Tuesday, February 23, 2010

ಎರಡು ಮುಂಜಾವಿನ ಸತ್ಯ ಕತೆಗಳು

ಹತ್ತು ವರ್ಷಗಳ ಹಿಂದೆ ನಾನು ಪ್ರತಿದಿನ ೨೦೦ ಗ್ರಾಹಕರನ್ನು ಹೊಂದಿರುವ ಪುಟ್ಟ ವೆಂಡರ್ ಆಗಿದ್ದೆ. ಆಗ ಶರವಣ ಎನ್ನುವ ಹುಡುಗ ಪೇಪರ್ ಹಾಕುತ್ತೇನೆ ಅಂತ ನನ್ನ ಬಳಿ ಸೇರಿಕೊಂಡ. ಅವನಿಗೆ ಬೆಳಗಿನ ಮುಕ್ಕಾಲು ಗಂಟೆಯ ಕೆಲಸಕ್ಕೆ ತಿಂಗಳಿಗೆ ಮುನ್ನೂರು ರೂಪಾಯಿ ಕೊಡುತ್ತಿದ್ದೆ. ಹತ್ತನೇ ತರಗತಿ ಓದುತ್ತಿದ್ದವನು ನಾನು ಕೊಟ್ಟ ಹಣವನ್ನು ಇಡೀ ತಿಂಗಳ ಖರ್ಚಿಗೆ ಹೊಂದಿಸಿಕೊಳ್ಳುತ್ತಿದ್ದ. ಬಡ ಮದ್ಯಮವರ್ಗದ ತುಂಬುಕುಟುಂಬದ ಹುಡುಗನಾದ ಅವನಿಗೆ ಮನೆಯ ಜವಾಬ್ದಾರಿಯ ಜೊತೆಗೆ ಬದುಕಿನಲ್ಲಿ ತನ್ನ ಕಾಲ ಮೇಲೆ ನಿಲ್ಲಬೇಕೆಂಬ ಚಲವಿತ್ತು. ನಾಲ್ಕು ವರ್ಷಗಳು ಕಳೆಯುವ ಹೊತ್ತಿಗೆ ಅವನಿಗೆ ಸ್ವಲ್ಪ ಅನುಭವವಾಗಿತ್ತಲ್ಲ, ನಾನೇ ಒಂದು ಏಜೆನ್ಸಿ ತೆಗೆದುಕೊಂಡು ನಡೆಸುತ್ತೇನೆ ಅಂದವನಿಗೆ ನನಗೆ ತಿಳಿದ ವಿಚಾರಗಳನ್ನು, ಇದರ ಅನುಕೂಲ-ಅನಾನುಕೂಲಗಳನ್ನು ವಿವರಿಸಿ ಜವಾಬ್ದಾರಿಯಿಂದ ನಡೆಸಿಕೊಂಡು ಹೋಗುವ ಸಾಮಾನ್ಯ ಜ್ಞಾನವನ್ನು ಅವನಿಗೆ ಗೊತ್ತುಪಡಿಸಿ ಸಹಕರಿಸಿದ್ದೆ. ಈ ಮದ್ಯೆ ಓದು ಕೈಕೊಟ್ಟಿದ್ದರಿಂದ ಪೂರ್ಣಮಟ್ಟದಲ್ಲಿ ಪತ್ರಿಕೆವಿತರಣೆಗೆ ತೊಡಗಿಕೊಂಡ. ನಡುವೆ ಕರೆಸ್ಪಾಂಡೆನ್ಸ್‍ನಲ್ಲಿ ಪದವಿ ಮುಗಿಸಿದ್ದರಿಂದ ಶಿವಾಜಿನಗರಲ್ಲಿನ ಒಂದು ಟ್ರಾವಲ್ ಏಜೆನ್ಸಿಯಲ್ಲಿ ಆಫೀಸ್ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡ. ದಿನಪತ್ರಿಕೆ ವಿತರಣೆ, ಅಫೀಸ್ ಬಾಯ್ ಕೆಲಸದ ನಡುವೆಯೇ ಕಂಪ್ಯೂಟರಿನ ಬೇಸಿಕ್ ಟ್ರೈನಿಂಗ್ ಕಲಿತಿದ್ದರಿಂದ ಅದೇ ಅಫೀಸಿನಲ್ಲಿ ಅವನ ಕೆಲಸ ಬದಲಾಯಿತು. ಅವನು ಎಷ್ಟು ಚೆನ್ನಾಗಿ ಕೆಲಸ ಮಾಡುತ್ತಿದ್ದನೆಂದರೆ ತನ್ನ ಕೆಲಸದ ಜೊತೆಗೆ ಇತರರ ಕೆಲಸವನ್ನು ಮಾಡಿಕೊಡುತ್ತಿದ್ದರಿಂದ ಬೇರೆ ಟ್ರಾವಲ್ ಏಜೆನ್ಸಿಯವ


ರು ನೇರವಾಗಿ ಐದಂಕಿ ಸಂಬಳಕ್ಕೆ ಕರೆದಾಗ ಅಲ್ಲಿಗೆ ಸೇರಿಕೊಂಡುಬಿಟ್ಟ.
ಮೊನ್ನೆ ತೆಗೆದಶರವಣನ ಫೋಟೋ




ಮುಂದೆ ಇದೇ ಶರವಣ ತನ್ನ ಕೆಲಸದಲ್ಲಿ ಎಷ್ಟು ಪರಿಣತಿ ಹೊಂದಿದನೆಂದರೆ, ಟ್ರಾವಲ್ ಏಜೆನ್ಸಿ ಗ್ರಾಹಕರ ಏರೋಪ್ಲೇನ್ ಟಿಕೆಟ್ ಬುಕಿಂಗ್‍ನಿಂದ ಹಿಡಿದು ಆ ಅಫೀಸಿನ ಎಲ್ಲಾ ಕೆಲಸಗಳನ್ನು ಮಾಡುವಷ್ಟು ಪರಿಣತನಾಗಿಬಿಟ್ಟಿದ್ದ. ಸಹಜವಾಗಿ ಅವನ ಕೆಲಸದ ಬದ್ಧತೆಯನ್ನು ಗುರುತಿಸಿ ಪ್ರಖ್ಯಾತ ತಾಮಸ್ ಕುಕ್ ಕಂಪನಿ ಮತ್ತಷ್ಟು ಹೆಚ್ಚಿನ ಸಂಬಳಕ್ಕೆ ಸೆಳೆದುಕೊಂಡಿತು. ನಡುವೆ ಎರಡು ಕೆಲಸ ಮಾಡಲಾಗುತ್ತಿಲ್ಲವೆಂದು ದಿನಪತ್ರಿಕೆ ವಿತರಣೆಯನ್ನು ಬೇರೆಯವರಿಗೆ ಬಿಟ್ಟುಕೊಟ್ಟು ಪೂರ್ಣಮಟ್ಟದಲ್ಲಿ ಹೊಸ ಕೆಲಸದಲ್ಲಿ ತೊಡಗಿಸಿಕೊಂಡುಬಿಟ್ಟ. ಇಷ್ಟೇಲ್ಲಾ ಬೆಳವಣಿಗೆಯ ಬದಲಾವಣೆಗಳನ್ನು ನನಗೆ ಸಿಕ್ಕಿದಾಗಲೆಲ್ಲಾ ಹೇಳಿ ನನ್ನಿಂದ ಸಲಹೆ ಸೂಚನೆಗಳನ್ನು ಸ್ವೀಕರಿಸುತ್ತಿದ್ದ. ಕೆಲಸದ ಎಲ್ಲಾ ಆಗುಹೋಗುಗಳನ್ನು ನನ್ನೊಂದಿಗೆ ಹಂಚಿಕೊಳ್ಳದಿದ್ದರೆ ಅವನಿಗೆ ಸಮಾಧಾನವಿರುತ್ತಿರಲಿಲ್ಲ. ಕಳೆದ ಆರುತಿಂಗಳಿಂದ ಇಬ್ಬರೂ ನಿತ್ಯವೂ ಮಲ್ಲೇಶ್ವರದ ಹಳ್ಳಿಮನೆ ಹೋಟಲಿನಲ್ಲಿ ಕಾಫಿಗಾಗಿ ಸಿಕ್ಕುತ್ತಿದ್ದೇವೆ. ಈ ನಡುವೆ ಒಂದು ದಿನ ನನಗೆ ಮಸ್ಕಾಟ್ ಕಂಪನಿಯ ಟ್ರಾವಲ್ ಸಿಟಿ ಎನ್ನುವ ಕಂಪನಿಯಲ್ಲಿ ಕೆಲಸ ಮಾಡಲು ಅಫರ್ ಬಂದಿದೆ ಏನು ಮಾಡಲಿ? ನನ್ನನ್ನು ಕೇಳಿದ. ಮತ್ತು ಈಗ ಬರುತ್ತಿರುವ ಸಂಪಾದನೆಗಿಂತ ಮೂರರಷ್ಟು ಗಳಿಸಬಹುದು ಅಂದ. ಆತನ ಸದ್ಯದ ಕೆಲಸ, ಅವನ ಮನೆಯಲ್ಲಿನ ಜವಾಬ್ದಾರಿಗಳು, ವಿದೇಶದ ಕಂಪನಿಯಲ್ಲಿ ಸೇರಿದರೆ ಆಗುವ ಅನುಕೂಲವನ್ನು ಪ್ರತಿಯೊಂದನ್ನು ನನ್ನೊಂದಿಗೆ ಚರ್ಚಿಸಿ ಕೊನೆಗೆ ವಿದೇಶಕ್ಕೆ ಕೆಲಸಕ್ಕೆ ಹೋಗುವುದೇ ಒಳ್ಳೆಯದು ಅಂತ ತೀರ್ಮಾನಿಸಿದ. ಅದಕ್ಕಾಗಿ ಬೇಕಾದ ಪಾಸ್‍ಪೋರ್ಟ್, ಇತ್ಯಾದಿಗಳನ್ನು ಮಾಡಿಸಿಕೊಂಡಿದ್ದಾನೆ. ಹತ್ತು ವರ್ಷಗಳ ಹಿಂದೆ ನನ್ನ ದಿನಪತ್ರಿಕೆ ಹಂಚುವ ಹುಡುಗನಾಗಿದ್ದವನು ಇವತ್ತು ವಿದೇಶದಲ್ಲಿ ದೊಡ್ಡ ಮೊತ್ತದ ಸಂಬಳಕ್ಕಾಗಿ ಇದೇ ಫೆಬ್ರವರಿ ತಿಂಗಳ ೨೮ನೇ ತಾರೀಖು ವಿಮಾನದಲ್ಲಿ ಮಸ್ಕಾಟ್‍ಗೆ ಹಾರುತ್ತಾನೆ. ಅವನಿಗೆ ಮೊದಲಿನಿಂದ ನನ್ನ ಕಡೆಯಿಂದಲೇ ಫೋಟೊ ತೆಗೆಸಿಕೊಳ್ಳಬೇಕೆಂದು ಆಸೆಯಿದ್ದರೂ ಕಾರಣಾಂತರಗಳಿಂದ ಆಗಿರಲಿಲ್ಲ. ಕಳೆದ ಭಾನುವಾರ ನನ್ನ ಕೈಯಿಂದ ಫೋಟೊ ತೆಗೆಸಿಕೊಂಡವನಿಗೆ ಏನು ಒಂಥರ ಸಮಾಧಾನ. ಅಲ್ಲಿಗೆ ತಲುಪಿದ ಮೇಲೆ ವಾರಕ್ಕೆ ಒಂದೆರಡು ಬಾರಿಯಾದರೂ ಚಾಟಿಂಗ್ ಸಿಗುತ್ತೇನೆ ಬಿಡುವಾದಾಗಲೆಲ್ಲಾ ಮೇಲ್ ಮಾಡುತ್ತೇನೆ ಅಂದಿದ್ದಾನೆ. ಆತ ನನ್ನ ದಿನಪತ್ರಿಕೆಯ ಬೀಟ್ ಬಾಯ್ ಆಗಿ, ನನಗಿಂತ ಚಿಕ್ಕವಯಸ್ಸಿನ ಗೆಳಯನಾಗಿ ಈ ಮಟ್ಟಕ್ಕೆ ತಲುಪಿರುವುದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು. ಅವನಿಗೆ ನೀವು ಶುಭಾಶಯ ಹೇಳಿ.



