Saturday, February 6, 2010

ಅವತಾರ್ ವರ್ಸಸ್ ಬಬ್ರುವಾಹನ

ಆಗ ತಾನೆ "ಅವತಾರ್" ಸಿನಿಮಾ ನೋಡಿ ಬರುತ್ತಿದ್ದೆ. ದಾರಿಯುದ್ದಕ್ಕೂ ಅದೇ ಗುಂಗು, ಅದರ ನಿರ್ದೇಶಕ ಮತ್ತು ನಿರ್ಮಾಪಕ ಕ್ಯಾಮೆರಾನ್, .........................................ಅದರಲ್ಲಿ ಕೆಲಸ ಮಾಡಿದ ಅಲ್ಲಲ್ಲ.....ಈ ಸಿನಿಮಾವನ್ನೇ ತಮ್ಮ ಊಟ ತಿಂಡಿ ನಿದ್ರೆಯಾಗಿಸಿಕೊಂಡ, ಕಲಾ ನಿರ್ದೇಶಕರು, ಕ್ಯಾಮೆರಾಮೆನ್, ಚಿತ್ರದ ದೃಶ್ಯಕಾವ್ಯವನ್ನು ಸೃಷ್ಟಿಸಲು ಹಗಲು ರಾತ್ರಿಯೆನ್ನದೇ ಕೆಲಸಮಾಡಿದ ಗ್ರಾಫಿಕ್ಸ ತಂತ್ರಜ್ಞರು, ಕಲಾವಿದರೂ ಪ್ರತಿಯೊಂದು ಪಾತ್ರಗಳನ್ನು ಕಂಪ್ಯೂಟರುಗಳಲ್ಲಿ, ನಿಜವಾದ ಮಾಡೆಲ್ಲುಗಳಲ್ಲಿ ಸೃಷ್ಟಿಸಿ ನಿರ್ದೇಶಕ ಕ್ಯಾಮೆರಾನ್‍ಗೆ ತೋರಿಸಿದಾಗ, ಅರೆರೆ....ಇದು ಈ ರೀತಿ ಬೇಡ, ಅ ರೀತಿ ಮಾಡಿ, ಇದು ಓಕೆ ಅದ್ರೂ ಇದರಲ್ಲಿ ಇನ್ನೂ ಸ್ವಲ್ಪ ವೈವಿದ್ಯತೆ ಬೇಕು, ಇದು ನೋಡಿ ಚೆನ್ನಾಗಿದೆ, ಆದ್ರೆ ಇನ್ನೂ ಸ್ವಲ್ಪ ಪರಿಪೂರ್ಣತೆ ಕೊಡಲು ಸಾಧ್ಯವೇ ಅಂಥ ಪ್ರತಿ ಪಾತ್ರಗಳು, ಗಿಡಗಳು, ಎಲೆಗಳು, ಬೆಳಕುಚೆಲ್ಲುವ ಹುಳುಗಳು, ಪ್ರಾಣಿಗಳು, ತೇಲಾಡುವ ಬೆಟ್ಟಗಳು, ಅದಕ್ಕೆ ಕೊಂಡಿಗಳಾದ ರಾಕ್ಷಸಗಾತ್ರದ ಬಿಳಲುಗಳು, ಹಾರಾಡುವ ಪಕ್ಷಿಗಳು, ರಾತ್ರಿಸಮಯದ ಆ ಪ್ರಕೃತಿಯ ಸ್ವರ್ಗ, ಇತ್ಯಾದಿಗಳನ್ನು ನೋಡಿ ತಂತ್ರಜ್ಞರಿಗೆ ಈ ನಿರ್ದೇಶಕ ಕ್ಯಾಮೆರಾನ್ ಎಂಥ ಗೋಳು ಕೊಟ್ಟಿರಬೇಕು. ಅವರು ಹಗಲು ರಾತ್ರಿ ಕೊನೆಗೆ ಕನಸಲ್ಲೂ ಕುಸುರಿಕೆಲಸಮಾಡಿ ತಕ್ಷಣ ಎದ್ದು ಅದನ್ನೇ ಮರುಸೃಷ್ಟಿಸಿರುವ ಕೆಲಸಕ್ಕೆ ತೊಡಗಿಕೊಂಡಿದ್ದರೆ ಮಾತ್ರ ಯಾರು ಕಾಣದಂತ, ಕಲ್ಪಿಸಿಕೊಳ್ಳದಂತ ಮಾಯಾಲೋಕ ಸೃಷ್ಟಿಸಲು ಸಾಧ್ಯವಲ್ಲವೇ ಅಂದುಕೊಳ್ಳುವ ಇಡಿ ಸಿನಿಮಾ ತಂಡಕ್ಕೆ ನನ್ನ ದೀರ್ಘ ನಮಸ್ಕಾರಗಳನ್ನು ಹಾಕಿ ಮನೆಗೆ ಬಂದೆ.

ಊಟದ ಸಮಯ. ಟಿವಿಯಲ್ಲಿ ಬಬ್ರುವಾಹನ ಸಿನಿಮಾ ಬರುತ್ತಿತ್ತು. ನಾನು ಅವತಾರ್ ಸಿನಿಮಾಗೆ ಹೋಗಿದ್ದನ್ನು ಹೇಮಾಶ್ರಿಗೆ ಹೇಳಲ್ಲಿಲ್ಲ. ಇಬ್ಬರೂ ಊಟಮಾಡುತ್ತಿದ್ದೆವು. ನಾನು ಟಿವಿಯಲ್ಲಿನ ಸಿನಿಮಾ ಸರಿಯಾಗಿ ಗಮನಿಸದೇ ಅವತಾರ್ ಹ್ಯಾಂಗವರ್‍ನಲ್ಲಿ ಊಟ ಮಾಡುತ್ತಿದ್ದೆ. ಆಗ ಬಂತಲ್ಲ ಅರ್ಜುನ ಮತ್ತು ಬಬ್ರುವಾಹನ ನಡುವಿನ ವಾಗ್ಯುದ್ದ ತದನಂತರ ಅವರ ಬಾಣಪ್ರಯೋಗ. ಅರ್ಜನ ಮೊದಲು ಬಿಟ್ಟ ಅದೆಂತದೋ ಬೆಂಕಿಯುಗಳುವ ಅಸ್ತ್ರ ಅದಕ್ಕೆ ವಿರುದ್ಧವಾಗಿ ಬಬ್ರುವಾಹನ ಬಿಟ್ಟ ಮತ್ತೊಂದು ಅದಕ್ಕಿಂತ ಶಕ್ತಿಶಾಲಿ ಅಸ್ತ್ರ. ಅವೆರಡು ಆಕಾಶದಲ್ಲಿ ಹಾರಾಡಿ ಒಂದಕ್ಕೊಂದು ತಾಗಿ ಗುದ್ದಾಡಿ ಕೊನೆಗೊಂದು ಗೆದ್ದಿತು. ಮತ್ತೆ ಮತ್ತೊಂದು ಬಾಣ ಪ್ರಯೋಗ ಇಬ್ಬರಕಡೆಯಿಂದ.
" ರೀ ಇದೇನ್ರಿ ಇದು ಅರ್ಜುನ ಮತ್ತು ಬಬ್ರುವಾಹನ ಇಬ್ಬರೂ ಹೆಚ್ಚೆಂದರೆ ನೂರು ಮೀಟರ್ ದೂರವಿರಬಹುದು. ಇಬ್ಬರೂ ಸರಿಯಾದ ಗುರಿಕಾರರೆಂದಮೇಲೆ ಅವನು ಬಿಟ್ಟ ಬಾಣ ಇವನಿಗೆ ತಗುಲಬೇಕು, ಇವನು ಬಿಟ್ಟಬಾಣ ಅವನಿಗೆ ನಾಟಿ ಸಾಯಬೇಕು, ಆದ್ರೆ ಇಲ್ಲಿ ಇದ್ಯಾಕೆ ಆ ಬಾಣಗಳೆರಡು ಆಕಾಶಕ್ಕೆ ಹೋಗ್ತವಲ್ಲ?" ಅವಳಿಂದ ಸಡನ್ನಾಗಿ ಬಂದ ಪ್ರಶ್ನೆ ನನ್ನನ್ನು ಒಂದುಕ್ಷಣ ತಬ್ಬಿಬ್ಬು ಮಾಡಿತು. ಅವಳು ಕೇಳುತ್ತಿರುವುದು ಸರಿಯಾಗಿದೆಯಲ್ಲಾ. ಆದ್ರೆ ತಕ್ಷಣ ನನಗೆ ಉತ್ತರ ನೀಡಲಾಗಲಿಲ್ಲ. ಅವಳ ಪ್ರಶ್ನೆಯೇ ನನ್ನ ಪ್ರಶ್ನೆಯೂ ಆಗಿತ್ತು. ಸ್ವಲ್ಪ ಹೊತ್ತು ಆಲೋಚಿಸಿ, " ನೀನು ಬುದ್ದಿವಂತೆಯಾಗಿದ್ದೀಯಾ ಅನ್ನಿಸುತ್ತೆ, ಇದೇ ಸಿನಿಮಾವನ್ನು ನಿನ್ನ ಬಾಲ್ಯದಲ್ಲಿ ನೋಡಿದಾಗ ಯಾರಿಗೂ ಅವಾಗ ಈ ಪ್ರಶ್ನೆಯನ್ನು ಕೇಳಲಿಲ್ಲವೇ" ನಾನು ಮರು ಪ್ರಶ್ನೆ ಹಾಕಿ ಅವಳಿಂದ ಎಂಥ ಉತ್ತರ ಬರಬಹುದು ಅಂತ ಕಾಯುತ್ತಿದ್ದೆ.
"ನೋಡ್ರಿ ನಮ್ಮ ಚಿಕ್ಕಂದಿನ ಹಬ್ಬ ಹರಿದಿನಗಳಲ್ಲಿ, ಗಣೇಶನ ದೊಡ್ಡ ಪೆಂಡಾಲುಗಳಲ್ಲಿ[ಅರಸಿಕೆರೆಯಲ್ಲಿಯಲ್ಲಿ ಗಣೇಶ ಪೆಂಡಾಲಿನಲ್ಲಿ ತಿಂಗಳುಗಟ್ಟಲೆ ಗಣೇಶನನ್ನು ಇಟ್ಟು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಹಳೆ ಸಿನಿಮಾಗಳನ್ನು ಹಾಕುತ್ತಿದ್ದರಂತೆ]ವಿಧಿವಿಲಾಸ, ಜಗದೇಕವೀರ, ಬಬ್ರುವಾಹನ, ಭೂಕೈಲಾಸ ಹೀಗೆ ಅನೇಕ ಸಿನಿಮಗಳನ್ನು ಹಾಕುತ್ತಿದ್ದರಲ್ಲಾ ಅದು ನಮಗೆ ಮೊದಲೇ ಗೊತ್ತಾಗಿ ಸ್ಕೂಲ್ ಬಿಟ್ಟ ತಕ್ಷಣ ಮನೆಯಲ್ಲಿ ಬ್ಯಾಗ್ ಬಿಸಾಡಿ ಅಲ್ಲಿ ಗೆಳತಿಯರೊಂದಿಗೆ ಹೋಗಿ ಕುಳಿತುಬಿಡುತ್ತಿದ್ದೆ. ಅದರ ಆನಂದವೇ ಬೇರೆ ಬಿಡ್ರಿ" ಅಂದಳು.
"ಆ ಸಿನಿಮಾಗಳಲ್ಲೂ ಇಂಥ ಸನ್ನಿವೇಶಗಳನ್ನು ನೋಡಿದಾಗ ನನಗೆ ಕೇಳಿದಂತೆ ನೀನು ಆವಾಗ ಯಾರಿಗೂ ಈ ರೀತಿ ಪ್ರಶ್ನೆ ಕೇಳಲಿಲ್ವಾ" ನಾನು ಕೇಳಿದೆ.
"ಅಯ್ಯೋ ಹೋಗ್ರಿ, ಆಗಿನ ಮಜವೇ ಬೇರೆ, ನಮ್ಮೂರಲ್ಲಿ ಇದ್ರೆ ಇನ್ನೂ ಅಂತ ಸಿನಿಮಾ ನೋಡಿ ಖುಷಿ ಪಡಬಹುದಿತ್ತು. ನಿಮ್ಮನ್ನು ಮದುವೆಯಾಗಿ ಬೆಂಗಳೂರಿಗೆ ಬಂದಮೇಲೆ ಅವೆಲ್ಲಾ ಎಲ್ಲಿ ಸಿಗುತ್ತವೆ ಹೇಳಿ" ಅಂತ ನನಗೇ ಮರು ಪ್ರಶ್ನೆ ಹಾಕಿದಳು. ಅವಳ ಪ್ರಶ್ನೆಗೆ ನಾನು ಉತ್ತರಿಸದಿದ್ದರೂ ಬೆಂಗಳೂರಿಗೆ ಬಂದರೆ ಅಂತ ಖುಷಿಯನ್ನು ಎಲ್ಲರೂ ಕಳೆದುಕೊಂಡುಬಿಡುತ್ತಾರ. ನನ್ನಲ್ಲಿ ಹೊಸ ಪ್ರಶ್ನೆ ಉದ್ಬವವಾಗಿತ್ತು.

