Wednesday, June 24, 2009

"ಕಿರುಬೆರಳಿನಿಂದ ಲಗುವಾಗಿ ಮುಟ್ಟಿದೆ. ತಟ್ಟನೇ ಒಂದು ಕ್ಷಣ ಅಲುಗಾಡಿತು".


"ಅಯ್ಯೋ ಇವನ್ನು ಮೊದಲು ತೆಗೆದುಕೊಂಡು ಹೋಗು ಶಿವು...ಸುಮ್ಮನೆ ನಂದಿಬಟ್ಟಲು ಗಿಡದ ಎಲೆಗಳನ್ನು ತಿಂದು ಇಡೀ ಮರವನ್ನೇ ಬೋಳು ಮಾಡಿಬಿಡ್ತವೆ" ಅಂತ ಗೆಳತಿ ಸುನಿತಾ ಮತ್ತೊಮ್ಮೆ ಹೇಳಿದಾಗ ನನಗೆ ನಗು ಬಂತು.

ಪಾಪ ! ಅವಳಿಗೇನು ಗೊತ್ತು ? ಈ ಹುಳುಗಳಿಗೆ ನಂದಿಬಟ್ಟಲು ಗಿಡದ ಎಲೆಗಳೇ ಆಹಾರವೆಂದು..

"ಶಿವು ಅನ್ನೋ ಛಾಯಾಗ್ರಾಹಕನೇ ಎಲ್ಲಿದ್ದಿಯೋ...ನೀನು ಇವತ್ತೇ ನಮ್ಮನೆಗೆ ಬರಬೇಕು. ಇಲ್ಲಿ ನನಗೆ ನಂದಿಬಟ್ಟಲು ಗಿಡದ ಎಲೆಗಳನ್ನೆಲ್ಲಾ ಬಕಾಸುರರಂತೆ ತಿಂದು ಮುಗಿಸುವ ಹುಳುಗಳು, ಅವುಗಳನ್ನು ಬೇಟೆಯಾಡಲು ನಮ್ಮೆ ಮನೆಯ ಟೆರಸ್ ಮೇಲೆ ಗುಂಪು ಗೂಡಿರುವ ಕಾಗೆಗಳ ಕಾಟ ನಮಗಂತು ಸಹಿಸಲಾಗುತ್ತಿಲ್ಲ. ಬೇಗ ಬಂದು ಇವುಗಳಿಗೆ ಒಂದು ಗತಿ ಕಾಣಿಸು. ನೀನು ಇವತ್ತು ಬರದಿದ್ದಲ್ಲಿ ನಾನೇ ನಿನಗೊಂದು ಗತಿ ಕಾಣಿಸುತ್ತೀನಿ" ಅಂತ ಸುನೀತಾ ಒಂದೇ ಸಮನೆ ಫೋನಿನಲ್ಲಿ ಬಡಬಡಿಸಿದಾಗ ಇರುವ ಕೆಲಸವನ್ನೇಲ್ಲಾ ಬಿಟ್ಟು ಅವಳ ಮನೆಗೆ ಹೋಗಿದ್ದೆ.


ನಂದಿಬಟ್ಟಲು ಗಿಡದ ಕಾಂಡ ಮತ್ತು ಎಲೆಗಳು


ಇಷ್ಟಕ್ಕೂ ಈ ಮೊದಲು ಅವಳ ಮನೆಗೆ ಹೋಗಿದ್ದಾಗ ಅವಳ ಮನೆಯ ಕಾಂಪೌಂಡಿನೊಳಗಿದ್ದ ನಂದಿಬಟ್ಟಲು ಗಿಡ, ಅದರ ಎಲೆಗಳು, ಒಲಿಯಾಂಡರ್ ಹಾಕ್ ಮಾತ್ ಎನ್ನುವ ಪತಂಗ ರಾತ್ರಿ ಸಮಯದಲ್ಲಿ ಆ ಗಿಡದ ಎಲೆಗಳ ಮೇಲೆ ಕೂತು ಮೊಟ್ಟೆ ಇಡುವುದು, ಜೋಳದ ಕಾಳಿನ ಗಾತ್ರದ ಮೊಟ್ಟೆಯಿಂದ ಹುಳು ಹೊರಬಂದು ಅದೇ ಎಲೆಯನ್ನು ತಿನ್ನುವುದು, ನಂತರ ಅದು ತೋರುಬೆರಳು ಗಾತ್ರದ ಹುಳುವಾಗಿ ಬೆಳೆಯುವ ವಿಚಾರವನ್ನೆಲ್ಲಾ ಅವಳಿಗೆ ಉಪನ್ಯಾಸ ಕೊಟ್ಟು ಬಂದಿದ್ದೆ. ಆಗ ನಾನು ಹೇಳಿದ್ದನ್ನೆಲ್ಲಾ ನಂಬಿದ್ದಳು. ಈಗ ಅವುಗಳ ಕಾಟ ತಡೆಯಲಾಗದೆ ನನ್ನನ್ನು ತರಾಟೆಗೆ ತೆಗೆದುಕೊಂಡಿದ್ದಳು.

ಮರುದಿನ ಪ್ರಾರಂಭವಾಯಿತು ನನ್ನ ಮನೆಯಲ್ಲಿ ಅದರ ಲಾಲನೆ ಪಾಲನೆ. ಒಂದು ಹೂ ಕುಂಡದಲ್ಲಿ ಏಳೆಂಟು ಎಲೆಗಳಿರುವ ನಂದಿಬಟ್ಟಲು ಗಿಡದ ಕಾಂಡವನ್ನು ಇಟ್ಟು ಅದರ ಎಲೆಗಳ ಮೇಲೆ ಈ ಹುಳುವನ್ನು ಬಿಟ್ಟೆ. ಸ್ವಲ್ಪ ಸಮಯದ ನಂತರ ಹುಳು ಎಲೆಯನ್ನು ತಿನ್ನತೊಡಗಿತು. ಒಂದು ತಾಸಿಗೆ ಒಂದು ಎಲೆಯನ್ನು ಹಾಕಿತು. ಜೊತೆಗೆ ಹಿಕ್ಕೆ ಹಾಕುವುದು, ಹೀಗೆ ಮೊದಲನೇ ದಿನವೇ ಐದಾರು ಎಲೆಗಳನ್ನು ತಿಂದು ಮುಗಿಸಿತ್ತು. ಓಹ್ ಇದು ಬೇರೆ ಚಿಟ್ಟೆಗಳಂತಲ್ಲ ಇದಂತೂ ಬಕಾಸುರ ವಂಶಕ್ಕೆ ಸೇರಿದಂತೆ ಕಾಣುತ್ತೆ...ಇದನ್ನು ಸಂಭಾಳಿಸುವುದು ಚಿಟ್ಟೆಗಳಷ್ಟು ಸುಲಭವಲ್ಲ ಅಂದುಕೊಂಡು ಪ್ರತೀದಿನ ಆರು ಕಿಲೋ ಮೀಟರ್ ದೂರದಲ್ಲಿರುವ ಗೆಳತಿ ಸುನಿತಾ ಮನೆಗೆ ಹೋಗಿ ನಂದಿಬಟ್ಟಲು ಗಿಡದ ಹತ್ತಾರು ಎಲೆಗಳು ತುಂಬಿದ ಕಾಂಡವನ್ನು ತರುವ ಕಾಯಕ ನನ್ನದಾಯಿತು.

ಒಲಿಯಾಂಡರ್ ಹಾಕ್ ಪತಂಗದ ಹುಳು [ oleander hawk moth caterpillar] ಇದರ ತಲೆ ಮತ್ತು ಬುಡ ಎಲ್ಲಿ ಅಂತ ಗೊತ್ತಾಗುತ್ತಿಲ್ಲ ಅಲ್ಲವೇ..!


ಹೀಗೆ ಒಂದು ವಾರದ ನಂತರ ಅದರ ಆಕಾರ ಮತ್ತು ವರ್ತನೆಯಲ್ಲಿ ಬದಲಾವಣೆಯುಂಟಾಯಿತು. ತೋರುಬೆರಳ ಗಾತ್ರದ ಹುಳು ಎಲೆ ತಿನ್ನುವುದನ್ನು ನಿಲ್ಲಿಸಿತ್ತು. ಅದಕ್ಕೂ ಮೊದಲು ತನ್ನ ದೇಹದ ಹೊರಪದರವನ್ನು ಹಾವಿನಂತೆ ಕಳಚಿ ಸಣ್ಣದಾಗಿತ್ತು. ನಾನು ಅದನ್ನೇ ಗಮನಿಸತೊಡಗಿದೆ. ಎಲೆ, ಕಾಂಡ, ಹೂಕುಂಡ ಎಲ್ಲಾ ಕಡೆ ಹರಿದಾಡತೊಡಗಿತು. ಬಹುಶಃ ತನ್ನ ಆಕಾರ ಬದಲಿಸಿ ಪ್ಯೂಪ ಆಗಲು, ಅದಕ್ಕಾಗಿ ಸುರಕ್ಷಿತ ಸ್ಥಳದ ಪರಿಶೀಲನೆಗಾಗಿ ಈ ಪರಿಯ ಗಡಿಬಿಡಿಯಿರಬಹುದೆಂದುಕೊಂಡೆ.

ಎಂದಿನಂತೆ ಮುಂಜಾನೆ ನಾನು ಬೆಳಿಗ್ಗೆ ದಿನಪತ್ರಿಕೆಯ ಕೆಲಸದಲ್ಲಿರುವಾಗ ನನ್ನಾಕೆ ಫೋನ್ ಮಾಡಿ "ಬೇಗ ಮನೆಗೆ ಬನ್ನಿ" ಎಂದಳು

"ಏನ್ ಸಮಾಚಾರ" ಕೇಳಿದೆ.

"ಬನ್ನಿ ಹೇಳ್ತೀನಿ"...ಅಂದಳು. ನಾನು ಎಂಟು ಗಂಟೆಯ ಹೊತ್ತಿಗೆಲ್ಲಾ ಮನೆಗೆ ಹೋದೆ.

"ಮೊದಲು ಈ ಹುಳುವನ್ನು ಎತ್ತಿ ಬಿಸಾಕಿ.....ನನಗಂತೂ ಅದರ ಕಾಟ ತಡೆಯೋಕಾಗೊಲ್ಲ...ಬೆಳಿಗ್ಗೆ ಆರು ಗಂಟೆಗೆ ಎದ್ದಾಗ ನಾನು ಹೊದ್ದಿದ್ದ ಕಂಬಳಿ ಮೇಲೆ ಮಲಗಿತ್ತು. ನಾನು ಕಣ್ಣು ಬಿಟ್ಟು ನೋಡಿದ ತಕ್ಷಣ ಭಯದಿಂದ ದಿಗಿಲಾಗಿ ಜೋರಾಗಿ ಕಂಬಳಿ ಕೊಡವಿ ಮಲಗಿಬಿಟ್ಟೆ. ಮತ್ತೆ ಈಗ ಎದ್ದು ಮನೆ ಕಸ ಗುಡಿಸಲು ಬಾಗಿಲ ಕಾರ್ಪೆಟ್ ತೆಗೆಯುತ್ತೇನೆ ಸುರುಳಿ ಸುತ್ತಿಕೊಂಡು ಮಲಗಿದೆ. ಕಾರ್ಪೆಟ್ ತೆಗೆದೆ. ಪಣ್ಣನೇ ನೆಗೆದು ಮತ್ತೆ ಸುರುಳಿ ಸುತ್ತಿಕೊಂಡಾಗ ನನಗಂತೂ ಸಿಕ್ಕಾಪಟ್ಟೆ ದಿಗಿಲಾಗಿಬಿಟ್ಟಿತು" ಅಂದಳು.

ನಾನು ಅವಳಿಗೆ ಸಮಾಧಾನ ಹೇಳಿ ಅದನ್ನು ಸಣ್ಣ ಕಡ್ಡಿಯಿಂದ ಮುಟ್ಟಿದೆ. ಪಣ್ ಎಂದು ನೆಗೆದು ಮತ್ತೆ ಸುರುಳಿ ಸುತ್ತಿಕೊಂಡಿತ್ತು. ತಿಳಿಹಸಿರು ಬಣ್ಣದಿಂದ ಕಂದು ಬಣ್ಣಕ್ಕೆ ತಿರುಗಿತ್ತು. ಹಾಗೆ ಅದರ ಸ್ಥಳವೂ ಬದಲಾಗಿತ್ತು.

ಓಹ್ ! ಇದು ರಾತ್ರೋ ರಾತ್ರಿ ಟಿ.ವಿ. ಸ್ಟ್ಯಾಂಡ್ ಮೇಲಿಟ್ಟಿದ್ದ ಹೂಕುಂಡದಿಂದ ಕೆಳಮುಖವಾಗಿ ಟಿ.ವಿ, ಡಿವಿಡಿ ಪ್ಲೆಯರ್, ಟೇಪರೆಕಾರ್ಡರ್, ಮೇಲೆಲ್ಲಾ ನಿದಾನವಾಗಿ ತೆವಳಿಕೊಂಡು ನೆಲದ ಮೇಲೆ ಸಾಗಿ ನಮ್ಮ ಬೆಡ್ ರೂಂ ಸೇರಿಕೊಂಡುಬಿಟ್ಟಿದೆ. ನನ್ನಾಕೆ ಹೆದರಿ ಬ್ಲಾಂಕೆಟ್ ಕೊಡವಿದಾಗ ಹಾಗೆ ನೆಲದ ಮೇಲೆ ತೆವಳಿಕೊಂಡು ಮುಂಬಾಗಿಲ ಕಾರ್ಪೇಟ್ ಕೆಳಗೆ ಸೇರಿಕೊಂಡುಬಿಟ್ಟಿದೆ.


ಮುಂದಿನ ಸ್ಥಿತಿಗತಿ ತಿಳಿಯಲು ಪುಸ್ತಕದ ಮೊರೆ ಹೋದೆ. ಈ ಹುಳು ಪ್ಯೂಪ ಆಗಲು ಭೂಮಿಯ ಮಣ್ಣಿನಲ್ಲಿ ಸೇರಿಕೊಳ್ಳುತ್ತದೆ ಎನ್ನುವ ವಿಷಯ ತಿಳಿಯಿತು. ಕೊನೆಗೆ ಹೊರಗಿನಿಂದ ಮರಳು ಮಿಶ್ರಿತ ಮಣ್ಣನ್ನು ತಂದು ಒಂದು ಪಾದರಕ್ಷೆ ಬಾಕ್ಸ್‌ನಲ್ಲಿ ಅರ್ಧ ತುಂಬಿ ಅದರೊಳಗೆ ಈ ಹುಳುವನ್ನು ಬಿಟ್ಟೆ. ಈ ಹಂತದಲ್ಲಿ ಒಂದು ಸಣ್ಣ ಕಡ್ಡಿಯನ್ನು ಮುಟ್ಟಿದರೂ ಪಣ್ ಅಂತ ನೆಗೆಯುತ್ತಿದ್ದ ಹುಳು ಮಣ್ಣು ತುಂಬಿದ ಬಾಕ್ಸಿನೊಳಗೆ ಬಿಟ್ಟಾಗ ಸುಮ್ಮನಾಯಿತು.

