Thursday, September 23, 2010

ಯಾವ ಋತುವಿನ ಕೊನೆಯಲ್ಲಿ...

                   ನೀ ಭಾವಪೂರ್ಣವಾಗಿ ನಕ್ಕು
                            ಅದೆಷ್ಟು ವರ್ಷಗಳು ಕಳೆದವು?
                            ಎದೆಯಾಳದಲ್ಲಿದ್ದ ಮುಗ್ಧನಗೆಯನ್ನು
                            ಬೊಗಸೆ ತುಂಬಾ ಚೆಲ್ಲಿದ್ದು
                            ನಮ್ಮೂರ ಜಾತ್ರೆಯಲ್ಲಲ್ಲವೇ!
                            ಮೊಗ್ಗಿನ ಮುಗ್ಧತೆ ಹೂವಿಗೆಲ್ಲಿ 
                            ಬರಬೇಕು  ಅಲ್ಲಿದ್ದ ಹೂಗಳು
                            ಸ್ಪರ್ಧಿಸಲಾಗದೆ ಸೋತು ಬಾಡಿದ್ದವು
                        
                             ಅಂದೇ ಕೊನೆ ನಗು ಮಾಯವಾಗಿತ್ತು
                              ಜೊತೆಗೆ ಮನೆಯಂಗಳದ ಪಾರಿಜಾತ
                              ಸುವಾಸನೆ ಬೀರಲು ಮರೆಯಿತು
                              ಮರುಭೂಮಿ ಹೃದಯದಲ್ಲಿದ್ದ
                              ಓಯಸಿಸ್ ಬತ್ತಿಹೋಯಿತು
                              ಮುಂಜಾವು ಸುಪ್ರಭಾತ ನಿಲ್ಲಿಸಿತ್ತು
                              ಕೊರಳ ಸರದ ನೀಲಿಮುತ್ತು
                              ನಿರಾಸೆಯಿಂದ ಜಾರಿ ಉರುಳಿಹೋಯ್ತು

                              ಕಾರಣ, ಇಷ್ಟವಿಲ್ಲದ ಮದುವೆ
                              ಗಂಡ, ವಿಧವೆ ಪಟ್ಟ, ಸಮಾಜ
                              ಎದೆಯಲ್ಲಿದ್ದ ಆಸೆ ಆವಿಯಾಗಿ ನಿರಾಶೆ
                              ನಿಟ್ಟುಸಿರು ಮೊಳೆಯಂತೆ ಹೊಕ್ಕಿರಬಹುದು
                              ನೂರು ಮಾತಲ್ಲಿ  ಸಾವಿರಾರು
                              ಮೌನದಲಿ ಕಚ್ಚಿಚುಚ್ಚಿ
                               ಸಮಾಜ ನಿನ್ನನ್ನು ಕೊಂದಿರಬಹುದು

                               ಆದರೆ  "ನಿನ್ನತನ" ಉಳಿದಿದೆಯಲ್ಲ

                               ಅದಕ್ಕಾಗಿ, ಅದನ್ನು ಆರಾಧಿಸುವ
                               ನನಗಾಗಿ ನೀ ನಗಬೇಕು, ಮಾಗಿಯಲ್ಲಿ
                               ಮೂಕವೇದನೆಗೊಂಡರೂ ಭುವಿ ವಸಂತಋತು
                               ಬಂದಾಗ ನಕ್ಕು ಅರಳುತ್ತಾಳೆ  ಹೇಳು
                               ನಾನ್ಯಾವ ಋತುವಿನ ಕೊನೆಯಲ್ಲಿ
                               ಕುಳಿತು ಕಾಯಲಿ?

ಗೆಳೆಯರೆ ಇದನ್ನು ಓದಿ ಅಪರೂಪಕ್ಕೊಂದು ಹೊಸ ಕವನ ಈಗ ನಾನು ಬರೆದಿದ್ದೇನೆ ಎಂದುಕೊಳ್ಳಬೇಡಿ.  ಇದನ್ನು ಬರೆದಿದ್ದು ಈಗಲ್ಲ  1997 ರಲ್ಲಿ.  ಆಗ ಈ ಕವನ 1997ರ ಫೆಬ್ರವರಿ 23ರಂದು ಕರ್ಮವೀರ ವಾರಪತ್ರಿಕೆಯ  "ಬಾ ಕವಿತಾ"  ಕಾಲಂನಲ್ಲಿ ಪ್ರಕಟವಾಗಿತ್ತು.  ಆಗಿನ ಮನಸ್ಥಿತಿಯಲ್ಲಿ ಬರೆದ ಕವನವಿದು.  ಅದ್ಯಾಕೋ ಈಗ ನಿನ್ನೆ ಓದಿದಾಗ ಬ್ಲಾಗಿಗೆ ಹಾಕಬೇಕೆನ್ನಿತು.  ಓದುವಾಗ ಕವನದಲ್ಲಿ ಒಳಾರ್ಥವಿದ್ದಲ್ಲಿ ಅದು ನಿಮ್ಮ ಕಲ್ಪನೆಗೆ ತಕ್ಕಂತೆ  ರೂಪುಗೊಳ್ಳಲಿ ಎನ್ನುವ ಕಾರಣಕ್ಕೆ ಯಾವುದೇ ಚಿತ್ರವನ್ನು ನಾನು ಹಾಕಲು ಇಷ್ಟಪಡಲಿಲ್ಲ.   ಓದಿ ನಿಮ್ಮ  ಅಭಿಪ್ರಾಯವನ್ನು ತಿಳಿಸಿ.

            


ಕವನ
ಶಿವು.ಕೆ
    

Friday, September 17, 2010

ಛಾಯಾಲೋಕದ ದಿಗ್ಗಜರ ಛಾಯಾಚಿತ್ರ ಪ್ರದರ್ಶನ


 
     ನೇಚರ್ ಫೋಟೊಗ್ರಫಿಯ ವಿಶ್ವಕಪ್ ಸ್ಪರ್ಧೆ ತೀರ್ಪುಗಾರರಾಗಿ ಬೆಂಗಳೂರಿಗೆ ಮೂವರು ವಿದೇಶಿ ಸ್ಥಿರ ಛಾಯಾಗ್ರಾಹಣ ಕಲೆಯ ದಿಗ್ಗಜರು ಬಂದಿದ್ದರು.  ಸೌತ್ ಅಫ್ರಿಕದ ಮೇಡಮ್ ಸ್ನೀಜ್ ಜಿಸ್ಬೆ[Ms. Jill Sneesby, ESFIAP]. ಫೋಟೊಗ್ರಫಿ ಸಾಧನೆ ಮತ್ತು ಸೇವೆಗಾಗಿ ESFIAP  ಡಿಸ್ಟಿಂಕ್ಷನ್ ಪಡೆದಿದ್ದರೆ, ಫೆಡರೇಷನ್ ಅಪ್ ಇಂಟರ್‌ನ್ಯಾಷನಲ್ ಫೋಟೊಗ್ರಫಿ ಉಪಾದ್ಯಕ್ಷರಾದ ಜಾಕೀ ಮಾರ್ಟಿನ್[Mr.Jacky Martin,EFIAP] ಬಂದಿದ್ದರು. ಇವರ ಅಮೋಘ ಫೋಟೊಗ್ರಫಿ ಸಾಧನೆಗಾಗಿ ಎಕ್ಸಲೆನ್ಸ್ ಅಪ್ ಆಶೋಷಿಯೇಟ್ ಫೋಟೊಗ್ರಫಿ ಡಿಸ್ಟಿಂಕ್ಷನ್[EFIAP] ಗೌರವ ದೊರೆತಿದೆ.   ಇನ್ನೂ ಮೂರನೇಯವರಾದ ಇಟಲಿಯ ರೆಕಾರ್ಡೋ ಬುಸಿ[Mr. Riccardo Busi,MFIAP, HonEFIAP]ಇವರಂತೂ ತಮ್ಮ ಫೋಟೊಗ್ರಫಿ ಸಾಧನೆಗೆ ಮಾಸ್ಟರ್ ಆಪ್ ಫೆಡರೇಷನ್ ಇಂಟರ್‌ನ್ಯಾಷನಲ್ ಡಿ ಲ ಆಶೋಷಿಯೇಟ್ ಫೋಟೊಗ್ರಫಿ" ಎನ್ನುವ ಗೌರವವನ್ನೇ ಪಡೆದಿದ್ದಾರೆ. ಇದಂತೂ ಫೋಟೋಗ್ರಫಿ ಸಾಧನೆಗೆ ಸಿಗುವ ಅತ್ಯುನ್ನತ ಗೌರವ. ಈ ಮೂವರು ವಿದೇಶಿ ತೀರ್ಪುಗಾರರ ಜೊತೆ  ರೆಕಾರ್ಡೋ ಬುಸಿಯಷ್ಟೇ ಉನ್ನತ ಗೌರವ ಹೊಂದಿರುವುದರ ಜೊತೆಗೆ ರಾಯಲ್ ಫೋಟೊಗ್ರಫಿ ಲಂಡನ್‍ನಿಂದ [ ]ಫೆಲೊಶಿಪ್ ಅಫ್ ರಾಯಲ್ ಫೋಟೊಗ್ರಫಿ ಸೊಸೈಟಿ ಮನ್ನಡೆ ಪಡೆದಿರುವ ನಮ್ಮ ದೇಶದ ಪ್ರಖ್ಯಾತ ಛಾಯಾಗ್ರಾಹಕರಾದ ಬಿ.ಶ್ರೀನಿವಾಸ[B.SRinivasa,MFIAP,FRPS]ಮತ್ತು ಟಿ.ಎನ್.ಎ. ಪೆರುಮಾಳ್[T.N.A.Perumal,MFIAP,FRPS] ಕೂಡ ತೀರ್ಪುಗಾರರಾಗಿದ್ದರು.  ಇವರನ್ನೆಲ್ಲಾ ಒಟ್ಟಿಗೆ ನೋಡುವುದು ಮಾತಾಡಿಸುವುದು ನನ್ನ ನೂರಾರು ಕನಸುಗಳಲ್ಲಿ ಇದೂ ಒಂದು. ಅವತ್ತು ನನಸಾಗಿತ್ತು.


T.N.A.Perumal, B.Srinivasa, Riccardo busi, Jacky Martin, Jill Sneesby.


