Friday, November 25, 2011

ನನ್ನ ಬಹುದಿನದ ಕನಸು



     ನನ್ನದೇ ಆದ ಫೋಟೊಗ್ರಫಿ ವೆಬ್‍ಸೈಟ್ ಮಾಡಿಕೊಳ್ಳುವ ನನ್ನ ಕನಸು ಇಂದು ನನಸಾಗಿದೆ. ಇವತ್ತಿನಿಂದ ತೆರೆದುಕೊಳ್ಳುವ ಮೂಲಕ ಹೊರಪ್ರಪಂಚಕ್ಕೆ ಲೋಕಾರ್ಪಣೆಯಾಗುತ್ತಿದೆ. ಇದರಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಸೆರೆಹಿಡಿದ ನನ್ನ ಮೆಚ್ಚಿನ ಪಿಕ್ಟೋರಿಯಲ್ ಫೋಟೊಗಳು, ಪಕ್ಷಿಗಳು, ಮ್ಯಾಕ್ರೋ ವಿಭಾಗದಲ್ಲಿ ಚಿಟ್ಟೆಗಳು ಮತ್ತು ಕೀಟಗಳು, ವನ್ಯಜೀವಿ ಪ್ರಪಂಚ, ಕ್ರೀಡಾ ಪಿಕ್ಟೋರಿಯಲ್ ಫೋಟೊ ವಿಭಾಗಗಳು, ಕ್ರಿಯೇಟೀವ್ ಫೋಟೊಗ್ರಫಿ, ಹೀಗೆ ನೂರಾರು ಚಿತ್ರಗಳನ್ನು ನನ್ನ ವೆಬ್‍ಸೈಟಿನ ..........ವಿಭಾಗವನ್ನು ಕ್ಲಿಕ್ಕಿಸಿದರೆ ನೀವೆಲ್ಲ ನೋಡಬಹುದು.

ಮತ್ತೊಂದು ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿದೆ. ಅದು ಮದುವೆ ಇನ್ನಿತರ ಕಾರ್ಯಕ್ರಮಗಳ ಫೋಟೊಗ್ರಫಿಗೆ ಸಂಭಂದಿಸಿದ್ದು. ಇತ್ತೀಚೆಗೆ ಚಾಲ್ತಿಯಲ್ಲಿರುವ[ನಾನು ಈ ಫೋಟೊಗ್ರಫಿಗೆ ಕಳೆದ ಆರುತಿಂಗಳಿಂದ ತೊಡಗಿಕೊಂಡಿದ್ದೇನೆ.  ಈ ಟ್ರೆಂಡು ಕಳೆದ ಮೂರು ವರ್ಷದಿಂದ ಪ್ರಾರಂಭವಾಗಿದೆ]ಕ್ಯಾಂಡಿಡ್ ವೆಡ್ಡಿಂಗ್ ಫೋಟೊಗ್ರಫಿ. ನಮ್ಮ ಅನೇಕ ಗ್ರಾಹಕರು ಇಂಥ ಫೋಟೊಗ್ರಫಿ ಬೇಕೆಂದು ಕೇಳುತ್ತಿದ್ದಾರೆ. ಅದಕ್ಕಾಗಿ ನಾನೂ ಕೂಡ ಅದರಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದೇನೆ.  ಮುಖ್ಯವಾಗಿ ಇಂಥ ಫೋಟೊಗ್ರಫಿಗಾಗಿ ನನ್ನದೇ ಆದ ವೆಬ್ ಸೈಟು ಇರಬೇಕು ಅಂತ ಆಸೆಯಿತ್ತು.  ಅದು ಇವತ್ತು ತೆರೆದುಕೊಂಡಿದೆ.
ನನ್ನ ವೆಬ್ ಸೈಟಿನ ವಿನ್ಯಾಸದ ಕೆಲವು ಚಿತ್ರಗಳು ಇವು.


         

 ವೆಬ್ ಸೈಟಿನ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ: 

http://www.shivuphotography.com

ನೀವೆಲ್ಲ ನೋಡಬೇಕೆನ್ನುವುದು ನನ್ನ ಆಸೆ.  ಖುಷಿಯಾದರೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಪ್ರೋತ್ಸಾಹ ನೀಡಿ.

ಶಿವು.ಕೆ

Friday, October 28, 2011

ಆತ್ಮೀಯ ಬ್ಲಾಗ್ ಗೆಳೆಯರೆ,

ಆತ್ಮೀಯ ಬ್ಲಾಗ್ ಗೆಳೆಯರೆ,

ನನ್ನ ಫೋಟೊಗ್ರಫಿ ಲೇಖನ ಹತ್ತು ಬರಹಕ್ಕೆ ಬಂದ ಪ್ರತಿಕ್ರಿಯೆಗಳ ಬಗ್ಗೆ ನಿಮಗೆ ಕೆಲವೊಂದು ಸ್ಪಷ್ಟವಾದ ವಿಚಾರಗಳನ್ನು ತಿಳಿಸಬೇಕಿದೆ.

ಮೊದಲಿಗೆ ನಾನು ಲೇಖನದ ವಿಚಾರವಾಗಿ ಅನೇಕ ಊರುಗಳ ಹೆಸರುಗಳನ್ನು ಬರೆದು ಅಲ್ಲಿರುವವರಿಗೆ ಇಂಗ್ಲೀಷ್ ಬರುವುದಿಲ್ಲವೆಂದು ಬರೆದಿರುವ ಪ್ರತಿಕ್ರಿಯೆಯ ಬಗ್ಗೆ. ನಾನು ಅನೇಕ ಊರುಗಳ ಹೆಸರನ್ನು ಬರೆದು ಅಲ್ಲಿರುವವರಿಗೆ ಇಂಗ್ಲೀಷ್ ಬರುವುದಿಲ್ಲವೆಂದು ಬರೆದಿದ್ದರ ಹಿಂದೆ ಯಾರನ್ನು ಅವಮಾನಿಸಬೇಕು ಅಂತ ಆಗಲಿ ಖಂಡಿತ ಇಲ್ಲ. ಅದು ಆತುರದಲ್ಲಿ ಬರೆದ ಒಂದು ಪ್ರತಿಕ್ರಿಯೆ. ಹಾಗೆ ಬರೆದಿದ್ದಕ್ಕಾಗಿ ನಾನು ಹೆಸರಿಸಿದ ಊರಿನ ಪ್ರತಿಯೊಬ್ಬರ ಬಳಿ ಈ ಮೂಲಕ ಕ್ಷಮೆಯಾಚಿಸುತ್ತೇನೆ.

ಇದು ನಾನು ಆತುರದಲ್ಲಿ ಬರೆದ ಪ್ರತಿಕ್ರಿಯೆ ಎನ್ನುವುದು ಇದನ್ನು ಓದುತ್ತಾ ಹೋದಂತೆ ನಿಮ್ಮ ಅರಿವಿಗೆ ಬರುತ್ತದೆ.

ನಾನು ಕಳೆದ ನಾಲ್ಕು ವರ್ಷಗಳಿಂದ ಬ್ಲಾಗ್ ಬರೆಯುತ್ತಿದ್ದೇನೆ. ನಾನು ಬರೆಯುವ ಲೇಖನಗಳು ನನ್ನ ಖುಷಿಗೆ ಸಂತೋಷಕ್ಕೆ. ಅದಕ್ಕೆ ಬಜ್ ನಲ್ಲಿ ಬ್ಲಾಗಿನಲ್ಲಿ ಹಾಕಿ ನಿಮ್ಮೊಂದಿಗೆ ಹಂಚಿಕೊಂಡಾಗ ಸಿಗುವ ಪ್ರತಿಕ್ರಿಯೆಗಳಿಂದಾಗಿ ಮತ್ತಷ್ಟು ಬರೆಯಲು ಸ್ಪೂರ್ತಿ ಸಿಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದೇ ರೀತಿ ಫೋಟೊಗ್ರಫಿ ಲೇಖನಗಳನ್ನು ನನ್ನ ಖುಷಿಗಾಗಿಯೇ ಬರೆಯುತ್ತಿದ್ದೇನೆ ಅಷ್ಟೆ.

ಹಾಗೆ ಈ "ಕಲಾತ್ಮಕ ಫೋಟೊಗ್ರಫಿ ಓದುವುದು ಹೇಗೆ" ಲೇಖನವನ್ನು ನಾನು ಕಲಿತ ಪುಟ್ಟ ಫೋಟೊಗ್ರಫಿ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಲುವಾಗಿ ಮಾತ್ರವೇ ಬ್ಲಾಗಿಗೆ ಮತ್ತು ಬಜ್‍ಗೆ ಹಾಕಿದ್ದು. ಎಂದಿನಂತೆ ನನ್ನ ಬ್ಲಾಗ್ ಗೆಳೆಯರು ಅದನ್ನು ಓದಿದರು. ಹೆಬ್ಬಾರರು, ನನ್ನ ಲೇಖನಕ್ಕೆ ಒಂದು ಕಾಮೆಂಟು ಹಾಕಿದರು. ಮಾನವ ಕಟ್ಟಿದ ಮನೆ ಇತ್ಯಾದಿಗಳಿದ್ದಲ್ಲಿ ಅದು ಲ್ಯಾಂಡ್ ಸ್ಕೇಪ್ ಆಗೊಲ್ಲವೆಂದು ಪ್ರತಿಕ್ರಿಯಿಸಿದರು. ಇಲ್ಲಿ ಒಂದು ವಿಷಯವನ್ನು ಸ್ಪಷ್ಟಪಡಿಸಬೇಕು. ಈ ಲೇಖನ ಪೂರ್ತಿಯಾಗಿ ಪಿಕ್ಟೋರಿಯಲ್ ಫೋಟೊಗ್ರಫಿಗೆ ಸಂಭಂದಿಸಿದ್ದು. ಮತ್ತೆ ನನ್ನ ಅನುಭವಕ್ಕೆ ಸಂಭಂದಿಸಿದ್ದು ಮಾತ್ರ. ಅವರು ಅಷ್ಟಕ್ಕೆ ಸೀಮಿತವಾದ ವಿಚಾರವನ್ನು ತೆರೆದಿಟ್ಟಿದ್ದರೆ ಅದಕ್ಕೆ ತಕ್ಕಂತೆ ಪ್ರತಿಕ್ರಿಯೆಯನ್ನು ನೀಡಿದ್ದರೆ ಇಷ್ಟೆಲ್ಲಾ ಅವಾಂತರಗಳಾಗುತ್ತಿರಲಿಲ್ಲ. ನನ್ನ ಲೇಖನ ಅದ್ಬುತವಾಗಿದೆಯೆಂದು ನಾನೆಲ್ಲಿಯೂ ಹೇಳುವುದಿಲ್ಲ. ಅದರಲ್ಲಿರುವ ವಿಚಾರ ಚರ್ಚೆಗೆ ಒಳಪಟ್ಟರೆ ನಾನು ಸೇರಿದಂತೆ ಅನೇಕರಿಗೆ ಹೊಸತನ್ನು ತಿಳಿದುಕೊಳ್ಳುವ ಅವಕಾಶ ಅಂತ ಪ್ರತಿಭಾರಿಯೂ ಅಂದುಕೊಳ್ಳುತ್ತೇನೆ. ಹೀಗಿರುವಾಗ ಅವರು ಪಿಕ್ಟೋರಿಯಲ್ ವಿಚಾರವಾಗಿ ತಿಳಿಸದೆ ಲ್ಯಾಂಡ್ ಸ್ಕೇಪ್ ಬಗ್ಗೆ ತಿಳಿಸಿ ನಾನು ಹೇಳಿದ್ದು ಲ್ಯಾಂಡ್ ಸ್ಕೇಪ್ ಅಲ್ಲವೆಂದು ಪ್ರತಿಕ್ರಿಯೆ ನೀಡಿದರು. ಹಾಗೆ ಕಂಪೋಜಿಷನ್ ವಿಚಾರವಾಗಿಯೂ ಕೂಡ. ಆಗ ಅವರ ಪ್ರತಿಕ್ರಿಯೆಗೆ ನಾನು ಅವರದೇ ಅನುಭವವವನ್ನು ನೆನಪಿಸಿ ಉತ್ತರ ನೀಡಿ ನಿಮ್ಮ ಅನುಭವವನ್ನು ಕೂಡ ಹಂಚಿಕೊಳ್ಳಿ ಅದಕ್ಕಾಗಿ ನೀವು ಇತ್ತೀಚೆಗೆ ತೆಗೆದ ಫೋಟೊಗಳನ್ನು ಹಾಕಿ ಹಂಚಿಕೊಳ್ಳಿ, ಮತ್ತೆ ಎಲ್ಲರೂ ಇಂಗ್ಲೀಷಿನಲ್ಲಿ ಬರೆಯುತ್ತಾರೆ. ನನಗೆ ಸುಲಭವಾಗಿ ಬರೆಯಲು ಗೊತ್ತಿರುವುದು ಕನ್ನಡ ಮಾತ್ರ, ನೀವು ಬರೆದ ಟಿಪ್ಸುಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಮೂರು ಸಲ ಓದಬೇಕಾಯ್ತು. ಹಾಗೆ ನನ್ನಂತೆ ನೂರಾರು ಸಾವಿರಾರು ಛಾಯಾಗ್ರಾಹಕರಿಗೆ ಇಂಗ್ಲೀಷ್ ಬರುವುದಿಲ್ಲ ಅವರೊಂದಿಗೆ ಈ ವಿಚಾರವನ್ನು ಹಂಚಿಕೊಳ್ಳಲಿಕ್ಕಾಗಿ ಬರೆಯುತ್ತಿದ್ದೇನೆ ಅಂತ ಹೇಳಿ ಕೆಲವು ಊರುಗಳ ಹೆಸರುಗಳನ್ನು ಬರೆದುಬಿಟ್ಟೆ. ಆ ಕ್ಷಣದಲ್ಲಿ ನನ್ನ ನೆನಪಿಗೆ ಬಂದಿದ್ದು ನನ್ನ ಗೆಳೆಯರ ಊರುಗಳು ಆದ್ದರಿಂದ ಆತುರದಲ್ಲಿ ಬರೆದುಬಿಟ್ಟೆನೇ ವಿನ: ಅದರ ಹಿಂದೆ ಯಾವ ಕೆಟ್ಟ ಉದ್ದೇಶವಾಗಲಿ ಅಥವ ಯಾರನ್ನಾದರೂ ಅವಮಾನಿಸಬೇಕೆಂದಾಗಲಿ ಅಲ್ಲ. ಹಳ್ಳಿಯಲ್ಲೇ ಇದ್ದು ಚೆನ್ನಾಗಿ ಓದಿ ಒಳ್ಳೆಯ ಸಾಪ್ಟ್ ವೇರು, ವಿಜ್ಞಾನಿಗಳು, ದೊಡ್ಡ ದೊಡ್ಡ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದುಕೊಂಡು ಹವ್ಯಾಸವಾಗಿ ಫೋಟೊಗ್ರಫಿ ಮಾಡುತ್ತಿರುವವರು, ಚೆನ್ನಾಗಿ ಓದಿ ಹಳ್ಳಿಯಲ್ಲೇ ಕೃಷಿಯನ್ನು ಮಾಡುತ್ತಾ ಅತ್ಯುತ್ತಮ ಇಂಗ್ಲೀಷ್ ಲೇಖನಗಳನ್ನು ಬರೆಯುತ್ತಾ ಫೋಟೊಗ್ರಫಿ ಮಾಡುತ್ತಿರುವವರ ಮೇಲೆ ನನಗೆ ತುಂಬಾ ಗೌರವವಿದೆ. ನಮ್ಮ ಬದುಕಿಗೆ ಅವರೆಲ್ಲಾ ಮಾದರಿಯಾಗಿದ್ದಾರೆ. ಈ ಕಾರಣಕ್ಕೆ ಕಳೆದ ವರ್ಷ ಮುತ್ಮರ್ಡು ಊರು ಮತ್ತು ಊರಿನ ಹಿರಿಯ ಸಾಧಕರ ಬಗ್ಗೆ ನನ್ನ ಬ್ಲಾಗಿನಲ್ಲಿ ಲೇಖನವನ್ನು ಬರೆದಿದ್ದೇನೆ. ಆದ್ರೆ ಸತ್ಯ ಸಂಗತಿಯೆಂದರೆ ಈಗಲೂ ನಮ್ಮ ಬೆಂಗಳೂರಿನಲ್ಲಿಯೇ ಇಂಗ್ಲೀಷ್ ಬರದ ನೂರಾರು ಛಾಯಾಗ್ರಾಹಕರಿದ್ದಾರೆ, ಅದೇ ರೀತಿ ಕರ್ನಾಟಕದಾದ್ಯಂತ ಇರುವ ಸಾವಿರಾರು ಛಾಯಾಗ್ರಾಹಕರಲ್ಲಿ ನಾಲ್ಕು ಜನರಿಗೆ ಇಂಗ್ಲೀಷ್ ಬಂದರೆ ಇನ್ನೂ ನಲವತ್ತು ಜನರಿಗೆ ಇಂಗ್ಲೀಷ್ ಬರುವುದಿಲ್ಲವೆನ್ನುವುದು ಸತ್ಯಸಂಗತಿ. ನಾನು ಈ ಗುಂಪಿನಲ್ಲಿ ಒಬ್ಬನಾಗಿದ್ದು ಆ ಕ್ಷಣದಲ್ಲಿ ನನ್ನ ಅಲೋಚನೆಯೂ ಅದೇ ಆಗಿದ್ದರಿಂದ ಹಾಗೆ ಉತ್ತರಿಸಿದ್ದು ಬಿಟ್ಟರೆ ಇದರ ಹಿಂದೆ ಇನ್ಯಾವ ಕೆಟ್ಟ ಉದ್ದೇಶವು ಇರಲಿಲ್ಲ. ಇದೇ ಸಮಯಕ್ಕೆ ಹೆಬ್ಬಾರರು ತಮ್ಮ ಫೋಟೊಗ್ರಫಿ ಅನುಭವವನ್ನು ಹಂಚಿಕೊಳ್ಳುವ ಬದಲು "ಹಳ್ಳಿಜನರಿಗೆ ಇಂಗ್ಲೀಷ್ ಬರುವುದಿಲ್ಲವೆಂದು ಏಕೆ ಅಂದುಕೊಳ್ಳುತ್ತಿ" ನಿನಗೊಬ್ಬನಿಗೆ ಅರ್ಥವಾಯಿತಲ್ಲ ಅಷ್ಟು ಸಾಕು" ಅಂತ ವಿಷಯವನ್ನು ತಿರುಗಿಸಿದರಲ್ಲ. ಅಲ್ಲಿಗೆ ಇಡೀ ಫೋಟೊಗ್ರಫಿ ಲೇಖನದ ಅಭಿಪ್ರಾಯಗಳಿಗೆ ತಿರುವುಗಳು ಬಂದುಬಿಟ್ಟಿತ್ತು. ನಾನು ಹೆಸರಿಸಿದ್ದ ಊರುಗಳಲ್ಲಿರುವ ಗೆಳೆಯರಿಗೆ ಸಹಜವಾಗಿ ಈ ವಿಚಾರವಾಗಿ ಅಸಮಧಾನ ಶುರುವಾಗಿತ್ತು. ಒಬ್ಬರು ನಾನು ಬರೆದಿದ್ದು ತಪ್ಪು ಎಂದು ಇಂಗ್ಲೀಷಿನಲ್ಲಿ ಕಾಮೆಂಟ್ ಹಾಕಿದರು. ಅನೇಕರು ಬೇಸರ ಮಾಡಿಕೊಂಡಿದ್ದರು. ಅಷ್ಟರಲ್ಲಿ ಹೆಬ್ಬಾರ್ ಶಿಷ್ಯನೊಬ್ಬ ಅದೆಲ್ಲಿದ್ದನೋ ಬ್ಲಾಗಿಗೆ ಬಂದು ತುಂಬಾ ಕೆಟ್ಟದಾಗಿ ಪೇಜುಗಟ್ಟಲೆ ಕಾಮೆಂಟು ಹಾಕಿದ್ದ. ಅವನು ಏನು ಕೇಳುತಿದ್ದಾನೆ ಅಂತ ಅರ್ಥವಾಗಲಿಲ್ಲ. ಹೆಬ್ಬಾರರಿಗೆ ಅವಮಾನವಾಗಿದೆ ಅಂತ ಬೇರೆ ಹೇಳಿದ್ದ. ಹಾಗೆ ನೋಡಿದರೆ ಅವನು ನನಗೆ ತುಂಬಾ ಗೊತ್ತಿರುವವನೇ. ಬಹುಶಃ ಅವನ ಪ್ರತಿಕ್ರಿಯೆಯಲ್ಲಿನ ವಿಚಾರಗಳನ್ನು ನೋಡಿದಾಗ ಫೋಟೊಗ್ರಫಿ ಸಾಧನೆಯ ವೃತ್ತಿಮತ್ಸರವನ್ನಿಟ್ಟುಕೊಂಡಿದ್ದಾನೆಂದು ತಿಳಿಯಿತು. "ಶಿವು ನನ್ನನ್ನು ಪಿಕ್ಟೋರಿಯಲ್ ಫೋಟೊಗ್ರಫಿಗೆ ಎಲ್ಲಿಗೂ ಕರೆದುಕೊಂಡು ಹೋಗುವುದಿಲ್ಲ" ನನ್ನ ಇತರ ಫೋಟೊಗ್ರಫಿ ಗೆಳೆಯರ ಬಳಿ ಹೇಳಿದ್ದು ನೆನಪಾಗಿ ಅದರ ದ್ವೇಷ ಹೀಗೆ ಹೊರಬಂದಿರಬಹುದು ಅಂದುಕೊಂಡು ಅವನ ಎಲ್ಲಾ ಪ್ರಶ್ನೆಗಳಿಗೂ ಸಮಾಧಾನವಾಗಿಯೇ ಪ್ರತಿಕ್ರಿಯಿಸಿದ್ದೆ. ಇದಾದ ನಂತರ ಹೆಬ್ಬಾರರಿಗೆ ಮೇಲ್ ಮಾಡಿ ನೋಡಿ ಎಂಥ ಕಾಮೆಂಟುಗಳನ್ನು ಹಾಕುತ್ತಿದ್ದಾನೆ ಅಂತ ಕೇಳಿದಾಗ "ಅವನಿಗೆ ಹೇಳಿದ್ದೇನೆ ಈ ವಿಷಯವನ್ನು ಇಲ್ಲಿಗೆ ಬಿಡಿ" ಅಂತ ನನಗೆ ರಿಪ್ಲೆ ಮಾಡಿದರು. ನಾನು ಸುಮ್ಮನಾದೆ. ಅಲ್ಲಿಗೆ ಎಲ್ಲಾ ಮುಗಿಯಿತು ಅಂದುಕೊಳ್ಳುವಷ್ಟರಲ್ಲಿ ಮತ್ತೆ ಹೊಸದೊಂದು ಕಾಮೆಂಟು ಹಾಕಿದ್ದ. ಎರಡನೆ ಭಾರಿ ಹಾಕಿದ ಕಾಮೆಂಟಿನಲ್ಲಿ ಅವನು ಏನು ಬರೆದಿದ್ದಾನೆ ಅಂತ ಅರ್ಥವಾಗಲಿಲ್ಲ. ಅವನು ಫೋಟೊಗ್ರಫಿ ಬಗ್ಗೆ ಮಾತಾಡುತ್ತಿದ್ದಾನೋ, ಅಥವ ನನ್ನ ವಿಚಾರವನ್ನು ಹೇಳುತ್ತಿದ್ದಾನೋ ಗೊತ್ತಾಗಲಿಲ್ಲ ಆದ್ರೆ ಇಡೀ ಪ್ರತಿಕ್ರಿಯೆಯಲ್ಲಿ ಅಸೂಯೆ ಅವರಿಸಿತ್ತು. ಹೆಬ್ಬಾರ್ ಪ್ರತಿಕ್ರಿಯೆ ಪಡೆದೆ ಇದೆಲ್ಲವನ್ನು ಬರೆದಿದ್ದು ಅಂತ ಬೇರೆ ಹೇಳಿದ್ದ. ತಕ್ಷಣ ಹೆಬ್ಬಾರರಿಗೆ ಮತ್ತೊಂದು ಮೇಲ್ ಮಾಡಿ ಇದೆಲ್ಲ ಏನ್ ಸಾರ್? ಅಂದೆ. ಅದಕ್ಕೆ ಅವರು ಉತ್ತರಿಸದೇ ಸುಮ್ಮನಾದರು. ಆಗ ಎಲ್ಲಾ ಗೊತ್ತಾಯಿತು. ಇದೆಲ್ಲಾ ಪಕ್ಕಾ ವ್ಯವಸ್ಥಿತವಾಗಿರುವ ವಿಚಾರವೆಂದು. ಎರಡು ದಿನ ಅವನು ಬರೆದ ಅಸೂಯೆಯನ್ನು ನಮ್ಮ ಬ್ಲಾಗ್ ಗೆಳೆಯರು ಓದಿದರು. ಇವರ ಉದ್ದೇಶವೂ ಅದೇ ಆಗಿತ್ತು ಅನ್ನಿಸುತ್ತೆ. ಯಾಕೋ ತುಂಬಾ ಅವಮಾನವಾದಂತೆ ಆಯಿತು. ಒಂದು ಫೋಟೊಗ್ರಫಿ ಲೇಖನದ ವಿಚಾರ ಅರೋಗ್ಯಪೂರ್ಣ ಚರ್ಚೆಯಾಗುವುದು ಹೀಗೆ ದಾರಿ ತಪ್ಪಿ ನನಗೆ ಈ ಮಟ್ಟಿನ ಅವಮಾನವಾಗುವುದಕ್ಕೆ ಅದಕ್ಕೆ ಮೊದಲು ನನ್ನಿಂದಾದ ತಪ್ಪಿಗೆ ಕಾರಣ ನೀವು, ನನ್ನನ್ನು ಸುಮ್ಮನಿರಿಸಿ ನಿಮ್ಮ ಶಿಷ್ಯ ಬರೆದ ಎರಡನೇ ಪ್ರತಿಕ್ರಿಯೆಯನ್ನು ನೋಡುತ್ತಾ ಎಂಜಾಯ್ ಮಾಡಿದ್ರಿ" ಇದರಿಂದ ನನಗೆ ಅವಮಾನವಾಗಿದೆ. ನನ್ನ ಬರಹ ಮತ್ತು ಲೇಖನಗಳು ಪರೋಕ್ಷವಾಗಿ ಕಳಪೆ ಎನ್ನುವಂತೆ ಮಾತುಗಳು, ಅದಕ್ಕಾಗಿ ನನ್ನೆಲ್ಲಾ ಬಜ್ ಮತ್ತು ಬ್ಲಾಗ್ ಲೇಖನಗಳನ್ನು ಡಿಲಿಟ್ ಮಾಡುತ್ತಿದ್ದೇನೆ. ಇದರಿಂದ ನಿಮಗೆ ತೃಪ್ತಿಯಾದರೆ ಸಾಕು. ನನ್ನೊಳಗೆ ಆತ್ಮಾವಲೋಕನವಾಗಿ ಮತ್ತೆ ನನ್ನ ಬರವಣಿಗೆ ಚೆನ್ನಾಗಿದೆಯೆನಿಸುವವರೆಗೆ ನಾನು ಇಲ್ಲಿ ಬರೆಯುವುದಿಲ್ಲ." ಅಂತ ಒಂದು ದೀರ್ಘವಾದ್ ಪತ್ರವನ್ನು ಬರೆದು ಅವರಿಗೆ ಮೇಲ್ ಮಾಡಿ ನನ್ನಲ್ಲಾ ಬಜ್ ಮತ್ತು ಬ್ಲಾಗಿನ ಒಂದು ವರ್ಷದ ಲೇಖನಗಳನ್ನು ಡಿಲಿಟ್ ಮಾಡಿದ್ದೆ. ಅವರಿಂದ ಇನ್ನೂ ಉತ್ತರ ಬರಲಿಲ್ಲ.

ಮೂರು ದಿನ ಕಳೆಯಿತು. ಯಾವುದೇ ಕಾರಣಕ್ಕೆ ಗೆಳೆಯರೊಬ್ಬರಿಗೆ ಫೋನ್ ಮಾಡಿ ಸಹಜವಾಗಿ ಮಾತಾಡುವಾಗ ಪ್ರತಿಕ್ರಿಯೆಯಲ್ಲಿ ಬರೆದ ಊರುಗಳ ವಿಚಾರವಾಗಿ ತುಂಬಾ ಜನರು ಬೇಜಾರು ಮಾಡಿಕೊಂಡಿದ್ದಾರೆ ಅಂದಾಗ ಅವರಿಗೆ ಇದೆಲ್ಲವನ್ನು ವಿವರಿಸಿ ಹೇಳಿ ಸಾರಿ ಕೇಳಿದೆ. ಅವರು ಅರ್ಥಮಾಡಿಕೊಂಡರು. ಆದರೆ ಮರುಕ್ಷಣದಲ್ಲಿ ಇದು ಎಲ್ಲರ ಮನಸ್ಸಲ್ಲಿ ಎಷ್ಟು ಗಾಢವಾಗಿ ಅವರಿಗೆ ಬೇಸರ ತಂದಿರಬಹುದು ಅಂತ ಅಂದುಕೊಂಡಾಗ ಆತುರದಲ್ಲಿ ಮಾಡಿದ ತಪ್ಪು ನನ್ನನ್ನು ಕಾಡತೊಡಗಿತು. ಇನ್ನು ಸುಮ್ಮನಿರಲಾಗಲಿಲ್ಲ. ಮತ್ತೆ ಎಲ್ಲರಿಗೂ ಫೋನ್ ಮಾಡಿ ಇದೆಲ್ಲವನ್ನು ಅರ್ಥಮಾಡಿಸಲು ಸಾಧ್ಯವಿಲ್ಲವಲ್ಲ. ಅದಕ್ಕೆ ನೇರವಾಗಿ ಎಲ್ಲಿ ಆ ಪ್ರತಿಕ್ರಿಯೆಯನ್ನು ಬರೆದಿದ್ದೆನೋ ಅಲ್ಲಿಯೇ ಕ್ಷಮೆಯಾಚಿಸುವುದು ಒಳ್ಳೆಯದು ಅಂದುಕೊಂಡು ಇದೆಲ್ಲವನ್ನು ಬರೆದಿದ್ದೇನೆ. ಇದೆಲ್ಲ ಆಗಿರುವ ಸಂಗತಿ. ಇದೆಲ್ಲವನ್ನು ಬರೆಯುವ ಮೂಲಕ ನನ್ನೊಳಗಿನ ದುಗಡವನ್ನು ಹೊರಹಾಕಿದ್ದೇನೆ. ಹಾಗೆ ಇದಿಷ್ಟನ್ನು ವಿವರಿಸದಿದ್ದಲ್ಲಿ ಮತ್ತೆ ಈ ವಿಚಾರ ಬೇರೆ ಅರ್ಥವನ್ನು ಪಡೆದುಕೊಳ್ಳುವ ಅವಕಾಶವಿರುವುದರಿಂದ ಇದೆಲ್ಲ ಬರೆಯಬೇಕಾಯಿತು. ಹಾಗೆ ಯಾರಮೇಲು ತಪ್ಪು ಹೊರಿಸುತಿಲ್ಲ. ನನ್ನೊಳಗೆ ಆಗಿರುವ ತಪ್ಪುಗಳು ಕಾಡತೊಡಗಿದರಿಂದ ಇದೆಲ್ಲವನ್ನು ಬರೆಯಬೇಕಾಯ್ತು. ಮುಂದೆ ಇದನ್ನು ಮತ್ತೆ ಮುಂದುವರಿಸಿಕೊಂಡು ಹೋಗಲು ನನಗಿಷ್ಟವಿಲ್ಲ. ಈ ಲೇಖನದಿಂದ ಯಾರಿಗಾದರೂ ಬೇಸರವಾದಲ್ಲಿ ಅದಕ್ಕೂ ಮೊದಲೇ ಕ್ಷಮೆ ಕೇಳಿಬಿಡುತ್ತೇನೆ.

ಪ್ರೀತಿಯಿಂದ..

ಶಿವು.ಕೆ

Thursday, October 13, 2011

ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ


   
     ಛಾಯಾಸಕ್ತರೇ ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ

    ನೆನ್ನೆಯಿಂದ ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ  ಛಾಯಾ ವಿಶಿಷ್ಟ ಎನ್ನುವ ಅದ್ಬುತ ಛಾಯಚಿತ್ರ ಪ್ರದರ್ಶನ ಪ್ರಾರಂಭವಾಗಿದೆ.  ಇದು ಅಂತಿಂತ ಛಾಯಾಚಿತ್ರಗಳ ಪ್ರದರ್ಶನವಲ್ಲ. ಕಲಾತ್ಮಕ ಛಾಯಾಗ್ರಾಹಣದಲ್ಲಿ ಮಾಸ್ಟರ್ ಮತ್ತು ಫಿಲೋಶಿಫ್ ಪಡೆದ ಕರ್ನಾಟಕದ ಎಂಟು ಜನ ಸಾಧಕರ ಛಾಯಾಚಿತ್ರಗಳನ್ನು ನೋಡುವ ಅವಕಾಶ.  ಈ ಕಲಾತ್ಮಕ ಛಾಯಾಗ್ರಹಣದಲ್ಲಿ  ಲಂಡನ್ನಿನ "ರಾಯಲ್ ಫೋಟೊಗ್ರಫಿ ಸೊಸೈಟಿ" ಯವರು ARPS ಮತ್ತು FRPS ಎನ್ನುವ ಎರಡು ಅತ್ಯುನ್ನತ ಮನ್ನಣೆಗಳನ್ನು ನೀಡುತ್ತಾರೆ.  ಅದೇ ರೀತಿ ಪ್ಯಾರಿಸ್ಸಿನ "ಫೆಡರೇಷನ್ ಇಂಟರ್ ನ್ಯಾಷನಲ್ ಡಿ ಲ ಅರ್ಟ್ ಫೋಟೊಗ್ರಫಿಕ್" AFIAP, EFIAP, MFIAP ಎನ್ನುವ ಮನ್ನಣೆಯಗಳನ್ನು ನೀಡುತ್ತಾರೆ.  ಮತ್ತೊಂದು "ಅಮೇರಿಕನ್ ಫೋಟೊಗ್ರಫಿಕ್ ಅಷೋಷಿಯೇಷನ್"  ನೀಡುವ ಸ್ಟಾರ್ ರೇಟಿಂಗ್ ಮನ್ನಣೆ.   ಈ ಮೂರು ಸಂಸ್ಥೆಗಳು ಫೋಟೊಗ್ರಫಿ ಕ್ಷೇತ್ರದಲ್ಲಿ ವಿಶ್ವವಿಖ್ಯಾತವೆನಿಸುವ ಅತ್ಯುನ್ನತ ವಿಶ್ವವಿದ್ಯಾಲಯಗಳು ಇದ್ದಂತೆ. 

