Saturday, November 28, 2009

ಜೀವನೋತ್ಸಾಹವೆಂದರೆ ಹೀಗಿರಬೇಕು.

ಪುಸ್ತಕ ಬಿಡುಗಡೆಯಾದ ಖುಷಿಯಲ್ಲಿ, ಮಾರಾಟ ಉತ್ತಮಗೊಳ್ಳುತ್ತಿರುವ ಆನಂದದಲ್ಲಿ ತೇಲುತ್ತಿದ್ದ ನನಗೆ ಇವತ್ತಿಗೆ ಸರಿಯಾಗಿ[ಕಳೆದ ಶನಿವಾರ]ಒಂದು ವಾರದ ಹಿಂದೆ ಜ್ವರವೆಂಬ ಜ್ವರ ನನ್ನನ್ನು ಆಕ್ರಮಿಸಿ ಹಾಸಿಗೆ ಬಿಟ್ಟು ಏಳದಂತೆ ಮಾಡಿತ್ತು. ಸದಾ ಮೈಮೇಲೆ ರಾಶಿ ಕೆಲಸವನ್ನು ಏರಿಕೊಂಡು ಓಡಾಡುತ್ತಿರುವ ನನಗೆ ಒಮ್ಮೇಲೆ ಗರಬಡಿದಂತಾಗಿತ್ತು. ಹೊರಗಿನ ವೇಗದ ಪ್ರಪಂಚದ ನಡುವೆ ನನ್ನನ್ನು ಕೈಕಾಲು ಕಟ್ಟಿಹಾಕಿದಂತೆ ಆಗಿತ್ತು. ಮನಸ್ಸು ಏನೆಲ್ಲಾ ಮಾಡಬೇಕು ಅಂದರೂ ದೇಹ ಮಾತ್ರ ನನ್ನ ಮಾತು ಕೇಳುತ್ತಿಲ್ಲ. ನನ್ನ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದ ಗೆಳೆಯರಾದ ಡಾ.ದೇವರಾಜ್ " ಶಿವು, ಕಳೆದೊಂದು ತಿಂಗಳಿಂದ ಸಿಕ್ಕಾಪಟ್ಟೆ ಓಡಾಡಿ ಸುಸ್ತಾಗಿದ್ದೀರಿ, ನಿಮ್ಮ ಮನಸ್ಸು ಉತ್ಸಾಹದಿಂದಿದ್ದರೂ ದೇಹಕ್ಕೆ ನಿಮ್ಮ ಮಾತನ್ನು ಕೇಳುತ್ತಿಲ್ಲ. ನಾಲ್ಕೈದು ದಿನ ರೆಸ್ಟ್ ತೆಗೆದುಕೊಂಡು ಬಿಡಿ ಅಂದಾಗ ನಾನು ಮರುಮಾತಾಡದೇ ಅವರು ಹೇಳಿದಂತೆ ಮಾಡಿದ್ದೆ.


ಈ ರೆಸ್ಟ್ ಅನ್ನುವುದರ ನಡುವೆ ಒಂದೆರಡು ಪುಸ್ತಕಗಳನ್ನು ಓದಿ ಮುಗಿಸಿದೆ. ನಾಲ್ಕು ದಿನ ಕಳೆಯುವಷ್ಟರಲ್ಲಿ ಇದು ನನಗೆ ಆಗಿಬರುವುದಿಲ್ಲ. ನಾನು ಹೀಗೆ ಬೆಡ್‍ರೂಮಿನಲ್ಲಿ ಬಿದ್ದಿದ್ದರೇ ಕಳೆದುಹೋಗುತ್ತೇನೆ ಅನ್ನಿಸಲಾರಂಭಿಸಿತ್ತು. ಕೊನೆಗೆ ಮೊನ್ನೆ ಸ್ವಲ್ಪ ಸುಸ್ತು ಇದ್ದರೂ ಹೊರಗೆಲ್ಲಾದರೂ ಹೋಗೋಣ ಎನ್ನಿಸಿದಾಗ ಕಣ್ಣಿಗೆ ಬಿದ್ದಿದ್ದು ಅಂತರಾಷ್ಟ್ರೀಯ ಅಂಗವಿಕಲರ ಕ್ರೀಡಾಕೂಟ. ದೇವರಾಜ್ ನಾನು ಸ್ವಲ್ಪ ಹುಷಾರಾಗಿದ್ದೇನೆ. ನಾನು ಸ್ವಲ್ಪ ಈ ಕ್ರೀಡಾಕೂಟವನ್ನು ನೋಡಿ ಬರಲೇ ಅಂದೆ. ಅದಕ್ಕೆ ಅವರು "ನಿಮ್ಮ ಕಣ್ಣಿಗೆ ಅದು ಬಿದ್ದಿದೆಯೆಂದಮೇಲೆ ಮುಗೀತು. ನಾನು ಬೇಡವೆಂದರೂ ನಿಮ್ಮ ಮನಸ್ಸು ಬೇಡವೆನ್ನುತ್ತಾ, ಹೋಗಿಬನ್ನಿ ಎಂದರು. ಅಷ್ಟು ಸಾಕಿತ್ತು ನನಗೆ.


ಕ್ರೀಡಾಕೂಟಕ್ಕೆ ಹೋದಾಗ ಅಲ್ಲಿನ ವಾತವರಣ ನನಗೆ ಹಿತಕರವೆನಿಸಿತ್ತು. ಅಲ್ಲಿ ಭಾಗವಹಿಸಿದ್ದ ಕ್ರೀಡಾ ಭಾಂದವರೆಲ್ಲರ ಸ್ಪೂರ್ತಿಯನ್ನು ನೋಡಿದಾಗ, ಅವರ ಬದುಕಿನಲ್ಲಿ ಅವರಿಗೆ ಆಗಿರುವ ಅಂಗವೈಕಲ್ಯತೆಯನ್ನು ಮೀರಿ ಅವರ ಜೀವನೋತ್ಸಾಹವನ್ನು ಗಮನಿಸಿದಾಗ ಅವರಿಂದ ನಾವು ಕಲಿಯಬೇಕಾದ್ದು ತುಂಬಾ ಎನಿಸಿತ್ತು. ಅವರ ಬಗ್ಗೆ ಬರೆಯುವುದಕ್ಕಿಂತ ಅವರ ಜೀವನೋತ್ಸಾಹವನ್ನು, ಕ್ರೀಡಯಲ್ಲಿ ಮತ್ತು ಬದುಕಿನಲ್ಲಿ ಗೆಲ್ಲಬೇಕೆನ್ನುವ ಚಲ, ಇತ್ಯಾದಿಗಳನ್ನು ಫೋಟೊಗಳ ಮೂಲಕ ಸೆರೆಯಿಡಿಯಲು ಪ್ರಯತ್ನಿಸಿದ್ದೇನೆ. ನೀವು ಒಮ್ಮೆ ನೋಡಿಬಿಡಿ.

