Monday, March 30, 2009

ನಿಮಗೆ ಗೊತ್ತೆ...ಇವು ಪರಿಸರ ಪ್ರೇಮಿ ಟೋಪಿಗಳು...!

ದಿನಾಂಕ ೩೦-೩-೨೦೦೯ ರ ಪ್ರಜಾವಾಣಿ ಮೆಟ್ರೋನಲ್ಲಿ ಬೆಂಗಳೂರಿನ ರಸ್ತೆಗಳನ್ನು ಅಗಲಗೊಳಿಸಲು, ಮತ್ತು ಮೆಟ್ರೋ ರೈಲಿಗಾಗಿ ಬೆಂಗಳೂರಿನ ಜೀವಾಳವಾಗಿದ್ದ ಸಾಲು ಮರಗಳನ್ನು ಕತ್ತರಿಸಿ ಹಾಕಿರುವ ಲೇಖನ ಓದಿದೆ. ಅನೇಕ ವರ್ಷಗಳಿಂದ ಬೆಂಗಳೂರಿನ ಹೆಸರನ್ನು ಕಾಪಾಡುತಿದ್ದ ಈ ಮರಗಳ ಮಾರಣಹೋಮದ ಚಿತ್ರಲೇಖನವನ್ನು ಬರೆದಿದ್ದು " ಮಳೆಹನಿ" ಗೆಳೆಯ ಜೋಮನ್ ವರ್ಗೀಸ್. ಓದಿ ಬೇಸರವಾಯಿತು. ಮುಂದೆ ಬೆಂಗಳೂರಿನ ಕತೆ ಹೇಗೋ ಏನೋ ಅನ್ನುವ ಚಿಂತೆಗೊಳಗಾದೆ.

ಇದೇ ಗುಂಗಿನಲ್ಲಿ ಮನೆಗೆ ಬಂದವನು ನನ್ನ ಫೋಟೋಗಳ ರಾಶಿಯನ್ನು ನೋಡುತ್ತಿದ್ದಾಗ.. ಎಂದೋ ಕ್ಲಿಕ್ಕಿಸಿದ್ದ ಪರಿಸರ ಪ್ರೇಮಿ ಟೋಪಿಗಳು ಗಮನ ಸೆಳೆದವು. ಅವನ್ನು ವನಮಹೋತ್ಸವ ದಿನದಂದೂ ಬ್ಲಾಗಿಗೆ ಹಾಕಲು ಎತ್ತಿಟ್ಟಿದ್ದೆ. ಅದರೆ, ಬೆಂಗಳೂರಲ್ಲಿ ಉರುಳುತ್ತಿರುವ ಮರಗಳನ್ನು ನೋಡಿದಾಗ ಯಾಕೋ ಇವತ್ತೇ ಹಾಕಬೇಕೆನಿಸಿತು.

ಈ ಟೋಪಿಗಳಲ್ಲಿ ಕೆಲವು ಲಾವೆಂಚ ಬೇರಿನಿಂದ ಮಾಡಿರುವಂತವು. ಇನ್ನೂ ಕೆಲವು ಬಿದಿರು, ಸೆಣಬಿನಿಂದ ಮಾಡಿರುವಂತವು. ಇನ್ನಷ್ಟು ಮಲೆನಾಡಿನಲ್ಲಿ ಉಪಯೋಗಿಸುವ ಅಡಿಕೆ ಪಟ್ಟಿಯಿಂದ ಮಾಡಿದಂತವು. ಇವುಗಳ ಜೊತೆಗೆ ಸ್ವಲ್ಪ ಬಿನ್ನವೆನಿಸಿ, ಆಕರ್ಷಣೀಯವೆನಿಸಿರುವಂತ ಕೆಲವು ಪರಿಸರ ಪ್ರೇಮಿ ಟೋಪಿ ಫೋಟೋಗಳು ನನ್ನ ಕ್ಯಾಮೆರಾಗೆ ಸೆರೆಸಿಕ್ಕಿವೆ. ಅವುಗಳನ್ನೆಲ್ಲಾ ಬ್ಲಾಗಿಗೆ ಹಾಕಿದ್ದೇನೆ. ನೀವು ನೋಡಿ ಆನಂದಿಸಿ.


ಆಹಾ ...ಇಲ್ಲಿದೆ ನೋಡಿ ಪಕ್ಕಾ ಸಾಂಪ್ರಧಾಯಿಕ ಆಡಿಕೆ ಟೋಪಿ. ಈ ಮುಗ್ದ ಪೋರನಂತೆಯೇ ಈ ಟೋಪಿಯೂ ಮುಗ್ದತೆ ಪ್ರತೀಕವಲ್ಲವೇ.....ಅಂದಹಾಗೆ ಇದನ್ನು ಹಾಕಿಕೊಂಡಿರುವ ಈ ಪುಟ್ಟನ ಪೋರನ ಹೆಸರು ವಿಕಾಶ. ಕಾನ್ಸೂರಿನ ಹತ್ತಿರದ ಊರಾದ ಮತ್ಮರ್ಡುನಲ್ಲಿರುವ ಗೆಳೆಯ ನಾಗೇಂದ್ರನ ಎರಡನೇ ಪುತ್ರ.

ಅಡಿಕೆ ಟೋಪಿಯ ಹಿಂಬಾಗ ಅದೆಷ್ಟು ಚೆಂದಾಗಿ ಕಾಣುತ್ತೇ ಅಲ್ಲವೇ....ಸೀರೆಯ ನೆರಿಗೆಯಂತೆ ಕಾಣುವ ಇದಕ್ಕೆ ಅದೆಷ್ಟು ಸುಂದರ ಗಂಟು ಅಲ್ಲವೇ....ಅಂದಹಾಗೆ...ಇದು ಗರಿಗೆದರಿದ ಗಂಡು ನವಿಲಂತೆಯೂ ಕಾಣುತ್ತದಲ್ಲವೇ.....


ಇದಂತೂ ನವನಾವಿನ್ಯ ರೀತಿಯಲ್ಲಿ ತಯಾರಿಸಿದ ಆಡಿಕೆ ಟೋಪಿ....ಇದನ್ನು ಹಾಕಿಕೊಂಡಿರುವ ಪೋರಿ ಸ್ವಾತಿ....ಈಕೆ ನಾಗೇಂದ್ರನ ಅಣ್ಣನ ಮಗಳು.


ಈತ ನಾಗೇಂದ್ರನ ಮೊದಲನೇ ಪುತ್ರ ಸುಹಾಸ. ಇವನ ತಲೆ ಮೇಲಿರುವುದು ಆಡಿಕೆಪಟ್ಟಿಯಿಂದ ಮಕ್ಕಳಿಗೆ ಇಷ್ಟವಾಗುತ್ತದೆ ಅಂತ ಅಧುನಿಕವಾಗಿ ತಯಾರಿಸಿದ ಮತ್ತೊಂದು ಪಕ್ಕಾ ಪರಿಸರ ಟೋಪಿ....!


ಇದೋ ನೋಡಿ... ಇದು ಲಾವಂಚ ಬೇರಿನಿಂದ ತಯಾರಿಸಿದ ಟೋಪಿ. ಇದನ್ನು ಹಾಕಿಕೊಂಡರೆ ದೈಹಿಕ ಮತ್ತು ಮಾನಸಿಕ ಅರೋಗ್ಯ ವೃದ್ಧಿಗೊಳ್ಳುತ್ತದೆ. ಇದನ್ನು ಈ ರೀತಿ ಸುಂದರವಾಗಿ ತಯಾರಿಸಿದರೆ ಯಾರು ತಾನೇ ಬೇಡ ಅಂದಾರು....!



ಪಕ್ಕ ಮಲೆನಾಡಿನ ಶೈಲಿಯಲ್ಲಿ ತಯಾರಿಸಿದ ಮತ್ತೊಂದು ರೀತಿಯ ಲಾವಂಚ ಬೇರಿನ ಟೋಪಿ......!



ಲಾವೆಂಚ ಬೇರಿನ ಈ ಟೋಪಿವಾಲ ಸೆರೆ ಸಿಕ್ಕಿದ್ದು ರಸ್ತೆಯಲ್ಲಿ.....




ಸುಹಾಸನ ತಲೆಮೇಲಿರುವ ಇದು ಒಂದು ರೀತಿ ಸೆಣಬಿನಿಂದ ಮಾಡಿದ ಕೌಬಾಯ್ ಮಾದರಿ ಟೋಪಿ.


ಸೆಣಬಿನಿಂದ ಸುಂದರವಾಗಿ ಹೆಣೆಯಲ್ಪಟ್ಟ ಈ ಟೋಪಿ ನೋಡಲು ಅದೆಷ್ಟು ಸುಂದರ....ನೋಡಲು ಬುದ್ಧಿಜೀವಿಯಂತೆ ಕಾಣುವ ಈತ ಚಿತ್ರಸಂತೆಯಲ್ಲಿ ನನ್ನ ಕ್ಯಾಮೆರಾದೊಳಗೆ ಸೆರೆಯಾಗಿದ್ದರು.....



ಈ ಪರಿಸರ ಪ್ರೇಮಿ ಪರದೇಶಿ ಯುವಕ ನನ್ನ ಕ್ಯಾಮೆರಾಕ್ಕೆ ಸೆರೆ ಸಿಕ್ಕಿದ್ದು ಚಿತ್ರಕಲಾ ಪರಿಷತ್‌ನಲ್ಲಿ.....



ಈಕೆಯ ತಲೆಯ ಮೇಲೆ ಇರುವ ಬಿದಿರಿನ ಟೋಪಿ ಅದೆಷ್ಟು ಸೊಗಸು ಅಲ್ವಾ.......



ಈ ವಿದೇಶಿ ಮಹಿಳೆಯ ತಲೆ ಮೇಲೆ ಬಿದಿರಿನಿಂದ ತಯಾರಿಸಿದ ಮತ್ತೊಂದು ಚೆಂದದ ಟೋಪಿ....



ಚಿತ್ರ ಮತ್ತು ಲೇಖನ

ಶಿವು.

Sunday, March 22, 2009

ನಾ ನಿನ್ನ ಮದುವೆಯಾಗೋಲ್ಲ ಅಂದೆ....ಅವಳು ಬಹ್ಮಕುಮಾರಿಗೆ ಸೇರಿದಳು....




ಸಮಯ ಬೆಳಗಿನ ಹತ್ತು ಗಂಟೆ. ಅವನು ತನ್ನ ಮೊಬೈಲು ರಿಂಗಾಗುವುದನ್ನೇ ಕಾಯುತ್ತಿದ್ದ...ರಿಂಗಾಯಿತು....


" ಹಲೋ.....ಹೇಗಿದ್ದೀರಿ......" ಇದು ಅವಳದೇ ದ್ವನಿ....


ಹಲೋ ಅಂತನ್ನುವ ನವಿರುತನದಲ್ಲೇ ಖಚಿತವಾಗುತ್ತದೆ...


" ನಾನು ಚೆನ್ನಾಗಿದ್ದೇನೆ....ನೀನು ಹೇಗಿದ್ದೀಯಾ.....ಟಿಫನ್ ಆಯ್ತ...."


ಅವನಿಗೆ ಅವಳ ಜೊತೆ ಮಾತಾಡುವ ಅವಕಾಶ ಸಿಕ್ಕಾಗಲೆಲ್ಲಾ ಮೈಪುಳಕ... ಸ್ವಲ್ಪೇ ಸ್ವಲ್ಪ ಭಾವೋದ್ವೇಗ....ಅದು ಬರದಂತೆ ತಡೆಯಬೇಕೆಂದು ಎಷ್ಟೇ ಪ್ರಯತ್ನಿಸಿದರೂ ಆ ಸಮಯದಲ್ಲಿ ಅವನ ಮೈ ಮನವನ್ನು ಆವರಿಸಿರುತ್ತದೆ.....ಅದರೂ ಜೊತೆ ಜೊತೆಯಲ್ಲೇ...ವರ್ಣಿಸಲಾಗದ ಖುಷಿ....ಒಂದು ರೀತಿ ಯುಪಿಎಸ್ ಮುಖಾಂತರ ಚಲಿಸುವ ತೆಳುವಾದ ವಿದ್ಯುತ್‌ನಂತೆ. ಇದೆಲ್ಲಾ ಅವಳಿಗೂ ಆಗುತ್ತಿತ್ತಾ......


ಗೊತ್ತಿಲ್ಲ......ಆಗುತ್ತಿರಬಹುದು ಅನ್ನಿಸುತ್ತೆ....ಏಕೆಂದರೆ ಆವಳು ಹೀಗೆ ಅವನಿಗೆ ಫೋನ್ ಮಾಡಲು ಹತ್ತು ಗಂಟೆ ಆಗುವುದನ್ನೇ ಕಾಯುತ್ತಿರುತ್ತಾಳಲ್ಲ !


ಎಂದಿನಂತೆ ಸ್ವಲ್ಪ ಉಭಯಕುಸಲೋಪರಿ.... ಅಭಿರುಚಿಗಳ ವಿನಿಮಯ........ಆಸೆ ಆಕಾಂಕ್ಷೆಗಳ ಕೊಡುಕೊಳ್ಳುವಿಕೆ.....ನಡುವೆ ಆಗಾಗ....


" ನಿಮಗೆ ಗೊತ್ತಾ! ನಾನು ಕೊನೇ ವರ್ಷದ ಬಿ.ಎ ನಲ್ಲಿದ್ದಾಗ......ಏನಾಯ್ತು ಅಂದರೆ............[ಅವಳ ಗೆಳತಿಯರ ಜೊತೆಗಿನ ತಮಾಷೆ, ಆಟ...ಲೆಚ್ಚರುಗಳ ಬಗ್ಗೆ ವಿವರಿಸಿ]ಅಂಗಾಯ್ತು.....ಅದನ್ನು ಈಗಲೂ ಮರೆಯೋದಿಕ್ಕೆ ಆಗೋಲ್ಲ ನನಗೆ." ಒಂದೇ ಉಸುರಿನಲ್ಲಿ ಹೇಳುತ್ತಿದ್ದಳು....