          ಲಂಡನ್ನಿನ ರಾಯಲ್ ಫೋಟೊಗ್ರಫಿ ಸೊಸೈಟಿಯವರ "FRPS ಅಥವ "fellowship Rayal photography society"  ಹಾಗೂ ಪ್ಯಾರಿಸ್ಸಿನ "ಫೆಡರೇಷನ್ ಇಂಟರ್ ನ್ಯಾಷನಲ್ ಡಿ ಲ ಅರ್ಟ್ ಫೋಟೊಗ್ರಫಿಕ್"  MFIAP ಅಥವ Master of Federation International De la Art photographic" ಇವೆರಡು ಕಲಾ ಛಾಯಾಗ್ರಹಣ ಕ್ಷೇತ್ರದ ಅತ್ಯುಚ್ಚ ಪ್ರಶಸ್ತಿ ಮತ್ತು ಮನ್ನಣೆಗಳು. ಇಂಥ  ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆಯುವುದು ಸುಲಭವಲ್ಲ.   FRPS ಗಳಿಸುವ ಮೊದಲು ARPS ಗಳಿಸಬೇಕು, ಹಾಗೆ MFIAP ಗಳಿಸುವ ಮೊದಲು EFIAP [Exelense of  Federation International De la Art photographic] ಮನ್ನಣೆ ಗಳಿಸಬೇಕು.  ಅದಕ್ಕೂ ಮೊದಲು AFIAP[Asociateship of  Federation International De la Art photographic] ಪಡೆಯಬೇಕು. ಇವೆಲ್ಲವನ್ನು ಗಳಿಸದೆ ನೇರವಾಗಿ FRPS ಆಗಲಿ MFIAP ಆಗಲಿ ಪಡೆಯಲು ಸಾಧ್ಯವಿಲ್ಲ.  ಶಿಕ್ಷಣ ಕ್ಷೇತ್ರ ಅಥವ ಇನ್ನಿತರ ಕ್ಷೇತ್ರಗಳಲ್ಲಿ ಪಡೆಯುವ ಡಾಕ್ಟರೇಟ್ ನಂತೆ ಈ FRPS ಮತ್ತು MFIAP. ಡಾಕ್ಟ್ರರೇಟುಗಳನ್ನು ನಮ್ಮ ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಶ್ವ ವಿದ್ಯಾಲಯಗಳು ನೀಡಿದರೆ ಮೇಲೆ ವಿವರಿಸಿದ ಫೋಟೊಗ್ರಫಿ ಮನ್ನಣೆಗಳನ್ನು ಪ್ಯಾರಿಸ್, ಲಂಡನ್, ಅಮೇರಿಕಾದ ಈ ವಿಶ್ವವಿದ್ಯಾಲಯದಂತ ಸಂಸ್ಥೆಗಳಿಂದಲೇ ಪಡೆಯಬೇಕು.  ಮತ್ತೆ ಪ್ರತಿಯೊಂದು ದೇಶಗಳಲ್ಲಿ ಸಾವಿರಾರು ಅಥವ ಅದಕ್ಕಿಂತ ಹೆಚ್ಚು ಡಾಕ್ಟರೇಟು ಪಡೆದ ಸಾಧಕರಿದ್ದಾರೆ.  ಆದ್ರೆ ನಮ್ಮ ಭಾರತದಲ್ಲಿ 1943 ರಿಂದ 2011 ರ ಸೆಪ್ಟಂಬರ್ ವರೆಗೆ ಕೇವಲ ಹದಿನೈದು ಜನರು ಮಾತ್ರ ಇಂಥ ಮನ್ನಣೆಗಳನ್ನು ಸಾಧಿಸಿದ್ದಾರೆ.  ಅಂತ ತಿಳಿದಾಗ ಇವುಗಳನ್ನು ಪಡೆಯುವುದು ಎಷ್ಟು ಕಷ್ಟ ಮತ್ತು ಅದರ ಹಿಂದೆ ಎಂಥ ಸಾಧನೆ ಶ್ರಮ ಬೇಕು ಎಂದು ಅರ್ಧೈಸುವುದು ನಿಮಗೆ ಬಿಟ್ಟಿದ್ದು.

              ಮೊದಲಿಗೆ AFIAP ಪಡೆಯಬೇಕಾದರೆ ನಾವು ಹತ್ತಾರು ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಗಳಲ್ಲಿ ನಮ್ಮ ಚಿತ್ರಗಳು ಪ್ರಶಸ್ತಿ ಗಳಿಸಬೇಕು ಅಥವ ಕನಿಷ್ಟ ಪಕ್ಷ ಪ್ರದರ್ಶನಕ್ಕೆ ಆಯ್ಕೆಯಾಗಬೇಕು.  ಇದಕ್ಕಿಂತ ಮೊದಲು ನೂರಾರು ರಾಷ್ಜ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ನಿಮ್ಮ  ಚಿತ್ರಗಳು  ಪ್ರಶಸ್ತಿ ಗಳಿಸಬೇಕು ಅಥವ ಕನಿಷ್ಟ ಪಕ್ಷ ಪ್ರದರ್ಶನಕ್ಕೆ ಆಯ್ಕೆಯಾಗಬೇಕು.   ರಾಷ್ಟ್ರಮಟ್ಟದ ಗುಣಮಟ್ಟ ತಿಳಿಯುವ ಮೊದಲು ರಾಜ್ಯ ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ನಿಮ್ಮ ಆಯ್ಕೆಯಾಗಬೇಕು.


ಹೀಗೆ ಮೇಲಿನಿಂದ ಕೆಳಮುಖವಾಗಿ ವಿವರಿಸಿರುವ ಇಷ್ಟೆಲ್ಲಾ ಹಂತಗಳಲ್ಲಿ ಸ್ಪರ್ಧಿಸಲು Pictorial, Black and white, Nature,  Photo travel, Wild life, Creative, ಹೀಗೆ ಹತ್ತಾರು ವಿಭಾಗಗಳಿವೆ. ಈ  ವಿಭಾಗದಲ್ಲಿ  ಯಾವ ರೀತಿಯ ಚಿತ್ರಗಳಿರಬೇಕು. ಅವುಗಳ ಗುಣಮಟ್ಟ ಹೇಗಿರಬೇಕು, ಈ ಗುಣಮಟ್ಟ ಎಂದರೇನು, ಅದನ್ನು ಅರಿತುಕೊಳ್ಳುವುದು ಹೇಗೆ ಇವೆಲ್ಲವುಗಳ ಹಿನ್ನೆಲೆಯನ್ನು ಒಂದು photo appriciation ಮಾಡುವುದು ಹೇಗೆ? ಇದನ್ನೇ ಕನ್ನಡದಲ್ಲಿ ಫೋಟೊವನ್ನು ಮೆಚ್ಚುವುದು ಎನ್ನುವುದಕ್ಕಿಂತ ಫೋಟೊವನ್ನು ಓದುವುದು ಹೇಗೆ  ಅದರ ವಿಧಿ ವಿಧಾನಗಳೇನು ನಿಯಮಗಳೇನು?  ಹೀಗೆ ಕೆಳಗಿನಿಂದ ಮೇಲಿನ ಅತ್ಯುಚ್ಚ ಅಂತದ ವರೆಗೆ  ಹಂತ ಹಂತವಾಗಿ ತಲುಪುವುದು ಹೇಗೆ ಎನ್ನುವ ಸಂಪೂರ್ಣ ವಿವರಪೂರ್ಣ ವಿಚಾರವನ್ನು ನನ್ನ ಮುಂದಿನ ಫೋಟೊಗ್ರಫಿ ಲೇಖನದಲ್ಲಿ ಬರೆಯುತ್ತೇನೆ.

      ಮತ್ತೆ ಈಗ ನಡೆಯುತ್ತಿರುವ ಸ್ಪರ್ಧೆಗೆ ಬರೋಣ.  ಭಾರತದಾದ್ಯಂತ MFIAP ಮನ್ನಣೆ ಮತ್ತು ಗೌರವ ಪಡೆದಿರುವ 15 ಪ್ರಖ್ಯಾತ ಛಾಯಾಗ್ರಾಹಕರಲ್ಲಿ  ನಮ್ಮ ಕರ್ನಾಟಕದವರೇ 7 ಜನರಿದ್ದಾರೆ ಎನ್ನುವುದು ಹೆಮ್ಮೆಯ ವಿಚಾರ.  ಹಾಗೆ ಭಾರದಾದ್ಯಂತ FRPS ಮನ್ನಣೆ ಮತ್ತು ಗೌರವ ಪಡೆದಿರುವ 27 ಪ್ರಖ್ಯಾತ ಛಾಯಾಗ್ರಾಹಕರಲ್ಲಿ  ನಮ್ಮ ಕರ್ನಾಟಕದವರೇ 13 ಜನರಿದ್ದಾರೆ ಎನ್ನುವುದು ಹೆಮ್ಮೆಯ ಮತ್ತು ಸಂತೋಷದ ವಿಚಾರ.  ನಿನ್ನೆ ಪ್ರಾರಂಭವಾದ ಈ "ಛಾಯಾವಿಶಿಷ್ಟ" ಎನ್ನುವ ಛಾಯಾಚಿತ್ರ ಪ್ರದರ್ಶನದಲ್ಲಿ ಪ್ರದರ್ಶಿತವಾಗುತ್ತಿರುವುದು ಈ ನಮ್ಮ ಕರ್ನಾಟಕದ 13 ಮಹಾನ್ ಛಾಯಾಗ್ರಾಹಕರ ಅದ್ಬುತ ಚಿತ್ರಗಳು.  ಇವುಗಳಲ್ಲಿ ಹೆಚ್ಚಿನವು ಡಿಸ್ಟಿಂಕ್ಷನ್ ಪಡೆಯಲು ಕಳಿಸಿದ ಚಿತ್ರಗಳೇ ಆಗಿರುವುದು ವಿಶೇಷ.  ಮತ್ತೆ ಭಾರತದ ಮೊದಲಿಗೆ 1943ರಲ್ಲಿ ARPS ಅಂತರರಾಷ್ಟ್ರೀಯ ಮನ್ನಣೆ ಪಡೆದ ಡಾ. ಜಿ.ಥಾಮಸ್ ರವರ ಆಗಿನ ನೆಗೆಟಿವ್ ಕಪ್ಪುಬಿಳುಪಿನ ಕಲಾತ್ಮಕ ಛಾಯಾಚಿತ್ರಗಳ ಪ್ರದರ್ಶನವಾಗುತ್ತಿವೆ. ಇವನ್ನು ನೋಡುವುದು ಈಗ ಅದರಲ್ಲೂ ಬೆಂಗಳೂರಿನ ಛಾಯಾಸಕ್ತರಿಗೆ ಸೌಭಾಗ್ಯವೇ ಸರಿ.

           ಇದಲ್ಲದೇ 1943 ರಿಂದ 2011 ರ ವರೆಗೆ ಕರ್ನಾಟಕದ 115 ಛಾಯಾಗ್ರಾಹಕರು ARPS, AFIAP, EFIAP, MFIAP ಮನ್ನಣೆ ಮತ್ತು ಗೌರವವನ್ನು ಗಳಿಸಿದ್ದಾರೆ.  ಅವರೆಲ್ಲರ ಹೆಸರುಗಳನ್ನು ಈ ಪ್ರದರ್ಶನದಲ್ಲಿ ಹಾಕಿದ್ದಾರೆ.  ಅದನ್ನು ನಿಮಗಾಗಿ ಇಲ್ಲಿ ಕೊಡುತ್ತಿದ್ದೇನೆ.
     
  
              
        ದಿನಾಂಕ 13-10-2011 ರಿಂದ 17-10-2011 ರವರೆಗೆ ನಡೆಯುವ ಈ ಅದ್ಬುತ ಛಾಯಾಚಿತ್ರ ಪ್ರದರ್ಶನವನ್ನು ಮಿಸ್ ಮಾಡಿಕೊಳ್ಳಬೇಡಿ. ಮತ್ತೊಂದು ವಿಷಯ.: ದಿನಾಂಕ 15-10-2011 ರಂದು ಸಂಜೆ 5 ಗಂಟೆಗೆ ಈ ಪ್ರಖ್ಯಾತರು ತಮ್ಮ ಫೋಟೊಗ್ರಫಿ ಬದುಕಿನ ಅನುಭವಗಳನ್ನು ಹಂಚಿಕೊಳ್ಳುವ ಸಂವಾದವಿದೆ. ಅದನ್ನಂತೂ ಮಿಸ್ ಮಾಡಿಕೊಳ್ಳಲೇಬೇಡಿ

ಶಿವು.ಕೆ

Friday, October 7, 2011

ಈ ರೀತಿ ಶರಣಾದ ಪ್ರೀತಿ

    ಇದು ಪ್ರಕಾಶ್ ಹೆಗಡೆಯವರು ಬರೆದ "ರೀತಿ" ಕಥೆಯ ಮುಂದುವರಿದ ಭಾಗ ನನಗಿಂತ ಮೊದಲು ಪ್ರಕಾಶ್ ಹೆಗಡೆಯವರು, ಅಜಾದ್, ದಿನಕರ್ ಸರ್, ಪ್ರವೀಣ್, ಬಾಲು ಸರ್, ಬದರಿನಾಥ ಪಾಲವಳ್ಳಿ, ಸುಗುಣಕ್ಕ ಮತ್ತು ಸೀತರಾಂ ಸರ್ ಬರೆದಿದ್ದಾರೆ. ಅದರ ಮುಂದಿನ ಭಾಗ ನಾನು ಬರೆದಿದ್ದೀನೆ. ನೀವೆಲ್ಲ ಒಮ್ಮೆ ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ..
      

         ಪುಟ್ಟಣ್ಣಿ ತನ್ನ ಇಷ್ಟುದಿನದ ಬದುಕಿನಲ್ಲಿ ಎಂದೂ ಅಷ್ಟು ಗಟ್ಟಿಯಾಗಿ ಆತನ ಸುಕ್ಕುಗಟ್ಟಿದ್ದ ಕೈಗಳನ್ನು ಹಿಡಿದಿರಲಿಲ್ಲ. ಹಾಗಂತ ಅವಳ ಕೈಗಳೇನು ಯುವತಿಯ ಅಂಗೈನಂತೆ ಸುಕೋಮಲವಾಗಿರಲಿಲ್ಲ. ಅವಳ ಕೈಗಳು ಅವನಷ್ಟೇ ಸುಕ್ಕುಗಟ್ಟಿದ್ದವು.  ಕಿಟ್ಟಾಣಿ ಸುಕ್ಕುಗಟ್ಟಿದ್ದ ತನ್ನ ಕೈಯಲ್ಲಿ ಅವಳ ಅಂಗೈಯನ್ನು ಹಿಡಿದಿದ್ದರೂ ಅದರಲ್ಲಿ ಸುಕ್ಕಿರಲಿಲ್ಲ. ಬದಲಾಗಿ ಆಗ ತಾನೆ ಹೊಸದಾಗಿ ಮದುವೆಯಾದ ಗಂಡು ಹೆಣ್ಣು ಸಪ್ತಪದಿ ತುಳಿದ ಮೇಲೆ ಅವಳ ಸೆರಗನ್ನು ಅವನ ಹೆಗಲ ಮೇಲಿನ ವಸ್ತ್ರಕ್ಕೆ ಗಂಟುಹಾಕಿ ಅವನ ಎಡಗೈ ಅಸ್ತದಿಂದ ಅವಳ ಬಲಗೈ ಅಸ್ತವನ್ನು ಹಿಡಿಸಿದಾಗ ಮೊದಲ ಭಾರಿಗೆ ಉಂಟಾಗುತ್ತದಲ್ಲ ಕಂಪರ್ಟ್ ಎನ್ನುವ ಅನುಭೂತಿ ಅದೇ ಇವತ್ತು ಅವಳಿಗೆ ಆಗಿತ್ತು. ಅವನ ಮಿದುವಾದ ಹಿಡಿತದಲ್ಲಿ ವಾತ್ಸಲ್ಯಮಯ ಅಪ್ಪನಿರಬಹುದಾ, ಮಮತೆಯ ಅಮ್ಮನಿರಬಹುದಾ, ಪುಟ್ಟ ಮಕ್ಕಳ ಅಂಗಾಲಿನಷ್ಟೇ ಮಿತವೆನಿಸುವ ಮುಗ್ದ ಮಗ ಅಥವ ಮಗಳಿರಬಹುದಾ, ಬದುಕಿಗೆ ದಾರಿ ತೋರುವ ಗುರುವಿರಬಹುದಾ, ಕೇಳಿದ್ದೆಲ್ಲಾ ಕೊಡುವ ದೇವರಿರಬಹುದಾ, ಇವೆಲ್ಲ ಭಾವಗಳ ಜೊತೆಗೆ ಕಾಮವನ್ನು ಪ್ರೇಮಮಯವನ್ನಾಗಿಸುವ ಗಂಡನಿರಬಹುದಾ? ನಿರೀಕ್ಷೆಯಿಲ್ಲದ ನಿಶ್ಕಲ್ಮಶ ಮನಸ್ಸಿನ ಜೀವದ ಗೆಳೆಯನಿರಬಹುದಾ? ಆ ಕ್ಷಣ ಅವಳೆಷ್ಟು ಯೋಚಿಸಿದರೂ ಉತ್ತರ ಸಿಗಲಿಲ್ಲ.

       ಮೊದಲ ಭಾರಿಗೆ ಬದುಕಿನಲ್ಲಿ ಇಷ್ಟು ಗಾಢವಾದ ದಟ್ಟ ಅನುಭವವನ್ನು ಕೊಡುತ್ತಿರುವ ಆತನ ಅಂಗೈ ಹಿಡಿತವನ್ನು ಅನುಭವಿಸುತ್ತಿರುವ ನಾನು ಉತ್ತರವನ್ನೇಕೆ ಹುಡುಕಲು ಪ್ರಯತ್ನಿಸುತ್ತಿರುವೆ, ನಾನೆಂತ ದಡ್ಡಿ, ಕೆಲವೊಮ್ಮೆ ಇಂಥವಕ್ಕೆ ಅರ್ಥ ಹುಡುಕಲು ಪ್ರಯತ್ನಿಸಬಾರದು ಅನುಭವಿಸಿಬಿಡಬೇಕು ಅಂದುಕೊಂಡು ಎಲ್ಲವನ್ನು ಮರೆತು ಮಗುವಿನಂತೆ ಆತನ ಜೊತೆ ನಿದಾನವಾಗಿ ಹೆಜ್ಜೆ ಹಾಕತೊಡಗಿದಳು. ಅವರಿಬ್ಬರ ಹೆಜ್ಜೆಗಳು ಮುಂದೆ ಸಾಗಿದಂತೆ ಅವಳ ನೆನಪುಗಳ ಸುರುಳಿ ಹಿಂದಕ್ಕೆ ಓಡಲಾರಂಭಿಸಿತ್ತು.

    ಅವರಿಬ್ಬರ ಹೆಜ್ಜೆಗಳು ಅದ್ಯಾಕೋ ವೇಗವಾಗಿರಲಿಲ್ಲ ಮತ್ತು ಒತ್ತಡವಂತೂ ಇರಲೇ ಇಲ್ಲ. ಏಕೆಂದರೆ ಅವರಿಬ್ಬರೂ ನವದಂಪತಿಗಳಾಗಿರಲಿಲ್ಲ. ಮದ್ಯವಯಸ್ಕರಂತೂ ಆಗಿರಲೇ ಇಲ್ಲ. ಈ ಮದ್ಯ ವಯಸ್ಕ ದಂಪತಿಗಳ ಬದುಕೇ ಹಾಗೆ. ಮಗ ಅಥವ ಮಗಳನ್ನು ಒಳ್ಳೆ ಸ್ಕೂಲಿಗೆ ಸೇರಿಸಬೇಕು, ಮಕ್ಕಳನ್ನು ಮದುವೆ ಮಾಡಬೇಕು, ಎದುರು ಮನೆಯ ಗೆಳತಿ ಕಾಂಜಿವರಂ ಸೀರೆ ಉಟ್ಟಿದ್ದಾಳೆ ನಾನು ಕೊನೇ ಪಕ್ಷ ಕ್ರೇಪ್ ಸಿಲ್ಕ್ ಸೀರೆಯನ್ನಾದರೂ ಉಡಬೇಕು,  ಆತ ಸ್ಕೋಡ ತಗೊಂಡಿದ್ದಾನೆ ನಾನು ಕೊನೇ ಪಕ್ಷ ಮಾರುತಿ ಆಲ್ಟೋ ಕಾರಿನಲ್ಲಿ ಅವನ ಮುಂದೆ ಸಾಗಬೇಕು, ಅವನು ಮನೆ ಕಟ್ಟಿಸಿಬಿಟ್ಟಿದ್ದಾನೆ ನಾನು ಸೈಟಾನ್ನಾದರೂ ಕೊಳ್ಳಬೇಕು...ಹೀಗೆ. ಆದ್ರೆ ಆಗ ತಾನೆ ಮದುವೆಯಾದ ನವ ದಂಪತಿಗಳಿಗೆ ಪ್ರಪಂಚದ ಪರಿವೇ ಇಲ್ಲ. ಯಾವುದರ ಬಗ್ಗೆಯೂ ಚಿಂತೆಯಿಲ್ಲ. ಅವರಿಬ್ಬರೂ ಮೈಮರೆತು ಕುಳಿತರೆ, ನಿಂತರೆ, ನಡೆದರೆ, ಸಾಗಿದರೆ....ಹೀಗೇ ಏನಾದರಾಗಲಿ, ಪ್ರತಿಕ್ಷಣವೂ ವರ್ಣಿಸಲಾಗದ ಆನಂದ. ಅವರ ಕಣ್ಣಿಗೆ ಪ್ರಪಂಚ ಕಾಣುವುದಿಲ್ಲ. ಕಾಣುವುದೆಲ್ಲಾ ಅವರಿಬ್ಬರ ಬದುಕು ಮಾತ್ರ. ಹಾಗೆ ವಯಸ್ಸಾದ ದಂಪತಿಗಳಿಗೂ ಒಂಥರ ಹೀಗೇನೇ. ಎಲ್ಲಾ ಜವಾಬ್ದಾರಿಗಳನ್ನು ಮುಗಿಸಿ, ಒಬ್ಬರಿಗೊಬ್ಬರು ಹೆಗಲ ಮೇಲೆ ಕೈಗಳನ್ನು ಹಾಕಿಕೊಂಡು ಪ್ರಪಂಚವನ್ನು ಮರೆತು ಅನುಭವದ ದಾರಿಯಲ್ಲಿ ಸಾಗುತ್ತಿರುತ್ತಾರೆ. ಇಲ್ಲಿಯೂ  ಹಾಗೆ ಅರವತ್ತು ದಾಟಿದ ಪುಟ್ಟಣ್ಣಿ ಮತ್ತು ಕಿಟ್ಟಾಣಿ ಸಾಗುತ್ತಿದ್ದಾರೆ ಅಂದುಕೊಂಡಿದ್ದರೆ ಕಿಟ್ಟಾಣಿ ಪ್ರಕಾರ ಹೌದು. ಅವನು ಬದುಕಿನ ಪ್ರತಿಕ್ಷಣ ಅನುಭವಿಸುತ್ತಾ ಇದ್ದವನು ಈಗಲೂ ಆಕೆಯ ಹಸ್ತದ ಹಿತವಾದ ಬಿಸಿಯನ್ನು ಅನುಭವಿಸುತ್ತಾ ಪ್ರಪಂಚವನ್ನೇ ಮರೆತು ತನ್ನದೇ ಲೋಕದಲ್ಲಿ ತೇಲುತ್ತಿದ್ದಾನೆ. ಆದ್ರೆ ಪುಟ್ಟಾಣಿ ವಿಚಾರದಲ್ಲಿ ಆಗಿಲ್ಲ. ಏಕೆಂದರೆ ಅವಳು ಈ ಕ್ಷಣವನ್ನು ಪೂರ್ತಿಯಾಗಿ ಅನುಭವಿಸದೇ ತನ್ನ ಯೌವ್ವನದ ನೆನಪಿನಲ್ಲಿ ಹಿಂದಕ್ಕೆ ಓಡುತ್ತಿದ್ದಾಳೆ.

        ಅಪ್ಪನ ಇಷ್ಟದಂತೆ ಮದುವೆ, ನಾವಿಬ್ಬರೂ ಮೊದಲ ರಾತ್ರಿ ಒಬ್ಬರ ಮನಸ್ಸನ್ನು ಮತ್ತೊಬ್ಬರು ಅರಿತುಕೊಳ್ಳಲು ಪ್ರಯತ್ನಿಸಿದ್ದು ಆತನ ಹಳೆಯ ಪ್ರೇಮದ ಬಗ್ಗೆ ನನಗೆ ಮೂಡಿದ ಅಸಮದಾನ, ಅದೆಷ್ಟೋ ರಾಗಿಣಿ, ಜಯಂತುಗಳಿಂದ ಬಂದರು ಅವರಿಂದ ಉಂಟಾದ ಸಂಶಯಗಳು, ಗೆಳೆಯ ಗೆಳೆತಿಯರ ಬಗ್ಗೆ ಮೂಡಿದ ಸಂಶಯಗಳು.... ಒಂದಾ ಎರಡಾ,... ಮುಂದೆ ನಮ್ಮಿಬ್ಬರಲ್ಲಿ ಪುಟ್ಟ ವಿಚಾರಗಳಿಗೆ ಉಂಟಾದ ಹಟಗಳು, ಹೀಗೋಯಿಸಂಗಳು,...ಇವು ನಮ್ಮ ಬದುಕನ್ನೇ ನುಂಗಿ ನೀರು ಕುಡಿದಿದ್ದವು. ಇದರಲ್ಲಿ ತಪ್ಪು ಯಾರದು? ನನ್ನದ ಅಥವ ಕಿಟ್ಟಾಣಿದಾ! ಉತ್ತರ ಹುಡುಕಲು ಪ್ರಯತ್ನಿಸುತ್ತಿರುವಾಗಲೇ ನಮಗೆ ಒಂದು ಗಂಡು ಒಂದು ಹೆಣ್ಣು ಮಕ್ಕಳಾದವು. ಅವರ ಬೆಳವಣಿಗೆ, ಓದು, ಮದುವೆ....ಇವೆಲ್ಲದರ ನಡುವೆ ತಪ್ಪು ಯಾರದೂ ಅಂತ ಕಂಡುಕೊಳ್ಳುವ ಪ್ರಯತ್ನದಲ್ಲಿ ನಮ್ಮ ವಯಸ್ಸು ಅರವತ್ತು ದಾಟಿಬಿಟ್ಟೆವಲ್ಲ!  ಉತ್ತರ ಸಿಕ್ಕಿತಾ ಅಂದುಕೊಂಡರೆ ಇಲ್ಲ.

       ನಿತ್ಯ ಸಣ್ಣ ಸಣ್ಣದಕ್ಕೂ ಒಬ್ಬರಿಗೊಬ್ಬರೂ ಮುನಿಸಿಕೊಳ್ಳುತ್ತಿದ್ದನ್ನು ಬೆಳೆದ ಮಕ್ಕಳು ಗಮನಿಸಿದ್ದಾರೆ. ಅವರಿಬ್ಬರಿಗೂ ಅವರಿಷ್ಟಪಟ್ಟಂತೆ ಮದುವೆಯಾಗಿದೆ.  ಈಗಿನ ಮಕ್ಕಳ ರೀತಿಯೇ ಬೇರೆ.  ಬದುಕಿನ ಪ್ರತಿಕ್ಷಣವನ್ನು ಅನಂದಿಸುತ್ತಾರೆ. ಅವರ ಆನಂದದ ನಡುವೆ ನಮ್ಮನ್ನು ಗಮನಿಸಿದ್ದಾರೆ. ನಾವು ಏನನ್ನೋ ಕಳೆದುಕೊಂಡಿದ್ದೇವೆ ಅಂತ ಅವರಿಗನ್ನಿಸುವ ಹೊತ್ತಿಗೆ ನನಗೆ ಅರವತ್ತು ಚಿಟ್ಟಾಣಿಗೆ ಅರವತ್ತೈದು. ಒಂದು ವಾರ ನಮ್ಮನ್ನೆಲ್ಲಾ ಮರೆತು ಸುತ್ತಾಡಿಕೊಂಡು ಖುಷಿಯಾಗಿ ಬನ್ನಿ ಅಂತ ಒಂದು ಪ್ರವಾಸದ ಪ್ಯಾಕೇಜ್ ಮಾಡಿ ಕಳಿಸಿದ್ದಾರೆ. ಈ ಪ್ರವಾಸವಾದರೂ ಎಂಥದ್ದು ನಮ್ಮ ವಯಸ್ಸಿಗೆ ತಕ್ಕಂತೆ ದೇವಸ್ಥಾನ ತೀರ್ಥಕ್ಷೇತ್ರಗಳೊಂದು ಇಲ್ಲ. ಮೊದಲೆರಡು ದಿನ ರಿಸಾರ್ಟು, ನಂತರ ಕೆಮ್ಮಣ್ಣುಗುಂಡಿಯಂತ ಗಿರಿಧಾಮದಲ್ಲಿ ರೆಲ್ಯಾಕ್ಸು, ಅಲ್ಲಿಂದ ಮುಂದಕ್ಕೆ ನೇರವಾಗಿ ಪ್ರಖ್ಯಾತ ಜೋಗ್ ಫಾಲ್ಸ್. ನನ್ನ ತುಂಟ ಮಗಳಂತೂ "ಅಮ್ಮ ಇದು ನಿಮ್ಮಿಬ್ಬರಿಗೂ ಛಾನ್ಸ್ ಎರಡನೇ ಹನಿಮೂನ್ ಮುಗಿಸಿಕೊಂಡು ಬನ್ನಿ" ಅಂತ ಕಣ್ ಹೊಡೆದು ಕಳಿಸಿದ್ದು ಯಾಕೆಂದು ಈಗ ಅರ್ಥವಾಗುತ್ತಿದೆ.

  ತಾವು ಉಳಿದುಕೊಂಡಿದ್ದ ರಿಸಾರ್ಟ್‍ನಿಂದ ಜೋಗ್ ಫಾಲ್ಸ್ ಒಂದು ಕಿಲೋಮೀಟರ್ ಇದ್ದಿದ್ದರಿಂದ ಇಬ್ಬರು ಕೈ ಕೈ ಹಿಡಿದು ನಡೆದುಕೊಂಡು ಹೋಗುತ್ತಿದ್ದಾರೆ.  ಅರ್ಧ ಕಿಲೋಮೀಟರ್ ದಾರಿ ಸಾಗಿರಬೇಕು ತನ್ನದೇ ಹಳೆಯ ನೆನಪುಗಳಲ್ಲಿ ಮುಳುಗಿ ಹೋಗಿದ್ದ ಪುಟ್ಟಾಣಿ ಸಣ್ಣದೊಂದು ಕಲ್ಲನ್ನು ಎಡವಿ ಮುಗ್ಗರಿಸಿ ಬೀಳಬೇಕೆನ್ನುವಷ್ಟರಲ್ಲಿ ಗಟ್ಟಿಯಾಗಿ ಹಿಡಿದುಕೊಂಡ ಕಿಟ್ಟಾಣಿ ಅವಳನ್ನೊಮ್ಮೆ ನೋಡಿ " ಯಾವ ಲೋಕದಲ್ಲಿದ್ದೀಯ" ಕೇಳಿದ.  ಅವಳು ಉತ್ತರಿಸಲಿಲ್ಲ ಅವನನ್ನೊಮ್ಮೆ ನೋಡಿ ನಕ್ಕಳಷ್ಟೇ. ಮುಂದೆ ಇಬ್ಬರ ನಡುವೆ ಮಾತಿರಲಿಲ್ಲ. ನಡುವೆ ಒಮ್ಮೆ ಕಿಟ್ಟಾಣಿಯ ಮುಖವನ್ನೊಮ್ಮೆ ಪುಟ್ಟಾಣಿ ತಿರುಗಿ ನೋಡಿದಳಲ್ಲ!  ಅರೆರೆ ಇವತ್ತು ಇವರ ಮುಖ ತುಂಬಾ ಚೆನ್ನಾಗಿ ಕಾಣುತ್ತಿದೆಯಲ್ಲ!  ಮುಖದಲ್ಲಿ ವಯಸ್ಸಾಗಿರುವುದು ಕಾಣುತ್ತಿದ್ದರೂ ನನ್ನ ಗಂಡನೆನ್ನುವ ಕಾರಣಕ್ಕೆ ತುಂಬಾ ಇಷ್ಟವಾಗುತ್ತಿದೆಯಲ್ಲಾ! ಈ ಇಷ್ಟಕ್ಕೆ ಕಾರಣವೇನು?  ಮದುವೆಯಾದ ಹೊಸತರಲ್ಲಿ, ಮೊದಲ ರಾತ್ರಿಯಲ್ಲಿ ನಂತರದ ದಿನಗಳಲ್ಲಿ ಯುವ ಸುರಸುಂದರಾಂಗನಾಗಿದ್ದರೂ ಅವತ್ತಿಗಿಂತ ಇವತ್ತಿನ ಅವರ ತೃಪ್ತಿ ತುಂಬಿದ ಮುಖ ತುಂಬಾ ಅಪ್ಯಾಯಮಾನವಾಗುತ್ತಿದೆಯಲ್ಲ! ಮತ್ತೆ ಮತ್ತೆ ನೋಡಬೇಕೆನಿಸುತ್ತಿದೆಯಲ್ಲ!  ಈ ರೀತಿ ಕದ್ದು ಮುಚ್ಚಿ ನೋಡುವುದರಲ್ಲಿ ಅದೊಂತದೋ ವರ್ಣಿಸಲಾಗದ ಖುಷಿಯಿದೆ. ಸಿಹಿಯನ್ನು ಸ್ವಲ್ಪ ಸ್ವಲ್ಪ ತಿಂದಷ್ಟು ರುಚಿ ಹೆಚ್ಚು. ಹಾಗೆ ಸ್ವಲ್ಪ ಸ್ವಲ್ಪವೇ ಆತನ ಮುಖವನ್ನು ಕಿರುಗಣ್ಣಿನಿಂದ ನೋಡುವುದರಲ್ಲಿ ವರ್ಣಿಸಲಾಗದ ಖುಷಿ ಮನಸ್ಸಿಗೆ. ಹಾಗೆ ದಾರಿಯುದ್ದಕ್ಕೂ ಅವನಿಗರಿವಿಲ್ಲದಂತೆ ಕಿರುಗಣ್ಣಿನಲ್ಲೇ ನೋಡುತ್ತಾ ಸಾಗಿದಳು. ಜೋಗ್ ಫಾಲ್ಸ್ ಬಂದೇ ಬಿಡ್ತು.

   ಅದೆಷ್ಟೋ ವರ್ಷಗಳ ನಂತರ ಜೋಗ್ ಫಾಲ್ಸ್ ಇವತ್ತು ಈ ಕ್ಷಣದಲ್ಲಿ ಅವರಿಗೆ ತುಂಬಾ ಚೆನ್ನಾಗಿ ಕಾಣುತ್ತಿದೆ.  "ಅರೆರೆ ಅಲ್ಲಿ ನೋಡ್ರಿ, ಜೋಗ್ ಫಾಲ್ಸ್ ನಡುವೆ ಕಾಮನ ಮೂಡಿದೆ" ವಾಹ್! ಸೂಪರ್ ಅಲ್ಲೇ ಮಗುವಿನಂತೆ ಕುಣಿದಾಡಿದಳು ಪುಟ್ಟಾಣಿ. ಜೋಗ್ ಫಾಲ್ಸ್ ಮುಂದೆ ಕಾಮನಬಿಲ್ಲು ಯಾವಾಗಲೂ ಬರುವುದಿಲ್ಲ. ಮತ್ತು ಎಲ್ಲರಿಗೂ ಕಾಣಿಸಿಕೊಳ್ಳುವುದಿಲ್ಲ.  ಅಪರೂಪಕ್ಕೆ ಕಾಣಿಸುವ ಅದನ್ನು ನೋಡುವವರೇ ಅದೃಷ್ಟವಂತರು. ಅಂತ ಅದೃಷ್ಟ ನಮಗಿದೆಯಲ್ಲ ಅವರಿಬ್ಬರೂ ಕುಣಿದಾಡಿದರು.

     "ಪುಟ್ಟಾಣಿ, ನಿನಗೊಂದು ವಿಶೇಷವನ್ನು ತೋರಿಸಲೇನೋ" ಹೇಳಿದ ಕಿಟ್ಟಾಣಿ ಪ್ರೀತಿಯಿಂದ.

      ಕಾಮನಬಿಲ್ಲನ್ನು ಮೈಮರೆತು ಕಣ್ತುಂಬಿಕೊಳ್ಳುತ್ತಿದ್ದ ಪುಟ್ಟಾಣಿ ಆತನ ಮಾತು ಕೇಳಿ ಅವನತ್ತ ತಿರುಗಿದಳು.

      " ಇಲ್ಲಿ ನೋಡೋ" ಅಂತ ಪ್ರೀತಿಯಿಂದ ಕರೆದು, "ನಿನಗೆ ಇದೇ ಕಾಮನಬಿಲ್ಲನ್ನು ನನ್ನ ಕಣ್ಣಲ್ಲಿ ತೋರಿಸುತ್ತೇನೆ"

      "ಹೌದಾ, ಹೇಗೆ ತೋರಿಸ್ತೀರಿ"

      ಆದ್ರೆ ಒಂದು ಷರತ್ತು.  ನೀನು ನನ್ನ ಕಣ್ಣಲ್ಲಿ ಕಣ್ಣಿಟ್ಟು ಒಂದು ಕ್ಷಣವೂ ಮಿಟುಕಿಸದೇ ನೋಡಬೇಕು.

