Monday, September 14, 2009

"ಆಕಾಶ ಕೆಳಗೇಕೆ ಬಂತು?...ಈ ಭೂಮಿ ಮೇಲೇಕೆ ಹೋಯ್ತು..." ಜಿರಲೆ ಕತೆ ಭಾಗ-೨

ಆಡುಗೆ ಮನೆಯ ವಿನ್ಯಾಸವೇ ಅವುಗಳಿಗೆ ಅಪ್ಯಾಯಮಾನವಾದುದು. ಎಷ್ಟೊಂದು ಸೆಲ್ಪುಗಳು, ಸಿಂಕುಗಳು, ಕಿಟಕಿ, ವಾರ್ಡ್‍ರೋಬುಗಳ ಜೊತೆಗೆ ತರಾವರಿ ಡಬ್ಬಗಳು, ಪಾತ್ರೆಪಗಡಗಳು, ಅವುಗಳನ್ನು ಜೋಡಿಸಿಟ್ಟ ಮೇಲೆ ಹಿಂಬಾಗದಲ್ಲಿ ಸೃಷ್ಟಿಯಾಗುವ ಸುಂದರ ಕತ್ತಲು,......ಇವೆಲ್ಲಾ ಅವುಗಳ ಗೆರಿಲ್ಲಾ ಯುದ್ದ ತಂತ್ರಗಳಿಗೆ ಹೇಳಿ ಮಾಡಿಸಿದಂತಿವೆ! ಕಡಲೆಕಾಳಿನ ಡಬ್ಬದೊಳಗೆ ತಳಕ್ಕೆ ಹೋಗಿ ನಿದಾನವಾಗಿ ಒಂದೊಂದೇ ಕಾಳುಗಳನ್ನು ಮೆಟ್ಟಿಲುಗಳಂತೆ ಏರಿ ಟ್ರಕ್ಕಿಂಗ್ ಮಾಡಬಹುದು, ಮತ್ತೆ ಡಬ್ಬದ ತುದಿಯೇರಿ ಅಲ್ಲಿಂದ ಮತ್ತೊಂದು ಸೆಲ್ಪಿನಲ್ಲಿರುವ ಡಬ್ಬದೊಳಕ್ಕೆ ತಲೆಕೆಳಕಾಗಿ ಭಂಗಿ ಜಂಪ್ ಮಾಡಬಹುದು. ಜೊತೆಗೆ ಅವಕ್ಕೆ ಬೇಸರವಾದಾಗ ಡಬ್ಬದೊಳಗಿನ ಬೇಳೆಗಳೊಳಗೆ ನುಸುಳಿ ಮಂಗನಾಟವಾಡಬಹುದು. ಪುಟ್ಟ ಪುಟ್ಟ ಮಸಾಲೆ ಡಬ್ಬಗಳ ನಡುವೆ ಅವಿತುಕೊಂಡು ಜಿರಲೆ ಮರಿಗಳು ಕಣ್ಣು ಮುಚ್ಚಾಲೆ, ಐಸ್ ಪೈಸ್, ಆಡಲಡ್ಡಿಯಿಲ್ಲ. ಇನ್ನೂ ಎಣ್ಣೆ ಡಬ್ಬಗಳ ಹೊರಮೈ ಸಹಜವಾಗಿ ಜಾರುವುದರಿಂದ ತಲೆಕೆಳಕಾಗಿ ಸ್ಕೇಟಿಂಗ್ ಆಡಬಹುದು. ಆಗಾಗ ಕಾಫಿ, ಟೀ ಪುಡಿ, ಸಕ್ಕರೆ ಡಬ್ಬಗಳು ತೆರೆದುಬಿಟ್ಟಿದ್ದರೇ ಅದರೊಳಗೆ ಮುಳುಗೇಳುತ್ತಾ ಕಾಫಿ ಮಸಾಜ್, ಟೀ ಮಸಾಜ್, ಸಕ್ಕರೆ ಮಸಾಜ್ ಮಾಡಿಕೊಳ್ಳಬಹುದು, ಹಸಿವಾದರೆ ಅದನ್ನೇ ತಿನ್ನಲುಬಹುದು. ಕೋಪ ಬಂದರೆ ಮತ್ತು ತಮ್ಮತಮ್ಮಲ್ಲೇ ಅನೇಕ ವಿಚಾರಗಳಿಗಾಗಿ ಜಗಳವಾಡಿಕೊಳ್ಳಬೇಕಾಗಿ ಬಂದರೆ ಮೆಣಸಿನ ಕಾಯಿ ಪುಡಿ, ಮೆಣಸಿನ ಪುಡಿ ಇತ್ಯಾದಿಗಳನ್ನು ತಮ್ಮಲ್ಲೇ ಕಣ್ಣಿಗೆ ಎರಚಿಕೊಳ್ಳುತ್ತಾ ಗುದ್ದಾಡಿಕೊಳ್ಳಬಹುದು. ಇಷ್ಟೇಲ್ಲಾ ಇರುವಾಗ ಈ ಜಿರಲೆಯೆನ್ನುವ ಭಯೋತ್ಪಾದಕರು ತಮ್ಮ ತರಬೇತಿ ಕಾರ್ಯಗಾರ, ಕೇಂದ್ರ ಕಚೇರಿಯನ್ನು ಅಡುಗೆಮನೆಯಲ್ಲಿ ಸ್ಥಾಪಿಸುವ ಅವಕಾಶವನ್ನು ಬಿಡುತ್ತವೆಯೇ...!


ಒಂದು ವರ್ಷ ಕಳೆಯುವ ಹೊತ್ತಿಗೆ ನನ್ನ ಕಂಪ್ಯೂಟರ್ ರೂಮ್, ಷೋಕೇಸ್, ಬಟ್ಟೆಗಳ ಬೀರುಗಳು, ಬಚ್ಚಲುಮನೆ, ಹಾಲ್, ದೇವರಮನೆ, ಹೀಗೆ ಎಲ್ಲಾ ಕಡೆ ಜಿರಲೆಗಳು ತಮ್ಮ ಬ್ರಾಂಚು ಆಫೀಸುಗಳನ್ನು ಮಾಡಿಕೊಂಡು ತಮ್ಮ ಸ್ಥಾವರಗಳನ್ನು ಚೆನ್ನಾಗಿ ಸ್ಥಾಪಿಸಿಬಿಟ್ಟಿದ್ದವು. ಒಂದೇ ರಾಕಿನ ನನ್ನ ಪುಟ್ಟ ಪುಸ್ತಕಗಳ ಗ್ರಂಥಾಲಯವಂತೂ ಮೊಟ್ಟೆಗಳನ್ನಿಡಲು ಪರಮ ಯೋಗ್ಯ ತಾಣವೆನಿಸಿತ್ತೇನೋ ಯಾವ ಪುಸ್ತಕ ತೆಗೆದರು ಅದರ ಹಿಂಬಾಗಕ್ಕೊಂದು ಜಿರಲೆ ಮೊಟ್ಟೆ ಅಂಟಿಕೊಂಡೆ ಇರುತ್ತಿತ್ತು. ಅದನ್ನು
ಗಮನಿಸಿದಾಗಲೆಲ್ಲಾ ನನ್ನಾಕೆ "ಈ ಪುಸ್ತಕಗಳನ್ನಾದ್ರೂ ಆಗಾಗ ಕ್ಲೀನ್ ಮಾಡಿ ಇಟ್ಟುಕೊಳ್ಳೋಕೆ ಆಗೊಲ್ಲವೇನ್ರಿ ನಿಮಗೆ" ಅಂತ ಆಗಾಗ ನನ್ನನ್ನು ಆಕ್ಷೇಪಿಸುತ್ತಿದ್ದಳು. ನಾನು ಈ ವಿಚಾರದಲ್ಲಿ ಸ್ವಲ್ಪ ಸೋಮಾರಿಯಾಗಿದ್ದರೂ ಅವಳ ಮಾತನ್ನು ಒಪ್ಪದೇ "ನಿನ್ನ ಆಡುಗೆ ಮನೆ ನೋಡು ಮಿಕ್ಸಿಯೊಳಗೆ, ಗ್ಯಾಸ್ ಕೆಳಗೆ, ಲೋಟದೊಳಗೆ, ಕೊನೆಗೆ ಪ್ಲೆಗ್ ತೂತಿನೊಳಗೂ ಮೊಟ್ಟೆಗಳನ್ನಿಟ್ಟಿರುತ್ತವಲ್ಲೇ...ಅದನ್ನು ಕ್ಲೀನ್ ಮಾಡು ಅವುಗಳಿಗೆ ಹೋಲಿಸಿದರೆ ನನ್ನ ಪುಸ್ತಕಗಳಲ್ಲಿ ಜಿರಲೆ ಇರುವುದು ಕಡಿಮೆ" ಅಂತ ವಾದಿಸುತ್ತಾ ನನ್ನ ಸೋಮಾರಿತನವನ್ನು ಮರೆಮಾಚುತ್ತಿದ್ದೆ. ಅದು ಅವಳಿಗೂ ಗೊತ್ತಿದ್ದರಿಂದ ಕೊನೆಗೊಮ್ಮೆ ಎಲ್ಲಾ ಪುಸ್ತಕಗಳನ್ನು ಕೊಡವಿ ಕ್ಲೀನ್ ಮಾಡಿ ಮತ್ತೆ ಅದೇ ಜಾಗಕ್ಕೆ ಜೋಡಿಸುತ್ತಿದ್ದಳು. ನಾವು ಹಬ್ಬ ಹುಣ್ಣಿಮೆಗಳಲ್ಲಿ ಮನೆಯನ್ನು ಕ್ಲೀನ್ ಮಾಡಿ ರಾಶಿ ರಾಶಿ ಜಿರಲೆಗಳು ಮತ್ತು ಮೊಟ್ಟೆಗಳನ್ನು ಹೊರಗೆಳದು ಸಾಯಿಸಿದರೂ, ಆಗಾಗ ಟಿ.ವಿ ಜಾಹಿರಾತಿನಲ್ಲಿ ತೋರಿಸುವ ತರಾವರಿ ಜಿರಲೆ ಔಷದಿಗಳನ್ನು, ಪುಡಿಗಳನ್ನು ಇಟ್ಟರೂ, ಸ್ಪ್ರೇಗಳನ್ನು ಹೊಡೆದರೂ ಅವುಗಳ ಸಂತತಿಯನ್ನು ಸಂಪೂರ್ಣವಾಗಿ ನಿರ್ಮಾಲನೆ ಮಾಡಲು ನಮಗೆ ಆಗಲೇ ಇಲ್ಲ.


