Saturday, May 21, 2011

ಪ್ರಳಯವಾಗೋಯ್ತು...



      ನನ್ನ ಕೈ ಬೆರಳುಗಳು ನಿದಾನವಾಗಿ ಜಾರುತ್ತಿವೆ.....ಮೈಯೆಲ್ಲಾ ನಡುಗುತ್ತಿದೆ ಯಾವಕ್ಷಣದಲ್ಲಿ ಬೇಕಾದರೂ ನನ್ನ ಜೀವ ಹಾರಿ ಹೋಗಬಹುದು, ಕೇವಲ ಎರಡು ಕೈ ಬೆರಳುಗಳ ಆಧಾರದಲ್ಲಿ ನೇತಾಡುತ್ತಿದ್ದ ನಾನು ಒಮ್ಮೆ ಭಯದಿಂದ ಕೆಳಗೆ ನೋಡಿದೆ.  ಪಾತಾಳ ಕಂಡಂತೆ ಆಗಿತ್ತು.  ಏಕೆಂದರೆ ನಾನು ಆ ಕಟ್ಟಡದ ಸಜ್ಜೆಯನ್ನೆ ಬೆರಳಗಳ ಆಧಾರದಲ್ಲಿ ಹಿಡಿದು ನೇತಾಡುತ್ತಿದೆ. ಆ ಕಟ್ಟಡದ ಗೋಡೆಗೆ ಸರಿಯಾಗಿ ಆಳಕ್ಕೆ ಭೂಮಿ ಬಿರುಕು ಬಿಟ್ಟಿತ್ತು. ಎಷ್ಟು ಆಳಕ್ಕೆ ಎಂದರೆ ಕಡಿಮೆ ಎಂದರೂ ಒಂದು ಸಾವಿರ ಅಡಿಗಳಿರಬಹುದು.  ಇಷ್ಟಕ್ಕೂ ನಾನೊಬ್ಬನೇ ನೇತಾಡುತ್ತಿಲ್ಲ.  ಆ ಸಾಲಿನ ಎಲ್ಲಾ ಕಟ್ಟಡಗಳಲ್ಲಿ ಅನೇಕರು ಪೈಪುಗಳು, ಮುರಿದ ಬಾಗಿಲುಗಳು, ಕಿಟಕಿಗಳು, ಸಜ್ಜೆಗಳನ್ನಿಡಿದು ನೇತಾಡುತ್ತಿದ್ದರೆ ಎಷ್ಟೋ ಜನ ಗಾಳಿಯಲ್ಲಿ ತೇಲಿ ಕೆಳಗೆ ಬೀಳುತ್ತಿದ್ದಾರೆ. ಬಿದ್ದವರು ಸಾವಿರ ಅಡಿ ಆಳಕ್ಕೆ.  ಬೀಳುವಾಗಲೇ ಅವರ ಜೀವ ಹೋಗಿಬಿಟ್ಟಿರುತ್ತದೋ,, ಕೆಳಗೆ ಬಿದ್ದ ಮೇಲೆ ದೇಹ ಚೂರುಚೂರಾಗಿ ಸಾಯುತ್ತಾರೋ ಒಟ್ಟಾರೆ ಒಂದಲ್ಲ ಒಂದು ರೀತಿ ಎಲ್ಲರೂ ಸಾಯುತ್ತಿದ್ದಾರೆ.  ನನ್ನ ಸಾವಿನ ಕ್ಷಣಗಣನೆಯೂ ಆಗುತ್ತಿದೆ. ಇಡೀ ಬೆಂಗಳೂರಿಗೆ ಬೆಂಗಳೂರು, ಕರ್ನಾಟಕ, ಭಾರತ, ಅಷ್ಟೇ ಇಡೀ ಪ್ರಪಂಚವೇ ಪ್ರಳಯಕ್ಕೆ ಸಿಲುಕಿ ಸುನಾಮಿ, ಭೂಕಂಪ, ಬಿರುಗಾಳಿ, ಚಂಡಮಾರುತ.....ಪ್ರವಾಹ ಎಲ್ಲವೂ ಒಟ್ಟಿಗೆ ಆಗುತ್ತಿದ್ದೂ  ಪ್ರಪಂಚಕ್ಕೆ ಪ್ರಪಂಚವೇ ನಾಶವಾಗುತ್ತಿದೆ!   ಅಂತ ಪರಿಸ್ಥಿತಿಯಲ್ಲೂ ಒಮ್ಮೆ ಇದೆಲ್ಲವನ್ನು ನೆನಪಿಸಿಕೊಳ್ಳತೊಡಗಿದೆ.  ಇವತ್ತು ಸರಿಯಾಗಿ ಮೇ ತಿಂಗಳ ೨೧ನೇ ತಾರೀಖು. ಸಂಜೆ ಒಂದು ಮದುವೆ ಅರತಕ್ಷತೆ ಫೋಟೊಗ್ರಫಿಗೆ ಬಂದಿದ್ದ ನಾನು ಮುಗಿಯುವ ಹೊತ್ತಿಗೆ ರಾತ್ರಿ ಹತ್ತು ಗಂಟೆಯಾಗಿತ್ತು.

    ನಾನು ಬರುವುದು ತಡವಾಗುತ್ತದೋ ಇಲ್ಲವೋ ಎನ್ನುವ ವಿಚಾರಕ್ಕಾಗಿ ಎಂದಿನಂತೆ ಹೇಮಾಳಿಂದ ಒಂದು ಪೋನ್ ಕಾಲ್ ಬಂತು. "ರೀ ಇಲ್ಲಿ ಬಿರುಗಾಳಿ ಬೀಸುತ್ತಿದೆ, ಕಿಟಕಿ ಬಾಗಿಲುಗಳೆಲ್ಲಾ ಕಿತ್ತುಕೊಂಡು ಹೋಗಿವೆ, ಒಳಗೆ ನಿಲ್ಲಲಾರದಷ್ಟು ಗಾಳಿಯಿದೆ, ನಮ್ಮ ಮನೆಯ ಗೋಡೆ ಮದ್ಯಕ್ಕೆ ಸೀಳಾಗಿ ಅಡುಗೆ ಮನೆ ಮತು ಬೆಡ್ ರೂಮ್ ಎಲ್ಲ ನಾಶವಾಗಿಬಿಟ್ಟಿದೆ. ನಾನಿದ್ದ ಮತ್ತೊಂದು ರೂಮ್ ಕೂಡ ಅಲುಗಾಡುತ್ತಿದೆ. ನಾನು ಆಕಡೆಗೆ ಹೋಗಲಾಗುತ್ತಿಲ್ಲ, ಮೆಟ್ಟಿಲುಗಳು ಕುಸಿದುಬಿಟ್ಟಿವೆ,  ಎಲ್ಲರ ಮನೆಯಲ್ಲೂ ಹೀಗೆ ಅವರ ಮನೆಗಳಾಗಲೇ ನೆಲಸಮವಾಗಿವೆ,  ಅಕ್ಕಪಕ್ಕದ ಮನೆಯವರು ಯಾರು ಬದುಕಿದಂತೆ ಕಾಣುತ್ತಿಲ್ಲ. ನನಗೆ ಭಯವಾಗುತ್ತಿದೆ"...ಎನ್ನುವಷ್ಟರಲ್ಲಿ ಅವಳ ಫೋನ್ ಕಟ್ಟಾಗಿತ್ತು.  ನಾನು ಫೋಟೊ ತೆಗೆಯುವುದು ಬಿಟ್ಟು ಅಲ್ಲಿಂದ ಹೊರಗೆ ಓಡಿಬಂದೆ ಅಷ್ಟೇ. ಮುಂದೆ ಹೆಜ್ಜೆ ಇಡಲಾಗಲಿಲ್ಲ. ನನ್ನ ಮುಂದಿದ್ದ ಮೆಟ್ಟಿಲುಗಳ ಸಮೇತ ಅರ್ಧ ಕಟ್ಟಡವೇ ನಿದಾನವಾಗಿ ನನ್ನ ಕಣ್ಣೆದುರೇ ಕುಸಿಯತೊಡಗಿತ್ತು. ಒಂದು ಕ್ಷಣ ನಾನು ಮೈಮರೆತು ಹೆಜ್ಜೆಇಟ್ಟಿದ್ದರೂ ನಾನು ಅದರ ಜೊತೆ ನೆಲಸಮವಾಗಿಬಿಡುತ್ತಿದೆ.  ಹಿಂದಕ್ಕೆ ಓಡಿಬಂದು ನೋಡುವಷ್ಟರಲ್ಲಿ ಮದುವೆ ಮನೆಯಲ್ಲಿನ ಸಂಭ್ರಮವೆಲ್ಲಾ ಮಾಯವಾಗಿ ಎಲ್ಲರೂ ದಿಕ್ಕಾಪಾಲಾಗಿ ಓಡುತ್ತಿದ್ದಾರೆ. ಎಲ್ಲ ಬೇರೆ ಊರುಗಳಲ್ಲಿಯೂ ಹೀಗೆ ಆಗಿ ಊರಿಗೆ ಊರೇ ಮುಳುಗಿಹೋಗುತ್ತಿರುವುದು ಅವರ ಆತಂಕದಿಂದ ಮಾತಾಡುತ್ತಿರುವ ಮೊಬೈಲುಗಳಿಂದ ಕೇಳಿಸುತ್ತಿದೆ.  ಇನ್ನೇನು ನನ್ನ ಕತೆಯೂ ಮುಗಿಯಿತು ಅಂದುಕೊಳ್ಳುವಷ್ಟರಲ್ಲಿ ನಾನು ನಿಂತಿದ್ದ ನೆಲವೇ ನಿದಾನವಾಗಿ ಬಿರುಕುಬಿಡತೊಡಗಿತ್ತು.  ಎಚ್ಚೆತ್ತ ನಾನು ಓಡಿ ಅಲ್ಲೊಂದು ಸಜ್ಜೆಯನ್ನು ಎರಡು ಕೈಗಳಿಂದ ಹಿಡಿದು ನೇತಾಡತೊಡಗಿದೆ. ನನ್ನ ಕ್ಯಾಮೆರ ಬ್ಯಾಗ್ ಎಲ್ಲಿಹೋಯಿತೋ ಗೊತ್ತಿಲ್ಲ. ಆದ್ರೆ ಕ್ಯಾಮೆರಾ ಮಾತ್ರ ಬೆಲ್ಟಿನ ಸಮೇತ ಭುಜದಲ್ಲಿ ನೇತಾಡುತ್ತಿತ್ತು.

ಕೊನೆಯ ಬಾರಿ ಎನ್ನುವಂತೆ ನಿದಾನವಾಗಿ ಮೇಲೆ  ನೋಡಿದೆನಲ್ಲಾ, ಆಕಾಶದೆತ್ತರಕ್ಕೆ ಈ  ಬಾರಿ ಬ್ರಹ್ಮಾಂಡ ಸ್ವಾಮೀಜಿ  ನಿಂತು ನಗುತ್ತಿದ್ದಾನೆ. ನಾನು ಹೇಳಿದ್ದು ಹೇಗೆ ನಿಜವಾಯಿತು ನೋಡಿ ಅಂತ ಜೋರಾಗಿ ಗಹಗಹಿಸಿ ನಗುತ್ತಿದ್ದಾನೆ. "ಪಾಪಿ ಮುಂಡೇವ, ನಾನು ಎಷ್ಟು ಹೇಳಿದ್ರೂ ನಂಬಲಿಲ್ಲ ಅಲ್ವಾ ನಿಮ್ಮ ಕರ್ಮಕಾಂಡವನ್ನು ಅನುಭವಿಸಿ"  ಅಂತ ಒಂದು ಕೈಯಲ್ಲಿ ಷಣ್ಮುಖನ ಪುಟ್ಟ ಈಟಿ ಮತ್ತೊಂದು ಕೈಯಲ್ಲಿ ಮೊಸರನ್ನದ ಪೊಟ್ಟಣವನ್ನು ಹಿಡಿದುಕೊಂಡು ಗಹಗಹಿಸಿ ನಗುತ್ತಿದ್ದಾನೆ.  ಆತ ಈ ಭೂಮಿಯನ್ನೇ ನಾಶ ಮಾಡುವ ರಾಕ್ಷಸನಂತೆ ಕಾಣುತ್ತಿದ್ದಾನೆ. ಆಷ್ಟರಲ್ಲೇ ದೂರದಲ್ಲೊಂದು ಬಸ್ಸು ಹೊರಡಲು ನಿಂತಿದೆ.    ಆ ಬಸ್ಸಿನೊಳಗೆ ಆಗಲೇ ನೂರಕ್ಕಿಂತ ಹೆಚ್ಚು ಜನ ಒಳಗೆ ತುಂಬಿದ್ದಾರೆ.  ಇನ್ನಷ್ಟೂ ಮತ್ತಷ್ಟೂ, ಬಸ್ಸಿನ ಮೇಲೆ ಬಸ್ಸಿನ ಅಕ್ಕಪಕ್ಕ ಹೀಗೆ ಒಂದು ಸಾವಿರಕ್ಕೂ ಹೆಚ್ಚು ಜನರೂ ತುಂಬಿ ಆದು ಯಾವ ಕಾಣುತ್ತಿದೆಯೆಂದರೆ ಒಂದುದೊಡ್ಡ ಬಾಲ್ ಆಕಾರದಲ್ಲಿ ಕಂಡು ಕೆಳಗೆ ನಾಲ್ಕು ಚಕ್ರಗಳನ್ನು ಬಿಟ್ಟರೆ ಅದೊಂದು ಬಸ್ಸು ಅನ್ನುವ ಸೂಚನೆಯೇ ಇಲ್ಲದಂತೆ ಅದನ್ನು ಸುತ್ತುವರಿದುಬಿಟ್ಟಿದ್ದಾರೆ.  ಬಸ್ಸಿನ ಹಿಂಭಾಗದಲ್ಲೊಂದು ಬೋರ್ಡು ಅದರ ಮೇಲೆ "ಬೆಳಗಾವಿಯ ಹತ್ತಿರದ ಹಳ್ಳಿಗೆ" ಅಂತ ಬರೆದಿದೆ. ಪ್ರಪಂಚವೇ ಪ್ರಳಯದಲ್ಲಿ ಮುಳುಗಿ ನಾಶವಾದರೂ ಅದೊಂದು ಹಳ್ಳಿ ಉಳಿದುಕೊಳ್ಳುತ್ತದೆ ಅಂತ ಈ ಬ್ರಹ್ಮಾಂಡ ಸ್ವಾಮೀಜಿ ಹೇಳಿದ್ದರಿಂದ ಎಲ್ಲರೂ ಆ ಬಸ್ಸನ್ನು ಈ ಪರಿ ಹತ್ತಿದ್ದಾರೆ.  ನಿದಾನವಾಗಿ ಆ ಬಸ್ಸು ಹೊರಟಿತು.  ಸ್ವಲ್ಪ ದೂರ ಹೋಗುವಷ್ಟರಲ್ಲಿ ಒಬ್ಬೊಬ್ಬರೇ ಕೆಳಗೆ ಹಾರಿ ಬೀಳುತ್ತಿದ್ದಾರೆ. ಮತ್ತಷ್ಟು ದೂರ ಸಾಗಿರಬಹುದು,  ಬಸ್ಸಿನ ಮುಂಭಾಗದ ಸೇತುವೆ ನಿದಾನವಾಗಿ ಕುಸಿಯುತ್ತಿದೆ, ಅದರ ಮೇಲೆ ಚಲಿಸುತ್ತಿರುವ ಬಸ್ಸು ಕೂಡ ಸೇತುವೆ ಸಮೇತ ಕುಸಿಯುತ್ತಾ ನಿದಾನವಾಗಿ ನೀರಿನೊಳಗೆ ಮುಳುಗುತ್ತಿದೆ...
    
       ಇದನ್ನು ನೋಡಿ ಈ ರಾಕ್ಷಸ ಸ್ವಾಮಿ ಜೋರಾಗಿ ಗಹಗಹಿಸಿ ನಗುತ್ತಿದ್ದಾನೆ.  ಅಯ್ಯೋ ನನ್ನ ಕೈ  ಜಾರಿಹೋಗುತ್ತಿದೆಯಲ್ಲಾ  ಇನ್ನೇನು ನಾನು ಕೆಳಗೆ ಬಿದ್ದು ಸಾಯುತ್ತಿದ್ದೇನೆ ಅಂದುಕೊಳ್ಳುತ್ತಿರುವಷ್ಟರಲ್ಲಿ ನನ್ನ ಆಶ್ಚರ್ಯ " ನನ್ನ ಕೈಬೆರಳುಗಳು ರಬ್ಬರಿನಂತೆ ಬೆಳೆಯುತ್ತಿವೆ! ಇಡೀ ದೇಹವೇ ಮತ್ತೆ ರಬ್ಬರಿನಂತೆ ಆಗಿ ದೇಹ ಹೂವಿನಂತೆ ಹಗುರಾಗುತ್ತಿದೆ!  ಒಮ್ಮೆ ನಾನು ಕೈಬೆರಳುಗಳನ್ನು ಒತ್ತಿದೆನಲ್ಲ. ಚಂಗನೆ ಹಾರಿದಂತೆ ಟೆರಸ್ ಹತ್ತಿಬಿಟ್ಟಿದ್ದೆ.  ನನಗೇನೋ ಈಗ ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಹಾರಬೇಕೆನಿಸುತ್ತಿದೆ! ಹಾರಿದೆ. ಹಾಗೇ ಗಾಳಿಯಲ್ಲಿ ತೇಲುತ್ತಿರುವ ಅನುಭವ! ಆ ಕಟ್ಟಡದಲ್ಲಿ ನಿದಾನವಾಗಿ ಕಾಲೂರಿ ನಿಂತ ಅನುಭವ.  ಸರಿ ಹೇಗಾದರೂ ಸಾಯುತ್ತೇನೆಲ್ಲ ಅಂದುಕೊಂಡು ಕಟ್ಟಡದಿಂದ ಕಟ್ಟಡಕ್ಕೆ ಹಾರಿ ನಾಶವಾಗುತ್ತಿರುವ ಈ ಎಲ್ಲಾ ದೃಶ್ಯಗಳನ್ನು ಫೋಟೊ ತೆಗೆಯತೊಡಗಿದೆ.   ಈ ಪ್ರಪಂಚ ಮುಳುಗಿ ಎಲ್ಲಾ ನಾಶವಾಗಿ ಮುಂದೆ ಎಷ್ಟೋ ಸಾವಿರ ವರ್ಷಗಳ ನಂತರ ಈ ಭೂಮಿಯಲ್ಲಿ ಮುಂದೆಂದೋ ಹುಟ್ಟುವ ಜೀವಿಗೆ  ನಮ್ಮ ಹಿಂದಿನ ಪ್ರಪಂಚ ಹೇಗಿತ್ತೋ ಅನ್ನುವುದನ್ನು ತಿಳಿದುಕೊಳ್ಳಲು ಈ ಫೋಟೊಗಳು ಸಹಕಾರಿಯಾಗಲಿ ಅಂತ ತನ್ಮಯತೆಯಿಂದ ಫೋಟೊ ತೆಗೆಯುತ್ತಿದ್ದೆ.

