Wednesday, November 10, 2010

ಗಾಜಿನ ಲೋಟದ ಅರ್ಧ ಕಾಫಿ

             ಸಂಜೆ ೪ ಗಂಟೆಗೆ ಒಳಗೆ ಹೋಗಿ ೬ಕ್ಕೆ ನವರಂಗ್ ತಿಯೇಟರಿನಿಂದ ಭಟ್ಟರ ಪಂಚರ್ ಅಂಗಡಿ ಅಲ್ಲಲ್ಲ ಪಂಚರಂಗಿ ಸಿನಿಮಾವನ್ನು ನಾನು ಮತ್ತು ಹೇಮಾಶ್ರೀ ನೋಡಿ ಹೊರಬಂದಾಗ ಸಣ್ಣಗೆ ಮಳೆ.  ಸಿನಿಮಾ ಹೇಗನ್ನಿಸಿತು ಅಂತ ನಾನವಳನ್ನು ಕೇಳಿದೆ.  "ಸಿನಿಮಾ ತೀರಾ ಚಿಕ್ಕದಾಯ್ತು ಕಣ್ರಿ, ಹಾಗ್ ಹೋಗಿ ಹೀಗ್ ಬಂದಂಗೆ ಆಯ್ತು" ಅಂದಳು.  ಅವಳ ಪ್ರಕಾರ್‍ಅ ಸಿನಿಮಾ ದೊಡ್ಡದಿರಬೇಕು. ಅವಳ ಚಿಕ್ಕಂದಿನಲ್ಲಿ ಅವರ ಮನೆಯಲ್ಲಿ ಯಾರಾದರೂ ಸಿನಿಮಾಗೆ ಕರೆದುಕೊಂಡು ಹೋಗುತ್ತಾರೆಂದರೆ ಬೆಳಿಗ್ಗೆ ಎಂಟುಗಂಟೆಯಿಂದಲೇ ಸಿನಿಮಾ ದ್ಯಾನ.  ಮಕ್ಕಳೆಲ್ಲಾ ಸೇರಿ ನಾವು ಸಿನಿಮಾ ಹೋಗುತ್ತಿದ್ದೇವೆಂದು ಒಂದು ರೌಂಡ್ ಡಂಗುರ ಬಾರಿಸಿ, ಮಧ್ಯಾಹ್ನವಾಗುತ್ತಿದ್ದಂತೆ ಊಟ ಮಾಡಿ ಒಂದಷ್ಟು ಚಕ್ಕಲಿ,ಕೋಡುಬಳೆ, ನುಪ್ಪಟ್ಟು, ಬಾಳೆಹಣ್ಣು ಬುತ್ತಿ ಮಾಡಿಕೊಂಡು ಹೊರಟರೆ ಸಿನಿಮಾನೋಡಿ ಸಂಜೆ ಮನೆಗೆ ಬರುತ್ತಾ ಹೋಟಲ್ಲಿನಲ್ಲಿ ಮಸಾಲೆ ದೋಸೆ, ಕಾಫಿ...ಹೀಗೆ ಎಲ್ಲಾ ಮುಗಿಯುವ ಹೊತ್ತಿಗೆ ಕತ್ತಲಾಗಿರುತ್ತಿತ್ತು. ಅದು ಕಣ್ರಿ ಸಿನಿಮಾ ನೋಡಾಟ ಎಂದು ಆಗಾಗ ಹೇಳುತ್ತಿರುತ್ತಾಳೆ.  ಅವಳ ಮಾತು ಕೇಳಿ ನನಗೂ ಬಾಲ್ಯದ ನೆನಪಾಯಿತಾದರೂ ಬಾ ಒಂದು ಒಳ್ಳೇ ಕಾಫಿ ಕೊಡಿಸುತ್ತೇನೆ ಅಂತ ಪಕ್ಕದಲ್ಲೇ ಹೊಸದಾಗಿ ತೆರೆದುಕೊಂಡಿದ್ದ "ಹಟ್ಟಿ ಕಾಫಿ"ಗೆ ಕರೆದುಕೊಂಡು ಹೋದೆ. ಇತ್ತೀಚೆಗೆ ಯಾವುದೇ ಟ್ರೆಂಡ್ ಶುರುವಾದರೂ ಅದು ರಿವರ್ಸ್ ಆರ್ಡರಿನಲ್ಲಿ ಬಂದಂತೆ ನನಗನ್ನಿಸುತ್ತದೆ. ಏಕೆಂದರೆ ಮೊದಲೆಲ್ಲಾ ಹಳೆಯದನ್ನು ಮುಚ್ಚಿಹಾಕಿ ಹೊಸದಾಗಿ ಕೆಪೆಚಿನೋ, ಚೈನೀಸ್, ಕಾಫಿಡೇ...ಹೀಗೆ  ಅಧುನಿಕವಾದ ಟ್ರೆಂಡ್ ಬರುತ್ತಿತ್ತು.  ಕೆಲವೇ ವರ್ಷಗಳಲ್ಲಿ ಅದು ನಮ್ಮ ಜನಗಳಿಗೆ ಬೇಸರವಾಯಿತೇನೋ...ಮತ್ತೆ ನಮ್ಮ ಸಂಸ್ಕೃತಿಯ ಹಳ್ಳಿ ಮನೆ, ಹಳ್ಳಿ ತಿಂಡಿ, ತಾಯಿಮನೆ ಊಟ, ಮನೆಯೂಟ, ನಳಪಾಕ, ಹಟ್ಟಿಕಾಫಿ...ಹೀಗೆ ಶುರುವಾಗಿರುವುದು ರಿವರ್ಸ್ ಆರ್ಡರಿನಲ್ಲಿ ಅಲ್ಲವೇ....

       ನನಗೆ "ಹಟ್ಟಿ ಕಾಫಿ" ತುಂಬಾ ಇಷ್ಟ.  ಮೊದಲು ನಾನು ಕುಡಿದಿದ್ದು ಮಂತ್ರಿ ಮಾಲ್‍ನ ಸ್ಪಾರ್ ಮಾರುಕಟ್ಟೆಯಲ್ಲಿ.  ಅಂತಾ ಮಾಲಾಮಾಲ್‍ನಲ್ಲಿ ಐದು ರೂಪಾಯಿಗೆ ಕಾಫಿ ಸಿಕ್ಕಾಗ ನಾನು ಅಲ್ಲಿ ನಿಂತು ಕೂತು ಖುಷಿಯಿಂದ ಕುಡಿದಿದ್ದೆ. ಆಗ ಅದರ ರುಚಿಯನ್ನು ಮರೆಯಲಾಗಿರಲಿಲ್ಲ. ಕಾಫಿ ಅಷ್ಟು ಚೆನ್ನಾಗಿದ್ದರೂ ಪ್ರತೀ ದಿನ ಮಂತ್ರಿ ಮಾಲ್‍ಗೆ ಹೋಗಿ ಕುಡಿಯಲಾಗುವುದಿಲ್ಲವಲ್ಲ. ಅದರಲ್ಲೂ ಅರ್ಧ ಕಾಫಿ ಕುಡಿಯಲು ಮಂತ್ರಿ ಮಾಲ್‍ಗೇಕೆ ಹೋಗಬೇಕು. ರಸ್ತೆಬದಿಯ ಪುಟ್ಟ ಅಂಗಡಿಯಲ್ಲಿ ಸಿಗುವ ಕಾಫಿ ಕಪ್ಪನ್ನು ಕೈಯಲ್ಲಿಡಿದು ಸುತ್ತ ಹೋಗಿಬರುವ ಸುಂದರ ಬೆಡಗಿಯರನ್ನು ನೋಡುತ್ತಾ ಕುಡಿಯುತ್ತಿದ್ದರೇ ಅದೊಂತರ ಪುಟ್ಟ ಬೊಗಸೆಯಲ್ಲಿ ಬ್ರಹ್ಮಾಂಡ ತುಂಬಿಕೊಂಡಂತ ದೊಡ್ಡ ಸಂತೋಷ.  ಅಂತದ್ದೇ ಪುಟ್ಟ ಹಟ್ಟಿ ಕಾಫಿ ಅಂಗಡಿ ನವರಂಗ್ ಬಳಿ ತೆರೆದುಕೊಂಡಿತಲ್ಲ. ನವರಂಗ್ ಬಳಿಯ ಅಜಂತ ಕಲರ್ ಲ್ಯಾಬಿಗೆ ಫೋಟೊ ಪ್ರಿಂಟ್‍ಗಾಗಿ ಹೋದಾಗಲೆಲ್ಲಾ ಹಟ್ಟಿ ಕಾಫಿಗೆ ವಿಸಿಟ್ ಕೊಡುತ್ತಿದ್ದೆ.  ಇಷ್ಟಕ್ಕೂ ಆ ಕಾಫಿಯಲ್ಲೇನು ವಿಶೇಷ ಅಂತೀರಾ, ಹೇಳ್ತೀನಿ ಕೇಳಿ,  ಅದಕ್ಕೂ ಮೊದಲು ಬೇರೆ ಜಾಗಗಳಲ್ಲಿ ಕಾಫಿಗಳನ್ನು ಒಮ್ಮೆ ಗ್ಲಾನ್ಸ್ ಮಾಡಿಬಿಡೋಣ. 