ಒಮ್ಮೆ ನಾನು ತೇಜಸ್ವಿಯವರ ಏರೋಪ್ಲೇನ್ ಚಿಟ್ಟೆ ಪುಸ್ತಕದಲ್ಲಿ ಪ್ರೈಯಿಂಗ್ ಮಾಂಟೀಸ್ ಕೀಟದ ಬಗ್ಗೆ ಸೊಗಸಾದ ವಿವರಣೆಯನ್ನು ಖುಷಿಯಿಂದ ಓದುತ್ತಿದ್ದೆ. ಎದುರಿಗೆ ಆಡುಗೆಮನೆಯಿಂದ ಒಂದು ಜಿರಲೆ ನಿದಾನವಾಗಿ ನಡೆದು ಬರುತ್ತಿತ್ತು. ನನ್ನಾಕೆಗೆ ಜಿರಲೆಗಳ ಮೇಲೆ ಭಯಂಕರ ಸಿಟ್ಟು. ನಾನು ಮನೆಯಲ್ಲಿ ಅವಳ ಜೊತೆಗೆ ಇದ್ದಾಗ ಈ ಜಿರಲೆಗಳು ಕಂಡರೆ ಅವಳ ಸಿಟ್ಟಿಗೆ ನನ್ನ ಸಹಮತವನ್ನು ವ್ಯಕ್ತಪಡಿಸಿ ಅವಳಿಗಿಂತ ಹೆಚ್ಚು ಸಿಟ್ಟು ಮತ್ತು ದ್ವೇಷ ಇರುವವನಂತೆ ನಟಿಸುತ್ತಿದ್ದೆನಾದರೂ, ನಿಜಕ್ಕೂ ನನಗೆ ಅವುಗಳ ಕಂಡರೆ ಸಿಟ್ಟು ಇಲ್ಲ. ದ್ವೇಷವಂತೂ ಮೊದಲೆ ಇರಲಿಲ್ಲ. ಇಷ್ಟಕ್ಕೂ ಅವುಗಳನ್ನು ಕಂಡರೇ ನನಗೆ ಕುತೂಹಲವೇ ಜಾಸ್ತಿ. ಅವತ್ತು ನನ್ನ ಶ್ರೀಮತಿ ಮನೆಯಲ್ಲಿಲ್ಲವಾದ್ದರಿಂದ ನಿದಾನವಾಗಿ ಅದನ್ನು ಗಮನಿಸತೊಡಗಿದೆ. ತೇಟ್ ತೇಜಸ್ವಿಯವರ ಪುಸ್ತಕದಲ್ಲಿನ ಪ್ರೈಯಿಂಗ್ ಮಾಂಟಿಸ್ ತರಹವೇ ತನ್ನ ಆರು ಕಾಲನ್ನು ಅಗಲವಾಗಿ ಹಾಕಿಕೊಂಡು ನಿಂತಿತ್ತು. ಇದ್ಯಾಕೆ ಹೀಗೆ ನಿಂತಿದೆ. ನನ್ನನ್ನೂ ನೋಡಿಯೂ ಓಡಿಹೋಗದೆ ಹಾಗೆ ನಿಂತಿದೆಯಲ್ಲ! ನೋಡೋಣ ಏನು ಮಾಡಬಹುದು ಅಂದುಕೊಂಡು ನಾನು ಪುಸ್ತಕದ ಕಡೆ ಗಮನವಿಟ್ಟಂತೆ ಓರೆ ಕಣ್ಣಿನಿಂದ ನೋಡುತ್ತಿದ್ದೆ. ನಿದಾನವಾಗಿ ಒಂದೊಂದೆ ಹೆಜ್ಜೆಗಳನ್ನು ಇಡುತ್ತಾ ಮುಂದೆ ಬರತೊಡಗಿತು. ಈ ರೀತಿ ಹೆಜ್ಜೆಯಿಡಬೇಕಾದರೆ ಮತ್ತು ಅಗಲವಾಗಿ ಈ ರೀತಿ ಅಡರಬಡರ ಕಾಲುಗಳನ್ನು ಹಾಕುತ್ತಿದೆಯೆಂದರೇ ಇದು ವಯಸ್ಸಾದ ಜಿರಲೆಯೇ ಇರಬೇಕು. ಅದಕ್ಕೆ ಕೈಕಾಲು ಶಕ್ತಿಯಿಲ್ಲದಂತಾಗಿ ಹೀಗೆ ನಡೆಯುತ್ತಿರಬಹುದು ಅನ್ನಿಸಿತು. ಅನೇಕ ಸಲ ಅವುಗಳನ್ನು ಗಮನಿಸಿದ್ದೇನೆ. ಚುರುಕಾದ ಮತ್ತು ಯಂಗ್ ಅಂಡ್ ಎನರ್ಜೆಟಿಕ್ ಜಿರಲೆಗಳ ಎಲ್ಲಾ ಕಾಲುಗಳು ಒಳಗೆ ಮಡಚಿಕೊಂಡಿರುತ್ತವೆ ಮತ್ತು ನಡೆಯುವಾಗ ಅಥವ ಓಡುವಾಗ ಅವುಗಳ ಕಾಲುಗಳು ಕಾಣಿಸುವುದೇ ಇಲ್ಲ. ನೆಲದ ಮೇಲೆ ಜಾರಿದಂತೆ ವೇಗವಾಗಿ ಓಡುತ್ತಿರುತ್ತವೆ. ಇದಕ್ಕೆ ನಡೆದಾಡಲು ಶಕ್ತಿಯೇ ಇರಲಿಲ್ಲವೆನಿಸುತ್ತೆ. ಸ್ವಲ್ಪ ದೂರ ನಡೆದು ನಿಂತಿತು. ನನ್ನ ಕಡೆಯೂ ಸೇರಿದಂತೆ ಸುತ್ತಲು ನೋಡಿತು. ನಾನು ಕದಲಲಿಲ್ಲ. ಮತ್ತೆ ನಿದಾನವಾಗಿ ನಡೆಯತೊಡಗಿತು. ಇದ್ದಕ್ಕಿದ್ದಂತೆ ಏನೋ ತಣ್ಣನೆ ದ್ರವದಂತದ್ದನ್ನು ತನ್ನ ಹಿಂಬಾಗದಿಂದ ಚೆಲ್ಲಿ ಮತ್ತೆ ನಡೆಯತೊಡಗಿತು. ಆರೆರೆ...ಇದೇನಿದು ಹೊಗಲಿ ಪಾಪ ವಯಸ್ಸಾಗಿದೆ ಅಂತ ಬಿಟ್ಟರೆ ಇಂಥ ಹೇಸಿಗೆ ಕೆಲಸ ಮಾಡುವುದೇ. ಆ ಕ್ಷಣದಲ್ಲಿ ನನಗೂ ಸಿಟ್ಟು ಬಂದು ಸಾಯಿಸಿಬಿಡ್ಲಾ ಅನ್ನಿಸಿದರೂ ನಾನ್ಯಾವತ್ತೂ ಸಾಯಿಸಿಲ್ಲ, ಈಗಲೇ ಸಾಯುವಂತಿರುವುದನ್ನು ಸಾಯಿಸಿ ನಾನ್ಯಾವ ಪಾಪ ಕಟ್ಟಿಕೊಳ್ಳಲಿ, ಬೇಡ ಅಂದುಕೊಂಡೆ. ಆದ್ರೂ ಅದರ ನಡುವಳಿಕೆ ನೋಡಿ ನನ್ನಾಕೆ ಹೇಳಿದಂತೆ ಇವಕ್ಕೆ ನಾಚಿಕೆ ಎನ್ನುವುದೇ ಇಲ್ವ ಅನ್ನಿಸದಿರಲಿಲ್ಲ. ಹೇಮಾಶ್ರಿ ಬರುವ ಹೊತ್ತಿಗೆ ಅದು ನಿದಾನವಾಗಿ ಮರೆಯಾಗಿಬಿಟ್ಟಿತ್ತು.


ಆಗೆಲ್ಲಾ ಮನೆಗಳ ನೆಲವೆಲ್ಲಾ ರೆಡ್ ಆಕ್ಸೆಡ್ ಇರುತ್ತಿದ್ದುದ್ದರಿಂದ ಜಿರಲೆ ಬಣ್ಣಕ್ಕೆ ಹೊಂದಿಕೊಳ್ಳುವಂತೆ ಇದ್ದು ಕಾಮೋಪ್ಲೇಜ್ ಆಗಿ ಮನೆಯವರ ಕಣ್ಣಿಗೆ ಮಣ್ಣೆರಚಿ ಓಡಾಡುತ್ತಿದ್ದವು. ಆಗಿನ ತಂತ್ರಜ್ಞಾನದಿಂದ ಕಟ್ಟಿದ ಮನೆಗಳು ಕೆಲವೇ ವರ್ಷಗಳಲ್ಲಿ ಗೋಡೆಯಲ್ಲಿ ಬಿರುಕು, ಮತ್ತೆ ಇಲಿ ಹೆಗ್ಗಣಗಳ ಸಹಾಯದಿಂದ ಮೂಲೆ ಮೂಲೆಗಳಲ್ಲಿ ತೂತುಗಳಾಗಿ ಜಿರಲೆಗಳು ಸಂಸಾರಮಾಡುವುದಕ್ಕೆ ಹಿತಕರವಾಗಿದ್ದರಿಂದ ಆಗಿನ ಗುತ್ತಿಗೆದಾರರು, ಇಂಜಿನಿಯರುಗಳ ಮೇಲೆ ಜಿರಲೆಗಳಿಗೆ ಅಭಿಮಾನ ಜಾಸ್ತಿಯಿತ್ತು. ಆದರೆ ಈಗ ಹೊಸ ತಂತ್ರಜ್ಞಾನವನ್ನಳವಡಿಸಿ ಕಟ್ಟುವ ಇಂಜಿನಿಯರು, ಗುತ್ತಿಗೆದಾರರನ್ನು ಕಂಡರೆ ಜಿರಲೆಗಳಿಗೆ ಆಗುವುದಿಲ್ಲ. ಅದರಲ್ಲೂ ಪ್ರಕಾಶ್ ಹೆಗಡೆಯಂಥವರನ್ನು ಕಂಡರಂತೂ ಅವುಗಳಿಗೆ ಕೋಪ ಸರ್ರನೆ ಬಂದುಬಿಡುತ್ತದೆ. ಏಕೆಂದರೆ ಅವರಂಥವರು ಕಟ್ಟುವ ಮನೆಗಳು ನೆಲಕ್ಕೆ ಕಾಲಿಟ್ಟರೇ ಜಾರುವಂತ ಟೈಲ್ಸ್, ಮಾರ್ಬಲ್ಸ್, ಎಂಥ ಮಳೆ, ಗಾಳಿ, ಬಿಸಿ ತಾಗಿದರೂ ಏನು ಆಗದಂತ ಗೋಡೆ, ಸೂರುಗಳನ್ನು ಕಟ್ಟಿಬಿಡುವುದರಿಂದ ಜಿರಲೆಗಳಿಗೆ ಮನೆಯೊಳಗೆ ನೋ ಎಂಟ್ರಿ.


ನಾವು ಅದೇ ಮನೆಯಲ್ಲಿ ಇದ್ದಿದ್ದರೇ ಆಗಾಗ ಕಣ್ಣಿಗೆ ಕಾಣುವಂತವುಗಳನ್ನು ಸಾಯಿಸುತ್ತಾ ಸಮಾಧಾನ ಮಾಡಿಕೊಂಡು ಸುಮ್ಮನಾಗುತ್ತಿದ್ದೆವೇನೋ. ಆದ್ರೆ ಯಾವಾಗ ಮನೆ ಬದಲಾಯಿಸುವ ಸಂದರ್ಭ ಬಂತೋ ಆಗ ಶುರುವಾಯಿತು ನೋಡಿ ಜಿರಲೆಗಳ ವಿರುದ್ಧ ನಮ್ಮ ಅಂತಿಮ ಹೋರಾಟ. ಎಲ್ಲಾ ಹರವಿಕೊಂಡು ನಮಗೆ ಬೇಕಾದ ವಸ್ತುಗಳನ್ನು ವಿಂಗಡಿಸಿಕೊಂಡು ಬೇಡದ ವಸ್ತುಗಳನ್ನು ಬೇರೆ ಮಾಡುತ್ತೇವಲ್ಲ ಆಗ ಒಳಗೆಲ್ಲಾ ಸೇರಿಕೊಂಡಿದ್ದ ಜಿರಲೆಗಳೆಲ್ಲಾ ಹೊರಗೆ ಬರತೊಡಗಿದವು. ಈಗ ಮಾಡಿದರೆ ಆಕ್ರಮಣ ಸರಿಯಾಗಿಯೇ ಮಾಡಬೇಕು. ಎಲ್ಲವನ್ನೂ ಸಾಮೂಹಿಕವಾಗಿ ಸಾಯಿಸಿ ನಮ್ಮೆಲ್ಲಾ ಸಾಮಾನುಗಳನ್ನು ಜಿರಲೆರಹಿತವಾಗಿಯೇ ಹೊಸಮನೆಗೆ ಒಯ್ಯಬೇಕೆಂದು ತೀರ್ಮಾನಿಸಿ ಇಲ್ಲಿ ಪ್ರಕಾಶ ಹೆಗಡೆಯವರ ಸಹಾಯ ಕೇಳಿದೆವು. ಅವರು ಮಲ್ಲಿಕಾರ್ಜುನ್[ಫೋಟೋಗ್ರಾಫರ್ ಗೆಳೆಯ ಮಲ್ಲಿಕಾರ್ಜುನ್ ಅಲ್ಲ]ಎನ್ನುವ ಶಸ್ತ್ರಧಾರಿ ಯೋದನನ್ನು ಕಳಿಸಿದರು. ನೋಡಲು ತೆಳ್ಳಗೆ ಸುಮಾರು ಎತ್ತರವಿದ್ದರೂ ಜಿರಲೆಗಳ ಗೆರಿಲ್ಲಾ ತಂತ್ರಕ್ಕೆ ಈತನಲ್ಲಿ ಪ್ರತಿತಂತ್ರ ಚೆನ್ನಾಗಿಯೇ ಇತ್ತು. "ಸರ, ನಿಮಗೆ ಬೇಕಾದ ಸಾಮಾನುಗಳನ್ನೆಲ್ಲಾ ಗಂಟು ಮೂಟೆಕಟ್ಟಿ ಹಾಲ್ ಮದ್ಯದಲ್ಲಿಟ್ಟುಬಿಡಿ, ರೇಷನ್, ಆಡುಗೆ ಸಾಮಾನು ಇತ್ಯಾದಿಗಳನ್ನೆಲ್ಲಾ ಬಾಲ್ಕನಿಯಲ್ಲಿಟ್ಟುಬಿಡಿ, ದಿವಾನ, ಮಂಜ, ಟೇಬಲ್, ಚಾಪೆ ಇತ್ಯಾದಿಗಳೆಲ್ಲಾ ಎಲ್ಲಿಲ್ಲಿವೆಯೋ ಹಾಗೆ ಇರಲಿ, ನೀವೆಲ್ಲಾ ಮೂರು ತಾಸು ಹೊರಗಿದ್ದುಬಿಡಿ. ಉಳಿದದ್ದನ್ನು ನಾನು ನೋಡಿಕೊಳ್ತೇನೆ" ಅಂದ. ಮೊದಲಿಗೆ ಆತನ ಮಾತು ನಂಬಿಕೆ ತರಿಸದಿದ್ದರೂ " ಆತ ಸಿಂಪಡಿಸುವ ಔಷದಿ ಪ್ರಭಾವ ಹೇಗಿರುತ್ತೆ ಅಂದ್ರೆ ಜಿರಲೇ ಮಾತ್ರವಲ್ಲ, ಗೊದ್ದ, ಇರುವೆ, ಜಿಡ್ಡುಹುಳು ಇತ್ಯಾದಿಗಳೆಲ್ಲಾ ಸಂಪೂರ್ಣವಾಗಿ ಸಾಯುವುದಲ್ಲದೇ ಮುಂದೆ ಸುಮಾರು ಹತ್ತು ಹದಿನೈದು ವರ್ಷ ನಿಮ್ಮ ಮನೆಕಡೆ ಅವು ತಲೆಹಾಕಿ ಕೂಡ ಮಲಗುವುದಿಲ್ಲವೆಂದು ಹೇಳಿದ್ದರಿಂದ ನಂಬಿ ಮನೆಯ ಸಾಮಾನುಗಳನ್ನೆಲ್ಲಾ ಕಟ್ಟಿ ಮನೆಯಿಂದ ಹೊರಬಂದೆವು.