 ಸೆಪ್ಟಂಬರ್ ೧೦ ಮತ್ತು ೧೧ರಂದು ಹೋಟಲ್ ತಾಜ ವೆಸ್ಟೆಂಡ್ ನಲ್ಲಿ ಫೋಟೋಗ್ರಫಿಯ ತೀರ್ಪು ಕಾರ್ಯಕ್ರಮ ಮುಗಿದ ಮೇಲೆ ಸೆಪ್ಟಂಬರ್ ಹದಿನಾಲ್ಕರಂದು ಈ ಐವರು ಸಾಧಕರ ಫೋಟೊಗ್ರಫಿ ಪ್ರೊಜೆಕ್ಷನ್ ಷೋ ಮತ್ತು ಸಂವಾದ ನಡೆಯಿತು.  ನಿಜಕ್ಕೂ ನನ್ನಂತ ಛಾಯಾಗ್ರಾಹಕರಿಗೆ ಮರೆಯಲಾಗದ ಅನುಭವ.  ಮೊದಲಿಗೆ ಮೇಡಮ್ ಸ್ನೀಜ್ ಜಿಸ್ಬೆ  ಸೌತ್ ಆಫ್ರಿಕಾದ ಕಾಡುಗಳಲ್ಲಿ ಕ್ಲಿಕ್ಕಿಸಿದ ಅದ್ಬುತ ಚಿತ್ರಗಳನ್ನು ಪ್ರದರ್ಶಿಸಿದರು.  ನಡುವೆ ಕೆಲವು ಫೋಟೊಗಳನ್ನು ತೆಗೆಯಲು ಕಾಡಿನ ನಡುವೆ ಹಳ್ಳ ತೆಗೆದು ಅದರೊಳಗೊಂದು ಬಂಕರ್ ನಿರ್ಮಿಸಿ  ಅದರೊಳಗೆ ಕುಳಿತು ನೆಲಮಟ್ಟದಲ್ಲಿ  ಕುಳಿತು, ಮಲಗಿ ಫೋಟೊ ತೆಗೆಯುವಾಗಿನ ಅನುಭವಗಳನ್ನು ಹಂಚಿಕೊಂಡರು.  ಒಂಟಿಸಲಗಗಳು ಇವರು ಬಂಕರಿನೊಳಗೆ ಇದ್ದಾಗ ಇಪ್ಪತ್ತು ಅಡಿ ಅಂತರದಲ್ಲಿ ಬಂದು ಬಂಕರನ್ನೆಲ್ಲಾ ಮೂಸಿ ನೋಡಿ ಹೋಗಿದ್ದು ಅವಕ್ಕೆ ತಲೆಕೆಟ್ಟು ಬಂಕರಿನೊಳಗೆ ಕಾಲಿಟ್ಟುಬಿಟ್ಟಿದ್ದರೆ ನಾನಿಲ್ಲಿ ನಿಮಗೆ ಇದನ್ನೆಲ್ಲಾ ತೋರಿಸಲು ಬರಲಾಗುತ್ತಿರಲಿಲ್ಲವೆಂದಾಗ ಅಲ್ಲಿ ನೆರೆದಿದ್ದ ಛಾಯಾಭಿಮಾನಿಗಳಲ್ಲಿ ರೋಮಾಂಚನ.

 ಪ್ರದರ್ಶನಗೊಂಡ ಅವರ ಕೆಲವು ಫೋಟೊಗಳು ಇಲ್ಲಿವೆ.

ಈ ಚಿತ್ರವನ್ನು ನೀವು ಎಲ್ಲಾ ಕಡೆ ನೋಡಿರುತ್ತೀರಿ. ಅಷ್ಟು ಪ್ರಸಿದ್ಧಿಯಾದ ಚಿತ್ರ.


ಜೀಬ್ರಾಗಳ ಕಾದಾಟ

ಸೌತ್ ಆಫ್ರಿಕಾದ ಜಿಂಕೆಗಳು



 ಆಸ್ಟ್ರಿಚ್ ಹಕ್ಕಿ ಸೂರ್ಯಾಸ್ತದ ದೂಳಿನ ಹಿನ್ನೆಲೆಯಲ್ಲಿ

  ಸೌತ್ ಅಫ್ರಿಕಾದ ಸ್ಪ್ರಿಂಗ್ ಬಾಕ್ ಜಿಂಕೆ


       ನಂತರ ಬಂದವರು ಬಂದವರು ಇಂಟರನ್ಯಾಷನಲ್ ಫೆಡರೇಷನ್ ಅಪ್ ಫೋಟೊಗ್ರಫಿಯ ಉಪಾದ್ಯಕ್ಷರಾದ ಪ್ರಾನ್ಸಿನ ಜಾಕಿ ಮಾರ್ಟಿನ್.  ಅವರು ತಮಗಿಷ್ಟವಾದ ಅಮೇರಿಕಾದ ಫೀನಿಕ್ಸ್ ನಗರದ ಕೆಲವು ಲ್ಯಾಂಡ್‍ಸ್ಕೇಪಿನ ಅಮೋಘ ಚಿತ್ರಗಳನ್ನು  ಪ್ರದರ್ಶಿಸಿದರು. ಅವರ ಕೆಲವು ಚಿತ್ರಗಳು ಇಲ್ಲಿವೆ.

 ಎಷ್ಟು ಚೆಂದವಲ್ವ ಈ ಒಂಟಿಮರದ ದೃಶ್ಯ
 
 ಹೀಗೊಂದು ಸುಂದರ ಪ್ರಕೃತಿ ಸೌಂದರ್ಯ

 ಬ್ರೈಸ್ ಕ್ಯಾನಿಯನ್‍ನ ಒಂದು ಲ್ಯಾಂಡ್‍ಸ್ಕೇಪ್

 ಮೂರನೇಯದಾಗಿ  ಇಟಲಿಯ ರೆಕಾರ್ಡೋ ಬುಸಿಯಂತೂ ತಮ್ಮ ಅಷ್ಟು ಚಿತ್ರಗಳನ್ನು ಎಂಟು ನಿಮಿಷಗಳ ಪವರ್ ಪಾಯಿಂಟ್ ಪ್ರದರ್ಶನದಲ್ಲಿ ತೋರಿಸಿ ಇಟಲಿಯವರ ಸೃಜನಶೀಲತೆಯನ್ನು ಮೆರೆದರು. ಅವರ ಕೆಲವು ಚಿತ್ರಗಳು ಇಲ್ಲ
ಹರಿವ ನೀರಿಗೆ ವಿರುದ್ಧವಾಗಿ ಈಜಿ ಮೇಲೆ ಹಾರಿದ ಮೀನನ್ನು ಹಿಡಿಯುತ್ತಿರುವ ಹಿಮಕರಡಿ

 ಪಫಿಟ್ ಹಕ್ಕಿಗಳ ಫೋಸು

 ಕಾಡುಬೆಕ್ಕು ಬೇಟೆಗಾಗಿ ಓಟ

ಓಡಿ ಪ್ರಾಣ ಉಳಿಸಿಕೊಳ್ಳುತ್ತಿರುವ ಜಿಂಕೆ
                                  

 ಇವರ ನಂತರ ಬಂದವರು ನಮ್ಮವರೇ ಆದ ಬಿ.ಶ್ರೀನಿವಾಸ. ತಮ್ಮ ನಲವತ್ತು ವರ್ಷಗಳ ಫೋಟೊಗ್ರಫಿ ಅನುಭವವನ್ನು ಹಂಚಿಕೊಳ್ಳುವುದಲ್ಲದೇ ಕೆಲವು ವಿಶೇಷವೆನ್ನುವ ಪಕ್ಷಿಗಳ ಛಾಯಾಚಿತ್ರಗಳನ್ನು ತೋರಿಸಿದರು.

 ರಂಗನತಿಟ್ಟಿನಲ್ಲಿ  ಹಕ್ಕಿಗಳ ಲವ್ ಲವಿಕೆ
 ಬ್ಲೂ ಜೇ ಹಕ್ಕಿಯ ಹಾರಾಟ

 ಕೆಸ್ಟ್ರಾಲ್ ಎನ್ನುವ ಗಿಡುಗನ ಹಾರಾಟ


 ಎರಡೂ ಗ್ರೀನ್ ಬೀಈಟರುಗಳ ಬಾಯಲ್ಲಿ ಬೇಟೆ. ಖುಷಿಯ ವಿಚಾರವೆಂದರೆ ಈ ಚಿತ್ರವನ್ನು ನನ್ನ ಜೊತೆಗೆಯಲ್ಲಿ ಕ್ಲಿಕ್ಕಿಸಿದ್ದು.



 ಕೊನೆಯಲ್ಲಿ ಬಂದವರು ಇವರೆಲ್ಲರಿಗಿಂತ ಹಿರಿಯರಾದ ೭೬ ವರ್ಷದ ಟಿ.ಎನ್.ಎ. ಪೆರುಮಾಳ್.  ಅವರ ಐವತ್ತು ಫೋಟೊಗ್ರಫಿ ಅನುಭವಗಳ ಜೊತೆಗೆ  ಕೀಟಲೋಕದ ವಿಶೇಷಗಳು, ಪಕ್ಷಿಲೋಕದ ವೈವಿಧ್ಯಗಳನ್ನು ವಿವರಿಸಿದರು.  ಜೊತೆಗೆ  ಒಂದು ಗೂಬೆಯ ಫೋಟೊ ಕ್ಲಿಕ್ಕಿಸಲು ಸುಮಾರು ೩೨ ರಾತ್ರಿಗಳನ್ನು ನಿದ್ರೆಯಿಲ್ಲದೇ ಕಳೆದ ಆನುಭವಗಳನ್ನು ವಿವರಿಸಿದಾಗ ನಮ್ಮಂತ ಯುವ ಛಾಯಾಗ್ರಾಹಕರಿಗಂತೂ ಮೈಜುಮ್ಮೆನ್ನಿಸಿತ್ತು. ಅವರ ಕೆಲವು ಚಿತ್ರಗಳು ಇಲ್ಲಿವೆ.

ಕಾಡುನಾಯಿಗಳು ಲವ್‍ಲವಿಕೆ


ಒಂದು ರೀತಿಯ ವಿಶೇಷ ನೊಣ ಮತ್ತೊಂದು ನೊಣವನ್ನು ಹಿಡಿದು ತಿನ್ನುತ್ತಿರುವುದು ಇದು ಕೀಟಲೋಕದ  ವೈವಿಧ್ಯತೆ

ಇದೊಂದು ಗೂಬೆಯ ಚಿತ್ರವನ್ನು ಕ್ಲಿಕ್ಕಿಸಲು ಪೆರುಮಾಳ್‍ರವರು ೩೨ ರಾತ್ರಿಗಳನ್ನು ವ್ಯಯಿಸಿದ್ದಾರೆ. ಅದಕ್ಕೆ ತಕ್ಕಂತೆ ಈ ಚಿತ್ರವೂ ಅವರಿಗೆ ನೂರಾರು ಬಹುಮಾನಗಳನ್ನು ಗಳಿಸಿಕೊಟ್ಟಿದೆ.


