Monday, April 20, 2009

ನಾನದನ್ನು ನೋಡಬಾರದಿತ್ತು...ನೋಡಿಬಿಟ್ಟೆ..!!

ನಾನದನ್ನು ನೋಡಬಾರದಿತ್ತು....ನೋಡಿಬಿಟ್ಟೆ.!! ಕಣ್ಣಿಗಂಟಿಕೊಂಡಿದ್ದ [10x50DPS I] ಒಲಂಪಸ್ ಬೈನಕ್ಯೂಲರ್‌ನಿಂದ ಅವರಿಬ್ಬರ ರೊಮ್ಯಾನ್ಸ್ ನನ್ನಲ್ಲಿ ಕುತೂಹಲ ಕೆರಳಿಸಿದ್ದವು. ಅವೇ ಕಳ್ಳಿಪೀರ ಜೋಡಿ ಹಕ್ಕಿಗಳು. ನಾನು ಹೊರಗಿನ ಪ್ರಪಂಚವನ್ನು ಮರೆತು ಅವೆರಡನ್ನು ಗಮನಿಸುತ್ತಿದ್ದರೂ ಅವು ಅರಿವಿಲ್ಲದೇ ತಮ್ಮ ಸಂಸಾರ ಸಾಗರದಲ್ಲಿ ಮುಳುಗಿದ್ದವು.

ಬಾಯಲ್ಲಿರುವ ನೊಣವನ್ನು ಗಿಫ್ಟ್ ಕೊಟ್ಟು ಗೆಳತಿಯನ್ನು ಒಲಿಸಿಕೊಳ್ಳುವ ಕಲೆ!!


ಬಹುಶಃ ಇಲ್ಲೇ ಹತ್ತಿರದಲ್ಲಿ ಅವುಗಳ ಗೂಡಿರಬೇಕು ಅಂದುಕೊಳ್ಳುತ್ತಿದ್ದಂತೆ ಅವು ಅತ್ತಿತ್ತ ಹಾರಾಡಿದವು. ನಾನು ಬೇಕಂತಲೇ ನನ್ನ ಗಮನವನ್ನು ಬೇರೆಡೆಗೆ ಹರಿಸಿದೆ... ಅವು ಸ್ವಲ್ಪ ಹೊತ್ತು ಸುತ್ತ ಮುತ್ತ ನೋಡಿ ನಾನು ಕಣ್ಣು ಮಿಟುಕುವಷ್ಟರಲ್ಲಿ..ಬೇಲಿಯಾಚೆಗಿದ್ದ ನೆಲಮಟ್ಟದಿಂದ ಒಂದು ಆಡಿ ಎತ್ತರದಲ್ಲಿ ತೂತು ಕೊರೆದು ಮಾಡಿದ್ದ ಗೂಡಿಗೆ ರಾಕೆಟಿನಂತೆ ಗಂಡು ಹಕ್ಕಿ ನುಗ್ಗಿತ್ತು. ಅದರ ಹಿಂದೆಯೇ...ಹೆಣ್ಣು ಕೂಡ ಹೋಯಿತು. ಒಳಗೆ ಇನ್ನೇನು ಸರಸ ಸಲ್ಲಾಪ ನಡೆದಿದೆಯೋ ನಮಗ್ಯಾಕೆ "ಮಾಡಿದವರ ಪಾಪ ನೋಡಿದವರ ಕಣ್ಣಲ್ಲಿ" ಅಂದುಕೊಂಡು ಗೂಡನ್ನು ಕಂಡುಹಿಡಿದ ಖುಷಿಯಲ್ಲಿ ವಾಪಸು ಬಂದುಬಿಟ್ಟೆ.


ಹಕ್ಕಿಗೂಡು ಒಂದು...ಮುದ್ದು ಮುದ್ದಾಗಿ ಒಳಗೇನು ನಡೆದಿದೆಯೋ...!!


ನಂತರ ಪ್ರತಿವಾರಕ್ಕೊಮ್ಮೆ ಹೋಗಿ ಅವುಗಳ ಚಲನವಲನವನ್ನು ವೀಕ್ಷಿಸುತ್ತಿದ್ದೆ. ಸರಿಯಾಗಿ ೩೫ ನೇ ದಿನ ಹೆಣ್ಣು ಕಳ್ಳಿಪೀರ ಬಾಯಲ್ಲಿ ಸಣ್ಣ ಹುಳುವನ್ನು ಹಿಡಿದುಕೊಂಡು ಗೂಡಿನ ಹತ್ತಿರದಲ್ಲೇ ಸಣ್ಣ ಕಡ್ಡಿಯ ಮೇಲೆ ಕುಳಿತಿತ್ತು. ಗಂಡು ಮರದ ಮೇಲೆ ಕುಳಿತಿತ್ತು. ನಾನು ಬೈನಾಕ್ಯೂಲರ್‌ನಲ್ಲಿ ನೋಡಿದ ಆ ಮೂರು ತಾಸಿನಲ್ಲಿ ಹೆಣ್ಣು ಹಕ್ಕಿ ಮಾತ್ರ ಆಹಾರವನ್ನು ಬಾಯಲ್ಲಿ ಹಿಡಿದುತಂದು ಗೂಡಿಗೆ ಹೋಗಿ ಮರಿಗಳಿಗೆ ಕೊಟ್ಟು ಬರುತ್ತಿತ್ತು.

ಆಹಾರ ಬೇಟೆಗೆ ಈಗ ಹಾರಬೇಕು...!!


ಈ ಗಂಡು ಹಕ್ಕಿಗೆ ಇತ್ತೀಚಿನ ಸಾಮಾಜಿಕ ನ್ಯಾಯದ ಅರಿವಿಲ್ಲವೇ ? ಒಂದು ಮನೆ, ಮಕ್ಕಳು ಸಂಸಾರ ಚೆನ್ನಾಗಿ ನಡೆಯಬೇಕಾದರೆ ಈಗಿನ ಕಾಲದಲ್ಲಿ ಇಬ್ಬರೂ ದುಡಿಯಬೇಕು ಎನ್ನುವ ಸೂಕ್ಷ್ಮ ತಿಳಿವಳಿಕೆಯೂ ಈ ಗಂಡು ಹಕ್ಕಿಗೆ ಬೇಡವೇ ಎಂದು ನನ್ನ ಮನಸ್ಸಿಗೆ ಖೇದವಾಯಿತು.

ನಿಮ್ಮ ವಿಮಾನಗಳಿಗೆ ನನ್ನಂತೆ ಲ್ಯಾಂಡ್ ಆಗಲಿಕ್ಕೆ ಬರುತ್ತಾ..!!


ಸರಿಯಾಗಿ ೪೦ನೇ ದಿನಕ್ಕೆ ನಾನು ನನ್ನ ಛಾಯಾಗ್ರಹಣದ ಪರಿಕರಗಳಾದ ಕ್ಯಾಮೆರಾ, ಲೆನ್ಸ್, ಸ್ಟ್ಯಾಂಡ್, ನನಗೆ ಬೇಕಾದ ಆಹಾರ,ನೀರು ಇನ್ನಿತರ ಪರಿಕರಗಳೊಂದಿಗೆ ಸಿದ್ದನಾಗಿಹೋಗಿದ್ದೆ.