     ಮೊಸರನ್ನವನ್ನು ಆಗ ತಾನೆ ತಿಂದು ಮುಗಿಸಿದ್ದ ಈ ಬಾಡಿ ಬ್ರಹ್ಮಂಡ ನಾನು ಸಾಯದೇ ಉಳಿದಿರುವುದನ್ನು ನೋಡಿದನಲ್ಲ, ತನ್ನ ಕೈಯಲಿದ್ದ ಈಟಿಯಿಂದ ತಿವಿಯಲು ಓಡಿಬಂದ. ಮತ್ತೊಂದು ಕೈಯಲ್ಲಿ ದೇವರ ಗಂಟೆಯನ್ನು ಅಲುಗಾಡಿಸುತ್ತಾ ಶಬ್ದ ಮಾಡುತ್ತಿದ್ದ.  ನನ್ನ ಮುಂದೆ ಆಕಾಶದೆತ್ತರಕ್ಕೆ ಬಾಡಿ ಬ್ರಹ್ಮಾಂಡ ನಿಂತಿದೆ. ಸಾಯಿಸುವ ಮುನ್ನ ಒಮ್ಮೆ ಗಹಗಹಿಸಿ ನಕ್ಕು ಜೋರಾಗಿ ಗಂಟೆ ಬಾರಿಸತೊಡಗಿದ..... ಆ ಸದ್ದು ಕೇಳಲಾಗದೇ ನಾನು ಕಿವಿಮುಚ್ಚಿಕೊಂಡರೂ  ತಡೆಯಲಾಗುತ್ತಿಲ್ಲ. ಒಮ್ಮೆ ಶಂಖವನ್ನು ಊದಿ ಜೋರಾಗಿ ಗಂಟೆ ಬಾರಿಸಿ ಇನ್ನೇನು ನನ್ನ ಎದೆಗೆ ಈಟಿಯನ್ನು ಚುಚ್ಚಿ ಸಾಯಿಸಬೇಕು.... 

"ರೀ...ರೀ...ಎದ್ದೇಳ್ರಿ.... ಮೊಬೈಲ್ ಅಲಾರಂ ಆಗಿನಿಂದ ಒಂದೇ ಸಮನೆ ಹೊಡ್ಕೋತಿದ್ರೂ ಯಾಕೆ ಇವತ್ತು ನಿಮಗೆ  ಎಚ್ಚರವಾಗುತ್ತಿಲ್ಲ. ಎದ್ದೇಳ್ರೀ ಆಗಲೇ ಗಂಟೆ ನಾಲ್ಕುವರೆಯಾಯ್ತು"... ನನ್ನನ್ನು ಅಲುಗಾಡಿಸಿದ್ದಳು ನನ್ನ ಶ್ರೀಮತಿ.

"ಅರೆರೆ...ಇದೇನಿದೂ ನಾನಿನ್ನು ಮಲಗೇ ಇದ್ದೀನಲ್ಲ. ಸತ್ತೋಗಿಲ್ವಾ",  ಸುತ್ತಲೂ ಕಣ್ಣು ತೆರೆದು ನೋಡಿದೆ. ಮಸುಕುಮಸುಕಾಗಿಯೇ ಎಲ್ಲವೂ ಕಾಣುತ್ತಿತ್ತು. ಓಹ್! ಮಲಗುತ್ತಲೇ ಸಾಯುತ್ತಿದ್ದೇನೆ, ಬ್ರಹ್ಮಾಂಡ ಗುರುಜೀ ಹೇಳಿದ್ದಾನಲ್ಲ ಅದು ತಪ್ಪುವುದಿಲ್ಲವೆಂದು ಮತ್ತೆ ಕಣ್ಣು ಮುಚ್ಚಿದೆ. "ಏನ್ರೀ ನೀವು ಮತ್ತೆ ಮಲಗಿಕೊಳ್ಳುತ್ತಿದ್ದೀರಿ, ಇವತ್ತು ಪೇಪರ್ ಕೆಲಸಕ್ಕೆ ರಜಾನಾ"  ಅಂತ ಮತ್ತೆ ಅಲುಗಾಡಿಸಿದಳಲ್ಲ ಈ ಬಾರಿ ಪೂರ್ತಿ ಎಚ್ಚರವಾಯಿತು.   ಎದ್ದು ನೋಡುತ್ತೇನೆ. ನನ್ನ ಪಕ್ಕ ಹೇಮಾಶ್ರೀ, ನನ್ನ ಮನೆ, ರೂಮು, ಎದುರಿದ್ದ ಕಪಾಟಿನಲ್ಲಿರುವ ಪುಸ್ತಕಗಳು, ಇತ್ಯಾದಿಗಳೆಲ್ಲಾ ಹಾಗೆ ಇವೆ.  ನಾನು ಸತ್ತಿಲ್ಲ. ಇವು ಯಾವುವು ಪ್ರಳಯದಿಂದ ಕೊಚ್ಚಿಕೊಂಡುಹೋಗಿಲ್ಲ. ಎಲ್ಲಿವಿಯೋ ಆಗೆ ಇವೆಯಲ್ಲಾ!  ಹಾಗಾದರೆ ಇದುವರೆಗೂ ಕಂಡಿದ್ದೆಲ್ಲಾ ಕನಸು ಅಂದುಕೊಂಡಾಗ"  ಆ ನಿದ್ರೆ ಕಣ್ಣಿನಲ್ಲಿ ನಗುಬಂತು.  "ನಿಮಗೇನೋ ಆಗಿದೆ ಇವತ್ತು ಎದ್ದ ತಕ್ಷಣ ಮೊದಲ ಬಾರಿಗೆ ಹೀಗೆ ನಗುತ್ತಿದ್ದೀರಿ"  ಅಂದುಕೊಂಡು ಅಂತ ಮುಂಜಾನೆಯಲ್ಲೇ ಚಿಂತೆಗೊಳಗಾದಳು.

"ಓಹ್! ಹಾಗಾದರೆ ನಿನ್ನೆ ದಿನಾಂಕ ಮೇ ಇಪ್ಪತ್ತೊಂದು ಬಾಡಿ ಬ್ರಹ್ಮಾಂಡ ಗುರೂಜಿ ಹೇಳಿದಂತೆ ಪ್ರಳಯವಾಗಿ ಯಾರು ಉಳಿಯೊಲ್ಲವೆಂದುಕೊಂಡು ಅದೇ ರಾತ್ರಿ ಅದೇ ಯೋಚನೆಯಲ್ಲಿ ಮಲಗಿದ್ದೆನಲ್ಲಾ ಅದಕ್ಕೆ ರಾತ್ರಿಯೆಲ್ಲಾ ಕನಸಿನಲ್ಲಿ ಪ್ರಳಯ, ಭೂಕಂಪ, ಸುನಾಮಿಗಳೇ ಕಾಣಿಸಿಕೊಂಡು ನಮ್ಮನ್ನೆಲ್ಲಾ ನಾಶಮಾಡುತ್ತಿರುವ ದೃಶ್ಯಾವಳಿಗಳೇ ಕಾಣಿಸುತ್ತಿದ್ದಿದ್ದು ಇದಕ್ಕೇ ಇರಬೇಕು"   ಎಂದುಕೊಂಡು ಎದ್ದು ಮುಖತೊಳೆದುಕೊಂಡು ಬಟ್ಟೆಬದಲಾಯಿಸಿಕೊಂಡು ಮುಂಜಾನೆ ನಾಲ್ಕು ಮುಕ್ಕಾಲಿನ ಕತ್ತಲಲ್ಲಿ ನನ್ನ ದಿನಪತ್ರಿಕೆ ವಿತರಣೆ ಕೆಲಸಕ್ಕೆ ಹೊರಟೆ.  ಪ್ರಳಯದ ಕನಸಿನಿಂದ ಹೊರಬಂದು ಇವತ್ತು ಏನೇನು ಕೆಲಸವುಂಟು ಅಂತ ಒಮ್ಮೆ ಯೋಚಿಸಿದಾಗ ಆಗಾಧಪಟ್ಟಿಯೇ ಹೊರಬಿತ್ತು.

       ಮೊದಲನೆಯದು ದಿನಪತ್ರಿಕೆಯ ವಿತರಣೆಯ ಕೆಲಸ, ನಂತರ ಸ್ನಾನ ತಿಂಡಿ, ಅರ್ಧವಾಗಿರುವ ಫೋಟೊಗ್ರಫಿ ಲೇಖನದ  ನಾಲ್ಕನೇ ಭಾಗವನ್ನು ಮುಗಿಸಬೇಕು, ಆಗಬೇಕಾಗಿರುವ ಐದು ಮದುವೆ ಫೋಟೊಗಳ ಅಲ್ವಂಗಳಲ್ಲಿ ಒಂದನ್ನಾದರೂ ಇವತ್ತು ಸಿದ್ಧಗೊಳಿಸಬೇಕು, ಕಳೆದ ಒಂದು ತಿಂಗಳಿಂದ ಭಾನುವಾರದ ಯಶವಂತಪುರ ತರಕಾರಿ ಸಂತೆಗೆ ಹೋಗಲಾಗಿರಲಿಲ್ಲ. ಇವತ್ತಾದರೂ ನನ್ನಾಕೆ ಜೊತೆ ಹೋಗಿಬಂದರೇ ಆಕೆಗೆ ಖಂಡಿತ ಖುಷಿಯಾಗುತ್ತದೆ.   ನಡುವೆ ಬಿಡುವಾದರೆ ಹೆಂಡತಿಗೆ ಇಷ್ಟವಾದ "ಹುಡುಗರು" ಅಥ್ವ  "ಸಂಜು ವೆಡ್ಸ್ ಗೀತ" ಚಿತ್ರಕ್ಕೆ ಕರೆದುಕೊಂಡು ಹೋಗಬೇಕು, ಅಥವ ನಾನೊಬ್ಬನೇ "ಪೈರೈಟ್ಸ್ ಅಫ್ ಕೆರೆಬಿಯನ್-ಭಾಗ ನಾಲ್ಕು"  ನೋಡಿಬಿಡಬೇಕು. ಸಂಜೆ ನನ್ನ ದಿನಪತ್ರಿಕೆ ವಿತರಣೆ ಗೆಳೆಯನ ಅಕ್ಕನ ಮದುವೆಯ ಅರತಕ್ಷತೆಯಿದೆ. ಅದಕ್ಕೆ ತಪ್ಪಿಸಿಕೊಳ್ಳುವಂತಿಲ್ಲ. ತುಮಕೂರಿನಿಂದ ಅಣ್ಣನ ಮಕ್ಕಳಾದ ಮೋಹನ, ಮೇಘನ ಮತ್ತು ತೇಜು ಬರುತ್ತಿದ್ದಾರೆ  . ಅವರನ್ನು ಸಂಜೆ ಹೊರಗೆ ಕರೆದುಕೊಂಡು ಹೋಗಬೇಕು.     ಬಳ್ಳಾರಿಯಿಂದ ಕಾಶಿನಾಥ್ ನಗಲೂರ್ ಮಠ್ ಮತ್ತು ಹಾವೇರಿಯಿಂದ ಶಶಿಧರ್ ಹಿರೇಮಠ್ ಫೋಟೊಗ್ರಫಿ ವಿಚಾರವಾಗಿ ಮನೆಗೆ ಬರುತ್ತಿದ್ದಾರೆ ಅವರೊಂದಿಗೆ ಕೆಲವೊತ್ತು ಕಳೆಯಬೇಕು!.............ಅಯ್ಯೋ ಇವತ್ತು ಭಾನುವಾರ ಒಂದೇ ಎರಡೇ ಇಷ್ಟೇಲ್ಲಾ ಇರುವಾಗ ನಾನು ಈ ಬೂಟಾಟಿಕೆ ಬಾಡಿ ಬ್ರಹ್ಮಾಂಡ ಮೊಸರನ್ನ ಗುರುಜೀ ಪ್ರಳಯವಾಗುತ್ತೆ ಅನ್ನುವ ಮಾತನ್ನು ಯೋಚಿಸುತ್ತಲ್ಲೇ ಮಲಗಿ ಪ್ರಳಯದ ಕನಸನ್ನು ಕಂಡು ಹಾಳಾದೆನಲ್ಲಾ....ಛೇ ಇವನಿಂದಾಗಿ ನಿನ್ನೆ ರಾತ್ರಿ ಒಂದು ಸುಂದರ ಕನಸು ಕಾಣುವ ಸಮಯ ಹಾಳಾಯಿತಲ್ಲ ಎಂದುಕೊಂಡು ನನ್ನ ಪತ್ರಿಕೆ ವಿತರಣೆ ಕೆಲಸಕ್ಕೆ ಹೊರಟೆ.  ಆ ಕೆಲಸ ಮುಗಿಸಿ ಮನೆಗೆ ಬಂದು ಸ್ವಲ್ಪ ವ್ಯಾಯಾಮ, ಸ್ನಾನ ತಿಂಡಿ ಮುಗಿಸಿ ಟಿ ವಿ ಹಚ್ಚಿದರೆ!  ಅದೇ ಬಾಡಿ ಬ್ರಹ್ಮಾಂಡವಿಲ್ಲದ ಗುರುಜೀ ಕಾಣಿಸಿಕೊಂಡಿದ್ದಾನೆ.  "ನಿನ್ನೆ ಪ್ರಳಯವಾಗಲಿಲ್ಲ. ಕಾರಣ ನಿಮ್ಮ ಮನೆಯ ಹೆಂಗಸರೆಲ್ಲಾ ನಿನ್ನೆ ರಾತ್ರಿ ಲಕ್ಷಣವಾಗಿ ರೇಷ್ಮೇ ಸೀರೆಯುಟ್ಟು ನಿಮ್ಮ ಮನೆಯ ಆಡುಗೆ ಕೆಲಸ ಮಾಡಿದ್ದಾರೆ ಅದರ ಪ್ರಭಾವದ ಪವಿತ್ರತೆಯಿಂದಾಗಿ ಭೂಮಿಗೆ ಒದಗಬಹುದಾದ ಭೂಕಂಪ ಮುಂದಕ್ಕೆ ಹೋಗಿದೆ"
ಆ ದಿನಾಂಕವನ್ನು ಮುಂದೆ ತಿಳಿಸಲಾಗುವುದು"   ಅಂದನಲ್ಲ ಅವನ ಮಾತನ್ನು ಕೇಳಿಸಿಕೊಳ್ಳುತ್ತಲ್ಲೇ  ಹೇಮಾಶ್ರೀಯ ಕಡೆಗೆ ನೋಡಿದೆ.  ನಿನ್ನೆ ರಾತ್ರಿ ಅವಳು ಕೆಂಪುಬಣ್ಣದ ನೈಟಿಯನ್ನು ಧರಿಸಿದ್ದಾಳೆ. ಹೋಗಲಿ ನಮ್ಮ ಓಣಿಯ ಎಲ್ಲಾ ಹೆಣ್ಣುಮಕ್ಕಳು ರಾತ್ರಿ ನೈಟಿಯಲ್ಲಿಯೇ ಇದ್ದಿದ್ದು ನೆನಪಾಗಿ,  "ತತ್,  ಇವನು ನನಗೆ ಎಲ್ಲಾದರೂ ಒಬ್ಬಂಟಿಯಾಗಿ ಸಿಗಲಿ ಆಗ ವಿಚಾರಿಸಿಕೊಳ್ಳುತ್ತೇನೆ"  ಅಂದುಕೊಳ್ಳುತ್ತಾ ಮಾಡಬೇಕಾದ ದೊಡ್ದಪಟ್ಟಿಯಲ್ಲಿ ಯಾವುದನ್ನು ಮೊದಲು ಪ್ರಾರಂಭಿಸಲಿ ಎಂದು ಯೋಚಿಸುತ್ತಿದ್ದವನಿಗೆ ನಮ್ಮ ಓಣಿಯ ಮಕ್ಕಳು ಆಗಲೆ ರಸ್ತೆಯಲ್ಲಿ ಕ್ರಿಕೆಟ್ ಆಡುತ್ತಿದ್ದುದ್ದು ನೋಡಿ,   ಇಷ್ಟೆಲ್ಲಾ ಕೆಲಸಗಳ ಮನೆ ಹಾಳಾಗಲಿ ಅದನ್ನು ಅಮೇಲೆ ನೋಡಿಕೊಳ್ಳೋಣ ಸ್ವಲ್ಪ ಹೊತ್ತು ಈ ಮಕ್ಕಳ ಜೊತೆ ಕ್ರಿಕೆಟ್ ಆಡೋಣವೆಂದುಕೊಂಡು ಹೊರ ನಡೆದೆ.

 ಲೇಖನ :  ಶಿವು.ಕೆ   

Friday, May 20, 2011

ಮೋನಾಲಿಸ


        ಬಿಡುವಿಲ್ಲದ ಕೆಲಸದ ಒತ್ತಡದಿಂದಾಗಿ ಫೋಟೊಗ್ರಫಿ ಲೇಖನಕ್ಕೆ ನಾಲ್ಕೈದು ದಿನದ ಮಟ್ಟಿಗೆ ಬ್ರೇಕ್.  ಅದಕ್ಕಾಗಿ ಒಂದು ಕವನವನ್ನು ಬ್ಲಾಗಿಗೆ ಹಾಕುವ ಆಸೆಯಾಯ್ತು.   ಮತ್ತೆ ಈ ಕವನ ಈಗ ಬರೆದಿದ್ದಲ್ಲ. ಹತ್ತು ವರ್ಷಗಳ ಹಿಂದೆ ಬರೆದಿದ್ದು ಮತ್ತು ಆಗಲೇ ಕರ್ಮವೀರದಲ್ಲಿ ಪ್ರಕಟವಾಗಿತ್ತು.  ಅದು ಈಗ ನಿಮಗಾಗಿ.

ಕ್ಯಾನ್ವಸ್ಸಿಗೆ ಸ್ಕೆಚ್ ಹಾಕುವ
ಬಣ್ಣ ಹಚ್ಚುವ ಚಿತ್ರಕಲೆಗಾರ ನಾನು
ಬೇಸತ್ತಿದ್ದೆ ಬದುಕಿನ ವಾಸ್ತವ
ಸಂಕೀರ್ಣ ಕೃತಿ ರಚನೆಗಳಿಂದ
ಬರೆಯಲು ಸಿದ್ಧವಾಯ್ತು ಕುಂಚ, ಬಣ್ಣ, ಮನಸ್ಸು
ಬೇಷ್ ಎನಿಸಿಕೊಳ್ಳುವ ಮೋನಾಲಿಸಳನ್ನು.

