Sunday, March 22, 2009

ನಾ ನಿನ್ನ ಮದುವೆಯಾಗೋಲ್ಲ ಅಂದೆ....ಅವಳು ಬಹ್ಮಕುಮಾರಿಗೆ ಸೇರಿದಳು....




ಸಮಯ ಬೆಳಗಿನ ಹತ್ತು ಗಂಟೆ. ಅವನು ತನ್ನ ಮೊಬೈಲು ರಿಂಗಾಗುವುದನ್ನೇ ಕಾಯುತ್ತಿದ್ದ...ರಿಂಗಾಯಿತು....


" ಹಲೋ.....ಹೇಗಿದ್ದೀರಿ......" ಇದು ಅವಳದೇ ದ್ವನಿ....


ಹಲೋ ಅಂತನ್ನುವ ನವಿರುತನದಲ್ಲೇ ಖಚಿತವಾಗುತ್ತದೆ...


" ನಾನು ಚೆನ್ನಾಗಿದ್ದೇನೆ....ನೀನು ಹೇಗಿದ್ದೀಯಾ.....ಟಿಫನ್ ಆಯ್ತ...."


ಅವನಿಗೆ ಅವಳ ಜೊತೆ ಮಾತಾಡುವ ಅವಕಾಶ ಸಿಕ್ಕಾಗಲೆಲ್ಲಾ ಮೈಪುಳಕ... ಸ್ವಲ್ಪೇ ಸ್ವಲ್ಪ ಭಾವೋದ್ವೇಗ....ಅದು ಬರದಂತೆ ತಡೆಯಬೇಕೆಂದು ಎಷ್ಟೇ ಪ್ರಯತ್ನಿಸಿದರೂ ಆ ಸಮಯದಲ್ಲಿ ಅವನ ಮೈ ಮನವನ್ನು ಆವರಿಸಿರುತ್ತದೆ.....ಅದರೂ ಜೊತೆ ಜೊತೆಯಲ್ಲೇ...ವರ್ಣಿಸಲಾಗದ ಖುಷಿ....ಒಂದು ರೀತಿ ಯುಪಿಎಸ್ ಮುಖಾಂತರ ಚಲಿಸುವ ತೆಳುವಾದ ವಿದ್ಯುತ್‌ನಂತೆ. ಇದೆಲ್ಲಾ ಅವಳಿಗೂ ಆಗುತ್ತಿತ್ತಾ......


ಗೊತ್ತಿಲ್ಲ......ಆಗುತ್ತಿರಬಹುದು ಅನ್ನಿಸುತ್ತೆ....ಏಕೆಂದರೆ ಆವಳು ಹೀಗೆ ಅವನಿಗೆ ಫೋನ್ ಮಾಡಲು ಹತ್ತು ಗಂಟೆ ಆಗುವುದನ್ನೇ ಕಾಯುತ್ತಿರುತ್ತಾಳಲ್ಲ !


ಎಂದಿನಂತೆ ಸ್ವಲ್ಪ ಉಭಯಕುಸಲೋಪರಿ.... ಅಭಿರುಚಿಗಳ ವಿನಿಮಯ........ಆಸೆ ಆಕಾಂಕ್ಷೆಗಳ ಕೊಡುಕೊಳ್ಳುವಿಕೆ.....ನಡುವೆ ಆಗಾಗ....


" ನಿಮಗೆ ಗೊತ್ತಾ! ನಾನು ಕೊನೇ ವರ್ಷದ ಬಿ.ಎ ನಲ್ಲಿದ್ದಾಗ......ಏನಾಯ್ತು ಅಂದರೆ............[ಅವಳ ಗೆಳತಿಯರ ಜೊತೆಗಿನ ತಮಾಷೆ, ಆಟ...ಲೆಚ್ಚರುಗಳ ಬಗ್ಗೆ ವಿವರಿಸಿ]ಅಂಗಾಯ್ತು.....ಅದನ್ನು ಈಗಲೂ ಮರೆಯೋದಿಕ್ಕೆ ಆಗೋಲ್ಲ ನನಗೆ." ಒಂದೇ ಉಸುರಿನಲ್ಲಿ ಹೇಳುತ್ತಿದ್ದಳು....


" ಓಹ್! ತುಂಬಾ ತಮಾಷೆ ಅನ್ನಿಸುತ್ತೆ......ನನಗೂ ಒಮ್ಮೆ ಹೀಗೆ ಆಗಿತ್ತು.............ನಾನು ಆಗ ನಿನ್ನ ಹಾಗೆ ಏನು ಗೊತ್ತಿರಲಿಲ್ಲ...........................[ಅವನದೂ ವರ್ಣನೆ]ಕೊನೆಗೆ ಇಂಗಾಯ್ತಲ್ಲ......ನನಗೆ ನಗು ತಡೆಯಲಾಗಲಿಲ್ಲ ನೋಡು" .......ಕೊನೆಗೆ ಇಬ್ಬರೂ ನಗುತ್ತಿದ್ದರು.......


" ಸಕ್ಕತ್ ರೊಮ್ಯಾಂಟಿಕ್ ಆಗಿದೆ.....ಮುಂದೆ ಹೇಳಿ"...ಪ್ರಕಾಶ್ ಹೆಗಡೆ ಊಟಕ್ಕೆ ಕುಳಿತುಕೊಳ್ಳುತ್ತಾ ಕೇಳಿದರು....


"ಅದ್ಸರಿ ಆ ಹುಡುಗಿ ಎಲ್ಲಿಂದ ಫೋನ್ ಮಾಡುತ್ತಿದ್ದಳು" ಹೇಮಾಶ್ರಿ ಇಬ್ಬರಿಗೂ ಅನ್ನ ಬಡಿಸುತ್ತಾ ಕೇಳಿದ್ದಳು..


ಹುಡುಗಿ ಮನೆ ಹಾಸನ. ಅವರ ತಂದೆಗೆ ರೈಲ್ವೇ ಕೆಲಸ. ಮುಂಜಾನೆ ಆರು ಗಂಟೆಗೆ ಹೋಗಿಬಿಡುತ್ತಿದ್ದರು.... ಅವಳ ಎರಡನೇ ಅಣ್ಣ ಕೂಡ ೯ ಗಂಟೆಗೆ ಹೋಗಿಬಿಡುತ್ತಿದ್ದರು. ದೊಡ್ಡಣ್ಣನಿಗೆ ಮದುವೆಯಾಗಿದೆ. ಆತನಿಗೆ ಹುಬ್ಬಳ್ಳಿಯಲ್ಲಿ ಕೆಲಸವಾದ್ದರಿಂದ ಅಲ್ಲೇ ವಾಸ. ..ಮತ್ತೆ ಇನ್ನು ಉಳಿದ ಅಮ್ಮ ಕೂಡ ಸರಿಯಾಗಿ ೯-೩೦ರ ನಂತರ ಹೊರಡುತ್ತಿದ್ದರು....ನಂತರ ಉಳಿಯುತ್ತಿದ್ದುದು ಈ ಉಷಾ ಒಬ್ಬಳೇ.....


ಆವಳ ಫೋನ್ ಬರುವುದು ಇವನಿಗೆ ಮೊದಲೇ ಗೊತ್ತಿತ್ತಲ್ಲ....ಅದಕ್ಕೆ ಸರಿಯಾಗಿ ೯-೪೫ ಕ್ಕೆ ತನ್ನ ದಿನಪತ್ರಿಕೆಯ ಕೆಲಸದ ಮೇಲೆ ಹೊರಟುಬಿಡುತ್ತಿದ್ದ. ಅವಳ ಮನೆಯ ಲ್ಯಾಂಡ್‌ಲೈನ್ ಫೋನ್ ಬಂದಾಗ ಇವನು ರಸ್ತೆಯ ಮೇಲೆ...ಸಮಯದ ಪರಿವೇ ಇಲ್ಲದೇ ಖುಷಿಯಾಗಿ ಮಾತನಾಡಿಕೊಳ್ಳುತ್ತಿದ್ದರು.


ಇಷ್ಟಕ್ಕೂ ಆ ಹುಡುಗನ ಮನೆಯ ಸಂಭಂದಿಕರೊಬ್ಬರು ಹಾಸನದಲ್ಲಿರುವ ಇದೇ ಉಷಾಳ ಫೋಟೊವನ್ನು ತೋರಿಸಿ ನೋಡು ಇವಳು ಹೇಗಿದ್ದಾಳೆ ಅಂದಾಗ ಹುಡುಗನು ಇಷ್ಟಪಟ್ಟಿದ್ದ. ಮತ್ತು ಹುಡುಗನ ಫೋಟೊವನ್ನು ಹುಡುಗಿ ಮತ್ತು ಅವಳ ಮನೆಯವರು ಇಷ್ಟಪಟ್ಟಿದ್ದರು.....ಒಂದು ರೀತಿ ಎರಡು ಕಡೆ ಇಷ್ಟವಾದ ಮೇಲೆ ಒಪ್ಪಿಗೆಯೂ ಆಗಿತ್ತು......ನಡುವೆ ಎರಡು ಕಡೆಯವರಿಗೂ ಬಿಡುವಿಲ್ಲದ ಕಾರಣ ಮದುವೆ ಮಾತುಕತೆ ವಿಚಾರ ಒಂದು ತಿಂಗಳು ಮುಂದಕ್ಕೆ ಹೋಗಿತ್ತು....


ಇದರ ನಡುವೆ ಎರಡು ಕಡೆ ಒಪ್ಪಿಗೆಯಾಗಿತ್ತಲ್ಲ....ಅದಕ್ಕೆ ಹುಡುಗ ಮತ್ತು ಹುಡುಗಿ ಈ ರೀತಿ ಚೆನ್ನಾಗಿ ಮಾತಾಡಿಕೊಳ್ಳುತ್ತಿದ್ದರು. ಹೇಗೂ ನಮ್ಮಿಬ್ಬರ ಮದುವೆ ಆಗುತ್ತದಲ್ಲ......ಅಂತ ಅವರಿಬ್ಬರಿಗೂ ಖಚಿತವಾಗಿತ್ತು.


ಇದು ಯಾವ ಮಟ್ಟಕ್ಕೆ ಹೋಗಿತ್ತೆಂದರೆ ಅವರಿಬ್ಬರೂ ಒಬ್ಬರನ್ನೊಬ್ಬರೂ ಬಿಟ್ಟಿರಲಾಗದಷ್ಟು ಗಾಢಪ್ರೇಮಿಗಳಾಗಿಬಿಟ್ಟಿದ್ದರು. ದಿನದಲ್ಲಿ ಅದೆಷ್ಟು ಸಲ ಈ ರೀತಿ ಫೋನ್ ಸಂಭಾಷಣೆಗಳು ನಡೆಯುತ್ತಿದ್ದವೋ......ಅದರೆ ಎರಡು ಮನೆ ಕಡೆಯವರಿಗೂ ಇವರು ಈ ಮಟ್ಟಕ್ಕೆ ಮುಂದುವರಿದಿರುವುದು ತಿಳಿಯದೆ ಹುಡುಗ ಹುಡುಗಿ ಒಬ್ಬರನ್ನೊಬ್ಬರೂ ಒಪ್ಪಿದ್ದಾರೆ....ಮುಂದೆ ಮಾತುಕತೆಗೆ ಹೋದಾಗ ಉಳಿದಿದ್ದು ಅಂದುಕೊಂಡಿದ್ದಾರೆ.


ಅವತ್ತು ಫೆಬ್ರವರಿ ೧೦. ಹುಡುಗನ ಕಡೆಯವರೆಲ್ಲಾ ಹಾಸನದ ಹುಡುಗಿಯ ಮನೆಯಲ್ಲಿದ್ದರು. ಎಲ್ಲರಿಗೂ ಒಂದು ರೀತಿಯ ಸಂಬ್ರಮ.. ಎರಡು ಕಡೆ ಆತ್ಮೀಯವಾದ ನಗು, ಪ್ರೀತಿ ತುಂಬಿದ ಕಾಳಜಿ.... ಇತ್ಯಾದಿ ವಿನಿಮಯವಾಯಿತು. ಮುಂದೆ ಸಂಭಂದಿಗಳಾಗುವುದರಿಂದ ಇವರಿಗೆ ಅವರಿಂದ ಅತಿಥಿ ಸತ್ಕಾರ ಚೆನ್ನಾಗೆ ನಡೆಯಿತು....


" ಇನ್ನೂ ಶುರು ಮಾಡೋಣವೇ." .....ಹುಡುಗನ ಚಿಕ್ಕಪ್ಪ ಮಾತು ಪ್ರಾರಂಬಿಸಿದರು.. " ಆಗಲಿ ಅದಕ್ಕೇನಂತೆ ಸ್ವಲ್ಪ ಇರಿ, ನನ್ನ ತಮ್ಮನೂ ಬರಲಿ ಇಲ್ಲೇ ಹತ್ತಿರದಲ್ಲೇ ಇದ್ದಾನೆ ಬರುತ್ತಿದ್ದಾನೆ" ಅಂದಳು ಹುಡುಗಿಯ ತಾಯಿ. ಹೆಣ್ಣಿನ ಮನೆಯವರಿಗೆ ತಮ್ಮನ ಮಾತು ವೇದವಾಕ್ಯ. ಹತ್ತು ನಿಮಿಷದ ನಂತರ ಆತನ ಆಗಮನವಾಯಿತು....ಬಂದವನು ಎಲ್ಲರನ್ನೂ ನೋಡಿದ, ಹುಡುಗನು ಸೇರಿದಂತೆ ಎಲ್ಲರೂ ಚಾಪೆಯ ಮೇಲೆ ಕುಳಿತಿದ್ದರು. ಆತ ಬಂದಿದ್ದರಿಂದ ಅವನಿಗೊಂದು ಖುರ್ಚಿ ಹಾಕಿ ಕೂರಿಸಲಾಯಿತು.


ಪ್ರಾರಂಬಿಕ ಪೀಠಿಕೆಗಳೆಲ್ಲಾ ಮುಗಿದು................"ನೋಡಿ ಹುಡುಗ ಮತ್ತು ಹುಡುಗಿ ಇಬ್ಬರು ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದಾರೆ....ಅವರು ಇಷ್ಟಪಟ್ಟಮೇಲೆ ನಮ್ಮದೇನಿದೆ......ಅವರು ತಾನೆ ಬದುಕಿ ಬಾಳೋರು" .... ಹೀಗೆ ಶುರುವಾಯಿತು. ಹಾಗೆ ಮುಂದುವರಿದೂ ಮದುವೆ ಎಲ್ಲಿ ಮಾಡೋದು ಹೇಗೆ.....ಯಾವ ತಿಂಗಳು.....ಹಣಕಾಸಿನ ವಿಚಾರಗಳು.....ಎಲ್ಲಾ ಇತ್ಯಾರ್ಥವಾಗುವ ಅಂತ ಬಂತು.


" ಹುಡುಗ ಯಾವ ಕೆಲಸದಲ್ಲಿದ್ದಾನೆ.?" ಪ್ರಶ್ನೆಯೊಂದು ತೂರಿ ಬಂತು ಹುಡುಗಿಯ ತಾಯಿ ತಮ್ಮನಿಂದ.


" ಹುಡುಗ ನ್ಯೂಸ್ ಪೇಪರ್ ಏಜೆಂಟ್.. ಜೊತೆಗೆ ಮದುವೆ ಮುಂಜಿ ಇತ್ಯಾದಿ ಸಮಾರಂಭಗಳಿದ್ದರೇ ಫೋಟೋಗ್ರಫಿ ಮಾಡುತ್ತಾನೆ" ....ಇತ್ತಕಡೆಯಿಂದ ಉತ್ತರ....


"ಹೌದೇನು" .....ಅಂದವನು ಅದರ ಅಧಾಯವೇನು....ಇತ್ಯಾದಿಗಳನ್ನು ಕೇಳಿ ತಿಳಿದುಕೊಂಡ. ಸ್ವಲ್ಪ ಹೊತ್ತಿನ ನಂತರ, ತನ್ನಕ್ಕನನ್ನು ರೂಮಿಗೆ ಕರೆದುಕೊಂಡು ಹೋದ. ತದನಂತರ ಹುಡುಗಿಯೂ ಕರೆ ಬಂತು.....ಸುಮಾರು ಹೊತ್ತಿನ ನಂತರ ಅವರೆಲ್ಲಾ ಹೊರಬಂದರು.


" ನನಗೆ ಈ ಮದುವೆ ಇಷ್ಟವಿಲ್ಲ." ಹುಡುಗಿಯಿಂದ ಸಡನ್ನಾಗಿ ಮಾತು ಬಂತು.


ಎಲ್ಲರಿಗೂ ಒಂದು ಕ್ಷಣ ಷಾಕ್ ಆಯಿತು. ಅದರೂ ಗಾಬರಿಯಾಗದೆ ಮತ್ತೊಮ್ಮೆ ಕೇಳಿದಾಗ ಅದೇ ಮಾತನ್ನು ಆಕೆ ಪುನರುಚ್ಚರಿಸಿದಳು. ಎಲ್ಲರಿಗೂ ಕಳವಳ ಶುರುವಾಯಿತು. ಕೊನೆಗೆ ಹಿರಿಯರೊಬ್ಬರು.....


"ನೋಡಿ ಹುಡುಗ ಮತ್ತು ಹುಡುಗಿ ಒಬ್ಬರಿಗೊಬ್ಬರು ಚೆನ್ನಾಗಿ ಪರಿಚಯವಾಗಿದೆ. ಮತ್ತೇ ಓದಿಕೊಂಡಿದ್ದಾರೆ....ಅವರಿಬ್ಬರೇ ಮಾತಾಡಿಕೊಳ್ಳಲಿ" ಎಂದು ಹೇಳಿ ಇಬ್ಬರನ್ನು ಬಾಲ್ಕನಿಗೆ ಕಳಿಸಿದರು.


ಹುಡುಗನಿಗೆ ಇದು ಒಂದು ರೀತಿಯ ಗಾಬರಿ, ಗೊಂದಲ, ನಿರಾಸೆ.....ಎಲ್ಲಾ ಉಂಟಾದರೂ ಇಲ್ಲ ಏನೋ ಯಡವಟ್ಟಾಗಿದೆ ಸರಿಪಡಿಸಬಹುದು ಅಂತ ಸಣ್ಣ ನಂಬಿಕೆಯೂ ಆ ಕ್ಷಣದಲ್ಲಿ ಉಂಟಾಗಿತ್ತು. ಹುಡುಗ ಒಂದು ತಿಂಗಳಿಂದ ಅವರಿಬ್ಬರಲ್ಲಿ ನಡೆದ ಸವಿ ಸವಿ ನೆನಪುಗಳು, ಮಾತುಗಳು, ಎಲ್ಲವನ್ನೂ ನೆನಪಿಸಿ.. ಯೋಚಿಸಲು ಅವಕಾಶ ಕೊಟ್ಟರೂ ಅವಳು ತನ್ನ ಹೊಸ ನಿರ್ದಾರ ಬದಲಿಸಲಾಯಿಸಿಕೊಳ್ಳಲು ಸಿದ್ದಳಿರಲಿಲ್ಲ..


ಎಲ್ಲರ ಮುಖದಲ್ಲೂ ಹುಡುಗಿಯ ತೀರ್ಮಾನದಿಂದಾಗಿ ಮಂಕು ಬಡಿದಂತಾಗಿತ್ತು.... ಯಾರು ಎಷ್ಟೇ ಹೇಳಿದರೂ ಹುಡುಗಿಯ ನಿರ್ದಾರವಂತೂ ಕಲ್ಲಿನಷ್ಟೇ ಗಟ್ಟಿಯಾಗಿಬಿಟ್ಟಿತ್ತು.


ಕೊನೆಗೆ ಗಂಡಿನ ಕಡೆಯವರು ಬೇಸರವಾಗಿ ಹುಡುಗಿಯ ನಿರ್ದಾರವನ್ನು ಮೊದಲೇ ತಿಳಿಸಿದ್ದರೇ ನಾವು ಇಷ್ಟೊಂದು ದಣಿಯುವ ಅಗತ್ಯವಿರಲಿಲ್ಲವೆಂದು ಕೋಪ, ಬೇಸರದಿಂದ....ಬೆಂಗಳೂರಿನ ಬಸ್ಸು ಹಿಡಿದರು


ಬಸ್ಸಿನಲ್ಲಿ ಹುಡುಗನಿಗೆ ಸಮಾಧಾನ ಹೇಳಿದರೂ ಆತನ ತಲೆಯೊಳಗೆ ಸುತ್ತುತ್ತಿದ್ದುದು ಒಂದೇ ವಿಚಾರ..." ಸುಮಾರು ಒಂದು ತಿಂಗಳವರೆಗೆ ಪ್ರತಿದಿನ ನಾಲ್ಕೈದು ಬಾರಿ ಫೋನ್ ಮಾಡುತ್ತಿದ್ದವಳು, ಮತ್ತು ಎಲ್ಲಾ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದವಳು , ಅದರಿಂದಾಗಿ ನಮ್ಮಿಬ್ಬರ ಪ್ರೀತಿಯೂ ಮತ್ತಷ್ಟು ಗಾಢವಾಗುತ್ತಿದ್ದುದ್ದು....ಮದುವೆಯಾದ ಮೇಲೆ ಹೇಗೇಗೋ ಇರಬೇಕು ಅಂತೆಲ್ಲಾ ಕನಸು ಕಟ್ಟಿಕೊಂಡ ಹುಡುಗಿ ಇವಳೇನಾ? ಎಷ್ಟು ಯೋಚಿಸಿದರೂ ಆ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ..


ಎರಡು ಮೂರು ದಿನ ಕಳೆದರೂ ಈ ನಿರಾಸೆಯಿಂದ ಹೊರಬರಲು ಅವನಿಗೆ ಸಾಧ್ಯವಾಗಿರಲಿಲ್ಲ.


ಹುಡುಗ ಕಳೆದೆರಡು ವರ್ಷಗಳಿಂದ ಆದ್ಯಾತ್ಮಿಕ ಶಿಬಿರವಾದ "ಎಸ್ ಎಸ್ ವೈ" ತರಗತಿಗೆ ಹೋಗುತ್ತಿದ್ದುದ್ದರಿಂದ ಈಗಲೂ ಇಂಥ ಪರಿಸ್ಥಿತಿಯಿಂದ ಹೊರಬರಲು...ಅದೇ ಸರಿ ಎಂದು ನಾಲ್ಕು ದಿನಗಳ ಕಾಲ ನಡೆಯುವ ಶಿಬರಕ್ಕೆ ದೂರದ ಆಶ್ರಮಕ್ಕೆ ಹೋಗಿಬಿಟ್ಟ.


"ಆಯ್ಯೋ ಇದೇನ್ರಿ ! ಹುಡುಗನಿಗೆ ಹೀಗಾಗೊಯ್ತು...... " ಪ್ರಕಾಶ ಹೆಗಡೆ ತಟ್ಟೆಯಲ್ಲಿ ಕೈ ತೊಳೆಯುತ್ತಾ ಆಶ್ಚರ್ಯದಿಂದ.


"ಅದ್ಸರಿ ಹುಡುಗಿ ಕತೆ ಏನಾಯ್ತುರೀ......" ಹೇಮಾಶ್ರೀ ತಟ್ಟೆಗಳನ್ನು ಎತ್ತಿಡುತ್ತಾ ಕೇಳಿದಳು.


"ಹೇಳ್ತೀನಿ ಇರಿ, ನಿದಾನ ಮಾಡಿ......" ನಾನು ತಟ್ಟೆಯಲ್ಲಿ ಕೈ ತೊಳೆದೆ.


ಆಶ್ರಮದಲ್ಲಿ ಎಸ್ ಎಸ್ ವೈ ಕ್ಯಾಂಪಿನ ಪರಿಣಾಮವೇ ಏನೋ.......ಹುಡುಗ ಸಂಪೂರ್ಣವಾಗಿ ಎಲ್ಲವನ್ನೂ ಮರೆತು ಹೊಸ ಮನುಷ್ಯನಾಗಿ ಮನೆಗೆ ಬಂದ......


ಈತ ಕ್ಯಾಂಪಿಗೆ ಹೋದ ಒಂದೆರಡು ದಿನಗಳಲ್ಲಿ ಹುಡುಗಿ ಮನೆ ಕಡೆಯಿಂದ ಫೋನ್. ಹುಡುಗಿ ಮತ್ತೆ ಇದೇ ಹುಡುಗನನ್ನೇ ಮದುವೆಯಾಗುತ್ತಾಳಂತೆ... ಆವತ್ತು ಅವಳ ಆ ನಿರ್ದಾರಕ್ಕೆ ಅವಳ ಮಾವ[ಅಮ್ಮನ ತಮ್ಮ]ನೇ ಕಾರಣವಂತೆ. ಹುಡುಗನ ಕೆಲಸದ ಬಗ್ಗೆ ಆತ ಕೀಳಾಗಿ ಮಾತಾಡಿ ತಲೆಕೆಡಿಸಿದ್ದರಿಂದ ನಾನು ಆ ನಿರ್ದಾರವನ್ನು ತೆಗೆದುಕೊಂಡಿದ್ದೆ. ಈಗ ನನ್ನ ತಪ್ಪಿನ ಅರಿವಾಗಿದೆ. ನಾನು ಈಗ ಮದುವೆಯಾದರೇ ಅದೇ ಹುಡುಗನನ್ನೇ ಮದುವೆಯಾಗುವುದು ಅಂತಿದ್ದಾಳೆ.


