Sunday, April 18, 2010

ದೇವರಿಗೆ ಇರಿಸುಮುರಿಸಾಗಬಹುದು, ಬೇಡ ಸುಮ್ಮನಿರ್ರೀ.....

ಯಶವಂತಪುರ-ಮಂಗಳೂರು ರೈಲು ಹತ್ತಿ ನಮ್ಮ ಸೀಟು ಹುಡುಕುವಷ್ಟರಲ್ಲಿ ಸರಿಯಾಗಿ ಬೆಳಗ್ಗಿನ ೭.೩೦ಕ್ಕೆ ಹೊರಟೇಬಿಟ್ಟಿತ್ತು. ನನ್ನ ಸೀಟ್ ನಂಬರ್ ೧೯ ಆದರೆ ನನ್ನಾಕೆಯದು ಅದೇ ಬೋಗಿಯಲ್ಲಿ ೯೨ನೇ ನಂಬರಿನದು. ಇಡೀ ಬೋಗಿಯಲ್ಲಿ ಹೊರಟಿದ್ದವರೆಲ್ಲಾ ಕುಕ್ಕೆ ಸುಬ್ರಮಣ್ಯ ದೇವಾಸ್ಥಾನಕ್ಕೆ ಹೊರಟಿದ್ದರು. ಎಲ್ಲಾ ತರಹದ ಜನರಿದ್ದರೂ ಅರವತ್ತು ದಾಟಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ನನ್ನ ಸೀಟು ಸೇರಿದಂತೆ ಮೂರು ಸೀಟಿನಲ್ಲಿ ೬೦ ಪ್ಲಸ್ ಮೂವರು ಹಿರಿಯರು ಅರಾಮವಾಗಿ ಕುಳಿತುಬಿಟ್ಟಿದ್ದಾರೆ.

"ಸರ್ ೧೯ ನನ್ನ ಸೀಟು" ಅಂತ ಟಿಕೆಟ್ಟು ತೋರಿಸಿದೆ.
ಅವರ ಮಾತುಕತೆಗೆ ಭಂಗವಾಯಿತೇನೋ, ನನ್ನನ್ನೊಮ್ಮೆ ನೋಡಿ
"ನೀವು ಫ್ಯಾಮಿಲಿ ಜೊತೆ ಬಂದಿದ್ದೀರಾ" ಅಂತ ಒಬ್ಬರು ಕೇಳಿದರು. ನಾನು "ಹೌದು" ಅಂದೆ.
"ನೋಡಪ್ಪ ಬೇಸರ ಮಾಡಿಕೊಳ್ಳಬೇಡ...ನಾವು ಮೂವರು ಬ್ಯಾಚುಲರ್ಸು, ಅರಾಮವಾಗಿ ಎಂಜಾಯ್ ಮಾಡಲು ಬಂದಿದ್ದೇವೆ.ನಮ್ಮ ಸೀಟು ಅಲ್ಲಿದೆ,ನೀವು ಸಂಸಾರಿಕರು,ಹೊಂದಾಣಿಕೆಮಾಡಿಕೊಳ್ಳುವ ಮನಸ್ಥಿತಿಯಿದೆಯೆಂದುಕೊಳ್ಳುತ್ತೇನೆ..ಸಹಕರಿಸುತ್ತೀರಾ? ಅಂದರು.

ಅರವತ್ತು ದಾಟಿದರು ಬ್ಯಾಚುಲರ್ಸು ಅಂತ ಹೇಳಿದ ಮಾತು ಕೇಳಿ ಸುತ್ತಲಿದ್ದವರೆಲ್ಲಾ ಗೊಳ್ಳೆಂದು ನಕ್ಕರು. ನನಗೂ ನಗು ತಡೆಯಲಾಗಲಿಲ್ಲ. ಕೊನೆಗೆ ಅವರ ಸೀಟು ೮೮ರಲ್ಲಿ ಹೋಗಿ ಕುಳಿತುಕೊಂಡೆ. ಅದರ ಹಿಂದೆಯೇ ನನ್ನಾಕೆ ಸೀಟು ಇತ್ತು. ನಮ್ಮ ಸಂಸಾರವನ್ನು ಕೊನೇ ಪಕ್ಷ ಅಷ್ಟು ಹತ್ತಿರವಾದರೂ ಮಾಡಿದ ಆ ಬ್ಯಾಚುರರ್ಸುಗಳಿಗೆ ಮನಸ್ಸಿನಲ್ಲಿಯೇ ಥ್ಯಾಂಕ್ಸ್ ಹೇಳುತ್ತಾ ಕುಳಿತುಕೊಂಡೆ.


ಸಿನಿಮಾ ಹಾಲಿನಲ್ಲಿ ಸೀಟು ಬದಲಾವಣೆ ಮಾಡಿ ಹೊಂದಾಣಿಕೆ ಮಾಡಿಕೊಳ್ಳುವಂತೆ ಇಲ್ಲಿಯೂ ಹಾಗೇ ಅನೇಕರು ಸೀಟು ಬದಲಾಯಿಸಿಕೊಂಡು ಕುಳಿತುಕೊಳ್ಳುವ ಹೊತ್ತಿಗೆ ನಮ್ಮ ರೈಲು ಸೋಲದೇವನಹಳ್ಳಿ ದಾಟಿತ್ತು. ಈ ರೈಲಿನಲ್ಲಿ ಬೋಗಿಗಳೆಲ್ಲಾ ನಡುವೆ ಬಾಗಿಲ ಮುಖಾಂತರ ಕನೆಕ್ಟ್ ಆಗಿದ್ದರಿಂದ ಒಮ್ಮೇ ಎಲ್ಲಾ ಬೋಗಿಗಳನ್ನು ನೋಡಿಬರೋಣವೆಂದು ಹೊರಟೆ. ಮೂರನೇ ಬೋಗಿಗೆ ಹೋಗುವಷ್ಟರಲ್ಲಿ ಅಲ್ಲಲ್ಲಿ ಒಬ್ಬೊಬ್ಬರು ಪ್ರಾಯಾಣಿಕರು. ನಂತರದ ಬೋಗಿಗಳಲ್ಲಿ ಒಬ್ಬರೋ ಇಬ್ಬರೋ ಕುಳಿತಿದ್ದರು. ಇವೆಲ್ಲಾ ಕಾದಿರಿಸಿದ ಬೋಗಿಗಳಾದಾರೂ ಪ್ರಯಾಣಿಕರೇ ಇರಲ್ಲಿಲ್ಲ. ನಾವ್ಯಾಕೆ ಸುಮ್ಮನೆ ಮೊದಲನೇ ಬೋಗಿಯಲ್ಲಿ ಸೀಟಿಗಾಗಿ ರಾಜಕೀಯದವರಂತೆ ಹೊಂದಣಿಕೆ ಮಾಡಿಕೊಳ್ಳಲು ತಲೆಬಿಸಿಮಾಡಿಕೊಂಡವಲ್ಲ ಅನ್ನಿಸಿತು. ನಾನು ವಾಪಸು ಬಂದು ಈ ವಿಚಾರವನ್ನು ನನ್ನ ಶ್ರೀಮತಿಗೆ ಹೇಳಿದೆ. ಇಬ್ಬರು ಮುಂದೆ ಖಾಲಿಇರುವ ಬೋಗಿಗಳಲ್ಲಿ ಅರ್‍ಆಮವಾಗಿ ಕುಳಿತೆವು.

ನನ್ನ ಕ್ಯಾಮೆರಾ ನೋಡಿ ದೂರದಿಂದಲೇ ರೈಲ್ವೇ ನೌಕರರು ಫೋಸು ಕೊಟ್ಟಿದ್ದು ಹೀಗೆ!

ಆ ಹುಡುಗ ಕೈತುಂಬ, ಬ್ಯಾಗ್ ತುಂಬಾ ಪುಸ್ತಕಗಳನ್ನು ಹಿಡಿದು ಪ್ರತಿಸೀಟಿನಲ್ಲೂ ಅಷ್ಟಷ್ಟೂ ಪುಸ್ತಕಗಳನ್ನು ಇಟ್ಟು ಹೋಗುತ್ತಿದ್ದ. ನಮ್ಮ ಬಳಿ ಇಟ್ಟಿದ್ದ ಪುಸ್ತಕಗಳನ್ನು ಒಮ್ಮೆ ನೋಡಿದೆ. ಪಂಚತಂತ್ರ, ಈಸೋಪನಕತೆಗಳು, ಜೋಕ್ಸ್, ಆರೋಗ್ಯ ದೇವರನಾಮ, ಮಂತ್ರಗಳು ಮಕ್ಕಳ ಚಿತ್ರಕಲೆ ಹೀಗೆ ಎಲ್ಲಾ ವಿಧದ ಪುಸ್ತಕಗಳು ಇದ್ದವು ಇಂಥ ಪುಸ್ತಕಗಳನ್ನು ಓದಿ ತುಂಬಾ ದಿನವಾದ್ದರಿಂದ ಐದಾರು ಪುಸ್ತಕಗಳನ್ನು ಕೊಂಡುಕೊಂಡೆ. ನಾನು ಓದಿದ ನಂತರ ನಮ್ಮ ಓಣಿಯ ಪುಟ್ಟಮಕ್ಕಳಿಗೆ ಕೊಟ್ಟರೆ ಅವರಿಗೂ ನಮ್ಮ ಹಳ್ಳಿಕತೆಗಳು, ಜಾನಪದ ಸೊಗಡಿನ ಕತೆಗಳ ಪರಿಚಯವಾಗುತ್ತದೆ. ಈ ಮಟ್ಟಿಗಾದರೂ ನಮ್ಮ ಟಿ.ವಿ ನೋಡುವ ಚಟದಿಂದ ಸ್ವಲ್ಪಮಟ್ಟಿಗಾದರೂ ಹೊರಬರುತ್ತಾರೆನ್ನುವುದು ನನ್ನ ಪುಟ್ಟ ಆಸೆ. ಅವನಿಗೆ ಇಲ್ಲಿಂದ ಹೊರಡುವ ಪ್ರತಿಯೊಂದು ರೈಲಿನ ಸಮಯಯೂ ಗೊತ್ತಿರುವುದರಿಂದ ಎಲ್ಲಾ ರೈಲಿನ ಪ್ರಯಾಣಿಕರಿಗೂ ಬೆಳಿಗ್ಗೆಯಿಂದ ಸಂಜೆಯವರೆಗೆ ಪುಸ್ತಕವನ್ನು ಮಾರುತ್ತೇನೆ ಅಂದ.


"ಅದಾಯ ಪರ್ವಾಗಿಲ್ಲವಾ?" ನಾನು ಕೇಳಿದೆ.

"ಪರ್ವಾಗಿಲ್ಲ ಸರ್ ಆದ್ರೆ, ರೈಲ್ವೇ ಪೋಲಿಸ್, ಟೆಕೆಟ್ ಕಲೆಕ್ಟರುಗಳು ಬಂದು ನಮ್ಮ ಮೇಲೆ ಕೇಸು ಹಾಕುತ್ತಾರೆ. ನಾವು ವರ್ಷ ಪೂರ್ತಿ ದುಡಿದ ಹಣದಲ್ಲಿ ಅರ್ಧಕ್ಕಿಂತ ಹೆಚ್ಚು ಹಣ ಕೋರ್ಟಿನಲ್ಲಿ ದಂಡಕಟ್ಟಲಿಕ್ಕೆ ಹೋಗಿಬಿಡುತ್ತದೆ" ಅಂದ.

"ನೀನ್ಯಾಕೆ ಇದನ್ನು ಟೆಂಡರ್ ಪಡೆದು ಅಧಿಕೃತವಾಗಿಯೇ ಮಾರಾಟಮಾಡಬಾರದು?" ನಾನು ಕೇಳಿದೆ.

"ಅದೆಲ್ಲಾ ನಮ್ಮ ಕೈಲಿ ಆಗುತ್ತಾ ಸರ್, ಲಕ್ಷಾಂತರ ರೂಪಾಯಿ ಟೆಂಡರಿಗೆ ಕಟ್ಟಬೇಕು, ಅದು ನಮ್ಮಂತ ಬಡವರಿಗೆ ಸಾದ್ಯವಾ ಹೇಳಿ?" ಅಂತ ನನಗೆ ಮರುಪ್ರಶ್ನೆ ಹಾಕಿದಾಗ ನನ್ನಲ್ಲಿ ಉತ್ತರವಿರಲಿಲ್ಲ.


"ನೀನು ಏನು ಓದಿದ್ದೀಯಾ?" ಪ್ರಶ್ನೆಯನ್ನು ಬದಲಿಸಿದೆ.


"ಎಸ್.ಎಸ್.ಎಲ್.ಸಿವರೆಗೆ" ಅಂದ. ಆದನ್ನು ಹೇಳುವಾಗ ಅವನಿಗೆ ಅಳುಕಿರಲಿಲ್ಲ.

"ಮುಂದೆ ಏಕೆ ಓದಲಿಲ್ಲ"

"ಓದಬೇಕು ಅಂದುಕೊಂಡರೂ ನಮ್ಮ ಮನೆ ಪರಿಸ್ಥಿತಿ ಅದಕ್ಕೆ ಸಹಕರಿಸಲಿಲ್ಲ ಸರ್, ಅದಕ್ಕೆ ಈ ಉದ್ಯೋಗವನ್ನು ಆರಿಸಿಕೊಂಡೆ"

"ಹೋಗಲಿ ಈ ವ್ಯಾಪಾರ ಮಾಡುವುದರಲ್ಲಿ ನಿನಗೆ ಖುಷಿ ಸಿಗುತ್ತದೆಯೇ,"

"ಖಂಡಿತ ಸರ್, ಚಲಿಸುವ ರೈಲಿನಲ್ಲಿ ಚಲಿಸುವ ಸಾವಿರಾರು ಪ್ರಯಾಣರನ್ನು ಬೇಟಿಯಾಗುವ ಅನುಭವ, ಮಾತು ಚರ್ಚೆ, ಇವೆಲ್ಲಾ ನಿಜಕ್ಕೂ ಖುಷಿಕೊಡುತ್ತವೆ. ಸರ್ ಒಂದು ವಿಚಾರ ಗೊತ್ತಾ ನಿಮಗೆ, ನಿಮ್ಮೆಲ್ಲರ ಬದುಕು ನಿಂತಲ್ಲೇ ಚಲಿಸಿದರೆ, ನಮ್ಮದು ಮಾತ್ರ ಚಲಿಸುತ್ತಲೇ ಬದಕನ್ನು ಕಟ್ಟಿಕೊಳ್ಳುವ, ಕಟ್ಟಿಕೊಳ್ಳುತ್ತಲೇ ಚಲಿಸುವ ಬದುಕು. ಇಂಥವುಗಳನ್ನು ಪುಸ್ತಕಗಳು ಕಲಿಸಿಕೊಡುವುದಿಲ್ಲವೆಂದು ನನ್ನ ಭಾವನೆ ಸರ್"


"ಹತ್ತನೇ ತರಗತಿಯವರೆಗೆ ಓದಿದ ಮಾತ್ರಕ್ಕೆ ಚೆನ್ನಾಗಿ ಓದಿದವರಂತೆ, ಸಂಸ್ಕಾರವಂತರಂತೆ ನಿನ್ನ ಭಾಷೆ ಚೆನ್ನಾಗಿದೆಯಲ್ಲಾ? ಕೇಳಿದೆ.

ನನ್ನ ಮಾತಿಗೆ ಅವನು ಸುಮ್ಮನೇ ನಕ್ಕ. ನಮ್ಮ ಮಾತುಕತೆ ನಡುವೆಯೇ ತುಮಕೂರು ಬಂದೇ ಬಿಟ್ಟಿತ್ತು.

"ಸರ್, ಮತ್ತೊಂದು ರೈಲಿಗೆ ಹೋಗಬೇಕು. ವಾಪಸ್ ಬರುವಾಗ ಮತ್ತೆ ಸಿಗುತ್ತೇನೆ" ಅಂದವನೇ ಇಳಿದು ಬೇರೊಂದು ರೈಲು ಹತ್ತಿ, ನನ್ನ ಕಡೆಗೆ ಕೈಯಾಡಿಸಿದ. ನಾನು ಅವನೆಡೆಗೆ ಕೈಯಾಡಿಸಿದೆ. ಅವನ ಮಾತು, ತಿಳುವಳಿಕೆಗೆ ನನ್ನ ಮನದಲ್ಲಿ ಮೆಚ್ಚುಗೆಯಿತ್ತು. ಕೇವಲ ಐವತ್ತೇ ನಿಮಷದಲ್ಲಿ ತುಮಕೂರಿಗೆ ತಲುಪಿದ ಈ ರೈಲಿಗೊಂದು ಮೆಚ್ಚುಗೆ ವ್ಯಕ್ತಪಡಿಸುತ್ತಾ ತಿಂಡಿ ತಿಂದು ಮುಗಿಸಿದೆವು.

ಎಡಕು ಮೇರಿ ಹತ್ತಿರ ಬರುತ್ತಿದ್ದಂತೆ ಎಲ್ಲೂ ಹಸಿರೋ ಹಸಿರು


ಹಸಿರು ವಾತಾರವಣವನ್ನು ಸೀಳಿಕೊಂಡು ಹೋಗುತ್ತಿರುವ ನಮ್ಮ ರೈಲು

ಸಕಲೇಶಪುರ ದಾಟಿ ಬಾಳ್ಳುಪೇಟೆ ಸಿಗುವ ನಡುವೆ ಸಿಗುವ ಹಸಿರು ದೃಶ್ಯಾವಳಿ

ರೈಲ್ವೇ ಗ್ಯಾಂಗ್ ಮೆನ್ ಈತನ ಕೆಲಸವೇ ಎಲ್ಲರಿಗಿಂತ ಮುಖ್ಯವಾದದು. ರೈಲು ಹಳಿ ಪರೀಕ್ಷೆ ಮಾಡುತ್ತಾ ಮೈಲುಗಟ್ಟಲೇ ಬಿಸಿಲು ಮಳೆ ಚಳಿ ಎನ್ನದೇ ದುಡಿಯುತ್ತಾನೆ.

ಸ್ವಲ್ಪ ಹೊತ್ತಿನಲ್ಲೇ ನಿದಾನವಾಗಿ ಕಡ್ಲೆ ಕಾಯಿ, ಚುರುಮುರಿ, ಹಣ್ಣುಗಳು, ನೀರಿನ ಬಾಟಲ್ ಪೆಪ್ಸಿ, ಕಾಫಿ ಟೀ ಒಂದೊಂದಾಗಿ ಬರತೊಡಗಿದವು. ಹೂ ಮಾರುವ ಹೆಂಗಸು ಬಂದಾಗ ನನ್ನ ಶ್ರೀಮತಿಯೂ ಸೇರಿದಂತೆ ಅಲ್ಲಿದ್ದ ಮಹಿಳಾ ಪ್ರಯಾಣಿಕರೆಲ್ಲಾ ಹೂ ಕೊಂಡುಕೊಂಡು ಕುಳಿತಲ್ಲೇ ಕಟ್ಟತೊಡಗಿದರು. ನನ್ನ ಶ್ರೀಮತಿ ಹೇಮಾಶ್ರಿ ಹೂಕಟ್ಟುವುದರ ನಡುವೆ ಮೂರ್ನಾಲ್ಕು ಮಲ್ಲಿಗೆ ಹೂವುಗಳನ್ನು ಕೆಳಕ್ಕೆ ಎಸೆದಳು.
"ಏಕೆ ಆ ಮಲ್ಲಿಗೆ ಹೂಗಳು ಚೆನ್ನಾಗಿದ್ದರೂ ಕೆಳಗೆ ಬಿಸಾಡುತ್ತಿರುವೆಯಲ್ಲ" ಕೇಳಿದೆ.

"ರೀ ಅದರೊಳಗೆ ಹುಳುಗಳಿವೆ ಕಣ್ರಿ ಅದಕ್ಕೆ ಬಿಸಾಡಿದೆ" ಅಂದಳು.

"ಹೂವಿನೊಳಗೆ ಹುಳುಗಳಿದ್ದರೇ ಏನಂತೆ, ನೀನು ಕಟ್ಟಿದ ಮೇಲೆ ದೇವಾಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತೀಯಲ್ಲ ಅದನ್ನು ದೇವರ ಮೇಲೆ ಹಾಕುತ್ತಾರೆ ಅದರಿಂದ ಯಾರಿಗೆ ತೊಂದರೆಯಾಗೋಲ್ಲವಲ್ಲ ಇರಲಿಬಿಡು" ಅಂತ ಕೆಳಗೆ ಬಿದ್ದಿದ ಹೂಗಳನ್ನು ಎತ್ತಿಕೊಳ್ಳಲು ಬಗ್ಗಿದೆ.

"ರೀ ಬೇಡ ಸುಮ್ಮನಿರಿ, ದೇವರ ಮೇಲೆ ಹೂ ಹಾಕಿದಾಗ ಅದರಲ್ಲಿನ ಹುಳುಗಳು ಆಚೆಬಂದು ದೇವರ ಮೈ ಮೇಲೆಲ್ಲಾ ಹರಿದಾಡುವಾಗ ದೇವರಿಗೆ ಇರಿಸುಮುರಿಸಾಗಿ ಬೇಸರವಾಗಬಹುದು" ಅಂದಳು.

"ಹೂವಿನೊಳಗಿರುವ ಹುಳುಗಳು ದೇವರ ಸನ್ನಿದಿಗೆ ತಲುಪಿ ಅವಕ್ಕೂ ಪುಣ್ಯ ಲಭಿಸಿ ಅವುಗಳ ಜೀವನವೂ ಪಾವನವಾಗುತ್ತದಲ್ಲವೇ" ಅಂತ ನನಗನ್ನಿಸಿದರೂ ಅವಳ ಮಾತಿಗೆ ಉತ್ತರ ಕೊಡದೆ ಸುಮ್ಮನಾದೆ. ಬಹುಶಃ ಪ್ರಾಣಿ, ಪಕ್ಷಿ, ಹುಳುಗಳ ಮೇಲೆ ನನಗೆ ವಿಶೇಷ ಪರಿಸರಪ್ರೇಮವಿರುವುದರಿಂದ ಹೀಗೆ ಅನ್ನಿಸಿರಲೂಬಹುದು ಅಂದುಕೊಂಡು ಸುಮ್ಮನಾದೆ. ಅಷ್ಟರಲ್ಲಾಗಲೇ ಸಮಯ ೧೦-೩೦ ನಮ್ಮ ರೈಲು ಅರಸೀಕೆರೆ ತಲುಪಿತ್ತು.
ಇಪ್ಪತ್ತು ನಿಮಿಷಗಳ ನಂತರ ರೈಲು ಹಿಂದಕ್ಕೆ ವಾಪಸ್ಸು ಹೊರಟಾಗ ಮುಂದಿನ ಸೀಟಿನಲ್ಲಿ ಕುಳಿತಿದ್ದ ಹಳ್ಳಿ ಹೆಂಗಸರಲ್ಲಿ ಗುಸುಗುಸು ಗಾಬರಿ ಪ್ರಾರಂಭವಾಯಿತು.

"ರೈಲು ಮತ್ತೆ ಬೆಂಗ್ಳೂರಿಗೆ ಹೋಯ್ತಾಯಿದೆಯಾ? ಏನು ತೊಂದರೆಯಂತೆ? ಮುಂದೆ ರೈಲು ಹಳಿಗೇನಾದರೂ ಹೆಚ್ಚುಕಮ್ಮಿ ಆಗವಾ? " ಅಯ್ಯೋ ಕೊನೆಗಾಲದಲ್ಲಿ ಸುಬ್ರಮಣ್ಯ ಸ್ವಾಮಿಯ ದರ್ಶನ ಮಾಡಬೇಕಂತ ಈ ರೈಲಲ್ಲಿ ಬಂದ್ರೆ ಇದು ವಾಪಸ್ ಹೋಯ್ತಾ ಇದೆಯಲ್ಲಾ? ಕೊನೆಗಾಲದಲ್ಲಿ ನನ್ನಾಸೆಯೂ ಪೂರೈಸಕಾಗದಂಗೆ ಆಯ್ತಾಲ್ಲಾ?" ಅಂತ ವಯಸ್ಸಾದ ಮುದುಕಿಯೊಬ್ಬಳು ಪಕ್ಕದಲ್ಲಿದ್ದ ಗೆಳೆತಿಗೆ ಹೇಳುತ್ತಾ ಅವಲತ್ತುಕೊಳ್ಳುತ್ತಿದ್ದಳು.

"ನೋಡಮ್ಮಿ ಎಂಥ ಕೆಲಸವಾಯ್ತು"..ಸ್ವಲ್ಪ ತಡೆದು ಅತ್ತ ಇತ್ತಾ ನೋಡಿ....."ನಾನು ಈ ಬೆಳಿಗ್ಗೆ ಈ ರೈಲು ಹತ್ತುವಾಗ ಬಾಗಿಲಿಗೆ ಅಡ್ಡವಾಗಿ ಕುಳಿತಿದ್ದ ಬಿಕ್ಷುಕ ಹೆಂಗ್ಸಿನ ಮುಖ ನೋಡಿದ್ದಕ್ಕೆ ಇಂಗಾಯ್ತೋ ಏನೋ..." ಈಕೆ ಅನುಮಾನ ವ್ಯಕ್ತಪಡಿಸಿದಳು.

