Monday, December 21, 2009

"ಅಣ್ಣಾ ಇದು ಯಾವ ಮೀನು ಗೊತ್ತಾ"



"ಒಂದು ನೂರು ಪಾರ್ಸೆಲ್, ಮತ್ತೊಂದು ನೂರು ಸರ್ವಿಸ್,"

ಆ ಮಾತನ್ನು ಕೇಳಿ ಆಕೆಯತ್ತ ನೋಡಿದೆ. ಮಧ್ಯ ವಯಸ್ಸು ದಾಟಿದ್ದರೂ ನೋಡಲು ಲಕ್ಷಣವಾಗಿದ್ದಳು ಆಕೆ. ಚಟಪಟ ಅಂತ ಮಾತಾಡುತ್ತಾ, ಕಣ್ಣಲ್ಲೇ ಎಲ್ಲರನ್ನೂ ಗಮನಿಸುತ್ತಾ, ಮಾರು ದೂರದಲ್ಲಿ ನಿಂತು ತಿಂದು ಮುಗಿಸಿದವನು ಹಣ ಕೊಡುತ್ತಾನಾ, ಇಲ್ಲವಾ ಅಂತ ಗಮನಿಸುತ್ತಾ, ತನ್ನ ಪಕ್ಕ ನಿಂತು ಬಾಣಲೆಯ ಎಣ್ಣೆಯಲ್ಲಿ ಮೀನಿನ ಕಬಾಬ್ ಮತ್ತು ಅದರ ಪಕ್ಕ ಮತ್ತೊಂದು ಕಪ್ಪುಬಣ್ಣದ ಕಾವಲಿಯಲ್ಲಿ ಮೀನು ಪ್ರೈ ಮಾಡುತ್ತಿದ್ದ ಗಂಡನ ಕಡೆಗೆ ಆಗಾಗ ಹೀಗೆ ಆರ್ಡರ್ ಮಾಡುತ್ತಿದ್ದಳು ಅವಳು.

ಮತ್ತೆ ಅವಳ ಬಾಯಿಂದ ಅದೇ ಮಾತು. "ನಾಲ್ಕು ನೂರು ಪಾರ್ಸೆಲ್, ಕಾಲ್ ಪ್ರೈ ಪಾರ್ಸೆಲ್, ನಿಮಗೇನಣ್ಣ, ಸ್ವಲ್ಪ ಇರಿ, ಅರ್ಜೆಂಟ್ ಮಾಡಿದ್ರೆ ಹೇಗೆ, ಮೀನು ಚೆನ್ನಾಗಿ ಬೇಯಬೇಕಲ್ವ, ಅರ್ಜೆಂಟ್ ಮಾಡಬೇಡ್ರಿ,"

ಮತ್ತೆ ಗಂಡನತ್ತ ತಿರುಗಿ "ನಾಲ್ಕು ನೂರು ಕಬಾಬ್ ಪಾರ್ಸೆಲ್, ಕಾಲ್ ಪ್ರೈ ಪಾರ್ಸೆಲ್," ಅನ್ನುತ್ತಾ ಈಗ ಮೀನನ್ನು ತೆಗೆದುಕೊಂಡು ತಿನ್ನುತ್ತಿರುವವರ ಕಡೆ ಒಂದು ಸುತ್ತು ಗಮನ ಹರಿಸಿದಳು.

ನನಗಂತೂ ಇದು ನಿಜಕ್ಕೂ ಕುತೂಹಲವೆನ್ನಿಸಿತ್ತು. ಆತ ಬಾಣಲೆಗೆ ಹಾಕುವ ಮುನ್ನ ತೂಕದ ತಕ್ಕಡಿಯಲ್ಲಿ ನೂರು ಗ್ರಾಮ್ ಮೀನಿನ ತುಣುಕುಗಳನ್ನು ಹಾಕಿದ. ಸ್ವಲ್ಪ ಕಡಿಮೆ ಬಂತು. ಆಗ ದೂರದಿಂದಲೇ ಒಂದು ಮೀನಿನ ತುಂಡನ್ನು ತಕ್ಕಡಿಗೆ ಎಸೆದಾಗ ಅದು ಕೆಳಗೆ ಬಂತು. ತಕ್ಷಣ ಅದನ್ನು ತೆಗೆದು ಎಣ್ಣೆ ಕಾಯುತ್ತಿರುವ ಬಾಣಲೆಗೆ ಹಾಕಿದ. ಆಗ ನನಗನ್ನಿಸಿತು ಒಂದು ನೂರು ಅಂದರೆ ಒಂದು ಪ್ಲೇಟ್, ನಾಲ್ಕು ನೂರು ಅಂದರೆ ನಾಲ್ಕು ಪ್ಲೇಟ್ ಅಂತ.

"ಅರೆರೆ..ಇವನೇನು ಇಷ್ಟು ಕರೆಕ್ಟ್ ಆಗಿ ತೂಕ ಹಾಕುತ್ತಾನಲ್ಲ, ಅಂದುಕೊಳ್ಳುತ್ತಾ ಅವನೆಡೆಗೆ ನೋಡಿದೆ. ಆತ ತನ್ನ ಕೆಲಸದಲ್ಲಿ ಮಗ್ನ. ಹೆಂಡತಿಗೆ ತಕ್ಕ ಗಂಡ ಅಂದುಕೊಂಡು ನನ್ನ ಜೊತೆಯಲ್ಲಿ ಬಂದವನ ಕಡೆಗೆ ತಿರುಗಿ "ನಿನಗೇನು ಬೇಕೋ ತೆಗೆದುಕೊ" ಅಂದೆ. ಅವನು ತುಸು ನಾಚುತ್ತಾ, ಚೊತೆಯಲ್ಲಿಯೇ ಅತಿ ನಾಚಿಕೆ ಪಟ್ಟುಕೊಂಡರೆ ನನಗೆ ಸಿಗಬೇಕಾದ್ದು ಸಿಗಲಾರದು ಅಂತಲೂ ಅನ್ನಿಸಿ,

"ನೋಡಿ ಸರ್, ಇಲ್ಲಿ ಮೀನಿನ ಕಬಾಬ್ ತುಂಬಾ ಚೆನ್ನಾಗಿ ಮಾಡುತ್ತಾರೆ, ಫ್ರೈ ಕೂಡ ತುಂಬಾ ಚೆನ್ನಾಗಿರುತ್ತೆ. ಮೊದಲು ಫ್ರೈ ತಿಂದುಬಿಡುತ್ತೇನೆ ನಂತರ ಕಬಾಬ್ ಟೇಸ್ಟ್ ಮಾಡೋಣ" ಅಂದವನೇ ಎರಡು ಪ್ಲೇಟ್ ಕಬಾಬ್ ಅಂದ.

ಅರೆರೆ...ನನಗೂ ಸೇರಿಸಿ ಹೇಳುತ್ತಾನಲ್ಲ ಇವನು ಅನ್ನಿಸಿ,

"ನನಗೆ ಬೇಡ ನೀನು ತಗೋ" ಅಂದೆ.