ಸ್ವಲ್ಪ ಹೊತ್ತು ಅತ್ತ ಇತ್ತ ನೋಡಬೇಕು....ನಂತರ ಗೂಡಿಗೆ ಹೋಗೋಣ...


ಅಲ್ಲೇ ಪೊದೆಯ ಮರೆಯಲ್ಲಿ ನನ್ನ ಕ್ಯಾಮೆರಾವನ್ನು ಅಣಿಗೊಳಿಸಿ ರಿಮೋಟ್ ಕೇಬಲ್ ಎಳೆದು ದೂರದಲ್ಲಿ ಮರೆಯಾಗಿ ಕುಳಿತುಬಿಟ್ಟೆ. ಮೊದಲಿಗೆ ಮರಿಗಳು ಚಿಕ್ಕದಾಗಿದ್ದರಿಂದ ಹೆಣ್ಣು ಹಕ್ಕಿ ಸಣ್ಣ ಸಣ್ಣ ಹುಳುಗಳನ್ನು ಹಿಡಿದು ತರುತ್ತಿತ್ತು. ಕಡ್ಡಿಯ ಮೇಲೆ ಕುಳಿತು ಸ್ವಲ್ಪ ಹೊತ್ತು ಅತ್ತ ಇತ್ತ ನೋಡಿ ಗೂಡಿಗೆ ಹಾರಿ ಮರಿಗಳಿಗೆ ಗುಟುಕು ಕೊಟ್ಟು ಬರುತ್ತಿತ್ತು. ನಾನು ಒಂದೇ ಸಮನೆ ಕ್ಲಿಕ್ಕಿಸುತ್ತಿದ್ದೆ.

ನನ್ನನ್ನೂ ನೋಡಿಯೇ ತಾನೇ ನಿಮ್ಮ ಸುಕೋಯ್..ಮೀರಜ್ ಹಾರೋದು ಕಲಿತದ್ದು....!!



ಆರನೇ ದಿನ ನನ್ನ ಸಮಾಜಿಕ ನ್ಯಾಯದ ಲೆಕ್ಕಾಚಾರ ತಲೆಕೆಳಗಾಯಿತು. ಎಂದಿನಂತೆ ಹೆಣ್ಣು ಕಳ್ಳಿಪೀರ ಒಂದು ಏರೋಪ್ಲೇನ್ ಚಿಟ್ಟೆಯನ್ನು ಹಿಡಿದು ತಂದಿತ್ತು. ನಾನು ಅದನ್ನು ಕ್ಲಿಕ್ಕಿಸಬೇಕೆನ್ನುವಷ್ಟರಲ್ಲಿ ಅದೆಲ್ಲಿಂದಲೋ ಇನ್ನೂ ದೊಡ್ಡದಾದ ಹುಳುವನ್ನು ಹಿಡಿದುಕೊಂಡು ಬಂದ ಗಂಡು ಕಳ್ಳಿಪೀರ ತನ್ನ ಶ್ರೀಮತಿಯ ಪಕ್ಕದಲ್ಲೇ ಕಡ್ಡಿಯ ಮೇಲೆ ಕುಳಿತುಕೊಂಡಿತು.

ಗಂಡು ಹಕ್ಕಿಯ ಬಾಯಲ್ಲಿ ದೊಡ್ಡ ಚಿಟ್ಟೆ....


ನನಗೆ ಒಂದು ಕ್ಷಣ ಖುಷಿ, ಗಲಿಬಿಲಿ, ಆಶ್ಚರ್ಯ ಒಟ್ಟೊಟ್ಟಿಗೆ ಆಗಿ ಕ್ಲಿಕ್ಕಿಸುವುದು ಮರೆತೇ ಹೋಯಿತು. ಏಕೆಂದರೆ ಇದುವರೆಗೆ ಗಂಡು ಕಳ್ಳೀಪೀರವನ್ನು ಮನಸ್ಸಿನಲ್ಲೇ ಹೀಯಾಳಿಸಿ, ಅದರ ಸೋಮಾರಿತನವನ್ನು ಖಂಡಿಸಿದ್ದೆನಲ್ಲಾ....ಮರಿಗಳು ದೊಡ್ಡದಾಗಿರುವುದರಿಂದ ಗಂಡಿಗೆ ತನ್ನ ಜವಾಬ್ದಾರಿ ಅರಿತಿದ್ದಕ್ಕೆ ನನಗೆ ಖುಷಿಯಾಯಿತು. ಇದೆಲ್ಲಾ ಅಂದುಕೊಳ್ಳುತ್ತಿರುವಾಗಲೇ ಎರಡು ಒಂದರ ನಂತರ ಮತ್ತೊಂದು ಗೂಡಿಗೆ ಹಾರಿ ಮರಿಗಳಿಗೆ ಆಹಾರಕೊಟ್ಟು ಹೊರ ಹಾರಿಹೋಗಿದ್ದವು. ಆರೆರೆ...... ಎಂಥ ಒಳ್ಳೇ ಅವಕಾಶವನ್ನು ಕ್ಲಿಕ್ಕಿಸಲು ಮರೆತನಲ್ಲಾ.. ಈ ರೀತಿ ಬೇರೆಯವರ ಬಗ್ಗೆ ಯೋಚಿಸಿದರೆ ಹೀಗೆ ತಾನೆ ಆಗುವುದು ಅಂತ ಸಂಕಟವಾಗಿ ಇನ್ನಾದರೂ ಅಂಥ ಮತ್ತೊಂದು ಅಂಥ ಕ್ಷಣ ಸಿಗುವುದೋ ಅಂತ ಕಾಯತೊಡಗಿದೆ..

ನಾನು ಇಳಿಯುವಾಗ ನನ್ನ ರೆಕ್ಕೆಗಳ ಅಂದ ನೋಡು....

ಹದಿಮೂರನೇ ದಿನ ಮತ್ತೆ ದಂಪತಿಗಳಿಬ್ಬರೂ ದೊಡ್ಡ ಮಿಡತೆ ಮತ್ತು ಚಿಟ್ಟೆಯನ್ನು ಬಾಯಿಯಲ್ಲಿ ಹಿಡಿದು ಒಟ್ಟಿಗೆ ಕುಳಿತ ದೃಶ್ಯ ನನ್ನ ಕ್ಯಾಮೆರಾದಲ್ಲಿ ಸೆರೆಯಾಯಿತು. ನಂತರದ ದಿನಗಳಲ್ಲಿ ಎಲ್ಲಾ ರೀತಿಯ ದೊಡ್ಡ ದೊಡ್ಡ ಚಿಟ್ಟೆಗಳು, ಹುಳುಗಳು, ದುಂಬಿಗಳು, ಡ್ರ್ಯಾಗನ್ ಪ್ಲೈಗಳು, ಗೆದ್ದಲು ಹುಳುಗಳು....ಹಿಡಿದು ತರುತ್ತಿದ್ದವು. ಇತ್ತೀಚೆಗೆ ನಾನು ಕ್ಲಿಕ್ಕಿಸಿದ ಮಡಿವಾಳ ಹಕ್ಕಿ, ಚಿಟ್ಟು ಮಡಿವಾಳ ಹಕ್ಕಿ, ಬೇಲಿ ಚಟುಕಗಳಂತೆ ಒಮ್ಮೆಯೂ ಹಣ್ಣು ಇನ್ನಿತರ ಸಸ್ಯಹಾರವನ್ನು ಇವು ತರಲಿಲ್ಲವಲ್ಲ. ಪಕ್ಕಾ ವಿದೇಶಿ ಆಹಾರಪದ್ದತಿಯನ್ನು[ನಾನ್‌ವೆಜ್]ಮೈಗೂಡಿಸಿಕೊಂಡಿವೆಯಲ್ಲ...ಅನ್ನಿಸಿದರೂ ಬೇರೆಯವರ ಸಮಾಚಾರ ನಮಗೇಕೆ ಅಂದುಕೊಂಡು ಸುಮ್ಮನೆ ಕ್ಲಿಕ್ಕಿಸತೊಡಗಿದೆ.

