Sunday, August 9, 2009

ನಾವು ಪಕ್ಕಾ ಎಡವಟ್ಟುಗಳಂತೆ ಅವರಿಗೆ ಅನ್ನಿಸಿಬಿಡುತ್ತಿದ್ದೆವು.

ಎಲ್ಲಿ ಹೋಗುವುದು.?


ನಾವು ಫೋಟೋಗ್ರಫಿಯ ಪ್ರವಾಸಕ್ಕಾಗಿ ಎಲ್ಲಿಗೆ ಹೋದರೂ ಹೀಗೆ ಯಾವತ್ತು ಅನ್ನಿಸಿರಲಿಲ್ಲ. ಯಾವ ಊರಿಗೆ ಹೋದರೂ ಅಲ್ಲಿ ಪ್ರತಿಯೊಂದು ನಿಮಿಷವೂ ವ್ಯರ್ಥವಾಗದಂತೆ ಮುಂಜಾನೆಯಿಂದ ಸಂಜೆಯವರೆಗೆ ನಮ್ಮ ಫೋಟೋಗ್ರಫಿಯ ಪಕ್ಕಾ ಪ್ಲಾನ್ ಇರುತ್ತಿತ್ತು. ಅಲೆಪ್ಪಿ ಅನ್ನುವ ಕೇರಳದ ಪುಟ್ಟ ನಗರದಲ್ಲಿ ಮರುದಿನ ವಿಶ್ವವಿಖ್ಯಾತ "ಹಾವಿನ ದೋಣಿಗಳ ಸ್ಪರ್ಧೆ" ಇತ್ತಾದರೂ ಇವತ್ತು ಏನು ಮಾಡುವುದು ಮತ್ತು ಎಲ್ಲಿಗೆ ಹೋಗುವುದು ಅನ್ನುವ ಪ್ರಶ್ನೆ ನಾವು ಬೇಗ ಎದ್ದು ಸಿದ್ಧರಾದಾಗ ಕಾಡಿತ್ತು.

ಅಲ್ಲಿರುವ ಯಾರನ್ನು ಕೇಳಿದರೂ ದೋಣಿ ಸ್ಪರ್ಧೆಯನ್ನು ಬಿಟ್ಟರೆ ಒಂದೆರಡು ದೇವಸ್ಥಾನ, ಚರ್ಚುಗಳಿವೆ ಅವು ಬಿಟ್ಟರೆ ಇನ್ನೇನು ವಿಶೇಷವಿಲ್ಲವೆಂದು ಹೇಳುತ್ತಿದ್ದರು. ಮತ್ತು ಅವರು ಹೇಳಿದ ಸ್ಥಳಗಳ ಬಗ್ಗೆ ನಮಗೂ ಆಸಕ್ತಿ ಇಲ್ಲದ್ದರಿಂದ "ಎಲ್ಲಿ ಹೋಗುವುದು" ಅನ್ನುವ ಪ್ರಶ್ನೆ ಕಾಡತೊಡಗಿತ್ತು.


ಆಟೋ ಬಂತು. ಆತ ಯುವಕ. ಮೊದಲು ಒಳಗೆ ಕುಳಿತೆವು. ಆತನಿಗೆ ಮಳೆಯಾಳಿ ಬಿಟ್ಟರೆ ಬೇರೆ ಬಾಷೆ ಬರದು. ಮುಖ ನೋಡಿದ. ನಾವು "ಕಾಯಿನ್‍ಕೆರ" ಅಂದೆವು.

"ಎವಡೆ., ಕಾಯಿನ್ರೇ" ಅಂದ. ನಮಗೆ ಗೊತ್ತಾಗಲಿಲ್ಲ.


ಮಲ್ಲಿಕಾರ್ಜುನ್ ಕನ್ನಡದಲ್ಲಿ, ಮತ್ತೊಮ್ಮೆ ಇಂಗ್ಲೀಷಿನಲ್ಲಿ ಮತ್ತೊಮ್ಮೆ ಹೇಳಿದರು. ಅವನಿಗೆ ಗೊತ್ತಾಗಲಿಲ್ಲ


"ಕಾಯಿನ್‍ಕೆರ" ಮತ್ತೆ ನಾನಂದೆ. ಆದ್ರೆ ಅವನು ಮತ್ತೆ ಮತ್ತೆ ಮದ್ಯದ ಆಕ್ಷರಗಳನ್ನು ನುಂಗಿ ಮೊದಲ ಕೊನೆಯ ಆಕ್ಷರಗಳನ್ನು ಮಾತ್ರ ಹೇಳುತ್ತಿದ್ದ.


ಅಲೆಪ್ಪಿಯ ಆಟೋ, ಟ್ಯಾಕ್ಷಿ, ದೋಣಿಮನೆಯವರು, ಯಾರೇ ಆಗಲಿ ಪ್ರವಾಸಿಗಳಿಂದ ಚೆನ್ನಾಗಿ ಹಣವನ್ನು ನುಂಗುವ ವಿಚಾರ ನಮಗೆ ಹಿಂದಿನ ದಿನವೇ ಅನುಭವಕ್ಕೆ ಬಂದಿತ್ತು. ಆದ್ರೆ ಮಾತಾಡುವ ಪದಗಳ ನಡುವಿನ ಆಕ್ಷರಗಳನ್ನು ನುಂಗುತ್ತಾರಂತ ಗೊತ್ತಿರಲಿಲ್ಲ.

ಒಂದು ನಿಮಿಷ ಆತನಿಗೂ ನಮಗೂ ಭಾಷೆಗಳನ್ನು ಆರ್ಥಮಾಡಿಸುವಲ್ಲಿ ಸರ್ಕಸ್ ನಡೆಯುತ್ತಿತ್ತು. ಕೊನೆಗೆ ನನಗೊಂದು ಉಪಾಯ ಹೊಳೆಯಿತು. ನಾವು ಹೇಳುವ ಮಾತಿನಲ್ಲಿ ತಮಿಳು, ಕನ್ನಡ ಹಿಂದಿ, ಇಂಗ್ಲೀಷ್ ನಾಲ್ಕು ಭಾಷೆಯನ್ನು ಸೇರಿಸಿ ಮಾತಾಡುವುದು, ಅದರಲ್ಲಿ ಯಾವುದಾದರೂ ಒಂದು ಪದ ಅರ್ಥಮಾಡಿಕೊಳ್ಳಬಹುದು ಅಂತ. ನನ್ನ ಪ್ರಯೋಗ ವರ್ಕೌಟ್ ಆಯಿತು.

ನಂತರ ಆತ ತನ್ನಲ್ಲಿರುವ ಪ್ರವಾಸಿ ಕೈಪಿಡಿಯಿಂದ ಅಲ್ಲಿರುವ ದೇವಸ್ಥಾನ, ಚರ್ಚು, ಬೀಚು ಇತ್ಯಾದಿಗಳನ್ನು ಅದ್ಬುತವೆಂದು ಹೊಗಳುತ್ತಾ ಅಲ್ಲಿಗೆ ಹೋಗೋಣವೆಂದು ಮಲೆಯಾಳಿಯಲ್ಲಿ ಹೇಳುತ್ತಾ ಕೈಗಳು ಮತ್ತು ಮುಖದಲ್ಲಿ ಪ್ರದರ್ಶಿಸುತ್ತಿದ್ದ. ಇಷ್ಟಕ್ಕೂ ನಾವು ಯಾವುದೇ ಫೋಟೋಗ್ರಫಿ ಪ್ರವಾಸಕ್ಕೆ ಹೋದರೂ ಅಲ್ಲಿನ ಪ್ರಸಿದ್ಧ ಸ್ಥಳಗಳಿಗೆ ಎಂದೂ ಬೇಟಿಕೊಡುತ್ತಿರಲಿಲ್ಲ. ಅವು ಏನಿದ್ದರೂ ಕಟ್ಟ ಕಡೆಯ ಸ್ಥಾನದಲ್ಲಿರುತ್ತಿದ್ದವು. ಮತ್ತೊಂದು ವಿಚಾರವೇನೆಂದರೇ ನಾವು ಫೋಟೋಗ್ರಫಿ ಪ್ರವಾಸದಲ್ಲಿದ್ದಾಗ ನಮ್ಮ ಮನೆಯವರು ಅಥವ ಗೆಳೆಯರ ಜೊತೆಗೆ ಹೋಗಿಬಿಟ್ಟರೇ ಮುಗೀತು, ನಾವು ಪಕ್ಕಾ ಎಡವಟ್ಟುಗಳಂತೆ ಅವರಿಗೆ ಅನ್ನಿಸಿಬಿಡುತ್ತಿದ್ದೆವು. ಅದೇ ರೀತಿ ಈ ಆಟೋದವನು ಹೇಳಿದ್ದಕ್ಕೆಲ್ಲಾ "ಅದ್ಯಾವುದೂ ಬೇಡ ನಾವು ಹೇಳಿದ ಸ್ಥಳಕ್ಕೆ ನಡಿ" ಎಂದು ಮತ್ತೆ ನಾನು ಮಿಶ್ರ ಭಾಷೆಯಲ್ಲಿ ಹೇಳಿದೆ. ನಿಜಕ್ಕೂ ಅದೊಂದು ರಾಜ್ಯ ಹೆದ್ದಾರಿಯ ತಿರುವು ಆಗಿದ್ದರಿಂದ ಅವನಂತೂ ಇವರಿಗೆ ಸ್ವಲ್ಪ ತಲೆ ಕೆಟ್ಟಿರುವುದು ಗ್ಯಾರಂಟಿ ಅಂದುಕೊಂಡು ಆಟೋ ಸ್ಟಾರ್ಟ್ ಮಾಡಿದ.


