Monday, December 21, 2009

"ಅಣ್ಣಾ ಇದು ಯಾವ ಮೀನು ಗೊತ್ತಾ"



"ಒಂದು ನೂರು ಪಾರ್ಸೆಲ್, ಮತ್ತೊಂದು ನೂರು ಸರ್ವಿಸ್,"

ಆ ಮಾತನ್ನು ಕೇಳಿ ಆಕೆಯತ್ತ ನೋಡಿದೆ. ಮಧ್ಯ ವಯಸ್ಸು ದಾಟಿದ್ದರೂ ನೋಡಲು ಲಕ್ಷಣವಾಗಿದ್ದಳು ಆಕೆ. ಚಟಪಟ ಅಂತ ಮಾತಾಡುತ್ತಾ, ಕಣ್ಣಲ್ಲೇ ಎಲ್ಲರನ್ನೂ ಗಮನಿಸುತ್ತಾ, ಮಾರು ದೂರದಲ್ಲಿ ನಿಂತು ತಿಂದು ಮುಗಿಸಿದವನು ಹಣ ಕೊಡುತ್ತಾನಾ, ಇಲ್ಲವಾ ಅಂತ ಗಮನಿಸುತ್ತಾ, ತನ್ನ ಪಕ್ಕ ನಿಂತು ಬಾಣಲೆಯ ಎಣ್ಣೆಯಲ್ಲಿ ಮೀನಿನ ಕಬಾಬ್ ಮತ್ತು ಅದರ ಪಕ್ಕ ಮತ್ತೊಂದು ಕಪ್ಪುಬಣ್ಣದ ಕಾವಲಿಯಲ್ಲಿ ಮೀನು ಪ್ರೈ ಮಾಡುತ್ತಿದ್ದ ಗಂಡನ ಕಡೆಗೆ ಆಗಾಗ ಹೀಗೆ ಆರ್ಡರ್ ಮಾಡುತ್ತಿದ್ದಳು ಅವಳು.

ಮತ್ತೆ ಅವಳ ಬಾಯಿಂದ ಅದೇ ಮಾತು. "ನಾಲ್ಕು ನೂರು ಪಾರ್ಸೆಲ್, ಕಾಲ್ ಪ್ರೈ ಪಾರ್ಸೆಲ್, ನಿಮಗೇನಣ್ಣ, ಸ್ವಲ್ಪ ಇರಿ, ಅರ್ಜೆಂಟ್ ಮಾಡಿದ್ರೆ ಹೇಗೆ, ಮೀನು ಚೆನ್ನಾಗಿ ಬೇಯಬೇಕಲ್ವ, ಅರ್ಜೆಂಟ್ ಮಾಡಬೇಡ್ರಿ,"

ಮತ್ತೆ ಗಂಡನತ್ತ ತಿರುಗಿ "ನಾಲ್ಕು ನೂರು ಕಬಾಬ್ ಪಾರ್ಸೆಲ್, ಕಾಲ್ ಪ್ರೈ ಪಾರ್ಸೆಲ್," ಅನ್ನುತ್ತಾ ಈಗ ಮೀನನ್ನು ತೆಗೆದುಕೊಂಡು ತಿನ್ನುತ್ತಿರುವವರ ಕಡೆ ಒಂದು ಸುತ್ತು ಗಮನ ಹರಿಸಿದಳು.

ನನಗಂತೂ ಇದು ನಿಜಕ್ಕೂ ಕುತೂಹಲವೆನ್ನಿಸಿತ್ತು. ಆತ ಬಾಣಲೆಗೆ ಹಾಕುವ ಮುನ್ನ ತೂಕದ ತಕ್ಕಡಿಯಲ್ಲಿ ನೂರು ಗ್ರಾಮ್ ಮೀನಿನ ತುಣುಕುಗಳನ್ನು ಹಾಕಿದ. ಸ್ವಲ್ಪ ಕಡಿಮೆ ಬಂತು. ಆಗ ದೂರದಿಂದಲೇ ಒಂದು ಮೀನಿನ ತುಂಡನ್ನು ತಕ್ಕಡಿಗೆ ಎಸೆದಾಗ ಅದು ಕೆಳಗೆ ಬಂತು. ತಕ್ಷಣ ಅದನ್ನು ತೆಗೆದು ಎಣ್ಣೆ ಕಾಯುತ್ತಿರುವ ಬಾಣಲೆಗೆ ಹಾಕಿದ. ಆಗ ನನಗನ್ನಿಸಿತು ಒಂದು ನೂರು ಅಂದರೆ ಒಂದು ಪ್ಲೇಟ್, ನಾಲ್ಕು ನೂರು ಅಂದರೆ ನಾಲ್ಕು ಪ್ಲೇಟ್ ಅಂತ.

"ಅರೆರೆ..ಇವನೇನು ಇಷ್ಟು ಕರೆಕ್ಟ್ ಆಗಿ ತೂಕ ಹಾಕುತ್ತಾನಲ್ಲ, ಅಂದುಕೊಳ್ಳುತ್ತಾ ಅವನೆಡೆಗೆ ನೋಡಿದೆ. ಆತ ತನ್ನ ಕೆಲಸದಲ್ಲಿ ಮಗ್ನ. ಹೆಂಡತಿಗೆ ತಕ್ಕ ಗಂಡ ಅಂದುಕೊಂಡು ನನ್ನ ಜೊತೆಯಲ್ಲಿ ಬಂದವನ ಕಡೆಗೆ ತಿರುಗಿ "ನಿನಗೇನು ಬೇಕೋ ತೆಗೆದುಕೊ" ಅಂದೆ. ಅವನು ತುಸು ನಾಚುತ್ತಾ, ಚೊತೆಯಲ್ಲಿಯೇ ಅತಿ ನಾಚಿಕೆ ಪಟ್ಟುಕೊಂಡರೆ ನನಗೆ ಸಿಗಬೇಕಾದ್ದು ಸಿಗಲಾರದು ಅಂತಲೂ ಅನ್ನಿಸಿ,

"ನೋಡಿ ಸರ್, ಇಲ್ಲಿ ಮೀನಿನ ಕಬಾಬ್ ತುಂಬಾ ಚೆನ್ನಾಗಿ ಮಾಡುತ್ತಾರೆ, ಫ್ರೈ ಕೂಡ ತುಂಬಾ ಚೆನ್ನಾಗಿರುತ್ತೆ. ಮೊದಲು ಫ್ರೈ ತಿಂದುಬಿಡುತ್ತೇನೆ ನಂತರ ಕಬಾಬ್ ಟೇಸ್ಟ್ ಮಾಡೋಣ" ಅಂದವನೇ ಎರಡು ಪ್ಲೇಟ್ ಕಬಾಬ್ ಅಂದ.

ಅರೆರೆ...ನನಗೂ ಸೇರಿಸಿ ಹೇಳುತ್ತಾನಲ್ಲ ಇವನು ಅನ್ನಿಸಿ,

"ನನಗೆ ಬೇಡ ನೀನು ತಗೋ" ಅಂದೆ.

"ಇರಲಿ ತಗೊಳ್ಳಿ" ಅಂದ. ಮತ್ತೆ ನನಗೆ ಬೇಡವೆಂದು ಒಂದು ಪ್ಲೇಟ್ ಮಾತ್ರ ಅಂತ ಆ ಹೆಂಗಸಿಗೆ ನಾನೇ ಹೇಳಿದೆ. ಐದೇ ನಿಮಿಷದಲ್ಲಿ ಆತ ಕೇಳಿದ ಹೊಗೆಯಾಡುತ್ತಿರುವ ಮೀನಿನ ಫ್ರೈ, ಈರುಳ್ಳೀ ಮತ್ತು ನಿಂಬೆಹಣ್ಣಿನ ಚೂರಿನ ಜೊತೆಗೆ ಬಂತು. ಆತನ ನೋಡಿ ನನಗೆ ತುಂಬಾ ಖುಷಿಯಾಯ್ತು. ಏಕೆಂದರೆ ಅದನ್ನು ತಿನ್ನುವಾಗ ಅದೇನು ಆನಂದವೋ ಅವನಿಗೆ. ಮತ್ತೊಂದು ಪ್ಲೇಟ್ ಮೀನು ಫ್ರೈ ಕೇಳಿ ತಿಂದ.