"ಓಹ್ ಸಕ್ಕತ್ ಇಂಟರೆಷ್ಟಿಂಗ್...ಮುಂದೇನಾಯ್ತು." ...ಪ್ರಕಾಶ್ ಹೆಗಡೆ...


" ಪಾಪ ಹುಡುಗಿಗೆ ತನ್ನ ತಪ್ಪಿನ ಅರಿವಾಗಿದೆ... ಹುಡುಗ ಅದೇ ಹುಡುಗಿಯನ್ನು ಮದುವೆಯಾದನಾ? ಕೇಳಿದಳು ಹೇಮಾಶ್ರಿ ಕುತೂಹಲದಿಂದ..


" ಈಗ ಮುಂದೇನಾಯ್ತು ಅಂತ ನೀವು ಊಹಿಸಬೇಕು.....ಜೊತೆಗೆ ನಿಮ್ಮ ಅಭಿಪ್ರಾಯ ತಿಳಿಸಬೇಕು." ನನ್ನ ಕಡೆಯಿಂದ ಪ್ರಶ್ನೆ.


"ಹುಡುಗಿ ಓದಿಕೊಂಡಿದ್ದಾಳೆ.. ಅವಳಿಗೆ ಈ ವಿಚಾರದಲ್ಲಿ ಸ್ವಂತ ಬುದ್ದಿ ಬೇಡವೇ ? ಇದು ಅವಳ ಜೀವನದ ಪ್ರಶ್ನೆ....ಇಂಥದ್ದರಲ್ಲಿ ಅವಳು ಮಾಡಿದ ಅವಮಾನಕ್ಕೆ ಹುಡುಗ ಒಪ್ಪಬಾರದು ಅಂತ ನನಗನಿಸುತ್ತೆ...." ಇದು ಪ್ರಕಾಶ್ ಹೆಗಡೆಯವರ ಅಭಿಪ್ರಾಯ.


" ಇಲ್ಲಾ ಇಲ್ಲಾ.....ಅವಳಿಗೆ ತನ್ನ ತಪ್ಪಿನ ಅರಿವಾಗಿದೆ....ಮತ್ತೆ ಮದುವೆಯಾದರೆ ನಾನು ಅದೇ ಹುಡುಗನನ್ನೇ ಆಗುತ್ತೇನೆ ಅಂತ ಬೇರೆ ಹೇಳಿರುವಾಗ ಹುಡುಗ ಒಪ್ಪಬೇಕು ಅಂತ ನನಗನ್ನಿಸುತ್ತೆ" .....ಇದು ಹೇಮಾಶ್ರೀ ಅಭಿಪ್ರಾಯ.


ನನಗೆ ಕತೆ ಮುಂದುವರಿಸುವುದೋ ನಿಲ್ಲಿಸುವುದೋ ತಿಳಿಯಲಿಲ್ಲ....ಅದಕ್ಕಿಂತ ಹೆಚ್ಚಾಗಿ "ಸತ್ಯ" ಗೊತ್ತಾದರೆ ಏನಾಗುತ್ತೋ ಅನ್ನುವ ಭಯವೂ ಶುರುವಾಗಿ.....ಸುಮ್ಮನಾಗಿಬಿಟ್ಟೆ.....


ಇಬ್ಬರೂ ಒತ್ತಾಯಿಸಲಾರಂಭಿಸಿದರು....ನಾನು ಅವರಿಬ್ಬರನ್ನೂ ಒಮ್ಮೆ ನೋಡಿದೆ... ಇನ್ನೂ ಅಲ್ಲೇ ಇದ್ದೇ ಅನ್ನದ ಸೌಟು, ಸಾರಿನ ಸೌಟ್ ಎರಡನ್ನು ಕೈಗೆತ್ತಿಕೊಂಡೆ... ಮತ್ತೇನು ಅಂತವು ಇಲ್ಲವೆಂದು ಗ್ಯಾರಂಟಿ ಮಾಡಿಕೊಂಡ ನಂತರ ದೈರ್ಯ ಬಂತು.....


"ನಾನು ಮದುವೆ ಆಗೊಲ್ಲ ಅಂದೆ....ಅವಳು ಈಶ್ವರೀಯ ಬ್ರಹ್ಮಕುಮಾರಿ ಸೇರಿದಳು...."


ಇಬ್ಬರೂ ನನ್ನ ಮುಖ ನೋಡಿದರು......ಪ್ರಕಾಶ್ ಹೆಗಡೆಗೆ ನಾನೇ ಹುಡುಗನ ಪಾತ್ರಧಾರ ಅಂತ ತಿಳಿದು.....ಏನು ಮಾತಾಡದೇ......ಸುಮ್ಮನಾಗಿಬಿಟ್ಟಿದ್ದಾರೆ....


ಹೇಮಾಶ್ರೀ ಮುಖದಲ್ಲಿ ಮೊದಲು ಆಶ್ಚರ್ಯ....., ಮರುಕ್ಷಣ ಗೊಂದಲ......ಗಲಿಬಿಲಿ.......ನಿದಾನಕ್ಕೆ ಕೋಪ.....ಬರುತ್ತಿದೆ.....ಸುತ್ತಲು ನೋಡಿದಳು......


" ಅಂದ್ರೆ ನನ್ನ ಮದುವೆಯಾಗುವ ಮೊದಲು ನಿಮ್ಮದೂ ಇಷ್ಟೇಲ್ಲಾ ಕತೆ ನಡೆದಿದೆಯಾ......" ಸೌಟು ಹುಡುಕತೊಡಗಿದಳು. ಅದು ಹೀಗೆ ಆಗುತ್ತದೆ ಅಂತ ಗೊತ್ತಿದ್ದರಿಂದ ಮೊದಲೇ ಅವು ನನ್ನ ಕೈಯಲ್ಲಿದ್ದವು.


" ನಾನು ಮೊದಲೇ ಹೇಳಿದ್ದೆನಲ್ಲ ಈ ಕತೆಯನ್ನು" ಅವಳನ್ನು ಸಮಾಧಾನಿಸಲೆತ್ನಿಸಿದೆ....


" ನಿಮ್ಮ ಲವ್ ಸ್ಟೋರಿ ಹೇಳೀದ್ರಾ........" ಕೋಪ ಹಾಗೆ ಇತ್ತು.....ನಿದಾನವಾಗಿ ಇಳಿಯಿತು.


" ಹೇಳಿರಲಿಲ್ಲ.....ಈಗ ಹೇಳಿದ್ದೇನೆ....." ಅದಕ್ಕೆ ಎರಡು ಸೌಟುಗಳನ್ನು ನನ್ನ ಕೈಯಲ್ಲಿಡಿದಿದ್ದೀನಿ........"


ನಾನು ನಗುತ್ತಾ ಹೇಳಿದ ಮಾತಿಗೆ ಇಬ್ಬರೂ ಜೋರಾಗಿ ನಕ್ಕರು.. ಕಾತುರ, ಆಶ್ವರ್ಯ, ಗೊಂದಲದ ವಾತಾವರಣವೆಲ್ಲಾ . ನಗುವಿನ ಅಲೆಯಲ್ಲಿ ತೇಲಿಹೋಗಿತ್ತು.

----------------------------

[ಇದು ನನ್ನ ಬದುಕಿನ ಅತ್ಯಂತ ಮುಖ್ಯ ಘಟ್ಟದ ಮರೆಯಲಾಗದ ನೆನಪು. ಈ ವಿಚಾರವನ್ನು ಯಾರಲ್ಲಿಯೂ [ನನ್ನ ಶ್ರೀಮತಿಯೂ ಸೇರಿಕೊಂಡಂತೆ] ಹೇಳಿಕೊಂಡಿರಲಿಲ್ಲ.......ಬರೆದಿದ್ದನ್ನು ಭಯದಿಂದ ಹಾಗೆ ಎತ್ತಿಟ್ಟಿಬಿಟ್ಟಿದ್ದೆ... ಎಷ್ಟು ದಿನ ಮುಚ್ಚಿಟ್ಟು ಬಚ್ಚಿಡಲು ಸಾಧ್ಯ ? ನಾನು ಹಗುರಾಗಲೇ ಬೇಕಲ್ಲವೇ !...ಚಿತ್ರಾಳ " ಮೈ ಆಟೋಗ್ರಾಫ್" ಮತ್ತು ರಾಜೇಶ್ ಮಂಜುನಾಥ್‌ ನ " ಬದುಕಿನ ಕಾಲಿ ಕ್ಯಾನ್ವಸ್ಸಿನ ಮೇಲೆ ಪ್ರೀತಿ ಎಂದಷ್ಟೇ ಬರೆದು " ಲೇಖನ ಓದಿದ ಮೇಲೆ ಸ್ವಲ್ಪ ದೈರ್ಯ ಬಂದಂತಾಗಿ ಬ್ಲಾಗಿಗೆ ತಳ್ಳಿದ್ದೇನೆ. ಹಾಗೂ ಹುಡುಗಿಯ ಹೆಸರು ಬದಲಿಸಿದ್ದೇನೆ....ನಿಮ್ಮ ಪ್ರತಿಕ್ರಿಯೆಗಳು ಮುಖ್ಯ]


ಚಿತ್ರ ಲೇಖನ.
ಶಿವು.

131 comments:

sunaath said...

ಶಿವು,
ನಾವು ಪ್ರೀತಿ ಎಂದು ತಿಳಿದದ್ದು ಭ್ರಮೆ ಅಂತ ಅರಿವಾದಾಗ, ಆಘಾತ ಆಗತ್ತೆ ಅಲ್ವಾ?
ಒಟ್ಟಿನಲ್ಲಿ ಎಲ್ಲಾ ವಿಧಿಬರೆಹ.
ಆ ಹುಡುಗಿಗಿಂತ ಒಳ್ಳೆಯ ಹುಡುಗಿ ಲಭಿಸುವದು ನಿಮ್ಮ ಹಣೆಯಲ್ಲಿ ಇತ್ತು, ನೋಡಿ!

shivu.k said...

ಸುನಾಥ್ ಸರ್,

ಇದು ನನ್ನ ಅತ್ಯಂತ ಹಳೆಯ ಮತ್ತು ಭಾರವಾದ ಲೇಖನ....ಸದಾ ಈ ಭಾರವನ್ನು ಹೊರಲಾಗದೆ ಹೊರುತ್ತಿದ್ದೆ.....ಇವತ್ತು ದೈರ್ಯ ಮಾಡಿ ಇಳಿಸಿಬಿಟ್ಟೆ....ನಿಮ್ಮ ಮಾತಿನಂತೆ ಆಗುವುದೆಲ್ಲಾ ಒಳ್ಳೆಯದಕ್ಕೆ ಅನ್ನುವಂತೆ ಗೆಳತಿಯಂತ ಒಡತಿ ಸಿಕ್ಕಿದ್ದಾಳೆ...ಧನ್ಯವಾದಗಳು....

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಶಿವೂ, ಚೆಂದನೆಯ ಬರಹ.
ನಿಮ್ಮ ಜೀವನದ ಒಂದು ಮುಖ್ಯವಾದ ಘಟನೆಯನ್ನು ತುಂಬ effective ಆಗಿ, ಅಷ್ಟೇ ಲಘುವಾಗಿ ಬರೆದಿದ್ದೀರಿ. ಇದನ್ನು ಬರೆಯುವುದು ಅಷ್ಟು ಸುಲಭವಾಗಿರಲಿಕ್ಕಿಲ್ಲ ನಿಮಗೆ. ’ಆದದ್ದೆಲ್ಲ ಒಳಿತೇ ಆಯಿತು’ ಎನ್ನುವ ಮಾತನ್ನು ನೂರು ಪ್ರತಿಶತ ಒಪ್ಪುವವರಲ್ಲಿ ನಾನೂ ಒಬ್ಬಳು ನೋಡಿ! :-)

Rajesh Manjunath - ರಾಜೇಶ್ ಮಂಜುನಾಥ್ said...

ಶಿವೂ ಸರ್,
ಬದುಕಿನ ಅನುಭವಗಳು ನೀಡುವ ಮಾಧುರ್ಯ ನಿಜಕ್ಕೂ ಅವರ್ಣನೀಯ. ಚೆಂದದ ನಿರೂಪಣೆ. ಸರಿಯಾದ ನಿರ್ಧಾರ ಕೂಡ ತೆಗೆದುಕೊಳ್ಳುವಲ್ಲಿ ತಡವಾದಾಗ ತಪ್ಪು ನಿರ್ಧಾರವೇ ಆಗಿರುತ್ತದೆ ಎಂಬುದು ನಿಮ್ಮ ಬರಹಕ್ಕೆ ಹೇಳಿ ಮಾಡಿಸಿದಂತಿದೆ. ನಿಮ್ಮ ಶ್ರೀಮತಿಯವರೆದುರು ಹೇಳುವ ಧೈರ್ಯ ಮಾಡಿ ಹೇಳಿದ್ದಕ್ಕೆ ನಿಮ್ಮನ್ನು ಮೆಚ್ಚಲೇ ಬೇಕು.

ಜೊತೆಗೆ ಛಾಯಚಿತ್ರ ರಂಗದಲ್ಲಿ ನಿಮ್ಮ ಸಾಧನೆ ಭಾರತ ಮಾತೆಯ ಮುಕುಟಕ್ಕೆ ಇನ್ನೊದು ಗರಿ, ಈ ಸಂದರ್ಭದಲ್ಲಿ ನಿಮಗೆ ಮತ್ತು ಮಲ್ಲಿಕಾರ್ಜುನ್ ಸರ್ ಗೆ ನನ್ನ ಹೃದಯಾಂತರಾಳದ ಅಭಿನಂದನೆಗಳು.

Annapoorna Daithota said...

ಕಾಲಾಯ ತಸ್ಮೈ ನಮಃ
ಆಗುವುದೆಲ್ಲಾ ಒಳ್ಳೆಯದಕ್ಕೇ...

hEmAsHrEe said...

>>> ಗೆಳತಿಯಂತ ಒಡತಿ ಸಿಕ್ಕಿದ್ದಾಳೆ.

ಶಿವು ಅವ್ರೇ, ನಿಜಕ್ಕೂ ಖುಶಿಯಾಯ್ತು ಬರಹ ಓದಿ ಮತ್ತು ನಿಮ್ಮ ಈ ಸಾಲನ್ನು ಓದಿ.
ಸಂಗಾತಿಯನ್ನು ಗೆಳೆಯ/ಗೆಳತಿಯಂತೆ ಒಪ್ಪಿಕೊಳ್ಳುವ ಮನಸ್ಸು ಆರೋಗ್ಯಕರ ಬಾಳ್ವೆಗೆ ಬಹಳ ಮುಖ್ಯ.

thank you.

shivu.k said...

ಫೂರ್ಣಿಮಾ ಮೇಡಮ್,

ಇಂಥ ಲೇಖನ ಬರೆಯುವುದು ಕಷ್ಟ ಸಾಧ್ಯವೇ ಸರಿ....ಬರೆದು ಮುಗಿಸಿದ ಮೇಲೆ ಸಿಗುವ ಅನುಭವ ವರ್ಣಿಸಲಾಗದು.....

ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ....

shivu.k said...

ರಾಜೇಶ್,

"ಬದುಕಿನ ಅನುಭವಗಳು ನೀಡುವ ಮಾಧುರ್ಯ ನಿಜಕ್ಕೂ ಅವರ್ಣನೀಯ" ಈ ಮಾತನ್ನು ಒಪ್ಪುತ್ತೇನೆ...ಏಕೆಂದರೆ ಆ ರೀತಿ ಅನುಭವಿಸುತ್ತಿದ್ದೇನೆ...ಆ ಕ್ಷಣದ ನಿರ್ದಾರಗಳು ಮರುಕ್ಷಣದಲ್ಲಿ ಬೇರೇನೇ ಅರ್ಥ ಕೊಡುತ್ತಿರುತ್ತವೆ...ನನ್ನಾಕೆಯೆದುರು ಹೇಳಿದಾಗ ಅವಳು ಸುಲಭವಾಗಿ ತೆಗೆದುಕೊಂಡದ್ದು ನನಗೇ ಈಗಲೂ ಆಶ್ಚರ್ಯ ತರುತ್ತಿದೆ......

ಲೇಖನ ಮೆಚ್ಚಿದ್ದಕ್ಕೆ,....ಮತ್ತು ಪ್ರಶಸ್ತಿಗೆ ಅಭಿನಂದಿಸಿದ್ದೀರಿ....ಥ್ಯಾಂಕ್ಸ್....

shivu.k said...

ಅನ್ನಪೂರ್ಣ ಮೇಡಮ್,

ನಿಮ್ಮ ಮಾತು ನಿಜ....ಥ್ಯಾಂಕ್ಸ್....

shivu.k said...
This comment has been removed by the author.
shivu.k said...

ಹೇಮಾಶ್ರೀ ಮೇಡಮ್,


"ಗೆಳತಿಯಂತ ಒಡತಿ ಸಿಕ್ಕಿದ್ದಾಳೆ." ಈ ಸಾಲನ್ನು ಮೆಚ್ಚಿದ್ದೀರಿ...ಇದನ್ನು ಅವಳಿಗೂ ತಿಳಿಸಿದರೇ ಅವಳು ಸಂತೋಷ ಹೆಚ್ಚಾಗಬಹುದು....

ನಮ್ಮ ಮನೆಯಲ್ಲಿ ಅಕೆಗೂ ಪೂರ್ಣ ಅಭಿವ್ಯಕ್ತಿ ಸ್ವಾತಂತ್ರವಿದೆ....ಮುಕ್ತವಾಗಿ ಎಲ್ಲಾ ವಿಚಾರವನ್ನೂ ಚರ್ಚಿಸುತ್ತೇವೆ...ಕೊನೆಯಲ್ಲಿ ಮೂಡಿದ ಅಭಿಪ್ರಾಯಗಳು ಬೇರೆ ಬೇರೆ ಆದರೂ ಅದನ್ನು ಸಮಾನವಾಗಿ ಗೌರವಿಸುತ್ತೇವೆ.

ಧನ್ಯವಾದಗಳು....

Keshav.Kulkarni said...

ಶಿವು,
ಧೈರ್ಯ ನಿಮ್ಮೊಬ್ಬರದೇ ಅಲ್ಲ, ನಿಮ್ಮ ಪತ್ನಿಯದೂ ಇದೆ. ಪ್ರೇಮಿಸದವರುಂಟೆ, ಪ್ರೇಮ ಕಳೆದುಕೊಳ್ಳದವರುಂಟೆ, ಪ್ರೇಮ ಸಿಕ್ಕಿದವರುಂಟೆ, ಪ್ರೇಮ ಸಿಗದವರುಂಟೆ, ಹರಿವ ನೀರಿದು ಶಿವು, ನಿಮ್ಮ ಬರಹ ತುಂಬ ವೈಯಕ್ತಿಕ, ಇದಕ್ಕಿಂತ ಹೆಚ್ಚೇನೂ ಹೇಳಲಾರೆ.
- ಕೇಶವ

shivu.k said...

ಕುಲಕರ್ಣಿ ಸರ್,

ಪ್ರೇಮವನ್ನು ಹರಿವ ನೀರಿಗೆ ಹೋಲಿಸುತ್ತಾ ಕೆಲವು ವಾಸ್ತವ ಉದಾಹರಣೆಗಳನ್ನು ಕೊಟ್ಟಿದ್ದೀರಿ.....ನನ್ನಾಕೆ ಜೊತೆಗಿನ ದೈರ್ಯವೇ....ಈ ಬರವಣಿಗೆ....ಹೀಗೆ ಬರುತ್ತಿರಿ....

ಧನ್ಯವಾದಗಳು.....

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಜೀವನದಲ್ಲಿ ನಡೆಯುವ ಈ ರೀತಿಯ ಸೂಕ್ಷ್ಮ, ಸಂದಿಗ್ದ, ಘಟನೆಗಳನ್ನು ಹೇಳಿಕೊಳ್ಳುವುದೇ ಕಷ್ಟ. ಅಂತಹುದರಲ್ಲಿ ಬರೆದಿದ್ದೀರ.. ಮನತಟ್ಟುವಂತೆ. ನಿವು ಗೆದ್ದಿದ್ದೀರಿ.. ಜೀವನದಲ್ಲೂ...

Anonymous said...

ಶಿವೂ ಅವರೇ,
ಆಗುವುದೆಲ್ಲಾ ಒಳ್ಳೇದಕ್ಕೆ ಅನ್ನುವುದಕ್ಕೆ ಇದಕ್ಕಿಂತ ಒಳ್ಳೆ ಉದಾಹರಣೆ ಇಲ್ಲ! ಯಾರಿಗೂ ಹೇಳದೆ ಬಚ್ಚಿಟ್ಟ ವಿಷಯಗಳನ್ನು ಬರೆದಾಗ ಮನಸ್ಸು ಹಗುರಾಗುವುದು ನಿಜ.
ತುಂಬಾ ಚೆನ್ನಾಗಿ ಬರೆದಿದ್ದೀರಿ.

Royal society associate ಆಗಿದ್ದಕ್ಕೆ ನಿಮಗೂ, ಮಲ್ಲಿಕಾರ್ಜುನ್ ಅವರಿಗೂ ಹೃತ್ಪೂರ್ವಕ ಅಭಿನಂದನೆಗಳು.

shivu.k said...

ಮಲ್ಲಿಕಾರ್ಜುನ್

ಇಂಥ ವಿಚಾರಗಳನ್ನು ಹೇಳಿಕೊಳ್ಳುವುದು ತುಂಬಾ ಕಷ್ಟದ ವಿಚಾರ...ಅದರೂ ದೈರ್ಯವಹಿಸಿದ್ದೇನೆ....ಪ್ರತಿಕ್ರಿಯೆಗಳು ಹೇಗೆ ಬರುತ್ತವೋ ಕುತೂಹಲವಿದೆ....ಧನ್ಯವಾದಗಳು...

shivu.k said...

ಜ್ಯೋತಿ ಮೇಡಮ್,

ಹಗುರಾಗುವುದು ಅಂದ್ರೆ ಹೀಗೇನಾ....ಈಗ ಗೊತ್ತಾಗುತ್ತಿದೆ...ಅದರ ನಿಜವಾದ ನಿರಾಳತೆ....ನಿಮ್ಮ ನನಗೆ ಮುಖ್ಯವಾಗಿ ನಿಮ್ಮಂಥ ಹೆಣ್ಣುಮಕ್ಕಳ ಪ್ರತಿಕ್ರಿಯೆ ಬಗ್ಗೆ ತುಂಬಾ ಕುತೂಹಲವಿತ್ತು. ಮತ್ತು ಭಯವೂ ಇತ್ತು....ಅದ್ರೆ ಈಗ ಎಲ್ಲಾ ನಿರಾಳ ಮತ್ತು ಸೊಗಸು..

ಪ್ರಶಸ್ತಿಯ ಅಭಿನಂದನೆಗಳಿಗೆ ಧನ್ಯವಾದಗಳು...

Umesh Balikai said...

ಅಬ್ಬ್ಬ!
ಪ್ರತಿಯೊಬ್ಬರ ಜೀವನದಲ್ಲೂ ಏನೇನೆಲ್ಲ ನಡೆದಿರುತ್ತಲ್ಲ ಅಂತ ಆಶ್ಹರ್ಯ ಆಗ್ತಿದೆ. ಆ ವಯಸ್ಸಿನಲ್ಲಿ ಹುಡುಗಿ ಎಷ್ಟೇ ಓದಿದ್ದರೂ ಹಿರಿಯರು ಹೇಳಿದ್ದೆಲ್ಲ ನಿಜವೇನೋ ಅಂತ ಅಂದುಕೊಂಡಿರುವುದೇನೂ ಸೋಜಿಗವಲ್ಲ ಬಿಡಿ; ಪಾಪ, ಅಷ್ಟರ ಮಟ್ಟಿಗೆ ಆ ಹುಡುಗಿಯ ಬ್ರೈನ್ ವಾಶ್ ಮಾಡಿಬಿಟ್ಟಿದ್ದ ರೇನೋ. ಆದರೆ, ನೀವು ನಿರಾಕರಿಸಿದ್ದಕ್ಕೆ ಹುಡುಗಿ ಬ್ರಹ್ಮಕುಮಾರಿ ಸೇರಿದ್ದು ಮಾತ್ರ ತುಂಬಾ ಬೇಸರ ಮೂಡಿಸಿತು.

Laxman (ಲಕ್ಷ್ಮಣ ಬಿರಾದಾರ) said...

