Friday, May 28, 2010

ಹುಳುಗಳು ಕಾಡುಹೂಗಳ ಲೋಕಕ್ಕೆ ನೀವೆಲ್ಲಾ ಬನ್ನಿ

ನೀವು ಪಿವಿಅರ್, ಐನಾಕ್ಸ್, ಅಥವ ಅದಕ್ಕಿಂತ ದೊಡ್ಡ ಥಿಯೇಟರಿನ ಕತ್ತಲಲ್ಲಿ ನಿಮ್ಮ ಸೀಟು ಹಿಡಿದು ಕುಳಿತುಕೊಳ್ಳುತ್ತಿದ್ದಂತೆ ಎದುರಿನ ದೊಡ್ದ ಬೆಳ್ಳಿ ಪರದೆಯಲ್ಲಿ ಡೈನೋಸಾರಿನಷ್ಟೇ ದೊಡ್ದದಾಗಿರುವ ಆಕೃತಿ, ಕೊಳಾಯಿ ಪೈಪಿನಷ್ಟು ದೊಡ್ಡದಾದ ರೋಮಗಳಿರುವ ಕಾಲುಗಳು ಇಡೀ ಪರದೆಯ ತುಂಬಾ ಕಾಣಿಸುತ್ತವೆ. ನಿದಾನವಾಗಿ ಅದರ ಹೊಟ್ಟೆ, ಕುತ್ತಿಗೆ, ತಲೆ, ತಲೆಯೊಳಗೆ ಕನ್ನಡಿಯಂತೆ ಪ್ರತಿಪಲಿಸುವ ಸಾವಿರಕ್ಕೂ ಹೆಚ್ಚು ಕಣ್ಣುಗಳು, ಅದರ ಕೆಳಗೆ ಒಂದು ದೊಡ್ದದಾಗ ಹಾವಿನಂತೇ ಭಾಷವಾಗುವ ಉದ್ದವಾದ ನಾಲಿಗೆ ನಿದಾನವಾಗಿ ಸ್ಪ್ರಿಂಗ್‍ನಂತೆ ಸುರಳಿ ಸುತ್ತಿಕೊಳ್ಳುತ್ತಿದೆ. ಹಾಗೆ ನಿದಾನವಾಗಿ ಜಾಲರಿಯಂತೆ ಕಾಣುವ ಅದರ ರೆಕ್ಕೆಗಳಲ್ಲಿ ನೂರಾರು ಬಣ್ಣಗಳು. ಮದ್ಯೆ ಬಳೆಯಂತ ಬಣ್ಣ ಬಣ್ಣದ ಉಂಗುರಗಳು.

ಇಷ್ಟೆಲ್ಲಾ ನೋಡುವಷ್ಟರಲ್ಲಿ ಅದೊಂದು ಬಣ್ಣದ ಚಿಟ್ಟೆ ಅಂತ ಗೊತ್ತಾಗಿಬಿಡುತ್ತದೆ ನಿಮಗೆ. ಅಷ್ಟು ದೊಡ್ಡ ಬೆಳ್ಳಿ ಪರಧೆಯಲ್ಲಿ ಅದರ ದೇಹದ ಪ್ರತಿಯೊಂದು ಭಾಗವನ್ನು ರಾಕ್ಷಸಾಕಾರದಲ್ಲಿ ನೋಡುತ್ತಾ ಮೈಮರೆಯುತ್ತಿರುತ್ತೀರಿ..ಅಲ್ಲವೇ...

ಮೊದಲ ಭಾರಿ ಒಂದು ಇಂಚು ಸುತ್ತಳತೆಯ ಬಣ್ಣದ ಚಿಟ್ಟೆಯನ್ನು ಮ್ಯಾಕ್ರೋ ಲೆನ್ಸ್ ಮೂಲಕ ನೋಡಿ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದಾಗ ನನಗೂ ನಿಮ್ಮಂತೆ ಅನುಭವವಾಗಿತ್ತು. ಮ್ಯಾಕ್ರೋ ಲೆನ್ಸ್ ಅನ್ನುವ ಆ ಅದ್ಭುತ ಲೆನ್ಸಿನ ತಾಕತ್ತೇ ಅಂತಹುದು. ಒಂದು ಕಣ್ಣನ್ನು ಮುಚ್ಚಿ ಮತ್ತೊಂದು ಕಣ್ಣಿನಲ್ಲಿ ಮ್ಯಾಕ್ರೋ ಲೆನ್ಸ್ ಹಾಕಿರುವ ಕ್ಯಾಮೆರಾ ಕಿಂಡಿಯಲ್ಲಿ ಕಾಣುವ ದೃಶ್ಯವನ್ನು ನೀವೊಮ್ಮೆ ನೋಡಬೇಕು. ಚಿಟ್ಟೆಯಾಗಲಿ, ಪುಟ್ಟ ಹೂವಾಗಲಿ, ಅರ್ದ ಇಂಚಿನಷ್ಟು ಉದ್ದದ ಹುಳುವಾಗಲಿ, ಮಿಡಿತೆಯಾಗಲಿ, ಜೀರುಂಡೆಯಾಗಲಿ, ಜೇಡವಾಗಲಿ, ಇರುವೆಗಳಾಗಲಿ, ಇಬ್ಬನಿಗಳಾಗಲಿ, ಜೇನುನೊಣವಾಗಲಿ, ಕೊನೆಗೆ ಮನೆನೊಣವಾಗಲಿ, ಪ್ರತಿಯೊಂದು ರಾಕ್ಷಸಕಾರದಲ್ಲಿ ಕಾಣುತ್ತವೆ. ಅದರ ಮೈಮೇಲಿನ ಸಣ್ಣ ಸಣ್ಣ ರೋಮಗಳು ನಮ್ಮ ಮನೆಯ ಕೊಳಾಯಿ ಪೈಪುಗಳಷ್ಟು ದೊಡ್ಡದಾಗಿ ಕಾಣುತ್ತಾ ನಮ್ಮನ್ನು ಬೆರಗಾಗಿಸುತ್ತವೆ.

ಹೀಗೆ ಮೊದಲು ನಾನು ಚಿಟ್ಟೆಯನ್ನು ಈ ರೀತಿ ನೋಡಿದ್ದು ನನ್ನ ಹಿರಿಯ ಛಾಯಾಗ್ರಾಹಕರ ಕ್ಯಾಮೆರಾ ಮತ್ತು ಅವರ ಮ್ಯಾಕ್ರೋ ಲೆನ್ಸ್ ಮುಖಾಂತರ. ಆಗ ನನ್ನ ಬಳಿ ಮ್ಯಾಕ್ರೋ ಲೆನ್ಸು ಇರಲಿಲ್ಲ. ನಮ್ಮ ಹಿರಿಯ ಛಾಯಾಗ್ರಾಹಕ ಗೆಳೆಯರ ಜೊತೆ ಚಳಿಗಾಲದ ಮುಂಜಾನೆ ಚಿಟ್ಟೆ ಫೋಟೊಗ್ರಫಿಗೆ ಹೋದಾಗ ಅವರ ಕ್ಯಾಮೆರಾ ಜೊತೆಗಿದ್ದ ಮ್ಯಾಕ್ರೋ ಲೆನ್ಸ್ ಮೂಲಕ ಆ ಅದ್ಭುತ ಲೋಕವನ್ನು ನೋಡಿ ಮನತುಂಬಿಸಿಕೊಳ್ಳುತ್ತಿದ್ದೆ. ಮೈಮರೆಯುತ್ತಿದ್ದೆ. ಆ ನಂತರವೇ ನಾನು ಇಂಥ ಒಂದು ಮ್ಯಾಕ್ರೋ ಲೆನ್ಸ್ ತೆಗೆದುಕೊಳ್ಳಬೇಕು ಅನ್ನಿಸಿತ್ತು. ನೋಡಲು ಪುಟ್ಟದಾದರೂ ಇದು ದುಬಾರಿ ಲೆನ್ಸ್. [ಒಂದು ಒಳ್ಳೆಯ ಅತಿ ಕಡಿಮೆ ಬೆಲೆಯದ್ದು ಬೇಕೆಂದರೂ ಇಪ್ಪತ್ತು ಸಾವಿರ ರೂಪಾಯಿಗಳಂತೂ ಬೇಕೇ ಬೇಕು]. ಹೇಗೋ ಒಂದು ವರ್ಷದಲ್ಲಿ ಹಣಕೂಡಿಸಿ ಒಂದು ಉತ್ತಮ ಮ್ಯಾಕ್ರೋ ಲೆನ್ಸ್ ಕೊಂಡುಕೊಂಡೆ. ನನ್ನ ಜೊತೆಗಾರನಾಗಿದ್ದ ಹಿಂದು ದಿನಪತ್ರಿಕೆಯಲ್ಲಿ ಛಾಯಾಗ್ರಾಹಕನಾಗಿ ಕೆಲಸ ಮಾಡುವ ಮುರಳಿ ಕೂಡ ಮ್ಯಾಕ್ರೋ ಲೆನ್ಸ್ ತೆಗೆದುಕೊಂಡ ಮೇಲೆ ಇಬ್ಬರೂ ಚಿಟ್ಟೆ ಫೋಟೊಗ್ರಫಿಗೆ, ಹೆಸರಘಟ್ಟ, ಬನ್ನೇರುಘಟ್ಟ,........ಹೀಗೆ ಬೆಂಗಳೂರು ದಾಟಿ ೨೫-೩೦ ಕಿಲೋಮೀಟರ್ ದಾಟಿ ಹೋಗುತ್ತಿದ್ದೆವು.

ನಾನು ಒಮ್ಮೆ ಹೀಗೆ ಚಳಿಗಾಲದ ಮುಂಜಾನೆ ಚಿಟ್ಟೆ ಫೋಟೋ ಕ್ಲಿಕ್ಕಿಸುವಾಗಲೇ ನನಗೆ ಫೋನ್ ಬಂತು.

"ಶಿವು, ಏನು ಮಾಡುತ್ತಿದ್ದೀರಿ"

ಆಗ ನಾನು ಎಂದೂ ನೋಡದ ಅದ್ಬುತವೆನಿಸುವ ಚಿಟ್ಟೆಯನ್ನು ಆ ಕೊಚ್ಚೆ ನೆಲದಲ್ಲಿ ಮಲಗಿ ಕ್ಲಿಕ್ಕಿಸುತ್ತಿದ್ದೆ. ಅಂತ ಸಮಯದಲ್ಲಿ ಯಾವ ಫೋನ್ ಬಂದರೂ ನನಗೆ ನನಗೆ ಕೋಪ ಬರುವುದು ಸಹಜ. ನಾನು ಅಸಹನೆಯಿಂದ ಚಿಟ್ಟೆ ಫೋಟೊ ತೆಗೆಯುವುದು ನಿಲ್ಲಿಸಿ ಫೋನ್ ತೆಗೆದು ಮಾತಾಡಿದರೆ ಆ ಕಡೆಯಿಂದ ನಾಗೇಶ್ ಹೆಗಡೆ.
"ಸಾರ್ ಚಿಟ್ಟೆ ಫೋಟೊ ತೆಗೆಯುತ್ತಿದ್ದೇನೆ"
"ಯಾವ ಚಿಟ್ಟೆ"

"ನನಗೂ ಗೊತ್ತಿಲ್ಲ ಸರ್"

"ಹೋಗಲಿ ಬಿಡಿ, ನೀವು ಮನೆಗೆ ಹೋದ ಮೇಲೆ ಅದು ಯಾವ ಚಿಟ್ಟೆ, ಹೇಗೆ ಕ್ಲಿಕ್ಕಿಸಿದಿರಿ, ನಿಮ್ಮ ವಾತಾವರಣ ಇತ್ಯಾದಿಗಳನ್ನು ಹಾಗೆ ಬರೆದು, ಫೋಟೊ ಸಮೇತ ನನಗೆ ಕಳಿಸಿ" ಎಂದರು.