ಇದು ಒಬ್ಬ ದಿನಪತ್ರಿಕೆ ಹುಡುಗನ ಬೆಳವಣಿಗೆಯ ಕತೆ. ಖುಷಿಯಾಗುತ್ತಲ್ವಾ! ಸ್ವಲ್ಪ ಇರಿ ಮತ್ತೊಂದು ಕತೆಯನ್ನು ಹೇಳಿಬಿಡುತ್ತೇನೆ.



ಶರವಣನಂತೆ ಮತ್ತೊಬ್ಬ ಹುಡುಗ ಮಂಜು ಕೂಡ ಬೆಳಗಿನ ಬೀಟ್ ಬಾಯ್ ಆಗಿ ಅದೇ ವರ್ಷ ಸೇರಿಕೊಂಡಿದ್ದ. ಇವನು ಕೂಡ ಶರವಣನಂತೆ ಮೈಬಗ್ಗಿಸಿ ದುಡಿಯುತ್ತಿದ್ದ. ನಾನಾಗ ಬೆಳಗಿನ ದಿನಪತ್ರಿಕೆಯಲ್ಲದೇ ಮದ್ಯಾಹ್ನ ಮುಂಬೈನಿಂದ ಬರುವ "ಹಿಂದಿ, ಗುಜರಾತಿ ಪತ್ರಿಕೆಗಳನ್ನು ವಿತರಿಸುತ್ತಿದ್ದೆ. ಈ ಮಂಜು ಬೆಳಗಿನ ಕೆಲಸವಲ್ಲದೇ ಮದ್ಯಾಹ್ನದ ಆ ಕೆಲಸಕ್ಕೂ ಬರುತ್ತಿದ್ದ. ಮೂರು ವರ್ಷಗಳಲ್ಲಿ ಮದ್ಯಾಹ್ನದ ದಿನಪತ್ರಿಕೆ ವಿತರಣೆ ನೋಡಿಕೊಳ್ಳಲಾಗದಷ್ಟು ದೊಡ್ಡದಾಗಿ ಮುಂಜಾನೆ ಪತ್ರಿಕೆ ಕೆಲಸ ದೊಡ್ಡದಾಗಿದ್ದರಿಂದ ಅದನ್ನು ಮಂಜುವಿಗೆ ಬಿಟ್ಟುಕೊಟ್ಟಿದ್ದೆ. ಮೂರು ವರ್ಷಗಳಲ್ಲಿ ಮಂಜು ಕೂಡ ವೆಂಡರ್ ಆಗಿ ಬೆಳಗಿನ ಮತ್ತು ಮಧ್ಯಾಹ್ನದ ದಿನಪತ್ರಿಕೆ ವಿತರಣೆಯನ್ನು ಚೆನ್ನಾಗಿ ನಿರ್ವಹಿಸುವ ಮಟ್ಟಕ್ಕೆ ಬೆಳೆದಿದ್ದ. ಆಗ ಅವನ ಬಳಿಗೆ ವಿಶ್ವ ಎನ್ನುವ ಹುಡುಗ ಬೀಟ್ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡ. ಬಡತನದಲ್ಲೇ ಬೆಳೆದ ಹುಡುಗನಾದ್ದರಿಂದ ದಿನಪತ್ರಿಕೆಯ ಕೆಲಸದಿಂದಲೇ ನನ್ನ ನೆಲೆ ಕಂಡುಕೊಳ್ಳುತ್ತೇನೆ ಅಂತ ತೀರ್ಮಾನಿಸಿದ್ದ. ಏಕೆಂದು ಕೇಳಿದರೆ ಮಂಜು, ಶರವಣ, ನನ್ನನ್ನು ಉದಾಹರಿಸಿ ನಿಮ್ಮಂತೆ ಆಗಬೇಕು ಅಂತ ಖುಷಿಯಿಂದ ಹೇಳುವಾಗ ಅವನಲ್ಲಿ ಆತ್ಮವಿಶ್ವಾಸ ತುಂಬಿತುಳುಕುತ್ತಿತ್ತು. ಆರು ತಿಂಗಳ ಹಿಂದೆ ಅವನು ಕೂಡ ಐವತ್ತು ದಿನಪತ್ರಿಕೆಗಳನ್ನು ವಿತರಿಸುವ ಸಣ್ಣ ವೆಂಡರ್ ಆಗಿದ್ದ. ಮಂಜುವಿನ ಜೊತೆ ಸೇರಿ ಮಧ್ಯಾಹ್ನದ ಹಿಂದಿ, ಗುಜರಾತಿ ದಿನಪತ್ರಿಕೆಗಳ ವಿತರಣೆಯನ್ನು ಮಾಡುತ್ತಿದ್ದ. ನನ್ನದು ಶೇಷಾದ್ರಿಪುರಂ ವಿತರಣೆ ಕೇಂದ್ರವಾದರೇ, ಮಂಜು ಮತ್ತು ವಿಶ್ವ ಇಬ್ಬರೂ ರಾಜಾಜಿನಗರದ ಕಡೆ ಏಜೆನ್ಸಿ ಪಡೆದುಕೊಂಡು ಅಲ್ಲಿ ವೆಂಡರ್ ಆಗಿದ್ದರು. ಅವರು ಉದ್ಯೋಗ ನಿಮಿತ್ತ ದೂರದಲ್ಲಿದ್ದರೂ ಪ್ರತಿಯೊಂದು ವಿಚಾರವನ್ನು ನನ್ನೊಂದಿಗೆ ಚರ್ಚಿಸುತ್ತಿದ್ದರು. ಆ ಮಟ್ಟಿಗೆ ನನ್ನ ಬಗ್ಗೆ ಅವರಿಗೆ ಆತ್ಮೀಯತೆ ಮತ್ತು ಗೌರವವಿತ್ತು.



