Wednesday, May 29, 2013

ನಿದ್ರಾವತಾರ

     ಅನೇಕ ವರ್ಷಗಳಿಂದ ನನ್ನನ್ನು ಕಾಡುತ್ತಿರುವ ವಿಚಾರವೆಂದರೆ ನಿದ್ರೆ. ಅರೆರೆ...ಹಾಗಂತ ನಾನು ಆಗಿನಿಂದ ಸರಿಯಾಗಿ ನಿದ್ರೆ ಮಾಡುತ್ತಿಲ್ಲವೆಂದುಕೊಳ್ಳಬೇಡಿ. ನಾನು ತುಂಬಾ ಚೆನ್ನಾಗಿ, ಸುಖವಾಗಿ ಮತ್ತು ನೆಮ್ಮದಿಯಾಗಿ ನಿದ್ರಿಸುತ್ತಿದ್ದೇನೆ.  ಮತ್ರೇನ್ರಿ ಚಿಂತೆ ನಿಮಗೆ ಸುಮ್ಮನೆ ಮಲಗೋದು ಬಿಟ್ಟು ಎನ್ನುತ್ತೀರಲ್ಲವೇ...ಸ್ವಲ್ಪ ತಾಳಿ ನನ್ನನ್ನು ಕಾಡುತ್ತಿರುವುದು ಕಣ್ಣು ಮುಚ್ಚಿ ಸುಖಿಸುವ ಪ್ರಾಕ್ಟಿಕಲ್ ನಿದ್ರೆಯಲ್ಲ.  "ನಿದ್ರೆ" ಎನ್ನುವ ವಿಚಾರ ನನ್ನ ಮನಸ್ಸಿನಲ್ಲಿ ಹತ್ತಾರು ಗೊಂದಲಗಳನ್ನು, ಪ್ರಶ್ನೆಗಳನ್ನು ಸೃಷ್ಟಿಸುತ್ತಿದೆ.  ಕೆಲವೊಮ್ಮೆ ಇದರ ಬಗ್ಗೆ ಸಂಶೋಧನೆ ಮಾಡಿ ಡಾಕ್ಟರೇಟ್ ತೆಗೆದುಕೊಳ್ಳಬಹುದೇನೋ ಎನ್ನುವಷ್ಟರ ಮಟ್ಟಿಗೆ ಈ ನಿದ್ರೆ ಎನ್ನುವ ವಿಚಾರ ಗಾಢತೆಗೆ ತೆಗೆದುಕೊಂಡು ಹೋಗುತ್ತದೆ. ಆದ್ರೆ ನಾನು ಅಷ್ಟು ಬುದ್ಧಿವಂತನಲ್ಲ ಮತ್ತು ತಾಳ್ಮೆಯು ಕಡಿಮೆಯಿರುವುದರಿಂದ ನನ್ನ ಮನಸ್ಸಿನಲ್ಲಿ ಆಗಿನಿಂದ ಮೂಡಿದ ಕುತೂಹಲ ಮತ್ತು ಕೌತುಕತೆಯನ್ನು, ಬೇರೆಯವರ ಅಭಿಪ್ರಾಯ ಮತ್ತು ನನ್ನದೇ ಬದುಕಿನ "ನಿದ್ರೆ"ಯ ಅನುಭವವನ್ನು ಅವಲೋಕಿಸುತ್ತಾ ಮನಸ್ಸಿನ ಆಳದಲ್ಲಿ ಹೊಕ್ಕಿರುವ ಈ ವಿಚಾರವನ್ನು ಹೀಗೆ ಬರೆದು ನಿರಾಳವಾಗುತ್ತಿದ್ದೇನೆ ಎಂದುಕೊಳ್ಳುತ್ತ ಲೇಖನವನ್ನು ಮುಂದುವರಿಸುತ್ತೇನೆ.
 
    ನಿದ್ರೆಯಲ್ಲಿ ನಿಮ್ಮ ಪ್ರಕಾರ ಎಷ್ಟು ವಿಧಗಳಿವೆಯೋ ಗೊತ್ತಿಲ್ಲ. ಆದ್ರೆ ನನ್ನ ಅನಿಸಿಕೆ ಪ್ರಕಾರ ನೂರಾರು ವಿಧಗಳಿರಬಹುದು. ಅವುಗಳಲ್ಲಿ ಕಿರುನಿದ್ರೆ, ಮರುನಿದ್ರೆ, ಮಗುನಿದ್ರೆ, ನಗುನಿದ್ರೆ, ಚುಟುಕು ನಿದ್ರೆ, ಚಿನಕುರಳಿ ನಿದ್ರೆ, ಮಲಗಿ ನಿದ್ರೆ, ಮಲಗದೇ ಕುಂತು ನಿದ್ರೆ, ನಿಂತು ನಿದ್ರೆ, ನಡೆದಾಡುವ ನಿದ್ರೆ, ತೂಕಡಿಕೆ ನಿದ್ರೆ, ಆಕಳಿಕೆ ನಿದ್ರೆ, ಕಣ್ಣುಮುಚ್ಚಿ ನಿದ್ರೆ, ಕಣ್ಣ ತೆರೆದೇ ನಿದ್ರೆ, ಧ್ಯಾನದ ನಿದ್ರೆ, ಧ್ಯಾನದೊಳಗೊಂದು ನಿದ್ರೆ, ಬಸ್ಸಿನಲ್ಲಿ ನಿಂತು ಅಲುಗಾಡದೇ ನಿದ್ರೆ, ಕೂತಲ್ಲಿ ಉರುಳಿಬೀಳುವ ನಿದ್ರೆ, ಸ್ಕೂಲು ಕಾಲೇಜುಗಳಲ್ಲಿ ಮಾಸ್ತರ ಕಣ್ತಪ್ಪಿಸಿ ಮಾಡುವ ನಿಮಿಷಕ್ಕೊಮ್ಮೆ ನಿದ್ರೆ, ದಿನಪೂರ್ತಿ ಹಗಲು ಹೊತ್ತೇ ಮಲಗಿರುವ ಸೋಮಾರಿ ನಿದ್ರೆ, ಪ್ರಾಜೆಕ್ಟ್ ಮುಗಿಸಬೇಕೆಂದು ನಮ್ಮ ಸಾಪ್ಟವೇರಿಗಳು ವಾರದ ಐದು ದಿನ ಹಗಲು ರಾತ್ರಿ ಕೆಲಸ ಮಾಡಿ ಕೊನೆ ಎರಡು ದಿನ ಹಗಲು ರಾತ್ರಿ ಪೂರ್ತಿ ಮಲಗುವ ಕುಂಬಕರ್ಣ ನಿದ್ರೆ, ನಿದ್ರೆಯಲ್ಲೂ ಮಾತಾಡುತ್ತಲೇ ಇರುವ ನಿದ್ರೆ, ಹಾಸಿಗೆ ಮೇಲೆ ಎಚ್ಚರದಿಂದ ಒದ್ದಾಡುತ್ತಿದ್ದರೂ ನಿದ್ರಿಸುತ್ತಿದ್ದೇನೆಂದು ಭ್ರಮಿಸುವ ನಿದ್ರೆ,  ಸತ್ತಂತೆ ಮಲಗಿರುವ ನಿದ್ರೆ, ಆಲ್ಕೋಹಾಲ್ ಮತ್ತಿನ ನಿದ್ರೆ, ಸುಪ್ಪತ್ತಿಗೆಯ ನಿದ್ರೆ, ಋಷಿಗಳ ಮುಳ್ಳಿನ ಹಾಸಿಗೆಯ ನಿದ್ರೆ, ಕೋಳಿ ನಿದ್ರೆ, ಪ್ರೀತಿಯಿಂದ ಅಪ್ಪಿಕೊಂಡ ಹೆಂಡತಿಯೊಂದಿಗೆ ಚಳಿಗಾಲದ ಬೆಚ್ಚನೆ ಸಿಹಿ ನಿದ್ರೆ, ಜಗಳವಾಡಿದ ಹೆಂಡತಿ ಕಡೆಗೆ ಬೆನ್ನುತಿರುಗಿಸಿ ಮಲಗಿದ ಕಹಿ ನಿದ್ರೆ, ಮುಂಜಾನೆಯ ಕಲ್ಲು ಸಕ್ಕರೆ ನಿದ್ರೆ, ಕಲ್ಲು ಬಡಿದು ಎದ್ದೇಳಿಸಿದಂತೆ ಆಲರಾಂ ಗಂಟೆ ಬಡಿದು ಎಚ್ಚರಗೊಳ್ಳುವಾಗಿನ ಪೇಪರ್ ಮತ್ತು ಹಾಲು ಹಾಕುವ ಹುಡುಗರ ನಿದ್ರೆ, ಎಣ್ಣೆ ಸ್ನಾನದ ನಂತರ ಗಡದ್ದಾಗಿ ಉಂಡು ಮಲಗಿದಾಗ ಹಗುರವಾಗಿ ಆಕಾಶದಲ್ಲಿ ತೇಲಾಡುವ ನಿದ್ರೆ, ವಿಷಾದ-ಜಿಗುಪ್ಸೆ-ನೋವು-ಬೇಸರಗಳು ಮನದೊಳಗೆ ಹೊಕ್ಕು ಮಲಗಿದಾಗ ಬಂದರೂ ಬಾರದಂತಿರುವ ಭಾರವಾದ ನಿದ್ರೆ, ಲವರ್ ನೆನಪಿನ ರೋಮಾಂಚನದ ನಿದ್ರೆ, ಲವರ್ ಕೈಕೊಟ್ಟಾಗ ದೇವದಾಸ ವಿರಹಿ ನಿದ್ರೆಯಲ್ಲದ ನಿದ್ರೆ, .......ಸತ್ತ ಮೇಲೆ ಚಿರನಿದ್ರೆ, ಅಬ್ಬಬ್ಬ ಇನ್ನೂ ಎಷ್ಟಿವೆಯೋ?

