Thursday, April 9, 2015

ನಮ್ಮಯ ಚಿಟ್ಟೆ ಬಿಟ್ಟೇ ಬಿಟ್ಟೆ!

 ಈ ಸಲದ ಕನ್ನಡಪ್ರಭ ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾದ ಫೋಟೊಗ್ರಫಿ ಲೇಖನ.


ಈ ಸಲ ಶಿವರಾತ್ರಿ ಮುಗಿದ ಕೂಡಲೇ ಚಳಿಚಳಿ ಮಾಯವಾಗಿ ಬಿಸಿಲಿನ ಝಳ ಹೆಚ್ಚಾಗಿತ್ತು. ಈ ಬಿಸಿಯನ್ನೇ ತಡೆಯಲಾಗದೇ ರಾತ್ರಿ ನಿದ್ರೆ ಬರುತ್ತಿಲ್ಲ ಇನ್ನೂ ಮಾರ್ಚಿ ಏಪ್ರಿಲ್ ಮೇ ತಿಂಗಳ ಬೇಸಿಗೆ ಬಿಸಿ ಹೇಗಿರಬಹುದೆಂದು ಊಹಿಸಿ ದಿಗಿಲುಪಟ್ಟುಕೊಳ್ಳುತ್ತಿರುವಾಗಲೇ ಅನಿರೀಕ್ಷಿತವಾಗಿ ಬೆಂಗಳೂರು ಸುತ್ತಮುತ್ತ ಎರಡು ದಿನ ಜೋರು ಮಳೆಯಾಗಿ ವಾತಾವರಣ ತಂಪಾಗಿತ್ತು. ಅಪರೂಪಕ್ಕೆ ಇಂಥ ಮಳೆಯಾದ ಮರುದಿನ ನಮ್ಮ ಕ್ಯಾಮೆರ, ಟ್ರೈಪಾಡ್,ಮ್ಯಾಕ್ರೋಲೆನ್ಸುಗಳು ಹೊರಬರುತ್ತವೆ. ಏಕೆಂದರೆ ವಾತಾವರಣದ ಬಿಸಿಯೆಲ್ಲಾ ತಣ್ಣಗಾಗಿ ನೆಲದ ಮಣ್ಣೆಲ್ಲಾ ಒದ್ದೆಯಾಗಿ ಅದರೊಳಗಿರುವ ಲಾರ್ವಗಳು, ಮೊಟ್ಟೆಗಳು, ಪ್ಯೂಪಗಳು, ಮಿಡತೆಗಳು, ಡ್ರ್ಯಾಗನ್ ಪ್ಲೈಗಳು, ನಾನಾ ವಿಧದ ಹುಳುಗಳು, ಕೀಟಗಳು, ಎಲ್ಲೆಲ್ಲೋ ಮರೆಯಾಗಿದ್ದ ದುಂಬಿಗಳು, ಪತಂಗಗಳು, ಚಿಟ್ಟೆಗಳು ಒಂದೆರಡು ದಿನದ ಇಂಥ ಜೋರು ಮಳೆಯ ನಂತರ ಅವುಗಳಿಗೆ ಸಿರಿ ಬಂದಂತೆ ಲವಲವಿಕೆಯಿಂದ ಹಾರಾಡುತ್ತಾ ಸಂಭ್ರಮಿಸುತ್ತವೆಯೆನ್ನುವುದು ನಮ್ಮ ಲೆಕ್ಕಾಚಾರ. ಹೀಗೆ ಅಂದುಕೊಂಡು ಕ್ಯಾಮೆರ ಬ್ಯಾಗ್ ಹೊತ್ತುಕೊಂಡು ಎಂದಿನಂತೆ ನಮ್ಮ ಹಳೆಯ ಸ್ಥಳ ಹೆಸರಘಟ್ಟ ಕೆರೆಯ ಕಡೆ ಹೊರಟೆವು.