ನೀನು ಗೆದ್ದೆಯಲ್ಲಾ! ಇರು ನಿನ್ನದೊಂದು ಫೋಟೊ ತೆಗೆಯುತ್ತೇನೆ!


ನಾರ್ವೆಯ ಈ ಜಾವೆಲಿನ್ ಆಟಗಾರ ಓಡಿಬಂದು ಜಾವೆಲಿನ್ ಎಸೆಯುವ ಪರಿಯನ್ನು ನೋಡುವುದೇ ಒಂದು ಸಂಭ್ರಮ!

ಆಟಗಾರರನ್ನು ಇವರು ಹುರಿದುಂಬಿಸುತ್ತಾ, ಸಂಭ್ರಮಿಸುವ ಪರಿ ನೋಡಿ!

ಢಂ ಢಂ....ಬಡಿಯುತ್ತಾ ಎಲ್ಲಾ ದೇಶದ ಆಟಗಾರರನ್ನು ಪ್ರೋತ್ಸಾಹಿಸುತ್ತಿರುವ ಥೈಲ್ಯಾಂಡ್ ಪ್ರಜೆ.

ನೋಡು ನೀನು ಹೀಗೆ ಬ್ಯಾಲೆನ್ಸ್ ಮಾಡಬೇಕು ಗೊತ್ತಾ![ಬ್ರೆಜಿಲ್ ರಗ್ಬಿ ಆಟಗಾರರ ತಯಾರಿ]

ನಾನು ಕೈಯಿಲ್ಲದಿದ್ದರೂ ಚೆನ್ನಾಗಿ ಟೇಬಲ್ ಟೆನ್ನಿಸ್ ಆಡಬಲ್ಲೆ![ಪಿಲಿಫೈನ್ಸ್ ಆಟಗಾರ್ತಿ]

ನಾನು ಕಾಲಿಲ್ಲದಿದ್ದರೂ ಇನ್ನೂ ಚೆನ್ನಾಗಿ ಟೇಬಲ್ ಟೆನ್ನಿಸ್ ಆಡಬಲ್ಲೆ![ಥೈಲ್ಯಾಂಡ್ ಆಟಗಾರ್ತಿ]

ಹಲೋ! ಕೊರಿಯಾದಿಂದ ಯಾರು ಮಾತಾಡುತ್ತಿರುವುದು! ನಮ್ಮ ಹುಡುಗ ಚಿನ್ನದ ಪದಕ ಗೆದ್ದಿದ್ದಾನೆ! ಈ ಕೊರಿಯಾ ಹುಡುಗಿ ಅವರ ದೇಶಕ್ಕೆ ಫೋನ್ ಹಚ್ಚಿರಬಹುದೇ!

ನಗಬೇಕೆನ್ನುವ ಮನಸ್ಸಿದ್ದರೆ ಸಾಕು ಈ ರೀತಿ ನಕ್ಕುಬಿಡಬಹುದು. ನಗುವಿಗೆ ಬಣ್ಣ ಅಕಾರಗಳುಂಟೆ!

ಈ ಮುಖಾರವಿಂದದಲ್ಲಿ ಅದೆಷ್ಟು ಮುಗ್ಧತೆಯುಂಟು ಅಲ್ವಾ!

ಆಟದ ನಡುವೆಯೂ ಒಂದಷ್ಟು ವಿರಾಮ, ಓದು.

ಓಟದ ಟ್ರ್ಯಾಕಿನಲ್ಲಿ ಓಡಲು ಎಲ್ಲರೂ ಸಿದ್ಧರಾಗಿರುವಾಗ ಈ ಕುಳ್ಳ ಹೀಗೆ ನಡೆದಾಡುತ್ತಿರುವುದೇಕೆ ಅನ್ನಿಸಿತೆ! ಆತ ನಡೆದಾಡುತ್ತಿರುವುದು ನಿಜವಾದರೂ ಆ ಓಟದ ಟ್ರ್ಯಾಕ್ ನಿಜವಲ್ಲ. ಅದು ದೂರದರ್ಶನದ ದೊಡ್ಡ ಟಿ.ವಿ. ಪರದೆ!

ಒಂದು ಕೈಯಿಲ್ಲದಿದ್ದರೂ ನಾನು ಹೀಗೆ ದೂರ ಹಾರಿ ನೆಗೆಯಬಲ್ಲೆ!

ನನಗೊಂದು ಕಾಲಿಲ್ಲದಿದ್ದರೂ ನಿಮ್ಮಂತೆ ಓಡಬಲ್ಲೆ, ಹಾರಬಲ್ಲೆ, ನೆಗೆಯಬಲ್ಲೆ, ಪದಕ ಗೆಲ್ಲಬಲ್ಲೆ!
ಲಾಂಗ್ ಜಂಪ್‍ನಲ್ಲಿ ನಾನೇ ಚಾಂಪಿಯನ್ ಗೊತ್ತಾ![ಜರ್ಮನಿಯ ಈ ಆಟಗಾರ್ತಿಗೆ ಎರಡೂ ಕಾಲಿಲ್ಲ]

ನೂರು ಮೀಟರ್ ಓಟದಲ್ಲಿ ಜರ್ಮನಿಯ ಈ ಆಟಗಾರ[ಒಂದು ಕಾಲಿಲ್ಲ] ಗೆಲ್ಲಬೇಕೆಂಬ ಗುರಿಯಿಂದ ಅಂತಿಮ ಗೆರೆಯ ಬಳಿ ಬಿದ್ದರೂ ಚಿನ್ನದ ಪದಕ ಗೆದ್ದುಬಿಟ್ಟ! ಆತನ ಛಲಕ್ಕೆ ಮತ್ತು ಬದುಕಿಗೆ ಒಂದು ಸಲಾಂ!

ಎರಡು ಕಾಲಿಲ್ಲದಿದ್ದರೇನಂತೆ, ಗಂಟೆಗೆ ೬೦ ಕಿಲೋಮೀಟರ್ ವೇಗದಲ್ಲಿ ಇವರ ಚಲನೆ ನೋಡುಗರನ್ನು ಖಂಡಿತ ಬೆರಗುಗೊಳಿಸುತ್ತದೆ!

