Sunday, February 12, 2012

ಮರೆಯಲಾಗದ ಪ್ರವಾಸ


            ಜನವರಿ ೨೬ರ ರಾತ್ರಿ ಬೆಂಗಳೂರಿನ ಜಯಮಹಲ್ ಪ್ಯಾಲೆಸ್‍ನಿಂದ ಹೊರಬರುವಷ್ಟರಲ್ಲಿ ಆಗಲೇ ಸಮಯ ೯-೪೦.  ಅದೊಂದು ತೆರೆದ ಉದ್ಯಾನವನದಲ್ಲಿ ನಡೆದ ಅದ್ದೂರಿ ಮದುವೆಯ ಅರತಕ್ಷತೆ.  ಕಡಿಮೆಯೆಂದರೂ ಐದು ಸಾವಿರಕ್ಕೂ ಹೆಚ್ಚು ಜನರಿದ್ದ ಅಂತ ಮದುವೆಯಲ್ಲಿ ಊಟಮಾಡದೆ ಹೊರಬಂದಿದ್ದೆ, ಅದಕ್ಕೆ ಕಾರಣ ಅವತ್ತೇ ರಾತ್ರಿ ನಾನು ಪುತ್ತೂರಿಗೆ ಹೋಗುವ ವೋಲ್ವೋ ಬಸ್ ಸಮಯ ರಾತ್ರಿ ಹತ್ತು ಮುವತ್ತು. ಕೊನೆಯ ಕ್ಷಣದಲ್ಲಿ ನಿಗದಿಯಾದ ಈ ಕ್ಯಾಂಡಿಡ್ ಫೋಟೊಗ್ರಫಿಯನ್ನು ಪುತ್ತೂರಿಗೆ ಹೋಗುವ ಕಾರಣದಿಂದಾಗಿ ಕೇವಲ 6-30 ರಿಂದ 8-30ರ ವರೆಗೆ ಮಾತ್ರ ಮಾಡಿಕೊಡುತ್ತೇನೆ ಅಂತ ಒಪ್ಪಿಕೊಂಡಿದ್ದೆ.  ಆದ್ರೆ ಈ ಕ್ಯಾಂಡಿಡ್ ಫೋಟೊಗ್ರಫಿ ಎನ್ನುವುದಿದೆಯಲ್ಲ. ಇದು ಒಂಥರ ಮೈಮರೆಯುವಂಥದ್ದೇ ಸರಿ!  ಹತ್ತು ಅತ್ಯುತ್ತಮ ಫೋಟೊಗಳು ಬೇಕೆಂದರೆ ಕಡಿಮೆಯೆಂದರೂ 100-150 ಫೋಟೊಗಳನ್ನಾದರೂ ಕ್ಲಿಕ್ಕಿಸಬೇಕು! ಮತ್ತೆ ಅಷ್ಟು ತೆಗೆದರೂ ಸಮಾಧಾನವಾಗುವುದಿಲ್ಲ!  ಇನ್ನೂ ಏನಾದರೂ ಹೊಸತು ಕಾಣಬಹುದು, ಸಿಗಬಹುದು ಅನ್ನುವ ಕುತೂಹಲದಲ್ಲಿ ಊಟ ತಿಂಡಿ ಸಮಯ ಮರೆತೇ ಹೋಗಿರುತ್ತದೆ! ಮೊದಲ ಬಾರಿಗೆ ಈ ರೀತಿ ತೆರೆದ ಉದ್ಯಾನವನದಲ್ಲಿ ಕೇವಲ ಸೀರಿಯಲ್ ಸೆಟ್ ಮತ್ತು ಕೆಲವೊಂದು ಲೈಟುಗಳು ಅಧಾರದಲ್ಲಿ  ಕ್ಯಾಂಡಿಡ್ ಫೋಟೊಗ್ರಫಿ ಮಾಡುವುದು ನಿಜಕ್ಕೂ ಸವಾಲು! ಆದ್ರೆ ನನ್ನ ಬಳಿ ೫ಡಿ ಮಾರ್ಕ್ ೨ ಕ್ಯಾಮೆರ ಇತ್ತಲ್ಲ! ಫೋಟೊ ತೆಗೆಯುತ್ತಾ ಸಮಯ ರಾತ್ರಿ 9-40 ಆಗಿದ್ದು ಗೊತ್ತೇ ಆಗಲಿಲ್ಲ.

   ಮನೆ ತಲುಪಿದಾಗ ಹತ್ತು ಗಂಟೆ. ಹತ್ತೇ ನಿಮಿಷಕ್ಕೆ ಊಟ ಮಾಡುವ ಶಾಸ್ತ್ರ ಮಾಡಿ  ಅದೇ ಕ್ಯಾಮೆರ ಕಿಟ್ ಮತ್ತು ಬಟ್ಟೆಯ ಲಗೇಜ್ ಬ್ಯಾಗ್ ಬೆನ್ನಿಗೆ ಹಾಕಿಕೊಂಡು ಹೊರಟೆನಲ್ಲ! ಹತ್ತೇ ನಿಮಿಷಕ್ಕೆ ನವರಂಗ್ ಬಸ್ ಸ್ಟಾಪ್. ಸಮಯಕ್ಕೆ ಸರಿಯಾಗಿ ಬಸ್ ಬಂತು. ಬಸ್‍ನೊಳಗೆ ಮಲಗಿದಷ್ಟೇ ಗೊತ್ತು. ಪುತ್ತೂರು ತಲುಪಿದಾಗ ಬೆಳಿಗ್ಗೆ ಏಳು ಗಂಟೆ.  ಪುತ್ತೂರಿನ ವಿವೇಕಾನಂದ ಕಾಲೇಜಿನವರು ಕಾಯ್ದಿರಿಸಿದ್ದ ರಾಮ ಹೋಟಲಿನಲ್ಲಿ ತಲುಪಿ ಸ್ನಾನ ಮಾಡುವ ಹೊತ್ತಿಗೆ ಬಾಗಲಕೋಟೆಯ ಇಂದ್ರ ಕುಮಾರ್ ಫೋನು. ಇಂದ್ರಕುಮಾರ್ ಮತ್ತು ಮುಂಡರಗಿಯ ಸಲೀಂ ಇಬ್ಬರೂ ಪುತ್ತೂರು ತಲುಪಿದ್ದರು. ಕಾಲ್ನಡಿಯಲ್ಲೇ ಬನ್ನಿ ಕೇವಲ ಎರಡು ಐದು ನಿಮಿಷದಲ್ಲಿ ಹೋಟಲ್ ಸಿಗುತ್ತದೆ ಎಂದಿದ್ದೆ ಹಾಗೆ ಬಂದರು ಅವರ ಬಗ್ಗೆ ಒಂದೆರಡು ಮಾತುಗಳನ್ನು ಇಲ್ಲಿ ಹೇಳಲೇಬೇಕು. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವಿಧ್ಯಾರ್ಥಿಗಳ ಫೋಟೊಗ್ರಫಿ ಪ್ರದರ್ಶನದ ಉದ್ಘಾಟನೆ ಮತ್ತು ನನ್ನ ಫೋಟೊಗ್ರಫಿ ಸಂವಾದ ವಿಚಾರವನ್ನು ತಿಳಿದು ನನಗಿಂತ ದೂರದಲ್ಲಿರುವ ಬಾಗಲಕೋಟೆಯಿಂದ ಇಂದ್ರಕುಮಾರ್ ಮತ್ತು ಗದಗ್ ಜಿಲ್ಲೆ ಮುಂಡರಗಿ ತಾಲ್ಲೂಕಿನ ಸಲೀಂ ಬಾಳಬಟ್ಟಿ ಪುತ್ತೂರಿಗೆ ಆಗಮಿಸಿದ್ದರು. ನಮ್ಮ ಕರ್ನಾಟಕದ ಪೂರ್ತಿ ಹಿಂದುಳಿದ ಪ್ರದೇಶಗಳಿಂದ ಬಂದು ಫೋಟೊಗ್ರಫಿಯಲ್ಲಿನ ಶ್ರದ್ಧೆ, ಶ್ರಮ, ಭಕ್ತಿಯಿಂದ ಇವರು ಮಾಡುತ್ತಿರುವ ಸಾಧನೆಯಿಂದಾಗಿ ಮುಂದಿನ ವರ್‍ಷಗಳಲ್ಲಿ ಇವರು ಅಂತರರಾಷ್ಟ್ರೀಯ ಮಟ್ಟದ ಮನ್ನಣೆ ಪಡೆಯಲು ಸಿದ್ದರಾಗುತ್ತಿರುವುದು ನಿಜಕ್ಕೂ ಸಂತಸದ ವಿಚಾರ. ಅವರು ನನ್ನಂತೆ ಜನವರಿ ಇಪ್ಪತ್ತಾರ ಸಂಜೆ ಸಾಗರ ಫೋಟೊಗ್ರಫಿಯಲ್ಲಿನ ಬಹುಮಾನ ವಿತರಣೆ ಸಮಾರಂಭದಲ್ಲಿ ಬಹುಮಾನಗಳನ್ನು ಪಡೆದು ಅಲ್ಲಿಂದಲೇ ನೇರವಾಗಿ ರಾತ್ರಿ ಹೊರಟು ಪುತ್ತೂರಿಗೆ ಬಂದಿದ್ದರು. ಅವರು ಸಿದ್ದರಾದ ಮೇಲೆ ನಾವು ಬೆಳಗಿನ ತಿಂಡಿ ಮುಗಿಸುವ ಹೊತ್ತಿಗೆ ಹತ್ತು ಗಂಟೆಯಾಗಿತ್ತು.  ಫೋಟೊಗ್ರಫಿ ಪ್ರದರ್ಶನ ಮತ್ತು ಸಂವಾದ ವಿಚಾರವನ್ನು ತಿಳಿದ ಮಂಗಳೂರಿನ ಕನ್ನಡ ಪ್ರಭ ಪತ್ರಕರ್ತರಾದ ಹರೀಶ್ ಮಾಂಬಾಡಿಯವರು ನನ್ನನ್ನು ಬೇಟಿಯಾಗಲು ನಾವು ಉಳಿದಕೊಂಡಿದ್ದ ರೂಮಿಗೆ ಬಂದಿದ್ದು ನನ್ನ ಸೌಭಾಗ್ಯವೇ ಅನಿಸಿತ್ತು. ಸ್ವಲ್ಪ ಹೊತ್ತಿನಲ್ಲಿಯೇ ನನ್ನ ಆತ್ಮೀಯ ಗೆಳೆಯರಾದ ಪುತ್ತೂರಿನ ವಿನಾಯಕ್ ನಾಯಕ್ ಕೂಡ ಬಂದರು. ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲು ಅವರೇ ಮುಖ್ಯ ಕಾರಣ. ಬೆಂಗಳೂರಿಗೆ ಬಂದಾಗಲೆಲ್ಲಾ ನನ್ನ ಮನೆಗೆ ಬೇಟಿಕೊಡುವ ಅವರು ಪುತ್ತೂರಿನ ಕಲಾತ್ಮಕ ಫೋಟೊಗ್ರಫಿಗೆ ಅವರ ಕೊಡುಗೆ ದೊಡ್ಡದು ಎನ್ನುವುದು ನನ್ನ ಭಾವನೆ.

     ನಾನು, ಇಂದ್ರಕುಮಾರ್, ಸಲೀಂ, ಹರೀಶ್ ಮಾಂಬಾಡಿ, ವಿನಾಯಕ್ ನಾಯಕ್ ಎಲ್ಲರೂ ಮಾತಾಡಲು ಪ್ರಾರಂಭಿಸಿದೆವಲ್ಲ, ಬ್ಲಾಗ್, ಫೋಟೊಗ್ರಫಿ, ಪತ್ರಿಕಾರಂಗ, ಬರವಣಿಗೆ ಇನ್ನೂ ಅನೇಕ ವಿಚಾರಗಳಿಂದಾಗಿ ಹನ್ನೆರಡು ಗಂಟೆಯಾಗಿದ್ದೆ ಗೊತ್ತಾಗಲಿಲ್ಲ. ನಾವೆಲ್ಲಾ ಬಹು ಕಾಲದ ಹಳೆಯ ಗೆಳೆಯರೇನೋ ಅನ್ನುವಂತೆ ಅನೇಕ ಆರೋಗ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದೆವು. ಇನ್ನೂ ಮಾತಾಡಲು ಮುಗಿಯದ ಅನೇಕ ವಿಚಾರಗಳಿದ್ದರೂ ಸಮಯದ ಒತ್ತಡದಿಂದಾಗಿ ನಮ್ಮ ಮಾತುಗಳನ್ನು ನಿಲ್ಲಿಸಬೇಕಾಯ್ತು.  ನಂತರ ಹೋಟಲ್ಲಿಗೆ ಹೋಗಿ ಊಟ ಮಾಡುವ ಶಾಸ್ತ್ರ ಮುಗಿಸಿ ಹೊರಬರುವಾಗ ಒಂದುಗಂಟೆ.  ಒಂದು ಕಾಲಿಗೆ ಸರಿಯಾಗಿ ಕಾಲೇಜಿ ಕನ್ನಡ ಉಪನ್ಯಾಸಕರಾದ ಮಾನ್ಯ ಶ್ರೀಧರ್ ಸರ್ ನಮ್ಮನ್ನು ಕರೆದುಕೊಂಡು ಹೋಗಲು ಬಂದರು.  ಪುತ್ತೂರಿನ ವಿವೇಕನಂದ ಕಾಲೇಜು ದೊಡ್ಡದು. ಸುಮಾರು 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಲ್ಲಿ ಕಲಿಯುತ್ತಿದ್ದಾರೆ. ಅಲ್ಲಿ ವಿದ್ಯಾರ್ಥಿಗಳು ಮತ್ತು ಕೆಲವು ಅದ್ಯಾಪಕರ ಫೋಟೊಗಳೂ ಸೇರಿದಂತೆ ಒಟ್ಟು ನೂರೈವತ್ತನಾಲ್ಕು ಛಾಯಾಚಿತ್ರಗಳನ್ನು ಪ್ರದರ್ಶನಕ್ಕಿಟ್ಟಿದ್ದರು.  ಅವರಿಗೆ ಗೊತ್ತಿಲ್ಲದಂತೆ ಪಿಕ್ಟೋರಿಯಲ್, ಫೋಟೊಜರ್ನಲಿಸಂ, ಫೋಟೊಟ್ರಾವಲ್, ಕ್ಯಾಂಡಿಡ್, ವೈಲ್ಡ್ ಲೈಫ್, ಮ್ಯಾಕ್ರೋ, ಲ್ಯಾಂಡ್ಸ್ಕೇಪ್.....ಇತ್ಯಾದಿ ಛಾಯಾಚಿತ್ರಗಳಿದ್ದವು. ಪುತ್ತೂರಿನ ವಿವೇಕಾನಂದ ಕಾಲೇಜಿನ ವಿಧ್ಯಾರ್ಥಿಗಳು ಮತ್ತು ಅಧ್ಯಾಪಕರು ಪ್ರತಿವರ್ಷ ತಾವು ಕ್ಲಿಕ್ಕಿಸಿದ ಫೋಟೊಗ್ರಫಿಗಳಲ್ಲಿ ಅತ್ಯುತ್ತಮವಾದ ಚಿತ್ರಗಳನ್ನು ಪ್ರದರ್ಶನಕ್ಕೆ ವ್ಯವಸ್ಥೆ ಮಾಡುತ್ತಾರೆ.  ಒಂದು ಪುಟ್ಟ ಪುತ್ತೂರಿನಂತ ಪುತ್ತೂರಿನ ತಾಲ್ಲೂಕಿನಲ್ಲಿ ಇಂಥ ಫೋಟೊಗ್ರಫಿ ಪ್ರದರ್ಶನ ಅದರೆಡೆಗಿನ ಆಸಕ್ತಿ ಮತ್ತು ಫೋಟೊಗ್ರಫಿಯ ಬೆಳವಣಿಗೆ ನಿಜಕ್ಕೂ ಅನುಕರಣೀಯ ಎಂದು ನನ್ನ ಅನಿಸಿಕೆ. ಯಾವ ವಿಚಾರದ ಬಗ್ಗೆ ಮಾತಾಡಬೇಕೆಂದುಕೊಂಡವನಿಗೆ ಅಲ್ಲಿನ ಚಿತ್ರಗಳನ್ನು ನೋಡಿದ ತಕ್ಷಣ ಸಂವಾದಕ್ಕೆ ವಿಚಾರ ಸಿಕ್ಕಂತಾಗಿ ನನಗೆ ಖುಷಿಯಾಯ್ತು.
                      ಪುತ್ತೂರ್ ವಿವೇಕನಂದ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಛಾಯಾಚಿತ್ರ ಪ್ರದರ್ಶನ
     ಪಿಕ್ಟೋರಿಯಲ್ ಫೋಟೊಗ್ರಫಿ ಬಗ್ಗೆ ಚಿತ್ರಗಳನ್ನು ತೋರಿಸುತ್ತಾ ವಿವರಣೆ

      ನಂತರ ಸಂವಾದ

    ಬೆಂಗಳೂರಿನ ಫೋಟೊ ಜರ್ನಲಿಸಂ ವಿಧ್ಯಾರ್ಥಿಗಳಿಗೆ ಫೋಟೊಗ್ರಫಿ ಕಲಿಸಿದ್ದರೂ ಹೀಗೆ ನೇರವಾದ ಸಂವಾದದ ಅವಕಾಶ ಮೊದಲನೆಯದು. ಎರಡುಗಂಟೆಗಳ ಸಂವಾದದಲ್ಲಿ ಮೊದಲಿಗೆ ಒಂದು ಗಂಟೆ ನನ್ನ ಪಿಕ್ಟೋರಿಯಲ್ ಫೋಟೊಗ್ರಫಿ ಪ್ರದರ್ಶನ ಮತ್ತು ವಿವರಣೆ ನಂತರದ ಒಂದು ಗಂಟೆ ಸಂವಾದ ನನ್ನ ಮಟ್ಟಿಗೆ ಮರೆಯಲಾಗದ ಅನುಭವ. ವಿಧ್ಯಾರ್ಥಿಗಳಲ್ಲಿದ್ದ ಕುತೂಹಲ ಅದಕ್ಕೆ ಪೂರಕವಾಗಿ ಮೂಡುತ್ತಿದ್ದ ಪ್ರಶ್ನೆಗಳು, ಅದಕ್ಕೆ ನನಗೆ ತಿಳಿದ ಅನುಭವದ ಉತ್ತರ....ಹೀಗೆ ನಾಲ್ಕು ಗಂಟೆಯಾಗಿದ್ದು ಗೊತ್ತೇ ಆಗಲಿಲ್ಲ.  ನಂತರ ಹದಿನೈದು ನಿಮಿಷ ವಿರಾಮ ಅದರ ನಂತರ ಫೋಟೊಗ್ರಫಿ ಉದ್ಘಾಟನ ಕಾರ್ಯಕ್ರಮ. ಎಂದಿನಂತೆ ದೀಪ ಹೊತ್ತಿಸುವುದೋ ಅಥವ ಟೇಪ್ ಕಟ್ ಮಾಡುವ ಬದಲಾಗಿ ಕ್ಯಾಮೆರ ಕ್ಲಿಕ್ ಮಾಡಿ ಫೋಟೊ ತೆಗೆಯುವ ಮೂಲಕ ಉದ್ಘಾಟನೆಯಾಗಿದ್ದು ವಿಭಿನ್ನವೆನಿಸಿತ್ತು.  ಪುಟ್ಟ ಕಾರ್ಯದಲ್ಲಿ ಸಂವಾದ ವಿಚಾರಗಳು, ಫೋಟೊಗ್ರಫಿ ಇನ್ನಿತರ ವಿಚಾರಗಳು..ಹೀಗೆ ಒಂದು ವ್ಯವಸ್ಥಿತವಾದ ಸೊಗಸಾದ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ಐದುವರೆಯಾಗಿತ್ತು.
                      ಉದ್ಘಾಟಣೆ ಕಾರ್ಯಕ್ರಮ

ಅವರಿಂದ ಬೀಳ್ಕೊಟ್ಟು ರೂಮಿಗೆ ತಲುಪುವ ಹೊತ್ತಿಗೆ ಆರುಗಂಟೆ. ಅವತ್ತು ರಾತ್ರಿ ಅಲ್ಲಿದ್ದು ಮರುದಿನ ಬೆಳಿಗ್ಗೆ ಉಡುಪಿಗೆ ಹೋಗುವ ಯೋಜನೆ ಹಾಕಿಕೊಂಡು ರೂಮಿನಲ್ಲಿ ಹೋಗಿ ವಿಶ್ರಾಂತಿ ತೆಗೆದುಕೊಳ್ಳೋಣವೆಂದುಕೊಂಡಿದ್ದೆನಲ್ಲ, ಇಂದ್ರಕುಮಾರ್ ಮಾಡಿದ ಹೊಸ ಉಪಾಯದಿಂದಾಗಿ ಅದು ವಿಫಲವಾಯ್ತು. ಆದ್ರೂ ಅದು ಒಂಥರ ಒಳ್ಳೆಯದೇ ಆಯ್ತು. ಆತ ಹೊಸ ಅಲೋಚನೆ ಏನೆಂದರೆ ಇವತ್ತು ರಾತ್ರಿ ಪುತ್ತೂರಿನಲ್ಲಿ ಕಳೆಯುವ ಬದಲು ಈಗಲೇ ಉಡುಪಿಗೆ ಹೊರಟುಬಿಟ್ಟರೆ ರಾತ್ರಿ ಒಂಬತ್ತು ಗಂಟೆಗೆ ತಲುಪುತ್ತೇವೆ ಅಲ್ಲಿ ರೂಮ್ ಮಾಡಿ ಮಲಗಿದ್ದು ಮರುದಿನ ಬೇಗನೆ ಎದ್ದು ಸಿದ್ದರಾಗಿ ಬೆಳಗಿನ ಸೂರ್ಯನ ಹಿತವಾದ ಬೆಳಕಿನಲ್ಲಿ ಏನಾದರೂ ಫೋಟೊಗ್ರಫಿ ಮಾಡೋಣ ಎನ್ನುವುದು ಇಂದ್ರಕುಮಾರ್ ಆಲೋಚನೆ. ಆತನ ಅಲೋಚನೆ ಸರಿಯೆನಿಸಿ ಮಂಗಳೂರು ಬಸ್ ಹತ್ತಿಯೇ ಬಿಟ್ಟೆವು. ಮತ್ತೆ ಮಂಗಳೂರಿನಿಂದ ಉಡುಪಿಗೆ ಪ್ರಯಾಣ. ನಾಳೆ ಬೆಳಿಗ್ಗೆ ಎಲ್ಲಿಗೆ ಹೋಗುವುದು, ಏನು ಫೋಟೊಗ್ರಫಿ ಮಾಡುವುದು ಹೀಗೆ ಅನೇಕ ವಿಚಾರಗಳಲ್ಲಿ ನಾನು ತಲ್ಲೀನನಾಗಿದ್ದರೆ ಇಂಥ ಅಲೋಚನೆಯನ್ನು ನಮ್ಮ ತಲೆಯೊಳಗೆ ಬಿಟ್ಟು ಪೂರ್ತಿ ಮೂರು ಗಂಟೆ ನೆಮ್ಮದಿಯಾಗಿ ಬಸ್ಸಿನಲ್ಲೇ ನಿದ್ರೆ ಮಾಡಿದ್ದ ಇಂದ್ರಕುಮಾರ್.

    ಮರುದಿನ ಸ್ವಲ್ಪ ತಡವಾಗಿಯೇ ಎದ್ದಾಗ ಸಮಯ ಏಳುಗಂಟೆ.  ಅರ್ಧಗಂಟೆಯಲ್ಲಿ ಸಿದ್ದರಾಗಿ ಉಡುಪಿ ಬಸ್ ಸ್ಟಾಂಡಿನಲ್ಲಿ ತಿಂಡಿ ಮುಗಿಸಿ ಉದ್ಯಾವರದ ಕಡೆಗೆ ಬಸ್ ಹತ್ತಿದ್ದೆವಲ್ಲ! ಅಷ್ಟರಲ್ಲಿ ಕಟ್ ಪಾಡಿಯಲ್ಲಿರುವ ಛಾಯಾಗ್ರಾಹಕ ಗೆಳೆಯ ವಿವೇಕ್‍ನಿಂದ ಫೋನ್ "ಎಲ್ಲಿದ್ದೀರಿ ಮಾರಾಯ್ರೆ! ಅಂತ ವಿಚಾರಿಸಿಕೊಂಡರು. ನಿನ್ನೆ ರಾತ್ರಿ ಉಡುಪಿಗೆ ಬಂದ ಕತೆಯನ್ನು ಹೇಳಿದಾಗ "ಅರೆರೆ ನೀವು ಎಂಥದ್ದು ಮಾಡಿದ್ದು ಸುಮ್ಮನೆ ಉಡುಪಿಗೆ ಹೋಗುವ ಬದಲು ನಮ್ಮ ಮನೆಗೆ ಬರಬಹುದಿತ್ತಲ್ವ!  ನಾವು ಮುಂಬೈನಲ್ಲಿ ನೆಲೆಸಿರುವುದರಿಂದ ನನ್ನ ಕಟ್ ಪಾಡಿ ಮನೆ ಕಾಲಿಯುಂಟು ನಾಲ್ಕು ದಿನದಿಂದ ಪಡುಬಿದ್ರಿಯಲ್ಲಿ ಫೋಟೊಗ್ರಫಿ ಕಾರ್ಯಕ್ರಮವಿರುವುದರಿಂದ  ಇಲ್ಲಿಯೇ ಇದ್ದೇನೆ. ನಿನ್ನೆಯೂ ಕಾರ್ಯಕ್ರಮವಿತ್ತು. ನಾನು ರಾತ್ರಿ ಬಂದಾಗ ಹನ್ನೊಂದು ಗಂಟೆ. ನೀವು ಮೊದಲೇ ಫೋನ್ ಮಾಡಿದ್ದರೆ ಮನೆಯ ಕೀಯನ್ನು ಕೆಳಗೆ ಕೊಟ್ಟು ಹೋಗಿತ್ತಿದ್ದೆನಲ್ಲ! ಹೋಗಲಿ ಬಿಡಿ ನೀವು ಬರುವ ಹೊತ್ತಿಗೆ ಉದ್ಯಾವರದ ಬಳಿಗೆ ನಾನು ಬರುತ್ತೇನೆ ಅಂದರು. ಅಲ್ಲಿಗೆ ನಮ್ಮ ಬೆಳಗಿನ ಫೋಟೊಗ್ರಫಿಗೆ ವಿವೇಕ್ ಕೂಡ ಸೇರಿಕೊಂಡರು.