ನಾವು ಎಲ್ಲಿಗೆ ಹೋಗಲಿ ಮೊದಲು ಅವರಿಗೆ ಗೆಳೆಯರಾಗಲೆನ್ನಿಸುತ್ತೇವೆ. ಕಾರಣವಿಷ್ಟೆ. ನಮ್ಮ ಉದ್ದೇಶ ಅವರಿಗೆ ಅರ್ಥಮಾಡಿಸುವುದು ಸುಲಭ ಅಂತ. ಅವನ ಹೆಸರು ಶಿಬು ಅಂತ, ಒಬ್ಬಳು ಮಗಳಿದ್ದಾಳಂತೆ. ನಮ್ಮ ಸಮವಯಸ್ಕನಾದ್ದರಿಂದ ಆಟೋ ಓಡಿಸುತ್ತಾ ಏನೇನೋ ವಟಗುಟ್ಟುತ್ತಿದ್ದ, ಹಿಂದೆ ತಿರುಗಿ ನಮ್ಮನ್ನು ನೋಡಿ ನಗುತ್ತಿದ್ದ. ನಾವು ಅವನ ಮಲೆಯಾಳಿ ಮಾತಿಗನುಗುಣವಾಗಿ ಕನ್ನಡದಲ್ಲಿ ಅವನನ್ನು ಚೆನ್ನಾಗಿ ಬೈಯ್ಯುತ್ತಾ ನಗುತ್ತಿದ್ದೆವು. ನಾಲ್ಕು ಕಿಲೋ ಮೀಟರ್ ಸಾಗಿರಬಹುದು. ನಾನು ಸ್ಟಾಪ್ ಸ್ಟಾಪ್ ಅಂದೆ. ಇವರುಯಾಕೆ ಇಂಥ ರಸ್ತೆ ಮದ್ಯೆ ನಿಲ್ಲಿಸು ಅಂತಾರಲ್ಲ ಅಂದುಕೊಂಡು ರಸ್ತೆ ಪಕ್ಕ ಆಟೋ ನಿಲ್ಲಿಸಿದ. ರಸ್ತೆಯ ಎರಡು ಬದಿಯಲ್ಲಿ ಸಮೃದ್ಧ ಹಸಿರು ಗದ್ದೆ ಬಯಲು ಇತ್ತು. ನಾವು ಇಳಿದು ನಮಗೆ ಬೇಕಾದ ಹಾಗೆ ಅರ್ಧ ಗಂಟೆ ಫೋಟೋ ತೆಗೆದುಕೊಂಡೆವು.


"ಕಾಯಿನ್ ಕೆರ" ತಿರುವಿನ ಹೆದ್ದಾರಿಯ ಎರಡು ಬದಿಯಲ್ಲಿ ಭತ್ತದ ಗದ್ದೆಗಳು.





ನಂತರ ಸ್ವಲ್ಪ ದೂರ ಹೋಗುತ್ತಿದ್ದಂತೆ ದಾರಿಯಲ್ಲಿ ಮತ್ತು ಕಾಲುವೆಗಳಲ್ಲಿ ಬಾತುಕೋಳಿಗಳು, ಅವುಗಳನ್ನು ಕುಯ್ದು ಮಾರುವ ಅಂಗಡಿಗಳು ಕಾಣಿಸಿಕೊಂಡವು. ಆಟೋ ನಿಲ್ಲಿಸಿ ಫೋಟೋ ಕ್ಲಿಕ್ಕಿಸಿಕೊಂಡೆವು. ಹೀಗೆ ಹೆದ್ದಾರಿಯುದ್ದಕ್ಕೂ ಅಲ್ಲಿನ ಜನ,ಮಕ್ಕಳು ಅಂತ ಅಲ್ಲಲ್ಲಿ ಆಟೋ ನಿಲ್ಲಿಸಿ ದೂರದಿಂದಲೇ ಕ್ಲಿಕ್ಕಿಸಿಕೊಂಡೆವು. ಆ ಊರಿನ ಪ್ರಸಿದ್ಧ ಸ್ಥಳಗಳನ್ನು ಬಿಟ್ಟು ಹೀಗೆ ಏನೇನೋ ಕ್ಲಿಕ್ಕಿಸುವ ಇವರಂತೂ ಪಕ್ಕಾ ಎಡಬಿಡಂಗಿಗಳೇ ಸರಿ ಅನ್ನಿಸಿತೇನೋ ನಾವು ಆಟೋ ನಿಲ್ಲಿಸಿದ ಜಾಗದಲ್ಲಿ ಸುಮ್ಮನೆ ನಮ್ಮ ಮುಖ ನೋಡುತ್ತಾ ಯಾವುದೋ ಒಂದು ಹಾಡು ಹೇಳುತ್ತಿದ್ದ.


ಬಾತುಕೋಳಿಗಳ ಈಜಾಟ.

ನಡುವೆ ಒಂದು ಪ್ರವಾಸಿಗಳ ದೋಣಿ.


ನೀರ ಮೇಲಿನ ದೋಣಿಯೊಳಗೆ ಪುಟ್ಟ ಮಕ್ಕಳು


ನೀರ ಬದಿಯ ದಡದಲ್ಲಿ ಓದು ಮತ್ತು ಬರಹ



ನಾವು ಹೋದ ಕೆಲಸ ಮುಗಿದು ವಾಪಸ್ಸು ಬರುವಾಗ ನಮಗೂ ದಾರಿ ಕಳೆಯಬೇಕಲ್ಲ " ನೀ ಸೂಪರ್ ಸಿಂಗರ್" ಅಂದೆ.

ಸ್ವಲ್ಪ ಖುಷಿಯಾಯಿತೇನೋ ಅವನಿಗೆ ಮತ್ತಷ್ಟು ಉಮ್ಮಸ್ಸಿನಿಂದ ಹಾಡುತ್ತಾ ಆಟೋ ಓಡಿಸುತ್ತಿದ್ದ. ಮತ್ತೆ "ನಿಂಗ ರಾಗಂ ಗುಡ್" ಅಂದೆ.

"ಸರ್, ಇವಡೆ ಮಾಪಿಳ್ಳಿ ಸಾಂಗ್" ಅಂದ.

ಮತ್ತೆ ನಾನು ಮಿಶ್ರಿತ ಬಾಷೆಯಲ್ಲಿ ಮತ್ತಷ್ಟು ಮಾಪಿಳ್ಳೆ ಸಾಂಗ್ ಹಾಡಲು ಹೇಳಿದೆ.

ಅವನು ಖುಷಿಯಿಂದ ಕೆಲವು ಹಿಂದಿ ಹಾಡುಗಳನ್ನು ಹಾಡತೊಡಗಿದ. ನಿಜಕ್ಕೂ ಅವನ ಸ್ವರ ತುಂಬಾ ಚೆನ್ನಾಗಿತ್ತು ಮತ್ತು ಅವನು ಇಷ್ಟಪಟ್ಟು ಖುಷಿಯಿಂದ ಚೆನ್ನಾಗಿ ಆಡುತ್ತಿದ್ದ. ನಾವು ಅವನನ್ನು ಮತ್ತಷ್ಟು ಹೊಗಳಿದಾಗ ಅವನು ಥ್ಯಾಂಕ್ಯೂ ಅನ್ನುತ್ತಾ ಹಾಡಿಕೊಂಡು ಆಟೋ ಓಡಿಸುತ್ತಿದ್ದ.

ಇದ್ದಕ್ಕಿದ್ದಂತೆ "ಚೋರ್ ಚೋರ್ ಸರ್, ಚೋರ್ ಚೋರ್, ಅಂತ ಜೋರಾಗಿ ಹೇಳುತ್ತಾ ಒಂದು ಬಿಡ್ಜಿನ ಮೇಲೆ ಆಟೋ ನಿಲ್ಲಿಸಿದ. ಕೆಳಗೆ ದೊಡ್ಡದಾಗಿ ಪೊನ್ನುಮಡ ಸರೋವರವಿದೆ.

ನಾವು ಅವನ ಮುಖವನ್ನು ಆಶ್ಚರ್ಯದಿಂದ ನೋಡುತ್ತಾ ಏನು ಅಂತ ಪ್ರಶ್ನಿಸಿದೆವು.

"ಚೋರ್ ಸರ್, ಜೋರ್." ಅಂತ ಅವನು ಆಟೋ ಇಳಿದಾಗ ನಮಗಂತೂ ಆಶ್ಚರ್ಯ ನಾವು ಅವನನ್ನು ಸುಮ್ಮನೆ ಹಿಂಬಾಲಿಸಿದೆವು.

"ಸರ್, ಇವಡೆ ಡಿ.ವನ್ ರೈಸ್ ಸರ್" ಅದು ಮಲೆಯಾಳಿಯಲ್ಲಿ "ಚೋರ್" ಅಂತ ಅಂದ.

ಓಹ್! ಇಲ್ಲಿ ಸೇತುವೆಯ ಮೇಲಿನ ಪಾದಚಾರಿ ದಾರಿಯಲ್ಲಿ ಬೆಳೆದಿರುವ ಭತ್ತದ ತೆನೆಗಳನ್ನು ತೋರಿಸಲಿಕ್ಕಾಗಿ ಆಟೋ ನಿಲ್ಲಿಸಿದ್ದಾನೆ. ಮತ್ತು ಮಲೆಯಾಳಿಯಲ್ಲಿ ಅದನ್ನು ಚೋರ್ ಅನ್ನುತ್ತಿದ್ದಾನೆ. ಅದನ್ನು ನೋಡಿ ನಮಗೆ ಖುಷಿಯಾಗಿತ್ತು. ಇದು ಮೊದಲೇ ಗೊತ್ತಿತ್ತಾ ಅಂತ ಕೇಳಿದೆವು. ಇಲ್ಲಾ ಅಂತ ಕತ್ತು ಆಡಿಸಿದ. ಮತ್ತೆ ಹ್ಯಾಗೆ ಕಂಡು ಹಿಡಿದೆ ಅಂತ ಕೇಳಿದೆ. ಈ ರಸ್ತೆಯಲ್ಲಿ ಎಷ್ಟೋ ಬಾರಿ ಟೂರಿಷ್ಟುಗಳನ್ನು ಕರೆದುಕೊಂಡು ಹೋಗಿದ್ದೇನೆ ಗೊತ್ತಾಗಿರಲಿಲ್ಲ. ಇವತ್ತು ನಿಮ್ಮ ಜೊತೆ ಬಂದಿದ್ದಕ್ಕೆ ಗೊತ್ತಾಯ್ತು ಅಂತ ಹಿಂದಿ ಮಿಶ್ರಿತ ಮಲೆಯಾಳಿಯಲ್ಲಿ ಹೇಳಿದ. ಕೊನೆಗೂ ನಮ್ಮ ಯಡವಟ್ಟು ಬುದ್ಧಿ ಇವನಿಗೂ ಬಂತಲ್ಲ ಅಂತ ಖುಷಿಯಾಯ್ತು.


"ಭತ್ತದ ಒಂದು ತೆನೆ ಸೇತುವೆ ಮೇಲೆ !"



ಉದ್ದಕ್ಕೂ ಸಾಲಾಗಿ ಬೆಳೆದಿರುವ ಭತ್ತದ ತೆನೆ ಹೊತ್ತ ಪೈರುಗಳು!



ಅದ್ಸರಿ "ಅಲ್ಲಿ[ಗದ್ದೆಯ ಕಡೆ ಕೈತೋರಿಸಿ] ಬೆಳೆಯಬೇಕಾದ ಈ ಭತ್ತದ ತೆನೆ ಇಲ್ಲಿ ಹೇಗೆ ಬೆಳೆಯಲು ಸಾದ್ಯ" ಅವನಿಗೆ ಕೈಸನ್ನೆ ಮಾಡಿ ಕೇಳಿದೆ.

