Thursday, September 24, 2009

ಕುಲುಮೆ-ಬಾಗ ೨

ಹೊರಬಂದು ನೋಡಿದರೆ ಇವರ ಮನೆಯೊಂದು ಬಿಟ್ಟು ಊರು ಪೂರ್ತಿ ಮಲಗಿತ್ತು. ಬಾವಲಿಗಳ ಹಾರಾಟ, ಮಿಂಚುಳಗಳ ಮಿಣುಕಾಟ, ಕಪ್ಪೆಗಳ ಸಣ್ಣ ಒಟರ್‌‍ಗುಟ್ಟುವಿಕೆ ಬಿಟ್ಟರೇ ದೂರದಲ್ಲಿ ಭಯಂಕರ ಮೌನವಿತ್ತು. "ಯಾವಾಗ ಬಂದಿ ಮಗ ಬಾ, ಕೈಕಾಲು ತೊಳಕೊಂಡು ಬಾ, ಉಂಡು ಮಲಗುವಿಯಂತೆ, ನಾಳೆ ಸರೋತ್ತಿನಲ್ಲಿ ಎದ್ದೇಳಬೇಕು" ಅವ್ವನ ಮಾತು ಕೇಳಿ ಒಳಗೆ ಕೈಕಾಲು ತೊಳೆಯಲು ಬಚ್ಚಲುಗೂಡಿನ ಕಡೆಗೆ ನಡೆದ. ಬೀರ ಮತ್ತು ಪಾರ್ವತಿ ಇಬ್ಬರಿಗೂ ಉಣಬಡಿಸಿ ಅಪ್ಪನನ್ನು ಎಚ್ಚರಗೊಳಿಸುತ್ತಿದ್ದಳು. ಮಂಜ ಊಟಕ್ಕೆ ಕೂತ. "ಲೇ ಮಗ ನಾಳೆ ನಿನಗೆ ಸಂಬಳ ಕೊಡೋ ದಿನ ಅಲ್ವೇನೋ" ಅವ್ವನ ಮಾತು ಕೇಳಿ ಗಕ್ಕನೇ ನೆನಪಾಯಿತು. ತಾನಾಗಲೇ ಯೋಚಿಸಿದ್ದು ನನ್ನ ಸಂಬಳದ ಬಗ್ಗೇನೆ ಅಲ್ವೇ, ಆದರೇ ಆಗ ಸರಿಯಾಗಿ ನೆನಪಾಗಲಿಲ್ಲವಲ್ಲ. "ಹೂನವ ನಾಳೆ ಕಮ್ಮಾರ ಶೆಟ್ಟಿ ಸಂಬಳ ಕೊಡಬಹುದು" ಜೋಪಾನವಾಗಿ ತಗಂಡು ಬಾ ಮಗ" ಎನ್ನುತ್ತಾ ತಾನು ಊಟ ಮಾಡಲು ಕೋಣೆಗೆ ಹೋದಳು. ರಾತ್ರಿ ಮಲಗುವಾಗ ನಾಳೆ ತೆಗೆದುಕೊಳ್ಳುವ ಸಂಬಳದ ಯೋಚನೆಯಲ್ಲೇ ನಿದ್ದೇ ಹೋಗಿದ್ದ ಮಂಜ.

ಎಚ್ಚರವಾದಾಗ ಕಣ್ಣು ಬಿಟ್ಟು ನೋಡಿದ. ಹೊರಗೆ ಹಕ್ಕಿಗಳ ಚಿಲಿಪಿಲಿ ಕಲರವ ಕೇಳಿಸುತ್ತಿತ್ತು. ಇನ್ನೂ ಪೂರ್ತಿ ಬೆಳಕಾಗಿರಲಿಲ್ಲ ಮಂಜನ ತಾಯಿ ಬಚ್ಬಲು ಮನೆಯಲ್ಲಿ ನೀರೊಲೆಗೆ ಬೆಂಕಿಹಾಕಿದ್ದಳೆನಿಸುತ್ತದೆ, ಅದರ ಮಬ್ಬು ಬೆಳಕು ನಾನು ಮಲಗಿದ್ದ ಕೋಣೆಯನ್ನು ಬೇರ್ಪಡಿಸಿದ್ದ ಗೋಡಿಯ ಕಿಂಡಿಯಿಂದ ಬಿಳಿಕೋಲಾಗಿ ಎದುರುಗೋಡೆಯನ್ನು ಕೊರೆಯುತ್ತಿತ್ತು. ಪಕ್ಕದ ಗೋಣಿತಾಟು ಅಲುಗಿದ್ದರಿಂದ "ಪಾತಿ" ಅಂದ. ಕೊಂಚ ಅಲುಗಾಡಿ ಪೂರ್ತಿ ತಲೆ ಒಳಗೆ ಎಳೆದುಕೊಂಡು "ಹೂಂ" ಎಂದು ಸದ್ದಾಗಿ ಮತ್ತೆ ಸ್ಥಬ್ಧವಾಯಿತು. ಈ ಪಕ್ಕ ಮಲಗಿದ್ದ ಬೀರನನ್ನು ಕೂಗಬೇಕೆನಿಸಿದರೂ ಅವನು ಮೂಲೆಯಲ್ಲಿ ಮುಸುಕು ಹಾಕಿಕೊಂಡು ಮುದುರಿಕೊಂಡಿರುವುದು ನೋಡಿ ಬೇಡವೆನಿಸಿತ್ತು ಕೂಗಲಿಲ್ಲ. ಅವರಿಬ್ಬರೂ ತಮ್ಮ ಗೋಣಿತಾಟಿನೊಳಗೆ ಮುದುರಿ ಗೊರಕೆ ಹೊಡೆಯುತ್ತಿದ್ದರು. ಅವ್ವ ಯಾರೊಡನೆಯೋ ಮಾತಾಡುತ್ತಿರುವುದು ಕೇಳಿಸಿತು. ಮತ್ಯಾರ ಜೊತೆ ಮಾತಾಡಿಯಾಳು, ಅಪ್ಪನ ಜೊತೆ ತಾನೆ, ಅವನು ಅವ್ವನಿಗೆ ಏನೇನೋ ಬೈಯ್ಯುತ್ತಿದ್ದ. ಅವನ ಗಲಾಟೆ ಜೋರಾಗಿತ್ತು. ಬಹುಶಃ ಅವನ ಗಲಾಟೆಯಿಂದಲೇ ಮಂಜನಿಗೆ ಎಚ್ಚರವಾಯಿತೇನೋ. "ಹತ್ತು ರೂಪಾಯಿ ಕೊಡೆ" ಅವ್ವನನ್ನು ಕೇಳುತ್ತಿದ್ದ. ಕೇಳುತ್ತಿದ್ದ ಎನ್ನುವುದಕ್ಕಿಂತ ಪೀಡಿಸುತ್ತಿದ್ದ. ಹಾಡು ಹಗಲಾಗಲಿ, ಮದ್ಯ ರಾತ್ರಿಯಾಗಲಿ ತನಗೆ ಕುಡಿಯಲು ಕಾಸುಬೇಕೆಂದರೇ ಅವ್ವನನ್ನು ಹೀಗೆ ಪೀಡಿಸುತ್ತಿದ್ದ. ಅವನು ಕೂಲಿ ಮಾಡುವುದು ಬಿಟ್ಟು ಅದೆಷ್ಟು ದಿನ ಕಳೆದುಹೋದವೋ.. "ದಿನಾ ಯಾಕೆ ನನ್ನ ಪಿರಾಣ ತಿಂತೀ, ನಿನಗೇನು ಹೊತ್ತು ಗೊತ್ತಿಲ್ಲವೇ, ಇನ್ನೂ ಬೆಳಕೇ ಹರಿದಿಲ್ಲ ಆಗಲೇ ನನ್ನ ಪೀಡಿಸುತ್ತಿದ್ದಿಯಲ್ಲ, ಕಾಸು ಕಾಸು ನಾನೆಲ್ಲಿಂದ ತರಲಿ ಹೋಗು" ಗೊಣಗುತ್ತಿದ್ದಳು. ಅವಳಾದರೂ ಏನು ಮಾಡುತ್ತಾಳೆ, ಅಪ್ಪ ಕೂಲಿ ಮಾಡೋದು ಬಿಟ್ಟ ಮೇಲೆ ಅವ್ವನೇ ಕೂಲಿಗೆ ಹೋಗಬೇಕಾಗಿತ್ತು. ಗಂಡಾಳಿಗಿಂತ ಹೆಣ್ಣಾಳಿಗೆ ಕಡಿಮೆ ಕೂಲಿ ಇದ್ದರೂ ಅದರಲ್ಲೇ ಸಂಸಾರ ನಿಭಾಯಿಸುತ್ತಿದ್ದಳು. ಅಪ್ಪ ಮೊದಲು ಹೇಗಿದ್ದ ಈಗ ಏಕೆ ಹಿಂಗಾದ? ದಿನಾಲು ಕೆಲಸಕ್ಕೆ ಹೋಗುತ್ತಿದ್ದವನು ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಇದ್ದಕ್ಕಿದ್ದಂತೆ ಒಂದು ದಿನ ಏನಾಯಿತೋ ಕುಡಿದು ಬಂದಿದ್ದ. ಅವ್ವನ ಮೇಲೆ ಜಗಳ ಮಾಡಿದ. ಅಂದೇ ಕೊನೆ ಮರುದಿನದಿಂದ ಕೂಲಿಗೆ ಹೋಗಲಿಲ್ಲ. ಕುಡಿತದ ದಾಸನಾಗಿಬಿಟ್ಟಿದ್ದ. ಸಹವಾಸದಿಂದ ಕೆಟ್ಟು ಹೋಗಿದ್ದ. ಅಂದಿನಿಂದ ಇಂದಿನವರೆಗೆ ಮನೆಯ ಪರಿಸ್ಥಿತಿಯಂತೂ ಬಿಗಡಾಯಿಸಿಹೋಗಿದೆ. ಅಮೇಲೆ ತಾನೆ ನಾನು ಸ್ಕೂಲು ಬಿಟ್ಟು ದೂರದ ಬಡಿಗಳ್ಳಿಯ ಕಮ್ಮಾರ ಶೆಟ್ಟಿಯ ಕುಲುಮೇಲಿ ಕಬ್ಬಿಣ ಬಡಿಯುವ ಕೆಲಸಕ್ಕೆ ಸೇರಿದ್ದು. ಇಂದಿಗೆ ಸರಿಯಾಗಿ ಒಂದು ತಿಂಗಳಾಯಿತು. ಅಂದರೆ ಇಂದು ನನಗೆ ಸಂಬಳದ ದಿನ. ಸಂಬಳವೆಂದ ಕೂಡಲೇ ಲಗುಬಗನೇ ಎದ್ದ. ಪಕ್ಕದಲ್ಲಿ ತಮ್ಮ ತಂಗಿಯರಿಬ್ಬರೂ ಇನ್ನೂ ನಿದ್ರಿಸುತ್ತಿದ್ದರು. ಎದ್ದು ಬಚ್ಚಲುಗೂಡಿನ ಕಡೆಗೆ ನಡೆದ. ಅವ್ವನನ್ನು ಅಪ್ಪ ಪೀಡಿಸುತ್ತಲೇ ಇದ್ದ ಹತ್ತು ರೂಪಾಯಿಗಾಗಿ. ಅದನ್ನು ಗಮನಿಸದೆ ಅವ್ವ ಮಂಜನನ್ನು ನೋಡಿ "ಏನ್ ಮಗ ಇಷ್ಟು ನಿದಾನ ಎದ್ದಿ, ಹೊತ್ತಾಯ್ತಾ ಬಂತು, ಬೇಗ ಹೊರಡು ಎಂದಳು ಮಂಜನಿಗೆ ಹೊಟ್ಟೆ ಚುರುಗುಟ್ಟುತ್ತಿತ್ತೇನೋ ಹಾಗೆ ನಿಂತಿದ್ದ. ಅದ್ಯಾಕೆ ಹಾಗೆ ನಿಂತಿದ್ದಿ, ರಾತ್ರೀದು ಮುದ್ದೆ ಮೆಣಸಿನ ಕಾರ ಇರಬೋದು ಹಾಕ್ಕೊಂಡು ತಿಂದು ಹೋಗು ಮಗ" ಮತ್ತೆ ಹೇಳಿದ್ದಳು. ಅವ್ವ ದಿನಾಲು ಇದೇ ಮಾತನ್ನು ಹೇಳುತ್ತಿದ್ದಳು. ಮಂಜನೂ ದಿನಾ ಅದನ್ನೇ ತಿನ್ನುತ್ತಿದ್ದ. ಆದರೆ ಇಂದು ಹಾಗಾಗುವುದಿಲ್ಲ ಅವನಿಗೆ ಸಂಬಳ ಬರುತ್ತದೆ, ಕಮ್ಮಾರ ಶೆಟ್ಟಿ ಸಂಬಳ ಕೊಟ್ಟ ಮೇಲೆ ನಾಗಮಂಗಲ ಪೇಟೆಗೆ ಹೋಗಿ ಮನೆಗೆ ಬೇಕಾದ ಅಕ್ಕಿ ಮುಂತಾದ ಸಾಮಾನು ತರಬೇಕು, ಹಾಗೆ ಅವ್ವನ ಬಳಿ ಇರೋದು ಒಂದೇ ರವಿಕೆ, ಅದೂ ಬೆನ್ನ ಹಿಂದೆ ಹರಿದು ಹೋಗಿದೆ. ಅವಳಿಗೆ ಹೊಸದೊಂದು ರವಿಕೆ ತರಬೇಕು, ನಾಳೆಯಿಂದ ಕೆಲದಿನಗಳ ಮಟ್ಟಿಗಾದ್ರು ಅನ್ನದ ಮುಖ ನೋಡ್ತಿವಲ್ಲ ಅಂದುಕೊಳ್ಳುತ್ತಾ ಖುಷಿಯಲ್ಲಿ ತಟ್ಟೆಯಲ್ಲಿದ್ದದ್ದನ್ನೆಲ್ಲಾ ಖಾಲಿಮಾಡಿ ನೀರು ಕುಡಿದು ಎದ್ದ. ಅಪ್ಪ ಅವ್ವನನ್ನು ಪೀಡಿಸುತ್ತಿದ್ದು ಇನ್ನೂ ನಡೆಯುತ್ತಿತ್ತು. ಅವಳು ಕೊಡೋವರೆಗೂ ಇವನು ಬಿಡೋದಿಲ್ವೇನೋ ಅಂದುಕೊಂಡು ಮಂಜ ಮನೆಯಂಗಳ ದಾಟಿದ್ದ.

