Tuesday, September 8, 2009

ನಾಚಿಕೆಯಿಲ್ಲದೆ ಅಪ್ಪ ಅಮ್ಮನ್ನ ಹ್ಯಾಗೆ ಹಿಂಬಾಲಿಸುತ್ತಿವೆ ನೋಡ್ರಿ....

"ಇವಕ್ಕೆ ನಾಚಿಕೆ ಮಾನ ಮರ್ಯಾದೆ ಒಂದೂ ಇಲ್ವಾ".....ನನ್ನಾಕೆ ಬೈಯ್ಯುತ್ತಿದ್ದರೆ ನಾನು ಸುಮ್ಮನೆ ಕೇಳುತ್ತಿದ್ದೆ. ಮುಂದುವರಿಸಿದಳು.

"ಅಗೋ.. ಅಲ್ಲಿ ನೋಡಿ ಅವ ಗಂಡ ಇರಬೇಕು ಯ್ಯಾಗೆ ಹೋಗ್ತಿದ್ದಾನೆ"......ಕೈ ತೋರಿಸಿ ಹೇಳಿದಳು.

"ಹೌದು ಕಣೇ ಎಷ್ಟು ಚೆನ್ನಾಗಿ ನಿದಾನವಾಗಿ, ಅದರಲ್ಲೂ ಜಬರದಸ್ತಾಗಿ ಹೋಗ್ತೀರೋದು ನೋಡಿದ್ರೆ ಅವ ಗಂಡನೇ ಇರಬೇಕು" ನಾನು ಉತ್ತರಿಸಿದ್ದೆ. ನಾವಿಬ್ಬರೂ ಏನಾಗುತ್ತೆ ನೋಡೋಣ ಅಂತ ಆ ದೃಶ್ಯವನ್ನು ನೋಡಲು ನಿಂತೇ ಬಿಟ್ಟಿದ್ದೆವು.

"ಶಿವು ಅಲ್ಲಿ ನೋಡ್ರೀ.....ಎಷ್ಟು ನಿದಾನವಾಗಿ, ನಯವಾಗಿ ಅಲ್ಲಲ್ಲಿ ನಿಂತು ಅಕ್ಕ ಪಕ್ಕ ನೋಡಿ ಹೋಗ್ತಿರೋದು ನೋಡ್ರಿ,....ಖಂಡಿತವಾಗಿ ಹೆಂಡ್ತೀನೇ ಇರಬೇಕು ಕಣ್ರೀ..... ಆವಳ ಕುತೂಹಲದ ಮಾತಿಗೆ ನಾನು ಈಗಲೂ ಪ್ರತಿಕ್ರಿಯಿಸದೆ ಸುಮ್ಮನೆ ನೋಡುತ್ತಿದ್ದೆ.

"ಛೇ ಛೇ.... ಇಲ್ನೋಡ್ರೀ....ಅವರಿಬ್ಬರಿಗಂತೂ ಬುದ್ಧಿ ಇಲ್ಲ, ಇವಕ್ಕಾದ್ರೂ ಸ್ವಲ್ಪ ವಿವೇಕ ಬ್ಯಾಡ್ವ....ಈಗಿನ ಕಾಲದ ಮಕ್ಕಳು ಚುರುಕುತನದಲ್ಲಿ, ಬುದ್ಧಿವಂತಿಕೆಯಲ್ಲಿ, ಜೊತೆಗೆ ಮಾನ ಮರ್ಯಾದೆ ಕಾಪಾಡಿಕೊಳ್ಳುವುದರಲ್ಲೂ ಮುಂದು ಅಂತಾರೆ....ಇಲ್ನೋಡ್ರೀ....ಹ್ಯಾಗೆ ಅವುಗಳನ್ನೆಲ್ಲಾ ಬಿಟ್ಟು ನಾಚಿಕೆಯಿಲ್ಲದೆ ಅಪ್ಪ ಅಮ್ಮನ್ನ ಹಿಂಬಾಲಿಸುತ್ತಿವೆ.....ಛೇ ಕಾಲ ಕೆಟ್ಟೋಯ್ತು ಬಿಡ್ರಿ.....". ಆಗಲೂ ನಾನು ಸುಮ್ಮನಿದ್ದೆ. ಆದು ಅವಳಿಗೆ ಸಹಿಸಲಾಗಲಿಲ್ಲ.

ಏನ್ರೀ...ನೀವು ನಾನು ಅವುಗಳ ಬಗ್ಗೆ ಮಾತಾಡುತ್ತಿದ್ದರೂ ನೀವು ಸುಮ್ಮನಿದ್ದಿರಲ್ಲ...."

ಇಷ್ಟಕ್ಕೂ ಈ ಮಾತುಕತೆಯಾಗಿದ್ದು ಗಣೇಶ ಹಬ್ಬದ ದಿನ ನಾವಿಬ್ಬರೂ ಹತ್ತಿರದ ಗಣೇಶನ ಗುಡಿಗೆ ನಡೆದು ಹೋಗುವಾಗ ನಮ್ಮ ರಸ್ತೆಯನ್ನು ದಾಟುತ್ತಿದ್ದ ಜಿರಲೆಗಳನ್ನು ನೋಡಿಯೇ ಮಾತಾಡಿದ್ದಳು. ಅವಳ ಮಾತುಗಳಿಗೆ ನಾನು ಪ್ರತಿಕ್ರಿಯಿಸದಿರಲು ಕಾರಣ ನನಗೆ ಆ ಕ್ಷಣದಲ್ಲಿ ಕುವೆಂಪುರವರ

" ಎಲ್ಲಿಯೂ ನಿಲ್ಲದಿರು,

ಮನೆಯನೆಂದು ಕಟ್ಟದಿರು,

ಕೊನೆಯನೆಂದು ಮುಟ್ಟದಿರು

ಓ ಅನಂತವಾಗಿರು.....

ನೆನಪಾಗುತ್ತಿತ್ತು. ನಾವೆಲ್ಲ ಒಂದು ಮನೆಯಲ್ಲಿ ಸ್ಥಿರವಾಗಿ ನೆಲೆಸಬೇಕೆಂದು ಎಷ್ಟೆಲ್ಲಾ ಕಷ್ಟ ಪಟ್ಟು ಜೀವನವನ್ನು ನಡೆಸುತ್ತೇವೆ. ಆದರೆ ಅವುಗಳು ತಮ್ಮದೇ ಅಂತ ಒಂದು ಮನೆ ಮಾಡಿಕೊಳ್ಳದೆ ಮನೆಯಿಂದ ಮನೆಗೆ ಹೀಗೆ ಅನಂತವಾಗಿ ಚಲಿಸುತ್ತಾ ಕುವೆಂಪುರವರ ಮಾತುಗಳನ್ನು ಅದೆಷ್ಟು ಚೆನ್ನಾಗಿ ಪಾಲಿಸುತ್ತಿವೆಯಲ್ಲಾ ಅಂತ ನನಗೆ ಅನ್ನಿಸುತ್ತಿದ್ದರೆ, ನನ್ನಾಕೆಯ ಆಲೋಚನೆಯೇ ಬೇರೆಯಾಗಿತ್ತು. ಮೊದಲು ಗಂಡ [ಅದರ ಗತ್ತಿನ ನಡುಗೆ ನೋಡಿ ಹಾಗೆ ಅಂದುಕೊಂಡಳೇನೋ,]ಮತ್ತೆ ಹಿಂದೆ ಮತ್ತೊಂದು ಹೆಣ್ಣು ಜಿರಲೆ[ಅದರ ನಡುಗೆ, ಆಗಾಗ ನಿಂತು ಅತ್ತಿತ್ತ ತನ್ನ ಮೀಸೆ ತಿರುಗಿಸುವುದನ್ನು ನೋಡಿ ಅದನ್ನು ಹೆಂಡತಿ ಅಂದುಕೊಂಡಳೊ ಗೊತ್ತಿಲ್ಲ]ಅವುಗಳ ಹಿಂದೆಯೇ ಕೆಲವು ಪುಟ್ಟ ಜಿರಲೆಗಳು ಚಲಿಸುತ್ತಿದ್ದನ್ನು ನೋಡಿ ಹೀಗೆ ಊಹಿಸಿದ್ದಳೋ ಏನೋ.

ನಾನು ಅವಳ ಮಾತನ್ನು ಆಲಿಸುತ್ತಾ, ಈ ಜಿರಲೆ ಕುಟುಂಬ ಒಂದು ಮನೆಯ ಆಡುಗೆಮನೆ ಅಥವ ಬಚ್ಚಲು ಮನೆಯ ಚರಂಡಿಯಿಂದ ಹೊರಬಿದ್ದು ರಸ್ತೆಯ ಮೂಲಕ ದಾಟಿ ಈಗ ತಾನೆ ಮುಂಗಾರು ಮಳೆಯ ಮುನ್ಸೂಚನೆಗಾಗಿ ಕ್ಲೀನ್ ಮಾಡಿದ ಚರಂಡಿಯ ಮುಖಾಂತರ ನಮ್ಮ ಪಕ್ಕದ ಮನೆಯ ಹಬ್ಬದ ಊಟಕ್ಕೆ ಹೋಗುತ್ತಿರುವುದನ್ನು ನೋಡಿ ನನಗೆ ಕುವೆಂಪುರವರ ಈ ಕವನವೇ ನೆನಪಾದರೂ ನಿಜಕ್ಕೂ ನನ್ನ ಚಿಂತೆ ಬೇರೆನೇ ಆಗಿತ್ತು. ನಮ್ಮ ಪುಟ್ಟ ರಸ್ತೆಗೂ, ಮಹಾಕವಿ ಕುವೆಂಪುರಸ್ತೆಗೂ ಇನ್ನೂರು ಹೆಜ್ಜೆಗಳಷ್ಟೇ ದೂರ. ದೇವಯ್ಯ ಪಾರ್ಕಿನಿಂದ ನವರಂಗ್ ಟಾಕೀಸ್‍ವರೆಗೆ ಮೆಟ್ರೋ ರೈಲು ಕೆಲಸ ನಡೆಯುತ್ತಿರುವುದರಿಂದ ಆನೇಕ ದ್ವಿಚಕ್ರ ವಾಹನಗಳು ಅಲ್ಲಿನ ಟ್ರಾಫಿಕ್ ತಪ್ಪಿಸಿಕೊಳ್ಳುವುದಕ್ಕಾಗಿ ನಮ್ಮ ಮನೆಯ ಮುಂದಿನ ರಸ್ತೆಯಲ್ಲೇ ಚಲಿಸುತ್ತವೆ. ನಾವು ಎದುರು ಮನೆಗೆ ಹೋಗಬೇಕಾದರೂ ಸ್ವಲ್ಪ ಕಾಯಬೇಕಾಗುವಷ್ಟು ಟ್ರಾಫಿಕ್ ನಮ್ಮ ರಸ್ತೆಯಲ್ಲಿ ಇದ್ದೇ ಇರುತ್ತೆ. ಇಂಥ ಪರಿಸ್ಥಿತಿಯಲ್ಲಿ ಸಂಜೆ ಹೆಚ್ಚು ದ್ವಿಚಕ್ರವಾಹನಗಳು ಚಲಿಸುವ ಈ ನಮ್ಮ ರಸ್ತೆಯಲ್ಲಿ ಈ ಜಿರಲೆ ಕುಟುಂಬ ಹೀಗೆ ರಾಜರೋಷವಾಗಿ ಹಬ್ಬದೂಟಕ್ಕೆ ಹೋಗುತ್ತಿವೆಯಲ್ಲ, ಯಾವುದಾದರೂ ಒಂದು ಬೈಕ್ ಹತ್ತಿದರೂ ಮುಗೀತು ಗಂಡನೋ ಹೆಂಡತಿಯೋ, ಮಕ್ಕಳೋ ಡಮಾರ್, ಇಷ್ಟಕ್ಕೆ ಮುಗಿಯೊಲ್ಲ, ಸತ್ತಿದ್ದೂ ಯಾರೇ ಹಾಗಲಿ ಕರುಳ ಸಂಭಂದವಲ್ಲವೆ, ಒಮ್ಮೆ ಹಿಂತಿರುಗಿ ನೋಡಿ ದುಃಖ ಉಮ್ಮಳಿಸಿ ಬಂದು ಉಳಿದವು ಅಲ್ಲೇ ನಿಂತು ಮೈಮರೆತರೆ ಇವುಗಳ ಮೇಲೆ ಇನ್ಯಾವುದಾದರೂ ಆಕ್ಟೀವ್ ಹೋಂಡ, ಸುಜುಕಿ ಬೈಕಿನ ರೇಡಿಯಲ್ ಟೈರುಗಳು ಇವುಗಳ ಮೇಲೆ ಹತ್ತಿಬಿಟ್ಟರೆ, ಉಳಿದವರಿಗೆ ಜೀವನಪೂರ್ತಿ ಶೋಕದಲ್ಲಿ ಮುಳುಗಬೇಕಾಗುತ್ತದಲ್ಲ ಎನ್ನುವ ಚಿಂತೆ ನನ್ನಲ್ಲಿ ಕಾಡುತ್ತಿತ್ತು.