ಅಲ್ಲಿ[ಗದ್ದೆಯಲ್ಲಿ]ಬಿತ್ತನೆ ಮಾಡಿದ ಮೇಲೆ ಅಲ್ಲಿಗೆ ಹಕ್ಕಿ ಪಕ್ಷಿಗಳು ಹೋಗಿ ಬಿತ್ತನೆ ಮಾಡಿದ್ದ ಬೀಜಗಳನ್ನು ತಿನ್ನಲು ಹೋಗಿ, ಬೀಜಗಳನ್ನು ಬಾಯಿತುಂಬ ತುಂಬಿಕೊಂಡು ಈ ಸೇತುವೆ ಮೇಲೆ ಕುಳಿತುಕೊಳ್ಳುತ್ತವೆ. ಇಲ್ಲಿ ಓಡಾಡುವ ವಾಹನಗಳ ಸದ್ದುಗದ್ದಲಕ್ಕೆ ಅವುಗಳ ಬಾಯಿಂದ ಬೀಜಗಳು ಈ ಪುಟ್‍ಪಾತ್ ಮೇಲೆ ಬಿದ್ದಿವೆ. ನಂತರ ಮಳೆಯಾದಾಗ ಪೈರು ಬಂದು ಈಗ ತೆನೆಬಂದಿದೆ" ಅಂತ ಅವನು ಕೈಸನ್ನೆ ಬಾಯಿಸನ್ನೆಯ ಜೊತೆ ತನ್ನ ಮಾತೃಭಾಷೆಯಲ್ಲಿ ಹೇಳಿದಾಗ ಅವನ ತರ್ಕಕ್ಕೆ ನಾವು ಖಂಡಿತ ತಲೆದೂಗಬೇಕಾಯಿತು.


ಭತ್ತದ ತೆನೆಯನ್ನು ಕೈಯಲ್ಲಿ ಹಿಡಿದಿರುವ ನಮ್ಮ ಆಟೋ ಡ್ರೈವರ್ ಶಿಬು



ನಂತರ ಅದನ್ನು ಕಿತ್ತುಕೊಂಡು ಆಟೋದೊಳಗೆ ಆತನ ಇಸ್ಲಾಮಿಕ್ ಏಮ್‍ಲಮ್ ಪಕ್ಕ ಕಟ್ಟಿದ. ಆದ್ಯಾಕೆ ಅಂತ ಕೇಳಿದೆವು. ಅದಕ್ಕೆ ಆತ ಅದನ್ನು ಇಲ್ಲಿ ಅಥವ ಮನೆಯ ಮುಂಬಾಗಿಲ ಮೇಲೆ ಹೀಗೆ ಕಟ್ಟಿದರೇ ಐಶ್ವರ್ಯ ಹೆಚ್ಚುತ್ತದೆ" ಅಂದಾಗ ಅವನ ತಿಳಿವಳಿಕೆಗಳು ಮೆಚ್ಚಿಗೆಯಾಯಿತು.

ಇದ್ದಕ್ಕಿದ್ದಂತೆ Ayeshamol@gmail.com ಅಂದ.

ಏನೋ ಡಾಟ್.ಕಾಂ ಅನ್ನುತ್ತಿದ್ದಾನೆ ಅಂದುಕೊಂಡು ಏನದು ಅಂದೆವು.

"ಇದು ನನ್ನ ಮೇಲ್ ಐಡಿ ಬರೆದುಕೊಳ್ಳಿ. ನನ್ನ ಮಗಳ ಹೆಸರು ಆಯೆಷಾ ಅದಕ್ಕೆ ಈ ರೀತಿ ಇಟ್ಟುಕೊಂಡಿದ್ದೇನೆ. ನೀವು ನನಗೆ ಮೇಲ್ ಮಾಡಿ" ಅಂದ.

ಎಲಾ ಇವನಾ... ಮಲೆಯಾಳಿ ಬಿಟ್ಟರೇ ಬೇರೆ ಯಾವ ಭಾಷೆಯೂ ಬರುವುದಿಲ್ಲ ಆದ್ರೂ ಇಮೇಲ್ ಐಡಿ ಇಟ್ಟಿದ್ದಾನಲ್ಲ ಅಂತ ಆಶ್ವರ್ಯವಾಗಿತ್ತು.

ನಮ್ಮ ರಿಸಾರ್ಟ್ ಬಂತು ಆಟೋದಿಂದ ಇಳಿದೆವು. ಆಷ್ಟರಲ್ಲಿ ಎದುರು ಬದಿಯಿಂದ ಲಾರಿಯೊಂದು ನಿದಾನವಾಗಿ ಅವನ ಆಟೋದ ಹಿಂಬದಿಯ ಚಕ್ರ ಮತ್ತು ಮಡ್‍ಗಾರ್ಡನ್ನು ಸ್ವಲ್ಪ ಉಜ್ಜಿದಂತಾಗಿ ತಗ್ಗಾಯಿತು. ಈತ ತಕ್ಷಣ ಓಡಿಹೋಗಿ ಲಾರಿ ಡ್ರೈವರ್ ಬಳಿ ಹೋಗಿ ಏನೇನೋ ಬೈದು ಬಂದ.

ನಾವು ಸುಮ್ಮನಿರದೆ "ಭತ್ತದ ತೆನೆ ಕಟ್ಟಿದ್ದಕ್ಕೆ ನಿನ್ನ ಆಟೋ ಐಶ್ವರ್ಯ ಏನಾಯಿತು ನೋಡು" ಅಂದಾಗ ತನ್ನ ಮುವತ್ತೆರಡು ಹಲ್ಲುಗಳು ಕಾಣುವಂತೆ ನಕ್ಕು ನಾವು ಕೊಟ್ಟ ಹಣವನ್ನು ಪಡೆದು, ಆತನ ಫೋನ್ ನಂಬರ್ ಕೊಟ್ಟು ಮತ್ತೆ ಬೇಕಾದ್ರೆ ಕರೀರಿ ಅಂತ ಹೇಳಿ ಹೊರಟು ಹೋದ.

ಮುಂದಿನ ಲೇಖನಗಳಲ್ಲಿ ಅಲೆಪ್ಪಿಯ ಮತ್ತಷ್ಟು ಚಿತ್ರಗಳು ಮತ್ತು ಲೇಖನಗಳು.


ಚಿತ್ರ ಮತ್ತು ಲೇಖನ.
ಶಿವು.ಕೆ

74 comments:

SSK said...

ಶಿವೂ ಅವರೇ,
ತಿಳಿಯದ ಊರಿನಲ್ಲಿ, ಗೊತ್ತಿರದ ಭಾಷೆ, ಇವುಗಳ ಮಧ್ಯೆ ಪ್ರವಾಸ ಮಾಡುವುದು ಎಂದರೆ ಒಂದು ರೀತಿಯ ಸಾಹಸವೇ ಸರಿ. ನೀವುಗಳು ಪಟ್ಟ ಫಜೀತಿ, ಮತ್ತು ನಿಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದೀರ. ಮಜವಾಗಿತ್ತು ಲೇಖನ!

nirusha said...

shivu,your photos are simply super

Ittigecement said...

ಶಿವು ಸರ್...

ನಿಮ್ಮ ಅನುಭವಗಳು ತುಂಬ ಮಜವಾಗಿರುತ್ತವೆ....
ಸಾಮಾನ್ಯನ ಜೀವನವನ್ನು
ತುಂಬ ಸರಳವಾಗಿ ಬರೆಯ ಬಲ್ಲಿರಿ..
ಅದು ನಿಮ್ಮ ಸಾಮರ್ಥ್ಯ....

ಫೋಟೊಗ್ರಫಿಯಲ್ಲಿ ನೀವು ಮಾಸ್ಟರ್...

ಸೊಗಸಾದ ಛಾಯಚಿತ್ರಗಳು...
ಸುಂದರ ಬರವಣಿಗೆ...

ಅಭಿನಂದನೆಗಳು...

ವಿನುತ said...

ಕೇರಳದ ಸೊಬಗೂ, ಮಲಯಾಳದ ಕ್ಲಿಷ್ಟತೆಯೂ, ಭಾಷೆ ಗೊತ್ತಿರದ ಸ್ಥಳದ ಯಡವಟ್ಟುಗಳೂ ಎಲ್ಲವೂ ನಿಮ್ಮ ಬರಹದಲ್ಲಿ, ಫೋಟೋಗಳಲ್ಲಿ ಚೆನ್ನಾಗಿ ಬಿ೦ಬಿತವಾಗಿವೆ. ಅಭಿನ೦ದನೆಗಳು,

Ravi Hegde said...

ಶಿವು ಸರ್,

ಫೋಟೊಗಳು ಚೆನ್ನಾಗಿವೆ.
ಅಭಿನಂದನೆಗಳು.

Ravi

umesh desai said...

ಶಿವು ಎಂದಿನ ಹಾಗೆ ಫೋಟೋ ಸೂಪರ್ ಹಾಗೆ ನಿಮ್ಮ ಬರಹ ಅಪರಿಚಿತ ಸ್ಥಳಗಳಲ್ಲಿ ಸಿಗೋ ಆಟೋದವರು, ಹೊಟೆಲ್ ಮಾಣಿಗಳು ಸದಾ ನೆನಪಾಗುತ್ತರೆ ಅಲ್ಲವೇ ನನ್ನ ಬ್ಲಾಗ್ ಗೂ ಬರ್ರಿ ನಮ್ಮ ವಾಡೆ, ಶ್ರೀಮಾತಾ ದ ಕೆಲವು ಚಿತ್ರ ಹಾಕಿರುವೆ

Guruprasad said...

ಶಿವೂ,,
ನಿಮ್ಮ ಪ್ರವಾಸದ ಅನುಭವದ ವಿವರಣೆ ತುಂಬ ಚೆನ್ನಾಗಿ ಇರುತ್ತೆ....ಯಾವುದೇ ವಿಷಯವನ್ನಾದರೂ,,, ತುಂಬ ಚೆನ್ನಾಗಿ ನವಿರಾಗಿ ವಿವರಿಸುತ್ತೀರಾ......ಫೋಟೋಗಳ ಬಗ್ಗೆ ಬೇರೆ ಮಾತು ಇಲ್ಲ.....ಚೊಕ್ಕವಾದ ಬರಹ...ಅದಕ್ಕೆ ಅಚ್ಚುಕಟ್ಟಾದ ಫೋಟೋಗಳು...ವೆರಿ ನೈಸ್....

ಮನಸು said...

photogala jotege nimma pravasa chitrana kannige kattidantide.

dhanyavadagaLu

ಕ್ಷಣ... ಚಿಂತನೆ... said...