ಜಪಾನಿ ಆಟಗಾರರು ಈ ಆಟದಲ್ಲೂ ಮುಂದು. ಈತ ಎರಡು ಚಿನ್ನದ ಪದಕ ಗೆದ್ದುಬಿಟ್ಟ.

ಬ್ರೆಜಿಲ್ ದೇಶದ ಈ ಆಟಗಾರನ ಹುರುಪು ಮತ್ತು ಗೆಲ್ಲಬೇಕೆನ್ನುವ ಛಲ ನೋಡಿ!

ಚಿತ್ರಗಳು ಮತ್ತು ಲೇಖನ.
ಶಿವು.ಕೆ

Monday, November 16, 2009

ಧನ್ಯವಾದಗಳು!

ನಿನ್ನೆ ಬಿಡುಗಡೆಯಾದ ನಮ್ಮ ಮೂರು ಪುಸ್ತಕಗಳಿಗೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆ ಸೇರಿದ್ದ ಗಣ್ಯರು, ಬ್ಲಾಗ್ ಗೆಳೆಯರು, ಬಂಧುಮಿತ್ರರು, ವೃತ್ತಿಭಾಂದವರು, ಪುಟ್ಟಮಕ್ಕಳು, ಅವರಿಂದ ಬಂದ ಹಾರೈಕೆಗಳು! ಇವೆಲ್ಲಾ ನಡೆಯುತ್ತಿದೆಯಾ! ಅನ್ನುವ ಭ್ರಮೆಯಲ್ಲಿಯೇ ನಾನಿದ್ದೆ. ಇದೊಂದು ನಿರೀಕ್ಷೆ ಮೀರಿ ಯಶಸ್ವಿಯಾದ ಕಾರ್ಯಕ್ರಮ ನಾನು ಎಂದಿನಂತೆ ಅನೇಕ ಪುಸ್ತಕ ಕಾರ್ಯಕ್ರಮಗಳಿಗೆ ಹೋಗಿದ್ದಾಗ ಹೊಸಬರ ಪುಸ್ತಕಗಳಿಗೆ ನೂರಕ್ಕಿಂತ ಕಡಿಮೆ ಜನರು ಸೇರಿರುತ್ತಿದ್ದರು. ಇಲ್ಲಿ ನಾನು ಮತ್ತುಪ್ರಕಾಶ್ ಹೆಗಡೆಯವರಿಬ್ಬರಿಗೂ ಇದು ಚೊಚ್ಚಲ ಪುಸ್ತಕ ಸಂಭ್ರಮ. ಕೆಲ ಕಾರ್ಯಕ್ರಮಗಳಲ್ಲಂತೂ ಮುವತ್ತು, ನಲವತ್ತು, ಐವತ್ತು ದಾಟುತ್ತಿರಲಿಲ್ಲ. ನಾವು ನಮ್ಮ ಪುಸ್ತಕಗಳ ಬಿಡುಗಡೆಗೆ ನಮ್ಮ ಮೂರು ಜನರಿಂದ ಸೇರಿ ಒಟ್ಟಾರೆ ನೂರರಿಂದ ನೂರೈವತ್ತು ಗೆಳೆಯರು ಬರಬಹುದು ಅಂದುಕೊಂಡಿದ್ದೆವು. ಮತ್ತು ಪುಸ್ತಕಗಳು ಅಲ್ಲೇ ಏನೇ ಡಿಸ್ಕೌಂಟ್ ಕೊಟ್ಟರೂ ಒಬ್ಬೊಬ್ಬರದೂ ಐವತ್ತು ಮೀರಿ ಮಾರಲಾಗದು ಅಂದುಕೊಂಡಿದ್ದೆವು. ನಮ್ಮ ಪ್ರಕಾಶಕರಾದ ಸೀತಾರಾಮ ಹೆಗಡೆಯವರು ಅಷ್ಟು ಮಾರಾಟವಾದರೆ ಅಡ್ಡಿಯಿಲ್ಲ ಒಬ್ಬೊಬ್ಬರದು ನೂರು ಮಾರಾಟವಾದರೆ ನನಗದು ಬಂಪರ್ ಅಂದಷ್ಟೇ ಹೇಳಿದ್ದರು.

ಬೆಳಿಗ್ಗೆ ನಾನು ಸ್ವಲ್ಪ ತಡವಾಗಿ ಬಂದೆನಾದರೂ ದಿವಾಕರ್ ಹೆಗಡೆ ಮತ್ತು ಪ್ರಕಾಶ್ ಹೆಗಡೆ, ಮತ್ತು ಬಂಧುಗಳು ಮೊದಲೇ ಬಂದು ಕೆಲವು ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿದ್ದರು.

ನಂತರ ಮುಖ್ಯ ಅತಿಥಿಗಳು, ಗೆಳೆಯರು ಬರಲಾರಂಭಿಸಿದರು. ಕಾರ್ಯಕ್ರಮ ಶುರುವಾಯಿತು. ಅದರ ವಿವರಗಳನ್ನು ಬರೆಯಲು ನಾನು ಇಷ್ಟಪಡುವುದಿಲ್ಲ. ಅದೆಲ್ಲ ಬರೆದರೆ ಅದು ವರದಿಯಾಗಿಬಿಡುತ್ತದೆ. ಅದೆಲ್ಲಾ ಬಿಟ್ಟು ಬೇರೆ ಕೆಲವೊಂದು ವಿಚಾರಗಳನ್ನು ಹೇಳಲಿಚ್ಚಿಸುತ್ತೇನೆ.