ಹೀಗೆ ಎಲ್ಲಾ ಚೆನ್ನಾಗಿದೆ ಅನ್ನುವಾಗಲೇ ಒಂದು ಅನಿರೀಕ್ಷಿತ ಘಟನೆ ನಾಲ್ಕು ದಿನದ [ಶುಕ್ರವಾರ] ಹಿಂದೆ ನಡೆದುಹೋಯಿತು. ಇದೇ ವಿಶ್ವ ಎಂದಿನಂತೆ ಮುಂಜಾನೆ ಸೈಕಲೇರಿ ದಿನಪತ್ರಿಕೆ ಹಂಚುವ ಸಮಯದಲ್ಲಿ ವೇಗವಾಗಿ ನುಗ್ಗಿಬಂದ ಮೋಟರ್ ಬೈಕ್ ಇವನ ಮೇಲೆ ಹತ್ತಿ ದೊಡ್ಡ ಮಟ್ಟದ ಅಫಘಾತವಾಗಿಬಿಟ್ಟಿದೆ. ಅಂತ ಮುಂಜಾನೆಯಲ್ಲಿ ಯಾರೋ ಪರ್ಕಿ ಹುಡುಗರು ಮೈಮರೆತು ಇವನ ಮೇಲೆ ಬೈಕ್ ಹತ್ತಿಸಿದ್ದರಿಂದ ಮುಖದ ಅರ್ಧಬಾಗದ ಮೂಳೆಗಳೆಲ್ಲಾ ಪುಡಿಪುಡಿಯಾಗಿಬಿಟ್ಟಿವೆ. ಅಪಘಾತವಾದ ಮರುಕ್ಷಣದಲ್ಲಿ ಪ್ರಜ್ಞೆ ತಪ್ಪಿ ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದಾನೆ. ಆಗ ಅಲ್ಲಿದ ಇತರ ಬೀಟ್ ಬಾಯ್ಸುಗಳು ಹತ್ತಿರದ ಅಸ್ಪತ್ರೆಗೆ ಸೇರಿಸಿ ಮನೆಗೆ ವಿಚಾರವನ್ನು ಮುಟ್ಟಿಸಿದ್ದಾರೆ. ಅಲ್ಲಿಂದ ನೇರವಾಗಿ ನಿಮ್ಹಾನ್ಸಿಗೆ ಹೋಗಿದ್ದಾರೆ. ಕೆನ್ನೆ, ಮೂಗು, ಮತ್ತು ಮುಖದ ಅರ್ಧಭಾಗ ಮೂಲೆಗಳು ಪುಡಿಪುಡಿಯಾಗಿಬಿಟ್ಟಿದ್ದರಿಂದ ನಮ್ಮಲ್ಲಿ ಆಗುವುದಿಲ್ಲವೆಂದು ನಿಮ್ಹಾನ್ಸ್ ನವರು ರಾಜಾಜಿನಗರದ ಪೆನೆಸಿಯ ಅಸ್ಪತ್ರೆಗೆ ಕಳಿಸಿದ್ದಾರೆ. ವಿಶ್ವನಿಗೆ ತಾಯಿಯಿಲ್ಲ. ತಂದೆ ಗಾರೆ ಕೆಲಸ ಮಾಡಿ ಜೀವನ ಸಾಗಿಸುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಈಗ ಆಗಿರುವ ಅಪಘಾತದಿಂದಾಗಿ ದೊಡ್ದ ಮಟ್ಟದ್ ಆಪರೇಷನ್ ಮಾಡಬೇಕೆಂದು ಡಾಕ್ಟರುಗಳು ಹೇಳಿದ್ದಾರೆ. ಅದರ ಖರ್ಚು ಒಂದುವರೆ ಲಕ್ಷ ಆಗಬಹುದು ಅಂತ ಹೇಳಿದ್ದಾರೆ. ಏನಾಗುತ್ತೋ ಗೊತ್ತಿಲ್ಲ. ಮುಂದೆ ಅವನ ಭವಿಷ್ಯವೇನು? ನಾವು ವೆಂಡರುಗಳೆಲ್ಲಾ ಸ್ವಲ್ಪ ಹಣವನ್ನು ಕಲೆಹಾಕಿ ಕೊಟ್ಟಿದ್ದೇವೆ. ಅದರೂ ಅದು ಏನೇನು ಸಾಲದು. ವಿಶ್ವ ಆಸ್ಪತ್ರೆಯಲ್ಲಿ ಪ್ರಜ್ಞಾಸೂನ್ಯನಾಗಿ ಬಿದ್ದಿದ್ದರೆ ಒಂದೇ ಸಮನೆ ಬೆಳಿಗ್ಗೆಯಿಂದ ಸಂಜೆಯವರೆಗೆ ಗಿರಾಕಿಗಳಿಂದ ಫೋನ್ ಕಾಲ್ ಬರುತ್ತಲೇ ಬರುತ್ತಲೇ ಇತ್ತು. ಕಾರಣ ಇವತ್ತಿನ ದಿನಪತ್ರಿಕೆ ಬಂದಿಲ್ಲ ಏನೆಂದು?

ಸದ್ಯ ಈ ಚಿತ್ರದಲ್ಲಿ ತೋರಿಸಿರುವಂತೆ ವಿಶ್ವನ ಬಲಮುಖದ ಮೂಳೆಗಳೆಲ್ಲಾ ಪುಡಿಯಾಗಿದ್ದು ಎಲ್ಲೆಲ್ಲಿ ಅಫರೇಷನ್ ಮಾಡಬೇಕೆಂದು ಡಾಕ್ಟರುಗಳು ಮಾರ್ಕ್ ಮಾಡಿದ ಸ್ಲಿಪ್ ಸಿಕ್ಕಿದೆ. ಅದನ್ನೇ ಇಲ್ಲಿ ಬ್ಲಾಗಿನಲ್ಲಿ ಹಾಕಿದ್ದೇನೆ. ವಿಶ್ವನ ಫೋಟೊ ತೆಗೆಯುವ ಮಟ್ಟದಲ್ಲಿದ್ದರಿಂದ ಫೋಟೊ ತೆಗೆಯದೇ ಹಾಗೆ ಬಂದಿದ್ದೇನೆ...



್ಗೆಳೆಯರೆ, ಈಗ ಹೇಳಿ ಶರವಣನ ಕತೆ ಕೇಳಿ ಖುಷಿ ಪಡುವುದೋ, ವಿಶ್ವನ ಕತೆ ಕೇಳಿ......................

ಬ್ಲಾಗಿನ ಆತ್ಮೀಯ ಗೆಳೆಯರೆ, ನನ್ನ ಲೇಖನಕ್ಕೆ ನೀವು ಸ್ಪಂದಿಸಿದ ರೀತಿಯಿಂದಾಗಿ ನಾನು ಆಸ್ಪತ್ರೆ ಹೋಗಿ ಅಲ್ಲಿಂದ ವಿಶ್ವನ ಭ್ಯಾಂಕ್ ಅಕೌಂಟ್ ನಂಬರ್ ತಂದಿದ್ದೇನೆ.

ಆತನ ಬ್ಯಾಂಕಿನ ವಿವರ ಹೀಗಿದೆ.

VISHWANATHA.P

CORPORATION BANK. MALLESWARAM MAIN BRANCH. BENGALORE.

ACCOUNT NO: 0056/SB/01/037125

for RTGS/NEFT Mention Account Number As: SB01037125

Online account number: RTGS IFSC CODE: CORP0000056

ಆತ್ಮೀಯ ಬ್ಲಾಗ್ ಗೆಳೆಯರೆ, ಮೇಲೆ ತಿಳಿಸಿರುವ ಬ್ಯಾಂಕ್ ಅಕೌಂಟ್ ನಂಬರು ಅಪಘಾತವಾಗಿರುವ ವಿಶ್ವನಾಥನದು. ನಿಮ್ಮ ಸಹಾಯವನ್ನು ಅದರ ಮೂಲಕ ಮಾಡಬಹುದು.

ನಮ್ಮ ಮುಂಜಾನೆ ದಿನಪತ್ರಿಕೆ ವಿತರಣೆಯಲ್ಲಿದ್ದ ಎರಡು ಜೀವಗಳನ್ನು ಮತ್ತು ಜೀವನವನ್ನು ದೇವರು ಹೇಗೆ ವಿರುದ್ಧ ದಿಕ್ಕಿನಲ್ಲಿ ಸಾಗಿಸಿದ್ದಾನೆ ನೋಡಿ.

ಚಿತ್ರ ಮತ್ತು ಲೇಖನ.
ಶಿವು.ಕೆ


Monday, February 15, 2010

ಕೆಲವು ಖುಷಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವಾಸೆ


ಪ್ರತಿವರ್ಷದಂತೆ 2010 ವರ್ಷವನ್ನು ಉತ್ಸಾಹದಿಂದ ಪ್ರಾರಂಭಿಸಿದ್ದೆ. ಎಂದಿನಂತೆ ನನ್ನ ದಿನಪತ್ರಿಕೆ ಕೆಲಸ ಇದ್ದರೂ ಮೊದಲಿಗಿಂತ ಸುಲಭವೆನಿಸಿ ದಿನದ ಸಮಯದಲ್ಲಿ ಮೊದಲ ವಾರ ಆರು ತಾಸು, ಇನ್ನುಳಿದ ಮೂರುವಾರಗಳಲ್ಲಿ ಕೇವಲ ಮೂರು ತಾಸು ಮಾತ್ರ ಬೇಡುತ್ತಾ ನನ್ನನ್ನು ಮತ್ತು ನನ್ನ ಕುಟುಂಬವನ್ನು ಸಾಕುತ್ತಾ ಉಳಿದ ಸಮಯವನ್ನು ಏನಾದರೂ ಮಾಡಿಕೊ ಅಂತ ನನಗೆ ಪ್ರತಿದಿನ ದಾನ ಮಾಡುತ್ತಿದೆ. ಅದಕ್ಕೆ ನನ್ನ ಮೊದಲ ಥ್ಯಾಂಕ್ಸ್.


ಕಳೆದ ಸೆಪ್ಟಂಬರ್ ನಾಲ್ಕು "ವೆಂಡರ್ಸ್ ಡೇ" ದಿನ. ಅವತ್ತು ನಾನು ಮಾಡಿಕೊಂಡ ಕಮಿಟ್‍ಮೆಂಟ್ ಪರಿಣಾಮವೋ ಏನೋ ಅಂದಿನಿಂದ ಕೈತುಂಬಾ ಮತ್ತು ಕ್ಯಾಮೆರಾ ತುಂಬಾ ಕಮರ್ಶಿಯಲ್ ಫೋಟೊಗ್ರಫಿ ಕೆಲಸ ಬರುತ್ತಿದ್ದು, ಮುಂದಿನ ಮೇ ತಿಂಗಳವರೆಗೆ ಅನೇಕ ಮದುವೆ, ಇನ್ನಿತರ ಕಾರ್ಯಕ್ರಮಗಳು ನನ್ನ ಪ್ರೋಗ್ರಾಂ ಡೈರಿಯಲ್ಲಿ ದಿನಾಂಕಗಳು ತುಂಬಿವೆ. ಇದೆಲ್ಲಾ ಹೊಟ್ಟಿಪಾಡಿನ ವಿಚಾರವಾಯಿತು.