"ಇರಲಿ ತಗೊಳ್ಳಿ" ಅಂದ. ಮತ್ತೆ ನನಗೆ ಬೇಡವೆಂದು ಒಂದು ಪ್ಲೇಟ್ ಮಾತ್ರ ಅಂತ ಆ ಹೆಂಗಸಿಗೆ ನಾನೇ ಹೇಳಿದೆ. ಐದೇ ನಿಮಿಷದಲ್ಲಿ ಆತ ಕೇಳಿದ ಹೊಗೆಯಾಡುತ್ತಿರುವ ಮೀನಿನ ಫ್ರೈ, ಈರುಳ್ಳೀ ಮತ್ತು ನಿಂಬೆಹಣ್ಣಿನ ಚೂರಿನ ಜೊತೆಗೆ ಬಂತು. ಆತನ ನೋಡಿ ನನಗೆ ತುಂಬಾ ಖುಷಿಯಾಯ್ತು. ಏಕೆಂದರೆ ಅದನ್ನು ತಿನ್ನುವಾಗ ಅದೇನು ಆನಂದವೋ ಅವನಿಗೆ. ಮತ್ತೊಂದು ಪ್ಲೇಟ್ ಮೀನು ಫ್ರೈ ಕೇಳಿ ತಿಂದ.

"ಅಣ್ಣಾ ಇದು ಯಾವ ಮೀನು ಗೊತ್ತಾ"

"ಗೊತ್ತಿಲ್ಲಪ್ಪ"

"ಇದೇ ಅಣ್ಣಾ ಪಾಂಪ್ಲೆಟ್ ಮೀನು. ನಾವೇ ಹಿಡಿದ ಮೀನನ್ನು ಇಲ್ಲಿ ಇಷ್ಟು ರುಚಿಯಾಗಿ ಮಸಾಲೆ ಹಾಕಿ ಮಾಡುತ್ತಾರೆ. ಎರಡು ಪೆಗ್ ಹಾಕಿಕೊಂಡು ಇಲ್ಲಿ ಬಂದುಬಿಟ್ಟರೆ ಇಲ್ಲಿನ ವಾಸನೆಯೇ ಸ್ವರ್ಗಸುಖ ಗೊತ್ತಣ್ಣ" ಅಂದ ಅವನ ಕಣ್ಣುಗಳಲ್ಲಿ ತೃಪ್ತಿಯ ಕುರುಹು ಕಾಣುತ್ತಿತ್ತು. ಅವನ ಮಾತಿಗೆ ನಾನು ಉತ್ತರ ಕೊಡದೆ ಸುಮ್ಮನೆ ನಸುನಕ್ಕೆ. ನಾನು ಮಾತಾಡದಿರುವುದು ನೋಡಿ ಅವನೇ ಮುಂದುವರಿಸಿದ.

"ಇಲ್ಲಿ ನೋಡಿಣ್ಣಾ, ನಾನು ಪ್ರತಿದಿನ ಇಂಥ ನೂರಾರು ಮೀನುಗಳನ್ನು ನನ್ನ ಬಲೆಯಲ್ಲಿ ಹಿಡಿದುಹಾಕ್ತೇನೆ. ಆದ್ರೆ ಅದನ್ನು ತಿನ್ನುವ ಯೋಗವಿಲ್ಲ. ಯಾರೋ ಎಲ್ಲವನ್ನು ಕೊಂಡುಕೊಳ್ಳುತ್ತಾರೆ, ನಂತರ ಎಲ್ಲ ಮೀನುಗಳನ್ನು ವಿಂಗಡಿಸಿ, ಮಾರುತ್ತಾರೆ. ಇಲ್ಲಿ ಹೀಗೆ ಎಣ್ಣೆಯಲ್ಲಿ ಕುದಿಯುವ ಹೊತ್ತಿಗೆ ಅದರ ಬೆಲೆಯ ಹತ್ತರಷ್ಟು ಕೊಡಬೇಕೆಂದಾಗ ಮನಸ್ಸಿಗೆ ನೋವಾಗುತ್ತಣ್ಣ" ಅಂದಾಗ ಅವನ ಮನಸ್ಸಿನ ನೋವು ಕಣ್ಣುಗಳಲ್ಲಿ ಕಾಣುತ್ತಿತ್ತು.

"ನಿನಗಿಷ್ಟವಾದ ಈ ಮೀನನ್ನು ನೀನೆ ಬಲೆ ಹಾಕಿ ಹಿಡಿದಿರುವೆ ಅಂದ ಮೇಲೆ ನಿನಗೆ ಬೇಕಾದ್ದನ್ನು ಆರಿಸಿಕೊಂಡು ಮನೆಯಲ್ಲಿ ನಿನ್ನ ಹೆಂಡತಿಗೆ ಕೊಟ್ಟು ನಿನಗೆ ಬೇಕಾದ ಹಾಗೆ ಮಾಡಿಸಿಕೊಂಡು ತಿನ್ನಬಹುದಲ್ವಾ? ಅವನೆಡೆಗೆ ಪ್ರಶ್ನೆ ಎಸೆದೆ.

ಆತ ತಕ್ಷಣ ತಿನ್ನುತ್ತಿದ್ದವನು ನಿಲ್ಲಿಸಿದ. ನನ್ನಡೆಗೆ ನೋಡಿದ. ಅವನ ನೋಟ ನನಗೆ ಆ ಕ್ಷಣಕ್ಕೆ ಭಯವೆನ್ನಿಸಿತು. "

"ಯಾಕೆ ಹಾಗೆ ನೋಡ್ತೀಯಾ" ಅಂದೆ.

"ಅಣ್ಣಾ ನನಗೆಲ್ಲಿ ಹೆಂಡತಿ ಇದ್ದಾಳೆ, ಅವಳು ತೀರಿಹೋಗಿ ಐದು ವರ್ಷಗಳಾದವು."

ಆತ ತಲೆ ಎತ್ತದೇ ಮೆತ್ತನೆ ದ್ವನಿಯಲ್ಲಿ ಹೇಳಿದಾಗ ನನಗೆ ಒಂದು ಕ್ಷಣ ಶಾಕ್ ಆಗಿತ್ತು. ಅವನೆಡೆಗೆ ನೋಡಿದೆ. ಕಂಡರೂ ಕಾಣದ ಹಾಗೆ ಅವನ ಕಣ್ಣಂಚಲ್ಲಿ ನೀರು ಇಣುಕಿತ್ತು.

ನನ್ನ ಮನಸ್ಸಿಗೆ ಒಂಥರ ಕಸಿವಿಸಿ ಉಂಟಾಯಿತು. ನಾನು ಈ ವಿಚಾರವನ್ನು ಕೇಳಬಾರದಿತ್ತು ಅನ್ನಿಸಿತು. ಹೋಗಲಿ ಬಿಡು ಅಂತ ಸಮಾಧಾನಿಸಿ, ಅವನು ಬೇಡವೆಂದರೂ ಮತ್ತೊಂದು ಮೀನಿನ ಕಬಾಬ್ ಹೇಳಿದೆ. ನನ್ನ ಕಡೆಗೆ ನೋಡದೇ ಬಗ್ಗಿ ಕಣ್ಣಂಚಿನ ನೀರನ್ನು ಒರಸಿಕೊಳ್ಳುತ್ತಿದ್ದ. ಎರಡು ಪೆಗ್ ಕುಡಿದಿದ್ದಕ್ಕೋ ಏನೋ ಕಣ್ಣು ಬೇಗನೇ ಕೆಂಪಾಗಿತ್ತು.

