Thursday, December 2, 2010

ಬೇಸರಗೊಂಡು ಜಿಗುಪ್ಸೆಯಿಂದ ಕಪ್ಪುಬಣ್ಣಕ್ಕೆ ತಿರುಗಿ.....

         

             ಆಗಷ್ಟೇ ಕಾಫಿ ಪುರಾಣದ ಲೇಖನವನ್ನು ಬರೆಯಲು ಕುಳಿತಿದ್ದೆ.  ಐದಾರು ಸಾಲು ಬರೆಯುವಷ್ಟರಲ್ಲಿ ಅದ್ಯಾಕೋ ತಟ್ಟನೆ ನಿಂತು ಹೋಯಿತು. ಏನೇ ಪ್ರಯತ್ನಿಸಿದರೂ ಸರಾಗವಾಗಿ ಸಾಗುತ್ತಿಲ್ಲ. ಅಂತ ಸಮಯದಲ್ಲಿ ಕಂಪ್ಯೂಟರ್ ಬಿಟ್ಟು ಹೊರಗೆ ಬಂದು ಐದು ನಿಮಷ ರಸ್ತೆಯನ್ನು ನೋಡುತ್ತಾ ನಿಂತುಬಿಡುತ್ತೇನೆ. ಸ್ವಲ್ಪ ರಿಲ್ಯಾಕ್ಸ್ ಸಿಕ್ಕಿತು ಅನ್ನಿಸಿದಾಗ ಮತ್ತೆ ಒಳಗೆ ಬಂದು ಕುಳಿತು ಬರೆಯಲು ಪ್ರಾರಂಭಿಸಿದರೆ ಎಂದಿನಂತೆ ಸಹಜವಾಗಿ ಬರವಣಿಗೆಯ ಅಕ್ಷರಗಳು ನೀರಿನಂತೆ ಹರಿಯಲಾರಂಭಿಸುತ್ತವೆ.  ಇದು ನಾನು ಕಂಡುಕೊಂಡ ಒಂದು ಸಣ್ಣ ಬರಹದ ಯುರೇಕ.  ಆದ್ರೆ ಅವತ್ತು ಅದ್ಯಾಕೋ ಈ ವಿಧಾನದಿಂದಲೂ ಬರಹ ವೇಗ ಪಡೆಯಲಿಲ್ಲ. ಸರಿ ಟೀ ಅಥವ ಕಾಫಿ ಕುಡಿದರೆ ಎಲ್ಲಾ ಸರಿಹೋಗುತ್ತದೆ ಎಂದುಕೊಂಡು ಅಡುಗೆ ಮನೆ ಕಡೆ ನೋಡಿದ್ರೆ ಹೇಮಾಶ್ರೀ ಇಲ್ಲ. ಅವಳು ಅಕ್ಕನ ಮನೆಗೆ ತುಮಕೂರಿಗೆ ಹೋಗಿದ್ದಾಳಲ್ಲ...ಅದು ಮರೆತೇಹೋಗಿತ್ತು. ಸರಿ ನಾನೇ ಹೋಗಿ ಮಾಡಿಕೊಳ್ಳೋಣವೆಂದುಕೊಂಡು ಅಡುಗೆಮನೆಗೆ ಹೋದೆ.   ನಮ್ಮ ಮನೆಯ ಕಾಫಿ ನನಗಿಷ್ಟವಾದರೂ ನನಗೆ ಹೇಮಾಶ್ರೀಯಷ್ಟು ಚೆನ್ನಾಗಿ ಮಾಡಲು ಬರುವುದಿಲ್ಲ.  ಬಿಸಿನೀರು ಕಾಯಿಸಿ ಅದಕ್ಕೆ ಸರಿಯಾದ ಅಳತೆಯ ಕಾಫಿಪುಡಿ ಹಾಕಿ ಫಿಲ್ಟರ್ ತೆಗೆದು ಸರಿಯಾದ ಪ್ರಮಾಣದಲ್ಲಿ ಸಕ್ಕರೆ ಮಿಶ್ರಿತ ಹಾಲನ್ನು ಹಾಕಿ ಹಬೆಯಾಡುವ ಕಾಫಿ ಮಾಡುವುದೇನಿದ್ದರೂ ಅವಳಿಗೆ ಸರಿ. ನನಗೆ ಅಷ್ಟೆಲ್ಲಾ ಮಾಡಿಕೊಳ್ಳುವ ತಾಳ್ಮೆಯೂ ಇರಲಿಲ್ಲವಾದ್ದರಿಂದ ಟೀ ಮಾಡಿಕೊಂಡು ಕುಡಿಯೋದು ಒಳ್ಳೆಯದು ಅಂದುಕೊಂಡೆ. ಮತ್ತೊಂದು ವಿಚಾರವೆಂದರೆ ನಾನು ತುಂಬಾ ಚೆನ್ನಾಗಿ ಟೀ ಮಾಡುತ್ತೇನೆ. ನನಗೇ ಬೇಕಾದ ಹಾಗೆ ಎರಡು ಅಥವ ಮೂರು ವಿಧಾನದ ಟೀ ಪುಡಿಗಳನ್ನು ತಂದಿಟ್ಟುಕೊಂಡು ಹೇಮಾಶ್ರೀ ಇಲ್ಲದಾಗ ನನಗೆ ಬೇಕಾದ ಹಾಗೆ ಸೊಗಸಾಗಿ ಅದ್ಬುತ ರುಚಿಯುಳ್ಳ ಟೀ ಮಾಡಿಕೊಂಡು ಕುಡಿಯುತ್ತಾ ಅನಂದಿಸುತ್ತೇನೆ. ಈ ವಿಚಾರದಲ್ಲಿ ನನ್ನನ್ನು ಹೊಗಳಿಕೊಳ್ಳುತ್ತಿಲ್ಲ. ಏಕೆಂದರೆ ನನ್ನ ಮನೆಗೆ ಅನೇಕ ಫೋಟೊಗ್ರಫಿ ಗೆಳೆಯರು ಮತ್ತು ಬ್ಲಾಗ್ ಗೆಳೆಯರು ಬಂದಾಗ ನಾನು ಮಾಡಿದ ಟೀ ರುಚಿಯನ್ನು ನೋಡಿರುವುದರಿಂದ ನೀವು ಅವರನ್ನು ಕೇಳಿ ನನಗೆ ಸರ್ಟಿಫಿಕೆಟ್ ಕೊಡಬಹುದು.


              ಗ್ಯಾಸ್ ಸ್ಟವ್ ಹತ್ತಿಸಿ ಹಾಲಿನ ಪಾತ್ರೆಯನ್ನು ಇಟ್ಟು ನನಗಿಷ್ಟವಾದ ಆಯುರ್ವೇದದ ಅನೇಕ ದ್ರವ್ಯಗಳನ್ನು ಸೇರಿಸಿ ತಯಾರಿಸಿದ ರೆಡ್ ಲೇಬಲ್ಲಿನ ನೇಚರ್ ಕೇರ್ ಟೀ ಪುಡಿಯನ್ನು ಸ್ವಲ್ಪ ಗಟ್ಟಿಹಾಲು, ನನಗೆ ಬೇಕಷ್ಟು ಸಕ್ಕರೆಯನ್ನು ಹಾಕಿ ಕುದಿಯಲು ಬಿಟ್ಟು ಕಂಪ್ಯೂಟರಿನ ಮುಂದೆ ಬಂದು ಕುಳಿತೆ. ಅದ್ಯಾವ ಮಾಯದಲ್ಲಿ ಕಾಫಿಯ ಅರೋಮ ತಲೆಗೇರಿತೋ ಗೊತ್ತಿಲ್ಲ. ಲೇಖನ ಹರಿಯುವ ನದಿಯಂತೆ ಅಡೆತಡೆಯಿಲ್ಲದೆ ಸಾಗಿ ಸರಿಸುಮಾರು ಒಂದು ತಾಸು ಅಲುಗಾಡದೇ ಬರೆದುಮುಗಿಸಿದ್ದೆ.


          ಒಂದು ಲೇಖನವನ್ನು ಬರೆದು ಮುಗಿಸಿ ಒಮ್ಮೆ ಎರಡು ಕೈಗಳನ್ನೆತ್ತಿ ಮೈಯನ್ನೆಲ್ಲಾ ಅತ್ತ ಇತ್ತ ಅಲುಗಾಡಿಸಿ ಮೈಮುರಿದು ರೆಲ್ಯಾಕ್ಸ್ ಆಗುವುದಿದೆಯಲ್ಲಾ ಅದು ಮತ್ತು ಮುಗಿಸಿದಾಗಿನ ಅನುಭವದಲ್ಲಿ ತೇಲಿಹೋಗುವುದಿದೆಯಲ್ಲಾ ಅದನ್ನು ಅನುಭವಿಸಿಯೇ ತೀರಬೇಕು. ಇಲ್ಲೂ ಹಾಗೆ ಮಾಡಿ ಒಂದು ಕ್ಷಣ ಹಾಗೆ ಕುಳಿತಲ್ಲಿಯೇ ಕಣ್ಣು ಮುಚ್ಚಿದೆನಲ್ಲಾ! ಎಷ್ಟು ಹೊತ್ತು ಹಾಗೆ ಇದ್ದೆನೋ ಗೊತ್ತಿಲ್ಲ ಎಚ್ಚರವಾದಾಗ ಯಾವುದೋ ಒಂದು ವಾಸನೆ ಮೂಗಿಗೆ ನಿದಾನವಾಗಿ ತಾಕುತ್ತಿದೆ! ಕಾಫಿಯ ಲೇಖನದಿಂದಾಗಿ ಕಾಫಿಯ ನೊರೆನೊರೆ ಮತ್ತು ಅದರ ಸ್ವಾದವನ್ನು ಮಾನಸಿಕವಾಗಿ ಅನುಭವಿಸುತ್ತಿದ್ದವನಿಗೆ ಇದ್ಯಾವುದೋ ಹೊಸ ವಾಸನೆ ಕಾಫಿಯ ಸುವಾಸನೆಯ ನಡುವೆ ಜಾಗಮಾಡಿಕೊಂಡು ಬಂದು ಮೂಗಿಗೆ ತೊಂದರೆ ಕೊಡುತ್ತಿದ್ದೆಯಲ್ಲಾ!  ಒಂಥರ ಸುಟ್ಟ ಕಮಟು ವಾಸನೆಯಂತಿದೆ! ಏನಿರಬಹುದು ಯೋಚಿಸಿದೆ. ಗೊತ್ತಾಗಲಿಲ್ಲ. ಸುಟ್ಟವಾಸನೆಯೆಂದರೆ ನಮ್ಮ ಓಣಿಯಲ್ಲಿ ಯಾರೋ ಸ್ಟವ್ ಮೇಲೆ ಏನನ್ನೋ ಬೇಯಿಸಲು ಇಟ್ಟು ಮರೆತಿರುವುದರಿಂದ ಈ ವಾಸನೆ ಬರುತ್ತಿರಬಹುದು ಇರಲಿಬಿಡಿ ನಮಗ್ಯಾಕೆ ಪಕ್ಕದ ಮನೆಯ ಚಿಂತೆ ಎಂದುಕೊಂಡು ಈಗ ಒಂದು ಸೊಗಸಾದ ಟೀ ಮಾಡಿಕೊಂಡು ಕುಡಿಯೋಣ ಎಂದು ಎದ್ದೆ. 


              ಓಹ್! ಟೀ ಮತ್ತೆ ಮಾಡುವುದೇನು ಬಂತು! ಆಗಲೇ ಟೀ ಮಾಡಲು ಸ್ಟವ್ ಮೇಲೆ ಇಟ್ಟಿದ್ದ ಪಾತ್ರೆ ನೆನಪಾಯಿತು. ಸಮಯ ನೋಡಿಕೊಂಡೆ. ಸರಿಸುಮಾರು ಒಂದುವರೆಗಂಟೆ ದಾಟಿಹೋಗಿದೆ! ತಕ್ಷಣ ಎದ್ದೆನೋ ಬಿದ್ದೆನೋ ಎನ್ನುವಂತೆ ಆಡುಗೆ ಮನೆಗೆ ನುಗ್ಗಿದೆ. ಏನು ಆಗಬಾರದಿತ್ತೋ ಅದು ಆಗಿಹೋಗಿತ್ತು. ಅರ್ಧ ಸ್ಪೂನ್ ಟೀಪುಡಿ ಮತ್ತು ಒಂದು ಸ್ಪೂನ್ ಸಕ್ಕರೆ ಬೆರೆತ ನೂರೈವತ್ತು ಎಂಎಲ್ ಹಾಲಿದ್ದ ಆ ಪುಟ್ಟ ಟೀ ಮಾಡುವ ಪಾತ್ರೆ ಒಂದುವರೆಗಂಟೆಗೂ ಹೆಚ್ಚುಕಾಲ  ಹೈ ವಾಲ್ಯೂಮ್ ಸಿಮ್‍ನಲ್ಲಿ ಬೆಂದು ಬೇಸತ್ತು ಸಿಟ್ಟಿನಿಂದ ಅನೇಕ ಬಾರಿ ಕುದ್ದು ಕೊನೆಗೆ ಅದರ ಸಿಟ್ಟನ್ನು ಗಮನಿಸುವವರು ಯಾರು ಇಲ್ಲದಿರುವಾಗ ಬೇಸರಗೊಂಡು ಜಿಗುಪ್ಸೆಯಿಂದ ಕಪ್ಪುಬಣ್ಣಕ್ಕೆ ತಿರುಗಿ ತಳಸೇರುವುದರ ಜೊತೆಗೆ ಪಾತ್ರೆಯ ಒಳಸುತ್ತೆಲ್ಲಾ ಕಾಂಕ್ರೀಟಿನಂತೆ ಮೆತ್ತಿಕೊಂಡುಬಿಟ್ಟಿದೆ!  ಟೀ ಸುಟ್ಟು ಕರಕಲಾದ ವಾಸನೆಯಂತೂ ಇಡೀ ಮನೆಯನ್ನು ಅವರಿಸಿಬಿಟ್ಟಿದೆ! ಅಯ್ಯೋ ಎಂಥ ಪ್ರಮಾದವಾಯಿತು!  ಏನು ಮಾಡುವುದು?  ಆಗ ತಕ್ಷಣ ಹೊಳೆದ ಉಪಾಯ ಪಾತ್ರೆಗೆ ನೀರು ಹಾಕುವುದು. ಹಾಕಿದೆ. ಇದರಿಂದಾಗಿ ಕಮಟು ಮತ್ತಷ್ಟು ಹೆಚ್ಚಾಗಿ ಮನೆಯಲ್ಲಾ ಮತ್ತಷ್ಟು ಆವರಿಸಿತೋ ವಿನಃ ಕಡಿಮೆಯಾಗಲಿಲ್ಲ. ಆ ಪಾತ್ರೆಯನ್ನು ಮನೆಯ ಹಾಲಿಗೆ ತಂದಿಟ್ಟು ಫ್ಯಾನ್ ಜೋರಾಗಿ ಹಾಕಿದೆ.


            ಅರ್ಧ ಗಂಟೆ ನಾನು ಚೇರಿನಲ್ಲಿ ಕುಳಿತಿದ್ದರೂ ಆ ಪಾತ್ರೆ ನನ್ನ ಮುಂದೆ ಪ್ಯಾನ್ ಕೆಳಗಿದ್ದರೂ ವಾತವರಣದಲ್ಲಿ ಎಳ್ಳಷ್ಟು ಬದಲಾವಣೆಯಾಗಲಿಲ್ಲ. ಇರಲಿ ಸವಾಲುಗಳು ನಮಗೆ ಬರದೇ ಇನ್ಯಾರಿಗೆ ಬರಲು ಸಾಧ್ಯ! ಎನ್ನುವ ಒಂದು ಅದ್ಯಾತ್ಮದ ಮಾತನ್ನು ನೆನೆಸಿಕೊಂಡು ಮನೆಯಲ್ಲಿರುವ ಎಲ್ಲಾ ತರಹದ ಪುಡಿಗಳಿಂದ ಉಜ್ಜಿ ತಿಕ್ಕಿ ತೊಳದು ಒಪ್ಪ ಮಾಡಿ ಯಾವುದಾದರೂ ಒಂದು ಸೆಂಟ್  ಹೊಡೆದುಬಿಟ್ಟರೆ ಮುಗೀತು ಇದು ಖಂಡಿತ ನನ್ನ ಶ್ರೀಮತಿಗೆ ಗೊತ್ತಾಗುವುದಿಲ್ಲವೆಂದುಕೊಂಡು ಒಂದೊಂದೇ ಪುಡಿಯನ್ನು ಹಾಕುವುದು ಚೆನ್ನಾಗಿ ಉಜ್ಜುವುದು ತಿಕ್ಕುವುದು ಪ್ರಾರಂಭಿಸಿದೆ.  ಅದು ಯಾವ ಪರಿ ಮೆತ್ತಿಕೊಂಡಿತ್ತೆಂದರೆ ಗೋಡೆಗೆ ಹಾಕಿದ ಕಾಂಕ್ರೀಟನ್ನಾದರೂ ಕೆತ್ತಿ ಹಾಕಬಹುದಿತ್ತೇನೋ! ಆದ್ರೆ ಇದು ಮಾತ್ರ ಅದಕ್ಕಿಂತ ಗಟ್ಟಿಯಾಗಿ ಪಾತ್ರೆಯ ಒಳಭಾಗಕ್ಕೆ ಅಂಟಿಕೊಂಡುಬಿಟ್ಟಿತ್ತು.  ಕೊನೆಗೆ ಮನೆಯಲ್ಲಿದ್ದ ಚಾಕು ಕತ್ತರಿ ಇನ್ನಿತರ ಆಯುಧಗಳಿಂದ ಉಜ್ಜಿ ಕೆತ್ತಿ ಬಿಡಿಸಲೆತ್ನಿಸಿದೆ.  ಉಹೂಂ! ಜಪ್ಪಯ್ಯ ಅಂದರೂ ಬಿಡಲಿಲ್ಲ. ಸ್ವಲ್ಪ ಜೋರಾಗಿ ಶಕ್ತಿಪ್ರಯೋಗ ಮಾಡಿದಾಗ ಪಾತ್ರೆಯು ಅಲ್ಲಲ್ಲಿ ತಗ್ಗಾಯಿತೋ ವಿನಃ "ನಾನಿನ್ನ ಬಿಡಲಾರೆ" ಅಂತ ಗಟ್ಟಿಯಾಗಿ ಅಂಟಿಕೊಂಡುಬಿಟ್ಟಿತ್ತು. 


         ಇಷ್ಟೆಲ್ಲಾ ಅವಾಂತರದ ನಡುವೆ ಹೇಮಾಶ್ರೀ ನೆನಪಾದಳಲ್ಲ!  ಮೊದಲಿಂದಲೂ ಅವಳಿಗೆ ಅಡುಗೆ ಮನೆ ವಿಚಾರದಲ್ಲಿ ನನ್ನ ಬಗ್ಗೆ ಸಣ್ಣ ಗುಮಾನಿ ಇದ್ದೆ ಇತ್ತು.  ಅವಳು ಪ್ರತಿ ಭಾರಿ ಊರಿಗೆ ಹೋಗುವಾಗಲು ವಿಧವಿಧವಾದ ತರಾವರಿ ಎಚ್ಚರಿಕೆ ಕೊಟ್ಟೇ ಹೋಗುತ್ತಿದ್ದಳು.  ಅಷ್ಟು ಎಚ್ಚರಿಕೆ ಕೊಟ್ಟರೂ ನಾನು ಇಂಥ ಎಡವಟ್ಟು ಮಾಡಿಕೊಂಡುಬಿಟ್ಟೆನಲ್ಲಾ!  ಅವಳಿಗಂತೂ ಅಡುಗೆ ಮನೆಯ ಪಾತ್ರೆಗಳನ್ನು ಕಂಡರೇ ವಿಶೇಷ ಒಲವು ಮತ್ತು ಪ್ರೀತಿ. ತನಗಿಷ್ಟವಾದದ್ದನ್ನು ಹುಡುಕಿ ತಂದು ಇಟ್ಟುಕೊಳ್ಳುವವಳು. ಒಂದು ಚಮಚ ಕಣ್ಣಿಗೆ ಕಾಣಿಸದಿದ್ದರು ಅದು ಸಿಗುವವರೆಗೂ ಬಿಡುವುದಿಲ್ಲ ಹುಡುಕಾಟ ನಡೆಸುತ್ತಾಳೆ.  ಈಗ ಅವಳ ಕಣ್ಣಿಗೆ ಈ ತಳತಳ ಹೊಳೆಯುವ ಬೆಳ್ಳಿಯ ಹೊಳಪುಳ್ಳ  ಟೀಪಾತ್ರೆಗೆ ಬಂದಿರುವ ಸ್ಥಿತಿ ನೋಡಿದರೆ ನನ್ನ ಗತಿ ಏನು?  ಇದಕ್ಕೆ ಏನಾದರೂ ಪರಿಹಾರ ಕಂಡುಹಿಡಿಯಲೇ ಬೇಕು ಅಂತ ಯೋಚಿಸಿದಾಗ ಹೊಳೆದಿದ್ದು ಇದನ್ನು ಯಾರಿಗೂ ಕಾಣದಂತೆ ಹೊರಗೆ ಹೋಗಿ ಬಿಸಾಡಿಬರುವುದು ಅಂತ.  ಸರಿ ಅದರಂತೆ ಕಾರ್ಯೋನ್ಮುಖನಾದೆ.
       
     
        ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರಿನೊಳಗೆ ಅದನ್ನು ಹಾಕಿಕೊಂಡು ಮನೆಯಿಂದ ಹೊರಬಂದಾಗ ನಮ್ಮ ಓಣಿಯವರು ಯಾರು ಕಾಣಲ್ಲಿಲ್ಲ. ಮನೆಯಲ್ಲಿ ನಾನೊಬ್ಬನೇ ಇದ್ದಿದ್ದರಿಂದ ಮನೆಗೆ ಬೀಗಹಾಕಿಕೊಂಡು ಹೊರಬಂದು ನಿದಾನವಾಗಿ ಓಣಿಯಲ್ಲಿ ನಡೆಯತೊಡಗಿದೆ. ಕವರಿನೊಳಗಿದ್ದ ವಸ್ತುವಿನಿಂದ ಬರುತ್ತಿದ್ದ ವಾಸನೆ ಎಷ್ಟು ದಟ್ಟವಾಗಿತ್ತೆಂದರೆ ಖಂಡಿತ ಇಷ್ಟು ಹೊತ್ತಿಗೆ ನಮ್ಮ ಓಣಿಯ ಹೆಂಗಸರ ನಾಸಿಕಕ್ಕೆ ತಲುಪಿ ಯಾರಾದರೂ ಬಂದು ಕೇಳುತ್ತಾರೇನೋ ಅಂದುಕೊಂಡೆ. ಸದ್ಯ ಯಾರು ಬರಲಿಲ್ಲ ಮತ್ತು ಕೇಳಲಿಲ್ಲವಾದ್ದರಿಂದ ಬಚಾವಾದೆನೆಂದುಕೊಂಡು ಮುಖ್ಯ ಗೇಟ್ ದಾಟಿ ರಸ್ತೆ ತಲುಪಿ ಸುತ್ತಲೂ ನೋಡಿದೆ ಯಾರೂ ಇರಲಿಲ್ಲ.  ಇಲ್ಲೇ ರಸ್ತೆಯಲ್ಲೇ ಹಾಕಿಬಿಡಲಾ? ಏಕೆಂದರೆ ನಮ್ಮ ರಸ್ತೆಯ ಎಲ್ಲಾ ಮನೆಯವರು ಬೆಳಿಗ್ಗೆ ಏಳುಗಂಟೆಗೆ ಸರಿಯಾಗಿ ತಮ್ಮ ಮನೆಯ ಕಸದ ಡಬ್ಬ ಅಥವ ಪ್ಲಾಸ್ಟಿಕ್ ಪೇಪರಿನಲ್ಲಿ ತುಂಬಿದ ಕಸವನ್ನು ರಸ್ತೆಯ ಬದಿಯಲ್ಲಿ ಇಟ್ಟುಬಿಡುತ್ತಾರೆ. ನಿತ್ಯ ಬೆಳಿಗ್ಗೆ ಏಳುಗಂಟೆಗೆ ಬಿಬಿಎಂಪಿಯ ಕೆಲಸದವರು ಗಂಟೆ ಬಾರಿಸುತ್ತ ಅದನ್ನೆಲ್ಲಾ ಒಂದು ಆಟೋದಲ್ಲಿ ತುಂಬಿಸಿಕೊಂಡು ಹೋಗಿಬಿಡುತ್ತಾರೆ. ನಾನು ಮಾಡುತ್ತಿರುವುದು ಸರಿಯಾಗಿದೆ ಎನಿಸಿ ನಾವು ಟೂವೀಲರುಗಳನ್ನು ಪಾರ್ಕ್ ಮಾಡುವ ಜಾಗದಲ್ಲಿಯೇ ಕಸವೆನ್ನುವ ರೀತಿಯಲ್ಲಿ ನೆಲದ ಮೇಲೆ ಇಟ್ಟು ನಮ್ಮ ಗೇಟಿನ ಬಳಿಬಂದು ಸಹಜವಾಗಿ ರಸ್ತೆಯಲ್ಲಿ ಹೋಗಿಬರುವ ಜನರನ್ನು ನೋಡತೊಡಗಿದೆ.  ಸ್ವಲ್ಪ ಹೊತ್ತಿಗೆ ಒಂಥರ ದಿಗಿಲಾಗತೊಡಗಿತ್ತು. ಏಕೆಂದರೆ ಅದು ಕಸವಲ್ಲ. ಕಸವನ್ನು ಮೀರಿದ ಒಂದು ಪಾತ್ರೆಯಿದೆ. ಅದರೊಳಗೆ ಕಮಟು ವಾಸನೆ ಬರುತ್ತಿದೆ. ನಮ್ಮ ಓಣಿಯ ಅಥವ ರಸ್ತೆಯ ಹಿರಿಯರು ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗಿ ಇದರ ಕಡೆ ಗಮನ ಕೊಡದಿದ್ದರೂ ನಮ್ಮ ಓಣಿಯ ಮಕ್ಕಳು ಸಾಮಾನ್ಯರಲ್ಲ. ಇಂಥವನ್ನು ಕಂಡುಹಿಡಿಯುವುದೇ ಅವರ ಕೆಲಸ. ಹೊಸ ವಾಸನೆ ಬಂತೆಂದರೆ ಸಾಕು ಅದೆಲ್ಲಿಂದ ಬಂತು ಹೇಗೆ ಬಂತು? ಅದರ ಕಾರಣಕರ್ತರು ಯಾರೂ? ಹೀಗೆ ಸಣ್ಣ ಹುಡುಕಾಟ ನಡೆಸುತ್ತಾ, ತಮ್ಮೊಳಗೆ ಕುತೂಹಲವನ್ನು ಬೆಳೆಸಿಕೊಳ್ಳುತ್ತಾ...ಅದರ ಬಗ್ಗೆ ಗಾಸಿಪ್ ಹಬ್ಬಿಸಿ ದೊಡ್ಡವರ ಗಮನವನ್ನು ಸೆಳೆದು ಕೊನೆಗೆ ಸುಮ್ಮನಾಗಿಬಿಡುತ್ತಾರೆ.

            ಅಲ್ಲಿಗೆ ಮುಗಿಯುತು. ದೊಡ್ಡವರು ಇದು ಎಲ್ಲಿಂದ ಬಂತು ಯಾರಮನೆಯದು? ಇತ್ಯಾದಿ ತಲಾಸು ಮಾಡಲು ಶುರುಮಾಡಿದರೆ! ಅಯ್ಯಯ್ಯೋ ಬೇಡವೇ ಬೇಡ! ...........

