Friday, July 29, 2011

ಎಂದೂ ಮರೆಯದ ರಾತ್ರಿ



        ಆತ ಬಸ್ ನಿಲ್ದಾಣಕ್ಕೆ ಕಾಲಿಟ್ಟೊಡನೆ ಆಶ್ಚರ್ಯಗೊಂಡಿದ್ದ.   ಎರಡು ಹಳ್ಳಿ ಬಸ್ಸುಗಳು ಅನಾಥವಾಗಿ ನಿಂತಿದ್ದು ಬಿಟ್ಟರೆ ಇಡೀ ಬಸ್ ನಿಲ್ದಾಣದಲ್ಲಿ ಒಬ್ಬ ಮನುಷ್ಯ ಪ್ರಾಣಿಯೂ ಕಾಣದಿರುವುದು!  ಮಂಡ್ಯದಂತ ಮಂಡ್ಯ ಬಸ್ ನಿಲ್ದಾಣದಲ್ಲಿ ರಾತ್ರಿ ಹನ್ನೊಂದುವರೆಗೆ ಒಂದು ನರಪಿಳ್ಳೆಯೂ ಇಲ್ಲವಲ್ಲ ಛೇ ಇದ್ಯಾಕೆ ಹಿಂಗಾಯ್ತು ಅಂದುಕೊಳ್ಳುತ್ತಿರುವಂತೆ ಎಡಪಕ್ಕದಲ್ಲಿ ಒಬ್ಬ ಪೋಲಿಸಪ್ಪ ಚೇರಿನಲ್ಲಿ ಕುಳಿತಿದ್ದವನು ಆತನ ಕಡೆಗೆ ನೋಡಿದ.  ಏನ್ ಸರ್, ಯಾರು ಇಲ್ಲ? ಈಗ ಬೆಂಗಳೂರಿಗೆ ಯಾವುದೂ ಬಸ್ ಬರುವುದಿಲ್ಲವ?  ಫೋಲಿಸಪ್ಪನನ್ನು ಕೇಳಿದ.  ರಾತ್ರಿ ಹತ್ತು ಗಂಟೆಯನಂತರ ಬಸ್ ನಿಲ್ದಾಣದಲ್ಲಿ ಯಾರು ಇರುವಂತಿಲ್ಲ, ನಿಮಗೆ ಮೇನ್ ರೋಡಿನಲ್ಲಿ ಬಸ್ ಸಿಗುತ್ತದೆ" ಅಂತ ಹೇಳಿ ಛೇರಿನ ಮುಂದಿನ ಟೇಬಲ್ ಮೇಲೆ ನಿದ್ರೆಗಾಗಿ ಮತ್ತೆ ತಲೆಹಾಕಿದ.