ಅಲ್ಲಿಂದ ಇಬ್ಬರೂ ಹೊರಟೆವು. ಅವನಿಗಿಷ್ಟವಾದ ಹೋಟಲ್ಲಿಗೆ ಹೋಗಿ ಊಟ ಕೊಡಿಸಿದೆ. ಮತ್ತದೇ ಮೀನಿನ ಕೆಂಪುಬಣ್ಣದ ಸಾರು, ಕೆಂಪುಬಣ್ಣದ ದಪ್ಪಕ್ಕಿ ಅನ್ನವನ್ನು ಇಷ್ಟಪಟ್ಟು ತಿಂದು ಮುಗಿಸಿದ. ಅವನು ತೃಪ್ತನಾಗಿದ್ದು ಕಂಡು ನನಗೆ ಖುಷಿಯಾಯ್ತು.

ನನಗೆ ಆತ ಸಿಕ್ಕಿದ ಮೇಲೆ ಒಂದೇ ಸಮ ಹರಳು ಹುರಿದಂತೆ ಮಾತಾಡುತ್ತಿದ್ದವನು ಇವನೇನಾ ಅನ್ನುವಷ್ಟರ ಮಟ್ಟಿಗೆ ಸುಮ್ಮನಾಗಿದ್ದ ಅವನನ್ನು ಮತ್ತೆ ಮಾತಾಡಿಸಬೇಕೆನ್ನಿಸಲ್ಲಿಲ್ಲ. ಒಂದು ಫರ್ಲಾಂಗು ದೂರದ ಅವನ ಮನೆ ಕಡೆಗೆ ಇಬ್ಬರು ಸುಮ್ಮನೆ ನಡೆಯುತ್ತಿದ್ದೆವು. ನಮ್ಮ ನಡುವೆ ಮಾತಿರಲಿಲ್ಲ. ಅವನ ಮನೆಗೆ ಹೋಗುವ ಮೊದಲು ಒಂದು ದೊಡ್ಡ ಸೇತುವೆ ಬರುತ್ತದೆ. ಅದೇ ಉಡುಪಿಗೆ ಐದು ಕಿಲೋಮೀಟರ್ ದೂರದ ಉದ್ಯಾವರ ಸೇತುವೆ. ಕೆಳಗೆ ನೇತ್ರಾವತಿ ಜನವರಿಯ ತಿಂಗಳ ಅಮವಾಸ್ಯೆಯಲ್ಲಿ ತೆಳ್ಳಗೆ ಹರಿಯುತ್ತಿದ್ದಳು. ಸೇತುವೆಯ ಕೆಳಗೆ ಇಳಿದು ಹೋದರೆ ದೂರದಲ್ಲಿ ಸಣ್ಣದಾಗಿ ಕಾಣುತ್ತದೆ ಆತನ ಹೆಂಚಿನ ಮನೆ. ಎರಡು ಕಡೆ ನೀರು. ಮಧ್ಯದಲ್ಲಿ ನಾಲ್ಕು ಮನೆ. ಅದರಲ್ಲಿ ಒಂದು ಮನೆ ಈತನದು.
"ಕತ್ತಲಲ್ಲಿ ಏನು ಕಾಣಿಸುತ್ತಿಲ್ಲ ಹೇಗೆ ಹೋಗುತ್ತೀಯಾ" ನನಗೆ ಆತಂಕ.

"ಅಯ್ಯೋ ಇದ್ಯಾವ ಕತ್ತಲು ಬಿಡಿಣ್ಣಾ, ಇಂಥ ಕತ್ತಲೆಯ ಅಮಾವಾಸ್ಯೆಯಲ್ಲಿ ನೀರು ಇಳಿದಿರುವಾಗಲೇ ನೀರಿನೊಳಗೆ ಬಲೆಯನ್ನು ಇಳಿಬಿಟ್ಟಿರುತ್ತೇವೆ. ಮಧ್ಯರಾತ್ರಿಯ ಹೊತ್ತಿಗೆ ರಾಶಿ ರಾಶಿ ಮೀನು ಗೊತ್ತಾ? ಅಂಥವನ್ನೇ ಮಾಡಿರುವಾಗ ಇದ್ಯಾವ ಲೆಕ್ಕ. ನೀವು ಹೋಗಿ ನಾಳೆ ಬೆಳಿಗ್ಗೆ ಸಿಗುತ್ತೇನೆ" ಅಂದವನು ನಿಧಾನವಾಗಿ ಆ ಕತ್ತಲೆಯಲ್ಲಿ ನಡೆಯತೊಡಗಿದ.

ನನಗೆ ಒಂಥರ ಆತಂಕವಿದ್ದರೂ ಆತನ ತೆಳ್ಳಗಿನ ಆಕೃತಿ ಕತ್ತಲೆಯಲ್ಲಿ ಮರೆಯಾಗುವವರೆಗೂ ನೋಡುತ್ತಿದ್ದೆ. ಅಂಚಿಕಡ್ಡಿಯಂತೆ ತೆಳ್ಳಗಿದ್ದ ಇವನು ಯಾವ ರೀತಿ ಅಷ್ಟು ದೊಡ್ಡ ಮೀನಿನ ಬಲೆಯನ್ನು ಎಸೆಯಬಲ್ಲ? ಅನ್ನುವ ಪ್ರಶ್ನೆಯೂ ಮಿಂಚಂತೆ ಬಂದು ಆ ಕತ್ತಲಲ್ಲಿ ಹಾಗೆ ಮಾಯವಾಗಿತ್ತು. ನೋಡನೋಡುತ್ತಿದ್ದಂತೆ ಆತನ ಆಕೃತಿಯೂ ಕತ್ತಲೆಯೊಳಗೆ ಒಂದಾಗಿತ್ತು. ನಾನು ಉದ್ಯಾವರ ಬಸ್ ನಿಲ್ದಾಣದ ಕಡೆಗೆ ಹೆಜ್ಜೆ ಹಾಕಿದೆ. "ಆರೆರೆ ಅವನ ಫೋನ್ ನಂಬರ್ ತೆಗೆದುಕೊಳ್ಳಲೇ ಇಲ್ಲವಲ್ಲ., ಎಂಥ ಕೆಲಸವಾಯಿತು. ವಾಪಾಸ್ ಹೋಗೋಣವೆಂದರೆ ಪೂರ್ಣ ಕತ್ತಲು ಏನು ಮಾಡುವುದು" ಒಳ್ಳೇ ಫಜೀತಿಯಾಯಿತಲ್ಲ, ನಾಳೆ ಇವನನ್ನು ಹುಡುಕುವುದು ಹೇಗೆ, ಒಳ್ಳೇ ಯಡವಟ್ಟು ಕೆಲಸ ಮಾಡಿಕೊಂಡುಬಿಟ್ಟೆನಲ್ಲ" ಅಂದುಕೊಳ್ಳುವ ಹೊತ್ತಿಗೆ ಉಡುಪಿಗೆ ಹೋಗುವ ಬಸ್ ಬಂತು.

ದಾರಿಯುದ್ದಕ್ಕೂ ಅವನ ಸಂಸಾರದ ಕತೆಯನ್ನು ಮೆಲುಕು ಹಾಕುವ ಹೊತ್ತಿಗೆ ಉಡುಪಿ ಬಸ್ ನಿಲ್ದಾಣ ಬಂತು. ನಿದಾನವಾಗಿ ನಾನು ಉಳಿದುಕೊಂಡಿರುವ ಹೋಟಲ್ಲಿನ ಕಡೆಗೆ ಹೆಜ್ಜೆ ಹಾಕತೊಡಗಿದೆ.

