Sunday, August 30, 2009

ಟೋಪಿ ಬೇಕಾ ಟೋಪಿ.



ರಂಜಾನ್ ಹಬ್ಬವೋ ಅಥವಾ ಬಕ್ರೀದ್ ಸಂಭ್ರಮವೋ-ಸಾವಿರಾರು ಮುಸಲ್ಮಾನ ಬಂಧುಗಳು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಚಿತ್ರ ಅದ್ಭುತ ಕಲಾಕೃತಿಯಂತೆ ಕಾಣಿಸುತ್ತದೆ. ನೆಲಕ್ಕೆ ಬಾಗಿದ ಅವರ ತಲೆಗಳು ಅಕಾಶಕ್ಕೆ ಕಣ್ಣು ಮಿಟುಕಿಸುವಂತೆ ಕಾಣಿಸುತ್ತವೆ. ಟೋಪಿ ಎಂದಾಗಲೆಲ್ಲಾ ತಕ್ಷಣ ನನಗೆ ನೆನಪಾಗುವುದು ಈ ಸಾಲುಟೋಪಿಗಳ ಕಲಾಕೃತಿಯೇ!

ಟೋಪಿಯ ಸಹವಾಸಕ್ಕೆ ಬಿದ್ದುದು ಯಾವಾಗ ಎಂದು ನಿಶ್ಚಿತವಾಗಿ ಹೇಳಲಾರೆ. "ಟೋಪಿ ಬೇಕೆ ಟೋಪಿ, ಬಣ್ಣದ ಟೋಪಿ" ಎಂದು ಚಿಕ್ಕಂದಿನಲ್ಲಿ ಆಡಿದ ಆಟ ಈಗಲೂ ನೆನಪಿದೆ. ಈ ನೆನಪೇ ಇವತ್ತಿನ ಟೋಪಿ ವ್ಯಾಮೋಹಕ್ಕೆ ಕಾರಣವಿರಬಹುದೇ? ಗೊತ್ತಿಲ್ಲ. ಈಗ, ಟೋಪಿ ಬೇಕೆ ಟೋಪಿ ಎಂದು ಯಾರಾದರೂ ಕೇಳಿದರೆ ಮಾತನಾಡುವುದು ನಾನಲ್ಲ. ನನ್ನ ಕ್ಯಾಮೆರಾ! ಈ ಟೋಪಿಗಳಿಗಾಗಿ ಕತ್ತಿಗೆ ಕ್ಯಾಮೆರಾ ನೇತುಹಾಕಿಕೊಂಡು ಎಲ್ಲೆಲ್ಲಿ ಅಲೆದಿರುವೆನೋ?

ಹಾಂ, ನಾನೀಗ ಹೇಳಹೊರಟಿರುವುದು ನನ್ನ ಟೋಪಿ ಸಾಹಸಯಾತ್ರೆ ಬಗ್ಗೆ ಅಲ್ಲ.[ಟೋಪಿ ಚಿತ್ರಗಳಿಗಾಗಿ ಯಾವ ಟ್ರೋಫಿಯನ್ನು ನಿರೀಕ್ಷಿಸುತ್ತಿಲ್ಲ]. ನನ್ನ ಆಸಕ್ತಿ ಏನಿದ್ದರೂ ಟೋಪಿ ಬೆನ್ನು ಹತ್ತಿದ ನಾನು ಅವುಗಳ ಕುರಿತು ಕಲೆಹಾಕಿದ ಸ್ವಾರಸ್ಯಕರ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಬಗೆಗೆ.

ಪ್ರಾಚೀನ ಕಾಲದ ಜನ ಪ್ರಾಣಿಗಳ ಚರ್ಮ ತೆಗೆದು ತಮ್ಮ ತಲೆಯ ಮೇಲೆ ಹಾಕಿಕೊಳ್ಳುತ್ತಿದ್ದರಂತೆ. ಇದು ಇತರ ಪ್ರಾಣಿ ಅಥವ ಮನುಷ್ಯನಿಂದ ರಕ್ಷಿಸಿಕೊಳ್ಳಲು ಮಾಡಿಕೊಂಡ ವಿಧಾನವಾಗಿತ್ತು. ಪ್ರಾಚೀನ ಗ್ರೀಸ್ ಮತ್ತು ರೋಮ್‌ನಲ್ಲಿ ಗುಲಾಮರನ್ನು ಬಿಡುಗಡೆ ಮಾಡಿದಾಗ ವಿಮುಕ್ತಿಯ ಸೂಚನೆಯಾಗಿ ಅವರ ತಲೆಗೊಂದು ಟೋಪಿಯನ್ನು ಹಾಕಿ ಕಳಿಹಿಸುತ್ತಿದ್ದರಂತೆ. ಅದು ಸ್ವತಂತ್ರದ ಟೊಪ್ಪಿ! ಹಾಗೆಯೇ ಹೆಂಗಸರು ತಮ್ಮ ತಲೆಯನ್ನು ಮುಚ್ಚಿಕೊಳ್ಳಲು ಬಿದಿರಿನ ವಸ್ತುಗಳು, ಎಲೆಗಳಿಂದ ಮಾಡಿದ ಆಕೃತಿಗಳನ್ನು ಬಳಸುತ್ತಿದ್ದರು. ಹದಿನೇಳನೇ ಶತಮಾನದ ಕೊನೆಯಲ್ಲಿ, ಪುರುಷರ ಟೊಪ್ಪಿಗಳ ಅನುಕರಣೆಬಿಟ್ಟು ಮಹಿಳೆಯರಿಗೆಂದೇ ಟೋಪಿಗಳನ್ನು ರೂಪಿಸಲಾಯಿತು. ಮಿಲ್ಲಿನರ್ ಎಂಬಾತ ೧೮೦೦ರ ಮದ್ಯದಲ್ಲಿ ಕೊಳವೆಗಳನ್ನು ಬಳಸಿ ಕಾಗದ, ಕಾರ್ಡ್‌ಬೋರ್ಡ್, ಹುಲ್ಲು, ಕುದುರೆ ರೋಮಗಳಿಂದ ಮಹಿಳೆಯರ ಟೋಫಿ ತಯಾರಿಸುತ್ತಿದ್ದನು. ನಂತರ ವೆಲ್ವೆಟ್ ಟೋಪಿಗಳು ಬಳಕೆಗೆ ಬಂದವು.

ಹತ್ತೊಂಬತ್ತನೇ ಶತಮಾನದ ಮದ್ಯದಲ್ಲಿ ಮಹಿಳೆಯರ ಟೋಪಿಗಳು ಹೂವು, ಗರಿಗಳು, ರಿಬ್ಬನ್, ಇತ್ಯಾದಿಗಳಿಂದ ಅಲಂಕೃತಗೊಂಡವು. ಮಹಿಳೆಯರು ಕೂದಲು ಕತ್ತರಿಸಿಕೊಳ್ಳುವುದು ಫ್ಯಾಶನ್ ಆಗತೊಡಗಿದಾಗ ಅದಕ್ಕೆ ತಕ್ಕಂತೆ ಟೋಪಿಗಳು ಬದಲಾಗಿವೆ.

೧೯೧೪ರಿಂದ ೧೯೧೮ರವರೆಗೆ ಯುದ್ಧಕಾಲದಲ್ಲಿ ಟೋಪಿಗಳ ಬೇಡಿಕೆ ಮತ್ತು ಬಳಕೆ ಕಡಿಮೆಯಾಗಿತ್ತು. ಯುದ್ಧಾನಂತರ ಮಿಲಿಟರಿಗೆ ಸಂಭಂದಿಸಿದಂತೆ ಸುರಕ್ಷತೆಗಾಗಿ ಟೋಪಿಗಳು ತಯಾರಾದವು. ೧೯೬೦ರ ನಂತರ ಪುರುಷರ ಮತ್ತು ಮಹಿಳೆಯರ ತಲೆಯ ಕೂದಲನ್ನು ಅನೇಕ ಆಕಾರದಲ್ಲಿ ಶ್ರದ್ಧೆಯಿಂದ ಅಲಂಕರಿಸುವ ಬೆಳವಣಿಗೆ ಉಂಟಾಯಿತು. ವಸ್ತ್ರಗಳೊಂದಿಗೆ ಟೋಪಿಯೂ ಒಂದು ಸ್ವಾಭಾವಿಕ ಧಿರಿಸಾಗಿ ಬೆಳವಣಿಗೆ ಕಂಡಿತು. ೮೦-೯೦ರ ದಶಕದಲ್ಲಂತೂ ಟೋಪಿಗಳ ಸಾಮ್ರಾಜ್ಯ ಅತ್ಯುನ್ನತ ಸ್ಥಾನಕ್ಕೇರಿತು. ವೇಲ್ಸ್ ರಾಜಕುಮಾರ ಹೊಸ ಬಗೆಯ ಟೋಪಿ ಧರಿಸುವುದರಲ್ಲಿ ಉತ್ಸಾಹಿಯಾಗಿದ್ದ ಕಾರಣ ತಯಾರಕರು ಸಾವಿರಾರು ಹೊಸ ಶೈಲಿಯ ಟೋಪಿಗಳನ್ನು ಮಾರುಕಟ್ಟೆಗೆ ತಂದರು.

ಸಮವಸ್ತ್ರವಾಗಿ, ಅಲಂಕಾರಿಕ ವಸ್ತುವಾಗಿ ಘನತೆಯ ಗುರುತಾಗಿ, ಆಟೋಟಗಳ ತಲೆದಿರಿಸಾಗಿ ಮತ್ತು ಸುರಕ್ಷತೆಯ ಗುರಾಣಿಯಾಗಿ ಟೋಪಿಗಳ ಸ್ವರೂಪವಿದೆ. ಗಣಿಗಳಲ್ಲಿ ಕೆಲಸ ಮಾಡುವ ಕೂಲಿಯವನಿಗೆ ಸಿಗುವ ಸಂಬಳದ ನೂರು ಪಟ್ಟು ಬೆಲೆಯ ಹೆಲ್ಮೆಟ್ಟನ್ನು ಅವನು ಧರಿಸಿರುವ ಉದಾಹರಣೆ ಇದೆ. ಹೆಲ್ಮೆಟ್ಟಿಗೆ ಅಂಟಿಕೊಂಡ ದೊಡ್ಡ ಲೈಟ್ ಈ ಕಾಲಮಾನದ ಬೆರಗೇ ಹೌದು.

ರಾಜ-ಮಹಾರಾಜರ ಕಾಲದಲ್ಲಿ ಕಿರೀಟದ ಸ್ವರೂಪವೇ ಅವರವರ ಹುದ್ದೆಗೆ ಕನ್ನಡಿ ಹಿಡಿಯುತ್ತಿತ್ತು. ಜೋಕರ್‌‍ಗೆ ತ್ರಿಕೋನಾಕಾರದ ಟೋಪಿ, ಸಾಂತಕ್ಲಾಸ್‌ಗೆ ವಾಲಾಡುವ ವಿಚಿತ್ರವಾದ ಬಿಳಿ ಟೋಪಿ. ಟೋಪಿಗೆ ಅಲಂಕಾರ ಮಾಡುವುದೇ ಇಂದು ದೊಡ್ಡ ಉದ್ಯಮ.

ಈಗಲೂ ಕರಾವಳಿ ಕಡೆ ನೋಡಿ; ಅಡಿಕೆಪಟ್ಟೆಯ ಟೋಪಿ ತೊಡುವ ಕೂಲಿ ಕಾರ್ಮಿಕರಿದ್ದಾರೆ. ಅದೇ ಆಡಿಕೆಪಟ್ಟೆಯ ಟೋಪಿಗೆ ಅಧುನಿಕ ರೂಪಕೊಟ್ಟು, ಕೌಬಾಯ್ ಟೋಪಿಯ ಆಕರಕ್ಕೆ ತಂದು ಮಾರುಕಟ್ಟೆ ಅಂಗಡಿಗೆ ತಂದಿಟ್ಟಿದ್ದೂ ಆಗಿದೆ. ಅಡಿಕೆ ಟೋಪಿ ನೆತ್ತಿಗೆ ತಂಪು ಎನ್ನುವುದು ಮಾರಾಟದ ತಂತ್ರ.

ರಾಜನ ಕಿರೀಟ, ಗಾಂಧಿ ಟೋಪಿ, ತಿಲಕರ ಟೋಪಿ, ಶಿವಾಜಿ ಟೋಪಿ, ಕೌಬಾಯ್ ಟೋಪಿ, ವಿಷ್ಣುವರ್ಧನ್ ಟೋಪಿ, ರವಿಚಂದ್ರನ್ ಟೋಪಿ,[ಅದರೊಳಗೆ ಐಸ್ ಗಡ್ಡೆಗಳನ್ನು ಹಾಕಿ ಮಂಡೆಯನ್ನು ತಣ್ಣಗೆ ಮಾಡಿಕೊಳ್ಳಬಹುದು]. ಮಂಕಿ ಟೋಪಿ, ದೊಡ್ಡ ದೊಡ್ಡ ಕಂಪನಿಗಳ ಡಿಸೈನರ್ ಟೋಪಿ....ಟೋಪಿ ನಾಗರಿಕತೆ ಹೇಗೆಲ್ಲಾ ರೂಪಾಂತರಗೊಂಡಿದೆ ನೋಡಿ.

ಹೆದ್ದಾರಿಯಲ್ಲಿ ಬರ್ರನೆ ಸಾಗುವ ವಾಹನಗಳಲ್ಲಿ ಓಡಾಡುವವರ ಟೋಪಿ ಆಗೀಗ ಹಾರುತ್ತಲೇ ಇರುತ್ತದೆ. ಒಮ್ಮೆ ಟೋಪಿ ಹಾರಿದರೆ, ಮತ್ತೆ ಅದು ಸಿಗುವುದು ಕಷ್ಟ. ಅಂಥ ಟೋಪಿಗಳನ್ನೆಲ್ಲಾ ಕಲೆಹಾಕಿ ಪುಟ್‌ಪಾತ್ ಬದಿಯಲ್ಲಿ ಮಾರುವ ಹುಡುಗರು ನಮ್ಮ ನಡುವೆ ಇದ್ದಾರೆನ್ನುವುದು ಸೋಜಿಗ. "ಟೋಪಿ ಹಾಕುವುದು" ಎಂಬ ನುಡಿಗಟ್ಟಿಗೆ ಏನೆಲ್ಲಾ ಅರ್ಥವಿದೆ ಅಲ್ಲವೇ?.