ಅರೆರೆ....ಇದೇನಿದು! ಆಗ್ತಿಲ್ಲವಲ್ಲ!!?
ನುಣುಪು ಕೆನ್ನೆಗಾಗಿ ಕುಂಚ ಆಡಿಸಿದರೆ
ಇದ್ಯಾಕೆ ಮೂಡುತ್ತಿವೆ ಮುಖದ ಮೇಲೆ
ಅಲ್ಲಲ್ಲಿ ಮೊಡವೆಗಳು
ನಮ್ಮ ದೇಶದ ರೋಗಗಳಂತೆ

ಸಂಪಿಗೆಯಂಥ ಮೂಗು ಮೂಡಲಿಲ್ಲ
ನೂರಾರು ಮೂಢನಂಬಿಕೆಗಳ ಗೊಂದಲದಲ್ಲಿ

ಗುರಿ ಆಕಾಂಕ್ಷೆ ಇಲ್ಲದ ಯುವ ಜನಾಂಗದ್ದೆ!
ಸತ್ವಹೀನ ಸರ್ಕಾರಿ ಯೋಜನೆಗಳೇ!
ಈ ಹೊಳಪಿಲ್ಲದ ಕಣ್ಣುಗಳು  ಯಾವುದರ ಸಂಕೇತ?
 ಭವ್ಯ ನಾಡಿನ ಭವಿಷ್ಯವನ್ನು
ಅಧೋಗತಿಗೆಳೆಯುತ್ತಿರುವ ಸರ್ಕಾರಗಳ ಗುರುತೇ!

ಬಿಳಿ ಜಾಳುಜಾಳು ಕೇಶರಾಶಿ
ಅಪಘಾತಕ್ಕೆ ಆಹ್ವಾನ ಕೊಡೋ ರಸ್ತೆಗಳೇ
ಹಣೆ ಕಣ್ಣುಬ್ಬುಗಳಂತೂ ಥೇಟ್!

ತುಟಿಗಳಂತೂ ನಗುವನ್ನೇ ಮರೆತ ನಾಗರಿಕರ ಗುರುತು.
ಭಯೋತ್ಪಾದನೆ, ತೆರಿಗೆ ಉತ್ಪಾದನೆ ಭಯದಲ್ಲಿ.

ಕೊನೆಗೂ ಮೂಡಿದ ಮಂದಹಾಸ
ರಾಜಕಾರಣಿಗಳ ಅಶ್ವಾಸನೆಯಂತೆ ಕಾಣಬೇಕೇ!

ತೋರುತ್ತಿದೆಯಲ್ಲ ವ್ಯವಸ್ಥೆಯ ಚಿತ್ರ
ರೋಗಿಷ್ಟ ಮುದುಕಿಯ ಮುಖ

ಇದೇನಿದು ಮೊನಾಲಿಸ ಬದಲಿಗೆ
ಹೆಚ್ಚಾಗುತ್ತಿವೆಯಲ್ಲ ಗೋಜಲುಗಳು
ಮತ್ತೆ ತಿದ್ದಿ ತೀಡಲೋದರೆ

ಕೈ ಚೆಲ್ಲಿದ್ದೆ ಪರಿಹಾರ ಕಾಣದೆ
ದೊಡ್ದ ಬಹುಮಾನ ಗಳಿಸಿದವನಿಂದು
ಬಿಡಿಸಲಾಗಲಿಲ್ಲ ಮಂದಹಾಸದ ಮೋನಲಿಸಳನ್ನು.

ಶಿವು.ಕೆ.





        

Tuesday, April 12, 2011

ಮುತ್ಮರ್ಡು ಹಳ್ಳಿ ಲೇಖನ-೨



           ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಮುತ್ಮರ್ಡು ಊರಿನ ಸಾಧನೆ ಇಷ್ಟಕ್ಕೆ ಮುಗಿದಿಲ್ಲ ಇನ್ನೂ ಇದೆ. ಮೊದಲ  ಭಾಗದಲ್ಲಿ ವಿವರಿಸಿದ ವಿಶಿಷ್ಟ ವ್ಯಕ್ತಿಗಳ ಜೊತೆಗೆ ಮತ್ತಷ್ಟು ಸಾಧಕರ ಪರಿಚಯವನ್ನು ಈ ಭಾರಿ ಮಾಡಲು ಪ್ರಯತ್ನಿಸುತ್ತಿದ್ದೇನೆ.

                    ವಿಜ್ಞೇಶ್ವರ ಹೆಗಡೆ ತಮ್ಮ ಕಲಾಕೃತಿಯೊಂದಿಗೆ...

ಇವರು  ೪೫  ವರ್ಷದ  ವಿಜ್ಞೇಶ್ವರ ಹೆಗಡೆ ಎನ್ನುವವರು  ದೊಡ್ಡ ದೊಡ್ಡ ನಾಟಕ ಪರಧೆಗಳ ಚಿತ್ರಗಳನ್ನು  ಬರೆಯುವುದರಲ್ಲಿ ಪರಿಣಿತರು.  ಜಾತ್ರೆಗಳಲ್ಲಿ, ಉತ್ಸವಗಳಲ್ಲಿ ನಡೆಯುವ ದೊಡ್ದ ದೊಡ್ಡ ನಾಟಕಗಳಿಗೆ  ಬಳಸುವ  ದೊಡ್ಡ ಪರದೆಗಳ[ಕ್ಯಾನ್‌ವಸ್ ಬಟ್ಟೆ]ಪೌರಾಣಿಕ  ಚಿತ್ರಗಳನ್ನು  ಬರೆಯುವ  ಅದ್ವಿತೀಯ ಕಲಾವಿದರು.

ಯುವ ಸಂಗೀತಗಾರ.ವಿನಾಯಕ ಹೆಗಡೆ

          
ಇವರ ತಮ್ಮನಾದ  ವಿನಾಯಕ ಹೆಗಡೆ ಎನ್ನುವವರು ಹಿಂದುಸ್ಥಾನಿ ಸಂಗೀತ ಕಲಾವಿದರು.  ಇವರೆಂಥ  ಪ್ರತಿಭಾವಂತರೆಂದರೇ  ಕೇಂದ್ರ ಸರ್ಕಾರದಿಂದ  ಹಿಂದುಸ್ಥಾನಿ ಕ್ಲಾಸಿಕಲ್ ಸಂಗೀತ ಕಲಿಯಲು ಪ್ರತಿತಿಂಗಳಿಗೆ ಆರುಸಾವಿರ ರೂಪಾಯಿಯಂತೆ  ಎರಡುವರ್ಷಗಳವರೆಗೆ ಸ್ಕಾಲರ್‌ಷಿಪ್ ಸಿಕ್ಕಿದೆ. ಈ  ರೀತಿಯ ಕರ್ನಾಟಕದಿಂದ ಅವಕಾಶ ಸಿಕ್ಕಿರುವ  ಇಬ್ಬರಲ್ಲಿ  ಇವರೊಬ್ಬರು  ಅಂದರೇ  ಇವರ ಸಾಧನೆ ಎಂಥದ್ದು  ಎಂದು ಊಹಿಸಬಹುದು...


ಇಷ್ಟೆಲ್ಲಾ ಹೇಳಿದ ಮೇಲೆ  ಇಲ್ಲಿನ ಹೆಣ್ಣು ಮಕ್ಕಳು ಏನು ಸಾಧಿಸಿಲ್ವಾ  ಅಂತ ನಿಮಗನ್ನಿಸಬಹುದು...ಯಾಕಿಲ್ಲ. ಈ ಊರಿನ ಮಣ್ಣಿನಲ್ಲೇ ಕಲೆಯಾ ಗುಣವಿರುವಾಗ  ಅವರನ್ನು ಬಿಟ್ಟಿರಲು ಹೇಗೆ ಸಾಧ್ಯ.?  ...ಸ್ವಾತಿಯ ತಾಯಿ ಉಷಾ ಹೆಗಡೆ, ಮತ್ತು  ಜಯಂತ್ ತಾಯಿ ಜಯಲಕ್ಷ್ಮಿ ಹೆಗಡೆ ಇಬ್ಬರೂ ಸೊಗಸಾಗಿ ಬಟ್ಟೆ ಹೊಲೆಯುತ್ತಾರೆ.  ಸುತ್ತಮುತ್ತಲ ಊರಿಗೆಲ್ಲಾ  ಮಕ್ಕಳ ಮತ್ತು  ಹೆಣ್ಣು  ಮಕ್ಕಳ ಬಟ್ಟೆ ಹೊಲಿಯುವುದರಲ್ಲಿ  ಇವರು ತುಂಬಾ ಫ಼ೇಮಸ್ಸು....!

ಜಯಲಕ್ಷ್ಮಿ ಹೆಗಡೆ


 ಉಷಾ ಹೆಗಡೆ.
             

ನಾಗೇಂದ್ರರವರ ಶ್ರೀಮತಿ  ನಾಗರತ್ನ ಹೆಗಡೆಯವರು  ಆಡಿಕೆ  ಬೀಜಗಳನ್ನು  ಸಂಗ್ರಹಿಸಿ ಕಸಿ ಮಾಡಿ  ಪ್ರತಿವರ್ಷ ಸಾವಿರಾರು  ಆಡಿಕೆ ಸಸಿಗಳನ್ನು  ಸುತ್ತಲ ಊರಿಗೆ ಮಾರುತ್ತಾರೆ.  ಜೊತೆಗೆ  ಬೆಟ್ಟದಲ್ಲಿ ಸಿಗುವ  ಅಂಟುವಾಳ, ಕೋಕಮ್, ಬೆಟ್ಟದ ಹಲಸು,  ಮಾವು,  ವಾಟೆ, ಸೀಗೆಪುಡಿಗಿಡ, ಬೆಟ್ಟದ ನೆಲ್ಲಿಕಾಯಿ, ಆಳಲೇಕಾಯಿ......ಇನ್ನೂ ಅನೇಕ ಔಷದೀಯಾ ಗಿಡಗಳು ಇವರೇ  ಮನೆಯ ಸುತ್ತ ಮಾಡಿಕೊಂಡ  ನರ್ಸರಿಯಲ್ಲಿ  ಪ್ರತಿವರ್ಷ ಸಿದ್ಧವಾಗುತ್ತವೆ.  ಮತ್ತೆ ಇದೆಲ್ಲವನ್ನು   ಮನೆಯ ಕೆಲಸ, ಮಕ್ಕಳ ಓದು, ಅವರನ್ನು  ಸ್ಕೂಲಿನ ಸಮಯದಲ್ಲಿ ಸಿದ್ಧಮಾಡಿಕಳಿಸುವುದು, ಮನೆಯ ಹಿರಿಯರೆಲ್ಲರಿಗೆ ಆಡಿಗೆ ಊಟ ತಿಂಡಿ, ಇತ್ಯಾದಿ ಮನೆಕೆಲಸಗಳನ್ನು ಮಾಡುತ್ತಾ  ಮನೆಯ ಹಿರಿಯರ ಕೃಷಿಕೆಲಸದಲ್ಲಿ ಸಹಾಯ ಮಾಡುತ್ತಾ ಇಂಥ ನರ್ಸರಿ ನಡೆಸುತ್ತಾರೆಂದರೇ ನಂಬಲಿಕ್ಕೆ ಸಾಧ್ಯವಿಲ್ಲ ಅಲ್ಲವೇ....ಹಾಗೆ  ಇವರು  ಆಡಿಕೆ ಸುಲಿಯುವುದರಲ್ಲಿ  ಪಳಗಿದ ಕೈ ಕೂಡ...

ನಾಗರತ್ನ ಹೆಗಡೆ

ನಾನು ಇದುವರೆಗೆ ಹೇಳಿದ್ದೆಲ್ಲಾ ಇದೇ ಊರಿನಲ್ಲಿ ಇದ್ದು ಸಾದನೆ ಮಾಡಿದವರ ಬಗ್ಗೆ.   ಈಗ  ಈ ಊರಿನಲ್ಲಿ  ಹುಟ್ಟಿ ಬೆಳದು  ಹೊರರಾಜ್ಯ,  ವಿದೇಶಗಳಲ್ಲಿ ನೆಲಸಿ ದೊಡ್ಡ ಸಾಧನೆ ಮಾಡಿ  ಊರಿಗೆ  ಕೀರ್ತಿ ತಂದವರ ಬಗ್ಗೆ  ಮುಂದಿನ ಭಾಗದಲ್ಲಿ ಹೇಳುತ್ತೇನೆ.

ಚಿತ್ರಗಳು: ನಾಗೇಂದ್ರ ಮತ್ಮುರ್ಡು.
ಲೇಖನ :  ಶಿವು.ಕೆ


Sunday, April 10, 2011

ಫೋಟೋ ಸುಖ...ಪ್ರಜಾವಾಣಿ ದು:ಖ

       

          ದಿನಾಂಕ ೧೦-೪-೨೦೧೧ರ ಭಾನುವಾರದ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿನ ಮುಖಪುಟದಲ್ಲಿ ನನ್ನ ಆತ್ಮೀಯ ಗೆಳೆಯ ಚಿಕ್ಕಮಗಳೂರಿನ ಪ್ರಜಾವಾಣಿ ಮುಖ್ಯ ಪ್ರತಿನಿಧಿ ಡಿ.ಎಂ.ಘನಶ್ಯಾಮ ಬರೆದ "ಫೋಟೊ ಸುಖ... ಹಕ್ಕಿ ದು:ಖ"  ಲೇಖನವನ್ನು ಓದಿದೆ. ಓದಿದ ಮೇಲೆ ಅದು ಪ್ರಜಾವಾಣಿಯ ದು:ಖವೆನಿಸಿತ್ತು.  ಪ್ರತಿಷ್ಟಿತ ಪ್ರಜಾವಾಣಿಗೆ ಇಂಥ ಲೇಖನವನ್ನು ಪ್ರಕಟಿಸುವ ಮುನ್ನ ಆ ಲೇಖನದ ಹಿಂದೆ ಎಷ್ಟರ ಮಟ್ಟಿಗಿನ ಶ್ರಮವಿದೆ ಅಂತ ಏಕೆ ನೋಡಲಿಲ್ಲ.  ಘನಶ್ಯಾಮ ನನ್ನ ಆತ್ಮೀಯ ಗೆಳೆಯ. ಆತ ಹತ್ತಾರು ಉತ್ತಮ ಲೇಖನಗಳನ್ನು ಬರೆದಿದ್ದಾರೆ. ಅವರ ಬಗ್ಗೆ ಮೆಚ್ಚುಗೆ ಮತ್ತು ಗೌರವವಿದೆ.  ಪತ್ರಿಕೆಯಲ್ಲಿ ತನ್ನ ಲೇಖನ ಬಂದು ತುಂಬ ದಿನವಾಯಿತಲ್ಲ ಎನ್ನುವ ಹಫಾಹಫಿತನದಿಂದಾಗಿ ಬರೆದ ಲೇಖನವನ್ನು ಪ್ರಜಾವಾಣಿಯ ಸಾಪ್ತಾಹಿಕ ಸಂಪಾದಕರು ಅದನ್ನು ಪರಾಮರ್ಶಿಸದೆ ಪ್ರಕಟಿಸಿದ್ದಾರೆ. ಪ್ರಕಟಿಸುವುದರ ಜೊತೆಗೆ ನೂರಾರು ವನ್ಯಜೀವಿ ಛಾಯಾಗ್ರಾಹಕರನ್ನು ಅವಮಾನಿಸಿದ್ದಾರೆ. "ಪಕ್ಷಿಗಳ ಮಟ್ಟಿಗೆ ಹೆಸರು ಮಾಡುವ ಏಕೈಕ ಉದ್ದೇಶದಿಂದ ಬರುವ ಫೋಟೊಗ್ರಾಫರುಗಳೇ ದೊಡ್ಡ ಅಪತ್ತು. ಫೋಟೊ ಕ್ಲಿಕ್ಕಿಸುವ ಭರದಲ್ಲಿ ಇವರು ಮಾಡುವ ಅವಾಂತರ ಒಂದೆರಡಲ್ಲ.............ಹೀಗೆ ಬರೆದಿರುವ ಘನಶ್ಯಾಮ್  ಎಷ್ಟು ಪಕ್ಷಿ ಛಾಯಾಗ್ರಾಹಕರು ಹಕ್ಕಿಗಳ ಗೂಡುಗಳನ್ನು ಹಾಳುಮಾಡುವುದನ್ನು ಖುದ್ದಾಗಿ ನೋಡಿದ್ದಾರೆ? ಹೋಗಲಿ ಕಲೆಹಾಕಿದ ಮಾಹಿತಿಯಿಂದ ಬರೆದಿರುವ ವಿಚಾರವೆಂದು ತಿಳಿಯೋಣವೆಂದರೆ ಆ ಮಾಹಿತಿಗೂ ತಲೆಬುಡ ಸರಿಯಿಲ್ಲ.  ಏಕೆಂದರೆ ಅವರೇ ಕೊಟ್ಟ ಒಂದು ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ   "ಚಿಕ್ಕಮಗಳೂರು-ಬೇಲೂರು ರಸ್ತೆಯಲ್ಲಿರುವ ಕೋಟೆಕೆರೆಯಲ್ಲಿ ಸಾಮಾನ್ಯವಾಗಿ ಬೆಳ್ಳಕ್ಕಿ ಹಿಂಡು ಬೀಡು ಬಿಟ್ಟಿರುತ್ತದೆ. ಕೆರೆಯ ಒಂದು ಬದಿಯಲ್ಲಿ ವಿಶ್ರಮಿಸುತ್ತಿರುವ ಬೆಳ್ಳಕ್ಕಿಗಳ ಫೋಟೊ ತೆಗೆದ ಫೋಟೊಗ್ರಾಫರ್ ಒಬ್ಬರಿಗೆ ಅವು ರೆಕ್ಕೆ ಬಿಚ್ಚಿ ಹಾರುವ ಫೋಟೊಗಳು ಬೇಕು ಎನಿಸಿತ್ತು. ಆದರೆ ಅವರು ಹಿಂದುಮುಂದು ಯೋಚಿಸದೆ ಕಲ್ಲು ತೆಗೆದು ಬೀಸಿದರು. ಕಲ್ಲೊಂದು ಬೆಳ್ಳಕ್ಕಿ ಕಾಲಿಗೆ ತಾಗಿ ಗಾಯವಾಯಿತು. ಉಳಿದವು ಹಾರಿದವು. ಈ ಮಹಾನುಭಾವ ಫೋಟೊ ತೆಗೆದು ಸಂಭ್ರಮಿಸಿದ."    ಹೀಗೆ ಬರೆದಿದ್ದಾರೆ.  ಒಬ್ಬ ಪಕ್ಷಿ ಫೋಟೋ ತೆಗೆಯುವ ಛಾಯಾಗ್ರಾಹಕ ಇದೇ ಬೆಳ್ಳಕ್ಕಿಗಳ ಫೋಟೊ ತೆಗೆಯುವ ಸಮಯದಲ್ಲಿ ತನ್ನ ಬಳಿಯಿರುವ ನಾಲ್ಕರಿಂದ ಆರುಕೇಜಿ ತೂಕವಿರುವ ಕ್ಯಾಮೆರ ಮತ್ತು ಜೊತೆಗಿರುವ ದೊಡ್ದ ಲೆನ್ಸ್ ಅನ್ನು ನೆಲದ ಮೇಲಿಟ್ಟು ಒಂದು ಕಲ್ಲನ್ನೆತ್ತಿಕೊಂಡು ಪಕ್ಷಿಗಳಿಗೆ ಗುರಿಯಿಟ್ಟು ಹೊಡೆದು ಮರುಕ್ಷಣ ಅಷ್ಟು ತೂಕವಿರುವ ಕ್ಯಾಮೆರ ಮತ್ತು ಲೆನ್ಸುಗಳನ್ನೆತ್ತಿ ಯಾವುದೋ ಒಂದು ಹಕ್ಕಿಯನ್ನು ಫೋಕಸ್ ಮಾಡಿ ಫೋಟೊ ತೆಗೆಯಲು ಸಾಧ್ಯವೇ? ಬಹುಶಃ ಇಂಥ ವರದಿಗಾಗಿ ಘನಶ್ಯಾಮ್ ತನ್ನ ಗೆಳೆಯರನ್ನು ಅದೇ ಜಾಗಕ್ಕೆ ಕಳಿಸಿ ಅಲ್ಲಿ ಹಕ್ಕಿಗಳಿಗೆ ಕಲ್ಲು ಹೊಡೆಸಿ ಗಾಯಮಾಡಿ ತಮ್ಮ ಪುಟ್ಟ ಕ್ಯಾಮೆರದಲ್ಲಿ ಫೋಟೊ ಕ್ಲಿಕ್ಕಿಸುವ ಹಾಗೆ ಮಾಡಿದ್ದಾರ ಅಂತ ಸಂಶಯ ಬರುವುದು ಖಂಡಿತ.  ಒಬ್ಬ ವನ್ಯ ಜೀವಿ ಅಥವ ಪಕ್ಷಿಗಳ ಛಾಯಾಗ್ರಾಹಕರು ಮೊದಲಿಗೆ ಅವರು ಪ್ರಕೃತಿ ಪ್ರೇಮಿಗಳಾಗಿರುತ್ತಾರೆ.  ಅವರು ಮೊದಲಿಗೆ ಹಕ್ಕಿಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಅವುಗಳ ಸಂರಕ್ಷಣೆಗಾಗಿ ಉಳಿವಿಗಾಗಿ ಮತ್ತು ಮಾಹಿತಿಗಾಗಿ ಫೋಟೊಗ್ರಫಿ ಮಾಡುತ್ತಾರೆ.  ಒಳ್ಳೆಯ ಮತ್ತು ಅದ್ಬುತ ಫೋಟೊಗ್ರಫಿ ಮಾಡಿ ಅದು ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಮಾದ್ಯಮಗಳಲ್ಲಿ ಬಂದರೆ ಪಕ್ಷಿವೀಕ್ಷಕರಿಗೆ ಅಧ್ಯಾಯನ ಮಾಡುವವರಿಗೆ, ಅದರ ಬಗ್ಗೆ ಆಸಕ್ತಿಯಿರುವವರಿಗೆ ಆಗುವ ಉಪಯೋಗಗಳು ನೂರಾರು. ಇಂಥ ಪ್ರಯತ್ನದಿಂದಾಗಿ ಆ ಛಾಯಾಗ್ರಹಕನಿಗೆ  ಹೆಸರು ಮತ್ತು ಖ್ಯಾತಿ ಬಂದರೆ ಅದು ಛಾಯಾಗ್ರಾಹಕನಿಗೆ ಬೋನಸ್ ಮಾತ್ರ.  ಆದು ಬಿಟ್ಟು ಘನಶ್ಯಾಮ್ ಬರೆದ ಹಾಗೆ ನಡೆದುಕೊಳ್ಳುವ ವನ್ಯಜೀವಿ ಛಾಯಾಗ್ರಾಹರಿರುವುದಿಲ್ಲ. 