"ಅದಕ್ಕೆ ನಾನು ಯೋಳದು ದೇವರ ಮುಖ ನೋಡಿ ಬರಬೇಕು ಅಂತ..."
ಹೀಗೆ ಸಾಗುತ್ತಿದ್ದ ಇವರ ಮಾತುಗಳನ್ನು ಕೇಳಿ ನನಗೆ ನಗು ಬಂದರೂ ಅದ್ಯಾರು ಬಾಗಿಲಲ್ಲಿ ಕುಳಿತಿರುವವರೋ ನೋಡಿ ಬರೋಣವೆಂದು ಕ್ಯಾಮೆರಾವನ್ನು ಹೆಗಲಿಗೇರಿಸಿ ಹೊರಟೆ. ಇವರು ಹೇಳಿದಂತೆ ಆ ಬಿಕ್ಷುಕಿ ಅಲ್ಲೇ ಕುಳಿತಿದ್ದಳು. ನಾನು ಯಾರನ್ನೇ ನೋಡಿದರೂ ಕುತೂಹಲವೆನಿಸಿದರೆ ಮಾತಾಡಿಸುವುದು ನನ್ನ ಚಟ. ಅದೇ ರೀತಿ ಆಕೆಯನ್ನು ಮಾತಾಡಿಸಿದೆ. ಅವಳಿಗೆ ನನ್ನ ಭಾಷೆ ಅರ್ಥವಾಗಲಿಲ್ಲ. ತಮಿಳು, ತೆಲುಗು, ಹಿಂದಿ ಭಾಷೆ ಪ್ರಯತ್ನಿಸಿದೆ. ಅವಳು ಹಿಂದಿಯಲ್ಲೇ ಉತ್ತರಿಸಿದಳು.
ಆಕೆಯಿಂದ ತಿಳಿದಿದ್ದೇನೆಂದರೆ, ಅವಳು ಪಶ್ಚಿಮ ಬಂಗಾಲದಿಂದ ಹೀಗೆ ಒಂದೊಂದೇ ರೈಲು ಹತ್ತಿ ಹೋಗುತ್ತಿದ್ದಾಳೆ ಅಲ್ಲಲ್ಲಿ ಬಿಕ್ಷೆ ಬೇಡಿ ಹೊಟ್ಟೆ ಹೊರೆಯುತ್ತಳಂತೆ...

"ಮುಂದೆ ಎಲ್ಲಿಗೆ ಹೋಗುತ್ತೀಯಾ" ನಾನು ಕೇಳಿದೆ.

ನನಗೇ ಗೊತ್ತಿಲ್ಲವೆಂದು ಎರಡು ಕೈಗಳನ್ನು ಮೇಲಕ್ಕೆತ್ತಿ ತೋರಿಸಿದಳು. ಅವಳನ್ನು ಇನ್ನೂ ಮಾತಾಡಿಸಿದರೆ ಪ್ರಯೋಜನವಿಲ್ಲವೆಂದುಕೊಂಡೆ. ನಾವೆಲ್ಲಾ ಬದುಕಿನಲ್ಲಿ ಸರಿಯಾದ ದಿಕ್ಕಿನಲ್ಲೇ ಪ್ರಯಾಣಿಸುತ್ತಿದ್ದೇವೆಂದು ಅಂದುಕೊಂಡಿದ್ದೇವಲ್ಲ....ಆದ್ರೆ ಈಕೆಗೆ ಮುಂದಿನ ಬದುಕು, ಪ್ರಯಾಣದ ದಾರಿಯೇ ತಿಳಿದಿಲ್ಲವೆಂದುಕೊಂಡಾಗ ಮನಸ್ಸಿನಲ್ಲೇ ಒಂದು ರೀತಿಯ ವಿಷಾದ ಭಾವ ತುಂಬಿತ್ತು. ನಮ್ಮ ಬೋಗಿಗೆ ವಾಪಸ್ಸು ಬಂದೆ. ಹಳ್ಳಿ ಹೆಂಗಸರ ಚರ್ಚೆ ಹಾಗೇ ಮುಂದುವರಿದಿತ್ತು.

ರೈಲಿನಲ್ಲೇ ಗೊತ್ತುಗುರಿಯಿಲ್ಲದೇ ಸಾಗುತ್ತಿರುವ ಬೆಂಗಾಲಿ ಬಿಕ್ಷುಕಿ.
"ಅಯ್ಯೋ ಹೌದಾ....ಈ ರೈಲಿನಲ್ಲೇ ಬರಬಾರದಿತ್ತು ಕಣಮ್ಮಿ" ಕೊನೆಗೆ ಅವರಿಬ್ಬರೂ ಬೇಸರದಿಂದ ಈ ರೀತಿಯ ತೀರ್ಮಾನ ತೆಗೆದುಕೊಂಡಾಗ ನನಗೆ ನಗುಬಂತು. ಇಷ್ಟಕ್ಕೂ ಇಲ್ಲಿಂದ ಹಾಸನಕ್ಕೆ ಹೋಗಬೇಕಾದರೆ ರೈಲಿಗೆ ಮುಂಭಾಗದ ಇಂಜಿನ್ ಹಿಂಭಾಗಕ್ಕೆ ತಗುಲಿಸುವುದರಿಂದ ಆ ಹಳ್ಳಿ ಹೆಂಗಸರಿಗೆ ಹಾಗೆ ಅನ್ನಿಸಿತ್ತು.
ಮುಂದುವರಿಯುವುದು.....

ವಿಶೇಷ ಸೂಚನೆ: [ಈ ಬಾರಿಯ "ಸಖಿ" ಕನ್ನಡ ಪಾಕ್ಷಿಕ ಪತ್ರಿಕೆಯಲ್ಲಿ ಪ್ರವಾಸ ವಿಶೇಷಾಂಕ ಪ್ರಯುಕ್ತ "ಕುಕ್ಕೆ ಕ್ಲಿಕ್" ಹೆಸರಲ್ಲಿ ಈ ಚಿತ್ರಸಹಿತ ಲೇಖನ ಪ್ರಕಟವಾಗಿದೆ.]
ಚಿತ್ರಗಳು ಮತ್ತು ಲೇಖನ.
ಶಿವು.ಕೆ

Monday, April 12, 2010

"ಯಾವ ವಾರದ ಸುತ್ತಳತೆ ಹೇಳಲಿ ಹೇಳು"

ದೃಶ್ಯ-೧

"ಸರ್, ಕ್ಯಾನ್ ಐ ಹೆಲ್ಪ್ ಯೂ"....ಆತ ನನ್ನನ್ನು ನೋಡುತ್ತಾ ಕೇಳಿದ...
"ಇಟ್ಸ್ ಓಕೆ. ಐ ವಿಲ್ ಟೆಲ್ ಲೇಟರ್"...ನಾನಂದೆ.
"ಮೇಡಮ್, ನಿಮ್ಮ ಮನೆಗೆ ಇದು ತುಂಬಾ ಚೆನ್ನಾಗಿರುತ್ತೆ" ಅಂದ.
"ಇದು ನಮ್ಮ ಮನೆಯಲ್ಲಿದೆ ನಾನು ಬೇರೆಯದನ್ನು ನೋಡಲಿಕ್ಕೆ ಬಂದಿದ್ದೇನೆ." ನನ್ನಾಕೆ ಹೇಳಿದಳು.

ಸ್ವಲ್ಪ ಮುಂದೆ ಸಾಗಿ ಬಟ್ಟೆಗಳ ಬಳಿ ಬಂದೆವು. ತಕ್ಷಣ ಅಲ್ಲಿದವನೊಬ್ಬ,
"ಸರ್, ಯುವರ್ ವೇಸ್ಟ್ ಸೈಜ್ ಪ್ಲೀಸ್" ಕೇಳಿದ.

ಅರೆರೆ ನನ್ನ ಸೊಂಟದ ಸೈಜು ನನಗೇ ಗೊತ್ತಾಗದ ಹಾಗೆ ವ್ಯತ್ಸಾಸವಾಗುತ್ತಿರುತ್ತದೆ? ಅಂತದ್ದರಲ್ಲಿ ಇವನಿಗೆ ಹೇಗೆ ಸರಿಯಾಗಿ ಹೇಳುವುದು? ಅಂದುಕೊಂಡು, ನೋಡಪ್ಪ ನನ್ನ ಸೊಂಟದ ಸುತ್ತಳತೆ ಪ್ರತಿವಾರ ವ್ಯತ್ಯಾಸವಾಗುತ್ತಿರುತ್ತದೆ. "ಯಾವ ವಾರದ ಸುತ್ತಳತೆ ಹೇಳಲಿ ಹೇಳು" ಕೇಳಿದೆ.

ನನ್ನ ಮಾತಿಗೆ ಅವನಿಗೆ ನಗು ಬಂದರೂ ನಗುವಂತಿರಲಿಲ್ಲ. ಒಂದು ಮುಗುಳ್ನಗು ನಕ್ಕು ಸುಮ್ಮನಾದ.

ದೃಶ್ಯ-೨

ಅಲ್ಲೊಬ್ಬ ಉರಿಬಿಸಿಲನ್ನು ಲೆಕ್ಕಿಸದೆ ಹತ್ತಕ್ಕೆ ಒಂದುವರೆ, ಹತ್ತಕ್ಕೆ ಒಂದುವರೆ ಎಂದು ರಾಗವಾಗಿ ಕೂಗಿ ಈರುಳ್ಳಿ ಮಾರುತ್ತಿದ್ದ. ಹತ್ತಕ್ಕೆ ಒಂದುವರೆ ಎಂದರೇನು ಅಂತ ನನಗೆ ಗೊತ್ತಾಗಲಿಲ್ಲ. ಅವನ ಬಳಿಯೇ ಹೋಗಿ ಕೇಳಬೇಕೆನಿಸಿ ಕೇಳಿದೆ. ಅವನು ನನ್ನ ಅಪಾದಮಸ್ತಕ ನೋಡಿ,

"ಸಾರ್ ಅದು ನಿಮಗೆ ಗೊತ್ತಾಗೊಲ್ಲ ಬಿಡಿ, ಹೆಂಗಸರಿಗೆ ಬೇಗ ಗೊತ್ತಾಗಿಬಿಡುತ್ತೆ" ಅಂತ ನಕ್ಕ.

"ಅದಕ್ಕೆ ಕಣ್ರೀ ಕೇಳೀದ್ದು ಗೊತ್ತಾಗಿದ್ದರೆ ಯಾರು ಕೇಳುತ್ತಿದ್ದರು ಹೇಳಿ?" ನನ್ನನ್ನು ಸಮರ್ಥಿಸಿಕೊಳ್ಳುತ್ತಾ ಮರು ಪ್ರಶ್ನೆ ಹಾಕಿದೆ.

"ಒಂದುವರೆ ಕೇಜಿಗೆ ಹತ್ತು ರೂಪಾಯಿ ಅಷ್ಟೇ ಎಷ್ಟು ಕೊಡಲಿ?" ಅಂದ. ಅಷ್ಟರಲ್ಲಿ ನನ್ನ ಪಕ್ಕ ಒಂದು ವಯಸ್ಕ ಹೆಂಗಸು " ಕಡಿಮೆ ಮಾಡಿಕೊಳ್ಳಪ್ಪ ಸ್ವಲ್ಪ" ಅಂದಳು.

"ಓ ಇದಕ್ಕಿಂತ ಕಡಿಮೇನಾ., ನಾನು ಇಬ್ಬರು ಹೆಂಡ್ತೀ ನಾಲ್ಕು ಹೆಣ್ಣುಮಕ್ಕಳು ಸಾಕಬೇಕು. ಇನ್ನೂ ಕಡಿಮೆ ಮಾಡಿದ್ರೆ ಅಷ್ಟೆ" ತಕ್ಷಣವೇ ಅವನಿಂದ ಉತ್ತರ ಬಂತು. ಅಲ್ಲಿದ್ದವರೆಲ್ಲಾ ಅವನ ಮಾತು ಕೇಳಿ ಗೊಳ್ಳೆಂದು ನಕ್ಕರು.

"ಹೋಗ್ಲಿ ಬಿಡಪ್ಪ, ಹತ್ತು ರೂಪಾಯಿಗೆ ಒಂದುವರೆ ಕೆಜಿ ಕೊಟ್ಟು ನಿಮ್ಮ ಹೆಂಡ್ತಿ ಮಕ್ಕಳನ್ನ ಮಹಾರಾಜನಂತೆ ಸಾಕು" ಮರು ಉತ್ತರ ನೀಡಿ ಈರುಳ್ಳಿ ಕೊಂಡು ವಯಸ್ಸಾದ ಮಹಿಳೆ ಹೊರಟುಹೋದಳು.

" ಬನ್ನಿ ಅಕ್ಕ, ಬನ್ನಿ ಅಮ್ಮ....ಹತ್ತಕ್ಕೆ ಒಂದುವರೆ, ನಮ್ಮ ಈರುಳ್ಳಿ ತಿಂದವರ ಮನೆಯಲ್ಲಿ ದೀಪಾವಳಿ ಹಬ್ಬ ಬನ್ನಿ ತಂಗಿ" ಒಂದೇ ಸಮನೇ ಕೂಗುತ್ತಿದ್ದ. ಎಲಾ ಇವನ ಬರೀ ಅಮ್ಮ, ಅಕ್ಕ, ತಂಗಿ ಅಂತ ಕೇವಲ ಹೆಂಗಸರನ್ನೇ ಕರೀತಾನಲ್ಲ, ಕೇಳಿಯೇ ಬಿಡೋಣವೆನ್ನಿಸಿ, "ಏನಪ್ಪ ವ್ಯಾಪಾರಕ್ಕೆ ಹೆಂಗಸರನ್ನು ಮಾತ್ರ ಕರೀತೀಯಲ್ಲ....ನಮ್ಮಂತವರು ನಿಮಗೆ ಗಿಟ್ಟೋದಿಲ್ವೇ" ಅಂದೆ.

"ಸಾರ್ ನೀವು ಅಪರೂಪಕ್ಕೆ ಒಮ್ಮೆ ಬರುತ್ತೀರಿ, ಬೆಲೆ ಕೇಳದೆ ತೆಗೆದುಕೊಂಡು ಹೋಗಿಬಿಡುತ್ತೀರಿ. ಮತ್ತೆ ನೀವು ಬರುವುದು ಮುಂದಿನ ಯುಗಾದಿಗೋ, ಮಾರನವಮಿಗೋ...ಆದ್ರೆ ಹೆಣ್ಮಕ್ಕಳು ಪ್ರತಿ ವಾರ ಬರುತ್ತಾರೆ. ಅವರು ಚೌಕಾಸಿ ಮಾಡಿದರೂ ಯಾಪಾರ ಮಾಡೋರು ಅವರೇ ತಾನೇ! ಅವರು ಚೌಕಾಸಿ ಮಾಡಿದರೂ ಅವರಿಂದಲೇ ನಮ್ಮ ಜೀವನ. ಅವರೇ ಮುಖ್ಯ ಸಾಮಿ ನೀವಲ್ಲ.." ಅಂದ. ಅವನ ಮಾತಿಗೆ ನನ್ನಲ್ಲಿ ಉತ್ತರವಿರಲಿಲ್ಲ.

ಇವರಡು ದೃಶ್ಯಗಳಲ್ಲಿ ಮೊದಲನೆಯದು ಸಂಪಿಗೆ ರಸ್ತೆಯಲ್ಲಿರುವ ಮಂತ್ರಿ ಸ್ಕ್ವೈರ್‍ನ ಸ್ಪಾರ್ ಮಾರ್ಕೆಟಿನದು. ಎರಡನೆಯದು ಯಶವಂತಪುರ ತರಕಾರಿ ಮಾರುಕಟ್ಟೆಯದು.

ಮಂತ್ರಿ ಸ್ಕ್ವೇರ್ ಕಡೆಯಿಂದ ಸಂಪಿಗೆ ರಸ್ತೆ.

ಮಲ್ಲೇಶ್ವರಂ ಕಡೆಯಿಂದ ನೋಡಿದಾಗ ನಮ್ಮ ಸಂಪಿಗೆ ರಸ್ತೆ ಕಾಣುವುದು ಹೀಗೆ!

ಸಂಪಿಗೆ ರಸ್ತೆ ನನ್ನ ಮೆಚ್ಚಿನ ರಸ್ತೆ. ಎರಡೂ ಕಡೇ ರೆಂಬೆಕೊಂಬೆಗಳಲ್ಲಿ ಹಸಿರನ್ನು ತುಂಬಿಕೊಂಡು ಇಡೀ ರಸ್ತೆಗೆ ಹಸಿರುಚತ್ರಿ ಹಿಡಿದಂತೆ ಕಾಣುವ ದೊಡ್ಡ ದೊಡ್ಡ ಸಾಲುಮರಗಳು, ಪಕ್ಕದಲ್ಲಿನ ಉದ್ಯಾನವನ. ನನ್ನ ಹೈಸ್ಕೂಲು ಮತ್ತು ಕಾಲೇಜುದಿನಗಳ ಎಂಟುವರ್ಷಗಳು ಈ ರಸ್ತಯಲ್ಲಿ ನಡೆದಿದ್ದೇನೆ. ಆಗ ಈ ನಡುರಸ್ತೆಯಲ್ಲಿ ಆಯಾಗಿ ಸೈಕಲ್ ತುಳಿದಿದ್ದೇನೆ. ಬೇಸಿಗೆಯಲ್ಲಿ ನೆರಳಿನ ತಂಪನ್ನು, ಚಳಿಗಾಲದಲ್ಲಿ ಬೆಳಗಿನ ಚುಮುಚುಮು ಚಳಿಯ ಇಬ್ಬನಿ ವಾತಾವರಣದಲ್ಲಿ ಚತ್ರಿಗಳಂತಿರುವ ಈ ಮರಗಳ ಎಲೆಗಳ ನಡುವೆ ತೂರಿ ಬರುವ ಬಿಸಿಲಕೋಲನ್ನು ನೋಡಿ ಅಸ್ವಾದಿಸಿದ್ದೇನೆ. ಈಗಲೂ ನಿತ್ಯ ನನ್ನ ಬೆಳಗಿನ ದಿನಪತ್ರಿಕೆ ವಿತರಣೆ ಕೆಲಸದ ಓಡಾಟ ಈ ರಸ್ತೆಯಲ್ಲೇ. ಅಂತ ರಸ್ತೆಯಲ್ಲಿ ಮಾಲ್‍ಗಿಂತ ದೊಡ್ಡದು ಅಂತ ಹೇಳುವ ಮಂತ್ರಿ ಸ್ಕ್ವೇರ್ ಬಂದಿದೆ. ಜೊತೆಗೆ ಬೆಂಗಳೂರಿಗೆ ಮತ್ತೊಂದು ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಜೊತೆಯಲ್ಲಿಯೇ ಕರೆತಂದಿದೆ. ಆಗೆಲ್ಲಾ ನಿಮಿಷದಲ್ಲಿ ಈ ರಸ್ತೆಯಲ್ಲಿ ಸಾಗುತ್ತಿದ್ದ ನಾವು ಈಗ ಈ ಪುಟ್ಟ ರಸ್ತೆಯನ್ನು ಕ್ರಮಿಸಲು ಹತ್ತು ಹದಿನೈದು ನಿಮಿಷಗಳಾಗುತ್ತಿವೆ. ವಾರಾಂತ್ಯದಲ್ಲಂತೂ ವಾಹನಚಾಲಕರ ಕತೆ ಕೇಳುವುದೇ ಬೇಡ. ಮುಂದೆ ಏನಾಗಬಹುದು? ನಮ್ಮ ಸರ್ಕಾರಕ್ಕೆ ಗೊತ್ತಿರುವುದು ಒಂದೇ ರಸ್ತೆ ಅಗಲ ಮಾಡಲು ಮರಗಳನ್ನು ಕತ್ತರಿಸಿ ಬಿಸಾಡುವುದು. ಇಲ್ಲೂ ಮುಂದೆ ಅದು ಆಗುತ್ತದೆ. ಅದಕ್ಕಾಗಿ ಈ ಸುಂದರ ರಸ್ತೆಯ ಮರಗಳ ಸಮೇತ ಮಳೆಗಾಲ ಚಳಿಗಾಲ ಬೇಸಿಗೆ ಎಲ್ಲಾ ಕಾಲದಲ್ಲಿಯೂ ಫೋಟೊ ತೆಗೆದಿಟ್ಟುಕೊಂಡಿದ್ದೇನೆ. ಮುಂದೆ ಈ ರಸ್ತೆಯಲ್ಲಿ ಮರಗಳು ಇಲ್ಲವಾಗಿ ಈ ರಸ್ತೆಯೂ ಬೋಳಾಗಿಬಿಟ್ಟರೆ ಅನ್ನುವ ಭಯ ಈಗಲೇ ನನಗೆ ಕಾಡುತ್ತಿದೆ. ನಮ್ಮ ಸರ್ಕಾರಕ್ಕೆ ಅಂತ ಆಲೋಚನೆ ಬರದೇ ಟ್ರಾಫಿಕ್ಕಿಗಾಗಿ ಬೇರೆ ದಾರಿ ಹುಡುಕಿಕೊಳ್ಳಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ.

ಈ ಟ್ರಾಫಿಕ್ ಮಂತ್ರಿ ಸ್ಕ್ವೇರ್ ಎಫೆಕ್ಟ್!


ಮಾಲ್ ಸಂಸ್ಕೃತಿ ನಮ್ಮ ಕಡೆ[ಮಲ್ಲೇಶ್ವರಂ, ರಾಜಾಜಿನಗರ, ವೈಯ್ಯಾಲಿಕಾವಲ್, ಶೇಷಾದ್ರಿಪುರಂ, ಇತ್ಯಾದಿ..]ಇರಲಿಲ್ಲ. ಇತ್ತೀಚೆಗೆ ಒಂದು ಬಿಗ್ ಬಜಾರ್, ಅದರ ಪಕ್ಕ ಪ್ಯಾಕ್ಟರಿ ಔಟ್‍ಲೆಟ್, ಸಂಪಿಗೆ ರಸ್ತೆಯಲ್ಲಿ ಮಂತ್ರಿ ಸ್ಕ್ವೇರ್....ದೊಡ್ದದಾದ ರೀತಿಯಲ್ಲಿ ತೆರೆದುಕೊಂಡಿವೆ. ಎಲ್ಲೆಲ್ಲೂ ದೊಡ್ಡ ದೊಡ್ಡ ಜಾಹಿರಾತಿನ ದೊಡ್ದಪಲಕಗಳು, ಟಿ.ವಿ ಮತ್ತು ಎಪ್. ಎಮ್ ರೇಡಿಯೋದಲ್ಲಿ ನಿಮಿಷಕೊಮ್ಮೆ ಜಾಹಿರಾತುಗಳು, ಪತ್ರಿಕೆಗಳಲ್ಲಿ ಪುಟಗಟ್ಟಲೇ ಜಾಹಿರಾತುಗಳನ್ನು, ನಮ್ಮ ಓಣಿಯ ಪುಟ್ಟ ಮಕ್ಕಳು ಈ ಮಾಲ್, ಬಜಾರುಗಳ ಬಗ್ಗೆ ಮಾತಾಡುವುದನ್ನು ನೋಡಿ ನನ್ನ ಶ್ರೀಮತಿ ನಾವು ಹೋಗಿಬರೋಣವೆಂದು ಒತ್ತಾಯ ಮಾಡಿದಳು. ಮೊದಲು ಪ್ಯಾಕ್ಟರಿ ಔಟ್‍ಲೆಟ್, ಬಿಗ್ ಬಜಾರ್...ನಂತರ ಮಂತ್ರಿ ಸ್ಕ್ವೇರ್. ಒಳಗೆ ಹೋಗುತ್ತಿದ್ದಂತೆ ಆಹಾ.....ತರಾವರಿ ಬಣ್ಣ ಬಣ್ಣದ ವಸ್ತುಗಳು, ಮನೆಗೆ ಬೇಕಾದ ಸಕಲವೂ ಇಲ್ಲಿ ಸಿಕ್ಕೇ ಸಿಗುತ್ತವೆ. ನುಣುಪಾದ ಕನ್ನಡಿಯಂತ ನೆಲ, ಮೇಲೇರಿ ಕೆಳಗಿಳಿಯುವ ಎಸ್ಕಲೇಟರುಗಳು, ಸುತ್ತಾಡಿ ಸುಸ್ತಾಗುವಷ್ಟು ದೊಡ್ಡ ಮಾಲುಗಳು ಎಲ್ಲ ಏಸಿ. ಪೂರ್ತಿ ಓಸಿ. ನೋಡುತ್ತಿದ್ದರೇ ಕಾಮನಬಿಲ್ಲಿನ ಎಲ್ಲಾ ಬಣ್ಣಗಳೂ ಇಲ್ಲೇ ಮೇಳೈಸಿದಂತೆ ಅನುಭವ.

