Friday, February 11, 2011

ರಾಷ್ಟ್ರಮಟ್ಟದ ಛಾಯಾಚಿತ್ರ ಪ್ರದರ್ಶನ ಮಿಸ್ ಮಾಡಿಕೊಳ್ಳಬೇಡಿ


ಬೆಂಗಳೂರಿನ  ಯೂತ್ ಫೋಟೊಗ್ರಫಿ ಸೊಸೈಟಿಯ 32ನೇರಾಷ್ಟ್ರಮಟ್ಟದ ಛಾಯಾಚಿತ್ರ ಪ್ರದರ್ಶನವು ಇದೇ ಫೆಬ್ರವರಿ 10 ರಿಂದ 14ರವರೆಗೆ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ನಡೆಯುತ್ತಿದೆ.  ಕಳೆದ ಬಾರಿ ಮೂರು ವಿಭಾಗದ ಪಲಿತಾಂಶವನ್ನು ಬ್ಲಾಗಿನಲ್ಲಿ ಹಾಕಿದ್ದೆ. ಉಳಿದ ಪ್ರಕೃಯಿ ಮತ್ತು ಕ್ರಿಯೇಟೀವ್ ವಿಭಾಗದ ಪ್ರಶಸ್ತಿ ವಿಜೇತ ಛಾಯಾಚಿತ್ರಗಳು ನಿಮಗಾಗಿ


ನೇಚರ್ ಪ್ರಿಂಟ್ ವಿಭಾಗದ ಬಹುಮಾನ ವಿಜೇತ ಚಿತ್ರಗಳು.
ಮೊದಲ ಬಹುಮಾನ ಬಿ.ಸಿ ಮಂಜಪ್ಪ. ಬೆಂಗಳೂರು
ಚಿತ್ರ: ಮಕ್ಕಳೊಂದಿಗೆ ಹೆಣ್ಣು ಹುಲಿ.


ಎರಡನೇ ಬಹುಮಾನ ಬೆಂಗಳೂರಿನ ಪ್ರದೀಪ್ ಕುಮಾರ್
ಚಿತ್ರ: ನೈಟ್ ಹೆರಾನ್ ಜೊತೆಯಲ್ಲಿ ಮರಿ


ಮೂರನೆ ಬಹುಮಾನ ವಿ ಡಿ ಭಟ್ ಸುಗಾವಿ
ಚಿತ್ರ: ಮೊಟ್ಟೆಯಿಡುತ್ತಿರುವ ಪೆಂಟಟಾಮಿ ಬಗ್


ಅತ್ಯುತ್ತಮ ಪ್ರಾಣಿಗಳ ಚಿತ್ರ ಬಹುಮಾನ ವಿಜೇತರು ಸಿದ್ಧಾರ್ಥ ಮಲ್ಲಿಕ್ ಬೆಂಗಳೂರು
 ಚಿತ್ರ:  ಕಾಡುನಾಯಿಯನ್ನು ಅಟ್ಟಿಸಿಕೊಂಡು ಹೋಗುತ್ತಿರುವ ಕಾಡುಹಂದಿ


ಅತ್ಯುತ್ತಮ ಕೀಟ ವಿಭಾಗದ ಬಹುಮಾನ ವಿಜೇತರು ವಿ.ಡಿ ಭಟ್ ಸುಗಾವಿ
 ಚಿತ್ರ : ಮೊಟ್ಟೆಯಿಡುತ್ತಿರುವ ಬಗ್


ಅರ್ಹತ ಪತ್ರ ಪಡೆದವರು: ಬೆಂಗಳೂರಿನ ಇಮ್ತಿಯಾಜ್ ಖಾನ್
  ಚಿತ್ರ ಆಹಾರದ ಜೊತೆ ಹ್ಯಾರಿಯರ್ ಹದ್ದು



ಸೃಜನಶೀಲ ಛಾಯಾಚಿತ್ರ ವಿಭಾಗದಲ್ಲಿ ಬಹುಮಾನ ವಿಜೇತ ಚಿತ್ರಗಳು.

ಮೊದಲನೆ ಬಹುಮಾನ ಶಿವು ಕೆ. AFIAP, ARPS. ಬೆಂಗಳೂರು
ಚಿತ್ರ: ಇರುವೆಗಳ ಒಗ್ಗಟ್ಟು


ಎರಡನೆ ಬಹುಮಾನ :ದೃತಿಮಾನ್ ಹೋರ. ಕೋಚ್ ಬಿಹಾರ್
ಚಿತ್ರ: ಡಿವೈನಿಟಿ


ಮೂರನೆ ಬಹುಮಾನ ಎ.ಜಿ ಲಕ್ಷ್ಮಿನಾರಾಯಣ್ EFIAP  ಶಿವಮೊಗ್ಗ
ಚಿತ್ರ: ವಾಚ್‍ಮೆನ್



ಆರ್ಹತ ಪತ್ರ ಪಡೆದವರು ಗೌತಮ ಚಟರ್ಜಿ EFIAP. ಕೊಲ್ಕಟ್ಟ
ಚಿತ್ರ: ಆಟಮನ್ ಡ್ರೀಮ್


                     ಎರಡನೆ ಆರ್ಹತ ಪತ್ರ ಪಡೆದವರು ಸೃಜನ್ ಸಾಕರ್. ಕೋಚ್ ಬಿಹಾರ್
                                                                ಚಿತ್ರ: ಸಸ್ಟೇನ್ 



ಆರನೆ ಮತ್ತು ಹೊಸ ವಿಭಾಗವಾದ ಡಿಜಿಟಲ್ ನೇಚರ್ ವಿಭಾಗದ ಬಹುಮಾನ ವಿಜೇತ ಚಿತ್ರಗಳು.
ಮೊದಲ ಬಹುಮಾನ: ಕಿರಣ್ ಪೂಣಚ್ಚ ಬೆಂಗಳೂರು.
ಚಿತ್ರ: ಹ್ಯಾರಿಯರ್ ಲ್ಯಾಂಡಿಂಗ್



ದ್ವಿತೀಯ ಬಹುಮಾನ ಕೆ.ಪಿ. ಮಾರ್ಟಿನ್ ಬೆಂಗಳೂರು
 ಚಿತ್ರ: ಮರಿಗಳೊಂದಿಗೆ ಪ್ಲೇನ್ ರನ್ ಹಕ್ಕಿ


ಮೂರನೆ ಬಹುಮಾನ: ತಪಸ್ ಕುಮಾರ್ ನಂದ, ಕೋಚ್ ಬಿಹಾರ್
ಚಿತ್ರ: ಬ್ಲಾಕ್ ವಿಂಗಡ್ ಕೈಟ್


ಅತ್ಯುತ್ತಮ ಕೀಟ ಪ್ರಶಸ್ತಿ ಪಡೆದವರು ವಿಧ್ಯಾದರ್ ಶಿಲ್ಕೆ. ಬೆಳಗಾವಿ
 ಚಿತ್ರ: ರಾಬರ್ ಪ್ಲೆ ಮೇಟಿಂಗ


ಮೊದಲ ಅರ್ಹತ ಪತ್ರ ಪಡೆದವರು ವಿ.ಡಿ.ಭಟ್ ಸುಗಾವಿ
ಚಿತ್ರ ಮರಿಗಳೊಂದಿಗೆ ಬಗ್



ಎರಡನೇ ಅರ್ಹತಪತ್ರ ಪಡೆದವರು: ಕಿರಣ್ ಪೂಣಚ್ಚ: ಬೆಂಗಳೂರು
 ಚಿತ್ರ: ಬೇಟೆಯೊಂದಿಗೆ ಹದ್ದು

ಇವುಗಳಲ್ಲದೇ ನೂರಾರು ಅತ್ಯುತ್ತಮವೆನಿಸುವ ಪ್ರದರ್ಶನಕ್ಕೆ ಆಯ್ಕೆಯಾಗಿರುವ ಚಿತ್ರಗಳನ್ನು ನೋಡಲು ಅವಕಾಶ ಸಂಜೆಯ ವೆಂಕಟಪ್ಪ ಆರ್ಟ್ ಗ್ಯಾಲರಿಗೆ ಸಂಜೆ  ಸಮಯದಲ್ಲಿ ಹೋದರೆ ಪ್ರದರ್ಶನಗೊಂಡ ಚಿತ್ರಗಳೊಂದಿಗೆ ಪ್ರೊಜೆಕ್ಟೆಡ್ ವಿಭಾಗದ ಚಿತ್ರಗಳನ್ನು ನೋಡುವ ಅವಕಾಶ ತಪ್ಪದೇ ನೋಡಿ ಆನಂದಿಸಿ..

 ಲೇಖನ: ಶಿವು.ಕೆ




Sunday, January 30, 2011

ಮಕ್ಕಳ ಚಿತ್ರಸಂತೆ



   ಒಂದು ವರ್ಷದಲ್ಲಿ ನಾನು ತಪ್ಪಿಸಕೊಳ್ಳಲೇಬಾರದೆಂದು ಪ್ಲಾನ್ ಮಾಡುವ ಹತ್ತು ಕಾರ್ಯಕ್ರಮಗಳ ಪಟ್ಟಿಮಾಡಿದರೆ ಮೊದಲ ಸ್ಥಾನ ಚಿತ್ರಸಂತೆಗೆ. ಎರಡನೇಯದು ಎರಡು ವರ್ಷಕ್ಕೊಮ್ಮೆ ನಡೆಯುವ "ಏರ್ ಷೋ"[ಮುಂದಿನ ತಿಂಗಳ 9 ರಿಂದ 13ರವರೆಗೆ ಬೆಂಗಳೂರಿನಲ್ಲಿ ನಡೆಯುತ್ತದೆ.] ನಂತರ ಫೋಟೊಗ್ರಫಿ ಪ್ರವಾಸಗಳು,.....ಹೀಗೆ ಮುಂದುವರಿಯುತ್ತವೆ.