ಗೆಳೆಯರೆ, ಜುಲೈ ೨೦೦೯ ತಿಂಗಳ ಮಯೂರ ಮಾಸಪತ್ರಿಕೆಯಲ್ಲಿ ಟೋಪಿ ಚಿತ್ರಗಳ ಜೊತೆಗೆ ಈ ಲೇಖನ ಪ್ರಕಟವಾಗಿತ್ತು. ಲೇಖನ ಓದಿಲ್ಲದವರಿಗಾಗಿ ಮತ್ತೆ ಅದನ್ನೇ ಇಲ್ಲಿ ಹಾಕಿದ್ದೇನೆ. ಹಾಗೂ ಹೊಸದಾಗಿ ಇನ್ನೊಂದು ಸುತ್ತಿನ ಹೊಸ ಟೋಪಿಗಳನ್ನು ನಿಮಗಾಗಿ ಕೊಡುತ್ತಿದ್ದೇನೆ. ಛಾಯಾಕನ್ನಡಿ ಮೊದಲ ವರ್ಷ ಮುಗಿದು ಎರಡನೆ ವರ್ಷ ಪ್ರಾರಂಬಿಸುವ ಹಂತದಲ್ಲಿ ಮೊದಲಿಗೆ ಟೋಪಿಗಳಿಂದ ಪ್ರಾರಂಭಿಸುತ್ತಿದ್ದೆನೆಂದು ಬೇಸರಿಸಬೇಡಿ, ಇಷ್ಟವಿದ್ದವರು ಟೋಪಿ ಹಾಕಿಕೊಳ್ಳಬಹುದು.


ಸ್ಕೇಟಿಂಗ್ ಟೋಪಿ..



ಸ್ಕೇಟಿಂಗ್ ಟೋಪಿ ಹಾಕಿಕೊಂಡ ಮಕ್ಕಳು ಸಂಜೆ ಸಮಯದಲ್ಲಿ ಎಷ್ಟು ಹುರುಪಿನಿಂದ ಅಭ್ಯಾಸ ಮಾಡುತ್ತಿದ್ದಾರೆ ನೋಡಿ...



ವಿವೇಕನಂದ ಟೋಪಿ.


ನೇಪಾಳಿಗಳ ಟೋಪಿ.!



ಮಿಲಿಟರಿ ಟೋಪಿ...!


ತುಪ್ಪಳದ ಈ ಟೋಪಿಯೊಳಗೆ ನಮ್ಮ ಪ್ರಸ್ತುತ ಸಚಿವರ ತಲೆಯೂ ಸೇರಿದೆ...ಯಾರ ತಲೆಯೆಂದು ನೀವೆ ಹೇಳಿ!


ಸ್ವದೇಶಿ ಮತ್ತು ಚೀನಿ ಆಡುಗೆ ಟೋಪಿ..


ಈ ಟೋಪಿಯನ್ನು ಬೆಂಗಳೂರಿನ ವರ್ಲ್ಡ್ ಟೆನ್ ಕೆ ನಲ್ಲಿ ಕ್ಲಿಕ್ಕಿಸಿದ್ದು. ಇದು ಜೋಕರ್ ಟೋಪಿ ಇರಬಹುದೇ?

ನಾನು ಕ್ಲಿಕ್ಕಿಸಿದ ವೈವಿಧ್ಯಮಯ ಟೋಪಿಗಳನ್ನು ಹಿಂದಿನ ಸರಣಿಯಲ್ಲಿ ನೋಡುವ ಆಸೆಯಿದ್ದರೇ ನೀವು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ....
ನೋಡಿದ ಮೇಲೆ ಇಷ್ಟವಾದರೆ ಒಂದು ಪ್ರತಿಕ್ರಿಯೆ ತಿಳಿಸಿ.
ಚಿತ್ರ ಮತ್ತು ಲೇಖನ.
ಶಿವು.ಕೆ ARPS.

Saturday, August 22, 2009

ಬ್ಲಾಗ್ ಮಾಯಾಲೋಕದಲ್ಲಿ ಎರಡನೇ ವರ್ಷಕ್ಕೆ ಅಂಬೆಗಾಲಿಡುತ್ತಾ....



"ಹಲೋ, ಶಿವುರವರಾ....ನಾನು ಮೋಹನ್. ನೀವು ಮದುವೆ ಫೋಟೊ ತೆಗೆಯುತ್ತೀರಾ? " ಕೇಳಿದರು.

ನಾನು ಹೌದೆಂದೆ.

"ನಮ್ಮದೊಂದು ಮದುವೆ ಕಾರ್ಯಕ್ರಮವಿದೆ ಫೋಟೋಗ್ರಫಿ ಮಾಡಿಕೊಡ್ತೀರಾ...?" ಅಂತ ಒಂದು ಫೋನ್ ಕಾಲ್ ಬಂತು. ನಾನು ಎಂದಿನಂತೆ ಆಯ್ತು ಸರ್ ಮಾಡಿಕೊಡ್ತೀನಿ ಅಂತ ಒಪ್ಪಿಕೊಂಡೆ.


"ನೋಡಿ ಶಿವು, ನನಗೆ ಫೋಟೋಗಳೆಲ್ಲಾ ಸಹಜವಾಗಿರಬೇಕು. ಯಾರನ್ನೂ ಹೀಗೆ ನಿಲ್ಲಿ ಹಾಗೆ ಬನ್ನಿ ಅನ್ನದೇ ಅವರು ಹೇಗಿರುತ್ತಾರೆ ಹಾಗೆ ಫೋಟೋ ತೆಗೆಯಬೇಕು" ಅಂದರು

ಈಟೀವಿಯಲ್ಲಿ ನ್ಯೂಸ್ ಚೀಪ್ ಆಗಿದ್ದ ಜಿ.ಎನ್.ಮೋಹನ್‍ರವರು. ಈ ರೀತಿ ಸಹಜವಾದ ಫೋಟೋಗ್ರಫಿ ಬೇಕೆಂದು ಕೇಳಿದ್ದರಲ್ಲಿ ನನಗೆ ಆಶ್ಚರ್ಯವಾಗಲಿಲ್ಲ. ಬದಲಾಗಿ ನನಗೆ ಇಂಥ ಫೋಟೋಗ್ರಫಿ ಖುಷಿಕೊಡುತ್ತಿರುತ್ತವೆ. ಮತ್ತು ನಮ್ಮ ಕ್ರಿಯಾಶೀಲತೆಯನ್ನು ಓರೆಗೆ ಹಚ್ಚಲು ಇದೊಂದು ಸದವಕಾಶ ಅಂದುಕೊಂಡು ಒಪ್ಪಿಕೊಂಡೆ. ಮದುವೆ ಮುಗಿಯಿತು. ನಾನು ತೆಗೆದ ಫೋಟೋಗಳನ್ನು ಆಯ್ಕೆಮಾಡಲು ಮೋಹನ್ ಸರ್ ನಮ್ಮ ಮನೆಗೆ ಬಂದರು. ನೋಡಿಹೋದರು. ಮದುವೆ ಫೋಟೋ ಅಲ್ಬಂ ಸಿದ್ದವಾಯಿತು. ನನ್ನ ಹೊಸ ಪ್ರಯೋಗ ಅವರಿಗೆ ಇಷ್ಟವಾಯಿತು. ಅವರಿಗೆ ಇಷ್ಟವಾಗಿದ್ದರಿಂದ ನನಗೂ ಖುಷಿಯಾಗಿತ್ತು. ಈ ನಡುವೆ ಮದುವೆ ಫೋಟೋಗಳಲ್ಲದೇ ಬೇರೆ ರೀತಿಯಲ್ಲಿ ನಾನು ತೆಗೆದ ಫೋಟೋಗಳನ್ನು ಅವರು ನೋಡಿದ್ದರು. ಒಂದು ದಿನ

"ನೀವ್ಯಾಕೆ ಒಂದು ಬ್ಲಾಗ್ ಅಂತ ತೆರೆಯಬಾರದು? ನೀವು ತೆಗೆದ ಫೋಟೋಗಳನ್ನು, ಮತ್ತು ಬರಹಗಳನ್ನು ನಿಮ್ಮದೇ ಬ್ಲಾಗಿನಲ್ಲಿ ಹಾಕಿದರೆ ವಿಶ್ವದಾದ್ಯಂತ ನಮ್ಮ ಕನ್ನಡಿಗರು ನೋಡುತ್ತಾರೆ" ಅಂದರು.

ಅವರು ಹೇಳಿದ ಮೇಲು ನಾನು ಈ ಬ್ಲಾಗ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಅವರು ನನ್ನಲ್ಲಿ ಅದೇನು ಗುರುತಿಸಿದರೋ ಗೊತ್ತಿಲ್ಲ ಇನ್ನೊಮ್ಮೆ ತಮ್ಮ ಲ್ಯಾಪ್‍ಟಾಪ್ ತಂದು ಅದರೊಳಗೆ ತಮ್ಮ ಅವಧಿ ಬಗ್ಗೆ ಅವು ತಲುಪುವ ಬಗ್ಗೆ ಇನ್ನಿತರ ಅನೇಕ ವಿಚಾರಗಳನ್ನು ಹೇಳಿ,

" ನಮ್ಮ ಮೇಪ್ಲವರ್ ಆಫೀಸಿಗೆ ಬನ್ನಿ. ಅಲ್ಲಿ ನಿಮಗೆ ನಾನು ನಿಮ್ಮದೇ ಒಂದು ಬ್ಲಾಗ್ ತೆರೆದುತೋರಿಸಿಕೊಡುತ್ತೇನೆ." ಅಂದರು.

ನಾನು ಒಂದು ದಿನ ಹೋದೆ. ಅವರು ತೆರೆದುಕೊಟ್ಟ ಬ್ಲಾಗ್ ನನಗೆ ಆಪರೇಟ್ ಮಾಡಲು ಬರಲಿಲ್ಲ. ಅದನ್ನು ಅಲ್ಲಿಗೆ ಬಿಟ್ಟೆ.


ಮತ್ತೊಂದು ತಿಂಗಳು ಕಳೆಯಿತು. ಈ ಬ್ಲಾಗ್ ಲೋಕವೆನ್ನುವುದು ಎಲ್ಲಾದಿನಪತ್ರಿಕೆಗಳಲ್ಲಿ ಗೆಳೆಯರಲ್ಲಿ ಸದಾ ಚಲಾವಣೆಯಲ್ಲಿದ್ದರಿಂದ ನಾನು ಇದರ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಕೊನೆಗೊಂದು ದಿನ ನನ್ನದೇ ಒಂದು ಬ್ಲಾಗ್ ಸ್ಪಾಟ್ ಅಂತ ಮಾಡಿಕೊಂಡು ಅದಕ್ಕೆ ಛಾಯಾಕನ್ನಡಿ ಅಂತ ಹೆಸರಿಟ್ಟೆ. ಆದೇ ಖುಷಿಯಲ್ಲಿ ಮೋಹನ್ ಸರ್‌ಗೆ ತಕ್ಷಣ ಫೋನ್ ಮಾಡಿ "ಸಾರ್ ನಾನು ಒಂದು ಬ್ಲಾಗ್ ಮಾಡಿದ್ದೇನೆ. ಅದರ ಹೆಸರು ಛಾಯಾಕನ್ನಡಿ ಅಂತ ಚೆನ್ನಾಗಿದೆಯಾ" ಕೇಳಿದೆ. "ವೆರಿಗುಡ್ ಹೆಸರು ಚೆನ್ನಾಗಿದೆ ಮುಂದುವರಿಸಿ" ಅಂದರು ಅವತ್ತು ದಿನಾಂಕ 24-8-2008. ಈಗ ಸರಿಯಾಗಿ ಒಂದು ವರ್ಷವಾಯಿತು.


ಅಂದಿನಿಂದ ಇವತ್ತಿನವರೆಗೆ ನಡೆದು ಬಂದ ದಾರಿಯಲ್ಲಿ ಮೂರು ಕವನಗಳು ಸೇರಿದಂತೆ ೭೦ ಲೇಖನಗಳನ್ನು ಬ್ಲಾಗಿಗೆ ಹಾಕಿದ್ದೇನೆ. ಸರಾಸರಿ ಐದು ದಿನಕ್ಕೊಂದರಂತೆ ಹಾಕಿದ ಚಿತ್ರಗಳಲ್ಲಿ ಮತ್ತು ಲೇಖನಗಳಲ್ಲಿ ತಿರುಳೆಷ್ಟು, ಜೊಳ್ಳೆಷ್ಟು, ಯಾವುದು ಭಾರ, ಹಗುರ, ಹೀಗೆ ನಾನೇ ಹಿಂತಿರುಗಿ ನೋಡಿ ಅವಲೋಕಿಸಿದಾಗ ಕೆಲವೊಂದು ಆಂಶಗಳು ಗಮನಕ್ಕೆ ಬಂದವು. ಮೊದಲಿಗೆ ನಾನು ಈ ಬ್ಲಾಗ್ ಲೋಕಕ್ಕೆ ಹೊಸತನ್ನು ಕೊಡುವ ಪ್ರಯತ್ನದಲ್ಲಿ ಆಧಾರವಾಗಿ ನಾನು ಕ್ಲಿಕ್ಕಿಸಿದ ಫೋಟೋಗಳನ್ನು ಆನೇಕ ಲೇಖನಗಳಲ್ಲಿ ಬಳಸಿಕೊಂಡಿದ್ದೇನೆ. ಅದು ಮೊದಲಿಗೆ ನೀವೆಲ್ಲಾ ನನ್ನತ್ತ ತಿರುಗಿನೋಡಲು ಈ ಫೋಟೋಗಳು ಸಹಕಾರಿಯಾದವೆಂದೆ ಹೇಳಬಹುದು. ನೀವು ನನ್ನ ಫೋಟೋಗಳನ್ನು ಅದೆಷ್ಟೇ ಮೆಚ್ಚಿ ಹೊಗಳಿದರೂ ಎಲ್ಲಾ ಲೇಖನಗಳಿಗೂ ಫೋಟೊಗಳಿಲ್ಲದೇ ನಾನು ಬರಹವೆನ್ನುವ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವ ಅಂತ ಯೋಚಿಸಿದಾಗ ಪಲಿತಾಂಶ ಸೊನ್ನೆ ಎಂದೇ ಹೇಳಬಹುದು. ಆದರೂ ಕೆಲವು ಪ್ರಯತ್ನಗಳನ್ನು ಖುಷಿಯಿಂದ ಮಾಡಿದ್ದೇನೆ.