"ಸರಿ ಸರ್" ಅಂದವನ್ನು ಮತ್ತೆ ಕ್ಲಿಕ್ಕಿಸತೊಡಗಿದೆ.

[ನಾನು ಅವತ್ತು ಮುಂಜಾನೆ ಕ್ಲಿಕ್ಕಿಸುತ್ತಿದ್ದ ಚಿಟ್ಟೆ. ಇದರ ಹೆಸರು ಗೊತ್ತಿರಲಿಲ್ಲ. ಅವರ ಪುಸ್ತಕವನ್ನು ನೋಡಿದಾಗ ಅದು ಲೈಮ್ ಬಟರ್ ಪ್ಲೈ ಅಂತ ಗೊತ್ತಾಯಿತು.]


ಇಷ್ಟಾದರೂ ನಮ್ಮ ಮ್ಯಾಕ್ರೋ ಫೋಟೋಗ್ರಫಿ ಅಂತ ಹೇಳಿಕೊಳ್ಳುವಂತಿರಲಿಲ್ಲ. ಕಾರಣ ನಮಗೂ ಗೊತ್ತಿರಲಿಲ್ಲ. ಹೊಸ ಹುಮ್ಮಸ್ಸಿನಿಂದ ಹೋಗಿ ಆ ಚಳಿಯಲ್ಲಿ ಚಿಟ್ಟೆಗಳು, ಹುಳುಗಳನ್ನು ಹುಡುಕಿ ಕ್ಲಿಕ್ಕಿಸುತ್ತಿದ್ದೆವು. ನಾವು ಕ್ಲಿಕ್ಕಿಸಿದ ಚಿತ್ರಗಳನ್ನೆಲ್ಲಾ ದೇಶದಲ್ಲಿಯೇ ಅತ್ಯುತ್ತಮ ಮ್ಯಾಕ್ರೋ ಫೋಟೊಗ್ರಫಿಯಲ್ಲಿ ಪರಿಣತರಾದ ಟಿ.ಎನ್.ಎ ಪೆರುಮಾಳ್‍ರವರಿಗೆ ಏಕೆ ತೋರಿಸಬಾರದು ಅಂತ ನಾನು ಮುರುಳಿ ಅಂದುಕೊಂಡು ಅವರ ಮನೆಗೆ ಹೋದೆವು. ನಮ್ಮ ಫೋಟೊಗ್ರಫಿ ಮತ್ತು ನಮ್ಮ ಹುಮ್ಮಸ್ಸು, ಉತ್ಸಾಹವನ್ನು ನೋಡಿದ ಅವರು,

"ನೋಡಿ, ನಿಮ್ಮ ಉತ್ಸಾಹಕ್ಕೆ ನನ್ನ ಮೆಚ್ಚುಗೆಯಿದೆ. ಆದ್ರೆ ನೀವು ಕ್ಯಾಮೆರಾದಲ್ಲಿ ಕೆಲವೊಂದು ತಾಂತ್ರಿಕ ವಿಚಾರಗಳನ್ನು ಗಮನಿಸಬೇಕು ಎಂದು ಕೆಲವು ಟಿಪ್ಸ್ ಕೊಟ್ಟರು. ಮತ್ತು ಚಿಟ್ಟೆ ಮತ್ತು ಇನ್ನಿತರ ಹುಳುಗಳ ಫೋಟೋ ತೆಗೆಯುವ ಮೊದಲು ನೀವು ಕೆಲವೊಂದು ವಿಚಾರಗಳನ್ನು ಮೊದಲು ಅರಿತುಕೊಳ್ಳಬೇಕು. ಯಾವುದೇ ಚಿಟ್ಟೆಯ ಫೋಟೊ ತೆಗೆಯಬೇಕಾದರೆ, ಅದರ ಸಂಪೂರ್ಣ ಮಾಹಿತಿಯನ್ನು ನೀವು ತಿಳಿದಿರಬೇಕು. ಅದಕ್ಕಾಗಿ ನಿಮಗೊಂದು ಪುಸ್ತಕವನ್ನು ತರಿಸಿಕೊಡುತ್ತೇನೆ" ಅಂದರು.

ಫೀಲ್ಡ್ ಗೈಡ್ ಅಫ್ ಸೌತ್ ಇಂಡಿಯನ್ ಬಟರ್ ಪ್ಲೈಸ್ ಪುಸ್ತಕದ ಮುಖಪುಟ


ಫೀಲ್ಡ್ ಗೈಡ್ ಅಫ್ ಸೌತ್ ಇಂಡಿಯನ್ ಬಟರ್ ಪ್ಲೈಸ್ ಪುಸ್ತಕ ಹಿಂಬದಿ ರಕ್ಷಾ ಪುಟ

ಇಷ್ಟಕ್ಕೂ ಅವರು ಹೇಳಿದ ಪುಸ್ತಕ ಯಾವುದು ಗೊತ್ತೆ. "ಫೀಲ್ಡ್ ಗೈಡ್ ಅಫ್ ಸೌತ್ ಇಂಡಿಯನ್ ಬಟರ್ ಪ್ಲೈಸ್" ಅದು ಅವರದೇ ಸಂಪಾದಕೀಯದಲ್ಲಿ ಭಾರತದ ಅತ್ಯುತ್ತಮ ಮ್ಯಾಕ್ರೋಫೋಟೋಗ್ರಾಫರುಗಳು ಕ್ಲಿಕ್ಕಿಸಿದ ಅತ್ಯುತ್ತಮ ಮ್ಯಾಕ್ರೋ ಫೋಟೊಗ್ರಫಿ ಪುಸ್ತಕ. ಅದರಲ್ಲಿ ಎಲ್ಲಾ ಬಗೆಯ ಚಿಟ್ಟೆಗಳ ಅತ್ಯುತ್ತಮ ಚಿತ್ರಗಳು ಮತ್ತು ಸಂಪೂರ್ಣ ವಿವರ ಸಮೇತ ಇತ್ತು. ಬಂಗಾರದಂತ ಪುಸ್ತಕವನ್ನು ಅವರು ಡಿಸ್ಕೌಂಟ್ ರೇಟಿನಲ್ಲಿ ತರಿಸಿಕೊಟ್ಟರು[ಅದರ ಮುಖಬೆಲೆ ೮೦೦ ರೂಪಾಯಿಗಳು. ನಮಗೆ ಐದುನೂರಕ್ಕೆ ತರಿಸಿಕೊಟ್ಟರು. ಆಗ ಆ ಪುಸ್ತಕ ಎರಡು ಸಾವಿರ ಕೊಟ್ಟರೂ ಸಿಗುವುದಿಲ್ಲ. ಅದರ ಮೊದಲ ಪ್ರತಿಗಳೆಲ್ಲಾ ಮುಗಿದಿವೆ. ಎರಡನೇ ಮುದ್ರಣವಾಗದ್ದರಿಂದ ಮೊದಲು ಕೊಂಡುಕೊಂಡವರೆಲ್ಲ ಅದನ್ನು ಬಂಗಾರಕ್ಕಿಂತ ಹೆಚ್ಚು ಬೆಲೆಯುಳ್ಳದ್ದು ಎನ್ನುವಂತೆ ಜೋಪಾನವಾಗಿರಿಸಿದ್ದಾರೆ, ಹಾಗೂ ಯಾರು ಕೇಳಿದರೂ ಕೊಡುವುದಿಲ್ಲ. ನಾನು ಕೂಡ ಅದನ್ನು ಯಾರು ಕೇಳಿದರೂ ಕೊಡುವುದಿಲ್ಲ.] ಇಂಥ ಪುಸ್ತಕವನ್ನು ಅಭ್ಯಾಸ ಮಾಡುತ್ತಾ, ನಾನು ಇದುವರೆಗೆ ಅರವತ್ತಕ್ಕೂ ಹೆಚ್ಚು ಚಿಟ್ಟೆಗಳು, ಹುಳುಗಳ ಫೋಟೊಗ್ರಫಿ ಮಾಡಿದ್ದೇನೆ. ಚಿಟ್ಟೆಗಳ ನಡುವಳಿಕೆಯನ್ನು ಒಂದು ಹಂತದ ಮಟ್ಟಿಗೆ ಚೆನ್ನಾಗಿ ಅರಿಯುವಲ್ಲಿ ಈ ಪುಸ್ತಕ ನನಗಂತೂ ತುಂಬಾ ಉಪಯುಕ್ತವಾಗಿದೆ. ಆ ನಂತರ ತೆಗೆದ ಚಿಟ್ಟೆಗಳು, ಹುಳುಗಳು, ನನಗೆ ಹತ್ತಾರು ಬಹುಮಾನಗಳನ್ನು, ಖುಷಿಯನ್ನು, ಮರೆಯಲಾಗದ ತನ್ಮಯತೆಯನ್ನು, ತಂದುಕೊಟ್ಟಿವೆ. ಆನೇಕ ಪತ್ರಿಕೆಗಳಲ್ಲಿ, ವಿಶೇಷಾಂಕಗಳಲ್ಲಿ ಚಿತ್ರಗಳು, ಮತ್ತು ಚಿತ್ರಲೇಖನಗಳಾಗಿ ಪ್ರಕಟವಾಗಿವೆ. ನನ್ನ ಬ್ಲಾಗಿನಲ್ಲೂ ಇವುಗಳ ಬಗ್ಗೆ ಚಿತ್ರ ಸಮೇತ ಹಾಕಿದ್ದೇನೆ.

ಈಗ ಮುಖ್ಯ ವಿಚಾರ ಬರೋಣ. ಚಿಟ್ಟೆಗಳ ಪುಸ್ತಕವಾಯಿತು. ಈಗ ಭಾರತದಾಧ್ಯಂತ ಮಣ್ಣಿನೊಳಗೆ ಮತ್ತು ಮಣ್ಣ ಮೇಲೆ ಕಾಣಸಿಗುವ ವೈವಿಧ್ಯಮಯ ಹುಳುಗಳು ಮತ್ತು ಕಾಡುಹೂಗಳ ಬಗ್ಗೆ ಪುಸ್ತಕ ಮಾಡಲು ಹೊರಟಿದ್ದಾರೆ ಇದೇ ತಂಡದವರು. ಒಂದು ದಿನ ನನಗೆ ಇದೇ ಪೆರುಮಾಳ್ ಸರ್ ಅವರಿಂದ ಫೋನ್ ಕರೆಬಂತು.