ಮತ್ತೊಂದು ವಿಚಾರವೇನೆಂದರೆ ನಮ್ಮ ನಾಡಿನ ಪ್ರಖ್ಯಾತ ವನ್ಯಜೀವಿ ಛಾಯಾಗ್ರಾಹಕರು ಪಕ್ಷಿಗಳ ಫೋಟೊಗ್ರಫಿ ಮಾಡಿ ಲಂಡನ್ನಿನ ರಾಯಲ್ ಫೋಟೊಗ್ರಫಿ ಸೊಸೈಟಿ ಮತ್ತು ಫ್ಯಾರಿಸ್ಸಿನ "ಫೆಡರೇಷನ್ ಅಪ್ ಇಂಟರ್‌ನ್ಯಾಷನಲ್ ಡಿ ಲ ಅರ್ಟ್  ಫೋಟೊಗ್ರಫಿ" ಸಂಸ್ಥೆಗಳಿಂದ ಪ್ರತಿಷ್ಟಿತ ಡಿಸ್ಟಿಂಕ್ಷನ್ ಪಡೆದಿದ್ದಾರೆ.  ಆ ರೀತಿ 2011ರವರೆಗೆ 50ಕ್ಕೂ ಹೆಚ್ಚು ಕರ್ನಾಟಕದ ಛಾಯಾಗ್ರಾಹಕರು ಮತ್ತು  200ಕ್ಕೂ ಹೆಚ್ಚು ಡಿಸ್ಟಿಂಕ್ಷನ್ ಪಡೆದ ಛಾಯಾಗ್ರಾಹಕರು ಭಾರತದಾದ್ಯಂತ ಇದ್ದಾರೆ. ಹಾಗಾದರೆ ಇವರಿಗೆಲ್ಲಾ ಡಿಸ್ಟಿಂಕ್ಷನ್ ಕೊಟ್ಟ ಆ ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಬುದ್ದಿಯಿಲ್ಲವೇ?   ಇವರೆಲ್ಲಾ ಘನಷ್ಯಾಮ್ ಬರೆದಂತೆ ಫೋಟೊಗ್ರಫಿಗಾಗಿ ಹಕ್ಕಿಗಳನ್ನು ಸಾಯಿಸಿದ್ದಾರೆಯೇ?  ಒಂದುವೇಳೆ  ಸಾಯಿಸಿದ್ದಾರೆ ಅಂತಲೇ ಅಂದುಕೊಂಡರೆ ಅವರು ಕ್ಲಿಕ್ಕಿಸಿದ ಹಕ್ಕಿಗಳ ಚಿತ್ರಗಳನ್ನು ನಿಮ್ಮದೇ ಪತ್ರಿಕೆಯಲ್ಲಿ ಇದುವರೆಗೂ ಪ್ರಕಟಿಸಿದ್ದೀರಲ್ಲ ಅದು ಎಷ್ಟು ಸರಿ? 

            ಯಾವುದೋ ಇಂಟರ್‍ನೆಟ್ ಲೇಖನವನ್ನು ಓದಿ ಹೀಗೆ ಬರೆಯುವ ಡಿ.ಎಂ ಘನಶ್ಯಾಂ ಈಗ ಪತ್ರಿಕೆಯ ಮುಖ್ಯ ವರಧಿಗಾರನಾಗಿರುವುದು ಚಿಕ್ಕಮಗಳೂರಿನಲ್ಲಿ. ಘನಶ್ಯಾಂ ಅವರು ಬರೆದ ಲೇಖನ ಪ್ರಕಟವಾಗಿದ್ದು ದಿನಾಂಕ 10-4-2011ರ ಭಾನುವಾರದಂದು. ಆದ್ರೆ ಅದೇ ದಿನಾಂಕದಂದು ಪ್ರಜಾವಾಣಿಯ ನಾಲ್ಕನೆ ಪುಟದಲ್ಲಿ "ಪ್ರಜಾವಾಣಿ ಕ್ಲಿಕ್" ಕಾಲಂನಲ್ಲಿ "ತುತ್ತಾ ಮುತ್ತಾ" ಕೆಂಪಕ್ಷರದ ಹೆಡ್ಡಿಂಗಿನಲ್ಲಿ "ನಗರದ ಕಬ್ಬನ್ ಉದ್ಯಾನದಲ್ಲಿನ ಮರದ ಪೊಟರೆಯಲ್ಲಿ ಗಿಳಿಯೊಂದು ತನ್ನ ಮರಿಗೆ ಗುಟುಕು ನೀಡಿದ ದೃಶ್ಯ ಶನಿವಾರ ಕಂಡುಬಂತು."  "ಪ್ರಜಾವಾಣಿ ಚಿತ್ರ: ಬಿ.ಕೆ. ಜನಾರ್ಧನ್." ಎನ್ನುವ ಪುಟ್ಟ ಶೀರ್ಷಿಕೆಯ ಮೇಲೆ ಒಂದು ಗಿಳಿ ತನ್ನ ಮರಿಗಿಳಿಗೆ ಗುಟುಕು ನೀಡುತ್ತಿರುವ ಸುಂದರ ಚಿತ್ರವನ್ನು ಪ್ರಕಟಿಸಿಬಿಟ್ಟಿದ್ದಾರೆ. ಈ ಚಿತ್ರದಿಂದಾಗಿ ಪ್ರಜಾವಾಣಿ ಪತ್ರಿಕೆಗೂ ಅದನ್ನು ತೆಗೆದ ಛಾಯಾಗ್ರಾಹಕನಿಗೂ ಹೆಸರು ಮತ್ತು ಕೀರ್ತಿ ಅವತ್ತಿನ ಮಟ್ಟಿಗೆ ಬಂದಿರುವುದಂತೂ ನಿಜ.  ಪಾಪ ಘನಶ್ಯಾಮರಿಗೆ ಮರದ ಪೊಟರೆಯಲ್ಲಿ ಗೂಡುಮಾಡಿರುವ ಆ ಗಿಳಿಯು ತನ್ನ ಮರಿಗೆ ಗುಟುಕು ನೀಡುವುದನ್ನು ಫೋಟೊ ತೆಗೆದ ತಮ್ಮ ಪ್ರಜಾವಾಣಿಯ ಛಾಯಾಗ್ರಾಹಕ ಬಿ.ಕೆ ಜನಾರ್ಧನ್ ಫೋಟೊಗ್ರಫಿ ಮಾಡುವ ಸಲುವಾಗಿ ಆ ಗಿಳಿ ಮತ್ತು ಅದರ ಮರಿಗೆ ತೊಂದರೆ ಕೊಡುತ್ತಿದ್ದಾರೆ ಅಂತ ಏಕೆ ಅನ್ನಿಸಲಿಲ್ಲ. ಪತ್ರಿಕೆಯಲ್ಲಿ ಪ್ರಕಟವಾದ ಈ ಚಿತ್ರವನ್ನು ನೋಡಿ ಅಲ್ಲೊಂದು ಗಿಳಿಗೂಡಿದೆ. ಅದರಲ್ಲೊಂದು ಮರಿಯಿದೆ. ತಾಯಿ ಗಿಳಿಯಿದೆ. ಅದರಿಂದ ನಮಗೆ ಮಾಂಸ ಸಿಗುತ್ತದೆ ಅಂತ ಹಕ್ಕಿಗಳ ಬೇಟೆಗಾರರು ಖುಷಿಪಡುವುದಿಲ್ಲವೇ... ಇಂಥ ಚಿತ್ರಗಳನ್ನು ಪ್ರಕಟಿಸಿ ಆ  ಹಕ್ಕಿಗಳ ಸಾವಿಗೆ ಪತ್ರಿಕೆ ಪರೋಕ್ಷವಾಗಿ  ಕಾರಣವಾಗುವುದಿಲ್ಲವೇ?  ಪಾಪ ಆ ಛಾಯಾಗ್ರಾಹಕರಿಗೆ ಗೊತ್ತಿರದಿದ್ದರೂ ಘನಶ್ಯಾಂ ಲೇಖನವನ್ನು ಪ್ರಕಟಿಸುವ ಪ್ರಜಾವಾಣಿ ಪತ್ರಿಕೆಗೆ ಏಕೆ ಅನ್ನಿಸಲಿಲ್ಲ. ತಮ್ಮ ಪತ್ರಿಕೆಯ ಛಾಯಾಗ್ರಾಹಕರು ಇಂಥ ಫೋಟೊಗಳನ್ನು ಕ್ಲಿಕ್ಕಿಸಿದರೆ ಅದರಿಂದ ತಮ್ಮ ಪತ್ರಿಕೆಗೆ ಮತ್ತು ಛಾಯಾಗ್ರಾಹಕನಿಗೆ ಕೀರ್ತಿ. ಇತರ ವನ್ಯ ಜೀವಿ ಛಾಯಾಗ್ರಾಹಕರು ಇಂಥ ಫೋಟೊಗಳನ್ನು ಕ್ಲಿಕ್ಕಿಸಿದರೆ ಹಕ್ಕಿಗಳಿಗೆ ದು:ಖ ಅಲ್ಲವೇ....

ತಮ್ಮ ಪತ್ರಿಕೆಯ ವರದಿಗಾರ ಈ ಲೇಖನದ ಮೂಲಕ ಎಲ್ಲಾ ವನ್ಯಜೀವಿ ಛಾಯಾಗ್ರಾಹಕರನ್ನು ಅವಮಾನಿಸಿರುವುದಲ್ಲದೇ ಇಂಥ ಆಧಾರವಿಲ್ಲದ ಲೇಖನವನ್ನು ಪ್ರಕಟಿಸಿರುವ ಪ್ರಜಾವಾಣಿಯ ಸಾಪ್ತಾಹಿಕ ಪುರವಾಣಿಯ ಸಂಪಾದಕರು ಇದಕ್ಕೆ ಉತ್ತರಿಸುವರೆ?

ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯ ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..

http://220.227.178.12/prajavani/web/include/story.php?news=1591&section=54&menuid=13


ಲೇಖನ: ಶಿವು.ಕೆ


Friday, April 1, 2011

ನದಿತಟದಲ್ಲಿ



ಕಾಣದ ಅವಳಿಗಾಗಿ
ದಿನಕ್ಕೊಂದು ಕವನ ಬರೆಯುತ್ತಿದ್ದೆ
ನದಿತಟದಲ್ಲಿ ಕುಳಿತು
ದೋಣಿಗಳಲ್ಲಿ ಪದಗಳನ್ನು ತೇಲಿಬಿಡುತ್ತಿದ್ದೆ

ತುಂಟ ಮೀನೊಂದು ನೀರಿಂದ
ಚಿಮ್ಮಿ ಕಣ್ಣು ಮಿಟುಕಿಸಿ ಹಾರಿಳಿದಾಗ
ತುಂತುರು ಮಳೆಯಲ್ಲಿ ಕೋಲ್ಮಿಂಚು
ಭೂರಮೆಯ ಛಾಯಾಚಿತ್ರ ಕ್ಲಿಕ್ಕಿಸಿ ಮರೆಯಾದಾಗ
ಕೊಂಬೆಯಲ್ಲಿದ್ದ ಮೈನ ಹಕ್ಕಿ
ಇನಿಯನಿಗೆ ಕಿಸಕ್ಕನೆ ಕಚಗುಳಿಯಿಟ್ಟಾಗ
ಮಕರಂದವೀರಿದ ಪತಂಗವನ್ನೇ
ನೋಡುತ್ತಾ ಹೂ ಸಂಕೋಚದಿ ನಾಚಿಕೊಂಡಾಗ

ಅವಳ ಕಾಣಲೆತ್ನಿಸಿ ಕಾಣದೇ
ಕವನ ಬರೆದು ದೋಣಿಯಾಗಿ ತೇಲಿಬಿಡುತ್ತಿದ್ದೆ.

ಅಂದು ಹಾಗಾಗಲಿಲ್ಲ
ಮೈನ ಜೋಡಿಯಿಲ್ಲ, ಮಿಂಚೊಳೆಯಲಿಲ್ಲ,
ಪತಂಗ ಬರಲಿಲ್ಲ, ಮೀನು ಚಿಮ್ಮಲಿಲ್ಲ
ಪ್ರಕೃತಿಗೆ ಪ್ರತಿರೂಪವಾಗಿ ಎದುರಲ್ಲಿ
ಅವಳಲ್ಲಿ  ಎಲ್ಲಾ ಅಡಗಿರುವಾಗ ಪ್ರಕೃತಿಗೆಲ್ಲಿ ಬೆಲೆ
ಕ್ರಿಯಾಕರ್ಮಕ್ಕೆಲ್ಲಿ ನೆಲೆ?

ಲೇಖನಿ ತುಂಬಿದ್ದರೂ ದಂಡಿ ಪದಗುಚ್ಛಗಳು ಮನದಲ್ಲಿದ್ದರೂ
ದೋಣಿ ಇರಲಿ ಕವನ ಕಾಗದದ
ಮೇಲೆ ಇಳಿದು ತೇಲುತ್ತಿಲ್ಲ

ನಿಸರ್ಗ ನಿದ್ರಿಸುತ್ತಿತ್ತೆ? ನಾನದರಲ್ಲಿ ಸೇರಿದ್ದೆನೇ?
ಒಂದೇ ದಿನ ಅವಳು ಮಾಯ
 ಪ್ರಕೃತಿಗೆ ಸ್ಪರ್ಧಿಯೆಲ್ಲಿ, ನನ್ನ ಕವನಕ್ಕೆ ಕೊನೆ ಎಲ್ಲಿ

ಎಂದಿನಂತೆ ಕಾಣದ ನನ್ನವಳಿಗಾಗಿ
ದಿನಕ್ಕೊಂದು ಕವನ ಬರೆಯುತ್ತಿದ್ದೆ
ನದಿತಟದಲ್ಲಿ ಕುಳಿತು
ದೋಣಿಗಳನ್ನು ಪದಗಳನ್ನು ತೇಲಿಬಿಡುತ್ತಿದ್ದೆ.


       ಇದು ಈಗ ಬರೆದ ಕವನವಲ್ಲ.  2001 ನೇ ಜುಲೈ ತಿಂಗಳಲ್ಲಿ ಬರೆದಿದ್ದು.  ನಂತರ ಆಗ ಹೊಸ ದಿಗಂತ ಮಾಸಪತ್ರಿಕೆಯಲ್ಲಿ ದಿನಾಂಕ 22-12-2001 ರಲ್ಲಿ ಪ್ರಕಟವೂ ಆಗಿತ್ತು.   ಆಂಗ್ಲ ಕವಿಯೊಬ್ಬ ಹೇಳಿದಂತೆ ನಾವು ಬರೆದಿದ್ದನ್ನು ಒಂಬತ್ತು ವರ್ಷ ಎಲ್ಲೂ ಪ್ರಕಟಿಸದೆ...ಒಂಬತ್ತನೇ ವರ್ಷದ ನಂತರ ಮತ್ತೊಮ್ಮೆ ನಾವೇ ಓದಿದಾಗ ಅದು ನಿಜಕ್ಕೂ ಇಷ್ಟವಾದರೇ ನಂತರ ಅದು ಇಡೀ ಪ್ರಪಂಚಕ್ಕೆ ಇಷ್ಟವಾಗುತ್ತದಂತೆ...ಈ ಮಾತನ್ನು ಏಕೆ ಹೇಳುತ್ತಿದ್ದೇನೆಂದರೆ...ಒಂಬತ್ತು ವರ್ಷದ ಹಿಂದೆ ಬರೆದ ನನ್ನ ಕವಿತೆಗಳನ್ನು ಈಗ ಓದುತ್ತಿದ್ದೇನೆ. ಅವು ಯಾಕೋ ಇಷ್ಟವಾಗುತ್ತಿವೆ ಅದರಲ್ಲಿ ಇದು ಮೊದಲನೆಯದು. ಆಗ ಪ್ರಕಟವಾಗಿದ್ದರೂ ಈಗ ಮತ್ತೊಮ್ಮೆ ಓದಿದಾಗ ಒಂಥರ ಇಷ್ಟವಾಯಿತು. ಆಗ ಹುಡುಗಾಟದ ಮನಸ್ಥಿತಿಯಲ್ಲಿ ಬರೆದಿದ್ದರೂ ನಿಮಗೂ ಇಷ್ಟವಾಗಬಹುದು  ಅಂತ ಬ್ಲಾಗಿಗೆ ಹಾಕಿದ್ದೇನೆ.