ನಾನು ಬರೆದ ಅನೇಕ ಲೇಖನಗಳಲ್ಲಿ ಟೋಪಿಗಳ ಸರಣಿ, ಭೂಪಟ ಸರಣಿಗಳ ಗಿಮಿಕ್ಕುಗಳು, ಚಿಟ್ಟೆ-ಪತಂಗ, ಪಕ್ಷಿಗಳ ಪ್ರಯೋಗಾತ್ಮಕ ಚಿತ್ರಲೇಖನಗಳ ಯಶಸ್ಸಿಗೆ ಫೋಟೋಗಳು ಮುಖ್ಯ ಕಾರಣವಾದ್ದರಿಂದ ಅಲ್ಲಿ ನನ್ನ ಬರವಣಿಗೆಯ ಚಾಪು ಏನು ಇರಲಿಲ್ಲವೆಂದೇ ಹೇಳಬಹುದು. ಅವುಗಳನ್ನು ಬಿಟ್ಟು ನಾನು ಈ ಒಂದು ವರ್ಷದ ದಾರಿಯಲ್ಲಿ ಇಷ್ಟಪಟ್ಟ ಹತ್ತು ಬರಹಗಳು ಇವು.


೧೦. ಮಾಲ್ಗುಡಿ ಡೇಸ್ ಮಿಂಚು ಮಲ್ಲೇಶ್ವರಂ ರೈಲು ನಿಲ್ದಾಣ.

ನಮ್ಮ ಮೆಚ್ಚಿನ ರೈಲುನಿಲ್ದಾಣದ ಪ್ಲಾಟ್‍ಫಾರಂನಲ್ಲಿ ನಿತ್ಯ ಸಂಜೆ ನಾನು ಮತ್ತು ನನ್ನಾಕೆ ಇಲ್ಲಿ ಓಡಾಡುವಾಗ ಆಗಿದ್ದ ಆನುಭವಗಳಿಂದಾಗಿ ಅದೇ ಇಷ್ಟಪಟ್ಟು ಬರೆಸಿಕೊಂಡ ನನ್ನ ಮೊದಲ ಲೇಖನವಾದರೂ ಪೂರ್ತಿ ಯಶಸ್ಸಿನ ಪಾಲನ್ನು ಫೋಟೋಗಳು ಕಸಿದುಕೊಂಡವು.


೯. ಹಳೆ ಮನೆಯ ನೆನಪುಗಳು....ಹೊಸ ಮನೆಯ ಕನಸುಗಳು..

ಇದೂ ಕೂಡ ನೆನಪು..ಕನಸುಗಳ ತಳಹದಿಯಲ್ಲಿ ಬರೆದಿದ್ದಾದರೂ ಪೂರ್ತಿ ಯಶಸ್ಸಿನಲ್ಲಿ ಸ್ವಲ್ಪವನ್ನು ಫೋಟೋಗಳು ಲೇಖನಕ್ಕೆ ಬಿಟ್ಟುಕೊಟ್ಟವು.


೮. ವಾರಕೊಮ್ಮೆ ಯಶವಂತಪುರ ಸಂತೆ.

ಇಲ್ಲಿಯೂ ಕೂಡ ನಾವಿಬ್ಬರೂ ಪ್ರತಿಭಾನುವಾರ ಆ ಸಂತೆಗೆ ಹೋಗುತ್ತಿದ್ದುದರಿಂದ ಅದರ ಆನುಭವಗಳನ್ನು ಚಿತ್ರಗಳ ಸಹಿತ ಬರೆದಿದ್ದೆ. ಬರೆಯುವಾಗ ನಾನು ನಕ್ಕಿದ್ದೆ. ಓದುವಾಗ ನೀವು ನಕ್ಕಿರುತ್ತೀರಿ ಅಂದುಕೊಳ್ಳುತ್ತೇನೆ. ಈ ಲೇಖನದಿಂದಾಗಿ ಕೆಲವು ಬ್ಲಾಗು ಮತ್ತು ಬ್ಲಾಗಿನಾಚೆಗಿನ ಹೆಣ್ಣುಮಕ್ಕಳ ಆಕ್ಷೇಪಣೆಗಳಿಗೆ ಒಳಗಾದರೂ ನಾನು ಇಷ್ಟಪಟ್ಟಿದ್ದ ಲೇಖನಗಳಲ್ಲಿ ಇದು ಒಂದು.


೭. ಇವು ಎಲ್ಲಿ ಕಾಣಿಸಿದ್ರೂ ನಾಯಿಗಳು ಅಲ್ಲೇ ಕಾಲೆತ್ತಿಬಿಡುತ್ತವೆ ಸರ್.....

ಇದು ಹೊಸ ಲೇಖನ ಮತ್ತು ಬರೆಯುವಾಗಿನ ಖುಷಿ ಎಂಥದ್ದು ಅನ್ನುವುದನ್ನು ತೋರಿಸಿಕೊಟ್ಟ ಪುಟ್ಟ ಲೇಖನ. ಅದಕ್ಕೆ ತಕ್ಕಂತೆ ಆದ ಆನುಭವಕ್ಕಾಗಿ ಆ ನಂಬರ್ ಪ್ಲೇಟ್ ಕಲಾವಿದನಿಗೆ ನನ್ನ ಧನ್ಯವಾದಗಳು.


೬. ಯಾರ್ರೀ...ಟೀ...ಟೀ....ಟೀ.......

ಏನನ್ನೋ ಬರೆಯಲು ಹೋಗಿ ಮತ್ತೆಂಥದ್ದೋ ಅನುಭವ ಪಡೆದುಕೊಂಡ ಲೇಖನವಿದು. ಸುಮ್ಮನೇ ಸರಳವಾಗಿ ಅವರ ನಿತ್ಯ ದಿನಚರಿಯ ವಿಚಾರವನ್ನು ಬರೆಯಲು ಅವರ ಹಿಂದೆ ಬಿದ್ದಾಗ ಆದ ಅನುಭವಗಳು, ಕೇಳಿದ ಮಾತು ಈಗಲು ನನ್ನಲ್ಲಿ ಗುನುಗುನಿಸುತ್ತಿವೆ. ಪ್ರತಿಯೊಂದು ವೃತ್ತಿಯಲ್ಲೂ ಅವುಗಳದೇ ಆದ ಆಳ, ಆಗಲ, ಉದ್ದ, ಎತ್ತರವಿರುತ್ತದೆ ಅಂತ ಗೊತ್ತಾಗಿದ್ದು ಇವರ ಒಡನಾಟದಿಂದ. ಇಲ್ಲಿಯೂ ಕೆಲವು ಫೋಟೋಗಳನ್ನು ಬಳಸಿಕೊಂಡರೂ ಲೇಖನವನ್ನು ನೀವು ಮೆಚ್ಚಿದ್ದರೇ ಅದು ಬರಹದಿಂದ ಮಾತ್ರವೇ ಹೊರತು ಫೋಟೋಗಳಿಂದಲ್ಲ ಅಲ್ಲವೇ..?


೫. ನನ್ ಹಿಂಬದಿ ಕಣ್ಣು ಒಡೆದೊಯ್ತು....ಅಮೇಲೆ...ಏನೇನಾಯ್ತು...?

ಸುಮಾರು ಒಂದು ತಿಂಗಳು ನಾನು ನನ್ನ ಗಾಡಿಯ ಬಲಬದಿಯ ಮಿರರ್ ಇಲ್ಲದೇ ಓಡಾಡುತ್ತಿರುವಾಗ ಅನ್ನಿಸಿದ್ದನ್ನೂ ಹಾಗೇ ನೇರವಾಗಿ ಅಕ್ಷರ ರೂಪಕ್ಕಿಳಿಸಿದ್ದೆ. ಆಹಾ....ಈ ಲೇಖನ ಬರೆಯುವಾಗಿನ ಮಜವೇ ಬೇರೆ. ಈ ಲೇಖನವನ್ನು ಓದಿ ನೀವೆಲ್ಲರೂ ನನಗೆ ಮಹಾ ರಸಿಕತನ ಪಟ್ಟ ಕೊಟ್ಟುಬಿಟ್ಟಿರಿ. ಆರೆರೆ..ನನ್ನಲ್ಲೂ ರಸಿಕತನವಿದೆಯಲ್ಲವೇ ಅಂತ ನನಗೇ ಗೊತ್ತಾಗಿದ್ದು ಈ ಲೇಖನದಿಂದ. ಮತ್ತೆ ಈ ಲೇಖನವನ್ನು ಇದುವರೆಗೂ ನನ್ನಾಕೆಗೆ ಓದುವ ಅವಕಾಶ ನೀಡಿಲ್ಲ.


೪. ಬಾಲ್ಡಿ ತಲೆ ಮನುಷ್ಯನಿಗಾಗದೇ ಪ್ರಾಣಿ, ಪಕ್ಷಿ, ಮರಗಳಿಗೆ ಆಗುತ್ತಾ....!

ಭೂಪಟವೆನ್ನುವ ಹೊಸ ಫೋಟೋ ಕಾನ್ಸೆಪ್ಟುಗಳಿಗಾಗಿ ಈ ಲೇಖನವನ್ನು ಬರೆದಿದ್ದೆ. ನಾನು ಬರವಣಿಗೆಯಲ್ಲಿ ಸಕ್ಕತ್ ಮಜಕೊಟ್ಟ ಲೇಖನವಿದು. ಕಟೀಂಗ್ ಷಾಪ್‍ನವನ ಮಾತುಗಳನ್ನು ಅವನ ಬಾಯಿಂದ ಕೇಳುವಾಗ ಅದನ್ನು ಹಾಗೆ ಅಕ್ಷರ ರೂಪಕ್ಕೆ ತರುವಾಗ ತುಂಬಾ ಖುಷಿಪಟ್ಟಿದ್ದೇನೆ.


೩. ಹಿರಿಯಜ್ಜನಿಗೆ ಕತೆ ಹೇಳಿದ ಕರಿಬೇವು.

ಚುಟುಕು ಕತೆಯನ್ನು ಬರೆಯಬೇಕೆನ್ನುವ ಆಸೆ ಮನದಲ್ಲಿ ಮೂಡಿದಾಗ "ವಿಶ್ವ ಹಿರಿಯರ ದಿನಕ್ಕಾಗಿ" ಬರೆದ ಈ ನಾನು ಬರೆದ ಲೇಖನಗಳಲ್ಲಿ ಮೂರನೆ ಸ್ಥಾನದಲ್ಲಿ ನಿಲ್ಲುತ್ತದೆ.


೨. ನಾ ನಿನ್ನ ಮದುವೆಯಾಗೋಲ್ಲ ಅಂದೆ....ಅವಳು ಬಹ್ಮಕುಮಾರಿಗೆ ಸೇರಿದಳು....

ನನ್ನದೇ ಬದುಕಿನ ಕತೆಯನ್ನು ಹಾಗೇ ನೇರವಾಗಿ ಬರೆಯುವಾಗಿನ ಆತಂಕ, ನಲುಗಾಟ, ದಿಗಿಲು, ಖುಷಿ, ಯಾರೇನು ಅಂದುಕೊಳ್ಳುತ್ತಾರೋ ಅನ್ನುವ ಭಯ, ಎಲ್ಲವನ್ನೂ ಅನುಭವಿಸಿದ ಒಂದು ಭಾವಾನಾತ್ಮಕ ಲೇಖನವಿದು. ಮತ್ತು ಬರೆದ ಮೇಲೆ ತುಂಬಾ ನಿರಾಳವೆನಿಸಿ ಅದೇ ಗುಂಗಿನಲ್ಲಿ, ದೇಹ ಮತ್ತು ಮನಸ್ಸು ಹಗುರತ್ವವನ್ನು ಅನುಭವಿಸಿದ್ದು ಈ ಲೇಖನದಿಂದಲೇ... ಇಂಥ ಅನುಭವ ನೀಡಿದ ಈ ಲೇಖನಕ್ಕೂ ಮತ್ತು ಅತಿಹೆಚ್ಚು ಪ್ರತಿಕ್ರಿಯೆಗಳು[೭೦] ಅತಿಹೆಚ್ಚು ಬಾರಿ ನೋಡಿದ ಬ್ಲಾಗ್ ಗೆಳೆಯರಿಗೂ ನನ್ನ ಹೃತ್ಫೂರ್ವಕ ನಮನಗಳು.


೧. ಈ ದೇಹದಿಂದ ದೂರನಾದೆ ಏಕೆ ಆತ್ಮನೇ....ಈ ಸಾವು ನ್ಯಾಯವೇ ?