" ಓಹ್! ತುಂಬಾ ತಮಾಷೆ ಅನ್ನಿಸುತ್ತೆ......ನನಗೂ ಒಮ್ಮೆ ಹೀಗೆ ಆಗಿತ್ತು.............ನಾನು ಆಗ ನಿನ್ನ ಹಾಗೆ ಏನು ಗೊತ್ತಿರಲಿಲ್ಲ...........................[ಅವನದೂ ವರ್ಣನೆ]ಕೊನೆಗೆ ಇಂಗಾಯ್ತಲ್ಲ......ನನಗೆ ನಗು ತಡೆಯಲಾಗಲಿಲ್ಲ ನೋಡು" .......ಕೊನೆಗೆ ಇಬ್ಬರೂ ನಗುತ್ತಿದ್ದರು.......


" ಸಕ್ಕತ್ ರೊಮ್ಯಾಂಟಿಕ್ ಆಗಿದೆ.....ಮುಂದೆ ಹೇಳಿ"...ಪ್ರಕಾಶ್ ಹೆಗಡೆ ಊಟಕ್ಕೆ ಕುಳಿತುಕೊಳ್ಳುತ್ತಾ ಕೇಳಿದರು....


"ಅದ್ಸರಿ ಆ ಹುಡುಗಿ ಎಲ್ಲಿಂದ ಫೋನ್ ಮಾಡುತ್ತಿದ್ದಳು" ಹೇಮಾಶ್ರಿ ಇಬ್ಬರಿಗೂ ಅನ್ನ ಬಡಿಸುತ್ತಾ ಕೇಳಿದ್ದಳು..


ಹುಡುಗಿ ಮನೆ ಹಾಸನ. ಅವರ ತಂದೆಗೆ ರೈಲ್ವೇ ಕೆಲಸ. ಮುಂಜಾನೆ ಆರು ಗಂಟೆಗೆ ಹೋಗಿಬಿಡುತ್ತಿದ್ದರು.... ಅವಳ ಎರಡನೇ ಅಣ್ಣ ಕೂಡ ೯ ಗಂಟೆಗೆ ಹೋಗಿಬಿಡುತ್ತಿದ್ದರು. ದೊಡ್ಡಣ್ಣನಿಗೆ ಮದುವೆಯಾಗಿದೆ. ಆತನಿಗೆ ಹುಬ್ಬಳ್ಳಿಯಲ್ಲಿ ಕೆಲಸವಾದ್ದರಿಂದ ಅಲ್ಲೇ ವಾಸ. ..ಮತ್ತೆ ಇನ್ನು ಉಳಿದ ಅಮ್ಮ ಕೂಡ ಸರಿಯಾಗಿ ೯-೩೦ರ ನಂತರ ಹೊರಡುತ್ತಿದ್ದರು....ನಂತರ ಉಳಿಯುತ್ತಿದ್ದುದು ಈ ಉಷಾ ಒಬ್ಬಳೇ.....


ಆವಳ ಫೋನ್ ಬರುವುದು ಇವನಿಗೆ ಮೊದಲೇ ಗೊತ್ತಿತ್ತಲ್ಲ....ಅದಕ್ಕೆ ಸರಿಯಾಗಿ ೯-೪೫ ಕ್ಕೆ ತನ್ನ ದಿನಪತ್ರಿಕೆಯ ಕೆಲಸದ ಮೇಲೆ ಹೊರಟುಬಿಡುತ್ತಿದ್ದ. ಅವಳ ಮನೆಯ ಲ್ಯಾಂಡ್‌ಲೈನ್ ಫೋನ್ ಬಂದಾಗ ಇವನು ರಸ್ತೆಯ ಮೇಲೆ...ಸಮಯದ ಪರಿವೇ ಇಲ್ಲದೇ ಖುಷಿಯಾಗಿ ಮಾತನಾಡಿಕೊಳ್ಳುತ್ತಿದ್ದರು.


ಇಷ್ಟಕ್ಕೂ ಆ ಹುಡುಗನ ಮನೆಯ ಸಂಭಂದಿಕರೊಬ್ಬರು ಹಾಸನದಲ್ಲಿರುವ ಇದೇ ಉಷಾಳ ಫೋಟೊವನ್ನು ತೋರಿಸಿ ನೋಡು ಇವಳು ಹೇಗಿದ್ದಾಳೆ ಅಂದಾಗ ಹುಡುಗನು ಇಷ್ಟಪಟ್ಟಿದ್ದ. ಮತ್ತು ಹುಡುಗನ ಫೋಟೊವನ್ನು ಹುಡುಗಿ ಮತ್ತು ಅವಳ ಮನೆಯವರು ಇಷ್ಟಪಟ್ಟಿದ್ದರು.....ಒಂದು ರೀತಿ ಎರಡು ಕಡೆ ಇಷ್ಟವಾದ ಮೇಲೆ ಒಪ್ಪಿಗೆಯೂ ಆಗಿತ್ತು......ನಡುವೆ ಎರಡು ಕಡೆಯವರಿಗೂ ಬಿಡುವಿಲ್ಲದ ಕಾರಣ ಮದುವೆ ಮಾತುಕತೆ ವಿಚಾರ ಒಂದು ತಿಂಗಳು ಮುಂದಕ್ಕೆ ಹೋಗಿತ್ತು....


ಇದರ ನಡುವೆ ಎರಡು ಕಡೆ ಒಪ್ಪಿಗೆಯಾಗಿತ್ತಲ್ಲ....ಅದಕ್ಕೆ ಹುಡುಗ ಮತ್ತು ಹುಡುಗಿ ಈ ರೀತಿ ಚೆನ್ನಾಗಿ ಮಾತಾಡಿಕೊಳ್ಳುತ್ತಿದ್ದರು. ಹೇಗೂ ನಮ್ಮಿಬ್ಬರ ಮದುವೆ ಆಗುತ್ತದಲ್ಲ......ಅಂತ ಅವರಿಬ್ಬರಿಗೂ ಖಚಿತವಾಗಿತ್ತು.


ಇದು ಯಾವ ಮಟ್ಟಕ್ಕೆ ಹೋಗಿತ್ತೆಂದರೆ ಅವರಿಬ್ಬರೂ ಒಬ್ಬರನ್ನೊಬ್ಬರೂ ಬಿಟ್ಟಿರಲಾಗದಷ್ಟು ಗಾಢಪ್ರೇಮಿಗಳಾಗಿಬಿಟ್ಟಿದ್ದರು. ದಿನದಲ್ಲಿ ಅದೆಷ್ಟು ಸಲ ಈ ರೀತಿ ಫೋನ್ ಸಂಭಾಷಣೆಗಳು ನಡೆಯುತ್ತಿದ್ದವೋ......ಅದರೆ ಎರಡು ಮನೆ ಕಡೆಯವರಿಗೂ ಇವರು ಈ ಮಟ್ಟಕ್ಕೆ ಮುಂದುವರಿದಿರುವುದು ತಿಳಿಯದೆ ಹುಡುಗ ಹುಡುಗಿ ಒಬ್ಬರನ್ನೊಬ್ಬರೂ ಒಪ್ಪಿದ್ದಾರೆ....ಮುಂದೆ ಮಾತುಕತೆಗೆ ಹೋದಾಗ ಉಳಿದಿದ್ದು ಅಂದುಕೊಂಡಿದ್ದಾರೆ.


ಅವತ್ತು ಫೆಬ್ರವರಿ ೧೦. ಹುಡುಗನ ಕಡೆಯವರೆಲ್ಲಾ ಹಾಸನದ ಹುಡುಗಿಯ ಮನೆಯಲ್ಲಿದ್ದರು. ಎಲ್ಲರಿಗೂ ಒಂದು ರೀತಿಯ ಸಂಬ್ರಮ.. ಎರಡು ಕಡೆ ಆತ್ಮೀಯವಾದ ನಗು, ಪ್ರೀತಿ ತುಂಬಿದ ಕಾಳಜಿ.... ಇತ್ಯಾದಿ ವಿನಿಮಯವಾಯಿತು. ಮುಂದೆ ಸಂಭಂದಿಗಳಾಗುವುದರಿಂದ ಇವರಿಗೆ ಅವರಿಂದ ಅತಿಥಿ ಸತ್ಕಾರ ಚೆನ್ನಾಗೆ ನಡೆಯಿತು....


" ಇನ್ನೂ ಶುರು ಮಾಡೋಣವೇ." .....ಹುಡುಗನ ಚಿಕ್ಕಪ್ಪ ಮಾತು ಪ್ರಾರಂಬಿಸಿದರು.. " ಆಗಲಿ ಅದಕ್ಕೇನಂತೆ ಸ್ವಲ್ಪ ಇರಿ, ನನ್ನ ತಮ್ಮನೂ ಬರಲಿ ಇಲ್ಲೇ ಹತ್ತಿರದಲ್ಲೇ ಇದ್ದಾನೆ ಬರುತ್ತಿದ್ದಾನೆ" ಅಂದಳು ಹುಡುಗಿಯ ತಾಯಿ. ಹೆಣ್ಣಿನ ಮನೆಯವರಿಗೆ ತಮ್ಮನ ಮಾತು ವೇದವಾಕ್ಯ. ಹತ್ತು ನಿಮಿಷದ ನಂತರ ಆತನ ಆಗಮನವಾಯಿತು....ಬಂದವನು ಎಲ್ಲರನ್ನೂ ನೋಡಿದ, ಹುಡುಗನು ಸೇರಿದಂತೆ ಎಲ್ಲರೂ ಚಾಪೆಯ ಮೇಲೆ ಕುಳಿತಿದ್ದರು. ಆತ ಬಂದಿದ್ದರಿಂದ ಅವನಿಗೊಂದು ಖುರ್ಚಿ ಹಾಕಿ ಕೂರಿಸಲಾಯಿತು.


ಪ್ರಾರಂಬಿಕ ಪೀಠಿಕೆಗಳೆಲ್ಲಾ ಮುಗಿದು................"ನೋಡಿ ಹುಡುಗ ಮತ್ತು ಹುಡುಗಿ ಇಬ್ಬರು ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದಾರೆ....ಅವರು ಇಷ್ಟಪಟ್ಟಮೇಲೆ ನಮ್ಮದೇನಿದೆ......ಅವರು ತಾನೆ ಬದುಕಿ ಬಾಳೋರು" .... ಹೀಗೆ ಶುರುವಾಯಿತು. ಹಾಗೆ ಮುಂದುವರಿದೂ ಮದುವೆ ಎಲ್ಲಿ ಮಾಡೋದು ಹೇಗೆ.....ಯಾವ ತಿಂಗಳು.....ಹಣಕಾಸಿನ ವಿಚಾರಗಳು.....ಎಲ್ಲಾ ಇತ್ಯಾರ್ಥವಾಗುವ ಅಂತ ಬಂತು.


" ಹುಡುಗ ಯಾವ ಕೆಲಸದಲ್ಲಿದ್ದಾನೆ.?" ಪ್ರಶ್ನೆಯೊಂದು ತೂರಿ ಬಂತು ಹುಡುಗಿಯ ತಾಯಿ ತಮ್ಮನಿಂದ.


" ಹುಡುಗ ನ್ಯೂಸ್ ಪೇಪರ್ ಏಜೆಂಟ್.. ಜೊತೆಗೆ ಮದುವೆ ಮುಂಜಿ ಇತ್ಯಾದಿ ಸಮಾರಂಭಗಳಿದ್ದರೇ ಫೋಟೋಗ್ರಫಿ ಮಾಡುತ್ತಾನೆ" ....ಇತ್ತಕಡೆಯಿಂದ ಉತ್ತರ....


"ಹೌದೇನು" .....ಅಂದವನು ಅದರ ಅಧಾಯವೇನು....ಇತ್ಯಾದಿಗಳನ್ನು ಕೇಳಿ ತಿಳಿದುಕೊಂಡ. ಸ್ವಲ್ಪ ಹೊತ್ತಿನ ನಂತರ, ತನ್ನಕ್ಕನನ್ನು ರೂಮಿಗೆ ಕರೆದುಕೊಂಡು ಹೋದ. ತದನಂತರ ಹುಡುಗಿಯೂ ಕರೆ ಬಂತು.....ಸುಮಾರು ಹೊತ್ತಿನ ನಂತರ ಅವರೆಲ್ಲಾ ಹೊರಬಂದರು.


" ನನಗೆ ಈ ಮದುವೆ ಇಷ್ಟವಿಲ್ಲ." ಹುಡುಗಿಯಿಂದ ಸಡನ್ನಾಗಿ ಮಾತು ಬಂತು.


ಎಲ್ಲರಿಗೂ ಒಂದು ಕ್ಷಣ ಷಾಕ್ ಆಯಿತು. ಅದರೂ ಗಾಬರಿಯಾಗದೆ ಮತ್ತೊಮ್ಮೆ ಕೇಳಿದಾಗ ಅದೇ ಮಾತನ್ನು ಆಕೆ ಪುನರುಚ್ಚರಿಸಿದಳು. ಎಲ್ಲರಿಗೂ ಕಳವಳ ಶುರುವಾಯಿತು. ಕೊನೆಗೆ ಹಿರಿಯರೊಬ್ಬರು.....


