Wednesday, November 11, 2009

ನೀವು ಅವತ್ತು ನಮ್ಮೊಂದಿಗೆ ಇದ್ದರೆ ಚೆನ್ನ. ಬರುತ್ತಿರಲ್ವಾ....

ಅವತ್ತು ಬೆಳಿಗ್ಗೆಯಿಂದಲೇ ಏನೋ ಒಂಥರ ಹೇಳಲಾಗದ ಖುಷಿ. ಮೊಗ್ಗೊಳಗೆ ಆಗ ತಾನೆ ಕೋಟ್ಯಾಂತರ ಜೀವಕೋಶಗಳು ಒಂದರ ಹಿಂದೊಂದು ಸಾಲಾಗಿ ಸಾಗುತ್ತಾ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಾ ಸೇರಿಕೊಳ್ಳುತ್ತಾ ಮಕರಂದವಾದಂತೆ. ನಾನೊಂದು ಪೋನನ್ನು ನಿರೀಕ್ಷಿಸುತ್ತಿದ್ದೆ. ಬಂತಲ್ಲ. ಹತ್ತೇ ನಿಮಿಷದಲ್ಲಿ ಸಿದ್ಧನಾಗಿ ಹೊರಟೇ ಬಿಟ್ಟೆ. ಹೊರಗೆ ಬಿಟ್ಟು ಬಿಡದ ಚಂಡಮಾರುತದ ಮಳೆ. ನಿದಾನವಾಗಿ ನನ್ನ ಸ್ಕೂಟಿಯಲ್ಲಿ ಆ ಜಡಿಮಳೆಯಲ್ಲಿ ಹೋಗುತ್ತಿದ್ದಾಗ ಅಕ್ಕ ಪಕ್ಕ ಹತ್ತಾರು ವಾಹನಗಳು ಚಲಿಸುತ್ತಿದ್ದರೂ ನನಗೆ ಮೊದಲ ಭಾರಿಗೆ ನಾನೊಬ್ಬನೇ ಹೋಗುತ್ತಿದ್ದೇನೆ ಅನ್ನಿಸಿತ್ತು.


ಮಳೆ ಜೋರಾಯಿತು. ಸಹಜವಾಗಿ ಗಾಡಿ ನಿಲ್ಲಿಸಿ ಯಾವುದಾದರೂ ಸೂರು ನೋಡಿಕೊಳ್ಳುತ್ತಿದ್ದ ನಾನು ಅವತ್ತು ಹಾಗೆ ಮಾಡಲಿಲ್ಲ. ಸಾದ್ಯವಾದಷ್ಟು ಬೇಗ ಅಲ್ಲಿಗೆ ತಲುಪಬೇಕು ಅನ್ನುವ ಕಾತುರ. ಸುಮಾರು ಅರ್ಧಗಂಟೆಯ ಚಲಿಸುವ ರಸ್ತೆಗಳಲ್ಲಿ ಅದೇ ಯೋಚನೆ, ಕನಸು, ಕಲ್ಪನೆ, ಇನ್ನೂ ಏನೇನೋ.......ಸ್ಕೂಟಿಯಂತ ಪುಟ್ಟ ಗಾಡಿಯಲ್ಲಿ ಹೋಗುತ್ತಿದ್ದರೂ ತುಂಬಾ ಸರಾಗವಾಗಿ ಹಾರುತ್ತಾ ಸಾಗುತ್ತಿದ್ದೇನೆ ಅನ್ನುವ ಕಲ್ಪನೆ ಮನಸ್ಸಿಗೆ ಬಂದಾಗ ಅದು ನಿಜವಾ ಅಂತ ಸುತ್ತ ಮುತ್ತ ಒಮ್ಮೆ ನೋಡಿದೆ ಕೂಡ. ಇದೆಲ್ಲಾ ಕತೆ ಮುಗಿಯುವಷ್ಟರಲ್ಲಿ ನಾನು ತಲುಪಬೇಕಾದ ಜಾಗವನ್ನು ಸುರಕ್ಷಿತವಾಗಿ ತಲುಪಿದ್ದೆ.