ಕೂಡಿ ಬಾಳಿದರೆ ಸ್ವರ್ಗ ಸುಖ....ನನಗೂ ಸ್ವಲ್ಪ ಜಾಗ ಕೊಡೆ...!!



ಅವು ಆಕಾಶದಲ್ಲೇ ಹುಳುಗಳನ್ನು ಬೇಟೆಯಾಡುವ ಪರಿ, ಉಲ್ಟಾ ಲಾಗ ಹಾಕುವುದು, ಲಗಾಟಿ ಹೊಡೆಯುವುದು, ಕೆಳಮುಖ ಹಾರುವುದು, ಇಳಿಯುವಾಗ ಮತ್ತು ಹಾರುವಾಗ ದೇಹದ ಮುಂಭಾಗ ಮೇಲೆತ್ತಿ ಬ್ಯಾಲೆನ್ಸ್ ಮಾಡುವುದು, ತಲೆಕೆಳಕಾಗಿ ಹಾರುತ್ತಾ ತಕ್ಷಣವೇ ತಿರುವು ತೆಗೆದುಕೊಂಡು ಮೇಲ್ಮುಖವಾಗುವುದು, ರೆಕ್ಕೆ ಕದಲಿಸದೇ ನೇರವಾಗಿ ಗೂಡಿಗೆ ಗುರಿತಪ್ಪದೆ ಹೋಗುವಲ್ಲಿನ ನಿಖರತೆ, ಚಾಕಚಕ್ಯತೆಗಳೆಲ್ಲಾ ನಮ್ಮ ಯುದ್ದವಿಮಾನಗಳಾದ ಜಾಗ್ವಾರ್, ಸುಖೋಯ್, ಮೀರಜ್, ಸೂರ್ಯಕಿರಣಗಳನ್ನು ನೆನಪಿಸಿತ್ತು.

ನಾನು ನೀನು ಜೋಡಿ...ಈ ಜೀವನ ಎತ್ತಿನ ಗಾಡಿ....!!

ಈ ಮದ್ಯ ಮತ್ತೊಂದು ವಿಚಿತ್ರ ಘಟನೆ ನಡೆಯಿತು. ಒಬ್ಬ ಹುಡುಗ ತನ್ನಲ್ಲಿ ಆಡಗಿಸಿಕೊಂಡಿದ್ದ ಚಾಟರಬಿಲ್ಲಿನಿಂದ ಈ ಕಳ್ಳೀ ಪೀರ ಹಕ್ಕಿಗಳಿಗೆ ಗುರಿಯಿಟ್ಟಿದ್ದ. ನಾನು ಅದನ್ನು ಗಮನಿಸಿ "ಏನು ಮಾಡುತ್ತಿದ್ದೀಯಾ" ಅಂದೆ. ಅದಕ್ಕವನು "ಸುಮ್ಮನೆ " ಅಂದ. ತಕ್ಷಣ ಅವನದೊಂದು ಫೋಟೊ ತೆಗೆದು ನೋಡಿಲ್ಲಿ "ನೀನು ಪಕ್ಷಿಗಳನ್ನು ಸಾಯಿಸುತ್ತೀಯಾ ಅಂತ ಹೇಳಿ ನಿನ್ನ ಅರಣ್ಯ ಇಲಾಖ ಪೋಲಿಸರಿಗೆ ಕೊಟ್ಟರೆ ನಿನ್ನನ್ನು ಹಿಡಿದು ಜೈಲಿಗೆ ಹಾಕುತ್ತಾರೆ ಗೊತ್ತಾ.. ನಿನ್ನಂತೆ ಅವುಗಳಿಗೂ ಸ್ವತಂತ್ರವಾಗಿ ಜೀವಿಸುವ ಆಸೆಯಿರುತ್ತೆ...ಅಲ್ವಾ..."ಅಂತ ಬುದ್ದಿ ಹೇಳಿ ಕಳಿಸಿದ್ದಾಯಿತು.


ಈ ಹಕ್ಕಿಗಳ ಛಾಯಾಗ್ರಹಣ ಇಪ್ಪತ್ತಮೂರನೇ ದಿನಕ್ಕೆ ಕೊನೆಗೊಂಡಿತ್ತು. ಅವತ್ತು ಹೇಮಾಶ್ರಿಯೂ ಬಂದಿದ್ದಳು.., ಬೈನಾಕ್ಯೂಲರನಲ್ಲಿ ಹಕ್ಕಿಗಳ ಆಟ ಪಾಠಗಳ ಚಟುವಟಿಕೆಯೆಲ್ಲಾ ನೋಡಿ ಬೆರಗಾಗಿದ್ದಳು...

ಎರಡು ತಿಂಗಳ ಹಿಂದೆ ರೋಮ್ಯಾನ್ಸ್‌ನಿಂದ ಪ್ರಾರಂಭವಾದ ಕಳ್ಳಿಪೀರ ಸಂಸಾರ ಕತೆ., ಈಗ ಮರಿಗಳು ದೊಡ್ಡವಾಗಿ ಗೂಡಿನಿಂದ ಹಾರಿಹೋಗುವಲ್ಲಿಗೆ ಮುಗಿದಿತ್ತು.

[ಈ ಮೊದಲು ಇದೇ ಜಾತಿಗೆ ಸೇರಿದ blue tailed green bee eater ಪಕ್ಷಿಯ ಸಂಪೂರ್ಣ ದಿನಚರಿಯನ್ನು "ಪಕ್ಷಿ ಲೇಕದ ಸಂದೇಶ" http://chaayakannadi.blogspot.com/2008/09/blog-post_20.html ಅನ್ನುವ ಶೀರ್ಷಿಕೆಯಲ್ಲಿ ಚಿತ್ರ-ಲೇಖನವನ್ನು ಬರೆದಿದ್ದೆ. ಅದರ ಸಂಪೂರ್ಣ ಚಿತ್ರಣವನ್ನು ಕ್ಲಿಕ್ಕಿಸಿದ್ದು ಮೈಸೂರಿನ ನಗುವನಹಳ್ಳಿ ಎಂಬ ಊರಿನಲ್ಲಿ....ಅದೇ ಜಾತಿಯ ಈ " Small green bee eater" ಹಕ್ಕಿಯ ಚಿತ್ರಗಳನ್ನು ಕ್ಲಿಕ್ಕಿಸಿದ್ದು..ಹೆಸರಘಟ್ಟದ ಸಮೀಪ..ಇವು ಗಾತ್ರದಲ್ಲಿ ಅವುಗಳಿಗಿಂತ ಸ್ವಲ್ಪ ಚಿಕ್ಕದಾಗಿದ್ದು ಬಾಲ ನೀಲಬಣ್ಣವಾಗಿರುವುದಿಲ್ಲ..]