ಪುಟ್ಟೇಗೌಡ್ರ ಹಿತ್ತಲು ದಾಟಿದ್ರೆ ಸಾಮೇಗೌಡ್ರ ಅಂಗಳ, ಅಲ್ಲಿಂದ ಮುಂದೆ ಮಣ್ಣಿನ ರಸ್ತೆ. ಕಾಲುದಾರೀಲಿ ನಾಗಮಂಗಲದತ್ತ ಹೆಜ್ಜೆ ಹಾಕುವಾಗ ತಣ್ಣಗೆ ಚಳಿ ಕೊರೆಯುತ್ತಿತ್ತು. ಕಮ್ಮಾರ ಶೆಟ್ಟಿ ಕುಲುಮೆ ತಲುಪುವ ಹೊತ್ತಿಗೆ ಬೆಳಕಾಗಿತ್ತು. ಕೊಂಚ ತಡವೂ ಆಗಿತ್ತು. ಕುತ್ತಿಗೆಯಿಂದಿಳಿಯುತ್ತಿದ್ದ ಬೆವರು ಒರೆಸಿಕೊಳ್ಳುತ್ತಾ ಕುಲುಮೆಯ ಗುಡಿಸಲಿಗೆ ಕಾಲಿಟ್ಟರೆ ಬಾಗಿಲಲ್ಲೇ ಇದ್ದಾನೆ ಕಮ್ಮಾರಶೆಟ್ಟಿ. "ಸಾಕೇನೋ ಹೊತ್ತು, ಇನ್ನೂ ಕೊಂಚ ತಡವಾಗಿ ಬರಬಹುದಿತ್ತಲ್ಲ, ಬರೋವಾಗ ಮೊದಲೇ ಹೇಳಿದ್ರೆ ಸಾರೋಟು ಕಳಿಸ್ತಿದ್ದೆ. ನಿಮ್ಮಂತವರನ್ನು ನಂಬಿದ್ರೆ ನನ್ನ ಹೊಟ್ಟೆ ತುಂಬಿದಾಗೆ, ನಡಿಯೋ ಒಳಗೆ" ಕಮ್ಮಾರ ಶೆಟ್ಟಿಯ ಬೈಗುಳದಿಂದ ಅವನಿಗೇನು ಬೇಸರವಾಗಲಿಲ್ಲ. ಯಾಕೆಂದರೆ ಇದೆಲ್ಲಾ ಪ್ರತಿದಿನದ ದಿನಚರಿ ಎಂಬಷ್ಟು ಸಲೀಸಾಗಿ ಒಳನಡೆದ. ಅವನಿಗಾಗಿ ಕೆಲಸ ಕಾಯುತ್ತಿತ್ತು. ಆಗ ಶುರುಮಾಡಿದ ಕೆಲಸ ಸಂಜೆಯಾದರೂ ಮುಗಿಯುತ್ತಿರಲಿಲ್ಲ. ಒಂಬತ್ತು ಗಂಟೆಗೊಮ್ಮೆ 'ಚಾ" ಬಂತು. ಅದು ದಿನವೂ ಬರುತ್ತದೆ, ಅದು "ಚಾ"ನೋ ಅಥವ ಕಲಗಚ್ಚೋ, ಅದಾದರೂ ಸಿಕ್ಕುತ್ತಲ್ಲ ಸುಸ್ತಾದವನಿಗೆ ಸುಧಾರಿಸಿಕೊಳ್ಳಲು ಒಂದೇ ದಾರಿ ಇದಾಗಿತ್ತು. ಮತ್ತೊಮ್ಮೆ ಸಂಬಳ ಸಿಕ್ಕುವ ನೆನಪಾಯ್ತು. ರಾತ್ರಿ ಅಂದುಕೊಂಡಂತೆ ಮಾಡಿದ ಮೇಲೆ ಹಣ ಉಳಿದರೆ ತಂಗಿ ಪಾರ್ವತಿ, ತಮ್ಮ ಬೀರನಿಗೆ ಬಳೆ ಬತ್ತಾಸು ಕೊಳ್ಳಬೇಕು. ಅವನ್ನೆಲ್ಲಾ ಪಡೆದುಕೊಂಡ ಮೇಲೆ ಅವರ ಮುಖದಲ್ಲೂ ಅರಳುವ ಸಂತೋಷವನ್ನು ನಾನು ನೋಡಬೇಕು. ಆಲೋಚನೆಯ ಜೊತೆಯಲ್ಲೇ ಕೆಲಸವನ್ನು ಮಾಡುತ್ತಾ ಸಂಜೆಯಾಗುವುದನ್ನು ಕಾಯುತ್ತಿದ್ದ ಮಂಜ.

ಸಂಜೆ ಐದು ಗಂಟೆಯಾಯಿತು ಹೀರ ಮತು ಮಂಜ ಇಬ್ಬರು ಕೆಲಸ ಮುಗಿಸಿ ಕೈಕಾಲು ತೊಳೆದುಕೊಂಡು ಕಮ್ಮಾರಶೆಟ್ಟಿಗಾಗಿ ಕಾಯುತ್ತಿದ್ದರು ಸಂಬಳ ಪಡೆಯಲು. ಕಮ್ಮಾರ ಶೆಟ್ಟಿ ಹೊರಗೆ ಹೋಗಿದ್ದ. ಇಬ್ಬರು ಮಾತಾಡಿಕೊಳ್ಳುತ್ತಿರುವಾಗ ದೂರದಿಂದ ಒಬ್ಬ ವ್ಯಕ್ತಿ ವೇಗವಾಗಿ ಬರುತ್ತಿದ್ದುದು ಕಂಡಿತು. ಅವನ ಮುಖದಲ್ಲಿ ವಿಷಾದ, ದುಃಖ ಮಿಶ್ರಿತವಾಗಿ ಎದ್ದುಕಾಣುತ್ತಿತ್ತು.

"ಕಮ್ಮಾರ ಶೆಟ್ಟಿ ಎಲ್ಲಿ" ಹೀರ ಕೇಳಿದ.

ನೀವಿಬ್ಬರೂ ಬೇಗ ಹೋಗಿ ಕಮ್ಮಾರ ಶೆಟ್ಟಿಯ ಹೆಣವನ್ನು ಊರ ಚತ್ರದ ಅಂಗಳದಲ್ಲಿ ಮಲಗಿಸಿದ್ದಾರೆ. ಮದ್ಯಾಹ್ನ ರಸ್ತೆಯನ್ನು ದಾಟುವಾಗ ಲಾರಿಯೊಂದು ವೇಗವಾಗಿ ಬಂದು ಕಮ್ಮಾರಶೆಟ್ಟಿಗೆ ಅಪ್ಪಳಿಸಿ ಅಲ್ಲೇ ಸತ್ತ" ಹೇಳಿ ಬಂದಷ್ಟೇ ವೇಗವಾಗಿ ವಾಪಸ್ ಹೊರಟ ಆತ.

"ಕಮ್ಮಾರ ಶೆಟ್ಟಿ ಸತ್ತ" ಮಾತಷ್ಟೇ ಕೇಳಿಸಿತ್ತು. ಮುಂದಿನ ಮಾತುಗಳ್ಯಾವುವು ಕೇಳಿಸಲಿಲ್ಲ ಮಂಜನಿಗೆ. ಕಣ್ಣಂಚಲ್ಲಿ ನೀರು ತುಂಬಿಕೊಂಡಿತ್ತು ಒರೆಸಿಕೊಂಡಷ್ಟು ಜಾಸ್ತಿಯಾಗಿ. ಅವ್ವನ ಹರಿದ ರವಿಕೆ, ಗೋಣಿತಾಟುಗಳಲ್ಲಿ ಮುದುರಿಕೊಂಡಿರುವ ತಮ್ಮ ತಂಗಿ, ಅದೇ ಗಂಜಿ, ತಂಗಳು ಮುದ್ದೆ, ಗೊಡ್ಡು ಕಾರ ಎಲ್ಲಾ ಕಣ್ಣ ಮುಂದೆ ಸರಿಯುತ್ತಿದ್ದವು.

ಶಿವು.ಕೆ.

Sunday, September 20, 2009

ಕುಲುಮೆ

ಕತೆಗಾರ ನಾನು ಎಂದು ಹೇಳಿಕೊಳ್ಳುವ ಯೋಗ್ಯತೆ ಖಂಡಿತ ನನಗಿಲ್ಲ. ಹಾಗೂ ಮೂಲತಃ ನಾನು ಬರಹಗಾರನೂ ಅಲ್ಲ. ಮೊದಲು ಸಣ್ಣ ಪುಟ್ಟ ಚಿತ್ರಲೇಖನಗಳನ್ನು ಬರೆದು ಪತ್ರಿಕೆಗೆ ಕಳಿಸುತ್ತಿದ್ದೆ. ಪ್ರಕಟವಾದಾಗ ಖುಷಿಯಾಗುತ್ತಿತ್ತು. ಈಗ ಬ್ಲಾಗಿನಲ್ಲಿ ಸ್ವಲ್ಪ ಗೀಚುತ್ತಿದ್ದೇನೆ. ಇಂಥ ಹಿನ್ನೆಲೆಯ ನನಗೇ ಈ ಪುಟ್ಟ ಕತೆ ಏಕೆ ನನ್ನೊಳಗೆ ಕಾಡುತ್ತಿತ್ತೋ ಗೊತ್ತಿಲ್ಲ. ನನ್ನಿಂದ ಬರೆಯಲು ಸಾಧ್ಯವಿಲ್ಲವೆಂದು ಉಡಾಫೆಯಿಂದಿದ್ದರೂ ಇದು ಯಾವ ರೀತಿ ಕಾಡಿತೆಂದರೇ ಇನ್ನೂ ನಾನು ಸುಮ್ಮನಿರಲೂ ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಆಗಿ ಕೂತು ಬರೆಸಿಕೊಂಡಿತು. ಬರೆದ ಮೇಲೆ ದೊಡ್ಡ ಹೊರೆ ಇಳಿಸಿದಷ್ಟು ಸಮಾಧಾನ. ಒಂದಷ್ಟು ದಿನ ಅದೇ ಗುಂಗಿನಲ್ಲಿದ್ದು ಈಗ ನಿಮ್ಮ ಮುಂದೆ ಇಡುತ್ತಿದ್ದೇನೆ.

------------ ---------------- ------------------

ಅದೇನಲೇ ಮಂಗ್ಯ, ಸಣ್ಣ ಮಗನ್ನ ಮನಗಿಸ್ಯಾಕೆ ಬೆನ್ನು ತಟ್ಟುತ್ತಾರಲ್ಲ ಅಂಗೆ ತಟ್ಟುತ್ತಿದ್ದಿ, ಅದು ಕಬ್ಬಿಣ ಕಣ್ಲ, ಒಸಿ ಜೋರಾಗಿ ಏಟು ಹಾಕ್ಲ, ನೀನು ಹಿಂಗೆ ಬಡಿತಿದ್ರೆ ಕ್ಯಾಮೆ ಆದಂಗೆಯಾ...ಕುಲುಮೆಯಲ್ಲಿ ಕಾದ ಕಬ್ಬಿಣದ ತುಂಡಿಗೆ ಉಸ್ ಉಸ್ ಉಸಿರು ಬಿಡುತ್ತಾ ಸುತ್ತಿಗೆಯಿಂದ ಟಣ್ ಟಣ್ ಟಣ್......ಬಡಿಯುತ್ತಿದ್ದ ಮಂಜನಿಗೆ ಕಮ್ಮಾರ ಶೆಟ್ಟಿ ರೇಗಿದಾಗ ತನ್ನದೇ ಆಲೋಚನೆಯಲ್ಲಿ ದಗ ದಗ ದಗೆಯನ್ನು ಮರೆತು ಕೆಲಸ ಮಾಡುತ್ತಿದ್ದ ಆ ಹುಡುಗನಿಗೆ ದಗೆಯ ಜೊತೆಗೆ ಉರಿಬಿಸಿಲು ಮೈ ಮುತ್ತಿದಂತಾಯಿತು. ಅವನಿಗೆ ಅದೇನು ಹೊಸದಲ್ಲ. ಕಳೆದ ಒಂದು ತಿಂಗಳಿಂದ ಸಡಗರ, ಕುತೂಹಲ, ಆಕಾಂಕ್ಷೆಗಳೆಲ್ಲಾ ಮಾಯಾವಾಗಿ ಒಂದು ರೀತಿಯ ಜಿಗುಪ್ಸೆ, ವೇದನೆಗಳು ಬೆನ್ನುಮೂಳೆಯ ಚಳುಕಿನಂತೆ ಅವನನ್ನು ಕಾಡುತ್ತಿವೆ.

ಶಿಥಿಲಗೊಂಡು ಜೀರ್ಣವಾಗಿ ಹೋಗಿದ್ದ, ಬಣ್ಣ ಕಾಣದ, ಬಾಗಿಲೇ ಇಲ್ಲದ ಆ ಗುಡಿಸಲು ಹೊರನೋಟಕ್ಕೆ ಕಮ್ಮಾರಶೆಟ್ಟಿಯಂತೆ ಜಬರದಸ್ತಾಗಿ ಕಂಡರೂ ಒಳಗಡೆ ಕುಲುಮೇಲಿ ನಡೆಯುವ ಬಡಿದಾಟ, ಬಗ್ಗಿಸುವುದು, ತಟ್ಟುವುದು ಎಲ್ಲಾ ಅವನ ಬೈಗುಳ, ಜಿಗುಟುತನ, ಕೋಪದಂತೆ ಜೊತೆಯಲ್ಲೇ ಸಾಗುತ್ತಿತ್ತು ಕಬ್ಬಿಣದ ತುಂಡುಗಳಿಗೆ ಮತ್ತು ಕೆಲಸ ಮಾಡುವ ಬಾಲಕಾರ್ಮಿಕರಿಗೆ.

