"ಸಾರ್ ನನ್ ಪೇರ್ ವಿಮಲ್ ಸರ್" ಅಂತ ಪರಿಚಯಿಸಿಕೊಂಡ ಅವನಿಗೆ ಮೊದಲೇ ಹೇಳಿದಂತೆ ನಮ್ಮ ಸಮಯವನ್ನು ಅವನಿಗೆ ಮನದಟ್ಟಾಗುವಂತೆ ಹೇಳಿದೆವು. ಉತ್ಸಾಹಿ ೨೨-೨೩ ವಯಸ್ಸಿನ ಯುವಕನಾದ್ದರಿಂದ ನಮ್ಮ ಮಾತಿಗೆ ಓಕೆ ಅಂದ.
"ನಾಳೆ ಮಾರ್ನಿಂಗ್ ಆರು ಮನಿಕ್ಕೂ ನೀ ಪಕ್ಕಾ ವಾ’ ಅಂದೆ.
"ಆಯ್ಚಿ ಸರ್". ಅಂದು ಅವನು ಅಲ್ಲಿಂದ ಹೋಗಿಬಿಟ್ಟ. ಮುನ್ನಾರು ಸುತ್ತಾಡಲು ಟ್ಯಾಕ್ಸಿಗಳು ಮತ್ತು ಆಟೋಗಳು ಸಿಗುತ್ತವೆ. ಟ್ಯಾಕ್ಸಿಗಳ ಬಾಡಿಗೆ ದುಬಾರಿ. [ಮುನ್ನಾರು ಕೇರಳದ ಇಡುಕ್ಕಿ ಜಿಲ್ಲೆಯ ರಾಜಧಾನಿಯಾದರೂ ಮತ್ತು ಮುಖ್ಯ ಆಧಾಯ ಪ್ರವಾಸೋದ್ಯಮವೇ ಆಗಿರುವುದರಿಂದ ಅಲ್ಲಿರುವ ಟ್ಯಾಕ್ಸಿ ಮತ್ತು ಆಟೋ ಚಾಲಕರೆಲ್ಲಾ ತಮಿಳುನಾಡಿನಿಂದ ಬಂದವರೇ ಇರಬೇಕು. ಅದಕ್ಕೆ ಎಲ್ಲರೂ ತಮಿಳು ಮಾತಾಡುತ್ತಾರೆ. ] ಅದಕ್ಕೆ ನಾವು ಆಟೋಗಳನ್ನು ಆಯ್ಕೆ ಮಾಡಿಕೊಂಡಿದ್ದೆವು. ಜೊತೆಗೆ ಘಟ್ಟದ ಸಣ್ಣ ಅಂಕುಡೊಂಕಿನ ರಸ್ತೆಗಳಲ್ಲಿ ಬೇಕಾದ ಕಡೆ ಹೋಗಲು, ಮತ್ತೆ ಬೇಡವೆಂದ ಜಾಗದಿಂದ ವಾಪಸ್ ತಿರುಗಲು ಕಾರಿಗಿಂತ ಆಟೋ ಸುಲಭವೆಂದು ಜೊತೆಗೆ ತುಟ್ಟಿಯೇನಲ್ಲವೆನಿಸಿದ್ದರಿಂದ ನಮ್ಮ ಸುತ್ತಾಟಕ್ಕೆ ಆಟೋವನ್ನೇ ಅಯ್ಕೆ ಮಾಡಿಕೊಂಡಿದ್ದೆವು. ಅವತ್ತು ಸಂಜೆ ಬೇರೆಲ್ಲೂ ಹೋಗದೇ ಸುಮ್ಮನೇ ರೂಮಿನಲ್ಲಿ ವಿಶ್ರಾಂತಿ ಪಡೆದುಕೊಂಡೆವು. ಸಂಜೆ ಸ್ವಲ್ಪ ಹೊರಗೆ ಸುತ್ತಾಡೋಣ ಎಂದು ನಮ್ಮ ಆಯುಧಗಳಾದ ಕ್ಯಾಮೆರಗಳನ್ನು ಹೊತ್ತು ಮಾರುಕಟ್ಟೆ, ಇತರ ಹೋಟಲ್ಲುಗಳು, ಅಲ್ಲಿನ ವಾತಾವರಣ, ಸಿಗುವ ವಸ್ತುಗಳು, ಇವೆಲ್ಲವನ್ನು ತಿಳಿದುಕೊಂಡಂತೆ ಆಗುತ್ತದೆ ಅನ್ನುವುದು ನಮ್ಮ ಉದ್ದೇಶ.