    ದಾರಿಯುದ್ದಕ್ಕೂ ಒಂದಕ್ಕಿಂತ ಒಂದು ವೈವಿಧ್ಯಮಯವೆನಿಸುವಂತ ಮನೆಗಳು, ಅಪಾರ್ಟ್‍ಮೆಂಟುಗಳು, ಅವುಗಳ ಅಕ್ಕಪಕ್ಕದಲ್ಲಿಯೇ ಸಿಮೆಂಟು ಮತ್ತು ಟಾರ್ ರಸ್ತೆಗಳೇ ಕಾಣುತ್ತಿದ್ದವು. ಅಯ್ಯೋ ಇದ್ಯಾಕೆ ಹೀಗೆ ಆಯ್ತು, ಹತ್ತು ವರ್ಷದ ಹಿಂದೆ ನಾವು ಚಿಟ್ಟೆ ಮತ್ತು ಹುಳುಗಳ ಫೋಟೊಗ್ರಫಿ ಮಾಡಲು ಇಲ್ಲಿಗೆ ಬರುತ್ತಿದ್ದಾಗ ದಾರಿಯುದ್ದಕ್ಕೂ ಒಂದು ಮನೆಯೂ ಕಾಣುತ್ತಿರಲಿಲ್ಲ. ಯಾವ ರೀತಿಯ ರಸ್ತೆಗಳು ಕಾಣುತ್ತಿರಲಿಲ್ಲ. ಕೇವಲ ಒಂದು ಪುಟ್ಟ ಮಣ್ಣಿನ ರಸ್ತೆ, ಅದರ ಸುತ್ತ ಮುತ್ತ ಹೊಲ ಗದ್ದೆಗಳು, ನಡುವೆ ದೊಡ್ಡ ದೊಡ್ಡ ಮರಗಳು, ತೋಟಗಳು, ಅವುಗಳ ಸುತ್ತ ಬೇಲಿ...ಹೀಗೆ ಎತ್ತ ನೋಡಿದರೂ ಕೂಡ ಹಸಿರು ವಾತಾವರಣವೇ ಕಾಣುತ್ತಿತ್ತು. ಪೀಣ್ಯದಿಂದ ಬಲಕ್ಕೆ ಹೆಸರುಘಟ್ಟ ರಸ್ತೆಗೆ ತಿರುಗಿ ಮೂರು ಕಿಲೋಮೀಟರ್ ದಾಟುತ್ತಿದ್ದಂತೆ ರೈಲ್ವೇ ಗೇಟ್ ಬರುತ್ತಿತ್ತು. ಅದರ ಸುತ್ತ ಮುತ್ತ ಒಂದು ಕಿಲೋಮೀಟರ‍ಿಗೂ ಹೆಚ್ಚು ಜಾಗದಲ್ಲಿ ಕೆರೆ ಕಟ್ಟೆಯಂತ ಜೌಗುಪ್ರದೇಶವಿದ್ದು ಅಲ್ಲೆಲ್ಲಾ ನಾವು ಪ್ರತಿದಿನವೂ ಹೋಗಿ ಚಿಟ್ಟೆಗಳು ಮತ್ತು ಇನ್ನಿತರ ಕೀಟಗಳ ಫೋಟೊಗ್ರಫಿಯನ್ನು ಮಾಡುತ್ತಿದ್ದೆವು.

