Saturday, September 20, 2008

ಪಕ್ಷಿಲೋಕದ ಸಂದೇಶ

ನೀಲಿ ಬಾಲದ ಕಳ್ಳಿಪೀರ ಪಕ್ಷಿಗಳ ಸಚಿತ್ರ ಜೀವನ ಚರಿತ್ರೆ. ಅವನ್ನು ನೋಡಿ ನಾವು ಕಲಿಯಬೇಕಾದ್ದು ಸಾಕಷ್ಟಿದೆ. ಪ್ರತಿ ಚಳಿಗಾಲಕ್ಕೂ ಛಾಯಗ್ರಹಣ ನೆಪದ ಮೇಲೆ ರಂಗನತಿಟ್ಟಿನಲ್ಲಿ ಸರ್ಕೀಟು ಹೋಡೆಯುತ್ತಾ ಪಕ್ಷಿಗಳನ್ನು ಕಂಡು ಪುಳಕಿತನಾಗುವುದು ನನ್ನ ಇಷ್ಟದ ಹವ್ಯಾಸ. ಬೇಸಿಗೆಯಲ್ಲೂ ಕಣ್ಣಿಗೆ ತಂಪಾಗುವ ತಾಣ ಯಾವುದಾದರೂ ಇವೆಯೇ ಎಂದು ಹುಡುಕಿದಾಗ ನಮಗೆ ಕಣ್ಡಿದ್ದು ಶ್ರೀರಂಗಪಟ್ಟಣದಿಂದ ಎಂಟು ಕಿ.ಮೀ. ದೂರದಲ್ಲಿರುವ ನಗುವನಹಳ್ಳಿ ಗ್ರಾಮದ ಕಾವೇರಿ ದಂಡೆ. ಇದಕ್ಕೆ ಸಮೀಪದಲ್ಲೇ ವಿಶಾಲ ಹುಲ್ಲುಗಾವಲಿನಂತಿರುವ ಮೈದಾನವಿದೆ. ಅದನ್ನು ಸೀಳುವ ಒಂದು ಕಾಲುವೆ ನದಿಯನ್ನು ಸೇರುತ್ತದೆ.

ಈ ಕಾಲುವೆಯಲ್ಲಿ ಸುತ್ತ ಮುತ್ತ ನೀಲಿಬಾಲದ ಹಕ್ಕಿಗಳ ಇಂಚರ ಹುಡುಗಾಟ-ಬೇಟೆ-ಬೇಟ. ಕಾಲುವೆ ಗೋಡೆಯಲ್ಲಿ ೨ ರಿಂದ ೫ ಆಡಿ ಎತ್ತರದಲ್ಲಿ ಹಳ್ಳಗಳು ಈ ನೀಲಿಬಾಲದ ಪಕ್ಷಿಗಳ ಗೂಡು ಕಟ್ಟುವ ತಾಣ.