          ಮುಂದೇನಾಯಿತು.. ಇನ್ನುಳಿದ ತರಲೇ ತಾಪತ್ರಯಗಳು ಮುಂದಿನ ಭಾಗದಲ್ಲಿ ಅಲ್ಲಿಯವರೆಗೆ ಸುಟ್ಟ ಟೀ ಕಮಟುವಾಸನೆಯನ್ನು ಆನಂದಿಸುತ್ತಿರಿ...


ಲೇಖನ : ಶಿವು.ಕೆ


Wednesday, November 10, 2010

ಗಾಜಿನ ಲೋಟದ ಅರ್ಧ ಕಾಫಿ

             ಸಂಜೆ ೪ ಗಂಟೆಗೆ ಒಳಗೆ ಹೋಗಿ ೬ಕ್ಕೆ ನವರಂಗ್ ತಿಯೇಟರಿನಿಂದ ಭಟ್ಟರ ಪಂಚರ್ ಅಂಗಡಿ ಅಲ್ಲಲ್ಲ ಪಂಚರಂಗಿ ಸಿನಿಮಾವನ್ನು ನಾನು ಮತ್ತು ಹೇಮಾಶ್ರೀ ನೋಡಿ ಹೊರಬಂದಾಗ ಸಣ್ಣಗೆ ಮಳೆ.  ಸಿನಿಮಾ ಹೇಗನ್ನಿಸಿತು ಅಂತ ನಾನವಳನ್ನು ಕೇಳಿದೆ.  "ಸಿನಿಮಾ ತೀರಾ ಚಿಕ್ಕದಾಯ್ತು ಕಣ್ರಿ, ಹಾಗ್ ಹೋಗಿ ಹೀಗ್ ಬಂದಂಗೆ ಆಯ್ತು" ಅಂದಳು.  ಅವಳ ಪ್ರಕಾರ್‍ಅ ಸಿನಿಮಾ ದೊಡ್ಡದಿರಬೇಕು. ಅವಳ ಚಿಕ್ಕಂದಿನಲ್ಲಿ ಅವರ ಮನೆಯಲ್ಲಿ ಯಾರಾದರೂ ಸಿನಿಮಾಗೆ ಕರೆದುಕೊಂಡು ಹೋಗುತ್ತಾರೆಂದರೆ ಬೆಳಿಗ್ಗೆ ಎಂಟುಗಂಟೆಯಿಂದಲೇ ಸಿನಿಮಾ ದ್ಯಾನ.  ಮಕ್ಕಳೆಲ್ಲಾ ಸೇರಿ ನಾವು ಸಿನಿಮಾ ಹೋಗುತ್ತಿದ್ದೇವೆಂದು ಒಂದು ರೌಂಡ್ ಡಂಗುರ ಬಾರಿಸಿ, ಮಧ್ಯಾಹ್ನವಾಗುತ್ತಿದ್ದಂತೆ ಊಟ ಮಾಡಿ ಒಂದಷ್ಟು ಚಕ್ಕಲಿ,ಕೋಡುಬಳೆ, ನುಪ್ಪಟ್ಟು, ಬಾಳೆಹಣ್ಣು ಬುತ್ತಿ ಮಾಡಿಕೊಂಡು ಹೊರಟರೆ ಸಿನಿಮಾನೋಡಿ ಸಂಜೆ ಮನೆಗೆ ಬರುತ್ತಾ ಹೋಟಲ್ಲಿನಲ್ಲಿ ಮಸಾಲೆ ದೋಸೆ, ಕಾಫಿ...ಹೀಗೆ ಎಲ್ಲಾ ಮುಗಿಯುವ ಹೊತ್ತಿಗೆ ಕತ್ತಲಾಗಿರುತ್ತಿತ್ತು. ಅದು ಕಣ್ರಿ ಸಿನಿಮಾ ನೋಡಾಟ ಎಂದು ಆಗಾಗ ಹೇಳುತ್ತಿರುತ್ತಾಳೆ.  ಅವಳ ಮಾತು ಕೇಳಿ ನನಗೂ ಬಾಲ್ಯದ ನೆನಪಾಯಿತಾದರೂ ಬಾ ಒಂದು ಒಳ್ಳೇ ಕಾಫಿ ಕೊಡಿಸುತ್ತೇನೆ ಅಂತ ಪಕ್ಕದಲ್ಲೇ ಹೊಸದಾಗಿ ತೆರೆದುಕೊಂಡಿದ್ದ "ಹಟ್ಟಿ ಕಾಫಿ"ಗೆ ಕರೆದುಕೊಂಡು ಹೋದೆ. ಇತ್ತೀಚೆಗೆ ಯಾವುದೇ ಟ್ರೆಂಡ್ ಶುರುವಾದರೂ ಅದು ರಿವರ್ಸ್ ಆರ್ಡರಿನಲ್ಲಿ ಬಂದಂತೆ ನನಗನ್ನಿಸುತ್ತದೆ. ಏಕೆಂದರೆ ಮೊದಲೆಲ್ಲಾ ಹಳೆಯದನ್ನು ಮುಚ್ಚಿಹಾಕಿ ಹೊಸದಾಗಿ ಕೆಪೆಚಿನೋ, ಚೈನೀಸ್, ಕಾಫಿಡೇ...ಹೀಗೆ  ಅಧುನಿಕವಾದ ಟ್ರೆಂಡ್ ಬರುತ್ತಿತ್ತು.  ಕೆಲವೇ ವರ್ಷಗಳಲ್ಲಿ ಅದು ನಮ್ಮ ಜನಗಳಿಗೆ ಬೇಸರವಾಯಿತೇನೋ...ಮತ್ತೆ ನಮ್ಮ ಸಂಸ್ಕೃತಿಯ ಹಳ್ಳಿ ಮನೆ, ಹಳ್ಳಿ ತಿಂಡಿ, ತಾಯಿಮನೆ ಊಟ, ಮನೆಯೂಟ, ನಳಪಾಕ, ಹಟ್ಟಿಕಾಫಿ...ಹೀಗೆ ಶುರುವಾಗಿರುವುದು ರಿವರ್ಸ್ ಆರ್ಡರಿನಲ್ಲಿ ಅಲ್ಲವೇ....

       ನನಗೆ "ಹಟ್ಟಿ ಕಾಫಿ" ತುಂಬಾ ಇಷ್ಟ.  ಮೊದಲು ನಾನು ಕುಡಿದಿದ್ದು ಮಂತ್ರಿ ಮಾಲ್‍ನ ಸ್ಪಾರ್ ಮಾರುಕಟ್ಟೆಯಲ್ಲಿ.  ಅಂತಾ ಮಾಲಾಮಾಲ್‍ನಲ್ಲಿ ಐದು ರೂಪಾಯಿಗೆ ಕಾಫಿ ಸಿಕ್ಕಾಗ ನಾನು ಅಲ್ಲಿ ನಿಂತು ಕೂತು ಖುಷಿಯಿಂದ ಕುಡಿದಿದ್ದೆ. ಆಗ ಅದರ ರುಚಿಯನ್ನು ಮರೆಯಲಾಗಿರಲಿಲ್ಲ. ಕಾಫಿ ಅಷ್ಟು ಚೆನ್ನಾಗಿದ್ದರೂ ಪ್ರತೀ ದಿನ ಮಂತ್ರಿ ಮಾಲ್‍ಗೆ ಹೋಗಿ ಕುಡಿಯಲಾಗುವುದಿಲ್ಲವಲ್ಲ. ಅದರಲ್ಲೂ ಅರ್ಧ ಕಾಫಿ ಕುಡಿಯಲು ಮಂತ್ರಿ ಮಾಲ್‍ಗೇಕೆ ಹೋಗಬೇಕು. ರಸ್ತೆಬದಿಯ ಪುಟ್ಟ ಅಂಗಡಿಯಲ್ಲಿ ಸಿಗುವ ಕಾಫಿ ಕಪ್ಪನ್ನು ಕೈಯಲ್ಲಿಡಿದು ಸುತ್ತ ಹೋಗಿಬರುವ ಸುಂದರ ಬೆಡಗಿಯರನ್ನು ನೋಡುತ್ತಾ ಕುಡಿಯುತ್ತಿದ್ದರೇ ಅದೊಂತರ ಪುಟ್ಟ ಬೊಗಸೆಯಲ್ಲಿ ಬ್ರಹ್ಮಾಂಡ ತುಂಬಿಕೊಂಡಂತ ದೊಡ್ಡ ಸಂತೋಷ.  ಅಂತದ್ದೇ ಪುಟ್ಟ ಹಟ್ಟಿ ಕಾಫಿ ಅಂಗಡಿ ನವರಂಗ್ ಬಳಿ ತೆರೆದುಕೊಂಡಿತಲ್ಲ. ನವರಂಗ್ ಬಳಿಯ ಅಜಂತ ಕಲರ್ ಲ್ಯಾಬಿಗೆ ಫೋಟೊ ಪ್ರಿಂಟ್‍ಗಾಗಿ ಹೋದಾಗಲೆಲ್ಲಾ ಹಟ್ಟಿ ಕಾಫಿಗೆ ವಿಸಿಟ್ ಕೊಡುತ್ತಿದ್ದೆ.  ಇಷ್ಟಕ್ಕೂ ಆ ಕಾಫಿಯಲ್ಲೇನು ವಿಶೇಷ ಅಂತೀರಾ, ಹೇಳ್ತೀನಿ ಕೇಳಿ,  ಅದಕ್ಕೂ ಮೊದಲು ಬೇರೆ ಜಾಗಗಳಲ್ಲಿ ಕಾಫಿಗಳನ್ನು ಒಮ್ಮೆ ಗ್ಲಾನ್ಸ್ ಮಾಡಿಬಿಡೋಣ. 

ಬೆಂಗಳೂರೆಲ್ಲಾ ಸುತ್ತಿ ಹುಡುಕಿ ತಂದಿದ್ದು ಈ ಗಾಜಿನ ಲೋಟ. ಸದ್ಯ ನಾನು ಮನೆಯಲ್ಲಿ ಕಾಫಿ ಕುಡಿಯುತ್ತಿರುವುದು ಇದರಲ್ಲಿ.

ನೀವು ಸ್ವಲ್ಪ ಅನುಕೂಲವಾದ ಏಸಿ-ಗೀಸಿ ಇರುವ ಹೋಟಲ್ಲಿಗೆ ಹೋಗಿ ಅರಾಮವಾಗಿ ಕುಳಿತು ಕಾಫಿಗೆ ಆರ್ಡರ್ ಮಾಡಿದರೆ ಚೀನಿ ಪಿಂಗಾಣಿ ಬಟ್ಟಲುಗಳಲ್ಲಿ ಕಾಫಿ ತಂದಿಟ್ಟು ದುಬಾರಿ ಬಿಲ್ಲು ಇಟ್ಟು ಹೋಗುತ್ತಾರೆ. ಕಾಫಿ ಚೆನ್ನಾಗಿದ್ದರೂ ಅದರ ಬಟ್ಟಲು ಪಿಂಗಾಣಿಯಾದ್ದರಿಂದ ಅದೇನೋ ನಮ್ಮದಲ್ಲವೆನ್ನುವ ಭಾವನೆಯಿಂದಲೇ ಕಾಫಿ ಕುಡಿದು ಎದ್ದು ಬಂದಿರುತ್ತೇವೆ.  ತ್ರಿ ಸ್ಟಾರ್-ಫ಼ೈವ್ ಸ್ಪಾರ್ ಹೋಟಲ್ಲುಗಳಲ್ಲಿ ಹಾಲಿನಪುಡಿ-ಸಕ್ಕರೆ ರಹಿತ ಸಕ್ಕರೆ-ನೆಸ್‍ಕೆಪೆ-ಅಥವ-ದಾರ್ಜಿಲಿಂಗ್ ಟೀ ಇತ್ಯಾದಿಗಳನ್ನು ಪೊಟ್ಟಣಗಳಲ್ಲಿ ಇಟ್ಟು ಬಿಸಿನೀರನ್ನು ಒಂದು ದೊಡ್ಡ ಪಿಂಗಾಣಿಯಲ್ಲಿ ಇಟ್ಟು ಅದರ ಪಕ್ಕ ಮತ್ತದೇ ಚಿತ್ತಾರವಾದ ಪಿಂಗಾಣಿ ಬಟ್ಟಲು ಅದರ ಪಕ್ಕ ಎಲ್ಲವನ್ನು ಮಿಕ್ಸ್ ಮಾಡಿಕೊಂಡ ಮೇಲೆ ರುಬ್ಬಲು ಅಲ್ಲಲ್ಲ ತಿರುಗಿಸಲು ಚಮಚ.  ಇಷ್ಟೆಲ್ಲಾ ಮಾಡಿಕೊಂಡು ಕಾಫಿ ಕುಡಿಯುವಾಗ ನಮ್ಮ ಕಣ್ಣು  ಬೇರೆಯವರು ಯಾವ ರೀತಿ ಕಾಫಿ ಕುಡಿಯುತ್ತಿದ್ದಾರೆ ಅಂತ ಗಮನಿಸುತ್ತಾ ಆ ಚೆನ್ನಾಗಿಲ್ಲದ ಸ್ವಾದವನ್ನು ಅನುಭವಿಸದೇ ಅಲ್ಲಿಯೂ ಕೂಡ ಪರರಿಗಾಗಿ ಕಾಫಿ ಕುಡಿಯಾಟವಾಗಿಬಿಟ್ಟಿರುತ್ತದೆ.  ಹೋಗಲಿ ಇತ್ತ ನಮ್ಮ ಇರಾನಿ ಛಾಯ್ ಅಂಗಡಿಗಳಿಗೆ ಬರೋಣ. ಕೆಳಗೆ ಸೌದೆ ಉರಿ ಅದರ ಮೇಲೆ ಮದ್ಯಮ ಗಾತ್ರದ ಹಿತ್ತಾಳೆ ಪಾತ್ರೆ ಬೆಳಿಗ್ಗೆ ಹಾಲಿನ ಪುಡಿ ಹಾಕಿ ಕುದಿಸಲು ಪ್ರಾರಂಭಿಸಿದರೆ ರಾತ್ರಿ ಹತ್ತು-ಹನ್ನೊಂದು ಗಂಟೆಗೂ ನಿಮಗೆ ಕಾಫಿ-ಟೀ ಸಿಗುತ್ತದೆ. ಅಲ್ಲಿ ಸಕ್ಕರೆ ಮಿಶ್ರಿತ ಗಟ್ಟಿಹಾಲು ಜೊತೆಗೆ ನೆಸ್‍ಕೆಪೆ ಪುಡಿ ಬೆರೆಸಿ ಪ್ಲಾಸ್ಟಿಕ್ ಲೋಟಕ್ಕೆ ಹಾಕಿ ನಮ್ಮ ಕೈಗೆ ಒಂದು ಮುಗುಳ್-ನಗೆ ಸೇರಿಸಿ ಕೊಡುತ್ತಾನೆ. ಮೊದಲ ಸಿಪ್ ಓಕೆ. ಕೊನೆ ಕೊನೆಯಲ್ಲಿ ಬೇಡವೆನ್ನಿಸುವಷ್ಟರ ಮಟ್ಟಿಗೆ ಬೇಸರವಾಗಿ ಅರ್ಧ ಕುಡಿದು ಸ್ಟೈಲಾಗಿ ಹಣಕೊಟ್ಟು ಬಂದುಬಿಡುತ್ತೇವೆ.  ಹೋಗಲಿ ನಮ್ಮ ಮಲ್ಲೇಶ್ವರಂನ ಹಳ್ಳಿಮನೆಯಲ್ಲಿ ಕಾಫಿ ತುಂಬಾ ಚೆನ್ನಾಗಿರುತ್ತದೆಯೆಂದು ಅಲ್ಲಿ ಕುಡಿಯೋಣವೆಂದರೆ ಅವರು ಅತ್ತ ಪ್ಲಾಸ್ಟಿಕ್ ಲೋಟವೂ ಅಲ್ಲದ,  ಸ್ಟೈನ್‍ಲೆಸ್ ಸ್ಟೀಲಿನ ಪುಟಾಣಿ ಲೋಟವನ್ನು ಕೊಡದೇ ಪಿಂಗ್ ಪಾಂಗ್ ಪಿಂಗಾಣಿಯನ್ನು ಕೊಡದೆ ಪೇಪರ್ ಲೋಟದಲ್ಲಿ ಕೊಡುತ್ತಾರೆ. ಅದೊಂದರ ಚೆನ್ನಾಗಿದೆಯೆಂದು ನಾವು ಕಾಫಿಯನ್ನು ಅಸ್ವಾದಿಸಿದರೂ ನಮ್ಮ ಹಿರಿಯ ದಿನಪತ್ರಿಕೆಯ ವೆಂಡರ್ ಬೋರೇಗೌಡರಿಗೆ ಅದ್ಯಾಕೋ ಇಷ್ಟವಾಗುವುದಿಲ್ಲ. ಪೇಪರ್ ಲೋಟದಲ್ಲಿ ಕೊಟ್ಟ ಕಾಫಿಯನ್ನು ತಂದು ಟೇಬಲ್ಲಿನ ಮೇಲಿಟ್ಟು ಕುಡಿಯುವ ನೀರಿನ ಬಳಿಹೋಗಿ ಅಲ್ಲಿಟ್ಟಿರುವ ಉದ್ದುದ್ದದ ನೀರು ಕುಡಿಯುವ ಸ್ಟೀಲ್ ಲೋಟದ ತುಂಬ ನೀರು ಕುಡಿದು ಅದೇ ಲೋಟಕ್ಕೆ ಪೇಪರ್ ಲೋಟದ ಕಾಫಿಯನ್ನು ಬಗ್ಗಿಸಿಕೊಂಡು ನಿದಾನವಾಗಿ ಕುಡಿದರೆ ಅವರಿಗೇ ಅವರದೇ ಮನೆಯಲ್ಲಿ ಕುಡಿದಷ್ಟೇ ಆನಂದವಂತೆ. ಅವರು ಹೇಳಿದ ಮೇಲೆ ಅವರ ಮಾತು ನಮಗೆ ಯಾವ ಪರಿ ಭ್ರಮೆಯನ್ನು ಆವರಿಸಿತೆಂದರೆ ಅಷ್ಟು ದಿನ ಮನೆ ಕಾಫಿಯಂತೆ ರುಚಿಯಾಗಿದ್ದ ಅದು ನಂತರ ಕೇವಲ ಹಳ್ಳೀಮನೆ ಕಾಫಿಯಾಗಿಬಿಟ್ಟಿತ್ತು.

ಈಗ ಹಟ್ಟಿ ಕಾಫಿಗೆ ವಾಪಸ್ ಬರೋಣ.  ಅಲ್ಲಿ ಒಂದು ಕಾಫಿ ಅಂತ ನಾನು ಕೇಳಿದ ತಕ್ಷಣ ಆರು ರೂಪಾಯಿ ಕೊಡಿ  ಅನ್ನುತ್ತಾನೆ ಕ್ಯಾಶ್ ಕೌಂಟರಿನ ಹಿಂದೆ ಕುಳಿತಿರುವಾತ.  ಅರೆರೆ.....ಬೇರೆ ಕಡೆ ಕಾಫಿ ಬೆಲೆ ೮-೯-೧೦-೧೨ ಆಗಿರುವಾಗ ಇಲ್ಲಿ ಕೇವಲ ಆರು ರೂಪಾಯಿಗೆ ಸಿಗುತ್ತಲ್ಲ ಎಂದು ಮೊದಲಿಗೆ ಖುಷಿಯಾಗುತ್ತದೆ. ಈಗ ಪ್ರತಿಭಾರಿ ಕಾಫಿ ಕುಡಿಯಲು ಅಲ್ಲಿಗೆ ಹೋದಾಗಲೂ ಹೀಗೆ ಅನ್ನಿಸುವುದರಿಂದ ಖುಷಿ ಉಚಿತ.   ಟೋಪಿ ಹಾಕಿಕೊಂಡ ಮಾಣಿ ನಮ್ಮ ಕಣ್ಣ ಮುಂದೆ ಒಂದು ಗಾಜಿನ ಲೋಟವನ್ನು ಇಡುತ್ತಾನೆ.  ಅದನ್ನು ನೋಡಿದ ತಕ್ಷಣ  ಮತ್ತೆ ನನ್ನ ಬಾಲ್ಯದ ನೆನಪು ಗರಿಗೆದರುತ್ತದೆ. ಆಗೆಲ್ಲಾ ಸ್ಟೀಲ್ ಲೋಟಗಳಲ್ಲಿ ಕಾಫಿ ಕೊಡುತ್ತಿರಲಿಲ್ಲ. ಕೊಟ್ಟರೂ ದೊಡ್ಡ ದೊಡ್ಡ ಹೋಟಲ್ಲುಗಳಲ್ಲಿ ಮಾತ್ರ. ಪಿಂಗಾಣಿಯೂ ಇನ್ನೂ ಬಂದಿರಲಿಲ್ಲ. ಪ್ಲಾಸ್ಟಿಕ್ ಲೋಟ ಕಾಲಿಟ್ಟಿರಲಿಲ್ಲ.  ಆಗೆಲ್ಲಾ ಕೆಲಸಗಾರರು ಸುಲಭವಾಗಿ ಸಿಕ್ಕುತ್ತಿದ್ದರಿಂದ ಈ ಗಾಜಿನ ಲೋಟಗಳದೇ ದರ್ಭಾರು.  ನಾವು ಶ್ರೀರಾಮಪುರಂನ ಐದನೇ ಮುಖ್ಯರಸ್ತೆಯಲ್ಲಿರುವ ಮಂಗಳೂರು ಕೆಫೆಯಲ್ಲಿ ಬೈಟು ಕಾಫಿ ಎಂತ ಹೇಳಿ ಒಂದುವರೆ ರೂಪಾಯಿ ಕೊಟ್ಟರೆ ಮುಗೀತು. ಆರ್ಡರ್ ತೆಗೆದುಕೊಂಡ ಹೋಟಲ್ ಓನರ್  ಒಂದು ಬೈಟು ಕಾಫಿ..ಎಂದು ಹೇಳುತ್ತಿದ್ದ. ಮತ್ತೊಬ್ಬರು ಬಂದಾಗ ಇನ್ನೊಂದು ಬೈಟು.........ಎಂದು ರಾಗವಾಗಿ ಎಳೆಯುತ್ತಿದ್ದ.  ಹೀಗೆ ಹತ್ತಾರು ಬೈಟುಗಳ ಆರ್ಡರ್ ಬಂದರೂ ಇನ್ನೊಂದು ಬೈಟು.........ಎನ್ನುವ ಅವನ ರಾಗದಲ್ಲಿ ವ್ಯತ್ಯಾಸವಾಗುತ್ತಿರಲಿಲ್ಲ. ಅಷ್ಟರಲ್ಲಿ ಒಳಗೆ ಗಳಗಳ ಸದ್ದು. ಲೋಟಗಳನ್ನು ಜೋರು ಬರುವ ನೀರಿನಲ್ಲಿ ತೊಳೆದು ದೊಡ್ಡದಾದ ಟ್ರೇನ ಈ ತುದಿಯಿಂದ ಆ ತುದಿಗೆ ತಲೆಕೆಳಕಾಗಿ ಮಾಡಿದ ಒಂದೊಂದೇ ಲೋಟಗಳನ್ನು ತಳ್ಳುವಾಗಿನ ದೃಶ್ಯವನ್ನು ನೋಡುವಾಗಲೇ ಕಾಫಿ ಸ್ವಾದದ ಅಮಲು.  ಕೆಲವೊಮ್ಮೆ ನಾವು ಹೊರಗಿದ್ದು ಆ ದೃಶ್ಯ ಕಾಣದಿದ್ದರೂ ತೊಳದ ನಂತರದ ಟ್ರ್‍ಏನಲ್ಲಿ ಒಂದೊಂದು ಲೋಟವನ್ನು ತಳ್ಳುವಾಗಿನ ಶಬ್ದವೂ ಕೂಡ ಮುಂದೆ ಅದೇ ಲೋಟದಲ್ಲಿ ಬರುವ ಕಾಫಿಯ ರುಚಿಯಲ್ಲಿ ತೇಲುವಂತೆ ಮಾಡುತ್ತಿತ್ತು.  ಕಣ್ಣಿಗೆ ಕಾಣಿಸಿದ ಈ ದೃಶ್ಯಗಳಿಗೂ ಮತ್ತು ಕಿವಿಗೆ ಕೇಳಿಸಿದ ಸರರ್..ರ್....ಎನ್ನುವ ಗಾಜಿನ ಲೋಟದ ಶಬ್ದಕ್ಕೂ ನಾಲಗೆಗೆ ಸೋಕುವ ಕಾಫಿಯ ರುಚಿಗೂ ಅದೆಂಥ ಕನೆಕ್ಷನ್ ಇತ್ತೋ ನನಗೆ ಗೊತ್ತಿಲ್ಲ. ಇಷ್ಟೆಲ್ಲಾ ಆದ ಮೇಲೆ  ಗಾಜಿನ ಲೋಟಕ್ಕೆ ಕಾಲು ಭಾಗ ಡಿಕಾಕ್ಷನ್ ಇನ್ನುಳಿದ ಮುಕ್ಕಾಲು ಭಾಗಕ್ಕೆ ನಿದಾನವಾಗಿ ಬಿಸಿಹಾಲನ್ನು ಹಾಕುತ್ತಿದ್ದರೆ ಕೊನೆಯಲ್ಲಿ ಉಕ್ಕಿದ ನೊರೆಯನ್ನು ಬ್ಯಾಲೆನ್ಸ್ ಮಾಡುತ್ತಾ ಲೋಟದ ತುಂಬಾ ಕಾಫಿಯನ್ನು ತುಂಬಿಸುತ್ತಲೇ ನೊರೆಯ ಕಲಾಕೃತಿಯ ಗೋಪುರವನ್ನು ಮಾಡಿ ನಮ್ಮ ಕೈಗೆ ಕೊಡುತ್ತಾನಲ್ಲಾ!  ಆ ಚಳಿಗಾಲದ ಚಳಿಯಲ್ಲಿ ನಿದಾನವಾಗಿ ನೊರೆಯನ್ನು ಹೀರುತ್ತಾ..........ಕಾಫಿಯ ಮೊದಲ ಗುಟುಕು ನಾಲಗೆಗೆ ಸೋಕುವಾಗ ಆಹಾ! ಆ ಸ್ವರ್ಗ ಸುಖ!  ಇಲ್ಲಿ ಹಟ್ಟಿ ಕಾಫಿಯ ಮಾಣಿ ಕೊಡುವ ಗಾಜಿನ ಲೋಟವೂ ತನ್ನ  ಹಳೆಯ ತಾತ ಮುತ್ತಾತಂದಿರುಗಳಾದ ಪಟ್ಟಿ ಗಾಜಿನ ಲೋಟಗಳನ್ನು ನೆನಪಿಸುತ್ತದೆ.