ಬ್ಲಾಗ್ ಲೋಕವೆನ್ನುವ ಮಾಯಾಲೋಕಕ್ಕೆ ಕಾಲಿಟ್ಟ ಮೇಲೆ ಪುಟ್ಟ ಕತೆಯನ್ನು ಬರೆಯಬೇಕೆನ್ನುವ ಆಸೆಯೆಂದ ಈ ಕತೆಯನ್ನು ಬರೆದಿದ್ದೆ. ರೈಲ್ವೇ ನಿಲ್ದಾಣ ಒಡನಾಟ ನನಗೆ ಯಾವಾಗಲು ಇದ್ದುದ್ದರಿಂದ ಕಥೆಯ ಸ್ಥಳವಾಗಿ ರೈಲ್ವೇ ನಿಲ್ದಾಣವನ್ನೇ ಬಳಸಿಕೊಂಡು ಕುರುಡ, ಅಂಗವಿಕಲ ಹುಡುಗಿ, ಮತ್ತೊಬ್ಬಳು ತಂಗಿ ಮೂರೇ ಪಾತ್ರದಾರಿಗಳಿರುವ ಈ ಕತೆ ನನ್ನ ಇದುವರೆಗಿನ ಬರಹಗಳಲ್ಲೇ ನನಗೆ ತುಂಬಾ ಇಷ್ಟವಾದದ್ದು. ಬರೆಯುವಾಗ ಸ್ವಲ್ಪ ಎಚ್ಚರ ತಪ್ಪಿದ್ದರೂ ಭಾವುಕತೆ ಎನ್ನುವುದು ಉಮ್ಮಳಿಸಿ ಬಂದುಬಿಡುವ ಅಪಾಯದಿಂದ ಪಾರಾದ ಈ ಕತೆಯನ್ನು ನಾನೇ ಆಗಾಗ ಓದಬೇಕೆನ್ನಿಸುವಷ್ಟು ಇಷ್ಟವಾಗುತ್ತದೆ. ಯಾರಾದರೂ ಇದುವರೆಗಿನ ನಿಮ್ಮ ಮೆಚ್ಚಿನ ಮತ್ತು ಮೊದಲ ಸ್ಥಾನದ ಬರಹ ಯಾವುದೆಂದು ಕೇಳಿದರೆ ನಾನು ಖಂಡಿತ ಇದನ್ನೇ ಆಯ್ಕೆಮಾಡುತ್ತೇನೆ.


ಇವುಗಳ ಜೊತೆಗೆ ಪುಟ್ಟ ಪುಟ್ಟ ಪುಟಾಣಿ ಸಂತೋಷಗಳು, ತಂಗಿ ಇದೋ ನಿನಗೊಂದು ಪತ್ರ, ಕೊನೇದು ಹೆಲಿಕಾಪ್ಟರು..ತವರುಮನೆ ಕಡೀಕೆ ತಿರೀಕತ್ತು, ನಿಮ್ಮ ಮೂಗು ಆರ್ಡರ್ ಕೊಟ್ಟು ಮಾಡಿಸಿದಂತಿದೆಯಲ್ವೇ?, ನನ್ನಪ್ಪನ್ನ ಕರ್ಕೊಂಡು ಬರ್ತೀನಿ ತಾಳು, ಮಾಡಲ್ ಒಂದೆ ಆದ್ರೆ ತಂದೆ ತಾಯಿ ಬೇರೆ, ನಿಮ್ಮೆಂಗುಸ್ರು.....ಪಕ್ಕದ ಮನೆಯ ಹೆಂಗಸ್ರೂ...., ನಾಚಿಕೆಯಿಲ್ಲದ ಪಾರಿವಾಳಗಳು.........ಇತ್ಯಾದಿ. ಹಾಗೆ ನನ್ನ ವೃತ್ತಿ ಜೀವನದ ಆನುಭವಗಳ ಸರಮಾಲೆಯೊಂದು ಪುಸ್ತಕ ರೂಪ ಪಡೆಯುತ್ತಿದೆ. ಇವನೆಲ್ಲಾ ಮರೆಯಲು ಸಾಧ್ಯವೇ?


ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವಂತೆ ನಾನು ಬರೆದ ಲೇಖನಗಳ ವಿಚಾರವಾಗಿಯೇ ಮಾತಾಡುತ್ತಿದ್ದೇನೆ ಅಂದುಕೊಳ್ಳಬೇಡಿ. ಒಮ್ಮೆ ಇವನ್ನೆಲ್ಲಾ ಅವಲೋಕಿಸಿ ಬೇರೆ ಬ್ಲಾಗುಗಳ ಬರಹ, ಓದಿದ ಕತೆಗಳು, ಲೇಖನಗಳನ್ನು ಗಮನಿಸಿದಾಗ ಹೊರಗಿನ ಪುಸ್ತಕ ಪ್ರಪಂಚದಲ್ಲಿ ಎಂಥೆಂಥ ಪ್ರಯೋಗಗಳಾಗುತ್ತಿವೆ! ಅವುಗಳ ನಡುವೆ ನಾನು ಅಂಬೆಗಾಲಿಡುತ್ತಿದ್ದೇನೆ ಅನ್ನಿಸಿದ್ದು ಸತ್ಯ. ಅದಕ್ಕಾಗಿ ನಾನು ಮತ್ತಷ್ಟು ಓದಬೇಕಿದೆ. ಓದುತ್ತಾ ಕಲಿಯಬೇಕಿದೆ. ಕಲಿಕಲಿತು ಜೊತೆಗೆ ನಲಿಯುತ್ತಾ ಹೊಸದರತ್ತ ತೊಡಗಿಸಿಕೊಳ್ಳಬೇಕಿದೆ.


ಬ್ಲಾಗ್ ಲೋಕದ ಗೆಳೆಯರಾದ ನೀವು ನನ್ನ ಫೋಟೋಗಳನ್ನು ಮೆಚ್ಚಿದ್ದೀರಿ. ಬರೆದ ಲೇಖನಗಳನ್ನು ಓದಿ ಇಷ್ಟಪಟ್ಟಿದ್ದೀರಿ, ಮೆಚ್ಚಿದ್ದೀರಿ, ನಕ್ಕಿದ್ದೀರಿ ನನ್ನನ್ನೂ ನಗಿಸುತ್ತಿದ್ದೀರಿ, ತಪ್ಪಾದ ಕಡೆ ಹೀಗಲ್ಲಾ ಹಾಗೆ ಅಂತ ತಿದ್ದಿ ಕೈಹಿಡಿದು ನಡೆಸುತ್ತಿದ್ದೀರಿ. ಬ್ಲಾಗ್ ಲೋಕಕ್ಕೆ ಪ್ರತ್ಯಕ್ಷವಾಗಿ ಎಳೆತಂದ ಜಿ.ಎನ್.ಮೋಹನ್‍ರವರಿಗೆ ಈ ಕ್ಷಣದಲ್ಲಿ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತಾ, ನಾನು ಏನೇ ಗೀಚಿದರೂ ಉತ್ಸಾಹದಿಂದ ಓದಿ ಬೆನ್ನುತಟ್ಟುವ ನಿಮಗೆಲ್ಲಾ ನನ್ನ ನಮನಗಳನ್ನು ಸಲ್ಲಿಸುತ್ತಾ, ನನ್ನ ಒಂದು ವರ್ಷದ ಛಾಯಾಕನ್ನಡಿ ಎರಡನೇ ವರ್ಷಕ್ಕೆ ತನ್ನ ಪುಟ್ಟ ಹೆಜ್ಜೆಗಳನ್ನಿಡುತ್ತಿದೆ..........ಮುಂದೆಯೂ ಹೀಗೆಯೇ ಕೈಹಿಡಿದು ನಡಿಸಿ......


ಎಲ್ಲಾ ಬ್ಲಾಗ್ ಗೆಳೆಯರಿಗೂ ಗೌರಿ ಮತ್ತು ಗಣೇಶ ಹಬ್ಬದ ಶುಭಾಶಯಗಳು.



ಧನ್ಯವಾದಗಳು.
ಶಿವು.ಕೆ.

Sunday, August 16, 2009

ಅಣ್ಣಾ...ಬೇಡ ಕಣೋ, ನನ್ಗೆ ಭಯವಾಗುತ್ತೇ......


"ನಮಗೆ ಸ್ನಾನಕ್ಕೆ ಹಾಟ್ ವಾಟರ್ ಬೇಕಲ್ಲ?" ನಾನು ಕೇಳಿದೆ.

ಆತ ನಮ್ಮಿಬ್ಬರನ್ನು ಆಶ್ಚರ್ಯದಿಂದ ನೋಡಿದ. ಬಹುಶಃ ನನ್ನ ಕೇಳುವಿಕೆಯೇ ಅವನಿಗೆ ವಿಚಿತ್ರವೆನಿಸಿರಬೇಕು.

ಅವನಿಗೆ ಕೇಳಿಸಲಿಲ್ಲವೇನೋ ಅಂದುಕೊಂಡು ಮತ್ತೊಮ್ಮೆ ಕೇಳಿದೆ.

"ನಮ್ಮಲ್ಲಿ ಹಾಟ್ ವಾಟರ್ ಸಿಗೋಲ್ಲ ಸರ್" ಹೇಳಿದ.

"ಇಷ್ಟು ದೊಡ್ದ ರಿಸಾರ್ಟ್ ಇಟ್ಟುಕೊಂಡಿದ್ದೀರಿ... ಯಾಕೆ ಸಿಗೋಲ್ಲ"...ಮತ್ತೆ ನನ್ನ ಅಸಮಧಾನ

"ಸಾರಿ ಸರ್, ಅದನ್ನು ನಮ್ಮ ಬಾಸ್ ಬಳಿ ಕೇಳಿಕೊಳ್ಳಿ....ಅವರನ್ನೇ ಕಳಿಸುತ್ತೇನೆ"

ರಾತ್ರಿಯೆಲ್ಲಾ ರೈಲಲ್ಲಿ ನಿದ್ರೆಯಿಲ್ಲದೇ ಪ್ರಯಾಣ ಮಾಡಿ ಮುಂಜಾನೆ ಏಳುಗಂಟೆಗೆ ಆ ರಿಸಾರ್ಟ್ ಸೇರಿಕೊಂಡಿದ್ದೆವು. ಮತ್ತೆ ನಮ್ಮ ಆ ದಿನದ ಚಟುವಟಿಕೆಗೆ ಸಿದ್ಧರಾಗಲೂ ಸ್ನಾನವಾಗಲೇ ಬೇಕಿತ್ತು. ಆ ರೀಸಾರ್ಟ್ ನೋಡಲು ಬಲುಸುಂದರವಾಗಿದ್ದು ಸುತ್ತ ಮರಗಳಿದ್ದು ಅಹ್ಲಾದಕರ ವಾತಾವರಣವಿದ್ದರೂ ಬಾತ್‍ರೂಮಿನಲ್ಲಿ ಬಿಸಿನೀರಿನ ವ್ಯವಸ್ಥೆಯಿರಲಿಲ್ಲ. ಅದಕ್ಕಾಗಿ ಅಲ್ಲಿನ ರೂಂಬಾಯ್‍ನನ್ನು ಕೇಳಿದಾಗ ಅವನಿಂದ ಇಂಥ ಉತ್ತರ ಬಂದಿತ್ತು. ಅದೋ ಅವನ ಬಾಸ್ ಬರುತ್ತಿದ್ದಾನೆ. ನೋಡಲು ಆಫ್ರಿಕನ್ ತರ ಕಾಣುವ ಆತ ಕೂದಲಿಗೆ ಜಡೆಹಾಕಿ ರಬ್ಬರ್ ಬ್ಯಾಂಡ್ ಹಾಕಿದ್ದ. ದೇಹಬಣ್ಣವಂತೂ ಕಪ್ಪುಮಸಿಯಂತಿತ್ತು. ಜಾಗಿಂಗ್ ಪ್ಯಾಂಟ್ ಮಾತ್ರ ಹಾಕಿಕೊಂಡು ಟಾಪ್ ಲೆಸ್ ಹಾಗಿದ್ದ ಅವನನ್ನು ಮತ್ತೆ ಸ್ನಾನಕ್ಕೆ ನೀರು ಕೊಡಬೇಕೆಂದು ಕೇಳಿದೆ.

"ಸಾರಿ ಸರ್, ನಮ್ಮಲ್ಲಿ ಬಿಸಿನೀರು ಸಿಗೋಲ್ಲ."

"ಯಾಕೆ ಸಿಗೋಲ್ಲ, ನಾವು ಈಗ ತಾನೆ ಪ್ರಯಾಣ ಮಾಡಿ ಬಂದಿದ್ದೇವೆ. ನಮ್ಮ ಆಯಾಸ ಪರಿಹಾರಕ್ಕಾಗಿ ಬಿಸಿನೀರು ಸ್ನಾನ ಮಾಡಲೇಬೇಕು ನೀವು ಅದನ್ನು ವ್ಯವಸ್ಥೆ ಮಾಡಬೇಕು?" ನಾನು ಆರ್ಡರ್ ಮಾಡುವಂತೆ ಮಾತಾಡಿದೆ.

"ನೋಡಿಸರ್, ಫಾರಿನರ್ಸ್ ಯಾರು ಬಿಸಿನೀರು ಕೇಳಲ್ಲ.....ಮತ್ತೆ ಅವರು ಲೈಕ್ ಮಾಡಲ್ಲ....ಅದಕ್ಕೆ ನಮ್ಮಲ್ಲಿ ಅದರ ಫೆಸಿಲಿಟಿ ಇಲ್ಲ ಸರ್"

"ಆರೆರೆ....ನಾವು ಇಂಡಿಯನ್ಸ್ ನಮಗೆ ಬೇಕಲ್ಲ" ನೀವು ಕೊಡಲಿಲ್ಲ ಅಂದ್ರೆ ನಾವು ಬೇರೆ ರೆಸಾರ್ಟಿಗೆ ಹೋಗುತ್ತೇವೆ."

"ಸಾರಿ ಸರ್, ಇವತ್ತು ಸಿಗೋಲ್ಲ. ಇವತ್ತೊಂದು ದಿನ ಅಡ್ಜೆಸ್ಟ್ ಮಾಡಿಕೊಳ್ಳಿ ನಾಳೆ ಬೇಕಾದ್ರೆ ವ್ಯವಸ್ಥೆ ಮಾಡುತ್ತೇನೆ'

ನಮ್ಮನ್ನು ಸಮಾಧಾನಿಸಲು ಅವನು ಹೇಳಿದಾಗ ನಾವು ಆಗಲೇ ಸುಸ್ತಾಗಿದ್ದರಿಂದ ಮತ್ತು ಬೇರೆ ಹೋಟಲ್ಲುಗಳನ್ನು ಹುಡುಕುವ ಮನಸ್ಸು ಇರಲಿಲ್ಲವಾದ್ದರಿಂದ ಒಪ್ಪಿಕೊಂಡೆವು.