ಇಲ್ಲಿ ಈ ಪಕ್ಷಿಗಳು ಒಟ್ಟಾಗಿ ಹಾರಾಡುವುದು, ಒಟ್ಟಾಗಿ ವಿದ್ಯುತ್ ತಂತಿ ಮೇಲೆ ಕುಳಿತುಕೊಳ್ಳುವುದು, ಆಕಾಶದಲ್ಲಿ ಚಿಟ್ಟೆ, ಡ್ರ್ಯಾಗನ್ ಫ್ಲೈ, ಜೇನುಹುಳು,ದುಂಬಿ ಸೇರಿದಂತೆ ಎಷ್ಟೋ ಕೀಟಗಳನ್ನು ಗುರಿ ತಪ್ಪದ ಹಾಗೆ ಹಾರುತ್ತಲೇ ತನ್ನ ಕೊಕ್ಕಿನಲ್ಲಿ ಬೇಟೆಯಾಡುವ ಪರಿ ಚಂದಕ್ಕಿಂತ ಚಂದ. ಮೇಲ್ಮುಖ-ಕೆಳಮುಖ-ಲಂಬಕಾರ ಹೀಗೆ ಹೇಗೆಂದರೆ ಹಾಗೆ ಹಾರಾಡಬಲ್ಲ-ಹಾರುತ್ತಲೇ ಹಠಾತ್ತನೆ ದಿಕ್ಕು ಬದಲಿಸಬಲ್ಲ ಇವು ಯುದ್ಧ ವಿಮಾನಗಳನ್ನು ನೆನಪಿಸುತ್ತವೆ. ಬೇಟೆಯ ಹಿಂದೆ ಬಿದ್ದು ತನ್ನ ಕೊಕ್ಕಿನಿಂದ ಹಿಡಿದಾಗ "ಪಟ್" ಶಬ್ದ ಕೇಳಿಸಿತೆಂದರೆ ಬಡಪಾಯಿ ಕೀಟಕ್ಕೆ ಮೋಕ್ಷ ಸಿಕ್ಕಿದೆ ಎಂದೆ ಅರ್ಥ. ಇದನ್ನು ಕಾಣಲು ಕಣ್ಣಿನ ಸಾಮಾರ್ಥ್ಯ ಸಾಕಾಗುವುದಿಲ್ಲ. ಅದಕ್ಕೆ ಬೈನಾಕ್ಯುಲರಿನ ನೆರವು ಬೇಕೇಬೇಕು. ಮೇ ತಿಂಗಳು ಉರಿಬಿಸಿಲು. ಈ ಪಕ್ಷಿಗಳು ಬೇಸಿಗೆಯಲ್ಲಿ ಗೂಡು ಕೊರೆದು ಮೊಟ್ಟೆಯಿಟ್ಟು, ಕಾವು ಕೊಟ್ಟು ಹೊರಬಂದ ಮರಿಗಳಿಗೆ ಆಹಾರ ಕೊಡುತ್ತವೆ. ಏಕೆಂದರೆ ಆ ಸಮಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುತ್ತದೆ. ಕಾಲುವೆ ಬದಿಗಳು ಗೂಡು ಕೊರೆಯಲು ಸಹಾಯಕವಾಗಿರುತ್ತವೆ. ಇಂಥ ೩-೪ ಅಡಿ ಎತ್ತರದ ಕಾಲುವೆ ಬದಿಗಳಲ್ಲಿ ೫-೬ ಗೂಡುಗಳು, ಕೆಲವೊಂದು ಕಡೆ ೧೦-೧೨ಕ್ಕೂ ಹೆಚ್ಚು ಗೂಡುಗಳು ಕಂಡುಬರುತ್ತವೆ. ಇನ್ನು ಕೆಲವು ಕಡೆ ಇಪ್ಪತ್ತಕ್ಕೂ ಹೆಚ್ಚು ಪಕ್ಷಿಗೂಡುಗಳಿದ್ದು ಒಳಗಿರುವ ಮರಿಗಳಿಗೆ ಸೂಚನೆ ನೀಡಿ ಆಹಾರ ಕೊಡುವಾಗ ಸಂಭ್ರಮಿಸುವ ರೀತಿ ಆಶ್ಚರ್ಯವನ್ನುಂಟು ಮಾಡುತ್ತವೆ. ಕ್ಯಾಮರ, ಲೆನ್ಸುಗಳನ್ನು ಸ್ಟ್ಯಾಂಡಿಗೆ ಸೆಟ್ ಮಾಡಿ ಕೇಬಲುಗಳನ್ನು ಕ್ಯಾಮರಗಳಿಗೆ ತಗುಲಿಸಿ ಸುಮಾರು ೭೦ ಅಡಿಗಳಷ್ಟು ದೂರದಲ್ಲಿ ರಿಮೋಟ್ ಸ್ವಿಚ್ ಹಿಡಿದು ಕುಳಿತಾಗ ಬೆವರು ಇಳಿಯುತ್ತಿದ್ದರೂ ಕ್ಯಾಮೆರಾ ಫೋಕಸ್ ಮಾಡಿದ ಗಿಡದ ಕಡ್ಡಿಯ ಮೇಲೆ ನೀಲಿ ಬಾಲದ ಕಳ್ಳಿ ಪೀರ ಹಕ್ಕಿಗಳು ಯಾವಾಗ ಬಂದು ಕುಳಿತುಕೊಳ್ಳುತ್ತವೋ ಎಂದು ಎದೆ ಹೊಡೆದುಕೊಳ್ಳುತ್ತಿತ್ತು. ಎರಡು ಗಂಟೆ ಕಳೆದ ನಂತರ ಒಂದು ಹಕ್ಕಿ ಬಂದು ಕುಳಿತುಕೊಂಡಿತು.