      "ಒಹ್! ಖಂಡಿತ. ಆದ್ರೆ ನೀವು ಕಣ್ಣು ಮಿಟುಕಿಸುವುದಿಲ್ಲವೇ?

       "ಇಲ್ಲ ಇಲ್ಲ ನಿನಗೆ ಕಾಮನಬಿಲ್ಲು ತೋರಿಸಲಿಕ್ಕಾಗಿ ನಾನು ಒಮ್ಮೆಯೂ ಕಣ್ಣು ಮಿಟುಕಿಸುವುದಿಲ್ಲ

       ಇದೇ ಮಾತಾ? ನೀವು ಮಿಟುಕಿಸಿ ಸೋತರೇ?

       ಸೋತರೆ ನೀನು ಏನು ಕೇಳಿದರೂ ಕೊಡಿಸುತ್ತೇನೆ, ನೀನು ಸೋತರೆ?

       ನಾನು ಒಮ್ಮೆಯೂ ಕಣ್ಣು ಮಿಟುಕಿಸದೇ ನಿಮ್ಮ ಕಣ್ಣನ್ನೇ ನೋಡುತ್ತೇನೆ. ನಾನು ಮಿಟುಕಿಸಿದಲ್ಲಿ ನೀವು ಕೇಳಿದ್ದನ್ನು ಕೊಡುತ್ತೇನೆ. ಕಿಟ್ಟಾಣಿ ಒಂದು ಕಲ್ಲುಬೆಂಚಿನ ಮೇಲೆ ಕಾಮನ ಬಿಲ್ಲಿಗೆ ಅಭಿಮುಖವಾಗಿ ಖುಳಿತ.

       ಆಯ್ತು ಈಗ ಪ್ರಾರಂಭಿಸೋಣವಾ? ಕೇಳಿದ ಕಿಟ್ಟಾಣಿ. ಆಯ್ತು ಎಂದಳು.

       ಕಣ್ಣು ನಿದಾನವಾಗಿ ತೆರೆದ. ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡತೊಡಗಿದಳು ಪುಟ್ಟಾಣಿ.

        ಐದು ಸೆಕೆಂಡುಗಳಾಯಿತು. ಜೋಗ್ ಫಾಲ್ಸ್ ಜಲಪಾತದ ಮುಂದೆ ಸೃಷ್ಟಿಯಾಗಿದ್ದ ಕಾಮನಬಿಲ್ಲು ಅವನ ಕಣ್ಣಿನಲ್ಲಿ ನಿದಾನವಾಗಿ ಅಸ್ಪಸ್ಟವಾಗಿ ಅವಳಿಗೆ ಕಾಣತೊಡಗಿತು.  ಹತ್ತು ಸೆಕೆಂಡುಗಳು ಕಳೆದವು. ಈಗ ಸ್ಪಷ್ಟವಾಗಿ ತುಂಬಾ ಚೆನ್ನಾಗಿ ಕಾಣುತ್ತಿದೆ ಕಾಮನಬಿಲ್ಲು. ಇಬ್ಬರಲ್ಲೂ ಗೆಲ್ಲಬೇಕೆನ್ನುವ ಚಲದಲ್ಲಿ ಒಮ್ಮೆಯೂ ಮಿಟುಕಿಸಲಿಲ್ಲ. ಅವಳ ದೃಷ್ಟಿ ಅವನ ದೃಷ್ಟಿಗೆ ಮತ್ತಷ್ಟು ನೇರವಾಯಿತು. ಇಬ್ಬರಲ್ಲಿ ಒಬ್ಬರೂ ಒಮ್ಮೆಯೂ ಮಿಟುಕಿಸುತ್ತಿಲ್ಲ. ಇನ್ನತ್ತು ಸೆಕೆಂಡುಗಳು ಕಳೆದವು. ನಿದಾನವಾಗಿ ಸ್ಪರ್ಧೆಯನ್ನು ಮರೆತ ಅವರಿಬ್ಬರ ಕಣ್ಣುಗಳು ನಿದಾನವಾಗಿ ಒಂದಾಗುತ್ತಿವೆ.  ಈಗ ಪುಟ್ಟಣ್ಣಿಯ ಕಣ್ಣುಗಳಲ್ಲಿ ಅದೆಂತದೋ ವರ್ಣಿಸಲಾಗದ ಪ್ರೀತಿ ಮತ್ತು ಮಮತೆ ತುಂಬಿದ ಭಾವುಕತೆ ತುಂಬಿ ತುಳುಕುತ್ತಿರುವುದು ಅವನಿಗೆ ಅರಿವಾಗುತ್ತಿದೆ. ಜೊತೆಗೆ ತಾನು ಬದುಕಿನ ಇಷ್ಟು ವರ್ಷಗಳು ಅಹಂನಿಂದ ಅನುಭವಿಸಿದ ನೋವುಗಳು ಕಿಟ್ಟಾಣಿಗೆ ಕೊಟ್ಟ ಮಾನಸಿಕ ತೊಂದರೆಗಳೆಲ್ಲಾ ನೆನಪಾಗಿ ಮಾಡಿದ ತಪ್ಪುಗಳಿಗೆ ಪ್ರಾಯಶ್ಚಿತ್ತವೆನ್ನುವ ಅವಳ ಕಣ್ಣು ತುಂಬಿಕೊಳ್ಳುತ್ತಿವೆ.  ಅವನ ಕಣ್ಣುಗಳಲ್ಲಿ ಮೂಡಿದ ಕಾಮನಬಿಲ್ಲು ನಿದಾನ ಪ್ರೀತಿಯ ಸಂಕೇತವಾಗಿ, ಪ್ರೀತಿಯಾಗಿ ಕಾಣುತ್ತಿದೆ. ಅವಳಿಗೆ ಕಿಟ್ಟಾಣಿಯ ಕಣ್ಣುಗಳನ್ನೇ ನೋಡುತ್ತಿದ್ದರೆ, ಮನಸ್ಸಿನಲ್ಲಿ ವರ್ಣಿಸಲಾಗದ ಭಾವ ತುಂಬಿಹೋಗುತ್ತಿದೆ.  ಇನ್ನು ತಡೆಯಲಾಗುತ್ತಿಲ್ಲ ಆಹಂಕಾರವೆಲ್ಲಾ ನೀರಿನಂತೆ ಕರಗಿಹೋಗುತ್ತಿವೆ. ಪಶ್ಚಾತಾಪ ಮನದಲ್ಲಿ ತುಂಬಿಕೊಳ್ಳುತ್ತಿದೆ. ಮತ್ತೈದು ಸೆಕೆಂಡು ಕಳೆಯಿತಷ್ಟೆ ಅವಳಿಗರಿವಿಲ್ಲದಂತೆ ಮನತುಂಬಿ  ಕಣ್ಣುಗಳಲ್ಲಿ ಆನಂದ ಭಾಸ್ಪ ಉಕ್ಕಿ ಬಂದೇ ಬಿಟ್ಟಿತ್ತು.  ಅದನ್ನು ನೋಡುತ್ತಿದ್ದ ಚಿಟ್ಟಾಣಿಯ ಕಣ್ಣುಗಳಲ್ಲಿ ಆನಂದ ಬಾಷ್ಪ. ಅದ್ಯಾವ ಕ್ಷಣದಲ್ಲಿ ಕಿಟ್ಟಾಣಿಯ ಎದೆಗೆ ಅವಚಿಕೊಂಡಳೋ, ಅಷ್ಟೇ ವೇಗವಾಗಿ ಪುಟ್ಟಾಣ್ಣಿಯನ್ನು ಮಗುವಿನಂತೆ ತನ್ನ ತೋಳ ತೆಕ್ಕೆಯೊಳಗೆ ಸೆಳೆದುಕೊಂಡುಬಿಟ್ಟಿದ್ದಾನೆ.  ಅವರಿಲ್ಲದಂತೆ ಈ ರೀತಿ ಒಬ್ಬರಿಗೊಬ್ಬರು ಶರಣಾಗಿಬಿಟ್ಟಿದ್ದರು. ಅಕ್ಕಪಕ್ಕದಲ್ಲಿ, ಅದರಾಚೆಗೆ ಹತ್ತಾರು ಜನರು ನೂರಾರು ಜನರು, ಎದುರಿಗೆ ಕಾಣುತ್ತಿರುವ ಜೋಗ್ ಫಾಲ್ಸ್, ಅದರೊಳಗೆ ಮೂಡಿಬಂದ ಕಾಮನಬಿಲ್ಲು ಅದರ ಮೇಲಿನ ಆಕಾಶ, ಕೆಳಗಿನ ಭೂಮಿ ಇದ್ಯಾವುದರ ಪರಿವೆ ಇಲ್ಲ. ಅದೆಷ್ಟು ಹೊತ್ತು ಹಾಗೆ ಗಾಡ ಆಲಿಂಗನದಲ್ಲಿ ಒಬ್ಬರಿಗೊಬ್ಬರು ಶರಣಾಗಿಬಿಟ್ಟಿದ್ದರು. ಇತ್ತ ಜೋಗ್ ಪಾಲ್ಸ್‍ನ ರಾಜ ರಾಣಿ, ರಾಕೆಟ್ ರೋರರ್, ಮತ್ತು ಕಾಮನಬಿಲ್ಲು ಇವರಿಬ್ಬರಲ್ಲಿ ಗೆದ್ದವರಾರು ಅಂತ ಮಾತಾಡುತ್ತಿದ್ದರೆ ಇತ್ತ ಪುಟ್ಟಾಣಿಯ ಬಲಗೈ  ಕಿಟ್ಟಾಣಿಯ ಸೊಂಟವನ್ನು ಬಳಸಿದರೆ ಕಿಟ್ಟಾಣಿಯ ಎರಡೈ ಆಕೆಯ ಹೆಗಲನ್ನು ಬಳಸಿತ್ತು. ಇವರ ಕಣ್ಣಳತೆ ದಾರಿಯ ಕೊನೆಯಲ್ಲಿ ಇವರನ್ನೇ ನೋಡಿ ಆಶೀರ್ವಾದಿಸಿದ ಸೂರ್ಯ ನಿದಾನ ಅಸ್ತಂಗತನಾಗುತ್ತಿದ್ದ.




ಶಿವು.ಕೆ
 
         

Tuesday, October 4, 2011

ಇವರು "ಸಮೂಹ ಸನ್ನಿ"ಗೊಳಗಾದರೆ ಪತ್ರಿಕೋದ್ಯಮ ಇರುತ್ತದೆಯೇ?

 
    ಕೇಂದ್ರ ಸರ್ಕಾರವನ್ನು ನಡುಗಿಸಿ, ವಿಶ್ವದ ಗಮನವನ್ನೇ ಸೆಳೆದ ಅಣ್ಣಾ ಅಜಾರೆ ಭ್ರಷ್ಟಾಚಾರ ವಿರುದ್ದದ ಉಪವಾಸ ಸತ್ಯಗ್ರಹ ನಮಗೆಲ್ಲಾ ಗೊತ್ತೇ ಇದೆ. ಪ್ರತಿಯೊಬ್ಬ ನಾಗರೀಕನಲ್ಲೂ ಭ್ರಷ್ಟಾಚಾರವನ್ನು ಹೋಗಲಾಡಿಸಲು ಹೋರಾಟ ಮಾಡಬೇಕೆನ್ನುವ ಸಂಚಲನವನ್ನೇ ಉಂಟು ಮಾಡಿದ ಆರೋಗ್ಯಕರ ಸಮೂಹ ಸನ್ನಿ ಎನ್ನಬಹುದು.  ಇಂಥ ಅರೋಗ್ಯಕರ ಸಮೂಹ ಸನ್ನಿ ನಮಗೆ ಬೇಕಿತ್ತು.

   ಇಂಥದ್ದೇ ಒಂದು ಸಮೂಹ ಸನ್ನಿ ನಮ್ಮ ಪೇಪರ್ ಹಾಕುವ ಹುಡುಗರಲ್ಲಿ ನೆಗಟೀವ್ ಆಗಿ ಆಗಿಬಿಟ್ಟರೆ  ಏನಾಗಬಹುದು? ಅಂತ ಒಮ್ಮೆ ಪ್ರಶ್ನಿಸಿಕೊಂಡೆ. ನಿಜಕ್ಕೂ ಒಂದು ಕ್ಷಣ ಹೃದಯ ಬಡಿತ ನಿಂತಂತೆ ಆಗಿ ಆತಂಕ ದಿಗಿಲುಗಳು ಒಟ್ಟಿಗೆ ಮೈಮನಸ್ಸುಗಳನ್ನು ಆವರಿಸಿಕೊಂಡವು.  ಇದೇನಿದು ಪೇಪರ್ ಹಾಕುವ ಹುಡುಗರ ಮನಸ್ಸು ಬದಲಾದರೇ ಹೃದಯಬಡಿತ ನಿಲ್ಲುವಂತದ್ದು, ದಿಗಿಲು, ಆತಂಕ ಪಡುವಂತದ್ದು ಏನಾಗಿಬಿಡುತ್ತದೆ ಅಂತ ನಿಮ್ಮಲ್ಲಿ ಪ್ರಶ್ನೆ ಮೂಡಬಹುದು.  ವಿವರಿಸಿಬಿಡುತ್ತೇನೆ ಬಿಡಿ..

    ಎಲ್ಲೋ ಪುಟ್ಟ ಗುಡಿಸಲಿನಲ್ಲಿ ಮಲಗಿದ್ದ ಒಬ್ಬ ಹದಿನೆಂಟು ವರ್ಷದ ಪೇಪರ್ ಹಾಕುವ ಹುಡುಗನಿಗೆ ಒಂದು ಅಲೋಚನೆ ಬರುತ್ತದೆ.  ಅದನ್ನು ತನ್ನ ಇತರ ಪೇಪರ್ ಹಾಕುವ ಹುಡುಗರಿಗೆ ಹೇಳುತ್ತಾನೆ. ಅದು ಒಬ್ಬರಿಂದ ಒಬ್ಬರಿಗೆ ಎಸ್ ಎಂ ಎಸ್  ತರ ಸಾಗಿ ಹತ್ತು..ನೂರು...ಸಾವಿರ...ಕೊನೆಗೆ ಭಾರತದಾದ್ಯಂತ ಮುಂಜಾನೆ ದಿನಪತ್ರಿಕೆ ಹಂಚುವ ಎಲ್ಲಾ ಹುಡುಗರ ಮನಸ್ಸಿನಲ್ಲಿಯೂ ಆದೇ ಅಲೋಚನೆ ಗಟ್ಟಿಯಾಗಿಬಿಡುತ್ತದೆ.  ನಿಮಗೆ ಗೊತ್ತಿರಲಿ, ನಮ್ಮ ಭಾರತದಾದ್ಯಂತ ಪೇಪರ್ ಹಾಕುವ ಹುಡುಗರೆಲ್ಲರ ವಯಸ್ಸು ಹದಿನೈದರಿಂದ ಇಪ್ಪತ್ತೈದು. ಈ ಪೇಪರ್ ಹಾಕುವ ಕೆಲಸವನ್ನು ಹಣವಂತರ ಮಕ್ಕಳು ಮಾಡುವುದಿಲ್ಲ. ಸೋಕಿಗೆ ಅಥವ ವ್ಯಾಯಾಮಕ್ಕೆ ಆಗುತ್ತೆ ಅಂದುಕೊಂಡು ಬರುವವರು ಹೆಚ್ಚೆಂದರೆ ಒಂದು ವಾರ್‍ಅ-ಹದಿನೈದು ದಿನವಷ್ಟೆ. ಅಷ್ಟರಲ್ಲಿ ಬೇಸರವಾಗಿ ಮನೆಯಲ್ಲಿ ಸುಖನಿದ್ರೆ ಮಾಡುತ್ತಾರೆ. ಇನ್ನೂ ಮೇಲ್ಮದ್ಯಮ, ಮದ್ಯಮ ವರ್ಗದ ಹುಡುಗರು ಇತ್ತ ಸುಳಿಯುವುದಿಲ್ಲ. ಸುಳಿದರೂ ಅವರ ಕತೆ ಶ್ರೀಮಂತ ಹುಡುಗರ ಕತೆಯೇ!  ಇಲ್ಲಿ ಅವರ ತಂದೆ ತಾಯಿಗಳಿಗೆ ಗೌರವ ಅಂತಸ್ಥು, ಪಕ್ಕದ ಮನೆಯವರು, ಸಂಭಂದಿಕರು ಏನಂದುಕೊಳ್ಳುತ್ತಾರೋ ಎನ್ನುವ ಕಾರಣಕ್ಕೆ ಅವರ ಮಕ್ಕಳನ್ನು ಈ ಕೆಲಸಕ್ಕೆ ಕಳಿಸುವುದಿಲ್ಲ. ಇನ್ನೂ ಕೆಳ ಮದ್ಯಮವರ್ಗದವರು ಸ್ವಲ್ಲ ಜನ ಬರುತ್ತಾರಾದರೂ ಅವರು ತಾತ್ಕಾಲಿಕ ಅಷ್ಟೆ. ಇಂಥ ಕೆಲಸಕ್ಕೆ ಬಡತನದಲ್ಲಿರುವವರು, ಸ್ಲಮ್‍ನಲ್ಲಿರುವ ಹುಡುಗರು, ಮನೆಯಲ್ಲಿ ಕಷ್ಟವಿರುವವರು. ಇವರೇ ಮುಂಜಾನೆ ದಿನಪತ್ರಿಕೆ ಸಂತೆಯ ಜೀವಾಳ. ಈ ಹುಡುಗರ ಮನಸ್ಥಿತಿಯನ್ನು ಎಂಥದ್ದು ಅಂದರೆ ಇವರೊಮ್ಮೆ ಮನಸ್ಸು ಮಾಡಿದರೆ ಕಿತ್ತು ಹೋದ ಕಚಡ ಮಾಸ್ ಸಿನಿಮವನ್ನು ಸೂಪರ್ ಹಿಟ್ ಮಾಡಿಬಿಡಬಲ್ಲರು. ತುಂಬಾ ಚೆನ್ನಾಗಿರುವ ಮಾಸ್ ಚಿತ್ರವನ್ನು ಪ್ಲಾಪ್ ಮಾಡಿ ಡಬ್ಬದೊಳಗೆ ಹಾಕಿಬಿಡುವಂತೆ ಮಾಡುವವರು.  ಪಾದರಸಕ್ಕಿಂತ ವೇಗವಾಗಿ ಸದಾ ಚಂಚಲತೆಯನ್ನು ಹೊಂದಿರುವ, ಇವರು "ಇದರಿಂದೇನು ಲಾಭವಿಲ್ಲ,  ಇಷ್ಟು ವರ್ಷ ನಮ್ಮ ಮುಂಜಾನೆ ಸಕ್ಕರೆ ನಿದ್ರೆಗಳನ್ನು ಹಾಳುಮಾಡಿಕೊಂಡು ಪೇಪರ್ ಹಾಕುವ ಕೆಲಸಕ್ಕೆ ನಿಂತೆವಲ್ಲ, ಇದನ್ನು ಮನೆ ಮನೆಗೆ ಹಾಕಿ ಯಾರನ್ನು ಉದ್ದಾರ ಮಾಡಬೇಕಾಗಿದೆ?  ನಾಳೆಯಿಂದ ಯಾರು ಪೇಪರ್ ಹಾಕುವ ಕೆಲಸಕ್ಕೆ ಹೋಗುವುದು ಬೇಡ ಅಂತ ತೀರ್ಮಾನಿಸಿ ಅಣ್ಣಾ ಅಜಾರೆಯಷ್ಟೇ ದೊಡ್ಡ ಸಂಚಲನ ಉಂಟು ಮಾಡಿದ ಸಮೂಹ ಸನ್ನಿಗೊಳಗಾಗಿಬಿಟ್ಟರೆ ಮುಂದೇನಾಗಬಹುದು..


    ಮೊದಲು ಕೆಲಸ ಕಳೆದುಕೊಳ್ಳುವುದು ನಮ್ಮಂಥ ನೂರಾರು ಸಾವಿರಾರು ವೆಂಡರುಗಳು. ಒಬ್ಬ ವೆಂಡರ್ ಹೆಚ್ಚೆಂದರೆ ೨೦೦ ದಿನಪತ್ರಿಕೆಯನ್ನು ಮುಂಜಾನೆ ಮನೆಮನೆಗಳಿಗೆ ವಿತರಿಸಬಹುದು ಅದಕ್ಕಿಂತ ಹೆಚ್ಚು ಸಾಧ್ಯವೇ ಇಲ್ಲ.  ಹಾಗೆ ಆದಲ್ಲಿ ಒಬ್ಬ ವೆಂಡರ್ ಆದಾಯ ನೂರರಲ್ಲಿ ೯೦% ಮಾಯವಾಗಿ  ೧೦% ಗಿಳಿಯುತ್ತದೆ.
  ನಂಬರ್ ಒನ್ ಎಂದು ಮೀಸೆ ತಿರುಗಿಸುವ ಟೈಮ್ಸ್ ಆಫ್ ಇಂಡಿಯ ಸರ್ಕುಲೇಷನ್ ಐದು ಲಕ್ಷ ನಲವತ್ತು ಸಾವಿರದಿಂದ ಐವತ್ತನಾಲ್ಕು ಸಾವಿರಕ್ಕೆ ಇಳಿಯುತ್ತದೆ.
  ಡೆಕ್ಕನ್ ಹೆರಾಲ್ಡ್ ಒಂದು ಲಕ್ಷದಿಂದ ಹತ್ತು ಸಾವಿರಕ್ಕೆ, ಹಿಂದೂ ದಿನಪತ್ರಿಕೆ ಅರವತ್ತು ಸಾವಿರದಿಂದ ಆರುಸಾವಿರಕ್ಕೆ, ಇಂಡಿಯನ್ ಎಕ್ಸ್ ಪ್ರೆಸ್ ನಲವತ್ತು ಸಾವಿರದಿಂದ ನಾಲ್ಕು ಸಾವಿರಕ್ಕೆ, ಡೆಕ್ಕನ್ ಕ್ರಾನಿಕಲ್ ಇಪ್ಪತ್ತು ಸಾವಿರದಿಂದ ಎರಡು ಸಾವಿರಕ್ಕೆ, ಡಿ ಎನ್ ಎ ಪತ್ರಿಕೆ ಹದಿನೆಂಟು ಸಾವಿರದಿಂದ ಸಾವಿರದ ಎಂಟು ನೂರಕ್ಕೆ ಇಳಿಯುತ್ತದೆ. ಮತ್ತೆ ಕನ್ನಡ ದಿನಪತ್ರಿಕೆಗಳಲ್ಲಿ ಎರಡು ಲಕ್ಷವಿರುವ ವಿಜಯ ಕರ್ನಾಟಕ ಇಪ್ಪತ್ತು ಸಾವಿರಕ್ಕೆ ಒಂದುಲಕ್ಷ ನಲವತ್ತು ಸಾವಿರವಿರುವ ಪ್ರಜಾವಾಣಿ ಹದಿನಾಲ್ಕು ಲಕ್ಷಕ್ಕೆ, ಅರವತ್ತು ಸಾವಿರವಿರುವ ಕನ್ನಡಪ್ರಭ ಆರುಸಾವಿರಕ್ಕೆ, ಮುವತ್ತು ಸಾವಿರವಿರುವ ಉದಯವಾಣಿ ಮೂರು ಸಾವಿರಕ್ಕೆ, ಹದಿನೆಂಟು ಸಾವಿರವಿರುವ ಸಂಯುಕ್ತ ಕರ್ನಾಟಕ ಸಾವಿರದ ಎಂಟುನೂರಕ್ಕೆ, ಇದು ಬಿಟ್ಟು ಹೊಸದಿಗಂತ, ವ್ಯಾಪಾರಿ ದಿನಪತ್ರಿಕೆಗಳಾದ ಎಕನಾಮಿಕ್ಸ್ ಟೈಮ್ಸ್, ಬುಸಿನೆಸ್ ಲೈನ್, ಬುಸಿನೆಸ್ ಸ್ಟಾಂಡರ್ಡ್, ಇತ್ಯಾದಿಗಳು ನೂರು ಇನ್ನೂರು ಲೆಕ್ಕಕ್ಕೆ ಇಳಿದುಬಿಡುತ್ತವೆ. ಇದು ಬೃಹತ್ ಬೆಂಗಳೂರಿನ ಲೆಕ್ಕಚಾರ. ಇತರೆ ನಗರಗಳು, ಇತರೆ ರಾಜ್ಯಗಳು, ಪೂರ್ತಿ ಭಾರತದ ಮುಂಜಾನೆ ದಿನಪತ್ರಿಕೆ ವಿತರಣೆ ಲೆಕ್ಕಾಚಾರ ಕೇವಲ ೧೦% ಗೆ ಇಳಿದುಬಿಡುತ್ತದೆ.

      ನೂರು ರೂಪಾಯಿಯನ್ನು ನೋಡುತ್ತಿದ್ದ ನನ್ನಂತ ವೆಂಡರ್ ಹತ್ತು ರೂಪಾಯಿಗೆ ಎಷ್ಟು ದಿನ ಇಂಥ ವ್ಯಾಪಾರ ಮಾಡಿಯಾನು? ವಿಧಿಯಿಲ್ಲದೇ ಅವನು ಬೇರೆ ಉದ್ಯೋಗ, ಅಥವ  ವ್ಯಾಪರವನ್ನೋ ಹುಡುಕಿಕೊಳ್ಳುತ್ತಾನೆ.  ಅಲ್ಲಿಗೆ ಮೇಲೆ ವಿವರಿಸಿದ ಹತ್ತು ಪರಸೆಂಟ್ ಕೂಡ ಇಲ್ಲವಾಗುತ್ತದೆ.

       ಯಾರು ಇದ್ದರೆಷ್ಟು ಬಿಟ್ಟರೆಷ್ಟು ಅಂದುಕೊಂಡ ಪತ್ರಿಕಾ ಕಛೇರಿಗಳು ತಾವೆ ವಿತರಣೆ ಮಾಡುತ್ತೇವೆ ಅಂತ ಮುಂದೆ ನಿಂತರೆ ಅವರಿಗೆ ಮನೆಮನೆಗೆ ತಲುಪಿಸಲು ಅವರ ವರದಿಗಾರರನ್ನು ಬಿಡುತ್ತಾರಾ, ಎಸಿ ರೂಮಿನಲ್ಲಿ ಕುಳಿತ ಡೆಸ್ಕ್ ಆಪರೇಟರುಗಳಿಗೆ ಸೈಕಲ್ ಕೊಟ್ಟು ಮನೆಮನೆಗೆ ಕಳಿಸುತ್ತಾರಾ? ಈಗಿನ ವರದಿಗಾರರು ಮತ್ತು ಡೆಸ್ಕ್ ಆಪರೇಟರುಗಳು ಆಕಾಶದಿಂದ ಇಳಿದುಬಂದ ರಾಜಕುಮಾರರಂತೆ ವರ್ತಿಸುವ ಇಂದಿನ ಕಾಲದಲ್ಲಿ ಅವರನ್ನು ಮನೆಮನೆಗೆ ಪೇಪರ್ ಹಂಚುವ ಕೆಲಸಕ್ಕೆ ಹಚ್ಚಿಬಿಟ್ಟರೆ ಅವರ ಅಹಂಗೆ ಕುಂದು ಬಂದಂತಾಗಿ ಅವರು ಖಂಡಿತ ಕೆಲಸ ಬಿಡುತ್ತಾರೆ. ಇದೆಲ್ಲವನ್ನು ಬಿಟ್ಟು ಮಾರುಕಟ್ಟೆ ವಿಭಾಗದ ಪ್ರತಿನಿಧಿಗಳಿಗೆ ಸೈಕಲ್ಲು, ಮೋಟರ್ ಸೈಕಲ್ ಕೊಟ್ಟು ಮನೆಮನೆಗೆ ಪೇಪರ್ ಹಾಕಲು ಕಳಿಸಿದರೂ ಇವರ ಅರ್ಹತೆಯೂ ವೆಂಡರಿನಷ್ಟೆ. ಮತ್ತೆ ಈಗಾಗಲೇ ಐದು ಆರಂಕಿ ಪಗಾರದ ರುಚಿಯನ್ನು ನೋಡಿರುವ ಇವರೆಲ್ಲಾ ಐನೂರು ಸಾವಿರಕ್ಕೆ ಕೆಲಸ ಮಾಡುತ್ತಾರಾ? ಅಲ್ಲಿಗೆ ಇದು ಕಾರ್ಯಸಾಧುವಲ್ಲವೆಂದಾಯಿತು.

      ಈ ಪತ್ರಿಕೆ ಕಛೇರಿಯವರು ಮೊಂಡುಬಿದ್ದು ವೆಂಡರುಗಳು ಬೇಡ, ಪೇಪರ್ ಹಾಕುವ ಹುಡುಗರೂ ಬೇಡ ಅಂತ ಅಜೆಂಡ ಹೊರಡಿಸಿ, ಈ ದಿನಪತ್ರಿಕೆ ವಿತರಣೆ ಕೆಲಸಕ್ಕೆ ಹೊಸದಾಗಿ ನೂರಾರು ಜನರನ್ನು ನೇಮಿಸಿಕೊಂಡರೂ ಪ್ರತಿಯೊಬ್ಬನೂ ಹೆಚ್ಚೆಂದರೆ ಇನ್ನೂರು ಪೇಪರುಗಳನ್ನು ಮನೆಮನೆಗೆ ತಲುಪಿಸಬಹುದು....ಅಲ್ಲಿಗೆ ಅವನ ಕತೆಯೂ ವೆಂಡರ್‌‍ಗಿಂತ ವ್ಯತ್ಯಾಸವೇನು ಇಲ್ಲ. ಮತ್ತೆ ಅವನ ಕೆಲಸಕ್ಕೆ ವೆಂಡರಿಗೆ ಸಿಗುವ ೧೦% ಅಧಾಯವನ್ನೆ ಸಂಬಳವಾಗಿ ಕೊಟ್ಟರೆ ಅವನಿಗೆ ಅದು ಸಾಲದಾಗಿ ಒಂದೇ ತಿಂಗಳಿಗೆ ಕೆಲಸ ಬಿಟ್ಟು ಓಡುತ್ತಾನೆ. ಅಥವ ಅವರ ಸಂಬಳವನ್ನು ೧೦% ಗೆ ೯೦% ಸೇರಿಸಿ ಕೊಟ್ಟರೆ ಪತ್ರಿಕೆ ಕಂಪನಿಗಳು ಒಂದೇ ತಿಂಗಳಿಗೆ ಬಾಗಿಲು ಮುಚ್ಚಿಕೊಂಡು ಒಳಗೆ ಮಲಗಬೇಕಾಗುತ್ತದೆ.

      ಮತ್ತೇನು ಮಾಡಬಹುದು ಅಂತ ಬೇರ್‍ಎ ದಿಕ್ಕಿನಲ್ಲಿ ಅಲೋಚಿಸಿದಾಗ ಹೀಗೆ ಹೊಸದಾಗಿ ನೇಮಕ ಮಾಡಿಕೊಂಡ ನೂರಾರು ಜನರನ್ನೇ ಮನೆಮನೆಗಳಿಗೆ ವಿತರಿಸುವ ಬದಲು ನೂರು ಇನ್ನೂರು ಪತ್ರಿಕೆಗಳನ್ನು ನೇರವಾಗಿ ಎಲ್ಲಾ ಏರಿಯಗಳಲ್ಲಿರುವ ದೊಡ್ಡ-ಪುಟ್ಟ ಅಂಗಡಿಗಳಿಗೆ ಕೊಟ್ಟರೆ ಅವರು ಭರ್ಜರಿ ವ್ಯಾಪರ ಮಾಡಬಹುದು ಅಂದುಕೊಂಡರೆ ಅದು ಸುಳ್ಳೇ ಸುಳ್ಳು. ನಿಮಗೆ ಮತ್ತೊಂದು ವಿಚಾರ ಗೊತ್ತಿರಲಿ, ಬೆಂಗಳೂರಿನಲ್ಲಿ ಪ್ರಿಂಟ್ ಆಗುವ ಎಲ್ಲಾ ದಿನಪತ್ರಿಕೆಗಳ ಕೇವಲ ೧% ಮಾತ್ರ ಅಂಗಡಿಗಳಲ್ಲಿ ಸೇಲ್ ಆಗುತ್ತವೆ. ಎಷ್ಟೇ ಶ್ರಮವಹಿಸಿ ಚಾಣಕ್ಷತೆ ಮೆರೆದರೂ ಇದು ೫% ದಾಟುವುದಿಲ್ಲ. ಏಕೆ ದಾಟುವುದಿಲ್ಲವೆನ್ನುವುದಕ್ಕೆ ಕಾರಣಗಳನ್ನು ಕೊಡುತ್ತೇನೆ.  ಬೆಂಗಳೂರಿನ ಒಂದು ಏರಿಯದಲ್ಲಿ ನೂರು ಮೀಟರ್ ರಸ್ತೆಯ ಆ ಬದಿ ಈ ಬದಿ ಎರಡು ಅಂಗಡಿಗಳಿದ್ದರೂ ಆ ನೂರು ಮೀಟರ್ ಸುತ್ತಳತೆಯಲ್ಲಿರುವ ಒಂದು ಸಾವಿರ ಮನೆಗಳಲ್ಲಿ ಕೇವಲ ನಲವತ್ತು-ಐವತ್ತು ಮನೆಯವರು ಮಾತ್ರ ಮನೆಯಿಂದ ಹೊರಗೆ ವಾಕಿಂಗ್ ಅಂತ ಬಂದು ಪೇಪರ್ ಕೊಳ್ಳುತ್ತಾರೆ. ಅಲ್ಲಿಗೆ ೫೦ ಪೇಪರ್ ಮಾತ್ರ ಖರ್ಚಾಯಿತು.  ಉಳಿದ ಮನೆಯವರಿಗೆ ಪೇಪರ್ ಓದುವ ಆಸಕ್ತಿಯಿಲ್ಲ ಇಲ್ಲವಾ ಅಂದುಕೊಂಡರೆ ಅವರಲ್ಲಿ ಕಡಿಮೆಯೆಂದರೂ ಇನ್ನೂ ಏಳುನೂರು ಮನೆಗಳವರಿಗೆ ಪೇಪರ್ ಬೇಕಿದೆ. ಆದ್ರೆ  ನಮ್ಮ ಬೆಂಗಳೂರು ಇವರಿಗೆಲ್ಲಾ ಅದೆಂತ ಅರಾಮದಾಯಕ ಜೀವನವನ್ನು ಒದಗಿಸಿಕೊಟ್ಟಿದೆಯೆಂದರೆ ಅವರು ಕುಳಿತಲ್ಲೆ ಮಲಗಿದಲ್ಲೇ ಬೇಕಾದರೆ ವೆಂಡರುಗಳ ಜೊತೆ ಪೇಪರ್ ಹುಡುಗರ ಜೊತೆ ಫೋನಿನಲ್ಲೇ ಅರ್ಧಗಂಟೆ ಮಾತಾಡುತ್ತಾರೆ ಹೊರತು, ಮನೆಯಿಂದ ಹೊರಬಂದು ಮೆಟ್ಟಿಲಿಳಿದು ಪೇಪರ್ ಅಂಗಡಿಯಲ್ಲಿ ಪೇಪರ್ ಕೊಳ್ಳುವುದಿಲ್ಲ. ಇದೆಲ್ಲಾ ನಮ್ಮ ಬೆಂಗಳೂರು ಇವರಿಗೆ ಕರುಣಿಸಿರುವ ಮಾರ್ವಾಡಿ ಬದುಕಿನ ಗಿಪ್ಟ್. ಇದೇ ಲೆಕ್ಕಾಚಾರದಲ್ಲಿ ಈಗ ನೂರು ಮೀಟರ್ ಅಂತರದಲ್ಲಿರುವ ಸಾವಿರ ಮನೆಗಳಲ್ಲಿ ವೆಂಡರುಗಳು-ಪೇಪರ್ ಹುಡುಗರ ಮೂಲಕ ಏಳುನೂರಕ್ಕೂ ಹೆಚ್ಚು ಮನೆಗಳಿಗೆ,  ನೂರು ಮನೆಗಳಿರುವ ಅಪಾರ್ಟ್‍ಮೆಂಟಿನಲ್ಲಿ ೯೫ ಮನೆಗಳ ಬಾಗಿಲಿಗೆ, ಮೆಟ್ಟಿಲ ಮೇಲೆ, ಬಾಲ್ಕನಿಗಳ ಮೇಲೆ, ಪೇಪರುಗಳು ಸುರಕ್ಷಿತವಾಗಿ ತಲುಪುತ್ತಿವೆ ಎನ್ನುವ ವಿಚಾರ ನಿಮ್ಮ ಮನಸ್ಸಿನಲ್ಲಿರಲಿ. ನಾನಿಲ್ಲಿ ವಿವರಿಸಿದ ವಿಚಾರಗಳು ಬೆಂಗಳೂರಿಗೆ ಸೀಮಿತವಾದರೂ ಇತರೆ ನಗರಗಳು ಹಾಗೂ ನಮ್ಮ ಭಾರತದಾದ್ಯಂತ ಒಂದರಡು % ಹೆಚ್ಚು ಕಡಿಮೆಯಾದರೂ ದೊಡ್ಡ ಬದಲಾವಣೆಯೇನಿಲ್ಲ.