ನಾನು ಅಲ್ಲಿಯೇ ಕೇವಲ ಆರುತಿಂಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ವಿಧದ ಚಿಟ್ಟೆಗಳು, ದುಂಬಿಗಳು, ಪತಂಗಗಳ ಫೋಟೊಗ್ರಫಿಯನ್ನು ಮಾಡಿದ್ದೆ.  ಇನ್ನೂ ಸ್ವಲ್ಪ ಹಿಂದಕ್ಕೆ ಇಪ್ಪತ್ತೈದು ವರ್ಷಗಳ ಹಿಂದೆ ನಾನು ಹುಟ್ಟಿ ಬೆಳೆದ ಏರಿಯದಲ್ಲಿ ಇದ್ದಿದ್ದು ಒಂದೇ ಟಾರ್ ರಸ್ತೆ. ಅದರ ಸುತ್ತ ಮುತ್ತ ಹುಲ್ಲು ಪೊದೆ, ಗಿಡ ಗಂಟಿಗಳಿದ್ದು ಮುಳ್ಳು ಚುಚ್ಚುತ್ತವೆಂದು ನಮ್ಮನ್ನು ಅಲ್ಲಿಗೆ ಹೋಗಲು ಬಿಡುತ್ತಿರಲಿಲ್ಲ. ಮೂರು ನಾಲ್ಕನೇ ತರಗತಿಯಲ್ಲಿ ಓದುತ್ತಿರುವಾಗಲೇ ನಾವೆಲ್ಲಾ ಗೋಲಿ, ಸೋಡ ಡಬ್ಬಿ, ಬುಗರಿ ಆಟವನ್ನೆಲ್ಲಾ ಇದೇ ಮಣ್ಣಿನ ನೆಲದಲ್ಲಿ ಆಡಿದ್ದೆವು. ಮತ್ತೊಂದು ಬುಗುರಿಗೆ ಗುನ್ನ ಹೊಡೆಯಲು ಬೀಸಿದ್ದ ಬುಗರಿಯ ಚೂಪು ಮೊಳೆಗಳು ಮಾಡಿದ ತೂತುಗಳಲ್ಲಿಯೇ ಅದೆಷ್ಟು ಇರುವೆಗಳು ಗೂಡು ಕಟ್ಟಿಕೊಂಡಿದ್ದವೋ..ಗುರಿಯಿಟ್ಟು ಗೋಲಿ ಹೊಡೆಯುವಾಗ ಇದೇ ಮಣ್ಣಿನ ಸಂದಿಯಿಂದ ಹೊರಬಂದ ಕೆಂಪಿರುವೆಗಳು ನಮ್ಮ ಕಾಲುಗಳನ್ನು ಕಚ್ಚಿ ಗುರಿಯನ್ನು ತಪ್ಪಿಸಿರಲಿಲ್ಲವೇ!. ಒಂದು  ಇರುವೆ ಕಾಲು ಕಚ್ಚಿದ್ದಕ್ಕೆ ಸಿಟ್ಟಿನಿಂದ ಸಾಲಿನಲ್ಲಿ ಸಾಗುವ ಎಲ್ಲಾ ಇರುವೆಗಳನ್ನು ಹೊಸಕಿ ಸಾಯಿಸಿದ್ದೆವಲ್ಲಾ! ಆಗ ನಮಗೆಲ್ಲಾ ಈಗಿನಂತೆ ಫೋಟೊಗ್ರಫಿ ತಿಳುವಳಿಕೆ ಇದ್ದಿದ್ದರೇ ಹಾಗೆಲ್ಲ ಕೆಂಪಿರುವೆ, ಕಪ್ಪಿರುವೆ, ಕಡುನೀಲಿ ಬಣ್ಣದ ಗೊದ್ದಗಳು, ಕಡು ಹಸಿರಿನ ದುಂಬಿಗಳನ್ನೆಲ್ಲಾ ಸಾಯಿಸದೇ ಅವುಗಳನ್ನು ಫೋಟೊಗ್ರಫಿ ಮಾಡುತ್ತಾ ಅವುಗಳನ್ನು ಉಳಿಸಿಕೊಂಡು ಮತ್ತಷ್ಟು ಬೆಳಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗುತ್ತಿದೆವೇನೋ. ಹಾಗೆ ನೋಡಿದರೆ ಮೊದಲಿಗೆ ಇಂಥ ಸೂಕ್ಷ್ಮ ಜೀವಿಗಳನ್ನು ಫೋಟೊಗ್ರಫಿ ಮಾಡುವುದು ನಿಜಕ್ಕೂ ಒಬ್ಬ ಛಾಯಾಗ್ರಾಹಕನಿಗೆ ಸವಾಲೇ ಸರಿ. ಬಲು ಕಷ್ಟದ ಇಂಥ ಪುಟ್ಟ ಪುಟ್ಟ ಸೂಕ್ಷ್ಮ ಜೀವಿಗಳ ಚಿತ್ರ ವಿಚಿತ್ರ ಆಕಾರಗಳು, ನಡುವಳಿಕೆಗಳು, ಇತ್ಯಾದಿಗಳ ಬದುಕನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಅವುಗಳನ್ನು ಫೋಟೊಗ್ರಫಿ ಮಾಡುವಾಗ ಮನಸ್ಸಿಗೆ ಸಿಗುವ ಆನಂದವನ್ನು ಇಲ್ಲಿ ವರ್ಣಿಸಲಾಗದು. ಹಾಗೆ ಇಂಥ ಚಿಟ್ಟೆಗಳು, ದುಂಬಿಗಳು, ಮಿಡತೆಗಳು, ಇನ್ನಿತರ ಸಾವಿರಾರು ಕೀಟಗಳು ನಮ್ಮ ಕಾಲ ಕೆಳಗಿನ ಒದ್ದೆ ನೆಲದೊಳಗೆ, ಗಿಡಗಳ ಎಲೆಗಳ ಕೆಳಗೆ, ಎಲೆಗಳನ್ನು ಸುರಳಿ ಸುತ್ತಿ ಹೊಲೆದು ಅದರೊಳಗೆ ಗೂಡುಕಟ್ಟಿ, ಮರದ ಬಳ್ಳಿ, ಕಾಂಡದೊಳಗೆ ಅದೇ ಬಣ್ಣದಲ್ಲಿ ಗೂಡುಕಟ್ಟಿ, ಭತ್ತದ ಹುಲ್ಲಿನ ಮೇಲೆ ಮೊಟ್ಟೆಯಿಟ್ಟು, ಕೆರೆ ಕಟ್ಟೆಗಳಲ್ಲಿನ ನೀರಿನ ಮೇಲೆ ಸಮ್ಮಿಲನವಾಗಿ ಅದರ ಮೇಲೆ ಮೊಟ್ಟೆಗಳನ್ನು ಇಟ್ಟು, ಕೆಲವು ನೀರೊಳಗೆ ಮೊಟ್ಟೆಗಳನ್ನಿಟ್ಟು, ಹೀಗೆ ಸಾವಿರಾರು ರೀತಿಯಲ್ಲಿ ಹೊರ ಪ್ರಪಂಚಕ್ಕೆ ಹುಟ್ಟಿಬರುತ್ತವೆ.