ಕರೆಂಟ್ ಇರಲಿಲ್ಲ. ಬಾಗಿಲು ತಟ್ಟಿದೆ. ಒಂದೆರಡು ಕ್ಷಣಗಳ ನಂತರ ಬಾಗಿಲು ತೆರೆಯಿತು. ಬನ್ನಿ ಬನ್ನಿ ಅಂತ ಕರೆದರು ಸೀತರಾಮ್ ಹೆಗಡೆಯವರು. ಕುಳಿತ ತಕ್ಷಣ ತಗೊಳ್ಳಿ ನಿಮ್ಮ ಪುಸ್ತಕ ಎಂದು ಕೈಗೆ ಕೊಟ್ಟರು. ಅದನ್ನು ಕೈಗೆತ್ತಿಕೊಂಡೆ. ಮೊದಲ ಭಾರಿಗೆ ಒಂಥರ ವಿಭಿನ್ನ ಆನುಭವ. ನನ್ನದೇ ಪುಟ್ಟ ಮಗುವನ್ನು ಕೈಯಲ್ಲಿ ತಡವಿದಾಗ ಅದಂತ ಭಾವ. ಆಗಲೂ ನನಗೆ ನಂಬಲೂ ಆಗುತ್ತಿಲ್ಲ. ಇದು ಕನಸು ಅನ್ನಿಸಿದ್ದೆ ಹೆಚ್ಚು. ಈ ಮೊದಲು ಮನಸ್ಸಿಗೆ ಬಂದಂತೆ ಫೋಟೊಗಳನ್ನು ಕ್ಲಿಕ್ಕಿಸುತ್ತಾ, ಅದನ್ನು ಹಾಗೆ ಕ್ಲಿಕ್ ಮಾಡಿದೆ, ಹೀಗೆ ಕ್ಲಿಕ್ ಮಾಡಿದೆ ಅಂತ ನಾಲ್ಕಕ್ಷರ ಗೀಜುತ್ತಾ ಅದರಲ್ಲೇ ಖುಷಿಯಾಗಿರುತ್ತಿದ್ದ ನನಗೆ ಇದನ್ನೆಲ್ಲಾ ಮೀರಿ ಬರೆಯಲೇಬೇಕು ಅಂತ ಬರೆಸಿಕೊಂಡ, ಪುಟ್ಟಮಕ್ಕಳು ಪುಟ್ಟ ಪುಟ್ಟ ಫ್ರಾಕ್ ಹಾಕಿಸಿಕೊಂಡಂತೆ, ಹೊತ್ತಲ್ಲದ ಹೊತ್ತಿನಲ್ಲಿ ಮನದಲ್ಲಿ ಮೂಡಿದ ಚಿತ್ರಗಳು ಹೀಗೆ ಬರಹದ ಫ್ರಾಕ್ ಹಾಕಿಸಿಕೊಂಡವು.


ಸದ್ಯ ಅಂತ ನೂರಾರು ಚಿತ್ರಗಳಿಗೆ ಹೀಗೆ ಫ್ರಿಲ್ಲುಗಳಿಂದ ಕೂಡಿದ ಬಣ್ಣ ಬಣ್ಣದ ಫ್ರಾಕಿನ ಬರಹಗಳ ಹದಿನೇಳು ಲೇಖನಗಳ ಪುಟ್ಟ ಪುಸ್ತಕ ’ವೆಂಡರ್ ಕಣ್ಣು" ನನ್ನ ಕೈಯಲ್ಲಿದೆ. ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನುವ ಹಾಗೆ ನಾನು ಬರೆದಿದ್ದು ನನಗೆ ಚಂದವೇ ಅನ್ನಿಸಿದರೂ ಒಮ್ಮೆ ಹಿಂದಿನದೆಲ್ಲಾ ಮರೆತು ಮೂರನೆ ವ್ಯಕ್ತಿಯ ಹಾಗೆ, ಹತ್ತನೇ ವ್ಯಕ್ತಿಯ ಹಾಗೆ, ಕೊನೆಗೆ ನೂರನೆ ವ್ಯಕ್ತಿಯ ಹಾಗೆ ಯಾವುದೇ ಪೂರ್ವಗ್ರಹ ಪೀಡಿತನಾಗದೆ ಬೇರೆಯವರ ಪುಸ್ತಕವನ್ನು ಓದುವಂತೆ ಓದಿದೆ. ಬ್ಲಾಗು, ಕಂಪ್ಯೂಟರುಗಳಲ್ಲಿ ಓದುವುದಕ್ಕಿಂತ ಪುಸ್ತಕ ರೂಪದಲ್ಲಿ ಓದುವ ಮಜವೇ ಬೇರೆ ಅಂತ ಮತ್ತೊಮ್ಮೆ ಅನ್ನಿಸಿತ್ತು. ಹೊಸ ಪುಸ್ತಕಗಳನ್ನು ತಂದು ಓದಿದಾಗ ಪ್ರತಿಭಾರಿಯೂ ಹೀಗೆ ಅನ್ನಿಸುತ್ತದೆ. ನನ್ನ ಪುಸ್ತಕ ನಿಮಗೆ ನಿರಾಶೆಗೊಳಿಸೊಲ್ಲವೆಂಬ ಭಾವನೆ, ಆತ್ಮವಿಶ್ವಾಸ ನನ್ನಲ್ಲಿದೆ. ದಿನಾಂಕ 15-11-2009ರ ಭಾನುವಾರ ಬೆಳಗ್ಗೆ ಹತ್ತು ಗಂಟೆಗೆ ನೀವೆಲ್ಲಾ ನಿಮ್ಮ ಗೆಳೆಯರೊಂದಿಗೆ, ಕುಟುಂಬದೊಂದಿದೆ ಒಟ್ಟಾಗಿ ಬನ್ನಿ. ಅಲ್ಲಿ ನನ್ನ "ವೆಂಡರ್ ಕಣ್ಣು" ಪುಸ್ತಕದ ಜೊತೆಗೆ, ಪ್ರಕಾಶ್ ಹೆಗಡೆಯವರ "ಹೆಸರೇ...ಬೇಡ" ದಿವಾಕರ್ ಹೆಗಡೆಯವರ "ಉದ್ಧಾರ ಮತ್ತು ಸಂತೆ" ನಿಮಗೆಲ್ಲಾ ಸಿಗಲಿದೆ.