     ಮತ್ತೊಂದು ವಿಚಾರ್‍ಅವಿದೆ. ಅದು ಜಾಹಿರಾತಿಗೆ ಸಂಭಂದಿಸಿದ್ದು.  ನೀವ್ಯಾರು ಬೇಕಾಗಿಲ್ಲ. ನೀವಿಲ್ಲದಿದ್ದಲ್ಲಿ ನಮ್ಮ ಪತ್ರಿಕೆ ನಿಂತುಹೋಗುವುದಿಲ್ಲ ನಮಗೆ ಜಾಹಿರಾತಿನ ಅದಾಯವಿದೆ. ಅದರಿಂದ ನಾವು ಪತ್ರಿಕೆಯನ್ನು ನಡೆಸುತ್ತೇವೆ ಬೇಕಾದರೆ  ಪತ್ರಿಕೆಯನ್ನು ಉಚಿತವಾಗಿ ಹಂಚುತ್ತೇವೆ ಅಂತ ಶೂರ ಧೀರ ಏಕಾಂಗಿ ವೀರರಂತೆ ಮುನ್ನುಗ್ಗಿದರೂ ಹಾಗೆ ಉಚಿತವಾಗಿ ಮನೆಮನೆಗೆ ತಲುಪಿಸಲು ನೂರಾರು ಸಾವಿರಾರು ಕೆಲಸಗಾರರು ಬೇಕಾಗುತ್ತದೆ.  ಮತ್ತೆ ಅವರೆಲ್ಲಾ ವೆಂಡರುಗಳು ಮತ್ತು ಪೇಪರ್ ಬಾಯ್‍ಗಳಾಗುವುದಕ್ಕೆ ಆಗುವುದಿಲ್ಲ. ಈ ರೀತಿ ಉಚಿತವಾಗಿ ಹಂಚಿದರೂ ಈಗಿನ ಜಾಹಿರಾತು ತುಂಬಿದ ಪೇಪರುಗಳನ್ನು ಮತ್ತೆ ಹತ್ತು % ಮಾತ್ರ ಹಂಚಲು ಸಾಧ್ಯ. ಇನ್ನೂ ನಾಲ್ಕರಷ್ಟು ಹೆಚ್ಚು ಕೆಲಸಗಾರರನ್ನು ನೇಮಿಸಿ ಮನೆಮನೆಗೆ ಹಂಚುತ್ತೇವೆ. ಅಂತ ಶುರುಮಾಡಿದರೇ ಅದು ಖಂಡಿತ ಚೆನ್ನಾಗಿ ನಡೆಯುತ್ತದೆ.  ಆಹಾ! ಎಲ್ಲಾ ಪತ್ರಿಕೆಗಳು ಉಚಿತವಾಗಿ ಸಿಗುತ್ತಿವೆಯಲ್ಲಾ ಅಂತ ಗ್ರಾಹಕರು ಪುಲ್ ಖುಷ್!  ಆದ್ರೆ ಉಚಿತವಾಗಿ ಹಂಚುವವನು ಉಪ್ಪುಕಾರ ತಿನ್ನುವ, ನವರಸಗಳ ಮನುಷ್ಯರೇ ತಾನೆ!  ಒಂದು ತಿಂಗಳು ತುಂಬಾ ಖುಷಿಯಾಗಿ ತಾವು ಪಡೆಯುವ ಸಂಬಳಕ್ಕೆ ತಕ್ಕಂತೆ ಉಚಿತವಾಗಿ ಮನೆಮನೆಗೆ ಪೇಪರ್ ತಲುಪಿಸುತ್ತಾರೆ.  ಮುಂದಿನ ತಿಂಗಳಿಗೆ ಅವರ ತಲೆ ತಿರುಗುತ್ತದೆ. ಮನೆಮನೆಗೆ ಉಚಿತವಾಗಿ ಏಕೆ ಕೊಡಬೇಕು. ಅದರ ಬದಲು ತೂಕಕ್ಕೆ ಹಾಕಿದರೆ ಸಕ್ಕತ್ ಹಣಬರುತ್ತದಲ್ಲಾ....ಸರಿಯಾಗಿ ಹಾಕಬೇಕು ಎನ್ನುವುದಕ್ಕೆ ಮನೆಯವರೇನು ಹಣಕೊಡುವುದಿಲ್ಲವಲ್ಲ. ಒಂದೆರಡು ದಿನ ತಪ್ಪಿಸಿದರಾಯಿತು..ಅಂದುಕೊಂಡು ಒಂದೆರಡು ದಿನ ತಪ್ಪಿಸಿ ತೂಕಕ್ಕೆ ಹಾಕುತ್ತಾರೆ. ಈ ಸುಲಭದ ಹಣ ಯಾವಾಗ ಕೈತುಂಬ ಸಿಗಲು ಪ್ರಾರಂಭವಾಗುತ್ತದೋ...ಅಲ್ಲಿಗೆ ಅದು ಒಂದು ವಾರ, ತಿಂಗಳು.ಹುಚ್ಚುಮುಂಡೆ ಮದುವೆಯಲ್ಲಿ ಉಂಡವನೇ ಜಾಣ ಅಂತ ಈ ಕೆಲಸಗಾರರೆಲ್ಲಾ ಚೆನ್ನಾಗಿ ಹಣ ಮಾಡುತ್ತಾರೆ....ಹೀಗೆ ಮುಂದುವರಿದು  ಪತ್ರಿಕೋದ್ಯಮದ ಮಾರುಕಟ್ಟೆ ವ್ಯವಸ್ಥೆಯೇ ಅಡ್ಡದಾರಿ ಹಿಡಿಯುತ್ತದೆ.  ಜಾಹಿರಾತು ನೀಡುವವರಿಗೆ ಸತ್ಯ ಗೊತ್ತಾಗಿ ಅವರು ಪತ್ರಿಕೆಗೆ ಕೊಡುವ ಜಾಹಿರಾತು ನಿಲ್ಲಿಸಿದರೆ ಅದನ್ನೇ ನಂಬಿಕೊಂಡು ಪತ್ರಿಕೆ ನಡೆಸುವ ಶೂರ ಧೀರರೆಲ್ಲಾ ಟುಸ್ ಪಟಾಕಿಗಳಾಗಿ ತಲೆಮೇಲೆ ಟವಲ್ ಹಾಕಿಕೊಂಡು ಮಕಾಡೆ ಮಲಗಬೇಕಾಗುತ್ತದೆ.

     ಈಗ ಹೇಳಿ ಮುಂಜಾನೆ ದಿನಪತ್ರಿಕೆಯ ನಿಜವಾದ ಹೀರೋಗಳು ಯಾರು? ಭಾರತಕ್ಕೆ ನಂಬರ್ ಒನ್ ಎಂದು ಮೀಸೆ ತಿರುವುವ ಟೈಮ್ಸ್  ಅಫ್ ಇಂಡಿಯಾನ, ಡೆಕ್ಕನ್, ಪ್ರಜಾವಾಣಿ, ಕನ್ನಡಪ್ರಭ, ಉದಯವಾಣಿಯ....ಇತ್ಯಾದಿ ಹತ್ತಾರು ಪತ್ರಿಕೆಗಳ ಮಾಲೀಕರಾ,  ತಾವು ಅದ್ಬುತ ಕಾಲಂ ಲೇಖಕರು ಎಂದು ಬೀಗುವ ಸಂಪಾದಕರಾ, ಹೊರಪ್ರಪಂಚದಲ್ಲಿರುವವರೆಲ್ಲಾ ದಡ್ಡರು, ನಾವು ಬರೆದಿದ್ದೇ ವೇದವಾಕ್ಯ ಎಂದುಕೊಂಡು ಬೈಲೈನ್ ಹಾಕಿಕೊಳ್ಳುವ ವರದಿಗಾರರು ಮತ್ತು ಡೆಸ್ಕ್ ಅಪರೇಟರುಗಳಾ? ವಾರಕ್ಕೊಂದು ಕಾಲಂ ಬರೆಯುವ ಪ್ರಖ್ಯಾತ ಲೇಖಕರಾ?  ಪುಟಗಟ್ಟಲೇ ಜಾಹಿರಾತು ಹಾಕಿಸಿ ಜನರನ್ನು ಟೆಂಪ್ಟ್ ಮಾಡುತ್ತಿರುವ ಜಾಹಿರಾತು ಕಂಪನಿಗಳಾ? ಇರುವುದರಲ್ಲೇ ಸ್ವಲ್ಪ ವಾಸಿ ಎನ್ನುವಂತೆ ವೆಂಡರುಗಳನ್ನು ಪುಸಲಾಯಿಸುತ್ತಾ, ಕಛೇರಿಯಲ್ಲಿ ಸರ್ಕುಲೇಷನ್ ಹೆಚ್ಚು ಮಾಡಬೇಕು ಅಂತ ಮಾಡುವ ತಾಕೀತನ್ನು ಸಹಿಸಿಕೊಳ್ಳುವ ಮಾರುಕಟ್ಟೆ ವಿಭಾಗದ ಪ್ರತಿನಿಧಿಗಳಾ? 

    ಜನರ ಮಾನಸಿಕ ಸ್ಥಿತಿಗತಿಗಳನ್ನು ಬದಲಾಯಿಸುವ ನಾವೇ ಹೀರೋಗಳು ಅಂತ ಭ್ರಮೆಯಲ್ಲಿರುವವರು. ಈ ಭ್ರಮೆಯಲ್ಲಿರುವುದಕ್ಕೆ ಅವರಿಗೆ ವರ್ಷಕ್ಕೊಮ್ಮೆಯಾದರೂ ಅವರಿಗೆ ವೆಂಡರ್ಸ್ ಡೇ ನೆನಪಾಗುವುದಿಲ್ಲ. ವೆಂಡರುಗಳ ಕಷ್ಟಗಳು ಮನಸ್ಸಿಗೆ ಬರುವುದಿಲ್ಲ. ಇದುವರೆಗೂ ಒಬ್ಬಸಂಪಾದಕ, ಸಹಸಂಪಾದಕನಾಗಲಿ, ವರದಿಗಾರನಾಗಲಿ, ಪ್ರಖ್ಯಾತ ಲೇಖನರಾಗಲಿ, ವಾರಕ್ಕೊಂದು ಕಾಲಂ ಬರೆಯುವ ಡೆಸ್ಕ್ ಆಪರೇಟರುಗಳಾಗಲಿ ಒಬ್ಬ ವೆಂಡರ್‍ಅನ್ನು ಸಂದರ್ಶಿಸಿಲ್ಲ. ಪೇಪರ್ ಹುಡುಗನ ಸ್ಥಿತಿ ಗತಿ ತಿಳಿದಿಲ್ಲ.


  ನಂಬರ್ ಒನ್ ಪತ್ರಿಕೆಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುವವರ ಮನೆಗೆ ಪೇಪರ್ ಹಾಕುತ್ತೇನೆ. ಆರಾಮ ಸೋಪ ಮೇಲೆ ಕುಳಿತು ಟೀಪಾಯ್ ಮೇಲೆ ಕಾಲುಚಾಚಿ ಎದುರಿನ ಗೋಡೆಯಲ್ಲಿನ ನಲವತ್ತು ಇಂಚಿನ ಟಿವಿಯನ್ನು ನೋಡುವ ಅವರಿಗೆ ನಾಲ್ಕು ಅಡಿ ಅಗಲ ಎಂಟು ಅಡಿ ಉದ್ದ ಮಲಗಿದರೆ ಕಾಲು ಚಾಚಲು ಆಗದ ನಮ್ಮ ಪೇಪರ್ ಹುಡುಗನ ಪುಟ್ಟ ಗುಡಿಸಲು ಗೊತ್ತಿಲ್ಲ. ಜಾಹಿರಾತು ಹಣಕ್ಕಾಗಿ ಗಂಡು ಹೆಣ್ಣಿನ ಅರೆಬೆತ್ತಲೆ ಫೋಟೊಗಳನ್ನು ಹಾಕುವ ನಮ್ಮ ಸಂಪಾದಕರಿಗೆ ಅರಕಲು ಕುಪ್ಪಸ, ಸೀರೆ ಹಾಕಿಕೊಂಡ ನಮ್ಮ ಸಾವಿರಾರು ಪೇಪರ್ ಹುಡುಗರ ತಾಯಂದಿರ ಸ್ಥಿತಿಯ ಕಲ್ಪನೆಯಿಲ್ಲ.

      ಈಗ ಮತ್ತೆ ಮೊದಲೆರಡು ಪ್ಯಾರಗಳನ್ನು ನೆನಪಿಸಿಕೊಳ್ಳೋಣ. ನಮ್ಮ ಭಾರತದಾಧ್ಯಂತ ಇರುವ ಇಂಥ ನೂರಾರು ಸಾವಿರಾರು, ಲಕ್ಷಾಂತರ ಪುಟ್ಟ ಪುಟ್ಟ ಮನೆ, ಗುಡಿಸಲು,...ಮುಂತಾದವುಗಳಲ್ಲಿರುವ ನಮ್ಮ ಪೇಪರ್ ಹಾಕುವ ಹುಡುಗರೆಲ್ಲಾ ನಾಳೆಯಿಂದ ಪೇಪರ್ ಹಾಕಬಾರದೆಂದು ತೀರ್ಮಾನಿಸಿ "ಸಮೂಹ ಸನ್ನಿಗೆ ಒಳಗಾಗಿಬಿಟ್ಟರೆ"........ನಮ್ಮ ಭಾರತದಲ್ಲಿ ಮುಂಜಾನೆ ದಿನಪತ್ರಿಕೆ ಉದ್ಯಮ ಮಕಾಡೆ ಮಲಗುತ್ತದೆ. ಈಗ ನಿಮ್ಮ ಎದೆ ಬಡಿತವೂ ಒಂದು ಕ್ಷಣ ನಿಂತಂತೆ ಅಯ್ತಲ್ಲವೇ....ಜನರನ್ನು ಮೆಚ್ಚಿಸುವ ಸಲುವಾಗಿ ಉಪ್ಪು ಖಾರ, ಮಸಾಲೆಗಳನ್ನು ತಮ್ಮ ಲೇಖನಗಳಲ್ಲಿ ತುರುಕುವ, ನಮ್ಮ ಪತ್ರಿಕೆಗಳ ಸಂಪಾದಕರು, ವರದಿಗಾರರು ಈ ಮುಂಜಾನೆ ಹೀರೋಗಳು ಕೈಕೊಟ್ಟರೆ.....ಆ ಮಸಾಲಯುಕ್ತ ಬಿಸಿಬಿಸಿ ಪತ್ರಿಕೆಗಳನ್ನು ತಮ್ಮ ತಮ್ಮ ಮನೆಗಳ ಟೆರಸ್ ಮೇಲೆ ಹರಡಿ ಅದರ ಮೇಲೆ ಹಪ್ಪಳ ಸಂಡಿಗೆಗಳನ್ನು ಒಣಗಿಸುತ್ತಾ, ಅದನ್ನು ಕದ್ದು ತಿನ್ನಲು ಬರುವ ಕಾಗೆ ಕೋತಿಗಳನ್ನು ಓಡಿಸುತ್ತಾ ಕೂರಬೇಕಾಗುತ್ತದೆ. ಏನಂತೀರಿ?

   ಇದುವರೆಗೂ ದಿನಪತ್ರಿಕೆ ವೆಂಡರುಗಳು ಮತ್ತು ಪೇಪರ್ ಹುಡುಗರು ಗ್ರೇಟ್, ಸೆಲೆಬ್ರಿಟಿಗಳು, ಹೀರೋಗಳು, ಅವರಿಲ್ಲದಿದ್ದರೇ ಬೆಳಗಾಗುವುದಿಲ್ಲ ಅಂತ ಹೇಳಲಿಕ್ಕೆ ನಾನು ಈ ಲೇಖನವನ್ನು ಖಂಡಿತ ಬರೆಯಲಿಲ್ಲ. ಸದ್ಯ ನಮ್ಮ ಸ್ಥಿತಿಗತಿಯನ್ನು ನೇರವಾಗಿ ವಿವರಿಸುತ್ತಿದ್ದೇನೆ ಅಷ್ಟೆ. ಹಾಗಾಂತ ಎಲ್ಲಾ ದಿನಪತ್ರಿಕೆ ಸಂಪಾದಕರು, ರಿಪೋರ್ಟರುಗಳು, ಡೆಸ್ಕ್ ಆಪರೇಟರುಗಳು ಮಾರುಕಟ್ಟೆ ಪ್ರತಿನಿಧಿಗಳು ಕೆಟ್ಟವರಲ್ಲ. ಒಳ್ಳೆಯ ಸಂಪಾದಕರು, ರೆಪೋರ್ಟರುಗಳು, ಪ್ರತಿನಿಧಿಗಳು ಇದ್ದಾರೆ. ಅವರಿಂದಲೇ ವೆಂಡರುಗಳ ಮತ್ತು ಪೇಪರ್ ಹುಡುಗರಿಗೆ ಬೆಳಗಿನ ಕೆಲಸ ಸಿಗುತ್ತಿದೆ. ಅದಕ್ಕಾಗಿ ಈ ಲೇಖನದಿಂದಾಗಿ ಬೇರೆ ಗ್ರಾಹಕರು, ಮತ್ತು ಪತ್ರಿಕೋದ್ಯಮದವರು ತಪ್ಪು ತಿಳಿಯಬಾರದಾಗಿ ವಿನಂತಿ.

       ಮತ್ತೊಂದು ವಿಚಾರವೇನೆಂದರೆ, ಈ ಲೇಖನದಲ್ಲಿರುವ ಕೆಲವು ಅಂಶಗಳನ್ನು ತುಂಬಾ ನೇರವಾಗಿ ಬರೆದಿರುವುದರಿಂದ ನನ್ನ ಪತ್ರಕರ್ತ ಗೆಳೆಯರು, ಪತ್ರಿಕೆಯಲ್ಲಿ ಕೆಲಸಮಾಡುವ ಡೆಸ್ಕ್ ಆಪರೇಟರುಗಳು, ಸಂಪಾದಕರು ಒಪ್ಪದಿರಬಹುದು. ಇಲ್ಲಿ ಇವೆರೆಲ್ಲ ಕೆಟ್ಟವರು ಅಂತ ಹೇಳಲು ಪ್ರಯತ್ನಿಸಿಲ್ಲ. ಯಾರ ಮನಸ್ಸನ್ನು ನೋಯಿಸುವ ಉದ್ದೇಶವೂ ನನಗಿಲ್ಲ.  ನಮ್ಮ  ಮುಂಜಾನೆ ಸತ್ಯದ ನೋವುಗಳನ್ನು ಹೊರಜಗತ್ತಿಗೆ ತೋರಿಸಲು ಪ್ರಯತ್ನಿಸಿದ್ದೇನೆ. ಮತ್ತೆ ಸಮೂಹ ಸನ್ನಿ ಎನ್ನುವ ಪದಕ್ಕೂ ಚಳುವಳಿಗೂ ಹೋಲಿಸಿ ಇಲ್ಲಿ ಬರೆದಿರುವುದು ತಪ್ಪು ಅಂತ ನನಗೂ ಗೊತ್ತು.  ಆದಕ್ಕಾಗಿ ಅದನ್ನು "ಆರೋಗ್ಯಕರ ಸಮೂಹ ಸನ್ನಿ" ಎಂದು ಹೇಳಿದ್ದೇನೆ. ನಾನು ಬರೆಯುವ ಸಮಯದಲ್ಲಿ ನನಗೆ ಹೊಳೆದ ಪದ ಇದೊಂದೆ. ಆ ಕಾರಣಕ್ಕೆ ಅದನ್ನೇ ಹೈಲೈಟ್ ಮಾಡಿ ಲೇಖನದ ದಿಕ್ಕು ತಪ್ಪಿಸಬಾರದಾಗಿ ವಿನಂತಿ. ಈ ಪದಕ್ಕಿಂತ ಉತ್ತಮ ಪದವಿದ್ದಲ್ಲಿ ತಿಳಿಸಿದರೆ ಸ್ವಾಗತಿಸುತ್ತೇನೆ ಮತ್ತು ನಾನು ಕಲಿತಂತಾಗುತ್ತದೆ.

     ಮತ್ತೆ ಅನಾಮಧೇಯ ನಾಮದಲ್ಲಿ ವಿತಂಡವಾದ, ಇತ್ಯಾದಿ comments ನೀಡಿದರೆ ಅದಕ್ಕೆ ಉತ್ತರಿಸದೆ  ಡಿಲಿಟ್ ಮಾಡಲಾಗುವುದು.  ಇಲ್ಲಿರುವ ವಿಚಾರಗಳಿಗಾಗಿ ನಿಮ್ಮ ಪ್ರತಿಕ್ರಿಯೆಗಳು ಆರೋಗ್ಯಕರವಾಗಿದ್ದು ಚರ್ಚೆಗೆ ಅವಕಾಶ ಮಾಡಿಕೊಟ್ಟರೆ ಎಲ್ಲರಿಂದ ಎಲ್ಲರೂ ಕಲಿಯಲು ಅವಕಾಶವಾಗುತ್ತದೆ.

ಈ ಲೇಖನ "ಸಂಪಾದಕೀಯ" ಬ್ಲಾಗಿನಲ್ಲೂ ಪ್ರಕಟವಾಗಿದೆ ಬೇಕಿದ್ದವರು ಅಲ್ಲಿಯೂ ಓದಬಹುದು.
http://sampadakeeya.blogspot.com/2011/10/blog-post.html#comments

ಚಿತ್ರಗಳು ಮತ್ತು ಲೇಖನ
ಶಿವು.ಕೆ

     

Friday, September 30, 2011

ಇದೆಲ್ಲಾ ಹೇಗಾಯ್ತು?


       ಜೂನ್ ಹದಿನೆಂಟನೇ ತಾರೀಖು ಯಾವ ಗಳಿಗೆಯಲ್ಲಿ ನನ್ನ ಕಿರುಚಿತ್ರದ ಚಿತ್ರೀಕರಣ ಪ್ರಾರಂಭಿಸಿದೆನೋ...ಅದರಿಂದ ಏನೇನ್ ಆಗೋಯ್ತು..ಗೊತ್ತಾ?  ಅನುಕೂಲ ಮತ್ತು ಅನಾನುಕೂಲಗಳೆರಡೂ ಆಗಿಬಿಟ್ಟಿವೆ

     ಮೊದಲಿಗೆ ಅದರಿಂದಾದ ಅನುಕೂಲಗಳನ್ನು ಹೇಳಿಬಿಡುತ್ತೇನೆ.

ಕಿರುಚಿತ್ರದ ವಿಚಾರ ಸೆಪ್ಟಂಬರ್ ನಾಲ್ಕರ ವೆಂಡರ್ಸ್ ಡೇ ದಿನ ಕನ್ನಡಪ್ರಭ ಮತ್ತು ಉದಯವಾಣಿಯಲ್ಲಿ ಪ್ರಕಟವಾಯ್ತಲ್ಲ, ಕನ್ನಡಪ್ರಭದಲ್ಲಿ ಪೋನ್ ನಂಬರ್ ಹಾಕಿಬಿಟ್ಟಿದ್ದರಿಂದ ಅವತ್ತು ನೂರಾರು ಫೋನ್ ಕರೆಗಳಲ್ಲಿ. ಅಭಿನಂದನೆಗಳ ಮಹಾಪೂರವೇ ಆಗಿಹೋಯ್ತು.  ಕರ್ನಾಟಕದಾದ್ಯಂತ ಇರುವ ದಿನಪತ್ರಿಕೆ ವೆಂಡರುಗಳು ಫೋನ್ ಮಾಡಿ ಅಭಿನಂದಿಸಿದರು.  ಮತ್ತೆ ಇದೇ ರೀತಿ ಕರ್ನಾಟಕದಾದ್ಯಂತ ಅದೆಷ್ಟೋ ಛಾಯಾಸಕ್ತರು ಈ ಸಿನಿಮಾ ಬಗ್ಗೆ ಫೋನ್ ಮಾಡಿ ವಿಚಾರಿಸಿದರು. ಕೆಲವು ನಾವು ಇಂಥ ಕಿರುಚಿತ್ರ ತೆಗೆಯಬೇಕು ನಮ್ಮಲ್ಲಿ ಕತೆ ಸಿದ್ದವಾಗಿದೆ, ನೀವು ತಯಾರು ಮಾಡಿದ ರೀತಿ ವಿವರಿಸಿ ಅಂತ ಕೇಳಿದರೆ ಇನ್ನೂ ಕೆಲವರು ನಾವು ಡಾಕ್ಯುಮೆಂಟರಿ ಮಾಡಬೇಕಿದೆ, ಬಂಡವಾಳ ನಾವೇ ಹಾಕುತ್ತೇವೆ, ನೀವು ಪೂರ್ತಿ ಜವಾಬ್ದಾರಿ ತೆಗೆದುಕೊಂಡು ನಮಗೆ ಹೊಸ ಕಿರುಚಿತ್ರ, ಡಾಕ್ಯುಮೆಂಟರಿ ಮಾಡಿಕೊಡಿ ಕೇಳಿದವರು ಅನೇಕರು. ಮತ್ತೆ ಬಳಸಿದ ಕ್ಯಾಮೆರ ಇತ್ಯಾದಿಗಳ ಬಗ್ಗೆ ತಿಳಿದುಕೊಂಡರು. ಬಹುಶಃ ನನಗೆ ಬಂದ ಮಾಹಿತಿ ಪ್ರಕಾರ ಸುಮಾರು ಇಪ್ಪತ್ತಕ್ಕೂ ಹೆಚ್ಚು Canon 550D ಕ್ಯಾಮೆರಗಳು ಮಾರಾಟವಾಗಿವೆ ಎಂದು ತಿಳಿದುಬಂತು.  ಇದನ್ನು ತಿಳಿದ ಬೆಂಗಳೂರಿನಲ್ಲಿರುವ ಬ್ರಿಗೇಡ್ ರಸ್ತೆಯಲ್ಲಿರುವ ಕ್ಯಾನನ್ ಕ್ಯಾಮೆರ ಕಛೇರಿಯವರು ಈ ಸಿನಿಮಾ ನೋಡುವ ಕುತೂಹಲವನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದೇನೆ. ಮತ್ತಷ್ಟು ಗೆಳೆಯರು ಈ ಕ್ಯಾಮೆರ ಬಗ್ಗೆ, ಬೆಲೆಯ ಬಗ್ಗೆ, ಮಾರುಕಟ್ಟೆಯಲ್ಲಿ ದೊರೆಯುವ ಬಗ್ಗೆ ನನಗೆ ಫೋನ್ ಕರೆ ಮಾಡುತ್ತಿದ್ದಾರೆ.

ಈ ಚಿತ್ರದ ಸ್ಫೂರ್ತಿಯಿಂದ ದಾವಣೆಗೆರೆಯಲ್ಲಿ ಒಂದು ತಂಡ ಕಿರುಚಿತ್ರದ ಚಿತ್ರೀಕರಣದಲ್ಲ್ಲಿ ಮಗ್ನವಾಗಿದೆ.  ಮುಂಡರಗಿ ಗೆಳೆಯ ಸಲೀಂ ಕಡೆಯ ಗೆಳೆಯರು ಕತೆಯನ್ನು ಸಿದ್ದಮಾಡಿಕೊಂಡು ಕಿರುಚಿತ್ರ ಮಾಡಲು ಸಿದ್ದರಾಗುತ್ತಿದ್ದಾರೆ. ಹೀಗೆ ಹತ್ತಾರು ಕಿರುಚಿತ್ರದ ತಯಾರಿಗಳು ನಡೆದಿವೆ.  ನವೆಂಬರ್ ಅಥವ ಡಿಸೆಂಬರ್‍ನಲ್ಲಿ ನಮ್ಮ ಮಣಿಕಾಂತ್ ಚಿತ್ರವನ್ನು ಪ್ರಾರಂಭಿಸುವ ಸಿದ್ಧತೆಯಲ್ಲಿದ್ದಾರೆ.

 ಹೊಸಪೇಟೆಯ ಆಕಾಶವಾಣಿ ರೇಡಿಯೋ ಕೇಂದ್ರವೂ ನನಗೆ ಫೋನ್ ಮಾಡಿ ಭಾನುವಾರ ಬೆಳಿಗ್ಗೆ ಬರುವ "ಉಪಹಾರ್" ಎನ್ನುವ ಕಾರ್ಯಕ್ರಮಕ್ಕಾಗಿ ಬೆಳಗಾಯ್ತು.... ಕಿರುಚಿತ್ರ ಮತ್ತು ನನ್ನ ವೃತ್ತಿಬದುಕಿನ ಬಗ್ಗೆ ೪೫ ನಿಮಿಷಗಳ ಕಾರ್ಯಕ್ರಮ ಮತ್ತು ಸಂದರ್ಶನವನ್ನು ದೂರವಾಣಿ ಮೂಲಕವೇ ನಡೆಸಿತ್ತು. ಅದು ಪ್ರಸಾರವಾದ ದಿನಾಂಕ ಸೆಪ್ಟಂಬರ್ ಹದಿನೆಂಟರ್ ಭಾನುವಾರ ಬೆಳಿಗ್ಗೆ ಒಂಬತ್ತು ಗಂಟೆ.

ಪತ್ರಿಕೆಯಲ್ಲಿ ಈ ವಿಚಾರವನ್ನು ಓದಿದ ಆಕಾಶವಾಣಿ ರೈನ್‍ಬೌ ಎಫ್ ಎಂ ರೇಡಿಯೋ ವಾಹಿನಿಯವರು ನನ್ನನ್ನು ಕರೆದು ಪ್ರಖ್ಯಾತ "ಕಾಕಂಬಿ" ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟರು. ಅದರಿಂದಾಗ ಪರಿಣಾಮ ಮಾತ್ರ ಅಪಾರವಾದದು.  ಅವತ್ತು ಬೆಳಿಗ್ಗೆ ೯ ಗಂಟೆಯಿಂದ ಅಭಿನಂದನೆ ಕರೆಗಳು ಪ್ರಾರಂಭವಾಗಿ ಪೂರ್ತಿ ದಿನ ಫೋನಿನಲ್ಲಿ ಮುಳುಗುವಂತಾಗಿತ್ತು.  ನಂತರದ ಎರಡು-ಮೂರು ದಿನಗಳು ಈ ವಿಚಾರವಾಗಿ ಕರೆಗಳು ಬರುತ್ತಲೇ ಇದ್ದವು. ಫೋನ್ ಮಾಡಿದ ಎಲ್ಲರೂ "ವೆಂಡರ್ ಕಣ್ಣು" ಪುಸ್ತಕವನ್ನು ಕೇಳುವವರೇ ಆಗಿದ್ದರು.  ಪುಸ್ತಕವನ್ನು ಕೊಡೋಣವೆಂದರೆ ನನ್ನ ಬಳಿ ಒಂದೂ ಪುಸ್ತಕವಿರಲಿಲ್ಲ. ಎಲ್ಲಾ ಖಾಲಿಯಾಗಿಬಿಟ್ಟಿತ್ತು. ನಮ್ಮ ಪ್ರಕಾಶಕರನ್ನು ಕೇಳಿದರೆ ಅವರ ಬಳಿಯೂ ಖಾಲಿ.  ಮತ್ತೆ ಯಾವ ಪುಸ್ತಕದ ಅಂಗಡಿಯಲ್ಲಿಯೂ ಇರಲಿಲ್ಲ. ಮೂರು ದಿನ ನನಗೆ ಬಂದ ಫೋನ್ ಕರೆಗಳನ್ನೆಲ್ಲಾ ಕಂಫ್ಯೂಟರಿನಲ್ಲಿ ಬರೆದು ಕೆಲ ಹಾಕಿದ್ದೆ. ಸುಮಾರು ಇನ್ನೂರು ವೆಂಡರ್ ಕಣ್ಣು ಪುಸ್ತಕಕ್ಕೆ ಬೇಡಿಕೆ ಬಂತಲ್ಲ! ಮರು ಯೋಚಿಸದೇ ನಾನೇ ಮೂರನೇ ಮರುಮುದ್ರಣಕ್ಕೆ ಸಿದ್ಧನಾಗಿಬಿಟ್ಟೆ. ಈ ಮೊದಲು ಮುದ್ರಣವಾದ ಪುಸ್ತಕಗಳಲ್ಲಿ ತುಂಬಾ ಅಕ್ಷರಗಳ ತಪ್ಪುಗಳಿದ್ದರಿಂದ ಮತ್ತೊಮ್ಮೆ ತಿದ್ದುಪಡಿಗಾಗಿ ಹಿರಿಯ ಆತ್ಮೀಯ ಗೆಳೆಯರಾದ ಸುನಾಥ್ ಸರ್ ಅವರನ್ನು ಕೇಳಿಕೊಂಡಾಗ ಅವರು ಪ್ರೀತಿಯಿಂದ ಮಾಡಿಕೊಟ್ಟರು. ಮೂರು ಹೊಸ ಲೇಖನಗಳು ಸೇರಿದಂತೆ ಈಗ ಪುಸ್ತಕದ ಗಾತ್ರ ದೊಡ್ಡದಾಯಿತು. ಇಷ್ಟೆಲ್ಲಾ ಬದಲಾವಣೆಯಾದ ಮೇಲೆ ಮುಖಪುಟವನ್ನು ಬದಲಾಯಿಸಬೇಕು ಅನ್ನಿಸಿತು. ಅದಕ್ಕಾಗಿ ಹೊಸ ಫೋಟೊ ತೆಗೆದು ಮುಖಪುಟವನ್ನು ಬದಲಾಯಿಸಿದೆ.  ಕಳೆದ ಒಂದು ವಾರದಿಂದ ಆಗುತ್ತಿರುವ ವಿದ್ಯುತ್ ಕಣ್ಣು ಮುಚ್ಚಾಲೆಯ ನಡುವೆಯೇ ಮತ್ತೊಬ್ಬ ಆತ್ಮೀಯ ಗೆಳೆಯರಾದ ಡಾ.ಸತ್ಯನಾರಾಯಣರವರು ಖುಷಿಯಿಂದ ಪುಟವಿನ್ಯಾಸವನ್ನು ಮಾಡಿಕೊಟ್ಟರು. ನಿನ್ನೆ ಮದ್ಯಾಹ್ನದ ಹೊತ್ತಿಗೆ ಪುಸ್ತಕದ ಕೆಲಸ ಮುಗಿಸಿ ಪ್ರಿಂಟಿಗೆ ಕೊಟ್ಟು,  ಸಂಜೆ ಈಟಿವಿಯವರ ರವಿ ಬೆಳಗೆರೆಯವರು  ನಡೆಸಿಕೊಡುವ "ಎಂದು ಮರೆಯದ ಹಾಡು" ಕಾರ್ಯಕ್ರಮದ ಫೋಟೊಗ್ರಫಿ ಅಸೈನ್ ಮೆಂಟಿಗೆ ಹೋಗಿದ್ದೆ.  ದಸರ ಮುಗಿಯುವ ಹೊತ್ತಿಗೆ ಹೊಸ ಮುಖಪುಟ ವಿನ್ಯಾಸದ "ವೆಂಡರ್ ಕಣ್ಣು" ಪುಸ್ತಕದ ಪ್ರತಿಗಳು ಮನೆಗೆ ತಲುಪಿರುತ್ತವೆ.
                     ವೆಂಡರ್ ಕಣ್ಣು ಮೂರನೆ ಮರುಮುದ್ರಣದ ಹೊಸ ಮುಖಪುಟ
     

ಮತ್ತೆ ಇಷ್ಟೆಲ್ಲಾ ಹೇಳಿಯೂ ನೀವು ಕಿರುಚಿತ್ರವನ್ನು ನೋಡಲು ಅದನ್ನು ಫೇಸ್‍ಬುಕ್, ಯು ಟ್ಯೂಬ್‍ನಲ್ಲಿ ನನಗೆ ಹಾಕಲಾಗಿಲ್ಲ. ಕಾರಣ ಅಂತರರಾಷ್ಟ್ರೀಯ ಕಿರುಚಿತ್ರ ಉತ್ಸವ ನಿಯಮಗಳ ಪ್ರಕಾರ ಅದು ಪ್ರದರ್ಶನವಾಗುವವರೆಗೆ ಎಲ್ಲಿಯೂ ಹಾಕುವಂತಿಲ್ಲವಾದ್ದರಿಂದ ಕೇವಲ ಒಂದು ನಿಮಿಷದ ಪೊಮೋ ಮಾತ್ರ ಹಾಕಿದ್ದೇನೆ.  ಇದನ್ನು ಬೆಂಗಳೂರು, ನ್ಯೂಯಾರ್ಕ್, ಪ್ಯಾರಿಸ್, ಫಿಲಿಡೆಲ್ಫಿಯ ಅಂತರರಾಷ್ಟ್ರೀಯ ಕಿರುಚಿತ್ರ ಉತ್ಸವಗಳಿಗೆ  ಬೆಳಗಾಯ್ತು ಕಿರುಚಿತ್ರವನ್ನು ಕಳಿಸಿದ್ದೇನೆ.