ಎದುರುಗಡೆ ಸರ್ವದಿಕ್ಕಿಗೂ ತನ್ನ ರೆಂಬೆಕೊಂಬೆಗಳನ್ನು ಹರಡಿಕೊಂಡಿದ್ದ ಆಲದ ಮರದ ಕೆಳಗೆ ಒಂದು ಮುರುಕು ಕುರ್ಚಿ ಹಾಕಿಕೊಂಡು ಬಾಯೊಳಗೆ ಎಲೆಅಡಿಕೆಯೊಂದಿಗೆ ಹೊಗೆಸೊಪ್ಪು ಜಗಿಯುತ್ತಾ, ತುಪಕ್ಕೆಂದು ಬಾಯಿಂದ ಆಗಾಗ ಕೆಂಪುನೀರು ಹೊಡೆಯುತ್ತಾ ಎದುರು ಕುಳಿತವರ ಜೊತೆ ಗಂಟೆಗಟ್ಟಲೇ ಹರಟುತ್ತಾನೆ ಕಮ್ಮಾರಶೆಟ್ಟಿ. ಅದಿನ್ನೆಂತಾ ಘನಾನ್‌ದಾರಿ ವಿಷಯಗಳಿರುತ್ತವೋ...ಎದುರು ಕುಳಿತವರು ಇವನ ಮಾತನ್ನು ಕೇಳಲು ಬರುತ್ತಾರೋ ಅಥವ ಕಮ್ಮಾರ ಶೆಟ್ಟಿಯೋ ದಿನಕ್ಕೊಬ್ಬರಂತೆ ಜೊತೆಗಾಕಿಕೊಂಡು ಬರುತ್ತಾನೋ, ಇಲ್ಲ ಇವನು ಕೊಡಿಸುವ ಅರ್ಧ 'ಚಾ" ದ ದಾಕ್ಷಿಣ್ಯಕ್ಕಾಗಿ ಇವನಿಗಂಟಿಕೊಂಡಿರುತ್ತಾರೋ ತಿಳಿಯದು. ಆದರೆ ಒಂದಂತು ನಿಜ. ಗುಡಿಸಲಲ್ಲಿರುವ ಕೆಲಸಗಾರರನ್ನು ಬೈಯ್ಯುವುದು, ಹೊರಗೆ ಆಲದ ಮರದಡಿ ಕುಳಿತು ಹರಟುವುದು, ಜೊತೆಗಾರರ ಜೊತೆ ಊರ ಉಸಾಬರಿಗಳನ್ನೆಲ್ಲಾ ತನ್ನ ಮೇಲೆಳೆದುಕೊಳ್ಳುವಂತೆ ಮಾತಾಡುತ್ತಾ, ಕಾಲು ನೋವುಬಂತೆಂದು ಎದ್ದು ತಿರುಗಾಡಿ ರಸ್ತೆ ಅಳತೆ ಹಾಕುವುದು ಇವಿಷ್ಟೇ ಜೀವನದಲ್ಲಿ ಕಲಿತದ್ದು ಇದು ಬಿಟ್ಟರೇ ಬೇರೇನು ಗೊತ್ತಿಲ್ಲವೆನ್ನುವಷ್ಟರ ಮಟ್ಟಿಗೆ ಸಾಗಿತ್ತು ಕಮ್ಮಾರಶೆಟ್ಟಿಯ ದಿನಚರಿ.

ನಿದಾನವಾಗಿ ಸೂರ್ಯ ಪಶ್ಚಿಮ ದಿಕ್ಕಿಗೆ ಜಾರುತ್ತಿದ್ದ ಯಾರೋ ಆಕರ್ಷಿಸುತ್ತಿದ್ದಾರೆನ್ನುವಷ್ಟರ ಮಟ್ಟಿಗೆ. ರಂಗೇರಿದ್ದ ಸೂರ್ಯನಂತೆ ಮಂಜನ ಮುಖದಲ್ಲೂ ನಿಟ್ಟುಸಿರು ಇಣುಕಿ ಸಮಾಧಾನದ ಗಾತ್ರ ಹೆಚ್ಚಾಗುತ್ತಿತ್ತು. ಸಂಜೆಯಾಗುತ್ತಿದ್ದಂತೆ ಈ ನರಕ ಸದೃಶ ಕೆಲಸದಿಂದ ಅಂದಿನ ಮಟ್ಟಿಗೆ ಬಿಡುಗಡೆಯಾಗಿ ಮನೆಯ ಹಾದಿ ಹಿಡಿಯಬಹುದಲ್ಲ ಎಂದು. ಎದುರು ಆಲದ ಮರದ ಕೆಳಗೆ ಕಮ್ಮಾರ ಶೆಟ್ಟಿ ಕೂರದೆ ಊರಲ್ಲೆಲ್ಲೋ ಸುತ್ತಾಡಲು ಹೋಗಿದ್ದರಿಂದ ನಿರಮ್ಮಳವಾದಂತಾಗಿ ಮಂಜ ತನ್ನ ಜೊತೆಗಾರನೊಂದಿಗೆ ಮಾತಾಡುತ್ತಾ ಕುಳಿತ. ಸೂರ್ಯ ಮುಳುಗಿ ಕತ್ತಲು ತನ್ನ ಕರಿಬಾಹುಗಳನ್ನು ನಿದಾನವಾಗಿ ಆವರಿಸಿಕೊಳ್ಳುತ್ತಿತ್ತು.

ಆಷ್ಟೋತ್ತಿಗೆ ಎಲ್ಲಿಗೋ ಹೋಗಿದ್ದ ಕಮ್ಮಾರಶೆಟ್ಟಿ ಬಂದವನೇ, "ಲೋ ಮಂಜ, ಹೀರ ಆಯ್ತೇನ್ರೋ, ಹೋಗಿ ಕೈಕಾಲು ತೊಳಕೊಂಡು ಮನೆಗೆ ಹೋಗಿ, ನಾಳೆ ಒತ್ತಾರೆ ಬೇಗನೆ ಬಂದುಬಿಡಿ, ಹೋಗುತ್ತಾ ಬಾಗಿಲು ಮುಚ್ಚಿ ಹೋಗಿ" ಎಂದ ಗತ್ತಿನಿಂದ ಮುರುಕು ಚಾಪೆಯನ್ನು ತೋರಿಸಿ. ಅರ್ಧಂಬರ್ಧ ತಯಾರಾದ ಕಬ್ಬಿಣದ ವಸ್ತುಗಳನ್ನು ಹೆಗಲ ಮೇಲೇರಿಸಿ ಜೊತೆಗಿದ್ದವನ ಜೊತೆ ಮನೆಯ ಕಡೆ ಹೆಜ್ಜೆ ಹಾಕತೊಡಗಿದ. ಈಗ ಹೊರಟಿದ್ದು ಮನೆಯ ಕಡೆಗಾದರೂ ಹೆಗಲಮೇಲಿದ್ದವನ್ನು ಮನೆಯೊಳಗೆ ಇಟ್ಟ ಮೇಲೆ ಮನಸ್ಸು ಮತ್ತು ಹೆಜ್ಜೆಗಳು ಒಂದಾಗಿ ಸಾಗುತ್ತಿದ್ದುದ್ದು ಕಳ್ಳಬಟ್ಟಿಸಾರಾಯಿ ಅಂಗಡಿಗೆ ಎಂಬುದು ಇಡೀ ಊರಿಗೆ ತಿಳಿದ ವಿಷಯವಾಗಿತ್ತು.

ಆಷ್ಟರಲ್ಲಾಗಲೇ ಮಬ್ಬು ಆವರಿಸಿತ್ತು. ನಾಳೆ ಬರುವ ಎಂದು ಹೀರ ಮಂಜನಿಗೆ ಹೇಳಿ ತನ್ನ ಊರು ಕಬ್ಬಳ್ಳಿಯ ಹಾದಿಯನ್ನು ಸೀಳತೊಡಗಿದಾಗ ಮಂಜನೂ ಇತ್ತ ತನ್ನೂರು ತಳ್ಳೀಗೆ ಹೊರಡಲನುವಾದನು, ಕಮ್ಮಾರ ಶೆಟ್ಟಿಯ ಮಾತು ನೆನಪಾಗಿ ಮುರುಕು ಚಾಪೆಯ ಬಾಗಿಲು ಹೊಚ್ಚಲು ಹೋದ. ಒಳಗೆ ಏನಿದೆ ಕದಿಯಲು! ನೆಲ ಹಗೆದು ಕೂರಿಸಿದ ಕುಲುಮೆ ಬಿಟ್ಟರೆ ಗೋಡೆಗೊಂದು ಗಣೇಶ ಕ್ಯಾಲೆಂಡರ್ ಮಾತ್ರ. ಗಣೇಶನೂ ಕೂಡ ಆ ಕತ್ತಲಿಗೆ ಬೆದರಿ ಏಕಾಂಗಿಯಾಗಿರಲು ಇಷ್ಟಪಡದೇ ನಾನು ಬರುತ್ತೇನೆ ಎನ್ನುವಂತಿತ್ತು. ಮುರುಕು ಚಾಪೆಯ ಕದವಿಕ್ಕಿ ಎರಡು ಮೈಲು ದೂರದ ತನ್ನೂರಿನತ್ತ ಕತ್ತಲನ್ನು ಸೀಳುತ್ತಾ ಮಬ್ಬು ನೆರಳಂತೆ ಹೆಜ್ಜೆ ಹಾಕತೊಡಗಿದ ಮಂಜ.

ನಿರ್ಜನ ದಾರಿಯನ್ನು ಸೀಳುತ್ತಾ ತಣ್ಣನೇ ಕೊರೆಯುವ ಚಳಿ ಲೆಕ್ಕಿಸದೇ ಹೊತ್ತಾಗೋಯ್ತು ಅಂದುಕೊಳ್ಳುವಾಗ ಚೆನ್ನಯ್ಯ ಮೇಷ್ಟು ನೆನಪಾದರು. ಎಂಟನೇ ತರಗತಿಯನ್ನು ಓದುತ್ತಿದ್ದ ಮಂಜ ಸ್ಕೂಲ್ ಬಿಡಲು ದೊಡ್ಡ ಕಾರಣವೇ ಇತ್ತು. ತನ್ನ ತಮ್ಮ ಮತ್ತು ತಂಗಿಯ ಜೊತೆ ಅಪ್ಪ ಅವ್ವ ಸೇರಿ ಐದು ಜನರ ಕುಟುಂಬ ಮೊದಲು ಚೆನ್ನಾಗಿಯೇ ಸಾಗಿತ್ತು. ಅಪ್ಪ ಕೂಲಿಕೆಲಸದಲ್ಲಿ ಮೈಮುರಿದು ದುಡಿಯುತ್ತಿದ್ದರಿಂದ ಸಂಸಾರ ಚೆನ್ನಾಗಿಯೇ ಸಾಗುತ್ತಿತ್ತು. ಒಂದು ದಿನ ಅಪ್ಪ ನಿದಾನವಾಗಿ ತೂರಾಡುತ್ತಾ ಮನೆಯೊಳಗೆ ಬಂದ. ಕುಡಿಯುತ್ತಾನೆ ಎಂಬ ಗುಮಾನಿ ಇದ್ದದ್ದು ನಿಜವೆಂಬಂತೆ ಅಂದು ತೂರಾಡುತ್ತಾ ಮನೆಗೆ ಬಂದಾಗ ಯಾವುದೋ ಗಂಡಾಂತರ ಒಕ್ಕರಿಸುವ ಸೂಚನೆ ಇಣುಕಿತ್ತು. ಸಹವಾಸದಿಂದಾಗಿ ಕುಡಿತಕ್ಕೆ ದಾಸನಾಗಿ ಬರುಬರುತ್ತಾ ಕೆಲಸಕ್ಕೆ ಹೋಗುವುದು ಬಿಟ್ಟು ಸರಾಯಿ ಕುಡಿತವನ್ನೇ ಖಾಯಂ ಮಾಡಿಕೊಳ್ಳುವಂತೆ ಕಂಡ. ಇತ್ತ ಸಂಸಾರವೂ ಬಿಗಡಾಯಿಸತೊಡಗಿತ್ತು. ಹೊಟ್ಟೆಗೆ ಗಂಜಿಗೂ ಗತಿಇಲ್ಲದಂತಾಗಿ ತಣ್ಣೀರು ಬಟ್ಟೆ ಹಾಕಿಕೊಳ್ಳುವ ಸ್ಥಿತಿ ಬಂದಾಗ ವಿಧಿಯಿಲ್ಲದೇ ಅವ್ವನೇ ಕೂಲಿ ಮಾಡಲು ಹೊರಟಿದ್ದಳು. ಹೆಣ್ಣಾಳಿಗೆ ಕೂಲಿ ಕಡಿಮೆಯಿದ್ದರೂ ಬಂದಿದ್ದರಲ್ಲಿ ಸಂಸಾರ ಭಾರ ಹೊತ್ತು ನಡೆಯತೊಡಗಿದಳು ಮಂಜನ ಅವ್ವ. ಎಂಟನೇ ತರಗತಿಯಲ್ಲಿ ಓದುತ್ತಿದ್ದ ಮಂಜ ತುಂಬಾ ಚುರುಕಾಗಿದ್ದು ಎಲ್ಲಾ ಪಾಠಗಳನ್ನು ಒಬ್ಬರೇ ಮಾಡುವ ಏಕೋಪದ್ಯಾಯ ಶಾಲೆಯ ಚೆನ್ನಯ್ಯ ಮೇಷ್ಟರ ಮೆಚ್ಚಿನ ವಿದ್ಯಾರ್ಥಿಯಾಗಿದ್ದ. ಅವರ ಮಾತು, ಪಾಠಗಳು ಅದನ್ನು ವಿವರಿಸಿ ಹೇಳೋ ವಿಧಾನ ಎಂಥ ದಡ್ಡನಿಗೂ ತಲೆಯೊಳಗೆ ಕೊರೆದು ಹೋಗುತ್ತಿತ್ತು. ಉಳಿದ ಹುಡುಗರಿಗಿಂತ ಮಂಜನ ನೆನಪಿನ ಶಕ್ತಿ ಚೆನ್ನಾಗಿದೆ ಅಂತ ಹೊಗಳುವ ಮೇಷ್ಟ್ರು ಇವರ ಸಂಸಾರ ತಾಪತ್ರಯ ನೋಡಿ ಮಂಜನಿಗೆ ಓದು ಬರಹಕ್ಕೆ ಬೇಕಾದ ಪುಸ್ತಕ ಪೆನ್ನು, ಪೆನ್ಸಿಲ್ ಎಲ್ಲಾ ಅವರೇ ಕೊಡಿಸಿದ್ದರು. " ಮಂಜ ನೀನೊಬ್ಬನೇ ಕಣ್ಲ ಚೆನ್ನಾಗಿ ಓದೋನು, ನೀನು ಓದಿ ದೊಡ್ಡ ಅಫೀಸರ್ ಆಗಬೇಕು ಗೊತ್ತಾ...ಎನ್ನುತ್ತಿದ್ದರು.

ಒಂದು ದಿನ ಅವನಪ್ಪ ಸ್ಕೂಲಿಗೆ ಬಂದು ಮೇಷ್ಟ್ರ ಬಳಿ ಅದೆಷ್ಟೋ ಹೊತ್ತು ಮಾತಾಡಿದ. ಮಾತು ಅನ್ನುವುದಕ್ಕಿಂತ ವಾದಿಸಿದ್ದ. ನಂತರ ಮಂಜನನ್ನು ಕರೆದುಕೊಂಡು ಮನೆಗೆ ಬಂದ. ಅನಂತರವೇ ತಿಳಿದಿದ್ದು ತನ್ನನ್ನು ಸ್ಕೂಲಿನಿಂದ ಬಿಡಿಸಿದ್ದಾರೆಂದು ಮರುದಿನವೇ ಕಮ್ಮಾರಶೆಟ್ಟಿಯ ಕುಲುಮೆ ಗುಡಿಸಲಲ್ಲಿ ಕೆಲಸಕ್ಕೆ ತಗುಲಿಸಿದ್ದರು. ಅಂದಿನಿಂದ ಕಾದ ಕಬ್ಬಿಣ ಬಡಿಯುವುದು ಮತ್ತೆ ಕಾಯಿಸುವುದು ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ನಡೆದಿತ್ತು.