ನಿಮ್ಮ ಪುಸ್ತಕದ ಅಭಿರುಚಿಗೆ ತಕ್ಕಂತೆ ರುಚಿಯಾದ ಕಾಫಿ ತಿಂಡಿ, ಜಿ.ಎನ್.ಮೋಹನ್‍ರವರ ಅವರದೇ ಶೈಲಿಯ ಮಾತು, ನಾಗೇಶ್ ಹೆಗಡೆಯವರ ತಿಳುವಳಿಕೆಯ ಕಾಳಜಿಯುಕ್ತ ಮಾತುಗಳು, ಡಾ.ಬಿ.ವಿ.ರಾಜರಾಂರವರ ನಾಟಕದ ನುಡಿಗಳು, ಯಶವಂತ್ ಸರ್‍ದೇಶ್ ಪಾಂಡೆಯವರ ಹಾಸ್ಯಚಟಾಕಿಗಳು, ಅನೇಕ ಸಾಹಿತಿಗಳು, ಗಣ್ಯರು, ನನ್ನ ವೃತ್ತಿಭಾಂದವರು, ಬ್ಲಾಗ್ ಗೆಳೆಯರು, ಎಲ್ಲರೂ ಸಿಗುತ್ತಾರೆ. ಭಾವ ಭಾಷೆಗಳನ್ನು ಹಂಚಿಕೊಳ್ಳುತ್ತಾರೆ. ನಾವೆಲ್ಲಾ ಒಟ್ಟಾಗಿ ಪಡೆದುಕೊಳ್ಳೋಣ. ಎಂದಿನ ಭಾನುವಾರವನ್ನು ವಿಭಿನ್ನವಾಗಿ ನಮ್ಮದು ಮಾಡಿಕೊಳ್ಳೋಣ. ನೀವು ಅವತ್ತು ನಮ್ಮೊಂದಿಗೆ ಇದ್ದರೆ ಚೆನ್ನ. ಬರುತ್ತಿರಲ್ವಾ....

ಗೆಳೆಯರೊಂದಿಗೆ ಕಾಯುತ್ತಿರುತ್ತೇನೆ.

ಪ್ರೀತಿಯಿಂದ.....

ಶಿವು.ಕೆ




ನನ್ನ "ವೆಂಡರ್ ಕಣ್ಣು" ಮುಖಪುಟ.


ಪ್ರಕಾಶ್ ಹೆಗಡೆಯವರ "ಹೆಸರೇ...ಬೇಡ" ಪುಸ್ತಕದ ಮುಖಪುಟ.

ದಿವಾಕರ್ ಹೆಗಡೆಯವರ "ಉದ್ಧಾರ ಮತ್ತು ಸಂತೆ" ಪುಸ್ತಕದ ಮುಖಪುಟ.


36 comments:

PARAANJAPE K.N. said...