ವಿಶೇಷ ಸೂಚನೆ:

ಬ್ಲಾಗ್ ಗೆಳೆಯರೆ....

ಕಳೆದೊಂದು ವಾರದಿಂದ ಈ ತಿಂಗಳ ಅಂತ್ಯದವರೆಗೆ ಮದುವೆಗಳನ್ನು ಮಾಡಿಸುವ ಅಲ್ಲಲ್ಲ .. ಮದುವೆ ಫೋಟೋ ತೆಗೆಯುವ ಕಾಯಕದಲ್ಲಿ ತೊಡಗಿಕೊಂಡಿದ್ದೇನೆ...[ನಾವು ಬದುಕಬೇಕಲ್ಲಾ ಸ್ವಾಮಿ] ಈ ಕಾರಣದಿಂದಾಗಿ ಬ್ಲಾಗ್ ಲೋಕಕ್ಕೆ ಕಾಲಿಡಲು ಸಮಯವಾಗುತ್ತಿಲ್ಲ....ಮುಗಿದ ಕೂಡಲೇ ಎಲ್ಲರ ಲೇಖನಗಳನ್ನು ಚಿತ್ರಗಳನ್ನು ನೋಡುವ ಹಂಬಲವಿದೆ. ಅಲ್ಲಿಯವರೆಗೆ ಸಹಕರಿಸಿ...ಸಾಧ್ಯವಾದರೆ ಮದುವೆ ಮನೆಗಳಲ್ಲಿ ನಮ್ಮ ಫೋಟೊ ಮತ್ತು ವಿಡಿಯೋಗ್ರಫಿ ಗೆಳೆಯರ ಕಥೆ...ವ್ಯಥೆ....ಹಾಸ್ಯಗಳನ್ನು ಹೊತ್ತು ತರಲೆತ್ನಿಸುತ್ತೇನೆ.....ಧನ್ಯವಾದಗಳು..

ಚಿತ್ರ-ಲೇಖನ.
ಶಿವು.ಕೆ ARPS.

Friday, April 17, 2009

ಕಸ್ತೂರಿ ಕನ್ನಡ ಮತ್ತು ಸುವರ್ಣ ಸಂದರ್ಶನ.

ಅತ್ಮೀಯ ಬ್ಲಾಗ್ ಗೆಳೆಯರೆ,

ನನ್ನ ಛಾಯಾಕನ್ನಡಿ ಬ್ಲಾಗಿನ "ಭೂಪಟಗಳ ಚಿತ್ರ-ಲೇಖನ" ವಿಚಾರವಾಗಿ "ಕಸ್ತೂರಿ ಕನ್ನಡ" ಛಾನಲ್ಲಿನವರು ನಡೆಸಿದ ಸಂದರ್ಶನ ದಿನಾಂಕ [ 25-3-2009] ರಂದು ಪ್ರಸಾರವಾಯಿತು. ಇದರ ವಿಡಿಯೋ ತುಣುಕುಗಳು......

ಹಾಗೂ ಇತ್ತೀಚೆಗೆ ಲಂಡನ್ನಿನ ರಾಯಲ್ ಫೋಟೊಗ್ರಫಿ ಸೊಸೈಟಿಯಿಂದ ಅದರ ಪ್ರತಿನಿಧಿ ಗೌರವ[ARPS Distinction] ನನಗೆ ಮತ್ತು ಮಲ್ಲಿಕಾರ್ಜುನ್‌ಗೆ ದೊರಕಿರುವ ಸಂತೋಷವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ. ಈ ಸಂಧರ್ಭದಲ್ಲಿ "ಸುವರ್ಣ ನ್ಯೂಸ್" ಚಾನಲ್ಲಿನಲ್ಲಿ ದಿನಾಂಕ[10-4-2009]ರಂದು ನಮ್ಮನ್ನು ಸಂದರ್ಶಿಸಿದ್ದರು. ಅದರ ವಿಡಿಯೋ ಚಿತ್ರಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುತ್ತೇವೆ...

ಅದನ್ನು ನೋಡಲು ಅಥವ ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ....


Part 1 - http://video.google.com/videoplay?docid=3023628538498416913

Part 2 - http://video.google.com/videoplay?docid=6131706322515531053

ಪ್ರೀತಿಯಿಂದ ಶಿವು.ಕೆ ARPS.

Sunday, April 12, 2009

ನನ್ ಹಿಂಬದಿ ಕಣ್ಣು ಒಡೆದೊಯ್ತು....ಅಮೇಲೆ...ಏನೇನಾಯ್ತು...?

ಅಯ್ಯೋ..ನನ್ನ ಬಲ ಹಿಂಬದಿ ಕಣ್ಣು ಹೋಯ್ತಲ್ಲ.......



ನನ್ನ ಟೂವೀಲರ್ ಮತ್ತು ಅದರ ಮೇಲೆ ಕುಳಿತ ನಾನು ಟ್ರಾಫಿಕ್‌ನಲ್ಲಿ ನಿಂತಿದ್ದರೂ ನನ್ನ ತಲೆ ಅಲ್ಲಲ್ಲ ನನ್ನ ತಲೆಯೊಳಗಿನ ಅಲೋಚನೆಗಳು ಎಲ್ಲೆಲ್ಲೋ ಊರೂರು ಸುತ್ತಿ ಬರುತ್ತಿದ್ದವು. ನನ್ನ ಮುಂದೆ ಬಿ.ಎಂ.ಟಿ.ಸಿ ಬಸ್ಸಿತ್ತು. ಅದರ ಮುಂದೆ ಈ ವರ್ಷ ರಾಷ್ಟ್ರದಲ್ಲೇ ಅತ್ಯುತ್ತಮ ಸೇತುವೆ ಅಂತ ರಾಷ್ಟ್ರ ಪ್ರಶಸ್ತಿ ಪಡೆದ ಕೆ.ಅರ್.ಪುರಂ ತೂಗು ಸೇತುವೆಯ ರಸ್ತೆ ಇತ್ತು.