ಶಿವು ಅವರೆ ,
ಬರಹದ ನಿರೂಪಣೆ ಚೆನ್ನಾಗಿದೆ.
ಬದುಕಿನ ನಿಜವಾದ ಘಟನೆಯನ್ನು ಬರೆಯುವುದು ತುಂಬಾ ಕಷ್ಟ.
ನಿಮ್ಮ ನಿರ್ಧಾರ ನನಗೆ ಸರಿಯೆನಿಸಿತು.
“ಗೆಳತಿಯಂತ ಒಡತಿ ಸಿಕ್ಕಿದ್ದಾಳೆ."
ಎಂಬ ನಿಮ್ಮ ಅಭಿಪ್ರಾಯ ತುಂಬಾ ಹಿಡಿಸಿತು.
ಆದರೆ ಏಕೊ ಏನೊ “ಅವಳು ಈಶ್ವರೀಯ ಬ್ರಹ್ಮಕುಮಾರಿ ಸೇರಿದಳು....”
ಮನಸ್ಸಿಗೆ ತುಂಬಾ ಖೇದವನ್ನುಂಟು ಮಾಡಿತು.

“ಕೆಲವೊಮ್ಮೆ ಮಾತುಗಳು ಸಮಸ್ಯೆಯನ್ನ ಹುಟ್ಟು ಹಾಕುತ್ತವೆ.
ಕೆಲವೊಮ್ಮೆ ಮಾತಾಡದಿದ್ದರೆ ಸಮಸ್ಯೆ ಹಾಗೆಯೇ ಉಳಿದುಕೊಳ್ಳುತ್ತವೆ.”

ಪ್ರೀತಿಯಿಂದ
ಲಕ್ಷ್ಮಣ

ಹರಟೆ ಮಲ್ಲ said...

ನಾನು ಸಧ್ಯಕ್ಕೆ 'engage' ಆಗಿರೋ ಹುಡುಗ... ಮನೆಯವರು ಒಬ್ಬರಿಗೊಬ್ಬರನ್ನು ತೋರಿಸಿದ ಮೇಲೆ ಒಪ್ಪಿ ತುಂಬಾನೇ ಹತ್ತಿರ ಆಗಿದ್ದೇವೆ... ಮದುವೆ ದಿನಾಂಕ ಇನ್ನ ತಿರ್ಮಾನಿಸಿಲ್ಲ... ನನ್ನ ಹುಡುಗಿಗೆ ನಿಮ್ಮ ಲೇಖನ ತೋರಿಸ್ತೀನಿ...

Anonymous said...

ಶಿವೂ ಅವರೇ,
ಅವಳು ಬ್ರಹ್ಮಕುಮಾರಿಗೆ ಸೇರಿದ್ದು ಸ್ವಲ್ಪ ಬೇಜಾರಾದರೂ ಅದು ಅವಳ ನಿರ್ಧಾರ ತಾನೇ.
ಅವಳು ಯಾರದ್ದೋ ಮಾತು ಕೇಳಿ ಬೇಡ ಅಂತ ಹೇಳಿದ ಮೇಲೆ ನೀವೇನಾದರೂ ಹಿಮಾಲಯಕ್ಕೋ/ಕಾಶಿಗೋ ಹೋಗಿ ಸನ್ಯಾಸ ತೆಗೆದುಕೊಂಡಿದ್ದಾರೆ? ನಿರ್ಧಾರ ಮಾಡುವುದು ನಿಮ್ಮ ಕೈಯಲ್ಲಿತ್ತು. ನಿಮಗೇನು ಸರಿ ಎನಿಸಿತೋ ನೀವು ಮಾಡಿದಿರಿ. ಅದೇ ರೀತಿ ಅವಳಿಗೂ ಬೇರೆ options ಇತ್ತು, ಆದರೆ ಬ್ರಹ್ಮ ಕುಮಾರಿಯಾಗುವುದು ಅವಳ ನಿರ್ಧಾರ. ಅದಕ್ಕೋಸ್ಕರ ನಾವು ಅಳುವುದು ಸರಿಯಲ್ಲ ಎನ್ನುವುದು ನನ್ನ ಭಾವನೆ.

Greeshma said...

ಹೀಗೆ ಆಗ್ಬೇಕು ಅಂತ ಇದ್ರೆ ತಡಿಯೋದಕ್ಕೆ ಯಾರಿಂದನೂ ಆಗೋದಿಲ್ಲ.
time is the healer.ನೀವು ಸಂತೋಷವಾಗಿದ್ದೀರ. ಅವರು ಬ್ರಹ್ಮಕುಮಾರಿ ಆಗಿ ಖುಷಿಯಲ್ಲಿ ಇರಬಹುದು.
ಇಷ್ಟು ವರ್ಷ ಆದಮೇಲೆ ಬರಿಯೋ ಧೈರ್ಯ ಮಾಡಿದ್ದೀರ. Great!

Royal society associate ಆಗಿದೀರಾ ಅಂತ ಕೇಳಿ ಖುಷಿ ಆಯ್ತು. ಅಭಿನಂದನೆಗಳು!

Lakshmi Shashidhar Chaitanya said...

hmm...nirdhaara tagobekaadre hushaaraagirbeku. illandre obrige niraala, innobrige paschaattappa !

shivu.k said...

ಉಮಿ ಸರ್,

ಇದು ನನ್ನ ಜೀವನದ ಒಂದು ಅನುಭವ ಅಷ್ಟೇ...ನನ್ನಂತೆ ಇದೇ ರೀತಿ ಬೇರೆಯವರಿಗೆ ಬೇರೆ ಬೇರೆ ಅನುಭವಗಳು ಎಷ್ಟೋ ಅಲ್ಲವೇ....ಮತ್ತೆ ಅಂದು ಒಂದು ರೀತಿ ಸಿನಿಮೀಯವಾಗಿ ಎಲ್ಲಾ ನಡೆದಿತ್ತು. ಈಶ್ವರೀಯ ಬ್ರಹ್ಮ ಕುಮಾರಿಗೆ ಆ ಹುಡುಗಿ ಮದುವೆ ಬೇಡವೆಂದು ತೀರ್ಮಾನಿಸಿದ್ದಳಂತೆ.....ಮೂರು ವರ್ಷಗಳ ನಂತರ ಅವಳನ್ನು ಮದುವೆಗೆ ಒಪ್ಪಿಸಲು ಅವರ ಹಿರಿಯರಿಗೆ ಸಾಕು ಬೇಕಾಯಿತಂತೆ....

ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

PARAANJAPE K.N. said...

ಶಿವೂ,
ನಿಮ್ಮ ಮನಸಿನ ಭಾರವನ್ನು ಇಳಿಸಿ ಹಗುರಾಗಿದ್ದಿರಿ. ಚೆನ್ನಾದ ನಿರೂಪಣೆಯ ಸಾಥ್ ಕೊಟ್ಟಿದ್ದೀರಿ. ಮನಸಿನಾಳದಿ೦ದ ಬರುವ ಇ೦ತಹ ಬರಹಗಳು ಯಾವಾಗಲೂ ಚೆನ್ನಾಗಿರುತ್ತವೆ. ಹೀಗೆಲ್ಲ ಆದಾಗಲೇ "ಆಗುವುದೆಲ್ಲ ಒಳ್ಳೆಯದಕ್ಕೆ" ಅ೦ತ ನಾವನ್ನುತ್ತೇವಲ್ಲ, ಅದು ಒ೦ದುರೀತಿ ಸರಿಯೆನಿಸುತ್ತದೆ, ಅಲ್ವೇ ?

shivu.k said...

ಲಕ್ಷ್ಮಣ್ ಸರ್,

ಬದುಕಿನ ಕೆಲವು ಸತ್ಯಗಳನ್ನು ಬರೆಯುವಾಗ ತುಂಬಾ ಕಷ್ಟವಾಗುತ್ತದೆ....ಒಂದು ನೀರಿಗಿಳಿಯುವಾಗ ಭಯಪಟ್ಟಂತೆ...ನಂತರ ಇಳಿದ ಮೇಲೆ ಚಳಿಯೇನು ಮಳೆಯೇನು ಅನ್ನುವಂತಾಗುತ್ತದೆ....ಈಗ ನನಗೂ ಅದೇ ಭಂಡ ದೈರ್ಯ ಬಂದಿದ್ದರಿಂದ ಬರೆದಿದ್ದೇನೆ...ನೀವೆಲ್ಲಾ ಈ ರೀತಿ ಸ್ವೀಕರಿಸುತ್ತಿರುವುದು ನನಗೆ ಖುಷಿಯಾಗುತ್ತಿದೆ...

“ಕೆಲವೊಮ್ಮೆ ಮಾತುಗಳು ಸಮಸ್ಯೆಯನ್ನ ಹುಟ್ಟು ಹಾಕುತ್ತವೆ.
ಕೆಲವೊಮ್ಮೆ ಮಾತಾಡದಿದ್ದರೆ ಸಮಸ್ಯೆ ಹಾಗೆಯೇ ಉಳಿದುಕೊಳ್ಳುತ್ತವೆ.”

ಮಾತಿನ ಪರಿಣಾಮಕ್ಕೆ ಮೇಲಿನ ವಾಕ್ಯಗಳು ಉತ್ತಮ ಉದಾಹರಣೆ...

ನನ್ನಾಕೆ ಈಗ ನಿಜಕ್ಕೂ ಗೆಳತಿಯೇ...ಆಗಿದ್ದಾಳೆ...

ಆ ಹುಡುಗಿಗೆ ಈಗ ಮದುವೆಯಾಗಿದೆ....

ನಿಮ್ಮದು ತುಂಬಾ ಅರ್ಥಗರ್ಭಿತ ಪ್ರತಿಕ್ರಿಯೆ ಧನ್ಯವಾದಗಳು...

shivu.k said...

ಸಂತೋಷ್ ಕುಮಾರ್,

ನಿಮಗೆ ನನ್ನ ಬ್ಲಾಗಿಗೆ ಸ್ವಾಗತ...ನೀವು ನನ್ನ ಬ್ಲಾಗ್ ಹಿಂಬಾಲಿಸುತ್ತಿರುವುದು ಖುಷಿಯಾಯಿತು....

ಮತ್ತೆ ನೀವು engage ಆಗಿರುವುದಕ್ಕೆ ಅಭಿನಂದನೆಗೆಳು. ನಿಮ್ಮ ಭಾವಿ ಬಾಳ ಸಂಗಾತಿಗೂ ನನ್ನ ಅಭಿನಂದನೆಗಳನ್ನು ತಿಳಿಸಿ....ಈ ಕತೆಯನ್ನು ಓದಿದ ಅವರ ಪ್ರತಿಕ್ರಿಯೆಯನ್ನು ತಿಳಿಸಿ....ಕಾಯುತ್ತಿರುತ್ತೇನೆ..

ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

Unknown said...

ನಿಮ್ಮ ಬರಹದ ಭಾವ ಮತ್ತು ನಿರೂಪಣೆಯ ಶೈಲಿ ನನಗೆ ಇಷ್ಟವಾಯಿತು.

ಆ ಹುಡುಗಿಯ ಮೊದಲ ನಿರಾಕರಣೆ ಮತ್ತು ಬಳಿಕದ ಒಪ್ಪಿಗೆಯಲ್ಲಿ ಎಷ್ಟು ಮಂಥನ ಅವಳ ಒಳಗೆ ನಡೆದಿರಬಹುದು ಎಂದು ಊಹಿಸಿದಲ್ಲಿ ದಿಗಿಲಾಗುತ್ತದೆ. ನಾವಿಲ್ಲಿ ಹುಡುಗಿಯರು ಎಷ್ಟು ವಿದ್ಯಾವಂತರಾದರೂ ಸ್ವಂತ ನಿರ್ಧಾರ ತೆಗೆದುಕೊಳ್ಳುವಲ್ಲಿ ಬಾಲ್ಯದಿಂದ ಪ್ರತಿಬಂಧಿತರು ಎಂಬುದನ್ನು ಮರೆಯುತ್ತಿದ್ದೆವೋ ಎಂದನಿಸುತ್ತಿದೆ. ಆದರೂ ಆ ಹುಡುಗಿ ತನ್ನ ತೊಳಲಾಟ, ಒತ್ತಡಗಳಿಂದ ಹೊರಬಂದು ತನ್ನ ಮನದ ಮಾತನ್ನೇ ಆಯ್ದುಕೊಂಡಾಗ ಹುಡುಗ ನಿರಾಕರಿಸಿದ್ದು ಒಂದು ರೀತಿಯಲ್ಲಿ ಗಂಡು ಇಗೋವನ್ನು ಸಮಾಜ ಪ್ರೊಗ್ರಾಮಿಂಗ್ ಮಾಡಿರುವ ರೀತಿಯನ್ನು ತೋರಿಸುತ್ತದೆ.

ನೀವು ಹಗುರಾಗಿ ನಮ್ಮನ್ನು ಭಾರವಾಗಿಸಿದ್ದೀರಿ.

AntharangadaMaathugalu said...

ಶಿವು ಸರ್
ನಿಮ್ಮ ಬರಹದ ಶೈಲಿ ನನಗೆ ತುಂಬಾ ಇಷ್ಟ ಆಯಿತು. ಸಮಯದಲ್ಲಿ ಸರಿಯಾದ ನಿರ್ಧಾರ ತಗೆದುಕೊಳ್ಳದಿದ್ದರೆ, ಬದುಕು ಎಷ್ಟೊಂದು ಭಾರಿಯಾಗಿಬಿಡತ್ತೆ ಅನ್ನುವುದು ತುಂಬಾ ಸತ್ಯ. ಹುಡುಗಿ ತನ್ನ ಮನಸ್ಸಾಕ್ಷಿಯನ್ನು ಬಿಟ್ಟು, ಇನ್ನೊಬ್ಬರ ಸಲಹೆಗೆ ಮಾನ್ಯತೆ ಕೊಟ್ಟಿದ್ದಕ್ಕೆ ತೆತ್ತ ದಂಡ ನಿಮ್ಮಂತಹ ಸಹ್ರುದಯರನ್ನು, ಶಾಶ್ವತವಾಗಿ ಕಳೆದುಕೊಂಡಿದ್ದು. So a certain somebody's loss is somebody's gain. ಗೆಳತಿಯಂತಹ ಸಂಗಾತಿಯನ್ನು ಪಡೆದಿರುವ ನಿಮಗೆ ನನ್ನ ಹಾರ್ದಿಕ ಶುಭಾಷಯಗಳು.

ಶ್ಯಾಮಲ

ಮನಸು said...

ಶಿವೂ ಸರ್,
ಎಲ್ಲರ ಜೀವನದಲ್ಲಿ ಒಂದೊಂದು ನಿರಾಸೆ ಮೂಡಿರುತ್ತೆ.. ಆದರೆ ನಿರಾಸೆಯೇ ಜೀವನವಾಗಬರದು... ನೀವು ಇಸ್ಟುದಿನ ಮುಚ್ಚಿಟ್ಟ ಗುಟ್ಟು ಹೇಗೋ ಹೊರಬಂದಿದೆ.. ಹ ಹ ಹ ಋಣಾನುಬಂದೆ ರೂಪೇನ ಪಶುಪತ್ನಿ ಸುತಾಲಯಹ ಎಂದು ಅಸ್ಟಕಿಲ್ಲದೆ ಹೇಳುತ್ತರ ಹೇಳಿ.. ಹೇಮಶ್ರೀ ಅವರು ನಿಮಗಾಗಿ ಕಾಯುತ್ತಿದ್ದರು ಅದಕ್ಕೆ ಆ ಮದುವೆ ಮಾತು ಮುರಿದಿತ್ತು.. ಆಗುವುದೆಲ್ಲ ಒಳ್ಳೆಯದಕ್ಕೆ..
ಜೀವನದಲ್ಲಿ ಬಂದು ಹೋಗುವರೆಸ್ಟೋ ಅದರಲ್ಲಿ ಕೊನೆವರೆಗೆ ಉಳಿಯುವರೆಸ್ಟೋ ತಿಳಿಯದು..ನೀವು ನಿಮ್ಮ ಪತ್ನಿಗೆ ಹೇಳಿ ಒಳ್ಳೆ ಕೆಲಸಮಾಡಿದಿರಿ..ಕ್ಷಣದಲ್ಲಿ ಕೋಪ ಹುಸಿ ಮುನಿಸು ಇದ್ದರು ಒಳಮನದಲಿ ನಿಮ್ಮ ಮೇಲೆ ಗೌರವ ಇರುತ್ತೆ.
ಗುಟ್ಟು ಹೊರದೂಡಿ.. ಈಗ ಲಘುವಾಗಿದೆ ಮನ,ಗೆಲುವಾಗಿದೆ ಮನ ಅಲ್ಲವೇ..? ನಿಮ್ಮ ಜೀವನ ಸುಖಮಯ ಸಂತೋಷಮಯವಾಗಿರಲೆಂದು ಆಶಿಸುತ್ತೇನೆ..(ಇನ್ನು ಬೇರೆನಾದರು ಗುಟ್ಟಿದ್ದರೆ ಮೊದಲೇ ಹೇಳಿಬಿಡಿ.. ಆಮೇಲೆ ಸೌಟು ಹೋಗಿ ಹಿಟ್ಟಿನ ಕೋಲು ಬರುವಹಾಗೆ ಮಾಡಿಕೊಳ್ಳ ಬೇಡಿ.. ಹ ಹ ಹ )
ಧನ್ಯವಾದಗಳು ಇಂತಹ ವಿಷಯವನ್ನು ಮುಕ್ತವಾಗಿ ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ....
ವಂದನೆಗಳು..

Anonymous said...

ಶಿವು,
ಹುಡುಗಿ ಸ್ವಯಂ ನಿರ್ಧಾರ ಕೈಗೊಳ್ಳುವ ಮಟ್ಟಕ್ಕೆ ಬೆಳೆದಿದ್ದಾಳೆ ಮತ್ತು ಹುಡುಗ ಒಳ್ಳೆಯವನೇ ಅಂತ ಒಪ್ಪಿಕೊಂಡಿದ್ದ ಹೆತ್ತವರು, ತಮ್ಮ ಮಗಳ ಪರಿಸ್ಥಿತಿಯ ಬದಲಾಗಿ, ಬೇರೊಬ್ಬರ ಮಾತಿಗೆ ಬೆಲೆ ಕೊಡಬಾರದಿತ್ತು....

ನಿಮಗೆ ಆದ ಆಘಾತ ಮತ್ತು ಬೇರೆಯವರ ಮಾತು ಕೇಳಬೇಕೆಂಬ ಒತ್ತಡಕ್ಕೀಡಾದ ಆ ಹುಡುಗಿಯ ಮನಸಿನೊಳಗೆ ಆಗಿದ್ದಿರಬಹುದಾದ ಸಮುದ್ರಮಥನ ನೆನಪಿಸಿಕೊಂಡರೆ ನೋವಾಗುತ್ತದೆ.

ಆದರೆ, ಋಣಾನುಬಂಧೇನ ರೂಪೇಣ... ಅಂತ ಹೇಳಿಕೊಂಡು, ಹಳೆಯದನ್ನು ಮರೆತುಹಬಿಡೋದು, ಭಾರ ಇಳಿಸಿಕೊಳ್ಳೋದು ಒಳ್ಳೇದು.

ಛಾಯಾಚಿತ್ರಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ದೊರೆತಿದ್ದಕ್ಕೆ ಶುಭಾಶಯಗಳು
-ಅವಿನಾಶ್

Unknown said...

ಹುಹ್... ಹೀಗೂ ಉಂಟೆ?????
ಪ್ರೀತಿಗೆ ಸಂಬಂಧಿಸಿದ ಘಟನೆಗಳು (ಬಹುಶ) ಎಲ್ಲರ ಜೀವನದಲ್ಲೂ ನಡೆದಿರುತ್ತವೆ... ಕೆಲವರು ಹೇಳ್ಕೊತಾರೆ (ಧೈರ್ಯಮಾಡಿ) :-).....
"ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ........."

http://ravikanth-gore.blogspot.com

ಗಿರಿ said...

ಪ್ರೀತಿಯ ಶಿವಣ್ಣಾ,
ಹಾಡು ಹಳೆಯದಾದರೆನು....? ಭಾವ ನವ ನವೀನ...!!
ಎಲ್ಲೂ ನೋವಿನ ಸುಳಿವನ್ನು ಕೊಡದೆ, ಸರಳವಾಗಿ ಹಾಗೂ ಸರಾಗವಾಗಿ(ಜೊತೆಗಿರುವ ಶೃಂಗಾರವನ್ನು ಹೇಳದಿರುವಂತಿಲ್ಲ...!) ಬರೆದು ನಿಮ್ಮ ನೆನಪನ್ನು ಕೃತಿಯಾಗಿಸಿದ್ದೀರಾ...
ಸ್ವಾರಸ್ಯಕರವಾಗಿ ಬರೆದಿದ್ದೀರಾ...ಬರೆದು ನಿರಾಳರಾಗಿದ್ದೀರಾ...
ಕೊನೆಯಲ್ಲಿ ಹೇಳಿದ್ರಲ್ಲಾ... "ಬರೆದಿದ್ದನ್ನು ಭಯದಿಂದ ಹಾಗೆ ಎತ್ತಿಟ್ಟಿಬಿಟ್ಟಿದ್ದೆ... ಎಷ್ಟು ದಿನ ಮುಚ್ಚಿಟ್ಟು ಬಚ್ಚಿಡಲು ಸಾಧ್ಯ ? ನಾನು ಹಗುರಾಗಲೇ ಬೇಕಲ್ಲವೇ !" ಅಂತ..... ಹಗುರವಾಗುವುದು ಅರ್ಥ ಆಗುತ್ತೆ.. ಜೊತೆಗೆ... ಹೆದರಿಕೆಯದ್ದೂ...
ಮತ್ತೆ, ಆಶ್ರಮಕ್ಕೆ ಹೋಗಿ ತಿರುಗಿ ಬಂದ್ರಲ್ಲ... ನಮಗದೇ ಸಾಕು... ಇಲ್ಲದಿದ್ರೆ, ಈ ಬಿಕನಾಸಿ ಬ್ಲಾಗು, ಜೊತೇಲಿರೋ ನಿಮ್ ಪಾತರಗಿತ್ತಿ ಕ್ಯಾಮರಾ, ನಿಮ್ ಕಥೆ, ನಿಮ್ ಪ್ರೊತ್ಸಾಹ, ನಮ್ಮಣ್ಣನಿಗೆ ಬಂದಿರೋ ಅಂತರ್ ರಾಷ್ಟ್ರೀಯ ಪ್ರಶಸ್ತಿ, ಅದಕ್ಕಾಗಿರೋ ನಮ್ ಸಂಭ್ರಮ... ಎಲ್ಲಾ ಇರ್ತಿರ್ಲಿಲ್ಲ...
ಹೇಮಕ್ಕನಿಗೆ ನನ್ನ ನಮಸ್ಕಾರ ತಿಳಿಸಿ...
ಜೊತೆಗೆ... ಪ್ರಶಸ್ತಿಗಳ ಸರದಾರನಿಗೊಂದು ಜಯಕಾರದೊಂದಿಗೆ,
-ಗಿರಿ

ಸಾಗರದಾಚೆಯ ಇಂಚರ said...

ಶಿವೂ ಅವರೇ,
ಅಂತೂ ಒಂದು ದೊಡ್ಡ ಪ್ರೆಮಕಥೆಯೇ ಇದೆ ಅನ್ನಿ. ತುಂಬಾ ಸೊಗಸಾಗಿ ವಿವರಿಸಿದ್ದೀರಿ,
ನಮ್ಮನ್ನು ನಗಿಸಿದ್ದಕ್ಕೆ ಧನ್ಯವಾದಗಳು
- ಗುರು

ಶಿವಪ್ರಕಾಶ್ said...

ಶಿವು ಅವರೇ,
ಆ ಹುಡುಗಿ ತೆಗುದುಕೊಂಡ ನಿರ್ಧಾರ ಕೇಳಿ, ಬೇಸರವಾಯಿತು..
ನನಗೆ ಇ ಬ್ರಹ್ಮಕುಮಾರಿ, ಸನ್ಯಾಸತ್ವದಲ್ಲಿ ನಂಬಿಕೆ ಇಲ್ಲ..
ನಾ ಏನನ್ನು ಕಳೆದುಕೊಂಡರು, ಅದನ್ನು ಆದಸ್ಟು ಮರೆಯಲೆತ್ನಿಸಿ, ಮತ್ತೆ ಸಂತೋಷ ಹುಡುಕಿಕೊಳ್ಳುತ್ತೇನೆ...
ನೀವು ಬೇಡ ಎಂದು ಹೇಳಿದ್ದರಲ್ಲಿ ತಪ್ಪಿಲ್ಲ, ಹಾಗೆಂದು ಸರಿ ಎನ್ನಲಾರೆ ( ಏಕೆಂದರೆ, it depends on our mental condition at that moment )...

ನಿಮ್ಮ ಕಥೆ ಕೇಳುತ್ತಾ ನನ್ನ ಹೃದಯಚೋರ (http://urshivabmf.blogspot.com/2009/01/blog-post.html) ಕಥೆ ಜ್ಞಾಪಕವಾಯಿತು...

Anonymous said...