ಬೇರೆ ಊರಿನಿಂದ ಬಂದವರಿಗೆ ಈ ರೀತಿ ಆದರೆ ನನ್ನಂತೆ ಇಲ್ಲೇ ಹುಟ್ಟಿ ಬೆಳೆದವರ ಕತೆಯೇನು ಅಂದುಕೊಂಡಾಗ ನನ್ನ ಬಾಲ್ಯದ ನೆನಪು ಮರುಕಳಿಸಿತು.

ನಾನು ಐದನೇ ತರಗತಿಯಲ್ಲಿ ಓದುತ್ತಿದ್ದೆ. ಆಗ ನಮ್ಮ ರಸ್ತೆಗಳಲ್ಲಿ ಗಣೇಶ, ಕನ್ನಡ ರಾಜ್ಯೋತ್ಸವ, ಇತ್ಯಾದಿಗಳನ್ನು ನಡೆಸುವಾಗ ಕಡ್ಡಾಯವಾಗಿ ಒಂದೆರಡು ಸಿನಿಮಾಗಳನ್ನು ಹಾಕುತ್ತಿದ್ದರು. ನಾಳೆ ರಾತ್ರಿ ಇಂಥ ಸಿನಿಮಾ ಅಂತ ಮೈಕಿನಲ್ಲಿ ದೊಡ್ಡದಾಗಿ ಇವತ್ತೇ ಅನೌನ್ಸ್ ಮಾಡುತ್ತಿದ್ದರು. ಜೊತೆಗೆ ಅಲ್ಲೊಂದು ದೊಡ್ಡ ಕೈಬರಹವನ್ನು ಹಾಕಿಬಿಡುತ್ತಿದ್ದರು. ನಾನು ಗೆಳೆಯರೊಂದಿಗೆ ಬೆಳಿಗ್ಗೆ ಹೋಗುವಾಗ ಅದನ್ನು ನೋಡಿಬಿಟ್ಟರೆ ಮುಗೀತು. ರಾತ್ರಿ ಬೇಗ ಊಟ ಮುಗಿಸಿ ನನ್ನ ಕೈಲಿದ್ದ ಚಿಲ್ಲರೆ ಕಾಸಿಗೆ ಆಗ ಸಿಗುತ್ತಿದ್ದ ಕುರುಕುಲು ತಿಂಡಿಗಳನ್ನು ಜೇಬಿನಲ್ಲಿ ತುಂಬಿಸಿಕೊಂಡು ಗೆಳೆಯರೊಂದಿಗೆ ಸಿನಿಮಾ ಶುರುವಾಗುವ ಮೊದಲೇ ಮುಂದಿನಸಾಲಿನಲ್ಲಿ ಜಾಗವನ್ನು ಹಿಡಿದು ಕುಳಿತುಬಿಡುತ್ತಿದ್ದೆ. ಭೂಕೈಲಾಸ, ವಿಧಿವಿಲಾಸ, ಜಗದೇಕವೀರ, ಶ್ರೀನಿವಾಸ ಕಲ್ಯಾಣ, ಸತ್ಯಹರಿಸ್ಚಂದ್ರ,.................ಒಂದೇ ಎರಡೇ.........ಹತ್ತಾರು ಸಿನಿಮಾಗಳನ್ನು ಅದರೊಳಗಿನ ಮಾಯ ಮಂತ್ರಗಳನ್ನು ನೋಡಿ ಮಜಾ ಮಾಡುತ್ತಿದ್ದೆವು. ಆಗಲೂ ರಥವೇರಿ ಬಿಲ್ಲುಬಾಣಗಳ ಯುದ್ಧ, ಉದಯಕುಮಾರ್ ಒಮ್ಮೆ ಬಲಗೈಯಲ್ಲಿ ಚೂಂ ಅಂದು ಬಿಟ್ಟರೇ ಮುಗೀತು ಒಬ್ಬ ರಾಕ್ಷಸ ಬಂದುಬಿಡುತ್ತಿದ್ದ ಅವನು ಎಲ್ಲಾ ಯೋದರನ್ನು ಒಸಗಿಬಿಡುತ್ತಿದ್ದರೆ ನಮಗೆ ಸಿಟ್ಟು. ಆಷ್ಟರಲ್ಲಿ ರಾಜಕುಮಾರ್ ಬಿಟ್ಟಬಾಣ ಆಕಾಶವೆಲ್ಲಾ ಸುತ್ತಿ, ಎಲ್ಲೆಲ್ಲೋ ಅಲೆದಾಡಿ ಕೊನೆಗೆ ಆ ರಾಕ್ಷಸನಿಗೆ ತಗುಲಿ ಅವನು ಸತ್ತರೆ ನಮಗಂತೂ ನಾವೇ ಯುದ್ಧದಲ್ಲಿ ಗೆದ್ದಷ್ಟೂ ಸಂಭ್ರಮ. ಒಂದು ಕೋಣೆಯೊಳಗೆ ನಮ್ಮ ರಾಜಕುಮಾರ್ ಹೋದರೆ, ಅಲ್ಲಿರುವ ಪ್ರತಿಗೋಡೆಯಲ್ಲಿನ ವಸ್ತುಗಳು ಮಾಯಾವಸ್ತುಗಳೇ. ಒಂದು ಗೋಡೆಗೆ ಸಿಕ್ಕಿಸಿದ್ದ ಹುಲಿಮುಖವನ್ನು ಮುಟ್ಟಿದರೆ ಸಡನ್ನಾಗಿ ಎದುರಿಂದ ಈಟಿಯೊಂದು ನುಗ್ಗಿ ಬಂದು ರಾಜಕುಮಾರಿಗೆ ಚುಚ್ಚುವುದಲ್ಲದೇ ನಮಗೇ ಚುಚ್ಚಿಬಿಟ್ಟಿತ್ತೇನೋ ಅನ್ನಿಸಿ ಅದುರಿ, ಬೆದರಿಬಿಡುತ್ತಿದ್ದೆವು. ಸಿನಿಮಾ ನೋಡಿ ಮನೆಗೆ ಬಂದರೆ ರಾತ್ರಿ ಕನಸಲ್ಲೂ ಅದೇ ಬಂದು ಭಯದಿಂದ ಅಮ್ಮನನ್ನು ಅಪ್ಪನನ್ನು ಅಪ್ಪಿ ಮಲಗಿದ್ದು ನೆನಪಾಯಿತು.