ಹತ್ತನೇ ದಿನ ಹುಳು ಆಗಲೇ ಬಾದಮಿ ಬಣ್ಣದ ಪ್ಯೂಪ ರಚಿಸಿಕೊಂಡಿದೆ. ಮತ್ತೆ ಮೇಲ್ಪದರದಲ್ಲಿ ಜೇಡರಬಲೆಯಂತೆ ಜಾಲರಿಯನ್ನು ರಕ್ಷಣ ಕೋಟೆಯಂತೆ ರಚಿಸಿಕೊಂಡಿದೆ. ಅಲ್ಲಿಗೆ ಇನ್ನು ಮುಂದೆ ಪತಂಗವಾಗಿ ಹೊರಬಂದಾಗ ಫೋಟೋ ತೆಗೆಯುವುದಷ್ಟೇ ನನ್ನ ಕೆಲಸ ಅಂದುಕೊಂಡು ಸುಮ್ಮನಾದೆ.

ಇದುವರೆಗೂ ಅದರ ಕಾಟ ತಡೆಯಲಾರದೇ ಗೊಣಗುತ್ತಿದ್ದ ನನ್ನಾಕೆ ಅದು ಪ್ಯೂಪ ಆದ ನಂತರ [ನನ್ನನ್ನೂ ಮತ್ತು ಹುಳುವನ್ನು ಚೆನ್ನಾಗಿ ಬೈದುಕೊಂಡು]ನಿಟ್ಟುಸಿರುಬಿಟ್ಟಳು.

ಈ ಮದ್ಯೆ ಗೆಳೆಯ ಮಲ್ಲಿಕಾರ್ಜುನ್ "ಎಲ್ಲಾದರೂ ಪ್ರವಾಸ ಹೋಗೋಣವೇ" ಕೇಳಿದರು. ಒಂದು ವಾರದ ನಂತರ ಇಬ್ಬರೂ ಚಿತ್ರದುರ್ಗಕ್ಕೆ ಹೊರಟೆವು.

ಹೊರಡುವ ಹಿಂದಿನ ದಿನ ಬಾದಾಮಿ ಬಣ್ಣಕ್ಕೆ ತಿರುಗಿದ್ದ ಈ ಪ್ಯೂಪ ನೆನಪಾಯಿತು. ಅದನ್ನು ಹೇಗೆ ಬಿಟ್ಟು ಹೋಗುವುದು ? ಬಿಟ್ಟು ಹೋದ ಮೇಲೆ ಅದು ಪತಂಗವಾಗಿ ಹೊರಬಂದುಬಿಟ್ಟರೆ ಅದರ ಫೋಟೋ ತೆಗೆಯುವ ಅವಕಾಶ ತಪ್ಪಿಹೋಗುತ್ತದಲ್ಲ.! ಕೊನೆಗೆ ನಮ್ಮ ಲಗ್ಗೇಜುಗಳ ಜೊತೆಗೆ ಪ್ಯೂಪ ಇರುವ ಪಾದರಕ್ಷೆ ಬಾಕ್ಸನ್ನು ತೆಗೆದುಕೊಂಡು ಹೊರಟೆವು.


ಪತಂಗ ಹೊರಬರುವ ಮೊದಲು ಮಣ್ಣಿನ ಬಣ್ಣದ ಪ್ಯೂಪ ಕಿರುಬೆರಳಷ್ಟು ದಪ್ಪವಿತ್ತು.


ಚಿತ್ರದುರ್ಗದ ಕೋಟೆಯ ಫೋಟೊಗ್ರಫಿಗಾಗಿ ಎರಡು ದಿನವಿದ್ದೆವು. ಅಲ್ಲಿದ್ದ ಪ್ರತಿ ಗಂಟೆಗೊಮ್ಮೆ ಬಾಕ್ಸ್ ತೆಗೆದು ಪತಂಗ ಡೆಲಿವರಿ ಆಗಿದೆಯಾ ಅಂತ ನೋಡುವುದು ಮತ್ತು ಮುಚ್ಚುವುದು ನಡೆದಿತ್ತು. ಆದ್ರೆ ಕೋಟೆಯ ಮೇಲೆ ಡೆಲಿವರಿ ಅದಕ್ಕೇ ಇಷ್ಟವಿರಲಿಲ್ಲವೆನಿಸುತ್ತೆ. ಹೇಗೆ ತೆಗೆದುಕೊಂಡು ಹೋಗಿದ್ದೆವೋ ಹಾಗೆ ವಾಪಸ್ಸು ಬಾಕ್ಸ್ ತೆಗೆದುಕೊಂಡು ಬಂದೆವು. ನಮ್ಮ ಜೊತೆ ಪ್ಯೂಪ ಕೂಡ ೪೫೦ ಕಿ.ಮಿ. ದೂರ ಪ್ರಯಾಣ ನಡೆಸಿದಂತಾಗಿತ್ತು.

ಈ ಘಟನೆಗಳು ನಡೆದ ಮತ್ತೊಂದು ವಾರಕ್ಕೆ ನಾನು ಮತ್ತು ನನ್ನ ಶ್ರೀಮತಿ ಈ ಮೊದಲೇ ಮುಂಗಡ ಕಾದಿರಿಸಿದ್ದ ಗೋವಾಗೆ ಹೊರಡುವ ಸಮಯ ಬಂತು. ಈ ಒಂದು ವಾರದಲ್ಲಿ ಪ್ಯೂಪದಿಂದ ಪತಂಗ ಹೊರಬರಲೇ ಇಲ್ಲ. ಆದರೆ ನಿದಾನವಾಗಿ ಅದರ ಬಣ್ಣ ಮಣ್ಣಿನ ಬಣ್ಣಕ್ಕೆ ತಿರುಗಿತ್ತು. ಪ್ಯೂಪದೊಳಗೆ ಹುಳು ಬದುಕಿದೆಯೋ ಅಥವ ಸತ್ತುಹೋಗಿದೆಯೋ, ಇಲ್ಲಾ ಪತಂಗವಾಗಿ ಅದರ ದೇಹ ಬೆಳೆಯುತ್ತಿದೆಯೋ ಅನ್ನುವ ಅನುಮಾನ ಶುರುವಾಗಿ ನನ್ನ ಕಿರುಬೆರಳಿನಿಂದ ಲಗುವಾಗಿ ಮುಟ್ಟಿದೆ. ತಟ್ಟನೇ ಒಂದು ಕ್ಷಣ ಅಲುಗಾಡಿತು. ಆ ಕ್ಷಣ ನನಗೂ ಬೆಚ್ಚಿದಂತಾಗಿತ್ತು. ಬಹುಶಃ ಹೊರಗಿನ ಆಕ್ರಮಣವನ್ನು ತಪ್ಪಿಸಿಕೊಳ್ಳಲು ಈ ರೀತಿ ನಡೆದುಕೊಳ್ಳುತ್ತಿರಬಹುದು ಅನ್ನಿಸಿತು.

ಅಂದು ಹುಳು ಪ್ಯೂಪವಾಗಿ ಹದಿನೆಂಟನೇ ದಿನ. ನಾವು ಗೋವಾಗೆ ಹೋಗುವ ದಿನವೂ ಅದೇ ಆಗಿತ್ತು. ಕೊನೇ ಪ್ರಯತ್ನ ನಡೆದೇ ತೀರಲಿ ಎಂದು ಸಂಜೆ ಗೋವಾಗೆ ಹೊರಡುವ ರೈಲಿನಲ್ಲಿ ಈ ಪ್ಯೂಪ ಬಾಕ್ಸನ್ನು ಜೊತೆಯಲ್ಲಿರಿಸಿಕೊಂಡೆವು.

ಪ್ಯೂಪದಿಂದ ಹೊರಬಂದ ಪರಿಪೂರ್ಣ ಬೆಳವಣಿಗೆ ಹೊಂದಿದ ಒಲಿಯಾಂಡರ್ ಹಾಕ್ ಮಾತ್[oliender hawk moth]


ಬೆಳಿಗ್ಗೆ ಐದು ಗಂಟೆಗೆ ಮಡ್‍ಗಾಂ ನಿಲ್ದಾಣದಲ್ಲಿ ರೈಲು ನಿಂತಾಗ ಬಾಕ್ಸ್ ತೆಗೆದು ನೋಡಿದೆ...... ಆಶ್ಚರ್ಯ !! ಹಸಿರು ಬಣ್ಣದ ಒಂದೆರಡು ದಪ್ಪ ಪಟ್ಟೆಗಳನ್ನು ಹೊಂದಿರುವ ಹೋಲಿಯೆಂಡರ್ ಹಾಕ್ ಮಾತ್ ಎನ್ನುವ ಪತಂಗ ಪ್ಯೂಪದಿಂದ ಹೊರಬಂದಿದೆ. ಬಿಟ್ಟ ಕಣ್ಣುಗಳಿಂದ ನನ್ನನೇ ನೋಡುತ್ತಿದೆ.॒! ತಕ್ಷಣವೇ ಬಾಕ್ಸ್ ಮುಚ್ಚಿಬಿಟ್ಟೆ, ಅದು ಹಾರಿಹೋಗಿಬಿಡಬಹುದು ಅಂತ. ಅಮೇಲೆ ಅನ್ನಿಸಿತು ಅದಕ್ಕೆ ಕಣ್ಣು ಕಾಣಿಸುವುದಿಲ್ಲವಾದ್ದರಿಂದ ಹಗಲು ಹೊತ್ತಿನಲ್ಲಿ ಹಾರಾಡುವುದಿಲ್ಲವೆಂದು ಪುಸ್ತಕದಲ್ಲಿ ಓದಿದ್ದ ನೆನಪಾಯಿತು.

ಪತಂಗ ಹೊರಬಂದ ನಂತರ ಪ್ಯೂಪದ ಪರಿಸ್ಥಿತಿ...!


ನಮ್ಮ ಲಗ್ಗೇಜುಗಳ ಜೊತೆ ಪತಂಗದ ಬಾಕ್ಸನ್ನು ಹೊತ್ತು ನಾವು ತಲುಪಬೇಕಿದ್ದ ಕಲಂಗುಟ್ ಪಟ್ಟಣದ ಬಾಗ ಬೀಚ್ ಬಳಿಯಿದ್ದ ಸನ್ ವಿಲೇಜ್ ರೆಸಾರ್ಟ್ ತಲುಪುವ ಹೊತ್ತಿಗೆ ಬೆಳಗಿನ ಹತ್ತುಗಂಟೆ. ದಾರಿ ಮದ್ಯೆ ಸಿಗುವ ಹೊಲದ ಬಯಲಿನ ಫೊದೆಯೊಂದರಲ್ಲಿ ಬಿಡಬೇಕೆಂದು ತೀರ್ಮಾನಿಸಿದ್ದೆವು. ಇದಕ್ಕೆ ಕಣ್ಣು ಕಾಣುವುದಿಲ್ಲವಾದ್ದರಿಂದ ಹೊರಗೆ ಬಯಲಿನಲ್ಲಿ ಬಿಟ್ಟರೆ ಕಾಗೆ ಇನ್ನಿತರ ಪಕ್ಷಿಗಳಿಗೆ ಆಹಾರವಾಗುವುದು ಖಚಿತವೆಂದು ಪೊದೆಯೊಳಗೆ ಬಿಟ್ಟೆವು.


ನೋಡಲು ಕಣ್ಣು ತೆರೆದಂತೆ ಕಾಣುವ ರೀತಿ ರಚನೆಯಾಗಿರುವುದು ಇತರ ಅಕ್ರಮಣಕಾರಿ ವೈರಿಗಳಿಗೆ ಏಮಾರಿಸಲು ಆ ರೀತಿ ರಚನೆಯಾಗಿತ್ತದೆ. ಮತ್ತು ಅದೇ ಕಾರಣಕ್ಕೆ ಹಗಲು ಹೊತ್ತಿನಲ್ಲಿ ಕೂತಲ್ಲೇ ಕುಳಿತಿರುತ್ತದೆ. ಪತಂಗಕ್ಕೂ ಚಿಟ್ಟೆಗೂ ಏನು ವ್ಯತ್ಯಾಸವೆಂದರೆ ಚಿಟ್ಟೆಯ ರೆಕ್ಕೆಗಳು ದೊಡ್ಡದಾಗಿರುತ್ತವೆ ದೇಹ ಚಿಕ್ಕದಾಗಿರುತ್ತದೆ..ಆದ್ರೆ ಪತಂಗಕ್ಕೆ ದೇಹ ದೊಡ್ಡದಾಗಿದ್ದು ರೆಕ್ಕೆಗಳು ಗಾತ್ರದಲ್ಲಿ ಚಿಕ್ಕದಾಗಿರುತ್ತವೆ. ಚಿಟ್ಟೆಗಳು ಹಗಲಿನಲ್ಲಿ ಹಾರಾಟ ನಡೆಸಿದರೆ, ಪತಂಗಗಳು ರಾತ್ರಿ ಸಮಯದಲ್ಲಿ ಹಾರಾಡುತ್ತವೆ. ಚಿಟ್ಟೆಗಳಷ್ಟು ಆಕರ್ಷಕ ಬಣ್ಣಗಳನ್ನು ಪತಂಗಗಳು ಹೊಂದಿರುವುದಿಲ್ಲವಾದ್ದರಿಂದ ಚಿಟ್ಟೆಯಷ್ಟು ಸುಂದರವಾಗಿರುವುದಿಲ್ಲ.


ನಂತರ ನನಗೆ ಬೇಕಾದ ಹಾಗೆ ಅದರ ಫೋಟೋಗಳನ್ನು ಕ್ಲಿಕ್ಕಿಸಿ ರೆಸಾರ್ಟ್ ಕಡೆಗೆ ಹೆಜ್ಜೆ ಹಾಕುವಾಗ ನಮ್ಮ ಮನಸ್ಸು ಏನೋ ಕಳೆದುಕೊಂಡಂತೆ ಅನಿಸಿತ್ತು. ಆದರೇನು ಮಾಡುವುದು ಅದಕ್ಕೂ ಸ್ವತಂತ್ರವಾಗಿ ಬದುಕುವ ಹಕ್ಕಿದೆಯಲ್ಲವೇ? ಸರಿ ಸುಮಾರು ಹತ್ತು ದಿನ ಹುಳುವಾಗಿ, ಪ್ಯೂಪವಾಗಿ ಹದಿನೆಂಟು ದಿನ ನಮ್ಮ ಜೊತೆ ಇದ್ದು ಗೋವದಲ್ಲಿ ತನ್ನ ಬದುಕನ್ನು ಹರಸ ಹೊರಟ ಪತಂಗಕ್ಕೆ ಹಾಗೂ ಇಂಥ ಅಧ್ಬುತ ಸೃಷ್ಠಿ ವೈವಿಧ್ಯವನ್ನು ನೋಡುವ ಆನಂದಿಸುವ ಅವಕಾಶ ಕಲ್ಪಿಸಿದ ಪ್ರಕೃತಿ ಮಾತೆಗೆ ನಮಸ್ಕರಿಸಿ ಮುನ್ನಡೆದಾಗ ರೆಸಾರ್ಟ್ ತಲುಪಿಯಾಗಿತ್ತು.


[ಪ್ಯೂಪವಾಗುವ ಮೊದಲು ಕಂದುಬಣ್ಣವಾಗಿದ್ದ ಚಿತ್ರ, ಪ್ಯೂಪವಾದ ನಂತರ ಬಾದಾಮಿ ಬಣ್ಣ ಪಡೆದುಕೊಂಡಿದ್ದು, ಮರಳಿಗೆ ಬಿಟ್ಟ ಮೇಲೆ ತನ್ನ ದೇಹದ ಮೇಲೆ ಸೂರಿನಂತೆ ಒಂದು ರಕ್ಷಣ ಜಾಲರಿಯನ್ನು ಕಟ್ಟಿಕೊಂಡಿದ್ದ ಚಿತ್ರಗಳು ನನ್ನಿಂದ ತಪ್ಪಿಸಿಕೊಂಡಿರುವುದರಿಂದ ವಿಷಾದಿಸುತ್ತೇನೆ...]