ಒಳಗೆ ಜೀನ್ಸ್ ಪ್ಯಾಂಟುಗಳನ್ನು ಒಪ್ಪವಾಗಿ ಜೋಡಿಸಿಟ್ಟಿದ್ದ ಮಂತ್ರಿ ಸ್ಕ್ವೇರಿನ ಒಂದು ಮಾಲ್‍ನೊಳಗೆ ಹೋಗಿ ನೋಡುತ್ತಿದ್ದೆ. ಎಲ್ಲದರ ಬೆಲೆಯೂ ಸಹಜವಾಗಿ ಹೆಚ್ಚೇ ಇತ್ತು. ಯಾವ ಬಟ್ಟೆಯನ್ನು ನೋಡಿದರೂ ಬೆಲೆ ಹೆಚ್ಚಾಗಿಯೇ ಇತ್ತು. ಆಗ ನಮ್ಮ ರಾಮಚಂದ್ರಪುರದ ಟೈಲರ್ ನೆನಪಿಗೆ ಬಂದ. "ಸರ್, ನಿಮಗೆ ಬೇಕಾದ ಬಟ್ಟೆ ಇಲ್ಲಿದೆ ನೋಡಿ ಅಯ್ಕೆ ಮಾಡಿ. ನಿಮಗೆ ಬೇಕಾದ ಪಕ್ಕಾ ಅಳತೆಯಲ್ಲಿ ಬಟ್ಟೆ ಮತ್ತು ಹೊಲೆಯುವ ಕೂಲಿ ಸೇರಿ ಕೇವಲ ಮುನ್ನೂರು ರೂಪಾಯಿಗೆ ಚೆನ್ನಾಗಿ ಹೊಲಿದುಕೊಡುತ್ತೇನೆ" ಅಂತ ಆತ ಹೇಳಿದ್ದು ನೆನಪಿಗೆ ಬಂತು. ಇಂಥ ಮಾಲ್‍ನಲ್ಲಿ ದುಬಾರಿ ಬೆಲೆಯನ್ನು ಕೊಟ್ಟು ನಮ್ಮಂಥ ಮದ್ಯಮ ವರ್ಗದವರು ಬಟ್ಟೆಗಳನ್ನು ಕೊಳ್ಳಲು ಪ್ರಾರಂಭಿಸಿದರೆ ಆ ಟೈಲರುಗಳ ಗತಿಯೇನು? ಅವನ ಹೆಂಡತಿ ಮತ್ತು ಮಕ್ಕಳ ಕತೆಯೇನು? ಯಾವಾಗ ಹೋದರು ಪ್ರೀತಿಯಿಂದ ಮನಃಪೂರ್ವಕವಾಗಿ ಮಾತಾಡಿಸುವ ಆತ ಚೌಕಾಸಿ ಮಾಡಿದರೂ ಬೇಸರಗೊಳ್ಳುವುದಿಲ್ಲ. ಆದ್ರೆ ಇಲ್ಲಿ ಎಲ್ಲವೂ ನಿಗದಿತ ಬೆಲೆ. ತರಕಾರಿ ಆಹಾರ ಪದಾರ್ಥಗಳು, ಖಾದ್ಯಗಳು ಇನ್ನಿತರ ವಿಚಾರದಲ್ಲಿ ಬೆಲೆಗಳು ಸ್ವಲ್ಪ ಕಡಿಮೆಯಿದೆ ಅನ್ನೋದು ನನ್ನ ಶ್ರೀಮತಿಯ ಅಭಿಪ್ರಾಯ. ಕೆಲವು ಉತ್ತಮ ಗುಣಮಟ್ಟದ ವಸ್ತುಗಳ ಬೆಲೆಯೂ ಗುಣಮಟ್ಟಕ್ಕೆ ತಕ್ಕಂತೆ ಇರುವುದರಿಂದ ಗುಣಮಟ್ಟ ನಿರೀಕ್ಷಿಸುವವರು ದಾರಾಳವಾಗಿ ಕೊಂಡುಕೊಳ್ಳುತ್ತಿದ್ದರು. ಮತ್ತೆ ಎಲ್ಲ ವಸ್ತುಗಳಿಗೂ ನಿಗದಿತ ಬೆಲೆ. ಚೌಕಾಸಿಯ ಮಾತೇ ಇಲ್ಲ. ಅದಕ್ಕಿಂತ ಮೊದಲಿಗೆ ಎಲ್ಲಾ ಲೆಕ್ಕಾಚಾರ. ಬ್ರೆಡ್ಡಿನ ಮೇಲೆ ಬೆಣ್ಣೆ ಸವರಿದಂತೆ ಮೇಲುನೋಟಕ್ಕೆ ಎಲ್ಲವೂ ತಳುಕುಬಳುಕು.

ಆದ್ರೂ ಮಂತ್ರಿ ಸ್ಕ್ವೇರಿಗೆ ಬರಬೇಕು ಕಣ್ರಿ... ಏನನ್ನು ಕೊಂಡುಕೊಳ್ಳದಿದ್ದರೂ ಚೆಂದದ ಬಟ್ಟೆ ತೊಟ್ಟ ಬಣ್ಣ ಬಣ್ಣದ ಹುಡುಗಿಯರನ್ನು ನೋಡಲು ಬರಬೇಕು. ಮನೆಯಲ್ಲಿ, ಕಾಲೇಜಿನಲ್ಲಿ, ಅಫೀಸಿನಲ್ಲಿ ಜೈಲುಹಕ್ಕಿಗಳಾಗಿದ್ದರೇನೋ ಅನ್ನುವಷ್ಟರ ಮಟ್ಟಿಗೆ ಹುಡುಗರು ಮತ್ತು ಹುಡುಗಿಯರು ಮೈಮರೆತು ನಲಿಯುವುದನ್ನು ನೋಡಲು ಬರಲೇಬೇಕು. ನುಣುಪಾದ ನೆಲದಲ್ಲಿ ಆಗಾಗ ನಮ್ಮ ಮುಖ ನೋಡಿಕೊಳ್ಳಬೇಕು. ಬಣ್ಣ ಬಣ್ಣದ ಗೋಡೆಗಳು ಅದಕ್ಕೊಪ್ಪುವಂತ ಕಣ್ಕುಕ್ಕುವಂತ ಜಾಹಿರಾತುಗಳುಗಳನ್ನೆಲ್ಲಾ ನೋಡುತ್ತಾ ಮೆಟ್ಟಿಲು ಹತ್ತಿಳಿಯಬೇಕು. ಇಡೀ ಮಾಲನ್ನು ಲೆನ್ಸಿನ ವೈಡ್ ಆಂಗಲಿನಂತೆ ಕಣ್ಣಗಲಿಸಿ ನೋಡಿ ಕಣ್ತುಂಬಿಕೊಳ್ಳಬೇಕು. ಡಾಕ್ಟರು ವಾಕಿಂಗ್ ಮಾಡಿ ಅಂತ ಹೇಳಿದಾಗ ಬೇಸರಗೊಳ್ಳದೆ ಇಲ್ಲಿ ಬಂದು ದಿನಕ್ಕೆ ಎರಡುಗಂಟೆ ಇಡೀ ಮಾಲ್ ತುಂಬಾ ವಾಕ್ ಮಾಡಿ ಮೆಟ್ಟಿಲು ಹತ್ತಿಳಿಯಿರಿ. ಅಂತ ಏಸಿ ಮಾಲಿನಲ್ಲಿ ಕಣ್ಣು ಮತ್ತು ಮನಸ್ಸು ತಂಫು ಮಾಡಿಕೊಳ್ಳೂತ್ತಾ ಉಚಿತವಾಗಿ ದೇಹದ ತೂಕವನ್ನು ಇಳಿಸಿಕೊಳ್ಳಲು ಇದಕ್ಕಿಂತ ಒಳ್ಳೇ ದಾರಿ ಬೇರೊಂದಿಲ್ಲ.

ಮೂರನೆ ಮಹಡಿಯಲ್ಲಿರುವ ಫುಡ್ ಕಾಂಪ್ಲೆಕ್ಸು

ನನ್ನ ಈ ಉಪಾಯವನ್ನು ಕೆಲವು ವಯಸ್ಕರು ಆಗಲೇ ಕಾರ್ಯೋನ್ಮುಖರಾಗಿಬಿಟ್ಟಿದ್ದಾರೆ. ನಾನು ಪರೀಕ್ಷೆಮಾಡಲು ಮೂರು ದಿನ ಸತತವಾಗಿ ಹೋಗಿದ್ದೆ. ಮೂರು ದಿನವೂ ಸಂಜೆಯ ವೇಳೆಯಲ್ಲಿ ಆರು ವಯಸ್ಕರು ಹಾಜರಾಗಿದ್ದಾರೆ. ಅವರು ಸ್ಪಾರ್ ಮಾರ್ಕೆಟ್ಟಿನ ವೈನ್ ಸೆಕ್ಷನ್ನಿನಲ್ಲಿ ತಮ್ಮ ಆಡ್ಡ ಮಾಡಿಕೊಂಡಿದ್ದರು. ಒಬ್ಬ ಹಿರಿಯ ಅಲ್ಲಿರುವ ದುಬಾರಿ ವಿದೇಶಿ ವೈನನ್ನು ತೋರಿಸಿ ’ಫಾರೀನ್‍ನಿಂದ ಬಂದ ನನ್ನ ಅಳಿಯ ಇದೇ ವೈನನ್ನು ನನಗಾಗಿ ತಂದುಕೊಟ್ಟಿದ್ದ, ಅದನ್ನು ಜೋಪಾನವಾಗಿಟ್ಟು ನನ್ನ ಗೆಳೆಯನ ಮದುವೆ ವಾರ್ಷಿಕೋತ್ಸವಕ್ಕೆ ಗಿಫ್ಟ್ ಮಾಡಿದೆ ಕಣಯ್ಯ", ಅಂತ ಹೇಳಿದರೇ, "ನನಗೆ ಐದುನೂರು ವರ್ಷದಷ್ಟು ಹಳೆಯದಾದ ಫಾರಿನ್ನಿನ ವೈನೊಂದು ಗಿಪ್ಟ್ ಬಂದಿತ್ತು ಕಣಯ್ಯ, ಎಂಥ ಪ್ಲೇವರ್ ಅಂತೀಯಾ, ವರ್ಷಾನುಗಟ್ಟಲೇ ಅದರ ವಾಸನೆ ಎಳೆದುಕೊಂಡೇ ಖುಷಿಪಟ್ಟಿದ್ದೆ. ಅದೊಂದು ರಾತ್ರಿ ಸಿಂಗ್ ಜೊತೆಸೇರಿ ಕುಡಿದು ಖಾಲಿಮಾಡಿದ್ದೆ." ಅಂತ ಮತ್ತೊಬ್ಬರು ಹೇಳಿದ್ದು ಕೇಳಿ ನನಗೆ ನಗು ಬಂತು. ಹೀಗೆ ವಯಸ್ಕರು ಏನನ್ನು ಕೊಳ್ಳದೇ ಹೀಗೆ ಅಡ್ದಾಡಿ ವಸ್ತುಗಳ ಮುಂದೆ ನಿಂತು ತಮ್ಮ ಗತಕಾಲದ ನೆನಪುಗಳ ಸುರುಳಿಯನ್ನು ಬಿಚ್ಚಲು ಇದಕ್ಕಿಂತ ಒಳ್ಳೇ ಜಾಗ ಎಲ್ಲಿದೆ ಹೇಳಿ?

ಬೃಹತ್ ಗಾತ್ರ ಜಾಹಿರಾತು ಫಲಕಗಳು ಮಾಲುಗಳಲ್ಲಿ

ನಾನು ಗಮನಿಸಿದ ಮತ್ತೊಂದು ವಿಚಾರವೆಂದರೆ ನಿತ್ಯ ಗಾಂಪರ ಹಾಗೆ ದಿನಪತ್ರಿಕೆ ಹಂಚಲು ಬರುವ ನಮ್ಮ ಬೀಟ್ ಹುಡುಗರು ಮತ್ತು ಯುವಕರು ಇದೇ ಮಾಲುಗಳಲ್ಲಿ ಸಮವಸ್ತ್ರ ಧರಿಸಿ ಸೇಲ್ಸ್ ಬಾಯ್ಸ್ ಆಗಿರುವುದು ಕಾಣಿಸಿತು. ಮತ್ತೆ ದಿನಪತ್ರಿಕೆ ವಸೂಲಿಗೆ ಹೋದಾಗ ಒಂದು ರೂಪಾಯಿ ಮತ್ತು ಐವತ್ತು ಪೈಸೆಗೆ ನನ್ನ ಜೊತೆಗೆ ಚೌಕಾಸಿ ಮಾಡುವ ಅನೇಕ ಗ್ರಾಹಕರು ಮಾಲ್‍ನ ಮೂರನೇ ಮಹಡಿಯಲ್ಲಿರುವ ಪುಡ್ ಕಾಂಪ್ಲೆಕ್ಸುಗಳಿಗೆ ಲಗ್ಗೆ ಹಾಕಿದ್ದರು. ಅದಕ್ಕೆ ನನ್ನ ಅಭ್ಯಂತರವೇನು ಇಲ್ಲ. ಆದ್ರೆ ಇಲ್ಲಿರುವ ಪ್ರತಿಯೊಂದು ತಿಂಡಿಯ ಬೆಲೆಯೂ ನೂರನ್ನೂ ದಾಟುತ್ತದೆ. ಅದನ್ನು ಕ್ಯೂನಲ್ಲಿ ಮಕ್ಕಳ ಜೊತೆ ನಿಂತಿರುವುದು ನೋಡಿ ನನಗೆ ನಗುಬಂತು. ಇಷ್ಟೆಲ್ಲಾ ನೋಡಿದ ಮೇಲೆ ಎಲ್ಲೋ ಒಂದು ಕಡೆ ನಮಗೆ ಗೊತ್ತಿಲ್ಲದ ಹಾಗೆ ಬೇಸರವಾಗುತ್ತದೆ. ಅದ್ಯಾಕೆ ಬೇಸರವಾಗುತ್ತದೆ ಅಂತ ನಿಮ್ಮನ್ನು ನೀವು ಪ್ರಶ್ನಿಸಿಕೊಂಡರೇ ಉತ್ತರ ತಕ್ಷಣಕ್ಕೆ ಹೊಳೆಯುವುದಿಲ್ಲ. ಸ್ವಲ್ಪ ಯೋಚಿಸಿದಾಗ ಹೊಳೆಯಿತು. ಅಲ್ಲಿಗೆ ಬಂದಿರುವ ಪ್ರತಿಯೊಬ್ಬರೂ ಸಹಜವಾಗಿ ಇದ್ದಂತೆ ಕಾಣಲಿಲ್ಲ. ಜೊತೆಗೆ ನಾನು ಕೂಡ ನನಗಾಗಿ ಮಾಲ್‍ನಲ್ಲಿ ಸಹಜವಾಗಿ ಇರಲಿಲ್ಲವಲ್ಲ ಅನ್ನಿಸತೊಡಗಿತು. ಪ್ರತಿಯೊಬ್ಬರೂ ಆಧುನಿಕ ಬಟ್ಟೆಗಳನ್ನು ಧರಿಸಿದ್ದರೂ ಅದು ಅವರಿಗಾಗಿ ಹಾಕಿರಲಿಲ್ಲವೇನೋ, ಬೇರೆಯವರು ಅವರನ್ನು ನೋಡಿ ಮೆಚ್ಚಿಕೊಳ್ಳಲಿ ಎನ್ನುವ ಹಾಗೆ ಅವರ ನಡುವಳಿಕೆಯಿತ್ತು. ಮತ್ತೆ ಕ್ಷಣಕೊಮ್ಮೆ ತಮ್ಮನ್ನು ಯಾರಾದರೂ ಗಮನಿಸುತ್ತಿದ್ದಾರೆಯೇ ಅಂತ ವಾರೆನೋಟದಲ್ಲಿ ನೋಡುವವರೇ ಇದ್ದರು. ಒಟ್ಟಾರೆ ಇಡೀ ಮಾಲ್‍ನಲ್ಲಿ ತಮ್ಮ ಸಹಜಗುಣವನ್ನು ಮರೆತು ಬೇರೆಯವರಿಗಾಗಿ ಹೀಗೆಲ್ಲಾ ವರ್ತಿಸುತ್ತಿದ್ದಾರೇನೋ ಅನ್ನಿಸಿದ್ದು ನಿಜ. ಅವರಿಗೇ ತಮ್ಮ ಮನಸ್ಸಿಗೆ ಬಂದಂತೆ ಹೃದಯಪೂರ್ವಕವಾಗಿ ಬಂದ ಭಾವನೆಗಳನ್ನು ಸಹಜವಾಗಿ ಯಾರೊಂದಿಗೂ ಹಂಚಿಕೊಳ್ಳದೇ ಪ್ರತಿಯೊಬ್ಬರೂ ತೋರಿಕೆಗೆ ಒಬ್ಬರನ್ನೊಬ್ಬರೂ ಮೆಚ್ಚುತ್ತಾ ಮಾಲ್ ಕಾಂಪ್ಲೆಕ್ಸನ್ನು ಹೊಗಳುತ್ತಾ ಕೃತಕವಾಗಿ ಮುಗುಳ್ನಗು ಮಾತ್ರ ಚಿಮ್ಮಿಸುತ್ತಿದ್ದರು.

ಬಣ್ಣದ ದೀಪಗಳಿಂದ ಅಲಂಕೃತವಾದ ಮಾಲ್

ಮತ್ತೊಂದು ವಿಚಾರವೆಂದರೆ ಇಡೀ ಮಾಲ್‍ನಲ್ಲಿ ಎಲ್ಲೂ ನಾವು ಮನ:ಪೂರ್ವಕವಾಗಿ ನಗುವಂತಿಲ್ಲ. ಜೋರಾಗಿ ನಗಬಾರದೆಂದು ಎಲ್ಲೂ ಬೋರ್ಡು ಹಾಕಿಲ್ಲ. ಆದ್ರೂ ಯಾರು ಮನಸೋ ಇಚ್ಚೇ ನಕ್ಕು ಸಂತೋಷಪಡುವಂತಿಲ್ಲ. "ಹಾಗಾದರೆ ಇಂಥ ಮಾಲುಗಳಿಗೆ ಸುಖಾಸುಮ್ಮನೇ ಬರುವುದಕ್ಕೆ ಜನರಿಗೇನು ತಲೆಕೆಟ್ಟಿದೆಯೇ?" ಅಂತ ನಿಮಗನ್ನಿಸಬಹುದು. ನಾನು ಇದೇ ಪ್ರಶ್ನೆಯನ್ನು ಕೇಳಿಕೊಂಡಾಗ ಸಿಕ್ಕ ಉತ್ತರವೇನೆಂದರೆ, ಅವರು ಇಲ್ಲಿಗೆ ಬಂದಾಗ ತುಂಬಾ ಖುಷಿಯಾಗುತ್ತದೆ, ಅದಕ್ಕಾಗಿಯೇ ಬರುತ್ತಾರೆ. ಆದ್ರೆ ಅದನ್ನು ಹೊರಗಡೆ ಮಗುವಿನಂತೆ ಆನಂದಿಸಲು ಅವರಿಗೆ ನಮ್ಮ ಆಧುನಿಕ ನಗರೀಕರಣದ ಗಾಂಭೀರ್ಯ ಸಂಸ್ಕೃತಿ ಆಡ್ಡಬರುತ್ತಿದೆ. ಅಲ್ಲಿ ಮಕ್ಕಳು ಮಕ್ಕಳಂತೆ ಆನಂದಿಸಲು ಅವರ ತಂದೆತಾಯಿಗಳು ಬಿಡುವುದಿಲ್ಲ. ಅವರ ಮೇಲು ಇದೇ ಸಂಸ್ಕೃತಿಯನ್ನು ಹೇರಿಬಿಡುತ್ತಾರೆ. ಇನ್ನೂ ಅದರಲ್ಲಿ ಕೆಲಸ ಮಾಡುವ ಕೆಲಸಗಾರರಿಗೂ ಹಾಗೆ ನೀತಿ ನಿಯಮಗಳಿರುವುದರಿಂದ, ಅವರು ಕೂಡ ಒಳಗೊಳಗೆ ನಗಬೇಕು.

ಯಶವಂತಪುರ ತರಕಾರಿ ಮಾರುಕಟ್ಟೆ.