"ಶಿವು, ನಿಮ್ಮ ಬಳಿ ಇರುವ ಎಲ್ಲಾ ಹುಳುಗಳ ಫೋಟೋ ಸಿಡಿ ಕಳಿಸಿ" ಅಂದರು. ನನ್ನ ಮ್ಯಾಕ್ರೋ ಫೋಟೊಗ್ರಫಿಗೆ ಗುರು ಸಮಾನರಾದ ಅವರು ಕೇಳಿದಾಗ ನಾನು ಮರು ಮಾತಾಡದೇ ನನ್ನಲ್ಲಿರುವ ಎಲ್ಲಾ ಹುಳುಗಳ ಚಿತ್ರಗಳನ್ನು ಸಿಡಿಯಲ್ಲಿ ಹಾಕಿ ಅವರಿಗೆ ಪೋಸ್ಟ್ ಮಾಡಿದೆ. ಮರುದಿನ ಪೆರುಮಾಳ ಸರ್ ಮತ್ತೆ ಫೋನ್ ಮಾಡಿದರು. "ಶಿವು, ನಾವು ಮತ್ತೆ ಒಂದು ಹೊಸ ಪುಸ್ತಕವನ್ನು ಹೊರತರಲು ಸಿದ್ಧತೆ ನಡೆಸಿದ್ದೇವೆ. ಈ ಬಾರಿಯ ಪುಸ್ತಕ ನಮ್ಮ ದೇಶದ ಭೂಮಿಯ ಮೇಲೆ ಮತ್ತು ಭೂಮಿಯೊಳಗಿರುವ ಹುಳು, ಹುಪ್ಪಟೆಗಳಿಗೆ ಸಂಭಂದಿಸಿದ್ದು. ನೀವು ತೆಗೆದ ಕೆಲವು ಹುಳುಗಳ ಚಿತ್ರಗಳನ್ನು ನಮ್ಮ ಪುಸ್ತಕಕ್ಕೆ ಬಳಸಿಕೊಳ್ಳಲು ನಿರ್ಧರಿಸಿದ್ದೇವೆ, ಅದಕ್ಕಾಗಿ ನಿಮ್ಮಿಂದ ಫೋಟೊಗಳನ್ನು ತರಿಸಿಕೊಂಡಿದ್ದು" ಅಂದರು. ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ಏಕೆಂದರೆ ಅವರದೇ ಪುಸ್ತಕವನ್ನು ಓದಿ ಕಲಿತು ಅಬ್ಯಾಸಮಾಡಿ ಕ್ಲಿಕ್ಕಿಸಿದ ಚಿತ್ರಗಳು ಕೆಲವು ವರ್ಷಗಳ ನಂತರ ಅವರದೇ ಪ್ರಕಾಶನದ ಮತ್ತೊಂದು ಪುಸ್ತಕಕ್ಕೆ ಬಳಕೆಯಾಗುವುದು, ಅದರ ಮೂಲಕ ಸಾವಿರಾರು ಜನರಿಗೆ ತಲುಪುವ ವಿಚಾರವೇ ಒಂದು ರೀತಿ ನನಗೆ ಥ್ರಿಲ್ ಎನ್ನಿಸುತ್ತಿದೆ.

ಇಂಡಿಯನ್ ಇನ್‍ಸೆಕ್ಟ್ಸ್ ಅಂಡ್ ಆರ್ಕಿಡ್ಸ್ ಪುಸ್ತಕದ ಮುಖಪುಟ

ನಿಮಗೆಲ್ಲರಿಗೂ ಇದು ಅಹ್ವಾನ ಪತ್ರಿಕೆ.

ಇದೇ ಜೂನ್ ಐದರಂದು, ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿಧ್ಯಾಭವನದ ESV Hall ನಲ್ಲಿ ಬಿಡುಗಡೆಯಾಗುತ್ತಿದೆ. ಈ ಪುಸ್ತಕದಲ್ಲಿ ನಾನು ಕ್ಲಿಕ್ಕಿಸಿದ ಹುಳುಗಳ ಫೋಟೊಗಳು, ಅವುಗಳ ವಿವರಗಳಷ್ಟೇ ಅಲ್ಲದೇ ದೇಶದ ಪ್ರಖ್ಯಾತ ಮ್ಯಾಕ್ರೋ ಛಾಯಾಗ್ರಾಹಕರು ಕ್ಲಿಕ್ಕಿಸಿದ ನೂರಾರು ಹುಳುಗಳ ಫೋಟೊಗಳು ಮತ್ತು ಅದರ ವಿವರಗಳು ಈ ಪುಸ್ತಕದಲ್ಲಿವೆ. ಪುಸ್ತಕದ ಹೆಸರು "ಫೀಲ್ಡ್ ಗೈಡ್ ಅಫ್ ಇಂಡಿಯನ್ ಇನ್‍ಸೆಕ್ಟ್". ಇದು ನಿಜಕ್ಕೂ ಒಂದು ಅದ್ಭುತ ಪುಸ್ತಕ. ನೂರಾರು ಹುಳಗಳ ವಿವರ ಸಹಿತ ಚಿತ್ರಗಳಿರುವ ಇದು ನಿಜಕ್ಕೂ ಅದ್ಭುತ ಪುಸ್ತಕ.ಪ್ರತಿಯೊಬ್ಬರ ಮನೆಯಲ್ಲೂ ಇರಬೇಕಾದಂತವುದು. ಇಂಥ ಪುಸ್ತಕವೊಂದು ಮನೆಯಲ್ಲಿದ್ದರೇ ಮಕ್ಕಳು ಸೇರಿದಂತೆ ವಯಸ್ಸಾದ ಹಿರಿಯರಲ್ಲೂ ಪ್ರಕೃತಿ ಬಗ್ಗೆ ಸಹಜವಾಗಿ ಆಸಕ್ತಿ ಹುಟ್ಟಿಸುತ್ತದೆ. ಇನ್ನೂ ಇಂಥ ವಿಚಾರಗಳಲ್ಲಿ ಆಸಕ್ತಿಯಿರುವ ಛಾಯಾಗ್ರಾಹಕರಲ್ಲಿ ಇರಲೇ ಬೇಕಾದ ಪುಸ್ತಕ.


ಈ ಪುಸ್ತಕ ಇದೇ ಜೂನ್ ೫ನೇ ತಾರೀಖಿನಂದು ಸಂಜೆ ೪-೩೦ ಕ್ಕೆ ಬಿಡುಗಡೆಯಾಗುತ್ತಿದೆ. ಬನ್ನಿ ನಾವೆಲ್ಲಾ ಹುಳುಗಳು, ಕಾಡುಹೂಗಳ ಲೋಕಕ್ಕೆ ಜೊತೆಯಾಗಿ ಸಾಗೋಣ.

ಚಿತ್ರಗಳು ಮತ್ತು ಲೇಖನ.
ಶಿವು.ಕೆ

Sunday, May 23, 2010

ನೀವೇ ನೋಡಿಬಿಡಿ!

ಇವತ್ತು ಬೆಳಿಗ್ಗೆ ಏಳುಗಂಟೆಗೆ ಸನ್‍ಫೀಸ್ಟ್ ವರ್ಲ್ಡ್ ಟೆನ್ ಕೆ ಓಟ ಶುರುವಾಗುವ ಮೊದಲೇ ವಿಧಾನಸೌದದ ಮುಂದೆ ಕ್ಯಾಮೆರ ಜೊತೆಗೆ ಸಜ್ಜಾಗಿ ನಿಂತಿದ್ದರೂ ತಲೆಯೆಲ್ಲಿ ಗೊಂದಲ ಶುರುವಾಗಿತ್ತು. ಯಾವ ರೀತಿಯ ಫೋಟೊ ತೆಗೆಯಬೇಕು? ಅಂತ. ಓಟಗಾರರ ಫೋಟೊ ತೆಗೆಯೋಣವೆಂದರೆ ಎಲ್ಲ ಪತ್ರಿಕಾ ಛಾಯಾಗ್ರಾಹಕರೂ ಕೂಡ ಅದನ್ನೇ ಮಾಡುವುದು. ಅವರ ಗಮನವೆಲ್ಲಾ ಪ್ರಖ್ಯಾತ ಓಟಗಾರರ ಮೇಲೆ ಕೇಂದ್ರಿಕೃತವಾಗಿರುವುದು ಖಚಿತ. ನನಗೆ ಇವತ್ತಿನವರೆಗೆ ಪ್ರಖ್ಯಾತರ ಹಿಂದೆ ಮುಂದೆ ಕ್ಯಾಮೆರಾವನ್ನು ಹಿಡಿದುಕೊಂಡು ಓಡುವುದು ನನಗೆ ಅಭ್ಯಾಸವಿಲ್ಲ. ಮತ್ತೆ ಮಾಮೂಲಿ ನಾಗರೀಕರ ವೈವಿಧ್ಯತೆಗಳನ್ನು ಕ್ಲಿಕ್ಕಿಸೋಣವೆಂದರೆ ಅದನ್ನು ಕಳೆದ ವರ್ಷವೇ ಕ್ಲಿಕ್ಕಿಸಿ ನನ್ನ ಬ್ಲಾಗಿನಲ್ಲಿ ಹಾಕಿಬಿಟ್ಟಿದ್ದೇನೆ. ಅದಕ್ಕಿಂತ ಈಗ ಎಷ್ಟೇ ವೈವಿಧ್ಯತೆಯಿದ್ದರೂ ನಮ್ಮ ಓದುಗರೂ ಅದಕ್ಕೆ ಹೋಲಿಸಿ ಅದಕ್ಕಿಂತ ಚೆಂದವಿಲ್ಲವೆಂದು ಹೇಳಿಬಿಡುತ್ತಾರೆ. ಅವರು ಯಾಕೆ ನಾನೇ ಮೊದಲು ನೋಡಿಕೊಂಡಾಗ ಅದೆಷ್ಟೇ ಚೆನ್ನಾಗಿದ್ದರೂ ಅದು ಇಷ್ಟವಾಗುವುದಿಲ್ಲ. ನನಗೇ ಇಷ್ಟವಾಗದಿದ್ದಮೇಲೆ ಬೇರೆಯವರಿಗೆ ಹೇಗೆ ಇಷ್ಟವಾದೀತು? ಅಲ್ವಾ!


ಸರಿ ಮತ್ತೇನು ಮಾಡುವುದು! ಮತ್ತೆ ತಲೆಯಲ್ಲಿ ಗೊಂದಲ. ಅಷ್ಟರಲ್ಲಿ ಅನೇಕ ಪತ್ರಿಕಾ ಛಾಯಾಗ್ರಾಹಕರೂ ಅಲ್ಲಿ ಟಾಳಾಯಿಸತೊಡಗಿದ್ದರು. ಅವರು ಎಲ್ಲಾ ಕಡೆಯೂ ನನಗೆ ಸಿಗುತ್ತಾರೆ ಅದರಲ್ಲೇನು ವಿಶೇಷವೆಂದುಕೊಂಡು ಸುಮ್ಮನಾದೆ. ನನ್ನ ಮನಸ್ಸು ಸುಮ್ಮನಾದರೂ ನನ್ನ ಕಣ್ಣು ಮೊದಲೇ ಚಂಚಲ[ಇದು ನನ್ನ ಶ್ರೀಮತಿಯ ಅಭಿಪ್ರಾಯ]ಹಾಗೆ ನನಗೆ ಬೇಕೋ ಬೇಡವೋ ಅವರನ್ನೇ ನೋಡತೊಡಗಿತ್ತು. ಆಗ ಶುರುವಾಯಿತಲ್ಲ ಅವರ ಆಟ! ಅವರು ಯಾವ ರೀತಿಯ ಫೋಟೋ ತೆಗೆಯುತ್ತಿದ್ದಾರೋ ನನಗಂತೂ ಗೊತ್ತಿಲ್ಲ. ಅಥವ ಅವರೇ ಸ್ವಲ್ಪ ವಿಭಿನ್ನವಾಗಿ ಹೊಸತೇನನ್ನೋ ಕೊಡಬೇಕೆಂಬ ಸಂಕಲ್ಪದಿಂದ ಇಂಥವುಗಳನ್ನೆಲ್ಲಾ ಮಾಡುತ್ತಿದ್ದಾರೋ ಗೊತ್ತಾಗುತ್ತಿಲ್ಲ. ಆದ್ರೆ ನನಗೆ ಅದು ವೈರೈಟಿಯೆನ್ನಿಸತೊಡಗಿತು. ಮತ್ತೇಕೆ ತಡ ಅವರನ್ನೇ ಕ್ಲಿಕ್ಕಿಸು ಅಂತ ನನ್ನ ಮನಸ್ಸು ಹೇಳಿತು. ಮರುಮಾತಿಲ್ಲದೇ ನಾನು ಮತ್ತು ನನ್ನ ಕ್ಯಾಮೆರಾ ಓಟಗಾರರ ಹಿಂದೆ ಮುಂದೆ ಹಿಂಬಾಲಿಸದೇ, ನಮ್ಮ ಛಾಯಾಗ್ರಾಹಕರನ್ನು ಹಿಂಬಾಲಿಸತೊಡಗಿದವು. ಅದರ ಪರಿಣಾಮ! ನಾನು ಮತ್ತೆ ಅದನ್ನು ಬರೆದು ನಿಮಗೆ ಬೇಸರ ತರಿಸಲಾರೆ! ನೀವೇ ನೋಡಿಬಿಡಿ!