ಅದೆಲ್ಲಾ ಆದರೂ ನಮಗೆ ಅಂಥ ಸಿನಿಮಾಗಳು ಬೇಕಿತ್ತು. ಅದರೊಳಗಿನ ಈ ಮಾಯಾ ಮಂತ್ರಗಳು, ಬಾಣ ಬಿರುಸುಗಳು ಬೇಕಿತ್ತು. ಇವತ್ತು ನಮ್ಮಲ್ಲಿ ಮೂಡಿದ ಈ ಪ್ರಶ್ನೆಗಳು ಅವತ್ತು ಮೂಡಲಿಲ್ಲವೇಕೆ? ಇಂಥವು ಸಿನಿಮಾ ಮಾತ್ರವಲ್ಲ, ಐದು ಆರನೇ ತರಗತಿಯಲ್ಲಿ ಸ್ಕೂಲ್ ಬಿಟ್ಟಕೂಡಲೇ ನಮ್ಮ ಮನೆಯ ಹತ್ತಿರವಿರುತ್ತಿದ್ದ ಗ್ರಂಥಾಲಯಕ್ಕೆ ನುಗ್ಗಿ ಅಲ್ಲಿರುವ ಚಂದಮಾಮ, ಬೊಂಬೆಮನೆ, ಬಾಲಮಿತ್ರದಲ್ಲೂ ಇಂಥವೇ ಮಾಯಾ ಮಂತ್ರಗಳು, ಸಪ್ತ ಸಾಗರಗಳು, ಪರ್ವತಗಳ ದಾಟಿ ಏಳುಸುತ್ತಿನ ಕೋಟಿಯೊಳಗಿನ ಪ್ರವೇಶದ್ವಾರಕ್ಕೆ ಹೋದರೇ ಅಲ್ಲಿಯೂ ಹೀಗೆ ಅನೇಕ ಬೆರಗುಗೊಳಿಸುವ ಅನೇಕ ಮಂತ್ರ ತಂತ್ರಗಳ ವಿದ್ಯೆಗಳು ನಮ್ಮನ್ನು ಸೂಜಿಗಲ್ಲಿನಂತೆ ಸೆಳೆದು ನಾವೇ ಒಂದು ಪಾತ್ರವಾಗಿ ಅಲ್ಲಿನ ಎಲ್ಲ ಅನುಭವಗಳನ್ನು ನಾವು ಅನುಭವಿಸಿ ಮೈಮರೆತಾಗಲೂ ಈಗ ಬಂದ ಪ್ರಶ್ನೆ ಆಗ ಏಕೆ ಬರಲಿಲ್ಲ?
ಬಹುಶಃ ಬಾಲ್ಯದ ಮುಗ್ಧತೆಯೇ ಇಂಥ ಪ್ರತಿಯೊಂದನ್ನು ಬೆರಗಿನಿಂದ ನೋಡಿ ಸಂಭ್ರಮಿಸುವುವುದನ್ನು ಕಲಿಸುತ್ತಿತ್ತೇನೋ. ಆದ್ರೆ ನಾವು ಹತ್ತನೇ ತರಗತಿ, ಪಿಯುಸಿ, ಪದವಿಗೆ ಬರುತ್ತಿದ್ದಂತೆ ಇಂಥ ಸಿನಿಮಾಗಳ ಬಗ್ಗೆ, ಬಾಲಮಿತ್ರ, ಚಂದಮಾಮ ಬರಹಗಳ ಬಗ್ಗೆ ನಮ್ಮ ತಿಳುವಳಿಕೆ ಹೆಚ್ಚಾಗಿ ಅದನ್ನು ಹೇಗೆ ಮಾಡುತ್ತಾರೆ ಅನ್ನುವುದು ತಿಳಿದು ಇದು ಇಷ್ಟೇನಾ.........ಇದೆಲ್ಲಾ ಬರೀ ಸುಳ್ಳು, ಗಿಮಿಕ್ಕು, ಅನ್ನಿಸತೊಡಗಿದ್ದು ನಮ್ಮ ಮುಗ್ಧತೆ ಮಾಯವಾಗಿ ನಾವು ಬುದ್ಧಿವಂತರಾಗಿದ್ದೇವೆ ಎನ್ನುವ ಅಲೋಚನೆ ನಮ್ಮಲ್ಲಿ ಮೂಡಿತ್ತು. ಅದ್ರೆ ಅದು ಬಹುಕಾಲ ಇರಲಿಲ್ಲ. ಮತ್ತೆ ವಿದೇಶಿ ಸಿನಿಮಾಗಳಲ್ಲಿ ಮತ್ತೆ ನಮ್ಮ ನಿರೀಕ್ಷೆ, ನಮ್ಮ ಬುದ್ಧಿವಂತಿಕೆಯನ್ನು ಮೀರಿ "ಸ್ಪೈಡರ್‍ ಮ್ಯಾನ್, ಟೈಟಾನಿಕ್, ಟರ್ಮಿನೇಟರ್, ದ ಡೇ ಆಪ್ಟರ್ ಟುಮಾರೋ, ಇಂಡಿಪೆಂಡೆನ್ಸ್ ಡೇ, ೨೦೧೨, ಲಾರ್ಡ್ ಆಫ್ ರಿಂಗ್ಸ್, ಹ್ಯಾರಿ ಪಾಟರ್, ಇನ್ನೂ ಅನೇಕ ಸಿನಿಮಾಗಳು ಮತ್ತೆ ನಮ್ಮಲ್ಲಿ ಅಡಗಿದ್ದ ಮುಗ್ಧ ಮನಸ್ಸನ್ನು ಎಚ್ಚರಗೊಳಿಸಿ ಮತ್ತೆ ಬೆರಗು ಗೊಳಿಸಿಬಿಟ್ಟವು. ಅವುಗಳ ಮುಂದೆ ನಮ್ಮ ಈ ಬಾಣ ಬಿರುಸುಗಳ ಬಬ್ರುವಾಹನ, ಮಾಯಾಬಜಾರ್, ಇತ್ಯಾದಿಗಳೆಲ್ಲಾ ಸವಕಲು ತಂತ್ರಜ್ಞಾನವೆನಿಸುವಷ್ಟು ಬುದ್ದಿವಂತರಾದರೂ ನಾವು ಸ್ಪೈಡರ್ ಮ್ಯಾನ್, ೨೦೧೨ ಇತ್ಯಾದಿಗಳಲ್ಲಿ ಹೊಸ ಅದ್ಭುತಗಳನ್ನು ನಿರೀಕ್ಷಿಸುತ್ತೇವೆಂದರೇ ನಮ್ಮ ನಮ್ಮಲ್ಲಿ ಅಡಗಿರುವ ಮುಗ್ದತೆಯೂ ಹೊಸ ತಂತ್ರಜ್ಞಾನವೆನ್ನುವ ಬೆರಗನ್ನು ನಿರೀಕ್ಷಿಸುತ್ತಾ ಆಗಾಗ್ಗೆ ಹೊರಬರಲು ಪ್ರಯತ್ನಿಸುತ್ತಿರುತ್ತದೆ ಅಲ್ಲವೇ. ಈಗಲೂ ನಮ್ಮ ಹಳೆತಲೆಮಾರಿನವರಿಗೆ ಬಬ್ರುವಾಹನ, ಮಾಯಾಬಜಾರುಗಳಂತ ಸಿನಿಮಾಗಳೇ ಸಂಭ್ರಮಿಸಲು ಬೇಕಾದರೆ, ಅವರಲ್ಲಿ ಇನ್ನೂ ಮುಗ್ದತೆ ಉಳಿದುಕೊಂಡಿದೆ ಅಂತ ಆಯಿತಲ್ಲವೇ.
ಆದ್ರೂ "ಅವತಾರ್" ಸಿನಿಮಾದಲ್ಲಿ ಯಾವ ತಂತ್ರಜ್ಞಾನವನ್ನು ಉಪಯೋಗಿಸಿದ್ದಾರೆ ಅನ್ನುವುದನ್ನು ಕಂಡುಹಿಡಿಯಲು ಪ್ರಯತ್ನಿಸಿದೆ. ಆಗಲಿಲ್ಲ. ಆಗದಿರವುದು ಒಳ್ಳೆಯದೆ. ಅದನ್ನು ತಿಳಿದುಕೊಂಡುಬಿಟ್ಟರೇ ಇಷ್ಟೇನಾ ಅನ್ನಿಸಿ ಅಂತ ಅದ್ಬುತ ಮಾಯಾಲೋಕವನ್ನು ಆನಂದಿಸುವ ಅವಕಾಶವನ್ನು ನಾವು ಕಳೆದುಕೊಂಡುಬಿಡುತ್ತೇವೆ ಅಲ್ವಾ.?

ಲೇಖನ
ಶಿವು.ಕೆ

50 comments:

PARAANJAPE K.N. said...

ಅವತಾರ್ ಮತ್ತು ಬಬ್ರುವಾಹನ ಎರಡನ್ನೂ ಸಮೀಕರಿಸಿ, ಜೊತೆಗೆ ನಿಮ್ಮ ಮತ್ತು ನಿಮ್ಮ ಮನೆಯವರ ಬಾಲ್ಯದ ನೆನಪುಗಳ ಸರಮಾಲೆಯನ್ನು ಕೊಟ್ಟಿದ್ದೀರಿ. ನಿಮ್ಮ ಬರವಣಿಗೆ ದಿನದಿ೦ದ ದಿನಕ್ಕೆ ಪ್ರಬುದ್ಧ ಆಗ್ತಿದೆ. ಓದಿ ಖುಷಿ ಆಯ್ತು.

sunaath said...

ಸಿನಿಮಾದ ತಂತ್ರ ಹಳೆಯದೇ ಅಗಿರಲಿ, ಹೊಸದಿರಲಿ, ಮನುಷ್ಯನಿಗೆ ಸಂತೋಷ ನೀಡುವದು, ಆ ಸಿನಿಮಾ ನೀಡುವ ರೋಮಾಂಚನ.
ಮಾಯಾಬಜಾರ ಸಿನೆಮಾದಲ್ಲಿ, ಘಟೋತ್ಕಚನು,"ವಿವಾಹ ಭೋಜನವಿದು..." ಎಂದು ಹಾಡುತ್ತ, ಅಲ್ಲಿರುವ ಭಕ್ಷ್ಯಗಳನ್ನು ಸ್ವಾಹಾ ಮಾಡುವ ವಿಡಿಯೋವನ್ನು ನಾನು ಇಂದಿಗೂ ನೋಡಿ ಆನಂದಿಸುತ್ತೇನೆ.