ಛಾಯಾಚಿತ್ರ ಪ್ರದರ್ಶನ ಮತ್ತು ಸಂವಾದದಲ್ಲಿ ಭಾಗವಹಿಸಿದ್ದ ಛಾಯಾಗ್ರಾಹಕರು ಮತ್ತು ಅಭಿಮಾನಿಗಳು


ಇವರೆಲ್ಲರ ಛಾಯಾಚಿತ್ರಗಳ ಪ್ರದರ್ಶನದ ನಂತರ ಸಂವಾದ ಕಾರ್ಯಕ್ರಮವಿತ್ತು.  ಯುವ ಛಾಯಾಗ್ರಾಹಕರೊಂದಿಗೆ ಪ್ರಶ್ನೋತ್ತರ ಕಾರ್ಯಕ್ರಮವಿತ್ತು. 

 ಎಲ್ಲ ಮುಗಿದ ಮೇಲೆ  ವಿದೇಶಿ ದಿಗ್ಗಜರಾದ ಪ್ರಾನ್ಸಿನ ಜಾಕಿ ಮಾರ್ಟಿನ್ ಮತ್ತು ಇಟಲಿಯ ರೆಕಾರ್ಡೋ ಬುಸಿಯ ಜೊತೆ ನಾನು ಫೋಟೊ ತೆಗೆಸಿಕೊಳ್ಳುವ ಆಸೆ ಈಡೇರಿತ್ತು. ನನ್ನ ಜೊತೆ ಬಂದಿದ್ದ ಉದಯ್ ಹೆಗಡೆ ನಮ್ಮ ಫೋಟೊ ತೆಗೆದುಕೊಟ್ಟಿದ್ದರು.
ನಾನು ಮುಂದಿನ ವರ್ಷ EFIAP ಮನ್ನಣೆಗಾಗಿ ಅರ್ಜಿ ಸಲ್ಲಿಸಬೇಕು ಎಂದಾಗ ನನಗೆ ಅವರಿಬ್ಬರೂ "ALL THE BEST" ಹೇಳಿದಾಗ ನನಗೆ ತುಂಬಾ ಖುಷಿಯಾಗಿತ್ತು.

ಚಿತ್ರಗಳು ಮತ್ತು ಲೇಖನ.
ಶಿವು.ಕೆ

Sunday, September 12, 2010

ಕೊರಿಯನ್ ನಾಟಕ "ಟೇಲ್ ಅಪ್ ಹಾರುಕ್"

         ಅವತ್ತು ದಿನಾಂಕ ೨೭-೭-೨೦೧೦.  ಸಂಜೆ ೬-೩೦ಕ್ಕೆ ನನ್ನ ಮನೆಯಿಂದ ಹೊರಟು  ೭-೧೫ಕ್ಕೆ ಮೊದಲು ನಾನು ರಂಗಶಂಕರ ತಲುಪಬೇಕಿತ್ತು. ಹೊರಟ ಸ್ವಲ್ಪ ಹೊತ್ತಿಗೆ ಸಣ್ಣಗೆ ಮಳೆ ಶುರುವಾಗಿತ್ತು. ಎಲ್ಲಾದರೂ ನಿಂತರೆ ಸಮಯಕ್ಕೆ ಸರಿಯಾಗಿ ತಲುಪಲಾಗುವುದಿಲ್ಲವಲ್ಲ ಅಂದು ಕೊಂಡು ಹಾಗೆ ನಿದಾನವಾಗಿ ಹೋಗುತ್ತಿದ್ದೆ.  ಮಳೆಯಿಂದ ರಕ್ಷಣೆಗಾಗಿ ಜರ್ಕಿನ್ ಹಾಕಿಕೊಂಡಿದ್ದೆನಾದರೂ  ನನ್ನ ಜೊತೆಯಿದ್ದ ಕ್ಯಾಮೆರಾ ಬ್ಯಾಗ್ ಬಗ್ಗೆ ಭಯವಿತ್ತು. ಯಾಕೆಂದರೆ ಅದರಲ್ಲಿ ದೊಡ್ಡಲೆನ್ಸ್ ಕೂಡ ಇತ್ತು. ಅದೆಲ್ಲಾದರೂ ಮಳೆಯಲ್ಲಿ ನೆನದುಬಿಟ್ಟರೆ ಎನ್ನುವ ಭಯ. ಅದಕ್ಕೆ ಒಂದು ಕಡೆ ನಿಲ್ಲಿಸಿ ಇಡೀ ಕ್ಯಾಮೆರಾ ಬ್ಯಾಗಿಗೆ ಒಂದು ದೊಡ್ದದಾದ ಪ್ಲಾಸ್ಟಿಕ್ ಕವರ್ ಸುತ್ತಿದ ಮೇಲೆ ನಿದಾನವಾಗಿ ಮಳೆಯಲ್ಲೇ ರಂಗಶಂಕರದ ಕಡೆಗೆ ನನ್ನ ಸ್ಕೂಟಿಯಲ್ಲಿ ಹೊರಟೆ.  ಸಂಜೆಯ ಟ್ರಾಫಿಕ್ ಜಾಮ್, ಕೊಚ್ಚೆ ನೀರು, ಅಗೆದ ರಸ್ತೆಗಳಂತ ಅಡೆತಡೆಗಳನ್ನು ದಾಟಿ ಆಗುಹೀಗೂ ರಂಗಶಂಕರವನ್ನು ತಲುಪಿದಾಗ ೭-೨೦ ಆಗಿಬಿಟ್ಟಿತ್ತು.  ಅಲ್ಲಂತೂ ಜನವೋ ಜನ. ಟಿಕೆಟ್ ಕೌಂಟರ್ ಬಳಿ ಹೋಗಿ ಟಿಕೆಟ್ ಕೇಳಿದರೆ ಮೊದಲೇ ಆನ್‍ಲೈನ್ ಬುಕ್ ಮಾಡಿದ್ದೀರಾ? ಅನ್ನುವ ಪ್ರಶ್ನೆಬಂತು ಕೌಂಟರಿನೊಳಗಿಂದ. ಇಲ್ಲ ಅಂದೆ. ಸರಿ ಎಷ್ಟು ಬೇಕು ಅಂದರು. ಒಂದು ಟಿಕೆಟ್ ಅಂದೆ. ಎಲ್ಲ ಖಾಲಿಯಾಗಿ ನಾಲ್ಕು ಮಾತ್ರ ಉಳಿದಿವೆ. ನಿಮ್ಮ ಅದೃಷ್ಟ ಚೆನ್ನಾಗಿದೆ ತಗೊಳ್ಳಿ ಇನ್ನೂರು ರೂಪಾಯಿ ಕೊಡಿ" ಅಂದರು. ನಾನು ಹಣಕೊಟ್ಟು ಟಿಕೆಟ್ ಪಡೆದುಕೊಂಡು ಒಳಗೆ ಹೋಗಲು ಕ್ಯೂ ನಿಂತೆ.  ಅಲ್ಲಂತೂ ದೊಡ್ಡವರ ಜೊತೆಗೆ ಮಕ್ಕಳೂ ಅಷ್ಟೇ ಪ್ರಮಾಣದಲ್ಲಿದ್ದರು. ಅನೇಕ ಸಿನಿಮಾ ನಿರ್ಧೇಶಕರು, ನಟರು, ಸೆಲಬ್ರಟಿಗಳು ಕಾಣಿಸಿದರು. ಅವರ ಕಡೆಗೆ ನನ್ನ ಗಮನ ಹೋಗಲಿಲ್ಲ. ಏಕೆಂದರೆ ಅದು ರಂಗಶಂಕರದಲ್ಲಿ ವಿಶೇಷವೇನು ಅಲ್ಲವಲ್ಲ. ನನ್ನ ಗಮನವಿದ್ದಿದ್ದು ಮಕ್ಕಳ ಕಡೆಗೆ. ಏಕೆಂದರೆ ಒಂದು ನಾಟಕ ನೋಡಲು ಇಷ್ಟೊಂದು ಮಕ್ಕಳು ಬಂದಿರುವುದು ನೋಡಿ ನನಗೆ ಆಶ್ಚರ್ಯವಾಗಿತ್ತು.  ತಡಮಾಡದೆ ಒಳಗೆ ನನಗೆ ಬೇಕಾದ ಜಾಗ ಹಿಡಿಯಬೇಕು ಅಂತ ಹೇಗೋ ಒಳಗೋಗಿ ಕುಳಿತರೆ ರಂಗಶಂಕರ ತುಂಬಿಹೋಗಿತ್ತು. 


 ನನ್ನಲ್ಲಿದ್ದ ದೊಡ್ಡ ಕ್ಯಾಮೆರಾ ಬ್ಯಾಗು ಮತ್ತು ಅದರಲ್ಲಿದ್ದ ಲೆನ್ಸುಗಳನ್ನು ನೋಡಿ "ನೀವು ಪ್ರೆಸ್ಸಿನಿಂದ ಬಂದಿರುವವರಾ" ಅಂತ ಒಬ್ಬ ವ್ಯವಸ್ಥಾಪಕಿ ಕೇಳಿದರು.  ಇಲ್ಲವೆಂದೆ.  ಹಾಗಾದರೆ ಈ ಕ್ಯಾಮೆರಾ ಇದೆಲ್ಲಾ ಏನು ಅಂತ ಕೇಳಿದರು.  ನನಗೆ ಈ ನಾಟಕವನ್ನು ಫೋಟೊಗ್ರಫಿ ಮಾಡಬೇಕು ಅಂತ ಆಸೆ ಅದಕ್ಕೆ ಕ್ಯಾಮೆರ ತಂದಿದ್ದೇನೆ. ಅಂದೆ. "ಓಹ್! ಇಲ್ಲಿ ಕ್ಯಾಮೆರಾ ಅನುಮತಿಯಿಲ್ಲ. ಏಕೆಂದರೆ ನೀವು ಫೋಟೊ ತೆಗೆಯುವಾಗ ಬರುವ ಬೆಳಕಿನಿಂದಾಗಿ ಎಲ್ಲರಿಗೂ ಡಿಸ್ಟರ್ಬ್ ಆಗುತ್ತದೆ.  ಸಾರಿ" ಅಂದಳು ಆಕೆ.

 "ನೀವಂದುಕೊಂಡಂತೆ ನಾನು ಪ್ಲಾಶ್ ಉಪಯೋಗಿಸುವುದಿಲ್ಲವಾದ್ದರಿಂದ ಯಾರಿಗೂ ತೊಂದರೆಯಾಗುವುದಿಲ್ಲವಲ್ಲ" ಅಂದೆ.