     ಈ ನಿದ್ರೆಯ ಚಿಂತೆಯನ್ನು ನಿಮ್ಮ ಮನಸ್ಸಿನ ಆಳಕ್ಕೆ ತೆಗೆದುಕೊಂಡು ಈ ರೀತಿ ಯಾಕೆ ಒದ್ದಾಡುತ್ತೀರಿ, ಸುಮ್ಮನೇ ಅದರ ಚಿಂತೆಯನ್ನು ಬಿಟ್ಟು ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ರೆ ಎನ್ನುವಂತೆ ಇರಬಾರದೇ ಅಂತ ನೀವು ನನಗೆ ಹೇಳಬಹುದು.  ನಾನು ಹಾಗೆ ಅನೇಕ ಬಾರಿ ಅದರ ಚಿಂತೆಯನ್ನು ಬಿಟ್ಟು ಸಂತೆಯಂತಹ ಸ್ಥಳಗಳಲ್ಲೂ ಸುಖವಾಗಿ ನಿದ್ರೆ ಮಾಡಿದ್ದೇನೆ. ಆದ್ರೆ ಆ ನಿದ್ರೆಯಿಂದ ಎದ್ದಮೇಲು "ಉಂಡಮೇಲೆ ಸುಂಕ ಕಟ್ಟಿಹೋಗು" ಎನ್ನುವಂತೆ ಮತ್ತೆ ಇದೇ ಚಿಂತೆ ಆವರಿಸಿಕೊಂಡರೆ ಏನು ಮಾಡೋಣ?  ಹೀಗೆ ಪದೇ ಪದೇ ಈ ನಿದ್ರೆಯ ಅಲೋಚನೆ ಮನಸ್ಸಿಗೆ ಬರಲು ಮೂಲ ಕಾರಣವೇನೆಂದು ಹುಡುಕಲಾರಂಭಿಸಿದೆ.


      ಬಾಲ್ಯದಲ್ಲಿ ಆಟ ಪಾಠ ಊಟಗಳ ಜೊತೆಗೆ ನಿದ್ರೆಯೂ ಚೆನ್ನಾಗಿತ್ತು. ಪ್ರಾಥಮಿಕ ಮತ್ತು ಮಿಡ್ಲ್ ಸ್ಕೂಲ್ ಸಮಯದ ಪರೀಕ್ಷೆಗಳಲ್ಲಿ ನಿದ್ರೆಗೆಟ್ಟು ಓದಿದ್ದು ನೆನಪಿಲ್ಲ. ಪರೀಕ್ಷೆಯ ಹಿಂದಿನ ದಿನ ಗಡದ್ದಾಗಿ ನಿದ್ರೆ ಮಾಡಿ, ಮರುದಿನ ಚೆನ್ನಾಗಿ ಪರೀಕ್ಷೆಯನ್ನು ಬರೆದ ನೆನಪು.  ಹೈಸ್ಕೂಲು ಮತ್ತು ಕಾಲೇಜು ದಿನಗಳಲ್ಲಿ ಪರೀಕ್ಷೆಗಳ ಹಿಂದಿನ ದಿನಗಳಲ್ಲಿ ಓದುವ ಸಲುವಾಗಿ ಪೂರ್ತಿ ರಾತ್ರಿ ನಿದ್ರೆಗೆಟ್ಟಿರುವುದು, ಆಗ ನಮ್ಮ ಏರಿಯಗಳಲ್ಲಿ ರಾಜ ಸತ್ಯವೃತ, ನಳದಮಯಂತಿ, ಶನಿಮಹಾದೇವರ ಮಹಾತ್ಮೆ, ಮಹಾಭಾರತ, ರಾಮಾಯಣ, ಇವಲ್ಲದೇ ತೊಗಲು ಬೊಂಬೆಯಾಟಗಳು.... ಹೀಗೆ ಇನ್ನೂ ಅನೇಕ ನಾಟಕಗಳನ್ನು ರಾತ್ರಿ ಪೂರ್ತಿ ನಿದ್ರೆಗೆಟ್ಟು ನೋಡಿದ್ದು ನೆನಪಿದೆ. ಈ ಕಾರಣಗಳನ್ನು ಬಿಟ್ಟರೆ ನಾನು ನಿದ್ರೆಯನ್ನು ಕಳಕೊಂಡಿದ್ದು ನೆನಪಿಲ್ಲ. ಈ ವಿಚಾರವಾಗಿ ಸೊಗಸಾಗಿ ಮತ್ತು ಸುಖವಾಗಿದ್ದೆ.  ಆದ್ರೆ ಹದಿನಾಲ್ಕು ವರ್ಷಗಳ ಹಿಂದೆ ಫೋಟೊಗ್ರಫಿ ಕಲಿತ ಮೇಲೆ ಮದುವೆ ಫೋಟೊಗ್ರಫಿಗಾಗಿ ಬೆಂಗಳೂರು ಮಾತ್ರವಲ್ಲದೇ ಬೇರೆ ಬೇರೆ ನಗರ ಊರುಗಳಿಗೆ ಹೋಗಬೇಕಾಗಿ ಬಂತಲ್ಲ., ಅಲ್ಲಿಗೆ ಹೋದಾಗಲೆಲ್ಲಾ ರಾತ್ರಿ ಸರಿಯಾಗಿ ನಿದ್ರೆ ಬರುತ್ತಿರಲಿಲ್ಲ. ನಮ್ಮ ಮನೆಯಲ್ಲಿ ಚೆನ್ನಾಗಿ ನಿದ್ರೆ ಬರುತ್ತದೆ, ಆದ್ರೆ ಹೀಗೆ ಬೇರೆ ಊರುಗಳಿಗೆ ಹೋದಾಗ ಮಾತ್ರ ಏಕೆ ನಿದ್ರೆ ಬರುವುದಿಲ್ಲ? ಎನ್ನುವ ಪ್ರಶ್ನೆ ಮನದಲ್ಲಿ ಕಾಡತೊಡಗಿತ್ತು. ಇದೇ ಈ ನಿದ್ರೆ ಎನ್ನುವ ಆಲೋಚನೆ ಮನಸ್ಸಿಗೆ ಬರಲು ಮೂಲ. 