ಹಟ್ಟಿ ಕಾಫಿ ಕುಡಿದು ಮುಗಿಸುತ್ತಿದ್ದಂತೆ ಹೇಮಾಶ್ರೀಗೂ ಆ ಲೋಟ ಇಷ್ಟವಾಗಿಬಿಟ್ಟಿತ್ತು. ಇಂಥದ್ದೇ ಗಾಜಿನ ಲೋಟವನ್ನು ಮನೆಗೆ ತನ್ನಿ ಅಂದುಬಿಟ್ಟಳು.  ಇತ್ತ ನಮ್ಮ ಮನೆಯಲ್ಲೂ ಅನೇಕ ಹೇಮಾ ತುಂಬಾ ಚೆನ್ನಾದ ಕಾಫಿ ಮಾಡಿ ಕೊಡುತ್ತಾಳೆ.  ಅಷ್ಟು ಚೆನ್ನಾದ ಕಾಫಿಗಾಗಿ ನಾವು ಹುಡುಕಿದ ಕಾಫಿಪುಡಿ ಅಂಗಡಿಗಳು ಒಂದೆರಡಲ್ಲ..ಕೊತಾಸ್, ಬಾಯರ್ಸ್,.......ಕೊನೆಗೆ ಮಲ್ಲೇಶ್ವರಂನ ಒಂಬತ್ತನೇ ಕ್ರ್‍ಆಸಿನಲ್ಲಿರುವ ನಾಯಕ್ ಕಾಫಿ ಅಂಗಡಿಯಲ್ಲಿನ ಕಾಫಿಪುಡಿಯು ನಮಗೆ ಚೆನ್ನಾಗಿ ಹೊಂದಿಕೆಯಾಗಿಬಿಟ್ಟಿತ್ತು. ಮೊದಲೆರಡು ದಿನ ಹದ ತಪ್ಪಿದರೂ ನಂತರ ಕಾಫಿ ಫಿಲ್ಟರಿಗೆ ಎಷ್ಟು ಬಿಸಿನೀರು ಮತ್ತು ಎಷ್ಟು ಕಾಫಿಪುಡಿಹಾಕಿದರೆ ಸರಿಯಾದ ಅರ್‍ಓಮದ ಫೀಲ್ ಬರುವ ಡಿಕಾಕ್ಷನ್ ಬರುತ್ತದೆ ಎನ್ನುವುದನ್ನು ಚೆನ್ನಾಗಿ ಅರಿತಿರುವುದರಿಂದ ನನಗೆ ಮನೆಯಲ್ಲಿನ ಕಾಫಿ ತುಂಬಾ ಇಷ್ಟ.  [ಟೀಯನ್ನು ನಾನು ಅವಳಿಗಿಂತ ಚೆನ್ನಾಗಿ ಮಾಡುತ್ತೇನಾದ್ದರಿಂದ ನನ್ನ ಬ್ಲಾಗ್ ಮತ್ತು ಇತರ ಗೆಳೆಯರು ಮನೆಗೆ ಬಂದಾಗ ಅದರ ರುಚಿಯನ್ನು ನೋಡಿರುತ್ತಾರೆ ಸದ್ಯ ಆ ಇಲ್ಲಿ ಟೀ ವಿಚಾರ ಬೇಡ.] ನಾನು ಆ ಗಾಜಿನ ಕಾಫಿಲೋಟಗಳಿಗಾಗಿ ನಮ್ಮ ಸುತ್ತ ಮುತ್ತ ಹತ್ತಾರು ಕಡೆ ಹುಡುಕಿದೆ ಸಿಗಲಿಲ್ಲ. ಕೇಳಿದರೆ ಸಿಟಿಯಲ್ಲಿ ಸಿಗುತ್ತದೆ ಎಂದರು.  ಒಂದು ದಿನ ಬಿಡುವು ಮಾಡಿಕೊಂಡು ಸಿಟಿಮಾರ್ಕೆಟ್, ಬಿವಿಕೆ ಆಯಂಗಾರ್ ರೋಡ್ ಎಲ್ಲಾ ಓಡಾಡಿದಾಗ ನನಗೆ ಬೇಕಾದ ಆ ಗ್ಲಾಸುಗಳು ಸಿಕ್ಕವು.  ಅದನ್ನು ನೋಡಿದ ಹೇಮಾಶ್ರೀ ಕೂಡ ತುಂಬಾ ಖುಷಿಪಟ್ಟಳು.  ಅವತ್ತಿನಿಂದ ನಮ್ಮ ಮನೆಯಲ್ಲಿ ಗಾಜಿನ ಲೋಟದಲ್ಲಿ ಕಾಫಿಯ ಸ್ವಾದ...ನಾದ....ಭಾವಾನಾತ್ಮಕ ಆನಂದ.

ಒಂದೆರಡು ದಿನಗಳಲ್ಲೇ ನನ್ನಲ್ಲಿ ಸೊಗಸಾದ ದುರಾಸೆ ಹುಟ್ಟಿಕೊಂಡಿತ್ತು. ಅದಕ್ಕೆ ಕಾರಣವೂ ಉಂಟು. ಹಟ್ಟಿ ಕಾಫಿಯಲ್ಲಿ  ಆರು ರೂಪಾಯಿಗೆ ಆ ಗಾಜಿನ ಲೋಟದ ಮುಕ್ಕಾಲು  ಭಾಗವನ್ನು ಮಾತ್ರ ಕಾಫಿ ಕೊಡುವುದು!  ನಾವು ಕೊಡುವ ಹಣಕ್ಕೆ ಅಷ್ಟು ಸಾಕು, ಅದು ಅರೋಗ್ಯಕ್ಕೂ ಒಳ್ಳೆಯದು ಎನ್ನುವುದು ಅವರ ಭಾವನೆಯಿರಬಹುದು. ಅದೇ ಭಾವನೆ ಹೇಮಾಶ್ರೀಗೂ ಬಂದುಬಿಟ್ಟಿರಬೇಕು  ಅದಕ್ಕೆ ಮನೆಯಲ್ಲೂ ಕೂಡ ಗಾಜಿನ ಲೋಟದಲ್ಲಿ ಅಷ್ಟೇ ಪ್ರಮಾಣದ ಕಾಫಿ ಕೊಡುತ್ತಾಳೆ. 

"ಇದರ ತುಂಬಾ ಕೊಡು" ಎಂದೆ. 

"ಕೊಡೊಲ್ಲಾ ಕಣ್ರಿ, ನಿಮಗೆ ಇಷ್ಟು ಸಾಕು ಸುಮ್ಮನೇ ಕುಡೀರಿ" ಅಂದಳು.

"ಅಲ್ಲಾ ಕಣೇ, ಈ ಲೋಟದಲ್ಲಿ ಕುಡಿಯುವ ಆನಂದವೇ ಬೇರೆ, ಅದಕ್ಕಾಗಿಯೇ ಅಲ್ಲವೇ ಸಿಟಿಯೆಲ್ಲಾ ಹುಡುಕಿ ತಂದಿದ್ದು., ಇದರ ತುಂಬಾ ಕಾಫಿಯನ್ನು ಹಾಕಿದಾಗ ನೋಡಲು ತುಂಬಾ ಚೆನ್ನಾಗಿರುತ್ತದೆ. ಮತ್ತೆ ಪೂರ್ತಿ ಕುಡಿದಾಗ ಸಿಗುವ ಸಂತೃಪ್ತಿಯನ್ನು ಬೇರೆ" ಅದಕ್ಕಾಗಿ ಪ್ಲೀಸ್ ನನಗೆ ಇನ್ನು ಮುಂದೆ ಲೋಟದ ತುಂಬ ಕಾಫಿ ಕೊಡು" ಎಂದೆ.

    "ನೀವು ಈ ಗಾಜಿನ ಲೋಟಗಳನ್ನು ತಂದಿದ್ದು ಈ ಕಾರಣಕ್ಕೋ? ನೋಡುವುದಕ್ಕೆ ಚೆಂದ ಕಾಣುತ್ತದೆ ಎನ್ನುವ ಮಾತ್ರಕ್ಕೆ ಲೋಟ ತುಂಬಾ ಕಾಫಿ ಕೊಡುವುದಕ್ಕಾಗುವುದಿಲ್ಲ. ಬೇಕಾದರೆ ಒಮ್ಮೆ ಪೂರ್ತಿ ಕೊಡುತ್ತೇನೆ, ಅದರ ಫೋಟೊ ತೆಗೆದು ಕಂಪ್ಯೂಟರಿಗೆ ಸ್ಕ್ರೀನ್ ಸೇವರ್ ಮಾಡಿಕೊಂಡು  ನೋಡುತ್ತಾ ಆನಂದಪಡಿ, ಬೇಡ ಅಂದೋರು ಯಾರು?  ಮತ್ತೆ ಪೂರ್ತಿ ಬೇಕು ಅಂತ ಹಟ ಮಾಡಿದ್ರೆ ಈ ಲೋಟವನ್ನು  ಬಾಕ್ಸಿಗೆ ಹಾಕಿಟ್ಟು ಮೇಲೆ ಇಟ್ಟುಬಿಡುತ್ತೇನೆ. ಅಥವ ಯಾರಿಗಾದ್ರು ಕೊಟ್ಟುಬಿಡುತ್ತೇನೆ ಅಷ್ಟೇ" ಅಂತ ಅಂದುಬಿಟ್ಟಳಲ್ಲ!

       ವಿಧಿಯಿಲ್ಲದೇ ಅತಿಯಾಸೆ ಗತಿಗೇಡು ಅಂದುಕೊಳ್ಳುತ್ತಾ ಮುಕ್ಕಾಲು ಕಾಫಿ ಕಾಲು ಭಾಗ ನೊರೆತುಂಬಿದ  ಆ ಗಾಜಿನ ಲೋಟದಲ್ಲಿ  ಕಾಫಿ ಕುಡಿಯುತ್ತಾ ಆನಂದಿಸುತ್ತಿದ್ದೇನೆ.


ಚಿತ್ರಗಳು ಮತ್ತು ಲೇಖನ.
ಶಿವು.ಕೆ

Thursday, November 4, 2010

ಒಂದೂವರೆದಿನದ ಧಾರವಾಡ ಅನುಭವ

        

        ನಾನು ದೂರದ ಪ್ರಯಾಣಕ್ಕಾಗಿ ಅದೆಷ್ಟೇ ವೇಗದ ರೈಲಿನ ಟಿಕೆಟ್ ಕಾಯ್ದಿರಿಸಿದರೂ ಅದ್ಯಾಕೋ ನಿದಾನವಾಗಿ ಪಕ್ಕಾ ಪ್ಯಾಸಿಂಜರ್ ಆಗಿಬಿಡುತ್ತದೆ. ಇಲ್ಲೂ ಹಾಗೇ ಆಯಿತು. ನಮ್ಮ ಅತ್ಯಂತ ವೇಗದ ರೈಲಾದ ಬೆಂಗಳೂರು-ಧಾರವಾಡ ಇಂಟರ್ ಸಿಟಿ ರೈಲನ್ನು ಮಧ್ಯಾಹ್ನ ಒಂದುಗಂಟೆಗೆ ಹತ್ತಿ ಕುಳಿತಾಗ ಅದು ರಾತ್ರಿ ಒಂಬತ್ತು ಗಂಟೆಗೆ ತಲುಪುತ್ತದೆ. ನಾನು ಬೇಗ ಹೋಟಲ್ ರೂಮ್ ಸೇರಿ ಲಗ್ಗೇಜ್ ಇಟ್ಟು ಊಟ ಮುಗಿಸಿ ರಾತ್ರಿ ಒಂದು ಸುತ್ತು ಧಾರವಾಡವನ್ನು ಕ್ಯಾಮೆರಾ ಸಮೇತ ಸುತ್ತೋಣವೆಂದು ಮಾಸ್ಟರ್ ಪ್ಲಾನ್ ಮಾಡಿದ್ದೆ.  ಆದ್ರೆ ಈ ರೈಲು ರಾತ್ರಿ ಹತ್ತುಮುವತ್ತೈದಕ್ಕೆ ಧಾರವಾಡ ತಲುಪಿ ನನ್ನ ಲೆಕ್ಕಚಾರವನ್ನೆಲ್ಲಾ ತಲೆಕೆಳಗಾಗಿಸಿತ್ತು.  ನಾನು ರೈಲಿಳಿದು ಆಟೋ ಏರಿ ಅವರೇ ವ್ಯವಸ್ಥೆ ಮಾಡಿದ್ದ ಬೃಂದಾವನ ಲಾಡ್ಜ್ ಸೇರುವ ಹೊತ್ತಿಗೆ ಹನ್ನೊಂದು ಗಂಟೆಯಾಗಿದ್ದರಿಂದ ಕ್ಯಾಮೆರಾದೊಂದಿಗೆ ಸುತ್ತುವ ಆಸೆಯನ್ನು ಕೈಬಿಟ್ಟಿದ್ದೆ. ರೈಲಿನಲ್ಲಿ ಏನು ತಿಂದಿರಲಿಲ್ಲ.  ಹೊರಗೆ ಬಂದು ನೋಡಿದರೆ ಜನರ ಓಡಾಟವೇ ಇಲ್ಲ. ಧಾರವಾಡ ಆಗಲೇ ನಿದ್ರಿಸುತ್ತಿದೆ. ಹೊಟ್ಟೆ ಚುರುಗುಟ್ಟುತ್ತಿದ್ದರಿಂದ ತಿನ್ನಲು ಏನಾದರೂ ಸಿಗುತ್ತದೋ ಅಂತ ಹೋಟಲಿನ ಬಲಬದಿಯ ರಸ್ತೆಯ ಉದ್ದಕ್ಕೆ ಒಂದು ಪರ್ಲಾಂಗ್ ನಡೆದೆ. ಅಂಗಡಿ ಹೋಟಲ್ಲುಗಳೆಲ್ಲಾ ಮುಚ್ಚಿವೆ. ಮತ್ತೆ ಬಲಕ್ಕೆ ತಿರುಗಿ ಸ್ವಲ್ಪ ದೂರ ನಡೆದರೂ ಏನೂ ಪ್ರಯೋಜನವಿಲ್ಲ. ಮತ್ತೊಂದು ತಿರುವು ಬಲಕ್ಕೆ ಕಾಣಿಸಿತು. ತಿರುಗಿದೆ. ಅಲ್ಲಿ ರಸ್ತೆಯಲ್ಲಿ ಇಬ್ಬರು ಬೈಕ್ ಮೇಲೆ ಕುಳಿತು ಮಾತಾಡುತ್ತಿದ್ದರು. ಅವರನ್ನೇ ದೈರ್ಯಮಾಡಿ ಕೇಳಿದೆ. "ಇಲ್ಲಿ ಊಟದ ಹೋಟಲ್, ಖಾನವಾಳಿ ಏನಾದ್ರು ತೆರೆದಿದೆಯಾ" ಅಂತ.  ಅವರು "ಸ್ವಲ್ಪ ಮುಂದಕ್ಕೆ ಹೋಗಿ ಬಲಕ್ಕೆ ತಿರುಗಿ ಅಲ್ಲೊಂದು ಖಾನಾವಳಿ ಇದೆ. ನಿಮ್ಮ ಅದೃಷ್ಟವನ್ನು ಪರೀಕ್ಷಿಸಿ" ಎಂದರು.  ಸಣ್ಣ ಆಸೆಯಿಂದ ಅಲ್ಲಿಗೆ ಹೋದೆ. ಅರ್ಧ ಬಾಗಿಲು ಮುಚ್ಚಿದ್ದ ಖಾನಾವಳಿಯ ಒಳಗೆ ಹೋಟಲ್ಲಿನವರೇ ಊಟ ಮಾಡುತ್ತಿದ್ದರು.  


 "ಊಟ ಸಿಗುತ್ತಾ" ಕೇಳಿದೆ.

 "ಎಲ್ಲಾ ಖಾಲಿಯಾಯ್ತಲ್ಲ" ಅಂದ ಒಬ್ಬ.


"ಹೌದಾ, ಛೇ ಎಂಥ ಕೆಲಸವಾಯ್ತು, ರೈಲು ತಡವಾಗಿದ್ದರಿಂದ ನನ್ನ ಊಟ ತಪ್ಪಿ ಹೋಯ್ತಲ್ಲ" ಅಂದ ನನ್ನಲ್ಲೇ ಗೊಣಗಿಕೊಂಡೆ.

"ಸ್ವಲ್ಪ ದೂರ ಅಲ್ಲಿ ಒಂದು ಖಾನಾವಳಿ ತೆರೆದಿದೆ ಅಲ್ಲಿ ಹೋಗಿ ನಿಮಗೆ ಊಟ ಸಿಗುತ್ತದೆ" ಅಂತ ಕೈತೋರಿಸುತ್ತ ಹೇಳಿದ ಮಗದೊಬ್ಬ.

 "ಆ ಖಾನಾವಳಿ ತುಂಬಾ ದೂರನಾ?" ನಾನು ಅರೆಮನಸ್ಸಿನಿಂದ ಕೇಳಿದೆ. ನನ್ನ ಅಷ್ಟು ದೂರ ಹೋಗಬೇಕಲ್ಲ ಅನ್ನುವ ಚಿಂತೆಯಿಂದ ಅಲ್ಲೇ ಅತ್ತಿತ್ತ ನೋಡುತ್ತಾ ನಿಂತೆ.

        "ಎಲ್ಲಿಂದ ಬಂದ್ರಿ"  ಹೋಟಲ್ ಒಡತಿ ಕೇಳಿದಳು.

"ಬೆಂಗಳೂರಿನಿಂದ" ಹೇಳಿದೆ.  "ರೊಟ್ಟಿ ಇಲ್ಲ ಚಪಾತಿ ಆಗುತ್ತಾ" ಕೇಳಿದಳು. ಪರ್ವಾಗಿಲ್ಲ ಏನಿದ್ದರೂ ಕೊಡಿ. ಎಂದೆ. ಸ್ವಲ್ಪ ಅನ್ನವೂ ಉಂಟು ಅಂದಳು. "ಚಪಾತಿ ಜೊತೆಗೆ ಅನ್ನವೂ ಸಿಗುತ್ತಾ"  ಹಸಿವನ್ನು ಅದುಮಿಟ್ಟುಕೊಂಡಿದ್ದ ನನಗೆ ಮತ್ತಷ್ಟು ಹಸಿವು ಹೆಚ್ಚಾಯಿತು. ಒಂದು ಊಟ ಪಾರ್ಸೆಲ್ ಕೊಟ್ಟುಬಿಡುತ್ತೇನೆ ಎಂದಳು. ಸದ್ಯ ಅಷ್ಟಾದರೂ ಸಿಕ್ಕಿತಲ್ಲ ನಿಮಗೆ ಪುಣ್ಯಬರಲಿ ಎಂದುಕೊಳ್ಳುತ್ತಾ "ಆಗಲಿ ಕೊಡಿ ಎಂದು ಹೇಳಿದೆನಾದರೂ ಅವರಿಗೆ ಉಳಿಸಿಕೊಂಡಿರುವ ಊಟವನ್ನು ನಾನು ದೂರದಿಂದ ಬಂದಿದ್ದೇನೆ ಅಂತ ನನಗೆ ಕೊಟ್ಟು ಅವರು ಅರೆಹೊಟ್ಟೆ ತಿಂದು ಮಲಗಬಹುದಾ ಅಂತ ಒಮ್ಮೆ ಅನ್ನಿಸಿತು. "ತಗೊಳ್ಳಿ ಸರ, ಪಲ್ಯ ಉಪ್ಪಿನಕಾಯಿ ಹಾಕಿದ್ದೇನೆ. ಚಟ್ನಿ ಹಪ್ಪಳ ಖಾಲಿಯಾಗಿದೆ, ಇಪ್ಪತ್ತೈದು ರೂಪಾಯಿ ಕೊಡ್ರಿ" ಅಂದಳು.


ನಮ್ಮ ಬೆಂಗಳೂರಿನಲ್ಲಿ ಇಂಥ ಹೊತ್ತಿನಲ್ಲಿ ಇಂಥ ಸಂದರ್ಭ ಬಂದಿದ್ದಲ್ಲಿ ಹೋಟಲ್ಲಿನ ಒಡೆಯ ಅಥವ ಕೆಲಸ ಮಾಡುವವರು ಹೀಗೆ ತಮ್ಮ ಊಟವನ್ನು ದೂರದವರೊಂದಿಗೆ ಹಂಚಿಕೊಳ್ಳುತ್ತಿದ್ದರೆ? ಖಂಡಿತ ಇಲ್ಲ. ಧಾರವಾಡದಲ್ಲಿ ಇನ್ನೂ ಮುಗ್ದತೆಯಿರುವುದರಿಂದ ಅಲ್ಲಿನ ಜನಗಳಿಗೆ ಹೊರಗಿನವರ ಮೇಲೆ ತುಂಬುಪ್ರೀತಿಯಿದೆ. ಅದರ ಪಲಿತಾಂಶವೇ ನನಗೆ ಊಟ ಸಿಕ್ಕಿರಬಹುದು ಎಂದುಕೊಳ್ಳುತ್ತಾ ನನ್ನ ರೂಮು ಸೇರುವ ಹೊತ್ತಿಗೆ ಸಮಯ ಹನ್ನೊಂದುವರೆಯಾಗಿತ್ತು.

ಲಾಡ್ಜಿನ ರೆಸೆಪ್ಟನ್‍ನಲ್ಲಿ ಒಂದು ಊಟದ ತಟ್ಟೆ ಮತ್ತು ನೀರಿನ ಲೋಟವನ್ನು ನನ್ನ ರೂಮಿಗೆ ಕಳಿಸಿ ಎಂದು ಹೇಳಿ ರೂಮಿಗೆ ಹೋದೆ. ಎರಡೂ ಬರಲಿಲ್ಲ. ಸಮಯವಾಗಲೇ ಮೀರಿಹೋಗುತ್ತಿದೆ. ನನ್ನ ರೂಮಿನ ಎದುರಿಗೆ ರೂಮ್ ಬಾಯ್‍ನ ರೂಮ್ ಇತ್ತು. ಅಲ್ಲಿ ಊಟದ ತಟ್ಟೆಗಳು, ಗಾಜಿನ ಲೋಟಗಳು ಹಾಸಿಗೆ ದಿಂಬು ಟವಲ್ಲುಗಳು ಎಲ್ಲಾ ಇದ್ದರೂ ರೂಮ್ ಬಾಯ್ ಇರಲಿಲ್ಲ. ನಾನೇ ಹೋಗಿ ಒಂದು ತಟ್ಟೆಯನ್ನು ಮತ್ತು ಲೋಟವನ್ನು ತೆಗೆದುಕೊಂಡು ಬಂದು ಊಟದ ಪಾರ್ಸೆಲ್ ತೆಗೆಯುತ್ತೇನೆ!  ಇಬ್ಬರು ಊಟಮಾಡುವಷ್ಟನ್ನು ಪಾರ್ಸೆಲ್ ಮಾಡಿಬಿಟ್ಟಿದ್ದಾರೆ.  ನನ್ನ ಊಟ ಮುಗಿದು ಮಲಗುವ ಹೊತ್ತಿಗೆ ರಾತ್ರಿ ಹನ್ನೆರಡು ದಾಟಿತ್ತು. ಅದ್ಯಾವ ಮಾಯದಲ್ಲಿ ನಿದ್ರೆ ಬಂತೋ ಬೆಳಿಗ್ಗೆ ಎಚ್ಚರವಾದಾಗ ಆರುವರೆಯಾಗಿತ್ತು


ಎದ್ದು ಕೈಕಾಲು ಮುಖ ತೊಳೆದುಕೊಂಡು ಕ್ಯಾಮೆರಾ ಬ್ಯಾಗ್ ಹೆಗಲಿಗೇರಿಸಿ ರೂಮಿನಿಂದ ಹೊರಬಿದ್ದೆ.  ಧಾರವಾಡ ಎದ್ದಿತ್ತಾದರೂ ಪೂರ್ತಿ ಎದ್ದಿರಲಿಲ್ಲ. ಸ್ವಲ್ಪ ದೂರ ನಡೆಯುವಷ್ಟರಲ್ಲಿ  ಒಂದು ಕಾಂಪ್ಲೆಕ್ಸ ಕೆಳಗೆ ನನ್ನ ವೃತ್ತಿ ಭಾಂದವರಾದ ದಿನಪತ್ರಿಕೆ ವಿತರಕರು ಅವರ ಬೀಟ್ ಹುಡುಗರು ಸೈಕಲ್ಲಿಗೆ ಕ್ಯಾರಿಯರಿಗೆ ಪೇಪರುಗಳನ್ನು ಜೋಡಿಸಿಕೊಳ್ಳುತ್ತಿದ್ದರು.


 ನಮ್ಮ  ವೃತ್ತಿ ಭಾಂದವರು ಎಲ್ಲಿದ್ದರೂ ನನ್ನ ಕಣ್ಣಿಗೆ ಕಾಣಲೇಬೇಕು!


 ಮಂಜು ಮುಸುಕಿದ ದಟ್ಟಮರಗಳ ಧಾರವಾಡ ರಸ್ತೆ!


 ಮುಂಜಾವಿನ ಧಾರವಾಡ ರಸ್ತೆ




  ಆಗಾಗ ಕಾಣುವ ದೂರದ ಊರಿನ ಬಸ್ಸುಗಳ ಜೊತೆಗೆ ಸಿಟಿಬಸ್ಸುಗಳು ಒಂದೊಂದಾಗಿ ಕಾಣತೊಡಗಿದವು. ರಸ್ತೆಗಳ ಎರಡೂ ಬದಿಯಲ್ಲೂ ದಟ್ಟಮರಗಳು ನಮ್ಮ ಹದಿನೈದು ವರ್ಷದ ಬೆಂಗಳೂರನ್ನು ನೆನಪಿಸಿದವು. ಅದ್ಯಾಕೋ ಖುಷಿಯಿಂದ ಒಂದಷ್ಟು ಮರಗಳ ಸಮೇತ ರಸ್ತೆಗಳ ಪೋಟೊಗಳನ್ನು ಕ್ಲಿಕ್ಕಿಸಿದೆ. ಹಾಗೇ ಸಾಗುತ್ತಿದ್ದಂತೆ ಆರ್.ಎನ್ ಸೆಟ್ಟಿ ಮೈದಾನ ಕಾಣಿಸಿತು. ಒಳಗೆ ಹೋದೆ. ಯುವಕ ಯುವತಿಯರು ಜಾಗಿಂಗ್ ಮಾಡುತ್ತಿದ್ದರು, ಬಾಲಕರು ಪುಟ್‍ಬಾಲ್ ಆಡುತ್ತಿದ್ದರು. ವಯಸ್ಸಾದವರು ವಾಕ್ ಮಾಡುತ್ತಿದ್ದರು. ದೂರದಲ್ಲೊಬ್ಬ ಪ್ರಾಣಯಾಮ ಮಾಡುತ್ತಾ ಉಸಿರು ಎಳೆದುಬಿಡುತ್ತಿದ್ದಾನೆ.  ಇದೆಲ್ಲವೂ ಏನು ವಿಶೇಷವಿಲ್ಲವೆಂದುಕೊಳ್ಳುವಷ್ಟರಲ್ಲಿ ಪಕ್ಕದಿಂದ ಕೆಲವು ವಯಸ್ಕ ಮಹಿಳೆಯರ ದ್ವನಿಗಳು ಕೇಳಿಬರತೊಡಗಿದವಲ್ಲ! ನಾನು ಅತ್ತ ತಿರುಗದೇ ಹಾಗೆ ಕೇಳಿಸಿಕೊಂಡೆ!




" ಅಲ್ಲ ಕಣ್ರಿ, ಈ ರಾಜಕೀಯ್ದೋವ್ರಿಗೆ ಏನು ಬಂದು ಸಾಯಲ್ವಾ? ನಮ್ಮ ದುಡ್ಡಲ್ಲಿ ರಿಸಾರ್ಟ್‍ನಲ್ಲಿ ಕೂತು ಮಜಮಾಡುತ್ತಾರಲ್ವಾ?
"ಹೌದು ಬಾಯೆರ್ರ...ಇವರಿಗೆ ದೊಡ್ಡ ರೋಗಬಡಿಬೇಕು ನೋಡ್ರಿ..’ ಹೇಳಿದಳು ಈಕೆ.

ಹೂ ಕಣ್ರಿ..ಇವರಿಗೆ ಚಿಕನ್ ಗುನ್ಯಗಿಂತ ದೊಡ್ಡದು ಅದೇನೋ ಮಟನ್ ಗುನ್ಯ ಅಂತ ಬಂದಿದೆಯಂತೆ ಅದು ಬಂದವರಿಗೆ ಆರುತಿಂಗಳು ನರಕದರ್ಶನವಂತೆ! ಅದು ಇವರಿಗಾದ್ರು ಬರಬಾರದಾ? ಶಾಪ ಹಾಕಿದಳು ಆಕೆ.