ಕೆ.ಅರ್. ಪುರಂನಲ್ಲಿರುವ ಅಣ್ಣನ ಮನೆಗೆ ಹೋಗುತ್ತಿದ್ದವನು ಆ ಟ್ರಾಫಿಕ್‌ನಲ್ಲಿ ನಿಂತಿದ್ದೆ. ಇದ್ದಕ್ಕಿದ್ದಂತೆ ಕಾಲೇಜು ಹುಡುಗನೊಬ್ಬ ಹಿಂಬಾಗದಿಂದ ವೇಗವಾಗಿ ಓಡಿಬಂದಿದ್ದು ನನಗೆ ಗೊತ್ತಾಗಲಿಲ್ಲ. ಅವನ ಉದ್ದೇಶ ಮುಂದಿರುವ ಬಸ್ಸನ್ನು ಹತ್ತುವುದು. ಹಿಂದಿನಿಂದ ಜೋರಾಗಿ ಓಡಿಬಂದವನು ನನ್ನ ಪಕ್ಕದಲ್ಲಿ ಸಾಗಿ ಹೋಗಿದ್ದ. ಹಾದುಹೋಗುವಾಗ ಅವನ ವೇಗಕ್ಕೆ ಬೆನ್ನಿಗೆ ಹಾಕಿದ್ದ ಕಾಲೇಜ್ ಬ್ಯಾಗ್ ನನ್ನ ಸ್ಕೂಟಿಯ ಬಲಗಡೆಯ ಮಿರರಿಗೆ ತಗುಲಿ "ಪಟ್" ಅಂತ ಶಬ್ದವಾಯಿತು. ಏನಾಯಿತು ಅಂತ ನೋಡಿಕೊಳ್ಳುವಷ್ಟರಲ್ಲಿ ಆ ಮಿರರ್ ಕಳಚಿ ಕೆಳಗೆ ಬಿದ್ದು ಒಡೆದು ಹೋಗಿತ್ತು. ಅವನು ಅದೇ ವೇಗದಲ್ಲಿ ನನ್ನ ಮುಂದಿದ್ದ ಬಿ.ಎಮ್.ಟಿ.ಸಿ. ಬಸ್ಸನ್ನು ಹತ್ತಿಬಿಟ್ಟಿದ್ದ.

ನನಗೆ ಕೆಳಗೆ ಬಿದ್ದ ಮಿರರ್ ಮತ್ತು ಮುಂದೆ ಬಸ್ಸು ಹತ್ತಿದ್ದ ಹುಡುಗನನ್ನು ನೋಡುತ್ತಾ,. "ಹೇ...ನಿಂತುಕೊಳ್ಳೋ...ನಿನಗೆ ಕಣ್ಣು ಕಾಣೋಲ್ವ".....ಕೂಗಿದೆ...ಅಷ್ಟರಲ್ಲಿ ಬಸ್ಸು ಮುಂದೆ ಸಾಗಿತ್ತು.

ಎಲ್ಲಾ ಕ್ಷಣಮಾತ್ರದಲ್ಲೇ ಆಗಿಹೋಗಿತ್ತು. ಅಣ್ಣನ ಮನೆಗೆ ಹೋಗಿ ವಾಪಸ್ಸು ಬಂದೆ. ಅವತ್ತು ಏನು ಅನ್ನಿಸಲಿಲ್ಲ.


ಮರುದಿನ ಮತ್ತೆ ಎಂದಿನಂತೆ ಮನೆಯಿಂದ ಹೊರಟಾಗ ಮೊದಲ ಟ್ರಾಫಿಕ್ ಸಿಗುವುದು ಶೇಷಾದ್ರಿಪುರಂನಲ್ಲಿ. ಅಲ್ಲಿ ನಿಂತಿದ್ದೆ. ನನ್ನ ಪಕ್ಕ ಸ್ವಲ್ಪ ಹಿಂದೆ ಸುಂದರವಾದ ಹುಡುಗಿ ಆಕ್ಟೀವ್ ಹೋಂಡದ ಮೇಲೆ ಕುಳಿತಿದ್ದಳು. ಒಂದು ಕ್ಷಣ ಹಿಂದೆ ತಿರುಗಿದೆ....! ನೋಡಲು ಸುಂದರವಾಗಿದ್ದಾಳಲ್ಲ...ಕತ್ತನ್ನು ಸ್ವಲ್ಪ ತಿರುಗಿಸಿದೆ....ಯಾಕೋ ಬೇಡವೆನಿಸಿತ್ತು. ಮೊದಲ ಸಲ ಆಚಾನಕ್ಕಾಗಿ ನೋಡಿದರೆ ಆ ಹುಡುಗಿಗೂ ಏನು ಅನ್ನಿಸುವುದಿಲ್ಲ....ಅದ್ರೆ ಈಗ ಮತ್ತೆ ತಿರುಗಿನೋಡಿದರೆ ಅವಳಿಗೆ ಗೊತ್ತಾಗುವುದರ ಜೊತೆಗೆ ಅವಳ ಮನಸ್ಸಿಗೆ ಇರಿಸುಮುರಿಸು ಉಂಟುಮಾಡಿದಂತಾಗುತ್ತದೆ. ಕಿರಿಕಿರಿ ಅಂತ ನನ್ನ ಬಗ್ಗೆ ಅನ್ನಿಸಬಹುದು. ಆದರೆ ಮನಸ್ಸು ಮತ್ತೆ ಮತ್ತೆ ನೋಡಲು ಆಸೆಪಡುತ್ತಿದೆಯಲ್ಲಾ..!! ಈಗ ಬಲಗಡೆಯ ಮಿರರ್ ಇದ್ದಿದ್ದರೇ.... ಹೆಲ್ಮೆಟ್ಟಿನ ಕಪ್ಪುಗ್ಲಾಸನ್ನು ಪೂರ್ತಿ ಮುಚ್ಚಿಕೊಂಡು ನನ್ನ ಕತ್ತನ್ನು ತಿರುಗಿಸದೆ ಬಲಗಡೆಯ ಮಿರರ್ ಮುಖಾಂತರ ಟ್ರಾಫಿಕ್ ಗ್ರೀನ್ ಸಿಗ್ನಲ್ ಬೀಳುವವರೆಗೂ ಆ ಹುಡುಗಿಯನ್ನು ನೋಡಬಹುದಿತ್ತಲ್ಲ.


ಛೇ! ಎಂಥ ಕೆಲಸವಾಯಿತು. ನಿನ್ನೆಯವರೆಗೂ ಬಲಗಡೆಯ ಮಿರರ್ ಇತ್ತು... ಆ ಹುಡುಗ ನನ್ನ ಕೈಗೆ ಸಿಕ್ಕರೇ.....ಅವನ ಮೇಲೆ ಸಿಕ್ಕಾಪಟ್ಟೆ ಕೋಪ ಬಂತು....ಆಷ್ಟರಲ್ಲಿ ಗ್ರೀನ್ ಸಿಗ್ನಲ್ ಬಿತ್ತು. ನಾನು ಮನಸ್ಸಿಲ್ಲದ ಮನಸ್ಸಿನಲ್ಲಿ ಮುಂದೆ ಸಾಗಿದೆ.