ಮಂಜುನಾಥನೆಂಬ ಮಂಜುವಿನದು ಸ್ವಲ್ಪ ವಿಭಿನ್ನ ವ್ಯಕ್ತಿತ್ವ. ಅವನ ಮುಖ್ಯ ಉದ್ಧೇಶ ಫೋಟೋಗ್ರಫಿಯಾದರೂ, ಆವನಿಗೆ ಟ್ರಕ್ಕಿಂಗ್, ಜಾಗಿಂಗ್ ಇತ್ಯಾದಿಗಳ ಬಗ್ಗೆ ಆಸಕ್ತಿ ಹೆಚ್ಚು. ಅಲ್ಲೇ ಹತ್ತಿರದಲ್ಲಿದ್ದ ಮುನ್ನಾರ್ ಮಾಹಿತಿ ಕೇಂದ್ರ ಮಂಜು ಕಣ್ಣಿಗೆ ಬಿತ್ತು. ಅವರು ಕೊಡುವ ಮಾಹಿತಿಗಳ್ಯಾವುದು ನಮಗೆ ಉಪಯೋಗವಾಗುವುದಿಲ್ಲವೆಂದು ಹೇಳಿದರೂ ಕೇಳದೇ ಅಲ್ಲಿರುವ ಮುನ್ನಾರ್ ಪ್ರವಾಸಿ ಮಾಹಿತಿ ಕೇಂದ್ರಕ್ಕೆ ನುಗ್ಗೇ ಬಿಟ್ಟ. ಆಯ್ತು ನೀನು ವಿಚಾರಿಸುತ್ತಿರು ನಾವು ಇಲ್ಲೇ ಮಾರುಕಟ್ಟೆ ಸುತ್ತಾಡಿ ಬರುತ್ತೇವೆ ಅಂತ ನಾನು ಮತ್ತು ಮಲ್ಲಿ ಹೊರಟೆವು. ನಾವು ವಾಪಸ್ ಬರುವ ಹೊತ್ತಿಗೆ ನಮಗೆ ರಾತ್ರಿ ಊಟದ ಸ್ಥಳ ಇನ್ನಿತರ ವಿಚಾರಗಳೊಂದಿಗೆ ರೂಮಿಗೆ ಬಂದೆವು. ಮಂಜು ಇನ್ನೂ ಬಂದಿರಲಿಲ್ಲ. ಅವನು ಹೋಗಿದ್ದ ಮಾಹಿತಿ ಕೇಂದ್ರಕ್ಕೆ ಹೋಗಿ ವಿಚಾರಿಸಿದಾಗ ನಿಮ್ಮ ಗೆಳೆಯ ಆಗಲೇ ಯಾರ ಜೊತೆಗೆ ಹೋದರು ಅಂತ ಹೇಳಿದರು. ನಮ್ಮನ್ನು ಬಿಟ್ಟರೆ ಈ ಮುನ್ನಾರಿನಲ್ಲಿ ಇನ್ಯಾರು ಇವನ ಹೊಸ ಗೆಳಯರು ಅಂದುಕೊಂಡರೂ ನನ್ನಂತೆ ಸಕಲ ಚರಾಚರಗಳನ್ನು ಮಾತಾಡಿಸಿ ಗೆಳೆತನ ಸಂಪಾದಿಸುವ ಕಲೆ ಅವನಲ್ಲಿ ಸಿದ್ಧಿಸಿರುವುದು ನನಗೆ ಗೊತ್ತಿತ್ತು. ಅವನಲ್ಲಿನ ಮತ್ತೊಂದು ವಿಶೇಷ ಗುಣವೆಂದರೆ ಯಾರಾದರೂ ಹೊಸಬರು ಸಿಕ್ಕರೇ ಜೊತೆಯಲ್ಲಿ ಬಂದವರನ್ನು ಮರೆತುಬಿಡುವಂತ ಕಲ್ಯಾಣಗುಣವೂ ಅವನಿಗೆ ಒಲಿದಿತ್ತು. ಅಂತ ಅನೇಕ ಆನುಭವಗಳು ನನಗೆ ಈಗಾಗಲೇ ಆಗಿದ್ದರಿಂದ ಸ್ವಲ್ಪ ದಿಗಿಲು ಕೂಡ ಆಗಿತ್ತು. ಫೋನ್ ಮಾಡೋಣವೆಂದರೆ ಸ್ವಿಚ್ ಆಪ್ ಬರುತ್ತಿತ್ತು. ಈಗ ಏನು ಮಾಡುವುದು ಅಂದುಕೊಳ್ಳುತ್ತಿರುವಾಗಲೇ ಅವನ ಆಗಮನವಾಯಿತು. ಅವನನ್ನು ನೋಡಿದ ಮೇಲೆ ಸ್ವಲ್ಪ ಸಮಧಾನವಾದರೂ, ಸಹಜವಾಗಿಯೇ ಅವನ ಮೇಲೆ ಸಿಟ್ಟು ಬಂದಿತ್ತು. ಅದನ್ನು ಅವನು ಗುರುತಿಸಿದನೇನೋ, ಬರುತ್ತಲೇ
" ಸಾರಿ ಗುರು ಲೇಟಾಗಿ ಹೋಯ್ತು. ಆದ್ರೆ ನಾನೊಂದು ಸೂಪರ್ ಪ್ಲಾನ್ ಮಾಡಿಕೊಂಡು ಬಂದಿದ್ದೇನೆ, ನನಗೊಬ್ಬ ಟ್ರೈಬ್ ಸಿಕ್ಕಿದ್ದ, ಅವನನ್ನು ನೋಡಿದ್ರೆ ಟ್ರೈಬಲ್ ಅನ್ನಿಸುವುದೇ ಇಲ್ಲ. ಪೂರ್ತಿ ಮಾರ್ಡರ್ನ್ ಆಗಿಬಿಟ್ಟಿದ್ದಾನೆ, ಪ್ರೆಂಚ್ ಗಡ್ಡ, ಪಂಕ್ ಕೂದಲು, ತರಾವರಿ ಟ್ರಕ್ಕಿಂಗ್ ಡ್ರೆಸ್ ಹಾಕಿಕೊಂಡಿದ್ದ, ಅವನು ಫಾರಿನ್ ನವರಿಗೆ ಟ್ರಕ್ಕಿಂಗ್ ಅರೆಂಜ್ ಮಾಡುತ್ತಾನಂತೆ ಗುರು, ಕೇವಲ ೮೦೦ ಡಾಲರ್ ಅಂತೆ, ಮುನ್ನಾರಿಂದ ಪಳನಿಗೆ ೫೦ ಕಿಲೋಮೀಟರ್ ಟ್ರಕ್ಕಿಂಗ್, ಕಾಡಲ್ಲಿ ಟೆಂಟ್, ಊಟ, ತಿಂಡಿ ಕಾಫಿ ಎಲ್ಲಾ ಅವನದೇ, ಈ ಮಿಸ್ಟಲ್ಲಿ ಮಸ್ತ್ ಗುರು ಸಕತ್ ಆಗಿರುತ್ತೇ ಅಲ್ವಾ," ಅಂತ ಒಂದೇ ಉಸುರಿನಲ್ಲಿ ಬುಡಕಟ್ಟಿನವನಂತೆ ಅಭಿನಯಿಸುತ್ತಾ ಹೇಳಿದ.