ಬೆಂಗಳೂರೆಲ್ಲಾ ಸುತ್ತಿ ಹುಡುಕಿ ತಂದಿದ್ದು ಈ ಗಾಜಿನ ಲೋಟ. ಸದ್ಯ ನಾನು ಮನೆಯಲ್ಲಿ ಕಾಫಿ ಕುಡಿಯುತ್ತಿರುವುದು ಇದರಲ್ಲಿ.

ನೀವು ಸ್ವಲ್ಪ ಅನುಕೂಲವಾದ ಏಸಿ-ಗೀಸಿ ಇರುವ ಹೋಟಲ್ಲಿಗೆ ಹೋಗಿ ಅರಾಮವಾಗಿ ಕುಳಿತು ಕಾಫಿಗೆ ಆರ್ಡರ್ ಮಾಡಿದರೆ ಚೀನಿ ಪಿಂಗಾಣಿ ಬಟ್ಟಲುಗಳಲ್ಲಿ ಕಾಫಿ ತಂದಿಟ್ಟು ದುಬಾರಿ ಬಿಲ್ಲು ಇಟ್ಟು ಹೋಗುತ್ತಾರೆ. ಕಾಫಿ ಚೆನ್ನಾಗಿದ್ದರೂ ಅದರ ಬಟ್ಟಲು ಪಿಂಗಾಣಿಯಾದ್ದರಿಂದ ಅದೇನೋ ನಮ್ಮದಲ್ಲವೆನ್ನುವ ಭಾವನೆಯಿಂದಲೇ ಕಾಫಿ ಕುಡಿದು ಎದ್ದು ಬಂದಿರುತ್ತೇವೆ.  ತ್ರಿ ಸ್ಟಾರ್-ಫ಼ೈವ್ ಸ್ಪಾರ್ ಹೋಟಲ್ಲುಗಳಲ್ಲಿ ಹಾಲಿನಪುಡಿ-ಸಕ್ಕರೆ ರಹಿತ ಸಕ್ಕರೆ-ನೆಸ್‍ಕೆಪೆ-ಅಥವ-ದಾರ್ಜಿಲಿಂಗ್ ಟೀ ಇತ್ಯಾದಿಗಳನ್ನು ಪೊಟ್ಟಣಗಳಲ್ಲಿ ಇಟ್ಟು ಬಿಸಿನೀರನ್ನು ಒಂದು ದೊಡ್ಡ ಪಿಂಗಾಣಿಯಲ್ಲಿ ಇಟ್ಟು ಅದರ ಪಕ್ಕ ಮತ್ತದೇ ಚಿತ್ತಾರವಾದ ಪಿಂಗಾಣಿ ಬಟ್ಟಲು ಅದರ ಪಕ್ಕ ಎಲ್ಲವನ್ನು ಮಿಕ್ಸ್ ಮಾಡಿಕೊಂಡ ಮೇಲೆ ರುಬ್ಬಲು ಅಲ್ಲಲ್ಲ ತಿರುಗಿಸಲು ಚಮಚ.  ಇಷ್ಟೆಲ್ಲಾ ಮಾಡಿಕೊಂಡು ಕಾಫಿ ಕುಡಿಯುವಾಗ ನಮ್ಮ ಕಣ್ಣು  ಬೇರೆಯವರು ಯಾವ ರೀತಿ ಕಾಫಿ ಕುಡಿಯುತ್ತಿದ್ದಾರೆ ಅಂತ ಗಮನಿಸುತ್ತಾ ಆ ಚೆನ್ನಾಗಿಲ್ಲದ ಸ್ವಾದವನ್ನು ಅನುಭವಿಸದೇ ಅಲ್ಲಿಯೂ ಕೂಡ ಪರರಿಗಾಗಿ ಕಾಫಿ ಕುಡಿಯಾಟವಾಗಿಬಿಟ್ಟಿರುತ್ತದೆ.  ಹೋಗಲಿ ಇತ್ತ ನಮ್ಮ ಇರಾನಿ ಛಾಯ್ ಅಂಗಡಿಗಳಿಗೆ ಬರೋಣ. ಕೆಳಗೆ ಸೌದೆ ಉರಿ ಅದರ ಮೇಲೆ ಮದ್ಯಮ ಗಾತ್ರದ ಹಿತ್ತಾಳೆ ಪಾತ್ರೆ ಬೆಳಿಗ್ಗೆ ಹಾಲಿನ ಪುಡಿ ಹಾಕಿ ಕುದಿಸಲು ಪ್ರಾರಂಭಿಸಿದರೆ ರಾತ್ರಿ ಹತ್ತು-ಹನ್ನೊಂದು ಗಂಟೆಗೂ ನಿಮಗೆ ಕಾಫಿ-ಟೀ ಸಿಗುತ್ತದೆ. ಅಲ್ಲಿ ಸಕ್ಕರೆ ಮಿಶ್ರಿತ ಗಟ್ಟಿಹಾಲು ಜೊತೆಗೆ ನೆಸ್‍ಕೆಪೆ ಪುಡಿ ಬೆರೆಸಿ ಪ್ಲಾಸ್ಟಿಕ್ ಲೋಟಕ್ಕೆ ಹಾಕಿ ನಮ್ಮ ಕೈಗೆ ಒಂದು ಮುಗುಳ್-ನಗೆ ಸೇರಿಸಿ ಕೊಡುತ್ತಾನೆ. ಮೊದಲ ಸಿಪ್ ಓಕೆ. ಕೊನೆ ಕೊನೆಯಲ್ಲಿ ಬೇಡವೆನ್ನಿಸುವಷ್ಟರ ಮಟ್ಟಿಗೆ ಬೇಸರವಾಗಿ ಅರ್ಧ ಕುಡಿದು ಸ್ಟೈಲಾಗಿ ಹಣಕೊಟ್ಟು ಬಂದುಬಿಡುತ್ತೇವೆ.  ಹೋಗಲಿ ನಮ್ಮ ಮಲ್ಲೇಶ್ವರಂನ ಹಳ್ಳಿಮನೆಯಲ್ಲಿ ಕಾಫಿ ತುಂಬಾ ಚೆನ್ನಾಗಿರುತ್ತದೆಯೆಂದು ಅಲ್ಲಿ ಕುಡಿಯೋಣವೆಂದರೆ ಅವರು ಅತ್ತ ಪ್ಲಾಸ್ಟಿಕ್ ಲೋಟವೂ ಅಲ್ಲದ,  ಸ್ಟೈನ್‍ಲೆಸ್ ಸ್ಟೀಲಿನ ಪುಟಾಣಿ ಲೋಟವನ್ನು ಕೊಡದೇ ಪಿಂಗ್ ಪಾಂಗ್ ಪಿಂಗಾಣಿಯನ್ನು ಕೊಡದೆ ಪೇಪರ್ ಲೋಟದಲ್ಲಿ ಕೊಡುತ್ತಾರೆ. ಅದೊಂದರ ಚೆನ್ನಾಗಿದೆಯೆಂದು ನಾವು ಕಾಫಿಯನ್ನು ಅಸ್ವಾದಿಸಿದರೂ ನಮ್ಮ ಹಿರಿಯ ದಿನಪತ್ರಿಕೆಯ ವೆಂಡರ್ ಬೋರೇಗೌಡರಿಗೆ ಅದ್ಯಾಕೋ ಇಷ್ಟವಾಗುವುದಿಲ್ಲ. ಪೇಪರ್ ಲೋಟದಲ್ಲಿ ಕೊಟ್ಟ ಕಾಫಿಯನ್ನು ತಂದು ಟೇಬಲ್ಲಿನ ಮೇಲಿಟ್ಟು ಕುಡಿಯುವ ನೀರಿನ ಬಳಿಹೋಗಿ ಅಲ್ಲಿಟ್ಟಿರುವ ಉದ್ದುದ್ದದ ನೀರು ಕುಡಿಯುವ ಸ್ಟೀಲ್ ಲೋಟದ ತುಂಬ ನೀರು ಕುಡಿದು ಅದೇ ಲೋಟಕ್ಕೆ ಪೇಪರ್ ಲೋಟದ ಕಾಫಿಯನ್ನು ಬಗ್ಗಿಸಿಕೊಂಡು ನಿದಾನವಾಗಿ ಕುಡಿದರೆ ಅವರಿಗೇ ಅವರದೇ ಮನೆಯಲ್ಲಿ ಕುಡಿದಷ್ಟೇ ಆನಂದವಂತೆ. ಅವರು ಹೇಳಿದ ಮೇಲೆ ಅವರ ಮಾತು ನಮಗೆ ಯಾವ ಪರಿ ಭ್ರಮೆಯನ್ನು ಆವರಿಸಿತೆಂದರೆ ಅಷ್ಟು ದಿನ ಮನೆ ಕಾಫಿಯಂತೆ ರುಚಿಯಾಗಿದ್ದ ಅದು ನಂತರ ಕೇವಲ ಹಳ್ಳೀಮನೆ ಕಾಫಿಯಾಗಿಬಿಟ್ಟಿತ್ತು.