ಅದೇ ನಮ್ಮ ಮಲ್ಲೇಶ್ವರಂ ೮ನೇ ಆಡ್ಡರಸ್ತೆಗೆ ಬನ್ನಿ. ಅಲ್ಲಿ ರಸ್ತೆಯಲ್ಲಿ ಹೂ ಮಾರುವ ಹುಡುಗಿಯ ಬಳಿ ನಗುತ್ತಾ ಚೌಕಾಸಿ ಮಾಡಬಹುದು. ಕೈಗಾಡಿಯ ಹಣ್ಣಿನವನು ಹೇಳುವ ಅವನ ಸ್ವಂತ ಕತೆಯನ್ನು ಹಿತವಾಗಿ ಕೇಳಬಹುದು. ಉಗುರಿಗೆ ಹಾಕುವ ನೇಲ್ ಪಾಲಿಸ್ ಒಮ್ಮೆ ಹಾಕಿ ನೋಡಿ ಚೆನ್ನಾಗಿಲ್ಲವೆಂದರೆ ವಾಪಸ್ಸು ಕೊಡಬಹುದು, ತರಕಾರಿ ಮಾರುವವಳ ಬಳಿ ಅಮಟೇಕಾಯಿ ಕೊಳ್ಳುತ್ತಾ ಆದರಿಂದ ತಂಬುಳಿ ಮಾಡುವುದನ್ನು ಚರ್ಚಿಸಬಹುದು. ಯಶವಂತಪುರ ತರಕಾರಿ ಮಾರುಕಟ್ಟೆಯಲ್ಲಿ ಮತ್ತಷ್ಟು ಹಳ್ಳಿ ಸೊಗಡು ಭಾಷೆ ಮುಗ್ದತೆಯನ್ನು ನೋಡುತ್ತಾ, ಮನಃಪೂರ್ವಕವಾಗಿ ನಗುತ್ತಾ ವ್ಯಾಪಾರ ಮಾಡಬಹುದು. ಅಲ್ಲಿ ಎಲ್ಲವೂ ಮುಕ್ತ ಮುಕ್ತ. [ಯಶವಂತಪುರ ಸಂತೆಯನ್ನು ಆನಂದಿಸಬೇಕಾದರೆ ನನ್ನ ಈ ವಾರಕೊಮ್ಮೆ ಯಶವಂತಪುರ ಸಂತೆ. ಓದಿ.]
ಮಲ್ಲೇಶ್ವರಂ ಎಂಟನೇ ಆಡ್ಡರಸ್ತೆಯ ರಸ್ತೆ ಮಾರುಕಟ್ಟೆ
ಇಂಥ ಮಾಲುಗಳಲ್ಲಿ ಪ್ರತಿಯೊಂದು ವಸ್ತುವನ್ನು ಪ್ಲಾಸ್ಟಿಕ್ ಪೇಪರಿನಲ್ಲಿ ತುಂಬಿ ತೂಕ ಹಾಕಿ ಸೀಲ್ ಮಾಡಿಟ್ಟಿರುತ್ತಾರೆ. ನನ್ನ ಶ್ರೀಮತಿ ಐದುನೂರು ರೂಪಾಯಿ ಬೆಲೆಯ ವಸ್ತುಗಳನ್ನು ತಂದು ಮನೆಯ ಡಬ್ಬಗಳಿಗೆ ತುಂಬಿದ ನಂತರ ಎಲ್ಲ ಪ್ಲಾಸ್ಟಿಕ್ ಕವರುಗಳನ್ನು ತೂಕ ಮಾಡಿದಾಗ ೨೫೦ ಗ್ರಾಂಗಿಂತಲೂ ಹೆಚ್ಚು ತೂಗುತ್ತಿತ್ತು. ನಮ್ಮಂತೆ ಸಾವಿರಾರು ಗ್ರಾಹಕರು ಸಾವಿರಾರು ರೂಪಾಯಿ ಬೆಲೆಯ ಖರೀದಿಗಳನ್ನು ಮಾಡಿದಾಗ ಅವರಿಗೆ ಕಡಿಮೆಯೆಂದರೂ ಅರ್ಧ ಕೇಜಿ ಪ್ಲಾಸ್ಟಿಕ್ ಅವರ ಮನೆ ಸೇರುತ್ತದೆ. ಇದೇ ಲೆಕ್ಕಾಚಾರದಲ್ಲಿ ಒಂದು ಮಾಲ್ ದಿನಕ್ಕೆ ಅರ್ಧ ಟನ್‍ಗಿಂತಲೂ ಅಧಿಕ ಪ್ಲಾಸ್ಟಿಕ್ ಅನ್ನು ಮನೆಗೆ ಮನೆಗೆ ಕಳಿಸುವುದರಿಂದ ಇಂಥ ಹತ್ತಾರು ಮಾಲುಗಳಿಂದ ಅದೆಷ್ಟು ಟನ್ ಪ್ಲಾಸ್ಟಿಕ್ ಹೊರಬರಬಹುದು. ಇಷ್ಟು ಪ್ಲಾಸ್ಟಿಕ್ ಬೇಡಿಕೆಯನ್ನು ಪರೋಕ್ಷವಾಗಿ ಸೃಷ್ಟಿಸುವ ಮಾಲುಗಳಿಗೆ ಹೋಲಿಸಿದರೆ ಈ ವಿಚಾರದಲ್ಲಿ ನಮ್ಮ ರಸ್ತೆ ಮಾರುಕಟ್ಟೆಗಳೇ ಉತ್ತಮ. ನಾವು ಮಲ್ಲೇಶ್ವರಂ ಅಥವ ಯಶವಂತ ಮಾರುಕಟ್ಟೆಗೆ ಹೊರಟರೆ ಕೈಯಲ್ಲಿ ಒಂದು ದೊಡ್ಡ ಬಟ್ಟೆ ಬ್ಯಾಗುಗಳನ್ನು ತೆಗೆದುಕೊಂಡೇ ಹೊರಡುವುದು. ಕೊಂಡ ಎಲ್ಲಾ ತರಕಾರಿ ರೇಷನ್ ಇತ್ಯಾದಿಗಳನ್ನು ಅದೇ ಬ್ಯಾಗಿನಲ್ಲಿ ತುಂಬಿಸಿಕೊಳ್ಳುತ್ತೇವೆ. ಪ್ಲಾಸ್ಟಿಕ್ ಬಳಕೆ ಇದ್ದರೂ ತೀರ ಕಡಿಮೆ. ಪರೀಕ್ಷೆಗಾಗಿ ಐದುನೂರು ಬೆಲೆಯ ವಸ್ತುಗಳನ್ನು ಮಲ್ಲೇಶ್ವರಂನಲ್ಲಿ ಕೊಂಡು ತಂದಾಗ ನಮಗೆ ಬಂದ ಪ್ಲಾಸ್ಟಿಕ್ ೫೦ ಗ್ರ್‍ಆಂಗಿಂತಲೂ ಕಡಿಮೆಯೆಂದರೇ ನೀವು ನಂಬಲೇ ಬೇಕು. ಹಾಗೆ ಈ ಮಾಲ್‍ಗಳಲ್ಲಿ ನಿತ್ಯ ಉಪಯೋಗಿಸುವ ವಿದ್ಯುತ್ ಲೆಕ್ಕಕ್ಕೆ ಸಿಗುವುದಿಲ್ಲ. ದಿನದ ಹದಿನಾಲ್ಕು ಗಂಟೆ ಲಕ್ಷಾಂತರ ದೀಪಗಳು, ಏಸಿ, ಎಸ್ಕಲೇಟರುಗಳು, ಒಂದೇ ಎರಡೇ......ನಮ್ಮ ಸರ್ಕಾರ ಉತ್ಪಾದಿಸುವ ವಿದ್ಯುತ್ ಇಂಥ ಮಾಲುಗಳಿಗೆ ಸಿಂಹ ಪಾಲು ಸಿಗುವುದರಿಂದ ನಮ್ಮ ಮನೆಗಳಿಗೆ ಗಂಟೆಗೊಮ್ಮೆ ಲೋಡ್ ಸೆಡ್ಡಿಂಗ್. ಅದೆಲ್ಲಾ ಖರ್ಚನ್ನು ಕೊನೆಗೆ ನಮ್ಮ ತಲೆಗೆ ಕಟ್ಟುವುದರಿಂದ ಸಹಜವಾಗಿ ವಸ್ತುಗಳ ಬೆಲೆ ಹೆಚ್ಚೇ ಇರುತ್ತದೆ. ಅದರ ಬದಲಾಗಿ ನಮ್ಮ ರಸ್ತೆಬದಿಯಲ್ಲಿ ಹಗಲೆಲ್ಲಾ ಸೂರ್ಯನಬೆಳೆಕು ರಾತ್ರಿ ಬೀದಿ ದೀಪಗಳಲ್ಲಿ ವ್ಯಾಪಾರ ಮಾಡುವವರೊಂದಿಗೆ ಖುಷಿಯಿಂದ ಚೌಕಾಸಿ ವ್ಯಾಪಾರ ಮಾಡಿ ಸರ್ಕಾರಕ್ಕೆ ಲಕ್ಷಾಂತರ ಯೂನಿಟ್ ವಿದ್ಯುತ್ ಉಳಿಸಬಹುದಲ್ಲವೇ?
ಇವೆಲ್ಲಾ ನನ್ನ ಮನಸ್ಸಿಗೆ ಅನ್ನಿಸಿದ ಭಾವನೆಗಳು ಅಷ್ಟೇ. ಬಡವರ, ಬಡ ಮದ್ಯಮ ವರ್ಗದವರ ದೃಷ್ಟಿಕೋನದ ಅಲೋಚನೆಗಳಷ್ಟೆ. ಶ್ರೀಮಂತರ ದೃಷ್ಟಿಕೋನದಲ್ಲಿ ನೋಡಿದಾಗ ಇದಕ್ಕಿಂತ ಭಿನ್ನ ಚಿತ್ರಗಳೇ ಮೂಡಬಹುದು. ನೀವು ಮಾಲ್‍ಗಳಿಗೆ ಬೇಟಿಕೊಟ್ಟರೆ ನಿಮ್ಮ ಅನುಭವವೂ ಬೇರೆಯಾಗಬಹುದು. ದಿನ ಬದಲಾದಂತೆ ಭಾವನೆಗಳು ಬದಲಾಗಬಹುದು. ಬದಲಾವಣೆ ಜಗದ ನಿಯಮ. ಆದ್ರೆ ಅದು ಪರಿಸರಕ್ಕೆ ಸಂಬಂದಿಸಿದಂತೆ ದಿಡೀರ್ ಬದಲಾವಣೆಯಾಗಬಾರದು, ನಮ್ಮ ಸುಂದರ ಸಾಲುಮರಗಳ ಸಂಪಿಗೆ ರಸ್ತೆಯ ವಾತಾವರಣ ಬದಲಾಗಬಾರದು. ಹಸಿರಿಂದ ನಳನಳಿಸುವ ಮರಗಳು ಮರೆಯಾಗಬಾರದು ಅಲ್ಲವೇ....

ಚಳಿಗಾಲದಲ್ಲಿ ಸಂಪಿಗೆ ರಸ್ತೆ...ಮುಂದೆಯೂ ಈ ಹಸಿರು ಹೀಗೆ ಉಳಿಯುವುದೇ?

ಚಿತ್ರಗಳು ಮತ್ತು ಲೇಖನ.
ಶಿವು.ಕೆ

Tuesday, April 6, 2010

ಬ್ಲಾಗ್ ಲೋಕದ ಮನಸ್ಸು ದೊಡ್ಡದು.

ಫೋನಿಗೆ ಅಥವ ಎದುರಿಗೆ ಸಿಕ್ಕಾಗ ಮನಃಪೂರ್ವಕವಾಗಿ ಶಿವಣ್ಣ ಅಂತಲೇ ಕರೆಯುವ ನವೀನ್ ಅದೊಂದು ಮದುವೆ ಮನೆಯಲ್ಲಿ ದೊಡ್ಡ ಮಟ್ಟದ ಚೆಕ್ [ನನಗೆ, ನವೀನ್‍ಗೆ ಮತ್ತು ಅಪಘಾತಕೊಳ್ಳಗಾದ ವಿಶ್ವನಾಥನಿಗಂತೂ ದೊಡ್ದಮೊತ್ತ]ನನ್ನ ಕೈಗಿತ್ತಾಗ ಅಚ್ಚರಿಯ ಜೊತೆಗೆ ಹೀಗಾಗನ್ನಿಸಿದ್ದು ನಿಜ. ಈ ಲೇಖನವನ್ನು ನಾನು ಬರೆಯಬಾರದೆಂದುಕೊಂಡು ಅದೆಷ್ಟೋ ಬಾರಿ ಮುಂದೂಡಿದರೂ ನವೀನ್ ನನ್ನ ಕೈಗೆ ಆ ಚೆಕ್ ಕೊಟ್ಟಾಗ ಬರೆಯಲೇ ಬೇಕೆನಿಸಿತ್ತು.

ದಿನಪತ್ರಿಕೆಯ "ವೆಂಡರ್" ವಿಶ್ವನಾಥನಿಗೆ ಅಪಘಾತವಾದಾಗ ನಾನು ಸಹಜವಾದ ಕಾಳಜಿಯಿಂದ ಒಂದು ಪುಟ್ಟ ಲೇಖನವನ್ನು ಬರೆದು ಬ್ಲಾಗಿನಲ್ಲಿ ಹಾಕಿದೆ. ಆಗ ನನಗೆ ಕೇವಲ ಒಂದು ಸಣ್ಣ ಕಾಳಜಿಯುಕ್ತ ಸುದ್ದಿಯಾಗಿ ಬ್ಲಾಗಿನಲ್ಲಿ ಹಾಕಬೇಕೆನ್ನುವುದಷ್ಟೇ ನನ್ನ ಉದ್ದೇಶವಾಗಿತ್ತು. ಆತನ ವಿವರಗಳನ್ನು ಪಡೆದು ಬ್ಲಾಗಿನಲ್ಲಿ ಹಾಕಿದ ಮರುಕ್ಷಣವೇ ಶ್ವೇತರವರು ಮೊದಲು ಪ್ರತಿಕ್ರಿಯಿಸಿದ್ದು ಹೀಗೆ. ವಿಶ್ವನಾಥನಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ ಅವರ ಬ್ಯಾಂಕ್ ಅಕೌಂಟ್ ನಂಬರ್ ಪಡೆದು ಬ್ಲಾಗಿನಲ್ಲಿ ಹಾಕಿ ಅಂತ. ಇದನ್ನು ನಿರೀಕ್ಷಿಸದಿದ್ದರೂ ಅವರ ಪ್ರತಿಕ್ರಿಯೆಯಿಂದಾಗಿ ಕೂಡಲೇ ಆತ ಆಡ್ಮಿಟ್ ಆಗಿದ್ದ ಪ್ರಿಸ್ಟೇನ್ ಆಸ್ಪತ್ರೆಗೆ ಹೋಗಿ ಆತನ ಬ್ಯಾಂಕ್ ಅಕೌಂಟ್ ನಂಬರ್ ಮತ್ತು ಇತರ ಪುಟ್ಟ ವಿವರಗಳನ್ನು ಹಾಕಿದೆ. ಆಮೇಲೆ ನಡೆದಿದ್ದು ಅಚ್ಚರಿಯ ಸಂಗತಿ. ಹತ್ತಾರು ಮೇಲ್‍ಗಳು ಬಂದವು. ಮೊದಲಿಗೆ ಹೊಸಪೇಟೆಯ ಬ್ಲಾಗ್ ಗೆಳೆಯರಾದ ಸೀತಾರಾಂ ಸರ್ ಅವನ ಬ್ಯಾಂಕ್ ಖಾತೆಗೆ ಹಣ ತುಂಬಿದರು. ಕುವೈಟಿನಿಂದ ಗೆಳೆಯ ಡಾ.ಆಜಾದ್ ಹಣ ಸಹಾಯದ ಜೊತೆಗೆ ವಿಶ್ವನ ಬಗ್ಗೆ ಚಾಟಿನಲ್ಲಿ ವಿಚಾರಿಸಿಕೊಳ್ಳುತ್ತಿದ್ದರು. ಉಮೇಶ್ ದೇಸಾಯಿ, ಕೊಪ್ಪಳದ ಸಲೀಮ್, ಮೈಸೂರಿನಿಂದ ಜಿ.ಮಾದವ್, ಲೋಕೇಶ್ ಲಕ್ಷ್ಮಿದೇವಿ, ಬೆಂಗಳೂರಿನಿಂದ ಸುರೇಶ್, ಹೀಗೆ ಅನೇಕರು ಅವನ ಖಾತೆ ಹಣ ಹಾಕಿದರು. ಮತ್ತೆ ನೂರಾರು ನನ್ನ ಬ್ಲಾಗ್ ಗೆಳೆಯರು ಅವನ ಅರೋಗ್ಯವನ್ನು ನಿತ್ಯ ವಿಚಾರಿಸಿ ಮೇಲ್ ಮಾಡುತ್ತಿದ್ದರು. ಫೋನ್ ಮಾಡುತ್ತಿದ್ದರು. ಅವನು ಬೇಗ ಗುಣಮುಖನಾಗಲಿ ಅಂತ ಆರೈಸುತ್ತಿದ್ದರು. ಇವೆಲ್ಲದರ ಪ್ರತಿಫಲವೇ ಏನೋ ಸದ್ಯ ವಿಶ್ವ ಗುಣಮುಖನಾಗಿದ್ದಾನೆ. ಆವನ ಶಸ್ತ್ರಚಿಕಿತ್ಸೆ, ಆಸ್ಪತ್ರೆ ಖರ್ಚಿನ ನಾಲ್ಕನೇ ಒಂದು ಭಾಗವನ್ನು ನಮ್ಮ ಬ್ಲಾಗ್ ಗೆಳೆಯರ ಬಳಗ ತುಂಬಿದೆ. ಇನ್ನೂ ಕೆಲವೇ ದಿನಗಳಲ್ಲಿ ಮೊದಲಿನಂತೆ ಆಗುತ್ತಾನೆ ತನ್ನ ನಿತ್ಯ ಕೆಲಸದಲ್ಲಿ ತೊಡಗಿಕೊಳ್ಳುತ್ತಾನೆ. ಇಂಥ ಇಷ್ಟು ಒಳ್ಳೆಯ ಮನಸಿನ, ಕಾಳಜಿಯುತ, ಮನಃಪೂರ್ವಕವಾಗಿ ತನು,ಮನ, ಧನ ಸಹಾಯ ಹೊರಗಿನ ಯಾವ ಮಾದ್ಯಮದಲ್ಲಿದೆ ತೋರಿಸಿ ಸ್ವಾಮಿ!

ಇದೇ ವಿಚಾರವಾಗಿ ಮೊದಲಿಗೆ ಪತ್ರಿಕೆ ಮಾದ್ಯಮಗಳಿಗೆ ಸುದ್ಧಿ ಮುಟ್ಟಿಸಿದೆ. ನನಗೆ ಗೊತ್ತಿರುವ ಎಲ್ಲಾ ಪತ್ರಿಕಾ ಪ್ರತಿನಿಧಿಗಳು, ವರದಿಗಾರರು, ಡೆಸ್ಕ್ ಆಪರೇಟರುಗಳು, ಹೀಗೆ ಪ್ರತಿಯೊಬ್ಬರಿಗೂ ಮೆಸೇಜ್ ಮಾಡಿದೆ. ಮೇಲ್ ಮಾಡಿದೆ. ಯಾರೊಬ್ಬರಿಂದಲೂ ಸರಿಯಾದ ಪ್ರತಿಕ್ರಿಯೆಯಿಲ್ಲ, ಉತ್ಸಾಹವಿಲ್ಲ. ಮೊದಲಿಗೆ ಕಾಳಜಿಯಂತೂ ಇಲ್ಲವೇ ಇಲ್ಲ. ಏಕೆಂದರೆ ನಮ್ಮ ವಿಶ್ವನೇನು ದೊಡ್ಡ ಸೆಲಬ್ರಟಿಯೇ, ಸಿನಿಮಾನಟನೇ, ಪ್ರಖ್ಯಾತ ಕ್ರೀಡಾಪಟುವೆ, ಅಥವ ರಾಜ್ಯ, ರಾಷ್ಟ್ರಮಟ್ಟದ ರಾಜಕಾರಣಿಯೇ! ಯಾವುದ ಅಲ್ಲವಲ್ಲ. ಕರ್ನಾಟಕದ ಆರು ಕೋಟಿ ಜನಸಂಖ್ಯೆಯಲ್ಲಿ ಒಬ್ಬನಾದ ಬಡ ದಿನಪತ್ರಿಕೆ ವಿತರಕ. ಆತನಿಗೆ ಸಹಾಯ ನೀಡದಿದ್ದರೂ ತೊಂದರೆಯಿಲ್ಲ. ದಿನಪತ್ರಿಕೆ ವಿತರಿಸುವ "ವೆಂಡರ್" ಆಗಿರುವುದರಿಂದ ಪತ್ರಿಕಾ ಮಾದ್ಯಮವೆನ್ನುವ ಅವಿಭಕ್ತ ಕುಟುಂಬದ ಸದಸ್ಯನೇ ತಾನೇ!. ಅದಕ್ಕಾಗಿಯಾದರೂ ಕೊನೇ ಪಕ್ಷ ಒಂದು ಕಾಳಜಿಯುಕ್ತ, ಸಹಾನುಭೂತಿಯ ಸುದ್ಧಿಯನ್ನು ಸಣ್ಣಕಾಲಂನಲ್ಲಿ ನಮ್ಮ ಪ್ರಖ್ಯಾತ ಪತ್ರಿಕೆಗಳು ಹಾಕಬಹುದಿತ್ತು. ಕನ್ನಡಪ್ರಭ ಮತ್ತು ಇಂಗ್ಲೀಷಿನ ಡಿ.ಎನ್.ಎ ಪತ್ರಿಕೆಗಳು ಮಾತ್ರ ವಿಶ್ವನ ವಿಚಾರವಾಗಿ ಸಣ್ಣ ಕಾಲಂನಲ್ಲಿ ಪ್ರಕಟಿಸಿದ್ದು ಬಿಟ್ಟರೆ ಉಳಿದ ಬೆಂಗಳೂರಿನ ಪತ್ರಿಕೆಗಳ್ಯಾವುವು ಕೂಡ ವಿಶ್ವನ ಬಗ್ಗೆ ಕಾಳಜಿವಹಿಸಲಿಲ್ಲ. ನಿಮಗೆ ತಿಳಿದಿರಲಿ ಅಂತ ಒಂದು ವಿಚಾರವನ್ನು ತಿಳಿಸುತ್ತೇನೆ. ಈ ವಿಚಾರವನ್ನು ನಾನು ಇಂಗ್ಲೀಷಿನ ನಂಬರ್ ಒನ್ ಪತ್ರಿಕೆಯೆಂದು ಸ್ವಘೋಷಿತ ಪತ್ರಿಕೆಗೆ ಇಂಥ ವಿಚಾರವನ್ನು ಹಾಕಬೇಕಾದರೆ ನಾವೇ ಹಣಕೊಡಬೇಕಂತೆ! ಅವರದು ಪ್ರತಿ ಆಕ್ಷರಕ್ಕೂ ಹಣದ ಲೆಕ್ಕಚಾರವಿದೆಯಂತೆ! ಆ ಪತ್ರಿಕೆ ಸಂಪಾದಕೀಯ ವಿಭಾಗಕ್ಕೆ ಹೊರಗಿನವರಿಗೆ ಹೋಗಲು ಸಾಧ್ಯವೇ ಇಲ್ಲ. ಏಕೆಂದರೆ ಅದು ಒಂಥರ ಸಾಪ್ಟ್ ವೇರ್ ಕಂಪನಿಯ ರೀತಿಯ ಸೆಕ್ಯುರಿಟಿ ಇದೆ. ಇರಲಿಬಿಡಿ ಅಷ್ಟು ದೊಡ್ಡ ಕಛೇರಿಗೆ ಬೇಕು ಒಪ್ಪಿಕೊಳ್ಳುತ್ತೇನೆ. ಆದ್ರೆ ನಾವು ಯಾವುದೇ ಸುದ್ಧಿಯ ಕವರನ್ನು ಅಲ್ಲಿ ಹೊರಗೆ ಕುಳಿತಿರುವ ಸೆಕ್ಯುರಿಟಿ ಗಾರ್ಡ್ ಕೈಗೆ ಕೊಟ್ಟುಬರಬೇಕು. ಅವನೇ ಸಂಪಾದಕನಂತೆ ನಮ್ಮ ಬಳಿ ಎಲ್ಲಾ ವಿಚಾರಿಸುತ್ತಾನೆ. ಕೊನೆಗೆ ತಲುಪಿಸುತ್ತೇನೆ ಎಂದು ಹೇಳುತ್ತಾನೆ. ಕಳೆದ ನಾಲ್ಕು ವರ್ಷಗಳಿಂದ ನಾನು ತಲುಪಿಸಿದ ಯಾವ ಸುದ್ಧಿಯೂ ಆ ಪತ್ರಿಕೆಯಲ್ಲಿ ಬರಲಿಲ್ಲ ಏಕೆಂದರೆ ನಾನು ಸುದ್ಧಿಯನ್ನು ಹಾಕಲು ಹಣಕೊಡಲಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ವಿಶ್ವ ಅದೇ ದಿನಪತ್ರಿಕೆಯನ್ನು ನೂರಕ್ಕೂ ಹೆಚ್ಚು ಮನೆಗಳಿಗೆ ಮುಟ್ಟಿಸುತ್ತಾನೆ. ಇನ್ನುಳಿದ ದಿನಪತ್ರಿಕೆಗಳ ಕಚೇರಿಗಳಲ್ಲಿ ಒಳಗೆ ಹೋಗಿ ವಿಚಾರವಿನಿಮಯ, ಸುದ್ಧಿಗಳನ್ನು ನೇರವಾಗಿ ಮುಟ್ಟಿಸುವ ಅವಕಾಶವಿದೆಯಾದರೂ ಇಂಥ ಸುದ್ಧಿಗಳು ಬರುವುದಿಲ್ಲ. ಏಕೆಂದರೆ ಅಲ್ಲಿರುವ ವರದಿಗಾರರನ್ನು, ಡೆಸ್ಕ್ ಆಪರೇಟರುಗಳನ್ನು, ಉಪಸಂಪಾದಕರನ್ನು ಮರ್ಜಿ ಮಾಡಬೇಕು. ಇದು ಸುದ್ಧಿ ವಿಚಾರಕ್ಕೆ ಮಾತ್ರ ನಿಲ್ಲುವುದಿಲ್ಲ. ನೀವು ಪ್ರತಿಭಾವಂತರಾಗಿ ಒಳ್ಳೆಯ ಲೇಖನ, ಫೋಟೊ ಚಿತ್ರ ಇತ್ಯಾದಿಗಳನ್ನು ಇಷ್ಟಪಟ್ಟು ಕಷ್ಟಪಟ್ಟು ಮಾಡಿದ್ದರೆ ಅದನ್ನು ಪತ್ರಿಕೆಯಲ್ಲಿ ಪ್ರಕಟವಾಗಬೇಕಾದರೆ ಅದು ಸುಲಭವಲ್ಲ. ಏಕೆಂದರೆ ಅಲ್ಲಿ ನಿಮಗೆ ಪರಿಚಯವಿರಬೇಕು. ನಿಮ್ಮಿಂದ ಅವರಿಗೆ ಉಪಯೋಗವಾಗಬೇಕು. ನೀವೆಷ್ಟೇ ಪ್ರತಿಭಾವಂತರಾದರೂ ಸುಮ್ಮಸುಮ್ಮನೇ ಪತ್ರಿಕೆಯಲ್ಲಿ ನಿಮ್ಮ ಲೇಖನ, ಫೋಟೋಗಳನ್ನು ಪ್ರಕಟಿಸಲು ಅವರೇನು ದಡ್ಡರೇ! ಹಾಗೂ ಹೀಗೂ ನಿಮ್ಮ ಲೇಖನ, ಫೋಟೊಗಳನ್ನು ಅನೇಕ ಬಾರಿ ಹಾಕುತ್ತಾರೆ ಅಂದುಕೊಂಡರೂ ನೀವು ಜನಪ್ರಿಯರಾಗಿಬಿಟ್ಟರೇ ಅವರನ್ನು ಮೀರಿಸಿ ಜನಪ್ರಿಯರಾಗಿಬಿಟ್ಟರೆ ಮುಂದೆ ನಿಮ್ಮ ಯಾವ ಲೇಖನಗಳು, ಚಿತ್ರಗಳು, ವ್ಯಂಗ್ಯಚಿತ್ರಗಳು ಪ್ರಕಟವಾಗುವುದಿಲ್ಲ. ಆದರೂ ನೀವು ಹೋದರೆ ಚೆನ್ನಾಗಿ ಮಾತಾಡಿಸುತ್ತಾರೆ. ಹೊಸ ಲೇಖನವನ್ನು ಕೊಟ್ಟರೆ ನಮ್ಮ ಕಚೇರಿಯವರೇ, ವರದಿಗಾರರೇ ಮಾಡುತ್ತಾರಲ್ಲ ಅಂತ ನಿಮ್ಮನ್ನು ನಿರಾಸೆಗೊಳಿಸುತ್ತಾರೆ. ಅದು ಯಾವ ಮಟ್ಟದ ಪರಿಣಾಮ ಬೀರುತ್ತದೆಂದರೆ ನೀವು ಬರೆಯುವುದನ್ನೇ ನಿಲ್ಲಿಸುತ್ತೀರಿ. ನನ್ನ ಅನೇಕ ಪ್ರತಿಭಾವಂತ ಗೆಳೆಯರು ಸದ್ಯ ಇದೇ ಕಾರಣದಿಂದಾಗಿ ಬರೆಯುವುದನ್ನು ನಿಲ್ಲಿಸಿದ್ದಾರೆ.