          ನಿನ್ನೆ ಬೆಂಗಳೂರಿನಲ್ಲಿ ನಡೆದ ಚಿತ್ರಸಂತೆಯಲ್ಲಿ ನನ್ನದು ಕೆಲವು ಫೋಟೊಗಳನ್ನು ತರಕಾರಿ, ಸೊಪ್ಪುಗಳಂತೆ ಮಾರಾಟಕ್ಕೆ ಇಟ್ಟಿದ್ದೆ. ವ್ಯಾಪಾರದಲ್ಲಿ ಚೆನ್ನಾಗಿ ಲಾಭವೆ ಆಯ್ತು.  ಇನ್ನುಳಿದಂತೆ ಚಿತ್ರ ಕಲಾವಿದರೂ, ನನ್ನಂಥ ಛಾಯಾ ಕಲಾವಿದರಲ್ಲಾ ಹೀಗೆ ಚೌಕಾಸಿ ವ್ಯಾಪರದಲ್ಲಿ ತೊಡಗಿ ಕೊನೆಗೆ ನೀಟ್ ಆಗಿ ಪೇಪರ್ ಅಥವ ಕವರಿನಲ್ಲಿ ಕವರಿನಲ್ಲಿ ಹಾಕಿ ಪ್ಯಾಕ್ ಮಾಡಿ ಕೊಡುತ್ತಿದ್ದರು.  ಅಲ್ಲದೆ ಕೊಳ್ಳಲು ಬಂದ ಕಲಾಸ್ತಕರು,   ಬರೀ ಕಲೆಯನ್ನೇ ನೋಡಿ ಖುಷಿಪಡಲು ಬಂದ ಕಲಾಸಕ್ತರು, ಇವರನ್ನೆಲ್ಲಾ ಸೆರೆಯಿಡಿಯಲು, ಹಿಡಿದು ಬರೆಯಲು ಬಂದಿದ್ದ ಟಿವಿ ಕ್ಯಾಮೆರಾಮ್ಯಾನುಗಳು, ಪತ್ರಕರ್ತರು, [ಸಣ್ಣಕ್ಯಾಮೆರಾದಲ್ಲಿ ನನ್ನ ಚಿತ್ರಗಳ ಫೋಟೊ ತೆಗೆಯತ್ತಿದ್ದ ಪ್ರಜಾವಾಣಿ ಪತ್ರಕರ್ತರಿಗೆ "ಸಾರ್ ಫೋಟೊ ತೆಗೆಯಬೇಡಿ ಸರ್ ಅದರ ಉಪಯೋಗವಿಲ್ಲ" ಅಂದೆ ಅದಕ್ಕೆ ಅವರು ನಮ್ಮ ಜರ್ನಲಿಸ್ಟ್ ಬುದ್ದಿ ಸರ್ ಎಲ್ಲಾ ಫೋಟೊ ತೆಗೆಯಬೇಕೆನಿಸುತ್ತದೆ ಅಷ್ಟೇ": ಅಂದರು,  ಅದಕ್ಯಾಕೆ ಸರ್ ಹೀಗೆ ಫೋಟೊ ತೆಗೀತೀರಿ, ನಿಮ್ಮ ಪ್ರಜಾವಾಣಿಅಫೀಸಿನಲ್ಲೇ ಯಾರನ್ನಾದರೂ ಕೇಳಿದರೆ ನನ್ನ ಚಿತ್ರಗಳು ಹೈ ರೆಸಲ್ಯೂಷನಲ್ಲಿ ಸಿಗುತ್ತದೆ" ಅಂದೆ] ಜೊತೆಗೆ ಸುತ್ತಾಡಲು ಬಂದ ಸುಂದರ ಹುಡುಗಿಯರು, ಅವರನ್ನು ನೋಡಲು ಬಂದ ಹುಡುಗರು, ಅವರ ಜೇಬು ಕಾಲಿಮಾಡಲೆಂದೇ ಸಿದ್ದರಾಗಿದ್ದ ಐಸ್‍ಕ್ರೀಮ್, ಟೀ, ಕಡ್ಲೇಬೀಜ, ಚುರುಮುರಿ, ಕೈಗಾಡಿ ಹೋಟಲ್ಲುಗಳು[ಇವರೆಲ್ಲಾ ನೆನ್ನೆ ತಿನ್ನುವ ಪದಾರ್ಥಗಳನ್ನು ನ್ನು ದುಬಾರಿಬೆಲೆಗೆ ಮಾರಿದರು] , ಹಿತವಾದ ಬಿಸಿಲು ಇದೆಲ್ಲವೂ ಪ್ರತಿವರ್ಷವೂ ಇರುತ್ತದೆಯಾದ್ದರಿಂದ ಇವು ಯಾವುದು ನನಗೆ ವಿಶೇಷವೆನಿಸಲಿಲ್ಲ.  ಇಂಥ ಸಮಯದಲ್ಲಿ ನನ್ನ ಕಣ್ಣಿಗೆ ವಿಶೇಷವೆನಿಸಿದ್ದೇ ಪುಟ್ಟ ಮಕ್ಕಳು.

           ಚಿತ್ರಸಂತೆಯಲ್ಲಿ ಕಲಾವಿದರಿಗೆ ತಮ್ಮ ಕಲಾಕೃತಿಯನ್ನು ಉತ್ತಮಬೆಲೆಗೆ ಮಾರಬೇಕೆನ್ನುವ ಆಸೆಯಿದ್ದರೆ,. ಅದನ್ನು ಕೊಳ್ಳುವವರಿಗೆ ಅತೀ ಕಡಿಮೆಬೆಲೆಯಲ್ಲಿ ಉತ್ತಮ ಕಲಾಕೃತಿಯನ್ನು ಕೊಳ್ಳುವ ತವಕ, ಉಳಿದಂತೆ ಪತ್ರಕರ್ತರು, ಕ್ಯಾಮರಾಮೆನ್ನುಗಳು, ಹುಡುಗ-ಹುಡುಗಿಯರು, ದಂಪತಿಗಳು, ವ್ಯಾಪರಿಗಳು ಇವರೆಲ್ಲಾರಿಗೂ ಒಂದಲ್ಲ ಒಂದು ಉದ್ದೇಶ ಚಿತ್ರಸಂತೆಯಲ್ಲಿ ಇದ್ದೇ ಇರುತ್ತದೆ. ಆದ್ರೆ ಅವರ ಸೊಂಟದ ಮೇಲೆ, ಹೆಗಲಮೇಲೆ, ಹೊಟ್ಟೆಯ ಮೇಲೆ[ಬಸುರಿ ಹೊಟ್ಟೆಯಲ್ಲ ಗಂಡಸರ ಹೊಟ್ಟೆಯ ಮೇಲೆ ನೇತಾಡುವ ಮಕ್ಕಳು. ಮತ್ತೆ ಐದಾರು ಬಸುರಿ ಹೆಂಗಸರು ಬಂದಿದ್ದರು ಅನ್ನಿ] ಇದ್ದ ಮಕ್ಕಳಿಗೆಲ್ಲಾ ಏನು ಉದ್ದೇಶವಿರಬಹುದು? ಇಂಥ ಒಂದು ಪ್ರಶ್ನೆ ಆ ಕ್ಷಣದಲ್ಲಿ ಮೂಡಿತಲ್ಲ!  ಅದನ್ನು ತಿಳಿಯುವ ಉದ್ದೇಶವಾಗಿ ಅವರ ಫೋಟೊ ತೆಗೆಯಲು ಪ್ರಯತ್ನಿಸಿದೆ.  ಕೆಲವೊಂದರ ಉದ್ದೇಶವನ್ನು ನಾನು ನನಗನ್ನಿಸಿದಂತೆ ಕೊಟ್ಟಿದ್ದೇನೆ.  ನೀವು ಆ ಮಕ್ಕಳ ಚಿತ್ರಗಳನ್ನು ನೋಡಿದಾಗ ಅದನ್ನು ಮೀರಿದ ಬೇರೆ ಭಾವನೆಗಳು ನಿಮಗೆ ಬರಬಹುದು ಅಂದುಕೊಂಡಿದ್ದೇನೆ. ಈಗ ಚಿತ್ರಸಂತೆಯಲ್ಲಿನ ಮಕ್ಕಳ ಚಿತ್ರಗಳನ್ನು ನೋಡೋಣ ಬನ್ನಿ.

ನಾನು ಮನೆಯಲ್ಲೇ ಚೆನ್ನಾಗಿ ನಿದ್ದೆ ಮಾಡುತ್ತಿದ್ದೆ, ಇದರ ಮದ್ಯೆ ನಮ್ಮಪ್ಪ ಮೊಬೈಲ್ ಬೇರೆ


ಇಲ್ಲಿರುವ ಕಲಾವಿದರಿಗೆಲ್ಲಾ ನನ್ನ ಕಡೆಯಿಂದ ಹ್ಯಾಟ್ಸಪ್!


                  ಯಾರೋ ನನ್ ಫೋಟೊ ತೆಗಿತಾವರಲ್ಲ!


ವಾಹ್! ಈ ಚಿತ್ರ ಸೂಪರ್!

       
                                     

  ಯಾರದು!



ಅಯ್ಯೋ, ನಮ್ಮ ಅಪ್ಪ ಅಮ್ಮನಿಗೆ ಬುದ್ದಿಯಿಲ್ಲ, ಇಲ್ಲೆಲ್ಲೋ ಕರೆದುಕೊಂಡು ಬಂದಿದ್ದಾರೆ, ಮನೆಯಲ್ಲಿದ್ದಾರೆ ಮೊಬೈಲಿನಲ್ಲಿ ಗೇಮ್ ಅಥ್ವ  ಕಾರ್ಟೂನ್ ಚಾನಲ್ ನೋಡಬಹುದಿತ್ತು! 
                             

 ಚಿತ್ರಪಟ ತಗೊಳ್ಳಕ್ಕೆ ಬಂದ ನಮ್ಮಪ್ಪನಿಗೆ ಅಲ್ಲಿರುವ ಐಸ್ ಕ್ರೀಮ್ ಕೊಡಿಸಬೇಕು ಅನ್ನಿಸುತ್ತಿಲ್ಲವಲ್ಲ!
                 

ಆಕಾಶದಲ್ಲಿ ಹಾರಾಡುತ್ತಿರುವ ಏರೋಪ್ಲೇನಿನಲ್ಲಿ ನಾನು ಹೋಗೋದು ಯಾವಾಗ?
        

 ನೀನು ಎಲ್ಲಿಗೆ ಕರೆದುಕೊಂಡು ಹೋದ್ರೂ ನಾನು ನಿದ್ರೆ ಮಾಡೋದು ಹೀಗೇನೇ
           
 ನಾನು ಚೆನ್ನಾಗಿ ಕಾಣುತ್ತಿದ್ದಿನಲ್ವಾ? ಬೇಗ ಫೋಟೊ ತೆಗಿ
   
ಕುರಿ ಓಡಿಸಿಕೊಂಡು ಹೋಗುವ ಈ ಚಿತ್ರ ಸಕ್ಕತ್ ಆಗಿದೆ!


ಈ ರೀತಿ ಮೇಲೆ ಕುಳಿತುಕೊಂಡು ಲಾಲಿಪಪ್ ತಿನ್ನುತ್ತಿದ್ದರೇ......