      ನನ್ನ ಆಸೆಯಿದ್ದದ್ದೂ ಏಳು ವರ್ಷದ ಹಿಂದೆ ಮೀನಿನ ಬಲೆಯ ಫೋಟೊ ತೆಗೆದ ಸಮಯದಲ್ಲಿ ಮೀನಿನ ಬಲೆ ಎಸೆದ ರವಿ, ಅವರ ಭಾವಮೈದ ಯೋಗೇಶನನ್ನು ಬೇಟಿಮಾಡಬೇಕೆನ್ನುವ ಆಸೆಯಿತ್ತು. ಏಳುವರ್ಷದ ಹಿಂದಿದ್ದ ಉದ್ಯಾವರ ಸ್ವಲ್ಪ ಬದಲಾಗಿದ್ದರಿಂದ ಅವರ ಮನೆ ಹುಡುಕುವುದು ಕಷ್ಟವಾಗಿತ್ತು. ಎರಡು ಕಡೆ ಹಿನ್ನೀರು. ಹಾಗೆ ಸಾಗಿದರೆ ಕೊನೆಗೆ ಹಿನ್ನೀರು ಸೇರುವ ಕೊನೆಯಲ್ಲಿ ಅವರ ಮನೆ. ಒಂದೊಂದೇ ಮನೆಯ ಬಳಿ ವಿಳಾಸವನ್ನು ಕೇಳಿಕೊಂಡು ತಲುಪುವ ಹೊತ್ತಿಗೆ ಒಂದುವರೆ ಕಿಲೋಮೀಟರ್ ದಾರಿ ಸಾಗಿಸಿದ್ದೆವು. ಅವರ ಅಕ್ಕ ಮಾತ್ರ ಇದ್ದರು. ನಾನು ಮೊದಲಿಗೆ ಮಾತಾಡಿಸಿದಾಗ ಅವರಿಗೆ ನೆನಪು ಹತ್ತಲಿಲ್ಲ. ಏಳುವರ್‍ಷದ ಹಿಂದೆ ನಾನು ಅಲ್ಲಿಗೆ ಬಂದಿದ್ದು, ಟೀ ಕುಡಿದಿದ್ದು ನಂತರ ಅವರ ಮಗ ಯೋಗೇಶನ ಜೊತೆ ಬೋಟಿನಲ್ಲಿ ಕುಳಿತು ಒಂದುಗಂಟೆ ಹಿನ್ನೀರಿನಲ್ಲಿ ಸುತ್ತಾಡಿದ್ದು, ಎಲ್ಲವನ್ನು ನೆನಪಿಸಿದಾಗ  ಅವರಿಗೆ ಅದೆಲ್ಲಾ ನೆನಪಾಗಿ ಅವರ ಮುಖದಲ್ಲಿ ಅಚ್ಚರಿ ಮತ್ತು ಸಂತೋಷ ಒಟ್ಟಿಗೆ ಮೂಡಿತ್ತು.  ಅಷ್ಟೆಲ್ಲವನ್ನು ನೆನಪಿಟ್ಟುಕೊಂಡಿದ್ದೀರಲ್ಲ! ಇರಿ ಕುಡಿಯಲು ಏನಾದರೂ ತರುತ್ತೇನೆ  ಅಂತ ಹೋಗಿ ಪ್ರಿಡ್ಜಿನಿಂದ  ತಣ್ಣಗಿನ ನೀರು ಕೊಟ್ಟರು.  ಹತ್ತು ನಿಮಿಷ ಅವರೊಂದಿಗೆ ಮಾತಾಡಿ ನನ್ನ ಫೋನ್ ನಂಬರ್ ಕೊಟ್ಟು, ನಿಮ್ಮ ಮಗ ಯೋಗೇಶ್ ಬಂದರೆ ಫೋನ್ ಮಾಡಿಸಿ, ನಿಮ್ಮ ಮನೆಗೆ ಆ ಮೀನಿನ ಬಲೆಯ ಫೋಟೊವನ್ನು ಕಳಿಸಿಕೊಡುತ್ತೇನೆ. ಎಂದು ಹೇಳಿ ನಾವು ಮೂವರು ಅಲ್ಲಿಂದ ಹೊರಟೆವು. ಏಳು ವರ್ಷದ ಹಿಂದಿನ ಹಳೆಯ ನೆನಪುಗಳು ಆ ಮೀನಿನ ಬಲೆಯ ಫೋಟೊ, ನಂತರ ಅದು ಪಡೆದುಕೊಂಡ ಅಂತರರಾಷ್ಟ್ರಿಯ ಮಟ್ಟದ ಹತ್ತಾರು ಪ್ರಶಸ್ಥಿಗಳು ಇದಕ್ಕೆಲ್ಲಾ ಕಾರಣಕರ್ತರಾದ ಇವರು ಮತ್ತೆ ಈ ಮನೆ ಎಲ್ಲವೂ ಮತ್ತೆ ಮತ್ತೆ ಮರುಕಳಿಸಿದ್ದವು.


       ಉದ್ಯಾವರದಲ್ಲಿ ಆಗಲೇ ವಿವೇಕ್ ಆಗಲೇ ತಮ್ಮ ಆಲ್ಟೋ ಕಾರಿನಲ್ಲಿ ನಮಗಾಗಿ ಕಾಯುತ್ತಿದ್ದರು. ಆಗಲೇ ಸಮಯ ಒಂಬತ್ತು ದಾಟಿತ್ತು. ಹಿನ್ನೀರು, ನಡುವೆ ಚಲಿಸುತ್ತಿದ್ದ ದೋಣಿಗಳು ಇತ್ಯಾದಿಗಳ ಫೋಟೊವನ್ನು ತೆಗೆದೆವು. ಅಲ್ಲಿಂದ ನೇರವಾಗಿ ವಿವೇಕ್ ಮನೆಗೆ. ಅವರ ಮನೆಯಲ್ಲಿದ್ದಷ್ಟು ಹೊತ್ತು ನಮ್ಮ ಫೋಟೊಗ್ರಫಿ ಜೀವನಗಳು, ಮುಂಬೈನಲ್ಲಿ ಅವರ ಫೋಟೊಗ್ರಫಿ ವ್ಯವಹಾರ, ಅಲ್ಲಿಗೂ ಇಲ್ಲಿಗೂ ಹೋಲಿಕೆ ಇತ್ಯಾದಿ ವಿಚಾರಗಳನ್ನೆಲ್ಲಾ ಮಾತಾಡುತ್ತಾ ಸಮಯವಾಗಿದ್ದೇ ಗೊತ್ತಾಗಲಿಲ್ಲ. ಊಟ ಮುಗಿಸಿ ವಿಶ್ರಾಂತಿ ತೆಗೆದುಕೊಂಡು ಕಂಬಳ ನಡೆಯುವ ಸ್ಥಳಕ್ಕೆ ತಲುಪುವ ಹೊತ್ತಿಗೆ ಆಗಲೇ ಸಮಯ ನಾಲ್ಕುಗಂಟೆ.


      ಸರ್ ಕಂಬಳಕ್ಕೆ ಇನ್ನೂ ಬೇಗ ಬರಬೇಕಿತ್ತು ಅಂತ ಇಂದ್ರಕುಮಾರ್‌ ಯೋಚಿಸುತ್ತಿದ್ದರಲ್ಲ, ನೋಡಿ ನೀವು ಮದ್ಯಾಹ್ನ ಹನ್ನೆರಡು ಗಂಟೆಗೆ ಬಂದುಬಿಟ್ಟರೆ ಆಗಿನಿಂದಲೇ ಕಂಬಳ ಓಟದ ಫೋಟೊಗ್ರಫಿ ಮಾಡಲು ಶುರುಮಾಡಿಬಿಡುತ್ತೀರಿ. ಪ್ರತಿ ಓಟದ ಸ್ಪರ್ಧೆಯನ್ನು ಉತ್ಸಾಹ ಮತ್ತು ಹುರುಪಿನಿಂದ ಕ್ಲಿಕ್ಕಿಸುತ್ತಿರುತ್ತೀರಿ. ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ನಿಮ್ಮ ಮೊಮೊರಿ ಕಾರ್ಡು ಮುಗಿಯುತ್ತಾ ಬಂದಿರುವುದು ನಿಮಗೆ ಗೊತ್ತಾಗುವುದಿಲ್ಲ.  ಹಾಗೆ ನೋಡಿದರೆ ಸರಿಯಾದ ಫೋಟೊ ತೆಗೆಯಲು ನಿಮಗೆ ಸಾಧ್ಯವಾಗುವುದು ನಾಲ್ಕು-ಐದುಗಂಟೆಯ ನಂತರವೇ. ಹಿತವಾದ ತಿಳಿಬಿಸಿಲಿನ ಆ ಸಮಯದಲ್ಲಿ ಸರಿಯಾಗಿ ಹತ್ತು ಫೋಟೊ ತೆಗೆದರೆ ಸಾಕು, ಆದ್ರೆ ಬೆಳಗ್ಗಿನಿಂದ ಸತತವಾಗಿ ಕ್ಲಿಕ್ಕಿಸಿ ಮೊಮೊರಿಕಾರ್ಡು ಪುಲ್ ಆಗಿಬಿಟ್ಟಿರುತ್ತದೆ. ಮತ್ತೆ  ಅತ್ಯುತ್ತಮ ಸಮಯದ ಫೋಟೊಗ್ರಫಿ ಸಮಯದಲ್ಲಿ ಪೇಚಾಡುವಂತಾಗುತ್ತದೆ.  ಅದರ ಬದಲು ಈ ನಾಲ್ಕು ಗಂಟೆಯಿಂದ ಸಂಜೆ ಸೂರ್ಯ ಮುಳುಗುವ ಆರುವರೆಯವರೆಗೂ ಚೆನ್ನಾಗಿ ಫೋಟೊಗ್ರಫಿ ಮಾಡಬಹುದಲ್ವಾ...ನೀವೇ ನೋಡುವಿರಂತೆ ಇಂಥ ತೆಳು ಬಿಸಿಲಿನಲ್ಲಿ ಈ ಕೋಣದ ಓಟದ ಸ್ಪರ್ಧೆ ಹೇಗೆ ಕಾಣುತ್ತದೆ ಅಂತ ಹೇಳಿದಾಗ ಅವರಿಗೆ ಸಮಾಧಾನವಾಯಿತು.

      ಇಲ್ಲಿಂದ ನಮ್ಮ  ಕಂಬಳ ಫೋಟೊಗ್ರಫಿ ಶುರುವಾಗಿತ್ತು. ಸಲೀಂ ಸೈಡಿನಲ್ಲಿ ನಿಂತು ಪ್ಯಾನಿಂಗ್ ಫೋಟೊಗ್ರಫಿ ಮಾಡುತ್ತಿದ್ದರೆ ಇಂದ್ರಕುಮಾರ್ ಎದುರಿಗೆ ಬರುವ  ಕಂಬಳ ಓಟದ ಫೋಟೊ ತೆಗೆಯುತ್ತಿದ್ದರು. ಕಳೆದ ಐದು ವರ್ಷಗಳ ನಂತರ ಮೊದಲ ಬಾರಿಗೆ ಕಂಬಳ ಫೋಟೊಗ್ರಫಿಗೆ ಹೋಗಿದ್ದೆನಲ್ಲ. ತುಂಬಾ ಖುಷಿಯಾಗಿತ್ತು. ಸಂಜೆ ಆರುವರೆಯಾಯಿತಲ್ಲ! ಸೂರ್ಯ ಮುಳುಗಿ ಪೂರ್ತಿ ಕತ್ತಲಾಯಿತು. ಸುತ್ತಲೂ ಪ್ಲೆಡ್ ಲೈಟುಗಳು ಹತ್ತಿಕೊಂಡವು. ಇಂದ್ರಕುಮಾರ್ ಮತ್ತು ಸಲೀಮ್ ಕ್ಯಾಮೆರ ಪ್ಯಾಕ್ ಮಾಡಿ ಹೋಗೋಣವೆಂದುಕೊಂಡರು. ಆದ್ರೆ ನನಗೆ  ರಾತ್ರಿ ಬೆಳಕಿನಲ್ಲಿ  ಕಂಬಳ ಫೋಟೊಗ್ರಫಿ ಅದರಲ್ಲೂ ಚಲನೆಯುಕ್ತ ಫೋಟೊಗ್ರಫಿ ಮಾಡಬೇಕು ಎನ್ನುವ ಆಸೆಯಿತ್ತಲ್ಲ ಇನ್ನರ್ಧ ಗಂಟೆ ಅಂತ ನನ್ನ ಫೋಟೊಗ್ರಫಿ ಮುಂದುವರಿಸಿದ್ದೆ.  ಸಂಜೆ ಹೊತ್ತಿನಲ್ಲಿ ಫೋಟೊಗ್ರಫಿ ಮಾಡುವುದು ಒಂಥರ ಅನುಭವವಾದರೆ ರಾತ್ರಿ ಬೆಳಕಿನಲ್ಲಿ ಕಂಬಳ ಫೋಟೊಗ್ರಫಿ ಮಾಡುವುದು ನಿಜಕ್ಕೂ ಸವಾಲು ಆದ್ರೆ ನನ್ನ ೫ಡಿ ಮಾರ್ಕ್ ಕ್ಯಾಮೆರ ಇಂಥ ಪ್ರಯೋಗಗಳಿಗೆ ಸಿದ್ಧವಾಗಿತ್ತು. ಮೊದಲ ಬಾರಿಗೆ ಇಂಥಪ್ರಯೋಗದಲ್ಲಿ ಯಶಸ್ವಿಯಾಗಿದ್ದೇನೆ ಫೋಟೊಗಳೆಲ್ಲಾ ತುಂಬಾ ಚೆನ್ನಾಗಿ ಬಂದಿವೆ. ಕಂಬಳ ಫೋಟೊವನ್ನು ನಾನು ಯಾಕೆ ಹಾಕಿಲ್ಲವೆಂದರೆ ಅವೆಲ್ಲವನ್ನು ಆಯ್ಕೆಮಾಡಿ ಕರೆಕ್ಷನ್ ಮಾಡಬೇಕಿದೆ. ಮತ್ತೆ ಸ್ಪರ್ಧೆಗೆ ಕಳುಹಿಸುವ ಸಲುವಾಗಿ ಇರುವುದರಿಂದ ಇಲ್ಲಿ ಹಾಕಲಾಗಿಲ್ಲ. ಅದಕ್ಕಾಗಿ ವಿಷಾದಿಸುತ್ತೇನೆ.


        ಇಂದ್ರ ಪ್ರತಿ ಭಾರಿಯೂ ಕ್ಲಿಕ್ಕಿಸಿದ ಫೋಟೊವನ್ನು ತೋರಿಸಿ ಹೇಗಿದೆ ಅಂತ ಕೇಳಿ ಕಂಪೋಜಿಷನ್, ತಾಂತ್ರಿಕ ವಿವರಣೆಯನ್ನು ಚೆಕ್ ಮಾಡಿಕೊಳ್ಳುತ್ತಿದ್ದರಲ್ಲ, ಒಮ್ಮೆ ನಾನು ಅವರಿಂದ ಸ್ವಲ್ಪ ದೂರ ಪ್ಯಾನಿಂಗ್ ಫೋಟೊಗ್ರಫಿಗೆ ಸೈಡಿಗೆ ಹೋದಾಗ ತಾವು ಆಗ ತಾನೆ ಕ್ಲಿಕ್ಕಿಸಿದ ಫೋಟೊವನ್ನು ತಮ್ಮ ಪಕ್ಕದಲ್ಲಿದ್ದ ಹಿರಿಯರಿಗೆ ತೋರಿಸಿದ್ದಾರೆ. ಅವರು ಚೆನ್ನಾಗಿದೆಯೆಂದು ಹೇಳಿ ತಮ್ಮ ವಿಸಿಟಿಂಗ್ ಕಾರ್ಡ್ ಕೊಟ್ಟಿದ್ದಾರೆ. ಅಷ್ಟರಲ್ಲಿ ನಾನು ಪಕ್ಕ ಬಂದೆನಲ್ಲ, ನೋಡಿ ಸರ್ ಅಂತ ಅವರ ನನಗೆ ಕಾರ್ಡು ತೋರಿಸಿದರು. ಹೌದಾ, ಓಕೆ ಅಂತ ಮತ್ತೆ ನಾನು ಫೋಟೊಗ್ರಫಿಯಲ್ಲಿ ಮಗ್ನನಾಗಿಬಿಟ್ಟೆ.  ಆದ್ರೆ ಮರುಕ್ಷಣದಲ್ಲಿಯೇ ಅ ಕಾರ್ಡಿನಲ್ಲಿ "ಟಿ. ಶ್ರೀನಿವಾಸ ರೆಡ್ಡಿ" ಅಂತ ಇದ್ದಿದ್ದು ನೆನಪಾಗಿ ಮತ್ತೊಮ್ಮೆ ಆ ಕಾರ್ಡನ್ನು  ಕೊಡಿ ಇಲ್ಲಿ ಅಂತ ಪಡೆದು ನೋಡಿದೆ. "ಡೌಟೇ ಇಲ್ಲ ಇವರು ಅವರೇ...ಖುಷಿಯಿಂದ ಕುಣಿದಾಡುವಂತಾಗಿತ್ತು. ಆಂದ್ರಪ್ರದೇಶದ ವಿಜಯವಾಡದಲ್ಲಿರುವ ಇವರು ದಕ್ಷಿಣ ಭಾರತದ ಅತ್ಯುತ್ತಮ ಪಿಕ್ಟೋರಿಯಲ್ ಛಾಯಾಗ್ರಾಹಕರಲ್ಲಿ ಒಬ್ಬರು. ಅವರು ರಾಷ್ಟ್ರ ಮತ್ತು ಅಂತರರಾಷ್ಟ್ರ ಮಟ್ಟದ ಫೋಟೊಗ್ರಫಿಯಲ್ಲಿ ಅದ್ಬುತವೆನಿಸುವ ಸಾಧನೆ ಮಾಡಿದ್ದಾರೆ. ಒಂಥರ ಆಂದ್ರಪ್ರದೇಶದ ಪಿಕ್ಟೋರಿಯಲ್ ಐಕಾನ್ ಎಂದೆ ಹೇಳಬಹುದು.  ಹತ್ತಿರ ಹೋಗಿ ನನ್ನ ಪರಿಚಯ ಮಾಡಿಕೊಂಡೆನಷ್ಟೆ. "ಒಹ್! ಶಿವು.ಕೆ ಬೆಂಗಳೂರು, ಐ ಅಮ್ ಸರ್ಪ್ರೈಸ್, ಯು ಅರ್ ಮ್ಯ ಫೇವರೇಟ್ ಫೋಟೊಗ್ರಫರ್ ಅನ್ನುತ್ತ ನನ್ನನ್ನು ಅಪ್ಪಿಕೊಂಡುಬಿಟ್ಟರು.  ಅವರ ಗೆಳೆಯರನ್ನು ಕರೆದು ನನಗೆ ಪರಿಚಯಿಸಿದರಲ್ಲ...ಆಗ ಗೊತ್ತಾಯಿತು. ಮತ್ತೊಬ್ಬ ಗ್ರೇಟ್ ಪಿಕ್ಟೋರಿಯಲ್ ಫೋಟೊಗ್ರಫರ್ ಮುಸನಿ  ವಿಜಯಭಾಸ್ಕರ್ ಅಂತ. ನಾವೆಲ್ಲ ಒಟ್ಟಿಗೆ ಫೋಟೊ ತೆಗೆಸಿಕೊಂಡೆವು. "ಇಂಡಿಯನ್ ಫೆಡರೇಷನ್ ಅಪ್ ಫೋಟೊಗ್ರಫಿ ನಡೆಸುವ ಕನ್‍ವೆನ್ಶನ್ ಗೆ ನನ್ನನ್ನು ಅಹ್ವಾನಿಸಿದರು. ಅವರನ್ನು ಬೇಟಿಯಾಗಿದ್ದು ನನಗಂತೂ ವರ್ಣಿಸಲಾಗದ ಅನುಭವ. ನಾವು ಛಾಯಾಗ್ರಾಹಕರು ಫೋಟೊ ತೆಗೆಯಲು ನಾ ಮುಂದು ತಾ ಮುಂದು ಅಂತ ಒಬ್ಬರಿಗೊಬ್ಬರು ಮುನ್ನುಗ್ಗುವುದು, ಅವನು ತನ್ಮಯನಾಗಿ ಫೋಟೊ ಕ್ಲಿಕ್ಕಿಸುವಾಗ ಇವನು ಅಡ್ಡಬರುವುದು ಅಮೇಲೆ ಸಾರಿ ಕೇಳುವುದು, ಈತ ಓಕೆ ಅಂತ ಹೇಳಿದರೂ ಮನಸ್ಸಿನಲ್ಲಿಯೇ ಬೈದುಕೊಳ್ಳುವುದು ನಡೆಯುತ್ತಿತ್ತಲ್ಲ, ಆಗ ನಾನು ಇವರನ್ನು ಎಷ್ಟು ಸಲ ಬೈದುಕೊಂಡಿದ್ದೆನೋ, ಅವರು ನಮ್ಮನ್ನು ಎಷ್ಟು ಸಲ ಬೈದುಕೊಂಡಿದ್ದರೋ....ಆದ್ರೆ ಕೊನೆಯಲ್ಲಿ ಹೀಗೆ ಅನಿರೀಕ್ಷಿತವಾಗಿ ಬೇಟಿಯಾಗಿದ್ದು ಮಾತ್ರ "ಯಾರೇ ನೀನು ಚಲುವೆ"  ಸಿನಿಮಾ ಸನ್ನಿವೇಶದಂತೆ ನಾಯಕ ನಾಯಕಿಯ ಜೊತೆಗಿದ್ದರೂ ಆವಳನ್ನು ಗುರುತಿಸಲಾಗದಂತೆ, ಹಾಗೆ ನಾಯಕಿಯೂ ಕೂಡ ತನ್ನ ಪ್ರೇಮಿ ಜೊತೆಯಲ್ಲಿದ್ದರೂ ಗುರುತಿಸಲಾಗದಂತೆ ಓಡಾಡುತ್ತಿರುತ್ತಾರಲ್ಲ ಹಾಗೆ ಇಲ್ಲಿಯೂ ಆಗಿದ್ದು ಮಾತ್ರ ಕಾಕತಾಳಿಯ.

ಆಂದ್ರಪ್ರದೇಶದ ಫೋಟೊಗ್ರಫಿ ಐಕಾನ್‍ಗಳ ಜೊತೆ ನಾನು ಎಡದಿಂದ ನೀಲಿ ಅಂಗಿಯವರು ಶರೀಫ್, ಮುಸನಿ ವಿಜಯಭಾಸ್ಕರ್, ನಾನು, ಟಿ.ಶ್ರೀನಿವಾಸ ರೆಡ್ಡಿ ಮತ್ತು ಸಲೀಂ
          ನಮ್ಮ ಇಂದ್ರಕುಮಾರ್ ಮತ್ತೆ ಜೊತೆಯಾದಾಗ

      ಅವತ್ತು ರಾತ್ರಿ ಉಡುಪಿಯಿಂದ ಹೊರಟು ಬೆಂಗಳೂರು ತಲುಪುವ ಹೊತ್ತಿಗೆ ಬೆಳಿಗ್ಗಿನ ಏಳುಗಂಟೆ. ಹಿಂದಿನ ದಿನ ಪೂರ್ತಿ ಸುತ್ತಾಡಿದ್ದರಿಂದ ಬಸ್ಸಿನ ಸ್ಲೀಪರ್ ಕೋಚಿನಲ್ಲಿ ಚೆನ್ನಾಗಿ ನಿದ್ರೆ ಬಂದಿತ್ತು. ಮನೆಗೆ ಬಂದವನೆ ಒಂದೇ ಗಂಟೆಯಲ್ಲಿ ಚಿತ್ರಸಂತೆಗೆ ಹೋಗಲು ಸಿದ್ದನಾಗಿದ್ದೆ.


ಲೇಖನ :ಶಿವು.ಕೆ
ಚಿತ್ರಗಳು: ಸಲೀಂ ಮತ್ತು ಇಂದ್ರಕುಮಾರ್

Friday, January 6, 2012

ಮಂಗಳೂರಿನಲ್ಲಿ ನನ್ನ ಕಿರುಚಿತ್ರ "ಬೆಳಗಾಯ್ತು" ಪ್ರದರ್ಶನ

ದಿನಾಂಕ:15-1-2012 ರಂದು ಮಂಗಳೂರಿನಲ್ಲಿ ನಡೆಯುವ "ಆಂಬಿಟ್ ಕಿರುಚಿತ್ರ ಉತ್ಸವದಲ್ಲಿ 19 ಚಿತ್ರಗಳ ಜೊತೆಗೆ ಮೊದಲ ಪ್ರಯತ್ನವಾದ ನನ್ನಕಿರುಚಿತ್ರ: "ಬೆಳಗಾಯ್ತು...,ಇನ್ನೂ ನ್ಯೂಸ್ ಪೇಪರ್ ಬಂದಿಲ್ವಾ" ಪ್ರದರ್ಶನ ಮತ್ತು ಸ್ಪರ್ಧೆ ಆಯ್ಕೆಯಾಗಿದೆ. 
ನಿಮಗೆಲ್ಲರಿಗೂ ಸ್ವಾಗತ.

Monday, January 2, 2012

ಹೊಸ ವರ್ಷದ ಮೊದಲ ದಿನವೇ ನನ್ನ ಹೊಸ ಕ್ಯಾಮೆರ ಮತ್ತು ಲೆನ್ಸುಗಳು ಮತ್ತು EFIAP ಫೋಟೊಗ್ರಫಿ Distinction


ಅತ್ಮೀಯ ಬ್ಲಾಗ್ ಗೆಳೆಯರೆ,

ಮೊದಲಿಗೆ ನಿಮಗೆಲ್ಲ ಹೊಸ ವರ್ಷದ ಶುಭಾಶಯಗಳು.  2011 ಎನ್ನುವ ಒಂದು ವರ್ಷ ನನ್ನ ಮಟ್ಟಿಗೆ ಹೀಗೆ ಬಂದು ಹಾಗೆ ಹೋಯ್ತು ಅನ್ನುವ ಆಗಿತ್ತು.  ಕಳೆದ ವರ್ಷದ ಲೆಕ್ಕದಲ್ಲಿ ನೋಡಿದರೆ ಮೊದಲಿಗೆ ನನ್ನ ಶ್ರೀಮತಿಯನ್ನು ಚೆನ್ನಾಗಿ ನೋಡಿಕೊಂಡಿದ್ದೇನೆ ಅಂದುಕೊಂಡಿದ್ದೇನೆ. ಏಕೆಂದರೆ ಅವಳು ಖುಷಿಯಾಗಿದ್ದಾಳೆ. ಅದು ಬಿಟ್ಟರೆ ನನ್ನ ವಿಚಾರಕ್ಕೆ ಬಂದರೆ ನನ್ನ ಮನೆ, ಪೇಪರ್ ಏಜೆನ್ಸಿ ಕೆಲಸ, ಇವೆಲ್ಲ ಎಂದಿನಂತೆ ಸಣ್ಣ ಪುಟ್ಟ ತೊಂದರೆಗಳೊಂದಿಗೆ ಸರಳ ಮತ್ತು ಸರಾಗ. ಮೂರು ಹೊತ್ತು ಊಟಕ್ಕೆ ಮತ್ತು ವರ್ಷಕ್ಕೆರಡು ಜೊತೆ ಬಟ್ಟೆಗೆ ನಮ್ಮ ಕುಟುಂಬಕ್ಕೆ ತೊಂದರೆಯಿಲ್ಲದ ವರ್ಷ. ಪೂರ್ತಿ ವರ್ಷದಲ್ಲಿ ಒಂದು "ಬೆಳಗಾಯ್ತು" ಕಿರುಚಿತ್ರ ಮತ್ತು ನನ್ನ ವೆಬ್ ಸೈಟು ಇವೆರಡು ಖುಷಿಯ ವಿಚಾರಗಳು. ಅದನ್ನು ಸಾಧನೆ ಎಂದು ನಾನು ಹೇಳಲು ಇಷ್ಟಪಡುವುದಿಲ್ಲ.  ಏಕೆಂದರೆ ಅವೆರಡರ ಪಲಿತಾಂಶ ಬಂದ ಮೇಲೆಯೇ ಅವು ಸಾಧನೆಯೋ ಅಥವ ಸುಮ್ಮನೇ ಮಣ್ಣು ಹೊತ್ತಿದ್ದೋ ಅಂತ ಗೊತ್ತಾಗುತ್ತದೆ. ಅದೆಲ್ಲದರ ಪಲಿತಾಂಶ 2012ರಲ್ಲಿ ಗೊತ್ತಾಗುತ್ತದೆ. ಇನ್ನುಳಿದಂತೆ ಬರವಣಿಗೆ ವಿಚಾರಕ್ಕೆ ಬಂದರೆ ಆ ವರ್ಷದಲ್ಲಿ ನಾನು ವಾರ ವಾರ ವೀಕು. ಏಕೆಂದರೆ ಕಳೆದ ಮೂರು ತಿಂಗಳಿಂದ ಕಂಪ್ಯೂಟರಿನ ಬರಹವನ್ನು ಕುಟ್ಟುವುದು ಮರೆತೆ ಹೋಗಿದೆ. ಇದರ ನಡುವೆ ಖುಷಿಯ ವಿಚಾರವೆಂದರೆ ಅಜಾದ್ ಸಹಕಾರದಿಂದಾಗಿ ದೊಡ್ಡಮನಿ ಮಂಜು, ರೂಪ ಎಲ್ ರಾವ್,  ಸುಧೇಶ್ ಶೆಟ್ಟಿ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಜೊತೆಯಾಗಿದ್ದು ಒಂಥರ ಖುಷಿ ತಂದಿದೆ.