ನೀವೇ ಪತ್ರಿಕೆಯಲ್ಲಿ ಓದಿರುವಂತೆ ಎಷ್ಟು ಜನ ದಿನಪತ್ರಿಕೆ ಹಂಚುವ ಹುಡುಗರು, ವೆಂಡರುಗಳು ಅಪಘಾತದಲ್ಲಿ ಸತ್ಯ ಸುದ್ಧಿ ಬಂದಿದೆ ಹೇಳಿ. ಅದೇ ಯಡಿಯೂರಪ್ಪನವರು ಸೈಕಲ್ಲಿನಿಂದ ಬೀಳುವ ದೃಶ್ಯ ರಾಷ್ಟ್ರವ್ಯಾಪಿ ಸುದ್ಧಿಯಾಗುತ್ತದೆ. ಇಷ್ಟೆಲ್ಲಾ ಹೇಳಿದ ಮೇಲೆ ನಮ್ಮ ವಿಶ್ವನಂಥವರಿಗೆ ಪತ್ರಿಕಾ ಮಾದ್ಯಮದಿಂದ ಸಹಾಯ ಸಾಧ್ಯವೇ? ಇನ್ನೂ ಟಿ.ವಿ ಮಾಧ್ಯಮವೂ ಇದಕ್ಕಿಂತ ಬೇರೆಯಲ್ಲ. ಅವರಿಗೆ ಟಿ ಆರ್ ಪಿ ಹೆಚ್ಚುತ್ತಿರಬೇಕು. ನಮ್ಮ ವಿಶ್ವನಿಗೆ ಚಾನಲ್ಲುಗಳ ಟಿ ಅರ್ ಪಿ ಹೆಚ್ಚಿಸಲು ಸಾಧ್ಯವೇ?

ನಿಮಗೆ ತಿಳಿದಿರಲಿ ಅಂತ ಮತ್ತೊಂದು ವಿಚಾರವನ್ನು ತಿಳಿಸುತ್ತೇನೆ. ನನ್ನಂಥ ವಿಶ್ವನಂಥ ಸಾವಿರಾರು "ವೆಂಡರುಗಳು" ನಿತ್ಯ ಬೆಳಗಿನ ದಿನಪತ್ರಿಕೆ ವಿತರಣೆ ಕೆಲಸದಲ್ಲಿ ತೊಡಗಿ ನಮ್ಮದೇ ಟೆನ್ಷನ್‍ನಲ್ಲಿರುವಾಗ ಆ ಕ್ಷಣ ಹಾಜರಾಗುತ್ತಾರೆ ಇದೇ ಪತ್ರಿಕೆಗಳ ಸರ್ಕುಲೇಷನ್ ವಿಭಾಗದ ಪ್ರತಿನಿಧಿಗಳು. ನಮ್ಮನ್ನೂ ಯಾವ ರೀತಿ ಓಲೈಸುತ್ತಾರೆಂದರೆ ಬೇರೆಲ್ಲಾ ಪತ್ರಿಕೆಗಳನ್ನು ನಿಲ್ಲಿಸಿ ಅವರ ಪತ್ರಿಕೆಯನ್ನೇ ಗ್ರಾಹಕರಿಗೆ ಮುಟ್ಟಿಸಬೇಕಂತೆ. ಅದಕ್ಕೆ ಏನೆಲ್ಲಾ ತಂತ್ರ ಪ್ರತಿತಂತ್ರ. ಒಟ್ಟಾರೆ ಮುಂಜಾನೆ ಲೋಕದಲ್ಲಿ ಒಬ್ಬರ ಕಾಲೆಳೆದು ಬೀಳಿಸಿ ಇವರು ಎದ್ದು ನಿಲ್ಲಲೂ ಇವರು ಮಾಡದಿದ್ದ ಕುತಂತ್ರವೇ ಇಲ್ಲ. ಆದ್ರೆ ನಮ್ಮಲ್ಲಿ ಯಾರಿಗೆ ಅಪಘಾತವಾಗಲಿ, ತೊಂದರೆಯಾಗಲಿ, ವಿಚಾರ ತಿಳಿದ ತಕ್ಷಣ "ಅರೆರೆ...ಅಯ್ಯೋ ಪಾಪ ತುಂಬಾ ಒಳ್ಳೆ ಹುಡುಗ ಕಣ್ರೀ..ಹೀಗಾಗಬಾರದಿತ್ತು" ಅಂತ ಸಹಾನುಭೂತಿ ವ್ಯಕ್ತಪಡಿಸಿ ಸುಮ್ಮನಾಗಿಬಿಡುತ್ತಾರೆ. ಮರುದಿನ ಆತ ಏನಾದನೆಂದು ಯಾರಿಗೂ ತಿಳಿದುಕೊಳ್ಳುವ ಕಾಳಜಿಯಿಲ್ಲ. ಇದೇ ಪ್ರತಿನಿಧಿಗಳಿಗೆ ವಿಶ್ವನ ವಿಚಾರವನ್ನು ಮೊದಲು ಮುಟ್ಟಿಸಿದ್ದು. ಒಬ್ಬೊಬ್ಬರದು ಒಂದೊಂದು ರೀತಿ. ಒಬ್ಬ ವಿಶ್ವನಿಂದ ಒಂದು ಲೆಟರ್ ತರಲು ಸಾಧ್ಯವೇ ಅಂತ ಕೇಳಿದರೆ, ಮತ್ತೊಬ್ಬ ತಕ್ಷಣವೇ ಹೋಗಿ ಸಹಾಯ ಮಾಡುವಂತೆ ಮಾತಾಡುತ್ತಾನೆ. ಆದ್ರೆ ಪಲಿತಾಂಶ ಮಾತ್ರ ಸೊನ್ನೆ.

ಈ ಲೇಖನದಲ್ಲಿ ನನ್ನ ವೈಯಕ್ತಿಕ ಅನುಭವಗಳನ್ನು ಅನಿಸಿಕೆಗಳನ್ನು ಹೇಳಿದ್ದೇನೆ. ಮತ್ತೆ ಎಲ್ಲಾ ದಿನಪತ್ರಿಕೆಗಳು ಕೆಟ್ಟವಲ್ಲ. ಅಲ್ಲಿಯೂ ಒಳ್ಳೆಯ ಮನಸ್ಸಿನ ವರದಿಗಾರರಿದ್ದಾರೆ. ಎಲ್ಲರ ಬಗೆಗೂ ಕಾಳಜಿಯುಳ್ಳ ಸಂಪಾದಕರು ಇದ್ದಾರೆ. ಸಮಾಜದ ಸ್ವಾಸ್ಥ ಸುಧಾರಿಸಲು ಸಹಕರಿಸುತ್ತಿದ್ದಾರೆ.

ಈಗ ಹೇಳಿ ಯಾವ ಮಾದ್ಯಮದಲ್ಲಿ ಆತ್ಮೀಯವಾದ ಒಳ್ಳೆಯ ಹೃದಯವಂತಿಕೆಯ ಮನಸ್ಸಿದೆ? ನಮ್ಮ ಬ್ಲಾಗ್ ಲೋಕವಲ್ಲವೇ....ವಿಶ್ವನ ವಿಚಾರವಾಗಿ ತನು, ಮನ ಧನವನ್ನು ಹೃದಯಪೂರ್ವಕವಾಗಿ ಸಹಾಯ ಮಾಡಿದ ನಮ್ಮ ಪರಿಶುದ್ಧ ಬ್ಲಾಗ್ ಲೋಕಕ್ಕೆ ಬ್ಲಾಗ್ ಗೆಳೆಯರಿಗೆ ವಿಶ್ವನ ಪರವಾಗಿ ನಮ್ಮ ದಿನಪತ್ರಿಕೆ ವಿತರಕರ ಪರವಾಗಿ, ಬೀಟ್ ಹುಡುಗರ ಪರವಾಗಿ ಹೃತ್ಪೂರ್ವಕವಾದ ಧನ್ಯವಾದಗಳನ್ನು ಮತ್ತೊಮ್ಮೆ ತಿಳಿಸುತ್ತೇನೆ.

ವಿಶ್ವನಿಗೆ ಅವನ ಬ್ಯಾಂಕ್ ಅಕೌಂಟಿಗೆ ಬಂದ ಹಣವನ್ನು ನಾನು ಖುದ್ದಾಗಿ ತಂದು ಹಾಕಿದ್ದೇನೆಂದು ಕಲೆಕ್ಟ್ ಮಾಡಿದ್ದೇನೆಂದು ಆತ ತಿಳಿದುಕೊಂಡಿದ್ದ. ಅವನಿಗೆ ಈ ಬ್ಲಾಗ್ ಲೋಕದ ಬಗ್ಗೆ ವಿವರಿಸಿ, ಹಣವೆಲ್ಲಾ ಅವನ ಅಕೌಂಟಿಗೆ ಹೇಗೆ ಬಂತು ಅಂತ ಅವನಿಗೆ ವಿವರಿಸಿದೆ. ಅವನಿಗೆ ಆಶ್ಚರ್ಯವಾಗಿ ಇದೆಲ್ಲವೂ ನಿಜವಾ? ಅಂತ ಕೇಳಿದ. ನಾನು ನಿಜವೆಂದೆ. ಹಾಗೆ ನೋಡಿದರೆ ನನಗೆ ಇದೆಲ್ಲಾ ಆಗಿರುವುದು ನಿಜವಾ? ಅಂತ ಅನೇಕ ಬಾರಿ ಅನ್ನಿಸಿದ್ದು ಉಂಟು.

ವಿಶ್ವನಿಗೆ ಹಣ ಯಾವ ಯಾವ ಬ್ಯಾಂಕ್ ನಂಬರುಗಳ ಮೂಲಕ ಬಂದಿದೆ ಎನ್ನುವುದನ್ನು ಕೆಳಗೆ ಬರೆದಿದ್ದೇನೆ. ಇದನ್ನು ಇಲ್ಲಿ ಅಂಕಿಅಂಶ ಸಮೇತ ಕೊಡುವ ಉದ್ದೇಶ ಬೇರೇನು ಅಲ್ಲ. ಒಳ್ಳೆಯ ಮನಸ್ಸಿನಿಂದ ನೀವು ಕಳಿಸಿರುವ ಹಣ ವಿಶ್ವನ ಬ್ಯಾಂಕ್ ಖಾತೆ ಸರಿಯಾಗಿ ಜಮೆಯಾಗಿದೆಯೆನ್ನುವದನ್ನು ತಿಳಿಸಲಿಕ್ಕಾಗಿ ಅದರ ವಿವರಣೆಯನ್ನು ಕೊಡುತ್ತಿದ್ದೇನೆ..
೧] NEFT customer payment inwa ref:SBINH10056032305:---Rs.150
2] By ABB DEP-HOSPET.Dep.slip NO. 0000000/ABB S-------Rs.2480-00
3] By ABB Dep-Bangalore-J.Umesh Desai----------------------Rs.500-00
4] By ABB Dep-Ranibennur By Cash Nanda--------------------RS.101-00
5]By Shivu.k Cheque.7820---೦೧-೦೩-೨೦೧೦--------------------Rs. 3000-00
6]By ABB cheque Dep at 022 Thrru Inst.0088875-26-2-2010.Rs. 1001-00
7]By NEFT Customer payment inwa.
Ref:CITIN10006705947 Date:3-3-2010---------------- Rs. 300-00
8] By ABB Dep-Bangalore-S Cash by suresh-------------------Rs.1480-00
9]By Cash-----------------------------------------------------Rs-500-00
10]By NEFI Customer payment Inwa
Ref: AMBR4060310X4K1---Date:8-3-2010--------------- Rs.5000-00
11] By ABB Dep-Mysore-K B Lokesh
Dep.slip no.0000000/ABB S------------------------------ Rs. 480-00
12]By Inst.no: 468672 on SYNDICATE BANK-
Lakshmi Devi--------------------------------------------- Rs. 100-00
13] By Inst.no.:311894 on Vijaya Bank-------------------------Rs.1000-00
14] Cheque by Navin Indian------Date:5-4-2010--------------Rs.5000-00

ಇಲ್ಲಿರುವ ವಿವರಣೆಗಳೆಲ್ಲಾ ವಿಶ್ವನ ಬ್ಯಾಂಕ್ ಪಾಸ್‍ಬುಕ್‍ನಲ್ಲಿರುವಂತದ್ದು. ಅದನ್ನು ಹಾಗೇ ಇಲ್ಲಿ ಬರೆದಿದ್ದೇನೆ. ಆತನ ಆಸ್ಪತ್ರೆಯ ಖರ್ಚು ವೆಚ್ಚದ ನಾಲ್ಕನೇ ಒಂದು ಭಾಗದ ಹಣವನ್ನು ತುಂಬಿರುವ ನಮ್ಮ ಬ್ಲಾಗ್ ಲೋಕಕ್ಕೆ ಸಾವಿರ ಪ್ರಣಾಮಗಳು ಅಂತ ವಿಶ್ವನಾಥ ಧನ್ಯವಾದಗಳನ್ನು ಹೇಳಿದ್ದಾನೆ.

ಅಪಘಾತಕ್ಕೊಳಗಾಗಿ ಚೇತರಿಸಿಕೊಂಡಿರುವ ವಿಶ್ವ. ಈ ಫೋಟೋ ಎರಡು ದಿನಗಳ ಹಿಂದೆ ಕ್ಲಿಕ್ಕಿಸಿದ್ದು. ಈಗ ಎಂದಿನಂತೆ ಮತ್ತೆ ದಿನಪತ್ರಿಕೆ ವಿತರಣೆ ಕೆಲಸಕ್ಕೆ ಹೋಗುತ್ತಿದ್ದಾನೆ.

----------------------------------------
----------------------------------------

ಕೊನೆಯದಾಗಿ ಮತ್ತೊಂದು ವಿಚಾರವೇನೆಂದರೆ ನನ್ನ ಛಾಯಾಕನ್ನಡಿಯಲ್ಲಿ ಇದು ನೂರನೇ ಲೇಖನ. "ಛಾಯಾಕನ್ನಡಿ"ಯಲ್ಲಿ ನನ್ನ ನೂರನೇ ಲೇಖನ ಬರುತ್ತಿದೆಯೆಂದರೆ ಅದಕ್ಕೆ ನೀವು ನೀಡುತ್ತಿರುವ ತುಂಬು ಹೃದಯದ ಪ್ರೋತ್ಸಾಹ. ನೀವು ಛಾಯಾಕನ್ನಡಿಗೆ ಬಂದು ನೋಡಿ, ಓದಿಖುಷಿಪಟ್ಟು ಈ ಮಟ್ಟದ ಪ್ರೋತ್ಸಾಹ ನೀಡುತ್ತಿದ್ದೀರಿ. ಆಗಾಗ ನಡೆಯುವ ತಪ್ಪುಗಳನ್ನು ತಿದ್ದುತ್ತಿದ್ದೀರಿ. ಅದಕ್ಕಾಗಿ ನನ್ನ ಬ್ಲಾಗ್ ಗೆಳೆಯರಿಗೆಲ್ಲಾ ಹೃತ್ಪೂರ್ವಕ ನಮನಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

ಶಿವು.ಕೆ

Monday, March 29, 2010

ಕಿಟಕಿಯಲ್ಲೇನಿದೆ? ಕಿಟಕಿಯೊಳಗಿನ್ನೇನಿದೆ?


ಅರೆರೆ! ಇದೇನಿದು ಕಿಟಕಿ ವಿಚಾರವೆಂದ ತಕ್ಷಣ ಮನಸ್ಸಿನಲ್ಲೇ ಒಂಥರ ಕಸಿವಿಸಿಯುಂಟಾಗುತ್ತದಲ್ಲವೇ? ಅದು ಸಹಜಬಿಡಿ. ನಮ್ಮನೆ ಕಿಟಕಿಯನ್ನೇ ಯಾರಾದರೂ ನೋಡಿದರೆ ನಮಗೊಂತರ ಆಗುತ್ತದೆ. ಇನ್ನೂ ಕಿಟಕಿಯೊಳಗೆ ಇಣುಕಿದರಂತೂ ಅವರ ಮೇಲೆ ಕೋಪ ಬರುವುದು ಗ್ಯಾರಂಟಿ, ಅಂತದ್ದರಲ್ಲಿ ನಾವು ಬೇರೆಯವರ ಮನೆಯ ಕಿಟಕಿ ನೋಡಿದರೆ, ಅದರೊಳಗಿ ಇಣುಕಿದರೆ ಸುಮ್ಮನೇ ಬಿಟ್ಟಾರಯೇ?

ಆದರೂ ನೀವು ಇಂಥ ಕಿಟಕಿಗಳನ್ನು ನೋಡಲೇ ಬೇಕು. ಸಾದ್ಯವಾದರೆ ಇಣುಕಿಯೂ ಬಿಡಬೇಕು. ಆಗ ನೋಡಿ ನಿಮಗೆ ಬಿನ್ನ ವಿಭಿನ್ನ ದೃಶ್ಯಾವಳಿಗಳು ಕಾಣತೊಡಗುತ್ತವೆ! ದಿಗಿಲುಪಡುವಂತದ್ದೇನಿಲ್ಲ. ದೈರ್ಯವಾಗಿ ಕಣ್ಣಗಲಿಸಿ ನೋಡಿ, ಕಣ್ಣುಚಿಕ್ಕದು ಮಾಡಿನೋಡಿ, ಕೆಲವೊಮ್ಮೆ ಓರೆನೋಟ, ಕಿರುನೋಟ ಹೇಗಾದರೂ ಸರಿ, ವಿಭಿನ್ನ ಅನುಭೂತಿಗಾಗಿ ನೋಡಲೇಬೇಕು.! ಸಾಕು ರೈಲುಬಿಡಬೇಡ ವಿಚಾರಕ್ಕೆ ಬಾರಯ್ಯ ಅಂತೀರಾ!

ಖಂಡಿತ ರೈಲುಬಿಡುತ್ತಿಲ್ಲ. ಆದ್ರೆ ಇದು ರೈಲಿನ ಸಮಾಚಾರ, ರೈಲುಕಿಟಕಿಗಳ ಸಮಾಚಾರ. ಅದರೊಳಗಿನ ಕೆಲವು ವಿಭಿನ್ನ ದೃಶ್ಯಗಳ ಸಮಾಚಾರ.

ಇಲ್ಲಿ ನಾನು ತೋರಿಸುತ್ತಿರುವ ರೈಲಿನ ಕಿಟಕಿಗಳು ನಿಮಗೂ ಗೊತ್ತು. ಅಲ್ಲಿ ನಡೆಯುವ ಚಟುವಟಿಕೆಗಳು ನಿಮಗೆ ಗೊತ್ತು. ಆದ್ರೆ ಅದನ್ನು ನೋಡುವ ದೃಷ್ಟಿಕೋನವನ್ನು ಬದಲಿಸಿಕೊಂಡಾಗ ಇಂಥ ಚಿತ್ರಗಳು ಸಿಗುತ್ತವೆ. ನೀವು ಬೇರೆನು ಮಾಡಬೇಕಿಲ್ಲ ನಾನು ಮಾಡಿದಂತೆ ಪ್ರತಿಯೊಂದಕ್ಕು ಒಂದೊಂದು ಪ್ರೇಮುಗಳನ್ನು ಹೀಗೆ ಹಾಕಿಬಿಟ್ಟರೆ ನಿಮಗೂ ಅವು ಹೀಗೆಕಾಣಸಿಗುತ್ತವೆ. ಅವುಗಳನ್ನು ನೋಡಿ ನೀವು ಖುಷಿಪಡಿ.

ಇನ್ನೇಕೆ ತಡ, ಬನ್ನಿ ಕಣ್ಣಲ್ಲಿ, ಅಲ್ಲಿಂದ ನೇರ ಮನಸ್ಸಿನಲ್ಲಿ ಅವುಗಳಿಗೆಲ್ಲಾ ಪ್ರೇಮು ಹಾಕೋಣ.

ಶಿರಾಡಿ ಘಾಟಿನ ಸೌಂದರ್ಯದಷ್ಟೇ ಚೆಂದ ಈ ಬಾಲೆ!


ಅಕ್ಕನ ಜೊತೆ ತಮ್ಮನೂ ಕೂಡ

ಎಲ್ಲೆಲ್ಲೂ ಶಿರಾಡಿಘಾಟ್ ಸೌಂದರ್ಯವೇ! ಅಂತ ಹಾಡುತ್ತಿರಬಹುದೇ ಈ "ಕೈ"

ನನ್ನಲ್ಲಿ ನೀನಾಗಿ......ನಿನ್ನಲ್ಲಿ ನಾನಾಗಿ....ಅಂತ ಹಾಡಿಕೊಳ್ಳುತ್ತಿರಬಹುದೇ ಈ ಕೈಗಳು!

ಊಟವಾದ ಮೇಲೆ ಕೈತೊಳೆಯಲೇ ಬೇಕಲ್ಲವೇ!

ಸುಬ್ರಮಣ್ಯಕ್ಕೆ ಹೀಗೊಂದು ಪಾದಯಾತ್ರೆ!

ಎಮರ್ಜೆನ್ಸಿ ಕಿಟಕಿಯಲ್ಲೊಂದು ಭೂಪಟ!

ಈತ ಸದಾ ಬಾಗಿಲ ಬಳಿ ನಿಲ್ಲುವ ಕನ್ನಡಕಧಾರಿ ಇಣುಕಪ್ಪ!

ಒಳಗಿದ್ದು ಬೇಸರವಾಯಿತೇನೋ! ಹೊರಗಡೆ ರಿಲ್ಯಾಕ್ಸ್!

ರಿಲ್ಯಾಕ್ಸ್ ನಂತರ ಕಿಟಕಿ ಕಂಬಿಗಳೊಂದಿಗೆ ಆಟ!

ನಾನು ಆಟಕ್ಕೆ ಬರಲಾ? ಹೊರಬಂದ ಮಗಳ ಕೈಗಳು!

ಅಪ್ಪನ ಕೈಬೆರಳುಗಳೊಂದಿಗೆ ಮಗಳ ಪುಟ್ಟ ಬೆರಳುಗಳ ಆಟ!

ಈತನಂತೆ ನಾನು ಬಾಗಿಲಲ್ಲಿ ಕುಳಿತು ರೈಲು ವೇಗವಾಗಿ ಚಲಿಸುವಾಗ ಒಂದು ಕೈಯಲ್ಲಿ ಬಾಗಿಲ ಪೈಪನ್ನು ಬೀಳದಂತೆ ಆಧಾರವಾಗಿ ಹಿಡಿದು ನಿಂತು.....ಕುಳಿತು....., ಮತ್ತೊಂದು ಕೈಯಲ್ಲಿ ಮೂರುವರೆ ಕೆಜಿ ತೂಕದ ದೊಡ್ಡಲೆನ್ಸಿನ ಕ್ಯಾಮೆರಾ ಹಿಡಿದು ಕ್ಲಿಕ್..ಕ್ಲಿಕ್..... ಮಗದೊಮ್ಮೆ ಎಮರ್ಜೆನ್ಸಿ ಕಿಟಕಿಯಿಂದ ತಲೆ, ಕ್ಯಾಮೆರಾ, ಕೆಲವೊಮ್ಮೆ ಅರ್ಧ ದೇಹವನ್ನು ಕ್ಯಾಮೆರಾ ಸಮೇತ ಹೊರಹಾಕಿ ಒಂದೇ ಕೈಯಲ್ಲಿ ಹಿಡಿದು ಕ್ಲಿಕ್ಕಾಟವಾಡಿದ್ದೇನೆ.


ಇನ್ನೂ ರೈಲು ಕಿಟಕಿಯೊಳಗೇನಿದೆ ನೋಡೋಣ ಬನ್ನಿ.

ಕೂಸುಮರಿ ಆಟ. ಮಮತೆ ವಾತ್ಸಲ್ಯದ ಆಟ

ಎಂಥ ಸುಖ ನಿದ್ರೆ!

ಓಹ್! ಕೆಟ್ಟ ಕನಸೇ!

ಶ್ರಮಜೀವಿಯ ನಿದ್ರೆಯಲ್ಲಿ ಸ್ವರ್ಗಕ್ಕೆ ಮೂರೇ ಗೇಣು!
ಬೆಳ್ಳಿಕಾಲುಂಗರ ಶ್ರೀಮತಿಗೆ ಸುಂದರ!

ಈ ಹುಡುಗನ ಪಾದಗಳು ನಿದ್ರಿಸುವ ಮೊದಲು ಅದೆಷ್ಟು ಸುತ್ತಾಡಿದ್ದವೋ!
ನಿದ್ರೆಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ....

ಹಾಯಾಗಿ ಮಲಗು ನನ್ನ ಪುಟ್ಟ ಕಂದ!

ಅಂಗಾಲ ತೊಳೆದೇನು ನಿದ್ರೆ ಮಾಡಿ ಬಾ ನನ ಕಂದ!