ಶಿವು ಸರ್‍, ನಿಮ್ಮ ಕೇರಳದ ಪ್ರವಾಸಕಥನ ಚೆನ್ನಾಗಿದೆ. ಫೋಟೋಗಳಂತೂ ಸುಂದರವಾಗಿವೆ. ಭಾಷಾ ಸಮಸ್ಯೆಯನ್ನೂ ಮೀರಿದ ಈ ಅನುಭವದ ಲೇಖನದಲ್ಲಿ ಕೊನೆಯದಾಗಿ ಆತ ತನ್ನ ಈ-ಮೇಲ್‌ ಐಡಿ ಕೊಟ್ಟಾಗ ನಿಜಕ್ಕೂ ಸಂತಸವಾಯಿತು. ಏಕೆಂದರೆ, ಅಲ್ಲಿಯವರೆವಿಗೂ ಇವರೇನೋ ವಿಚಿತ್ರವೆಂಬಂತೆ ಕಾಣುತ್ತಿದ್ದವನೊಬ್ಬನಿಗೆ ನಿಮ್ಮ ಫೋಟೋಗ್ರಫಿಯ ಬಗೆಗೆನ ಪ್ರೀತಿಯು ಅವನಲ್ಲಿ ಆ ಸೇತುವೆಯ ಮೇಲೆ ಭತ್ತದ ಬೆಳೆ ಕಾಣಿಸುವಂತಾಗಿದ್ದು ಸಾಮಾನ್ಯವೇನಲ್ಲ. ಇದರಿಂದ ಅವನು ಹೊಸಮನುಷ್ಯನೇ ಆಗಿ ಬದಲಾವಣೆಯನ್ನು ಕಾಣಬಹುದು (ತನ್ನ ದಿನನಿತ್ಯದ ಚಟುವಟಿಕೆಗಳಿಗಿಂತ ಭಿನ್ನವಾಗಿ).

ಧನ್ಯವಾದಗಳು.

ಸಸ್ನೇಹಗಳೊಂದಿಗೆ,

ಚಂದ್ರಶೇಖರ ಬಿ.ಎಚ್.

ಸವಿಗನಸು said...

ಶಿವು ಸರ್,
ನಿಮ್ಮ ಅನುಭವದ ಲೇಖನ ಬಹಳ ಚೆನ್ನಾಗಿತ್ತು...ಸೊಗಸಾಗಿ ಬರೆದ್ದಿದೀರಾ.....ಅದಕ್ಕೆ ತಕ್ಕ ಫೋಟೊಗ್ರಫಿ.....ನಿಜ ಮಲಯಾಳಂ ಮಾತು ಎಷ್ಟು ಕಷ್ಟ ಅಂತ ಗೊತ್ತು...ಅರ್ಧ ಪದ ನುಂಗಿ ಬಿಡ್ತಾರೆ....ಇಲ್ಲಿ ನಾನು ಸ್ವಲ್ಪ ಕಲಿತು ಕೊಂಡಿದ್ದೀನಿ ಭಾಷೆ, ನಮ್ಮ ಕಂಪನಿನಲ್ಲಿ ಮುಕ್ಕಾಲು ಭಾಗ ಅವ್ರೆ ಇರೋದು.....ಇನ್ನು ಸ್ವಲ್ಪ ದಿನ ಕಳೆದರೆ email id ಜೊತೆ ಬ್ಲಾಗ್ id ಸಹ ಕೊಡ್ತಾರೆ.. ದೂರ ಇಲ್ಲ ಆ ಕಾಲ
ಇನ್ನಷ್ಟು ಬರೆಯಿರಿ...

PARAANJAPE K.N. said...

ಈ ಬಾರಿ ನಿಮ್ಮ ಸೂಪರ್ ಚಿತ್ರಗಳ ಜೊತೆ ಬರಹ ಕೂಡ ಪ್ರೌಢವಾಗಿದ್ದು ಉತ್ತಮ ಸಾಥ್ ನೀಡಿದೆ. ಮುಂದುವರಿಯಲಿ ನಿಮ್ಮ ಯಾತ್ರೆಯ ಕಥಾನಕ.

Srinidhi said...

ಸಖತ್ ಫೋಟೋಗಳು!

ಚಿತ್ರಾ said...

ಶಿವೂ,
ಭಾಷೆ ಗೊತ್ತಿಲ್ಲದ ಊರಲ್ಲಿ ನೀವು ರಿಕ್ಷಾ ಡ್ರೈವರ್ ಜೊತೆ ಹರಟಿದ ರೀತಿ ಚೆನ್ನಾಗಿತ್ತು.ನಾವು ಬ್ಯಾಂಕಾಕ್ ನ ರಸ್ತೆ ಬದಿಯ ಇಂಗ್ಲಿಷ್ ಬಾರದ ವ್ಯಾಪಾರಿಯ ಜೊತೆ ಮಾತಾಡಿದ್ದು ನೆನಪಾಯಿತು !!
ಹಾಗೆಯೇ ಲೇಖಕಿ ' ನೇಮಿ ಚಂದ್ರ ' ಅವರು ಪೆರುವಿನ ಪ್ರವಾಸದಲ್ಲಿ ಇಂಗ್ಲಿಷ್ ನ ಗಾಳಿಯು ಗೊತ್ತಿಲ್ಲದ ಅಲ್ಲಿಯ ಮಹಿಳೆಯ ಜೊತೆ , ಕನ್ನಡದಲ್ಲೇ ಹರಟೆ ಹೊಡೆದಿದ್ದರ ಬಗ್ಗೆ ಓದಿದ್ದು ನೆನಪಾಯಿತು .
ಒಟ್ಟಿನಲ್ಲಿ ನೀವೂ, ಮಲ್ಲಿಕಾರ್ಜುನ್ ಅವರೂ ಒಳ್ಳೊಳ್ಳೆ ಫೋಟೋ ಪ್ರವಾಸ ಕೈಗೊಳ್ಳುವುದಲ್ಲದೆ, ನಿಮ್ಮ ಅನುಭವಗಳನ್ನು ನಮ್ಮೊಡನೆ ಪ್ರೀತಿಯಿಂದ ಹಂಚಿಕೊಳ್ಳುವುದಕ್ಕೆ ಧನ್ಯವಾದಗಳು !
ಚೆನ್ನಾಗಿತ್ತು.

sunaath said...

ಈ ಮಲೆಯಾಳಿ ಸಾಹಸ ತುಂಬ ಚೆನ್ನಾಗಿದೆ. ನಿಮ್ಮ ಫೋಟೋಗಳೂ ಅಷ್ಟೇ ಮುದ್ದಾಗಿವೆ.

shivu.k said...

SSK ಮೇಡಮ್,

ನಾನು ಬ್ಲಾಗಿಗೆ ಈ ಲೇಖನವನ್ನು ಹಾಕಿದ ತಕ್ಷಣ ಕಾಮೆಂಟಿಸಿದ್ದೀರಿ...ನೀವು ಹೇಳಿದಂತೆ ಗೊತ್ತಿರದ ಊರಿನಲ್ಲಿ ಅಲೆದಾಡುವುದು ಒಂದು ರೀತಿಯ ಪಜೀತಿಯೇ ಸರಿ..

ಅನುಭವವನ್ನು ಇಷ್ಟಪಟ್ಟಿದ್ದೀರಿ ಥ್ಯಾಂಕ್ಸ್..

shivu.k said...

Nirusha sir,

ಫೋಟೊಗಳನ್ನು ಇಷ್ಟಪಟ್ಟಿದ್ದೀರಿ...ಥ್ಯಾಂಕ್ಸ್...

shivu.k said...

ಪ್ರಕಾಶ್ ಸರ್,

ಆನುಭವಗಳನ್ನು ಅಲ್ಲಿಯೇ ಆನುಭವಿಸುವಾಗ ಕೆಲವೊಮ್ಮೆ ತುಂಬಾ ಕಷ್ಟವಾಗುತ್ತದೆ. ಅಲ್ಲಿನ ಊಟ ತಿಂಡಿ ಸರಿಯಾಗಿಲ್ಲದೇ ಮದ್ಯಾಹ್ನ ಬಾಳೆಹಣ್ಣು ತಿಂದು ಸುಮ್ಮನಾಗಿದ್ದೇವೆ....ಅವುಗಳನ್ನೆಲ್ಲಾ ಮರೆಯಬೇಕಾದರೆ ಇಂಥವುಗಳಿಂದ ಸಾಧ್ಯ..

ಫೋಟೋ ಮತ್ತು ಲೇಖನಗಳನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...

shivu.k said...

ವಿನುತಾ,

ಕೇರಳದ ಸೊಬಗು ಬಲು ಚೆನ್ನ. ಆದ್ರೆ ಅಲ್ಲಿನ ವಾತಾವರಣ ಬಿಸಿ ತಡೆಯಲು ಸಾಧ್ಯವಾಗುವುದಿಲ್ಲ...ಚಿತ್ರಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...

shivu.k said...

ರವಿ ಹೆಗಡೆ ಸರ್,

ಧನ್ಯವಾದಗಳು.

shivu.k said...

ದೇಸಾಯಿ ಸರ್,

ನಿಮ್ಮ ಬ್ಲಾಗನ್ನು ಕೇರಳಕ್ಕೆ ಹೋಗುವಾಗ ಓದಿ ಹೋಗಿದ್ದೆ. ಕಾಮೆಂಟಿಸಲಾಗಲಿಲ್ಲ..ಇವತ್ತು ಮತ್ತೆ ನೋಡಿದ್ದೇನೆ...

ಮತ್ತೆ ನಮ್ಮ ಪ್ರವಾಸದ ಮುಖ್ಯ ಆಕರ್ಷಣೆಗಳೇ ಇಂಥಹ ವ್ಯಕ್ತಿಗಳು. ಇನ್ನಷ್ಟು ಬರಲಿವೆ. ಆಗಲೂ ಬನ್ನಿಸರ್..

ಧನ್ಯವಾದಗಳು.

shivu.k said...

ಗುರು,

ಪ್ರವಾಸದಲ್ಲಿ ಕೆಲವು ದೊಡ್ಡ ಸಂಗತಿಗಳು ಜರುಗುತ್ತವೆ. ಉದಾಹರಣೆ: ಸೋನಿಯಾ ಗಾಂಧಿ ಬಂದು ಹೋಗಿದ್ದು. ಅವರಷ್ಟೆ ಮುಖ್ಯ ಅದಕ್ಕಿಂತಲೂ ಹೆಚ್ಚು ಕುತೂಹಲ ನನಗೆ ಈ ಆಟೋಡ್ರೈವರ್. ಇನ್ನಷ್ಟು ಕುತೂಹಲಕಾರಿ ವಿಚಾರಗಳಿವೆ...

ಚಿತ್ರಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಮನಸು ಮೇಡಮ್,

ತುಂಬಾ ದಿನಗಳಾದ ಮೇಲೆ ಬ್ಲಾಗಿಗೆ ಬಂದಿದ್ದೀರಿ. ಪ್ರವಾಸವನ್ನು, ಫೋಟೋಗಳನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

shivu.k said...