ಸ್ವಲ್ಪ ಹೊತ್ತಿಗೆ ಅವನ್ಯಾಕೆ ನಮಗೆ ಬಿಸಿನೀರು ಕೊಡಲಿಲ್ಲವೆನ್ನುವುದು ನಮ್ಮ ಆನುಭವಕ್ಕೆ ಬರತೊಡಗಿತು. ಬೆಳಗಿನ ಎಂಟುಗಂಟೆಗೆ ನಮ್ಮ ಮೈಯಲ್ಲಾ ಬಿಸಿಯಾಗಿ ಬೆವರು ಸುರಿಯಲಾರಂಭಿಸಿತು. ತಿಂಡಿ ಮುಗಿಸಿ ಒಂದಷ್ಟು ಹೊತ್ತು ಸುತ್ತಾಡಿ ಬರುವ ಹೊತ್ತಿಗಾಗಲೇ ಸಮಯ ಹನ್ನೊಂದುಗಂಟೆ ಆಗಂತೂ ನಮ್ಮ ಮೈಯಲ್ಲಾ ಒದ್ದೆಯಾಗುವಷ್ಟು ಬೆವರು ಬಂದು ನಮಗೆ ನಡೆಯಲಾರದಷ್ಟು ಸುಸ್ತು ಆಗಿಬಿಟ್ಟಿತ್ತು. ವಾಪಸ್ ರಿಸಾರ್ಟಿಗೆ ಬಂದು ಚೆನ್ನಾಗಿ ತಣ್ಣೀರು ಸ್ನಾನ ಮಾಡಿ ಎರಡು ಗಂಟೆ ಚೆನ್ನಾಗಿ ನಿದ್ರೆ ಮಾಡಿದ ಮೇಲೆ ನಮ್ಮ ಆಯಾಸ ಪರಿಹಾರವಾಗಿತ್ತು. ಇದು ಅಲೆಪ್ಪಿ ಅನ್ನುವ ಕೇರಳದ ಪುಟ್ಟ ನಗರದ ಕತೆ. ನಂತರ ಗೊತ್ತಾಯಿತು ಅಲ್ಲಿ ಬಿಸಿನೀರಿನ ಕಾನ್ಸೆಪ್ಟೇ ಇಲ್ಲ ಅಂತ. ಮತ್ತೆ ಇಷ್ಟು ಸೆಕೆಯಿರುವ ಈ ಊರಿನಲ್ಲಿ ಯಾರು ಬಿಸಿನೀರಿನ ಸ್ನಾನ ಮಾಡುತ್ತಾರೆ ಹೇಳಿ! ಅಲ್ಲೆಲ್ಲಾ ಪ್ರತಿಯೊಬ್ಬರೂ ತಣ್ಣೀರು ಸ್ನಾನ ಮಾಡುವುದೇ ಅಭ್ಯಾಸ. ಇಡೀ ನಗರದ ತುಂಬಾ ಫೊನ್ನುಮಡ ಸರೋವರದ ಕಾಲುವೆಗಳಿದ್ದರೂ ಸದಾ ಸೆಕೆ ವಾತಾವರಣವಿರುತ್ತದೆ.

ಅಲ್ಲಿನ ಹೆಂಗಸರೂ ತಣ್ಣೀರು ಸ್ನಾನವಾದ ನಂತರ ತಲೆ ಒಣಗಿಸದೆ ದಿನಪೂರ್ತಿ ತಲೆ ತಂಪಾಗಿರಲು ಎಣ್ಣೆ ಹಚ್ಚಿ ನೀರು ಜಡೆ ಹಾಕಿಕೊಂಡು ಬಿಡುತ್ತಾರೆ. ಅದಕ್ಕಾಗಿ ಇಡೀ ಊರಿನ ತುಂಬಾ ಹುಡುಗಿಯರ, ಹೆಂಗಸರ ನೀರಜಡೆಗಳೇ ಕಾಣುತ್ತಿರುತ್ತವೆ. ಹೊರಗೆ ಚೆನ್ನಾಗಿ ಬಿಸಿಲು ಬರುತ್ತಿದ್ದರೂಆಗಾಗ ಮಳೆಯೂ ಬರುತ್ತದೆಯಾದ್ದರಿಂದ ಎಲ್ಲ ಹೆಂಗಸರು,ಹೆಣ್ಣುಮಕ್ಕಳುಕೊಡೆಯ ಜೊತೆಯಲ್ಲಿಯೇ ಮನೆಯಿಂದ ಹೊರಬರುವುದು.

ಮತ್ತೆ ಗಂಡಸರ ಕತೆಯೂ ಬೇರೆಯೇನಲ್ಲ. ಎಲ್ಲರೂ ಪಂಚೆಧಾರಿಗಳು. ರಸ್ತೆಯಲ್ಲಿ ಓಡಾಡುವವರು, ಸೈಕಲ್ ತುಳಿಯುವವರು, ಆಟೋ ಓಡಿಸುವವರು, ಕಾರು ಓಡಿಸುವವರು, ಸಣ್ಣ-ದೊಡ್ಡ ದೋಣಿಗಳ ಅಂಬಿಗರು, ರಸ್ತೆ ಮಾಡಿಸುವ ಗುತ್ತಿಗೆದಾರರು, ಹೋಟಲ್ ಮಾಲಿಕರು, ದೊಡ್ಡ ದೊಡ್ಡ ಇಂಡಸ್ಟ್ರೀಯಲಿಷ್ಟ್, [ಕೊನೆಗೆ ನಮ್ಮ ರಕ್ಷಣಾ ಮಂತ್ರಿಯಾದ ಎ.ಕೆ ಆಂಟನಿ ಸಹ ಸದಾ ಪಂಚೆಯಲ್ಲಿರುತ್ತಾರೆ.] ರಸ್ತೆ ಬದಿಯ ವ್ಯಾಪಾರಿಗಳು, ಹೀಗೆ ಪ್ರತಿಯೊಂದು ಪಂಚೆಮಯ.

ಮತ್ತೊಂದು ವಿಚಾರವೇನೆಂದರೇ ಅಲೆಪ್ಪಿಯಲ್ಲಿ ಬಹುತೇಕ ಗಂಡಸರು ಬಾಲ್ಡಿತಲೆಯವರೆ ಆಗಿದ್ದರು. ಅಲ್ಲಿನ ಬಿಸಿ ವಾತವರಣಕ್ಕೆ ಅವರ ತಲೆಕೂದಲೆಲ್ಲಾ ತರಾವರಿ ಶೈಲಿಯಲ್ಲಿ ಉದುರಿಹೋಗಿ ವೈವಿಧ್ಯಮಯ ಭೂಪಟಗಳೇ ಆಗಿದ್ದವು. ಅವುಗಳನ್ನು ನೋಡಿ ನಾನಂತೂ ಖುಷಿಯಿಂದ ಕ್ಲಿಕ್ಕಿಸಿದ್ದೆ.

ಇಷ್ಟೆಲ್ಲಾ ಆದಮೇಲೆ ಮರುದಿನ ಬಿಸಿನೀರಿನ ಕಾನ್ಸೆಪ್ಟನ್ನು ನಾವು ಕೈ ಬಿಟ್ಟೆವು.

ಇದೆಲ್ಲಾ ದೊಡ್ಡವರ ಕತೆಯಾಯ್ತು. ಇನ್ನೂ ಅಲ್ಲಿನ ಮಕ್ಕಳ ಬದುಕೇನು ಅಂತ ಗಮನಿಸಲಾರಂಭಿಸಿದಾಗ ತುಂಬಾ ವಿಭಿನ್ನವಾದ ಆನುಭವವಾಯ್ತು. ಆ ಆನುಭವಗಳನ್ನೆಲ್ಲಾ ಮಾತಿನಲ್ಲಿ ಕೇಳುವುದಕ್ಕಿಂತ ಕ್ಯಾಮೆರಾ ಕಣ್ಣಿನಿಂದ ನೋಡಿದರೇ ಚೆನ್ನಾ ಅಲ್ವೇ!. ಒಂದಷ್ಟು ನೀರ ಮೇಲಿನ ಮಕ್ಕಳು, ನೀರ ಜೊತೆ ಗೆಳೆತನದ ಮಕ್ಕಳು, ನೀರಿಗಂಟಿಕೊಂಡ ಮಕ್ಕಳನ್ನು ನೋಡೋಣ ಬನ್ನಿ.

ನೋಡಿ ಇವರು ನೀರ ಮೇಲಿನ ಮಕ್ಕಳು....

೧. ಹೇ ಸುಮ್ನಿರೋ...ಫೋಟೋ ತೆಗಿತಾವ್ರೇ......



೨. ಅಮ್ಮ ಇನ್ನೂ ಬರ್ಲೇ ಇಲ್ಲಾ.....ಬೇಜಾರಾಗ್ತಿದೆ.



೩. ಅಜ್ಜೀ ಅಲ್ನೋಡು......ಯಾರೋ ನಮ್ಮೂರಿಗೆ ಹೊಸಬರು ಬಂದವ್ರೇ.....


೪. ಅಪ್ಪಾಜಿ ಎಲ್ಲೋದ್ರು.....ನಾನು ಅಮ್ಮ ಅವಾಗಿಂದ ಕಾಯ್ತಾನೇ ಇದ್ದೀವಿ.....


೫. ಈ ಸೆಕೇಲಿ ಬರೆಯೋದಿಕ್ಕೆ ಆಗ್ತ ಇಲ್ಲಾ, ಏನಾದ್ರು ಆಗ್ಲಿ ಇವಗ್ಲೇ ಹೋಂವರ್ಕ್ ಮುಗಿಸಿಬಿಟ್ರೆ ಆಟವಾಡಲು ಹೋಗಬಹುದು.....

೬. ಬೇಡ ನೋಡು, ಎಮ್ಮೆ ತರ ಇದ್ದೀಯಾ....ನಿನಗೆ ಸ್ವಲ್ಪನಾದ್ರು ಬುದ್ಧಿ ಬೇಡ್ವ.......



೭. ಏನ್ ಎಲ್ಲಾ ಇಂಗ್ ಕುಣಿತಾವ್ರೆ.... ನನ್ನಮ್ಮ ನನಗೂ ಚೆನ್ನಾಗಿ ಮೇಕಪ್ ಮಾಡಿದ್ದಾಳೆ, ನಾನು ಒಂದು ಕೈ ನೋಡಿಬಿಡ್ಲಾ?

೮. ಅಲ್ಲಿ ಯಾಕೆ ಅಷ್ಟೊಂದು ಜನ ಪೋಲಿಸರು ಅವ್ರೇ.....ಓಹ್ ಸೋನಿಯಾ ಗಾಂಧಿ ಬರುತ್ತಾಳಲ್ಲ....ಅದಕ್ಕೆ ಇಷ್ಟೊಂದು ಸೆಕ್ಯುರಿಟಿ ಇರಬೇಕು.



೯. ಏನ್ ಸ್ಫೀಡಾಗಿ ದೋಣಿ ನಡೆಸ್ತಾರೆ ಅಲ್ವಾ ಅಣ್ಣ....ನೋಡು ಅವರೇ ನೆಹರು ಟ್ರೋಪಿ ಗೆದ್ರು...[ಚಪ್ಪಾಳೆ]


ನೋಡಿ ಇವರೆಲ್ಲಾ ನೀರ ಜೊತೆಗಿನ ಮಕ್ಕಳು.....

೧೦. ಅಲ್ನೋಡ್ ಅಕ್ಕ ಆ ಬೋಟ್ ಮೇಲೆ ಎಂಗೆ ಡ್ಯಾನ್ಸ್ ಮಾಡ್ತಾವ್ರೇ......ಸಕ್ಕತ್ ಮಜಾ ಅಲ್ವಾ....



೧೧. ನಮ್ಮ ಸ್ನೇಕ್ ಬೋಟ್ ರೇಸ್ ವರ್ಲ್ಡ್ ಫೇಮಸ್ಸು, ಅದಕ್ಕೆ ನಾವು ಸ್ಕೂಲಿಗೆ ಚಕ್ಕರ್ ಹೊಡೆದು ನೋಡಕ್ಕೆ ಬಂದಿದ್ದೀವಿ...


೧೨. ಸ್ನೇಕ್ ಬೋಟ್ ರೇಸ್ ಸ್ಪರ್ಧೆಗೆ ಹೋಗಕ್ಕೆ ಮೊದಲು ಈ ರೀತಿನೇ ಅಬ್ಯಾಸ ಮಾಡಬೇಕು ಗೊತ್ತ...ಅದಕ್ಕೇ ನಾನು ಮಾಡ್ತಾ ಇದ್ದೀನಿ....


೧೩. ಈ ಸೆಕೇಲಿ ಏನಣ್ಣ ಮೀನ್ ಹಿಡಿಯೋದು, ಇವತ್ತು ಬೋಟ್ ರೇಸ್ ಅಲ್ವಾ ಅದಕ್ಕೆ ಮೀನುಗಳು ರಜಾಹಾಕಿ ನೆಂಟರ ಮನೆಗೆ ಹೋಗಿಬಿಟ್ಟಿರಬೇಕು...



೧೪. ಇವತ್ತು ಸ್ಕೂಲಿಗೆ ರಜಾ ಅಲ್ವಾ......ಅದಕ್ಕೆ ನನ್ನ ಬಟ್ಟೆಗಳನ್ನ ಜಾಲಿಸಿಕೊಳ್ಳುತ್ತಿದ್ದೀನಿ..




೧೫. ಅಮ್ಮ ಹೇಳ್ತಾ ಇದ್ದ ಸಮುದ್ರ ಅಂದ್ರೆ ನೀನೇನಾ!.....ಎಷ್ಟೊಂದು ಗಲಾಟೆ ಮಾಡ್ತಿಯಪ್ಪ ನೀನು........

೧೬. ನಾನು ನಿನ್ನ ನೋಡಕ್ಕೆ ಬಂದಿದ್ದೀನಿ, ಸ್ವಲ್ಪ ಗಂಭೀರವಾಗಿ ಇರಬಾರದಾ...