"ರೀ ಏನ್ ಯೋಚಿಸುತ್ತಿದ್ದೀರಿ."..ಅಂತ ಕೇಳಿದಾಗಲೇ ನಾನು ಈ ಆಲೋಚನೆಯಿಂದ ಹೊರಬಂದಿದ್ದೆ.

ಜಿರಲೆ ಕಂಡರೆ ತನ್ನ ಎಲ್ಲಾ ಅಸ್ತ್ರಗಳನ್ನು ತೆಗೆದುಕೊಂಡು ಮುನ್ನುಗ್ಗುವ ನನ್ನ ಶ್ರೀಮತಿ ಇಲ್ಲಿ ಜಿರಲೆ ಕುಟುಂಬ ನೋಡಿ ಈ ರೀತಿ ಮಾತನಾಡಲು ಕಾರಣವಿದೆ. ನಾವು ಬಂದಿರುವ ಹೊಸ ಮನೆಯಲ್ಲಿ ಜಿರಲೆಗಳಿಲ್ಲವಾದ್ದರಿಂದ[ಏಕಿಲ್ಲವೆಂದು ಮುಂದೆ ತಿಳಿಸುತ್ತೇನೆ] ಅವುಗಳ ಬಗ್ಗೆ ಆಕೆಗೆ ಒಂದು ರೀತಿಯ ಸಾಫ್ಟ್ ಕಾರ್ನರ್ ಮನಸ್ಸಿದೆ. ನಮ್ಮ ಮನೆಯ ಪಕ್ಕವೋ ಎದುರುಗಡೆಯೋ ಒಂದು ಗುಂಪು ಗಲಾಟೆ ಮಾಡುತ್ತಿದ್ದರೆ, ಒಂದೆರಡು ದಿನ ಸಹಿಸಬಹುದು. ಅಥವ ಒಂದು ವಾರ ಸಹಿಸಬಹುದು. ವರ್ಷಾನುಗಟ್ಟಲೇ ಅವರ ಗಲಾಟೆ ಇದ್ದರೆ ಅವರನ್ನು ಕಂಡರೆ ನಮಗಾಗುವುದಿಲ್ಲ ದ್ವೇಷವೆನ್ನುವುದು ಅವರನ್ನು ಕಂಡಾಗಲೆಲ್ಲಾ ಜ್ವಾಲಾಮುಖಿಯಂತೆ ಹೊರಹೊಮ್ಮುತ್ತಿರುತ್ತದೆ. ಹಾಗೆ ಅವರೆಲ್ಲಾ ಮಾಯವಾಗಿ ಸುಮಾರು ತಿಂಗಳುಗಳ ನಂತರ ಕಂಡರೆ ಅವರ ಬಗ್ಗೆ ದ್ವೇಷವೇ ಇರುವುದಿಲ್ಲ. ಜೊತೆಗೆ ಅವುಗಳ ಬಗ್ಗೆ ಒಂದಷ್ಟು ಒಳ್ಳೆಯ ಭಾವನೆಗಳು ಮೂಡಲುಬಹುದು. ಇಲ್ಲಿ ಈ ಜಿರಲೆಗಳನ್ನು ಕಂಡಾಗ ಈ ರೀತಿ ಸಾಫ್ಟ್ ಕಾರ್ನರ್ ಮೂಡಲು ಇದೇ ಕಾರಣವೂ ಇರಬಹುದು. ಆದ್ರೆ ಇದಕ್ಕೂ ಮೊದಲು ನಾವಿದ್ದ ಮನೆಯಲ್ಲಿ ಪ್ರತೀದಿನ ನನ್ನಾಕೆಗೂ ಜಿರಲೆಗಳಿಗೂ ಪ್ರತಿದಿನ ಯುದ್ಧವಾಗುತ್ತಿತ್ತು. ಜಿರಲೆ ಬಗ್ಗೆ ಅವಳಿಗೆ ಎಂಥ ದ್ವೇಷವಿತ್ತೆಂದರೇ ನನ್ನನ್ನು ನೆನೆಸಿಕೊಳ್ಳುವುದಕ್ಕಿಂತ ಹೆಚ್ಚು ಜಿರಲೆಗಳ ದ್ಯಾನದಲ್ಲಿರುತ್ತಿದ್ದಳು.

ಐದು ವರ್ಷದ ಹಿಂದಿನ ಮಾತು. ಚಿಕ್ಕದಾಗಿ ಚೊಕ್ಕವಾಗಿದ್ದ ಎರಡು ಕೋಣೆಯ ಆ ಮನೆ ಇಷ್ಟವಾಗಿತ್ತು. ಎಲ್ಲಾ ಸಾಮಾನು ಒಪ್ಪವಾಗಿ ಜೋಡಿಸಿಕೊಳ್ಳಲು ಒಂದು ವಾರವೇ ಬೇಕಾಗಿತ್ತು. ಮನೆಯಲ್ಲಿ ದಿವಾನವಿದ್ದರೂ ಅದನ್ನೇ ಒರಗಿಕೊಂಡು ನೆಲದ ಮೇಲೆ ಕೂತು ಟಿ.ವಿ ನೋಡುವುದು ನನ್ನ ಆಭ್ಯಾಸ. ಅವತ್ತು ಭುಜದ ಮೇಲೆ ಏನೋ ಮುಲಮುಲ ಅಂತ ಚಲಿಸಿದ ಅನುಭವವಾಯಿತು. ತಿರುಗಿ ನೋಡಿದೆ, ಏನು ಇಲ್ಲ. ಮತ್ತೆ ಸ್ವಲ್ಪ ಹೊತ್ತಿಗೆ ಎಡಗೈ ಮೇಲೆ ಏನೋ ಸರಿದಾಡಿದಂತಾಯಿತು. ಅರೆರೆ..ಏನಿದು ಅಂತ ಮತ್ತೆ ನೋಡಿದರೆ ಕೈ ಮೇಲೆ ಏನು ಕಾಣಲಿಲ್ಲ.ಅತ್ತಿತ್ತ ಕಣ್ಣಾಡಿಸಿದೆ. ಅದೋ ದಿವಾನದ ಸ್ವಲ್ಪ ತೆರೆದ ಬಾಗಿಲಲ್ಲಿ ಎರಡು ಕೆಂಪು ನೆಟ್ಟಗಿನ ಕೂದಲು ಕಾಣಿಸಿದವು. ನಿದಾನವಾಗಿ ಅಲುಗಾಡುತ್ತಿದ್ದವು. ಒಹ್ ನನಗೆ ಗೊತ್ತಾಗಿ ಹೋಯಿತು. ಇದು ಖಂಡಿತ ಜಿರಲೆ ಇರಬೇಕು. ಅದರ ಮೀಸೆ ಹಿಡಿಯಲು ಕೈಹಾಕಿದೆ. ಪುಲಕ್ಕನೆ ದಿವಾನ ಒಳಗೋಡಿತು.

"ಹೇಮಾ ಈ ಓನರ್ ಸರಿಯಿಲ್ಲ ನೋಡು, ನಮಗಲ್ಲದೇ ಬೇರೆಯವರಿಗೂ ಇದೇ ಮನೆಯನ್ನು ಬಾಡಿಗೆ ಕೊಟ್ಟಿದ್ದಾರೆ ನೋಡು"

"ಯಾರ್ರೀ ಅದು....ಅವಳಿಗೆ ಗಾಬರಿಯೇ ಆಯಿತು.

"ಮತ್ಯಾರು ನಿನ್ನ ಅತ್ಮೀಯ ಗೆಳೆಯರಾದ ಜಿರಲೆಗಳಿಗೆ"

ಜಿರಲೆಗಳಿಗೆ ಅಂದ ತಕ್ಷಣ ಅವಳಿಗೆ ಸಿಟ್ಟು ಅದೆಲ್ಲಿತ್ತೋ ಬಾಗಿಲ ಹಿಂಬಾಗದಲ್ಲಿದ್ದ ಕಸಪರಕೆಯನ್ನು ತಂದೇ ಬಿಟ್ಟಳು. "ಬಾಜಿಕಟ್ಟಿ ನೋಡುಬಾರ ಮೀಸೆ ಮಾಮ" ಅಂತ ಹಂಗಿಸಿ ಮೀಸೆ ತೋರಿಸಿ ಒಳಗೋಡುತ್ತಿದ್ದ ಅದನ್ನು ಹೊರಗೆಳೆದು ಬಡಿದು ಸಾಯಿಸಿ" "ಸಾಯಿ ಕಳನನಮಗಂದೆ, ಹಳೆ ಮನೆಬಿಟ್ಟು ಹೊಸ ಮನೆಗೆ ಬಂದರೂ ಇಲ್ಲಿಯೂ ಕಾಟ ಕೊಡ್ತೀಯಾ....ನಿಮ್ಮನ್ನು ಹುಟ್ಟಲಿಲ್ಲ ಅನ್ನಿಸಿಬಿಡ್ತೀನಿ" ಅಂದು ಸಿಟ್ಟಿನಿಂದ ಮತ್ತೊಂದು ಏಟು ಹಾಕಿದಳು. ಬಾಗಿಲಿಂದ ಹೊರಗೆತ್ತಿಕೊಂಡು ಹೋಗಿ ಅಲ್ಲಿ ಸ್ವಲ್ಪ ಹೊತ್ತು ಬಿಸಿಲಲ್ಲಿ ಬಿಟ್ಟು ನೋಡಿದಳು. ಕೈಕಾಲು, ಮೀಸೆಗಳು ಸ್ವಲ್ಪವೇ ಅಲುಗಾಡಿದರೂ ಅದು ಇನ್ನೂ ಬದುಕಿದೆ ಅಂತಲೇ ಅರ್ಥೈಸಿಕೊಂಡು ಪರಕೆಯಲ್ಲಿ ಮತ್ತೊಂದೆರಡು ಏಟು ಹಾಕಿ ಸಾಯಿಸಲು ಸಿದ್ದಳಾಗಿದ್ದಳು. ಅದ್ರೆ ಅದು ಕೈಕಾಲು ಮೀಸೆ ಆಡಿಸಲಿಲ್ಲ. ಆದ್ರೂ ಎತ್ತಿ ಹೊರಗೆ ಬಿಸಾಡದೆ ಮತ್ತೊಂದು ಜೋರಾದ ಏಟು ಹಾಕಿಯೇ ಎತ್ತಿ ಕಸದ ಬುಟ್ಟಿಗೆ ಹಾಕಿದ್ದಳು. ಇದನ್ನೆಲ್ಲಾ ನೋಡುತ್ತಿದ್ದ ನನಗೆ ಅದು ಸತ್ತಿದ್ದರೂ ಇವಳ್ಯಾಕೆ ಮತ್ತೆ ಅದಕ್ಕೆ ಪರಕೆಯಲ್ಲಿ ಹೊಡೆದು ಎನರ್ಜಿ ವೇಷ್ಟ್ ಮಾಡಿಕೊಳ್ಳುತ್ತಿದ್ದಾಳೆ ಅನ್ನಿಸಿ ಕೇಳಿಯೇ ಬಿಟ್ಟೆ.

"ರೀ ನಿಮಗೆ ಗೊತ್ತಾಗಲ್ಲ ಸುಮ್ಮನಿರಿ ಇವು ಡೈನಸರ್‌ಗಳು ಹುಟ್ಟುವುದಕ್ಕಿಂತ ಮೊದಲೇ ಈ ಭೂಮಿಮೇಲೆ ಹುಟ್ಟಿದ್ದಂತೆ. ಆಂತ ದೊಡ್ಡ ಪ್ರಾಣಿಗಳು ಸತ್ತರೂ ಇವು ಸಾಯಲಿಲ್ಲವಂತೆ. ಭೂಕಂಪವಾದಾಗ ಎಲ್ಲಾ ಸತ್ತರೂ ಇವು ಸತ್ತಂತೆ ನಟಿಸಿ ಸುಮ್ಮನಾಗಿಬಿಟ್ಟವಂತೆ. ಅದಕ್ಕೆ ಈಗಲೂ ಹಾಗೆ ನಟಿಸಿ ನಾನು ಬಿಸಾಡಿದ ಮೇಲೆ ಬೇರೆ ಜಾಗದಲ್ಲಿ ಬದುಕಿಬಿಟ್ಟರೇ, ಅಷ್ಟೇ. ಒಂದು ಎರಡಾಗಿ ಎರಡು ನಾಲ್ಕಾಗಿ ಹೀಗೆ ಅವುಗಳ ಸಂತತಿ ಸಾವಿರಗಟ್ಟಲೇ ಆಗಿಬಿಟ್ಟರೆ ನಮ್ಮ ಗತಿ ಅದೋಗತಿ, ಇವೆಲ್ಲಾ ನಿಮಗೆ ಗೊತ್ತಾಗೊಲ್ಲ ಸುಮ್ಮನಿರಿ." ಅಂದಿದ್ದಳು.