ಹತ್ತು ಸೆಕೆಂಡಿನ ನಂತರ ತನ್ನ ಗೂಡಿಗೆ ಹೋಗಿ ತಾನು ಹಿಡಿದು ತಂಡಿದ್ದ ಆಹಾರವನ್ನು ಮರಿಗಳಿಗೆ ಕೊಟ್ಟು ವಾಪಾಸ್ ಹೊರಗೆ ಹಾರಿಹೋಯಿತು. ಸ್ವಲ್ಪ ಹೊತ್ತಿನ ನಂತರ ಇನ್ನೊಂದು, ಮಗದೊಂದು ಬಂದು ಆ ಕಡ್ಡಿಯ ಮೇಲೆ ಕೂರಲಾರಂಭಿಸಿದೆವು. ಪ್ರತಿಯೊಂದು ಹಕ್ಕಿ ತನ್ನದೇ ಆದ ಪ್ರತಿಭೆಯಿಂದ ಕೊಕ್ಕಿನಲ್ಲಿ ಹಿಡಿದುತಂದ ಆಹಾರದಲ್ಲಿ ವಿಭಿನ್ನತೆಗಳೆಷ್ಟು? ಪ್ರತಿಯೊಬ್ಬರಲ್ಲೂ ಒಂದೊಂದು ವಿಭಿನ್ನ ಪ್ರತಿಭೆ ಇರುವಂತೆ, ಒಂದು ಹಕ್ಕಿ ಕಡುನೀಲಿ ಬಣ್ಣದ ದುಂಬಿ ಹಿಡಿದು ತಂದರೆ,
ಮತ್ತೊಂದರ ಬಾಯಲ್ಲಿ ಜೀಬ್ರಾ ಬಣ್ಣದ ಪಟ್ಟಿಯಿರುವ ಡ್ರ್ಯಾಗನ್ ಫ್ಲೇ. ಇನ್ನೊಂದು ಹಕ್ಕಿ ಕೆಂಪು ಬಣ್ಣದ ಮಿರುಗುವ ಡ್ರ್ಯಾಗನ್ ಫ್ಲೇ ತಂದರೆ ಮಗದೊಂದು ಹಕ್ಕಿ ಹಳದಿ ಬಣ್ಣದಲ್ಲಿ ಕಪ್ಪು ಚುಕ್ಕಿಗಳಿರುವ "ಲೈಮ್ ಬಟರ್ ಫ್ಲೇ" ಎಂಬ ಹೆಸರಿನ ಸುಂದರ್ ಚಿಟ್ಟೆಯನ್ನೇ ಬಾಯಲ್ಲಿರಿಸಿಕೊಂಡಿದೆ.

ಜೇನು ಹುಳು, ಮಿಡತೆಗಳು ಇನ್ನು ಆನೇಕ ಜಾತಿಯ ಕೀಟಗಳು ಇವುಗಳ ಕಣ್ಣಿಗೆ ಮಾತ್ರ ಬೀಳುತ್ತವೆಯೇನೋ! ಬೈನಾಕ್ಯುಲರಿನಲ್ಲಿ ಎಲ್ಲವನ್ನು ನೋಡುತ್ತಿದ್ದರೆ ಇವೆಲ್ಲವನ್ನು ಸೃಷ್ಟಿಸಿದ, ನೋಡುವ ಭಾಗ್ಯ ಕರುಣಿಸಿದ ಪ್ರಕೃತಿ ದೇವನಿಗೆ ನಮೋ ನಮಃ ಎಂದು ಮನಸ್ಸಿನಲ್ಲಿಯೇ ಹೇಳುವಂತಾಯಿತು.