    ನೀವು ಹೇಳಬಹುದು ಪರಸ್ಥಳಕ್ಕೆ ಹೋದಾಗ ಹೊಸ ಜಾಗಕ್ಕೆ ಹೊಂದಿಕೊಳ್ಳಲು ಸ್ವಲ್ಪ ಕಷ್ಟವಾಗುವುದರಿಂದ ಪ್ರಾರಂಭದಲ್ಲಿ ನಿದ್ರೆ ಬರುವುದಿಲ್ಲವೆಂದು.  ಆ ಮಾತನ್ನು ನಾನು ಒಪ್ಪುತ್ತೇನೆ. ಮೊದಲ ಬಾರಿ ಮೈಸೂರಿಗೆ ಹೋದಾಗ ಅವತ್ತು ರಾತ್ರಿ ನಿದ್ರೆ ಬಂದಿಲ್ಲವಾದರೆ ನಿಮ್ಮ ಮಾತು ಸರಿ.  ಆದ್ರೆ ನಂತರ ಮೈಸೂರಿಗೆ ಇಪ್ಪತ್ತು ಬಾರಿ ಹೋದಾಗಲೂ ಅಷ್ಟು ಸಲವೂ ಅಲ್ಲಿ ಮಲಗಿದಾಗ ನಿದ್ರೆ ಬರದಿದ್ದರೆ ಹೇಗೆ? ಇದೇ ರೀತಿ ಬೇರೆ ಬೇರೆ ಊರುಗಳಿಗೆ ಹತ್ತಾರು ಸಲ ಹೋಗಿದ್ದರೂ ಅಷ್ಟು ಸಲವೂ ಆ ರಾತ್ರಿಗಳಲ್ಲಿ ಸರಿಯಾಗಿ ನಿದ್ರೆ ಬರದಿದ್ದರೆ ಕಾರಣವೇನು? ಮದುವೆ ಫೋಟೊಗ್ರಫಿ ಕೆಲಸದಲ್ಲಿ ಹೋಗಿದ್ದಾಗ ಅಲ್ಲಿನ ಕಲ್ಯಾಣ ಮಂಟಪಗಳಲ್ಲಿ, ಮದುವೆ ಕಡೆಯವರ ಮನೆಗಳಲ್ಲಿ ಉಳಿದುಕೊಂಡಾಗ ಅಲ್ಲಿನ ವ್ಯವಸ್ಥೆ ಸರಿಯಾಗಿರುವುದಿಲ್ಲ.  ಆ ಕಾರಣಕ್ಕಾಗಿಯೂ ಸರಿಯಾಗಿ ನಿದ್ರೆ ಬಂದಿಲ್ಲದಿರಬಹುದು ಎಂದುಕೊಂಡರೂ ಅನೇಕ ಕಡೆ ನಮಗೆ ಉತ್ತಮ ಲಾಡ್ಜಿಂಗ್ ವ್ಯವಸ್ಥೆಯಿದ್ದು ಕೂಡ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗಿಲ್ಲವಲ್ಲ?

    ಈ ಮದುವೆ ಫೋಟೋಗ್ರಫಿಯೆನ್ನುವುದು ದುಡಿಮೆಯ ವಿಚಾರವಾಗಿರುವುದರಿಂದ ಅಲ್ಲಿ ಅದೇ ಮುಖ್ಯವಾಗಿ ಉಳಿದೆಲ್ಲವೂ ಗೌಣವೆಂದೆನಿಸಿ ನಮ್ಮ ಸಂಪೂರ್ಣವಾದ ಅಲೋಚನೆ, ಶ್ರಮ, ಚಿಂತೆ, ಚಿಂತನೆಗಳೆಲ್ಲವೂ ಅದರ ಕಡೆಗೆ ಇರುವುದರಿಂದಲೂ ಅಲ್ಲಿನ ಜಾಗಗಳಲ್ಲಿ ಸರಿಯಾಗಿ ನಿದ್ರೆಬರುವುದಿಲ್ಲವೆನ್ನುವ ವಿಚಾರವನ್ನು ಒಪ್ಪಿಕೊಂಡರೂ ಇವೆಲ್ಲ ಟೆನ್ಷನ್ ಬದಿಗಿಟ್ಟು ಸುಮ್ಮನೇ ಎರಡು-ಮೂರು ದಿನ ಫೋಟೊಗ್ರಫಿ ಪ್ರವಾಸ ಹೋಗಿ ಬರೋಣ, ಅಥವ ಹೆಂಡತಿಯೊಂದಿಗೆ ನಾಲ್ಕು ದಿನ ಎಲ್ಲವನ್ನು ಮರೆತು ಪ್ರವಾಸ ಹೋಗಿಬರೋಣವೆಂದು ಹೊರಟಾಗಲೂ ಅಲ್ಲಿ ಈ ನಿದ್ರೆ ನನಗೆ ಕೈಕೊಟ್ಟಿದೆ. ಅವುಗಳಲ್ಲಿ ಕೆಲವು ಉದಾಹರಣೆಗಳು ಇಲ್ಲಿವೆ.

    ಹೊಸದಾಗಿ ಆಗತಾನೆ ಫೋಟೊಗ್ರಫಿ ಕಲಿಯುತ್ತಿದ್ದ ಸಮಯ. ಪ್ರಾರಂಭದಲ್ಲಿ ಬಂಡಿಪುರಕ್ಕೆ ಹೋಗಿದ್ದೆ. ಅಲ್ಲಿನ ಕಾಟೇಜ್ ಉತ್ತಮವಾಗಿ ಮಲಗುವ ವ್ಯವಸ್ಥೆಯಿದ್ದರೂ ನಿದ್ರೆ ಬಂದಿರಲಿಲ್ಲ. ಇದಲ್ಲದೇ ಗೆಳೆಯರ ಜೊತೆ ಫೋಟೊಗ್ರಫಿಗಾಗಿ ನಾಗರಹೊಳೆ, ಕುಶಾಲನಗರ, ಮಡಿಕೇರಿ, ಮೈಸೂರು.........ಅಲ್ಲದೇ ಕಬಿನಿ ಜಂಗಲ್ ಲಾಡ್ಜ್ ನಂತ ಏಷ್ಯದಲ್ಲೇ ಅತ್ಯುತ್ತಮವೆನಿಸುವ ರೆಸಾರ್ಟ್ನಲ್ಲಿ ಉತ್ತಮವಾದ ಹಸಿರು ವಾತಾವರಣ, ಪಂಚತಾರ ಸೌಲಭ್ಯದ ವೈಭೋಗವಿದ್ದರೂ ಅಲ್ಲಿ ಮಲಗಿದ್ದ ರಾತ್ರಿ ನಿದ್ರೆಯಿಲ್ಲದೇ ಒದ್ದಾಡಿದ್ದೆ.  ಊಟಿ, ಕೊಡೈಕನಲ್, ಗೋವ ಏರ್ಕಾಡ್, ಮುನ್ನಾರ್, ಪಾಂಡಿಚೇರಿ ಇನ್ನೂ ಅನೇಕ ಕಡೆ ಪ್ರವಾಸ ಹೋಗಿದ್ದು ಅಲ್ಲಿ ಅತ್ಯುತ್ತಮ ಸೌಲಭ್ಯಗಳು ವಿಲಾಸಿ ರೆಸಾರ್ಟ್ ಕಾಟೇಜುಗಳಲ್ಲಿ ಇದ್ದರೂ ನಾನು ಅಲ್ಲೆಲ್ಲ ರಾತ್ರಿ ನಿದ್ರೆಯಿಲ್ಲದೇ ಒದ್ದಾಡಿದ್ದೇನೆ.  ಭದ್ರಾ ಜಲಶಯದ ಬಳಿ ಇರುವ "ರೆವರ್ ಟರ್ನ್ ಜಂಗಲ್ ಲಾಡ್ಜ್" ಒಂದು ಅತ್ಯುತ್ತಮ ವಾದ ಜಂಗಲ್ ರಿಸಾರ್ಟ್ ಅಲ್ಲಿಯೂ ಫೋಟೊಗ್ರಫಿ ಪ್ರವಾಸದಲ್ಲಿ ಎರಡು ರಾತ್ರಿ ನಿದ್ರೆಯಿಲ್ಲದೇ ಒದ್ದಾಡಿದ್ದೇನೆ.