ಇವೆಲ್ಲಾ ಚಿತ್ರಗಳನ್ನು ರೈಲು ನಿಂತಾಗ ಹೊರಬಂದು ರೈಲು ನಿಲ್ದಾಣದಲ್ಲಿ ನಿಂತು ಕ್ಲಿಕ್ಕಿಸಿದಲ್ಲ. ಆ ರೀತಿ ಫೋಟೊ ಕ್ಲಿಕ್ಕಿಸಲು ನಮ್ಮ ದೊಡ್ಡ ಕ್ಯಾಮೆರಾ ಹೊರತೆಗೆದರೆ ನಮ್ಮನ್ನು ಉಳಿದ ಪ್ರಯಾಣಿಕರು ಸುತ್ತುವರಿಯುತ್ತಾರೆ, ತರಾವರಿ ಪ್ರಶ್ನೆಗಳನ್ನು ಕೇಳುತ್ತಾರೆ. ಅವರಿಗೆ ಉತ್ತರಿಸುವ ನಿಟ್ಟಿನಲ್ಲಿ ಇಂಥ ಚಿತ್ರಗಳು ತಪ್ಪಿಸಿಕೊಂಡುಬಿಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ರೈಲ್ವೇ ಪೋಲಿಸ್ ಗಮನಿಸುತ್ತಿರುತ್ತಾರೆ. ಬಂದು ಕೇಳುತ್ತಾರೆ ಏನು ತೆಗೆಯುತ್ತಿದ್ದೀರಿ? ಏಕೆ ತೆಗೆಯುತ್ತಿದ್ದೀರಿ, ಇಲಾಖೆಯಿಂದ ಅನುಮತಿ ಪಡೆದಿದ್ದೀರಾ? ಇನ್ನೂ ಏನೇನೋ ಪ್ರಶ್ನೆಗಳು. ಅವೆಲ್ಲ ಕಿರಿಕಿರಿಗಳಿಂದಾಗಿ ನಮಗೆ ವೈವಿಧ್ಯಮಯ ಫೋಟೊಗಳು ಸಿಗುವುದಿಲ್ಲ. ಎಲ್ಲಾ ಚಿತ್ರಗಳು ರೈಲು ಚಲಿಸುತ್ತಿರುವಾಗಲೇ ಕ್ಲಿಕ್ಕಿಸಿದಂತವು. ರೈಲಿನ ಒಳಗೆ ನನ್ನ ಕ್ಯಾಮೆರಾ ಕಾಣದಂತೆ ಒಂದು ಬಟ್ಟೆ ಸುತ್ತಿಕೊಂಡು ಸಮಯನೋಡಿ ಯಾರೂ ನನ್ನಡೆಗೆ ನೋಡದಿರುವಾಗ ತೆಗೆದಂತ ಪೋಟೋಗಳಿವು.
ಇವೆಲ್ಲಾ ಚಿತ್ರಗಳಿಗೆ ಪ್ರೇಮು ಹಾಕಿದ್ದು ಬೆಂಗಳೂರು -ಮಂಗಳೂರು ಹಗಲು ರೈಲಿನಲ್ಲಿ. ಕಳೆದ ವಾರ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಈ ರೈಲಿನಲ್ಲಿ ಪ್ರಯಾಣ ಮಾಡಿದಾಗ ಸಿಕ್ಕ ಕೆಲವು ಫೋಟೊಗಳಿವು. ಇದನ್ನು ಮೀರಿ ಆ ರೈಲು ಪ್ರಯಾಣವೇ ಒಂದು ಆದ್ಬುತ ಅನುಭವ. ಸೀಟಿಗಾಗಿ ಚರ್ಚೆ, ಆ ರೈಲಿನಲ್ಲಿ ಪುಸ್ತಕ ಮಾರುವ ಹುಡುಗ, ಹೆಂಗಸರ ಮಾತು ಮತ್ತು ಚಟುವಟಿಕೆಗಳು, ಸಂಭಾಷಣೆಗಳು.... ಇಡೀ ಪ್ರಯಾಣದಲ್ಲಿ ರೈಲು ಓಡಿದ್ದು.......ಓಡಿ ಓಡಿ ಸುಸ್ತಾಗಿ....ನಡೆ ನಡೆದು ಕೊನೆಗೊಮ್ಮೆ ಎಲ್ಲಿ ಸ್ವಲ್ಪ ಹೊತ್ತು ಮಲಗಿತ್ತು ಅನ್ನುವ ವಿಚಾರ, ಸಿಗುವ ರಾಕ್ಷಸಾಕಾರದ ಸೇತುವೆಗಳು, ಸುರಂಗಗಳು..... ಅವುಗಳ ಫೋಟೋಗಳು... ಸುಬ್ರಮಣ್ಯ ರೋಡಿನಿಂದ ದೇವಸ್ಥಾನದವರೆಗೆ ಜೀಪುಗಳಲ್ಲಿ ಕರೆದೊಯ್ಯುವ ಡ್ರೈವರುಗಳು ಒಂದೇ ಕುಂಡಿಯಲ್ಲಿ ಕುಳಿತು ಜೀಪು ಓಡಿಸುವ ಪರಿ ಇತ್ಯಾದಿಗಳನ್ನು ಮುಂದಿನ ಲೇಖನದಲ್ಲಿ ಚಿತ್ರಸಹಿತ ಕಟ್ಟಿಕೊಡುತ್ತೇನೆ..

ಚಿತ್ರಗಳು ಮತ್ತು ಲೇಖನ
ಶಿವು. ಕೆ

Tuesday, March 23, 2010

ಚಿತ್ರಸಂತೆಯಲ್ಲಿ ಪುಟ್ಟ ಪುಟ್ಟ ಕತೆಗಳು.


೧. ಚಿತ್ರಸಂತೆಯಲ್ಲಿ ಆತ ಗಾಂಧಿಭವನದ ಬಳಿ ಚಿತ್ರಗಳನ್ನು ನೋಡಲು ಪ್ರಾರಂಭಿಸಿದಾಗ ಮಧ್ಯಾಹ್ನ ೧೨ ಗಂಟೆ. ಇಡೀ ಚಿತ್ರಸಂತೆಯನ್ನು ನೋಡಿ ಮುಗಿಸಿ ನಮ್ಮ ಬಳಿಗೆ ಬರುವ ಹೊತ್ತಿಗೆ ಸಂಜೆ ಆರುಗಂಟೆ. ಆ ಕಲಾಭಿಮಾನಿ ಚಿತ್ರಸಂತೆಯಲ್ಲಿನ ಎಲ್ಲಾ ಚಿತ್ರಗಳನ್ನು ನೋಡಿ ಅದೆಷ್ಟು ಗೊಂದಲಗೊಂಡಿದ್ದನೆಂದರೆ ನನ್ನ ಫೋಟೊಗಳನ್ನು ಮುಟ್ಟಿ ನೋಡಿ "ಅಹಾ ಈ ಪೇಂಟಿಂಗ್ಸ್ ಎಷ್ಟು ಚೆನ್ನಾಗಿದೆ" ಅಂದವನೇ ಪಕ್ಕದಲ್ಲಿದ್ದ ನನ್ನ ಭಾವನ ದೊಡ್ಡ ಚಿತ್ರಕಲಾಕೃತಿಯನ್ನು ನೋಡಿ ಈ ಫೋಟೊ ಎಲ್ಲಿ ತೆಗೆದಿದ್ದು ಅಂತ ಕೇಳಿದ. ಅವನ ಮಾತನ್ನು ಕೇಳಿ ನಾವಿಬ್ಬರೂ ಅಚ್ಚರಿಯಿಂದ ಮುಖ ನೋಡಿಕೊಂಡೆವು.


೨. ಆ ಪ್ರೇಮಿಗಳು ಕಳೆದ ಚಿತ್ರಸಂತೆಗೂ ಬಂದಿದ್ದರು. ಈ ಬಾರಿಯೂ ಬಂದಿದ್ದಾರೆ. ಆದ್ರೆ ಚಿತ್ರಸಂತೆಯೊಂದು ಅವರಿಗೆ ನೆಪ. ಬೆಂಗಳೂರಿನ ಎಲ್ಲಾ ಜಾಗದಲ್ಲಿ ಆಡ್ಡಾಡಿ ಸಾಕಾಗಿ ಚಿತ್ರಸಂತೆಯಲ್ಲಿ ಮತ್ತಷ್ಟು ಪ್ರೇಮಿಗಳಾಗುತ್ತಿದ್ದಾರೆ. ಅವರಂದುಕೊಂಡಿದ್ದಾರೆ ನಮ್ಮನ್ಯಾರು ಗಮನಿಸುವುದಿಲ್ಲವೆಂದು. ಆದ್ರೆ ಆವನ್ಯಾವನೋ ಛಾಯಾಗ್ರಾಹಕ ಇವರ ಪ್ರೇಮದಾಟವನ್ನು ಫೋಟೊ ತೆಗೆದೇಬಿಟ್ಟಿದ್ದ. ಆ ಫೋಟೊ ಇನ್ನೊಬ್ಬ ಚಿತ್ರಕಾರನ ಕೈಸೇರಿ ಅದ್ಭುತ ಕಲಾಕೃತಿಯಾಗಿ ಈ ವರ್ಷದ ಸಂತೆಯಲ್ಲಿ ಮಾರಾಟಕ್ಕಿದೆ. ಮತ್ತೆ ಈ ಬಾರಿ ಇವರನ್ನು ನೋಡಿದ ಛಾಯಾಗ್ರಾಹಕ ಕ್ಯಾಮೆರಾ ಕೈಗೆತ್ತಿಕೊಂಡ. ಆದ್ರೆ ಇವರಿಬ್ಬರೂ ಇದ್ಯಾವುದರ ಪರಿವೆಯೂ ಇಲ್ಲದೇ ಮತ್ತಷ್ಟು ಪ್ರೇಮಿಗಳಾಗುತ್ತಿದ್ದರು.


೩. ಸಂಜೆಯಾಗುತ್ತಿತ್ತು. ಇನ್ನೊಂದು ಸಾವಿರ ವ್ಯಾಪಾರವಾದರೆ ಹತ್ತು ಸಾವಿರವಾಗುತ್ತದೆ ಅಂತ ಆ ಕಲಾವಿದನು ಜೇಬಿನಲ್ಲಿದ್ದ ಒಂಬತ್ತು ಸಾವಿರಗಳ ನೋಟುಗಳನ್ನು ಮುಟ್ಟಿನೋಡಿಕೊಳ್ಳುತ್ತಿದ್ದರೇ, ಉತ್ತಮ ಚಿತ್ರಕಲಾಕೃತಿಯನ್ನು ಕೊಳ್ಳಲು ಹೇಗೆ ಚೌಕಾಸಿ ಮಾಡುಬೇಕು ಅಂತ ಈ ಕಲಾಸಕ್ತ ಜೇಬಿನೊಳಗಿದ್ದ ಒಂದು ಸಾವಿರ ನೋಟನ್ನು ಮುಟ್ಟಿನೋಡಿಕೊಳ್ಳುತ್ತಿದ್ದ. ಹೀಗೆ ಆ ರಸ್ತೆಯಲ್ಲಿದ್ದ ಕಲಾವಿದರು, ನೋಡಲು-ಕೊಳ್ಳಲು ಬಂದ ಕಲಾಭಿಮಾನಿಗಳ ಕೈಗಳೆಲ್ಲಾ ತಮ್ಮ ತಮ್ಮ ಜೇಬುಗಳಲ್ಲಿದ್ದವು. ಇವೆಲ್ಲಾದರ ನಡುವೆ ಅಲ್ಲಲ್ಲಿ ಪುಟ್ಟ ಪುಟ್ಟ ಮಕ್ಕಳು ತಮ್ಮೆದುರಿಗಿದ್ದ ಚಿತ್ರಗಳನ್ನು ಮುಟ್ಟುತ್ತಾ, ಇನ್ನೂ ಹತ್ತಿರ ಹೋಗಿ ಮೂಗಿನಿಂದ ಬಣ್ಣಗಳ ವಾಸನೆಯನ್ನು ಆಹ್ಲಾದಿಸುತ್ತಾ, ಕಣ್ಣರಳಿಸಿ ನೋಡಿ, ಮನತುಂಬಿಕೊಳ್ಳುತ್ತಿದ್ದವು.

Add Image


೪.ಆತ ಕುಳಿತಲ್ಲೇ ಮುಖಚಿತ್ರ ರಚಿಸುವ ಕಲಾವಿದ. ಸಂಜೆ ಐದುಗಂಟೆಗೆ ಒಂದು ಪುಟ್ಟ ಹುಡುಗಿಯನ್ನು ಎದುರಿಗೆ ಕೂರಿಸಿ ಮುಖಚಿತ್ರ ಬರೆಯಲು ಶುರುಹಚ್ಚಿಕೊಂಡ. ಕಣ್ಣಮುಂದೆ ಕಂಡಿದ್ದನ್ನು ಕಣ್ಣಿಗೆ ಕಟ್ಟುವಂತೆ ಬರೆಯುವ ಮುಖಚಿತ್ರ ಕಲಾವಿದನಾದರೂ ಅವನದು ನಿಧಾನವೇ ಪ್ರಧಾನ ಎನ್ನುವದು ಅವನ ಮಂತ್ರ. ಅದರ ಪರಿಣಾಮ ಆರುಗಂಟೆಯ ಹೊತ್ತಿಗೆ ಮುಖದ ಹೊರರೇಖೆಗಳನ್ನು ಎಳೆದಿದ್ದ. ೬-೩೦ರ ಹೊತ್ತಿಗೆ ಕತ್ತಲಾಗಿ ಆ ಬೆಳ್ಳಗಿನ ಮಗುವಿನ ಮುಖಕ್ಕೂ ಕತ್ತಲು ಆವರಿಸುತ್ತಿತ್ತು. ೭-೩೦ಕ್ಕೆ ಎದುರಿಗೆ ಕುಳಿತಿದ್ದ ಬೆಳ್ಳಂಬೆಳಗಿನ ಮಗುವಿನ ಮುಖ ಚಿತ್ರದಲ್ಲಿ ಕಪ್ಪಾಗಿತ್ತು.


೫. ಸದಾ ಹೊಸತರ ಬಗ್ಗೆ ಚಿಂತಿಸುವ ಕಲಾವಿದನಾಗಿದ್ದ ಆತ ಅವತ್ತು ಮಾರಾಟಕ್ಕೆ ಯಾವುದೇ ಕಲಾಕೃತಿಯನ್ನು ತಂದಿರಲಿಲ್ಲ. ಆದ್ರೆ ಕೈಯಲ್ಲಿ ಒಂದು ಕ್ಯಾನ್ವಸ್,ಬ್ರಷ್, ಬಣ್ಣಗಳನ್ನು ಹಿಡಿದಿದ್ದ. ಅರ್ಧದಿನ ಚಿತ್ರಸಂತೆ ಸುತ್ತಾಡಿದರೂ ಹೊಸತೇನು ಸ್ಪೂರ್ತಿ ಸಿಕ್ಕಲಿಲ್ಲವಾದ್ದರಿಂದ ಬೇಸರಗೊಂಡು ಇದೆಲ್ಲಾ ಗೊಡವೆಯೇ ಬೇಡವೆಂದು ಪಕ್ಕದಲ್ಲಿದ್ದ ಅಪಾರ್ಟ್‍ಮೆಂಟಿನ ಟೆರಸ್ ಮೇಲೆ ವಿಶ್ರಾಂತಿಗೆಂದು ಕುಳಿತವನು ಕೆಳಗೆ ನೋಡಿದ. ಸಾಗರೋಪಾದಿಯಲ್ಲಿ ಚಿತ್ರಸಂತೆ ನೋಡಲು ಬರುತ್ತಾಹೋಗುತ್ತಿದ್ದರು. ನೋಡನೋಡುತ್ತಿದ್ದಂತೆ ಅದನ್ನೆ ಕ್ಯಾನ್ವಸ್ ಮೇಲೆ ಬಿಡಿಸಿ ಬಣ್ಣದಿಂದ ಅಲಂಕರಿಸಿ ಕೆಳಗೆಬಂದು ತನ್ನ ಜಾಗದಲ್ಲಿ ಪ್ರದರ್ಶನಕ್ಕಿಟ್ಟ. ಇದು ನಿಜಕ್ಕೂ ಹೊಸತನವೆಂದು ಕಲಾಸಕ್ತರು ಅದನ್ನು ಕೊಳ್ಳಲು ಮುಗಿಬಿದ್ದರು.

ಈ ನ್ಯಾನೋ ಕತೆಗಳೆಲ್ಲಾ [14-3-2010]ಭಾನುವಾರ ವಿಜಯಕರ್ನಾಟಕದಲ್ಲಿ ಬಂದಿದ್ದವು.

ಚಿತ್ರಗಳು ಮತ್ತು ಲೇಖನ
ಶಿವು.ಕೆ.

Saturday, March 13, 2010

ಬೆಕ್ಕಿಗೆ ಜ್ವರ ಬರುವ ಮಾತಾಡಬೇಡ್ರೀ!




ಬೆಳಿಗ್ಗೆ ಸಮಯ ೮-೩೦. ಅವರು ವರಾಂಡದಲ್ಲಿ ದಿನಪತ್ರಿಕೆ ಓದುತ್ತಾ ಕುಳಿತಿದ್ದರು. "ಸರ್, ನ್ಯೂಸ್ ಪೇಪರ್ ಬಿಲ್" ಅಂದೆ. ಒಮ್ಮೆ ಕತ್ತೆತ್ತಿ ನೋಡಿ, ಎಷ್ಟಾಯ್ತು ಅಂದರು. ಹೇಳಿದೆ. ಜೇಬಿಗೆ ಕೈ ಹಾಕಿದರು. ಅವರು ನನ್ನ ಅತ್ಯಂತ ಆತ್ಮೀಯವಾದ ಗ್ರಾಹಕ. ಅವರಿಗೆ ಹದಿಮೂರು ವರ್ಷಗಳಿಂದ ನನ್ನ ಕಡೆಯಿಂದಲೇ ದಿನಪತ್ರಿಕೆ ತಲುಪುತ್ತಿದೆ. ನನ್ನ ವೆಂಡರ್ ಕಣ್ಣು ಪುಸ್ತಕವನ್ನು ಓದಿದ್ದಲ್ಲದೇ ನನ್ನೆಲ್ಲಾ ಚಟುವಟಿಕೆಗಳನ್ನು ಅರಿತವರು. ಜೇಬಿನಿಂದ ಒಂದು ಸಾವಿರದ ನೋಟನ್ನು ತೆಗೆದುಕೊಟ್ಟರು.
"ಸಾರ್ ಚಿಲ್ಲರೆ ಇಲ್ಲವಲ್ಲ"
ನನ್ನ ಕಡೆಗೊಮ್ಮೆ ವ್ಯಂಗ್ಯವಾಗಿ ನೋಡಿ,
"ನಿನ್ನ ಬಳಿ ಸಾವಿರ ರೂಪಾಯಿಗೆ ಚಿಲ್ಲರೆ ಇಲ್ವಾ, ಬೆಕ್ಕಿಗೆ ಜ್ವರ ಬರೋ ಮಾತಾಡಬೇಡ"

ಅವರ ಮಾತಿಗೆ ಮರುಉತ್ತರ ಹೇಳದೆ ಚಿಲ್ಲರೆ ಎಣಿಸಿಕೊಟ್ಟು,

"ಸರ್ ಬೆಕ್ಕಿಗೆ ನಿಜಕ್ಕೂ ಜ್ವರ ಬರುತ್ತಾ" ಕೇಳಿದೆ.

ನನ್ನನ್ನೊಮ್ಮೆ ನೋಡಿ ನಕ್ಕು ಹಣ ಎಣಿಸಿಕೊಂಡರು.

"ಪೋಟೊ ತೆಗಿತೀಯಾ, ಪತ್ರಿಕೆಗೆ ಲೇಖನ ಬರೀತೀಯ, ಬ್ಲಾಗ್ ಬರೀತೀಯಾ, ಪುಸ್ತಕ ಬರೀತೀಯಾ, ಇದನ್ನು ಕಂಡುಹಿಡಿಯಕಾಗೊಲ್ವಾ?" ಅಂದರು.
ನನಗೂ ಹೌದಲ್ವಾ ಅನ್ನಿಸಿತು. ಅವರಿಗೆ ಥ್ಯಾಂಕ್ಸ್ ಹೇಳಿ ಅ ಮನೆಯಿಂದ ಹೊರಬರುವ ಹೊತ್ತಿಗೆ ನನ್ನ ತಲೆಯಲ್ಲಿ ಹೊಸ ಹುಳುವೊಂದು ಹೊಕ್ಕಿತ್ತು.

ಹೌದು ಬೆಕ್ಕಿಗೆ ನಿಜಕ್ಕೂ ಜ್ವರ ಬರುತ್ತಾ? ಜ್ವರ ಬಂದಾಗ ಬೆಕ್ಕು ಏನೇನು ಮಾಡಬಹುದು, ಇದನ್ನು ತಿಳಿಯುವುದು ಹೇಗೆ? ಇಷ್ಟಕ್ಕೂ ಈ ಪದ ಹುಟ್ಟಿದ್ದು ಹೇಗೆ? ಯಾರಾದರೂ ಕನ್ನಡ ಪಂಡಿತರನ್ನು ಕೇಳಿದರೆ ಹೇಗೆ ಅನ್ನಿಸಿತು ಇನ್ನೇಕೆ ತಡ,

ಓವರ್ ಟು ಡಾ.ಶೇಷಾಶಾಸ್ತ್ರಿ.

"ಸಾರ್, ಬೆಕ್ಕಿಗೆ ಜ್ವರ ಬರುತ್ತಾ?" ನೇರ ಕೇಳಿದೆ.

"ಇದೇನಪ್ಪ ಹೀಗೆ ಕೇಳ್ತೀಯಾ...ಫೋಟೋ ತೆಗೆಯುವುದು ಬಿಟ್ಟು ಬೆಕ್ಕಿನ ಹಿಂದೆ ಬಿದ್ದಿದ್ದು ಯಾಕೆ" ಅಂದರು.

ಅವರಿಗೆ ನಡೆದ ವಿಚಾರವನ್ನು ವಿವರಿಸಿ ಅವರ ಉತ್ತರಕ್ಕಾಗಿ ಕಾಯುತ್ತಿದ್ದೆ.
"ನೋಡಪ್ಪ ಶಿವು, ಬೆಕ್ಕಿಗೆ ಜ್ವರ ಬರುತ್ತಾ ಅನ್ನುವ ಪದ ಇಲ್ಲ ಅದು ನಿಜಕ್ಕೂ ಬೆಂಕಿಗೆ ಜ್ವರ ಬರುತ್ತಾ ಅಂತ ಇತ್ತು. ಬೆಂಕಿ ಅಂದರೆ ಬಿಸಿ, ಜ್ವರ ಅಂದರೂ ಬಿಸಿ, ಬೆಂಕಿಗೆ ಜ್ವರ ಬರುತ್ತಾ ಅನ್ನುವ ಮಾತು ಆಡಿಕೊಂಡು ಬಂದ ಜನ ಒಂದು ದಿನ ಸೊನ್ನೆಯನ್ನು ನುಂಗಿಹಾಕಿ ಬೆಕ್ಕು ಮಾಡಿದರು. ಇಷ್ಟಕ್ಕೂ ಅದು ತಪ್ಪೇನಲ್ಲ. ಬೆಕ್ಕಿನ ಮೈ ಕೂಡ ಯಾವಾಗಲೂ ಬಿಸಿಯಾಗಿರುತ್ತದೆ. ಹೀಗಿರುವಾಗ ಅದು ಜ್ವರದಲ್ಲಿದ್ದಂತೆ ತಾನೆ. ಮತ್ತೆ ಅದಕ್ಕೆ ಹೊಸದಾಗಿ ಬಂದ ಜ್ವರಕ್ಕೆ ಜಾಗವೆಲ್ಲಿ ಇರುತ್ತದೆ? ಅಂದರು.
ನನಗೂ ಹೌದಲ್ವಾ ಅನ್ನಿಸಿತು.

"ಇಷ್ಟೇ ಅಲ್ಲಪ್ಪ ಶಿವು, ಬೆಕ್ಕಿನ ಹಿಂದೆ ಬಿದ್ದಿದ್ದೀಯಾ ಅಂತ ಹೇಳ್ತೇನೆ ಕೇಳು, ಬೆಕ್ಕಿನ ಬಗ್ಗೆ ತುಂಬಾ ಮಾತುಗಳಿವೆ, ಬೆಕ್ಕನ್ನು ಕಂಕುಳಲ್ಲಿ ಇಟ್ಟುಕೊಂಡಂತೆ ಆಯ್ತು" ಅಂತ ಹೇಳ್ತಾರೆ ಗೊತ್ತಾ? ಹಾಗಂದರೆ ಬೆಕ್ಕು ಅಪಶಕುನ, ಅದು ಎದುರಿಗೆ ಬಂದರೆ ಅಪಶಕುನ ಅಂತ ಎಲ್ಲರೂ ಹೇಳ್ತಾರೆ, ಇನ್ನು ಅದನ್ನೇ ಕಂಕುಳಲ್ಲಿ ಇಟ್ಟುಕೊಂಡು ಬಂದರೆ ಯಾವ ಶುಭಕೆಲಸವೂ ಆಗುವುದಿಲ್ಲವೆಂದು ಅರ್ಥ" ಅಂದರು.
ನಾನು ಸುಮ್ಮನಿರಲಿಲ್ಲ. "ಸಾರ್, ಈ ಮಾತು ಅಷ್ಟು ಸತ್ಯವಲ್ಲ ಅಂತ ನನ್ನ ಭಾವನೆ ಏಕೆಂದರೆ ನನಗೆ ಪ್ರತಿನಿತ್ಯ ಬೆಳಗಿನ ನಾಲ್ಕು ಗಂಟೆಗೆ ಹೋಗುವಾಗ ಒಂದು ಬೆಕ್ಕು ನನ್ನ ದಾರಿಗೆ ಆಡ್ಡಬರುತ್ತಿರುತ್ತದೆ. ಆದರೂ ನನಗೇನು ತೊಂದರೆಯಾಗಿಲ್ಲ ಅಪಶಕುನವಾಗಿಲ್ಲವಲ್ಲ ಸರ್?" ಅಂದೆ.