ನಾನು ಬೀಳದಂತೆ ಗಟ್ಟಿಯಾಗಿ ಅಪ್ಪನ ತಲೆಯನ್ನು ಹೀಗೆ ಹಿಡಿದುಕೊಳ್ಳಬೇಕು 

ನನ್ನ ತರ ಇರೋ ಆ ಪಾಪು ಫೋಟೊ ಎಷ್ಟು ಚೆನ್ನಾಗಿದೆ!


       ಕೊನೆಯಲ್ಲಿ ಮತ್ತೊಂದು ವಿಚಾರ ನನ್ನ ಹಾಸನದ ಗೆಳೆಯನಾದ ಚಿತ್ರಕಲಾವಿಧ ಆರುಣ್ ಒಂದು ವರ್ಷದ ಹಿಂದೆ ನಮ್ಮ  ಮನೆಗೆ ಬಂದು ನಾನು ತೆಗೆದ ಅನೇಕ ಹಳ್ಳಿ ಜೀವನದ ಚಿತ್ರಗಳನ್ನು ತೆಗೆದುಕೊಂಡು ಹೋಗಿದ್ದ. ಅದರಲ್ಲಿ ಈ ಬಾರಿ ಚಿತ್ರಿಸಿದ್ದ ಮೇಕೆಗಳನ್ನು ಓಡಿಸಿಕೊಂಡು  ಬರುತ್ತಿರುವ ಹುಡುಗನ ಚಿತ್ರ "ಗೋಧೂಳಿ"  ಮುವತ್ತೊಂದು ಸಾವಿರಕ್ಕೆ ಮಾರಾಟವಾಗಿದ್ದು ನಿಜಕ್ಕೂ ಖುಷಿಯ ವಿಚಾರ ಆತನಿಗೆ ಅಭಿನಂದನೆಗಳು.

              ಹಾಸನದ ಗೆಳೆಯ ಮತ್ತು ಚಿತ್ರಕಲೆಗಾರ ಬಿಡಿಸಿದ "ಗೋಧೂಳಿ ಚಿತ್ರ"
                

     ಮುಂದಿನ ಲೇಖನದಲ್ಲಿ ಚಿತ್ರಸಂತೆ ವಿಭಿನ್ನ ಕ್ಯಾಮೆರಾಗಳ ಆಟಗಳನ್ನು ಬ್ಲಾಗಿನಲ್ಲಿ ಹಾಕುತ್ತೇನೆ.
 

      ಚಿತ್ರಗಳು ಮತ್ತು ಲೇಖನ
        ಶಿವು.ಕೆ




Sunday, January 23, 2011

32ನೇರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯ ಪಲಿತಾಂಶ


      ಬೆಂಗಳೂರಿನ  ಯೂತ್ ಫೋಟೊಗ್ರಫಿ ಸೊಸೈಟಿಯ 32ನೇರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯು ನಡೆದು ಅದರ ಪಲಿತಾಂಶ ಹೊರಬಂದಿದೆ. ಪ್ರಶಸ್ಥಿ ವಿಜೇತ ಚಿತ್ರಗಳು ಹೀಗಿವೆ.


ಕಪ್ಪು ಬಿಳುಪು ವಿಭಾಗದಲ್ಲಿ 1ನೇ ಬಹುಮಾನ ಪಡೆದ  ಚಿತ್ರ
ಛಾಯಾಗ್ರಾಹಕ: ಅನೂಪ್ ಪಾಲ್ MFIAP, ARPS, ಕೊಲ್ಕಟ
ಶೀರ್ಷಿಕೆ : QUEEN


 ಕಪ್ಪುಬಿಳುಪು ವಿಭಾಗದಲ್ಲಿ 2ನೇ ಬಹುಮಾನ ಪಡೆದ ಚಿತ್ರ
ಛಾಯಾಗ್ರಾಹಕ ಪ್ರಾಣೇಶ್ ಕುಲಕರ್ಣಿ, ಬೆಂಗಳೂರು.
ಶೀರ್ಷಿಕೆ: UNTITLED


ಕಪ್ಪು ಬಿಳುಪು ವಿಭಾಗದಲ್ಲಿ 3ನೇ ಬಹುಮಾನ ಪಡೆದ ಚಿತ್ರ 
ಛಾಯಾಗ್ರಾಹಕ ವಿಕೆಅರ್‍ಎಸ್ ಶರ್ಮ ಅಮಲಪುರಂ
ಶ್ರೀರ್ಷಿಕೆ: NET THROWING


ಕಪ್ಪುಬಿಳುಪು ವಿಭಾಗದಲ್ಲಿ ಪ್ರಶಂಸ ಪತ್ರ ಪಡೆದ ಚಿತ್ರ
ಛಾಯಾಗ್ರಾಹಕ ವೀರಭದ್ರರಾವ್, ಕಾಕಿನಾಡ ಆಂದ್ರ
ಶೀರ್ಷಿಕೆ : RURAL LIFE



ಕಲರ್ ಪ್ರಿಂಟ್ ವಿಭಾಗದಲ್ಲಿ 1ನೇ ಬಹುಮಾನ ಪಡೆದ ಚಿತ್ರ
ಛಾಯಾಗ್ರಾಹಕ: ಲೋಕೇಶ್.ಎಸ್ ARPS, ಬೆಂಗಳೂರು. 
ಶೀರ್ಷಿಕೆ : ONE MORNING




ಕಲರ್ ಪ್ರಿಂಟ್ ವಿಭಾಗದಲ್ಲಿ 2ನೇ ಬಹುಮಾನ ಪಡೆದ ಚಿತ್ರ
ಛಾಯಾಗ್ರಾಹಕ: ಶಿವು ಕೆ ARPS, AFIAP  ಬೆಂಗಳೂರು
ಶೀರ್ಷಿಕೆ :WINNING  SPIRIT



ಕಲರ್ ಪ್ರಿಂಟ್ ವಿಭಾಗದಲ್ಲಿ 3ನೇ ಬಹುಮಾನ ಪಡೆದ ಚಿತ್ರ
ಛಾಯಾಗ್ರಾಹಕ: ಮುಸಿನಿ ವೆಂಕಟೇಶ್ವರ ರಾವ್ AFIAP  ರಾಜಮಂಡ್ರಿ
ಶೀರ್ಷಿಕೆ  : SWEEP




ಕಲರ್ ಪ್ರಿಂಟ್ ವಿಭಾಗದಲ್ಲಿ "ಬೆಸ್ಟ್ ಲ್ಯಾಂಡ್ ಸ್ಕೇಪ್" ಪ್ರಶಸ್ತಿ ಪಡೆದ ಚಿತ್ರ 
ಛಾಯಾಗ್ರಾಹಕ :ಮಹೇಶ್ ಎಂ ಶಿವಮೊಗ್ಗ
ಶೀರ್ಷಿಕೆ :GAYSER BASIN




ಕಲರ್ ಪ್ರಿಂಟ್ ವಿಭಾಗದಲ್ಲಿ ಪ್ರಶಂಸಪತ್ರ ಪಡೆದ ಚಿತ್ರ 
ಛಾಯಾಗ್ರಾಹಕ ವಿಕೆಅರ್‍ಎಸ್ ಶರ್ಮ ಅಮಲಪುರಂ
                                                                        ಶೀರ್ಷಿಕೆ: DUSK


ಫೋಟೋ ಟ್ರಾವಲ್ ವಿಭಾಗದಲ್ಲಿ 1ನೇ ಬಹುಮಾನ ಪಡೆದ ಚಿತ್ರ 
ಛಾಯಾಗ್ರಾಹಕ: ಆಸ್ಟ್ರೋ ಮೋಹನ್, ಉಡುಪಿ
ಶೀರ್ಷಿಕೆ : OH GOD SAW SEED OF PEACE





ಫೋಟೋ ಟ್ರಾವಲ್ ವಿಭಾಗದಲ್ಲಿ 2ನೇ ಬಹುಮಾನ ಪಡೆದ ಚಿತ್ರ
ಛಾಯಾಗ್ರಾಹಕ: ಎನ್ ಪಿ ಸತ್ಸಂಗಿ, ಚನ್ನೈ
ಶೀರ್ಷಿಕೆ :ESPALANADO


  ಫೋಟೋ ಟ್ರಾವಲ್ ವಿಭಾಗದಲ್ಲಿ ೩ನೇ ಬಹುಮಾನ ಪಡೆದ ಚಿತ್ರ. 
ಛಾಯಾಗ್ರಾಹಕ: ಮನೋಜ್ ರಾಯ್,  ಬೆಂಗಳೂರು,
ಶೀರ್ಷಿಕೆ : RUINED FORT OF CHITHRADURGA


 ಮುಂದಿನ ಭಾಗದಲ್ಲಿ NATURE PRINTS, CREATIVE DIGITAL PRINTS, NATURE DIGITAL IMAGES  ಬಹುಮಾನ ವಿಜೇತ ಚಿತ್ರಗಳನ್ನು ಹಾಕುತ್ತೇನೆ.

ಶಿವು.ಕೆ



Thursday, December 2, 2010

ಬೇಸರಗೊಂಡು ಜಿಗುಪ್ಸೆಯಿಂದ ಕಪ್ಪುಬಣ್ಣಕ್ಕೆ ತಿರುಗಿ.....