 ಆಕೆಗೆ ಅದನ್ನೆಲ್ಲಾ ಯೋಚಿಸುವ ವ್ಯವಧಾನವಿರಲಿಲ್ಲ. 

 "ಅದೆಲ್ಲ ನನಗೆ ಗೊತ್ತಿಲ್ಲ ಸರ್. ನೀವು ಫೋಟೊ ತೆಗೆಯಬಾರದು  ಕ್ಯಾಮೆರಾ ಹೊರಗಿಟ್ಟು ಬಿಡಿ" ಅಂದಳು.

 "ಹೊರಗೆ ಅಂದರೆ ಎಲ್ಲಿಡಲಿ. ಒಂದುವರೆ ಲಕ್ಷದ ಕ್ಯಾಮೆರ ಮತ್ತು ಲೆನ್ಸನ್ನು ನಾನು ಹೊರಗೆ ಎಲ್ಲಿಡಲಿ, ಬೇಕಾದರೆ ನೀವು ಇಟ್ಟುಕೊಳ್ಳಿ  ನಾಟಕ ಮುಗಿದ ನಂತರ ನಿಮ್ಮ ಬಳಿಯಿಂದ ನಾನು ವಾಪಸ್ ಪಡೆಯುತ್ತೇನೆ"  ಎಂದೆ.

 ತಕ್ಷಣ ನನ್ನ ಮಾತಿಗೆ ಆಕೆಗೆ ದಿಗಿಲಾಗಿ " ಬೇಡ ಸರ್, ನೀವೇ ಇಟ್ಟುಕೊಳ್ಳಿ. ಆದ್ರೆ ಫೋಟೊ ತೆಗೆಯುವಂತಿಲ್ಲ.  ಅಂತ ಹೇಳಿ  ಆಕೆ ಬೇರೆಯವರನ್ನು ನೋಡಲು ಹೋಗಿಬಿಟ್ಟಳು. ಕೇಳಿದವರಿಗೆ ದೊಡ್ಡ ಜವಾಬ್ದಾರಿಯನ್ನು ಹೊರಿಸಿಬಿಟ್ಟಿರೆ ಅದರಿಂದ ಹೀಗೆ ತಪ್ಪಿಸಿಕೊಂಡು ನಮ್ಮ ಸಹವಾಸಕ್ಕೆ ಬರುವುದಿಲ್ಲವೆಂದುಕೊಂಡು ನಾನು ಮಾಡಿದ ತಂತ್ರ ಕೆಲಸಕ್ಕೆ ಬಂದಿತ್ತು.

 ನಾನು ಇಷ್ಟೆಲ್ಲಾ ಕಷ್ಟಪಟ್ಟು ಆ ನಾಟಕವನ್ನು ನೋಡಲೇಬೇಕು. ಸಾಧ್ಯವಾದರೆ ಫೋಟೊಗ್ರಫಿ ಮಾಡಲೇಬೇಕು ಅಂತ ಇಷ್ಟೆಲ್ಲಾ ಸಾಹಸ ಮಾಡಿದ ನಾಟಕದ ಹೆಸರು. "ಟೇಲ್ ಆಪ್ ಹಾರುಕ್" ’ ಎನ್ನುವ ಕೊರಿಯನ್ ಭಾಷೆಯ ನಾಟಕ.

"ಹಾರುಕನ ಕಥೆ" ನಾನು ನೋಡಿದ ಅತ್ಯುತ್ತಮ ನಾಟಕಗಳಲ್ಲಿ ಒಂದು.  ಭಾರತದಲ್ಲಿಯೇ ಮೊದಲ ಬಾರಿಗೆ ಕೊರಿಯ ದೇಶದ "ಟ್ಯುಡಾ" ನಾಟಕ ತಂಡ ಈ ನಾಟಕವನ್ನು ಪ್ರದರ್ಶಿಸಿತು.

 ಭಾರತದಲ್ಲಿಯೇ ಮೊದಲ ಬಾರಿಗೆ ಇದರ ಪ್ರಯೋಗವಾಗುತ್ತಿದೆಯೆಂದು ನಮ್ಮ ಅವಧಿ ಬ್ಲಾಗಿನಲ್ಲಿ ಪ್ರಕಟವಾದಾಗ ಹೋಗಲೇಬೇಕೆಂದು ದಿನಾಂಕವನ್ನು ಗೊತ್ತುಪಡಿಸಿಕೊಂಡಿದ್ದೆ.

 ಈ ನಾಟಕದ ಕೆಲವು ವಿಶೇಷಗಳು ಇವು.
 
 ಉತ್ತಮ ನಾಟಕ, ಉತ್ತಮ ರಂಗಭೂಮಿಕತೆ, ಕಲೆಗಾಗಿ ೨೦೦೨ರಲ್ಲಿ ಸಿಯೋಲ್‍ನಲ್ಲಿ ಬಹುಮಾನವನ್ನು ಪಡೆದಿತ್ತು. ಅತ್ಯುತ್ತಮ ರಂಗಸಜ್ಜಿಕೆ, ಸ್ಪೂರ್ತಿಯುತ ಬೆಳಕಿನ ವಿನ್ಯಾಸ, ಹೊಸಪ್ರಯೋಗ ವಿಚಾರವಾಗಿ ವಿಮರ್ಶಕರಿಂದ ಪ್ರಶಂಸೆ ಪಡೆದಿದೆ.

 ನಾಟಕ ಬರೆದು ನಿರ್ದೇಶಿಸಿದವರು ಬಾ ಯೆ ಸೂಪ್. ಪ್ರದರ್ಶನ ನೀಡಿದ್ದು ಕೊರಿಯದೇಶದ ಟ್ಯುಡಾ ತಂಡ. ಕೊರಿಯನ್ ಸಾಂಪ್ರದಾಯಿಕ ಶೈಲಿಯಲ್ಲಿ ಕಾಗದದಿಂದ ಮಾಡಿದ ಪಾಪೆಟ್‍ಗಳು[ಗೊಂಬೆಗಳು], ವಿಭಿನ್ನವೆನಿಸುವ ಮುಖವಾಡಗಳು, ಬಳಸಿ ಬಿಸಾಡುವ ಬಾಟಲಿಗಳು, ಕೋಲುಗಳು, ಸೆಲ್ಲೋ ಟೇಪುಗಳು, ಒಡೆದ ಮಡಿಕೆಗಳು, ಕಸದಬುಟ್ಟಿಯಲ್ಲಿನ ಷ್ಟ್ರಾಗಳು, ಪೇಪರುಗಳು...  ಇಂಥ ಪರಿಸರ ಪ್ರೇಮಿವಸ್ತುಗಳನ್ನು ಬಳಸಿಕೊಂಡೇ ತಮ್ಮ ನಾಟಕಕ್ಕೆ ಅತ್ಯುತ್ತಮ ಹಿನ್ನೆಲೆ ಸಂಗೀತವನ್ನು ನೀಡಿದ ಹೆಗ್ಗಳಿಕೆ ಈ ತಂಡದ್ದು. ನಾಟಕವನ್ನು ನೋಡುತ್ತಿದ್ದರೆ ಎಲ್ಲೂ ಅವರು ಇಂಥ ವಸ್ತುಗಳನ್ನು ಬಳಸಿ ಸಂಗೀತ ನೀಡುತ್ತಿದ್ದಾರೆ ಎನ್ನುವ ಭಾವನೇ ಬರದಂತ ಮಟ್ಟಕ್ಕೆ ನಿಮ್ಮನ್ನು ತನ್ಮಯಗೊಳಿಸುವ ಹಿನ್ನೆಲೆ ಸಂಗೀತ ನೀಡುತ್ತಾ ನಾವು ನಾಟಕ ನೋಡುತ್ತಾ ಮೈಮರೆಯುವಂತೆ ಮಾಡುತ್ತಾರೆ.

 ೨೦೦೨ರಲ್ಲಿ ಪ್ರಾರಂಭವಾದ ಈ ನಾಟಕ ಸಿಯೋಲ್ ಮಕ್ಕಳ ರಂಗಮಂದಿರದಲ್ಲಿ ಪ್ರದರ್ಶಿಸಿ ಅತ್ಯುತ್ತಮ ರಂಗಭೂಮಿಪ್ರಯೋಗ ಬಹುಮಾನ ಸೇರಿದಂತೆ ನಾಲ್ಕು ಅವಾರ್ಡುಗಳನ್ನು ತನ್ನ ಮುಡಿಗೇರಿಸಿಕೊಂಡಿತು.  ಮುಂದೆ ಇದೇ ನಾಟಕವನ್ನು ಟ್ಯುಡಾ ತಂಡವು ಜಪಾನ್, ಚೈನ, ಸಿಂಗಪೂರ್, ಟರ್ಕಿ, ಆಷ್ಟ್ರೇಲಿಯ, ರಷ್ಯಾ, ಹಂಗರಿ, ಆಷ್ಟ್ರೀಯ ಮುಂತಾದ ದೇಶಗಳ ಅಹ್ವಾನದ ಮೇರೆಗೆ ಅಲ್ಲೆಲ್ಲಾ ಹೋಗಿ ಪ್ರದರ್ಶಿಸಿತು. ೨೦೦೯ರಲ್ಲಿ ರಷ್ಯಾದ ಕಿಂಗ್ ಪೆಷ್ಟಿವಲ್ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ನಾಟಕ ರಚನೆ ಮತ್ತು ಯುವ ವಿಮರ್ಶ ಬಹುಮಾನವನ್ನು ಒಟ್ಟಿಗೆ ಪಡೆದಿದ್ದು ಈ ತಂಡದ ಹೆಗ್ಗಳಿಕೆಯೇ ಸರಿ.