ದಿನಕರ ಮೊಗೇರ said...

ಶಿವೂ ಸರ್,
ತುಂಬಾ ಚೆನ್ನಾಗಿದೆ ಬರಹ.... ಹಳೆಯ ನೆನಪನ್ನು ಕೆದಕುತ್ತಾ , ಹೊಸತರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದೀರಿ.... ನಾನು '' ಅವತಾರ್'' ಫಿಲಂ ನೋಡಿಲ್ಲಾ..... ಈಗ ನೋಡುವ ಮನಸ್ಸಾಗುತ್ತಿದೆ..... ರಾಜಕುಮಾರ್ ಚಿತ್ರಗಳಲ್ಲಿನ ಯುದ್ದದ ಬಗ್ಗೆ ನಮಗೂ ತುಂಬಾ ವಿಸ್ಮಯ ಹುಟ್ಟುತ್ತಿತ್ತು.... ಎದುರಿಗೆ ಶತ್ರು ಇದ್ದಾಗ ಯಾಕೆ ಬಾಣಗಳನ್ನು ಮೇಲಕ್ಕೆ ಹೊಡೆಯುತ್ತಾರೆ ಅಂತ.......

ಗೌತಮ್ ಹೆಗಡೆ said...

nija sir neev baredaddu. ajnanave olledu jnanakkinta. jaasti tilkoloke hogabaardu kelavashtannu. makkala thara iddu bidabeku just enjoy maadkondu:)

ದೀಪಸ್ಮಿತಾ said...

ಆಗಿನ ಮುಗ್ಧತೆ, ಎಲ್ಲವನ್ನೂ ಬೆರಗಿನಿಂದ ನೋಡುವ ಬಾಲ್ಯ ಮತ್ತೆ ಬರುವುದಿಲ್ಲ. ಆಗ ಇಂಥದ್ದು ಎಷ್ಟೋ ವಸ್ತುಗಳು, ವಿಷಯಗಳು ಭಾರಿ ಆಶ್ಚರ್ಯ ಹುಟ್ಟಿಸುತ್ತಿದ್ದವು. ಮನೆಗೆ ಒಂದು ಟೇಪ್ ರೆಕಾರ್ಡರ್ ತಂದಾಗ, ಅದರಲ್ಲಿ ನನ್ನದೇ ಧ್ವನಿ ಕೇಳಿದಾಗ ಖುಷಿಯಿಂದ ನಮ್ಮ ಶಾಲೆಯಲ್ಲೆಲ್ಲ ಅದೊಂದು ದೊಡ್ಡ ಅದ್ಭುತ ಎಂಬಂತೆ ವರ್ಣನೆ ಮಾಡಿದ್ದೆ. ಈಗ ಐಪಾಡ್ ಇರಲಿ, MP3 ಇರಲಿ, ಮೊಬೈಲ್ ಇರಲಿ ಯಾವುದೂ ಆ ಖುಷಿ, ಆಶ್ಚರ್ಯ ಹುಟ್ಟಿಸುವುದಿಲ್ಲ.

ಆಗಿನ ಕಪ್ಪು ಬಿಳುಪು ಚಿತ್ರಗಳಲ್ಲಿ ತೋರುತ್ತಿದ್ದ ಮಾಯಾ ಮಂತ್ರ ದೃಶ್ಯಗಳು, 'ಮಾಯಾ ಬಜಾರ್' ಚಿತ್ರದಲ್ಲಿ ಘಟೋತ್ಕಚ ಮದುವೆ ಊಟವನ್ನು ನುಂಗುವ ದೃಶ್ಯಗಳು, ಹೀಗೆ ಎಲ್ಲವೂ ತುಂಬ ಬೆರಗು ಹುಟಿಸುತ್ತಿದ್ದವು. ಈಗಿನ ಮಕ್ಕಳಿಗೆ ಮೊಬೈಲ್, ಕಂಪ್ಯೂಟರ್, ಟಿವಿ, ಎಲ್ಲವೂ ಹುಟ್ಟುತ್ತಲೆ ನೋಡುವುದರಿಂದ ಯಾವುದೂ ವಿಶೇಷ ಎನಿಸುವುದಿಲ್ಲ, taken for granted ಅನಿಸುತ್ತದೆ.

ಮನಮುಕ್ತಾ said...

ಶಿವು ಅವರೆ,
ನಿಮ್ಮ ಲೇಖನ ಮತ್ತೆ ಹಳೆ ಮಾಯಮ೦ತ್ರದ ಸಿನಿಮಾಗಳ ನೆನಪನ್ನು ಕೆದಕಿತು..
ಮಾಯಾಬಜಾರ್, ರತ್ನಾಗಿರಿಯ ರಹಸ್ಯ..ಬಬ್ರವಾಹನ, ಸ೦ಪುರ್ಣರಾಮಾಯಣ್ ಗಳಲ್ಲಿನ ಮಾಯೆಗಳು ನಿಜಕ್ಕೂ ಬೇರೆಯೇ ಲೋಖಕ್ಕೆ ನಮ್ಮನ್ನು ಕೊ೦ಡೊಯ್ಯೂತ್ತವೆ..
ಅವತಾರ ಇನ್ನು ನೋಡಬೇಕು..
ಧನ್ಯವಾದಗಳು.

ಮನಸು said...

nija sir nimma niroopaNe, baalyadallina nenapu namagoo marukaLisuvante maadidiri

shivu.k said...

ಪರಂಜಪೆ ಸರ್,

ಅವತಾರ್ ಸಿನಿಮಾ ನೋಡಿ ಬಂದ ದಿನವೇ ಮನೆಯ ಟಿ.ವಿಯಲ್ಲಿ ಬಬ್ರುವಾಹನ ನೋಡಿದ್ದು, ನನ್ನಾಕೆ ಪ್ರಶ್ನೆಗಳೆಲ್ಲಾ ಕಾಕತಾಳಿಯ. ಆಗ ಹುಟ್ಟಿದ್ದೇ ಈ ಲೇಖನ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

shivu.k said...

ಸುನಾಥ್ ಸರ್,

ಆಗಿನಿಂದ ಈಗಿನವರೆಗೆ ಎಲ್ಲಾ ತಂತ್ರಗಳು ನಮ್ಮನ್ನು ರೋಮಾಂಚನಗೊಳಿಸಲಿಕ್ಕೆ ಬಂದಿವೆ. ಅದನ್ನು ಪ್ರತಿಕ್ಷಣ ಖುಷಿಯಿಂದ ಮೈಮರೆತು ನೋಡಿದಾಗಲೇ ಅಲ್ಲವೇ ಸಾರ್ ಅದು ವಿಶೇಷವೆನಿಸುವುದು. ನನಗೂ ಈಗಲೂ "ವಿವಾಹಬೋಜನವಿದು" ಹಾಡು, ಅದರ ತಂತ್ರಗಳು ಇಷ್ಟ.

shivu.k said...

ದಿನಕರ್ ಸರ್,

ಹೊಸತರ ಜೊತೆ ಹಳೆಯದನ್ನು ತಳುಕಿಹಾಕಿ ನೋಡಿದಾಗ ಸಿಗುವ ಆನಂದವನ್ನು ವರ್ಣಿಸಲು ಸಾಧ್ಯವಿಲ್ಲ. ಅದರ ಒಂದು ಸಣ್ಣ ಪ್ರಯತ್ನವಷ್ಟೇ ಇದು.

ಲೇಖನದಿಂದಾಗಿ ನಿಮಗೆ ಅವತಾರ್ ಸಿನಿಮಾ ನೋಡುವ ಆಸೆಯುಂಟಾಗಿದ್ದರೆ ಖಂಡಿತ ನೋಡಿ. ಅದೊಂದು ಅದ್ಭುತ ತಾಂತ್ರಿಕತೆಯ ಸಿನಿಮಾ..
ಧನ್ಯವಾದಗಳು.

shivu.k said...

ಗೌತಮ್ ಹೆಗಡೆ ಸರ್,

ನೀವು ಹೇಳಿದಂತೆ ಅಜ್ಞಾನವೇ ನಮಗೇ ಅನೇಕ ಸಂತೋಷದ ಕ್ಷಣಗಳನ್ನು ತಂದುಕೊಡುತ್ತದೆ. ಅದನ್ನು ಮಕ್ಕಳಲ್ಲಿನ ಮುಗ್ದತೆಯಿಂದ ಸ್ವೀಕರಿಸಬೇಕಷ್ಟೆ.

ಧನ್ಯವಾದಗಳು.

shivu.k said...

ಕುಲದೀಪ್ ಸರ್,

ಬಾಲ್ಯದಲ್ಲಿನ ಮುಗ್ಧತೆ, ಕುತೂಹಲ ಈಗ ಉಳಿದಿರುವುದಿಲ್ಲ. ಅದನ್ನು ಉಳಿಸಿಕೊಂಡವರು ನಿಜಕ್ಕೂ ಜೀವನವನ್ನು enjoy ಮಾಡುತ್ತಾರೆ. ಸಿನಿಮಾ ತಯಾರಿ ಬಗೆಗಿನ ವಿಚಾರವನ್ನು ತಿಳಿದುಕೊಳ್ಳದೇ ಇದ್ದಲ್ಲಿ ಅಲ್ಲಿನ ಮಾಯಾಮಂತ್ರಗಳು ನಮಗೆ ಈಗಲೂ ಕುತೂಹಲ ಹುಟ್ಟಿಸುತ್ತವೆ.
ನನ್ನ ಲೇಖನ ಓದಿ ನಿಮ್ಮ ಬಾಲ್ಯದ ಟೇಪ್‍ರೆಕಾರ್ಡರ್ ವಿಚಾರವನ್ನು ಹಂಚಿಕೊಂಡಿದ್ದೀರಿ...

ಧನ್ಯವಾದಗಳು.

shivu.k said...