ಕ್ಷಣ ಚಿಂತನೆ ಸರ್,

ಪ್ರವಾಸ ಕಥನ ಮತ್ತು ಫೋಟೋಗಳನ್ನು ಇಷ್ಟಪಟ್ಟಿದ್ದೀರಿ..
ಅವರ ಊರಿನಲ್ಲಿ ಟೂರಿಸಂ ದೊಡ್ಡ ಆದಾಯ. ಅದಕ್ಕಾಗಿ ಅಲ್ಲಿ ಯಾರನ್ನು ಮಾತಾಡಿಸಿದರೂ ಮೊದಲು ೩೨ ಹಲ್ಲುಗಳನ್ನು ಬಿಡುತ್ತಾರೆ. ನಾವು ಏನು ಹೇಳಿದರೂ ಹಾಗೆ ನಗುತ್ತಾರೆ. ಹೋಟಲ್, ಆಟೋ, ಟ್ಯಾಕ್ಸಿ, ಬೋಟ್ ಹೌಸ್, ಮಾಹಿತಿ ಕೇಂದ್ರದಲ್ಲಿರುವವರು ಎಲ್ಲರ ಕತೆಯೂ ಇದೆ. ಆದರೂ ಅವರವರ ಕೆಲಸದಲ್ಲಿ ಪಕ್ಕಾ ಇರುತ್ತಾರೆ. ಈ ಆಟೋ ಡ್ರೈವರ್ ನಮಗೆ ಹೊಂದಿಕೊಂಡು ಬಿಟ್ಟ. ಕೆಲವು ಫೋಟೋಗಳನ್ನು ರಸ್ತೆಗಳಲ್ಲಿ ತೆಗೆಯಲು ಅದಕ್ಕೆ ತಕ್ಕಂತೆ ಆಟೋ ಓಡಿಸಿ ಸಹಕರಿಸಿದ್ದಾನೆ.

ಧನ್ಯವಾದಗಳು.

shivu.k said...

ಮಹೇಶ್ ಸರ್,

ಮಲೆಯಾಳಿಗಳು ಸದಾ ಮುಂದಿರುತ್ತಾರೆ ಅನ್ನುವ ನಿಮ್ಮ ಅಭಿಪ್ರಾಯ ಸರಿಯೆನಿಸಿದರೂ ಅಲ್ಲಿಯೂ ಸೋಮಾರಿಗಳಾದ ಮೂಲನಿವಾಸಿಗಳಿರುತ್ತಾರೆ. ಅವರ ಅನೇಕ ಪೋಟೋಗಳನ್ನು ತೆಗೆದು ಪ್ರಕಾಶ್ ಹೆಗಡೆಯವರನ್ನು ನೆನಪಿಸಿಕೊಂಡೆವು. ವಿಪರ್ಯಾಸವೆಂದರೆ ಅಲ್ಲಿನ ಹೆಂಗಳೆಯರು ಸದಾ ಏನಾದರೂ ಕೆಲಸ ಮಾಡುತ್ತಾ ಚಟುವಟಿಕೆಯಿಂದಿರುತ್ತಾರೆ. ಅದು ನನಗೆ ಖುಷಿ ಕೊಟ್ಟ ವಿಚಾರ. ಫೋಟೋಗಳ ಜೊತೆಗೆ ಲೇಖನವನ್ನು ಇಷ್ಟಪಟ್ಟಿದ್ದೀರಿ. ಧನ್ಯವಾದಗಳು.

shivu.k said...

ಪರಂಜಪೆ ಸರ್,

ನಡೆದ ಆನುಭವವನ್ನು ಹಾಗೆ ಬರೆಯುವುದರಲ್ಲಿ ನನಗೆ ಖುಷಿ. ಚಿತ್ರ-ಲೇಖನವನ್ನು ಮೆಚ್ಚಿದ್ದೀರಿ. ಧನ್ಯವಾದಗಳು.

shivu.k said...

ಟಿ.ಜಿ. ಶ್ರೀನಿಧಿ,

ಧನ್ಯವಾದಗಳು.

shivu.k said...

ಚಿತ್ರಾ ಮೇಡಮ್,

ನೇಮಿಚಂದ್ರ ಪುಸ್ತಕವನ್ನು ಓದಿದ್ದೇನೆ.ನಮ್ಮ ಪ್ರವಾಸದ ಆಟೋ ಡ್ರೈವರ್ ಪ್ರಕರಣವನ್ನು ಓದಿ ನಿಮ್ಮ ಬ್ಯಾಂಕಾಕ್ ಆನುಭವವನ್ನು ಹಂಚಿಕೊಂಡಿದ್ದೀರಿ. ಮುಂದೆ ನಾವು ಬ್ಯಾಂಕಾಕ್ ಹೋಗುವ ಸಾಧ್ಯತೆಯಿದೆ. ನಮ್ಮ ಪ್ರವಾಸದ ಮುಖ್ಯ ಉದ್ದೇಶ ಕೆಲವು ಸ್ಪರ್ಧಾತ್ಮಕ ಚಿತ್ರಗಳನ್ನು ತೆಗೆಯುವುದು. ಅದರ ಜೊತೆಗೆ ಇಂಥ ಅನುಭವಗಳು ಇಂಥ ಚಿತ್ರಗಳು ಸಿಗುವುದರಿಂದ ಬ್ಲಾಗಿನಲ್ಲಿ ಹಂಚಿಕೊಳ್ಳುತ್ತೇವೆ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

ಚಿತ್ರ ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಸುನಾಥ್ ಸರ್,

ಮಲೆಯಾಳಿ ಆಟೊ ಡ್ರೈವರ್ ಸಾಹಸ ಇನ್ನಷ್ಟು ದೊಡ್ಡದಿತ್ತು. ನಾನೆ ಕತ್ತರಿಸಿದ್ದೇನೆ. ಫೋಟೋಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

Naveen ಹಳ್ಳಿ ಹುಡುಗ said...

ಒಳ್ಳೆಯ ಅನುಭವ... ಮತ್ತು ಒಳ್ಳೆಯ ಚಿತ್ರಗಳು.. ಮುಂದಿನ ಲೇಖನಕಾಗಿ ಕಾಯುತ್ತಿರುವೆ...

shivu.k said...

ನವೀನ್,

ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಮುಂದಿನ ಬಾರಿ ಮತ್ತಷ್ಟು ವೈವಿಧ್ಯತೆ ಖಂಡಿತ ಕೊಡುತ್ತೇನೆ.

Rajesh Manjunath - ರಾಜೇಶ್ ಮಂಜುನಾಥ್ said...

ಶಿವೂ ಸರ್,
ಪ್ರವಾಸ ಕಥನ ಚೆನ್ನಾಗಿದೆ. ಫೋಟೋಗಳ ಬಗ್ಗೆ ಹೆಚ್ಚೇನು ಹೇಳುವಂತಿಲ್ಲ, ಎಂದಿನಂತೆ ಸುಪೆರ್ಬ್.
ನಿಮ್ಮ ಮತ್ತು ಮಲ್ಲಿಕಾರ್ಜುನ್ ಸರ್ ರವರ ಹುಡುಕಾಟದ ಜೋಳಿಗೆ ಇನ್ನಷ್ಟು ಸಮ್ರುಧ್ಧವಾಯಿತೆನ್ನಿ...

ವನಿತಾ / Vanitha said...

ಶಿವು..
ನೀವು ಕನ್ನಡ,ಇಂಗ್ಲಿಷ್,ಹಿಂದಿ,ತಮಿಳು ಮಿಶ್ರಿತ ಮಲಯಾಳಂ ಹೇಗೆ ಮಾತಾಡಿದ್ದಿರಬಹುದು ಎಂದು Imagine ಮಾಡ್ತಾ
ಇದ್ದೇನೆ.ಮೊದ್ಲೇ ಗೊತ್ತಿದ್ರೆ ಒಂದ್ ಸ್ವಲ್ಪ word ಹೇಳ್ತಿದ್ದೆ, ಕೇಳಲೇ ಇಲ್ವಲ್ಲ ನೀವು.!!!ದೋಣಿ ಸ್ಪರ್ಧೆ ಇಷ್ಟವಾಯ್ತಾ...?..ಎಂದಿನಂತೆ ಚೆಂದದ ಫೋಟೋದೊಂದಿಗೆ ಒಳ್ಳೆಯ ಬರಹ..

Annapoorna Daithota said...

ಸುಂದರವಾಗಿವೆ ಛಾಯಾಚಿತ್ರಗಳು..

shivu.k said...

ರಾಜೇಶ್,

ನಾವಿಬ್ಬರೂ ಎಲ್ಲಿಗೆ ಒಟ್ಟಿಗೆ ಹೋದರೂ ಹೊಸತು ಇರಲೇಬೇಕೆಂಬ ಅಲಿಖಿತ ನಿಯಮ ಮಾಡಿಕೊಂಡುಬಿಟ್ಟಿದ್ದೇವೆ. ಮತ್ತೆ ಕೆಲವು ಫೋಟೋಗಳ ವಿಚಾರ ಬಿಟ್ಟರೆ ಯಾವುದೇ ನಿರೀಕ್ಷೆಯಿಲ್ಲದೇ ಹೋಗುವುದರಿಂದ ಖಾಲಿಯಾಗಿರುವ ಮನಸ್ಸಿಗೆ ಇಂಥವು ತಾವಾಗೆ ತುಂಬಿಕೊಳ್ಳುತ್ತವೆ.
ಪ್ರವಾಸ ಕಥನ ಮತ್ತು ಫೋಟೋಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

ವನಿತಾ,

"ನೀನು ರೊಂಬ interesting ಆದ್ಮಿಹೇ.." ಹೀಗೆ ಅವರ ಬಳಿ ನನ್ನ ಮಾತುಕತೆ ಮುಂದುವರಿಯುತ್ತಿತ್ತು. ಅದೆಷ್ಟು ಅರ್ಥವಾಗುತ್ತಿತ್ತೋ ಗೊತ್ತಿಲ್ಲ...ನನ್ನ ಮಾತಿಗೆಲ್ಲಾ ನಗುವುದನ್ನು ಮಾತ್ರ ಕಲಿತಿದ್ದರು.

ನನಗೆ ಮೊದಲೇ ಗೊತ್ತಿದ್ದರೇ ನಿಮ್ಮನ್ನು ಕೇಳುತ್ತಿದ್ದೆ. ಮತ್ತೆ ದೋಣಿ ಸ್ಪರ್ದೆ ಖಂಡಿತ ಇಷ್ಟವಾಯಿತು. ಅದರ ಬಗ್ಗೆ ದೊಡ್ಡದಾದ ಲೇಖನವನ್ನು ಚಿತ್ರ ಸಹಿತ ಬರೆಯುವುದಿದೆ.

ಧನ್ಯವಾದಗಳು.

shivu.k said...