"ಅಣ್ಣಾ ಇದು ಯಾವ ಮೀನು ಗೊತ್ತಾ"

"ಗೊತ್ತಿಲ್ಲಪ್ಪ"

"ಇದೇ ಅಣ್ಣಾ ಪಾಂಪ್ಲೆಟ್ ಮೀನು. ನಾವೇ ಹಿಡಿದ ಮೀನನ್ನು ಇಲ್ಲಿ ಇಷ್ಟು ರುಚಿಯಾಗಿ ಮಸಾಲೆ ಹಾಕಿ ಮಾಡುತ್ತಾರೆ. ಎರಡು ಪೆಗ್ ಹಾಕಿಕೊಂಡು ಇಲ್ಲಿ ಬಂದುಬಿಟ್ಟರೆ ಇಲ್ಲಿನ ವಾಸನೆಯೇ ಸ್ವರ್ಗಸುಖ ಗೊತ್ತಣ್ಣ" ಅಂದ ಅವನ ಕಣ್ಣುಗಳಲ್ಲಿ ತೃಪ್ತಿಯ ಕುರುಹು ಕಾಣುತ್ತಿತ್ತು. ಅವನ ಮಾತಿಗೆ ನಾನು ಉತ್ತರ ಕೊಡದೆ ಸುಮ್ಮನೆ ನಸುನಕ್ಕೆ. ನಾನು ಮಾತಾಡದಿರುವುದು ನೋಡಿ ಅವನೇ ಮುಂದುವರಿಸಿದ.

"ಇಲ್ಲಿ ನೋಡಿಣ್ಣಾ, ನಾನು ಪ್ರತಿದಿನ ಇಂಥ ನೂರಾರು ಮೀನುಗಳನ್ನು ನನ್ನ ಬಲೆಯಲ್ಲಿ ಹಿಡಿದುಹಾಕ್ತೇನೆ. ಆದ್ರೆ ಅದನ್ನು ತಿನ್ನುವ ಯೋಗವಿಲ್ಲ. ಯಾರೋ ಎಲ್ಲವನ್ನು ಕೊಂಡುಕೊಳ್ಳುತ್ತಾರೆ, ನಂತರ ಎಲ್ಲ ಮೀನುಗಳನ್ನು ವಿಂಗಡಿಸಿ, ಮಾರುತ್ತಾರೆ. ಇಲ್ಲಿ ಹೀಗೆ ಎಣ್ಣೆಯಲ್ಲಿ ಕುದಿಯುವ ಹೊತ್ತಿಗೆ ಅದರ ಬೆಲೆಯ ಹತ್ತರಷ್ಟು ಕೊಡಬೇಕೆಂದಾಗ ಮನಸ್ಸಿಗೆ ನೋವಾಗುತ್ತಣ್ಣ" ಅಂದಾಗ ಅವನ ಮನಸ್ಸಿನ ನೋವು ಕಣ್ಣುಗಳಲ್ಲಿ ಕಾಣುತ್ತಿತ್ತು.

"ನಿನಗಿಷ್ಟವಾದ ಈ ಮೀನನ್ನು ನೀನೆ ಬಲೆ ಹಾಕಿ ಹಿಡಿದಿರುವೆ ಅಂದ ಮೇಲೆ ನಿನಗೆ ಬೇಕಾದ್ದನ್ನು ಆರಿಸಿಕೊಂಡು ಮನೆಯಲ್ಲಿ ನಿನ್ನ ಹೆಂಡತಿಗೆ ಕೊಟ್ಟು ನಿನಗೆ ಬೇಕಾದ ಹಾಗೆ ಮಾಡಿಸಿಕೊಂಡು ತಿನ್ನಬಹುದಲ್ವಾ? ಅವನೆಡೆಗೆ ಪ್ರಶ್ನೆ ಎಸೆದೆ.

ಆತ ತಕ್ಷಣ ತಿನ್ನುತ್ತಿದ್ದವನು ನಿಲ್ಲಿಸಿದ. ನನ್ನಡೆಗೆ ನೋಡಿದ. ಅವನ ನೋಟ ನನಗೆ ಆ ಕ್ಷಣಕ್ಕೆ ಭಯವೆನ್ನಿಸಿತು. "

"ಯಾಕೆ ಹಾಗೆ ನೋಡ್ತೀಯಾ" ಅಂದೆ.

"ಅಣ್ಣಾ ನನಗೆಲ್ಲಿ ಹೆಂಡತಿ ಇದ್ದಾಳೆ, ಅವಳು ತೀರಿಹೋಗಿ ಐದು ವರ್ಷಗಳಾದವು."

ಆತ ತಲೆ ಎತ್ತದೇ ಮೆತ್ತನೆ ದ್ವನಿಯಲ್ಲಿ ಹೇಳಿದಾಗ ನನಗೆ ಒಂದು ಕ್ಷಣ ಶಾಕ್ ಆಗಿತ್ತು. ಅವನೆಡೆಗೆ ನೋಡಿದೆ. ಕಂಡರೂ ಕಾಣದ ಹಾಗೆ ಅವನ ಕಣ್ಣಂಚಲ್ಲಿ ನೀರು ಇಣುಕಿತ್ತು.

ನನ್ನ ಮನಸ್ಸಿಗೆ ಒಂಥರ ಕಸಿವಿಸಿ ಉಂಟಾಯಿತು. ನಾನು ಈ ವಿಚಾರವನ್ನು ಕೇಳಬಾರದಿತ್ತು ಅನ್ನಿಸಿತು. ಹೋಗಲಿ ಬಿಡು ಅಂತ ಸಮಾಧಾನಿಸಿ, ಅವನು ಬೇಡವೆಂದರೂ ಮತ್ತೊಂದು ಮೀನಿನ ಕಬಾಬ್ ಹೇಳಿದೆ. ನನ್ನ ಕಡೆಗೆ ನೋಡದೇ ಬಗ್ಗಿ ಕಣ್ಣಂಚಿನ ನೀರನ್ನು ಒರಸಿಕೊಳ್ಳುತ್ತಿದ್ದ. ಎರಡು ಪೆಗ್ ಕುಡಿದಿದ್ದಕ್ಕೋ ಏನೋ ಕಣ್ಣು ಬೇಗನೇ ಕೆಂಪಾಗಿತ್ತು.

ಅಲ್ಲಿಂದ ಇಬ್ಬರೂ ಹೊರಟೆವು. ಅವನಿಗಿಷ್ಟವಾದ ಹೋಟಲ್ಲಿಗೆ ಹೋಗಿ ಊಟ ಕೊಡಿಸಿದೆ. ಮತ್ತದೇ ಮೀನಿನ ಕೆಂಪುಬಣ್ಣದ ಸಾರು, ಕೆಂಪುಬಣ್ಣದ ದಪ್ಪಕ್ಕಿ ಅನ್ನವನ್ನು ಇಷ್ಟಪಟ್ಟು ತಿಂದು ಮುಗಿಸಿದ. ಅವನು ತೃಪ್ತನಾಗಿದ್ದು ಕಂಡು ನನಗೆ ಖುಷಿಯಾಯ್ತು.