ಮನಮುಕ್ತ,

ಅವತಾರ್ ಸಿನಿಮಾದ ಲೇಖನ ನಿಮ್ಮನ್ನು ನಿಮ್ಮ ಹಳೆ ಸಿನಿಮಾ ಪ್ರಪಂಚಕ್ಕೆ ಕರೆದೊಯ್ದಿದ್ದರೆ ನಾನು ಬರೆದಿದ್ದು ಸಾರ್ಥಕವೆಂದುಕೊಳ್ಳುತ್ತೇನೆ.
ಅವತಾರ್ ಸಿನಿಮಾವನ್ನು ಬೇಡಿ ನೋಡಿ.

ಧನ್ಯವಾದಗಳು.

shivu.k said...

ಮನಸು ಮೇಡಮ್,

ನನ್ನ ಅವತಾರ್ ಲೇಖನ ನಿಮ್ಮ ಬಾಲ್ಯದಲ್ಲಿನ ನೆನಪುಗಳನ್ನು ಮರುಕಳಿಸುವಂತೆ ಮಾಡಿದ್ದಕ್ಕೆ ನನಗೆ ಖುಷಿಯಿದೆ.
ಧನ್ಯವಾದಗಳು.

ರಾಜೀವ said...

ಹೌದು. ಬಾಲ್ಯದಲ್ಲಿ ನಾವು ಇಷ್ಟಪಟ್ಟು ನೋಡಿದ ಎಷ್ಟೋ ವಿಷಯಗಳು ಈಗ ಇಷ್ಟವಾಗುದಿಲ್ಲ. ಇದು ತಿಳುವಳಿಕೆಯಿಂದ ಮಾತ್ರವಲ್ಲ, ನಾವು ಆ ಮುಗ್ಧತೆಯನ್ನು ಕಳೆದುಕೊಳ್ಳುತ್ತಿರುವುದರಿಂದ ಇರಬಹುದು.

ನಾನು ಅವತಾರ್ ನೋಡಿಲ್ಲ. ತುಂಬಾ ಚೆನ್ನಗಿದೆ ಎಂದು ಹಲವಾರು ಜನರಿಂದ ಕೇಳಿದ್ದೇನೆ. ಸಮಯವಾದಾಗ ನೋಡಬೇಕು.

ಚಿತ್ರಾ said...

ಶಿವೂ,
ಲೇಖನ ಓದಿ ಖುಷಿಯಾಯ್ತು . ಯಾವುದೇ ಆಗಲಿ " ಹೇಗೆ ಮಾಡಿದ್ದು " ಎನ್ನುವ ಗುಟ್ಟು ತಿಳಿದುಬಿಟ್ಟರೆ ಅದರ ಬಗೆಗಿನ ಕುತೂಹಲ , ಅನುಭವಿಸುವ ಸಂಭ್ರಮ ಕಳೆದುಕೊಂಡುಬಿಡುತ್ತೇವೆ ಅಲ್ಲವೇ? ಜಾದೂಗಾರನ ಕೈಚಳಕ ನೋಡಿ ಆಶ್ಚರ್ಯಗೊಳ್ಳುವ , " ವಾಹ್ " ಎಂದು ಉದ್ಗರಿಸುವ ನಾವು ಅದರ ರಹಸ್ಯ ಗೊತ್ತಾದಾಗ ಆಸಕ್ತಿ ಕಳೆದುಕೊಂಡುಬಿಡುತ್ತೇವೆ ! ಹಾಗೇ ಇದೂ. ' ತಂತ್ರಜ್ಞಾನ' ವನ್ನು ವಿವರಿಸುವ ಗೋಜಿಗೆ ಹೋಗದೆ ನೋಡಿ ಬೆರಗಾಗುವ , ಮಕ್ಕಳಂತೆ ಸಂಭ್ರಮಿಸಿ , ಖುಷಿ ಪಡುವುದು ಒಳ್ಳೆಯದೇನೋ !
ಈಗಲೂ ಕೂಡ ಟಿವಿಯಲ್ಲಿ ಹಳೆಯ ಪೌರಾಣಿಕ ಚಿತ್ರಗಳು ಪ್ರಸಾರವಾದಾಗ ಇಂಥ ಯುದ್ಧ ಸನ್ನಿವೇಶವನ್ನು ನಾನು ತಪ್ಪಿಸಿಕೊಳ್ಳುವುದಿಲ್ಲ.
ಆಗಿನ ಕಾಲಕ್ಕೆ ಅದೇ ದೊಡ್ಡ ತಂತ್ರ ಜ್ಞಾನವಾಗಿತ್ತು . ಕಂಪ್ಯೂಟರ್ ನ ಸಹಾಯವಿಲ್ಲದೆ ಅಂಥಾ ಸನ್ನಿವೇಶಗಳನ್ನು ಸೃಷ್ಟಿಸುವುದೂ ಒಂದು ಚಾಲೆಂಜಿಂಗ್ ಕೆಲಸ ಅಲ್ಲವೇ?
ಈಗಿನ ಮಕ್ಕಳು ನಮ್ಮ ಹಾಗಲ್ಲ , ಅವರಿಗೆ ಎಲ್ಲವನ್ನೂ ಪ್ರಶ್ನಿಸುವ ಆಸಕ್ತಿ ಹೆಚ್ಚು. ನಾವು ಸ್ವಲ್ಪ ದೊಡ್ಡವರಾದಾಗ ಯೋಚಿಸುತ್ತಿದ್ದುದನ್ನು ಅವರು ಈಗಲೇ ಕೇಳುತ್ತಾರೆ. ಎದುರು ಬದುರು ಇರುವವರು ಮೇಲೇಕೆ ಬಾಣ ಬಿಡಬೇಕು ಎಂದು ನಾವು ಕಾಲೇಜಿಗೆ ಬಂದ ಮೇಲೆ ಯೋಚಿಸಿದರೆ , ನನ್ನ ಮಗಳು ಇನ್ನೂ ಒಂದು ಲಾಜಿಕ್ ಪ್ರಶ್ನೆ ಮುಂದಿಡುತ್ತಾಳೆ. ಮೇಲೆ ಬಿಟ್ಟ ಬಾಣಗಳು , ಏನೇನೋ ಚಿತ್ರ ವಿಚಿತ್ರಗಳನ್ನು ಸೃಷ್ಟಿಸಿ, ಉರಿದು ಬೀಳುವವರೆಗಿನ ಸಮಯವನ್ನು ಅವರಿಬ್ಬರೂ ಏಕೆ ಹಾಳು ಮಾಡಬೇಕು ? ಬೇಗ ಬೇಗ ಮುಗಿಸಲೇನು ಕಷ್ಟ ಎಂದು ! ಉತ್ತರ ಹುಡುಕುತ್ತಿದ್ದೇನೆ !
ಮತ್ತೊಮ್ಮೆ ಬಾಲ್ಯವನ್ನು ನೆನಪಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು !

AntharangadaMaathugalu said...

ಶಿವು ಸಾರ್
ನಿಮ್ಮ ಲೇಖನ ಓದಿ ನನಗೂ ಬಾಲ್ಯದ ಚಿತ್ರಗಳೆಲ್ಲಾ ನೆನಪಾದವು.. ರತ್ನಗಿರಿ ರಹಸ್ಯ್ ದ ಯಾರು ಯಾರು ನೀ ಯಾರು... ಹಾಡಿನಲ್ಲಿ ರುಂಡ - ಮುಂಡ ಬೇರೆಯಾಗುವ ಮತ್ತೆ ಸೇರುವ ದೃಶ್ಯ ಮತ್ತು ಮಾಯಾಬಜಾರ್ ನಲ್ಲಿ ಘಟೋದ್ಗಜನ ತೆರೆದ ಬಾಯಿಗೆ ಒಂದೊಂದಾಗಿ ಹೋಗುವ ಲಾಡುಗಳ ದೃಶ್ಯ ನನ್ನನ್ನು ಅತ್ಯಂತ ಬೆರಗು ಗೊಳಿಸಿದ್ದವು. ಈಗಲೂ ನನಗೆ ಮಾಯಾ ಮಂತ್ರಗಳ ಹಳೆಯ ಸಿನಿಮಾಗಳನ್ನು ನೋಡುವುದೆಂದರೆ ಇಷ್ಟವಾಗುತ್ತದೆ.
ನಿಮ್ಮ ಲೇಖನ ಚೆನ್ನಾಗಿದೆ....

ಶ್ಯಾಮಲ

ಸವಿಗನಸು said...

ಶಿವು ಸರ್,
ಹಳೆಯ ನೆನಪು ಮರಕಳಿಸಿದವು....
ತುಂಬಾ ಚೆನ್ನಾಗಿದೆ ಬರಹ....
ಅವತಾರ ಇನ್ನು ನೋಡಿಲ್ಲಾ....ನೋಡ್ತೀನಿ ಈಗ...

shivu.k said...

ರಾಜೀವ್ ಸರ್,

ನಿಮ್ಮ ಮಾತು ಸತ್ಯ. ಬಾಲ್ಯದಲ್ಲಿನ ಮುಗ್ಧತೆ ಈಗ ಯಾಕೆ ಇರುವುದಿಲ್ಲವೆನ್ನುವುದು ನನ್ನದೂ ಪ್ರಶ್ನೆಯೂ ಕೂಡ.
ಅವತಾರ್ ಸಿನಿಮಾವನ್ನು ನೋಡಿ.

Unknown said...

ಬಾ ಇಲ್ಲಿ ಸಂಭವಿಸು, ಇಂದೆನ್ನ ಹೃದಯದಲಿ, ನಿತ್ಯವೂ ಅವತರಿಪ ಸತ್ಯಾವತಾರ! ಈ ರೀತಿಯ ಸಾಕ್ಷಾತ್ಕಾರ ಎಲ್ಲಾ ಕಾಲಕ್ಕೂ, ಈಗಲೂ ಈ ಕ್ಷಣವೂ ಅವತರಿಸುತ್ತಿರುತ್ತದೆ. ಆದರೆ ಅದನ್ನು ಕಾಣುವ ಕಣ್ಣು ಬೇಕು, ನಿಮ್ಮ ಹಾಗೆ. ಅವತಾರ್ ನೋಡಿಲ್ಲ, ಇನ್ನೂ ನೋಡಬೇಕೆನಿಸಿಲ್ಲ! ಕಾರಣವೂ ಗೊತ್ತಿಲ್ಲ. ನೀವು ಹೇಳಿದ ಹಾಗೆ ನಾನೀಗಲೇ ಅಂತಹ ಕುತೂಹಲವನ್ನು ಕಳೆದುಕೊಂಡು ಬಿಟ್ಟಿದ್ದೇನೆಯೇ ಎನ್ನಿಸುತ್ತಿದೆ. ಆದರೆ ಕೆಲವು ಬೇರೆ ಭೇರೆ ವಿಷಯಗಳಲ್ಲಿ ಉಳಿದಿರುವ ಕುತೂಹಲ ಆ ಪ್ರಶ್ನೆಗೆ ಸಮಾಧಾನವನ್ನೂಹೇಳುತ್ತದೆ.