     ಇದೆಲ್ಲವನ್ನು ಬಿಟ್ಟರೆ ಒಂದಷ್ಟು ಫೋಟೊಗ್ರಫಿ ಮತ್ತು ಅದರ ಲೇಖನಕ್ಕೆ ಸಂಭಂದಿಸಿದ ಕಿರಿಕಿರಿಗಳು, ಬೇಸರಗಳು ಇದರಿಂದಾಗಿ ನಾನು ಬರವಣಿಗೆಯನ್ನು ನಿಲ್ಲಿಸಿದ್ದು ನಿಮಗೆ ಗೊತ್ತೇ ಇದೆ. ಇದು ಒಂಥರ ಒಳ್ಳೆಯದೇ ಆಯಿತೇನೋ ಅನ್ನಿಸಿತ್ತು. ಏಕೆಂದರೆ ಅದರ ನಂತರ ನಾನು ಫೂರ್ತಿ ಫೋಟೊಗ್ರಫಿಯಲ್ಲಿ ಮುಳುಗಿಹೋದೆ. ಸಾವಿರಾರು ಫೋಟೊಗಳನ್ನು ಕ್ಲಿಕ್ಕಿಸಿದೆ. ಅವೆಲ್ಲಕ್ಕೂ ಅಕ್ಷರ ರೂಪ ಕೊಟ್ಟು ಬ್ಲಾಗು, ಬಜ್ ಮತ್ತು ಫೇಸ್ ಬುಕ್ ಗೆ ಪೋಸ್ಟ್ ಮಾಡಬೇಕೆನ್ನಿಸಿದರೂ ಅದ್ಯಾಕೋ ಎಲ್ಲವನ್ನು ತಡೆಹಿಡಿದುಬಿಟ್ಟೆ.  ಕಾರಣ ಏಕೆಂದು ಗೊತ್ತಿಲ್ಲ. ಕೆಲವು ಗೆಳೆಯರ ಸಲಹೆಯನ್ನು ಕೇಳಿದಾಗ ಎಲ್ಲವನ್ನು ಫೋಸ್ಟ್ ಮಾಡಬೇಡಿ. ಪುಸ್ತಕ ರೂಪಕ್ಕೆ ಕಾಯ್ದಿರಿಸಿ ಎಂದರು. ಹಾಗೆ ಮಾಡಿದ್ದೇನೆ ಅಂದುಕೊಂಡಿದ್ದೇನೆ.

      ಕಳೆದ ಮೂರು ತಿಂಗಳಿಂದ ಬರವಣಿಗೆಯನ್ನೇ ನಿಲ್ಲಿಸಿರುವವನು ಇದ್ದಕ್ಕಿದ್ದ ಹಾಗೆ ಏಕೆ ಈ ಲೇಖನವನ್ನು ಬರೆಯಲು ಪ್ರಾರಂಭಿಸಿದೆ ಅಂತ ನಿಮಗೆ ಅನ್ನಿಸಿರಬಹುದು. ನನಗೂ ಕೆಲಸ ಒತ್ತಡ, ಫೋಟೋಗ್ರಫಿ ಹೀಗೆ ಹತ್ತಾರು ಕಾರಣಗಳಿಂದಾಗಿ ಬರವಣಿಗೆಯೇ ನಿಂತುಹೋಗಿರುವ ಈ ಸಮಯದಲ್ಲಿ ಈ ವರ್ಷದ ಮೊದಲ ದಿನ ಘಟಿಸಿದ ಕೆಲವು ಸಂಗತಿಗಳು ಮತ್ತೆ  ಬರೆಯುವಂತೆ ಮಾಡಿವೆ.

ನಿನ್ನೆ ಬೆಳಿಗ್ಗೆ ಎದ್ದೆನಲ್ಲ. ಮೊದಲಿಗೆ ಮುಂಜಾನೆ ಐದುಗಂಟೆಗೆ ನನ್ನ ಪೇಪರ್ ಹುಡುಗರೊಂದಿಗೆ ಹೊಸವರ್ಷವನ್ನು ಕೇಕ್ ಕಟ್  ಮಾಡಿ ತಿಂದು ಎಲ್ಲರೂ ಸಂಭ್ರಮಿಸಿದೆವು. ಅದರ ನಂತರ ನಮ್ಮ ಸಿದ್ಧ ಸಮಾಧಿ ಯೋಗದ  ವೈವಿಧ್ಯಮಯ ಆಟದಲ್ಲಿ ಭಾಗವಹಿಸಿದ್ದು.  ಬೆಳಿಗ್ಗೆ ಎಂಟು ಗಂಟೆಯಿಂದ ಮಧ್ಯಾಹ್ನದವರೆಗೆ ನಡೆದ ಅನೇಕ ಆಟಗಳು ನಿಜಕ್ಕೂ ಮರೆಯಲಾಗದ್ದು. ನಾನು ಸೇರಿದಂತೆ ಅಕ್ಷರಶ: ಎಲ್ಲರೂ ಪುಟ್ಟ,ಮಕ್ಕಳಂತೆ ಭಾಗವಹಿಸಿ ಖುಷಿಪಟ್ಟೆವು. ನಾವು ಮಕ್ಕಳಾಗುವ ಅವಕಾಶ ನೀಡಿದ್ದಕ್ಕೆ ನಮ್ಮ ಸಿದ್ಧ ಸಮಾದಿ ಯೋಗ ಸಂಸ್ಥೆಗೆ ಧನ್ಯವಾದಗಳು.

       ಅದನ್ನು ಮುಗಿಸಿ ಮನೆಗೆ ಬರುತ್ತಿದ್ದಂತೆ ನನ್ನ ಗೆಳೆಯನಿಂದ ಫೋನ್. "ನಿನ್ನ Canon 5D mark 2 Camera, 24-70 2.8 lens, Flash  ಎಲ್ಲವೂ ಅಮೇರಿಕದಿಂದ ಬಂದಿದೆ ತೆಗೆದುಕೊಂಡು ಹೋಗು"  ಅಲ್ಲಿಗೆ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ.

       ನನ್ನ ಬಹುದೊಡ್ಡ ಕನಸು ಇದು.  Canon 5D mark 2 Camera, ಮತ್ತು ಅದಕ್ಕೆ ಸಂಭಂದಿಸಿದ ಉಪಕರಣಗಳು ಹೊಸವರ್ಷದ ದಿನ ನನ್ನವಾಗಿದ್ದು ನಾನು ಅವುಗಳ ಒಡೆಯನೆಂದುಕೊಳ್ಳುವುದಕ್ಕೆ ಒಮ್ಮೊಮ್ಮೆ ಖುಷಿಯಾಗುತ್ತಿದೆ, ಮತ್ತೊಮ್ಮೆ  ಅಂತ ಅದ್ಬುತ ಕ್ಯಾಮೆರವನ್ನು ನಾನು ಚೆನ್ನಾಗಿ ನಿಭಾಯಿಸಬಲ್ಲೆನಾ ಮತ್ತು ಚೆನ್ನಾಗಿ ದುಡಿಸಿಕೊಳ್ಳಬಲ್ಲೆನಾ ಅಂತ ಅಳುಕು ಮನದೊಳಗೆ ಕಾಡುತ್ತಿದೆ. ಇದು ಒಂಥರ ಅಂತರರಾಷ್ಟ್ರೀಯ ಮಟ್ಟದ ಮಹಾನ್ ಕಲಾವಿದನನ್ನು ಸಾಮಾನ್ಯ ನಿರ್ಧೇಶಕನೊಬ್ಬ ಸಂಪೂರ್ಣವಾಗಿ ದುಡಿಸಿಕೊಳ್ಳಲು ಸಾಧ್ಯವೇ ಎನ್ನುವ ಜಿಜ್ಞಾಸೆಯಲ್ಲಿದ್ದೇನೆ. ಇವೆರಡು ಭಾವನೆಗಳು2012 ವರ್ಷದ ಕೊಡುಗೆ ಅಂತ ಅಂದುಕೊಂಡಿದ್ದೇನೆ.  ಹಾಗೆ ಹೊಸ ವರ್ಷದ ಎರಡನೆ ದಿನವಾದ ಇವತ್ತು ನಾನು ತುಂಬಾ ಇಷ್ಟಪಡುವ Caon 70-200 f 2.8 L USM  IS  lens ಮನೆಗೆ ಬಂದಿದೆ

       ಇದೆಲ್ಲವನ್ನು ಮೀರಿ ನನಗೆ ಆಕಾಶದಲ್ಲಿ ತೇಲಾಡುವಂತ ವಿಚಾರವೊಂದು ನನಗೆ ನಿನ್ನೆ ಫೋನ್ ಮೂಲಕ ಬಂದಿದ್ದು.  ಮದ್ಯಾಹ್ನ ಹನ್ನೆರಡು ಗಂಟೆಯ ಹೊತ್ತಿಗೆ ನಾನು ಸಂಪೂರ್ಣ ನಮ್ಮ ಸಿದ್ದ ಸಮಾಧಿ ಯೋಗದ ಆಟಗಳಲ್ಲಿ ಮೈಮರೆತಿದ್ದಾಗ ಒಂದು ಫೋನ್ ಬಂತು.  ಆ ಸಮಯದಲ್ಲಿ ಫೋನ್ ತೆಗೆಯಬಾರದೆಂದು ನಮ್ಮ ಆಟದ ನಿಯಮವಿದ್ದರೂ  ಅದ್ಯಾಕೋ ಅಬ್ಯಾಸಬಲದಿಂದಾಗಿ ಮರೆಯಲ್ಲಿ ಹೋಗಿ ನೋಡಿದರೆ ನಮ್ಮ  Fedaration of Indian photography ಅದ್ಯಕ್ಷರ ಫೋನ್ ನಂಬರ್.  "Hi Shivu, Happy new year, good news for you, you got  EFIAP Distinction from Paris" ಅಂತ ಹೇಳಿದರಲ್ಲ, ಆ ಕ್ಷಣದ ಖುಷಿಯಿಂದಾಗಿ ಆ ಮೈದಾನದಲ್ಲಿ ಅಂಗಾತ ಮಲಗಿಬಿಟ್ಟೆ. ಮೇಲೆ ತಿಳಿ ಆಕಾಶ. ಅದರಲ್ಲಿ ತೇಲುತ್ತಿದ್ದೇನೆ ಅನ್ನಿಸಿತ್ತು. ನನ್ನ ಮಹತ್ವಾಕಾಂಕ್ಷೆಯ ಫೋಟೊಗ್ರಫಿ ಡಿಸ್ಟಿಂಕ್ಷನ್ ಆ ಸಮಯದಲ್ಲಿ ಹಾಗೆ ಬರುತ್ತಿದೆ ಅಂತ ನಾನು ಕನಸು ಮನಸ್ಸಿನಲ್ಲಿಯೂ ನೆನಸಿರಲಿಲ್ಲ.  ಹತ್ತು ನಿಮಿಷ ಹಾಗೆ ಆಕಾಶ ನೋಡುತ್ತ ಅಂಗಾತ ಮಲಗಿದ್ದೆ. ಕಣ್ತೆರೆದು ಆಕಾಶದೊಳಗೆ ಒಂದಾಗುವಾಗಿನ ನನ್ನ ಭಾವನೆಗಳನ್ನು ವರ್ಣಿಸಲು ಇಲ್ಲಿ ಪದಗಳಿಲ್ಲ. ಇದೆಲ್ಲ ಆಗುವಷ್ಟರಲ್ಲಿ ನನ್ನ ಕ್ರೀಡಾ ಪಾರ್ಟನರ್ ನಾನೆಲ್ಲಿ ಹೋದೆ ಅಂತ ಹುಡುಕಿಕೊಂಡು ಬಂದು "ಶಿವು ಏನಾಯ್ತು ಹೀಗೆ ಅಂಗಾತ ಮಲಗಿದ್ದೀರಿ, ಎದ್ದೇಳಿ ನಾವಿಬ್ಬರೂ ಮೂರು ಕಾಲಿನ ಓಟದ ಸ್ಪರ್ಧೆಗೆ ಭಾಗವಹಿಸಬೇಕಿದೆ" ಅಂದಾಗಲೇ ನಾನು ವಾಸ್ತವ ಪ್ರಪಂಚಕ್ಕೆ ಬಂದಿದ್ದು.  ಈ ಮೊದಲು ಜೋಡಿ ಆಟದ ಒಂದು ಸ್ಪರ್ಧೆಯಲ್ಲಿ ಗೆದ್ದಿದ್ದ ನಾವಿಬ್ಬರೂ,  EFIAP Distinction ಬಂದ ಖುಷಿಯಲ್ಲಿ ನಾನು ಸರಿಯಾಗಿ ಭಾಗವಹಿಸದೇ ಮೂರು ಕಾಲಿನ ಓಟದ ಸ್ಪರ್ಧೆಯಲ್ಲಿ ಮೈಮರೆತು ಇಬ್ಬರು ಸೋತಿದ್ದೆವು.

 1]ದಿವಂಗತ ಡಾ.ಜಿ. ಥಾಮಸ್
2]ದಿವಂಗತ ಸಿ. ರಾಜಗೋಪಾಲ್,
3]ದಿವಂಗತ ಎಂ ವೈ ಗೋರ್ಪಡೆ,
4]ದಿವಂಗತ ಒ.ಸಿ ಎಡ್ವರ್ಡ್,
5]ದಿವಂಗತ ಎಸ್.ನಾಗಭೂಷಣ್,6]ಶ್ರೀಯುತ ಟಿ.ಎನ್.ಎ ಪೆರುಮಾಳ್,
7]ಶ್ರೀಯುತ ಬಿ. ಶ್ರೀನಿವಾಸ,
8]ಶ್ರೀಯುತ ಎಚ್.ಸತೀಶ್
9]ಶ್ರೀಯುತ ಎಚ್.ವಿ ಪ್ರವೀಣ್ ಕುಮಾರ್
10]ಶ್ರೀಯುತ ಎಮ್.ಎನ್ ಜಯಕುಮಾರ್,
11]ಶ್ರೀಯುತ ಎಸ್. ತಿಪ್ಪೆಸ್ವಾಮಿ,
12]ಶ್ರೀಯುತ ದಿವಂಗತ ಬಿ.ಎಸ್. ಸುಂದರಂ,
13]ಶ್ರೀಯುತ ದಿವಂಗತ ಡಾ.ಡಿ.ವಿ. ರಾವ್,
14]ಶ್ರೀಯುತ ಜಿ.ಎಸ್.ರವಿ,
15]ಶ್ರೀಯುತ ಸಿ.ಅರ್ ಸತ್ಯನಾರಾಯಣ,
16]ಶ್ರೀಯುತ ಡಾ.ಪ್ರಮೋದ್ ಜಿ. ಶ್ಯಾನುಬಾಗ್,
17]ಶ್ರೀಯುತ ಜಿ.ಎಸ್ ಕೃಷ್ಣಮೂರ್ತಿ,
18]ಶ್ರೀಯುತ ಎ.ಜಿ.ಲಕ್ಷ್ಮಿ ನಾರಾಯಣ

..ಹೀಗೆ ಕರ್ನಾಟಕದ ಮಟ್ಟಿಗೆ ಇದುವರೆಗೆ 18 ಫೋಟೊಗ್ರಫಿ ಕಲಾವಿದರು ಈ EFIAP  ಮನ್ನಣೆಯನ್ನು ಪಡೆದಿದ್ದಾರೆ.  ಹೂವಿನೊಂದಿಗೆ ನಾರು ಎನ್ನುವಂತೆ ನಾನು ಹತ್ತೊಂಬತ್ತನೆಯವನಾಗಿ ಇವರೊಟ್ಟಿಗೆ ಸೇರಿದ್ದಕ್ಕೆ ಸಂತೋಷವಾಗುವುದರ ಜೊತೆಗೆ ಜವಾಬ್ದಾರಿಯೂ ಹೆಚ್ಚಾಗಿದೆ. .

         

     
       ಹೊಸ ವರ್ಷದ ಮೊದಲದಿನವಾದ ಇವತ್ತಿನ ನಮ್ಮ SSY ವಿನೋದದ ಆಟದಲ್ಲಿ ಸಂಫೂರ್ಣ ಮಗುವಿನಂತಾಗಿದ್ದು, ನನ್ನ ಕನಸಿನಕ್ಯಾಮೆರ ಮತ್ತು ಇತರ ಉಪಕರಣಗಳ ಜೊತೆಗೆ Canon 70-200 f2.8 lens ನನ್ನವಾಗಿದ್ದು,  ಮಹತ್ವಾಕಾಂಕ್ಷೆ  EFIAP ಅಂತರರಾಷ್ಟ್ರಿಯ ಮನ್ನಣೆ ಇವತ್ತೆ ದಕ್ಕಿದ್ದು, ಮತ್ತೆ ಇವತ್ತಿನ ಉದಯವಾಣಿ ದಿನಪತ್ರಿಕೆಯ ಸಾಪ್ತಾಹಿಕ ಸಂಪದ ಪುಟದಲ್ಲಿ ಇಳಿಸಂಜೆ ಹೊತ್ತಿನ ಗೋದೂಳಿ ಸಮಯದಲ್ಲಿ ನಾನು ಕ್ಲಿಕ್ಕಿಸಿದ್ದ ಎತ್ತಿನ ಗಾಡಿಯ ಚಿತ್ರವು ಅರ್ಧಪುಟ ಪೂರ ಪ್ರಕಟವಾಗಿದ್ದು.... ಇದೆಲ್ಲವನ್ನು ನಿಮ್ಮೊಂದಿಗೆ ಹಂಚಿಕೊಳ್ಳದೇ ಇರಲಾರೆ ಎನಿಸಿತ್ತು.  ಬಹುಶಃ 2012ರಲ್ಲಿ ಇವೆಲ್ಲಕ್ಕಿಂತ ದೊಡ್ಡ ಕೊಡುಗೆ ಮತ್ತೊಂದು ಇರಲಾರದು ಅನ್ನಿಸಿ ಖುಷಿಯಿಂದ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಮತ್ತೊಮ್ಮೆ ನಿಮಗೆಲ್ಲರಿಗೂ ಹೊಸ ವರ್ಶದ ಶುಭಾಶಯಗಳು.

ಚಿತ್ರ ಮತ್ತು ಲೇಖನ
ಶಿವು.ಕೆ

      

Friday, November 25, 2011

ನನ್ನ ಬಹುದಿನದ ಕನಸು



     ನನ್ನದೇ ಆದ ಫೋಟೊಗ್ರಫಿ ವೆಬ್‍ಸೈಟ್ ಮಾಡಿಕೊಳ್ಳುವ ನನ್ನ ಕನಸು ಇಂದು ನನಸಾಗಿದೆ. ಇವತ್ತಿನಿಂದ ತೆರೆದುಕೊಳ್ಳುವ ಮೂಲಕ ಹೊರಪ್ರಪಂಚಕ್ಕೆ ಲೋಕಾರ್ಪಣೆಯಾಗುತ್ತಿದೆ. ಇದರಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಸೆರೆಹಿಡಿದ ನನ್ನ ಮೆಚ್ಚಿನ ಪಿಕ್ಟೋರಿಯಲ್ ಫೋಟೊಗಳು, ಪಕ್ಷಿಗಳು, ಮ್ಯಾಕ್ರೋ ವಿಭಾಗದಲ್ಲಿ ಚಿಟ್ಟೆಗಳು ಮತ್ತು ಕೀಟಗಳು, ವನ್ಯಜೀವಿ ಪ್ರಪಂಚ, ಕ್ರೀಡಾ ಪಿಕ್ಟೋರಿಯಲ್ ಫೋಟೊ ವಿಭಾಗಗಳು, ಕ್ರಿಯೇಟೀವ್ ಫೋಟೊಗ್ರಫಿ, ಹೀಗೆ ನೂರಾರು ಚಿತ್ರಗಳನ್ನು ನನ್ನ ವೆಬ್‍ಸೈಟಿನ ..........ವಿಭಾಗವನ್ನು ಕ್ಲಿಕ್ಕಿಸಿದರೆ ನೀವೆಲ್ಲ ನೋಡಬಹುದು.

ಮತ್ತೊಂದು ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿದೆ. ಅದು ಮದುವೆ ಇನ್ನಿತರ ಕಾರ್ಯಕ್ರಮಗಳ ಫೋಟೊಗ್ರಫಿಗೆ ಸಂಭಂದಿಸಿದ್ದು. ಇತ್ತೀಚೆಗೆ ಚಾಲ್ತಿಯಲ್ಲಿರುವ[ನಾನು ಈ ಫೋಟೊಗ್ರಫಿಗೆ ಕಳೆದ ಆರುತಿಂಗಳಿಂದ ತೊಡಗಿಕೊಂಡಿದ್ದೇನೆ.  ಈ ಟ್ರೆಂಡು ಕಳೆದ ಮೂರು ವರ್ಷದಿಂದ ಪ್ರಾರಂಭವಾಗಿದೆ]ಕ್ಯಾಂಡಿಡ್ ವೆಡ್ಡಿಂಗ್ ಫೋಟೊಗ್ರಫಿ. ನಮ್ಮ ಅನೇಕ ಗ್ರಾಹಕರು ಇಂಥ ಫೋಟೊಗ್ರಫಿ ಬೇಕೆಂದು ಕೇಳುತ್ತಿದ್ದಾರೆ. ಅದಕ್ಕಾಗಿ ನಾನೂ ಕೂಡ ಅದರಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದೇನೆ.  ಮುಖ್ಯವಾಗಿ ಇಂಥ ಫೋಟೊಗ್ರಫಿಗಾಗಿ ನನ್ನದೇ ಆದ ವೆಬ್ ಸೈಟು ಇರಬೇಕು ಅಂತ ಆಸೆಯಿತ್ತು.  ಅದು ಇವತ್ತು ತೆರೆದುಕೊಂಡಿದೆ.
ನನ್ನ ವೆಬ್ ಸೈಟಿನ ವಿನ್ಯಾಸದ ಕೆಲವು ಚಿತ್ರಗಳು ಇವು.


         

 ವೆಬ್ ಸೈಟಿನ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ: 

http://www.shivuphotography.com

ನೀವೆಲ್ಲ ನೋಡಬೇಕೆನ್ನುವುದು ನನ್ನ ಆಸೆ.  ಖುಷಿಯಾದರೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಪ್ರೋತ್ಸಾಹ ನೀಡಿ.

ಶಿವು.ಕೆ

Friday, October 28, 2011

ಆತ್ಮೀಯ ಬ್ಲಾಗ್ ಗೆಳೆಯರೆ,

ಆತ್ಮೀಯ ಬ್ಲಾಗ್ ಗೆಳೆಯರೆ,

ನನ್ನ ಫೋಟೊಗ್ರಫಿ ಲೇಖನ ಹತ್ತು ಬರಹಕ್ಕೆ ಬಂದ ಪ್ರತಿಕ್ರಿಯೆಗಳ ಬಗ್ಗೆ ನಿಮಗೆ ಕೆಲವೊಂದು ಸ್ಪಷ್ಟವಾದ ವಿಚಾರಗಳನ್ನು ತಿಳಿಸಬೇಕಿದೆ.

ಮೊದಲಿಗೆ ನಾನು ಲೇಖನದ ವಿಚಾರವಾಗಿ ಅನೇಕ ಊರುಗಳ ಹೆಸರುಗಳನ್ನು ಬರೆದು ಅಲ್ಲಿರುವವರಿಗೆ ಇಂಗ್ಲೀಷ್ ಬರುವುದಿಲ್ಲವೆಂದು ಬರೆದಿರುವ ಪ್ರತಿಕ್ರಿಯೆಯ ಬಗ್ಗೆ. ನಾನು ಅನೇಕ ಊರುಗಳ ಹೆಸರನ್ನು ಬರೆದು ಅಲ್ಲಿರುವವರಿಗೆ ಇಂಗ್ಲೀಷ್ ಬರುವುದಿಲ್ಲವೆಂದು ಬರೆದಿದ್ದರ ಹಿಂದೆ ಯಾರನ್ನು ಅವಮಾನಿಸಬೇಕು ಅಂತ ಆಗಲಿ ಖಂಡಿತ ಇಲ್ಲ. ಅದು ಆತುರದಲ್ಲಿ ಬರೆದ ಒಂದು ಪ್ರತಿಕ್ರಿಯೆ. ಹಾಗೆ ಬರೆದಿದ್ದಕ್ಕಾಗಿ ನಾನು ಹೆಸರಿಸಿದ ಊರಿನ ಪ್ರತಿಯೊಬ್ಬರ ಬಳಿ ಈ ಮೂಲಕ ಕ್ಷಮೆಯಾಚಿಸುತ್ತೇನೆ.

ಇದು ನಾನು ಆತುರದಲ್ಲಿ ಬರೆದ ಪ್ರತಿಕ್ರಿಯೆ ಎನ್ನುವುದು ಇದನ್ನು ಓದುತ್ತಾ ಹೋದಂತೆ ನಿಮ್ಮ ಅರಿವಿಗೆ ಬರುತ್ತದೆ.

ನಾನು ಕಳೆದ ನಾಲ್ಕು ವರ್ಷಗಳಿಂದ ಬ್ಲಾಗ್ ಬರೆಯುತ್ತಿದ್ದೇನೆ. ನಾನು ಬರೆಯುವ ಲೇಖನಗಳು ನನ್ನ ಖುಷಿಗೆ ಸಂತೋಷಕ್ಕೆ. ಅದಕ್ಕೆ ಬಜ್ ನಲ್ಲಿ ಬ್ಲಾಗಿನಲ್ಲಿ ಹಾಕಿ ನಿಮ್ಮೊಂದಿಗೆ ಹಂಚಿಕೊಂಡಾಗ ಸಿಗುವ ಪ್ರತಿಕ್ರಿಯೆಗಳಿಂದಾಗಿ ಮತ್ತಷ್ಟು ಬರೆಯಲು ಸ್ಪೂರ್ತಿ ಸಿಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದೇ ರೀತಿ ಫೋಟೊಗ್ರಫಿ ಲೇಖನಗಳನ್ನು ನನ್ನ ಖುಷಿಗಾಗಿಯೇ ಬರೆಯುತ್ತಿದ್ದೇನೆ ಅಷ್ಟೆ.