ರಾತ್ರಿ ಎಂಟುಗಂಟೆ ದಾಟಿತ್ತು ಮಂಜ ಮನೆಗೆ ಬರುವ ಹೊತ್ತಿಗೆ. ಕಿಟಿಕಿಯ ಕಿಂಡಿಯಿಂದ ಕಂಡ ಸಣ್ಣಗೆ ಉರಿಯುತ್ತಿದ್ದ ಕಂದೀಲಿನ ಮಬ್ಬು ಬೆಳಕು ಅರಿವಿಗೆ ಬಂದ ನಂತರ ಇದುವರೆಗೆ ಕೇಳಿಸುತ್ತಿದ್ದ ಶಬ್ದದ ಜೊತೆಗೆ ಅಲೋಚಿಸುತ್ತಿದ್ದ ನೆನಪಿನ ಸುರುಳಿಯು ತುಂಡಾಯಿತು. ಒಂದು ಕ್ಷಣ ನಿಂತ ಅವನ ತಲೆಗೆ ಅಸ್ಪಷ್ಟವಾಗಿ ಏನೋ ಹೊಳೆದಂತಾಯಿತು. ಸರಿಯಾಗಿ ತಿಳಿಯಲಿಲ್ಲ. ಕೊನೆಗೆ ಆಮೇಲೆ ಯೋಚಿಸಿದರಾಯಿತು ಎಂದು ಮನೆಯೊಳಕ್ಕೆ ಆಡಿಯಿಟ್ಟ. ಅವ್ವ ಅಡುಗೆ ಮಾಡುತ್ತಿದ್ದಳು. ತಮ್ಮ ಬೀರ ಮತ್ತು ತಂಗಿ ಪಾರ್ವತಿ ಒಂದು ಮೂಲೆಯಲ್ಲಿ ಕುಳಿತು ಮಬ್ಬಲ್ಲೇ ಆಟವಾಡಿಕೊಳ್ಳುತ್ತಿದ್ದರು. ಮತ್ತೊಂದು ಮೂಲೆಯಲ್ಲಿ ಕಂಠಪೂರ್ತಿ ಕುಡಿದಿದ್ದ ಅಪ್ಪ ಅಡ್ಡಗೋಡೆಗೆ ತಲೆ ಒರಗಿಸಿ ತೂಕಡಿಸುತ್ತಿದ್ದ. ಬಹುಶಃ ಅವನ ತೂಕಡಿಕೆಯ ಮೊದಲು ಭಯಂಕರ ಚಂಡಮಾರುತಕ್ಕೆ ಊರಿಗೆ ಊರೇ ಕೊಚ್ಚಿ ಹೋಗಿ ಅನಂತರ ಕೇವಲ ಅವಶೇಷ ಉಳಿಯುವಂತೆ ಅವ್ವನೊಂದಿಗೆ ಬೈದಾಡಿ ಮನೆಯ ನಿಶ್ಯಬ್ಧತೆಯನ್ನೆಲ್ಲಾ ಕಲಕಿ ಕೊನೆಗೆ ಸರಾಯಿ ವಾಸನೆ ಮತ್ತು ತೂಕಡಿಕೆ ಮಾತ್ರ ಉಳಿದಿತ್ತು.

ಮುಂದುವರಿಯುವುದು......

ಶಿವು.ಕೆ.


Monday, September 14, 2009

"ಆಕಾಶ ಕೆಳಗೇಕೆ ಬಂತು?...ಈ ಭೂಮಿ ಮೇಲೇಕೆ ಹೋಯ್ತು..." ಜಿರಲೆ ಕತೆ ಭಾಗ-೨

ಆಡುಗೆ ಮನೆಯ ವಿನ್ಯಾಸವೇ ಅವುಗಳಿಗೆ ಅಪ್ಯಾಯಮಾನವಾದುದು. ಎಷ್ಟೊಂದು ಸೆಲ್ಪುಗಳು, ಸಿಂಕುಗಳು, ಕಿಟಕಿ, ವಾರ್ಡ್‍ರೋಬುಗಳ ಜೊತೆಗೆ ತರಾವರಿ ಡಬ್ಬಗಳು, ಪಾತ್ರೆಪಗಡಗಳು, ಅವುಗಳನ್ನು ಜೋಡಿಸಿಟ್ಟ ಮೇಲೆ ಹಿಂಬಾಗದಲ್ಲಿ ಸೃಷ್ಟಿಯಾಗುವ ಸುಂದರ ಕತ್ತಲು,......ಇವೆಲ್ಲಾ ಅವುಗಳ ಗೆರಿಲ್ಲಾ ಯುದ್ದ ತಂತ್ರಗಳಿಗೆ ಹೇಳಿ ಮಾಡಿಸಿದಂತಿವೆ! ಕಡಲೆಕಾಳಿನ ಡಬ್ಬದೊಳಗೆ ತಳಕ್ಕೆ ಹೋಗಿ ನಿದಾನವಾಗಿ ಒಂದೊಂದೇ ಕಾಳುಗಳನ್ನು ಮೆಟ್ಟಿಲುಗಳಂತೆ ಏರಿ ಟ್ರಕ್ಕಿಂಗ್ ಮಾಡಬಹುದು, ಮತ್ತೆ ಡಬ್ಬದ ತುದಿಯೇರಿ ಅಲ್ಲಿಂದ ಮತ್ತೊಂದು ಸೆಲ್ಪಿನಲ್ಲಿರುವ ಡಬ್ಬದೊಳಕ್ಕೆ ತಲೆಕೆಳಕಾಗಿ ಭಂಗಿ ಜಂಪ್ ಮಾಡಬಹುದು. ಜೊತೆಗೆ ಅವಕ್ಕೆ ಬೇಸರವಾದಾಗ ಡಬ್ಬದೊಳಗಿನ ಬೇಳೆಗಳೊಳಗೆ ನುಸುಳಿ ಮಂಗನಾಟವಾಡಬಹುದು. ಪುಟ್ಟ ಪುಟ್ಟ ಮಸಾಲೆ ಡಬ್ಬಗಳ ನಡುವೆ ಅವಿತುಕೊಂಡು ಜಿರಲೆ ಮರಿಗಳು ಕಣ್ಣು ಮುಚ್ಚಾಲೆ, ಐಸ್ ಪೈಸ್, ಆಡಲಡ್ಡಿಯಿಲ್ಲ. ಇನ್ನೂ ಎಣ್ಣೆ ಡಬ್ಬಗಳ ಹೊರಮೈ ಸಹಜವಾಗಿ ಜಾರುವುದರಿಂದ ತಲೆಕೆಳಕಾಗಿ ಸ್ಕೇಟಿಂಗ್ ಆಡಬಹುದು. ಆಗಾಗ ಕಾಫಿ, ಟೀ ಪುಡಿ, ಸಕ್ಕರೆ ಡಬ್ಬಗಳು ತೆರೆದುಬಿಟ್ಟಿದ್ದರೇ ಅದರೊಳಗೆ ಮುಳುಗೇಳುತ್ತಾ ಕಾಫಿ ಮಸಾಜ್, ಟೀ ಮಸಾಜ್, ಸಕ್ಕರೆ ಮಸಾಜ್ ಮಾಡಿಕೊಳ್ಳಬಹುದು, ಹಸಿವಾದರೆ ಅದನ್ನೇ ತಿನ್ನಲುಬಹುದು. ಕೋಪ ಬಂದರೆ ಮತ್ತು ತಮ್ಮತಮ್ಮಲ್ಲೇ ಅನೇಕ ವಿಚಾರಗಳಿಗಾಗಿ ಜಗಳವಾಡಿಕೊಳ್ಳಬೇಕಾಗಿ ಬಂದರೆ ಮೆಣಸಿನ ಕಾಯಿ ಪುಡಿ, ಮೆಣಸಿನ ಪುಡಿ ಇತ್ಯಾದಿಗಳನ್ನು ತಮ್ಮಲ್ಲೇ ಕಣ್ಣಿಗೆ ಎರಚಿಕೊಳ್ಳುತ್ತಾ ಗುದ್ದಾಡಿಕೊಳ್ಳಬಹುದು. ಇಷ್ಟೇಲ್ಲಾ ಇರುವಾಗ ಈ ಜಿರಲೆಯೆನ್ನುವ ಭಯೋತ್ಪಾದಕರು ತಮ್ಮ ತರಬೇತಿ ಕಾರ್ಯಗಾರ, ಕೇಂದ್ರ ಕಚೇರಿಯನ್ನು ಅಡುಗೆಮನೆಯಲ್ಲಿ ಸ್ಥಾಪಿಸುವ ಅವಕಾಶವನ್ನು ಬಿಡುತ್ತವೆಯೇ...!


ಒಂದು ವರ್ಷ ಕಳೆಯುವ ಹೊತ್ತಿಗೆ ನನ್ನ ಕಂಪ್ಯೂಟರ್ ರೂಮ್, ಷೋಕೇಸ್, ಬಟ್ಟೆಗಳ ಬೀರುಗಳು, ಬಚ್ಚಲುಮನೆ, ಹಾಲ್, ದೇವರಮನೆ, ಹೀಗೆ ಎಲ್ಲಾ ಕಡೆ ಜಿರಲೆಗಳು ತಮ್ಮ ಬ್ರಾಂಚು ಆಫೀಸುಗಳನ್ನು ಮಾಡಿಕೊಂಡು ತಮ್ಮ ಸ್ಥಾವರಗಳನ್ನು ಚೆನ್ನಾಗಿ ಸ್ಥಾಪಿಸಿಬಿಟ್ಟಿದ್ದವು. ಒಂದೇ ರಾಕಿನ ನನ್ನ ಪುಟ್ಟ ಪುಸ್ತಕಗಳ ಗ್ರಂಥಾಲಯವಂತೂ ಮೊಟ್ಟೆಗಳನ್ನಿಡಲು ಪರಮ ಯೋಗ್ಯ ತಾಣವೆನಿಸಿತ್ತೇನೋ ಯಾವ ಪುಸ್ತಕ ತೆಗೆದರು ಅದರ ಹಿಂಬಾಗಕ್ಕೊಂದು ಜಿರಲೆ ಮೊಟ್ಟೆ ಅಂಟಿಕೊಂಡೆ ಇರುತ್ತಿತ್ತು. ಅದನ್ನು
ಗಮನಿಸಿದಾಗಲೆಲ್ಲಾ ನನ್ನಾಕೆ "ಈ ಪುಸ್ತಕಗಳನ್ನಾದ್ರೂ ಆಗಾಗ ಕ್ಲೀನ್ ಮಾಡಿ ಇಟ್ಟುಕೊಳ್ಳೋಕೆ ಆಗೊಲ್ಲವೇನ್ರಿ ನಿಮಗೆ" ಅಂತ ಆಗಾಗ ನನ್ನನ್ನು ಆಕ್ಷೇಪಿಸುತ್ತಿದ್ದಳು. ನಾನು ಈ ವಿಚಾರದಲ್ಲಿ ಸ್ವಲ್ಪ ಸೋಮಾರಿಯಾಗಿದ್ದರೂ ಅವಳ ಮಾತನ್ನು ಒಪ್ಪದೇ "ನಿನ್ನ ಆಡುಗೆ ಮನೆ ನೋಡು ಮಿಕ್ಸಿಯೊಳಗೆ, ಗ್ಯಾಸ್ ಕೆಳಗೆ, ಲೋಟದೊಳಗೆ, ಕೊನೆಗೆ ಪ್ಲೆಗ್ ತೂತಿನೊಳಗೂ ಮೊಟ್ಟೆಗಳನ್ನಿಟ್ಟಿರುತ್ತವಲ್ಲೇ...ಅದನ್ನು ಕ್ಲೀನ್ ಮಾಡು ಅವುಗಳಿಗೆ ಹೋಲಿಸಿದರೆ ನನ್ನ ಪುಸ್ತಕಗಳಲ್ಲಿ ಜಿರಲೆ ಇರುವುದು ಕಡಿಮೆ" ಅಂತ ವಾದಿಸುತ್ತಾ ನನ್ನ ಸೋಮಾರಿತನವನ್ನು ಮರೆಮಾಚುತ್ತಿದ್ದೆ. ಅದು ಅವಳಿಗೂ ಗೊತ್ತಿದ್ದರಿಂದ ಕೊನೆಗೊಮ್ಮೆ ಎಲ್ಲಾ ಪುಸ್ತಕಗಳನ್ನು ಕೊಡವಿ ಕ್ಲೀನ್ ಮಾಡಿ ಮತ್ತೆ ಅದೇ ಜಾಗಕ್ಕೆ ಜೋಡಿಸುತ್ತಿದ್ದಳು. ನಾವು ಹಬ್ಬ ಹುಣ್ಣಿಮೆಗಳಲ್ಲಿ ಮನೆಯನ್ನು ಕ್ಲೀನ್ ಮಾಡಿ ರಾಶಿ ರಾಶಿ ಜಿರಲೆಗಳು ಮತ್ತು ಮೊಟ್ಟೆಗಳನ್ನು ಹೊರಗೆಳದು ಸಾಯಿಸಿದರೂ, ಆಗಾಗ ಟಿ.ವಿ ಜಾಹಿರಾತಿನಲ್ಲಿ ತೋರಿಸುವ ತರಾವರಿ ಜಿರಲೆ ಔಷದಿಗಳನ್ನು, ಪುಡಿಗಳನ್ನು ಇಟ್ಟರೂ, ಸ್ಪ್ರೇಗಳನ್ನು ಹೊಡೆದರೂ ಅವುಗಳ ಸಂತತಿಯನ್ನು ಸಂಪೂರ್ಣವಾಗಿ ನಿರ್ಮಾಲನೆ ಮಾಡಲು ನಮಗೆ ಆಗಲೇ ಇಲ್ಲ.