ನನಗೆ ಆತ ಸಿಕ್ಕಿದ ಮೇಲೆ ಒಂದೇ ಸಮ ಹರಳು ಹುರಿದಂತೆ ಮಾತಾಡುತ್ತಿದ್ದವನು ಇವನೇನಾ ಅನ್ನುವಷ್ಟರ ಮಟ್ಟಿಗೆ ಸುಮ್ಮನಾಗಿದ್ದ ಅವನನ್ನು ಮತ್ತೆ ಮಾತಾಡಿಸಬೇಕೆನ್ನಿಸಲ್ಲಿಲ್ಲ. ಒಂದು ಫರ್ಲಾಂಗು ದೂರದ ಅವನ ಮನೆ ಕಡೆಗೆ ಇಬ್ಬರು ಸುಮ್ಮನೆ ನಡೆಯುತ್ತಿದ್ದೆವು. ನಮ್ಮ ನಡುವೆ ಮಾತಿರಲಿಲ್ಲ. ಅವನ ಮನೆಗೆ ಹೋಗುವ ಮೊದಲು ಒಂದು ದೊಡ್ಡ ಸೇತುವೆ ಬರುತ್ತದೆ. ಅದೇ ಉಡುಪಿಗೆ ಐದು ಕಿಲೋಮೀಟರ್ ದೂರದ ಉದ್ಯಾವರ ಸೇತುವೆ. ಕೆಳಗೆ ನೇತ್ರಾವತಿ ಜನವರಿಯ ತಿಂಗಳ ಅಮವಾಸ್ಯೆಯಲ್ಲಿ ತೆಳ್ಳಗೆ ಹರಿಯುತ್ತಿದ್ದಳು. ಸೇತುವೆಯ ಕೆಳಗೆ ಇಳಿದು ಹೋದರೆ ದೂರದಲ್ಲಿ ಸಣ್ಣದಾಗಿ ಕಾಣುತ್ತದೆ ಆತನ ಹೆಂಚಿನ ಮನೆ. ಎರಡು ಕಡೆ ನೀರು. ಮಧ್ಯದಲ್ಲಿ ನಾಲ್ಕು ಮನೆ. ಅದರಲ್ಲಿ ಒಂದು ಮನೆ ಈತನದು.
"ಕತ್ತಲಲ್ಲಿ ಏನು ಕಾಣಿಸುತ್ತಿಲ್ಲ ಹೇಗೆ ಹೋಗುತ್ತೀಯಾ" ನನಗೆ ಆತಂಕ.

"ಅಯ್ಯೋ ಇದ್ಯಾವ ಕತ್ತಲು ಬಿಡಿಣ್ಣಾ, ಇಂಥ ಕತ್ತಲೆಯ ಅಮಾವಾಸ್ಯೆಯಲ್ಲಿ ನೀರು ಇಳಿದಿರುವಾಗಲೇ ನೀರಿನೊಳಗೆ ಬಲೆಯನ್ನು ಇಳಿಬಿಟ್ಟಿರುತ್ತೇವೆ. ಮಧ್ಯರಾತ್ರಿಯ ಹೊತ್ತಿಗೆ ರಾಶಿ ರಾಶಿ ಮೀನು ಗೊತ್ತಾ? ಅಂಥವನ್ನೇ ಮಾಡಿರುವಾಗ ಇದ್ಯಾವ ಲೆಕ್ಕ. ನೀವು ಹೋಗಿ ನಾಳೆ ಬೆಳಿಗ್ಗೆ ಸಿಗುತ್ತೇನೆ" ಅಂದವನು ನಿಧಾನವಾಗಿ ಆ ಕತ್ತಲೆಯಲ್ಲಿ ನಡೆಯತೊಡಗಿದ.

ನನಗೆ ಒಂಥರ ಆತಂಕವಿದ್ದರೂ ಆತನ ತೆಳ್ಳಗಿನ ಆಕೃತಿ ಕತ್ತಲೆಯಲ್ಲಿ ಮರೆಯಾಗುವವರೆಗೂ ನೋಡುತ್ತಿದ್ದೆ. ಅಂಚಿಕಡ್ಡಿಯಂತೆ ತೆಳ್ಳಗಿದ್ದ ಇವನು ಯಾವ ರೀತಿ ಅಷ್ಟು ದೊಡ್ಡ ಮೀನಿನ ಬಲೆಯನ್ನು ಎಸೆಯಬಲ್ಲ? ಅನ್ನುವ ಪ್ರಶ್ನೆಯೂ ಮಿಂಚಂತೆ ಬಂದು ಆ ಕತ್ತಲಲ್ಲಿ ಹಾಗೆ ಮಾಯವಾಗಿತ್ತು. ನೋಡನೋಡುತ್ತಿದ್ದಂತೆ ಆತನ ಆಕೃತಿಯೂ ಕತ್ತಲೆಯೊಳಗೆ ಒಂದಾಗಿತ್ತು. ನಾನು ಉದ್ಯಾವರ ಬಸ್ ನಿಲ್ದಾಣದ ಕಡೆಗೆ ಹೆಜ್ಜೆ ಹಾಕಿದೆ. "ಆರೆರೆ ಅವನ ಫೋನ್ ನಂಬರ್ ತೆಗೆದುಕೊಳ್ಳಲೇ ಇಲ್ಲವಲ್ಲ., ಎಂಥ ಕೆಲಸವಾಯಿತು. ವಾಪಾಸ್ ಹೋಗೋಣವೆಂದರೆ ಪೂರ್ಣ ಕತ್ತಲು ಏನು ಮಾಡುವುದು" ಒಳ್ಳೇ ಫಜೀತಿಯಾಯಿತಲ್ಲ, ನಾಳೆ ಇವನನ್ನು ಹುಡುಕುವುದು ಹೇಗೆ, ಒಳ್ಳೇ ಯಡವಟ್ಟು ಕೆಲಸ ಮಾಡಿಕೊಂಡುಬಿಟ್ಟೆನಲ್ಲ" ಅಂದುಕೊಳ್ಳುವ ಹೊತ್ತಿಗೆ ಉಡುಪಿಗೆ ಹೋಗುವ ಬಸ್ ಬಂತು.

ದಾರಿಯುದ್ದಕ್ಕೂ ಅವನ ಸಂಸಾರದ ಕತೆಯನ್ನು ಮೆಲುಕು ಹಾಕುವ ಹೊತ್ತಿಗೆ ಉಡುಪಿ ಬಸ್ ನಿಲ್ದಾಣ ಬಂತು. ನಿದಾನವಾಗಿ ನಾನು ಉಳಿದುಕೊಂಡಿರುವ ಹೋಟಲ್ಲಿನ ಕಡೆಗೆ ಹೆಜ್ಜೆ ಹಾಕತೊಡಗಿದೆ.

____ ______ _____


ನಾನು ಮತ್ತು ಮಲ್ಲಿಕಾರ್ಜುನ್ ಇಬ್ಬರೂ ಸೇರಿ ಬರೆಯುತ್ತಿರುವ ನಮ್ಮ ಮುಂದಿನ ಪುಸ್ತಕ "ಫೋಟೊ ಹಿಂದಿನ ಕತೆಗಳು" ಅದರಲ್ಲಿ ನನ್ನ ಮೆಚ್ಚಿನ ಚಿತ್ರವಾದ "ಮೀನಿನ ಬಲೆ" ಫೋಟೊ ತೆಗೆದಿದ್ದು ಹೇಗೆ, ಅದಕ್ಕೂ ಮೊದಲು ಆ ಚಿತ್ರದ ಕಲ್ಪನೆ ಹೇಗೆ ಬಂತು? ಅದರ ಹಿಂದೆ ಬಿದ್ದು ಸಾಗುತ್ತಾ............ಕ್ಲಿಕ್ಕಿಸುವವರೆಗೆ ನಡುವೆ ನಡೆದ ವಿಭಿನ್ನ ಆನುಭವದಲ್ಲಿ ಇಲ್ಲಿ ಹಾಕಿರುವುದು ಲೇಖನದ ನಡುವಿನ ತುಣುಕು ಮಾತ್ರ. ನೀವು ಓದಿದ ಮೇಲೆ ನಿಮ್ಮ ಅಭಿಪ್ರಾಯ ತಿಳಿಸಿ.

ಸಧ್ಯ ಇಬ್ಬರು ಕೆಲವು ಚಿತ್ರಗಳನ್ನು ಆರಿಸಿಕೊಂಡು ಅವುಗಳನ್ನು ಕ್ಲಿಕ್ಕಿಸುವಾಗಿನ ಹಿಂದಿನ ಕತೆಗಳನ್ನು ಬರೆಯಲು ಕುಳಿತಿದ್ದೇವೆ.