ಮೊದಲು ಇದೇ ರೀತಿ ಎಷ್ಟೋ ಟ್ರಾಫಿಕ್ಕುಗಳಲ್ಲಿ ಬಲಗಡೆಯ ಮಿರರ್‌ನಿಂದ ನೋಡಿರುವ ಹುಡುಗಿಯರೆಷ್ಟು......ಲೆಕ್ಕಹಾಕಲು ಸಾಧ್ಯವಿಲ್ಲ....ಈ ಒಂದು ಕಾರಣಕ್ಕೂ ನನಗೆ ಬೆಂಗಳೂರಿನ ಟ್ರಾಫಿಕ್ ಇಷ್ಟವಾಗುತ್ತೆ.


ಕೆಲವೊಮ್ಮೆ ಟ್ರಾಫಿಕ್‌ನಲ್ಲಿ ಹಿಂಭಾಗ ಇದೇ ರೀತಿ ಕಂಡ ಹುಡುಗಿಯರನ್ನು ಹಾಗೇ ನೋಡುತ್ತಾ ಡ್ರೈವ್ ಮಾಡಬೇಕೆನಿಸಿದರೆ.....ಅದೇ ಟ್ರಾಫಿಕ್‌ನಲ್ಲಿ ನಮಗೆ ಬೇಕಾದ ಹಾಗೆ ಬಲಗಡೆಯ ಮಿರರ್ [ಹುಡುಗಿಯ ಮುಖ ಚೆನ್ನಾಗಿ ಕಾಣುವಂತೆ] ಸ್ವಲ್ಪ ಅಕ್ಕಪಕ್ಕ ತಿರುಗಿಸಿ ಸೆಟ್ ಮಾಡಿಕೊಳ್ಳಬಹುದು. ಮುಂದೆ ರಸ್ತೆಯ ಎಡಬದಿಯಲ್ಲೇ ಚಲಿಸುತ್ತಾ ನಮ್ಮ ಹಿಂದೆ ಟೂವೀಲರ್‌ನಲ್ಲಿ ಬರುತ್ತಿರುವ ಹುಡುಗಿ ರಸ್ತೆಯುದ್ದಕ್ಕೂ ನಮಗೆ ಮಿರರ್‌ನಲ್ಲಿ ಕಾಣುವಂತೆ ನಿದಾನವಾಗಿ ಒಂದೇ ಅಳತೆಯ ವೇಗದಲ್ಲಿ ಟೂವೀಲರ್‌ನಲ್ಲಿ ಸಾಗಬಹುದು..


ಹೆಲ್ಮಟ್ಟಿನ ಹಿಂದಿರುವ ಕಣ್ಣು ಮುಂದಿರುವ ರಸ್ತೆ, ಅಕ್ಕಪಕ್ಕ ಇರುವ ವಾಹನಗಳು, ಸಿಗ್ನಲ್, ಪೋಲಿಸ್ ಎಲ್ಲವನ್ನು ಗಮನಿಸುತ್ತಿದ್ದರೇ... ಮನಸೊಳಗಿನ ಕಣ್ಣು ನನ್ನ ಟೂ ವೀಲರ್‌ನ ಹಿಂಬದಿ ಕಣ್ಣಿನ[ಬಲಗಡೆಯ ಮಿರರ್] ಜೊತೆಸೇರಿ ಹೀಗೆ ಹುಡುಗಿಯರನ್ನು ನೋಡಿ ಆನಂದಿಸಬಹುದಿತ್ತು.


ಇದಿಷ್ಟೇ ಅಲ್ಲದೇ ಎಲ್ಲಾದರೂ ಬಸ್‌ಸ್ಟಾಂಡಿಗೆ ಸ್ವಲ್ಪ ಮುಂದೆ ಯಾವುದೋ ಕಾರಣಕ್ಕೆ ರಸ್ತೆ ಪಕ್ಕ ಟೂವೀಲರ್ ನಿಲ್ಲಿಸಿಕೊಂಡಿದ್ದಾಗ... ಹಿಂಬಾಗದಲ್ಲಿ ಬಸ್ ಸ್ಟಾಪ್ ಇದ್ದರಂತೂ...ಅಲ್ಲಿ ಬಸ್ಸಿಗೆ ಕಾಯುತ್ತಿರುವ ಹತ್ತಾರು ಹುಡುಗಿಯರನು ಹೋಲ್‌ಸೇಲಾಗಿ ಈ ಮಿರರ್ ಸಹಾಯದಿಂದ ನೋಡಿ ಖುಷಿಪಡಬಹುದಿತ್ತು.
ಇಂಥ ಅನೇಕ ಮಜಗಳನ್ನು ರಸ್ತೆಯಲ್ಲಿ ನನ್ನ ಹಿಂಬದಿಯ ಕಣ್ಣಿನ ಸಹಾಯದಿಂದ ಅನುಭವಿಸುತ್ತಿದ್ದೆ. ಅರೆರೆ......ಅಯ್ಯೋ ಇದೆಲ್ಲಾ ಸೀಕ್ರೇಟನ್ನು ನಿಮ್ಮತ್ರ ಹೇಳಿಬಿಟ್ಟೆನಲ್ಲ.....ಇದು ಯಾವುದು ನನ್ನ ಹೆಂಡತಿಗೆ ಗೊತ್ತಿಲ್ಲಾರ್ರೀ......ದಯವಿಟ್ಟು ಅವಳಿಗೆ ಹೇಳಬೇಡ್ರೀ......


ಸರಿ ಇವೆಲ್ಲಾ ತಮಾಷೆಯ ವಿಚಾರಗಳಾಯ್ತಲ್ಲ.......ಅನಿರೀಕ್ಷಿತವಾಗಿ ಏನಾದರೂ ಟ್ರ್‍ಆಫಿಕ್ ಸಿಗ್ನಲ್ ಜಂಪ್ ಮಾಡಿಬಿಟ್ಟಿರೇ......ಅಥವ ಹಾಗೇ ಸಾಗಿ ಬರುತ್ತಿದ್ದರೇ.....ಅಲ್ಲಿ ನಿಂತಿರುವ ಪೋಲಿಸ್ ಗಮನಿಸಿದನಾ....ಗಮನಿಸಿದರೂ ಏನಾದರೂ ನೋಟ್ ಮಾಡಿಕೊಳ್ಳುತ್ತಿದ್ದಾನಾ.....ಆಗ ನಾವೇನು ಮಾಡಬೇಕು....ಇತ್ಯಾದಿಗಳನ್ನು ತಿಳಿಯಬಹುದು.

ಹತ್ತಾರು ವರ್ಷ ನಮ್ಮ ಜೊತೆಗಿದ್ದರೂ ಅದರ ಕಡೆಗೆ ಗಮನ ಕೊಡದೆ ಕಡೆಗಾಣಿಸುವ ನಾವು ಅವು ಒಂದೆರಡು ದಿನ ಇಲ್ಲವಾದಾಗ ಆಗುವ ತೊಂದರೆ...ಅಲ್ಲಲ್ಲ ತಪ್ಪಿಹೋದ ಅನಂದಗಳಿಂದಾಗಿ ಅವುಗಳ ಮಹತ್ವ ಗೊತ್ತಾಗುತ್ತದೆ ಅಲ್ವೇ...