ಮೊದಲಿಗೆ ನಾನು ದಿವಾಕರ್ ಹೆಗಡೆ, ಪ್ರಕಾಶ್ ಹೆಗಡೆ ಮೂವರು ವೇದಿಕೆ ಮೇಲೆ ಕೂರಬಾರದು ಅಂತ ತೀರ್ಮಾನಿಸಿದ್ದೆವು. ಮತ್ತು ಮೂರು ಜನರ ಪರವಾಗಿ ದಿವಾಕರ ಹೆಗಡೆ ಚುಟುಕಾಗಿ ಮಾತಾಡಬೇಕೆಂದು ಹೇಳಿದ್ದರಿಂದ ಅವರಷ್ಟೇ ಮಾಡಿದ್ದು. ಮತ್ತೆ ನಮ್ಮ ಪುಸ್ತಕಗಳು ಎಂದಿನ ಸಂಪ್ರಧಾಯದಂತೆ ಒಟ್ಟಿಗೆ ಬಿಡುಗಡೆಯಾದವು. ಬಿಡುಗಡೆಯ ಸಮಯದಲ್ಲಿ ನಾಗೇಶ್ ಹೆಗಡೆಯವರು ಅವರಿಗಿಂತ ಸ್ವಲ್ಪ ದೂರ ನಿಂತಿದ್ದ ನನಗೆ ನನ್ನ ವೆಂಡರ್ ಕಣ್ಣು ಪುಸ್ತಕವನ್ನು "ಶಿವು ಕ್ಯಾಚ್" ಅಂದು ಪಟ್ಟಂತ ಎಸೆದೇ ಬಿಟ್ಟರು. ನನಗೆ ಅನಿರೀಕ್ಷಿತವಾಗಿ ಬಂದ ಅವರ ಮಾತು ಕೇಳುವಷ್ಟರಲ್ಲಿ ನನ್ನ ಪುಸ್ತಕ ನನ್ನೆಡೆಗೆ ಹಾರಿಬಂತು. ತಕ್ಷಣ ನಾನು ಅಷ್ಟೇ ವೇಗವಾಗಿ ಅದನ್ನು ಕ್ಯಾಚ್ ಹಿಡಿದಿದ್ದೆ.[ನಾನು ಹೈಸ್ಕೂಲ್ ಮತ್ತು ಕಾಲೇಜಿನಲ್ಲಿ ಒಳ್ಳೆ ಕ್ರಿಕೆಟರು ಆಗಿದ್ದರಿಂದ]. ಅದನ್ನು ವೇದಿಕೆಯಲ್ಲಿದ್ದ ಎಲ್ಲರು ಸಿನಿಮಾ ದೃಶ್ಯದಂತೆ ನೋಡುತ್ತಿರುವುದನ್ನು ಮಲ್ಲಿಕಾರ್ಜುನ್ ಕ್ಯಾಮೆರಾದಲ್ಲಿ ಸೆರೆಹಿಡಿದೇ ಬಿಟ್ಟಿದ್ದರು. ನಂತರ "ಶಿವು ನೀವು ನಿತ್ಯ ದಿನಪತ್ರಿಕೆಗಳನ್ನು ಮಹಡಿ ಮನೆಗಳಿಗೆ ಎಸೆದು ಬಿಡುಗಡೆ ನ್ಯೂಸುಗಳನ್ನು ಬಿಡುಗಡೆ ಮಾಡುತ್ತೀರಲ್ವ. ಹಾಗೆ ನಾನು ನಿಮ್ಮ ವೆಂಡರ್ ಕಣ್ಣು ಪುಸ್ತಕವನ್ನು ಹಾಗೆ ಸಾಂಕೇತಿಕವಾಗಿ ಎಸೆದು ಲೋಕಾರ್ಪಣೆ ಮಾಡಿದೆ ಅಂದರು.

ನಡುವೆ ದೂರದ ಲಿಬಿಯದಿಂದ ಬಿಸಿಲಹನಿ ಬ್ಲಾಗಿನ ಉದಯ್ ಸರ್ ಫೋನ್ ಮಾಡಿ ನನಗೂ ಮತ್ತು ಪ್ರಕಾಶ್ ಹೆಗಡೆಯವರಿಗೂ ಅಭಿನಂದಿಸಿದ್ದು ಮರೆಯಲಾಗದ ಕ್ಷಣಗಳು. ಇದರ ನಡುವೆ ನನ್ನಕಡೆಯಿಂದ ದಿನಪತ್ರಿಕೆ ಕೊಳ್ಳುವ ಗ್ರ್‍ಆಹಕರೂ ನನ್ನ ಮೇಲಿನ ಪ್ರೀತಿಯಿಂದಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಸ್ತಕಗಳನ್ನು ಖರೀದಿಸಿದರೂ ನಡುವೆ ಗುಜರಾತಿ ಗ್ರ್‍ಆಹಕನೊಬ್ಬ ನನ್ನ ನಾನು ಬರೆದ ವೆಂಡರ್ ಕಣ್ಣು ಪುಸ್ತಕವನ್ನು ಖರೀದಿಸಲು ಬಂದಿದ್ದು ವಿಶೇಷ. ಆತನನ್ನು ಅನೇಕರಿಗೆ ಪರಿಚಯಿಸಿದಾಗ ಆತ ಕನ್ನಡವನ್ನು ಒಂದೊಂದೆ ಆಕ್ಷರವನ್ನು ಕೂಡಿಸಿ ಓದುತ್ತೇನೆ ಅರ್ಥಮಾಡಿಕೊಳ್ಳುತ್ತೇನೆ. ಶಿವುರವರ ಬ್ಲಾಗಿನ ಲೇಖನಗಳನ್ನು ಓದಿ ಅರ್ಥಮಾಡಿಕೊಳ್ಳುತ್ತೇನೆ. ಓದುವಾಗ ತುಂಬಾ ನಗುಬರುತ್ತದೆ ಅಂದಾಗ ನನಗಂತೂ ತುಂಬಾ ಖುಷಿಯಾಗಿತ್ತು. ಒಬ್ಬ ಗುಜರಾತಿ ಗ್ರಾಹಕ ಕನ್ನಡ ಬ್ಲಾಗ್ ಲೇಖನಗಳನ್ನು ಓದಿ ಇಷ್ಟಪಟ್ಟು ಕನ್ನಡ ಪುಸ್ತಕವನ್ನು ಖರೀದಿಸಲು ಬಂದಿದ್ದು ನಮ್ಮ ಕಾರ್ಯಕ್ರಮದ ವಿಶೇಷವೇ ಸರಿ.