 
 ಕೊರಿಯಾದ ಈ ಒಂದೇ ಕಥೆ, ನೂರೆಂಟು ಕಥೆಗಳನ್ನು ಹೇಳುತ್ತದೆ..
 ಅದು ಹೀಗಿದೆ-ಒಂದೂರಿನಲ್ಲಿ ಒಬ್ಬ ಮುದುಕ-ಮುದುಕಿ ಬೆಟ್ಟದಲ್ಲಿ ವಾಸಮಾಡುತ್ತಿದ್ದರು.ಅವರಿಗೆ ಮಕ್ಕಳು ಇರಲಿಲ್ಲ.  ಒಂದು ದಿನ ಮಾಂತ್ರಿಕ ಮರವೊಂದು ಅವರಿಗೆ "ಹಾರುಕ್" ಎನ್ನುವ ಪುಟ್ಟ ಮಗುವನ್ನು ನೀಡಿತು. "ಆ ಮಗುವಿಗೆ ಇಬ್ಬನಿಯನ್ನು ಬಿಟ್ಟು ಮಾತ್ರ ಕೊಡಿ. ಬೇರೇನೂ ಕೊಡಬೇಡಿ" ಎಂದು ಆ ಮರ ಎಚ್ಚರಿಕೆಯನ್ನು ಕೊಟ್ಟಿತ್ತು.  ಅಜ್ಜ ಅಜ್ಜಿಗೆ ತುಂಬ ಖುಷಿ.  ಪುಟ್ಟ ಹಾರುಕೆ ಜತೆಗೆ ಸಂತೋಷದಿಂದ ಕಾಲ ಕಳೆದರು. ಹಾರುಕ್ ಬೆಳೆದು ದೊಡ್ಡವನಾದ. ಅದೊಂದು ದಿನ ತನಗೆ ತಿನ್ನಲು ಅನ್ನ ಕೊಡಿ ಎಂದ. ಖೂಷಿಯಿಂದ ಅನ್ನವನ್ನು ಕೊಟ್ಟರು. ಹಾರುಕ್ ತಿನ್ನುತ್ತಾ ಬೆಳೆಯತೊಡಗಿದ. ದೊಡ್ಡದಾಗಿ ಬೆಳೆಯುತ್ತಿದ್ದಂತೆಲ್ಲ, ಕೊನೆಗೆ ಕೈಗೆ ಸಿಕ್ಕಿದ್ದನ್ನೆಲ್ಲ ತಿನ್ನತೊಡಗಿದ.

 ಅಜ್ಜ ಅಜ್ಜಿ ಕೆಲ ದಿನಗಳ ಮಟ್ಟಿಗೆ ಎಲ್ಲೋ ಹೋಗಿದ್ದರು. ಹಾರುಕ್ ಎದುರಿಗೆ ಸಿಕ್ಕಿದ ಮನುಷ್ಯರನ್ನೂ ತಿನ್ನತೊಡಗಿದ. ಏನು ಸಿಗುತ್ತದೋ ಅದನ್ನು ತಿನ್ನುವುದು ಅವನ ಅಭ್ಯಾಸವಾಯಿತು.  ಅಜ್ಜ-ಅಜ್ಜಿ ಬಂದು ನೋಡುತ್ತಾರೆ-ಹಾರುಕ್ ತಿಂದು ತಿಂದು ಬೆಟ್ಟದಂತೆ ಬೆಳೆದಿದ್ದಾನೆ. ಹಸಿವೆ ತಾಳಲಾಗುತ್ತಿಲ್ಲ. ತಿನ್ನಲು ಏನಾದರೂ ಕೊಡಿ ಎಂದು ಕೇಳುತ್ತಿದ್ದಾನೆ! ಕೊನೆಗೆ ಆ ವೃದ್ಧ ದಂಪತಿ ಪ್ರೀತಿಯ ಮಗನಿಗೆ ತಮ್ಮನ್ನೇ ತಾವು ಆಹಾರವಾಗಿಸುತ್ತಾರೆ. 

ಈ ಕೊರಿಯನ್ ಭಾಷೆಯ ನಾಟಕ ನಡೆಯುವಾಗ ಎರಡು ಬದಿಯಲ್ಲಿ ನಾಟಕದ ಮಾತುಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿ ಒಂದು ರೀತಿಯ ಸಬ್‍ಟೈಟಲ್ ರೀತಿ ಪುಟ್ಟ ಕಪ್ಪು ಪರದೆಯ ಮೇಲೆ ಕೊಡುತ್ತಿರುತ್ತಾರೆ. ಅದನ್ನು ನೋಡಿಕೊಂಡು ನಾಟಕವನ್ನು ಅರ್ಥಮಾಡಿಕೊಳ್ಳಬೇಕು.
                      
 ಅತ್ಯುತ್ತಮ ಬೆಳಕಿನ ಸಂಯೋಜನೆ ಈ ನಾಟಕವನ್ನು ಫೋಟೊಗ್ರಫಿ ಮಾಡುವುದು ನಿಶಿದ್ಧ ಅಂತ ವ್ಯವಸ್ಥಾಪಕಿ ಹೇಳಿದ್ದರೂ  ಆ ಕತ್ತಲಲ್ಲಿ ನನ್ನ ಕ್ಯಾಮೆರದಲ್ಲಿ ಕೆಲವು ಸೆಟ್ಟಿಂಗುಗಳನ್ನು ಮಾಡಿಕೊಂಡು ನಿದಾನವಾಗಿ ಇಡೀ ನಾಟಕದ ಚಿತ್ರಗಳನ್ನು ಕ್ಲಿಕ್ಕಿಸಿದ್ದೆ. ನಾಟಕದ ವ್ಯವಸ್ಥಾಪಕರಿರಲಿ,  ನನ್ನ ಅಕ್ಕಪಕ್ಕ ಕುಳಿತವರಿಗೂ ನಾನು ಫೋಟೊ ತೆಗೆಯುತ್ತಿರುವುದು ಗೊತ್ತಾಗಿರಲಿಲ್ಲ. ನಾನು ಬರೆದ ಈ ಚಿತ್ರಸಹಿತ ಲೇಖನ ಮೂರು ವಾರಗಳ ಹಿಂದೆ ಸುಧಾ ವಾರಪತ್ರಿಕೆಯಲ್ಲಿ[ದಿನಾಂಕ:೨೬-೮-೨೦೧೦]ಪ್ರಕಟವಾಗಿತ್ತು. ಅದನ್ನು ಮತ್ತಷ್ಟು ಚಿತ್ರಗಳೊಂದಿಗೆ ಇಲ್ಲಿ ಕೊಡುತ್ತಿದ್ದೇನೆ. ನೋಡಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ. 
      
  ಕೊರಿಯನ್ ಸಾಂಪ್ರದಾಯಿಕ ಶೈಲಿಯಲ್ಲಿ ನಾಟಕ ಪ್ರಾರಂಭ

ಪ್ರಾರಂಭದಲ್ಲಿ  ಬಿಸಾಡುವ ವಸ್ತುಗಳನ್ನು ಉಪಯೋಗಿಸಿ ಹಿನ್ನೆಲೆ ಸಂಗೀತ ಕೊಡುತ್ತೇವೆ ಅನ್ನುವದರ ಪ್ರದರ್ಶನ
                              
                                
     ಒಡೆದ ಅರ್ಧ ಮಡಿಕೆಯಲ್ಲಿ ಹಿನ್ನೆಲೆ ಸಂಗೀತ.
                           
  ಮುಖ್ಯ ಹಿನ್ನೆಲೆ ಸಂಗೀತಕ್ಕೆ  ಖಾಲಿ ಬಾಟಲಿಗಳು, ಸೆಲ್ಲೋ ಟೇಪುಗಳು, ಹರಿದ ಪೇಪರುಗಳು,  ಹಣ್ಣಿನ ಸಿಪ್ಪೆಗಳು,  ಖಾಲಿ ಡಬ್ಬಗಳು, ಇನ್ನೂ ಏನೇನೋ...ಅವುಗಳಿಂದ ಹಿನ್ನೆಲೆ  ಸಂಗೀತ ಕೊಡುತ್ತಿರುವ ಪಾತ್ರಧಾರಿ.
                                              
                               ಒಂದೂರಿನಲ್ಲಿ ಒಂದು ಅಜ್ಜಿ.
           
                            ಆಕೆಯ ಜತೆಗೊಬ್ಬ ಅಜ್ಜ
                       

                        ಇಬ್ಬರೂ..........
                     


              ಹೀಗೆ  ಸಂತೋಷದಿಂದ ಇದ್ದರು.
                                 

     ಅವರಿಗೆ ಮಾಂತ್ರಿಕ ಮರದಿಂದ "ಹಾರುಕ್" ಸಿಕ್ಕಿದ್ದು ಹೀಗೆ.
                             
       ಅದರ ಸಂತೋಷಕ್ಕಾಗಿ ಹೀಗೆ ಮಕ್ಕಳಂತೆ ನಲಿದರು.
                                               
     ಅದರ  ಜೊತೆಗೂಡಿ ಆಡಿದರು.
                                                      
       ಹಾರುಕ್" ಹೀಗೆ ಮಲಗಿರುವಾಗ.......
                                             
     ಅನಿರೀಕ್ಷತವಾಗಿ ದೇಶಾಂತರ ಹೋಗುತ್ತಿರುವ ವಯಸ್ಸಾದ ಅಜ್ಜ ಮತ್ತು ಅಜ್ಜಿ.
                                        

ಹಾರುಕ್ ಬೆಳೆಯುವ ಪರಿಯನ್ನು ನೋಡಿ ಅಚ್ಚರಿಪಡುತ್ತಿರುವ ಸುತ್ತಮುತ್ತಲ ಪರಿಸರಗಳು.
                           
 ಅದು ಬೆಳೆದು ಹೀಗೆ ಹಸಿವಿನಿಂದ ಎಲ್ಲವನ್ನು ತಿಂದು ಹಾಕಿ ಕೊನೆಗೆ ಕಣ್ಣಿಗೆ ಕಂಡ ಮನುಷ್ಯರನ್ನು ಬೇಟೆಯಾಡುತ್ತಿದ್ದುದ್ದು ಹೀಗೆ.
                               
      
ಪರ್ವತ ಗಾತ್ರದಲ್ಲಿ ಬೆಳೆದಿದ್ದ ಹಾರುಕ್‍ಗೆ ಕಣ್ಣಿಗೆ ದೇಶಾಂತರ ಹೋಗಿಬಂದ ಅಜ್ಜ-ಅಜ್ಜಿ ಕಂಡುಬಂದಿದ್ದು ಹೀಗೆ.
                     

   ಕೊನೆಯಲ್ಲ ಹಸಿವನ್ನು ತಡೆಯಲಾಗದೆ ತನ್ನನ್ನು ಬೆಳೆಸಿದ ಅಜ್ಜ-ಅಜ್ಜಿಯನ್ನು ತಿನ್ನಲು ಬಾಯಿ ಹಾಕುತ್ತಿರುವುದು.
                                      

ಕೊನೆಗೆ ಪರ್ವತಗಳಲ್ಲಿ ಒಂದಾಗುತ್ತಿರುವ "ಹಾರುಕ್"
                           

 ಚಿತ್ರಗಳು ಮತ್ತು ಲೇಖನ.
 ಶಿವು.ಕೆ

Tuesday, September 7, 2010

ಆತ ಮತ್ತು ಪರದೆ.