    ’ಆರೆಂಜ್ ಕೌಂಟಿ" ರೆಸಾರ್ಟ್ ನಿಜಕ್ಕೂ ವಿಶಿಷ್ಟ, ವಿಭಿನ್ನ ಮತ್ತು ದುಬಾರಿಯಾದ ಒಂದು ಅದ್ಬುತವಾದ ಲೋಕವೆನಿಸುವ ಪಂಚತಾರ ರೆಸಾರ್ಟ್. ಅಲ್ಲಿರುವಷ್ಟು ದಿನ ನಾವು ಪ್ರಪಂಚವನ್ನೇ ಮರೆತುಹೋಗುತ್ತೇವೆ. ಆ ಮಟ್ಟಿಗಿನ ಸಕಲ ಸೌಕಲ್ಯಗಳುಳ್ಳಂತದ್ದು.  ಆ ರಿಸಾರ್ಟ್ ಮತ್ತು ಅದರ ಸುತ್ತಮುತ್ತಲಿನ ಪರಿಸರವನ್ನು ಫೋಟೊಗ್ರಫಿ ಮಾಡಲು ನನಗೆ ಅವರ ಕಡೆಯಿಂದ ಅಸೈನ್ ಮೆಂಟ್ ಸಿಕ್ಕಿತ್ತು. ಅಲ್ಲಿ ಬೆಳಿಗ್ಗೆ ಆರುಗಂಟೆಯಿಂದ ರಾತ್ರಿ ಎಂಟು ಗಂಟೆಯವರೆಗೆ ನಿರಂತರವಾಗಿ ಫೋಟೊಗ್ರಫಿಯನ್ನು ಮಾಡಬೇಕಾಗಿದ್ದರಿಂದ ರಾತ್ರಿ ಹೊತ್ತಿಗೆ ಸುಸ್ತಾಗಿಬಿಡುತ್ತಿತ್ತು. ಪಂಚತಾರ ರೀತಿಯ ಊಟ ಮತ್ತು ವ್ಯವಸ್ಥೆ, ಅಲ್ಲಿನ ಕಾಡಿನ ವಾತಾವರಣದಿಂದಾಗಿ ರಾತ್ರಿ ಮಲಗಿದ್ದ ತಕ್ಷಣ ನಿದ್ರೆ ಬರಬೇಕಿತ್ತು.  ಆದ್ರೆ ಅಂತ ಸ್ಥಳದಲ್ಲೂ ನಿದ್ರೆಯಿಲ್ಲದೇ ಒದ್ದಾಡಿದ್ದರಿಂದಾಗಿ ಈ ನಿದ್ರೆ ವಿಚಾರ ಮನದೊಳಗೆ ಆಳವಾಗಿ ಬೇರೂರಿ ಇದಕ್ಕೆ ಕಾರಣವನ್ನು ಕಂಡು ಹಿಡಿಯಲೇಬೇಕೆಂದು ತೀರ್ಮಾನಿಸಿದ್ದೆ.



