Wednesday, June 27, 2012

ಬನ್ನಿ ಪುಸ್ತಕಗಳ ದೇಗುಲಕ್ಕೆ

  
       ಒಳಗೆ ಕಾಲಿಟ್ಟು ಒಮ್ಮೆ ಸುತ್ತ ನೋಡಿದ ತಕ್ಷಣ ಕಡಿಮೆಯಾಗಿದ್ದು ನನ್ನಲ್ಲಿನ ಆಹಂಕಾರ.ಇದು ನನಗೆ ಮಾತ್ರವಲ್ಲ ಅಲ್ಲಿಗೆ ಬಂದವರ ಪ್ರತಿಯೊಬ್ಬರ ಆಹಂಕಾರವೂ ತಾನೇ ತಾನಾಗಿ ಮಣ್ಣಾಗುತ್ತದೆ.
 
    ಪುಸ್ತಕದ ಮುಂದೆ ಕುಬ್ಜರಾಗುವುದು ಹೀಗೇನಾ...
                
      ನಿದಾನವಾಗಿ ಒಮ್ಮೆ ಸುತ್ತಲೂ  ನೋಡಿದೆ.ಅದೊಂದು ದೊಡ್ಡ ಮದುವೆ ಮಂಟಪದಂತಿದೆ. ಆದ್ರೆ ಅಲ್ಲಿ ಜನರಿಲ್ಲ.ಬದಲಾಗಿ ಎಲ್ಲಿ ನೋಡಿದರೂ ಪುಸ್ತಕಗಳು. ಎಣಿಸಲು ಲೆಕ್ಕವೆಲ್ಲದಷ್ಟು ಪುಸ್ತಕಗಳು. ನಮ್ಮ ಎಂಟು ದಿಕ್ಕುಗಳಷ್ಟೇ ಅಲ್ಲದೇ ನೆಲದ ಮೇಲು ಸಾವಿರಾರು ಪುಸ್ತಕಗಳು. ಯಾವ ಪುಸ್ತಕವನ್ನು ನೋಡುವುದು, ಯಾವುದನ್ನು ಬಿಡುವುದು.ಯಾವ ಕಡೆ ಕೈ ಚಾಚಿದರೂ ಒಂದು ಕಾದಂಬರಿಯೋ, ಕತೆಯೋ ಕವನವೋ, ಪಠ್ಯಪುಸ್ತಕವೋ ಸಿಕ್ಕೇ ಸಿಗುತ್ತದೆ ಒಂದನೇ ತರಗತಿಯಿಂದ ಡಾಕ್ಟರೇಟ್ ಪಿ.ಎಚ್‍ಡಿ ಪಡೆಯುವರೆಗೆ....ಹೀಗೆ ನನ್ನದೇ ಯೋಚನೆಯಲ್ಲಿದ್ದವನಿಗೆ ನಮ್ಮ ಜೊತೆಯಲ್ಲಿಯೇ ಬಂದಿದ್ದ ಮೂರು ಪುಟ್ಟ ಮಕ್ಕಳು ಆಷ್ಟೋಂದು ಸಾವಿರಾರು ಪುಸ್ತಕಗಳ ನಡುವೆ ಓಡಾಡಿ ತಮಗೆ ಬೇಕಾದುದನ್ನು ಕೈಗೆತ್ತಿಕೊಂಡು ಸಂಭ್ರಮಿಸುತ್ತಿರುವುದನ್ನು ನೋಡಿ ಕನಸಿನ ಲೋಕದಿಂದ ಹೊರಬಂದೆ.  ಇತ್ತ ನೋಡಿದರೆ ಒಟ್ಟಾಗಿ ಬಂದ ನಮ್ಮ ಬ್ಲಾಗ್ ಗೆಳೆಯರೆಲ್ಲಾ ಬೇರೆ ಬೇರೆಯಾಗಿ ಕುತೂಹಲದಿಂದ ಕೈಗೆ ಸಿಕ್ಕ ಪುಸ್ತಕಗಳನ್ನು ನೋಡುತ್ತಿದ್ದಾರೆ.

       ಸ್ಕೂಲ್ ಓದುತ್ತಿರುವ ಮಕ್ಕಳಿಗೂ ಕೂಡ ಆಸಕ್ತಿ ಕೆರಳಿಸುವಂತ ಪಠ್ಯ ಪುಸ್ತಕಗಳು

   ಪುಸ್ತಕಗಳನ್ನು ನೋಡಿ ಸಂಭ್ರಮಿಸಿದವರು ನಮ್ಮ ಈ ಬ್ಲಾಗರುಗಳು.


 ಪ್ರಪಂಚವನ್ನೇ ಮರೆತು ತಮಗಿಷ್ಟವಾದ ಪುಸ್ತಕಗಳನ್ನು ನೋಡುತ್ತಿರುವ ಬ್ಲಾಗರುಗಳು.

      ಇಷ್ಟೆಲ್ಲ ವಿವರಿಸಿದ ಮೇಲೆ ನಾವು ಹೋಗಿದ್ದು ಎಲ್ಲಿ ಅಂತ ನಿಮಗೆ ಹೇಳಲಿಲ್ಲ ಅಲ್ವಾ...ಕಳೆದ ಶನಿವಾರ ಬ್ಲಾಗ್ ಗೆಳೆಯರೆಲ್ಲಾ ಒಂದು ದಿನದ ಪ್ರವಾಸವೆಂದು ಹೊರಟಿದ್ದು ಪಾಂಡವಪುರದ ರೈಲುನಿಲ್ದಾಣದಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿರುವ ಅಂಕೇಗೌಡರ ಪುಸ್ತಕದ ಅರಮನೆಗೆ.
 ಇಲ್ಲಿ ನಿಜಕ್ಕೂ ಸರಸ್ವತಿ ಕಾಲು ಮುರಿದುಕೊಂಡು ಬಿದ್ದಿದ್ದಾಳೆ ಎಂದೇ ಹೇಳಬಹುದು. ನಾವೆಲ್ಲಾ ಹೀಗೆ ಮೈಮರೆತು ಅಲ್ಲಿನ ಹಳೆಯ ಪುಸ್ತಕಗಳನ್ನು ನೋಡುತ್ತಿದ್ದರೆ ನಿದಾನವಾಗಿ ನಮ್ಮತ್ತ ಬಂದರು ಅಂಕೇಗೌಡರು. ಅವರನ್ನು ನೋಡಿದ ಮೇಲೆ ಅಂಕೇಗೌಡರು ಇವರೇನಾ ಅನ್ನಿಸಿತ್ತು. ಒಂದು ಹಳೆಯ ಅಂಗಿ ಪ್ಯಾಂಟು ಧರಿಸಿಕೊಂಡು ತೀರ ಸಾದ ಸೀದ ಹಳ್ಳಿ ರೈತನಂತೆ ನಮ್ಮ ಮುಂದೆ ನಿಂತ ಅವರನ್ನುಕಂಡು ನಮಗೆಲ್ಲಾ ಆಶ್ಚರ್ಯವಾಯಿತು.