"ನೋಡಿ ಹುಡುಗ ಮತ್ತು ಹುಡುಗಿ ಒಬ್ಬರಿಗೊಬ್ಬರು ಚೆನ್ನಾಗಿ ಪರಿಚಯವಾಗಿದೆ. ಮತ್ತೇ ಓದಿಕೊಂಡಿದ್ದಾರೆ....ಅವರಿಬ್ಬರೇ ಮಾತಾಡಿಕೊಳ್ಳಲಿ" ಎಂದು ಹೇಳಿ ಇಬ್ಬರನ್ನು ಬಾಲ್ಕನಿಗೆ ಕಳಿಸಿದರು.


ಹುಡುಗನಿಗೆ ಇದು ಒಂದು ರೀತಿಯ ಗಾಬರಿ, ಗೊಂದಲ, ನಿರಾಸೆ.....ಎಲ್ಲಾ ಉಂಟಾದರೂ ಇಲ್ಲ ಏನೋ ಯಡವಟ್ಟಾಗಿದೆ ಸರಿಪಡಿಸಬಹುದು ಅಂತ ಸಣ್ಣ ನಂಬಿಕೆಯೂ ಆ ಕ್ಷಣದಲ್ಲಿ ಉಂಟಾಗಿತ್ತು. ಹುಡುಗ ಒಂದು ತಿಂಗಳಿಂದ ಅವರಿಬ್ಬರಲ್ಲಿ ನಡೆದ ಸವಿ ಸವಿ ನೆನಪುಗಳು, ಮಾತುಗಳು, ಎಲ್ಲವನ್ನೂ ನೆನಪಿಸಿ.. ಯೋಚಿಸಲು ಅವಕಾಶ ಕೊಟ್ಟರೂ ಅವಳು ತನ್ನ ಹೊಸ ನಿರ್ದಾರ ಬದಲಿಸಲಾಯಿಸಿಕೊಳ್ಳಲು ಸಿದ್ದಳಿರಲಿಲ್ಲ..


ಎಲ್ಲರ ಮುಖದಲ್ಲೂ ಹುಡುಗಿಯ ತೀರ್ಮಾನದಿಂದಾಗಿ ಮಂಕು ಬಡಿದಂತಾಗಿತ್ತು.... ಯಾರು ಎಷ್ಟೇ ಹೇಳಿದರೂ ಹುಡುಗಿಯ ನಿರ್ದಾರವಂತೂ ಕಲ್ಲಿನಷ್ಟೇ ಗಟ್ಟಿಯಾಗಿಬಿಟ್ಟಿತ್ತು.


ಕೊನೆಗೆ ಗಂಡಿನ ಕಡೆಯವರು ಬೇಸರವಾಗಿ ಹುಡುಗಿಯ ನಿರ್ದಾರವನ್ನು ಮೊದಲೇ ತಿಳಿಸಿದ್ದರೇ ನಾವು ಇಷ್ಟೊಂದು ದಣಿಯುವ ಅಗತ್ಯವಿರಲಿಲ್ಲವೆಂದು ಕೋಪ, ಬೇಸರದಿಂದ....ಬೆಂಗಳೂರಿನ ಬಸ್ಸು ಹಿಡಿದರು


ಬಸ್ಸಿನಲ್ಲಿ ಹುಡುಗನಿಗೆ ಸಮಾಧಾನ ಹೇಳಿದರೂ ಆತನ ತಲೆಯೊಳಗೆ ಸುತ್ತುತ್ತಿದ್ದುದು ಒಂದೇ ವಿಚಾರ..." ಸುಮಾರು ಒಂದು ತಿಂಗಳವರೆಗೆ ಪ್ರತಿದಿನ ನಾಲ್ಕೈದು ಬಾರಿ ಫೋನ್ ಮಾಡುತ್ತಿದ್ದವಳು, ಮತ್ತು ಎಲ್ಲಾ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದವಳು , ಅದರಿಂದಾಗಿ ನಮ್ಮಿಬ್ಬರ ಪ್ರೀತಿಯೂ ಮತ್ತಷ್ಟು ಗಾಢವಾಗುತ್ತಿದ್ದುದ್ದು....ಮದುವೆಯಾದ ಮೇಲೆ ಹೇಗೇಗೋ ಇರಬೇಕು ಅಂತೆಲ್ಲಾ ಕನಸು ಕಟ್ಟಿಕೊಂಡ ಹುಡುಗಿ ಇವಳೇನಾ? ಎಷ್ಟು ಯೋಚಿಸಿದರೂ ಆ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ..


ಎರಡು ಮೂರು ದಿನ ಕಳೆದರೂ ಈ ನಿರಾಸೆಯಿಂದ ಹೊರಬರಲು ಅವನಿಗೆ ಸಾಧ್ಯವಾಗಿರಲಿಲ್ಲ.


ಹುಡುಗ ಕಳೆದೆರಡು ವರ್ಷಗಳಿಂದ ಆದ್ಯಾತ್ಮಿಕ ಶಿಬಿರವಾದ "ಎಸ್ ಎಸ್ ವೈ" ತರಗತಿಗೆ ಹೋಗುತ್ತಿದ್ದುದ್ದರಿಂದ ಈಗಲೂ ಇಂಥ ಪರಿಸ್ಥಿತಿಯಿಂದ ಹೊರಬರಲು...ಅದೇ ಸರಿ ಎಂದು ನಾಲ್ಕು ದಿನಗಳ ಕಾಲ ನಡೆಯುವ ಶಿಬರಕ್ಕೆ ದೂರದ ಆಶ್ರಮಕ್ಕೆ ಹೋಗಿಬಿಟ್ಟ.


"ಆಯ್ಯೋ ಇದೇನ್ರಿ ! ಹುಡುಗನಿಗೆ ಹೀಗಾಗೊಯ್ತು...... " ಪ್ರಕಾಶ ಹೆಗಡೆ ತಟ್ಟೆಯಲ್ಲಿ ಕೈ ತೊಳೆಯುತ್ತಾ ಆಶ್ಚರ್ಯದಿಂದ.


"ಅದ್ಸರಿ ಹುಡುಗಿ ಕತೆ ಏನಾಯ್ತುರೀ......" ಹೇಮಾಶ್ರೀ ತಟ್ಟೆಗಳನ್ನು ಎತ್ತಿಡುತ್ತಾ ಕೇಳಿದಳು.


"ಹೇಳ್ತೀನಿ ಇರಿ, ನಿದಾನ ಮಾಡಿ......" ನಾನು ತಟ್ಟೆಯಲ್ಲಿ ಕೈ ತೊಳೆದೆ.


ಆಶ್ರಮದಲ್ಲಿ ಎಸ್ ಎಸ್ ವೈ ಕ್ಯಾಂಪಿನ ಪರಿಣಾಮವೇ ಏನೋ.......ಹುಡುಗ ಸಂಪೂರ್ಣವಾಗಿ ಎಲ್ಲವನ್ನೂ ಮರೆತು ಹೊಸ ಮನುಷ್ಯನಾಗಿ ಮನೆಗೆ ಬಂದ......


ಈತ ಕ್ಯಾಂಪಿಗೆ ಹೋದ ಒಂದೆರಡು ದಿನಗಳಲ್ಲಿ ಹುಡುಗಿ ಮನೆ ಕಡೆಯಿಂದ ಫೋನ್. ಹುಡುಗಿ ಮತ್ತೆ ಇದೇ ಹುಡುಗನನ್ನೇ ಮದುವೆಯಾಗುತ್ತಾಳಂತೆ... ಆವತ್ತು ಅವಳ ಆ ನಿರ್ದಾರಕ್ಕೆ ಅವಳ ಮಾವ[ಅಮ್ಮನ ತಮ್ಮ]ನೇ ಕಾರಣವಂತೆ. ಹುಡುಗನ ಕೆಲಸದ ಬಗ್ಗೆ ಆತ ಕೀಳಾಗಿ ಮಾತಾಡಿ ತಲೆಕೆಡಿಸಿದ್ದರಿಂದ ನಾನು ಆ ನಿರ್ದಾರವನ್ನು ತೆಗೆದುಕೊಂಡಿದ್ದೆ. ಈಗ ನನ್ನ ತಪ್ಪಿನ ಅರಿವಾಗಿದೆ. ನಾನು ಈಗ ಮದುವೆಯಾದರೇ ಅದೇ ಹುಡುಗನನ್ನೇ ಮದುವೆಯಾಗುವುದು ಅಂತಿದ್ದಾಳೆ.


"ಓಹ್ ಸಕ್ಕತ್ ಇಂಟರೆಷ್ಟಿಂಗ್...ಮುಂದೇನಾಯ್ತು." ...ಪ್ರಕಾಶ್ ಹೆಗಡೆ...


" ಪಾಪ ಹುಡುಗಿಗೆ ತನ್ನ ತಪ್ಪಿನ ಅರಿವಾಗಿದೆ... ಹುಡುಗ ಅದೇ ಹುಡುಗಿಯನ್ನು ಮದುವೆಯಾದನಾ? ಕೇಳಿದಳು ಹೇಮಾಶ್ರಿ ಕುತೂಹಲದಿಂದ..


" ಈಗ ಮುಂದೇನಾಯ್ತು ಅಂತ ನೀವು ಊಹಿಸಬೇಕು.....ಜೊತೆಗೆ ನಿಮ್ಮ ಅಭಿಪ್ರಾಯ ತಿಳಿಸಬೇಕು." ನನ್ನ ಕಡೆಯಿಂದ ಪ್ರಶ್ನೆ.


"ಹುಡುಗಿ ಓದಿಕೊಂಡಿದ್ದಾಳೆ.. ಅವಳಿಗೆ ಈ ವಿಚಾರದಲ್ಲಿ ಸ್ವಂತ ಬುದ್ದಿ ಬೇಡವೇ ? ಇದು ಅವಳ ಜೀವನದ ಪ್ರಶ್ನೆ....ಇಂಥದ್ದರಲ್ಲಿ ಅವಳು ಮಾಡಿದ ಅವಮಾನಕ್ಕೆ ಹುಡುಗ ಒಪ್ಪಬಾರದು ಅಂತ ನನಗನಿಸುತ್ತೆ...." ಇದು ಪ್ರಕಾಶ್ ಹೆಗಡೆಯವರ ಅಭಿಪ್ರಾಯ.


" ಇಲ್ಲಾ ಇಲ್ಲಾ.....ಅವಳಿಗೆ ತನ್ನ ತಪ್ಪಿನ ಅರಿವಾಗಿದೆ....ಮತ್ತೆ ಮದುವೆಯಾದರೆ ನಾನು ಅದೇ ಹುಡುಗನನ್ನೇ ಆಗುತ್ತೇನೆ ಅಂತ ಬೇರೆ ಹೇಳಿರುವಾಗ ಹುಡುಗ ಒಪ್ಪಬೇಕು ಅಂತ ನನಗನ್ನಿಸುತ್ತೆ" .....ಇದು ಹೇಮಾಶ್ರೀ ಅಭಿಪ್ರಾಯ.


ನನಗೆ ಕತೆ ಮುಂದುವರಿಸುವುದೋ ನಿಲ್ಲಿಸುವುದೋ ತಿಳಿಯಲಿಲ್ಲ....ಅದಕ್ಕಿಂತ ಹೆಚ್ಚಾಗಿ "ಸತ್ಯ" ಗೊತ್ತಾದರೆ ಏನಾಗುತ್ತೋ ಅನ್ನುವ ಭಯವೂ ಶುರುವಾಗಿ.....ಸುಮ್ಮನಾಗಿಬಿಟ್ಟೆ.....


ಇಬ್ಬರೂ ಒತ್ತಾಯಿಸಲಾರಂಭಿಸಿದರು....ನಾನು ಅವರಿಬ್ಬರನ್ನೂ ಒಮ್ಮೆ ನೋಡಿದೆ... ಇನ್ನೂ ಅಲ್ಲೇ ಇದ್ದೇ ಅನ್ನದ ಸೌಟು, ಸಾರಿನ ಸೌಟ್ ಎರಡನ್ನು ಕೈಗೆತ್ತಿಕೊಂಡೆ... ಮತ್ತೇನು ಅಂತವು ಇಲ್ಲವೆಂದು ಗ್ಯಾರಂಟಿ ಮಾಡಿಕೊಂಡ ನಂತರ ದೈರ್ಯ ಬಂತು.....


"ನಾನು ಮದುವೆ ಆಗೊಲ್ಲ ಅಂದೆ....ಅವಳು ಈಶ್ವರೀಯ ಬ್ರಹ್ಮಕುಮಾರಿ ಸೇರಿದಳು...."


ಇಬ್ಬರೂ ನನ್ನ ಮುಖ ನೋಡಿದರು......ಪ್ರಕಾಶ್ ಹೆಗಡೆಗೆ ನಾನೇ ಹುಡುಗನ ಪಾತ್ರಧಾರ ಅಂತ ತಿಳಿದು.....ಏನು ಮಾತಾಡದೇ......ಸುಮ್ಮನಾಗಿಬಿಟ್ಟಿದ್ದಾರೆ....


ಹೇಮಾಶ್ರೀ ಮುಖದಲ್ಲಿ ಮೊದಲು ಆಶ್ಚರ್ಯ....., ಮರುಕ್ಷಣ ಗೊಂದಲ......ಗಲಿಬಿಲಿ.......ನಿದಾನಕ್ಕೆ ಕೋಪ.....ಬರುತ್ತಿದೆ.....ಸುತ್ತಲು ನೋಡಿದಳು......


" ಅಂದ್ರೆ ನನ್ನ ಮದುವೆಯಾಗುವ ಮೊದಲು ನಿಮ್ಮದೂ ಇಷ್ಟೇಲ್ಲಾ ಕತೆ ನಡೆದಿದೆಯಾ......" ಸೌಟು ಹುಡುಕತೊಡಗಿದಳು. ಅದು ಹೀಗೆ ಆಗುತ್ತದೆ ಅಂತ ಗೊತ್ತಿದ್ದರಿಂದ ಮೊದಲೇ ಅವು ನನ್ನ ಕೈಯಲ್ಲಿದ್ದವು.