     ಕೆಲವು ದಿನಗಳ ಹಿಂದೆ ಮದುವೆ ಫೋಟೊಗ್ರಫಿಗಾಗಿ ಭದ್ರಾವತಿಗೆ ಹೋಗಿದ್ದೆ. ಮದುವೆ ಮನೆಯವರು ನನಗೆ ಮತ್ತು ನನ್ನ ವಿಡಿಯೋಗ್ರಾಫರ್ ಇಬ್ಬರಿಗೂ  ಕಲ್ಯಾಣಮಂಟಪದ ಪಕ್ಕದಲ್ಲಿಯೇ ಇದ್ದ ಹೋಟಲ್ಲಿನಲ್ಲಿ ನಮಗಾಗಿ ಒಂದು ರೂಮ್ ಕಾದಿರಿಸಿದ್ದರು. ನಮ್ಮ ಲಗ್ಗೇಜು ಬಟ್ಟೆ ಇತ್ಯಾದಿಗಳನ್ನು ಅಲ್ಲಿಯೇ ಇರಿಸಿ ರಾತ್ರಿ ಅರತಕ್ಷತೆ ಫೋಟೊಗ್ರಫಿ ವಿಡಿಯೋಗ್ರಫಿ ಕೆಲಸ ಮುಗಿದು ಊಟವಾದ ಮೇಲೆ ನಾವು ಮಲಗುವ ವ್ಯವಸ್ಥೆಯಾಗಿತ್ತು. ಆದರೆ ನಮಗೆ ಹಾಗೆ ಸುಲಭವಾಗಿ ಮತ್ತು ಸುಖವಾಗಿ ನಿದ್ರೆ ಮಾಡುವ ಸದವಕಾಶ ಒದಗಿಬರಲಿಲ್ಲ. ಏಕೆಂದರೆ ಅವತ್ತು ಮದ್ಯರಾತ್ರಿ ಹೊತ್ತಿಗೆ ಅರಿಸಿನ ಬೆರೆಸಿದ ಎಣ್ಣೆಯನ್ನು ವದುವರರಿಗೆ ಹಚ್ಚುವ ಕಾರ್ಯಕ್ರಮವಿತ್ತು. ಈ ಶಾಸ್ತ್ರವು ಕೆಲವು ಸಂಪ್ರದಾಯಗಳಲ್ಲಿ ಹಗಲು ಹೊತ್ತಿನಲ್ಲಿ ನಡೆದರೆ ಇನ್ನು ಕೆಲವು ಸಂಪ್ರದಾಯಗಳಲ್ಲಿ ಮದ್ಯರಾತ್ರಿ ಹೊತ್ತಲ್ಲಿ ನಡೆಯುತ್ತದೆ. ಛಾಯಾಗ್ರಾಹಕರಿಗೆ ಮತ್ತು ವಿಡಿಯೋಗ್ರಾಫರುಗಳಿಗೆ ಮದ್ಯರಾತ್ರಿಯ ಫೋಟೊಗ್ರಫಿಯೆಂದರೆ ಸಹಜವಾಗಿ ಕಷ್ಟ ಕಷ್ಟ. ಮದುವೆ ಮನೆಯವರಿಗೆ ಅದು ಅಪರೂಪದ ಸಂಭ್ರಮವಾದರೆ ನಮ್ಮಂತ ಛಾಯಾಗ್ರಾಹಕ-ವಿಡಿಯೋಗ್ರಾಹಕರಿಗೆ ಅದು ನಿದ್ರೆಗೆಟ್ಟು ಮಾಡುವ ಮಾಡಬೇಕಾದ ಅನಿವಾರ್ಯ ಸಂಗತಿಯಾದ್ದರಿಂದ ಬೇಸರವಾದರೂ ಸಹಿಸಿಕೊಂಡು ಮಾಡಲೇಬೇಕು. ಏಕೆಂದರೆ ಅದೇ ನಮ್ಮ ವೃತ್ತಿಯಾಗಿದೆಯಲ್ಲ! ಅವತ್ತು ಆ ಕಾರ್ಯಕ್ರಮ ಮದ್ಯರಾತ್ರಿ ಹನ್ನೆರಡು ಗಂಟೆಗೆ ಶುರುವಾಗಿ ಅದು ಮುಗಿಯುವ ಹೊತ್ತಿಗೆ ಮಧ್ಯರಾತ್ರಿ ಎರಡು ಗಂಟೆಯಾಗಿತ್ತು. ನಮಗೆ ಕಾದಿರಿಸಿದ್ದ ರೂಮಿಗೆ ಬಂದು ನೋಡುತ್ತೇವೆ! ಆಗಲೇ ಅದರಲ್ಲಿ ಐದುಜನ ಮದುವೆ ಮನೆಯ ಅತಿಥಿಗಳು ನಿದ್ರಿಸುತ್ತಿದ್ದಾರೆ. ಅದು ಎರಡು ಬೆಡ್ ರೂಮಿನ ಕೊಠಡಿ. ಮಂಚದ ಮೇಲೆ ಮೂವರು ನಿದ್ರೆಯ ಕನಸಿನಲ್ಲಿದ್ದರೆ, ನೆಲದಲ್ಲಿ ಇಬ್ಬರು ಹೆಚ್ಚುವರಿ ಪಡೆದುಕೊಂಡ ಹಾಸಿಗೆ ಮೇಲೆ ಒದ್ದಾಡುತ್ತಿದ್ದಾರೆ. ನಾನು ಮತ್ತು ನನ್ನ ಗೆಳೆಯ ವಿಡಿಯೋಗ್ರಾಫರ್ ಮುಖ-ಮುಖ ನೋಡಿಕೊಂಡೆವು. ಏಕೆಂದರೆ ನಮಗೆ ಮೀಸಲಿದ್ದ ನಿದ್ರಾಸ್ಥಳ ಬೇರೆಯವರ ಪಾಲಾಗಿತ್ತು. ವಿಧಿಯಿಲ್ಲದೇ ನಮ್ಮ ಕಾರ್ಯಕ್ರಮದ ಆಯೋಜಕರಿಗೆ ಫೋನಾಯಿಸಿದೆ. ತಕ್ಷಣ ಅಲ್ಲಿಂದ ಬಂತು ಉತ್ತರ. "ನಿಮಗಾಗಿ ಎರಡು ಹೆಚ್ಚುವರಿ ಹಾಸಿಗೆಯನ್ನು ಅಲ್ಲಿಡಲಾಗಿದೆ. ಸ್ವಲ್ಪ ಅಡ್ಜೆಸ್ಟ್ ಮಾಡಿಕೊಂಡು ಸ್ಥಳವನ್ನು ಹೊಂದಿಸಿಕೊಳ್ಳಿ. ನಾಳೆ ಬೆಳಿಗ್ಗೆ ಏಳುಗಂಟೆಗೆ ನೀವು ಸಿದ್ದರಾಗಿ ಬಂದುಬಿಡಬೇಕು. ಈಗ ಸುಖವಾಗಿ ನಿದ್ರೆಮಾಡಿ. ತೊಂದರೆಗಾಗಿ ಕ್ಷಮೆಯಿರಲಿ. ಗುಡ್ ನೈಟ್ " ಎಂದರು. ಮರುಕ್ಷಣವೇ ಫೋನ್ ಕಟ್ ಆಯ್ತು. ನನ್ನ ವಿಡಿಯೋಗ್ರಾಫರ್ ಗೆಳೆಯ ಒಂದು ಹಾಸಿಗೆಯನ್ನು ಹಾಕಿಕೊಂಡು ಎರಡೇ ನಿಮಿಷದಲ್ಲಿ ನಿದ್ರೆಹೋದ. ನಾನು ಜಾಗ ಹುಡುಕುತ್ತೇನೆ ಎಲ್ಲಿಯೂ ಕಾಣಿಸುತ್ತಿಲ್ಲ! ಆ ಪುಟ್ಟದಾದ ಕೋಣೆಯಲ್ಲಿ ನನಗೆ ಕಾಣಿಸಿದ್ದು ಒಂದೇ ಸ್ಥಳ . ಮೇಕಪ್ ಮಾಡಿಕೊಳ್ಳಲು ಒಂದು ಪುಟ್ಟ ಕಪಾಟಿಗೆ ಹೊಂದಿಕೊಂಡ ದೊಡ್ಡ ಕನ್ನಡಿ. ಅದರ ಕೆಳಗೆ ಮೂರು ಅಡಿ ಅಂತರದಲ್ಲಿರುವ ನೆಲದ ಮೇಲೆ ಮಾತ್ರ ಜಾಗವಿತ್ತು. ಗೋಡೆಯ ಪಕ್ಕದ ಆ ಜಾಗ ಅಗಲ ಕಡಿಮೆಯಿದ್ದರೂ ಉದ್ದ ಹೆಚ್ಚಿತ್ತು. ಸದ್ಯ ಇಷ್ಟಾದರೂ ಸಿಕ್ಕಿತಲ್ಲ ಎಂದುಕೊಂಡು ನನಗಾಗಿ ಉಳಿದಿದ್ದ ಹಾಸಿಗೆಯನ್ನು ಹಾಕಿಕೊಂಡು ಬಲಬದಿಯ ಗೋಡೆಗೆ ಒರಗಿಕೊಂಡಂತೆ ಮಲಗಿದೆನಷ್ಟೆ. ಮರುಕ್ಷಣದಲ್ಲಿ ಮಾಯದಂತ ನಿದ್ರೆ ಆವರಿಸಿತ್ತು. ಬೆಳಿಗ್ಗೆ ಏಳುಗಂಟೆಗೆ ಮದುವೆ ಮನೆಯವರು ಎಚ್ಚರಗೊಳಿಸದಿದ್ದಲ್ಲಿ ಅವತ್ತು ಮದ್ಯಾಹ್ನದವರೆಗೆ ಮಲಗಿಬಿಡುತ್ತಿದ್ದೆನೇನೋ, ಅಂತ ಅದ್ಬುತವೆನಿಸುವ ನಿದ್ರೆ.  ರಾತ್ರಿ ಯಾವುದಾದರೂ ಕನಸು ಬಿತ್ತಾ ಅಂತ ನೆನಪಿಸಿಕೊಂಡೆ. ಯಾವ ಕನಸು ಬರಲಿಲ್ಲ. ಕನಸುಗಳೇ ಬರದ ಅಪರೂಪದ ಸುಖವಾದ ಮತ್ತು ನೆಮ್ಮದಿಯಾದ ನಿದ್ರೆ ಅದಾಗಿತ್ತು. ನಂತರ ಸಿದ್ದನಾಗಿ ಮದುವೆ ಫೋಟೊಗ್ರಫಿಗೆ ಹೊರಟರೂ ಕೂಡ ನನ್ನ ಮನೆಯಲ್ಲಿ ಮಾಡುವಷ್ಟರ ಮಟ್ಟಿಗೆ ಇಷ್ಟು ಚೆನ್ನಾದ ನಿದ್ರೆಗೆ ಕಾರಣವೇನಿರಬಹುದು ಎನ್ನುವ ವಿಚಾರ ಮನಸ್ಸಿನಲ್ಲಿ ಕೊರೆಯುತ್ತಿತ್ತು. ಕೆಲವೇ ನಿಮಿಷಗಳಲ್ಲಿ ಅದಕ್ಕೆ ಉತ್ತರ ಸಿಕ್ಕಿತ್ತು. ಹತ್ತಾರು ಪ್ರವಾಸಗಳಲ್ಲಿ ಅತ್ಯುತ್ತಮ ಮತ್ತು ಸಕಲ ಸೌಕರ್ಯವುಳ್ಳ, ತ್ರಿತಾರ, ಪಂಚತಾರ ಹೋಟಲ್ಲುಗಳು, ರಿಸಾರ್ಟುಗಳಲ್ಲಿ ಬರದ ನಿದ್ರೆ ನಿನ್ನೆ ರಾತ್ರಿ ಇಷ್ಟು ಚೆನ್ನಾಗಿ ಬಂದಿರುವುದಕ್ಕೆ ಕಾರಣ ನಾನು ಗೋಡೆಗೆ ಒರಗಿಕೊಂಡು ಮಲಗಿರುವುದು!  ಮನೆಯಲ್ಲಿಯೂ ಕೂಡ ನಾನು ಗೋಡೆಗೆ ಒರಗಿಕೊಂಡು ಮಲಗಿವುದರಿಂದಲೇ ಚೆನ್ನಾಗಿ ನಿದ್ರೆ ಮಾಡುವುದು! ಈ ಫೋಟೊಗ್ರಫಿ ಮಾಡಲು ಪ್ರಾರಂಭಿಸಿದ ಹದಿನಾಲ್ಕು ವರ್ಷದ ನಂತರ ಮೊಟ್ಟ ಮೊದಲ ಬಾರಿಗೆ ಸುಖವಾಗಿ ನಿದ್ರೆ ಮಾಡುವ ರಹಸ್ಯವನ್ನು ತಿಳಿದಂತೆ ಜ್ಞಾನೋದಯವಾಯ್ತು!