ಪುಸ್ತಕ ಬರೆದಾತನಿಗೆ ಆತನ ಪುಸ್ತಕದ ಮೇಲಿನ ಪ್ರೀತಿ ಅಭಿಮಾನ, ಸ್ವಂತ ಮಗನ ಮೇಲಿನದಕ್ಕಿಂತ ಜಾಸ್ತಿ ಇರುತ್ತದಂತೆ. ಯಾಕೆಂದರೆ ಪುಸ್ತಕದ ಮೇಲೆ ಆತನದು ಶೇ:100 ಸ್ವಾಮ್ಯ.ಅದು ಪೂರ್ಣ ಅವನದೇ ಕೃತಿ. ಮಗನ ಮೇಲೆ ಶೇ:50 ಭಾಗ ಮಾತ್ರ, ಉಳಿದರ್ಧಕ್ಕೆ ಹೆತ್ತಾಕೆ ಇರುತ್ತಾಳೆ. ನಿಮ್ಮ ಖುಷಿಯಲ್ಲಿ ಭಾಗಿಯಾಗಲು ನಿಮ್ಮ ಪುಸ್ತಕ ಬಿಡುಗಡೆ ಗೆ ಖಂಡಿತ ಬರುವೆ

ಮನಸು said...

ಶಿವು ಸರ್,
ನಿಮಗೆ ಶುಭವಾಗಲಿ, ಕಾರ್ಯಕ್ರಮ ಯಶಸ್ವಿಯಾಗಲೆಂದು ಮನಪೂರ್ವಕ ಆಶಿಸುತ್ತೇವೆ.
ಪುಸ್ತಕ ನಮಗಾಗಿ ಕಾದಿರಿಸಿ... ನಮ್ಮಂತ ದೂರದೂರಿನವರಿಗೂ ಸಿಗುವಂತೆ ಮಾಡಿ ಇದು ನಮ್ಮ ಕೋರಿಕೆ.

ವಂದನೆಗಳು

AntharangadaMaathugalu said...

ಶಿವು ಸಾರ್...
ನಿಮ್ಮ ಆತ್ಮೀಯ ಆಮಂತ್ರಣ ಮುದ ಕೊಟ್ಟಿತು. ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಸಮಾರಂಭ ಅತ್ಯಂತ ಯಶಸ್ವಿಯಾಗಲೆಂದು ಹಾರೈಸುವೆ.

ಶ್ಯಾಮಲ

ಶಿವಪ್ರಕಾಶ್ said...

ಶಿವು ಅವರೇ,
ಪುಸ್ತಕ ಬಿಡುಗಡೆಯ ಸಮಾರಂಭಕ್ಕೆ ಬಂದೆ ಬರುತ್ತೇನೆ.
ಅಭಿನಂದನೆಗಳು

ಕ್ಷಣ... ಚಿಂತನೆ... said...

ಶಿವು ಅವರೆ, ಪುಸ್ತಕದ ಮೇಲಿನ ಅಭಿಮಾನ, ಪ್ರೀತಿ, ಮಮತೆ ಸಹಜವೇ. ಪುಸ್ತಕ ಬಿಡುಗಡೆಯ ಜೊತೆಗೆ ರುಚಿರುಚಿಯಾದ ತಿಂಡಿಯ ಬಗೆಗೂ ತಿಳಿಸಿದ್ದೀರಿ. ಈ ಸಂತಸ ಕ್ಷಣದಲ್ಲಿ ನಾವೂ ಭಾಗಿಯಾಗುತ್ತೇವೆ. ನಿಮ್ಮ ಮತ್ತು ನಿಮ್ಮ ಸ್ನೇಹಿತರ ಈ ಪುಸ್ತಕ ಬಿಡುಗಡೆ ಸಮಾರಂಭವು ಯಶಸ್ವಿಯಾಗಲಿ. ಮತ್ತು ನಿಮ್ಮಗಳಿಂದ ಇನ್ನೂ ಅನೇಕ ಪುಸ್ತಕಗಳು, ಬರವಣಿಗೆಗಳು ಮೂಡಿಬರಲೆಂದು ಆಶಿಸುತ್ತಾ..
ಸ್ನೇಹದಿಂದ,

ಸವಿಗನಸು said...

ಶಿವು ಸರ್...
ನಿಮ್ಮ ಆತ್ಮೀಯ ಆಮಂತ್ರಣಕ್ಕೆ ಧನ್ಯವಾದಗಳು....
ಸಮಾರಂಭ ಯಶಸ್ವಿಯಾಗಲೆಂದು ಹಾರೈಸುವೆ.....