____ ______ _____


ನಾನು ಮತ್ತು ಮಲ್ಲಿಕಾರ್ಜುನ್ ಇಬ್ಬರೂ ಸೇರಿ ಬರೆಯುತ್ತಿರುವ ನಮ್ಮ ಮುಂದಿನ ಪುಸ್ತಕ "ಫೋಟೊ ಹಿಂದಿನ ಕತೆಗಳು" ಅದರಲ್ಲಿ ನನ್ನ ಮೆಚ್ಚಿನ ಚಿತ್ರವಾದ "ಮೀನಿನ ಬಲೆ" ಫೋಟೊ ತೆಗೆದಿದ್ದು ಹೇಗೆ, ಅದಕ್ಕೂ ಮೊದಲು ಆ ಚಿತ್ರದ ಕಲ್ಪನೆ ಹೇಗೆ ಬಂತು? ಅದರ ಹಿಂದೆ ಬಿದ್ದು ಸಾಗುತ್ತಾ............ಕ್ಲಿಕ್ಕಿಸುವವರೆಗೆ ನಡುವೆ ನಡೆದ ವಿಭಿನ್ನ ಆನುಭವದಲ್ಲಿ ಇಲ್ಲಿ ಹಾಕಿರುವುದು ಲೇಖನದ ನಡುವಿನ ತುಣುಕು ಮಾತ್ರ. ನೀವು ಓದಿದ ಮೇಲೆ ನಿಮ್ಮ ಅಭಿಪ್ರಾಯ ತಿಳಿಸಿ.

ಸಧ್ಯ ಇಬ್ಬರು ಕೆಲವು ಚಿತ್ರಗಳನ್ನು ಆರಿಸಿಕೊಂಡು ಅವುಗಳನ್ನು ಕ್ಲಿಕ್ಕಿಸುವಾಗಿನ ಹಿಂದಿನ ಕತೆಗಳನ್ನು ಬರೆಯಲು ಕುಳಿತಿದ್ದೇವೆ.

ಚಿತ್ರ ಮತ್ತು ಲೇಖನ.
ಶಿವು.ಕೆ.

Monday, December 14, 2009

ಬೆಂಗಳೂರಲ್ಲಿ ಬಣ್ಣದ ಚಿಟ್ಟೆಗಳಿಲ್ವಾ?

ಯಾಕಿಲ್ಲ? ಬೆಂಗಳೂರಿನಲ್ಲಿ ಬಣ್ಣ ಬಣ್ಣದ ತರಾವರಿ ಧಿರಿಸುಗಳನ್ನು ಹಾಕಿಕೊಂಡು ಓಡಾಡುವ ಬಣ್ಣದ ಚಿಟ್ಟೆಗಳು ಕಾಲೇಜು, ಆಫೀಸು, ರಸ್ತೆ ರಸ್ತೆಗಳು, ಮಾಲಾಮಾಲುಗಳು ಎಲ್ಲಾ ಕಡೆ ಇವೆಯಲ್ರೀ ಅಂತೀರಾ!

ಹೌದು ನೀವು ಹೇಳೋದು ಸರಿ ಖಂಡಿತವಾಗಿ ನಮ್ಮ ಬೆಂಗಳೂರಿನಲ್ಲಿ ಅದರಲ್ಲೂ ಈ ಚಳಿಗಾಲದಲ್ಲಿ ಪ್ರೆಶ್ಶಾಗಿ ಲವಲವಿಕೆಯಿಂದ ಓಡಾಡುವ ಹುಡುಗಿಯರಿಗೇನು ಕಡಿಮೇಯೇ? ಪ್ರತಿಯೊಬ್ಬರೂ ಬಣ್ಣಬಣ್ಣದ ಬಟ್ಟೆಗಳನ್ನು ಹಾಕಿಕೊಂಡು ಓಡಾಡುತ್ತಾ, ಬಸ್ ಸ್ಟಾಪಿನಲ್ಲಿ ಕಾಯುತ್ತಾ, ಆಫೀಸಿನಲ್ಲಿ ಕಾಯಕಮಾಡುತ್ತಾ ಅವರವರದೇ ಲೋಕದಲ್ಲಿರುತ್ತಾರೆ. ಆ ವಿಚಾರ ಬಿಡಿ, ನಾನು ಹೇಳುತ್ತಿರುವುದು ನಿಜವಾದ ಚಿಟ್ಟೆಗಳ, ನಾವು ಕಾಣದ ಲೋಕದ ಬಗ್ಗೆ. ಹೌದು ಕಣ್ರೀ, ಬೆಂಗಳೂರಲ್ಲಿನ್ನು ಚಿಟ್ಟೆಗಳಿವೆ. ಸಾವಿರಾರು ಮರಗಳನ್ನು ಕಡಿದು ರಸ್ತೆಗಳನ್ನು ಮಾಡುತ್ತಿದ್ದರೂ, ಅವುಗಳ ಸೂರುಗಳನ್ನು ಕಿತ್ತುಕೊಂಡಿದ್ದರೂ, ಕೆಲವು ಚಿಟ್ಟೆಗಳು, ಪತಂಗಗಳು ನಮ್ಮ ಅಕ್ಕಪಕ್ಕದಲ್ಲೇ ನಮಗೆ ಕಾಣದಂತೆ ದಂಪತಿಗಳಾಗುತ್ತವೆ, ಮೊಟ್ಟೆಯಿಡುತ್ತವೆ, ಹುಳುವಾಗಿ ಹೊರಬಂದು, ಬೆಳೆದು ಪ್ಯೂಪಗಳಾಗಿ ತದ ನಂತರ ಸುಂದರ ಚಿಟ್ಟೆಯಾಗಿ ಬರುತ್ತವೆ, ಹಾರಾಡುತ್ತವೆ, ನಮಗೆ ಕಂಡೂ ಕಾಣದಂತೆ. ಎಲೆಮರೆಕಾಯಿಯಂತೆ. ಈ ವಿಚಾರದಲ್ಲಿ ಇತ್ತೀಚೆಗೆ ಆದ ಅನುಭವ, ಅದರ ಹಿಂದೆ ಬಿದ್ದು ನನಗಾದ ಗೊಂದಲ, ಭಯ, ಕಾಳಜಿ, ನಂತರ ಕ್ಲಿಕ್ಕಿಸಿದ ಚಿತ್ರಗಳು. ಇವುಗಳನ್ನೆಲ್ಲಾ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿದೆ.