    ನನಗೇನೋ ಗೋಡೆಗೆ ತಾಗಿಕೊಂಡು ಮಲಗಿದರೆ ಸುಖನಿದ್ರೆ ಬರುತ್ತದೆನ್ನುವುದು ಖಚಿತವಾಗಿ ಜ್ಞಾನೋದಯವಾಯ್ತು. ಅಲ್ಲಿಂದ ಮುಂದೆ ನಾನು ಯಾವ ಊರಿನಲ್ಲಿಯೇ ಉಳಿದುಕೊಳ್ಳಲಿ, ನನ್ನ ಹಾಸಿಗೆ ಅಥವ ಮಂಚವನ್ನು ಗೋಡೆ ಬದಿಗೆ ಮೊದಲು ಸರಿಸಿಬಿಡುತ್ತೇನೆ. ಮಂಚ ಹಾಸಿಗೆ ಏನೂ ಇಲ್ಲದಿದ್ದಲ್ಲಿ ಕೊನೇ ಪಕ್ಷ ಒಂದು ಚಾಪೆ ಮತ್ತು ತಲೆದಿಂಬು ಕೊಟ್ಟು ಗೋಡೆ ಬದಿ ಎರಡು ಅಡಿಯಷ್ಟು ಅಗಲ, ಆರು ಆಡಿಯಷ್ಟು ಉದ್ದದ ಜಾಗವನ್ನು ಕೊಟ್ಟುಬಿಡ್ಟರೆ ಸಾಕು ನನ್ನ ಸುಖನಿದ್ರೆಗೆ.  ನನ್ನ ಚೆಂದದ ನಿದ್ರೆಗೆ ಗೋಡೆಯೇ ಆಧಾರವಾದರೆ, ಈ ಭೂಮಂಡಲದಲ್ಲಿರುವ ೮೦೦ ಕೋಟಿ ಜನರಿಗೂ ನನ್ನಂತೆ ಏನಾದರೂ ಅಧಾರವಿರಬಹುದೇನೋ. ಇದು ಕೇವಲ ನನ್ನ ಅನಿಸಿಕೆ ಮಾತ್ರ. ಆದರೂ ನನ್ನ ಬುದ್ಧಿಗೆ ತಿಳಿದಂತೆ ಅನುಭವಕ್ಕೆ ದಕ್ಕಿದಂತೆ ಬೇರೆಯವರ ನಿದ್ರೆಯ ಬಗ್ಗೆ ಹೇಳಬಹುದಾದರೆ, ಕೆಲವರಿಗೆ ಹಾಸಿಗೆ ತುದಿಯಲ್ಲಿ ಮಲಗಿದರೆ ನಿದ್ರೆ, ಒಬ್ಬರಿಗೆ ಮಕಾಡೆ ಮಲಗಿದರೆ ನಿದ್ರೆ, ಇನ್ನೊಬ್ಬರಿಗೆ ಅಂಗಾತ ಮಲಗಿದರೆ ನಿದ್ರೆ, ಮಗದೊಬ್ಬರಿಗೆ ಹಾಸಿಗೆ ತುದಿಯಲ್ಲಿ ಕೈಕಾಲುಗಳನ್ನು ಇಳಿಬಿಟ್ಟುಕೊಂಡು ಮಲಗಿದರೆ ನಿದ್ರೆ. ಹಾಸಿಗೆಯನ್ನು ಬಿಟ್ಟು ನೆಲಕ್ಕೆ ಬಂದರೆ, ಅನೇಕರಿಗೆ ನೆಲಕ್ಕೆ ಹಾಸಿದ ಚಾಪೆಯ ಮೇಲೆ ಸುಖನಿದ್ರೆ, ಮತ್ತೊಬ್ಬರಿಗೆ ಈ ಭೂಮಿಯೇ ಹಾಸಿಗೆ ಆಕಾಶವೇ ಹೊದಿಕೆಯೆನ್ನುವಂತೆ ಬರಿನೆಲದ ಮೇಲೆ ಮಲಗಿದರೆ ಸಕತ್ ನಿದ್ರೆ.  ಇಲ್ಲೊಬ್ಬನಿಗೆ ತಲೆದಿಂಬಿದ್ದರೆ ನಿದ್ರೆ, ಅಲ್ಲೊಬ್ಬನಿಗೆ ತಲೆದಿಂಬಿಲ್ಲದಿದ್ದರೆ ನಿದ್ರೆ, ಇವನಿಗೆ ಪುಸ್ತಕವನ್ನು ಓದುತ್ತಾ ಮಲಗಿದರೆ ನಿದ್ರೆ, ಆತನಿಗೆ ಎಫ್ ಎಂ ನಲ್ಲಿ ಹಳೆಯ ಸುಮಧುರ ಹಾಡುಗಳನ್ನು ಕೇಳುತ್ತಿದ್ದರೆ ನಿದ್ರೆ, ಒಬ್ಬನಿಗೆ ಫ್ಯಾನ್ ಇದ್ದರೆ ನಿದ್ರೆ ಮತ್ತೊಬ್ಬನಿಗೆ ಫ್ಯಾನ್ ಇಲ್ಲದಿದ್ದಲ್ಲಿ ಒಳ್ಳೆಯ ನಿದ್ರೆ. ಹಾಸಿಗೆ, ದಿಂಬು, ನೆಲ ಚಾಪೆಯನ್ನು ದಾಟಿ ನೋಡಿದರೆ ಅದೋ ಅವಳಿಗೆ ಟಿವಿಯಲ್ಲಿ ಬರುವ ಅತ್ತೆ ಸೊಸೆ ಕಿತ್ತಾಟದ ಧಾರವಾಹಿಯನ್ನು ತಪ್ಪದೇ ನೋಡಿದರೆ ನಿದ್ರೆ, ಇವನಿಗೆ ರಾತ್ರಿ ಮಲಗುವ ಮುನ್ನ ಕ್ರೈಂ ಧಾರಾವಾಹಿಯನ್ನು ಟಿವಿಯಲ್ಲಿ ನೋಡಿದರೆ ನಿದ್ರೆ, ಆ ಹುಡುಗನಿಗೆ ಮಿಡ್ ನೈಟ್ ಮಸಾಲವನ್ನು ನೋಡಿದರೆ ನಿದ್ರೆ, ಈ ಮಗುವಿಗೆ ಅಜ್ಜಿಯ ಕೈತುತ್ತು ತಿಂದ ಮೇಲೆ ನಿದ್ರೆ, ಆ ಮಗುವಿಗೆ ಅಜ್ಜನ ಕತೆ ಕೇಳುತ್ತಲೇ ನಿದ್ರೆ, ಈಗೀನ ಮಕ್ಕಳಿಗೆ ಕಾರ್ಟೂನ್ ನೋಡುತ್ತಲೇ ನಿದ್ರೆ. ಅದೋ ನೋಡಿ ಅವನಿಗೆ ರಾತ್ರಿ ಹನ್ನೊಂದುಗಂಟೆಗೆ ತನ್ನ ಪೋಸ್ಟಿಂಗಿಗೆ ಬಂದ ಕಾಮೆಂಟುಗಳು ಮತ್ತು ಲೈಕುಗಳನ್ನು ನೋಡಿದ ಮೇಲೆ ನಿದ್ರೆ. ಅವನೊಬ್ಬನಿಗೆ ರಾತ್ರಿ ಬ್ಲಾಗಿನಲ್ಲಿ ಹಾಕಿದ ಲೇಖನಕ್ಕೆ ಎಷ್ಟು ಕಾಮೆಂಟುಗಳು ಬಂದಿವೆ ಎಂದು ನೋಡಿದ ಮೇಲೆ ನಿದ್ರೆ. ಈತನೊಬ್ಬನಿಗೆ ರಾತ್ರಿ ಮಲಗುವ ಮುನ್ನ ಒಂದು ಲೇಖನವೋ, ಕವನವೋ ಬರೆದು ಬ್ಲಾಗಿಗೆ ಹಾಕಿದ ಮೇಲೆ ಸಮಾಧಾನದ ನಿದ್ರೆ ಬಂದರೆ ಅವನೊಬ್ಬನಿಗೆ ಕಂಫ್ಯೂಟರ್ ಗೇಮ್ ಆಡಿದ ಮೇಲೆ ನಿದ್ರೆ. ಟೆರಸ್ಸಿನಲ್ಲಿ ಕುಳಿತು ಸಿಗರೇಟು ಸೇದಿ ಬಿಡುವ ಹೊಗೆಯ ನಡುವೆ ಕಣ್ಣುಮುಚ್ಚಾಲೆಯಾಡುವ ಆಕಾಶದ ನಕ್ಷತ್ರಗಳನ್ನು ನೋಡುತ್ತಿದ್ದರೆ ನಿದ್ರೆ, ಹಳ್ಳಿಯಲ್ಲಿ ರಾತ್ರಿ ಬೇಗ ಊಟ ಮುಗಿಸಿ ಹೊರಾಂಡದಲ್ಲಿ ಚಾಪೆ ಹಾಸಿಕೊಂಡು ಅಂಗಾತ ಮಲಗಿ ಆಕಾಶದಲ್ಲಿರುವ ನಕ್ಷತ್ರಗಳನ್ನು ಎಣಿಸಿ ಅದರ ಕತೆಯನ್ನು ಹೇಳುತ್ತಾ ನಿದ್ರೆಹೋದರೆ ಆತನ ಎದೆಯ ಮೇಲೆ ಕುಳಿತ ಮೊಮ್ಮಗನಿಗೆ ಒಮ್ಮೆ ಆಕಾಶದಲ್ಲಿರುವ ನಕ್ಷತ್ರಗಳನ್ನು ಮಗದೊಮ್ಮೆ ಅಜ್ಜನ ಎದೆಯ ಮೇಲೆ ಹರಡಿಕೊಂಡ ಕೂದಲು ಎಣಿಸುತ್ತಲೇ ನಿದ್ರೆ, ಪಕ್ಕದಲ್ಲಿಯೇ ಕುಳಿತ ಅಜ್ಜಿ ಬೊಕ್ಕಬಾಯಲ್ಲಿ ಎಲೆಅಡಿಕೆ ಹಾಕಿಕೊಂಡು ಮುಟಿಗೆಯಷ್ಟು ತಂಬಾಕು ಹಾಕಿ ಜಗಿಯುತ್ತಾ ಅಜ್ಜ ಮಗನ ಆಟವನ್ನು ನೋಡುತ್ತಾ ನಿದ್ರೆ, ಅತ್ತ ಸೊಸೆ ಗಂಡನಿಗೆ ಹೊಟ್ಟೆತುಂಬ ಊಟಕ್ಕಿಟ್ಟು ಗಂಡ ಮಲಗಿದ ಮೇಲೆ ಆಕೆಗೆ ನೆಮ್ಮದಿಯ ನಿದ್ರೆ. ಮಗ ಸೊಸೆ ಇಬ್ಬರೂ ಸುಖವಾಗಿ ಮಲಗಿದರೆಂದು ತಿಳಿದ ಅತ್ತೆ ಎಲ್ಲವನ್ನು ಒಪ್ಪ ಓರಣ ಮಾಡಿ ತನ್ನ ಗಂಡನ ಜೊತೆ ಒಂದಷ್ಟು ದಿನನಿತ್ಯದ ಕತೆಗಳನ್ನು ಹಂಚಿಕೊಂಡ ಮೇಲೆ ನಿದ್ರೆ. ಅಜ್ಜನಿಗೂ ಅಷ್ಟೆ. ತನ್ನ ಮಗ ಸೊಸೆಯನ್ನು ಸುಖವಾಗಿ ಮಲಗಿಸಿ ಬಂದ ಹೆಂಡತಿಯ ಮುಖವನ್ನು ನೋಡಿ, ಅವಳ ಕೈಯಿಂದ ಹದವಾಗಿ ಬೆರೆಸಿದ ಎಲೆ ಅಡಿಕೆ ಸುಣ್ಣವನ್ನು ಪಡೆದು ಬಾಯಲ್ಲಿ ಇಟ್ಟುಕೊಂಡು ಜಗಿಯುತ್ತಾ...ಆಕೆಯ ತೊಡೆಯ ಮೇಲೆ ಮಗುವಿನಂತೆ ಮಲಗಿ...ಇವತ್ತು ಏನಾಯ್ತು...ಗೊತ್ತಾ...ಅಂತ ಅಂದಿನ ಪೂರ್ತಿ ದಿನಚರಿಯ ಕಷ್ಟಸುಖವನ್ನು ಹೇಳುತ್ತಲೆ ನಿದ್ರೆ...
   ಅಯ್ಯೋ ಇವನ್ಯಾಕೋ ನಿದ್ರೆಯ ವಿಚಾರವಾಗಿ ಇಷ್ಟೊಂದು ಬೋರ್ ಹೊಡೆಸುತ್ತಿದ್ದಾನಲ್ಲ ಅಂತ ನಿಮಗೂ ಆಕಳಿಕೆ ಬಂತೇ? ಹಾಗಾದರೆ ಅದೇ ನಿಮ್ಮ ಸುಖ ನಿದ್ರೆಯ ರಹಸ್ಯವಾಗಿರಬಹುದು ಎಂದುಕೊಳ್ಳುತ್ತಾ ಈ ನಿದ್ರಾವತಾರ ಲೇಖನವನ್ನು ಬರೆದು ಮುಗಿಸುತ್ತಿದ್ದೇನೆ.......ಅಯ್ಯೋ ನನಗೂ ಕೂಡ ಆಕಳಿಕೆ ಬಂತು...ಸ್ವಲ್ಪ ಮಲಗುತ್ತೇನೆ......ಅಹಹ...