" ನಾನು ಮೊದಲೇ ಹೇಳಿದ್ದೆನಲ್ಲ ಈ ಕತೆಯನ್ನು" ಅವಳನ್ನು ಸಮಾಧಾನಿಸಲೆತ್ನಿಸಿದೆ....


" ನಿಮ್ಮ ಲವ್ ಸ್ಟೋರಿ ಹೇಳೀದ್ರಾ........" ಕೋಪ ಹಾಗೆ ಇತ್ತು.....ನಿದಾನವಾಗಿ ಇಳಿಯಿತು.


" ಹೇಳಿರಲಿಲ್ಲ.....ಈಗ ಹೇಳಿದ್ದೇನೆ....." ಅದಕ್ಕೆ ಎರಡು ಸೌಟುಗಳನ್ನು ನನ್ನ ಕೈಯಲ್ಲಿಡಿದಿದ್ದೀನಿ........"


ನಾನು ನಗುತ್ತಾ ಹೇಳಿದ ಮಾತಿಗೆ ಇಬ್ಬರೂ ಜೋರಾಗಿ ನಕ್ಕರು.. ಕಾತುರ, ಆಶ್ವರ್ಯ, ಗೊಂದಲದ ವಾತಾವರಣವೆಲ್ಲಾ . ನಗುವಿನ ಅಲೆಯಲ್ಲಿ ತೇಲಿಹೋಗಿತ್ತು.

----------------------------

[ಇದು ನನ್ನ ಬದುಕಿನ ಅತ್ಯಂತ ಮುಖ್ಯ ಘಟ್ಟದ ಮರೆಯಲಾಗದ ನೆನಪು. ಈ ವಿಚಾರವನ್ನು ಯಾರಲ್ಲಿಯೂ [ನನ್ನ ಶ್ರೀಮತಿಯೂ ಸೇರಿಕೊಂಡಂತೆ] ಹೇಳಿಕೊಂಡಿರಲಿಲ್ಲ.......ಬರೆದಿದ್ದನ್ನು ಭಯದಿಂದ ಹಾಗೆ ಎತ್ತಿಟ್ಟಿಬಿಟ್ಟಿದ್ದೆ... ಎಷ್ಟು ದಿನ ಮುಚ್ಚಿಟ್ಟು ಬಚ್ಚಿಡಲು ಸಾಧ್ಯ ? ನಾನು ಹಗುರಾಗಲೇ ಬೇಕಲ್ಲವೇ !...ಚಿತ್ರಾಳ " ಮೈ ಆಟೋಗ್ರಾಫ್" ಮತ್ತು ರಾಜೇಶ್ ಮಂಜುನಾಥ್‌ ನ " ಬದುಕಿನ ಕಾಲಿ ಕ್ಯಾನ್ವಸ್ಸಿನ ಮೇಲೆ ಪ್ರೀತಿ ಎಂದಷ್ಟೇ ಬರೆದು " ಲೇಖನ ಓದಿದ ಮೇಲೆ ಸ್ವಲ್ಪ ದೈರ್ಯ ಬಂದಂತಾಗಿ ಬ್ಲಾಗಿಗೆ ತಳ್ಳಿದ್ದೇನೆ. ಹಾಗೂ ಹುಡುಗಿಯ ಹೆಸರು ಬದಲಿಸಿದ್ದೇನೆ....ನಿಮ್ಮ ಪ್ರತಿಕ್ರಿಯೆಗಳು ಮುಖ್ಯ]


ಚಿತ್ರ ಲೇಖನ.
ಶಿವು.

Sunday, March 15, 2009

ಪೇಪರ್ ಬಿಲ್ಲು ಹೋಯ್ತು.........ಕ್ಯಾಟರ್‌ಪಿಲ್ಲರ್ ಬಂತು....ಡುಂ..ಡುಂ...!!

ನನ್ನ ಕೈಯಲ್ಲಿರುವ ಪೆನ್ನು "ಕನ್ನಡಪ್ರಭ ದಿನಪತ್ರಿಕೆಯ ..... ಮೊತ್ತವನ್ನು ಪೇಪರ್ ಬಿಲ್ಲಿನಲ್ಲಿ ಬರೆಯುತ್ತಿದ್ದರೂ ನನ್ನ ಕಣ್ಣು ಮಾತ್ರ...ಆ ಗಿಡದ ಕಡೆಗಿತ್ತು.....ಮತ್ತೇನಿಲ್ಲಾ, ಸುಮ್ಮನೇ ಕುತೂಹಲ......ನಾನು ಯಾವುದೆ ಮನೆಯ ಬಾಗಿಲಿನ ಮುಂದೆ ನಿಂತರೂ ಅವರು ಮನೆಯ ಮುಂದೆ ವರಾಂಡದಲ್ಲಿ, ಕುಂಡಗಳಲ್ಲಿ ಹಾಕಿರುವ ಹೂವಿನ ಗಿಡಗಳ ಕಡೆ ಕಣ್ಣು ವಾಲಿರುತ್ತದೆ...


ಗಿಡಗಳಲ್ಲಿರುವ ಹೂಗಳಿಗಿಂತ ಅದರ ಎಲೆಗಳು ನನ್ನನ್ನೂ ಹೆಚ್ಚಾಗಿ ಸೆಳೆಯುತ್ತವೆ..... ಅದರಲ್ಲೂ ಅಂಗವಿಕಲ ಎಲೆಗಳು!! ಒಂದೆರಡು ಎಲೆಗಳು ಈ ರೀತಿ ಯಾವುದೇ ಗಿಡದಲ್ಲಿದ್ದರೂ ನನ್ನ ಕುತೂಹಲ ಬೆರಗಿನಿಂದ ಹೆಚ್ಚಾಗುತ್ತದೆ.... ಹತ್ತಿರ ಹೋಗಿ ಎಲೆಯ ಕೆಳಬಾಗದಲ್ಲಿ ನೋಡಿದರೆ ಯಾವುದಾದರೂ ಒಂದು ಹುಳು [ಕ್ಯಾಟರ್‌ಪಿಲ್ಲರ್] ಅದೇ ಎಲೆಯನ್ನೇ ತಿನ್ನುತ್ತಿರುತ್ತದೆ.....


ಇಷ್ಟಾದರೇ ಸಾಕು...........ಅಲ್ಲಿಂದ ಶುರುವಾಗುತ್ತದೆ.....ನನ್ನ ಹೊಸ ಆಸೈನ್ ಮೆಂಟು... ಮನೆಗೆ ಬಂದು ನನ್ನ ಬಳಿ ಇರುವ ಚಿಟ್ಟೆ, ಹುಳುಗಳ ಪುಸ್ತಕಗಳಿಂದ ಗಿಡದ ಹೆಸರು, ಹುಳುವಿನ ಬಣ್ಣ ಆಕಾರ ನೋಡಿ ತಿಳಿದ ಮಾಹಿತಿಯಿಂದ ನನ್ನ ಕ್ಯಾಮೆರಾ ಜಾಗ್ರುತವಾಗುತ್ತದೆ.....


ಹೀಗೆ ಗಮನ ಸೆಳೆದ ಆ ಮನೆಯ ಕಾಂಪೌಂಡಿನಲ್ಲೇ ಬೆಳೆದಿದ್ದ ನುಗ್ಗೆ ಎಲೆಯಷ್ಟೆ ಚಿಕ್ಕದಾದ ಹಸಿರೆಲೆಗಳನ್ನು ತನ್ನ ಕಾಂಡಗಳ ತುಂಬಾ ತುಂಬಿಕೊಂಡಿದ್ದ ಆ "ಮುಳ್ಳಿನ ಗಿಡ" ನನ್ನ ಗಮನ ಸೆಳೆದಿತ್ತು..... ಆ ಮನೆಯವರು ನನ್ನ ಕೈಯಿಂದ ರಸೀತಿ ಪಡೆದು ಹಣತರಲು ಒಳ ಹೋದ ಮೇಲೆ ನಾನು ಕೆಳಗೆ ಕುಳಿತು ನಿದಾನವಾಗಿ ನೋಡಿದರೆ ಹಸಿರು ಬಣ್ಣದ ಹತ್ತಾರು ಹುಳುಗಳು ಗಿಡದ ಎಲೆಗಳ ಮೇಲೆ ಕೆಳಗೆ ಬಸವನ ಹುಳುವಿನ ವೇಗದಲ್ಲಿ ಹರಿದಾಡುತ್ತಾ ಅದೇ ಎಲೆಗಳನ್ನೇ ತಿನ್ನುತ್ತಿವೆ....!!ತಕ್ಷಣ ನೋಡಿದರೆ ಎಲೆಯಾವುದು.. ಹುಳು ಯಾವುದು ಗೊತ್ತಾಗದ ಹಾಗೆ ಎಲೆಗಳ ಜೊತೆಗೆ ಕೋಮೊಪ್ಲೇಜ್ ಆಗಿವೆ..... ಇದು ಅವುಗಳ ಪ್ರೆಡೇಟರುಗಳಾದ, ಜೇಡ, ಪ್ರೈಯಿಂಗ್ ಮ್ಯಾಂಟಿಸ್, ದುಂಬಿಗಳು, ಮತ್ತು ಇತರ ಪಕ್ಷಿಗಳಿಂದ ರಕ್ಷಿಸಿಕೊಳ್ಳಲು ದೇವರ ಸಹಜ ಸೃಷ್ಥಿ!!.


ನನ್ನ ಜೇಬಿನಲ್ಲಿ ಸದಾ ಒಂದು ಪೆನ್ನು, ಚೂರು ಕಾಲಿ ಕಾಗದ, ಒಂದಷ್ಟು ರಬ್ಬರ್ ಬ್ಯಾಂಡ್‌ಗಳು, ಮತ್ತು ಸಣ್ಣ ಕಟ್ಟರ್[ಚಾಕು ] ಇರುತ್ತದೆ. ಚಾಕುವಿನಿಂದ ಗಿಡದಲ್ಲಿ ಆ ಹಸಿರು ಹುಳುಗಳಿರುವ ಒಂದು ಕಾಂಡವನ್ನು ನಿದಾನವಾಗಿ ಕತ್ತರಿಸಿ.. .ಹುಳುಗಳಿಗೆ ನೋವಾಗದ ಹಾಗೆ ನನ್ನ ಬ್ಯಾಗಿನಲ್ಲಿ ಸೇರಿಸಿ... ಬರುವ ದಾರಿಯಲ್ಲಿ ಆಟೋದವರು ಬಸುರಿ ಹೆಂಗಸರು ಕೂತಾಗ ಅಲ್ಲಿಲ್ಲಿ ಸಿಗುವ ಹಂಪ್ಸುಗಳಲ್ಲಿ ನಿದಾನ ನಾಜೂಕಾಗಿ ಡ್ರೈವ್ ಮಾಡುವಂತೆ ನಾನು ಕೂಡ ಹಂಪ್ಸುಗಳಲ್ಲಿ ಕುಲುಕದ ಹಾಗೆ ನನ್ನ ಟೂವೀಲರ್‌ನಲ್ಲಿ ಮನೆಗೆ ಅವುಗಳನ್ನು ತಂದಿದ್ದೆ.


ನೋಡಲು ಅವರೇ ಕಾಯಿ ಹುಳುಗಳಿಗಿಂತ ಚಿಕ್ಕದಾಗಿ ಸಣ್ಣದಾಗಿದ್ದ ಅವುಗಳನ್ನು ನನ್ನಾಕೆ ನೋಡಿ...."ಓಹ್ ಇನ್ನಷ್ಟು ಹುಳಗಳನ್ನು ತಂದಿರಾ... ಮುಗಿಯಿತು ಬಿಡಿ... ಇನ್ನೂ ನಿಮಗೆ ಹೆಂಡತಿ, ಮನೆ ಮಠ, ಸಂಸಾರ, ಎಲ್ಲ ಮರೆತಂತೆ" ಅಂತ ಗೊಣಗುತ್ತಾ ಅಡುಗೆ ಮನೆಗೆ ಹೋದಳು... .[ ಇದೇ ರೀತಿ ಪ್ರಯೋಗವನ್ನು ಹೋಲಿಯಂಡರ್ ಹಾಕ್ ಮಾತ ಪತಂಗದ ಮೇಲೆ ಮಾಡಲು ಹೋಗಿ, ಆ ಹುಳು ಮಾಡಿದ ತರಲೇ ತಾಪತ್ರಯ, ಅದರ ಕಣ್ಣು ಮುಚ್ಚಾಲೆ ಆಟ, ನಂತರ ನಮ್ಮ ಜೊತೆ ಆದು ಚಿತ್ರದುರ್ಗಕ್ಕೆ ಪ್ರವಾಸ ಹೋಗಿಬಂದಿದ್ದು, ಮತ್ತೆ ಅಲ್ಲಿಂದ ಗೋವಾಗೆ ನಮ್ಮ ಜೊತೆಯಲ್ಲೇ ಬಂದು ಅಲ್ಲೇ ಅದರ ಡೆಲಿವರಿಯಾದದ್ದು ಎಲ್ಲಾ ನನ್ನಾಕೆ ನೋಡಿದ್ದಳು.. ಅದರ ಸ್ವಾರಸ್ಯಕರ ಸನ್ನಿವೇಶಗಳನ್ನು ಮುಂದೆ ಎಂದಾದರು ಬರೆಯುತ್ತೇನೆ.]


ನಾನು ತಂದಿದ್ದ ಕಾಂಡದಲ್ಲಿ ನಾಲ್ಕು ಹುಳುಗಳಿದ್ದವು.... ಅವುಗಳಲ್ಲಿ ಎರಡು ದೊಡ್ಡದಾಗಿ ಸುಮಾರು ಮುಕ್ಕಾಲು ಇಂಚಿನಷ್ಟು ಬೆಳೆದು ಸರಸರ ಹರಿದಾಡುತ್ತಿದ್ದವು... ಇನ್ನೆರಡು ಒಂದು ಸೆಂಟಿಮೀಟರ್ ಇದ್ದು ನಿದಾನವಾಗಿ ಎಲೆಗಳನ್ನು ತಿನ್ನುತ್ತಿದ್ದವು...