"ನೋಡಪ್ಪ, ನಿನಗೆ ಮತ್ತು ನನಗೆ ಅಪಶಕುನ ಆಗಿಲ್ಲದಿರಬಹುದು, ಆದ್ರೆ ಹೊರಪ್ರಪಂಚದಲ್ಲಿ ಈ ಮಾತನ್ನು ಎಲ್ಲರೂ ನಂಬುತ್ತಾರೆ, ಅವರ ನಂಬಿಕೆಯಿಂದ ಅವರಿಗೆ ಖುಷಿಯಾಗುವುದಾದರೆ ಅದು ತಪ್ಪು ಅಂತ ಹೇಳಲು ನಾನು ನೀನು ಯಾರು ?" ಅಂದರು.

ಅವರ ಮಾತು ಕೂಡ ಒಂದು ರೀತಿಯಲ್ಲಿ ಸರಿಯೆನಿಸಿತು. ನಮಗಾಗದ ಅನುಭವ ಬೇರೆಯವರಿಗೆ ಆಗಿರಬಹುದಲ್ಲವೇ? ಆಗಿಲ್ಲದಿದ್ದರೂ ಆದರ ಹಿಂದೆ ಏನೋ ಒಳ್ಳೇ ಉದ್ದೇಶವೇ ಇರುವುದರಿಂದ ಆ ಮಾತು ರೂಡಿಯಲ್ಲಿರಬಹುದು ಅನ್ನಿಸಿತು.
ಹಾಗೆ ಮತ್ತಷ್ಟು ಬೆಕ್ಕಿನ ಕತೆ ಹೇಳಿದರು. ಬಡವರ ಮನೆಯ ಒಲೆಯಲ್ಲಿ ಮಲಗಿದ ಬೆಕ್ಕು ಏಳಲಿಲ್ಲವೆಂದರೆ ಅವತ್ತು ಒಲೆ ಹಚ್ಚಲಿಲ್ಲವೆಂದು ಅರ್ಥ. ಹೇಗೆಂದರೆ ಬೆಕ್ಕು ಸಹಜವಾಗಿ ಬಿಸಿಮೈಯನ್ನು ಹೊಂದಿರುತ್ತದೆ. ಅದು ಮಲಗಿಬಿಟ್ಟಿತೆಂದರೆ ಅದರ ಬಿಸಿ ಇಲ್ಲ. ಅಂದಮೇಲೆ ಬಿಸಿಯಿಲ್ಲದ ಒಲೆ ಎಂದರೆ ಬೆಂಕಿಯಿಲ್ಲದ ಒಲೆ ಅಂತಲೇ ಅರ್ಥವಲ್ಲವೇ? ಅಂದರು. ಜೊತೆಗೆ ತೆನಾಲಿ ರಾಮನ ಬೆಕ್ಕು, ತೆಲುಗಿನಲ್ಲಿ ಬೆಕ್ಕಿನ ಮಾತುಗಳು, ಗಾದೆಗಳು, ಮಠದಲ್ಲಿ ಧ್ಯಾನ ಮಾಡುತ್ತಾ ಕುಳಿತ ಬೆಕ್ಕು, ಸನ್ಯಾಸಿ ಸಾಕಿದ ಬೆಕ್ಕು, ಹೀಗಿನ ಮಾಡ್ರನ್ ಬೆಕ್ಕು,..........ಹೀಗೆ ಬೆಕ್ಕಿನ ಅನೇಕ ಕತೆ ಹೇಳಿದರು.

ಅವರ ಉತ್ತರ ನನಗೆ ಸಮಂಜಸವೆನಿಸಿತ್ತು. ಆದರೂ ನನ್ನ ಮನಸ್ಸಿನಲ್ಲೊಂದು ಕಡೆ ಇದನ್ನು ಪ್ರಾಕ್ಟಿಕಲ್ ಆಗಿ ನೋಡಿದರೆ ಹೇಗೆ? ಅನ್ನಿಸತೊಡಗಿತ್ತು. ಹಾಗಾದರೆ ಅದನ್ನು ಕಂಡುಹಿಡಿಯುವುದು ಹೇಗೆ? ನೇರ ಪಶುವೈದ್ಯರನ್ನೇ ಸಂಪರ್ಕಿಸಿದರೇ?

ಹೌದಲ್ವಾ ಅನ್ನಿಸಿತು. ನನ್ನ ಆರುನೂರು ಗ್ರಾಹಕರನ್ನು ಮನಸ್ಸಿನಲ್ಲಿಯೇ ಸ್ಕ್ಯಾನ್ ಮಾಡಿದೆ. ಅರೆರೆ ನನ್ನ ಕಡೆಯಿಂದಲೇ ದಿನಪತ್ರಿಕೆ ಕೊಳ್ಳುವ ಪಶುವೈದ್ಯರೊಬ್ಬರು ಮಲ್ಲೇಶ್ವರಂನಲ್ಲಿದ್ದಾರಲ್ಲಾ? ಇನ್ನೇಕೆ ತಡ ಹೊರಟೇಬಿಟ್ಟೆ ಅವರ ಮನೆಕಡೆಗೆ.


ಓವರ್ ಟು ವೆಟರ್‍ನರಿ ಡಾಕ್ಟರ್.
"ಸರ್" ಕೂಗಿದೆ. ಅವರು ಹೊರಬಂದು ನನ್ನನ್ನು ನೋಡಿ,
"ರೀ ನಿಮಗೆ ಎರಡು ದಿನಗಳ ಹಿಂದೆ ಪೇಪರ್ ದುಡ್ಡು ಕೊಟ್ಟಿದ್ದೀನಲ್ರೀ?" ಅಂದರು.

"ಸರ್, ನಾನು ಹಣಕ್ಕಾಗಿ ಬರಲಿಲ್ಲ."

"ಮತ್ಯಾಕೆ ಬಂದ್ರಿ,"

"ನೀವು ಪಶುವೈದ್ಯರಲ್ಲವೇ, ನಿಮ್ಮಿಂದ ಒಂದು ವಿಚಾರ ತಿಳಿಯಬೇಕಿತ್ತು." ಕೇಳಿದೆ.

"ಏನದು"

"ಸರ್, ಬೆಕ್ಕಿಗೆ ಜ್ವರ ಬರುತ್ತಾ? ಜ್ವರ ಬಂದ ಬೆಕ್ಕುಗಳಿಗೆ ಚಿಕಿತ್ಸೆ ಮಾಡುತ್ತೀರಾ?" ಕೇಳಿದೆ.

ಅವರು ನನ್ನ ಮುಖವನ್ನೊಮ್ಮೆ ನೋಡಿದರು. ಬೇರೆಯವರು ಬೆಳಿಗ್ಗೆ ಇಂಥ ಪ್ರಶ್ನೆ ಕೇಳಿದ್ದರೇ ಬೈದುಕಳಿಸುತ್ತಿದ್ದರೇನೋ. ನನ್ನ ಇಂಥ ತೆವಲುಗಳನ್ನು ಅರಿತಿದ್ದ ಅವರು,

"ನೋಡ್ರೀ ಶಿವು, ಬೆಕ್ಕಿಗೆ ಜ್ವರ ಬರುತ್ತೇ ಕಣ್ರೀ, ನಮ್ಮಂತೆ ಅದಕ್ಕೂ ಬಾಡಿ ಟೆಂಪರೇಚರ್ ಇರುತ್ತೆ ಅದು ಹೆಚ್ಚಾದಾಗ ಜ್ವರ ಬರುತ್ತೆ ಗೊತ್ತಾ?"

"ಅದಕ್ಕೆ ಜ್ವರ ಬಂದಿದೆ ಅಂತ ನಾವು ಹೇಗೆ ಕಂಡುಹಿಡಿದುಕೊಳ್ಳುವುದು? ಅದನ್ನು ನೀವು ಹೇಗೆ ಪರೀಕ್ಷೆ ಮಾಡುತ್ತೀರಿ?"

"ಮನೆಯಲ್ಲಿ ಸಹಜವಾಗಿರುವ ಬೆಕ್ಕು ಸುಮ್ಮನೆ ಕೂಗಾಡುವುದು, ಊಟ ಸರಿಯಾಗಿ ಮಾಡದಿರುವುದು, ಹೀಗೆ ಅದರ ಚಟುವಟಿಕೆಯಲ್ಲಿ ವ್ಯತ್ಯಾಸ ಕಂಡಾಗ ಮನೆಯ ಯಜಮಾನರು ಅದನ್ನು ನೋಡಿ ಬೆಕ್ಕಿಗೆ ಏನೋ ಕಾಯಿಲೆ ಬಂದಿದೆ ಅಂತ ತಿಳಿದುಕೊಳ್ಳಬೇಕು, ನಮ್ಮಲ್ಲಿಗೆ ಅವನನ್ನು ಕರೆತರಬೇಕು. ನಾವು ಅದನ್ನು ಪರೀಕ್ಷೆ ಮಾಡುತ್ತೇವೆ."

"ನೀವು ನಮ್ಮ ಬಾಯಿಗೆ ಥರ್ಮಾಮೀಟರ್ ಇಟ್ಟಂತೆ ಅದರ ಬಾಯಿಗೂ ಇಟ್ಟು ನೋಡುತ್ತೀರಾ?"

" ನೋಡಿ ಶಿವು ಇಲ್ಲೊಂದು ಸೂಕ್ಷ್ಮವಿದೆ. ಪ್ರತಿಯೊಂದು ಜೀವದ ಗುದದ್ವಾರದಲ್ಲಿ ಥರ್ಮಾಮೀಟರ್ ಇಟ್ಟಾಗ ಮಾತ್ರ ಸರಿಯಾದ ಟೆಂಪರೇಚರ್ ಗೊತ್ತಾಗುವುದು. ನಾವು ಮನುಷ್ಯರು ಆ ವಿಚಾರದಲ್ಲಿ ಮಾನ ಮರ್ಯಾದೆ, ನಾಚಿಕೆ ಅಂತ ಮಾಡಿಕೊಂಡು ಆ ಕೆಲ ಮರ್ಮಗಳನ್ನು ಹೊರ ಪ್ರಪಂಚಕ್ಕೆ ತೋರಿಸಲಾಗದ ಮಟ್ಟದ ಸಂಸ್ಕಾರವಂತರಾಗಿದ್ದೇವೆ. ಈ ಕಾರಣದಿಂದಾಗಿ ನಾವು ಬಾಯಿಯಲ್ಲಿ ಥರ್ಮಾಮೀಟರ್ ಇಟ್ಟು ಜ್ವರ ಬಂದಿದೆಯಾ ಅಂತ ನೋಡುತ್ತೇವೆ. ಆದ್ರೆ ಬೆಕ್ಕಿಗೆ ಅದರ ಗುದದ್ವಾರದಲ್ಲೇ ಥರ್ಮಾಮೀಟರ್ ಇಟ್ಟು ನೋಡಬೇಕು. ಮನುಷ್ಯನ ದೇಹದ ಸಹಜ ಉಷ್ಣಾಂಶ ೯೮ ಡಿಗ್ರಿ ಆಸುಪಾಸು ಇರುತ್ತದೆ. ಅದು ಎರಡು ಮೂರು ಡಿಗ್ರಿ ಹೆಚ್ಚಾದಾಗ ಜ್ವರ ಬಂತು ಅಂದುಕೊಳ್ಳುತ್ತೇವೆ. ಬೆಕ್ಕಿನ ಉಷ್ಣಾಂಶ ಮನುಷ್ಯರಿಗಿಂತ ೨-೩ [ಬೆಕ್ಕಿನ ಸಹಜ ಉಷ್ಣತೆ ೧೦೧.೭]ಡಿಗ್ರಿ ಹೆಚ್ಚೇ ಇರುತ್ತದೆ. ಅದಕ್ಕಿಂತ ಹೆಚ್ಚಾದಾಗ ಅದಕ್ಕೆ ಜ್ವರ ಬಂದಿದೆ ಅಂತ ಅರ್ಥ."

"ಸರ್ ನಮಗೆ ನೀರು, ಊಟದ ವ್ಯತ್ಯಾಸ, ವಾತಾವರಣ, ಕೆಲಸ ಒತ್ತಡದಿಂದ ಜ್ವರ ಬರಬಹುದು. ಆದ್ರೆ ಬೆಕ್ಕಿಗೆ ಜ್ವರ ಬರಲು ಕಾರಣಗಳೇನು?"


"ಬೆಕ್ಕು ಸದಾ ಶುಚಿಯಾಗಿರಲು ಇಷ್ಟಪಡುತ್ತದೆ. ಆದಕ್ಕೆ ಜ್ವರ ಬರುವುದು ಕಡಿಮೆ. ಅದು ತನ್ನ ಆಯುಷ್ಷಿನ ೭೫ % ತನ್ನ ದೇಹದ ಎಲ್ಲಾ ಭಾಗವನ್ನು ನೆಕ್ಕಿ ನಿಕ್ಕಿ ಶುಚಿಮಾಡಿಕೊಳ್ಳುವುದರಲ್ಲೇ ಕಳೆಯುತ್ತದೆ. ಈ ಸಮಯದಲ್ಲಿ ಬಾಯಿಯ ಮೂಲಕ ಅದರದೇ ದೇಹದ ಕೂದಲುಗಳು ದೇಹವನ್ನು ಸೇರಿ ಕರುಳಿನಲ್ಲಿ ಕೂದಲಗಂಟು[ಏರ್‍ಬಾಲ್]ಶೇಖರಣೆಯಾಗಿ ಆಹಾರ ಜೀರ್ಣಕ್ರಿಯೆಗೆ ತೊಂದರೆಯಾಗಿ ಅದರ ಚಟುವಟಿಕೆಯಲ್ಲಿ ವ್ಯತ್ಸಾಸವಾಗುತ್ತದೆ. ಅದು ಇಲಿಯನ್ನು ಹಿಡಿದು ತಿನ್ನುವುದರಿಂದ ಇಲಿಯ ದೇಹದ ಚಿಗುಟಗಳು ಬೆಕ್ಕಿನ ಮೈಮೇಲೆ ಬಂದು ಚರ್ಮದ ತೊಂದರೆಯಾಗಿ ಹೊಟ್ಟೆಯಲ್ಲಿ ಲಾಡಿಹುಳ ಆಗುತ್ತದೆ. ಆಗ ಡಾಕ್ಟರಿಗೆ ತೋರಿಸಬೇಕು. ಬೆಕ್ಕಿಗೂ ರೇಬಿಸ್ ರೋಗ ಬರುವುದರಿಂದ ವರ್ಷಕ್ಕೆ ಒಂದೆರಡು ಬಾರಿ ಚುಚ್ಚು ಮದ್ದು ಕೊಡಿಸಬೇಕು."

"ಅದಕ್ಕೆ ಚಿಕಿತ್ಸೆ ಮಾಡುವಾಗ ಅದರ ಪ್ರತಿಕ್ರಿಯೆ ಹೇಗಿರುತ್ತದೆ?"

ಈ ಪ್ರಶ್ನೆಗೆ ನನ್ನ ಮುಖವನ್ನು ನೋಡಿ " ನೀವು ನಮ್ಮ ಆಸ್ಪತ್ರೆ ಬನ್ನಿ ಅಲ್ಲೇ ನೋಡುವಿರಂತೆ ಅಂದರು."



ಓವರ್ ಟು ಪಶು ವೈದ್ಯಶಾಲ.

ಟೇಬಲ್ಲಿನ ಮೇಲೆ ಕುಳಿತ ಬೆಕ್ಕಿನ ಕುತ್ತಿಗೆಗೆ ಒಂದು ಬೆಲ್ಟ್ ಹಾಕಿದ್ದರು. ಅದರ ಮತ್ತೊಂದು ತುದಿಯನ್ನು ಟೇಬಲ್ಲಿನ ಒಂದು ಭಾಗಕ್ಕೆ ಕಟ್ಟಿದ್ದರು. ಹೊಸ ವಾತಾವರಣದಲ್ಲಿ ಚಿಕಿತ್ಸೆ ಮಾಡುವಾಗ ಹೆದರಿ ತಪ್ಪಿಸಿಕೊಳ್ಳಬಾರದೆಂದು ಈ ಕ್ರಮ. ಮೇಲೆ ಹೇಳಿದಂತೆ ಗುದದ್ವಾರದಲ್ಲಿ ಥರ್ಮಾಮೀಟರ್ ಇಟ್ಟು ಜ್ವರವೆಷ್ಟಿದೆಯೆಂದು ತಿಳಿದು ಚುಚ್ಚುಮದ್ದು ಸಿದ್ದಮಾಡಿಕೊಂಡರು. ಇಲ್ಲಿ ತನಗೇನೋ ಮಾಡಲು ಯತ್ನಿಸುತ್ತಿದ್ದಾರೆ ಅಂತ ಬೆಕ್ಕಿಗೆ ಅನ್ನಿಸಿತೇನೋ, ಜೋರಾಗಿ ಕಿರುಚಿತು. ಡಾಕ್ಟರಿಗೆ ಪರಚಲು ಪ್ರಯತ್ನಿಸಿತು. ಈ ವಿಚಾರದಲ್ಲಿ ಡಾಕ್ಟರಿಗೆ ಮೊದಲೇ ಅನುಭವವಿದ್ದದ್ದರಿಂದ ಹುಷಾರಾದರು. ಬೆಕ್ಕಿನ ಎರಡು ಕಿವಿಗಳ ನಡುವೆ ನೇವೇರಿಸಲು ಅದರ ಯಜಮಾನನಿಗೆ ಹೇಳಿದರು. ಆವರು ಹಾಗೆ ಮಾಡಿದಾಗ ಬೆಕ್ಕು ಸಮಾಧಾನವಾಯಿತು. ಅದೇ ಸಮಯದಲ್ಲಿ ನಿದಾನವಾಗಿ ಚುಚ್ಚುಮದ್ದು ಕೊಟ್ಟಾಗ ಒಮ್ಮೇ ಜೋರಾಗಿ ಬಾಯಿ ತೆರೆದು ಮುಖ ಕಿವುಚಿದಂತೆ ಮಾಡಿತು. ಅಷ್ಟರಲ್ಲಿ ಡಾಕ್ಟರು ತಮ್ಮ ಕೆಲಸ ಮುಗಿಸಿದ್ದರು. ಯಜಮಾನನಿಗೆ ಬೆಕ್ಕಿಗೆ ಬೇಕಾದ ಹಾಗೆ ಪತ್ಯವನ್ನು ಹೇಳಿ ಮಾತ್ರೆ ಇತ್ಯಾದಿಗಳನ್ನು ಕೊಟ್ಟು ಕಳಿಸಿದರು.

"ಈಗ ಗೊತ್ತಾಯ್ತಾ ಬೆಕ್ಕಿಗೆ ಜ್ವರ ಬರುತ್ತೇ ಅಂತ?"

"ನಿಮ್ಮಿಂದ ತುಂಬಾ ತುಂಬಾ ವಿಚಾರ ತಿಳಿಯಿತು ಸರ್" ಅಂತ ಅವರಿಗೆ ಧನ್ಯವಾದ ಹೇಳಿ ಮನೆಗೆ ಬಂದೆ. ನಾನು ಬರುವುದನ್ನೇ ಕಾಯುತ್ತಿದ್ದ ಹೇಮಾಶ್ರಿ "ರ್ರೀ.... ಗ್ಯಾಸ್ ಬುಕ್ ಮಾಡಿದ್ರಾ, ಲೈಟ್ ಬಿಲ್ಲಿಗೆ ಇವತ್ತು ಕೊನೇ ದಿನ ಕಟ್ಟಿದ್ರಾ, ಗೋದಿಹಿಟ್ಟು ಖಾಲಿಯಾಗಿತ್ತು ತರಲಿಕ್ಕೆ ಹೇಳಿದ್ದೆ ತಂದ್ರ?" ಕೇಳಿದಳು.
"ಅಯ್ಯೋ ಸಾರಿ ಕಣೆ. ಬೆಕ್ಕಿಗೆ ಜ್ವರ ಬರುತ್ತಾ’ ಅಂತ ತಿಳಿದುಕೊಳ್ಳೋದಿಕ್ಕೆ ಹೋಗಿ ಇವೆಲ್ಲಾ ಮರೆತುಹೋಯ್ತು ನೋಡು." ಹೇಳಿದೆ.

"ರ್ರೀ ಸಾಕು ಸುಮ್ಮನಿರಿ, ಬೆಕ್ಕಿಗೆ ಜ್ವರ ಬರೋ ಮಾತು ಆಡಬೇಡ್ರಿ" ತಕ್ಷಣ ಅವಳಿಂದ ಉತ್ತರ ಬಂತು. ಈ ವಿಚಾರವಾಗಿ ನನ್ನ ಪ್ರಾಮಾಣಿಕತೆಯನ್ನೇ ಪ್ರಶ್ನಿಸಿದ ಅವಳಿಗೆ ನಾನು ಮರು ಉತ್ತರ ಕೊಡದೆ ಸುಮ್ಮನಾಗಿದ್ದೆ.

"ಈಗ ಹೇಳಿ ಬೆಕ್ಕಿಗೆ ಜ್ವರ ಬರುತ್ತಾ?"

ಚಿತ್ರಗಳು ಮತ್ತು ಲೇಖನ.
ಶಿವು.ಕೆ

Sunday, March 7, 2010

ಇದು ತಲೆಕೂದಲಗಳ ಪುರಾಣ

"ರೀ ಈ ಸಲ ಏನಾದ್ರು ಒಂದು ಕೂದಲು ನಿಮ್ಮ ಬಟ್ಟೆ ಮೇಲಿದ್ರೆ ನಾನು ಸುಮ್ಮನಿರೋಲ್ಲ ನೋಡಿ."

"ಯಾಕೆ ? ಏನಾಯ್ತು?"

"ತಲೆಕೂದಲು ಕಟ್ ಮಾಡಿಸಿದ ಮೇಲೆ ನಿಮ್ಮ ಅಂಗಿ ಮೇಲೆ ಉದುರಿದ ಕೂದಲು ಎಷ್ಟೇ ಚೆನ್ನಾಗಿ ಬಟ್ಟೆ ಒಗೆದರೂ ಹಾಗೆ ಕಚ್ಚಿಕೊಂಡಿರುತ್ತೆ, ಥೂ.. ನೋಡಲು ಎಷ್ಟು ಅಸಹ್ಯವೆನಿಸುತ್ತೆ, ನಿಮಗಿದೆಲ್ಲಾ ಎಲ್ಲಿ ಗೊತ್ತಾಗುತ್ತೇ,"

"ಸರಿ ನಾನು ಈಗ ಏನು ಮಾಡಬೇಕು ಹೇಳು?"

"ಮಾಡೋದೇನು, ನೀವು ಕಟಿಂಗ್ ಷಾಪ್‍ನವನಿಗೆ ದುಡ್ಡು ಕೊಡೋದಿಲ್ವಾ, ಕಟಿಂಗ್ ಮಾಡುವ ಮೊದಲು ದೊಡ್ಡದಾದ ಚೆನ್ನಾಗಿರುವ ಬಟ್ಟೆಯನ್ನು ನಿಮ್ಮ ಮೈಸುತ್ತ ಹಾಕಲಿಕ್ಕೆ ಅವನಿಗೇನು ದಾಡಿ, ನಾವು ಬ್ಯೂಟಿ ಪಾರ್ಲರಿಗೆ ಹೋಗಿ ನಮ್ಮ ಕೂದಲು ಕಟ್ ಮಾಡಿಸಿಕೊಂಡರೆ ಒಂದೇ ಒಂದು ಕೂದಲ ತುಣುಕು ಕೂಡ ಮೈಮೇಲೆ ಬೀಳದಂತೆ ಜೋಪಾನವಾಗಿ ನೋಡಿಕೊಳ್ಳುತ್ತಾರೆ. ಈ ವಿಚಾರವನ್ನು ಅವನಿಗೆ ಹೇಳಿ." ಅಂತ ತಾಕೀತು ಮಾಡಿದಳು.