ಕಳೆದ ವಾರ ಹಿಂದು ದಿನಪತ್ರಿಕೆ ಕಛೇರಿಯ ಪಕ್ಕದಲ್ಲಿರುವ ವಾರ್ತಾ ಇಲಾಖೆಗೆ[ಇನ್‍ಫೆಂಟ್ರಿ ರಸ್ತೆ]ಕೆಲಸ ನಿಮಿತ್ತ ಹೋಗಿದ್ದೆ. ಹೊರಬಂದಾಗ ಎರಡು ಬದಿಯಲ್ಲಿ ಹಾಕಿದ್ದ ಪಾಮ್ ಟ್ರಿ ಗಿಡಗಳು ಕಂಡು ಬಂದವು. ನಾನು ಬೆಂಗಳೂರಿನ ಯಾವುದೇ ಕಚೇರಿಗೆ ಹೋದರೂ ಅಲ್ಲಿ ಕಟ್ಟಿರುವ ಸುಂದರ ವಿನ್ಯಾಸದ ಕಟ್ಟಡದ ಜೊತೆಗೆ ಕೆಲವು ಗಿಡಗಳಿಗೆ ಜಾಗವಿದೆಯಾ? ಅವುಗಳನ್ನು ಬೆಳೆಸಿದ್ದಾರಾ? ಇತ್ಯಾದಿಗಳನ್ನು ನೋಡುತ್ತೇನೆ. ಇದ್ದ ಮರಗಳನ್ನು ಕಡಿದು ಅದೇ ಜಾಗದಲ್ಲಿ ಬಿಲ್ಡಿಂಗ್ ಹಬ್ಬಿಸಿದ್ದರೂ ಪರಿಹಾರವಾಗಿ ಕೆಲವು ಗಿಡಗಳನ್ನು ಹಾಕಬಹುದಲ್ವಾ ಅನ್ನೋದು ನನ್ನ ಆಸೆ. ಮುಂಭಾಗ ಅಥವ ಹಿಂಬಾಗ ಜಾಗ ಬಿಟ್ಟಿದ್ದರೆ ಅದು ವಾಹನಗಳ ನಿಲುಗಡೆಗೆ ಮೀಸಲಾಗಿರುತ್ತದೆಯೋ ಹೊರತು ಗಿಡಗಳಿಗೆ ಜಾಗವಿಲ್ಲ. ನನಗೆ ಹೆಚ್ಚಾಗಿ ಈ ವಿಚಾರದಲ್ಲಿ ನಿರಾಸೆಯೇ ಆಗುತ್ತದೆ. ಆದರೂ ಕೆಲವು ಕಡೆ ಅಲಂಕಾರಿಕ ಗಿಡಗಳನ್ನು ಬೆಳೆಸಿರುತ್ತಾರೆ. ಅವು ಬೆಳೆಸಿದವರಿಗೆ ಖುಷಿ ಕೊಡಬಹುದು. ನನಗಾಗುವುದಿಲ್ಲ. ಮನೆಯಲ್ಲಿ ಅಥವ ಹೊರಗೆಲ್ಲೂ ಕೆಲಸ ಕಾರ್ಯ ಮಾಡದೇ ಸದಾ ಮೇಕಪ್ ಮಾಡಿಕೊಳ್ಳುತ್ತಾ, ಕೃತಕ ಫೋಸು ಕೊಡುತ್ತಾ, ಹೆತ್ತವರಿಗೂ, ಭೂಮಿಗೂ ಭಾರವಾಗಿರುವ ಒಂಥರ ಬೆಡಗಿನ ಬಿನ್ನಾಣಗಿತ್ತಿ ಹುಡುಗಿಯರ ಹಾಗೆ.

ಇರಲಿ ಈ ಪಾಮ್ ಟ್ರೀ ಗಿಡಗಳು ಅದೇ ರೀತಿ ಅಲಂಕಾರಿಕವಾದರೂ ಇತ್ತೀಚೆಗೆ ಉಪಯೋಗಕ್ಕೆ ಬರುತ್ತಿವೆ. ಹೇಗೆಂದರೇ ಒಂದು ಜಾತಿಯ ಚಿಟ್ಟೆಗಳಿಗೆ ವರ್ಷಪೂರ್ತಿ ಅತಿಥೇಯರಾಗಿ[Host plant] ಆಶ್ರಯ ಕೊಡುತ್ತವೆ. ಇಂಡಿಯನ್ ಜೈಂಟ್ ರೆಡ್ ಹೈ ಎನ್ನುವ ಬಣ್ಣದ ಚಿಟ್ಟೆಗಳು ಎಲ್ಲೆಲ್ಲೋ ಹನಿಮೂನ್ ಮಾಡಿದರೂ ಇದೇ ಗಿಡದ ಮೇಲೆ ಕುಳಿತು ಮೊಟ್ಟೆ ಇಡುತ್ತವೆ. ಕೆಲವು ದಿನಗಳ ನಂತರ ಮೊಟ್ಟೆಯೊಡೆದು ದೇಹ ಪೂರ್ತಿ ಫ್ರಿಲ್ಲುಗಳೇ ತುಂಬಿರುವ ಬಿಳಿ ವಸ್ತ್ರ ಧರಿಸಿದಂತೆ ಸುಂದರ ಹುಳು ಹೊರಬರುತ್ತದೆ.
ಬಿಳಿದಾರದಿಂದ ಸುತ್ತಿದ ಬಟ್ಟೆ ಧರಿಸಿದ ಜೈಂಟ್ ರೆಡ್ ಹೈ ಹುಳು.

ಇಲ್ಲೊಂದು ವಿಚಾರವನ್ನು ನಾನು ಹೇಳಲೇಬೇಕು. ನಮ್ಮಲ್ಲಿ[ಮನುಷ್ಯರಲ್ಲಿ]ಮಕ್ಕಳು ಹುಟ್ಟಿದ ಮೇಲೆ ಅವುಗಳನ್ನು ಪೋಷಿಸಿ, ಬೆಳೆಸಿ, ಓದಿಸಿ, ಸುಸಂಶ್ಕೃತರನ್ನಾಗಿ[೧೮-೨೦ ವರ್ಷಗಳವರೆಗೆ] ಮಾಡಿ ನಿನ್ನ ಬದುಕು ನೀನು ನೋಡಿಕೊ ಅನ್ನುತ್ತೇವೆ. ಪ್ರಾಣಿ-ಪಕ್ಷಿಗಳಲ್ಲಿ ನಮ್ಮಷ್ಟಿಲ್ಲದಿದ್ದರೂ ಇದೇ ಮಟ್ಟದ ಲಾಲನೆ ಪಾಲನೆ ಇದ್ದೇ ಇರುತ್ತದೆ. ಆದ್ರೆ ಈ ಚಿಟ್ಟೆಗಳ ಲೋಕದಲ್ಲಿ ಇದೆಲ್ಲಾ ಇರುವುದಿಲ್ಲ. ಹನಿಮೂನ್ ಮುಗಿಸಿದ ಮೇಲೆ ಸರಿಯಾದ ಗಿಡದ ಮೇಲೆ ಮೊಟ್ಟೆ ಇಟ್ಟುಬಿಟ್ಟರೆ ಅವುಗಳ ಜವಾಬ್ದಾರಿ ಮುಗಿಯಿತು. ನಂತರ ಮೊಟ್ಟೆಯೊಡೆದು ಹೊರಬರುವ ಹುಳುವೇ ತನ್ನ ಆಹಾರವನ್ನು ಹುಡುಕಿಕೊಂಡು ತಿಂದುಂಡು ಬೆಳೆದು ತನಗೊಂದು ತಾತ್ಕಾಲಿಕ ಗೂಡನ್ನು ಕಟ್ಟಿಕೊಂಡು[ಪ್ಯೂಪ], ಅದರೊಳಗೆ ತನ್ನ ದೇಹಪರಿವರ್ತನೆಯಾಗಿ ಹೊರಬರುವಾಗ ಸುಂದರ ಚಿಟ್ಟೆಯಾಗಿರುತ್ತದೆ.


ಜೈಂಟ್ ರೆಡ್ ಹೈ[joint red eye] ಚಿಟ್ಟೆ ಆಗ ತಾನೆ ತನ್ನ ಪ್ಯೂಪದಿಂದ ಹೊರಬಂದು ಕುಳಿತಿದೆ.