ಎರಡು ದಿನ ಕಳೆಯಿತು... ನನಗೂ ತಿಂಗಳ ಮೊದಲವಾರ ಅವುಗಳನ್ನೇ ನೋಡಿಕೊಂಡು ಕೂರಲೂ ಆಗುವುದಿಲ್ಲವಲ್ಲ... ಹಣವಸೂಲಿ... ಇತ್ಯಾದಿ ಕೆಲಸಗಳಿಗಾಗಿ ಬ್ಯುಸಿಯಾಗಿದ್ದೆ.... .ಮೂರನೆ ದಿನ ನೋಡುತ್ತೇನೆ. ದೊಡ್ಡವೆರಡು ಪ್ಯೂಪ ಹಾಗಿವೆ.!!




ಅಷ್ಟರಲ್ಲಿ ಇನ್ನೆರಡು ತಮ್ಮಂದಿರು ತಿಂದುಂಡು ಬೆಳೆಯುತ್ತಿದ್ದವು..... ಅಣ್ಣಂದಿರು ಪ್ಯೂಪ ಆಗುವುದನ್ನು ನೋಡಲಾಗಲಿಲ್ಲ ಇವುಗಳನ್ನು ಸರಿಯಾಗಿ ಗಮನಿಸಬೇಕು ಅಂದುಕೊಂಡು ಅವುಗಳನ್ನು ಸಂಪೂರ್ಣವಾಗಿ ಗಮನಿಸತೊಡಗಿದೆ... ಜೊತೆಗೆ ಗೋಡೆಯ ಮೇಲಿನ ಹಲ್ಲಿಗಳು, ಇದ್ದಂಕ್ಕಿದ್ದಂತೆ ಹಾಜರಾಗುವ ಜೇಡಗಳು, ಏನೇ ಸಿಕ್ಕರೂ ಬಲಿಹಾಕಿ ಶೇಕರಿಸುವ ಕೆಂಪಿರುವೆಗಳಿಂದಲೂ ಈ ಹುಳು ಮತ್ತು ಪ್ಯೂಪಗಳನ್ನು ರಕ್ಷಿಸುವ ಜವಾಬ್ದಾರಿಯೂ ನನ್ನ ಮೇಲಿತ್ತು.



ನಾಲ್ಕನೆ ದಿನ ಮದ್ಯಾಹ್ನದ ಹೊತ್ತಿಗೆ ಮೂರನೆ ತಮ್ಮ ತನ್ನ ಹೊರಗಿನ ಚರ್ಮವನ್ನು ಹಾವಿನ ಪೊರೆಯಂತೆ ಕಳಚಿ ತನ್ನ ದೊಡ್ಡ ಆಕಾರವನ್ನು ಸಂಪೂರ್ಣ ಕುಗ್ಗಿಸಿ ಅರ್ದ ಭಾಗಕ್ಕೆ ತಂದು, ತನ್ನ ದೇಹದ ಹಿಂಬಾಗವನ್ನು ಕಾಂಡದ ಒಂದು ತುದಿಗೆ ಅಂಟಿಸಿದ....!! ಮತ್ತೊಂದು ತುದಿಯನ್ನು [ತಲೆಭಾಗ] ಕಾಂಡದ ಮತ್ತೊಂದು ತುದಿಗೆ ಸಣ್ಣ ದಾರದ ಎಳೆಯಂತ ಅಂಟನ್ನು ತನ್ನ ದೇಹದಿಂದಲೇ ಸೃಷ್ಠಿಸಿ ಅದರೊಳಗೆ ತನ್ನ ಕುಗ್ಗಿಸಿದ ದೇಹವನ್ನು ತೂರಿಸಿ ನೇತಾಡತೊಡಗಿತು...... ಇದಿಷ್ಟು ಪ್ರಕ್ರಿಯೆ ನಡೆದಿದ್ದು ಸುಮಾರು ನಾಲ್ಕು ತಾಸಿನಲ್ಲಿ..!!. ಮರುದಿನ ಕೊನೆ ತಮ್ಮನದೂ ಇದೇ ಪ್ರಕ್ರಿಯೆ ! ಮರುದಿನ ಅವೆರಡು ಹಚ್ಚ ಹಸುರಿನ ಬಣ್ಣ ಹೊತ್ತ ಪ್ಯೂಪಗಳಾಗಿ ಬಿಟ್ಟಿವೆ.


ದೊಡ್ಡಣ್ಣನಿದ್ದ ಪ್ಯೂಪ ಏಳನೇ ದಿನದ ಸಂಜೆ ಹೊತ್ತಿಗೆ ನಿದಾನವಾಗಿ ಬಣ್ಣ ಬದಲಿಸುತ್ತಿದೆಯಲ್ಲ......ರಾತ್ರಿ ವೇಳೆಗೆ ಹಸಿರು ಬಣ್ಣದ ಗುರುತೇ ಇಲ್ಲದಂತೆ ಕೆಳಗೆಲ್ಲಾ ಹಳದಿ ಬಣ್ಣ ಮತ್ತು ಮೇಲಿನ ಸ್ವಲ್ಪ ಭಾಗ ಕಂದು ಬಣ್ಣಕ್ಕೆ ತಿರುಗಿದೆ.!!


ನಾನು ಇದುವರೆಗೂ ಸುಮಾರು ೧೨ ವಿಧದ ಚಿಟ್ಟೆಗಳನ್ನು ಪ್ಯೂಪ ಸಮೇತ ತೆಗೆದಿರುವ ಅನುಭವದ ಪ್ರಕಾರ ಯಾವ ಪ್ಯೂಪ ಸಂಜೆ ಹೊತ್ತಿಗೆ ಬಣ್ಣ ಬದಲಿಸುತ್ತದೋ ಮರುದಿನ ಖಂಡಿತ ಪ್ಯೂಪವನ್ನು ಭೇದಿಸಿ ಚಿಟ್ಟೆ ಹೊರಬರುತ್ತದೆ...!


ಮರುದಿನ ಮುಂಜಾನೆ ನನ್ನ ದಿನಪತ್ರಿಕೆ ಕೆಲಸವನ್ನು ಹುಡುಗರಿಗೆ ವಹಿಸಿ ೬ ಗಂಟೆಗೆ ಮನೆಗೆ ಓಡಿ ಬಂದೆ. ಕ್ಯಾಮೆರಾವನ್ನು ಪ್ಯೂಪ ಮುಂದೆ ಸೆಟ್ ಮಾಡಿ ಕಾಯುತ್ತಾ ಕುಳಿತೆ.... ನನ್ನ ಅದೃಷ್ಟಕ್ಕೆ ತೆಳುವಾದ ಬೆಳಕು ಪ್ಯೂಪ ಮೇಲೆ ಬಿದ್ದು ಒಳ್ಳೆ ಪಿಕ್ಟೋರಿಯಲ್ ಬೆಳಕಿನಲ್ಲಿ ಚಿಟ್ಟೆಯ ಚಿತ್ರ ಸೆರೆಯಿಡಿಯುವ ಅವಕಾಶ ಸಿಕ್ಕಿತ್ತು.


ಮುಂಜಾನೆ ಬ್ಲಾಹ್ಮಿ ಮಹೂರ್ತದಲ್ಲಿ ಡೆಲಿವರಿ... ಚಿಟ್ಟೆ ಪ್ಯೂಪವನ್ನು ತೆರೆದುಕೊಂಡು ತಲೆಮುಖಾಂತರ ಹೊರಬರುತ್ತಿದೆ...!!

ಆಗ ತಾನೆ ಪೂರ್ತಿ ಹೊರ ಬಂದ "ಟ್ರೀ ಎಲ್ಲೋ" ಚಿಟ್ಟೆ




ನನ್ನ ಕಣ್ಣು ಕ್ಯಾಮೆರಾ ಕಣ್ಣಿನೊಳಗೆ.... .ಕಣ್ಣು ನೋವು ಬಂದಾಗ ಹೊರತೆಗೆದು ಅತ್ತ ಇತ್ತ ನೋಡುವುದು... ಹೀಗೆ ಸುಮಾರು ಅರ್ಧಗಂಟೆ ನಡೆಯಿತು.....




ರ್ರೀ.....ರೀ......ಚಿಟ್ಟೆ ಆಚೆ ಬಂತು...... ತೆಗೀರಿ ಫೋಟೊ.....ಹೇಮಾಶ್ರೀ ಕೂಗಿದಾಗ ಗಡಿಬಿಡಿಯಲ್ಲಿ ಪಟಪಟನೇ ಐದಾರು ಫೋಟೊ ತೆಗೆದಿದ್ದೆ....ಅದೇ ಸಮಯಕ್ಕೆ ಸಣ್ಣಗೆ ಗಾಳಿಯೂ ಬೀಸಿ ಪ್ಯೂಪ ಅಲುಗಾಡಿ ಕೆಲವು ಫೋಟೊಗಳು ಫೋಕಸ್ ಹೌಟ್ ಆಗಿದ್ದವು.....ಎರಡೇ ಕ್ಷಣದಲ್ಲಿ ಚಿಟ್ಟೆಯ ಡೆಲಿವರಿಯಾಗಿ ಅದೇ ಪ್ಯೂಪವನ್ನು ತನ್ನ ಕಾಲುಗಳಿಂದ ಹಿಡಿದುಕೊಂಡು ತಲೆಕೆಳಗಾಗಿ ನೇತಾಡುತ್ತಿತ್ತು......


ತಮ್ಮಂದಿರಿಬ್ಬರೂ ಮೊದಲು ಪ್ಯೂಪದೊಳಗೆ ಹೀಗೆ ಒಳಗೆ ಕುಳಿತ್ತಿದ್ದರು........


"ಟ್ರೀ ಎಲ್ಲೋ.." ಚಿಟ್ಟೆಯ ಮೂರನೆ ತಮ್ಮ ಹೊರಬಂದಿದ್ದಾನೆ...ನಾಲ್ಕನೆಯವನು ಹೊರಲು ಕಾಯುತ್ತಿದ್ದಾನೆ.




ಇದೇ ರೀತಿ ಮರುದಿನ ಮೊದಲನೆ ತಮ್ಮ, ಮೂರುದಿನ ಬಿಟ್ಟು ಕೊನೆಯ ಇಬ್ಬರೂ ತಮ್ಮಂದಿರಲ್ಲಿ ಒಬ್ಬ ಆರು ಗಂಟೆಗೆ ಮತ್ತೊಬ್ಬ ೭-೩೦ಕ್ಕೆ ಡೆಲಿವರಿಯಾಗಿ ನನ್ನ ಕ್ಯಾಮೆರಾದಲ್ಲಿ ಸೆರೆಯಾಗಿದ್ದರು....ಸುಮಾರು ಎಂಟು ಗಂಟೆಯ ಹೊತ್ತಿಗೆ ಜೇನು ಹೀರಲು ಹೂಗಳನ್ನರಸಿ ಹಾರಿ ಹೋದವು.

ಪೇಪರ್ ಬಿಲ್ಲು ಹೋಯ್ತು......ಕ್ಯಾಟರ್‌ಪಿಲ್ಲರ್ ಸಿಕ್ತು... ಡುಂ..ಡುಂ...

ಕ್ಯಾಟರ್‌ಪಿಲ್ಲರ್ ಹೋಯ್ತು....ಪ್ಯೂಪ ಆಯ್ತು.......ಡುಂ..ಡುಂ.....

ಪ್ಯೂಪ ಹೋಯ್ತು....ಚಿಟ್ಟೆ ಬಂತು ಡುಂ...ಡುಂ.......

ಇಷ್ಟಕ್ಕೂ ಈ ಚಿಟ್ಟೆಯ ಹೆಸರು "ಟ್ರೀ ಎಲ್ಲೋ". ಇವು "ಕಾಮನ್ ಗ್ರಾಸ್ ಎಲ್ಲೋ" ಪ್ರಭೇದಕ್ಕೆ ಸೇರಿದರೂ ಗಾತ್ರದಲ್ಲಿ ಸಲ್ಪ ದೊಡ್ಡವು.... ಸುಮಾರು ೫೦-೬೦ ಎಮ್ ಎಮ್ ಇರುತ್ತವೆ . ಈ "ಟ್ರೀ ಎಲ್ಲೋ" ಎಲ್ಲೋ ಚಿಟ್ಟೆಯೂ ಪಿಯಾರಿಡೈ, PIERIDAE ಜಾತಿಗೆ ಸೇರಿದೆ....... ಸಾಧ್ಯವಾದರೆ ಎಲ್ಲಾ ಪ್ರಭೇದಗಳ ವಿವರವನ್ನು ಮುಂದೆ ಚಿತ್ರ ಸಮೇತ ಕೊಡಲು ಪ್ರಯತ್ನಿಸುತ್ತೇನೆ....



"ಟ್ರೀ ಎಲ್ಲೋ" ಚಿಟ್ಟೆಯೂ ಆಲ್ಬ್‌ಜಿಯಾ [Albzia ] ಅನ್ನುವ ಮುಳ್ಳೀನ ಗಿಡದ ಎಲೆಗಳ ಮೇಲೆ ಸಾಸುವೆಕಾಳಿಗಿಂತ ಚಿಕ್ಕದಾದ ಮೊಟ್ಟೆಗಳನ್ನು ಇಡುತ್ತದೆ....ಮೊಟ್ಟೆಯೊಡೆದು ಹೊರಬಂದ ಹುಳು [ಇದನ್ನು ಲಾರ್ವ ಅಂತಲೂ ಕರೆಯುತ್ತಾರೆ] ನಿದಾನವಾಗಿ ಅದೇ ಎಲೆಯನ್ನು ತಿನ್ನುವುದರಿಂದ ಮತ್ತು ಬೆಳೆದು ದೊಡ್ಡದಾಗಿ ಪ್ಯೂಪ ಆಗುವುದು . ಅದೇ ಗಿಡದಲ್ಲಿ ಅದ್ದರಿಂದ ಈ ಗಿಡವೇ ಚಿಟ್ಟೆಯ " ತವರುಮನೆ" [host plant ] ಎನ್ನಬಹುದು..