ಪುಸ್ತಕದ ದೇಗುಲದ ಭಕ್ತ

ತಮ್ಮ ಜೀವನವನ್ನೇ ಈ ರೀತಿ ಪುಸ್ತಕಗಳನ್ನು ಕಲೆಹಾಕುವ ಹವ್ಯಾಸಕ್ಕೆ ತೊಡಗಿಸಿಕೊಂಡ ಧೀಮಂತ ವ್ಯಕ್ತಿ ಹೀಗೆ ಇಷ್ಟು ಸರಳವಾಗಿರುವುದು ನೋಡಿ ನಮಗಂತೂ ಬೆರಗು. ನಮ್ಮನ್ನೆಲ್ಲಾ ಪ್ರೀತಿಯಿಂದ ಮಾತಾಡಿಸುವ ಹೊತ್ತಿಗೆ ಅವರ ಶ್ರೀಮತಿಯವರು ಬಂದರು. ಎಲ್ಲರ ಪರಿಚಯಗಳು ಆದ ಮೇಲೆ ಇಡೀ ಪುಸ್ತಕಮನೆಯನ್ನೆಲ್ಲ ತೋರಿಸಿದರು ಅಪರೂಪದ ನೂರೈವತ್ತನಾಲ್ಕು ವರ್ಷಗಳ ಹಿಂದಿನ ಪುಸ್ತಕ "ಐವತ್ತು ಜಗತ್ತಿನ ಅದ್ಬುತಗಳು ಎನ್ನುವ ಫೋಟೊಗ್ರಫಿ ಪುಸ್ತಕ,

  ಜಗತ್ತಿನ ಐವತ್ತು ಅದ್ಬುತಗಳು ಫೋಟೊಗ್ರಫಿ ಪುಸ್ತಕ

 ನೂರು ವರ್ಷಗಳ ಹಿಂದಿನ ಮೈಸೂರಿನ ಕತೆಯನ್ನು ಹೇಳುವ ಛಾಯಚಿತ್ರಸಹಿತ ಪುಸ್ತಕ, ಹೀಗೆ ಅನೇಕ ಅಪರೂಪದ ಪುಸ್ತಕಗಳನ್ನು ನಮಗೆಲ್ಲಾ ತೋರಿಸಿದರು. 

 ಅವರ ಶ್ರೀಮತಿಯವರು ನಮಗೆಲ್ಲಾ ಕಾಫಿಮಾಡಿಕೊಂಡು ತಂದರು. ನಾವು ಮೊದಲಿಗೆ ಅಂತ ಅದ್ಬುತ ಸ್ಥಳವನ್ನು ಬೇಟಿನೀಡುವ ಉದ್ದೇಶ ಮೊದಲಾಗಿದ್ದರೂ ಇಂಥ ಅಭಿರುಚಿ ಮತ್ತು ಹವ್ಯಾಸವುಳ್ಳ ಅಂಕೇಗೌಡರು ಮತ್ತು ಅದಕ್ಕೆ ಸಂಪೂರ್ಣ ಬೆನ್ನೆಲುಬಾಗಿ ನಿಂತು ಜೀವನ ಪೂರ್ತಿ ಸಹಕರಿಸುತ್ತಿರುವ ಅವರ ಶ್ರೀಮತಿಯವರನ್ನು ಪುಟ್ಟ ಸನ್ಮಾನದ ಮೂಲಕ ನಮ್ಮ ಅಭಿನಂದನೆಗಳನ್ನು ಸಲ್ಲಿಸುವುದು ನಮ್ಮ ಮುಖ್ಯ ಉದ್ದೇಶವಾಗಿತ್ತು.

ಅಂಕೇಗೌಡರ ಶ್ರೀಮತಿಯವರು
         
     ಪುಟ್ಟ ಕಾರ್ಯಕ್ರಮದಲ್ಲಿ ಅವರ ಅದ್ಬುತ ಸಾಧನೆ ಬಗ್ಗೆ ಪ್ರಸ್ತಾಪಮಾಡಿದ ಬಾಲು ಸರ್,   ಅವರ ಪೂರ್ತಿಪರಿಚಯವನ್ನು ಮಾಡಿಕೊಟ್ಟರು.


      ನಂತರ ನಮ್ಮೊಂದಿಗೆ ತಮ್ಮ ಬದುಕಿನ ಸಂಪೂರ್ಣ ಅನುಭವ, ಈ ಪುಸ್ತಕಗಳನ್ನು ಕಲೆಹಾಕುವ ಹವ್ಯಾಸ ಅವುಗಳ ಮೇಲಿನ ಪ್ರೀತಿ, ತಮ್ಮ ಬದುಕಿನುದ್ದಕ್ಕೂ ಸರ್ಕಾರಿ ಕೆಲಸದಲ್ಲಿದ್ದೂ ಎಲ್ಲೂ ಒಂದೂ ರೂಪಾಯಿಗೆ ಕೈಚಾಚದೆ ಪ್ರಾಮಾಣಿಕರಾಗಿ ಬದುಕಿದ್ದು, ಅದಕ್ಕೆ ಸಿಕ್ಕ ಅಡೆತಡೆಗಳು...ಅದಕ್ಕೂ ಮೊದಲು ಪ್ರಾರಂಭದಲ್ಲಿ ಬಸ್ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಾ...ಎಲ್ಲಾ ಕಂಡಕ್ಟರುಗಳು ದಿನಕ್ಕೆ ಮುನ್ನೂರು ರೂಪಾಯಿಯನ್ನು ಕಟ್ಟುತ್ತಿದ್ದರೆ ಇವರು ಮೊದಲ ದಿನವೇ ಏಳುನೂರು ರೂಪಾಯಿಯನ್ನು ಕಟ್ಟಿ ಇತರ ಕಂಡಕ್ಟರುಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಅವರ ಪ್ರಾಮಾಣಿಕತೆಯನ್ನು ಮೆಚ್ಚಿ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಅವರನ್ನು ಸನ್ಮಾನಿಸಿದ್ದು ಹೀಗೆ ಅನೇಕ ವಿಚಾರಗಳನ್ನು ನಮ್ಮೊಂದಿಗೆ ಹಂಚಿಕೊಂಡರು.

    ಅಂಕೇಗೌಡರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು  

    ಆವರೊಬ್ಬ ಭಾವಜೀವಿ. ಬದುಕಿನಲ್ಲಿ ನಡೆದ ಅನೇಕ ಘಟನೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವಾಗ ಅವರ ಮಾತುಗಳು ನಮ್ಮನ್ನು ಯಾವ ರೀತಿ ಮಂತ್ರ ಮುಗ್ದರನ್ನಾಗಿಸಿದವೆಂದರೆ ಅಲ್ಲಿದ್ದ ಪ್ರತಿಯೊಬ್ಬ ಬ್ಲಾಗಿಗನೂ ಮೂಕಪ್ರೇಕ್ಷಕರಾಗಿಬಿಟ್ಟಿದ್ದರು. ಅಲ್ಲಿನ ಬಗ್ಗೆ ನಾನು ಹೆಚ್ಚಾಗಿ ಬರೆಯದೆ ನಮ್ಮ ಬ್ಲಾಗಿಗರ ಅಲ್ಲಿದ್ದ ಹೊತ್ತು ಹೇಗಿದ್ದರು ಎನ್ನುವುದನ್ನು ಚಿತ್ರಗಳ ಮೂಲಕ ವಿವರಿಸಲು ಪ್ರಯತ್ನಿಸುತ್ತೇನೆ.
    ಅಂಕೇಗೌಡರ ಅನುಭವದ ಮಾತುಗಳನ್ನು ಕೇಳುತ್ತಿರುವ ನಮ್ಮ ಬ್ಲಾಗಿಗರು..

    ಎಂಟನೇ ತರಗತಿಯನ್ನು ಓದುತ್ತಿರುವ ಪುಟ್ಟ ಹುಡುಗಿ ಕೂಡ ತನ್ಮಯತೆಯಿಂದ ಅಂಕೇ ಗೌಡರ ಅನುಭವವನ್ನು ಕೇಳುತಿದ್ದಾಳೆ

 ನಡುವೆ ಅವರ ಅನುಭವಗಳ ಮೆಲುಕಾಟದಲ್ಲಿ ಅವರು  ಕಣ್ತುಂಬಿಬಂದಿದ್ದು ಹೀಗೆ.


ನಂತರ ಅವರಿಗೆ ಬ್ಲಾಗಿಗರ ಪರವಾಗಿ ಅಜಾದ್‍ರಿಂದ ಸನ್ಮಾನ ಕಾರ್ಯಕ್ರಮ.


 ಕೊನೆಯಲ್ಲಿ ಅಲ್ಲಿಗೆ ಹೋಗಿದ್ದ ಬ್ಲಾಗಿಗರೆಲ್ಲರೂ ಒಬ್ಬೊಬ್ಬರಾಗಿ ಅಲ್ಲಿನ ಅನುಭವದ ಬಗ್ಗೆ ತಮ್ಮ ಅನಿಸಿಕೆಗಳನ್ನು ಅಂಚಿಕೊಂಡು ತಾವು ಬರೆದ ಪುಸ್ತಕಗಳನ್ನು ಅಂಕೆಗೌಡರ ಪುಸ್ತಕ ಮನೆಗೆ ಉಡುಗೊರೆಯಗಿ ಕೊಟ್ಟರು.

ಬ್ಲಾಗಿಗರ ಜೊತೆ ಅಂಕೇಗೌಡರ ಕುಟುಂಬ ಮತ್ತು ಅವರ ಗೆಳೆಯರ ಜೊತೆ ಒಂದು ಗ್ರೂಪ್ ಫೋಟೊ ಕ್ಲಿಕ್ಕಿಸಿದ್ದು ಆಯ್ತು.

 ಅಲ್ಲಿ ಕಳೆದ ಎರಡೂವರೆ ಗಂಟೆಯಷ್ಟರಲ್ಲೇ ಅಂಕೆಗೌಡರಿಗೂ ನಮಗೂ ವಿವರಿಸಲಾಗದ ಒಂದು ಅವಿನಾಭಾವ ಸಂಭಂದ ಮೂಡಿತ್ತು. ಅಂಕೇಗೌಡರ ಪುಸ್ತಕ ಪ್ರೇಮ, ಹವ್ಯಾಸ ಮತ್ತು ಸಾಧನೆಯ ನೂರನೇ ಒಂದಂಶವಾದರೂ ನಮ್ಮೊಳಗೆ ಮೂಡಿ ಅಷ್ಟರ ಮಟ್ಟಿನ ಪ್ರಯತ್ನ ನಮ್ಮ ಕಡೆಯಿಂದ ಆದರೆ  ಇದುವರೆಗೆ ನಾವು ಮಾಡಿರುವ ಪಾಪಗಳನ್ನೆಲ್ಲ ಕಳೆದುಕೊಂಡೆವೇನೋ..ಎನ್ನಿಸತೊಡಗಿತ್ತು. ಕೊನೇ ಪಕ್ಷ ಇಂಥ ಒಂದು ಸ್ಥಳವಿದೆ, ಅಲ್ಲಿ ಒಬ್ಬ ಇಂಥ ಮಹಾನ್ ಸಾಧಕರಿದ್ದಾರೆ ಅಂತ ನಮ್ಮ ಗೆಳೆಯರಿಗೆ, ನಮ್ಮ ಮಕ್ಕಳಿಗೆ ತಿಳಿಸಿ ಅದರ ಬಗೆಗೆ ತಿಳುವಳಿಕೆ  ಮೂಡಿಸುವ ಸಂಕಲ್ಪ ಮಾಡಿಕೊಂಡು
ದೇಶವೇ ಹೆಮ್ಮೆ ಪಡುವಂತ ಕೆಲಸವನ್ನು ಮಾಡುತ್ತಿರುವ ಅಂಕೇಗೌಡರು ಮತ್ತು ಅವರ ಪುಸ್ತಕಮನೆಯನ್ನು ಬಿಟ್ಟು ಹೊರಬರುವಾಗ ನಮ್ಮ ಕಣ್ಣಾಲಿಗಳಲ್ಲಿ ನೀರು ಇಣುಕಿತ್ತು.