ಈಗ ಹಟ್ಟಿ ಕಾಫಿಗೆ ವಾಪಸ್ ಬರೋಣ.  ಅಲ್ಲಿ ಒಂದು ಕಾಫಿ ಅಂತ ನಾನು ಕೇಳಿದ ತಕ್ಷಣ ಆರು ರೂಪಾಯಿ ಕೊಡಿ  ಅನ್ನುತ್ತಾನೆ ಕ್ಯಾಶ್ ಕೌಂಟರಿನ ಹಿಂದೆ ಕುಳಿತಿರುವಾತ.  ಅರೆರೆ.....ಬೇರೆ ಕಡೆ ಕಾಫಿ ಬೆಲೆ ೮-೯-೧೦-೧೨ ಆಗಿರುವಾಗ ಇಲ್ಲಿ ಕೇವಲ ಆರು ರೂಪಾಯಿಗೆ ಸಿಗುತ್ತಲ್ಲ ಎಂದು ಮೊದಲಿಗೆ ಖುಷಿಯಾಗುತ್ತದೆ. ಈಗ ಪ್ರತಿಭಾರಿ ಕಾಫಿ ಕುಡಿಯಲು ಅಲ್ಲಿಗೆ ಹೋದಾಗಲೂ ಹೀಗೆ ಅನ್ನಿಸುವುದರಿಂದ ಖುಷಿ ಉಚಿತ.   ಟೋಪಿ ಹಾಕಿಕೊಂಡ ಮಾಣಿ ನಮ್ಮ ಕಣ್ಣ ಮುಂದೆ ಒಂದು ಗಾಜಿನ ಲೋಟವನ್ನು ಇಡುತ್ತಾನೆ.  ಅದನ್ನು ನೋಡಿದ ತಕ್ಷಣ  ಮತ್ತೆ ನನ್ನ ಬಾಲ್ಯದ ನೆನಪು ಗರಿಗೆದರುತ್ತದೆ. ಆಗೆಲ್ಲಾ ಸ್ಟೀಲ್ ಲೋಟಗಳಲ್ಲಿ ಕಾಫಿ ಕೊಡುತ್ತಿರಲಿಲ್ಲ. ಕೊಟ್ಟರೂ ದೊಡ್ಡ ದೊಡ್ಡ ಹೋಟಲ್ಲುಗಳಲ್ಲಿ ಮಾತ್ರ. ಪಿಂಗಾಣಿಯೂ ಇನ್ನೂ ಬಂದಿರಲಿಲ್ಲ. ಪ್ಲಾಸ್ಟಿಕ್ ಲೋಟ ಕಾಲಿಟ್ಟಿರಲಿಲ್ಲ.  ಆಗೆಲ್ಲಾ ಕೆಲಸಗಾರರು ಸುಲಭವಾಗಿ ಸಿಕ್ಕುತ್ತಿದ್ದರಿಂದ ಈ ಗಾಜಿನ ಲೋಟಗಳದೇ ದರ್ಭಾರು.  ನಾವು ಶ್ರೀರಾಮಪುರಂನ ಐದನೇ ಮುಖ್ಯರಸ್ತೆಯಲ್ಲಿರುವ ಮಂಗಳೂರು ಕೆಫೆಯಲ್ಲಿ ಬೈಟು ಕಾಫಿ ಎಂತ ಹೇಳಿ ಒಂದುವರೆ ರೂಪಾಯಿ ಕೊಟ್ಟರೆ ಮುಗೀತು. ಆರ್ಡರ್ ತೆಗೆದುಕೊಂಡ ಹೋಟಲ್ ಓನರ್  ಒಂದು ಬೈಟು ಕಾಫಿ..ಎಂದು ಹೇಳುತ್ತಿದ್ದ. ಮತ್ತೊಬ್ಬರು ಬಂದಾಗ ಇನ್ನೊಂದು ಬೈಟು.........ಎಂದು ರಾಗವಾಗಿ ಎಳೆಯುತ್ತಿದ್ದ.  ಹೀಗೆ ಹತ್ತಾರು ಬೈಟುಗಳ ಆರ್ಡರ್ ಬಂದರೂ ಇನ್ನೊಂದು ಬೈಟು.........ಎನ್ನುವ ಅವನ ರಾಗದಲ್ಲಿ ವ್ಯತ್ಯಾಸವಾಗುತ್ತಿರಲಿಲ್ಲ. ಅಷ್ಟರಲ್ಲಿ ಒಳಗೆ ಗಳಗಳ ಸದ್ದು. ಲೋಟಗಳನ್ನು ಜೋರು ಬರುವ ನೀರಿನಲ್ಲಿ ತೊಳೆದು ದೊಡ್ಡದಾದ ಟ್ರೇನ ಈ ತುದಿಯಿಂದ ಆ ತುದಿಗೆ ತಲೆಕೆಳಕಾಗಿ ಮಾಡಿದ ಒಂದೊಂದೇ ಲೋಟಗಳನ್ನು ತಳ್ಳುವಾಗಿನ ದೃಶ್ಯವನ್ನು ನೋಡುವಾಗಲೇ ಕಾಫಿ ಸ್ವಾದದ ಅಮಲು.  ಕೆಲವೊಮ್ಮೆ ನಾವು ಹೊರಗಿದ್ದು ಆ ದೃಶ್ಯ ಕಾಣದಿದ್ದರೂ ತೊಳದ ನಂತರದ ಟ್ರ್‍ಏನಲ್ಲಿ ಒಂದೊಂದು ಲೋಟವನ್ನು ತಳ್ಳುವಾಗಿನ ಶಬ್ದವೂ ಕೂಡ ಮುಂದೆ ಅದೇ ಲೋಟದಲ್ಲಿ ಬರುವ ಕಾಫಿಯ ರುಚಿಯಲ್ಲಿ ತೇಲುವಂತೆ ಮಾಡುತ್ತಿತ್ತು.  ಕಣ್ಣಿಗೆ ಕಾಣಿಸಿದ ಈ ದೃಶ್ಯಗಳಿಗೂ ಮತ್ತು ಕಿವಿಗೆ ಕೇಳಿಸಿದ ಸರರ್..ರ್....ಎನ್ನುವ ಗಾಜಿನ ಲೋಟದ ಶಬ್ದಕ್ಕೂ ನಾಲಗೆಗೆ ಸೋಕುವ ಕಾಫಿಯ ರುಚಿಗೂ ಅದೆಂಥ ಕನೆಕ್ಷನ್ ಇತ್ತೋ ನನಗೆ ಗೊತ್ತಿಲ್ಲ. ಇಷ್ಟೆಲ್ಲಾ ಆದ ಮೇಲೆ  ಗಾಜಿನ ಲೋಟಕ್ಕೆ ಕಾಲು ಭಾಗ ಡಿಕಾಕ್ಷನ್ ಇನ್ನುಳಿದ ಮುಕ್ಕಾಲು ಭಾಗಕ್ಕೆ ನಿದಾನವಾಗಿ ಬಿಸಿಹಾಲನ್ನು ಹಾಕುತ್ತಿದ್ದರೆ ಕೊನೆಯಲ್ಲಿ ಉಕ್ಕಿದ ನೊರೆಯನ್ನು ಬ್ಯಾಲೆನ್ಸ್ ಮಾಡುತ್ತಾ ಲೋಟದ ತುಂಬಾ ಕಾಫಿಯನ್ನು ತುಂಬಿಸುತ್ತಲೇ ನೊರೆಯ ಕಲಾಕೃತಿಯ ಗೋಪುರವನ್ನು ಮಾಡಿ ನಮ್ಮ ಕೈಗೆ ಕೊಡುತ್ತಾನಲ್ಲಾ!  ಆ ಚಳಿಗಾಲದ ಚಳಿಯಲ್ಲಿ ನಿದಾನವಾಗಿ ನೊರೆಯನ್ನು ಹೀರುತ್ತಾ..........ಕಾಫಿಯ ಮೊದಲ ಗುಟುಕು ನಾಲಗೆಗೆ ಸೋಕುವಾಗ ಆಹಾ! ಆ ಸ್ವರ್ಗ ಸುಖ!  ಇಲ್ಲಿ ಹಟ್ಟಿ ಕಾಫಿಯ ಮಾಣಿ ಕೊಡುವ ಗಾಜಿನ ಲೋಟವೂ ತನ್ನ  ಹಳೆಯ ತಾತ ಮುತ್ತಾತಂದಿರುಗಳಾದ ಪಟ್ಟಿ ಗಾಜಿನ ಲೋಟಗಳನ್ನು ನೆನಪಿಸುತ್ತದೆ.