ಇದೆಲ್ಲದರ ನಡುವೆ ನನ್ನ ಫೋಟೊಗ್ರಫಿಯ ವೆಬ್‍ಸೈಟ್ ಸಿದ್ದವಾಗುತ್ತಿದೆ. ಅದನ್ನು ಬ್ಲಾಗ್ ಗೆಳೆಯರೊಬ್ಬರು ಪ್ರೀತಿಯಿಂದ ಮಾಡಿಕೊಡುತ್ತಿದ್ದಾರೆ. ಇದೆಲ್ಲಾ ಕಿರುಚಿತ್ರದ ಪರಿಣಾಮದಿಂದಾದ ಅನುಕೂಲಗಳು. ಆದ್ರೆ ಅನಾನುಕೂಲಗಳು ಆಗಿವೇ ಆದ್ರೆ ನೀವು ನಂಬಲೇಬೇಕು.  ಏನೇನು ಅನಾನುಕೂಲಗಳಾದವು ಅನ್ನುವುದನ್ನು ವಿವರಿಸಿಬಿಡುತ್ತೇನೆ.

 ಈ ಕಿರುಚಿತ್ರದ ತಯಾರಿಕೆಗೆ  ಸಿದ್ದನಾದೆನಲ್ಲ....ಒಂದು ಫೋಟೊ ತೆಗೆಯಬೇಕೆಂದರೆ ಅದೆಷ್ಟೋ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳುತ್ತೇವಲ್ವಾ,  ಅಂತದ್ದರಲ್ಲಿ ಈ ಕಿರುಚಿತ್ರದ ದೃಶ್ಯವಳಿಗಳನ್ನು ಚಿತ್ರಿಸಲು ಚಿತ್ರಕತೆ ಬೇಕಲ್ಲ, ನನ್ನ ಮನಸ್ಸಿನ ಕಲ್ಪನೆಯ ಚಿತ್ರಕತೆಯನ್ನು ಬರೆಯಲಾರಂಭಿಸಿದೆ.  ಸುಮಾರು ಮುನ್ನೂರಕ್ಕೂ ಹೆಚ್ಚು ದೃಶ್ಯಗಳನ್ನು ಬರೆಯಬೇಕಿತ್ತು. ನೂರಕ್ಕೂ ಹೆಚ್ಚು ಪುಟಗಳಿದ್ದ ಇದನ್ನು ಬರೆದು ಮುಗಿಸಲು ಹತ್ತು ದಿನಗಳು ಬೇಕಾಯ್ತು.  ಅಲ್ಲಿಗೆ ನನ್ನ ಎಲ್ಲಾ  ಫೋಟೊಗ್ರಫಿ, ಬ್ಲಾಗ್, ಬಜ್, ಇತ್ಯಾದಿಗಳು ಬಂದ್. ಮತ್ತೆ ಅದನ್ನು ಚಿತ್ರೀಕರಿಸಿದ ಹತ್ತು ದಿನಗಳು, ಅದರ ಸಂಕಲನ, ಸಂಗೀತ, ಇತ್ಯಾದಿಗಳಿಂದಾಗಿ ಎರಡು ತಿಂಗಳೇ ಕಳೆದುಬಿಟ್ಟವು.  ಹದಿನೆಂಟು ನಿಮಿಷದ ಕಿರುಚಿತ್ರಕ್ಕೆ ಎರಡು ತಿಂಗಳುಗಳು ಬೇಕಾ ಅನ್ನಿಸಬಹುದು ನಿಮಗೆ.  ಈ ವಿಚಾರದಲ್ಲಿ ನಾನು ಪಕ್ಕಾ ವೃತ್ತಿಪರನಲ್ಲ.  ನನ್ನ ವೃತ್ತಿಯೇ ಬೇರೆ ಇದು ಪ್ರವೃತ್ತಿ ಮಾತ್ರ ತಾನೆ. ಆ ಕಾರಣಕ್ಕೆ ನನ್ನ ವೃತ್ತಿಯ ನಡುವೆ ಬಿಡುವು ಮತ್ತು ನನಗೆ ಕೆಲಸ ಮಾಡಿಕೊಡುವವರ ಬಿಡುವು ನೋಡಿಕೊಂಡು ಅವರಿಂದ ಕೆಲಸ ತೆಗೆಸಬೇಕಿತ್ತಲ್ಲ ಅದಕ್ಕಾಗಿ ಚಿತ್ರ ಇಷ್ಟು ದಿನವಾಯ್ತು. ಪೂರ್ತಿ ಸಿದ್ದವಾಗುವವರೆಗೆ ನಾನು ಈ ಚಿತ್ರದ ಗುಂಗಿನಿಂದ ಹೊರಬರಲು ಸಾಧ್ಯವಾಗದ್ದರಿಂದ ನಮ್ಮ ಬ್ಲಾಗ್ ಬಜ್, ಬರೆಯುವುದಿರಲಿ, ಬೇರೆಯವರ ಬ್ಲಾಗುಗಳನ್ನು ಓದುವುದಕ್ಕೂ ಆಗಿರಲಿಲ್ಲ.  ಈಗ ಅದೆಲ್ಲ ಗುಂಗಿನಿಂದ ಹೊರಬಂದಿದ್ದೇನೆ[ಹಾಗೆ ಅಂದುಕೊಂಡಿದ್ದೇನೆ]. ಮಾಡುವ ಕೆಲಸ ಬೇಕಾದಷ್ಟಿದೆ ಅನ್ನಿಸುತ್ತಿದೆ. ಮೊದಲಿಗೆ ಬ್ಲಾಗ್ ಲೋಕದೊಳಗೆ ಇಳಿಯಬೇಕು. ಗೆಳೆಯರ ಲೇಖನಗಳನ್ನು ಓದಬೇಕು. ಅದರಿಂದ ಸ್ಪೂರ್ತಿ ಪಡೆದು ಮತ್ತೆ ಬರೆಯಲು ಪ್ರಾರಂಭಿಸಬೇಕು. ಕಿರುಚಿತ್ರಕ್ಕೆ ಮೊದಲು ಐದಾರು  ವಿಚಾರಗಳಿಗಾಗಿ ಲೇಖನಗಳನ್ನು ಪ್ರಾರಂಭಿಸಿದ್ದೆ. ಎಲ್ಲವೂ ಒಂದೊಂದು ಪ್ಯಾರ ಬರೆಸಿಕೊಂಡು ನಿಂತುಬಿಟ್ಟಿವೆ.  ಅವೆಲ್ಲಾ ಈಗ ಔಟ್ ಡೇಟೆಡ್ ಆಗಿಬಿಟ್ಟಿದೆಯಾ? ಈಗಿನ ಪ್ರಸ್ತುತಕ್ಕೆ ತಕ್ಕಂತೆ ಬರೆಯಬಹುದಾ ನೋಡಬೇಕು. ಎರಡು ಸಿನಿಮಾಗಳ ಅವಲೋಕನ ಅರ್ಧದಷ್ಟಾಗಿದೆ. ಮತ್ತೊಮ್ಮೆ ಆ ಸಿನಿಮಗಳನ್ನು ನೋಡಬೇಕು. ಅದೆಲ್ಲಕ್ಕಿಂತ ನನ್ನ ಎರಡು ಫೋಟೊಗ್ರಫಿ ಪುಸ್ತಕಗಳಿಗಾಗಿ ಬರೆಯುತ್ತಿದ್ದ ಬರವಣಿಗೆ ನಿಂತು ಹೋಗಿದೆ. ಇದು ಅದೆಲ್ಲಕ್ಕಿಂತ ಮುಖ್ಯವಾದ್ದರಿಂದ ಅದನ್ನು ಶುರುಮಾಡಬೇಕು......

ಮತ್ತೆ ಈ ಮೂರು ತಿಂಗಳಿನಲ್ಲಿ ನನಗಿಷ್ಟವಾದ ಫಿಕ್ಟೋರಿಯಲ್, ಮ್ಯಾಕ್ರೋ...ಇತ್ಯಾದಿ ಫೋಟೊಗ್ರಫಿಯನ್ನು ಮಾಡಲಾಗಿಲ್ಲ. ಆದ್ರೆ ಸಾಲು ಸಾಲು ಅಂತರರಾಷ್ಟ್ರೀಯ ಫೋಟೊಗ್ರಫಿ ಸ್ಪರ್ಧೆಗಳು ಬರುತ್ತಿವೆ. ಫೋಟೊಗ್ರಫಿ ಗೆಳೆಯರೆಲ್ಲಾ ಕರೆದರೂ ಹೋಗಲಾಗಿರಲಿಲ್ಲ.

ಈ ಕಿರುಚಿತ್ರ ನನ್ನ ಇಷ್ಟೆಲ್ಲ ಬರೆವಣಿಗೆಯನ್ನು, ಫೋಟೊಗ್ರಫಿಯನ್ನು ನುಂಗಿ ನೀರು ಕುಡಿದಿದೆಯಲ್ಲಾ!  ಇದೆಲ್ಲಾ ಅನಾನುಕೂಲಗಳೇ ತಾನೇ...

ಸದ್ಯ ಆ ಗುಂಗಿನಿಂದ ಹೊರಬಂದಿದ್ದೇನೆ. ಬರವಣಿಗೆಯನ್ನು ಎಲ್ಲಿಂದ ಪ್ರಾರಂಭಿಸಲಿ,  ಬ್ಲಾಗ್ ಲೇಖನವನ್ನು ಬರೆಯಲಾ?, ಪುಸ್ತಕಗಳಿಗಾಗಿ ಫೋಟೊಗ್ರಫಿ ಲೇಖನವನ್ನು ಪ್ರಾರಂಭಿಸಲಾ? ಸ್ಪೂರ್ತಿಯನ್ನು ಎಲ್ಲಿಂದ ಪಡೆಯಲಿ? ಅಥವ  ಹೊರಗೆ ಲೈಟಿಂಗ್ ತುಂಬಾ ಚೆನ್ನಾಗಿದೆ ಅಂತ ಒತ್ತಾಯ ಮಾಡುತ್ತಿರುವ ಫೋಟೊಗ್ರಫಿ ಗೆಳೆಯರೊಂದಿಗೆ ಓಡಿಹೋಗಲಾ? 

 ಯೋಚಿಸುತ್ತಿದ್ದೇನೆ........

ಹೊಸಪೇಟೆಯ ಆಕಾಶವಾಣಿ ಕೇಂದ್ರವೂ ನನ್ನ " ಬೆಳಗಾಯ್ತು....ಇನ್ನೂ ನ್ಯೂಸ್ ಪೇಪರ್ ಬಂದಿಲ್ವಾ" ಕಿರುಚಿತ್ರಕ್ಕಾಗಿ ದೂರವಾಣಿಯ ಮೂಲಕ ಸಂದರ್ಶಿಸಿದ "ಉಪಹಾರ್ ಕಾರ್ಯಕ್ರಮ. ಇದು ಪ್ರಸಾರವಾಗಿದ್ದು ಸೆಪ್ಟಂಬರ್ 18ರಂದು.
ಸಂದರ್ಶನವನ್ನು ಪೂರ್ತಿ ಕೇಳಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ..

http://soundcloud.com/shivuk/track


  
ಬೆಂಗಳೂರಿನ ಆಕಾಶವಾಣಿಯ FM Rainbow ರೇಡಿಯೋ ವಾಹಿನಿಯವರು ನಡೆಸಿಕೊಡುವ ಜನಪ್ರಿಯ "ಕಾಕಂಬಿ" ಕಾರ್ಯಕ್ರಮದಲ್ಲಿ ನನ್ನನ್ನು ಸಂದರ್ಶಿಸಿದರು. ಸೆಪ್ಟಂಬರ್ 14 ರ ಬುದವಾರ ಪ್ರಸಾರವಾದ ಈ ಕಾರ್ಯಕ್ರಮವನ್ನು ಫೂರ್ತಿ ಕೇಳಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ...

http://soundcloud.com/omshivaprakash/shivu-k-in-fm-radio

ಚಿತ್ರಗಳು ಮತ್ತು ಲೇಖನ
ಶಿವು.ಕೆ
      




Wednesday, September 7, 2011

ಈ ಬದುಕು ಯಾವ ದಿಕ್ಕಿನತ್ತ ಸಾಗುತ್ತಿದೆಯೋ ನನಗಂತೂ ಗೊತ್ತಿಲ್ಲ.


  
         ಮೊನ್ನೆ ಸೋಮವಾರ ಮಧ್ಯಾಹ್ನ ಸುಸ್ತಾಗಿ ವಿಶ್ರಾಂತಿಗಾಗಿ ಮಲಗಿದ್ದೆ. ನನ್ನ ಮೊಬೈಲ್ ರಿಂಗ್ ಆಗಿ ಎಚ್ಚರಿಸಿತು.

         "ನಾನು ಡಿ.ಪಿ.ಪರಮೇಶ್ವರ್ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅದ್ಯಕ್ಷರು. ನಿಮ್ಮ ಜೊತೆ ಮಾತಾಡಬಹುದಾ?

         "ಮಾತಾಡಿ" ಅಂದೆ. 

          "ನೀವು ನಮ್ಮ ಫೋಟೊ ಜರ್ನಲಿಸಂ ವಿದ್ಯಾರ್ಥಿಗಳಿಗೆ ಗೆಸ್ಟ್ ಲೆಕ್ಚರ್ ಆಗಿ ಬರಬೇಕು"

          "ಏನ್ ಮತ್ತೊಮ್ಮೆ ಹೇಳಿ, ನಾನು ನಿಮ್ಮ ಜರ್ನಲಿಸಂ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಾ?"

          "ಹೌದು ಸಾರ್,  ಇಲ್ಲ ಅನ್ನಬಾರದು.  ನೀವು ಒಪ್ಪಿಕೊಳ್ಳಲೇಬೇಕು."

           ಈ ಮಾತಿನಿಂದ ನನಗೆ ಸಂಪೂರ್ಣ ಎಚ್ಚರವಾಗಿತ್ತು.

           "ಸರ್ ತಪ್ಪು ತಿಳಿಯಬೇಡಿ, ನಾನು ಯಾವತ್ತು ಯಾರಿಗೂ ಪಾಠ ಮಾಡಿಲ್ಲ. ನನಗೆ ಅದು ಬರುವುದು ಇಲ್ಲ. ನನಗೆ ಅಂತ ಯೋಗ್ಯತೆಯಿಲ್ಲ"

           "ಸರ್ ನಿಮ್ಮ ಬಗ್ಗೆ ನಮಗೆಲ್ಲಾ ಗೊತ್ತಿದೆ ಸರ್, ರೇಡಿಯೋ, ಟಿವಿಯಲ್ಲಿ ಪೇಪರಿನಲ್ಲಿ ನಿಮ್ಮ ಲೇಖನಗಳನ್ನು ಓದಿದ್ದೇವೆ. ನಿಮ್ಮ ಪುಸ್ತಕ, ಫೋಟೊಗ್ರಫಿ, ಇತ್ತೀಚಿನ ಕಿರುಚಿತ್ರ ಇದೆಲ್ಲವನ್ನು ನೋಡಿದ ಮೇಲೆ ನೀವು ಸರಿಯಾದರು ಅಂತ ತೀರ್ಮಾನಿಸಿದ್ದೇವೆ."

            "ನೋಡಿ ಸರ್, ನನಗಿಂತ ಪಕ್ಕಾ ಅಕಾಡೆಮಿಕ್ ಆಗಿ ಈ ಫೋಟೊ ಜರ್ನಲಿಸಂ ಹೇಳಿಕೊಡಲು ಖ್ಯಾತ ಛಾಯಾಗ್ರಾಹಕರಾದ ಸಗ್ಗೆರೆ ರಾಮಸ್ವಾಮಿ, ಹಿಂದೂ ಪತ್ರಿಕೆಯ ಹಿರಿಯ ಛಾಯಾಗ್ರಾಹಕರಾದ ಗೋಪಿನಾಥನ್,...ಹೀಗೆ ಇನ್ನೂ ಅನೇಕರಿದ್ದಾರೆ. ಅವರಿಂದ ನಿಮ್ಮ ವಿದ್ಯಾರ್ಥಿಗಳಿಗೆ ಉಪಯೋಗವಾಗಬಹುದು, ನನ್ನಿಂದ ಏನು ಉಪಯೋಗವಿಲ್ಲ ಸರ್"

            "ಅವರೆಲ್ಲಾ ಅಕಾಡೆಮಿಕ್ ಆಗಿ ಒಂದು ಸುತ್ತು ಬಂದು ಹೋಗಿದ್ದಾರೆ. ಆದ್ರೆ ಪ್ರಾಕ್ಟಿಕಲ್ ಮತ್ತು ವಿಭಿನ್ನ ಶೈಲಿಯ ಫೋಟೊ ಜರ್ನಲಿಸಂಗೆ ನೀವೇ ಸೂಕ್ತ ನಾವು ಆಯ್ಕೆ ಮಾಡಿಕೊಂಡಿದ್ದೇವೆ"

            "ಆದ್ರೆ ಸರ್, ನಾನು ಈ ಮೊದಲು ನಿಮ್ಮನ್ನು ಬೇಟಿಯಾಗಿಲ್ಲ, ಮಾತಾಡಿಸಿಲ್ಲ, ಆದ್ರೂ ನನ್ನ ಬಗ್ಗೆ ಎಲ್ಲಾ ತಿಳಿದುಕೊಂಡಿದ್ದೀರಿ, ಫೋನ್ ನಂಬರ್ ಬೇರೆ ಸಿಕ್ಕಿದೆ ಇದೆಲ್ಲ ಹೇಗೆ?"

           "ನಿಮ್ಮ ಬಗ್ಗೆ ಇದೆಲ್ಲ ಹೇಳಿದ್ದು ನಾಗೇಶ್ ಹೆಗಡೆ. ಅವರೇ ನಿಮ್ಮನ್ನು ರೆಕಮಂಡ್ ಮಾಡಿದರು. ಫೋನ್ ನಂಬರ್ ಪೇಪರಿನಲ್ಲಿ ಬಂದಿತ್ತಲ್ಲ.."

           ಇನ್ನು ತಪ್ಪಿಸಿಕೊಳ್ಳುವಂತಿಲ್ಲ. ಒಪ್ಪಿಕೊಳ್ಳಲೇಬೇಕಾಯಿತು.

           "ಬುಧವಾರ ಮಧ್ಯಾಹ್ನ ಮೂರುಗಂಟೆಯಿಂದ ನಾಲ್ಕು ಗಂಟೆಯವರೆಗೆ ಮೊದಲ ಕ್ಲಾಸ್ ಇರುತ್ತೆ. ನಮ್ಮ ಹುಡುಗರಿಗೆಲ್ಲಾ ಹೇಳಿಬಿಡುತ್ತೇನೆ ಸರ್" ಅಂದರು.

          "ಆಯ್ತು ಸರ್" ಒಪ್ಪಿಕೊಂಡೆ.

            ಮರುಕ್ಷಣವೇ ನಾಗೇಶ್ ಹೆಗಡೆಯವರಿಗೆ ಫೋನ್ ಮಾಡಿ,  "ಸರ್ ನನ್ನ ಸಬ್ಜೆಕ್ಟ್ ಫೋಟೊ ಜರ್ನಲಿಸಂ ಅಲ್ಲ. ಅದ್ರೆ ನೀವು ಈ ವಿಚಾರದಲ್ಲಿ ನನಗೆ ಲೆಕ್ಚರ್ ಕೊಡಲಿಕ್ಕೆ ರೆಕಮೆಂಡ್ ಮಾಡಿಬಿಟ್ಟಿದ್ದೀರಲ್ಲ "

           "ಯಾರು ಹೇಳಿದ್ದು ನೀವು ಫೋಟೊ ಜರ್ನಲಿಸ್ಟ್ ಅಲ್ಲ ಅಂತ?  ಪತ್ರಿಕೆಗಳಲ್ಲಿ ನಿಮ್ಮ ಲೇಖನಗಳು ಮತ್ತು ಬರಹಗಳು ಪ್ರಕಟವಾಗಿರುವಷ್ಟು ಪತ್ರಿಕೋದ್ಯಮದಲ್ಲಿ ಕೆಲಸಮಾಡುವವರದೂ ಕೂಡ ಆಗಿಲ್ಲವಲ್ಲ, ಮತ್ತೆ ನಿಮ್ಮ ಅಷ್ಟೂ ಲೇಖನಗಳನ್ನು ಸುಮ್ಮ ಸುಮ್ಮನೇ ಹಾಕಲಿಕ್ಕೆ ಸಂಪಾದಕರುಗಳಿಗೆ ಬುದ್ಧಿಯಿಲ್ಲವೇ...ಅದರಲ್ಲೇನೋ ಸ್ವಾರಸ್ಯವಿರುವುದರಿಂದಲೇ ಪ್ರಕಟ ಮಾಡಿದ್ದಾರೆ.  ಹೊಸಬರಿಗೆ ಈಗ ಬೇಕಿರುವುದು ಅಂತದ್ದೆ.  ನೀವು ಏನು ಚಿಂತಿಸಬೇಡಿ. ದೈರ್ಯವಾಗಿ ಹೋಗಿಬನ್ನಿ" ಅಂತ ಕೆಲವು ಟಿಪ್ಸ್ ಕೊಟ್ಟರು. 

            ಅದನ್ನೆಲ್ಲಾ ನೋಟ್ ಮಾಡಿಕೊಂಡು, ನಮ್ಮ ಹಿರಿಯ ಛಾಯಾಗ್ರಾಹಕರಾದ ಸಿ.ಅರ್.ಸತ್ಯನಾರಯಣರವರಲ್ಲಿ ಈ ವಿಚಾರ ತಿಳಿಸಿ ಅವರಿಂದಲ್ಲೂ ನಮ್ಮ ಫೋಟೊಗ್ರಫಿ, ಮತ್ತು ಉಪನ್ಯಾಸದ ಬಗ್ಗೆ ಟಿಪ್ಸ್ ಪಡೆದುಕೊಂಡೆ. 

          ಬುಧವಾರ ಬಂದೇ ಬಿಡ್ತಲ್ಲ.  ನಾಗೇಶ್ ಹೆಗಡೆ ಮತ್ತು ಸತ್ಯನಾರಯಣರವರು ಕೊಟ್ಟ ಟಿಪ್ಸುಗಳ ಸಹಾಯದಿಂದ ಉಪನ್ಯಾಸಕ್ಕೆ ಬೇಕಾದ ಎಲ್ಲಾ ವಿಚಾರವನ್ನು ಬರೆದುಕೊಳ್ಳುವ ಹೊತ್ತಿಗೆ ಮಧ್ಯಾಹ್ನ ಒಂದು ಗಂಟೆ.  ಊಟ ಮುಗಿಸಿ ಕೆ.ಅರ್ ಸರ್ಕಲ್ಲಿನ ಬಳಿ ಇರುವ ಸರ್ಕಾರಿ ಕಲಾ ಕಾಲೇಜು ಸೇರುವ ಹೊತ್ತಿಗೆ ಮೂರುಗಂಟೆ.
                        


          ನನ್ನ ಪರಿಚಯ ಮತ್ತು ವಿದ್ಯಾರ್ಥಿಗಳ ಪರಿಚಯವಾಗಿ ನನ್ನ ಲೆಕ್ಚರ್ ಪ್ರಾರಂಭವಾಗಿ ಮುಗಿಯುವ ಹೊತ್ತಿಗೆ ನಾಲ್ಕುಮುಕ್ಕಾಲು ಆಗಿಹೋಗಿತ್ತು.  ಒಂದು ಗಂಟೆಯ ಉಪನ್ಯಾಸ ಮತ್ತು ವಿಚಾರವಿನಿಮಯ ಒಂದುಮುಕ್ಕಾಲು ಗಂಟೆಯವರೆಗೆ ಆಗಿಹೋಗಿತ್ತು.  ನಾನೇನು ಹೇಳಿಕೊಟ್ಟೆನೋ, ಆದ್ರೆ ಅಷ್ಟೂ ವಿದ್ಯಾರ್ಥಿಗಳು ಪೂರ್ತಿ ಖುಷಿಯಾಗಿದ್ದರು. ಮತ್ತೆರಡು ಕ್ಲಾಸ್ ನಿಮ್ಮದು ಬೇಕೇ ಬೇಕು ಅಂತೇಳಿ ಗೌರವ ಸಂಭಾವನೆ ಅಂತ ಕೈಗೊಂದು ಕವರ್ ಕೊಟ್ಟರು.   ಆಯ್ತು ಮಾಡೋಣ ಅಂತ ಹೇಳಿ ಅಲ್ಲಿಂದ ಮನೆಗೆ ಬಂದಾಗ ಆರುಗಂಟೆ. ಜೇಬಿನಲ್ಲಿದ ಕವರ್ ತೆಗೆದು ಅದರಲ್ಲಿದ್ದ ನೋಟುಗಳನ್ನು ನೋಡಿದಾಗ ಒಂದುವರೆ ಗಂಟೆಗೆ ಇಷ್ಟೊಂದು ಸಂಭಾವನೆಯೇ ಅಂತ ಆಶ್ಚರ್ಯವಾಗಿತ್ತು.

ಈ ಬದುಕು ಯಾವ ದಿಕ್ಕಿನತ್ತ ಸಾಗುತ್ತಿದೆಯೋ ನನಗಂತೂ ಗೊತ್ತಿಲ್ಲ.

ಶಿವು.ಕೆ
    

Sunday, August 28, 2011

ಬೆಳಗಾಯ್ತು....


        
          ಇದೇನು ನನ್ನ ಮೆಚ್ಚಿನ Titanic ..ಅಥವ Tom hanks Cast away, ಅಥವ The Terminal  ಸಿನಿಮಾನ?
  
            ಆದ್ರೂ ನನಗೆ ಯಾಕಿಷ್ಟು ಕಾಡುತ್ತಿದೆ ಅಂತ ಅನೇಕ ಭಾರಿ ಪ್ರಶ್ನಿಸಿಕೊಂಡರೂ ಉತ್ತರ ಸಿಗುತ್ತಿಲ್ಲ.  ಈ ವಿಚಾರ ತಲೆಗೆ ಹೊಕ್ಕಮೇಲಂತೂ ಒಂದೆರಡು ದಿನ ರಾತ್ರಿ ಸರಿಯಾಗಿ ನಿದ್ರೆಯೇ ಬರಲಿಲ್ಲ. ನಿದ್ರೆಯ ಕನಸಲ್ಲೂ ಅದೇ ಮರುಕ್ಷಣ ಎಚ್ಚರಗೊಂಡ ಮನಸಲ್ಲೂ ಅದೇ.  ಮರುದಿನ ದಿನಾಂಕ ಜೂನ್ ೧  ನನ್ನ ದಿನಪತ್ರಿಕೆಯ ಹಣ ವಸೂಲಿ ಪ್ರಾರಂಭಿಸುವ ದಿನ. ಜೊತೆಗೊಂದಷ್ಟು ಬಿಳಿ ಕಾಗದ ಹಾಳೆಗಳನ್ನು ತೆಗೆದು ಜೇಬಿಗಿಟ್ಟು ನನ್ನ ಹಣ ವಸೂಲಿ ಕೆಲಸ ಪ್ರಾರಂಭಿಸಿದ್ದೆ.   ಒಂದೆರಡು ಮನೆಗಳ ವಸೂಲಿ ಆಗುತ್ತಿದ್ದಂತೆ ಅದ್ಯಾಕೋ ಆ ನೈಜ ಕತೆ ನನ್ನನ್ನೂ ತುಂಬಾ ಕಾಡತೊಡಗಿತ್ತು.  ವಿಧಿಯಿಲ್ಲದೇ ಜೇಬಿನಿಂದ ಬಿಳಿ ಪೇಪರನ್ನು ಹೊರತೆಗೆದು ಒಂದೆರಡು ಸಾಲುಗಳನ್ನು ಬರೆದೆ.  ಅಲ್ಲಿಂದ ಮತ್ತೊಂದು ಮನೆಗೆ.  ದಿನಪತ್ರಿಕೆ ಗ್ರಾಹಕರು ನನ್ನಿಂದ ಬಿಲ್ ಪಡೆದು ಹಣ ತರಲು ಒಳಗೆ ಹೋಗಿ ಬರುವ  ಐದು-ಹತ್ತು ನಿಮಿಷಗಳಲ್ಲಿ ಮತ್ತಷ್ಟು ಸಾಲುಗಳನ್ನು ಗೀಚಿಕೊಳ್ಳುತ್ತಿದ್ದೆ.  ಹೀಗೆ ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ನನ್ನ ವಸೂಲಿ ಕೆಲಸ ಮುಗಿಯುವ ಹೊತ್ತಿಗೆ ನಾನು ತಂದಿದ್ದ ಬಿಳಿಹಾಳೆಗಳು ತುಂಬಿಹೋಗಿತ್ತು. 

     ತುಂಬಾ ಕಾಡುತ್ತಿದ್ದ ನನ್ನ ಹೊಸ ಕಿರುಚಿತ್ರದ ಕತೆಯ ಚಿತ್ರಕತೆಯನ್ನು ಬರೆದಿದ್ದು ಹೀಗೆ.  ನಂತರ ಅದನ್ನು ಸಂಪೂರ್ಣವಾಗಿ ಪ್ರತಿಯೊಂದು ದೃಶ್ಯವನ್ನು ಬರೆದುಕೊಂಡು ಪಕ್ಕಾ ಮಾಡಿಕೊಂಡು ಎಲ್ಲರನ್ನು ಹೊಂದಿಸಿಕೊಂಡು ನಾನು ಶೂಟಿಂಗ್ ಪ್ರಾರಂಭಿಸಿದ್ದು ಹದಿನೈದು ದಿನಗಳ ನಂತರ. 

      ಎಲ್ಲಾ ಸರಿ ಈ ಕಿರುಚಿತ್ರ ತೆಗೆಯುವ ಹುಚ್ಚು ನನಗೆ ಯಾವಾಗ ತಗುಲಿಕೊಂಡಿತ್ತು ಎನ್ನುವ ವಿಚಾರವನ್ನು ಸ್ವಲ್ಪ ವಿವರಿಸಿಬಿಡುತ್ತೇನೆ.  ಅದು ಏಪ್ರಿಲ್ ತಿಂಗಳ ೨೬ನೇ ತಾರೀಖು.  ಸಂವಾದ.ಕಾಂನ ರವಿ ಅರೇಹಳ್ಳಿ ನನಗೆ ಅನಿರೀಕ್ಷಿತವಾಗಿ ಫೋನ್ ಮಾಡಿ  "ಶಿವು ನಾವೊಂದು ಕಿರುಚಿತ್ರವನ್ನು ಚಿತ್ರೀಕರಿಸುತ್ತಿದ್ದೇವೆ.  ನೀವು ಬಂದರೇ ಚೆನ್ನಾಗಿರುತ್ತೆ. ಅಂದರು.  "ನಾನು ಅಲ್ಲಿ ಬಂದು ಏನು ಮಾಡಲಿ, ಫೋಟೊ ತೆಗೆಯಲು ಬರುತ್ತದೆ ಹೊರತು, ಸಿನಿಮಾಟೋಗ್ರಫಿಯಾಗಲಿ ಅಥವ ಇನ್ನಿತರ ಚಿತ್ರೀಕರಣದ ಪಾತ್ರವಾಗಲಿ ನನಗೆ ಗೊತ್ತಿಲ್ಲ" ಎಂದೆ.   " ಅಯ್ಯೋ ಅದಕ್ಕ್ಯಾಕೆ  ಚಿಂತಿಸುತ್ತೀರಿ, ನಮಗೇನು ಗೊತ್ತಿದೆಯಾ?  ನಾವು ಎಲ್ಲಾ ಹೊಸಬರೇ. ನಿರ್ಧೇಶಕ, ಕ್ಯಾಮೆರ ಮನ್, ಪಾತ್ರಧಾರಿಗಳು, ಸಹಾಯಕ ನಿರ್ಧೇಶಕ, ಇತ್ಯಾದಿ ಯಾರು ಕೂಡ ವೃತ್ತಿಪರರಲ್ಲ. ಯಾರಿಗೂ ಒಂಚೂರು ಅನುಭವವಿಲ್ಲ.  ಅದರೂ ಏನಾದರೂ ಮಾಡಬೇಕೆನ್ನುವ ಹಂಬಲ ಎಲ್ಲರಲ್ಲೂ ಇರುವುದರಿಂದ ನೀವು ನಮ್ಮ ತಂಡವನ್ನು ಸೇರಿಕೊಂಡರೆ ಚೆನ್ನಾಗಿರುತ್ತೆ"    ಅಂದರು.  ಹೀಗೆ ಯಾರಾದರೂ ನನ್ನನ್ನು ಕರೆದುಬಿಟ್ಟರೆ ಸಾಕು ಏನೋ ಹೊಸತು ಸಿಗುತ್ತದೆ ಎನ್ನುವ ಆಸೆಯಲ್ಲಿ ಇರುವ ಕೆಲಸವನ್ನು ಬಿಟ್ಟು ಹೋಗಿಬಿಡುವ ದುರ್ಬಲ ಗುಣ ನನ್ನದು.  ಹೋಗಿ ಅವರೊಂದಿಗೆ ಸೇರಿಕೊಂಡೆ.