----------------------- ೦ -------------------



ಮತ್ತೊಂದು ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ..ನನ್ನ "ಛಾಯಾಕನ್ನಡಿ" ಬ್ಲಾಗ್ ಪ್ರಾರಂಬಿಸಿದ್ದು ದಿನಾಂಕ 24-8-2008 ರಂದು. ವಿಶ್ವದಾದ್ಯಂತ ನಮ್ಮ ಬ್ಲಾಗ್ ಗೆಳೆಯರು ನನ್ನ ಛಾಯಾಕನ್ನಡಿ ಬ್ಲಾಗಿನ ಬಾಗಿಲನ್ನು ದಿನಕ್ಕೆ ಎಷ್ಟು ಬಾರಿ ತೆರೆಯಬಹುದು ಅನ್ನುವ ಕುತೂಹಲಕ್ಕಾಗಿ ಆರು ತಿಂಗಳ ನಂತರ ಪ್ರೇಮಿಗಳ ದಿನವಾದ ದಿನಾಂಕ 14-2-2009 ರಂದು ಗೆಳೆಯ ರಾಜೇಶ್ ಸಹಾಯದಿಂದ ನನ್ನ ಬ್ಲಾಗಿನಲ್ಲಿ ಕ್ಲಿಕ್ಕಿಂಗ್ಸ್ ಸೆಟ್ ಮಾಡಿಕೊಂಡೆ. ಮತ್ತೆ ಈಗ ದಿನಾಂಕ 25-6-2009 ಹೊತ್ತಿಗೆ ಸರಿಯಾಗಿ 132 ದಿನಗಳಲ್ಲಿ 10,000 ಕ್ಲಿಕ್ಕಿಂಗ್ಸ್ ದಾಟಿದೆ. ಪ್ರತಿದಿನ ವಿಶ್ವದಾದ್ಯಂತ ನಮ್ಮ ಕನ್ನಡ ಬ್ಲಾಗ್ ಗೆಳೆಯರು ಛಾಯಾಕನ್ನಡಿ ಬ್ಲಾಗನ್ನು ಸರಾಸರಿ "76" ಬಾರಿ ತೆರೆದು ನೋಡಿ ಪ್ರೋತ್ಸಾಹಿಸುತ್ತಿರುವುದು ನನಗಂತೂ ಖುಷಿಯಾಗುತ್ತಿದೆ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...ಧನ್ಯವಾದಗಳು.


ಚಿತ್ರ ಮತ್ತು ಲೇಖನ.
ಶಿವು.ಕೆ

Thursday, June 18, 2009

ನಮ್ಮಪ್ಪನ್ನ ಕರ್ಕೊಂಡು ಬರ್ತೀನಿ ತಾಳು.!

"ನಮ್ಮಪ್ಪನ್ನ ಕರ್ಕೊಂಡು ಬರ್ತೀನಿ ತಾಳು, ನಿನಗೆ ಮಾಡಿಸ್ತೀನಿ" ಮಣೆಯಂತ ಉದ್ದ ಹಲಗೆಯ ಮೇಲೆ ನನಗಿಂತ ದಪ್ಪನಾಗಿ ಪಕ್ಕ ಕುಳಿತಿದ್ದ ಹರೀಶ ಸೀಮೆಸುಣ್ಣವನ್ನು ಕಿತ್ತುಕೊಂಡಾಗ ಹೀಗೆ ಅಂದಿದ್ದೆ. ನನಗೆ ನೆನಪಿರುವಂತೆ ಆಗ ಎರಡನೇ ತರಗತಿಯಲ್ಲಿ ಓದುತ್ತಿದ್ದೆ. ನಮಗಾಗ ಕ್ಲಾಸ್ ಅನ್ನುವುದು ಬರದೇ ಒಂದು ಗ್ಲಾಸ್, ಎರಡು ಗ್ಲಾಸ್ ಅನ್ನುತ್ತಿದ್ದೆವು. ಪ್ರತಿಯೊಂದಕ್ಕೂ ಆಗ ಅಪ್ಪ ಬೇಕಾಗಿತ್ತು.


ಪಕ್ಕದ ಮನೆಯ ಆನಂದನಿಗೆ ಅವನಪ್ಪ ಮಿಣಮಿಣ ಮಿನುಗಿ, ಸೊಯ್ ಸೊಯ್.....ಅಂತ ಓಡುವ ಆಟದ ಕಾರನ್ನು ತಂದಾಗ ನಾನು ಅಪ್ಪನಿಗೆ ಅಂತದ್ದೇ ತಂದುಕೊಡು ಅಂತ ಯಾಕೆ ಹಟ ಹಿಡಿಯಲಿಲ್ಲವೋ ಗೊತ್ತಿಲ್ಲ. ಆದರೆ ಮುರಿದು ಆಟ್ಟದ ಮೇಲೆ ಬಿಸಾಡಿದ್ದ ಕೊಡೆಯ ಒಂದು ಕಂಬಿಯನ್ನು ತೆಗೆದುಕೊಂಡು, ಅದರಲ್ಲಿ ಒಂದು ಕಡೆ "ವಿ" ಆಕಾರದಲ್ಲಿ ಬಗ್ಗಿಸಿಕೊಡಲು ಹಟ ಮಾಡುತ್ತಿದ್ದೆ. ಆಷ್ಟು ಮಾಡಿಕೊಟ್ಟರೆ, ಎಲ್ಲೋ ಹೊಂಚಿಕೊಂಡಿದ್ದ ಕುಕ್ಕರಿನ ಗ್ಯಾಸ್ಕೆಟ್ ರಬ್ಬರನ್ನು ವಿ ಅಕಾರದ ನಡುವೆ ಚಕ್ರ ಮಾಡಿಕೊಂಡು ರಸ್ತೆಯಲ್ಲಿ ಓಡಿಸಿಕೊಂಡು ಓಡುತ್ತಿದ್ದೆ.


ಯಾಕೋ ಆಗ ಅಪ್ಪನಿಗೆ ಕತೆ ಹೇಳು ಅಂತ ಗಂಟು ಬೀಳಲಿಲ್ಲ. ಆಗ ಮನೆಯಲ್ಲಿ ವಟ ವಟ ಅನ್ನುತ್ತಿದ್ದ ಅಜ್ಜಿಗೆ ದುಂಬಾಲು ಬೀಳುತ್ತಿದ್ದೆ. ಬೆಳೆದು ದೊಡ್ಡವನಾದ ಮೇಲೆ ಅದೇ ಅಜ್ಜಿಯನ್ನು ಕಾಡಿಸಿದ್ದು ಬೇರೆ ವಿಷಯ. ಐದು-ಆರನೇ ತರಗತಿಗೆ ಬರುತ್ತಿದ್ದಂತೆ ಯಾಕೋ ಅಪ್ಪನ ಮಡಿಲು ಬೇಕೆನಿಸುತ್ತಿರಲಿಲ್ಲ. ಆತನ ಬಿಡುವಿಲ್ಲದ ದುಡಿತ ಮುಖದಲ್ಲಿ ಕಾಣತೊಡಗಿದಾಗ ಆತನ ಮಡಿಲಿಗಿಂತ ಬೇರೇನೋ ಕಾಣತೊಡಗಿತ್ತು. ನಂತರ ನನಗೆ ಹತ್ತಿರವಾದವರು ಅಜ್ಜಿ, ಅಮ್ಮ, ಅಕ್ಕ ಕೊನೆಯಲ್ಲಿ ತಂಗಿ.

ಒಮ್ಮೆ ಸ್ಕೂಲಿನಲ್ಲಿ ನಾನು ಸರಿಯಾಗಿ ಓದುತ್ತಿಲ್ಲವೆಂದು ಅಪ್ಪನನ್ನು ಬರಹೇಳಿದ್ದರು. ಜೊತೆಯಲ್ಲಿ ನಾನು ಹೋದೆ. ಆಟ ಜಾಸ್ತಿಯಾಗಿ ಸರಿಯಾಗಿ ಓದುದೇ ಅಂಕ ಕಡಿಮೆ ತೆಗೆದಿದ್ದಾನೆಂದು ಮೇಷ್ಟ್ರು ಹೇಳಿದಾಗ ಅಲ್ಲಿ ಬೇರೇನು ಹೇಳದೆ ಮನೆಗೆ ಕರೆದುಕೊಂಡು ಬಂದಿದ್ದರು.


ಬೆಂಕಿಪೊಟ್ಟಣ, ಸಿಗರೇಟು ಪ್ಯಾಕಿಗೆ ರಬ್ಬರ್ ಚಕ್ರಗಳನ್ನು ಹಾಕಿ ಲಾರಿ, ಬಸ್ಸು ಮಾಡುವುದು, ರೈಲುಗಳನ್ನು ಮಾಡುವುದು ನಂತರ ಅದಕ್ಕೊಂದು ದಾರಕಟ್ಟಿ ಮನೆತುಂಬಾ ಎಳೆದಾಡುವುದು ನನಗಾಗ ತುಂಬಾ ಇಷ್ಟದ ವಿಚಾರವಾಗಿತ್ತು. ಅದಕ್ಕಾಗಿ ಗ್ಯಾಸ್ಕೆಟ್ ರಬ್ಬರ್ ಚಕ್ರ ಓಡಿಸುತ್ತಾ ರಸ್ತೆಗಳಲ್ಲಿ ಸಿಗರೇಟು ಪ್ಯಾಕ್, ಮತ್ತು ಬೆಂಕಿಪಟ್ಟಣ, ಕ್ಲಿನಿಕ್‌ಗಳಲ್ಲಿ ಇಂಜೆಕ್ಷನ್ ಕೊಟ್ಟ ನಂತರ ಬಿಸಾಡಿದ ಸಣ್ಣಬಾಟಲಿಗೆ ಹಾಕಿರುತ್ತಿದ್ದ ರಬ್ಬರ್ ಮುಚ್ಚಳವನ್ನು[ಅದರಿಂದ ಚಕ್ರಗಳನ್ನು ಮಾಡುತ್ತಿದ್ದೆ] ಆರಿಸುತ್ತಿದ್ದೆ. ಅಪ್ಪ ಅದನ್ನು ನೋಡಿಬಿಟ್ಟರು. ನಾನು ಮನೆಗೆ ಬರುತ್ತಿದ್ದಂತೆ ನಾನು ಮನೆಯಲ್ಲಿ ಮಾಡಿಟ್ಟಿದ್ದ ಲಾರಿ, ಬಸ್ಸು, ರೈಲು ಇತ್ಯಾದಿಗಳನ್ನು ಹರಿದೆಸೆದು, ಆವರೇ ಮಾಡಿಕೊಟ್ಟಿದ್ದ ಕೊಡೆಕಂಬಿಯನ್ನು ಕಿತ್ತುಕೊಂಡು ಗ್ಯಾಸ್ಕೆಟ್ ರಬ್ಬರನ್ನು ತುಂಡು ತುಂಡು ಮಾಡಿದ್ದರು. ಅಂಕ ಕಡಿಮೆ ಬಂದಿದ್ದ ಕಾರಣವೂ ಸೇರಿ ಚೆನ್ನಾಗಿ ಬಡಿದ್ದಿದ್ದರು.


ಏಟು ಬಿದ್ದಿದ್ದಕ್ಕಿಂತ ನಾನು ಮಾಡಿದ್ದೆಲ್ಲಾ ಹೋಯ್ತಲ್ಲ ಅಂತ ಕೆಲವು ದಿನ ಮಂಕಾಗಿಬಿಟ್ಟಿದ್ದೆ. ಕೊನೆಗೊಂದು ದಿನ ಅಪ್ಪನೇ ಹೋಗಿ ನನಗಿಷ್ಟವಾದ ಸಿಗರೇಟುಪ್ಯಾಕ್‌ಗಳು, ಬೆಂಕಿಪೊಟ್ಟಣಗಳು, ಇಂಜೆಕ್ಷನ್ ರಬ್ಬರುಗಳು, ಇವುಗಳನ್ನೆಲ್ಲಾ ಕತ್ತರಿಸಿ ಅಂಟಿಸಲು ಬೇಕಾಗುವ ಕತ್ತರಿ, ಬ್ಲೇಡು, ಗಮ್ ಇತ್ಯಾದಿಗಳನ್ನು ತಂದುಕೊಟ್ಟಿದರು. ಮತ್ತೆ ಬೋನಸ್ ಆಗಿ ಮತ್ತೊಂದು ಇಷ್ಟದ ವಸ್ತು ಥರ್ಮಕೋಲ್[ಅದರಿಂದ ಇನ್ನಷ್ಟು ಕೆಲವು ಕುಸುರಿ ಕೆಲಸಗಳನ್ನು ಮಾಡುತ್ತಿದ್ದೆ.]ಕೂಡ ತಂದುಕೊಟ್ಟಾಗ ಅಂದು ನನಗೆ ಆಕಾಶವೇ ಕೈಗೆಟುಕಿದಂತಾಗಿತ್ತು.


ಆ ನಂತರ ಒಮ್ಮೆ ಕದ್ದು ಮುಚ್ಚಿ ಸೈಕಲ್ ಕಲಿಯುವಾಗ ಸಿಕ್ಕಿಬಿದ್ದು ಏಟು ತಿಂದಿದ್ದೇ ಕೊನೆ. ನಂತರ ಅವರು ನನಗೆ ಹೊಡೆದಿದ್ದು ನೆನಪಿಲ್ಲ.


ಅಪ್ಪ ನಿವೃತ್ತಿಯಾದ ಮೇಲೆ ಗೆಳೆಯನಂತೆ ಎಲ್ಲಾ ವಿಚಾರಗಳನ್ನು ಮುಕ್ತವಾಗಿ ಚರ್ಚಿಸಲು ಇಷ್ಟಪಡುತ್ತಿದ್ದರು.. ಆದರೆ ಆಗ ಯುವ ವಯಸ್ಸಿನ ಅಮಲು ಹೆಚ್ಚಿದ್ದರಿಂದ ಅವರ ಮಾತು ನನ್ನ ಕಿವಿಗೆ ಕೇಳುತ್ತಿರಲಿಲ್ಲ. ನಾನು ಸ್ವಲ್ಪ ದುಡಿಯುವಂತಾಗಿದ್ದು ಮತ್ತು ಅವರಿಗೆ ವಯಸ್ಸಾಗಿದ್ದು ಎರಡು ಸೇರಿ ಅವರನ್ನು ನಿರ್ಲಕ್ಷ ಮಾಡುವಂತ ಆಹಂ ಬಂದುಬಿಟ್ಟಿತ್ತು. ಆವರ ವಯಸ್ಸು ೬೫ ದಾಟುತ್ತಿದ್ದಂತೆ ಕಾಯಿಲೆಗಳು ಅವರಿಸಿಕೊಂಡುಬಿಟ್ಟಿದ್ದವು. ಆ ಸಮಯದಲ್ಲಿ ತಮ್ಮ ಮಾತುಗಳನ್ನು ಕೇಳಿಸಿಕೊಳ್ಳಲು ಒಬ್ಬ ಗೆಳೆಯ ಬೇಕಿತ್ತೋನೋ...ಮಗುವಿನಂತೆ ಮಾತಾಡುತ್ತಿದ್ದರು. ಊರಿನ ವಿಚಾರವಾಗಿ, ಹೊಲ ಗದ್ದೆ, ಮನೆಯ ವಿಚಾರವಾಗಿ ಅಲ್ಲಿ ತಾವು ಮಾಡಿಸಿದ ಕೆಲಸವನ್ನು ಹೇಳಿಕೊಂಡು ನಾನು ಮೆಚ್ಚಿದರೇ ಅವರಿಗೆ ಸಂತೋಷವಾಗುತ್ತಿತ್ತು. ಅವರಿಗೆ ಪ್ಯಾರಲೈಸ್ ಸ್ಟ್ರೋಕ್ ತಗುಲಿದಾಗ ಮಾತನಾಡಲಾಗದೇ ನನ್ನ ಕೈಯಿಡಿದು ಅತ್ತುಬಿಟ್ಟಿದ್ದರು. ಅಂತ ಅಪ್ಪ ಈಗ ಇಲ್ಲ.