       ಮೇನ್ ರೋಡಿನಲ್ಲಿ ಆಟೋಗಳು ಮತ್ತು ಆಟೋಡ್ರೈವರುಗಳನ್ನು ಬಿಟ್ಟರೆ ಮತ್ಯಾರು ಕಾಣಿಸಲಿಲ್ಲ.  ಆತ ಮೇನ್ ರೋಡಿನಲ್ಲಿ ಬಸ್ಸಿಗೆ ಕಾಯಲು ನಿಂತಿದ್ದು ನೋಡಿ ಇದು ಮಾಮೂಲು ಅಂದುಕೊಂಡು ತಮ್ಮ ಜೇಬಿನಿಂದ ಬೀಡಿ ಹೊರತೆಗೆದು ಕಡ್ಡಿ ಗೀರಿದರು.  ಹದಿನೈದು ನಿಮಿಷ ಕಳೆಯಿತು. ಬಸ್ ಬರಲಿಲ್ಲ ಬದಲಿಗೆ ಹತ್ತಾರು ಲಾರಿಗಳು, ಕಾರುಗಳು ಜೀಪುಗಳು, ಅವಕ್ಕೆ ವಿರುದ್ಧ ದಿಕ್ಕಿನಲ್ಲಿ ಬೆಂಗಳೂರಿನಿಂದ ಮೈಸೂರಿನಕಡೆಗೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ರಾಜಹಂಸ, ವೋಲ್ವೋ  ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಸಾಗಿದ್ದವು. ಈತ ಸಮಯ ನೋಡಿದ ಹನ್ನೆರಡು ಗಂಟೆಗೆ ಹದಿನೈದು ನಿಮಿಷ ಬಾಕಿಇದೆ.  ರಸ್ತೆಯುದ್ದಕ್ಕೂ ಇದ್ದ ಮರಗಳಿಗೆ ಮತ್ತಷ್ಟು ಕತ್ತಲು ಆವರಿಸಿ ಒಂಥರ ದಿಗಿಲುಂಟಾಗಿ ಬಸ್ಸು ಸಿಗದಿದ್ದರೇ ಮುಂದೇನು ಗತಿ ಅಂತ ಈತ ಚಿಂತೆಗೊಳಗಾಗುತ್ತಿರುವಾಗಲೇ ಅಯ್ಯಪ್ಪ ಮಾಲೆ ಹಾಕಿಕೊಂಡಿದ್ದ ಆಟೋ ಡ್ರೈವರ್ "ಎಲ್ಲಿಗೆ ಹೋಗಬೇಕು ಸಾಮಿ" ಅಂತ ಕೇಳಿದ.  ರಾತ್ರಿ ಹನ್ನೆರಡು ಗಂಟೆಯಲ್ಲಿ ಬ್ಯಾಗಿನಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಇಟ್ಟುಕೊಂಡಿದ್ದರಿಂದಲೇ ಈತ ಭಯದಿಂದಲೇ "ಬೆಂಗಳೂರಿಗೆ" ಅಂತ ಉತ್ತರಿಸಿದ.  "ಇತ್ತೀಚಿಗೆ ನೈಟ್ ಬಸ್ಸುಗಳು ಕಡಿಮೆ ಸಾಮಿ,  ಇನ್ನು ಸ್ವಲ್ಪ ಹೊತ್ತು ನೋಡಿ ಬರದಿದ್ದಲ್ಲಿ ಇಲ್ಲೇ ಲಾಡ್ಜ್ ಮಾಡಿಕೊಂಡು ಇದ್ದು ಬೆಳಿಗ್ಗೆ ಹೋಗಿ ಅಂತ ಬಿಟ್ಟಿ ಐಡಿಯವನ್ನು ಬೇರೆ ಕೊಟ್ಟ.  ಈತನಂತೂ ಅಲ್ಲಿ ಉಳಿಯುವಂತಿರಲಿಲ್ಲ, ಹೇಗಾದರೂ ಬೆಂಗಳೂರು ತಲುಪಲೇ ಬೇಕಾಗಿತ್ತು. ಅಷ್ಟರಲ್ಲಿ ಒಂದು ಕೆಂಪು ಬಸ್ ಬಂತು.  ಈತನಿಗೆ ಹೋದ ಜೀವ ಬಂದಂತೆ ಆಗಿ ಬಸ್ ಹತ್ತಿದ.  ಇಡೀ ಬಸ್ಸಿನಲ್ಲಿ ಹತ್ತು ಜನ ಪ್ರಯಾಣಿಕರಿದ್ದರೆ ಹೆಚ್ಚು. ಈತನಿಗೆ ಬೇಕಾಗಿದ್ದು ಆದೇ.  ಬೆಂಗಳೂರಿಗೆ ಟಿಕೆಟ್ ತೆಗೆದುಕೊಂಡು ಮೂರು ಜನರು ಕುಳಿತುಕೊಳ್ಳುವ ಸೀಟಿನ ಒಂದು ಮೂಲೆಯಲ್ಲಿ ಬೆಲೆಬಾಳುವ ವಸ್ತುವಿರುವ ಬ್ಯಾಗನ್ನು ತಲೆದಿಂಬಿನಂತೆ ಹಾಕಿಕೊಂಡು ಮಲಗಿದ.  ಸುಸ್ತಾಗಿದ್ದರಿಂದ ಸಹಜವಾಗಿ ನಿದ್ರೆ ಬರಬೇಕಿತ್ತು ಆದ್ರೆ ತಲೆದಿಂಬಾಗಿರುವ ಬ್ಯಾಗಿನಲ್ಲಿರುವ ವಸ್ತುಗಳಿಂದಾಗಿ ನಿದ್ರೆ ಬರಲಿಲ್ಲ.  ಬಸ್ ಟ್ರಾಫಿಕ್ ಇಲ್ಲದ್ದರಿಂದ ಮದ್ಯರಾತ್ರಿ ಎರಡು ಗಂಟೆಯ ಹೊತ್ತಿಗೆ ಬೆಂಗಳೂರಿನ ಬಸ್ ನಿಲ್ದಾಣ ತಲುಪಿತ್ತು.
     ಬಸ್ ಇಳಿದ ತಕ್ಷಣ ತನ್ನನ್ನು ಸುತ್ತುವರಿಯುವ ಆಟೋದವರಿಂದ ಹೇಗಪ್ಪ ತಪ್ಪಿಸಿಕೊಳ್ಳುವುದು ಅಂದುಕೊಳ್ಳುತ್ತ ಕೆಳಗಿಳಿದ ಆತನಿಗೆ ಯಾವ ಆಟೋದವರು ಕೂಡ ಎಲ್ಲಿಗೆ ಸರ್, ಬನ್ನಿ ಸಾರ್, ಇಂದ್ರನಗರನಾ, ವೈಟ್ ಫೀಲ್ಡಾ, ಪೀಣ್ಯಾನ, ಅಂತೇನು ಕೇಳದೆ ತಮ್ಮ ಪಾಡಿಗೆ ತಾವಿದ್ದಿದ್ದು ನೋಡಿ ಅವನಿಗೆ ಸ್ವಲ್ಪ ಸಮಾಧಾನವಾಗಿತ್ತು.  ಬಸ್ ಇಳಿದ ಜಾಗದಲ್ಲಿ ಮಬ್ಬುಗತ್ತಲು ಇದ್ದಿದ್ದರಿಂದ ನಿದಾನವಾಗಿ ಮುಖ್ಯ ನಿಲ್ಡಾಣಕ್ಕೆ ಬರುತ್ತಿದ್ದಂತೆ ಅಲ್ಲಿ ಹತ್ತಾರು ಬಸ್ಸುಗಳು  ಅದರ ಡೈವರುಗಳು, ಕಂಡಕ್ಟರುಗಳು ತಮ್ಮ ಬಸ್ಸುಗಳಿಗೆ ಗಿರಾಕಿಗಳನ್ನು ಹುಡುಕುವುದರಲ್ಲಿ ಮಗ್ನರಾಗಿದ್ದರು.  ಅಲ್ಲಲ್ಲಿ ಒಂದಷ್ಟು ಪ್ರಯಾಣಿಕರು ಕುಳಿತಿದ್ದರೆ ಕೆಲವರು ಮಲಗಿದ್ದರು. ತಲೆಗೆ ಮಪ್ಲರುಗಳನ್ನು ಸುತ್ತಿಕೊಂಡ ಮಪ್ತಿ ಪೋಲಿಸರು ಬರುವ ಹೋಗುವ ಜನರನ್ನು  ಸೂಕ್ಷ್ಮವಾಗಿ ಗಮನಿಸುತ್ತಿದ್ದರು.  ಜನಗಳನ್ನು ನೋಡಿ ಈತನಿಗೆ ಸ್ವಲ್ಪ ಸಮಾಧಾನವಾದರೂ ಅಲ್ಲಿ ಹೆಚ್ಚು ಹೊತ್ತು ಇರುವಂತಿಲ್ಲ. ಏಕೆಂದರೆ ಈತ ರೈಲ್ವೆ ನಿಲ್ಡಾಣಕ್ಕೆ ಹೋಗಲೇಬೇಕಾಗಿತ್ತು. 
       ಮೈಸೂರು ಕಡೆಗೆ ಹೋಗುವ ಬಸ್ಸೊಳಗಿನಿಂದ ಬನ್ನಿ ಬನ್ನಿ ಮೈಸೂರು ಅಂತ ಡ್ರೈವರ್ ಕೂಗುತ್ತಿದ್ದರಿಂದ ಈ ಮದ್ಯರಾತ್ರಿ ಎರಡು ಗಂಟೆಗೆ ಮೈಸೂರಿಗೆ ಹೋಗುವ ಬಸ್ಸು ಅದರಲ್ಲಿ ಪ್ರಯಾಣಿಸುವವರು ಇದ್ದಾರಲ್ಲ ಅಂದುಕೊಂಡು ನಿದಾನವಾಗಿ ರೈಲು ನಿಲ್ದಾಣದ ಕಡೆಗೆ ಹೊರಟ.
          ರಸ್ತೆ ದಾಟಿ ರೈಲು ನಿಲ್ದಾಣದ ಮುಖ್ಯದ್ವಾರದ ಕಡೆಗೆ ಈತನ ಹೆಜ್ಜೆ ಸಾಗುತ್ತಿದ್ದಂತೆ ಅಲ್ಲಿಂದ ಚಿತ್ರಣವೇ ಬೇರೆಯಿತ್ತು. ನೂರ್‍ಆರು ಜನರು ಅಕಾಶವೇ ಹೊದಿಕೆ ಭೂಮಿಯೇ ಹಾಸಿಗೆಯೆನ್ನುವಂತೆ ಮಲಗಿದ್ದರು. ತಲೆಗೆ ತಮ್ಮ ಲಗ್ಗೇಜುಗಳನ್ನೇ ದಿಂಬುಗಳನ್ನಾಗಿಸಿಕೊಂಡಿದ್ದರು.  ಹೆಚ್ಚಿನವರು ಉತ್ತರ ಭಾರತ ಪ್ರಯಾಣ ಬೆಳೆಸುವವರು, ಟಿಬೆಟ್ಟಿಯನ್ನರು, ಹಳ್ಳಿ ಜನಗಳು, ಹೀಗೆ ತರಾವರಿ ಜನರು ಮೈಮರೆತು ಮಲಗಿದ್ದರು. ತಮ್ಮ ಲಗ್ಗೇಜುಗಳನ್ನು ಯಾರಾದರೂ ಕದ್ದುಕೊಂಡು ಹೋಗಿಬಿಟ್ಟರೆ ಎನ್ನುವ ಭಯವೂ ಇಲ್ಲದಂತೆ ಅರಾಮವಾಗಿ ಹೀಗೆ ಮಲಗಿಕೊಂಡಿದ್ದಾರಲ್ಲ ಇಂಥ ಚಳಿಯಲ್ಲಿ ಅಂದುಕೊಳ್ಳುತ್ತಾ ಅವರ ನಡುವೆ ಸಾಗುತ್ತಿದ್ದಂತೆ ಈತನ ಕಾಲು ಸಪ್ಪಳಕ್ಕೆ ಮಲಗಿದ್ದರೂ ಎಚ್ಚರವಾಗಿದ್ದಂತೆ ಅರೆನಿದ್ರೆಯಲ್ಲಿದ್ದ ಒಬ್ಬ ಮಲಗಿದ್ದಲ್ಲಿಂದಲೇ ಅರ್ಥಕಣ್ಣು ತೆರೆದು ನೋಡಿದ. ಮುಂದೆ ಅನೇಕರು ಹಾಗೆ ಅರೆಗಣ್ಣು ತೆರೆಯುತ್ತಿದ್ದುದ್ದನ್ನು ಕಂಡು  ಇವರು ಯಾರು ಮೈಮರೆತು ಮಲಗಿಲ್ಲ!  ಎಂದುಕೊಂಡು ನಿಧಾನವಾಗಿ ಪ್ಲಾಟ್‍ಫಾರಂನೊಳಗೆ ಸಾಗಿ ನಾಲ್ಕಾರು ರೈಲುಹಳಿಗಳನ್ನು ದಾಟಿಕೊಂಡು ಟೂವೀಲರ್ ಪಾರ್ಕಿಂಗ್ ಸ್ಥಳಕ್ಕೆ ಬಂದ.