ಇನ್ನೂ ಹವ್ಯಾಸಿ ಛಾಯಾಚಿತ್ರಗಳ ವಿಚಾರದಲ್ಲಿ 2010ರ ಪ್ರಾರಂಭದಲ್ಲಿಯೇ ನನಗೆ ಬಂಪರ್. ಮೊದಲಿಗೆ ರಾಷ್ಟ್ರಮಟ್ಟದ ಜೋದ್‍ಪುರ ಫೋಟೋಗ್ರಫಿ ಸ್ಪರ್ಧೆಯಲ್ಲಿ ಎರಡು ಅರ್ಹತ ಪತ್ರಗಳು ಸೇರಿದಂತೆ ಆರುಚಿತ್ರಗಳು ಪ್ರದರ್ಶನಕ್ಕೆ ಆಯ್ಕೆ, ಕೊಲ್ಕತ್ತದ "ನಾರ್ತ್ ಬೆಂಗಾಲ್" ಫೋಟೋಗ್ರಫಿ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ಮತ್ತು ಒಂದು ಸರ್ಟಿಫಿಕೆಟ್ ಅಪ್ ಮೆರಿಟ್, ಬೆಂಗಳೂರಿನ ಯೂತ್ ಫೋಟೊಗ್ರಫಿ ಸೊಸೈಟಿಯವರ 31ನೇ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕಪ್ಪುಬಿಳುಪಿಗೆ ಮೊದಲ ಬಹುಮಾನ ಮತ್ತು ಒಂದು ಸರ್ಟಿಫಿಕೆಟ್ ಅಪ್ ಮೆರಿಟ್, ಹೌರಾದ "ಸೊಸೈಟಿ ಅಪ್ ಫೋಟೊಗ್ರಫರ್ಸ್" ನಡೆಸಿದ ೪೨ನೇ ಅಂತರರಾಷ್ಟ್ರೀಯ ಫೋಟೋಗ್ರಫಿ ಸ್ಪರ್ಧೆಯಲ್ಲಿ "ಹಾನರಬಲ್ ಮೆನ್ಷನ್" ಬಹುಮಾನಗಳು ಸಿಕ್ಕಿದೆ. ಈ ಬಹುಮಾನಗಳು ಮತ್ತು ಪ್ರದರ್ಶನಕ್ಕೆ ಆಯ್ಕೆಯಾದ ಚಿತ್ರಗಳಿಗೆ ಒಂದಷ್ಟು ಅಂಕಗಳು ದೊರೆಯುತ್ತವೆ.

ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಹೆಚ್ಚು ಬಹುಮಾನ ಪಡೆದ ಚಿತ್ರ.



ಹೀಗೆ ನನ್ನಂತೆ ವರ್ಷಪೂರ್ತಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದ ಸಾವಿರಾರು ಹವ್ಯಾಸಿ ಛಾಯಾಗ್ರಾಹಕರ ಅಂಕಗಳನ್ನು ಗಮನಿಸಿ ಭಾರತ ಪರಮೋಚ್ಚ ಫೋಟೋಗ್ರಫಿ ಸಂಸ್ಥೆಯಾದ "ಫೆಡರೇಷನ್ ಅಫ್ ಇಂಡಿಯನ್ ಫೋಟೊಗ್ರಫಿ" Top ten Ranking ನೀಡುತ್ತದೆ. ಕಳೆದ ಭಾರಿ [2009] ನನಗೆ ದ್ವಿತೀಯ Ranking ಸಿಕ್ಕಿತ್ತು. ಈ ಭಾರಿ ಯಾವ Rank ಸಿಗುತ್ತದೋ ಮೇ ತಿಂಗಳವರೆಗೆ ಕಾದು ನೋಡಬೇಕು.
ಮತ್ತೆ ನನ್ನ "ವೆಂಡರ್ ಕಣ್ಣು" ಎನ್ನುವ ಪುಟ್ಟ ಪುಸ್ತಕ ನವೆಂಬರ್ ೧೫ರಂದು ಬಿಡುಗಡೆಯಾಗಿದ್ದು ಜನವರಿ ೨೦ರ ಹೊತ್ತಿಗೆ ಮೊದಲ ಸಾವಿರ ಪ್ರತಿಗಳು ಖರ್ಚಾಗಿಬಿಟ್ಟಿದ್ದು ಎರಡನೇ ಮುದ್ರಣವಾಗುತ್ತಿದೆ. ನನ್ನ ಅನ್ನದಾತರಾದ ದಿನಪತ್ರಿಕೆ ಕೊಳ್ಳುವ ಗ್ರಾಹಕರು ನಾಲ್ಕುನೂರಕ್ಕೂ ಹೆಚ್ಚು "ವೆಂಡರ್ ಕಣ್ಣು" ಪುಸ್ತಕವನ್ನು ಕೊಂಡು ಓದಿದ್ದು ನನಗೆ ಹೆಚ್ಚು ಖುಷಿಯ ವಿಚಾರ. ಡಿಸೆಂಬರ್, ಜನವರಿ, ಪೆಬ್ರವರಿ ತಿಂಗಳ ಮೊದಲ ಹತ್ತು ದಿನಗಳಲ್ಲಿ ನಾನು ನನ್ನ ಗ್ರಾಹಕರ ಬಳಿ ಸರಿಯಾಗಿ ಹಣ ವಸೂಲಿ ಮಾಡಲಾಗದಿದ್ದುದ್ದಕ್ಕೆ ನನ್ನ "ವೆಂಡರ್ ಕಣ್ಣು ಪುಸ್ತಕವೇ ಕಾರಣವೆಂದರೆ ನಿಮಗೆ ಆಶ್ಚರ್ಯವಾಗಬಹುದು. ನಿಜಕ್ಕೂ ನಡೆದಿದ್ದೇನೆಂದರೆ, ಕಳೆದ ಎರಡು ತಿಂಗಳಲ್ಲಿ ವೆಂಡರ್ ಕಣ್ಣು ಪುಸ್ತಕವನ್ನು ಓದಿದ ಪ್ರತಿಯೊಬ್ಬ ಗ್ರಾಹಕರಲ್ಲಿ ನನ್ನನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿಕೊಂಡಿದ್ದಾರೆ. ನಾನು ಹಣ ವಸೂಲಿಗೆ ಹೋದರೆ ಕನಿಷ್ಟಪಕ್ಷ ಹತ್ತು ನಿಮಿಷ ಪುಸ್ತಕದ ಬಗ್ಗೆ ಮಾತಾಡುತ್ತಾರೆ. ಅವರ ಅಭಿಪ್ರಾಯ ತಿಳಿಸುತ್ತಾರೆ. ಕೆಲವರು ಪುಸ್ತಕದಿಂದ ಬದಲಾಗಿರುವ ವಿಚಾರವನ್ನು ಹೇಳುತ್ತಾರೆ. ಮತ್ತಷ್ಟು ಹೊಸವಿಚಾರಗಳನ್ನು ಬರೆಯಲು ಪ್ರೋತ್ಸಾಹಿಸುತ್ತಾರೆ. ಮೊದಲಿಗಿಂತ ಹೆಚ್ಚು ತಾಳ್ಮೆಯಿಂದ ಗೌರವದಿಂದ, ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಯಿಂದ ಮಾತಾಡಿಸುತ್ತಾರೆ. ಹಣವಸೂಲಿಗೆ ಅಂತ ಹೋಗಿದ್ದರೂ ಪುಸ್ತಕದ ವಿಚಾರವೇ ಮಾತಾಗಿ ಹಣವಸೂಲಿ ಈ ರೀತಿಯಾಗಿ ತಡವಾಗಿತ್ತು. ಮೊದಲು ನಮ್ಮ ಬಗ್ಗೆ ಅವರಿಗಿದ್ದ ಕಲ್ಪನೆಯೇ ಬದಲಾಗಿ ನಮ್ಮನ್ನು ತುಂಬು ಪ್ರೀತಿಯಿಂದ ಮಾತಾಡಿಸುತ್ತಾರೆ. ನಮ್ಮ ಕೆಲಸದ ಬಗ್ಗೆ ಗೌರವವಿದೆ.

ವೆಂಡರ್ ಕಣ್ಣು ಮುಖಪುಟ ಮೊದಲು ಹೀಗಿತ್ತು.

ಸದ್ಯ "ವೆಂಡರ್ ಕಣ್ಣು ಎಫೆಕ್ಟ್" ಪ್ರತಿಯೊಬ್ಬ ಗ್ರಾಹಕರಲ್ಲಿ, ಪತ್ರಿಕಾ ಪ್ರತಿನಿಧಿಗಳಲ್ಲಿ, ನನ್ನಂಥ ನೂರಾರು ವೆಂಡರುಗಳಲ್ಲಿ ಆಗಿರುವ ಬದಲಾವಣೆಯನ್ನು ಬರೆದರೆ ಅದು ಮತ್ತೆ ಹತ್ತಾರು ಪುಟಗಳ ಲೇಖನವಾಗಬಹುದು. ಅದನ್ನು ಖಂಡಿತ ಮುಂದೆ ಬರೆಯುತ್ತೇನೆ. ಮತ್ತೆ ಪುಸ್ತಕದಲ್ಲಿ ಪಾತ್ರಧಾರಿಗಳಾದ ಕೆಲವು ಗ್ರಾಹಕರು ಇದೇ ಪುಸ್ತಕದಲ್ಲಿ ತಮ್ಮದೇ ಕತೆಯನ್ನು ಓದಿದ ಮೇಲೆ ಆಗಿರುವ ಪರಿಣಾಮವನ್ನು ಖಂಡಿತ ಬರೆಯಲೇ ಬೇಕೇನಿಸಿದೆ.
ಇದೆಲ್ಲಾ ಸಾಧ್ಯವಾಗಿದ್ದು ನನ್ನ "ಛಾಯಾಕನ್ನಡಿ" ಬ್ಲಾಗಿನಿಂದಲ್ಲವೇ! ಅದನ್ನು ಪ್ರಾರಂಭಿಸಿದ್ದು 2008ರ ಆಗಷ್ಟ್ ತಿಂಗಳಲ್ಲಿ ಆದರೂ ನಾನು ಹಿಟ್ ಕೌಂಟರ್ ಸೆಟ್ ಮಾಡಿಕೊಂಡಿರಲಿಲ್ಲ. ಈಗ್ಗೆ ಸರಿಯಾಗಿ ಒಂದು ವರ್ಷದ ಹಿಂದೆ ಫೆಬ್ರವರಿ 14ರ ರ ಪ್ರೇಮಿಗಳ ದಿನದಂದೂ ಇಷ್ಟಪಟ್ಟು ಬರೆದ ಈ ದೇಹದಿಂದ ದೂರನಾದೆ ಏಕೆ ಆತ್ಮನೇ....ಈ ಸಾವು ನ್ಯಾಯವೇ ? ಪುಟ್ಟಕತೆಯನ್ನು ಬ್ಲಾಗಿಗೆ ಹಾಕಿದ್ದೆ. ಅವತ್ತೇ ನನ್ನ ಹಿಟ್ ಕೌಂಟರ್ ಅನ್ನು ಬ್ಲಾಗಿನಲ್ಲಿ ಸೆಟ್ ಮಾಡಿಕೊಂಡಿದ್ದೆ.