ಜ್ಯೋತಿ,

"ಆಗುವುದೆಲ್ಲಾ ಒಳ್ಳೇದಕ್ಕೆ ಅನ್ನುವುದಕ್ಕೆ ಇದಕ್ಕಿಂತ ಒಳ್ಳೆ ಉದಾಹರಣೆ ಇಲ್ಲ" ಅಂತ ಹೇಳಿದೀರ.
ಇಲ್ಲಿ ಯಾರ ಒಳ್ಳೇದು, ನಿಮ್ಮರ್ಥದಲ್ಲಿ ಒಳ್ಳೇದು ಅಂದ್ರೆ ಏನು, ಹೀಗಾಗ್ದೆ ಇನ್ನೊಂದ್ ರೀತಿ ಆಗಿದ್ರೆ ಅದು ಹೇಗೆ ಒಳ್ಳೇದು ಆಗ್ತಾ ಇರ್ಲಿಲ್ಲ ಅಂತಾ ಹೇಳ್ತೀರ?

"ಅವಳು ಬ್ರಹ್ಮಕುಮಾರಿಗೆ ಸೇರಿದ್ದು ಸ್ವಲ್ಪ ಬೇಜಾರಾದರೂ ಅದು ಅವಳ ನಿರ್ಧಾರ ತಾನೇ. ಅವಳು ಯಾರದ್ದೋ ಮಾತು ಕೇಳಿ ಬೇಡ ಅಂತ ಹೇಳಿದ ಮೇಲೆ ನೀವೇನಾದರೂ ಹಿಮಾಲಯಕ್ಕೋ/ಕಾಶಿಗೋ ಹೋಗಿ ಸನ್ಯಾಸ ತೆಗೆದುಕೊಂಡಿದ್ದಾರೆ? "
ತುಂಬಾ ಬೇಸರವಾಯ್ತು ನಿಮ್ಮೀ ಸಾಲನ್ನು ಓದಿ!

-
ಸಿಂಚನ

shivu.k said...

ಜ್ಯೋತಿ ಮೇಡಮ್,

ಮತ್ತೆ ಬಂದು ಪ್ರತಿಕ್ರಿಯಿಸಿದ್ದೀರಿ....ಈಗ ನಿಮ್ಮ ಅಭಿಪ್ರಾಯದಲ್ಲಿ ಅವರವರ ನಿರ್ಧಾರ ಆ ಸಮಯಕ್ಕೆ ಸರಿ ಎಂದು ಹೇಳುತ್ತಿದ್ದಿರಿ.....ನಿಮ್ಮ ಮಾತು ನಾನು ಒಪ್ಪುತ್ತೇನೆ...ನಾನು ಲೇಖನದಲ್ಲಿ ಎಲ್ಲೂ ಯಾರನ್ನು ವಿರೋಧವಾಗಿ ಚಿತ್ರಿಸಿಲ್ಲ....ಹುಡುಗನು ತುಂಬಾ ಒಳ್ಳೆಯವನೆಂದು ಬಿಂಬಿಸಿಲ್ಲ.....ಎಲ್ಲರೂ ಆ ಸಮಯದಲ್ಲಿ ಆಗುವ ಒತ್ತಡಗಳಿಗೆ, ಸಂಧರ್ಭಗಳಿಗೆ, ಅವರವರ ವಯಸ್ಸಿಗೆ ತಕ್ಕಂತೆ ನಡೆದುಕೊಂಡಿರುವುದರಿಂದ ಆ ಸಮಯಕ್ಕೆ ಎಲ್ಲವೂ ಅವರವರ ಭಾವಕ್ಕೆ ಸರಿಯಾಗಿದೆ. ನಿಜಕ್ಕೂ ನಡೆದದ್ದು ಅದೇನೆ...ಮತ್ತೆ ನಾನು ಹೋಗಿದ್ದು...ಬೇಸರದಿಂದ ಸನ್ಯಾಸಕ್ಕೆ ಅಲ್ಲ...ಹೋಗಿದ್ದು ನಾಲ್ಕೆ ದಿನ. ವಾಪಸ್ಸು ಬಂದಾಗ ಎಲ್ಲಾ ಮರೆತು ಹೊಸ ಮನುಷ್ಯನಾಗಿದ್ದೆ. ಅದೊಂದು ರೀತಿ ಪುಣ್ಯಕ್ಷೇತ್ರ ಹೋಗಿ ಬಂದಂತೆ. ಆಷ್ಟೇ. ಇಡೀ ಲೇಖನ ಓದಿದಾಗ ಆಳು ಬರುವಂತೆ ಬರೆದಿಲ್ಲ....ಮತ್ತೆ ಕೊನೆಯಲ್ಲಿ ಅಳುಗಿಂತ ನಗುವೇ ಬರುತ್ತದೆ....

ಒಟ್ಟಾರೆ ವಸ್ತುಸ್ಥಿತಿಗೆ ಕನ್ನಡಿ ಹಿಡಿದಿದ್ದೇನೆ. ಆಷ್ಟೇ.
ಧನ್ಯವಾದಗಳು.

shivu.k said...

ಗ್ರೀಷ್ಮ ಮೇಡಮ್,

ಕಾಲವೇ ನಮಗೆ ತಕ್ಕ ಮದ್ದು ಅನ್ನುವ ಮಾತು ನನ್ನ ವಿಚಾರದಲ್ಲಿ ನಿಜವಾಗಿದೆ. ನಾನು ತುಂಬಾ ಸಂತೋಷವಾಗಿದ್ದೇನೆ. ಆಕೆಯೂ ಈಗ ಮದುವೆಯಾಗಿದ್ದಾಳೆ..

ಬರೆಯುವ ದೈರ್ಯವಂತೂ ಇತ್ತೀಚೆಗೆ ಹೆಚ್ಚಾಗಿದೆ. ಜೊತೆಗೆ ಎಲ್ಲವನ್ನು ಹಂಚಿಕೊಳ್ಳವ ಕಾತುರವೇ...ನಮ್ಮನ್ನು ಮತ್ತಷ್ಟು ಸಂತೋಷಪಡುವಂತೆ ಮಾಡುತ್ತದಂತೆ.

ನನ್ನ ಪ್ರಶಸ್ಥಿಗೆ ಅಭಿನಂದಿಸಿದ್ದೀರಿ...ಧನ್ಯವಾದಗಳು.

shivu.k said...

ಲಕ್ಷ್ಮಿ ಮೇಡಮ್,

ನಿಮ್ಮ ಅಭಿಪ್ರಾಯವನ್ನು ಪ್ರಾಮಾಣಿಕವಾಗಿ ಒಪ್ಪುತ್ತೇನೆ...ಏಕೆಂದರೆ ಉಷಾಳಿಗೆ ಜೀವನದಲ್ಲಿ ಆದ ನೋವು ನಿಮಗೆ ಅರಿವಾಗಿದೆ...ಆದರೆ ಆ ಸಮಯದಲ್ಲಿ ಆಗ ನನಗೆ ತೋಚಿದ್ದು ಅದೇ ಅದ್ದರಿಂದ ಹೀಗೆಲ್ಲಾ ಆಯಿತು...

ಧನ್ಯವಾದಗಳು...

shivu.k said...

ಪರಂಜಪೆ ಸರ್,

ಲೇಖನ ಮೆಚ್ಚಿದ್ದಕ್ಕೆ ಮತ್ತು ನಿಮ್ಮ ಅಬಿಪ್ರಾಯವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು...

ನನಗೆ ಅನುಭವಗಳನ್ನು ಬರೆಯಲು ತುಂಬಾ ಇಷ್ಟಪಡುತ್ತೇನೆ...ಮತ್ತು ಅದರಿಂದ್ ಏನೋ ಒಂದು ರೀತಿ ವರ್ಣಿಸಲಾಗದ ನೆಮ್ಮದಿ ಸಿಗುತ್ತದೆ...

ಹೀಗೆ ಬರುತ್ತಿರಿ...

shivu.k said...

ಗುರುಬಾಳಿಗ,

ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಪ್ರಪೈಲ್ ನೋಡಿದೆ...ಖುಷಿಯಾಯಿತು...ನಿಮ್ಮ ಬ್ಲಾಗಿಗೆ ಮತ್ತೆ ಬರುತ್ತೇನೆ...

ಲೇಖನವನ್ನು ಓದಿ ನೀವು ತುಂಬಾ ಚೆನ್ನಾಗಿ ಹೆಣ್ಣಿನ ಭಾವವನ್ನು ವಿವರಿಸಿದ್ದೀರಿ....ನಿಜಕ್ಕೂ ಅಂತ ಸಮಯದಲ್ಲಿ ಹೆಣ್ಣಿನ ಮನಸ್ಸಿನ ಮೇಲೆ ಪ್ರಭಾವ ಬೀರುವ ಮಾತುಗಳು ಅವರನ್ನು ದಿಕ್ಕು ತಪ್ಪಿಸುತ್ತವೆ. ಆಕೆ ಎರಡು ಮೂರು ದಿನಗಳ ನಂತರ ಅವಳ ತಪ್ಪಿನ ಅರಿವಾಗಿ ಮತ್ತೆ ಅದೇ ಹುಡುಗನನ್ನು ಒಪ್ಪಿಕೊಂಡರೂ ಇಲ್ಲಿ ಹುಡುಗ ಒಪ್ಪಿಕೊಳ್ಳುವುದಿಲ್ಲ...ಕಾರಣ...ಆತನಿಗೂ ಅವನ ಮನೆಯ ಕಡೆಯ ಒತ್ತಡ...ಮತ್ತು ಅವರ ಇಗೋಗಳನ್ನು ಸಂತೈಸುವಂತ ಒತ್ತಡ ಇದ್ದೇ ಇರುತ್ತದಲ್ವಾ...ಅವರನ್ನು ಎದುರು ಹಾಕಿಕೊಳ್ಳಲು ಆವನು ಆ ಕ್ಷಣದಲ್ಲಿ ಆ ಪರಿಸ್ಥಿತಿಯಲ್ಲಿ ತಯಾರಾಗಿರದಿದ್ದಿದ್ದು ಕತೆ ಈ ರೀತಿ ಬದಲಾಗಲು ಕಾರಣವಾಯಿತು...

ಒಟ್ಟಿನಲ್ಲಿ ನಿಮ್ಮ ಅಭಿಪ್ರಾಯವನ್ನು ನಾನು ಗೌರವಿಸುತ್ತೇನೆ...ಹೀಗೆ ಬರುತ್ತಿರಿ....

shivu.k said...

ಸವಿ ನೆನಪುಗಳು,


ನನ್ನ ಬ್ಲಾಗಿಗೆ ಸ್ವಾಗತ. ಮತ್ತೆ ನಿಮ್ಮ ಹೆಸರು ತಿಳಿಯಲಿಲ್ಲ..

ನನ್ನ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು...ಅಂಥ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಅವರವರ ಮನಸ್ಥಿತಿಯ ಮೇಲೆ ಆಧಾರವಾಗಿರುತ್ತವೆ...ಮತ್ತು ಮುಂದೆ ಅದರ ಪರಿಣಾಮಗಳು ಇವನ್ನೇ ಅದರಿಸಿರುತ್ತವೆ...ಕೆಲವರಿಗೆ ದೀರ್ಘವಾಗಿ ಕಾಡಿ...ಬೇರೇನೋ ರೂಪು ಕೊಟ್ಟರೆ...ಇನ್ನು ಕೆಲವರಿಗೆ ಅದರಿಂದ ಹೊರಬರುವುದು ಸುಲಭವೆನಿಸುತ್ತದೆ...

ಧನ್ಯವಾದಗಳು...ಹೀಗೆ ಬರುತ್ತಿರಿ....

shivu.k said...

ಮನಸು ಮೇಡಮ್,

ಜೀವನದಲ್ಲಿ ನನಗಾದ ನಿರಾಸೆಗಳಲ್ಲಿ ಇದು ಒಂದು. ..ನೀವು ಹೇಳಿದಂತೆ...ಹೇಮಾಶ್ರಿ [ಬಲೆ ಹಾಕಿ ]...ನನಗಾಗಿ ಕಾದಿದ್ದಳೇನೋ...

ಈಗ ಅವಳು ಒಡತಿಯಂತ ಗೆಳತಿ ಆಗಿರುವುದರಿಂದ ನಾನು ಮಾಡುವ ಎಲ್ಲಾ ತರಲೇ ತಾಪತ್ರಯಗಳು ಅವಳಿಗೆ ಸಿಲ್ಲಿ ಅನ್ನಿಸಿದೆ. ಮತ್ತು ಅದೆಲ್ಲಕ್ಕಿಂತ ನಿಜಕ್ಕೂ ಅವಳಿಗೆ ನನ್ನ ಮೇಲೆ ಅಪಾರ ಗೌರವವಿದೆ.

ಇನ್ನೂ ಅನೇಕ ಗುಟ್ಟುಗಳು ನಿರಾಸೆಗಳು...ಅನಂದಗಳು ಅತಂಕಗಳು....ಎಲ್ಲಾ ಇವೆ...ನಿದಾನವಾಗಿ ಎಲ್ಲಾ ರೀತಿಯಲ್ಲಿ ತಯಾರಾಗಿ[ಸುರಕ್ಷಿತವಾದ ಎಲ್ಲಾ ರಕ್ಷಣೆ ಮಾಡಿಕೊಂಡು]ಹೇಳುತ್ತೇನೆ....

ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

shivu.k said...

ಅವಿನಾಶ್ ಸರ್,

ಇಲ್ಲಿ ಹುಡುಗಿ ಓದಿ ಬುದ್ದಿವಂತಳಾಗಿದ್ದರೂ...ಅವಳ ನಿರ್ಧಾರ ಬದಲಾಗಲು ಅವಳ ಮಾವ ಕಾರಣ.. ಆತನಿಗೆ ಹುಡುಗನ ಕೆಲಸದ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲದ ಕಾರಣ...ಹುಡುಗ ತಮ್ಮ ಹೆಣ್ಣು ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತಾನಾ ? ಎಂಬಂತ ಪ್ರಶ್ನೆ ಅವನಿಗೆ ಉದ್ಭವವಾಗಿರುವುದೇ ...ಸನ್ನಿವೇಶ ಈ ರೀತಿ ತಿರುವು ಪಡೆಯಲು ಕಾರಣ. ಹುಡುಗ ಮತ್ತು ಹುಡುಗಿಗೆ ಆದ ಆಘಾತ, ಮಾನಸಿಕ ಪರಿಣಾಮಗಳನ್ನು ಹೇಳದೇ ಓದುಗರ ಕಲ್ಪನೆಗೆ ಬಿಟ್ಟು ಬಿಟ್ಟಿದ್ದೇನೆ....ಅದರಿಂದಾಗಿ ಈ ಲೇಖನ ಪ್ರತಿಯೊಬ್ಬರಿಗೂ ಒಂದೇ ರೀತಿ ಅನ್ನಿಸದೆ.....ಪ್ರತಿಯೊಬ್ಬರ ಅಭಿಪ್ರಾಯಗಳು ಬದಲಾಗಿಹೋಗುತ್ತವೆ...ಅದರಲ್ಲಿ ನೀವು ಒಬ್ಬರೂ...

ಧನ್ಯವಾದಗಳು..

shivu.k said...

ರವಿಕಾಂತ ಗೋರೆ ಸರ್,

ಹೀಗೂ ಉಂಟೆ...ಅಂತ ನಿಮಗನ್ನಿಸಿದ್ದರಲ್ಲಿ ನಾನು ಸ್ವಲ್ಪ ದೈರ್ಯ ಮಾಡಿದ್ದೇನೆ. ಇನ್ನೂ ಅನೇಕ ಹಾಗೂ ಹೀಗೂ ಹೇಗೇಗೋ ಇರುವ ಘಟನೆಗಳು, ಕತೆಗಳಿವೆ..ಮುಂದೆ ಎಂದಾದರೂ ದೈರ್ಯ ಮಾಡಿ ಬರೆಯುತ್ತೇನೆ...

ಧನ್ಯವಾದಗಳು....

shivu.k said...

ಗಿರಿ,

ಈ ಲೇಖನ ಬರೆಯುವಾಗ ನಾನು ಯಾವ ರೀತಿ ಬರೆಯಬೇಕೆಂದು ಯೋಚಿಸಲಿಲ್ಲ...ಬರೆಯುವ ಮೊದಲು ನೂರಕ್ಕೂ ಹೆಚ್ಚು ಬಾರಿ ಮುಂದಕ್ಕೆ ಹಾಕಿದ್ದೇನೆ. ಸಿಕ್ಕಾ ಪಟ್ಟೇ ಸ್ಟಾರ್ಟಿಂಗ್ ತೊಂದರೆ ಇತ್ತು....ಯಾವಾಗ ಶುರು ಮಾಡಿದರೂ ಭಯವೂ ಅವರಿಸಿಬಿಡುತ್ತಿತ್ತು. ಕೊನೆಗೊಂದು ಪಟ್ಟಾಗಿ ಕುಳಿತು ಶುರು ಮಾಡಿದೆ....ಆಷ್ಟೇ...ಅನಂತರ ಎಲ್ಲಾ ಸರಾಗವಾಯಿತು. ಮತ್ತೆ ಬರೆಯುವಾಗ ಯಾವುದೇ ಪ್ಲಾನ್ ಮಾಡದೇ...ನಡೆದಿದ್ದನ್ನು ನೆನೆಸಿಕೊಳ್ಳುತ್ತಾ...ಎಲ್ಲೂ ಗಿಮಿಕ್ ಮಾಡದೇ ನೇರವಾಗಿ ಬರೆದಿದ್ದೇನೆ........

ಮತ್ತೆ ನಾನು ಆಶ್ರಮಕ್ಕೆ ಹೋಗಿದ್ದು ಸನ್ಯಾಸಿಯಾಗಲು ಅಲ್ಲ.
ಅಲ್ಲಿ ಹೋಗಿ ನಮ್ಮ ssy ಕ್ಯಾಂಪಿನಲ್ಲಿ ಸಂಪೂರ್ಣವಾಗಿ ಭಾಗವಹಿಸಿ ವಾಪಸ್ಸು ಬಂದರೆ ಹಳೆಯದನ್ನೆಲ್ಲಾ ಮರೆದು ಹೊಸದಾಗಿ ಹುರುಪಿನಿಂದ ಜೀವನ ಮಾಡಲು ಸಾಕಷ್ಟು ಶಕ್ತಿ ಬರುತ್ತದೆ. ನನಗೂ ಅದೇ ಆಗಿದೆ.
ಹೊಸ ಹುರುಪು ಬಂದಂತೆ ಆಗಿರುತ್ತದೆ. ಮತ್ತೆ ಬ್ಲಾಗ್, ಕ್ಯಾಮೆರಾ, ಚಿಟ್ಟೆ ಹುಳು, ಪಕ್ಷಿ, ಪ್ರಶಸ್ತಿ ಎಲ್ಲವೂ ಬಿಟ್ಟು ಬೇರೇನೋ ಆಗುತ್ತಿತೇನೋ...

ಸುಂದರವಾದ ಕಾಮೆಂಟಿಗೆ ಮತ್ತು ಪ್ರಶಸ್ಥಿಯ ಅಭಿನಂದನೆಗಳಿಗೆ ಧನ್ಯವಾದಗಳು....

ಚಂದ್ರಕಾಂತ ಎಸ್ said...

ಶಿವೂ

ನಿಜವಾಗಲೂ ಇದೊಂದು ಪ್ರೇಮಕಾವ್ಯವೇ! ಅಂದಿನ ಆ ಹುಡುಗಿಯೊಂದಿಗಿನ ಮಧುರ ಪ್ರೇಮ ಭಾವನೆಯನ್ನು ಅತ್ಯಂತ ಪ್ರಾಮಾಣಿಕವಾಗಿ ಬರೆದಿರುವಿರಿ. ಆ ಕ್ಷಣದಲ್ಲಿ ಅವಳು ಎಲ್ಲರ ಮುಂದೆ ಮದುವೆ ಬೇಡವೆಂದು ತಿರಸ್ಕರಿಸಿದಾಗ ನಿಮ್ಮ ಮನಸ್ಸಿಗಾದ ಆಘಾತ ಅತ್ಯಂತ ತೀವ್ರವಾದದ್ದೇ.ನೀವು ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಲು ಎಸ್ ಎಸ್ ವೈ ಆಶ್ರಯಿಸಿದ್ದೂ ಸಹಜವಾಗಿದೆ. ಹಾಗೆಯೇ ಅವಳ ದೃಷ್ಟಿಯಿಂದ ನೋಡಿದಾಗ ಅವಳು ಮಾಡಿದ್ದು ಅಂಥಹಾ ಭೀಕರ ಅಪರಾಧ ಅನಿಸುವುದಿಲ್ಲ.

ಮದುವೆಯ ವಿಷಯದಲ್ಲಿ ಮನೆಯವರೆಲ್ಲಾ ಒಪ್ಪಿದರೇ ಹೆಣ್ಣಿಗೆ ಒಂದು ರೀತಿಯ ಸುಭದ್ರ ಭಾವ ಮೂಡುವುದು. ಕಡೆಗೆ ಅವಳು ಮತ್ತೆ ಮದುವೆಯಾಗುವೆನೆಂದಾಗ ನೀವು ಬೇಡ ಎಂದಿರುವುದೂ ಸಹಜವೇ. ಅವಳು ಬ್ರಹ್ಮಕುಮಾರಿಗೆ ಸೇರಿದ್ದು ಮನಸ್ಸಿನ ನೆಮ್ಮದಿಗಾಗಿ. ಹೀಗಾಗಿ ಇಲ್ಲಿ ಯಾರದೂ ( ಹುಡುಗ /ಹುಡುಗಿ) ತಪ್ಪಿಲ್ಲ ಎನಿಸುತ್ತದೆ.

ನೀವು ನಿರೂಪಿಸಿರುವ ರೀತಿ ಮಾತ್ರ ವಿಶೇಷವಾಗಿದೆ. ಒಂದು ಸಣ್ಣ ಪ್ರಶ್ನೆ. ಇದೇ ಪ್ರಸಂಗ ಹೇಮಾಶ್ರೀಯವರ ಜೀವನದಲ್ಲಿ ನಡೆದಿದ್ದರೆ...? ನಿಮಗೇನನಿಸುತ್ತಿತ್ತು. ಪ್ರಾಮಾಣಿಕವಾಗಿ ಹೇಳಿ. ( ನನ್ನನ್ನು ಬೈದುಕೊಳ್ಳುವುದಿಲ್ಲ ಎಂದುಕೊಳ್ಳಲೇ ?)

PaLa said...

ಶಿವು,
ನಿಮ್ಮ ವಯುಕ್ತಿಕ ನಿರ್ಧಾರ, ಕಾಮೆಂಟ್ ಹಾಕ್ಬೇಕು ಅನ್ನಿಸ್ತಾ ಇಲ್ಲ.
ನಿಮಗೂ ಮಲ್ಲಿಕಾರ್ಜುನರಿಗೂ ಸಂದ ಗೌರವಕ್ಕೆ ಅಭಿನಂದನೆಗಳನ್ನ ಹೇಳಬಲ್ಲೆ ಅಷ್ಟೆ.
--
ಪಾಲ

Anveshi said...

ಶಿವು ಅವರೆ,
ಪ್ರೀತಿಯ ಮತ್ತೊಂದು ಮಗ್ಗುಲು.
ವಿಧಿಲಿಖಿತ ತಪ್ಪಿಸಲಾಗದು ಅಂತ ಸಮಾಧಾನಿಸಿಕೊಳ್ಳಬೇಕಷ್ಟೆ.

ಫೋಟೋಗ್ರಫಿಯಲ್ಲಿ ಮಾಡಿದ ಸಾಧನೆಗೆ ಹಾರ್ದಿಕ ಅಭಿನಂದನೆಗಳು.

Pramod P T said...

ಅಬ್ಬಾ! ಆ ಎರಡೂ ಸೌಟುಗಳು ನಿಮ್ಮ ಕೈಯಲ್ಲೇ ಇತ್ತಲ್ಲಾ :)
ಫೆಂಟಾಸ್ಟಿಕ್ ಆಗಿದೆ ಶೀವು.

ಕ್ಷಣ... ಚಿಂತನೆ... said...

ಶಿವು ಅವರೆ, ಲೇಖನ ಓದಿದೆ.

"What has happened may happen again." -Caine


ಜೀವನವೇ ಹಾಗಲ್ಲವೇ? "ತಾನೊಂದು ಬಗೆದರೆ ಮಾನವ, ಬೇರೊಂದು ಬಗೆವುದು ದೈವ" ಎಂಬಂತೆ ಅದು ಏನಾಗಬೇಕಿರುತ್ತದೋ ಅದೇ ಆಗುವುದು. ಜೊತೆಗೆ ಆಗುವುದೆಲ್ಲಾ ಒಳ್ಳೆಯದಕ್ಕೇ ಎಂಬ ಭಾವನೆಯೊಂದಿಗೆ ಬಾಳಬೇಕು ಹಾಗೆಯೇ ಎಷ್ಟು ಕಷ್ಟವೋ ಹೊಂದಿಕೆಯೆಂಬುದು ಸಹ ಇಲ್ಲಿ ಮುಖ್ಯವಾಗುತ್ತದೆ ಎಂಬುದು ನನ್ನ ಅನಿಸಿಕೆ. ತಪ್ಪಿದ್ದರೆ... ತಿಳಿಸಿ.