ಇನ್ನೂರು ಜನಕ್ಕೆ ತಿಂಡಿಯ ವ್ಯವಸ್ಥೆಯಾಗಿದ್ದರೂ ನಮ್ಮೂರ ಹೋಟಲಿನವರು ೨೨೫ ಪ್ಲೇಟ್ ತಂದಿದ್ದರಂತೆ. ಅಷ್ಟು ಪ್ಲೇಟುಗಳು ಹನ್ನೊಂದು ಮುವತ್ತರ ಹೊತ್ತಿಗೆ ಕಾಲಿಯಾಗಿಬಿಟ್ಟವಂತೆ. ಅದರ ನಂತರ ಸುಮಾರು ಜನರು ಬಂದರು ಬಾಗಿಲಲ್ಲೇ ನಿಂತು ಕಾರ್ಯಕ್ರಮವನ್ನು ಪೂರ್ತಿಯಾಗಿ ವೀಕ್ಷಿಸಿದರು. ಕೊನೆಯಲ್ಲಿ ದೂರದ ಗದಗದಿಂದ ಬ್ಲಾಗ್ ಗೆಳೆಯ ಶಿವಶಂಕರ ಯಳವತ್ತಿ ಬರುವ ಹೊತ್ತಿಗೆ ಸಮಯ ಒಂದುಗಂಟೆ ಇಪ್ಪತ್ತು ನಿಮಿಷ. ಅವರು ಫೋನ್ ಮಾಡಿದಾಗ ಅಷ್ಟು ದೂರದಿಂದ ನಮ್ಮ ಪುಸ್ತಕ ಕಾರ್ಯಕ್ರಮಕ್ಕೆ ಬಂದಿರುವುದು, ದೂರದ ಸಿರಸಿ ಸಿದ್ಧಾಪುರ, ಧಾರವಾಡದಿಂದ ಪುಸ್ತಕಪ್ರೇಮಿಗಳು ಬಂದಿದ್ದನ್ನು ನೋಡಿ ನನಗಾದ ಆನಂದವನ್ನು ಪದಗಳಲ್ಲಿ ವರ್ಣಿಸಲಾರೆ. ಒಟ್ಟಾರೆ ನಾನೂರಕ್ಕೂ ಹೆಚ್ಚು ಪುಸ್ತಕಪ್ರ್‍ಏಮಿಗಳು ಹೊಸಬರ ಪುಸ್ತಕ ಬಿಡುಗಡೆ ಸಂಭ್ರಮದಲ್ಲಿ ಭಾಗಿಯಾಗಿದ್ದಂತೂ ನನಗೆ ಅಚ್ಚರಿ ಉಂಟು ಮಾಡಿತ್ತು.

ದಿವಾಕರ್ ಹೆಗಡೆಯವರ "ಉದ್ಧಾರ ಮತ್ತು ಸಂತೆ’ ನೂರೈವತ್ತಕ್ಕೂ ಹೆಚ್ಚು ಮಾರಾಟವಾಗಿತ್ತು. ಪ್ರಕಾಶ್ ಹೆಗಡೆಯವರ ಇನ್ನೂರೈವತ್ತಕ್ಕೂ ಹೆಚ್ಚು ಪುಸ್ತಕಗಳು ಬಿಸಿದೋಸೆಯಂತೆ ಮಾರಾಟವಾಗಿದ್ದು ಮತ್ತೆ ಅವರ ಬಂದ ಈಮೇಲ್ ಪ್ರಕಾರ ನೂರ ಎಪ್ಪತೈದು ಪುಸ್ತಕಗಳು ಬೇರೆ ಊರಿನವರಿಗೆ ಬೇಕಿವೆಯೆಂದು ಹೇಳಿದ್ದಾರೆ. ಮತ್ತೆ ನನ್ನ "ವೆಂಡರ್ ಕಣ್ಣು" ಕೂಡ ಇನ್ನೂರ ಎಂಬತ್ತು ಪುಸ್ತಕಗಳು ಅಲ್ಲೇ ಮಾರಾಟವಾಗಿದೆಯೆಂತೆ. ಅದಲ್ಲದೇ ಇವತ್ತು ಬೆಳಿಗ್ಗೆಯಿಂದ ಈ ಲೇಖನ ಬರೆಯುವವರೆಗೆ ನನ್ನ ವೃತ್ತಿಭಾಂದವರು, ಗ್ರಾಹಕರು, ಗೆಳೆಯರು ಇಷ್ಟಪಟ್ಟು ಖರೀದಿಸಿರುವುದರಿಂದ ಇದುವರೆಗೆ ಮುನ್ನೂರ ಮುವತ್ತು "ವೆಂಡರ್ ಕಣ್ಣು" ಪ್ರತಿಗಳು ಮಾರಾಟವಾಗಿಬಿಟ್ಟಿವೆ. ಮತ್ತೆ ನನಗೆ ಮೇಲ್ ಮಾಡಿ ವಿಳಾಸ ಕೊಟ್ಟ ಹೊರ ಊರಿನವರಿಗೆ ಕಳಿಸಬೇಕಾದ ಪ್ರತಿಗಳು ಸದ್ಯ ೨೦ ದಾಟಿದೆ.

ನಮ್ಮ ಪುಟ್ಟಕಾರ್ಯಕ್ರಮ ಯಶಸ್ವಿಯಾಗಲು ಕಾರಣಕರ್ತರಾದ ಪ್ರಕಾಶಕರಾದ ಸೀತಾರಾಮ್ ಹೆಗಡೆಯವರಿಗೂ, ನಮ್ಮೂರ ಹೋಟಲ್ ಮಾಲೀಕರಾದ ಕೃಷ್ಣ ಹೆಗಡೆಯವರಿಗೂ, ಕಾರ್ಯಕ್ರಮದ ಪ್ರಾಯೋಜಕರಾದ ಸತ್ಯಹೆಗಡೆಯವರಿಗೂ, ನನಗಿಂತ ಮೊದಲೇ ಬಂದು ಫೋಟೊಗಳನ್ನು ತೆಗೆಯಲಾರಂಭಿಸಿ ಇಡೀ ಕಾರ್ಯಕ್ರಮದಲ್ಲಿ ಯಾರು ತಪ್ಪಿಸಕೊಳ್ಳದಂತೆ ಕ್ಯಾಮೆರಾದಲ್ಲಿ ಸೆರೆಯಿಡಿದ ಮಲ್ಲಿಕಾರ್ಜುನ್‍ಗೂ, ಸೊಗಸಾಗಿ ನಿರೂಪಣೆ ಮಾಡಿದ ಭಾರತಿಹೆಗಡೆಯವರಿಗೂ, ಅಚ್ಚುಕಟ್ಟಾದ ದ್ವನಿವ್ಯವಸ್ಥೆ ಮಾಡಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇಷ್ಟು ಚೆನ್ನಾದ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಟ್ಟ ಕಾರ್ಯಕತ್ರರಿಗೂ, ಮತ್ತು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಪುಸ್ತಕಪ್ರೇಮಿಗಳಿಗೆ ನನ್ನ ಅನಂತಾನಂತ ಧನ್ಯವಾದಗಳು.