ಇತ್ತೀಚಿನ ಹೊಸ ಲೇಖನಗಳಲ್ಲಿ ಅತಿಹೆಚ್ಚು ಹಿಟ್ ಕೌಂಟರ್ ಪಡೆದುಕೊಂಡಿದ್ದು "ಮುನ್ನಾರು ಪ್ರವಾಸ ಸರಣಿ" ಮತ್ತು ಎರಡು ಭಾಗವಾಗಿ ಬಂದ "ರಾಷ್ಟ್ರಮಟ್ಟದ ಛಾಯಾಚಿತ್ರಗಳು" ಹಾಗೂ "ಅವತಾರ್" ಸಿನಿಮಾ ಬರಹ. ಮುನ್ನಾರು ಸರಣಿ ಲೇಖನಕ್ಕೆ ಮೊದಲು "18000" ಸಾವಿರದಷ್ಟಿದ್ದ ಹಿಟ್ ಕೌಂಟರ್ ಅವತಾರ್ ಲೇಖನದ ಹೊತ್ತಿಗೆ "25000" ಮುಟ್ಟಿದೆ. ಈ ಫೆಬ್ರವರಿ 16-2-2010ರ [ಒಂದು ವರ್ಷ ಕಳೆದು ಎರಡು ದಿನ] ಹೊತ್ತಿಗೆ ಸರಿಯಾಗಿ ನನ್ನ ಛಾಯಾಕನ್ನಡಿ ಬ್ಲಾಗ್ ವಿಶ್ವದಾದ್ಯಂತ "25000" ಬಾರಿ ತೆರೆದುಕೊಂಡಿದೆ.
ಛಾಯಾಕನ್ನಡಿ ಬ್ಲಾಗ್‍ನಿಂದಾಗಿ ವಿಶ್ವದಾದ್ಯಂತ ಗೆಳೆಯರು ಸಿಕ್ಕಿದ್ದಾರೆ. ಸಾವಿರಾರು ಮೈಲುಗಳಷ್ಟು ದೂರದಲ್ಲಿರುವ ಗೆಳೆಯರು ಕೈಬೆರಳುಗಳ ತುದಿಗಳು ಕೀಬೋರ್ಡ್ ಒತ್ತುತ್ತಿದ್ದಂತೆ ಸಿಕ್ಕಿಬಿಡುತ್ತಾರೆ. ಜೊತೆಗೆ ಫೋಟೊಗ್ರಫಿ ಅಸೈನ್‍ಮೆಂಟುಗಳು[ಆರೆಂಜ್ ಕೌಂಟಿ, ಸರ್ಕಾರದ ಲ್ಯಾಂಡ್ ಅರ್ಮಿ ಸಂಸ್ಥೆ, ಶಿಕ್ಷಣ ಇಲಾಖೆ, ವಾರ್ತ ಇಲಾಖೆ.... ಇತ್ಯಾದಿ] ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಫೋಟೊಗ್ರಫಿ, ವೆಂಡರ್ ಕಣ್ಣು ಪುಸ್ತಕ, ಇಷ್ಟಪಟ್ಟು ಬರೆದುದನ್ನು ಅಷ್ಟೇ ಖುಷಿಯಿಂದ ಓದಿ ಪ್ರೋತ್ಸಾಹಿಸುವ ನಿಮ್ಮಂಥ ಬ್ಲಾಗ್ ಗೆಳೆಯರು ಇಂಥ ಇನ್ನೂ ಅನೇಕ ವಿಚಾರಗಳನ್ನು "ಛಾಯಾಕನ್ನಡಿ ಬ್ಲಾಗ್ ನನಗಾಗಿ ನೀಡುತ್ತಾ ಮತ್ತಷ್ಟು ಜವಾಬ್ದಾರಿಯನ್ನು ಹೆಚ್ಚಿಸುತ್ತಿದೆ. ಅದಕ್ಕೆ ನನ್ನ ದೊಡ್ಡ ನಮನಗಳು.
ಅಜಿತ್ ಕೌಂಡಿನ್ಯ ಇಷ್ಟಪಟ್ಟು ಬರೆದ ನನ್ನ ರೇಖಾ ಚಿತ್ರ


ಅರೆರೆ...ಇವನೇನು ಬರೀ ಖುಷಿ ವಿಚಾರಗಳನ್ನೇ ಹೇಳುತ್ತಿದ್ದಾನಲ್ಲ! ಇವನಿಗೆ ಇತ್ತೀಚಿಗೆ ನೋವು, ಬೇಸರ, ದೂರು......ಇತ್ಯಾದಿಗಳು ಆಗಲಿಲ್ಲವೇ ಅಂತ ನಿಮಗೆ ಅನಿಸಿರಬೇಕಲ್ಲವೇ? ಖಂಡಿತ ಆಗಿವೆ. ಮೊದಲಿಗೆ ನನ್ನಾಕೆ ಜೊತೆ ಆಕೆಯ ತವರೂರಿಗೆ ಆರುತಿಂಗಳಲ್ಲಿ ಒಮ್ಮೆಯೂ ಹೋಗಿಲ್ಲವೆನ್ನುವುದು, ಏನಾದರೂ ನೆಪವೊಡ್ಡಿ ವಾರಕ್ಕೊಮ್ಮೆ ಯಶವಂತಪುರ ಸಂತೆ ತಪ್ಪಿಸಿಕೊಳ್ಳುವುದು, ಮಲ್ಲೇಶ್ವರ್ ರೈಲ್ವೇ ನಿಲ್ದಾಣ ಮತ್ತು ಪ್ರಸಿದ್ಧ ಮಲ್ಲೇಶ್ವರಂ ೮ನೇ ಕ್ರಾಸಿಗೆ ಇಬ್ಬರೂ ವಾಕಿಂಗ್ ತಪ್ಪಿಸಿಕೊಳ್ಳುತ್ತಿರುವುದು, ಕಳೆದ ನಾಲ್ಕು ತಿಂಗಳುಗಳಲ್ಲಿ ಒಳ್ಳೆಯ ಸಿನಿಮಗಳನ್ನು ತೋರಿಸದಿರುವುದು.......ಇನ್ನೂ ಅನೇಕ ದೂರುಗಳು ನನ್ನ ಶ್ರೀಮತಿಯ ಕಡೆಯಿಂದ. ಜೊತೆಗೆ ನಾನು ಕೆಲಸದ ಒತ್ತಡದಿಂದಾಗಿ ಕೆಲವು ಅತ್ಯುತ್ತಮ ಸಿನಿಮಾಗಳನ್ನು ನೋಡಲಾಗದಿದ್ದುದ್ದು, ಮದುವೆ ಫೋಟೊಗ್ರಫಿಯಿಂದಾಗಿ ಆಗಾಗ ಜಿಮ್, ಪ್ರಾಣಯಾಮ ತಪ್ಪಿಸಿಬಿಡುವುದು, ವರ್ಷಕ್ಕೆ ಐದಾರು ಫೋಟೋಗ್ರಫಿ ಪ್ರವಾಸ ಹೋಗುತ್ತಿದ್ದವನು ಕಳೆದ ಆಕ್ಟೋಬರಿನಿಂದಾಚೆಗೆ ಎಲ್ಲಿಗೂ ಹೋಗದಿರುವುದಕ್ಕೆ ಬೇಸರವಿದೆ. ಈ ವರ್ಷವಾದರೂ ಜನವರಿಯಲ್ಲಿ ಹಂಪಿ ಪ್ರವಾಸ ಹೋಗಲೇಬೇಕು ಅಂತ ಅಂದುಕೊಂಡರೂ ಹೋಗಲಾಗಲಿಲ್ಲ. ಗೋದಾವರಿ ನದಿಯುದ್ದಕ್ಕೂ ಎರಡುದಿನ ಬೆಳದಿಂಗಳಲ್ಲಿ ದೋಣಿ ಪ್ರವಾಸ ಮಾಡಬೇಕೆನ್ನುವ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ಇನ್ನೂ ಅಂಡಮಾನ್‍ನಲ್ಲಿ ಕ್ಯಾಮೆರಾ ಹಿಡಿದು ಆಡ್ಡಾಡಲಿಲ್ಲ. ಮಲ್ಲಿಕಾರ್ಜುನ್ ಮತ್ತು ನಾನು ಈ ಫೆಬ್ರವರಿಯಲ್ಲಿ ಒಂದು ವಿದೇಶಿ ಫೋಟೊಗ್ರಫಿ ಪ್ರವಾಸ[ವಿಯೆಟ್ನಾಮ್ ಅಥವ ಕಾಂಬೋಡಿಯಾ ಅಥವ ಥೈಲ್ಯಾಂಡ್]ಹೋಗಬೇಕೆಂದು ಯೋಜನೆ ಹಾಕಿಕೊಂಡಿದ್ದೆವು. ಅದು ಸಫಲವಾಗದಿದ್ದುದ್ದಕ್ಕೆ ಬೇಸರವಿದೆ. ಆಡುಗೋಡಿಯಲ್ಲಿ ಒಬ್ಬ ದಿನಪತ್ರಿಕೆ ಹುಡುಗ ಮುಂಜಾನೆ ಪತ್ರಿಕೆ ಹಂಚುವಾಗ ಅವನ ಮೇಲೆ ಬಸ್ ಹರಿದು ಆತ ಸತ್ತ ಘಟನೆಯ ನೋವು ಇನ್ನೂ ಮಾಸಿಲ್ಲ. ಹದಿನೈದು ವರ್ಷಗಳಿಂದ ನನ್ನಿಂದಲೇ ದಿನಪತ್ರಿಕೆ ಪಡೆದು ಓದುತ್ತಾ, ತಿಂಗಳಿಗೊಮ್ಮೆ ಹುಡುಗರ ಮೇಲೆ ದೂರು, ಆಗಾಗ ನನ್ನ ಮೇಲೆ ಸಿಟ್ಟು ಮಾಡಿಕೊಂಡರೂ ಪ್ರೀತಿಯಿಂದ ಮಾತಾಡಿಸಿ ನನ್ನ ಕಷ್ಟ ಸುಖವಿಚಾರಿಸುತ್ತಿದ್ದ ನಾಲ್ವರು ಹಿರಿಯ ಗ್ರಾಹಕರು ತೀರಿಹೋಗಿದ್ದಾರೆ. ಈಗ ಅವರ ಮನೆಗೆ ಹೋದರೆ ಗೋಡೆಮೇಲಿನ ಫೋಟೊದಲ್ಲೇ ಕೋಪಿಸಿಕೊಳ್ಳುತ್ತಾರೆ, ಬೈಯ್ಯುತ್ತಾರೆ, ನಗುತ್ತಾರೆ. ಅದೆಲ್ಲವನ್ನು ನೋಡಿದಾಗ ನೋವು ಬೇಸರ ಎರಡು ಒಟ್ಟಿಗೆ ಆಗುತ್ತದೆ. ಅಂತ ಆತ್ಮೀಯವಾದ ನಮ್ಮ ನಡುವಿನ ಸಂಭಂದವನ್ನು ಮುಂದೆ ಎಂದಾದರೂ ಬರೆಯುತ್ತೇನೆ ಎಂದು ಹೇಳುತ್ತಾ ಈ ಲೇಖನವನ್ನು ಮುಗಿಸುತ್ತೇನೆ.