ಹಾಗೆ ಈ "ಕಲಾತ್ಮಕ ಫೋಟೊಗ್ರಫಿ ಓದುವುದು ಹೇಗೆ" ಲೇಖನವನ್ನು ನಾನು ಕಲಿತ ಪುಟ್ಟ ಫೋಟೊಗ್ರಫಿ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಲುವಾಗಿ ಮಾತ್ರವೇ ಬ್ಲಾಗಿಗೆ ಮತ್ತು ಬಜ್‍ಗೆ ಹಾಕಿದ್ದು. ಎಂದಿನಂತೆ ನನ್ನ ಬ್ಲಾಗ್ ಗೆಳೆಯರು ಅದನ್ನು ಓದಿದರು. ಹೆಬ್ಬಾರರು, ನನ್ನ ಲೇಖನಕ್ಕೆ ಒಂದು ಕಾಮೆಂಟು ಹಾಕಿದರು. ಮಾನವ ಕಟ್ಟಿದ ಮನೆ ಇತ್ಯಾದಿಗಳಿದ್ದಲ್ಲಿ ಅದು ಲ್ಯಾಂಡ್ ಸ್ಕೇಪ್ ಆಗೊಲ್ಲವೆಂದು ಪ್ರತಿಕ್ರಿಯಿಸಿದರು. ಇಲ್ಲಿ ಒಂದು ವಿಷಯವನ್ನು ಸ್ಪಷ್ಟಪಡಿಸಬೇಕು. ಈ ಲೇಖನ ಪೂರ್ತಿಯಾಗಿ ಪಿಕ್ಟೋರಿಯಲ್ ಫೋಟೊಗ್ರಫಿಗೆ ಸಂಭಂದಿಸಿದ್ದು. ಮತ್ತೆ ನನ್ನ ಅನುಭವಕ್ಕೆ ಸಂಭಂದಿಸಿದ್ದು ಮಾತ್ರ. ಅವರು ಅಷ್ಟಕ್ಕೆ ಸೀಮಿತವಾದ ವಿಚಾರವನ್ನು ತೆರೆದಿಟ್ಟಿದ್ದರೆ ಅದಕ್ಕೆ ತಕ್ಕಂತೆ ಪ್ರತಿಕ್ರಿಯೆಯನ್ನು ನೀಡಿದ್ದರೆ ಇಷ್ಟೆಲ್ಲಾ ಅವಾಂತರಗಳಾಗುತ್ತಿರಲಿಲ್ಲ. ನನ್ನ ಲೇಖನ ಅದ್ಬುತವಾಗಿದೆಯೆಂದು ನಾನೆಲ್ಲಿಯೂ ಹೇಳುವುದಿಲ್ಲ. ಅದರಲ್ಲಿರುವ ವಿಚಾರ ಚರ್ಚೆಗೆ ಒಳಪಟ್ಟರೆ ನಾನು ಸೇರಿದಂತೆ ಅನೇಕರಿಗೆ ಹೊಸತನ್ನು ತಿಳಿದುಕೊಳ್ಳುವ ಅವಕಾಶ ಅಂತ ಪ್ರತಿಭಾರಿಯೂ ಅಂದುಕೊಳ್ಳುತ್ತೇನೆ. ಹೀಗಿರುವಾಗ ಅವರು ಪಿಕ್ಟೋರಿಯಲ್ ವಿಚಾರವಾಗಿ ತಿಳಿಸದೆ ಲ್ಯಾಂಡ್ ಸ್ಕೇಪ್ ಬಗ್ಗೆ ತಿಳಿಸಿ ನಾನು ಹೇಳಿದ್ದು ಲ್ಯಾಂಡ್ ಸ್ಕೇಪ್ ಅಲ್ಲವೆಂದು ಪ್ರತಿಕ್ರಿಯೆ ನೀಡಿದರು. ಹಾಗೆ ಕಂಪೋಜಿಷನ್ ವಿಚಾರವಾಗಿಯೂ ಕೂಡ. ಆಗ ಅವರ ಪ್ರತಿಕ್ರಿಯೆಗೆ ನಾನು ಅವರದೇ ಅನುಭವವವನ್ನು ನೆನಪಿಸಿ ಉತ್ತರ ನೀಡಿ ನಿಮ್ಮ ಅನುಭವವನ್ನು ಕೂಡ ಹಂಚಿಕೊಳ್ಳಿ ಅದಕ್ಕಾಗಿ ನೀವು ಇತ್ತೀಚೆಗೆ ತೆಗೆದ ಫೋಟೊಗಳನ್ನು ಹಾಕಿ ಹಂಚಿಕೊಳ್ಳಿ, ಮತ್ತೆ ಎಲ್ಲರೂ ಇಂಗ್ಲೀಷಿನಲ್ಲಿ ಬರೆಯುತ್ತಾರೆ. ನನಗೆ ಸುಲಭವಾಗಿ ಬರೆಯಲು ಗೊತ್ತಿರುವುದು ಕನ್ನಡ ಮಾತ್ರ, ನೀವು ಬರೆದ ಟಿಪ್ಸುಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಮೂರು ಸಲ ಓದಬೇಕಾಯ್ತು. ಹಾಗೆ ನನ್ನಂತೆ ನೂರಾರು ಸಾವಿರಾರು ಛಾಯಾಗ್ರಾಹಕರಿಗೆ ಇಂಗ್ಲೀಷ್ ಬರುವುದಿಲ್ಲ ಅವರೊಂದಿಗೆ ಈ ವಿಚಾರವನ್ನು ಹಂಚಿಕೊಳ್ಳಲಿಕ್ಕಾಗಿ ಬರೆಯುತ್ತಿದ್ದೇನೆ ಅಂತ ಹೇಳಿ ಕೆಲವು ಊರುಗಳ ಹೆಸರುಗಳನ್ನು ಬರೆದುಬಿಟ್ಟೆ. ಆ ಕ್ಷಣದಲ್ಲಿ ನನ್ನ ನೆನಪಿಗೆ ಬಂದಿದ್ದು ನನ್ನ ಗೆಳೆಯರ ಊರುಗಳು ಆದ್ದರಿಂದ ಆತುರದಲ್ಲಿ ಬರೆದುಬಿಟ್ಟೆನೇ ವಿನ: ಅದರ ಹಿಂದೆ ಯಾವ ಕೆಟ್ಟ ಉದ್ದೇಶವಾಗಲಿ ಅಥವ ಯಾರನ್ನಾದರೂ ಅವಮಾನಿಸಬೇಕೆಂದಾಗಲಿ ಅಲ್ಲ. ಹಳ್ಳಿಯಲ್ಲೇ ಇದ್ದು ಚೆನ್ನಾಗಿ ಓದಿ ಒಳ್ಳೆಯ ಸಾಪ್ಟ್ ವೇರು, ವಿಜ್ಞಾನಿಗಳು, ದೊಡ್ಡ ದೊಡ್ಡ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದುಕೊಂಡು ಹವ್ಯಾಸವಾಗಿ ಫೋಟೊಗ್ರಫಿ ಮಾಡುತ್ತಿರುವವರು, ಚೆನ್ನಾಗಿ ಓದಿ ಹಳ್ಳಿಯಲ್ಲೇ ಕೃಷಿಯನ್ನು ಮಾಡುತ್ತಾ ಅತ್ಯುತ್ತಮ ಇಂಗ್ಲೀಷ್ ಲೇಖನಗಳನ್ನು ಬರೆಯುತ್ತಾ ಫೋಟೊಗ್ರಫಿ ಮಾಡುತ್ತಿರುವವರ ಮೇಲೆ ನನಗೆ ತುಂಬಾ ಗೌರವವಿದೆ. ನಮ್ಮ ಬದುಕಿಗೆ ಅವರೆಲ್ಲಾ ಮಾದರಿಯಾಗಿದ್ದಾರೆ. ಈ ಕಾರಣಕ್ಕೆ ಕಳೆದ ವರ್ಷ ಮುತ್ಮರ್ಡು ಊರು ಮತ್ತು ಊರಿನ ಹಿರಿಯ ಸಾಧಕರ ಬಗ್ಗೆ ನನ್ನ ಬ್ಲಾಗಿನಲ್ಲಿ ಲೇಖನವನ್ನು ಬರೆದಿದ್ದೇನೆ. ಆದ್ರೆ ಸತ್ಯ ಸಂಗತಿಯೆಂದರೆ ಈಗಲೂ ನಮ್ಮ ಬೆಂಗಳೂರಿನಲ್ಲಿಯೇ ಇಂಗ್ಲೀಷ್ ಬರದ ನೂರಾರು ಛಾಯಾಗ್ರಾಹಕರಿದ್ದಾರೆ, ಅದೇ ರೀತಿ ಕರ್ನಾಟಕದಾದ್ಯಂತ ಇರುವ ಸಾವಿರಾರು ಛಾಯಾಗ್ರಾಹಕರಲ್ಲಿ ನಾಲ್ಕು ಜನರಿಗೆ ಇಂಗ್ಲೀಷ್ ಬಂದರೆ ಇನ್ನೂ ನಲವತ್ತು ಜನರಿಗೆ ಇಂಗ್ಲೀಷ್ ಬರುವುದಿಲ್ಲವೆನ್ನುವುದು ಸತ್ಯಸಂಗತಿ. ನಾನು ಈ ಗುಂಪಿನಲ್ಲಿ ಒಬ್ಬನಾಗಿದ್ದು ಆ ಕ್ಷಣದಲ್ಲಿ ನನ್ನ ಅಲೋಚನೆಯೂ ಅದೇ ಆಗಿದ್ದರಿಂದ ಹಾಗೆ ಉತ್ತರಿಸಿದ್ದು ಬಿಟ್ಟರೆ ಇದರ ಹಿಂದೆ ಇನ್ಯಾವ ಕೆಟ್ಟ ಉದ್ದೇಶವು ಇರಲಿಲ್ಲ. ಇದೇ ಸಮಯಕ್ಕೆ ಹೆಬ್ಬಾರರು ತಮ್ಮ ಫೋಟೊಗ್ರಫಿ ಅನುಭವವನ್ನು ಹಂಚಿಕೊಳ್ಳುವ ಬದಲು "ಹಳ್ಳಿಜನರಿಗೆ ಇಂಗ್ಲೀಷ್ ಬರುವುದಿಲ್ಲವೆಂದು ಏಕೆ ಅಂದುಕೊಳ್ಳುತ್ತಿ" ನಿನಗೊಬ್ಬನಿಗೆ ಅರ್ಥವಾಯಿತಲ್ಲ ಅಷ್ಟು ಸಾಕು" ಅಂತ ವಿಷಯವನ್ನು ತಿರುಗಿಸಿದರಲ್ಲ. ಅಲ್ಲಿಗೆ ಇಡೀ ಫೋಟೊಗ್ರಫಿ ಲೇಖನದ ಅಭಿಪ್ರಾಯಗಳಿಗೆ ತಿರುವುಗಳು ಬಂದುಬಿಟ್ಟಿತ್ತು. ನಾನು ಹೆಸರಿಸಿದ್ದ ಊರುಗಳಲ್ಲಿರುವ ಗೆಳೆಯರಿಗೆ ಸಹಜವಾಗಿ ಈ ವಿಚಾರವಾಗಿ ಅಸಮಧಾನ ಶುರುವಾಗಿತ್ತು. ಒಬ್ಬರು ನಾನು ಬರೆದಿದ್ದು ತಪ್ಪು ಎಂದು ಇಂಗ್ಲೀಷಿನಲ್ಲಿ ಕಾಮೆಂಟ್ ಹಾಕಿದರು. ಅನೇಕರು ಬೇಸರ ಮಾಡಿಕೊಂಡಿದ್ದರು. ಅಷ್ಟರಲ್ಲಿ ಹೆಬ್ಬಾರ್ ಶಿಷ್ಯನೊಬ್ಬ ಅದೆಲ್ಲಿದ್ದನೋ ಬ್ಲಾಗಿಗೆ ಬಂದು ತುಂಬಾ ಕೆಟ್ಟದಾಗಿ ಪೇಜುಗಟ್ಟಲೆ ಕಾಮೆಂಟು ಹಾಕಿದ್ದ. ಅವನು ಏನು ಕೇಳುತಿದ್ದಾನೆ ಅಂತ ಅರ್ಥವಾಗಲಿಲ್ಲ. ಹೆಬ್ಬಾರರಿಗೆ ಅವಮಾನವಾಗಿದೆ ಅಂತ ಬೇರೆ ಹೇಳಿದ್ದ. ಹಾಗೆ ನೋಡಿದರೆ ಅವನು ನನಗೆ ತುಂಬಾ ಗೊತ್ತಿರುವವನೇ. ಬಹುಶಃ ಅವನ ಪ್ರತಿಕ್ರಿಯೆಯಲ್ಲಿನ ವಿಚಾರಗಳನ್ನು ನೋಡಿದಾಗ ಫೋಟೊಗ್ರಫಿ ಸಾಧನೆಯ ವೃತ್ತಿಮತ್ಸರವನ್ನಿಟ್ಟುಕೊಂಡಿದ್ದಾನೆಂದು ತಿಳಿಯಿತು. "ಶಿವು ನನ್ನನ್ನು ಪಿಕ್ಟೋರಿಯಲ್ ಫೋಟೊಗ್ರಫಿಗೆ ಎಲ್ಲಿಗೂ ಕರೆದುಕೊಂಡು ಹೋಗುವುದಿಲ್ಲ" ನನ್ನ ಇತರ ಫೋಟೊಗ್ರಫಿ ಗೆಳೆಯರ ಬಳಿ ಹೇಳಿದ್ದು ನೆನಪಾಗಿ ಅದರ ದ್ವೇಷ ಹೀಗೆ ಹೊರಬಂದಿರಬಹುದು ಅಂದುಕೊಂಡು ಅವನ ಎಲ್ಲಾ ಪ್ರಶ್ನೆಗಳಿಗೂ ಸಮಾಧಾನವಾಗಿಯೇ ಪ್ರತಿಕ್ರಿಯಿಸಿದ್ದೆ. ಇದಾದ ನಂತರ ಹೆಬ್ಬಾರರಿಗೆ ಮೇಲ್ ಮಾಡಿ ನೋಡಿ ಎಂಥ ಕಾಮೆಂಟುಗಳನ್ನು ಹಾಕುತ್ತಿದ್ದಾನೆ ಅಂತ ಕೇಳಿದಾಗ "ಅವನಿಗೆ ಹೇಳಿದ್ದೇನೆ ಈ ವಿಷಯವನ್ನು ಇಲ್ಲಿಗೆ ಬಿಡಿ" ಅಂತ ನನಗೆ ರಿಪ್ಲೆ ಮಾಡಿದರು. ನಾನು ಸುಮ್ಮನಾದೆ. ಅಲ್ಲಿಗೆ ಎಲ್ಲಾ ಮುಗಿಯಿತು ಅಂದುಕೊಳ್ಳುವಷ್ಟರಲ್ಲಿ ಮತ್ತೆ ಹೊಸದೊಂದು ಕಾಮೆಂಟು ಹಾಕಿದ್ದ. ಎರಡನೆ ಭಾರಿ ಹಾಕಿದ ಕಾಮೆಂಟಿನಲ್ಲಿ ಅವನು ಏನು ಬರೆದಿದ್ದಾನೆ ಅಂತ ಅರ್ಥವಾಗಲಿಲ್ಲ. ಅವನು ಫೋಟೊಗ್ರಫಿ ಬಗ್ಗೆ ಮಾತಾಡುತ್ತಿದ್ದಾನೋ, ಅಥವ ನನ್ನ ವಿಚಾರವನ್ನು ಹೇಳುತ್ತಿದ್ದಾನೋ ಗೊತ್ತಾಗಲಿಲ್ಲ ಆದ್ರೆ ಇಡೀ ಪ್ರತಿಕ್ರಿಯೆಯಲ್ಲಿ ಅಸೂಯೆ ಅವರಿಸಿತ್ತು. ಹೆಬ್ಬಾರ್ ಪ್ರತಿಕ್ರಿಯೆ ಪಡೆದೆ ಇದೆಲ್ಲವನ್ನು ಬರೆದಿದ್ದು ಅಂತ ಬೇರೆ ಹೇಳಿದ್ದ. ತಕ್ಷಣ ಹೆಬ್ಬಾರರಿಗೆ ಮತ್ತೊಂದು ಮೇಲ್ ಮಾಡಿ ಇದೆಲ್ಲ ಏನ್ ಸಾರ್? ಅಂದೆ. ಅದಕ್ಕೆ ಅವರು ಉತ್ತರಿಸದೇ ಸುಮ್ಮನಾದರು. ಆಗ ಎಲ್ಲಾ ಗೊತ್ತಾಯಿತು. ಇದೆಲ್ಲಾ ಪಕ್ಕಾ ವ್ಯವಸ್ಥಿತವಾಗಿರುವ ವಿಚಾರವೆಂದು. ಎರಡು ದಿನ ಅವನು ಬರೆದ ಅಸೂಯೆಯನ್ನು ನಮ್ಮ ಬ್ಲಾಗ್ ಗೆಳೆಯರು ಓದಿದರು. ಇವರ ಉದ್ದೇಶವೂ ಅದೇ ಆಗಿತ್ತು ಅನ್ನಿಸುತ್ತೆ. ಯಾಕೋ ತುಂಬಾ ಅವಮಾನವಾದಂತೆ ಆಯಿತು. ಒಂದು ಫೋಟೊಗ್ರಫಿ ಲೇಖನದ ವಿಚಾರ ಅರೋಗ್ಯಪೂರ್ಣ ಚರ್ಚೆಯಾಗುವುದು ಹೀಗೆ ದಾರಿ ತಪ್ಪಿ ನನಗೆ ಈ ಮಟ್ಟಿನ ಅವಮಾನವಾಗುವುದಕ್ಕೆ ಅದಕ್ಕೆ ಮೊದಲು ನನ್ನಿಂದಾದ ತಪ್ಪಿಗೆ ಕಾರಣ ನೀವು, ನನ್ನನ್ನು ಸುಮ್ಮನಿರಿಸಿ ನಿಮ್ಮ ಶಿಷ್ಯ ಬರೆದ ಎರಡನೇ ಪ್ರತಿಕ್ರಿಯೆಯನ್ನು ನೋಡುತ್ತಾ ಎಂಜಾಯ್ ಮಾಡಿದ್ರಿ" ಇದರಿಂದ ನನಗೆ ಅವಮಾನವಾಗಿದೆ. ನನ್ನ ಬರಹ ಮತ್ತು ಲೇಖನಗಳು ಪರೋಕ್ಷವಾಗಿ ಕಳಪೆ ಎನ್ನುವಂತೆ ಮಾತುಗಳು, ಅದಕ್ಕಾಗಿ ನನ್ನೆಲ್ಲಾ ಬಜ್ ಮತ್ತು ಬ್ಲಾಗ್ ಲೇಖನಗಳನ್ನು ಡಿಲಿಟ್ ಮಾಡುತ್ತಿದ್ದೇನೆ. ಇದರಿಂದ ನಿಮಗೆ ತೃಪ್ತಿಯಾದರೆ ಸಾಕು. ನನ್ನೊಳಗೆ ಆತ್ಮಾವಲೋಕನವಾಗಿ ಮತ್ತೆ ನನ್ನ ಬರವಣಿಗೆ ಚೆನ್ನಾಗಿದೆಯೆನಿಸುವವರೆಗೆ ನಾನು ಇಲ್ಲಿ ಬರೆಯುವುದಿಲ್ಲ." ಅಂತ ಒಂದು ದೀರ್ಘವಾದ್ ಪತ್ರವನ್ನು ಬರೆದು ಅವರಿಗೆ ಮೇಲ್ ಮಾಡಿ ನನ್ನಲ್ಲಾ ಬಜ್ ಮತ್ತು ಬ್ಲಾಗಿನ ಒಂದು ವರ್ಷದ ಲೇಖನಗಳನ್ನು ಡಿಲಿಟ್ ಮಾಡಿದ್ದೆ. ಅವರಿಂದ ಇನ್ನೂ ಉತ್ತರ ಬರಲಿಲ್ಲ.

ಮೂರು ದಿನ ಕಳೆಯಿತು. ಯಾವುದೇ ಕಾರಣಕ್ಕೆ ಗೆಳೆಯರೊಬ್ಬರಿಗೆ ಫೋನ್ ಮಾಡಿ ಸಹಜವಾಗಿ ಮಾತಾಡುವಾಗ ಪ್ರತಿಕ್ರಿಯೆಯಲ್ಲಿ ಬರೆದ ಊರುಗಳ ವಿಚಾರವಾಗಿ ತುಂಬಾ ಜನರು ಬೇಜಾರು ಮಾಡಿಕೊಂಡಿದ್ದಾರೆ ಅಂದಾಗ ಅವರಿಗೆ ಇದೆಲ್ಲವನ್ನು ವಿವರಿಸಿ ಹೇಳಿ ಸಾರಿ ಕೇಳಿದೆ. ಅವರು ಅರ್ಥಮಾಡಿಕೊಂಡರು. ಆದರೆ ಮರುಕ್ಷಣದಲ್ಲಿ ಇದು ಎಲ್ಲರ ಮನಸ್ಸಲ್ಲಿ ಎಷ್ಟು ಗಾಢವಾಗಿ ಅವರಿಗೆ ಬೇಸರ ತಂದಿರಬಹುದು ಅಂತ ಅಂದುಕೊಂಡಾಗ ಆತುರದಲ್ಲಿ ಮಾಡಿದ ತಪ್ಪು ನನ್ನನ್ನು ಕಾಡತೊಡಗಿತು. ಇನ್ನು ಸುಮ್ಮನಿರಲಾಗಲಿಲ್ಲ. ಮತ್ತೆ ಎಲ್ಲರಿಗೂ ಫೋನ್ ಮಾಡಿ ಇದೆಲ್ಲವನ್ನು ಅರ್ಥಮಾಡಿಸಲು ಸಾಧ್ಯವಿಲ್ಲವಲ್ಲ. ಅದಕ್ಕೆ ನೇರವಾಗಿ ಎಲ್ಲಿ ಆ ಪ್ರತಿಕ್ರಿಯೆಯನ್ನು ಬರೆದಿದ್ದೆನೋ ಅಲ್ಲಿಯೇ ಕ್ಷಮೆಯಾಚಿಸುವುದು ಒಳ್ಳೆಯದು ಅಂದುಕೊಂಡು ಇದೆಲ್ಲವನ್ನು ಬರೆದಿದ್ದೇನೆ. ಇದೆಲ್ಲ ಆಗಿರುವ ಸಂಗತಿ. ಇದೆಲ್ಲವನ್ನು ಬರೆಯುವ ಮೂಲಕ ನನ್ನೊಳಗಿನ ದುಗಡವನ್ನು ಹೊರಹಾಕಿದ್ದೇನೆ. ಹಾಗೆ ಇದಿಷ್ಟನ್ನು ವಿವರಿಸದಿದ್ದಲ್ಲಿ ಮತ್ತೆ ಈ ವಿಚಾರ ಬೇರೆ ಅರ್ಥವನ್ನು ಪಡೆದುಕೊಳ್ಳುವ ಅವಕಾಶವಿರುವುದರಿಂದ ಇದೆಲ್ಲ ಬರೆಯಬೇಕಾಯಿತು. ಹಾಗೆ ಯಾರಮೇಲು ತಪ್ಪು ಹೊರಿಸುತಿಲ್ಲ. ನನ್ನೊಳಗೆ ಆಗಿರುವ ತಪ್ಪುಗಳು ಕಾಡತೊಡಗಿದರಿಂದ ಇದೆಲ್ಲವನ್ನು ಬರೆಯಬೇಕಾಯ್ತು. ಮುಂದೆ ಇದನ್ನು ಮತ್ತೆ ಮುಂದುವರಿಸಿಕೊಂಡು ಹೋಗಲು ನನಗಿಷ್ಟವಿಲ್ಲ. ಈ ಲೇಖನದಿಂದ ಯಾರಿಗಾದರೂ ಬೇಸರವಾದಲ್ಲಿ ಅದಕ್ಕೂ ಮೊದಲೇ ಕ್ಷಮೆ ಕೇಳಿಬಿಡುತ್ತೇನೆ.

ಪ್ರೀತಿಯಿಂದ..

ಶಿವು.ಕೆ

Wednesday, October 19, 2011

ಕಲಾತ್ಮಕ ಫೋಟೊವನ್ನು ಓದುವುದು ಹೇಗೆ?- ಫೋಟೊಗ್ರಫಿ ಲೇಖನ ೧೦



          ಹಿಂದಿನ ಲೇಖನದಲ್ಲಿ [ಫೋಟೊಗ್ರಫಿ ಲೇಖನ-೯] ಮೇಲುನೋಟಕ್ಕೆ ಫೋಟೊಗಳನ್ನು ಓದುವುದನ್ನು ಕಲಿತಿದ್ದೀರಿ. ಈಗ ಒಂದು ಫೋಟೊವನ್ನು ಆಳವಾಗಿ  ಓದುವುದು ಅಥವ ಕಲಾತ್ಮಕವಾಗಿ ಓದುವುದು ಹೇಗೆ? ಎನ್ನುವುದನ್ನು ಕಲಿಯೋಣ.

      ನೀವು  ಚಿಕ್ಕಂದಿನಲ್ಲಿ ಕನ್ನಡ ಇಂಗ್ಲೀಷ್, ಗಣಿತ, ವಿಜ್ಞಾನ ಇತ್ಯಾದಿ ವಿಷಯಗಳನ್ನು ಓದಿದ್ದೀರಿ ತಾನೆ.  ಕೇವಲ ಓದಿಕೊಂಡು ಹೋಗಿದ್ದಕ್ಕೆ ಮಾತ್ರವೇ ಪಾಸಾಗಿ ಬಿಟ್ರಾ ಅಥವ ಇನ್ನೇನಾದ್ರು ಮಾಡಿದ್ರಾ ಅಂತ ಕೇಳಿದ್ರೆ ತಕ್ಷಣ  ನಿಮಗೆ ಉತ್ತರ ಕೊಡಲಾಗುವುದಿಲ್ಲ.  ಉತ್ತರವೇನು ಗೊತ್ತಾ?  ನೀವು ಓದುವುದರ ಜೊತೆ ಜೊತೆಗೆ ಬರೆದು ಬರೆದು ಚೆನ್ನಾಗಿ ಅಬ್ಯಾಸ ಮಾಡಿದ್ದೀರಿ. ಹಾಗೇ ಈ ಕಲಾತ್ಮಕ ಫೋಟೊ ಓದುವುದನ್ನು ಕಲಿಯುವುದಕ್ಕೆ ಮೊದಲು ನಾವು ಬರೆದು ಅಭ್ಯಾಸ ಮಾಡಲೇ ಬೇಕು.  ಫೋಟೊಗ್ರಫಿಯಲ್ಲಿ ಬರೆಯುವುದು ಅಂದರೇನು ಅಂತ ಮತ್ತೆ ನಿಮ್ಮ ಹೊಸ ಪ್ರಶ್ನೆ ಮೂಡಿತಲ್ಲವೇ? ಅದನ್ನು ಮತ್ತಷ್ಟು ಸರಳವಾಗಿ ವಿವರಿಸಲು ಪ್ರಯತ್ನಿಸುತ್ತೇನೆ.