ಒಮ್ಮೆ ನಾನು ತೇಜಸ್ವಿಯವರ ಏರೋಪ್ಲೇನ್ ಚಿಟ್ಟೆ ಪುಸ್ತಕದಲ್ಲಿ ಪ್ರೈಯಿಂಗ್ ಮಾಂಟೀಸ್ ಕೀಟದ ಬಗ್ಗೆ ಸೊಗಸಾದ ವಿವರಣೆಯನ್ನು ಖುಷಿಯಿಂದ ಓದುತ್ತಿದ್ದೆ. ಎದುರಿಗೆ ಆಡುಗೆಮನೆಯಿಂದ ಒಂದು ಜಿರಲೆ ನಿದಾನವಾಗಿ ನಡೆದು ಬರುತ್ತಿತ್ತು. ನನ್ನಾಕೆಗೆ ಜಿರಲೆಗಳ ಮೇಲೆ ಭಯಂಕರ ಸಿಟ್ಟು. ನಾನು ಮನೆಯಲ್ಲಿ ಅವಳ ಜೊತೆಗೆ ಇದ್ದಾಗ ಈ ಜಿರಲೆಗಳು ಕಂಡರೆ ಅವಳ ಸಿಟ್ಟಿಗೆ ನನ್ನ ಸಹಮತವನ್ನು ವ್ಯಕ್ತಪಡಿಸಿ ಅವಳಿಗಿಂತ ಹೆಚ್ಚು ಸಿಟ್ಟು ಮತ್ತು ದ್ವೇಷ ಇರುವವನಂತೆ ನಟಿಸುತ್ತಿದ್ದೆನಾದರೂ, ನಿಜಕ್ಕೂ ನನಗೆ ಅವುಗಳ ಕಂಡರೆ ಸಿಟ್ಟು ಇಲ್ಲ. ದ್ವೇಷವಂತೂ ಮೊದಲೆ ಇರಲಿಲ್ಲ. ಇಷ್ಟಕ್ಕೂ ಅವುಗಳನ್ನು ಕಂಡರೇ ನನಗೆ ಕುತೂಹಲವೇ ಜಾಸ್ತಿ. ಅವತ್ತು ನನ್ನ ಶ್ರೀಮತಿ ಮನೆಯಲ್ಲಿಲ್ಲವಾದ್ದರಿಂದ ನಿದಾನವಾಗಿ ಅದನ್ನು ಗಮನಿಸತೊಡಗಿದೆ. ತೇಟ್ ತೇಜಸ್ವಿಯವರ ಪುಸ್ತಕದಲ್ಲಿನ ಪ್ರೈಯಿಂಗ್ ಮಾಂಟಿಸ್ ತರಹವೇ ತನ್ನ ಆರು ಕಾಲನ್ನು ಅಗಲವಾಗಿ ಹಾಕಿಕೊಂಡು ನಿಂತಿತ್ತು. ಇದ್ಯಾಕೆ ಹೀಗೆ ನಿಂತಿದೆ. ನನ್ನನ್ನೂ ನೋಡಿಯೂ ಓಡಿಹೋಗದೆ ಹಾಗೆ ನಿಂತಿದೆಯಲ್ಲ! ನೋಡೋಣ ಏನು ಮಾಡಬಹುದು ಅಂದುಕೊಂಡು ನಾನು ಪುಸ್ತಕದ ಕಡೆ ಗಮನವಿಟ್ಟಂತೆ ಓರೆ ಕಣ್ಣಿನಿಂದ ನೋಡುತ್ತಿದ್ದೆ. ನಿದಾನವಾಗಿ ಒಂದೊಂದೆ ಹೆಜ್ಜೆಗಳನ್ನು ಇಡುತ್ತಾ ಮುಂದೆ ಬರತೊಡಗಿತು. ಈ ರೀತಿ ಹೆಜ್ಜೆಯಿಡಬೇಕಾದರೆ ಮತ್ತು ಅಗಲವಾಗಿ ಈ ರೀತಿ ಅಡರಬಡರ ಕಾಲುಗಳನ್ನು ಹಾಕುತ್ತಿದೆಯೆಂದರೇ ಇದು ವಯಸ್ಸಾದ ಜಿರಲೆಯೇ ಇರಬೇಕು. ಅದಕ್ಕೆ ಕೈಕಾಲು ಶಕ್ತಿಯಿಲ್ಲದಂತಾಗಿ ಹೀಗೆ ನಡೆಯುತ್ತಿರಬಹುದು ಅನ್ನಿಸಿತು. ಅನೇಕ ಸಲ ಅವುಗಳನ್ನು ಗಮನಿಸಿದ್ದೇನೆ. ಚುರುಕಾದ ಮತ್ತು ಯಂಗ್ ಅಂಡ್ ಎನರ್ಜೆಟಿಕ್ ಜಿರಲೆಗಳ ಎಲ್ಲಾ ಕಾಲುಗಳು ಒಳಗೆ ಮಡಚಿಕೊಂಡಿರುತ್ತವೆ ಮತ್ತು ನಡೆಯುವಾಗ ಅಥವ ಓಡುವಾಗ ಅವುಗಳ ಕಾಲುಗಳು ಕಾಣಿಸುವುದೇ ಇಲ್ಲ. ನೆಲದ ಮೇಲೆ ಜಾರಿದಂತೆ ವೇಗವಾಗಿ ಓಡುತ್ತಿರುತ್ತವೆ. ಇದಕ್ಕೆ ನಡೆದಾಡಲು ಶಕ್ತಿಯೇ ಇರಲಿಲ್ಲವೆನಿಸುತ್ತೆ. ಸ್ವಲ್ಪ ದೂರ ನಡೆದು ನಿಂತಿತು. ನನ್ನ ಕಡೆಯೂ ಸೇರಿದಂತೆ ಸುತ್ತಲು ನೋಡಿತು. ನಾನು ಕದಲಲಿಲ್ಲ. ಮತ್ತೆ ನಿದಾನವಾಗಿ ನಡೆಯತೊಡಗಿತು. ಇದ್ದಕ್ಕಿದ್ದಂತೆ ಏನೋ ತಣ್ಣನೆ ದ್ರವದಂತದ್ದನ್ನು ತನ್ನ ಹಿಂಬಾಗದಿಂದ ಚೆಲ್ಲಿ ಮತ್ತೆ ನಡೆಯತೊಡಗಿತು. ಆರೆರೆ...ಇದೇನಿದು ಹೊಗಲಿ ಪಾಪ ವಯಸ್ಸಾಗಿದೆ ಅಂತ ಬಿಟ್ಟರೆ ಇಂಥ ಹೇಸಿಗೆ ಕೆಲಸ ಮಾಡುವುದೇ. ಆ ಕ್ಷಣದಲ್ಲಿ ನನಗೂ ಸಿಟ್ಟು ಬಂದು ಸಾಯಿಸಿಬಿಡ್ಲಾ ಅನ್ನಿಸಿದರೂ ನಾನ್ಯಾವತ್ತೂ ಸಾಯಿಸಿಲ್ಲ, ಈಗಲೇ ಸಾಯುವಂತಿರುವುದನ್ನು ಸಾಯಿಸಿ ನಾನ್ಯಾವ ಪಾಪ ಕಟ್ಟಿಕೊಳ್ಳಲಿ, ಬೇಡ ಅಂದುಕೊಂಡೆ. ಆದ್ರೂ ಅದರ ನಡುವಳಿಕೆ ನೋಡಿ ನನ್ನಾಕೆ ಹೇಳಿದಂತೆ ಇವಕ್ಕೆ ನಾಚಿಕೆ ಎನ್ನುವುದೇ ಇಲ್ವ ಅನ್ನಿಸದಿರಲಿಲ್ಲ. ಹೇಮಾಶ್ರಿ ಬರುವ ಹೊತ್ತಿಗೆ ಅದು ನಿದಾನವಾಗಿ ಮರೆಯಾಗಿಬಿಟ್ಟಿತ್ತು.


ಆಗೆಲ್ಲಾ ಮನೆಗಳ ನೆಲವೆಲ್ಲಾ ರೆಡ್ ಆಕ್ಸೆಡ್ ಇರುತ್ತಿದ್ದುದ್ದರಿಂದ ಜಿರಲೆ ಬಣ್ಣಕ್ಕೆ ಹೊಂದಿಕೊಳ್ಳುವಂತೆ ಇದ್ದು ಕಾಮೋಪ್ಲೇಜ್ ಆಗಿ ಮನೆಯವರ ಕಣ್ಣಿಗೆ ಮಣ್ಣೆರಚಿ ಓಡಾಡುತ್ತಿದ್ದವು. ಆಗಿನ ತಂತ್ರಜ್ಞಾನದಿಂದ ಕಟ್ಟಿದ ಮನೆಗಳು ಕೆಲವೇ ವರ್ಷಗಳಲ್ಲಿ ಗೋಡೆಯಲ್ಲಿ ಬಿರುಕು, ಮತ್ತೆ ಇಲಿ ಹೆಗ್ಗಣಗಳ ಸಹಾಯದಿಂದ ಮೂಲೆ ಮೂಲೆಗಳಲ್ಲಿ ತೂತುಗಳಾಗಿ ಜಿರಲೆಗಳು ಸಂಸಾರಮಾಡುವುದಕ್ಕೆ ಹಿತಕರವಾಗಿದ್ದರಿಂದ ಆಗಿನ ಗುತ್ತಿಗೆದಾರರು, ಇಂಜಿನಿಯರುಗಳ ಮೇಲೆ ಜಿರಲೆಗಳಿಗೆ ಅಭಿಮಾನ ಜಾಸ್ತಿಯಿತ್ತು. ಆದರೆ ಈಗ ಹೊಸ ತಂತ್ರಜ್ಞಾನವನ್ನಳವಡಿಸಿ ಕಟ್ಟುವ ಇಂಜಿನಿಯರು, ಗುತ್ತಿಗೆದಾರರನ್ನು ಕಂಡರೆ ಜಿರಲೆಗಳಿಗೆ ಆಗುವುದಿಲ್ಲ. ಅದರಲ್ಲೂ ಪ್ರಕಾಶ್ ಹೆಗಡೆಯಂಥವರನ್ನು ಕಂಡರಂತೂ ಅವುಗಳಿಗೆ ಕೋಪ ಸರ್ರನೆ ಬಂದುಬಿಡುತ್ತದೆ. ಏಕೆಂದರೆ ಅವರಂಥವರು ಕಟ್ಟುವ ಮನೆಗಳು ನೆಲಕ್ಕೆ ಕಾಲಿಟ್ಟರೇ ಜಾರುವಂತ ಟೈಲ್ಸ್, ಮಾರ್ಬಲ್ಸ್, ಎಂಥ ಮಳೆ, ಗಾಳಿ, ಬಿಸಿ ತಾಗಿದರೂ ಏನು ಆಗದಂತ ಗೋಡೆ, ಸೂರುಗಳನ್ನು ಕಟ್ಟಿಬಿಡುವುದರಿಂದ ಜಿರಲೆಗಳಿಗೆ ಮನೆಯೊಳಗೆ ನೋ ಎಂಟ್ರಿ.


ನಾವು ಅದೇ ಮನೆಯಲ್ಲಿ ಇದ್ದಿದ್ದರೇ ಆಗಾಗ ಕಣ್ಣಿಗೆ ಕಾಣುವಂತವುಗಳನ್ನು ಸಾಯಿಸುತ್ತಾ ಸಮಾಧಾನ ಮಾಡಿಕೊಂಡು ಸುಮ್ಮನಾಗುತ್ತಿದ್ದೆವೇನೋ. ಆದ್ರೆ ಯಾವಾಗ ಮನೆ ಬದಲಾಯಿಸುವ ಸಂದರ್ಭ ಬಂತೋ ಆಗ ಶುರುವಾಯಿತು ನೋಡಿ ಜಿರಲೆಗಳ ವಿರುದ್ಧ ನಮ್ಮ ಅಂತಿಮ ಹೋರಾಟ. ಎಲ್ಲಾ ಹರವಿಕೊಂಡು ನಮಗೆ ಬೇಕಾದ ವಸ್ತುಗಳನ್ನು ವಿಂಗಡಿಸಿಕೊಂಡು ಬೇಡದ ವಸ್ತುಗಳನ್ನು ಬೇರೆ ಮಾಡುತ್ತೇವಲ್ಲ ಆಗ ಒಳಗೆಲ್ಲಾ ಸೇರಿಕೊಂಡಿದ್ದ ಜಿರಲೆಗಳೆಲ್ಲಾ ಹೊರಗೆ ಬರತೊಡಗಿದವು. ಈಗ ಮಾಡಿದರೆ ಆಕ್ರಮಣ ಸರಿಯಾಗಿಯೇ ಮಾಡಬೇಕು. ಎಲ್ಲವನ್ನೂ ಸಾಮೂಹಿಕವಾಗಿ ಸಾಯಿಸಿ ನಮ್ಮೆಲ್ಲಾ ಸಾಮಾನುಗಳನ್ನು ಜಿರಲೆರಹಿತವಾಗಿಯೇ ಹೊಸಮನೆಗೆ ಒಯ್ಯಬೇಕೆಂದು ತೀರ್ಮಾನಿಸಿ ಇಲ್ಲಿ ಪ್ರಕಾಶ ಹೆಗಡೆಯವರ ಸಹಾಯ ಕೇಳಿದೆವು. ಅವರು ಮಲ್ಲಿಕಾರ್ಜುನ್[ಫೋಟೋಗ್ರಾಫರ್ ಗೆಳೆಯ ಮಲ್ಲಿಕಾರ್ಜುನ್ ಅಲ್ಲ]ಎನ್ನುವ ಶಸ್ತ್ರಧಾರಿ ಯೋದನನ್ನು ಕಳಿಸಿದರು. ನೋಡಲು ತೆಳ್ಳಗೆ ಸುಮಾರು ಎತ್ತರವಿದ್ದರೂ ಜಿರಲೆಗಳ ಗೆರಿಲ್ಲಾ ತಂತ್ರಕ್ಕೆ ಈತನಲ್ಲಿ ಪ್ರತಿತಂತ್ರ ಚೆನ್ನಾಗಿಯೇ ಇತ್ತು. "ಸರ, ನಿಮಗೆ ಬೇಕಾದ ಸಾಮಾನುಗಳನ್ನೆಲ್ಲಾ ಗಂಟು ಮೂಟೆಕಟ್ಟಿ ಹಾಲ್ ಮದ್ಯದಲ್ಲಿಟ್ಟುಬಿಡಿ, ರೇಷನ್, ಆಡುಗೆ ಸಾಮಾನು ಇತ್ಯಾದಿಗಳನ್ನೆಲ್ಲಾ ಬಾಲ್ಕನಿಯಲ್ಲಿಟ್ಟುಬಿಡಿ, ದಿವಾನ, ಮಂಜ, ಟೇಬಲ್, ಚಾಪೆ ಇತ್ಯಾದಿಗಳೆಲ್ಲಾ ಎಲ್ಲಿಲ್ಲಿವೆಯೋ ಹಾಗೆ ಇರಲಿ, ನೀವೆಲ್ಲಾ ಮೂರು ತಾಸು ಹೊರಗಿದ್ದುಬಿಡಿ. ಉಳಿದದ್ದನ್ನು ನಾನು ನೋಡಿಕೊಳ್ತೇನೆ" ಅಂದ. ಮೊದಲಿಗೆ ಆತನ ಮಾತು ನಂಬಿಕೆ ತರಿಸದಿದ್ದರೂ " ಆತ ಸಿಂಪಡಿಸುವ ಔಷದಿ ಪ್ರಭಾವ ಹೇಗಿರುತ್ತೆ ಅಂದ್ರೆ ಜಿರಲೇ ಮಾತ್ರವಲ್ಲ, ಗೊದ್ದ, ಇರುವೆ, ಜಿಡ್ಡುಹುಳು ಇತ್ಯಾದಿಗಳೆಲ್ಲಾ ಸಂಪೂರ್ಣವಾಗಿ ಸಾಯುವುದಲ್ಲದೇ ಮುಂದೆ ಸುಮಾರು ಹತ್ತು ಹದಿನೈದು ವರ್ಷ ನಿಮ್ಮ ಮನೆಕಡೆ ಅವು ತಲೆಹಾಕಿ ಕೂಡ ಮಲಗುವುದಿಲ್ಲವೆಂದು ಹೇಳಿದ್ದರಿಂದ ನಂಬಿ ಮನೆಯ ಸಾಮಾನುಗಳನ್ನೆಲ್ಲಾ ಕಟ್ಟಿ ಮನೆಯಿಂದ ಹೊರಬಂದೆವು.