ಆಹಾ..! ಇವರಂತೂ ನೀರಿಗಂಟಿದ ಮಕ್ಕಳು.....

೧೭. ನೀರಲ್ಲಿ ಬಿದ್ಯಾ, ಒಳ್ಳೇದಾಯ್ತು ಬಿಡು. ಈ ಸೆಕೇಲಿ ಸ್ವಲ್ಪ ತಂಪಾಗುತ್ತೆ.



೧೮. ನೀರು ಅನ್ನೊದು ಎಂಥವರನ್ನೂ ಮಕ್ಕಳನ್ನಾಗಿ ಮಾಡಿಬಿಡುತ್ತೇ ಅಲ್ವಾ....


೧೯. ಹೇ..ಹೇ...ಅಣ್ಣಾ...ನೀರಲ್ಲಿ ಆಡೋದು ಎಂಥ ಮಜಾ ಅಲ್ವಾ...

೨೦. ಆಣ್ಣಾ ಬೇಡ ಕಣೊ, ನನಗೆ ಭಯವಾಗುತ್ತೆ......


೨೧. ಹೋಗ್ಲೀ, ಕಣ್ಣು ಮುಚ್ಚಿಕೊಂಡುಬಿಡ್ತೀನಿ ಇರೋ....ಸ್ವಲ್ಪ.....

೨೨. ವಾಹ್!!....ಎಂಥಾ ಮಜಾ.....


೨೩. ನೋಡಿದ್ಯಾ ಅಣ್ಣಾ........ನೀನು ನೀರು ಎರಚಿದ್ರೂ ನನಗೇನು ಭಯವಾಗಲಿಲ್ಲ...ಎಂಗೆ.....



ಮುಂದಿನ ಭಾಗಗಳಲ್ಲಿ ಸ್ನೇಕ್ ಬೋಟ್ ಸ್ಪರ್ಧೆ, ವೈವಿಧ್ಯಮಯ ಅಲೆಪ್ಪಿ, ಜೊತೆಗೆ ಕೆಲವು ಅಲೆಪ್ಪಿ ಭೂಪಟಗಳು ಬರುತ್ತವೆ...

ಗೆಳೆಯರೆ ನನ್ನ ಲೇಖನಗಳ ಪುಸ್ತಕವೊಂದು ಸಿದ್ದವಾಗುತ್ತಿದೆ.....ಶೀಘ್ರದಲ್ಲಿ ಅದರ ಬಗ್ಗೆ ಇನ್ನಷ್ಟು ವಿವರಗಳನ್ನು ಕೊಡುತ್ತೇನೆ...ಧನ್ಯವಾದಗಳು.

ಚಿತ್ರಗಳು ಮತ್ತು ಲೇಖನ.
ಶಿವು.ಕೆ. ARPS.

Sunday, August 9, 2009

ನಾವು ಪಕ್ಕಾ ಎಡವಟ್ಟುಗಳಂತೆ ಅವರಿಗೆ ಅನ್ನಿಸಿಬಿಡುತ್ತಿದ್ದೆವು.

ಎಲ್ಲಿ ಹೋಗುವುದು.?


ನಾವು ಫೋಟೋಗ್ರಫಿಯ ಪ್ರವಾಸಕ್ಕಾಗಿ ಎಲ್ಲಿಗೆ ಹೋದರೂ ಹೀಗೆ ಯಾವತ್ತು ಅನ್ನಿಸಿರಲಿಲ್ಲ. ಯಾವ ಊರಿಗೆ ಹೋದರೂ ಅಲ್ಲಿ ಪ್ರತಿಯೊಂದು ನಿಮಿಷವೂ ವ್ಯರ್ಥವಾಗದಂತೆ ಮುಂಜಾನೆಯಿಂದ ಸಂಜೆಯವರೆಗೆ ನಮ್ಮ ಫೋಟೋಗ್ರಫಿಯ ಪಕ್ಕಾ ಪ್ಲಾನ್ ಇರುತ್ತಿತ್ತು. ಅಲೆಪ್ಪಿ ಅನ್ನುವ ಕೇರಳದ ಪುಟ್ಟ ನಗರದಲ್ಲಿ ಮರುದಿನ ವಿಶ್ವವಿಖ್ಯಾತ "ಹಾವಿನ ದೋಣಿಗಳ ಸ್ಪರ್ಧೆ" ಇತ್ತಾದರೂ ಇವತ್ತು ಏನು ಮಾಡುವುದು ಮತ್ತು ಎಲ್ಲಿಗೆ ಹೋಗುವುದು ಅನ್ನುವ ಪ್ರಶ್ನೆ ನಾವು ಬೇಗ ಎದ್ದು ಸಿದ್ಧರಾದಾಗ ಕಾಡಿತ್ತು.

ಅಲ್ಲಿರುವ ಯಾರನ್ನು ಕೇಳಿದರೂ ದೋಣಿ ಸ್ಪರ್ಧೆಯನ್ನು ಬಿಟ್ಟರೆ ಒಂದೆರಡು ದೇವಸ್ಥಾನ, ಚರ್ಚುಗಳಿವೆ ಅವು ಬಿಟ್ಟರೆ ಇನ್ನೇನು ವಿಶೇಷವಿಲ್ಲವೆಂದು ಹೇಳುತ್ತಿದ್ದರು. ಮತ್ತು ಅವರು ಹೇಳಿದ ಸ್ಥಳಗಳ ಬಗ್ಗೆ ನಮಗೂ ಆಸಕ್ತಿ ಇಲ್ಲದ್ದರಿಂದ "ಎಲ್ಲಿ ಹೋಗುವುದು" ಅನ್ನುವ ಪ್ರಶ್ನೆ ಕಾಡತೊಡಗಿತ್ತು.


ಆಟೋ ಬಂತು. ಆತ ಯುವಕ. ಮೊದಲು ಒಳಗೆ ಕುಳಿತೆವು. ಆತನಿಗೆ ಮಳೆಯಾಳಿ ಬಿಟ್ಟರೆ ಬೇರೆ ಬಾಷೆ ಬರದು. ಮುಖ ನೋಡಿದ. ನಾವು "ಕಾಯಿನ್‍ಕೆರ" ಅಂದೆವು.

"ಎವಡೆ., ಕಾಯಿನ್ರೇ" ಅಂದ. ನಮಗೆ ಗೊತ್ತಾಗಲಿಲ್ಲ.


ಮಲ್ಲಿಕಾರ್ಜುನ್ ಕನ್ನಡದಲ್ಲಿ, ಮತ್ತೊಮ್ಮೆ ಇಂಗ್ಲೀಷಿನಲ್ಲಿ ಮತ್ತೊಮ್ಮೆ ಹೇಳಿದರು. ಅವನಿಗೆ ಗೊತ್ತಾಗಲಿಲ್ಲ


"ಕಾಯಿನ್‍ಕೆರ" ಮತ್ತೆ ನಾನಂದೆ. ಆದ್ರೆ ಅವನು ಮತ್ತೆ ಮತ್ತೆ ಮದ್ಯದ ಆಕ್ಷರಗಳನ್ನು ನುಂಗಿ ಮೊದಲ ಕೊನೆಯ ಆಕ್ಷರಗಳನ್ನು ಮಾತ್ರ ಹೇಳುತ್ತಿದ್ದ.


ಅಲೆಪ್ಪಿಯ ಆಟೋ, ಟ್ಯಾಕ್ಷಿ, ದೋಣಿಮನೆಯವರು, ಯಾರೇ ಆಗಲಿ ಪ್ರವಾಸಿಗಳಿಂದ ಚೆನ್ನಾಗಿ ಹಣವನ್ನು ನುಂಗುವ ವಿಚಾರ ನಮಗೆ ಹಿಂದಿನ ದಿನವೇ ಅನುಭವಕ್ಕೆ ಬಂದಿತ್ತು. ಆದ್ರೆ ಮಾತಾಡುವ ಪದಗಳ ನಡುವಿನ ಆಕ್ಷರಗಳನ್ನು ನುಂಗುತ್ತಾರಂತ ಗೊತ್ತಿರಲಿಲ್ಲ.

ಒಂದು ನಿಮಿಷ ಆತನಿಗೂ ನಮಗೂ ಭಾಷೆಗಳನ್ನು ಆರ್ಥಮಾಡಿಸುವಲ್ಲಿ ಸರ್ಕಸ್ ನಡೆಯುತ್ತಿತ್ತು. ಕೊನೆಗೆ ನನಗೊಂದು ಉಪಾಯ ಹೊಳೆಯಿತು. ನಾವು ಹೇಳುವ ಮಾತಿನಲ್ಲಿ ತಮಿಳು, ಕನ್ನಡ ಹಿಂದಿ, ಇಂಗ್ಲೀಷ್ ನಾಲ್ಕು ಭಾಷೆಯನ್ನು ಸೇರಿಸಿ ಮಾತಾಡುವುದು, ಅದರಲ್ಲಿ ಯಾವುದಾದರೂ ಒಂದು ಪದ ಅರ್ಥಮಾಡಿಕೊಳ್ಳಬಹುದು ಅಂತ. ನನ್ನ ಪ್ರಯೋಗ ವರ್ಕೌಟ್ ಆಯಿತು.

ನಂತರ ಆತ ತನ್ನಲ್ಲಿರುವ ಪ್ರವಾಸಿ ಕೈಪಿಡಿಯಿಂದ ಅಲ್ಲಿರುವ ದೇವಸ್ಥಾನ, ಚರ್ಚು, ಬೀಚು ಇತ್ಯಾದಿಗಳನ್ನು ಅದ್ಬುತವೆಂದು ಹೊಗಳುತ್ತಾ ಅಲ್ಲಿಗೆ ಹೋಗೋಣವೆಂದು ಮಲೆಯಾಳಿಯಲ್ಲಿ ಹೇಳುತ್ತಾ ಕೈಗಳು ಮತ್ತು ಮುಖದಲ್ಲಿ ಪ್ರದರ್ಶಿಸುತ್ತಿದ್ದ. ಇಷ್ಟಕ್ಕೂ ನಾವು ಯಾವುದೇ ಫೋಟೋಗ್ರಫಿ ಪ್ರವಾಸಕ್ಕೆ ಹೋದರೂ ಅಲ್ಲಿನ ಪ್ರಸಿದ್ಧ ಸ್ಥಳಗಳಿಗೆ ಎಂದೂ ಬೇಟಿಕೊಡುತ್ತಿರಲಿಲ್ಲ. ಅವು ಏನಿದ್ದರೂ ಕಟ್ಟ ಕಡೆಯ ಸ್ಥಾನದಲ್ಲಿರುತ್ತಿದ್ದವು. ಮತ್ತೊಂದು ವಿಚಾರವೇನೆಂದರೇ ನಾವು ಫೋಟೋಗ್ರಫಿ ಪ್ರವಾಸದಲ್ಲಿದ್ದಾಗ ನಮ್ಮ ಮನೆಯವರು ಅಥವ ಗೆಳೆಯರ ಜೊತೆಗೆ ಹೋಗಿಬಿಟ್ಟರೇ ಮುಗೀತು, ನಾವು ಪಕ್ಕಾ ಎಡವಟ್ಟುಗಳಂತೆ ಅವರಿಗೆ ಅನ್ನಿಸಿಬಿಡುತ್ತಿದ್ದೆವು. ಅದೇ ರೀತಿ ಈ ಆಟೋದವನು ಹೇಳಿದ್ದಕ್ಕೆಲ್ಲಾ "ಅದ್ಯಾವುದೂ ಬೇಡ ನಾವು ಹೇಳಿದ ಸ್ಥಳಕ್ಕೆ ನಡಿ" ಎಂದು ಮತ್ತೆ ನಾನು ಮಿಶ್ರ ಭಾಷೆಯಲ್ಲಿ ಹೇಳಿದೆ. ನಿಜಕ್ಕೂ ಅದೊಂದು ರಾಜ್ಯ ಹೆದ್ದಾರಿಯ ತಿರುವು ಆಗಿದ್ದರಿಂದ ಅವನಂತೂ ಇವರಿಗೆ ಸ್ವಲ್ಪ ತಲೆ ಕೆಟ್ಟಿರುವುದು ಗ್ಯಾರಂಟಿ ಅಂದುಕೊಂಡು ಆಟೋ ಸ್ಟಾರ್ಟ್ ಮಾಡಿದ.


ನಾವು ಎಲ್ಲಿಗೆ ಹೋಗಲಿ ಮೊದಲು ಅವರಿಗೆ ಗೆಳೆಯರಾಗಲೆನ್ನಿಸುತ್ತೇವೆ. ಕಾರಣವಿಷ್ಟೆ. ನಮ್ಮ ಉದ್ದೇಶ ಅವರಿಗೆ ಅರ್ಥಮಾಡಿಸುವುದು ಸುಲಭ ಅಂತ. ಅವನ ಹೆಸರು ಶಿಬು ಅಂತ, ಒಬ್ಬಳು ಮಗಳಿದ್ದಾಳಂತೆ. ನಮ್ಮ ಸಮವಯಸ್ಕನಾದ್ದರಿಂದ ಆಟೋ ಓಡಿಸುತ್ತಾ ಏನೇನೋ ವಟಗುಟ್ಟುತ್ತಿದ್ದ, ಹಿಂದೆ ತಿರುಗಿ ನಮ್ಮನ್ನು ನೋಡಿ ನಗುತ್ತಿದ್ದ. ನಾವು ಅವನ ಮಲೆಯಾಳಿ ಮಾತಿಗನುಗುಣವಾಗಿ ಕನ್ನಡದಲ್ಲಿ ಅವನನ್ನು ಚೆನ್ನಾಗಿ ಬೈಯ್ಯುತ್ತಾ ನಗುತ್ತಿದ್ದೆವು. ನಾಲ್ಕು ಕಿಲೋ ಮೀಟರ್ ಸಾಗಿರಬಹುದು. ನಾನು ಸ್ಟಾಪ್ ಸ್ಟಾಪ್ ಅಂದೆ. ಇವರುಯಾಕೆ ಇಂಥ ರಸ್ತೆ ಮದ್ಯೆ ನಿಲ್ಲಿಸು ಅಂತಾರಲ್ಲ ಅಂದುಕೊಂಡು ರಸ್ತೆ ಪಕ್ಕ ಆಟೋ ನಿಲ್ಲಿಸಿದ. ರಸ್ತೆಯ ಎರಡು ಬದಿಯಲ್ಲಿ ಸಮೃದ್ಧ ಹಸಿರು ಗದ್ದೆ ಬಯಲು ಇತ್ತು. ನಾವು ಇಳಿದು ನಮಗೆ ಬೇಕಾದ ಹಾಗೆ ಅರ್ಧ ಗಂಟೆ ಫೋಟೋ ತೆಗೆದುಕೊಂಡೆವು.