 ಚಿತ್ರ ಮತ್ತು ಕವನ: ಶಿವು.ಕೆ



Friday, March 25, 2011

ಮೂರುಮುಕ್ಕಾಲು ಅಕ್ಷರಗಳ ಹೆಸರಿನ ಈ ಊರಿನ ಸಾಧನೆ ನಿಮಗೆ ಗೊತ್ತೆ.?


            ನಾನು ಮತ್ತು ಮಲ್ಲಿಕಾರ್ಜುನ್ ಮೊದಲ ಭಾರಿಗೆ ಕಾನ್ಸೂರಿನಲ್ಲಿ ಬಸ್ಸಿಳಿದಾಗ ಮುಂಜಾನೆ ೫-೩೦.  ಕತ್ತಲು  ಏನು ಕಾಣುತ್ತಿಲ್ಲ. ಜನವರಿ ತಿಂಗಳಾದ್ದರಿಂದ  ಹಿಮದಿಂದ ಕೂಡಿದ ಚಳಿ. ೬-೩೦ರವರೆಗೆ ಫೋಟೋಗ್ರಫಿ ದೃಷ್ಠಿಯಿಂದ ಇಷ್ಟಪಟ್ಟು, ವೈಯಕ್ತಿಕವಾಗಿ ಕಷ್ಟಪಟ್ಟು ಅದನ್ನು ಅನುಭವಿಸುತ್ತಿದ್ದೆವು.  ನಾಗೇಂದ್ರ ಜೊತೆಗೆ ನಾಲ್ಕು ಕಿಲೋಮೀಟರ್ ದೂರ ಪಕ್ಕಾ ಮಣ್ಣಿನ ಪುಟ್ಟ ರಸ್ತೆಯಲ್ಲಿ ಮುತ್ಮುರ್ಡು ಅನ್ನುವ  ಎಂಟೇ ಮನೆ ಇರುವ ಊರು ತಲುಪುವ ಹೊತ್ತಿಗೆ ೭ ಗಂಟೆ.  ಡಿಲಕ್ಸ್ ಬಸ್ಸು ಸಿಗದೇ ಸರ್ಕಾರಿ ಆರ್ಡಿನರಿ ಎಕ್ಸ್‌ಪ್ರೆಸ್ಸಿನ  ಕೊನೆ  ಸೀಟಿನಲ್ಲಿ ರಾತ್ರಿ ಪ್ರಯಾಣ, ಮತ್ತು ಈ ಮಣ್ಣಿನ ರಸ್ತೆಗಳು  ನಮ್ಮ  ಮೂಳೆಗಳ ಜಾಗ ಬದಲಿಸಿದ್ದವು.

ಮುತ್ಮರ್ಡುಗೆ ಹೋಗುವ ಏರಿಳಿತದ ಮಣ್ಣಿನ ದಾರಿ

 ನಂತರ ನಾಗೇಂದ್ರ ಮನೆಯಲ್ಲಿ ಬಿಸಿಬಿಸಿ ಸ್ನಾನಮಾಡಿ "ತುಪ್ಪ ಮತ್ತು ಜೋನಿಬೆಲ್ಲದ ಜೊತೆಗೆ ತೆಳ್ಳೇವು"  ತಿನ್ನುವಲ್ಲಿ ಪ್ರಾರಂಭವಾಗಿ ಅಲ್ಲಿದ್ದ ಮೂರು ದಿನದಲ್ಲಿ ನಮ್ಮ ಫೋಟೋಗ್ರಫಿ, ಊರಿನ ಜನರ ಒಡನಾಟ ಮಕ್ಕಳೊಂದಿಗೆ ಮಕ್ಕಳಾಗಿದ್ದು,  ದೊರತ ಮುಗ್ದ ಪ್ರೀತಿ, ಮರುವರ್ಷ  ಮಲ್ಲಿಕಾರ್ಜುನ್ ಕುಟುಂಬ ಸಮೇತರಾಗಿ ಹೊರಟು ನಿಂತಾಗ ನಾನು ಹೇಮಾಶ್ರೀಯನ್ನು ಕರೆದುಕೊಂಡು ಹೋಗಿದ್ದು ಇದ್ದ ಮೂರುದಿನ  ಮಜ ಅನುಭವ, ಇತ್ಯಾದಿಗಳನ್ನು  ಚೆನ್ನಾಗಿ ಅನುಭವಿಸಿದರೂ  ಅದನ್ನು ಬರೆಯದೇ  ಮೂರುಮುಕ್ಕಾಲು ಅಕ್ಷರಗಳ ಮುತ್ಮುರ್ಡು ಎಂಬ ಊರು, ಊರಿನ ಜನರ ಸಾಧನೆ ಬಗ್ಗೆ ಕಿರು ಪರಿಚಯ ಮಾಡಿಕೊಡಲೆತ್ನಿಸುತ್ತೇನೆ.

ದಟ್ಟ ಕಾಡಿನ ನಡುವೆ ಕಾಣುವ ಹೆಂಚಿನ ಮನೆಗಳೇ ಮುತ್ಮರ್ಡು ಎನ್ನುವ ಊರು.
            
 ಮೊದಲಿಗೆ ಅರವತ್ತು ವರ್ಷಗಳ ಹಿಂದೆ ಕೇವಲ ಮೂರು ಮನೆಗಳಿದ್ದ  ಈ ಊರಿನ  ಫೋಟೋವನ್ನು ಮನಸ್ಸಿನಲ್ಲೇ ಕ್ಲಿಕ್ಕಿಸಿಕೊಳ್ಳಿ.   ಆಗ ವಿದ್ಯುತ್  ಇರಲಿಲ್ಲ[ಈಗ ಇದ್ದರೂ  ಇಲ್ಲದಂತಿದೆ]. ಸೀಮೆಯೆಣ್ಣೆ, ಅಥವ  ಎಳ್ಳೆಣ್ಣೆ ದೀಪಗಳೇ  ರಾತ್ರಿಯ  ಕತ್ತಲು ನಿವಾರಿಸುವ  ಬೆಳಕುಗಳು.  ಆಗ  ಓದು ಬರಹ ಬರದ ಹೆಬ್ಬೆಟ್ಟು ಸಹಿಯ ಈ ಊರಿನ  "ಗಣೇಶ್ ಹೆಗಡೆ" ಎಂಬುವರು  ದೂರದ  ಶರಾವತಿ ವಿದ್ಯುತ್ ಕಾರ್ಯಗಾರಕ್ಕೆ  ಹೋಗಿ,  ಅಲ್ಲಿನ  ವಿದ್ಯುತ್ ಉತ್ಪಾದಿಸುವ ದೊಡ್ಡ ದೊಡ್ಡ ಟರ್ಬೈನುಗಳನ್ನು ನೋಡಿದರಂತೆ.  ಮತ್ತೆ  ಮತ್ತೆ  ಹೋಗಿ  ಅವುಗಳನ್ನು ಚೆನ್ನಾಗಿ ಅಧ್ಯಾಯನ ಮಾಡಿ, ನಂತರ ಸಿರಸಿಯ  ಮರಗೆಲಸದವರ ಬಳಿ  ತಮಗೇ ಬೇಕಾದ ಹಾಗೆ  ಆಡಿಕೆ ಮರದ ತುಂಡುಗಳಿಂದ  ಚಿಕ್ಕ ಚಿಕ್ಕ ಟರ್ಬೈನುಗಳನ್ನು ಮಾಡಿಸಿಕೊಂಡರಂತೆ.  ಊರಿನ ಪಕ್ಕದ ಬೆಟ್ಟದಲ್ಲಿ  ಹರಿಯುತ್ತಿದ್ದ  ನೀರಿನ ಝರಿಗೆ  ಒಂದು ದೊಡ್ಡ ಕೊಳವೆಯನ್ನು  ಹೊಂದಿಸಿ,  ಕೆಳಮುಖದಲ್ಲಿ  ಕೊಳವೆಯ ಮುಖಾಂತರ  ವೇಗವಾಗಿ  ಈ ಮರದ ಟರ್ಬೈನುಗಳ ಮೇಲೆ ನೀರು ಬೀಳುವಂತೇ ಮಾಡಿ ಅದರಿಂದ  ವಿದ್ಯುತ್ಚಕ್ತಿ ಉತ್ಪಾದಿಸುತ್ತಿದ್ದರಂತೆ.  ಅದನ್ನು ತಮ್ಮ  ಮನೆಯ  ಸಂಪೂರ್ಣ ಬೆಳಕಿಗೆ, ತೋಟದ ಕೆಲಸಕ್ಕೆ, ಹೀಗೆ  ಇಪ್ಪತ್ತು ವರ್ಷಗಳವರೆಗೆ   ಉಪಯೋಗಿಸುತ್ತಿದ್ದರಂತೆ. ಇಷ್ಟೇ ಅಲ್ಲದೇ  ಕಾಡಿನಲ್ಲಿ ಸಿಗುವ ಗಿಡಮೂಲಿಕೆ ಗಿಡಗಳಿಂದ ಮದ್ದು ಮಾಡುವುದನ್ನು ಕಲಿತು ಸುತ್ತಮುತ್ತಲಿನ ಊರಿನ ಜನರಿಗೆ ಉಚಿತವಾಗಿ ಚಿಕಿತ್ಸೆ ಮಾಡುವುದು  ಹೀಗೆ  ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರಂತೆ.

ಐವತ್ತು ವರ್ಷಗಳ ಹಿಂದೆಯೇ ಹರಿಯುವ ನೀರಿನಿಂದ ಜಲವಿದ್ಯುತ್ ಉತ್ಪಾದಿಸಿ ಮನೆ ಬಳಕೆಗೆ ಬಳಸಿಕೊಂಡ ಗಜಾನನ ಹೆಗಡೆ ದಂಟಕಲ್

 ಈಗ ಎಂಟು ಮನೆಗಳಿವೆ.  ಈ ಬೆರಳೆಣಿಕೆಯ ಮನೆಯಲ್ಲಿರುವ  ಪುಟ್ಟ ಮಕ್ಕಳಿಗೆ ಒಂದು ಸ್ಕೂಲು. ಗಾಂಧಿ ಜನ್ಮ ಶತಾಬ್ಧಿ ವತಿಯಿಂದ ಈ ಊರಿಗೆ ಸ್ಕೂಲು ಬಂದಿದೆ.  ಊರಿನಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಪುಟ್ಟ ಗುಡ್ಡದ ಮೇಲಿರುವ ಈ ಸ್ಕೂಲು ಕೂಡ ವಿಶೇಷವಾದುದ್ದೇ.   ವಿಕಾಶ, ಜಯಂತ, ಅಶ್ವಿನಿ, ಮಧುರ, ಭರತ, ಸ್ವಾತಿ, ........ಇಷ್ಟೇ ಜನ  ಆ ಶಾಲೆಯ ವಿದ್ಯಾರ್ಥಿಗಳು. 

 ಮುತ್ಮರ್ಡು ಪಾಠಶಾಲೆ

ಈ ಸ್ಕೂಲಿನ ಸ್ಥಾಪಕರಾದ ಸುಬ್ರಾಯ ಹೆಗಡೆ

ಜಯಂತ ದೊಡ್ಡಬಿನ್ನೆತ್ತಿ[ಯುಕೆಜಿ]ಆದರೆ ಆಶ್ವಿನಿ ಚಿಕ್ಕ ಬಿನ್ನೆತ್ತಿ[ಎಲ್‌ಕೆಜಿ]. ವಿಕಾಶ ಎರಡನೇ ತರಗತಿಯಾದರೇ, ಭರತ ನಾಲ್ಕನೇ ತರಗತಿ. ಸ್ವಾತಿ ಹಾಗೂ ಮಧುರ ಐದನೇ ತರಗತಿ.  ಈ ಆರು ಜನಕ್ಕೆ  ಒಬ್ಬ  ಉಪದ್ಯಾಯರು  ಹಾಗೂ  ಬಿಸಿಊಟಕ್ಕಾಗಿ ಒಬ್ಬರು ಆಡಿಗೆಯವರು ಕೇಳುವುದಕ್ಕೆ  ತುಂಬಾ ಚೆನ್ನಾಗಿದೆಯಲ್ಲವೇ...ನಾವು  ಈ ಶಾಲೆ ನೋಡಲು ಹೋದಾಗ  ಈ ಆರು ಜನ  ಜನರು ಒಂದೇ ಮಣೆಯಲ್ಲಿ ಕುಳಿತು ಓದುತ್ತಿದ್ದರು.

ಎಲ್‍ಕೆಜಿಯಿಂದ....ಆರನೇ ತರಗತಿ....ಒಂದೇ ಕೊಟಡಿಯಲ್ಲಿ ಅದರಲ್ಲೂ ಒಂದೇ ಬೆಂಚಿನಲ್ಲಿ ಕುಳಿತಿದ್ದಾರೆ
ಹೀಗೆ ಒಟ್ಟಿಗೆ ಕೂರುವುದರಿಂದ ಚಿಕ್ಕಬಿನ್ನೆತ್ತಿ[ಎಲ್‍ಕೆಜಿ]ಆಶ್ವಿನಿ ಸೇರಿದಂತೆ ಉಳಿದವರು   ಐದನೇ ತರಗತಿ ಪಾಠ ಕೇಳಬಹುದು...ಹಾಗೇ  ಸ್ವಾತಿ ಮತ್ತು ಮಧುರ ಇಬ್ಬರೂ  ಒಂದನೇ, ಎರಡನೇ,[ಮೂರನೇ ತರಗತಿಗೆ ಮಕ್ಕಳೇ ಇಲ್ಲ]ನಾಲ್ಕನೇ ತರಗತಿಯ ಪಾಠಗಳನ್ನು ಕೇಳಬಹುದು...ಇಂಥ  ಆವಕಾಶ  ಎಲ್ಲಾದರೂ ಉಂಟೇ....ಇದನ್ನೆಲ್ಲಾ  ನೋಡಿ  ನಮಗಂತೂ ಅಚ್ಚರಿ..

ಮುತ್ಮರ್ಡು ಊರಿನ ಮಕ್ಕಳು..ಆಶ್ವಿನಿ, ಜಯಂತ, ವಿಕಾಸ, ಸುಹಾಸ, ಭರತ,  ಆಶ್ವಿನಿ ಅಣ್ಣ...ನಡುವೆ ಇರುವವನು ಮಲ್ಲಿಕಾರ್ಜುನ್ ಮಗ "ಓಂ" ಅವನೊಬ್ಬ ಮಾತ್ರ ಮುತ್ಮರ್ಡು ಊರಿನವನಲ್ಲ.

ಈ ಮಕ್ಕಳು  ಪ್ರತಿದಿನ ಸಂಜೆ ಮನೆಗೆ ಬರುವಾಗ  ಕಾಡುಕೋಣದಂತ  ವನ್ಯಜೀವಿಗಳು ಎದುರಾಗುತ್ತವೆ.  ಅವುಗಳು  ಎದುರಾದಾಗ ಅವುಗಳ ತಂಟೆಗೆ ಹೋಗದೆ  ಸುಮ್ಮನೇ ನಿಂತು ಬಿಟ್ಟರೇ  ತಮ್ಮ ಪಾಡಿಗೆ ಅವು ಹೊರಟು ಹೋಗುತ್ತವೆ ಎನ್ನುವ ಪಾಠವನ್ನು  ಎಲ್ಲರ ಮನೆಯಲ್ಲೂ ಹೇಳಿಕೊಟ್ಟಿರುವುದರಿಂದ  ಈ ಮಕ್ಕಳು ಕಾಡುಪ್ರಾಣಿಗಳ ಜೊತೆ ಹೊಂದಿಕೊಂಡುಬಿಟ್ಟಿವೆ.

    ಮುಂದಿನ ವರ್ಷಗಳಲ್ಲಿ  ಈಗಿರುವ ಮಕ್ಕಳು ಪಾಸಾಗಿ ಮುಂದಿನ ತರಗತಿ ಹೋಗಿಬಿಟ್ಟರೇ ಆ ಶಾಲೆಗೆ ಮಕ್ಕಳೇ ಇರುವುದಿಲ್ಲ  ಈಗ  ಊರಿನ ಯುವಕರೆಲ್ಲಾ ದುಡಿಮೆಗಾಗಿ ನಾಡಿಗೆ ಬರುತ್ತಿರುವುದರಿಂದ  ಮುಂದಿನ ವರ್ಷಗಳಲ್ಲಿ  ಅಲ್ಲಿರುವವರು  ವಯಸ್ಸಾದ ಹಿರಿಯರು ಮಾತ್ರ.  ಆಗ ಈ ಸ್ಕೂಲಿನ ಗತಿ  ಏನಾಗುತ್ತದೋ ನೋಡಬೇಕು.   ಕಾನ್ಸೂರು..ಸಿರಸಿ  ಈ ಊರಿಗೆ ತುಂಬಾ ದೂರವಿರುವುದರಿಂದ  ಊರಿನ ಜನ ಅದಕ್ಕೆ ತಕ್ಕಂತೆ  ಹೊಂದಿಕೊಂಡುಬಿಟ್ಟಿದ್ದಾರೆ.  ಊರಿನಲ್ಲಿ  ಮದುವೆ, ಮುಂಜಿ...ಇತ್ಯಾದಿ ಏನೇ ದೊಡ್ಡ ಕಾರ್ಯಕ್ರಮಗಳಾಗಲಿ, ಹೊರಗಿನವರ ಸಹಾಯವಿಲ್ಲದೇ  ಇಡೀ ಊರಿನ  ಎಂಟು ಮನೆಗಳವರು ತಮ್ಮದೇ ಮನೆಯ ಕಾರ್ಯಕ್ರಮವೆನ್ನುವಂತೆ ಆತ್ಮೀಯವಾಗಿ ಒಂದಾಗುವುದರಿಂದ  ತುಂಬಾ ಚೆನ್ನಾಗಿ ನಡೆಯುತ್ತವೆ

ಊರಿನ ಹಿರಿಯರೆಲ್ಲಾ  ಆಡಿಕೆ ಕೃಷಿಯನ್ನು ಹೆಚ್ಚಾಗಿ  ಅವಲಂಬಿಸಿರುವುದರಿಂದ  ಇಡೀ ಮನೆಯ ಜನಕ್ಕೆ  ದಿನದ ೨೪ ಗಂಟೆಯೂ ಕೆಲಸ. ಕೆಲವರಿಗೆ ಓದು ಬರಹ ಬರದಿದ್ದರೂ  ಇನ್ನೊಬ್ಬರ ಮೇಲೆ ಅವಲಂಬಿಸದೇ ಬದುಕುವುದನ್ನು ಕಲಿತಿರುವುದರಿಂದ  ಇಲ್ಲಿರುವ ಪ್ರತಿಯೊಂದು ವಸ್ತುವನ್ನು ಉಪಯೋಗದ ವಸ್ತುವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.  ಊದಾ: ಹಸುಗಳಿಂದ ಹಾಲು ಮೊಸರು  ಮತ್ತು ಅವುಗಳ ಸಗಣಿಯಿಂದ  ಪ್ರತಿಯೊಂದು ಮನೆಯವರು ತಮ್ಮ ಮನೆಗೆ ಬೇಕಾದ ಗೋಬರ್ ಗ್ಯಾಸ್  ಮಾಡಿಕೊಂಡು  ಆಡಿಗೆ ಅನಿಲವನ್ನು  ತಾವೆ ಸ್ವತಃ ತಯಾರಿಸಿಕೊಳ್ಳುತ್ತಾರೆ.  ಇನ್ನೂ  ತಮಗೆ ಬೇಕಾದ ತರಕಾರಿಗಳು, ಹೂ ಹಣ್ಣುಗಳನ್ನು ತಮ್ಮ ಮನೆಯ ಅಂಗಳದಲ್ಲೇ ಬೆಳೆಯುತ್ತಾರೆ.  ಹಿರಿಯರು ಮತ್ತು ಮನೆಯ ಹೆಣ್ಣುಮಕ್ಕಳು ತಮಗೆ ಬೇಕಾದ ಔಷದೀಯ ಗಿಡಗಳನ್ನು ತಮ್ಮ  ತೋಟ, ಅಂಗಳದಲ್ಲಿಯೇ ಬೆಳೆಸುವುದರಿಂದ ಮಕ್ಕಳಿಂದ ಹಿರಿಯರಾದಿಯಾಗಿ ಯಾರಿಗೂ ಖಾಯಿಲೆಯ ಸಮಸ್ಯೆಯಿಲ್ಲ.  ಬಂದರೂ  ವೈದ್ಯರ ಸಹಾಯವಿಲ್ಲದ  ಮನೆಮದ್ದು ಮಾಡುವುದರಲ್ಲಿ  ಆನುಭವವುಳ್ಳವರಾಗಿದ್ದಾರೆ. ಪರಿಶುದ್ಧಗಾಳಿ,  ಸದಾ ಹಸಿರಾಗಿರುವ  ಇಂಥ ವಾತಾವರಣದಲ್ಲಿ ಬೆಳೆಯುವವರಿಗೆ ರೋಗವೆಲ್ಲಿ ಬರುತ್ತದೇ ಹೇಳಿ...!