"ಮಂಜು ನಾವು ಬಂದಿರುವುದು ಫೋಟೊಗ್ರಫಿಗೆ, ಟ್ರಕ್ಕಿಂಗ್ ಮಾಡಲಿಕ್ಕೆ ಅಲ್ಲಾ ಅಲ್ವಾ....ಸುಮ್ಮನೆ ಬೇಕಿಲ್ಲದಿರುವ ವಿಚಾರದ ಹಿಂದೆ ಬಿದ್ದು ಸಮಯ ಹಾಳುಮಾಡಬೇಡ, ಊಟದ ಸಮಯವಾಯಿತು, ನಿನಗಂತ ಒಳ್ಳೇ ಊಟದ ಹೋಟಲ್ ಹುಡುಕಿದ್ದೇವೆ ಬಾ", ಅಂದೆ.
ಅತಿಉತ್ಸಾಹದಿಂದ, ಟ್ರೈಬ್ನವನಂತೆ ಅವನ ಭಾಷೆಯನ್ನು ಅನುಕರಿಸಿ ನಟಿಸಿ ನಮ್ಮನ್ನು ಇಂಪ್ರೆಸ್ ಮಾಡಬೇಕೆಂದುಕೊಂಡಿದ್ದ ಮಂಜುಗೆ ನನ್ನ ಮಾತು ಕೇಳಿ ಬೇಸರವಾದರೂ, ಊಟದ ವಿಚಾರ ಬಂದಾಗ ಸ್ವಲ್ಪ ಸಮಾಧಾನವಾಗಿರಬೇಕು. ಅವನಿಗೆ ಎಲ್ಲಕ್ಕಿಂತ ಮೊದಲು ಸಮಯಕ್ಕೆ ಸರಿಯಾಗಿ ಒಳ್ಳೆ ಊಟವಿರಬೇಕು.
"ಅದೇ ಶರವಣಭವನ್ ಊಟಾನಾ" ಅಂತ ರಾಗ ಎಳೆದ.
"ಆದಲ್ಲ ಗುರು, ನಿನಗಾಗಿ ನಾನ್ ವೆಜ್ ಹುಡುಕಿದ್ದೇವೆ, ಬಾ ನೀನು ಮೊದಲು" ಅಂತ ರೂಮಿನಿಂದ ಅವನನ್ನು ಎಳೆದುಕೊಂಡು ಹೊರಟೆವು.
ನಮಗೆ ಮೊದಲಿಂದಲೂ ಒಂದು ಅಭ್ಯಾಸ ಯಾವುದೇ ಸ್ಥಳಕ್ಕೆ ಹೋದರೂ ಅಲ್ಲಿನ ರಸ್ತೆ ಜೀವನ ಹೇಗಿರುತ್ತೇ ಅನ್ನುವುದನ್ನು ಮೊದಲು ನೋಡುವುದು. ಮುನ್ನಾರಿನಲ್ಲಿರುವ ಎಲ್ಲಾ ದುಬಾರಿ ರಿಸಾರ್ಟುಗಳು, ಮತ್ತು ನಾವು ಹುಡುಕಿದ ಮುನ್ನಾರು ಮುಖ್ಯರಸ್ತೆಯಲ್ಲಿರುವ ಕೆಲವು ಕೈಗಾಡಿ ಹೋಟಲ್ಲುಗಳನ್ನು ಬಿಟ್ಟರೆ ಇಡೀ ಸಾರ್ವಜನಿಕ ಮುನ್ನಾರು ೯ ಗಂಟೆಯ ಹೊತ್ತಿಗೆ ಮಲಗಿಬಿಡುತ್ತದೆ. ನಮ್ಮಲ್ಲಿರುವ ಇಗೋ, ಮತ್ತು ಯಾರಾದರೂ ನೋಡಿದರೆ ಏನಾದ್ರು ಅಂದುಕೊಳ್ಳುತ್ತಾರೆ ಅನ್ನುವ ಭಾವನೆಯನ್ನು ಬೆಂಗಳೂರು ಅಥವ ನಮ್ಮ ಮನೆಯೊಳಗೆ, ಅಥವ ನಮ್ಮ ಮನದೊಳಗೆ ಇಟ್ಟು ಹೊರಗೆ ಬಂದುಬಿಟ್ಟರೆ ನಿಜಕ್ಕೂ ಸೊಗಸಾದ ಮತ್ತು ಉತ್ತಮ ರುಚಿಕಟ್ಟಾದ ಊಟವನ್ನು ಇಂಥ ಕೈಗಾಡಿಗಳಲ್ಲಿ ಮಾಡಬಹುದು. ನಮ್ಮ ಕಣ್ಣಮುಂದೆ ಸೊಯ್...ಅಂತ ರುಚಿಯಾದ ದೋಸೆ ಹಾಕಿಕೊಡುತ್ತಾರೆ, ಸ್ಯಾವಿಗೆ, ಬಿಸಿಬಿಸಿ ಇಡ್ಲಿ, ಪರೋಟ, ಅದಕ್ಕೆ ತಕ್ಕಂತೆ ಪಲ್ಯ, ಚಟ್ನಿ, ನಾನ್ವೆಜ್ ತಿನ್ನುವವರಿಗೆ, ಉತ್ತಮವಾದ ಚಿಕನ್, ಕಬಾಬ್, ಗ್ರೇವಿ, ಒಂದಕ್ಕಿಂತ ಒಂದು ಸೂಪರ್. ನಂತರ ಗೊತ್ತಾಗಿದ್ದೇನೆಂದರೆ ಅನೇಕ ದುಬಾರಿ ರಿಸಾರ್ಟುಗಳು ಇವರಿಂದ ಅನೇಕ ನಾನ್ವೆಜ್ ಐಟೆಮ್ಮುಗಳನ್ನು ಪಾರ್ಸೆಲ್ ಮಾಡಿಸಿಕೊಂಡು ಅಲ್ಲಿನ ಅತಿಥಿಗಳಿಗೆ ಒದಗಿಸುತ್ತವೆ ಅಂತ. ಒಂದೇ ವ್ಯತ್ಸಾಸ ರಿಸಾರ್ಟುಗಳಲ್ಲಿ ಏಸಿ ಜೊತೆಗೆ ಕೃತಕ ಚಿತ್ತಾರ ಗೋಡೆಗಳು