"ಕಾಯಿನ್ ಕೆರ" ತಿರುವಿನ ಹೆದ್ದಾರಿಯ ಎರಡು ಬದಿಯಲ್ಲಿ ಭತ್ತದ ಗದ್ದೆಗಳು.





ನಂತರ ಸ್ವಲ್ಪ ದೂರ ಹೋಗುತ್ತಿದ್ದಂತೆ ದಾರಿಯಲ್ಲಿ ಮತ್ತು ಕಾಲುವೆಗಳಲ್ಲಿ ಬಾತುಕೋಳಿಗಳು, ಅವುಗಳನ್ನು ಕುಯ್ದು ಮಾರುವ ಅಂಗಡಿಗಳು ಕಾಣಿಸಿಕೊಂಡವು. ಆಟೋ ನಿಲ್ಲಿಸಿ ಫೋಟೋ ಕ್ಲಿಕ್ಕಿಸಿಕೊಂಡೆವು. ಹೀಗೆ ಹೆದ್ದಾರಿಯುದ್ದಕ್ಕೂ ಅಲ್ಲಿನ ಜನ,ಮಕ್ಕಳು ಅಂತ ಅಲ್ಲಲ್ಲಿ ಆಟೋ ನಿಲ್ಲಿಸಿ ದೂರದಿಂದಲೇ ಕ್ಲಿಕ್ಕಿಸಿಕೊಂಡೆವು. ಆ ಊರಿನ ಪ್ರಸಿದ್ಧ ಸ್ಥಳಗಳನ್ನು ಬಿಟ್ಟು ಹೀಗೆ ಏನೇನೋ ಕ್ಲಿಕ್ಕಿಸುವ ಇವರಂತೂ ಪಕ್ಕಾ ಎಡಬಿಡಂಗಿಗಳೇ ಸರಿ ಅನ್ನಿಸಿತೇನೋ ನಾವು ಆಟೋ ನಿಲ್ಲಿಸಿದ ಜಾಗದಲ್ಲಿ ಸುಮ್ಮನೆ ನಮ್ಮ ಮುಖ ನೋಡುತ್ತಾ ಯಾವುದೋ ಒಂದು ಹಾಡು ಹೇಳುತ್ತಿದ್ದ.


ಬಾತುಕೋಳಿಗಳ ಈಜಾಟ.

ನಡುವೆ ಒಂದು ಪ್ರವಾಸಿಗಳ ದೋಣಿ.


ನೀರ ಮೇಲಿನ ದೋಣಿಯೊಳಗೆ ಪುಟ್ಟ ಮಕ್ಕಳು


ನೀರ ಬದಿಯ ದಡದಲ್ಲಿ ಓದು ಮತ್ತು ಬರಹ



ನಾವು ಹೋದ ಕೆಲಸ ಮುಗಿದು ವಾಪಸ್ಸು ಬರುವಾಗ ನಮಗೂ ದಾರಿ ಕಳೆಯಬೇಕಲ್ಲ " ನೀ ಸೂಪರ್ ಸಿಂಗರ್" ಅಂದೆ.

ಸ್ವಲ್ಪ ಖುಷಿಯಾಯಿತೇನೋ ಅವನಿಗೆ ಮತ್ತಷ್ಟು ಉಮ್ಮಸ್ಸಿನಿಂದ ಹಾಡುತ್ತಾ ಆಟೋ ಓಡಿಸುತ್ತಿದ್ದ. ಮತ್ತೆ "ನಿಂಗ ರಾಗಂ ಗುಡ್" ಅಂದೆ.

"ಸರ್, ಇವಡೆ ಮಾಪಿಳ್ಳಿ ಸಾಂಗ್" ಅಂದ.

ಮತ್ತೆ ನಾನು ಮಿಶ್ರಿತ ಬಾಷೆಯಲ್ಲಿ ಮತ್ತಷ್ಟು ಮಾಪಿಳ್ಳೆ ಸಾಂಗ್ ಹಾಡಲು ಹೇಳಿದೆ.

ಅವನು ಖುಷಿಯಿಂದ ಕೆಲವು ಹಿಂದಿ ಹಾಡುಗಳನ್ನು ಹಾಡತೊಡಗಿದ. ನಿಜಕ್ಕೂ ಅವನ ಸ್ವರ ತುಂಬಾ ಚೆನ್ನಾಗಿತ್ತು ಮತ್ತು ಅವನು ಇಷ್ಟಪಟ್ಟು ಖುಷಿಯಿಂದ ಚೆನ್ನಾಗಿ ಆಡುತ್ತಿದ್ದ. ನಾವು ಅವನನ್ನು ಮತ್ತಷ್ಟು ಹೊಗಳಿದಾಗ ಅವನು ಥ್ಯಾಂಕ್ಯೂ ಅನ್ನುತ್ತಾ ಹಾಡಿಕೊಂಡು ಆಟೋ ಓಡಿಸುತ್ತಿದ್ದ.

ಇದ್ದಕ್ಕಿದ್ದಂತೆ "ಚೋರ್ ಚೋರ್ ಸರ್, ಚೋರ್ ಚೋರ್, ಅಂತ ಜೋರಾಗಿ ಹೇಳುತ್ತಾ ಒಂದು ಬಿಡ್ಜಿನ ಮೇಲೆ ಆಟೋ ನಿಲ್ಲಿಸಿದ. ಕೆಳಗೆ ದೊಡ್ಡದಾಗಿ ಪೊನ್ನುಮಡ ಸರೋವರವಿದೆ.

ನಾವು ಅವನ ಮುಖವನ್ನು ಆಶ್ಚರ್ಯದಿಂದ ನೋಡುತ್ತಾ ಏನು ಅಂತ ಪ್ರಶ್ನಿಸಿದೆವು.

"ಚೋರ್ ಸರ್, ಜೋರ್." ಅಂತ ಅವನು ಆಟೋ ಇಳಿದಾಗ ನಮಗಂತೂ ಆಶ್ಚರ್ಯ ನಾವು ಅವನನ್ನು ಸುಮ್ಮನೆ ಹಿಂಬಾಲಿಸಿದೆವು.

"ಸರ್, ಇವಡೆ ಡಿ.ವನ್ ರೈಸ್ ಸರ್" ಅದು ಮಲೆಯಾಳಿಯಲ್ಲಿ "ಚೋರ್" ಅಂತ ಅಂದ.

ಓಹ್! ಇಲ್ಲಿ ಸೇತುವೆಯ ಮೇಲಿನ ಪಾದಚಾರಿ ದಾರಿಯಲ್ಲಿ ಬೆಳೆದಿರುವ ಭತ್ತದ ತೆನೆಗಳನ್ನು ತೋರಿಸಲಿಕ್ಕಾಗಿ ಆಟೋ ನಿಲ್ಲಿಸಿದ್ದಾನೆ. ಮತ್ತು ಮಲೆಯಾಳಿಯಲ್ಲಿ ಅದನ್ನು ಚೋರ್ ಅನ್ನುತ್ತಿದ್ದಾನೆ. ಅದನ್ನು ನೋಡಿ ನಮಗೆ ಖುಷಿಯಾಗಿತ್ತು. ಇದು ಮೊದಲೇ ಗೊತ್ತಿತ್ತಾ ಅಂತ ಕೇಳಿದೆವು. ಇಲ್ಲಾ ಅಂತ ಕತ್ತು ಆಡಿಸಿದ. ಮತ್ತೆ ಹ್ಯಾಗೆ ಕಂಡು ಹಿಡಿದೆ ಅಂತ ಕೇಳಿದೆ. ಈ ರಸ್ತೆಯಲ್ಲಿ ಎಷ್ಟೋ ಬಾರಿ ಟೂರಿಷ್ಟುಗಳನ್ನು ಕರೆದುಕೊಂಡು ಹೋಗಿದ್ದೇನೆ ಗೊತ್ತಾಗಿರಲಿಲ್ಲ. ಇವತ್ತು ನಿಮ್ಮ ಜೊತೆ ಬಂದಿದ್ದಕ್ಕೆ ಗೊತ್ತಾಯ್ತು ಅಂತ ಹಿಂದಿ ಮಿಶ್ರಿತ ಮಲೆಯಾಳಿಯಲ್ಲಿ ಹೇಳಿದ. ಕೊನೆಗೂ ನಮ್ಮ ಯಡವಟ್ಟು ಬುದ್ಧಿ ಇವನಿಗೂ ಬಂತಲ್ಲ ಅಂತ ಖುಷಿಯಾಯ್ತು.


"ಭತ್ತದ ಒಂದು ತೆನೆ ಸೇತುವೆ ಮೇಲೆ !"



ಉದ್ದಕ್ಕೂ ಸಾಲಾಗಿ ಬೆಳೆದಿರುವ ಭತ್ತದ ತೆನೆ ಹೊತ್ತ ಪೈರುಗಳು!



ಅದ್ಸರಿ "ಅಲ್ಲಿ[ಗದ್ದೆಯ ಕಡೆ ಕೈತೋರಿಸಿ] ಬೆಳೆಯಬೇಕಾದ ಈ ಭತ್ತದ ತೆನೆ ಇಲ್ಲಿ ಹೇಗೆ ಬೆಳೆಯಲು ಸಾದ್ಯ" ಅವನಿಗೆ ಕೈಸನ್ನೆ ಮಾಡಿ ಕೇಳಿದೆ.

ಅಲ್ಲಿ[ಗದ್ದೆಯಲ್ಲಿ]ಬಿತ್ತನೆ ಮಾಡಿದ ಮೇಲೆ ಅಲ್ಲಿಗೆ ಹಕ್ಕಿ ಪಕ್ಷಿಗಳು ಹೋಗಿ ಬಿತ್ತನೆ ಮಾಡಿದ್ದ ಬೀಜಗಳನ್ನು ತಿನ್ನಲು ಹೋಗಿ, ಬೀಜಗಳನ್ನು ಬಾಯಿತುಂಬ ತುಂಬಿಕೊಂಡು ಈ ಸೇತುವೆ ಮೇಲೆ ಕುಳಿತುಕೊಳ್ಳುತ್ತವೆ. ಇಲ್ಲಿ ಓಡಾಡುವ ವಾಹನಗಳ ಸದ್ದುಗದ್ದಲಕ್ಕೆ ಅವುಗಳ ಬಾಯಿಂದ ಬೀಜಗಳು ಈ ಪುಟ್‍ಪಾತ್ ಮೇಲೆ ಬಿದ್ದಿವೆ. ನಂತರ ಮಳೆಯಾದಾಗ ಪೈರು ಬಂದು ಈಗ ತೆನೆಬಂದಿದೆ" ಅಂತ ಅವನು ಕೈಸನ್ನೆ ಬಾಯಿಸನ್ನೆಯ ಜೊತೆ ತನ್ನ ಮಾತೃಭಾಷೆಯಲ್ಲಿ ಹೇಳಿದಾಗ ಅವನ ತರ್ಕಕ್ಕೆ ನಾವು ಖಂಡಿತ ತಲೆದೂಗಬೇಕಾಯಿತು.


ಭತ್ತದ ತೆನೆಯನ್ನು ಕೈಯಲ್ಲಿ ಹಿಡಿದಿರುವ ನಮ್ಮ ಆಟೋ ಡ್ರೈವರ್ ಶಿಬು



ನಂತರ ಅದನ್ನು ಕಿತ್ತುಕೊಂಡು ಆಟೋದೊಳಗೆ ಆತನ ಇಸ್ಲಾಮಿಕ್ ಏಮ್‍ಲಮ್ ಪಕ್ಕ ಕಟ್ಟಿದ. ಆದ್ಯಾಕೆ ಅಂತ ಕೇಳಿದೆವು. ಅದಕ್ಕೆ ಆತ ಅದನ್ನು ಇಲ್ಲಿ ಅಥವ ಮನೆಯ ಮುಂಬಾಗಿಲ ಮೇಲೆ ಹೀಗೆ ಕಟ್ಟಿದರೇ ಐಶ್ವರ್ಯ ಹೆಚ್ಚುತ್ತದೆ" ಅಂದಾಗ ಅವನ ತಿಳಿವಳಿಕೆಗಳು ಮೆಚ್ಚಿಗೆಯಾಯಿತು.

ಇದ್ದಕ್ಕಿದ್ದಂತೆ Ayeshamol@gmail.com ಅಂದ.

ಏನೋ ಡಾಟ್.ಕಾಂ ಅನ್ನುತ್ತಿದ್ದಾನೆ ಅಂದುಕೊಂಡು ಏನದು ಅಂದೆವು.

"ಇದು ನನ್ನ ಮೇಲ್ ಐಡಿ ಬರೆದುಕೊಳ್ಳಿ. ನನ್ನ ಮಗಳ ಹೆಸರು ಆಯೆಷಾ ಅದಕ್ಕೆ ಈ ರೀತಿ ಇಟ್ಟುಕೊಂಡಿದ್ದೇನೆ. ನೀವು ನನಗೆ ಮೇಲ್ ಮಾಡಿ" ಅಂದ.

ಎಲಾ ಇವನಾ... ಮಲೆಯಾಳಿ ಬಿಟ್ಟರೇ ಬೇರೆ ಯಾವ ಭಾಷೆಯೂ ಬರುವುದಿಲ್ಲ ಆದ್ರೂ ಇಮೇಲ್ ಐಡಿ ಇಟ್ಟಿದ್ದಾನಲ್ಲ ಅಂತ ಆಶ್ವರ್ಯವಾಗಿತ್ತು.