       ನಾವು ಎಲ್ಲಿಗೋ ಒಂದು ಪ್ರವಾಸ, ಪಿಕ್‍ನಿಕ್ ಅಂತ ಬೆಟ್ಟ, ಗುಡ್ಡ, ನದಿ, ಹೊಳೆ, ದೇವಸ್ಥಾನ ಇತ್ಯಾದಿಗಳಿಗೆ ಹೋಗಿ ಬರುತ್ತೇವಲ್ಲ...ಅದರ ಬದಲು ಇಂಥ ಒಂದು ಸ್ಥಳಕ್ಕೆ ಪ್ರವಾಸಕ್ಕೆ ಹೋಗಿಬಂದರೆ ನಮ್ಮ ಬದುಕು ಸಾರ್ಥಕ ಎಂದೆನಿಸಿತ್ತು. ಇಂಥ ಒಂದು ಸ್ಥಳಕ್ಕೆ ಬೇಟಿಕೊಡಲು ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಿದ್ದ ಮೈಸೂರಿನ ಬಾಲು ಸರ್ [ನಮ್ಮೊಳಗೊಬ್ಬ ಬಾಲು]ರವರಿಗೆ ಮತ್ತು ನಮ್ಮ ಬ್ಲಾಗಿಗರನ್ನು ಒಟ್ಟುಗೂಡಿಸಿ ಇಂಥ ವಿಶೇಷ ಅನುಭವ ನೀಡುವ ಕಾರ್ಯಕ್ರಮವನ್ನು ರೂಪಿಸಿದ ಪ್ರಕಾಶ್ ಹೆಗಡೆಯವರಿಗೆ ಸಾವಿರ ವಂದನೆಗಳು. ನನ್ನ ಬದುಕಿನಲ್ಲಿ ಹತ್ತಾರು ಫೋಟೊಗ್ರಫಿ ಮತ್ತು ಇತರ ಪ್ರವಾಸಗಳನ್ನು ಮಾಡಿದ್ದೇನೆ. ಅದೆಲ್ಲ ಒಂದು ತೂಕವಾದರೆ ಈ ಪುಸ್ತಕದರಮನೆಯ ಪ್ರವಾಸವೇ ಬೇರೆ ತೂಕದ್ದು ದಯವಿಟ್ಟು ಎಲ್ಲಾ ಪುಸ್ತಕ ಪ್ರೇಮಿಗಳು ಒಮ್ಮೆಯಾದರೂ ಹೋಗಿಬನ್ನಿ.

ನಾಡಿನ ಹಿರಿಮೆ ಸಾರಲು ಹೋರಾಟ ನಡೆಸಿರುವ  ವ್ಯಕ್ತಿಗೆ  ಸಹಾಯ ಮಾಡಲು ನಿಮಗೆ ಇಷ್ಟ ವಿದ್ದಲ್ಲಿ ಅವರನ್ನೇ ನೇರವಾಗಿ ಸಂಪರ್ಕಿಸಿ ಸಹಾಯ ಮಾಡ ಬಹುದು. ಅವರ ವಿಳಾಸ. ಶ್ರೀ ಅಂಕೆ ಗೌಡ ,ಪುಸ್ತಕದ ಮನೆ ಶ್ರೀ ಅಂಕೆ ಗೌಡ ಜ್ಞಾನ ಪ್ರತಿಷ್ಠಾನ [ರಿ] ಹರಳ ಹಳ್ಳಿ  ಪಾಂಡವಪುರ ತಾಲೂಕ್  ,ಮಂಡ್ಯ ಜಿಲ್ಲೆ.571434 ಮೊಬೈಲ್ ನಂಬರ್ ;9242844934 ,9242844206 ಗಳನ್ನೂ ಸಂಪರ್ಕಿಸಬಹುದು .ಪುಸ್ತಕ ಪ್ರಕಟಣೆ ಮಾಡುವವರು ತಮ್ಮ ಒಂದು ಪ್ರತಿಯನ್ನು ಇಲ್ಲಿಗೆ  ಉಚಿತವಾಗಿ ಕಳುಹಿಸಿದರೆ ಅದೂ ಸಹ ಒಂದು ಉತ್ತಮ ಕಾರ್ಯ ವಾಗುತ್ತದೆ. ನೀವು ಒಮ್ಮೆ ಮೈಸೂರಿಗೆ ಬಂದರೆ ಮರೆಯದೆ ಇಲ್ಲಿಗೆ ಹೋಗಿಬನ್ನಿ ನಿಮ್ಮ ಗೆಳೆಯರಿಗೂ ತೋರಿಸಿ.ಒಂದು ಉತ್ತಮ ಹವ್ಯಾಸಿಯ ಕಾರ್ಯಕ್ಕೆ ನಾವೆಲ್ಲಾ ಬೆಂಬಲ ನೀಡೋಣ.........!!11


ಲೇಖನ : ಶಿವು.ಕೆ
ಚಿತ್ರಗಳು. ಶಿವು.ಕೆ ಮತ್ತು ನವೀನ್.

Tuesday, June 26, 2012

ದೇವರು ನನ್ನ ಕಡೆಗಿದ್ದ. ಆಗುವ ಅನಾಹುತ ತಪ್ಪಿತು.