ಇರುತ್ತದೆ. ಇಲ್ಲಿ ಹೊರಗೆ ಸ್ವಾಭಾವಿಕ ಏಸಿ ಜೊತೆಗೆ ಸಹಜವಾಗಿ ಕಷ್ಟಪಡುವ ಜನರ ನಡುವೆ ಗೋಡೆಗಳಿಲ್ಲದೇ ಖುಷಿಯಿಂದ ರಾತ್ರಿಯೂಟವನ್ನು ಸವಿಯಬಹುದು. ತೃಪ್ತಿಯಿಂದ ಊಟಮಾಡಿದ ಮೇಲೆ ಅವರು ಕೊಡುವ ಕಡಿಮೆ ಬಿಲ್ ನೋಡಿ ಖುಷಿಯಿಂದ ನಿಮಗಿಷ್ಟಬಂದಷ್ಟು ಟಿಪ್ಸ್ ನಗುವಿನ ಜೊತೆ ಕೊಟ್ಟು ಬರಬಹುದು. ಅವರಿಗೂ ಖುಷಿಯಾಗುತ್ತದೆ. ಮಂಜು ಸದಾ ಊಟದಲ್ಲಿ ಮುಂದು. ಅವನಿಗಿಷ್ಟವಾದ ಚಿಕನ್, ದೋಸೆ, ಇಡ್ಲಿ, ಇತ್ಯಾದಿಗಳನ್ನು ಕಬಳಿಸಿದ,
"ಸಕತ್ ಗುರು, ಇವರ ಮುಂದೆ ಇಲ್ಲಿರುವ ತಳುಕಿನ ರಿಸಾರ್ಟುಗಳನ್ನು ನಿವಾಳಿಸಿ ಬಿಸಾಕಬೇಕು ಗುರು" ಅಂದ. ನಮಗೂ ಹಾಗೆ ಅನ್ನಿಸಿತ್ತು. ಹಣ ಕೊಟ್ಟು ಅಲ್ಲಿಂದ ಬರುವಾಗ ಒಮ್ಮೆ ಕಣ್ಣಾಡಿಸಿದರೆ ಎಷ್ಟೋ ವಿದೇಶಿ ಪ್ರವಾಸಿಗಳು ಅಲ್ಲೇ ಊಟ ಮಾಡುತ್ತಿದ್ದರು.
"ಮಂಜು ಈಗ ಬೇಗ ಮಲಗಬೇಕು. ನಾಳೆ ಬೆಳಿಗ್ಗೆ ಐದು ಗಂಟೆಗೆ ನಮ್ಮನ್ನು ಎಬ್ಬಿಸುವ ಜವಾಬ್ದಾರಿ ನಿನ್ನದು" ಅಂತ ನಾನು ಮಲ್ಲಿ ಅವನಿಗೆ ಹೇಳಿ ಮಲಗಿದಾಗ ಸಮಯ ರಾತ್ರಿ ಹತ್ತು.
ಮರುದಿನ ಬೆಳಿಗ್ಗೆ ಮಲ್ಲಿಕಾರ್ಜುನ್ ಬೇಗ ಎದ್ದು ತಮ್ಮ ನಿತ್ಯಕರ್ಮಾಧಿಗಳನ್ನುಮುಗಿಸಿ ಮೊದಲು ಸಿದ್ಧರಾದರು. ನಂತರ ನಾವಿಬ್ಬರೂ ಕೂಡ ಬೇಗ ಸಿದ್ಧವಾಗಿಬಿಟ್ಟೆವು. ಮಂಜು ಮುಸುಕಿದ ವಾತಾವರಣದಿಂದಾಗಿ ಹೊರಗೆ ಏನು ಕಾಣುತ್ತಿಲ್ಲ. ಬಹುಶ: ವಾತಾವರಣದ ಉಷ್ಣತೆ ಸೊನ್ನೆ ಡಿಗ್ರಿ ಇರಬಹುದು, ಏಕೆಂದರೆ ನಾವು ಬನಿಯನ್, ಟೀಶರ್ಟು, ಅದರ ಮೇಲೆ ಸ್ವೆಟರು, ತಲೆಗೆ ಉಲ್ಲನ್ ಮಂಕಿ ಟೋಪಿ ಹಾಕಿದ್ದರೂ ಕುಳಿರ್ಗಾಳಿ ಕಿವಿ, ಮೂಗಿನೊಳಗೆ ನುಗ್ಗಿ ಕಿರಿಕಿರಿ ಮಾಡುತ್ತಿತ್ತು. ನಾವು ಮಾತ್ರವಲ್ಲದೇ ಇಡೀ ಮುನ್ನಾರಿನ ಜನ ಮುಂಜಾವಿನಲ್ಲಿ ನಮ್ಮಂತೆ ಉಲ್ಲನ್ ದಿರಿಸುಗಳ ಜೊತೆಗೆ ಮಂಕಿ ಕ್ಯಾಪುಗಳನ್ನು ಹಾಕಿಕೊಂಡು ಹಿಂದಿನೆರಡು ಕಾಲಿನಲ್ಲಿ ನಡೆದಾಡುವ ಟರ್ಕಿ ಕುರಿಗಳಂತೆ ವಿಚಿತ್ರವಾಗಿ ಕಾಣುತ್ತಿದ್ದರು. ನಾವು ಸಿಗರೇಟು ಸೇದದಿದ್ದರೂ ನಮ್ಮ ಬಾಯಿಂದ ಸಿಗರೇಟು, ಬೀಡಿ ಸೇದುವವರಿಗಿಂತ ಚೆನ್ನಾಗಿ ಹೊಗೆ ಬರುತ್ತಿತ್ತು. ಸಮಯ ೬ ಗಂಟೆ ೧೫ ನಿಮಿಷ. ಅಷ್ಟರಲ್ಲಿ ನಾವೆಲ್ಲ ನಮ್ಮ ಎದುರಿನ ಪುಟ್ಟ ಟೀ ಅಂಗಡಿಯಲ್ಲಿ ಕುಳಿತು ಬ್ರೆಡ್ ತಿಂದು ಟೀ ಕುಡಿಯುತ್ತಿದ್ದೆವು. ನಿದಾನವಾಗಿ ಬೆಳಕಾಗತೊಡಗಿತ್ತು. ನಮ್ಮ ಆಟೋದವನಿಗೆ ಫೋನ್ ಮಾಡಿದರೆ