ಇಲ್ಲಿ ಕೆಲವು ಫೋಟೊಗಳನ್ನು ಮಾತ್ರ ಹಾಕಿದ್ದೇವೆ. ಮತ್ತಷ್ಟು ಫೋಟೊಗಳನ್ನು ಪ್ರಕಾಶ ಹೆಗಡೆಯವರು ಅವರ ಇಟ್ಟಿಗೆ ಸಿಮೆಂಟು ಬ್ಲಾಗಿನಲ್ಲಿ ಹಾಕುತ್ತಾರೆ.

ನೀವು ಒಳಗೆ ಕೂತು ಬರೆದು ಪ್ರಿಂಟ್ ಮಾಡಿ ಕಳಿಸಿದ್ದನ್ನು ನಾನು ಹೊರಗೆಲ್ಲಾ ಹಂಚುತ್ತೇವೆ. ನನ್ನ ದಿನಪತ್ರಿಕೆ ವಿತರಕರ ಜೊತೆ ಶ್ರೀದೇವಿ ಕಳಸದ.

ಪರಂಜಪೆ ಮತ್ತು ಡಾ.ಬಿ.ವಿ.ರಾಜಾರಾಂ ಪುಸ್ತಕಗಳ ಲೋಕದಲ್ಲಿ

ಪ್ರಕಾಶ್ ಹೆಗಡೆಯವರ ಜೊತೆ ಕ್ಷಣಚಿಂತನೆ ಚಂದ್ರು ಸರ್, ನವೀನ್.

ಬ್ಲಾಗ್ ಗೆಳೆಯರಾದ ಡಾ. ಸತ್ಯನಾರಯಣ ರಾವ್ ಗೆಳೆಯರೊಂದಿಗೆ


ಗಣ್ಯರ ನಡುವಿನ ಮಾತುಕತೆ.

ಬ್ಲಾಗ್ ಗೆಳೆಯರ ಜೊತೆ ಫೋಟೊಗ್ರಫಿ ಗೆಳೆಯರು.

ವಸುದೇಂಧ್ರರವರ ಜೊತೆ ನಾನು ಮತ್ತು ಪ್ರಕಾಶ್ ಹೆಗಡೆ.

"ಶಿವು, ನಿನ್ನ ವೆಂಡರ್ ಕಣ್ಣು ಕ್ಯಾಚ್"
ಹೆಸರೇ...ಬೇಡ ಮತ್ತು ಉದ್ಧಾರ ಮತ್ತು ಸಂತೆ ಪುಸ್ತಕಗಳಿಗೆ ಸುಂದರವಾದ ಮುಖಪುಟಗಳನ್ನು ರಚಿಸಿಕೊಟ್ಟ ಅಪಾರರವರಿಗೆ ಸನ್ಮಾನ.

ನನ್ನ ವೆಂಡರ್ ಕಣ್ಣಿನ ಕೆಲವು ಚಿತ್ರಗಳು ಮತ್ತು ಪ್ರಕಾಶ್ ಹೆಗಡೆಯವರ ಹೆಸರೇ ಬೇಡ ಪುಸ್ತಕಕ್ಕೆ ತನ್ನದೇ ಶೈಲಿಯ ಚಿತ್ರಗಳನ್ನು ಬರೆದುಕೊಟ್ಟ ಅಜಿತ್ ಕೌಂಡಿನ್ಯಗೆ ಸನ್ಮಾನ.
ನನ್ನ ವೆಂಡರ್ ಕಣ್ಣು ಚಿತ್ರಕ್ಕೆ ಮುಖಪುಟ ಚಿತ್ರದ ಜೊತೆಗೆ ಒಳಚಿತ್ರಗಳನ್ನು ರಚಿಸಿದ ಪಿ.ಟಿ.ಪ್ರಮೋದ್‍ರಿಗೆ ಸನ್ಮಾನ.

ಪ್ರಕಾಶ ಹೆಗಡೆಯವರ ಹೆಸರೇ..ಬೇಡ ಪುಸ್ತಕದ ಬಗ್ಗೆ ಮಾತಾಡುತ್ತಿರುವ ಜಿ.ಎನ್.ಮೋಹನ್.

ಫೋಟೊ ತೆಗೆಯುತ್ತಲೇ ಅತಿಥಿಗಳ ಮಾತು ಕೇಳಲು ಕುಳಿತ ಮಲ್ಲಿಕಾರ್ಜುನ್.

ಒಂದೂ ಸೀಟು ಖಾಲಿಯಿಲ್ಲ!

ದಿವಾಕರ ಹೆಗಡೆಯವರ ಮಾತುಗಾರಿಕೆ.

ಯಶವಂತ್ ಸರದೇಶ್ ಪಾಂಡೆಯವರ ಮಾತಿನ ಶೈಲಿ.

ಸೀತಾರಾಂ ಹೆಗಡೆಯವರಿಂದ ಸ್ವಾಗತ ಭಾಷಣ.

ಪ್ರಕಾಶಕರಾದ ಸೀತಾರಾಮ ಹೆಗಡೆಯವರಿಂದ ಡಾ.ಬಿ.ವಿ ರಾಜರಾಂರವರಿಗೆ ಸನ್ಮಾನ.
ಪ್ರಕಾಶ್ ಹೆಗಡೆಯವರ ಪರಿವಾರ.
ಈಗ ಸದ್ಯ ನಮ್ಮ ಪುಸ್ತಕಗಳು ನವಕರ್ನಾಟಕದ ಎಲ್ಲಾ ಮಳಿಗೆಗಳಲ್ಲಿ ಸಿಗುತ್ತವೆ. ನಂತರ ಮೇಪ್ಲವರ್ ಮೀಡಿಯಾ ಹೌಸ್‍ನಲ್ಲಿ ಕೂಡ ನಾಳೆಯಿಂದ ಸಿಗುತ್ತವೆ.
ಚಿತ್ರಗಳು ಮಲ್ಲಿಕಾರ್ಜುನ್.
ಲೇಖನ. ಶಿವು.ಕೆ

Wednesday, November 11, 2009

ನೀವು ಅವತ್ತು ನಮ್ಮೊಂದಿಗೆ ಇದ್ದರೆ ಚೆನ್ನ. ಬರುತ್ತಿರಲ್ವಾ....