ನೀವು ಈ ಲೇಖನವನ್ನು ಓದಿದ ಮೇಲೆ ನಿಮ್ಮ ಮನೆ, ಕಛೇರಿ ಎಲ್ಲೇ ಆಗಲಿ ನೀವೊಮ್ಮೆ ಪಾಮ್ ಟ್ರೀ ಕಡೆ ಗಮನವಿಟ್ಟು ಕಣ್ಣಾಯಿಸಿ. ನಿಮಗೆ ಇಂಥ ಹುಳು ಅಥವ ಪ್ಯೂಪ ಕಂಡುಬರುತ್ತದೆ. ಆ ಹುಳು, ತೆಂಗಿನ ಗರಿಯಂತಿದ್ದರೂ ಅದಕ್ಕಿಂತ ಚಿಕ್ಕದಾಗಿರುವ ಇದರ ಎಲೆಗಳನ್ನು ತಿಂದು ಬೆಳೆದು ನಂತರ ಅದೇ ಎಲೆಗಳ ನಡುವೆ ತನ್ನ ದೇಹದಿಂದಲೇ ಸ್ರವಿಸಿದ ಅಂಟು ಮತ್ತು ದಾರದಿಂದ ಹೆಣೆದು ಮಳೆ, ಗಾಳಿ, ಬಿಸಿಲು ಯಾವುದರಿಂದಲೂ ತೊಂದರೆಯಾಗದಂತ ಕೊನೆಗೆ ಪಕ್ಷಿಗಳ ಕಣ್ಣಿಗೂ ಕಾಣದಂತೆ ತಲೆಕೆಳಕಾಗಿ ತೋರು ಬೆರಳು ಗಾತ್ರದ ಗೂಡನ್ನು ಕಟ್ಟಿಕೊಳ್ಳುತ್ತದೆ. ಅದರೊಳಗೆ ಸೇರಿಕೊಂಡು ಪ್ಯೂಪವಾಗಿಬಿಡುತ್ತದೆ. ಸುಮಾರು ಹದಿನೈದು ದಿನಗಳ ನಂತರ ಪ್ಯೂಪದಿಂದ ಕಂದು ಮಿಶ್ರಿತ ಬಣ್ಣದ ಪತಂಗವಾಗಿ ಹೊರಬರುತ್ತದೆ. ಇದನ್ನೆಲ್ಲಾ ಗಮನಿಸಿ ಅದರ ಹಿಂದೆ ಬಿದ್ದು ಇದರ ಎಲ್ಲಾ ಚಿತ್ರಗಳನ್ನು ಕ್ಲಿಕ್ಕಿಸಿದ್ದರಿಂದ ಈ ಆಲಂಕಾರಿಕ ಗಿಡ ಈ ಚಿಟ್ಟೆಗಳಿಗೆ [Host plant]ಅತಿಥೇಯವಾಗಿದೆಯಲ್ಲ ಅಂತ ಖುಷಿಯಾಗಿತ್ತು.

ಇದೇ ರೀತಿ ನಾನು ವಾರ್ತಾ ಇಲಾಖೆಯ ಎರಡು ಬದಿಯ ಗಿಡಗಳನ್ನು ನೋಡಿದಾಗ ಹೊಸದೊಂದು ಆಶ್ಚರ್ಯ ಕಾದಿತ್ತು. ಇಲ್ಲಿ ಜೈಂಟ್ ರೆಡ್ ಹೈ ಚಿಟ್ಟೆಗಳ ಬದಲಿಗೆ ಬೇರೆ ಪ್ಯೂಪಗಳು ಕಾಣಿಸಬೇಕೆ.! ನನ್ನ ಆನಂದಕ್ಕೆ ಪಾರವೇ ಇಲ್ಲ. ಇದು ಹೇಗೆ ಸಾಧ್ಯ? ಒಂದು ಚಿಟ್ಟೆಗೆ ಅತಿಥೇಯವಾಗಿದ್ದು ಮತ್ತೊಂದು ಬೇರೆ ಜಾತಿಯ ಹುಳುವಿಗೂ ಜಾಗ ಮತ್ತು ಆಹಾರ ಕೊಡುವ ಸಾಧ್ಯತೇ ಇದೆಯಾ ಅಂತ ಮೊದಲು ಅನ್ನಿಸಿದರೂ ಕಾಗೆ ಗೂಡಿನಲ್ಲಿ ಕೋಗಿಲೆ ಮೊಟ್ಟೆ ಇಟ್ಟಂತೆ, ನಾವು ಮನೆ, ಅಪಾರ್ಟ್‍ಮೆಂಟ್ ಕಟ್ಟಿಸಿ ಬೇರೆಯವರಿಗೆ ಬಾಡಿಗೆಗೆ ಕೊಡುವಂತೆ ಇಲ್ಲಿಯೂ ಜೈಂಡ್ ರೆಡ್ ಹೈ ಚಿಟ್ಟೆಗಳು ಈ ಹೊಸ ಹುಳುಗಳಿಗೆ ಆ ರೀತಿ ಬಾಡಿಗೆ ಕೊಟ್ಟಿರಬಹುದೇ ಅನ್ನಿಸಿತು. ಇರಲಿ ಹೇಗೂ ಪ್ಯೂಪ ಕಾಣಿಸಿದೆ, ಅದರಲ್ಲಿ ಯಾವ ರೀತಿಯ ಚಿಟ್ಟೆಯೋ ಅಥವ ಪತಂಗವೋ ಹೊರಬರುವುದಂತೂ ಖಂಡಿತ. ಅದನ್ನು ನೋಡಿಯೇ ಬಿಡೋಣ ಅಂದುಕೊಂಡು ಒಂದು ಪ್ಯೂಪವಿರುವ ಎಲೆಯನ್ನು[ನನ್ನ ಜೇಬಿನಲ್ಲಿ ಒಂದು ಸಣ್ಣ ಕಟ್ಟರ್ ಇದ್ದೇ ಇರುತ್ತದೆ]ಕಟ್ ಮಾಡಿಕೊಂಡೆ.

ಪ್ಯೂಪವಿರುವ ಎಲೆಯನ್ನು ತೆಗೆದುಕೊಂಡ ಮೇಲೆ ಅದನ್ನು ಸುರಕ್ಷಿತವಾಗಿ ನಮ್ಮ ಮನೆಗೆ ತರಬೇಕಲ್ವ. ಅದು ಒಂಥರ ಭಯ ಭಕ್ತಿಯ ಕೆಲಸ. ಹೇಗೆಂದರೆ ಏಳು ತಿಂಗಳ ಬಸುರಿಯನ್ನು ನಿದಾನವಾಗಿ ಸುರಕ್ಷಿತವಾಗಿ ಆಸ್ಪತ್ರೆಗೆ ಕರೆದೊಯ್ಯುವಂತೆ. ಇಂಥವು ಸಿಗುತ್ತವೆ ಎಂದು ನನಗೆ ಗೊತ್ತಿರುವುದರಿಂದ ನನ್ನ ಸ್ಕೂಟಿಯ ಡಿಕ್ಕಿಯಲ್ಲಿ ಅದಕ್ಕಾಗಿ ಪುಟ್ಟ ಜಾಗ ಮಾಡಿರುತ್ತೇನೆ. ಗಿಡದಲ್ಲಿ ಯಾವ ಸ್ಥಿತಿಯಲ್ಲಿ ಇರುತ್ತದೋ ಅದೇ ಸ್ಥಿತಿಯಲ್ಲಿಯೇ ನನ್ನ ಡಿಕ್ಕಿಯಲ್ಲಿಟ್ಟುಕೊಳ್ಳಬೇಕು.[ಬಸುರಿಯನ್ನು ತಲೆಕೆಳಕಾಗಿ ಮಲಗಿಸಿ ಆಟೋ ಅಥವ ಕಾರಿನಲ್ಲಿ ಕರೆದೊಯ್ಯಲು ಸಾಧ್ಯವೇ?]. ಇದೆಲ್ಲಾ ಮುಗಿದ ನಂತರ ನನ್ನ ಇನ್ನುಳಿದ ಕೆಲಸವನ್ನೆಲ್ಲಾ ನಿಲ್ಲಿಸಿ ತುರ್ತುಪರಿಸ್ಥಿತಿಯ ವಾಹನದಂತೆ ಮನಸ್ಸಿನಲ್ಲೇ ಅಲಾರಾಂ ಬಾರಿಸಿಕೊಂಡು ನಿದಾನವಾಗಿ ನನ್ನ ಸ್ಕೂಟಿಯನ್ನು ಓಡಿಸಿಕೊಂಡು ಬರುತ್ತೇನೆ. ಈ ಸಮಯದಲ್ಲಿ ಯಾವುದಾದರೂ ಹಂಪ್ಸ್ ಮೇಲೆ ಜಗ್ಗಿದಾಗ, ಹಳ್ಳದೊಳಗೆ ಕುಲುಕಿದಾಗ ನಾನೇ ಪ್ಯೂಪ ಸ್ಥಿತಿಯಲ್ಲಿದ್ದಂತೆ ಭಾಸವಾಗಿ ಮನಸ್ಸಿನಲ್ಲೇ ನಲುಗಿಬಿಡುತ್ತೇನೆ.