ತಾನು ತಂದಿದ್ದ ಟವಲ್ಲನ್ನು ಕಣ್ಣುಗಳೆರಡು ಕಾಣುವಂತೆ ಬಿಟ್ಟು ತಲೆಸಮೇತವಾಗಿ ಸುತ್ತಿಕೊಂಡು ಔಷದಿಯನ್ನು ಷ್ಟ್ರಾಂಗ್ ಮಾಡಿಕೊಂಡು ಅರ್ಧಗಂಟೆಯಲ್ಲಿ ಇಡೀ ಮನೆಯನ್ನೇ ಸಿಂಪಡಿಸಿಬಿಟ್ಟಿದ್ದ. ನಂತರ ನಾವು ಹೋಗುವ ಹೊಸ ಮನೆಗೂ ಅಲ್ಲಿನ ಬಣ್ಣ ಬಳಿಯುವ ಮೊದಲೇ ಮತ್ತಷ್ಟು ಔಷದಿಯನ್ನು ಮನೆಯ ಪ್ರತಿಯೊಂದು ಮೂಲೆಗಳು, ಪೀಟೋಪಕರಣಗಳು, ಬಾಗಿಲು, ಕಿಟಕಿ ಇತ್ಯಾದಿಗಳಿಗೆಲ್ಲಾ ಚೆನ್ನಾಗಿ ಸಿಂಪಡಿಸಿ ವಾಪಸ್ ಬಂದುಬಿಟ್ಟ. ಆತ ಹೋದ ಮೇಲೆ ನೋಡುತ್ತೇವೆ. ಮಂಚ, ದಿವಾನ, ಟಿ.ವಿ ಸ್ಟ್ಯಾಂಡ್, ಆಡುಗೆಮನೆ ಬಚ್ಚಲುಮನೆ ಎಲ್ಲಾ ಕಡೆ ಹತ್ತಾರು, ನೂರಾರು ಹಿರಿತನದ, ಮದ್ಯವಯಸ್ಸಿನ, ಯುವಮನಸ್ಸಿನ ಗಂಡು ಜಿರಲೆಗಳು, ಹೆಂಗರುಳಿನ, ಹೆಣ್ಣಪ್ಪಿ ಮನಸ್ಸಿನ ಹೆಣ್ಣು ಜಿರಲೆಗಳು, ಅವುಗಳ ನಡುವೆ ಅಮ್ಮನನ್ನು ತಬ್ಬಿಕೊಂಡಿದ್ದ ಆಗತಾನೆ ಹರೆಯಕ್ಕೆ ಬಂದಿದ್ದಂತವು...ಇತ್ಯಾದಿ ಜಿರಲೆಗಳೆಲ್ಲಾ ರಾಶಿ ರಾಶಿಯಾಗಿ ಸತ್ತು ಬಿದ್ದಿದ್ದವು. ಅವುಗಳ ಪಕ್ಕದಲ್ಲೇ ಪುಟ್ಟಪುಟ್ಟ ಮಕ್ಕಳ ಮನಸ್ಸಿನ ಜಿರಲೆಗಳು ಅಪ್ಪ ಅಮ್ಮನ ಪಕ್ಕದಲ್ಲೇ ಸತ್ತುಬಿದ್ದಿದ್ದವು. ಹಿರೋಶಿಮದ ಮೇಲೊಂದು ಬಾಂಬ್ ಬಿದ್ದು ಲಕ್ಷಾಂತರ ಜನರ ಮರಣಹೋಮವಾದಂತೆ ಇಲ್ಲಿಯೂ ಸಾವಿರಾರು ಜಿರಲೆಗಳು ತಮ್ಮ ಧರ್ಮಯುದ್ದದಲ್ಲಿ ವೀರಮರಣವನ್ನು ಅಪ್ಪಿದ್ದವು. ನಾವು ಕಟ್ಟಿಟ್ಟಿದ್ದ ಗೋಣಿಚೀಲವನ್ನು ಬಿಚ್ಚಿದ್ದರೆ ಅದರ ಒಳಗೆ ವಾಸನೆಗೆ ಸತ್ತಿದ್ದ ಹತ್ತಾರು ಜಿರಲೆಗಳನ್ನು ಹೊರಗೆ ತರಲಾಗಿತ್ತು. ಮತ್ತೊಮ್ಮೆ ಎಲ್ಲವನ್ನು ಒಟ್ಟುಮಾಡಿ ಒಂದು ನಿಮಿಷದ ಶೋಕಾಚರಣೆಯನ್ನು ಮಾಡಿ ದೂರದಲ್ಲಿ ಎಸೆದು ಬಂದಾಗ ಅಲ್ಲಿದ್ದ ಕಾಗೆಗಳಿಗೆ ಅವತ್ತು ದಸರಾ, ರಂಜಾನ್, ಕ್ರಿಸ್‍ಮಸ್.


ಈಗ ಹೊಸ ಮನೆಗೂ ಬಣ್ಣ ಬಳಿಯುವ ಮೊದಲೇ ಅದೇ ಔಷದಿಯನ್ನು ಮನೆಯ ಪ್ರತಿಯೊಂದು ಮೂಲೆಗಳು, ಪೀಟೋಪಕರಣಗಳು, ಬಾಗಿಲು, ಕಿಟಕಿ ಇತ್ಯಾದಿಗಳಿಗೆಲ್ಲಾ ಆತನೇ ಚೆನ್ನಾಗಿ ಹೊಡೆದಿರುವುದರಿಂದ ಆರುತಿಂಗಳಾದರೂ ಒಂದು ಜಿರಲೆಯೂ ಕಂಡಿಲ್ಲ. ಒಂದೆರಡು ಬಾರಿ ಕಂಡರೂ ನಮ್ಮ ಮನೆಗೆ ಏಕಾದರೂ ಬಂದೆವೋ ಅನ್ನಿಸರಬೇಕು ಅವುಗಳಿಗೆ. ಅಪರೂಪಕ್ಕೆ ಯಾವಾಗಲಾದರೂ ಕಾಣಿಸಿದರೆ ನಮ್ಮ ಮನೆಯಲ್ಲಿ ಮತ್ತು ಬಂದಂತೆ ಅಲ್ಲೇ ನಿಂತುಬಿಡುತ್ತವೆ. ಆಗ ನಾನು ಅದನ್ನು ಹಂಗಾತ ಮಲಗಿಸಿಬಿಡುತ್ತೇನೆ. ಮೊದಲೇ ತಲೆ ದಿಮ್ ಎಂದು ತಿರುಗುತ್ತಿರುವಾಗ ನಾನು ಅದಕ್ಕೆ ತಲೆಕೆಳಗಾಗಿ ಅಂದರೆ ಅಂಗಾತ ಮಲಗಿಸಿಬಿಟ್ಟರೆ ಏನಾಗಬಹುದು? "ಆಕಾಶ ಕೆಳಗೇಕೆ ಬಂತು?...ಈ ಭೂಮಿ ಮೇಲೇಕೆ ಹೋಯ್ತು..." ಅನ್ನುತ್ತಾ ಅವು ಕೈಕಾಲು ಆಡಿಸುತ್ತಾ ಸುಮಾರು ಹೊತ್ತು ವ್ಯಾಯಾಮ ಮಾಡುತ್ತಿರುತ್ತವೆ. ಕೊನೆಗೆ ಸುಸ್ತಾಗಿ ಅಲ್ಲೇ ಜೀವ ಬಿಟ್ಟುಬಿಡುತ್ತವೆ. ಆಡುಗೆ ಮನೆಯಲ್ಲಿ ಎಲ್ಲಾ ಪದಾರ್ಥಗಳು, ಸಿಹಿತಿಂಡಿಗಳನ್ನು ತೆರೆದಿಟ್ಟಿದ್ದರೂ ಇದುವರೆಗೂ ಇರುವೆ, ಗೊದ್ದಾ, ಜಿಡ್ಡುಹುಳ, ಜಿರಲೆ ಯಾವುದು ಇದುವರೆಗೆ ಕಂಡಿಲ್ಲವಾದ್ದರಿಂದ ಅವುಗಳ ಮೇಲೆ ನನ್ನಾಕೆಗೆ ಕೋಪವೇ ಇಲ್ಲ.


ಅಪರೂಪಕ್ಕೆ ಯಾವಾಗಲಾದರೂ ಕಾಣಿಸಿದರೆ ನಾವಿಬ್ಬರೂ ಅದರ ನಡಿಗೆ ನಡುವಳಿಕೆ, ಹೆಣ್ಣಾದರೆ ಒನಪು, ಒಯ್ಯಾರ ಇತ್ಯಾದಿಗಳನ್ನು ವಿಶ್ಲೇಷಿಸುತ್ತಾ ಕಾಲ ಕಳೆಯುತ್ತೇವೆ.


ನಾಚಿಕೆಯಿಲ್ಲದೆ ಅಪ್ಪ ಅಮ್ಮನ್ನ ಹ್ಯಾಗೆ ಹಿಂಬಾಲಿಸುತ್ತಿವೆ ನೋಡ್ರಿ....[ಜಿರಲೆ ಕತೆ ಭಾಗ-೧]ಓದಿ. ನಂತರ ಎರಡನೆ ಭಾಗವನ್ನು ಓದಿ...

ಲೇಖನ :ಶಿವು.ಕೆ

Tuesday, September 8, 2009

ನಾಚಿಕೆಯಿಲ್ಲದೆ ಅಪ್ಪ ಅಮ್ಮನ್ನ ಹ್ಯಾಗೆ ಹಿಂಬಾಲಿಸುತ್ತಿವೆ ನೋಡ್ರಿ....

"ಇವಕ್ಕೆ ನಾಚಿಕೆ ಮಾನ ಮರ್ಯಾದೆ ಒಂದೂ ಇಲ್ವಾ".....ನನ್ನಾಕೆ ಬೈಯ್ಯುತ್ತಿದ್ದರೆ ನಾನು ಸುಮ್ಮನೆ ಕೇಳುತ್ತಿದ್ದೆ. ಮುಂದುವರಿಸಿದಳು.

"ಅಗೋ.. ಅಲ್ಲಿ ನೋಡಿ ಅವ ಗಂಡ ಇರಬೇಕು ಯ್ಯಾಗೆ ಹೋಗ್ತಿದ್ದಾನೆ"......ಕೈ ತೋರಿಸಿ ಹೇಳಿದಳು.

"ಹೌದು ಕಣೇ ಎಷ್ಟು ಚೆನ್ನಾಗಿ ನಿದಾನವಾಗಿ, ಅದರಲ್ಲೂ ಜಬರದಸ್ತಾಗಿ ಹೋಗ್ತೀರೋದು ನೋಡಿದ್ರೆ ಅವ ಗಂಡನೇ ಇರಬೇಕು" ನಾನು ಉತ್ತರಿಸಿದ್ದೆ. ನಾವಿಬ್ಬರೂ ಏನಾಗುತ್ತೆ ನೋಡೋಣ ಅಂತ ಆ ದೃಶ್ಯವನ್ನು ನೋಡಲು ನಿಂತೇ ಬಿಟ್ಟಿದ್ದೆವು.

"ಶಿವು ಅಲ್ಲಿ ನೋಡ್ರೀ.....ಎಷ್ಟು ನಿದಾನವಾಗಿ, ನಯವಾಗಿ ಅಲ್ಲಲ್ಲಿ ನಿಂತು ಅಕ್ಕ ಪಕ್ಕ ನೋಡಿ ಹೋಗ್ತಿರೋದು ನೋಡ್ರಿ,....ಖಂಡಿತವಾಗಿ ಹೆಂಡ್ತೀನೇ ಇರಬೇಕು ಕಣ್ರೀ..... ಆವಳ ಕುತೂಹಲದ ಮಾತಿಗೆ ನಾನು ಈಗಲೂ ಪ್ರತಿಕ್ರಿಯಿಸದೆ ಸುಮ್ಮನೆ ನೋಡುತ್ತಿದ್ದೆ.

"ಛೇ ಛೇ.... ಇಲ್ನೋಡ್ರೀ....ಅವರಿಬ್ಬರಿಗಂತೂ ಬುದ್ಧಿ ಇಲ್ಲ, ಇವಕ್ಕಾದ್ರೂ ಸ್ವಲ್ಪ ವಿವೇಕ ಬ್ಯಾಡ್ವ....ಈಗಿನ ಕಾಲದ ಮಕ್ಕಳು ಚುರುಕುತನದಲ್ಲಿ, ಬುದ್ಧಿವಂತಿಕೆಯಲ್ಲಿ, ಜೊತೆಗೆ ಮಾನ ಮರ್ಯಾದೆ ಕಾಪಾಡಿಕೊಳ್ಳುವುದರಲ್ಲೂ ಮುಂದು ಅಂತಾರೆ....ಇಲ್ನೋಡ್ರೀ....ಹ್ಯಾಗೆ ಅವುಗಳನ್ನೆಲ್ಲಾ ಬಿಟ್ಟು ನಾಚಿಕೆಯಿಲ್ಲದೆ ಅಪ್ಪ ಅಮ್ಮನ್ನ ಹಿಂಬಾಲಿಸುತ್ತಿವೆ.....ಛೇ ಕಾಲ ಕೆಟ್ಟೋಯ್ತು ಬಿಡ್ರಿ.....". ಆಗಲೂ ನಾನು ಸುಮ್ಮನಿದ್ದೆ. ಆದು ಅವಳಿಗೆ ಸಹಿಸಲಾಗಲಿಲ್ಲ.

ಏನ್ರೀ...ನೀವು ನಾನು ಅವುಗಳ ಬಗ್ಗೆ ಮಾತಾಡುತ್ತಿದ್ದರೂ ನೀವು ಸುಮ್ಮನಿದ್ದಿರಲ್ಲ...."

ಇಷ್ಟಕ್ಕೂ ಈ ಮಾತುಕತೆಯಾಗಿದ್ದು ಗಣೇಶ ಹಬ್ಬದ ದಿನ ನಾವಿಬ್ಬರೂ ಹತ್ತಿರದ ಗಣೇಶನ ಗುಡಿಗೆ ನಡೆದು ಹೋಗುವಾಗ ನಮ್ಮ ರಸ್ತೆಯನ್ನು ದಾಟುತ್ತಿದ್ದ ಜಿರಲೆಗಳನ್ನು ನೋಡಿಯೇ ಮಾತಾಡಿದ್ದಳು. ಅವಳ ಮಾತುಗಳಿಗೆ ನಾನು ಪ್ರತಿಕ್ರಿಯಿಸದಿರಲು ಕಾರಣ ನನಗೆ ಆ ಕ್ಷಣದಲ್ಲಿ ಕುವೆಂಪುರವರ

" ಎಲ್ಲಿಯೂ ನಿಲ್ಲದಿರು,

ಮನೆಯನೆಂದು ಕಟ್ಟದಿರು,

ಕೊನೆಯನೆಂದು ಮುಟ್ಟದಿರು

ಓ ಅನಂತವಾಗಿರು.....