ಚಿತ್ರ ಮತ್ತು ಲೇಖನ.
ಶಿವು.ಕೆ.

62 comments:

ಸಾಗರದಾಚೆಯ ಇಂಚರ said...

ಶಿವೂ ಸರ್,
ತುಂಬಾ ನವಿರಾದ ನಿರೂಪಣೆ, ಅವುಗಳೊಂದಿಗೆ ಫೋಟೋ
ಸೇರಿ ಇನ್ನಷ್ಟು ಹಿತ ನೀಡಿದೆ
ನಿಮ್ಮ ಹೊಸ ಪುಸ್ತಕದ ವಿಷಯ ಕೇಳಿ ಬಹಳ ಸಂತಸವಾಯಿತು
ನಿಮ್ಮ ಸಾಧನೆ ಹೀಗೆಯೇ ಮುಂದುವರೆಯಲಿ
ಹೊಸ ಪುಸ್ತಕಕ್ಕೆ ಶುಭ ಹಾರೈಕೆ
ಒಳ್ಳೆಯ ಲೇಖನಕ್ಕೆ ಅಭಿನಂದನೆ

L'Étranger said...

ಚಿತ್ರಗಳಲ್ಲಷ್ಟೇ ಅಲ್ಲ ಕತೆ ಇರುವುದು, ಚಿತ್ರಗಳ ಹಿಂದೆಯೂ ವಿಭಿನ್ನ ರೀತಿಯ ಕತೆಗಳಿರುತ್ತವೆ ಅನ್ನುವುದಕ್ಕೊಂದು ಒಳ್ಳೆಯ ನಿದರ್ಶನ.

ಹೊಸ ಪುಸ್ತಕ ಪ್ರಯತ್ನ ಸಫಲವಾಗಲಿ!

ಮನಸು said...

ಒಳ್ಳೆಯ ನಿರೂಪಣೆ, ನಿಮ್ಮ ಪುಸ್ತಕ ನಮಗಿನ್ನು ತಲುಪಿಲ್ಲ ಮುಂದಿನಬಾರಿ ಬಂದಾಗ ತೆಗೆದುಕೊಂಡು ಓದುತ್ತೆವೆ. ಲೇಖನ ಚೆನ್ನಾಗಿದೆ.
ವಂದನೆಗಳು

sunaath said...

ಶಿವು,
ತುಂಬ ಮನ ಮಿಡಿಯುವ ನಿರೂಪಣೆ.
ಫೋಟೋ ಸೊಗಸಾಗಿದೆ.

ಶಿವಪ್ರಕಾಶ್ said...

ಶಿವು ಅವರೇ,
ನಿಮ್ಮ ಮುಂದಿನ ಪುಸ್ತಕಕ್ಕೆ ಉತ್ತಮ ಆರಂಭ ಕೊಟ್ಟಿದ್ದಿರಿ.
ಹೀಗೆ ಮುಂದುವರೆಸಿ.
All The Best :)

ವನಿತಾ / Vanitha said...

ವಾಹ್!!!ಇನ್ನೊಂದು ಪುಸ್ತಕ..Goodluck ಶಿವು..
ನಮ್ಮೊರ ಕಥೆ ತುಂಬಾ ಕುಶಿಯಾಯ್ತು, ಅಂದ ಹಾಗೆ Pamphlet ಫಿಶ್ ತುಂಬಾ tastyಯಂತೆ :)

Shweta said...

ohh heegu erutta annistu;photo tumba chennagide ,nimma vivaraneyu saha chennagide..

ಚುಕ್ಕಿಚಿತ್ತಾರ said...

ಉತ್ತಮ ಬರಹ.
ಹೊಸ ಪುಸ್ತಕಕ್ಕೆ ಮು೦ಗಡ ಶುಭಾಶಯಗಳು.

Nisha said...

ಒಳ್ಳೆಯ ಬರಹ, ನಿರೂಪಣೆ. ಹೊಸ ಪುಸ್ತಕಕ್ಕೆ ಶುಭ ಹಾರೈಕೆ

ಬಾಲು said...

ನಿಮ್ಮ ಅಕ್ಷರಯಾನ ಹೀಗೆ ಮುಂದುವರೆಯಲಿ.

ಸವಿಗನಸು said...

ಶಿವು ಸರ್,
ಸೊಗಸಾದ ನಿರೂಪಣೆಯೊಂದಿಗೆ ಒಳ್ಳೆಯ ಫೋಟೋಗಳು....
ಹೊಸ ಪುಸ್ತಕಕ್ಕೆ ನಮ್ಮ ಶುಭ ಹಾರೈಕೆಗಳು......

ರಾಜೀವ said...

ಫೋಟೋ ಚೆನ್ನಾಗಿದೆ.
ನನಗೆ ಮೀನಿನ ವಾಸನೆ ಆಗುವುದಿಲ್ಲ. ಈಗ ಮೂಗು ಮುಚ್ಚಿಕೊಂಡು ನಿಮ್ಮ ಲೇಖನವನ್ನು ಓದುತ್ತಿದ್ದೇನೆ ;-)
ನಿಮ್ಮ ನಿರೂಪಣೆ ಅಂತಹದು. ಅಕ್ಷರದ ಜೊತೆಗೆ ಗಂಧವನ್ನೂ ಸೇರಿಸಿ ಬರೆದಿದ್ದೀರ.

ದಿನಕರ ಮೊಗೇರ said...

ಶಿವೂ ಸರ್,
ಮುಂದಿನ ಪುಸ್ತಕ ಅಭಿಯಾನಕ್ಕೆ ಅಭಿನಂದನೆ....... ನಾನು ಈಗಲೇ ಪುಸ್ತಕಕ್ಕೆ ಪ್ರಸ್ತಾಪ ಕಳಿಸುತ್ತೇನೆ.... ಸುಂದರ ನಿರೂಪಣೆ.....
ಸರ್, ಈ ಮೇಲಿನ ಫೋಟೋ ತೆಗಿಯಲಿಕ್ಕೆ ನೀವು ಉಡುಪಿಗೆ ಬಂದಿದ್ದಾ....... ಅಥವಾ ಬೇರೆ ಕೆಲಸಕ್ಕೆ ಬಂದಿದ್ದಾಗ ತೆಗೆದಿದ್ದಾ.....

shivu.k said...

ಡಾ.ಗುರುಮೂರ್ತಿ ಸರ್,

ಬ್ಲಾಗಿನಲ್ಲಿ ಹಾಕಿರುವ ಈ ಫೋಟೊ ಹಿಂದೆ ದೊಡ್ಡ ಕತೆಯಿದೆ. ಕೆಲವು ಫೋಟೊಗಳನ್ನು ಕ್ಲಿಕ್ಕಿಸಲು ವರ್ಷಗಟ್ಟಲೇ ಕಾದಿದ್ದಿದೆ. ಅದನ್ನು ಗೆಳೆಯರೊಂದಿಗೆ ಹಂಚಿಕೊಂಡಾಗ ಇದನ್ನೆಲ್ಲಾ ಖಂಡಿತ ಬರೆಯಬೇಕು ಅಂತ ತಾಕೀತು ಮಾಡಿದರು. ಆಗ ನಾನು ಮತ್ತು ಮಲ್ಲಿಕಾರ್ಜುನ್ ಕೆಲವು ಫೋಟೊಗಳನ್ನು ಆರಿಸಿಕೊಂಡು ಅದರ ಹಿಂದಿನ ಕತೆಗಳನ್ನು ಬರೆಯಲು ಪ್ರಾರಂಭಿಸಿದ್ದೇವೆ.
ಖಂಡಿತ ಇದು ಪುಸ್ತಕವಾಗುತ್ತದೆ.
ಲೇಖನದ ಶೈಲಿಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

L.Etranger,

ನೀವು ಹೇಳಿದಂತೆ ನಮ್ಮ ಕಲಾತ್ಮಕ ಛಾಯಾಚಿತ್ರಗಳ ಹಿಂದೆ ದೊಡ್ಡ ಕತೆಯಂತೂ ಇದ್ದೇ ಇದೆ. ಯಾಕೆಂದರೆ ನಮಗೆ ಅಂಥ ಚಿತ್ರವೇ ಬೇಕು ಎನ್ನುವ ಕಲ್ಪನೆ ಮೂಡಿದಾಗ ಅದನ್ನು ಸೃಷ್ಟಿಸುವ ದಾರಿ ದೀರ್ಘವಾಗಿರುತ್ತದೆ. ಅವುಗಳನ್ನೆಲ್ಲಾ ಬರವಣಿಗೆಯ ಮೂಲಕ ಒಟ್ಟು ಮಾಡಿ ಪುಸ್ತಕ ಮಾಡುವ ಆಸೆ.

