Friday, March 23, 2012

ತರಂಗ ಉಗಾದಿ ವಿಶೇಷಾಂಕದಲ್ಲಿ ನನ್ನ ಹೊಸ ಫೋಟೊಗಳು.


                ಈ ಚಿತ್ರದಲ್ಲಿರುವವರು ನನ್ನ ಅಕ್ಕನ ಮಕ್ಕಳಾದ ಚೇತನ ಮತ್ತು ವರ್ಷಿಣಿ. ಕಳೆದ ವರ್ಷ  ಇದೇ ಸರಣಿಯ ಚಿತ್ರಗಳನ್ನು ಕ್ಲಿಕ್ಕಿಸುವ ಸಮಯದಲ್ಲಿ ಕೈಕಾಲುಗಳಿಗೆ ಒಂದಿಂಚು ಉದ್ದವಿರುವ ಹತ್ತಾರು ಈಚಲ ಮರದ ಚುಚ್ಚಿಸಿಕೊಂಡಿದ್ದೆ.  ಒಂದು ಮುಳ್ಳಂತೂ ಹದಿನೈದು ದಿನ ನನ್ನ ಕಾಲಿನಲ್ಲೇ ಇದ್ದು ಸಕ್ಕತ್ ನೋವು ಕೊಟ್ಟಿತ್ತು.  ಅದೆಲ್ಲದರ ಪ್ರತಿಫಲ ಇವತ್ತು ಸಿಕ್ಕಿದೆ. ಇವತ್ತು ಮಾರುಕಟ್ಟೆಗೆ ಬಂದ  ಈ ಕೆಳಗಿನ ಚಿತ್ರವೂ ತರಂಗ ಉಗಾದಿ ವಿಶೇಷಾಂಕದಲ್ಲಿ ಸಂಧ್ಯಾ ಪೈರವರ ಸಂಪಾದಕೀಯ ಬರಹದ ಜೊತೆಗೆ ಪ್ರಕಟವಾಗಿದೆ.[ಪುಟ 20]

   
      ಇಲ್ಲಿರುವ ಎರಡು ಚಿತ್ರಗಳು ಕೂಡ ತರಂಗ ಉಗಾದಿ ವಿಶೇಷಾಂಕದೊಳಗೆ ವೀಣಾ ಬನ್ನಂಜೆಯವರ "ಏನು ಹೊಸತೆಂದರೆ..." ಕವನದ ಜೊತೆ  ಪ್ರಕಟವಾಗಿವೆ. [ಪುಟ 25 ಮತ್ತು 26]
   
            ಇದಲ್ಲದೇ ನನ್ನದೇ ಒಂದು ಪುಟ್ಟ ಕತೆ "ಕಣ್ಣಿಲ್ಲದವರು" ಕೂಡ ಪ್ರಕಟವಾಗಿದೆ. ಅದನ್ನು ನೀವು ಓದಿ ದಯವಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿ.
    
         ಹುಟ್ಟು ಕುರುಡನಾದ ವಾಜಿದ್ ಕೈಯನ್ನು ಹಿಡಿದು ಪೋಲಿಯೋ ಪೀಡಿತಳಾದ ಫಾತಿಮ ರೈಲು ನಿಲ್ದಾಣದಲ್ಲಿ  ನೂರಾರು ಜನರ ನಡುವೆ ನಿಂತಿದ್ದರು.  ರೈಲು ಬಂದು ನಿಲ್ಲುತ್ತಿದ್ದಂತೆ ನೂರಾರು ಜನರು ಹತ್ತಿದರು. ಅಷ್ಟೇ ಜನ ಪ್ರಯಾಣಿಕರು ಇಳಿದರು. ಅವರೆಲ್ಲರ ನಡುವೆಯೇ ಫಾತಿಮಾಲ ಸಹಾಯದಿಂದ ವಾಜಿದ್ ಕೂಡ ರೈಲು ಹತ್ತಿಕೊಂಡ. ರೈಲು ಹೊಅಟಿತು. ಪ್ರಯಾಣಿಕರು ತಮ್ಮದೇ ಕೈಂಕರ್ಯದಲ್ಲಿ ತೊಡಗಿಕೊಂಡರು. ಒಬ್ಬ ಪುಸ್ತಕವನ್ನು ತೆಗೆದುಕೊಂಡರೆ, ಎದುರಿಗಿದ್ದವ ತನ್ನ ಜೇಬಿನಲ್ಲಿ  ಮೊಬೈಲ್ ಫೋನಿನ ಇಯರ್ ಫೋನನ್ನು ಕಿವಿಗೆ ಹನಿಸಿ ತನಗಿಷ್ಟವಾದ ಸಿನಿಮಾ ಹಾಡುಗಳನ್ನು ಕೇಳತೊಡಗಿದ್ದ. ಅವನ ಹಿಂದಿನ ಸೀಟಿನ ಹುಡುಗಿಯರಿಗೆ ತಮ್ಮ ಕಾಲೇಜಿನ ಹುಡುಗರ ಪೆಕರಾಟಗಳೇ ಅವರ ಚರ್ಚೆಯ ವಸ್ತು. ಕಿಟಕಿಯ ಬಳಿ ಸ್ಕೂಲ್ ಮಾಸ್ತರ್ ಚಲಿಸುವ ಹೊರಜಗತ್ತನ್ನು ಸುಮ್ಮನೇ ನೋಡುತ್ತಿದ್ದರು.