ಆ ಮನೆ ಖಾಲಿ ಮಾಡುವಾಗ ಮನೆಯ ಆಷ್ಟು ಸಾಮಾನುಗಳನ್ನು ಕೊಡವಿ, ಪಾತ್ರೆ ಪಡಗಗಳನ್ನೆಲ್ಲಾ ಚೆನ್ನಾಗಿ ತೊಳೆದು, ಬಟ್ಟೆಬರೆಗಳನ್ನೆಲ್ಲಾ ಕೊಡವಿ ಗಂಟು ಮೂಟೆ ಕಟ್ಟಿ, ಬೀರು, ದಿವಾನ, ಮಂಚ, ಇತ್ಯಾದಿ ವಸ್ತುಗಳನ್ನು ಚೆನ್ನಾಗಿ ಕ್ಲೀನ್ ಮಾಡಿ ತೆಗೆದುಕೊಂಡು ಈ ಮನೆಗೆ ಬಂದಿದರೂ ಹೇಗೋ ಒಂದು ಜಿರಲೆ ತಪ್ಪಿಸಿಕೊಂಡು ದಿವಾನದೊಳಗೆ ಸೇರಿಕೊಂಡು ತನ್ನ ಸಂತಾನಾಭಿರುದ್ಧಿ ಬೆಳೆಸಲು ಇಷ್ಟಪಟ್ಟಿತ್ತೇನೋ. ಆದ್ರೆ ನನ್ನ ಶೀಮತಿಯ ಕೈಯಲ್ಲಿ ಸಿಕ್ಕಿ ಸತ್ತು ಹೋಗಿತ್ತು.

ಆದರೆ ನಮ್ಮ ಲೆಕ್ಕಚಾರ ತಪ್ಪಾಗಿತ್ತು. ಮೂರು ದಿನ ಕಳೆದ ನಂತರ ಮತ್ತೊಂದು ಕಾಣಿಸಿತು. ಆದ್ರೆ ಅದು ತುಂಬಾ ಚಾಲಾಕಿಯಾಗಿತ್ತು. ನಮ್ಮ ಕಣ್ಣಿಗೆ ಕಾಣುವಷ್ಟವಷ್ಟರಲ್ಲಿ ಮಂಚದ ಕೆಳಗೆ ಪುಣುಪುಣು ಓಡಿ ಕತ್ತಲಲ್ಲಿ ಮಾಯವಾಗಿಬಿಡುತ್ತಿತ್ತು. ಬಹುಶಃ ತನ್ನ ಗೆಳೆಯನ ಸಾವನ್ನು ಮರೆಯಲ್ಲಿ ನಿಂತು ನೋಡಿ ಕಣ್ಣೀರಿಟ್ಟಿತ್ತೇನೋ, ನನಗನ್ನಿಸುತ್ತೆ ಅವರಿಬ್ಬರೂ ಒಟ್ಟಿಗೆ ಸೇರಿ ತಾಲಿಬಾನ್ ಅಥವ ಎಲ್ಟಿಟಿಯಿ ಭಯೋತ್ಪಾದಕರಂತೆ ನಾವು ಸತ್ತರೂ ಚಿಂತೆಯಿಲ್ಲ ಆದ್ರೆ ಈ ಮನೆಯಲ್ಲಿ ನಮ್ಮ ಸಂತತಿಯನ್ನು ಸಾವಿರಗಟ್ಟಲೆ ಬೆಳೆಸಿ ಸಾಮ್ರಾಜ್ಯವನ್ನು ಸ್ಥಾಪಿಸಿ ನಂತರ ಸಾಯಬೇಕು. ಈ ಕೆಲಸದಲ್ಲಿ ಇಬ್ಬರಲ್ಲಿ ಯಾರಾದರೂ ಮೊದಲು ಸಿಕ್ಕಿಹಾಕಿಕೊಂಡು ಸತ್ತರೆ ಉಳಿದವ ಆ ಅಸೆಯನ್ನು ಪೂರೈಸಲೇಬೇಕು ಎನ್ನುವ ಆತ್ಮಾಹುತಿ ದಳದ ಹಾಗೆ ಈ ಜಿರಲೆಗಳಲ್ಲಿ ಒಪ್ಪಂದವಾಗಿರಬಹುದು. ಅದಕ್ಕಾಗಿ ಇವರ ಮನೆಯಲ್ಲಿ ನಾನು ಬದುಕಿ ಬಾಳಬೇಕಾದರೆ ಎಲ್ಲಾ ಪಾಕಡ ವಿದ್ಯೆಗಳಲ್ಲಿ ತಂತ್ರಗಳಲ್ಲಿ ಪಾರಂಗತನಾಗಿರಬೇಕು ಅಂತ ತೀರ್ಮಾನಿಸಿಬಿಟ್ಟಿತ್ತೇನೋ. ಕೊನೆಗೂ ನಮ್ಮ ಕೈಗೆ ಸಿಗಲೇ ಇಲ್ಲ. ನಂತರ ಹೊಸ ಮನೆಯಲ್ಲಿ ಯಾವ ಜಿರಲೆಗಳು ಕಾಣಲಿಲ್ಲವಾದ್ದರಿಂದ ನಮಗೂ ಅದರ ಯೋಚನೆ ಬರಲಿಲ್ಲ.

ಆರು ತಿಂಗಳು ಕಳೆಯಿತು. ಮಂಚದ ಮೇಲಿನ ಹಾಸಿಗೆಯನ್ನು ಕ್ಲೀನ್ ಮಾಡಬೇಕೆಂದು ಹಾಸಿಗೆಯನ್ನು ಮೇಲಿನ ಬಾಲ್ಕನಿಯಲ್ಲಿಹಾಕಿ ಅದರ ಕೆಳಗಿದ್ದ ಚಾಪೆಯನ್ನು ಎತ್ತಿ ನೋಡಿದರೆ...ಭಯೋತ್ಪಾದಕರಂತೆ ನೆಲದೊಳಗೆ ಸುರಕ್ಷಿತ ಬಂಕರುಗಳನ್ನು ಸ್ಥಾಪಿಸಿಕೊಂಡು ಯುದ್ದ ತಯಾರಿ ನಡೆಸುವಂತೆ ಇವು ಕೂಡ ಮಂಚದ ಪ್ಲೈವುಡ್‍ಗಳ ಸಣ್ಣ ಸಂದುಗಳಲ್ಲಿ ಅನೇಕ ಸಣ್ಣ ಸಣ್ಣ ಮರಿಗಳು, ಕೆಲವು ಮೊಟ್ಟೆಗಳು ನಾಲ್ಕೈದು ದೊಡ್ಡ ಜಿರಲೆಗಳು ನೆಮ್ಮದಿಯಾಗಿ ವಿಶ್ರಮಿಸುತ್ತಿವೆ.! ನೈರುತ್ಯ ದಿಕ್ಕಿನಲ್ಲಿ ನಾನು ತಲೆಹಾಕಿ ಮಲಗುವ ಮೂಲೆಯಲ್ಲೇ ಇವು ದೊಡ್ಡ ಸಂಸಾರ ಹೂಡಿವೆಯೆಂದರೇ ಬಹುಶಃ ವಾಸ್ತು ಜ್ಞಾನದ ಅರಿವಿರಬಹುದೇ! ಮೊದಲ ಪರಕೆ ಏಟು ಬಿತ್ತಲ್ಲ ಎರಡು ದೊಡ್ಡ ಜಿರಲೆಗಳು ಅಲ್ಲೇ ಸತ್ತು ಬಿದ್ದವು ಮತ್ತಷ್ಟು ಕೈಕಾಲು, ಮೀಸೆ, ರೆಕ್ಕೆ ಇತ್ಯಾದಿಗಳನ್ನು ಮುರಿದು ಅಂಗವಿಕಲವಾಗಿ ಸಂದುಗೊಂದುಗಳಲ್ಲಿ ಓಡಿಹೋದವು. ಮಂಚ ಜರುಗಿಸಿ ಮೂಲೆಗಳಲ್ಲಿ ಆಡಗಿಕೊಂಡಿದ್ದವನ್ನೆಲ್ಲಾ ಹೊರಗೆಳೆದು ಸಾಯಿಸಿದಾಗ ನನ್ನಾಕೆಗಂತೂ ಏನೋ ನಿಟ್ಟುಸಿರು. ಆದರೆ ಇಷ್ಟಕ್ಕೆ ಮುಗಿಯಲಿಲ್ಲ. ನಮ್ಮ ಬೆಡ್ ರೂಮ್ ಅವಕ್ಕೆ ಒಂದು ಬ್ರಾಂಚ್ ಅಷ್ಟೇ ಅವುಗಳ ಕೇಂದ್ರ ಕಛೇರಿ ಆಡುಗೆ ಮನೆಯೆನ್ನುವುದು ನಂತರ ಗೊತ್ತಾಯಿತು.

ಮುಂದುವರಿಯುತ್ತದೆ.....

ಸೂಚನೆ: ಆರೆಂಜ್ ಕೌಂಟಿ ರೆಸಾರ್ಟಿನವರು ಕೊಟ್ಟಿರುವ ಫೋಟೋಗ್ರಫಿ ಅಸೈನ್‍ಮೆಂಟಿಗಾಗಿ ಮೂರು ದಿನದ ಮಟ್ಟಿಗೆ ಮಡಿಕೇರಿಗೆ ಹೋಗುತ್ತಿದ್ದೇನೆ. ಅಲ್ಲಿಯವರೆಗೆ ಬ್ಲಾಗ್, ಮೇಲ್ ಎಲ್ಲಾ ರಜಾ. ವಾಪಸ್ ಬಂದಮೇಲೆ ಫೋಟೋಗಳೊಂದಿಗೆ ಬೇಟಿಯಾಗೋಣ...

ಲೇಖನ :ಶಿವು.ಕೆ

68 comments:

jaya said...

jiralegaLu nimmannu kaaDuttave endu tiLida mEle swalpa samaadhaanavaaitu. (hubbErisabEDi). Hosa manege banda 3 varsha nemmadiyaagidda nanage kaLeda varsha, nereyavaru mane khaali maaDikonDu hOdaaga, avara maneyalli beeDu biTTidda ee nenTaru (jiralegaLu)namma maneyatta tamma prayaaNa beLesiddavu. nanago jirale khandare praaNabhaya, avakke namma maneyalli ODDuvudu raajaarOsha. konege, "infectiside " spray maaDisabEkaaitu. 1 varsha nemmadiyaagidde. monne 1 tanna muKha tOrisi koleyaagide. kaadu nOdabeku, matte yudda saarabEkaaguvudEno endu. haage nimagyarigaadaru gottiddare tiLisi "halligaLinda" vimOchane hEgendu.

shivu.k said...

ಜಯಲಕ್ಷ್ಮಿ ಮೇಡಮ್,

ಮೊದಲು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನಮ್ಮ ಮನೆಯ ಜಿರಲೆ ಕತೆಯನ್ನು ಓದಿ ನಿಮ್ಮ ಮನೆಯ ಜಿರಲೆ ಕತೆಯನ್ನು ಹಂಚಿಕೊಂಡಿದ್ದೀರಿ...ನೀವು ಜಿರಲೆ ಕಂಡರೆ ಪ್ರಾಣಭಯವೆಂದಿದ್ದೀರಿ..ಮೊದಲು ನನ್ನ ಶ್ರೀಮತಿಗೂ ಹೀಗೆ ಆಗುತ್ತಿತ್ತು. ಕೊನೆಗೆ ಅವುಗಳ ಕಾಟ ತಾಳಲಾರದೆ ತಿರುಗಿ ಬಿದ್ದು ಯುದ್ಧ ಸಾರಿಯೇ ಬಿಟ್ಟಳು. ಈ ಲೇಖನ ಕೇವಲ ಯುದ್ಧ ಸಾರುವಷ್ಟರಲ್ಲಿ ವಿರಾಮ ತೆಗೆದುಕೊಂಡಿದೆ.

ಇದರ ಮುಂದಿನ ಎರಡನೆ ಭಾಗದಲ್ಲಿ ನಿಜವಾದ ಯುದ್ಧ ಹೇಗೆ ನಡೆಯುತ್ತದೆಯೆನ್ನುವುದನ್ನು ನೀವು ತಿಳಿಯಬಹುದು. ಎಲ್ಲಾ ತರದ ಸೆಂಟಿಮೆಂಟುಗಳು, ಹಾರಾಟ, ಕೂಗಾಟ, ಕ್ಲೈಮ್ಯಾಕ್ಸ್...ಎಲ್ಲಾ ಮುಂದೆ ಬರುತ್ತದೆ...ಅದನ್ನು ಓದಲು ಮರೆಯದಿರಿ....