ಇಂತಹ ವೈವಿಧ್ಯಮಯವಾದ ಪ್ರಕ್ರಿಯೆಯನ್ನು ಬರಿ ಕಣ್ಣಿನಿಂದ ನೋಡಲು ಸಾಧ್ಯವಾಗದಿದ್ದರೂ ಓದಿ ತಿಳಿದುಕೊಳ್ಳುವ ಮೂಲಕ, ಅಥವ್ ಅವುಗಳನ್ನು ಫೋಟೊಗ್ರಫಿ ಮಾಡುವ ಮೂಲಕ ಅಂಥ ಅಧ್ಬುತಗಳನ್ನು ನೋಡಿ ಆನಂದಿಸಬಹುದು ಮತ್ತು ತನ್ಮಯತೆಯಿಂದ ಮೈಮರೆಯಬಹುದು. ಚಿಟ್ಟೆಗಳು ಮತ್ತು ದುಂಬಿಗಳು ಹೂವಿಂದ ಹೂವಿಗೆ ಹಾರಿ ಮಕರಂದವನ್ನು ಹೀರುವುದರಿಂದ ಅವುಗಳಲ್ಲಿ ಪರಾಗಸ್ಪರ್ಶವಾಗಿ ಕೋಟ್ಯಾಂತರ ಹೂವುಗಳು ಅರಳಿ ಪ್ರಕೃತಿಗೆ ಹೊಸ ಬಣ್ಣವನ್ನು ಕಟ್ಟಿಕೊಡುತ್ತವೆ. ನಮಗೆಲ್ಲಾ ಬಣ್ಣ ಬಣ್ಣದ ಹೂಗಳು ಸಿಗುತ್ತವೆ. ಕೆಲವು ಹುಳುಗಳು ಮಣ್ಣನ್ನೇ ಕೊರೆದು ಕೊರೆದು ಮೆದು ಮಾಡುವುದರಿಂದ ನಮ್ಮ ರೈತನಿಗೆ ಉಪಯೋಗವಾಗುತ್ತದೆ. ಇಂಥ ಕೀಟಗಳ ಸಂಖ್ಯೆ ಹೆಚ್ಚಾಗುವುದರಿಂದ ಅವುಗಳನ್ನು ತಿನ್ನಲು ನೂರಾರು ಹಕ್ಕಿಗಳು ಬರುತ್ತವೆ. ಹೀಗೆ ಬರುವ ತರಹೇವಾರಿ ಹಕ್ಕಿಗಳಿಗೆ ಹೊಟ್ಟೆ ತುಂಬಾ ಊಟ ಸಿಗುವುದರಿಂದ ಮತ್ತು ವಾತಾವರಣ ಹಸಿರಾಗುವುದರಿಂದ  ಗಂಡು ಹೆಣ್ಣು ಹಕ್ಕಿಗಳಿಗೆ ಆ ಸ್ಥಳಗಳೇ ಊಟಿ ಕೊಡೈಕನಲ್, ಮುನ್ನಾರ್, ಸಿಮ್ಲಾಗಳಾಗಿ ರೊಮ್ಯಾನ್ಸ್ ಮಾಡುತ್ತಾ, ಕಾಲ ಕಳೆಯುತ್ತವೆ. ಕೆಲವೇ ದಿನಗಳಲ್ಲಿ ಅಲ್ಲಿಯೇ ಗೂಡು ಕಟ್ಟುತ್ತವೆ, ಸಂಸಾರ ಮಾಡುತ್ತವೆ, ಮೊಟ್ಟೆಯಿಡುತ್ತವೆ, ಮರಿಗಳಾಗುತ್ತವೆ, ಅವುಗಳನ್ನು ಬೆಳೆಸಲು ಮತ್ತದೇ ಊಟ ತಿಂಡಿಗೆ ಇವೇ ಹುಳುಗಳು, ಚಿಟ್ಟೆಗಳು, ದುಂಬಿಗಳು, ಮಿಡತೆಗಳು.... ಹೀಗೆ ಪಕ್ಷಿಗಳ ಸಂತತಿ ಹೆಚ್ಚಾಗುತ್ತಿದ್ದಂತೆ ಮಣ್ಣಿನ ಫಲವತ್ತತೆ ಹೆಚ್ಚಾಗಿ ಗಿಡಮರದ ಎಲೆಗಳು, ಹುಲ್ಲುಗಳು ಪೊಗದಸ್ತಾಗಿ ಬೆಳೆಯುತ್ತವೆ. ಇದು ಎಲ್ಲಾ ನಗರಗಳಾಚೆಗಿನ ಕತೆಗಳಾದರೆ, ಹೀಗೆ ಮಳೆ ಬಂದಾಗ ಕಾಡುಗಳಾದ ಬಂಡಿಪುರ, ನಾಗರಹೊಳೆ, ದಾಂಡೇಲಿ, ಭದ್ರಾ,...ಎಲ್ಲಾ ಕಡೆ ನಗರ ಪ್ರದೇಶಗಳಿಗಿಂತ ಹೆಚ್ಚಾಗಿ ಕೀಟಗಳು ಹುಳುಗಳು, ಉತ್ಪತಿಯಾಗಿ ಅವುಗಳನ್ನು ತಿನ್ನಲು ಹಕ್ಕಿಗಳು, ಚೆನ್ನಾಗಿ ಬೆಳೆದ  ಹಸಿರು ಹುಲ್ಲು ಮತ್ತು ಎಲೆಗಳನ್ನು ತಿನ್ನಲು ಸಾರಂಗಗಳು, ಕಡವೆ, ಕಾಡೆಮ್ಮೆಗಳು, ನರಿಗಳು, ಲಂಗೂರ್ ಜಾತಿಯ ಕೋತಿಗಳು, ಅಳಿಲುಗಳು,ಜಿಂಕೆಗಳು, ಪಕ್ಷಿಗಳನ್ನು ತಿನ್ನಲು ಮುಂಗುಸಿ, ಹಾವು, ಹೀಗೆ ಅನೇಕ ಕಾಡುಪ್ರಾಣಿಗಳು ಹುಡುಕಿಕೊಂಡು ಬರುತ್ತವೆ. ಅವುಗಳ ಸಂತತಿಯೂ ಕೂಡ ಚೆನ್ನಾಗಿ ಬೆಳೆಯುತ್ತದೆ. ಅವುಗಳ ಸಂತತಿ ಹೆಚ್ಚಾದಾಗ ಸಹಜವಾಗಿಯೇ ಅವುಗಳನ್ನು ಅರಸುತ್ತಾ,ಹುಲಿ ಸಿಂಹ, ಚಿರತೆ, ನರಿ, ತೋಳಗಳು ಬರುತ್ತವೆ. ಅವು ಚೆನ್ನಾಗಿ ತಿಂದುಂಡು ಬೆಳೆಯುತ್ತವೆ. ಇದೇ ರೀತಿಯಲ್ಲಿ ವಾತಾವರಣದಲ್ಲಿ ಹಸಿರು ಹೆಚ್ಚಾದರೆ ಹಾಳಾಗಿರುವ ಓಜೋನ್ ಪದರ ನಿದಾನವಾಗಿ ಮುಚ್ಚಿಕೊಳ್ಳತೊಡಗುತ್ತದೆ. ಅದರಿಂದ ನಮಗೆ ಇನ್ನಷ್ಟು ಮತ್ತು ಮತ್ತಷ್ಟು ಪರಿಶುದ್ಧವಾದ ಆಮ್ಲಜನಕ ಸಿಗುತ್ತದೆ. ಅದರಿಂದ ನಮ್ಮ ಆರೋಗ್ಯವೂ ಸುಧಾರಿಸುತ್ತದೆ.