ತಾನು ತಂದಿದ್ದ ಟವಲ್ಲನ್ನು ಕಣ್ಣುಗಳೆರಡು ಕಾಣುವಂತೆ ಬಿಟ್ಟು ತಲೆಸಮೇತವಾಗಿ ಸುತ್ತಿಕೊಂಡು ಔಷದಿಯನ್ನು ಷ್ಟ್ರಾಂಗ್ ಮಾಡಿಕೊಂಡು ಅರ್ಧಗಂಟೆಯಲ್ಲಿ ಇಡೀ ಮನೆಯನ್ನೇ ಸಿಂಪಡಿಸಿಬಿಟ್ಟಿದ್ದ. ನಂತರ ನಾವು ಹೋಗುವ ಹೊಸ ಮನೆಗೂ ಅಲ್ಲಿನ ಬಣ್ಣ ಬಳಿಯುವ ಮೊದಲೇ ಮತ್ತಷ್ಟು ಔಷದಿಯನ್ನು ಮನೆಯ ಪ್ರತಿಯೊಂದು ಮೂಲೆಗಳು, ಪೀಟೋಪಕರಣಗಳು, ಬಾಗಿಲು, ಕಿಟಕಿ ಇತ್ಯಾದಿಗಳಿಗೆಲ್ಲಾ ಚೆನ್ನಾಗಿ ಸಿಂಪಡಿಸಿ ವಾಪಸ್ ಬಂದುಬಿಟ್ಟ. ಆತ ಹೋದ ಮೇಲೆ ನೋಡುತ್ತೇವೆ. ಮಂಚ, ದಿವಾನ, ಟಿ.ವಿ ಸ್ಟ್ಯಾಂಡ್, ಆಡುಗೆಮನೆ ಬಚ್ಚಲುಮನೆ ಎಲ್ಲಾ ಕಡೆ ಹತ್ತಾರು, ನೂರಾರು ಹಿರಿತನದ, ಮದ್ಯವಯಸ್ಸಿನ, ಯುವಮನಸ್ಸಿನ ಗಂಡು ಜಿರಲೆಗಳು, ಹೆಂಗರುಳಿನ, ಹೆಣ್ಣಪ್ಪಿ ಮನಸ್ಸಿನ ಹೆಣ್ಣು ಜಿರಲೆಗಳು, ಅವುಗಳ ನಡುವೆ ಅಮ್ಮನನ್ನು ತಬ್ಬಿಕೊಂಡಿದ್ದ ಆಗತಾನೆ ಹರೆಯಕ್ಕೆ ಬಂದಿದ್ದಂತವು...ಇತ್ಯಾದಿ ಜಿರಲೆಗಳೆಲ್ಲಾ ರಾಶಿ ರಾಶಿಯಾಗಿ ಸತ್ತು ಬಿದ್ದಿದ್ದವು. ಅವುಗಳ ಪಕ್ಕದಲ್ಲೇ ಪುಟ್ಟಪುಟ್ಟ ಮಕ್ಕಳ ಮನಸ್ಸಿನ ಜಿರಲೆಗಳು ಅಪ್ಪ ಅಮ್ಮನ ಪಕ್ಕದಲ್ಲೇ ಸತ್ತುಬಿದ್ದಿದ್ದವು. ಹಿರೋಶಿಮದ ಮೇಲೊಂದು ಬಾಂಬ್ ಬಿದ್ದು ಲಕ್ಷಾಂತರ ಜನರ ಮರಣಹೋಮವಾದಂತೆ ಇಲ್ಲಿಯೂ ಸಾವಿರಾರು ಜಿರಲೆಗಳು ತಮ್ಮ ಧರ್ಮಯುದ್ದದಲ್ಲಿ ವೀರಮರಣವನ್ನು ಅಪ್ಪಿದ್ದವು. ನಾವು ಕಟ್ಟಿಟ್ಟಿದ್ದ ಗೋಣಿಚೀಲವನ್ನು ಬಿಚ್ಚಿದ್ದರೆ ಅದರ ಒಳಗೆ ವಾಸನೆಗೆ ಸತ್ತಿದ್ದ ಹತ್ತಾರು ಜಿರಲೆಗಳನ್ನು ಹೊರಗೆ ತರಲಾಗಿತ್ತು. ಮತ್ತೊಮ್ಮೆ ಎಲ್ಲವನ್ನು ಒಟ್ಟುಮಾಡಿ ಒಂದು ನಿಮಿಷದ ಶೋಕಾಚರಣೆಯನ್ನು ಮಾಡಿ ದೂರದಲ್ಲಿ ಎಸೆದು ಬಂದಾಗ ಅಲ್ಲಿದ್ದ ಕಾಗೆಗಳಿಗೆ ಅವತ್ತು ದಸರಾ, ರಂಜಾನ್, ಕ್ರಿಸ್‍ಮಸ್.


ಈಗ ಹೊಸ ಮನೆಗೂ ಬಣ್ಣ ಬಳಿಯುವ ಮೊದಲೇ ಅದೇ ಔಷದಿಯನ್ನು ಮನೆಯ ಪ್ರತಿಯೊಂದು ಮೂಲೆಗಳು, ಪೀಟೋಪಕರಣಗಳು, ಬಾಗಿಲು, ಕಿಟಕಿ ಇತ್ಯಾದಿಗಳಿಗೆಲ್ಲಾ ಆತನೇ ಚೆನ್ನಾಗಿ ಹೊಡೆದಿರುವುದರಿಂದ ಆರುತಿಂಗಳಾದರೂ ಒಂದು ಜಿರಲೆಯೂ ಕಂಡಿಲ್ಲ. ಒಂದೆರಡು ಬಾರಿ ಕಂಡರೂ ನಮ್ಮ ಮನೆಗೆ ಏಕಾದರೂ ಬಂದೆವೋ ಅನ್ನಿಸರಬೇಕು ಅವುಗಳಿಗೆ. ಅಪರೂಪಕ್ಕೆ ಯಾವಾಗಲಾದರೂ ಕಾಣಿಸಿದರೆ ನಮ್ಮ ಮನೆಯಲ್ಲಿ ಮತ್ತು ಬಂದಂತೆ ಅಲ್ಲೇ ನಿಂತುಬಿಡುತ್ತವೆ. ಆಗ ನಾನು ಅದನ್ನು ಹಂಗಾತ ಮಲಗಿಸಿಬಿಡುತ್ತೇನೆ. ಮೊದಲೇ ತಲೆ ದಿಮ್ ಎಂದು ತಿರುಗುತ್ತಿರುವಾಗ ನಾನು ಅದಕ್ಕೆ ತಲೆಕೆಳಗಾಗಿ ಅಂದರೆ ಅಂಗಾತ ಮಲಗಿಸಿಬಿಟ್ಟರೆ ಏನಾಗಬಹುದು? "ಆಕಾಶ ಕೆಳಗೇಕೆ ಬಂತು?...ಈ ಭೂಮಿ ಮೇಲೇಕೆ ಹೋಯ್ತು..." ಅನ್ನುತ್ತಾ ಅವು ಕೈಕಾಲು ಆಡಿಸುತ್ತಾ ಸುಮಾರು ಹೊತ್ತು ವ್ಯಾಯಾಮ ಮಾಡುತ್ತಿರುತ್ತವೆ. ಕೊನೆಗೆ ಸುಸ್ತಾಗಿ ಅಲ್ಲೇ ಜೀವ ಬಿಟ್ಟುಬಿಡುತ್ತವೆ. ಆಡುಗೆ ಮನೆಯಲ್ಲಿ ಎಲ್ಲಾ ಪದಾರ್ಥಗಳು, ಸಿಹಿತಿಂಡಿಗಳನ್ನು ತೆರೆದಿಟ್ಟಿದ್ದರೂ ಇದುವರೆಗೂ ಇರುವೆ, ಗೊದ್ದಾ, ಜಿಡ್ಡುಹುಳ, ಜಿರಲೆ ಯಾವುದು ಇದುವರೆಗೆ ಕಂಡಿಲ್ಲವಾದ್ದರಿಂದ ಅವುಗಳ ಮೇಲೆ ನನ್ನಾಕೆಗೆ ಕೋಪವೇ ಇಲ್ಲ.


ಅಪರೂಪಕ್ಕೆ ಯಾವಾಗಲಾದರೂ ಕಾಣಿಸಿದರೆ ನಾವಿಬ್ಬರೂ ಅದರ ನಡಿಗೆ ನಡುವಳಿಕೆ, ಹೆಣ್ಣಾದರೆ ಒನಪು, ಒಯ್ಯಾರ ಇತ್ಯಾದಿಗಳನ್ನು ವಿಶ್ಲೇಷಿಸುತ್ತಾ ಕಾಲ ಕಳೆಯುತ್ತೇವೆ.


ನಾಚಿಕೆಯಿಲ್ಲದೆ ಅಪ್ಪ ಅಮ್ಮನ್ನ ಹ್ಯಾಗೆ ಹಿಂಬಾಲಿಸುತ್ತಿವೆ ನೋಡ್ರಿ....[ಜಿರಲೆ ಕತೆ ಭಾಗ-೧]ಓದಿ. ನಂತರ ಎರಡನೆ ಭಾಗವನ್ನು ಓದಿ...

ಲೇಖನ :ಶಿವು.ಕೆ

73 comments:

ಗೀತಾ ಗಣಪತಿ said...

ಶಿವೂ ಸರ್,
ತುಂಬಾ ಹಾಸ್ಯಮಯ ಬರಹ. ನಕ್ಕು ಸುಸ್ತಾಯ್ತು.
ಅದ್ಯಾವ ಔಶಧಿ ಅಂತ ನಮಗೂ ಸ್ವಲ್ಪ ಹೇಳಿ ಮಾರಾಯ್ರೆ, ನಾವು ಸಹ ಜಿರಲೆಯ ಉಪದ್ರವ ಸಹಿಸಿಕೊಂಡಿರುವವರೇ :)

Unknown said...

ಶಿವು ಜಿರಲೆಗಳ ಸಂಹಾರ ಕಥೆ ಇಷ್ಟೊಂದು ರಸಮಯವಾಗಿ ಇರುತ್ತದೆ ಎಂದರೆ, ಸಂಹಾರ ಕಾರ್ಯವೂ ಖುಷಿಕೊಡುವಂತದ್ದೇ ಅಲ್ಲವೇ?!!!! ಅದು ಸರಿ
ಕಾಗೆಗಳಿಗೆ ಅವತ್ತು ದಸರಾ, ರಂಜಾನ್, ಕ್ರಿಸ್‍ಮಸ್. ಅಂದಿದ್ದೀರಲ್ಲಾ ಅದು ನಿಜವೇ, ವಿಷ ಸೇವನೆಯಿಂದ ಸತ್ತಿರುವ ಜಿರಲೆಗಳನ್ನು ತಿಂದರೆ ಅವು ಬದುಕಿ ಉಳಿದಾವೆಯೇ? ಅಥವಾ ಅವುಗಳು ಈ ವಿಷಕ್ಕೆ ಹೊಂದಿಕೊಂಡುಬಿಟ್ಟಿವಿಯೇ? ಈಗ ಮಾರುಕಟ್ಟೆಯಲ್ಲಿ ಬರುವ ವಿಷಗಳಲ್ಲಿ ಜಿರಲೆಯದನ್ನು ತಿಂದರೆ ನೊಣ ಿರುವೆ ಸಾಯುವುದಿಲ್ಲ. ನೊಣಗಳದ್ದು ತಿಂದರೆ ಜಿರಲೆ ಮತ್ತು ಬೇರೆಯವು ಸಾಯುವುದಿಲ್ಲ!!!!!!