     ಇವತ್ತು ಬೆಳಿಗ್ಗೆಯಿಂದ ಹನ್ನೆರಡುವರೆ ಗಂಟೆಯವರೆಗೆ ಫೋಟೊಗ್ರಫಿ ಕೆಲಸ ಮಾಡುತ್ತಿದ್ದವನು ಫೋನ್ ಕರಯಿಂದಾಗಿ ಹೊರಗೆ ಹೋಗುವ ಪ್ರಸಂಗ ಬಂತು.  ಮುಕ್ಕಾಲು ಗಂಟೆಯ ನಂತರ ಮನೆಗೆ ಬಂದು ಬಾಗಿಲು ತೆಗೆದರೆ....ಭಯ, ಗಾಬರಿ, ದಿಗಿಲು ಒಮ್ಮೇಲೆ ಆಯ್ತು. ನನ್ನ ಮನೆ ತುಂಬಾ ನೀರು ತುಂಬಿಕೊಂಡಿದೆ!  ಒಳಗೆ ಕಾಲಿಟ್ಟೆ. ಒಂದಿಂಚು ನೀರು ಹಾಲ್‍ನಲ್ಲಿ ತುಂಬಿಕೊಂಡಿದೆ. ದಿನಪತ್ರಿಕೆ ಬ್ಯಾಗ್, ಉಳಿದ ಪೇಪರುಗಳು, ಕಾಲು ಒರೆಸುವ ಕಾರ್ಪೆಟ್ಟುಗಳು ಸೇರಿದಂತೆ ಎಲ್ಲವೂ ಒದ್ದೆಯಾಗಿ ತೊಪ್ಪೆಯಾಗಿಬಿಟ್ಟಿವೆ, ಜೋರಾಗಿ ನೀರು ಸುರಿಯುವ ಶಬ್ದ.  ಹಾಗೆ ಅಡುಗೆ ಮನೆಗೆ ಹೋದರೆ ಅಲ್ಲಿರುವ ಮದ್ಯದ ನಲ್ಲಿಯಲ್ಲಿ ನೀರು ಧಾರಕಾರವಾಗಿ ಸುರಿದು ಹೊರಗೆ ಚೆಲ್ಲಿ ಆಡುಗೆ ಮನೆ, ಹಾಲ್, ಮಲಗುವ ಕೋಣೆ ಎಲ್ಲಾ ಕಡೆ ನೀರು ಒಂದಿಂಚು ನಿಂತುಬಿಟ್ಟಿದೆ. ತಕ್ಷಣ ನಲ್ಲಿ ನಿಲ್ಲಿಸಿದೆ. ಇಷ್ಟಕ್ಕೂ ನಡೆದ ವಿಚಾರವೇನೆಂದರೆ ನಮ್ಮ ಬಡಾವಣೆಯಲ್ಲಿ ಮಳೆ ಬರದಿರುವ ಕಾರಣ ಬೋರ್‍ವೆಲ್ ನಲ್ಲಿ ಹೆಚ್ಚು ನೀರಿಲ್ಲ. ಕಾವೇರಿ ನೀರನ್ನು ಸಂಪುಗೆ ಅದನ್ನು ಓವರ್ ಟ್ಯಾಂಕ್‍ಗೆ ತುಂಬಿಸಿ ನಮಗೆ ಉಪಯೋಗಿಸಲು ಅವಕಾಶ ಮಾಡಿಕೊಡುತ್ತಾರೆ. ನಲ್ಲಿಗಳ ವಿಚಾರದಲ್ಲಿ ನನ್ನ ಗಮನ ಅಷ್ಟಕಷ್ಟೆ. ನೀರು ಸುರಿವ ನಲ್ಲಿಗಳು ನನಗೆ ಹೇಗೆ ಯಾಮಾರಿಸುತ್ತವೆ ಎನ್ನುವ ವಿಚಾರವನ್ನು ನನ್ನ "ಗುಬ್ಬಿ ಎಂಜಲು" ಪುಸ್ತಕದಲ್ಲಿ ಬರೆದಿದ್ದೇನೆ. ಇವತ್ತು ಹಾಗೆ ಆಯ್ತು. ನನಗೆ ಗೊತ್ತಿಲ್ಲದಂತೆ ಆಡುಗೆ ಮನೆಯ ನಲ್ಲಿಯನ್ನು ಬೆಳಿಗ್ಗೆ ತಿರುಗಿಸಿಬಿಟ್ಟಿದ್ದೇನೆ. ನಾನು ಹೊರಗೆ ಹೋದೆನಲ್ಲ...ಆ ಸಮಯದಲ್ಲಿ ನಮ್ಮ ಮನೆಯ ಮಾಲೀಕರು ಓವರ್ ಟ್ಯಾಂಕ್ ತುಂಬಿಸಿದ್ದಾರೆ. ಟ್ಯಾಂಕ್ ತುಂಬಿದ ತಕ್ಷಣ ನಮ್ಮ ಆಡುಗೆ ಮನೆಯಲ್ಲಿನ ಮದ್ಯದ ನಲ್ಲಿಯಲ್ಲಿ ಜೋರಾಗಿ ನೀರು ಸುರಿಯತೊಡಗಿದೆ. ಹೇಮ ತಾಯಿ ಮನೆಗೆ ಹೋಗಿದ್ದರಿಂದ ನಾನೊಬ್ಬನೆ ಮನೆಯಲ್ಲಿ ಇದ್ದೆನಲ್ಲ ಫೋನ್ ಕರಯ ಸಲುವಗಿ ಮನೆಗೆ ಬೀಗ ಹಾಕಿಕೊಂಡು ಹೋಗಿ  ಹೊರಗೆ ಹೋಗಿ ವಾಪಸ್ ಬರುವಷ್ಟರಲ್ಲಿ ಇಷ್ಟೆಲ್ಲ ಆಗಿಬಿಟ್ಟಿದೆ! ಕಂಪ್ಯೂಟರ್ ರೂಮಿನ ಕಡೆಗೆ ಹೋದರೆ ನಿದಾನವಾಗಿ ನೀರು ಸ್ವಿಚ್ ಬೋರ್ಡ್ ಮತ್ತು ups ಕಡಗೆ ಸಾಗುತ್ತಿದೆ. ಇನ್ನು 10-15 ನಿಮಿಷ ತಡವಾಗಿದ್ದರೂ  ನೀರು extension card switchಗಳ ಕಡಗೆ ಸಾಗಿ ಅದರಲ್ಲಿ ನೀರು ತುಂಬಿ,ವಿದ್ಯುತ್ ಶಾರ್ಟ್ ಸರ್ಕಿಟ್ ಆಗಿ ನೀರಿನ ಮಟ್ಟ ಏರಿ ನಾನು ಬಾಗಿಲು ತೆಗೆದು ಒಳಗೆ ಕಾಲಿಟ್ಟ ತಕ್ಷಣ ಈ ಷಾರ್ಟ್ ಸರ್ಕಿಟ್ ನಿಂದಾಗಿ ನನ್ನ ಗತಿ ಏನಾಗುತ್ತಿತ್ತೋ....