ಸರಿ ಅದು ಇಲ್ಲದಿದ್ದರೇ ಏನಾಯ್ತು...ನಷ್ಟವೇನಾಗುತ್ತೇ.....ನೋಡೇ ಬಿಡುವ ಅಂತ ಒಂದಷ್ಟು ದಿನ ಹಾಗೇ ಓಡಾಡಿದೆ. ನಿಜಕ್ಕೂ ಹೇಳ್ತೀನಿ......ನನಗೆ ರಸ್ತೆಗಳು ಬೇಸರದ ಸಂಗತಿಗಳೇನೋ ಅನ್ನಿಸತೊಡಗಿದವು. ಚಿಕ್ಕರಸ್ತೆಗಳಾದರೂ ಮಿಗಿಯದ ರಸ್ತೆಗಳಂತೆ ಕಾಡತೊಡಗಿದವು. ಅನೇಕ ಬಾರಿ ಹಿಂದೆ ಬರುತ್ತಿರುವ ವಾಹನಗಳನ್ನು ಕತ್ತು ತಿರುಗಿಸಿ ನೋಡಲಾಗದೆ[ಟೂ ವೀಲರ್ ಓಡಿಸುವಾಗ ಹಾಗೆ ನೋಡಲುಬಾರದು] ಮತ್ತು ದೊಡ್ಡ ರಸ್ತೆಗಳಲ್ಲಿ ಯಾವ ವೇಗದಲ್ಲಿ ಹೋಗಬೇಕೆಂದು ಗೊತ್ತಾಗದೇ ಅನೇಕರಿಂದ ಬೈಸಿಕೊಂಡಿದ್ದೇನೆ.


ಇಷ್ಟೆಲ್ಲಾ ಹೇಳಿದ ಮೇಲು ನೀವು ಕೇಳಬಹುದು. "ಅಯ್ಯೋ ಎಡಬದಿಯ ಹಿಂಬದಿಯ ಕಣ್ಣು ಇತ್ತಲ್ಲ, ಅದನ್ನು ಉಪಯೋಗಿಸಬಹುದಿತ್ತಲ್ಲ ಅಂತ" ನಿಮಗನ್ನಿಸಿದ್ದು ಸರಿ....ನಾನು ಹಾಗೆ ಅಂದುಕೊಂಡು ಆ ಕಣ್ಣನ್ನು ಮೇಲೆ ಹೇಳಿದ ಎಲ್ಲಾ ರೀತಿ ಉಪಯೋಗಿಸಲೆತ್ನಿಸಿದೆ........


ಆಗಲಿಲ್ಲ ಕಣ್ರೀ.....ಅದು ಸರಿಯಾಗಿ ವರ್ಕೌಟ್ ಆಗಲೇ ಇಲ್ಲ. ತುಂಬಾ ಪ್ರಯತ್ನಿಸಿದೆ...ಅದೇಕೋ ಏನೋ ಅದರಲ್ಲಿ ಹುಡುಗಿಯರು ಕಾಣೋದೆ ಇಲ್ಲ. ಕಂಡರೂ ಸುಂದರವಾಗಿ ಕಾಣೋದಿಲ್ಲ.. ಮತ್ತೆ ವೇಗವನ್ನು ಅದರಲ್ಲಿ ನೋಡಿ ನಿಯಂತ್ರಿಸಿಕೊಳ್ಳೋಕಂತೂ ಆಗೋದೆ ಇಲ್ಲ. ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸದೆ ಒಮ್ಮೆ ಪೋಲೀಸಪ್ಪ ದಂಡವನ್ನು ವಸೂಲಿ ಮಾಡಿದ್ದ. ನಮ್ಮಜ್ಜಿ ಹೇಳಿದಂತೆ ಎಡಗೈ ಏನಿದ್ದರೂ ಅದಕ್ಕೆ ಸರಿ ಅನ್ನುವಂತೆ ಇಲ್ಲೂ ಕೂಡ ಈ ಎಡ ಹಿಂಬದಿ ಕಣ್ಣು ತನ್ನ ಬೆಲೆ ಕಳೆದುಕೊಂಡಿತ್ತು.

ಎಡ-ಅಥವ ಬಲ ತಿರುವು ತೆಗೆದುಕೊಳ್ಳುವಾಗ ನನ್ನ ಹಿಂಬದಿ ಕಣ್ಣಿಲ್ಲದೇ ಕತ್ತನ್ನು ಆಗಾಗ ತಿರುಗಿಸಿ....ಕತ್ತು ನೋವು ಬರತೊಡಗಿತ್ತು. ಸುಮಾರು ಒಂದು ವಾರಕ್ಕೆ ಇಷ್ಟೇಲ್ಲಾ ತೊಂದರೆಯಾದರೆ ಮುಂದೆ ಏನೇನು ಆಗುವುದೋ ಅನ್ನುವ ಭಯಕ್ಕೆ ಮರುದಿನವೇ ನನ್ನ ಮೆಚ್ಚಿನ ಇನ್ನೂ ಚೆನ್ನಾಗಿ ಕಾಣುವ ಬಲ ಹಿಂಬದಿಕಣ್ಣನ್ನು ಹಾಕಿಸಿದ್ದೆ.


ಮತ್ತೆ ಹೊಸ ಹಿಂಬದಿ ಕಣ್ಣನ್ನು ಹಾಕಿಸಿದ ಮೇಲೆ........ಮತ್ತದೇ ಖುಷಿ....


ಚಿತ್ರ ಮತ್ತು ಲೇಖನ.
ಶಿವು.ಕೆ ARPS.

Saturday, April 4, 2009

ಹಿರಿಯಜ್ಜನಿಗೆ ಕತೆ ಹೇಳಿದ ಕರಿಬೇವು.

ಗೆಳೆಯರೆ, ನನ್ನ ಛಾಯಾಕನ್ನಡಿ ಬ್ಲಾಗಿನಲ್ಲಿ ಇದು ಐವತ್ತನೇ ಪೋಸ್ಟಿಂಗ್.
ಮನುಷ್ಯನ ಜೀವನದಲ್ಲಿ ಐವತ್ತನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ವೃದ್ಧಾಪ್ಯದ ಕಡೆಗೆ ನೋಟ ನೆಟ್ಟಂತೆ ಲೆಕ್ಕ. ಮತ್ತೆ ಇಂದು ವಿಶ್ವ ಹಿರಿಯರ ದಿನ. ಅದಕ್ಕಾರಿ ಅವರನ್ನು ಗೌರವಿಸಲು ಈ ಚಿತ್ರ ಲೇಖನ.


ಜಿಗುಪ್ಸೆಯಿಂದ ಭಾರವಾದ ಹೆಜ್ಜೆಗಳನ್ನಿಡುತ್ತಿದ್ದರೂ ನೆಲದಲ್ಲಿ ಬಿದ್ದಿದ್ದ ತರಗಲೆಗಳು ಸದ್ದು ಮಾಡದೇ ಅವನ ನೋವಿಗೆ ಸಹಕರಿಸುತ್ತಿದ್ದವು. ಆತ ಹಗುರಾಗಿ ಆ ಕಟ್ಟೆಯ ಮೇಲೆ ಕುಳಿತರೂ ಮೈ ಮನಸೆಲ್ಲಾ ಭಾರವಾಗಿದೆ ಎನಿಸುತ್ತಿತು.