ಧನ್ಯವಾದಗಳು.

ಪಾಚು-ಪ್ರಪಂಚ said...

ಶಿವೂ ಅವರೇ,

ನಿಜಕ್ಕೂ ಜಿರಲೆ ನಿರ್ಮೂಲನ ಒಂದು ದೊಡ್ಡ ಸವಾಲೇ ಸರಿ, ನಾನು ಕೂಡ ಹಳೆಯ ಮನೆಯಲ್ಲಿದ್ದಾಗ ಸ್ಪ್ರೇ ಹೊಡೆದು ಎಲ್ಲ ಜಿರಲೆಯನ್ನು ನಿರ್ಮೂಲನ ಮಾಡಿದೆ ಎಂದು ಮೀಸೆ ತಿರುವಿದ್ದೆ..!! ಅದೇ ದಿನ ರಾತ್ರಿ ದೊಡ್ಡ ಮೀಸೆಯ ೨ ಜಿರಲೆಗಳು ಟೀವಿ ಸಂದಿನಿಂದ ಹೊರಕ್ಕೆ ಬಂದು ಮೀಸೆ ಕುಣಿಸಿ ನನ್ನನ್ನು ಹಂಗಿಸಿದವು...!!

ಮುಂದುವರಿಯಲಿ ನಿಮ್ಮ ಜಿರಲೆ ಪ್ರಸಂಗ.

Unknown said...

ಶಿವು ಸರ್,
ನಿಮ್ಮ ಜಿರಳೆ ಸ೦ಸಾರದ ಕಥೆ ಒಳ್ಳೆಯದಿದೆ . ಮು೦ದಿನ ಭಾಗದಲ್ಲಿ ಯುದ್ದವಿದೆ ಯಲ್ಲವೇ ? ಕಾತುರದಿ೦ದ ಕಾಯುತ್ತಿದ್ದೇನೆ .
ನಿಮ್ಮ ಶ್ರೀಮತಿಯವರ ವರ್ಲ್ಡ್ ವಾರ್ ಭಾಗ -೩ ??? ಹ ಹ ಹ

ಸವಿಗನಸು said...

ಶಿವು,
ಕೆಲವು ಸಾರಿ ಯಾರಿಗೆ ಹೆದರದ್ದಿದರೂ ಜಿರಲೆಗಳಿಗೆ ಹೆದರಬೇಕಾಗುತ್ತೆ......
ಕಾಕ್roach ಗಳು ರೊಚ್ಚಿಗೆದ್ದರೆ ಬಲು ಕಷ್ಟ...
ಮುಂದಿನ ಭಾಗ....
ಹಾಕಿ ಬೇಗ...

Amit Hegde said...

ನಮ್ಮನೇಲೂ ಇವೆ ಸಾರ್ ಆದ್ರೆ ಅವೆಲ್ಲಾ ರೆಂಟ್ ಕೊಟ್ಟು ಇರೋವ್ರು ಅನ್ನೋದು ಗೊತ್ತಿರ್ಲಿಲ್ಲ...!! ಅದೇ ನೋಡ್ತೀನಿ ಎಷ್ಟು ಸ್ಪ್ರೇ ಮಾಡಿದ್ರು ಮರುದಿನ ಮತ್ತೆ ಹಾಜರ್...

http://eyeclickedit.blogspot.com/

Ittigecement said...

ಶಿವು ಸರ್...

ಜಿರಳೆಯ..
ರಗಳೆ...
ಪರಿತಾಪ ಪಡಲಾರದ ಕಷ್ಟ ಅನುಭವಿಸಿ..

ಈಗ ನೆಮ್ಮದಿಯಿಂದ ಇದ್ದೇವೆ...

ಬರೆಯುತ್ತೀರಲ್ಲ... ಜಿರಳೆ ಯುದ್ಧ..!!

ನಿಮ್ಮ ಯುದ್ಧದಲ್ಲಿ ನಾವೂ ಹಿಂದಿನಿಂದ ಬೆಂಬಲ ಸೂಚಿಸಿದ್ದೇವು..
ಸಕ್ರೀಯವಾಗಿ ನಮ್ಮ ಸಲಹೆಗಾರರನ್ನೂ..
ಸೈನಿಕರನ್ನೂ ಕಳುಹಿಸಿದ್ದೇವು..
ಅದೆಲ್ಲ ಇದೆ ...ತಾನೆ..?

ಓದಲಿಕ್ಕೆ ಸೊಗಸಾಗಿದೆ...

shivu.k said...

ಪ್ರಶಾಂತ್ ಭಟ್,

ಜಿರಲೆ ಪ್ರಸಂಗಗಳು ನಿಮಗಾಗಿದ್ದು ನಮಗೂ ಆಗಿದೆ. ನನಗೆ ಜಿರಲೆ ಬಗ್ಗೆ ಅಷ್ಟೇನು ದ್ವೇಷವಿಲ್ಲ. ಆದ್ರೆ ನನ್ನ ಶ್ರಿಮತಿಗಂತೂ ಅದೇನು ಕೋಪವೋ ಅದರ ಮೀಸೆಯನ್ನು ಕಂಡರೆ ಸಾಕು ಸಾಯಿಸುವವರೆಗೂ ಸಮಾಧಾನ ಮಾಡಿಕೊಳ್ಳುತ್ತಿರಲಿಲ್ಲ.
ಜಿರಲೆ ಮೀಸೆ, ಆವುಗಳ ನಡುವಳಿಕೆ ಮುಂದೆ ನಮ್ಮದೇನಿದೆ ಸಾರ್...ಅದಕ್ಕೆ ನಾನು ಪ್ರೆಂಡ್ ಆಗಿಬಿಟ್ಟಿದ್ದೆ. [ಮುಂದಿನ ಭಾಗದಲ್ಲಿ ಓದಿ]I mean ಒಳ ಒಪ್ಪಂದವಾಗಿಬಿಟ್ಟಿತ್ತು.
ಜಿರಲೆಯ ಎರಡನೆ ಭಾಗ ಹಾಕುವವರೆಗೂ ಜಿರಲೆ ಜೊತೆ ಮೀಸೆ ತಿರುವುತ್ತಿರಿ....
ಧನ್ಯವಾದಗಳು.

shivu.k said...

ರೂಪ ಮೇಡಮ್,

ಜಿರಲೆ ಪ್ರಸಂಗವನ್ನು ಓದಿದ್ದೀರಿ. ಇಷ್ಟಪಟ್ಟಿರಾ....ಓಕೆ ಖಂಡಿತ ಎರಡನೆ ಭಾಗದಲ್ಲಿ ನೀವೇಳಿದಂತ ದೊಡ್ಡ ಯುದ್ಧವೇ ಸಾಗುತ್ತದೆ...ಕೊನೆಗೆ ಗೆದ್ದವರು ಯಾರು...ಅದು ಸಸ್ಪೆನ್ಸ್...

ಕಾಯುತ್ತಿರಿ....

ಧನ್ಯವಾದಗಳು.

shivu.k said...

ಮಹೇಶ್ ಸರ್,[ಸವಿಕನಸು]

ಜಿರಲೆಗಳನ್ನು ಮನೆಯೊಳಗೆ ಬಿಟ್ಟುಕೊಳ್ಳಬಾರದು. ಬಿಟ್ಟುಕೊಂಡಮೇಲೆ ಹೊಂದಿಕೊಂಡುಬಿಡಬೇಕು....ಇಲ್ಲದಿದ್ದಲ್ಲಿ ಅವು ರೊಚ್ಚಿಗೆದ್ದುಬಿಟ್ಟರೆ ಏನಾಗಬಹುದು....

ಮುಂದಿನ ಭಾಗದಲ್ಲಿ....

ಅಲ್ಲಿಯವರೆಗೆ ಜಿರಲೆ ಜೊತೆ ಸವಿಕನಸು ಕಾಣುತ್ತಿರಿ...

ಧನ್ಯವಾದಗಳು.

shivu.k said...

ಅಮಿತ್ ಹೆಗಡೆ,

ಜಿರಲೆಗಳು ಮತ್ತು ಅವುಗಳ ಸಂತತಿಗಳು ಒಂದು ರೀತಿ ರೌಡಿಗಳಿದ್ದಂತೆ. ಯಾವಾಗ ಬೇಕಾದ್ರು ಬರುತ್ತವೆ..ಹೋಗುತ್ತವೆ...ರೆಂಟು...ಲೀಸು...ಎಲ್ಲಾ ಕೇಳುವಂತಿಲ್ಲ...ಕೇಳಿದರೆ ಅಷ್ಟೆ....
ಗೆರಿಲ್ಲಾ ವಾರ್ ಶುರುಮಾಡಿಬಿಡುತ್ತವೆ..

ಅವುಗಳ ಗೆರಿಲ್ಲಾ ವಾರ್ ಇತ್ಯಾದಿ ಬಗ್ಗೆ ಮುಂದಿನ ಭಾಗದಲ್ಲಿ ಓದಲು ಬನ್ನಿ....

ಧನ್ಯವಾದಗಳು.

shivu.k said...

ಪ್ರಕಾಶ್ ಸರ್,

ಜಿರಲೆಯಿಂದ ಮುಕ್ತಿಹೊಂದುವುದೆಂದರೆ...ಅದೊಂಥರ ಹೇಳಲು ಬಾರದ ಆನುಭೂತಿ....

ನೀವು ನೆಮ್ಮದಿಯಾಗಿದ್ದೀರಿ...

ನಮ್ಮನೆಯಲ್ಲಿನ ಹೋರಾಟವನ್ನು ನೀವು ನೋಡಿದ್ದೀರಿ...ನಮ್ಮ ಕಷ್ಟ ನೋಡಲಾರದೆ....ನಿಮ್ಮ ಬಾಹ್ಯ ಬೆಂಬಲ...
ಸೈನಿಕರು....ಯುದ್ದವಿಮಾನಗಳು, ಬಾಂಬುಗಳ ರಹಸ್ಯ ಸರಬರಾಜು....ಕೊನೆಗೆ ಯಾರು ಗೆದ್ದರು ಇತ್ಯಾದಿಗಳ ಬಗ್ಗೆ ಮುಂದಿನ ಲೇಖನದಲ್ಲಿ ಬರುತ್ತಿದೆ....ಅಲ್ಲಿಯವರೆಗೆ ಹೀಗೆ ನೆಮ್ಮದಿಯಾಗಿರಿ....

ಧನ್ಯವಾದಗಳು.

ಸುಮ said...

ಹ್ಹ.. ಹ್ಹ..ಹ್ಹ ..ತುಂಬ ಚೆನ್ನಾಗಿದೆ ಶಿವು ಸರ‍್.ಬಹುಶಃ ಇದು ಪ್ರತಿಯೊಂದು ಮನೆಯ ಕಥೆ.ಜಿರಲೆಗಳು ಎಂತಹ ಪರಿಸರದಲ್ಲು ಜೀವಿಸಬಲ್ಲ ಕಷ್ಟಸಹಿಷ್ಣುಗಳು. ಮುಂದಿನ ಭಾಗಕ್ಕಾಗಿ ಎದುರುನೋಡುತ್ತಿದ್ದೇನೆ.

ರಾಜೀವ said...

ಹೌದು ಶಿವು ಅವರೆ. ನನಗಂತೂ ಸಾಕುಸಾಕಾಗ್ಹೋಗಿದೆ. ಈ ಜಿರಳೆಗಳಿಗೆ ಪರಿಹಾರವೇ ಇಲ್ಲವೆನುಸುತ್ತದೆ. ಎಷ್ಟೆಲ್ಲಾ ಔಷಧಿ ಹಾಕಿದರೂ, ದಿನದಿನಕ್ಕೂ ಇದು ಹೆಚ್ಚಾಗುತ್ತಿದೆ. ಇದರ ಜೊತೆಗೆ ಸಾಗಿಸುತ್ತಿದ್ದೇನೆ ದಿನಾಗ್ಲು.

ಮುಂದಿನ ಲೇಖನ ಬೇಗ ಬರಲಿ.

shridhar said...