ಸದ್ಯ ಬೇಗ ಬಂದಿದ್ದರಿಂದ ಏನು ಆಗಲಿಲ್ಲ. ಎದುರುಗಡೆಯ ಮನೆಯವರಿಗೂ ಇದನ್ನು ನೋಡಿ ಆಶ್ಚರ್ಯ.  ಹೇಗೇಕಾಯ್ತು..ನೀವು ಕೊಳಾಯಿಗಳನ್ನು ಸರಿಯಾಗಿ ನಿಲ್ಲಿಸುವುದಿಲ್ಲವಾ? ಅಂತ ಕೇಳಿದರು. ಅವರ ಮನೆಗೆ ಮತ್ತು ಪಕ್ಕದ ಮನೆಯ ಕಾಲೇಜು ಓದುತ್ತಿರುವ ಹುಡುಗಿಯರಿಬ್ಬರೂ ನನ್ನನ್ನೂ ನೋಡಿ " ಏನ್ ಅಂಕಲ್ ಹೀಗಾಗಿಬಿಟ್ಟಿದೆ...ನಿಮಗೆ ಮನೆ ಕಡೆ ಜವಾಬ್ದಾರಿಯಿಲ್ಲ ಬರಿ ಕೆಲಸ, ಕಂಫ್ಯೂಟರ್ ಅಂತಿರುತ್ತೀರಿ." ಅವರ ಮಾತಿಗೆ ನಾನು ಉತ್ತರಿಸುವ ಸ್ಥಿತಿಯಲ್ಲಿ ನಾನು ಇರಲಿಲ್ಲ. ಇಡೀ ಮನೆಯಲ್ಲಿನ ನೀರನ್ನು ಎತ್ತಿಹಾಕುವ ಕೆಲಸ ಬಿದ್ದಿತ್ತು. ಕಸದ ಪೊರಕೆಯಿಂದ ನಿದಾನವಾಗಿ ನೀರನ್ನು ತಳ್ಳಲು ಪ್ರಯತ್ನಿಸಿದೆ. ಆದ್ರೆ ನೀರು ಆಡುಗೆ ಮನೆಯಿಂದ ಹಾಲ್‍ಗೆ ಹಾಲ್‍ನಿಂದ ಬೆಡ್ ರೂಮ್ ಗೆ ಸಾಗುತ್ತಿತ್ತು. ಕೊನೆಗೆ ನನ್ನ ಹಳೆಯ ಬನಿಯನ್ ತೆಗೆದುಕೊಂಡು ಪುಟ್ಟ ಬಕೆಟ್ ತೆಗೆದುಕೊಂಡು ನೀರಿನಲ್ಲಿ ಹದ್ದಿ ಹದ್ದಿ ಬಕೆಟ್ಟಿಗೆ ಹಿಂಡತೊಡಗಿದೆ.  ಇಳಿ ಮಧ್ಯಾಹ್ನ ಮೂರುವರೆ ಗಂಟೆಯವರೆಗೆ ಇದನ್ನೆಲ್ಲಾ ಮಾಡಿ ಮುಗಿಸುವಷ್ಟರಲ್ಲಿ ನನ್ನ ಸೊಂಟ ಹಾಗೆ ಪದವನ್ನು ಹೇಳತೊಡಗಿತ್ತು. ಇಂಥ ಮಳೆ ಬರುವ ಕಾಲದಲ್ಲೂ ಅಪರೂಪಕ್ಕೆ ಧಾರಕಾರವಾಗಿ ಬೆವರು ಸುರಿಯುತ್ತಿತ್ತು. ಎದುರು ಮನೆಯ ಆಂಟಿ " ಹೇಮ ಇಲ್ಲದ್ದರಿಂದ ಮೂರು ದಿನ ಮನೆಯ ಕಸ ಗುಡಿಸಿ ತೊಳೆದು, ಸ್ವಚ್ಚ ಮಾಡಿರಲಿಲ್ಲ...ಇದು ಒಳ್ಳೆಯದೇ ಆಯ್ತು...ಅಂತ ಹೇಳಿದರೂ ನಾನು ಕೇಳಿಸಿದರೂ ಕೇಳಿಸದವನಂತೆ ಸುಮ್ಮನಿದ್ದುಬಿಟ್ಟೆ.  ಎರಡುವರೆ ಗಂಟೆಯ ಅವಧಿಯಲ್ಲಿ ಬೆಡ್ ರೂಮ್, ಹಾಲ್, ಆಡುಗೆ ಮನೆ, ಎಲ್ಲಾ ಕಡೆ ನಿಂತಿದ್ದ ಒಂದಿಂಚು ನೀರನ್ನು ಹೊರಗೆ ಸಾಗಹಾಕುವಷ್ಟರಲ್ಲಿ  ಸಾಕುಬೇಕಾಗಿತ್ತು.  ಒಮ್ಮೆ ಎಲ್ಲವನ್ನು ನಿದಾನವಾಗಿ ಒರಸಿ ಸುಸ್ತಾಗಿದ್ದ ಮುಖಕ್ಕೆ ಎರಡೂ ಕೈಗಳ ತುಂಬ ನೀರನ್ನು ತೆಗೆದು ಮುಖ  ತೊಳೆದುಕೊಂಡ ಸ್ವಲ್ಪ ಹೊತ್ತಿನ ನಂತರ ಕುವೈಟನಲ್ಲಿರುವ ಆಜಾದ್‍ಗೆ ಬೇಕಾದ ಪುನೀತ್ ರಾಜ್ ಕುಮಾರ್ ಬರೆದ ಡಾ.ರಾಜ್‍ಕುಮಾರ್ ರವರ  ಪುಸ್ತಕವನ್ನು ಸ್ಪೀಡ್ ಪೋಸ್ಟ್ ಮಾಡಲು ಜಿ ಪಿ ಓ ಫೋಸ್ಟ್ ಆಫೀಸ್ ಕಡೆಗೆ ಸಾಗಿದೆ.