       ಆತ ಹುಲ್ಲಿನ ಮೇಲೆ ಚಿತ್ರ ಬಿಡಿಸುತ್ತಿದ್ದ. ನಂತರ ಅದಕ್ಕೊಂದು ಕವನವನ್ನು ಗೀಚುತ್ತಿದ್ದ. ಮುಗಿಸಿದ ಮೇಲೆ ನೋಡಿದರೆ ಅದು ಯಾರ್‍ಇಗೂ ಕಾಣುತ್ತಿರಲಿಲ್ಲ.  ಕಾಣುತ್ತಿಲ್ಲವಲ್ಲವೆಂದು ಮರದ ಕಾಂಡದ ಮೇಲೆ ಗೀಜಿದ. ಅದು ಕೂಡ ಯಾರಿಗೂ  ಕಾಣಲಿಲ್ಲ. ನೀರಿನ ಬಳಿಗೆ ಓಡಿದ. ನೀರು ಪಾರದರ್ಶಕವಾಗಿ ಕಾಣುತ್ತಿತ್ತಲ್ಲ. ಇದರ ಮೇಲೆ ಬರೆದರೆ, ಚಿತ್ರ ತೆಗೆದರೆ ಕಾಣಬಹುದು ಅಂತ ಅದರ ಮೇಲು ತನ್ಮಯತೆಯಿಂದ ಚಿತ್ರಬಿಡಿಸಿದ.  ಇನ್ನೇನು ಮುಗಿದು ಎಲ್ಲರಿಗೂ ಕಾಣಬೇಕು ಅನ್ನುವಷ್ಟರಲ್ಲಿ ಜೋರಾದ ಗಾಳಿಯೊಂದು ಬೀಸಿ ನೀರಿನ ಮೇಲೆ ಉಂಗುರಾಕಾರದ ಪುಟ್ಟ ಪುಟ್ಟ ಅಲೆಗಳೆದ್ದು ಬೇರೆಯವರು ನೋಡುವ ಮೊದಲೇ ಇಡೀ ಚಿತ್ರವನ್ನು ಕಲಕಿ ಬಿಟ್ಟವು.  ಆದರೂ ಆತ ತನ್ನ ಪ್ರಯತ್ನವನ್ನು ಬಿಡದೆ ಕೈಗೆ ಸಿಕ್ಕವಸ್ತುಗಳ ಮೇಲೆಲ್ಲಾ ಚಿತ್ರ ಬಿಡಿಸುವುದು, ಪದ್ಯ-ಗದ್ಯ ಗೀಜುವುದು ನಡೆದೇ ಇತ್ತು.

       ಹೀಗೆ ಒಂದು ದಿನ ಆತ ತನ್ನ ಕಾಯಕದಲ್ಲಿರುವಾಗ ಒಂದು ಆಯತಾಕಾರದ ಬಿಳಿ ಪರಧೆ ಅವನ ಮುಂದೆ ನಿಂತಿತು.  ನೋಡಲು ಬೆಳ್ಳಂಬೆಳ್ಳಗಿನ ಈ ಪರಧೆಯನ್ನು  ನೋಡಿ ಅವನಿಗೆ ಆಶ್ಚರ್ಯವಾಯಿತು.
   "ನೀನು ಯಾರು?" ಕೇಳಿದ.

"ಕಣ್ಣು ಕಾಣೊಲ್ವ, ನಾನು ಬಿಳಿ ಪರದೆ" ಹೇಳಿತು.

 "ನೀನು ಬಿಳಿಯಾಗಿರುವುದರಿಂದ ಹಾಗೆ ಹೇಳಬಹುದು.  ಆದ್ರೆ ನೀನು ಎಲ್ಲಿಂದ ಬಂದೆ? ನನ್ನ ಬಳಿಯೇಕೆ ಬಂದೆ."
 
"ನೋಡು ಎಲ್ಲಿಂದ ಬಂದೆ, ಹೇಗೆ ಬಂದೆ ಅನ್ನುವ ಕಾರಣ ತಿಳಿದುಕೊಳ್ಳುವುದಕ್ಕಿಂತ ನಾನು ನಿನ್ನ ಬಳಿಗೆ ಬಂದಿರುವ ಕಾರಣವನ್ನು ಹೇಳುತ್ತೇನೆ ಕೇಳು, ನೀನು ಏನೇನೋ ಮಾಡುತ್ತಿದ್ದಿಯಲ್ಲ, ಅದನ್ನೆಲ್ಲ ಹುಲ್ಲು, ಗಿಡ, ಮರ, ನೆಲ ಗಾಳಿ, ನೀರು ಇವೆಲ್ಲದರ ಮೇಲೆ ಮಾಡಿದರೆ ಅದು ನಿನಗೊಬ್ಬನಿಗೆ ಗೊತ್ತಾಗುತ್ತದೆ ವಿನಃ ಬೇರೆ ಹೊರಪ್ರಪಂಚಕ್ಕೆ ಗೊತ್ತಾಗುವುದಿಲ್ಲ.  ಅದರ ಬದಲಾಗಿ ನಾನು ಬಿಳಿಪರದೆಯಾದ ನನ್ನ ಮೇಲೆ ನೀನು ಚಿತ್ರವನ್ನು ರಚಿಸಬಹುದು, ಕತೆ, ಕವಿತೆ ಗೀತೆ,.............ಏನು ಬೇಕಾದರೂ ಬರಿ.  ನೀನು ಬರೆದ ಮರುಕ್ಷಣವೇ ನಾನು ಹಾರಿಹೋಗಿ ಪ್ರಪ್ರಂಚದ ಮೂಲೆ ಮೂಲೆಗೂ ಕ್ಷಣಮಾತ್ರದಲ್ಲಿ ತಲುಪಿ ನಿನ್ನ ಚಿತ್ರಗಳು, ಬರಹಗಳು,.........ಎಲ್ಲವನ್ನು ನಿನ್ನ ಗೆಳೆಯರಿಗೆ, ಗೆಳೆಯರಲ್ಲದವರಿಗೆ, ಗೆಳಯರಾಗಬಯಸುವವರಿಗೆ, ಇನ್ನೂ.............ಅನೇಕರಿಗೆ ತಲುಪಿಸುತ್ತೇನೆ. ಅವರಿಂದ ಸುದ್ಧಿಯನ್ನು ಪ್ರತಿಕ್ರಿಯೆಯನ್ನು ನಿನಗಾಗಿ ನಾನು ಹೊತ್ತು ತರುತ್ತೇನೆ."  


        ಅದರ ಮಾತು ಕೇಳಿ ಅವನಿಗೆ ತಕ್ಷಣ ಏನು ಹೇಳಬೇಕೆಂದು ಗೊತ್ತಾಗಲಿಲ್ಲ. ಆತ ಯೋಚಿಸಿದ. ಹೌದು ನನ್ನ ಭಾವ, ಬರಹ, ಚಿತ್ರಗಳನ್ನು ಹಂಚಿಕೊಳ್ಳಲು ಹೊಸದೇನನ್ನೋ ಹುಡುಕುತ್ತಿದ್ದ ಅವನಿಗೆ ಇದೊಂತರ ಕುತೂಹಲ ಕೆರಳಿಸಿತ್ತು. ಇರಲಿ ನೋಡೋಣವೆಂದು ಮೊದಲು ಪ್ರಯತ್ನಿಸಿದ.  ಅಷ್ಟು ಚೆನ್ನಾಗಿ ಬರಲಿಲ್ಲ.  ಮತ್ತೆ ಮತ್ತೆ ಪ್ರಯತ್ನಿಸಿದಾಗ ಅದು ಕೆಲವೇ ದಿನಗಳಲ್ಲಿ ಅವನ ಹಿಡಿತಕ್ಕೆ ಹದಕ್ಕೆ ಬಂತು. ಶುರುವಾಯಿತಲ್ಲ.   ಮೊದಮೊದಲು ಬೇರೆಯವರು ಗಮನಿಸುತ್ತಿದ್ದಾರೆ ಎನ್ನುವುದಕ್ಕಾಗಿ ಒಂದಷ್ಟು ಚಿತ್ರಗಳನ್ನು ಬಿಡಿಸಿದರೂ, ಅದು ಸ್ವಲ್ಪ ದಿನಗಳಲ್ಲೇ ಬೋರು ಹೊಡೆಯತೊಡಗಿತು.  ಮುಂದೆ ಅವನು ಆ ಪರದೆಯ ಮೂಲಕ ತನ್ನನ್ನು ನೋಡಿಕೊಳ್ಳಲು ಪ್ರಯತ್ನಿಸಿದ.  ಬೇರೆಯವರಿಂದ ಹೊಸತನ್ನು ನಿರೀಕ್ಷಿಸುವ ಆತ ತನ್ನಿಂದಲೂ ಹೊಸತು ಪ್ರತಿಬಾರಿಯೂ ಇರಬೇಕು  ಅದಕ್ಕಾಗಿ ಒಂದಷ್ಟು ಶ್ರಮ, ತಾಳ್ಮೆ, ತುಡಿತ, ಕಾತುರ, ಕುತೂಹಲವನ್ನು  ತನ್ನೊಳಗೆ ಆಳವಡಿಸಿಕೊಂಡ. ಪರಿಣಾಮ ಮುಂದೆ ಬರುವ ಗದ್ಯಗಳು, ಚಿತ್ರಗಳು ಆತನಿಗೆ ಖುಷಿಕೊಡತೊಡಗಿದವು.  ಪರದೆಯ ಮೂಲಕ ಮೂಡಿಸುವ ಪ್ರತಿಯೊಂದು ಕೃತಿಯೂ ಆತನಿಗೆ ಖುಷಿ ಕೊಡುತ್ತಿತ್ತು.  ತಾನು ಮಾಡುವುದು ಮೊದಲು ನನಗೇ ಇಷ್ಟವಾಗದಿದ್ದಲ್ಲಿ ಬೇರೆಯವರಿಗೆ ಹೇಗೆ ಇಷ್ಟವಾಗುತ್ತದೆ, ಎನ್ನುವ ಒಂದೇ ಮಾನದಂಡವನ್ನು ಇಟ್ಟುಕೊಂಡು ತನ್ನ ಕೆಲಸ ಮುಂದುವರಿಸಿದ. ನಿದಾನವಾಗಿ ಎಲ್ಲರೂ ಅವನನ್ನು ಗುರುತಿಸತೊಡಗಿದರು.  ಈತನ ಕೃತಿಗಳು ಪರದೆಯಲ್ಲಿ ಮೂಡಿದ ತಕ್ಷಣ ಯಾವುದೋ ದೇಶದ ಗೆಳೆಯರು ತಕ್ಷಣ ಓಡಿಬಂದು ಅದನ್ನು ಇಷ್ಟಪಟ್ಟು ತಮ್ಮ ಮೆಚ್ಚಿಗೆ ಸೂಚಿಸಿ ಹೋಗುತ್ತಿದ್ದರು.