ಕೊನೆಗೂ ಮನೆಗೆ ಸುರಕ್ಷಿತವಾಗಿ ತಲುಪಿ ಆ ಪ್ಯೂಪವಿರುವ ಎಲೆಗಳನ್ನು ಅದೇ ಸ್ಥಿತಿಯಲ್ಲಿ ಒಂದು ಹೂಕುಂಡದ ಮೇಲೆ ಇಟ್ಟುಬಿಟ್ಟರೆ ಅಲ್ಲಿಗೆ ದೊಡ್ಡ ಸಾಧನೆ ಮಾಡಿದಂತೆ.

ಇಂಡಿಯನ್ ಪಾಮ್ ಬಾಬ್ ಚಿಟ್ಟೆಯ ಪ್ಯೂಪ


ಈ ವಿಚಾರದಲ್ಲಿ ನನ್ನ ಮನೆ ಒಂದು ರೀತಿ ಆಸ್ಪತ್ರೆಯಿದ್ದಂತೆ. ಹೊರಗಿನ ಜಾಗಕ್ಕಿಂತ ಹೆಚ್ಚು ಸುರಕ್ಷಿತ. ಹೇಗೆಂದರೆ ಹೊರಗೆ ಪ್ರಕೃತಿಯ ಜೊತೆಗಿದ್ದರೂ ಇವುಗಳು ಪಕ್ಷಿಗಳಿಗೆ, ಕೆಲವು ಜೇಡಗಳಿಗೆ, ಅಥವ ಪ್ರೈಯಿಂಗ್ ಮಾಂಟಿಸ್, ಕ್ರಿಕೆಟ್ ಇತ್ಯಾದಿ ಹುಳುಗಳಿಗೆ ಆಹಾರವಾಗುವುದೇ ಹೆಚ್ಚು. ನೂರಕ್ಕೆ ಐದರಷ್ಟು ಪ್ಯೂಪಗಳು ಮಾತ್ರ ಸುರಕ್ಷಿತವಾದ ಚಿಟ್ಟೆಗಳಾಗಿ ಹೊರಬರುತ್ತವೆ. ನಮ್ಮ ಮನೆಯಲ್ಲಿ ಇವ್ಯಾವುದರ ಕಾಟವಿಲ್ಲ. ಮತ್ತೆ ಜಿರಲೆಗಳಿಲ್ಲ[ಅದಕ್ಕಾಗಿ ಜಿರಲೆ ಕತೆ ಓದಿ] ಹಲ್ಲಿಗಳಂತೂ ಇಲ್ಲವೇ ಇಲ್ಲವಾದ್ದರಿಂದ ಖಂಡಿತ ಪ್ರತಿಯೊಂದು ಚಿಟ್ಟೆಗಳು ನಮ್ಮ ಮನೆಯಲ್ಲಿ ಸುರಕ್ಷಿತವಾಗಿ ಸಂದರವಾಗಿಯೇ ಹುಟ್ಟುತ್ತವೆ. [ಈವರೆಗೆ ಈ ರೀತಿ ಹದಿಮೂರು ಜಾತಿಯ ಚಿಟ್ಟೆಗಳು ಮತ್ತು ಪತಂಗಗಳು ಹುಟ್ಟಿವೆ ಅವುಗಳಲ್ಲಿ ಮೂರನ್ನು ನನ್ನ ಬ್ಲಾಗಿನಲ್ಲಿ ಆಗಲೇ ಬರೆದಿದ್ದೇನೆ.]

ಇರಲಿ ಮತ್ತೆ ಈ ಪ್ಯೂಪ ವಿಚಾರಕ್ಕೆ ಬರೋಣ. ಈ ಪ್ಯೂಪದಿಂದ ಯಾವ ಚಿಟ್ಟೆ ಹೊರಬರಬಹುದು. ಇಷ್ಟಕ್ಕೂ ಈ ಪ್ಯೂಪ ಚಿತ್ರ ನನ್ನಲ್ಲಿರುವ ಚಿಟ್ಟೆಗಳ ಪುಸ್ತಕದಲ್ಲಿದೆಯಾ ಅಂತ ಹುಡುಕಿದೆ. ಅಲ್ಲೆಲ್ಲೂ ಕಾಣಸಿಗಲಿಲ್ಲ. ಪ್ರತಿದಿನ ಬೆಳಿಗ್ಗೆ ಮಧ್ಯಾಹ್ನ, ಸಂಜೆ ಇದನ್ನು ಗಮನಿಸುತ್ತಿದ್ದೆ. ರಾತ್ರಿ ಸಮಯದಲ್ಲಿ ಚಿಟ್ಟೆಗಳು ಪ್ಯೂಪದಿಂದ ಹೊರಬರುವುದಿಲ್ಲ. ಏಕೆಂದರೆ ಹೊರಬಂದ ತಕ್ಷಣ ಅವುಗಳ ರೆಕ್ಕೆಗಳಿಗೆ ಸೂರ್ಯನ ಕಿರಣದ ಶಾಖದಿಂದ ಶಕ್ತಿ ಬರುತ್ತದೆಯಾದ್ದರಿಂದ ಅವು ಬೆಳಗಿನ ಜಾವ ಮಾತ್ರ ಹೊರಬಂದು ಸೂರ್ಯನಿಗಾಗಿ ಕಾಯುತ್ತಿರುತ್ತವೆ. ಆದ್ರೆ ಎಲ್ಲಾ ಚಿಟ್ಟೆಗಳು ಹೀಗಾಲ್ಲ, ಕೆಲವು ಆಡ್ನಾಡಿ ಬುದ್ಧಿಯ ಚಿಟ್ಟೆಗಳು ರಾತ್ರಿಯೇ ಹೊರಬಂದು ಒದ್ದಾಡಿ ಮನೆಯಲ್ಲೆಲ್ಲಾ ಹಾರಾಡಿ, ಮುಂಜಾನೆ ಬಾಗಿಲು ತೆಗೆಯುತ್ತಿದ್ದಂತೆ ಹಾರಿ ಹೋಗಿದ್ದು ಉಂಟು. ಇಷ್ಟೆಲ್ಲಾ ಮಾಡಿ ಆ ಚಿಟ್ಟೆಯ ಫೋಟೋ ತೆಗೆಯಲಾಗಲ್ಲಿಲ್ಲವಲ್ಲ ಅಂತ ನಿರಾಸೆಯಾಗಿದ್ದು ಉಂಟು.