ನಿಮ್ಮ ಆರೈಕೆಗೆ ಧನ್ಯವಾದಗಳು.

shivu.k said...

ಮನಸು ಮೇಡಮ್,

ನನ್ನ ವೆಂಡರ್ ಕಣ್ಣು ಪುಸ್ತಕವನ್ನು ಓದುವ ಆಸೆಗೆ ನನ್ನ ಧನ್ಯವಾದಗಳು.

ಈಗ ಎರಡನೇ ಪುಸ್ತಕದ ಯೋಚನೆಯಲ್ಲಿದ್ದೇನೆ..

ಅದರ ನಿರೂಪಣೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಸುನಾಥ್ ಸರ್,

ಎರಡನೆ ಪುಸ್ತಕದ ಪ್ರಾರಂಭದ ಲೇಖನದ ಒಂದು ಚಿಕ್ಕ ಭಾಗವಷ್ಟೆ. ಈ ಫೋಟೋ ಹಿಂದೆ ತುಂಬಾ ದೊಡ್ಡ ಕತೆಯಿದೆ. ಅದನ್ನು ಮುಂದೆ ಎಂದಾದರೂ ಬರೆಯುತ್ತೇನೆ.

ಧನ್ಯವಾದಗಳು.

shivu.k said...

ಶಿವಪ್ರಕಾಶ್,

ಎರಡನೇ ಪುಸ್ತಕದ ಆರಂಭ ನಿಮಗಿಷ್ಟವಾಗಿದ್ದಕ್ಕೆ ನನಗೆ ಖುಷಿ.

ನಿಮ್ಮ ಆರೈಕೆಗೆ ಧನ್ಯವಾದಗಳು.

shivu.k said...

ವನಿತಾ,

ಮೀನಿನ ಬಲೆಯ ಪೋಟೊವನ್ನು ನಿಮ್ಮೂರಲ್ಲಿ[ಉಡುಪಿಯ ಬಳಿ]ಕ್ಲಿಕ್ಕಿಸಿದ್ದು. ಹಾಗೆ [Light and Dust]ಕುರಿಗಳ ಚಿತ್ರವನ್ನು ತುಮಕೂರಿನ ಗುಬ್ಬಿಯ ಹಳ್ಳಿಯಲ್ಲಿ, ನೀರೆರೆಚುವ ಚಿತ್ರವನ್ನು ಸಿರಸಿಯ ಮತ್ಮರ್ಡುನಲ್ಲಿ......ಹೀಗೆ ಸಾಗುತ್ತದೆ. ಇದರೆಲ್ಲಾ ಅನುಭವಗಳನ್ನು ಒಟ್ಟು ಮಾಡಿ ಪುಸ್ತಕ ಮಾಡುವ ಆಸೆ..

ನಿಮ್ಮ ಆರೈಕೆಗೆ ಧನ್ಯವಾದಗಳು.

shivu.k said...

ಶ್ವೇತ ಮೇಡಮ್,

ಪ್ರತಿ ಫೋಟೊಗಳ ಒಂದೊಂದು ಕತೆ ಇದ್ದೇ ಇರುತ್ತೆ...ಈ ಫೋಟೊ ಮತ್ತು ಅದರ ಬರಹವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಚುಕ್ಕಿಚಿತ್ತಾರ,

ನಿಮ್ಮ ಆರೈಕೆಗೆ ಧನ್ಯವಾದಗಳು.

shivu.k said...

ನಿಷಾ,

ಹೊಸಪುಸ್ತಕಕ್ಕೆ ನಿಮ್ಮ ಆರೈಕೆಗೆ ಧನ್ಯವಾದಗಳು.

shivu.k said...

ನಿಷಾ,

ಹೊಸಪುಸ್ತಕಕ್ಕೆ ನಿಮ್ಮ ಆರೈಕೆಗೆ ಧನ್ಯವಾದಗಳು.

shivu.k said...

ಸವಿಗನಸು[ಮಹೇಶ್ ಸರ್],

ನಿರೂಪಣೆ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

ಹೊಸ ಪುಸ್ತಕವನ್ನು ಶುಭ ಕೋರಿದ್ದೀರಿ. ಥ್ಯಾಂಕ್ಸ್..

shivu.k said...

ರಾಜೀವ್,

ನನ್ನ ಲೇಖನವನ್ನು ಓದಿ ನಿಮಗೆ ಮೀನಿನ ವಾಸನೆ ಬಂದಿದೆಯಾ...ಅಲ್ಲಿಗೆ ಫೋಟೊದಂತೆ ನನ್ನ ಬರಹವೂ ಚಿತ್ರಗಳನ್ನು ಕಟ್ಟಿಕೊಡುವುದಲ್ಲದೇ ವಾಸನೆಯೂ ಕೊಡುತ್ತದೆ ಅಂದ ಹಾಗೆ ಆಯ್ತು...ಅದಕ್ಕೆ ಥ್ಯಾಂಕ್ಸ್...

shivu.k said...

ದಿನಕರ್ ಸರ್,

ನನ್ನ ಮುಂದಿನ ಪುಸ್ತಕದ ಪ್ರಾರಂಭದ ಹೆಜ್ಜೆ ಇದು. ನಿಮಗೆ ಖಂಡಿತ ಪುಸ್ತಕವನ್ನು ಕಳಿಸುತ್ತೇನೆ.

ಮತ್ತೆ ನಾನು ಅಚಾನಕ್ಕಾಗಿ ಉಡುಪಿಗೆ ಬಂದಾಗ ಈ "ಮೀನಿನ ಬಲೆ" ಚಿತ್ರವನ್ನು ಕ್ಲಿಕ್ಕಿಸಲಿಲ್ಲ. ಅದರ ಹಿಂದೆ ದೊಡ್ದ ಕತೆಯಿದೆ. ಮೊದಲು ಆ ಚಿತ್ರವೇ ಹೀಗಿರಬೇಕೆಂದು ಕಲ್ಪನೆ ಮೂಡಿದ್ದು. ಅದರ ಬಗ್ಗೆ ಪ್ಲಾನ್ ಮಾಡಿದ್ದು, ಒಂದು ತಿಂಗಳ ಅಂತರದಲ್ಲಿ ಮಂಗಳೂರಿಗೆ ಹೋಗಿ ಕ್ಲಿಕ್ಕಿಸಿ ವಿಫಲವಾಗಿದ್ದು, ಅಷ್ಟರಲ್ಲಿ ಬೆಳಕು ಹೆಚ್ಚಾಗಿ ಒಳ್ಳೆಯ ಲೈಟಿಂಗ್ ಇಲ್ಲದ ಕಾರಣ ಮುಂದಿನ ವರ್ಷದ ಡಿಸೆಂಬರ್ ಲೈಟಿಂಗ್ ಗಾಗಿ ಕಾಯ್ದು ಅದಕ್ಕಾಗಿ ಹೊರಟು....ಹೀಗೆ ದೊಡ್ಡದಾಗಿ ಬರೆಯಬೇಕಿದೆ...