"ಬಲಭಾಗದಲ್ಲಿ ನಾನು, ನನ್ನ ಹಿಂದೆ ನನ್ನಕ್ಕ, ನಂತರ ಆವಳ ಗೆಳತಿಯರು ಇರುವ ಈ ಕಪ್ಪು-ಬಿಳುಪು ಫೋಟೋವನ್ನು ಅಪ್ಪ ಸ್ಟುಡಿಯೋಗೆ ಕರೆದುಕೊಂಡು ಹೋಗಿ ತೆಗೆಸಿದ್ದರು. ಅಮ್ಮ ಜೋಪಾನವಾಗಿ ಇಟ್ಟಿದ್ದ ಈ ಫೋಟೋವನ್ನು ಈಗ ನಿಮಗೆ ತೋರಿಸಬೇಕಿನಿಸಿತು."


"ಜೂನ್ ೧೯ ಅಪ್ಪಂದಿರ ದಿನ" ನನ್ನ ಅಪ್ಪನ ಜೊತೆಗೆ ಎಲ್ಲಾ ಅಪ್ಪಂದಿರನ್ನು ನೆನಸಿಕೊಳ್ಳುತ್ತಾ.....ರಸ್ತೆಯಲ್ಲಿ, ಜಾತ್ರೆಯಲ್ಲಿ, ಉತ್ಸವಗಳಲ್ಲಿ, ಕೆಲವು ಅಪ್ಪ-ಮಕ್ಕಳ ನಿಶ್ಕಲ್ಮಶ ಪ್ರೀತಿಯ ಮಧುರ ಕ್ಷಣಗಳನ್ನು ಕ್ಲಿಕ್ಕಿಸಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ...
ಮತ್ತು ಆ ಫೋಟೋಗಳಿಗೆ ಮಾತಿನ ಅವಶ್ಯಕತೆ ಇಲ್ಲವೆನಿಸಿ ಯಾವುದೇ ವಿವರಣೆಯನ್ನು ಕೊಡಲೆತ್ನಿಸಿಲ್ಲ. ನಿಮಗನ್ನಿಸಿದ ವಿವರಣೆಯನ್ನು ನೀವು ಪ್ರತಿಕ್ರಿಯಿಸಬಹುದು....


ನೀವು ನೋಡಿ. ನೋಡದಿದ್ದಲ್ಲಿ "ನಮ್ಮಪ್ಪನ್ನ ಕರ್ಕೊಂಡು ಬರ್ತೀನಿ...."














ಚಿತ್ರ-ಲೇಖನ.
ಶಿವು.ಕೆ. ARPS.

Friday, June 12, 2009

ಯಾರ್ರೀ...ಟೀ...ಟೀ....ಟೀ.......

ದೇವಯ್ಯ ಪಾರ್ಕ್ ಟ್ರಾಫಿಕ್ ದಾಟಿ ಬಲಕ್ಕೆ ಗಾಡಿ ತಿರುಗಿದೆ ಆತ ಕಾಣಿಸಿದ. ಗಾಡಿ ನಿಲ್ಲಿಸಿ ನನ್ನ ಬಲಗೈ ತೋರುಬೆರಳು ಅವನೆಡೆಗೆ ತೋರಿಸಿದೆ. ಆತ ನಿಂತ ನಿಲುವಿನಲ್ಲೇ ಬಲಗೈಯಲ್ಲಿದ್ದ ಮೂರು ಕೇಜಿ ಬಾರದ ಪ್ಲಾಸ್ಕಿನಿಂದ ಎಡಗೈಯಲ್ಲಿದ್ದ ಪ್ಲಾಸ್ಟಿಕ್ ಲೋಟಕ್ಕೆ ಟೀ ಬಗ್ಗಿಸಿ ಕೊಟ್ಟು ಮೂರು ರುಪಾಯಿ ಪಡೆದು ಹೊರಟು ಹೋದ.


ಇಷ್ಟಕ್ಕೂ ಮೆಟ್ರೋ ರೈಲಿಗಾಗಿ ಮರ, ಮನೆಗಳನ್ನು ಕಡಿಯುತ್ತಾ ದೂಳುಮಯವನ್ನಾಗಿ ಮಾಡಿರುವ ಆ ರಸ್ತೆಯಲ್ಲಿ ನನಗೆ ಹೀಗೆ ಟೀ ಕುಡಿಯಲೇ ಬೇಕೆನಿಸಿದ್ದಕ್ಕೆ ಕಾರಣವಿದೆ. ಎರಡು ದಿನದ ಹಿಂದೆ ನಮ್ಮ ಮನೆಯ ಆಡಿಗೆ ಅನಿಲ [ಸಿಲಿಂಡರ್‌ನಲ್ಲಿ] ಕಾಲಿಯಾಗಿತ್ತು ಅದಕ್ಕಿಂತ ಮೂರು ದಿನದ ಹಿಂದೆ ಮೊದಲನೆ ಸಿಲಿಂಡರ್ ಕಾಲಿಯಾಗಿಬಿಟ್ಟಿತ್ತು. [ಅದು ಹೇಗೆ ಎರಡು ಸಿಲಿಂಡರುಗಳು ನಾಲ್ಕು ದಿನದ ಅಂತರದಲ್ಲಿ ಕಾಲಿಯಾಯಿತು ಅನ್ನುವುದನ್ನು ಬರೆದರೆ ಅದು ಮತ್ತೊಂದು ಲೇಖನವಾಗುತ್ತದೆ...ಅದನ್ನು ಮುಂದೆಂದಾದರೂ ಬರೆಯುತ್ತೇನೆ. ಆದ್ರೆ ನಾನಿಲ್ಲಿ ಹೇಳುತ್ತಿರುವ ವಿಚಾರವೇ ಬೇರೆ.]

ಹೊರಗೆಲ್ಲೂ ಕಾಫಿ,ಟೀ ಕುಡಿಯದೇ ಮನೆಯಲ್ಲೇ ಕುಡಿದು ಅಭ್ಯಾಸವಿರುವ ನನಗೆ ಖಾಲಿಯಾದ ಸಿಲಿಂಡರ್‌ಗಳಿಂದಾಗಿ ಯಾರೇನು ಅಂದುಕೊಂಡರೂ ಪರ್ವಾಗಿಲ್ಲ ಅಂತ ಆ ಧೂಳುಮಯ ರಸ್ತೆಯಲ್ಲೂ ಅವರನ್ನು ನಿಲ್ಲಿಸಿ ಟೀ ಕುಡಿಯುತ್ತಿದ್ದೆ. ಆಗ ಬಂತಲ್ಲ ನನ್ನ ತಲೆಗೆ ಹೊಸ ವಿಚಾರ. ನಾನ್ಯಾಕೆ ಈ ಟೀ ಮಾರುವವರ ಹಿಂದೆ ಬೀಳಬಾರದು ಅನ್ನಿಸಿತು. ಹಿಂದೆ ತಿರುಗಿದೆ ಅವನು ಮಾಯಾವಾಗಿದ್ದ. ಇರಲಿ ನಾಳೆಯಿಂದ ಅವರದೇನು ಕತೆ ಅನ್ನುವುದನ್ನು ನೋಡೋಣ ಅಂದುಕೊಂಡು ಸುಮ್ಮನಾದೆ.
ಮರುದಿನದಿಂದ ಅವರು ಸಿಕ್ಕಲ್ಲೆಲ್ಲಾ ನಿಲ್ಲಿಸಿ ಟೀ [ನನಗೆ ಭೇಕೋ ಬೇಡವೋ]ಕುಡಿದಿದ್ದೇನೆ. ಕುಡಿಯುತ್ತಾ ಅವರನ್ನು ಮಾತಾಡಿಸಿ, ತಿಳಿದುಕೊಂಡ ವಿಚಾರಗಳು ನನಗೆ ಅಚ್ಚರಿ ಹುಟ್ಟಿಸಿದವು. ಅವುಗಳಲ್ಲಿ ಕೆಲವನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ.

ನಸುಕಿನ ಐದುಗಂಟೆಗೆ ನಮ್ಮ ದಿನಪತ್ರಿಕೆ ಹುಡುಗರಿಗೆ ಟೀ ಕೊಡಬೇಕಾದರೆ ಇವರು ನಮಗಿಂತ ಒಂದು ಗಂಟೆ ಬೇಗ ಎದ್ದು ನಮಗೆ ಬೇಕಾದ ಹಾಗೆ ಮಸಾಲೆ ಟೀ, ಜಿಂಜರ್ ಟಿ, ಎಲಕ್ಕಿ ಟೀ..ಇತ್ಯಾದಿಗಳನ್ನು ಆ ನಸುಕಿನಲ್ಲೇ ಹದವಾಗಿ ಮಾಡಿಕೊಂಡು ತರುತ್ತಾರೆ. ಅಲ್ಲಿಂದ ಶುರುವಾಗಿ ರಾತ್ರಿ ಹತ್ತರವರೆಗೆ ಇವರು ಹೋಗದಿರುವ ಜಾಗ ಉಂಟೇ. ಮಳೆ, ಗಾಳಿ, ಬಿಸಿಲು, ಚಳಿಯೆನ್ನದೇ ನಿರಂತರವಾಗಿ ಬಸ್ ನಿಲ್ದಾಣಗಳು, ಕಚೇರಿಗಳು, ಅಂಗಡಿಗಳು, ಮಾರುಕಟ್ಟೆಗಳು ಹೀಗೆ ಸದಾ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಚಲಿಸುತ್ತಿರುತ್ತಾರೆ.

ನೀವು ಇಂದಿರನಗರದ ಸಿ ಎಮ್ ಎಚ್ ರಸ್ತೆಯ ಬದಿಯಲ್ಲೇ ಆಗಲಿ, ಹೆಬ್ಬಾಳ ದಾಟಿದ ಮೇಲೆ ಸಿಗುವ ಬ್ಯಾಟರಾಯನಪುರದ ಪುಟ್‌ಪಾತ್‌ನಲ್ಲಾಗಲಿ, ಮಲ್ಲೇಶ್ವರದ ೮ನೇ ಆಡ್ಡರಸ್ತೆಯಲ್ಲಾಗಲಿ, ರಾಜಾಜಾಜಿನಗರದ ಭಾಷ್ಯಂ ವೃತ್ತದಲ್ಲಾಗಲಿ, ಅಥವ ಬೆಂಗಳೂರಿನ ಯಾವ ಮೂಲೆಯಲ್ಲೇ ಇವರನ್ನು ನಿಲ್ಲಿಸಿ ಮೂರು ರೂಪಾಯಿ ಕೊಟ್ಟು ಅರ್ಧ ಟೀ ಕುಡಿದು ನೋಡಿ! ರುಚಿಯಲ್ಲಿ ವ್ಯತ್ಯಾಸವಾಗುವುದಿಲ್ಲ. ಇದು ನನ್ನ ಅನುಭವಕ್ಕೆ ಬಂದ ವಿಚಾರ.

ನನ್ನ ಸಂಶಯ ನಿವಾರಣೆಗಾಗಿ ಒಬ್ಬನನ್ನು ಕೇಳಿಯೇ ಬಿಟ್ಟೆ. ಹೇಗೆ ಎಲ್ಲಾ ಕಡೆಯೂ
"ನೀವು ಮಾರುವ ಟೀ ರುಚಿಯಲ್ಲಿ ಒಂದೇ ತೆರನಾಗಿರುತ್ತದಲ್ಲ" ಅಂತ. ಅದಕ್ಕೆ ಅವರು ಹೇಳಿದ್ದು.
"ಸಿಹಿ ಕೆಲವರಿಗೆ ಸ್ವಲ್ಪ ಹೆಚ್ಚು, ಕೆಲವರಿಗೆ ಕಡಿಮೆ ಬೇಕಾಗಿರುವುದರಿಂದ ಸಕ್ಕರೆ ಪ್ರಮಾಣ ವ್ಯತ್ಯಾಸವಾಗುವುದು ಬಿಟ್ಟರೇ ಒಂದೇ ವಿಧವಾದ ಟೀ ಪುಡಿ, ನೀರು ಎಲ್ಲಾ ಪಕ್ಕಾ ಲೆಕ್ಕಾಚಾರದಲ್ಲಿ ಮಾಡುತ್ತೇವೆ. "
ಎಲ್ಲೋ ಒಂದುಕಡೆ ಚಳುವಳಿ, ಗಲಾಟೆ, ರಸ್ತೆತಡೆ, ದೊಂಬಿ ನಡೆಯುತ್ತಿರಲಿ ಅಲ್ಲಿಯೂ ಇವರು ಹಾಜರ್. ಮತ್ತೆ ಯಾವುದೋ ವೃತ್ತದಲ್ಲಿ ಉಪವಾಸ ಸತ್ಯಗ್ರಹ ನಡೆಯುತ್ತಿರಲಿ ಅವರಿಗೂ ಇವರು ಟೀ ಮಾರುತ್ತಾರೆ. ಇದೆಲ್ಲಾ ನಾನು ಅವರನ್ನು ಹೊರಗಿನಿಂದ ಕಂಡ ನಿತ್ಯ ನೋಟವಾಗಿತ್ತು. ನನಗೆ ಇಷ್ಟಕ್ಕೆ ಸಮಾಧಾನವಾಗದೆ ಅವರ ಒಳನೋಟ ಅಂದರೆ ಅವರ ಮನಸ್ಸಿನ ಭಾವನೆಗಳು, ಅಭಿಪ್ರಾಯಗಳು, ತಿಳಿವಳಿಕೆಗಳು, ಅನುಭವಗಳು, ಇನ್ನೂ ಏನೇನೋ ತಿಳಿದುಕೊಳ್ಳುವ ಕುತೂಹಲ ಕಾತುರ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತ್ತು.

ನಿತ್ಯ ರಸ್ತೆಯಲ್ಲಿ ಹೀಗೆ ಟೀ ಕುಡಿಯುವಾಗ ಅವರನ್ನು ಮಾತನಾಡಿಸಲೆತ್ನಿಸಿದ್ದೆ. ಸಾಧ್ಯವಾಗಲಿಲ್ಲ. ಅವರಿಗೆ ಪ್ರತಿಯೊಂದು ನಿಮಿಷವೂ ಮುಖ್ಯವೆನ್ನುವಂತೆ ಚಲಿಸುತ್ತಿರುತ್ತಾರೆ. ಹೀಗೆ ಮಾತನಾಡದೆ "ನನಗೆ ಬಿಡುವಿಲ್ಲ ಸರ್" ಅಂತ ತಪ್ಪಿಸಿಕೊಂಡವರು ಯಾರೆಂದು ಗಮನಿಸಿದಾಗ ಅವರೆಲ್ಲಾ ಹೈಸ್ಕೂಲು ಮತ್ತು ಪ್ರಥಮ-ದ್ವಿತೀಯ ಪಿ ಯೂ ಸಿ ಹುಡುಗರು.