ಮತ್ತೆ ಇದು ಮುಂದುವರಿದು ಯಡಿಯೂರಪ್ಪ, ಕುಮಾರಸ್ವಾಮಿ,............ರೇಣುಕಾಚಾರ್ಯ....ಸಾಗುತ್ತಿತ್ತು.  ಹಾಗೆ ಮೈದಾನದಿಂದ ಹೊರಗೆ ಬಂದು ರಸ್ತೆಯಲ್ಲಿ ನಡೆಯತೊಡಗಿದೆ. ಕಾಲೇಜಿಗೆ ಹೋಗುವ ಸುಂದರ ಹುಡುಗಿಯರು ಕಾಣಿಸತೊಡಗಿದರು.

 ರಸ್ತೆ ಬದಿಯ ಹೋಟಲ್ ಹಿಂಭಾಗದಲ್ಲಿ ಮುಂಜಾವಿನಲ್ಲಿ ನೀರು ಕಾಯಿಸುತ್ತಿರುವ ವಯಸ್ಕ ಮಹಿಳೆ



ಅವರನ್ನೆಲ್ಲಾ ಹಾಗೆ ನೋಡಿ ಕಣ್ಣುತುಂಬಿಕೊಳ್ಳುತ್ತಾ, ಕನ್ನಡ ಸಂಸ್ಕೃತಿ ಇಲಾಖೆ ಕಟ್ಟಡ, ಮಂದಾರ ಹೋಟಲ್ ಸಾಗಿ ದಾರಿಯಲ್ಲಿ ಸಿಕ್ಕ ಒಂದು ಪುಟ್ಟ ಹೋಟಲ್ಲಿ ಚಾ ಕುಡಿದು ಹೋಟಲ್ಲಿಗೆ ಬರುವ ಹೊತ್ತಿಗೆ ಯಾರೋ ದೂರದಿಂದ ಕೈಯಾಡಿಸುತ್ತಿರುವುದು ಕಾಣಿಸಿತು. ಹತ್ತಿರ ಬರುವಷ್ಟರಲ್ಲಿ ಆತ ಚಿದಾನಂದ ಸಾಲಿ ಅಂತ ಗೊತ್ತಾಯಿತು.  ಕಳೆದ ನಾಲ್ಕು ತಿಂಗಳಿಂದ ಬರೀ ಫೋನಿನಲ್ಲಿ ನಮ್ಮ ಗೆಳೆತನ ಬೆಳೆದಿದ್ದರಿಂದ ನಾನು ಅವರನ್ನು ನೋಡಿರದಿದ್ದರೂ ಆತ ನನ್ನ ಬ್ಲಾಗಿನಲ್ಲಿ ನನ್ನ ಫೋಟೊ ನೋಡಿದ್ದರಿಂದ ಹತ್ತಿರ ಬಂದವರೇ ನನ್ನ ಅಪ್ಪಿಕೊಂಡುಬಿಟ್ಟರು.  ಮತ್ತೆ ಮಾತಾಡಿ ಪರಿಚಯಮಾಡಿಕೊಂಡ ಮೇಲೆ ಜೊತೆಗಿದ್ದವರು ಆರೀಪ್ ರಾಜ ಅಂತ ಪರಿಚಯ ಮಾಡಿಕೊಂಡರು.  ಅಲ್ಲಿಂದ ಮತ್ತೆ ನಮ್ಮ ರೂಮ್ ಸೇರಿ ಸಿದ್ದರಾಗಿ ಹೊರಬರುವ ಹೊತ್ತಿಗೆ ಸಮಯ ಒಂಬತ್ತುವರೆಯಾಗಿತ್ತು.
            
ಈ ಫೋಟೊ ಚೆನ್ನಾಗಿದೆಯಲ್ವಾ.....


ಮತ್ತೆ ಸ್ವಲ್ಪ ಹೊತ್ತಿನಲ್ಲೇ  ಮುಂಡರಗಿಯ ಸಲೀಂ ಮತ್ತು ಬಾಗಲಕೋಟದ ಇಂದ್ರಕುಮಾರ್ ಕೂಡಿಕೊಂಡರು. ಅವರು ನನ್ನ ವೆಂಡರ್ ಕಣ್ಣು ಪುಸ್ತಕಕ್ಕೆ ಬಹುಮಾನ ಬಂದ ಸಂತೋಷಕ್ಕೆ  ನನ್ನ ಮೇಲಿನ ಪ್ರೀತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು. ಎಲ್ಲರೂ ಒಟ್ಟಿಗೆ ಬೆಳಗಿನ ಉಪಹಾರ ಮುಗಿಸಿ ದ.ರಾ.ಬೇಂದ್ರೆ ಭವನವನ್ನು ಸೇರುವ ಹೊತ್ತಿಗೆ ಹತ್ತುವರೆಯಾಗಿತ್ತು.

ಅರೀಫ್ ರಾಜರ "ಪಕೀರ ಜಂಗಮ ಜೋಳಿಗೆ, ಮತ್ತು ನನ್ನ ವೆಂಡರ್ ಕಣ್ಣು ಪುಸ್ತಕದ ಬಗ್ಗೆ ಅವಲೋಕಿಸಿದವರು ಡಾ.ರಂಗರಾಜ ವನದುರ್ಗ. ಸಂದೀಪ್ ನಾಯಕ್‍ರ "ಗೋಡೆಗೆ ಬರೆದ ನವಿಲು" ಚಿದಾನಂದ ಸಾಲಿಯವರ "ಯಜ್ಞ" ಅನುವಾದ ಕೃತಿ, ಮಾರ್ತಾಂಡಪ್ಪ ಕತ್ತಿಯವರ "ಬಸವರಾಜ ಮನ್ಸೂರರ ಜೀವನ ಚರಿತೆ" ಶ್ರೀಧರ ಹೆಗಡೆ ಭದ್ರನ್‍ರವರ "ವಿಸ್ತರಣೆ" ಕೃತಿಗಳ ಬಗ್ಗೆ ಜಗದೀಶ ಮಂಗಳೂರ್ ಮಠ್‍ರವರು ಮಾತಾಡಿದರು. ನಂತರ ಇಡೀ ಕಾರ್ಯಕ್ರಮವನ್ನು ಉದ್ದೇಶಿಸಿ ಮತ್ತು ಪುಸ್ತಕಗಳ ಬಗ್ಗೆ ಇಂದಿನ ಸಾಹಿತ್ಯದ ಬಗ್ಗೆ ಲವಲವಿಕೆಯಿಂದ ಮಾತಾಡಿದವರು ಜಯಂತ್ ಕಾಯ್ಕಿಣಿ.


ಕಾರ್ಯಕ್ರಮದ ನಡುವೆ ಪುಸ್ತಕ ಮಾರಾಟ ಹೊರಗೆ ನಡೆಯುತ್ತಿತ್ತು. ನಾನು ತೆಗೆದುಕೊಂಡು ಹೋಗಿದ್ದ ಹದಿನೈದು "ವೆಂಡರ್ ಕಣ್ಣು ಪುಸ್ತಕಗಳು ಮಾರಾಟವಾಗಿದ್ದು ನನಗೆ ಖುಷಿಯಾಗಿತ್ತು.  ಮದ್ಯಾಹ್ನ ಸಂಸ್ಥೆಯವರ ಜೊತೆ ಜಯಂತ್ ಕಾಯ್ಕಿಣಿ ಮತ್ತು ಬಹುಮಾನ ಪುರಸ್ಕೃತರಾದ ನಾವೆಲ್ಲಾ ಸಹಜವಾದ ಮಾತು, ಹರಟೆ, ತಮಾಷೆಗಳೊಂದಿಗೆ ಒಟ್ಟಿಗೆ ಊಟ ಮಾಡಿದ್ದು ಮರೆಯಲಾಗದ ಅನುಭವ.

ಸಂಜೆ ಧಾರವಾಡ ವಿಶ್ವವಿದ್ಯಾಲಯವನ್ನು ಸಲೀಂ ಮತ್ತು ಇಂದ್ರಕುಮಾರ್ ಜೊತೆ ನೋಡಲು ಹೋದಾದ ಅದರ ಆಗಾದವಾದ ಕ್ಯಾಂಪಸನ್ನು ನೋಡುವುದೇ ಒಂದು ಆನಂದ. ದಟ್ಟ ಮರಗಳ ನಡುವೆ ಅಲ್ಲಲ್ಲಿ ಇರುವ ವಿಭಾಗಗಳು, ಕಾಲೇಜು ಮತ್ತು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು,..........ಈಗ ಹತ್ತು ವರ್ಷ ಚಿಕ್ಕವನಾಗಿದ್ದರೆ ಇಲ್ಲಿ ಸ್ನಾತಕೋತ್ತರ ಪದವಿಗೆ ಸೇರಿಕೊಳ್ಳುವ ಆಸೆ ಮನದಲ್ಲಿ ಮೂಡಿತ್ತು.

 ಸೂರ್ಯ ಮುಳುಗುವ ಹೊತ್ತಿನಲ್ಲಿ ಧಾರವಾಡ ವಿಶ್ವವಿದ್ಯಾಲಯ ಮುಖ್ಯ ಕಟ್ಟಡ.



 ದಟ್ಟ ಮರಗಳಿಂದ ಕೂಡಿದ ಕ್ಯಾಂಪಸಿನ ರಸ್ತೆ...


    ಸಂಜೆ ಹೊತ್ತಿನಲ್ಲಿ ಧಾರವಾಡ ವಿಶ್ವವಿದ್ಯಾಲಯದ ಕ್ಯಾಂಪಸ್.


ಅಲ್ಲಿಂದ ಹೊರಬಂದು ಬಸ್ ಹತ್ತಿ ನಮ್ಮ ಸಂಜೆ ಕಾರ್ಯಕ್ರಮವಿದ್ದ ಸೃಜನ ರಂಗಮಂದಿರಕ್ಕೆ ಬಂದೆವು ಅಲ್ಲಿ ನಮಗಾಗಿ ಸುನಾಥ್‍ರವರು ಕಾಯುತ್ತಿದ್ದರು. ಅವರನ್ನು ಬೇಟಿಯಾಗಿದ್ದು ಒಂದು ವಿಭಿನ್ನ ಅನುಭವ. ಸಂಜೆ ಕಾರ್ಯಕ್ರಮ ಮುಗಿದು ಎಲ್ಲರಿಂದಲೂ ಬೀಳ್ಕೊಡುವಾಗ ಎಲ್ಲರ ಮನತುಂಬಿಬಂದಿತ್ತು.  ವಾಪಸ್ಸು ರೂಮಿಗೆ ಬಂದು ನಮ್ಮ ಲಗ್ಗೇಜುಗಳನ್ನು ಪ್ಯಾಕ್ ಮಾಡಿಕೊಂಡು ಒಂದು ದೊಡ್ಡ ಮಿಶ್ರ ಪೇಡ ಅಂಗಡಿಯಲ್ಲಿ ಧಾರವಾಡ ಪೇಡವನ್ನು ಕೊಂಡು ಪಕ್ಕದಲ್ಲಿಯೇ ಇದ್ದ ೯೦ ವರ್ಷ ಹಳೆಯದಾದ ಬಸಪ್ಪ ಖಾನಾವಳಿಯಲ್ಲಿ ಊಟಮಾಡಿ ರೈಲು ನಿಲ್ದಾಣದ ಬಳಿಗೆ ಬರುವ ಹೊತ್ತಿಗೆ ೯-೩೦.  ನಾನು ಬೆಂಗಳೂರಿಗೆ ಬರುವ ರಾಣಿಚೆನ್ನಮ್ಮ ಎಕ್ಸ್‍ಪ್ರೆಸ್ ಬಂದುನಿಂತಿತ್ತು.

ಇಡೀ ದಿನದ ಧಾರವಾಡದ ಅನುಭವವನ್ನು ಮೆಲುಕು ಹಾಕುತ್ತಿರುವಾಗಲೇ ಅದ್ಯಾವಾಗ ನಿದ್ರೆ ಬಂತೊ ಗೊತ್ತಿಲ್ಲ.  ಬೆಳಿಗ್ಗೆ ಕಣ್ಣು ಬಿಟ್ಟಾಗ ರೈಲು ತುಮಕೂರು ದಾಟಿ ಬೆಂಗಳೂರಿನ ಕಡೆ ವೇಗವಾಗಿ ಚಲಿಸುತ್ತಿತ್ತು.


ಚಿತ್ರಗಳು ಮತ್ತು ಲೇಖನ:
ಶಿವು.ಕೆ

Wednesday, October 27, 2010



ದಿನಾಂಕ ೨೬-೧೦-೨೦೧೦ ರಂದು ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ{ರಿ]ಧಾರವಾಡ ಸಂಸ್ಥೆಯವರು ಬಹುಮಾನ ವಿಜೇತ ಪುಸ್ತಕಗಳ ಅವಲೋಕನ ಮತ್ತು ಕೃತಿಕಾರರಿಗೆ ಬಹುಮಾನ ಸಮ್ಮಾನ ಮಾಡಿದರು ಅದರ ಕೆಲವು ಫೋಟೊಗಳು. 


ಆಯ್ಕೆಗಾರರಾದ  ರಂಗರಾಜ ವನದುರ್ಗರವರು "ಜಂಗಮ ಪಕೀರನ ಜೋಳಿಗೆ, ಮತ್ತು ವೆಂಡರ್ ಕಣ್ಣು  ಪುಸ್ತಕಗಳನ್ನು ಅವಲೋಕಿಸಿದರು.

ಆಯ್ಕೆಗಾರರಲ್ಲಿ ಒಬ್ಬರಾದ ಜಗದೀಶ್ ಮಂಗಳೂರ್ ಮಠರವರು "ಯಜ್ಞ, ವಿಸ್ತರಣೆ, ಡಾ.ಬಸವರಾಜ ಮನ್ಸೂರ್ ಜೀವನಚರಿತ್ರೆ, ಗೋಡೆಗೆ ಬರೆದ ನವಿಲು" ಪುಸ್ತಕಗಳ ಬಗ್ಗೆ ಮಾತಾಡಿದರು.


ಮುಖ್ಯ ಅತಿಥಿಗಳಾದ ಜಯಂತ್ ಕಾಯ್ಕಿಣಿ ಸರ್ ಪುಸ್ತಕಗಳ ಬಗ್ಗೆ ಮಾತಾಡಿದ್ದು ಹೀಗೆ..... 

ಕಾರ್ಯಕ್ರಮಕ್ಕೆ ಬಂದಿದ್ದ ಧಾರವಾಡದ ಸಾಹಿತ್ಯಾಭಿಮಾನಿಗಳು.


"ವೆಂಡರ್ ಕಣ್ಣು" ಬಗ್ಗೆ ನನ್ನ ಮಾತು


"ಡಾ.ಬಸವರಾಜ ಮನ್ಸೂರ್ ಜೀವನ ಚರಿತ್ರೆ"  ಕೃತಿಕಾರ ಮಾರ್ತಾಂಡಪ್ಪ ಕತ್ತಿ 

 ತಮ್ಮ ವಿಸ್ತರಣೆ ಪುಸ್ತಕದ ಬಗ್ಗೆ ಮಾತಾಡಿದ ಶ್ರೀಧರ್ ಹೆಗೆಡೆ ಭದ್ರನ್.

ನಾಡಿನ ಖ್ಯಾತ ಕವಿಗಳಾದ ಸಿದ್ದಲಿಂಗ ಪಟ್ಟಣಸೆಟ್ಟಿಯವರು ನನಗೆ ಮಾತಾಡಿಸಲು ಸಿಕ್ಕಿದ್ದು ನನಗೆ ಮರೆಯಲಾಗದ ಅನುಭವ

ನನಗೆ ಜಯಂತ್ ಕಾಯ್ಕಿಣಿ ಸರ್ ಈ ರೀತಿ ಸಿಕ್ಕಿದ್ದು ನನ್ನ ಸುಯೋಗ. 

ಮೂವರು ಹರಟುತ್ತಿದ್ದಾಗ ನಮ್ಮನ್ನು ಕ್ಲಿಕ್ಕಿಸಿದ್ದು ಸಲೀಂ 

"ಯಜ್ಞ"  ಅನುವಾದ ಕೃತಿಗೆ ಬಹುಮಾನ ಗಳಿಸಿದ ಗೆಳೆಯ ಚಿದಾನಂದ್ ಸಾಲಿ ನನ್ನ ಕ್ಯಾಮೆರಾಗೆ ಸೆರೆಸಿಕ್ಕಿದ್ದು ಹೀಗೆ.

ಕವನ ವಿಭಾಗದಲ್ಲಿ ಪ್ರಶಸ್ಥಿ ಗಳಿಸಿದ ಗೆಳೆಯ ಆರೀಪ್ ರಾಜ  ಸಿನಿಮಾದಲ್ಲಿ ಬುದ್ದಿವಂತ ವಿಲನ್ ಪಾತ್ರದಂತೆ ಕಾಣುತ್ತಾರಲ್ಲವೇ?
 
ಸಂಜೆ  ಸೃಜನ ರಂಗಮಂದಿರದಲ್ಲಿ ಗಣ್ಯರ ಜೊತೆಗೆ ಪ್ರಶಸ್ಥಿ ವಿಜೇತರು.

ಪ್ರಶಸ್ಥಿ ಪ್ರಧಾನದಲ್ಲಿ ಜಯಂತ್ ಕಾಯ್ಕಿಣಿ, ಡಾ.ಶ್ಯಾಮಸುಂದರ್ ಬಿದರಕುಂದಿ, ಡಾ.ಕೆ.ಶರ್ಮ
 
ಕನ್ನಡ ನಾಡಿನ ಖ್ಯಾತ ಕವಿ ಚೆನ್ನವೀರಕಣವಿಯವರು ನಮ್ಮ ಕಾರ್ಯಕ್ರಮದಲ್ಲಿ
ಸಹಜ ಬೆಳಕಿನಲ್ಲಿ ಬೇಂದ್ರೆಯವರ ಫೋಟೊವನ್ನು ಸೆರೆಯಿಡಿದ ಬಾಗಲಕೋಟದ ಇಂದ್ರಕುಮಾರ್.
ಸೃಜನ ರಂಗಮಂದಿರದಲ್ಲಿ ಸಂಜೆ ಸಿಕ್ಕ ಹಿರಿಯ ಬ್ಲಾಗಿಗರಾದ ಸುನಾಥ್[ಸುಧೀಂದ್ರ ದೇಶಪಾಂಡೆ]ಸರ್

ಸಮಾರಂಭದಲ್ಲಿ ಖ್ಯಾತ ಸಾಹಿತಿಗಳು
  

ನಿನ್ನೆ ರಾತ್ರಿ ಬೆಂಗಳೂರಿಗೆ ಬಂದಾಗ ರಾತ್ರಿ ಹತ್ತು ಗಂಟೆ. ಇವತ್ತು ಬೆಳಿಗ್ಗೆ ಕೆಲವು ಫೋಟೊಗಳನ್ನು ಆಯ್ಕೆ ಮಾಡಿ ಬ್ಲಾಗಿಗೆ ಹಾಕಿದ್ದೇನೆ. ಮುಂದಿನ ಭಾರಿ ಧಾರವಾಡದ ಅನುಭವಗಳು. 

ಚಿತ್ರಗಳು.: ಮುಂಡರಗಿಯ ಸಲೀಂ,
ಬಾಗಲಕೋಟದ ಇಂದ್ರಕುಮಾರ.
 ಶಿವು.ಕೆ

Tuesday, October 19, 2010

" ವೆಂಡರ್ ಕಣ್ಣು"ಗೆ ಬಹುಮಾನ

        ಮೊನ್ನೆ ಭಾನುವಾರ ಬೆಳಿಗ್ಗೆ ಒಂಬತ್ತು ಗಂಟೆಗೆ ಎದ್ದಾಗ ಏನೋ ಒಂಥರ ಉಲ್ಲಾಸ. ಏಕೆಂದರೆ ಇದು ನಮಗೆ ಮೂರನೇ ಅಧಿಕೃತ ರಜ. ನಾವು ಅಧಿಕೃತವಾಗಿ ಮತ್ತು ನೆಮ್ಮದಿಯಾಗಿ  ನಿದ್ರಿಸಿದ್ದು ಈ ವರ್ಷದಲ್ಲಿ ಮೂರನೇ ಭಾರಿ. ಅವತ್ತು ನನ್ನ ಕನಸಿನಲ್ಲೂ ಸುಖವಾಗಿ ನಿದ್ರಿಸುತ್ತಾ ಅಕಾಶದಲ್ಲಿ ತೇಲಿಹೋಗುತ್ತಿರುವ ಚಿತ್ರಗಳೇ!. ನಾನು ಮಾತ್ರವಲ್ಲ ನನ್ನ ಹುಡುಗರು, ನನ್ನ ಎಲ್ಲಾ ವೆಂಡರ್ ಗೆಳೆಯರು, ಅವರ ಹುಡುಗರೂ ಕೂಡ ಸುಖವಾಗಿ ನಿದ್ರಿಸಿದ ದಿನವದು. ಅವತ್ತು  ಭಾನುವಾರವಾಗಿತ್ತಾದ್ದರಿಂದ ಏನು ಕೆಲಸವಿರಲಿಲ್ಲ. ಇಡೀ ದಿನ ಎಲ್ಲಿಯೂ ಹೋಗದೇ ಅರಾಮವಾಗಿ ಮನೆಯಲ್ಲಿಯೇ ಕಳೆದೆ. ಒಂಥರ ಏನು ಮಾಡದೇ ಸುಮ್ಮನಿದ್ದುಬಿಡುವುದು ಅಂತಾರಲ್ಲ ಹಾಗೆ. ಮಾನಸಿಕವಾಗಿ ತುಂಬಾ ರಿಲ್ಯಾಕ್ಸ್ ಆಗಿದ್ದ ದಿನವದು.


 ಮರುದಿನ ಮುಂಜಾನೆ ನಾಲ್ಕು ಖುಷಿಯಿಂದಲೇ ಹೋದೆ.  ನನ್ನ ಒಂಬತ್ತು ಹುಡುಗರಲ್ಲಿ ಇಬ್ಬರು ತಿರುಪತಿಗೆ ಹೋಗಿಬಿಟ್ಟಿದ್ದಾರೆ, ಫೋನ್ ಮಾಡಿದರೆ ಒಬ್ಬನದು ಸ್ವಿಚ್ ಆಪ್ ಮತ್ತೊಬ್ಬ ದರ್ಶನಕ್ಕಾಗಿ ನಿಂತಿದ್ದೇವೆ ಅಂತ ಹೇಳಬೇಕೆ!  ಇನ್ನೊಬ್ಬ ಅಕ್ಕನ ಮಗನ ನಾಮಕರಣಕ್ಕೆ ಅಂತ ಚಕ್ಕರ್. ಮಗದೊಬ್ಬನ ಮೊಬೈಲ್ ಸ್ವಿಚ್ ಆಪ್.  ಆಗ ತಾನೆ ಹೊಸದಾಗಿ ಸೇರಿದ್ದ ಹುಡುಗ ಜೊತೆಗಿದ್ದರೂ ಅವನಿಗೆ ಯಾವ ರೂಟಿನ ಪೇಪರುಗಳು ಗೊತ್ತಿಲ್ಲ. ಆತ ಇದ್ದರೂ ಒಂದೇ ಇಲ್ಲದಿದ್ದರೂ ಒಂದೆ.  ಸಪ್ಲಿಮೆಂಟರಿಗಳನ್ನು ಹಾಕಿ ಸಿದ್ದಗೊಳಿಸಲು ಸಹಕರಿಸಿದನಷ್ಟೆ.  ಉಳಿದ ಐದು ಹುಡುಗರು ಬಂದಿದ್ದರಿಂದ ಏಳುರೂಟುಗಳಲ್ಲಿ ಎರಡು ರೂಟುಗಳಿಗೆ ನಾನು ಹೋಗಲೇಬೇಕಿತ್ತು.   ಇದರ ನಡುವೆ ಟೈಮ್ಸ್ ಆಪ್ ಇಂಡಿಯ ಭಾನುವಾರದ ಸಪ್ಲಿಮೆಂಟರಿಗಳು ಸೋಮವಾರ ಬಂದು ಪೇಪರುಗಳು ದಪ್ಪವಾಗಿ ಊದಿಕೊಂಡಿದ್ದವು.  ಇಷ್ಟೆಲ್ಲಾ ಟೆನ್ಷನ್ನು ಗಳ ನಡುವೆ ಉರಿಯುವ ಬೆಂಕಿಗೆ ಉಪ್ಪುಕಾರ ಹಾಕುವಂತೆ ಕನ್ನಡ ಪ್ರಭ ಮತ್ತು ಇಂಡಿಯನ್ ಎಕ್ಸ್‍ಪ್ರೆಸ್ ಪೇಪರುಗಳ ಪ್ರಿಂಟಿಂಗ್‍ನಲ್ಲಿ ತೊಂದರೆಯಾಗಿ ಆರುವರೆಯಾದರೂ ಬಂದಿರಲಿಲ್ಲ. ಕಾಲೇಜಿಗೆ ಹೋಗುವ ಹುಡುಗರೆಲ್ಲಾ "ಅಣ್ಣ ಅದು ಬಂದಮೇಲೆ ನೀವೇ ಹಾಕಿಕೊಂಡು ಬಿಡಿ" ಎನ್ನುತ್ತಿದ್ದಾರೆ. ಇಂಥ ಸಮಯದಲ್ಲಿ ನನ್ನ ಸ್ಥಿತಿ ಹೇಗಿರಬಹುದು.  ನೆನ್ನೆಯಲ್ಲಾ ಖುಷಿಯಿಂದ ಆಕಾಶದಲ್ಲಿ ತೇಲಾಡುತ್ತಿದ್ದವನನ್ನು ನೇರವಾಗಿ ನೆಲಕ್ಕೆ ಬಿಸಾಡಿದಂತೆ ಆಗಿತ್ತು.  ನಮ್ಮ ಎಲ್ಲಾ ವೆಂಡರುಗಳ ಸ್ಥಿತಿ ಹೀಗಾದರೆ, ನಮ್ಮ ಬೀಟ್ ಹುಡುಗರ ಪ್ರಕಾರ ವರ್ಷಕ್ಕೆ ಒಂದು ಹಬ್ಬ ರಜ ಅದರ ಜೊತೆಗೆ ಮತ್ತೊಂದು ದಿನ ರಜ ತೆಗೆದುಕೊಂಡು ಊರಿಗೆ ಹೋದರೆ ತಪ್ಪೇನು? ಎನ್ನುವುದು ಅವರ ಮಾತು.  ಎಂದಿನಂತೆ ರಸ್ತೆಯಲ್ಲಿ ವಾಕಿಂಗ್ ಮಾಡುವ ಜನರ ಕಣ್ಣಿಗೆ ಮತ್ತೊಂದು ಮುಂಜಾನೆ ಸಂತೆ. ಬಿಟ್ಟಿ ಸಿನಿಮಾ. ಇದೆಲ್ಲರಿಂದ ಹೊರಗೆ ಬಂದು ನನ್ನ ಪಾತ್ರ ಬದಲಾಗಿ ಒಬ್ಬ ಛಾಯಾಗ್ರಾಹಕನಾಗಿ ಅಥವ ಬರಹನಾಗಿಬಿಟ್ಟರೆ ನನಗೂ ಮತ್ತು ನಿಮಗೆಲ್ಲರಿಗೂ ಮತ್ತೊಂದು "ವೆಂಡರ್ ಕಣ್ಣು"ವಿನ ಕತೆ. 