       ಆ ಕಿರುಚಿತ್ರದ ಅವಧಿ ಎಂಟು ನಿಮಿಷ.  ಚಿತ್ರೀಕರಣಕ್ಕಾಗಿ ನಿಗದಿಪಡಿಸಿದ್ದು ಎರಡು ದಿನಗಳು.  ನಾನು ಅಲ್ಲಿಗೆ ಹೋಗುತ್ತಿದ್ದಂತೆ ನಾನೇನೋ ದೊಡ್ಡ ಸಿನಿಮಾಟೋಗ್ರಾಫರ್ ಇರಬಹುದು ಎನ್ನುವ ಭಾವನೆಯಲ್ಲಿ ತಕ್ಷಣ ನನ್ನ ಕೈಗೆ ಕ್ಯಾಮೆರವನ್ನೇ  ಕೊಟ್ಟುಬಿಟ್ಟರು.  ತಮಾಷೆಯೆಂದರೆ ನನಗೆ ಫೋಟೊ ತೆಗೆಯಲು ಮಾತ್ರ ಬರುತ್ತೆ ಅಂತ ಈ ಮೊದಲೇ ಹೇಳಿದ್ದೆನಲ್ಲ, ವಿಡಿಯೋ ರೆಕಾರ್ಡಿಂಗ್ ಮಾಡುವುದು ಹೇಗೆ ಎಂದು ತಿಳಿಯಲು ಕ್ಯಾಮರ ಹಿಂಭಾಗದಲ್ಲಿರುವ ಹತ್ತಾರು ಗುಂಡಿಗಳನ್ನು ಹುಡುಕತೊಡಗಿದೆ. ಸಿಗಲಿಲ್ಲ. ಮತ್ತೆ ನನಗೆ ಕಲಿಯುವ ವಿಚಾರದಲ್ಲಿ ಯಾವುದೇ ಸಂಕೋಚವಿರಲಿಲ್ಲವಾದ್ದರಿಂದ ಈ ಮೊದಲು ಸೂಟಿಂಗ್ ಮಾಡುತ್ತಿದ್ದ ಮುರಳಿ ಎನ್ನುವವರ ಬಳಿ ವಿಡಿಯೋ ರೆಕಾರ್ಡಿಂಗ್ ಬಟನ್, ಆನ್-ಅಪ್ ಫೋಕಸ್,....ಇತ್ಯಾದಿಗಳನ್ನು ಕೇಳಿ ತಿಳಿದುಕೊಂಡು ಹೇಗೆ ಅಪರೇಟ್ ಮಾಡಬೇಕೆಂದು ಅವರಿಂದ ಹೇಳಿಸಿಕೊಂಡೆ.  ಈ ವಿಚಾರದಲ್ಲಿ ನಾನು ಆ ಮಟ್ಟದ ಹೊಸಬ ಮತ್ತು ದಡ್ಡನಾದರೂ ಅವರು ನನ್ನ ಕಡೆಯಿಂದಲೇ ಯಾಕೆ ಚಿತ್ರೀಕರಿಸಬೇಕೆಂದು ಕರೆದರೋ ನನಗೆ ಗೊತ್ತಿಲ್ಲ.  ಮುರಳಿ ಮತ್ತು ನಾನು ಇಬ್ಬರೂ ಕ್ಯಾಮೆರ ಮ್ಯಾನುಗಳು.   ಒಂದೆರಡು ಶಾಟ್ ಮುಗಿದ ನಂತರ  ಅದ್ಯಾಕೋ ನನಗೆ ಹೊಸ ಹೊಸ ಕ್ಯಾಮೆರ ಯಾಂಗಲ್ಲುಗಳು ಹೊಳೆಯತೊಡಗಿದವು.  ಅವುಗಳನ್ನು ಅವರಿಗೆ ವಿವರಿಸಿ ಹೀಗೆ ಚಿತ್ರೀಕರಿಸಿದರೆ ಚೆನ್ನಾಗಿರುತ್ತದೆ  ಬೇಕಾದರೆ ಪ್ರಯತ್ನಿಸಿ ನೋಡಿ ಎಂದೆನಲ್ಲ ಅಲ್ಲಿಗೆ ಮುಗೀತು.  ಹತ್ತು ನಿಮಿಷಕ್ಕೊಂದು ಶಾಟ್ ಅಂತ ಚಿತ್ರೀಕರಿಸುತ್ತಿದ್ದ ಅವರು  ನನ್ನ ಅನೇಕ ಪ್ರೇಮಿಂಗ್, ಯಾಂಗಲ್ಸುಗಳಿಂದಾಗಿ  ಅರ್ಧಗಂಟೆಗೆ ಒಂದು ಶಾಟ್ ಕೂಡ ತೆಗೆಯಲು ಸಾಧ್ಯವಾಗದಂತಾಯಿತು.  ಅವರ ಶೂಟಿಂಗ್ ಶೆಡ್ಯೂಲ್ ಎರಡು ದಿನವಿದ್ದಿದ್ದು ನನ್ನ ಪ್ರವೇಶದಿಂದಾಗಿ ಅದು ಆರು ದಿನಕ್ಕೆ ಎಳೆದುಕೊಂಡು ಹೋಗಿಬಿಟ್ಟಿತ್ತು.  ಹಾಗೂ ಹೀಗೂ ಶೂಟಿಂಗ್ ಮುಗಿಸಿ ಚಿತ್ರೀಕರಣದ ನಂತರದ ಕೆಲಸಗಳನ್ನು ಪ್ರಾರಂಭಿಸುವ ಹಂತದಲ್ಲಿ ಎಲ್ಲರೂ ಅವರವರ ವೈಯಕ್ತಿಕ ಕೆಲಸಗಳಲ್ಲಿ ಬ್ಯುಸಿಯಾಗಿಬಿಟ್ಟರು.   ಈ ಕಿರುಚಿತ್ರದಲ್ಲಿ ಕ್ಯಾಮೆರ ಮೆನ್ ಆಗಿ ಚಿತ್ರೀಕರಿಸುವಲ್ಲಿನ ಅನೇಕ ಅನುಭವಗಳು, ಪ್ರೇಮಿಂಗು, ಸಹಜ ಬೆಳಕನ್ನು ಚಿತ್ರೀಕರಣಕ್ಕೆ ಬಳಸಿಕೊಂಡ ರೀತಿ,  ನಡುವೆ ಬಂದ ಮಳೆಯನ್ನು ಚಿತ್ರೀಕರಣದಲ್ಲಿ ಪಾತ್ರವಾಗಿಸಿದ ರೀತಿ, ಇತ್ಯಾದಿಗಳೆಲ್ಲಾ ನನ್ನ ಮರೆಯಲಾಗದ ನೆನಪುಗಳಾಗಿ ಆ ಕಿರುಚಿತ್ರ ಬೇಗನೇ ಸಿದ್ದವಾಗಿಬಿಟ್ಟರೆ ಹೊರಪ್ರಪಂಚಕ್ಕೆ ತೋರಿಸುವ ಆಸೆ ತುಂಬಾ ಕಾಡತೊಡಗಿತ್ತು.  ಆ ಸಿನಿಮಾದ ನಿರ್ದೇಶಕ ಮತ್ತು ಸಹಾಯಕ ನಿರ್ದೇಶಕನಿಗೆ ಮದುವೆ ಗೊತ್ತಾಗಿ ಅವರು ಬ್ಯುಸಿಯಾಗಿಬಿಟ್ಟರು. ಉಳಿದವರು ಕೂಡ ಅವರವರ ವೈಯಕ್ತಿಕ ಕೆಲಸದ ಒತ್ತಡಗಳಿಂದಾಗಿ ಕೊನೆಗೆ ಆ ಸಿನಿಮಾ ಸಿದ್ದವಾಗಲೇ ಇಲ್ಲ. 

      ಆದರೂ ನಾನು ಚಿತ್ರೀಕರಿಸಿದ ಕೆಲವು ಶಾಟುಗಳು, ಪ್ರೇಮುಗಳು, ತಾಂತ್ರಿಕತೆಯಲ್ಲಿ ವಿಭಿನ್ನವೆನಿಸುವ ಫೋಕಸಿಂಗ್ ವಿಚಾರಗಳು ಇದ್ದ ಕೆಲವು ದೃಶ್ಯಗಳನ್ನು ನನ್ನ ಮನೆಯಲ್ಲಿ ಮತ್ತೆ ಮತ್ತೆ ನೋಡುವಾಗ  ನನಗೆ ಗೊತ್ತಿಲ್ಲದಂತೆ ಅದೊಂತರ ಆತ್ಮವಿಶ್ವಾಸ ನನ್ನಲ್ಲಿ ಮೂಡತೊಡಗಿತ್ತು.  ಎಲ್ಲರೂ ಒಟ್ಟುಗೂಡಿ ಮಾಡಿದ ಸಿನಿಮಾ ಸಿದ್ದವಾಗದಿರುವುದು ನನ್ನದೇ ಕೂಸು ಗರ್ಭದೊಳಗೆ ಇದ್ದು ಹೊರಬರಲಾಗದ ಪರಿಸ್ಥಿತಿ ಎನ್ನುವಂತೆ ನನ್ನನ್ನು ಕಾಡತೊಡಗಿತ್ತು.  ಅದೇ ಗುಂಗಿನಲ್ಲಿದ್ದ ನನಗೆ ಕೆಲವೇ ದಿನಗಳ ಹಿಂದೆ ನಡೆದ ಒಂದು ನೈಜ ಘಟನೆಯನ್ನು  ಆದರಿಸಿದ ಕಿರುಚಿತ್ರವನ್ನು ನಾನೇ ಏಕೆ ಮಾಡಬಾರದು ಅನ್ನಿಸತೊಡಗಿತ್ತು.  ಅಷ್ಟು ಸಾಕಾಯಿತು. ಒಂದಾದ ಮೇಲೆ ಒಂದು ದೃಶ್ಯಗಳು ನನ್ನ ಮನಸ್ಸಿನ ಪಟಲದ ಮೂಡತೊಡಗಿದವು. ಪ್ರತಿಯೊಂದು ದೃಶ್ಯಗಳು ಕೊಂಡಿಗಳಂತೆ ಜೋಡಿಸಿಕೊಳ್ಳುತ್ತಾ ಚಲಿಸತೊಡಗಿದವು.  ಇಷ್ಟೇಲ್ಲಾ ಆದ ಮೇಲೆ ನನಗೆ ನಿದ್ರೆ ಬರದಂತಾಗಿ ಮರುದಿನ ದಿನಪತ್ರಿಕೆ ವಸೂಲಿ ಸಮಯದಲ್ಲಿ ಮನೆ ಮನೆಗಳ ಬಾಗಿಲುಗಳ ಮುಂದೆ, ಅಪಾರ್ಟುಮೆಂಟಿನ ಮೆಟ್ಟಿಲುಗಳ ನಡುವೆ, ಲಿಫ್ಟುಗಳಲ್ಲಿ ಚಲಿಸುತ್ತಾ, ಅಲ್ಲಲ್ಲಿ ರಸ್ತೆ ಪಕ್ಕ ಸ್ಕೂಟಿಯನ್ನು ನಿಲ್ಲಿಸಿ ಕೈಗಾಡಿ ಅಂಗಡಿಯ ಟೀ ಕುಡಿಯುತ್ತಾ, ನನ್ನ ಕಿರುಚಿತ್ರದ ಚಿಕ್ಕ ದೃಶ್ಯಗಳನ್ನು ಬರೆದಿದ್ದೆ.

    ಮೊದಲೇ ಕ್ಲೈಮ್ಯಾಕ್ಸ್ ದೃಶ್ಯಗಳು ಸಿದ್ದವಾಗಿತ್ತಲ್ಲ,  ಉಳಿದ ದೃಶ್ಯಗಳಿಗಾಗಿ ಜೇಬಿನಲ್ಲಿಟ್ಟ ಪೇಪರುಗಳಲ್ಲಿ ಆತುರಾತುರವಾಗಿ ಗೀಚಿಕೊಂಡಿದ್ದ ದೃಶ್ಯಗಳನ್ನು ಜೋಡಿಸಿಕೊಳ್ಳುತ್ತಾ ಒಂದು ಪಕ್ಕಾ ಚಿತ್ರಕತೆಯನ್ನು ಸಿದ್ಧ ಮಾಡಿದೆ. ಈ ಕಿರುಚಿತ್ರದಲ್ಲಿ ಒಟ್ಟು ಹತ್ತು ದೃಶ್ಯಗಳು ಅಂತ ಯೋಜನೆ ಹಾಕಿಕೊಂಡು ಪ್ರತಿಯೊಂದು ದೃಶ್ಯದಲ್ಲೂ ಕ್ಯಾಮೆರ ಪ್ರೇಮಿಂಗ್, ಒಂದು ದೃಶ್ಯದ ಹತ್ತಾರು ಯಾಂಗಲ್ಲುಗಳು, ಟೇಕಿಂಗ್ಸ್,  ಯಾವ ದೃಶ್ಯದಲ್ಲಿ ಮೂವಿಂಗ್ ಶಾಟ್,  ಯಾವ ದೃಶ್ಯದಲ್ಲಿ ಕ್ಯಾಮೆರ ತಾಂತ್ರಿಕತೆ ಮೇಲುಗೈ ಸಾಧಿಸಬೇಕು,  ಮತ್ಯಾವ ದೃಶ್ಯದಲ್ಲಿ ಮಾತು, ಭಾವನೆಗಳು ಮುಂದಿರಬೇಕು ಇತ್ಯಾದಿಗಳನ್ನು ಪಕ್ಕಾ ಆಗಿ ಪೇಪರ್ ವರ್ಕ್ ಮಾಡಿಕೊಂಡೆ.  ಒಂದು ವಾರ್‍ಅ ಪೂರ್ತಿ ಈ ಪೇಪರ್ ವರ್ಕ್ ಮುಗಿಸಿದಾಗ ಅದರಲ್ಲಿ ವಿಧವಿಧವಾದ ದಿಕ್ಕುಗಳ ಪ್ರೇಮಿಂಗುಗಳು, ಕ್ಯಾಮೆರ ಯಾಂಗಲ್ಲುಗಳು, ತಾಂತ್ರಿಕ ವಿವರಗಳು, ದೃಶ್ಯದ ಹಿನ್ನೆಲೆ ಮುನ್ನಲೆಗಳು, ಪಾತ್ರಧಾರಿಗಳು, ಸಂಭಾಷಣೆ, ಚಿತ್ರೀಕರಣದ ಸಮಯ, ಬೆಳಕು...........ಹೀಗೆ ಎಲ್ಲಾ ತಾಂತ್ರಿಕ ವಿವರಗಳನ್ನು ಹೊಂದಿದ ಮುನ್ನೂರು ಪುಟ್ಟ ಪುಟ್ಟ ದೃಶ್ಯಗಳು ಸಿದ್ದವಾಗಿಬಿಟ್ಟವು.

        ಓಹ್!  ಸ್ವಲ್ಪ ತಡೆಯಿರಿ, ಟಿವಿ ೯ ಛಾನಲ್ಲಿನವರು ಮನೆಗೆ ಬಂದೇ ಬಿಟ್ಟರು.  ಪೂರ್ತಿ ಸಿದ್ದವಾದ ಈ ಕಿರುಚಿತ್ರವನ್ನು ನೋಡಿ ನನ್ನನ್ನು ಮತ್ತು ನಮ್ಮ ಹುಡುಗರನ್ನು ಮಾತಾಡಿಸಲು ಬಂದಿದ್ದಾರೆ.  ಸಿನಿಮ ವಸ್ತುವಿನ ಹಿನ್ನೆಲೆ, ಅದರ ಸೂಟ್ ಮಾಡಿದ ಕ್ಯಾಮೆರ ಬಗ್ಗೆ, ಏಕೆ ಈ ವಸ್ತುವನ್ನೆ ಕತೆಯನ್ನಾಗಿ ಚಿತ್ರ ಮಾಡಿದೆ ಎನ್ನುವುದರ ಬಗ್ಗೆ ಕೇಳಲು ಬಂದಿದ್ದಾರೆ.  ಅವರ ಜೊತೆ ಮಾತಾಡಿ, ನೀವೆಲ್ಲಾ ನೋಡುವಂತೆ  ಟಿವಿ ೯ ಛಾನಲ್ಲಿನಲ್ಲಿ ಒಂದಷ್ಟು ಫೋಸು ಕೊಟ್ಟು ಬಂದುಬಿಡುತ್ತೇನೆ.  

     ಅಮೇಲೆ ನಮ್ಮ ಕಿರುಚಿತ್ರ ಪ್ರಾರಂಭವಾದ ಬಗೆ, ಅದಕ್ಕೆ ಹೊಂದಿಸಿಕೊಂಡ ಕ್ಯಾಮೆರ, ಎಲ್ಲಿ ಶೂಟಿಂಗ್ ಮಾಡಿದೆವು,  ಆ ಜಾಗದ ಹುಡುಕಾಟ, ತಡಕಾಟ, ಒಂದು ಬುಟ್ಟಿಯಲ್ಲಿ ಹಾಕಿದರೆ ಒಂದು ಕ್ಷಣ ಒಂದು ಕಡೆ ನಿಲ್ಲದ ಹಾಗೆ ನೆಗೆದಾಡುವ ಕಪ್ಪೆಗಳಂತ ನಮ್ಮ ಪಾತ್ರಧಾರಿ ಹುಡುಗರು,  ಸೂಟಿಂಗ್ ಸಮಯದಲ್ಲಿ ಅವರು ಕೈ ಕೊಟ್ಟ ಬಗೆಗಳು, ಕದ್ದು ಮುಚ್ಚಿ ಅವರಿಗೆ ಗೊತ್ತಿಲ್ಲದ ಹಾಗೆ ಸೂಟ್ ಮಾಡಿದ ದೃಶ್ಯಗಳು, ನಂತರದ ಸಂಕಲನ ಕೆಲಸ, ನಮಗೆಲ್ಲಾ ಧ್ವನಿ ಮರುಮುದ್ರಣವೆನ್ನುವ ಕಬ್ಬಿಣದ ಅಗಿಯಲು ಪ್ರಯತ್ನಿಸಿದ್ದು ಅದರಲ್ಲಿ ಯಶಸ್ವಿಯಾದೆವಾ?,  ಪೂರ್ತಿ ಸಿದ್ಧವಾದ ಸಿನಿಮಾಗೆ ಮೊದಲು ಮಾಡಿದ ನಂತರ ಅದನ್ನು ಬದಲಾಯಿಸುವ ಸಲುವಾಗಿ ನನ್ನ ಗೆಳೆಯ ಮಹೇಶ್‍ಗೆ ನಾನು ಕೊಟ್ಟ ಕಾಟ,...............ಒಂದೇ ಎರಡೇ ಬರೆಯಲು ತುಂಬಾ ದೊಡ್ಡದಾದ ಸಾಲುಗಳಿವೆ....ಮುಂದಿನ ಭಾಗದಲ್ಲಿ ಬರೆಯುತ್ತೇನೆ.

       ಅಂದಹಾಗೆ ಈ ಬರಹದ ನಡುವೆ ಟಿವಿ ೯ ಛಾನಲ್ಲಿನವರು ಕ್ಯಾಮೆರ ಹಿಡಿದುಕೊಂಡು ನಮ್ಮನ್ನು ಸೆರೆಯಿಡಿಯಲು ಬಂದರು ಅಂತ ನಿಲ್ಲಿಸಿದೆನಲ್ಲ...ಅದು ಗಿಮಿಕ್ ಏನೂ ಅಲ್ಲ.   ಸತ್ಯ. ಇವತ್ತು [ದಿನಾಂಕ ೨೮-೮-೨೦೧೧]ಸಂಜೆ ಬಂದು ನಮ್ಮ ಕಿರುಚಿತ್ರದ ಬಗ್ಗೆ ನನ್ನನ್ನು ಮತ್ತು ನನ್ನ ಹುಡುಗರನ್ನು ಮಾತಾಡಿಸಿ ಹೋಗಿದ್ದಾರೆ.  ಅದು ಪ್ರಸಾರವಾಗುವ ದಿನಾಂಕವಿನ್ನು ಗೊತ್ತಾಗಿಲ್ಲ. ಗೊತ್ತಾದ ತಕ್ಷಣ ನಿಮಗೆಲ್ಲಾ  mail, massage, facebook, bazz...ಎಲ್ಲಾ ಕಡೆ ತಿಳಿಸುತ್ತೇನೆ. ತಪ್ಪದೇ ನೋಡಿ
ನಮ್ಮ ಹೊಸ ಪ್ರಯತ್ನವನ್ನು ಪ್ರೋತ್ಸಾಹಿಸಿ.

ಅಂದಹಾಗೆ ನಮ್ಮ ಕಿರುಚಿತ್ರದ ಹೆಸರು..

                               ಬೆಳಗಾಯ್ತು....
                           Tag line : ಇನ್ನೂ ನ್ಯೂಸ್ ಪೇಪರ್ ಬಂದಿಲ್ವಾ?

ಸಮಯದ ಅವಧಿ : ಹದಿನೆಂಟು ನಿಮಿಷಗಳು...

ನಮ್ಮ ಕಿರುಚಿತ್ರದಲ್ಲಿ ಹೆಚ್ಚು ಇಲ್ಲಗಳು ಇವೆ.

ನಾನು ನಿರ್ಧೇಶಕನಲ್ಲ. ನಟನಲ್ಲ.
ಸಿನಿಮಾಟೋಗ್ರಾಫರ್ ಅಂತೂ ಅಲ್ಲವೇ ಅಲ್ಲ
 ನನಗೆ ಸಿನಿಮಾ ಸಾಹಿತ್ಯ ಗೊತ್ತಿಲ್ಲ.
ಸಂಗೀತ ನೀಡಿರುವ ಮಹೇಶ್ ಸಂಗೀತ ಗಾರನಲ್ಲ.
ನಾವು ಕಿರುಚಿತ್ರಕ್ಕೆ ಬಳಸಿರುವ ಕ್ಯಾಮೆರಾ ಸಿನಿಮಾ ಸಿನಿಮಾಟೋಗ್ರಫಿ ಕ್ಯಾಮೆರ ಅಲ್ಲ
ಬೆಳಗಿನ ದಿನಪತ್ರಿಕೆ ಹಾಕುವ ಪಾತ್ರಧಾರಿ ಹುಡುಗರು ನಟರಲ್ಲ.
ಮೇಕಪ್ ಅಂತೂ ಯಾರಿಗೂ ಇಲ್ಲವೇ ಇಲ್ಲ.

ಈ ಎಲ್ಲಾ ಇಲ್ಲಗಳ ನಮ್ಮ ಕಿರುಚಿತ್ರ ಸಿದ್ದವಾಗಿದೆ.

           
ನಮ್ಮ ಕಿರುಚಿತ್ರದ ಚಿತ್ರೀಕರಣ ಸಮಯದಲ್ಲಿನ ಕೆಲವು ಫೋಟೊಗಳು.

         ಪ್ರಾರಂಭದ ಹಂತದ ಚಿತ್ರೀಕರಣ.
         

ಪ್ರೇಮಿಂಗ್ ಚೆನ್ನಾಗಿದೆಯಾ?  ಶಿವಪ್ರಕಾಶ್  ಜೊತೆ ಚರ್ಚೆ
 
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತಿದೆ ಈ ಕ್ಯಾಮೆರದ ಚಿತ್ರೀಕರಣ ಪಲಿತಾಂಶ

     
ನಮ್ಮ ಚಿತ್ರದ ಕೆಲವು ಹೀರೋಗಳು

     

ಮಹೇಶ್ ಮತ್ತು ಶಿವಪ್ರಕಾಶ್  ಜೊತೆ ಚಿತ್ರೀಕರಣದ ನಡುವೆ ದೃಶ್ಯಗಳ ಚರ್ಚೆ

 ಆಗಾಗ ಸ್ವಲ್ಪ ರಿಲ್ಯಾಕ್ಸ್..


ಇವರು ಕೂಡ ನಮ್ಮ ಕಿರುಚಿತ್ರದ ಹೀರೊಗಳು........ಸೂಟಿಂಗ್ ಸಮಯದಲ್ಲಿ ನನಗೆ ಸಕ್ಕತ್ ಕಾಟ ಕೊಟ್ಟ ವಿಲನ್ನುಗಳು.

 ಅಷ್ಟೆಲ್ಲಾ ಹೀರೋಗಳಿದ್ದರೂ....ಇಲ್ಲಿ ಕತೆ ಮತ್ತು ಚಿತ್ರಕತೆಯೇ ನಿಜವಾದ ಹೀರೋ....


ಚಿತ್ರಗಳು ಮತ್ತು ಲೇಖನ.
ಶಿವು. ಕೆ


Saturday, August 13, 2011

ಬ್ಲಾಗಿಗರ ಪುಸ್ತಕಗಳ ಲೋಕಾರ್ಪಣೆ


ಹೌದು. ಮತ್ತೆ ನಮ್ಮ ಬ್ಲಾಗಿಗರು ಸಂಭ್ರಮಿಸುವ  ಕಾಲ ಬಂದಿದೆ.  ನಾವೆಲ್ಲ ಒಟ್ಟಿಗೆ ಸೇರಿ ನಲಿಯುವ ಕಾಲ ಬಂದಿದೆ.  
ಇದೇ ಆಗಸ್ಟ್ 21ರ ಭಾನುವಾರ ಚಾಮರಾಜ ಪೇಟೆಯಲ್ಲಿರುವ "ಕನ್ನಡ ಸಾಹಿತ್ಯ ಪರಿಷತ್ತ್ "ನಲ್ಲಿ ನಮ್ಮ ಬ್ಲಾಗಿಗರ ಮೂರು ವಿಭಿನ್ನ ಪುಸ್ತಕಗಳು ಲೋಕಾರ್ಪಣೆಯಾಗುತ್ತಿವೆ.

ಇದು ನಮ್ಮ ಅಹ್ವಾನ ಪತ್ರಿಕೆ ನಿಮಗೆಲ್ಲಾ ಆತ್ಮೀಯವಾದ ಸ್ವಾಗತ


ಸುಧೇಶ್ ಶೆಟ್ಟಿ ನಮ್ಮೆಲ್ಲರ ಮೆಚ್ಚಿನ ಯುವ ಬರಹಗಾರ.   ಬ್ಲಾಗಿರರ ಸ್ಪೂರ್ತಿ ಮತ್ತು ಒತ್ತಾಸೆಯಿಂದ ಆತ  "ಹೆಜ್ಜೆ ಮೂಡದ ಹಾದಿ" ಕಾದಂಬರಿ ಬರೆದಿದ್ದಾರೆ ಈಗ ಅವರ ಬರಹ ಪುಸ್ತಕ ರೂಪದಲ್ಲಿ ಬಿಡುಗಡೆಯಾಗುತ್ತಿದೆ.  ಇವರ ಪುಸ್ತಕದ ಕುರಿತು ನಮ್ಮೆಲ್ಲರ ಮೆಚ್ಚಿನ ಖ್ಯಾತ ಸಾಹಿತಿ ಕು.ವೀರಭದ್ರಪ್ಪನವರು ಮಾತನಾಡಲಿದ್ದಾರೆ.

ಸುಧೇಶ್ ‍ರ ಕಾದಂಬರಿ "ಹೆಜ್ಜೆ ಮೂಡದ ಹಾದಿ"


ಮತ್ತೊಬ್ಬ ಬ್ಲಾಗ್ ಬರಹಗಾರ್ತಿ ರೂಪ ರಾವ್[ "ತೆರೆದ ಮನ" ಬ್ಲಾಗಿನ ಒಡತಿ]ರವರ ಸಣ್ಣಕತೆಗಳು ಪುಸ್ತಕವೂ ಬಿಡುಗಡೆಯಾಗುತ್ತಿದೆ. ಈ ಪುಸ್ತಕದ ಬಗ್ಗೆ ಮಾತನಾಡುವವರು ಖ್ಯಾತ ಸಾಹಿತಿ, ವಿಜ್ಞಾನಿ, ವಾಸ್ತುತಜ್ಞರಾದ ಡಾ.ರಮೇಶ್ ಕಾಮತ್‍ರವರು.

ರೂಪಾ ರಾವ್ ರವರ ಸಣ್ಣ ಕಥಾ ಸಂಕಲನ "ಪ್ರೀತಿ ಏನನ್ನಲಿ ನಿನ್ನ"


ಹಾಗೆ ಇನ್ನೊಬ್ಬ ಗೆಳೆಯ ದೊಡ್ಡಮನಿ ಮಂಜು. ಮೂರ್ತಿ ಚಿಕ್ಕದಾದರೂ ಆತನ ಚಟುವಟಿಕೆ ಚುರುಕು. ಆತನ ಕವನ ಸಂಕಲನವನ್ನು ಖ್ಯಾತ ಸಿನಿಮಾ ಸಾಹಿತಿ ಹೃದಯಶಿವರವರು ಬಿಡುಗಡೆ ಮಾಡಿ ಪುಸ್ತಕದ ಬಗ್ಗೆ ಮಾತಾಡಲಿದ್ದಾರೆ.

ದೊಡ್ಡ ಮನಿ ಮಂಜುರವರ ಕವನ ಸಂಕಲನ "ಮಂಜು ಕರಗುವ ಮುನ್ನ"


   ಮೂರು ಬೇರೆ ಬೇರೆ ಪ್ರಕಾರದ ನಮ್ಮ ಬ್ಲಾಗಿಗರ ಪುಸ್ತಕಗಳು ಒಂದೇ ವೇದಿಕೆಯಲ್ಲಿ ಬಿಡುಗಡೆಯಾಗುತ್ತಿರುವುದು ಒಂದು ವಿಶೇಷವಾದರೆ,  ಇದು ಸೃಷ್ಠಿ-ತುಂತುರು ಪ್ರಕಾಶನಗಳ ಸಂಯೋಗದಲ್ಲಿ ಬಿಡುಗಡೆಯಾಗುತ್ತಿರುವುದು ಮತ್ತೊಂದು ವಿಶೇಷ. ಈ ಕಾರ್ಯಕ್ರಮಕ್ಕಾಗಿ ದೂರದ ನಾಡಾದ ಕುವೈಟಿನಿಂದ ಡಾ.ಆಜಾದ್,  ಸುಗುಣಕ್ಕ,[ಮೃದು ಮನಸ್ಸು ಬ್ಲಾಗ್] ಮಹೇಶ್ ಸರ್, ಅವರ ಮಗ ಮನುವಚನ್,  ದೆಹಲಿಯಿಂದ ಪ್ರವೀಣ್ [ಮನದಾಳದಿಂದ....ಬ್ಲಾಗ್], ಪೂನದಿಂದ ಚಿತ್ರಾಂಜಲಿ ಹೆಗಡೆ[ಮನಸ್ಸೆಂಬ ಹುಚ್ಚು ಹೊಳೆ]ಯವರು ಬರುತ್ತಿದ್ದಾರೆ.  ಗೆಳೆಯರಿಗೆ ಪ್ರೋತ್ಸಾಹಿಸುವುದಕ್ಕಾಗಿ ಅವರೊಂದಿಗೆ ಸಂಭ್ರಮಿಸುವುದಕ್ಕಾಗಿ ಆಷ್ಟು ದೂರದಿಂದ ಅವರೇ ಬರುತ್ತಿರಬೇಕಾದರೆ ಹತ್ತಿರದಲ್ಲಿರುವ ನಾವೆಲ್ಲರೂ ಕೂಡ ಹೋಗೋಣ ಅಲ್ವಾ....

ಇತರ ವಿವರಗಳಿಗೆ ಮೇಲೆ ಹಾಕಿರುವ ಅಹ್ವಾನ ಪತ್ರಿಕೆಯನ್ನು ನೋಡಿ. 
ಕಾರ್ಯಕ್ರಮಕ್ಕೆ ಮೊದಲು ಬೆಳಗಿನ ಉಪಹಾರ ಮತ್ತು ಕಾಫಿ ಟೀ ವ್ಯವಸ್ಥೆಯಿದೆ. 
ಖಂಡಿತ ಬರುತ್ತೀರಿ ಅಲ್ವಾ!


ಚಿತ್ರಗಳು ಮತ್ತು ಲೇಖನ
ಶಿವು.ಕೆ

     


Friday, August 5, 2011

ಪಾಂಡಿಚೇರಿ ಪ್ರವಾಸ

  
            ಕಂಡಕ್ಟರನ ಅಂಗೈಯಲ್ಲಿ ಎಣ್ಣೆ ಮಿಶ್ರಿತ ಅರಿಸಿನ, ಕುಂಕುಮ ಮತ್ತು ವಿಭೂತಿಯಿತ್ತು. ಡ್ರೈವರ್ ತನ್ನ ಉಂಗುರ ಬೆರಳ ತುದಿಯಲ್ಲಿ ಮೊದಲು ಸ್ವಲ್ಪ ಅರಿಸಿನವನ್ನು ತೆಗೆದುಕೊಂಡು ತನ್ನ ಹಣೆಗೆ ಇಟ್ಟುಕೊಂಡ.  ಮತ್ತೆ ಸ್ವಲ್ಪ ಕುಂಕುಮ, ಕೊನೆಯಲ್ಲಿ ವಿಭೂತಿಯನ್ನು ಸ್ವಲ್ಪ ಹೆಚ್ಚೇ ಬಲ ತೋರುಬೆರಳಿನಲ್ಲಿ  ತೆಗೆದುಕೊಂಡು ಎಡಗೈಯನ್ನು ಎದೆಯಮೇಲಿಟ್ಟುಕೊಂಡು ಹೆಚ್ಚು ಭಕ್ತಿಯನ್ನು ವ್ಯಕ್ತಪಡಿಸುತ್ತಾ ಹಣೆಯ ತುಂಬಾ ಹಚ್ಚಿಕೊಂಡು ಮತ್ತಷ್ಟು ತೆಗೆದುಕೊಂಡು ಕಂಡಕ್ಟರನ ಹಣೆಗೂ ಸ್ವಲ್ಪ ಉದ್ದವಾಗಿ ಬಳಿದ. ಡ್ರೈವರ್ ಹೀಗೆ ಕಂಡಕ್ಟರಿಗೆ ವಿಭೂತಿಯನ್ನು ಹಣೆಗೆ ಬಳಿಯುವಾಗ ಕಂಡಕ್ಟರ್‍ನಲ್ಲಿ ಗಾಢವಾದ ಭಕ್ತಿ ಮುಖದಲ್ಲಿ ವ್ಯಕ್ತವಾಗಿದ್ದು ನಾನು ನೋಡುತ್ತಲೇ ಇದ್ದೆ. ಈಗ ಕಂಡಕ್ಟರ್ ತನ್ನ ಬ್ಯಾಗಿನಲ್ಲಿದ್ದ ತುಂಡು ಹೂವನ್ನು ದೇವರ ಫೋಟೊಗೆ ಸಿಕ್ಕಿಸಿ,  ಊದುಬತ್ತಿಯನ್ನು ಅಂಟಿಸಿ ಮೊದಲು ದೇವರ ಫೋಟೊಗಳಿಗೆ, ಡ್ರೈವಿಂಗ್ ಚಕ್ರಕ್ಕೆ, ಗೇರಿಗೆ, ಕೊನೆಯಲ್ಲಿ ತನ್ನ ಟಿಕೆಟ್ ಮತ್ತು ಹಣದ ಚೀಲಕ್ಕೆ ಭಕ್ತಿಯಿಂದ ಪೂಜೆಮಾಡಿ,  ಊದುಬತ್ತಿಯನ್ನು ಇಂಜಿನ್ ಬಾಕ್ಸಿನ ಮೇಲ್ತುದಿಯಲ್ಲಿ ಸಿಕ್ಕಿಸಿ, ಬಸ್ಸಿನೊಳಗೆ ಆಗಲೇ ತುಂಬಿಕೊಂಡಿದ್ದ ಪ್ರಯಾಣಿಕರ ಕಡೆಗೆ ಒಮ್ಮೆ ತೃಪ್ತಿಯಿಂದ ನೋಡಿ, ಡ್ರೈವರ್‌ಗೆ ಸನ್ನೆ ಮಾಡಿ "ರೈಟ್ ರೈಟ್" ಅಂದ. ಬಸ್ಸು ಸ್ಟಾರ್ಟ್ ಆಯಿತು.  ಅದೇ ಸಮಯಕ್ಕೆ ಎಂಜಿನ್ ಮೇಲೆ ಹಾಕಿದ್ದ ಮಡಿಬಟ್ಟೆಗಳನ್ನು ತೆಗೆಯುತ್ತಾ, ಪಕ್ಕದಲ್ಲೇ ಇದ್ದ ಗಲ್ಲಪೆಟ್ಟಿಗೆಯನ್ನು ಕೈಗೆತ್ತಿಕೊಳ್ಳುವಾಗ ಊದುಬತ್ತಿಯ ಬೆಂಕಿ ಮೊಣಕೈಗೆ ಸುಟ್ಟುಬಿಡ್ತು.  "ತತ್ ತೇರಿ" ಅಂತ ಆ ಊದುಬತ್ತಿಯನ್ನು ಬೈದು ಕೋಪದಿಂದ ಅದನ್ನು ಎತ್ತಿ ಕಿಟಕಿಯಾಚೆ ಬಿಸಾಡಿಬಿಟ್ಟ. ಅರಿಸಿನ, ಕುಂಕುಮ, ವಿಭೂತಿ, ಊದುಬತ್ತಿಗಳೆಲ್ಲಾ ಅವರ ದೈವಭಕ್ತಿಯ ಪ್ರತೀಕವಾಗಿದ್ದನ್ನು ನೋಡುತ್ತಿದ್ದ ನಮಗೆ ಕೆಲವೇ ಕ್ಷಣಗಳಲ್ಲಿ ಪಾಪ ಊದುಬತ್ತಿಗಳು ಮಾತ್ರ ಕಂಡಕ್ಟರನ ಕೋಪಕ್ಕೆ ಬಲಿಯಾಗಿದ್ದು ನೋಡಿ ನಮಗೆ ನಗುತಡೆಯಲಾಗಲಿಲ್ಲ.