ಅವತ್ತು ಬೆಳಿಗ್ಗೆಯಿಂದಲೇ ಏನೋ ಒಂಥರ ಹೇಳಲಾಗದ ಖುಷಿ. ಮೊಗ್ಗೊಳಗೆ ಆಗ ತಾನೆ ಕೋಟ್ಯಾಂತರ ಜೀವಕೋಶಗಳು ಒಂದರ ಹಿಂದೊಂದು ಸಾಲಾಗಿ ಸಾಗುತ್ತಾ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಾ ಸೇರಿಕೊಳ್ಳುತ್ತಾ ಮಕರಂದವಾದಂತೆ. ನಾನೊಂದು ಪೋನನ್ನು ನಿರೀಕ್ಷಿಸುತ್ತಿದ್ದೆ. ಬಂತಲ್ಲ. ಹತ್ತೇ ನಿಮಿಷದಲ್ಲಿ ಸಿದ್ಧನಾಗಿ ಹೊರಟೇ ಬಿಟ್ಟೆ. ಹೊರಗೆ ಬಿಟ್ಟು ಬಿಡದ ಚಂಡಮಾರುತದ ಮಳೆ. ನಿದಾನವಾಗಿ ನನ್ನ ಸ್ಕೂಟಿಯಲ್ಲಿ ಆ ಜಡಿಮಳೆಯಲ್ಲಿ ಹೋಗುತ್ತಿದ್ದಾಗ ಅಕ್ಕ ಪಕ್ಕ ಹತ್ತಾರು ವಾಹನಗಳು ಚಲಿಸುತ್ತಿದ್ದರೂ ನನಗೆ ಮೊದಲ ಭಾರಿಗೆ ನಾನೊಬ್ಬನೇ ಹೋಗುತ್ತಿದ್ದೇನೆ ಅನ್ನಿಸಿತ್ತು.


ಮಳೆ ಜೋರಾಯಿತು. ಸಹಜವಾಗಿ ಗಾಡಿ ನಿಲ್ಲಿಸಿ ಯಾವುದಾದರೂ ಸೂರು ನೋಡಿಕೊಳ್ಳುತ್ತಿದ್ದ ನಾನು ಅವತ್ತು ಹಾಗೆ ಮಾಡಲಿಲ್ಲ. ಸಾದ್ಯವಾದಷ್ಟು ಬೇಗ ಅಲ್ಲಿಗೆ ತಲುಪಬೇಕು ಅನ್ನುವ ಕಾತುರ. ಸುಮಾರು ಅರ್ಧಗಂಟೆಯ ಚಲಿಸುವ ರಸ್ತೆಗಳಲ್ಲಿ ಅದೇ ಯೋಚನೆ, ಕನಸು, ಕಲ್ಪನೆ, ಇನ್ನೂ ಏನೇನೋ.......ಸ್ಕೂಟಿಯಂತ ಪುಟ್ಟ ಗಾಡಿಯಲ್ಲಿ ಹೋಗುತ್ತಿದ್ದರೂ ತುಂಬಾ ಸರಾಗವಾಗಿ ಹಾರುತ್ತಾ ಸಾಗುತ್ತಿದ್ದೇನೆ ಅನ್ನುವ ಕಲ್ಪನೆ ಮನಸ್ಸಿಗೆ ಬಂದಾಗ ಅದು ನಿಜವಾ ಅಂತ ಸುತ್ತ ಮುತ್ತ ಒಮ್ಮೆ ನೋಡಿದೆ ಕೂಡ. ಇದೆಲ್ಲಾ ಕತೆ ಮುಗಿಯುವಷ್ಟರಲ್ಲಿ ನಾನು ತಲುಪಬೇಕಾದ ಜಾಗವನ್ನು ಸುರಕ್ಷಿತವಾಗಿ ತಲುಪಿದ್ದೆ.


ಕರೆಂಟ್ ಇರಲಿಲ್ಲ. ಬಾಗಿಲು ತಟ್ಟಿದೆ. ಒಂದೆರಡು ಕ್ಷಣಗಳ ನಂತರ ಬಾಗಿಲು ತೆರೆಯಿತು. ಬನ್ನಿ ಬನ್ನಿ ಅಂತ ಕರೆದರು ಸೀತರಾಮ್ ಹೆಗಡೆಯವರು. ಕುಳಿತ ತಕ್ಷಣ ತಗೊಳ್ಳಿ ನಿಮ್ಮ ಪುಸ್ತಕ ಎಂದು ಕೈಗೆ ಕೊಟ್ಟರು. ಅದನ್ನು ಕೈಗೆತ್ತಿಕೊಂಡೆ. ಮೊದಲ ಭಾರಿಗೆ ಒಂಥರ ವಿಭಿನ್ನ ಆನುಭವ. ನನ್ನದೇ ಪುಟ್ಟ ಮಗುವನ್ನು ಕೈಯಲ್ಲಿ ತಡವಿದಾಗ ಅದಂತ ಭಾವ. ಆಗಲೂ ನನಗೆ ನಂಬಲೂ ಆಗುತ್ತಿಲ್ಲ. ಇದು ಕನಸು ಅನ್ನಿಸಿದ್ದೆ ಹೆಚ್ಚು. ಈ ಮೊದಲು ಮನಸ್ಸಿಗೆ ಬಂದಂತೆ ಫೋಟೊಗಳನ್ನು ಕ್ಲಿಕ್ಕಿಸುತ್ತಾ, ಅದನ್ನು ಹಾಗೆ ಕ್ಲಿಕ್ ಮಾಡಿದೆ, ಹೀಗೆ ಕ್ಲಿಕ್ ಮಾಡಿದೆ ಅಂತ ನಾಲ್ಕಕ್ಷರ ಗೀಜುತ್ತಾ ಅದರಲ್ಲೇ ಖುಷಿಯಾಗಿರುತ್ತಿದ್ದ ನನಗೆ ಇದನ್ನೆಲ್ಲಾ ಮೀರಿ ಬರೆಯಲೇಬೇಕು ಅಂತ ಬರೆಸಿಕೊಂಡ, ಪುಟ್ಟಮಕ್ಕಳು ಪುಟ್ಟ ಪುಟ್ಟ ಫ್ರಾಕ್ ಹಾಕಿಸಿಕೊಂಡಂತೆ, ಹೊತ್ತಲ್ಲದ ಹೊತ್ತಿನಲ್ಲಿ ಮನದಲ್ಲಿ ಮೂಡಿದ ಚಿತ್ರಗಳು ಹೀಗೆ ಬರಹದ ಫ್ರಾಕ್ ಹಾಕಿಸಿಕೊಂಡವು.