ಕೊನೆಗೂ ಎಲ್ಲಾ ಕೆಲಸ ಮುಗಿಸಿ ಮನೆಗೆ ಬಂದಾಗ ಬೆಳಿಗ್ಗೆ ಒಂಬತ್ತು ಗಂಟೆ. ಸೋಮವಾರ ಕೆಲವು ಆಫೀಸುಗಳಿಗೆ ಹೋಗಬೇಕಾಗಿದ್ದರಿಂದ ಬೇಗ ಸಿದ್ದನಾಗಿ ಹೊರಟೆ.  ಮನೆಗೆ ಬಂದಾಗ ಮಧ್ಯಾಹ್ನ ಎರಡು ಗಂಟೆಯಾಗಿತ್ತು. ಕೈಕಾಲು ಮುಖ ತೊಳೆದು ಊಟಕ್ಕೆ ಕುಳಿತುಕೊಳ್ಳುವಷ್ಟರಲ್ಲಿ ಬಂತು ಪೋಸ್ಟ್.  ತೆಗೆದು ಓದಿದೆ ನನ್ನ ಕಣ್ಣನ್ನು ನಾನೇ ನಂಬಲಾಗಲಿಲ್ಲ. ನನ್ನ "ವೆಂಡರ್ ಕಣ್ಣು" ಪುಸ್ತಕಕ್ಕೆ ಲಲಿತ ಪ್ರಬಂಧ ವಿಭಾಗದಲ್ಲಿ ಡಾ.ದ.ರಾ.ಬೆಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್[ರಿ],ಧಾರವಾಡದ ಸಂಸ್ಥೆಯಿಂದ ಬಹುಮಾನ ಬಂದಿತ್ತು. "ನನ್ನ ವೆಂಡರ್ ಕಣ್ಣು ಪುಸ್ತಕಕ್ಕೆ ಬಹುಮಾನ ಬಂದಿದೆ" ನಾನು ಜೋರಾಗಿ ಹೇಳಿದಾಗ ನನ್ನ ಕೈಯಿಂದ ಪತ್ರವನ್ನು ಕಿತ್ತುಕೊಂಡು ನಿದಾನವಾಗಿ ಓದಿದಳು ಹೇಮಶ್ರೀ. ನಮ್ಮಿಬ್ಬರ ಆನಂದಕ್ಕೆ ಪಾರವೇ ಇಲ್ಲ. ಮತ್ತೆ ಅಕಾಶ ಹಾರಿ ಮೋಡಗಳ ನಡುವೆ ತೇಲುತ್ತಿದ್ದೆ. ಊಟ ಬೇಕಿಲ್ಲವಾಗಿತ್ತು.


ಇದಕ್ಕೆಲ್ಲಾ ಕಾರಣ ಮತ್ತದೇ ನನ್ನ ಮುಂಜಾನೆ ಚುಮುಚುಮು ಬೆಳಕಿನ ಮುಂಜಾನೆ ಸಂತೆ. ಅದರಲ್ಲಿನ ಬೀಟ್ ಹುಡುಗರು. ಇವರೊಂಥರ ನೀರಿದ್ದಂತೆ. ಯಾವ ಆಕಾರಕ್ಕೆ ಬೇಕಾದರೂ ಒಗ್ಗಿಕೊಳ್ಳುತ್ತಾರೆ. ಓಲೈಸಿಬಿಟ್ಟರೆ ಮುದ್ದಿನ ಅರಗಿಣಿಗಳು, ಶಿಸ್ತಿನ ಸಿಪಾಯಿಗಳು. ಕೋಪದಿಂದ ಬೈದರೇ....ಚಕ್ಕರ್ ಮೇಲೆ ಚಕ್ಕರುಗಳು...ಲಾಂಗ್ ಲೀವುಗಳು...ಮೊಬೈಲ್ ಸ್ವಿಚ್ ಆಪ್‍ಗಳು...ನಾಟ್ ರೀಚಬಲ್ಲುಗಳು...........ಆದರೂ.......


                    ಚಳಿ ಗಾಳಿ ಮಳೆ ಎನ್ನದೇ....
                   ತಣ್ಣನೆ ಮುಂಜಾವಿನಲ್ಲಿ....
                   ಬೆಚ್ಚನೇ ಬೆಳಗು ತರುವ....
                   ಅಸಂಖ್ಯಾತ, ಅನಾಮಿಕ....
                   ದಿನಪತ್ರಿಕೆ ಹಂಚುವ....
                   ಹುಡುಗರಿಗೆ.....

 ವೆಂಡರ್ ಕಣ್ಣು ಪುಸ್ತಕಕ್ಕೆ ಬಂದ ಬಹುಮಾನ ಅರ್ಪಣೆ.


ಮತ್ತೊಂದು ರೀತಿಯಲ್ಲಿ ಹೇಳಬೇಕೆಂದರೆ ಇವರೊಂಥರ ಪ್ಲಾಸ್ಟರ್ ಆಪ್ ಪ್ಯಾರಿಸ್ ಇದ್ದಂತೆ. ಬೇಕಾದ ಆಕಾರದಲ್ಲಿ ಅಚ್ಚಾಗುವ ಮೂಲ ದ್ರವ್ಯಗಳು. ಇದನ್ನೆಲ್ಲಾ ಬರಹದ ಮೂಲಕ ಹೊರಹಾಕಲು ಒಂದು ಮಾಧ್ಯಮ ಬೇಕಿತ್ತು ಮೊದಲಾದರೆ ಪೆನ್ನು ಪೇಪರ್ ಹಿಡಿದು  ನಿದಾನವಾಗಿ ಬರೆಯುವಾಗ ಈ ವೇಗವಿರಲಿಲ್ಲ. ಅದ್ಯಾವಾಗ ಜಿ.ಎನ್.ಮೋಹನ್ ನನಗೆ ತಗುಲಿಕೊಂಡರೋ ನನ್ನಲ್ಲಿ ಕಂಫ್ಯೂಟರಿನಲ್ಲಿ ಬರೆಯುವ ಉಮೇದು ಹತ್ತಿಸಿ ಬರೆದಿದ್ದನ್ನು ತೋರಿಸಲು ಬ್ಲಾಗ್ ಲೋಕವೆನ್ನುವ ವೇದಿಕೆಯ ನಡುವೆ ನಿಲ್ಲಿಸಿ ಮುಂದೆ ನೀನುಂಟು ನಿನ್ನ ಬ್ಲಾಗ್ ಬಳಗವುಂಟು ಅಂತೇಳಿ ನಡೆದೇ ಬಿಟ್ಟರು. 


ಅಮೇಲೆ ನಡೆದಿದ್ದೆಲ್ಲಾ ಇತಿಹಾಸ. ಬ್ಲಾಗ್ ನನಗೊಂದು ಹೊಸಲೋಕವನ್ನು ತೋರಿಸಿತು. ಇಲ್ಲಿ ಬರೆದಿದ್ದನ್ನು ಪ್ರೀತಿಯಿಂದ ಓದುವವರು ಇದ್ದಾರೆ. ತಪ್ಪುಗಳನ್ನು ತಿದ್ದಿ ಬೆನ್ನುತಟ್ಟುವ ಹಿರಿಯರಿದ್ದಾರೆ. ಬರಹದ ಜೊತೆಗೆ ಭಾವನೆಗಳನ್ನು ಹಂಚಿಕೊಳ್ಳುವ ಸಮಾನ ಮನಸ್ಕರಿದ್ದಾರೆ. ಬೇರೆಲ್ಲಾ ಮಾದ್ಯಮಗಳು  ಹದಗೆಟ್ಟುಹೋಗಿ ಒಳಗೊಂದು ಹೊರಗೊಂದು ಅಂತಿರುವ ಕಾಲದಲ್ಲಿ ನಮ್ಮ ಬ್ಲಾಗ್ ಲೋಕ ಪರಿಶುಧ್ಧವಾಗಿದೆ. ಅದಕ್ಕೇ ಸಾಕ್ಷಿಯಾಗಿ ಪೇಪರ್ ಹುಡುಗ ವಿಶ್ವನಾಥನ ಅಪಘಾತ ಪರಿಸ್ಥಿತಿಯಲ್ಲಿ ಸ್ಪಂದಿಸಿದ ರೀತಿ,  ನಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಲ್ಲಿ ನಮ್ಮದೇ ಮನೆಯ ಕಾರ್ಯಕ್ರಮ, ಪುಸ್ತಕವೆನ್ನುವಷ್ಟರ ಮಟ್ಟಿಗೆ ಅಪ್ಪಿಕೊಂಡು ಯಶಸ್ವಿಗೊಳಿಸಿದ್ದು, ಬ್ಲಾಗ್ ವನಕ್ಕೆ ಹೋಗಿ ಗಿಡನೆಟ್ಟಿದ್ದು...ಹೀಗೆ ಅನೇಕ ಉದಾಹರಣೆಗಳು. ಇಂಥ ಪರಿಸರದಲ್ಲಿ ನನ್ನ ಬರಹಕ್ಕೆ ಮೊದಲು ಒಂದು ಚೌಕಟ್ಟು ಹಾಕಿಕೊಟ್ಟು ಒಂದೇ ವಿಷಯದ ಬಗ್ಗೆ ಬರಿ ಅಂತ ಒಂದು ಕಡೆ ಕೂರಿಸಿ   ಪ್ರೋತ್ಸಾಹಿಸಿದವರು ಹಿರಿಯರಾದ ನಾಗೇಶ್ ಹೆಗೆಡೆ. ಅವರನ್ನು ಈ ಕ್ಷಣದಲ್ಲಿ ನಾನು ನೆನೆಯಲೇಬೇಕು. ಬಹುಮಾನ ಬಂದ ತಕ್ಷಣ "ನನ್ನ ಪುಸ್ತಕಕ್ಕೆ ಬಹುಮಾನ ಬಂದಷ್ಟು ಖುಷಿಯಾಯ್ತು" ಎಂದ ಹಾಲ್ದೊಡ್ಡೇರಿ ಸುಧೀಂದ್ರ ಸರ್, "ನೀನಿನ್ನು ಅರಾಮವಾಗಿ ಕೂರುವಂತಿಲ್ಲ" ಎಂದ ಶೇಷಾಶಾಸ್ತ್ರಿಗಳು,  ದೂರದ ಕುವೈಟಿನಿಂದ ಪೋನ್ ವಿಶ್ ಮಾಡಿದ ಗೆಳೆಯ ಡಾ.ಅಜಾದ್, ಸುಗುಣಕ್ಕ, ಮಹೇಶ್ ಸರ್, ಡಾ.ಕೃಷ್ಣಮೂರ್ತಿ, ಪರಂಜಪೆ, ಎಂ ವಿಶ್ವನಾಥ್, ಮಲ್ಲಿಕಾರ್ಜುನ್, ಶಿವಶಂಕರ್ ಎಳವತ್ತಿ..... ಇನ್ನಿತರರು ತಮ್ಮದೇ ಪುಸ್ತಕಕ್ಕೆ ಬಹುಮಾನ ಬಂದಷ್ಟು ಖುಷಿ ಪಟ್ಟಿದ್ದಾರೆ. ಇದಲ್ಲದೇ ದೂರದೂರಿನಲ್ಲಿರುವ ವನಿತಾ, ರಂಜಿತ, ಚೇತನ ಭಟ್, ಪೂರ್ಣಿಮ ಭಟ್, ಮಾನಸ ಮಾತ್ರವಲ್ಲದೇ ವಸುದೇಶ್, ಶಿವಪ್ರಕಾಶ್, ಶಶಿಅಕ್ಕ, ವಿಕಾಶ್ ಹೆಗಡೆ, ಸುಶ್ರುತ, ಸುಮನ್ ವೆಂಕಟ್, ಪ್ರಕಾಶ್ ಹೆಗಡೆ, ಚಂದ್ರುಸರ್, ಮಹೇಶ್ ಕಲ್ಲರೆ, ಪ್ರಗತಿ ಹೆಗಡೆ, ವಿಜಯಶ್ರೀ, ಚಿನ್ಮಯ್, ಬಾಲಸುಬ್ರಮಣ್ಯ ಶಾಸ್ತ್ರಿ, ವಿನಯ್, ನಾಗರಾಜ್, ಶ್ಯಾಮಲ ಮೇಡಮ್, ಶ್ರೀನಿಧಿ, ದಿವ್ಯ, ದೊಡ್ಡಮನಿ ಮಂಜು,..................ಇನ್ನೂ ಎಷ್ಟೋ ಬ್ಲಾಗ್ ಗೆಳೆಯರು ನನಗಿಂತ ಮೊದಲೇ ತಿಳಿದು ವಿಷ್ ಮಾಡುತ್ತಾ ಸಂತೋಷ ಪಟ್ಟಿದ್ದಾರೆ. "ವೆಂಡರ್ ಕಣ್ಣು" ಬರೆದಿದ್ದು ನಾನು ಎನ್ನುವ ನೆಪವಾದರೂ ಅದರಲ್ಲಿನ ಎಲ್ಲಾ ಘಟನೆಗಳು, ಪಾತ್ರಗಳು, ಅದರಲ್ಲಿ ನೋವು ನಲಿವುಗಳನ್ನು ನಮ್ಮ ಬ್ಲಾಗ್ ಗೆಳೆಯರು ತುಂಬು ಹೃದಯದಿಂದ ಅನುಭವಿಸಿದ್ದಾರೆ. ಪ್ರೋತ್ಸಾಹಿಸಿದ್ದಾರೆ.  ಬ್ಲಾಗ್ ಬಳಗ ಪ್ರೋತ್ಸಾಹಿಸದಿದ್ದಲ್ಲಿ ಇಂಥ ವೆಂಡರ್ ಕಣ್ಣು ರೂಪುಗೊಳ್ಳುತ್ತಿರಲಿಲ್ಲ.  ಇಂಥ ಸಮಯದಲ್ಲಿ ಬ್ಲಾಗ್ ಬರಹದ ಪುಸ್ತಕವಾದ "ವೆಂಡರ್ ಕಣ್ಣು"ಗೆ ಸಿಕ್ಕ ಬಹುಮಾನ ಎಲ್ಲಾ ಬ್ಲಾಗಿಗರಿಗೂ ಸಲ್ಲುತ್ತದೆ." ಬ್ಲಾಗ್ ಬರಹಕ್ಕೂ ಬಹುಮಾನ ಬಂತ?" ಈ ಪ್ರಶ್ನೆ ಮೂಡಿ ನನ್ನೊಳಗೆ ಅಚ್ಚರಿ ಮೂಡಿಸಿದಂತೆ ನನ್ನ ಇತರ ಬ್ಲಾಗ್ ಗೆಳೆಯರಲ್ಲೂ ಇದೇ ಪ್ರಶ್ನೆಯ ಜೊತೆಗೊಂದು ಆಶ್ಚರ್ಯ, ಅದರಾಚೆಗೊಂದು ಆಸೆಯೂ ಮೂಡುತ್ತಿದೆ.  ಹೀಗೆ  ನಮ್ಮ ಎಲ್ಲಾ ಬ್ಲಾಗ್ ಗೆಳೆಯರು  ತಮ್ಮದೇ ಪುಸ್ತಕಕ್ಕೆ ಬಹುಮಾನ ಬಂದಷ್ಟು ಸಂತೋಷ ಪಡುತ್ತಿರುವುದರಿಂದ ಈ ಬಹುಮಾನವನ್ನು ನಮ್ಮ ದಿನಪತ್ರಿಕೆ ಹುಡುಗರ ಜೊತೆಗೆ ಬ್ಲಾಗ್ ಲೋಕದ ಗೆಳೆಯರಿಗೂ ಅರ್ಪಿಸುತ್ತಿದ್ದೇನೆ.

ಪ್ರೀತಿಯಿಂದ..
ಶಿವು.ಕೆ.

Sunday, October 10, 2010

ಚೆನ್ನಾಗಿರುವವರನ್ನು ಕಂಡರೆ ದೇವರಿಗೂ ಹೊಟ್ಟೆ ಕಿಚ್ಚಂತೆ!

 

         ಮಹಡಿ ಮನೆಯ ಕಿಟಕಿಯಲ್ಲಿ ನಾನು ಇಣುಕಿದಾಗ ಹಾಲ್‍ನ ಬಲಬದಿಯ ಆಡುಗೆ ಮನೆಯ ಬಾಗಿಲಿನಲ್ಲಿ ಅವರ ನೆರಳು ಕಾಣಿಸಿದ್ದು ನೋಡಿ ನನಗೆ ಸಮಾಧಾನವಾಗಿತ್ತು. "ಸಾರ್" ಅಂತ ಜೋರಾಗಿ ಕೂಗಿದೆ. ಆವರಿಗೆ ಗೊತ್ತಾಗಲಿಲ್ಲ. ಕಾಲಿಂಗ್ ಬೆಲ್ ಒತ್ತಿದೆ, ತಿರುಗಿ ನೋಡಲಿಲ್ಲ.  ಬಾಗಿಲು ಬಡಿದೆ.  ಹೂಹೂಂ...ಆತ ತಿರುಗಿ ನೋಡಲಿಲ್ಲ.  ಇದ್ಯಾಕೋ ಸರಿಬರಲಿಲ್ಲವೆಂದು ಮತ್ತೆ ನಾಲ್ಕೈದು ಬಾರಿ ಬೆಲ್ ಮಾಡಿದೆ. ಬಾಗಿಲು ತಟ್ಟಿದೆ..."ಸಾರ್, ಸಾರ್," ಜೋರಾಗಿ ಕೂಗಿದೆ. ನನ್ನ ಕೂಗಿಗೆ ಕೆಳಗಿನ ಮನೆಯವರು ಕೇಳಿಸಿಕೊಂಡು ಮಾತಾಡಿದರೇ ಹೊರತು ಆತನಿರಲಿ, ಆತನ ನೆರಳೂ ಕೂಡ ನನ್ನ ಕೂಗಿಗೆ ಓಗೊಡಲಿಲ್ಲ.   

ಒಳಗಿನಿಂದ ಲಾಕ್ ಮಾಡಿದ ಬಾಗಿಲ ಹೊರಗೆ ನಿಂತು ಕೂಗಿ,ಬಾಗಿಲು ತಟ್ಟಿ, ಬೆಲ್ ಮಾಡಿದರೂ ಒಳಗೆ ಹಾಲ್‍ನ ಬಲಬದಿಯಲ್ಲಿ ಕೇವಲ ಐದು ಆಡಿ ದೂರದಲ್ಲಿ ನಿಂತಿರುವ ವ್ಯಕ್ತಿಯೊಬ್ಬ ತಿರುಗಿ ನೋಡದಿದ್ದಲ್ಲಿ ಯಾರಿಗೇ ಆದರೂ ಸಿಟ್ಟು ಬರದಿರುತ್ತದೆಯೇ? ನೀವು ಹತ್ತುನಿಮಿಷ ಅಲ್ಲಿಯೇ ನಿಂತು ಕೂಗಿದರೂ ಆ ವ್ಯಕ್ತಿ ತಿರುಗಿನೋಡದಿದ್ದಲ್ಲಿ ಖಂಡಿತವಾಗಿ ನಿಮ್ಮ ಸಿಟ್ಟು ನೆತ್ತಿಗೇರಿಬಿಡುತ್ತಿತ್ತೇನೋ.  ಆದ್ರೆ ನಾನು ಸಿಟ್ಟು ಮಾಡಿಕೊಳ್ಳುವಂತಿಲ್ಲ. ಏಕೆಂದರೆ ಆವರಿಗೆ ಕಿವಿ ಕೇಳುವುದಿಲ್ಲ. ಆವರು ತಿರುಗುವವರೆಗೆ ನಾನು ಕೂಗಿ, ಕಿರುಚಿ, ಬಾಗಿಲು ಬಡಿದು....ಇನ್ನೈದು ನಿಮಿಷ ಕಳೆದರೂ ಆತ ನನ್ನ ಕಡೆಗೆ ನೋಡಲು ಏನಾದರೂ ಮಾಡುತ್ತಿರಬೇಕು.." ಮತ್ತೆರಡು ನಿಮಿಷ ಕಳೆಯಿತು. ನಿದಾನವಾಗಿ ಅಡುಗೆ ಮನೆಯ ಬಾಗಿಲಿಗೆ ನೇತುಹಾಕಿದ್ದ ಸಣ್ಣ ಕರವಸ್ತ್ರದಲ್ಲಿ  ಆ ನೆರಳು ಕೈವರೆಸಿಕೊಂಡು ಹಾಲ್‍ನೆಡೆಗೆ ಬರುತ್ತಿರುವುದು ಕಾಣಿಸಿತು. ಸದ್ಯ ನಾನು ಇಷ್ಟು ಹೊತ್ತು ಕಾದಿದ್ದಕ್ಕೂ ಸಾರ್ಥಕವಾಯಿತು ಅಂದುಕೊಂಡೆ. ಹಾಲ್‍ಗೆ ಬರುತ್ತಿದ್ದಂತೆ ಕೈಯಾಡಿಸಿದೆ.  ಆತ ನನ್ನನ್ನು ನೋಡುತ್ತಿದ್ದರೂ ಏನೂ ಪ್ರತಿಕ್ರಿಯಿಸುತ್ತಿಲ್ಲ.  ನನಗ್ಯಾಕೋ ಇವತ್ತು ಗಿಟ್ಟುವ ಕೆಲಸವಲ್ಲ ಎನಿಸಿ ಬೇಸರವಾಗತೊಡಗಿತ್ತು. ಆತ ಮತ್ತೆರಡು ಹೆಜ್ಜೆ ಬಾಗಿಲ ಕಡೆಗೆ ಬಂದರಲ್ಲ!   ನಾನು ಕಿಟಕಿಯಾಚೆ ಕೈಯಾಡಿಸುತ್ತಿರುವುದು ಆವರಿಗೆ ಕಾಣಿಸಿತು.
 ಯಾರೋ ಬಂದಿರಬಹುದು ಅನ್ನಿಸಿತೇನೋ, ಕಿಟಕಿಯ ಬಳಿಬಂದು ಕನ್ನಡಕವನ್ನು ಸರಿಮಾಡಿಕೊಳ್ಳುತ್ತಾ ನನ್ನನ್ನು ನೋಡಿ ನಾನೇ ಎಂದು ನಿದಾನವಾಗಿ ಖಚಿತಪಡಿಸಿಕೊಂಡು ಬಾಗಿಲು ತೆರೆದು  

"ಶಿವುನಾ, ಬನ್ನಿ ಬನ್ನಿ, ಇವತ್ತು ತಾರೀಖು ಎರಡು ಅಲ್ವಾ...ನಾನು ಮರೆತೇಬಿಟ್ಟಿದ್ದೆ  ಸಾರಿ"  ಎಂದರು.
 "ನಾನು ಬಂದು ಹತ್ತು ನಿಮಿಷವಾಯ್ತು," ಅಂತ ಹೇಳಿ ಬಾಗಿಲಾಚೆ ನಿಂತು ನಾನು ಮಾಡಿದ ಎಲ್ಲಾ ಕೂಗಾಟ, ಕಾಲಿಂಗ್ ಬೆಲ್, ಇತ್ಯಾದಿಗಳನ್ನೆಲ್ಲ ಜೋರಾಗಿ ವಿವರಿಸಿದೆ.
 
 "ಹೌದಾ...ನನಗೆ ಗೊತ್ತಾಗೊಲ್ಲಪ್ಪ, ವಯಸ್ಸು ಆಗಲೇ ಎಪ್ಪತ್ತನಾಲ್ಕು ದಾಟಿದೆ.  ಕನ್ನಡಕ ಹಾಕಿಕೊಳ್ಳದಿದ್ದರೆ ಪಕ್ಕದವರು ಕಾಣುವುದಿಲ್ಲ,  ನನಗೆ ಕಿವಿಕೇಳುವುದಿಲ್ಲವೆನ್ನುವುದು ನಿನಗೇ ಗೊತ್ತು." ಎನ್ನುತ್ತಾ ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುತ್ತಾ ನನಗಾಗಿ ದಿನಪತ್ರಿಕೆ ಹಣತರಲು ಒಳಗೆ ಹೋದರು. ಅವರು ಒಳಗೆ ಹೋದರೆಂದರೆ ಮುಗಿಯಿತು. ನೆನಪಿನ ಶಕ್ತಿ ಕಡಿಮೆಯಾಗಿರುವುದರಿಂದ ಇಟ್ಟಿರುವ ಹಣವನ್ನು ಹುಡುಕಿ ತಡಕಿ, ನನಗೆ ತಂದುಕೊಡಲು ಕಡಿಮೆಯೆಂದರೂ ಹತ್ತು ನಿಮಿಷಬೇಕು.

 ಅವರ ಸೋಫಾ ಮೇಲೆ ಕುಳಿತುಕೊಳ್ಳುತ್ತಿದ್ದ ಹಾಗೆ ಹಳೆಯ ನೆನಪುಗಳು ಮರುಕಳಿಸಿದವು.  ಹದಿನೈದು ವರ್ಷಗಳ ಹಿಂದೆ ನಾನು ಹೀಗೆ ಅವರ ಮನೆಗೆ ತಿಂಗಳ ಮೊದಲ ಒಂದನೇ ಅಥವ ಎರಡನೇ ತಾರೀಖು ಸರಿಯಾಗಿ ದಿನಪತ್ರಿಕೆಯ ಹಣವಸೂಲಿಗೆ ಹೋಗುತ್ತಿದ್ದೆ.  ನನ್ನ ನಿರೀಕ್ಷೆಯಲ್ಲಿಯೇ ಇದ್ದರೇನೋ ಎಂಬಂತೆ ವಯಸ್ಸಾದ ದಂಪತಿ ಒಳಗೆ ಕರೆದು ಕೂಡಿಸಿ ಪ್ರೀತಿಯಿಂದ ಮಾತಾಡಿ ನನ್ನ ಬಗ್ಗೆಯೆಲ್ಲಾ ವಿಚಾರಿಸಿಕೊಂಡು ಅವರ ವಿಚಾರಗಳನ್ನು ಹೇಳುತ್ತಾ ಸಂತೋಷಪಡುತ್ತಿದ್ದರು. ಕೆಲವೊಮ್ಮೆ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಬಂದಿದ್ದಾಗ ನನ್ನನ್ನು ಒಳಗೆ ಕರೆದು ಕೂಡಿಸಿ ಹಣಕೊಡುವಾಗ ನನಗೊಂಥರ  ಸಂಕೋಚವಾಗುತ್ತಿತ್ತು.  ಅವರದು ತುಂಬು ಕುಟುಂಬದ ಸಂಸಾರ. ದಿನಕಳೆದಂತೆ ಅವರಿಗೆ ನಿವೃತ್ತಿಯಾಯಿತು.  ವಯಸ್ಸಾದಂತೆ ರೋಗಗಳು ಹೆಚ್ಚಾಗುತ್ತವಲ್ಲ,  ನಿದಾನವಾಗಿ ಇವರಿಗೆ ಕಿವಿ ಕೇಳದಂತಾಗತೊಡಗಿತ್ತು.  ಹತ್ತು ಬಾರಿ ಕೂಗಿದರೆ ಒಮ್ಮೆ ತಿರುಗಿನೋಡುವ ಸ್ಥಿತಿಗೆ ಬಂದಿದ್ದರು ಆತ. ಆದರೂ ಕಳೆದ ಹತ್ತು ವರ್ಷಗಳಿಂದ ಆತ  ಓದುತ್ತಿದ್ದುದ್ದು ಶಿವು ತಂದುಕೊಡುವ ಡೆಕ್ಕನ್ ಹೆರಾಲ್ಡ್ ಪೇಪರ್ ಮಾತ್ರ!  ನಮ್ಮ ಜೀವನ ಪರ್ಯಾಂತ ಶಿವುನೇ ನಮಗೆ ಪೇಪರ್ ತಂದುಕೊಡಬೇಕು!  ಹಾಗಂತ ದಂಪತಿಗಳಿಬ್ಬರೂ ತಮಾಷೆ ಮಾಡುವುದರ ಜೊತೆಗೆ ತುಂಬು ಪ್ರೀತಿಯಿಂದ ನನ್ನ ಬಳಿಯೇ ಹೇಳುತ್ತಿದ್ದರು. 