ಕುರ್ಚಿಯ ಮೇಲೆ ಕುಳಿತೆ. ಅವನು ಸುಮಾರಾದ ಒಂದು ಬಟ್ಟೆಯನ್ನು ನನ್ನ ಸುತ್ತ ಸುತ್ತಿ ಕುತ್ತಿಗೆ ಹಿಂಬಾಗ ಒಂದು ಗಂಟು ಹಾಕಿ, ತಲೆಗೆ ನೀರು ಚಿಮುಕಿಸಿ ಒಂದು ಸಾರಿ ಬಾಚಣಿಗೆಯಿಂದ ಬಾಚಿದ. ಅದುವರೆಗೂ ಹೇಗೇಗೋ ಎತ್ತೆತ್ತಲೋ ಅಡ್ಡಾದಿಡ್ಡಿಯಾಗಿ ಸಂತೆಯೊಳಗಿನ ಜನಗಳಂತೆ ಹರಡಿಕೊಂಡಿದ್ದ ಕೂದಲುಗಳೆಲ್ಲಾ ಆತನ ಬಾಚಣಿಗೆ ಸ್ಪರ್ಶಕ್ಕೆ ಪ್ರಾಥಮಿಕ ಶಾಲಾ ಮಕ್ಕಳು ಪ್ರಾರ್ಥನೆಗೆ ಸಾಲಾಗಿ ಭಯಭಕ್ತಿಯಿಂದ ರೋಸ್ ಮತ್ತು ಕಾಲಂ ಎರಡೂ ಕಡೆಯಿಂದ ಸರಿಯಾಗಿ ಸಮವಸ್ತ್ರಸಹಿತರಾಗಿ ನಿಲ್ಲುವಂತೆ ತಲೆಬಾಗಿ ನಿಂತುಬಿಟ್ಟವು. ನಾವು ಮನೆಯಲ್ಲಿ ಸುಹಾಸನೆಬರಿತ ದುಬಾರಿ ಷಾಂಪು ಹಾಕಿ ಕೂದಲಿಗೆ ಸ್ನಾನ ಮಾಡಿಸಿ, ತುಂಬಾ ಚೆನ್ನಾದ ಒಳ್ಳೆಯ ಬಾಚಣಿಕೆಯಲ್ಲಿ ತಲೆಬಾಚಿದರೂ ನಮಗೆ ಬೇಕಾದ ಹಾಗೆ ಮುಂದೆ ಕ್ರಾಪು, ಕಿವಿಗಳ ಮೇಲೆ, ನೆತ್ತಿ ತಲೆ, ಹಿಂಭಾಗದಲ್ಲೆಲ್ಲಾ ನಮಗೆ ಬೇಕಾದ ಹಾಗೆ ಕೂರುವುದೇ ಇಲ್ಲ. ನಾವೆಷ್ಟೇ ಅದುಮಿ ಬಾಚಿದರೂ, ಮತ್ತಷ್ಟು ಎಣ್ಣೆಹಾಕಿ ಮಾಲೀಶ್ ಮಾಡಿದರೂ ನಾವಿರುದೇ ಹೀಗೆ ಅಂತ ಮೊಂಡು ಹಿಡಿದ ಮಕ್ಕಳ ಹಾಗೆ ನಿಂತುಬಿಡುತ್ತಿದ್ದ ಇದೇ ಕೂದಲುಗಳು ಈ ಕಟಿಂಗ್ ಷಾಪ್‍ನವನ ಮಾತನ್ನು ಸುಲಭವಾಗಿ ಕೇಳುತ್ತವಲ್ಲ! ಈ ವಿಚಾರ ನನಗೂ ಬಿಡಿಸಲಾಗದ ಕಗ್ಗಂಟು.

ನನ್ನ ಆಲೋಚನೆ ತುಂಡರಿಸುವಂತೆ "ಸರ್, ಟ್ರಿಮ್ಮಾ, ಮೀಡಿಯಮ್ಮಾ, " ಕೇಳಿದ.

ನಾವು ಟ್ರಿಮ್ ಅಂದುಬಿಟ್ಟರೆ ಮುಗೀತು. ಖುಷಿಯಿಂದ ಸುಮ್ಮನೆ ಒಮ್ಮೆ ತಲೆಮೇಲೆಲ್ಲಾ "ಕಚ್ ಕಚ್ ಕಚ್ ಕಚ್" ಅಂತ ಚೆನ್ನಾಗಿ ಶಬ್ದ ಬರುವಂತೆ ಕತ್ತರಿ ಆಡಿಸಿ ಶಾಸ್ತ್ರಕ್ಕೆ ನೆತ್ತಿ ಮೇಲೆ, ಕಿವಿಗಳ ಮೇಲೆ, ಹಿಂಭಾಗ ಮತ್ತು ಮುಂಭಾಗ ಚೂರೇ ಚೂರು ಕೂದಲು ಕತ್ತರಿಸಿ ಕಳಿಸಿಬಿಡುತ್ತಾನೆ. ಎರಡು ವಾರಗಳ ನಂತರ ಮತ್ತೆ ನೀವು ಅವನ ಬಳಿಗೆ ಹೋಗಲೇಬೇಕು. ಇನ್ನೂ ಮೀಡಿಯಮ್ ಅಂದರೆ ಇನ್ನೂ ಸ್ವಲ್ಪ ಹೆಚ್ಚಾಗಿ ಎಲ್ಲಾ ಕಡೆಯೂ ಕತ್ತರಿಸಿ [ಕತ್ತರಿಸಿದಂತೆ ಮಾಡಿ] ಒಂದು ತಿಂಗಳ ಒಳಗಾಗಿ ಮತ್ತೆ ಬರುವಂತೆ ನೋಡಿಕೊಳ್ಳುವುದು. ಆತನೆಂದೂ ಷಾರ್ಟ್ ಮಾಡಿಬಿಡಲಾ ಅಂತ ಕೇಳುವುದಿಲ್ಲ. ಅದು ಅವರ ವೃತ್ತಿಗೆ ಲಾಭದಾಯಕವಲ್ಲ. ಹಾಗೆ ಆತ ಕೇಳಿದಾಗ ನಾವು ಹೂ ಅಂದುಬಿಟ್ಟರೆ ಅಥವ ನಾನೇ ಷಾರ್ಟ್ ಮಾಡಿಬಿಡು ಅಂದುಬಿಟ್ಟರೆ ವಿಧಿಯಿಲ್ಲದೇ ಆತ ನುಣ್ಣಗೆ ಕತ್ತರಿಸಬೇಕಾಗುತ್ತದೆ. ಮತ್ತೆ ಕೂದಲುಗಳೆಲ್ಲಾ ಉದ್ದ ಬೆಳೆದು ಆತನ ಬಳಿಗೆ ಮತ್ತೊಮ್ಮೆ ಕಟಿಂಗ್ ಬರುವ ಹೊತ್ತಿಗೆ ಎರಡು ತಿಂಗಳು ದಾಟಿಬಿಟ್ಟಿರುತ್ತದಲ್ಲ!

ಮೀಡಿಯಮ್ಮಾಗಿರಲಿ ಅಂತ ಹೇಳಿ ನನ್ನ ಶ್ರೀಮತಿ ಹೇಳಿದ ವಿಚಾರವನ್ನು ಅವನಿಗೆ ನೆನಪಿಸಿದೆ.

" ಅಯ್ಯೋ ಬಿಡಿ ಅಣ್ಣಾ, ನಿಮಗಿದೆಲ್ಲಾ ಗೊತ್ತಾಗೊಲ್ಲ! ಈ ಕೂದಲುಗಳೆಲ್ಲಾ ಒಂಥರ! ಭಲೇ ಆಕ್ಟಿಂಗ್ ಮಾಡ್ತಾವೆ!

ಆಹಾಂ! ಕೂದಲು ಆಕ್ಟಿಂಗ್ ಮಾಡ್ತವ! ಇದೆಂಥದಪ್ಪ ಇದು ಹೊಸ ವಿಚಾರ ಅಂದುಕೊಳ್ಳುತ್ತಿದ್ದಂತೆ ಇದುವರೆಗೆ ಭಯಭಕ್ತಿಯಿಂದ ತಲೆಬಾಗಿದ್ದ ನನ್ನ ತಲೆಕೂದಲುಗಳೆಲ್ಲಾ ಗಕ್ಕನೆ ನಿಂತುಕೊಂಡವು.

"ಇದೇನಣ್ಣಾ ನೀನು ಹೇಳೋದು? ಕೂದಲು ಆಕ್ಟಿಂಗ್ ಸ್ವಲ್ಪ ಬಿಡಿಸಿ ಹೇಳಬಾರದಾ?"

"ನೋಡಣ್ಣ, ಗಂಡ್ಸು ಅಫೀಸಿಂದ ಸಂಜೆ ಮನೆಗೆ ಸುಸ್ತಾಗಿ ಬರುತ್ತಿದ್ದಂತೆ ಹೆಂಡ್ತಿ ಬಿಸಿಬಿಸಿ ಒಂದು ಲೋಟ ಕಾಫಿ ಕೊಟ್ಟು ಗಂಡನ ತಲೆಸವರಿ ತನಗೆ ಬೇಕಾದ ಎಲ್ಲವನ್ನು ವಸೂಲಿ ಮಾಡಿಕೊಂಡುಬಿಡುತ್ತಾಳೆ. ಹಿರಿಯಕ್ಕನ ಚಾಲು ಮನೆಮಕ್ಕಳಿಗೆ ಅನ್ನುವಂತೆ ಅವಳ ಇಂಥ ನಯ, ನಾಜೂಕು, ವೈಯ್ಯಾರದಂತ ಗುಣಗಳನ್ನು ದೇಹದ ಎಲ್ಲಾ ಅಂಗಾಗಗಳು ಕಲಿತುಕೊಂಡಂತೆ ಅವಳ ತಲೆಯ ಕೂದಲುಗಳು ಕೂಡ ಚೆನ್ನಾಗಿ ಕಲಿತುಬಿಡುತ್ತವೆ. ಕಲಿತ ಮೇಲೆ ನಟಿಸೋದು ಸುಲಭ ತಾನೆ! ಅವರ ಬ್ಯೂಟಿ ಪಾರ್ಲರ್‍ನಲ್ಲಿ ಕತ್ತರಿಸಿದಾಗ ಅವರ ಬಟ್ಟೆಗೆ ಅಂಟಿಕೊಳ್ಳದೇ ನಾಜೂಕಾಗಿ ಜಾರಿಬಿದ್ದುಬಿಡುತ್ತವೆ . ಆದ್ರೆ ಗಂಡಸರು ಕೆಲಸ ಕಾರ್ಯ ಅಂತ ಹೊರಗೆ ಹೋಗಿ ಸುತ್ತಾಡಿ ಜಡ್ಡು ಹಿಡಿದು ಕುಲಗೆಟ್ಟು ಹೋಗಿರುವುದರಿಂದ ಅವರ ತಲೆಕೂದಲುಗಳು ವೀಕ್ ಆಗಿಬಿಡುತ್ತವೆ. ಹೀಗಾಗಿ ಕಟಿಂಗ್ ಮಾಡಿದಾಗ ಹಾರಾಡಿ ತೂರಾಡಿ ಸುಸ್ತಾಗಿ ಹೀಗೆ ಬಟ್ಟೆಗೆ ಸಿಕ್ಕಿಹಾಕಿಕೊಳ್ಳುತ್ತವೆ. ಮತ್ತೊಂದು ವಿಚಾರ ಸರ್, ಹೆಂಗಸರು ತಲೆಕೂದಲನ್ನು ಏನೇನೋ ಹಾಕಿ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅನೇಕ ಎಣ್ಣೆಗಳನ್ನು ಹಾಕಿ ತಿದ್ದಿ ತೀಡಿ ನೀವಿ ಚೆನ್ನಾಗಿ ನೋಡಿಕೊಳ್ಳುತ್ತಾರೆ, ಆದ್ರೆ ಗಂಡಸರು ಬೇರೆ ಎಣ್ಣೆಗಳನ್ನು ತಲೆಗಾಕದೇ ಬಾಯಿಗೆ ಹಾಕುವುದರಿಂದ ಗಂಡಸರು ಕೂದಲುಗಳಿಗೆ ಈ ಗತಿ ಬಂದಿದೆ ನೋಡಿ". ಅವನ ವಾದಕ್ಕೆ ನಾನು ಮರು ಉತ್ತರ ನೀಡಲಿಲ್ಲ. ಸುಮ್ಮನೇ ಮುಖ ನೋಡುತ್ತಿದ್ದೆ.

"ಅದ್ಯಾಕಣ್ಣ ನನ್ನ ಮುಖ ಹಾಗೆ ನೋಡ್ತಿಯಾ, ನಾನೇನಾದ್ರು ಹೇಳಿದ್ರಲ್ಲಿ ತಪ್ಪಿದಿಯಾ? ಈ ಭೂಮಿ ಮೇಲೆ ನಡೀತಿರೋ ವೈಯ್ಯಾರ, ನಾಜೂಕೆಲ್ಲಾ ಹೆಂಗಸರಿಂದ್ಲೇ ಆಗ್ತಿರೋದು, ಈ ಭೂಮಿ ನಡೀತಿರೋದು ಅವರಿಂದ್ಲೆ ಅಂದ್ರೆ ತಪ್ಪಾಗಿ ತಿಳಿಬೇಡಿ" ಅಂದ. ಓಹ್! ಇವತ್ತೇನೋ ವಿಭಿನ್ನವಾದ ಮೂಡ್‍ನಲ್ಲಿದ್ದಾನೆ ಅನ್ನಿಸುತ್ತೆ, ಇರಲಿ ಯಾವುದೋ ಹೊಸ ವಿಚಾರವನ್ನು ಹೇಳಲೆತ್ನಿಸುತ್ತಿದ್ದಾನೆ, ಮದ್ಯ ನಾನು ಮಾತಾಡಿದರೆ ಆವನ ಮಾತಿನ ದಾರಿ ದಿಕ್ಕು ತಪ್ಪಬಹುದು ಅಂತ ಸುಮ್ಮನೆ ಅವನ ಮುಖವನ್ನು ನೋಡುತ್ತಾ ಕುತೂಹಲದಿಂದ ಕಣ್ಣ ಹುಬ್ಬೇರಿಸಿದೆ. ಒತ್ತಾಗಿ ಬೆಳೆದಿದ್ದ ನನ್ನ ಕಣ್ಣ ಹುಬ್ಬು ಕಂಡರೆ ಅವನಿಗೆ ಇಷ್ಟ. ಅವನಿಗೆ ಅಷ್ಟೇ ಸಾಕಾಯಿತು. ಅದನ್ನು ನೀವುತ್ತಾ.....

"ಹೂ ಕಣಣ್ಣ.....ಅದನ್ನ ನಿಮಗೆ ಅರ್ಥವಾಗುವಂತೆ ಹೇಳ್ತೀನಿ ಇರಿ"....ಅಂದು ಸ್ವಲ್ಪ ಹೊರಗೆ ಅತ್ತ ಇತ್ತ ನೋಡಿದ. ದೂರದಲ್ಲಿ ಒಬ್ಬ ಮುವ್ವತೈದರ ಆಜುಬಾಜು ವಯಸ್ಸಿನ ವ್ಯಕ್ತಿ ಕಟ್ಟೆಯ ಮೇಲೆ ಕುಳಿತು ಬೀಡಿ ಸೇದುತ್ತಿದ್ದ. ತನ್ನ ಕತ್ತರಿ ಕೆಲಸ ನಿಲ್ಲಿಸಿ "ಅದೋ ಅಲ್ಲಿ ಕುಳಿತಿದ್ದಾನಲ್ಲ ಅವನನ್ನೊಮ್ಮೆ ನೋಡಿ, ಅವನು ಯಾವಾಗಲೂ ಹೀಗೆ ಅಲ್ಲಿ ಬಂದು ಕುಳಿತು ಬೀಡಿ ಸೇದುತ್ತಿರುತ್ತಾನೆ. ಅವ್ನ ಮನೇಲಿ ಅವನೆಂಡ್ತಿ, ಮತ್ತೆ ಅವನ ತಾಯಿ ಸೇರಿ ಮೂರೆ ಜನ ಇರೋದು. ಒಂದು ದಿನ ಅವನ ತಾಯಿ ಅರ್ಧ ಕೇಜಿ ಸೇಬು ತಗೊಂಬಾ ಮಗ ತಿನ್ನೋ ಆಸೆಯಾಗ್ತಿದೆ ಅಂತ ಕೇಳಿದ್ಲು. ಅದಕ್ಕೆ ಇವನು, ಓ ಆಸೆ ನೋಡು, ಸಾಯೋ ಮುದ್ಕಿ ನೀನು ಅದನ್ನ ತಿಂದು ಯಾವ ರಾಜ್ಯಭಾರ ಮಾಡಬೇಕಾಗಿದೆ, ಸುಮ್ನೆ ಬಿದ್ಕೋ" ಅಂತ ಬೈದುಬಿಟ್ಟ. ಆ ಯಮ್ಮ ನನ್ನ ಮಗ ಇಂಗಂದುಬಿಟ್ನಲ್ಲ ಅಂತ ಬೇಜಾರು ಮಾಡಿಕೊಂಡುಬಿಟ್ಲು. ಆದ್ರೆ ಅವನ ಹೆಂಡ್ತಿ ರೇಶ್ಮೆ ಸೀರೆ ಕೇಳಿದ್ದಕ್ಕೆ "ನೋಡಮ್ಮಿ ನೀನು ಕೇಳೋದು ಹೆಚ್ಚಾ, ನಾನು ತರೋದು ಹೆಚ್ಚಾ, ತಂದುಕೊಡ್ತೀನಿ ಆದ್ರೆ ಈಗಲ್ಲ ಮುಂದಿನ ಮಾರನವಮಿಗೆ ತಂದುಕೊಟ್ಟುಬಿಡ್ತೀನಿ" ಅಂತ ಹೇಳಿದ್ದಕ್ಕೆ ಅವಳು ಸುಮ್ಮನಾದಳು. ಇಲ್ಲೇ ಇರೋದು ನೋಡಿ ಯತ್ವಾಸ. ತಾಯಿಗೆ ಹೇಳಿದ ಹಾಗೆ ಹೆಂಡ್ತಿಗೆ ಹೇಳಲಿಕ್ಕೆ ಅವನಿಗೆ ಆಗಲಿಲ್ಲವಲ್ಲ, ಯಾಕಂದ್ರೆ ತಾಯಿ ಕೂದಲು ಬೆಳ್ಳಗಾಗಿ ಅವಳಂತೆ ಈಗಲೋ ಆಗಲೋ ಅಂತ ಸಾಯುವ ಸ್ಥಿತಿಗೆ ಬಂದುಬಿಟ್ಟಿದೆ, ಆದ್ರೆ ಹೆಂಡತಿ ಕೂದಲಲ್ಲಿ ವೈಯಾರ, ಯವ್ವನ ತುಂಬಿ ತುಳುಕಾಡುತ್ತಲ್ವಾ ಅದೇನೇ ಅದೇ ಸ್ವಾಮಿ ಆಕರ್ಷಣೆ" ಈ ಕೂದಲು ವಿಚಾರದಲ್ಲಿ ತಿಳಿದುಕೊಳ್ಳೋದು ಬಾಳ ಇದೆ. ಇದೇ ವಿಚಾರದಲ್ಲಿ ಸ್ವಲ್ಪ ಆಳಕ್ಕಿಳಿದು ನೋಡಿದ್ರೆ ಏನೇನೋ ತಿಳಿಯುತ್ತೆ" ಗೊತ್ತಾಣ್ಣ ಅಂದ.

ಅವನ ಮಾತಿಗೆ ನಾನು ಮರುಉತ್ತರ ನೀಡದೇ ಕೇಳಿಸಿಕೊಳ್ಳುತ್ತಿದ್ದೆ. "ಟರ್ರ್ ರ್ರ್... ಟಕ್ ಟಕ್...ಟಕ್ ಟಕ್."...ಎಂದು ಪಕ್ಕದಲ್ಲಿ ಚಿಕ್ಕ ಹುಡುಗನ ತಲೆಕೂದಲು ಕತ್ತರಿಸುತ್ತಿದ್ದ ಮಿಷಿನ್ ಶಬ್ದಮಾಡುತ್ತಿತ್ತು. ಇದ್ದಕ್ಕಿದ್ದಂತೆ ಡರರ್..ರ್......ಅಂತ ಸದ್ದು ಮಾಡಿ ಎಲ್ಲರ ಗಮನವನ್ನು ಸೆಳೆಯಿತು.

"ನೋಡಿದ್ರಾ, ಈ ನಮ್ಮ ಮಿಷಿನ್ ಏನು ಹೇಳ್ತು ನೋಡಿ," ಅಂದು ಅ ಹುಡುಗನ ಕಡೆ ತಿರುಗಿ "ರಾತ್ರಿ ಏನು ತಿಂದ್ಯೋ ಮರಿ" ಕೇಳಿದ. ಹುಡುಗ ಭಯಭಕ್ತಿಯಿಂದ ಹೆದರಿಕೊಂಡು "ಮೊಟ್ಟೆ ತಿಂದೆ" ಅಂದ "ನೋಡಿದ್ರಾ ನಾನು ಹೇಳಲಿಲ್ಲವಾ...ಇವನು ರಾತ್ರಿ ತಿಂದ ಮೊಟ್ಟೆಯಲ್ಲಿನ ಗ್ಯಾಸ್ ದೇಹದ ಮೂಲಕ ತಲೆಗೂ ಹತ್ತಿದೆ. ತಲೆಗೆ ಹತ್ತಿದ ಮೇಲೆ ಕೂದಲಿಗೂ ಬರಲೇಬೇಕಲ್ವಾ.........ಯಾವಾಗ ಅವನ ತಲೆಕೂದಲನ್ನು ನಮ್ಮ ಕಟಿಂಗ್ ಮಿಷಿನ್ ಕತ್ತರಿಸತೊಡಗಿತೊ, ಅದುವರೆಗೂ ಕೂದಲೊಳಗೆ ಕುಳಿತಿದ್ದ ಈ ಮೊಟ್ಟೆ ಗ್ಯಾಸ್ ಮಿಷಿನ್ನಿನ ಹಲ್ಲುಗಳಿಗೆ ತಾಗಿ ಡರರ್....ರ್.....ಅಂದ ಶಬ್ದ ಮಾಡಿದೆ. ಚಿಕನ್ ಮಟನ್ ತಿಂದಿದ್ದರೆ ಇನ್ನೂ ಬೇರೆ ತರ ಶಬ್ದ ಮಾಡುತ್ತೆ ಕಣಣ್ಣ," ಅಂತ ನಕ್ಕ. ಅವನ ಮಾತಿಗೆ ಅಲ್ಲಿ ಕುಳಿತಿದ್ದವರೆಲ್ಲಾ ಜೋರಾಗಿ ನಕ್ಕರು. ಬದುಕಿನ ಪ್ರತಿಯೊಂದು ವಿಚಾರಗಳಿಗೂ, ಆ ಕ್ಷಣದಲ್ಲಿ ನಡೆದ ಸನ್ನಿವೇಶಗಳಿಗೂ ತಲೆಕೂದಲನ್ನು ಲಿಂಕ್ ಮಾಡಿ ತನ್ನದೇ ಒಂದು ಶೈಲಿಯಲ್ಲಿ ವಿಚಾರವನ್ನು ಮಂಡಿಸುತ್ತಿದ್ದ ಅವನ ಚಾಕಚಕ್ಯತೆಗೆ ನಾನು ತಲೆದೂಗಬೇಕಾಯಿತು.

ಅಷ್ಟರಲ್ಲಿ ನನ್ನ ತಲೆಕೂದಲುಗಳೆಲ್ಲಾ ಅವನ ಹದ್ದುಬಸ್ತಿಗೆ ಬಂದು ಗಂಬೀರವಾಗಿರುವಂತೆ ನನಗೆ ಅನ್ನಿಸಿತು. ಬಹುಶಃ ಕಟಿಂಗ್ ಶಾಪ್‍ನಲ್ಲಿರುವವರೆಗೆ ಮಾತ್ರ ಹೀಗಿರಬಹುದು, ನಮ್ಮ ಮತ್ತೆ ನಮ್ಮ ಮನೆಯ ಕನ್ನಡಿಯ ಮುಂದೆ ನಿಂತು ತಲೆ ಬಾಚುವಾಗ ಆಡ್ನಾಡಿ ಬುದ್ದಿ ತೋರಿಸಬಹುದು ಅಂದುಕೊಳ್ಳುತ್ತಾ ಅವನಿಗೆ ಹಣಕೊಟ್ಟು ಹೊರಬರುವಾಗ ನನ್ನ ಬಟ್ಟೆಯನ್ನು ನೋಡಿಕೊಂಡೆ. ಒಂದು ಕೂದಲ ತುಣುಕು ಕೂಡ ಕಾಣಲಿಲ್ಲವಾದ್ದರಿಂದ ಮನಸ್ಸಿಗೆ ಸಮಾಧಾನವಾಗಿತ್ತು. ಆದರೂ ಎಲ್ಲೋ ಅನುಮಾನ. ನನಗೆ ಕಾಣಿಸದೇ ಇದ್ದ ಕೂದಲು ನನ್ನ ಶ್ರೀಮತಿಗೆ ಕಾಣಿಸಿದರೆ! ಅನ್ನಿಸುತ್ತಿದ್ದಂತೆ ಕುತ್ತಿಗೆ ಮೇಲೆ ಮುಲಮುಲವೆಂದಿತು. ಸಂಶಯವಾಗಿ ಮತ್ತೊಮ್ಮೆ ಒಳಗೋಗಿ ದೊಡ್ಡಕನ್ನಡಿಯಲ್ಲಿ ಕುತ್ತಿಗೆಯನ್ನು ನೋಡಿಕೊಂಡೆ. ಒಂದು ಕೂದಲು ಕೂಡ ಕಾಣಲಿಲ್ಲ. ಓಹ್! ಭ್ರಮೆಗೊಳಗಾಗಿರಬೇಕು ಅಂದುಕೊಳ್ಳುತ್ತಾ ಹೊರಬಂದು ಮನೆ ಕಡೆಗೆ ನಡೆಯುತ್ತಿದ್ದೆ. ನಿದಾನವಾಗಿ ಬುಜ, ತೋಳುಗಳು, ಬೆನ್ನಬಾಗವೆಲ್ಲಾ ಮುಲಮುಲ ನವೆ ಪ್ರಾರಂಭವಾಗಿತ್ತು.

ಲೇಖನ: ಶಿವು.ಕೆ