     ರಾತ್ರಿ ಹನ್ನೊಂದು ಗಂಟೆಗೆ ನಿಮಗೆ ನಿದ್ದೆ ಬರದಿದ್ದಲ್ಲಿ  ಎದ್ದು ಒಮ್ಮೆ  ಮಂದಬೆಳಕಿನತ್ತ  ಕಣ್ಣು ಹಾಯಿಸಿ  ಆತ  ಅಲ್ಲೇನೋ ಆಡಿಕೆ ಕೆಲಸ ಮಾಡುತ್ತಿರುತ್ತಾರೆ.  ಮತ್ತೆ  ಬೆಳಿಗ್ಗೆ  ಐದುಗಂಟೆಗೆ  ನಿಮಗೆ ಎಚ್ಚರವಾಗಿಬಿಟ್ಟಿರೇ  ಮತ್ತದೇ ಮಬ್ಬುಗತ್ತಲ  ಚಳಿಯ ಮುಂಜಾವಿನಲ್ಲಿ  ಈತ  ಹಸುವಿನ  ಕೊಟ್ಟಿಗೆಯಲ್ಲಿ  ಸಗಣಿ ತೆಗೆಯುವುದು..ಹಾಲುಕರೆಯುವುದು ಏನೋ ಮಾಡುತ್ತಿರುತ್ತಾರೆ.  ಎದ್ದು ಎಷ್ಟೋ ಹೊತ್ತಾಗಿರಬಹುದು ಅಂತ ಅವರನ್ನು ನೋಡಿದರೆ  ಅನ್ನಿಸುತ್ತದೆ.  ಇವೆಲ್ಲಾ ಕೆಲಸ ಮುಗಿಸಿ,  ಯೋಗ, ಪ್ರಾಣಾಯಾಮ, ಸ್ನಾನ  ಸಂದ್ಯಾ ವಂದನೆ, ದೇವರ ಪೂಜೆ ಮುಗಿಸುವ ಹೊತ್ತಿಗೆ  ಬೆಳಿಗ್ಗೆ ಏಳುಗಂಟೆ...ಬಿಸಿಬಿಸಿ  ನೀರು ದೋಸೆ ತಿಂದು, ಕಸಾಯ ಕುಡಿದು  ತೋಟಕ್ಕೆ ಹೊರಟರೆಂದರೇ...ಮತ್ತೆ ಬರುವುದು  ಮದ್ಯಾಹ್ನದ ಊಟದ ಹೊತ್ತಿಗೆ.  ಮತ್ತೆ ತೋಟದ ಕೆಲಸ ಸಂಜೆ ಮಕ್ಕಳೊಂದಿಗೆ ಆಟ...ರಾತ್ರಿ ಮತ್ತೆ  ಮೊಮ್ಮಕ್ಕಳಿಗೆ  ಉಪನಿಷತ್, ದೇವರ ಪೂಜ ಮಂತ್ರಗಳನ್ನು ಹೇಳಿಕೊಡುತ್ತಾರೆ. ಪೂಜಾ ವಿಧಾನಗಳನ್ನು ಕಲಿಸುತ್ತಾರೆ. ರಾತ್ರಿ ಒಟ್ಟಿಗೆ ಊಟ....ನಂತರ  ತಾವೇ ಬೆಳೆದ ಆಡಿಕೆ, ಎಲೆ ಸೇವನೆ,...ಜೊತೆಯಲ್ಲೇ ಮೊಮ್ಮಕ್ಕಳ ಜೊತೆ  ಆಟ...ಮಾಯಾ ಮಂತ್ರದ ಕತೆಗಳು, ಹೀಗೆ  ಅವರು  ಮತ್ತೆ  ಮಲಗುವ ಹೊತ್ತಿಗೆ  ರಾತ್ರಿ ಹನ್ನೆರಡು ದಾಟಿರುತ್ತದೆ.  ಯುವಕರು  ನಾಚಿಸುವಂತೆ ಸದಾ  ಒಂದಲ್ಲ  ಒಂದು ಕೆಲಸವನ್ನು ಮಾಡುತ್ತಿರುವ  ಇವರು ನೋಡುವವರ ಕಣ್ಣಿಗೆ ಯಾವಾಗ ನಿದ್ರೆ ಮಾಡುತ್ತಾರಪ್ಪ  ಅನ್ನಿಸದೇ ಇರದು.  ಇಷ್ಟಕ್ಕೂ  ಇವರು ವಯಸ್ಸು ಕೇವಲ  ೭೩.  ಹೆಸರು ಗಜಾನನ ಹೆಗಡೆ. ನಾಗೇಂದ್ರ ಅವರ ತಂದೆ.

ಮಕ್ಕಳೊಂದಿಗೆ ಕ್ರಿಕೆಟ್ ಆಡುತ್ತಿರುವ  ನಾಗೇಂದ್ರ ತಂದೆ ಗಜಾನನ ಹೆಗಡೆ                                 
    ಅವರೆಂದು  ತಮ್ಮ  ಮಕ್ಕಳಿಗಾಗಲಿ, ಮೊಮ್ಮಕ್ಕಳಿಗಾಗಲಿ,  ಹೀಗೆ ಮಾಡಿ, ಹಾಗೆ ಮಾಡಿ ಅಂತ ಹೇಳಿದವರಲ್ಲ......ಎಲ್ಲರೂ ಸ್ವತಂತ್ರವಾಗಿ ಅವರಿಷ್ಟಬಂದದ್ದು  ಮಾಡಿಕೊಂಡು  ಚೆನ್ನಾಗಿರಲಿ  ಅಂತ ಬಯಸಿದವರು. ಅವರು  ಏನಾದರೂ  ಪ್ರತಿಯೊಬ್ಬರಿಗೂ ಹೀಗೆ ಮಾಡಿ ಹಾಗೆ ಮಾಡಿ  ಅಂತ ಹೇಳಿದ್ದರೇ ನಾವು ಮಾಡುತ್ತಿರಲಿಲ್ಲವೇನೋ....ಹಾಗೇ ಹೇಳುವ ಬದಲು  ತಾವೆ  ಮಾಡುತ್ತಿರುವುದರಿಂದ  ಅವರನ್ನು  ನಮಗರಿವಿಲ್ಲದಂತೆ ನಾವು ಅನುಸರಿಸುತ್ತಿದ್ದೇವೆ" ಎಂದು  ತಮ್ಮ ಕರ್ಮಯೋಗಿ ಅಪ್ಪ ಗಜಾನನ ಹೆಗಡೆ ಬಗ್ಗೆ ಅಭಿಪ್ರಾಯ ಪಟ್ಟರು ನಾಗೇಂದ್ರ.

ಸಂಜೆಯಾಯಿತೆಂದರೆ ಊರಿನ ಹೆಣ್ಣುಮಕ್ಕಳು, ಮತ್ತು ಪುಟ್ಟ ಮಕ್ಕಳು  ಎಲ್ಲರೂ  ಒಟ್ಟಾಗಿ ಆ ಮನೆಯಲ್ಲಿ  ಸಂಗೀತ ಅಭ್ಯಾಸ ಮಾಡುತ್ತಿರುತ್ತಾರೆ...ಎಲ್ಲರೂ ಎಷ್ಟು ಉತ್ಸಾಹದಿಂದ ಹಾಡುತ್ತಾರೆಂದರೇ ಅವರಿಗೆ ಹೇಳಿಕೊಡುವ ಗುರುವನ್ನು ನೋಡುವ ಮನಸ್ಸಾಗದೇ ಇರದು. ಇಷ್ಟಕ್ಕೂ  ಅವರಿಗೆ ಇಷ್ಟು ಸೊಗಸಾಗಿ ಸಂಗೀತ ಹೇಳಿಕೊಡುವವರು ಮಹಾದೇವಿ ಸುಬ್ರಾಯ ಹೆಗಡೆ ಅನ್ನುವ  ಹಿರಿಯಜ್ಜಿ. ಹಾರ್ಮೊನಿಯಂ ನುಡಿಸುತ್ತಾ  ಹೇಳಿಕೊಡುವ  ಅವರ ವಯಸ್ಸು  ಈಗ ಕೇವಲ ೮೦ ಮಾತ್ರ.

ಸಂಗೀತಗಾರ್ತಿ ಮಹಾದೇವಿ ಸುಬ್ರಾಯ ಹೆಗಡೆ...

ಮುತ್ಮರ್ಡು ಅನ್ನುವ ಊರಿನ ಹಿಂಬಾಗವೇ  ಒಂದು  ಸೊಗಸಾದ  ಪುಟ್ಟ ಹೊಳೆಯಿದೆ.  ಆ  ಹೊಳೆಯಲ್ಲಿ  ಗಂಟೆ ಗಟ್ಟಲೇ  ನೀರಮೇಲೆ  ತೇಲುವ ವ್ಯಕ್ತಿಯನ್ನು ನೀವು ನೋಡಿದರೇ  ನಿಮಗೆ ಆಶ್ಚರ್ಯವಾಗುವುದು ಖಂಡಿತ.  ಯಾಕೆಂದರೇ ಅವರ  ವಯಸ್ಸು ಈಗ ಕೇವಲ  ೮೦ ವರ್ಷ ಮಾತ್ರ.  ಈ  ಸಾಧನೆಯನ್ನು  ಚಿಕ್ಕಂದಿನಿಂದ ಮಾಡಿಕೊಂಡು ಬಂದಿರುವವರು ಇದೇ ಊರಿನ  ನರಸಿಂಹ ಹೆಗಡೆ.

 ನೀರಿನ ಮೇಲೆ ತೇಲುವ ನರಸಿಂಹ ಹೆಗಡೆ....

ಆ  ಊರಿನ ಆಷ್ಟು ಜನ ಆರೋಗ್ಯವಾಗಿರಲು ಏನಾದರೂ ಒಂದು ಗುಟ್ಟು ಇರಲೇ ಬೇಕಲ್ಲ. ಇಲ್ಲೊಬ್ಬ  ಮಂಜುನಾಥ ಎಸ್ ಹೆಗಡೆ ಎನ್ನುವ  ಗಿಡಮೂಲಿಕೆ ತಜ್ಞರಿದ್ದಾರೆ.  ಊರಿನಲ್ಲಿರುವ ಯಾರಿಗೆ ಆಗಲಿ ಸಣ್ಣ ಪುಟ್ಟ ಕಾಯಿಲೆಗಳಿಗೆ  ಇವರೇ ವೈದ್ಯರು.   ಇವರಿಗೆ ತಿಳಿದಿರುವ  ಗಿಡಮೂಲಿಕೆಗಳಿಂದಾಗಿ  ಎಲ್ಲ ರೋಗಕ್ಕೂ ಮದ್ದುಂಟು.  ಇವರ  ಸಹವಾಸದಿಂದಾಗಿ  ಹಳ್ಳಿಯ  ಎಲ್ಲರಿಗೂ  ಯಾವ ಗಿಡಮೂಲಿಕೆಯಿಂದ  ಯಾವ ರೋಗ ವಾಸಿಮಾಡಬಹುದು  ಅನ್ನುವುದು  ಚೆನ್ನಾಗಿ ಕರಗತವಾಗಿಬಿಟ್ಟಿದೆ.  ಇನ್ನೂ  ಔಷದಕ್ಕಾಗಿ  ಸಿರಸಿಗೆ ಏಕೆ ಹೋಗಬೇಕು ಹೇಳಿ. 

ಮಂಜುನಾಥ್ ಹೆಗಡೆ..ಸಕಲಕಲವಲ್ಲಭ

ಮತ್ತೆ  ಈ  ಮಂಜುನಾಥ ಎಸ್ ಹೆಗಡೆ  ಜ್ಯೋತಿಷ್ಯ ಹೇಳುತ್ತಾರೆ.   ಸೊಗಸಾಗಿ  ಚಿತ್ರಬಿಡಿಸುತ್ತಾರೆ. ಮತ್ತೆ  ಮಣ್ಣಿನಲ್ಲಿ  ಕಲಾಕೃತಿ ಮಾಡುವುದರಲ್ಲಿ  ಇವರು ಸಿದ್ಧಹಸ್ತರು. ಗಣಪತಿ ಹಬ್ಬಕ್ಕೆ  ಊರಿನ ಎಲ್ಲರಿಗೂ  ಇವರೇ ಮಣ್ಣಿನ ಗಣಪತಿಯನ್ನು ಮಾಡಿ ಅದಕ್ಕೆ  ಸೊಗಸಾಗಿ ಬಣ್ಣವನ್ನು  ಹಾಕುತ್ತಾರೆ. ಮತ್ತು ಆ ಕಲೆಯನ್ನು ಊರಿನ ಜನರಿಗೂ ಕಲಿಸಿದ್ದಾರೆ.  ನಾಗೇಂದ್ರರ ತಂದೆ, ನಾಗೇಂದ್ರ, ಮಗ ಸುಹಾಸ್  ಇವರೆಲ್ಲಾ  ತಾವೇ ಮಣ್ಣಿನಿಂದ  ಗಣಪತಿಯನ್ನು ಮಾಡುವುದನ್ನು ಕಲಿತಿದ್ದು  ಇವರಿಂದಲೇ  ಅಂತೆ.  ನಾಗೇಂದ್ರ ಮನೆಯಲ್ಲಿ ಇಟ್ಟಿದ್ದ ಗಣಪತಿಯನ್ನು  ಸುಹಾಸ್ ಮತ್ತು ನಾಗೇಂದ್ರ ಸೇರಿ ಮಾಡಿದ್ದಂತೆ.  ಅದು ನಮ್ಮ  ಬೆಂಗಳೂರಿನಲ್ಲಿ ಮಾರಾಟಕ್ಕಿಂತ ಗಣೇಶ ವಿಗ್ರಹಗಳನ್ನು ನಾಚಿಸುವಂತಿತ್ತು.  ಅದೇ  ಹಾಗಿರಬೇಕಾದರೇ  ಇವರಿಗೆ ಕಲಿಸಿದ ಗುರುವಾದ ಮಂಜುನಾಥ ಎಸ್ ಹೆಗಡೆ ಕೈಚಳಕ ಹೇಗಿರಬಹುದು...ಅಲ್ವಾ....ಜೊತೆಗೆ ಇವರು ಪೌರಾಣಿಕ ನಾಟಕಗಳನ್ನು ಬರೆದಿದ್ದಾರೆ, ನಟಿಸುತ್ತಾರೆ, ನಿರ್ದೇಶನ ಮಾಡುತ್ತಾರೆ...ಹೀಗೆ ಇವರೊಬ್ಬರು ಸಕಲಕಲವಲ್ಲಭರೆಂದೇ ಹೇಳಬಹುದು..

        ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಊರಿನ ಮತ್ತು ಊರಿನಲ್ಲಿರುವ ಸಾಧಕರ ಇನ್ನು ಇದೆ.  ಅದು ಮುಂದಿನ ಭಾಗದಲ್ಲಿ

ಚಿತ್ರಗಳು: 
ನಾಗೇಂದ್ರ ಮುತ್ಮರ್ಡು, 
ಶಿವು.ಕೆ,  ಮಲ್ಲಿಕಾರ್ಜುನ್. ಡಿ.ಜಿ
ಲೇಖನ:   ಶಿವು.ಕೆ

Monday, March 14, 2011

ಕೆರೆನೀರಿನ ಕೊಚ್ಚೆಯೂ-ಬೆಂಜ್ ಕಾರಿನ ಸೀಟೂ............


                  ಏರ್ ಷೋ ಬಗ್ಗೆ ಎಲ್ಲಾ ಟಿವಿ ಚಾನಲ್ಲುಗಳು, ದಿನಪತ್ರಿಕೆಗಳಲ್ಲಿ ತರಾವರಿ ಸುದ್ಧಿಗಳು ವೈವಿಧ್ಯಮಯ ಚಿತ್ರಚಿತ್ತಾರಗಳು ಪ್ರಕಟವಾಗುತ್ತಿದ್ದದ್ದು ನೋಡಿ ನಾನು ಏರ್ ಷೋ ಬಗ್ಗೆಯಾಗಲಿ ಅಥವ ಚಿತ್ರಗಳನ್ನಾಗಲಿ ಬ್ಲಾಗಿಗೆ ಹಾಕುವ ಅವಶ್ಯಕತೆಯಿಲ್ಲವೆಂದು ಸುಮ್ಮನಾಗಿದ್ದೆ.  ಯಾವಾಗ ಹೇಮಾ

                     ಆಹಾ! ಅಕಾಶವೆಂಬ ತಂಪು
                     ನೀಲಾಕಾಶವೆಂಬ ಎಣ್ಣೆ ಬಾಣಲಿಯೊಳಗೆ
                     ಜೀಲೇಬಿ ಹಾಕುತ್ತಿರುವ
                     ಯೂರೋ ಟೈಪೂನೂ ಪ್ಲೇನು.......