 ನನ್ನಂಥ ಸಾವಿರಾರು ವೆಂಡರುಗಳು ಇಂಥ ಗ್ರಾಹಕರ ದೆಸೆಯಿಂದಲೇ ಇವತ್ತು ಹೊಟ್ಟೆತುಂಬ ಉಂಡು...ನೆಮ್ಮದಿಯಾಗಿ ಮಲಗಿ ಕಣ್ತುಂಬ ನಿದ್ರಿಸುವುದು!

         ಮತ್ತೆ ಮೂರು ವರ್ಷ ಕಳೆಯಿತು. ಚೆನ್ನಾಗಿರುವವರನ್ನು ಕಂಡರೆ ದೇವರಿಗೂ ಹೊಟ್ಟೆ ಕಿಚ್ಚಂತೆ ಅನ್ನುವ ಹಾಗೆ ಒಂದು ದಿನ ಇದ್ದಕ್ಕಿದ್ದ ಹಾಗೆ ಅವರ ಶ್ರೀಮತಿಗೆ ಬೆನ್ನು ಮೂಳೆಯ ತೊಂದರೆಯಿಂದಾಗಿ ಸೊಂಟ ಬಿದ್ದುಹೋಯಿತು. ಚುರುಕಾಗಿ ಮನೆತುಂಬಾ ಓಡಾಡಿಕೊಂಡಿದ್ದ ಆಕೆ ವಯಸ್ಸು ಅರವತ್ತೆಂಟರ ಸನಿಹದ ಇಳಿವಯಸ್ಸಿನಲ್ಲಿ ಇನ್ನುಳಿದ ಬದುಕಲ್ಲಿ ಊಟ, ತಿಂಡಿ, ಒಂದು ಎರಡು ಎಲ್ಲಾ ಹಾಸಿಗೆಯಲ್ಲೇ ಅಂತಾದರೆ ಆಕೆಯ ಸ್ಥಿತಿ ಹೇಗಿರಬಹುದು!.  ಕಿವಿಕೇಳದ ಕಣ್ಣು ಮಂಜಾದ ತನಗಿಂತ ನಾಲ್ಕು ವರ್ಷ ದೊಡ್ಡವರಾದ ಗಂಡನನ್ನು ಈಕೆಯೇ ನೋಡಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಆಕೆಗೆ ಹೀಗೆ ಸೊಂಟ ಬಿದ್ದು ಹೋದರೆ ಗತಿಯೇನು!  ಮುಂದೆ ಆತ ಯಾವ ಸ್ಥಿತಿಯಲ್ಲಿದ್ದರೋ ಅದೇ ಸ್ಥಿತಿಯಲ್ಲಿ ಹೆಂಡತಿಯನ್ನು ನೋಡಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿತ್ತು. ಇವರಿಗಿದ್ದ ಮೂರು ಮಕ್ಕಳಲ್ಲಿ ಒಬ್ಬಳು ಅಮೇರಿಕಾದಲ್ಲಿ ಸೆಟ್ಲ್ ಆಗಿದ್ದರೆ, ಮತ್ತೊಬ್ಬಳು ದೆಹಲಿಯಲ್ಲಿ ಕೆಲಸದ ನಿಮಿತ್ತ ನೆಲೆಸಿಬಿಟ್ಟಿದ್ದಳು. ಮಗ ತಮಿಳುನಾಡಿನಲ್ಲಿ. ಇಂಥ ಸ್ಥಿತಿಯಲ್ಲಿ ವಾಪಸ್ಸು ಇವರ ಬಳಿಗೆ ಬರಲಾಗದ ಮಟ್ಟಿಗೆ ಮಕ್ಕಳು ಅವರವರ ಜೀವನದಲ್ಲಿ ಸೆಟ್ಲ್ ಆಗಿಬಿಟ್ಟಿದ್ದರು.  ಬಂದರೂ ಆಗೊಮ್ಮೆ ಹೀಗೊಮ್ಮೆ ಬರುವಂತ ಅತಿಥಿಗಳು. ಇಲ್ಲೆ ಇವರನ್ನು ನೋಡಿಕೊಳ್ಳಲು ಉಳಿದರೆ ನಮ್ಮ ಕೆಲಸ, ಮಕ್ಕಳು, ಜೀವನದ ಗತಿಯೇನು ಎನ್ನುವ ಪ್ರಶ್ನೆಗಳೊಳಗೆ ಸಿಲುಕಿ ಅವರವರ ಬದುಕು ಅವರಿಗೆ ಎನ್ನುವಂತಾಗಿತ್ತು.  ಬದುಕಿನಲ್ಲಿ ಜಿಗುಪ್ಸೆ, ವಿಷಾಧ, ಆತಂಕಗಳು ಬಂದರೆ ಬೇಗನೇ ಮಾಯವಾಗಿಬಿಡಬೇಕು. ಅದು ಬಿಟ್ಟು ಇನ್ನುಳಿದ ಜೀವನದುದ್ದಕ್ಕೂ ಜೊತೆಗೆ ಅಂಟಿಕೊಂಡುಬಿಟ್ಟರೇ.....ಸೊಂಟವಿಲ್ಲದ ಆಕೆಯ ಸ್ಥಿತಿ ಹಾಗಾಗಿ ಆರುತಿಂಗಳೊಳಗೆ ದೇವರ ಪಾದ ಸೇರಿಕೊಂಡು ಬಿಟ್ಟರು.

 ಇನ್ನು ಮುಂದೆ ಕಣ್ಣು ಸರಿಯಾಗಿ ಕಾಣದ, ಕಿವಿಕೇಳದ, ಬಿಪಿ ಮತ್ತು ಶುಗರ್ ಕಾಯಿಲೆ ಮೈತುಂಬಿಕೊಂಡ, ಎಪ್ಪತ್ತನಾಲ್ಕ ವಯಸ್ಸಿನ ಹಿರಿಯಜ್ಜನೇ ಆ ಮನೆಗೆ ರಾಜ, ರಾಣಿ, ಸೇವಕ, ಸೈನಿಕ. ಇಂಥ ಪರಿಸ್ಥಿತಿಯಲ್ಲೂ ಅವರ ಅಚಾರ ವಿಚಾರಗಳು ವ್ಯತ್ಯಾಸವಾಗಿಲ್ಲ. ನಿತ್ಯ ಬೆಳಿಗ್ಗೆ ಆರು-ಆರುವರೆಗೆ ಎದ್ದು ಬಾಲ್ಕನಿಯಲ್ಲಿ ನಮ್ಮ ಹುಡುಗ ಹಾಕುವ ಡೆಕ್ಕನ್ ಹೆರಾಲ್ಡ್ ಪೇಪರಿಗಾಗಿ ಕಾಯುತ್ತಿರುತ್ತಾರೆ.  ಪೇಪರ್ ಕೈಗೆ ಸಿಕ್ಕಮೇಲೆ ಎಂಟುಗಂಟೆಯವರೆಗೆ ದಪ್ಪಕನ್ನಡದ ಹಿಂದಿನ ಮಬ್ಬು ಕಣ್ಣಿನಲ್ಲೇ ಓದುತ್ತಾರೆ. ಆಮೇಲೆ ಒಂಬತ್ತುವರೆಗೆ ಸ್ನಾನ, ಮಡಿ, ಶಿವನಪೂಜೆ.  ಆ ಸಮಯದಲ್ಲಿ ಯಾರು ಹೋದರೂ ಬಾಗಿಲು ತಟ್ಟಿದರೂ ಬಾಗಿಲು ತೆಗೆಯುವುದಿಲ್ಲ.  ನಾನೇ ಅನೇಕ ಬಾರಿ ಹಣವಸೂಲಿಗೆ ಅಂತ ಎಂಟು ಗಂಟೆ ದಾಟಿದ ಮೇಲೆ ಹೋಗಿ ಬಾಗಿಲು ತಟ್ಟಿ ವಾಪಸ್ಸು ಬಂದಿದ್ದೇನೆ.  ಒಬ್ಬಂಟಿಯಾದ ಮೇಲೆ ಅಡುಗೆ ಮಾಡಿಕೊಳ್ಳುತ್ತಾರೆ. ನಂತರ ಬೇರೆ ಪುಸ್ತಕದ ಓದು...ಸಣ್ಣ ನಿದ್ರೆ. ಕಣ್ಣು ಸ್ವಲ್ಪ ಕಾಣಿಸಿದರೂ ಕಿವಿ ಕೇಳಿಸುವುದಿಲ್ಲವಾದ್ದರಿಂದ ಟಿ.ವಿ ನೋಡುವುದಿಲ್ಲ. ಸಂಜೆ ಮತ್ತೆ ಪೂಜೆ, ಸಣ್ಣ ಮಟ್ಟಿನ ಊಟ...ನಿದ್ರೆ...ಹೀಗೆ ಜೀವನ ಸಾಗಿತ್ತು.
 
 ಆತ ನನ್ನ ವೆಂಡರ್ ಕಣ್ಣು ಪುಸ್ತಕವನ್ನು ಓದಿದ್ದಾರೆ. ಎರಡನೆ ಪುಸ್ತಕ "ಗುಬ್ಬಿ ಎಂಜಲು"ನ್ನು ಬಿಡುಗಡೆಯಾದ ಒಂದು ವಾರಕ್ಕೆ ಕೊಟ್ಟುಬಂದಿದ್ದೆ.  ಅವರು ಎರಡೇ ದಿನದಲ್ಲಿ ಓದಿ ಮುಗಿಸಿ ನನಗೆ ಫೋನ್ ಮಾಡಿ ಹೇಳಿದ್ದು ಹೀಗೆ,
"ಶಿವು, ನಿನ್ನ ಗುಬ್ಬಿ ಎಂಜಲು ಓದುತ್ತಿದ್ದೆ. ನಾವು ಮದುವೆಯ ನಂತರ ಹೊಸಮನೆಯಲ್ಲಿ ಸಂಸಾರ ನಡೆಸುತ್ತಿದ್ದ ಆ ದಿನಗಳು ನೆನಪಾದವು. ಅದನ್ನು ನನ್ನ ಶ್ರೀಮತಿಯೊಂದಿಗೆ ಹಂಚಿಕೊಳ್ಳೋಣವೆಂದರೆ ಅವಳೇ ಇಲ್ಲ" ಎಂದು ಭಾವುಕತೆಯಿಂದ ಹೇಳಿದಾಗ ನನಗೂ ಕಣ್ಣು ತುಂಬಿಬಂದಿತ್ತು.

ಇನ್ನೂ ಏನೇನೋ ಅಲೋಚನೆಗಳು ಬರುತ್ತಿದ್ದವು ಅಷ್ಟರಲ್ಲಿ ಆವರು ನನಗೆ ಕೊಡಬೇಕಾದ ಒಂದು ತಿಂಗಳ ದಿನಪತ್ರಿಕೆ ಹಣ ಹಿಡಿದುಕೊಂಡು ಬಂದರಲ್ಲ, ನಾನು ಅವರದೇ ಬದುಕಿನ ನೆನಪಿನ ಲೋಕದಿಂದ ಹೊರಬಂದೆ.
 "ಶಿವು ತಡವಾಯ್ತು, ಹಣ ಎಲ್ಲಿಟ್ಟಿರುತ್ತೇನೆ ಅನ್ನೋದ ನೆನಪಾಗೋಲ್ಲ." ನನಗೆ ಹಣಕೊಡುತ್ತಾ ಹಾಗೆ ನಿದಾನವಾಗಿ ಸೋಪಾ ಮೇಲೆ ಕುಳಿತರು.
 ಸ್ವಲ್ಪ ತಡೆದು "ನೋಡು ಶಿವು, ಕೆಲವೊಂದು ವಿಚಾರವನ್ನು ನಿನ್ನಲ್ಲಿ ಹೇಳಬೇಕಿದೆ.  ಎರಡು ತಿಂಗಳ ಹಿಂದೆ ನಾನು ನಮ್ಮ ಮನೆಯ ಮೆಟ್ಟಿಲಿಳಿಯುವಾಗ ಕೆಳಗೆ ಜಾರಿಬಿದ್ದೆ ಅಷ್ಟೆ. ಪ್ರಜ್ಞೆತಪ್ಪಿತ್ತು.  ಒಂದು ದಿನದ ನಂತರ ನನಗೆ ಪ್ರಜ್ಞೆ ಬಂದಾಗ ಆಸ್ಪತ್ರೆಯ ಬೆಡ್ ಮೇಲಿದ್ದೆ.  ನನ್ನ ಕೆಳಗಿನ ಮನೆಯವರು ಆಸ್ಪತ್ರೆಗೆ ಸೇರಿಸಿದ್ದರು.  ಅಷ್ಟರಲ್ಲಿ ನನ್ನ ದೆಹಲಿಯ ಮಗಳು ಬಂದು ನನ್ನನ್ನು ಮಾತಾಡಿಸಿ ಏನು ಆಗೋಲ್ಲ ನಾನಿದ್ದೇನೆ ಅಂತ ದೈರ್ಯ ಹೇಳಿದಳು.  ಮತ್ತೆ ಯಾರೋ ಬಂದು ನನಗೆ ಅನಾಸ್ತೇಶಿಯ ಇಂಜೆಕ್ಷನ್ ಕೊಟ್ಟು ಅಪರೇಷನ್ ಮಾಡಿದರಂತೆ. ನನಗೆ ಪ್ರಜ್ಞೆ ಬಂದಾಗ ನನ್ನ ಉಸಿರಾಟದಲ್ಲಿ ಏನೋ ವ್ಯತ್ಯಾಸವಾದಂತೆ ಅನ್ನಿಸುತ್ತಿತ್ತಾದರೂ ಗೊತ್ತಾಗಲಿಲ್ಲ.   ಅಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಹೊತ್ತಿಗೆ ಗೊತ್ತಾಗಿತ್ತು  ಕೃತಕ ಉಸಿರಾಟಕ್ಕಾಗಿ ನನಗೆ ಫೇಸ್ ಮೇಕರ್ ಹಾಕಿದ್ದಾರೆಂದು.  ಕೆಲವು ದಿನಗಳಲ್ಲಿ ನನ್ನ ಮಗಳು ದೆಹಲಿಗೆ ಅವಳ ಜೀವನಕ್ಕಾಗಿ ಹೊರಟೇಬಿಟ್ಟಳು.  ಅಮೇರಿಕಾದಿಂದ ಮತ್ತೊಬ್ಬ ಮಗಳು ಅಳಿಯ ಮಕ್ಕಳು ಎಲ್ಲಾ ಬಂದು ನನ್ನನ್ನು ನೋಡಿಕೊಂಡು ಒಂದು ವಾರವಿದ್ದು ವಾಪಸ್ಸು ಹೊರಟು ಹೋದರು.  ಇನ್ನು  ನನ್ನ ಮಗನಂತೂ ನನ್ನಿಂದ ಕಿತ್ತುಕೊಳ್ಳಲು ಬರುತ್ತಾನೆ ಹೊರತು,  ಇಂಥ ಸಮಯದಲ್ಲೂ ನನ್ನ ಸಹಾಯಕ್ಕೆ ಬರಲಿಲ್ಲ.  ಕೆಲವೇ ದಿನಗಳಲ್ಲಿ ನಾನು ಮತ್ತೆ ಎಂದಿನಂತೆ ಈ ಮನೆಗೆ ನಾನೇ ರಾಜ ರಾಣಿ, ಸೈನಿಕ ಸೇವಕ ಎಲ್ಲಾ ಆಗಿಬಿಟ್ಟೆ." ಹೇಳುತ್ತಾ ಮಾತು ನಿಲ್ಲಿಸಿದರು.
 ಸ್ವಲ್ಪ ಸುಧಾರಿಸಿಕೊಳ್ಳುತ್ತಾ, "ಅದಾದ ಮೇಲೆ ನನಗೆ ಆಡಿಗೆ ಮಾಡಿಕೊಳ್ಳಲು ಆಗಲಿಲ್ಲ.  ಸದ್ಯ ಕೆಳಗಿನ ಮನೆಯ ಬಾಡಿಗೆಯವರು ಒಳ್ಳೆಯವರು.  ನೀನು ಹಾಕಿದ ಡೆಕ್ಕನ್ ಹೆರಾಲ್ಡ್ ಓದಿದ ಮೇಲೆ ಎತಾ ಸ್ಥಿತಿ ಸ್ನಾನ ಶಿವನ ಪೂಜೆ ಮುಗಿಸಿದ ಮೇಲೆ ಅವರು ಮೇಲೆ ಬಂದು ನನ್ನನ್ನು ನಿದಾನವಾಗಿ ಕೆಳಗೆ ಕರೆದುಕೊಂಡು ಹೋಗಿ ತಿಂಡಿ ಕೊಡುತ್ತಾರೆ.  ಅಮೇಲೆ  ಅಲ್ಲೇ ನಿದ್ರೆ ಮಾಡುತ್ತೇನೆ. ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ ಅವರು ನನ್ನನ್ನು ಎಚ್ಚರಗೊಳಿಸಿ ಚಪಾತಿ ಅನ್ನ ಸಾಂಬರು ಇತ್ಯಾದಿ ಊಟಕೊಡುತ್ತಾರೆ. ಊಟ ಮಾಡಿದ ಮೇಲೆ ನಿದಾನವಾಗಿ ಮೇಲೆ ಬಂದುಬಿಡುತ್ತೇನೆ.  ಸಂಜೆ ಒಂದು ಕಾಫಿ ಕಳಿಸುತ್ತಾರೆ.  ರಾತ್ರಿ ಎಂಟುಗಂಟೆಗೆ ಚಪಾತಿಯನ್ನು ಚೂರು ಚೂರು ಮಾಡಿ ಒಂದು ಲೋಟ ಹಾಲಿಗೆ ಹಾಕಿ ನೆನಸಿ ಜೊತೆಗೊಂದು ಬಾಳೆಹಣ್ಣು ಕೆಲಸದವಳ ಕೈಲಿ ಮೇಲೆ ಕಳಿಸುತ್ತಾರೆ. ಅದನ್ನು ತಿಂದು ಮಲಗಿಬಿಡುತ್ತೇನೆ"  ಎಂದರು. 

 "ನೋಡು ಶಿವು ಇಲ್ಲಿ ಗಟ್ಟಿಯಾಗಿದೆಯಲ್ಲಾ, ಅದೇ ಜಾಗದಲ್ಲಿ ಫೇಸ್ ಮೇಕರ್ ಹಾಕಿದ್ದಾರೆ. ನಿನ್ನೆಯಲ್ಲಾ ನೋವು ಹೆಚ್ಚಾಗಿ ಇಲ್ಲಿ ಉಬ್ಬಿಕೊಂಡು ಇಡೀ ದಿನ ಒದ್ದಾಡಿಬಿಟ್ಟೆ. ಇವತ್ತು ಸ್ವಲ್ಪ ಪರ್ವಾಗಿಲ್ಲ.   ಅಂತ ನನ್ನ ಕೈಯನ್ನು ಅವರ ಎದೆಯ ಎಡಭಾಗಕ್ಕೆ ಮುಟ್ಟಿಸಿಕೊಂಡರು. ಮೂರುತಿಂಗಳಿಗೊಮ್ಮೆ ದೆಹಲಿಯಲ್ಲಿರುವ ಮಗಳು ಮತ್ತು ಅಳಿಯ ಬಂದು ನೋಡಿಕೊಂಡು ಹೋಗುತ್ತಾರೆ. ಮಗನಂತೂ ಹತ್ತಿರದ ತಮಿಳುನಾಡಿನಲ್ಲಿದ್ದರೂ ಒಮ್ಮೆಯೂ ಬರುವುದಿಲ್ಲ. ನನ್ನ ಮೇಲೆ ತುಂಬಾ ಪ್ರೀತಿಯಿರುವ ಅಮೆರಿಕಾದ ಮೊದಲ ಮಗಳು ಎರಡು ದಿನಕ್ಕೊಮ್ಮೆ ಫೋನ್ ಮಾಡುತ್ತಾಳೆ, ನನ್ನ ದುರಾದೃಷ್ಟಕ್ಕೆ ಅವಳ ಮಾತನ್ನು ಕೇಳಿಸಿಕೊಳ್ಳಲು ನನಗೆ ಕಿವಿಯೇ ಇಲ್ಲ" ಎಂದು  ಭಾವುಕರಾಗಿ ಕಣ್ಣೀರಾದಾಗ ನನ್ನ ಕಣ್ಣು ತುಂಬಿಬಂದಿತ್ತು.
 "ಆಯಸ್ಸು ಕರಗುವ ಸಮಯದಲ್ಲಿ ಮನಸ್ಸಿಗಾಗುವ ಕೊರಗನ್ನು ಮರೆಯಲು ಪೂಜೆ, ಪುಸ್ತಕಗಳು,  ನಿನ್ನ ಡೆಕ್ಕನ್ ಹೆರಾಲ್ಡ್  ಪೇಪರ್........ಅಷ್ಟಕ್ಕೆ ಮಾತು ನಿಲ್ಲಿಸಿ, "ಸರಿಯಪ್ಪ ನೀನು ಹೋಗಿಬಾ, ಆದ್ರೆ ನೀವು ಮಾತ್ರ ನನಗೆ ಡೆಕ್ಕನ್ ಹೆರಾಲ್ಡ್ ಹಾಕುವುದನ್ನು ತಪ್ಪಿಸಬೇಡ....ಎಂದು ಹೇಳುತ್ತಾ ಮತ್ತೆ ನಿದಾನವಾಗಿ ಪೂಜೆಗೆ ಒಳಗೆ ಹೋದರು.

 ನಾನು ನಿದಾನವಾಗಿ ಮೆಟ್ಟಿಲಿಳಿಯುತ್ತಿದ್ದೆ.  ಹಳ್ಳಿಯಲ್ಲಿ ವಯಸ್ಸಾದವರ ಕೊನೆದಿನಗಳನ್ನು  ಮನಮುಟ್ಟುವಂತೆ ಚಿತ್ರಿಸಿರುವ ಕಾಡುಬೆಳದಿಂಗಳು ಸಿನಿಮಾ ನೆನಪಾಗಿತ್ತು.  ಹಳ್ಳಿಯಷ್ಟೇ ಏಕೆ ಇಂಥ ಮೆಟ್ರೋಪಾಲಿಟನ್ ನಾಡಿನಲ್ಲಿರುವ ಹಿರಿಯರಿಗೆ ಕೊನೆದಿನಗಳಲ್ಲಿ ಬೆಳದಿಂಗಳು ತೋರಿಸುವವರು ಯಾರು? ಎನ್ನುವ ಪ್ರಶ್ನೆ ನನ್ನಲ್ಲಿ ಕಾಡತೊಡಗಿತ್ತು.

[ವೆಂಡರ್ ಮತ್ತು ಗ್ರಾಹಕರ ಕಥೆಗಳು ಮುಗಿಯಿತು ಎಂದುಕೊಳ್ಳುತ್ತಿದ್ದ ಹಾಗೆ ಇಂಥ ಘಟನೆಗಳು ಇನ್ನಷ್ಟು ಮತ್ತಷ್ಟು ವೆಂಡರ್ ಲೇಖನಗಳನ್ನು ಬರೆಯಲು ಪ್ರೇರೇಪಿಸುತ್ತಿವೆ....ಬಹುಶಃ ಇವೆಲ್ಲಾ ಮುಗಿಯದ ಕತೆಗಳಾ?  ಬ್ಲಾಗ್ ಗೆಳೆಯರಾದ ನೀವೇ ಉತ್ತರಿಸಬೇಕು]

ಲೇಖನ: ಶಿವು.ಕೆ


Sunday, October 3, 2010

ಫೋಟೊಗ್ರಫಿ ವಿಶ್ವಕಪ್.....ಮಿಸ್ ಮಾಡಿಕೊಳ್ಳಬೇಡಿ.




  ಇದೇನಿದೂ ಫೋಟೊಗ್ರಫಿಯಲ್ಲಿ ವಿಶ್ವಕಪ್? ಅಂತ ಈ ಕ್ಷಣ ನಿಮಗನ್ನಿಸಿರಬಹುದು.  ನಿಮಗೆಲ್ಲರಿಗೂ ಪುಟ್‍ಬಾಲ್ ವಿಶ್ವಕಪ್ [ಫಿಪಾ], ಟೆನಿಸ್‍ನಲ್ಲಿ [ಡೇವಿಸ್ ಕಪ್], ಟೇಬಲ್ ಟೆನ್ನಿಸಿನಲ್ಲಿ ವಿಶ್ವಕಪ್, ಕ್ರಿಕೆಟ್ಟಿನಲ್ಲಂತೂ ಒಂದು ದಿನದ ಪಂದ್ಯಾವಳಿಯ ವಿಶ್ವಕಪ್ ಅಲ್ಲದೇ, ೨೦-೨೦ ವಿಶ್ವಕಪ್ ಕೂಡ ನಡೆಯುವುದು ಪುಟ್ಟ ಮಕ್ಕಳಿಗೂ ಗೊತ್ತು.  ಹಾಗಾದರೆ ಈ ಫೋಟೊಗ್ರಫಿ ವಿಶ್ವಕಪ್ ಅಂದರೇನು? ಅದು ಹೇಗಿರುತ್ತದೆ? ತಿಳಿದುಕೊಳ್ಳುವ ಕುತೂಹಲವೇ!  ಬನ್ನಿ ತಿಳಿದುಕೊಳ್ಳೋಣ.



  ಬೆಂಗಳೂರಿನಲ್ಲಿ ಫೋಟೊಗ್ರಫಿಯ ವಿಶ್ವಕಪ್ ನಡೆಯುತ್ತದೆ ಎನ್ನುವ ವಿಚಾರವೇ ನನಗೆ ಒಂಥರ ಥ್ರಿಲ್ ಅನ್ನಿಸಿತ್ತು.  ನಾನು ಒಬ್ಬ ಛಾಯಾಗ್ರಾಹಕನಾಗಿ ವಿದೇಶಗಳಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಫೋಟೊಗ್ರಫಿ ವಿಶ್ವಕಪ್ ಸ್ಪರ್ಧೆಗಳನ್ನು ಓದಿ ತಿಳಿದುಕೊಳ್ಳುತ್ತಿದ್ದೆ. ೨೦೦೬ರಲ್ಲಿ ಯುರೋಪಿನ ಲಕ್ಸಂಬರ್ಗ್‍ನಲ್ಲಿ ನಡೆದ ಪಿಕ್ಟೋರಿಯಲ್ ವಿಶ್ವಕಪ್  ಫೋಟೊಗ್ರಫಿಯಲ್ಲಿ ನಮ್ಮ ಭಾರತಕ್ಕೆ ಚಿನ್ನದ ಪದಕ ಲಭಿಸಿತ್ತು. ಅಲ್ಲಿ ಭಾಗವಹಿಸಿದ್ದ ಹತ್ತು ಚಿತ್ರಗಳಲ್ಲಿ ನನ್ನ "ಮೀನಿನ ಬಲೆ ಎಸೆಯುವ" ಚಿತ್ರವೂ ಸ್ಪರ್ಧಿಸಿದ್ದು ನನಗೆ ಮರೆಯಲಾಗದ ಅನುಭವ.