      ನಮ್ಮ ದೇಶದಲ್ಲಿ ಕ್ರಿಕೆಟ್ ಆಟ ಪ್ರಸಿದ್ಧ. ನೀವು ಅದನ್ನು ಟಿವಿಯಲ್ಲಿ, ಅಥವ ಅಂತರರಾಷ್ಟ್ರೀಯ ಮಟ್ಟದ ದೊಡ್ಡ ಮೈದಾನದಲ್ಲಿ ನೇರವಾಗಿ ನೋಡಿರುತ್ತೀರಿ.   ನಮ್ಮ ದೇಶದ ಆಟಗಾರರು ಬಾರಿಸುವ ಆರು, ನಾಲ್ಕು, ಮೇಲೆ ಹಾರಿ ಬಿದ್ದು ಹಿಡಿಯುವ ಕ್ಯಾಚ್, ಅದ್ಬುತ ಫೀಲ್ಡಿಂಗ್, ಬ್ಯಾಟಿಂಗ್‍ನಲ್ಲಿ ದ್ರಾವಿಡ್‍ನ ಮತ್ತು ಲಕ್ಷಣ್ ಕಲಾತ್ಮಕತೆಯ ರಕ್ಷಣಾತ್ಮಕ ಆಟ, ಅವರು ಹೊಡೆಯುವ ಕಲಾತ್ಮಕ ನಾಲ್ಕು ಮತ್ತು ಆರು ರನ್ನುಗಳು, ವಿರಾಟ್ ಕೋಹ್ಲಿ ಚತುರತೆಯಿಂದ ಕದಿಯುವ ಒಂದೊಂದೇ ರನ್ನುಗಳು ಇತ್ಯಾದಿಗಳನ್ನು ನೀವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಥವ ಯಾವುದೇ ದೊಡ್ಡ ಅಂತರರಾಷ್ಟ್ರೀಯ ಮೈದಾನದಲ್ಲಿ  ದೊಡ್ಡ ಹುಲ್ಲು ಹಾಸಿನ ಮೈದಾನದ ಸುತ್ತ ಪ್ರೇಕ್ಷಕರು ಕುಳಿತುಕೊಳ್ಳುವ ಒಂದು ಜಾಗದಲ್ಲಿ ಕುಳಿತು ನೋಡಿ ಖುಷಿಪಟ್ಟಿದ್ದೀರಿ ಅಲ್ವಾ...ಒಮ್ಮೆ ನೀವು ಸಚಿನ್ ಅಥವ ಸೆವ್ಹಾಗ್ ನಂತೆ ಬ್ಯಾಟ್ ಹಿಡಿದು ಇದೇ ಮೈದಾನದಲ್ಲಿ ನಾಲ್ಕು ಆರು ಬಾರಿಸಿದರೆ!  ದ್ರಾವಿಡ್‍ನಂತೆ ರಕ್ಷಣಾತ್ಮಕವಾಗಿ ಆಡಿದರೆ! ಹೇಗಿರಬಹುದು?  ನೀವೊಬ್ಬ ಅದ್ಬುತ ಕ್ರೀಡಾಳುವಾಗಿರುತ್ತೀರಿ ಅಲ್ವಾ...ಅದರ ಮಜವೇ ಬೇರೆ. ನಿಮ್ಮನ್ನು ಯಾರಾದರೂ ಪ್ರಶ್ನಿಸಿದರೆ ನಿಮ್ಮ ಆಟದ ಬಗ್ಗೆ ಆದರ ಅನುಭವದ ಬಗ್ಗೆ ಚೆನ್ನಾಗಿ ವಿವರಿಸುತ್ತೀರಿ ತಾನೆ?

      ಮತ್ತೆ ಫೋಟೊಗ್ರಫಿಯ ವಿಚಾರಕ್ಕೆ ಬರೋಣ. ಇಲ್ಲಿ ಫೋಟೊ ಓದುವುದಕ್ಕೆ ಮೊದಲು ಬರೆಯುವುದು ಅಂದರೆ ಮತ್ತೇನು ಅಲ್ಲ ನೀವು ಫೋಟೊಗ್ರಫಿ ಎನ್ನುವ ಮೈದಾನದಲ್ಲಿ ಬರೆಯುವ ಆಟವಾಡಲೇ ಬೇಕು.  ಬರೆಯುತ್ತಾ ಬರೆಯುತ್ತಾ..ನೀವೊಂದು ದಿನ ನಿಮಗೆ ಗೊತ್ತಿಲ್ಲದಂತೆ ಸಚಿನ್, ದ್ರಾವಿಡ್, ಸೆವ್ಹಾಗ್ ಆಗಬಹುದು.

    ಇದೆಲ್ಲಾ ಕೇಳಲು ತುಂಬಾ ಚೆನ್ನಾಗಿದೆ.  ಆದ್ರೆ ಇದರಲ್ಲಿ ಬರೆಯುವುದು ಅಥವ ಆಟವಾಡುವುದು ಅಂತ ಕೂಡ ಇದೆ ಇವತ್ತೆ ಗೊತ್ತಾಗಿದ್ದು ಇದು ಕೂಡ ಕೇಳಲು ತುಂಬಾ ಚೆನ್ನಾಗಿದೆ.  ಆದ್ರೆ ಈ ಫೋಟೊಗ್ರಫಿಯನ್ನು ಹೇಗೆ ಬರೆಯಬೇಕು ಹಾಗೂ ಅದರ ವಿಷಯಗಳೇನು? ಹೇಗಿರಬಹುದು? ಅದರ ಪಾಠಗಳು ಹೇಗಿರಬಹುದು? ಅಂತ ಮತ್ತೆ ನಿಮ್ಮಲ್ಲಿ ಪ್ರಶ್ನೆಗಳು?

    ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲು ಕೆಲವು ಫೋಟೊಗಳನ್ನು ನೋಡೋಣ. ಇಲ್ಲಿರುವ ಎರಡು ಲ್ಯಾಂಡ್ ಸ್ಕೇಪ್ ಫೋಟೊಗಳನ್ನು ಒಮ್ಮೆ ನೋಡಿ. ಅವುಗಳಲ್ಲಿನ ಕಲಾತ್ಮಕ ಗುಣಗಳನ್ನು ನೋಡೋಣ.

    ವಿರಾಜಪೇಟೆ ರಸ್ತೆ ಬದಿಯ ಬತ್ತದ ಗದ್ದೆಯ ಲ್ಯಾಂಡ್ ಸ್ಕೇಪ್


    ಮೊದಲ ಫೋಟೊ ಮಡಿಕೇರಿಯ ವಿರಾಜಪೇಟೆಯಲ್ಲಿ ಕ್ಲಿಕ್ಕಿಸಿದ್ದು. ಇನ್ನೊಂದು ಮುನ್ನಾರಿನಲ್ಲಿ ಕ್ಲಿಕ್ಕಿಸಿದ್ದು.  ಇವೆರಡು ಫೋಟೊಗಳಲ್ಲಿ ಕೆಲವು ಸಾಮ್ಯತೆಗಳಿವೆ.  ಅವುಗಳನ್ನು ಮೊದಲು ನೋಡೋಣ. ಎರಡೂ ಫೋಟೊಗಳಲ್ಲಿ ನೆಲಮಟ್ಟದಲ್ಲಿ ಹಚ್ಚ ಹಸಿರಿದೆ. ಹಿತವಾದ ವಾತಾವರಣವಿದೆ. ಕಂಪೋಜಿಷನ್ ಸರಿಯಾಗಿದೆ. ಬೆಳಕು ಪೂರ್ತಿ ಚೆನ್ನಾಗಿದೆ. ಇವೆರಡು ಫೋಟೊಗ್ರಫಿಗೆ ಬೇಕಾದ ತಾಂತ್ರಿಕ ಅಂಶಗಳು ತುಂಬಾ ಚೆನ್ನಾಗಿವೆ. ಇವೆರಡು ಪಿಕ್ಟೋರಿಯಲ್ ವಿಭಾಗದ ಲ್ಯಾಂಡ್ ಸ್ಕೇಪ್ ವಿಭಾಗಕ್ಕೆ ಸೇರ್ಪಡೆಯಾಗುತ್ತವೆ.  ಆದರೂ ಎರಡೂ ಫೋಟೊಗಳು ಬೇರೆ ಬೇರೆ.  ಈಗ ಮೊದಲ ವಿರಾಜಪೇಟೆ ಫೋಟೊ ನೋಡೋಣ. ಇದನ್ನು ಒಮ್ಮೆ ನೋಡಿದರೆ ಎಲ್ಲರಿಗೂ ಇಷ್ಟವಾಗುತ್ತದೆ.  ಅಲ್ಲಿಂದ ನಿಮ್ಮ ಕಣ್ಣಿನ ದೃಷ್ಟಿಯನ್ನು ಬದಲಿಸಿ ಬೇರೆ ಏನನ್ನೋ ನೋಡಿ. ಇದು ಖಂಡಿತ ಮರೆತುಹೋಗುತ್ತದೆ.  ಯಾಕೆ ಅಂತ ಕೇಳಿದರೆ ಅದರಲ್ಲಿ ಬೇರೆ ವಿಶೇಷವೇನಿಲ್ಲ. ಯೋಗರಾಜ ಭಟ್ಟರ ಹಾಡಿನಂತೆ ಆ ಕ್ಷಣದ ಖುಷಿಯಷ್ಟೆ.

    ಮತ್ತೊಂದು ಮುನ್ನಾರಿನಲ್ಲಿ ಕ್ಲಿಕ್ಕಿಸಿದ ಚಿತ್ರವನ್ನು ನೋಡಿ. ಅದರಲ್ಲೂ ಎಲ್ಲಾ ಪಿಕ್ಟೋರಿಯಲ್ ಗುಣಗಳಿವೆ. ಅರೆರೆ!  ನಾನು ಪಿಕ್ಟೋರಿಯಲ್ ಎನ್ನುವ ವಿಚಾರವನ್ನೆ ನಿಮಗೆ ತಿಳಿಸದೆ ನೇರವಾಗಿ ಇವೆರಡು ಚಿತ್ರಗಳನ್ನು ವಿಶ್ಲೇಷಿಸುತ್ತಿದ್ದೆನಲ್ಲ...ಈ ಹಿಂದೆ ವಿವರಿಸಿದ್ದರೂ ಇಲ್ಲಿ ಸಣ್ಣದಾಗಿ ಪಿಕ್ಟೋರಿಯಲ್ ನಿಯಮಗಳನ್ನು ನಿಮಗಾಗಿ ಹೇಳಿಬಿಡುತ್ತೇನೆ.

ಪಿಕ್ಟೋರಿಯಲ್ ಎಂದರೆ ಕನ್ನಡದಲ್ಲಿ ಭಾವ ಅಭಿವ್ಯಂಜಕ ಛಾಯಾಚಿತ್ರಕಲೆ ಅಂತ ಅರ್ಥ.

           ಭಾವ ಅಭಿವ್ಯಂಜಕ  ಅಂದರೆ ಭಾವನೆಗಳನ್ನು ನಿಮ್ಮ ಛಾಯಾಚಿತ್ರಗಳ ಮೂಲಕ ಅಭಿವ್ಯಕ್ತಿಗೊಳಿಸುವುದು..ಅದರಲ್ಲಿ ಬಿಂಬಿಸುವುದು. ಎಲ್ಲರಿಗೂ ಕಾಣುವಂತೆ ಮಾಡುವುದು ಅಂತ ಅರ್ಥ.

          ಪಿಕ್ಟೋರಿಯಲ್ ಫೋಟೊಗ್ರಫಿಯಲ್ಲಿ ಈ ಕೆಳಗಿನ ಅಂಶಗಳು ಇರಬೇಕು

          ೧]"ಒಹ್! ಎಷ್ಟು ಚೆನ್ನಾಗಿದೆ"  ಅಂತ ಒಂದು ಫೋಟೊ ನಿಮ್ಮನ್ನು ಇಂಪ್ರೆಸ್ ಮಾಡುವಂತಿರಬೇಕು

          ೨]ಹಾಗೆ ಆ ಫೋಟೊದೊಳಗೆ ಇರುವ ವಸ್ತು ನಿಮಗೆ ಸುಲಭವಾಗಿ ಅರ್ಥವಾಗುವಂತಿರಬೇಕು.  ನಿಮಗೆ ಮಾತ್ರವಲ್ಲ. ಪ್ರಪಂಚದ ಪ್ರತಿಯೊಬ್ಬರಿಗೂ ಸುಲಭವಾಗಿ ಅರ್ಥವಾಗಿಬಿಡಬೇಕು.

          ೩]ಮತ್ತೆ ಫೋಟೊದಲ್ಲಿರುವ ವಸ್ತುವಿನ ಕಂಪೋಸಿಂಗ್ ಸರಿಯಾಗಿರಬೇಕು.  ಈ ಕಂಪೋಸಿಂಗ್ ಅಂದರೆ ಏನು? ಫೋಟೊದಲ್ಲಿರುವ ಆಸಕ್ತಿಕರ ವಸ್ತು ಮದ್ಯದಲ್ಲಿರಬಾರದು. ಪೋಟೊ ಪ್ರೇಮಿನ ಚೌಕಟ್ಟಿನ ಮೂರನೆ ಒಂದು ಭಾಗದಲ್ಲಿರಬೇಕು.

          ೪]ಸಾಧ್ಯವಾದಲ್ಲಿ ನಿಮ್ಮ ಫೋಟೊದೊಳಗಿನ ವಸ್ತು ಉತ್ತಮ ಬೆಳಕಿನ ವಿನ್ಯಾಸವನ್ನು ಹೊಂದಿರಬೇಕು. ನೆರಳು ಬೆಳಕಿನ ಹೊಂದಾಣಿಕೆಯಿರಬೇಕು. ಅಯ್ಯೋ....ಬಿಸಿಲೇ ಬರಲಿಲ್ಲ ಅಲ್ಲಿ ಹೇಗೆ ನೆರಳು ಬೆಳಕು ಹೊಂದಾಣಿಕೆ ಸಾಧ್ಯ ಅಂತ ನಿಮಗೆ ಅನ್ನಿಸಿದರೆ...ಆಗ ನೀವು ಬಣ್ಣಗಳ ಹೊಂದಾಣಿಕೆ ಮೂಲಕ ಮುಖ್ಯ ವಸ್ತುವನ್ನು ತೋರಿಸಬೇಕು.

          ೫]ಒಂದು ಫೋಟೊ ಸಾವಿರ ಪದಗಳಿಗೆ ಸಮ ಅಂತ ಹೇಳುತ್ತಾರೆ.  ನೋಡಿದ ತಕ್ಷಣ ಫೋಟೊನೇ ಕತೆಯನ್ನು ಹೇಳುವಂತಿರಬೇಕು. ಕವಿತೆಯ ಭಾವವನ್ನು ಹೊರಹೊಮ್ಮಿಸುವಂತಿರಬೇಕು.

          ೫]ಇವೆಲ್ಲವನ್ನು ಒಳಗೊಂಡಂತೆ ಮುಖ್ಯವಾಗಿ ಫೋಟೊದಲ್ಲಿ ಜೀವಂತಿಕೆಯಿರಬೇಕು.

     ಈ ಗುಣಗಳನ್ನು ಹೊತ್ತುಕೊಂಡ ಯಾವುದೇ ಚಿತ್ರವೂ ಪಿಕ್ಟೋರಿಯಲ್ ಚಿತ್ರವಾಗಿರುತ್ತದೆ. 

     ಈಗ ಮೊದಲ ಚಿತ್ರವನ್ನು ನೋಡೋಣ. ಇದು ನಿಮಗೆ ಸುಲಭವಾಗಿ ಅರ್ಥವಾದರೂ ಮುಖ್ಯ ವಸ್ತು ಯಾವುದು?  ಹಸಿರು ವಾತಾವರಣವಾ? ಮೂರನೇ ಒಂದು ಭಾಗದಲ್ಲಿರುವ ಎರಡು ಒಣಗಿದ ಮರಗಳ? ಮೇಲಿರುವ ಆಕಾಶನ? ಹೀಗೆ ಹುಡುಕುತ್ತಾ ಹೋದರೆ ಇವೆಲ್ಲಾ ಒಂದಕ್ಕೊಂದು ತಮ್ಮೊಳಗೆ ಸ್ಪರ್ಧಿಸುತ್ತಾ ನೋಡುವ ನಿಮ್ಮನ್ನು ಗೊಂದಲಕ್ಕೀಡು ಮಾಡುತ್ತಿವೆ. ಅಂದ ಮೇಲೆ ಇಲ್ಲಿ ಮುಖ್ಯ ವಸ್ತು ಇಲ್ಲ. ಚಿತ್ರದಲ್ಲಿ ಒಂದು ಸರಿಯಾದ ಕತೆಯಿಲ್ಲ. ಕತೆಯಿಲ್ಲದ್ದರಿಂದ ಜೀವಂತಿಕೆ ಮೊದಲೇ ಇಲ್ಲ. ಮತ್ತೆ ತಾಂತ್ರಿಕವಾಗಿ ಕೂಡ ಉತ್ತಮವಾಗಿಲ್ಲ.  ಇದೊಂದು ಆರ್ಡಿನರಿ ಚಿತ್ರವಷ್ಟೆ. ಮತ್ತೆ ಇದನ್ನು ಕ್ಲಿಕ್ಕಿಸಲು ನೀವು ಯಾವುದೇ ಸರ್ಕಸ್ ಮಾಡಬೇಕಿಲ್ಲ. ನಿಮ್ಮ ಬಳಿ ಒಂದು ಕ್ಯಾಮೆರವಿದ್ದರೆ ಸಾಕು ವಿರಾಜಪೇಟೆ ರಸ್ತೆಯಲ್ಲಿ ಸಾಗುತ್ತಿದ್ದರೆ ಇದು ನಿಮಗೆ ಎಡಭಾಗದಲ್ಲಿ ಕಾಣುತ್ತದೆ ಒಮ್ಮೆ ನಿಂತು ಹತ್ತೇ ಸೆಕೆಂಡಿನಲ್ಲಿ ಕ್ಲಿಕ್ಕಿಸಿದರೆ ಆಯ್ತು.  ಈ ಫೋಟೊ ರೆಡಿ. ಇದೊಂತರ ಕ್ರಿಕೆಟ್ ಮೈದಾನದಲ್ಲಿ ಕ್ರಿಕೆಟ್ ಬಗ್ಗೆ ಸೊಗಸಾಗಿ ಮಾತಾಡಿದಷ್ಟೆ ಸುಲಭ ಇದರ ಫೋಟೊಗ್ರಫಿ.

     ಈಗ ಮತ್ತೊಂದು ಚಿತ್ರವನ್ನು ನೋಡೋಣ.

      ಎರಡನೇ ಚಿತ್ರವನ್ನು ವಿವರಿಸುವ ಬದಲು ಆದನ್ನು ಕ್ಲಿಕ್ಕಿಸುವಾಗಿನ ನೇರ ಅನುಭವವನ್ನು ಹೇಳಿಬಿಡುತ್ತೇನೆ.

     ಮುನ್ನಾರಿನಿಂದ ದೇವಿಕುಲಂ ಕಡೆಗೆ ನಮ್ಮ ಆಟೋ ಸಾಗುತ್ತಿರುವಾಗ ಅವತ್ತು ಬೆಳಿಗ್ಗೆಯಿಂದಲೇ ಅಲ್ಲಲ್ಲಿ ಮೋಡ ಚಲಿಸುತ್ತಿದ್ದವು.  ನಡುವೆ ಸೂರ್ಯ ಇಣುಕಿ ಮಾಯವಾಗುತ್ತಿದ್ದ.  ಹೀಗೆ ಸಾಗುತ್ತಿದ್ದಂತೆ ನಮ್ಮ ಎಡಬದಿಯಲ್ಲಿ ಹಸಿರು ಟೀ ಎಸ್ಟೇಟಿನ ನಡುವೆ ಒಂದು ಸಣ್ಣ ದೇವಸ್ಥಾನ ಕಾಣಿಸಿತು. ಎಲ್ಲರೂ ಆಟೋ ಇಳಿದು ಅದರ ಫೋಟೊ ತೆಗೆದುಕೊಂಡೆವು.  ಆದ್ರೆ ಅದು ನಮಗೆ ವಿಶೇಷವೆನ್ನಿಸಲಿಲ್ಲ. ಹಾಗಾದರೆ ವಿಶೇಷವೇನು? ಸುತ್ತೆಲ್ಲಾ ನೆರಳಿದ್ದು ಸೂರ್ಯನ ತಿಳಿಬೆಳಕು ಅದರ ಮೇಲೆ ಸ್ಪಾಟ್ ಲೈಟಿನಂತೆ ಬಿದ್ದಾಗ ಕಾಯ್ದು ಪೋಟೋ ಕ್ಲಿಕ್ಕಿಸುವುದೇ ನಮ್ಮ ಗುರಿ.  ಅದಕ್ಕಾಗಿ ಕಾದೆವು. ಕೆಲವೊಮ್ಮೆ ಸೂರ್ಯನಿಗೆಷ್ಟು ಸೊಕ್ಕು ಅಂದರೆ ನಮ್ಮಂತ ಛಾಯಾಗ್ರಾಹಕರಿಗೆ ಬೇಕಂತಲೇ ಆಟವಾಡಿಸಿಬಿಡುತ್ತಾನೆ. ಸುಮಾರು ಅರ್ಧ ಗಂಟೆ ಕಾದರೂ ಸೂರ್ಯ ಬರಲಿಲ್ಲ.  ಕೊನೆಗೆ ಸೂರ್ಯನನ್ನು ಚೆನ್ನಾಗಿ ಹೀಯಾಳಿಸಿ ಬೈದುಕೊಳ್ಳುತ್ತಾ, ಅಲ್ಲಿಂದ ಮುಂದೆ ದೇವಿಕುಲಮ್ ತಲುಪಿದೆವು. ಅಲ್ಲೇ ಟಿಫನ್ ಮಾಡಿ ವಾಪಸ್ ಹೊರಟೆವು. ದಾರಿಯುದ್ದಕ್ಕೂ ಮೋಡಗಳ ನಡುವೆ ಸೂರ್ಯ ಇಣುಕುವುದು ನಡೆದೇ ಇತ್ತು.   ಮೊದಲೇ ನೋಡಿದ್ದ ದೇವಸ್ಥಾನಕ್ಕೆ ಒಂದು ಕಿಲೋಮೀಟರ್ ಇರುವಂತೆಯೇ ಆಕಾಶ ನೋಡಿದೆ. ಮೋಡಗಳು ದೇವಿಕುಲಮ್ ಕಡೆಯಿಂದ ಮುನ್ನಾರ್ ಕಡೆಗೆ ದಟ್ಟವಾಗಿ ಸಾಗುತ್ತಿದ್ದವು.  ಆ ಮೋಡಗಳಾದರೂ ಕೂಡ ಒಂದು ಗುಂಪು ಸಾಗುವಷ್ಟರಲ್ಲಿ ಮತ್ತೊಂದು ಗುಂಪು ಅದೆಲ್ಲಿತ್ತೋ ತೇಲಿಬರುತ್ತಿತ್ತು.  ಒಹೋ! ಈಗ ನಮಗಿರುವ ಅವಕಾಶವೆಂದರೆ ಒಂದು ಗುಂಪಿನ ಮೋಡಗಳು ತೇಲಿಹೋಗಿ ಮತ್ತೊಂದು ಮೋಡಗಳ ಗುಂಪು ಬರುವ ಸಮಯದ ನಡುವೆ ಇಣುಕುವ ಸೂರ್ಯನ ಬೆಳಕು ಖಂಡಿತ ಆ ದೇವಸ್ಥಾನದ ಮೇಲೆ ಸ್ಪಾಟ್ ಲೈಟಿನಂತೆ ಬೀಳುವುದು ಖಚಿತ. ಆ ಸಮಯದಲ್ಲಿ ಅಲ್ಲಿದ್ದರೇ ನಮಗೆ ಅದರ ಸುಂದರ ಫೋಟೋ ಸಿಗಬಹುದು ಅನ್ನಿಸಿತ್ತು. ವಿಮಲ್‍ಗೆ ನನ್ನ ಪ್ಲಾನ್ ವಿವರಿಸಿದೆ. ಅಷ್ಟರಲ್ಲಾಗಲೇ ಅವನಿಗೆ ನಮ್ಮ ಫೋಟೊಗ್ರಫಿ ನಾಡಿಮಿಡಿತ ಅರ್ಥವಾಗಿದ್ದರಿಂದ ಒಮ್ಮೆ ಆಕಾಶ ನೋಡಿದ. ನಮ್ಮ ಸುತ್ತ ಮುತ್ತ ಸೂರ್ಯನ ಬೆಳಕು ಸ್ಪಾಟ್ ಲೈಟಿನಂತೆ ಬಿದ್ದಿತ್ತು ಮುಂದೆಯೂ ಮೋಡ, ಹಿಂದೆಯೂ ಮೋಡ.  ನಮ್ಮ ಮೇಲೆ ಬಿದ್ದ ಸ್ಪಾಟ್ ಲೈಟ್ ಹೀಗೆ ಸಾಗಿ ಖಂಡಿತ ಆ ದೇವಾಸ್ಥಾನದ ಮೇಲೆ ಬೀಳುತ್ತದೆ. ಅದರ ಪೋಟೊ ತೆಗೆಯುವುದೇ ನಮ್ಮ ಗುರಿ ಎಂದೆ. ಅವನಿಗೆ ಅರ್ಥವಾಗಿ ಸುಮಾರು ಒಂದು ಕಿಲೋಮೀಟರ್ ವೇಗವಾಗಿ ಆಟೋ ಓಡಿಸಿದ. ಅವನ ವೇಗ ಹೇಗಿತ್ತೆಂದರೇ ಮೋಡಗಳ ಜೊತೆಗೆ ಸಮಾನ ವೇಗವಾಗಿ ಚಲಿಸಿದ್ದರಿಂದ ಸುಮಾರು ಒಂದು ಕಿಲೋ ಮೀಟರ್ ನಮ್ಮ ಸೂರ್ಯನ ಬೆಳಕು ಸ್ಪಾಟ್ ಲೈಟಿನಂತೆ ನಮ್ಮ ದಾರಿಯುದ್ದಕ್ಕೂ ಬೀಳುವಂತೆ ವಿಮಲ್ ಆಟೋ ಓಡಿಸಿದ್ದ.  ಸರಿಯಾದ ಸಮಯಕ್ಕೆ  ದೇವಸ್ಥಾನದ ಸಮೀಪ ತಲುಪಿದ್ದೆವು.  ನಮಗಿಂತ ಒಂದು ಪರ್ಲಾಂಗು ದೂರವಿದ್ದ ದೇವಸ್ಥಾನದ ಮೇಲೆ ನಮ್ಮ ಮೇಲೆ ಬಿದ್ದ ಸೂರ್ಯನ ಬೆಳಕು ಸ್ಪಾಟ್ ಲೈಟಿನಂತೆ ಬೀಳುತ್ತದೆ, ಅದನ್ನು ಕ್ಲಿಕ್ಕಿಸಲು ಕ್ಯಾಮೆರಾ ಸಹಿತ ಸಿದ್ದರಾದೆವು. ಸೂರ್ಯನ ಬೆಳಕು ನಿದಾನವಾಗಿ ನಮ್ಮನ್ನು ದಾಟಿ, ಟೀ ಎಸ್ಟೇಟಿನ ಮೇಲೆ ಚಲಿಸಿತ್ತು. ನಮ್ಮ ಕ್ಯಾಮೆರಾಗಳು ತಾಂತ್ರಿಕವಾಗಿ ಎಲ್ಲಾ ಸರಿಯಾಗಿವೆಯಾ ಅಂತ ನೋಡಿಕೊಂಡೆವು. ಕೆಲವೇ ಸೆಕೆಂಡುಗಳಲ್ಲಿ ನಿದಾನವಾಗಿ ಸ್ಪಾಟ್ ಲೈಟಿನಂತೆ  ದೇವಸ್ಥಾನದ ಮೇಲೆ ಬಿದ್ದ ಸೂರ್ಯನ ಬೆಳಕಿನಲ್ಲಿ ಆ ದೇವಸ್ಥಾನದ ಫೋಟೊಗಳನ್ನು ಮೈಮರೆತು ಕ್ಲಿಕ್ಕಿಸುತ್ತಿರುವಾಗ ನಮ್ಮ ಅಕ್ಕ ಪಕ್ಕ ಏನಾಗುತ್ತಿದೆ ಎನ್ನುವುದನ್ನು ಮೈಮರೆತುಬಿಟ್ಟಿದ್ದೆವು. 