      ತನ್ನ ಟೂವೀಲರ್ ಕಾಣಿಸಲಿಲ್ಲ. ಪಾರ್ಕಿಂಗ್ ಕಾವಲು ಕಾಯುವವರು ಯಾರು ಕಾಣಲಿಲ್ಲ. ಪಾರ್ಕಿಂ‍ಗ್‍ನವರು ಇಪ್ಪತ್ತನಾಲ್ಕು ಗಂಟೆಯೂ ಇರುತ್ತೇವೆ ಎಂದು ಹೇಳಿದವರು ಇವರೇನಾ? ಅಂದುಕೊಂಡನಾದರೂ ಇಂಥ ಎರಡು ಗಂಟೆ ಹದಿನೈದುನಿಮಿಷದಂತ ಮದ್ಯರಾತ್ರಿಯಲ್ಲಿ ಅವರು ನಿದ್ರೆಯನ್ನು ಮಾಡುತ್ತಿರಬೇಕು ಅಂದುಕೊಂಡು ನಿದಾನವಾಗಿ ಮತ್ತೊಮ್ಮೆ ತನ್ನ ಗಾಡಿಯನ್ನು ಹುಡುಕತೊಡಗಿದ.  ಸುಮಾರು ಹತ್ತು ನಿಮಿಷ ಹುಡುಕುವಷ್ಟರಲ್ಲಿ ಈತನ ಟೂವೀಲರ್ ಕಾಣಿಸಿತ್ತು.  ತಾನು ನಿಲ್ಲಿಸಿದ್ದು ಎಲ್ಲಿ ಈಗ ಇದು ಇರುವುದು ಎಲ್ಲಿ? ಈ ಪಾರ್ಕಿಂಗ್‍ನವರು ಎಂಥ ಕೆಲಸ ಮಾಡುತ್ತಾರಪ್ಪ ಅಂದುಕೊಂಡು ಕೀ ತೆಗೆದು ತನ್ನ ಬ್ಯಾಗನ್ನು ಗಾಡಿಯ ಕಾಲಿಡುವ ನಡುವೆ ಇಟ್ಟು ಗಾಡಿಯನ್ನು ಸ್ಟಾರ್ಟ್ ಮಾಡಿದ. ಶಬ್ದ ಕೇಳಿದ ತಕ್ಷಣ ಯಾರದು? ಕೂಗು ಕೇಳಿತು ದೂರದಿಂದ.  ಓಹ್! ಇವರು ಎದ್ದಿದ್ದಾರೆ? ಅಂದುಕೊಂಡು ನಿದಾನವಾಗಿ ಅವರ ಬಳಿಗೆ ಹೋಗಿ ತನ್ನ ಚೀಟಿ ತೋರಿಸಿ ಅವರು ಹೇಳಿದಷ್ಟು ಹಣವನ್ನು ಕೊಟ್ಟು ಅಲ್ಲಿಂದ ಹೊರಟು ಮನೆ ಸೇರಿದಾಗ ಸರಿಯಾಗಿ ಎರಡುವರೆಗಂಟೆ.

      ಈತ ಮನೆಯ ಬಾಗಿಲು ತಟ್ಟಿ ಹೆಂಡತಿಯನ್ನು ಮೆಲ್ಲಗೆ ಕೂಗಿದ.  ಅವಳಿಗೆ ಮೊದಲೇ ಗೊತ್ತಿದ್ದರಿಂದ ಬಾಗಿಲು ತೆಗೆದು ಬಂದು ಎಲ್ಲಾ ಚೆನ್ನಾಗಿ ಆಯ್ತ?  ಬನ್ನಿ ಅರಾಮವಾಗಿ ನಿದ್ರೆ ಮಾಡಿ ಎಂದಳು. ಒಳಗೆ ಬಂದು ಬಾಗಿಲು ಹಾಕಿ  ".ಮದ್ಯಾಹ್ನ  ಮನೆಯಲ್ಲಿ ಊಟಮಾಡಿಕೊಂಡು ಹೊರಟವನು ಅಲ್ಲಿ ತಲುಪುವ ಹೊತ್ತಿಗೆ ಆರುಗಂಟೆ. ಹೋಗುತ್ತಿದ್ದಂತೆ ಕಾರ್ಯಕ್ರಮ ಶುರುವಾಗಿಬಿಟ್ಟಿತ್ತು.  ನಡುವೆ ಎಲ್ಲೂ ಬಿಡುವಾಗದೇ ಇದ್ದಿದ್ದರಿಂದ ಏನು ತಿನ್ನಲಾಗಲಿಲ್ಲ.  ಹೊಟ್ಟೆ ತುಂಬಾ ಹಸಿವು ಊಟ ಏನಾದರೂ ಉಳಿಸಿದ್ದೀಯಾ? ಕೇಳಿದ.  ನನಗೆ ಗೊತ್ತಿತ್ತು ನೀವು ಹಿಂಗೆ ಮಾಡಿಕೊಳ್ಳುತ್ತೀರಿ ಅಂತ ಅದಕ್ಕೆ ಉಳಿಸಿದ್ದೇನೆ ಕೈತೊಳೆದುಕೊಳ್ಳಿ ಅಂದು ಒಂದು ತಟ್ಟೆಯಲ್ಲಿ ಸ್ವಲ್ಪ ಅನ್ನ ಮತ್ತು ಸಾರು ತಂದುಕೊಟ್ಟಳು.

ಎಷ್ಟು ದಿನವಾಗಿತ್ತೋ ಇಂಥ ಹಸಿವನ್ನು ಅನುಭವಿಸಿ. ಖುಷಿ ಮತ್ತು ತೃಪ್ತಿಯಿಂದ ಊಟ ಮಾಡಿದ. ಉಪ್ಪು ಹುಳಿ ಖಾರ ಏನನ್ನು ಗಮನಿಸದೇ ಇಷ್ಟಪಟ್ಟು ತಿಂದ. ಎಲ್ಲಾ ಮುಗಿದು ಮಲಗುವ ಹೊತ್ತಿಗೆ ಮೂರು ಗಂಟೆ ಮೀರಿತ್ತು.  ಮರುಕ್ಷಣವೇ ಗಾಡ ನಿದ್ರೆ ಆವರಿಸಿತ್ತು.