 
          "ಇಂಟರ್‌ನ್ಯಾಷನಲ್ ಫೆಡರೇಷನ್ ಅಫ್ ಫೋಟೊಗ್ರಫಿಕ್ ಆರ್ಟ್" [ಫೆಡರೇಷನ್ ಇಂಟರ್‌ನ್ಯಾಷನಲ್ ಡಿ ಲ ಆರ್ಟ್ ಫೋಟೊಗ್ರಫಿಕ್"] ಸಂಸ್ಥೆಯವರು ಎರಡು ವರ್ಷಕ್ಕೊಮ್ಮೆ ಫೋಟೊಗ್ರಫಿ ವಿಶ್ವಕಪ್ಪನ್ನು ವಿವಿದ ದೇಶಗಳಲ್ಲಿ ನಡೆಸುತ್ತಾರೆ. ಇದರ ಮುಖ್ಯ ಕಛೇರಿ ಈಗ ಪ್ಯಾರಿಸ್‍ನಲ್ಲಿದೆ. ವಿಶ್ವದ ಫೋಟೊಗ್ರಫಿಯ ಅಭಿವೃದ್ಧಿ ಮತ್ತು ಬೆಳವಣಿಗೆಗಾಗಿ ಯುನೆಸ್ಕೋದಿಂದ ಅಧಿಕೃತವಾಗಿ ಮನ್ನಣೆ ಪಡೆದುಕೊಂಡ ಏಕೈಕ ಫೋಟೊಗ್ರಫಿ ಆರ್ಗನೈಸೇಷನ್ ಇದು.   ವಿಶ್ವದ ಐದು ಖಂಡಗಳ ೮೫ಕ್ಕೂ ಹೆಚ್ಚು ರಾಷ್ಟ್ರಗಳ ಫೋಟೊಗ್ರಫಿ ಸಂಸ್ಥೆಗಳು ಸದಸ್ಯತ್ವವನ್ನು ಹೊಂದಿವೆ. ಮತ್ತು ಹತ್ತು ಲಕ್ಷಕ್ಕೂ ಹೆಚ್ಚು ಛಾಯಾಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ.

 ವಿಶ್ವಕಪ್ ಅತಿಥ್ಯವನ್ನು ವಹಿಸಿಕೊಂಡ ದೇಶಕ್ಕೆ ನಾವು ಸ್ಪರ್ಧೆಗಾಗಿ ಫೋಟೋಗಳನ್ನು ಕಳಿಸಬೇಕಲ್ಲವೇ?  ಅದು ಹೇಗೆ ಕಳುಹಿಸಬಹುದು ಎನ್ನುವುದರ ಎಲ್ಲಾ ಹಂತಗಳನ್ನು ತಿಳಿದುಕೊಳ್ಳೋಣ.



 ೨೦೧೦ರಲ್ಲಿ ನಮ್ಮ ಭಾರತ ದೇಶಕ್ಕೆ ನೇಚರ್ ವಿಭಾಗದಲ್ಲಿ ವಿಶ್ವಕಪ್ ಫೋಟೊಗ್ರಫಿ ಸ್ಪರ್ಧೆಯನ್ನು ನಡೆಸುವ ಅವಕಾಶ ಸಿಕ್ಕಿದೆ. ಅದರ ಸಂಪೂರ್ಣ ಜವಾಬ್ದಾರಿ ಮತ್ತು ನಿರ್ವಹಣೆಯನ್ನು ಪ್ರತಿಷ್ಠಿತ ಬೆಂಗಳೂರಿನ ಯೂತ್ ಫೋಟೊಗ್ರಫಿಕ್ ಸೊಸೈಟಿ ವಹಿಸಿಕೊಂಡಿದೆ.  ಮೊದಲಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಛಾಯಾಗ್ರಾಹಕರು  ತಾವು ಕ್ಲಿಕ್ಕಿಸಿದ ಅತ್ಯುತ್ತಮ ನೇಚರ್ ವಿಭಾಗದ ಛಾಯಾಚಿತ್ರಗಳನ್ನು[ಒಬ್ಬರು ಎಷ್ಟು ಚಿತ್ರಗಳನ್ನಾದರೂ ಕಳಿಸಬಹುದು ಆದ್ರೆ ಅತ್ಯುತ್ತಮವಾಗಿರಲೇಬೇಕು] ಈ ಸ್ಪರ್ಧೆಯಲ್ಲಿ ನಮ್ಮ ದೇಶದ ಹೆಸರಿನಲ್ಲಿ ಭಾಗವಹಿಸುವ ಫೋಟೊಗ್ರಫಿ ಸಂಸ್ಥೆಗೆ ಕಳಿಸಬೇಕು. ಹೀಗೆ  ದೇಶದಾದ್ಯಂತ  ಫಿಯಪ್ ಸದಸ್ಯತ್ಯ ಹೊಂದಿರುವ ಫೋಟೊಗ್ರಫಿ[೨೫ಕ್ಕೂ ಹೆಚ್ಚು ಸಂಸ್ಥೆಗಳಿವೆ]ಸಂಸ್ಥೆಗಳ ಎಲ್ಲಾ ಸದಸ್ಯರೂ ಹೀಗೆ ತಮ್ಮ ಅತ್ಯುತ್ತಮ ನೇಚರ್ ವಿಭಾಗದ ಛಾಯಾಚಿತ್ರಗಳನ್ನು ಕಳಿಸುತ್ತಾರೆ.  ದೇಶದ ಎಲ್ಲಾ ಸದಸ್ಯತ್ವ ಹೊಂದಿದ ಒಂದೊಂದು ಸಂಸ್ಥೆಯಿಂದಲೂ ನೂರಾರು ಚಿತ್ರಗಳು ಸೇರಿ ನಮ್ಮ ದೇಶವನ್ನು ಪ್ರತಿನಿಧಿಸುವ ಸಂಸ್ಥೆಗೆ ಸಾವಿರಾರು ಛಾಯಾಚಿತ್ರಗಳು ಬರುತ್ತವೆ.  ಅಷ್ಟು ಚಿತ್ರಗಳಲ್ಲಿ ಒಂದು ದೇಶವನ್ನು ಪ್ರತಿನಿಧಿಸಲು ಹತ್ತು ಚಿತ್ರಗಳಿಗೆ ಮಾತ್ರ ಅವಕಾಶ ಮತ್ತು ಒಬ್ಬ ಛಾಯಾಗ್ರಾಹಕನ ಒಂದು ಚಿತ್ರ ಮಾತ್ರ ಆಯ್ಕೆಯಾಗಲು ಸಾಧ್ಯ. ಇವೆಲ್ಲಾ ಚಿತ್ರಗಳಲ್ಲಿ ನಮ್ಮ ದೇಶಕ್ಕೆ ವಿಶ್ವಕಪ್ ಗೆದ್ದು ಕೊಡುವ ಹತ್ತು ಅತ್ಯುತ್ತಮ ಚಿತ್ರಗಳನ್ನು ಆರಿಸುವ ಜವಾಬ್ದಾರಿ ಈಗ ಆ ಸಂಸ್ಥೆಯ ಮೇಲಿರುತ್ತದೆ. ನಮ್ಮ ಶಾಲಾ-ಕಾಲೇಜು, ಗ್ರಾಮೀಣ ಮತ್ತು ನಗರ ಮಟ್ಟದಲ್ಲಿ ಪ್ರತಿನಿಧಿಸಿದ ನಮ್ಮ ಕ್ರಿಕೆಟ್ ಪ್ರತಿಭೆಗಳನ್ನು ರಾಜ್ಯಮಟ್ಟದಲ್ಲಿ ಆಯ್ಕೆ ಮಾಡಿ ಅದರೊಳಗೆ ರಾಷ್ಟ್ರಮಟ್ಟಕ್ಕೆ ನಮ್ಮ ಸಚಿನ್, ದ್ರ್‍ಆವಿಡ್, ಸೆಹ್ವಾಗ್, ದೋನಿ.................ಹನ್ನೊಂದು ಜನರು ಮಾತ್ರ ಆಯ್ಕೆಯಾದಂತೆ ಇಲ್ಲಿಯೂ ಅದೇ ರೀತಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.  ವಿಶ್ವಕಪ್‍ನಲ್ಲಿ ನಿಮ್ಮ ಒಂದು ಚಿತ್ರವೂ ಸ್ಪರ್ಧೆಗೆ ಆಯ್ಕೆಯಾಗಬೇಕಾದರೆ ಅದರಲ್ಲಿ ನಿಮ್ಮ ಸಾಧನೆ, ಶ್ರಮ ಎಂಥದಿರಬೇಕೆನ್ನುವುದು ನಿಮ್ಮ ಊಹೆಗೆ ಬಿಟ್ಟಿದ್ದು.

 ಯ್ಕೆಯಾಗುವ ಚಿತ್ರಗಳೆಲ್ಲಾ ಅತ್ಯುತ್ತಮವೆಂದುಕೊಂಡರೂ ತಂಡರೂಪದಲ್ಲಿ ಪದಕ ಗೆಲ್ಲಬೇಕಲ್ಲವೇ!  ಕ್ರಿಕೆಟ್ಟಿನಲ್ಲಿ ಅತ್ಯುತ್ತಮ ನಾಯಕ ದೋನಿ ಇದ್ದರೆ ಸಾಲದು. ಪಂದ್ಯ ಗೆಲ್ಲಲೂ ಅತ್ಯುತ್ತಮ ೫ ಬ್ಯಾಟ್ಸ್‍ಮೆನ್‍ಗಳು, ಮೂವರು ವೇಗದ ಮತ್ತು ೧-೨ ಸ್ಪಿನ್ ಬೌಲರುಗಳು, ಉತ್ತಮ ಮತ್ತು ಅನುಭವವುಳ್ಳ ವಿಕೆಟ್ ಕೀಪರುಗಳು, ಅವರೊಳಗೆ ಪ್ರತಿಭಾನ್ವಿತ ಫೀಲ್ಡರುಗಳು, ಆಲ್‍ರೌಂಡರುಗಳೆಲ್ಲಾ ಇದ್ದಲ್ಲಿ ಒಂದು ಪ್ರತಿಭಾನ್ವಿತ ಸಮತೋಲನದ ತಂಡವೆನಿಸಿಕೊಳ್ಳುವಂತೆ  ಈ ಫೋಟೊಗ್ರಫಿ ಸ್ಪರ್ಧೆಯಲ್ಲೂ  ಇದೇ ರೀತಿಯಲ್ಲಿ ಸಮತೋಲನ ಹೊಂದಿದ ಹತ್ತು ಚಿತ್ರಗಳಿರಬೇಕಾಗುತ್ತದೆ.  ಸೆಹ್ವಾಗ್ ನೂರು ಬಾಲಿನಲ್ಲಿ ಇನ್ನೂರು ಹೊಡೆದಾಗ ನಾವು ಮೆಚ್ಚಿ ಕೊಂಡಾಡಿದಂತೆ, ಇಲ್ಲಿ ಒಂದು ಛಾಯಾಚಿತ್ರವೂ ತನ್ನನ್ನು ಕ್ಲಿಕ್ಕಿಸಿದ ಛಾಯಾಗ್ರಾಹಕನ ಹಲವು ವರ್ಷಗಳ ಸಾಧನೆ, ಪ್ರತಿಭೆ, ಕ್ಲಿಕ್ಕಿಸುವ ಸಮಯದಲ್ಲಿನ ತ್ವರಿತ ತಾಂತ್ರಿಕತೆ, ಆ ಸಮಯದಲ್ಲಿ ಆತನ ಮನಸ್ಥಿತಿ, ಎದುರಿಸಿದ ಗಂಭೀರ ಅಪಾಯಗಳು, ಆತನ ಕಾಯುವಿಕೆಯ ತನ್ಮಯತೆ, ಇತ್ಯಾದಿಗಳನ್ನು ಕ್ಷಣಮಾತ್ರದಲ್ಲಿ ತೀರ್ಪುಗಾರರ ಮನಸ್ಸಿನಲ್ಲಿ ಮೂಡಿಸಬೇಕು.

 ಇದರ ನಂತರದ ಹಂತವೇ ಕೋಹರೆನ್ಸ್ ಇದನ್ನು ಕನ್ನಡದಲ್ಲಿ ಸಮತೋಲನ, ವಿವಿಧ್ಯತೆಯಲ್ಲಿ ಏಕತೆ ಎನ್ನುತ್ತಾರೆ. ಅದು ಹೇಗೆ ಎಂದು ತಿಳಿದುಕೊಳ್ಳೋಣ.  ನೇಚರ್ ವಿಭಾಗದಲ್ಲಿ ಲ್ಯಾಂಡ್‍ಸ್ಕೇಪ್, ಪಕ್ಷಿಗಳು, ಕಾಡುಪ್ರಾಣಿಗಳು, ಕೀಟಲೋಕ, ಸಸ್ಯಗಳು,...........ಹೀಗೆ ಹತ್ತಾರು ವಿಭಾಗಗಳಿವೆ. ಇಷ್ಟು ವಿಭಾಗಗಳಲ್ಲಿ ನಾವು ಸ್ಪರ್ಧೆಗೆ ಕಳಿಸಲು ಒಂದು ವಿಭಾಗವನ್ನು ಮಾತ್ರ ಆಯ್ಕೆಮಾಡಿಕೊಳ್ಳಬೇಕು.  ಉದಾಹರಣೆಗೆ  ಕಾಡುಪ್ರಾಣಿಗಳ ಚಿತ್ರಗಳನ್ನು ಆಯ್ಕೆ ಮಾಡಿಕೊಂಡರೆ ಹತ್ತು ಚಿತ್ರಗಳು ಕಾಡುಪ್ರಾಣಿಗಳದೇ ಆಗಿರಬೇಕು. ಅದರಲ್ಲಿ ಚಿಟ್ಟೆಗಳ, ಪಕ್ಷಿಗಳ, ಪ್ರಕೃತಿಯ ಚಿತ್ರಗಳು ಇರುವಂತಿಲ್ಲ. ಬೇಕಾದರೆ ಹುಲಿ, ಚಿರತೆ, ಸಿಂಹ, ತೋಳ, ಕಾಡುಬೆಕ್ಕು, ಕಾಡುನಾಯಿ,...........ಹೀಗೆ ಹತ್ತು ಬಗೆಯವು ಇದ್ದರೂ ಅವೆಲ್ಲಾ ಕಾಡುಪ್ರಾಣಿಗಳೇ ಆಗಿರಬೇಕು.  ಹಾಗೆ ಹದ್ದು, ಗಿಡುಗ, ಮೈನಾ, ರಣಹದ್ದು, ಕಿಂಗ್‍ಫಿಷರ್, ಹಾರ್ನಬಿಲ್...........ಹತ್ತು ವೈವಿಧ್ಯಮಯ ಪಕ್ಷಿಗಳಿದ್ದರೂ ಅವುಗಳ ನಡುವೆ ಪ್ರಾಣಿಗಳ, ಕೀಟಗಳ ಚಿತ್ರಗಳು ಸೇರಿರಬಾರದು.  ಒಂದು ಹದ್ದು ತಾನು ಹಿಡಿದು ತಂದ ಹಾವನ್ನು ಬಾಯಲ್ಲಿ ಕಚ್ಚಿಕೊಂಡು ಕುಳಿತಿದ್ದರೇ ಉಳಿದ ಎಲ್ಲಾ ಒಂಬತ್ತು ಚಿತ್ರಗಳಲ್ಲಿರುವ ವಿವಿಧ ಹಕ್ಕಿಗಳೂ ಕೂಡ ತಮ್ಮ ಬಾಯಲ್ಲಿ ತಮಗಿಷ್ಟವಾದ ಆಹಾರವನ್ನು ಹಿಡಿದು ತಂದ ಚಿತ್ರಗಳಿರಬೇಕು.  ಮತ್ತೆ ಎಲ್ಲಾ ಚಿತ್ರಗಳ ಹಿನ್ನೆಲೆ ಬಣ್ಣಗಳು ಒಂದೇ ತೆರನಾಗಿದ್ದಲ್ಲಿ ತಂಡದ  ಅಂಕ ಹೆಚ್ಚಾಗುತ್ತದೆ. ಮತ್ತೆ ಕ್ಲಿಕ್ಕಿಸುವಾಗಿನ ತಾಂತ್ರಿಕತೆ ಒಂದೇ ಆಗಿದ್ದಲ್ಲಿ ಅದೂ ತಂಡದ ಅಂಕಗಳು ಹೆಚ್ಚಿಸುವಲ್ಲಿ ಸಹಾಯಮಾಡುತ್ತವೆ.  ಹೀಗೆ "ಚಲನೆಯಲ್ಲಿರುವ ಎರಡು ಪಕ್ಷಿಗಳು" "ಕಾಡುಪ್ರಾಣಿಯ ಬಾಯಲ್ಲಿ ಬೇಟೆ" "ಚಿಟ್ಟೆಗಳ ಪ್ರಪಂಚ"  ಹಿಮ ಆವರಿಸಿದ ಬೆಟ್ಟಗುಡ್ಡಗಳು, ಹೀಗೇ ನೂರಾರು ವಿಭಾಗದಲ್ಲಿ ಫೋಟೊಗಳನ್ನು ಕಳಿಸಬಹುದು.  ಇದೆಲ್ಲವೂ ಪ್ರಿಂಟ್ ವಿಭಾಗದ ಸ್ಪರ್ಧೆಯಾಯಿತು.


 ಮುಂದುವರಿದ ತಂತ್ರಜ್ಞಾನದ ನಿಟ್ಟಿನಲ್ಲಿ ಹೊಸದಾಗಿ ಸೇರಿಕೊಂಡ ಮತ್ತೊಂದು ವಿಭಾಗವೆಂದರೆ ಪ್ರೊಜೆಕ್ಟೆಡ್ ಇಮೇಜ್ ವಿಭಾಗ. ಇದರಲ್ಲಿ ಛಾಯಾಚಿತ್ರಗಳನ್ನು ಸಿಡಿಗಳಲ್ಲಿ ಸಾಪ್ಟ್ ಕಾಪಿಯಾಗಿ ಕಳಿಸಬೇಕು. ಇದಕ್ಕೂ ಪ್ರಿಂಟ್ ವಿಭಾಗದ ನಿಯಮಗಳೇ ಅನ್ವಯವಾದರೂ ಇದರಲ್ಲಿ ಇಪ್ಪತ್ತು ಚಿತ್ರಗಳು ಸ್ಪರ್ಧೆಗೆ ಭಾಗವಹಿಸುವುದಕ್ಕೆ ಅವಕಾಶ.  ಹಾಗೆ ಒಬ್ಬ ಛಾಯಾಗ್ರಾಹಕನಿಗೆ ಎರಡು ಚಿತ್ರಗಳನ್ನು ಸ್ಪರ್ಧೆಗೆ ಕೊಡಲು ಅವಕಾಶ.


 ಇಂಥ ಒಂದು ವಿಶ್ವಕಪ್ ಸ್ಪರ್ಧೆಯನ್ನು ಫೆಡರೇಷನ್ ಅಪ್ ಇಂಡಿಯನ್ ಫೋಟೊಗ್ರಫಿ ಸಂಸ್ಥೆಯ ವತಿಯಿಂದ ನಮ್ಮ ಬೆಂಗಳೂರಿನ ಪ್ರತಿಷ್ಟಿತ ಫೋಟೊಗ್ರಫಿ ಸಂಸ್ಥೆಯಾದ "ಯೂತ್ ಫೋಟೊಗ್ರಫಿ ಸೊಸೈಟಿ"ಗೆ ನಡೆಸುವ ಅವಕಾಶ ಸಿಕ್ಕಿತ್ತು. ವಿಶ್ವದಾದ್ಯಂತ ೩೨ ದೇಶಗಳ ೫೭೦ ಛಾಯಾಗ್ರಾಹಕರ ೮೫೦ಕ್ಕೂ ಹೆಚ್ಚು ಪ್ರಿಂಟ್ ಮತ್ತು ಸಾಪ್ಟ್‍ಕಾಪಿಯಲ್ಲಿನ ಛಾಯಾಚಿತ್ರಗಳು ಫೈನಲ್ ಅಂತಕ್ಕೆ ಆಯ್ಕೆಯಾಗಿದ್ದವು.


 ಈ ಸ್ಪರ್ಧೆಗೆ ತೀರ್ಪುಗಾರರಾಗಿ ಸೌತ್ ಆಫ್ರಿಕಾದಿಂದ ಜಿಲ್ ಸ್ನೀಸ್ಬೆ ಇಎಸ್‍ಎಫ್‍ಐಎಪಿ,  ಪ್ರಾನ್ಸಿನಿಂದ ಜಾಕಿ ಮಾರ್ಟಿನ್ ಇಎಫ್‍ಐಅಪಿ, ಇಟಲಿಯಿಂದ ರೆಕಾರ್ಡೋ ಬುಸಿ ಎಮ್‍ಎಫ್‍ಐಎಪಿ, ನಮ್ಮ ಭಾರತ ದೇಶದಿಂದ ಬೆಂಗಳೂರಿನ ಖ್ಯಾತ ಛಾಯಾಗ್ರಾಹಕರಾದ ಬಿ.ಶ್ರೀನಿವಾಸ ಎಮ್‍ಎಫ್‍ಐಎಪಿ, ಟಿ.ಎನ್.ಎ.ಪೆರುಮಾಳ್ ಎಮ್‍ಎಫ್‍ಐಎಪಿ. ಆಯ್ಕೆಯಾಗಿದ್ದರು. ಸೆಪ್ಟಂಬರ್ ೧೦ ಮತ್ತು ೧೧ರಂದು ಬೆಂಗಳೂರ್‍ರಿನ ತಾಜ್ ವೆಸ್ಟೆಂಡ್ ಹೋಟಲಿನಲ್ಲಿ ಸ್ಪರ್ಧೆಯ ತೀರ್ಪುಗಾರಿಕೆ ನಡೆಯಿತು.  


 ಪ್ರಿಂಟ್ ವಿಭಾಗದಲ್ಲಿ ಇಟಲಿ ಕೂದಲೆಳೆಯ ಅಂತರದಲ್ಲಿ ವಿಶ್ವಕಪ್ ಗೆದ್ದರೆ, ನಮ್ಮ ಭಾರತ ಚಿನ್ನದ ಪದಕ, ಪ್ರಾನ್ಸಿಗೆ ಬೆಳ್ಳಿ ಪದಕ, ಸ್ಕಾಟ್‍ಲೆಂಡಿಗೆ ಕಂಚು ಲಭಿಸಿತು. ನಂತರ ಉಳಿದ ಆರು ಸ್ಥಾನಗಳನ್ನು ಸೌತ್ ಆಫ್ರಿಕ, ಐರ್‌ಲ್ಯಾಂಡ್, ಟರ್ಕಿ, ಸ್ಯಾನ್ ಮೆರಿನೋ, ಬೆಲ್ಜಿಯಂ, ಆಸ್ಟ್ರಿಯ ಪಡೆದವು.

 ಇನ್ನೂ ಪ್ರೊಜೆಕ್ಟೆಡ್ ಇಮೇಜ್ ವಿಭಾಗದಲ್ಲಿ ಭಾರತ ವಿಶ್ವಕಪ್ ಗಳಿಸಿದರೆ, ಚಿನ್ನದ ಪದಕವನ್ನು ಇಟಲಿ ಗೆದ್ದಿತು. ಇಲ್ಲೂ ಕೂಡ ಕೂದಲೆಳೆಯ ಅಂತರ ಉತ್ತಮ ಸ್ಪರ್ಧೆ ಏರ್ಪಟ್ಟಿತ್ತು.  ಮೂರನೆ ಸ್ಥಾನದಲ್ಲಿ ಸೌತ್ ಅಫ್ರಿಕಾಗೆ ಬೆಳ್ಳಿ ಪದಕ, ನಾಲ್ಕನೇ ಸ್ಥಾನದ ಪ್ರಾನ್ಸಿಗೆ ಕಂಚು ಲಭಿಸಿತು. ಉಳಿದ ಆರು ಸ್ಥಾನಗಳು ಕ್ರಮವಾಗಿ ಸ್ಕಾಟ್‍ಲ್ಯಾಂಡ್, ಆಷ್ಟ್ರೀಯ, ಜರ್ಮನಿ, ಐರ್‌ಲ್ಯಾಂಡ್, ಟರ್ಕಿ, ಮತ್ತು ಹತ್ತನೇ ಸ್ಥಾನವನ್ನು ಫಿನ್‍ಲ್ಯಾಂಡ್ ಮತ್ತು ನೆದರ್‌ಲ್ಯಾಂಡ್ ಹಂಚಿಕೊಂಡವು. ನೇಚರ್ ಫೋಟೊಗ್ರಫಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಭಾರತ ಬೇರೆ ದೇಶಗಳನ್ನು ಮೀರಿಸಿ ವಿಶ್ವಕಪ್ ಮತ್ತು ಪದಕಗಳನ್ನು ಗೆಲ್ಲುತ್ತಿದೆ!  ನಮ್ಮ ದೇಶದಿಂದಲೂ ಉತ್ತಮ ನೇಚರ್ ಛಾಯಾಗ್ರಾಹಕರು ಬಹುಮಾನ ಗಳಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ.

 ವೈಯಕ್ತಿಕ ವಿಭಾಗದಲ್ಲಿ ಪ್ರಾನ್ಸಿನ ಆಲ್ಬರ್ಟ್ ಫರ್ನಾಂಡ್ ತಮ್ಮ ಚಿತ್ರವಾದ "ಡ್ಯಾನ್ಸಿಂಗ್ ಬರ್ಡ್ಸ್" ಚಿತ್ರಕ್ಕೆ ಚಿನ್ನದ ಪದಕ,  ಬೈಲೋರಷ್ಯಾದ ಸಾಯಿರಿಯಾ ಗ್ರೇಜ್ ತಮ್ಮ "ಹಾರೆ" ಎನ್ನುವ ಕಾಡು ಪ್ರಾಣಿಯ ಚಿತ್ರಕ್ಕೆ ಹಾಗು ಭಾರತದ ಬಾಬಿ ನೋಬಿಸ್ ತಮ್ಮ "ಬೇಟೆಯೊಂದಿಗೆ ಚಿರತೆ" ಚಿತ್ರಕ್ಕೆ ಬೆಳ್ಳಿಯ ಪದಕ, ಭಾರತದ ಮಂದಣ್ಣ ಕೆ.ಎ. ಬೈಲೋರಷ್ಯಾದ ಸಿಯಾಗೆಜ್ ಪ್ಲೆಕೆವಿಚ್, ಸೆರ್ಬಿಯಾದ ಲಾಡನೋವಿಕ್ ಡಾರಿಂಕ ಕಂಚಿನ ಪದಕಗಳನ್ನು ಪಡೆದರು.

 ಪ್ರೊಜೆಕ್ಟೆಡ್ ಇಮೇಜ್ ವಿಭಾಗದಲ್ಲಿ ಇಟಲಿಯ ಬಿಯಾಂಚೇಡಿ ಪ್ಲಾವಿಯೋ ತಮ್ಮ ಚಿತ್ರ "ಅಲ್ಬೆನೆಲ್ಲಾ" ಕ್ಕೆ ಚಿನ್ನದ ಪದಕ,  ಪ್ರಾನ್ಸಿನ ಮ್ಯಾಗ್ನಾಲ್ಡೋ ಅಲಿಸ್ಟೇರ್ ತಮ್ಮ ಚಿತ್ರ "ಲಿಂಕ್ ಡಿ ಯುರೋಪ್" ಚಿತ್ರಕ್ಕೆ ಬೆಳ್ಳಿಪದಕ, ಬೋಸ್ನಿಯಾ ಅರ್ಜೆಗೋವಿನಾದ ಸ್ಲಿಜೀವ್ ಹುಸೇನ್ ತಮ್ಮ ಚಿತ್ರ "ಒನ್ ಇಸ್ ಎಕ್ಸಸೀವ್" ಚಿತ್ರಕ್ಕೆ ಕಂಚಿನ ಪದಕ ಪಡೆದರು.


  ಇದಲ್ಲದೇ ಕೆಲವು ವೈಯಕ್ತಿಕ ಪ್ರಶಸ್ತಿಗಳ ವಿವರ ಹೀಗಿವೆ.