       "ಈ ದೇಹದಿಂದ ದೂರನಾದೆ ಏಕೆ ಆತ್ಮನೇ.... ಸುಶ್ರಾವ್ಯವಾದ ಹಾಡು ತೇಲಿ ಬಂದು ತಕ್ಷಣ ರೈಲು ಬೋಗಿಯಲ್ಲಿದ್ದವರೆಲ್ಲರ ಗಮನ ಅತ್ತ ಕಡೆಗೆ ಹರಿಯಿತು. ತನ್ನ ಕೈಗಳಲ್ಲಿ ಎರಡು ಮರದ ಚಪ್ಪಟೆ ತುಂಡುಗಳಿಂದ ತಾಳವನ್ನು ಹಾಕುತ್ತಾ ಈ ಹಾಡು ಹೇಳುತ್ತಿದ್ದವನು ಕಣ್ಣಿಲ್ಲದ ವಾಜಿದ್.


       ಎರಡು ನಿಮಿಷ ಎಲ್ಲರೂ ತನ್ಮಯರಾಗಿ ಹಾಡು ಕೇಳಿದರು. ಹಾಡು ಮುಗಿಯುತ್ತಿದ್ದಂತೆ ಅವನೊಂದಿಗಿದ್ದ ಫಾತಿಮಾ ತನ್ನ ಕಾಲೆಳೆದುಕೊಂಡು, "ಅಮ್ಮ ತಾಯಿ ಕಣ್ಣಿಲ್ಲ. ಕಾಲಿಲ್ಲ ದಾನ ಧರ್ಮ ಮಾಡಿ" ಅಂತ ಕೈಯೊಡ್ಡಿದಳು. ಹಾಡು ಕೇಳಿ ಕೆಲವು ಮಕ್ಕಳು ಮತ್ತು ಮಕ್ಕಳ ಮನಸ್ಸಿನವರು ಪ್ರೀತಿಯಿಂದ,, ಇನ್ನೂ ಕೆಲ ದೊಡ್ಡಮನಸ್ಸಿನವರು ಕರುಣೆಯಿಂದ, ತಮ್ಮ ಗಂಭೀರ ಚರ್ಚೆಗೆ ತೊಂದರೆಯಾಯಿತೆಂದು ಬೇಸರದಿಂದ ಕೆಲವರು ಪುಡಿಗಾಸು ಹಾಕಿದರೆ, ಇನ್ನೂ ಕೆಲವರು ಹಾಕಬೇಕೆಂದು ಕೈಯನ್ನು ಜೇಬಿಗಿಳಿಸಿ ಮುಂದಿನ ನಿಲ್ದಾಣದಲ್ಲಿ ಸಿಗರೇಟಿಗೆ ಬೇಕಾಗುತ್ತದೆ ಅಂತ ಸುಮ್ಮನಾದರು....ಬರಿಗೈ ಹೊರತೆಗೆದರೆ ಕೈಗೆ ನಾಜಿಕೆಯಾಗುತ್ತದೆಯೆಂದು ಕೈಯನ್ನು ಜೇಬಿನಲ್ಲೇ ಬಿಟ್ಟರು.

      ನಿಮಗೆಲ್ಲರಿಗೂ ನಂದನ ನಾಮ ಸಂವತ್ಸರ ಸುಖ ಸಮೃದ್ಧಿ ಕರುಣಿಸಲಿ ಎಂದು ಹಾರೈಸುತ್ತ ಬ್ಲಾಗ್ ಗೆಳೆಯರಿಗೆ ಯುಗಾದಿಯ ಹಾರ್ದಿಕ ಶುಭಾಶಯಗಳು.
           
ಚಿತ್ರಗಳು ಮತ್ತು ಲೇಖನ:
ಶಿವು.ಕೆ

      
   

Sunday, March 18, 2012

"ನನ್ನ ಮನೆ ಅದು, ಅಲ್ಲಿ ನನಗೆ ಭಯವಿಲ್ಲ"


       ಮನುಷ್ಯರಲ್ಲಿ ಭಾವನಾತ್ಮಕ ಸಂಭಂದಗಳು ಹುಟ್ಟಿಕೊಂಡ ಮರುದಿನವೇ ಈ ಕಾನೂನು ಅನ್ನುವುದು ಹುಟ್ಟಿಕೊಂಡಿರಬೇಕು.  ಏಕೆಂದರೆ ಅನಾದಿ ಕಾಲದಿಂದಲೂ ಮಾನವನ ಭಾವನೆಗಳು, ಅದರಿಂದ ಸೃಷ್ಟಿಯಾದ ಸಂಭಂದಗಳಿಂದಾಗಿ ಆತ ಬದುಕಿನಲ್ಲಿ ಸುಖ ನೆಮ್ಮದಿಯನ್ನು ಅನುಭವಿಸುತ್ತಿರುವಾಗಲೇ ಮತ್ತೊಂದು ದಿಕ್ಕಿನಲ್ಲಿ ದ್ವೇಷ ಅಸೂಯೆ ಇತ್ಯಾದಿ ಕೆಟ್ಟಗುಣಗಳೂ ಕೂಡ ಹುಟ್ಟಿಕೊಂಡವು.  ಮುಂದೆ ಈ ಕೆಟ್ಟ ಗುಣಗಳು ಹೆಚ್ಚಾದಾಗ ಅದನ್ನು ನಿಯಂತ್ರಿಸಲು ಕಾನೂನು ಅಂತ ಮಾನವ ಸೃಷ್ಟಿಸಿಕೊಂಡ.  ಇದು ಒಂಥರ ಮನುಷ್ಯನ ಏಳಿಗೆಗಾಗಿ ಮಾಡಿಕೊಂಡ ಒಂದು ಹೊಸ ವ್ಯವಸ್ಥೆ. ಇದು ಅನಾದಿ ಕಾಲದಿಂದಲೂ ಅದರದೇ ಆದ ರೂಪದಲ್ಲಿ ಚೌಕಟ್ಟಿನಲ್ಲಿ ಆಗಿನಿಂದ ಈಗಿನವರೆಗೆ ನಮಗೆ ಚಾಲ್ತಿಯಲ್ಲಿದೆ. ಆದರೆ ಮನುಷ್ಯನ ಸಂಭಂಧಗಳಲ್ಲಿ ಭಾವನೆಗಳು ಮಾತ್ರ ಸಾವಿರಾರು ವರ್ಷಗಳು ಕಳೆದರೂ ಮೂಲ ಅರ್ಥವನ್ನು ಮತ್ತು ಅದರ ಸಂತೋಷವನ್ನು ಕಳೆದುಕೊಳ್ಳದೇ ಇಂದಿನವರೆಗೂ ಮನಸ್ಸುಗಳಲ್ಲಿ ಹರಿದಾಡುತ್ತಿವೆ.
         