     ಸಾವಿರಾರು ಮೈಲುಗಳಷ್ಟು ದೂರವಿರುವ ಅವರೇ ಹೀಗೆ ಪರದೆಯಲ್ಲಿ ತಕ್ಷಣಕ್ಕೆ ಕಾಣಿಸಿಕೊಳ್ಳುತ್ತಿದ್ದಾರಲ್ಲ,  ನನಗೂ ಹಾಗೆ ಅವರಂತೆ ಅವರ ಸ್ಥಳಕ್ಕೆ ಹೋಗಿ ಅವರ ಕಲೆ, ಸಾಹಿತ್ಯವನ್ನು ನೋಡಿ, ಓದಿ ಆನಂದಿಸುವ ಸಾಧ್ಯವಾ?  ಅಂದುಕೊಂಡು ಕೊನೆಗೊಂದು ದಿನ ಆ ಪರದೆಯೊಳಗೆ ಕಾಲಿಟ್ಟ. ಅವನು ಒಳಬರುವುದನ್ನೆ ಕಾಯುತ್ತಿದ್ದ ಅದು  ಕೆಲವೇ ಕ್ಷಣಗಳಲ್ಲಿ ಅವನಿಷ್ಟಪಟ್ಟ ಸ್ಥಳಕ್ಕೆ ಅವನನ್ನು ಇಳಿಸಿತು. ಅಷ್ಟೇ ಅಲ್ಲದೇ ಆತ ಬಯಸಿದ ವ್ಯಕ್ತಿಯೊಂದಿಗೆ ಪತ್ರವ್ಯವಹಾರ, ಮಾತುಕತೆ ಇತ್ಯಾದಿಗಳನ್ನು ಖುಷಿಯಿಂದ ನಡೆಸಲು ಅವಕಾಶ ಮಾಡಿಕೊಟ್ಟಿತ್ತು.  ಅಲ್ಲಿನ ಗೆಳೆಯರನ್ನು ಮಾತಾಡಿಸಿಬರುವುದು, ಮೆಚ್ಚುಗೆ ವ್ಯಕ್ತಪಡಿಸುವುದು, ಖುಷಿಪಡುವುದು, ಹೀಗೆ ಎಲ್ಲವೂ ಕ್ಷಣಮಾತ್ರದಲ್ಲಿ ಸಾಧ್ಯವಾಗುತ್ತಿತ್ತು. ನಿಜಕ್ಕೂ ಇದೊಂತರ ಮಾಯಾಪರದೆಯೇ ಸರಿ ಎಂದುಕೊಂಡು ತನ್ನ ಕೆಲಸ ಮುಂದುವರಿಸಿದ.  ಒಂದು ವರ್ಷ ಕಳೆಯುವಷ್ಟರಲ್ಲಿ ಆತ ಬಹು ಜನಪ್ರಿಯನಾಗಿದ್ದ. ಅವನ ಚಿತ್ರಗಳು, ಸಾಹಿತ್ಯಗಳು ಪುಸ್ತಕದ ರೂಪದಲ್ಲಿ ಬಂದವು.  ಎರಡನೇ ವರ್ಷದಲ್ಲಿ ಅವನ ರಚನೆಯ ವೇಗ ಮತ್ತಷ್ಟು ಹೆಚ್ಚಾಯಿತು. ಮುಂದೆ ಆತ ಅದೆಷ್ಟು ವೇಗದಲ್ಲಿದ್ದನೆಂದರೆ ಹಿಂದಿರುಗಿ ಬರಲಾಗದಷ್ಟು ವೇಗವನ್ನು ತಲುಪಿದ್ದ. ಆತನಿಗೆ ಸಾವಿರಾರು ಸಹೃದಯರು, ಗೆಳೆಯರು ಸಿಕ್ಕಿ  ಅವರ ಪ್ರೋತ್ಸಾಹದಿಂದ ಪರದೆಯಲ್ಲಿ ಮೂಡಿದ ಮತ್ತಷ್ಟು ಅಕ್ಷರಗಳು ಎರಡನೇ ಪುಸ್ತಕ ರೂಪದಲ್ಲಿ ಬಂದವು.  ಈ ಸಮಯದಲ್ಲಿ ಆತನೂ ಪರದೆಯೊಳಗೆ ಹಾರಿ ತನ್ನ ಗೆಳೆಯರ ಜೊತೆಗಿನ ಸಂಭ್ರಮದಲ್ಲಿ ಯಾವರೀತಿ ಮೈಮರೆತಿದ್ದನೆಂದರೆ, ಕೊನೆ ಕೊನೆಯಲ್ಲಿ ತನಗೆ ದಾರಿ ತೋರ್‍ಇಕೊಟ್ಟ ಪರದೆಯನ್ನು ಮರೆತುಬಿಟ್ಟಿದ್ದ.   ಎಲ್ಲಾ ಸಂಭ್ರಮ ಮುಗಿಯಿತು.  ಗೆಳೆಯರೆಲ್ಲಾ ಮತ್ತೆ ಅವರವರ ಮನೆಗೆ ಹೋದರು.  

             ಈತ ಪರದೆಯ ಹೊರಗೆ ಬಂದು ಎಂದಿನಂತೆ ತನ್ನ ಕಾಯಕದಲ್ಲಿದ್ದಾಗ ಆತನ ಆರನೇ ಇಂದ್ರಿಯ ಅವನಿಗೆ ಏನೋ ಒಂದು ಸೂಚನೆ ಕೊಡುತ್ತಿತ್ತು. ಆದರೆ ಅದು ಏನು ಅಂತ ಗೊತ್ತಾಗಲಿಲ್ಲ. ಅವನ ಬುದ್ದಿಮಟ್ಟಕ್ಕೆ ಗೊತ್ತಾಗದಿದ್ದರೂ ಆವನ ಮನಸ್ಸಿನಲ್ಲಿ ನಾನೇನು ತಪ್ಪು ಮಾಡಿದ್ದೇನೆ ಎನ್ನುವ ಅಪರಾಧಿ ಮನೋಭಾವನೆ ಕಾಡತೊಡಗಿತು.  ಒಂದು ವಾರ ಕಳೆಯುವಷ್ಟರಲ್ಲಿ  ಅದೇನೆಂದು ಗೊತ್ತಾಗಿಬಿಟ್ಟಿತಲ್ಲ!  "ಛೇ ನಾನು ಇಂಥ ಕೆಲಸವನ್ನು ಮಾಡಬಾರದಾಗಿತ್ತು.  ನನಗೆ ಇಷ್ಟು ಖುಷಿ, ತೃಪ್ತಿಯನ್ನು ಕೊಟ್ಟ ಪರದೆ ನನಗೆ ಸಿಕ್ಕಿ ಆಗಲೇ ಎರಡು ವರ್ಷಗಳು ಕಳೆದುಹೋಗಿ ಮೂರನೇ ವರ್ಷ ಶುರುವಾಗಿಬಿಟ್ಟಿದೆಯಲ್ಲ!  ನಾನು ಅದನ್ನೇ ಮರೆತಿದ್ದೆನೆಂದು ಅರಿವಾಗಿತ್ತು.  ಯಶಸ್ಸಿನ ಅಮಲು ತಲೆಗೇರಿದ್ದು ಗೊತ್ತಾಗಿ ಆತನ ಮೇಲೆ ಆತನಿಗೆ ನಾಚಿಕೆಯಾಗಿತ್ತು.  ದೂರದಿಂದ ಯಾರೋ ಕಪಾಳಕ್ಕೆ ಬಾರಿಸಿದಂತೆ ಆಗಿತ್ತು.  ಮತ್ತೆ ಪರದೆಯ ಬಳಿ ಬಂದು ತನ್ನಿಂದಾದ ತಪ್ಪಿಗಾಗಿ ಕ್ಷಮೆಯನ್ನು ಕೇಳಿದ.  ನಂತರ ಅದರ ಮೂರನೇ ವರ್ಷದ ಹುಟ್ಟುಹಬ್ಬವನ್ನು ಖುಷಿಯಿಂದ ಆಚರಿಸಿದ.  ಇದನ್ನೆಲ್ಲಾ ದೂರದಿಂದ ನೋಡುತ್ತಿದ್ದ ಪರದೆ ಇವನ ಅವಾಂತರಗಳನ್ನು ಕಂಡು ಮುಗ್ದವಾಗಿ ನಗುತ್ತಿತ್ತು.

ಗೆಳೆಯರೆ ಕತೆ ಇಷ್ಟವಾಯಿತಾ!  ಅಂದ ಹಾಗೆ ಇದು ಯಾರದೋ ಕತೆಯಲ್ಲ.  ನನ್ನದೇ ಕತೆ.  ಆತ ನಾನು.  ಪರದೆಯೆನ್ನುವುದು ನನ್ನ ಮೆಚ್ಚಿನ ಛಾಯಾಕನ್ನಡಿ ಬ್ಲಾಗ್ ಪರದೆ.  ಅದಕ್ಕೆ  ಇದೇ ಅಗಷ್ಟ್ ೨೯ಕ್ಕೆ ಎರಡು ವರ್ಷ ತುಂಬಿ ಮೂರನೇ ವರ್ಷಕ್ಕೆ ಕಾಲಿಟ್ಟಿದೆ.  ಎರಡು ತುಂಬಿ ಮೂರನೇ ವರ್ಷಕ್ಕೆ ಹಂಬೆಗಾಲಿಟ್ಟ ಪುಟ್ಟ ಮಗುವಾದರೂ ನನ್ನಲ್ಲಿ ಅದೆಷ್ಟು ಬದಲಾವಣೆಯನ್ನು ತಂದಿದೆಯಲ್ವಾ.... ನನ್ನ ನಿತ್ಯ ಕೆಲಸದಲ್ಲಿ, ಯಶಸ್ಸಿನಲ್ಲಿ ಅದರ ಹುಟ್ಟಿದ ದಿನಾಂಕವನ್ನೇ ಮರೆತುಬಿಟ್ಟಿದ್ದೆನಲ್ಲಾ ಅಂತ ಗೊತ್ತಾಗಿ ನನ್ನ ಮೇಲೆ ನನಗೆ ಬೇಸರವಾಗಿತ್ತು.  ಅದಕ್ಕಾಗಿ ನನ್ನದೊಂದು ಕ್ಷಮಾಪಣೆಯ ರೂಪದಲ್ಲಿ ಈ ಕತೆಯನ್ನು ಬರೆದು ನನ್ನ ಮೆಚ್ಚಿನ, ಮುದ್ದಿನ ಛಾಯಾಕನ್ನಡಿಗಾಗಿ ಮೂರನೇ ವರ್ಷದ ಉಡುಗೊರೆಯನ್ನು ಕೊಡುತ್ತಿದ್ದೇನೆ. ನೀವು ಕೂಡ ಅದನ್ನು  ಹಾರೈಸುತ್ತಾ,  ಪ್ರೋತ್ಸಾಹಿಸುತ್ತೀರಲ್ವಾ?
 