ಈ ಒಂದು ಫೋಟೊ ಕ್ಲಿಕ್ಕಿಸಲು ಎರಡು ವರ್ಷ ಕಾದಿದ್ದೇನೆ. ಅದಕ್ಕಾಗಿಯೇ ಅಲ್ಲಿಗೆ ಬಂದು ಕ್ಲಿಕ್ಕಿಸಿದ್ದೇನೆ. ಅದಕ್ಕೆ ತಕ್ಕಂತೆ ಈ ಫೋಟೊ ಕೂಡ ನನಗೆ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ಥಿಗಳು, ಚಿನ್ನದ ಪದಕಗಳು, ಒಂದಷ್ಟು ಹಣ ಇತ್ಯಾದಿ ಎಲ್ಲವನ್ನು ಪ್ರತಿಯಾಗಿ ಕೊಟ್ಟಿದೆ..

ಧನ್ಯವಾದಗಳು.

Ittigecement said...

ಶಿವು ಸರ್....

ಮುಂದಿನ ಪುಸ್ತಕ್ಕಾಗಿ ಶುಭ ಹಾರೈಕೆಗಳು...

ಸೊಗಸಾದ ಫೋಟೊ..
ಅದರ ಹಿಂದಿನ ಕಥೆ...
ಓದಲೂ ಮಜವಾಗಿರುತ್ತದೆ...

ಕಾತುರದಿಂದ ಎದುರು ನೋಡುತ್ತಿದ್ದೇವೆ...

ಮತ್ತೊಮ್ಮೆ ಶುಭ ಹಾರೈಕೆಗಳು...

H.S. Prabhakara said...
This comment has been removed by a blog administrator.
ರಾಜ್ said...

"ನಾಲ್ಕು ನೂರು ಕಬಾಬ್ ಪಾರ್ಸೆಲ್, ಕಾಲ್ ಪ್ರೈ ಪಾರ್ಸೆಲ್,"
ಇದ್ಯಾವ ಹೋಟೆಲಪ್ಪ ಅ೦ತ ಕುತೂಹಲ ಹುತ್ತಿಸಿಬಿಟಿ‍‌‌ತ್ತು. ನಿಮ್ಮ ನಿರೂಪಣೆ ಯಾವುದೇ ಅತಿರೇಕವಿಲ್ಲದೇ ಅತ್ಯ೦ತ ಗ೦ಬಿರವಾಗಿದೆ.

Guruprasad said...

ಶಿವೂ,
ಒಳ್ಳೆಯ ನಿರೂಪಣೆ, ಹಾಗೆ, ಅದ್ಬುತ ಫೋಟೋ ಕೂಡ,, ತುಂಬ ಚೆನ್ನಾಗಿ ಇರುತ್ತೆ ಇಂಥ ಅನುಭವಗಳು,,, ನಿಮ್ಮ ಹಾಗು ಮಲ್ಲಿಕಾರ್ಜುನರ ಹೊಸ ಪುಸ್ತಕಕ್ಕೆ ಕಾಯುತ್ತಿರುತ್ತೇವೆ....
ಗುರು

ಸೀತಾರಾಮ. ಕೆ. / SITARAM.K said...

ಪೋಟೋ ಹಿ೦ದಿನ ಕಥೆ-ಚೆನ್ನಾಗಿದೆ. ನಮ್ಮ ಉತ್ಪಾದಕರೂ ಹಾಗೂ ಉಪಯೋಗಿಸುವರ ಮಧ್ಯದ ಮಧ್ಯವರ್ತಿಗಳೂ ಹೇಗೆ ಎರಡು ಕಡೆ ಶೋಷಿಸಿತ್ತಾರೆ ಎ೦ಬ ವಿಷಯಕ್ಕೆ ನವಿರು ನಿರೂಪಣೆ ಮಾಡಿರುವಿರಿ.

VENU VINOD said...

ಶಿವು, ಮನಮುಟ್ಟುವ ನಿರೂಪಣೆ...ಉಡುಪಿಗೆ ಬಂದವರು, ಮಂಗಳೂರಿಗೂ ಬರಬೇಕಿತ್ತು :) ಫೋಟೋ ಹಿಂದಿನ ಕಥೆಗಳು ಕಲ್ಪನೆ ಚೆನ್ನಾಗಿದೆ...all the best

Keshav.Kulkarni said...

ಚಂದದ ಪುಸ್ತಕ ಬೇಗ ಬರಲಿ.

PARAANJAPE K.N. said...

"ಫೋಟೋ ಹಿ೦ದಿನ ಕಥೆ" - ನಿಮ್ಮ ಹೊಸ ಪುಸ್ತಕಕೆ ಆಯ್ದುಕೊ೦ಡ concept ಮತ್ತು ಮೀನಿನ ಕಥೆಯ ಆರ೦ಭ ಚೆನ್ನಾಗಿದೆ. ಶುಭವಾಗಲಿ, ನಿಮ್ಮ ಮತ್ತು ಮಲ್ಲಿಯವರ ಯತ್ನಕ್ಕೆ ಯಶ ಸಿಗಲಿ.

ಬಿಸಿಲ ಹನಿ said...

ನಿಮ್ಮ ಮುಂದಿನ ಪುಸ್ತಕ "ಫೋಟೊ ಹಿಂದಿನ ಕತೆಗಳು” ನೀವು ಮತ್ತು ಮಲ್ಲಿಕಾರ್ಜುನ ಬರೆಯುತ್ತಿರುವದು ಕೇಳಿ ಸಂತೋಷವಾಯಿತು. ಆದಷ್ಟು ಶಿಘ್ರವಾಗಿ ಬರಲೆಂದು ಹಾರೈಸುವೆ.

b.saleem said...

ಶಿವು ಸರ್,
ಮಿನಿನ ಬಲೆಯ ಚಿತ್ರತೆಗೆದ ಅನುಭವವನ್ನು ಅತ್ಯಂತ ಸುಂದರವಾಗಿ ನಿರೂಪಿಸಿದ್ದಿರಿ.
ಇಂಥ ಅನುಭವಗಳ ಪುಸ್ತಕವನ್ನು ಬರೆಯುತ್ತಿರುವ ನಿಮಗೂ ಮತ್ತು ಮಲ್ಲಿಕಾರ್ಜುನ ಅವರಿಗೂ ನನ್ನ ಅಭಿನಂದನೆಗಳು.
ಅಲ್ಲದೆ ಚಿತ್ರಕ್ಕೆ ಸಂಬಂಧಿಸಿದ ಕ್ಯಾಮರಾದ ತಾಂತ್ರಿಕ ಅಂಶಗಳನ್ನು ಪ್ರಕಟಿಸಿದರೆ ಇನ್ನು ಉತ್ತಮ ಎಂದು ನನ್ನ
ಅಭಿಪ್ರಾಯ. ಎನೆ ಆದರು ಪುಸ್ತಕವನ್ನು ಬೇಗನೆ ತನ್ನಿ.

ಸುಧೇಶ್ ಶೆಟ್ಟಿ said...

ಮೀನಿನ ಕಬಾಬ್ ಬಗ್ಗೆ ಅಷ್ಟೊ೦ದು ಚೆನ್ನಾಗಿ ವರ್ಣಿಸಿ ಬಾಯಲ್ಲಿ ನೀರೂರಿಸಿಬಿಟ್ಟಿರಲ್ಲಾ ಶಿವಣ್ಣ... ಇವತ್ತು ರಾತ್ರಿಯ ಊಟಕ್ಕೆ ಮ೦ಗಳೂರು ಹೋಟೇಲಿಗೆ ಹೋಗಬೇಕು ಇನ್ನು :)

ಮು೦ದಿನ ಪುಸ್ತಕ! ಶುಭ ಸ೦ಗತಿ... ಆರಿಸಿಕೊ೦ಡಿರುವ ವಿಷಯ ಚೆನ್ನಾಗಿದೆ :)

ಕ್ಷಣ... ಚಿಂತನೆ... said...