Sushrutha Dodderi said...

ನೈಸ್!

ನಾನೂ 'ಅವತಾರ್' ಶನಿವಾರ ನೋಡಿದೆ. ಸೂಪರ್ ಎಕ್ಸ್‌ಪೀರಿಯೆನ್ಸ್! ಥೇಟರಿನಿಂದ ಹೊರಬರ್ತಿದ್ರೆ ಮಾಯಾಲೋಕವನ್ನ ತೊರೀತಿದ್ದ ಹಾಗೆ...

ಮತ್ತೆ 'ಬಬ್ರುವಾಹನ' ಸಹ ನನ್ನ ಅಷ್ಟೇ ಇಷ್ಟದ ಸಿನೆಮಾ.. ಅದರಲ್ಲೂ ಆ ಹಾಡು: 'ಯಾರು ತಿಳಿಯರು ನಿನ್ನ...' ನನ್ನ ಮೊಬೈಲಿನಲ್ಲೂ ಮನೆ ಮಾಡಿ, ಕನಿಷ್ಟ ವಾರಕ್ಕೊಮ್ಮೆ ಪ್ಲೇ ಆಗ್ತಿರೊತ್ತೆ ಈ ವೀಡಿಯೋ..

Chaithrika said...

ನಾನು ನೋಡಿಲ್ಲವಲ್ಲಾ ಅವತಾರ್... ಛೇ, ಛೇ.... :-(

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಎಲ್ಲಿಯ ಅವತಾರ್ ಮತ್ತೆಲ್ಲಿಯ ಬಬ್ರುವಾಹನ. ಆದರೂ ತುಂಬಾ ಚೆನ್ನಾಗಿ ಸಮೀಕರಿಸಿದ್ದಿರಿ. ಬಾಲ್ಯದ ಮುಗ್ಧತೆ ಕಳೆದುಕೊಳ್ಳದಿದ್ದರೆ ಪ್ರತಿ ಸಣ್ಣ ವಿಷಯವನ್ನೂ enjoy ಮಾಡುತ್ತೇವೆ. ನಿಮ್ಮ ಹಳೆಯ ಲೇಖನದಲ್ಲಿ technology ಬಗ್ಗೆಯೂ ವಿವರವಾಗಿ ತಿಳಿಸಿದ್ದೀರಿ. ಈ ಬಾರಿ ಮುಗ್ಢ ಮನಸ್ಸಿನಿಂದ ನೋಡುವುದರ ಆನಂದದ ಬಗ್ಗೆಯೂ ಬರೆದಿರುವಿರಿ. ನಮಗೆ ಎರಡೂ ಅಗತ್ಯವಿದೆ.

ಸುಧೇಶ್ ಶೆಟ್ಟಿ said...

avathaar innu nodilla :(

babruvahans movie nodadhavare illa anisuththe... antha adhbhutha cinema alve adhu...

different topic thagondu baredideeri,... thumba ishta aaythu....

ತೇಜಸ್ವಿನಿ ಹೆಗಡೆ said...

ಶಿವು ಅವರೆ,

ನಾನೂ ಈ ಚಿತ್ರವನ್ನು ಹೋದವಾರವಷ್ಟೇ ನೋಡಿದೆ. ತುಂಬಾ ಅದ್ಭುತ ತಂತ್ರಜ್ಞಾನ!

"ಅದನ್ನು ತಿಳಿದುಕೊಂಡುಬಿಟ್ಟರೇ ಇಷ್ಟೇನಾ ಅನ್ನಿಸಿ ಅಂತ ಅದ್ಬುತ ಮಾಯಾಲೋಕವನ್ನು ಆನಂದಿಸುವ ಅವಕಾಶವನ್ನು ನಾವು ಕಳೆದುಕೊಂಡುಬಿಡುತ್ತೇವೆ "

ನಿಮ್ಮ ಸಾಲು ತುಂಬಾ ಇಷ್ಟವಾಯಿತು.
(ಇದೇ ಚಿತ್ರದ ಬಗ್ಗೆ ನನ್ನ ಅನುಭವವನ್ನೂ ಮಾನಸದಲ್ಲಿ ಹಾಕಿದ್ದೇನೆ.)

ವನಿತಾ / Vanitha said...

ಶಿವು,
ನೀವು ಹೇಮಶ್ರೀ ಯನ್ನು ನಿಟ್ಟು 'ಅವತಾರ್' ನೋಡಲು ಹೋದಿರಿ..ನಾವು ಮಗಳನ್ನು ಬಿಟ್ಟು ಹೋಗಬೇಕಲ್ಲ ಅಂತ ಇನ್ನೂ ಹೋಗಲೇ ಇಲ್ಲ..ನೋಡ್ಬೇಕು ಯಾವಾಗ ಎಂದು ಇನ್ನೂ ಗೊತ್ತಿಲ್ಲ..
ಬಾಲ್ಯದಲ್ಲಿ ನೋಡಿದ ರಾಮಾಯಣ, ಮಹಾಭಾರತ ದ ಸೀನ್ ಗಳು ಮರುಕಳಿಸಿದವು.. ತುಂಬಾ ಚೆನ್ನಾಗಿ ಬರೆದಿದ್ದೀರಿ.

ಚುಕ್ಕಿಚಿತ್ತಾರ said...

ನಿಮ್ಮ ಲೇಖನ ಸು೦ದರವಾಗಿದೆ..
ಅವತಾರ್ ನೋಡಬೇಕೆ೦ದು ಮಕ್ಕಳು ಗಲಾಟೆ ಮಾಡುತ್ತಿದ್ದಾರೆ..
ವ೦ದನೆಗಳು.

ಸಾಗರದಾಚೆಯ ಇಂಚರ said...

ಶಿವೂ ಸರ್
ಅವತಾರ್ ಗೆ ಅವತಾರ ಮಾತ್ರ ಸ್ಪರ್ಧಿ
ಆ ನಿರ್ದೇಶಕನ ಜಾಣ್ಮೆಗೆ ಸಲ್ಯೂಟ್
ನನಗಂತೂ ಆ ಚಿತ್ರ ಇನ್ನೂ ಕಣ್ಣಲ್ಲೇ ಸುಳಿದಾಡುತ್ತಿದೆ
ಅದ್ಭುತ ರಮ್ಯ ರಮಣೀಯ

Unknown said...

ಅವತಾರ್ ನಾನು ನೋಡಿಲ್ಲ... ಇದೆ ರೀತಿ ಹಿಂದೆ ಪುಸ್ತಕ ಪ್ರಪಂಚದಲ್ಲಿ ಬಿರುಗಾಳಿಯೆಬ್ಬಿಸಿದ ಹಾರಿ ಪೊಟ್ಟರ್ ಬಗ್ಗೆ ಕೇಳಿ ನೋಡೋಣ ಅಂತ ಪುಸ್ತಕ ತಗೊಂಡು ಓದಿದೆ.. ಓದಿದ ಮೇಲೆ ಅನ್ನಿಸಿದ್ದೇನೆಂದರೆ ಇದೂ ಒಂದು "ಚಂದಮಾಮ" ಅಂತ.. ಬಿಡಿ, ಆಗಿನ ಬಬ್ರುವಾಹನ ಮಾಡುವಾಗ ನಮ್ಮ ಭಾರತದಲ್ಲ್ಲಿದ್ದ ತಂತ್ರಜ್ಞಾನ ಅಷ್ಟಕ್ಕಷ್ಟೇ... ಅದನ್ನೆಲ್ಲ ಈಗಿನ ಹೈ ಟೆಕ್ ತಂತ್ರಗಳಿಗೆ ಹೋಲಿಸಲಾದಿತೆ??

Ittigecement said...

ಶಿವು ಸರ್...

ಅವತಾರ್ ಸಿನೇಮಾವನ್ನು ಒಬ್ಬ ಪ್ರತಿಭಾನ್ವಿತ ಭಾರತೀಯ ಮಾಡಿದ್ದರೆ...!!
ನಮ್ಮ ರಾಮಾಯಣ ಮಹಾ ಕಾವ್ಯವನ್ನು ಇದೇ ಥರಹ ಮಾಡಿದ್ದರೆ...!!

ಅವತಾರ್ ಸಿನೇಮಾದವರು ನಮ್ಮ ಪುರಾಣಗಳಿಂದ ಸ್ಪೂರ್ತಿ ಪಡೆದಿದ್ದಾರೆ..
ಅದರಲ್ಲಿ ಅನುಮಾನವೇ ಇಲ್ಲ..

ಒಂದು ಸುಂದರ ಸಿನೇಮಾ..
ಅದಕ್ಕೆ ಬಬ್ರುವಾಹನವನ್ನು ಹೋಲಿಸಿ..
ಭಾವಗಳು.. ಮುಗ್ಧತೆ..
ಬುದ್ಧಿವಂತಿಕೆಗಳ
ದ್ವಂದ್ವವನ್ನು ಚೆನ್ನಾಗಿ ವಿಶ್ಲೇಷಿಸಿದ್ದೀರಿ.

ಅಭಿನಂದನೆಗಳು...

shivu.k said...

ಚಿತ್ರ ಮೇಡಮ್,

ನನ್ನ ಅವತಾರ್ ಬರಹಕ್ಕೆ ದೊಡ್ಡದಾದ ಪ್ರತಿಕ್ರಿಯೆ ನೀಡಿದ್ದೀರಿ.