ಪ್ರೀತಿಯಿಂದ...ಶಿವು.ಕೆ ಮತ್ತು ಛಾಯಾಕನ್ನಡಿ.

ಕತೆ ಮತ್ತು ಚಿತ್ರ
ಶಿವು.ಕೆ

Friday, September 3, 2010

ವೆಂಡರ್ಸ್ ಡೆ" ಗಾಗಿ ಆಂಗ್ಲ ಲೇಖನ


ಇವತ್ತು ಸೆಪ್ಟಂಬರ್ ನಾಲ್ಕು. "ವೆಂಡರ್ಸ್ ಡೆ." ಫಾದರ್ಸ್ ಡೇ, ಮದರ್ಸ್ ಡೆ, ಲವರ್ಸ್ ಡೇ, ಲೇಬರ್ಸ್ ಡೇ............ಗಳಿರುವಂತೆ ನಮ್ಮ ದಿನಪತ್ರಿಕೆ ವಿತರಿಸುವ ವೆಂಡರುಗಳಿಗೂ ಒಂದು ದಿನವಿದೆ. ಅದು ವೆಂಡರ್ಸ್ ಡೇ. ಸೆಪ್ಟಂಬರ್ ನಾಲ್ಕು ಅಂದರೆ ಇವತ್ತು ನಮ್ಮ ದಿನ. ನಾನು ಒಬ್ಬ ದಿನಪತ್ರಿಕೆ ವಿತರಕನಾದ್ದರಿಂದ ಇವತ್ತು ನಮ್ಮದಿನವೆಂದು ಹೇಳಿಕೊಳ್ಳಲು ನನಗೂ ಖುಷಿಯಿದೆ.

ಕಳೆದ ವರ್ಷ ಇದೇ ಸೆಪ್ಟಂಬರ್ ನಾಲ್ಕರಂದು ನಮ್ಮ ವೆಂಡರ್ಸ್ ಡೇಗಾಗಿ ನಾನು ಬರೆದ ಲೇಖನ "ಕನ್ನಡ ಪ್ರಭ" ದಿನಪತ್ರಿಕೆಯ ಭಾನುವಾರದ ಸಾಪ್ತಾಹಿಕದ ಮುಖಪುಟಲೇಖನವಾಗಿ ಪ್ರಕಟವಾಗಿತ್ತು. ಅದನ್ನು ಓದಿದ ದಿ ಹಿಂದೂ ದಿನಪತ್ರಿಕೆಯ ಮಾರುಕಟ್ಟೆ ವಿಭಾಗದ ಪ್ರತಿನಿಧಿಯೊಬ್ಬರು ಇಷ್ಟಪಟ್ಟು ಆಂಗ್ಲ ಭಾಷೆ ಅನುವಾದಿಸಿ ದಿ ಹಿಂದೂ ಮುಖ್ಯ ಕಛೇರಿಯಾದ ಚೆನ್ನೆಗೆ ಪ್ರಕಟಣೆಗಾಗಿ ಕಳಿಸಿದ್ದಾರೆ. ನಾನು ಗುಬ್ಬಿ ಎಂಜಲು ಪುಸ್ತಕದ ಬಿಡುಗಡೆ ಕಾರ್ಯಕ್ರಮದ ವಿವರಗಳ ವರದಿಯನ್ನು ಕೊಡಲು ಬೆಂಗಳೂರಿನ ಹಿಂದು ಕಛೇರಿಗೆ  ಹೋದಾಗ ಅದನ್ನು ಬರೆದಿದ್ದು ನಾನೇ ಅಂತ ಗೊತ್ತಾಗಿ ಖುಷಿಯಿಂದ ಅದರ ಪ್ರತಿಯನ್ನು ನನಗೆ ಕೊಟ್ಟಿದ್ದರು. ಅದನ್ನು ಹಾಗೆ ನಿಮಗಾಗಿ ಬ್ಲಾಗಿಗೆ ಹಾಕಿದ್ದೇನೆ.
ಇದನ್ನು ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.


--------------------------------------------------------------------------


To
Dy.Regional General Manager
The Hindu, Chennai.
Date: 7-9-2009

Dear sir,

                Sub: News Papers Venders day

This is the article by city vendor Shivu.k on view of newspapers vendors day and express
His daily morning life in the newspapers distribution business. His article appeared in “Kannada prabha” a express group vernacular daily on sept 6, 2009.

Papers vendors day[September 4th] is being celebrated in USA. This early “morning birds” get up from their deep slumber and leaving behind those dreams, circulate news to the word. Paper vendor shivu.k who has seen these paper boys and grown ups from close quarters and recounts his experiences in the “paper boat”

Trin…Trin…Trin…my mobile rings at 4’0 clock in the morning. Don’t think I got up from my deep sleep. This is the schedule for hundreds of venders including me. I chant first few lines from a melodies song and written to the bed, I remined of my duty, got up and after freshening I call my assistance by this time it is 4-30am.

brown swatter

I wear a khaki tinged brown swatter everyday except during 3 months during summer. I have a belief[Superstition]that I wear this, all the things eill go off smoothly. I have encounter the troubles whenever I have not wore it. By the time I reach the distribution point on my two wheeler, takes another 5 minutes.

I say “Mruthanjaya Mantra” 9 times on my way to the distribution point. Sometimes when my assistance mobiles are switched off there is no place for this mantra. The feeling of over burden of “having to do all the work myself envelops me and recite manthra. This will make invariable to chant more than 9 times. When I reach the spot it is already 4.45 am, I drowned my work “counting the newspapers inserting all the supplements in the main paper” with the help of the assistance or even without them. My friends and their boys will be doing the same work.

Morning Show
 
What ‘guru’ you used to come at 6 0 clock but today you are hear at 5 am. I hear this conversation from behind. ‘What to do, I could not go the “Deccan Hereld” office to pay the advance amount. [you know my difficulties, therefore I came early] To pay advance amount on the previous day at newspapers offices is known as ‘Morning show’ in our terminology.

‘Today nothing as come’ a delivery boy asks. His main job is to assist owner in inserting the supplements and later distribute newspapers. He comes very early to the distribution point. He thinks if gets a chance to insert a flyer’s or pamphlets, he could make additional money. He earns more money by doing this than his salary. Feeling passes through me if I had such boys.

Handbills

Hello come here, take this supplements. You are always after those ‘Hand bills’ someone shouts. He is a person who is in early 50s and has more than 30 years experience in newspaper distribution. The old man quotes saint scholar “Basavana vachanas” or [Sanskrit Language] everyday and it soothes me. This also brings joy, war of words between friends, A’ certificate words and non-veg talks. Hey look there is another person who is always in a hurry. He expects the main dirstributor to be at his “beck and call” His work will not move without shouting hurry and anxiety. There are friends who do their work without uttering a ward, sometimes through their sign language.

The work of the experienced is smooth and uy uncomplicated yet full of smoke too. I do not know how may packs of cigarette they empty, by the time it reaches 7am. Along with this they continouslyu drink tea. One could see the skills of boys in this field included 70 yeart olds.

Flash backs

Every after I entered the wedlock, I used to get at least 10-15 calls of having not received the paper. This is a miserable and no one should come across in their life. My father suffered from a stroke and was treated at Bangalore. He was here for ashort duration of time and had return to my native place adamantly. One day I received a call from my native place in the mid-night where my father is no more. Please some early was the message. I wanted to go to my native place early in the moring, but this newspapers distribution work came in my decision. I was worried whether my boys will turn up early and I was also thinking about my customers who wanted the newspaper early. By the time I completed my work, I was distressed. This is not the story of not only me, but of thousands who are into newspaper and milk distribution.

Return to reality and birthday

One day one of my boys, I came to know that he had distributed sweets on this birthday and was waiting for me. It was 6am and had small tea party together. These beat boys celebrate the birthdays in this way. But a few think a chance to miss work. They send message through some other beat boys. This shoots my BP high.


Bus-Accident

One day a shocking incident happened. A paper boy was it by a bus while crossing a road and died on the spot. We all venders decided to collect the contributions and went to the boy’s house to express our condolence. We have participated in the final rituals. While returning I was filled with a sense of guilt, tears started rolling my eyes. There are examples of beat boys of having bitten by either street or pet dogs they also meet with the accidents and loose or fractured limbs.




Rain-wet foot path

When beat boys don’t turn-up we distribute papers or when there is rain due to cyclone, the footpath become wet or small pool is formed. On such days we keep received calls from readers asking us “Why the paper not delivered, it is 6.30am?

20-20 Cricket

After the work is over, I feel a sigh of relief, try to brush the newspaper, but I don’t find any news interesting. It is all sore news. Compare to our early morning reality, ona footpath, the time goes like a 20-20 cricket match where our work gets over in 2-3 hours after I woke up.


Your’s faithfully


K.N.Vijaya Raghavan,
Sales Executive.

ಚಿತ್ರ: ಶಿವು.ಕೆ
ಲೇಖನ: ಕೆ.ಎನ್. ವಿಜಯರಾಘವನ್. 
 ------------------------------------------------------------------------------------------------------------------------------------

ಇದೊಂದು ವಿಶೇಷ ಸೂಚನೆ:
ಗೆಳೆಯರೆ,

ನಮ್ಮ ತುಂತುರು ಪ್ರಕಾಶನದ ಪುಸ್ತಕಗಳಾದ ಜಲನಯನ, ಗುಬ್ಬಿ ಎಂಜಲು ಮತ್ತು ವೆಂಡರ್ ಕಣ್ಣು ಪುಸ್ತಕಗಳು. ಕರ್ನಾಟಕದಾದ್ಯಂತ ನವಕರ್ನಾಟಕ ಪುಸ್ತಕ ಮಳಿಗೆಗಳು, ಬೆಂಗಳೂರಿನ ಸ್ವಪ್ನ ಬುಕ್ ಹೌಸ್, ಗಾಂಧಿಬಜಾರಿನ ರಸ್ತೆಯಲ್ಲಿರುವ ಅಂಕಿತ ಪುಸ್ತಕ ಮಳಿಗೆ, ಜಯನಗರದ ಕೂಲ್ ಜಾಯಿಂಟ್ ಎದುರು ರಸ್ತೆಯಲ್ಲಿರುವ "ಟೋಟಲ್ ಕನ್ನಡ ಡಾಟ್ ಕಾಂ" ಅಂಗಡಿಯಲ್ಲಿ ದೊರೆಯುತ್ತದೆ.

ಪ್ರೀತಿಯಿಂದ...
ಶಿವು.ಕೆ

ತುಂತುರು ಪ್ರಕಾಶನ