ಸವಿಗನಸು said...

ಶಿವು ಸರ್,
ಚೆನ್ನಾಗಿತ್ತು ಜಿರಲೆಗಳ ನಾಶ....ಎಲ್ಲರೊಂದಿಗೆ ಸ್ನೇಹಮಹಿ ಆಗಿರುವ ಪ್ರಕಾಶಣ್ಣನಿಗೆ ಜಿರಲೆಗಳು ಮಾತ್ರ ಅವರೊಟ್ಟಿಗೆ ಕೋಪ ಮಾಡಿ ಕೊಂಡು ಬಿಟ್ಟೆವಲ್ಲ...
ಪ್ರಕಾಶಣ್ಣ ನಿಮ್ಮ ಮೇಲೆ ಸೇಡು ತೀರಿಸಿಕೊಂಡಾವು ಹುಷಾರು......
ಚೆನ್ನಾಗಿತ್ತು ವಿವರಣೆ...

Unknown said...

ಶಿವು ಸರ್,
ಸೊಗಸಾದ ಬರಹ , ಸರ್ ನಿಮ್ಮ ಪತ್ನಿಯ೦ತು ಅದರ ಮೇಲೆ ಯುದ್ದವನ್ನು ಸಾರಿ ಅ೦ತು ಜಯಗಳಿಸಿದರು . ಅವರಿಗೆ ನನ್ನ ಅಭಿನ೦ದನೆಗಳು. ಜಿರಳೆಗಳು ಹಾಗೆ ಓಡಾಡುವಾಗ ಕಿರಿಕಿರಿಯಾದರೂ ಅದು ಒ೦ದು ಜೀವಿ ಎನ್ನಿಸಿ ಅದನ್ನು ಕೊಲ್ಲುವಾಗ ಪಾಪ ಎನ್ನಿಸುತ್ತದೆ . ಅದರ ಸಾವಿಗೆ ನನ್ನ ೨ ಹನಿ ಕಣ್ಣಿರು .

ಚಂದ್ರಕಾಂತ ಎಸ್ said...

ಶಿವೂ

ಲೇಖನ ಬಹಳ ಚೆನ್ನಾಗಿದೆ. ನಿಮಗೆ ಗೊತ್ತೇ ಪ್ರಪಂಚ ಪ್ರಳಯವಾದರೂ ಬದುಕುಳಿಯುವ ಸಾಮರ್ಥ್ಯವುಳ್ಳ ಕೀಟ ಜಿರಳೆ. ಪ್ರಾಣಿಗಳಲ್ಲಿ ಕತ್ತೆ.

ಜಿರಳೆಯನ್ನು ಹತೋಟಿಗೆ ತರುವ ಸರಳ ಉಪಾಯವೆಂದರೆ ಪ್ರತಿಯೊಂದು ವಸ್ತುವನ್ನೂ ವಾರಕ್ಕೊಮ್ಮೆಯಾದರೂ ಕದಲಿಸುವುದು. ಈಗ ಮನೆಗಳಲ್ಲಿ ಎಷ್ಟೊಂದು ಸಾಮಾನುಗಳಿರುತ್ತವೆಂದರೆ ಅದು ಅಸಾಧ್ಯದ ಕೆಲಸವೇ ಸರಿ.
ಈ ಜಿರಳೆಗಳ ವಿಶ್ವರೂಪವನ್ನು ನೋಡಬೇಕೆಂದರೆ ಮಧ್ಯರಾತ್ರಿ ಎರಡು ಎರದೂವರೆಯಷ್ಟರ ಹೊತ್ತಿಗೆ ಅಡಿಗೆ ಮನೆಯ ದೀಪ ಹಾಕಿ!!

ಇದನ್ನು ಯಾವುದೇ ಕೆಮಿಕಲ್ಸ್ ಇಲ್ಲದೆ ತಯಾರಿಸುವ " ಪ್ರಗತಿ ಪೆಸ್ಟಿಸೈಡ್ಶ್ ಅವರ Herbal Cockroach Killer . ಇದು ಅಂಗಡಿಗಳಲ್ಲಿ ಸಿಗದು.ಮನೆಯ ಬಳಿ ಬಂದು ಮಾರುತ್ತಾರ್. ಆರು ತಿಂಗಳಿಗೊಮ್ಮೆ ಈ ಪುಡಿಯನ್ನು ಬಳಸಿದರೆ ಅದರ ಸಂತಾನವನ್ನು control ಮಾಡಬಹುದು.

ಸಾಗರದಾಚೆಯ ಇಂಚರ said...

ಶಿವೂ ಸರ್,
ನಗು ತಡೆಯೋಕೆ ಆಗ್ತಾ ಇಲ್ಲ ,
ಅದೇಗೆ ಹಾಸ್ಯ ಸೇರಿಸಿ ಬರಿತಿರ,
ತುಂಬಾ ಒಳ್ಳೆಯ ಬರಹ

Unknown said...

ಹೈಸ್ಕೂಲಿನಲ್ಲಿ ಓದಿದ್ದ "remarkable cockroaches" ಪಾಠದ ನೆನಪು ಬರಿಸಿತು.

ತೇಜಸ್ವಿನಿ ಹೆಗಡೆ said...

ನಿಮ್ಮ ಲೇಖನವನ್ನು ಪೂರ್ತಿ ಓದಿದ ಮೇಲೆ ಗೊತ್ತಾಯಿತು ಶೀರ್ಷಿಕೆಯ("ಆಕಾಶ ಕೆಳಗೇಕೆ ಬಂತು?...ಈ ಭೂಮಿ ಮೇಲೇಕೆ ಹೋಯ್ತು...") ಅರ್ಥವೇನೆಂದು :) ಬಲು ಸೊಗಸಾಗಿದೆ ಲೇಖನ. ಅಂತೂ ಇಂತೂ ಜಿರಲೆಗಳಿಗೆ ಅಂತ್ಯ ಬಂತು ಎಂದಾಯ್ತು!

AntharangadaMaathugalu said...

ಶಿವೂ ಸರ್.... ಅದ್ಭುತವಾದ ಬರಹ. ಅದು ನಿಮ್ಮ ಕಡೆ ನಿಧಾನವಾಗಿ ಬರುತ್ತಿತ್ತು ಎಂದು ಓದಿದಾಗಲೇ ನನಗೆ ಸುತ್ತ ಮುತ್ತ ನೋಡುವಷ್ಟು ಹೆದರಿಕೆ ಆಗಿತ್ತು....ಅಯ್ಯೋ ಮುಗಿದೇ ಹೋಯ್ತಾ, ನಾನೇನೋ ಇನ್ನೂ ಇರತ್ತೇನೋ ಅನ್ಕೊಂಡಿದ್ದೆ... ಅತ್ಯಂತ ಅಸಹ್ಯದ ಕೀಟ ಅದು ಎಂದು ನನ್ನ ಅನಿಸಿಕೆ ಆದರೆ ನೀವು ಅದರ ಒನಪು, ಒಯ್ಯಾರ ಎಲ್ಲಾ ನೋಡಿದೀರಲ್ಲಾ? ಅಂತೂ ನಿಮ್ಮ ಕಲ್ಪನೆ ಒಂದ ಸುಂದರ ಲೇಖನ ಕೊಟ್ಟಿತು ನಮಗೆ.. ಧನ್ಯವಾದಗಳು. ನಕ್ಕು ಸಾಕಾಯಿತು. ಹೇಮಾಶ್ರೀ ಈಗ ಫುಲ್ ಖುಷಿನಾ?

ಶ್ಯಾಮಲ

SSK said...

ಶಿವೂ ಅವರೇ,
ಈ ಲೇಖನದ ಶೀರ್ಷಿಕೆಯೇ ಕಚಗುಳಿ ಇಡುವಂತಿದೆ!
ಅಂತೂ ಜಿರಲೆಗಳಿಂದ ಮುಕ್ತಿ ಪಡೆದ ನೀವೇ ಧನ್ಯರು!!

sunaath said...

ಅಹಾ, ಇದು ಹೊಸದಾದ ಜಿರಲೆ ಪುರಾಣ!

ಸುಧೇಶ್ ಶೆಟ್ಟಿ said...

jirale hinde ishtondu kathe ideya... chennagiththu shivanna :)

ವಿನುತ said...

ಪ್ರತಿಯೊ೦ದು ಘಟನೆಗೂ ಇನ್ನೊಂದು ಮುಖವಿರುತ್ತದೆ ಎನ್ನುವುದನ್ನು ಸೊಗಸಾಗಿ ವಿವರಿಸಿದ್ದೀರಿ ಶಿವು. ನಿಮ್ಮ ಅನುಭವಗಳು, ಅಬ್ಸರ್ವೇಶನ್ ಗಳು ಚೆನ್ನಾಗಿ ಬಿ೦ಬಿತವಾಗಿವೆ ಲೇಖನದಲ್ಲಿ. ಅಭಿನ೦ದನೆಗಳು

Anonymous said...

ಶಿವು ಸರ್,

ಸುಂದರ ನಿರೂಪಣೆ. ಓದುತ್ತಾ ಓದುತ್ತಾ ಪೂ.ಚಂ.ತೇ. ಶೈಲಿ ನೆನಪಾಯಿತು. ವಿವರಣೆ ನಿಜಕ್ಕೂ ರಸವತ್ತಾಗಿದೆ.

shivu.k said...

ಗೀತಾ ಗಣಪತಿ ಮೇಡಮ್,

ನನ್ನ ಬ್ಲಾಗಿಗೆ ಸ್ವಾಗತ. ಬರಹ ಓದಿ ನಕ್ಕಿದ್ದೀರಿ. ಅಲ್ಲಿಗೆ ನಾನು ಬರೆಯುವಾಗ ಆನುಭವಿಸಿದ ಖುಷಿ ನಿಮಗೂ ತಲುಪಿದೆ ಅಂದ ಹಾಗೆ ಆಯಿತು. ಮತ್ತೆ ಜಿರಲೆ ಔಷದಿಗಾಗಿ ನೀವು ಪ್ರಕಾಶ್ ಹೆಗಡೆಯವರನ್ನು ಬೇಟಿ ಮಾಡಿ.

ಹೀಗೆ ಬರುತ್ತಿರಿ....ಧನ್ಯವಾದಗಳು.

umesh desai said...

ಶಿವು ಅಂತೂ ಜೊಂಡಿಗ್ಯ ಸಂಹಾರ ಆತು ಖರೇ ಈ ಪ್ರಾಣಿ ಅಪರೂಪದ್ದು ಆದ್ರ ಅಷ್ಟ ಕಿರಿಕಿರಿದು

shivu.k said...

ಡಾ.ಸತ್ಯನಾರಾಯಣ ಸರ್,

ಜಿರಲೆ ಕತೆಗಳು ಅಷ್ಟೊಂದು ರಸಮಯವಾಗಿದೆಯ ಥ್ಯಾಂಕ್ಸ್...
ಕಾಗೆಗಳಿಗೆ ಹಬ್ಬವಾಗಿದ್ದಂತು ನಿಜ ಹಾಗೂ ಅವುಗಳಿಗೆ ಏನು ಆಗದೆ ಮರುದಿನವೂ ಕಾಯುತ್ತಿದ್ದುದ್ದೆ ಸಾಕ್ಷಿ. ಮತ್ತೆ ಒಬ್ಬರ ವಿಷ ಮತ್ತೊಬ್ಬರಿಗೆ ಔಷದವೆನ್ನುವುದು ಈಗಿನ ಎಲ್ಲಾ ಸಂಶೋಧನೆಗಳಲ್ಲಿ ಚಾಲ್ತಿಯಲ್ಲಿದೆಯಲ್ಲ ಸರ್...

ನೀವು ಹೀಗೆ ಬರಹವನ್ನು ಪ್ರೋತ್ಸಾಹಿಸುವುದು ಮತ್ತಷ್ಟು ಬರೆಯಲು ಸ್ಫೂರ್ತಿ ನೀಡುತ್ತದೆ ಸರ್...ಧನ್ಯವಾದಗಳು.

shivu.k said...

ಮಹೇಶ್ ಸರ್,

ಜಿರಲೆ ಸಂಹಾರ ಕತೆ ಇಷ್ಟವಾಯಿತಾ...