       ರಾತ್ರಿ ಬೆಂಗಳೂರಿನಿಂದ ಹೊರಟು ಮುಂಜಾನೆ ಪಾಂಡಿಚೇರಿ ಬಸ್ ನಿಲ್ದಾಣದಲ್ಲಿ ಇಳಿದು,  ನಾವು ಉಳಿದುಕೊಳ್ಳುವ ಅರಬಿಂದೋ ಆಶ್ರಮದ "ಕರ್ನಾಟಕ ನಿಲಯಂ" ಅತಿಥಿಗೃಹಕ್ಕೆ ಹೋಗಲು ಅಲ್ಲಿನ ಸಿಟಿ ಬಸ್‌ನಲ್ಲಿ ಕುಳಿತಾಗ ಇಂಥ ಸನ್ನಿವೇಶದ ಮೂಲಕ ನಮ್ಮ ಪಾಂಡಿಚೇರಿ ಪ್ರವಾಸ ಶುರುವಾಯ್ತು.

          ಕೇವಲ ಐದೇ ನಿಮಿಷದಲ್ಲಿ ಸರ್ಕಾರಿ ಆಸ್ಪತ್ರೆಯ ಬಳಿ ಬಸ್ ನಮ್ಮಿಬ್ಬರನ್ನು ಇಳಿಸಿ ಹೊರಟುಹೋಯ್ತು.  ಹೊರಗೆ ಬಂದು ನೋಡಿದರೆ ಬೇರೆ ಜಾಗದಲ್ಲಿ ಇಳಿದುಬಿಟ್ಟಿದ್ದೆವು.  ಕೊನೆಗೆ ಹತ್ತಾರು ಜನರನ್ನು ಕೇಳಿದರೂ  ಯಾರೂ ಕೂಡ ಸರಿಯಾಗಿ ನಾವು ತಲುಪಬೇಕಾದ ವಿಳಾಸವನ್ನು ಹೇಳಲಿಲ್ಲ.  ನಮ್ಮ ಪರದಾಟವನ್ನು ನೋಡಿ ಅಲ್ಲಿಯೇ ವಾಕಿಂಗ್ ಮಾಡುತ್ತಿದ್ದ ಒಬ್ಬ ಹಿರಿಯ ವ್ಯಕ್ತಿ, ಆತ ಆಶ್ರಮಕ್ಕೆ ಸಂಭಂದ ಪಟ್ಟವರಿರಬೇಕು ನಮಗೆ ಸರಿಯಾಗಿ ವಿಳಾಸ ಹೇಳಿ ಅರ್ಧ ಕಿಲೋಮೀಟರ್ ಆಗುತ್ತದೆ ನಡೆದು ಹೋಗಬಹುದು ಅಂದರು.  ನಾವು ಬೆಳಿಗ್ಗೆ ಆರುವರೆಯ ಒಳಗೆ ಅಲ್ಲಿಗೆ ತಲುಪಬೇಕಾದ್ದರಿಂದ ನಡೆಯಲು ಸಾಧ್ಯವಿಲ್ಲವೆಂದುಕೊಳ್ಳುತ್ತಿರುವಾಗ ಅಲ್ಲೊಬ್ಬ ಸೈಕಲ್ ರಿಕ್ಷಾದವನು ಬಂದ. ಅವನಿಗೆ ಆ ಹಿರಿಯವ್ಯಕ್ತಿಯೇ ವಿಳಾಸವನ್ನು ಹೇಳಿದಾಗ ಆತ ಇಪ್ಪತ್ತು ರೂಪಾಯಿ ಅಂದ.  "ಓಹ್! ಗ್ರೇಟ್ ಇಷ್ಟು ಕಡಿಮೆ ಆತ ಹೇಳಿರುವುದು ಇದೇ ಮೊದಲು ಹೋಗಿಬಿಡಿ" ಅಂತ ನಮಗೆ ಕಿವಿಮಾತು ಹೇಳಿದರು.  ಮೊದಲ ಬಾರಿಗೆ ನಾವು ನಮ್ಮ ಲಗ್ಗೇಜ್ ಹಾಕಿ ಸೈಕಲ್ ರಿಕ್ಷದಲ್ಲಿ ಕುಳಿತಿದ್ದೆವು.


                ನಾನು ಮೈಸೂರಿನಲ್ಲಿ ಸೈಕಲ್ ರಿಕ್ಷಾದವರನ್ನು ನೋಡಿದ್ದೇನೆ. ಮತ್ತು ಸಿನಿಮಾಗಳಲ್ಲೂ ನೋಡಿದ್ದೇನೆ. ಹೊರಗಿನಿಂದ ನೋಡುವುದು ಬೇರೆ, ಅದರಲ್ಲಿ ಕುಳಿತರೆ ಆಗುವ ಅನುಭವೇ ಬೇರೆ.  ನಾವು ಮತ್ತು ನಮ್ಮ ಲಗ್ಗೇಜ್ ಸೇರಿದಂತೆ ನೂರೈವತ್ತು ಕೇಜಿ ತೂಕವನ್ನು ಎಳೆದುಕೊಂಡು ಹೋಗಲು ಆತ ಸೈಕಲ್ ತುಳಿಯಲು ಪಡುತ್ತಿದ್ದ ಕಷ್ಟವನ್ನು ನೋಡಿದಾಗ ಮರುಕವುಂಟಾಯಿತು.  ಸುಮಾರು ನಲವತೈದು ದಾಟಿರಬೇಕು ಆತನಿಗೆ. ಸೈಕಲ್ ಸೀಟು ಸರಿಯಾಗಿ ಅರ್ಧಕ್ಕೆ ತುಂಡಾಗಿ ಅರ್ಧಮಾತ್ರ ಉಳಿದ್ದಿದ್ದರಿಂದ ಅವನು ಸೀಟಿನ ಮೇಲೆ ಕೂರದೆ ಬಾರ್ ತುಳಿಯುತ್ತಿದ್ದ.  "ಸೈಕಲ್ ಸೀಟ್ ಬದಲಾಯಿಸಬಾರದೇನಪ್ಪ" ಅಂತ ಅವನಿಗೆ ನನ್ನ ಅರೆ ತಮಿಳಿನಲ್ಲಿ ಕೇಳಿದಾಗ "ಬದಲಾಯಿಸಬೇಕು ಸರ್" ಅಂದ. ನೇರ ರಸ್ತೆಯಾಗಿದ್ದರಿಂದ ಐದೇ ನಿಮಿಷದಲ್ಲಿ ನಮ್ನನ್ನು ಗೆಸ್ಟ್ ಹೌಸ್ ತಲುಪಿಸಿದ. "ಸರ್ ಬೆಳಿಗ್ಗೆ ಬೋಣಿ ಐದು ರೂಪಾಯಿ ಸೇರಿಸಿಕೊಡಿ ಸರ್ ಕಾಫಿ ಕುಡಿಯುತ್ತೇನೆ"   ಅಂದಾಗ ನಮಗೆ ಇಲ್ಲವೆನ್ನಲಾಗಲಿಲ್ಲ.   ಆತನ ಮನೆಯಲ್ಲಿ ಹೆಂಡತಿ ಮತ್ತು ಇಬ್ಬರು ಮಕ್ಕಳು. ಮಕ್ಕಳನ್ನು ಓದಿಸುತ್ತಿದ್ದೇನೆ ಅಂತ ಹೇಳುವಾಗ ಅವನ ಬಗ್ಗೆ ಹೆಮ್ಮೆ ಉಂಟಾಗಿತ್ತು.

            ಗೆಸ್ಟ್ ಹೌಸ್ ಒಳಗೆ ಹೋಗುತ್ತಿದಂತೆ ಕಪ್ಪು ಕನ್ನಡಕ ಧರಿಸಿದ್ದ ಹಿರಿಯಜ್ಜ ಎದುರಾದರು. ನನ್ನ ಹೆಸರನ್ನು ಹೇಳಿದೆ. "ಓಹ್!  ಬೆಂಗಳೂರಿಂದ ಫೋನ್ ಮಾಡಿದವರು  ನೀವೇ ಅಲ್ವಾ ಬನ್ನಿ ಬನ್ನಿ" ಅಂತ ಸ್ವಾಗತ ಕೋಣೆಯಲ್ಲಿ ಕೂರಿಸಿ ಡೈರಿಯಲ್ಲಿ ವಿಳಾಸ ಬರೆಸಿಕೊಂಡು ರೂಮು ಕೊಟ್ಟರು. ಪಾಂಡಿಚೇರಿಯಲ್ಲಿ ಕನ್ನಡ ಮಾತಾಡುವವರು ಸಿಕ್ಕರಲ್ಲ ಅಂತ ಖುಷಿಯಾಯ್ತು. ಅವರ ಹೆಸರು ಮಲ್ಲಿಕಾರ್ಜುನಪ್ಪ. ಹುಬ್ಬಳ್ಳಿಯವರಿರಬೇಕು. ಪ್ರೀತಿಯಿಂದ ಮಾತಾಡಿಸುತ್ತಾರೆ.  ಅರ್ಧಗಂಟೆಯೊಳಗೆ ನಾನು ಮತ್ತು ಹೇಮಾಶ್ರೀ ಸಿದ್ದರಾಗಿ ಹೊರಬಂದಾಗ ನಮಗೆ ಎರಡು ಊಟದ ಕೂಪನ್ ಕೊಟ್ಟು ನಲವತ್ತು ರೂಪಾಯಿಗಳನ್ನು ಪಡೆದುಕೊಂಡರು.  ಪಾಂಡಿಚೇರಿಗೆ ಹೋದವರು ಅರಬಿಂದೋ ಆಶ್ರಮದವರ ಗೆಸ್ಟ್ ಹೌಸುಗಳಲ್ಲಿ ಉಳಿದುಕೊಂಡು ಕೇವಲ ಇಪ್ಪತ್ತು ರೂಪಾಯಿ ಕೊಟ್ಟು ಈ ಕೂಪನ್ನುಗಳನ್ನು ಪಡೆದುಕೊಂಡರೆ ಆಶ್ರಮದ ಕ್ಯಾಂಟೀನಿನಲ್ಲಿ ಮೂರು ಹೊತ್ತು ಊಟ ತಿಂಡಿ ಕೊಡುತ್ತಾರೆ.  "ಇನ್ನು ಹದಿನೈದು ನಿಮಿಷವಿದೆ ಬೇಗ ಹೋಗಿ ಇಲ್ಲವಾದಲ್ಲಿ ಬೆಳಗಿನ ತಿಂಡಿ ಸಿಗುವುದಿಲ್ಲ"  ಅಂದು ಕ್ಯಾಂಟೀನ್ ದಾರಿಯನ್ನು ತೋರಿಸಿದರು.  ನಮಗೆ ಬೆಂಗಳೂರಿನಲ್ಲಿ ರಾತ್ರಿ ವಾಕಿಂಗ್ ಅಬ್ಯಾಸವಿತ್ತಲ್ಲ ಹತ್ತೇ ನಿಮಿಷದಲ್ಲೇ ಅಲ್ಲಿಗೆ ತಲುಪಿ ನೋಡಿದರೆ ಆಶ್ಚರ್ಯ!  ಏಕೆಂದರೆ ನಾವು ಈ ಮೊದಲು ಬಸ್ಸು ಇಳಿದು ವಿಳಾಸವನ್ನು ಕೇಳಿ  ಕೊನೆಗೆ ಸೈಕಲ್ ರಿಕ್ಷಾದಲ್ಲಿ ಬಂದಿದ್ದು ಇಲ್ಲಿಂದಲೇ ಅಂತ!   ಕ್ಯಾಂಟೀನ್ ಅಂದುಕೊಂಡಿದ್ದ ನಮಗೆ ಅಲ್ಲಿನ ವಾತಾವರಣವನ್ನು ನೋಡಿ ಮತ್ತಷ್ಟು ಅಚ್ಚರಿಯುಂಟಾಯಿತು. ಏನಿಲ್ಲವೆಂದರೂ ಪ್ರತಿನಿತ್ಯ ಸಾವಿರಾರು ಜನರು ಅಲ್ಲಿ ಊಟ ತಿಂಡಿ ಮಾಡುತ್ತಾರೆ. ಎಲ್ಲಿಯೂ ಸದ್ದು ಗದ್ದಲವಿಲ್ಲ, ಗಲಾಟೆಯಿಲ್ಲ. ಅಂತ ವಾತಾವರಣದಲ್ಲಿ ತಟ್ಟೇ ಲೋಟ ಚಮಚಗಳ ಸದ್ದು ಬಿಟ್ಟರೆ ಮತ್ತೆ ಇನ್ಯಾರು ಮಾತು ಕೇಳಿಸುವುದಿಲ್ಲ.  ಮತ್ತೆ ಯಾವುದೇ ಜಾತಿ ಬೇಧ ಮತ ಪಂಥ ಇತ್ಯಾದಿಗಳು ಇಲ್ಲದೇ ಎಲ್ಲರೂ ಸಮನಾಗಿ ಸರತಿಯಲ್ಲಿ ನಿಂತು ತಮ್ಮ ಊಟವನ್ನು ಪಡೆದುಕೊಳ್ಳಬೇಕು.  ವಿದೇಶಿಯರು ಸಾಕಷ್ಟು ಜನರಿದ್ದರು.  ಬೆಳಿಗ್ಗೆ ನಮಗೆ ಫ್ರೆಂಚ್ ಶೈಲಿಯ ತಿಂಡಿ ದೊರೆಯಿತು. ಎರಡು ದೊಡ್ಡ ಬ್ರೆಡ್ ತುಂಡು ದೊಡ್ಡ ಬಟ್ಟಲಿನಲ್ಲಿ ಹಾಲು ಮತ್ತು ಎರಡು ಬಾಳೆಹಣ್ಣು.  ಸ್ವಲ್ಪ ಹೊತ್ತಿಗೆ ನಮಗೆ ಬ್ರೆಡ್ಡು ತಿನ್ನುವುದು ಕಷ್ಟವೆನಿಸಿತ್ತು. ಆದರೆ ತಟ್ಟೆಯಲ್ಲಿ ಬಿಡಬಾರದೆಂದು ಮುಗಿಸಿ ಹಾಲು ಕುಡಿದು ಬಾಳೆಹಣ್ಣು ತಿಂದಾಗ ಹೊಟ್ಟೆ ಪುಲ್ ಆಗಿಬಿಟ್ಟಿತ್ತು.  "ಕಾಯಿಲೆ ಬಂದವರು ಮಾತ್ರ ಹಾಲು ಬ್ರೆಡ್ ತಿನ್ನೋದು ಅಲ್ವೇನ್ರೀ, ನಾವ್ಯಾಕೆ ಇದನ್ನು ತಿನ್ನಬೇಕು ನನ್ನ ಕೈಲಿ ಆಗೊಲ್ಲಪ್ಪ"   ಹೇಮಾಶ್ರಿ ಅಂದಾಗ ಕಷ್ಟಪಟ್ಟು ತಿನ್ನುತ್ತಿದ್ದ  ನನಗೆ ನಗು ಬಂತು.  

      ಹೇಗೋ ಬೆಳಗಿನ ತಿಂಡಿಯನ್ನು ಮುಗಿಸಿ ಹೊರಬಂದು ಅಲ್ಲಿರುವ ಕರ್ನಾಟಕ ಬ್ಯಾಂಕ್ ವಿಳಾಸವನ್ನು ಹುಡುಕಿಕೊಂಡು ಹೊರಟೆವು. ಅದು  ಪಕ್ಕದ ರೋಡಿನಲ್ಲೇ ಇತ್ತು. ಅದರ ಎದುರಿಗೆ ಬೈಕು ಮತ್ತು ಸ್ಕೂಟರ್ ಮೊಪೈಡುಗಳನ್ನು ದಿನದ ಮಟ್ಟಿಗೆ ಬಾಡಿಗೆಗೆ ಕೊಡುತ್ತಾರೆ. ನಾವು ಹೋಗಿ ವಿಚಾರಿಸಿ ನಮ್ಮ ಕ್ಯಾಮೆರ ಬ್ಯಾಗನ್ನು ಇಟ್ಟುಕೊಳ್ಳಲು ಅನುಕೂಲವಾಗುವಂತೆ ಆಕ್ಟೀವ್ ಹೋಂಡ ಪಡೆದುಕೊಂಡೆವು.  ಒಂದು ದಿನಕ್ಕೆ ಬಾಡಿಗೆ ೨೦೦ ರೂಪಾಯಿಗಳು. ನಮ್ಮಿಂದ ಒರಜಿನಲ್ ಡ್ರೈವಿಂಗ್ ಪಡೆದುಕೊಂಡು ಸಾವಿರ ರೂಪಾಯಿ ಡೆಪಾಸಿಟ್ ಮಾಡಿಸಿಕೊಂಡು ನಮಗೆ ಬೇಕಾದ ಗಾಡಿಯನ್ನು ಕೊಡುತ್ತಾರೆ. ವಾಪಸ್ಸು ಬಿಟ್ಟಾಗ ನಮ್ಮ ಡ್ರೈವಿಂಗ್ ಲೈಸೆನ್ಸ್ ಮತ್ತು ಉಳಿದಹಣವನ್ನು ವಾಪಸ್ಸು ಕೊಡುತ್ತಾರೆ.  ಅಲ್ಲಿಂದ ನೇರವಾಗಿ ಮೂರೇ ನಿಮಿಷಕ್ಕೆ ನಮ್ಮ ಗೆಸ್ಟ್ ಹೌಸಿಗೆ ವಾಪಸ್ ಬಂದೆವು. 

            ಪಾಂಡಿಚೇರಿಯಲ್ಲಿ ನಮ್ಮ ಪ್ರವಾಸ ಈ ರೀತಿ ಕರಾರುವಕ್ಕಾಗಿದೆಯಲ್ಲಾ ಅಂತ ನಿಮಗೆ ಅನ್ನಿಸಬಹುದು. ಅದಕ್ಕೆ ಕಾರಣ  ಕುಣಿಗಲ್ಲಿನಲ್ಲಿರುವ  ಫೋಟೊಗ್ರಫಿ ಗೆಳೆಯ ಸುಧೀಂದ್ರ.  ಆತ ಆಗಾಗ ಪಾಂಡಿಚೇರಿಗೆ ಹೋಗುತ್ತಿರುತ್ತಾನೆ.  ಅವನೇ ಪಾಂಡಿಚೇರಿಯಲ್ಲಿ ಬಾಡಿಗೆ ಬೈಕುಗಳು, ರಸ್ತೆ, ಆಶ್ರಮದ ಗೆಸ್ಟ್ ಹೌಸುಗಳು, ಅದರಲ್ಲೂ ಕರ್ನಾಟಕ ನಿಲಯಂ ಗೆಸ್ಟ್ ಹೌಸು, ಆಶ್ರಮದ ಊಟದ ವಿಚಾರ, ಅಲ್ಲಿ ನೋಡುವಂತ ಸ್ಥಳಗಳು, ಕಡಿಮೆ ಟಿಕೆಟ್ಟಿನ ಬಸ್ಸುಗಳು,  ದುಬಾರಿ ಆಟೋಗಳು, ಇನ್ನೂ ಅನೇಕ ವಿಚಾರಗಳನ್ನು ನಮಗೆ ಮಾಹಿತಿ ಸಮೇತ ತಿಳಿಸಿದ್ದರಿಂದ ಎಲ್ಲವೂ ನಮ್ಮ ಪ್ಲಾನಿನಂತೆ ಆಗಿತ್ತು.

           ಇಡೀ ಪಾಂಡಿಚೇರಿಯಲ್ಲಿ ಕನ್ನಡ ಅಕ್ಷರ ಕಾಣುವುದು ಕರ್ನಾಟಕ ನಿಲಯಂ ಅತಿಥಿ ಗೃಹದ ಬೋರ್ಡು ಮತ್ತು ಕನ್ನಡ ಮಾತಾಡುವವರು ಅಲ್ಲಿರುವ ಮಲ್ಲಿಕಾರ್ಜುನಪ್ಪ ಮತ್ತು ಅವರ ಕುಟುಂಬ. ಅವರ ಕುಟುಂಬ ಅಲ್ಲಿಯೇ ವಾಸವಾಗಿದ್ದಾರೆ. ಅಂದಹಾಗೆ  ಈ ಕರ್ನಾಟಕ ನಿಲಯಂ ಅತಿಥಿಗೃಹವೂ ಸೇರಿದಂತೆ ಎಲ್ಲಾ ಆಶ್ರಮದ ಗೆಸ್ಟ್ ಹೌಸುಗಳಲ್ಲಿಯೂ ಒಂದು ದಿನಕ್ಕೆ ಕೇವಲ  ೧೫೦ ರಿಂದ ೧೭೫ ರೂಪಾಯಿಗಳು ಮಾತ್ರ.


        ಆಕ್ಟೀವ್ ಹೊಂಡದಲ್ಲಿ ಪಾಂಡಿಚೇರಿ ಸುತ್ತಾಡಲು ಹೊರಟಾಗ ಬೆಳಿಗ್ಗೆ ಒಂಬತ್ತು ಗಂಟೆ.  ಆಷ್ಟರಲ್ಲಾಗಲೇ ಹೊರಗಿನ ವಾತಾವರಣದ ಬಿಸಿಗೆ ಬೆವರು ಸುರಿಯಲಾರಂಬಿಸಿತ್ತು.  ಅಲ್ಲಿ ಇಪ್ಪತ್ತನಾಲ್ಕು ಗಂಟೆಯೂ ಸೆಕೆ.  ಪ್ಯಾನ್ ಇಲ್ಲದೇ ಇರುವುದಕ್ಕೆ ಆಗುವುದಿಲ್ಲ. ಹೊರಗೆ ಸುತ್ತಾಡಬೇಕೆಂದರೆ ಟೋಪಿ ಇರಲೇಬೇಕು ನಾವು ಮೊದಲೇ ತೆಗೆದುಕೊಂಡು ಹೋಗಿದ್ದರಿಂದ ಟೋಪಿಗಳನ್ನು ಹಾಕಿಕೊಂಡು ಹೊರಟೆವು.  ಅಲ್ಲಿರುವ ಎರಡು ಕಿಲೋ ಮೀಟರ್ ಉದ್ದದ ಬೀಚ್ ರಸ್ತೆಯಲ್ಲಿ ಬೈಕಿನಲ್ಲಿ ಸಾಗುತ್ತಿದ್ದರೆ ಯಾವುದೋ ವಿದೇಶದಲ್ಲಿ ಇದ್ದಂತೆ ಭಾಷವಾಗುತ್ತದೆ.  
             

ಬಲಭಾಗದಲ್ಲಿ ಬೀಚು ಎಡಭಾಗದಲ್ಲಿ ಹತ್ತಾರು ಪ್ರೆಂಚ್ ಶೈಲಿ ಕಟ್ಟಡಗಳು ಅವುಗಳಲ್ಲಿ ಸರ್ಕಾರಿ ಆಡಳಿತ ಕಚೇರಿಗಳು, ಹೋಟೆಲ್ಲುಗಳು.......ಹೀಗೆ ಆ ರಸ್ತೆಯಲ್ಲಿ ಸುತ್ತಾಡುವುದೇ ಬಲು ಸೊಗಸು.  



ಒಂದು ಗಂಟೆ ಸುತ್ತಾಡುವಷ್ಟರಲ್ಲಿ ಬಿಸಿಲಿಗೆ ಸುಸ್ತೋ ಸುಸ್ತು.   ಅಲ್ಲೊಂದು ಕಡೆ ನಮ್ಮ ಬಾಡಿಗೆ ಗಾಡಿಯನ್ನು ಪಾರ್ಕಿಂಗ್ ಮಾಡಿ ಕೈಗಾಡಿಯಲ್ಲಿ ಬರುತ್ತಿದ್ದ ಐಸ್ ಕ್ರೀಮ್ ತಗೊಂಡು ಸವಿಯತೊಡಗಿದೆವು.  ಅರ್ಧ ಐಸ್ ಕ್ರೀಮ್ ತಿಂದಿರಲಿಲ್ಲ. ಅಷ್ಟರಲ್ಲಿ ಅದೆಲ್ಲಿತ್ತೋ ಒಂದು ಕಾಗೆ ಹಾರಿ ಬಂದು ನಾವು ನಿಲ್ಲಿಸಿದ್ದ ಗಾಡಿ ಮಿರರ್ ಮೇಲೆ ಕುಳಿತು ನಮ್ಮನ್ನೇ ನೋಡುತ್ತಿತ್ತು. "ರೀ ಅದಕ್ಕೆ ದಾಹವಾಗಿರಬೇಕು ಸ್ವಲ್ಪ ಐಸ್ ಕ್ರೀಮ್ ಹಾಕೋಣ" ಅಂದಳು.   "ನೀನು ಬೇಕಾದರೆ ಹಾಕು ನಾನು ಹಾಕೊಲ್ಲ"  ಅಂತ ನನ್ನ ಪಾಡಿಗೆ ನಾನು ತಿನ್ನುತ್ತಿದ್ದೆ.  ಅವಳು ಮುಕ್ಕಾಲು ತಿಂದು ಕಾಲುಬಾಗವನ್ನು ಉಳಿಸಿ ಫುಟ್ ಬಾತ್ ಮೇಲೆ ಇಟ್ಟಳು.  ತಕ್ಷಣ  ಕಾಗೆ ಕೆಳಗೆ ಹಾರಿಬಂದು ಉಳಿದ ಐಸ್ ಕ್ರೀಮನ್ನು ಸೊರರ್...ಅಂತ ತನ್ನ ಕೊಕ್ಕಿನಲ್ಲಿ ಸೆಳೆದು ಗಂಟಿಲಿಗಿಳಿಸಿತು.  

                  ಐಸ್‍ಕ್ರೀಮ್ ತಿನ್ನುತ್ತಿರುವ ಪಾಂಡಿಚೇರಿ ಕಾಗೆ 

ಕಾಗೆಗಳು ಐಸ್ ಕ್ರೀಮ್ ತಿನ್ನುವುದಿಲ್ಲವೆಂದುಕೊಂಡಿದ್ದ ನನ್ನ ಊಹೆ ತಪ್ಪು ಮಾಡಿದ ಆ ಕಾಗೆ ಐಸ್ ಕ್ರಿಮ್ ತಿನ್ನುವಾಗ ಫೋಟೊ ತೆಗೆದೆ.  ಮತ್ತೆ ನಾನು ಕೂಡ ಸ್ವಲ್ಪ ಐಸ್ ಕ್ರಿಮ್ ಉಳಿಸಿ ಕಾಗೆಗೆ ಹಾಕಿದಾಗ ಅದನ್ನು ತಿಂದು ಮುಗಿಸಿ ಒಮ್ಮೆ ಕಾವ್ ಅಂದು ಹಾರಿಹೋಯಿತು.  ಬಹುಷಃ ಅದು ನಮಗೆ ಥ್ಯಾಂಕ್ಸ್ ಹೇಳಿರಬೇಕು ಅಂದುಕೊಂಡು ಅಲ್ಲಿಂದ ಮುಂದೆ ಹೊರಟೆವು. 


             ಆರಬಿಂದೋ ಆಶ್ರಮದ ದೊಡ್ಡ ಊಟದ ಕಟ್ಟಡ


    ಪಾಂಡಿಚೇರಿ ರಸ್ತೆಗಳು ಹೇಗೆ ಹೋದರು ನೇರವಾಗಿಯೆ ಇವೆ. ಮತ್ತೆ ಬೆಂಗಳೂರಿನಂತೆ ಏರುತಗ್ಗು ಮತ್ತು ಹಳ್ಳ ದಿಣ್ಣೆಗಳಿಲ್ಲ.   ನಿಮ್ಮಲ್ಲಿ ಒಂದು ಸೈಕಲ್ ಇದ್ದರೆ ಸಾಕು ಇಡೀ ಪಾಂಡಿಚೇರಿಯನ್ನು ಅದರಲ್ಲಿಯೇ ಸುತ್ತಾಡಬಹುದು. ನಮಗೂ ಸೈಕಲ್ ಇಷ್ಟವಾದರೂ ನಮ್ಮ ತೂಕದ ಕ್ಯಾಮೆರ ಲೆನ್ಸ್ ಇರುವ ಬ್ಯಾಗನ್ನು ಸೈಕಲ್ಲಲ್ಲಿ ಹಾಕಿಕೊಂಡು ಸೈಕಲ್ ತುಳಿಯುವುದು ಅಷ್ಟು ಒಳ್ಳೆಯ ಐಡಿಯವಲ್ಲ ಅಲ್ಲ ಅಂತ ನಾವು ಸ್ಕೂಟರ್ ತೆಗೆದುಕೊಂಡಿದ್ದೆವು.   ಆದರೆ ವಿದೇಶಿ ಪ್ರವಾಸಿಗಳು, ಇಲ್ಲೇ ನೆಲೆಸಿರುವ ಪ್ರೆಂಚ್ ಪ್ರಜೆಗಳು, ಮತ್ತೆ ಪಾಂಡಿಚೇರಿಯ ಪ್ರಜೆಗಳು ಸೈಕಲ್ಲುಗಳಲ್ಲಿ ಆರಾಮವಾಗಿ ಸುತ್ತಾಡುತ್ತಾರೆ ಮತ್ತು ತಮ್ಮ ನಿತ್ಯ ಕೆಲಸಗಳನ್ನು ಸೈಕಲ್ಲುಗಳಲ್ಲೇ ಓಡಾಡುತ್ತಾ ಮಾಡುತ್ತಾರೆ.



       ಸೂರ್ಯ ತಲೆ ಮೇಲೆ ಸುಡುತ್ತಿದ್ದರೂ ಪ್ರೆಂಚ್ ಕಾಲೋನಿಯಲ್ಲಿದ್ದ  ಪ್ರೆಂಚರು ನಿರ್ಮಿಸಿದ ರಸ್ತೆಗಳಲ್ಲಿ ಓಡಾಡುವಷ್ಟರಲ್ಲಿ ಆಗಲೇ ಸಮಯ ಹನ್ನೆರಡುಗಂಟೆ.  ಆಶ್ರಮದಲ್ಲಿ ಊಟದ ಸಮಯ.  ಐದೇ ನಿಮಿಷಕ್ಕೆ ಅಲ್ಲಿಗೆ ತಲುಪಿದೆವು.  ಟೋಕನ್ ತೋರಿಸಿದರೆ ಒಂದು ಪಂಚ್ ಮಾಡಿ ಒಳಗೆ ಬಿಡುತ್ತಾರೆ.  ನಮಗೆ ಬೇಕಾದಷ್ಟು ಅನ್ನ ಸಾರು, ಮತ್ತು ಒಂದು ದೊಡ್ಡ ಬೌಲಿನಲ್ಲಿ ಗಟ್ಟಿ ಮೊಸರು ಕೊಡುತ್ತಾರೆ.  ಜೊತೆಗೆ ಬಾಳೆಹಣ್ಣು ಅಥವ ಇನ್ಯಾವುದೇ ಹಣ್ಣನ್ನು ಕೊಡುತ್ತಾರೆ.  ಸ್ವಚ್ಚವಾದ ಮತ್ತು ತಂಪಾದ ಅಲ್ಲಿನ ವಾತಾವರಣದಲ್ಲಿ ನೆಲದ ಮೇಲೋ ಅಥವ ಟೇಬಲ್ಲಿನ ಮೇಲೋ ಕುಳಿತು ಊಟ ಮಾಡುವಾಗ ಆಗುವ ನೆಮ್ಮದಿ ಮತ್ತು ತೃಪ್ತಿ ನಿಮಗೆ ಯಾವ ದೊಡ್ಡ ಹೋಟಲ್ಲಿನಲ್ಲಿ ತಿಂದರು ಸಿಗದು. ರಾತ್ರಿಗೂ ಹೀಗೆ  ಅನ್ನ ಬೇರೆ ರೀತಿಯಾದ ಸಾರು,  ಗಟ್ಟಿ ಮೊಸರು, ಹಣ್ಣು ಹಾಗೂ ಯಾವುದಾದರೂ ರೀತಿಯ ಪಾಯಸವನ್ನು  ಕೊಡುತ್ತಾರೆ. ಇಷ್ಟಕ್ಕೆಲ್ಲ ನಮಗೆ ಇಪ್ಪತ್ತು ರೂಪಾಯಿಯ ಕೂಪನ್ ಸಾಕು.
                   
         ಅಲ್ಲಿಂದ ಮುಂದೆ ಆರೋವಿಲ್ಲಗೇ ಹೋಗಬೇಕಿತ್ತು.  ರಸ್ತೆಯಲ್ಲಿ ಸಾಗುತ್ತಾ ಹತ್ತಾರು ಜನರನ್ನು ಕೇಳಿದೆವು. ಯಾರೂ ಕೂಡ ಸರಿಯಾಗಿ ವಿಳಾಸವನ್ನು ಹೇಳಲಿಲ್ಲ.  ಏನಪ್ಪ ಇದು ವಿಶ್ವಖ್ಯಾತಿ ಆರೋವಿಲ್ಲ ಬಗ್ಗೆ ಇಲ್ಲಿನ ಜನರಿಗೆ ಗೊತ್ತಿಲ್ಲವಲ್ಲ?     "ಹೇಮ ಇವರೆಲ್ಲಾ ಇಲ್ಲೇ ಹುಟ್ಟಿ ಬೆಳೆದವರು. ಇವರಿಗೆ ಪಕ್ಕದ ಮನೆಯವನ ಹೆಸರು ಗೊತ್ತಿರುವುದಿಲ್ಲ.  ಅದನ್ನು ತಿಳಿದುಕೊಂಡು ಏನಾಗಬೇಕಿದೆ ಎನ್ನುವ ದೋರಣೆ ಇವರದು. ಅದಕ್ಕೆ  ಇವರಿಗೆ ಏನು ಗೊತ್ತಿರುವುದಿಲ್ಲ ಒಂಥರ ಮೂಲನಿವಾಸಿಗಳು. ಬಾವಿಯಲ್ಲಿನ ಕಪ್ಪೆಗಳ ಹಾಗೆ. ನಾವು ಬೇರೆಯವರನ್ನು ಕೇಳುವುದು ಒಳ್ಳೆಯದು" ಅಂದಾಗ,   ಮೂಲದಲ್ಲಿಯಾದರೂ ತಿಳಿದುಕೊಳ್ಳಿ ಅಥವ ವಿದೇಶದಲ್ಲಿಯಾದರೂ ತಿಳಿದುಕೊಳ್ಳಿ, ಏನೋ ಒಂದು ಮಾಡಿ. ಈ ಬಿಸಿಲು ತಡೆಯುವುದಕ್ಕಾಗುವುದಿಲ್ಲ" ಎಂದಳು.  ಸೈಕಲ್ಲಿನಲ್ಲಿ ಹೋಗುತ್ತಿದ್ದ ಒಬ್ಬ ವಿದೇಶಿ ಹುಡುಗಿಯನ್ನು ಕೇಳಿದೆ. ಅವಳು ನಾವು ಹೋಗಬೇಕಾದ ರಸ್ತೆ ಅಲ್ಲಿಂದ ಎಷ್ಟು ಕಿಲೋಮೀಟರ್ ಸಾಗಬೇಕು ಮತ್ತು ಅಲ್ಲಿ ಎಡಭಾಗಕ್ಕೆ ತಿರುಗಿ ಎಷ್ಟು ಕಿಲೋಮೀಟರ್ ಹೋಗಬೇಕು ಎಲ್ಲವನ್ನು ವಿವರವಾಗಿ ಹೇಳಿದಳು. "ನೋಡಿದ್ಯಾ ಈ ಪ್ರೆಂಚ್ ಹುಡುಗಿ ಎಷ್ಟು ಕರೆಕ್ಟ್ ಆಗಿ ಹೇಳಿದಳು. ಅವಳು ಇಲ್ಲಿ ಬದುಕುವ ಅವಶ್ಯಕತೆಯಿರುವುದರಿಂದ ಪ್ರತಿಯೊಂದನ್ನು ತಿಳಿದುಕೊಂಡಿರುತ್ತಾಳೆ. ಅವಳಿಗೆ ಗೊತ್ತಿರುವಷ್ಟು ಇಲ್ಲಿನವರಿಗೆ ಗೊತ್ತಿರುವುದಿಲ್ಲ ನೋಡು,  ಈಗ ಹೋಗೋಣ" ಅಂದುಕೊಂಡು ಅಲ್ಲಿಂದ ಹೊರಟೆವು. 