   ಎಲ್ಲಿಂದ ಎಲ್ಲಿಯ ಕೊಂಡಿ!. ಚಿಟ್ಟೆಗಳು ಮತ್ತು ಇನ್ನಿತರ ಪುಟ್ಟ ಪುಟ್ಟ ಕೀಟಗಳು ಚೆನ್ನಾಗಿ ಉತ್ಪತಿಯಾಗುವುದರಿಂದ ಹುಲಿ, ಸಿಂಹ, ಇನ್ನಿತರ ಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತದೆಯೆನ್ನುವುದು ಯಾವ ವಿಜ್ಞಾನ ಸೂತ್ರವೂ ಅಲ್ಲ. ಅದು ಪ್ರಕೃತಿಯ ಸಹಜ ಪ್ರಕ್ರಿಯೆ. ಅಂದ ಮೇಲೆ ನಾವೆಲ್ಲಾ ನಮ್ಮ ಪುಟ್ಟ ಬದುಕಿನ ಸ್ವಾರ್ಥಕ್ಕಾಗಿ ಅವುಗಳನ್ನು ಸಾಯಿಸುವುದು ಮತ್ತು ಇಲ್ಲದಂತೆ ಮಾಡಿ ಕ್ಷುಲ್ಲುಕ ಸಂತೋಷ ಪಡುವುದು ಯಾವ ಪುರುಷಾರ್ಥಕ್ಕಾಗಿ?  ಮನೆಯಲ್ಲಿ, ಹೊರಗೆ ಸರಿದಾಡುವ ಇರುವೆಗಳು, ಹುಳುಗಳು, ಕೀಟಗಳು, ಚಿಟ್ಟೆಗಳು, ದುಂಬಿಗಳು, ಮಿಡತೆಗಳು,..ಹೀಗೆ ಎಲ್ಲಾ ವಿಧದ ಸೂಕ್ಷ್ಮ ಜೀವಿಗಳನ್ನು ಕಂಡ ಕೂಡಲೇ ಸಾಯಿಸುವ ಬದಲು ಅವುಗಳ ಪಾಡಿಗೆ ಬಿಟ್ಟುಬಿಡೋದು ಒಳ್ಳೆಯದು ಅಲ್ವಾ..ಸಾಧ್ಯವಾದರೆ ನೋಡಿ ಆನಂದಿಸಬಹುದು. ಸಮಯವಿದ್ದರೆ ಮತ್ತು ನಿಮ್ಮಲ್ಲಿ ಒಳ್ಳೆಯ ಕ್ಯಾಮೆರ ಮತ್ತು ಲೆನ್ಸುಗಳಿದ್ದರೆ ಅವುಗಳ ಫೋಟೊಗಳನ್ನು ತೆಗೆಯುತ್ತಾ ಖುಷಿಪಡಬಹುದು.