         

             ಆಗಷ್ಟೇ ಕಾಫಿ ಪುರಾಣದ ಲೇಖನವನ್ನು ಬರೆಯಲು ಕುಳಿತಿದ್ದೆ.  ಐದಾರು ಸಾಲು ಬರೆಯುವಷ್ಟರಲ್ಲಿ ಅದ್ಯಾಕೋ ತಟ್ಟನೆ ನಿಂತು ಹೋಯಿತು. ಏನೇ ಪ್ರಯತ್ನಿಸಿದರೂ ಸರಾಗವಾಗಿ ಸಾಗುತ್ತಿಲ್ಲ. ಅಂತ ಸಮಯದಲ್ಲಿ ಕಂಪ್ಯೂಟರ್ ಬಿಟ್ಟು ಹೊರಗೆ ಬಂದು ಐದು ನಿಮಷ ರಸ್ತೆಯನ್ನು ನೋಡುತ್ತಾ ನಿಂತುಬಿಡುತ್ತೇನೆ. ಸ್ವಲ್ಪ ರಿಲ್ಯಾಕ್ಸ್ ಸಿಕ್ಕಿತು ಅನ್ನಿಸಿದಾಗ ಮತ್ತೆ ಒಳಗೆ ಬಂದು ಕುಳಿತು ಬರೆಯಲು ಪ್ರಾರಂಭಿಸಿದರೆ ಎಂದಿನಂತೆ ಸಹಜವಾಗಿ ಬರವಣಿಗೆಯ ಅಕ್ಷರಗಳು ನೀರಿನಂತೆ ಹರಿಯಲಾರಂಭಿಸುತ್ತವೆ.  ಇದು ನಾನು ಕಂಡುಕೊಂಡ ಒಂದು ಸಣ್ಣ ಬರಹದ ಯುರೇಕ.  ಆದ್ರೆ ಅವತ್ತು ಅದ್ಯಾಕೋ ಈ ವಿಧಾನದಿಂದಲೂ ಬರಹ ವೇಗ ಪಡೆಯಲಿಲ್ಲ. ಸರಿ ಟೀ ಅಥವ ಕಾಫಿ ಕುಡಿದರೆ ಎಲ್ಲಾ ಸರಿಹೋಗುತ್ತದೆ ಎಂದುಕೊಂಡು ಅಡುಗೆ ಮನೆ ಕಡೆ ನೋಡಿದ್ರೆ ಹೇಮಾಶ್ರೀ ಇಲ್ಲ. ಅವಳು ಅಕ್ಕನ ಮನೆಗೆ ತುಮಕೂರಿಗೆ ಹೋಗಿದ್ದಾಳಲ್ಲ...ಅದು ಮರೆತೇಹೋಗಿತ್ತು. ಸರಿ ನಾನೇ ಹೋಗಿ ಮಾಡಿಕೊಳ್ಳೋಣವೆಂದುಕೊಂಡು ಅಡುಗೆಮನೆಗೆ ಹೋದೆ.   ನಮ್ಮ ಮನೆಯ ಕಾಫಿ ನನಗಿಷ್ಟವಾದರೂ ನನಗೆ ಹೇಮಾಶ್ರೀಯಷ್ಟು ಚೆನ್ನಾಗಿ ಮಾಡಲು ಬರುವುದಿಲ್ಲ.  ಬಿಸಿನೀರು ಕಾಯಿಸಿ ಅದಕ್ಕೆ ಸರಿಯಾದ ಅಳತೆಯ ಕಾಫಿಪುಡಿ ಹಾಕಿ ಫಿಲ್ಟರ್ ತೆಗೆದು ಸರಿಯಾದ ಪ್ರಮಾಣದಲ್ಲಿ ಸಕ್ಕರೆ ಮಿಶ್ರಿತ ಹಾಲನ್ನು ಹಾಕಿ ಹಬೆಯಾಡುವ ಕಾಫಿ ಮಾಡುವುದೇನಿದ್ದರೂ ಅವಳಿಗೆ ಸರಿ. ನನಗೆ ಅಷ್ಟೆಲ್ಲಾ ಮಾಡಿಕೊಳ್ಳುವ ತಾಳ್ಮೆಯೂ ಇರಲಿಲ್ಲವಾದ್ದರಿಂದ ಟೀ ಮಾಡಿಕೊಂಡು ಕುಡಿಯೋದು ಒಳ್ಳೆಯದು ಅಂದುಕೊಂಡೆ. ಮತ್ತೊಂದು ವಿಚಾರವೆಂದರೆ ನಾನು ತುಂಬಾ ಚೆನ್ನಾಗಿ ಟೀ ಮಾಡುತ್ತೇನೆ. ನನಗೇ ಬೇಕಾದ ಹಾಗೆ ಎರಡು ಅಥವ ಮೂರು ವಿಧಾನದ ಟೀ ಪುಡಿಗಳನ್ನು ತಂದಿಟ್ಟುಕೊಂಡು ಹೇಮಾಶ್ರೀ ಇಲ್ಲದಾಗ ನನಗೆ ಬೇಕಾದ ಹಾಗೆ ಸೊಗಸಾಗಿ ಅದ್ಬುತ ರುಚಿಯುಳ್ಳ ಟೀ ಮಾಡಿಕೊಂಡು ಕುಡಿಯುತ್ತಾ ಅನಂದಿಸುತ್ತೇನೆ. ಈ ವಿಚಾರದಲ್ಲಿ ನನ್ನನ್ನು ಹೊಗಳಿಕೊಳ್ಳುತ್ತಿಲ್ಲ. ಏಕೆಂದರೆ ನನ್ನ ಮನೆಗೆ ಅನೇಕ ಫೋಟೊಗ್ರಫಿ ಗೆಳೆಯರು ಮತ್ತು ಬ್ಲಾಗ್ ಗೆಳೆಯರು ಬಂದಾಗ ನಾನು ಮಾಡಿದ ಟೀ ರುಚಿಯನ್ನು ನೋಡಿರುವುದರಿಂದ ನೀವು ಅವರನ್ನು ಕೇಳಿ ನನಗೆ ಸರ್ಟಿಫಿಕೆಟ್ ಕೊಡಬಹುದು.


              ಗ್ಯಾಸ್ ಸ್ಟವ್ ಹತ್ತಿಸಿ ಹಾಲಿನ ಪಾತ್ರೆಯನ್ನು ಇಟ್ಟು ನನಗಿಷ್ಟವಾದ ಆಯುರ್ವೇದದ ಅನೇಕ ದ್ರವ್ಯಗಳನ್ನು ಸೇರಿಸಿ ತಯಾರಿಸಿದ ರೆಡ್ ಲೇಬಲ್ಲಿನ ನೇಚರ್ ಕೇರ್ ಟೀ ಪುಡಿಯನ್ನು ಸ್ವಲ್ಪ ಗಟ್ಟಿಹಾಲು, ನನಗೆ ಬೇಕಷ್ಟು ಸಕ್ಕರೆಯನ್ನು ಹಾಕಿ ಕುದಿಯಲು ಬಿಟ್ಟು ಕಂಪ್ಯೂಟರಿನ ಮುಂದೆ ಬಂದು ಕುಳಿತೆ. ಅದ್ಯಾವ ಮಾಯದಲ್ಲಿ ಕಾಫಿಯ ಅರೋಮ ತಲೆಗೇರಿತೋ ಗೊತ್ತಿಲ್ಲ. ಲೇಖನ ಹರಿಯುವ ನದಿಯಂತೆ ಅಡೆತಡೆಯಿಲ್ಲದೆ ಸಾಗಿ ಸರಿಸುಮಾರು ಒಂದು ತಾಸು ಅಲುಗಾಡದೇ ಬರೆದುಮುಗಿಸಿದ್ದೆ.


          ಒಂದು ಲೇಖನವನ್ನು ಬರೆದು ಮುಗಿಸಿ ಒಮ್ಮೆ ಎರಡು ಕೈಗಳನ್ನೆತ್ತಿ ಮೈಯನ್ನೆಲ್ಲಾ ಅತ್ತ ಇತ್ತ ಅಲುಗಾಡಿಸಿ ಮೈಮುರಿದು ರೆಲ್ಯಾಕ್ಸ್ ಆಗುವುದಿದೆಯಲ್ಲಾ ಅದು ಮತ್ತು ಮುಗಿಸಿದಾಗಿನ ಅನುಭವದಲ್ಲಿ ತೇಲಿಹೋಗುವುದಿದೆಯಲ್ಲಾ ಅದನ್ನು ಅನುಭವಿಸಿಯೇ ತೀರಬೇಕು. ಇಲ್ಲೂ ಹಾಗೆ ಮಾಡಿ ಒಂದು ಕ್ಷಣ ಹಾಗೆ ಕುಳಿತಲ್ಲಿಯೇ ಕಣ್ಣು ಮುಚ್ಚಿದೆನಲ್ಲಾ! ಎಷ್ಟು ಹೊತ್ತು ಹಾಗೆ ಇದ್ದೆನೋ ಗೊತ್ತಿಲ್ಲ ಎಚ್ಚರವಾದಾಗ ಯಾವುದೋ ಒಂದು ವಾಸನೆ ಮೂಗಿಗೆ ನಿದಾನವಾಗಿ ತಾಕುತ್ತಿದೆ! ಕಾಫಿಯ ಲೇಖನದಿಂದಾಗಿ ಕಾಫಿಯ ನೊರೆನೊರೆ ಮತ್ತು ಅದರ ಸ್ವಾದವನ್ನು ಮಾನಸಿಕವಾಗಿ ಅನುಭವಿಸುತ್ತಿದ್ದವನಿಗೆ ಇದ್ಯಾವುದೋ ಹೊಸ ವಾಸನೆ ಕಾಫಿಯ ಸುವಾಸನೆಯ ನಡುವೆ ಜಾಗಮಾಡಿಕೊಂಡು ಬಂದು ಮೂಗಿಗೆ ತೊಂದರೆ ಕೊಡುತ್ತಿದ್ದೆಯಲ್ಲಾ!  ಒಂಥರ ಸುಟ್ಟ ಕಮಟು ವಾಸನೆಯಂತಿದೆ! ಏನಿರಬಹುದು ಯೋಚಿಸಿದೆ. ಗೊತ್ತಾಗಲಿಲ್ಲ. ಸುಟ್ಟವಾಸನೆಯೆಂದರೆ ನಮ್ಮ ಓಣಿಯಲ್ಲಿ ಯಾರೋ ಸ್ಟವ್ ಮೇಲೆ ಏನನ್ನೋ ಬೇಯಿಸಲು ಇಟ್ಟು ಮರೆತಿರುವುದರಿಂದ ಈ ವಾಸನೆ ಬರುತ್ತಿರಬಹುದು ಇರಲಿಬಿಡಿ ನಮಗ್ಯಾಕೆ ಪಕ್ಕದ ಮನೆಯ ಚಿಂತೆ ಎಂದುಕೊಂಡು ಈಗ ಒಂದು ಸೊಗಸಾದ ಟೀ ಮಾಡಿಕೊಂಡು ಕುಡಿಯೋಣ ಎಂದು ಎದ್ದೆ. 