ನಮ್ಮ ರಿಸಾರ್ಟ್ ಬಂತು ಆಟೋದಿಂದ ಇಳಿದೆವು. ಆಷ್ಟರಲ್ಲಿ ಎದುರು ಬದಿಯಿಂದ ಲಾರಿಯೊಂದು ನಿದಾನವಾಗಿ ಅವನ ಆಟೋದ ಹಿಂಬದಿಯ ಚಕ್ರ ಮತ್ತು ಮಡ್‍ಗಾರ್ಡನ್ನು ಸ್ವಲ್ಪ ಉಜ್ಜಿದಂತಾಗಿ ತಗ್ಗಾಯಿತು. ಈತ ತಕ್ಷಣ ಓಡಿಹೋಗಿ ಲಾರಿ ಡ್ರೈವರ್ ಬಳಿ ಹೋಗಿ ಏನೇನೋ ಬೈದು ಬಂದ.

ನಾವು ಸುಮ್ಮನಿರದೆ "ಭತ್ತದ ತೆನೆ ಕಟ್ಟಿದ್ದಕ್ಕೆ ನಿನ್ನ ಆಟೋ ಐಶ್ವರ್ಯ ಏನಾಯಿತು ನೋಡು" ಅಂದಾಗ ತನ್ನ ಮುವತ್ತೆರಡು ಹಲ್ಲುಗಳು ಕಾಣುವಂತೆ ನಕ್ಕು ನಾವು ಕೊಟ್ಟ ಹಣವನ್ನು ಪಡೆದು, ಆತನ ಫೋನ್ ನಂಬರ್ ಕೊಟ್ಟು ಮತ್ತೆ ಬೇಕಾದ್ರೆ ಕರೀರಿ ಅಂತ ಹೇಳಿ ಹೊರಟು ಹೋದ.

ಮುಂದಿನ ಲೇಖನಗಳಲ್ಲಿ ಅಲೆಪ್ಪಿಯ ಮತ್ತಷ್ಟು ಚಿತ್ರಗಳು ಮತ್ತು ಲೇಖನಗಳು.


ಚಿತ್ರ ಮತ್ತು ಲೇಖನ.
ಶಿವು.ಕೆ

Monday, August 3, 2009

ಮಳೆ ನಿಂತೂ ಹೋದ ಮೇಲೆ ಹನಿಯೊಂದು ಮೂಡಿದೆ....



ಇಷ್ಟಕ್ಕೂ ಈ ಚಿತ್ರಲೇಖನಕ್ಕೂ ಮೊದಲು ಮತ್ತೊಂದು ಮಳೆ ಲೇಖನ[ಮಳೆಯಿಂದಾದ ಸತ್ಯಘಟನೆ]ಸಿದ್ದವಾಗಿತ್ತು. ಆದ್ರೆ ಈ ಮಳೆಹನಿಗಳು 'ನೀನು ನಮ್ಮ ಬಗ್ಗೆ ಬ್ಲಾಗಲ್ಲಿ ಹಾಕದಿದ್ದಲ್ಲಿ ನೀನ್ ತೆಗೆದ ಛಾಯಾಚಿತ್ರಗಳಲ್ಲೇ ಕರಗಿಹೋಗ್ತಿವಿ" ಅಂತ ಹಟ ಹಿಡಿದು ಬ್ಲಾಗಿನೊಳಗೆ ನುಗ್ಗಿಬಂದಿವೆ. ಅವು ಕರಗುವುದರೊಳಗೆ ನೀವೊಮ್ಮೆ ನೋಡಿಬಿಡಿ.
----- ------- ----------

ಮಳೆ ಫೋಟೋ ತೆಗೆದಾದ ಮೇಲೆ ಒಂದಷ್ಟು ಸೂಕ್ಷ್ಮವಾಗಿ ಮಳೆಯನ್ನು ಅವುಗಳ ಹನಿಗಳನ್ನು ಸೆರೆಯಿಡಿಯೋಣವೆನಿಸಿತ್ತು. ಈ ಹನಿಗಳೆಂದರೇ ಸಾಮಾನ್ಯವಲ್ಲ. ನಮ್ಮ ಸಕಲ ಕವಿ ಮನಸ್ಸುಗಳಿಗೂ ಸ್ಫೂರ್ತಿಯ ಚಿಲುಮೆಯಾಗುವಂತವು. ಇಂಥವನ್ನು ಸೆರೆಯಿಡಿಯಲು ಒಂದಷ್ಟು ಸಿದ್ದತೆಯನ್ನು ಮಾಡಿಕೊಳ್ಳಬೇಕಾಯಿತು. ಅದಕ್ಕಾಗಿ ಹಳ್ಳಿ, ಕಾಡು, ನಗರ ಇತ್ಯಾದಿಗಳನ್ನು ಅಲೆಯಬೇಕಾಯಿತು. ಮಳೆಗಾಗಿ ಕಾಯಬೇಕಾಯಿತು. ಮಳೆ ಬಿದ್ದಮೇಲೆ ಪ್ರಿಯೆತಮೆ ಪ್ರಿಯನಿಗಾಗಿ ಕಾಯುವಂತೇ ನಾನು ಈ ಬಿಂಕದ ಮಳೆಹನಿಗಳಿಗಾಗಿ ಕಾಯಬೇಕಾಯಿತು. ಕೊನೆಗೂ ಸಿಕ್ಕಿದವಲ್ಲ. ನನಗೆ ಸಿಕ್ಕದೆ ಇನ್ಯಾರಿಗೆ ದಕ್ಕುತ್ತವೆ ಹೇಳಿ. ನಾನು ಕ್ಲಿಕ್ಕಿಸುತ್ತಾ ಹೋದಂತೆ ಅವು ನನ್ನೊಂದಿಗೆ ನನ್ನ ಕ್ಯಾಮೆರಾದೊಂದಿಗೆ ಮಾತಾಡುತ್ತಿವೆಯೇನೋ ಅನ್ನಿಸಿತು. ಅವು ಬೆಡಗು ಬಿನ್ನಾಣದಿಂದ, ವೈಯ್ಯಾರದಿಂದ ಕ್ಯಾಮೆರಾಗೆ ಫೋಸ್ ಕೊಡುವುದರ ಜೊತೆಗೆ ನನ್ನೊಂದಿಗೆ ಮಾತಾಡಿದ ಕೆಲವು ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ.

ವೈಯ್ಯಾರದಿಂದ ಬಿನ್ನಾಣದ ಬಿತ್ರಿಯರಂತೆ, ತಳುಕುತ್ತಾ, ಬಳುಕುತ್ತಾ, ಇಲ್ಲಿ ತೋರ್ತಾಳೆ ಅಲ್ಲಿ ಹಾರ್ತಾಳೆ ಅನ್ನುವ ನಮ್ಮಜ್ಜಿ ಮಾತಿನಂತೆ, ಮಾಯಾಂಗನೆಯರಂತೆ ಮಾತುಗಳನ್ನು ಆಡಿ ಮಾಯವಾಗುತ್ತಿದ್ದ ಅವುಗಳ ಜೊತೆ ನೀವು ಮಾತಾಡಿ. ನೋಡುತ್ತಾ ಮಾತಾಡುತ್ತಿರಲ್ಲ.


ಕನಸು ನೆನಸೆಲ್ಲಾ ನಿಮ್ಮ ಲೆಕ್ಕಾಚಾರ. ನಾವೇ ಒರಿಜಿನಲ್ಲು. ಎರಡರಲ್ಲೂ ಬಂದೇ ಬರುತ್ತೀವಿ.





ಮುತ್ತು ಮುತ್ತು ನೀರ ಹನಿಯ ತಾಂತನನಂ.....



ಲೈಪಲ್ಲಿ ಫೇಲ್ ಆಗೋದು ನೀವೆ ಕಣ್ರಿ, ನಾವು ನೋಡಿ ಹೀಗೆ ತೂಗಿದ್ರೆ ಮುತ್ತು, ಕೆಳಗ್‍ಬಿದ್ರೆ ನೀರು, ಮತ್‍ಮೇಲಕ್ಕೆ ಹೋದ್ರೆ ಮೋಡವಾಗಿ ತೇಲ್ತೀವಿ.



ಆತ ಅಳೋದ್ ಮರೆತಿದ್ದ. ನಮ್ಮನ್ನು ನೋಡಿದ ಕೂಡಲೆ ಆತನ ಕಣ್ಣೊಳಗಿನ ನಮ್ಮ ಗೆಳೆಯರು ನಮಗಾಗಿ ಹೊರಬಂದರು. ಈಗ ಖುಷಿಯಿಂದ ಆತನ ಕಣ್ಣಂಚಲ್ಲಿ ಮಳೆಹನಿ.



ನಾವೆಲ್ಲಾ ಇಷ್ಟು ಚಂದ ಕಾಣಲು ಯಾವುದೇ ಮೇಕಪ್ ಇಲ್ರೀ. ಆದ್ರೆ ನೀವಂಗ್ ನೋಡುವುದರಿಂದಲೇ ನಾವಿನ್ನಷ್ಟು ಅಂದ ಕಾಣುತ್ತೇವೆ ಅಲ್ವಾ?



ನಿಜವಾಗಿ ನಮ್ ಬೆಲೆ ಗೊತ್ತಾಗುವುದು ನಾವು ಕಂಡಾಗ ಅಲ್ಲ. ಕಂಡು ಮರೆಯಾದಾಗ!



ನಿಮಗೆ ಗೊತ್ತೇನ್ರಿ, ನಮಗೆ ಕಣ್ಣಿಲ್ಲ, ಆದ್ರೆ ಕಣ್ಣ ಹನಿಗಳಿವೆ. ಯಾಕಂದ್ರೆ ನಮ್ಮಲ್ಲೂ ಹೃದಯವಿದೆಯಲ್ಲಾ ಹಾಗಾಗಿ. ಹಾಗಂತ ಇದು ನೋವಿನ ಹನಿಯಲ್ರಿ. ಆನಂದಬಾಷ್ಪ.



ಈ ಪ್ರೀತಿ ಅನ್ನೋದು ಶುರುವಾಗಿದ್ದೆ ನಮ್ಮಿಂದ ಕಣ್ರಿ. ಎಲೆ, ಹೂ, ಹಣ್ಣು, ನೆಲ, ಜಲ....ಭುವಿಯ ಸಕಲಗಳ ಜೊತೆ. ಆದ್ರೆ ನೀವು ಸಿಕ್ಕ ಪ್ರೀತಿಯನ್ನು ಅನುಭವಿಸದೆ, ಮೊದಲು ನಮ್ಮಿಂದಲೇ ಶುರುವಾಯ್ತು ಅಂತ ಆಹಂ ಕಿರೀಟ ಇಟ್ಟುಕೊಳ್ತೀರಿ ಅಲ್ವಾ!



ನಾವು ಹನಿಗಳು ಒಂಥರ ಕಾಲದಂತೆ. ನೀವು ಮುಟ್ಟುವುದರೊಳಗೆ ಮಾಯವಾಗುತ್ತಿರುತ್ತೇವೆ. ಮತ್ತೆ ನಿಮಗೆ ಗೊತ್ತಿಲ್ಲದಂತೆ ಹೊಸದಾಗಿ ಮೂಡುತ್ತಿರುತ್ತೇವೆ.



ಛೇ ನಿನ್ನ[ಕ್ಯಾಮೆರಾ]ಕಣ್ಣಿಂದ ತಪ್ಪಿಸಿಕೊಳ್ಳಲಿಕ್ಕೆ ಆಗಲಿಲ್ಲವಲ್ಲ!



ಹನಿಹನಿಗೂಡಿದ್ರೆ ಹಳ್ಳ...
ಹನಿ ಹನಿ ಕೊಂಡಿ ಕಳಚಿಕೊಂಡರೆ......




ಮಳೆಗಾಲದ ರಾತ್ರಿ ಮ್ಯಾಲೆ ಚುಕ್ಕಿಗಳಿಲ್ಲ ಅಂತ ಬ್ಯಾಸರಮಾಡಬೇಡ್ರಿ. ನಮ್ಮನ್ನೇ ನೋಡಿ, ನಾವೇ ಮಳೆಗಾಲದ ಚುಕ್ಕಿಚಂದ್ರಮಗಳು....




ನೋಡಿದ ಮೇಲೆ ನೀವು ಮಳೆಹನಿಗಳ ಜೊತೆ ಏನು ಮಾತಾಡಿದ್ರಿ ಅನ್ನೋದನ್ನು ಕಾಮೆಂಟಿಸಿದರೆ ಇನ್ನೂ ಚೆನ್ನಾಗಿರುತ್ತೆ ಅಲ್ವಾ....ಅಂಥ ಮಾತುಗಳಿಗಾಗಿ ಕಾಯುತ್ತಿರುತ್ತೇನೆ.

[ಮಳೆಹನಿಗಳ ಚಿತ್ರಗಳೊಂದಿಗೆ ಲೇಖನ ಭಾಷೆ ತುಂಬಾ ಶಿಷ್ಟಚಾರದ ಪುಸ್ತಕ ಭಾಷೆಯಾಗಿಬಿಟ್ಟಿತ್ತು. ನಂತರ ನನ್ನ ಶ್ರೀಮತಿಯ ಸಹಕಾರದಿಂದ ಆಡುಭಾಷೆಯಾಗಿದೆ. ಆಕೆಗೂ ನನ್ನ ಧನ್ಯವಾದಗಳು.]

ಮತ್ತೊಂದು ಸೂಚನೆ: ಪ್ರಕಾಶ್ ಹೆಗಡೆಯವರ ಹೊಸ ಪುಸ್ತಕದ ಜೊತೆ ನನ್ನದೊಂದು ಪುಸ್ತಕವು ಪ್ರಕಟಣೆಗೆ ಭರದಿಂದ ಸಾಗಿದೆ. ಬಿಡುಗಡೆಯ ದಿನಾಂಕವನ್ನು ಮುಂದೆ ತಿಳಿಸುತ್ತೇನೆ. ಧನ್ಯವಾದಗಳು.

ಚಿತ್ರ-ಲೇಖನ.
ಶಿವು.ಕೆ.