ನಮ್ಮ ಬದುಕಿನಲ್ಲಿ ಪ್ರತಿಯೊಂದನ್ನು ಕುತೂಹಲದಿಂದ ನೋಡುವುದು ಮಕ್ಕಳಾಗಿದ್ದಾಗಲೇ ಅಲ್ಲವೇ. ಮುಂದೆ ಬೆಳೆದು ದೊಡ್ಡವರಾಗುತ್ತಿದ್ದಂತೆ ಆ ಮುಗ್ದತೆ ಏಕೆ ಕಡಿಮೆಯಾಗುತ್ತದೆ? ಮಕ್ಕಳಾಗಿದ್ದಾಗಲೇ ಚೆನ್ನಾಗಿತ್ತಲ್ವಾ ಅಂತ ಈಗ ಅನ್ನಿಸಿದರೆ ಅದಕ್ಕೆ ಕಾರಣ ಪ್ರತಿಯೊಂದು ವಿಚಾರವನ್ನು ಅಳೆದು ಸುರಿದು ನೋಡಿ ಇದು ಇಷ್ಟೇನಾ ಅನ್ನುವ ಮಟ್ಟಕ್ಕೆ ಬಂದುಬಿಟ್ಟಿದ್ದೇವೆ. ಮೊದಲಿಗೆ ನಾವು ಯಾವುದೇ ಹೊಸದನ್ನು ಪೂರ್ವಗ್ರಹ ಪೀಡಿತರಾಗದೇ ಹೊಸದಾಗಿ ಸ್ವೀಕರಿಸುವ ಮನಸ್ಸಿದ್ದರೇ ಖಂಡಿತ ನಮ್ಮಲ್ಲಿ ಮುಗ್ದತೆಯೆನ್ನುವುದು ಆ ಕ್ಷಣದಲ್ಲಿ ತಾನಾಗಿಯೇ ಹುಟ್ಟಿಕೊಳ್ಳುತ್ತದೆ.

ಆದರೂ ನೀವು ಹೇಳಿದಂತೆ ಖಂಡಿತ ಇಂದಿನ ಮಕ್ಕಳಿಗೆ ಪ್ರತಿದಿನವೂ ಹೊಸತು ಬೇಕಾಗಿದೆ. ಆ ಮಟ್ಟಕ್ಕೆ ಅವರ ಬುದ್ಧಿಮಟ್ಟವಿದೆ. ಇದು ಮುಂದುವರಿಯುತ್ತಿರುವ ತಂತ್ರಜ್ಞಾನದ ಸೂಚನೆಯೇ ಅಲ್ಲವೇ...

ಒಟ್ಟಾರೆ ಒಂದು ಲೇಖನದಿಂದ ಅನೇಕ ಅಭಿಪ್ರಾಯಗಳು ಹೀಗೆ ಪರಸ್ಪರ ತಿಳುವಳಿಕೆ ಮೂಡಿಸುತ್ತಿರುವುದಕ್ಕೆ ನನಗೆ ಖುಷಿಯಾಗುತ್ತಿದೆ. ಅದನ್ನು ಅವಕಾಶ ಮಾಡಿಕೊಟ್ಟ ನಿಮಗೂ ಧನ್ಯವಾದಗಳು.

shivu.k said...

ಶ್ಯಾಮಲ ಮೇಡಮ್,

ನಿಮ್ಮ ಅಭಿಪ್ರಾಯದಂತೆ ನನಗೂ ಅ ಸಿನಿಮಾಗಳಲ್ಲಿನ ಮಾಯಾ ಮಂತ್ರಗಳು ತುಂಬಾ ಇಷ್ಟ. ಆದರೆ ಈಗ ವಿದೇಶದ ಕೆಲವು ಚಿತ್ರಗಳಲ್ಲಿ ಪರಿಪಕ್ವಗೊಂಡಿರುವ ತಂತ್ರಜ್ಞಾನದಿಂದಾಗಿ ನಮ್ಮದೆಲ್ಲಾ ಹಳತು ಎನ್ನಿಸುವುದು ಸಹಜವಾಗಿಬಿಟ್ಟಿದೆ.
ನಿಮ್ಮ ಕುತೂಹಲ ಮತ್ತು ಮುಗ್ದತೆ ಹಾಗೆ ಇರಲಿ.

ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

shivu.k said...

ಸವಿಗನಸು ಮಹೇಶ್ ಸರ್,

ಲೇಖನದಿಂದಾಗಿ ನಿಮ್ಮ ಬಾಲ್ಯದ ನೆನಪುಗಳು ಮರುಕಳಿಸಿ ಖುಷಿಪಟ್ಟಿದ್ದೀರಿ. ಸಾದ್ಯವಾದಷ್ಟು ಬೇಗ ಅವತಾರ್ ನೋಡಿ..

ಧನ್ಯವಾದಗಳು.

shivu.k said...

ಸತ್ಯನಾರಾಯಣ ಸರ್,

ನೀವು ನನ್ನ ತುಂಬಾ ಹೊಗಳುತ್ತಿದ್ದೀರಿ. ನನ್ನ ಅಭಿಪ್ರಾಯದಂತೆ ನಾವು ಅಚ್ಚರಿಗಳನ್ನು ಹುಡುಕಿಕೊಂಡು ಬೇರೆಲ್ಲೋ ಹೋಗದೆ ನಾವಿರುವ ಜಾಗದಲ್ಲಿ ಗುರುತಿಸಿ ನೋಡಿ ಖುಷಿ ಪಟ್ಟರೆ, ಹಂಚಿಕೊಂಡರೆ ಅದು ವಿಶೇಷವಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ. ನಿಮ್ಮ ಅನಿಸಿಕೆಗೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.

shivu.k said...

ಸುಶ್ರುತ,

ಅವತಾರ್ ನೋಡಿ ಅದರ ಹ್ಯಾಂಗ್‍ ಓವರಿನಲ್ಲಿ ಇದ್ದದ್ದನ್ನು ತಿಳಿಸಿದ್ದೀರಿ. ಖಂಡಿತ ಅದು ಅಷ್ಟು ಪರಿಣಾಮಕಾರಿ ಸಿನಿಮಾ.

ಮತ್ತೆ ಬಬ್ರುವಾಹನ ಸಿನಿಮಾವನ್ನು ಅದೇ ರೀತಿ ಇಷ್ಟಪಡುತ್ತಿರುವುದು ನನಗೂ ಖುಷಿಯಾಯಿತು.

ಧನ್ಯವಾದಗಳು.

shivu.k said...

chaitrika,

ಬೇಗ ಅವತಾರ್ ನೋಡಿ.

shivu.k said...

ಮಲ್ಲಿಕಾರ್ಜುನ್,

ಖಂಡಿತ ನೀವು ಹೇಳಿದಂತೆ ಎರಡರ ಆಗತ್ಯವೂ ಇದೆ. ಮೊದಲಿನದು ಪ್ರತಿಕ್ಷಣದ ಸಂತೋಷಕ್ಕಾಗಿ ಬೇಕು. ಮತ್ತೆ ಎರಡನೆಯದು ಅದು ಹುಟ್ಟಿಕೊಂಡ-ತಯಾರಾದ ರೀತಿಯನ್ನು ತಿಳಿಯುವ, ಕಲಿಯುವ ಕುತೂಹಲ, ಆಸೆ ಇದ್ದಾಗ ನಾವು ಅದರಲ್ಲಿ ಉನ್ನತಿ ಸಾಧಿಸಬಹುದು. ನೀವು ಸಾಧ್ಯವಾದಷ್ಟು ಬೇಗ ಅವತಾರ್ ನೋಡಿ..

ಧನ್ಯವಾದಗಳು.

shivu.k said...

ಸುಧೇಶ್,

ಬಬ್ರುವಾಹನ ಖಂಡಿತ ಎಲ್ಲರಿಗೂ ಇಷ್ಟದ ಸಿನಿಮಾ. ನೀವು ಸಾಧ್ಯವಾದಷ್ಟು ಬೇಗ ಅವತಾರ್ ನೋಡಿ.

ಬರವಣಿಗೆ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

shivu.k said...

ತೇಜಸ್ವಿನಿ ಮೇಡಮ್,

ನೀವು ಸಿನಿಮಾ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿರುವುದು ನನಗೆ ಖುಷಿಯಾಯ್ತು.

ಬರಹವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

ವನಿತಾ,

ನನ್ನ ಶ್ರೀಮತಿಗೆ ಕೆಲಸವಿದ್ದುದರಿಂದ ಆಕೆಯನ್ನು ನಾನು ಸಿನಿಮಾಗೆ ಕರೆದುಕೊಂಡು ಹೋಗಲಿಲ್ಲ. ಮುಂದೊಂದು ದಿನ ಮತ್ತೆ ಅವಳಿಗೂ ಸಿನಿಮಾ ತೋರಿಸುತ್ತೇನೆ.

ನೀವು ನಿಮ್ಮ ಕುಟುಂಬ ಸಮೇತ ಸಿನಿಮಾನೋಡಿ...ಮಕ್ಕಳಿಗೂ ಇಷ್ಟವಾಗುತ್ತದೆ.

ಧನ್ಯವಾದಗಳು.

shivu.k said...

ವಿಜಯಶ್ರಿ ಮೇಡಮ್,

ಮಕ್ಕಳ ಜೊತೆ ಬೇಗ ಅವತಾರ್ ಸಿನಿಮಾವನ್ನು ನೋಡಿ.

ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಗುರುಮಾರ್ತಿ ಹೆಗಡೆ ಸರ್,

ನೀವು ಹೇಳಿದ್ದು ಸರಿ. ಸದ್ಯಕ್ಕೆ ಅವತಾರ್‌ ಸಿನಿಮಾಗೆ ಸ್ಪರ್ಧೆಯಿಲ್ಲ. ನಿರ್ಧೇಶಕ ಬುದ್ದಿವಂತಿಕೆಗೆ ಮೆಚ್ಚುಗೆ ಸೂಚಿಸಲೇ ಬೇಕು.

ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ರವಿಕಾಂತ್ ಗೋರೆ ಸರ್,

ಆಗಿನ ಕಾಲದಿಂದ ಈಗಿನವರೆಗೂ ಬರುತ್ತಿರುವ ಎಲ್ಲಾ ಚಿತ್ರಗಳಿಗೂ ಚಂದಮಾಮ ಬಾಲಮಿತ್ರದಂತ ಕತೆಗಳೇ ಆಧಾರವಾಗಿವೆ. ಅವತಾರ್ ನೋಡಿ ನಿಮ್ಮ ಅನಿಸಿಕೆಯನ್ನು ತಿಳಿಸಿ.

ಧನ್ಯವಾದಗಳು.

shivu.k said...

ಪ್ರಕಾಶ್ ಸರ್,

ಅವತಾರ್ ಸಿನಿಮಾವನ್ನು ನಮ್ಮ ಭಾರತೀಯನು ಮಾಡಿದ್ದರೆ ಅನ್ನುವ ಪ್ರಶ್ನೆಗೆ ನನ್ನ ಉತ್ತರ ಇನ್ನೂ ಚೆನ್ನಾಗಿ ಆಗುತ್ತಿತ್ತೇನೋ ಅನ್ನಿಸುತ್ತದೆ. ಏಕೆಂದರೆ, ಬುರ್ಜ್ ಕಲೀಪಾ ಕಟ್ಟದ ಸಾಧನೆಯಿಂದ ನಮ್ಮ ಶ್ರಮವಿದೆ. ಆದ್ರೆ ಇಂಥ ಸಿನಿಮಾ ತೆಗೆಯುವಾಗ ಮೊದಲು ತಮ್ಮದೇ ಸಿನಿಮಾವೆನ್ನುವ ಫ್ಯಾಷನ್ ಇರಬೇಕು. ಅದನ್ನೇ ಉಸಿರಾಗಿಸಿಕೊಳ್ಳಬೇಕು. ಅದು ಇದ್ದರೇ ಪ್ರಪಂಚದ ಯಾವುದೇ ವ್ಯಕ್ತಿಯೂ ಇದನ್ನು ಮಾಡಲು ಸಾಧ್ಯವಿದೆ.
ಇನ್ನೂ ಅವತಾರ್ ಅನ್ನು ಬಬ್ರುವಾಹನಕ್ಕೆ ಹೋಲಿಸಿದ್ದು ಅವತ್ತು ಮನೆಯಲ್ಲಿ ನಡೆದ ಸಂಭಾಷಣೆಯ ಸ್ಫ್ರೂರ್ತಿಯಿಂದಾಗಿ ಈ ಲೇಖನ ಮೂಡಿಬಂತು.
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.

ಜಲನಯನ said...

ಶಿವು, ಶಿವರಾತ್ರಿಯ ಶುಭಕಾಮನೆಗಳು ನಿಮಗೆ ಹೇಮಾಶ್ರೀಗೆ....ಹಹಹ ಎಂಥ ಕೊಶ್ಚನ್ ಹೇಮಾಶ್ರೀದು...ಎನ್ನುವುದಕ್ಕಿಂತ ಇದರ ಹಿಂದಿನ ವ್ಯೂಹ ಏನಿರಬಹುದು..? ಅವರಿಬ್ಬರನ್ನೂ ಹತ್ತಿರ ತೋರಿಸದಿದ್ದರೆ ಚಿತ್ರೀಕರಣ ಕಷ್ಟವಾಗ್ತಿತ್ತು ಅನ್ನೋದು ಬೇರೆ ಪ್ರಶ್ನೆ ಯಾದರೂ...ಯುದ್ಧದ ಭವಿತವನ್ನು ಸಾರುವ ಪೂರ್ವಜರ ನಿರೀಕ್ಷಿತ ಕಥಾ ನಿರೂಪಣೆಯೇ ?? ಸಂದೇಹವಾಗುತ್ತೆ...ಯಾಕೆಂದರೆ..ರಾವಣ ಪುಷ್ಪಕ ಉಪಯೋಗಿಸಿದ್ದು ಹೇಗೆ..ವರುಣಾಶ್ತ್ರ...ಈಗ ಮೋಡವನ್ನು ಬಿತ್ತುವ ತಂತ್ರದ ಪೂರ್ವಜರ ಕಲ್ಪನೆಯೇ..? ಎಲ್ಲ ...ಯೋಚಿಸಬೇಕಾದ ಅಂಶ....ಚನ್ನಾಗಿದೆ ನಿಮ್ಮ ಕಥೆಯನ್ನು ನಿರೂಪಿಸುವ ವಿಧಾನ.

shivu.k said...

ಆಜಾದ್,

ನಿಮಗೂ ಶಿವರಾತ್ರಿಯ ಶುಭಕಾಮನೆಗಳು.

ನನ್ನ ಅನೇಕ ಲೇಖನಗಳಿಗೆ ಹೇಮಾಶ್ರಿ ಮಾತುಗಳು, ಪ್ರಶ್ನೆಗಳೇ ಆಧಾರವಾಗಿರುತ್ತವೆ. ಮತ್ತೆ ಆಕೆ ಮಾತ್ರವಲ್ಲ ನಮ್ಮ ಓಣಿಯ ಮಕ್ಕಳು, ದಿನಪತ್ರಿಕೆ ಹುಡುಗರು, ಗ್ರಾಹಕರು...ಹೀಗೆ ಸಾಗುತ್ತದೆ. ಎರಡು ದಿನದ ಹಿಂದೆ ನಮ್ಮ ಗ್ರಾಹಕರು ಹೇಳಿದ ಒಂದು "ಮಾತಿನ ಅರ್ಥ" ಹುಡುಕಿಕೊಂಡು ಸದ್ಯ ಹೊರಟಿದ್ದೇನೆ. ಅದಕ್ಕೆ ಸಂಭಂದಿಸಿದವರನ್ನು ಮಾತಾಡಿಸುತ್ತಿದ್ದೇನೆ. ಬಲೇ ಖುಷಿ ಮತ್ತು ಜ್ಞಾನಾರ್ಜನೆ ವಿಚಾರವಾಗಿ ಹೊರಹೊಮ್ಮುತ್ತಿದೆ. ಮುಂದೆ ಅದನ್ನು ಬ್ಲಾಗಿನಲ್ಲಿ ಹಾಕುತ್ತೇನೆ.

ಇನ್ನೂ ಅವತಾರ್-ಬಬ್ರುವಾಹನ ಲೇಖನಕ್ಕೆ ನೀವು ನೀಡಿರುವ ಪ್ರತಿಕ್ರಿಯೆ, ಪ್ರಶ್ನೆಗಳು ತುಂಬಾ ಚೆನ್ನಾಗಿವೆ. ಅದರ ಕಾರಣಗಳನ್ನು ಹುಡುಕುತ್ತಾ ಅನೇಕ ಒಳಸುಳಿಗಳು ಸಿಗಬಹುದು ಅಂತ ನನ್ನ ಅನಿಸಿಕೆ...

ಧನ್ಯವಾದಗಳು.

Prashanth Arasikere said...

Houdu shivu nivu heliddu nija avgina namma mugda manassu astondu yochane madta irlilla madidre adu bore agtha ittu..

ಸೀತಾರಾಮ. ಕೆ. / SITARAM.K said...

ಭಾಲ್ಯದ ನೆನಪು ಮಾಡಿ ಕೊಟ್ಟಿರಿ. ನಾವೂ ಓದುತ್ತಿದ್ದ -ಬೊ೦ಬೆಮನೆ, ಬಾಲಮಿತ್ರ, ಚ೦ದಮಾಮ, ಶೂಜಾ, ಡಾಬೂ, ಮಜ್ನು, ಫ಼್ಯಾ೦ಟಮ, ಹಳೆ ಮಾಯಾ ಚಿತ್ರಗಳಾದ ಬಾಲನಾಗಮ್ಮ, ಜಗದೇಕವೀರನ ಕಥೆ, ಮಾಯಾಬಜ಼ಾರ್, ಇತ್ಯಾದಿ ಎಲ್ಲಾ ಕಣ್ಣ ಮು೦ದೆ ಹಾದು ಹೋದವು. ಅವತಾರ್-ನೋಡಿಲ್ಲ. ನಿಮ್ಮ ಹಾಗೂ ತೇಜಸ್ವಿನಿಯವರ ಲೇಖನ ಓದಿದ ಮೇಲೆ ನೋಡಬೇಕೆನಿಸುತ್ತಿದೆ.

shivu.k said...

ಪ್ರಶಾಂತ್,

ಬಾಲ್ಯದಲ್ಲಿನ ಮುಗ್ದತೆಯನ್ನು ನಾವೀಗ ಕಳೆದುಕೊಂಡಿರುವುದಕ್ಕೆ ಅಲ್ಲವೇ ಪ್ರತಿಯೊಂದನ್ನು ವಿಮರ್ಶಿಸುವುದು. ವಿಮರ್ಶಿಸುವುದು ತಪ್ಪಲ್ಲ. ಆದ್ರೆ ಅದರ ಮೂಲ ಉದ್ದೇಶವಾದ ಮನರಂಜನೆಯನ್ನು ಅನುಭವಿಸುದನ್ನು ಕಳೆದುಕೊಂಡುಬಿಡುತ್ತೇವಲ್ಲ..
ಧನ್ಯವಾದಗಳು.

shivu.k said...

ಸೀತಾರಾಮ್ ಸರ್,

ನನ್ನ ಬರವಣಿಗೆ ಉದ್ದೇಶವೇ ನೀವು ಹೇಳಿದಂತೆ ಬಾಲ್ಯದ ನೆನಪುಗಳನ್ನು ಇತ್ತೀಚಿನ ವಿಚಾರಗಳಿಗೆ ತಳುಕಿಹಾಕಿ ನೋಡುವುದು. ನೀವು ಬೇಗ ಅವತಾರ್ ನೋಡಿ ಆನಂದಿಸಿ.
ಧನ್ಯವಾದಗಳು.