ಅನ್ನಪೂರ್ಣ ಮೇಡಮ್,

ಧನ್ಯವಾದಗಳು.

ತೇಜಸ್ವಿನಿ ಹೆಗಡೆ said...

ಶಿವು ಅವರೆ,

ಬಾತುಕೋಳಿಗಳ ಹಾಗೂ ದೋಣಿವಿಹಾರದ ಚಿತ್ರ ನಯನಮನೋಹರವಾಗಿದೆ.

"ಯಾರೇ ಆಗಲಿ ಪ್ರವಾಸಿಗಳಿಂದ ಚೆನ್ನಾಗಿ ಹಣವನ್ನು ನುಂಗುವ ವಿಚಾರ ನಮಗೆ ಹಿಂದಿನ ದಿನವೇ ಅನುಭವಕ್ಕೆ ಬಂದಿತ್ತು. ಆದ್ರೆ ಮಾತಾಡುವ ಪದಗಳ ನಡುವಿನ ಆಕ್ಷರಗಳನ್ನು ನುಂಗುತ್ತಾರಂತ ಗೊತ್ತಿರಲಿಲ್ಲ."

ಈ ಸಾಲನ್ನು ಓದಿ ತುಂಬಾ ನಗು ಬಂತು :)

Rakesh Holla said...

Dear Shivu Sir,
I like your ‘Yedavattu’ Traveling article, very interesting.
Thanks for this fantastic article...

ಜ್ಯೋತಿ said...

ಫೋಟೋಗಳು ತುಂಬಾ ಚೆನ್ನಾಗಿವೆ.
ಭಾಷೆ ಗೊತ್ತಿಲ್ಲದ ಊರಲ್ಲಿ ಸುತ್ತಾಡುವುದು ನಿಜವಾಗಿಯೂ ಕಷ್ಟವೇ! ಒಂದು ಒಳ್ಳೆ ಅನುಭವ ಬಿಡಿ.
ಉಳಿದ ಫೋಟೋಗಳನ್ನು ಆದಷ್ಟು ಬೇಗ ಹಾಕಿ.

ರಾಜೀವ said...

ಒಳ್ಳೆ ಅನುಭವ ಶಿವು ಅವರೆ. ಕಾಲುದಾರಿಯಲ್ಲಿ ಬೆಳೆದಿರುವ ಬತ್ತದ ತೆನೆಗಳ ತರ್ಕ ಚಿತ್ತಾಕರ್ಷಕವಾಗಿದೆ. ಚಿತ್ರಗಳೂ ಕೂಡ ಎಂದಿನಂತೆ ಸುಂದರವಾಗಿದೆ. ಅಲೆಪ್ಪಿ ಚಿತ್ರಗಳಿಗೆ ಎದುರು ನೋಡುತ್ತಿರುತ್ತೇನೆ.

shivu.k said...

ತೇಜಸ್ವಿನಿ ಮೇಡಮ್,

ಫೋಟೊಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ಲೇಖನದ ಮಾತುಗಳನ್ನು ಮೆಚ್ಚಿದ್ದೀರಿ. ಮುಂದೆ ಇನ್ನಷ್ಟು ಚಿತ್ರಗಳು ಬರುತ್ತವೆ. ಆಗಲು ಹೀಗೆ ನೋಡಿ ಖುಷಿಪಡಲು ಬನ್ನಿ.

shivu.k said...

ರಾಕೇಶ್ ಸರ್,

ನನ್ನ ಎಡವಟ್ಟು ಪ್ರವಾಸ ಕಥನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು ಮತ್ತಷ್ಟು ಚಿತ್ರಗಳನ್ನು ಮುಂದಿನ ಲೇಖನಗಳಲ್ಲಿ ಹಾಕುತ್ತೇನೆ. ಆಗಲೂ ಹೀಗೆ ನೋಡಲು ಬನ್ನಿ.

shivu.k said...

ಜ್ಯೋತಿ ಮೇಡಮ್,

ನನ್ನ ಬ್ಲಾಗಿಗೆ ಸ್ವಾಗತ. ಫೋಟೋಗಳನ್ನು ಮತ್ತು ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..ಮತ್ತೆ ನೀವು ಹೇಳಿದಂತೆ ಗೊತ್ತಿಲ್ಲದ ಊರಿನಲ್ಲಿ ಸುತ್ತಾಟ ಬಾಯಲ್ಲಿ ಅಗಿಯಲಾಗದ ಕಡಲೆಯಿಟ್ಟುಕೊಂಡಂತೆ.

ಮತ್ತಷ್ಟು ಚಿತ್ರಗಳನ್ನು ಮುಂದಿನ ಲೇಖನಗಳಲ್ಲಿ ಹಾಕುತ್ತೇನೆ.

ಧನ್ಯವಾದಗಳು.

shivu.k said...

ರಾಜೀವ್ ಸರ್,

ಕಾಲುದಾರಿಯಲ್ಲಿ ಬೆಳೆದಿರುವ ಭತ್ತವೇ ಈ ಲೇಖನಕ್ಕೆ ಕಾರಣ. ಅದಕ್ಕೆ ತಕ್ಕಂತೆ ಆಟೋಡ್ರೈವರನಿಗೂ ನಮ್ಮಂತೆ ಎಡವಟ್ಟಾದ ಆಲೋಚನೆ ಉಂಟಾಗಿ ಬೇರೆಯವರಿಗೆ ವಿಶೇಷವೆನಿಸದ ಇಂಥವು ಅವನಿಗೆ ವಿಶೇಷವೆನಿಸಿರಬೇಕು ಇದು ನನ್ನ ಅನಿಸಿಕೆ.

ಮತ್ತಷ್ಟು ಚಿತ್ರಗಳು ಮುಂದಿನ ಲೇಖನಗಳಲ್ಲಿ...

ಹೀಗೆ ಬರುತ್ತಿರಿ...ಧನ್ಯವಾದಗಳು.

PaLa said...

"ಹಾವಿನ ದೋಣಿಗಳ ಸ್ಪರ್ಧೆ" ಯ ಚಿತ್ರಗಳ ನಿರೀಕ್ಷೆಯಲ್ಲಿ..

shivu.k said...

ಪಾಲಚಂದ್ರ,

ನಿಮ್ಮ ನಿರೀಕ್ಷೆಯಂತೇ ಶೀಘ್ರದಲ್ಲಿ...

ಸುಮ said...

ಫೊಟೋಗಳು,ಬರಹ ಚೆನ್ನಾಗಿವೆ ಶಿವು ಸರ‍್.ನನಗೆ ಆರು ವರ್ಷದ ಹಿಂದೆ ನಾವು ಕೇರಳದ ’ಮುವತಫಝ’ ಎಂಬ ಊರಿಗೆ ಹೋಗುವಾಗ ಪಟ್ಟ ಪಾಡು ನೆನಪಾಯಿತು.ದಾರಿಯಲ್ಲಿ ಯಾರನ್ನು ಕೇಳಿದರೂ ನಾವು ಯಾವ ಊರನ್ನು ಕೇಳುತ್ತಿದ್ದೇವೆಂದು ಅವರಿಗೆ ತಿಳಿಯುತ್ತಿರಲಿಲ್ಲ.ಅವರು ಹೇಳಿದ್ದು ನಮಗೆ ಅರ್ಥವಾಗುತ್ತಿರಲಿಲ್ಲ. ಸುಮಾರು ೪೦ಕಿ.ಮೀ ಹೆಚ್ಚಾಗಿ ಸುತ್ತಿ ಅಂತು ಆ ಊರು ತಲುಪಿದಾಗ ನಿಟ್ಟುಸಿರಿಟ್ಟಿದ್ದೆವು.

Umesh Balikai said...

ಶಿವು ಸರ್,

ಹ್ಹ ಹ್ಹ .. ಭಾಷೆ ಗೊತ್ತಿಲ್ಲದವರ ಜೊತೆ ವ್ಯವಹರಿಸೋದು ತುಂಬಾನೆ ಕಷ್ಟ. ಎಲ್ಲ ಬರೀ ಹರಕು-ಮುರುಕು ಭಾಷೆ ಮತ್ತು ಕೈ ಸನ್ನೆ, ಬಾಯಿ ಸನ್ನೆಯಲ್ಲೇ ಹೇಳಬೇಕು. ಈ ಅನುಭವ ನಾವು ತಿರುವಣ್ಣಾಮಲೈ ಗೆ ಹೋದಾಗ ಆಗಿತ್ತು (ನನ್ನ ಮೊದಲ ಬ್ಲಾಗ್ ಪೋಸ್ಟ್ ಅದರ ಬಗ್ಗೆಯೇ ಇತ್ತಲ್ಲ). ಅದರ ಜೊತೆಗೆ ಫೋಟೋಗ್ರಫೀ ಥರದ ಹವ್ಯಾಸಗಳಿದ್ದರಂತೂ ಜನ ನಮ್ಮನ್ನು ತುಂಬಾ ವಿಚಿತ್ರವಾಗಿ ನೋಡುತ್ತಾರೆ; "ಏನೀವನು, ಸಿಕ್ಕ ಸಿಕ್ಕದ್ದೆಲ್ಲ ಫೋಟೋ ತೆಗೀತಾನೆ" ಅಂತ. ಮೊನ್ನೆ ಲಾಲ್‌ಬಾಗಿನಲ್ಲಿ ರಸ್ತೆ ಬದಿಯ ಚಿಕ್ಕ ಪುಟ್ಟ ಹೂಗಳನ್ನೂ ತುಂಬ ಕುತೂಹಲದಿಂದ ಕ್ಲಿಕ್ಕಿಸುತ್ತಿದ್ದಾಗ ಜನ ನನ್ನನ್ನೂ ಹಾಗೆಯೇ ನೋಡುತ್ತಿದ್ದರು.

ಇಲ್ಲಿರುವ ಚಿತ್ರಗಳ ಬಗ್ಗೆ ಬೇರೆಯದಾಗಿ ಹೇಳುವ ಅಗತ್ಯವಿಲ್ಲ ಅಂದ್ಕೋತೀನಿ. ಏಕೆಂದರೆ, ಅವೆಲ್ಲ ಎಂದಿನಂತೆ ಸೂಪರ್! ಆದಷ್ಟು ಬೇಗ ಹಾವಿನ ದೋಣಿಯ ಚಿತ್ರಗಳನ್ನು ನೋಡುವ ಸೌಭಾಗ್ಯ ನಮ್ಮದಾಗಿಸಿ.

ಅಭಿನಂದನೆಗಳೊಂದಿಗೆ,
- ಉಮೇಶ್

ಬಾಲು said...