              ಓಹ್! ಟೀ ಮತ್ತೆ ಮಾಡುವುದೇನು ಬಂತು! ಆಗಲೇ ಟೀ ಮಾಡಲು ಸ್ಟವ್ ಮೇಲೆ ಇಟ್ಟಿದ್ದ ಪಾತ್ರೆ ನೆನಪಾಯಿತು. ಸಮಯ ನೋಡಿಕೊಂಡೆ. ಸರಿಸುಮಾರು ಒಂದುವರೆಗಂಟೆ ದಾಟಿಹೋಗಿದೆ! ತಕ್ಷಣ ಎದ್ದೆನೋ ಬಿದ್ದೆನೋ ಎನ್ನುವಂತೆ ಆಡುಗೆ ಮನೆಗೆ ನುಗ್ಗಿದೆ. ಏನು ಆಗಬಾರದಿತ್ತೋ ಅದು ಆಗಿಹೋಗಿತ್ತು. ಅರ್ಧ ಸ್ಪೂನ್ ಟೀಪುಡಿ ಮತ್ತು ಒಂದು ಸ್ಪೂನ್ ಸಕ್ಕರೆ ಬೆರೆತ ನೂರೈವತ್ತು ಎಂಎಲ್ ಹಾಲಿದ್ದ ಆ ಪುಟ್ಟ ಟೀ ಮಾಡುವ ಪಾತ್ರೆ ಒಂದುವರೆಗಂಟೆಗೂ ಹೆಚ್ಚುಕಾಲ  ಹೈ ವಾಲ್ಯೂಮ್ ಸಿಮ್‍ನಲ್ಲಿ ಬೆಂದು ಬೇಸತ್ತು ಸಿಟ್ಟಿನಿಂದ ಅನೇಕ ಬಾರಿ ಕುದ್ದು ಕೊನೆಗೆ ಅದರ ಸಿಟ್ಟನ್ನು ಗಮನಿಸುವವರು ಯಾರು ಇಲ್ಲದಿರುವಾಗ ಬೇಸರಗೊಂಡು ಜಿಗುಪ್ಸೆಯಿಂದ ಕಪ್ಪುಬಣ್ಣಕ್ಕೆ ತಿರುಗಿ ತಳಸೇರುವುದರ ಜೊತೆಗೆ ಪಾತ್ರೆಯ ಒಳಸುತ್ತೆಲ್ಲಾ ಕಾಂಕ್ರೀಟಿನಂತೆ ಮೆತ್ತಿಕೊಂಡುಬಿಟ್ಟಿದೆ!  ಟೀ ಸುಟ್ಟು ಕರಕಲಾದ ವಾಸನೆಯಂತೂ ಇಡೀ ಮನೆಯನ್ನು ಅವರಿಸಿಬಿಟ್ಟಿದೆ! ಅಯ್ಯೋ ಎಂಥ ಪ್ರಮಾದವಾಯಿತು!  ಏನು ಮಾಡುವುದು?  ಆಗ ತಕ್ಷಣ ಹೊಳೆದ ಉಪಾಯ ಪಾತ್ರೆಗೆ ನೀರು ಹಾಕುವುದು. ಹಾಕಿದೆ. ಇದರಿಂದಾಗಿ ಕಮಟು ಮತ್ತಷ್ಟು ಹೆಚ್ಚಾಗಿ ಮನೆಯಲ್ಲಾ ಮತ್ತಷ್ಟು ಆವರಿಸಿತೋ ವಿನಃ ಕಡಿಮೆಯಾಗಲಿಲ್ಲ. ಆ ಪಾತ್ರೆಯನ್ನು ಮನೆಯ ಹಾಲಿಗೆ ತಂದಿಟ್ಟು ಫ್ಯಾನ್ ಜೋರಾಗಿ ಹಾಕಿದೆ.


            ಅರ್ಧ ಗಂಟೆ ನಾನು ಚೇರಿನಲ್ಲಿ ಕುಳಿತಿದ್ದರೂ ಆ ಪಾತ್ರೆ ನನ್ನ ಮುಂದೆ ಪ್ಯಾನ್ ಕೆಳಗಿದ್ದರೂ ವಾತವರಣದಲ್ಲಿ ಎಳ್ಳಷ್ಟು ಬದಲಾವಣೆಯಾಗಲಿಲ್ಲ. ಇರಲಿ ಸವಾಲುಗಳು ನಮಗೆ ಬರದೇ ಇನ್ಯಾರಿಗೆ ಬರಲು ಸಾಧ್ಯ! ಎನ್ನುವ ಒಂದು ಅದ್ಯಾತ್ಮದ ಮಾತನ್ನು ನೆನೆಸಿಕೊಂಡು ಮನೆಯಲ್ಲಿರುವ ಎಲ್ಲಾ ತರಹದ ಪುಡಿಗಳಿಂದ ಉಜ್ಜಿ ತಿಕ್ಕಿ ತೊಳದು ಒಪ್ಪ ಮಾಡಿ ಯಾವುದಾದರೂ ಒಂದು ಸೆಂಟ್  ಹೊಡೆದುಬಿಟ್ಟರೆ ಮುಗೀತು ಇದು ಖಂಡಿತ ನನ್ನ ಶ್ರೀಮತಿಗೆ ಗೊತ್ತಾಗುವುದಿಲ್ಲವೆಂದುಕೊಂಡು ಒಂದೊಂದೇ ಪುಡಿಯನ್ನು ಹಾಕುವುದು ಚೆನ್ನಾಗಿ ಉಜ್ಜುವುದು ತಿಕ್ಕುವುದು ಪ್ರಾರಂಭಿಸಿದೆ.  ಅದು ಯಾವ ಪರಿ ಮೆತ್ತಿಕೊಂಡಿತ್ತೆಂದರೆ ಗೋಡೆಗೆ ಹಾಕಿದ ಕಾಂಕ್ರೀಟನ್ನಾದರೂ ಕೆತ್ತಿ ಹಾಕಬಹುದಿತ್ತೇನೋ! ಆದ್ರೆ ಇದು ಮಾತ್ರ ಅದಕ್ಕಿಂತ ಗಟ್ಟಿಯಾಗಿ ಪಾತ್ರೆಯ ಒಳಭಾಗಕ್ಕೆ ಅಂಟಿಕೊಂಡುಬಿಟ್ಟಿತ್ತು.  ಕೊನೆಗೆ ಮನೆಯಲ್ಲಿದ್ದ ಚಾಕು ಕತ್ತರಿ ಇನ್ನಿತರ ಆಯುಧಗಳಿಂದ ಉಜ್ಜಿ ಕೆತ್ತಿ ಬಿಡಿಸಲೆತ್ನಿಸಿದೆ.  ಉಹೂಂ! ಜಪ್ಪಯ್ಯ ಅಂದರೂ ಬಿಡಲಿಲ್ಲ. ಸ್ವಲ್ಪ ಜೋರಾಗಿ ಶಕ್ತಿಪ್ರಯೋಗ ಮಾಡಿದಾಗ ಪಾತ್ರೆಯು ಅಲ್ಲಲ್ಲಿ ತಗ್ಗಾಯಿತೋ ವಿನಃ "ನಾನಿನ್ನ ಬಿಡಲಾರೆ" ಅಂತ ಗಟ್ಟಿಯಾಗಿ ಅಂಟಿಕೊಂಡುಬಿಟ್ಟಿತ್ತು. 


         ಇಷ್ಟೆಲ್ಲಾ ಅವಾಂತರದ ನಡುವೆ ಹೇಮಾಶ್ರೀ ನೆನಪಾದಳಲ್ಲ!  ಮೊದಲಿಂದಲೂ ಅವಳಿಗೆ ಅಡುಗೆ ಮನೆ ವಿಚಾರದಲ್ಲಿ ನನ್ನ ಬಗ್ಗೆ ಸಣ್ಣ ಗುಮಾನಿ ಇದ್ದೆ ಇತ್ತು.  ಅವಳು ಪ್ರತಿ ಭಾರಿ ಊರಿಗೆ ಹೋಗುವಾಗಲು ವಿಧವಿಧವಾದ ತರಾವರಿ ಎಚ್ಚರಿಕೆ ಕೊಟ್ಟೇ ಹೋಗುತ್ತಿದ್ದಳು.  ಅಷ್ಟು ಎಚ್ಚರಿಕೆ ಕೊಟ್ಟರೂ ನಾನು ಇಂಥ ಎಡವಟ್ಟು ಮಾಡಿಕೊಂಡುಬಿಟ್ಟೆನಲ್ಲಾ!  ಅವಳಿಗಂತೂ ಅಡುಗೆ ಮನೆಯ ಪಾತ್ರೆಗಳನ್ನು ಕಂಡರೇ ವಿಶೇಷ ಒಲವು ಮತ್ತು ಪ್ರೀತಿ. ತನಗಿಷ್ಟವಾದದ್ದನ್ನು ಹುಡುಕಿ ತಂದು ಇಟ್ಟುಕೊಳ್ಳುವವಳು. ಒಂದು ಚಮಚ ಕಣ್ಣಿಗೆ ಕಾಣಿಸದಿದ್ದರು ಅದು ಸಿಗುವವರೆಗೂ ಬಿಡುವುದಿಲ್ಲ ಹುಡುಕಾಟ ನಡೆಸುತ್ತಾಳೆ.  ಈಗ ಅವಳ ಕಣ್ಣಿಗೆ ಈ ತಳತಳ ಹೊಳೆಯುವ ಬೆಳ್ಳಿಯ ಹೊಳಪುಳ್ಳ  ಟೀಪಾತ್ರೆಗೆ ಬಂದಿರುವ ಸ್ಥಿತಿ ನೋಡಿದರೆ ನನ್ನ ಗತಿ ಏನು?  ಇದಕ್ಕೆ ಏನಾದರೂ ಪರಿಹಾರ ಕಂಡುಹಿಡಿಯಲೇ ಬೇಕು ಅಂತ ಯೋಚಿಸಿದಾಗ ಹೊಳೆದಿದ್ದು ಇದನ್ನು ಯಾರಿಗೂ ಕಾಣದಂತೆ ಹೊರಗೆ ಹೋಗಿ ಬಿಸಾಡಿಬರುವುದು ಅಂತ.  ಸರಿ ಅದರಂತೆ ಕಾರ್ಯೋನ್ಮುಖನಾದೆ.
       