ಚುಕ್ಕಿಚಿತ್ತಾರ said...

Shivu sir...All the best.

guruve said...
This comment has been removed by the author.
guruve said...

ಶಿವುರವರೆ,
ಅಭಿನಂದನೆಗಳು. ಕಾರ್ಯಕ್ರಮ ಮತ್ತು ಪುಸ್ತಕ ಎರಡಕ್ಕೂ ಅಭೂತಪೂರ್ವ ಯಶಸ್ಸು ಸಿಗಲೆಂದು ಹಾರೈಸುವೆ...

ಬಿಸಿಲ ಹನಿ said...

ಶಿವು ಅವರೆ,
ನಿಮ್ಮದೇ ಕೂಸು ಅಂತೂ ಹೊರಬಂದಿದೆ. ಇನ್ನು ಅದನಾಡಿಸುವದು ನಮ್ಮ ಕೆಲಸ ಅಂದರೆ ಕನ್ನಡಿಗರ ಕೆಲಸ. ಕಂಗ್ರಾಚುಲೇಶನ್ಸ್! ಆದರೆ ಅವತ್ತು ನಾನಲ್ಲಿರಲಾಗುವದಿಲ್ಲವಲ್ಲ ಎನ್ನುವದಷ್ಟೆ ನನ್ನ ಕೊರಗು ಹಾಗೂ ಅನೇಕ ಬ್ಲಾಗ್ ಮಿತ್ರರು, ಸಾಹಿತಿಗಳನ್ನು ಭೇಟಿ ಮಾಡುವ ಅವಕಾಶ ತಪ್ಪಿ ಹೋಗುತ್ತದಲ್ಲ ಎನ್ನುವದೇ ಬೇಸರ. ನಿಮ್ಮನ್ನು, ನಿಮ್ಮ ಪುಸ್ತಕವನ್ನು, ಜೊತೆಗೆ ಕಾಫಿ ತಿಂಡಿಯನ್ನು ಸಹ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇರಲಿ. ದೂರದದಿಂದಲೇ ಶುಭಹಾರೈಸುತ್ತೇನೆ. Wish you all the success! and happy book releasing!

ಸುಮ said...

shivu sir all the best for the function.

ದಿನಕರ ಮೊಗೇರ said...

ಶಿವೂ ಸರ್,
ನಿಮ್ಮ ಕೂಸನ್ನ ನಮಗೂ ಆಡಿಸಲು ಅವಕಾಶ ಕೊಡಿ ..... ನಿಮ್ಮ ಪುಸ್ತಕ ನಮಗೂ ಕಳಿಸುವ ವ್ಯವಸ್ಥೆ ಮಾಡಿ ಪ್ಲೀಸ್.....

ಸಾಗರದಾಚೆಯ ಇಂಚರ said...

ಶಿವೂ ಸರ್
ಕಾರ್ಯಕ್ರಮಕ್ಕೆ ಶುಭವಾಗಲಿ
ನಿಮ್ಮ ವಂಡರ್ ಕಣ್ಣು ಬೆಂಗಳೂರಿಗೆ ಬಂದಾಗ ಕಂಡಿತ ತೆಗೆದುಕೊಳ್ಳುವೆ
ಹಾರೈಕೆಗಳೊಂದಿಗೆ
ಗುರು

umesh desai said...

ಶಿವು ಸಮಾರಂಭ ಮಿಸ್ ಮಾಡ್ಕೊಳ್ಳೋಲ್ಲ ಬರ್ತೇನಿ

ವಿನುತ said...

ಪುಸ್ತಕ ಬಿಡುಗಡೆಗೊಳ್ಳುತ್ತಿರುವುದಕ್ಕೆ ಅಭಿನಂದನೆಗಳು, ಕಾರ್ಯಕ್ರಮ ಯಶಸ್ವಿಯಾಗಲಿ ಎಂಬ ಹಾರೈಕೆಯೊಂದಿಗೆ.

Naveen ಹಳ್ಳಿ ಹುಡುಗ said...

ಶಿವಣ್ಣ.. ಪುಸ್ತಕ ಬಿಡುಗಡೆಯಾಗುತ್ತಿರುವ ವಿಷಯ ತಿಳಿದು ಬಹಳ ಖುಷಿಯಾಯಿತು... ಕಂಡಿತ ಹಾಜರ್ಆಗುವೆ.. ಮುಂಚಿತವಾಗಿ ನಿಮ್ಮ ತಮ್ಮನಿಂದ ಶುಭಾಶಯಗಳು...

shivu.k said...