Sunday, June 24, 2012

ನೋಡಿ ಇದೆಲ್ಲಾ ತಮಾಷೆಗಾಗಿ: ಬ್ಲಾಗರ್ಸ್ ಪ್ರವಾಸ




ದಿನಾಂಕ 23ರ ಶನಿವಾರ ನಾವು ಬ್ಲಾಗ್ ಮತ್ತು ಪೇಸ್‍ಬುಕ್ ಗೆಳೆಯರೆಲ್ಲಾ ಒಂದು ಶ್ರೀರಂಗಪಟ್ಟಣದ ಕರಿಘಟ್ಟ ಬೆಟ್ಟಕ್ಕೆ ಒಂದು ದಿನದ ಪ್ರವಾಸಕ್ಕೆ ಹೋಗಿದ್ದೆವು.  ಬಸ್ಸಿನ ಪ್ರಯಾಣ ನಡುವೆ ಎಲ್ಲರ ಕಿರುಪರಿಚಯ, ಹಾಡು ಅಂತ್ಯಾಕ್ಷರಿ, ಬಿಡದಿಯ ಸೂಪರ್ ತಟ್ಟೆ ಇಡ್ಲಿ, ಮದ್ದೂರು ಕಾಫಿ, ಕರಿಘಟ್ಟದ ಬೆಟ್ಟದ ವೆಂಕಟೇಶ್ವರ ಸ್ವಾಮಿ ದರ್ಶನ, ನಂತರ ಭರ್ಜರಿ ಊಟ, ಊಟದ ನಂತರ ಅದ್ಬುತ ಆಟಗಳಾದ ಒಲವಿನ ಚೆಂಡು, ಎಳನೀರು ಕುಡಿಯುವ ಪೈಪಿನಲ್ಲಿ ಮನೆ ಕಟ್ಟುವುದು, ಚಿತ್ರವನ್ನು ನೋಡಿ ಅದರಲ್ಲಿರುವ ವಿಶೇಷಗಳನ್ನು ಗುರುತಿಸುವುದು, ನಡುವೆ ಹಲ್ಕಟ್ ಜ್ಯೋತಿಷಿಯ ತಮಾಷೆ, ಕೊನೆಯಲ್ಲಿ ಬಹುಮಾನ ವಿಜೇತರಿಗೆ ಬಹುಮಾನ ಒಟ್ಟಾರೆ ಒಂದು ಅದ್ಬುತವಾದ ಅನುಭವವನ್ನು ಕೊಟ್ಟ ಪ್ರವಾಸದ ಕೆಲವು ಚಿತ್ರಗಳು ನಿಮಗಾಗಿ. ಚಿತ್ರಗಳ ಕೆಳಗಿರುವ ತುಂಟ ಶೀರ್ಷಿಕೆಗಳು ಕೇವಲ ತಮಾಷೆಗಾಗಿ....

ನಾನು ಹೇಳುವ ತತ್ವಪದಗಳನ್ನು.....

ನೀವು ನಂಬಿಬಿಟ್ರಾ....

ನೋಡಿದ್ರಾ...ನಾನು ಹೆಂಗೆ ಯಾಮಾರಿಸಿದೆ ಅಂತ..

ಆದ್ರೂ ನಾನು ಏನು ಹೇಳ್ತೀನಿ ಅಂದ್ರೆ....

ನಾನು ಹೇಳುವ ಈ ಪದಗಳು ಆಕಾಶದಲ್ಲಿ ತೇಲುತ್ತಿರುತ್ತವೆ...[ನಮ್ಮ ಅಜಾದ್]

ಯಾವುರವ್ವ...ಇವ್ಳು ಯಾವುರವ್ವ.....ಏನ್ ಚೆಂದ ಕಾಣಿಸ್ತಾಳೆ...

ಹೋಗಿ ಅಂಕಲ್ ನನಗೆ ಸಂಕೋಚವಾಗುತ್ತೆ....[ಜ್ಯೋತಿ ಬಸು ಮಗಳು]

ನಾನು ಹೇಳೋದು ಏನು ಅಂದ್ರೆ....ಈ ನಗು ಅನ್ನೋದು...
ನನಗೆ ಗೊತ್ತು ಬಿಡಪ...ನಾನು ಮಾರಿಷಸ್ ಗೇ ಹೋಗ್ ಬಂದೀನಿ...[ನಗುಮೊಗದ ಉಮೇಶ್ ದೇಸಾಯ್]
ನಾನು ಹೋಗ್ತೀದ್ದೀನಲ್ಲ.. [ಸದಾ ನಗುತ್ತಿರುವ ನವೀನ್]
ನಮ್ಮ ಆಶಕ್ಕ....ಮಗುವಿನಂತ ನಗು....
ನಾನು ಧ್ಯಾನ ಮಾಡ್ತಿಲ್ಲಪ್ಪ...ಅಂತ್ಯಾಕ್ಷರಿ ಹಾಡು ನೆನಪು ಮಾಡಿಕೊಳ್ತೀದ್ದೀನಿ..
ನಯನ...ನಯನ......[ರೂಪ ಸತೀಶ್]
ಗುಬ್ಬಚ್ಚಿಯಂತೆ ಕೂತು ಕಿಟಕಿಯತ್ತ ನೋಡುತ್ತಿದ್ದ...ಸಂಧ್ಯಾ...

ಕರಿಘಟ್ಟ ಬೆಟ್ಟಕ್ಕೆ ನಮ್ಮ ಪ್ರಯಾಣ ಸಾಗಿತ್ತು. ಅಲ್ಲಿ ದೇವರ ದರ್ಶನ ನಮಸ್ಕಾರ...ನಂತರ ಎಲ್ಲರಿಗೂ ಭೂರಿ ಬೋಜನ.
ಚೆನ್ನಾಗಿ ಊಟ ಮಾಡಿ ಆದ್ರೆ ನಿದ್ರೆ ಮಾತ್ರ ಮಾಡಬೇಡಿ....ಬಾಲು ಸರ್.