ಸದ್ಯ ಅಂತ ನೂರಾರು ಚಿತ್ರಗಳಿಗೆ ಹೀಗೆ ಫ್ರಿಲ್ಲುಗಳಿಂದ ಕೂಡಿದ ಬಣ್ಣ ಬಣ್ಣದ ಫ್ರಾಕಿನ ಬರಹಗಳ ಹದಿನೇಳು ಲೇಖನಗಳ ಪುಟ್ಟ ಪುಸ್ತಕ ’ವೆಂಡರ್ ಕಣ್ಣು" ನನ್ನ ಕೈಯಲ್ಲಿದೆ. ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನುವ ಹಾಗೆ ನಾನು ಬರೆದಿದ್ದು ನನಗೆ ಚಂದವೇ ಅನ್ನಿಸಿದರೂ ಒಮ್ಮೆ ಹಿಂದಿನದೆಲ್ಲಾ ಮರೆತು ಮೂರನೆ ವ್ಯಕ್ತಿಯ ಹಾಗೆ, ಹತ್ತನೇ ವ್ಯಕ್ತಿಯ ಹಾಗೆ, ಕೊನೆಗೆ ನೂರನೆ ವ್ಯಕ್ತಿಯ ಹಾಗೆ ಯಾವುದೇ ಪೂರ್ವಗ್ರಹ ಪೀಡಿತನಾಗದೆ ಬೇರೆಯವರ ಪುಸ್ತಕವನ್ನು ಓದುವಂತೆ ಓದಿದೆ. ಬ್ಲಾಗು, ಕಂಪ್ಯೂಟರುಗಳಲ್ಲಿ ಓದುವುದಕ್ಕಿಂತ ಪುಸ್ತಕ ರೂಪದಲ್ಲಿ ಓದುವ ಮಜವೇ ಬೇರೆ ಅಂತ ಮತ್ತೊಮ್ಮೆ ಅನ್ನಿಸಿತ್ತು. ಹೊಸ ಪುಸ್ತಕಗಳನ್ನು ತಂದು ಓದಿದಾಗ ಪ್ರತಿಭಾರಿಯೂ ಹೀಗೆ ಅನ್ನಿಸುತ್ತದೆ. ನನ್ನ ಪುಸ್ತಕ ನಿಮಗೆ ನಿರಾಶೆಗೊಳಿಸೊಲ್ಲವೆಂಬ ಭಾವನೆ, ಆತ್ಮವಿಶ್ವಾಸ ನನ್ನಲ್ಲಿದೆ. ದಿನಾಂಕ 15-11-2009ರ ಭಾನುವಾರ ಬೆಳಗ್ಗೆ ಹತ್ತು ಗಂಟೆಗೆ ನೀವೆಲ್ಲಾ ನಿಮ್ಮ ಗೆಳೆಯರೊಂದಿಗೆ, ಕುಟುಂಬದೊಂದಿದೆ ಒಟ್ಟಾಗಿ ಬನ್ನಿ. ಅಲ್ಲಿ ನನ್ನ "ವೆಂಡರ್ ಕಣ್ಣು" ಪುಸ್ತಕದ ಜೊತೆಗೆ, ಪ್ರಕಾಶ್ ಹೆಗಡೆಯವರ "ಹೆಸರೇ...ಬೇಡ" ದಿವಾಕರ್ ಹೆಗಡೆಯವರ "ಉದ್ಧಾರ ಮತ್ತು ಸಂತೆ" ನಿಮಗೆಲ್ಲಾ ಸಿಗಲಿದೆ.


ನಿಮ್ಮ ಪುಸ್ತಕದ ಅಭಿರುಚಿಗೆ ತಕ್ಕಂತೆ ರುಚಿಯಾದ ಕಾಫಿ ತಿಂಡಿ, ಜಿ.ಎನ್.ಮೋಹನ್‍ರವರ ಅವರದೇ ಶೈಲಿಯ ಮಾತು, ನಾಗೇಶ್ ಹೆಗಡೆಯವರ ತಿಳುವಳಿಕೆಯ ಕಾಳಜಿಯುಕ್ತ ಮಾತುಗಳು, ಡಾ.ಬಿ.ವಿ.ರಾಜರಾಂರವರ ನಾಟಕದ ನುಡಿಗಳು, ಯಶವಂತ್ ಸರ್‍ದೇಶ್ ಪಾಂಡೆಯವರ ಹಾಸ್ಯಚಟಾಕಿಗಳು, ಅನೇಕ ಸಾಹಿತಿಗಳು, ಗಣ್ಯರು, ನನ್ನ ವೃತ್ತಿಭಾಂದವರು, ಬ್ಲಾಗ್ ಗೆಳೆಯರು, ಎಲ್ಲರೂ ಸಿಗುತ್ತಾರೆ. ಭಾವ ಭಾಷೆಗಳನ್ನು ಹಂಚಿಕೊಳ್ಳುತ್ತಾರೆ. ನಾವೆಲ್ಲಾ ಒಟ್ಟಾಗಿ ಪಡೆದುಕೊಳ್ಳೋಣ. ಎಂದಿನ ಭಾನುವಾರವನ್ನು ವಿಭಿನ್ನವಾಗಿ ನಮ್ಮದು ಮಾಡಿಕೊಳ್ಳೋಣ. ನೀವು ಅವತ್ತು ನಮ್ಮೊಂದಿಗೆ ಇದ್ದರೆ ಚೆನ್ನ. ಬರುತ್ತಿರಲ್ವಾ....

ಗೆಳೆಯರೊಂದಿಗೆ ಕಾಯುತ್ತಿರುತ್ತೇನೆ.

ಪ್ರೀತಿಯಿಂದ.....

ಶಿವು.ಕೆ




ನನ್ನ "ವೆಂಡರ್ ಕಣ್ಣು" ಮುಖಪುಟ.


ಪ್ರಕಾಶ್ ಹೆಗಡೆಯವರ "ಹೆಸರೇ...ಬೇಡ" ಪುಸ್ತಕದ ಮುಖಪುಟ.

ದಿವಾಕರ್ ಹೆಗಡೆಯವರ "ಉದ್ಧಾರ ಮತ್ತು ಸಂತೆ" ಪುಸ್ತಕದ ಮುಖಪುಟ.