       ನಾವು ಬದುಕಲು ಮಾಡಿಕೊಂಡಿರುವ ಕಾನೂನಿಗೂ ಮನುಷ್ಯನ ಭಾವನಾತ್ಮಕ ಸಂಭಂದಗಳಿಗೂ ಆಗಾಗ ಯುದ್ಧ ನಡೆಯುತ್ತಿರುತ್ತದೆ.  ಸಾವಿರಾರು ವರ್ಷಗಳ ಹಿಂದಿನ ಕಾಡು, ಗುಡ್ಡಗಾಡಿನ ಜನಾಂಗ ನಂತರ ರಾಜರ ಆಡಳಿತ, ಆನಂತರ ಬಂದ ಪ್ರಜಾಪ್ರಭುತ್ವದ ಈ ದೀರ್ಘ ಅವಧಿಯಲ್ಲಿ ಕಾನೂನು ನೂರಾರು ರೂಪಗಳನ್ನು ಪಡೆದುಕೊಂಡಿದೆ.  ಭಾವನಾತ್ಮಕ ವಿಚಾರಗಳು ಅದೆಷ್ಟೇ ಗಾಢವಾದ ಪರಿಣಾಮವನ್ನು ಬೀರುತ್ತಿದ್ದರೂ ಅಂತ್ಯದಲ್ಲಿ ಕಾನೂನೇ ಗೆಲ್ಲುವುದು ತಾನೆ.  ಇದನ್ನು ನಾವು ಆಗಿನ ಕಾಲದಿಂದಲೂ ನೋಡುತ್ತಾ ಬಂದಿದ್ದೇವೆ.  ಗಂಡ ಹೆಂಡತಿ ನಡುವೆ, ಅಪ್ಪ-ಮಕ್ಕಳು, ಪ್ರಜೆಗಳು-ರಾಜ, ಸರ್ಕಾರ-ಪ್ರಜೆಗಳು ಹೀಗೆ ಅವಲೋಕಿಸಿದಾಗ ಎಲ್ಲಾ ಸಮಯದಲ್ಲೂ ಕಾನೂನು ಗೆಲ್ಲುವುದು ಮತ್ತು ಗೆಲ್ಲಬೇಕೆಂದು ನಾವು ನೀವು ಆಶಿಸುತ್ತೇವೆ ಅಲ್ವಾ...ಆದರೂ ಇದನ್ನು ಮೀರಿ ಕೆಲವು ವಿಭಿನ್ನ ಸಂಧರ್ಭದಲ್ಲಿ ಕಾನೂನನ್ನು ಮೀರಿ ಭಾವನಾತ್ಮಕ ಸಂಭಂಧಗಳು ಹೇಗೆ ಗೆಲುವು ಸಾಧಿಸುತ್ತವೆ ಎನ್ನುವುದನ್ನು ಒಂದು ಸಿನಿಮಾದಲ್ಲಿ ಸೊಗಸಾಗಿ ತೋರಿಸಿದ್ದಾರೆ.  ಅದು "The Terminal"  ಎನ್ನುವ ಆಂಗ್ಲ ಸಿನಿಮ.
      
      ಈ ಸಿನಿಮವನ್ನು ನೋಡಿದ ಮೇಲೆ ಇಂಥ ಅದ್ಬುತವಾದ ಸಿನಿಮವನ್ನು ನಿರ್ಧೇಶಿಸಿದವರಾರು ಅಂತ ನೋಡಿದರೆ ಅದು ಮತ್ಯಾರು ಅಲ್ಲ. ನನ್ನ ಮೆಚ್ಚಿನ ಸ್ಫಿಫನ್ ಸ್ಫಿಲ್‍ಬರ್ಗ್.  ಆತನ ಕಪ್ಪುಬಿಳುಪಿನ "ಸಿಂಡ್ಲರ್ ಲಿಸ್ಟ್" ಸಿನಿಮವನ್ನು ನೋಡಿದಾಗಲೇ ಅತನ ಅಭಿಮಾನಿಯಾಗಿಬಿಟ್ಟಿದ್ದೆ. ನಡುವೆ ಜುರೇಸಿಕ್ ಪಾರ್ಕ್ ಕಮರ್ಸಿಯಲ್ ಸಿನಿಮ ಸರಣಿಯನ್ನು ನೋಡಿದಾಗ ಈತ ಎಲ್ಲ ವಿಧದ ಸಿನಿಮಾಗಳನ್ನು ತನ್ನ ನಿರ್ಧೇಶನದ ಸೂಕ್ಷ್ಮತೆಯನ್ನು ತೋರಿಸುವ ಕುಶಲತೆಯನ್ನು ಹೊಂದಿದ್ದಾನೆ ಅಂತ ಅವನ ಸಿನಿಮಾಗಳಿಗಾಗಿ ಕಾಯುತ್ತಿರುತ್ತೇನೆ. ಈಗ ಆತ ನಿರ್ಧೇಶಿಸಿದ ಟರ್ಮಿನಲ್ ಸಿನಿಮವನ್ನು ಒಮ್ಮೆ ಅವಲೋಕಿಸೋಣ.