        ಈಟಿವಿಯವರು ಅಯೋಜಿಸಿ ರವಿಬೆಳಗೆರೆಯವರು ನಡೆಸಿಕೊಡುವ "ಎಂದು ಮರೆಯದ ಹಾಡು" ಕಾರ್ಯಕ್ರಮದ ಫೋಟೋಗ್ರಫಿಗಾಗಿ ನನಗೆ ಬುಲಾವ್ ಬಂದಿತ್ತು.  ಇದು ಮಾಮೂಲಿ ಕಾರ್ಯಕ್ರಮಗಳಂತೆ ಫೋಟೊಗ್ರಫಿಗೆ ಪ್ಲಾಶ್ ಲೈಟ್ ಉಪಯೋಗಿಸುವಂತಿರಲಿಲ್ಲ. ಉಪಯೋಗಿಸಿದರೆ ಕಾರ್ಯಕ್ರಮದ ವಿಡಿಯೋ ರೆಕಾರ್ಡಿಂಗ್ ತೊಂದರೆಯಾಗುತ್ತದೆಯೆನ್ನುವ ಕಾರಣಕ್ಕೆ ಪ್ಲಾಶ್ ಬಳಕೆಯನ್ನು ನಿರ್ಭಂದಿಸಿದ್ದರು.  ಇಂಥ ಒಳಾಂಗಣ ಕಾರ್ಯಕ್ರಮಗಳಲ್ಲಿ ಅವರು ವ್ಯವಸ್ಥೆ ಮಾಡಿದ್ದ ನೆರಳು ಮತ್ತು ಬೆಳಕಿನ ವಿಶಿಷ್ಟ ಸ್ಟುಡಿಯೋ ಲೈಟಿಂಗಿನಲ್ಲಿ ಪ್ಲಾಶ್ ಇಲ್ಲದ ಫೋಟೋಗ್ರಫಿ ನಿಜಕ್ಕೂ ಸವಾಲಿನದು. ಮತ್ತೆ ಇಂಥ ಕಾರ್ಯಕ್ರಮಕ್ಕೆ ಅತ್ಯುತ್ತಮ ಕ್ಯಾಮೆರ, ಕಡಿಮೆ ಅಪಾರ್ಚರ್ ಹೊಂದಿರುವ ಲೆನ್ಸುಗಳು, ಟೆಲಿ ಲೆನ್ಸು ಹೈಸ್ಪೀಡ್ ಮೆಮೋರಿಕಾರ್ಡುಗಳು...ಹೀಗೆ ಸುಮಾರು ಒಂದುಮುಕ್ಕಾಲು ಲಕ್ಷರೂಪಾಯಿಗಳಷ್ಟು ಬೆಲೆ ಕ್ಯಾಮೆರ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದೆ. ಕಾರ್ಯಕ್ರಮ ಮುಗಿಯುವ ಹೊತ್ತಿಗೆ ರಾತ್ರಿ ಹನ್ನೊಂದುವರೆಯಾಗಿತ್ತು. ಅನಂತರ ನನ್ನ ದುಬಾರಿ ಕ್ಯಾಮೆರ ವಸ್ತುಗಳ ಜೊತೆಗೆ ಮದ್ಯ ರಾತ್ರಿಯ ಪ್ರಯಾಣ,  ಮನೆಗೆ ತಲುಪುವವರೆಗಿನ ನನ್ನ ಅನುಭವವನ್ನೇ ಒಂದು ಕಥೆಯಂತೆ ಬರೆದಿದ್ದೇನೆ. ನಿಮಗೆ ಏನನ್ನಿಸಿತು. ಅಭಿಪ್ರಾಯವನ್ನು ತಿಳಿಸಿ.


ಲೇಖನ
ಶಿವು.ಕೆ 

Monday, July 25, 2011

ಭಾರತೀಯ ರೈಲ್ವೆ ನಿನಗೆ ನನ್ನ ಸಾವಿರ ಪ್ರಮಾಣಗಳು!



"ನಿಮಗೇನ್ ತಲೆಕೆಟ್ಟಿದೆಯಾ?
ಕಳೆದ ನಾಲ್ಕು ದಿನದಿಂದ ಈ ಪುಸ್ತಕಗಳಿಗೆ ಆಡಿಕ್ಟ್ ಆಗಿಬಿಟ್ಟಿದ್ದೀರಿ. ಹಗಲೆಲ್ಲಾ ಓದುವುದು ಓಕೆ. ರಾತ್ರಿ ನಿದ್ರೆಬರದಿದ್ದಲ್ಲಿ ಯಾವುದಾದರೂ ಕತೆ ಕಾದಂಬರಿ ಓದುವುದು ಎಲ್ಲರೂ ಮಾಡುವ ಕೆಲಸ, ನೀವೇನ್ರಿ ಈ ಪುಸ್ತಕವನ್ನು ಹಿಡಿದಿದ್ದೀರಿ? ಇದನ್ನು ಓದಿ ಯಾವರೈಲು ಓಡಿಸಬೇಕು?"  ಹೀಗೆ ನನ್ನ ಶ್ರೀಮತಿ ಬೈಯ್ಯುತ್ತಿದ್ದಾಳೆ.
ಆ ಪುಸ್ತಕದಲ್ಲಿ ಒಂದು ಕತೆಯಿಲ್ಲ, ಕವನವಿಲ್ಲ, ಲಲಿತಪ್ರಭಂದಗಳಿಲ್ಲ. ಹರಟೆಯಿಲ್ಲ, ಕಾವ್ಯವಿಲ್ಲ. ಕಗ್ಗವಿಲ್ಲ, ಓದಿ ಪಾಸು ಮಾಡೋಣವೆಂದರೆ ಅಧ್ಯಾಯನ ಪುಸ್ತಕವಂತೂ ಅಲ್ಲವೆ ಅಲ್ಲ! ಆದರೂ ನಾನು ಇದನ್ನು ಇಷ್ಟಪಟ್ಟು ಓದುತ್ತೇನೆ. ಮತ್ತು ಅಬ್ಯಾಸಮಾಡುತ್ತೇನೆ.
 

ನಾನು ಇಷ್ಟಕ್ಕೂ ಹೀಗೆ ಇಷ್ಟಪಟ್ಟು ಓದುತ್ತಿರುವ ಪುಸ್ತಕ ಯಾವುದು ಅಂದುಕೊಂಡ್ರಿ?

ನಮ್ಮ ಭಾರತದ ಹೆಮ್ಮೆಯ ರೈಲ್ವೇ ಟೈಮ್ ಟೇಬಲ್ ಪುಸ್ತಕಗಳು ಕಣ್ರಿ.

"TRAIN AT A GLANCE" 





  "SOUTERN ZONE TIME TABLE"


              
A4 ಸೈಜಿನಲ್ಲಿ ಮುನ್ನೂರು ಪುಟದ ಮೊದಲ ಪುಸ್ತಕದ ಬೆಲೆ ಕೇವಲ 35-00 ರೂಪಾಯಿಗಳು ಮಾತ್ರ
A4 ಸೈಜಿನಲ್ಲಿ ಮುನ್ನೂರ ಎಂಬತ್ತೈದು ಪುಟದ ಎರಡನೇ ಪುಸ್ತಕದ ಬೆಲೆ ಕೇವಲ 30-00 ರೂಪಾಯಿಗಳು ಮಾತ್ರ.