                          

                     ಹೀಗೆ ಸಾಲಿನಲ್ಲಿ ಕುಳಿತು ಉಣ್ಣುವ ಸುಖವೇ ಬೇರೆ....
    ಊಟವಾದ ನಂತರ ಎಲ್ಲರು ಗೋಲ್ ಘರ್ ನಲ್ಲಿ ಆಸೀನ....
 ಮುಂದೆ ಬಂತಲ್ಲ ಹಲ್ಕಟ್ ಜ್ಯೋತಿಷಿ ಪ್ರಸಂಗ....
 ಹಲ್ಕಟ್ ಜ್ಯೋತಿಷಿಗೆ ತಕ್ಕ ಜ್ಯೋತಿಷಿ ಹ್ಯಾಂಕರು....
ಈಗ ಒಲವಿನ ಚೆಂಡಾಟ ಸುರು.....
ಚೆಂಡಾಟದ ಜೊತೆಗೆ ಕ್ಯಾಮೆರದಲ್ಲಿ ಸೆರೆಯಿಡಿಯುವ ಆಟ..
ಸಕ್ಕತ್ ಮಜವಿದೆ ಅಲ್ವಾ....
ಇದನ್ನು ವಿಡಿಯೋ ಮಾಡುವುದರಲ್ಲಿ ಎಂಥ ಮಜವಿದೆ ಗೊತ್ತಾ...
ಇದು ಖಂಡಿತ ಡ್ಯಾನ್ಸ್ ಅಲ್ಲ ಕಣ್ರಿ...ಒಂಥರ ಹೊಸ ಆಟ...
ನಗು ನಗುತಾ...ನಲಿ ನಲಿ....


ನೀವು ಮನೆಕಟ್ಟಿಕೊಳ್ಳಿ...ನಾನು ಬಾಡಿ ಕಟ್ತೀನಿ...ಕರಿಘಟ್ಟ ತಂಡ.
ಪ್ರಕಾಶ್ ಹೆಗಡೆಯವರ ಎಡಿಯೂರಪ್ಪ ತಂಡ ಮನೆಕಟ್ಟುವಲ್ಲಿ ತಲ್ಲೀನ...
ಇದರಿಂದ ಮನೆ ಕಟ್ಟಲು ಸಾಧ್ಯವೇ...ನಮ್ಮ ಹಲ್ಕಟ್ ತಂಡ...



   ಆಟ ಮುಗಿದ ಮೇಲೆ ಒಂದು ಕಾಫಿ ಪಕೋಡ ಬಂತು. ನಂತರ ಬಹುಮಾನ ವಿತರಣೆ...ಕಾರ್ಯಕ್ರಮ...
          ಆಜಾದ್‍ಗೆ ಗಿಟಾರು.....
 ನವದಂಪತಿಗಳಿಗೆ ಸಿಕ್ಕಿದು......ಇದು.
ಪ್ರಕಾಶ್ ಹೆಗಡೆಗೆ ಸಿಕ್ಕಿದ್ದು ಸೆಂಟ್ ಬಾಟಲ್...
ಮಹೇಶ್ ಗೌಡ್ರ ಬಹುಮಾನ...ಇದು ಬಸ್ಸಿನಲ್ಲಿ ನಿದ್ರೆ ಮಾಡುತ್ತಿದ್ದ ಸುಧೇಶ್‍ನನ್ನು ಬೆದರಿಸಿ ಎಚ್ಚರಿಸಿದ್ದಕ್ಕೆ...
ನಮ್ಮ ಬಹುಮಾನ ಸಕ್ಕತ್ ಆಗಿದೆ...ರೂಪ ಸತೀಶ್ ಮತ್ತು ಅವರ ಮಗಳು.
ಬಾಲು ಸರ್ ಕತ್ತಿ ಪ್ರಕಾಶ್ ಹೆಗಡೆ ಸರ್ ಕಡೆಗೆ...ಇದು ಕಾರ್ಯಕ್ರಮ ಚೆನ್ನಾಗಿ ಆಯೋಜಿಸಿದ್ದಕ್ಕೆ ಶಿಕ್ಷೆನಾ...
ನಮ್ ಬಹುಮಾನ ನೋಡ್ರಿ....ಜ್ಯೋತ ಬಸು
ಶ್ರೀಕಾಂತ್ ಮಂಜುನಾಥ್ ದಂಪತಿಗಳು..
ಪ್ರಕಾಶ್ ಹೆಗಡೆ ಕುಟುಂಬಕ್ಕೆ ಸಿಕ್ಕ ಬಹುಮಾನ...
ಇವರೆಲ್ಲಾ...ಬೀಡಿ ಪಂಟರುಗಳು....ವಿಶೇಷ ಬಹುಮಾನಗಳು.
 ಓಂ ಶಿವಪ್ರಕಾಶ್ ಕುಟುಂಬ...
ನವೀನ್ ಮೇಷ್ಟ್ರು ಮತ್ತು ಗಿರೀಶ್ ಗೆ ಬಹುಮಾನ..
ಉಮೇಶ್ ದೇಸಾಯಿ ಕುಟುಂಬಕ್ಕೆ ಸಿಕ್ಕ ಬಹುಮಾನ.

   ಈ ಪ್ರವಾಸದಲ್ಲಿ ಮೊದಲನೆಯವನಾಗಿ ನಾನು ಬಸ್ ಹತ್ತಿದ್ದೆ. ಖುಷಿ ಆನಂದವೆನ್ನುವುದು ಒಬ್ಬರಿಂದ ಮತ್ತೊಬ್ಬರಿಗೆ ಹಂಚಿದಷ್ಟೂ ಇಮ್ಮಡಿಯಾಗುತ್ತದೆಯೆನ್ನುವ ಅದ್ಬುತ ಅನುಭವವನ್ನು ಪಡೆದುಕೊಂಡು ಪ್ರವಾಸದ ಸವಿನೆನಪುಗಳೊಂದಿಗೆ ಕೊನೆಯವನಾಗಿ ಬಸ್ ಇಳಿದಿದ್ದೆ...


  ಮತ್ತೊಂದು ವಿಶೇಷ ಸುದ್ಧಿ ಇದೆ. ಅದು ನಮ್ಮ ಪ್ರವಾಸದ ಸಮಯದಲ್ಲಿ ಆಗಿದ್ದು. ಅದಂತೂ
 ನಮ್ಮ ಜೀವಮಾನದಲ್ಲೇ ಮರೆಯಲಾಗದ ಅನುಭವವೊಂದು ಅವತ್ತು ಆಯ್ತು.  ಅದೇನೆಂದು ತಿಳಿದುಕೊಳ್ಳಲು  ನೀವು ಮುಂದಿನ ಗುರುವಾರದವರೆಗೆ  ಕಾಯಲೇ ಬೇಕು. 
 ಚಿತ್ರಗಳು: ಶಿವು ಮತ್ತು ನವೀನ್.