ಗೆಲ್ಲಲೇ ಬೇಕೆಂದು ಓಡುತ್ತಿರುವ ಇಬ್ಬರೂ ಓಟಗಾರರ ನಡುವೆ ನಮ್ಮ ವಿಡಿಯೋ ಕ್ಯಾಮೆರಾ ಮ್ಯಾನ್! ನೀವೇ ಹೇಳಿ ಈಗ ಯಾರಿಗೆ ಬಹುಮಾನ!



ಇವರೆಲ್ಲಾ ನಿಮ್ಮ ಫೋಟೋ ತೆಗೆಯುತ್ತಿದ್ದಾರೆ ಒಳ್ಳೇ ಫೋಸ್ ಕೊಟ್ಟುಬಿಡಿ!



ಅವರವರ ಕಾಯಕ ಅವರವಿಗೆ!


ಓಡುವ ಕಾಲುಗಳ ನಡುವೆ ಕ್ಯಾಮೆರಾವೋ? ಅಥವ ಕ್ಯಾಮೆರಾದೊಳಗೆ ಕಾಲುಗಳೋ! ನೀವೇ ಹೇಳಬೇಕು!

ಕಬ್ಬಿಣದ ಗೇಟಿನ ಹೊರಗೆ ಓಕೆ. ಒಳಗ್ಯಾಕೆ?!


ಅದೆಂಥ ತನ್ಮಯತೇ ಈ ಹಿರಿಯ ಛಾಯಾಗ್ರಾಹಕರಿಗೆ!


ಚುಚ್ಚುತ್ತಿರುವ ಕಬ್ಬಿಣದ ತುದಿಯಮೇಲೆ ಕುಳಿತು ಕ್ಲಿಕ್ಕಾಟ!


ಈ ಫೋಟೋದಲ್ಲಿ ಟ್ರಾಫಿಕ್ ಲೈಟಿನ ಜೊತೆಗೆ ಕ್ಯಾಮೆರಾ ಐದನೇ ಲೈಟಾದಂತೆ ಕಾಣುತ್ತದೆಯಲ್ಲವೇ!


ರಸ್ತೆ ವಿಭಜಕದ ಪಕ್ಕಾ ಕುಳಿತ ಈ ಛಾಯಾಗ್ರಾಹಕನಿಗೆ ಅದೆಂಥ ಚಿತ್ರದ ಕನಸಿರಬಹುದು!


ಕ್ಲಿಕ್ಕಿಸೋದು ಬಿಟ್ಟು ಕ್ಯಾಮೆರಾ ಜೊತೆಗೆ ಓಡೋದು ಏಕೆ! ಮುಂದೆ ಬ್ರೇಕಿಂಗ್ ಚಿತ್ರ ಸಿಗಬಹುದೆಂದೋ!

ಕ್ಯಾಮೆರಾ ಮ್ಯಾನ್ ಎಲ್ಲಿ!


ಕ್ಯಾಮೆರಾ ಮತ್ತು ಕ್ಯಾಮೆರಾ ಮ್ಯಾನ್ ಎಲ್ಲಿದ್ದಾನೆ ಅಂತ ನೀವೇ ಹುಡುಕಬೇಕು!

ಇದೆಂಥ ಸರ್ಕಸ್!


ಫೋಟೋ ತೆಗೆಯುತ್ತಿದ್ದಾರೋ, ಅಥವ ಮಲಗಿಬಿಟ್ಟಿದ್ದಾರೋ ನೀವೇ ಹೇಳಬೇಕು!


ಮನೆಯಲ್ಲಿ ಹೀಗೆ ಮಾಡಿದರೆ ಇವರನ್ನು ಹೇಗೆ ಕರೆಯಬಹುದು!
ಇದ್ಯಾವ ಭಂಗಿ!


ಮಕಾಡೆ ಮಲಗಿ ಏನನ್ನು ಕ್ಲಿಕ್ಕಿಸುತ್ತಿದ್ದಾನೋ ನಾನರಿಯೇ!
ರಾತ್ರಿ ಸುಪ್ಪತ್ತಿಗೆಯಲ್ಲಿ ಮಲಗಿದಾಗಲೂ ಇಂಥ ಸುಖವಿರುವುದಿಲ್ಲವೆಂದು ನನ್ನ ಭಾವನೆ!
ಅಲ್ಲೇ ಕ್ಲಿಕ್! ಅಲ್ಲೇ ಬಹುಮಾನವೆನ್ನುವಂತೆ ಅಲ್ಲೇ ಫೋಟೋ ವೀಕ್ಷಣೆ!ಚಿತ್ರಗಳು ಮತ್ತು ಲೇಖನ
ಶಿವು.ಕೆ

Sunday, May 16, 2010

ಬ್ಲಾಗಿಗರ ಕೂಟ.

ಇಪ್ಪತ್ತು ದಿನಗಳ ಹಿಂದೆ ನನ್ನ ಮೊಬೈಲಿಗೆ ಪೋನೊಂದು ಬಂತು. "ಹಲೋ ಸರ್ ಹೇಗಿದ್ದೀರಿ, ನೀವು ಶಿವು ಅಲ್ವಾ, ನಾನು ಉದಯ್ ಇಟಗಿ, ಬೆಂಗಳೂರಿಗೆ ಬಂದಿದ್ದೇನೆ. ನನಗೊಂದು ಆಸೆಯಿದೆ. ನಮ್ಮ ಆತ್ಮೀಯ ಬ್ಲಾಗ್ ಗೆಳೆಯರನ್ನೆಲ್ಲಾ ಒಮ್ಮೆ ಬೇಟಿಯಾಗಬೆಕೆನಿಸುತ್ತದೆ, ನಿಮ್ಮ ಬಳಿ ನಮ್ಮ ಬ್ಲಾಗ್ ಗೆಳೆಯರ ಫೋನ್ ನಂಬರುಗಳಿದ್ದರೇ ಕೊಡಿ" ಎಂದರು. ಅವರು ಕೇಳಿದಾಗ ನನಗಂತೂ ಆಶ್ಚರ್ಯವೇ ಆಯಿತು. ನಮ್ಮ ರಾಜ್ಯದ ಇಟಗಿಯಲ್ಲಿ ಹುಟ್ಟಿ ಬೆಳೆದು ಉದ್ಯೋಗಕ್ಕಾಗಿ ದೂರದ ಲಿಬಿಯಾ ದೇಶದಲ್ಲಿ ಲೆಕ್ಚರರ್ ಆಗಿರುವ ಉದಯ ಸರ್ ಫೋನನ್ನು ನಾನು ನಿರೀಕ್ಷಿಸಿರಲಿಲ್ಲವಾದ್ದರಿಂದ ಒಂದು ರೀತಿಯ ಅಚ್ಚರಿ, ಖುಷಿ ಒಟ್ಟೊಟ್ಟಿಗೆ ಆಗಿತ್ತು. ತಕ್ಷಣವೇ ನನ್ನ ಬಳಿಯಿರುವ ಅನೇಕ ಬ್ಲಾಗ್ ಗೆಳೆಯರ ಫೋನ್ ನಂಬರುಗಳನ್ನು ಮೆಸೇಜ್ ಮಾಡಿದ್ದೆ.

ಮತ್ತೆ ನಾನು ಕೆಲವು ದಿನಗಳು ಕೆಲಸದಲ್ಲಿ ಬ್ಯುಸಿಯಾಗಿಬಿಟ್ಟೆ. ಅವರು ಇಲ್ಲಿ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರೂ ಆಗಾಗ ಫೋನ್ ಮಾಡುತ್ತಿದ್ದರು.


ನಾಲ್ಕು ದಿನಗಳ ನಂತರ ಮತ್ತೆ ಫೋನ್ ಮಾಡಿ "ಕನಕಪುರ ರಸ್ತೆಯಲ್ಲಿರುವ ಹೋಟಲ್ ಅತಿಥಿ ಗ್ರ್ಯಾಂಡ್‍ನಲ್ಲಿ ಮಂಗಳವಾರ ಸಂಜೆ ಸೇರೋಣ ಎಲ್ಲರೂ ಬರುತ್ತಿದ್ದಾರೆ ನೀವು ಕುಟುಂಬ ಸಮೇತರಾಗಿ ಬನ್ನಿ." ಎಂದು ಆಹ್ವಾನವಿತ್ತರು. ಅನೇಕ ಬ್ಲಾಗ್ ಗೆಳೆಯರನ್ನು ಈ ಮೂಲಕ ಬೇಟಿಯಾಗುವ ಅವಕಾಶ ಸಿಕ್ಕಿರುವಾಗ ಬಿಡುವುದುಂಟೆ! ಒಪ್ಪಿಕೊಂಡೆ.