ಇವರ ಬಗ್ಗೆ ಸ್ವಲ್ಪ ಹೇಳಬೇಕೆನಿಸುತ್ತದೆ. ಇವರು ತಮ್ಮ ಮನೆಯ ಬಡತನದಿಂದಾಗಿ ಓದುವುದರ ಜೊತೆಗೆ ಸಿಕ್ಕ ಅಲ್ಪ ಸಮಯದಲ್ಲಿ ಟೀ ಮಾರುತ್ತಾ ಹಣ ಗಳಿಸುತ್ತಾರೆ. ಮತ್ತು ಹೆಚ್ಚಾಗಿ ಕೆಲವು ನರ್ಸಿಂಗ್ ಹೋಂಗಳು, ಆಸ್ಪತ್ರೆಗಳು, ಮಾರುಕಟ್ಟೆಗಳು, ಜನನಿಬಿಡ ಸ್ಥಳಗಳು ಇತ್ಯಾದಿಗಳಲ್ಲಿ ಸಮಯಕ್ಕೆ ಸರಿಯಾಗಿ ಸ್ವಚ್ಚವಾಗಿ ಸೊಗಸಾದ ಟೀ ಸಿದ್ದಮಾಡಿಕೊಂಡು ಹೋಗಿ ಮಾರುತ್ತಾರೆ. ಆ ದುಡಿಮೆಯ ಹಣದಲ್ಲಿ ತಮ್ಮ ಸ್ಕೂಲು ಕಾಲೇಜು ಫೀಜು, ಖರ್ಚು, ಸಾಧ್ಯವಾದರೆ ಸ್ವಲ್ಪ ಉಳಿಕೆ ಇತ್ಯಾದಿಗಳನ್ನು ಮಾಡುತ್ತಾ ಎಲೆಮರಿಕಾಯಿಯಂತೆ ಇರುತ್ತಾರೆ.

ಅದರೆ ಇದೇ ಹುಡುಗರು ಪಿ.ಯು.ಸಿ ಪಾಸ್ ಆಗಿ ಡಿಗ್ರಿ ಮಟ್ಟಕ್ಕೆ ಬಂದುಬಿಟ್ಟರೆ ಮುಗೀತು. ಅಲ್ಲಿ ಇವರಿಗೆ ಶುರುವಾಗುತ್ತದೆ ಪ್ರತಿಷ್ಟೆಯ ಪ್ರಶ್ನೆ. ಅದು ಯಾಕೆ ಕಾಡುತ್ತದೆಂದರೆ ಆವರು ಕಂಬೈನ್ [ಹುಡುಗ-ಹುಡುಗಿ ಇಬ್ಬರು ಒಟ್ಟಿಗೆ ಇರುವ]ಕಾಲೇಜಿನಲ್ಲಿ ಓದುತ್ತಿದ್ದರಂತೂ ಮುಗಿಯಿತು. ನಿದಾನವಾಗಿ ಅವರಲ್ಲಿ ತಮ್ಮ ವಯಸ್ಸಿನ ಹುಡುಗಿಯರನ್ನು ಸೆಳೆಯುವ, ಮೆಚ್ಚಿಸುವ, ಅವರಿಗೆ ತಾವು ಆಕರ್ಷಕವಾಗಿ ಕಾಣುವ, ಹೀಗೆ ಅವರೆಡೆಗೆ ಒಂದು ಕ್ರಷ್ ಬಂದುಬಿಟ್ಟಿರುತ್ತದೆ. ಸಹಜವಾಗಿ ಹುಡುಗಿಯರ ಕಣ್ಣಿಗೆ ತಾನು ಹೀರೋ ಆಗದಿದ್ದರೂ ಕೊನೇ ಪಕ್ಷ ಈ ರೀತಿ ಕೀಳಾಗಿ ಕಾಣಬಾರದೆಂಬ ಭಾವನೆ ಅವರಲ್ಲಿ ಗಾಢವಾಗಿ ಬೇರೂರಿ, ಆಗ ಟೀ ಮಾರುವ ಕೆಲಸವನ್ನು ಬಿಟ್ಟುಬಿಡುತ್ತಾರೆ. ಇದಿಷ್ಟನ್ನು ಅವರಿಂದ ತಿಳಿದುಕೊಳ್ಳಲು ಬಿಡುವಿನಲ್ಲಿ ಆರಾಮವಾಗಿ ಕುಳಿತಿದ್ದಾಗ ಮಾತಿಗೆಳೆದು ಅವರ ಟೀ ಚೆನ್ನಾಗಿದೆ ಅಂತ ಹೊಗಳಿ ಎರಡೆರಡು ಬಾರಿ ಟೀ ಕುಡಿಯಬೇಕಾಯಿತು.

ಇನ್ನೂ ನಲವತ್ತು ದಾಟಿದವರು ಸ್ವಲ್ಪ ದಾರಾಳವಾಗಿ ಮಾತಿಗೆ ಸಿಗುತ್ತಾರಾದರೂ ಅವರದು ಮಾತು ಕಡಿಮೆ. ಹೆಚ್ಚು ಗುಟ್ಟು ಬಿಟ್ಟುಕೊಡುವುದಿಲ್ಲ. ಹೀಗೆ ಒಂದು ದಿನ ಒಬ್ಬ ಸಿಕ್ಕಿದ ಆತನ ವಯಸ್ಸು ಸುಮಾರು ೫೦ ದಾಟಿರಬಹುದು. ಆತ ಇದೇ ವೃತ್ತಿಯಲ್ಲಿ ಕಳೆದ ಹದಿನೈದು ವರ್ಷಗಳಿಂದ ಇದ್ದಾನಂತೆ. ಅವನು ನಿತ್ಯ ಯಾವ ಯಾವ ರಸ್ತೆಯ ಕಚೇರಿಗಳು, ಅಂಗಡಿಗಳಿಗೆ ಹೋಗುತ್ತಾನೆಂದು ತಿಳಿದುಕೊಂಡು ಪ್ರತೀದಿನ ಅವನಿಗೆ ಟೀ ಕುಡಿಯುವ ನೆಪದಲ್ಲಿ ಎಡತಾಕುತ್ತಿದ್ದೆ. ಪ್ರತೀದಿನ ಸಿಗುವ ನೆಪದಲ್ಲಿ ಗೆಳೆಯನಾದೆ. ಒಂದಷ್ಟು ಆತ್ಮೀಯತೆ, ನಂಬಿಕೆ ನನ್ನ ಮೇಲು ಆತನಿಗೆ ಬಂದಿದ್ದರಿಂದ ಒಮ್ಮೊಮ್ಮೆ ಕೆಲವು ವಿಚಾರಗಳನ್ನು ದಾರಾಳವಾಗಿ ಮಾತನಾಡುತ್ತಿದ್ದ. ಎಲ್ಲರನ್ನೂ ಬಿಟ್ಟು ಅವನ ಹಿಂದೆ ಬೀಳಲು ಒಂದು ಕಾರಣವು ಇದೆ. ಒಮ್ಮೆ ಆತ ಹೀಗೆ ಮಾತಾಡುವಾಗ ಒಂದೆರಡು ಬಸವಣ್ಣನ ವಚನವನಗಳು ಪುಂಕಾನುಪುಂಕವಾಗಿ ಅವನ ಮಾತಿನ ಮದ್ಯೆ ಹರಿದುಬರತೊಡಗಿದವು.

ಆಗಾಗ ಕೆಲವೊಂದು ಸಂಸ್ಕೃತ ಸ್ಲೋಕಗಳು, ಮಂತ್ರಗಳು ನಮ್ಮ ಮಾತಿಗನುಸಾರವಾಗಿ ಅವನ ಬಾಯಿಂದ ಹೊರಹೊಮ್ಮುತ್ತಿದ್ದವು. ಅದರಿಂದಾಗಿ ನನಗಂತೂ ಅವನ ಬಗ್ಗೆ ಮತ್ತಷ್ಟು ಆಶ್ಚರ್ಯ, ಕುತೂಹಲ, ಹೆಚ್ಚಾಯಿತು. ಹಾಗೆ ನಿದಾನವಾಗಿ ನಿತ್ಯ ಅವನ ಕಷ್ಟ ಸುಖಗಳನ್ನು ವಿಚಾರಿಸುತ್ತಾ ಇನ್ನಷ್ಟು ಹತ್ತಿರದವನಾಗಿದ್ದೆ. ನಿದಾನವಾಗಿ ನಾನು ಕೇಳುವ ಪ್ರಶ್ನೆಗೆ ಉತ್ತರಿಸಲು ಪ್ರಾರಂಭಿಸಿದ. ನಮ್ಮಿಬ್ಬರ ಮಾತುಗಳು ಹೀಗೆ ಸಾಗುತ್ತಿದ್ದವು.

"ನೀವು ಟೀ ಎಲ್ಲೆಲ್ಲಿ ಮಾರಲು ಹೋಗುತ್ತೀರಿ..."

"ನನಗೆ ಕೆಲವು ನಿಗದಿನ ಸ್ಥಳಗಳಿವೆ ಅಲ್ಲಿಗೆ ಹೋಗುತ್ತೇನೆ..."

"ಅಲ್ಲಿ ನಿಮಗೆ ಚೆನ್ನಾಗಿ ವ್ಯಾಪಾರ ಆಗುತ್ತದೆಯೇ..."

" ಆಗಲೇ ಬೇಕು." ..ಖಚಿತವಾಗಿ ಹೇಳಿದ.

"ಹೇಗೆ ಹೇಳ್ತೀರಿ."

"ನೋಡಿ ಈಗಿನ ಟ್ರಾಫಿಕ್‌ನಲ್ಲಿ ಜನಕ್ಕೆ ತಮ್ಮ ಟೂವ್ಹೀಲರುಗಳನ್ನು ಎಲ್ಲೋ ಪಾರ್ಕಿಂಗ್ ಮಾಡಿ ಹೋಟಲ್ ಒಳಗೆ ಹೋಗಿ -೭-೮-೧೦ ರೂಪಾಯಿಗಳನ್ನು ಕೊಟ್ಟು ಸಮಾಧಾನವಾಗಿ ಕುಳಿತು ಕಾಫಿ, ಟೀ, ಕುಡಿಯುವಷ್ಟು ಸಮಯವಿಲ್ಲ. ಮತ್ತೇ ಯಾವ ಹೋಟಲ್ಲಿನಲ್ಲೂ ಕೂಡ ಅರ್ಧ ಕಾಫಿ, ಟೀ ಕೊಡುವುದಿಲ್ಲ. ಮತ್ತೆ ಜನಕ್ಕೆ ಗಂಟೆಗೊಮ್ಮೆ ಇದನ್ನು ಕುಡಿಯಬೇಕೆನ್ನುವ ಚಟವಂತೂ ಇದ್ದೇ ಇದೆ. ಆದರೆ ಪೂರ್ತಿ ಲೋಟ ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎನ್ನುವುದು ಚೆನ್ನಾಗಿ ತಿಳಿದಿದೆ."
ಸ್ವಲ್ಪ ತಡೆದು,

"ಆಗ ಏನು ಮಾಡುತ್ತಾರೆ? ನಮ್ಮಂಥವರು ಇರುತ್ತೇವಲ್ಲ.... ಅವರಿಗೆ ಕೇಳಿದ ಬೆಲೆಗೆ ಕೊಡುತ್ತೇವೆ. ಅವರ ಪಾರ್ಕಿಂಗ್ ಸಮಯ ಉಳಿಸುತ್ತೇವೆ. ಅವರು ಒಂದು ರುಪಾಯಿಗೆ ಕೇಳಲಿ ಅದಕ್ಕೆ ತಕ್ಕಂತೆ ಕೊಡುತ್ತೇವೆ. ಎರಡು, ಮೂರು ರುಪಾಯಿಗೂ ಕೊಡುತ್ತೇವೆ. ಇದರಿಂದ ಅವರಿಗೆ ನಾವು ಕೊಟ್ಟ ಅರ್ಧ ಟೀ ಕುಡಿದ ಹಾಗೂ ಆಯಿತು. ಸಮಯವೂ ಉಳಿಯಿತು ಅಲ್ಲವೇ...

ಕೆಲವೊಂದು ಕಛೇರಿ, ಅಂಗಡಿಗಳಲ್ಲಿ ಆಗ ತಾನೆ ಗ್ರಾಹಕರು ಬಂದಿರುತ್ತಾರೆ. ಆಗ ನಾವು ಅಲ್ಲಿಗೆ ಹೋಗಿ ಅವರಿಗೆ ಟೀ, ಬೇಕಾ ಎಂದು ಕೇಳುತ್ತೇವೆ. ಅವರಿಗಂತೂ ತಮ್ಮ ಗ್ರಾಹಕರ ಮುಂದೆ ಬೇಡವೆಂದು ಹೇಳಲಾಗುವುದಿಲ್ಲ. ಅದು ಅವರ ಮರ್ಯಾದೆ ಪ್ರಶ್ನೆ. ಅವರು ಗ್ರಾಹಕರ ಸಮೇತ ಎಲ್ಲರಿಗೂ ಟೀ ಕೊಡಿಸುತ್ತಾರೆ. ಮತ್ತು ನಾವು ಕೊಡುವ ಎರಡು ಮೂರು ರೂಪಾಯಿ ಬೆಲೆಯ ಟೀ ಮಾಲೀಕನಿಗೆ ಹೊರೆಯೆನಿಸುವುದಿಲ್ಲ ಮತ್ತು ಗ್ರಾಹಕನೂ ಟೀ ಕುಡಿದ ದಾಕ್ಷಿಣ್ಯಕ್ಕಾಗಿ ವ್ಯಾಪಾರ ಮಾಡಲೇಬೇಕು. ಇನ್ನೂ ಮಾರುಕಟ್ಟೆ ಇನ್ನಿತರ ಸ್ಥಳಗಳಲ್ಲಿ ಪ್ರತಿಯೊಬ್ಬರಿಗೂ ತಮ್ಮ ತಮ್ಮ ವ್ಯಾಪಾರದ ಒತ್ತಡದಲ್ಲಿ ಗಂಟೆಗೊಮ್ಮೆ ಟೀ ಕುಡಿಯುವ ಚಟವಿರುವುದರಿಂದ ನಾವು ಕೊಡುವ ಟೀ ಕಡಿಮೆ-ಹೆಚ್ಚು ಅನ್ನುವ ಪ್ರಶ್ನೆಗಿಂತ ಆ ಕ್ಷಣದಲ್ಲಿ ಅವರಿಗೆ ಒಂದು ಬಿಸಿ ಗುಟುಕು ಕುಡಿದ ಸಮಾಧಾನವಾಗುತ್ತದಲ್ಲ ಅದೇ ಮುಖ್ಯ ಅವರಿಗೆ. ಅದಕ್ಕಾಗಿ ಅವರಿಗೆ ಬೇಕೇ ಬೇಕು."