ಪ್ರಕಾಶ್ ಸರ್ ಅವರು ಎಲ್ಲರೊಂದಿಗೂ ಆತ್ಮೀಯವಾಗಿರುವುದು ನಿಜ ಆದ್ರೆ...ಜಿರಲೆಗಳಿಗೆ ಕೋಪಬಂದಿರುವುದಂತೂ ಸತ್ಯ. ನೋಡಬೇಕು ಅವು ಹೇಗೋ ತಾಲಿಬಾನ್ ಗಳಂತೆ ಮತ್ತೆ ಪುಟಿದೆದ್ದು ಅವರ ಮೇಲೆ ತಿರುಗಿ ಬೀಳಬಹುದು. ಆಗ ಅವರು ಹೀಗೆ ಒಂದು ಲೇಖನವನ್ನು ಬರೆಯಬಹುದು..ಕಾದು ನೋಡೋಣ...

ಧನ್ಯವಾದಗಳು.

shivu.k said...

ರೂಪ ಮೇಡಮ್,

ಖಂಡಿತ ನನ್ನ ಶ್ರೀಮತಿ ಜಿರಲೆಗಳ ವಿರುದ್ಧ ಯುದ್ಧದಲ್ಲಿ ಜಯಗಳಿಸಿದ್ದಾಳೆ. ಈಗ ಅವಳಿಗೆ ಕೋಪವಿಲ್ಲ ಬದಲಾಗಿ ಸ್ವಲ್ಪ ಅನುಕಂಪವಿದೆ.

ಜಿರಲೆಗಳು ಸತ್ತಾಗ ನನಗೂ ನೋಡಲಾಗಲಿಲ್ಲ. ಆದ್ರೆ ಏನು ಮಾಡುವುದು "ಕರ್ಮಣ್ಯೋ ವಾದಿಕಾರಸ್ತೆ" ಅನ್ನುವ ಹಾಗೆ ನಮ್ಮ ಕಾಯಕವನ್ನು ಮಾಡಲೇಬೇಕಲ್ಲವೇ...ನೀವು ಜಿರಲೆಗಳಿಗಾಗಿ ಎರಡು ಹನಿ ಕೊಟ್ಟಿದ್ದೀರಿ...ಅದರ ಋಣ ಅವು ಖಂಡಿತ ಮುಂದಿನ ಜನ್ಮದಲ್ಲಿ ತೀರಿಸುತ್ತವೆ..

ಧನ್ಯವಾದಗಳು.

shivu.k said...

ಚಂದ್ರಕಾಂತ ಮೇಡಮ್,

ಮತ್ತೆ ಬಿಡುವು ಮಾಡಿಕೊಂಡು ಜಿರಲೆ ಕತೆಯನ್ನು ಓದಿದ್ದೀರಿ. ಪ್ರಳಯವಾದರೂ ಬದುಕುಳಿಯುವ ಜಿರಲೆ ಮತ್ತು ಕತ್ತೆ ವಿಚಾರ ಗೊತ್ತಿರಲಿಲ್ಲ. ಥ್ಯಾಂಕ್ಸ್..

ನನ್ನ ಲೇಖನ ಓದಿ ಜಿರಲೆ ನಾಶಕ್ಕೆ ಒಂದು ಒಳ್ಳೆಯ ಟಿಪ್ಸ್ ಕೊಟ್ಟಿದ್ದೀರಿ. ನಮ್ಮೆಲ್ಲ ಬ್ಲಾಗಿಗರಿಗೂ ಇದು ಖಂಡಿತ ಉಪಯುಕ್ತವೆಂದೇ ನನ್ನ ಭಾವನೆ.

ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಗುರುಮೂರ್ತಿ ಹೆಗಡೆ ಸರ್,

ಈ ಲೇಖನವನ್ನು ಬರೆಯುವಾಗ ನನಗೂ ಹೀಗೆ ನಿಮ್ಮ ಹಾಗೆ ನಗು ತಡೆಯಲಾಗಲಿಲ್ಲ. ಲೇಖನವನ್ನು ಬರೆಯಬೇಕೆನ್ನುವುದಷ್ಟೇ ನನ್ನ ಉದ್ದೇಶ ನಗು ಹೇಗೆ ಸೇರಿಕೊಳ್ಳುತ್ತದೋ ನನಗೂ ಗೊತ್ತಿಲ್ಲ.

ಧನ್ಯವಾದಗಳು.

shivu.k said...

ಆಶೋಕ್,

ಮತ್ತೆ ನನ್ನ ಬ್ಲಾಗಿಗೆ ಬಂದು ಜಿರಲೆ ಲೇಖನವನ್ನು ಇಷ್ಟಪಟ್ಟಿದ್ದೀರಿ...ಧನ್ಯವಾದಗಳು.

ಮತ್ತೆ ಬ್ಲಾಗಿನಲ್ಲಿ ಕಾರ್ಟೂನುಗಳು ತುಂಬಾ ಚೆನ್ನಾಗಿರುತ್ತವೆ.

ಹೀಗೆ ಬರುತ್ತಿರಿ..

shivu.k said...

ತೇಜಸ್ವಿನಿ ಮೇಡಮ್,

ಶೀರ್ಷಿಕೆ ಕೇವಲ ಪಂಚಿಂಗ್ ಆಗಿರಲಿ ಅಂತ ಇಟ್ಟಿದ್ದು. ಅದು ನಿಮಗೆ ಇಷ್ಟವಾಗಿದ್ದರೆ ನಾನು ಬರೆದಿದ್ದು ಸಾರ್ಥಕ.

ಈಗ ನಮ್ಮ ಹೊಸ ಮನೆಯಲ್ಲಿ ಜಿರಲೆಗಳಿಲ್ಲ. ಆದ್ದರಿಂದ ಸದ್ಯಕ್ಕೆ ಜಿರಲೆಗಳಿಗೆ ಅಂತ್ಯವಾಗಿದೆ.

ಧನ್ಯವಾದಗಳು.

shivu.k said...

ಶ್ಯಾಮಲ ಮೇಡಮ್,

ಜಿರಲೆ ಕತೆ ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ಮತ್ತೆ ನಾನು ಜಿರಲೆ ಎಲ್ಲಾ ಘಟನೆಗಳನ್ನು ಬರೆಯುವಾಗ ಆನುಭವಗಳನ್ನು ನೆನಪಿಸಿಕೊಳ್ಳುತ್ತೇನೆ. ನನ್ನ ಅನುಭವವೇ ಎಲ್ಲರ ಅನುಭವ ಸಹಜವಾಗಿ ಆಗಿರುತ್ತದ್ದರಿಂದ ನಿಮಗೂ ಲೇಖನ ಪರಿಣಾಮ ಬೀರಿದೆ. ಅಲ್ಲಿಗೆ ನನ್ನ ಬರಹ ಸಾರ್ಥಕ.

ಲೇಖನ ಇನ್ನೂ ದೊಡ್ಡದಿತ್ತು. ಬ್ಲಾಗಿನಲ್ಲಿ ಚಿಕ್ಕದಾಗಿರಲಿ ಅಂತ ಕತ್ತರಿ ಹಾಕಿದ್ದೇನೆ. ಮತ್ತೆ ಒನಪು ಒಯ್ಯಾರ ವಿಚಾರ ಬಂದಾಗ ಅದೇಕೊ ಗೊತ್ತಿಲ್ಲ ಜೀವಿಗಳಲ್ಲೂ ನನಗೆ ಇಂಥ ಗುಣಗಳನ್ನು ಕಾಣಲೆತ್ನಿಸುತ್ತೇನೆ.

ಧನ್ಯವಾದಗಳು.

shivu.k said...

SSK ಮೇಡಮ್,

ಜಿರಲೆ ಶೀರ್ಷಿಕೆ ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಕೊನೆಗೂ ಜಿರಲೆಯಿಂದ ಮುಕ್ತಿ ಸಿಕ್ಕಿದೆ.

shivu.k said...

ಸುನಾಥ್ ಸರ್,

ಜಿರಲೆ ಕತೆ ಹೊಸದೆನಿಸಿದ್ದಕ್ಕೆ ಥ್ಯಾಂಕ್ಸ್..

shivu.k said...

ಸುಧೇಶ್,

ಜಿರಲೆ ಕತೆ ಇನ್ನೂ ದೊಡ್ಡದಿದೆ. ನಾನು ಚಿಕ್ಕದು ಮಾಡಿದ್ದೆ. ಇಷ್ಟವಾಗಿದ್ದಕ್ಕೆ ಥ್ಯಾಂಕ್ಸ್..

shivu.k said...

ವಿನುತಾ,

ಲೇಖನ ಬರೆಯುವ ಮೊದಲು ಕ್ಯಾಮೆರಾ ದೃಷ್ಟಿಕೋನದಿಂದ ನೋಡುವುದರಿಂದ ಹೀಗೆ ಬರೆಯಲು ಸಾಧ್ಯವೇನೋ ಅನ್ನಿಸುತ್ತೆ.
ಲೇಖನ ಹೊಸದಾಗಿದೆ ಅನ್ನಿಸಿದ್ದರೆ ಥ್ಯಾಂಕ್ಸ್...ಹೀಗೆ ಬರುತ್ತಿರಿ...

shivu.k said...

ರಂಜಿತ್,

ಜಿರಲೆ ಲೇಖನವನ್ನು ಓದಿ ಪೂ.ಚ.ತೇ. ನೆನಪಾಗಿದ್ದಕ್ಕೆ ಥ್ಯಾಂಕ್ಸ್...ಅವರ ಮಟ್ಟಕ್ಕೆ ಹೋಲಿಸಬೇಡಿ. ಅವರೆಲ್ಲಿ ನಾನೆಲ್ಲಿ. ಏನೋ ಹೀಗೆ ಅನುಭವಗಳನ್ನು ಬರೆದುಕೊಂಡಿರುತ್ತೇನೆ....ಧನ್ಯವಾದಗಳು.

shivu.k said...

ಉಮೇಶ್ ದೇಸಾಯಿ ಸರ್,

ಕೊನೆಗೂ ಜಿರಲೆ ಅಂತ್ಯವಾಗಿ ನಮ್ಮ ಮನೆಯಲ್ಲಿ ಈಗ ಜಿರಲೆಗಳಿಲ್ಲ. ಅದ್ದರಿಂದ ಸದ್ಯಕ್ಕೆ ಅಷ್ಟರ ಮಟ್ಟಿಗೆ ನಮಗೆ ಕಿರಿಕಿರಿಯಿಲ್ಲ ಸರ್.

ಧನ್ಯವಾದಗಳು.

jaya said...

neevyaavudo hosa upaaya hudukidiri jiralegLa antyakke endu kaayuttide, neevu nannateye oushadhi hoDesi avugaLannu samharisidira? haage oushadha hoDeyuvavaru hELuvante 10 - 15 varshada nemmadi saadyavilla annisuttade aadare naanantu 1.5 varsha nemmadi anubhavisiddEne. monneyashte ondu jirale maneyoLage kaaNisitu, adannu samharisiddaagide. munde kaadu nODabeku.

ಮನಸು said...

super sir, baari saahaasave nededide hahaha

ಕ್ಷಣ... ಚಿಂತನೆ... said...

ಶಿವು ಸರ್‍, ಜಿರಳೆಯ ಬಗ್ಗೆ ಮ್ಯಾಕ್ರೋ ಲೆನ್ಸ್ ಹಾಕಿ ಹಲವಾರು ವಿಚಾರಗಳನ್ನು ಹುಡುಕಿದ್ದೀರಿ. ಜಿರಳೆಗಳಿರದ ಜಾಗಗಳಾವುದೂ ಈ ಭೋಲೋಕದಲ್ಲಿಲ್ಲ. ಹಾಗೆಯೇ ಅವಿರದ ಮನೆ, ಮಾಡು, ವಾಹನಗಳೂ ಇಲ್ಲ. ಬಸ್ಸುಗಳಲ್ಲಿಯೂ ಸಣ್ಣ ಸಣ್ಣ ಜಿರಳೆಗಳನ್ನು ಕಂಡಿದ್ದೇನೆ. ತಿರುಪತಿ ಪ್ಯಾಸೆಂಜರ್‍ (ಮೈಸೂರು-ತಿರುಪತಿ)ನಲ್ಲಿ ಮೈಸೂರಿಗೆ ಹೋಗುವಾಗ ನನ್ನ ತಂಗಿಯ ಪುಟ್ಟ ಮಗಳು ಮರದ ಹಲಗೆಯ ಸೀಟಿನಲ್ಲಿದ್ದ ಜಿರಲೆ ಮರಿಗಳಿಂದಾಗಿ ಹೆದರಿ ಕುಳಿತಿದ್ದಳು. ಅವುಗಳಿರದ ಜಾಗಗಳೇ ಇಲ್ಲ.

ಡಾ. ರಾಜ್‌ ಅವರ ಈ ಹಾಡನ್ನು ನೆನಪಿಸಿದ್ದೀರಿ. ಲೇಖನಕ್ಕೆ ಬಳಸಿರುವ ಸರಳ ಭಾಷಾ ಪ್ರಯೋಗವೂ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಜಿರಳೋಪಖ್ಯಾನವನ್ನು ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.