       ಪಾಂಡಿಚೇರಿ ನಗರದಿಂದ ಹದಿನೈದು ಕಿಲೋಮೀಟರ್ ದೂರವಿರುವ ಆರೋವಿಲ್ಲವನ್ನು ಎರಡು ಗಂಟೆಯ ಹೊತ್ತಿಗೆ ತಲುಪಿದೆವು.  ಮುಖ್ಯರಸ್ತೆಯಿಂದ ಆಡ್ಡರಸ್ತೆಯಲ್ಲಿ ಮೂರು ಕಿಲೋಮೀಟರ್ ಚಲಿಸಿದರೆ ಅಲ್ಲಿಂದ ಮುಂದಕ್ಕೆ ನಿಮಗೆ ಆರೋವಿಲ್ಲ ತಲುಪುವವರೆಗೂ ಮಲೆನಾಡಿನ ನೆನಪಾಗುತ್ತದೆ. ರಸ್ತೆಯುದ್ದಕ್ಕೂ ಎರಡೂ ಬದಿಯಲ್ಲಿ ಕಿಲೋಮೀಟರುಗಳಷ್ಟು ಉದ್ದಕ್ಕೆ ದಟ್ಟಮರಗಳು ನಮಗೆ ದೊಡ್ಡ ಚತ್ರಿಗಳಂತೆ ಹಬ್ಬಿಕೊಂಡಿರುವುದರಿಂದ ಪಾಂಡಿಚೇರಿಯಲ್ಲಾದ ಸೆಕೆ ಇಲ್ಲಾಗುವುದಿಲ್ಲ.  ಬೈಕಿನಲ್ಲಿ ಆ ರಸ್ತೆಯಲ್ಲಿ ಸಾಗುವುದು ನಿಜಕ್ಕೂ ವಿಭಿನ್ನ ಮತ್ತು ಮರೆಯಲಾಗದ ಅನುಭವ.  ಒಳಗೆ ಹೋದಮೇಲೆ ಅಲ್ಲಿ ಅರೋವಿಲ್ಲ ಬಗ್ಗೆ ವಿಡಿಯೋ ನೋಡಿದೆವು.  ಅರೋವಿಲ್ಲಗೆ ಸೇರಿದಂತೆ ಐದಾರು ಅಂಗಡಿಗಳಿವೆ. ಆದ್ರೆ ಅವುಗಳಲ್ಲಿ ವಸ್ತುಗಳೆಲ್ಲಾ ದುಬಾರಿ.  ಸಂದರ್ಶನ ಕೇಂದ್ರದಿಂದ ಒಂದು ಕಿಲೋಮೀಟರ್ ದೂರವಿರುವ ಮಾತೃಮಂದಿರವನ್ನು ನಾವೆಲ್ಲಾ ನೋಡಲೇ ಬೇಕು.  ಅದೊಂದು ಅದ್ಬುತವಾದ ಸ್ಥಳ.

ಆರೋವಿಲ್ಲದ ಮಾತೃಮಂದಿರ

         ಮಾತೃಮಂದಿರದಲ್ಲಿ ಒಳಗೆ ದ್ಯಾನ ಮಾಡುವ ಅವಕಾಶ ಸಿಕ್ಕರೆ ಪಡೆದುಕೊಂಡವರು ಧನ್ಯ.  ನಿತ್ಯ ಬೆಳಗಿನ ಒಂಬತ್ತು ಗಂಟೆಯಿಂದ ಹತ್ತು ಗಂಟೆಯವರೆಗೆ ಕೇವಲ ಮುವತ್ತು-ಮುವತ್ತೈದು ಜನರಿಗೆ ಮಾತ್ರ ದ್ಯಾನ ಮಾಡಲು ಅವಕಾಶ. ಅದಕ್ಕಾಗಿ ಒಂದು ವಾರ ಮೊದಲೇ ಫೋನ್ ಅಥವ ಮೇಲ್ ಮಾಡಿ ಬುಕ್ ಮಾಡಿಕೊಳ್ಳಬೇಕು.  ನಮ್ಮ ಪಾಂಡಿಚೇರಿ ಪ್ರವಾಸ ಮೂರು ದಿನದಲ್ಲಿ ತೀರ್ಮಾನವಾಗಿದ್ದರಿಂದ ನಮಗೆ ಮಾತೃಮಂದಿರದ ಒಳಗೆ ಹೋಗುವುದಕ್ಕೆ ಬುಕ್ ಮಾಡಲು ಆಗಲಿಲ್ಲ.  ಆದರೂ ಹೊರಗಿನಿಂದಲೇ ನೋಡಿ  ಖುಷಿಪಟ್ಟೆವು.  ಅಲ್ಲಿಂದ ವಾಪಸ್ಸು ಬರುವಾಗ ನಮ್ಮದೇ ಪೋಟೋ ಶೆಷನ್ ಮಾಡಿಕೊಂಡೆವು.  ನಾನು ಹೇಮಾಳ ಫೋಟೊಗಳನ್ನು ಕ್ಲಿಕ್ಕಿಸಿದರೇ ಹೇಮಾ ನನ್ನ ಫೋಟೊಗಳನ್ನು ಕ್ಲಿಕ್ಕಿಸಿದಳು.

      
           
                     

                           
ಮತ್ತೆ ಪೂರ್ತಿ ಆರೋವಿಲ್ಲವನ್ನು ನೋಡಬೇಕಾದರೆ ಅರ್ಧದಿನ ಬೇಕು. ಇಷ್ಟಾದರೂ ಆರೋವಿಲ್ಲದಲ್ಲಿ  ಯಾವುದಕ್ಕೂ ಹಣತೆಗೆದುಕೊಳ್ಳುವುದಿಲ್ಲವೆನ್ನುವುದು ವಿಶೇಷ.  ಆರೋವಿಲ್ಲದ ಸುತ್ತಮುತ್ತ ಹಳ್ಳಿಗಳಲ್ಲಿ ಅನೇಕ ಪ್ರೆಂಚರು ವಾಸವಾಗಿದ್ದಾರೆ. ಅವರು ನಮ್ಮ ಹಳ್ಳಿಗರಂತೆ ಬದುಕುತ್ತಿದ್ದಾರೆ.  ವಾಪಸ್ ಬರುವಾಗ ರಸ್ತೆ ಬದಿಯ ಒಂದು ಮನೆಯ ಮುಂದೆ ಮರಳಿನ ಆಟವಾಡುತ್ತಿದ್ದ ಇಬ್ಬರು ಪ್ರೆಂಚ್ ಮಕ್ಕಳ ಫೋಟೊವನ್ನು ಕ್ಲಿಕ್ಕಿಸಿದ್ದೆ.

        ಮತ್ತೆ ಪಾಂಡಿಚೇರಿಗೆ ವಾಪಸ್ ಬಂದಾಗ ಸಂಜೆ ಆರುಗಂಟೆ. ರೂಮಿಗೆ ಹೋಗಿ ಒಂದು ಗಂಟೆ ವಿರಾಮ.  ನಂತರ ಸಂಜೆ ಸ್ವಲ್ಪ ಪಾಂಡಿಚೇರಿ ರಸ್ತೆಗಳಲ್ಲಿ ಷಾಪಿಂಗ್. ರಾತ್ರಿ ಎಂಟಕ್ಕೆ ಆಶ್ರಮದಲ್ಲಿ ಊಟ. ಹಿಂದಿನ ದಿನ ರಾತ್ರಿ ಪೂರ್ತಿ ನಿದ್ರೆಯಿಲ್ಲದ ಬಸ್ ಪ್ರಯಾಣ ಮತ್ತೆ ಬಿಸಿಲಲ್ಲಿ ಸುತ್ತಾಟ ಇದೆಲ್ಲದರ ಪರಿಣಾಮ  ಮತ್ತೆ ರೂಮಿಗೆ ಬಂದು ಹಾಸಿಗೆ ಮೇಲೆ ಬಿದ್ದುಕೊಂಡವಷ್ಟೆ. ಮರುಕ್ಷಣದಲ್ಲಿ ಗಾಡನಿದ್ರೆ.   ಒಮ್ಮೆಯೂ ಎಚ್ಚರವಾಗದ ಅಪರೂಪದ ನಿದ್ರೆಯಾಗಿತ್ತು.

         ಮರುದಿನ ಬೆಳಿಗ್ಗೆ ಎದ್ದಾಗ ಎಂಟುಗಂಟೆ.  ಆರಾಮವಾಗಿ ಎದ್ದು ಸ್ನಾನ ಮುಗಿಸಿ ನಮ್ಮ ಬಾಡಿಗೆ ಆಕ್ಟೀವ್ ಹೋಂಡದಲ್ಲಿ ಹೊರಟಾಗ ಒಂಬತ್ತು ಗಂಟೆ.   ಹತ್ತಿರದ ಹೋಟಲ್ಲಿನಲ್ಲಿ ತಿಂಡಿ ಮುಗಿಸಿ  ಮೊದಲಿಗೆ ಬೀಚ್ ರಸ್ತೆಯಲ್ಲಿರುವ ಪ್ರವಾಸಿ ಮಾಹಿತಿ ಕೇಂದ್ರಕ್ಕೆ ಹೋಗಿ ನೋಡಬೇಕಾದ ಸ್ಥಳಗಳು ಮತ್ತು ಪಾಂಡಿಚೇರಿ ಮ್ಯಾಪ್  ಪಡೆದುಕೊಂಡೆವು.  ಅದನ್ನು ಅಲ್ಲಿ ಪ್ರವಾಸಿಗಳಿಗಾಗಿ ಉಚಿತವಾಗಿ ಕೊಡುತ್ತಾರೆ.  ಇವತ್ತು ಯಾರನ್ನು ಕೇಳುವುದು ಬೇಡ ಈ ಮ್ಯಾಪ್ ನೋಡಿಕೊಂಡೇ ಇಲ್ಲಿನ ಚರ್ಚು, ದೇವಸ್ಥಾನ ಮತ್ತು ಮಸೀದಿ ಇನ್ನಿತರ ಸ್ಥಳಗಳನ್ನು ನೋಡೋಣ ಅಂತ ತೀರ್ಮಾನಿಸಿಕೊಂಡೆವು. ಆ ಮ್ಯಾಪನ್ನು ಆಕ್ಟೀವ್ ಹೋಂಡದ ತಲೆಯ ಮೇಲೆ ಸಿಕ್ಕಿಸಿಕೊಂಡು ನಮ್ಮ ಎರಡನೆ ದಿನದ ಸವಾರಿ ಪ್ರಾರಂಭವಾಯಿತು.

 ಆಕ್ಟೀವ್ ಹೋಂಡ ತಲೆ ಮೇಲೆ ಪಾಂಡಿಚೇರಿ ರಸ್ತೆಗಳ ನಕ್ಷೆ

ಮತ್ತೆ ಪಾಂಡಿಚೇರಿ ನಗರದಲ್ಲಿ ಚಲಿಸುವ ಬಸ್ಸು ಕಾರು ವ್ಯಾನು ಲಾರಿ, ಜೀಪು, ಬೈಕು ಸ್ಕೂಟರು, ಮೊಪೆಡುಗಳು ಮತ್ತು ಅದನ್ನು ಓಡಿಸುವ ಜನರ ಬಗ್ಗೆ ಹೇಳಲೇ ಬೇಕು.  ನಾವು ಅಲ್ಲಿ ನಮ್ಮ ಸ್ಕೂಟರ್ ಓಡಿಸುವಾಗ ಆಡ್ರೆಸ್ಸುಗಳನ್ನು ಹುಡುಕುತ್ತಾ ರಸ್ತೆಗಳ ಹೆಸರು, ಅಡ್ಡದಾರಿಗಳು, ಉದ್ದದಾರಿಗಳು ಟ್ರಾಫಿಕ್ ಬೋರ್ಡುಗಳು, ಸಿಗ್ನಲ್ಲುಗಳು ಇವುಗಳನ್ನೆಲ್ಲಾ ನೋಡಿಕೊಂಡು ನಿದಾನವಾಗಿ ಓಡಿಸುತ್ತಿದ್ದೆ.  ಆದ್ರೆ ನಮ್ಮ ಹಿಂದೆ ಮುಂದೆ ಚಲಿಸುವ ಬೈಕು ಕಾರು, ಇತ್ಯಾದಿ ವಾಹನಗಳು ಯಾವುದೇ ರೂಲ್ಸು ಫಾಲೋ ಮಾಡೋದಿಲ್ಲ. ಅರ್ದಾತ್ ಅವರು ರೂಲ್ಸ್ ಇರುವುದೇ ಮುರಿಯುವುದಕ್ಕೆ ಅಂತ ತೀರ್ಮಾನಿಸಿಕೊಂಡುಬಿಟ್ಟಿದ್ದಾರೆ.  ನೀವು ಎಡಪಕ್ಕದಲ್ಲಿ ನಿದಾನವಾಗಿ ಹೋಗುತ್ತಿದ್ದರೆ ಜೋರಾಗಿ ನಿಮ್ಮ ಎಡಪಕ್ಕದಲ್ಲಿಯೇ ಜೋರಾಗಿ ನುಗ್ಗಿಹೋಗಿ ನಿಮ್ಮನ್ನು ಗಾಬರಿಗೊಳಿಸುತ್ತಾರೆ.  ಸಡನ್ನಾಗಿ ಎದುರಿಗೆ ಬಂದು ಎಡಕ್ಕೋ ಬಲಕ್ಕೋ ತಿರುಗಿಬಿಡುತ್ತಾರೆ.  ಮತ್ತೆ ಬಸ್ಸು ಕಾರುಗಳಂತ ವೇಗವಾಗಿ ನಮ್ಮ ಎದುರಿಗೆ ತೀರ ಎಡಪಕ್ಕಕ್ಕೆ ಜೋರಾಗಿ ಹಾರ್ನ್ ಮಾಡಿಕೊಂಡು ಬರುವುದನ್ನು ನೋಡಿದರೆ ನಮ್ಮ ಜೀವ ಬಾಯಿಗೆ ಬಂದಂತೆ ಆಗುತ್ತದೆ. ಆದ್ರೆ ಅವರಿಗೆ ಅದರ ಅರಿವೇ ಇರುವುದಿಲ್ಲ.  ಮತ್ತೆ ರಸ್ತೆಯಲ್ಲಿ ಹಾಕಿರುವ "ಹಾರ್ನ್ ಮಾಡಬೇಡಿ", ಬಲ ತಿರುವು ಇಲ್ಲ, ಎಡತಿರುವು ಇಲ್ಲ, ಒನ್ ವೇ, ಇತ್ಯಾದಿ ಬೋರ್ಡುಗಳಿಗೆ ಬೆಲೆಯೇ ಇಲ್ಲ.  ಅದ್ಯಾವುದೂ ಇಲ್ಲ ಯಾವ ರಸ್ತೆಯಲ್ಲಿ ಹೇಗೆ ಬೇಕಾದರೂ ಹೋಗಬಹುದು ಎಂದುಕೊಂಡು ಜೋರಾಗಿ ಹಾರ್ನ್ ಮಾಡುತ್ತಾ ವೇಗವಾಗಿ ಬೈಕುಗಳನ್ನು ಓಡಿಸುತ್ತಾರೆ. ಹೀಗೆ ಸಾವಿರಾರು ಜನರು ಟ್ರ್‍ಆಫಿಕ್ ನಿಯಮಗಳನ್ನು ಮುರಿಯುತ್ತಿದ್ದರೂ ಅಲ್ಲಿನ ಪೋಲಿಸರು ನಾನಿದ್ದ ಎರಡು ದಿನದಲ್ಲಿ ಒಮ್ಮೆಯೂ ಯಾರನ್ನು ತಡೆದು ನಿಲ್ಲಿಸಲಿಲ್ಲ, ನಿಲ್ಲಿಸಿ ದಂಡ ವಸೂಲಿ ಮಾಡಲಿಲ್ಲ.  ಇದೆಂಥ ಟ್ರಾಫಿಕ್ ವ್ಯವಸ್ಥೆ ಅಂತ ನಮ್ಮಂತ ಬೆಂಗಳೂರ್‍ಇಗೆ ಅನ್ನಿಸದಿರದು.  ನಾವೊಂದು ಟ್ರ್‍ಆಫಿಕ್‍ನಲ್ಲಿ ನಿಂತಿದ್ದೆವು ನೂರ ಇಪ್ಪತ್ತು ಸೆಕೆಂಡುಗಳು ಕಳೆದ ಮೇಲೆ ಹೋಗಬೇಕಿತ್ತು.  ಆದ್ರೆ ಒಬ್ಬೊಬ್ಬರೇ ನಿದಾನವಾಗಿ ಒಂದೊಂದು ಅಡಿ ಚಲಿಸುತ್ತಾ, ಸಿಗ್ನಲ್ಲಿಗೆ ಹತ್ತಿರ ಬಂದರು. ಅಷ್ಟರಲ್ಲಿ ಅರವತ್ತು  ಮುಗಿದು ಇನ್ನೂ ಅವರತ್ತು ಸೆಕೆಂಡು ಆಗಬೇಕಿತ್ತು.  ನಮ್ಮ ಬಲಗಡೆ ಅಡ್ಡರಸ್ತೆಯಲ್ಲಿ ಇನ್ನೂ ವಾಹನಗಳು ಚಲಿಸುತ್ತಿರುವಾಗಲೇ ಮುಂದೆ ಹೋಗಿದ್ದ ಇವರೆಲ್ಲಾ ನುಗ್ಗಿದರು. ಅವರ ಮತ್ತಷ್ಟು ಬೈಕುಗಳು...ಹೀಗೆ ಎಲ್ಲರೂ ಹೋಗಿಬಿಟ್ಟರು ಇನ್ನೂ ಐವತ್ತು ಸೆಕೆಂಡು ಮುಗಿಯಬೇಕಿತ್ತು. ಆದ್ರೆ ಉಳಿದುಕೊಂಡಿದು ನಾವು ಮಾತ್ರ!  ಆ ಕ್ಷಣದಲ್ಲಿ ಆ ವಾತಾವರಣದಲ್ಲಿ ನಾವು ದಡ್ಡರೋ ಅಥವ ಬುದ್ದಿವಂತರೋ...ಎನ್ನುವ ಗೊಂದಲ ಉಂಟಾಗಿಬಿಟ್ಟಿತ್ತು.

    "ಇವರನ್ನೆಲ್ಲಾ ಬೆಂಗಳೂರಿಗೆ ಕಳಿಸಿ ನಮ್ಮ  ಟ್ರಾಫಿಕ್ ಪೋಲಿಸರ ಕೈಲಿ ಸಿಕ್ಕಿಹಾಕಿಕೊಂಡು ಬರೆಹಾಕಿಸಿ ಸಾವಿರಾರು ರೂಪಾಯಿ ದಂಡಕಟ್ಟಿಸಬೇಕು ಕಣ್ರಿ ಆಗ ಇವರಿಗೆ ಬುದ್ದಿ ಬರುತ್ತದೆ" ಅಂತ ಹೇಮಾಶ್ರೀ  ಸಿಟ್ಟಿನಿಂದ ಹೇಳುವಾಗ ನನಗೂ ಹಾಗೆ ಅನ್ನಿಸಿತ್ತು.

            ಪಾಂಡಿಚೇರಿಯ ದಕ್ಷಿಣಕ್ಕೆ ಇರುವ ಒಂದು ಚರ್ಚು ವಾಸ್ತು ಶಿಲ್ಪ ಮತ್ತು ಕಲೆಯ ವಿಚಾರದಲ್ಲಿ ಅದ್ಬುತವಾದುದು. ಒಳಗೆ ಹೋದೆವು.  ತುಂಬಾ ಶಾಂತವಾದ ವಾತವರಣ.  ಅಲ್ಲಿನ ಸೆಕ್ಯುರಿಟಿಯನ್ನು ಫೋಟೊತೆಗೆಯಲು ಅನುಮತಿ ಪಡೆದು ಫೋಟೊಗಳನ್ನು ಕ್ಲಿಕ್ಸಿಸಿಕೊಂಡೆವು.


ಹೇಮಾಶ್ರಿ ಏಸುವಿನಲ್ಲಿ ಏನನ್ನು ಬೇಡಿಕೊಳ್ಳುತ್ತಿದ್ದಾಳೋ.. 


ಒಂದು ಗಂಟೆ ಆ ಚರ್ಚಿನಲ್ಲಿ ಕಳೆದು  ನಂತರ ಹತ್ತಿರದಲ್ಲಿದ್ದ ಎರಡು ಮಸೀದಿಗೆ ಹೋಗಿಬಂದೆವು. ಅಷ್ಟರಲ್ಲಾಗಲೇ ಹನ್ನೊಂದು ಗಂಟೆಯಾಗಿದ್ದರಿಂದ ಬಿಸಿಲು ಮತ್ತು ಸೆಕೆ ಜಾಸ್ತಿಯಾಗಿ ಬೆವರಿಳಿಯಲಾರಂಭಿಸಿತ್ತು.  ರಸ್ತೆಯ ಬದಿಯಲ್ಲಿ ನಮ್ಮ ಗಾಡಿ ನಿಲ್ಲಿಸಿ ತಣ್ಣಗಿನ ನೀರಿನ ಬಾಟಲ್ ತರುವಷ್ಟರಲ್ಲಿ ಅಲ್ಲೊಬ್ಬ ಬಿಕ್ಷುಕ ಹಾಜರ್!  ಮತ್ತೆ ಈ ಬಿಕ್ಷುಕರ ವಿಚಾರವನ್ನು ಇಲ್ಲಿ ಬರೆಯಲೇ ಬೇಕು. ಅಲ್ಲಿರುವ ಎಲ್ಲಾ ಪಾರ್ಕಿಂಗ್ ಜಾಗದಲ್ಲೂ ಒಬ್ಬೊಬ್ಬ ಬಿಕ್ಷುಕ ಇರುತ್ತಾನೆ. ನೀವು ವಾಪಸ್ಸು ಗಾಡಿ ತೆಗೆಯುವಾಗ ’ಸಾರ್. ಅಮ್ಮ, ತಂಬಿ,.....ಹೀಗೆ ಕೂಗುತ್ತಾ ನಿಮ್ಮ ಮುಂದೆ ಕೈಯೊಡ್ಡುತ್ತಾರೆ.  ನಾವು ಒಂದು ಅಥವ ಎರಡು ರೂಪಾಯಿ ಕೊಟ್ಟರೆ  ಒಂದು ನಮಸ್ಕಾರ, ಥ್ಯಾಂಕ್ಸ್ ಏನೂ ಹೇಳದೇ ಹಾಗೆ ಹೋಗಿಬಿಡುತ್ತಾರೆ. "ಎಲಾ ಇವನಾ, ಒಂದು ನಗು, ಅಥವ ಒಂದು ಥ್ಯಾಂಕ್ಸು, ನಮಸ್ಕಾರವನ್ನು ಹೇಳಲ್ಲವಲ್ಲ ಇವರು ಅಂತ ನಾನು ಬೈದುಕೊಂಡರೆ "ರೀ ಹೋಗ್ಲಿ ಬಿಡ್ರಿ, ಅವರು ಪಾರ್ಕಿಂಗ್ ಚಾರ್ಚು ತಗೊಂಡಿದ್ದಾರೆ. ನಮ್ಮ ಬೆಂಗಳೂರಿನಲ್ಲಿ ಪಾರ್ಕಿಂಗ್ ಚಾರ್ಚ್ ಕೊಟ್ಟರೆ ಯಾರೂ ಕೂಡ ಥ್ಯಾಂಕ್ಸ್, ನಮಸ್ಕಾರ ಏನೂ ಹೇಳುವುದಿಲ್ಲವಲ್ಲ  ಇಲ್ಲೂ ಹಾಗೆ ಅಂದುಕೊಳ್ಳಿ" ಅಂತ ಅಂದಾಗ ಅವಳ ಸಮಯಸ್ಪೂರ್ತಿಯ ಹಾಸ್ಯಕ್ಕೆ ಇಬ್ಬರೂ ಜೋರಾಗಿ ನಕ್ಕಿದ್ದೆವು.  ಈ ಎರಡು ದಿನದಲ್ಲಿ ಬಿಕ್ಷುಕರಲ್ಲಿ ನಾವು ಥ್ಯಾಂಕ್ಸ್ ನಿರೀಕ್ಷೆಮಾಡಲಿಲ್ಲ.

   ಪಾಂಡಿಚೇರಿಯಲ್ಲಿನ ಮುಖ್ಯರಸ್ತೆಯಲ್ಲಿಯೇ ಇರುವ ಮತ್ತೊಂದು ದೊಡ್ಡ ಚರ್ಚ್ ಒಳಗೆ ಹೋದರೆ ಅಲ್ಲಿ ಇಡೀ ನೆಲವನ್ನು ಅಗೆದು ಮಟ್ಟಮಾಡುತ್ತಿದ್ದರು. ಬಹುಶಃ ನವೀಕರಿಸುತ್ತಿರಬಹುದು ಅಂದುಕೊಂಡು ಹೊರಗೆ ಬಂದರೆ ಅಲ್ಲೊಬ್ಬ ಎರಡು ವರ್ಷದ ಪುಟ್ಟ ಬಾಲಕ ನಮ್ಮ ದಾರಿಗೆ ಅಡ್ಡವಾಗಿ ನಿಂತು ಅಳುತ್ತಿದ್ದ.  ಅವನ ಎರಡು ಕೈಗಳಲ್ಲಿ ಬಿಸ್ಕೆಟ್ಟುಗಳಿದ್ದವು.

ನಾನು ತಮಿಳಿನಲ್ಲಿ ಏಕೆ ಅಳುತ್ತಿದ್ದೀಯಪ್ಪ ಅಂತ ಕೇಳಿದೆ.  ನನ್ನ ಮಾತನ್ನು ಕೇಳಿ ಮತ್ತಷ್ಟು ಜೋರಾಗಿ ಅಳಲಾರಂಭಿಸಿದ. ಹೋಗಲಿಬಿಡು ಅಂದುಕೊಂಡು ಅವನ ಫೋಟೊಗಳನ್ನು ಕ್ಲಿಕ್ಸಿಸಿದ್ದೆ.  ಅಷ್ಟರಲ್ಲಿ ಚರ್ಚಿನಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಅವನ ತಾಯಿ ಓಡಿಬಂದಳು. ಅವನಿಗೆ ಏನು ಬೇಕು ಅಂತ ಕೇಳಿದಾಗ ಕೈಯಲ್ಲಿದ್ದ ಬಿಸ್ಕೆಟ್ಟುಗಳನ್ನು ಎಸೆದುಬಿಟ್ಟ.

ಆಕೆಗೆ ಏನು ಅರ್ಥವಾಯಿತೋ ತನ್ನ ಸೀರೆ ಸೆರಗಿನಲ್ಲಿ ಕಟ್ಟಿಕೊಂಡಿದ್ದ ಎರಡು ಲಾಲಿಪಪ್ ಚಾಕಲೇಟನ್ನು ಕೊಟ್ಟಳು. ಅದನ್ನು ನೋಡಿ ಸುಮ್ಮನಾಗಿ ಬಾಯಲ್ಲಿ ಚೀಪತೊಡಗಿದ.  ಇವನು ಸುಮ್ಮನಾಗಿದ್ದು ನೋಡಿ ಮತ್ತೆ ಅವಳು ತನ್ನ ಕೆಲಸದ ಕಡೆಗೆ ಹೋದಳು. ಆ ಹುಡುಗನ ಫೋಟೊ ತೆಗೆಯುತ್ತಾ ಅವನ ಹೆಸರನ್ನು ಕೇಳುತ್ತಿರಬೇಕಾದರೆ ಹತ್ತಿರದಲ್ಲಿದ್ದ ಅಜ್ಜಿಯೊಬ್ಬಳು  "ಅವನ ಹೆಸರು  ಅಜಿತ್.   ಅವಳಮ್ಮನ ಹೆಸರು ಸೆಲ್ವಿ. ಇವನಪ್ಪ ಬಸುರಿಯಾದ ಅವಳನ್ನು ಅಸ್ಪತ್ರೆಗೆ ಸೇರಿಸಿ ಇವನು ಹುಟ್ಟುವ ಸಮಯದಲ್ಲಿ ಓಡಿಹೋದ. ಇನ್ನೂ ಪತ್ತೆ ಇಲ್ಲ"  ಅಂತ ತಮಿಳಿನಲ್ಲಿ ಹೇಳಿದಾಗ, ಈ ಮಗು ಹುಟ್ಟಿದಾಗ ಅವನ ತಾಯಿಯ ಪರಿಸ್ಥಿತಿ ಮತ್ತು ಈಗಿನ ಪರಿಸ್ಥಿತಿಗಾಗಿ ಆಕೆಯತ್ತ ತಿರುಗಿ ನೋಡಿದರೆ ಚರ್ಚ್ ಮುಂಭಾಗದಲ್ಲಿ ಮಣ್ಣು ತುಂಬಿದ ಬಾಂಡ್ಲಿಯನ್ನು ತಲೆಯ ಮೇಲೆ ಹೊತ್ತುಕೊಂಡು ಹೋಗುತ್ತಿದ್ದಳು. ಇತ್ತ ಈ ಪುಟ್ಟಮಗು ಲಾಲಿಪಪ್ ಸಿಹಿಯನ್ನು ಸವಿಯುತ್ತಿತ್ತು. .
              

          ಅಲ್ಲಿಂದ ಹೊರಟು  ಮಹಾತ್ಮ ಗಾಂಧಿ ರಸ್ತೆಯಲ್ಲಿನ ಶಿವನ ದೇವಾಲಯಕ್ಕೆ ಹೋದೆವು. ಅಲ್ಲಿ ನಮಸ್ಕಾರ ಪೂಜೆ ಇತ್ಯಾದಿ ಮುಗಿಯುವ ಹೊತ್ತಿಗೆ  ಹನ್ನೆರಡು ಗಂಟೆ. ಮತ್ತೆ ಆಶ್ರಮಕ್ಕೆ ಹೋಗಿ ಊಟಮಾಡಿದೆವು. ನಂತರ ಅರಬಿಂದೋ ಆಶ್ರಮ, ಅಲ್ಲಿನ ಸರ್ಕಾರಿ ಮ್ಯೂಸಿಯಂ ನೋಡಿಕೊಂಡು ಮತ್ತೆ ರೂಮಿಗೆ ಬಂದು ಸ್ವಲ್ಪ ಹೊತ್ತು ವಿರಮಿಸಿ ನಾಲ್ಕುಗಂಟೆಯ ಹೊತ್ತಿಗೆ ಪಾಂಡಿಚೇರಿ ಬೀಚಿಗೆ ಹೋದೆವು. ಆರುಗಂಟೆಯವರೆಗೆ ಚೆನ್ನಾಗಿ ಬೀಚಿನಲ್ಲಿ ಆಟವಾಡಿ ವಾಪಸ್ಸು ಬಂದು ಮತ್ತೊಮ್ಮೆ ಚೆನ್ನಾಗಿ ಸ್ನಾನ ಮಾಡಿದಾಗ ಸ್ವಲ್ಪ ಉಲ್ಲಾಸವೆನಿಸಿತು. ಸಂಜೆ ಒಂದಷ್ಟು ಶಾಪಿಂಗ್ ಮಾಡಿದೆವು.  ರಾತ್ರಿ ಊಟಕ್ಕೆ ಆಶ್ರಮದಲ್ಲಿ ಅನ್ನ ಸಾರು, ಮೊಸರು, ಮಾವಿನಹಣ್ಣು ಜೊತೆಗೆ ಗೋದಿ ಪಾಯಸವಿತ್ತು.  ಹೊಟ್ಟೆತುಂಬಾ ಊಟಮಾಡಿ ನಂತರ ಎರಡು ದಿನ  ಏನೂ ತೊಂದರೆಯಾಗದಂತೆ ಪಾಂಡಿಚೇರಿಯಲ್ಲೆಲ್ಲಾ ಸುತ್ತಾಡಿಸಿದ ಆಕ್ಟೀವ್ ಹೋಂಡವನ್ನು ವಾಪಸ್ಸು ಕೊಟ್ಟು ನಮ್ಮ ಡೆಪಾಸಿಟ್ ಹಣವನ್ನು ಮತ್ತು  ಡ್ರೈವಿಂಗ್ ಲೈಸೆನ್ಸ್ ವಾಪಸ್ ಪಡೆದು ನಿದಾನವಾಗಿ ನಮ್ಮ ಗೆಸ್ಟ್ ಹೌಸ್ ಕಡೆಗೆ ವಾಕಿಂಗ್ ಹೊರಟಾಗ ರಾತ್ರಿ ಎಂಟುವರೆ. ವಾಕಿಂಗ್ ಸಮಯದಲ್ಲಿ ರಾತ್ರಿ ಪಾಂಡಿಚೇರಿ ರಸ್ತೆಗಳ ಫೋಟೊ ಕ್ಲಿಕ್ಕಿಸಿದ್ದೆ.

ರಾತ್ರಿ ಪಾಂಡಿಚೇರಿ ರಸ್ತೆಗಳು


        ಮೊದಲೇ ಎಲ್ಲವನ್ನು ಪ್ಯಾಕ್ ಮಾಡಿದ್ದರಿಂದ "ಕರ್ನಾಟಕ ನಿಲಯಂ"  ಗೆಸ್ಟ್ ಹೌಸ್ ನೋಡಿಕೊಳ್ಳುವ ಮಲ್ಲಿಕಾರ್ಜುನಪ್ಪ ಮತ್ತು ಅವರ ಕುಟುಂಬವನ್ನು ಮಾತನಾಡಿಸಿ ಅವರಿಗೆ ಥ್ಯಾಂಕ್ಸ್ ಹೇಳಿ ನಾವು  ಪಾಂಡಿಚೇರಿ ಬಸ್ ನಿಲ್ದಾಣ ತಲುಪುವ ಹೊತ್ತಿಗೆ ಒಂಬತ್ತುವರೆಯಾಗಿತ್ತು. ನಮ್ಮ ಬಸ್ಸು ಹತ್ತಗಂಟೆ ಬರುವುದಿತ್ತು.  ಬಸ್ಸಿನ ಸೀಟಿಗೆ ತಲೆಕೊಟ್ಟಿದ್ದಷ್ಟೆ. ಬೆಳಿಗ್ಗೆ ಬೆಂಗಳೂರು ತಲುಪಿದಾಗಲೇ ಎಚ್ಚರ.

 ನಮ್ಮ ಪಾಂಡಿಚೇರಿ ಪ್ರವಾಸದ ಮತ್ತಷ್ಟು ಫೋಟೊಗಳು ನನ್ನ ಫೇಸ್ ಬುಕ್‍‍ನಲ್ಲಿ

ಚಿತ್ರಗಳು ಮತ್ತು ಲೇಖನ
ಶಿವು.ಕೆ