ಪ್ರಕಾಶ್ ಹೆಗಡೆ, ಮಲ್ಲಿಕಾರ್ಜುನ್ ಮತ್ತು ನಾನು ಕೊನೆಯಲ್ಲಿ ತಡವಾಗಿ ಹೋಗಿದ್ದರಿಂದ ಬೇರೆ ಬ್ಲಾಗಿಗರೆಲ್ಲಾ ಆಗಲೇ ಸೇರಿದ್ದರು. ಸಂಪದದ ಹರಿಪ್ರಸಾದ್ ನಾಡಿಗ್, ಚಾಮರಾಜ ಸಾವಡಿಯವರ ಕುಟುಂಬ, ಶಿವಪ್ರಕಾಶ್, ಓಂ ಪ್ರಕಾಶ್, ಡಾ.ಸತ್ಯನಾರಾಯಣ್ ಕುಟುಂಬ, ಪರಂಜಪೆ ಜೊತೆಗೆ ನಾವು ಮೂವರು ಅತಿಥಿಗಳಾಗಿದ್ದರೇ, ಉದಯ ಇಟಗಿ ಅವರ ಶ್ರೀಮತಿಯವರು ಮತ್ತು ಅವರ ಮಗಳು ಭೂಮಿಕ ಅತಿಥೇಯರಾಗಿದ್ದರು. ಪರಸ್ಪರ ಪರಿಚಯ ಉಭಯ ಕುಶಲೋಪರಿಯಿಂದ ಶುರುವಾಗಿ ಅಲ್ಲಿ ಅನೇಕ ಆರೋಗ್ಯಕರ ಚರ್ಚೆಗಳು ಇತ್ತು. ವಿಕಿಪೀಡಿಯ ಬಳಸುವ ವಿಧಾನ ಇತ್ಯಾದಿಗಳ ಬಗ್ಗೆ ಹರಿಪ್ರಸಾದ್ ನಾಡಿಗ್ ವಿವರಿಸಿ ಅದರ ಬಗ್ಗೆ ಇಡೀ ರಾಜ್ಯಾ ಎಲ್ಲಾ ಜಿಲ್ಲೆಯ ವಿಶ್ವವಿದ್ಯಾಲಯಗಳಲ್ಲೂ ಕಾರ್ಯಕ್ರಮ ಆಗುತ್ತಿದ್ದು ಅದರ ಪಲಿತಾಂಶ ಅದ್ಬುತವಾಗಿದೆ ಎನ್ನುವುದನ್ನು ಅಂಕಿಅಂಶ ಸಹಿತ ವಿವರಿಸಿದರು. ಎಪ್ಪತ್ತು ವರ್ಷದ ವೃದ್ಧರು ವಿಕೀಪೀಡಿಯಾ ಬಳಕೆಯಿಂದ ಈಗ ಇಂಟರ್ ನೆಟ್ ಬಳಸಲು ಅಸಕ್ತಿ ತೋರಿರುವುದನ್ನು ವಿವರಿಸಿದರು. ಚಾಮರಾಜಸಾವಡಿಯವರು ಇತ್ತೀಚಿನ ಪತ್ರಿಕೋದ್ಯಮ ಬೆಳವಣಿಗೆ ಬಗ್ಗೆ ಕಳವಳ ವ್ಯಕ್ತಪಡಿಸಿ ಸ್ವಲ್ಪ ಗಂಭೀರ ವಿಚಾರದ ಬಗ್ಗೆ ಮಾತಾಡಿದರೆ, ಡಾ.ಸತ್ಯನಾರಯಣ್ ಸರ್ ತಮ್ಮ ಬ್ಲಾಗಿನ ಇತ್ತೀಚಿನ ಬರಹದ ಬಗ್ಗೆ ಮಾತಾಡಿದರು. ಅದರಲ್ಲಿ ಬೀಡಿ ಸೇದುವ ಪ್ರಕರಣವಂತೂ ಅಲ್ಲಿದ್ದ ಅನೇಕ ಬ್ಲಾಗಿಗರಿಗೆ ತಮ್ಮ ಬಾಲ್ಯದ ಅನುಭವಗಳನ್ನು ಅದರಲ್ಲೂ ಮೊದಲು ಬೀಡಿ ಸಿಗರೇಟು ಸೇದಿದ ಬಗ್ಗೆ ಬರೆಯಲು ಮುಂದಾದರು. ನಡುನಡುವೆ ಪ್ರಕಾಶ್ ಹೆಗಡೆಯವರು ತಮ್ಮ ಮೂಲನಿವಾಸಿಗಳ ಬಗ್ಗೆ ನಾಗು ಬಗ್ಗೆ, ಮತ್ತೆ ಪುಸ್ತಕದ ಬಗ್ಗೆ ಅಲ್ಲಲ್ಲಿ ತಮ್ಮ ಎಂದಿನ ನಗೆ ಚಟಾಕಿಗಳನ್ನು ಹಾರಿಸುತ್ತ ಎಲ್ಲರನ್ನು ರಂಜಿಸುತ್ತಿದ್ದರು. ಬ್ಲಾಗ್ ಎನ್ನುವ ವಿಚಾರ ಮೊದಲು ತಲೆಗೆ ಹೇಗೆ ಬಂತು ಮೊದಲು ಕಬ್ಬಿಣ ಕಡಲೆಯೆನಿಸಿದ್ದ ಅದು ಹೇಗೆ ನಂತರ ಸುಲಭವಾಯಿತು, ಅದಕ್ಕೆ ಸ್ಪೂರ್ತಿಯಾರು.....ಹೀಗೆ ಶುರುವಾಗಿ ಎಲ್ಲರ ಬ್ಲಾಗಿಂಗುಗಳ ತರಲೇ ಆಟಗಳು, ಬರಹಗಳಿಗೆ ಯಾರ್ಯಾರು ಪ್ರೋತ್ಸಾಹ ನೀಡಿದ್ದರು ಎನ್ನುವ ವಿಚಾರಗಳೆಲ್ಲಾ ಚರ್ಚೆಗೆ ಬಂತು. ಪ್ರೋತ್ಸಾಹದ ವಿಚಾರದಲ್ಲಿ ನಾಗೇಶ್ ಹೆಗಡೆಯವರು ಎಲ್ಲಿರುವ ಎಲ್ಲರಿಗೂ ಒಂದಲ್ಲ ಒಂದು ರೀತಿ ಪ್ರೋತ್ಸಾಹ ನೀಡಿರುವುದನ್ನು ತಿಳಿದಾಗ ನಮಗಂತೂ ಅವರ ಬಗ್ಗೆ ಗೌರವ ಇಮ್ಮಡಿಯಾಗಿತ್ತು. ಊಟದ ನಡುವೆ ಕ್ಯಾಷ್ಟ್ ಅವೆ, ಲೈಪ್ ಇಸ್ ಬ್ಯುಟಿಪುಲ್, ಮಾಜಿದ್ ಮಜ್ದಿಯ ಚಿಲ್ಡ್ರನ್ ಆಪ್ ಹೆವನ್, ಬಾರನ್, ಸಾಂಗ್ ಅಪ್ ಸ್ಪ್ಯಾರೋ, ಶ್ಯಾಮ್ ಬೆನಗಲ್ ರವರ ಜರ್ನಿ ಟು ಸಜ್ಜನ್ ಪುರ್....ಕೊನೆಗೆ ಇತ್ತೀಚಿನ ಮೊಗ್ಗಿನ ಮನಸ್ಸು, ನಟ ಪ್ರಕಾಶ್ ರೈ ಇತ್ಯಾದಿ ನಟರ ಬಗ್ಗೆ ಆರೋಗ್ಯಕರವಾದ ಚರ್ಚೆಯೂ ಆಯಿತು. ಎಲ್ಲರು ತಮ್ಮ ತಮ್ಮ ಅನುಭವವನ್ನು ಹಂಚಿಕೊಂಡರು.


ನಾನು ಮತ್ತು ಮಲ್ಲಿಕಾರ್ಜುನ್ ಸುಮ್ಮನಿರಲಿಲ್ಲ ಎಲ್ಲರ ಮಾತುಗಳನ್ನು ಕೇಳುತ್ತಾ ಆಗಾಗ ಅವರ ಸಹಜ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದೆವು. ಉದಯ್ ಇಟಗಿಯವರು ಲಿಬಿಯ ದೇಶ, ಅಲ್ಲಿನ ಅಗ್ಗದ ಪೆಟ್ರೋಲ್, ಜನರ ವಿದ್ಯಾಬ್ಯಾಸದ ಪರಿಸ್ಥಿತಿ, ವಾತಾವರಣದ ಬಿಸಿ, ರಾಜಧಾನಿ ಟ್ರಿಪೋಲಿಯ ಹಸಿರುವಾತವರಣ ಉಳಿದೆಡೆಯಲ್ಲಾ ಮರಳುಗಾಡು, ಅಲ್ಲಿನ ಆರ್ಥಿಕ ಪರಿಸ್ಥಿತಿ, ಎಲ್ಲಾ ವಿಚಾರವನ್ನು ನಮ್ಮೊಂದಿಗೆ ಅಲ್ಲಲ್ಲಿ ಹಾಸ್ಯ ಮಾತುಗಳಲ್ಲಿ ಹಂಚಿಕೊಂಡರು.


ನಡುವೆಯೇ ಚಾಮರಾಜ್ ಸಾವಡಿಯವರ ಇಬ್ಬರು ಮಕ್ಕಳು, ಉದಯ್ ಇಟಗಿಯವರ ಮಗಳು ಭೂಮಿಕ, ಸತ್ಯನಾರಾಯಣ್ ಮಗಳು ಇಂಚಿತ, ಆಟವಾಡಿಕೊಳ್ಳುತ್ತಾ ಇಡೀ ರೂಮಿನ ತುಂಬಾ ಓಡಾಡಿಕೊಂಡು ತಮ್ಮದೇ ಲೋಕದಲ್ಲಿ ಮುಳುಗಿದ್ದರು.


ಉದಯ ಇಟಗಿಯವರ ಮಗಳು ಭೂಮಿಕ..

ಡಾ.ಸತ್ಯನಾರಾಯಣರವರ ಮಗಳು ಇಂಚಿತಮನಸಾರೆ ನಗುವ ಉದಯ ಇಟಗಿ
ನನ್ನ ಜೊತೆ ಶಿವಪ್ರಕಾಶ್
ಚಾಮರಾಜಸಾವಡಿಯವರ ಜೊತೆ ಮಗಳು
ಪ್ರಕಾಶ್ ಹೆಗಡೆ, ಮಲ್ಲಿಕಾರ್ಜುನ್, ಉದಯ್, ಹರಿಪ್ರಸಾದ್ ನಾಡಿಗ್,
ಡಾ.ಸತ್ಯನಾರಾಯಣ, ಪರಂಜಪೆ,


" ಸರ್, ನೀವೆಲ್ಲಾ ಬಂದಿದ್ದು ನನಗಂತೂ ತುಂಬಾ ಖುಷಿಯಾಯ್ತು....ಈ ಸಂಜೆ ತುಂಬಾ ಚೆನ್ನಾಗಿತ್ತು." ಖುಷಿಯಿಂದ ಹೇಳಿದರು ಉದಯ್ ಇಟಗಿ.

"ನಮಗೂ ತುಂಬಾ ಖುಷಿಯಾಗಿದೆ ಸರ್, ನಿಮ್ಮ ಕರೆಯ ನೆಪದಲ್ಲಿ ನಾವು ಚೆನ್ನಾಗಿ ತಿಂದು ಮನಸಾರೆ ಮಾತಾಡಿದ್ದೇವೆ," ನಾನಂದೆ.

" ಹೌದು ಸರ್, ಎಲ್ಲಾ ತುಂಬಾ ಚೆನ್ನಾಗಿತ್ತು. ಮತ್ತೆ ಮುಟ್ಟಾದ ಮೇಲೆ ಸಿಗೋಣ" ಪ್ರಕಾಶ ಹೆಗಡೆಯವರ ಬಾಯಿಂದ ಪಟ್ಟನೆ ಬಂತು ಮಾತು.

"ಏನ್ ಸರ್ ನನಗೆ ಗೊತ್ತಾಗಲಿಲ್ಲ ಮತ್ತೆ ಹೇಳಿ" ಎಂದರು. ಇಟಗಿ.

"ಅದೇ ಸರ್, ಮುಟ್ಟಾದ ಮೇಲೆ ಸಿಗೋಣ" ಮತ್ತೊಮ್ಮೆ ಅವರ ಮಾತಿನ ಒಳ ಅರ್ಥವನ್ನು ಗಮನಿಸಿ ಎಷ್ಟು ನಕ್ಕಿದ್ದೆವೆಂದರೆ, ಅಲ್ಲಿದ್ದ ಹೋಟಲ್ಲಿನ ಬೇರೆ ಜನಗಳೆಲ್ಲಾ ನಮ್ಮತ್ತ ತಿರುಗಿ ನೋಡುವಂತಾಗಿತ್ತು. ಅನೇಕ ಗಹನವಾದ ವಿಚಾರಗಳ ಹಿತಕರವಾದ ಮಾತಿನ ನಾಡುವೆ ಪ್ರಕಾಶ್ ಹೆಗಡೆಯವರ ಇಂಥಹ ಮಾತುಗಳು ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸುತ್ತಿದ್ದವು.

ನಾವೆಲ್ಲಾ ಬ್ಲಾಗಿಗರು.

ಎಲ್ಲರ ಮಾತುಗಳ ನಡುವೆ ಆಂದ್ರ ಶೈಲಿಯ ಸೊಗಸಾದ ಊಟ, ಐಸ್‍ಕ್ರೀಮ್, ಮೊಗಲಾಯ್ ಬೀಡ, ಕೊನೆಗೆ ಗ್ರೂಪ್ ಫೋಟೊ ಇಟಗಿ ಕುಟುಂಬದ ಫೋಟೋ ಇತ್ಯಾದಿಗಳೆಲ್ಲಾ ಸಾಂಗವಾಗಿ ಜರುಗಿ ಒಂದು ಉತ್ತಮ ಸಂಜೆಯನ್ನು ನಮ್ಮ ಆತ್ಮೀಯ ಬ್ಲಾಗ್ ಗೆಳೆಯರ ಜೊತೆ ಕಳೆದಿದ್ದು ನನ್ನ ತುಂಬಾ ಚೆನ್ನಾಗಿತ್ತು.