     
        ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರಿನೊಳಗೆ ಅದನ್ನು ಹಾಕಿಕೊಂಡು ಮನೆಯಿಂದ ಹೊರಬಂದಾಗ ನಮ್ಮ ಓಣಿಯವರು ಯಾರು ಕಾಣಲ್ಲಿಲ್ಲ. ಮನೆಯಲ್ಲಿ ನಾನೊಬ್ಬನೇ ಇದ್ದಿದ್ದರಿಂದ ಮನೆಗೆ ಬೀಗಹಾಕಿಕೊಂಡು ಹೊರಬಂದು ನಿದಾನವಾಗಿ ಓಣಿಯಲ್ಲಿ ನಡೆಯತೊಡಗಿದೆ. ಕವರಿನೊಳಗಿದ್ದ ವಸ್ತುವಿನಿಂದ ಬರುತ್ತಿದ್ದ ವಾಸನೆ ಎಷ್ಟು ದಟ್ಟವಾಗಿತ್ತೆಂದರೆ ಖಂಡಿತ ಇಷ್ಟು ಹೊತ್ತಿಗೆ ನಮ್ಮ ಓಣಿಯ ಹೆಂಗಸರ ನಾಸಿಕಕ್ಕೆ ತಲುಪಿ ಯಾರಾದರೂ ಬಂದು ಕೇಳುತ್ತಾರೇನೋ ಅಂದುಕೊಂಡೆ. ಸದ್ಯ ಯಾರು ಬರಲಿಲ್ಲ ಮತ್ತು ಕೇಳಲಿಲ್ಲವಾದ್ದರಿಂದ ಬಚಾವಾದೆನೆಂದುಕೊಂಡು ಮುಖ್ಯ ಗೇಟ್ ದಾಟಿ ರಸ್ತೆ ತಲುಪಿ ಸುತ್ತಲೂ ನೋಡಿದೆ ಯಾರೂ ಇರಲಿಲ್ಲ.  ಇಲ್ಲೇ ರಸ್ತೆಯಲ್ಲೇ ಹಾಕಿಬಿಡಲಾ? ಏಕೆಂದರೆ ನಮ್ಮ ರಸ್ತೆಯ ಎಲ್ಲಾ ಮನೆಯವರು ಬೆಳಿಗ್ಗೆ ಏಳುಗಂಟೆಗೆ ಸರಿಯಾಗಿ ತಮ್ಮ ಮನೆಯ ಕಸದ ಡಬ್ಬ ಅಥವ ಪ್ಲಾಸ್ಟಿಕ್ ಪೇಪರಿನಲ್ಲಿ ತುಂಬಿದ ಕಸವನ್ನು ರಸ್ತೆಯ ಬದಿಯಲ್ಲಿ ಇಟ್ಟುಬಿಡುತ್ತಾರೆ. ನಿತ್ಯ ಬೆಳಿಗ್ಗೆ ಏಳುಗಂಟೆಗೆ ಬಿಬಿಎಂಪಿಯ ಕೆಲಸದವರು ಗಂಟೆ ಬಾರಿಸುತ್ತ ಅದನ್ನೆಲ್ಲಾ ಒಂದು ಆಟೋದಲ್ಲಿ ತುಂಬಿಸಿಕೊಂಡು ಹೋಗಿಬಿಡುತ್ತಾರೆ. ನಾನು ಮಾಡುತ್ತಿರುವುದು ಸರಿಯಾಗಿದೆ ಎನಿಸಿ ನಾವು ಟೂವೀಲರುಗಳನ್ನು ಪಾರ್ಕ್ ಮಾಡುವ ಜಾಗದಲ್ಲಿಯೇ ಕಸವೆನ್ನುವ ರೀತಿಯಲ್ಲಿ ನೆಲದ ಮೇಲೆ ಇಟ್ಟು ನಮ್ಮ ಗೇಟಿನ ಬಳಿಬಂದು ಸಹಜವಾಗಿ ರಸ್ತೆಯಲ್ಲಿ ಹೋಗಿಬರುವ ಜನರನ್ನು ನೋಡತೊಡಗಿದೆ.  ಸ್ವಲ್ಪ ಹೊತ್ತಿಗೆ ಒಂಥರ ದಿಗಿಲಾಗತೊಡಗಿತ್ತು. ಏಕೆಂದರೆ ಅದು ಕಸವಲ್ಲ. ಕಸವನ್ನು ಮೀರಿದ ಒಂದು ಪಾತ್ರೆಯಿದೆ. ಅದರೊಳಗೆ ಕಮಟು ವಾಸನೆ ಬರುತ್ತಿದೆ. ನಮ್ಮ ಓಣಿಯ ಅಥವ ರಸ್ತೆಯ ಹಿರಿಯರು ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗಿ ಇದರ ಕಡೆ ಗಮನ ಕೊಡದಿದ್ದರೂ ನಮ್ಮ ಓಣಿಯ ಮಕ್ಕಳು ಸಾಮಾನ್ಯರಲ್ಲ. ಇಂಥವನ್ನು ಕಂಡುಹಿಡಿಯುವುದೇ ಅವರ ಕೆಲಸ. ಹೊಸ ವಾಸನೆ ಬಂತೆಂದರೆ ಸಾಕು ಅದೆಲ್ಲಿಂದ ಬಂತು ಹೇಗೆ ಬಂತು? ಅದರ ಕಾರಣಕರ್ತರು ಯಾರೂ? ಹೀಗೆ ಸಣ್ಣ ಹುಡುಕಾಟ ನಡೆಸುತ್ತಾ, ತಮ್ಮೊಳಗೆ ಕುತೂಹಲವನ್ನು ಬೆಳೆಸಿಕೊಳ್ಳುತ್ತಾ...ಅದರ ಬಗ್ಗೆ ಗಾಸಿಪ್ ಹಬ್ಬಿಸಿ ದೊಡ್ಡವರ ಗಮನವನ್ನು ಸೆಳೆದು ಕೊನೆಗೆ ಸುಮ್ಮನಾಗಿಬಿಡುತ್ತಾರೆ.

            ಅಲ್ಲಿಗೆ ಮುಗಿಯುತು. ದೊಡ್ಡವರು ಇದು ಎಲ್ಲಿಂದ ಬಂತು ಯಾರಮನೆಯದು? ಇತ್ಯಾದಿ ತಲಾಸು ಮಾಡಲು ಶುರುಮಾಡಿದರೆ! ಅಯ್ಯಯ್ಯೋ ಬೇಡವೇ ಬೇಡ! ...........

          ಮುಂದೇನಾಯಿತು.. ಇನ್ನುಳಿದ ತರಲೇ ತಾಪತ್ರಯಗಳು ಮುಂದಿನ ಭಾಗದಲ್ಲಿ ಅಲ್ಲಿಯವರೆಗೆ ಸುಟ್ಟ ಟೀ ಕಮಟುವಾಸನೆಯನ್ನು ಆನಂದಿಸುತ್ತಿರಿ...


ಲೇಖನ : ಶಿವು.ಕೆ


Wednesday, November 10, 2010

ಗಾಜಿನ ಲೋಟದ ಅರ್ಧ ಕಾಫಿ

             ಸಂಜೆ ೪ ಗಂಟೆಗೆ ಒಳಗೆ ಹೋಗಿ ೬ಕ್ಕೆ ನವರಂಗ್ ತಿಯೇಟರಿನಿಂದ ಭಟ್ಟರ ಪಂಚರ್ ಅಂಗಡಿ ಅಲ್ಲಲ್ಲ ಪಂಚರಂಗಿ ಸಿನಿಮಾವನ್ನು ನಾನು ಮತ್ತು ಹೇಮಾಶ್ರೀ ನೋಡಿ ಹೊರಬಂದಾಗ ಸಣ್ಣಗೆ ಮಳೆ.  ಸಿನಿಮಾ ಹೇಗನ್ನಿಸಿತು ಅಂತ ನಾನವಳನ್ನು ಕೇಳಿದೆ.  "ಸಿನಿಮಾ ತೀರಾ ಚಿಕ್ಕದಾಯ್ತು ಕಣ್ರಿ, ಹಾಗ್ ಹೋಗಿ ಹೀಗ್ ಬಂದಂಗೆ ಆಯ್ತು" ಅಂದಳು.  ಅವಳ ಪ್ರಕಾರ್‍ಅ ಸಿನಿಮಾ ದೊಡ್ಡದಿರಬೇಕು. ಅವಳ ಚಿಕ್ಕಂದಿನಲ್ಲಿ ಅವರ ಮನೆಯಲ್ಲಿ ಯಾರಾದರೂ ಸಿನಿಮಾಗೆ ಕರೆದುಕೊಂಡು ಹೋಗುತ್ತಾರೆಂದರೆ ಬೆಳಿಗ್ಗೆ ಎಂಟುಗಂಟೆಯಿಂದಲೇ ಸಿನಿಮಾ ದ್ಯಾನ.  ಮಕ್ಕಳೆಲ್ಲಾ ಸೇರಿ ನಾವು ಸಿನಿಮಾ ಹೋಗುತ್ತಿದ್ದೇವೆಂದು ಒಂದು ರೌಂಡ್ ಡಂಗುರ ಬಾರಿಸಿ, ಮಧ್ಯಾಹ್ನವಾಗುತ್ತಿದ್ದಂತೆ ಊಟ ಮಾಡಿ ಒಂದಷ್ಟು ಚಕ್ಕಲಿ,ಕೋಡುಬಳೆ, ನುಪ್ಪಟ್ಟು, ಬಾಳೆಹಣ್ಣು ಬುತ್ತಿ ಮಾಡಿಕೊಂಡು ಹೊರಟರೆ ಸಿನಿಮಾನೋಡಿ ಸಂಜೆ ಮನೆಗೆ ಬರುತ್ತಾ ಹೋಟಲ್ಲಿನಲ್ಲಿ ಮಸಾಲೆ ದೋಸೆ, ಕಾಫಿ...ಹೀಗೆ ಎಲ್ಲಾ ಮುಗಿಯುವ ಹೊತ್ತಿಗೆ ಕತ್ತಲಾಗಿರುತ್ತಿತ್ತು. ಅದು ಕಣ್ರಿ ಸಿನಿಮಾ ನೋಡಾಟ ಎಂದು ಆಗಾಗ ಹೇಳುತ್ತಿರುತ್ತಾಳೆ.  ಅವಳ ಮಾತು ಕೇಳಿ ನನಗೂ ಬಾಲ್ಯದ ನೆನಪಾಯಿತಾದರೂ ಬಾ ಒಂದು ಒಳ್ಳೇ ಕಾಫಿ ಕೊಡಿಸುತ್ತೇನೆ ಅಂತ ಪಕ್ಕದಲ್ಲೇ ಹೊಸದಾಗಿ ತೆರೆದುಕೊಂಡಿದ್ದ "ಹಟ್ಟಿ ಕಾಫಿ"ಗೆ ಕರೆದುಕೊಂಡು ಹೋದೆ. ಇತ್ತೀಚೆಗೆ ಯಾವುದೇ ಟ್ರೆಂಡ್ ಶುರುವಾದರೂ ಅದು ರಿವರ್ಸ್ ಆರ್ಡರಿನಲ್ಲಿ ಬಂದಂತೆ ನನಗನ್ನಿಸುತ್ತದೆ. ಏಕೆಂದರೆ ಮೊದಲೆಲ್ಲಾ ಹಳೆಯದನ್ನು ಮುಚ್ಚಿಹಾಕಿ ಹೊಸದಾಗಿ ಕೆಪೆಚಿನೋ, ಚೈನೀಸ್, ಕಾಫಿಡೇ...ಹೀಗೆ  ಅಧುನಿಕವಾದ ಟ್ರೆಂಡ್ ಬರುತ್ತಿತ್ತು.  ಕೆಲವೇ ವರ್ಷಗಳಲ್ಲಿ ಅದು ನಮ್ಮ ಜನಗಳಿಗೆ ಬೇಸರವಾಯಿತೇನೋ...ಮತ್ತೆ ನಮ್ಮ ಸಂಸ್ಕೃತಿಯ ಹಳ್ಳಿ ಮನೆ, ಹಳ್ಳಿ ತಿಂಡಿ, ತಾಯಿಮನೆ ಊಟ, ಮನೆಯೂಟ, ನಳಪಾಕ, ಹಟ್ಟಿಕಾಫಿ...ಹೀಗೆ ಶುರುವಾಗಿರುವುದು ರಿವರ್ಸ್ ಆರ್ಡರಿನಲ್ಲಿ ಅಲ್ಲವೇ....