 ಈಗ ನಿಮಗೆ ಅನ್ನಿಸುತ್ತಿರಬಹುದು, ನಾವು ನಮ್ಮ ಸುತ್ತ ಮುತ್ತಲಿನ ಚಿಟ್ಟೆಗಳು, ಹುಳುಗಳು, ಇರುವೆಗಳು, ದುಂಬಿಗಳು, ಮಿಡತೆಗಳು ಮತ್ತು ಕೀಟಗಳನ್ನು ಸಾಯಿಸದೇ ಅವುಗಳ ಸಂತತಿಯನ್ನು ಹೆಚ್ಚಿಸುವುದರಿಂದ ನಮಗೆ ಬೆಲೆ ಕಟ್ಟಲಾಗದಷ್ಟು ಉಪಯೋಗವಿದೆಯಲ್ಲವೆ, ಈ ಮೂಲಕ ಪರಿಸರದ ಫೋಟೊಗ್ರಫಿಯನ್ನು ಸಾಧ್ಯವಾದರೆ  ಮಾಡುತ್ತಾ, ಇಲ್ಲವಾದಲ್ಲಿ ಈ ರೀತಿ ಎಲ್ಲವನ್ನು ಉಳಿಸಿ ಬೆಳೆಸುವುದರ ಮೂಲಕ ನಾವು ಪರಿಸರ ಕಾಳಜಿಯನ್ನು ತೋರಬಹುದಲ್ಲವೇ..