ವಯಸ್ಸು ೭೦ ದಾಟಿರಬಹುದು. ತೊಡೆಯ ಮೇಲೆ ಏನೋ ಸ್ಪರ್ಶವಾಯಿತು, ಮುಗ್ಧ ಮಗು ತನ್ನ ಬೆರಳುಗಳಿಂದ ಆತನ ಕೆನ್ನೆಯನ್ನು ಸೋಕಿದಷ್ಟು ನುಣುಪಾಗಿ.ಆತನ ದೃಷ್ಟಿ ತನ್ನ ತೊಡೆಯ ಮೇಲೆ ಬಿತ್ತು. ವಯಸ್ಸಾದ, ಮುಟ್ಟಿದರೆ ಪುಡಿಯಾಗುವಷ್ಟು ಒಣಗಿದ ಕರಿಬೇವಿನ ಎಲೆ ಗಾಳಿಗೆ ತೂರಾಡಿ, ಮಕ್ಕಳು ಕಾಗದದಲ್ಲಿ ಮಾಡಿ ಮೇಲೆ ಎಸೆದಾಗ ಹಾರಿದ ಪೇಪರ್ ಪಾರಿವಾಳದ ಹಾಗೆ ಗಾಳಿಯಲ್ಲಿ ಜೀಕಿ, ತೊಯ್ದಾಡಿ ನಿದಾನವಾಗಿ ಆತನ ತೊಡೆಯನ್ನಲಂಕರಿಸಿತ್ತು.

ಆತ ಅದನ್ನು ಮುಟ್ಟಬೇಕೆನ್ನುವಷ್ಟರಲ್ಲಿ ಆ ಕರಿಬೇವು ಮಾತಾಡಲಾರಂಬಿಸಿತು.

"ಗೆಳೆಯ ನನ್ನನ್ನು ಮುಟ್ಟುತ್ತಿದ್ದೀಯ?, ನೀನನಲ್ಲದೆ ಇನ್ಯಾರು ನನ್ನನ್ನು ಸ್ಪರ್ಶಿಸಲು ಸಾಧ್ಯ. ನಿನಗೆ ನಾನು ನನಗೆ ನೀನು ಅಲ್ಲವೇ, ಸೆಳೆಯುತ್ತಿವೆಯೇ ಭಾರವಾದ ಹೆಜ್ಜೆಗಳು ಬದುಕಿನ ಕೊನೆಯ ಹಾದಿಗೆ, ಕೊರಗಿ ಕರಗುತ್ತಿವೆಯೇ ಅಂದಿನ ಭಾವ ತುಂಬಿದ ನೂರಾರು ಅನುಭವಗಳು........ ಗೆಳೆಯ ನೀ ಹುಟ್ಟಿದಂತೆ ನಾನೂ ಚಿಗುರಿದೆ, ದಿನಕಳೆದಂತೆ ಬೆಳೆದೆ, ಬೀಸುವ ಗಾಳಿಯಲ್ಲಿ ನಲಿದೆ, ರವಿಕಿರಣಗಳಲ್ಲಿ ಜಿಗಿದು ಜೋಕಾಲಿಯಾಡಿದ್ದೆ. ಅತ್ತ ನೀನು ನಿನ್ನ ಸಂಕ್ರಮಣಕಾಲದಲ್ಲಿ ಗಮಗಮಿಸಿದ್ದೆ ನನ್ನಂತೆ".

ವೃದ್ದ ಎಲೆಯ ಮಾತುಗಳನ್ನು ಕೇಳುತ್ತಾ...ಭಾವಪೂರ್ಣನಾಗಿದ್ದ..... ಆ ಹಣ್ಣೆಲೆ ಒಮ್ಮೆ ನಿಟ್ಟುಸಿರು ಬಿಟ್ಟಿತು... ಮತ್ತೆ ಮಾತು ಮುಂದುವರಿಸಿತು......

"ತಳ್ಳೇಬಿಟ್ಟರಲ್ಲ ನಿನ್ನನ್ನು ಹೆದ್ದಾರಿಯಿಂದ ಕಾಲುದಾರಿಗೆ ಸಮಾಜದ ಜೊತೆಗೂಡಿದ ನಿನ್ನ ಮಕ್ಕಳು, ಊಟದ ಎಲೆಯಿಂದ ಎತ್ತಿ ಬಿಸಾಡಿ ತಿರಸ್ಕರಿಸಿದರು ನಿನ್ನಂತೆ. ಆದರೇನು ನಾನು ಕೊರಗಲಾರೆನು. ಮತ್ತೆ ಮಣ್ಣಲ್ಲಿ ಮಣ್ಣಾಗಿ ನನ್ನ ಕಣಕಣಗಳು ಮತ್ತೊಂದು ಚಿಗುರುವ ಬೇರಿಗೆ ಮೂಲಸತುವಾಗುವ ಉತ್ಸಾಹದಲ್ಲಿ ನೀಡುತ್ತೇನೆ ನಿನಗೆ ಚಿಟಿಕೆಯಷ್ಟು ವಿಶ್ವಾಸ, ಒಂದಿಡಿ ಆತ್ಮೀಯತೆ, ಗುಟುಕಿನಷ್ಟು ಪ್ರೀತಿ. ಹೋಗಿಬರುತ್ತೇನೆ"

ಮತ್ತೆ ಗಾಳಿ ನಿದಾನವಾಗಿ ಬೀಸತೊಡಗಿತು. ವೃದ್ಧ ಮತ್ತೊಮ್ಮೆ ಆ ಕರಿಬೇವನ್ನು ಮುಟ್ಟಿದ ಮಗುವಿನ ಕಿರುಬೆರಳು ಸೋಕಿದಷ್ಟು ನವಿರಾಗಿ. ಮನದೊಳಗೆಲ್ಲೋ ಮಗುವಾದ ಅನುಭವ. ಕಣ್ಣಂಚಿಗೆ ಇಳಿದ ಹನಿಗಳಲ್ಲಿ ಅಮ್ಮನ ನೆನಪು..... ನಿರೀಕ್ಷೆಗಳಿಲ್ಲದ ಆನಂದದ ದಾರಿಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಟ್ಟ ಭಾವುಕತೆ.

ಅಷ್ಟರಲ್ಲಿ ಗಾಳಿ ಮತ್ತಷ್ಟು ಜೋರಾಗಿ ಬೀಸಿತು. ತೊಡೆಯ ಮೇಲಿದ್ದ ಕರಿಬೇವು ಹಾರಿಹೋಯಿತು ಗಾಳಿ ಬೀಸಿದೆಡೆಗೆ, ಮರಳಿ ಮಣ್ಣಿನೆಡೆಗೆ, ಮಣ್ಣಿನ ಕಣದೊಳಗೆ ಸೇರಿ ಮೂಲಸತುವಾಗುವ ಸಾರ್ಥಕತೆಯ ಕಡೆಗೆ.

ಚಿತ್ರ ಮತ್ತು ಲೇಖನ.
ಶಿವು ಕೆ.