     ಈ ಚಿತ್ರದ ನಾಯಕ ವಿಕ್ಟರ್ ನವ್ರೋಸ್ಕಿ ತನ್ನ ಪುಟ್ಟ ದೇಶವಾದ ಕ್ರಕೋಜಿಯ ದಿಂದ ನ್ಯೂಯಾರ್ಕಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾದ JFKನಲ್ಲಿ ಇಳಿಯುತ್ತಾನೆ. ಅವನಿಗೆ ಆಂಗ್ಲ ಭಾಷೆ ಬರುವುದಿಲ್ಲ. ಆದ್ರೆ ಸ್ವಲ್ಪ ಸ್ವಲ್ಪ ಅರ್ಥ ಮಾಡಿಕೊಳ್ಳುತ್ತಾನೆ. ಅವನ ಪಾಸ್ ಫೋರ್ಟ್, ಇಮಿಗ್ರೇಷನ್ ಚೆಕ್ ಮಾಡುವ ಹೊತ್ತಿಗೆ ಅವನ ದೇಶದಲ್ಲಿ ಕ್ರಾಂತಿಯುಂಟಾಗಿ ಅಲ್ಲಿ ಸರ್ಕಾರವೇ ಇಲ್ಲದಂತಾಗಿರುವುದು ವಿಮಾನ ನಿಲ್ದಾಣದ ಟರ್ಮಿನಲ್‍ಗಳಲ್ಲಿ ಇರುವ ಟಿವಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿಬರುತ್ತಿರುತ್ತದೆ. ಈ ಅಂತರರಾಷ್ಟ್ರೀಯ ನಿಲ್ದಾಣದ ಟರ್ಮಿನಲ್ ಅಧಿಕಾರಿಯಾದ ಡಿಕ್ಸನ್ ದಕ್ಷ ಕಾನೂನು ಪಾಲಕ. ಆತನ ಕೈಗೆ ಸಿಕ್ಕಮೇಲೆ ಇವನ ಕತೆ ಮುಗೀತು. "You are the citizen of nowhere" ಅಂತ ಅವನ ಪಾಸ್ ಪೋರ್ಟ್ ಕಿತ್ತುಕೊಂಡು ಅತ್ತ ಅವನ ದೇಶವಾದ ಕ್ರಕೋಜಿಯಾಗೂ ಕಳಿಸದೆ, ಇತ್ತ ಅಮೇರಿಕಾಕ್ಕೂ ಬಿಡದೇ ವಿಮಾನ ನಿಲ್ದಾಣದ ಟರ್ಮಿನಲ್‍ನಲ್ಲಿ ಇರುವಂತೆ ಹೇಳಿ ಅವನಿಗೆ ಊಟದ ಕೂಪನ್ ಮತ್ತು ಅವನು ಇರುವ ಸ್ಥಳವಾದ ಗೇಟ್ ನಂಬರ್ ೬೭ ತಿಳಿಸಿ ಅವನನ್ನು ಸಿಸಿ ಕ್ಯಾಮೆರ ಮೂಲಕ ಗಮನಿಸಲಾರಂಭಿಸುತ್ತಾರೆ. ಅಲ್ಲಿಂದ ಮುಂದಕ್ಕೆ ನಡೆಯುವ ಕತೆಯೇ ನಿಮ್ಮ ಕುತೂಹಲ ಕೆರಳಿಸುತ್ತದೆ, ನೀವು ಅದೇ ಟರ್ಮಿನಲ್‍ನೊಳಗೆ ಒಬ್ಬರಾಗಿ ಈ ಕಥಾನಾಯಕನ ಚಲನವಲನವನ್ನು ಮೈಮರೆತು ವೀಕ್ಷಿಸುತ್ತೀರಿ. ಎಷ್ಟರಮಟ್ಟಿಗೆ ಎಂದರೆ ಚಿತ್ರ ಮುಗಿಯುವವರೆಗೂ.