ಹಟ್ಟಿ ಕಾಫಿ ಕುಡಿದು ಮುಗಿಸುತ್ತಿದ್ದಂತೆ ಹೇಮಾಶ್ರೀಗೂ ಆ ಲೋಟ ಇಷ್ಟವಾಗಿಬಿಟ್ಟಿತ್ತು. ಇಂಥದ್ದೇ ಗಾಜಿನ ಲೋಟವನ್ನು ಮನೆಗೆ ತನ್ನಿ ಅಂದುಬಿಟ್ಟಳು.  ಇತ್ತ ನಮ್ಮ ಮನೆಯಲ್ಲೂ ಅನೇಕ ಹೇಮಾ ತುಂಬಾ ಚೆನ್ನಾದ ಕಾಫಿ ಮಾಡಿ ಕೊಡುತ್ತಾಳೆ.  ಅಷ್ಟು ಚೆನ್ನಾದ ಕಾಫಿಗಾಗಿ ನಾವು ಹುಡುಕಿದ ಕಾಫಿಪುಡಿ ಅಂಗಡಿಗಳು ಒಂದೆರಡಲ್ಲ..ಕೊತಾಸ್, ಬಾಯರ್ಸ್,.......ಕೊನೆಗೆ ಮಲ್ಲೇಶ್ವರಂನ ಒಂಬತ್ತನೇ ಕ್ರ್‍ಆಸಿನಲ್ಲಿರುವ ನಾಯಕ್ ಕಾಫಿ ಅಂಗಡಿಯಲ್ಲಿನ ಕಾಫಿಪುಡಿಯು ನಮಗೆ ಚೆನ್ನಾಗಿ ಹೊಂದಿಕೆಯಾಗಿಬಿಟ್ಟಿತ್ತು. ಮೊದಲೆರಡು ದಿನ ಹದ ತಪ್ಪಿದರೂ ನಂತರ ಕಾಫಿ ಫಿಲ್ಟರಿಗೆ ಎಷ್ಟು ಬಿಸಿನೀರು ಮತ್ತು ಎಷ್ಟು ಕಾಫಿಪುಡಿಹಾಕಿದರೆ ಸರಿಯಾದ ಅರ್‍ಓಮದ ಫೀಲ್ ಬರುವ ಡಿಕಾಕ್ಷನ್ ಬರುತ್ತದೆ ಎನ್ನುವುದನ್ನು ಚೆನ್ನಾಗಿ ಅರಿತಿರುವುದರಿಂದ ನನಗೆ ಮನೆಯಲ್ಲಿನ ಕಾಫಿ ತುಂಬಾ ಇಷ್ಟ.  [ಟೀಯನ್ನು ನಾನು ಅವಳಿಗಿಂತ ಚೆನ್ನಾಗಿ ಮಾಡುತ್ತೇನಾದ್ದರಿಂದ ನನ್ನ ಬ್ಲಾಗ್ ಮತ್ತು ಇತರ ಗೆಳೆಯರು ಮನೆಗೆ ಬಂದಾಗ ಅದರ ರುಚಿಯನ್ನು ನೋಡಿರುತ್ತಾರೆ ಸದ್ಯ ಆ ಇಲ್ಲಿ ಟೀ ವಿಚಾರ ಬೇಡ.] ನಾನು ಆ ಗಾಜಿನ ಕಾಫಿಲೋಟಗಳಿಗಾಗಿ ನಮ್ಮ ಸುತ್ತ ಮುತ್ತ ಹತ್ತಾರು ಕಡೆ ಹುಡುಕಿದೆ ಸಿಗಲಿಲ್ಲ. ಕೇಳಿದರೆ ಸಿಟಿಯಲ್ಲಿ ಸಿಗುತ್ತದೆ ಎಂದರು.  ಒಂದು ದಿನ ಬಿಡುವು ಮಾಡಿಕೊಂಡು ಸಿಟಿಮಾರ್ಕೆಟ್, ಬಿವಿಕೆ ಆಯಂಗಾರ್ ರೋಡ್ ಎಲ್ಲಾ ಓಡಾಡಿದಾಗ ನನಗೆ ಬೇಕಾದ ಆ ಗ್ಲಾಸುಗಳು ಸಿಕ್ಕವು.  ಅದನ್ನು ನೋಡಿದ ಹೇಮಾಶ್ರೀ ಕೂಡ ತುಂಬಾ ಖುಷಿಪಟ್ಟಳು.  ಅವತ್ತಿನಿಂದ ನಮ್ಮ ಮನೆಯಲ್ಲಿ ಗಾಜಿನ ಲೋಟದಲ್ಲಿ ಕಾಫಿಯ ಸ್ವಾದ...ನಾದ....ಭಾವಾನಾತ್ಮಕ ಆನಂದ.

ಒಂದೆರಡು ದಿನಗಳಲ್ಲೇ ನನ್ನಲ್ಲಿ ಸೊಗಸಾದ ದುರಾಸೆ ಹುಟ್ಟಿಕೊಂಡಿತ್ತು. ಅದಕ್ಕೆ ಕಾರಣವೂ ಉಂಟು. ಹಟ್ಟಿ ಕಾಫಿಯಲ್ಲಿ  ಆರು ರೂಪಾಯಿಗೆ ಆ ಗಾಜಿನ ಲೋಟದ ಮುಕ್ಕಾಲು  ಭಾಗವನ್ನು ಮಾತ್ರ ಕಾಫಿ ಕೊಡುವುದು!  ನಾವು ಕೊಡುವ ಹಣಕ್ಕೆ ಅಷ್ಟು ಸಾಕು, ಅದು ಅರೋಗ್ಯಕ್ಕೂ ಒಳ್ಳೆಯದು ಎನ್ನುವುದು ಅವರ ಭಾವನೆಯಿರಬಹುದು. ಅದೇ ಭಾವನೆ ಹೇಮಾಶ್ರೀಗೂ ಬಂದುಬಿಟ್ಟಿರಬೇಕು  ಅದಕ್ಕೆ ಮನೆಯಲ್ಲೂ ಕೂಡ ಗಾಜಿನ ಲೋಟದಲ್ಲಿ ಅಷ್ಟೇ ಪ್ರಮಾಣದ ಕಾಫಿ ಕೊಡುತ್ತಾಳೆ. 

"ಇದರ ತುಂಬಾ ಕೊಡು" ಎಂದೆ. 

"ಕೊಡೊಲ್ಲಾ ಕಣ್ರಿ, ನಿಮಗೆ ಇಷ್ಟು ಸಾಕು ಸುಮ್ಮನೇ ಕುಡೀರಿ" ಅಂದಳು.

"ಅಲ್ಲಾ ಕಣೇ, ಈ ಲೋಟದಲ್ಲಿ ಕುಡಿಯುವ ಆನಂದವೇ ಬೇರೆ, ಅದಕ್ಕಾಗಿಯೇ ಅಲ್ಲವೇ ಸಿಟಿಯೆಲ್ಲಾ ಹುಡುಕಿ ತಂದಿದ್ದು., ಇದರ ತುಂಬಾ ಕಾಫಿಯನ್ನು ಹಾಕಿದಾಗ ನೋಡಲು ತುಂಬಾ ಚೆನ್ನಾಗಿರುತ್ತದೆ. ಮತ್ತೆ ಪೂರ್ತಿ ಕುಡಿದಾಗ ಸಿಗುವ ಸಂತೃಪ್ತಿಯನ್ನು ಬೇರೆ" ಅದಕ್ಕಾಗಿ ಪ್ಲೀಸ್ ನನಗೆ ಇನ್ನು ಮುಂದೆ ಲೋಟದ ತುಂಬ ಕಾಫಿ ಕೊಡು" ಎಂದೆ.