ಶಿವು,
ಈ ಜಿರಲೆ ಮಾತ್ರ ಎಲ್ಲರಿಗು ಉಪದ್ರವ ಕೊಟ್ಟು ತಾನು ಮಾತ್ರ ಮೀಸೆ ತೊರಿಸಿ ಒಡುತ್ತದೆ ನೋಡಿ , ಅದಕ್ಕೆ ಹೆಂಗಸರಿಗೆ ಅದನ್ನ
ಕಂಡರೆ ಅಷ್ಟೊಂದು ಸಿಟ್ಟು , ನಮ್ಮ ಹಳೇ ರೂಮ ಬಿಟ್ಟ ಮೇಲೆ ಒನರ್ ಹೆಳ್ತಿದ್ರು , ಎನು ಬ್ಯಾಚುಲರ್ಸಪ್ಪ ಮನೆ ಎಲ್ಲ ಗಲೀಜು ಮಾಡಿದಾರೆ, ತಾವು ಇರೊದು ಮಾತ್ರವಲ್ಲ ಜಿರಲೆ, ತಿಗಣೆಗಳಿಗೂ ಜಾಗ ಕೊಟ್ಟಿದಾರೆ ಅಂತ. ಜಿರಲೆ ಪ್ರಸಂಗ ಮಾತ್ರ ಮುಗ್ಯೊದೆ ಇಲ್ಲ. ಉತ್ತಮ ಹಾಸ್ಯ ಬರಿತ ಲೇಖನ.

ಶ್ರೀಧರ ಭಟ್ಟ

AntharangadaMaathugalu said...

ಶಿವು ಸಾರ್ ಎಲ್ಲರ ಮನೆಯ ಕಥೆಯೂ ಅದೇ.. ಮನೆಯ ಹೆಣ್ಣು ಮಕ್ಕಳಿಗೆ ೨೪ ಘಂಟೆ ಯುದ್ಧ ಮಾಡುವುದೇ ಕಸುಬಾಗಿಬಿಟ್ಟಿದೆ. ನನಗಂತೂ ಅವನ್ನು ಕಂಡರೇ ಪ್ರಾಣ ಭಯ. ಅಲ್ಲ ಜಿರಲೆಗಳನ್ನೇ ಕಥಾ ನಾಯಕ ನಾಯಕಿಯರನ್ನಾಗಿ ಎಷ್ಟು ಕುತೂಹಲಕರವಾಗಿ ಬರೆದಿದ್ದೀರಿ. ಮುಂದಿನ ಭಾಗ ಬೇಗ ಹಾಕಿ, ತುಂಬಾ ಸಮಯ ಬಿಟ್ಟರೆ, ಶತೃಗಳು ಪರಾರಿಯಾಗಿಬಿಟ್ಟಾರು !!!!!!!! :-)

ಶ್ಯಾಮಲ

ಧರಿತ್ರಿ said...

ಶಿವಣ್ಣ..ನಿಮಗೆ ನೆನಪುಂಟಾ ನಾನು ಒಂದು ಬಾರಿ ಜಿರಲೆ ಸಮರ ನಡೆಸಿದ್ದು..ಆದರೆ ಎಷ್ಟು ಯುದ್ಧ ಮಾಡಿದರೂ ಸಂಪೂರ್ಣ ನಿರ್ಮೂಲನೆ ಭಾಳ ಕಷ್ಟಪ್ಪ. ಈವಾಗಲೇ ದೀಪ ಆರಿದ ಮೇಲೆ ಅಡುಗೆ ಮನೇಲಿ ಕಾರು ಬಾರು ನಡೆಸುತ್ತವೆ. ನಿಮ್ಮ ಬರಹ ಚೆನ್ನಾಗಿ ಮೂಡಿಬಂದಿದೆ.
-ಧರಿತ್ರಿ

Sushma Sindhu said...

ಜಿರಲೆ ರಗಳೆ ತಮಾಷೆಯಾಗಿದೆ. ಮು೦ದಿನ ಭಾಗ ತಪ್ಪದೇ ನೋಡುವೆ :)

ಶಿವಪ್ರಕಾಶ್ said...

ಶಿವು ಅವರೇ,
ಜಿರಳೆ ಪುರಾಣ ಚನ್ನಾಗಿದೆ ರೀ...
ಜಿರಲೆಗಳ ಇತಿಹಾಸದ ಬಗ್ಗೆ ನಿಮ್ಮವರು ಕೊಟ್ಟ ವಿವರಣೆ ತುಂಬಾ ಚನ್ನಾಗಿದೆ. ನಗು ಬಂತು.

shivu.k said...

ಸುಮ ಮೇಡಮ್,

ನೀವೊಬ್ಬರೇ ನನ್ನಂತೆ ಜಿರಲೆಗಳ ಪರವಾಗಿ ಹೇಳಿದವರು. ನಿಜಕ್ಕೂ ಅವು ಕಷ್ಟಸಹಿಷ್ಣುಗಳೇ ಸರಿ. ಅವುಗಳಿಗೂ ಒಂದು ಜೀವ, ಆತ್ಮ, ಮನಸ್ಸು ಇರುತ್ತವಲ್ಲವೇ...

ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

ಮುಂದುವರಿದ ಭಾಗಕ್ಕೆ ಬನ್ನಿ....

shivu.k said...

ರಾಜೀವ್‍ರವರೆ,

ಜಿರಲೆಗಳಿಂದ ನಿಮಗೆ ಸಾಕು ಬೇಕಾಗಿಹೋಗಿದೆಯಲ್ಲವೇ..ಬೇಸರಿಸಬೇಡಿ...ಪ್ರತಿಯೊಂದಕ್ಕೂ ಪರಿಹಾರವಿದೆ..ತಾಳ್ಮೆಯಿಂದ ಕಾಯುತ್ತಿರಿ...

ಮುಂದಿನ ಲೇಖನಕ್ಕೆ ಬರುತ್ತಿರಲ್ಲ...

ಧನ್ಯವಾದಗಳು.

shivu.k said...

ಶ್ರೀಧರ್ ಭಟ್,

ನಿಮ್ಮ ಮಾತು ನೂರಕ್ಕೆ ನೂರು ನಿಜ ಕಣ್ರಿ. ಮೀಸೆಹೊತ್ತ ಗಂಡಸರನ್ನು ಸಹಿಸಿಕೊಂಡು ಸಾಕಾದ ಹೆಂಗಸರಿಗೆ ಇನ್ನೂ ಈ ಜಿರಲೆಗಳ ಮೀಸೆಗಳು ಆಣಕಿಸಿದರೆ ಹೇಗಾಗಬೇಡ...ಹೇಳಿ...

ಅದಕ್ಕೆ ಬ್ಯಾಚುಲರ್ಸ್ ರೂಮಿನಲ್ಲಿ ಅವು ಅರಾಮವಾಗಿ ಓಡಾಡುತ್ತಿರುತ್ತವೆ. ಅಲ್ವಾ...

ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

ಮುಂದಿನ ಭಾಗಕ್ಕೆ ಖಂಡಿತ ಬನ್ನಿ...

shivu.k said...

ಶ್ಯಾಮಲ ಮೇಡಮ್,

ಜಿರಲೆಗಳ ಜೊತೆ ೨೪ ನಾಲ್ಕು ಗಂಟೆ ಯುದ್ದ ಮಾಡಿದರೂ ಮುಗಿಯದು. ಹೌದು...ನಿಮ್ಮ ಅನುಭವ ಚೆನ್ನಾಗಿ ಹಂಚಿಕೊಂಡಿದ್ದೀರಿ. ಜಿರಲೆಗಳು ಈ ಲೇಖನಕ್ಕೆ ಖಂಡಿತ ನಾಯಕ-ನಾಯಕಿಯರೆ..ಮುಂದಿನ ಭಾಗದಲ್ಲಿ ಅವುಗಳ ಹೀರೊಹಿಸಂ ಏನು ಅಂತ ಗೊತ್ತಾಗುತ್ತೆ. ಆಗ ಖಂಡಿತ ಬನ್ನಿ...

ಧನ್ಯವಾದಗಳು.

shivu.k said...

ಧರಿತ್ರಿ,

ನಿನ್ನ ಲೇಖನ ಓದಿದ್ದು ನೆನಪಿದೆ. ನಿನ್ನ ಕಷ್ಟ ನನಗೆ ಅರ್ಥವಾಗುತ್ತೆ....ಅವನ್ನು ಎದುರಿಸಿದಷ್ಟು ತಿರುಗಿಬೀಳುತ್ತವೆ. ಸುಮ್ಮನೆ ನನ್ನಂತೆ ಗೆಳೆತನ ಬೆಳೆಸೋದು ತಾನೆ..ಅದು ಹೇಗೆ ಅಂತ ಮುಂದಿನ ಸಂಚಿಕೆಯಲ್ಲಿ ಕೊಡುತ್ತೇನೆ...ನಿನ್ನ ಸಮಸ್ಯೆಗೆ ಪರಿಹಾರ ಸಿಗಬಹುದು..
ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

shivu.k said...

ಸುಷ್ಮ ಸಿಂಧು ಮೇಡಮ್,

ತುಂಬಾ ದಿನಗಳ ನಂತರ ಬ್ಲಾಗಿಗೆ ಬಂದಿದ್ದೀರಿ...ಜಿರಲೆ ಕತೆಯನ್ನು ಮೆಚ್ಚಿದ್ದೀರಿ..ಮುಂದಿನ ಲೇಖನಕ್ಕೆ ಖಂಡಿತ ಬನ್ನಿ...

ಧನ್ಯವಾದಗಳು.

shivu.k said...

ಶಿವಪ್ರಕಾಶ್,

ಜಿರಲೆ ಪುರಾಣ ಇಷ್ಟವಾಯಿತಾ...ನನ್ನ ಶ್ರೀಮತಿಯ ಮಾತುಗಳು ಇಷ್ಟವಾಯಿತಾ...ಅದೆಲ್ಲಾ ಅನುಭವದ ಮಾತುಗಳು ಕಣ್ರಿ....ಮುಂದಿನ ಬಾರಿ ಇನ್ನಷ್ಟು ಇಂಥ ಮಾತುಗಳಿಗಾಗಿ ತಪ್ಪದೇ ಬನ್ನಿ...

ಧನ್ಯವಾದಗಳು.

Nivedita Thadani said...

ಶಿವೂ ಅವರೇ
ಪ್ರತಿ ದಿನ ತುಂಬಾ ಜನ ಎದುರಿಸೋ ಸಮಸ್ಯೆಯನ್ನ ನಿಜವಾಗಲು ತುಂಬಾ ಹಾಸ್ಯಮಯವಾಗಿ ಬರೆದಿದ್ದೀರಾ. ಮುಂದಿನ ಭಾಗಕ್ಕಾಗಿ ಕಾಯುತ್ತೇವೆ.

ಮನಸು said...

ಜಿರಲೆ ರಗಳೆ ತಮಾಷೆಯಾಗಿದೆ, ಮಹಾಯುದ್ದ ಸಾರಬೇಕಿದೆಯೇ ಹಹ ಹಹ ಮುಂಬರುವ ಭಾಗಕ್ಕೆ ಕಾಯುತ್ತಲಿರುತ್ತೇವೆ..

SSK said...

ಶಿವೂ ಅವರೇ,
ನೀವು ನಂಬಿದರೆ ನಂಬಿ, ಇಲ್ಲದಿದ್ದರೆ ಇಲ್ಲ. ಈವತ್ತೇ ಈ ಲೇಖನ ಓದುವುದಕ್ಕೂ ಮುಂಚೆ, ನಾನು ನೀರಿನ ಮನೆಯಲ್ಲಿ ಎರಡು ಜಿರಲೆಗಳ ಜೀವ ಹಾರಿಸಿದ್ದೆ. ನಾನೂ ಸಹ ನಿಮ್ಮ ಶ್ರೀಮತಿಯವರ ಹಾಗೇನೇ, ಜಿರಳೆ ಕಾಣಿಸಿದರೆ ಮುಗಿಯಿತು ಅದರ ಕಥೆ, ಛಲ ಬಿಡದ ತ್ರಿವಿಕ್ರಮನಂತೆ ಅದರ ಬೆನ್ನಟ್ಟಿ ಅದನ್ನು ಸಾಯಿಸುವವರೆಗೂ ನೆಮ್ಮದಿಯಿರುವುದಿಲ್ಲ. ಎಂತಹ ಕಾಕತಾಳಿಯ ಅಲ್ಲವಾ?
ನನ್ನ ಸ್ನೇಹಿತೆಯೊಬ್ಬರು, ಅವರ ಮನೆಯಲ್ಲಿ ಅಕಸ್ಮಾತ್ ಜಿರಳೆ ಕಾಣಿಸಿದರೆ ಸಾಕು, ಅದು ಮನೆಯ ಯಾವುದೇ ಮೂಲೆಯಿರಲಿ, ಸ್ವತಹ ಅವರೇ ಮನೆಯಿಂದ ಹೊರಗೆ ಓಡಿ ಬಂದುಬಿಡುತ್ತಾರೆ ಅಷ್ಟು ಭಯ ಅವರಿಗೆ ಜಿರಳೆಯನ್ನು ಕಂಡರೆ.
ಅವರು ಇರುವುದು ಅಪಾರ್ಟ್ಮೆಂಟ್ ನಲ್ಲಿ ಆದರಿಂದ, ವಾಚ್ಮನ್ ನನ್ನು ಕರೆಸಿ, ಆ ಜಿರಳೆಗೆ ಒಂದು ಗತಿ ಕಾಣಿಸಿದ ಮೇಲೇನೆ ಅವರು ಮನೆಯೊಳಗೆ ಹೋಗೋದಂತೆ, ಹ ಹ್ಹ ಹ್ಹಾ ಹ್ಹಾ.....!
ಹೇಳುತ್ತಾ ಹೋದರೆ ಜಿರಲೆಗಳ ಕಥೆ ಮುಗಿಯುವುದೇ ಇಲ್ಲ, ಅದರ ಸಂತತಿಯಷ್ಟೇ ಧೀರ್ಘವಾದುದು ಅವುಗಳ ಕಥೆ, ವ್ಯಥೆ....