 ವಿಕ್ಟರ್ ನವ್ರೋಸ್ಕಿ ಪಡೆದುಕೊಂಡ ಊಟದ ಕೂಪನ್ನುಗಳನ್ನು ಅಲ್ಲಿ ಕುಳಿತುಕೊಳ್ಳುವ ಕುರ್ಚಿಯ ಮೇಲಿಟ್ಟು ಪಕ್ಕದಲ್ಲಿರುವ ಹುಡುಗಿಗೆ ಸಹಾಯ ಮಾಡುವಾಗಿನ ಸಮಯದಲ್ಲಿ ಮಾಡಿಕೊಳ್ಳುವ ಎಡವಟ್ಟಿನಿಂದ ಆತನ ಒಳ್ಳೆಯತನ ಮತ್ತು ಮುಗ್ದತೆ ನಿಮ್ಮೊಳಗೆ ಆವರಿಸಿಕೊಳ್ಳುತ್ತದೆ. ಊಟದ್ ಕೂಪನ್ನುಗಳು ಹಾರಿಹೋಗಿ ಕಸದ ಕಣ್ಣೆದುರಿಗೆ ಕಸದ ಬುಟ್ಟಿಗೆ ಸೇರಿ ಅದನ್ನು ವಾಪಸ್ಸು ಪಡೆದುಕೊಳ್ಳಲು ಕೇಳಿದರೆ ಅಲ್ಲಿ ಕಸಗುಡಿಸುವ "ನಿಮ್ಮಲ್ಲಿ ಅಪಾಯಿಂಟ್‍ಮೆಂಟ್ ಇದೆಯೇ" ಎನ್ನುತ್ತಾನೆ ಭಾಷೆಯ ತೊಂದರೆಯಿಂದಾಗಿ ಊಟದ ಕೂಪನ್ನುಗಳನ್ನು ಕಳೆದುಕೊಳ್ಳುವ ನವ್ರೋಸ್ಕಿ ಹಾಗೆ ಉಪವಾಸ ಬೀಳುತ್ತಾನೆ. ರಾತ್ರಿ ಅಲ್ಲಿ ಮಲಗಲು ಅಲ್ಲಿರುವ ಚೇರುಗಳನ್ನು ಎಳೆದುಕೊಳ್ಳುವಾಗ್ ಅವು ಸರಿಯಿಲ್ಲದಿರುವುದು ಗೊತ್ತಾಗಿ ಅವುಗಳ ರಿಪೇರಿ ಮಾಡುತ್ತಾನೆ. ಎಲ್ಲೆಲ್ಲೋ ಇರುವ ಚೇರುಗಳನ್ನು ಒಟ್ಟುಮಾಡಿ ಅದರಿಂದ ಬರುವ ಚಿಲ್ಲರೆ ಹಣದಿಂದ ಪುಟ್ಟ ಬರ್ಗರ್ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಾನೆ. ಇದು ಮುಖ್ಯ ಅಧಿಕಾರಿಯ ಕಣ್ಣಿಗೆ ಬಿದ್ದು ಆ ಕೆಲಸಕ್ಕೆ ಮತ್ತೊಬ್ಬನನ್ನು ನೇಮಿಸಿ ಇವನನ್ನು ಮತ್ತಷ್ಟು ಪರೀಕ್ಷೆಗೆ ಒಡ್ಡಿ ಅವನ ಹೊಟ್ಟೆಗೆ ಕಲ್ಲು ಹಾಕುತ್ತಾರೆ. ಮನುಷ್ಯನಿಗೆ ಬುದ್ದಿಗಿಂತ ಹೃದಯವಂತಿಕೆ  ಮತ್ತು ಡೌನ್ ಟು ಅರ್ಥ್ ನಂತ ಸರಳತೆ ಇದ್ದರೆ ಪ್ರಪಂಚದಲ್ಲಿ ಎಲ್ಲಿ ಬೇಕಾದರೆ ಬದುಕಬಹುದು ಎನ್ನುವುದಕ್ಕೆ ಪಕ್ಕಾ ಉದಾಹರಣೆಯಾಗಿರುವ ನಾಯಕ ಅಂತ ಕಷ್ಟಕರ ಪರಿಸ್ಥಿತಿಯಲ್ಲೂ ತನ್ನ ಮುಗ್ದತೆಯಿಂದ ಅಲ್ಲಿಯೇ ಖುಷಿಯಿಂದ ಇರುತ್ತಾನೆ. ಮುಂದಿನ ರಾತ್ರಿ ಅವನು ಮಲಗುವಾಗ ಅಲ್ಲಿನ ಗೋಡೆ ಸರಿಯಿಲ್ಲದಿರುವುದನ್ನು ನೋಡಿ ಅದನ್ನು ರಾತ್ರೋ ರಾತ್ರಿ ಸರಿ ಮಾಡುತ್ತಾನೆ.  ಆಗ ಗೊತ್ತಾಗುತ್ತದೆ ಅವನೊಬ್ಬ ಕಂಟ್ರಾಕ್ಟರ್. ಆದ್ರೆ ಆತ ಕಾರ್ಪೆಂಟರಿ ಕೆಲಸ ಮಾಡಬಲ್ಲ, ಪೇಯಿಂಟಿಂಗ್ ಮಾಡಬಲ್ಲ, ವಿಭಿನ್ನವಾದ ಅಲೋಚನೆಯಲ್ಲಿ ಗೋಡೆಗೆ ಸುಂದರವಾದ ವಿನ್ಯಾಸವನ್ನು ಕೊಡಬಲ್ಲ ಸಕಲ ವಿಧ್ಯಾ ಪಾರಂಗತನಾಗಿರುತ್ತಾನೆ. ಅದರಿಂದಾಗಿ ಹಾಳಾದ ಒಂದು ರೂಮಿನ ಗೋಡೆಯನ್ನು ರಾತ್ರೋ ರಾತ್ರಿ ಕಾರ್ಪೆಂಟರಿ ಕೆಲಸ ಮಾಡಿ ಸುಂದರವಾದ ಪೇಂಟ್ ಮಾಡಿ ಇಟ್ಟಿರುತ್ತಾನೆ.  ಕೈಯಲ್ಲಿ ಕೆಲಸವಿದ್ದಲ್ಲಿ ದೇವರು ಹುಲ್ಲು ಮೇಯಿಸುತಾನ" ಎನ್ನುವಂತೆ ಅವನನ್ನು ಅದೇ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ.