" ಸಾರ್ ನಾ ಇಪ್ಪ ವಂದೆ" ಅಂತ ಫೋನ್ ಕಟ್ ಮಾಡಿದ. ಪೂರ್ವದಲ್ಲಿ ಸೂರ್ಯ ಮೂಡುತ್ತಿದ್ದಾನೆ. ಅದೇ ಸಮಯದಲ್ಲಿ ದೂರದಲ್ಲಿ ಎತ್ತರದ ಮರಗಳ ಹಿನ್ನೆಲೆಯಲ್ಲಿ ಒಂದು ಮನೆ ಕಾಣಿಸಿತು. ಸೂರ್ಯನ ಕಿರಣಗಳು ಆ ಎತ್ತರದ ಮರಗಳ ತುದಿಯನ್ನು ಚುಂಬಿಸುತ್ತಿದ್ದವು. ಸಮಯ ನೋಡಿದರೆ ಆಗಲೇ ಆರುಗಂಟೆ ಮುವತ್ತೈದುನಿಮಷ. ಮಲ್ಲಿಕಾರ್ಜುನ್, ಮಂಜು, ಬೇಗ ಒಂದು ಎತ್ತರದ ಸ್ಥಳಕ್ಕೇ ಹೋಗಬೇಕು ಬನ್ನಿ ಅಂದೆ. ಮಂಜು ಹೊರಗೆ ಬಂದು ನೋಡಿದ. ಎದುರಿಗೆ ಹೊಸದಾಗಿ ಕಟ್ಟುತ್ತಿರುವ ಮೂರಂತಸ್ಥಿನ ಒಂದು ಕಟ್ಟಡ ಕಾಣಿಸಿತು. ನಾನು ವಿವರಿಸಿದೆ.
" ಅದೋ ನೋಡಿ, ಅಲ್ಲಿ ಕಾಣಿಸುತ್ತಿರುವ ಮರಗಳ ಮೇಲೆ ಸೂರ್ಯನ ಕಿರಣ ಬಿದ್ದಿದೆ. ನಿದಾನವಾಗಿ ಸೂರ್ಯ ಮೇಲೇರುತ್ತಿದ್ದಂತೆ ಅಲ್ಲಿರುವ ಒಂಟಿ ಮನೆಯ ಮೇಲೆ ಇನ್ನು ಎಂಟತ್ತು ನಿಮಿಷದಲ್ಲಿ ತಿಳಿಬೆಳಕು ಬೀಳುವ ಹೊತ್ತಿಗೆ ನಾವು ಆ ಕಟ್ಟುತ್ತಿರುವ ಮೂರನೆ ಅಂತಸ್ಥಿನ ಮನೆಯ ಟೆರಸ್ ಮೇಲಿರಬೇಕು. ಇಂಥ ಮಂಜು ಮುಸುಕಿರುವಾಗ ಮುಂಜಾವಿನ ತಿಳಿ ಬಿಸಿಲಿನಲ್ಲಿ ಕಾಣುವ ಆ ಒಂಟಿ ಮನೆಯ ಫೋಟೊವನ್ನು ಕ್ಲಿಕ್ಕಿಸುವುದೇ ಸದ್ಯದ ನಮ್ಮಗುರಿ" ಅಂದೆ.
ಸರಿ ಎಲ್ಲರೂ ಒಂದೇ ಉಸಿರಿನಲ್ಲಿ ನಮ್ಮ ಕ್ಯಾಮೆರಾ ಬ್ಯಾಗುಗಳನ್ನು ಹೊತ್ತು ಅಲ್ಲಿಗೆ ಹೋಗುವಷ್ಟರಲ್ಲಿ ಐದು ನಿಮಿಷ ಕಳೆದೇಬಿಟ್ಟಿತ್ತು. ನಮಗೆ ಬೇಕಾದ ಸ್ಥಳವನ್ನು ತಲುಪಿದ ಮೇಲೆ ನಮ್ಮ ಕ್ಯಾಮೆರಾ, ಲೆನ್ಸ್, ಇತ್ಯಾದಿಗಳನ್ನು ಬ್ಯಾಗಿನಿಂದ ತೆಗೆಯುವ ಅಬ್ಯಾಸವಿದ್ದರೆ ಮಂಜು ಕುತ್ತಿಗೆಗೆ ಸದಾ ದೊಡ್ಡಲೆನ್ಸಿನ ಕ್ಯಾಮೆರಾ ಹಾಕಿಕೊಂಡೇ ಓಡಾಡುತ್ತಾನೆ. ಇಲ್ಲೂ ಹಾಗೆ ಕ್ಯಾಮೆರಾವನ್ನು ಕುತ್ತಿಗೆಹಾಕಿಕೊಂಡು ಮೂರನೆ ಮಹಡಿಯ ಮೆಟ್ಟಿಲು ಹತ್ತುತ್ತಿರುವಾಗ ಗಡಿಬಿಡಿಯಲ್ಲಿ ಅವನ ಕೈಯಲ್ಲಿದ್ದ ೫೦-೫೦೦ ಸಿಗ್ಮ ಲೆನ್ಸ್ ಜಾರಿ ಬಿತ್ತು. ನಾವು ತಿರುಗಿ ನೋಡುವಷ್ಟರಲ್ಲಿ ಒಂದೆರಡು ಮೆಟ್ಟಿಲು ಕೆಳಗೆ ಉರುಳಿದ್ದು ನೋಡಿ ನಮಗೆ ಭಯವಾಯಿತು. ಆದ್ರೆ ಅದನ್ನು ಗಮನಿಸುತ್ತಿದ್ದರೆ ನಮ್ಮ ಗುರಿ ತಪ್ಪಿಹೋಗುತ್ತದಲ್ಲ ಅನ್ನಿಸಿದರೂ, ಒಂದು ನಿಮಿಷ ಅವನಿಗೆ ಸಹಾಯ ಮಾಡಿ ನಾವಿಬ್ಬರೂ ಟೆರಸ್ ತಲುಪಿದ್ದೆವು. ನಾವು ತಲುಪುವುದಕ್ಕೂ ಮಂಜಿನ ವಾತಾವರಣದಲ್ಲಿ ಸೂರ್ಯನ ಕಿರಣಗಳು ಮನೆಯ ಮೇಲೆ ಬೀಳುವುದಕ್ಕೂ ಒಂದೇ ಆಯಿತು.