ಅವನ ಮಾರ್ಕೆಟಿಂಗ್ ತಂತ್ರ, ಅದರೊಳಗೆ ಆಡಗಿರುವ ಸೂಕ್ಷ್ಮವಿಚಾರಗಳು, ನನಗಂತೂ ವಿಶೇಷವೆನಿಸಿದ್ದವು. "
ಅಲ್ಲಾ ಸರ್, ನೀವು ಇಷ್ಟೆಲ್ಲಾ ಗೊತ್ತಿದೆಯೆಂದ ಮೇಲೆ ನೀವು ಚೆನ್ನಾಗಿ ಓದಿಕೊಂಡಿದ್ದೀರ ಅಂತ ನನಗನ್ನಿಸುತ್ತೆ. ನೀವ್ಯಾಕೆ ಒಂದು ಒಳ್ಳೆಯ ಮಾರ್ಕೆಟಿಂಗ್ ಕಂಪನಿಗೆ ಸೇರಿಕೊಳ್ಳಬಾರದು" ಅಂತ ನಾನು ಕೇಳಿದೆ. ಆದಕ್ಕೆ ಆತ
"ನೋಡಿ ಸ್ವಾಮಿ,

ಆಯುಃಕರ್ಮೆಚ ವಿತ್ತಂಚ,

ವಿದ್ಯಾ, ನಿಧನಮೇವಚ,

ಪಂಚೈತಾನಪಿ ಸೃಜ್ಯಂತೇ,

ಗರ್ಭಸ್ತೈಸೈವದೇಹಿನಃ "

ಒಂದು ಸಂಸ್ಕೃತ ಶ್ಲೋಕ ಹೇಳಿದ. ಅದನ್ನು ಕೇಳಿ ನನಗಂತೂ ಅಚ್ಚರಿಯಾಯಿತು. ದಯವಿಟ್ಟು ಅದರ ಅರ್ಥವನ್ನು ಹೇಳಿ ಅಂದೆ.

"ಆಯೂಸ್ಸು, ವಿದ್ಯೆ, ಮರಣ ಕೆಲಸ, ಐಶ್ವರ್ಯ ಈ ಐದು ಮನುಷ್ಯನಿಗೆ ತಾಯಿಯ ಗರ್ಭದಲ್ಲೇ ನಿಶ್ಚಯಿಸಲ್ಪಟ್ಟಿತ್ತವೆ. ಆದ್ದರಿಂದ ನಾನೇನು ಆಗಬೇಕೆನ್ನುವುದು ಮೊದಲೇ ತೀರ್ಮಾನವಾಗಿಬಿಟ್ಟಿರುವುದರಿಂದ ನನ್ನ ಭವಿಷ್ಯವನ್ನು ನಿರ್ಧರಿಸಲು ನಾನ್ಯಾರು ?"

ಆತನ ಮಾತಿಗೆ ನಾನು ಮರು ಉತ್ತರ ಹೇಳಲಾಗದೇ ಅವನಿಗೆ ಟೀ ಹಣವನ್ನು ಕೊಟ್ಟು ಮತ್ತೆ ಸಿಗುತ್ತೇನೆ ಅಂತ ಹೇಳಿ ಅಲ್ಲಿಂದ ಹೊರಟಾಗ ನನ್ನ ಮನಸ್ಸು ಆಲೋಚನೆಗೆ ಬಿದ್ದಿತ್ತು.

ಅವನು ಹೇಳಿದ ಸಂಸ್ಕೃತ ಶ್ಲೋಕದ ಜೊತೆಗೆ ಆತ ಹೇಳಿದ ವಿದ್ಯೆ, ಆಯುಸ್ಸು, ಕೆಲಸ, ಐಶ್ವರ್ಯ, ಇವುಗಳನ್ನು ಪಡೆಯಲು ಇರುವ ನೆಮ್ಮದಿಯನ್ನು ಕಳೆದುಕೊಳ್ಳುತ್ತಾ ಬದುಕಿನಲ್ಲಿ ಅದೆಷ್ಟು ಒದ್ದಾಡುತ್ತೇವಲ್ಲ. ಹಾಗೂ ಸಾವಿನ ವಿಚಾರದಲ್ಲಿ ಅದೆಷ್ಟು ದಿಗಿಲು, ಆತಂಕ ಪಡುತ್ತೇವಲ್ಲ. ತಾನು ಮಾಡುವ ಕೆಲಸದಲ್ಲೇ ನೆಮ್ಮದಿಯನ್ನು ಕಂಡುಕೊಳ್ಳುತ್ತಾ ಸದಾ ಆನಂದದಿಂದಿರುವ ಆತ ನಮಗಿಂತ ಮಾನಸಿಕವಾಗಿ ಅದೆಷ್ಟು ಉನ್ನತ ಮಟ್ಟದಲ್ಲಿದ್ದಾನೆ ಅಂತ ಮನಸ್ಸಿನಲ್ಲೇ ಅವನಿಗೆ ದೀರ್ಘದಂಡ ನಮಸ್ಕಾರ ಹಾಕಿ ಮನೆಕಡೆಗೆ ನಡೆದಾಗ ಆತ ಹೇಳಿದ ಸಂಸ್ಕೃತ ಶ್ಲೋಕ ಮತ್ತೆ ಮತ್ತೆ ನೆನಪಾಗುತ್ತಿತ್ತು.

[ಆತನಿಗೆ ಇಷ್ಟವಿಲ್ಲದ್ದರಿಂದ ಆತನ ಹೆಸರು ಮತ್ತು ಫೋಟೋವನ್ನು ಬ್ಲಾಗಿನಲ್ಲಿ ಹಾಕಲಾಗಿಲ್ಲ. ]

ಚಿತ್ರ ಲೇಖನ.
ಶಿವು.ಕೆ ARPS.

Tuesday, June 9, 2009

ಗ್ರಾಮೀಣ ಪ್ರತಿಭೆ ನಾಗೇಂದ್ರರವರಿಗೆ ಅಭಿನಂದನೆಗಳು.

ನಾಗೇಂದ್ರ ಮುತ್ಮುರ್ಡು.



ಇದೊಂದು ಸಂತೋಷದ ವಿಚಾರ. ಆತ್ಮೀಯ ಗೆಳೆಯ ನಾಗೇಂದ್ರ ಮುತ್ಮರ್ಡು ಬೆಹರೇನಿಗೆ ಹೋಗುತ್ತಿದ್ದಾರೆ. ಆ ದೇಶದ ರಾಜಧಾನಿ ಮನಾಮ ನಗರದಲ್ಲಿರುವ "ಸಾರ್ಥ ಪೌಂಡೇಶನ್" ಅವರು ಐದು ಜನಕ್ಕೆ ದಿನಾಂಕ ೧೨-೬-೨೦೦೯ ರಂದು ವಿವಿಧ ರಂಗದಲ್ಲಿ ಸಾಧನೆ ಮಾಡಿರುವ ಐದು ಜನ ಪ್ರತೀಭಾವಂತರಿಗೆ ಸನ್ಮಾನಿಸುತ್ತಿದ್ದಾರೆ. ಅದರಲ್ಲಿ ನಾಗೇಂಧ್ರ ಮುತ್ಮರ್ಡು ಕೂಡ ಒಬ್ಬರು.

ಇದ್ದ ಜಾಗದಲ್ಲೇ ಗಟ್ಟಿಯಾಗಿ ಬೇರೂರಿ ಏನಾದರೂ ಸಾಧಿಸಬೇಕೆಂದು ನಿರ್ಧರಿಸಿ ತನ್ನ ಊರಿನ ಆಡಿಕೆ ತೋಟ, ಹತ್ತಿರದ ಸಣ್ಣ ಹೊಳೆಯನ್ನೇ ತನ್ನ ಸ್ವಾಭಾವಿಕ ಸ್ಟುಡಿಯೋ ಮಾಡಿಕೊಂಡು, ತನ್ನೂರಿನ ಒಂಬತ್ತು ಮನೆಯ ಮಕ್ಕಳ ಆಟ ಪಾಟವನ್ನೇ ತನ್ನ ಫೋಟೋಗ್ರಫಿಯ ವಸ್ತುವನ್ನಾಗಿ ಬಳಸಿಕೊಂಡಿರುವ ಈತ ಅತ್ಯುತ್ತಮ ಪಿಕ್ಟೋರಿಯಲ್ ಫೋಟೋಗ್ರಾಫರ್. ನೆರಳು-ಬೆಳಕಿನ ಹೊಂದಾಣಿಕೆಯಲ್ಲಿ ಒಳ್ಳೆಯ ಹಿಡಿತ ಸಾಧಿಸಿರುವ ನಾಗೇಂದ್ರ ಒಳ್ಳೆಯ ಬರಹಗಾರರೂ ಹೌದು. ಆವರ ಹಳ್ಳಿಯಲ್ಲಿ ಅಂತರಜಾಲ ಸೌಕರ್ಯವಿದ್ದಿದ್ದರೇ ಇಷ್ಟು ಹೊತ್ತಿಗೆ ಆವರ ಸಹಜ ಶೈಲಿಯ ಬರವಣಿಗೆಯ ಜೊತೆಗೆ ಅತ್ಯುತ್ತಮ ಫೋಟೋಗಳನ್ನು ಆವರ ಬ್ಲಾಗಿನಲ್ಲಿ ನಾವೆಲ್ಲಾ ನೋಡಿ ಸಂತೋಷ ಪಡುತ್ತಿದ್ದವೇನೋ. ಇವರ ಅನೇಕ ಚಿತ್ರ-ಲೇಖನಗಳು ಪ್ರಜಾವಾಣಿ, ಸುಧಾ, ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಈಗಲೂ ಆಗುತ್ತಿವೆ.

ಕಾನ್ಸೂರಿನ ಹತ್ತಿರದ ಮುತ್ಮರ್ಡು ಇವರ ಹಳ್ಳಿ. ಪದವೀದರನಾದರೂ ನಗರದ ಆಸೆಯನ್ನು ಬಿಟ್ಟು ಇದ್ದ ಜಾಗದಲ್ಲೇ ಬದುಕನ್ನು ಕಂಡುಕೊಳ್ಳುವುದರ ಜೊತೆಗೆ ಫೋಟೋಗ್ರಫಿ ಸಾಧನೆಯನ್ನು ಅಲ್ಲಿಯೇ ಮಾಡಿರುವುದು ಇವರ ಹೆಗ್ಗಳಿಕೆ. ಕಳೆದ ಹದಿನೈದು ವರ್ಷಗಳಿಂದ ಹವ್ಯಾಸಿ ಛಾಯಾಗ್ರಾಹಕರಾಗಿ ಮುಂಬೈ, ಕಲ್ಕತ್ತ, ಇಂದೋರ್, ಬೆಂಗಳೂರು, ಲಕ್ನೋ ಮುಂತಾದ ಸ್ಥಳಗಳಲ್ಲಿ ರಾಷ್ಟ್ರಮಟ್ಟದ ಪ್ರಶಸ್ಥಿಗಳು, ಆಷ್ಟ್ರೀಯಾ, ಹಾಂಗ್‌ಕಾಂಗ್‌ನಲ್ಲಿ ಅಂತರರಾಷ್ಟ್ರೀಯ ಬಹುಮಾನಗಳನ್ನು ಗಳಿಸಿದ್ದಾರೆ. ಬೆಂಗಳೂರಿನಿಂದ ಸುಮಾರು ೫೦೦ ಕಿಲೊಮೀಟರ್ ದೂರದ ಸಿರಸಿ ತಾಲ್ಲುಕಿನಲ್ಲಿದ್ದರೂ ನಾವು ನಿತ್ಯ ಅಕ್ಕಪಕ್ಕದ ಮನೆಯವರಂತೆ ಫೋಟೋಗ್ರಫಿ ವಿಚಾರವಾಗಿ ಗಂಟೆಗಟ್ಟಲೇ ಮಾತಾಡಿಕೊಳ್ಳುತ್ತಿರುತ್ತೇವೆ. ಕಳೆದ ಮೂರು ವರ್ಷಗಳಿಂದ ನಾವು ಮೂವರು ಅನೇಕ ಬಾರಿ ಒಟ್ಟೊಟ್ಟಿಗೆ ಫೋಟೋಗ್ರಫಿ ಮಾಡಿದ್ದೇವೆ...ಅದರ ಸಂಭ್ರಮವನ್ನು ಅನುಭವಿಸಿದ್ದೇವೆ.

ಈ ವರ್ಷ ನನಗೆ ಮತ್ತು ಮಲ್ಲಿಕಾರ್ಜುನ್‍ಗೆ ARPS ಅಂತರರಾಷ್ಟ್ರೀಯ ಮನ್ನಣೆ ಸಿಕ್ಕಿದಾಗ ಆವರು ತನಗೆ ಸಿಕ್ಕಷ್ಟು ಸಂಭ್ರಮ ಪಟ್ಟಿದ್ದರು.. ಇದೇ ವರ್ಷವೇ ಆತನಿಗೆ ಇಂಥ ಸನ್ಮಾನ ವಿದೇಶದಲ್ಲಿ ನಡೆಯುತ್ತಿರುವುದರಿಂದ ಸಂಭ್ರಮಿಸುವ ಸರದಿ ನಮ್ಮದು. ಇವರು ಆದಿಕೈಲಾಸ ಮತ್ತು ಕೈಲಾಸ ಮಾನಸ ಸರೋವರಕ್ಕೆ ಹೋಗಿ ಬಂದಿದ್ದಾರೆ. ಅಲ್ಲಿ ಕ್ಲಿಕ್ಕಿಸಿದ ಅವರ ಚಿತ್ರಗಳೊಂದಿಗೆ ಅವರಿಗೆ ನಮ್ಮೆಲ್ಲರ ಅಭಿನಂದನೆಗಳು.



ಲೇಖನ
ಶಿವು.ಕೆ ARPS.

Thursday, June 4, 2009

ವರ್ಲ್ಡ್ ಟೆನ್ ಕೆ...[೨] ಓಡೋದು ಬಿಟ್ಟು ಏನೇನು ಮಾಡಿದರು ?

ಇಷ್ಟಕ್ಕೂ ನಾನು ವಿಧಾನ ಸೌಧ ಮುಂದಿನ ರಸ್ತೆಯನ್ನೇ ಫೋಟೋಗ್ರಫಿಗಾಗಿ ಆರಿಸಿಕೊಂಡಿದ್ದಕ್ಕೆ ಕಾರಣವೂ ಇದೆ.

ಕಂಟೀರವ ಕ್ರೀಡಾಂಗಣದಿಂದ ಕಸ್ತೂರ್‌ಬಾ ರಸ್ತೆ, ಮಹಾತ್ಮ ಗಾಂಧಿ ರಸ್ತೆ, ಕ್ವೀನ್ಸ್ ರಸ್ತೆ ಮುಖಾಂತರ ಜಿಪಿಒ ಬಳಿ ಬರುವವರೆಗೆ ಪ್ರತಿಯೊಬ್ಬ ಓಟಗಾರನೂ ತನ್ನ ಮನಸ್ಸಿನಲ್ಲಿ ಅಂದುಕೊಂಡಂತೆ ಗೆದ್ದೇ ಗೆಲ್ಲುವ, ಆರೋಗ್ಯ ಸುಧಾರಿಸಿಕೊಳ್ಳುವ, ದೇಹ ತೂಕ ಇಳಿಸಿಕೊಳ್ಳುವ, ಅನೇಕ ಮಹತ್ವಾಕಾಂಕ್ಷೆಗಳನ್ನು ಇಟ್ಟುಕೊಂಡೇ ಓಡಿಬರುತ್ತಾರೆ. ಅಲ್ಲಿಂದ ಮುಂದಕ್ಕೆ ವಿಧಾನ ಸೌಧದ ಮುಂದಿನ ರಸ್ತೆಗೆ ಬರಬೇಕು.