ಚಿತ್ರಗಳು ಮತ್ತು ಲೇಖನ.
ಶಿವು.ಕೆ

Saturday, February 6, 2010

ಅವತಾರ್ ವರ್ಸಸ್ ಬಬ್ರುವಾಹನ

ಆಗ ತಾನೆ "ಅವತಾರ್" ಸಿನಿಮಾ ನೋಡಿ ಬರುತ್ತಿದ್ದೆ. ದಾರಿಯುದ್ದಕ್ಕೂ ಅದೇ ಗುಂಗು, ಅದರ ನಿರ್ದೇಶಕ ಮತ್ತು ನಿರ್ಮಾಪಕ ಕ್ಯಾಮೆರಾನ್, .........................................ಅದರಲ್ಲಿ ಕೆಲಸ ಮಾಡಿದ ಅಲ್ಲಲ್ಲ.....ಈ ಸಿನಿಮಾವನ್ನೇ ತಮ್ಮ ಊಟ ತಿಂಡಿ ನಿದ್ರೆಯಾಗಿಸಿಕೊಂಡ, ಕಲಾ ನಿರ್ದೇಶಕರು, ಕ್ಯಾಮೆರಾಮೆನ್, ಚಿತ್ರದ ದೃಶ್ಯಕಾವ್ಯವನ್ನು ಸೃಷ್ಟಿಸಲು ಹಗಲು ರಾತ್ರಿಯೆನ್ನದೇ ಕೆಲಸಮಾಡಿದ ಗ್ರಾಫಿಕ್ಸ ತಂತ್ರಜ್ಞರು, ಕಲಾವಿದರೂ ಪ್ರತಿಯೊಂದು ಪಾತ್ರಗಳನ್ನು ಕಂಪ್ಯೂಟರುಗಳಲ್ಲಿ, ನಿಜವಾದ ಮಾಡೆಲ್ಲುಗಳಲ್ಲಿ ಸೃಷ್ಟಿಸಿ ನಿರ್ದೇಶಕ ಕ್ಯಾಮೆರಾನ್‍ಗೆ ತೋರಿಸಿದಾಗ, ಅರೆರೆ....ಇದು ಈ ರೀತಿ ಬೇಡ, ಅ ರೀತಿ ಮಾಡಿ, ಇದು ಓಕೆ ಅದ್ರೂ ಇದರಲ್ಲಿ ಇನ್ನೂ ಸ್ವಲ್ಪ ವೈವಿದ್ಯತೆ ಬೇಕು, ಇದು ನೋಡಿ ಚೆನ್ನಾಗಿದೆ, ಆದ್ರೆ ಇನ್ನೂ ಸ್ವಲ್ಪ ಪರಿಪೂರ್ಣತೆ ಕೊಡಲು ಸಾಧ್ಯವೇ ಅಂಥ ಪ್ರತಿ ಪಾತ್ರಗಳು, ಗಿಡಗಳು, ಎಲೆಗಳು, ಬೆಳಕುಚೆಲ್ಲುವ ಹುಳುಗಳು, ಪ್ರಾಣಿಗಳು, ತೇಲಾಡುವ ಬೆಟ್ಟಗಳು, ಅದಕ್ಕೆ ಕೊಂಡಿಗಳಾದ ರಾಕ್ಷಸಗಾತ್ರದ ಬಿಳಲುಗಳು, ಹಾರಾಡುವ ಪಕ್ಷಿಗಳು, ರಾತ್ರಿಸಮಯದ ಆ ಪ್ರಕೃತಿಯ ಸ್ವರ್ಗ, ಇತ್ಯಾದಿಗಳನ್ನು ನೋಡಿ ತಂತ್ರಜ್ಞರಿಗೆ ಈ ನಿರ್ದೇಶಕ ಕ್ಯಾಮೆರಾನ್ ಎಂಥ ಗೋಳು ಕೊಟ್ಟಿರಬೇಕು. ಅವರು ಹಗಲು ರಾತ್ರಿ ಕೊನೆಗೆ ಕನಸಲ್ಲೂ ಕುಸುರಿಕೆಲಸಮಾಡಿ ತಕ್ಷಣ ಎದ್ದು ಅದನ್ನೇ ಮರುಸೃಷ್ಟಿಸಿರುವ ಕೆಲಸಕ್ಕೆ ತೊಡಗಿಕೊಂಡಿದ್ದರೆ ಮಾತ್ರ ಯಾರು ಕಾಣದಂತ, ಕಲ್ಪಿಸಿಕೊಳ್ಳದಂತ ಮಾಯಾಲೋಕ ಸೃಷ್ಟಿಸಲು ಸಾಧ್ಯವಲ್ಲವೇ ಅಂದುಕೊಳ್ಳುವ ಇಡಿ ಸಿನಿಮಾ ತಂಡಕ್ಕೆ ನನ್ನ ದೀರ್ಘ ನಮಸ್ಕಾರಗಳನ್ನು ಹಾಕಿ ಮನೆಗೆ ಬಂದೆ.