    "ನೀವು ಈ ಗಾಜಿನ ಲೋಟಗಳನ್ನು ತಂದಿದ್ದು ಈ ಕಾರಣಕ್ಕೋ? ನೋಡುವುದಕ್ಕೆ ಚೆಂದ ಕಾಣುತ್ತದೆ ಎನ್ನುವ ಮಾತ್ರಕ್ಕೆ ಲೋಟ ತುಂಬಾ ಕಾಫಿ ಕೊಡುವುದಕ್ಕಾಗುವುದಿಲ್ಲ. ಬೇಕಾದರೆ ಒಮ್ಮೆ ಪೂರ್ತಿ ಕೊಡುತ್ತೇನೆ, ಅದರ ಫೋಟೊ ತೆಗೆದು ಕಂಪ್ಯೂಟರಿಗೆ ಸ್ಕ್ರೀನ್ ಸೇವರ್ ಮಾಡಿಕೊಂಡು  ನೋಡುತ್ತಾ ಆನಂದಪಡಿ, ಬೇಡ ಅಂದೋರು ಯಾರು?  ಮತ್ತೆ ಪೂರ್ತಿ ಬೇಕು ಅಂತ ಹಟ ಮಾಡಿದ್ರೆ ಈ ಲೋಟವನ್ನು  ಬಾಕ್ಸಿಗೆ ಹಾಕಿಟ್ಟು ಮೇಲೆ ಇಟ್ಟುಬಿಡುತ್ತೇನೆ. ಅಥವ ಯಾರಿಗಾದ್ರು ಕೊಟ್ಟುಬಿಡುತ್ತೇನೆ ಅಷ್ಟೇ" ಅಂತ ಅಂದುಬಿಟ್ಟಳಲ್ಲ!

       ವಿಧಿಯಿಲ್ಲದೇ ಅತಿಯಾಸೆ ಗತಿಗೇಡು ಅಂದುಕೊಳ್ಳುತ್ತಾ ಮುಕ್ಕಾಲು ಕಾಫಿ ಕಾಲು ಭಾಗ ನೊರೆತುಂಬಿದ  ಆ ಗಾಜಿನ ಲೋಟದಲ್ಲಿ  ಕಾಫಿ ಕುಡಿಯುತ್ತಾ ಆನಂದಿಸುತ್ತಿದ್ದೇನೆ.


ಚಿತ್ರಗಳು ಮತ್ತು ಲೇಖನ.
ಶಿವು.ಕೆ

Thursday, November 4, 2010

ಒಂದೂವರೆದಿನದ ಧಾರವಾಡ ಅನುಭವ

        

        ನಾನು ದೂರದ ಪ್ರಯಾಣಕ್ಕಾಗಿ ಅದೆಷ್ಟೇ ವೇಗದ ರೈಲಿನ ಟಿಕೆಟ್ ಕಾಯ್ದಿರಿಸಿದರೂ ಅದ್ಯಾಕೋ ನಿದಾನವಾಗಿ ಪಕ್ಕಾ ಪ್ಯಾಸಿಂಜರ್ ಆಗಿಬಿಡುತ್ತದೆ. ಇಲ್ಲೂ ಹಾಗೇ ಆಯಿತು. ನಮ್ಮ ಅತ್ಯಂತ ವೇಗದ ರೈಲಾದ ಬೆಂಗಳೂರು-ಧಾರವಾಡ ಇಂಟರ್ ಸಿಟಿ ರೈಲನ್ನು ಮಧ್ಯಾಹ್ನ ಒಂದುಗಂಟೆಗೆ ಹತ್ತಿ ಕುಳಿತಾಗ ಅದು ರಾತ್ರಿ ಒಂಬತ್ತು ಗಂಟೆಗೆ ತಲುಪುತ್ತದೆ. ನಾನು ಬೇಗ ಹೋಟಲ್ ರೂಮ್ ಸೇರಿ ಲಗ್ಗೇಜ್ ಇಟ್ಟು ಊಟ ಮುಗಿಸಿ ರಾತ್ರಿ ಒಂದು ಸುತ್ತು ಧಾರವಾಡವನ್ನು ಕ್ಯಾಮೆರಾ ಸಮೇತ ಸುತ್ತೋಣವೆಂದು ಮಾಸ್ಟರ್ ಪ್ಲಾನ್ ಮಾಡಿದ್ದೆ.  ಆದ್ರೆ ಈ ರೈಲು ರಾತ್ರಿ ಹತ್ತುಮುವತ್ತೈದಕ್ಕೆ ಧಾರವಾಡ ತಲುಪಿ ನನ್ನ ಲೆಕ್ಕಚಾರವನ್ನೆಲ್ಲಾ ತಲೆಕೆಳಗಾಗಿಸಿತ್ತು.  ನಾನು ರೈಲಿಳಿದು ಆಟೋ ಏರಿ ಅವರೇ ವ್ಯವಸ್ಥೆ ಮಾಡಿದ್ದ ಬೃಂದಾವನ ಲಾಡ್ಜ್ ಸೇರುವ ಹೊತ್ತಿಗೆ ಹನ್ನೊಂದು ಗಂಟೆಯಾಗಿದ್ದರಿಂದ ಕ್ಯಾಮೆರಾದೊಂದಿಗೆ ಸುತ್ತುವ ಆಸೆಯನ್ನು ಕೈಬಿಟ್ಟಿದ್ದೆ. ರೈಲಿನಲ್ಲಿ ಏನು ತಿಂದಿರಲಿಲ್ಲ.  ಹೊರಗೆ ಬಂದು ನೋಡಿದರೆ ಜನರ ಓಡಾಟವೇ ಇಲ್ಲ. ಧಾರವಾಡ ಆಗಲೇ ನಿದ್ರಿಸುತ್ತಿದೆ. ಹೊಟ್ಟೆ ಚುರುಗುಟ್ಟುತ್ತಿದ್ದರಿಂದ ತಿನ್ನಲು ಏನಾದರೂ ಸಿಗುತ್ತದೋ ಅಂತ ಹೋಟಲಿನ ಬಲಬದಿಯ ರಸ್ತೆಯ ಉದ್ದಕ್ಕೆ ಒಂದು ಪರ್ಲಾಂಗ್ ನಡೆದೆ. ಅಂಗಡಿ ಹೋಟಲ್ಲುಗಳೆಲ್ಲಾ ಮುಚ್ಚಿವೆ. ಮತ್ತೆ ಬಲಕ್ಕೆ ತಿರುಗಿ ಸ್ವಲ್ಪ ದೂರ ನಡೆದರೂ ಏನೂ ಪ್ರಯೋಜನವಿಲ್ಲ. ಮತ್ತೊಂದು ತಿರುವು ಬಲಕ್ಕೆ ಕಾಣಿಸಿತು. ತಿರುಗಿದೆ. ಅಲ್ಲಿ ರಸ್ತೆಯಲ್ಲಿ ಇಬ್ಬರು ಬೈಕ್ ಮೇಲೆ ಕುಳಿತು ಮಾತಾಡುತ್ತಿದ್ದರು. ಅವರನ್ನೇ ದೈರ್ಯಮಾಡಿ ಕೇಳಿದೆ. "ಇಲ್ಲಿ ಊಟದ ಹೋಟಲ್, ಖಾನವಾಳಿ ಏನಾದ್ರು ತೆರೆದಿದೆಯಾ" ಅಂತ.  ಅವರು "ಸ್ವಲ್ಪ ಮುಂದಕ್ಕೆ ಹೋಗಿ ಬಲಕ್ಕೆ ತಿರುಗಿ ಅಲ್ಲೊಂದು ಖಾನಾವಳಿ ಇದೆ. ನಿಮ್ಮ ಅದೃಷ್ಟವನ್ನು ಪರೀಕ್ಷಿಸಿ" ಎಂದರು.  ಸಣ್ಣ ಆಸೆಯಿಂದ ಅಲ್ಲಿಗೆ ಹೋದೆ. ಅರ್ಧ ಬಾಗಿಲು ಮುಚ್ಚಿದ್ದ ಖಾನಾವಳಿಯ ಒಳಗೆ ಹೋಟಲ್ಲಿನವರೇ ಊಟ ಮಾಡುತ್ತಿದ್ದರು.  


 "ಊಟ ಸಿಗುತ್ತಾ" ಕೇಳಿದೆ.

 "ಎಲ್ಲಾ ಖಾಲಿಯಾಯ್ತಲ್ಲ" ಅಂದ ಒಬ್ಬ.