ನಾವು ಮರುಕ್ಷಣವೇ ನಮ್ಮ ಕ್ಯಾಮೆರಾಗಳನ್ನು ತೆಗೆದು ಅದಕ್ಕೆ ಬೇಕಾದ ಲೆನ್ಸ್ ಹೊಂದಿಸಿಕೊಂಡು ನಮಗೆ ಬೇಕಾದಂತೆ ಫೋಟೊಗಳನ್ನು ಕ್ಲಿಕ್ಕಿಸಿದೆವು. ಕ್ಲಿಕ್ಕಿಸುವಾಗಿನ ಆನಂದವನ್ನು ಇಲ್ಲಿ ವರ್ಣಿಸಲಾಗದು. ಒಮ್ಮೆ ಕ್ಯಾಮೆರಾದಲ್ಲಿ ಮತ್ತಮ್ಮೊ ಬರಿಕಣ್ಣಿನೋಡುತ್ತಾ ನಮಗೆ ಬೇಕಾದಷ್ಟು ಕ್ಲಿಕ್ಕಿಸಿದೆವು. ಕೊನೆಗೆ ಎಲ್ಲ ಸರಿಮಾಡಿಕೊಂಡು ಮೇಲೆ ಬಂದ ಮಂಜುವಿಗೆ ಆ ದೃಶ್ಯವನ್ನು ಆತ ಸೆರೆಯಿಡಿದ್ದಿದ್ದು ಕೇವಲ ಎರಡೇ ಪ್ರೇಮು. ಅವನ ಅದೃಷ್ಟ ಚೆನ್ನಾಗಿತ್ತು ಲೆನ್ಸ್ ಏನು ಆಗಿರಲಿಲ್ಲ. ಆಷ್ಟರಲ್ಲಾಗಲೇ ಸೂರ್ಯನ ಪ್ರಕರತೆ ಜಾಸ್ತಿಯಾಗಿ ನಾವು ಕಂಡ ಮನೋಹರ ದೃಶ್ಯ ಹತ್ತೇ ನಿಮಿಷದಲ್ಲಿ ಮಾಯವಾಗಿತ್ತು. ಕೆಳಗಿಳಿದು ಬರುವಷ್ಟರಲ್ಲಿ ಆಟೋ ಡ್ರೈವರ್ ವಿಮಲ್ ಕಾಯುತ್ತಿದ್ದ.

ನಮ್ಮನ್ನು ನೋಡಿ ನಕ್ಕ ಆತ ತನ್ನ ಬಳಿಯಿದ್ದ ಪ್ರವಾಸದ ವಿವರದ ಕಾಗದ ತೆಗೆದ.
"ಪಾರಂಗ್ ಸರ್ ಇದು ಅಣ್ಣೆಮುಡಿ ರೂಟ್..ಅಪ್ ಅಂಡ್ ಡೌನ್ ೨೦ ಕಿಲೋ ಮೀಟರ್ ಆಯಿಚ್ಚಿ.....ಇದು ಟಾಪ್ ಸ್ಟೇಷನ್ ರೂಟು,.........ಇದು....ದೇವಿಕುಲಮ್ ರೂಟ್.....ಹೀಗೆ ವಿವರಿಸುತ್ತಿದ್ದ. ಮದ್ಯ ಅವನ ಮಾತನ್ನು ತಡೆದು,
" ಇಂಗೆ ಪಾರು ವಿಮಲ್, ಎಂಗಳಿಕು ಈ ರೂಟ್ ಎನ್ನವೂ ವೆಂಡ....ಇಪ್ಪ ಒಂದು ರೂಟ್ ಸುಮ್ಮ ನಿದಾನ ಪೋ.....ನಾವ್ ಎಂಗೆ ಸ್ಟಾಪ್ ಸೊಲ್ಲುವೆ ಅಂದ ಸೈಡ್ ಸಡನ್ ಸ್ಟಾಪ್ ಕುಡು" ನನ್ನ ಮಾತನ್ನು ಕೇಳಿ ಒಮ್ಮೆ ಭಯ ಆಶ್ಚರ್ಯದಿಂದ ನೋಡಿದ.
"ಇದು ಎಂಗೆ ಸಾರ್ ನಮ್ಮ ಆಟೋ ವಾಡಿಗೆ ವರ್ಕೌಟ್ ಅವಾದಿಲ್ಲ ಸಾರ್" ಬೇಸರದಿಂದ ಹೇಳಿದ.