ಸ್ನೇಹದಿಂದ,

ಚಂದ್ರಶೇಖರ ಬಿ.ಎಚ್.

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ.. ತುಂಬಾ ಚನ್ನಾಗಿದೆ ರೀ..

ರಾಜೀವ said...

ಅಂತೂ ಇಂತೂ ಜಿರಳೆಗಳಿಂದ ಮುಕ್ತಿ ಸಿಕ್ಕಿತು ನಿಮಗೆ.

ಯಾವುದೋ ಕನ್ನಡ ಸಿನೆಮಾದಲ್ಲಿ ನೋಡಿದ ನೆನಪು. ಟೆನಿಸ್ ಕೃಷ್ಣ ಜೈಲ್ನಿಂದ ಬಂದಿರ್ತಾನೆ. ಜೈಲಿನಲ್ಲಿ ಸೊಳ್ಳೆಗಳ ಮಧ್ಯ ಮಲಗಿದ್ದು ಅಭ್ಯಾಸವಾಗಿ, ಮನೆಯಲ್ಲಿ ಸೊಳ್ಳೆಗಳ ಕಾಟ ಇಲ್ಲದೆ ನಿದ್ದೆಯೇ ಬರುವುದಿಲ್ಲ ಅವನಿಗೆ. ಹಾಗೆ ನಿಮಗೂ ಜಿರಲೆಗಳ ಕಾಟ ಇಲ್ಲದೆ ಕಷ್ಟ ಪಡುತ್ತಿದ್ದೀರೋ ಹೇಗೆ?

ಬಿಸಿಲ ಹನಿ said...

ನಿಮ್ಮ ಜಿರಲೆ ಸಂಹಾರ ಕತೆಯನ್ನು ಓದುತ್ತಿದ್ದಂತೆ ನನಗೆ ಎಂಟನೆ ಕ್ಲಾಸಿನಲ್ಲಿ ನಮಗೆ ಟೆಕ್ಷ್ಟ್ ಆಗಿದ್ದ "A Remarkable Cockroach" ಎನ್ನುವ ಪಾಠವೊಂದು ಜ್ಞಾಪಕಕ್ಕೆ ಬಂತು.

PARAANJAPE K.N. said...

ನಿಮ್ಮ ಜಿರಳೆ ಸ೦ಹಾರದ ರೋಚಕ ಕಥೆ ಇಷ್ಟವಾಯಿತು. ನಿಮ್ಮ ಬರಹ ಹರಳುಗಟ್ಟುತ್ತಿದೆ, ನಿಮಗೆ ಬರಹಲೇಖನ ದಲ್ಲಿ ಹಿಡಿತ ವಿದೆ. ಹೇಳಬೇಕಾದ್ದನ್ನು ಅಚ್ಚುಕಟ್ಟಾಗಿ ಹೇಳುವ ಕಲೆ ಸಿದ್ಧಿಸಿದೆ.

shridhar said...

ಶಿವೂ ಸರ್,
ಅಬ್ಬಾ , ಪ್ರತಿಯೊಂದು ವಸ್ತುವಿನಲ್ಲು ಏನಾದರು ಒಂದು ಹೊಸತನ್ನು ಹುಡುಕೋದು ನಿಮ್ಮ ಅಭ್ಯಾಸ ಅನಿಸುತ್ತೆ . ಎಷ್ಟು ಸೂಕ್ಷ್ಮವಾಗಿ ಜಿರಳೆ ಪುರಾಣವನ್ನು ವಿವರಿಸಿದ್ದಿರ .. ವಸ್ತು ಸೂಕ್ಷ್ಮ ವೀಕ್ಷಣೆ ಒಂದೇ ಅಲ್ಲ ಹಾಸ್ಯವನ್ನು ಬೇರೆಸಿದ್ದಿರಿ .. ತುಂಬಾ ಚೆನ್ನಾಗಿದೆ ನಿಮ್ಮ ಈ ಅನುಭವ ಲೇಖನ ..
ಸುಮ್ಮನೆ ಉಪಸಂಹಾರವೆಂಬಂತೆ ನನ್ನ ಎರಡು ಮಾತುಗಳು ,
ಕೀರ್ತನಕಾರರು ಹೇಳುವಂತೆ ,
ಇ ಜಿರಳೆ ಪುರಾಣವನ್ನು ಕೇಳಿದವರಿಗೂ .. ಓದಿದವರಿಗೂ .. ನಕ್ಕವರಿಗೂ .. ಕಂಬನಿಮಿಡಿದವರಿಗೂ .. ಜಿರಳೆ ಸಮೂಹದಿಂದ ಮುಕ್ತಿ ಸಿಗಲಿ ಎಂದೆನ್ನುತ್ತ , ಈ ಕಥಾ ಭಾಗವನ್ನು ಮುಗಿಸೋಣ ..
"ಇತಿ ಜಿರಳೆ ಸಂಹಾರ ಕಥಾ ಸಂಪೂರ್ಣಂ "

ಶ್ರೀಧರ್ ಭಟ್

Anonymous said...

ene sikkidroo avugala melondashtu bareyaballa thamma paadada xerox urgent agi beku .....!!!!

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಅಡುಗೆ ಮನೆ ವಿನ್ಯಾಸ ಬರೆದಿದ್ದೀರಲ್ಲ ಆ ಪ್ಯಾರಾಗ್ರಾಫ್ ತುಂಬ ಚೆನ್ನಾಗಿ ಬರೆದಿದ್ದೀರ. ಇನ್ನು ಜಿರಳೆ ಸಂಹಾರವಂತೂ ಯುದ್ಧಭಾರತವೇ ಸರಿ!
"ಎಲ್ಲೆಲ್ಲೂ ಸೌಂಧರ್ಯವೇ..ನೋಡುವ ಕಣ್ಣಿರಲು.."
ಇದಕ್ಕೆ ನಿಮ್ಮ ಬರಹ ಸಾಕ್ಷಿ ಒದಗಿಸುತ್ತದೆ.

Prashanth Arasikere said...

Hi shivu,

Jirle bagge tumba vichara elidira tumba thanks, ondu gade helbahdu allva "adu muttada soppu illa,jirle hokkada jagailla" enanthira. matte konege artha aythu 'kasha kelage eke banthu eee boomi mele eke hoythu' antha..
baraha chennagide..photo..elli ondu illa..adu onde korthe kanustha ide.

Shweta said...

ಶಿವು ಸರ್.....
ಜಿರಳೆ ಗಳು ಹೀರೊ ಆಗಿವೆ ಯಲ್ಲ ....ಎಸ್ಟು ಚೆನ್ನಾಗಿದೆ ಸರ್ ವಿವರಣೆ. ....ಎರಡು ಭಾಗವನ್ನು ಒಟ್ಟಿಗೆ ಓಡಿದೆ..
ಕೆಲಸದ ಒತ್ತಾದ ದಿಂದ ಬ್ಲೋಗನ್ನು ತೆರೆಯಲಿಕ್ಕೆ ಆಗಿಲ್ಲವಾಗಿತ್ತು......
ಧನ್ಯವಾದಗಳೊಂದಿಗೆ
-ಶ್ವೇತಾ

ಶಾಂತಲಾ ಭಂಡಿ (ಸನ್ನಿಧಿ) said...

ಶಿವು ಅವರೆ...
ಎರಡೂ ಭಾಗಗಳನ್ನು ಒಟ್ಟಿಗೇ ಓದಿದೆ.

ನಿಜ, ಈ ಜಿರಳೆಗಳಿಗೆ ಒಂದು ಪರಿಹಾರ ಬೇಕಾದ್ದೇ. ನನಗೆ ಸದಾ ಚಿಂತೆ. ನಿಜವಾಗಿಯೂ ಹೇಳಬೇಕೆಂದರೆ ಸದಾ ಈ ಜಿರಳೆಗಳದ್ದೇ ಯೋಚನೆ ಕಾಡುತ್ತದೆ. ಭಾರತಕ್ಕೆ ಮರಳಿದಮೇಲೆ ನಮ್ಮ ಮನೆಗೆ ಜಿರಳೆ ಬಾರದ ಹಾಗೆ ಏನು ಮಾಡಬಹುದು, ಒಂದುವೇಳೆ ಅದು ಮನೆಯನ್ನು ಹೊಕ್ಕಿಯೇ ಬಿಟ್ಟರೆ ಅದನ್ನು ಮನೆಯಿಂದ ಓಡಿಸಲು ಉಪಾಯಗಳನ್ನು ಆಗಾಗ ಯೋಚಿಸುತ್ತಿರುತ್ತೇನೆ. ಕೆಲವೊಮ್ಮೆ ಚೆಂದದ ಪುಸ್ತಕ ಕೈಯಲ್ಲಿರುತ್ತದೆ, ಅಂಥವೇಳೆಯಲ್ಲಿ ದಿಢೀರ್ ಅಂತ ಈ ಜಿರಳೆ ಬಗ್ಗೆ ಯೋಚನೆ ಬಂದುಬಿಡುತ್ತದೆ. ಪುಸ್ತಕ ಓದುವುದನ್ನು ಬಿಟ್ಟು ಜಿರಳೆಕಾಟ ತಪ್ಪಿಸಿಕೊಳ್ಳುವ ಬಗ್ಗೆ ಪ್ಲಾನ್ ಹಾಕತೊಡಗುತ್ತೇನೆ.

ಜಿರಳೆನಿಯಂತ್ರಣಕ್ಕೊಂದೊಳ್ಳೆಯ ಉಪಾಯವನ್ನೂ ಸೂಚಿಸಿ ಹಾಸ್ಯಭರಿತ ಜಿರಳೆ ಲೇಖನ ಕೊಟ್ಟಿದ್ದಕ್ಕೆ ಥ್ಯಾಂಕ್ಸ್.

ಹರೀಶ ಮಾಂಬಾಡಿ said...
This comment has been removed by the author.
ಹರೀಶ ಮಾಂಬಾಡಿ said...

ಶಿವು,
ಜಿರಳೆಗಳ ಕಥೆಗೆ ಉಪಸಂಹಾರ ಎಂದೆಲ್ಲಾ ಉಂಟಾ? ನಿಮಗೆ ಪುರುಸೊತ್ತಾದಾಗಲೆಲ್ಲಾ ಒಂದೊಂದೇ ಅನುಭವಗಳನ್ನು ಹೇಳಿ.
ಒಂದು ಕಾಲದಲ್ಲಿ ಜಿರಳೆ, ಇಲಿ ಕಾಟ‍ ತಡೀಲಿಕ್ಕಾಗದೆ ಬಾಡಿಗೆ ಕೋಣೆ ಬದ್ಲಾಯಿಸಿದವ ನಾನು. ಆದರೆ ಕೊನೆಗೆ ತಿಳೀತು. ಜಿರಳೆಗಳಿಲ್ಲದ ಮನೆ ಈ ಪ್ರಪಂಚದಲ್ಲೇ ಇಲ್ಲ.!

ಬಾಲು said...

ನಿಮ್ಮ ಜಿರಲೆ ಕಥೆ ಅತ್ಯ೦ತ ರಸಮಯವಾಗಿ ಇದೆ!!! ಹಾಗೆಯೆ ನಿಮ್ಮ ಮೇಲೆ ನನಗೆ ಅಸೂಯೆ ಶುರುವಾಗಿದೆ. ಯಾಕೆ೦ದರೆ ನನ್ನ ರೂಮಿನಲ್ಲಿ ಬರಿ ಜಿರಲೆಗಳೆ!! ಅವುಗಳಿಗೆ ನಿಮ್ಮ ವಿಳಾಸವನ್ನು ಕೊಟ್ಟು ನನ್ನ ಸೇಡನ್ನ ತೀರಿಸಿಕೊಳ್ಳಬೇಕೆ೦ದು ಕೊ೦ಡಿರುವೆ!! :)

ಯುದ್ದದಲ್ಲಿ ಗೆದ್ದಿದ್ದಕ್ಕಾಗಿ ಮತ್ತು ಒ೦ದು ಸು೦ದರ ಲೆಖನ ಕೊಟ್ಟಿದ್ದಕ್ಕೆ ನಿಮಗೆ ಅಭಿನ೦ದನೆಗಳು.

shivu.k said...

ಜಯಲಕ್ಷ್ಮಿ ಮೇಡಮ್,

ನಾನು ಮನುಷ್ಯನೇ ತಾನೆ..ನಿಮ್ಮಂತೆ ನಾನು ಕೂಡ ಔಷದಿ ಹೊಡೆಸಿ ಓಡಿಸಿದ್ದೇನೆ...