ಪ್ರೀತಿಯಿಂದ..
ಶಿವು.ಕೆ

Thursday, May 23, 2013

"ಮತ್ತೆ ಮತ್ತೆ ತೇಜಸ್ವಿ" ಒಂದು ಅದ್ಬುತವಾದ ಸಾಕ್ಷ್ಯಾಚಿತ್ರ


     "ಮತ್ತೆ ಮತ್ತೆ ತೇಜಸ್ವಿ" ಸಾಕ್ಷ್ಯಾಚಿತ್ರವನ್ನು ನೋಡಿದವನು ಒಂದರ್ಧ ಗಂಟೆ ಮೌನವಾಗಿ ಕುಳಿತುಬಿಟ್ಟೆ. ಎಂಥ ಅದ್ಬುತವಾದ ಪ್ರಯತ್ನವದು. ನಿಜಕ್ಕೂ ಇದನ್ನು ಹೊರತಂದ  "ಜೆಕೆ ಮೂವಿಸ್" ಮತ್ತು "ಟೋಟಲ್ ಕನ್ನಡ" ಸಂಸ್ಥೆಗೆ ನನ್ನ  ಸಾವಿರ ಸಲಾಂ. ಕೆ ಪಿ. ತೇಜಸ್ವಿಯವರನ್ನು ಇಷ್ಟು ಚೆನ್ನಾಗಿ ಕಣ್ಣಮುಂದೆ ಅವರಿಲ್ಲದೇಯೂ ಕಟ್ಟಿಕೊಟ್ಟಿರುವ ಪರಮೇಶ್ವರ್.ಕೆ ಮತ್ತು ಅವರ ತಂಡದ ಪರಿಶ್ರಮ, ಸಂಶೋಧನೆ ಎದ್ದುಕಾಣುತ್ತದೆ. ಸಾಹಿತ್ಯಾಸಕ್ತರು ಮಾತ್ರವಲ್ಲ, ಬೇರೆ ಇತರ ಕ್ಷೇತ್ರಗಳ ಅಭಿರುಚಿಯುಳ್ಳವರು ಕೂಡ ಒಮ್ಮೆ "ಮತ್ತೆ ಮತ್ತೆ ತೇಜಸ್ವಿ" ಸಾಕ್ಷಚಿತ್ರವನ್ನು ಹಾಕಿಕೊಂಡು ನೋಡಲು ಕುಳಿತುಬಿಟ್ಟರೆ ಸಾಕು. ಎರಡು ಗಂಟೆ ಇಪ್ಪತ್ತೇಳು ನಿಮಿಷ ನಿಮ್ಮ ಮೈಮನಸ್ಸಿನೊಳಗೆ ತೇಜಸ್ವಿ ಒಂದಾಗುತ್ತಾರೆ. ಬೈಯುತ್ತಾರೆ, ವ್ಯಂಗ್ಯ ಮಾಡುತ್ತಾರೆ, ನಿಮ್ಮ ಪಕ್ಕದಲ್ಲಿ ಕುಳಿತು ಗದರುತ್ತಾರೆ, ಬದುಕಿನ ಪುಟಗಳನ್ನು ತೆರೆದುಕೊಳ್ಳುತ್ತಲೇ ತಮ್ಮ ಕೋವಿಯ ದಾರಿ, ಫಿಷಿಂಗ್ ದಾರಿ, ಫೋಟೊಗ್ರಫಿಯ ದಾರಿಯಲ್ಲಿ ನಿಮ್ಮನ್ನು ಕೈಯಿಡಿದು ಕರೆದುಕೊಂಡು ಹೋಗುತ್ತಾರೆ. ಫಿಷಿಂಗ್ ನ ಮೌನದೊಳಗೆ ಕರೆದುಕೊಂಡು ಹೋಗುತ್ತಾರೆ. ಫೋಟೊಗ್ರಫಿಯ ದಾರಿಯಲ್ಲಿ ಕ್ಯಾಮೆರ ಮತ್ತು ಹಕ್ಕಿಗಳ ನಡುವಿನ ಮಾತು ತೋರಿಸುತ್ತಾರೆ..ಮತ್ತಷ್ಟು ಸರಳವಾಗುತ್ತಾ ಪರಿಸರದ ಕೌತುಕತೆಯನ್ನು ತೆರೆದಿಡುತ್ತಾರೆ, ಕತ್ತಲ ಜಗತ್ತನ್ನು ತೇಜಸ್ವಿಯವರು ನೋಡುವ ರೀತಿಗೆ ಪ್ರಶ್ನೆಗಳು ಮತ್ತು ಅದಕ್ಕೆ ಉತ್ತರಗಳು ಸಿಗುತ್ತವೆ ಎನ್ನುವಾಗ ನನಗೆ ಜುಗಾರಿ ಕ್ರಾಸ್‍ನ ರಾತ್ರಿ ರೈಲು ಪ್ರಯಾಣ ನೆನಪಾಯ್ತು........ ಹೇಳುತ್ತಾ ಹೋದರೆ ಖಂಡಿತ ಮುಗಿಯುವುದಿಲ್ಲ.