         ಇಪ್ಪತ್ತು ಸೆಕೆಂಡುಗಳಷ್ಟೇ. ಅದ್ಯಾವ ಕ್ಷಣದಲ್ಲಿ ಬೆಳಕು ಚಲಿಸಿ ದೇವಸ್ಥಾನ ದಾಟಿಹೋಗಿತ್ತೋ ಗೊತ್ತಾಗಲಿಲ್ಲ. ಪೋಟೊ ತೆಗೆಯುವುದು ನಿಲ್ಲಿಸಿ ಒಮ್ಮೆ ಸುತ್ತಲೂ ನೋಡಿದಾಗಲೇ ನಮಗೆ ಗೊತ್ತಾಗಿದ್ದು, ನಾವು ಪೋಟೊ ತೆಗೆಯುವ ತನ್ಮಯತೆಯಲ್ಲಿ ನಡು ರಸ್ತೆಯಲ್ಲಿ ನಿಂತಿರುವುದು ನಮಗೇ ಗೊತ್ತಿರಲಿಲ್ಲ. ಎರಡು ಕಡೆಯಿಂದ ಲಾರಿಗಳು, ಬಸ್ಸುಗಳು, ಕಾರುಗಳು ಸಾಲಾಗಿ ನಿಂತು  ಹಾರ್ನ್ ಮಾಡುತ್ತಿರುವುದು ನಮಗೇ ಗೊತ್ತೇ ಆಗಿರಲಿಲ್ಲ. ಎರಡು ಕಡೆ ರಸ್ತೆಯಲ್ಲಿ ಸಣ್ಣ ಮಟ್ಟಿನ ಟ್ರಾಫಿಕನ್ನು ಪರೋಕ್ಷವಾಗಿ ಸೃಷ್ಟಿಸಿಬಿಟ್ಟಿದ್ದೆವು.  ಎಚ್ಚೆತ್ತುಕೊಂಡು ಅವರಿಗೆಲ್ಲಾ ಸಾರಿ ಹೇಳಿ ದಾರಿಮಾಡಿಕೊಟ್ಟಾಗಲೇ ನಮಗೇ ವಾಸ್ತವ ಜಗತ್ತು ಅರಿವಾಗಿತ್ತು. ಇದರ ನಡುವೆ ಯಾವಾನಾದ್ರೂ ತಲೆಕೆಟ್ಟ ಬಸ್ಸೋ, ಕಾರೋ ವೇಗವಾಗಿ ನುಗ್ಗಿಬಂದಿದ್ದರೇ ನಮ್ಮ ಕತೆ ಅಲ್ಲಿಗೇ ಮುಗಿದು ಈ ಲೇಖನ ಬರೆಯಲು ಸಾಧ್ಯವಾಗುತ್ತಿರಲಿಲ್ಲವೇನೋ.  ವಿಮಲ್‍ಗೂ ನಮ್ಮ ಪೋಟೊಗ್ರಫಿ ಭಾಷೆ, ಅದರ ಆನಂದ ಅರ್ಥವಾಗಿದ್ದರಿಂದ ಮೈಮರೆತು ಆ ದೃಶ್ಯವನ್ನು ತನ್ಮಯನಾಗಿ ನೋಡುತ್ತಾ ನಿಂತುಬಿಟ್ಟಿದ್ದ.


        ಇಷ್ಟೆಲ್ಲಾ ಕಷ್ಟಪಟ್ಟು ತೆಗೆಯುವಂತ ಅದ್ಬುತ ವಿಚಾರ ಈ ಫೋಟೊದೊಳಗೆ ಏನಿದೆ? ಅದನ್ನು  ನಾವು ಓದುವುದು ಹೇಗೆ ಅಂತ ಮತ್ತೆ ನಿಮ್ಮ ಪ್ರಶ್ನೆ ಮೂಡಿರಬೇಕು. ಆ ಪ್ರಶ್ನೆಗೆ ಈ ಚಿತ್ರದ ವಿಶೇಷವನ್ನು ವಿವರಿಸುವ ಮೂಲಕ ತಿಳಿಸಲು ಪ್ರಯತ್ನಿಸುತ್ತೇನೆ.

       ಮೊದಲಿಗೆ ಈ ಚಿತ್ರದಲ್ಲಿ ಮುಖ್ಯವಸ್ತು ಬಿಳಿಬಣ್ಣದ ದೇವಸ್ಥಾನ.  ಅದರ ಸುತ್ತ ಇರುವ ಹಸಿರು ಟೀ ಗಾರ್ಡನ್ ಮುಖ್ಯವಸ್ತುವನ್ನು ಮೀರಿ ಬೆಳೆಯದೆ ಅಥವ ನೋಡುಗನ ಕಣ್ಣು ತಮ್ಮತ್ತ ಸೆಳೆಯದಿರುವಂತೆ ಇದ್ದು ಮುಖ್ಯವಸ್ತುವಾದ ದೇವಸ್ಠಾನಕ್ಕೆ ಸಹಕಾರಿಯಾಗಿದೆ.  ಇನ್ನೂ ದೇವಸ್ಥಾನವೂ ಮೂರನೇ ಒಂದು ಭಾಗದಲ್ಲಿ ಇರುವುದರಿಂದ ಕಂಪೋಸಿಂಗ್ ವಿಚಾರದಲ್ಲೂ ಚಿತ್ರ ಪಕ್ಕಾ ಅಗಿದೆ. ಇನ್ನು ನೆರಳು ಬೆಳಕಿನ ವಿನ್ಯಾಸ. ದೇವಸ್ಥಾನದ ಮೇಲೆ ಮಾತ್ರ ಸೂರ್ಯನ ಬೆಳಕು ಬಿದ್ದು ಅದನ್ನು ನೋಡಿದ ತಕ್ಷಣ ಕಣ್ ಸೆಳೆಯುವಂತಿದೆ. ಅದರ ಸುತ್ತಲು ಮೋಡದ ನೆರಳು ಹಿತವಾಗಿ ಹರಡಿಕೊಂಡಿದ್ದು ಚಿತ್ರಕ್ಕೆ ಇದು ಕೂಡ ಸಹಕಾರಿಯಾಗಿದೆ.  ಮತ್ತೆ ಇನ್ನೊಂದು ವಿಶೇಷವೆಂದರೆ ಇಡೀ ಚಿತ್ರದಲ್ಲಿ ಎಲ್ಲಿಯೂ ಬೆಳಕು ಹೆಚ್ಚು ಬಿದ್ದು ಆರ್ಶ್ ಆಗಿಲ್ಲ. ಮುಂಜಾನೆಯ ಚುಮುಚುಮು ಚಳಿಯ ವಾತಾವರಣದಲ್ಲಿ ಮೂಡಿದ ಹಿತವಾದ ಬಿಸಿಲು ಆ ದೇವಸ್ಥಾನದ ಮೇಲೆ ತಿಳಿಯಾಗಿ ಬಿದ್ದು ಒಂದು ನವಿರು ಭಾವನೆಯನ್ನು ಮೂಡಿಸುವಂತಿದೆ.  ಅದೇ ರೀತಿ ನೆರಳಿನ ಭಾಗವೂ ಕೂಡ ದಟ್ಟ ನೆರಳಾದ ಕಪ್ಪು ಬಣ್ಣಕ್ಕೆ ಇರದೆ ನೆರಳು ಬಿದ್ದ ಜಾಗದಲ್ಲೆಲ್ಲಾ ಆ ಸ್ಥಳದ ವಿವರವಿದೆ. 

        ಇದನ್ನು ಪಿಕ್ಟೋರಿಯಲ್ ಫೋಟೊಗ್ರಫಿ ನಿಯಮ ಅಥವ ಕಪ್ಪು ಬಿಳುಪು ಫೋಟೊಗ್ರಫಿ ನಿಯಮದ ಪ್ರಕಾರ ವಿವರಿಸಬೇಕಾದರೆ ಒಂದು ಚಿತ್ರದಲ್ಲಿನ ಬಣ್ಣಗಳ ವಿನ್ಯಾಸವನ್ನು ಸೊನ್ನೆಯಿಂದ ಹತ್ತು ಭಾಗವಾಗಿ ವಿಂಗಡಿಸುತ್ತಾರೆ. ಮೊದಲಿಗೆ ಸೊನ್ನೆ ಎಂದರೆ ನೇರ ದಟ್ಟ ಕಪ್ಪು ಬಣ್ಣ. ಇದರೊಳಗೆ ಆಡಗಿರುವ ವಸ್ತುವು ಏನೂ ಕಾಣುವುದಿಲ್ಲ.  ಇದರ ನಂತರ ಒಂದನೆ ಸಂಖ್ಯೆಗೆ ಬಂದರೆ ಕಪ್ಪು ಬಣ್ಣ ತನ್ನ ದಟ್ಟತೆಯನ್ನು ಕಡಿಮೆ ಮಾಡಿಕೊಂಡಿರುತ್ತದೆ.  ಎರಡನೇ ಸಂಖ್ಯೆಗೆ ಬಂದರೆ ಕಪ್ಪು ಬಣ್ಣದ ದಟ್ಟತೆ ಮತ್ತಷ್ಟು ಕಡಿಮೆಯಾಗಿ ಕಂದು ಬಣ್ಣವಾಗುತ್ತದೆ. ಮೂರನೇ ಸಂಖ್ಯೆಗೆ ಬಂದರೆ ಇಲ್ಲಿ ದಟ್ಟತೆ ಮತ್ತಷ್ಟು ಕಡಿಮೆಯಾಗಿ ಹಿತವಾದ ಕಂದು ಬಣ್ಣವಾಗುತ್ತದೆ. ಹೀಗೆ ನಾಲ್ಕರಲಿ ಮತ್ತಷ್ಟು ಕಡಿಮೆ, ಐದರಲ್ಲಿ ಇನ್ನೂ ಕಡಿಮೆ, ಆರರಲ್ಲಿ ಈಗ ಬಣ್ಣ ನಿದಾನವಾಗಿ ಬಿಳಿಯಾಗುವತ್ತ ಸಾಗುತ್ತಿದೆ. ಏಳನೇ ಸಂಖ್ಯೆ ಯಲ್ಲಿ ಮತ್ತಷ್ಟು ಬಿಳುಪು ಎಂಟನೇಯದರಲ್ಲಿ ಹಿತವಾದ ಬಿಳುಪು ಒಂಬತ್ತನೆ ಸಂಖ್ಯೆಗೆ ಈ ಹಿತವಾದ ಬಿಳುಪು ಬಣ್ಣ ಹೆಚ್ಚಾಗಿ ಸ್ವಲ್ಪ ಹಾರ್ಶ್ ಆದಂತೆ ಕಾಣುತ್ತದೆ.  ಹತ್ತನೆ ಸಂಖ್ಯೆಗೆ ಬರುತ್ತಲೇ ಈ ಬಿಳಿಪು ಮದ್ಯಾಹ್ನದ ಬಿರುಬಿಸಿನಷ್ಟು ಹಾರ್ಶ್ ಆಗಿ ಆ ಜಾಗದಲ್ಲಿ ವಸ್ತುವಿನ ಯಾವುದೇ ವಿವರ ಕಾಣುವುದಿಲ್ಲ.  ಬದಲಾಗಿ ಚಿತ್ರದಲ್ಲಿರುವ ಬಿಳುಪೆಲ್ಲಾ ಬ್ಲೀಚ್ ಆಗಿ ಓವರ್ ಎಕ್ಸ್ ಪೋಸ್ ಆದಂತೆ ಕಾಣುತ್ತದೆ.

        ಆದ್ದರಿಂದ ಒಂದು ಉತ್ತಮ ಫೋಟೋ ಎಂದರೆ ಅದರಲ್ಲಿ ಮೂರರಿಂದ ಏಂಟರವರೆಗೆ ಬೆಳಕಿನ ವಿನ್ಯಾಸವಿರಬೇಕು. ಈ ಮುನ್ನಾರಿನ ಚಿತ್ರದಲ್ಲಿಯೂ ಕೂಡ ಈ ನೆರಳು ಮತ್ತು ಬೆಳಕಿನ ವಿನ್ಯಾಸ ಮೂರರಿಂದ ಎಂಟರವರೆಗೆ ಮಾತ್ರವಿರುವುದರಿಂದ ಕಪ್ಪುಭಾಗದಲ್ಲೂ ಪೂರ್ತಿ ವಿವರವಿದೆ. ಮತ್ತು ಬಿಳುಪಿನ ಭಾಗದಲ್ಲೂ ಪೂರ್ತಿ ವಿವರವಿದೆ.

        ತಾಂತ್ರಿಕ ವಿವರಗಳು ಈ ಚಿತ್ರದಲ್ಲಿ ಚೆನ್ನಾಗಿದೆಯೆಂದ ಮೇಲೆ ಪಿಕ್ಟೋರಿಯಲ್ ಅಂಶಗಳಿವೆಯ ಆಂತ ನೋಡೋಣ.

       ೧]ಚಿತ್ರವನ್ನು ನೋಡಿದ ತಕ್ಷಣ ಅದರ ಬೆಳಕಿನ ವಿನ್ಯಾಸದಿಂದಾಗಿ ಎಂಥ ಅದ್ಬುತ ಲೈಟಿಂಗ್" ಅಂತ ನಮ್ಮನ್ನು ಇಂಪ್ರೆಸ್ ಮಾಡುತ್ತದೆ.

       ೨]ಈ ಫೋಟೊದೊಳಗೆ ಇರುವ ವಸ್ತುವಾದ ದೇವಸ್ಥಾನ ಸುಲಭವಾಗಿ ಎಲ್ಲರಿಗೂ ಅರ್ಥವಾಗುವಂತಿದೆ.

       ೩]ಮತ್ತೆ ಕಂಪೋಸಿಂಗ್ ಕೂಡ ಮೂರನೇ ಒಂದು ಭಾಗದಲ್ಲಿ ಇದೆ.

       ೪]ಚಿತ್ರದಲ್ಲಿ ಬೆಳಕಿನ ವಿನ್ಯಾಸವೇ ಅದ್ಬುತವಾಗಿದ್ದು ಜೊತೆಗೆ ಹಸಿರಿನ ಬಣ್ಣವಿರುವುದು ಚಿತ್ರದೊಳಗಿರುವ ವಾತಾವರಣವನ್ನು ಪ್ರತಿಬಿಂಬಿಸುವಲ್ಲಿ ಸಹಕಾರಿಯಾಗಿದೆ.

       ೫]ಈ ಫೋಟೊವನ್ನು ನೋಡಿದರೆ ನಿಮ್ಮಲ್ಲಿ ಒಂದು ಕತೆ ಕವನ ಮೂಡುತ್ತದೆಯಲ್ಲವೇ...ಅಂದ ಮೇಲೆ ಇದು ಸಾವಿರ ಪದಗಳಿಗೆ ಸಮವಾಗಿದೆ ಅನ್ನಿಸುತ್ತದೆಯಲ್ಲವೇ..

       ೬]ಈ ಚಿತ್ರವನ್ನು ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನ್ನಿವುದಕ್ಕೆ ಕಾರಣ ಇದರಲ್ಲಿರುವ ಜೀವಂತಿಕೆ. 

       ಈಗ ಹೇಳಿ ಮೊದಲನೇ ಚಿತ್ರಕ್ಕೆ ಹೋಲಿಸಿದರೆ ಅದಕ್ಕಿಂತ ಹೆಚ್ಚು ಪಿಕ್ಟೋರಿಯಲ್ ಅಥವ ಎಲ್ಲಾ ಪಿಕ್ಟೋರಿಯಲ್ ಗುಣಗಳನ್ನು ಹೊಂದಿದೆಯೆನಿಸುತ್ತದೆಯಲ್ಲವೇ...

        ಈ ಕಲಾತ್ಮಕ ಫೋಟೊಗ್ರಫಿ ಎಂದರೆ ನಮ್ಮ ಅರವತ್ತು ಎಪ್ಪತ್ತರ ದಶಕದ ಹಳೆಯ ಮಧುರ ಸುಮಧುರ ಹಾಡುಗಳಿದ್ದಂತೆ. ಅವತ್ತಿನಿಂದ ಇವತ್ತಿನ ಕೇಳಿದರೂ ಅವು ಎಂದಿಗೂ ಬೇಸರವನ್ನು ಕೊಡುವುದಿಲ್ಲ ಬದಲಾಗಿ ಒತ್ತಡದ ಮನಸ್ಸಿಗೆ ಉಲ್ಲಾಸ ಮತ್ತು ಅಹ್ಲಾದತೆಯನ್ನು ನೀಡುತ್ತದೆ. ಈಗಿನ ಆರುತಿಂಗಳ ಆಯುಸ್ಸಿನ ಜನಪ್ರಿಯ ಡಿಪ್ಪರೆ ಡಿಪಂಗ್, ಚಂಬೇಶ್ವರ ಹಾಡುಗಳಂತೆ ಮೊದಲ ಫೋಟೊದ ಹೋಲಿಕೆಯಾದರೆ ಹಳೆಯ ಐವತ್ತಕ್ಕೂ ಹೆಚ್ಚು ವರ್ಷ ಆಯುಷ್ಸಿನ ಈಗಲೂ ಮನಸ್ಸಿಗೆ ನವಿರಾದ ಭಾವನೆಯನ್ನುಂಟು ಮಾಡುವ ಮೆಲ್ಲುಸಿರೇ...ಸವಿಗಾನ, ಅಮರ ಮಧುರ ಪ್ರೇಮ, ಒಲವಿನ ಪ್ರಿಯಲತೆ...ಹಾಡುಗಳಿಗೆ ಎರಡನೆ ಚಿತ್ರ ಹೋಲಿಕೆಯಾಗುತ್ತದೆ.

        ಈಗ ಹೇಳಿ ಈ ರೀತಿ ಕಲಾತ್ಮಕವಾಗಿ ಫೋಟೊವನ್ನು ಓದುವುದರಲ್ಲಿ ಎಂಥ ಆನಂದವಲ್ಲವೇ....

          ಈಗ ಇನ್ನೊಂದು ಹೆಜ್ಜೆ ಮುಂದುವರೆದು ಮತ್ತೆರಡು ಫೋಟೊಗಳ ಉದಾಹರಣೆಯೊಂದಿಗೆ ಇನ್ನಷ್ಟು ಕಲಾತ್ಮಕವಾಗಿ ಅಥವ ಆಳವಾಗಿ ಓದುವುದನ್ನು ಕಲಿಯೋಣ.

          ಈ ಮಗುವಿನ ಫೋಟೋವನ್ನು ನೋಡಿ.  ಇದು ಎಲ್ಲಾ ವಿಧದಲ್ಲೂ ಪಕ್ಕಾ ಪಿಕ್ಟೋರಿಯಲ್ ಫೋಟೊಗ್ರಫಿಯಂತಿದೆಯಲ್ಲ ಅಂತ ನಿಮಗನ್ನಿಸಬಹುದು.  ಹೌದು ನೀವು ಹೇಳಿದಂತೆ ಇದು ಉತ್ತಮ ಪಿಕ್ಟೋರಿಯಲ್ ಫೋಟೊ ಆಗಬಹುದೇ..ಆಗಿದ್ದರೆ ಹೇಗೆ? ಸ್ವಲ್ಪ ನೋಡೋಣ.

ನನ್ನ ಗೆಳೆಯನ ಮುದ್ದು ಮಗನ ಫೋಟೊ 


          ೧]ನೋಡಿದ ತಕ್ಷಣ ಮಗುವಿನ ಮುಗ್ದತೆ ನಿಮ್ಮನ್ನು ಇಂಪ್ರೆಸ್ ಮಾಡುತ್ತದೆ.

          ೨]ಚಿತ್ರದಲ್ಲಿ ಮಗುವಿನ ಮುಖವೇ ಮುಖ್ಯವಸ್ತುವಾಗಿದ್ದು ಅದಕ್ಕೆ ತಕ್ಕಂತೆ ಹಿನ್ನೆಲೆ ಮುಖ್ಯವಸ್ತುವಿನೊಂದಿಗೆ ಸ್ಪರ್ಧಿಸದೇ ಅದಕ್ಕೆ ಸಹಕಾರಿಯಾಗಿದೆ. ಹಾಗೆ ನೋಡಿದರೆ ಈ ರೀತಿ ಹಿನ್ನೆಲೆಯಿರುವುದೇ ಈ ಚಿತ್ರದ ಬೋನಸ್ ಅಂಶ

          ೩]ತಾಂತ್ರಿಕವಾಗಿ ಕೂಡ ಅತ್ಯುತ್ತಮವಾಗಿದ್ದು, ಸಹಜವಾದ ಹಿಂಬೆಳಕು ಮಗುವಿನ ಕೂದಲಿನ ಮೇಲೆ ಬಿದ್ದು ಚಿತ್ರಕ್ಕೆ ಮೂರನೆ ಆಯಾಮವನ್ನು ಒದಗಿಸಿ[ತ್ರಿಡಿ]ಮಗು ಪೋಟೊ ಪ್ರೇಮಿನಿಂದ ಎದ್ದು ಬರುವಂತಿದೆ.

          ೪]ಚಿತ್ರದಲ್ಲಿನ ಅತಿಮುಖ್ಯ ಬೋನಸ್ ವಿಚಾರವೆಂದರೆ ಮಗು ತನ್ನ ಕೈಯನ್ನೆತ್ತಿ ಏನನ್ನೋ ಹೇಳಲು ಪ್ರಯತ್ನಿಸುತ್ತಿರುವುದು ಅದಕ್ಕೆ ಅದರ ಮುಖದಲ್ಲೂ ಅದೇ ಭಾವನೆಯಿದೆ.

          ೫]ಒಟ್ಟಾರೆ ಚಿತ್ರದಲ್ಲಿ ಜೀವಂತಿಕೆಯಿದೆ.


         ಇದು ನನ್ನ ಗೆಳೆಯನ ಮಗನ ಚಿತ್ರ. ಇಷ್ಟೆಲ್ಲಾ ಪಿಕ್ಟೋರಿಯಲ್ ಅಂಶಗಳಿರುವ ಈ ಚಿತ್ರವನ್ನು ಬಂಡಿಪುರ ಪ್ರವಾಸದಲ್ಲಿ ಏಳು ವರ್ಷಗಳ ಹಿಂದೆ ಕ್ಲಿಕ್ಕಿಸಿದ್ದು.  ಇದು ರಾಜ್ಯಮಟ್ಟ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಆಯ್ಕೆಯಾಗಿ ಅನೇಕ ಬಹುಮಾನಗಳನ್ನು ಪಡೆದುಕೊಂಡಿದೆ.

      
          ಮತ್ತೆ ಈಗ ಇಲ್ಲಿ ಕೊಟ್ಟಿರುವ ಎರಡನೇ ಚಿತ್ರವನ್ನು ನೋಡಿದರೆ ನಿಮಗೆ ಏನನ್ನಿಸಬಹುದು.? ಮತ್ತು ಪಿಕ್ಟೋರಿಯಲ್ ಆಂಶಗಳು ಇವೆಯಾ?  ಇದನ್ನೆಲ್ಲಾ ತಿಳಿದುಕೊಳ್ಳಲು ನಾವು ಈ ಚಿತ್ರವನ್ನು ಆಳವಾಗಿ ಅಥವ ಕಲಾತ್ಮಕವಾಗಿ ಓದಬೇಕು. ಚಿತ್ರವನ್ನು ತುಂಬಾ ಹೊತ್ತು ಗಮನಿಸಿ ನೋಡಿ!

"ಪಾಮ್ ಡುಕ್" ಎನ್ನುವ ವಿಯೆಟ್ನಾಮ್‍ನ ಛಾಯಾಗ್ರಾಹಕನ ಚಿತ್ರವಿದು  ೨೦೦೬ ರ ಆಷ್ಟ್ರೀಯನ್ ಆಂತರರಾಷ್ಟ್ರೀಯ ಫೋಟೊಗ್ರಫಿ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಪಡೆದ ಚಿತ್ರವಿದು.



          ೧]ಮೊದಲಿಗೆ ವಾಹ್! ಎಂಥ ಫೋಟೊಗ್ರಫಿ ಇದು? ಗ್ರೇಟ್ ಅಂತ ಉದ್ಗಾರ ಬರುತ್ತದೆ. ಅಲ್ಲಿಗೆ ನಿಮ್ಮನ್ನು ಇಂಪ್ರೆಸ್ ಮಾಡಿದಂತಾಯಿತು.

          ೨]ಆ ಚಿತ್ರದಲ್ಲಿ ಎರಡು ಆನಾಥ ಮಕ್ಕಳ ಮುಖಗಳೇ ಮುಖ್ಯವಸ್ತುವಾಗಿದ್ದು ಅದು ಮೂರನೆ ಒಂದು ಭಾಗದಲ್ಲಿ ಅದ್ಬುತವಾಗಿ ಕಂಪೋಸ್ ಆಗಿದೆ.
 
          ೩]ಮತ್ತೆ ಇಲ್ಲಿ ಎಲ್ಲದಕ್ಕಿಂತ ಮುಖ್ಯವಾಗಿ ಇದನ್ನು ಕ್ಲಿಕ್ಕಿಸಿದ ಛಾಯಾಗ್ರಾಹಕ ಸಂಪೂರ್ಣ ವಾತಾವರಣವನ್ನು ಒಂದು ಕತೆಯಂತೆ ಕಟ್ಟಿಕೊಟ್ಟಿದ್ದಾನೆ. ಅದಕ್ಕೆ ಆತ ಬಳಸಿಕೊಂಡಿರುವ ಹಿನ್ನೆಯ ವಾತಾವರಣವಂತೂ ಛಾಯಾಗ್ರಾಹಕನ ಆಪ್ರತಿಮ ಪ್ರತಿಭೆ ಸಾಕ್ಷಿಯಾಗಿದೆ.

          ೩] ಇನ್ನೂ ಚಿತ್ರದಲ್ಲಿರುವ ಭಾವನೆಗಳ ಬಗ್ಗೆ ಬರೆದರೆ ಅದು ಪುಟಗಟ್ಟಲೆ ದಾಟುತ್ತದೆ. ಸುಟ್ಟು ಹೋದ ತನ್ನ ಮನೆ ಮಠ ತಂದೆ ತಾಯಿ ಬಂಧು ಬಾಂಧವರನ್ನೆಲ್ಲಾ ಕಳೆದುಕೊಂಡಿರುವ ಸಂಕೇತದ ಹಿನ್ನೆಲ್ಲೆಯಲ್ಲಿ ಒಣಮರಗಳಿಗೆ ಬೆಂಕಿ ಹತ್ತಿಕೊಂಡಿದ್ದರೆ "ಎಲ್ಲಾ ಹೋಯಿತಲ್ಲ ಮುಂದೇನು ಗತಿ ಎನ್ನುವ ಅಸಹಾಯಕತೆ ಮತ್ತು ಜಿಗುಪ್ಸೆಯ ಭಾವನೆ ದೊಡ್ಡಹುಡುಗಿಯ ಮುಖದಲ್ಲಿ ಮೂಡಿದೆ. ಆದರೂ ಆಕೆಯ ತಮ್ಮನನ್ನು ಕಾಪಾಡಬೇಕಾದ ಅನಿವಾರ್ಯತೆ ಆಕೆ ಆತನನ್ನು ಬೆನ್ನಿಗೆ ಕಟ್ಟಿಕೊಳ್ಳುವ ರೀತಿಯಲ್ಲಿ ಬಿಂಬಿಸುತ್ತಿದೆ.  ಇಡೀ ಪರಿಸ್ಥಿತಿಯ ಸಂಪೂರ್ಣ ಭಾವನೆಯನ್ನು ಬೆನ್ನಿನಲ್ಲಿರುವ ಪುಟ್ಟ ಮಗುವಿನ ಆಳುವಿನಲ್ಲಿ ತೋರಿಸುತ್ತಿರುವ ಈ ಛಾಯಾಗ್ರಾಹಕನಿಗೆ ಎಂಥ ಬಹುಮಾನವನ್ನು ಕೊಟ್ಟರೂ ಸಾಲದು.

        ೪]ಇಂಥ ಜೀವಂತಿಕೆಯುಳ್ಳ ಫೋಟೊಗ್ರಫಿ ಮಾಡಬೇಕಾದರೆ ಅಲ್ಲಿನ ವಾತಾವರಣ ಹೇಗಿತ್ತು. ಎನ್ನುವ ಸ್ಪಷ್ಟ ಚಿತ್ರವನ್ನು ಕಟ್ಟಿಕೊಡುವಲ್ಲಿ ಆತ ಸಫಲನಾಗಿದ್ದಾನೆ.