ನಮ್ಮ ದಕ್ಷಿಣಭಾರತದ ಎಲ್ಲಾ ರಾಜ್ಯಗಳ ನಕ್ಷೆಗಳು, ಅದರಲ್ಲಿ ರೈಲು ದಾರಿಗಳು, ಅದರ ಮೇಲೆ 24 ಗಂಟೆ ಓಡಾಡುವ ಎಲ್ಲಾ ಎಕ್ಸ್ ಪ್ರೆಸ್, ಪ್ಯಾಸಿಂಜರ್, ಇಂಟರ್ ಸಿಟಿ, ಶತಾಬ್ಧಿ ಜನಶತಾಭ್ದಿ, ರಾಜಧಾನಿ, ದುರಂತೋ, ಸಂಪರ್ಕ ಕ್ರಾಂತಿ ರೈಲುಗಳು,....ಪ್ಯಾಸಿಂಜರ್ ರೈಲುಗಾಡಿಗಳು ನಿಲ್ಲುವ ಸಣ್ಣ ನಿಲ್ದಾಣಗಳ ವಿವರ, ಶತಾಬ್ಧಿ ರೈಲುಗಳು ನಿಲ್ಲು ದೊಡ್ಡ ನಗರಗಳ ವಿವರ, ಸಮಯ, ಎಲ್ಲಾ ದರ್ಜೆಯ ರೈಲಿನ ದರಗಳು, ರೈಲು ನಿಲ್ದಾಣಗಳಲ್ಲಿನ ಗೆಸ್ಟ್ ಹೌಸುಗಳು, ಅವುಗಳ ದರಗಳು, ಸಾವಿರಾರು ರೈಲುಗಾಡಿಗಳ ಸಂಖ್ಯೆ ಮತ್ತು ಹೆಸರುಗಳು............. ಹೀಗೆಒಂದೇ ಎರಡೇ...ಇನ್ನೂ ಸಾವಿರಾರು ಪಕ್ಕಾ ವಿವರಗಳು. ಎಲ್ಲವೂ ಅಚ್ಚುಕಟ್ಟು ಮತ್ತು ಕರಾರುವಾಕ್ಕು. ಇಂಥ ಒಂದು ಪುಸ್ತಕ ನಿಮ್ಮಲ್ಲಿದ್ದು ಕಂಪ್ಯೂಟರಿನಲ್ಲಿ ಇಂಟರ್‍ನೆಟ್ ಸೌಲಬ್ಯವಿದ್ದಲ್ಲಿ ನೀವು ಹೋಗಬೇಕಾದ ಸ್ಥಳಕ್ಕೆ ರೈಲುಗಾಡಿ ವಿವರ, ದರ, ಸಮಯ ಇತ್ಯಾದಿಗಳನ್ನೆಲ್ಲಾ ಈ ಪುಸ್ತಕದಿಂದ ತಿಳಿದು ಮನೆಯಲ್ಲೇ ಕುಳಿದು ಒಂದು ಅಚ್ಚುಕಟ್ಟಾದ ಮತ್ತು ಕರಾರುವಕ್ಕಾದ ಪ್ರವಾಸ ಕಾರ್ಯಕ್ರಮವನ್ನು ಸಿದ್ದಪಡಿಸಬಹುದು. ಹಾಗೆ ಇಂಟರ್‍ನೆಟ್ಟಿನಿಂದಲೇ ಎಲ್ಲಾ ಟಿಕೆಟ್ಟುಗಳನ್ನು ಬುಕ್ ಮಾಡಿಕೊಂಡುಬಿಡಬಹುದು. ಇದಲ್ಲದೇ ಪ್ರಖ್ಯಾತ ಪ್ರವಾಸಿ ತಾಣಗಳ ಚಿತ್ರಸಹಿತ ವಿವರಗಳು ಇವೆ.


ಈ ಪುಸ್ತಕದಿಂದಾಗಿ ನಾವು ಬೆಟ್ಟ ಕಣಿವೆಗಳಲ್ಲಿ ಸಾಗುವ ಊಟಿ-ಕೂನೂರ್ ರೈಲು ಪ್ರಯಾಣ ಆನಂದಿಸಿದ್ದು. ಮುನ್ನಾರ್ ಪ್ರವಾಸಗಳನ್ನು ಯಶಸ್ವಿ ಮಾಡಿಕೊಂಡಿದ್ದು. ಸುಬ್ರಮಣ್ಯ ಘಾಟ್ ರೈಲು ಪ್ರಯಾಣದಲ್ಲಿ ಫೋಟೊಗ್ರಫಿಯನ್ನು enjoy ಮಾಡಿದ್ದು.

ಈಗ ಹೇಳಿ ಮುವ್ವತ್ತು ರೂಪಾಯಿಗಳಿಗೆ ಒಂದು ಈರುಳ್ಳಿ ದೋಸೆ[ನನ್ನ ಇಷ್ಟದ್ದು]ಸಿಗದಿರುವ ಈ ಕಾಲದಲ್ಲಿ ಇಂಥ ಒಂದು ಅದ್ಬುತ ಪುಸ್ತಕವನ್ನು ಸಾರ್ವಜನಿಕರಿಗೆ ಕೊಟ್ಟಿರುವ ನಮ್ಮ ಭಾರತೀಯ ರೈಲ್ವೇ ಸಂಸ್ಥೆ ಗ್ರೇಟ್ ಅಲ್ವಾ?
ಮತ್ತೆ "TRAIN AT A GLANCE" ಎನ್ನುವ ಮತ್ತೊಂದು ಪುಸ್ತಕದಲ್ಲಂತೂ ಇಡೀ ಭಾರತ ದೇಶದಲ್ಲಿ ಸಂಚರಿಸುವ ಎಕ್ಸ್‍ ಪ್ರೆಸ್ ರೈಲುಗಳ ಮೇಲೆ ವಿವರಿಸಿದ ಎಲ್ಲಾ ವಿವರಗಳಿವೆ.
ಇಡೀ ಪುಸ್ತಕದಲ್ಲಿ ಒಂದೇ ಒಂದು ರೈಲುಗಾಡಿಯ ಸಂಖ್ಯೆ, ಹೆಸರು, ದಾರಿ, ಮಾರ್ಗ, ಸಮಯ, ನಿಲ್ದಾಣ, ಹುಡುಕಿದರೇ ಒಂದು ತಪ್ಪು ಸಿಗುವುದಿಲ್ಲ.
ಈಗ ಹೇಳಿ ಇಂಥ ಒಂದು ಅದ್ಬುತ ಪುಸ್ತದ ಹಿಂದೆ ಕೆಲಸ ಮಾಡಿದ ಸಾಪ್ಟ್ ವೇರ್ ಪರಿಣಿತರು, ನಕ್ಷಾ ತಜ್ಞರು, ಪುಟ ವಿನ್ಯಾಸಕರು, ಪ್ರೂಪ್ ರೀಡರುಗಳು, ಒಂದು ಅದ್ಬುತ ಸಾರ್ವಜನಿಕ ಹಿತಾಸಕ್ತಿಯುಳ್ಳ ರೈಲ್ವೆ ಅಧಿಕಾರಿಗಳು..........
ಅವರಿಗೆ ನಾವೆಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು.
ಪ್ರತೀ ವರ್ಷ ಹೊಸದಾಗಿ ಬರುವ ಈ ಪುಸ್ತಕಗಳಿಗೆ ಬಕಪಕ್ಷಿಯಂತೆ ಕಾಯುತ್ತಿರುತ್ತೇನೆ. ಒಂದು ತಿಂಗಳ ಮೊದಲೇ ರೈಲು ನಿಲ್ದಾಣದಲ್ಲಿ " ಪುಸ್ತಕ ಬಂತಾ" ಅಂತ ವಿಚಾರಿಸುತ್ತಿರುತ್ತೇನೆ.

ಭಾರತೀಯ ರೈಲ್ವೆ ನಿನಗೆ ನನ್ನ ಸಾವಿರ ಪ್ರಮಾಣಗಳು!


ಚಿತ್ರಗಳು ಮತ್ತು ಲೇಖನ
ಶಿವು.ಕೆ

Thursday, July 14, 2011

ಗೆಳೆಯನಿಗೊಂದು ಅವಾರ್ಡು

          ಈಗ ನನ್ನ ವಾಸ ಮಾರುತಿ ಬಡಾವಣೆ ಮಲ್ಲೇಶ್ವರಂ ರೈಲ್ವೇ ನಿಲ್ದಾಣಕ್ಕೆ ಮಗ್ಗಲು. ಈ ಬಡಾವಣೆಯ ಕಾಲು ದೇವಯ್ಯ ಪಾರ್ಕ್. ಹಬ್ಬ ಹರಿದಿನಗಳಿಗೆ ಒಮ್ಮೆ ನಾನು ದೇವಯ್ಯ ಪಾರ್ಕಿನ ಗಣೇಶ ದೇವಸ್ಥಾನಕ್ಕೆ ಹೋಗುತ್ತೇನೆ ನನ್ನ ಶ್ರೀಮತಿಯ ಒತ್ತಾಯದ ಮೇರೆಗೆ.  ದೇವಸ್ಥಾನಕ್ಕಿಂತ ನನಗೆ ತುಂಬಾ ಇಷ್ಟವಾಗುವುದು ಮಲ್ಲೇಶ್ವರಂ ರೈಲ್ವೇ ನಿಲ್ದಾಣ. ನಿತ್ಯ ಒಮ್ಮೆ ಬೇಟಿ ನೀಡಿದಿದ್ದರೆ ನನಗೆ ಸಮಾಧಾನವೇ ಆಗುವುದಿಲ್ಲ. ಅದೆಲ್ಲ ಈಗಿನ ಮಾತು. ಆದ್ರೆ ಹದಿಮೂರು ವರ್ಷಗಳ ಹಿಂದೆ ನನ್ನ ಮನೆ ಒಂದು ಮೈಲಿ ದೂರದ ಶ್ರೀರಾಮಪುರಂನಲ್ಲಿದ್ದರೂ ಫೇವರೇಟ್ ಜಾಗ ದೇವಯ್ಯ ಪಾರ್ಕ್ ಆಗಿತ್ತು. ಅಲ್ಲಿ ಗಣೇಶ ದೇವಸ್ಥಾನವಿದೆ ಅಂತ ಅಲ್ಲ. ಅಲ್ಲಿ  ಏಳೆಂಟು ಹುಡುಗರ ಒಂದು ಗುಂಪು ಸಂಜೆ ಆರು ಗಂಟೆಗೆ ಸೇರುತ್ತಿತ್ತು. ಏಕೆ ಸೇರುತ್ತಿತ್ತು ಅಂತ ಮುಂದೆ ವಿವರಿಸುತ್ತೇನೆ ಮೊದಲಿಗೆ ಅವರೆಲ್ಲರ ಪರಿಚಯ.