"ವರಿ ಪಣ್ಣಾದೆ ವಿಮಲ್, ನಿಂಗೆ ಪುಲ್ ಟ್ರಿಪ್ ಕಾಸು ಕುಡುಕಿರೆ" ಅಂದೆ. ಅಷ್ಟಕ್ಕೆ ಅವನ ಮುಖ ಅರಳಿತು. ಆದ್ರೂ ಬೆಳಿಗ್ಗೆ ಇಂಥ ತಲೆಕೆಟ್ಟ ಗಿರಾಕಿಗಳ ಕೈಗೆ ಸಿಕ್ಕಿಕೊಂಡೆನಲ್ಲ ಅನ್ನಿಸಿತೇನೋ, ಮನಸ್ಸಿನಲ್ಲಿ ಹಾಗೆ ಅನ್ನಿಸಿದರೂ ಮುಖದಲ್ಲಿ ನಗುವನ್ನು ಹೊಮ್ಮಿಸುತ್ತಾ ಆಟೋ ಸ್ಟಾರ್ಟ್ ಮಾಡಿದ. ನಾವು ಎಲ್ಲಿಗೆ ಹೋದರೂ ನಮ್ಮ ಜೊತೆಗೆ ಆಟೋ, ಟ್ಯಾಕ್ಸಿಡ್ರೈವರುಗಳು, ಹೋಟಲ್ಲಿನ ರೂಂ ಬಾಯ್ಗಳು, ಪ್ರತಿಯೊಬ್ಬರನ್ನು ಮಾತಾಡಿಸಿಕೊಂಡು ಅವರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತೇವೆ. ಇಲ್ಲಿಯೂ ಹಾಗೆ ವಿಮಲ್ ಬಗ್ಗೆ ಅವನ ಕುಟುಂಬ ಅವನ ಇತರ ಕೆಲಸಗಳನ್ನೆಲ್ಲಾ ವಿಚಾರಿಸಿಕೊಳ್ಳುತ್ತಾ ಅವನನ್ನು ಮತ್ತಷ್ಟು ಗೆಳಯನನ್ನಾಗಿಸುತ್ತಾ, ಅವನ ಭಾಷೆಯನ್ನು ನಾವು ಆಡಿಕೊಳ್ಳುತ್ತಾ, ಅವನು ನಮ್ಮ ಮಾತುಗಳನ್ನು ಅನುಕರಿಸಲೆತ್ನಿಸಿ ನಗೆಪಾಟಲಿಗೀಡಾಗುತ್ತಾ ಸಾಗುವಷ್ಟರಲ್ಲಿ ಆಟೋ ಮೂರು ಕಿಲೋ ಮೀಟರ್ ಸಾಗಿತ್ತು. ಅಲ್ಲೊಂದು ತಿರುವು. ಒಂದುಕಡೆ ಎತ್ತರದ ಟೀಎಸ್ಟೇಟುಗಳು ನಡುವೆ ಇಳಿಜಾರಿನಂತೆ ಸಾಗಿ ಮತ್ತೆ ಎತ್ತರಕ್ಕೆ ಸಾಗಿತ್ತು. ಅಲ್ಲಿನ್ನು ಸೂರ್ಯನ ಬೆಳಕು ಬಿದ್ದಿರಲಿಲ್ಲ. ಆಟೋ ಅಲ್ಲಿಯೇ ನಿಲ್ಲಿಸಿದೆವು.
"ಇದೇನು ಸಾರ್, ಇದು ನಲ್ಲ ಪ್ಲೇಸ್ ಇಲ್ಲ ಮುಂದೆ ಸೂಪರ್ ಸೀನರಿ ಇರುಕ್ಕು ಇಪ್ಪ ಇಲ್ಲಿ ಟೈಮ್ ವೇಸ್ಟ್ ಪಣ್ಣಾದೆ ಸರ್" ಅಂದ.
" ನೋ ಪ್ರಾಬ್ಲಂ ವಿಮಲ್ ಇಪ್ಪ ನೀ ಇಂಗೆ ಸುಮ್ಮ ಅಂದ ಜಾಗತ್ತಿಲೇ ವಕ್ಕಾರ್ ರಿಲ್ಯಾಕ್ಸ್ ಮಾಡು, ಅಂಜಿ ನಿಮಿಷಂ ವೈಟ್ ಪಣ್ಣಿ ಪಾರು, ಅಪರಮ ಎಂಥ ಮಾದರಿ ಸೀನ್ ವರುದು ಅಂತ" ಅಂದೆ. ಚಳಿ ಕಡಿಮೆಯಾಗಲಿಲ್ಲವಾದ್ದರಿಂದ ಅವನು ಮನಸ್ಸಿನಲ್ಲೇ ಬೈದುಕೊಂಡು ಒಂದು ಸಣ್ಣ ಕಲ್ಲಿನ ಮೇಲೆ ಕುಳಿತುಕೊಂಡ.
ನಮ್ಮ ಕ್ಯಾಮೆರಾಗಳನ್ನು ಸಿದ್ಧಮಾಡಿಕೊಂಡು ಕಾಯುತ್ತಿದ್ದೆವು. ಸೂರ್ಯನ ಬೆಳಕು ನಿದಾನವಾಗಿ ಮೇಲೇರಿ ಟೀ ಎಷ್ಟೇಟುಗಳ ನಡುವೆ ಅಲ್ಲಲ್ಲಿ ಹಾಕಿದ್ದ ಸಿಲ್ವರ್ ಟ್ರೀಗಳ ಮೇಲೆ ಮಾತ್ರ ತಿಳಿಬಿಸಿಲು ಬೀಳಲಾರಂಬಿಸಿತು. ಹಿಮದ ಹಿನ್ನೆಲೆಯಲ್ಲಿ ತಿಳಿಬಿಸಿಲು ಅಲ್ಲಿದ್ದ ಒಂಟಿ ಸಿಲ್ವರ್ ಮರದ ಹಿಮ್ಮುಖದಲ್ಲಿ ಬಿದ್ದು ಅದರ ಚಿಗುರೆಲೆಗಳೆಲ್ಲಾ ಇದ್ದಕ್ಕಿದ್ದಂತೆ ಹರೆಯಕ್ಕೆ ಬಂದ ಸುಂದರ ಹುಡುಗಿಯರಂತೆ ಚಿನ್ನದ ಬಣ್ಣಕ್ಕೆ ತಿರುಗಿ ಹೊಳೆಯುತ್ತಿರುವಾಗ ಅದನ್ನು ನೋಡಿ ನಮ್ಮಲ್ಲಿ ಮಾತಿರಲಿಲ್ಲ.