ನಿಮಗೆ ಈ ಗಿಡದ ಆಡುಭಾಷೆಯ ಹೆಸರನ್ನು ಗುರುತಿಸಲು ಸಾಧ್ಯವಾದರೆ ಹೇಳಿ...............



ಇವು ಜಾಲಿಗಿಡ, ದೊಡ್ಡ ಗೋಣಿಸೊಪ್ಪಿನ ಗಿಡ, ನೆಲಬೇಲಿಗಿಡ, ಲಂಟಾನ, ಹೊಂಗೆ ಮರದ ಬಳ್ಳೀಗಳು, ಬ್ಯಾಚುಲರ್ಸ್ ಬಟನ್, ಮೇಲೆ ಕೂರುತ್ತವೆ....ಇವುಗಳು ಆಹಾರಕ್ಕಾಗಿ ಕೆಳದರ್ಜೆಯ ದಾಲ್ಚಿನಿ ಗಿಡ, ಜಾಲಿಗಿಡದ ಹೂಗಳನ್ನು ಆಶ್ರಯಿಸುತ್ತವೆ..


ಕಾಮನ್ ಗ್ರಾಸ್ ಎಲ್ಲೋ ಚಿಟ್ಟೆ .......ಇದರ ವೈಜ್ಞಾನಿಕ ಹೆಸರು "Eurema hecabe"


ಈ ವಿಭಾಗದ "ಕಾಮನ್ ಗ್ರಾಸ್ ಎಲ್ಲೋ" ಚಿಟ್ಟೆಯೂ ಇದೇ ರೀತಿ ಇದ್ದರೂ ಎರಡು ರೆಕ್ಕೆಯ ಹಿಂಬಾಗದಲ್ಲಿ ಅರ್ಧ ಚಂದ್ರಾಕೃತಿಯಲ್ಲಿ ಸ್ವಲ್ಪ ಕಪ್ಪು ಬಣ್ಣವಿರುತ್ತದೆ. ಈ ಗಿಡದ ಹೋಸ್ಟ್ ಪ್ಲಾಂಟ್ " ಕಾಶಿಯಾ ಟೋರ" [cassia tora ] ಅಂದರೆ ನಮ್ಮ ಆಡುಭಾಷೆಯಲ್ಲಿ ಅದರಲ್ಲೂ ಉತ್ತರ ಕನ್ನಡದ ಕಡೆ " ನಾಯಿ ಶೇಂಗ " ಅಂತಲೂ ದಕ್ಷಿಣಾ ಕರ್ನಾಟಕ ಭಾಗದಲ್ಲಿ " ತಂಗಡಿ ಗಿಡ" ಅಂತ ಕರೆಯುತ್ತಾರೆ.


ಭಾರತ, ಶ್ರೀಲಂಕ, ಪಾಕಿಸ್ಥಾನ, ಬಾಂಗ್ಲದೇಶ, ಬರ್ಮಾ, ಮಲೇಶಿಯಾ, ಥೈಲ್ಯಾಂಡ್, ಇಂಡೋನೇಷಿಯಾ, ಆಪ್ರಿಕಾ, ಮಡ್ಗಾಸ್ಕರ್, ಮಾರಿಷಶ್, ಫುಜಿ, ಜಪಾನ್, ಟಾಂಗ, ನ್ಯೂ ಗಿನಿಯಾ, ಕೊರಿಯಾ, ಆಷ್ಟ್ರೇಲಿಯಾ ಮತ್ತು ದಕ್ಷಿಣ ಪೂರ್ವ ಚೀಣದಲ್ಲಿ ಕಂಡುಬರುತ್ತವೆ...


ಮತ್ತಷ್ಟು ಚಿಟ್ಟೆಗಳ ಕುತೂಹಲಕಾರಿ ವಿಚಾರಗಳನ್ನು ಮತ್ತೊಂದು ಚಿಟ್ಟೆಯ ಪ್ರಯೋಗ-ಫೋಟೊ-ಅನುಭವ ಭಾಂದವ್ಯಗಳ ಜೊತೆ ಜೊತೆಯಲ್ಲಿ ಹೇಳುತ್ತೇನೆ....


ಚಿತ್ರ ಮತ್ತು ಲೇಖನ:
ಶಿವು.

Monday, March 9, 2009

"ಆಹಾ ನನ್ನ ಮದುವೆಯಂತೆ"


"ರೀ....ಶಿವು ಏನ್ರೀ....ಯಾವಾಗ್ಲು ಬ್ಯುಸಿಯಾಗಿರ್ತೀರಿ......ಒಂದು ನಿಮಿಷ ಬಿಡುವು ಮಾಡಿಕೊಳ್ರೀ....ಬನ್ನಿ ಇಲ್ಲಿ,"

ಎಂದು ಸಣ್ಣ ಬ್ಯಾಗಿನಿಂದ ಒಂದು ಮದುವೆ ಕಾರ್ಡ್ ತೆಗೆದು ಅದರಲ್ಲಿ ಶಿವು ಮತ್ತು ಕುಟುಂಬದವರಿಗೆ ಅಂತ ಬರೆದು ನನ್ನ ಕೈಗೆ ಕೊಟ್ಟ ಗೆಳೆಯ ಅವನ ರಾಜು.

"ನನ್ನ ಮದುವೆ, ದಯವಿಟ್ಟು ಬರಬೇಕು, ಮಿಸ್ ಮಾಡಬೇಡಿ, ಅವತ್ತು ಆ ಕೆಲಸ ಈ ಕೆಲಸ ಪೇಪರ್ ಏಜೆನ್ಸಿ ಕೆಲಸ ಅಂತ ಸಬೂಬು ಹೇಳಬ್ಯಾಡ್ರೀ..... ನೀವು ಖಂಡಿತ ಬರಬೇಕು"

ಅಂತ ಮೂರ್ನಾಲ್ಕು ಸಲ ಹೇಳಿದಾಗ ನಾನು,

"ಆಯ್ತು ಖಂಡಿತ ಬರ್ತೀನಿ ಕಣ್ರೀ.....ಅಂತ ಫಾರ್ಮಾಲಿಟಿಸ್ ಮಾತುಗಳನ್ನು ಆಡಿ ಮರುಕ್ಷಣವೇ,

"ಅಲ್ರೀ ರಾಜು ನಾನು ಈ ರೀತಿ ಕೇಳ್ತೀನಿ ಅಂತ ತಪ್ಪು ತಿಳ್ಕೋಬೇಡಿ, ನಿಮಗೆ ಹುಡುಗರ ತೊಂದರೆ ಇದೆ ಅಲ್ವಾ" ಪ್ರತಿದಿನಾ ಮೂರು-ನಾಲ್ಕು ಬೀಟಿಗೆ ಹೋಗಿ ಪೇಪರ್ ಸಪ್ಲೆ ಮಾಡಿ ಬರ್ತೀರಾ, ಎಲ್ಲಾ ಕೆಲಸ ಮುಗಿಸಿ ಮನೆಗೆ ಹೋಗೋ ಹೊತ್ತಿಗೆ ೯ ಗಂಟೆ ಆಗುತ್ತೆ ನಿಮಗೆ, ಮದುವೆ ಮಹೂರ್ತದ ದಿನ ಎಂಗೆ ಮಾಡ್ತೀರ್ರೀ......."

ನಾನು ಕುತೂಹಲದಿಂದ ಕೇಳಿದಾಗ,

"ಏನ್ ಮಾಡೋದ್ ಹೇಳಿ ಶಿವು, ನೀವೇ ಏನಾದ್ರು ಒಂದು ಐಡಿಯಾ ಕೊಡ್ರೀ...., ನನ್ನ ಮದುವೆ ದಿನ, ಮತ್ತು ಅನಂತರ ಮೂರ್ನಾಲ್ಕು ದಿನ ಹುಡುಗರೆಲ್ಲಾ ತಪ್ಪಿಸಿಕೊಳ್ಳದೇ ಬಂದು ಎಲ್ಲಾ ರೆಡಿಮಾಡಿಕೊಂಡು ಎಲ್ಲಾರ ಮನೆಗೂ ಸರಿಯಾಗಿ ಪೇಪರ್ ಹಾಕಿ ಬಿಡ್ರಪ್ಪ, ತಪ್ಪಿಸಬೇಡಿ ಅಂತ ಹೇಳೀದ್ದೇನೆ ದೇವರಿದ್ದಾನೆ" ದೇವರ ಮೇಲೆ ಭಾರ ಹಾಕಿದ ರಾಜು.

ಸ್ವಲ್ಪ ತಡೆದು,

" ಆದ್ರೆ ಗೊತ್ತಲ್ಲ ನಾನು ಹೇಳೋದು ಹೇಳಿದ್ದೀನಿ, ನಿಮಗೇ ಗೊತ್ತಲ್ಲ, ನಿಮಗೂ ಆನುಭವ ಆಗಿದೆಯಲ್ಲಾ " ಎಂದಾಗ ಆ ಕ್ಷಣವೇ ನನ್ನ ಮದುವೆಯ ನೆನಪು ಮರುಕಳಿಸಿತ್ತು.


ನನ್ನ ಮಹೂರ್ತದ ಹಿಂದಿನ ದಿನದವರೆಗೆ ದಿನಪತ್ರಿಕೆ ವಿತರಣೆ ಮಾಡಿ ಒಂಬತ್ತು ಗಂಟೆಗೆ ಮನೆಗೆ ಹೋದಾಗ ಬೆಳಿಗ್ಗೆ ೬ ಗಂಟೆಗೆ ಚಪ್ಪರದ ಪೂಜೆಗೆ ಬರಲಿಲ್ಲವೆಂದು " ನಿನ್ನದು ಯಾವಾಗಲು ಇದ್ದದ್ದೆ, ಇವತ್ತು ಹೋಗಬೇಕಿತ್ತಾ, ಬೆಳಿಗ್ಗೆ ಚಪ್ಪರ ಪೂಜೆ ತಪ್ಪಿಸಿಕೊಂಡೆಯಲ್ಲಾ" ಅಂತ ಮನೆಯಲ್ಲಿ ಅಮ್ಮನಿಂದ ಬೈಸಿಕೊಂಡಿದ್ದು ನೆನಪಾಯಿತು.

ಅವತ್ತು ಮದ್ಯಾಹ್ನ ನನ್ನಾಕೆ ಊರಿಗೆ ಹೋಗಿ ಮರುದಿನ ನನ್ನ ಮದುವೆ ಮುಗಿಸಿಕೊಂಡು ಅಂದೇ ರಾತ್ರಿ ಬೆಂಗಳೂರಿಗೆ ತಲುಪಿ, ಮರುದಿನ ಬೆಳಿಗ್ಗೆ ದಿನಪತ್ರಿಕೆ ವಿತರಣೆಗೆ ಮುಂಜಾನೆ ಐದು ಗಂಟೆಗೆ ಎದ್ದು ಹೋದಾಗ.,.....

"ಏನೋ ಇವತ್ತೆ ಬಂದು ಬಿಟ್ಟಿದ್ದೀಯಾ ! ಒಂದು ವಾರ ಅರಾಮವಾಗಿದ್ದು ಬಂದಿದ್ದರೆ ನಿನ್ನ ಗಂಟೇನು ಹೋಗ್ತಿತ್ತಾ ? ಇದೆಲ್ಲಾ ಇದ್ದಿದ್ದೇ" ಅಂತ ಗೆಳೆಯರೆಲ್ಲಾ ಹೇಳಿದಾಗ "ಅರೆರೆ ........ಹೌದಲ್ವ " ಅನ್ನಿಸಿತ್ತು.

ಮದುವೆ ಸಂಬ್ರಮದಲ್ಲಿ ತೇಲಿದ್ದ ನನಗೆ ಹಾಗೆ ಅನ್ನಿಸಿದರೂ ನಿಜವಾದ ತೊಂದರೆಗಳು ಏನು ? ಒಂದು ದಿನ ಪತ್ರಿಕೆ ಬೆಳಗಿನ ೬ ಗಂಟೆಗೆ, ೬-೩೦ ಕ್ಕೆ ಬರದಿದ್ದರೆ ತಕ್ಷಣ ನನ್ನ ಮೊಬೈಲಿಗೆ ಫೋನ್ ಮಾಡಿ .,

"ರ್ರೀ ಶಿವು, ಏನ್ರೀ..... ಇನ್ನೂ ಪೇಪರ್ ಬಂದಿಲ್ಲವಲ್ರೀ....ನಮ್ಮ ಮನೆಗೆ"

ಅಂತ ದಿನಕ್ಕೆ ಕಡಿಮೆಯೆಂದರೂ ೧೦-೧೫ ಫೋನ್ ಕಾಲ್ ಬರುವ ನೆನಪಾಗಿ, ದೇವರೇ..... ನಮ್ಮಂಥ ಕಷ್ಟ ಇನ್ಯಾರಿಗೂ ಬರಬಾರದು ಅಂತ ಆ ಕ್ಷಣ ಅನ್ನಿಸಿದ್ದು ಇದೆ. ಎದುರಿಗೆ ಎಲ್ಲಾ ಸುಖ ಸಂತೋಷಗಳು ಕೈಗೆಟುಕಿದ್ದರೂ ಅದನ್ನು ಅನುಭವಿಸುವುದಕ್ಕಾಗುವುದಿಲ್ಲ. ಎದುರಿಗೆ ನಮಗಿಷ್ಟವಾದ ಊಟ, ಉಪಹಾರವೋ ಇದ್ದು ತಿನ್ನಬೇಕೆನಿಸಿದರೂ ತಿನ್ನುವಷ್ಟರಲ್ಲಿ ಕರ್ತವ್ಯದ ಕರೆ ಬಂದು ಬಿಟ್ಟಿರುತ್ತದೆ.