     ಅಲ್ಲಿಂದ ಮುಂದಕ್ಕೆ ಚಿತ್ರ ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತದೆ. ಇಮಿಗ್ರೇಷನ್ ಅಧಿಕಾರಿಣಿಗೂ ಮತ್ತು ಆಡುಗೆ ಕೆಲಸ ಮಾಡುವ ಹುಡುಗನಿಗೂ ಪ್ರೇಮದ ಸೇತುವೆಯಾಗಿ ಅವರಿಬ್ಬರ ಮದುವೆಯಾಗುತ್ತದೆ. ಸದಾ ಇವನನ್ನು ಸಂಶಯಿಸುವ ಗುಪ್ತಾ ಎನ್ನುವ ಭಾರತೀಯ ಮುದುಕ ಇವನಿಗೆ ತುಂಬಾ ಅತ್ಮೀಯನಾಗುತ್ತಾನೆ. ವಿಮಾನ ಸೇವಕಿಯೊಬ್ಬಳ ಅನಿರೀಕ್ಷಿತ ಪರಿಚಯದಿಂದಾಗಿ ಅವಳೊಂದಿಗೆ ಪರಿಶುದ್ಧ ಪ್ರೇಮ, ಹೀಗೆ ಸಿನಿಮಾ ಹತ್ತಾರು ತಿರುವುಗಳನ್ನು ಪಡೆದುಕೊಳ್ಳುತ್ತಾ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವವರೆಲ್ಲರೂ ಇವನನ್ನು ಅತ್ಯುತ್ತಮ ಗೆಳೆಯರನ್ನಾಗಿ ಮಾಡಿಕೊಳ್ಳುತ್ತಾರೆ, ಅವರೆಲ್ಲರಿಗೂ ಈತ ಮರೆಯಲಾಗದ ಆತ್ಮಿಯ ಬಂಧುವಾಗಿಬಿಡುತ್ತಾನೆ.  ಅನೇಕ ಬಾರಿ ಇವನನ್ನು ದಾರಿ ತಪ್ಪಿ ತಪ್ಪು ಮಾಡುವಂತೆ ಮಾಡಿ ತಪ್ಪಿತಸ್ಥನಾಗಿ ಅಪರಾಧಿಯನ್ನಾಗಿಸಲು ಪ್ರಯತ್ನಿಸುವ ಮುಖ್ಯ ಅಧಿಕಾರಿಯ ಪ್ರಯತ್ನಗಳೆಲ್ಲ ಇವನ ಒಳ್ಳೆಯತನ ಮತ್ತು ಮುಗ್ದತೆಯಿಂದ ವಿಫಲವಾಗುವುದನ್ನು ನೀವು ಸಿನಿಮಾ ನೋಡಿ ಆನಂದಿಸುವಾಗಲೇ ನಿಮ್ಮ ಕಣ್ಣಂಚಲ್ಲಿ ನಿಮಗೆ ಗೊತ್ತಿಲದೇ ಹನಿ ಇಣುಕಿರುತ್ತದೆ. ಪೂರ್ತಿ ಸಿನಿಮಾ ಕತೆಯನ್ನು ಹೇಳಿದರೆ ನಿಮಗೆ ಸಿನಿಮಾ ನೋಡುವ ಥ್ರಿಲ್ ಮತ್ತು ಅದಕ್ಕಿಂತ ನೋಡುತ್ತಾ ಸಿಗುವ ಒಂದು ಅಪ್ಯಾಯತೆ ನಿಮ್ಮೊಳಗೆ ಉಂಟಾಗುವಂತದ್ದನ್ನು ನೀವೇ ಅನುಭವಿಸಬೇಕು!

        