        ೫]ಇನ್ನು ಇದು ಅತ್ಯುತ್ತಮ ತಾಂತ್ರಿಕತೆಯುಳ್ಳ ಚಿತ್ರವಾಗಿದೆ.  ಹೇಗೆ ಅತ್ಯುತ್ತಮವಾಗಿದೆ ಎನ್ನುವುದನ್ನು ಸ್ವಲ್ಪ ನೋಡೋಣ

        ಮೊದಲಿಗೆ ಇದು ಇಳಿ ಸಂಜೆ ಅಥವ ಅಥವ ರಾತ್ರಿ ಹೊತ್ತಿನಲ್ಲಿ ಕ್ಯಾಂಡಿಡ್ ಆಗಿ ಕ್ಲಿಕ್ಕಿಸಿದ ಫೋಟೋ.  ನಾವು ಹಗಲು ಹೊತ್ತಿನಲ್ಲಿ ಈಗಿರುವ ಡಿಎಸ್ ಎಲ್ ಅರ್ ಕ್ಯಾಮೆರದಲ್ಲಿ ಸೂರ್ಯನ ಬೆಳಕಿನ ಸಹಾಯದಿಂದ ಅನುಕೂಲವಾದ ಅಪಾರ್ಚರ್ ಮತ್ತು ಅದಕ್ಕೆ ತಕ್ಕಂತೆ ಅಲುಗಾಡದಂತ ಷಟರ್ ಸ್ಪೀಡ್ ಇಟ್ಟುಕೊಂಡು ಫೋಟೊ ತೆಗೆಯುವುದು ಸುಲಭ.  ಆದ್ರೆ ಮುಂಜಾನೆ ಅಥವ ಸಂಜೆ ಸೂರ್ಯನ ಸಾಪ್ಟ್ ಲೈಟ್ ಅಥವ ತಿಳಿಬೆಳಕಿನಲ್ಲಿ ಒಂದು ಚಲನಶೀಲವಾದ ಚಿತ್ರವನ್ನು ಮಾಡಬೇಕಾದರೆ ಆಪಾರ್ಚರ್ ಮತ್ತು ಶಟರುಗಳ ಪಕ್ಕಾ ಹೊಂದಾಣಿಕೆಯನ್ನು ಮಾಡಿಕೊಂಡು ಕ್ಲಿಕ್ಕಿಸಬೇಕು. ಸ್ವಲ್ಪವೇ ವ್ಯತ್ಯಾಸವಾದರೂ ಫೋಟೊ ಪ್ರೇಮಿನಲ್ಲಿರುವ ವಸ್ತು ಔಟ್ ಅಪ್ ಫೋಕಸ್ ಆಗಿ ಇಡೀ ಚಿತ್ರವೇ ವಿಫಲವಾಗಿಬಿಡುತ್ತದೆ. ಅದಕ್ಕಾಗಿ ನಿಮ್ಮಲ್ಲಿ ಉತ್ತಮವಾದ ಮತ್ತು ವೃತ್ತಿಪರವಾದ ಕ್ಯಾಮೆರ ಮತ್ತು ಟೆಲಿ ಲೆನ್ಸ್ ಇರಲೇಬೇಕು. ಅದರಲ್ಲೂ ಅಪಾರ್ಚೆರ್ ೨.೮ ಇರುವ ಟೆಲಿ ಲೆನ್ಸುಗಳು, ಹಾಗೂ ಹೆಚ್ಚು ಐ ಎಸ್ ಓ ಇರುವ ಕ್ಯಾಮೆರಗಳು ಇರಲೇಬೇಕು. ಆಗ ಇಂಥ ಫೋಟೊಗ್ರಫಿಯನ್ನು ಮಾಡಬಹುದು.  ಆದ್ರೆ ಈ ಚಿತ್ರದ ಛಾಯಾಗ್ರಾಹಕನ ಸಮಯವೇ ಒಂದು ರೀತಿಯ ಕತ್ತಲು. ಅವನ ಫೋಟೊಗೆ ಬೇಕಿದ್ದ ಬೆಳಕು ಇದ್ದಿದ್ದು ಸ್ವಲ್ಪ ದೂರದಲ್ಲಿ ಮರಗಳು ಹತ್ತಿ ಉರಿಯುತ್ತಿರುವ ಬೆಂಕಿಯ ಬೆಳಕು ಮಾತ್ರ. ಇಂಥ ಬೆಳಕಿನ್ನು ಉಪಯೋಗಿಸಿಕೊಂಡು ಈ ಇಬ್ಬರ ಮುಖದಲ್ಲಿನ ಭಾವನೆಗಳನ್ನು ಸಹಜವಾಗಿ ಸೆರೆಯಿಡಿಯಬೇಕಾದರೆ ಆತನಲ್ಲಿ ಅತ್ಯುತ್ತಮ ಐ ಎಸ್ ಒ ಹೊಂದಿರುವ ದುಬಾರಿ ಕ್ಯಾಮೆರ ಮತ್ತು ೨.೮ ಅಪಾರ್ಚರ್ ಇರುವ ದುಬಾರಿ ಲೆನ್ಸ್ ಇರಬಹುದು. 

        ಇದೆಲ್ಲವನ್ನು ಒಂದು ಪಕ್ಕಕ್ಕೆ ಇಟ್ಟು ಆತ ಇಡೀ ಸನ್ನಿವೇಶವನ್ನು ಕ್ಷಣ ಮಾತ್ರದಲ್ಲಿ ಗುರುತಿಸಿ ಅಭ್ಯಾಸಿಸಿ ಮರುಕ್ಷಣದಲ್ಲಿ ಇಂಥ ಮರೆಯಲಾಗದ ದೃಶ್ಯವನ್ನು ಸೆರೆಯಿಡಿದಿರುವ ಆತನ ಫೋಟೊಗ್ರಫಿ ಅನುಭವ ಹೇಗಿರಬಹುದು. ಆತ ಇನ್ನೆಷ್ಟರ ಮಟ್ಟಿಗೆ ಕಲಾತ್ಮಕ ಫೋಟೊಗ್ರಫಿಯನ್ನು ಓದಿಕೊಂಡಿರಬಹುದು? ಅಂತ ಅನ್ನಿಸುತ್ತೆ ಅಲ್ವಾ...

        ಇದನ್ನು ಕ್ಲಿಕ್ಕಿಸಿದವರು "ಪಾಮ್ ಡುಕ್" ಎನ್ನುವ ವಿಯೆಟ್ನಾಮ್‍ನ ಛಾಯಾಗ್ರಾಹಕ.  ೨೦೦೬ ರ ಆಷ್ಟ್ರೀಯನ್ ಆಂತರರಾಷ್ಟ್ರೀಯ ಫೋಟೊಗ್ರಫಿ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಪಡೆದ ಚಿತ್ರವಿದು. ಈ ಚಿತ್ರ ಆ ವರ್ಷದ ಕ್ಯಾಟಲಾಗಿನ ಮುಖಪುಟದಲ್ಲಿ ಪ್ರಿಂಟ್ ಆಗಿದೆ. ಆ ಚಿತ್ರವನ್ನು ಸ್ಕಾನ್ ಮಾಡಿ ಇದಕ್ಕಾಗಿ ಬಳಸಿಕೊಂಡಿದ್ದೇನೆ.  ಈ ಆಷ್ಟ್ರೀಯನ್ ಸೂಪರ್ ಸರ್ಕಿಟ್ ಎನ್ನುವ ಅಂತರರಾಷ್ಟ್ರೀಯ ಫೋಟೊಗ್ರಫಿ ಸ್ಪರ್ಧೆ ವಿಶ್ವದಲ್ಲಿಯೇ ಅತಿದೊಡ್ಡದು. ಒಂಥರ ಫೋಟೊಗ್ರಫಿ ಒಲಂಪಿಕ್ಸ್ ಇದ್ದ ಹಾಗೆ.  

     ಮೊದಲು ಆ ಪುಟ್ಟ ಮಗುವಿನ ಚಿತ್ರವನ್ನು ನೋಡಿದಾಗ ಎಷ್ಟು ಚೆಂದವಿದೆ ಅನ್ನಿಸಿದರೂ ಈ ಎರಡನೇ ಚಿತ್ರದ ಅದ್ಬುತವೆನಿಸುವ ಜೀವಂತಿಕೆಯನ್ನು ನೋಡಿದರೆ ಮೊದಲ ಚಿತ್ರ ಇದರ ಮುಂದೆ ಸಪ್ಪೆಯಾಗಿಬಿಡುತ್ತದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರಿಯ ಮಟ್ಟದಲ್ಲಿ ಸ್ಪರ್ಧೆಗೆ ಬರುವ ಇಂಥಹ ಸಾವಿರಾರು ಚಿತ್ರಗಳನ್ನು ಫೋಟೊಗ್ರಫಿ ಜ್ಯೂರಿಗಳು ಇಂಥಹ ಮಾನದಂಡಗಳು ಅಂಶಗಳನ್ನಿಟ್ಟುಕೊಂಡೇ ಚಿತ್ರಗಳ ಗುಣಮಟ್ಟವನ್ನು ಗುರುತಿಸುತ್ತಾರೆ.

       ಈ ರೀತಿ ಕಲಾತ್ಮಕವಾಗಿ ಅಥವ ಆಳವಾಗಿ ಫೋಟೊವನ್ನು ಓದುವುದು ತುಂಬಾ ಚೆನ್ನಾಗಿದೆಯೆನ್ನಿಸುತ್ತದೆಲ್ಲವೇ......ಈ ಓದುವಿಕೆಯನ್ನು ನೀವು ಚೆನ್ನಾಗಿ ಕಲಿಯಬೇಕಾದಲ್ಲಿ ನೀವು ನಿರಂತರವಾಗಿ ಬರೆಯುತ್ತಿರಬೇಕು. ಅಂದರೆ ನಿರಂತರವಾಗಿ ಈ ಫೋಟೊಗ್ರಫಿ ಕಲೆಯನ್ನು ಪ್ರಾಕ್ಟಿಕಲ್ ಆಗಿ ಅಭ್ಯಾಸ ಮಾಡುತ್ತಿರಬೇಕು. 

   ಇನ್ನೊಂದು ವಿಚಾರವೇನೆಂದರೆ  ೧೯೩೦-೪೦-೫೦ರಲ್ಲಿ ಈಗಿನ ಇಷ್ಟು ಮುಂದುವರಿದ ತಂತ್ರಜ್ಞಾನದ ಎಳ್ಳಷ್ಟು ಜ್ಞಾನದ ಅರಿವಿಲ್ಲದ ಆ ಸಮಯದಲ್ಲಿ ಆಗ ಇದ್ದ ಕ್ಯಾಮೆರಗಳು, ನೆಗೆಟೀವುಗಳನ್ನು ಬಳಸಿಕೊಂಡು ತಮ್ಮ ಬುದ್ಧಿವಂತಿಕೆ, ಕ್ರಿಯಾಶೀಲತೆಯನ್ನು ಉಪಯೋಗಿಸಿ ಕ್ಲಿಕ್ಕಿಸಿ ತಾವೆ ಕತ್ತಲೆ ರೂಂ ನಲ್ಲಿ ಪ್ರಿಂಟ್ ಮಾಡಿ ಹತ್ತಾರು ದೇಶಗಳಿಗೆ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಕಳಿಸಿ ಬಹುಮಾನ ಗಳಿಸಿ ಕೊನೆಗೆ ಡಿಸ್ಟಿಂಕ್ಷನ್ ಪಡೆದಿದ್ದಾರಲ್ಲ ಅವರೆಲ್ಲ ನಮ್ಮ ಫೊಟೊಗ್ರಫಿ ಇತಿಹಾಸ ದಂತಕತೆಗಳು. ಅವರ ಫೋಟೊ ಕಲಾಕೃತಿಗಳು ಒಂಥರ ಶಾಸ್ತ್ರೀಯ ಸಂಗೀತದಂತೆ. ಅವು ಎಂದಿಗು ಅಜರಾಮರ. 

     ಅವರು ಕೂಡ ಮೊದಲು ವಿವರಿಸಿದಂತೆ ತಮ್ಮೊಳಗೆ ಗುನುಗುವ ಹಾಡುಗಳಂತೆ ತಮ್ಮಿಷ್ಟಕ್ಕೆ ಬಂದ ಫೋಟೊ ಕ್ಲಿಕ್ಕಿಸಿ ಈ ಪೋಟೊಗ್ರಫಿಯನ್ನು ಪ್ರಾರಂಭಿಸಿದ್ದು. ನಂತರ ಇಂದಿನ ಜನಪ್ರಿಯ ಡಿಪರೆ ಡಿಪಂಗ್ ನಂತ ಸೂರ್ಯಸ್ತ ಸೂರೋದಯ, ಅಮೇಲೆ ಹಳೆಯ ಎಂದೂ ಮರೆಯದ ಹಾಡುಗಳಂಥ ಫೋಟೋಗಳು. ಕೊನೆಯಲ್ಲಿ ಅತ್ಯುನ್ನತ ಶಾಸ್ತ್ರೀಯ ಸಂಗೀತದ ಮಟ್ಟದಂತ ಫೋಟೊಗ್ರಫಿ ಮಾಡಿ ದಂತಕತೆಯಾದರು. 
     ನಾವು ಅವರ ಮಟ್ಟಕ್ಕೆ ಹೋಗದಿದ್ದರೂ ಕೊನೇ ಪಕ್ಷ ಅರವತ್ತು ಎಪ್ಪತ್ತರ ದಶಕದ ಎಂದೂ ಮರೆಯದ ಹಾಡುಗಳ ಮಟ್ಟಕ್ಕಾದರೂ ತಲುಪುವ ಗುರಿ ಇಟ್ಟುಕೊಳ್ಳೋಣವೇ? 

       ಇಂಥ ಕಲಾತ್ಮಕ ಪೋಟೋಗ್ರಫಿ ಮಾಡುವುದರಿಂದ ಏನು ಉಪಯೋಗ? ಮುಂದಿನ ಲೇಖನದಲ್ಲಿ.

ಚಿತ್ರಗಳು ಮತ್ತು ಲೇಖನ
ಶಿವು.ಕೆ

  

Monday, October 17, 2011

ಫೋಟೊವನ್ನು ಓದುವುದು ಹೇಗೆ?-ಫೋಟೊಗ್ರಫಿ ಲೇಖನ ೯


      
        "ಯಡಿಯೂರಪ್ಪ ಚೇರಿನಿಂದ ಬೀಳುತ್ತಿರುವ ಫೋಟೊವನ್ನು ನನ್ನ ತಮ್ಮ ತುಂಬಾ ಚೆನ್ನಾಗಿ ತೆಗೆದಿದ್ದಾನೆ. ಅದನ್ನು ಈ ಸ್ಪರ್ಧೆಗೆ ಯಾಕೆ ಕಳಿಸಲಾಗುವುದಿಲ್ಲ?" ತಕ್ಷಣ ತೂರಿಬಂದ ಈ ಪ್ರಶ್ನೆಗೆ ರೈಲಿನಲ್ಲಿ ತೂಕಡಿಸುತ್ತಾ ಕುಳಿತಿದ್ದವನು ಎಚ್ಚರಗೊಂಡೆ.

      ಅಂದು ಬೆಳಿಗ್ಗೆ ಎಂಟು ಗಂಟೆಗೆ ಮಂಡ್ಯದಲ್ಲಿ ನಡೆಯುವ ಒಂದು ನಿಶ್ಚಿತಾರ್ಥ ಕಾರ್ಯಕ್ರಮದ ಫೋಟೊ ಮತ್ತು ವಿಡಿಯೋಗ್ರಫಿ ನಿಮಿತ್ತ ಹೋಗುವ ಸಲುವಾಗಿ ನಾನು ಮತ್ತು ವಿಡಿಯೋಗ್ರಫಿ ಗೆಳೆಯ ಶಿವಪ್ರಸಾದ್ ಹೋಗುತ್ತಿದ್ದೆವು.  ಹಿಂದಿನ ತಡವಾಗಿ ಮಲಗಿ ಬೆಳಿಗ್ಗೆ ಬೇಗ ನಾಲ್ಕಕ್ಕೆ ಎದ್ದು ಸಿದ್ದನಾಗಿ ದಿನಪತ್ರಿಕೆಯ ಕೆಲಸಗಳನ್ನು ಮುಗಿಸಿ ರೈಲಿನಲ್ಲಿ ಸೀಟು ಹಿಡಿದು ತೂಕಡಿಸುತ್ತಿದವನನ್ನು ಆ ಪ್ರಶ್ನೆ ಎಚ್ಚರಗೊಳಿಸಿತ್ತು.


       ಅವನ ಕಡೆ ನೋಡಿ "ಇನ್ನೊಮ್ಮೆ ಕೇಳಿ ನನಗೆ ನಿದ್ರೆ ಕಣ್ಣಿನಲ್ಲಿ ಗೊತ್ತಾಗಲಿಲ್ಲ" ಎಂದೆ.  ಆತ ಮತ್ತೆ ಕೇಳಿದರು.  ಹೌದಲ್ವಾ, ಇವರು ಕೇಳುತ್ತಿರುವುದಕ್ಕೆ ಉತ್ತರ ಸುಲಭವಾದರೂ ಅದನ್ನು ಸ್ವಲ್ಪ ಆಳವಾಗಿ ವಿಶ್ಲೇಷಣೆ ಮಾಡಿದರೆ ಏನಾದರೂ ಹೊಸತು ಹೊಳೆಯಬಹುದು ಅಂದುಕೊಂಡು ಸ್ವಲ್ಪ ಇರಿ ಮುಖಕ್ಕೆ ನೀರು ಹಾಕಿಕೊಂಡು ಬರುತ್ತೇನೆ ಅಂತ ಹೇಳಿ ಹೋಗಿ ಮುಖ ತೊಳೆದುಕೊಂಡು ಬಂದು ಮತ್ತೆ ಪ್ರಶ್ ಆಗಿ ಕುಳಿತೆ.


        "ನೋಡಿ ಅ ಫೋಟೊ ಪಿಕ್ಟೋರಿಯಲ್ ಫೋಟೊಗ್ರಫಿ ಆಗೊಲ್ಲ. ಅದಕ್ಕೆ ಸ್ಪರ್ಧಿಸುವುದಕ್ಕೆ ಆಗುವುದಿಲ್ಲ.  ಏಕೆ ಸ್ಪರ್ಧಿಸಲು ಆಗುವುದಿಲ್ಲ ಎನ್ನುವ ವಿಚಾರವನ್ನು ನಿಮಗೆ ಉದಾಹರಣೆ ಸಹಿತ ವಿವರಿಸುತ್ತೇನೆ,  ನೀವು ಪರೀಕ್ಷಾ ಹಾಲ್‍ನಲ್ಲಿ ಕುಳಿತು ವಿಜ್ಞಾನ ಪ್ರಶ್ನೆ ಪತ್ರಿಕೆಗೆ ಗಣಿತದ ಉತ್ತರಗಳನ್ನು ಬರೆದರೆ ನೀವು ಪಾಸ್ ಆಗುತ್ತೀರಾ?  ಅದು ನೇರವಾಗಿ ರೆಜೆಕ್ಟ್ ಆಗಿಬಿಡುತ್ತದೆ. ಹಾಗೆ ನಾವು ಫೋಟೊಗ್ರಫಿಗೆ ಸಂಭಂದಿಸಿದ ಆಯಾ ವಿಭಾಗದ ಸ್ಪರ್ಧೆಗಳಿಗೆ ಸರಿಯಾದ ಫೋಟೊಗಳನ್ನು ಕಳಿಸಬೇಕು.  ಒಂದು ವಿಭಾಗದ ಸ್ಪರ್ಧೆಗೆ ಮತ್ತೊಂದು ವಿಭಾಗಕ್ಕೆ ಸಂಭಂದಿಸಿದ ಚಿತ್ರವನ್ನು ಕಳಿಸಬಾರದು" ಎಂದೆ.

     ಹೌದಾ...ಆಯಾ ವಿಭಾಗಗಳು ಅಂದರೇನು ಸ್ವಲ್ಪ ವಿವರಿಸಿ ಹೇಳುತ್ತೀರಾ? ಮರುಪ್ರಶ್ನೆ ಹಾಕಿದರು?

     ಇದೇ ಪ್ರಶ್ನೆ ನಿಮ್ಮಲ್ಲೂ ಹೊಳೆದಿರಬೇಕಲ್ವ....ನೀವು ಎಲ್ಲೋ ಹೊರಗೆ ಪ್ರವಾಸಕ್ಕೋ ಅಥವ ಇನ್ನೆಲ್ಲೋ ರಸ್ತೆಯಲ್ಲಿ ಸಾಗುತ್ತಿರುತ್ತೀರಿ. ಅನಿರೀಕ್ಷಿತ ಘಟನೆಯೊಂದು ನಿಮ್ಮ ಕಣ್ಣ ಮುಂದೆ ನಡೆಯುತ್ತಿರುವಾಗ ನಿಮ್ಮ ಕೈಯಲ್ಲಿ ಕ್ಯಾಮೆರವಿದ್ದರೆ ಒಂದು ಚಿತ್ರವನ್ನು ತೆಗೆದಿರುತ್ತೀರಿ. ಆಗ ಅಲ್ಲಿನ ಕ್ಷಣವನ್ನೆಲ್ಲಾ ಅನುಭವಿಸಿದ್ದರಿಂದ  ನಿಮಗದು ಗ್ರೇಟ್ ಫೋಟೊಗ್ರಫಿ. ಅದೇ ಉತ್ಸಾಹದಲ್ಲಿ ನೀವು ಅಕಾಶದಷ್ಟು ಎತ್ತರದ ಉತ್ಸಾಹದಲ್ಲಿ ಅದನ್ನೊಂದು ಸ್ಪರ್ಧೆಗೆ  ಕಳಿಸುತ್ತೀರಿ.  ಆದ್ರೆ ಕೆಲವೇ ದಿನಗಳಲ್ಲಿ ಅದು ರೆಜೆಕ್ಟ್ ಆಗಿ ಬಂದಾಗ ನಿಮ್ಮ ಉತ್ಸಾಹ ಟುಶ್ ಪಟಾಕಿಯಾಗಿಬಿಟುತ್ತದೆ.  ಇಂಥ ಸಂದರ್ಭದಲ್ಲಿ ಗೊಂದಲವಾಗಿ ನೀರಿನಿಂದ ಹೊರಗಿಟ್ಟ ಮೀನಿನಂತೆ ಒದ್ದಾಡುತ್ತೀರಿ. ಕೆಲವೊಮ್ಮೆ ಹೀಗೆ ಆದಾಗ ಈ ಫೋಟೊಗ್ರಫಿ ಬಗ್ಗೆ ನಿಮಗೆ ಬೇಸರವಾಗಿಬಿಡುತ್ತದೆ ಅಲ್ವಾ...ನಾನು ಹೇಳಿದ್ದು ಎಲ್ಲಾ ನಿಜವೆನ್ನಿಸುತ್ತಿದೆಯಲ್ಲವೇ....

        ಈಗೇನು ಮಾಡಬಹುದು....

     ನನ್ನ ಗೆಳೆಯನ ಪ್ರಶ್ನೆ ಮತ್ತು ನಿಮ್ಮ ಪ್ರಶ್ನೆ, ಮತ್ತೆ ಹೊಸದಾಗಿ ಕಲಾತ್ಮಕ ಫೋಟೊಗ್ರಫಿ ಕಲಿಯಬೇಕೆನ್ನುವ ಪ್ರತಿಯೊಬ್ಬರ ಪ್ರಶ್ನೆಯೂ ಇದೇ ಆಗಿದೆ ಅಂದ ಮೇಲೆ ಇದಕ್ಕೆ ಉತ್ತರವನ್ನು ಕಂಡುಕೊಳ್ಳಬೇಕಲ್ಲವೇ!

       ಮೊದಲಿಗೆ ಕಲಾತ್ಮಕ ಫೋಟೊಗ್ರಫಿಯಲ್ಲಿ ಎಷ್ಟು ವಿಭಾಗಗಳಿವೆ ಎನ್ನುವ ವಿಚಾರವನ್ನು ಈ ಮೊದಲೇ ಹಿಂದಿನ ಲೇಖನದಲ್ಲಿ ವಿವರಿಸಿದ್ದೇನೆಯಾದ್ದರಿಂದ ಅದನ್ನು ಇಲ್ಲಿ ವಿವರಿಸುವ ಅಗತ್ಯವಿಲ್ಲ.   ಈ ವಿಚಾರಕ್ಕೆ ಸಂಭಂದಿಸಿದಂತೆ ಕೆಲವೊಂದು ಹೊಸ ವಿಚಾರಗಳನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ.

       ಮೊದಲಿಗೆ ನಾವೊಂದು ಫೋಟೊವನ್ನು ನೋಡಿದಾಗ ಮೆಚ್ಚುತ್ತೇವೆ. ಅದನ್ನು ಆಂಗ್ಲ ಭಾಷೆಯಲ್ಲಿ Photo appriciation  ಎನ್ನುತ್ತಾರೆ. ನೀವು ತೆಗೆದ ಪೋಟೊವನ್ನು ಮತ್ತೊಬ್ಬರು ಇಷ್ಟಪಟ್ಟಾಗ ನಿಮ್ಮ ಮನಸ್ಸಿನೊಳಗೆ ಖುಷಿಯುಂಟಾಗುತ್ತದೆ. ಅದನ್ನು ಹೊಗಳಿದಾಗ ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಎನಿಸುತ್ತದೆ. ನಿಮ್ಮ ಮುಂದಿನ ಪೋಟೋಗ್ರಫಿಗೆ ಸ್ಪೂರ್ತಿ ಸಿಗುತ್ತದೆ ಅಲ್ವಾ? ಆ ಸ್ಫೂರ್ತಿಯಿಂದಾಗಿ ಮತ್ತಷ್ಟು ಫೋಟೊಗ್ರಫಿಯಲ್ಲಿ ತೊಡಗಿಕೊಳ್ಳುತ್ತೀರಿ. ಅವು ಫೇಸ್‍ಬುಕ್, ಬಜ್, ಬ್ಲಾಗ್, ನಿಮ್ಮ ವೈಯಕ್ತಿಕ ವೆಬ್‍ಸೈಟುಗಳಲ್ಲಿ ಹಾಕಿಕೊಳ್ಳುತ್ತೀರಿ...ಈಗ ಮತ್ತೆ ನೂರಾರು Photo appriciation  ಸಿಗುತ್ತದೆ. ಮತ್ತೆ ನಿಮ್ಮ ಫೋಟೊಗಳನ್ನು ಪ್ರಿಂಟ್ ಮಾಡಿದ್ದರೆ ಅದನ್ನು ನೋಡಿದವರು ನಿಮ್ಮನ್ನು ಹೊಗಳುತ್ತಾರೆ. ಅಲ್ಲಿಗೆ ನಿಮ್ಮ ಖುಷಿ ಎವರೆಷ್ಟ್ ತುದಿ ತಲುಪಿರುತ್ತದೆ.

      ಎಲ್ಲಾ ಸರಿ ಇದೆಲ್ಲರಿಂದ ನಿಮಗೇನಾದ್ರೂ ಉಪಯೋಗವಾಯ್ತಾ?  ಅಂತ ನೀವು ಆ ಕ್ಷಣದಲ್ಲಿ ಪ್ರಶ್ನಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ. ಏಕೆಂದರೆ ನೀವು ಎಲ್ಲರ ಹೊಗಳಿಕೆಯ ತುಟ್ಟ ತುದಿಯಾದ ಎವರೆಸ್ಟ್ ತಲುಪಿರುತ್ತೀರಲ್ವಾ!  ಇದರಿಂದ ಸ್ಪೂರ್ತಿ ಎನ್ನುವ ಗುಣಾತ್ಮಕ ಅಂಶ ನಿಮ್ಮಲ್ಲಿ ಅಳವಡಿಸಿಕೊಂಡರೂ ಋಣಾತ್ಮಕ ಅಂಶ ನಿಮಗರಿವಿಲ್ಲದಂತೆ ನಿಮ್ಮನ್ನು ಸವಾರಿ ಮಾಡುತ್ತಿರುತ್ತದೆ. ಅದೆಂತ ಋಣಾತ್ಮಕ ವಿಚಾರವೆಂದು ನಿಮಗೆ ಸರಳವಾಗಿ ವಿವರಿಸಲು ಪ್ರಯತ್ನಿಸುತ್ತೇನೆ.