ಹರೀಶ ಮಾಂಬಾಡಿ said...

waiting for Jirale photos

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಜಿರಳೆ ಪ್ರಸಂಗ ಸಕತ್ತಾಗಿ ಬರೆದಿದ್ದೀರ.
ಎಲ್ಲರಿಗೂ ತಮ್ಮ ಮನೆಮನೆ ಕಥೆ (ಜಿರಲೆ) ನೆನಪಾಗುವಂತೆ.
ಹಾಗೇ ಒಮ್ಮೆ ಕೂದಲು ನಿಮಿರುವಂತೆ!
ವಾಸ್ತು ಜ್ಞಾನ ಇರುವ ಜಿರಲೆಗಳು, ಕುವೆಂಪು ಕವನ ಅರಿತ ಜಿರಲೆಗಳು...
ನಿಮ್ಮ ಕಲ್ಪನಾವಿಲಾಸ ಚೆನ್ನಾಗಿದೆ.
ಮುಂದಿನ ಮಹಾಯುದ್ಧಕ್ಕೆ ಕಾಯುತ್ತಿರುವೆ...

Unknown said...

ಅದೇನ್ರಿ ಜಿರಲೆ ಅಂದ್ರ ನಾವು ಜೊಂಡಿಗ್ಯ ಅಂತೇವಿ ಈ ಬೆಂಗಳೂರಾಗ ಅದರ ಕಾಟ ಭಾಳ ಇಲ್ಲಿ ಮಂದಿಕಡೆ ರೊಕ್ಕ ಭಾಳಅವ ಕಾಣಸ್ತದ ಹಂಗ ನನ್ನ ಅನುಭವ ಹೇಳಬೇಕಂದ್ರ ನಂಗ ಆ ಪ್ರಾಣಿ ಕಂಡ್ರ ಆಗೂದಿಲ್ಲ ದಿನಾ ರಾತ್ರಿ ಮಲಗುವಾಗ
ಬಾಗಿಲ ಭದ್ರ ಮಾಡಿ ಸಂದಿಯಲ್ಲಾ ಟಾವೆಲ್ ನಿಂದ ಪ್ಯಾಕ್ ಮಾಡಿ ಮಲ್ಕೋತಿನಿ ಒಂದು ಅಡ್ಡಾಡಿದ್ರೂ ಇಡೀ ರಾತ್ರಿ ಜಾಗರಣಿ
ನನಗ....!

Unknown said...

ಶಿವು ನಿನ್ನೇನೆ ನಿಮ್ಮ ಜಿರಲೆ ಕಥಾ ಪ್ರಸಂಗವನ್ನು ಓದಿ ಆಸ್ವಾದಿಸಿದ್ದೆನಾದರೂ ಪ್ರತಿಕ್ರಿಯಸಲಾಗಿರಲಿಲ್ಲ. ಉತ್ತಮ ಲಲಿತಪ್ರಬಂದೊಕ್ಕೊಂದು ಉದಾಹರಣೆ ನಿಮ್ಮ ಈ ಪ್ರಬಂಧ. ಮುಂದುವರೆಯುತ್ತದೆ ಎಂದು ಬೇರೆ ಹಾಕ್ಕಿದ್ದೀರಿ? ನೋಡೋಣ ಎಲ್ಲಿಗೆ ಮುಟ್ಟುತ್ತದೆ! ಈ ಕಥಾಪ್ರಸಂಗ!

shivu.k said...

ನಿವೇದಿತ ಮೇಡಮ್,

ನನ್ನ ಬ್ಲಾಗಿಗೆ ಸ್ವಾಗತ. ನೀವು ಹುಬ್ಬಳಿಯವರೆಂದು ಮತ್ತು ಚೆನ್ನಾಗಿ ಆಡುಗೆ ಮಾಡುತ್ತಿರೆಂದು ನಿಮ್ಮ ಬ್ಲಾಗಿಗೆ ಹೋದಾಗ ತಿಳಿಯಿತು. ನಿಮ್ಮ ಬ್ಲಾಗಿನ ತಿಂಡಿಗಳು ಹೊಸದೆನಿಸುತ್ತವೆ...ಬ್ಲಾಗಿನ್ನು ಲಿಂಕಿಸಿಕೊಳ್ಳುತ್ತೇನೆ..

ಜಿರಲೆಯ ಹಾಸ್ಯಬರಿತ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಮುಂದಿನದಕ್ಕೆ ಕಾಯುತ್ತಿರಿ..

ಧನ್ಯವಾದಗಳು.

shivu.k said...

ಮನಸು ಮೇಡಮ್,

ಜಿರಲೆಗಳ ಮೊದಲ ಲೇಖನ ಮಹಾಯುದ್ದಕ್ಕೆ ಉನ್ನತ ಮಟ್ಟದಲ್ಲಿ ಮಾತುಕತೆ...ಮುಂದೆ ಇದೆ ಮಾರಿಹಬ್ಬ ಜಿರಲೆಗಳಿಗೋ, ನಮಗೋ ಅನ್ನುವುದಕ್ಕಾಗಿ ಮುಂದಿನ ಭಾಗಕ್ಕಾಗಿ ಕಾಯಬೇಕು...

ಧನ್ಯವಾದಗಳು.

shivu.k said...

SSK ಮೇಡಮ್,

ನಿಮ್ಮ ಮಾತನ್ನು ಖಂಡಿತ ನಂಬುತ್ತೇನೆ. ಜಿರಲೆ ವಿಚಾರದಲ್ಲಿ ಯಾರು ಸುಳ್ಳು ಹೇಳುವುದಿಲ್ಲ.[ತಮಾಷೆಗೆ]. ಇವತ್ತೆ ಎರಡು ಕೊಲೆ ಮಾಡಿದ್ದೀರಿ. ಇದು ನಿಜಕ್ಕೂ ಕಾಕತಾಳಿಯ...

ನಿಮ್ಮ ಗೆಳೆಯರ ಮನೆಗೆ ಜಿರಲೆ ಸಾಯಿಸಲು ಒಬ್ಬ ಗಾರ್ಡ್ ವಿಥ್ ಗನ್ ನೇಮಿಸಿಕೊಳ್ಳಲು ಹೇಳಿಬಿಡಿ. ಮುಂದೆ ಭಯಪಡುವ ಆಗತ್ಯವಿಲ್ಲ..

ಜಿರಲೆ ಕತೆ ಮುಗಿಯುವುದೇ ಇಲ್ಲ ಅಲ್ವಾ...ಏಕೆ ...

ಮುಂದಿನ ಭಾಗಕ್ಕೆ ತಪ್ಪದೇ ಬರುತ್ತಿರಲ್ಲಾ....

shivu.k said...

ಹರೀಶ್ ಸರ್,

ಜಿರಲೆ ಪ್ರಬಂದಕ್ಕೆ ಬೇಕಂತಲೇ ಫೋಟೊ ಹಾಕಿಲ್ಲ. ಒಂದು ಫೋಟೋ ಹಾಕಿಬಿಟ್ಟರೆ ನಿಮ್ಮ ಕಣ್ಣುಮತ್ತು ಮನಸ್ಸು ಆ ಚಿತ್ರಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಚಿತ್ರ ಹಾಕದಿದ್ದಲ್ಲಿ ಲೇಖನ ಓದುತ್ತಾ ನಿಮಗೆ ಪಕ್ಕದಲ್ಲೇ ಜಿರಲೆ ಸರಿದಾಡಿದಂತಾಗಿ ಒಮ್ಮೆ ತಿರುಗಿ ನೋಡುವ ಅನುಭವವಾಗಬೇಕು ಎನ್ನುವುದು ನನ್ನ ಉದ್ದೇಶ.

ಧನ್ಯವಾದಗಳು.

shivu.k said...

ಮಲ್ಲಿಕಾರ್ಜುನ್,

ಜಿರಲೆ ಕತೆ ಎಲ್ಲರ ಮನೆಯದು ಕೂಡ ಅಲ್ಲವೇ...

ಇದನ್ನು ಓದುವಾಗ ನಿಮಗಾದ ಆನುಭವ ಹಂಚಿಕೊಂಡಿದ್ದೀರಿ..ಇದು ನನ್ನ ಬರವಣಿಗೆಯ ಸಾರ್ಥಕತೆ ಅಂದುಕೊಳ್ಳುತ್ತೇನೆ. ವಾಸ್ತು, ಕುವೆಂಪು ಕವನ, ಇತ್ಯಾದಿ ಬರೆಯುವಾಗಿನ ವೇಗಕ್ಕೆ ಹಾಗೆ ಜೊತೆ ಸೇರಿದಂತವುಗಳು. ಅದನ್ನು ಗುರುತಿಸಿದ್ದಕ್ಕೆ ಥ್ಯಾಂಕ್ಸ್...

ಮುಂದಿನ ಭಾರಿ ಆಡುಗೆಮನೆಯಲ್ಲಿ...ಹಾಗೆ ಮುಂದುವರಿದು ಏನಾಗುತ್ತದೆ...ಕಾಯುತ್ತಿರಲ್ಲ....

Prashanth Arasikere said...

Hello shivu,

Jirle baraha super adre jirle na prakruthe ne nasha madakke agilla innu navu elli madakke agutte..heli..nivu anubavisida suka dukka navu anubasiddivi..sahabalve nadusbeku aste!!

shivu.k said...

ಉಮೇಶ್ ಸರ್,

ನನ್ನ ಬ್ಲಾಗಿಗೆ ಸ್ವಾಗತ. ಜೊಂಡಿಗ್ಯಾ[ಜಿರಲೆ]ಬಗ್ಗೆ ನಿಮ್ಮ ಮನೆಯ ಆನುಭವವನ್ನು ಹಂಚಿಕೊಂಡಿದ್ದೀರಿ..ನೀವು ಮಲಗುವಾಗ ಸಂದುಗೊಂದುಗಳಲ್ಲಿ ಟವಲ್ಲ ಮುಚ್ಚುವುದು ಹೊಸ ವಿಚಾರ...ನಾವು ಪ್ರಯೋಗಿಸಬೇಕೆನ್ನಿಸುತ್ತದೆ...

ಮುಂದಿನ ಕ್ಲೈಮ್ಯಾಕ್ಸ್ ಭಾಗಕ್ಕೆ ಬನ್ನಿ...

shivu.k said...

ಸತ್ಯನಾರಾಯಣ ಸರ್,

ಜಿರಲೆ ಲೇಖನವನ್ನು ಒಂದು ಒಳ್ಳೆಯ ಲಲಿತ ಪ್ರಭಂದವಾಗಬಹುದು ಅಂತ ಹೇಳಿದ್ದೀರಿ. ಧನ್ಯವಾದಗಳು. ಲೇಖನವನ್ನು ಓದಿ ಖುಷಿಪಟ್ಟಿದ್ದಕ್ಕೆ ಥ್ಯಾಂಕ್ಸ್..ಮುಂದಿನ ಲೇಖನದಲ್ಲಿ ಮತ್ತಷ್ಟು ಜಿರಲೆಗಳ ಅಧಿಕಪ್ರಸಂಗತನಗಳು ಇವೆ...ಕಾಯುತ್ತಿರಿ ಸರ್...

shivu.k said...

ಪ್ರಶಾಂತ್,

ಜಿರಲೆ ಬಗ್ಗೆ ನಿಮ್ಮ ಅಭಿಪ್ರಾಯ ನನಗೆ ಇಷ್ಟವಾಯಿತು. ನಾನು ಹಾಗೆ ನಡೆದುಕೊಂಡಿದ್ದೇನೆ. ಆದ್ರೆ ಈ ವಿಚಾರವನ್ನು ನಿಮ್ಮ ಮನೆಯವರ ಬಳಿ ಚರ್ಚಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ಅವರ ಕಷ್ಟ ನಿಮಗೆ ಗೊತ್ತಿಲ್ಲ ಅನ್ನಿಸುತ್ತೆ...

ಮುಂದಿನ ಭಾಗದಲ್ಲಿ ಜಿರಲೆಗಳ ಪ್ರತಾಪವೇನು ನಮ್ಮ ಪ್ರತಿತಂತ್ರವೇನು ಅನ್ನುವುದನ್ನು ತಿಳಿಯುವುದಕ್ಕೆ ಖಂಡಿತ ಬನ್ನಿ...

ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

Ittigecement said...

ಶಿವು ಸರ್...

ಅಸಹ್ಯವಾದ ಜಿರಳೆಯೂ ವಿಷಯವಾಗುತ್ತದೆ...!
ಅಲ್ಲೂ ವಾಸ್ತುವನ್ನು ಕಾಣುತ್ತೀರಿ..

ಹೆಣ್ಣು ಜಿರಳೆ ಬಳುಕುತ್ತ ಹೋಗುವ ದೃಷ್ಯ..
ಎಲ್ಲವೂ ಕಣ್ಮುಂದೆ ಬಂದು ..
ಕಾರನ್ನು ಪಕ್ಕಕ್ಕೆ ನಿಲ್ಲಿಸಿ..
ಮನಸಾರೆ..
ಹೊಟ್ಟೆ ಹುಣ್ಣಾಗುವಷ್ಟು ನಕ್ಕು ಬಿಟ್ಟೆ...

ನಿಮಗೆ ನೀವೆ ಸಾಟಿ...

shivu.k said...

ಪ್ರಕಾಶ್ ಸರ್,

ಮತ್ತೇನಿಲ್ಲ...ಜಿರಲೆಗೊಂದು ಮನಸ್ಸು, ಆತ್ಮವಿದೆ, ಆದಕ್ಕೂ ಆಸೆ ಆಕಾಂಕ್ಷೆಗಳಿವೆಯೆಂದು ಒಮ್ಮೆ ಯೋಚಿಸಿದೆನಲ್ಲ. ಅದರ ಮನಸ್ಥಿತಿ ಗೊತ್ತಾಗತೊಡಗಿತು.
ನನ್ನ ಉದ್ದೇಶವೂ ಲೇಖನವನ್ನು ಓದಿದಾಗ ನಕ್ಕೂ ಮನಸ್ಸು ಉಲ್ಲಾಸಗೊಳ್ಳಬೇಕು. ಆಷ್ಟೇ ಅಲ್ಲದೇ ಯಾವಾಗ ನೆನಪಿಸಿಕೊಂಡರೂ ಅದೇ ನಗು ಉಲ್ಲಾಸದ ಚಿತ್ರಗಳು ಮರುಕಳಿಸಬೇಕು. ನೀವು ಕಾರು ನಿಲ್ಲಿಸಿ ನಕ್ಕಿದ್ದಿರೆಂದರೆ ನನ್ನ ಶ್ರಮ ಸಾರ್ಥಕ....

ಜಿರಲೆ ಆಡುಗೆಮನೆಯಲ್ಲಿ,,ಜಿರಲೆ ಹಂಗಾತ ಬಿದ್ದಾಗ, ವಯಸ್ಸಾದ ಜಿರಲೆಗಳು...ಇತ್ಯಾದಿಗಳಿಗಾಗಿ ಮುಂದಿನ ಲೇಖನದಲ್ಲಿ....

ಮತ್ತೆ ಬಂದು ಖುಷಿಯಿಂದ ಪ್ರತಿಕ್ರಿಯಿಸಿದ್ದೀರಿ...

ಧನ್ಯವಾದಗಳು.

ಚಿತ್ರಾ said...

ಚೆನಾಗಿದೆ ಕಣ್ರೀ ಶಿವೂ ನಿಮ್ಮ ಜಿರಳೆ ಪುರಾಣ !
ಒಂದು ಉಪಾಯ ಅಂದ್ರೆ , ಯಾರಾದರೂ ಚೀನೀಯರನ್ನು ನಿಮ್ಮನೇಲಿ ಸ್ವಲ್ಪ ದಿನ ಇಟ್ಕೋಳಿ .ಅವರೇನಾದರೂ ಸಹಾಯ ಮಾಡ ಬಹುದು !
ನಿನ್ನೆ ತಾನೇ , " khatron ke Khilaadi " ಕಾರ್ಯಕ್ರಮದಲ್ಲಿ ಯಲ್ಲಿ ಜಿರಳೆ ಗಳು ತುಂಬಿದ ಬಾಕ್ಸ್ ನಲ್ಲಿ ತಲೆಯಿಟ್ಟು ಕೊಂಡ ಸ್ಪರ್ಧಿಗಳು ಬಾಕ್ಸಿಗೆ ಹಾಕಿದ ಬೀಗವನ್ನು ತೆಗೆಯುವ stunt ನೋಡಿದ್ದೆ .ಇವತ್ತು ನಿಮ್ಮ ಲೇಖನ ಜಿರಲೆಗಳ ಬಗ್ಗೆ !!
ನನಗೆ ಜಿರಲೆಗಳ ಬಗ್ಗೆ ಭಯವಿಲ್ಲದಿದ್ದರೂ , ಅವುಗಳನ್ನು ಸಾಯಿಸಲು ಅಸಹ್ಯ !ಹಾಗಾಗಿ ಆ ಕೆಲಸ ನಮ್ಮ ಯಜಮಾನರದ್ದು !ಅಪ್ಪಚ್ಚಿಯಾದ ಅವುಗಳ ದೇಹದಿಂದ ಒಸರುವ ಬಿಳೀ ದ್ರವ ಹೇಸಿಗೆ ತರುತ್ತದೆ ! ಮುಂದಿನ ಕಂತಿನ ಮಹಾಯುದ್ಧಕ್ಕಾಗಿ ಕಾಯುತ್ತಿದ್ದೇನೆ !

shivu.k said...

ಚಿತ್ರಾ ಮೇಡಮ್,

ಜಿರಲೆ ಪುರಾಣ ಇಷ್ಟವಾಯಿತಾ...

ನೀವು ಹೇಳಿದಂತೆ ಚೀನಿಯರನ್ನು ಇಟ್ಟುಕೊಳ್ಳುವ ಸಲಹೆ ಒಳ್ಳೆಯದೆ. ಅವರು ಜಿರಲೆ ಇತ್ಯಾದಿಗಳನ್ನು ತಿಂದು ತೇಗಿ ನಮ್ಮ ಮನೆಯನ್ನೆ ಆಕ್ರಮಿಸಿಬಿಟ್ಟರೆ...ಅವರ ಬಗ್ಗೆ ಮತ್ತೊಂದು ಪರ್ಯಾಯ ಲೇಖನವನ್ನು ನಾನು ಬೇಸರದಿಂದ ಬರೆಯಬೇಕಾಗುತ್ತೇನೋ. khatron ke Khilaadi " ಕಾರ್ಯಕ್ರಮನವನ್ನು ನಾನು ನೋಡಿಲ್ಲ. ಬಿಡುವಾದಾಗ ನೋಡುತ್ತೇನೆ.

ನಿಮ್ಮಂತೆ ನನಗೂ ಜಿರಲೆಗಳನ್ನು ಸಾಯಿಸಲು ಆಸಹ್ಯ ಮತ್ತು ಸತ್ತ ಮೇಲೆ ಬರುವ ಬಿಳಿದ್ರವ ಮಾತ್ರವಲ್ಲ ಯಾವ ದ್ರವವನ್ನು ನನಗೆ ನೋಡಲಾಗುವುದಿಲ್ಲವಾದ್ದರಿಂದ ಅವುಗಳನ್ನು ನನಗೆ ನೋಡಲು ಆಗುವುದಿಲ್ಲ. ಈ ವಿಚಾರದಲ್ಲಿ ನೀವು ಕೂಡ ನನ್ನ ಕಡೆ ಸೇರಿದ್ದೀರಿ..ಥ್ಯಾಂಕ್ಸ್...

ಮತ್ತಷ್ಟು ಮಜವತ್ತಾದ ಜಿರಲೆ ಸಮಚಾರ ಮುಂದಿನ ಭಾಗದಲ್ಲಿ...

ಧನ್ಯವಾದಗಳು.

sunaath said...

ಜಿರಲೆಗಳ ಬಗೆಗೆ ನಿಮ್ಮಲ್ಲಿ ನಡೆದ dialogue ತುಂಬಾ ಚೆನ್ನಾಗಿದೆ, ತುಂಬಾ ತಾರ್ಕಿಕವಾಗಿಯೂ ಇದೆ.

shivu.k said...

ಸುನಾಥ್ ಸರ್,

ಜಿರಲೆ ಜೊತೆಗಿನ ಡೈಲಾಗ್ ಇಷ್ಟವಾಯಿತಾ...ಥ್ಯಾಂಕ್ಸ್...

ಮುಂದಿನ ಸಂಚಿಕೆಯಲ್ಲಿ ಮತ್ತಷ್ಟು.....ಖಂಡಿತ ಬನ್ನಿ.

ವನಿತಾ / Vanitha said...

ಹ್ಹ ಹ್ಹ ...ಚೆನ್ನಾಗಿದೆ ಜಿರಳೆ ಪುರಾಣ..
ನಾನು ಶಿಫ್ಟ್ ಆಗುವಾಗ ಮೈಸೂರಿನಲ್ಲಿದ್ದ ಎಲ್ಲಾ ಸಾಮಗ್ರಿಗಳನ್ನು ಊರಿಗೆ ಸಾಗಿಸಿದ್ದೆ.ನಾವಿದ್ದ old quaters ನಲ್ಲಿ ತುಂಬಾ ಜಿರಳೆಗಳಿದ್ದುವು.ಎಲ್ಲಾ ಸಾಮಾನುಗಳ ಜೊತೆಗೆ ಫ್ರೀ ಆಗಿ ಜಿರಳೆಗಳು ಕೂಡ ಬಂದಿವೆ ಎಂದು ನನ್ನ ಮೈದುನ,ಅತ್ತೆ ಅವಾಗವಾಗ ನೆನಪಿಸ್ತಾ ಇರ್ತಾರೆ..
waiting for the next part..

shivu.k said...

ವನಿತಾ,

ಜಿರಲೆ ಪುರಾಣ ಇಷ್ಟವಾಯಿತಾ...

ನಿಮ್ಮ ಹಳೆಯ ನೆನಪುಗಳಲ್ಲಿ ಜಿರಲೆಗಳನ್ನು ಹಂಚಿಕೊಂಡಿದ್ದೀರಿ...ಥ್ಯಾಂಕ್ಸ್...

ಮತ್ತೆ ಮುಂದಿನ ಬಾರಿ..ಇನ್ನಷ್ಟು....

ತೇಜಸ್ವಿನಿ ಹೆಗಡೆ said...

ಚೆನ್ನಾಗಿದೆ..

"ಭೂಕಂಪವಾದಾಗ ಎಲ್ಲಾ ಸತ್ತರೂ ಇವು ಸತ್ತಂತೆ ನಟಿಸಿ ಸುಮ್ಮನಾಗಿಬಿಟ್ಟವಂತೆ. ಅದಕ್ಕೆ ಈಗಲೂ ಹಾಗೆ ನಟಿಸಿ ನಾನು ಬಿಸಾಡಿದ ಮೇಲೆ ಬೇರೆ ಜಾಗದಲ್ಲಿ ಬದುಕಿಬಿಟ್ಟರೇ, ಅಷ್ಟೇ."

ಈ ಸಾಲುಗಳನ್ನೋದಿ ತುಂಬಾ ನಗು ಬಂತು :)

shivu.k said...

ತೇಜಸ್ವಿ ಮೇಡಮ್,

ಜಿರಲೆ ಕತೆ ಲೇಖನದಲ್ಲಿ ನಾನು ಮೆಚ್ಚಿದ ಸಾಲುಗಳು ಅದೇ...ಸಹಜವಾಗಿ ಬರುವ ಈ ಮಾತುಗಳು ನಮಗೆ ಖುಷಿಕೊಡುತ್ತವೆ ಅಲ್ವಾ...ಮುಂದಿನ ಭಾಗಕ್ಕೆ ಬನ್ನಿ.

ಜಿರಲೆ ಕತೆ ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

ಬಾಲು said...

ಶಿವು ಅವರೆ,

ನಾನು ಜಿರಲೆ ಗಳಿಗೆ ಔಷದಿ ಅದೂ ಇದೂ ಇಲ್ಲಾ ಪ್ರಯೊಗ ಮಾಡೊಲ್ಲ. ಅವು ಎಲ್ಲಿ ಕ೦ಡರು, ಕೈಗೆ ಸಿಗುವ ಯಾವುದೆ ವಸ್ತುವಿನ ಸಹಾಯದಿ೦ದ ಸ್ವರ್ಗಕ್ಕೆ ರವಾನೆ ಮಾಡುತ್ತೇನೆ!! :)

ನಿಮ್ಮ ಮು೦ದಿನ ಲೇಖನ ಬೇಗ ಬರಲಿ. !! :)

ಸಾಗರದಾಚೆಯ ಇಂಚರ said...