"ಹೌದಾ, ಛೇ ಎಂಥ ಕೆಲಸವಾಯ್ತು, ರೈಲು ತಡವಾಗಿದ್ದರಿಂದ ನನ್ನ ಊಟ ತಪ್ಪಿ ಹೋಯ್ತಲ್ಲ" ಅಂದ ನನ್ನಲ್ಲೇ ಗೊಣಗಿಕೊಂಡೆ.

"ಸ್ವಲ್ಪ ದೂರ ಅಲ್ಲಿ ಒಂದು ಖಾನಾವಳಿ ತೆರೆದಿದೆ ಅಲ್ಲಿ ಹೋಗಿ ನಿಮಗೆ ಊಟ ಸಿಗುತ್ತದೆ" ಅಂತ ಕೈತೋರಿಸುತ್ತ ಹೇಳಿದ ಮಗದೊಬ್ಬ.

 "ಆ ಖಾನಾವಳಿ ತುಂಬಾ ದೂರನಾ?" ನಾನು ಅರೆಮನಸ್ಸಿನಿಂದ ಕೇಳಿದೆ. ನನ್ನ ಅಷ್ಟು ದೂರ ಹೋಗಬೇಕಲ್ಲ ಅನ್ನುವ ಚಿಂತೆಯಿಂದ ಅಲ್ಲೇ ಅತ್ತಿತ್ತ ನೋಡುತ್ತಾ ನಿಂತೆ.

        "ಎಲ್ಲಿಂದ ಬಂದ್ರಿ"  ಹೋಟಲ್ ಒಡತಿ ಕೇಳಿದಳು.

"ಬೆಂಗಳೂರಿನಿಂದ" ಹೇಳಿದೆ.  "ರೊಟ್ಟಿ ಇಲ್ಲ ಚಪಾತಿ ಆಗುತ್ತಾ" ಕೇಳಿದಳು. ಪರ್ವಾಗಿಲ್ಲ ಏನಿದ್ದರೂ ಕೊಡಿ. ಎಂದೆ. ಸ್ವಲ್ಪ ಅನ್ನವೂ ಉಂಟು ಅಂದಳು. "ಚಪಾತಿ ಜೊತೆಗೆ ಅನ್ನವೂ ಸಿಗುತ್ತಾ"  ಹಸಿವನ್ನು ಅದುಮಿಟ್ಟುಕೊಂಡಿದ್ದ ನನಗೆ ಮತ್ತಷ್ಟು ಹಸಿವು ಹೆಚ್ಚಾಯಿತು. ಒಂದು ಊಟ ಪಾರ್ಸೆಲ್ ಕೊಟ್ಟುಬಿಡುತ್ತೇನೆ ಎಂದಳು. ಸದ್ಯ ಅಷ್ಟಾದರೂ ಸಿಕ್ಕಿತಲ್ಲ ನಿಮಗೆ ಪುಣ್ಯಬರಲಿ ಎಂದುಕೊಳ್ಳುತ್ತಾ "ಆಗಲಿ ಕೊಡಿ ಎಂದು ಹೇಳಿದೆನಾದರೂ ಅವರಿಗೆ ಉಳಿಸಿಕೊಂಡಿರುವ ಊಟವನ್ನು ನಾನು ದೂರದಿಂದ ಬಂದಿದ್ದೇನೆ ಅಂತ ನನಗೆ ಕೊಟ್ಟು ಅವರು ಅರೆಹೊಟ್ಟೆ ತಿಂದು ಮಲಗಬಹುದಾ ಅಂತ ಒಮ್ಮೆ ಅನ್ನಿಸಿತು. "ತಗೊಳ್ಳಿ ಸರ, ಪಲ್ಯ ಉಪ್ಪಿನಕಾಯಿ ಹಾಕಿದ್ದೇನೆ. ಚಟ್ನಿ ಹಪ್ಪಳ ಖಾಲಿಯಾಗಿದೆ, ಇಪ್ಪತ್ತೈದು ರೂಪಾಯಿ ಕೊಡ್ರಿ" ಅಂದಳು.


ನಮ್ಮ ಬೆಂಗಳೂರಿನಲ್ಲಿ ಇಂಥ ಹೊತ್ತಿನಲ್ಲಿ ಇಂಥ ಸಂದರ್ಭ ಬಂದಿದ್ದಲ್ಲಿ ಹೋಟಲ್ಲಿನ ಒಡೆಯ ಅಥವ ಕೆಲಸ ಮಾಡುವವರು ಹೀಗೆ ತಮ್ಮ ಊಟವನ್ನು ದೂರದವರೊಂದಿಗೆ ಹಂಚಿಕೊಳ್ಳುತ್ತಿದ್ದರೆ? ಖಂಡಿತ ಇಲ್ಲ. ಧಾರವಾಡದಲ್ಲಿ ಇನ್ನೂ ಮುಗ್ದತೆಯಿರುವುದರಿಂದ ಅಲ್ಲಿನ ಜನಗಳಿಗೆ ಹೊರಗಿನವರ ಮೇಲೆ ತುಂಬುಪ್ರೀತಿಯಿದೆ. ಅದರ ಪಲಿತಾಂಶವೇ ನನಗೆ ಊಟ ಸಿಕ್ಕಿರಬಹುದು ಎಂದುಕೊಳ್ಳುತ್ತಾ ನನ್ನ ರೂಮು ಸೇರುವ ಹೊತ್ತಿಗೆ ಸಮಯ ಹನ್ನೊಂದುವರೆಯಾಗಿತ್ತು.

ಲಾಡ್ಜಿನ ರೆಸೆಪ್ಟನ್‍ನಲ್ಲಿ ಒಂದು ಊಟದ ತಟ್ಟೆ ಮತ್ತು ನೀರಿನ ಲೋಟವನ್ನು ನನ್ನ ರೂಮಿಗೆ ಕಳಿಸಿ ಎಂದು ಹೇಳಿ ರೂಮಿಗೆ ಹೋದೆ. ಎರಡೂ ಬರಲಿಲ್ಲ. ಸಮಯವಾಗಲೇ ಮೀರಿಹೋಗುತ್ತಿದೆ. ನನ್ನ ರೂಮಿನ ಎದುರಿಗೆ ರೂಮ್ ಬಾಯ್‍ನ ರೂಮ್ ಇತ್ತು. ಅಲ್ಲಿ ಊಟದ ತಟ್ಟೆಗಳು, ಗಾಜಿನ ಲೋಟಗಳು ಹಾಸಿಗೆ ದಿಂಬು ಟವಲ್ಲುಗಳು ಎಲ್ಲಾ ಇದ್ದರೂ ರೂಮ್ ಬಾಯ್ ಇರಲಿಲ್ಲ. ನಾನೇ ಹೋಗಿ ಒಂದು ತಟ್ಟೆಯನ್ನು ಮತ್ತು ಲೋಟವನ್ನು ತೆಗೆದುಕೊಂಡು ಬಂದು ಊಟದ ಪಾರ್ಸೆಲ್ ತೆಗೆಯುತ್ತೇನೆ!  ಇಬ್ಬರು ಊಟಮಾಡುವಷ್ಟನ್ನು ಪಾರ್ಸೆಲ್ ಮಾಡಿಬಿಟ್ಟಿದ್ದಾರೆ.  ನನ್ನ ಊಟ ಮುಗಿದು ಮಲಗುವ ಹೊತ್ತಿಗೆ ರಾತ್ರಿ ಹನ್ನೆರಡು ದಾಟಿತ್ತು. ಅದ್ಯಾವ ಮಾಯದಲ್ಲಿ ನಿದ್ರೆ ಬಂತೋ ಬೆಳಿಗ್ಗೆ ಎಚ್ಚರವಾದಾಗ ಆರುವರೆಯಾಗಿತ್ತು


ಎದ್ದು ಕೈಕಾಲು ಮುಖ ತೊಳೆದುಕೊಂಡು ಕ್ಯಾಮೆರಾ ಬ್ಯಾಗ್ ಹೆಗಲಿಗೇರಿಸಿ ರೂಮಿನಿಂದ ಹೊರಬಿದ್ದೆ.  ಧಾರವಾಡ ಎದ್ದಿತ್ತಾದರೂ ಪೂರ್ತಿ ಎದ್ದಿರಲಿಲ್ಲ. ಸ್ವಲ್ಪ ದೂರ ನಡೆಯುವಷ್ಟರಲ್ಲಿ  ಒಂದು ಕಾಂಪ್ಲೆಕ್ಸ ಕೆಳಗೆ ನನ್ನ ವೃತ್ತಿ ಭಾಂದವರಾದ ದಿನಪತ್ರಿಕೆ ವಿತರಕರು ಅವರ ಬೀಟ್ ಹುಡುಗರು ಸೈಕಲ್ಲಿಗೆ ಕ್ಯಾರಿಯರಿಗೆ ಪೇಪರುಗಳನ್ನು ಜೋಡಿಸಿಕೊಳ್ಳುತ್ತಿದ್ದರು.