ಶಿವು ಸರ್‍, ಫೋಟೋ ಹಿಂದಿನ ಚಿತ್ರಕಥೆ ಸರಳವಾದ ಬರಹದಿಂದ ಕೂಡಿದೆ. ಹೊಸ ಪುಸ್ತಕದ ವಿಚಾರ ತಿಳಿದು ಸಂತಸವಾಯಿತು. ನಿಮ್ಮ ಮತ್ತು ಮಲ್ಲಿಕಾರ್ಜುನರ ಸಾಧನೆ ಹೀಗೆಯೆ ಮುಂದುವರೆದು ಮತ್ತಷ್ಟು ಯಶಸ್ಸು ನಿಮ್ಮಗಳದಾಗಲಿ.

ಫೋಟೋ ಅಂತೂ ಸೂಪರ್‍!

ಸ್ನೇಹದಿಂದ,

Prashanth Arasikere said...

chennagide nimma photo hindina kate

Prashanth Arasikere said...

chennagide nimma photo hindina kate

ಜಲನಯನ said...

ಶಿವು, ಮೀನಿನ ಫ್ರೈ ....ಹಹಹ ನಮಗೆ ಫ್ರೈ ಅಂದರೆ ಮೀನಿನ ಮರಿ ಎಂದರ್ಥ ಹಹಹ....
ಚನ್ನಾಗಿದೆ ವಿವರಣೆ ಮತ್ತು ಕಥೆಯ ಸಾರ...ಪಾಂಫ್ರೆಟ್ ಅನ್ನು ಪಾಂಪ್ಲೆಟ್ ಎನ್ನುವುದು...ಕಟ್ಲಾ ಮೀನನ್ನು ಕ್ಯಾಟ್ಲಾಕ್ ಎನ್ನುವುದು ನಮ್ಮ ಗ್ರಾಮ್ಯದಲ್ಲಿ ಸಹಜ...
ಮೀನಿನ ಬಲೆಗಳಲ್ಲಿ ನೀವು ಚಿತ್ರದಲ್ಲಿ ತೋರಿದ ಬಲೆಯನ್ನು ಬೀಸು-ಬಲೆ ಎನ್ನುತ್ತಾರೆ...ಅಂದರೆ ನಿಮ್ಮ ಕಥೆಗೆ ಇದೂ ಒಮ್ದು ಸೂಚ್ಯವಾಗಿಯೇ ಬಳಸಿದ್ದೀರಾ ಎಂದಾಯ್ತು...ಅಲ್ಲವಾ??

shivu.k said...

ಪ್ರಕಾಶ್ ಸರ್,

ನಮ್ಮಿಬ್ಬರ ಹೊಸ ಪುಸ್ತಕಕ್ಕೆ ನಿಮ್ಮ ಪ್ರೋತ್ಸಾಹ ಮುಖ್ಯ. ಪ್ರಯತ್ನ ನಡೆದಿದೆ.

ನನಗೂ ತುಂಬಾ ಕುತೂಹಲವಿದೆ. ವಿಚಾರ ಹೊಸದಾಗಿರುವುದರಿಂದ ಎಲ್ಲರಿಗೂ ಇಷ್ಟವಾಗಬಹುದು...
ಧನ್ಯವಾದಗಳು.

shivu.k said...

ರಾಜ್,

ನನ್ನ ಬ್ಲಾಗಿಗೆ ಸ್ವಾಗತ.

ಲೇಖನದ ಪ್ರಾರಂಭವನ್ನು ಓದಿ ಕುತೂಹಲ ಹೆಚ್ಚಾಗಿದ್ದಕ್ಕೆ ಥ್ಯಾಂಕ್ಸ್...ಪುಸ್ತಕಕ್ಕೆ ನಿಮ್ಮ್ ಹಾರೈಕೆ ಇರಲಿ...ಧನ್ಯವಾದಗಳು.

shivu.k said...

ಗುರು,

ನನ್ನ ಪೋಟೊಗಳ ಹಿಂದಿನ ಕತೆಗಳು ಅದರ ಪ್ರಯತ್ನ ತುಂಬಾ ಕಷ್ಟದ್ದು. ಪ್ರಯತ್ನಿಸುತ್ತಿದ್ದೇನೆ.

ಕೆಲವು ಫೋಟೋಗಳ ಯಶಸ್ಸಿಗೆ ವರುಷಗಳೇ ಬೇಕಾಯಿತು. ಅದನ್ನೆಲ್ಲಾ ಮುಂದೆ ಬರೆಯುತ್ತೇನೆ...

ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಸೀತಾರಾಂ ಸರ್,

ಫೋಟೊ ಹಿಂದಿನ ಕತೆಗಳನ್ನು ಬರೆಯುತ್ತಾ ಅನೇಕ ವಿಚಾರಗಳ ಅನುಭವಗಳು ನನಗಾಗಿವೆ. ಅವುಗಳನ್ನು ಮುಂದಿನ ಫೋಟೊಗಳ ಕತೆಗಳಲ್ಲಿ ಬರೆಯುತ್ತೇನೆ..
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಕುಲಕರ್ಣಿ ಸರ್,

ಖಂಡಿತ ಪುಸ್ತಕ ಬೇಗನೇ ಹೊರತರುತ್ತೇವೆ ಸರ್..
ಧನ್ಯವಾದಗಳು.

shivu.k said...

ವೇಣು ವಿನೋದ್,

ಉಡುಪಿಗೆ ಬಂದ ಮೇಲೆ ಮಂಗಳೂರಿಗೆ ಬರಲಾಗದೆ ಇದ್ದೀತೆ. ಮಂಗಳೂರಿಗೂ ಬಂದಿದ್ದೇನೆ. ಅಲ್ಲಿನ ಪ್ರಯತ್ನ ವಿಫಲವಾಗಿ ಉಡುಪಿಗೆ ಹೋಗಿದ್ದು. ಅದನ್ನು ಮುಂದೆ ಬರೆಯುತ್ತೇನೆ...

ಧನ್ಯವಾದಗಳು.

shivu.k said...

ಪರಂಜಪೆ ಸರ್,

ಪುಸ್ತಕಕ್ಕೆ ಆಯ್ದು ಕೊಂಡ ಫೋಟೊಗಳು ಕೂಡ ವಿಭಿನ್ನವೆನಿಸಿವೆ. ಅವುಗಳೆಲ್ಲಾ ಒಂದಲ್ಲ ಒಂದು ಬಹುಮಾನ ಪಡೆದಿರುವಂತವೇ. ಮುಖ್ಯವಾಗಿ ನನಗೆ ಲಂಡನ್ನಿನ ರಾಯಲ್ ಪೋಟೋಗ್ರಫಿಯ ಮನ್ನಣೆ ಸಿಗಲು ಸಹಕಾರಿಯಾದ ಫೋಟೋಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ...ಅವುಗಳ ಬಗ್ಗೆ ನಿದಾನವಾಗಿ ಬರೆಯುತ್ತೇನೆ...

ಧನ್ಯವಾದಗಳು.

shivu.k said...

ಉದಯ ಸರ್,

ನೀವು ನನ್ನ ವೆಂಡರ್ ಕಣ್ಣು ಪುಸ್ತಕ ಬಿಡುಗಡೆ ದಿನದಂದೂ ಅಷ್ಟು ದೂರದಿಂದಲೇ ವಿಶ್ ಮಾಡಿದ್ದು ನನ್ನ ನೆನಪಿನಲ್ಲಿ ಮರೆಯಲಾಗದ ವಿಚಾರ. ನಿಮ್ಮ ಶ್ರೀಮತಿಯವರು ಕಾರ್ಯಕ್ರಮವನ್ನು ನೋಡಿ ಆನಂದಿಸಿದ್ದು ಕೂಡ ನಮಗೆ ಖುಷಿ ವಿಚಾರ. ಮತ್ತೆ ಹೊಸ ಪುಸ್ತಕಕ್ಕೆ ನೀವು ಬರಲೇಬೇಕು ಅಂತ ನಮ್ಮ ಅಪೇಕ್ಷೆ.
ನಿಮ್ಮ ಆರೈಕೆಗೆ ಧನ್ಯವಾದಗಳು.

shivu.k said...