ನೆನಪಾಗುತ್ತಿತ್ತು. ನಾವೆಲ್ಲ ಒಂದು ಮನೆಯಲ್ಲಿ ಸ್ಥಿರವಾಗಿ ನೆಲೆಸಬೇಕೆಂದು ಎಷ್ಟೆಲ್ಲಾ ಕಷ್ಟ ಪಟ್ಟು ಜೀವನವನ್ನು ನಡೆಸುತ್ತೇವೆ. ಆದರೆ ಅವುಗಳು ತಮ್ಮದೇ ಅಂತ ಒಂದು ಮನೆ ಮಾಡಿಕೊಳ್ಳದೆ ಮನೆಯಿಂದ ಮನೆಗೆ ಹೀಗೆ ಅನಂತವಾಗಿ ಚಲಿಸುತ್ತಾ ಕುವೆಂಪುರವರ ಮಾತುಗಳನ್ನು ಅದೆಷ್ಟು ಚೆನ್ನಾಗಿ ಪಾಲಿಸುತ್ತಿವೆಯಲ್ಲಾ ಅಂತ ನನಗೆ ಅನ್ನಿಸುತ್ತಿದ್ದರೆ, ನನ್ನಾಕೆಯ ಆಲೋಚನೆಯೇ ಬೇರೆಯಾಗಿತ್ತು. ಮೊದಲು ಗಂಡ [ಅದರ ಗತ್ತಿನ ನಡುಗೆ ನೋಡಿ ಹಾಗೆ ಅಂದುಕೊಂಡಳೇನೋ,]ಮತ್ತೆ ಹಿಂದೆ ಮತ್ತೊಂದು ಹೆಣ್ಣು ಜಿರಲೆ[ಅದರ ನಡುಗೆ, ಆಗಾಗ ನಿಂತು ಅತ್ತಿತ್ತ ತನ್ನ ಮೀಸೆ ತಿರುಗಿಸುವುದನ್ನು ನೋಡಿ ಅದನ್ನು ಹೆಂಡತಿ ಅಂದುಕೊಂಡಳೊ ಗೊತ್ತಿಲ್ಲ]ಅವುಗಳ ಹಿಂದೆಯೇ ಕೆಲವು ಪುಟ್ಟ ಜಿರಲೆಗಳು ಚಲಿಸುತ್ತಿದ್ದನ್ನು ನೋಡಿ ಹೀಗೆ ಊಹಿಸಿದ್ದಳೋ ಏನೋ.

ನಾನು ಅವಳ ಮಾತನ್ನು ಆಲಿಸುತ್ತಾ, ಈ ಜಿರಲೆ ಕುಟುಂಬ ಒಂದು ಮನೆಯ ಆಡುಗೆಮನೆ ಅಥವ ಬಚ್ಚಲು ಮನೆಯ ಚರಂಡಿಯಿಂದ ಹೊರಬಿದ್ದು ರಸ್ತೆಯ ಮೂಲಕ ದಾಟಿ ಈಗ ತಾನೆ ಮುಂಗಾರು ಮಳೆಯ ಮುನ್ಸೂಚನೆಗಾಗಿ ಕ್ಲೀನ್ ಮಾಡಿದ ಚರಂಡಿಯ ಮುಖಾಂತರ ನಮ್ಮ ಪಕ್ಕದ ಮನೆಯ ಹಬ್ಬದ ಊಟಕ್ಕೆ ಹೋಗುತ್ತಿರುವುದನ್ನು ನೋಡಿ ನನಗೆ ಕುವೆಂಪುರವರ ಈ ಕವನವೇ ನೆನಪಾದರೂ ನಿಜಕ್ಕೂ ನನ್ನ ಚಿಂತೆ ಬೇರೆನೇ ಆಗಿತ್ತು. ನಮ್ಮ ಪುಟ್ಟ ರಸ್ತೆಗೂ, ಮಹಾಕವಿ ಕುವೆಂಪುರಸ್ತೆಗೂ ಇನ್ನೂರು ಹೆಜ್ಜೆಗಳಷ್ಟೇ ದೂರ. ದೇವಯ್ಯ ಪಾರ್ಕಿನಿಂದ ನವರಂಗ್ ಟಾಕೀಸ್‍ವರೆಗೆ ಮೆಟ್ರೋ ರೈಲು ಕೆಲಸ ನಡೆಯುತ್ತಿರುವುದರಿಂದ ಆನೇಕ ದ್ವಿಚಕ್ರ ವಾಹನಗಳು ಅಲ್ಲಿನ ಟ್ರಾಫಿಕ್ ತಪ್ಪಿಸಿಕೊಳ್ಳುವುದಕ್ಕಾಗಿ ನಮ್ಮ ಮನೆಯ ಮುಂದಿನ ರಸ್ತೆಯಲ್ಲೇ ಚಲಿಸುತ್ತವೆ. ನಾವು ಎದುರು ಮನೆಗೆ ಹೋಗಬೇಕಾದರೂ ಸ್ವಲ್ಪ ಕಾಯಬೇಕಾಗುವಷ್ಟು ಟ್ರಾಫಿಕ್ ನಮ್ಮ ರಸ್ತೆಯಲ್ಲಿ ಇದ್ದೇ ಇರುತ್ತೆ. ಇಂಥ ಪರಿಸ್ಥಿತಿಯಲ್ಲಿ ಸಂಜೆ ಹೆಚ್ಚು ದ್ವಿಚಕ್ರವಾಹನಗಳು ಚಲಿಸುವ ಈ ನಮ್ಮ ರಸ್ತೆಯಲ್ಲಿ ಈ ಜಿರಲೆ ಕುಟುಂಬ ಹೀಗೆ ರಾಜರೋಷವಾಗಿ ಹಬ್ಬದೂಟಕ್ಕೆ ಹೋಗುತ್ತಿವೆಯಲ್ಲ, ಯಾವುದಾದರೂ ಒಂದು ಬೈಕ್ ಹತ್ತಿದರೂ ಮುಗೀತು ಗಂಡನೋ ಹೆಂಡತಿಯೋ, ಮಕ್ಕಳೋ ಡಮಾರ್, ಇಷ್ಟಕ್ಕೆ ಮುಗಿಯೊಲ್ಲ, ಸತ್ತಿದ್ದೂ ಯಾರೇ ಹಾಗಲಿ ಕರುಳ ಸಂಭಂದವಲ್ಲವೆ, ಒಮ್ಮೆ ಹಿಂತಿರುಗಿ ನೋಡಿ ದುಃಖ ಉಮ್ಮಳಿಸಿ ಬಂದು ಉಳಿದವು ಅಲ್ಲೇ ನಿಂತು ಮೈಮರೆತರೆ ಇವುಗಳ ಮೇಲೆ ಇನ್ಯಾವುದಾದರೂ ಆಕ್ಟೀವ್ ಹೋಂಡ, ಸುಜುಕಿ ಬೈಕಿನ ರೇಡಿಯಲ್ ಟೈರುಗಳು ಇವುಗಳ ಮೇಲೆ ಹತ್ತಿಬಿಟ್ಟರೆ, ಉಳಿದವರಿಗೆ ಜೀವನಪೂರ್ತಿ ಶೋಕದಲ್ಲಿ ಮುಳುಗಬೇಕಾಗುತ್ತದಲ್ಲ ಎನ್ನುವ ಚಿಂತೆ ನನ್ನಲ್ಲಿ ಕಾಡುತ್ತಿತ್ತು.

"ರೀ ಏನ್ ಯೋಚಿಸುತ್ತಿದ್ದೀರಿ."..ಅಂತ ಕೇಳಿದಾಗಲೇ ನಾನು ಈ ಆಲೋಚನೆಯಿಂದ ಹೊರಬಂದಿದ್ದೆ.

ಜಿರಲೆ ಕಂಡರೆ ತನ್ನ ಎಲ್ಲಾ ಅಸ್ತ್ರಗಳನ್ನು ತೆಗೆದುಕೊಂಡು ಮುನ್ನುಗ್ಗುವ ನನ್ನ ಶ್ರೀಮತಿ ಇಲ್ಲಿ ಜಿರಲೆ ಕುಟುಂಬ ನೋಡಿ ಈ ರೀತಿ ಮಾತನಾಡಲು ಕಾರಣವಿದೆ. ನಾವು ಬಂದಿರುವ ಹೊಸ ಮನೆಯಲ್ಲಿ ಜಿರಲೆಗಳಿಲ್ಲವಾದ್ದರಿಂದ[ಏಕಿಲ್ಲವೆಂದು ಮುಂದೆ ತಿಳಿಸುತ್ತೇನೆ] ಅವುಗಳ ಬಗ್ಗೆ ಆಕೆಗೆ ಒಂದು ರೀತಿಯ ಸಾಫ್ಟ್ ಕಾರ್ನರ್ ಮನಸ್ಸಿದೆ. ನಮ್ಮ ಮನೆಯ ಪಕ್ಕವೋ ಎದುರುಗಡೆಯೋ ಒಂದು ಗುಂಪು ಗಲಾಟೆ ಮಾಡುತ್ತಿದ್ದರೆ, ಒಂದೆರಡು ದಿನ ಸಹಿಸಬಹುದು. ಅಥವ ಒಂದು ವಾರ ಸಹಿಸಬಹುದು. ವರ್ಷಾನುಗಟ್ಟಲೇ ಅವರ ಗಲಾಟೆ ಇದ್ದರೆ ಅವರನ್ನು ಕಂಡರೆ ನಮಗಾಗುವುದಿಲ್ಲ ದ್ವೇಷವೆನ್ನುವುದು ಅವರನ್ನು ಕಂಡಾಗಲೆಲ್ಲಾ ಜ್ವಾಲಾಮುಖಿಯಂತೆ ಹೊರಹೊಮ್ಮುತ್ತಿರುತ್ತದೆ. ಹಾಗೆ ಅವರೆಲ್ಲಾ ಮಾಯವಾಗಿ ಸುಮಾರು ತಿಂಗಳುಗಳ ನಂತರ ಕಂಡರೆ ಅವರ ಬಗ್ಗೆ ದ್ವೇಷವೇ ಇರುವುದಿಲ್ಲ. ಜೊತೆಗೆ ಅವುಗಳ ಬಗ್ಗೆ ಒಂದಷ್ಟು ಒಳ್ಳೆಯ ಭಾವನೆಗಳು ಮೂಡಲುಬಹುದು. ಇಲ್ಲಿ ಈ ಜಿರಲೆಗಳನ್ನು ಕಂಡಾಗ ಈ ರೀತಿ ಸಾಫ್ಟ್ ಕಾರ್ನರ್ ಮೂಡಲು ಇದೇ ಕಾರಣವೂ ಇರಬಹುದು. ಆದ್ರೆ ಇದಕ್ಕೂ ಮೊದಲು ನಾವಿದ್ದ ಮನೆಯಲ್ಲಿ ಪ್ರತೀದಿನ ನನ್ನಾಕೆಗೂ ಜಿರಲೆಗಳಿಗೂ ಪ್ರತಿದಿನ ಯುದ್ಧವಾಗುತ್ತಿತ್ತು. ಜಿರಲೆ ಬಗ್ಗೆ ಅವಳಿಗೆ ಎಂಥ ದ್ವೇಷವಿತ್ತೆಂದರೇ ನನ್ನನ್ನು ನೆನೆಸಿಕೊಳ್ಳುವುದಕ್ಕಿಂತ ಹೆಚ್ಚು ಜಿರಲೆಗಳ ದ್ಯಾನದಲ್ಲಿರುತ್ತಿದ್ದಳು.

ಐದು ವರ್ಷದ ಹಿಂದಿನ ಮಾತು. ಚಿಕ್ಕದಾಗಿ ಚೊಕ್ಕವಾಗಿದ್ದ ಎರಡು ಕೋಣೆಯ ಆ ಮನೆ ಇಷ್ಟವಾಗಿತ್ತು. ಎಲ್ಲಾ ಸಾಮಾನು ಒಪ್ಪವಾಗಿ ಜೋಡಿಸಿಕೊಳ್ಳಲು ಒಂದು ವಾರವೇ ಬೇಕಾಗಿತ್ತು. ಮನೆಯಲ್ಲಿ ದಿವಾನವಿದ್ದರೂ ಅದನ್ನೇ ಒರಗಿಕೊಂಡು ನೆಲದ ಮೇಲೆ ಕೂತು ಟಿ.ವಿ ನೋಡುವುದು ನನ್ನ ಆಭ್ಯಾಸ. ಅವತ್ತು ಭುಜದ ಮೇಲೆ ಏನೋ ಮುಲಮುಲ ಅಂತ ಚಲಿಸಿದ ಅನುಭವವಾಯಿತು. ತಿರುಗಿ ನೋಡಿದೆ, ಏನು ಇಲ್ಲ. ಮತ್ತೆ ಸ್ವಲ್ಪ ಹೊತ್ತಿಗೆ ಎಡಗೈ ಮೇಲೆ ಏನೋ ಸರಿದಾಡಿದಂತಾಯಿತು. ಅರೆರೆ..ಏನಿದು ಅಂತ ಮತ್ತೆ ನೋಡಿದರೆ ಕೈ ಮೇಲೆ ಏನು ಕಾಣಲಿಲ್ಲ.ಅತ್ತಿತ್ತ ಕಣ್ಣಾಡಿಸಿದೆ. ಅದೋ ದಿವಾನದ ಸ್ವಲ್ಪ ತೆರೆದ ಬಾಗಿಲಲ್ಲಿ ಎರಡು ಕೆಂಪು ನೆಟ್ಟಗಿನ ಕೂದಲು ಕಾಣಿಸಿದವು. ನಿದಾನವಾಗಿ ಅಲುಗಾಡುತ್ತಿದ್ದವು. ಒಹ್ ನನಗೆ ಗೊತ್ತಾಗಿ ಹೋಯಿತು. ಇದು ಖಂಡಿತ ಜಿರಲೆ ಇರಬೇಕು. ಅದರ ಮೀಸೆ ಹಿಡಿಯಲು ಕೈಹಾಕಿದೆ. ಪುಲಕ್ಕನೆ ದಿವಾನ ಒಳಗೋಡಿತು.

"ಹೇಮಾ ಈ ಓನರ್ ಸರಿಯಿಲ್ಲ ನೋಡು, ನಮಗಲ್ಲದೇ ಬೇರೆಯವರಿಗೂ ಇದೇ ಮನೆಯನ್ನು ಬಾಡಿಗೆ ಕೊಟ್ಟಿದ್ದಾರೆ ನೋಡು"

"ಯಾರ್ರೀ ಅದು....ಅವಳಿಗೆ ಗಾಬರಿಯೇ ಆಯಿತು.