ಲೇಖನಕ್ಕೆ ಇಂಬು ಕೊಡುವಂತೆ ಮಗುವಿನ ಫೋಟೋ ಚೆನ್ನಾಗಿಮೂಡಿಬಂದಿದೆ.

ಧನ್ಯವಾದಗಳು.

Anonymous said...

ಸಿಂಚನ ಅವರೇ,
ನನ್ನ ಅಭಿಪ್ರಾಯದಿಂದ ನಿಮ್ಮ ಮನಸ್ಸಿಗೆ ಬೇಸರವಾಗಿದ್ದಲ್ಲಿ ಕ್ಷಮಿಸಿ.

Anonymous said...

ಜ್ಯೋತಿ,

ನನಗೆ ಬೇಸರ ಆಗುತ್ತೆ ಅಂತ ನೀವು ಕ್ಷಮೆ ಕೇಳೋದು ಬೇಕಾಗಿಲ್ಲ.

ಆದದ್ದೆಲ್ಲಾ ಒಳ್ಳೇದಕ್ಕೇ ಅಗಿದೆ ಅಂತ ಹೇಳಿದೀರ. ಆ ಹುಡುಗಿ ದೃಷ್ಟಿಯಿಂದಾನಾ, ಲೇಖಕರ ದೃಷ್ಟಿಯಿಂದಾನಾ? ಒಂದು ವೇಳೆ ಆಗೋದೆಲ್ಲಾ ಒಳ್ಳೇದಕ್ಕೇ ಅಂತಾದ್ರೆ ಅದು ಎಲ್ಲಾರ ಜೀವನಕ್ಕೂ ಅನ್ವಯಿಸಬೇಕಲ್ವ? ಒಂದು ವೇಳೆ ಲೇಖಕರ ಆಶಯದಂತೆಯೆ ಆಗಿದ್ದರೆ ಅವರಿಬ್ಬರೂ ಒಳ್ಳೇ ರೀತೀಲಿ ಇರ್ತಾ ಇರ್ಲಿಲ್ಲ ಅಂತ ಹೆಂಗೆ ಹೇಳ್ತೀರ..

ಇನ್ನು ಹುಡುಗಿ ಬ್ರಹ್ಮ ಕುಮಾರಿ ಸೇರಿದ್ದು ಅವಳ ನಿರ್ಧಾರ ಅದಕ್ಕೆ ಮರುಗಬೇಕಾಗಿಲ್ಲ ಅಂತಂದ್ರಿ. ತುಂಬಾ ದೊಡ್ಡ ಆದರ್ಶವಾದದ ಮಾತಾಯ್ತು ಇದು. ಆದರ್ಶವಾದದ ಭ್ರಮೆಯಲ್ಲಿ ಇನ್ನೊಬ್ಬರ ನೋವಿಗೆ ಸ್ಪಂದಿಸೋ ಗುಣಾನ ಕಳ್ಕೊತೀವಿ ಅನ್ನಿಸ್ತಾ ಇದೆ. ಮನೆಯವರ ಮಾತಿಗೆ ಸಿಲುಕಿ ಆ ಹುಡುಗಿ ಬೇಡ ಅಂತ ಒಂದು ಸಲ ಹೇಳಿದಾಳೆ ನಿಜ. ಆದರೆ ೨,೩ ದಿನ ಬಿಟ್ಟು ಮತ್ತೆ ಬಂದಿಲ್ವಾ ಅವ್ಳು? ಅದು ಅವ್ಳ ದೊಡ್ಡತನ. "ಗುರು ಬಾಳಿಗ", "ಚಂದ್ರಕಾಂತ ಎಸ್" ಅವರ ಕಾಮೆಂಟ್ ಓದಿ, ಸಾಧ್ಯವಾದರೆ ಅರ್ಥ ಮಾಡ್ಕೊಳೋಕೆ ಪ್ರಯತ್ನಿಸಿ.

ಕ್ಷಣ ಚಿಂತನೆ,

"ಜೀವನವೇ ಹಾಗಲ್ಲವೇ? ’ತಾನೊಂದು ಬಗೆದರೆ ಮಾನವ, ಬೇರೊಂದು ಬಗೆವುದು ದೈವ’ ಎಂಬಂತೆ ಅದು ಏನಾಗಬೇಕಿರುತ್ತದೋ ಅದೇ ಆಗುವುದು"

ಸರಿ, ನಾವೆಲ್ಲಾ ಸುಮ್ನೆ ನೋಡಿ ಅದು ಬೇಕು, ಇದು ಬೇಕು ಅಂತ ಕೆಲ್ಸ ಕಾರ್ಯ ಮಾಡೋದು! ಎಲ್ಲಾ ದೈವ ಕೃಪೆ ಅಂತ ಸುಮ್ನೆ ಇದ್ಬಿಡ್ಬೇಕು ನೋಡಿ!

-
ಸಿಂಚನ

ಬಿಸಿಲ ಹನಿ said...

ಶಿವು ಅವರೆ,
ನಿಮ್ಮ ಲವ್ ಸ್ಟೋರಿ ನಿಮ್ಮದೇ ನಿರೂಪಣೆಯಲ್ಲಿ ಅತ್ಯಂತ ಲವ ಲವಕಿಯಿಂದ ಮೂಡಿಬಂದಿದೆ. ಆದರೆ ಕೊನೆಯಲ್ಲಿ ಹುಡುಗಿ ಬ್ರಹ್ಮಕುಮಾರಿ ಆಶ್ರಮ ಸೇರಿದ್ದು ಮಾತ್ರ ದುರಂತ!

Shankar Prasad ಶಂಕರ ಪ್ರಸಾದ said...

ಹುಡುಗಿ ಬ್ರಹ್ಮಕುಮಾರಿ ಸೇರಿದಳು, ನೀವು ಮದ್ವೆ ಆಗ್ಲಿಲ್ಲ ಅನ್ನೋದಕ್ಕಿಂತಾ, ಪ್ರೀತಿ ಅಂದಮೇಲೆ ಅದರ ಬುನಾದಿ ವಿಶ್ವಾಸ ಅನ್ನೋದಾಗಿರಬೇಕೇ ಹೊರತು ಬೇರೇನೂ ಅಲ್ಲ.
ಪ್ರೀತಿ ತಮ್ಮ ಕೈಯಾರೆ ಕಳೆದುಕೊಂಡವರಿಗೆ ನನ್ನಲ್ಲಿ ಸಿಂಪಥಿ ಇಲ್ಲಾ ಶಿವಣ್ಣ. ಏನಂತೀರಾ? ನಿಮ್ಮ ಮನೆಯವರನ್ನು ಹಾಗು ಪ್ರಕಾಶಪ್ಪನನ್ನೂ ನನ್ನ ಅಭಿಪ್ರಾಯದ ಬಗ್ಗೆ ಅವರ ಅಂಬೋಣ ಏನೆಂದು ಕೇಳಿ.

ಕಟ್ಟೆ ಶಂಕ್ರ

ಅಂತರ್ವಾಣಿ said...

ಶಿವಣ್ಣ,
ಈ ಕಥೆಯನ್ನು ಮುಂಚಿತವಾಗಿಯೇ ನಿಮ್ಮ ಶ್ರೀಮತಿಯವರಲ್ಲಿ ಹೇಳಿರ ಬೇಕಿತ್ತು. ಇರಲಿ. ಈಗ ಹೇಳಿದ್ದೀರಲ್ಲ.. ಅದೂ ಸೌಟುಗಳನ್ನು ನಿಮ್ಮ ಕೈಯಲ್ಲಿ ಹಿಡಿದುಕೊಂಡು.

ಮತ್ತು, ಮದುವೆಯ ವಿಷಯದಲ್ಲಿ ನಿಮ್ಮ ಅಭಿಪ್ರಾಯ ಮುಖ್ಯವಾಗಿರಬೇಕು. ಆಕೆ ಮಾವನ ಮಾತನ್ನು ಕಡೆಗಣಿಸ ಬೇಕಿತ್ತು.

Anonymous said...

ಶಂಕರ ಪ್ರಸಾದ,
ಇದು ಓಪನ್ ಫೋರಮ್ ತರ, ಇಲ್ಲಿ ಅಭಿಪ್ರಾಯ ವ್ಯಕ್ತ ಪಡಿಸೋಕೆ ಎಲ್ಲರಿಗೂ ಸಮಾನ ಅವಕಾಶ ಇದೆ ಅನ್ನೋದು ಗೊತ್ತಿದ್ರೂ, ನಿಮ್ಮಲ್ಲಿ ಕ್ಷಮೆಯಾಚಿಸುತ್ತಾ ನಿಮ್ಮ ಮಾತಿಗೆ ನನ್ನ ಅಭಿಪ್ರಾಯ ಸೇರಿಸ್ತಾ ಇದೀನಿ.

"ಪ್ರೀತಿ ಅಂದಮೇಲೆ ಅದರ ಬುನಾದಿ ವಿಶ್ವಾಸ ಅನ್ನೋದಾಗಿರಬೇಕೇ ಹೊರತು ಬೇರೇನೂ ಅಲ್ಲ" ತುಂಬಾ ಒಳ್ಳೆ ವ್ಯಾಖ್ಯಾನ. ಒಂದೊಳ್ಳೆ ಗುಲಾಬಿ ಹೂವಿನ ಫೋಟೋ ತೆಗೆದು ಈ ವಾಕ್ಯಾನ ಅದರಲ್ಲಿ ಬರೆದು ಎಲ್ಲರಿಗೂ ಕಳುಹಿಸಬೇಕು.

ಪ್ರೀತಿ, ವಿಶ್ವಾಸ ಎಲ್ಲಿಂದಲೋ ಒಮ್ಮೆಲೇ ಬಂದು ಹೃದಯದಲ್ಲಿ ಕೂತುಕೊಳ್ಳುವಂತದಲ್ಲ! ಅದು ನಿಧಾನಕ್ಕೆ ಬೆಳೆಯೋದು. ಮತ್ತೆ ನೀವು ಯಾವ ಪ್ರೀತಿ ಅಂತೀರೋ ಅದೇ ಪ್ರೀತಿ ವಿಶ್ವಾಸ ಅವಳ ಹೆತ್ತವರ ಮೇಲೂ, ಪಾಲಕರ ಮೇಲೂ ಇರುವುದು ಸಹಜ ಅಲ್ಲವೇ? "ಹೆತ್ತವರು ಈ ಹುಡುಗ ಬೇಡ" ಅಂತ ಹೇಳಿದ್ರೆ ಒಂದು ತಿಂಗಳ ಹಿಂದಿನ ಪರಿಚಯದ ಹುಡುಗನಿಗಿಂತ, ಹುಟ್ಟಿದಂದಿನಿಂದ ಪಾಲಿಸಿದ ಪಾಲಕರ ಮೇಲಿನ ವಿಶ್ವಾಸ ಹೆಚ್ಚಿರುವುದು ಸಹಜ ಅಲ್ಲವೇ? ಇಷ್ಟಾಗಿಯೂ ಆ ಹುಡುಗಿ ೨ ದಿನದ ನಂತರ ಮತ್ತೆ ವಾಪಾಸು ಬಂದಿದಾಳೆ ತನ್ನ ಪ್ರೀತೀನಾ ಹುಡುಕಿಕೊಂಡು. ನಿಮ್ಮ ವಾದ ಒಪ್ಪೋದಾದ್ರೆ ಹುಡುಗನಿಗೂ ಅವಳಲ್ಲಿ ವಿಶ್ವಾಸ ಇರ್ಲಿಲ್ಲ ಅಂತ ಆಯ್ತು. ಒಂದು ವೇಳೆ ಇದ್ದಿದ್ರೆ ಅವಳನ್ನ ಕೇಳ್ತಾ ಇದ್ದ ಏನಕ್ಕೆ ಬೇಡ ಅಂದೆ ಅಂತ ಅಥವಾ ಇನ್ನೊಂದು ಸಲ ಅವಳಾಗೇ ಬಂದಾಗ ಕೊನೇ ಪಕ್ಷ ಹಿಂದೆ ಏನಕ್ಕೆ ಬೇಡಾ ಅಂದೆ ಅಂತ ಕೇಳ್ತಿದ್ದ ಅಲ್ವ? ವಿಶ್ವಾಸ ಬರೀ ಹುಡುಗಿಯರಿಗೆ ಮಾತ್ರ ಇರ್ಬೇಕು ಹುಡುಗರಿಗೆ ಅದು ಕಡ್ಡಾಯ ಅಲ್ಲ ಅಂತಾನ? ನಿಮಗೆ ಇದೆಲ್ಲಾ ಗೊತ್ತಾಗಬೇಕು ಅಂದ್ರೆ ನಿಮ್ಮ ಮಗಳು ಮದುವೆ ವಯಸ್ಸಿಗೆ ಬರಬೇಕು ನೋಡಿ.

ಕೋನೇದಾಗಿ ರಾಮಾಯಣದ ರಾಮ, ಅಗಸನ ಮಾತನ್ನ ಕೇಳಿ ಹೆಂಡತೀನಾ ಕಾಡಿಗೆ ಅಟ್ಟುತಾನೆ, ಅವನಿಗೆ ತನ್ನ ಹೆಂಡತಿ ಮೇಲೆ ವಿಶ್ವಾಸ ಅರ್ಥಾತ್ ಪ್ರೀತಿ ಇರಲಿಲ್ಲವಾ?

-
ಸಿಂಚನ

shivu.k said...

ಡಾ. ಗುರುಮೂರ್ತಿ ಹೆಗಡೆ ಸರ್,

ಇದು ದೊಡ್ಡಕತೇಯೇ ಅಗಿದೇ...ಅದರಲ್ಲಿ ಪ್ರೇಮಕತೆ ಉಪಕತೆಯಾಗಿದೆ ಆಷ್ಟೇ....ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ....

ಶಾಂತಲಾ ಭಂಡಿ (ಸನ್ನಿಧಿ) said...

ಶಿವು ಅವರೆ...
ಕಥೆಯ ನಿರೂಪಣಾ ಶೈಲಿ ಯಾವತ್ತಿನಂತೆ ಇಷ್ಟವಾಯ್ತು.
ಬದುಕು ಹೀಗೆಯೇ ಇರಬೇಕು ಎನ್ನುವತ್ತ ನಿರ್ಧರಿಸಿ ಪಯಣಿಸುವ ಯತ್ನ ನಮ್ಮದು. ಉಳಿದದ್ದು ದೇವೇಚ್ಛೆ.
ಬಂದದ್ದೆಲ್ಲವೂ ನಮ್ಮದೇ ಅಂತ ಬದುಕನ್ನು ಬಾಳಾಗಿಸಿಕೊಳ್ಳುತ್ತ
ಸವಿಯುವುದಷ್ಟೇ ನಮ್ಮ ಪಾಲು.

ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳಿಸಿದ್ದಕ್ಕೆ ಅಭಿನಂದನೆಗಳು.

shivu.k said...

ಶಿವಪ್ರಕಾಶ್,

ಈ ಕತೆಯಲ್ಲಿ ಬರುವು ಹುಡುಗಿಯ ನಿರ್ದಾರ ಆ ಸಮಯದಲ್ಲಿ ಅವಳಿಗೆ ಸರಿಯೆನಿಸಬಹುದು.

ಮತ್ತೆ ನಾನು ಬೇಡ ಅನ್ನಲು ನನಗೂ ಅನೇಕ ಕಾರಣಗಳಿವೆ...ಮತ್ತು ನಿಮ್ಮಂತೆ ಒಂದೇ ವಿಚಾರದಲ್ಲಿ ಸಿಕ್ಕಿಕೊಂಡು ಕೊರಗುವುದು ನನ್ನ ಜಾಯಾಮಾನವಲ್ಲ...ಹೊಸ ಬದುಕನ್ನು ಹೊಸರೀತಿ ರೂಪಿಸಿಕೊಳ್ಳಲೆತ್ನಿಸುತ್ತೇನೆ....ಆಗ ನನಗನ್ನಿಸಿದ್ದು ಹಾಗೆ...ನಿಮ್ಮ ಮುಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು....ಮತ್ತೆ ಸಾಧ್ಯವಾದರೆ ನಿಮ್ಮ ಲಿಂಕಿನ ಲೇಖನ ಓದಲು ಯತ್ನಿಸುತ್ತೇನೆ...

shivu.k said...

ಸಿಂಚನ ಮೇಡಮ್,

ನನ್ನ ಬ್ಲಾಗಿಗೆ ಸ್ವಾಗತ...

ನೀವು ಬರುತ್ತಲೇ ಜ್ಯೋತಿ ಮೇಡಮ್‌ರವರ ಪ್ರತಿಕ್ರಿಯೆಗೆ ಉತ್ತರಿಸಿದ್ದೀರಿ....ಅವರ ಅಭಿಪ್ರಾಯವನ್ನು ತಪ್ಪು ಎಂದಿದ್ದೀರಿ....ನಾನು ಇಲ್ಲಿ ತಪ್ಪು ಸರಿ ಬಗ್ಗೆ ಹೇಳಲು ಇಷ್ಟಪಡುವುದಿಲ್ಲ. ಇದು ನಡೆದಿದ್ದು ೬ ವರ್ಷಗಳ ಹಿಂದೆ...ಆಗ ಇದ್ದ ಪರಿಸ್ಥಿತಿಯಲ್ಲಿ ಹುಡುಗಿ ಅವಳಿಗನ್ನಿಸಿದ್ದನ್ನು ಅವಳು ಮಾಡಿದ್ದಾಳೆ...ಮತ್ತು ಹುಡುಗನಾದ ನಾನು ನನಗನ್ನಿಸಿದ್ದನ್ನು ನಾನು ಮಾಡಿದ್ದೇನೆ...ಅಲ್ಲಿ ಇಬ್ಬರೂ ಸಂಧರ್ಭದ ಕೈಗೊಂಬೆಗಳಾಗಿದ್ದು ನಿಜ. ಹಿರಿಯರ ಕಡೆಯಿಂದ ಅವಳಿಗೆ ಇದ್ದಷ್ಟೇ ಒತ್ತಡ ನನಗೂ ನನ್ನ ಹಿರಿಯರ ಕಡೆಯಿಂದ ಇತ್ತು. ಅಂಗಾದ್ರೆ ಒಂದು ತಿಂಗಳು ಗಾಡ ಪ್ರೀತಿಯಲ್ಲಿ ಇದ್ದದ್ದು ಸುಳ್ಳ ಅಂತ ನೀವು ಕೇಳಬಹುದು...ಹೌದು ಆ ವಯಸ್ಸಿನಲ್ಲಿ ಸುನಾಥ್ ಸರ್ ಹೇಳಿದಂತೆ ಅದು ಪ್ರೀತಿಯಲ್ಲ ಒಂದು ಆಕರ್ಷಣೆ,ಭ್ರಮೆ ಎಂದೇ ಹೇಳಬಹುದು. ಮತ್ತೆ ಆ ಹುಡುಗಿ ಬ್ರಹ್ಮಕುಮಾರಿ ಸೇರಿದ್ದು ನಷ್ಟವೆಂದು ನನಗನ್ನಿಸಲ್ಲ. ಏಕೆಂದರೆ ಸ್ವಲ್ಪ ದಿನ ಆದ್ಯಾತ್ಮ ತಿಳಿದರೆ ವಾಸ್ತವ ಬದುಕು ಸುಲಭ. ನಾನು ಆಗಾಗ್ಗೆ ಅದ್ಯಾತ್ಮ ತರಗತಿಗಳಿಗೆ ಹೋಗಿಬರುತ್ತಿರುತ್ತೇನೆ...ಅಂಗಂತ ನಾನೇನು ಸನ್ಯಾಸಿಯಾಗಿಲ್ಲ...ಅಥವ ಅದರಿಂದ ನನಗೇನು ನಷ್ಟವಾಗಿಲ್ಲ. ಮತ್ತು ನನ್ನ ನಂಬಿದವರಿಗೂ [ಅಪ್ಪ ಅಮ್ಮ, ಅಕ್ಕ, ತಮ್ಮ , ಹೆಂಡತಿ, ಗೆಳೆಯರು ಎಲ್ಲರೊಂದಿಗೂ ಚೆನ್ನಾಗಿ ಇದ್ದೇನೆ. ಬದುಕಿನಲ್ಲಿ ಇವರೆಲ್ಲರ ಜೊತೆ ನನ್ನ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸುತ್ತಿದ್ದೇನೆ.] ನೋವು ಉಂಟುಮಾಡಿಲ್ಲ...ಇನ್ನೂ ಚೆನ್ನಾಗಿ ಜೀವಿಸುತ್ತಿದ್ದೇನೆ..ಹಾಗೆ ಆ ಸಮಯದಲ್ಲೂ ಅವಳು ಇದೇ ರೀತಿ ಮನಃಶಾಂತಿಗಾಗಿ ಬ್ರಹ್ಮಕುಮಾರಿಗೆ ಸೇರಿರ ಬಹುದು...ಆ ನಂತರ ಅದರಿಂದ ಹೊರಬಂದು ಅವಳಿಗೂ ಮದುವೆಯಾಗಿದೆ. ನನಗಿಂತ ಒಳ್ಳೆಯ, ಬುದ್ಧಿವಂತನಾದ ಸುಂದರನಾದ ಹುಡುಗನನ್ನೇ ಮದುವೆಯಾಗಿದ್ದಾಳೆ. ಅವರ ಬದುಕು ಹೊಸದಾದ ಚೌಕಟ್ಟಿನಲ್ಲಿ ಚೆನ್ನಾಗಿ ನಡೆಯುತ್ತಿದೆ. ...ಈಗ ಇಲ್ಲಿ ಯಾರಿಗೂ ನಷ್ಟವಾಗಿಲ್ಲ. ಆಗಿನ ಪರಿಸ್ಥಿತಿ ಆ ರೀತಿ ಇದ್ದಿದ್ದರಿಂದ ಎಲ್ಲರೂ ಹಾಗೆ ನಡೆದುಕೊಂಡಿದ್ದೇವೆ...ಮತ್ತೆ ಕಾಲವೇ ಉತ್ತರ ನೀಡುವಂತೆ ಅವಳ ಸಂಸಾರ ಮತ್ತು ನನ್ನ ಸಂಸಾರ ಎಲ್ಲಾ ಚೆನ್ನಾಗಿದ್ದೇವೆ.

ಒಟ್ಟಾರೆ ಒಂದು ಮುಕ್ತ ಚರ್ಚೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಕ್ಕೆ ಧನ್ಯವಾದಗಳು. ಮತ್ತೆ ಬ್ಲಾಗ್ ಗೆಳೆಯರೆಲ್ಲಾ ಈಗ ನನ್ನ ಪರವಾಗಿ ಯಾರು ಕಾಮೆಂಟು ಹಾಕುತ್ತಿಲ್ಲ. ಅವರಿಗೆ ಲೇಖನ ಓದಿದ ಮೇಲೆ ಅವರಿಗನ್ನಿಸಿದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇಲ್ಲಿ ಯಾರು ಕೂಡ ಪೂರ್ವಗ್ರಹ ಪೀಡಿರಾಗಿಲ್ಲವೆಂದು ನನಗನ್ನಿಸುತ್ತದೆ. ಇಷ್ಟು ಉತ್ತರ ನನ್ನ ಕಡೆಯಿಂದ ಸಾಕೆನಿಸುತ್ತದೆ....

ಧನ್ಯವಾದಗಳು....

shivu.k said...

ಚಂದ್ರಕಾಂತ್ ಮೇಡಮ್,

ನೀವು ಈ ಬರವಣಿಗೆಯನ್ನು ಪ್ರೇಮಕಾವ್ಯವೆಂದೇ ಹೊಗಳಿದ್ದೀರಿ...ಥ್ಯಾಂಕ್ಸ್....ನಿಜಕ್ಕೂ ಈ ಲೇಖನದಲ್ಲಿ ನಾನು ಯಾವುದೇ ಉಪಮೆಗಳು, ರೂಪಕಗಳನ್ನು ಬಳಸದೇ ನೇರವಾಗಿ ನಡೆದ ಘಟನೆಗಳನ್ನು ಹಾಗೆ ಬರೆದಿದ್ದೇನೆ.

ಮದುವೆ ವಿಚಾರದಲ್ಲಿ ಹೆಣ್ಣಿಗೆ ಸುಭದ್ರತೆ, ಗಂಡಿಗೆ ಕಷ್ಟ=ಸುಖಗಳಲ್ಲಿ ಸದಾ ಜೊತೆಯಾಗಿರುವ ಹೆಂಡತಿ ಬಯಸುವುದು ಸಹಜ. ಅದು ಪ್ರಾರಂಭದಲ್ಲಿ ಅಲುಗಾಡಿದಾಗ ಎರಡುಕಡೆಯಿಂದ ಹೀಗಾಗುವುದು ಸಹಜ. ಇದರಲ್ಲಿ ನಿಮ್ಮ ಅಭಿಪ್ರಾಯ ನನಗೆ ಇಷ್ಟವಾಯಿತು.