ನಿಮ್ಮ ಕತೆಯೇ ನನ್ನ ಕತೆ. ಪ್ರಕಾಶ್ ಹೆಗಡೆಯವರು ಕೂಡ ೧೦-೧೫ ವರ್ಷಗಳ ಖಚಿತ ಗ್ಯಾರಂಟಿ ಕೊಟ್ಟಿದ್ದಾರೆ. ಅವರ ಮನೆಯನ್ನು ಇದೇ ರೀತಿ ಮಾಡಿಕೊಂಡಿದ್ದಾರಾದ್ದರಿಂದ ಅವರ ಮೇಲೆ ನಂಬಿಕೆ ಇಡಬಹುದು...

ಮುಂದಿನ ಲೇಖನಕ್ಕೂ ಹೀಗೆ ಬರುತ್ತಿರಿ...

ಧನ್ಯವಾದಗಳು.

shivu.k said...

ಮನಸು ಮೇಡಮ್,

ಖಂಡಿತ ನಿಮ್ಮ ಅನಿಸಿಕೆಯಂತೆ ಭಾರಿ ಸಾಹಸವೇ ನಡೆದಿದೆ ಆದ್ರೆ ನನ್ನದಲ್ಲ. ಹೇಮಾಶ್ರಿಯದು...

ಧನ್ಯವಾದಗಳು.

shivu.k said...

ಕ್ಷಣ ಚಿಂತನೆ ಸರ್,

ನೀವು ಒಬ್ಬ ಛಾಯಾಗ್ರಾಹಕರಾಗಿರುವುದರಿಂದ ನಿಮ್ಮ ಪ್ರತಿಕ್ರಿಯೆ[ಪೋಟೋಗ್ರಫಿ ದೃಷ್ಟಿಕೋನದಿಂದ]ಚೆನ್ನಾಗಿದೆ. ನನಗೆ ಇಷ್ಟವಾಯಿತು.

ಜಿರಲೆಗಳಿಲ್ಲದ ಜಾಗವೇ ಇಲ್ಲ ಸರ್...ನೀವು ಹೇಳಿದ ಎಲ್ಲಾ ಕಡೆ ಇರುತ್ತವೆ...

ಮತ್ತೆ ಬರೆಯುವಾಗ ಅದಕ್ಕೆ ತಕ್ಕಂತೆ ಹಾಡುಗಳು ಮತ್ತು ಮಾತುಗಳು ನೆನಪಾಗುತ್ತವಾದ್ದರಿಂದ ಹಾಗೆ ಬರೆದುಬಿಡುತ್ತೇನೆ...ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

ಮುಂದಿನ ಬ್ಲಾಗ್ ಲೇಖನ ಖಂಡಿತ ತಮಾಷೆಯದಲ್ಲ. ಒಂದು ಗಂಬೀರ ಕತೆ ಬರೆದಿದ್ದೇನೆ. ಓದಲು ಬನ್ನಿ.

ಧನ್ಯವಾದಗಳು.

shivu.k said...

ಶಿವಪ್ರಕಾಶ್,

ಧನ್ಯವಾದಗಳು.

shivu.k said...

ರಾಜೀವ್ ಸರ್,'

ಸದ್ಯಕ್ಕೆ ನೀವು ಹೇಳಿದಂತೆ ಜಿರಲೆಗಳಿಂದ ಮುಕ್ತಿ ಸಿಕ್ಕಿದೆ.

ಮತ್ತೆ ನಿಮ್ಮ ಪ್ರತಿಕ್ರಿಯೆಯಿಂದ ನನಗೆ ಪುಸ್ಪಕ ವಿಮಾನ ನೆನಪಾಯಿತು. ಅದರಲ್ಲಿ ಕಮಲ್ ಹಾಸನ್ಗೆ ಗಲಾಟೆಯಿಲ್ಲದೆ ನಿದ್ರೆಬರುವುದಿಲ್ಲ. ೫ ಸ್ಟಾರ್ ಹೋಟಲ್ಲಿನಲ್ಲಿದ್ದರೂ ಅವನಿಗೆ ನಿದ್ರೆ ಬರುವುದಿಲ್ಲ. ಮತ್ತೆ ಮನೆಗೆ ಹೋಗಿ ಅದೇ ಗಲಾಟೆಯನ್ನೇ ರೆಕಾರ್ಡ್ ಮಾಡಿಕೊಂಡು ಬಂದು ಹಾಕಿಕೊಂಡಾಗ ನಿದ್ರೆ ಬರುತ್ತದೆ....

ಮತ್ತೊಂದು ವಿಚಾರ ಸರ್. ಮೊನ್ನೆ ಆರೆಂಜ್ ಕೌಂಟಿಯಂಥ ಅದ್ಬುತ ಸ್ಥಳದಲ್ಲೂ ಎಷ್ಟು ಚೆನ್ನಾದ ಹಾಸಿಗೆ, ಹೊದಿಕೆ, Ac, ಪ್ರಕೃತಿಯ ನಡುವಿನ ವಾತಾವರಣ, ಪ್ರತಿಯೊಂದು ಅನುಕೂಲವಿದರೂ ನನಗೆ ನಿದ್ರೆ ಬರಲಿಲ್ಲ. ಅದನ್ನು ಮುಂದೆ ಎಂದಾದರೂ ಬರೆಯಬೇಕೆನಿಸುತ್ತದೆ...

ಧನ್ಯವಾದಗಳು.

shivu.k said...

ಉದಯ್ ಸರ್,

ಜಿರಲೆ ಕತೆ ಓದಿ ನಿಮ್ಮ ಹಳೆಯ ನೆನಪುಗಳು ಬಂದಿದ್ದು ಖುಷಿಯಾಯಿತು...ಅದರ ಬಗ್ಗೆ ಬರೆಯಿರಿ...ಚೆನ್ನಾಗಿರುತ್ತೆ...

ಧನ್ಯವಾದಗಳು.

shivu.k said...

ಪರಂಜಪೆ ಸರ್,

ಜಿರಲೆ ಕತೆ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

ನನಗೆ ಆಗುವ ಆನುಭವವನ್ನು ನೇರವಾಗಿ ಹಾಗೆ ಬರೆದುಬಿಡುತ್ತೇನೆ...ಮತ್ತೇನು ಹೊಸ ಶೈಲಿಯನ್ನು ಪ್ರಯತ್ನಿಸುವುದಿಲ್ಲ...ಬರೆಯುವಾಗ ನನಗೆ ತುಂಬಾ ಖುಷಿಯಾಗುತ್ತದೆ...ಖುಷಿಯಾಗದ ವಿಚಾರವನ್ನು ನಾನು ಬರೆಯುವುದಿಲ್ಲ...
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...ಧನ್ಯವಾದಗಳು.

shivu.k said...

ಶ್ರೀಧರ್ ಭಟ್,

ನೀವು ನನ್ನನ್ನೂ ತುಂಬಾ ಹೊಗಳುತ್ತಿದ್ದೀರಿ...

ನನ್ನೆಲ್ಲಾ ಬರವಣಿಗೆಗೂ ಹಾಸ್ಯ ಇರಲೇ ಬೇಕು ಎನ್ನುವುದು ನನ್ನ ಆಸೆ. ಇದುವರೆಗೂ ಹಾಗೆ ಹಾಗಿದೆ. ಮುಂದೇನಾಗುತ್ತೆ ಗೊತ್ತಿಲ್ಲ...

ಮತ್ತೆ ನಿಮ್ಮ ಉಪಸಂಹಾರ ನನಗಿಷ್ಟವಾಯಿತು...

ಹೀಗೆ ಬರುತ್ತಿರಿ..ಧನ್ಯವಾದಗಳು.

NiTiN Muttige said...

enri shivu avare, 1 jirale sutta ishtella kathe hanidu bittiddira!!

punya aa oushadha nimmannu mane bittu hoguvante maadalillavalla!!! :) chennagide...

shivu.k said...

ಶಮ,

ನಾನು ಏನೇ ಸಿಕ್ಕಿದ್ರೂ ಬರೆಯೋಲ್ಲ ಕಣ್ರೀ...ಬರೆಯುವಾಗ ನನ್ಗೆ ಇಷ್ಟವಾದ್ರೆ ಮಾತ್ರ ಬ್ಲಾಗಿಗೆ ಹಾಕುತ್ತೇನೆ. ಮತ್ತೆ ನೀವು ಕೇಳಿದಂತೆ ನನ್ನ ಪಾದ zerox ಅಗೋಲ್ಲ...ಯಾಕಂದ್ರೆ ಅದಕ್ಕೆ ನನ್ನ ಕಾಲನ್ನು zerex ಯಂತ್ರದಲ್ಲಿಡಲೂ ಆಗೋಲ್ಲ [ತಮಾಷೆಗೆ ಹೇಳಿದೆ].

ಮೊನ್ನೆ ನಿಮ್ಮ ಯಜಮಾನರ ಕಾರ್ಯಕ್ರಮ ನೋಡಲಾಗಲಿಲ್ಲ. ಮತ್ತೆ ನೀವು ಸಿಕ್ಕಾಗ ಸಿ.ಡಿ ಕೊಡಿ. ಅಥವ ಬ್ಲಾಗಿನಲ್ಲಿ ಹಾಕಿ..
ಧನ್ಯವಾದಗಳು.

shivu.k said...

ಮಲ್ಲಿಕಾರ್ಜುನ್,

ಆಡುಗೆ ಮನೆಯ ಪ್ಯಾರ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

ಜಿರಲೆಗಳ ವಿಚಾರದಲ್ಲಿ ನಿಮ್ಮ ಅಭಿಪ್ರಾಯ ಸರಿಯಿದೆ...

ಧನ್ಯವಾದಗಳು.

shivu.k said...

ಶ್ರೀನಿಧಿ ಹಂದೆ,

ಧನ್ಯವಾದಗಳು.

shivu.k said...

ಪ್ರಶಾಂತ್,

ಜಿರಲೆ ಬಗ್ಗೆ ನೀವು ಹೇಳಿದ ಮಾತು ಸರಿಯಾಗಿದೆ...

ಆಕಾಶ ಕೆಳಗೇಕೆ ಬಂತು...ನೀವು ಕೂಡ ಜಿರಲೆಯನ್ನು ತಲೆಕೆಳಗು ಮಾಡಿ ನೋಡಿ..ಏನನ್ನಿಸುತ್ತೆ. ಹೇಳಿ..

ಈ ಲೇಖನದಲ್ಲಿ ಫೋಟೋ ಬೇಕಂತಲೇ ಹಾಕಿಲ್ಲ. ಓದುತ್ತಾ ಜಿರಲೆ ನಿಮ್ಮ ಪಕ್ಕದಲ್ಲಿ ಹರಿದಾಡಿದಂತಿರಬೇಕು ಅನ್ನುವ ಆಸೆ ನನ್ನದು. ಮತ್ತೊಮ್ಮೆ ಓದಿ ನಿಮಗೆ ಹಾಗೆ ಅನ್ನಿಸಿದರೆ ಹೇಳಿ..
ಧನ್ಯವಾದಗಳು.

shivu.k said...

ಶ್ವೇತ ಮೇಡಮ್,

ಜಿರಲೆ ಲೇಖನವನ್ನು ಓದಿ ಇಷ್ಟಪಟ್ಟಿದ್ದೀರಿ..ನೀವು ಹೇಳಿದಂತೆ ಜಿರಲೆ ಮಾತ್ರ ಹೀರೊ ಅಲ್ಲ. ಈ ಪ್ರಪಂಚದಲ್ಲಿರುವ ಪ್ರತಿಯೊಂದು ಜೀವಿಯೂ ಹೀರೊ ಅನ್ನುವುದು ನನ್ನ ಅಭಿಪ್ರಾಯ...ಬಿಡುವು ಮಾಡಿಕೊಂಡು ಎರಡು ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು.

ಮುಂದಿನ ಬರಹ ಖಂಡಿತ ಹಾಸ್ಯವಲ್ಲ. ಒಂದು ಗಂಭೀರ ಕತೆ. ಖಂಡಿತ ಬರುತ್ತೀರಲ್ಲ....

ಧನ್ಯವಾದಗಳು.

shivu.k said...

ಶಾಂತಲ ಮೇಡಮ್,

ತುಂಬಾ ದಿನಗಳ ನಂತರ ನನ್ನ ಬ್ಲಾಗಿಗೆ ಬಂದಿದ್ದೀರಿ..ಎರಡು ಭಾಗಗಳನ್ನು ಓದಿ ಇಷ್ಟಪಟ್ಟಿದ್ದೀರಿ..

ನೀವು ಇಲ್ಲಿ ನಿಮ್ಮ ಮನೆಗೆ ಬಂದಾಗ ನೆಮ್ಮದಿಯಾಗಿ ಪುಸ್ತಕ ಓದಲು ಖಂಡಿತ ನಿಮ್ಮ ಪ್ರಕಾಶ್ ಹೆಗಡೆಯವರನ್ನು ಬೇಟಿಮಾಡಿ ಅವರು ಖಂಡಿತ ಸರಿಯಾದ ಪರಿಹಾರ ಕೊಡುತ್ತಾರೆ. ನಂತರ ನೀವು ನೆಮ್ಮದಿಯಾಗಿ ಪುಸ್ತಕ ಓದಬಹುದು...