 ಅತ್ಯುತ್ತಮ ಕಾಡುಪ್ರಾಣಿ ಚಿತ್ರ: "ಲೆಟ್ ಮಿ ಟ್ರೈ"  ಶ್ರೀಲಂಕಾದ  ಬಂಡುಗುಣರತ್ನೆ


ಅತ್ಯುತ್ತಮ ಪಕ್ಷಿ ಚಿತ್ರ   :  "ಮರಬು"   ಇಟಲಿಯ ಬಾರ್ತಲೋನಿ ರಾಬರ್ಟೋ



 ಅತ್ಯುತ್ತಮ ಲ್ಯಾಂಡ್‍ಸ್ಕೇಪ್ ಚಿತ್ರ: "ರಸ್"   ಸೌತ್ ಅಫ್ರಿಕಾದ ಕೋಬಸ್ ಪಿಟ್ಜಿಯೇಟರ್



  ಅತ್ಯುತ್ತಮ ಮ್ಯಾಕ್ರೋ ಕೀಟ ಚಿತ್ರ : "ಹುಳು" ಟರ್ಕಿಯ ಕಾಕಿರ್ ಮೆಹಮತ್


 ಅತ್ಯುತ್ತಮ ವಾತಾವರಣದ ಭಾವನೆಯನ್ನು ಮೂಡಿಸುವ ಕಾಡಿನ ಚಿತ್ರ: "ಚಳಿಗಾಲದ ಬೆಳಕು" ಚಿತ್ರಕ್ಕಾಗಿ ಫಿನ್‍ಲ್ಯಾಂಡಿನ ಇಲ್ಕಾ ಇಸ್ಕನೆನ್ ಪ್ರಶಸ್ತಿ ಪಡೆದರು.







 ೨೦೧೦ರ ಮರ್ಸಿಡೀಸ್ ಬೆಂಜ್ ವಿಶ್ವಕಪನ್ನು ಇಟಲಿ ದೇಶ ಗೆದ್ದಿತು.


 ಎಲ್ಲಾ ವಿಭಾಗದಲ್ಲೂ ಉತ್ತಮ ಅಂಕಗಳಿಸಿ ಸಮಗ್ರ ಪ್ರದರ್ಶನವನ್ನು ತೋರಿದ ಇಟಲಿ ೨೦೧೦ನೇ ಮರ್ಸಿಡೀಸ್ ಬೆಂಜ್ ಪೋಟೊಗ್ರಫಿ ವಿಶ್ವಕಪನ್ನು ಗೆದ್ದುಕೊಂಡಿತು.




 ವಿಶ್ವಕಪ್ ಫೋಟೊಗ್ರಫಿಯ ಉದ್ಘಾಟನೆ ಕಾರ್ಯಕ್ರಮ ಇದೇ ಆಕ್ಟೋಬರ್ ಏಳರಂದು ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿದೆ. ಬಹುಮಾನ ವಿಜೇತ ಚಿತ್ರಗಳಲ್ಲದೇ ಆಯ್ಕೆಯಾದ ಛಾಯಾಚಿತ್ರಗಳ ಪ್ರದರ್ಶನವೂ ಆಕ್ಟೋಬರ್ ಏಳರಿಂದ ಹನ್ನೊಂದರವರೆಗೆ ನಡೆಯಲಿದೆ. ವನ್ಯ ಜೀವಿ ಆಸಕ್ತರೂ ಮತ್ತು ಛಾಯಾಭಿಮಾನಿಗಳಿಗೆಲ್ಲಾ ಅತ್ಯುತ್ತಮ ಚಿತ್ರಗಳನ್ನು ನೋಡುವ ಅವಕಾಶ. ಯಶಸ್ವಿಯಾಗಿ ಫೋಟೊಗ್ರಫಿ ವಿಶ್ವಕಪ್ ಕಾರ್ಯಕ್ರಮವನ್ನು ನಡೆಸುತ್ತಿರುವುದರಿಂದ ನಮ್ಮ ಬೆಂಗಳೂರಿನ ಯೂತ್ ಫೋಟೊಗ್ರಫಿ ಸಂಸ್ಥೆಗೆ ಮತ್ತೊಂದು ಹಿರಿಮೆಯ ಗರಿ.

[ಇವತ್ತು  ವಿಜಯಕರ್ನಾಟಕದ ಸಾಪ್ತಾಹಿಕ ಲವವಲಿಕೆಯ ಎರಡನೇ ಪುಟದಲ್ಲಿ ಈ ಲೇಖನ ಪ್ರಕಟವಾಗಿದೆ. ಅದಕ್ಕೆ ಮತ್ತಷ್ಟು ಚಿತ್ರಗಳನ್ನು ನನ್ನ ಬ್ಲಾಗಿನಲ್ಲಿ ಹಾಕಿ ಪ್ರಕಟಿಸಿದ್ದೇನೆ..]


ಚಿತ್ರಗಳು ಮತ್ತು ಲೇಖನ
ಶಿವು.ಕೆ.

Thursday, September 23, 2010

ಯಾವ ಋತುವಿನ ಕೊನೆಯಲ್ಲಿ...

                   ನೀ ಭಾವಪೂರ್ಣವಾಗಿ ನಕ್ಕು
                            ಅದೆಷ್ಟು ವರ್ಷಗಳು ಕಳೆದವು?
                            ಎದೆಯಾಳದಲ್ಲಿದ್ದ ಮುಗ್ಧನಗೆಯನ್ನು
                            ಬೊಗಸೆ ತುಂಬಾ ಚೆಲ್ಲಿದ್ದು
                            ನಮ್ಮೂರ ಜಾತ್ರೆಯಲ್ಲಲ್ಲವೇ!
                            ಮೊಗ್ಗಿನ ಮುಗ್ಧತೆ ಹೂವಿಗೆಲ್ಲಿ 
                            ಬರಬೇಕು  ಅಲ್ಲಿದ್ದ ಹೂಗಳು
                            ಸ್ಪರ್ಧಿಸಲಾಗದೆ ಸೋತು ಬಾಡಿದ್ದವು
                        
                             ಅಂದೇ ಕೊನೆ ನಗು ಮಾಯವಾಗಿತ್ತು
                              ಜೊತೆಗೆ ಮನೆಯಂಗಳದ ಪಾರಿಜಾತ
                              ಸುವಾಸನೆ ಬೀರಲು ಮರೆಯಿತು
                              ಮರುಭೂಮಿ ಹೃದಯದಲ್ಲಿದ್ದ
                              ಓಯಸಿಸ್ ಬತ್ತಿಹೋಯಿತು
                              ಮುಂಜಾವು ಸುಪ್ರಭಾತ ನಿಲ್ಲಿಸಿತ್ತು
                              ಕೊರಳ ಸರದ ನೀಲಿಮುತ್ತು
                              ನಿರಾಸೆಯಿಂದ ಜಾರಿ ಉರುಳಿಹೋಯ್ತು

                              ಕಾರಣ, ಇಷ್ಟವಿಲ್ಲದ ಮದುವೆ
                              ಗಂಡ, ವಿಧವೆ ಪಟ್ಟ, ಸಮಾಜ
                              ಎದೆಯಲ್ಲಿದ್ದ ಆಸೆ ಆವಿಯಾಗಿ ನಿರಾಶೆ
                              ನಿಟ್ಟುಸಿರು ಮೊಳೆಯಂತೆ ಹೊಕ್ಕಿರಬಹುದು
                              ನೂರು ಮಾತಲ್ಲಿ  ಸಾವಿರಾರು
                              ಮೌನದಲಿ ಕಚ್ಚಿಚುಚ್ಚಿ
                               ಸಮಾಜ ನಿನ್ನನ್ನು ಕೊಂದಿರಬಹುದು

                               ಆದರೆ  "ನಿನ್ನತನ" ಉಳಿದಿದೆಯಲ್ಲ

                               ಅದಕ್ಕಾಗಿ, ಅದನ್ನು ಆರಾಧಿಸುವ
                               ನನಗಾಗಿ ನೀ ನಗಬೇಕು, ಮಾಗಿಯಲ್ಲಿ
                               ಮೂಕವೇದನೆಗೊಂಡರೂ ಭುವಿ ವಸಂತಋತು
                               ಬಂದಾಗ ನಕ್ಕು ಅರಳುತ್ತಾಳೆ  ಹೇಳು
                               ನಾನ್ಯಾವ ಋತುವಿನ ಕೊನೆಯಲ್ಲಿ
                               ಕುಳಿತು ಕಾಯಲಿ?

ಗೆಳೆಯರೆ ಇದನ್ನು ಓದಿ ಅಪರೂಪಕ್ಕೊಂದು ಹೊಸ ಕವನ ಈಗ ನಾನು ಬರೆದಿದ್ದೇನೆ ಎಂದುಕೊಳ್ಳಬೇಡಿ.  ಇದನ್ನು ಬರೆದಿದ್ದು ಈಗಲ್ಲ  1997 ರಲ್ಲಿ.  ಆಗ ಈ ಕವನ 1997ರ ಫೆಬ್ರವರಿ 23ರಂದು ಕರ್ಮವೀರ ವಾರಪತ್ರಿಕೆಯ  "ಬಾ ಕವಿತಾ"  ಕಾಲಂನಲ್ಲಿ ಪ್ರಕಟವಾಗಿತ್ತು.  ಆಗಿನ ಮನಸ್ಥಿತಿಯಲ್ಲಿ ಬರೆದ ಕವನವಿದು.  ಅದ್ಯಾಕೋ ಈಗ ನಿನ್ನೆ ಓದಿದಾಗ ಬ್ಲಾಗಿಗೆ ಹಾಕಬೇಕೆನ್ನಿತು.  ಓದುವಾಗ ಕವನದಲ್ಲಿ ಒಳಾರ್ಥವಿದ್ದಲ್ಲಿ ಅದು ನಿಮ್ಮ ಕಲ್ಪನೆಗೆ ತಕ್ಕಂತೆ  ರೂಪುಗೊಳ್ಳಲಿ ಎನ್ನುವ ಕಾರಣಕ್ಕೆ ಯಾವುದೇ ಚಿತ್ರವನ್ನು ನಾನು ಹಾಕಲು ಇಷ್ಟಪಡಲಿಲ್ಲ.   ಓದಿ ನಿಮ್ಮ  ಅಭಿಪ್ರಾಯವನ್ನು ತಿಳಿಸಿ.

            


ಕವನ
ಶಿವು.ಕೆ
    

Friday, September 17, 2010

ಛಾಯಾಲೋಕದ ದಿಗ್ಗಜರ ಛಾಯಾಚಿತ್ರ ಪ್ರದರ್ಶನ


 
     ನೇಚರ್ ಫೋಟೊಗ್ರಫಿಯ ವಿಶ್ವಕಪ್ ಸ್ಪರ್ಧೆ ತೀರ್ಪುಗಾರರಾಗಿ ಬೆಂಗಳೂರಿಗೆ ಮೂವರು ವಿದೇಶಿ ಸ್ಥಿರ ಛಾಯಾಗ್ರಾಹಣ ಕಲೆಯ ದಿಗ್ಗಜರು ಬಂದಿದ್ದರು.  ಸೌತ್ ಅಫ್ರಿಕದ ಮೇಡಮ್ ಸ್ನೀಜ್ ಜಿಸ್ಬೆ[Ms. Jill Sneesby, ESFIAP]. ಫೋಟೊಗ್ರಫಿ ಸಾಧನೆ ಮತ್ತು ಸೇವೆಗಾಗಿ ESFIAP  ಡಿಸ್ಟಿಂಕ್ಷನ್ ಪಡೆದಿದ್ದರೆ, ಫೆಡರೇಷನ್ ಅಪ್ ಇಂಟರ್‌ನ್ಯಾಷನಲ್ ಫೋಟೊಗ್ರಫಿ ಉಪಾದ್ಯಕ್ಷರಾದ ಜಾಕೀ ಮಾರ್ಟಿನ್[Mr.Jacky Martin,EFIAP] ಬಂದಿದ್ದರು. ಇವರ ಅಮೋಘ ಫೋಟೊಗ್ರಫಿ ಸಾಧನೆಗಾಗಿ ಎಕ್ಸಲೆನ್ಸ್ ಅಪ್ ಆಶೋಷಿಯೇಟ್ ಫೋಟೊಗ್ರಫಿ ಡಿಸ್ಟಿಂಕ್ಷನ್[EFIAP] ಗೌರವ ದೊರೆತಿದೆ.   ಇನ್ನೂ ಮೂರನೇಯವರಾದ ಇಟಲಿಯ ರೆಕಾರ್ಡೋ ಬುಸಿ[Mr. Riccardo Busi,MFIAP, HonEFIAP]ಇವರಂತೂ ತಮ್ಮ ಫೋಟೊಗ್ರಫಿ ಸಾಧನೆಗೆ ಮಾಸ್ಟರ್ ಆಪ್ ಫೆಡರೇಷನ್ ಇಂಟರ್‌ನ್ಯಾಷನಲ್ ಡಿ ಲ ಆಶೋಷಿಯೇಟ್ ಫೋಟೊಗ್ರಫಿ" ಎನ್ನುವ ಗೌರವವನ್ನೇ ಪಡೆದಿದ್ದಾರೆ. ಇದಂತೂ ಫೋಟೋಗ್ರಫಿ ಸಾಧನೆಗೆ ಸಿಗುವ ಅತ್ಯುನ್ನತ ಗೌರವ. ಈ ಮೂವರು ವಿದೇಶಿ ತೀರ್ಪುಗಾರರ ಜೊತೆ  ರೆಕಾರ್ಡೋ ಬುಸಿಯಷ್ಟೇ ಉನ್ನತ ಗೌರವ ಹೊಂದಿರುವುದರ ಜೊತೆಗೆ ರಾಯಲ್ ಫೋಟೊಗ್ರಫಿ ಲಂಡನ್‍ನಿಂದ [ ]ಫೆಲೊಶಿಪ್ ಅಫ್ ರಾಯಲ್ ಫೋಟೊಗ್ರಫಿ ಸೊಸೈಟಿ ಮನ್ನಡೆ ಪಡೆದಿರುವ ನಮ್ಮ ದೇಶದ ಪ್ರಖ್ಯಾತ ಛಾಯಾಗ್ರಾಹಕರಾದ ಬಿ.ಶ್ರೀನಿವಾಸ[B.SRinivasa,MFIAP,FRPS]ಮತ್ತು ಟಿ.ಎನ್.ಎ. ಪೆರುಮಾಳ್[T.N.A.Perumal,MFIAP,FRPS] ಕೂಡ ತೀರ್ಪುಗಾರರಾಗಿದ್ದರು.  ಇವರನ್ನೆಲ್ಲಾ ಒಟ್ಟಿಗೆ ನೋಡುವುದು ಮಾತಾಡಿಸುವುದು ನನ್ನ ನೂರಾರು ಕನಸುಗಳಲ್ಲಿ ಇದೂ ಒಂದು. ಅವತ್ತು ನನಸಾಗಿತ್ತು.


T.N.A.Perumal, B.Srinivasa, Riccardo busi, Jacky Martin, Jill Sneesby.


 ಸೆಪ್ಟಂಬರ್ ೧೦ ಮತ್ತು ೧೧ರಂದು ಹೋಟಲ್ ತಾಜ ವೆಸ್ಟೆಂಡ್ ನಲ್ಲಿ ಫೋಟೋಗ್ರಫಿಯ ತೀರ್ಪು ಕಾರ್ಯಕ್ರಮ ಮುಗಿದ ಮೇಲೆ ಸೆಪ್ಟಂಬರ್ ಹದಿನಾಲ್ಕರಂದು ಈ ಐವರು ಸಾಧಕರ ಫೋಟೊಗ್ರಫಿ ಪ್ರೊಜೆಕ್ಷನ್ ಷೋ ಮತ್ತು ಸಂವಾದ ನಡೆಯಿತು.  ನಿಜಕ್ಕೂ ನನ್ನಂತ ಛಾಯಾಗ್ರಾಹಕರಿಗೆ ಮರೆಯಲಾಗದ ಅನುಭವ.  ಮೊದಲಿಗೆ ಮೇಡಮ್ ಸ್ನೀಜ್ ಜಿಸ್ಬೆ  ಸೌತ್ ಆಫ್ರಿಕಾದ ಕಾಡುಗಳಲ್ಲಿ ಕ್ಲಿಕ್ಕಿಸಿದ ಅದ್ಬುತ ಚಿತ್ರಗಳನ್ನು ಪ್ರದರ್ಶಿಸಿದರು.  ನಡುವೆ ಕೆಲವು ಫೋಟೊಗಳನ್ನು ತೆಗೆಯಲು ಕಾಡಿನ ನಡುವೆ ಹಳ್ಳ ತೆಗೆದು ಅದರೊಳಗೊಂದು ಬಂಕರ್ ನಿರ್ಮಿಸಿ  ಅದರೊಳಗೆ ಕುಳಿತು ನೆಲಮಟ್ಟದಲ್ಲಿ  ಕುಳಿತು, ಮಲಗಿ ಫೋಟೊ ತೆಗೆಯುವಾಗಿನ ಅನುಭವಗಳನ್ನು ಹಂಚಿಕೊಂಡರು.  ಒಂಟಿಸಲಗಗಳು ಇವರು ಬಂಕರಿನೊಳಗೆ ಇದ್ದಾಗ ಇಪ್ಪತ್ತು ಅಡಿ ಅಂತರದಲ್ಲಿ ಬಂದು ಬಂಕರನ್ನೆಲ್ಲಾ ಮೂಸಿ ನೋಡಿ ಹೋಗಿದ್ದು ಅವಕ್ಕೆ ತಲೆಕೆಟ್ಟು ಬಂಕರಿನೊಳಗೆ ಕಾಲಿಟ್ಟುಬಿಟ್ಟಿದ್ದರೆ ನಾನಿಲ್ಲಿ ನಿಮಗೆ ಇದನ್ನೆಲ್ಲಾ ತೋರಿಸಲು ಬರಲಾಗುತ್ತಿರಲಿಲ್ಲವೆಂದಾಗ ಅಲ್ಲಿ ನೆರೆದಿದ್ದ ಛಾಯಾಭಿಮಾನಿಗಳಲ್ಲಿ ರೋಮಾಂಚನ.

 ಪ್ರದರ್ಶನಗೊಂಡ ಅವರ ಕೆಲವು ಫೋಟೊಗಳು ಇಲ್ಲಿವೆ.

ಈ ಚಿತ್ರವನ್ನು ನೀವು ಎಲ್ಲಾ ಕಡೆ ನೋಡಿರುತ್ತೀರಿ. ಅಷ್ಟು ಪ್ರಸಿದ್ಧಿಯಾದ ಚಿತ್ರ.


ಜೀಬ್ರಾಗಳ ಕಾದಾಟ

ಸೌತ್ ಆಫ್ರಿಕಾದ ಜಿಂಕೆಗಳು



 ಆಸ್ಟ್ರಿಚ್ ಹಕ್ಕಿ ಸೂರ್ಯಾಸ್ತದ ದೂಳಿನ ಹಿನ್ನೆಲೆಯಲ್ಲಿ

  ಸೌತ್ ಅಫ್ರಿಕಾದ ಸ್ಪ್ರಿಂಗ್ ಬಾಕ್ ಜಿಂಕೆ


       ನಂತರ ಬಂದವರು ಬಂದವರು ಇಂಟರನ್ಯಾಷನಲ್ ಫೆಡರೇಷನ್ ಅಪ್ ಫೋಟೊಗ್ರಫಿಯ ಉಪಾದ್ಯಕ್ಷರಾದ ಪ್ರಾನ್ಸಿನ ಜಾಕಿ ಮಾರ್ಟಿನ್.  ಅವರು ತಮಗಿಷ್ಟವಾದ ಅಮೇರಿಕಾದ ಫೀನಿಕ್ಸ್ ನಗರದ ಕೆಲವು ಲ್ಯಾಂಡ್‍ಸ್ಕೇಪಿನ ಅಮೋಘ ಚಿತ್ರಗಳನ್ನು  ಪ್ರದರ್ಶಿಸಿದರು. ಅವರ ಕೆಲವು ಚಿತ್ರಗಳು ಇಲ್ಲಿವೆ.

 ಎಷ್ಟು ಚೆಂದವಲ್ವ ಈ ಒಂಟಿಮರದ ದೃಶ್ಯ
 
 ಹೀಗೊಂದು ಸುಂದರ ಪ್ರಕೃತಿ ಸೌಂದರ್ಯ

 ಬ್ರೈಸ್ ಕ್ಯಾನಿಯನ್‍ನ ಒಂದು ಲ್ಯಾಂಡ್‍ಸ್ಕೇಪ್

 ಮೂರನೇಯದಾಗಿ  ಇಟಲಿಯ ರೆಕಾರ್ಡೋ ಬುಸಿಯಂತೂ ತಮ್ಮ ಅಷ್ಟು ಚಿತ್ರಗಳನ್ನು ಎಂಟು ನಿಮಿಷಗಳ ಪವರ್ ಪಾಯಿಂಟ್ ಪ್ರದರ್ಶನದಲ್ಲಿ ತೋರಿಸಿ ಇಟಲಿಯವರ ಸೃಜನಶೀಲತೆಯನ್ನು ಮೆರೆದರು. ಅವರ ಕೆಲವು ಚಿತ್ರಗಳು ಇಲ್ಲ
ಹರಿವ ನೀರಿಗೆ ವಿರುದ್ಧವಾಗಿ ಈಜಿ ಮೇಲೆ ಹಾರಿದ ಮೀನನ್ನು ಹಿಡಿಯುತ್ತಿರುವ ಹಿಮಕರಡಿ

 ಪಫಿಟ್ ಹಕ್ಕಿಗಳ ಫೋಸು

 ಕಾಡುಬೆಕ್ಕು ಬೇಟೆಗಾಗಿ ಓಟ

ಓಡಿ ಪ್ರಾಣ ಉಳಿಸಿಕೊಳ್ಳುತ್ತಿರುವ ಜಿಂಕೆ
                                  

 ಇವರ ನಂತರ ಬಂದವರು ನಮ್ಮವರೇ ಆದ ಬಿ.ಶ್ರೀನಿವಾಸ. ತಮ್ಮ ನಲವತ್ತು ವರ್ಷಗಳ ಫೋಟೊಗ್ರಫಿ ಅನುಭವವನ್ನು ಹಂಚಿಕೊಳ್ಳುವುದಲ್ಲದೇ ಕೆಲವು ವಿಶೇಷವೆನ್ನುವ ಪಕ್ಷಿಗಳ ಛಾಯಾಚಿತ್ರಗಳನ್ನು ತೋರಿಸಿದರು.

 ರಂಗನತಿಟ್ಟಿನಲ್ಲಿ  ಹಕ್ಕಿಗಳ ಲವ್ ಲವಿಕೆ
 ಬ್ಲೂ ಜೇ ಹಕ್ಕಿಯ ಹಾರಾಟ

 ಕೆಸ್ಟ್ರಾಲ್ ಎನ್ನುವ ಗಿಡುಗನ ಹಾರಾಟ


 ಎರಡೂ ಗ್ರೀನ್ ಬೀಈಟರುಗಳ ಬಾಯಲ್ಲಿ ಬೇಟೆ. ಖುಷಿಯ ವಿಚಾರವೆಂದರೆ ಈ ಚಿತ್ರವನ್ನು ನನ್ನ ಜೊತೆಗೆಯಲ್ಲಿ ಕ್ಲಿಕ್ಕಿಸಿದ್ದು.



 ಕೊನೆಯಲ್ಲಿ ಬಂದವರು ಇವರೆಲ್ಲರಿಗಿಂತ ಹಿರಿಯರಾದ ೭೬ ವರ್ಷದ ಟಿ.ಎನ್.ಎ. ಪೆರುಮಾಳ್.  ಅವರ ಐವತ್ತು ಫೋಟೊಗ್ರಫಿ ಅನುಭವಗಳ ಜೊತೆಗೆ  ಕೀಟಲೋಕದ ವಿಶೇಷಗಳು, ಪಕ್ಷಿಲೋಕದ ವೈವಿಧ್ಯಗಳನ್ನು ವಿವರಿಸಿದರು.  ಜೊತೆಗೆ  ಒಂದು ಗೂಬೆಯ ಫೋಟೊ ಕ್ಲಿಕ್ಕಿಸಲು ಸುಮಾರು ೩೨ ರಾತ್ರಿಗಳನ್ನು ನಿದ್ರೆಯಿಲ್ಲದೇ ಕಳೆದ ಆನುಭವಗಳನ್ನು ವಿವರಿಸಿದಾಗ ನಮ್ಮಂತ ಯುವ ಛಾಯಾಗ್ರಾಹಕರಿಗಂತೂ ಮೈಜುಮ್ಮೆನ್ನಿಸಿತ್ತು. ಅವರ ಕೆಲವು ಚಿತ್ರಗಳು ಇಲ್ಲಿವೆ.

ಕಾಡುನಾಯಿಗಳು ಲವ್‍ಲವಿಕೆ


ಒಂದು ರೀತಿಯ ವಿಶೇಷ ನೊಣ ಮತ್ತೊಂದು ನೊಣವನ್ನು ಹಿಡಿದು ತಿನ್ನುತ್ತಿರುವುದು ಇದು ಕೀಟಲೋಕದ  ವೈವಿಧ್ಯತೆ

ಇದೊಂದು ಗೂಬೆಯ ಚಿತ್ರವನ್ನು ಕ್ಲಿಕ್ಕಿಸಲು ಪೆರುಮಾಳ್‍ರವರು ೩೨ ರಾತ್ರಿಗಳನ್ನು ವ್ಯಯಿಸಿದ್ದಾರೆ. ಅದಕ್ಕೆ ತಕ್ಕಂತೆ ಈ ಚಿತ್ರವೂ ಅವರಿಗೆ ನೂರಾರು ಬಹುಮಾನಗಳನ್ನು ಗಳಿಸಿಕೊಟ್ಟಿದೆ.


ಛಾಯಾಚಿತ್ರ ಪ್ರದರ್ಶನ ಮತ್ತು ಸಂವಾದದಲ್ಲಿ ಭಾಗವಹಿಸಿದ್ದ ಛಾಯಾಗ್ರಾಹಕರು ಮತ್ತು ಅಭಿಮಾನಿಗಳು


ಇವರೆಲ್ಲರ ಛಾಯಾಚಿತ್ರಗಳ ಪ್ರದರ್ಶನದ ನಂತರ ಸಂವಾದ ಕಾರ್ಯಕ್ರಮವಿತ್ತು.  ಯುವ ಛಾಯಾಗ್ರಾಹಕರೊಂದಿಗೆ ಪ್ರಶ್ನೋತ್ತರ ಕಾರ್ಯಕ್ರಮವಿತ್ತು. 

 ಎಲ್ಲ ಮುಗಿದ ಮೇಲೆ  ವಿದೇಶಿ ದಿಗ್ಗಜರಾದ ಪ್ರಾನ್ಸಿನ ಜಾಕಿ ಮಾರ್ಟಿನ್ ಮತ್ತು ಇಟಲಿಯ ರೆಕಾರ್ಡೋ ಬುಸಿಯ ಜೊತೆ ನಾನು ಫೋಟೊ ತೆಗೆಸಿಕೊಳ್ಳುವ ಆಸೆ ಈಡೇರಿತ್ತು. ನನ್ನ ಜೊತೆ ಬಂದಿದ್ದ ಉದಯ್ ಹೆಗಡೆ ನಮ್ಮ ಫೋಟೊ ತೆಗೆದುಕೊಟ್ಟಿದ್ದರು.
ನಾನು ಮುಂದಿನ ವರ್ಷ EFIAP ಮನ್ನಣೆಗಾಗಿ ಅರ್ಜಿ ಸಲ್ಲಿಸಬೇಕು ಎಂದಾಗ ನನಗೆ ಅವರಿಬ್ಬರೂ "ALL THE BEST" ಹೇಳಿದಾಗ ನನಗೆ ತುಂಬಾ ಖುಷಿಯಾಗಿತ್ತು.

ಚಿತ್ರಗಳು ಮತ್ತು ಲೇಖನ.
ಶಿವು.ಕೆ