       ನನಗೆ "ಹಟ್ಟಿ ಕಾಫಿ" ತುಂಬಾ ಇಷ್ಟ.  ಮೊದಲು ನಾನು ಕುಡಿದಿದ್ದು ಮಂತ್ರಿ ಮಾಲ್‍ನ ಸ್ಪಾರ್ ಮಾರುಕಟ್ಟೆಯಲ್ಲಿ.  ಅಂತಾ ಮಾಲಾಮಾಲ್‍ನಲ್ಲಿ ಐದು ರೂಪಾಯಿಗೆ ಕಾಫಿ ಸಿಕ್ಕಾಗ ನಾನು ಅಲ್ಲಿ ನಿಂತು ಕೂತು ಖುಷಿಯಿಂದ ಕುಡಿದಿದ್ದೆ. ಆಗ ಅದರ ರುಚಿಯನ್ನು ಮರೆಯಲಾಗಿರಲಿಲ್ಲ. ಕಾಫಿ ಅಷ್ಟು ಚೆನ್ನಾಗಿದ್ದರೂ ಪ್ರತೀ ದಿನ ಮಂತ್ರಿ ಮಾಲ್‍ಗೆ ಹೋಗಿ ಕುಡಿಯಲಾಗುವುದಿಲ್ಲವಲ್ಲ. ಅದರಲ್ಲೂ ಅರ್ಧ ಕಾಫಿ ಕುಡಿಯಲು ಮಂತ್ರಿ ಮಾಲ್‍ಗೇಕೆ ಹೋಗಬೇಕು. ರಸ್ತೆಬದಿಯ ಪುಟ್ಟ ಅಂಗಡಿಯಲ್ಲಿ ಸಿಗುವ ಕಾಫಿ ಕಪ್ಪನ್ನು ಕೈಯಲ್ಲಿಡಿದು ಸುತ್ತ ಹೋಗಿಬರುವ ಸುಂದರ ಬೆಡಗಿಯರನ್ನು ನೋಡುತ್ತಾ ಕುಡಿಯುತ್ತಿದ್ದರೇ ಅದೊಂತರ ಪುಟ್ಟ ಬೊಗಸೆಯಲ್ಲಿ ಬ್ರಹ್ಮಾಂಡ ತುಂಬಿಕೊಂಡಂತ ದೊಡ್ಡ ಸಂತೋಷ.  ಅಂತದ್ದೇ ಪುಟ್ಟ ಹಟ್ಟಿ ಕಾಫಿ ಅಂಗಡಿ ನವರಂಗ್ ಬಳಿ ತೆರೆದುಕೊಂಡಿತಲ್ಲ. ನವರಂಗ್ ಬಳಿಯ ಅಜಂತ ಕಲರ್ ಲ್ಯಾಬಿಗೆ ಫೋಟೊ ಪ್ರಿಂಟ್‍ಗಾಗಿ ಹೋದಾಗಲೆಲ್ಲಾ ಹಟ್ಟಿ ಕಾಫಿಗೆ ವಿಸಿಟ್ ಕೊಡುತ್ತಿದ್ದೆ.  ಇಷ್ಟಕ್ಕೂ ಆ ಕಾಫಿಯಲ್ಲೇನು ವಿಶೇಷ ಅಂತೀರಾ, ಹೇಳ್ತೀನಿ ಕೇಳಿ,  ಅದಕ್ಕೂ ಮೊದಲು ಬೇರೆ ಜಾಗಗಳಲ್ಲಿ ಕಾಫಿಗಳನ್ನು ಒಮ್ಮೆ ಗ್ಲಾನ್ಸ್ ಮಾಡಿಬಿಡೋಣ. 

ಬೆಂಗಳೂರೆಲ್ಲಾ ಸುತ್ತಿ ಹುಡುಕಿ ತಂದಿದ್ದು ಈ ಗಾಜಿನ ಲೋಟ. ಸದ್ಯ ನಾನು ಮನೆಯಲ್ಲಿ ಕಾಫಿ ಕುಡಿಯುತ್ತಿರುವುದು ಇದರಲ್ಲಿ.

ನೀವು ಸ್ವಲ್ಪ ಅನುಕೂಲವಾದ ಏಸಿ-ಗೀಸಿ ಇರುವ ಹೋಟಲ್ಲಿಗೆ ಹೋಗಿ ಅರಾಮವಾಗಿ ಕುಳಿತು ಕಾಫಿಗೆ ಆರ್ಡರ್ ಮಾಡಿದರೆ ಚೀನಿ ಪಿಂಗಾಣಿ ಬಟ್ಟಲುಗಳಲ್ಲಿ ಕಾಫಿ ತಂದಿಟ್ಟು ದುಬಾರಿ ಬಿಲ್ಲು ಇಟ್ಟು ಹೋಗುತ್ತಾರೆ. ಕಾಫಿ ಚೆನ್ನಾಗಿದ್ದರೂ ಅದರ ಬಟ್ಟಲು ಪಿಂಗಾಣಿಯಾದ್ದರಿಂದ ಅದೇನೋ ನಮ್ಮದಲ್ಲವೆನ್ನುವ ಭಾವನೆಯಿಂದಲೇ ಕಾಫಿ ಕುಡಿದು ಎದ್ದು ಬಂದಿರುತ್ತೇವೆ.  ತ್ರಿ ಸ್ಟಾರ್-ಫ಼ೈವ್ ಸ್ಪಾರ್ ಹೋಟಲ್ಲುಗಳಲ್ಲಿ ಹಾಲಿನಪುಡಿ-ಸಕ್ಕರೆ ರಹಿತ ಸಕ್ಕರೆ-ನೆಸ್‍ಕೆಪೆ-ಅಥವ-ದಾರ್ಜಿಲಿಂಗ್ ಟೀ ಇತ್ಯಾದಿಗಳನ್ನು ಪೊಟ್ಟಣಗಳಲ್ಲಿ ಇಟ್ಟು ಬಿಸಿನೀರನ್ನು ಒಂದು ದೊಡ್ಡ ಪಿಂಗಾಣಿಯಲ್ಲಿ ಇಟ್ಟು ಅದರ ಪಕ್ಕ ಮತ್ತದೇ ಚಿತ್ತಾರವಾದ ಪಿಂಗಾಣಿ ಬಟ್ಟಲು ಅದರ ಪಕ್ಕ ಎಲ್ಲವನ್ನು ಮಿಕ್ಸ್ ಮಾಡಿಕೊಂಡ ಮೇಲೆ ರುಬ್ಬಲು ಅಲ್ಲಲ್ಲ ತಿರುಗಿಸಲು ಚಮಚ.  ಇಷ್ಟೆಲ್ಲಾ ಮಾಡಿಕೊಂಡು ಕಾಫಿ ಕುಡಿಯುವಾಗ ನಮ್ಮ ಕಣ್ಣು  ಬೇರೆಯವರು ಯಾವ ರೀತಿ ಕಾಫಿ ಕುಡಿಯುತ್ತಿದ್ದಾರೆ ಅಂತ ಗಮನಿಸುತ್ತಾ ಆ ಚೆನ್ನಾಗಿಲ್ಲದ ಸ್ವಾದವನ್ನು ಅನುಭವಿಸದೇ ಅಲ್ಲಿಯೂ ಕೂಡ ಪರರಿಗಾಗಿ ಕಾಫಿ ಕುಡಿಯಾಟವಾಗಿಬಿಟ್ಟಿರುತ್ತದೆ.  ಹೋಗಲಿ ಇತ್ತ ನಮ್ಮ ಇರಾನಿ ಛಾಯ್ ಅಂಗಡಿಗಳಿಗೆ ಬರೋಣ. ಕೆಳಗೆ ಸೌದೆ ಉರಿ ಅದರ ಮೇಲೆ ಮದ್ಯಮ ಗಾತ್ರದ ಹಿತ್ತಾಳೆ ಪಾತ್ರೆ ಬೆಳಿಗ್ಗೆ ಹಾಲಿನ ಪುಡಿ ಹಾಕಿ ಕುದಿಸಲು ಪ್ರಾರಂಭಿಸಿದರೆ ರಾತ್ರಿ ಹತ್ತು-ಹನ್ನೊಂದು ಗಂಟೆಗೂ ನಿಮಗೆ ಕಾಫಿ-ಟೀ ಸಿಗುತ್ತದೆ. ಅಲ್ಲಿ ಸಕ್ಕರೆ ಮಿಶ್ರಿತ ಗಟ್ಟಿಹಾಲು ಜೊತೆಗೆ ನೆಸ್‍ಕೆಪೆ ಪುಡಿ ಬೆರೆಸಿ ಪ್ಲಾಸ್ಟಿಕ್ ಲೋಟಕ್ಕೆ ಹಾಕಿ ನಮ್ಮ ಕೈಗೆ ಒಂದು ಮುಗುಳ್-ನಗೆ ಸೇರಿಸಿ ಕೊಡುತ್ತಾನೆ. ಮೊದಲ ಸಿಪ್ ಓಕೆ. ಕೊನೆ ಕೊನೆಯಲ್ಲಿ ಬೇಡವೆನ್ನಿಸುವಷ್ಟರ ಮಟ್ಟಿಗೆ ಬೇಸರವಾಗಿ ಅರ್ಧ ಕುಡಿದು ಸ್ಟೈಲಾಗಿ ಹಣಕೊಟ್ಟು ಬಂದುಬಿಡುತ್ತೇವೆ.  ಹೋಗಲಿ ನಮ್ಮ ಮಲ್ಲೇಶ್ವರಂನ ಹಳ್ಳಿಮನೆಯಲ್ಲಿ ಕಾಫಿ ತುಂಬಾ ಚೆನ್ನಾಗಿರುತ್ತದೆಯೆಂದು ಅಲ್ಲಿ ಕುಡಿಯೋಣವೆಂದರೆ ಅವರು ಅತ್ತ ಪ್ಲಾಸ್ಟಿಕ್ ಲೋಟವೂ ಅಲ್ಲದ,  ಸ್ಟೈನ್‍ಲೆಸ್ ಸ್ಟೀಲಿನ ಪುಟಾಣಿ ಲೋಟವನ್ನು ಕೊಡದೇ ಪಿಂಗ್ ಪಾಂಗ್ ಪಿಂಗಾಣಿಯನ್ನು ಕೊಡದೆ ಪೇಪರ್ ಲೋಟದಲ್ಲಿ ಕೊಡುತ್ತಾರೆ. ಅದೊಂದರ ಚೆನ್ನಾಗಿದೆಯೆಂದು ನಾವು ಕಾಫಿಯನ್ನು ಅಸ್ವಾದಿಸಿದರೂ ನಮ್ಮ ಹಿರಿಯ ದಿನಪತ್ರಿಕೆಯ ವೆಂಡರ್ ಬೋರೇಗೌಡರಿಗೆ ಅದ್ಯಾಕೋ ಇಷ್ಟವಾಗುವುದಿಲ್ಲ. ಪೇಪರ್ ಲೋಟದಲ್ಲಿ ಕೊಟ್ಟ ಕಾಫಿಯನ್ನು ತಂದು ಟೇಬಲ್ಲಿನ ಮೇಲಿಟ್ಟು ಕುಡಿಯುವ ನೀರಿನ ಬಳಿಹೋಗಿ ಅಲ್ಲಿಟ್ಟಿರುವ ಉದ್ದುದ್ದದ ನೀರು ಕುಡಿಯುವ ಸ್ಟೀಲ್ ಲೋಟದ ತುಂಬ ನೀರು ಕುಡಿದು ಅದೇ ಲೋಟಕ್ಕೆ ಪೇಪರ್ ಲೋಟದ ಕಾಫಿಯನ್ನು ಬಗ್ಗಿಸಿಕೊಂಡು ನಿದಾನವಾಗಿ ಕುಡಿದರೆ ಅವರಿಗೇ ಅವರದೇ ಮನೆಯಲ್ಲಿ ಕುಡಿದಷ್ಟೇ ಆನಂದವಂತೆ. ಅವರು ಹೇಳಿದ ಮೇಲೆ ಅವರ ಮಾತು ನಮಗೆ ಯಾವ ಪರಿ ಭ್ರಮೆಯನ್ನು ಆವರಿಸಿತೆಂದರೆ ಅಷ್ಟು ದಿನ ಮನೆ ಕಾಫಿಯಂತೆ ರುಚಿಯಾಗಿದ್ದ ಅದು ನಂತರ ಕೇವಲ ಹಳ್ಳೀಮನೆ ಕಾಫಿಯಾಗಿಬಿಟ್ಟಿತ್ತು.