  ಕೊನೆ ಕೊನೆಯ ಹಂತಕ್ಕೆ ಬರುತ್ತಿದ್ದಂತೆ ಕತೆ ನಿಮ್ಮನ್ನು ಅವರಿಸಿಕೊಳ್ಳುತ್ತದೆ.  ತನ್ನ ಆತ್ಮೀಯ ಪ್ರೇಮದ ಗೆಳತಿಯಲ್ಲಿ ಇಲ್ಲಿಗೆ ಬರಬೇಕಾದ ಸನ್ನಿವೇಶವನ್ನು ವಿವರಿಸುತ್ತಾನೆ. ಆತನ ತಂದೆ ಜಾಜ್ ಸಂಗೀತದ ಅಭಿಮಾನಿ. ೧೯೫೮ರಲ್ಲಿ ಪತ್ರಿಕೆಯಲ್ಲಿ ಬಂದ ಐವತ್ತೇಳು ಜನರ ಒಂದು ಫೋಟೋ ನೋಡಿ ಅವರೆಲ್ಲರಿಗೂ ಪತ್ರ ಬರೆದು ಅವರ ಆಟೋಗ್ರಾಫ್ ಸಹಿತ ಪಡೆದ ಪತ್ರವನ್ನು ಪೋಸ್ಟ್ ಪಡೆದುಕೊಂಡಿರುತ್ತಾರೆ ಒಬ್ಬರನ್ನು ಬಿಟ್ಟು. ಸಾಕ್ಸಫೋನ್ ದಂತಕತೆಯಾಗಿರುವ ಬೆನ್ನಿ ಗೋಲ್ಸನ್ ಎನ್ನುವ ಕಲಾವಿದನ ಆಟೋಗ್ರಾಪ್ ಪಡೆಯುವ ವೇಳೆಗೆ ಆತನ ತಂದೆ ಸತ್ತುಹೋಗುತ್ತಾನೆ. ಸಾಯುವ ಸಮಯದಲ್ಲಿ ಆತನ ತಂದೆ ಈ ವಿಚಾರವನ್ನು ನೀನು ಸಾಧ್ಯವಾದರೆ ಆವರ ಆಟೋಗ್ರಾಫ್ ಪಡೆದುಕೊ ಅಂತ ಹೇಳಿದಾಗ ನಮ್ಮ ನಾಯಕ ನವ್ರೋಸ್ಕಿ ಖಂಡಿತ ಪಡೆದುಕೊಳ್ಳುತ್ತೇನೆ ಅಂತ ಅಪ್ಪನಿಗೆ ಮಾತುಕೊಟ್ಟಿರುತ್ತಾನೆ. ಬೆನ್ನಿ ಗೋಲ್ಸನ್ ನ್ಯೂಯಾರ್ಕ ನಗರದಲ್ಲಿರುವುದು ತಿಳಿದು ಆತ ತನ್ನ ಕ್ರಕೋಜಿಯ ದೇಶದಿಂದ ಅಮೇರಿಕಾದ ನ್ಯೂಯಾರ್ಕ ವಿಮಾನ ನಿಲ್ದಾಣದಲ್ಲಿ ಇಳಿದ ಮೇಲೆ ಇದೆಲ್ಲ ಆಗಿಬಿಟ್ಟಿರುತ್ತದೆ. ಆತನ ಕತೆಯನ್ನು ಕೇಳಿದ ಇವನ ಗೆಳತಿ ಅವನಿಗಾಗಿ ಒಂದುದಿನದ ನ್ಯೂಯಾರ್ಕ್ ಪ್ರವಾಸವನ್ನು ವ್ಯವಸ್ಥೆಗೊಳಿಸುತ್ತಾಳೆ. ಅಲ್ಲಿಯವರೆಗೆ ಎಲ್ಲವೂ ಸರಿಯಾಗಿ ಸುಖಾಂತ್ಯವಾಯಿತು ಎನ್ನುವಷ್ಟರಲ್ಲಿ ಮತ್ತೆ ಕಾನೂನು ತೊಡಕು.  ಅಷ್ಟರಲ್ಲಿ ಅವನ ದೇಶ ಕ್ರಾಂತಿಯಿಂದ ಮುಕ್ತವಾಗಿರುತ್ತದೆ. ವಾಪಸ್ಸು ಇನ್ನೇನು ತನ್ನ ದೇಶಕ್ಕೆ ಹೋಗಬೇಕೆನ್ನುವಷ್ಟರಲ್ಲಿ  ಗುಪ್ತ ಎನ್ನುವ ಭಾರತೀಯ ಇವನು ಹೋಗುವ ವಿಮಾನವನ್ನೇ ತಡೆಯಿಡಿಯುತ್ತಾನೆ. ಇದರಿಂದ ವಿಮಾನ ಅನಿರೀಕ್ಷಿತ ಸಮಯದವರೆಗೆ ವಿಳಂಬವಾಗುತ್ತದೆ. ಇಲ್ಲಿಂದ ಮುಂದಕ್ಕೆ ನಿಜಕ್ಕೂ ಸಂಗರ್ಷವಾಗುವುದು ಕಾನೂನು ಮತ್ತು ಮಾನವೀಯ ಭಾವನೆಗಳೊಂದಿಗೆ.  ಇಡೀ ವಿಮಾನ ನಿಲ್ದಾಣದ ಟರ್ಮಿನಲ್‍ನಲ್ಲಿ ಕೆಲಸ ಮಾಡುವ ಎಲ್ಲರೂ ಇವನು ಒಂದು ದಿನ ನ್ಯೂಯಾರ್ಕ್ ನಗರಕ್ಕೆ ಹೋಗಿ ಅವನ ತಂದೆ ಆಸೆ ಪೂರೈಸಲಿ ಅಂತ ಕಾನೂನನ್ನು ದಿಕ್ಕರಿಸಿ ಅವನನ್ನು ನ್ಯೂಯಾರ್ಕ್ ಸಿಟಿಗೆ ಕಳಿಸಿಕೊಡುತ್ತಾರೆ. ತನ್ನ ತಂದೆಯ ಆಸೆ ಪೂರೈಸಿದ ತೃಪ್ತಿಯಿಂದ ಅಲ್ಲಿಂದ ಹೊರಬಂದ ನಾಯಕ ಖುಷಿಯಿಂದ ಹೇಳುವ ಕೊನೆಯ ಮಾತು "ನಾನು ನನ್ನ ದೇಶಕ್ಕೆ ಹೋಗುತ್ತೇನೆ" ಅದು ಆತನ ದೇಶಪ್ರೇಮವನ್ನು ಸಾರುತ್ತದೆ.

"ಅವನ್ಯಾಕೆ ಇಲ್ಲಿಂದ ತಪ್ಪಿಸಿಕೊಂಡು ಹೋಗುತ್ತಿಲ್ಲ, ಬಹುಶಃ ಅವನು ತಲೆಕೆಟ್ಟವನಿರಬೇಕು"