ಕರ್ತವ್ಯದ ಕರೆಯನ್ನು ಮುಗಿಸಿ ಬರುವಷ್ಟರಲ್ಲಿ ಸಿದ್ದವಾಗಿದ್ದ ಮೃಷ್ಟಾನ್ನ ಬೋಜನ ತಣ್ಣಗಾಗಿಯೋ, ಅಥವಾ ಹಳಸಿಯೋ ಅದರ ರುಚಿಯೇ ಇಲ್ಲದಂತಾಗಿ ಹೋಗುವ ಸಂದರ್ಭಗಳೇ ಹೆಚ್ಚು. ಅವೆಲ್ಲಾ ಈಗ ನೆನಪಾಗಿ "ನನ್ನ ಗೆಳೆಯ ರಾಜುವಿಗೂ ಆ ರೀತಿ ಆಗದಿರಲಪ್ಪ ದೇವರೇ....." .ಅವನು ಮದುವೆಯ ಸಂಬ್ರಮವನ್ನೆಲ್ಲಾ ಅನುಭವಿಸಲಿ, ಸಂತೋಷ ಪಡಲಿ ಎಂದು ಹಾರೈಸುವಂತಾಯಿತು.

ಆದರೂ ಈ ಹಾರೈಕೆಗಳೆಲ್ಲಾ ಕೇವಲ ನೀರ ಮೇಲಿನ ಗುಳ್ಳೆಗಳೇ !! ನೋಡಲಿಕ್ಕೆ ವರ್ಣಿಸುವುದಕ್ಕೆ ತುಂಬಾ ಚೆನ್ನಾಗಿರುತ್ತವೆ !.! ಯಾವ ಕ್ಷಣದಲ್ಲಿ ಒಡೆದು ಹೋಗುತ್ತವೋ!! ಗೊತ್ತಿಲ್ಲ. ಇದು ನಮ್ಮ ಎಲ್ಲಾ ವೃತ್ತಿಭಾಂಧವರಿಗೆಲ್ಲಾ ಗೊತ್ತು.

" ಶಿವು ಏನು ಯೋಚಿಸುತ್ತಿದ್ದೀರಿ...... ನೀವು ಮದುವೆಗೆ ತಪ್ಪಿಸಿಕೊಳ್ಳಬೇಡ್ರಿ......."

ಎಂದು ನನ್ನ ಗೆಳೆಯ ಮತ್ತೊಮ್ಮೆ ಹೇಳಿದಾಗ ನನ್ನ ಮದುವೆಯ ಆಲೋಚನೆಯಿಂದ ಹೊರಬಂದೆ. ಆ ಕ್ಷಣದಲ್ಲಿ ನನಗನ್ನಿಸಿದ್ದು,

ಇದೆಲ್ಲಾ ಗೊತ್ತಿದ್ದು ಇಂಥ ಸಂಬ್ರಮಕ್ಕಾಗಿಯೇ ಅಲ್ಲವೇ ನಾವೆಲ್ಲ ಕಾಯುವುದು !! ನೀರ ಮೇಲಿನ ಗುಳ್ಳೆಗಳಂತೆ.!!

ಆತ ಅಲ್ಲಿಂದ ಸರಿದು ಹೋದಾಗ ಆದೇ ಗುಂಗಿನಲ್ಲಿದ್ದ ನನಗೆ ಆ ಕ್ಷಣದಲ್ಲಿ ನನ್ನ ತಂದೆಯ ನೆನಪಾಯಿತು.

ಅವತ್ತು ನನ್ನ ಮೊಬೈಲು ಗುನುಗುನಿಸಿದಾಗ ಮದ್ಯರಾತ್ರಿ ೧ ಗಂಟೆ. ನನಗೆ ಊರಿಂದ ಫೋನ್ ಬಂತು. "ನಿಮ್ಮಪ್ಪ ಹೋಗಿಬಿಟ್ರು. ನೀನು ಬೇಗ ಬಾ" ಅಂತ. ನನ್ನ ತಂದೆಗೆ ಪಾರ್ಶ್ವವಾಯು ಬಡಿದು ಬೆಂಗಳೂರಿನಲ್ಲಿ ಚಿಕಿತ್ಸೆಗಾಗಿ ಬಂದು ಸ್ವಲ್ಪ ಹುಷಾರಾದ ನಂತರ ಊರಿಗೆ ಹೋಗಿಬಿಡುತ್ತೇನೆ, ನನಗೆ ಅಲ್ಲಿಯೇ ಇಷ್ಟ ! ಎಂದು ಹಠ ಮಾಡಿ ಹೋಗಿದ್ದರು.

ಆಗಾಗ ಫೋನ್ ಮಾಡಿ ಆರೋಗ್ಯ ವಿಚಾರಿಸುತ್ತಿದ್ದಾಗ ಚೆನ್ನಾಗಿದ್ದೇನೆ ಎಂಬ ಉತ್ತರ ಬರುತಿತ್ತು. ಆದರೂ ನನಗಂತೂ ಆತಂಕ ಮನದ ಒಂದು ಮೂಲೆಯಲ್ಲಿ ಮನೆ ಮಾಡಿತ್ತು.

ಆ ರಾತ್ರಿ ನಿದ್ರೆ ಬರಲಿಲ್ಲ. ಬೆಳಿಗ್ಗೆ ಬೇಗ ಎದ್ದು ಊರಿಗೆ ಹೋಗೋಣವೆಂದರೆ ಈ ದಿನಪತ್ರಿಕೆ ಕೆಲಸವಿದೆಯಲ್ಲಾ ! ಯಾವ ಹುಡುಗರು ಬರುತ್ತಾರೊ ? ಯಾವ ಹುಡುಗರು ತಪ್ಪಿಸಿಕೊಳ್ಳುತ್ತಾರೊ ? ಗೊತ್ತಿಲ್ಲ. ನಾನು ಹೋಗಲೇ ಬೇಕಿದೆ. ಜೊತೆಗೆ ನಮಗೆ ಬೇಗ ಬೇಕು ಎನ್ನುವ ಮನೆಯವರ ಫೋನ್ ಕಾಲ್‌ಗಳು.

ಇವತ್ತೊಂದಿನ ಇವರ ಕಾಟದಿಂದ ತಪ್ಪಿಸಿಕೊಳ್ಳಲು ಮೊಬೈಲು ಸ್ವಿಚ್ಚ್ ಆಪ್ ಮಾಡೋಣವೆಂದುಕೊಂಡೆ.! ಆಗದು !! ಊರಿನಿಂದ ನನ್ನ ಅಮ್ಮ ಫೋನ್ ಮಾಡಿ ಏನನ್ನಾದರೂ ತರಲು ಹೇಳಬಹುದು. ಆಗ ನನ್ನ ಮೊಬೈಲ್ ಸ್ವಿಚ್ ಆಪ್ ಆಗಿದ್ದರೆ ! ತಪ್ಪು ತಪ್ಪು ನಾನು ಈ ಸಮಯದಲ್ಲಿ ಸ್ವಿಚ್ ಆಪ್ ಮಾಡಬಾರದು..

ಒಂದು ಕಡೆ ಕರ್ತವ್ಯ. ಮತ್ತೊಂದು ಕಡೆ ಭವಿಷ್ಯ... ಆ ದಿನ ಕೆಲಸ ಮುಗಿಸಿ ಊರಿಗೆ ಹೋಗುವ ಹೊತ್ತಿಗೆ ಮೈ ಮನಸ್ಸು ಗೊಂದಲದ ಗೂಡಗಿತ್ತು. ಈ ಜೀವನವೇ ಬೇಸರವೆನಿಸಿತ್ತು.

ಇದು ನನ್ನೊಬ್ಬನ ವಿಚಾರವಲ್ಲ, ನನ್ನಂಥ ಸಾವಿರಾರು ದಿನಪತ್ರಿಕೆ ವಿತರಕರ, ಹಾಲು ವಿತರಕರ ನಿತ್ಯ ಬದುಕು.

"ರ್ರೀ........ಯಜಮಾನ್ರೇ..... ಏನ್ರೀ... ಹೋದ ಕಡೆಗೆ ಹೋಗಿಬಿಡೋದ ನಿಮಗೇನು ಜವಾಬ್ದಾರಿ ಇಲ್ಲವಾ " ಎಂದು ವ್ಯಂಗ್ಯದೊಳಗೊ ಪ್ರೀತಿ ಸೇರಿಸಿ ನನ್ನ ಬೀಟ್ ಬಾಯ್ ಕೂಗಿದ್ದ.

ಅವನ ಹೆಸರು ಮಿಮಿಕ್ರಿ ಸೋಮ. ನಾನು ಮಾತಾಡುವ ಶೈಲಿ, ಹುಡುಗರನ್ನು ಅಣಕಿಸುವುದು, ಗದರಿಸುವುದು, ಕೋಪಬಂದಾಗ, ಖುಷಿಯಾಗಿದ್ದಾಗ ನನ್ನ ಮಾತುಗಳು ಇವೆಲ್ಲವನ್ನು ಮಿಮಿಕ್ರಿ ಮಾಡಿ ನನ್ನನ್ನು ಆಣಕಿಸುತ್ತಾನೆ. ಆಷ್ಟೇ ಅಲ್ಲದೇ ನನ್ನ ಬೀಟಿನ ಹುಡುಗರ ಎಲ್ಲಾ ದ್ವನಿ ಮತ್ತು ನಡುವಳಿಕೆಗಳನ್ನು ತದ್ರೂಪು ಮಾಡುವುದರಲ್ಲಿ ಸಿದ್ದ ಹಸ್ತ ಆತ. ಅವನು ನನ್ನ ದ್ವನಿಯನ್ನೇ ಅನುಕರಿಸಿ ನನ್ನನ್ನೇ ಕರೆದಾಗ ನನ್ನೆಲ್ಲಾ ನೆನಪುಗಳಿಗೆ ತಡೆ ಬಿದ್ದಂತಾಗಿ ವಾಸ್ತವಕ್ಕೆ ಬರುವಂತಾಯಿತು.

[ಲೇಖನವನ್ನು ಮೊದಲೇ ಬರೆದಿದ್ದರೂ ಇದಕ್ಕಾಗಿ ಒಂದೆರಡು ರೇಖಾಚಿತ್ರಗಳನ್ನು ಬರೆಯೋಣವೆಂದು ಅನ್ನಿಸಿತ್ತು....ಸಮಯಾಭಾವದಿಂದ ಬರೆಯಲಾಗಲಿಲ್ಲ...ಮುಂದಿನ ಬಾರಿ ರೇಖ ಚಿತ್ರಗಳೊಂದಿಗೆ ನನ್ನ ಮುಂಜಾನೆ ದಿನಪತ್ರಿಕೆಯ ಲೇಖನಗಳನ್ನು ಕೊಡುತ್ತೆನೆ....]

ಲೇಖನ..
ಶಿವು.

Tuesday, March 3, 2009

ಬನ್ನಿ.....ಮತ್ತೊಮ್ಮೆ ಬೋಳುತಲೆಯಿಂದ ಭೂಗೋಳ ಕಲಿಯೋಣ...!!!


ದೋಸೆ ತೆಳ್ಳಗಿದ್ದು...ಚೆನ್ನಾಗಿದ್ದರೂ....ಮೂರನೆಯದು ಬೇಡವಾಗಿತ್ತು.

"ಯಾಕ್ರೀ ಇತ್ತೀಚೆಗೆ ಸರಿಯಾಗಿ ಏನು ತಿಂತಾಯಿಲ್ಲಾ?.......,

ಬೇಡ ಮರಿ........,ಡಯಟ್ಟು....ಸ್ಲಿಮ್ಮು.....

ಹ್ಯಾಂಡ್‌ಸಮ್ಮಾಗಿ.......ಹೆಣ್ಣು ನೋಡಲಿಕ್ಕೆ ಹೋಗಬೇಕೇನ್ರಿ.......

ಆಗಲ್ಲ ಕಣೋ....ಮೊನ್ನೆ ರಾತ್ರಿ ಮದುವೆ ಊಟ.........

ಅದು ಚೆನ್ನಾಗಿತ್ತಲ್ರೀ.................

"ಅದು ಇವತ್ತು ಬೆಳಿಗ್ಗೆ ಕ್ಲಿಯರ್ ಆಯ್ತು.........."

"ನಿನ್ನೆ ತಿಂದಿದ್ದು ಇನ್ನೂ ಹೊಟ್ಟೆಯಲ್ಲಿದೆ."

ಮೂರನೆ ದೋಸೆ ಇನ್ನು ಅವಳ ಕೈಯಲ್ಲೇ ಇದೆ........"ಅದಕ್ಕೇನೀಗ.........."

ಮೂರನೇ....ದೋಸೆಗೆ......ಜಾಗವಿಲ್ಲ........

ಹೇಮಾಶ್ರೀ ಮೌನವಾಗಿ ನನ್ನ ಮುಖವನ್ನೇ ನೋಡಿದಳು.....

"ಅವರವರ ಕರ್ಮಕ್ಕೆ ಅವರವರೇ ಹೊಣೆ..".

ಅಂದಳು. ಆಡುಗೆ ಮನೆಕಡೆಗೆ ಹೊರಟಳು....ನಾನು ಕೈ ತೊಳೆದಿದ್ದೆ.