  "ಅವರು ಇಷ್ಟಪಡುವ ಬಿರಿಯಾನಿ ತಿಂದು ಸ್ವಲ್ಪ ಹೊತ್ತಿನ ನಂತರ.......ನಮ್ಮ ತೋಟದ ದೊಡ್ಡ ಮರ ಬಿದ್ದು ಹೋಯ್ತು"  ಎಂದು ಶ್ರೀಮತಿ ರಾಜೇಶ್ವರಿ ತೇಜಸ್ವಿಯವರು ಹೇಳುವಾಗ ನನಗರಿವಿಲ್ಲದಂತೆ ನನ್ನ ಕಣ್ತುಂಬಿಕೊಂಡವು.

    ಅವರ ಬದುಕಿನ ಒಡನಾಡಿಗಳು, ಗೆಳೆಯರು, ಮೇಷ್ಟ್ರು, ಕೆಲಸಗಾರರು, ಸಾಹಿತಿಗಳು ಇನ್ನಿತರರನ್ನು ಮಾತಾಡಿಸುತ್ತಲೇ....ಅದ್ಬುತವಾದ "ಮತ್ತೆ ಮತ್ತೆ ನೆನಪಿಸಿಕೊಳ್ಳುವ ತೇಜಸ್ವಿ"ಯವರನ್ನು ನಮ್ಮೊಳಗೆ ಒಂದಾಗಿಸುವ, ಪರಿಸರದ ಬಗೆಗಿನ ಉತ್ಸುಕತೆಯನ್ನು ಹೆಚ್ಚಿಸುವ, ಕುತೂಹಲ ಮೂಡಿಸುವ ಈ ಕಿರುಚಿತ್ರ ಖಂಡಿತ ಕನ್ನಡದ ಮಟ್ಟಿಗೆ ಅದರಲ್ಲೂ ಕನ್ನಡ ಸಾಹಿತ್ಯದ ಮಟ್ಟಿಗೆ ನಮ್ಮ ಮುಂದಿನ ಪೀಳಿಗೆಯವರಿಗೆ ಒಂದು ಅಮೋಘವಾದ ದಾಖಲೆಯಾಗುವುದು ಖಂಡಿತ.

    ಅವರನ್ನು ಹತ್ತಿರದಿಂದ ನೋಡಿದ ಕಡಿದಾಳ್ ಮಂಜಪ್ಪ, ಜಿ.ಎಚ್. ನಾಯಕ್, ಜಯಂತ್ ಕಾಯ್ಕಿಣಿ, ಬಾಪು ಗಣೇಶ್, ಧನಂಜಯ ಜೀವಾಳ, ಪ್ರದೀಪ್ ಕೆಂಜಿಗೆ, ರಾಘವೇಂದ್ರ, ಡಾ. ಚಂದ್ರಶೇಖರ್ ಕಂಬಾರ್, ತೇಜಸ್ವಿಯವರ ಅಕ್ಕ, ಶ್ರೀಮತಿ ರಾಜೇಶ್ವರಿ ತೇಜಸ್ವಿ, ಗಿರೀಶ್ ಕಾಸರವಳ್ಳಿ....ಇನ್ನೂ ಅನೇಕರು ಅವರೊಂದಿಗಿನ ಒಡನಾಟವನ್ನು ಆತ್ಮೀಯವಾಗಿ ಹಂಚಿಕೊಳ್ಳುವಾಗ ಕೆ ಪಿ ಪೂರ್ಣಚಂದ್ರ ತೇಜಸ್ವಿಯವರು ಇನ್ನತ್ತು ವರ್ಷವಾದರೂ ನಮ್ಮೊಂದಿಗೆ ಇರಬಾರದಿತ್ತಾ...ಅನ್ನಿಸುತ್ತದೆ.

   ಈ ಸಾಕ್ಷಚಿತ್ರವನ್ನು ಸ್ವಪ್ನ ಪುಸ್ತಕ ಮಳಿಗೆಯಲ್ಲಿ ಕೊಂಡಿದ್ದು ೧೨೫ ರೂಪಾಯಿಗಳಿಗೆ.  ಅದನ್ನು ಈಗ ನೋಡಿದ ಮೇಲೆ ಸಾವಿರ ರೂಪಾಯಿಯಷ್ಟರ ಅನುಭವವಾಗಿ ನಿಮ್ಮನ್ನು ಕಾಡತೊಡಗುತ್ತದೆ. ತೇಜಸ್ವಿಯವರನ್ನು ಮುಖತ: ದೂರದಿಂದ ನಾನು ನೋಡಿದ್ದು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ. ಅವತ್ತು ನನ್ನ ಕೈಯಲ್ಲಿ ಕ್ಯಾಮೆರವಿರಲಿಲ್ಲ.  ಅವತ್ತು ತೇಜಸ್ವಿಯವರ ಜೊತೆ ಜಯಂತ್ ಕಾಯ್ಕಿಣಿಯವರು ಇದ್ದುದನ್ನು ನೋಡುವುದಷ್ಟೇ ನನ್ನ ಭಾಗ್ಯವಾಗಿತ್ತು.

     ಈಗ ನನ್ನ ಮುಂದಿನ ಪೀಳಿಗೆಯವರಿಗೆ ಈ ಸಾಕ್ಷ್ಯಚಿತ್ರವನ್ನು ತೋರಿಸಲು ಜೋಪಾನವಾಗಿ ಎತ್ತಿಟ್ಟಿದ್ದೇನೆ. ಕಡಿಮೆಯೆಂದರೂ ನಾನು ಸಾಯುವಷ್ಟವರಲ್ಲಿ ಒಂದು ಸಾವಿರ ಜನರಿಗಾದರೂ ಇದನ್ನು ತೋರಿಸಿ ತೇಜಸ್ವಿಯವರ ಬಗ್ಗೆ, ಅವರ ಪುಸ್ತಕಗಳು, ಬರವಣಿಗೆ, ಪರಿಸರ ಕಾಳಜಿ, ಫೋಟೊಗ್ರಫಿಗಳ ಬಗ್ಗೆ ಅರಿವು ಮೂಡಿಸಬೇಕೆಂದು ನಿರ್ಧರಿಸಿದ್ದೇನೆ.

   ಇಂಥದೊಂದು ಅದ್ಬುತವಾದ ಸಾಕ್ಷಚಿತ್ರವನ್ನು ನಿರ್ಮಿಸಿದ ಪರಮೇಶ್ವರ .ಕೆ  ತಂಡ ಮತ್ತು ಅದನ್ನು ಹೊರತಂದ ಟೋಟಲ್ ಕನ್ನಡ ಬಳಗದವರಿಗೆ ಮತ್ತೊಮ್ಮೆ ನನ್ನ ಸಾವಿರ ಸಾವಿರ ಸಲಾಂ.

  "ಅವರನ್ನು ಪುಸ್ತಕದಲ್ಲಿ ಓದುವುದೊಂದು ದೊಡ್ಡ ಸುಖ" ಯೋಗರಾಜ್ ಭಟ್ಟರ ಮಾತು ಕೇಳಿ ನಾನು ಮತ್ತೆ ಮತ್ತೆ ತೇಜಸ್ವಿಯವರ ನೆನಪಿಗಾಗಿ, ಈ ಮೊದಲು ಎಷ್ಟು ಸಲ ಓದಿದ್ದರೂ ಬೇಸರವಾಗದೇ ಸಿಗುವ ದೊಡ್ದ ಸುಖಕ್ಕಾಗಿ,  ತೇಜಸ್ವಿಯವರ ಪುಸ್ತಕ ಮತ್ತೆ ಹೋಗಲು ಹೋಗುತ್ತಿದ್ದೇನೆ.



ಪ್ರೀತಿಯಿಂದ..

ಶಿವು.ಕೆ