ಅಂತ ನಿಶ್ಯಬ್ದ ಪರಿಶುದ್ಧ ತಿಳಿ ವಾತಾವರಣದಲ್ಲಿ ನಮ್ಮ ಕ್ಯಾಮೆರಾಗಳು ಮಾತ್ರ ಸತತವಾಗಿ ಕ್ಲಿಕ್,ಕ್ಲಿಕ್.....ಕ್ಲಿಕ್....ಸದ್ದು ಮಾಡುತ್ತಿದ್ದವು. ಧ್ಯಾನಸ್ಥ ಪ್ರಕೃತಿಯ ಮೌನಕ್ಕೆ ಹದವಾದ ತಾಳದಂತೆ. ಸೂರ್ಯನ ಕಿರಣಗಳ ಏರಿಳಿತದಲ್ಲಿ ಆ ಪುಟ್ಟ ಮರದ ಚಿಗುರೆಲೆ, ಹಣ್ಣೆಲೆಗಳ ಮೇಲೆ ಪ್ರತಿಕ್ಷಣ ಬದಲಾಗುತ್ತಿರುವ ನೆರಳು ಬೆಳಕಿನ ಆಟವನ್ನು ಕ್ಯಾಮೆರ ಮೂಲಕ ಸೆರೆಯಿಡಿಯುವುದರಲ್ಲಿ ಮೂವರು ಮಗ್ನರಾಗಿಬಿಟ್ಟಿದ್ದೆವು. ಐದೇ ನಿಮಿಷವಷ್ಟೇ. ಬಿಸಿಲು ಮೇಲೇರಿ ಆ ಮರವನ್ನು ದಾಟಿ ಬೇರೆಲ್ಲೋ ಹೋಯಿತು. ಅದುವರೆಗೂ ನಮ್ಮಾಟವನ್ನು ಮೌನದಿಂದ ನೋಡುತ್ತಿದ್ದ ವಿಮಲ್ ನಮ್ಮ ಕ್ಯಾಮೆರಾದಲ್ಲಿನ ಚಿತ್ರಗಳನ್ನು ನೋಡಿ ಬೆರಗಾಗಿಬಿಟ್ಟ. ಐದಾರು ವರ್ಷಗಳಿಂದ ಪ್ರವಾಸಿಗಳನ್ನು ಕರೆದುಕೊಂಡು ಬರುತ್ತಿದ್ದರೂ ಇಂಥದೊಂದು ಚಿತ್ರವನ್ನು ನಾನು ಗಮನಿಸಿಸಲಿಲ್ಲವಲ್ಲ ಅಂತ ನೊಂದುಕೊಂಡ. ಮತ್ತೆ ನಮ್ಮ ಪ್ರಯಾಣ ಮುಂದುವರಿಯಿತು. ಮತ್ತೆ ಅಲ್ಲಲ್ಲಿ ಹೀಗೆ ನಿಲುಗಡೆ, ಕ್ಯಾಮೆರಾ ಕ್ಲಿಕ್, ನಡೆಯುತ್ತಿತ್ತು. ಮುಂದೆ ಹೀಗೆ ದಾರಿಯುದ್ದಕ್ಕೂ ಸಿಕ್ಕಿದ ಇಂಥ ಅನೇಕ ಮರಗಳ ದೃಶ್ಯಗಳನ್ನು ಚಿತ್ರಿಸಿದೆವು. ಸಮಯವಾಗಲೇ ಒಂಬತ್ತು ಗಂಟೆ ದಾಟಿತ್ತು. ಚರ್ಮದ ಮೇಲೆ ಬಿದ್ದ ಸೂರ್ಯನ ಕಿರಣಗಳು ಚುರುಕು ಮುಟ್ಟಿಸಿದಾಗ
"ವಿಮಲ್ ಇನ್ನು ಸಾಕು ವಾಪಸ್ ಮುನ್ನಾರಿಕ್ಕೂ ಪೋ" ಅಂದೆ. ನನ್ನನ್ನೊಮ್ಮೆ ಗಾಬರಿಯಿಂದ ನೋಡಿದ. ಅವನು ಹೇಳಿದ ರೂಟಿ ಅರ್ಧಬಾಗವನ್ನು ದಾಟಿರಲಿಲ್ಲವಾದ್ದರಿಂದ ಅವನ ಆಟೋ ಮೀಟರ್ ಹಣ ನಾವು ಕಡಿಮೆ ಕೊಡುತ್ತೇವೆ ಎನ್ನುವ ಚಿಂತೆಗೀಡಾಗಿದ್ದ.
"ಕಳವಳ ಪಡಾದೆ ವಿಮಲ್, ನಮ್ ಮಾರ್ನಿಂಗ್ ಟ್ರಿಪ್ ಆಯಿಚಿ, ಡೋಂಟ್ ವರಿ ನಾವ್ ಪುಲ್ ಆಟೋ ವಾಡಿಗೆ ಕುಡುವೆ" ಅಂದೆ. ಸರಿ ವಾಪಾಸ್ ತಿರುಗಿಸಿಕೊಂಡು ಮುನ್ನಾರು ತಲುಪುವ ಹೊತ್ತಿಗೆ ಹತ್ತು ಗಂಟೆ ದಾಟಿತ್ತು. ಅವನ ಹಣವನ್ನು ಕೊಟ್ಟು
"ಮೂಣು ಮಣಿಕ್ಕೂ ನೀ ಇಂಗೆ ವಾ" ಅಂದೆವು. ಅವನು ಹೊರಟು ಹೋದ. ಹೋಟಲ್ ರೂಮಿಗೆ ಬಂದು ಬೆಳಗಿನ ಉಪಹಾರ ಮುಗಿಸಿ ನಾವು ಕ್ಲಿಕ್ಕಿಸಿದ್ದ ಪೋಟೊಗಳನ್ನು ನೋಡಿದಾಗ ನಮ್ಮ ಬೆಳಗಿನ ಫೋಟೊಗ್ರಫಿ ಪ್ರವಾಸ ಯಶಸ್ವಿಯಾಗಿದೆ ಅನ್ನಿಸಿತ್ತು.
ಕೆಲವೊತ್ತು ವಿಶ್ರಾಂತಿ, ನಂತರ ಶರವಣ ಭವನ್ನಲ್ಲಿ ಊಟ, ಮತ್ತೆ ಮೂರು ಗಂಟೆಗೆ ಸಿದ್ದರಾಗಿಬಿಟ್ಟೆವು. ವಿಮಲ್ ಕೂಡ ಹೇಳಿದ ಸಮಯಕ್ಕೆ ಸರಿಯಾಗಿ ಬಂದಿದ್ದ. ಈಗ ಟಾಪ್ ಸ್ಟೇಷನ್ ಕಡೆಗೆ ಹೊರಟೆವು.
ಮುಂದುವರಿಯುವುದು.....
ಚಿತ್ರ ಮತ್ತು ಲೇಖನ.
ಶಿವು.ಕೆ