"ಮತ್ಯಾರು ನಿನ್ನ ಅತ್ಮೀಯ ಗೆಳೆಯರಾದ ಜಿರಲೆಗಳಿಗೆ"

ಜಿರಲೆಗಳಿಗೆ ಅಂದ ತಕ್ಷಣ ಅವಳಿಗೆ ಸಿಟ್ಟು ಅದೆಲ್ಲಿತ್ತೋ ಬಾಗಿಲ ಹಿಂಬಾಗದಲ್ಲಿದ್ದ ಕಸಪರಕೆಯನ್ನು ತಂದೇ ಬಿಟ್ಟಳು. "ಬಾಜಿಕಟ್ಟಿ ನೋಡುಬಾರ ಮೀಸೆ ಮಾಮ" ಅಂತ ಹಂಗಿಸಿ ಮೀಸೆ ತೋರಿಸಿ ಒಳಗೋಡುತ್ತಿದ್ದ ಅದನ್ನು ಹೊರಗೆಳೆದು ಬಡಿದು ಸಾಯಿಸಿ" "ಸಾಯಿ ಕಳನನಮಗಂದೆ, ಹಳೆ ಮನೆಬಿಟ್ಟು ಹೊಸ ಮನೆಗೆ ಬಂದರೂ ಇಲ್ಲಿಯೂ ಕಾಟ ಕೊಡ್ತೀಯಾ....ನಿಮ್ಮನ್ನು ಹುಟ್ಟಲಿಲ್ಲ ಅನ್ನಿಸಿಬಿಡ್ತೀನಿ" ಅಂದು ಸಿಟ್ಟಿನಿಂದ ಮತ್ತೊಂದು ಏಟು ಹಾಕಿದಳು. ಬಾಗಿಲಿಂದ ಹೊರಗೆತ್ತಿಕೊಂಡು ಹೋಗಿ ಅಲ್ಲಿ ಸ್ವಲ್ಪ ಹೊತ್ತು ಬಿಸಿಲಲ್ಲಿ ಬಿಟ್ಟು ನೋಡಿದಳು. ಕೈಕಾಲು, ಮೀಸೆಗಳು ಸ್ವಲ್ಪವೇ ಅಲುಗಾಡಿದರೂ ಅದು ಇನ್ನೂ ಬದುಕಿದೆ ಅಂತಲೇ ಅರ್ಥೈಸಿಕೊಂಡು ಪರಕೆಯಲ್ಲಿ ಮತ್ತೊಂದೆರಡು ಏಟು ಹಾಕಿ ಸಾಯಿಸಲು ಸಿದ್ದಳಾಗಿದ್ದಳು. ಅದ್ರೆ ಅದು ಕೈಕಾಲು ಮೀಸೆ ಆಡಿಸಲಿಲ್ಲ. ಆದ್ರೂ ಎತ್ತಿ ಹೊರಗೆ ಬಿಸಾಡದೆ ಮತ್ತೊಂದು ಜೋರಾದ ಏಟು ಹಾಕಿಯೇ ಎತ್ತಿ ಕಸದ ಬುಟ್ಟಿಗೆ ಹಾಕಿದ್ದಳು. ಇದನ್ನೆಲ್ಲಾ ನೋಡುತ್ತಿದ್ದ ನನಗೆ ಅದು ಸತ್ತಿದ್ದರೂ ಇವಳ್ಯಾಕೆ ಮತ್ತೆ ಅದಕ್ಕೆ ಪರಕೆಯಲ್ಲಿ ಹೊಡೆದು ಎನರ್ಜಿ ವೇಷ್ಟ್ ಮಾಡಿಕೊಳ್ಳುತ್ತಿದ್ದಾಳೆ ಅನ್ನಿಸಿ ಕೇಳಿಯೇ ಬಿಟ್ಟೆ.

"ರೀ ನಿಮಗೆ ಗೊತ್ತಾಗಲ್ಲ ಸುಮ್ಮನಿರಿ ಇವು ಡೈನಸರ್‌ಗಳು ಹುಟ್ಟುವುದಕ್ಕಿಂತ ಮೊದಲೇ ಈ ಭೂಮಿಮೇಲೆ ಹುಟ್ಟಿದ್ದಂತೆ. ಆಂತ ದೊಡ್ಡ ಪ್ರಾಣಿಗಳು ಸತ್ತರೂ ಇವು ಸಾಯಲಿಲ್ಲವಂತೆ. ಭೂಕಂಪವಾದಾಗ ಎಲ್ಲಾ ಸತ್ತರೂ ಇವು ಸತ್ತಂತೆ ನಟಿಸಿ ಸುಮ್ಮನಾಗಿಬಿಟ್ಟವಂತೆ. ಅದಕ್ಕೆ ಈಗಲೂ ಹಾಗೆ ನಟಿಸಿ ನಾನು ಬಿಸಾಡಿದ ಮೇಲೆ ಬೇರೆ ಜಾಗದಲ್ಲಿ ಬದುಕಿಬಿಟ್ಟರೇ, ಅಷ್ಟೇ. ಒಂದು ಎರಡಾಗಿ ಎರಡು ನಾಲ್ಕಾಗಿ ಹೀಗೆ ಅವುಗಳ ಸಂತತಿ ಸಾವಿರಗಟ್ಟಲೇ ಆಗಿಬಿಟ್ಟರೆ ನಮ್ಮ ಗತಿ ಅದೋಗತಿ, ಇವೆಲ್ಲಾ ನಿಮಗೆ ಗೊತ್ತಾಗೊಲ್ಲ ಸುಮ್ಮನಿರಿ." ಅಂದಿದ್ದಳು.

ಆ ಮನೆ ಖಾಲಿ ಮಾಡುವಾಗ ಮನೆಯ ಆಷ್ಟು ಸಾಮಾನುಗಳನ್ನು ಕೊಡವಿ, ಪಾತ್ರೆ ಪಡಗಗಳನ್ನೆಲ್ಲಾ ಚೆನ್ನಾಗಿ ತೊಳೆದು, ಬಟ್ಟೆಬರೆಗಳನ್ನೆಲ್ಲಾ ಕೊಡವಿ ಗಂಟು ಮೂಟೆ ಕಟ್ಟಿ, ಬೀರು, ದಿವಾನ, ಮಂಚ, ಇತ್ಯಾದಿ ವಸ್ತುಗಳನ್ನು ಚೆನ್ನಾಗಿ ಕ್ಲೀನ್ ಮಾಡಿ ತೆಗೆದುಕೊಂಡು ಈ ಮನೆಗೆ ಬಂದಿದರೂ ಹೇಗೋ ಒಂದು ಜಿರಲೆ ತಪ್ಪಿಸಿಕೊಂಡು ದಿವಾನದೊಳಗೆ ಸೇರಿಕೊಂಡು ತನ್ನ ಸಂತಾನಾಭಿರುದ್ಧಿ ಬೆಳೆಸಲು ಇಷ್ಟಪಟ್ಟಿತ್ತೇನೋ. ಆದ್ರೆ ನನ್ನ ಶೀಮತಿಯ ಕೈಯಲ್ಲಿ ಸಿಕ್ಕಿ ಸತ್ತು ಹೋಗಿತ್ತು.

ಆದರೆ ನಮ್ಮ ಲೆಕ್ಕಚಾರ ತಪ್ಪಾಗಿತ್ತು. ಮೂರು ದಿನ ಕಳೆದ ನಂತರ ಮತ್ತೊಂದು ಕಾಣಿಸಿತು. ಆದ್ರೆ ಅದು ತುಂಬಾ ಚಾಲಾಕಿಯಾಗಿತ್ತು. ನಮ್ಮ ಕಣ್ಣಿಗೆ ಕಾಣುವಷ್ಟವಷ್ಟರಲ್ಲಿ ಮಂಚದ ಕೆಳಗೆ ಪುಣುಪುಣು ಓಡಿ ಕತ್ತಲಲ್ಲಿ ಮಾಯವಾಗಿಬಿಡುತ್ತಿತ್ತು. ಬಹುಶಃ ತನ್ನ ಗೆಳೆಯನ ಸಾವನ್ನು ಮರೆಯಲ್ಲಿ ನಿಂತು ನೋಡಿ ಕಣ್ಣೀರಿಟ್ಟಿತ್ತೇನೋ, ನನಗನ್ನಿಸುತ್ತೆ ಅವರಿಬ್ಬರೂ ಒಟ್ಟಿಗೆ ಸೇರಿ ತಾಲಿಬಾನ್ ಅಥವ ಎಲ್ಟಿಟಿಯಿ ಭಯೋತ್ಪಾದಕರಂತೆ ನಾವು ಸತ್ತರೂ ಚಿಂತೆಯಿಲ್ಲ ಆದ್ರೆ ಈ ಮನೆಯಲ್ಲಿ ನಮ್ಮ ಸಂತತಿಯನ್ನು ಸಾವಿರಗಟ್ಟಲೆ ಬೆಳೆಸಿ ಸಾಮ್ರಾಜ್ಯವನ್ನು ಸ್ಥಾಪಿಸಿ ನಂತರ ಸಾಯಬೇಕು. ಈ ಕೆಲಸದಲ್ಲಿ ಇಬ್ಬರಲ್ಲಿ ಯಾರಾದರೂ ಮೊದಲು ಸಿಕ್ಕಿಹಾಕಿಕೊಂಡು ಸತ್ತರೆ ಉಳಿದವ ಆ ಅಸೆಯನ್ನು ಪೂರೈಸಲೇಬೇಕು ಎನ್ನುವ ಆತ್ಮಾಹುತಿ ದಳದ ಹಾಗೆ ಈ ಜಿರಲೆಗಳಲ್ಲಿ ಒಪ್ಪಂದವಾಗಿರಬಹುದು. ಅದಕ್ಕಾಗಿ ಇವರ ಮನೆಯಲ್ಲಿ ನಾನು ಬದುಕಿ ಬಾಳಬೇಕಾದರೆ ಎಲ್ಲಾ ಪಾಕಡ ವಿದ್ಯೆಗಳಲ್ಲಿ ತಂತ್ರಗಳಲ್ಲಿ ಪಾರಂಗತನಾಗಿರಬೇಕು ಅಂತ ತೀರ್ಮಾನಿಸಿಬಿಟ್ಟಿತ್ತೇನೋ. ಕೊನೆಗೂ ನಮ್ಮ ಕೈಗೆ ಸಿಗಲೇ ಇಲ್ಲ. ನಂತರ ಹೊಸ ಮನೆಯಲ್ಲಿ ಯಾವ ಜಿರಲೆಗಳು ಕಾಣಲಿಲ್ಲವಾದ್ದರಿಂದ ನಮಗೂ ಅದರ ಯೋಚನೆ ಬರಲಿಲ್ಲ.

ಆರು ತಿಂಗಳು ಕಳೆಯಿತು. ಮಂಚದ ಮೇಲಿನ ಹಾಸಿಗೆಯನ್ನು ಕ್ಲೀನ್ ಮಾಡಬೇಕೆಂದು ಹಾಸಿಗೆಯನ್ನು ಮೇಲಿನ ಬಾಲ್ಕನಿಯಲ್ಲಿಹಾಕಿ ಅದರ ಕೆಳಗಿದ್ದ ಚಾಪೆಯನ್ನು ಎತ್ತಿ ನೋಡಿದರೆ...ಭಯೋತ್ಪಾದಕರಂತೆ ನೆಲದೊಳಗೆ ಸುರಕ್ಷಿತ ಬಂಕರುಗಳನ್ನು ಸ್ಥಾಪಿಸಿಕೊಂಡು ಯುದ್ದ ತಯಾರಿ ನಡೆಸುವಂತೆ ಇವು ಕೂಡ ಮಂಚದ ಪ್ಲೈವುಡ್‍ಗಳ ಸಣ್ಣ ಸಂದುಗಳಲ್ಲಿ ಅನೇಕ ಸಣ್ಣ ಸಣ್ಣ ಮರಿಗಳು, ಕೆಲವು ಮೊಟ್ಟೆಗಳು ನಾಲ್ಕೈದು ದೊಡ್ಡ ಜಿರಲೆಗಳು ನೆಮ್ಮದಿಯಾಗಿ ವಿಶ್ರಮಿಸುತ್ತಿವೆ.! ನೈರುತ್ಯ ದಿಕ್ಕಿನಲ್ಲಿ ನಾನು ತಲೆಹಾಕಿ ಮಲಗುವ ಮೂಲೆಯಲ್ಲೇ ಇವು ದೊಡ್ಡ ಸಂಸಾರ ಹೂಡಿವೆಯೆಂದರೇ ಬಹುಶಃ ವಾಸ್ತು ಜ್ಞಾನದ ಅರಿವಿರಬಹುದೇ! ಮೊದಲ ಪರಕೆ ಏಟು ಬಿತ್ತಲ್ಲ ಎರಡು ದೊಡ್ಡ ಜಿರಲೆಗಳು ಅಲ್ಲೇ ಸತ್ತು ಬಿದ್ದವು ಮತ್ತಷ್ಟು ಕೈಕಾಲು, ಮೀಸೆ, ರೆಕ್ಕೆ ಇತ್ಯಾದಿಗಳನ್ನು ಮುರಿದು ಅಂಗವಿಕಲವಾಗಿ ಸಂದುಗೊಂದುಗಳಲ್ಲಿ ಓಡಿಹೋದವು. ಮಂಚ ಜರುಗಿಸಿ ಮೂಲೆಗಳಲ್ಲಿ ಆಡಗಿಕೊಂಡಿದ್ದವನ್ನೆಲ್ಲಾ ಹೊರಗೆಳೆದು ಸಾಯಿಸಿದಾಗ ನನ್ನಾಕೆಗಂತೂ ಏನೋ ನಿಟ್ಟುಸಿರು. ಆದರೆ ಇಷ್ಟಕ್ಕೆ ಮುಗಿಯಲಿಲ್ಲ. ನಮ್ಮ ಬೆಡ್ ರೂಮ್ ಅವಕ್ಕೆ ಒಂದು ಬ್ರಾಂಚ್ ಅಷ್ಟೇ ಅವುಗಳ ಕೇಂದ್ರ ಕಛೇರಿ ಆಡುಗೆ ಮನೆಯೆನ್ನುವುದು ನಂತರ ಗೊತ್ತಾಯಿತು.

ಮುಂದುವರಿಯುತ್ತದೆ.....

ಸೂಚನೆ: ಆರೆಂಜ್ ಕೌಂಟಿ ರೆಸಾರ್ಟಿನವರು ಕೊಟ್ಟಿರುವ ಫೋಟೋಗ್ರಫಿ ಅಸೈನ್‍ಮೆಂಟಿಗಾಗಿ ಮೂರು ದಿನದ ಮಟ್ಟಿಗೆ ಮಡಿಕೇರಿಗೆ ಹೋಗುತ್ತಿದ್ದೇನೆ. ಅಲ್ಲಿಯವರೆಗೆ ಬ್ಲಾಗ್, ಮೇಲ್ ಎಲ್ಲಾ ರಜಾ. ವಾಪಸ್ ಬಂದಮೇಲೆ ಫೋಟೋಗಳೊಂದಿಗೆ ಬೇಟಿಯಾಗೋಣ...

ಲೇಖನ :ಶಿವು.ಕೆ