"ಹಳೇ ಪಾತ್ರೇ......ಹಳೇ ಕಬ್ಬಿಣಾ...... ಹಳೇ ಪೇಪರ್.......ತನ್ ಹೋಯಿ....."

ಹೇಮಾಶ್ರಿ ಹಾಡು ಗುನುಗುತ್ತಿದ್ದಾಳೆ ಆಡುಗೆ ಮನೆಯಲ್ಲಿ.

ಇದೊಂದನ್ನೇ ಬೆಳಿಗ್ಗೆಯಿಂದಾ ಗುನುಗುತ್ತಿದ್ದಾಳೆ.

ನನಗಂತೂ ಅಚ್ಚರಿ!...ಅವಳ ಹಾಡು ಅದಲ್ಲ......

ನಿಜಕ್ಕೂ ಅವಳು ಪ್ರತಿದಿನ ಭಕ್ತಿ ಭಾವದಿಂದ

ಅವಳಿಷ್ಟದ ಭಜನೆ "ಬಾಲಗೋಪಾಲ" ಗುನುಗುತ್ತಿದ್ದಳು.

ಮತ್ತೆ ಮತ್ತೆ "ಹಳೆ ಪಾತ್ರೆ.....ಹಳೆ ಕಬ್ಬಿಣಾ.......".

ಇದ್ಯಾಕೋ ಅತಿ ಅನ್ನಿಸಿತು... ನನಗೂ ರೇಗಿತ್ತು.

ಇಷ್ಟು ಬೇಗ ಅವಳ ಅಭಿರುಚಿ ಬದಲಾಗಿಹೋಯಿತಾ ?......

"ತತ್...ಬೆಳಿಗ್ಗೆಯಿಂದ ಅದೆಂಥ ಹಾಡದು ? "

"ಆ ಹಾಡಿನ ಮೇಲೆಂತ ಆಕರ್ಷಣೆಯೇ ನಿಂದು ? "

"ನಿಮಗೆ ಭೂಪಟದ ಮೇಲೇಕೆ ಆಷ್ಟು ಆಕರ್ಷಣೆ ?"

ನನ್ನ ಮಾತು ನನಗೆ ತಿರುಗುಬಾಣವಾಗಿತ್ತು.

ಭೂಪಟಗಳ ಪ್ರಭಾವ ಪಲಿತಾಂಶ...ಈ ರೀತಿ ನಮ್ಮ ಮನೆಯಲ್ಲಿ.

ಭೂಫಟದ ಖಯಾಲಿಯಿಂದಾಗಿ ನಮ್ಮ ಮನೆಯ ಟೆರಸ್ಸಿನ ಮೇಲೆ ಹೋಗಿ ಕ್ಯಾಮೆರಾ ಹಿಡಿದಾಗ ಅಲ್ಪಸ್ವಲ್ಪ ಸಿಕ್ಕವು. ಸಮಾಧಾನವಾಗಲಿಲ್ಲ... ಕೊನೆಗೆ ಫೋಟೊಗ್ರಫಿ ವಿಚಾರದಲ್ಲಿ ಕೇಳಿದ್ದನು ಕೊಡುವ ನನ್ನ ಅಚ್ಚುಮೆಚ್ಚಿನ ಮಲ್ಲೇಶ್ವರಂ ರೈಲ್ವೇ ನಿಲ್ದಾಣದ ಸೇತುವೆ ಮೇಲೆ ನಿಂತೆ.

ಮೊಬೈಲ್ ರಿಂಗಾಯಿತು. ವಿಂಧ್ಯಾಳ ಫೋನು...."ಹಲೋ ಹೇಳು ಮರಿ.............."

"ಏನ್ ಮಾಡ್ತಿದ್ದೀರಿ....."

"ಚಲಿಸುವ ಭೂಪಟಗಳ ಹಿಂದೆ ಬಿದ್ದಿದ್ದೇನೆ........."

"ಎಲ್ಲಿ....ಹೇಗೆ.....ಇಂಥ ಜಾಗದಲ್ಲಿ....ಹೀಗೀಗೆ........"

"ನಿನಗೆ ಈ ಹುಚ್ಚು ಯಾವಾಗ ಬಿಡುತ್ತೆ ?............"

"ಪ್ರಪಂಚದಲ್ಲಿ ನಡೆದಾಡುವ ಭೂಪಟಗಳು ಇಲ್ಲವಾದಾಗ!!. "

"ಅದು ಆಸಾಧ್ಯ.!! "

"ಈ ಖಯಾಲಿಯೂ ಕೂಡ. "

"ಸುಂದರ ಹುಡುಗಿಯರು ಓಡಾಡುತ್ತಾರೆ ಇಲ್ಲಿ..." ಮಾತು ಬದಲಿಸಿದೆ.

"ಹೌದಾ !! ಹೇಮಾಶ್ರೀ ಫೋನ್ ನಂಬರ್ ಕೊಡಿಲ್ಲಿ........."

"ಉಪಯೋಗವಿಲ್ಲ.....ಅವಳೇ ಕಳುಹಿಸಿದ್ದಾಳೆ. ನನ್ನ ಕಾಟ ತಡೆಯಲಾಗದೆ. "

ಆ ಕಡೆಯಿಂದ ಮೌನ...ಸ್ವಲ್ಪ ಹೊತ್ತಿನ ನಂತರ......

"ನಿನಗೆ ಒಳ್ಳೇ ಬುದ್ದಿ ಬರಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ"............"

"ಥ್ಯಾಂಕ್ಸ್.........." ಫೋನ್ ಕಟ್ಟಾಯಿತು.

ಚಲಿಸುವ ಭೂಪಟಗಳ ಕಡೆಗೆ ಕ್ಯಾಮೆರಾ ಕಣ್ಣು ನೆಟ್ಟಿತ್ತು.

"ಕ್ಲಿಕ್...ಕ್ಲಿಕ್.....ಕ್ಲಿಕ್........." ಶಬ್ದ ಶುರುವಾಗಿತ್ತು.....



೧. ಬ್ರೆಜಿಲ್ ದೇಶದ ಭೂಪಟ.......


ಬ್ರೆಜಿಲ್ ದಕ್ಷಿಣ ಅಮೇರಿಕಾ ಖಂಡದ ಅತಿ ದೊಡ್ಡ ದೇಶ. ರಾಜಧಾನಿ ಬ್ರಸಿಲಿಯಾ. ಕಾಫಿ ಅಲ್ಲಿನ ಮುಖ್ಯ ಬೆಳೆ. ಈ ದೇಶದಲ್ಲಿ ಉತ್ತರ ಮತ್ತು ದಕ್ಷಿಣ ಎರಡು ಕಡೆಗಳಿಂದ ನೂರಾರು ಉಪನದಿಗಳು ಸೇರಿ ದೇಶದ ಜೀವನದಿಯಾಗಿದೆ...ಪುಟ್‌ಬಾಲ್ ಇಲ್ಲಿನ ಜನರ ಜೀವ...ಮತ್ತು ಉಸಿರು... ಸಾವೋ ಪೋಲೋ, ರಿಯಾಡಿಜನೈರೋ, ಪೋರ್ಟೋ ಅಲ್ಜಿರೊ, ಸಾಲ್ವಡಾರ್, ಇತರ ಪ್ರಮುಖ ನಗರಗಳು... ಭಾಷೆ : ಪೋರ್ಚುಗೀಸ್. ಕರೆನ್ಸಿ: ರಿಯಲ್. ದೇಶದ ಶೇಕಡ ೮೫ ರಷ್ಟು ಜನರು ವಿದ್ಯಾವಂತರಾಗಿದ್ದಾರೆ...


೨. ದಕ್ಷಿಣ ಕೊರಿಯಾ ದೇಶದ ಭೂಪಟ.....

ದಕ್ಷಿಣ ಕೊರಿಯಾ ಏಷ್ಯಾ ಖಂಡದಲ್ಲಿದೆ....ಇತ್ತೀಚಿನ ಅರ್ಥಿಕ ಬೆಳವಣಿಗೆಯಿಂದಾಗಿ ಏಷ್ಯಾದ ಹುಲಿಗಳಲ್ಲಿ ಒಂದು ಎಂದು ಖ್ಯಾತಿ ಗಳಿಸಿದೆ.. ಕಬ್ಬಿಣ, ,ಮತ್ತು ಅದರ ಉತ್ಪನ್ನಗಳು, ಎಲ್.ಜಿ, ಎಲೆಕ್ಟ್ರಾನಿಕ್ಸ್ ವಸ್ತುಗಳು, ಮತ್ತು ಹ್ಯುಂಡೋ ಕಂಪನಿಯ ಕಾರುಗಳಿಂದಾಗಿ ಇತ್ತೀಚಿಗೆ ತುಂಬಾ ಖ್ಯಾತಿಗಳಿಸಿದೆ... ರಾಜಧಾನಿ ಸಿಯೋಲ್. ಈ ದೇಶದಲ್ಲಿ ಜನಸಂಖ್ಯೆ ಹೆಚ್ಚು. ಸಿಯೋಲ್ ನಲ್ಲಿಯೇ ಒಂದುವರೆ ಕೋಟಿ ಜನ ನೆಲೆಸಿದ್ದಾರೆ....ಶೇಕಡ ೯೮ ರಷ್ಟು ಜನರು ವಿದ್ಯಾವಂತರು...ಭಾಷೆ : ಕೊರಿಯನ್.


೩. ಶ್ರೀಲಂಕಾ ದೇಶದ ಭೂಪಟ.......

ನಮ್ಮ ಭಾರತದ ದಕ್ಷಿಣದಲ್ಲಿದೆ ಈ ಶ್ರೀಲಂಕ ದೇಶ. ಸ್ವಾಭಾವಿಕ ಕಾಡುಗಳಿಂದ ಈ ದೇಶ ಸುತ್ತಲು ಸಮುದ್ರದಿಂದ ಸುತ್ತುವರಿದ್ದಿದ್ದು ದ್ವೀಪವೆನಿಸಿದೆ.. ರಾಜಧಾನಿ: ಕೊಲಂಬೋ. ಟೀ, ರಬ್ಬರ್, ತೆಂಗು ಮತ್ತು ಭತ್ತ ಮುಖ್ಯ ಬೆಳೆಗಳು. ಭಾಷೆ : ಸಿಂಹಳಿ, ತಮಿಳು, ಅಂಗ್ಲ. ರಾಜಧಾನಿ ಕೊಲಂಬೋ ಆಗಿದ್ದು ದೇಶದ ಪ್ರಮುಖ ಬಂದರು ಕೂಡ ಆಗಿದೆ....ಇತರೆ ನಗರಗಳು ಕ್ಯಾಂಡಿ, ಗಾಲೆ.. ದೇಶದ ಶೇಕಡ್ ೫೭ ರಷ್ಟು ಜನರು ವಿದ್ಯಾವಂತರು. ಕರೆನ್ಸಿ: ರುಪಾಯಿ.

೪. ಥೈಲ್ಯಾಂಡ್ ದೇಶದ ಭೂಪಟ.........

ಬ್ಯಾಂಕಾಕನ್ನು ರಾಜಧಾನಿಯಾಗಿ ಹೊಂದಿರುವ ಥೈಲ್ಯಾಂಡ್ ಏಷ್ಯಾ ಖಂಡದಲ್ಲಿದೆ....ಭತ್ತ, ತೆಂಗು, ತಂಬಾಕು ಮುಖ್ಯಬೆಳೆಗಳು...ಇತ್ತೀಚಿನ ಪ್ರವಾಸೋದ್ಯಮ ಬೆಳವಣಿಗೆಯಿಂದಾಗಿ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ...ಇಲ್ಲಿನ ಜನರು ಥಾಯ್, ಚೀನಿ, ಆಂಗ್ಲ ಭಾಷೆಗಳನ್ನು ಮಾತನಾಡುತ್ತಾರೆ.. ನಾಮ್, ಯೋಮ್, ಮೆಕಾಂಗ್ ಮುಖ್ಯನದಿಗಳು...ದೇಶದ ಶೇಕಡ ೯೫ ರಷ್ಟು ಜನರು ವಿದ್ಯಾವಂತರು....ಕರೆನ್ಸಿ: ಬಹಟ್.

೫. ಇದು ಪ್ರಕಾಶ್ ಹೆಗಡೆಯವರ ತಲೆಹಿಂಭಾಗದ ಭೂಪಟ...ಇಥಿಯೋಪಿಯಾ ದೇಶಕ್ಕೆ ಹೋಲಿಕೆಯಾಗಿದೆಯಲ್ವೇ....

ಆಪ್ರಿಕ ಖಂಡದಲ್ಲಿರುವ ಇತಿಯೋಫಿಯ ಒಂದು ಅತ್ಯಂತ ಹಿಂದುಳಿದ ದೇಶ...ಅಲ್ಲಿ ಮಳೆಯಾಗಿ ತುಂಬಾ ವರ್ಷಗಳಾಗಿವೆ....ಕಾಫಿ, ಗೋದಿ, ಬಾರ್ಲಿ ಮುಖ್ಯ ಬೆಳೆಗಳು. ರಾಜಧಾನಿ : ಅಡೀಸ್ ಅಬಾಬ. ಭಾಷೆ: ಅಮಾರಿಕ್, ಕರೆನ್ಸಿ: ಬಿರ್. ದೇಶದ ಶೇಕಡ ೩೭ ರಷ್ಟು ಜನರು ವಿದ್ಯಾವಂತರು.....ಜನಸಂಖ್ಯೆ :

ಬೆಕ್ಕಸ ಬೆರಗಾಗುವ ಇನ್ನಷ್ಟು ಭೂಪಟಗಳು...ಮುಂದಿನಬಾರಿ...!!

ಚಿತ್ರ ಮತ್ತು ಲೇಖನ...

ಶಿವು....