ಬಿಸಿಲಹನಿ ಬ್ಲಾಗಿನ ಉದಯ ಇಟಗಿಯವರ ಒಂದು ಸೊಗಸಾದ ಇಚ್ಛಾಶಕ್ತಿಯಿಂದ ಒಂದಷ್ಟು ಬ್ಲಾಗ್ ಗೆಳೆಯರು ತಮ್ಮ ನಿತ್ಯದ ದುಗುಡ ದುಮ್ಮಾನಗಳನ್ನು ಮರೆತು ಮನೆಸಾರೆ ನಕ್ಕು ಒಂದು ಒಳ್ಳೆಯ ಊಟವನ್ನು ಮಾಡಿ ಎಲ್ಲರೂ ಬೀಳ್ಕೊಡುವಾಗ ಬ್ಲಾಗ್ ಎನ್ನುವ ಲೋಕದಲ್ಲಿ ಎಷ್ಟು ಸೊಗಸಾದ ಸಂತೃಪ್ತಿಯಿದೆ ಅನ್ನಿಸಿತ್ತು. ಅದಕ್ಕಾಗಿ ಉದಯ ಇಟಗಿಯವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.


[ಕಳೆದೊಂದು ವಾರದಿಂದ ಪ್ರವಾಸ, ಕೆಲಸ ಇತ್ಯಾದಿಗಳಿಂದಾಗಿ ಬೆಂಗಳೂರಿನಲ್ಲಿರಲಿಲ್ಲವಾದ್ದರಿಂದ ಬ್ಲಾಗಿಗೆ ಹೊಸ ಪೋಸ್ಟ್ ಹಾಕುವುದು, ಗೆಳೆಯರ ಬ್ಲಾಗುಗಳನ್ನು ನೋಡುವುದು ಸಾಧ್ಯವಾಗಲಿಲ್ಲ. ಈಗ ಎಲ್ಲವನ್ನು ಒಂದೊಂದಾಗಿ ನೋಡಬೇಕಿದೆ...ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.]

ಚಿತ್ರ ಲೇಖನ

ಶಿವು.ಕೆ.

Monday, May 3, 2010

ನಮಗೆ ಅನ್ಯಾಯವಾಗುತ್ತಿದೆ....


"ಸ್ವಾಮಿ ನೀವು ನಮಗೆ ಅನ್ಯಾಯ ಮಾಡುತ್ತಿದ್ದೀರಿ, ನಿಮ್ಮ ಪಕ್ಷಪಾತತನ ಹೆಚ್ಚಾಗುತ್ತಿದೆ"

ಮಾತನ್ನು ಕೇಳಿ ಸುತ್ತ ನೆರೆದಿದ್ದವರಿಗೆಲ್ಲಾ ಒಂದು ಕ್ಷಣ ಶಾಕ್ ಆಗಿತ್ತು.

ಇಷ್ಟಕ್ಕೂ ಈ ಮಾತನ್ನು ಹೇಳಿದ್ದು ಲಕ್ಷಾಂತರ ಮರಗಳ ಪರವಾಗಿ ಒಂದು ಅಂಗವಿಕಲ ಮರ. ಅದೊಂದು ದೊಡ್ಡ ಸಭೆ.

ಆ ಸಭೆಯಲ್ಲಿ ನೆರೆದಿದ್ದವರೆಲ್ಲಾ ಮಹಾನ್ ಘಟಾನುಘಟಿಗಳೇ. ಒಂದು ಕಡೇ ನೀರು ನಿಂತಿದ್ದರೇ, ಅದರ ಪಕ್ಕದಲ್ಲೇ ಗಾಳಿ ಕಂಡರೂ ಕಾಣದ ಹಾಗೆ ತೇಲುತ್ತಾ ನಿಲ್ಲುತ್ತಾ.. ಕುಳಿತಿತ್ತು. ಭೂಮಿಯೂ ನೆಲದ ಮೇಲೆ ಕುಳಿತಿದ್ದರೇ, ಅದರ ಮೇಲೆ ಅಕಾಶ ನಿಂತಿತ್ತು. ಅವೆರಡರ ನಡುವೆ ಶಾಂತವಾಗಿ ಕುಳಿತಿದ್ದ ಸಮುದ್ರ ಮರಗಳ ಅಹ್ವಾನದ ಮೇರೆಗೆ ಈ ಸಭೆಗೆ ಬಂದಿತ್ತು. ಇಷ್ಟಕ್ಕೂ ಈ ಸಭೆಯನ್ನು ಕರೆದಿದ್ದು ಮರಗಳು. ಇಡೀ ಭೂಮಿಯ ಮರಗಳೆಲ್ಲಾ ತಮಗೆ ಅನ್ಯಾಯವಾಗುತ್ತಿದೆಯೆಂದು, ಹೀಗೆ ಆದರೆ ನಮಗೆ ಉಳಿಗಾಲವಿಲ್ಲ, ನಮಗೆ ನ್ಯಾಯ ದೊರಕಿಸಿಕೊಡಿ ಅಂತ ನ್ಯಾಯ ಕೇಳಲು ಬಂದಿದ್ದವು. ಮರಗಳಿಗೆ ನ್ಯಾಯ ದೊರಕುತ್ತದೆಯೋ ಇಲ್ಲವೇ ನೋಡೋಣವೆಂದು ಭೂಮಿಯ ಪಂಚಭೂತಗಳೂ ಸೇರಿದಂತೆ ಎಲ್ಲವು ಸೇರಿದ್ದವು.

ಪ್ರತಿಯೊಂದು ಆಗುಹೋಗುಗಳನ್ನು ನಿಯಂತ್ರಿಸಿ ಇಡೀ ಪ್ರಪಂಚವನ್ನು ಸುಸ್ತಿತಿಯಲ್ಲಿಡುವ ಜವಾಬ್ದಾರಿಯನ್ನು ಹೊತ್ತಿದ್ದ ಪ್ರಕೃತಿ ದೇವತೆ ಅವತ್ತು ನ್ಯಾಯಾದೀಶನ ಸ್ಥಾನವನ್ನು ಅಲಂಕರಿಸಿತ್ತು. ಸಹಜವಾಗಿ ಯಾರಿಗೂ ಕಾಣದ ಹಾಗೆ ಇರುತ್ತಿದ್ದ ಪ್ರಕೃತಿ ದೇವತೆ ಅವತ್ತು ಮರಗಳು ಸಲ್ಲಿಸಿದ್ದ ಮನವಿಗಾಗಿ ಪ್ರತ್ಯಕ್ಷವಾಗಿತ್ತು.

"ಎಲೈ ಮರವೇ, ನೀನು ನೇರವಾಗಿ ನಿನ್ನ ದೂರು ಸಲ್ಲಿಸುವುದು ಬಿಟ್ಟು ನಮ್ಮನ್ನು ಅಪಾದಿಸುವುದು ಸರಿಯೇ?" ಪ್ರಕೃತಿ ದೇವತೆ ಕೇಳಿತು.

"ಮಹಾಸ್ವಾಮಿ, ನೀವೇ ನೋಡಿ, ಕಳೆದ ವಾರ ಬೆಂಗಳೂರಿನಲ್ಲಿ ಜೋರು ಮಳೆ ಬಿತ್ತಲ್ಲ, ಆಗ ಹೆಚ್ಚು ಬಲಿಯಾಗಿದ್ದು ನಾವು. ಬೆಂಗಳೂರಿನ ಪ್ರತಿಯೊಂದು ರಸ್ತೆಯಲ್ಲಿಯೂ ನಮ್ಮನ್ನು ಉರುಳಿಸಿ ಸಾಯಿಸಲಾಗಿತ್ತು. ಇಷ್ಟೇ ಅಲ್ಲದೇ ಇತ್ತೀಚೆಗೆ ನಡೆಯುತ್ತಿರುವ ಪ್ರತಿಯೊಂದು ವಿಕೋಪಕ್ಕೂ ಈ ಪ್ರಪಂಚದಲ್ಲಿ ನಾವು ಬಲಿಪಶುಗಳಾಗುತ್ತಿದ್ದೇವೆ, ನೀವೇ ನೋಡಿ ಬೆಂಗಳೂರಿನ ಮೆಟ್ರೋ ಸಲುವಾಗಿ, ರಸ್ತೆ ಅಗಲೀಕರಣಕ್ಕಾಗಿ, ಭೂಸ್ವಾಧೀನಕ್ಕಾಗಿ, ಪ್ಲೇಓವರಿಗಾಗಿ".........ಹೀಗೇ ರಾಜ್ಯದ, ದೇಶದ ವಿದೇಶಗಳಲ್ಲಿನ ವಿಧ್ಯಾಮಾನಗಳನ್ನು ಚಿತ್ರಗಳ ಸಹಿತ ಅಂಕಿ ಅಂಶ ನೀಡಿತು ಮರ.

ಅದನ್ನು ನೋಡಿದ ಪ್ರಕೃತಿ ದೇವತೆಗೆ ನಿಜಕ್ಕೂ ಅಶ್ಚರ್ಯ, ದಿಗಿಲು, ಒಟ್ಟಿಗೆ ಆಯಿತು.

"ನಿಮಗೆ ಇಡೀ ಪ್ರಪಂಚದ ಆಗುಹೋಗುಗಳನ್ನು ನಿಯಂತ್ರಿಸುವ ಶಕ್ತಿ ಇದೆ. ಎಲ್ಲೂ ಹೆಚ್ಚು ಕಡಿಮೆಯಾಗದಂತೆ ಸಮತೂಕ ಮಾಡಿಕೊಂಡು ಈ ಜಗತ್ತನ್ನು ಸುಸ್ತಿತಿಯಲ್ಲಿಡುವ ಜವಾಬ್ದಾರಿ ನಿಮ್ಮದು. ಒಂದು ಹುಲ್ಲು ಕಡ್ಡಿಯೂ ಕೂಡ ನಿಮ್ಮ ಅನುಮತಿಯಿಲ್ಲದೇ ಅಲುಗಾಡುವುದಿಲ್ಲ. ಒಂದು ಹುಳು ಪ್ಯೂಪ ಸೇರಿ ಸುಂದರ ಚಿಟ್ಟೆಯಾಗಿ ಬರುವಂತ ಅದ್ಬುತವನ್ನು, ಚಳಿರಾತ್ರಿಯಲ್ಲಿ ಗಾಳಿಯಲ್ಲಿರುವ ಕೋಟ್ಯಾಂತರ ನೀರಿನ ಕಣಗಳನ್ನು ಕತ್ತಲಲ್ಲಿ ಅಷ್ಟಷ್ಟೂ ಒಟ್ಟುಗೂಡಿಸಿ ಒಂದೊಂದೇ ಎಲೆಯ ಮೇಲೆ ನಿದಾನವಾಗಿ ಕತ್ತಲೆಯಲ್ಲೇ ಒಂದೊಂದು ಎಲೆಯ ಮೇಲೆ ಕೂರಿಸಿ, ಮುಂಜಾನೆಗೆ ಸೂರ್ಯನಿಂದ ಅವುಗಳ ಮೇಲೆ ತಿಳಿಯಾದ ಹದವಾದ ತಂಪು ಕಿರಣಗಳಿಂದ ಬಿಸಿಲ ಕೋಲುಗಳನ್ನು ಸೃಷ್ಟಿಸಿ, ನೋಡುಗರ ಕಣ್ಣಿಗೆ ಅದಮ್ಯ ಸೌಂದರ್ಯವನ್ನು ಸೃಷ್ಟಿಸುತ್ತೀರಿ. ಆದ್ರೆ ನಮ್ಮ ವಿಚಾರದಲ್ಲಿ ಏಕೆ ಹೀಗೆ ಅನ್ಯಾಯವಾಗುತ್ತಿದೆ ಮಹಾಸ್ವಾಮಿ?"