ಹೀಗೆ ಬರುತ್ತಿರಿ...

ಧನ್ಯವಾದಗಳು.

shivu.k said...

ಹರೀಶ್,

ಜಿರಲೆ ಕತೆ ನಿಮಗಿಷ್ಟವಾಯಿತಾ...ಮತ್ತೆ ನನ್ನ ಆನುಭವವನ್ನು ಬಿಡುವಾದಾಗ ಹೇಳಿ ಅಂದಿದ್ದೀರಿ..ಬೇಡ ಕಣ್ರೀ..ನಿಮಗೆ ಬೋರ್ ಆಗಿಬಿಡುತ್ತೆ...

ನಿಮ್ಮ ಅನುಭವದಂತೆ ನಾವು ಮನೆ ಬದಲಿಸಲು ಜಿರಲೆಯೂ ಒಂದು ಕಾರಣ....
ಹೀಗೆ ಬರುತ್ತಿರಿ..

ಧನ್ಯವಾದಗಳು.

shivu.k said...

ಬಾಲು ಸರ್,

ಜಿರಲೆ ಕತೆ ಅಷ್ಟೊಂದು ರಸಮಯವೇ...ನಿಮ್ಮಂತೆ ನಮ್ಮ ಶ್ರೀಮತಿ ಇಷ್ಟಪಡಲಿಲ್ಲವಲ್ರೀ....[ಈ ಲೇಖನವನ್ನು ಓದಿ ನನ್ಗೆ ಬೈದಿದ್ದುಂಟು].

ಮತ್ತೆ ನೀವು ನನ್ನ ಆಸೂಯೆಯಿಂದ ನನ್ನ ಮನೆಯ ವಿಳಾಸ ಕೊಟ್ಟರೂ ಅವಕ್ಕೆ ದಾರಿ ತಪ್ಪಿಸಲು ನನ್ನಲ್ಲಿ ಉಪಾಯ ಉಂಟು...

ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...

shivu.k said...

ನಿತಿನ್,

ಜಿರಲೆ ಕತೆ ಇಷ್ಟವಾಯಿತಾ...

ಮತ್ತೆ ಖಂಡಿತ ಆ ಔಷದ ನನಗೆ ಗುಣಾತ್ಮಕವಾಗಿ ಕೆಲಸ ಮಾಡಿರುವುದರಿಂದ ನನಗೆ ಸಧ್ಯ ಮನೆ ಬಿಡುವ ತೊಂದರೆಯಿಲ್ಲ...

ಧನ್ಯವಾದಗಳು.

ಅನಿಲ್ ರಮೇಶ್ said...

ಶಿವು,
ಜಿರಲೆ ಕತೆ ಚೆನ್ನಾಗಿದೆ.. cock-ರೋಚಕ ಬರಹ..

ಇನ್ನೂ ಇದೆಯೋ ಹೇಗೆ?

-ಅನಿಲ್

shivu.k said...

ಅನಿಲ್,

ಜಿರಲೆ ಕತೆ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು. ಮತ್ತೆ ಮತ್ತೆ ಜಿರಲೆಯನ್ನೇ ಬಿಟ್ಟರೆ ಬೇಸರವಾಗುವುದಿಲ್ಲವೇ...

ಮುಂದೆ ನಾನು ಇಷ್ಟಪಟ್ಟು ಬರೆದ ಗಂಭೀರ ಬರುತ್ತೆ ಬರುತ್ತಿರಲ್ಲ...

Prabhuraj Moogi said...

ಕೆಲಸದೊತ್ತಡದಲ್ಲಿ ಇಂದು ಬರಲಾಯಿತು, ಜಿರಲೆ ಕಥಾನಕ ಚೆನ್ನಾಗಿದೆ, ಹಿಂದೆ ನನ್ನ ಕೊಲೀಗು ಮನೇಲಿ ಮತ್ತೆ ಯಾರ್ಯಾರಿದಾರೆ ಅಂತ್ ಕೇಳಿದ್ದಕ್ಕೆ... ಎರಡು ಜಿರಲೆ ಒಂದು ಸೊಳ್ಳೇ ಅಂತ ಹೇಳಿದ್ದೆ :)
ನಮಗೂ ಈ ಕಾಟದ ಅನುಭವವಿದೆ, ಈಗ್ ಹಿಟ್ ಹೊಡೆದು ಎಲ್ಲ ಸಾಯಿಸಿ ನಮ್ಮ ಗೆಲುವಾಗಿದೆ, ಮತ್ತೆ ಅವುಗಳ ಪಡೆ ತಯ್ಯಾರಾಗುತ್ತಿದೆ, ಎರಡನೇ ಮಹಾಯುಧ್ಧಕ್ಕೆ ನಾವೂ ರೆಡಿ

shivu.k said...

ಪ್ರಭು,

ತಡವಾಗಿ ಬಂದಿದ್ದರೂ ಪರ್ವಾಗಿಲ್ಲ. ನಾನು ಕಳೆದ ಹತ್ತು ದಿನಗಳಿಂದ ಜಾಸ್ತಿ ಬ್ಯುಸಿಯಾಗಿದ್ದೇನೆ. ಬೇರೆಯವರ ಬ್ಲಾಗುಗಳಿಗೆ ಹೋಗಲಾಗುತ್ತಿಲ್ಲ.

ಮತ್ತೆ ನನ್ನ ಜಿರಲೆ ಲೇಖನವನ್ನು ಇಷ್ಟಪಟ್ಟು ನಿಮ್ಮ ಅನುಭವ ಹೇಳಿದ್ದೀರಿ. ಮತ್ತೆ ನೀವು ಸರಿಯಾಗಿಯೇ ಯುದ್ಧಕ್ಕೆ ಸಿದ್ಧರಾಗಿ...ಅದಕ್ಕಾಗಿ all the best!

Guruprasad said...

ತುಂಬ ಚೆನ್ನಾಗಿ ಇದೆ ಶಿವೂ,, ಜಿರಳೆ ಪುರಾಣ... ಅದನ್ನು ನೀವು ವಿವರಿಸಿರುವ ರೀತಿ ಇನ್ನು ಚೆನ್ನಾಗಿ ಇದೆ....
ನಾನು ಒಂದು ದಿನ ಈ ಜಿರಳೆ ಕಾಟ ದಿಂದ ರೋಸಿ ಹೋಗಿದ್ದೆ, ಮಂಚದ ಕೆಳಗಡೆ ಒಂದು ಹಳೆ ಹಾಸಿಗೆ ಯನ್ನು ಎಲ್ಲೊ ಮೂಲೆಯಲ್ಲಿ ಇತ್ತಿದ್ವಿ,,, ಬಿಸಿಲಿಗೆ ಹಾಕೋಣ ಅಂತ ಮೇಲೆ ತೆಗೆದು ಕೊಂಡು ಹೋಗಿ ತೆಗೆದು ನೋಡಿದರೆ,,, ಏನಿಲ್ಲ ಅಂದ್ರು ಒಂದು ೧೦೦ ಜಿರಳೆಗಳ ಸಂಸಾರ ಅದರಲ್ಲಿ ಇತ್ತು,,, ಅವೊತ್ತು ಎಷ್ಟು ಸಿಟ್ಟು ಬಂತು ಅಂದ್ರೆ,, ಒಂದು ಪೊರಕೆ ತೆಗೆದುಕೊಂಡು,,, ಕೈ ಗೆ ಸಿಕ್ಕ ಜಿರಳೆಗಳನ್ನ ಹೊಡೆದಿದ್ದೆ ಹೊಡೆದಿದ್ದು,,, ಪಾಪ ಎಷ್ಟು ಜಿರಳೆ ನನ್ನ ಪೊರಕೆ ಏಟಿಗೆ ಸತ್ತವೋ ಗೊತ್ತಿಲ್ಲ....ಆಮೇಲೆ ಹಳೇ ಹಾಸಿಗೆ ಸಮೇತ ಹೊರಗಡೆ ಎಸೆದು ಬಂದದ್ದಾಯಿತು ....

shivu.k said...

ಗುರು,

ನಿಮ್ಮ ಹಾಸಿಗೆಯಲ್ಲಿ ನೂರಕ್ಕೂ ಹೆಚ್ಚು ಜಿರಲೆ ಸಂಸಾರವೇ...ಗುಡ್....ನಿಮ್ಮ ಕತೆಯೂ ಚೆನ್ನಾಗಿಯೇ ಇರಬಹುದು ಅಲ್ವಾ.....ಎಲ್ಲವನ್ನು ಸಾಯಿಸಿದಾಗ ನಿಮಗೇನು ಅನ್ನಿಸಲಿಲ್ವ...ಹೋಗ್ಲಿ ಸಾಯಿಸಿದ ಮೇಲೆ ಆಯ್ತಲ್ಲ...ಇನ್ನು ಮುಂದಾದರೂ ಹುಷಾರಾಗಿರಿ...

ನನ್ನ ಜಿರಲೆ ಕತೆಯನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...

ರೂpaश्री said...

ಶಿವು ಅವರೆ,
ಬಹಳ ಹಾಸ್ಯಮಯ ಲೇಖನ!! ಜಿರಲೆಗಳು ಅಡುಗೆಮನೆಯಲ್ಲಿ ಬಂಗಿ ಜಂಪ್, ಟ್ರೆಕ್ಕಿಂಗ್ ಮಾಡುವುದು ಎಲ್ಲಾ ಓದಿ ನಗುಬಂತು:)
ಆದ್ರೆ ಈ ಜಿರಲೆ ಕಂಡ್ರೆ ಜನರಿಗೆ ಯಾಕೆ ಇಷ್ಟು ಕೋಪ? ಅವೂ ಬದುಕಬೇಕು ಅಲ್ವಾ?

Me, Myself & I said...

ಶಿವೂ ಸಾರ್,

ಅಬ್ಬಬ್ಬಾ!! ಎಂತಹ ವಿಶ್ಲೇಷಣೆ?

ನೀವು ಕರ್ನಾಟಕ ರಾಜ್ಯದ ಮಾನ್ಯ ಸಿ.ಎಂ ಅವರಿಗೆ ಆಪ್ತ ಕಾರ್ಯದರ್ಶಿ ಆಗ್ಬೋದು ಅನ್ನುಸ್ತಿದೆ. ಇರ್ಲಿ ನಿಮ್ಮ ಸೊಗಸಾದ ಬರಹಕ್ಕೆ ಧನ್ಯವಾದಗಳು.

ಒಮ್ಮೆ ಜಿರಳೆ ಕಾಟ ಅತಿಯಾದಾಗ ನಾನೂ ಅದನ್ನ ಸಹಿಸದೆ ನನ್ನ ಕೋಪದ ಕೈಯಲ್ಲಿ ಬುದ್ದಿ ಕೊಟ್ಟು, ಅಲ್ಲೇ ಪಕ್ಕದ ಕಿರಾಣಿ ಅಂಗಡಿಯಿಂದ ಒಂದೆರಡು ಜಿರಳೆ ಸ್ಪೆಷಲ್ ಊದ್ಬತ್ತಿ ತಂದು ಹಚ್ಚಿ, ಅಂದಾಜು 60 ಜಿರಲೆಗಳ ಮಾರಣ ಹೋಮ ಮಾಡಿಬಿಟ್ಟಿದ್ದೆ. :( ಸದ್ಯ ಆಗ ನೀವಿನ್ನು ಈ ರೀತಿ "ಅಖಿಲ ಕರ್ನಾಟಕ ಜಿರಳೆ ಸಂರಕ್ಷಣೆ ಸಂಘ"ನ ಆರಂಬಿಸಿರ್ಲಿಲ್ಲಾ ಅಂತ ಕಾಣುತ್ತೆ. ನಾನು ಬಚಾವ್.

shivu.k said...

ಲೋದ್ಯಾಶಿ ಸರ್,

ನಾನು ಮಾತ್ರ ಕರ್ನಾಟಕದ ಸಿ ಎಂ ಗೆ ಕಾರ್ಯದರ್ಶಿಯಾಗಲಾರೆ. ಈಗ ನಾನು ನೆಮ್ಮದಿಯಾಗಿರುವುದು ನಿಮಗಿಷ್ಟವಿಲ್ಲವೇ?

ನನ್ನ ಬರಹವನ್ನು ಇಷ್ಟಪಟ್ಟು ನಿಮ್ಮ ಜಿರಲೆಯ ಅನುಭವವನ್ನು ಹೇಳಿದ್ದೀರಿ...ಧನ್ಯವಾದಗಳು.
ಸಾಧ್ಯವಾದರೆ ಮೊದಲ ಭಾಗವನ್ನು ಓದಿ.