ಭಾಷೆ ಬಾರದ ನಾಡಲ್ಲಿ ನಿಮ್ಮ ಪಯಣ, ಓದುಗರಿಗೆ ಕುಶಿ ಕೊಟ್ಟಿತು. (ಆಗ ನಿಮಗೆ ಸಿಕ್ಕಾಪಟ್ಟೆ ಪಜೀತಿ ಆಗಿದ್ದಿರಬಹುದು) ಆಮೇಲೆ ನಿಮ್ಮ ವಿಶ್ರ ಭಾಷಾ ಪ್ರಯೋಗ ಚೆನ್ನಾಗಿದೆ. ಮುಂದೆ ನಾನು ಎಲ್ಲಾದರೂ ಸಿಕ್ಕಿ ಹಾಕಿ ಕೊಂಡರೆ ನಾನು ಪ್ರಯೋಗಿಸುವೆ. (ನಿಮ್ಮ ಐಡಿಯಾ ಗೆ ಪೇಟೆಂಟ್ ಮಾಡಿಸಿಲ್ಲ ಅಂತ ಭಾವಿಸುವೆ).

ಆಮೇಲೆ ನೀವು ಹಾವಿನ ದೋಣಿ ಅಂತ ಬರೆದಿರುವಿರಿ, ಅದು ಹಾಯಿ ದೋಣಿ ಇರಬಹುದೇ?

shivu.k said...

ಸುಮಾ ಮೇಡಮ್,

ನನ್ನ ಬ್ಲಾಗಿಗೆ ಸ್ವಾಗತ. ಚಿತ್ರಲೇಖನವನ್ನು ಓದಿ ನಿಮ್ಮ ಹಳೆಯ ಅನುಭವವನ್ನು ಹಂಚಿಕೊಂಡಿದ್ದೀರಿ...ಧನ್ಯವಾದಗಳು ಹೀಗೆ ಬರುತ್ತಿರಿ..

shivu.k said...

ಉಮೇಶ್ ಸರ್,

ಕೇರಳದಲ್ಲಿ ನಾವಿದ್ದಷ್ಟು ದಿನವೂ ಮಾತುಗಳಿಗಾಗಿ ತುಂಬಾ ಕಷ್ಟಪಟ್ಟೆವು. ಲೇಖನವನ್ನು ಓದಿ ನಿಮ್ಮ ತಮಿಳುನಾಡಿನ ಆನುಭವವನ್ನು ಹಂಚಿಕೊಂಡಿದ್ದೀರಿ. ಮತ್ತೆ ಫೋಟೋ ತೆಗೆಯುವಾಗ ಎಲ್ಲೋ ನೋಡುತ್ತಾ ಮತ್ತೆಲ್ಲೋ ಕ್ಲಿಕ್ಕಿಸಿರಿ. ಆಗ ನಿಮ್ಮನ್ಯಾರು ಕೇಳಲು ಬರುವುದಿಲ್ಲ. ಅವರಿಗೆ ಗೊತ್ತಾಗುವುದೂ ಇಲ್ಲ.

ಮತ್ತೆ ಚಿತ್ರಗಳನ್ನು ಮತ್ತು ಲೇಖನವನ್ನು ಮೆಚ್ಚಿದ್ದೀರಿ. ಹಾಗೆ ನೀವು ನಿರೀಕ್ಷಿಸಿದಂತೆ ಹಾವಿನ ದೋಣಿಯ ಚಿತ್ರಗಳನ್ನು ಮುಂದೆ ಹಾಕುತ್ತೇನೆ ಅವುಗಳ ಜೊತೆಗೆ ಇನ್ನಷ್ಟು ವೈರೈಟಿ ಫೋಟೋ ಮತ್ತು ಬರಹವಂತೂ ಖಂಡಿತ ಇದ್ದೇ ಇರುತ್ತೆ...

ಧನ್ಯವಾದಗಳು.

shivu.k said...

ಬಾಲು ಸರ್,

ಕೇರಳದಲ್ಲಿ ನಮ್ಮ ಪಜೀತಿ ಹೇಳಲಾರೆ. ಅಲ್ಲಿರುವ ಕೆಲವರಂತೂ ಪಕ್ಕಾ ಮೂಲನಿವಾಸಿಗಳು. ಮತ್ತೆ ನನ್ನ ಮಿಶ್ರ ಭಾಷೆಯನ್ನು ನೀವು ಇಷ್ಟಪಡಬಹುದು. ಆದ್ರೆ ಮಾತಾಡುವಂತಿಲ್ಲ. ನೀವೇಹೇಳಿದಂತೆ ಅದಕ್ಕೆ ಪೇಟೆಂಟ್ ಮಾಡಿಸಿಬಿಟ್ಟಿದ್ದೀನಿ. ನನ್ನ ಆನುಮತಿ ಪಡೆಯಬೇಕಾಗುತ್ತದಲ್ಲ...[ತಮಾಷೆಗೆ]

ಮತ್ತೆ ನೀವು ಹೇಳಿದಂತೆ ಅದು ಹಾಯಿ ದೋಣಿಯಲ್ಲ. ಹಾವಿನ ದೋಣಿಯೇ ಸರಿ. ಮತ್ತೆ ಅವುಗಳಿಗೆ ನಾಗದೋಣಿಗಳು ಅಂತಾನು ಅಂತಾರೆ...

ಪ್ರತಿಕ್ರಿಯೆಗೆ ಧನ್ಯವಾದಗಳು.

ರೂpaश्री said...

ಭಾಷೆ ತಿಳಿಯದ ಜನರೊಡನೆ, ಹೊಸ ಜಾಗದಲ್ಲಿ ನಿಮ್ಮ ಅನುಭವ ಚೆನ್ನಾಗಿತ್ತು. ನನ್ನ ಕಾಲೇಜಿನ ದಿನಗಳು ನೆನಪಾದವು, ನಮ್ಮಲ್ಲಿ ಬಹುತೇಕ ನರ್ಸ್ ಗಳು ಮಲಯಾಳಿಗಳೇ ಅವರೊಡನೆ ವ್ಯವಹರಿಸುವುದು ಅದರಲ್ಲೂ ಹೊಸಬರು(ಇನ್ನೂ ಇಂಗ್ಲೀಶ್ ಕಲಿತಿಲ್ಲದವರು) ಜೊತೆ ಮಾತಾಡುತ್ತಾ ನಾವೂ ಚೂರು ಪಾರು ಮಲಯಾಳಿ ಕಲಿತ್ತಿದ್ದೆವು:)
ಫೋಟೋಗಳು ಸಕ್ಕತಾಗಿವ!!

Prabhuraj Moogi said...

ಯಾರು ಎಡವಟ್ಟುಗಳೊ, ಏನೂ ಎಡವಟ್ಟು ಮಾಡಿಕೊಳ್ಳದೇ ಚಿತ್ರಗಳೊಂದಿಗೆ ಮರಳಿದ್ದೀರಲ್ಲ ಅದೇ ಓಳ್ಳೇದು.. ಸೇತುವೆ ಮೇಲೆ ಬೆಳೆದ ಬತ್ತದ ತೆನೆ ವಿಶಿಷ್ಟ ಅನಿಸಿತು.

Unknown said...

ಶಿವು
"ತುಂಬಾ ತುಂಬಾನೆ ಚೆನ್ನಾಗಿದೆ" ಅಂದರಷ್ಟೆ ಸಾಲದೆ? ಮಾತಿನೊಡವೆ ಗೊಡವೆ ಯಾತಕೆ?

shridhar said...

ಸುಂದರ ಛಾಯಾಚಿತ್ರ ಹಾಗು ಸರಳ ಬರವಣಿಗೆ ... ತುಂಬಾ ಚೆನ್ನಾಗಿದೆ ...

Shweta said...

ನಿಮ್ಮ ಬ್ಲಾಗಿಗೆ ಯಾವಾಗಲು ಲೇಟ್ ಆಗಿ ಬರುತ್ತೇನೆ.. ಯಾವಾಗಲು ಹೀಗೆ ,ನನ್ನ ಬ್ಲಾಗ್ನಲ್ಲಿ ಅಪ್ಡೇಟ್ ಆಗುತ್ತಿಲ್ಲ...ನಿಮ್ಮ ಪ್ರವಾಸ ತುಂಬಾ ಒಳ್ಳೆಯ ಅನುಭವ ಕೊಟ್ಟಿದೆ ಅಲ್ಲವೇ? ಮನುಷ್ಯರ ಹಲವು ಮುಖಗಳನ್ನು ಅರಿಯಲು ,ಚಿತ್ರಿಸಲು ಪ್ರವಾಸ ಬಹಳ ಸಹಾಯಕಾರಿ .........ಅಲ್ಲವೇ?
ಫೋಟೋಸ್ ಚೆನ್ನಾಗಿದೆ

ಪಾಚು-ಪ್ರಪಂಚ said...

Shivu,

Keralada pravasa kathana, allina sundara chitragalu manassige hidisitu.

Pravasigarige bhasheya gondala samanya allave..? gondalada kshanagalannu anubhavisalu tumbaa sundaravaagiruttade.
Kelasada vattadadindaagi keralakke hogalu agalilla, adare nimma chitra varadi nodi, allige hodashte kushi aagide..


Mattashtu sundara keralada chitragala nireeksheyalli...

Prashanth Bhat

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
"ನೀನು ಆಟೋ ಸಕತ್ತಾಗಿ ಓಡಿಸ್ತೀಯ" ಎಂದು ಶಿಬುಗೆ ನೀವು ಉಬ್ಬಿಸಿದಾಗ ಅವನು ಓಡಿಸಿದ ರೀತಿ ಇದೆಯಲ್ಲ - ಅದೇ 6 km ದೂರವನ್ನು 6 ನಿಮಿಷದಲ್ಲಿ ಬಂದದ್ದು! ನಮಗೆ ನಡುಕ ಹುಟ್ಟಿಸಿದ್ದು! ಎಲ್ಲಾ ಈಗ ನೆನೆಸಿಕೊಂಡರೆ ಮಜ ಅನ್ನಿಸುತ್ತೆ.
ಹಾಗೇ ಬೋಟ್ ರೇಸ್ ನೀನು ನೋಡಲ್ವಾ ಅಂದಿದ್ದಕ್ಕೆ ಅವನು ನಿಮ್ಮಂತೆ ಟಿಕೇಟ್ ಕೊಳ್ಳಲು ನನ್ನ ಬಳಿ ಹಣವಿಲ್ಲ ಹಾಗಾಗಿ ತೆಂಗಿನ ಮರಹತ್ತಿ ನೋಡುವೆ ಅಂದಿದ್ದನಲ್ವಾ?

Unknown said...

ಶಿವು ಸಾರ್,
ನಿಮಗೆ ಹಾಗೂ ನಿಮ್ಮ ಮನೆಯವರೆಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು . ಶ್ರೀ ಕೃಷ್ಣನು ತಮಗೆ ಸಕಲ ಸೌಭಾಗ್ಯವನ್ನು ಕೊಟ್ಟು ಹರಸಲಿ ಎ೦ದು ಈ ಶುಭ ಸ೦ದರ್ಭದಲ್ಲಿ ಹಾರೈಸುತ್ತೇನೆ
ರೂಪಾ

Prashanth Arasikere said...

photo jothe nimma comment tumba chennagide hagu mundina post gagi kayutta iruttenne..bega update madi..

shivu.k said...