ಪ್ರಕೃತಿ ದೇವತೆ ಮರದ ದೂರನ್ನು ಪರಿಶೀಲಿಸಿದಾಗ ಇದೆಲ್ಲದಕ್ಕೂ ಕಾರಣ ಮಳೆ. ಅದರ ಕಡೆಗೆ ತಿರುಗಿ,


"ಮಳೆಯೇ ನಿನ್ನ ಕೆಲಸದಲ್ಲಿ ವ್ಯತ್ಯಾಸವಾಗಿರುವುದರಿಂದ ಈ ಅಚಾತುರ್ಯ ನಡೆದಿದೆಯೆಂದು ನನ್ನ ಅಭಿಪ್ರಾಯ. ಇದಕ್ಕೆ ನಿನ್ನ ಉತ್ತರವೇನು?" ಮಳೆಯನ್ನು ಉದ್ದೇಶಿಸಿ ಕೇಳಿತು ಪ್ರಕೃತಿ ದೇವತೆ.

"ಮಹಾಸ್ವಾಮಿ ಇದಕ್ಕೆ ಖಂಡಿತನಾನು ಕಾರಣನಲ್ಲ, ನಾನು ನನ್ನ ನಿತ್ಯ ಕೆಲಸವನ್ನು ಸರಿಯಾಗಿ ನಿಮ್ಮ ಆದೇಶದಂತೆ ಸರಿಯಾಗಿ ಮಾಡುತ್ತಿದ್ದೇನೆ. ಆದರೂ ಕೆಲವೊಮ್ಮೆ ನನ್ನ ಕೈ ಮೀರಿ ಕೆಲವು ಕಡೇ ಹೆಚ್ಚು ಸುರಿದಾಗ ಹೀಗೆ ಪ್ರವಾಹವಾಗುವುದುಂಟು, ಈ ಮರಗಳು ಬುಡಮೇಲಾಗಿ ಸಾಯುವುದುಂಟು. ಇದನ್ನೆಲ್ಲಾ ನಾನೇ ಮಾಡಿದರೂ ಇದರಲ್ಲಿ ನನ್ನ ಪಾತ್ರವೇನು ಇದಕ್ಕೆಲ್ಲಾ ಕಾರಣ ಈ ಮೋಡಗಳು." ಮೋಡಗಳ ಕಡೆ ಕೈತೋರಿಸಿ ತನ್ನ ವಾದ ಮಂಡಿಸಿತು ಮಳೆ.

ಇದುವರೆಗೂ ಅರಾಮವಾಗಿ ತಮಾಷೆಯಾಗಿ ಮಾತಾಡಿಕೊಂಡಿದ್ದ ಮೋಡವೂ ತನ್ನ ಮೇಲೆ ಗೂಬೆ ಕೂರಿಸುತ್ತಿರುವ ಮಳೆಯ ಮೇಲೆ ಕೋಪ ಬಂದರೂ ಆ ಸಭೆಯಲ್ಲಿ ಅದನ್ನು ತೋರ್ಪಡಿಸುವಂತಿರಲಿಲ್ಲ. ಆದರೂ ಈಗ ಆಗಿರುವ ತಪ್ಪಿಗೆ ಕಾರಣ ನಾನೆಂದು ಎಲ್ಲರೂ ಹೇಳುತ್ತಿದ್ದಾರೆ. ನಾನೇನು ಮಾತಾಡದಿದ್ದಲ್ಲಿ ನಾನೇ ತಪ್ಪಿತಸ್ಥನಾಗಿಬಿಡುತ್ತೇನೆ. ಹಾಗೆ ಪ್ರಾಮಾಣಿಕವಾಗಿ ನೋಡಿದರೆ ನಾನೂ ಈ ಅವಾಂತರಕ್ಕೆ ಕಾರಣನಲ್ಲವಲ್ಲ? ನಾನು ಹೇಗೆ ಇದಕ್ಕೆಲ್ಲಾ ಕಾರಣನಲ್ಲವೆಂದು ಇಲ್ಲಿ ವಿವರಿಸಬೇಕು ಅಂದುಕೊಂಡು,

"ಮಹಾಸ್ವಾಮಿ, ನಾನು ನಿಮ್ಮ ಆಜ್ಞೆಯಂತೆ ಸೂರ್ಯನಬೆಳಕಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಾ, ತಿಳಿಮೋಡ, ಬೆಳ್ಳಿಮೋಡ,......ಹೀಗೆ ಸೌಂದರ್ಯವನ್ನು ಹೊಮ್ಮಿಸುತ್ತಾ ನೋಡುಗರ ಕಣ್ಣನ್ನು ಮನಸ್ಸನ್ನು ಸೂರೆಗೊಳ್ಳುತ್ತಿದ್ದೇನೆ. ಕತೆ ಕಾದಂಬರಿಕಾರರ, ಕವಿಗಳ, ಛಾಯಾಚಿತ್ರಕಾರರ, ಚಿತ್ರಕಲೆಗಾರರ ಕಲೆಗಳಿಗೆ ಸ್ಪೂರ್ತಿ ನೀಡುತ್ತಾ, ಅವರಿಂದ ಅದ್ಭುತ ಕಲಾಕೃತಿ ರಚನೆಗೆ ಕಾರಣನಾಗಿದ್ದೇನೆ. ಅಷ್ಟೇ ಅಲ್ಲದೇ ನೀವು ಹೇಳಿದ ಕಡೆ ಕರಿಮೋಡವಾಗಿ ಸಾಲುಗಟ್ಟಿ ಈ ಮಳೆ ಬೇಕಾದಷ್ಟು ಚೆನ್ನಾಗಿ ಸುರಿಯಲು ಅನುಕೂಲ ಮಾಡಿಕೊಟ್ಟಿದ್ದೇನೆ. ಅಂತದ್ದರಲ್ಲಿ ಈ ಮಳೆ ನನ್ನ ಮೇಲೆ ತಪ್ಪು ಹಾಕಿದೆ. ಆದರೂ ಈಗ ಈತನ ಅಭಿಪ್ರಾಯದಂತೆ ನನ್ನ ಕಡೆ ತಪ್ಪಾಗಿದೆಯೆಂದು ಅನ್ನಿಸಿದರೆ ಅದಕ್ಕೆ ಕಾರಣ ನಾನಲ್ಲ. ಈ ಸಮುದ್ರವೇ ಕಾರಣ" ತಪ್ಪನ್ನು ಸಮುದ್ರ ಮೇಲೆ ಹೊರಿಸಿ ಸುಮ್ಮನಾಯಿತು ಮೋಡ.

ಈಗ ಎಲ್ಲರ ಗಮನವೂ ಸಮುದ್ರದ ಕಡೆಗೆ ಬಿತ್ತು. ಶಾಂತವಾಗಿ ಸುಮ್ಮನೆ ಕುಳಿತಿದ್ದ ಸಮುದ್ರವೂ ದಿಡೀರ್ ಬಂದ ಹೊರೆಯಿಂದ ಈಗ ತಪ್ಪಿಸಿಕೊಳ್ಳಲೇಬೇಕಿತ್ತು.

"ಮಹಾಸ್ವಾಮಿ, ಇಲ್ಲಿ ತಮ್ಮ ತಪ್ಪುಗಳನ್ನು ಹೀಗೆ ಒಬ್ಬರ ಮೇಲೆ ಒಬ್ಬರೂ ಹೊರಿಸುತ್ತಾ ಈಗ ನನ್ನ ತಲೆಗೆ ಕಟ್ಟಿದ್ದಾರೆ. ನಾನು ಪ್ರಪಂಚದಲ್ಲಿನ ಸಕಲ ಜಲಚರಗಳಿಗೂ ಆಸರೆ ನೀಡುತ್ತಾ, ವಿಶ್ವದೆಲ್ಲೆಡೆ ಹರಡಿಕೊಂಡು ಸಾವಿರಾರು ಹಡಗು, ದೋಣಿಗಳು, ಸರಾಗವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣಿಸಲು ಜೀವನದುದ್ದಕ್ಕೂ ಶ್ರಮಿಸುತ್ತಿದ್ದೇನೆ. ನನ್ನೊಳಗೆ ಸೇರಿಕೊಂಡ ನದಿಗಳ ನೀರನ್ನು ಆಗಾಗ ಆವಿರೂಪದಲ್ಲಿ ಸೃಷ್ಟಿಸಿ ಆಕಾಶಕ್ಕೆ ಕಳಿಸಿ ಮೋಡಗಳಾಗುವುದಕ್ಕೆ ಸಹಕರಿಸುತ್ತಿದ್ದೇನೆ. ನಾನು ಈ ಕೆಲಸವನ್ನು ಮಾಡಿದ ಮೇಲೆ ಅದನ್ನು ಮೇಲೆ ಸರಿಯಾದ ಸ್ಥಳಕ್ಕೆ ಕಳಿಸುವ ಜವಾಬ್ದಾರಿ ಈ ಗಾಳಿಯದು ಅದು ಸರಿಯಾಗಿ ಕೆಲಸ ಮಾಡದಿದ್ದ ಮೇಲೆ ಈ ರೀತಿ ಆಚಾತುರ್ಯವಾಗಿರಬಹುದು. ಆದ್ದರಿಂದ ನೀವು ಗಾಳಿಯನ್ನು ವಿಚಾರಿಸಿಕೊಳ್ಳುವುದು ಒಳ್ಳೆಯದು" ಅಂತ ತನ್ನ ವಾದವನ್ನು ಮಂಡಿಸಿತು.

ಇದು ನನ್ನ ಬುಡಕ್ಕೆ ಬರುತ್ತದೆಯೆಂದು ಸಿದ್ದನಾಗಿದ್ದ ಗಾಳಿಯೂ "ಮಹಾಸ್ವಾಮಿ ನಾನು ನನ್ನ ಕೆಲಸವನ್ನು ಸರಿಯಾಗಿಯೇ ನಿರ್ವಹಿಸುತ್ತಿದ್ದೇನೆ. ಆದರೆ ಈಗ್ಗೆ ಸುಮಾರು ಐವತ್ತು ವರ್ಷಗಳಿಂದ ನನ್ನನ್ನು ಈ ಮಾನವರು ಅದೆಷ್ಟು ಕಲುಷಿತಗೊಳಿಸಿದ್ದಾರೆಂದರೆ, ಅವರ ವಾಹನಗಳು, ಕಾರ್ಖಾನೆಗಳು....ಇತ್ಯಾದಿಗಳಿಂದ ಬಿಡುಗಡೆಯಾಗುವ ಹೊಗೆಯಲ್ಲಿ ಪ್ರತಿದಿನ ಟನ್‍ಗಟ್ಟಲೇ ಇಂಗಾಲವನ್ನು ನನ್ನೊಳಗೆ ಸೇರಿಸುತ್ತಿದ್ದಾರೆ. ಇದರಿಂದ ನನ್ನ ಆರೋಗ್ಯ ಸದಾ ಹದಗೆಟ್ಟು ನನ್ನ ಕೆಲಸವನ್ನು ಸರಿಯಾಗಿ ನಿರ್ವಹಿಸಲು ಆಗುತ್ತಿಲ್ಲ ಸ್ವಾಮಿ,"