ಮತ್ತೆ ನಿಮ್ಮ ಮುಖ್ಯ ಪ್ರಶ್ನೆಗೆ ಬರುತ್ತೇನೆ. ಈ ಪ್ರಸಂಗ ಹೇಮಾಶ್ರೀಗೆ ಆಗಿದ್ದರೂ ನನಗೇನು ಅನ್ನಿಸುತ್ತಿರಲಿಲ್ಲ. ಏಕೆಂದರೆ ಆ ಸಮಯದಲ್ಲಿ ಹೇಮಾಶ್ರೀ ಇರಲಿ, ಉಷಾ ಇರಲಿ, ಅಥವ ಇನ್ಯಾವುದೇ ಹುಡುಗಿ ಇದ್ದರೂ ಆಗುತ್ತಿದ್ದುದ್ದು ಅದೇ ಅಲ್ಲವೇ...ಮತ್ತೆ ಅದು ಆ ಹುಡುಗಿಯರ ಮಾನಸಿಕ ಸ್ಥಿತಿಯನ್ನು ಅವಲಂಬಿಸಿರುತ್ತವೆ...ಅದಾದ ನಂತರ ಹೇಮಾಶ್ರೀ ನನ್ನ ಸಂಗಾತಿಯಾಗಿ ಐದು ವರ್ಷಗಳಾಗಿವೆ.. ಮದುವೆ ಹೊಸದರಲ್ಲಿ ಇದ್ದ ಆಕರ್ಷಣೆ ಭ್ರಮೆ, ಇತ್ಯಾದಿಗಳನ್ನೆಲ್ಲಾ ನಿತ್ಯಬದುಕು ನಿದಾನವಾಗಿ ಹೋಗಲಾಡಿಸಿ..ನಿಜ ಪ್ರೀತಿ, ವಿಶ್ವಾಸ, ನಂಬಿಕೆ, ಜವಾಬ್ದಾರಿ..........ಬದುಕುವ ಕಲೆ..ಹೊಂದಿಕೊಳ್ಳುವಿಕೆ...ಇತ್ಯಾದಿಗಳನ್ನು ಕಲಿಸಿದೆ...ಕಲಿಸುತ್ತಿದೆ....

ಒಟ್ಟಾರೆ ಕಾಲಯಃ ತಸ್ಥೇ ನಮಃ

ಧನ್ಯವಾದಗಳು...

shivu.k said...

ಪಾಲಚಂದ್ರ,

ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್...

ಮತ್ತೆ ಪ್ರಶಸ್ತಿಗೆ ಅಭಿನಂದಿಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು.

shivu.k said...

ಅಸತ್ಯ ಅನ್ವೇಷಿ ಸರ್,

ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯಕ್ಕೆ ಮತ್ತು ಪ್ರಶಸ್ಥಿ ಮನ್ನಣೆಗೆ ಅಭಿನಂದಿಸಿದ್ದಕ್ಕೆ ಥ್ಯಾಂಕ್ಸ್...

shivu.k said...

ಪ್ರಮೋದ್,

ಎಲ್ಲರೂ ಗಂಭೀರವಾಗಿ..ಬೇರೆ ವಿಚಾರವಾಗಿ ಚರ್ಚಿಸುತ್ತಿದ್ದರೇ ನೀವೊಬ್ಬರಾದರೂ ಸೌಟಿನ ಬಗ್ಗೆ ಹೇಳಿದ್ದೀರಲ್ಲ...ಥ್ಯಾಂಕ್ಸ್.....ಸೌಟು ಆಡಿಗೆ ಮನೆಗೆ ಮುಖ್ಯ, ಹಾಗೇ ಬದುಕಿಗೂ ಕೂಡ ಕಣ್ರಿ....

ಥ್ಯಾಂಕ್ಸ್....

shivu.k said...

ಕ್ಷಣ ಚಿಂತನೆ ಸರ್,

"ಜೀವನವೇ ಹಾಗಲ್ಲವೇ? "ತಾನೊಂದು ಬಗೆದರೆ ಮಾನವ, ಬೇರೊಂದು ಬಗೆವುದು ದೈವ"

ನಿಮ್ಮ ಮಾತು ತುಂಬಾ ಇಷ್ಟವಾಯಿತು...ನಾವೆಲ್ಲಾ ಬದುಕುವುದು ಹೀಗೆ ಅಲ್ಲವೇ..ನಿಮ್ಮ ಉಳಿದ ಅಭಿಪ್ರಾಯಗಳು ಇಷ್ಟವಾದವು....

ನೀವೊಬ್ಬರಾದರೂ ಮಗುವಿನ ಫೋಟೊ ಇಷ್ಟಪಟ್ಟರಲ್ಲ...[ನಿಜಕ್ಕೂ ಈ ಲೇಖನದ ಎಲ್ಲಾ ತಾಪತ್ರಯ, ಪಾತ್ರಧಾರಿಗಳ ಒದ್ದಾಟ ನೋಡಿ...ಮಗು ಈ ರೀತಿ ವ್ಯಂಗ್ಯವಾಗಿ ಅಣಕಿಸುತ್ತಿರಬಹುದೇ?]

ಅಭಿನಂದಿಸಿದ್ದಕ್ಕೆ ಧನ್ಯವಾದಗಳು...ಹೀಗೆ ಬರುತ್ತಿರಿ...

shivu.k said...

ಉದಯ್ ಸರ್,

ಲೇಖನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

ಮತ್ತೆ ಮಲ್ಲಿ ಮತ್ತು ನನ್ನ ಪ್ರಶಸ್ತಿಗಳ ಬಗ್ಗೆ, ಮತ್ತು ನಮ್ಮ ಬಗ್ಗೆ ದೊಡ್ಡ ಲೇಖನ ಬರೆದು ಅಭಿನಂದಿಸಿದ್ದೀರಿ....ನಿಮಗೆ ನಾವು ಹೇಗೆ ಕೃತಜ್ಞತೆ ಸಲ್ಲಿಸಬೇಕೋ ತಿಳಿಯುತ್ತಿಲ್ಲ...

ಮತ್ತೊಮ್ಮೆ ಧನ್ಯವಾದಗಳು...

b.saleem said...

ಶಿವು ಸರ್
ನಿಮ್ಮ ಜಿವನಾನುಭವ ತುಂಬಾ ದೊಡ್ಡದು.
ನಿಮ್ಮ ಪ್ರಿತಿಯ ಅನುಭವವನ್ನು ಹಂಚಿಕೊಂಡಿದ್ದಕ್ಕೆ
ಧನ್ಯವಾದಗಳು

Sathya said...

Shivu Sir,

The same Love story going on my life too. But I am in the intial stage, and I am not yet seen her.

guruve said...

ವ್ಯಯಕ್ತಿಕ ಸೂಕ್ಷ್ಮ ವಿಷಯಗಳನ್ನು ಬರೆದುಕೊಳ್ಳುವುದು ಯಾವಾಗಲೂ ಕಷ್ಟವೆ. ಚೆನ್ನಾಗಿ ಬರೆದಿದ್ದೀರಿ.

Unknown said...

ಶಿವು
ನಮ್ಮಲ್ಲಿ ನೆಟ್ ಪ್ರಾಬ್ಲೆಮ್ ಇತ್ತು. ಈಗ ತಾನೆ ನಿಮ್ಮ ಮೇಲ್ ನೋಡಿ, ಬ್ಲಾಗಿಗೆ ಜಿಗಿದು, 'ನಿಮ್ಮ' ಕಥೆ ಓದಿದೆ. ಕೋಪಕ್ಕೆ ಕೊಯ್ದುಕೊಂಡ ಮೂಗು ಮತ್ತೆ ಬರುವುದಿಲ್ಲ ಅಲ್ಲವೆ? ಮೊನ್ನೆ ಮೊನ್ನೆ ಒಬ್ಬ ದಡ್ಡ ಮನುಷ್ಯ ಶಿವನಿಗೆ ಕಣ್ಣು ಕೊಡುತ್ತೇನೆ ಎಂದು ಎರಡೂ ಕಣ್ಣು ಕಿತ್ತುಕೊಂಡು, ಈಗ ಅಂಗವಿಕಲ ಮಾಶಾಸನಕ್ಕಾಗಿ ಅಲೆಯುತ್ತಿದ್ದಾನೆ! ಹಾಗೇ ಆ ಹುಡುಗಿಯದು ಒಂದು ಕಥೆ. ನಿಮ್ಮ ಆಪ್ತ ಬರವಣಿಗೆಯ ಶೈಲಿ ಇಷ್ಟವಾಯಿತು. ತೀರಾ ಸ್ವಂತದ ವಿಷಯಗಳನ್ನು ಸ್ನೇಹಿತರ ಎದುರು ಹೇಳಿಕೊಳ್ಳಬಹುದು ಎಂಬುದಕ್ಕೆ ಇದೊಂದು ಉದಾಹರಣೆ. ಅಲ್ಲದೆ ಇದು ಯಾವುದೇ ಸಣ್ಣ ಕಥೆಗೂ ಕಡಿಮೆಯಿಲ್ಲ.

Anonymous said...

ಶಿವು ಸರ್,
"ಸಂಪದ"ದಲ್ಲಿ "ಉದಯ್ ಇಟಗಿ"ಯವರು ಬರೆದ, ನಿಮಗೆ ಸಂದ ಗೌರವದ ಬಗೆಗಿನ ಲೇಖನ ಓದಿ ನಿಮ್ಮ ಬ್ಲಾಗಿಗೆ ಬಂದೆ. ನಿಮಗೆ ಸಂದ ಗೌರವಕ್ಕೆ ಕಾರಣವಾದ ಚಿತ್ರಗಳು ಹಾಕಿರ್ತೀರ ಅಂದುಕೊಂಡಿದ್ದೆ.

ನನಗೂ ಯಾರ ಅಭಿಪ್ರಾಯ ತಪ್ಪು ಅಂತ ಹೇಳಿ ಏನೂ ಆಗಬೇಕಾಗಿದ್ದಿಲ್ಲ. ಅವರಿಗನಿಸಿದ್ದು ನಾನು ಹೇಳಿದ್ರೆ, ನನಗೆ ಅನಿಸಿದ್ದು ನಾನು ಹೇಳಿದೆ ಅಷ್ಟೆ.

ನಿಮ್ಮ ಲೇಖನದಲ್ಲಿ ಭಾವುಕರಾಗದೆ ವಸ್ತು ಸ್ಥಿತಿ ತಿಳಿಸಿದ್ದೀರ. ನಿಮ್ಮ ಪ್ರಾಮಾಣಿಕತೆಗೆ ಅಭಿನಂದನೆಗಳು.

"Royal society associate" ಆಗಿದ್ದಕ್ಕೆ ಅಭಿನಂದನೆ ಹೇಳ್ಬೇಕು, ಅಲ್ಲಿಗೆ ಕಳುಹಿಸಿದ ಕೆಲವು ಚಿತ್ರನಾದ್ರೂ ಮುಂದಿನ ಪೋಸ್ಟಿನಲ್ಲಿ ತೋರ್ಸ್ತೀರ ಅನ್ನೋ ನಂಬಿಕೆಯಲ್ಲಿ ಸಧ್ಯಕ್ಕೆ ಅಭಿನಂದನೇನಾ ನನ್ನ ಹತ್ರಾನೇ ಇಟ್ಕೊಂಡಿರ್ತೀನಿ.

-
ಸಿಂಚನ

shivu.k said...

ಶಂಕರ್ ಸರ್,

"ಪ್ರೀತಿ ಅಂದಮೇಲೆ ಅದರ ಬುನಾದಿ ವಿಶ್ವಾಸ ಅನ್ನೋದಾಗಿರಬೇಕೇ ಹೊರತು ಬೇರೇನೂ ಅಲ್ಲ."

ಈ ಸಾಲುಗಳು ತುಂಬಾನೇ ಅರ್ಥವನ್ನು ಸೂಚಿಸುತ್ತವೆ...ಅಂದಮೇಲೆ ಅದರ ಅನುಭವ ನಿಮಗೆ ಹೆಚ್ಚೇ ಆಗಿರಬೇಕು ಅನ್ನಿಸುತ್ತೆ.....

"ಪ್ರೀತಿ ತಮ್ಮ ಕೈಯಾರೆ ಕಳೆದುಕೊಂಡವರಿಗೆ ನನ್ನಲ್ಲಿ ಸಿಂಪಥಿ ಇಲ್ಲಾ " ಈ ಮಾತನ್ನು ಒಪ್ಪುತ್ತೇನೆ. " ಪ್ರೀತಿಸುವವರು ಮನಸಾರೆ ಅದನ್ನು ಕೊಟ್ಟಾಗ ಎರಡು ಕೈಗಳಿಂದ ಸಂಪೂರ್ಣ ತೆಗೆದುಕೊಳ್ಳಿ" ಅಂತ ಪ್ರಕಾಶ ಹೆಗಡೆ ಹೇಳಿದ್ದು ನನಗೆ ನೆನಪಿದೆ. ಇದೆಲ್ಲಾ ಯಾವ ಯಾವ ವಯಸ್ಸಿನಲ್ಲಿ ನಾವು ಹೇಗೆ ಇರುತ್ತೇವೆಯೋ ಹಾಗೆ ಅವುಗಳ ಪರಿಣಾಮ ಪಲಿತಾಂಶ ಸಿಗುತ್ತದೆ. ನಮಗೆ ಆ ವಯಸ್ಸಿನಲ್ಲಿ ಹಾಗೆ ಆಯಿತು. ಈಗ ಆಗುವುದೇ ಬೇರೆ ಅಲ್ಲವೇ.....

ಈ ವಿಚಾರದಲ್ಲಿ ನನ್ನ ಅಭಿಪ್ರಾಯವೇ ನನ್ನ ಶ್ರೀಮತಿಯದು ಕೂಡ....

ಇನ್ನೂ ಪ್ರಕಾಶ್ ಹೆಗಡೆಯವರು ಈ ವಿಚಾರದಲ್ಲಿ ಏನು ಹೇಳುತ್ತಾರೆ ಕಾದು ನೋಡೋಣ...

ನಿಮ್ಮ ಅಭಿಪ್ರಾಯ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಜಯಶಂಕರ್,

ನೀವು ಹೇಳಿದಂತೆ ನಾನು ಆಗ ಮಾಡಲು ಸಾಧ್ಯವಿರಲಿಲ್ಲ...ಈಗಲೇ ಇಷ್ಟು ದಿನವಾದ ಮೇಲೆ ಇದನ್ನು ಹೇಳಿ ಬರೆದಿದ್ದೇನೆ....ಏನು ಆಗಲಿಲ್ಲ...ನಿಮ್ಮ ಮಾತಿನಂತೆ ಮಾಡಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ...

ಮದುವೆ ವಿಚಾರದಲ್ಲಿ ನಾನು ಕ್ಲಿಯರ್ ಆಗಿದ್ದೆ... ಆಗ ಉಷಾ ಅವರ ಮಾವನ ಮಾತು ಕೇಳಿರದಿದ್ದರೆ ಕತೆ ಬೇರೆ ಆಗಿರುತ್ತಿತ್ತು.

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು....

shivu.k said...

ಶಾಂತಲಾ ಮೇಡಮ್,

ಸತ್ಯ ಲೇಖನವನ್ನು ಮೆಚ್ಚಿದ್ದಕ್ಕೆ ಮತ್ತು ಪ್ರಶಸ್ತಿಗೆ ಅಭಿನಂದಿಸಿದ್ದಕ್ಕೆ ಧನ್ಯವಾದಗಳು....

ಬದುಕು ಹೀಗೆಯೇ ಇರಬೇಕು ಎನ್ನುವತ್ತ ನಿರ್ಧರಿಸಿ ಪಯಣಿಸುವ ಯತ್ನ ನಮ್ಮದು. ಉಳಿದದ್ದು ದೇವೇಚ್ಛೆ.

ಈ ನಿಮ್ಮ ಮಾತನ್ನು ಖಂಡಿತ ಒಪ್ಪುತ್ತೇನೆ...

ಬಂದದ್ದೆಲ್ಲವೂ ನಮ್ಮದೇ ಅಂತ ಬದುಕನ್ನು ಬಾಳಾಗಿಸಿಕೊಳ್ಳುತ್ತ
ಸವಿಯುವುದಷ್ಟೇ ನಮ್ಮ ಪಾಲು.

ಈ ಸಾಲುಗಳು ನಿಮ್ಮ ಪಕ್ವ ಅನುಭವವನ್ನು ಬಿಂಬಿಸುತ್ತವೆ...ಹೀಗೆ ಬರುತ್ತಿರಿ...

shivu.k said...

ಸಲೀಂ,

ಮತ್ತೆ ಬ್ಲಾಗಿಗೆ ಬಂದಿದ್ದಕ್ಕೆ, ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್...

shivu.k said...

ಸತ್ಯ,

ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮದೂ ಕತೆಯನ್ನು ನಿಮ್ಮ ಬ್ಲಾಗಿನಲ್ಲಿ ಬರೆಯಿರಿ ನಾವು ಬಂದು ಓದುತ್ತೇವೆ...

ಧನ್ಯವಾದಗಳು....

Ittigecement said...

ಶಿವು ಸರ್... ನಮಸ್ಕಾರ..

ಎಲ್ಲರಿಗೂ ನಮಸ್ಕಾರ...

ಎಲ್ಲಾ ಮುಗಿದ ಮೇಲೆ..

ಪೋಲಿಸರ ಹಾಗೆ ಬಂದೆ ಅಂದು ಕೊಳ್ಬೇಡಿ...

ಏನಾಗ ಬೇಕಿತ್ತೋ ಅದು ಆಗಿದೆ...

ಆಗಿದ್ದೆಲ್ಲ ಒಳಿತೇ ಆಗಿದೆ..

ಒಳ್ಳೆಯ ಅಪರೂಪದ ಜೋಡಿ ಶಿವು -ಹೇಮಾಶ್ರೀ

ಅವರಮನೆಯಲ್ಲೂ ಪ್ರಜಾಪ್ರಭುತ್ವ ಇದೆ..

ಪ್ರಜಾಪ್ರಭುತ್ವ ಇರುವ ಮನೆಯಲ್ಲಿ ಸ್ವಲ್ಪ ಗಲಾಟೆ (ಚರ್ಚೆಯದು)
ಇರುತ್ತದೆ ಅನ್ನುವದು ಬಿಟ್ಟರೆ ಹೊಂದಾಣಿಕೆ ಚೆನ್ನಾಗಿರುತ್ತದೆ..

ನಾನು ಅವರ ಮನೆಗೆ ಹೋದಾಗಲೆಲ್ಲ ಇಂಥಹ ಚರ್ಚೆ ಸಾಮಾನ್ಯ..

ಆಮೇಲೆ ನಕ್ಕು ಸ್ವೀಟು ಕೊಟ್ಟು ಕಳುಹಿಸುತ್ತಾರೆ...

ಆ ಹುಡುಗಿ ಯಾಕೇ ಹಾಗೆ ಮಾಡಿದಳೋ..?
ಈಗ ಏನೂ ಪ್ರಯೋಜನ ಇಲ್ಲ...

ಆ ಸಮಯದಲ್ಲಿ ಹುಡುಗನಿಗೆ ಸ್ವಲ್ಪ ಆಘಾತವಾಯಿತು..
ಅವಳಿಗೂ ಆಗಿರಬಹುದು..

ಈಗ ಖುಷಿ ಇದೆಯಲ್ಲ...

ಹೇಮಾ, ಶಿವು ಸ್ವೀಟ್ ಮಾಡಿಸಿ...

ನಾನು ಬರ್ತೇನೆ...

ಚಂದದ ಲೇಖನಕ್ಕೆ ವಂದನೆಗಳು...

shivu.k said...

ಗುರುಪ್ರಸಾದ್,

ನಿಮ್ಮ ಮಾತು ನಿಜ ನಮ್ಮ ಜೀವನದ ವೈಯಕ್ತಿಕ ಸೂಕ್ಷ್ಮಗಳನ್ನು ಎಲ್ಲರ ಮುಂದೆ ತೆರೆದುಕೊಳ್ಳುವುದು ತುಂಬಾ ಕಷ್ಟ....ಪ್ರತಿಕ್ರಿಯೆಗೆ ಥ್ಯಾಂಕ್ಸ್...

ಹೀಗೆ ಬರುತ್ತಿರಿ....

shivu.k said...

ಡಾ.ಸತ್ಯನಾರಾಯಣ ಸರ್,

ಎರಡು ದಿನದಿಂದ ಎಲ್ಲಾ ಕಡೆ ಇಂಟರ್ ನೆಟ್ ತೊಂದರೆ ಇದೆ...ಮಲ್ಲಿಕಾರ್ಜುನ್ ಅದೇ ಹೇಳುತ್ತಿದ್ದರು...

ಈ ಲೇಖನದಲ್ಲಿ ನಿಮ್ಮ ಜೀವನಾನುಭವದ ಅಭಿಪ್ರಾಯವನ್ನು ತಿಳಿಸಿದ್ದೀರಿ....ಕೆಲವು ತೀರ ಸ್ವಂತದ ವಿಚಾರಗಳನ್ನು ಹೀಗೆ ಗೆಳೆಯರ ಮುಂದೆ ಹೇಳಿಕೊಳ್ಳುವ ಕಲೆ ನಾನು ssy ಕ್ಯಾಂಪಿನಲ್ಲಿ ಕಲಿತದ್ದು...ನಂತರ ಅದು ತುಂಬಾ ಸುಲಭವೆಂದು ಗೊತ್ತಾಯಿತು...ಲೇಖನವನ್ನು ಮೆಚ್ಚಿ ಹೊಗಳಿದ್ದೀರಿ...ಧನ್ಯವಾದಗಳು...ಹೀಗೆ ಬರುತ್ತಿರಿ...

shivu.k said...

ಸಿಂಚನ ಮೇಡಮ್,

ಉದಯ ಸರ್ ಅವರು ತುಂಬಾ ದೂರದ ಲಿಬಿಯಾ ದೇಶದಲ್ಲಿದ್ದರೂ ನಮ್ಮನ್ನು ಗುರುತಿಸುವ ಕೆಲಸ ಮಾಡಿದ್ದಾರೆ. ಅವರ ಮನಸ್ಸು ದೊಡ್ಡದು. ಹೀಗೆ ಒಬ್ಬರನ್ನೊಬ್ಬರು ನಮ್ಮ ಬ್ಲಾಗ್ ಲೋಕದಲ್ಲಿ ಗುರುತಿಸುವ ಕೆಲಸವಾದರೆ ಪ್ರತಿಯೊಬ್ಬರ ಸಾಧನೆಗಳು ಸಾರ್ಥಕತೆ ಪಡೆಯುತ್ತವೆ...ಮತ್ತು ಇನ್ನಷ್ಟು ಸಾಧಿಸಲು ಸ್ಫೂರ್ತಿ ನೀಡಿದಂತಾಗುತ್ತದೆ...

ಮತ್ತೆ ನೀವು ಈ ಲೇಖನಕ್ಕೆ ನೇರವಾಗಿ ನಿಮ್ಮ ಮನಸ್ಸಿಗೆ ತೋರಿದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೀರಿ...ಅದು ನನಗಿಷ್ಟವಾಯಿತು....ಇದರಿಂದ ಅನೇಕ ವಿಚಾರಗಳನ್ನು ತಿಳಿದುಕೊಂಡಂತಾಯಿತು. ಈ ಲೇಖನದ ಯಶಸ್ಸಿಗೆ ನೀವು ಕಾರಣವೆಂದು ನನಗೆ ಅನ್ನಿಸಿದೆ..ಅದಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ...

ನನಗೆ ದೊರಕಿದ ಅಂತರರಾಷ್ಟ್ರಿಯ ಮನ್ನಣೆಗೆ ಕಳುಹಿಸಿದ ಚಿತ್ರಗಳನ್ನು ಮುಂದೆ ನನ್ನ ಬ್ಲಾಗಿನಲ್ಲೇ ಹಾಕುತ್ತೇನೆ...ನಿಮಗೆ ನಿರಾಸೆಗೊಳಿಸೊಲ್ಲ.....ಅದಕ್ಕಾಗಿ ದಯವಿಟ್ಟು ಕಾಯಿರಿ...

ಧನ್ಯವಾದಗಳು...ಹೀಗೆ ಬರುತ್ತಿರಿ...

shivu.k said...

ಪ್ರಕಾಶ್ ಸರ್,

ನಿಮ್ಮ ಅಭಿಪ್ರಾಯಕ್ಕೆ ಸುಮಾರು ಜನ ಕಾಯುತ್ತಿದ್ದರು ಅನ್ನಿಸುತ್ತೆ. ಅದರಲ್ಲಿ ನಾನು ಕೂಡ. ನೀವು ನಮ್ಮ ಮನೆಗೆ ಬಂದಾಗಲೆಲ್ಲಾ....ಇಂಥ ಒಂದೊಂದು ಕತೆಗಳನ್ನು ಹೇಳುವ ದೈರ್ಯ ಮಾಡುತ್ತೇನೆ...ಏಕೆಂದರೆ ಹೇಮಾಶ್ರಿಯಿಂದ ಪೋಲಿಸರಂತೆ ರಕ್ಷಿಸುತ್ತೀರೆಂಬ ಭಯಂಕರ ನಂಬಿಕೆ ನನ್ನದು....ಮತ್ತೆ ಯುಗಾದಿಗೆ ಬನ್ನಿ ಸ್ವೀಟ್ಸ್ ಜೊತೆಗೆ ಬೇವು ಬೆಲ್ಲ ಕೊಡುತ್ತೇವೆ. ಮತ್ತು ಬದುಕಿನ ಬೇವು ಬೆಲ್ಲ ಒಬ್ಬರಿಗೊಬ್ಬರು ಹಂಚಿಕೊಳ್ಳೋಣ...