ಪರಂಜಪೆ ಸರ್,

ಪುಸ್ತಕದ ಅನುಭವ ನೀವು ಹೇಳಿದಂತೆ ಆಯ್ತು. ಮಗನ ಮೇಲಿನ ಪ್ರೀತಿಗಿಂತ ಪುಸ್ತಕದ ಮೇಲಿನ ಪ್ರೀತಿ ದೊಡ್ಡದು.
ನೀವು ಬರುತ್ತಿರುವ ವಿಚಾರ ತಿಳಿದು ಖುಷಿಯಾಯ್ತು.
ಭಾನುವಾರ ಸಿಗುವಾ.
ಧನ್ಯವಾದಗಳು.

shivu.k said...

ಮನಸು ಮೇಡಮ್,

ಪುಸ್ತಕದ ಕಾರ್ಯಕ್ರಮದಲ್ಲಿ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅನ್ನಿಸುತ್ತೆ. ನಿಮ್ಮ ಪ್ರೋತ್ಸಾಹ ದೊಡ್ಡದು. ಖಂಡಿತ ನಿಮಗಾಗಿ ಪುಸ್ತಕವನ್ನು ಎತ್ತಿಟ್ಟಿರುತ್ತೇನೆ. ಗೆಳೆಯರು ಅಲ್ಲಿಂದ ಬಂದಾಗ ತಿಳಿಸಿ. ಖಂಡಿತ ಪುಸ್ತಕ ಕೊಡುತ್ತೇನೆ.ಕಾರ್ಯಕ್ರಮ ಮುಗಿದ ನಂತರ ನವಕರ್ನಾಟಕ ಪುಸ್ತಕ ಅಂಗಡಿಗಳಲ್ಲಿ ನನ್ನ ಪುಸ್ತಕ ದೊರೆಯುತ್ತದೆ.
ಧನ್ಯವಾದಗಳು.

shivu.k said...

ಶ್ಯಾಮಲ ಮೇಡಮ್,

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ನೀವು ದೂರದ ಊರಿನಲ್ಲಿದ್ದರೂ ಅಲ್ಲಿಂದಲೇ ನಮ್ಮ ಪ್ರಯತ್ನಕ್ಕೆ ಆರೈಸುತ್ತಿದ್ದೀರಿ..ಧನ್ಯವಾದಗಳು.

shivu.k said...

ಶಿವಪ್ರಕಾಶ್,

ನನಗೂ ನಿಮ್ಮನ್ನು ನೋಡಬೇಕೆನ್ನುವ ಆಸೆಯಿದೆ. ಭಾನುವಾರ ಸಿಗುವಾ.

shivu.k said...

ಕ್ಷಣಚಿಂತನೆ ಸರ್,

ಪುಸ್ತಕದ ಮೇಲಿನ ಪ್ರೀತಿ ಅಭಿಮಾನ ಮೊದಲ ಭಾರಿಗೆ ಆದ ಅನುಭವ. ನಿಮ್ಮನ್ನು ನಾನು ತುಂಬಾ ದಿನದಿಂದ ಬೇಟಿಯಾಗಬೇಕೆನ್ನುವ ಆಸೆಯಿದೆ. ಪುಸ್ತಕದ ನೆಪದಿಂದಲಾದರೂ ಬೇಟಿಯಾಗುತ್ತೇವಲ್ಲ. ಅವತ್ತು ನಮ್ಮ ಯೂತ್ ಫೋಟೊಗ್ರಫಿ ಕ್ಲಬ್ಬಿನ ಅನೇಕ ಸದಸ್ಯರು ಬರುತ್ತಾರೆ ಅವರನ್ನು ಬೇಟಿಯಾಗಬಹುದು.

ಧನ್ಯವಾದಗಳು.

shivu.k said...

ಮಹೇಶ್ ಸರ್,

ದೂರದ ಕುವೈಟ್‍ನಿಂದ ನಮ್ಮ ಪುಸ್ತಕ ಕಾರ್ಯಕ್ರಮಕ್ಕೆ ಹಾರೈಸುತ್ತಿದ್ದೀರಿ. ಧನ್ಯವಾದಗಳು.

shivu.k said...

ಚುಕ್ಕಿ ಚಿತ್ತಾರ.

ಧನ್ಯವಾದಗಳು.

shivu.k said...