"ಊರಿಗೆ ಬಂದವಳು ನೀರಿಗೆ ಬರದೇ ಇರುತ್ತಾಳ" ಅನ್ನುವ ಗಾಧೆಯಂತೆ ಇಲ್ಲಿಗೆ ಬಂದವರ ಮನಸ್ಥಿತಿ ಬದಲಾಗಲೇಬೇಕು ಅನ್ನುವುದು ನನ್ನ ಲೆಕ್ಕಾಚಾರ. ವಿಧಾನ ಸೌಧದ ಪ್ರಭಾವವೋ ಅಥವ ಅದರೊಳಗೆ ಸೇರಿರುವವರ ಪ್ರಭಾವದ ಪರಿಣಾಮವೋ..... ಎಷ್ಟೇ ಓಳ್ಳೇ ಉದ್ದೇಶವಿಟ್ಟುಕೊಂಡಿದ್ದರೂ, ಓಡುತ್ತಿರುವವರ ಮನಸ್ಥಿತಿ ಇಲ್ಲಿ ಬದಲಾಗಿ ಅವರ ನಿಜವಾದ ಅವತಾರಗಳು ಇಲ್ಲಿಯೆ ಅನಾವರಣಗೊಳ್ಳುತ್ತವೆಂಬ ಖಚಿತ ನಂಬಿಕೆಯಿಂದಲೇ ಈ ಜಾಗವನ್ನು ಆರಿಸಿಕೊಂಡಿದ್ದೆ. ಹಾಗೇ ನನ್ನ ನಿರೀಕ್ಷೆ ಕೂಡ ಹುಸಿಯಾಗಲಿಲ್ಲವಾದ್ದರಿಂದ ಅದರ ಕೆಲವು ತುಣುಕುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಮೊದಲಿಗೆ ಕೆಲವು ವಿಧೇಶದ ಪ್ರಸಿದ್ಧ ಓಟಗಾರರು ಈ ರಸ್ತೆಗೆ ಬರುತ್ತಿದ್ದಂತೆ ಮತ್ತಷ್ಟು ಚುರುಕಾಗಿ ವೇಗವಾಗಿ, ಸ್ಪೂರ್ತಿಯಿಂದ ಓಡುತ್ತಿದ್ದರು. ಬಹುಶಃ ಅವರಿಗೆ ಇದನ್ನು ಕಟ್ಟಿದ ಕೆಂಗಲ್ ಹನುಮಂತಯ್ಯನವರ ಮಹತ್ವಾಕಾಂಕ್ಷೆ, ಮುಂದಾಲೋಚನೆಯ ಪ್ರಭಾವದಿಂದಾಗಿ ಕೆಲವು ವಿದೇಶಿ ಓಟಗಾರರು ಈ ರಸ್ತೆಗೆ ಬಂದಾಗ ಮತ್ತಷ್ಟು ಹುರುಪಿನಿಂದ, ವೇಗವಾಗಿ, ಓಡುತ್ತಿದ್ದರು. ಜೊತೆಗೆ ನಮ್ಮ ಅಂಗವಿಕಲ ಗಾಲಿ ಕುರ್ಚಿಯ ಓಟಗಾರರು ನಮ್ಮನ್ನೆಲ್ಲಾ ನೋಡಿ ನಮ್ಮೆಡೆಗೆ ವಿಷ್ ಮಾಡುತ್ತಾ, ನಮ್ಮ ಹುರಿದುಂಬಿಸುವಿಕೆಯಿಂದ ಮತ್ತಷ್ಟು ವೇಗವಾಗಿ ಸಾಗುತ್ತಿದ್ದರು..

ಇವರ ನಂತರ ದೂರದಲ್ಲಿ ವೇಗವಾಗಿ ಜಿಪಿಒದಿಂದ ಓಡಿ ಬರುತ್ತಿದ್ದಾರೆ ನಲವತ್ತು ದಾಟಿದವರು. ನಾನು ಅವರ ವೇಗಕ್ಕೆ ಖುಷಿಪಟ್ಟು ಕ್ಯಾಮೆರಾ ಮತ್ತು ಟೆಲಿಲೆನ್ಸ್ ಎಲ್ಲಾ ಸಿದ್ಧಮಾಡಿಕೊಂಡು ಕ್ಲಿಕ್ಕಿಸತೊಡಗಿದೆ. ಭಲೇ ಭಲೇ.. ಪರ್ವಾಗಿಲ್ಲ... ಇದಪ್ಪ ಜೀವನೋತ್ಸಹವೆನ್ನುತ್ತಾ ಹೊಸ ಹುರುಪಿನಿಂದ ಕ್ಲಿಕ್ಕಿಸತೊಡಗಿದೆ. ಅರೆರೆ....ಇದೇನಿದೂ ಕ್ಲಿಕ್ಕಿಸಲೇ ಆಗುತ್ತಿಲ್ಲವಲ್ಲ....ಏನಾದ್ರು ಟೆಕ್ನಿಕಲ್ ಪ್ರಾಬ್ಲಂ ಕ್ಯಾಮೆರಾದಲ್ಲಿ...? ನೋಡಿದೆ, ಕ್ಯಾಮೆರಾದಲ್ಲಿ ಯಾವುದೇ ತೊಂದರೆಯಿಲ್ಲ....ಮತ್ತೆ ತೊಂದರೆ ಎಲ್ಲಿದೆ... ಇರಲಿ ಎಂದು ಮತ್ತೊಮ್ಮೆ ಪ್ರಯತ್ನಿಸಿದೆ....ಆಗುತ್ತಿಲ್ಲ...

ಅವರೆಲ್ಲಾ ಓಡಿಬರುತ್ತಿದ್ದರೇ ತಾನೆ ನನ್ನ ಕ್ಯಾಮೆರಾ ಕ್ಲಿಕ್ ಆಗುವುದು ? ಅವರು ಆರಾಮವಾಗಿ ಹರಟುತ್ತಾ ನಡೆದು ಬರುತ್ತಿರುವುದು ಕ್ಯಾಮೆರಾಕಣ್ಣಿನಿಂದ ಕಾಣಿಸಿತ್ತು. ಅದು ಮೆದುಳಿಗೆ ಗೊತ್ತಾಗಿ ಅಲ್ಲಿಂದ ನೇರವಾಗಿ ನನ್ನ ತೋರುಬೆರಳಿಗೆ ಕ್ಲಿಕ್ಕಿಸಬೇಡವೆಂದು ಆರ್ಡರ್ ಪಾಸ್ ಆಗಿದೆ... ನನಗೆ ಗೊತ್ತಾಗದಂತೆ ನಡೆದ ಈ ಕ್ರಿಯೆಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಯಿತು.

ಆಗ ನನಗನ್ನಿಸಿತು ಓಹೋ! ಇದು ವಿಧಾನಸೌದದ ಪ್ರಭಾವ....ಈ ರಸ್ತೆಗೆ ಬರುತ್ತಿದ್ದಂತೆ ಓಡುವುದನ್ನು ಮರೆತಿದ್ದಾರಲ್ಲ!. ಮತ್ತೇನು ಮಾಡುತ್ತಾರೋ ನೋಡೇಬಿಡೋಣ ಅಂದುಕೊಂಡ ಮೇಲೆ ಮತ್ತೆ ನನ್ನ ಬೆರಳು ಕ್ರಿಯಾಶೀಲವಾಗತೊಡಗಿತು. ಆಷ್ಟರಲ್ಲಿ ನನ್ನ ಮುಂದೆಯೇ ಆ ದೊಡ್ಡ ಗುಂಪು ಸಾಗಿ ಹೋಗಿತ್ತು.

ಅದೋ..... ಮತ್ತೊಂದು ಹೆಂಗಳೆಯರ ತಂಡ ಓಡುತ್ತಾ... ನಡೆದುಕೊಂಡು ಬರುತ್ತಿದೆ. ಎಲ್ಲರ ಮುಖದಲ್ಲೂ ನಗು, ಹತ್ತಿರ ಬರುತ್ತಿದ್ದಂತೆ ಅವರ ಮಾತುಗಳು ಕೇಳಿಸುತ್ತಿವೆ..!

"ಮದುರಾ ಪಿಸುಮಾತಿಗೆ...ಅದರ ಸವಿಪ್ರೀತಿಗೆ.".....ನಲವತ್ತು ಪ್ಲಸ್ ಆಂಟಿ ಹಾಡು ಆಡುತ್ತಿದ್ದಾರೆ...

"ಗಣೇಶ ನಿನ್ನ ಮಹಿಮೆ ಅಪಾರ....ಭಕ್ತವತ್ಸಲ.."....ಮತ್ತೊಬ್ಬ ಆಂಟಿಯಿಂದ ಮುಂದುವರಿಕೆ..

"ಲಾಲಿ ಲಾಲಿ ಸುಕುಮಾರ..ಲಾಲಿ ಮುದ್ದು ಬಂಗಾರ....".

ವಾಹ್! ಎಂಥ ಅಂತ್ಯಾಕ್ಷರಿ....ನೋಡಿ.....



ಓಹ್ ಇಲ್ಲಿ ಅಂತ್ಯಾಕ್ಷರಿ ನಡೆಯುತ್ತಿದೆ.. ನಾನು ಅವರ ಜೊತೆ ಅವರ ಫೋಟೊ ಕ್ಲಿಕ್ಕಿಸುತ್ತಾ ನಡೆಯಲು ಪ್ರಾರಂಭಿಸಿದೆ...ಅವರು ನನ್ನ ಕ್ಯಾಮೆರಾ ನೋಡಿ ಮತ್ತಷ್ಟು ಎತ್ತರಿಸಿದ ಧ್ವನಿಯಿಂದ ಹಾಡುತ್ತಾ ಮುಂದೆ ನಡೆದರು. ಅವರು ಮುಂದೆ ಹೋಗುತ್ತಿದ್ದಂತೆ ದೂರದಲ್ಲಿ ಮತ್ತೊಂದು ಗುಂಪು ಬರುತ್ತಿದೆ. ಅದರಲ್ಲಿ ಮಹಿಳೆಯರು ಮತ್ತು ಮಹನಿಯರು ಒಟ್ಟಿಗೆ ಇದ್ದಾರೆ...!

"ಆಹ...ಅಹಾ..ಅಹ...ಒಹೋ.... ಒಹೋ.....ಹಿ..ಹೀ....ಹಿ......".

ನಗುವುದೇ ಸ್ವರ್ಗ...!


"ಹುಅಹ... ಯುಅಹ.....ಏಒಹೋ..".........ಅವರಲ್ಲೇ ಒಬ್ಬರಾದ ಮೇಲೆ ಒಬ್ಬರಂತೆ ನಗುವ ಸ್ಪರ್ದೆ ನಡೆಯುತ್ತಿದೆ. ನಮ್ಮ ಹತ್ತಿರ ಬಂದಾಗಲಂತೂ ಮತ್ತೊಷ್ಟು ಜೋರಾಗಿ ಗಹಗಹಿಸಿ ನಕ್ಕು ದೊಡ್ಡ ದೊಡ್ಡ ಫೋಸ್ ಕೊಟ್ಟು ಮುಂದೆ ನಡೆದರು...ಅವರಿಂದಾಗಿ ನಮಗೂ ನಗು ಬಂತು.

ನಂತರ ಇಬ್ಬರು ಕಾಲೇಜು ಹುಡುಗಿಯರು ಮತ್ತು ಒಬ್ಬ ಹುಡುಗ ಬರುತ್ತಿದ್ದರು.

"ಯು ನೊ..ಅವಳು ನನ್ನ ಇವತ್ತು ಮಾತಾಡಿಸಲೇ ಇಲ್ಲ" ..ಆ ಹುಡುಗಿಯ ಮಾತು ಹುಸಿಮುನಿಸಿನಿಂದ.

"ಅವಳಿಗೆ ಹೊಸ ಪ್ರೆಂಡ್ ಸಿಕ್ಕಿದ್ದಾನಲ್ಲ ಈಗ ನಿನ್ನ ಅವಶ್ಯಕತೆ ಅವನಿಗಿಲ್ಲ ಬಿಡು".....ಬೆಂಕಿಗೆ ತುಪ್ಪ ಹಾಕಿದಂತೆ ಮತ್ತೊಬ್ಬಳ ಮಾತು.

"ನೀನು ಇದೆಲ್ಲಾ ಬಿಟ್ಟು ಗಂಭೀರವಾಗಿ ಓದು"...ಅವರಿಬ್ಬರ ಜೊತೆಯಲ್ಲಿದ್ದ ಹುಡುಗನ ಉತ್ತರ....

ಓಡೋದು ಬಿಟ್ಟು ಇದೆಲ್ಲಾ ಯಾಕೆ ?


ಹೀಗೆ ಮೂವರ ಮದ್ಯೆ ಮಾತು ಕತೆ ಸಾಗಿತ್ತು. ನಾನು ಏನು ಕಾಲೇಜು ಹುಡುಗರೋ...ಓಡೋದು ಬಿಟ್ಟು ಇಲ್ಲೂ ಇದೆಲ್ಲಾ ಬೇಕಾ ಅಂದುಕೊಂಡೆ.

"ನೀನು ಏನೇ ಹೇಳಿ ಇಟ್ ಈಸ್ ನಾಟ್ ಫಾಸಿಬಲ್, ಆ ಸೆನ್ಸೆಕ್ಸ್ ಇಷ್ಟು ವರ್ಷ್ಟ್ ಆಗಬಾರದಿತ್ತು,
ಯಾಕ್ರಿ ಏನಾಯ್ತು...."

"ನನ್ನದು ......ಲಕ್ಷ ಅಮೌಂಟ್ ..............ಶೇರಿನ ಮೇಲೆ ಹಾಕಿದ್ದೆ. ಈಗ ಅದರ ಬೆಲೆ ಬಿದ್ದು ಹೋಗಿದೆ.".

ಓಟದ ನಡುವೆಯೂ ಶೇರು ವ್ಯವಹಾರದ ಮಾತೇ!

"ಎಷ್ಟು ಲಾಸ್ ಆಯ್ತು....."

"ಇಷ್ಟು ಲಕ್ಷ".......ಹೀಗೆ ಮಾತಾಡಿಕೊಂಡು ನಡೆಯುತ್ತಿದ್ದ ಮದ್ಯವಯಸ್ಕ ಗೆಳೆಯರು ನನ್ನ ಕ್ಯಾಮೆರದೊಳಗೆ ಸೆರೆಯಾದರು.

ಮತ್ತೊಂದು ಗುಂಪು ಬರುತ್ತಿದೆ. ನನ್ನ ಟೆಲಿ ಲೆನ್ಸ್‌ನಿಂದ ನೋಡಿದೆ. ಅವರೆಲ್ಲಾ ಹಣೆಗೆ ದೊಡ್ಡದಾಗಿ ಕುಂಕುಮವಿಟ್ಟುಕೊಂಡಿದ್ದಾರೆ. ಪಕ್ಕಾ ಸಂಪ್ರಾದಾಯಸ್ತ ಗೃಹಿಣಿಯರಿರಬಹುದು. ಅವರಲ್ಲೊಬ್ಬರು ಹೂ ಕಟ್ಟುತ್ತಿರುವಂತಿದೆಯಲ್ಲ... ಓಡುತ್ತಾ....ಅಲ್ಲಲ್ಲ ನಡೆಯುತ್ತಾ..ಇದು ಸಾಧ್ಯವೇ...ಚಕಚಕನೇ ಕ್ಲಿಕ್ಕಿಸಿದೆ. ಅಷ್ಟರಲ್ಲಿ ಹತ್ತಿರಬಂದರಲ್ಲ ಅವರ ಮಾತುಗಳು ಕೇಳಿಸತೊಡಗಿತು...