ನಾಳೆಯಿಂದಲೇ ಚಿಟ್ಟೆ ಇನ್ನಿತರ ಹುಳುಗಳನ್ನು ಕೊಲ್ಲಬೇಡಿ. ನಮ್ಮಂತೆ ಅವುಗಳನ್ನು ಬದುಕಲು ಬಿಡಿ.

ಚಿತ್ರಗಳು ಮತ್ತು ಲೇಖನ:

ಶಿವು. ಕೆ.
೧೧೮, ೭ನೇ ಮುಖ್ಯರಸ್ತೆ, ೫ನೇ ಅಡ್ಡ ರಸ್ತೆ,
ಲಕ್ಷ್ಮಿನಾರಾಯಣಪುರಂ, ಬೆಂಗಳೂರು ೫೬೦೦೨೧.
ಪೋನ್:೯೮೪೫೧೪೭೬೯೫.







3 comments:

Badarinath Palavalli said...

ನಗರಗಳ ಹೊರವಲಯ ತೀವ್ರ ಗತಿಯಲ್ಲಿ ಕಾಂಕ್ರೀಟ್ ಕಾಡಾಗಿ ಪರಿವರ್ತನೆಯಾಗುತ್ತೊರುವುದು.
ತಮ್ಮ ಬಾಲ್ಯವನ್ನು ಪರಿಸರದ ಸಮೇತ ಕಟ್ಟಿಕೊಟ್ಟ ರೀತಿ.
ಆಹಾರ ಸರಪಳಿಯ ವಿಶಿಷ್ಟ ಪರಿಕಲ್ಪನೆ.
- ಎಲ್ಲವೂ ಸಾದೃಶವಾಗಿದೆ.

ಚಿತ್ರ ಬರಹವು ಉಪಯುಕ್ತವಾಗಿದೆ.

chinmay.N said...

Keeta pakshigala parisara naasha aagutta iruvudu nijakku vishaadaneeya

Manjanna said...

Olleya abhilashe sir..!