         ಆ ಫೋಟೊವನ್ನು ನೋಡಿ ಅಚ್ಚರಿಗೊಂಡು ಹೇಳಿದಾಗ ಅರೆರೆ! ಹೌದಲ್ವಾ...ಅನ್ನಿಸಿತ್ತು.  ಮತ್ತೆ ಪತ್ರಿಕೆಯಲ್ಲಿ ಎಲ್ಲೂ ಪ್ರಕಟವಾಗದ ಮತ್ತು ಸ್ಪರ್ಧಾತ್ಮಕವಾಗಿ ಕ್ಲಿಕ್ಕಿಸಿದ ಚಿತ್ರಗಳ ಬಗ್ಗೆ ಬ್ಲಾಗಿನಲ್ಲಿ ಬರೆದು ಹಾಕಬಾರದೇಕೆ ಅನ್ನಿಸಿದರ ಪರಿಣಾಮ ಈ ಲೇಖನ.                
ಎಣ್ಣೆಯಲ್ಲಿ ಜಿಲೇಬಿ ಹಾಕುವಂತೆ ನೀಲಾಕಾಶಕ್ಕೆ ಹೊಗೆಯಿಂದ ಜಿಲೇಬಿ ಹಾಕುತ್ತಿರುವ ಯೂರೋ ಟೈಪೂನ್ ವಿಮಾನ


         ಪ್ರತಿಭಾರಿಯ ಏರ್ ಷೋನಲ್ಲಿ ಅದೇ ವಿಮಾನಗಳಿರುತ್ತವೆ ಹಾರಾಡುತ್ತವೆ ಅಂದುಕೊಳ್ಳುತ್ತಾ ಈ ಭಾರಿ ಏರ್ ಷೋಗೆ ಹೋಗೋದು ಬೇಡವೆಂದುಕೊಂಡಿದ್ದ ನನಗೆ ದೂರದ ದಾವಣಗೆರೆಯಿಂದ ಗೆಳೆಯ ಹೇಮಚಂದ್ರ ಜೈನ್ ಫೋನ್ ಮಾಡಿ ಏರ್ ಷೋ ಫೋಟೋ ತೆಗೆಯಲು ಬರುತ್ತಿದ್ದೇನೆ. ನಿಮ್ಮ ಸಹಾಯ ಬೇಕು ಎಂದಾಗ ಇಲ್ಲವೆನ್ನಲಾಗಲಿಲ್ಲ.  ಒಂಬತ್ತನೇ ತಾರೀಖು ಬೆಳಿಗ್ಗೆ ಹತ್ತು ಗಂಟೆಗೆ ಯಲಹಂಕದಿಂದ  ಹತ್ತು ಕಿಲೋಮೀಟರ್ ದೂರದ ಭಾರತೀಯ ವಾಯುಸೇನ ವಿಮಾನ ನಿಲ್ದಾಣದ ಕಾಂಪೌಂಡ್ ಆಚೆಬದಿಯಲ್ಲಿದ್ದ ಆ ಕೆರೆ ದಂಡೆಯ ಮೇಲೆ ನಿಂತಿದ್ದೆವು.   ಮೊದಲ ದಿನ ಜನರಿನ್ನೂ ಸೇರಿರಲಿಲ್ಲವಾದ್ದರಿಂದ ಪೋಲೀಸರ ಕಾಟವೂ ಇರಲಿಲ್ಲ.  ಆಗಲೇ ಬಿಸಿಲು ಜೋರಾಗಿದ್ದರೂ ಬೆಳಗಿನ ಸೆಷನ್ ಏರೋಪ್ಲೇನುಗಳ ಹಾರಾಟದ ಫೋಟೋಗಳನ್ನು ತೆಗೆಯುವಲ್ಲಿ ನಾವಿಬ್ಬರೂ ತಲ್ಲೀನರಾದೆವು.  ನಿದಾನವಾಗಿ ಅಲ್ಲಿಗೆ ಐಸ್‍ಕ್ರೀಮ್, ಚುರುಮುರಿ, ಕಡ್ಲೆಬೀಜ, ಇತ್ಯಾದಿಗಳು ಬರತೊಡಗಿದವು. ಜೊತೆಗೆ ಜನರೂ ಕೂಡ ಸೇರತೊಡಗಿದರು.

ಆಕಾಶ ನೋಡಲು ಕೊಡೆಹಿಡಿದು ಬಂದಿದ್ದ ಪುಟ್ಟ ಬಾಲಕ
                 
      ಇದೇ ಮೊದಲ ಭಾರಿಗೆ ಜೆಕ್ ಗಣರಾಜ್ಯದ ನಾಲ್ಕು ರೆಡ್ ಬುಲ್ ವಿಮಾನಗಳು ತಮ್ಮ ಪ್ರದರ್ಶನವನ್ನು ಪ್ರಾರಂಭಿಸಿದವಲ್ಲ...ನಾವು ನಮ್ಮ ಉದ್ದದ ಲೆನ್ಸ್ ಮೂಲಕ ಫೋಟೊ ತೆಗೆಯುತ್ತಿರುವಾಗ ನಮ್ಮ ಪಕ್ಕ ನಿಂತಿದ್ದ ಹಳ್ಳಿಯ ಸ್ಕೂಲ್ ಹುಡುಗರು ನಮ್ಮ ಕ್ಯಾಮೆರಾದ ಪುಟ್ಟಪರಧೆಯನ್ನು ಕುತೂಹಲದಿಂದ ನೋಡುತ್ತಿದ್ದರು.


 "ಅಲ್ಲಿನೋಡೋ ಆ ಪ್ಲೇನ್ ಎಷ್ಟು ಜೆನ್ನಾಗಿ ಹೊಗೆಯಿಂದಲೇ ಡ್ರಾಯಿಂಗ್ ಮಾಡ್ತು ಅಲ್ವಾ",


"ಹೌದು ಕಣ್ಲಾ, ಅದು ಇಲಿಜೆಟ್ಟು.  ಮೂಗಿಲಿ ತರ ಮೂಗು ಉದ್ದ ಮಾಡಿಕೊಂಡು ಹೋಯ್ತದೆ ನೋಡು"

ಅದಾದ ನಂತರ ಸುಖೋಯ್ ೩೦ ಜೆಟ್ ಪ್ಲೇನ್ ಆಕಾಶದೆತ್ತರಕ್ಕೆ ಹಾರಿತಲ್ಲಾ ಅದನ್ನು ಕಂಡ ಈ ಹುಡುಗರು,


"ಹೇ ಈ ಪ್ಲೇನು ಹೊಗೆ ಬಿಡೋಲ್ದು ಒಂಥರ ಒಳ್ಳೆ ಮನುಷ್ಯಿದ್ದಾಗೆ"  ಅಂದ.


ಆತನ ಮಾತನ್ನು ಕೇಳಿಸಿಕೊಂಡ ನಾನು  "ಇಲ್ಲಕಣೋ ಈ ಭಾರಿ ಅದು ಹೊಗೆಬಿಡುತ್ತಿಲ್ಲ ಕಳೆದ ವರ್ಷವೆಲ್ಲಾ ಹೊಗೆ ಬಿಡುತ್ತಿತ್ತು" ಅಂದೆ

  " ಹೌದಾ ಸರ್, ಮೊದಲು ಸಿಗರೇಟ್ ಅಬ್ಯಾಸವಾಗಿ ಹೊಗೆ ಬಿಡುತ್ತಿತ್ತೇನೋ ಈಗ ನಿಕೋಟಿನ್ ಮಾತ್ರೆ ನುಂಗಿ ಸಿಗರೇಟು ಸೇದೋದು ಬಿಟ್ಟಿರಬೇಕು ಅದಕ್ಕೆ ಈಗ ಹೊಗೆ ಬರೊಲ್ಲ" ಅಂದ.


 ಅವುಗಳ ಪ್ರದರ್ಶನವಾದ ನಂತರ ಬಂದಿದ್ದು ಸೂರ್ಯಕಿರಣಗಳು.

 "ಈ ಪ್ಲೇನುಗಳು ಟಿವಿ ಸೀರಿಯಲ್ಲಿನ ಗ್ಲಾಮರ್ ಹೆಂಗಸರಿದ್ದಂತೆ.  ಒಟ್ಟಿಗೆ ಹೋಗುತ್ತವೆ ಹಾರಾಡುತ್ತಿರುತ್ತವೆ, ನಮ್ಮ ಟಿವಿ ಸೀರಿಯಲ್ಲಿನ ಹೆಂಗಸರ ಮನಸ್ಸು ಯಾವಾಗ ಚಂಚಲವಾಗಿ ಎಲ್ಲರನ್ನೂ ದೂರಮಾಡಿಬಿಡುತ್ತಾರೋ ಹಾಗೇ ಇವು ಕೂಡ ಇದ್ದಕ್ಕಿದ್ದಂತೆ ದೂರವಾಗಿ ಎಲ್ಲೆಲ್ಲೋ ಹೋಗಿಬಿಡುತ್ತವೆ ಮತ್ತೆ ಅವುಗಳಲ್ಲಿ ಲವ್ ಉಂಟಾಗಿ ಆಕಾಶದಲ್ಲಿ ಹೊಗೆಬಿಟ್ಟು ಲವ್ ಬರೆಯುತ್ತವೆ ಒಟ್ಟಾರೆ ಅವುಗಳ ಚಂಚಲ ಮನಸ್ಸು ಹೇಗಿರುತ್ತೋ ಹೇಳಲಿಕ್ಕೆ ಬರೋಲ್ಲ"  ಮತ್ತೊಬ್ಬ ಹಳ್ಳಿ ಅಜ್ಜ ಈ ಮಾತನ್ನು ಹೇಳಿದಾಗ ಅಲ್ಲಿನ ವಾತಾವರಣವೆಲ್ಲಾ ನಗೆಗಡಲಿನಲ್ಲಿ ತೇಲಿತ್ತು. ಮತ್ತೆ ನಾವು ಇಡೀ ದಿನ ಬಿಸಿಲಿನಲ್ಲಿ ಬೆಂದು ಫೋಟೊಗ್ರಫಿ ಮಾಡಿಕೊಂಡು ಮನೆಗೆ ಬಂದೆವು. ಮರುದಿನ ನಮ್ಮ ಜೊತೆಗೆ  ಮುಂಡರಗಿಯ ಸಲೀಂ ಸೇರಿಕೊಂಡರು.
ನಮ್ಮ ಸೂರ್ಯಕಿರಣ ವಿಮಾನಗಳು ಆಕಾಶವನ್ನು  ಪ್ರೇಮಿಸಿದ್ದು ಹೀಗೆ.

  ಎರಡನೇ ದಿನ ಅದೇ ಜಾಗಕ್ಕೆ ಹೋದರೆ ಅಲ್ಲಿ ಅಕಾಶವನ್ನು ನೋಡಲಿಕ್ಕೆ ಒಬ್ಬನೂ ಇಲ್ಲ.  ಈ ಕೆರದಂಡೆಯ ಮೇಲೆ ನಿಲ್ಲುವ ಜನಗಳಿಂದ ತುಂಬಾ ತೊಂದರೆಯಾಗುತ್ತದೆ ಅಂತ ಮೇಲಧಿಕಾರಿಗಳಿಂದ ದೂರು ಬಂದು ಅಲ್ಲಿ ಯಾರನ್ನು ಬಿಡಬಾರದೆಂದು ಹೆಜ್ಜೆಗೊಬ್ಬರಂತೆ ಪೋಲೀಸರನ್ನು ನೇಮಿಸಿಬಿಟ್ಟಿದ್ದರು. ನಮ್ಮ ದೊಡ್ಡ ಲೆನ್ಸು ಕ್ಯಾಮೆರಗಳನ್ನು ತೋರಿಸಿ ನಮಗೆ ಇಲ್ಲಿಯೇ ಫೋಟೊಗ್ರಫಿ ಮಾಡಲಿಕ್ಕೆ ಹೇಳಿದ್ದಾರೆ ಎಂದು ಸುಳ್ಳುಹೇಳಿ ಸಲೀಂ ಬಳಿಯಿರುವ ಪ್ರೆಸ್ ಕಾರ್ಡನ್ನು ಅಲ್ಲಿನ ಇನ್ಸ್‍ಪೆಕ್ಟರಿಗೆ ತೋರಿಸಿದ ಮೇಲೆ ಕೊನೆಗೆ ಒಪ್ಪಿ ನಮ್ಮನ್ನು ಬೇರೆ ದಾರಿಯಿಂದ ಆ ಕೆರೆ ಬದಿಗೆ ಹೋಗಲು ಹೇಳಿದರು. ನಾವು ಖುಶಿಯಿಂದ ಹೊರಟೆವಲ್ಲ ಅದು ಒಂಥರ ಕಡಿದಾದ ದಾರಿ ಕೆಳಗೆ ಒಂದರಿಂದ ಎರಡು ಅಡಿಯಷ್ಟು ಕೊಚ್ಚೆ ನೀರು ಉದ್ದಕ್ಕೂ ಇತ್ತು. ಅದನ್ನು ದಾಟದೇ ನಿನ್ನೆ ನಾವು ನಿಂತಿದ್ದ ಜಾಗವನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲ. ಕ್ಯಾಮೆರಾ ಬ್ಯಾಗುಗಳನ್ನು ಬೆನ್ನಿಗೇರಿಸಿಕೊಂಡು ಮಂಡಿಯವರೆಗೆ ಪ್ಯಾಂಟುಗಳನ್ನು ಮಡಿಚಿಕೊಂಡು ಶೂ ಕಾಲಿನೊಳಗೆ ಆ ಕೊಚ್ಚೆನೀರಿನೊಳಗೆ ನಡೆದು ನಮ್ಮ ಜಾಗ ತಲುಪುವಷ್ಟರಲ್ಲಿ ನಮಗಂತೂ ಸಾಕುಬೇಕಾಗಿತ್ತು. 

ಮಧ್ಯಾಹ್ನದ ಉರಿಬಿಸಿಲಲ್ಲಿ ಫೋಟೊಗ್ರಫಿ ಮಾಡುವಾಗ ಸುಸ್ತಾಗಿ ಅದೇ ಕೆರೆ ದಂಡೆಯಲ್ಲಿ ನನಗರಿವಿಲ್ಲದಂತೆ ನಿದ್ರೆ ಹೋದಾಗ ಅವರ ಕ್ಯಾಮೆರಾದಲ್ಲಿ ಹೀಗೆ ನನ್ನ ಫೋಟೊ ತೆಗೆದಿದ್ದರು ಮುಂಡರಗಿಯಂದ ಬಂದಿದ್ದ ಮತ್ತೊಬ್ಬ ಫೋಟೊಗ್ರಫಿ ಗೆಳೆಯ ಸಲೀಂ
                   
     ಇಷ್ಟಾದರೂ ಎರಡನೆ ದಿನ ನಮ್ಮ ಫೋಟೊಗ್ರಫಿ ಮೊದಲ ದಿನಕ್ಕಿಂತ ಏನು ವಿಶೇಷವೆನಿಸಲಿಲ್ಲ. ಸಂಜೆ ಮನೆಗೆ ಬಂದಾಗ ಕೊಚ್ಚೆ ನೀರಿನಲ್ಲಿ ನಡೆದಾಡಿದ ಪರಿಣಾಮ ಕಾಲುಗಳಲ್ಲಿ ನವೆಯುಂಟಾಗಿ ಕೆರೆತ ಪ್ರಾರಂಭವಾಗಿತ್ತು. . ಅವತ್ತು ರಾತ್ರಿ ಹೇಮಚಂದ್ರ ಜೈನ್ ದಾವಣಗೆರೆ ಹೊರಟರು.


       ಮರುದಿನ ಅಂದರೆ ಮೂರನೆ ನನ್ನ ಅದೃಷ್ಟ ಕುಲಾಯಿಸಿತೆಂದೇ ಹೇಳಬೇಕು. ಏಕೆಂದರೆ ನಮ್ಮ ಪ್ರಖ್ಯಾತ ಛಾಯಾಗ್ರಾಹಕರಾದ  ಸಿ.ಅರ್.ಸತ್ಯನಾರಾಯಣರವರು ಅವರ ಆತ್ಮೀಯ ಗೆಳಯರೊಬ್ಬರಿಂದ  ಐದು ವಿವಿಐಪಿ ಪಾಸುಗಳನ್ನು ಹೇಗೋ ಗಿಟ್ಟಿಸಿಕೊಂಡಿದ್ದರು..  ಎರಡು ಕಾರುಗಳಲ್ಲಿ  ಅವರು ಸೇರಿದಂತೆ ನಾನು  ದೇವೆಂದ್ರ, ಶೈಲೇಶ್, ಮಾರ್ಟಿನ್ ಹೊರಟೆವು.  ಈ ಪಾಸು ಸುಲಭವಾಗಿ ಸಿಗುವುದಿಲ್ಲ ಸಿಕ್ಕರೆ ಅದರಿಂದ ಸಿಗುವ ರಾಜಯೋಗದ ಅನುಭವವೇ ಬೇರೆ. ಇಂಥ ಪಾಸುಗಳನ್ನು ಹೊಂದಿದವರ ಕಾರುಗಳಿಗೆ ವಿಶೇಷ ಪಾರ್ಕಿಂಗ್ ಉಂಟು.  ಅಲ್ಲಿ ನಮ್ಮನ್ನು ರಾಜಮರ್ಯಾದೆಯಿಂದ ಕರೆದೊಯ್ದು ಸೆಕ್ಯುರಿಟಿ ಚೆಕ್ ಎಲ್ಲಾ ಆದ ಮೇಲೆ ಏರ್ ಶೋ ಪ್ರದರ್ಶನಕ್ಕೆ ಒಳಗೆ ಹೋಗಲು ನಮಗಾಗಿ ವಿಶೇಷ ಬಸ್ಸುಗಳ ವ್ಯವಸ್ಥೆಯಾಗಿತ್ತು. ಅದು ಸುರಂಗಮಾರ್ಗದಲ್ಲಿ ಒಳಗೆ ಹೋದಮೇಲೆ ಮತ್ತೆ ಅಲ್ಲಿ ಮುಖ್ಯವಾದ ತಪಾಸಣೆ. ಅಲ್ಲಿ ನಮ್ಮ ಐಡಿಂಟಿಟಿ ಕಾರ್ಡನ್ನು ಈ ಪಾಸ್ ಜೊತೆಗೆ ಕಡ್ಡಾಯವಾಗಿ ತೋರಿಸಬೇಕು. ಅವರನ್ನು ದಾಟಿ ಒಳಗೆ ಹೋಗುತ್ತಿದ್ದಂತೆ ಪಾಸುಕೊಟ್ಟಿದ್ದವರು ನಮಗಾಗಿ ಕಳಿಸಿದ್ದ ಬೆಂಜ್ ಕಾರು ಕಾಯುತ್ತಿತ್ತು.  ಎಸ್ ಕ್ಲಾಸಿನ ಬೆಂಜ್ ಕಾರಿನಲ್ಲಿ ಮೊದಲ ಭಾರಿ ಕುಳಿತುಕೊಳ್ಳುತ್ತಿರುವುದಕ್ಕೆ ನಮಗೆಲ್ಲಾ ಅತೀವ ಆನಂದವಾಗಿತ್ತು. ಅಲ್ಲಿಂದ ಒಂದುವರೆ ಕಿಲೋಮೀಟರ್‍ ಸಾಗಿ ಮುಖ್ಯ ಪ್ರದರ್ಶನದ ಜಾಗಕ್ಕೆ ಬಂದೆವು ಅಲ್ಲಿ ಮತ್ತೊಂದು ತಪಾಸಣೆ.  ಅವರನ್ನು ದಾಟಿದ ನಂತರ ನಾವು ಪ್ರದರ್ಶನಕ್ಕೆ ಎಷ್ಟು ಹತ್ತಿರವಿದ್ದೆವೆಂದರೆ ನಮ್ಮ ಮುಂದೆಯೇ ರನ್‍ವೇನಲ್ಲಿ ವಿಮಾನಗಳು ಏರುತ್ತಿದ್ದವು ಮತ್ತು ಇಳಿಯುತ್ತಿದ್ದವು..