"ಅಲ್ಲಾ ದಾಕ್ಷಾಯಿಣಿ.... ಈ ಓಟ ಸರಿಬರಲಿಲ್ಲ ನೋಡು..."

"ಯಾಕ್ ಅಂಗಂತೀರಿ ಪಾರ್ವತಿಯವರೇ...."

"ಅಲ್ಲಾ...ಈ ಓಟದ ದಾರಿಯನ್ನು ಸಿಟಿ ಮಾರ್ಕೆಟ್ ಕಡೆ ಮಾಡಿದ್ರೆ ಎಂಗೂ ಇವತ್ತು ಭಾನುವಾರ ಒಂದಷ್ಟು ತರಕಾರಿಗಳನ್ನು ತಗೊಂಡು ಬಂದುಬಿಡಬಹುದಾಗಿತ್ತು..".

ಹೂವ ನೋಡು ಆಹಾ ಎಂಥಾ ಚೆಂದವಾಗಿದೆ..!


"ಹೂ ಕಣ್ರೀ.....ವಿಶಾಲಾಕ್ಷಮ್ಮನವರೇ, ಈಗ ಟಮೋಟೊ ಬೆಲೆ ಗಗನಕ್ಕೇರಿದೆಯಂತೆ.."

"ಅದಕ್ಕೆ ಕಣ್ರೀ ನಾನು ಟಮೋಟೋ ತರೋದು ನಿಲ್ಲಿಸಿದ್ದೀನಿ...".

"ಓಹ್! ಆಂಗಾದ್ರೆ ಟಮೋಟೋ ಇಲ್ದೇ ಮಾಡೋ ಆಡಿಗೆ ಅದೆಂಥ ಅಡಿಗೆ ದಾಕ್ಷಾಯಿಣಿ...".

"ಅಯ್ಯೋ ಅದಕ್ಯಾಕೆ ಚಿಂತೆ., ಇದೆಯಲ್ಲಾ ಹುಣಸೇ ಹಣ್ಣು. ಚೆನ್ನಾಗಿ ಕಿವುಚಿ ಹಾಕಿಬಿಡ್ತೀನಲ್ಲಾ...".

ಹೀಗೆ ದಾರಿಯುದ್ದಕ್ಕೂ ಸಾಗುತ್ತಿತ್ತು ಅವರ ಮಾತುಕತೆ....ತಕ್ಷಣ ನನಗೆ ಯಶವಂತ ಪುರ ಸಂತೆಯಲ್ಲಿ ನನ್ನಾಕೆ ವ್ಯಾಪಾರ ಮಾಡುತ್ತಿದ್ದ ಚಿತ್ರ ಕಣ್ಣಮುಂದೆ ಸಾಗಿ ಹೋಗಿತ್ತು.


ದೂರದಲ್ಲಿ ಏನನ್ನೋ ಕೈಯಲ್ಲಿ ಹಿಡಿದುಕೊಂಡು ಅಜ್ಜಿ ಬರುತ್ತಿದ್ದಾರೆ.. ನನ್ನ ಕ್ಯಾಮೆರಾ ಜೂಮ್ ಮಾಡಿದೆ. ಯಾವುದೋ ಸರದಂತಿದೆಯಲ್ಲ....ಇನ್ನು ಸ್ವಲ್ಪ ಹತ್ತಿರ ಬಂದ. ಈಗ ಸ್ವಷ್ಟವಾಗಿ ಕಾಣುತ್ತಿದೆ. ಅದೆಂತದೋ ರುದ್ರಾಕ್ಷಿ ಮಣಿಯಿರುವಂತಿದೆ. ಅದನ್ನಿಡಿದು ಅಜ್ಜಿ ಏನು ಮಾಡುತ್ತಿದ್ದಾರೆ ? ಮತ್ತಷ್ಟು ಹತ್ತಿರ ಬಂದರು. ಕೇಳಿಸುತ್ತಿದೆ.... ಯಾವುದೋ ಮಂತ್ರ ಹೇಳುತ್ತಿದ್ದಾರಲ್ಲ...ಅವರ ಪಕ್ಕದಲ್ಲೇ ಅವರ ಫೋಟೊ ತೆಗೆಯುತ್ತಾ ನಡೆದು ಮಾತಾಡಲೆತ್ನಿಸಿದೆ. ಅಜ್ಜಿ ಒಮ್ಮೆ ಮುಗುಳ್ನಕ್ಕೂ ತನ್ನ ಬಾಯಿಯ ಮೇಲೆ ತೋರುಬೆರಳು ಇಟ್ಟು "ಶೂ."......ಅನ್ನುವಂತೆ ಸನ್ನೆ ಮಾಡಿತು. ಓಹ್ ಅವರಿಗೆ ತೊಂದರೆಕೊಡಬಾರದೆಂದು ಹೇಳುತ್ತಿದ್ದಾರೆ.. ಇವತ್ತೇ ಆ ಮಂತ್ರವನ್ನು ಓಟ ಪೂರ್ತಿ ಹೇಳುತ್ತೇನೆ ಅಂತ ಎಷ್ಟು ದಿನದಿಂದ ಮಾಡಿಕೊಂಡ ಹರಕೆಯೋ ಅಂದುಕೊಂಡು ಸುಮ್ಮನಾದೆ.

ಓಟದುದ್ದಕ್ಕೂ ಮಂತ್ರಗಳ ಉಚ್ಚಾರ...ಹೀಗೂ ಉಂಟೆ...!



ಅಯ್ಯೋ ಇಲ್ಲಿಗೆ ಬಂದ ಉದ್ದೇಶವೇ ಎಕ್ಕುಟ್ಟಿ ಹೋಗುತ್ತಿದೆಯಲ್ಲಾ ಅಂದುಕೊಂಡು ಹೋಗಲಿ ಒಂದಷ್ಟು ಭೂಪಟಗಳನ್ನಾದರೂ ಕ್ಲಿಕ್ಕಿಸೋಣವೆಂದು ನನ್ನ ಫೋಟೊಗ್ರಫಿ ಶೈಲಿಯನ್ನು ಬದಲಿಸಿಕೊಳ್ಳತೊಡಗಿದೆ. ಎದುರಿಗೆ ಬರುತ್ತಿದ್ದವರಿಗೆಲ್ಲಾ ಮುಗುಳ್ನಗೆ ಬೀರಿ ಅವರು ಮುಂದೆ ಹೋಗುತ್ತಿದ್ದಂತೆ ಅವರೆಡೆಗೆ ಕ್ಯಾಮೆರಾ ಹಿಡಿಯುತ್ತಿದ್ದುದನ್ನು ನೋಡಿ, ಅದನ್ನರಿತ ಒಬ್ಬ ಮಾಧ್ಯಮ ಮಿತ್ರ "ಇಲ್ಲೂ ಅವರನ್ನು ನೆಮ್ಮದಿಯಾಗಿ ಓಡಲಿಕ್ಕೆ ಬಿಡೋಲ್ವ " ಅಂದು ಮುಗಳ್ನಕ್ಕ. ಗೊತ್ತಿಲ್ಲದವರು ನನ್ನೆಡೆಗೆ ಅಚ್ಚರಿಯಿಂದ ನೋಡತೊಡಗಿದರು. ಸ್ವಲ್ಪ ಹೊತ್ತು ಹೀಗೆ ಮಾಡುತ್ತಿದ್ದುದನ್ನು ನೋಡಿ ಓಡಿ ಅಲ್ಲಲ್ಲ ನಡೆದು ಬರುತ್ತಿದ್ದ ಹಿರಿಯ ಭೂಪಟ ತಲೆಯವರು ಕೇಳಿಯೇ ಬಿಟ್ಟರು.

"ಅದೇನ್ರಿ......ಮುಖವನ್ನು ತೆಗೆಯುವುದನ್ನು ಬಿಟ್ಟು ಹಿಂಬಾಗ ಏನ್ ತೆಗೆಯುತ್ತಿದ್ದೀರಿ..".

"ಇಲ್ಲ ಸರ್ ಮುಂದೆ ಓಡುತ್ತಿರುವ ಇತಿಯೋಪಿಯ ದೇಶದ ಮಹಿಳಾ ಸ್ಪರ್ಧಿಗಳನ್ನು ಕ್ಲಿಕ್ಕಿಸುತ್ತಿದ್ದೇನೆ...."

"ಓಹ್ ! ಹೌದಾ.....ಸರಿ ಸರಿ.....ತೆಗೀರಿ.....ಅಂದು ಮರುಕ್ಷಣವೇ..".

"ಅವರನ್ನು ಯಾಕ್ರೀ ಹಿಂಬದಿ ತೆಗೀತಿದ್ದೀರಿ..."

ಈ ಪ್ರಶ್ನೆಗೆ ನನ್ನಲ್ಲಿ ತಕ್ಷಣ ಉತ್ತರವಿರಲಿಲ್ಲ. ಏನೋ ಒಂದು ಹಾರಿಕೆ ಉತ್ತರಕೊಟ್ಟು ಮುಂದೆ ಕಳುಹಿಸಿದ್ದೆ. ನನ್ನ ಪರದಾಟ ನೋಡಿ ಪಕ್ಕದಲ್ಲಿದ್ದ ಗೆಳೆಯರು ಮುಸಿ ಮುಸಿ ನಗುತ್ತಿದ್ದರು.


ಮಧುರ ಪಿಸುಮಾತಿಗೆ.....


ಇವೆಲ್ಲದರ ನಡುವೆ ಅದೆಷ್ಟೋ ಜನರು ಮೊಬೈಲಿನಲ್ಲಿ ಮಾತಾಡಿಕೊಂಡು ಹೋಗುತ್ತಿದ್ದರು. ನವ ಜೋಡಿಗಳ, ಪ್ರೇಮಿಗಳ ಮಾತುಗಳನ್ನು ಕೇಳಿಸಿಕೊಳ್ಳಲು ಪ್ರಯತ್ನಿಸಿದರೂ ಅವರದು ಪಿಸುಪಿಸು ಗುಸುಗುಸು ಮಾತುಗಳಾದ್ದರಿಂದ ಏನು ಮಾತನಾಡಿಕೊಳ್ಳೂತ್ತಿರಬಹುದು ಅಂತ ಗೊತ್ತಾಗಲಿಲ್ಲ.


ಓಟಕ್ಕಿಂತ ಮೊಬೈಲ್ ಮಾತೇ ಹೆಚ್ಚಾಯಿತು.....

ಈ ನಡುವೆ ಒಬ್ಬ ವಿಕಲಾಂಗ ಗಾಲಿ ಕುರ್ಚಿ ಓಟಗಾರ್ತಿಯೂ ನನ್ನ ಬಳಿ ಬಂದು ತನ್ನ ಸಣ್ಣ ಕ್ಯಾಮೆರಾಗೆ ಶೆಲ್[ಬ್ಯಾಟರಿ]ಹಾಕಿಕೊಡಿ ಅಂತ ಹೇಳಿ ನಾನು ಹಾಕಿಕೊಟ್ಟಾಗ ನನ್ನ ಕೈಗೆ ಅದೇ ಕ್ಯಾಮೆರಾ ಕೊಟ್ಟು ಆಕೆ ಫೋಟೊ ತೆಗೆಸಿಕೊಂಡಿದ್ದು ಆಯಿತು.

ಆರೆರೆ...ಇದೇನಿದು...ವ್ಯಕ್ತಿ ದಿನಪತ್ರಿಕೆ ಓದುತ್ತಾ ಬರುತ್ತಿದ್ದಾನಲ್ಲ...ಅದಕ್ಕೆ ಮನೆಯಲ್ಲಿ ಜಾಗವಿರಲಿಲ್ಲವೇ...ಅಂದುಕೊಂಡು ಕ್ಲಿಕ್ಕಿಸತೊಡಗಿದೆ. ಆತನಂತೂ ಅಕ್ಕ ಪಕ್ಕದವರ ಪರಿವೆಯೋ ಇಲ್ಲದಂತೆ ಸುಮ್ಮನೇ ಓದುತ್ತಾ ನಡೆಯುತ್ತಲೇ...ಇದ್ದ..


ಓಟದ ಮದ್ಯೆ ಹಿರಿಯಜ್ಜನ ಸಂದರ್ಶನ..


ಇದೆಲ್ಲಾ ಚಟುವಟಿಕೆಗಳ ನಡುವೆ ಅಲ್ಲಲ್ಲಿ ಫೋಟೋ ತೆಗೆಸಿಕೊಳ್ಳುವವರು, ಓಡುತ್ತಾ ನೃತ್ಯ ಮಾಡಿಕೊಂಡು ಹೋಗುವವನು, ಮಾದ್ಯಮದವರು ಸಂದರ್ಶನ ಮಾಡುವುದು, .....ಹೀಗೆ ಅವರ ಓಟ ಸಾಗಿತ್ತು.

ಇವರ ನಡುವೆಯೇ ನಿಜಕ್ಕೂ ಓಡಿದವರು, ಗೆಲ್ಲಲೆಂದೇ ಓಡುತ್ತಿದ್ದವರು ನನ್ನ ಕ್ಯಾಮೆರಾಗೆ ಸೆರೆಯಾದರು.





ಓಟಕ್ಕೆ ಕಾಲುಗಳು ಎಷ್ಟು ಮುಖ್ಯ ಅಲ್ಲವೇ !

ವಿಶ್ವ ಪರಿಸರ ದಿನಕ್ಕೆ ಅತ್ಯುತ್ತಮ ಕೊಡುಗೆ ಪ್ಲಾಸ್ಟಿಕ್ ಬಾಟಲಿಗಳನ್ನು ರಸ್ತೆಯಲ್ಲಿ ಬಿಸಾಡಿರುವುದು..
ಈ ಬೆಂಗಳೂರು ವಿಶ್ವ ಮ್ಯಾರಥಾನ್ ಸ್ಪರ್ಧೆಯಲ್ಲಿ ಜನರು ಓಡುವುದನ್ನು ಮರೆತು ಏನೆಲ್ಲಾ ಮಾಡಿ ನಮ್ಮೆಲ್ಲರ ಮನಸ್ಸಿಗೆ ಖುಷಿ, ನಗು, ಉಲ್ಲಾಸವನ್ನು ಕೊಟ್ಟರು. ಆದರೆ ಕುಡಿಯುವ ನೀರಿಗಾಗಿ ಅವರಿಗೆ ಕೊಟ್ಟಿದ್ದ ಪ್ಲಾಸ್ಟಿಕ್ ಬಾಟಲಿಯನ್ನು ತಮ್ಮ ಓಟದ ರಸ್ತೆಯುದ್ದಕ್ಕೂ ಬಿಸಾಡಿ ಹೋಗಿದ್ದು ಮಾತ್ರ ಮನಸ್ಸಿಗೆ ಬೇಸರ ತಂದಿತು.

ಚಿತ್ರಗಳು ಮತ್ತು ಲೇಖನ.
ಶಿವು.ಕೆ. ARPS.