 ೨೦-೨೫ ವಯಸ್ಸಿನ ಆಗತಾನೆ ಪದವಿ ಮುಗಿಸಿದವರು ಕೆಲವರು. ಇನ್ನೂ ಕೆಲವರು ಎಂ ಎ ಮಾಡುತ್ತಿರುವವರು ಇದ್ದರು. ಅವರ ಗುಂಪಿನಲ್ಲಿ ನಾನು ಇದ್ದೆ.  ನಾನು ಸೇರಿದಂತೆ ಎಲ್ಲರೂ  ತಾತ್ಕಾಲಿಕ ಉದ್ಯೋಗಗಳನ್ನು ಮಾಡುತ್ತಿದ್ದೆವು.  ಒಬ್ಬ ಶಿವಶಂಕರ್ ಅಂತ. ಆತ ಆಗತಾನೆ ಕಾಲೇಜು ಮುಗಿಸಿ ಮೈಕೊ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿದ್ದರು.  ಆತ ಮೌನಿ. ಆದರೆ ಮಹಾ ತಿಳಿವಳಿಕಸ್ತ.  ನಮ್ಮ ಹತ್ತು ಮಾತಿಗೆ ಒಂದು ಮಾತಾಡುತ್ತಿದವರು. ಈತ ಲಕ್ಷ್ಮಿ ನಾರಾಯಣ.  ನಾವು ಸೇರುವ ವೇಳೆಗೆ ಎಂ. ಎ ಮಾಡುತ್ತಿದ್ದರು. ಇವರಿಬ್ಬರೂ ಮೊದಲಿನಿಂದಲೇ ಗೆಳೆಯರು. ಆ ವಯಸ್ಸಿನ ಉತ್ಸಾಹ ಹೇಗಿರುತ್ತದೆಯೆಂದರೆ ಪ್ರಪಂಚದಲ್ಲಿ ನಾವು ಏನಾದರೂ ಸಾಧಿಸಬೇಕು ಅನ್ನುವ ಮಹತ್ವಾಕಾಂಕ್ಷೆ. ಇವನ್ನೊಬ್ಬ ಮಂಜುನಾಥ. ಈಗ ಹಳ್ಳಿಯ ಹಿನ್ನೆಲೆಯಲ್ಲಿ ಬೆಳೆದು ಬಂದವನು ಕಾಲೇಜಿನಲ್ಲಿ ಪರಿಚಯವಾಗಿದ್ದಾನೆ. ಕಾಲೇಜು ಮುಗಿದಮೇಲೆ ಏನಾದರೂ ಹೊಸದನ್ನು ಮಾಡೋಣ ಎನ್ನುವ ಇವರಿಬ್ಬರ ಮಾತಿಗೆ ಈತನೂ ಅವರ ಜೊತೆಗೂಡಿದ್ದಾನೆ. ಆತ ರಮೇಶ್  ಶಿವಶಂಕರ್ ಗೆಳೆಯ.  ಆಟೋ ಓಡಿಸುತ್ತಿದವನು. ಆದರೂ ಆತನ ಮನಸ್ಸಿನಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಹಂಬಲ. ಇವನೊಬ್ಬ ರಾಘವೇಂದ್ರ ಕಾಮತ್. ಆಗ ಸಂಜೆ ಕಾಲೇಜಿನಲ್ಲಿ ಕೊನೇ ವರ್ಷದ ಬಿ.ಕಾಂ ಓದುತ್ತಿದ್ದ.  ಮತ್ತೊಬ್ಬನಿದ್ದ  ಭದ್ರಾವತಿ ಶ್ರೀನಿವಾಸ ಆಂತ. ಭದ್ರಾವತಿ ಇವನ ಹುಟ್ಟೂರಾದರೂ ಓದಿನಲ್ಲಿ ಇವರ ಜೊತೆಯಾಗಿದ್ದ. ಇಂಥವರ ಜೊತೆ ಸೇರಿದ ಮೇಲೆ ಅವನಿಗೂ ಬದುಕಿನಲ್ಲಿ ಏನಾದರೂ ಸಾಧಿಸಬೇಕು ಅನ್ನುವ ಆಸೆ ಉಂಟಾಗುತ್ತದೆಯಲ್ಲವೇ...ಹಾಗೆ ಈತ ಅದ್ಬುತ ಮಿಮಿಕ್ರಿ ಕಲಾವಿದ. ಮಗದೊಬ್ಬ ನನಗೆ ನನ್ನ ಗೆಳೆಯರ ಮೂಲಕ ಪರಿಚಯವಾದವನು. ಓಹಿಲೇಶ್ವರ್. ಕಾಲೇಜಿನಲ್ಲಿ ಇವರಿಗೆ  ಗೆಳೆಯನಾದವನು ಆಗ ಅದ್ಬುತವಾಗಿ ಕವನ ಬರೆಯುತ್ತಿದ್ದ. ಇವರೆಲ್ಲರ ಜೊತೆಗೆ ಪರಿಚಯವಾದವರು ನಾಗೇಂದ್ರ ಪ್ರಸಾದ್ ಮತ್ತು ಶಿವಪ್ರಕಾಶ್. ನಮ್ಮೆಲ್ಲರ ಗುರಿ ಒಂದೇ ಆಗಿತ್ತು ನಾನು ಆಗ ಕವನ ಮತ್ತು ಲೇಖನಗಳನ್ನು ಪತ್ರಿಕೆಗಳಿಗೆ ಬರೆಯುತ್ತಿದ್ದರಿಂದ ಓಹಿಲೇಶ್ವರ್ ಮೂಲಕ ಇವರಿಗೆ ಪರಿಚಯವಾಗಿದ್ದೆ. ನಮ್ಮ ತಂಡಕ್ಕೆ  ಇಷ್ಟಪಟ್ಟು ಇಟ್ಟುಕೊಂಡಿದ್ದ ಹೆಸರು  "ಸುಪ್ತ."   ನಾವು ಏಳೆಂಟು ಹುಡುಗರು ನಿತ್ಯ ಸಂಜೆ ಆರುಗಂಟೆಗೆ ದೇವಯ್ಯಪಾರ್ಕಿನಲ್ಲಿ ಸೇರುತ್ತಿದ್ದೆವು.