ಊಟದ ಸಮಯ. ಟಿವಿಯಲ್ಲಿ ಬಬ್ರುವಾಹನ ಸಿನಿಮಾ ಬರುತ್ತಿತ್ತು. ನಾನು ಅವತಾರ್ ಸಿನಿಮಾಗೆ ಹೋಗಿದ್ದನ್ನು ಹೇಮಾಶ್ರಿಗೆ ಹೇಳಲ್ಲಿಲ್ಲ. ಇಬ್ಬರೂ ಊಟಮಾಡುತ್ತಿದ್ದೆವು. ನಾನು ಟಿವಿಯಲ್ಲಿನ ಸಿನಿಮಾ ಸರಿಯಾಗಿ ಗಮನಿಸದೇ ಅವತಾರ್ ಹ್ಯಾಂಗವರ್‍ನಲ್ಲಿ ಊಟ ಮಾಡುತ್ತಿದ್ದೆ. ಆಗ ಬಂತಲ್ಲ ಅರ್ಜುನ ಮತ್ತು ಬಬ್ರುವಾಹನ ನಡುವಿನ ವಾಗ್ಯುದ್ದ ತದನಂತರ ಅವರ ಬಾಣಪ್ರಯೋಗ. ಅರ್ಜನ ಮೊದಲು ಬಿಟ್ಟ ಅದೆಂತದೋ ಬೆಂಕಿಯುಗಳುವ ಅಸ್ತ್ರ ಅದಕ್ಕೆ ವಿರುದ್ಧವಾಗಿ ಬಬ್ರುವಾಹನ ಬಿಟ್ಟ ಮತ್ತೊಂದು ಅದಕ್ಕಿಂತ ಶಕ್ತಿಶಾಲಿ ಅಸ್ತ್ರ. ಅವೆರಡು ಆಕಾಶದಲ್ಲಿ ಹಾರಾಡಿ ಒಂದಕ್ಕೊಂದು ತಾಗಿ ಗುದ್ದಾಡಿ ಕೊನೆಗೊಂದು ಗೆದ್ದಿತು. ಮತ್ತೆ ಮತ್ತೊಂದು ಬಾಣ ಪ್ರಯೋಗ ಇಬ್ಬರಕಡೆಯಿಂದ.
" ರೀ ಇದೇನ್ರಿ ಇದು ಅರ್ಜುನ ಮತ್ತು ಬಬ್ರುವಾಹನ ಇಬ್ಬರೂ ಹೆಚ್ಚೆಂದರೆ ನೂರು ಮೀಟರ್ ದೂರವಿರಬಹುದು. ಇಬ್ಬರೂ ಸರಿಯಾದ ಗುರಿಕಾರರೆಂದಮೇಲೆ ಅವನು ಬಿಟ್ಟ ಬಾಣ ಇವನಿಗೆ ತಗುಲಬೇಕು, ಇವನು ಬಿಟ್ಟಬಾಣ ಅವನಿಗೆ ನಾಟಿ ಸಾಯಬೇಕು, ಆದ್ರೆ ಇಲ್ಲಿ ಇದ್ಯಾಕೆ ಆ ಬಾಣಗಳೆರಡು ಆಕಾಶಕ್ಕೆ ಹೋಗ್ತವಲ್ಲ?" ಅವಳಿಂದ ಸಡನ್ನಾಗಿ ಬಂದ ಪ್ರಶ್ನೆ ನನ್ನನ್ನು ಒಂದುಕ್ಷಣ ತಬ್ಬಿಬ್ಬು ಮಾಡಿತು. ಅವಳು ಕೇಳುತ್ತಿರುವುದು ಸರಿಯಾಗಿದೆಯಲ್ಲಾ. ಆದ್ರೆ ತಕ್ಷಣ ನನಗೆ ಉತ್ತರ ನೀಡಲಾಗಲಿಲ್ಲ. ಅವಳ ಪ್ರಶ್ನೆಯೇ ನನ್ನ ಪ್ರಶ್ನೆಯೂ ಆಗಿತ್ತು. ಸ್ವಲ್ಪ ಹೊತ್ತು ಆಲೋಚಿಸಿ, " ನೀನು ಬುದ್ದಿವಂತೆಯಾಗಿದ್ದೀಯಾ ಅನ್ನಿಸುತ್ತೆ, ಇದೇ ಸಿನಿಮಾವನ್ನು ನಿನ್ನ ಬಾಲ್ಯದಲ್ಲಿ ನೋಡಿದಾಗ ಯಾರಿಗೂ ಅವಾಗ ಈ ಪ್ರಶ್ನೆಯನ್ನು ಕೇಳಲಿಲ್ಲವೇ" ನಾನು ಮರು ಪ್ರಶ್ನೆ ಹಾಕಿ ಅವಳಿಂದ ಎಂಥ ಉತ್ತರ ಬರಬಹುದು ಅಂತ ಕಾಯುತ್ತಿದ್ದೆ.
"ನೋಡ್ರಿ ನಮ್ಮ ಚಿಕ್ಕಂದಿನ ಹಬ್ಬ ಹರಿದಿನಗಳಲ್ಲಿ, ಗಣೇಶನ ದೊಡ್ಡ ಪೆಂಡಾಲುಗಳಲ್ಲಿ[ಅರಸಿಕೆರೆಯಲ್ಲಿಯಲ್ಲಿ ಗಣೇಶ ಪೆಂಡಾಲಿನಲ್ಲಿ ತಿಂಗಳುಗಟ್ಟಲೆ ಗಣೇಶನನ್ನು ಇಟ್ಟು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಹಳೆ ಸಿನಿಮಾಗಳನ್ನು ಹಾಕುತ್ತಿದ್ದರಂತೆ]ವಿಧಿವಿಲಾಸ, ಜಗದೇಕವೀರ, ಬಬ್ರುವಾಹನ, ಭೂಕೈಲಾಸ ಹೀಗೆ ಅನೇಕ ಸಿನಿಮಗಳನ್ನು ಹಾಕುತ್ತಿದ್ದರಲ್ಲಾ ಅದು ನಮಗೆ ಮೊದಲೇ ಗೊತ್ತಾಗಿ ಸ್ಕೂಲ್ ಬಿಟ್ಟ ತಕ್ಷಣ ಮನೆಯಲ್ಲಿ ಬ್ಯಾಗ್ ಬಿಸಾಡಿ ಅಲ್ಲಿ ಗೆಳತಿಯರೊಂದಿಗೆ ಹೋಗಿ ಕುಳಿತುಬಿಡುತ್ತಿದ್ದೆ. ಅದರ ಆನಂದವೇ ಬೇರೆ ಬಿಡ್ರಿ" ಅಂದಳು.
"ಆ ಸಿನಿಮಾಗಳಲ್ಲೂ ಇಂಥ ಸನ್ನಿವೇಶಗಳನ್ನು ನೋಡಿದಾಗ ನನಗೆ ಕೇಳಿದಂತೆ ನೀನು ಆವಾಗ ಯಾರಿಗೂ ಈ ರೀತಿ ಪ್ರಶ್ನೆ ಕೇಳಲಿಲ್ವಾ" ನಾನು ಕೇಳಿದೆ.
"ಅಯ್ಯೋ ಹೋಗ್ರಿ, ಆಗಿನ ಮಜವೇ ಬೇರೆ, ನಮ್ಮೂರಲ್ಲಿ ಇದ್ರೆ ಇನ್ನೂ ಅಂತ ಸಿನಿಮಾ ನೋಡಿ ಖುಷಿ ಪಡಬಹುದಿತ್ತು. ನಿಮ್ಮನ್ನು ಮದುವೆಯಾಗಿ ಬೆಂಗಳೂರಿಗೆ ಬಂದಮೇಲೆ ಅವೆಲ್ಲಾ ಎಲ್ಲಿ ಸಿಗುತ್ತವೆ ಹೇಳಿ" ಅಂತ ನನಗೇ ಮರು ಪ್ರಶ್ನೆ ಹಾಕಿದಳು. ಅವಳ ಪ್ರಶ್ನೆಗೆ ನಾನು ಉತ್ತರಿಸದಿದ್ದರೂ ಬೆಂಗಳೂರಿಗೆ ಬಂದರೆ ಅಂತ ಖುಷಿಯನ್ನು ಎಲ್ಲರೂ ಕಳೆದುಕೊಂಡುಬಿಡುತ್ತಾರ. ನನ್ನಲ್ಲಿ ಹೊಸ ಪ್ರಶ್ನೆ ಉದ್ಬವವಾಗಿತ್ತು.

ಬೇರೆ ಊರಿನಿಂದ ಬಂದವರಿಗೆ ಈ ರೀತಿ ಆದರೆ ನನ್ನಂತೆ ಇಲ್ಲೇ ಹುಟ್ಟಿ ಬೆಳೆದವರ ಕತೆಯೇನು ಅಂದುಕೊಂಡಾಗ ನನ್ನ ಬಾಲ್ಯದ ನೆನಪು ಮರುಕಳಿಸಿತು.

ನಾನು ಐದನೇ ತರಗತಿಯಲ್ಲಿ ಓದುತ್ತಿದ್ದೆ. ಆಗ ನಮ್ಮ ರಸ್ತೆಗಳಲ್ಲಿ ಗಣೇಶ, ಕನ್ನಡ ರಾಜ್ಯೋತ್ಸವ, ಇತ್ಯಾದಿಗಳನ್ನು ನಡೆಸುವಾಗ ಕಡ್ಡಾಯವಾಗಿ ಒಂದೆರಡು ಸಿನಿಮಾಗಳನ್ನು ಹಾಕುತ್ತಿದ್ದರು. ನಾಳೆ ರಾತ್ರಿ ಇಂಥ ಸಿನಿಮಾ ಅಂತ ಮೈಕಿನಲ್ಲಿ ದೊಡ್ಡದಾಗಿ ಇವತ್ತೇ ಅನೌನ್ಸ್ ಮಾಡುತ್ತಿದ್ದರು. ಜೊತೆಗೆ ಅಲ್ಲೊಂದು ದೊಡ್ಡ ಕೈಬರಹವನ್ನು ಹಾಕಿಬಿಡುತ್ತಿದ್ದರು. ನಾನು ಗೆಳೆಯರೊಂದಿಗೆ ಬೆಳಿಗ್ಗೆ ಹೋಗುವಾಗ ಅದನ್ನು ನೋಡಿಬಿಟ್ಟರೆ ಮುಗೀತು. ರಾತ್ರಿ ಬೇಗ ಊಟ ಮುಗಿಸಿ ನನ್ನ ಕೈಲಿದ್ದ ಚಿಲ್ಲರೆ ಕಾಸಿಗೆ ಆಗ ಸಿಗುತ್ತಿದ್ದ ಕುರುಕುಲು ತಿಂಡಿಗಳನ್ನು ಜೇಬಿನಲ್ಲಿ ತುಂಬಿಸಿಕೊಂಡು ಗೆಳೆಯರೊಂದಿಗೆ ಸಿನಿಮಾ ಶುರುವಾಗುವ ಮೊದಲೇ ಮುಂದಿನಸಾಲಿನಲ್ಲಿ ಜಾಗವನ್ನು ಹಿಡಿದು ಕುಳಿತುಬಿಡುತ್ತಿದ್ದೆ. ಭೂಕೈಲಾಸ, ವಿಧಿವಿಲಾಸ, ಜಗದೇಕವೀರ, ಶ್ರೀನಿವಾಸ ಕಲ್ಯಾಣ, ಸತ್ಯಹರಿಸ್ಚಂದ್ರ,.................ಒಂದೇ ಎರಡೇ.........ಹತ್ತಾರು ಸಿನಿಮಾಗಳನ್ನು ಅದರೊಳಗಿನ ಮಾಯ ಮಂತ್ರಗಳನ್ನು ನೋಡಿ ಮಜಾ ಮಾಡುತ್ತಿದ್ದೆವು. ಆಗಲೂ ರಥವೇರಿ ಬಿಲ್ಲುಬಾಣಗಳ ಯುದ್ಧ, ಉದಯಕುಮಾರ್ ಒಮ್ಮೆ ಬಲಗೈಯಲ್ಲಿ ಚೂಂ ಅಂದು ಬಿಟ್ಟರೇ ಮುಗೀತು ಒಬ್ಬ ರಾಕ್ಷಸ ಬಂದುಬಿಡುತ್ತಿದ್ದ ಅವನು ಎಲ್ಲಾ ಯೋದರನ್ನು ಒಸಗಿಬಿಡುತ್ತಿದ್ದರೆ ನಮಗೆ ಸಿಟ್ಟು. ಆಷ್ಟರಲ್ಲಿ ರಾಜಕುಮಾರ್ ಬಿಟ್ಟಬಾಣ ಆಕಾಶವೆಲ್ಲಾ ಸುತ್ತಿ, ಎಲ್ಲೆಲ್ಲೋ ಅಲೆದಾಡಿ ಕೊನೆಗೆ ಆ ರಾಕ್ಷಸನಿಗೆ ತಗುಲಿ ಅವನು ಸತ್ತರೆ ನಮಗಂತೂ ನಾವೇ ಯುದ್ಧದಲ್ಲಿ ಗೆದ್ದಷ್ಟೂ ಸಂಭ್ರಮ. ಒಂದು ಕೋಣೆಯೊಳಗೆ ನಮ್ಮ ರಾಜಕುಮಾರ್ ಹೋದರೆ, ಅಲ್ಲಿರುವ ಪ್ರತಿಗೋಡೆಯಲ್ಲಿನ ವಸ್ತುಗಳು ಮಾಯಾವಸ್ತುಗಳೇ. ಒಂದು ಗೋಡೆಗೆ ಸಿಕ್ಕಿಸಿದ್ದ ಹುಲಿಮುಖವನ್ನು ಮುಟ್ಟಿದರೆ ಸಡನ್ನಾಗಿ ಎದುರಿಂದ ಈಟಿಯೊಂದು ನುಗ್ಗಿ ಬಂದು ರಾಜಕುಮಾರಿಗೆ ಚುಚ್ಚುವುದಲ್ಲದೇ ನಮಗೇ ಚುಚ್ಚಿಬಿಟ್ಟಿತ್ತೇನೋ ಅನ್ನಿಸಿ ಅದುರಿ, ಬೆದರಿಬಿಡುತ್ತಿದ್ದೆವು. ಸಿನಿಮಾ ನೋಡಿ ಮನೆಗೆ ಬಂದರೆ ರಾತ್ರಿ ಕನಸಲ್ಲೂ ಅದೇ ಬಂದು ಭಯದಿಂದ ಅಮ್ಮನನ್ನು ಅಪ್ಪನನ್ನು ಅಪ್ಪಿ ಮಲಗಿದ್ದು ನೆನಪಾಯಿತು.