ಧನ್ಯವಾದಗಳು....

Anonymous said...

ನಮಸ್ತೆ ಶಿವು ಅಣ್ಣ
ಕೆಲಸದ ಒತ್ತಡ ಜಾಸ್ತಿ ಇದ್ದಿದ್ದಕ್ಕೆ ಪ್ರತಿಕ್ರಿಯಿಸಲು ತಡವಾಯಿತು
ಅಣ್ಣ ಮದುವೆ ವಿಷಯದಲ್ಲಿ ಹುಡುಗ ನಿರ್ಧಾರ ತೆಗೆದುಕೋಂಡಷ್ಟು ನೇರವಾಗಿ ಹುಡುಗಿಯರಿಗೆ ತೆಗೆದು ಕೊಳ್ಳಲು ಸಾದ್ಯವಿಲ್ಲ ಅನ್ನೋದೇನೋ ನಿಜ. ಹುಡುಗಿಯರ ಮನಸ್ಸು ಚಂಚಲ ಅನ್ನುತ್ತಾರೆ ಅದನ್ನ ಈ ಹುಡುಗಿ ನಿಜ ಮಾಡಿಬಿಟ್ಟಳು. ಒಮ್ಮೆ ಒಪ್ಪಿಗೆ ಕೊಟ್ಟು ನಂತರ ತನ್ನ ಮಾವ ಹೇಳಿದ ಮಾತು ಕೇಳಿ ಬೇಡ ಎಂದಳು. ಒಂದು ವೇಳೆ ಆ ಹುಡುಗಿನ ಮದುವೆ ಆಗಿದ್ದರೆ ಈಗ ಸಿಕ್ಕಿರುವ ಸ್ನೇಹಿತೆಯಂತ ಮಡದಿಯನ್ನ ಕಳೆದುಕೊಳ್ಳುತ್ತಿದ್ದಿರಿ ಅಲ್ವಾ ಅಣ್ಣ. ನೀವು ಒಪ್ಪಿಗೆ ಕೊಡದಿದ್ದೆ ಸರಿ ಅನಂತರ ಆ ಹುಡುಗಿಯ ಮನಸ್ಸು ಮತ್ತೆ ಬದಲಾವಣೆ ಆಗಿದ್ದರೆ ಏನು ಮಾಡಲು ಆಗುತ್ತಿರಲಿಲ್ಲ. ಆ ಹುಡುಗಿಯಾ ಜೀವನದಲ್ಲಿ ಈ ರೀತಿ ಆಗಬೇಕೆಂದು ಬರೆದಿತ್ತು. ಹಾಗೆ ನಡೆಯಿತು. ಹಣೆಯಲ್ಲಿ ಬರೆದದ್ದನ್ನು ಎಲೆಯಲ್ಲಿ ಒರೆಸಲಾಗದು. ಹೀಗಂತ ನಮ್ಮ ಅಮ್ಮ ಹೇಳ್ತಾ ಇದ್ರೂ

ತೇಜಸ್ವಿನಿ ಹೆಗಡೆ said...

ಶಿವು ಅವರೆ,

ನಿಮ್ಮ ಪ್ರಾಮಾಣಿಕ ನಿವೇದನೆ ಒದಿ ತುಂಬಾ ಮೆಚ್ಚುಗೆಯಾಯಿತು. ಮದುವೆಯ ಮೊದಲು ಇಂತಹ ಘಟನೆಗಳು ಅದೆಷ್ಟೋ ವ್ಯಕ್ತಿಗಳ ನಡುವೆ ನಡೆದು ಹೋಗುತ್ತವೆ. ಪರಿಸ್ಥಿತಿಯ ಕೈಗೊಂಬೆಯಾಗಿಯೋ ಇಲ್ಲಾ ಯಾವುದೋ ಇಬ್ಬಗೆಗೆ ಸಿಲುಕಿಯೀ ಈರೀತಿಯ ಕಹಿ ಘಟನೆಗಳು ನಡೆಯುವುದು ಅಸಹಜವೇನೂ ಅಲ್ಲ. ಆದರೆ ಅದನ್ನು ಸಮರ್ಥವಾಗಿ ಎದುರಿಸಿ. ಆದ್ಯಾತ್ಮದ ಮೂಲಕ ಪರಿಹರಿಸಿಕೊಂಡು ಉತ್ತಮ ಬಾಳ್ವೆ ಆರಂಭಿಸಿದಿರಿ ನೀವು ಮತ್ತು ಆ ಹುಡುಗಿ. ನಿಜಕ್ಕೂ ಇದು ಶ್ಲಾಘನೀಯ. ಇಬ್ಬರಿಗೂ ಶುಭಹಾರೈಕೆಗಳು.

ಇದ್ದುದನ್ನು ಇದ್ದಹಾಗೇ ಸ್ವೀಕರಿಸಿ, ಅದನ್ನು ಒಪ್ಪಿಕೊಂಡು ನಿಮ್ಮ ನೋವಿನಲ್ಲೂ ಸಹಭಾಗಿಯಾಗಿ ನಲಿವು ತುಂಬಿದ ನಿಮ್ಮ ಮನೆಯವರನ್ನೂ ಮೆಚ್ಚಲೇಬೇಕು. :)

ಬಿಡುವಿಲ್ಲದ ಕಾರ್ಯಗಳ ನಡುವೆಯೂ ಇಂತಹ ಒಂದು ಮಹಾನ್ ಸಾಧನೆ ಗೈದ ನಿಮಗೆ ಹಾಗೂ ಮಲ್ಲಿಕಾರ್ಜುನ ಅವರಿಗೆ ಮತ್ತೊಮ್ಮೆ ಅಭಿನಂದನೆಗಳು.

ಅಂದಹಾಗೆ ಆ ಮುದ್ದು ಮುಖವನ್ನೇಕೆ ಪುಟ್ಟ ಕೈಗಳಿಂದ ಮುಚ್ಚಿರುವಿರಿ? ತುಂಬಾ ಮುದ್ದಾಗಿದ್ದಾಳೆ ಪುಟ್ಟಿ. ಪೂರ್ತಿ ಚಿತ್ರವೂ ಸಿಕ್ಕಿದ್ದರೆ ನನ್ನ ಪುಟ್ಟಿಗೆ ತೋರಿಸಿ ಖುಶಿ ಪಡುತ್ತಿದ್ದೆ. :)

ಕೆ.ಎನ್.ಯೋಗೇಶ್ ರಾವ್ said...

ನಮಸ್ತೆ ಶಿವು ಸರ್, ನಿಮ್ಮ ಬ್ಲಾಗಿಗೆ ನಾನೊಬ್ಬ ಹೊಸ ಹಕ್ಕಿ ಹಾರಿಬಂದು ಕುಳಿತಿದ್ದೇನೆ. ದಯವಿಟ್ಟು ನನಗೊಂದಿಷ್ಟು ನಿಮ್ಮ ಸಲಹೆ-ಪ್ರೀತಿಯ ಕಾಳುಗಳನ್ನು ಹಾಕಿ.

ನಿಮ್ಮ ಈ ಲೇಖನ ಓದಿದೆ. ತಡವಾದರು ನಿಮಗೆ ಒಳ್ಳೆಯ ಒಡವೆ ದೊರಕಿದೆ. ಮತ್ತೆ ನೀವು ಆಕೆಯನ್ನೆ ಮದುವೆಯಾಗಿದ್ದರೆ, ಪ್ರತಿ ನಡೆ-ನುಡಿಯಲ್ಲು ಅನುಮಾನಗಳಿಗೆ ಎಡೆ ಕೊಟ್ಟು ಆಕೆ ತನ್ನ ಜೀವನವನ್ನೆ ಕೆಡವಿಕೊಳ್ಳುತ್ತಿದ್ದರು, ಎನಿಸುತ್ತದೆ..

ಧನ್ಯವಾದಗಳು...

Dr.Gurumurthy Hegde said...

ಹೈ ಶಿವು ಸರ್,
ನಿಮಗೆ ಪ್ರಶಸ್ತಿ ಸಿಕ್ಕಿದ್ದು ಕೇಳಿ ತುಂಬಾ ಸಂತಸವಾಯಿತು. ಇನ್ನೂ ಜಾಸ್ತಿ ಪ್ರಶಸ್ತಿಗಳು ನಿಮ್ಮನ್ನು ಅರಸಿ ಬರಲಿ.
Sorry for delayed wishes,

ವಿನುತ said...

ಶಿವುರವರೆ , ಪ್ರವಾಸದಿಂದಾಗಿ ನಿಮ್ಮ ಬ್ಲಾಗಿಗೆ ಪ್ರತಿಕ್ರಿಯಿಸುವುದು ತಡವಾಯಿತು. ಕ್ಷಮೆಯಿರಲಿ.
ನಿಮ್ಮ ಜೀವನದ ತೀರ ವೈಯಕ್ತಿಕ ಎನ್ನಬಹುದಾದ ಘಟನೆಯನ್ನು ನಮ್ಮೊಂದಿಗೆ ಹಂಚಿಕೊಂದಿದ್ದಿರಿ. ನಿಮ್ಮ ನಿರೂಪಣೆ
ಬಹಳವಾಗಿ ಹಿಡಿಸಿತು. ಬಹುಶ: ಇದೊಂದು ಘಟಿಸಿಹೋದ ಸಂಗತಿಯಾಗಿರದಿದ್ದರೆ ವಿವಿಧ ರೀತಿಯ ಚರ್ಚೆಗಳು ಅಗತ್ಯವಾಗಿದ್ದವೇನೋ, ಆದರೀಗ ನಿಮ್ಮ ಮತ್ತು ನಿಮ್ಮ ಪತ್ನಿಯ ಧೈರ್ಯ ಹಾಗು ಸಮಚಿತ್ತದ ಹೊಂದಾಣಿಕೆಗೆ ಅಭಿನಂದನೆಗಳನ್ನಷ್ಟೇ ಹೇಳಬಲ್ಲೆ.

ವಿನುತ said...
This comment has been removed by the author.
Anonymous said...

ನೀವು ಸರಿಯಾದ ನಿರ್ಧಾರವನ್ನೇ ತಗೊಂಡಿದ್ದೀರಿ ಸಾರ್. ಸ್ವಾಭೀಮಾನವುಳ್ಳ ಯಾವುದೇ ಯುವಕನೂ ಹಾಗೆಯೇ ಮಾಡ್ತಾನೆ..
ಹಾಗೂ ನಿಮ್ಮ ನಿರೂಪಣೆ ಎಷ್ಟು ಅಂದವಾಗಿತ್ತೆಂದರೆ, ಪೂರಾ ಓದಿಸಿಕೊಂಡು ಹೋಯಿತು. ಸಾಮಾನ್ಯವಾಗಿ ತುಂಬಾ ಉದ್ದದ ಲೇಖನವೋದಲು ಸಾಧ್ಯವಾಗುವುದಿಲ್ಲ!
:-)
ಕೊನೆಯದಾಗಿ, ಭಗವದ್ಗೀತೆಯಲ್ಲಿರುವಂತೆ,
"ಆದದ್ದೆಲ್ಲ ಒಳ್ಳೆಯದಕ್ಕೇ, ಆಗುತ್ತಿರುವುದೆಲ್ಲಾ ಒಳ್ಳೆಯದಕ್ಕೇ, ಮುಂದಾಗುವುದೂ ಓಳ್ಳೆಯದೇ..."

VENU VINOD said...

ಶಿವು.
ಸಿಹಿ ಕಹಿ ಎರಡನ್ನೂ ನಿಮ್ಮ ಬದುಕಿನಿಂದಲೇ ತೆಗೆದು ಇಲ್ಲಿ ಪ್ರಸ್ತುತ ಪಡಿಸಿದ್ದೀರಿ..ಪ್ರದೀಪ್ ಹೇಳಿದಂತೆ ಆಗೋದೆಲ್ಲಾ ಒಳ್ಳೆಯದಕ್ಕೇ....
ಇನ್ನೊಂದು ಚಿಕ್ಕ ವಿಚಾರ..ನನ್ನ ಹೆಸರು ವೇಣು ವಿನೋದ್. ಆನಂದ್ ಅಲ್ಲ...ತಪ್ಪು ತಿಳಿಯದಿರಿ..ವಂದನೆಗಳು
-ವೇಣು ವಿನೋದ್.

shivu.k said...

ರೋಹಿಣಿ ಮರಿ,

ಹುಡುಗಿಯರ ನಿರ್ದಾರಗಳ ಬಗ್ಗೆ ನಮಗಿಂತ ನಿಮಗೇ ಚೆನ್ನಾಗಿ ಗೊತ್ತು. ನನ್ನ ಭಾವನೆಗಳನ್ನು ನಾನು ಮಾತ್ರ ಬರೆಯಬಹುದು. ಆದರೆ ಹುಡುಗಿ ಮನಬದಲಿಸಿದಾಗ ಇದ್ದ ಭಾವನೆ ನನಗೆ ತಿಳಿಯದು...ಒಟ್ಟಿನಲ್ಲಿ ಆ ಸಮಯದಲ್ಲಿ ಏನಾಗಬೇಕಿತ್ತೋ ಅದು ಆಯಿತು.

"ಹಣೆಯಲ್ಲಿ ಬರೆದದ್ದನ್ನು ಎಲೆಯಲ್ಲಿ ಒರೆಸಲಾಗದು." ಈ ಮಾತು ನನಗೆ ತಿಳಿದಿರಲಿಲ್ಲ...ನಿನ್ನ ಅಮ್ಮನಿಗೆ ನನ್ನ ನಮಸ್ಕಾರ ತಿಳಿಸು...ತುಂಬಾ ತೂಕವುಳ್ಳ ವಾಕ್ಯವದು..
ಈ ಲೇಖನವನ್ನು ನಿನ್ನಮ್ಮನೂ ಓದಿರಬಹುದು ಅಥವ ನೀನು ಹೋಗಿ ಹೇಳಿರಬಹುದು ಅಂತ ಊಹಿಸುತ್ತೇನೆ...
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

shivu.k said...

ತೇಜಸ್ವಿನಿ ಮೇಡಮ್,

ಮೊದಲ ಬಾರಿ ನೀವೊಬ್ಬರೇ ಇಲ್ಲಿ ನಡೆದಿರುವ ಸನ್ನಿವೇಶದಲ್ಲಿ ಇಬ್ಬರ ನಿರ್ದಾರಗಳನ್ನು ಒಪ್ಪಿರುವುದು...ಲೇಖನವನ್ನು ಚೆನ್ನಾಗಿ ಅರ್ಥೈಸಿದ್ದೀರಿ ಥ್ಯಾಂಕ್ಸ್...ಒಟ್ಟಾರೆ ಇಲ್ಲಿ ನಾಯಕರಲ್ಲ...ಖಳನಾಯಕರಲ್ಲ...ಪರಿಸ್ಥಿತಿಯ ಕೈಗೊಂಬೆಗಳು.

ಮತ್ತೆ ಫೋಟೋ ಬಗ್ಗೆಯೂ ನೀವೊಬ್ಬರೆ ಪ್ರಸ್ತಾಪಿಸಿದ್ದು ನನಗೆ ಖುಷಿಯಾಯಿತು. ಈ ಫೋಟೋದಲ್ಲಿದ್ದ ಮಗು ತಾನಾಗೆ ಮುಖ ಮುಚ್ಚಿಕೊಂಡಿದ್ದಾಗ ತೆಗೆದ ಫೋಟೋ...ಈ ಲೇಖನದಲ್ಲಿ ನಮ್ಮೆಲ್ಲರ ರಂಗಾವತಾರಗಳನ್ನು ನೋಡಿ ಮಗು ನಮ್ಮನ್ನು ಅಣಕಿಸಲು "ಅಯ್ಯೋ ದೊಡ್ಡವರ ಕರ್ಮಕಾಂಡವೇ" ಅಂತ ಹೇಳುತ್ತಿರುವಂತಿದೆಯಲ್ಲ ! ಅದಕ್ಕ್ಜಾಗಿ ಈ ಲೇಖನಕ್ಕೆ ಈ ಫೋಟೊ ಬಳಸಿದ್ದೇನೆ...

ಧನ್ಯವಾದಗಳು.

shivu.k said...

ಯೋಗೇಶ್ ರಾವ್,

ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಬ್ಲಾಗಿಗೆ ಬೇಟಿಕೊಡುತ್ತೇನೆ....ಲೇಖನವನ್ನು ಮೆಚ್ಚಿದ್ದೀರಿ...ನಿಮ್ಮ ಅಭಿಪ್ರಾಯವನ್ನು ತಿಳಿಸಿದ್ದೀರಿ...

ಧನ್ಯವಾದಗಳು...ಹೀಗೆ ಬರುತ್ತಿರಿ....

shivu.k said...

ಡಾ.ಗುರುಮೂರ್ತಿ ಹೆಗಡೆ ಸರ್,

ಅಭಿನಂದನೆಗಳಿಗೆ ಧನ್ಯವಾದಗಳು..

shivu.k said...

ವಿನುತಾ ಮೇಡಮ್,

ತಡವಾಗಿ ಬಂದಿದ್ದಕ್ಕೆ ಬೇಸರವಿಲ್ಲ..

ವೈಯಕ್ತಿಕ ಬದುಕಿನ ಚಿತ್ರಗಳನ್ನು ತೋರಿಸುವಾಗ ಭಯವಿದ್ದೇ ಇರುತ್ತದೆ...ತೋರಿಸಿದ ಮೇಲೆ ಹಗುರತ್ವದ ಅನುಭವವೇ ಬೇರೆ..

ಇದು ಮುಗಿದು ಹೋಗಿರುವ ಘಟನೆಯಾದರೂ ಈಗಾಗಲೇ ಪ್ರತಿಕ್ರಿಯೆಗಳಲ್ಲಿ ತುಂಬಾ ಚರ್ಚೆಗಳಾಗಿವೆ..
ಬಹುಶಃ ಇದೇ ಕತೆ ಈಗ ನಡೆದಿದ್ದರೇ ನನ್ನ ಕತೆ ಈ ಬ್ಲಾಗಿನಲ್ಲಿ ಏನಾಗುತ್ತಿತ್ತೋ ದೇವರೇ ಬಲ್ಲ...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

shivu.k said...

ಪ್ರದೀಪ್,

ಲೇಖನವನ್ನು ಚಿಕ್ಕದು ಮಾಡಲು ತುಂಬಾ ಪ್ರಯತ್ನಿಸಿದೆ...ಸಾಧ್ಯವಾಗಲಿಲ್ಲ. ಮತ್ತೆ ನನಗನ್ನಿಸಿದಂತೆ ನಾನು ಅ ದಿನ ಸ್ವಾಭಿಮಾನಿ ಹುಡುಗನಾಗಿರಲಿಲ್ಲ..ಕಾರಣ ಆ ಹುಡುಗಿಯನ್ನು ಮಾತಾಡಿ ಒಪ್ಪಿಸಲು ಪ್ರಯತ್ನಿಸಿದ್ದೆ. ಅದರೆ ಆಕೆ ಒಪ್ಪಲಿಲ್ಲ...

ಭಗವದ್ಗೀತೆಯ ಸಾಲು ನೆನಪಿಸಿದ್ದಕ್ಕೆ ಮತ್ತು ಲೇಖನ ಶೈಲಿ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್....

shivu.k said...

ವೇಣು ವಿನೋದ್,

ಲೇಖನದಲ್ಲಿರುವ ಸಿಹಿ-ಕಹಿಗಳು ಬರುವ ಯುಗಾದಿಯಲ್ಲಿ ಹಂಚುವ ಬೇವು-ಬೆಲ್ಲದಂತೆ ಅಲ್ಲವೇ...

ಆತುರದಲ್ಲಿ ನಿಮ್ಮ ಹೆಸರನ್ನು ನಿಮ್ಮ ಬ್ಲಾಗಿನ ಕಾಮೆಂಟಿನಲ್ಲಿ ತಪ್ಪಾಗಿ ಬರೆದಿದ್ದೆ...ಮುಂದೆ ತಿದ್ದಿಕೊಳ್ಳುತ್ತೇನೆ..'
ಬ್ಲಾಗಿಗೆ ಬಂದಿದ್ದಕ್ಕೆ ಥ್ಯಾಂಕ್ಸ್...

NiTiN Muttige said...

helabekaagiddella helaagide... vilambavaagidakke kshamae irali..

andahaage nimage shubhashayagalu...

shivu.k said...

ನಿತಿನ್,

ಕೊನೆಯವರಾಗಿ ಬಂದಿದ್ದಕ್ಕೆ ನಿಮಗೆ ಥ್ಯಾಂಕ್ಸ್...

Unknown said...

yugAdi habbada shuBAShayagaLu

shivu.k said...

ರೂಪ ಮೇಡಮ್,

ನಿಮಗೂ ಯುಗಾದಿ ಹಬ್ಬದ ಶುಭಾಶಯಗಳು...

shivu.k said...
This comment has been removed by the author.
ಧರಿತ್ರಿ said...

ಶಿವಣ್ಣ...
ನಾನು ಬಂದು ಇಣುಕುವ ಹೊತ್ತಿಗೆ ಸೆಂಚುರಿ ದಾಟೇ ಬಿಟ್ಟಿದೆ. ಶಹಭಾಷ್..ಅಭಿನಂದನೆಗಳು. ನಿಮ್ಮ ಬರಹವನ್ನು ಮೊನ್ನೆನೇ ಓದಿದರೂ ಅದಕ್ಕೊಂದು ಪುಟ್ಟ ಕಾಮೆಂಟು ಮಾಡಲೂ ಆಗದಷ್ಟು ಕೆಲಸದ ನಡುವೆ ಹುದುಗಿಹೋಗಿದ್ದೆ. ಕ್ಷಮಿಸಿ..ಈವರೆಗೆ ಬರದ ಕುತೂಹಲಕರ ಸಂಗತಿಗಿಂತ ಇದು ಭಿನ್ನವಾದ ಕಥೆ, ಅನುಭವ. ಯಾವುದನ್ನೂ ಮನಸ್ಸಿನಲ್ಲಿಟ್ಟುಕೊಳ್ಳಬಾರದಂತೆ..ಬ್ಲಾಗಿಗೇ ಇಳಿಸೇಬಿಟ್ಟಿರಲ್ಲಾ..ನಿಮ್ಮ ಧೈರ್ಯದ ಜೊತೆಗೆ ಹೇಮಾಶ್ರೀ ಅವರು ಇಲ್ಲಿ ಗಮನಾರ್ಹ ಅನಿಸಿಬಿಡ್ತಾರೆ. ಇನ್ನಷ್ಟು ಅನುಭವದ ಸಾರ ಬಿಚ್ಚಿಡಿ..ಓದಕ್ಕಂತೂ ನಾವಿದ್ದೇವೆ.
-ಪ್ರೀತಿಯಿಂದ,
ಧರಿತ್ರಿ

ಆಲಾಪಿನಿ said...

ನಿಮ್ಮ ಬರಹಕ್ಕಿಂತ ಕಮೆಂಟ್ ಸಂಖ್ಯೆ ನೋಡಿ ಸಖತ್ ಖುಷಿಯಾಯ್ತು ಶಿವು ಅವ್ರೆ, ನೋಡಿ ಎಷ್ಟು ಜನರನ್ನ ಗಳಿಸಿಕೊಂಡುಬಿಟ್ಟಿದ್ದೀರಿ. ಇದಕ್ಕಿಂತ ಹೆಚ್ಚು ಜೀವನದಲ್ಲಿ ಇನ್ನೇನಿದೆ ಹೇಳಿ. ತುಂಬಾ ಕುತೂಹಲದಿಂದ ಓದಿಸ್ಕೊಂಡ್ತು. ಫೋಟೋಗ್ರಫಿ ಜೊತೆ ಬರಹವನ್ನೂ ಆಸ್ಥೆಯಿಂದ ಸ್ವೀಕರಿಸಿದಂತಿದೆ. ಒಳ್ಳೆಯದಾಗಲಿ ನಿಮಗೂ ನಿಮ್ಮ ಕುಟುಂಬಕ್ಕೂ.

ಅಹರ್ನಿಶಿ said...

ಶಿವು,
ನಿಮ್ಮ ಬರಹ ಓದಿದ್ದ ಮೇಲೆ ಮೆಚ್ಚಿಕೊ೦ಡು ಮಾಡಿದ ಮೊದಲ ಕೆಲಸ ನನ್ನ ಜೀವನದ ಇನ್ನೊ೦ದು ಘಟನೆ ಬ್ಲಾಗಿಸಿದ್ದು.ಬ್ಲಾಗಿಗೊಮ್ಮೆ ಬ೦ದು ಅಭಿಪ್ರಾಯ ತಿಳಿಸಿ.ಸ್ಪೂರ್ತಿಗಾಗಿ ವ೦ದನೆಗಳು.

shivu.k said...