    ಒಟ್ಟಿಗೆ ಸೇರಿದ ಮೇಲೆ ಏನಾದರೂ ಮಾಡಬೇಕಲ್ಲ. ಮೊದಲಿಗೆ ಒಂದು ನಾಟಕವನ್ನು ಮಾಡಬೇಕೆಂದು ತೀರ್ಮಾನಿಸಿದೆವು.  ನಾಗೇಂದ್ರ ಪ್ರಸಾದ್ ಆಗ ಬರೆದಿದ್ದ ಒಂದು ನಾಟಕದ ಹೆಸರು "ಶ್ವೇತಾರ್ಕ" ಅದನ್ನು ನಿತ್ಯ ಅಭ್ಯಾಸ ಮಾಡಲು ದೇವಯ್ಯ ಪಾರ್ಕಿನ ಸಭಾಂಗಣವನ್ನು ಹತ್ತಿರದ ಕೌನ್ಸಿಲರ್ ಬಳಿ ರಿಕ್ವೆಸ್ಟ್ ಮಾಡಿ ಪಡೆದುಕೊಂಡಿದ್ದೆವು.  ಅದೊಂತರ ತುಂಬಾ ವಿಭಿನ್ನವಾದ ನಾಟಕ.  ಐದು ಹುಡುಗರು ಪ್ರೀತಿಯ ಬಗ್ಗೆ ಮಾಡಿದ ಒಂದು ನಾಟಕ. ಈ ಐದು ಜನ ಹುಡುಗರು ಪ್ರೀತಿ ಪ್ರೇಮದ ಬಗ್ಗೆ ಅಭಿಪ್ರಾಯಗಳು ಬೇರೆ  ಬೇರೆ ಆಗಿರುವುದೇ ಈ ನಾಟಕದ ವಸ್ತು.   ಪ್ರೀತಿಯ ಬಗ್ಗೆ ಪಕ್ಕಾ ತರಲೇ ಅಭಿಪ್ರಾಯವನ್ನು ಹೊಂದಿದ್ದ ವ್ಯಕ್ತಿತ್ವದ್ದಾಗಿತ್ತು ನನ್ನ ಪಾತ್ರ. ನಾಗೇಂದ್ರ ಪ್ರಸಾದ್ ಬರೆದ ಆ ನಾಟಕ ಪೂರ್ತಿ ವಿವರವನ್ನು ಎಂದಾದರೂ ಮುಂದೆ ವಿವರವಾಗಿ ಬರೆಯುತ್ತೇನೆ.  ನಾವು ಈ ನಾಟಕವನ್ನು ಅದ್ಯಾವ ಮಟ್ಟಿಗೆ ಅಭ್ಯಾಸ ಮಾಡಿದೆವೆಂದರೆ  ನಮ್ಮ ತಂಡ ಮಂಡ್ಯ, ಬೆಂಗಳೂರಿನ  ರವೀಂದ್ರ ಕಲಾಕ್ಷೇತ್ರ. ಮುಂಬೈ.ಹೀಗೆ ಹತ್ತಾರು ಕಡೆ ಪ್ರಯೋಗ ಮಾಡಿದ್ದೆವು. 

     ಆಗಲೇ ನಾನು ಪದವಿ ಮುಗಿಸಿ ದಿನಪತ್ರಿಕೆ ವಿತರಣೆ ಪಡೆದುಕೊಂಡಿದ್ದರೆ ಈ ಗುಂಪಿನಲ್ಲಿ ರಾಘವೇಂದ್ರ್ ಕಾಮತ್ ಎನ್ನುವ ಮಂಗಳೂರಿನ ಹುಡುಗ ನರ್ಸಿಂಗ್ ಹೋಂಗಳಲ್ಲಿ ಕಾಫಿ ಮೆಸಿನ್ ಇಟ್ಟು ಕೊಂಡು ಕಾಫಿ ಮಾರುತ್ತಿದ್ದ. ಬಿಡುವಿನ ವೇಳೆಯಲ್ಲಿ ನನ್ನಂತೆ ಈ ತಂಡವನ್ನು ಸೇರುತ್ತಿದ್ದ.  ಈ ನಡುವೆ ಅದ್ಯಾಕೋ ನನಗೆ ಹೊಸ ವಿಚಾರವಾದ ಫೋಟೊಗ್ರಫಿ ಬಗ್ಗೆ ಒಲವು ಮೂಡಿತು. ನಾನು ಸಹಜವಾಗಿ ಈ ತಂಡವನ್ನು ಬಿಟ್ಟೆ.  ಒಬ್ಬಬ್ಬರಾಗಿ ಎಲ್ಲರೂ ಬೇರೆಯಾಗಿ ತಮ್ಮ ಬದುಕಿನ ಕಡೆಗೆ ಗಮನ ಹರಿಸಿದರು. ಆದ್ರೆ ಎಲ್ಲರೂ ವೈಯಕ್ತಿಕವಾಗಿ ತಮ್ಮ ಕಲೆಯನ್ನು ಎಲೆಮರೆಕಾಯಿಯಂತೆ ಮುಂದುವರಿಸಿದೆವು.  ನಾಗೇಂದ್ರ ಪ್ರಸಾದ್ ಈಗ ದೊಡ್ಡ ಸಿನಿಮಾ ಹಾಡಿನ ಸಾಹಿತ್ಯ ಕವಿ ಮತ್ತು ನಿರ್ಧೇಶಕನಾಗ ಹೆಸರು ಮಾಡಿದ್ದಾರೆ. ಅವರ ಆಗಿನ ಕೆಟ್ಟ ಮತ್ತು ಒಳ್ಳೆಯ ಗುಣಗಳನ್ನು ಎಂದಾದರೂ ಬರೆಯುತ್ತೇನೆ.. ಇವರ ನಡುವೆ ನನ್ನಂತೆ ರಾಘವೇಂದ್ರ ಕಾಮತ್ ಕೆಲಸದ ನೆಪವೊಡ್ಡಿ ಹೊರಬಂದರೂ ಆತನ ಮನಸ್ಸಿನೊಳಗಿನ ಕವಿ ಮನಸ್ಸು ಸದಾ ಎಚ್ಚರವಾಗಿತ್ತು. ಅಲ್ಲೊಂದು ಇಲ್ಲೊಂದು  ಸಿನಿಮಾ ಹಾಡಿಗೆ ಸಾಹಿತ್ಯ ಬರೆದಿದ್ದರೂ ಅದು ಗಮನಿಸುವಂತಿರಲಿಲ್ಲ. ಮುಂದೆ ನಾನು ಆತನನ್ನು ಸೇರಿದಂತೆ ಇಡೀ ಸುಪ್ತತಂಡವನ್ನು ಮರೆತೆ. ನನ್ನ ಕೆಲಸದಲ್ಲಿ ತೊಡಗಿಕೊಂಡೆ. ಹಾಗೆಂದ ಮಾತ್ರಕ್ಕೆ ನಾವ್ಯಾರು ನಮ್ಮ ಗೆಳೆತನವನ್ನು ಮರೆತಿರಲಿಲ್ಲ.  ಪತ್ರಿಕೆಯಲ್ಲಿ ನಾನು ಬರೆದ ಲೇಖನವನ್ನು ಓದಿ ಯಾರಾದರೂ ಮೆಚ್ಚುಗೆ ಸೂಚಿಸಿ ಪೋನ್ ಮಾಡುತ್ತಿದ್ದರು. ಹಾಗೆ ನಾನು ಅವರ ಮನೆಯ ಮದುವೆ ಇತ್ಯಾದಿ ಕಾರ್ಯಕ್ರಮಗಳಿಗೆ ಹೋಗಿಬರುತ್ತಿದ್ದೆ.