ರೂಪಶ್ರೀ,

ನಾವು ಯಾವ ಭಾಷೆಯವರ ಜೊತೆ ವ್ಯವಹರಿಸುತ್ತೇವೋ ಅವರ ಭಾಷೆಯನ್ನು ಕಲಿತುಬಿಡುತ್ತೇವಲ್ಲವೇ...ನಾನು ಹತ್ತು ವರ್ಷಗಳ ಹಿಂದೆ ಗುಜರಾತಿ ದಿನಪತ್ರಿಕೆಯನ್ನು ಬೆಂಗಳೂರಿನಲ್ಲಿ ಡಿಷ್ಟ್ರಿಬ್ಯೂಷನ್ ತೆಗೆದುಕೊಂಡಾಗ ಅವರ ಭಾಷೆಯನ್ನು ಸ್ವಲ್ಪ ಕಲಿತುಬಿಟ್ಟಿದ್ದೆ. ಅವರೊಂದಿಗೆ ಚೆನ್ನಾಗಿ ವ್ಯವಹರಿಸುತ್ತಿದ್ದೆ...
ಮತ್ತೆ ಇಲ್ಲಿ ನಾವು ಗೊತ್ತಿರದ ಜಾಗದಲ್ಲಿ ವ್ಯವಹರಿಸುದು ತುಂಬಾ ಕಷ್ಟವಾಗಿತ್ತು.

ಫೋಟೋಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

shivu.k said...

ಪ್ರಭು,

ಫೋಟೋಗ್ರಫಿಯಲ್ಲಿ ನಮ್ಮ ಜೊತೆ ಬಂದವರಿಗೆ ಖಂಡಿತ ನಾವುಗಳು ಅವರಿಗೆ ಯಡವಟ್ಟು ಅನ್ನಿಸುವುದು ಗ್ಯಾರಂಟಿಯಿತ್ತು. ಮತ್ತೆ ಅಲ್ಲಿ ಹೋಗಿ ಸೇಪ್ ಆಗಿ ಬಂದೆವು.

ಸೇತುವೆ ಮೇಲೆ ಭತ್ತ ನನಗೂ ವಿಶಿಷ್ಟವೆನಿಸಿತು...

ಧನ್ಯವಾದಗಳು.

shivu.k said...

ಡಾ.ಸತ್ಯನಾರಾಯಣ ಸರ್,

ಧನ್ಯವಾದಗಳು.

shivu.k said...

ಶ್ರೀಧರ್,

ಚಿತ್ರ ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಶ್ವೇತ ಮೇಡಮ್,

ನನ್ನ ಬ್ಲಾಗಿಗೆ ಲೇಟಾಗಿ ಬಂದರೂ ಖಂಡಿತ ಬರುತ್ತಿರಲ್ಲ ಅದೇ ಖುಷಿ ನನಗೆ. ಮತ್ತೆ ನಿಮ್ಮ ಬ್ಲಾಗಿನ ಲಿಂಕ್ ನನಗೂ ತೊಂದರೆಯಾಗಿದೆ. ನೀವು ಬೇರೆನಾದ್ರು ಬದಲಿಸಿಕೊಳ್ಳಬಹುದಾ ನೋಡಿ..

ಮತ್ತೆ ಪ್ರವಾಸದಿಂದ ಇಂಥ ವಿಭಿನ್ನ ಆನುಭವವಾಗುವುದು ಖಚಿತ. ಧನ್ಯವಾದಗಳು.

shivu.k said...

ಪ್ರಶಾಂತ್ ಭಟ್,

ಭಾಷೆಯ ಗೊಂದಲವನ್ನು ಗೊತ್ತಿಲ್ಲದ ಪ್ರದೇಶದಲ್ಲಿ ಅನುಭವಿಸುವುದು ಮಜವಿದೆ ಅಂದಿರಲ್ಲ...ನೀವು ಹೋಗಿಬನ್ನಿ..ಮತ್ತೆ ಕೆಲಸದ ಒತ್ತಡವಿದ್ದರೂ ಬಿಡುವು ಮಾಡಿಕೊಂಡು ಹೋಗಿಬನ್ನಿ.

ಚಿತ್ರಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಮಲ್ಲಿಕಾರ್ಜುನ್,

ಆತನನ್ನು ಸ್ವಲ್ಪ ಹೊಗಳಿದ್ದಕ್ಕೆ ಆತ ಅಂತ ಜನಜಂಗುಳಿ ರಸ್ತೆಯಲ್ಲಿ ಆಟೋವನ್ನು ಆಷ್ಟು ಸ್ಫೀಡ್ ಆಗಿ ಹೋಗಿಸಿದ್ದು ಖಂಡಿತ ಭಯವಾಗಿತ್ತು. ನನಗನ್ನಿಸಿತ್ತು ಬಹುಶಃ ಯಾರಾದರೂ ಜಗಳಕ್ಕೆ ಬರುವುದು ಖಂಡಿತ ಅನ್ನಿಸಿತ್ತು. ಆತನಂತೆ ಟಿಕೆಟ್ ತೆಗೆದುಕೊಳ್ಳದೇ ಮರಹತ್ತಿ ಬೋಟ್ ರೇಸ್ ನೋಡಿದವರು ನೂರಾರು ಜನರಿದ್ದರಲ್ಲವೇ...ಒಟ್ಟಾರೆ ಆತ ಪಟಿಂಗನಾಗರೂ ಹೇಳಿದ ಫೋನ್ ಮಾಡಿದ ಕೂಡಲೇ ಪ್ರತಿಕ್ರಿಯಿಸಿ ಬರುತ್ತಿದ್ದುದ್ದು ಖುಷಿಯಾಗುತ್ತಿತ್ತು.

ಧನ್ಯವಾದಗಳು.

shivu.k said...

ರೂಪ,

ಧನ್ಯವಾದಗಳು ಮತ್ತು ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಶ್ರೀಕೃಷ್ಣಾ ಜನ್ಮಾಷ್ಟ್ಘಮಿಯ ಶುಭಾಶಯಗಳು.

shivu.k said...

ಪ್ರಶಾಂತ್,

ಪ್ರತಿಕ್ರಿಯೆ ಮತ್ತು ಫೋಟೋಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

ನಿಮ್ಮ ನಿರೀಕ್ಷೆಯಂತೆ ಖಂಡಿತ ಇನ್ನಷ್ಟು ವಿಭಿನ್ನ ಫೋಟೋಗಳನ್ನು ಹಾಕುತ್ತೇನೆ..

ಧನ್ಯವಾದಗಳು.

guruve said...

ಫೋಟೊಗಳು ಮತ್ತು ನಿಮ್ಮ ಅನುಭವ ಚೆನ್ನಾಗಿದೆ.. :)

shivu.k said...

ಗುರು ಫೋಟೋ ಮತ್ತು ಅನುಭವಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

ಏ ಜೆ ಜಾವೀದ್ said...

ಪ್ರಿಯ ಶಿವು,
ನಾನು ತಮಿಳು,ತೆಲುಗು,ಮಲಯಾಳ,ಕೊಂಕಣಿ,ಪಂಜಾಬಿ ಹಾಗು ಬಂಗಾಳಿ ಭಾಷೆ ಕಲಿಯಬೇಕೆಂದು ಬಹಳ ವರ್ಷಗಳ ಹಿಂದೆ ಯೋಚಿಸಿದ್ದೆ. ಮೊದಲಿಗೆ ತಮಿಳು ಕಲಿಯೋಣವೆಂದು ಪುಸ್ತಕವನ್ನೂ ತಂದಿದ್ದೆ. ಏಳು ವರುಷಗಳ ನಂತರವೂ ಆ ಪುಸ್ತಕ ಈಗಲೂ ಅಷ್ಟೆ ಹೊಸದಾಗಿದೆ!!! ನನ್ನ ಭಾಷಙ್ಯಾನ ಈಗಲೂ ಅಂದಿನಷ್ಟೇ ಇದೆ!!

ನಿಮ್ಮ ಚಿತ್ರ ಲೇಖನ ಓದಿದ ನಂತರ ಗೊತ್ತಿರದ ಭಾಷೆ ಒಂದು ತರಹ ಮಜ ಕೊಡುತ್ತೆ ಅನ್ನಿಸಿತು. ಲೇಖನ ಚೆನ್ನಾಗಿ ಮೂಡಿದೆ. ಎಂದಿನಂತೆ ಚಿತ್ರಗಳೂ ಸಹ.

ಕೊನೆಗೂ ಒಬ್ಬ ಆಟೋ ಡ್ರೈವರಿನ ದೃಷ್ಟಿಕೋನವನ್ನು ಬದಲಿಸಿದಿರಿ......ಈಗ ಬಹುಶಃ ಅವನು ದೈನಂದಿನ ಜಂಜಾಟದಲ್ಲೂ ಸಣ್ಣ ಸಣ್ಣ ವಿಷಯಗಳನ್ನು ಗಮನಿಸಿ ನಿಮ್ಮನ್ನು ನೆನಪಿಸಿಕೊಳ್ಳುತಿರಬಹುದು....ಅಭಿನಂದನೆಗಳು

shivu.k said...

ಜಾವೀದ್,

ತುಂಬಾ ದಿನಗಳಾದ ನಂತರ ಬಿಡುವು ಮಾಡಿಕೊಂಡು ಬ್ಲಾಗಿಗೆ ಬಂದ್ದಿದ್ದೀರಿ...ನಿಮ್ಮ ಹಾಗೆ ನನಗೂ ಅನೇಕ ಭಾಷೆಗಳನ್ನು ಕಲಿಯುವ ಆಸೆಯಿತ್ತು. ಸಾಧ್ಯವಾಗಲಿಲ್ಲ..ಈಗಲೂ ಆಸೆಯಿದ್ದರೂ ಅದಕ್ಕೆ ಕಲಿಕೆಯ ಆದ್ಯತೆ ಕೊಡಲು ಸಾಧ್ಯವಾಗುತ್ತಿಲ್ಲ...

ಮತ್ತೆ ಅಲೆಪ್ಪಿಯ ಆಟೋ ಡ್ರೈವರ್ ಮಾತ್ರವಲ್ಲ ಅನೇಕರನ್ನು ಗಮನಿಸಿದ್ದೇನೆ. ಎಲ್ಲವೂ ಹೊಸ ಹೊಸ ಆನುಭವ. ಮತ್ತೆ ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ಹೀಗೆ ಬಿಡುವು ಮಾಡಿಕೊಂಡು ಬರುತ್ತಿರಿ...