ಧರಿತ್ರಿ,

ನಾನು ಈವರೆಗೂ ಬರೆದ ಲೇಖನಗಳಲ್ಲಿ ಇದು ತುಂಬ ದೈರ್ಯವಹಿಸಿದ್ದು. ಸರಳವಾಗಿ ನೇರವಾಗಿ ಬರೆದಿದ್ದೇನೆ...ನೋಡೋಣ ಏನಾಗಬಹುದು ಅಂತ....ಪರಿಣಾಮ ಅಂದು ಆಗುವುದೆಲ್ಲಾ ಒಳ್ಳೆಯದಕ್ಕೆ ಆಯಿತು...ಅನ್ನುವ ಹಾಗೆ ಈಗಲೂ ಅದೇ ಅಯಿತು...ಈ ಲೇಖನದ ಯಶಸ್ಸಿಗೆ ನೀನು ರಾಜೇಶ್ ಸೇರಿದಂತೆ ಎಲ್ಲರೂ ಕಾರಣ. ಧನ್ಯವಾದಗಳು...

shivu.k said...

ಶ್ರೀದೇವಿ ಮೇಡಮ್,

ನನ್ನ ಬ್ಲಾಗಿಗೆ ಆಗಾಗ ಬರುತ್ತಿರುತ್ತೀರಿ...ಮೆಚ್ಚಿ ಮಾತಾಡುತ್ತೀರಿ..ಬ್ಲಾಗ್ ಲೋಕಕ್ಕೆ ಬಂದು ಏಳು ತಿಂಗಳು ಆಯಿತು....ಆಮೇಲೇನಾಯಿತೋ ಗೊತ್ತಿಲ್ಲ ಎಲ್ಲರೂ ಗೆಳೆಯರಾಗಿಬಿಟ್ಟಿದ್ದಾರೆ....ಬರಹವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

shivu.k said...

ಶ್ರೀಧರ್ ಸರ್,

ನನ್ನ ಬ್ಲಾಗಿಗೆ ಸ್ವಾಗತ. ನೀವು ಮೊದಲಬಾರಿಗೆ ಬಂದು ನನ್ನ ಲೇಖನವನ್ನು ಮೆಚ್ಚಿ ಅದೇ ಸ್ಪೂರ್ತಿಯಿಂದ ನಿಮ್ಮ ಜೀವನದ "ಆ ದಿನಗಳು" ಬಗ್ಗೆ ನಿಮ್ಮ ಬ್ಲಾಗಿನಲ್ಲಿ ಬರೆದಿದ್ದೀರಿ....ನನಗೆ ಇದಕ್ಕಿಂತ ಇನ್ನೇನು ಬೇಕು...ನಿಮ್ಮ ಲೇಖನ ಓದಿದೆ...ತುಂಬಾ ಚೆನ್ನಾಗಿದೆ..

ಹೀಗೆ ಬರುತ್ತಿರಿ....ಧನ್ಯವಾದಗಳು...

Shrinidhi Hande said...

touching...

shivu.k said...

Srinidhi hande,

thanks...

shivu.k said...
This comment has been removed by the author.
ವನಿತಾ / Vanitha said...

ಚೆನ್ನಾಗಿದೆ ...ನಿಮ್ಮ old ಪ್ರೇಮಕಥೆ...
ಎಲ್ಲರ ಬದುಕಲ್ಲೂ ಸಿಹಿ ಕಹಿಗಳಿರುತ್ತವೆ, ಅದನ್ನು ಮೆಟ್ಟಿ ಬಾಳುವುದೇ ನಿಜವಾದ ಜೀವನ...
ಶುಭಹಾರೈಕೆ ಗಳೊಂದಿಗೆ,
ವನಿತಾ.

shivu.k said...

ವನಿತಾ ಮೇಡಮ್,

ನನ್ನ ಬ್ಲಾಗಿಗೆ ಬಂದಿದ್ದಕ್ಕೆ ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...
ಹೀಗೆ ಬರುತ್ತಿರಿ....

Ganesh Kiran said...

nice site shivu. Gud writing. Please visit our internet news magazin www.ekanasu.com and give your feed backs. Please contribute for ekanasu also

Guruprasad said...

ಶಿವೂ....
ತಡವಾಗಿ ಬಂದು ಪ್ರತಿಕ್ರಿಯಿಸುತಿರುವೆ ...... ಅದರೂ ಪ್ರತಿಕ್ರಿಯಿಸಲು ಏನಾದರೂ ಇದೆಯಾ ಅಂತ ನೋಡ್ತಾ ಇದೇನೇ..... ನನ್ ಏನ್ ಹೇಳಬೇಕೋ ಅದನ್ನೆಲ್ಲಾ ಎಲ್ಲರೂ ಹೇಳಿಬಿಟ್ಟು ಆಗಿದೆ....
ಓಕೆ ... firstly ನಿಮ್ಮ ಚಂದದ ಬರಹಕ್ಕೆ ಅಬಿನಂದನೆಗಳು.. ಕೆಲವೊಂದು ಸೂಕ್ಸ್ಮ ವಿಷಯಗಳನ್ನು ಹೇಳಿಕೊಳ್ಳಲು ಕಷ್ಟ ಆಗುತ್ತೆ ಆದರೆ ತಾವು ಅದನ್ನು ತುಂಬ ನವಿರಾಗಿ ಅಸ್ಟೇ effective ಆಗಿ ನಿಮ್ಮ ಹೆಂಡತಿಯ ಮುಂದೇನೆ ಹೇಳಿಕೊಂಡ ಇದ್ದೀರಿ..ಗುಡ್..
ನನಗೆ ಅನ್ನಿಸೋ ಪ್ರಕಾರ ನೀವು ತೆಗೆದುಕೊಂಡ ನಿರ್ದಾರ ಸರಿ ಅನ್ನಿಸುತ್ತ ಇದೆ.. ನೀವೇ ಹೇಳಿದ ಹಾಗೆ , ಮದುವೆ ನಿಶ್ಚಯ ಆಗಿದೆ ಅಂದಮೇಲೆ ಹುಡುಗಿ ಮತ್ತೆ ನೀವು ತುಂಬ ಮಾತಾಡಿದ್ರಿ ಅಂತ ಹೇಳಿದಿರ,, ಅದರಲ್ಲಿ ನಿಮ್ಮ profession ಬಗ್ಗೆ,, ನಿಮ್ಮ job ಬಗ್ಗೆ ಖಂಡಿಥವಗಳು ಪ್ರಸ್ತಾಪ ಬಂದಿರುತೆ,, ಅವಾಗ ಎಲ್ಲ ಒಪ್ಪಿಕೊಂಡಿದ್ದ ಹುಡುಗಿ, ಯಾರದೂ ಮಾತು ಕೇಳಿ ಇಲ್ಲ ಅಂತ ಹೇಳಿರೋದು ಸರಿಇರೋಲ್ಲ (ಅವರು ಯಾವ ಒತ್ತಡದಲ್ಲಿ ಇದ್ದರೋ ಗೊತ್ತಿಲ್ಲ ) ಆದರು ನಿದಾನವಾಗಿ ಯೋಚನೆ ಮಾಡಿ ಅಭಿಪ್ರಾಯ ಹೇಳಭಹುದಿತು.. ಯಾರಿಗೆ ಅಗಲಿ ಈ ವಿಚಾರದಲ್ಲಿ ಬೇಜಾರ್ ಅದಾಗ , ಅಸ್ಟು disapoint ಅದಾಗ ಮತ್ತೆ ಹುಡುಕಿ ಕೊಂಡು ಬಂದರು, ಬೇಡ ಅಂತಾನೆ ಅನ್ನಿಸೋದು.,..
ಏನೆಅಗಲಿ., ನಿಮ್ಮ ಹಳೆಯ ಹೇಳಿಕೊಳ್ಳಲಾಗದ ನೆನಪು ಗಳನ್ನೂ ಎಲ್ಲರ ಮುಂದೆ share ಮಾಡಿ.. ನಿಮ್ಮ ಮನಸ್ಸು ಹಗುರ ಮಾಡಿಕೊಂಡ್ ಇದ್ದೀರಿ... ದಟ್ಸ್ ಗ್ರೇಟ್... ಜೀವನದಲ್ಲಿ ಕರೆಕ್ಟ್ ಆದ ನಿರ್ಧಾರವನ್ನೇ ತೆಗೆದು ಕೊಂಡಿದ್ದಿರ ,, thats it.
ಈ ನಿಮ್ಮ ಪ್ರೇಮ ಕಥೆ ನಿಮ್ಮ ಸಿಂಪಲ್ ಆದ ಬರಹದಿಂದ ಚೆನ್ನಾಗಿ ಮೂಡಿ ಬಂದಿದೆ.... :-)
ಗುರು

Prabhuraj Moogi said...

ಶಿವು ಸರ್, ಬರುವುದು ತಡವಾಯಿತು, ಎಂಥ ಚೆಂದದ ಲೇಖನ ಎಷ್ಟು ತಡವಾಗಿ ಓದಿದೆ ಅನಿಸಿತು, ನೀವು ಮತ್ತೆ ಮುಂದುವರೆಯದೆ ಅದನ್ನು ಅಲ್ಲೇ ಕೊನೆಗೊಳಿಸಿದ್ದು, ಆ ಹುಡುಗಿಯ ಮರೆತಾದ್ದು ಬಹಳ ಒಳ್ಳೇದಾಯ್ತು ಬಿಡಿ, ವಿವಾಹದಲ್ಲಿ ನಂಬಿಕೆ ಮುಖ್ಯ ಅದಿಲ್ಲದಿದ್ರೆ ವ್ಯರ್ಥ, ನಿಮ್ಮಲ್ಲಿ ನಂಬಿಕೆಯಿರುವ ಸಂಗಾತಿಯ ಪಡೆದಿರುವಿರಿ, ನಿಮ್ಮ ಜೀವನ ಸುಖವಾಗಿರಲಿ.ಯಾರೋ ಬ್ರಹ್ಮಕುಮಾರಿಯಾದದ್ದಕ್ಕೆ ನೀವೇನು ಹೊಣೆಯಲ್ಲ, ಅದು ಅವರ ಆಯ್ಕೆ ಅಷ್ಟೆ...

shivu.k said...

Ganesh kiran,

thanks for coming to my blog. I will visit your website Shortly.

please come regularly...thanks...

shivu.k said...

ಗುರು,
ತಡವಾಗಿ ಬಂದರೂ ತೊಂದರೆಯಿಲ್ಲ. ಈ ಲೇಖನದಲ್ಲಿ ಬರೆದಂತೆ ನಾನು ಆ ಹುಡುಗಿಯ ಜೊತೆ ಒಂದು ತಿಂಗಳು ಮಾತಾಡಿದಾಗ ನನ್ನ ಎಲ್ಲಾ ವಿಚಾರಗಳನ್ನು ಹೇಳಿದ್ದೆ. ಇಬ್ಬರು ಸರಿಯಾಗಿ ಅರ್ಥಮಾಡಿಕೊಂಡಿದ್ದೆವು. ಅದರೆ ಆಕೆಯ ಪರಿಸ್ಥಿತಿಯ ಒತ್ತಡ ಹೇಗಿತ್ತೋ ಗೊತ್ತಿಲ್ಲ...ಮುಂದೆ ಏನು ಆಗಬೇಕೋ ಅದೇ ಅಯಿತು....ಈಗ ಅದರ ಬಗ್ಗೆ ಇಬ್ಬರಿಗೂ ಕೊರಗಿಲ್ಲ. ಈ ವಿಚಾರದಲ್ಲಿ ನಿಮ್ಮ ಪ್ರಮಾಣಿಕ ಅಭಿಪ್ರಾಯವನ್ನು ನಾನು ಮೆಚ್ಚುತ್ತೇನೆ...ಉಳಿದ ವಿಚಾರಗಳನ್ನೆಲ್ಲಾ ಉಳಿದವರಿಗೆ ಕಾಮೆಂಟು ಮಾಡಿದ್ದೇನೆ ನೀವು ನೋಡಿದರೆ ನಿಮಗೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಬಹುದು....
ನಿಮ್ಮ ಬ್ಲಾಗಿನಲ್ಲಿರುವ ರಸ್ತೆಚಿತ್ರಗಳು ತುಂಬಾ ಸುಂದರ ಅಮೇಜಿಂಗ್....ನನಗಂತೂ ತುಂಬಾ ಇಷ್ಟವಾಯಿತು...ಇಂತದ್ದು ಇನ್ನಷ್ಟು ಬರಲಿ...
ಧನ್ಯವಾದಗಳು...

shivu.k said...

ಪ್ರಭುರಾಜ್,

ನೀವು ತಡವಾಗಿ ಬಂದಿದ್ದಕ್ಕೆ ಬೇಸರವಿಲ್ಲ...ಕೊನೆಗೂ ಲೇಖನ ಓದಿದ್ದೀರಿ...ನಿಮ್ಮ ಅಭಿಪ್ರಾಯ ತಿಳಿಸಿದ್ದೀರಿ....ಈ ವಿಚಾರವಾಗಿ ನಾನು ಬೇರೆಯವರಿಗೆ ಎಲ್ಲಾ ರೀತಿಯ ಉತ್ತರಗಳನ್ನು ಕೊಟ್ಟಿದ್ದೇನೆ. ಅದನ್ನು ನೋಡಿದರೆ ನಿಮಗೆ ಬಂದ ಹೊಸ ಪ್ರಶ್ನೆಗಳಿಗೆ ಅಲ್ಲೇ ಉತ್ತರ ಸಿಗಬಹುದು...ಹೀಗೆ ಬರುತ್ತಿರಿ...
ಧನ್ಯವಾದಗಳು...

shivu.k said...

ನಾಗೇಶ್ ಹೆಗಡೆ ಹೇಳಿದರು..

ಚೆನ್ನಾಗಿದೆ ಪ್ರೇಮಿ ಕತೆ. ತುಂಬ ನವಿರಾಗಿ, ಯುಪಿಎಸ್
ನಲ್ಲಿ ಕರೆಂಟ್ ಹರಿಯುವ ಹಾಗೆ ಕತೆ ಬರೀತೀರಿ ನೀವು! ಹೆಡ್ ಲೈನ್ ಕೂಡ ಅಷ್ಟೆ
ನವಿರಾಗಿರಬೇಕಿತ್ತು. ತೀರ ಸಮ್ಮರಿ ಆಗಿಬಿಟ್ಟಿದೆ.

ಸುಧೇಶ್ ಶೆಟ್ಟಿ said...

ಶಿವಣ್ಣ...

ನೀವು ಬ್ಲಾಗ್ ಬರಹದಲ್ಲಿ ಲಿಮ್ಕಾ ದಾಖಲೆ ಮಾಡುವ ದಿನ ದೂರವಿಲ್ಲ ಎ೦ದನಿಸುತ್ತದೆ ನನಗೆ. ನಿಮ್ಮ ಬರಹಕ್ಕೆ ಬರುವ ಭರಪೂರ ಕಮೆ೦ಟುಗಳೇ ಅವು ಸಾಕ್ಷಿ. ಹೀಗೆ ಬರೆಯುತ್ತಿರಿ.

ಈ ಲೇಖನವನ್ನು ನಮ್ಮ ಜೊತೆ ಹ೦ಚಿಕೊ೦ಡಿದ್ದಕ್ಕೆ ಥ್ಯಾ೦ಕ್ಸ್. ತು೦ಬಾ ಚೆನ್ನಾಗಿ ಬರೆದಿದ್ದೀರಿ. ಮದುವೆಗಳು ಸ್ವರ್ಗದಲ್ಲೇ ನಿಶ್ಚಿತವಾಗಿರುತ್ತದೆ ಎ೦ಬುದು ನಿಜವೇನೋ...

ನೀವು ಹೇಮಾ ಅತ್ತಿಗೆಯನ್ನು ಮದುವೆಯಾಗಲು ಲಕ್ಕಿ ಇರಬೇಕು... ಹಾಗೆ ಅತ್ತಿಗೆ ನಿಮ್ಮನ್ನು ಮದುವೆಯಾಗಲು ಲಕ್ಕಿ ಇರಬೇಕು:)

ಹಿ೦ದೆಯೇ ಆಫೀಸಿನಲ್ಲಿ ಈ ಲೇಖನವನ್ನು ಓದಿದ್ದೆ. ಆದರೆ ಆಗ ಕಮೆ೦ಟಿಸಿರಲಾಗಿರಲಿಲ್ಲ. ತಡವಾಗಿ ಬ೦ದಿರುವುದಕ್ಕೆ ಕ್ಷಮೆ ಇರಲಿ. ಈ ವರ್ಷ ಪೂರ್ತಿ ನನಗೆ ಪರೀಕ್ಷೆಯ ಮೇಲೆ ಪರೀಕ್ಷೆಗಳಿವೆ....

shivu.k said...

ಸುಧೇಶ್,

ನನ್ನ ಈ ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಮತ್ತೆ ನೀವು ಲಿಮ್ಕಾ...ಧಾಖಲೆ ಅಂತೆಲ್ಲಾ ಹೊಸ ಆಸೆ ತೋರಿಸುತ್ತಿದ್ದೀರಿ....ಬ್ಲಾಗ್ ಗೆಳೆಯರಾದ ನೀವೆಲ್ಲಾ ಹೀಗೆ ಪ್ರೋತ್ಸಾಹಿಸುವುದರಿಂದ ಇದೆಲ್ಲಾ ಸಾಧ್ಯವಾಗಿದೆ ಅಂತ ನನಗೆ ಅನ್ನಿಸುತ್ತೆ. ಮತ್ತೆ ನನ್ನ ಮದುವೆ ವಿಚಾರದಲ್ಲಿ ನಾವಿಬ್ಬರು ಲಕ್ಕಿ ಅಂತ ನೀವು ಹೇಳಿದ್ದು ಸರಿಯಾಗಿದೆ...
ನಿಮಗೆ ಪರೀಕ್ಷೆ ಚೆನ್ನಾಗಿ ಅಭ್ಯಾಸ ಮಾಡಿ....ಒಳ್ಳೆಯದಾಗಲಿ...all the best..

ಧನ್ಯವಾದಗಳು...

Anonymous said...

ಶಿವು ಅವರೆ,ಕಥೆ ತುಂಬ ಚೆನ್ನಾಗಿತ್ತು; ಅದನ್ನ ನೀವು ಬೆಳೆಸಿಕೊಂಡು ಹೋದ ರೀತಿ ಇನ್ನೂ ಚೆನ್ನಾಗಿದೆ; ಓದ್ತಾ ಓದ್ತಾ ಮುಂದೇನಾಗುತ್ತೆ ಅನ್ನೋ ಕುತೂಹಲ . . ಇದನ್ನೇ ತಾನೆ ಕಥೆ ಹೇಳುವ ಕಲೆ ಅನ್ನೋದು. ಜೊತೆಗೆ ಮನೆಗೆ ಹೋದ ಮೇಲೂ ತುಂಬಾ ಹೊತ್ತಿನ ವರಗೆ ಕಾಡಿತು.

-ಪ್ರೀತಿಯಿಂದ
ಗ್ರೀಷ್ಮ

ಕೃಪಾ said...

ನಮಸ್ತೆ... ಶಿವಣ್ಣ....

ಏನು ಹೇಳ ಬೇಕೆಂದು ತಿಳಿಯುತ್ತಿಲ್ಲ......

ನಿಮ್ಮ ಹೇಮಾಶ್ರೀ ಬಗ್ಗೆ ಮೆಚ್ಚುಗೆ.... ಪ್ರೀತಿ ಜಾಸ್ತಿ ಆಗಿದೆ.....

ನನ್ನವರು..... ಪಿ.ಯು.ಸಿ ಯಲ್ಲಿದ್ದಾಗ ಪ್ರೇಮದ ಗುಂಗಿನಲ್ಲಿ ಬಿದ್ದು ಆದ ಹಾಸ್ಯ ವನ್ನು ... omme tilisuttene.

shivu.k said...

ಗ್ರೀಷ್ಮ ಮೇಡಮ್,

ನನ್ನ ಸತ್ಯಕತೆಯನ್ನು ಇಷ್ಟಪಟ್ಟಿದ್ದಕ್ಕೆ..ಥ್ಯಾಂಕ್ಸ್....ನಿಮಗೆ ಮನೆಗೆ ಹೋದ ಮೇಲು ಕಾಡಿತೆಂದರೆ ನಾನು ಬರೆದಿದ್ದಕ್ಕೂ ಸಾರ್ಥಕವೆನಿಸುತ್ತೆ...ಮತ್ತೆ ಕಾಡಿದ ಕತೆಗಳು ಕಾಡಿದವರಿಗೆ ಅವರ ನೆನಪುಗಳನ್ನು ಹೆಕ್ಕಿಕೊಡುತ್ತವಂತೆ.....ನಿಮ್ಮಲ್ಲೂ ಹಾಗಾಗಿ....ಸ್ವಲ್ಪ ದೈರ್ಯವಹಿಸಿ...ಇಂಥವುಗಳನ್ನು ನಮ್ಮೊಂದಿಗೆ ಹಂಚಿಕೊಂಡರೆ ನಾನು ಧನ್ಯರಾಗುತ್ತೇವೆ...
ಅಂದಹಾಗೆ ಈಗ ತಾನೆ ನಿಮ್ಮ cs festಗೆ ಹೋಗಿ ಬಂದು enjoy ಮಾಡಿದ್ದೇನೆ.....
ಧನ್ಯವಾದಗಳು...

shivu.k said...

ಕ್ರುಪಾ ಅಕ್ಕಾ...

ನಿಮಗೆ ಕಷ್ಟವೆನಿಸಿದರೂ ನೀವು ಹೇಗಾದರೂ ನನ್ನ ಬ್ಲಾಗಿಗೆ ಬಂದೇ ಬರುತ್ತೀರಿ....ಆತ್ಮೀಯತೆಯ ಸೆಳೆತವೇ ಹಾಗಲ್ಲವೇ...

ಹೇಮಾಶ್ರೀ ಆ ರೀತಿ ಇರುವುದರಿಂದಲೇ ಈ ಕತೆಯನ್ನು ಹಾಕುವ ದೈರ್ಯ ಮಾಡಿದ್ದು.

ನಿಮಗೂ ಹೀಗೆ ಒಂದು ಕತೆ ಹೇಳಿಕೊಳ್ಳುವ ದೈರ್ಯ ಬಂದಿದೆ ಅಂದ ಮೇಲೆ ನನಗೂ ಖುಶಿಯಾಯ್ತು...

ಬೇಗ ನಿಮ್ಮ ಬ್ಲಾಗಿನ ಬಾಗಿಲು ಕಾಯುತ್ತಿರುತ್ತೇನೆ....ತುಂಬಾ ತಡಮಾಡಬೇಡಿ...ಈ ತಮ್ಮನಿಗಾಗಿ ಬೇಗ ತಂದುಬಿಡಿ....
ಧನ್ಯವಾದಗಳು...

Veena DhanuGowda said...

Hello sir,

" IF U HVE FAILD UR LOVE LIFE, ITS BCOZ OF UR FUTURE PARTNRS PRAYER ", Nimma shree mathiyavara prarthaneye irabeku alwe ???

shivu.k said...

ವೀಣಾ ಮೇಡಮ್,

ನೀವು ಹೇಳಿದಂತೆ...ಒಂದು ಕಳೆದುಕೊಂಡರೆ ಮತ್ತೊಂದನ್ನು ಪಡೆದುಕೊಳ್ಳುತ್ತೇವಂತೆ...ನನ್ನ ಶ್ರೀಮತಿ ನನ್ನ ಅಚ್ಚುಮೆಚ್ಚಿನ ಗೆಳತಿಯಾಗಿದ್ದಾಳೆ....
ಧನ್ಯವಾದಗಳು...

ಏ ಜೆ ಜಾವೀದ್ said...

ಶಿವು,
ಸೌಟು ನಿಮ್ಮವರ ಬಳಿ ಇದ್ದಿದ್ದರೆ ಏನಾಗುತಿತ್ತು?

shivu.k said...

ಜಾವೀದ್,

ಅದನ್ನು ಪ್ರಕಾಶ್ ಹೆಗಡೆಯವರ ಬಳಿ ಕೇಳಿ...

ಅವರು ಅಲ್ಲೇ ಇದ್ದರಲ್ಲ...

ಧನ್ಯವಾದಗಳು...

Ambarish said...

ನಿಜವಾಗಲು ನಿಮ್ಮ ಲೇಖನ ತುಂಬಾ ಚೆನ್ನಾಗಿದೆ . ನಿಮ್ಮ ಹೇಳಲಾಗದ ಅನುಭವ ಹೇಳಿದ ಶೈಲಿ ತುಂಬಾ ಇಷ್ಟ ಆಯಿತು .
ಹಳೆಯದನ್ನು ಮರ್ತಿದ್ದೀರ , ಗೆಳತಿಯಂತ ಅರ್ಥ ಮಾಡಿಕೊಳ್ಳೋ ಒಡತಿ ಸಿಕ್ಕಿದ್ದಾಳೆ ,
ದೇವರು ನಿಮಗೆ ಈಗೆ ಒಳ್ಳೇದು ಮಾಡಲಿ ಅಂತ ಅರಿಸುವ !!


ಅಂಬಿ