"ಗಾಳಿಯೂ ಹೇಳುವುದರಲ್ಲಿ ನೂರಕ್ಕೂ ನೂರರಷ್ಟು ಸತ್ಯವಿದೆ ಮಹಾಸ್ವಾಮಿ, ನಾವು ಕುಂಬಕರ್ಣನ ವಂಶದವರು. ನಿನ್ನ ಆಜ್ಞೆಯಂತೆ ನೂರಾರು ವರ್ಷಗಳಿಗೊಮ್ಮೆ ನಾವು ನಿದ್ರೆಯಿಂದ ನಿದಾನವಾಗಿ ಎದ್ದು, ಸಣ್ಣ ಪುಟ್ಟ ಆಘಾತಗಳನ್ನುಂಟು ಮಾಡಿ ಭೂತಾಯಿಯ ಸಮತೋಲನವನ್ನು ಕಾಪಾಡುತ್ತಿದ್ದೆವು. ಆದ್ರೆ ಈ ಮನುಷ್ಯರು ವಾತಾವರಣವನ್ನು ಎಷ್ಟು ಬಿಸಿಗೊಳಿಸುತ್ತಿದ್ದಾರೆಂದರೆ, ಅಂಟಾರ್ಟಿಕದಲ್ಲಿ, ಹಿಮಪ್ರದೇಶದಲ್ಲಿ, ಹಿಮಾಲಯದಲ್ಲಿನ ಹಿಮದ ನೀರ್ಗಲ್ಲುಗಳು ಕರಗುತ್ತಿವೆ, ಮತ್ತಷ್ಟು ನೀರು ಸಮುದ್ರಕ್ಕೆ ಸೇರಿ ಅನೇಕ ಭೂಭಾಗಗಳು ಮುಳುಗುತ್ತಿವೆ, ಈ ಬಿಸಿಯಿಂದಾಗಿ ಸಮುದ್ರದ ಕೆಳಗೆ, ಭೂಭಾಗದ ಒಳಗೆ ನೆಮ್ಮದಿಯಾಗಿ ನಿದ್ರಿಸುತ್ತಿರುವ ನಾವೆಲ್ಲಾ ಈ ಬಿಸಿಯಿಂದಾಗಿ ದಿಡೀರ್ ಅಂತ ಬೆಚ್ಚಿಬಿದ್ದು ಎದ್ದುಬಿಡುತ್ತೇವೆ. ಆಗ ನಮಗೆ ಗೊತ್ತಿಲ್ಲದ ಹಾಗೆ ಪ್ರಪಂಚದೆಲ್ಲೆಡೆ ಅಲ್ಲೋಲಕಲ್ಲೋಲವಾಗಿಬಿಡುತ್ತದೆ ಸ್ವಾಮಿ," ಅಲ್ಲಿಯವೆರೆಗೂ ಸುಮ್ಮನಿದ್ದ ಚಂಡಮಾರುತ, ಸುನಾಮಿಗಳು ತಮ್ಮ ಅಹವಾಲುಗಳನ್ನು ಸಲ್ಲಿಸಿದವು.


"ಹೌದು ಮಹಾಸ್ವಾಮಿ ಇದಕ್ಕೆಲ್ಲಾ ಕಾರಣ ಈ ಮನುಷ್ಯರು, ಹೆಣ್ಣು, ಹೊನ್ನು ಮಣ್ಣಿನ ಆಸೆಯಿಂದಾಗಿ ಎಲ್ಲಾ ಕಡೆ ಮರಗಳನ್ನು ಕತ್ತರಿಸುತ್ತಿದ್ದಾರೆ, ತಮ್ಮ ಅಧುನಿಕ ಬದುಕಿಗಾಗಿ ಇರುವ ನೀರನ್ನೆಲ್ಲಾ ಕಲುಷಿತಗೊಳಿಸುತ್ತಿದ್ದಾರೆ, ಗಾಳಿಗೆ ವಿಷಾನಿಲಗಳನ್ನು ಸೇರಿಸುತ್ತಿದ್ದಾರೆ. ಯಾವ ರೀತಿಯಿಂದಲೂ ಸಾಯಿಸಲಾಗದಂತ ಪ್ಲಾಸ್ಟಿಕನ್ನು ಟನ್‍ಗಟ್ಟಲೇ ತಯಾರಿಸುತ್ತಿದ್ದಾರೆ, ಇದಕ್ಕೆಲ್ಲಾ ಕಾರಣ ಈ ಮನಷ್ಯ, ಅವನ ದುರಾಸೆಗಳು, ಆಧುನಿಕ ಐಬೋಗಗಳು, ಎಲ್ಲವನ್ನೂ ಇವತ್ತೇ ಅನುಭವಿಸಿಬಿಡಬೇಕೆನ್ನುವ ದುರಾಸೆ............ಈ ಮನುಜನಿಂದಾಗಿಯೇ ನಾವೆಲ್ಲಾ ನಮ್ಮ ನಮ್ಮ ಕರ್ತವ್ಯಗಳನ್ನು ಅರೋಗ್ಯಕರವಾಗಿ ನಿರ್ವಹಿಸಲು ಆಗುತ್ತಿಲ್ಲ. ಅವನನ್ನು ಮಟ್ಟಹಾಕಬೇಕು" ಅಲ್ಲಿ ನೆರೆದಿದ್ದ ಎಲ್ಲವೂ ಒಕ್ಕೊರಲಿನಿಂದ ತಮ್ಮ ಮನವಿಯನ್ನು ಸಲ್ಲಿಸಿದವು.


ಸಭೆಯಲ್ಲಿ ಅಲ್ಲಿಯವರೆಗೆ ಎಲ್ಲರ ವಿಚಾರಗಳು, ತಪ್ಪುಗಳು, ಅಹವಾಲುಗಳು, ಮನವಿಗಳನ್ನು ಕೇಳುತ್ತಾ ಕುಳಿತಿದ್ದ ಪ್ರಕೃತಿ ದೇವತೆ, ಇದಕ್ಕೆಲ್ಲಾ ಕಾರಣ ಈ ನವರಸಗಳನ್ನು ಹೊಂದಿ, ನವಆಟಗಳನ್ನು ಆಡುತ್ತಾ ಮೆರೆಯುತ್ತಿರುವ ಮನುಜನೇ ಕಾರಣವೆಂದು ಗೊತ್ತಾದ ಮೇಲೆ ಚಿಂತಿಸತೊಡಗಿತು. ಇದಕ್ಕೆ ಪರಿಹಾರವೇನು? ಎಂದು ಯೋಚಿಸುತ್ತಿರುವಾಗಲೇ...ದೂರದಿಂದ ಕೂಗು ಬಂತು.

"ಮಹಾಸ್ವಾಮಿ, ಬೇಗನೇ ತಪ್ಪಿಸಿಕೊಳ್ಳಿ, ಇಲ್ಲದಿದ್ದರೇ ನಮಗೆ ಉಳಿಗಾಲವಿಲ್ಲ. ದೂರದಿಂದ ಅಣ್ವಸ್ತ್ರವೊಂದು ನಮ್ಮ ಸಭೆಯ ಕಡೆಗೆ ಹಾರಿಬರುತ್ತಿದೆ. ಅದನ್ನು ಕಂಡುಹಿಡಿದಿದ್ದು ಈ ಮನುಷ್ಯನೇ.....ನಾವೆಲ್ಲಾ ಈಗ ಓಡದಿದ್ದಲ್ಲಿ ನಾಶವಾಗಿಬಿಡುತ್ತೇವೆ.... ದೂರದಿಂದ ಕೂಗು ಕೇಳಿಬಂತು.

"ಆರೆರೆ....ಇದೇನಿದು, ಇಡೀ ವ್ಯವಸ್ಥೆಯನ್ನು ನಿಯಂತ್ರಿಸುವ ನನಗೆ ಇದ್ಯಾವುದು ನನಗೆ ತಿಳಿಯದಂತಾ ಅಣ್ವಸ್ತ್ರ,? ಅದನ್ನು ನಿಯಂತ್ರಿಸಲು ನೀವೆಲ್ಲಾ ಸೇರಿ ಪ್ರಯತ್ನಿಸಿ," ಆಜ್ಞಾಪಿಸಿತು ಪ್ರಕೃತಿ ದೇವತೆ.

"ಇಲ್ಲ ಮಹಾಸ್ವಾಮಿ, ಇದು ನಮ್ಮ ಕೈಮೀರಿದ್ದು, ಏಕೆಂದರೆ ಅದನ್ನು ನಾವು ಸೃಷ್ಟಿಸಿದ್ದಲ್ಲ. ಈ ಮಾನವ ಸೃಷ್ಟಿಸಿದ್ದು. ಅದರ ಶಕ್ತಿ ನಮ್ಮಳತೆಯನ್ನು ಮೀರಿದ್ದು. ಅದನ್ನು ನಿಯಂತ್ರಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ" ಅಲ್ಲಿ ಸೇರಿದ್ದ, ಸಮುದ್ರ, ಮೋಡ, ಗಾಳಿ, ಮರಗಳು, ನೀರು, ಸುನಾಮಿ, ಚಂಡಮಾರುತ, ಆಕಾಶ, ಭೂಮಿ ಎಲ್ಲವೂ ಒಕ್ಕೊರಲಿನಿಂದ ಹೇಳಿದವು.

ಈ ಮಾತನ್ನು ಕೇಳಿ ಅದುವರೆಗೂ ಎಲ್ಲರ ಅಹವಾಲುಗಳನ್ನು ಕೇಳುತ್ತಿದ್ದ ತನ್ನೆಲ್ಲಾ ಶಕ್ತಿಯನ್ನು ಉಪಯೋಗಿಸಿ ದೂರದಿಂದಲೇ ಅದನ್ನು ನಿಸ್ಕ್ರೀಯಗೊಳಿಸಲು ಪ್ರಯತ್ನಿಸಿತು. ಅದರ ಯಾವ ಶಕ್ತಿಯೂ ಕೂಡ ಅಣ್ವಸ್ತ್ರವನ್ನು ನಿಯಂತ್ರಿಸಲಾಗಲಿಲ್ಲ....ಕೊನೆಗೆ ನಿಸ್ಸಾಯಕನಾಗಿ ಸೋತು ನೋವು ವಿಷಾದದಿಂದ ಪ್ರಕೃತಿದೇವತೆ ಕಣ್ಮರೆಯಾಗಿಬಿಟ್ಟಿತು. ತಮ್ಮ ಒಡೆಯನೇ ಹೀಗೆ ಕಣ್ಮರೆಯಾಗಿ ತಪ್ಪಿಸಿಕೊಂಡಿದ್ದು ನೋಡಿ ದಿಗಿಲಿನಿಂದ ತಮ್ಮೆಡೆಗೆ ತಮ್ಮ ನಾಶಕ್ಕೆ ಬರುತ್ತಿರುವ ಆಣ್ವಸ್ತ್ರ, ರಾಸಾಯನಿಕ ಅಸ್ತ್ರಗಳನ್ನು ನೋಡುತ್ತಾ ಸಾವಿರಾರು ಮರಗಳು, ನೀರು ಗಾಳಿ, ಮೋಡ, ಸಾಗರ, ಮಳೆ, ಭೂಮಿ, ಆಕಾಶಗೆಳೆಲ್ಲಾ ಅನಾಥರಾಗಿ ನಿಂತುಬಿಟ್ಟವು.
[ಈ ಪುಟ್ಟ ಕತೆಯನ್ನು ವಿಶ್ವ ಭೂದಿನ ಆಚರಣೆ ಸಲುವಾಗಿ ಏಪ್ರಿಲ್ ೨೨ರಂದು ಬ್ಲಾಗಿಗೆ ಹಾಕಲು ಬರೆದಿದ್ದೆ. ಕಾರಣಾಂತರದಿಂದ ಬ್ಲಾಗಿಗೆ ಹಾಕಿರಲಿಲ್ಲ. ಈಗ ಬ್ಲಾಗಿಗೆ ಹಾಕಿದ್ದೇನೆ. ನೀವು ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ...]

ಚಿತ್ರ ಮತ್ತು ಲೇಖನ
ಶಿವು.ಕೆ