        ಅದೊಂದು ದಿನ ಸುಧೀಪ್ ನಿರ್ಧೇಶನದ ಜಸ್ಟ್ ಮಾತ್ ಮಾತಲ್ಲಿ ಸಿನಿಮಾ ಹಾಡಗಳನ್ನು ಕೇಳಿದಾಗ ಮೊದಲ ಬಾರಿಗೆ ಒಂದು ಹಾಡು ತುಂಬಾ ಕಾಡುವಂತಿದೆಯಲ್ಲಾ ಅನ್ನಿಸುತ್ತು.  ನಾನು ತುಂಬಾ ಇಷ್ಟಪಡುವ ಸುಧೀಪ್ ಸಿನಿಮಾಗಳಲ್ಲಿ ಮೊದಲಿಗೆ "ಆಟೋಗ್ರಾಫ್"  ಆಗಿದ್ದರೂ ಅದು ರಿಮೇಕ್ ಆಗಿದ್ದರಿಂದ ಸುಧೀಪ್ ಎಂದಾದರೂ ಒಂದು ಸ್ವಂತ ಅತ್ಯುತ್ತಮ ಸಿನಿಮ ಕೊಡುತ್ತಾರೆಂಬ ನಂಬಿಕೆಯಿತ್ತು.  "ಜಸ್ಟ್ ಮಾತ್ ಮಾತಲ್ಲಿ"  ನಾನು ತುಂಬಾ ಇಷ್ಟಪಡುವ ಸುಧೀಪ್ ಸಿನಿಮ. ಅದ್ಬುತವಾದ ಫೋಟೊಗ್ರಫಿ, ನಟನೆ, ಕೊನೆಯವರೆಗೂ ಉಳಿಸಿಕೊಳ್ಳುವ ಕುತೂಹಲ..ಇವೆಲ್ಲದರ ಜೊತೆಗೆ ರಘು ದೀಕ್ಷಿತ್  ಸಂಗೀತ ಅದ್ಯಾಕೊ ವಿಭಿನ್ನವೆನಿಸಿತ್ತು. ಅದರಲ್ಲೂ "ಮುಂಜಾನೆ ಮಂಜಲ್ಲಿ"  ಗೀತೆಯನ್ನು  ಕೇಳಿದಾಗ ನನಗೆ ಅರಿವಿಲ್ಲದಂತೆ ಒಂದು ವಿಷಾದ ಕಾಡಲಾರಂಭಿಸಿತ್ತು. ಆ ಹಾಡನ್ನು ಕೇಳಿದ ನಂತರವೂ ಮತ್ತೆ ಮತ್ತೆ ಮನಸ್ಸಿನಲ್ಲಿ ಗುನುಗಿಕೊಳ್ಳುವಂತೆ ಕಾಡುತ್ತಿತ್ತಲ್ಲ...ಆಗ ಅದನ್ನು ಬರೆದವರಾರು ಅಂತ ಹುಡುಕಿದೆ. ಹೆಸರು ರಾಘವೇಂದ್ರ ಕಾಮತ್ ಅಂತ ಇತ್ತು.  ಯಾರೋ ಹೊಸಬ ಇರಬೇಕು ಅಂದುಕೊಂಡಿದ್ದೆ.
                                                   ರಾಘವೇಂದ್ರ ಕಾಮತ್

   ಕೆಲವೇ ದಿನಗಳಲ್ಲಿ ಇದೇ ರಾಘವೇಂದ್ರ ಕಾಮತ್‍ನಿಂದ ಫೋನ್ ಕರೆ ಬಂತು. ನಾನು ಮರೆತರೂ ಆತ ಮರೆತಿರಲಿಲ್ಲ. ತನ್ನ ತಮ್ಮನ ಮದುವೆಗೆ ಅಹ್ವಾನಿಸಲು ಆತ ಫೋನ್ ಮಾಡಿದ್ದ.  ನಾನು ಮದುವೆಗೆ ಹೋಗಿಬಂದಿದ್ದೆ. ಅಲ್ಲಿ ಸಹಜವಾಗಿ ಮಾತಾಡುವಾಗ ಈ ಹಾಡು ಬರೆದಿದ್ದು ಆತನೆಂದು ಗೊತ್ತಾ ಅದು ನನ್ನ ಮೆಚ್ಚಿನ ಹಾಡು ಅಂತ ಹೇಳಿ  ಅಭಿನಂದಿಸಿದ್ದೆ.

       ಫೋಟೊ ಟುಡೆ ಕಾರ್ಯಕ್ರಮವನ್ನು ಮುಗಿಸಿ ಸುಸ್ತಾಗಿ  ಅವತ್ತು ಟೀವಿ ನೋಡೋಣವೆಂದು ಟೀವಿ ಹಚ್ಚಿದರೆ ಸಿನಿಮಾದವರಿಗೆ ಸುವರ್ಣದವರು ನೀಡುವ ಅವಾರ್ಡ್ ಕಾರ್ಯಕ್ರಮ ಬರುತ್ತಿತ್ತು. ಕಾರ್ಯಕ್ರಮವನ್ನು ಎಂಜಾಯ್ ಮಾಡುತ್ತಿದ್ದಂತೆ ಅತ್ಯುತ್ತಮ ಹಾಡಿನ ಸಾಹಿತ್ಯದ ನಾಮಿನಿಗಳನ್ನು ಅನೌನ್ಸ್ ಮಾಡಿದಾಗ ಇದರಲ್ಲಿ ಕನ್ನಡದ ಅತಿರಥ ಮಹರಥರ ಹೆಸರಿನ ಜೊತೆಗೆ ಈ "ರಾಘವೇಂದ್ರ ಕಾಮತ್"  ಹೆಸರು ಜಸ್ಟ್ ಮಾತಲ್ಲಿ ಸಿನಿಮಾದ ಜೊತೆಗೆ ಬಂತಲ್ಲ. ನನ್ನ ಕುತೂಹಲ ಇಮ್ಮಡಿಯಾಯಿತು. ಮೊದಲೇ ನನಗೆ ಆ ಹಾಡು ಫೇವರೇಟ್ ಆಗಿತ್ತು.  ಈತ ಜಯಂತ್ ಕಾಯ್ಕಿಣಿ, ಕವಿರಾಜ್, ಯೋಗರಾಜ್ ಭಟ್, ನಾಗೇಂದ್ರಪ್ರಸಾಧ್ ಇವರನ್ನೆಲ್ಲಾ ಮೀರಿಸಿ ಈತ ಈ ವರ್ಷದ ಅತ್ಯುತ್ತಮ ಸಿನಿಮಾ ಹಾಡಿನ ಸಾಹಿತ್ಯಕ್ಕಾಗಿ ಸುವರ್ಣ ವಾಹಿನಿಯವರ ಪ್ರಶಸ್ತಿಯನ್ನು ಪಡೆದಾಗ ನನಗಂತೂ ನಾನೇ ಪಡೆದಷ್ಟು ಖುಷಿಯಿಂದ ಕುಣಿದಾಣಿದೆ. ಪೋನ್ ಮಾಡಿ ವಿಷ್ ಮಾಡಿದೆ.  ಆತನಿಗೆ ಇದು ಮೊದಲ ಅವಾರ್ಡ್. ನನ್ನ ಸಂತೋಷವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆಂದು ಆತನನ್ನು ಕೇಳಿದಾಗ ಖುಷಿಯಿಂದ ತನ್ನ ಫೋಟೊ ಕಳಿಸಿಕೊಟ್ಟ.  ನೀವು ಅವನಿಗೆ ವಿಷ್ ಮಾಡಿ ಅಭಿನಂದನೆ ತಿಳಿಸಿ..ಹಾರೈಸಿ.

   ನಿಮಗಾಗಿ ಅವನು ಬರೆದ ಹಾಡಿನ ವಿಡಿಯೋವನ್ನು ಹಾಕಿದ್ದೇನೆ. ನೀವು ನೋಡಿ ಸಂತೋಷದಿಂದ ಗೆಳೆಯನಿಗೆ ಆಶೀರ್ವಾದಿಸಿ..




     ರಾಘವೇಂದ್ರ ಕಾಮತ್ ಬರೆದ ಹಾಡಿನ ವಿಡಿಯೋ ನೋಡಲು  ಈ ಕೆಳಗಿನ ಲಿಂಕ್  ಕ್ಲಿಕ್ಕಿಸಿ



      http://www.youtube.com/watch?v=TcwUH_nZxno&feature=related


ಲೇಖನ
ಶಿವು. ಕೆ.