ಅದೆಲ್ಲಾ ಆದರೂ ನಮಗೆ ಅಂಥ ಸಿನಿಮಾಗಳು ಬೇಕಿತ್ತು. ಅದರೊಳಗಿನ ಈ ಮಾಯಾ ಮಂತ್ರಗಳು, ಬಾಣ ಬಿರುಸುಗಳು ಬೇಕಿತ್ತು. ಇವತ್ತು ನಮ್ಮಲ್ಲಿ ಮೂಡಿದ ಈ ಪ್ರಶ್ನೆಗಳು ಅವತ್ತು ಮೂಡಲಿಲ್ಲವೇಕೆ? ಇಂಥವು ಸಿನಿಮಾ ಮಾತ್ರವಲ್ಲ, ಐದು ಆರನೇ ತರಗತಿಯಲ್ಲಿ ಸ್ಕೂಲ್ ಬಿಟ್ಟಕೂಡಲೇ ನಮ್ಮ ಮನೆಯ ಹತ್ತಿರವಿರುತ್ತಿದ್ದ ಗ್ರಂಥಾಲಯಕ್ಕೆ ನುಗ್ಗಿ ಅಲ್ಲಿರುವ ಚಂದಮಾಮ, ಬೊಂಬೆಮನೆ, ಬಾಲಮಿತ್ರದಲ್ಲೂ ಇಂಥವೇ ಮಾಯಾ ಮಂತ್ರಗಳು, ಸಪ್ತ ಸಾಗರಗಳು, ಪರ್ವತಗಳ ದಾಟಿ ಏಳುಸುತ್ತಿನ ಕೋಟಿಯೊಳಗಿನ ಪ್ರವೇಶದ್ವಾರಕ್ಕೆ ಹೋದರೇ ಅಲ್ಲಿಯೂ ಹೀಗೆ ಅನೇಕ ಬೆರಗುಗೊಳಿಸುವ ಅನೇಕ ಮಂತ್ರ ತಂತ್ರಗಳ ವಿದ್ಯೆಗಳು ನಮ್ಮನ್ನು ಸೂಜಿಗಲ್ಲಿನಂತೆ ಸೆಳೆದು ನಾವೇ ಒಂದು ಪಾತ್ರವಾಗಿ ಅಲ್ಲಿನ ಎಲ್ಲ ಅನುಭವಗಳನ್ನು ನಾವು ಅನುಭವಿಸಿ ಮೈಮರೆತಾಗಲೂ ಈಗ ಬಂದ ಪ್ರಶ್ನೆ ಆಗ ಏಕೆ ಬರಲಿಲ್ಲ?
ಬಹುಶಃ ಬಾಲ್ಯದ ಮುಗ್ಧತೆಯೇ ಇಂಥ ಪ್ರತಿಯೊಂದನ್ನು ಬೆರಗಿನಿಂದ ನೋಡಿ ಸಂಭ್ರಮಿಸುವುವುದನ್ನು ಕಲಿಸುತ್ತಿತ್ತೇನೋ. ಆದ್ರೆ ನಾವು ಹತ್ತನೇ ತರಗತಿ, ಪಿಯುಸಿ, ಪದವಿಗೆ ಬರುತ್ತಿದ್ದಂತೆ ಇಂಥ ಸಿನಿಮಾಗಳ ಬಗ್ಗೆ, ಬಾಲಮಿತ್ರ, ಚಂದಮಾಮ ಬರಹಗಳ ಬಗ್ಗೆ ನಮ್ಮ ತಿಳುವಳಿಕೆ ಹೆಚ್ಚಾಗಿ ಅದನ್ನು ಹೇಗೆ ಮಾಡುತ್ತಾರೆ ಅನ್ನುವುದು ತಿಳಿದು ಇದು ಇಷ್ಟೇನಾ.........ಇದೆಲ್ಲಾ ಬರೀ ಸುಳ್ಳು, ಗಿಮಿಕ್ಕು, ಅನ್ನಿಸತೊಡಗಿದ್ದು ನಮ್ಮ ಮುಗ್ಧತೆ ಮಾಯವಾಗಿ ನಾವು ಬುದ್ಧಿವಂತರಾಗಿದ್ದೇವೆ ಎನ್ನುವ ಅಲೋಚನೆ ನಮ್ಮಲ್ಲಿ ಮೂಡಿತ್ತು. ಅದ್ರೆ ಅದು ಬಹುಕಾಲ ಇರಲಿಲ್ಲ. ಮತ್ತೆ ವಿದೇಶಿ ಸಿನಿಮಾಗಳಲ್ಲಿ ಮತ್ತೆ ನಮ್ಮ ನಿರೀಕ್ಷೆ, ನಮ್ಮ ಬುದ್ಧಿವಂತಿಕೆಯನ್ನು ಮೀರಿ "ಸ್ಪೈಡರ್‍ ಮ್ಯಾನ್, ಟೈಟಾನಿಕ್, ಟರ್ಮಿನೇಟರ್, ದ ಡೇ ಆಪ್ಟರ್ ಟುಮಾರೋ, ಇಂಡಿಪೆಂಡೆನ್ಸ್ ಡೇ, ೨೦೧೨, ಲಾರ್ಡ್ ಆಫ್ ರಿಂಗ್ಸ್, ಹ್ಯಾರಿ ಪಾಟರ್, ಇನ್ನೂ ಅನೇಕ ಸಿನಿಮಾಗಳು ಮತ್ತೆ ನಮ್ಮಲ್ಲಿ ಅಡಗಿದ್ದ ಮುಗ್ಧ ಮನಸ್ಸನ್ನು ಎಚ್ಚರಗೊಳಿಸಿ ಮತ್ತೆ ಬೆರಗು ಗೊಳಿಸಿಬಿಟ್ಟವು. ಅವುಗಳ ಮುಂದೆ ನಮ್ಮ ಈ ಬಾಣ ಬಿರುಸುಗಳ ಬಬ್ರುವಾಹನ, ಮಾಯಾಬಜಾರ್, ಇತ್ಯಾದಿಗಳೆಲ್ಲಾ ಸವಕಲು ತಂತ್ರಜ್ಞಾನವೆನಿಸುವಷ್ಟು ಬುದ್ದಿವಂತರಾದರೂ ನಾವು ಸ್ಪೈಡರ್ ಮ್ಯಾನ್, ೨೦೧೨ ಇತ್ಯಾದಿಗಳಲ್ಲಿ ಹೊಸ ಅದ್ಭುತಗಳನ್ನು ನಿರೀಕ್ಷಿಸುತ್ತೇವೆಂದರೇ ನಮ್ಮ ನಮ್ಮಲ್ಲಿ ಅಡಗಿರುವ ಮುಗ್ದತೆಯೂ ಹೊಸ ತಂತ್ರಜ್ಞಾನವೆನ್ನುವ ಬೆರಗನ್ನು ನಿರೀಕ್ಷಿಸುತ್ತಾ ಆಗಾಗ್ಗೆ ಹೊರಬರಲು ಪ್ರಯತ್ನಿಸುತ್ತಿರುತ್ತದೆ ಅಲ್ಲವೇ. ಈಗಲೂ ನಮ್ಮ ಹಳೆತಲೆಮಾರಿನವರಿಗೆ ಬಬ್ರುವಾಹನ, ಮಾಯಾಬಜಾರುಗಳಂತ ಸಿನಿಮಾಗಳೇ ಸಂಭ್ರಮಿಸಲು ಬೇಕಾದರೆ, ಅವರಲ್ಲಿ ಇನ್ನೂ ಮುಗ್ದತೆ ಉಳಿದುಕೊಂಡಿದೆ ಅಂತ ಆಯಿತಲ್ಲವೇ.
ಆದ್ರೂ "ಅವತಾರ್" ಸಿನಿಮಾದಲ್ಲಿ ಯಾವ ತಂತ್ರಜ್ಞಾನವನ್ನು ಉಪಯೋಗಿಸಿದ್ದಾರೆ ಅನ್ನುವುದನ್ನು ಕಂಡುಹಿಡಿಯಲು ಪ್ರಯತ್ನಿಸಿದೆ. ಆಗಲಿಲ್ಲ. ಆಗದಿರವುದು ಒಳ್ಳೆಯದೆ. ಅದನ್ನು ತಿಳಿದುಕೊಂಡುಬಿಟ್ಟರೇ ಇಷ್ಟೇನಾ ಅನ್ನಿಸಿ ಅಂತ ಅದ್ಬುತ ಮಾಯಾಲೋಕವನ್ನು ಆನಂದಿಸುವ ಅವಕಾಶವನ್ನು ನಾವು ಕಳೆದುಕೊಂಡುಬಿಡುತ್ತೇವೆ ಅಲ್ವಾ.?

ಲೇಖನ
ಶಿವು.ಕೆ