            ನಮ್ಮ ಫೋಟೊಗ್ರಫಿ ತಂಡ ಸಿ.ಅರ್ ಸತ್ಯನಾರಾಯಣ, ನಾನು,  ದೇವೆಂದ್ರ, ಶೈಲೇಶ್, ಮಾರ್ಟಿನ್ ಮತ್ತು ಎಸ್. ಮಲ್ಲಿಕಾರ್ಜುನ್.
          
          ನಮ್ಮ ಮುಂದೆಯೇ ಸಾಲಾಗಿ ಎಲ್ಲಾ ವಿಮಾನಗಳನ್ನು ನಿಲ್ಲಿಸಿದ್ದರು.  ವಿಮಾನಗಳು ತಮ್ಮ ಎಲ್ಲಾ ಹಾರಾಟ, ಏರುವುದು, ಇಳಿಯುವುದು, ಲಗಾಟಿ ಹೊಡೆಯುವುದು, ತಲೆಕೆಳಗು, ಉಲ್ಟಾಪಲ್ಟಾ.......ಇತ್ಯಾದಿ ಪ್ರದರ್ಶನಗಳನ್ನು ಇದೇ ಜಾಗದಲ್ಲಿ ಮಾಡುತ್ತಿದ್ದವು.  ಅವು ಇಲ್ಲೇ ಮಾಡಲು ಕಾರಣವೇನೆಂದರೆ ದೇಶವಿದೇಶಗಳಿಂದ ಬಂದಿದ್ದ ವ್ಯಾಪಾರಿಗಳು, ಅಧಿಕಾರಿಗಳು, ಸಚಿವರು, ರಾಜತಾಂತ್ರಿಕವರ್ಗದವರು ಒಟ್ಟಾರೆ ವಿವಿಐಪಿ ಅನ್ನುವವರೆಲ್ಲಾ ನಮ್ಮ ಎಡಪಕ್ಕದ ಕಟ್ಟಡಗಳಲ್ಲಿ ಕುಳಿತು ಈ ಪ್ರದರ್ಶನವನ್ನು ನೋಡುತ್ತಿದ್ದರಿಂದ  ಅವರನ್ನು ಮೆಚ್ಚಿಸಲು ಅದ್ಬುತ ಪ್ರದರ್ಶನವನ್ನು ತೋರಿಸುತ್ತಿದ್ದ ವಿಮಾನಗಳು ನಮ್ಮ ಕ್ಯಾಮೆರಾಗಳಲ್ಲಿ ಸುಲಭವಾಗಿ ಸೆರೆಯಾದವು.


          ಮಧ್ಯಾಹ್ನ ಊಟವಾದನಂತರ ನಾನು ಏನಾದರೂ ಸ್ವಲ್ಪ ವಿಭಿನ್ನವಾದ ಫೋಟೊಗ್ರಫಿ ಮಾಡಬೇಕೆಂದು ತೀರ್ಮಾನಿಸಿಕೊಂಡೆ. ಆಗ ಕಂಡಿತು ನನಗೆ ಅಲ್ಲಲ್ಲಿ ಎತ್ತರದಲ್ಲಿ ಕಾಣುತ್ತಿದ್ದ ಬಾವುಟಗಳು. ಅವುಗಳ ಹಿನ್ನೆಲೆಯನ್ನು ಮಾಡಿಕೊಂಡು ಫೋಟೊಗ್ರಫಿ ಮಾಡಿದರೆ ಹೇಗೆ ಅನ್ನಿಸಿತು.  ನೆಲ್ಲಿಕಾಯಿಗೂ ಸಮುದ್ರದ ಉಪ್ಪಿಗೂ ಎಲ್ಲಿಯ ಸಂಭಂದ ಅಂದುಕೊಂಡರೂ ಅವೆರಡೂ ಕೂಡಿದರೇ ಎಂಥ ಅದ್ಭುತವಲ್ಲವೇ! ಹಾಗೆ ನಾನು ಕೂಡ ಅಲ್ಲಿ ಹಾರಾಡುವ ವಿಮಾನ ಯಾವುದೆಂದು ಮೊದಲು ತಿಳಿಯಬೇಕು. ಆನಂತರ ಅದಕ್ಕೆ ಸಂಭಂದಿಸಿದ ಬಾವುಟ, ಚಿಹ್ನೆ, ಗೋಪುರ ಇತ್ಯಾದಿಗಳನ್ನು ಹುಡುಕಿಕೊಂಡು  ಇದರ ಹಿನ್ನೆಲೆಯಲ್ಲಿ ಅದೇ ದೇಶದ ವಿಮಾನಗಳ ಹಾರಾಟದ ಫೋಟೊಗ್ರಫಿ ಮಾಡಬೇಕೆಂದು ಪ್ಲಾನ್ ಮಾಡಿದೆನಲ್ಲಾ...ತಲೆಗೆ ಈ ಯೋಚನೆ ಬಂದ ತಕ್ಷಣ ನನ್ನ ಫೋಟೊಗ್ರಫಿ ಗೆಳೆಯರ ಗುಂಪಿನಿಂದ ಮಾಯವಾಗಿಬಿಟ್ಟಿದ್ದೆ.


         ಅಲ್ಲಿಂದ ಏಕೆ ಮಾಯವಾದೆನೆಂದರೆ ಹೀಗೊಂದು ಹೊಸ ರೀತಿಯ ಫೋಟೋಗ್ರಫಿಯ ಉಪಾಯವನ್ನು ಅವರಿಗೆ ಹೇಳಿದೆನೆಂದುಕೊಳ್ಳಿ. ಇಂಥ ಸುಡು ಬಿಸಿಲಲ್ಲಿ ಭಾರವಾದ ಕ್ಯಾಮೆರ ಲಗ್ಗೇಜುಗಳನ್ನು ಹೊತ್ತು ನಿಂತುಕೊಂಡು ಆಕಾಶದಲ್ಲಿ ದೂರದಲ್ಲೆಲ್ಲೋ ಹಾರಾಡುತ್ತಾ ಕ್ಷಣಮಾತ್ರದಲ್ಲಿ ಕಣ್ಮರೆಯಾಗುವ ವಿಮಾನಗಳನ್ನು  ನಮ್ಮ ಕ್ಯಾಮೆರಾಗಳಲ್ಲಿ ಸೆರೆಯಿಡಿಯುವುದೇ ದೊಡ್ಡ ಸಾಹಸ. ಅದರಲ್ಲೂ ನಾವು ಕ್ಲಿಕ್ಕಿಸಿದ ನೂರಾರು ಫೋಟೊಗಳಲ್ಲಿ  ವಿಮಾನಗಳ ವೇಗದ ಚಲನೆಗೆ ನಮ್ಮ ಕ್ಯಾಮೆರಗಳು ಕ್ಷಣಮಾತ್ರದಲ್ಲಿ ಫೋಕಸ್ ಮಾಡಿ ಶಾರ್ಪ್ ಆಗಿ ಫೋಟೊಗ್ರಫಿ ತೆಗೆದರೆ ಅದೇ ನಮ್ಮ ದೊಡ್ಡ ಸಾಧನೆ.  ಅಂತದ್ದರಲ್ಲಿ  ಮೇಲೆ ವಿವಿಧ ದೇಶಗಳ ಬಾವುಟಗಳನ್ನು ಹುಡುಕಿ ಕ್ಷಣಮಾತ್ರದಲ್ಲಿ ಕಂಡು ಕಣ್ಮರೆಯಾಗುವ ಆ ದೇಶದ ವಿಮಾನಗಳನ್ನು  ಇವುಗಳ ಹಿನ್ನೆಲೆಯಲ್ಲಿ ಫೋಟೊಗ್ರಫಿ ಮಾಡುವುದೆಂದರೆ ಅಸಾಧ್ಯವೆಂದುಕೊಂಡು ನನ್ನ ಯೋಜನೆಯನ್ನು ಹುಚ್ಚುತನವೆಂದುಬಿಟ್ಟರೆ!  ಅದಕ್ಕೆ ಅಲ್ಲಿಂದ ತಪ್ಪಿಸಿಕೊಂಡಿದ್ದೆ.

  ಸಂಜೆ ಫೋಟೊಗ್ರಫಿಯೆಲ್ಲಾ ಮುಗಿದ ಮೇಲೆ ಎಲ್ಲರೂ ಮತ್ತೆ ಸೇರಿದೆವು. ನಮ್ಮ ಸಿ.ಅರ್ ಸತ್ಯನಾರಾಯಣರವರು ಪಾಸ್ ಕೊಟ್ಟ ಗೆಳೆಯರಿಗೆ ಫೋನ್ ಮಾಡಿದರು. ನಮ್ಮ ಫೋನಿಗೆ ಕಾಯುತ್ತಿರುವಂತೆ ಬೆಂಜ್ ಕಾರಿನ ಡ್ರೈವರ್ ನಮಗಾಗಿ ಕಾಯುತ್ತಿದ್ದ.  ನಾವೆಲ್ಲಾ ಮತ್ತೊಮ್ಮೆ ಬೆಂಜ್ ಕಾರಿನ ಸೀಟುಗಳನ್ನು ಅಲಂಕರಿಸಿದೆವು.  ಏರ್ ಷೋ ನಡೆಯುವ ಸ್ಥಳದಿಂದ ಮುಖ್ಯದ್ವಾರಕ್ಕೆ ಒಂದುವರೆ ಕಿಲೋಮೀಟರ್.

 "ಈ ಒಂದುವರೆ ಕಿಲೋಮೀಟರ್ ಟ್ರಾಫಿಕ್ ಜಾಮ್ ಆಗಿ ನಮ್ಮ ಕಾರು ನಿದಾನವಾಗಿ ಹೋಗುವಂತಾಗಲಿ’ ಅಂದರು  ದೇವೇಂದ್ರ. 


"ಯಾಕಪ್ಪ ಬೇಗ ಮನೆಗೆ ಹೋಗಬೇಕು ಅನ್ನುವ ಆಸೆಯಿಲ್ವಾ" ಮಾರ್ಟಿನ್ ಕೇಳಿದರು.


 "ಟ್ರಾಫಿಕ್ ಜಾಮ್ ಆದ್ರೆ ಈ ಕಾರಿನಲ್ಲಿ ಜಾಸ್ತಿ ಹೊತ್ತು ಕೂರಬಹುದಲ್ವಾ"  ನಗುತ್ತಾ ಹೇಳಿದರು ದೇವೇಂದ್ರ.

     ಅವರ ಮಾತನ್ನು ಕೇಳಿ ಎಲ್ಲರೂ ಜೋರಾಗಿ ನಕ್ಕೆವು.  ಖುಷಿಯಿಂದ್ ಆ ಡ್ರೈವರಿಗೆ ಟಿಪ್ಸ್ ಕೊಟ್ಟು  ನಮ್ಮ ಮನೆ ಕಡೆಗೆ ಹೊರಟಾಗ ಸಂಜೆ ಆರುಗಂಟೆ. 
 ---------------------------------------------------
 ---------------------------------------------------
--------------------------------------------------
              ಮತ್ತೆ ಈಗ ಯಾವ ವಿಮಾನ ಈಗ ಹಾರಾಟ ಪ್ರಾರಂಭಿಸುತ್ತದೆ, ಆ ದೇಶಕ್ಕೆ ಸಂಭಂದಪಟ್ಟ ಬಾವುಟ ಇತ್ಯಾದಿಗಳು ಎಲ್ಲಿರುತ್ತವೆ, ಆ ವಿಮಾನದ ಹಾರಾಟ ಪ್ರದರ್ಶನ ಎಷ್ಟು ಹೊತ್ತು ಇರುತ್ತದೆ, ಅಷ್ಟರೊಳಗೆ ಆಕಾಶದ ಯಾವ ದಿಕ್ಕಿನಲ್ಲಿ ಇವೆರಡನ್ನು ಸೇರಿಸಿ ಫೋಟೊಗ್ರಫಿ ಮಾಡಬೇಕು ಎಷ್ಟು ವೇಗವಾಗಿ ಮಾಡಬೇಕು? ತಾಂತ್ರಿಕವಾಗಿ ಹೇಗೆ ಕ್ಯಾಮೆರ ಮತ್ತು ಲೆನ್ಸುಗಳನ್ನು ಬಳಸಬೇಕು ಇತ್ಯಾದಿ ವಿಚಾರ್‍ಅಗಳನ್ನು ಇಲ್ಲಿ ಬರೆದರೆ ಈ ಲೇಖನ ಮಾರುದ್ದವಾಗುತ್ತದೆ. ಅದೆಲ್ಲಾ ತರಲೇ ತಾಪತ್ರಯ ನನಗಿರಲಿ. ಅದರ ಬದಲಾಗಿ ಮಿಂಚಿನಂತೆ ಕಣ್ಮುಂದೆ ಹಾರಿ ಮಾಯವಾಗುವ ವೈವಿಧ್ಯಮಯ ವಿಮಾನಗಳು ಮಾತ್ರ ನಿಮಗಿರಲಿ ಅಂದುಕೊಂಡು ನೀವು ಅವುಗಳ ಫೋಟೊಗಳನ್ನು ಮಾತ್ರ ಹಾಕಿದ್ದೇನೆ ನೋಡಿ ಆನಂದಿಸಿ. ಖುಷಿಯಾದರೆ ನಿಮ್ಮ ಪ್ರತಿಕ್ರಿಯೆ ತಿಳಿಸಿ.


ಸೂರ್ಯ ಕಿರಣಗಳು ನೆಲದಿಂದ ಟೇಕ್ ಅಪ್ ಆಗುವಾಗ ಈ ಪುಟ್ಟ ಬಾಲಕ ಕುತೂಹಲದಿಂದ ನೋಡುವ ಪರಿಯನ್ನು  ನೋಡಿದರೆ ಮುಂದೆ ಈತ ಪೈಲಟ್ ಆಗಬಹುದೇ?


ನನಗೆ ಇದು ತುಂಬಾ ಇಷ್ಟದ ಫೋಟೊ. ಸೂರ್ಯಕಿರಣಗಳು ಆಕಾಶದಲ್ಲಿ ಬಣ್ಣದ ಚಿತ್ತಾರವನ್ನು ಬಿಡಿಸಿ ಕೆಳಮುಖವಾಗಿ ಇಳಿಯುವಾಗ ನಮ್ಮ  ದೇಶದ ಬಾವುಟವನ್ನು ಉತ್ಸಾಹದಿಂದ ಹಾರಿಸುತ್ತಿದ್ದಾರೆ.


ಆಕಾಶದಲ್ಲಿ ಬಣ್ಣದ ಚಿತ್ತಾರ ಬಿಡಿಸಿದ ಸೂರ್ಯಕಿರಣಗಳು ನಮ್ಮ  ಮತ್ತೊಂದು ಯುದ್ದ ವಿಮಾನದಲ್ಲಿರುವ ನಮ್ಮ ದೇಶದ ಧ್ವಜದ ಹಿನ್ನೆಲೆಯಲ್ಲಿ


ಇದು "ಯೋರೋ ಟೈಫೂನ್ ಯುದ್ದವಿಮಾನ"  ಇದನ್ನು ಯುರೋಪಿನ ಐದು ರಾಷ್ಟ್ರಗಳಾದ ಸ್ಪೈನ್, ಜರ್ಮನಿ, ಇಟಲಿ, ಆಷ್ಟ್ರೀಯ, ಪ್ರಾನ್ಸ್, ಮತ್ತು  ಏಷ್ಯಾದ ಸೌದಿ ಆರೇಬಿಯ ಒಟ್ಟಾಗಿ  ಸೇರಿ ನಿರ್ಮಿಸಿದ ಯುದ್ದ  ವಿಮಾನ. ನನಗೆ ಮೂರು ರಾಷ್ಟ್ರಗಳ ಬಾವುಟಗಳು ಹಿನ್ನೆಲೆಯಲ್ಲಿ ಮಾತ್ರ ಫೋಟೊಗ್ರಫಿ ಮಾಡಲು ಸಾಧ್ಯವಿತ್ತು ಉಳಿದ ಮೂರು ಮತ್ತೊಂದು ಬದಿಯಲ್ಲಿದ್ದವು.


 ಬೆಳಿಗ್ಗೆ ರೆಡ್ ಬುಲ್ ವಿಮಾನಗಳು ಅದರದೇ ದೊಡ್ಡ ಕೊಡೆಯ ಹಿನ್ನೆಯಲ್ಲಿ ಸೆರೆ ಸಿಕ್ಕಿದ್ದು ಹೀಗೆ.


ರೆಡ್ ಬುಲ್ ನಾಲ್ಕು ವಿಮಾನ ತಲೆಕೆಳಕಾಗಿ ಹಾರುವಾಗ ಛತ್ರಿಯಾಕಾರದ ಅವರ ದೇಶದ ದೊಡ್ಡ ಛತ್ರಿಯ ಹಿನ್ನೆಲೆಯಲ್ಲಿ ಸಂಜೆಗೆ ಸಿಕ್ಕ ಫೋಟೊ


ತಲೆಕೆಳಗಾಗಿ ವೇಗವಾಗಿ ಇಳಿಯುತ್ತಿರುವ ಸ್ವೀಡನ್ ದೇಶದ ಗ್ರೀಫಿನ್ ಯುದ್ದ ವಿಮಾನ ಅದೇ ದೇಶದ ದ್ವಜದ ಹಿನ್ನೆಲೆಯಲ್ಲಿ 


ನಮ್ಮ ಹೆಮ್ಮೆಯ ಲಘು  ಯುದ್ದ ವಿಮಾನ "ತೇಜಸ್"  ನಮ್ಮ ದೇಶದ  ಯುದ್ದ ವಿಮಾನದ ಬಾವುಟದ ಹಿನ್ನೆಲೆಯಲ್ಲಿ


ನಾಲ್ಕು  ದಿಕ್ಕಿಗೆ ಒಂದೇ ಕ್ಷಣದಲ್ಲಿ ಹಾರಿದ ಜೆಕೋಸ್ಲೋವಾಕಿಯಾದ ರೆಡ್ ಬುಲ್ ವಿಮಾನಗಳು


ಸೂರ್ಯಕಿರಣಗಳು ಆಕಾಶದಲ್ಲಿ ಬರೆದ  ತಿರುಪತಿ ತಿಮ್ಮಪ್ಪನ ಮೂರು ನಾಮ


ಚಿತ್ರಗಳು ಮತ್ತು ಲೇಖನ
ಶಿವು.ಕೆ