      ಮೊದಲಿಗೆ  ನಿಮ್ಮ ಫೋಟೊವನ್ನು ಮೆಚ್ಚುವವರು ಕೂಡ ನಿಮ್ಮ ಸ್ಥಿತಿಯಲ್ಲೇ ಇರುತ್ತಾರೆ. ಅವರೂ ಕೂಡ ನಿಮ್ಮಂತೆ  ನೋಡಿದ ಕ್ಷಣ ಅಚ್ಚರಿಯನ್ನು ವ್ಯಕ್ತಪಡಿಸುವಂತವರೇ ಅಗಿರುತ್ತಾರೆ.  ಇದೊಂತರ ಹೊಸತಾಗಿ ಬಿಡುಗಡೆಯಾದ ಮಾಸ್ ಸಿನಿಮಾ ಎಫೆಕ್ಟ್.  ಬದುಕಿನಲ್ಲಿ ಕುತೂಹಲ ಮತ್ತು ಅಚ್ಚರಿ ಇರಲೇಬೇಕು. ನಿಮ್ಮ ಚಿತ್ರಕ್ಕೆ ಅವರಿಗರಿವಿಲ್ಲದಂತೆ ಮೂಡಿಬಂದ ಆಶ್ಚರ್ಯ ನಿಜಕ್ಕೂ ಅದ್ಬುತ. ಆದ್ರೆ ಇನ್ನೊಬ್ಬರನ್ನು ಓಲೈಸಲು ಮೆಚ್ಚಿಸಲು ಮೂಡಿಬಂದ ಅಚ್ಚರಿಗಳಿಂದ ಮನುಷ್ಯ ನಿಂತ ನೀರಾಗಿಬಿಡುತ್ತಾನೆ.  ನಿಮ್ಮ ಫೋಟೋವನ್ನು ಬ್ಲಾಗ್, ಫೇಸ್‍ಬುಕ್, ಗೂಗಲ್ ಪ್ಲಸ್, ಆರ್ಕುಟ್, ಬಜ್ ಇತ್ಯಾದಿಗಳಲ್ಲಿ ಹೀಗೆ ನಿಮ್ಮನ್ನು ಓಲೈಸುವ ರೀತಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸುವುದರಿಂದ ನೀವು ಕೂಡ ಕಲಾತ್ಮಕ ಫೋಟೊಗ್ರಫಿ ಸಾಧನೆಯ ಹಾದಿಯಲ್ಲಿದ್ದಲ್ಲಿ ನಿಂತ ನೀರಾಗಿಬಿಡುವ ಸಾಧ್ಯತೆಯುಂಟು.  ನಿಂತ ನೀರು ಏನಾಗಬಹುದು? ಅದು ಕೂಳೆತು ನಾರಬಹುದು. ಹಾಗೆ ನಿಮ್ಮ ಫೋಟೊಗ್ರಫಿಯೂ ಕೊಳೆತು ನಾರುತ್ತಾ ಅಲ್ಲೇ ನಿಂತಿರಬಹುದು.

      ಈಗ ಹೇಳಿ ನೀವು ತೆಗೆದ ಫೋಟೊಗೆ ಅಫ್ರಿಷಿಯೇಷನ್ ಬೇಕಾ? ಬೇಡ ತಾನೆ! 

      ಆಗಾದ್ರೆ ಒಂದು ಪೋಟೊ ಚೆನ್ನಾಗಿದ್ದರೆ ಮೆಚ್ಚಿ ಹೊಗಳುವುದೇ ಬೇಡವೇನು? ಹೀಗೆ ಮತ್ತೊಂದು ಪ್ರಶ್ನೆ ನಿಮ್ಮಿಂದ ಬಂತಲ್ಲ?

      ಈ ಪ್ರಶ್ನೆಗೆ ಉತ್ತರವನ್ನು ಹೀಗೆ ಕಂಡು ಕೊಳ್ಳಲು ಪ್ರಯತ್ನಿಸೋಣ.

      ಮೊದಲಿಗೆ ಆಂಗ್ಲ ಭಾಷೆಯ ಪೋಟೊ ಅಪ್ರಿಷಿಯೇಷನ್ ಪದವನ್ನು ನಾನು ಹೀಗೆ "ಫೋಟೊನಾ ಓದುವುದು" ಅಂತ ಕನ್ನಡಕ್ಕೆ ಹೀಗೆ ಅನುವಾದಿಸಿದ್ದೇನೆ. ಫೋಟೊವನ್ನು ಹೊಗಳುವುದು ಅನ್ನುವುದಕ್ಕಿಂತ "ಫೋಟೊ ಓದುವುದು" ಎನ್ನುವ ಪದ ಹೇಗೆ ಸೂಕ್ತ ಎನ್ನುವುದು ಮುಂದೆ ನಿಮಗೇ ತಿಳಿಯುತ್ತದೆ. 

      ಈ "ಫೋಟೊ ಓದುವುದು" ವಿಚಾರದಲ್ಲಿ ಎರಡು ವಿಧ.

      ಮೊದಲನೆಯದು ಮೇಲುನೋಟಕ್ಕೆ ಓದುವುದು

      ಎರಡನೆಯದು ಆಳವಾಗಿ ಓದುವುದು ಅಥವ ಕಲಾತ್ಮಕವಾಗಿ ಓದುವುದು
    
      ಮೇಲು ನೋಟಕ್ಕೆ ಓದುವುದು ಅಂದರೆ ಒಂದರ್ಥದಲ್ಲಿ ಫೋಟೊವನ್ನು ನೋಡಿದ ತಕ್ಷಣ ಮೆಚ್ಚುವುದು ಎಂದರ್ಥ. ಇದನ್ನು ಓದಲು ಅಥವ ಮೆಚ್ಚಲು ಫೋಟೋಗ್ರಫಿ ಭಾಷೆಯನ್ನು ಕಲಿಯಬೇಕೆಂದಿಲ್ಲ ಕಣ್ಣ ಭಾಷೆಯೇ ಸಾಕು. ಇದನ್ನು ಯಾರು ಯಾರು ಓದಬಹುದು ಅಥವ ಮೆಚ್ಚಬಹುದು?  ಪ್ರಪಂಚದಲ್ಲಿ ಕಣ್ಣಿರುವ ಪ್ರತಿಯೊಬ್ಬರೂ ಮೆಚ್ಚಬಹುದು..

      ಈ ಮೆಚ್ಚುವಿಕೆ ಎನ್ನುವ ಪದ ಸಾಮಾನ್ಯವೇನಲ್ಲ ಕಣ್ರಿ....ಇದೊಂತರ ಪಕ್ಕಾ ಚಂಚಲವೇ ಸರಿ.  ಕೆಲವು ಉದಾಹರಣೆಗಳನ್ನು ಕೊಡುತ್ತಾ ವಿವರಿಸುತ್ತೇನೆ. ನೀವು ಕುಟುಂಬ ಸಮೇತರಾಗಿ ಒಂದು ಪ್ರವಾಸ ಹೋಗಿ ಅಲ್ಲಿ ನೂರಾರು ಫೋಟೊಗಳನ್ನು ಕ್ಲಿಕ್ಕಿಸಿರುತ್ತೀರಿ.  ಅದೇ ಕ್ಯಾಮೆರದಲ್ಲಿ ನಿಮ್ಮ ತಂದೆ ತಾಯಿ ಹೆಂಡತಿ ಮಕ್ಕಳು ಎಲ್ಲಾ ಫೋಟೊ ತೆಗೆಯುತ್ತಾರೆ. ಮನೆಗೆ ಬಂದು ಆ ಫೋಟೊಗಳನ್ನು ನೋಡಿದಾಗ ನೀವು ತೆಗೆದ ಫೋಟೊಗಳನ್ನು ನಿಮ್ಮ ಶ್ರೀಮತಿ ಮೆಚ್ಚುವುದಿಲ್ಲ. ನಿಮ್ಮ ಮಗ ಕ್ಲಿಕ್ಕಿಸಿದ ಫೋಟೊವನ್ನು ನೀವು ಮೆಚ್ಚುವುದಿಲ್ಲ. ನೀವು ತೆಗೆದ ಫೋಟೊನಾ ನಿಮ್ಮ ತಾಯಿ ತಂದೆ ಮೆಚ್ಚುವುದಿಲ್ಲ.  ಇದಕ್ಕೆ ಕಾರಣಗಳು ಹಲವು.  ನಿಮ್ಮ ಮನಸ್ಸಿಗೆ ಪ್ರಕೃತಿ ಇಷ್ಟವಾಗಿದ್ದರೆ ಅದರ ಹಿನ್ನೆಲೆಯಲ್ಲಿ ನಿಮ್ಮ ಕುಟುಂಬದ ಸದಸ್ಯರನ್ನು ನೀವು ಕ್ಲಿಕ್ಕಿಸುವ ಫೋಟೊದಲ್ಲಿ ಸಣ್ಣದಾಗಿ ಕಾಣಿಸುವಂತೆ ಮಾಡಿ ಹಿನ್ನೆಲೆ ಪ್ರಕೃತಿಯನ್ನು ದೊಡ್ಡದಾಗಿ ತೆಗೆದಿರುತ್ತೀರಿ.  ಇಷ್ಟಪಟ್ಟು ಹೋಗಿ ಬಂದ ಪ್ರವಾಸದಲ್ಲಿ ಅವರೆಲ್ಲರ ಮುಖಗಳು ದೊಡ್ಡದಾಗಿ ಮತ್ತು ಚೆಂದಾಗಿ ಕಾಣಬೇಕೆಂದು ಆಸೆಪಟ್ಟಿರುವ ವಿಚಾರ ನಿಮಗೆ ತಿಳಿಯದೆ ಅದಕ್ಕೆ ತದ್ವಿರುದ್ಧವಾಗಿ ನಿಮಗಿಷ್ಟವಾದ ಪ್ರಕೃತಿಯನ್ನು ಹೈಲೈಟ್ ಮಾಡಿ ಇವರನ್ನೆಲ್ಲಾ ಸಣ್ಣದಾಗಿ ಮಾಡಿದರೆ ಅವರು ಹೇಗೆ ಮೆಚ್ಚಲು ಸಾಧ್ಯ?   ಮತ್ತೆ ಇದೇ ಪ್ರವಾಸದಲ್ಲಿ ನಿಮ್ಮೆಲ್ಲರ ಮುಖಗಳು ಫೋಟೊದಲ್ಲಿ ತುಂಬಾ ಚೆಂದವಾಗಿ ಕಾಣಬೇಕೆಂದುಕೊಂಡ ನಿಮ್ಮ ತಂದೆಯವರು ನಿಮಗಿಷ್ಟವಾದ ಪ್ರಕೃತಿಯನ್ನು ಕಡೆಗಾಣಿಸಿರುವುದು ನಿಮಗಿಷ್ಟವಾಗುವುದಿಲ್ಲ.  ಈ ರೀತಿ ಏಕೆ ಆಗುತ್ತದೆಯೆಂದರೆ ಅವರು ಬಾಲ್ಯದಲ್ಲಿ ಬೆಳೆದ ರೀತಿ, ಹಿನ್ನೆಲೆ, ಅವರು ಇಷ್ಟಪಡುವ ಬಣ್ಣ, ಸಂಸ್ಕೃತಿ, ಕಲಿಕೆಯ ಅಧ್ಯಾಯನ ಇತ್ಯಾದಿಗಳು ಅವರ  ಫೋಟೊಗ್ರಫಿ ಅಭಿರುಚಿಯನ್ನು ರೂಪಿಸಿರುತ್ತವೆ. ಆದ್ರೆ ನಿಮ್ಮ ಅಭಿರುಚಿಯು ಅವರಂತೆ ಇಲ್ಲ. ಇದಕ್ಕೆ ವಯಸ್ಸಿನ ಅಂತರ, ನೀವು ಬೆಳೆದ ವಾತಾವರಣ, ನಿಮ್ಮ ಗೆಳೆಯರ ಬಳಗ, ನೀವು ಮೆಚ್ಚುವ ಬಣ್ಣ ಇತ್ಯಾದಿಗಳು ಕಾರಣ.  ಹೀಗೆ ಇದು ನಿಮ್ಮ ಶ್ರೀಮತಿ, ತಾಯಿ, ಮಗಳು...ಹೀಗೆ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಅನ್ವಯವಾಗುತ್ತದೆ.  ಇದರಾಚೆ ನಿಮ್ಮ ಗೆಳೆಯರು, ನಿಮ್ಮ ಕೆಲಸ ಬಾಸ್, ಸೆಕ್ಯುರಿಟಿ,...ಹೀಗೆ ನಿಮ್ಮ ಬದುಕಿನಲ್ಲಿ ದೂರದ ಕಟ್ಟಕಡೆಯ ಗೆಳೆಯ ಗೆಳತಿಯವರೆಗೆ ವ್ಯತ್ಯಾಸವಾಗುತ್ತ ಹೋಗುತ್ತದೆ. ಇದು ನಿಮ್ಮೊಬ್ಬರ ವಿಚಾರವಾಯಿತು.  ಇದನ್ನು ವಿಸ್ತಾರವಾಗಿ ನೋಡಿದರೆ...ಈ ಜಗತ್ತಿನಲ್ಲಿ ಕಣ್ಣ ಭಾಷೆ ಹೊಂದಿರುವ ಎಂಟು ನೂರು ಕೋಟಿ ಜನರ  ಫೋಟೊಗ್ರಫಿ ಅಭಿರುಚಿಗಳು ಒಬ್ಬರಿಗಿಂತ ಮತ್ತೊಬ್ಬರದು ವಿಭಿನ್ನವಾಗಿದೆ ಎನ್ನುವ ವಿಚಾರವನ್ನು ನಾವು ಒಪ್ಪಿಕೊಳ್ಳಲೇಬೇಕು. ಇದೇ ರೀತಿ ನಿಮ್ಮ ಮದುವೆ ಫೋಟೊಗಳು, ನಿಮ್ಮ ಮನೆಯಲ್ಲಿ ನಡೆದ ಸಂಭ್ರಮದ ಕಾರ್ಯಕ್ರಮಗಳು, ಇವುಗಳನ್ನೆಲ್ಲಾ ನಿಮ್ಮ ಮನೆಮಂದಿಯೊಂದಿಗೆ ಗೆಳೆಯರೊಂದಿಗೆ ಮನೆಗೆ ಬಂದ ನೆಂಟರುಗಳಿಗೆ ತೋರಿಸಿ ನೀವು ಸಂತೋಷ ಪಡುತ್ತೀರಿ. ಕಂಪ್ಯೂಟರ್, ಇಂಟರ್‍ನೆಟ್, ಬ್ಲಾಗ್, ಬಜ್, ಫೇಸ್‍ಬುಕ್, ಆರ್ಕುಟ್, ಗೂಗಲ್ ಪ್ಲಸ್, ಇವೆಲ್ಲ ಗೊತ್ತಿರುವವರು ಅವುಗಳಲ್ಲಿ ತಾವು ಕ್ಲಿಕ್ಕಿಸಿದ್ದ ಚಿತ್ರಗಳನ್ನು ಹಾಕಿ ಸಂತೋಷಪಡುತ್ತಾರೆ.

     ನಿನ್ನಿಚ್ಛೆಯಂತೆ ನೀನು ಬದುಕು ಎನ್ನುವಂತೆ ನೀವು ಕ್ಲಿಕ್ಕಿಸಿದ ಫೋಟೊಗಳನ್ನು ಬೇರೆಯವರು ಒಪ್ಪಿಕೊಳ್ಳದಿದ್ದರೇನಂತೆ...ನಿಮಗದು ಇಷ್ಟವಾಯ್ತು ಅದಕ್ಕೆ ಫೋಟೊ ತೆಗೆದಿದ್ದೀರಿ. ಇದೊಂತರ ನೀವು ಮನೆಯಲ್ಲಿ ಒಬ್ಬರೇ ಇದ್ದಾಗ ಅಥವ ಏಕಾಂಗಿಯಾಗಿ ಕೆಲಸ ಮಾಡುವಾಗ ನಿಮಗಿಷ್ಟವಾದ ಹಾಡನ್ನು ಗುನುಗುತ್ತಿರುವುದಿಲ್ಲವೇ...ಇದನ್ನು ಯಾರು ಮೆಚ್ಚಬೇಕು ಎಂದು ನೀವು ಗುನುಗುವುದಿಲ್ಲ ತಾನೆ.  ಹೀಗೆ ಈ ಹಾಡು ಅಥವ ಈ ಫೋಟೊ ಅಭಿರುಚಿ ಪ್ರಪಂಚದಾದ್ಯಂತ ಸ್ಥಳದಿಂದ ಸ್ಥಳಕ್ಕೆ ಪ್ರದೇಶದಿಂದ ಪ್ರದೇಶಕ್ಕೆ ದೇಶದಿಂದ ದೇಶಕ್ಕೆ ಬದಲಾಗುತ್ತ ಹೋಗುತ್ತದೆ.

   ಈಗ ಮತ್ತೊಂದು ಹೆಜ್ಜೆ ಮುಂದುವರಿದು ಇದರಲ್ಲಿ ಕೆಲವರು ಮೆಚ್ಚುವ ಫೋಟೊಗಳ ಬಗ್ಗೆ ಕೆಲವು ಉದಾಹರಣೆಗಳ ಮೂಲಕ ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.

       ಇದೇ ಪ್ರವಾಸದಲ್ಲಿ ಕ್ಲಿಕ್ಕಿಸಿದ ಕೆಲವು ಫೋಟೊಗಳು ಎಲ್ಲರಿಗೂ ಇಷ್ಟವಾಗುತ್ತವೆ. ಅದು ನೀವು ಕ್ಲಿಕ್ಕಿಸಿದ್ದ ಫೋಟೊಗಳು ಮಾತ್ರವಲ್ಲದೇ ನಿಮ್ಮ ತಂದೆ ತಾಯಿ, ಶ್ರೀಮತಿ, ಮಗ, ಮಗಳು, ಗೆಳೆಯ...ಹೀಗೆ ಎಲ್ಲರೂ ಕ್ಲಿಕ್ಕಿಸಿದ್ದ ಫೋಟೊಗಳು ಇರುತ್ತವೆ. ಇದಕ್ಕೆ ಕಾರಣವೇನೆಂದು ತಿಳಿಯೋಣ.  ಮನುಷ್ಯನ ಮನಸ್ಸು ತಮ್ಮ ನಿಲುವು ತಮ್ಮತನದ ಮನಸ್ಥಿತಿಯ ಜೊತೆಗೆ ಇತರರೊಂದಿಗೆ ಪ್ರೀತಿ, ಗೆಳೆತನ, ಭಾಂಧವ್ಯ, ಮಮತೆ ವಾತ್ಸಲ್ಯ....ಹೀಗೆ ಅನೇಕ ಸಂಭಂಧಗಳನ್ನು ಹೊಂದಿರುತ್ತದೆ. ಹಾಗೆ ನಮ್ಮ ಹೊರಪ್ರಪಂಚದ ಪ್ರಕೃತಿಯೊಂದಿಗೆ ಬದುಕುತ್ತಿರುವ ನಮಗೆ ಅದರೊಂದಿಗೆ ಅಂತದ್ದೇ ಸಂಭಂದಗಳನ್ನು ಹೊಂದಿರುತ್ತೇವೆ. ನೀವು ಕ್ಲಿಕ್ಕಿಸಿದ್ದ ಫೋಟೊದಲ್ಲಿ ಈ ಪ್ರೀತಿ, ನಗು, ಮಮತೆ ಭಾಂದ್ಯವ್ಯ..ಗಳ ಪ್ರಕೃತಿಯ ಜೊತೆಗೂ ನಿಮಗಿರುವ ಒಲವನ್ನು ನಿಮ್ಮ ಕ್ಲಿಕ್ಕಿಸಿರುವ ಫೋಟೊದಲ್ಲಿ ತೋರಿಸಿದ್ದರೆ ಅದು ನಿಮ್ಮ ಕುಟುಂಬದವರಿಗೆ ಮತ್ತು ಇತರ ಗೆಳೆಯರಿಗೆ ಮೆಚ್ಚುಗೆಯಾಗುತ್ತದೆ.  ಮತ್ತೆ  ಇಂಥ ಚಿತ್ರಗಳು ತಾಂತ್ರಿಕತೆಯಿಂದ ಕೂಡಿರಬೇಕೆಂದಿಲ್ಲ. ಮತ್ತೆ ಪ್ರಕೃತಿ ಸೌಂದರ್ಯದ ವಿಚಾರವಾದ ಸೂರ್ಯಾಸ್ತ, ಸೂರ್ಯೋದಯ, ಬಣ್ಣದ ಮೋಡಗಳ ಆಟ, ಹಸಿರು ತುಂಬಿದ ಬೆಟ್ಟಗುಡ್ಡಗಳು, ನದಿ ಸರೋವರಗಳು, ಕಡಲ ಕಿನಾರೆಗಳು, ಒಂದೇ ಎರಡೇ ಹೀಗೆ ಸಾವಿರಾರು ಸೊಗಸಾದ ಚಿತ್ರಗಳನ್ನು ನೀವು ಕ್ಲಿಕ್ಕಿಸುತ್ತೀರಿ. ಇವು ಸಹಜವಾಗಿ ನಿಮ್ಮ ಕುಟುಂಬ ಗೆಳೆಯರು ಮೆಚ್ಚುತ್ತಾರೆ. ಹಾಗೆ ಫೇಸ್‍ಬುಕ್, ಬಜ್, ಆರ್ಕುಟ್, ಗೂಗಲ್ ಪ್ಲಸ್, ಬ್ಲಾಗ್ ಇತ್ಯಾದಿಗಳಲ್ಲಿ ಹಾಕಿದ ತಕ್ಷಣ ಬೇರೆಯವರು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.  ಕಾರಣವೇನೆಂದರೆ ಎಲ್ಲರ ಮನಸ್ಥಿತಿಯೂ ಈ ಪ್ರಕೃತಿಯ ಸೌಂದರ್ಯಕ್ಕೆ ತಕ್ಷಣ ಸ್ಪಂದಿಸುತ್ತದೆ.  ಇದೊಂತರ ನಮ್ಮ ಇವತ್ತಿನ ಯೋಗರಾಜ ಬಟ್ಟರ "ಕತ್ತಲಲ್ಲಿ ಕರಡೀಗೆ ಯಾವತ್ತು ಜಾಮೂನು, ಯಾವನ್ನಿಗೆ ಗೊತ್ತು, ಚಂಬೇಶ್ವರ, ಈ ಕುರಿ ಕೋಳಿನ ಸೋಮವಾರ ಶನಿವಾರ, ಹೊಸ ಗಾನಬಜಾನ, ಉಪೇಂದ್ರ ಸಿನಿಮಾ ಹಾಡುಗಳು...ಒಟ್ಟಾರೆ ಇವತ್ತಿನ ಜನಪ್ರಿಯ ಹಾಡುಗಳ ಹಾಗೆ ಇಷ್ಟವಾಗಿಬಿಡುತ್ತವೆ.  ಈಗಿನ ವಿಚಾರ ಮಾತ್ರ ಅಲ್ಲ  ಅಂದಂದಿನ ಕಾಲದಲ್ಲಿ ಯಾವ ಟ್ರೆಂಡುಗಳಿದ್ದವೋ ಅಂತವೇ ಜನಪ್ರಿಯ ಹಾಡುಗಳಿದ್ದವಲ್ಲ ಹಾಗೆ ಈ ಪೋಟೋಗ್ರಫಿ ಮೆಚ್ಚುಗೆಯೆನ್ನುವುದು ಎಲ್ಲಾ ಕಾಲಕ್ಕು ಪ್ರಸ್ತುತವೆನಿಸುತ್ತದೆ. ನಾನು ಮೊದಲು ತಿಳಿಸಿದ ಹಾಗೆ ಇದೊಂತರ ಮಾಸ್ ಸಿನಿಮಾ ಎಫ಼ೆಕ್ಟ್.

       ಆದ್ರೆ ಮತ್ತೊಂದು ವಿಚಾರ ನಿಮಗೆ ಗೊತ್ತಿರಲಿ. ಈ ಜನಪ್ರಿಯ ಹಾಡುಗಳ ಆಯುಸ್ಸು ಕೇವಲ ಎರಡು ಮೂರು ತಿಂಗಳು. ಹೆಚ್ಚೆಂದರೆ ಆರು ತಿಂಗಳಷ್ಟೆ.  "ಹೊಸ ಗಾನ ಬಜಾನ" ಹಾಡನ್ನು "ಡಿಪ್ಪರೆ ಡಿಪಂಗು" ಮರೆಯುವಂತೆ ಮಾಡುತ್ತದೆ. ಡಿಪರೆ ಡಿಪಂಗನ್ನು  ಚಂಬೇಶ್ವರ ಮರೆಸುತ್ತದೆ"  ಇದನ್ನು ಮರೆಯುವಂತೆ ಇನ್ನೊಂದು ಕಾದಿರುತ್ತದೆ ತಾನೆ. ಈ ಜನಪ್ರಿಯ ಹಾಡುಗಳಿದ್ದಂತೆ ಈ ಫೋಟೊಗಳು ಕೂಡ. ನೋಡಿದ ತಕ್ಷಣ ಮೆಚ್ಚುಗೆ ಸೂಚಿಸುವಂತೆ ಮಾಡುತ್ತವೆ. ಮನಸ್ಸಿಗೆ ಒಂಥರ ಇಷ್ಟವಾಗಿ ಟೆಂಪ್ಟ್ ಮಾಡುತ್ತವೆ.  ಇದೇ ಕಾರಣಕ್ಕೆ ನಮ್ಮ ಫೇಸ್‍ಬುಕ್ ಫೋಟೋ ಟಾಕ್, ಬಜ್, ಆರ್ಕುಟ್, ಗೂಗಲ್ ಪ್ಲಸ್, ಬ್ಲಾಗ್ ಇತ್ಯಾದಿಗಳಲ್ಲಿ ಒಬ್ಬರ ಫೋಟೊಗೆ ಮತ್ತೊಬ್ಬರು ಸೂಪರ್, ಗ್ರೇಟ್, ತುಂಬಾ ಚೆನ್ನಾಗಿದೆ, ನೈಸ್, ಇತ್ಯಾದಿ ಕಾಮೆಂಟುಗಳನ್ನು ಹಾಕಿ ಮೆಚ್ಚುಗೆ ವ್ಯಕ್ತಪಡಿಸುವಂತೆ ಮಾಡುತ್ತವೆ.

   ನಿಮಗೀಗ ಫೋಟೊವನ್ನು ಮೇಲು ನೋಟಕ್ಕೆ ಓದುವುದು ಹೇಗೆಂದು ಗೊತ್ತಾಗಿರಬೇಕು.

   ಮತ್ತೆ ಎರಡನೆ ವಿಧಾನವಾದ ಫೋಟೊಗ್ರಫಿಯನ್ನು ಆಳವಾಗಿ ಓದುವುದು ಅಥವ ಕಲಾತ್ಮಕವಾಗಿ ಓದುವುದು ಹೇಗೆ?

  ಎನ್ನುವ ಕಲಾತ್ಮಕ ಫೋಟೊಗ್ರಫಿಯಲ್ಲೇ ಅತಿ ಮುಖ್ಯವಾದ ವಿಚಾರ ಮುಂದಿನ ಭಾಗದಲ್ಲಿ.....



ಶಿವು.ಕೆ