ಹೊಳೆಯಲ್ಲಿ ಬಟ್ಟೆ ತೊಳೆಯಲು ಬರುವ ಹಳ್ಳಿಯ ಜನರು ಹಕ್ಕಿಗಳ ಗೂಡುಗಳಿವೆ ಎಂದು ತಿಳಿಯದೆ, ಪಕ್ಷಿಗೂಡುಗಳು ಮುಚ್ಚಿಹೋಗುವಂತೆ ಬಟ್ಟೆ ಒಣಹಾಕುತ್ತಿದ್ದರು. ಈ ಬಟ್ಟೆಗಳಿಂದ ಹೆದರಿದ ಹಕ್ಕಿಗಳು ಬಾಯಲ್ಲಿ ಆಹಾರ ತಂದರೂ ಗೂಡಿಗೆ ಹೋಗಲು ಹಿಂಜರಿಯುತ್ತಿದ್ದವು. ಅಲ್ಲಿಯೇ ಇದ್ದ ನಾನು ಆ ಹಳ್ಳಿ ಜನರಿಗೆ ಅವರೇ ಹಾಕಿರುವ ಬಟ್ಟೆಗಳ ಹತ್ತಿರದಲ್ಲಿರುವ ಗೂಡುಗಳನ್ನು ತೋರಿಸಿ, ಒಳಗೆ ಮರಿಗಳು ಇವೆ. ವಿದ್ಯುತ್ ತಂತಿ ಮೇಲೆ ಆಹಾರ ಕೊಡಲು ಕಾಯುತ್ತಿರುವ ಹಕ್ಕಿಗಳು ನೀವು ಹಾಕಿರುವ ಬಟ್ಟೆಗಳಿಂದಾಗಿ ಹೆದರಿಕೊಂಡು ಗೂಡಿಗೆ ಬರಲು ಹಿಜರಿಯುತ್ತಿವೆಯೆಂದು, ಇದರಿಂದಾಗಿ ಮರಿಗಳು ಉಪವಾಸದಿಂದ ಸತ್ತುಹೋಗುತ್ತವೆ ಎಂದು ಅವರಿಗೆ ವಿವರಿಸಿದಾಗ ಅವರಿಗೆ ತಮ್ಮ ತಪ್ಪಿನ ಅರಿವಾಗಿ, ತಮ್ಮ ಬಟ್ಟೆಗಳನ್ನು ಅಲ್ಲಿಂದ ತೆಗೆದುಹಾಕಿದರು.
ಇದೆಲ್ಲದರ ನಡುವೆ ಈ ಪಕ್ಷಿಗಳ ಛಾಯಾಚಿತ್ರ ಸೆರೆಹಿಡಿಯುವ ನಮ್ಮ ಕಾಯಕವು ಮುಂದುವರಿದಿತ್ತು. ಎಲ್ಲಾ ಮುಗಿಸಿ ಸಂಜೆ ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ ರೈಲ್ವೇ ನಿಲ್ದಾಣದಲ್ಲಿ ಬೆಂಗಳೂರಿನ ರೈಲು ಹತ್ತಿದಾಗ ಸೂರ್ಯ ಪಶ್ಚಿಮದಲ್ಲಿ ಅಸ್ತಮಿಸುತ್ತಿದ್ದ. ನನ್ನ ಮನಸ್ಸಿನಲ್ಲಿ ನೀಲಿ ಬಾಲದ ಕಳ್ಳಿ ಪೀರ ಪಕ್ಷಿಗಳು, ಅವುಗಳ ಚಿತ್ರಗಳೇ ಅಚ್ಚೊತ್ತಿದ್ದವು. ಅವು ನೀಡಿದ ಭಾತೃತ್ವದ ಸಂದೇಶ ಹಸಿರಾಗಿತ್ತು.
ಶಿವು ಕೆ.
[ದಿನಾಂಕ ೨೩ ಆಗಸ್ಟ್ ೨೦೦೭ರ ಸುಧಾ ವಾರಪತ್ರಿಕೆಯಲ್ಲಿ ಫೋಟೊ ಸಹಿತ ಪ್ರಕಟಗೊಂಡ ಲೇಖನ].

2 comments:

ಹರೀಶ್ ಕೇರ said...

Marvellous shivu.
-Harish Kera

ಅಂತರ್ವಾಣಿ said...

ಶಿವು ಅವರೆ,
ಈ ಪೋಸ್ಟಿನ ಮೊದಲ ಚಿತ್ರ ನೋಡಿದಾಗ ಎಲ್ಲೋ ನೋಡಿದ್ದೀನಿ ಅನಿಸಿತು. ಆಮೇಲೆ "ಸುಧಾ" ಅಂತ ತಿಳಿಯಿತು.