ಸಲೀಂ.,

ತುಂಬಾ ಅಪರೂಪವಾಗಿಬಿಟ್ಟಿರಿ...

ಪೋಟೊ ಹಿಂದಿನ ಕತೆಗಳನ್ನು ಬರೆಯಬೇಕೆನ್ನುವುದು ನನ್ನ ಬಹುದಿನದ ಕನಸು. ಈಗ ಪ್ರಾರಂಭಿಸಿದ್ದೇನೆ...ನೀವು ಕೇಳಿದಂತೆ ಅವುಗಳ ತಾಂತ್ರಿಕ ವಿವರಗಳನ್ನು ಪುಸ್ತಕದಲ್ಲಿ ಕೊಡಲು ಪ್ರಯತ್ನಿಸುತ್ತೇನೆ..ಇಲ್ಲಿ ಕೊಟ್ಟಾಗ ಅದಕ್ಕೆ ಬರುವ ಪ್ರಶ್ನೆಗೆ ಉತ್ತರಿಸುವುದು ತುಸು ಕಷ್ಟದ ಕೆಲಸ.

ನಿಮಗೆ ಬೇಕಾದಲ್ಲಿ ವೈಯಕ್ತಿಕವಾಗಿ ತಿಳಿಸುತ್ತೇನೆ...

ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

ಚಿತ್ರಾ said...

ಶಿವೂ,
ತಡವಾಗಿ ಬಂದಿದ್ದಕ್ಕ್ಕೆ ಕ್ಷಮಿಸಿ.
ಫೋಟೋ ಹಿಂದಿನ ಕತೆ ಚೆನ್ನಾಗಿದೆ ! ತಾವು ದಿನ ನಿತ್ಯ ಹಿಡಿದು ಮಾರುವ ಮೀನನ್ನು ತಾವೇ ಎರಡು ಪಟ್ಟು ದುಡ್ಡು ಕೊಟ್ಟು ತಿನ್ನ ಬೇಕಾದ ಮೀನುಗಾರರ ಸಂಕಟ ಓದಿ ಬೇಜಾರಾಯ್ತು .
ಬೇಗ ಬರಲಿ ತಮ್ಮ ಮುಂದಿನ ಪುಸ್ತಕ !

Unknown said...

Super!!!... Pustaka begane barali...

ಸುಪ್ತವರ್ಣ said...

ಶಿವು ಸರ್! ಈ ಪುಸ್ತಕ ಬಿಡುಗಡೆಗೂ ಕರೀರಿ ಮತ್ತೆ! ಮರ್ತುಗಿರ್ತು ಬಿಟ್ಟೀರಾ!

shivu.k said...

ಸುಧೇಶ್,

ಮೀನಿನ ಕಬಾಬ್ ಮತ್ತು ಪ್ರೈ ನಿಮಗೆ ವಾಸನೆ ಬರುವಷ್ಟು ಚೆನ್ನಾಗಿದೆಯ ಲೇಖನ. ಥ್ಯಾಂಕ್ಸ್...ಮಂಗಳೂರಿಗೆ ಹೋದಾಗ ತಿಂದು ಬನ್ನಿ.

ನಿಮ್ಮ ಮೆಚ್ಚಿಗೆಗೆ ಧನ್ಯವಾದಗಳು.

shivu.k said...

ಕ್ಷಣಚಿಂತನೆ ಚಂದ್ರು ಸರ್,

ಬರಹವನ್ನು ಸರಳವಾಗಿರಬೇಕೆಂಬುದು ನಮ್ಮ ಆಸೆಯೂ ಕೂಡ. ಅದನ್ನು ಗುರುತಿಸಿದ್ದೀರಿ. ಮತ್ತೆ ನಾವಿಬ್ಬರೂ ಸದ್ಯ ಪ್ರಯತ್ನಿಸಿದ್ದೇವೆ.

ಹೀಗೆ ಪ್ರೋತ್ಸಾಹವಿರಲಿ...
ಧನ್ಯವಾದಗಳು.

shivu.k said...

ಪ್ರಶಾಂತ್,

ಫೋಟೊ ಹಿಂದಿನ ಕತೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಆಜಾದ್ ಸರ್,

ಪ್ರೈ ಅಂದ್ರೆ ಮೀನಿನ ಮರಿನಾ...ಇದು ನನಗೆ ಗೊತ್ತೇ ಇರಲಿಲ್ಲ. ಮತ್ತೆ ಒಂದೇ ಮೀನಿಗೆ ಬೇರೆ ಬೇರೆ ಊರುಗಳಲ್ಲಿ ಬೇರೆಯ ಹೆಸರುಗಳಿರುವುದು ಕೂಡ ಒಂಥರ ಆಶ್ಚರ್ಯವೇ ಸರಿ.

ಬೀಸುಬಲೆ ಎನ್ನುವ ಈ ಬಲೆಯನ್ನು ಎಸೆಯುವಾಗ ತೆಗೆದ ಚಿತ್ರದ ಬಗ್ಗೆ ಈ ಲೇಖನವನ್ನು ಬರೆಯುತ್ತಿದ್ದೇನೆ. ಮುಗಿದಮೇಲೆ ಹೇಗಿರುತ್ತದೆ ನೋಡಬೇಕು.

ಧನ್ಯವಾದಗಳು.

shivu.k said...

ಚಿತ್ರಾ ಮೇಡಮ್,

ನೀವು ತಡವಾಗಿ ಬಂದಷ್ಟೇ ತಡವಾಗಿ ನಾನು ಉತ್ತರಿಸುತ್ತಿದ್ದೇನೆ. ಕಾರಣ ಕೆಲವು ಫೋಟೊಗ್ರಫಿ ಸ್ಪರ್ಧೆಗಳು. ಅವುಗಳ ಕೆಲಸ ಸದ್ಯ ಮುಗಿದಿದೆ. ಮೀನುಬಲೆಯ ಹಿಂದಿನ ಕತೆಯನ್ನು ಬರೆಯುವಾಗ ಆದ ಆನುಭವದಲ್ಲಿ ನನ್ನ ಬಲೆಗಾರನ ಕತೆಯೂ ಸಹಜವಾಗಿ ಬಂದಿದೆ. ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ರವಿಕಾಂತ್ ಗೋರೆ ಸರ್,

ಪುಸ್ತಕ ಬಂದಾಗ ಖಂಡಿತ ತಿಳಿಸುತ್ತೇನೆ.

shivu.k said...

ಸುಪ್ತವರ್ಣ,

ಖಂಡಿತವಾಗಿಯೂ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಮರೆಯದೆ ಕರೆಯುತ್ತೇನೆ. ನೀವು ತಪ್ಪದೇ ಬನ್ನಿ.

Pradeep said...

ಲೇಖನ ಚೆನ್ನಾಗಿದೆ ಸಾರ್.. ಚಿತ್ರವೂ ಸಹ.. ನಿಮಗೆ ಹೊಸ ವರುಷದ ಶುಭಾಷಯಗಳು! (online ಬರಲು ಪುರುಸೂತು ಸಿಗೋದು ಕಷ್ಟ ಆಗಿದೆ..) ಅಂದ ಹಾಗೆ, ಉದ್ಯಾವರ ಸೇತುವೆ ನೇತ್ರಾವತಿಯದ್ದಲ್ಲ ಸಾರ್...

shivu.k said...

ಪ್ರದೀಪ್,

ಹೊಸ ಪುಸ್ತಕದ ಬರವಣಿಗೆಗೆ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

ನಾನು ಬ್ಲಾಗಿಗೆ ಹಾಕಿದ ಮೇಲೆ ನನಗೂ ಸಂಶಯ ಬಂತು. ಈಗಲೂ ನನಗೆ ಆ ನದಿ ಯಾವುದು ಅಂತ ನೆನಪಾಗುತ್ತಿಲ್ಲ ಸ್ವಲ್ಪ ತಿಳಿದು ಹೇಳಲು ಸಾಧ್ಯವೇ...