 ನಮ್ಮ  ವೃತ್ತಿ ಭಾಂದವರು ಎಲ್ಲಿದ್ದರೂ ನನ್ನ ಕಣ್ಣಿಗೆ ಕಾಣಲೇಬೇಕು!


 ಮಂಜು ಮುಸುಕಿದ ದಟ್ಟಮರಗಳ ಧಾರವಾಡ ರಸ್ತೆ!


 ಮುಂಜಾವಿನ ಧಾರವಾಡ ರಸ್ತೆ




  ಆಗಾಗ ಕಾಣುವ ದೂರದ ಊರಿನ ಬಸ್ಸುಗಳ ಜೊತೆಗೆ ಸಿಟಿಬಸ್ಸುಗಳು ಒಂದೊಂದಾಗಿ ಕಾಣತೊಡಗಿದವು. ರಸ್ತೆಗಳ ಎರಡೂ ಬದಿಯಲ್ಲೂ ದಟ್ಟಮರಗಳು ನಮ್ಮ ಹದಿನೈದು ವರ್ಷದ ಬೆಂಗಳೂರನ್ನು ನೆನಪಿಸಿದವು. ಅದ್ಯಾಕೋ ಖುಷಿಯಿಂದ ಒಂದಷ್ಟು ಮರಗಳ ಸಮೇತ ರಸ್ತೆಗಳ ಪೋಟೊಗಳನ್ನು ಕ್ಲಿಕ್ಕಿಸಿದೆ. ಹಾಗೇ ಸಾಗುತ್ತಿದ್ದಂತೆ ಆರ್.ಎನ್ ಸೆಟ್ಟಿ ಮೈದಾನ ಕಾಣಿಸಿತು. ಒಳಗೆ ಹೋದೆ. ಯುವಕ ಯುವತಿಯರು ಜಾಗಿಂಗ್ ಮಾಡುತ್ತಿದ್ದರು, ಬಾಲಕರು ಪುಟ್‍ಬಾಲ್ ಆಡುತ್ತಿದ್ದರು. ವಯಸ್ಸಾದವರು ವಾಕ್ ಮಾಡುತ್ತಿದ್ದರು. ದೂರದಲ್ಲೊಬ್ಬ ಪ್ರಾಣಯಾಮ ಮಾಡುತ್ತಾ ಉಸಿರು ಎಳೆದುಬಿಡುತ್ತಿದ್ದಾನೆ.  ಇದೆಲ್ಲವೂ ಏನು ವಿಶೇಷವಿಲ್ಲವೆಂದುಕೊಳ್ಳುವಷ್ಟರಲ್ಲಿ ಪಕ್ಕದಿಂದ ಕೆಲವು ವಯಸ್ಕ ಮಹಿಳೆಯರ ದ್ವನಿಗಳು ಕೇಳಿಬರತೊಡಗಿದವಲ್ಲ! ನಾನು ಅತ್ತ ತಿರುಗದೇ ಹಾಗೆ ಕೇಳಿಸಿಕೊಂಡೆ!




" ಅಲ್ಲ ಕಣ್ರಿ, ಈ ರಾಜಕೀಯ್ದೋವ್ರಿಗೆ ಏನು ಬಂದು ಸಾಯಲ್ವಾ? ನಮ್ಮ ದುಡ್ಡಲ್ಲಿ ರಿಸಾರ್ಟ್‍ನಲ್ಲಿ ಕೂತು ಮಜಮಾಡುತ್ತಾರಲ್ವಾ?
"ಹೌದು ಬಾಯೆರ್ರ...ಇವರಿಗೆ ದೊಡ್ಡ ರೋಗಬಡಿಬೇಕು ನೋಡ್ರಿ..’ ಹೇಳಿದಳು ಈಕೆ.

ಹೂ ಕಣ್ರಿ..ಇವರಿಗೆ ಚಿಕನ್ ಗುನ್ಯಗಿಂತ ದೊಡ್ಡದು ಅದೇನೋ ಮಟನ್ ಗುನ್ಯ ಅಂತ ಬಂದಿದೆಯಂತೆ ಅದು ಬಂದವರಿಗೆ ಆರುತಿಂಗಳು ನರಕದರ್ಶನವಂತೆ! ಅದು ಇವರಿಗಾದ್ರು ಬರಬಾರದಾ? ಶಾಪ ಹಾಕಿದಳು ಆಕೆ.


ಮತ್ತೆ ಇದು ಮುಂದುವರಿದು ಯಡಿಯೂರಪ್ಪ, ಕುಮಾರಸ್ವಾಮಿ,............ರೇಣುಕಾಚಾರ್ಯ....ಸಾಗುತ್ತಿತ್ತು.  ಹಾಗೆ ಮೈದಾನದಿಂದ ಹೊರಗೆ ಬಂದು ರಸ್ತೆಯಲ್ಲಿ ನಡೆಯತೊಡಗಿದೆ. ಕಾಲೇಜಿಗೆ ಹೋಗುವ ಸುಂದರ ಹುಡುಗಿಯರು ಕಾಣಿಸತೊಡಗಿದರು.

 ರಸ್ತೆ ಬದಿಯ ಹೋಟಲ್ ಹಿಂಭಾಗದಲ್ಲಿ ಮುಂಜಾವಿನಲ್ಲಿ ನೀರು ಕಾಯಿಸುತ್ತಿರುವ ವಯಸ್ಕ ಮಹಿಳೆ



ಅವರನ್ನೆಲ್ಲಾ ಹಾಗೆ ನೋಡಿ ಕಣ್ಣುತುಂಬಿಕೊಳ್ಳುತ್ತಾ, ಕನ್ನಡ ಸಂಸ್ಕೃತಿ ಇಲಾಖೆ ಕಟ್ಟಡ, ಮಂದಾರ ಹೋಟಲ್ ಸಾಗಿ ದಾರಿಯಲ್ಲಿ ಸಿಕ್ಕ ಒಂದು ಪುಟ್ಟ ಹೋಟಲ್ಲಿ ಚಾ ಕುಡಿದು ಹೋಟಲ್ಲಿಗೆ ಬರುವ ಹೊತ್ತಿಗೆ ಯಾರೋ ದೂರದಿಂದ ಕೈಯಾಡಿಸುತ್ತಿರುವುದು ಕಾಣಿಸಿತು. ಹತ್ತಿರ ಬರುವಷ್ಟರಲ್ಲಿ ಆತ ಚಿದಾನಂದ ಸಾಲಿ ಅಂತ ಗೊತ್ತಾಯಿತು.  ಕಳೆದ ನಾಲ್ಕು ತಿಂಗಳಿಂದ ಬರೀ ಫೋನಿನಲ್ಲಿ ನಮ್ಮ ಗೆಳೆತನ ಬೆಳೆದಿದ್ದರಿಂದ ನಾನು ಅವರನ್ನು ನೋಡಿರದಿದ್ದರೂ ಆತ ನನ್ನ ಬ್ಲಾಗಿನಲ್ಲಿ ನನ್ನ ಫೋಟೊ ನೋಡಿದ್ದರಿಂದ ಹತ್ತಿರ ಬಂದವರೇ ನನ್ನ ಅಪ್ಪಿಕೊಂಡುಬಿಟ್ಟರು.  ಮತ್ತೆ ಮಾತಾಡಿ ಪರಿಚಯಮಾಡಿಕೊಂಡ ಮೇಲೆ ಜೊತೆಗಿದ್ದವರು ಆರೀಪ್ ರಾಜ ಅಂತ ಪರಿಚಯ ಮಾಡಿಕೊಂಡರು.  ಅಲ್ಲಿಂದ ಮತ್ತೆ ನಮ್ಮ ರೂಮ್ ಸೇರಿ ಸಿದ್ದರಾಗಿ ಹೊರಬರುವ ಹೊತ್ತಿಗೆ ಸಮಯ ಒಂಬತ್ತುವರೆಯಾಗಿತ್ತು.
            
ಈ ಫೋಟೊ ಚೆನ್ನಾಗಿದೆಯಲ್ವಾ.....