ಗುರು,

ಕಾರ್ಯಕ್ರಮಕ್ಕೆ ಬನ್ನಿ ಅಲ್ಲಿ ನಿಮ್ಮನ್ನು ಬೇಟಿಯಾಗುವ ಆಸೆಯಿದೆ.
ಧನ್ಯವಾದಗಳು.

shivu.k said...

ಉದಯ್ ಸರ್,

ನನ್ನ ಮೊದಲ ಪುಸ್ತಕದ ಅನುಭವ ವಿಭಿನ್ನ. ಕನ್ನಡದ ಕೆಲಸ ಎಂದು ಹೇಳಿ ನಮ್ಮನ್ನು ಹೊಗಳಿದ್ದೀರಿ. ಆದ್ರೆ ಅಷ್ಟು ದೊಡ್ಡ ಮಾತಿಗೆ ನಾನು ಆರ್ಹನಲ್ಲ. ದೂರದ ಊರಿನಿಂದ ಅಲ್ಲಿಂದ ನಮ್ಮ ಕಾರ್ಯಕ್ರಮಕ್ಕೆ ಹಾರೈಸುತ್ತಿದ್ದೀರಿ.

ತಿಂಡಿ ಕಾಫಿ ಮಿಸ್ ಆದರೂ ಪುಸ್ತಕವನ್ನು ನಿಮಗಾಗಿ ಎತ್ತಿಟ್ಟಿರುತ್ತೇನೆ ಸರ್. ನೀವು ಇಲ್ಲಿಗೆ ಬಂದಾಗ ಖಂಡಿತ ಪುಸ್ತಕವನ್ನು ಕೊಡುತ್ತೇನೆ..

shivu.k said...

ಸುಮಾ ಮೇಡಮ್,

ನಿಮ್ಮ ಹಾರೈಕೆಗೆ ಧನ್ಯವಾದಗಳು.

shivu.k said...

ದಿನಕರ್ ಸರ್,

ನನ್ನ ಕೂಸು ಭಾನುವಾರದಿಂದ ಎಲ್ಲರ ಕೂಸಾಗುತ್ತದೆ. ನೀವು ಕಳಿಸಿದ ಮೇಲ್‍ನಿಂದ ನಿಮ್ಮ ವಿಳಾಸ ಪಡೆದುಕೊಂಡಿದ್ದೇನೆ. ಖಂಡಿತ ನಿಮಗೆ ಪುಸ್ತಕವನ್ನು ಕಳಿಸುತ್ತೇನೆ..

ಧನ್ಯವಾದಗಳು.

ಶಾಂತಲಾ ಭಂಡಿ (ಸನ್ನಿಧಿ) said...

ಶಿವು ಅವರೆ...
ಪುಸ್ತಕ ಬಿಡುಗಡೆಯಾಗುತ್ತಿರುವುದಕ್ಕೆ ಅಭಿನಂದನೆಗಳು. ಕಾರ್ಯಕ್ರಮಕ್ಕೆ ಶುಭಾಶಯ.

ಚಿತ್ರಾ said...

ಆತ್ಮೀಯ ಶಿವೂ ,
ನಿಮ್ಮ ಆಮಂತ್ರಣಕ್ಕೆ ಧನ್ಯವಾದಗಳು.
ನಿಜಕ್ಕೂ ಇದೊಂದು ರೀತಿಯಿಂದ ಮೊದಲ ಬಾರಿಗೆ ತಾಯಿಯಾಗುವ ಸಂಭ್ರಮಕ್ಕಿಂತ ಹೊರತಾಗಿಲ್ಲ .
ನಿಮ್ಮ ಪುಸ್ತಕದ ಬಿಡುಗಡೆ ಸಮಾರಂಭಕ್ಕೆ ಇಲ್ಲಿಂದಲೇ ನನ್ನ ಶುಭ ಹಾರೈಕೆಗಳು ! ಕಾರ್ಯಕ್ರಮ ಸುಗಮವಾಗಿ ನೆರವೇರಲಿ ಎಂದು ಹೃದಯಪೂರ್ವಕವಾಗಿ ಹಾರೈಸುತ್ತೇನೆ !

ಪ್ರೀತಿಯಿಂದ,
ಚಿತ್ರಾ

ಚಂದಿನ | Chandrashekar said...

ಶಿವು ಅವರೆ,

ನಿಮ್ಮ ವೆಂಡರ್ ಕಣ್ಣು ಪುಸ್ತಕ ಮತ್ತೆ ಮತ್ತೆ ಮರುಮುದ್ರಣವಾಗಲೆಂದು ಆಶಿಸುತ್ತಾ...