ಶಿವೂ ಸರ್,
ಫೋಟೋ ವಿಲ್ಲದೆ ಬರೆದ ಲೇಖನಕ್ಕೆ ನಿಮ್ಮ ಮಿದಾಸ್ ಟಚ್ ಇದೆ. ಸುಂದರ ಬರಹ,

Unknown said...

ಮತ್ತದೇ ಕೆಲಸ, ಕೆಲಸ, ಕೆಲಸ... ಯಾವುದೇ ಬ್ಲಾಗ್ ಬರೆಯಲು, ಓದಲು ಕೊನೆಗೆ ಕೆರೆದುಕೊಳ್ಳಲು ಸಹ ಸಮಯವೇ ಸಿಗಲಿಲ್ಲ... ನಿಮ್ಮ ಜಿರಳೆ ಪುರಾಣ ಚೆನ್ನಾಗಿದೆ... ಪೊರಕೆ ಬಿಡಿ, ಬೆಗೊನ್ ಉಪಯೋಗಿಸಿ... :-).. ನಿಮ್ಮ ಮಡಿಕೇರಿ ಚಿತ್ರ ಲೇಖನಕ್ಕಾಗಿ ಕಾಯುತ್ತಿದ್ದೇನೆ...

ಕ್ಷಣ... ಚಿಂತನೆ... said...

ಶಿವು ಸರ್‍, ಲೇಖನ ಕುತೂಹಲಕಾರಿಯಾಗಿದೆ ಮತ್ತು ಈ ಲೇಖನದ ಮುಂದುವರಿದ ಭಾಗದಲ್ಲಿ ಇನ್ನೂ ಏನೇನಿದೆಯೋ ಅನ್ನಿಸುತ್ತಿದೆ. ಮುಂದುವರೆಯಲಿ.

ಜಲನಯನ said...

ಜಿರಲೆಯೆಂಬ ಆತಂಕವಾದಿಯ ಆತಂಕ, ಅದರಿಂದ ಪಡುವ ಪಾಡುಗಳು...ಹಾವನ್ನೇ ಕಂಡವರಂತೆ ಬೆಚ್ಚಿಬಿದ್ದು ಚೀರುವವರು, ಯುದ್ಧಕ್ಕಿಂತ ಕಡಿಮೆಯೆಂದು ಪರಿಗಣಿಸದ ಗೃಹಿಣಿಯರು...ಅದರ ಉದ್ದನೆಯ ಸಿಂಗಲ್-ಸಿಂಗಲ್ ಮೀಸೆಗೆ ಕುಚ್ಚು-ಕುಚ್ಚು ಮೀಸೆ ಹೊತ್ತ ಗಂಡಸೂ ತಲೆತಗ್ಗಿಸುವ ಪ್ರಸಂಗ........ಅಬ್ಬಬ್ಬಬ್ಬ.....ಏನೆಲ್ಲಾ ಹೊರಬಿದ್ದಿದೆ...!!! ಶಿವು ನಿಮ್ಮ ಪೋಸ್ಟಿಗೆ ಪ್ರತಿಕ್ರಿಯೆ ಮೂಲಕ. ಹೊಸ ಮನೆ ಎಲ್ಲ ಶುದ್ಧ ಸ್ವಚ್ಚ...ಜಿರಲೆ ಮಾತೇ ಇಲ್ಲ ಎಮ್ದು ಕೊಂಡಿದ್ದ ನನಗೆ...ಮೊನ್ನೆ ಮೊನ್ನೆ ಒಂದೆರಡು ಮರಿಗಳು ಕಂಡವು...ಮರಿ ಇವೆ ಅಂದ್ಮೇಲೆ ಅಮ್ಮನೂ..ಅಪ್ಪನೂ..ಇರ್ಬೇಕಲ್ಲಾ..??? ಸೋಜಿಗ...!! ಆಮೇಲೇ ಗೊತ್ತಾಗಿದ್ದು...ನನ್ನ ಮಗಳು ಎರಡು ವರ್ಷಕ್ಕೆ ಹಿಂದೆಯೇ ನನ್ನ ಹಳೆಯ ಪುಸ್ತಕಗಳ ಕಂತೆಯಲ್ಲಿ ಒಂದು ಮೀಸೆಹೊತ್ತ ಗಡವ ಜಿರಲೇನ ನೋಡಿದ್ದಳು ಅಂತ....!! ಅಂದಮೇಲೆ...ಬೆಂಗಳೂರಿಂದಲೋ, ಮದ್ರಾಸಿನಿಂದಲೋ ನನ್ನ ಪುಸ್ತಕಗಳೊಂದಿಗೆ...ಪಾಸ್ಪೋರ್ಟ್, ವೀಸಾ ಇಲ್ಲದೇ ಮೀಸೆ ಮಾತ್ರ ಕುಣಿಸುತ್ತಾ ಬಂದಿರೋ ಆ ಜಿರಲೆ ಮಾಮನ ಬಗ್ಗೆ ಹೆಮ್ಮೆ ಅನಿಸ್ತು......ಹಹಹ....ಚನ್ನಾಗಿದೆ ...ಈಗ ಯುದ್ಧ ಕಾಂಡ ನೋಡೋಣ,,,!!!

PARAANJAPE K.N. said...

ನಿಮ್ಮ "ಜಿರಲೆ-ತರಲೆ" ಲೇಖನ ರೋಚಕವಾಗಿದೆ. ಹಿ೦ದೆ ಗೌತಮ ಬುದ್ಧ "ಸಾವಿರದ ಮನೆಯಿ೦ದ ಸಾಸಿವೆ ಕಾಳು ತೆಗೆದುಕೊ೦ಡು ಬಾ" ಎ೦ದು ಹೇಳಿದ೦ತೆ ಇ೦ದು ನಾವು "ಜಿರಲೆಯಿರದ ಮನೆಯಿ೦ದ ಜೀರಿಗೆ ತಗೊ೦ಡು ಬಾ" ಅ೦ತ ಹೇಳಬಹುದು. ಜಿರಲೆಯಿಲ್ಲದ ಮನೆ ಅದು ಮನೆಯೇ ಅಲ್ಲ. ಮನುಷ್ಯನಿಗೂ ಜಿರಲೆಗೂ ಇರುವ ಅವಿನಾಭಾವ ಸ೦ಬ೦ಧ ಅಂಥಾದ್ದು. ಚೆನ್ನಾಗಿದೆ.

Anonymous said...

ಬರಹದ ಶೈಲಿ ತುಂಬಾ ಚೆನ್ನಾಗಿದೆ! ಹೆಂಗಸರ ಆಜನ್ಮ ಶತ್ರುವಾದ ಜಿರಳೆ ಬಗ್ಗೆ ಚೆನ್ನಾಗಿ ವಿಶ್ಲೆಶಿಸಿದ್ದೀರ!!!

ಸುಧೇಶ್ ಶೆಟ್ಟಿ said...

nanage thumba bhaya padisuva jeevigalalli jirale kooda ondu (maththodu lakshmi chelu:).... avugalu mila mila oduvaaga naanu devva bandavaranthe kaikaalu aadisuththene nanna mai mele avu odidanthe... bengaloorinalli jiralegale illa andukondidde banda hosadaralli :)

idara bagge ondu lekhana bareyabekku anisuththide... nimma yaddhakaanda munduvariyali :)

shivu.k said...

ಬಾಲು ಸರ್,

ಜಿರಲೆಗಳನ್ನು ಹಾಗೆಲ್ಲಾ ಸಾಯಿಸಬಾರದು ಏಕೆಂದರೆ ಎಷ್ಟು ಸಾಯಿಸಿದರೂ ಅಲ್‍ ಖೈದ, ತಾಲಿಬಾನ್ ತರ ಹುಟ್ಟಿಬರುತ್ತಿರುತ್ತವೆ...ಅವನ್ನು ಒಮ್ಮೇಗೆ ಸಾಯಿಸಬಿಡಬೇಕು. ತಾಳ್ಮೆಯಿರಲಿ...

ಧನ್ಯವಾದಗಳು.

shivu.k said...

ಗುರುಮೂರ್ತಿ ಸರ್,

ಚಿತ್ರವಿಲ್ಲದ ಜಿರಲೆ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ರವಿಕಾಂತ್ ಸರ್,

ನಿಮ್ಮ ಪುರುಸೊತ್ತಿಲ್ಲದ ಕೆಲಸದ ಮದ್ಯೆ ಜಿರಲೆ ಕಥನವನ್ನು ಓದಿ ಮೆಚ್ಚಿದ್ದೀರಿ...ಧನ್ಯವಾದಗಳು. ಎರಡನೇ ಭಾಗಕ್ಕೂ ಬನ್ನಿ. ಮತ್ತೆ ಖಂಡಿತ ಮಡಿಕೇರಿಯ ಫೋಟೋಗಳನ್ನು ಹಾಕುತ್ತೇನೆ...
ಧನ್ಯವಾದಗಳು.

shivu.k said...

ಕ್ಷಣ ಚಿಂತನೆ ಸರ್,

ಜಿರಲೆ ಕಥನ ಕುತೂಹಲಕಾರಿಯೆಂದಿದ್ದೀರಿ...ಥ್ಯಾಂಕ್ಸ್...ನಿಮ್ಮ ಕುತೂಹಲವನ್ನು ಮುಂದಿನ ಲೇಖನದಲ್ಲಿ ನಿರಾಶೆಗೊಳಿಸೊಲ್ಲ...ಧನ್ಯವಾದಗಳು.

shivu.k said...

ಜಲನಯನ ಸರ್,

ನನ್ನ ಲೇಖನ ಸೂಕ್ಷ್ಮವಾಗಿ ವಿಶ್ಲೇಷಿಸಿದ್ದೀರಿ...ಎಲ್ಲ ಪ್ರಕಾರಗಳಲ್ಲೂ ಮನೆಯವರೆಲ್ಲರಿಗೂ ಜಿರಲೆ ಕೊಡುವ ತ್ರಾಸನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದೇನೆ....ನಿಮ್ಮ ಅನುಭವವನ್ನು ಬರೆಯಿರಿ....

ಮುಂದಿನ ಭಾಗ ನಿಮಗೆ ಖಂಡಿತ ಖುಷಿಕೊಡಬಹುದು...
ಧನ್ಯವಾದಗಳು.

shivu.k said...

ಪರಂಜಪೆ ಸರ್,

ಜಿರಲೆ ತರಲೆ ನಿಮ್ಮ ಹೆಸರು ತುಂಬ ಚೆನ್ನಾಗಿದೆ...ಮೊದಲೇ ಹೇಳಿದ್ದರೆ ಅದನ್ನೇ ಇಟ್ಟುಬಿಡುತ್ತಿದ್ದೆ.

ಜಿರಲೆ ಇರದ ಮನೆ ಇಲ್ಲವೆಂದಿದ್ದೀರಿ...ನಿಮ್ಮ ಮಾತು ಆಕ್ಷರಶಃ ಸತ್ಯ. ಮುಂದಿನ ಭಾಗಕ್ಕೆ ಖಂಡಿತ ಬನ್ನಿ...

ಧನ್ಯವಾದಗಳು.

shivu.k said...

ಸುಮನಾ ಮೇಡಮ್,

ಜಿರಲೆ ಹೆಂಗಸರ ಶತ್ರು ಮಾತ್ರವಲ್ಲ[ನನ್ನನ್ನು ಬಿಟ್ಟು]ಗಂಡಸರ ಶತ್ರುವೂ ಹೌದು. ಅದಕ್ಕಾಗಿ ಬಂದಿರುವ ಪ್ರತಿಕ್ರಿಯೆ ನೋಡಿ..
ಜಿರಲೆ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಸುಧೇಶ್,

ಜಿರಲೆ ಖಂಡರೆ ಭಯಪಡಬೇಡಿ ಅವು ಏನು ಮಾಡೋಲ್ಲ..ಸುಮ್ಮನೆ ಓಡಾಡಿ ಕಿರಿಕಿರಿ ಮಾಡುತ್ತವೆ ಅಷ್ಟೆ. ಖಂಡಿತ ದೆವ್ವದಷ್ಟು effect ಅಲ್ಲ[ನಾನು ದೆವ್ವವನ್ನು ನೋಡಿಲ್ಲವಾದ್ದರಿಂದ ದೆವ್ವದ ಪರಿಣಾಮ ನನಗೆ ಗೊತ್ತಿಲ್ಲ] ಮತ್ತೆ ಜಿರಲೆ ಬಗ್ಗೆ ನಿಮಗನ್ನಿಸಿದ್ದನ್ನು ಖಂಡಿತ ಬರೆಯಿರಿ..ಚೆನ್ನಾಗಿರುತ್ತೆ..

ಯುದ್ದಕಾಂಡಕ್ಕಾಗಿ ಎರಡನೆ ಭಾಗಕ್ಕೆ ಬನ್ನಿ...
ಧನ್ಯವಾದಗಳು.