ಮತ್ತೆ ಸ್ವಲ್ಪ ಹೊತ್ತಿನಲ್ಲೇ  ಮುಂಡರಗಿಯ ಸಲೀಂ ಮತ್ತು ಬಾಗಲಕೋಟದ ಇಂದ್ರಕುಮಾರ್ ಕೂಡಿಕೊಂಡರು. ಅವರು ನನ್ನ ವೆಂಡರ್ ಕಣ್ಣು ಪುಸ್ತಕಕ್ಕೆ ಬಹುಮಾನ ಬಂದ ಸಂತೋಷಕ್ಕೆ  ನನ್ನ ಮೇಲಿನ ಪ್ರೀತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು. ಎಲ್ಲರೂ ಒಟ್ಟಿಗೆ ಬೆಳಗಿನ ಉಪಹಾರ ಮುಗಿಸಿ ದ.ರಾ.ಬೇಂದ್ರೆ ಭವನವನ್ನು ಸೇರುವ ಹೊತ್ತಿಗೆ ಹತ್ತುವರೆಯಾಗಿತ್ತು.

ಅರೀಫ್ ರಾಜರ "ಪಕೀರ ಜಂಗಮ ಜೋಳಿಗೆ, ಮತ್ತು ನನ್ನ ವೆಂಡರ್ ಕಣ್ಣು ಪುಸ್ತಕದ ಬಗ್ಗೆ ಅವಲೋಕಿಸಿದವರು ಡಾ.ರಂಗರಾಜ ವನದುರ್ಗ. ಸಂದೀಪ್ ನಾಯಕ್‍ರ "ಗೋಡೆಗೆ ಬರೆದ ನವಿಲು" ಚಿದಾನಂದ ಸಾಲಿಯವರ "ಯಜ್ಞ" ಅನುವಾದ ಕೃತಿ, ಮಾರ್ತಾಂಡಪ್ಪ ಕತ್ತಿಯವರ "ಬಸವರಾಜ ಮನ್ಸೂರರ ಜೀವನ ಚರಿತೆ" ಶ್ರೀಧರ ಹೆಗಡೆ ಭದ್ರನ್‍ರವರ "ವಿಸ್ತರಣೆ" ಕೃತಿಗಳ ಬಗ್ಗೆ ಜಗದೀಶ ಮಂಗಳೂರ್ ಮಠ್‍ರವರು ಮಾತಾಡಿದರು. ನಂತರ ಇಡೀ ಕಾರ್ಯಕ್ರಮವನ್ನು ಉದ್ದೇಶಿಸಿ ಮತ್ತು ಪುಸ್ತಕಗಳ ಬಗ್ಗೆ ಇಂದಿನ ಸಾಹಿತ್ಯದ ಬಗ್ಗೆ ಲವಲವಿಕೆಯಿಂದ ಮಾತಾಡಿದವರು ಜಯಂತ್ ಕಾಯ್ಕಿಣಿ.


ಕಾರ್ಯಕ್ರಮದ ನಡುವೆ ಪುಸ್ತಕ ಮಾರಾಟ ಹೊರಗೆ ನಡೆಯುತ್ತಿತ್ತು. ನಾನು ತೆಗೆದುಕೊಂಡು ಹೋಗಿದ್ದ ಹದಿನೈದು "ವೆಂಡರ್ ಕಣ್ಣು ಪುಸ್ತಕಗಳು ಮಾರಾಟವಾಗಿದ್ದು ನನಗೆ ಖುಷಿಯಾಗಿತ್ತು.  ಮದ್ಯಾಹ್ನ ಸಂಸ್ಥೆಯವರ ಜೊತೆ ಜಯಂತ್ ಕಾಯ್ಕಿಣಿ ಮತ್ತು ಬಹುಮಾನ ಪುರಸ್ಕೃತರಾದ ನಾವೆಲ್ಲಾ ಸಹಜವಾದ ಮಾತು, ಹರಟೆ, ತಮಾಷೆಗಳೊಂದಿಗೆ ಒಟ್ಟಿಗೆ ಊಟ ಮಾಡಿದ್ದು ಮರೆಯಲಾಗದ ಅನುಭವ.

ಸಂಜೆ ಧಾರವಾಡ ವಿಶ್ವವಿದ್ಯಾಲಯವನ್ನು ಸಲೀಂ ಮತ್ತು ಇಂದ್ರಕುಮಾರ್ ಜೊತೆ ನೋಡಲು ಹೋದಾದ ಅದರ ಆಗಾದವಾದ ಕ್ಯಾಂಪಸನ್ನು ನೋಡುವುದೇ ಒಂದು ಆನಂದ. ದಟ್ಟ ಮರಗಳ ನಡುವೆ ಅಲ್ಲಲ್ಲಿ ಇರುವ ವಿಭಾಗಗಳು, ಕಾಲೇಜು ಮತ್ತು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು,..........ಈಗ ಹತ್ತು ವರ್ಷ ಚಿಕ್ಕವನಾಗಿದ್ದರೆ ಇಲ್ಲಿ ಸ್ನಾತಕೋತ್ತರ ಪದವಿಗೆ ಸೇರಿಕೊಳ್ಳುವ ಆಸೆ ಮನದಲ್ಲಿ ಮೂಡಿತ್ತು.

 ಸೂರ್ಯ ಮುಳುಗುವ ಹೊತ್ತಿನಲ್ಲಿ ಧಾರವಾಡ ವಿಶ್ವವಿದ್ಯಾಲಯ ಮುಖ್ಯ ಕಟ್ಟಡ.



 ದಟ್ಟ ಮರಗಳಿಂದ ಕೂಡಿದ ಕ್ಯಾಂಪಸಿನ ರಸ್ತೆ...


    ಸಂಜೆ ಹೊತ್ತಿನಲ್ಲಿ ಧಾರವಾಡ ವಿಶ್ವವಿದ್ಯಾಲಯದ ಕ್ಯಾಂಪಸ್.


ಅಲ್ಲಿಂದ ಹೊರಬಂದು ಬಸ್ ಹತ್ತಿ ನಮ್ಮ ಸಂಜೆ ಕಾರ್ಯಕ್ರಮವಿದ್ದ ಸೃಜನ ರಂಗಮಂದಿರಕ್ಕೆ ಬಂದೆವು ಅಲ್ಲಿ ನಮಗಾಗಿ ಸುನಾಥ್‍ರವರು ಕಾಯುತ್ತಿದ್ದರು. ಅವರನ್ನು ಬೇಟಿಯಾಗಿದ್ದು ಒಂದು ವಿಭಿನ್ನ ಅನುಭವ. ಸಂಜೆ ಕಾರ್ಯಕ್ರಮ ಮುಗಿದು ಎಲ್ಲರಿಂದಲೂ ಬೀಳ್ಕೊಡುವಾಗ ಎಲ್ಲರ ಮನತುಂಬಿಬಂದಿತ್ತು.  ವಾಪಸ್ಸು ರೂಮಿಗೆ ಬಂದು ನಮ್ಮ ಲಗ್ಗೇಜುಗಳನ್ನು ಪ್ಯಾಕ್ ಮಾಡಿಕೊಂಡು ಒಂದು ದೊಡ್ಡ ಮಿಶ್ರ ಪೇಡ ಅಂಗಡಿಯಲ್ಲಿ ಧಾರವಾಡ ಪೇಡವನ್ನು ಕೊಂಡು ಪಕ್ಕದಲ್ಲಿಯೇ ಇದ್ದ ೯೦ ವರ್ಷ ಹಳೆಯದಾದ ಬಸಪ್ಪ ಖಾನಾವಳಿಯಲ್ಲಿ ಊಟಮಾಡಿ ರೈಲು ನಿಲ್ದಾಣದ ಬಳಿಗೆ ಬರುವ ಹೊತ್ತಿಗೆ ೯-೩೦.  ನಾನು ಬೆಂಗಳೂರಿಗೆ ಬರುವ ರಾಣಿಚೆನ್ನಮ್ಮ ಎಕ್ಸ್‍ಪ್ರೆಸ್ ಬಂದುನಿಂತಿತ್ತು.

ಇಡೀ ದಿನದ ಧಾರವಾಡದ ಅನುಭವವನ್ನು ಮೆಲುಕು ಹಾಕುತ್ತಿರುವಾಗಲೇ ಅದ್ಯಾವಾಗ ನಿದ್ರೆ ಬಂತೊ ಗೊತ್ತಿಲ್ಲ.  ಬೆಳಿಗ್ಗೆ ಕಣ್ಣು ಬಿಟ್ಟಾಗ ರೈಲು ತುಮಕೂರು ದಾಟಿ ಬೆಂಗಳೂರಿನ ಕಡೆ ವೇಗವಾಗಿ ಚಲಿಸುತ್ತಿತ್ತು.


ಚಿತ್ರಗಳು ಮತ್ತು ಲೇಖನ:
ಶಿವು.ಕೆ