   ನಿನ್ನ ದೇಶದಲ್ಲಿ ಯುದ್ದವಾಗುತಿದೆ, ಈ ಸಮಯದಲ್ಲಿ ನೀನು ವಾಪಸ್ ನಿನ್ನ ದೇಶಕ್ಕೆ ಹೋಗುತ್ತೀಯಾ? ಅಂತ ಕೇಳಿದಾಗ ಆತ ಹೌದು ಹೋಗುತ್ತೇನೆ ಎನ್ನುತ್ತಾನೆ. ಇಲ್ಲ ಎಂದಿದ್ದಲ್ಲಿ ಆತನಿಗೆ ನ್ಯೂಯಾರ್ಕ್ ಸಿಟಿಯಲ್ಲಿ ರಾತ್ರಿ ಸುತ್ತಾಡಬಹುದು ಎನ್ನುವ ಅವಕಾಶವನ್ನು ಕೊಡುತ್ತಾರೆ. ಆರೆ ಆತ ತನ್ನ ದೇಶಾಭಿಮಾನದಿಂದಾಗಿ "ನನಗೆ ಕ್ರಕೋಜಿಯ ಭಯವಿಲ್ಲ,  ಅದಕ್ಕಿಂದ ನಿಮ್ಮ ರೂಮ್ ಸ್ವಲ್ಪ ಭಯವನ್ನು ತರುತ್ತಿದೆ" ಎಂದು ಹೇಳಿ ನ್ಯೂಯಾರ್ಕ್ ಸುತ್ತುವ ಅವಕಾಶವನ್ನು ತಪ್ಪಿಸಿಕೊಳ್ಳುತ್ತಾನೆ.
 
  ಹೀಗೆ ಹತ್ತಾರು ಸನ್ನಿವೇಶಗಳು ನಿಮ್ಮನ್ನು ವಿಧವಾಗಿ ಕಾಡಿಸುತ್ತವೆ.


         

   ಒಂದೇ ವಿಮಾನ ನಿಲ್ದಾಣದ ಟರ್ಮಿನಲ್‍ನಲ್ಲಿ ನಡೆಯುವಂತ ಇಂಥ ಅದ್ಬುತವಾದ ಕತೆಯನ್ನು ಎಣೆದ ನಿರ್ದೇಶಕ ಸ್ಟೀಫನ್ ಸ್ಪಿಲ್‍ಬರ್ಗ್ ಗೆ ನಿಜಕ್ಕೂ ಅಭಿನಂದನೆ ಸಲ್ಲಿಸಬೇಕು  ಇದೆಲ್ಲಕ್ಕಿಂತ ಮಿಗಿಲಾಗಿ ಇಡೀ ಚಿತ್ರದಲ್ಲಿ ನಾಯಕ ಟಾಮ್ ಹಾಂಕ್ ನಿಮ್ಮನ್ನು ಆವರಿಸಿಕೊಳ್ಳುತ್ತಾನೆ. ಕ್ಯಾಸ್ಟ್ ಅವೇ ಸಿನಿಮಾವನ್ನು ಮೊದಲು ನೋಡಿದಾಗ ನಾನು ಅವನ ಫ್ಯಾನ್ ಆಗಿಬಿಟ್ಟಿದೆ. ನಂತರ, ಫಾರೆಸ್ಟ್ ಗಂಫ್, ಸೇವಿಂಗ್ ಪ್ರವೈಟ್ ರಿಯಾನ್, ಗ್ರೀನ್ ಮೈಲ್, ಹೀಗೆ ಪ್ರತಿಯೊಂದು ಸಿನಿಮಾ ಕೂಡ ಅದ್ಬುತ ಕಲಾಕೃತಿಗಳೇ. ಈ ಸಿನಿಮದಲ್ಲಿ ಮೊದಲಿಗೆ ಕ್ರಕೋಜಿಯ ಪ್ರಜೆಯಾಗಿ ಅಧುನಿಕ ವಿಮಾನದಲ್ಲಿ ಕಳೆದುಹೋಗುವ ಮುಗ್ಧನಾಗಿ, ಯಾವುದೇ ಕ್ಷಣಕ್ಕೂ ಎಲ್ಲವನ್ನು ಸುಲಭವಾಗಿ ದೇವರು ಕೊಟ್ಟ ವರ ಎಂದುಕೊಂಡು ಭಾವೋದ್ವೇಗಕ್ಕೆ ಒಳಗಾಗದೇ ಸಿನಿಮಾ ನೋಡುವ ನಮ್ಮೊಳಗೆ ಭಾವೋದ್ವೇಗವನ್ನು ಉಕ್ಕಿಸುವ ಆತನ ನಟನೆಯನ್ನು ನಟನೆಯೆನ್ನಲು ಸಾಧ್ಯವಿಲ್ಲ. ಆತ ಅಲ್ಲಿ ಪಾತ್ರವಾಗಿ ಜೀವಿಸಿದ್ದಾನೆ. ಉಳಿದವರು ಪಾತ್ರಗಳು ಏನು ಕಡಿಮೆಯಿಲ್ಲ. ಯಾವುದೇ ಅದ್ಬುತ ತಾಂತ್ರಿಕತೆಯಿಲ್ಲದೇ ಕೇವಲ ಒಂದು ವಿಮಾನ ನಿಲ್ದಾಣದ ಟರ್ಮಿನಲ್ ಸೆಟ್‍ನಲ್ಲಿ ಯಾವುದೇ ಗಿಮಿಕ್ ಇಲ್ಲದೇ ಒಂದು ಚಿತ್ರವನ್ನು ತಯಾರಿಸಬೇಕಾದರೆ ಪಾತ್ರಧಾರಿಗಳ ನಟನೆಯೇ ಜೀವಾಳವಾಗಬೇಕಾಗುತ್ತದೆ.  ಅದೆಲ್ಲವೂ ಈ ಚಿತ್ರದಲ್ಲಿದೆ. ಇಂಥ ಚಿತ್ರವನ್ನು ಮಿಸ್ ಮಾಡಿಕೊಳ್ಳಬೇಡಿ.
 
 

ಚಿತ್ರಗಳು: ಅಂತರಜಾಲ
ಲೇಖನ : ಶಿವು.ಕೆ