ಪುಸ್ತಕ ಬಿಡುಗಡೆ ಕಾರ್ಯಕ್ರಮ ಅಮೋಘವಾಗಿ ನಡೆಯಲೆಂದು ಹಾರೈಸುತ್ತಾ...

ನಲ್ಮೆಯ
ಚಂದಿನ

ರಾಜೀವ said...

ಶಿವು ಅವರೇ,
ನಿಮ್ಮ "ವೊಂಡರ್ ಕಣ್ಣು" ವಂಡರ್ಫುಲ್ ಆಗಿ ಬಿಡುಗಡೆಗೊಳ್ಳಲಿ ಎಂದು ಆಶಿಸುತ್ತೇನೆ.
ಕನ್ನಡ ಸಾಹಿತ್ಯ ಇನ್ನೂ ಬೆಳೆಯಲಿ, ನಿಮ್ಮಿಂದ ಮತ್ತಷ್ಟು ವೊಂಡರ್ ಕಣ್ಣುಗಳು ಬರಲಿ.
ಪ್ರಕಾಶ್, ದಿವಾಕರ್ ಮತ್ತು ನಿಮಗೆ ಅಭಿನಂದನೆಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ನಿಮ್ಮ ಸಂಭ್ರಮದಲ್ಲಿ ನಾವೆಲ್ಲರೂ ಭಾಗಿಯಾಗುವೆವು.ನಿಮ್ಮ ಕೈಯಲ್ಲಿ ಮಿಸ್ ಆಗಿರುವ ಕ್ಯಾಮೆರಾ ನನ್ನ ಕೈಲಿರುತ್ತದೆ. ಆದಷ್ಟು ಚಿತ್ರಗಳನ್ನು ಪೋಣಿಸಿಕೊಡುವೆ. ಚಿಯರ್ಸ್...

b.saleem said...

ಶಿವು ಸರ್
ಪ್ರೀತಿಯಿಂದ ಆಮಂತ್ರಣ ಪತ್ರ ಕಳಿಸಿದ್ದಕ್ಕೆ ಧನ್ಯವಾದಗಳೂ.
ನಿಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಗಲೆಂದು ಆಶಿಸುತ್ತೆನೆ,

ಚಕೋರ said...

ಶಿವೂ,

ಖಂಡಿತ ಪ್ರಯತ್ನಿಸ್ತೇನೆ. ಪುಸ್ತಕ ತಗೊಳ್ತೇನೆ. ಆದರೆ ಕಾರಣಾಂತರದಿಂದ ನಿಮ್ಮನ್ನು ಮಾತಾಡಿಸಲು ನನಗೆ ಸಾಧ್ಯವಾಗದು.

Prabhuraj Moogi said...

ಇತ್ತೀಚೆಗೆ ನಿಮ್ಮ ಬ್ಲಾಗಗೆ ಬಂದಿರಲಿಲ್ಲ, ಹಾಗೆ ಕಾರ್ಯಕ್ರಮಕ್ಕೆ ಕೂಡ...ಬಹಳ ಕೆಲಸ... ಅದಕ್ಕೇ ಎನೂ ಮಾಡಲಾಗುತ್ತಿಲ್ಲ. ನಿಮ್ಮ ಆಮಂತ್ರಣ ಸಿಕ್ಕಿತ್ತು, ಇಷ್ಟೊತ್ತಿಗೆ ಕಾರ್ಯಕ್ರಮ ಮುಗಿದಿರುತ್ತದೆ, ಇರಲಿ ಪುಸ್ತಕ ಬಿಡುಗಡೆಗೆ ಅಭಿನಂದನೆಗಳು, ಪುಸ್ತಕ ಲೊಕಕ್ಕೇ ಇಟ್ಟ ಹೆಜ್ಜೆಯೊಂದಿಗೆ ಹೀಗೆ ಮುಂದೆ ಸಾಗಿರಿ...

Keshav.Kulkarni said...

ಲೇಟಾಗಿ ಬರೆಯುತ್ತಿದ್ದೇನೆ. ಆಭಿನಂದನೆಗಳು. ನಿಮ್ಮ ಪುಸ್ತಕ ಈ ಸಲ ಭಾರತಕ್ಕೆ ಬಂದಾಗ ಖಂಡಿತ ಕೊಂಡು ಒಯ್ಯುತ್ತೇನೆ.
- ಕೇಶವ