ಹತ್ತನೇ ದಿನ ಸಂಜೆ ಈ ಪ್ಯೂಪದ ಬಣ್ಣ ಬದಲಾಗತೊಡಗಿತು. ಅಂದರೆ ನಾಳೆ ಬೆಳಿಗ್ಗೆ ಖಂಡಿತ ಹೊರಬರುತ್ತದೆ ಅನ್ನುವ ಸೂಚನೆ. ಮರುದಿನ ಬೆಳಿಗ್ಗೆ ಬೇಗ ದಿನಪತ್ರಿಕೆ ಕೆಲಸ ಮುಗಿಸಿ ಮನೆಗೆ ಓಡಿಬಂದೆ. ರಾತ್ರಿಯೇ ಕ್ಯಾಮೆರವನ್ನು ಸ್ಟ್ಯಾಂಡಿಗೆ ಹಾಕಿ ಸೆಟ್ ಮಾಡಿದ್ದೆ. ಆದರೂ ನಾನು ಬರುವ ಹೊತ್ತಿಗೆ ಹೊರಬಂದು ಅದೇ ಪ್ಯೂಪವನ್ನು ಹಿಡಿದು ಕೂತಿದೆ. ಅದನ್ನು ನಮ್ಮ ಟೆರಸ್ಸಿನ ಮೇಲೆ ಒಯ್ದು ಸೂರ್ಯನ ಶಾಖಕ್ಕೆ ಅಭಿಮುಖವಾಗಿ ಪ್ಯೂಪ ಮತ್ತು ಚಿಟ್ಟೆಯಿರುವ ಪಾಮ್ ಟ್ರೀ ಎಲೆಯನ್ನು ಮತ್ತೊಂದು ಗಿಡಕ್ಕೆ ಕೂರಿಸಿ ನನಗೆ ಬೇಕಾದ ರೀತಿಯಲ್ಲಿ ಫೋಟೊಗಳನ್ನು ಕ್ಲಿಕ್ಕಿಸತೊಡಗಿದೆ. ಈ ಚಿಟ್ಟೆ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಪ್ಲೇನ್ ಟೈಗರ್ ಚಿಟ್ಟೆಯಷ್ಟೆ ದೊಡ್ಡದಾಗಿದ್ದರೂ ರೆಕ್ಕೆಗಳ ಬಣ್ಣ ಬೇರೆಯಾಗಿತ್ತು. ಎಂಟು ಗಂಟೆಯ ಹೊತ್ತಿಗೆ ಒಂದೆರಡು ಬಾರಿ ರೆಕ್ಕೆ ಬಡಿದು ಹೊಸ ಜೀವನವನ್ನು ಅರಸುತ್ತಾ ಹಾರಿಹೋಯಿತು. ತೆಗೆದ ಚಿತ್ರವನ್ನು ಕಂಪ್ಯೂಟರಿಗೆ ಹಾಕಿ ನೋಡಿದಾಗ ಗೊತ್ತಾಯಿತು. ಇದರ ಹೆಸರು ಇಂಡಿಯನ್ ಪಾಮ್ ಬಾಬ್ ಅಂತ.

ಆಗತಾನೆ ಹೊರಬಂದು ತನ್ನದೇ ಪ್ಯೂಪವನ್ನು ಹಿಡಿದು ಬಿಸಿಲು ಕಾಯಿಸಿಕೊಳ್ಳುತ್ತಿರುವ ಇಂಡಿಯನ್ ಪಾಮ್ ಬಾಬ್[Indian pom bob] ಚಿಟ್ಟೆ.

ಆಲಂಕಾರಿಕ ಗಿಡವಾದರೂ ಎರಡು ಚಿಟ್ಟೆಗಳಿಗೆ ಆಹಾರ ಮತ್ತೆ ಮನೆ ಮನೆಯಾಗಿದೆಯೆಲ್ಲಾ ಅಂತ ಪಾಮ್ ಟ್ರೀ ಬಗ್ಗೆ ಹೆಮ್ಮೆಯೆನಿಸಿತ್ತು.

ಚಿತ್ರಗಳು ಮತ್ತು ಲೇಖನ.

ಶಿವು.ಕೆ


Monday, December 7, 2009

ನೀವೇಕೆ ಹೀಗೆ




ಓ ಭಾವಗಳೇ... ನೀವೇಕೆ ಹೀಗೆ
ಕುಂತಲ್ಲಿ ಕೂರದೆ ನಿಂತಲ್ಲಿ ನಿಲ್ಲದೆ
ಹಾರುತ್ತಾ ಜಾರುತ್ತಾ ಮೋಡದ
ಮರೆಯ ಚಂದ್ರಮನ ಹಾಗೆ.

ಏನು ಅರಿಯದ
ಮನವೇನು ನಿಮ್ಮಪ್ಪನ ಸ್ವತ್ತೇ?
ನಿಮ್ಮೀ ಕಿತ್ತಾಟದಿಂದಾಗಿ
ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದೆ ಗೊತ್ತೆ?

ಸೋತಾಗ ಸೊರಗಿ, ಗೆದ್ದಾಗ ಜಿನುಗಿ
ಕರುಣೆಗೆ ಕರಗಿ ಕರುಳಿಗೆ ಮರುಗಿ
ಬಣ್ಣ ಬದಲಿಸೋ ಗೋಸುಂಬೆಗಳು
ಜಿಗಣೆಯಂತೆ ಹಿಂಬಾಲಿಸೋ ನೆರಳುಗಳು.

ಒಬ್ಬರ ದ್ವೇಷಕ್ಕೆ ನೂಕಿ
ಮತ್ತೊಬ್ಬರ ಒಲವಲ್ಲಿ ಜೀಕಿ
ಹಗಲೆಲ್ಲಾ ಕಾಲ್ಚೆಂಡಾಯ್ತು ಮನಸ್ಸು
ಇರುಳಂಕಣವಾಯ್ತು ನಿದ್ರೆಯ ಕನಸು.

ನಿನ್ನೆಯದು ಇಂದಿಗೆ ಹಳತಾದರೂ
ಇಂದಿನದು ನಾಳೆಗೆ ಕೊಳೆತುಹೋದರೂ
ಮತ್ತೆ ಹುಟ್ಟಿ ನಿಮ್ಮ ಆಸ್ಥಿತ್ವಕ್ಕಾಗಿ
ನನ್ನ ಆಸ್ಥಿತ್ವವನ್ನೇ ಅಲುಗಾಡಿಸುತ್ತಿರೇಕೆ?

ಬದುಕೆಲ್ಲಾ ಇಷ್ಟೊಂದು ಕಾಡುವಿರೇಕೆ?
ಖಾತ್ರಿಯೇನು? ಸತ್ತ ಮೇಲಾದರೂ ಬಿಡುತ್ತೀರೆನ್ನುವುದಕ್ಕೆ
ಓ ಭಾವಗಳೇ...ನೀವೇಕೆ ಹೀಗೆ
ಬೆಂಕಿ ಇಲ್ಲದಿದ್ದರೂ ಹೊಗೆಯೇಳುವ ಹಾಗೆ.
ಶಿವು.ಕೆ