ಈಗ ಹಟ್ಟಿ ಕಾಫಿಗೆ ವಾಪಸ್ ಬರೋಣ.  ಅಲ್ಲಿ ಒಂದು ಕಾಫಿ ಅಂತ ನಾನು ಕೇಳಿದ ತಕ್ಷಣ ಆರು ರೂಪಾಯಿ ಕೊಡಿ  ಅನ್ನುತ್ತಾನೆ ಕ್ಯಾಶ್ ಕೌಂಟರಿನ ಹಿಂದೆ ಕುಳಿತಿರುವಾತ.  ಅರೆರೆ.....ಬೇರೆ ಕಡೆ ಕಾಫಿ ಬೆಲೆ ೮-೯-೧೦-೧೨ ಆಗಿರುವಾಗ ಇಲ್ಲಿ ಕೇವಲ ಆರು ರೂಪಾಯಿಗೆ ಸಿಗುತ್ತಲ್ಲ ಎಂದು ಮೊದಲಿಗೆ ಖುಷಿಯಾಗುತ್ತದೆ. ಈಗ ಪ್ರತಿಭಾರಿ ಕಾಫಿ ಕುಡಿಯಲು ಅಲ್ಲಿಗೆ ಹೋದಾಗಲೂ ಹೀಗೆ ಅನ್ನಿಸುವುದರಿಂದ ಖುಷಿ ಉಚಿತ.   ಟೋಪಿ ಹಾಕಿಕೊಂಡ ಮಾಣಿ ನಮ್ಮ ಕಣ್ಣ ಮುಂದೆ ಒಂದು ಗಾಜಿನ ಲೋಟವನ್ನು ಇಡುತ್ತಾನೆ.  ಅದನ್ನು ನೋಡಿದ ತಕ್ಷಣ  ಮತ್ತೆ ನನ್ನ ಬಾಲ್ಯದ ನೆನಪು ಗರಿಗೆದರುತ್ತದೆ. ಆಗೆಲ್ಲಾ ಸ್ಟೀಲ್ ಲೋಟಗಳಲ್ಲಿ ಕಾಫಿ ಕೊಡುತ್ತಿರಲಿಲ್ಲ. ಕೊಟ್ಟರೂ ದೊಡ್ಡ ದೊಡ್ಡ ಹೋಟಲ್ಲುಗಳಲ್ಲಿ ಮಾತ್ರ. ಪಿಂಗಾಣಿಯೂ ಇನ್ನೂ ಬಂದಿರಲಿಲ್ಲ. ಪ್ಲಾಸ್ಟಿಕ್ ಲೋಟ ಕಾಲಿಟ್ಟಿರಲಿಲ್ಲ.  ಆಗೆಲ್ಲಾ ಕೆಲಸಗಾರರು ಸುಲಭವಾಗಿ ಸಿಕ್ಕುತ್ತಿದ್ದರಿಂದ ಈ ಗಾಜಿನ ಲೋಟಗಳದೇ ದರ್ಭಾರು.  ನಾವು ಶ್ರೀರಾಮಪುರಂನ ಐದನೇ ಮುಖ್ಯರಸ್ತೆಯಲ್ಲಿರುವ ಮಂಗಳೂರು ಕೆಫೆಯಲ್ಲಿ ಬೈಟು ಕಾಫಿ ಎಂತ ಹೇಳಿ ಒಂದುವರೆ ರೂಪಾಯಿ ಕೊಟ್ಟರೆ ಮುಗೀತು. ಆರ್ಡರ್ ತೆಗೆದುಕೊಂಡ ಹೋಟಲ್ ಓನರ್  ಒಂದು ಬೈಟು ಕಾಫಿ..ಎಂದು ಹೇಳುತ್ತಿದ್ದ. ಮತ್ತೊಬ್ಬರು ಬಂದಾಗ ಇನ್ನೊಂದು ಬೈಟು.........ಎಂದು ರಾಗವಾಗಿ ಎಳೆಯುತ್ತಿದ್ದ.  ಹೀಗೆ ಹತ್ತಾರು ಬೈಟುಗಳ ಆರ್ಡರ್ ಬಂದರೂ ಇನ್ನೊಂದು ಬೈಟು.........ಎನ್ನುವ ಅವನ ರಾಗದಲ್ಲಿ ವ್ಯತ್ಯಾಸವಾಗುತ್ತಿರಲಿಲ್ಲ. ಅಷ್ಟರಲ್ಲಿ ಒಳಗೆ ಗಳಗಳ ಸದ್ದು. ಲೋಟಗಳನ್ನು ಜೋರು ಬರುವ ನೀರಿನಲ್ಲಿ ತೊಳೆದು ದೊಡ್ಡದಾದ ಟ್ರೇನ ಈ ತುದಿಯಿಂದ ಆ ತುದಿಗೆ ತಲೆಕೆಳಕಾಗಿ ಮಾಡಿದ ಒಂದೊಂದೇ ಲೋಟಗಳನ್ನು ತಳ್ಳುವಾಗಿನ ದೃಶ್ಯವನ್ನು ನೋಡುವಾಗಲೇ ಕಾಫಿ ಸ್ವಾದದ ಅಮಲು.  ಕೆಲವೊಮ್ಮೆ ನಾವು ಹೊರಗಿದ್ದು ಆ ದೃಶ್ಯ ಕಾಣದಿದ್ದರೂ ತೊಳದ ನಂತರದ ಟ್ರ್‍ಏನಲ್ಲಿ ಒಂದೊಂದು ಲೋಟವನ್ನು ತಳ್ಳುವಾಗಿನ ಶಬ್ದವೂ ಕೂಡ ಮುಂದೆ ಅದೇ ಲೋಟದಲ್ಲಿ ಬರುವ ಕಾಫಿಯ ರುಚಿಯಲ್ಲಿ ತೇಲುವಂತೆ ಮಾಡುತ್ತಿತ್ತು.  ಕಣ್ಣಿಗೆ ಕಾಣಿಸಿದ ಈ ದೃಶ್ಯಗಳಿಗೂ ಮತ್ತು ಕಿವಿಗೆ ಕೇಳಿಸಿದ ಸರರ್..ರ್....ಎನ್ನುವ ಗಾಜಿನ ಲೋಟದ ಶಬ್ದಕ್ಕೂ ನಾಲಗೆಗೆ ಸೋಕುವ ಕಾಫಿಯ ರುಚಿಗೂ ಅದೆಂಥ ಕನೆಕ್ಷನ್ ಇತ್ತೋ ನನಗೆ ಗೊತ್ತಿಲ್ಲ. ಇಷ್ಟೆಲ್ಲಾ ಆದ ಮೇಲೆ  ಗಾಜಿನ ಲೋಟಕ್ಕೆ ಕಾಲು ಭಾಗ ಡಿಕಾಕ್ಷನ್ ಇನ್ನುಳಿದ ಮುಕ್ಕಾಲು ಭಾಗಕ್ಕೆ ನಿದಾನವಾಗಿ ಬಿಸಿಹಾಲನ್ನು ಹಾಕುತ್ತಿದ್ದರೆ ಕೊನೆಯಲ್ಲಿ ಉಕ್ಕಿದ ನೊರೆಯನ್ನು ಬ್ಯಾಲೆನ್ಸ್ ಮಾಡುತ್ತಾ ಲೋಟದ ತುಂಬಾ ಕಾಫಿಯನ್ನು ತುಂಬಿಸುತ್ತಲೇ ನೊರೆಯ ಕಲಾಕೃತಿಯ ಗೋಪುರವನ್ನು ಮಾಡಿ ನಮ್ಮ ಕೈಗೆ ಕೊಡುತ್ತಾನಲ್ಲಾ!  ಆ ಚಳಿಗಾಲದ ಚಳಿಯಲ್ಲಿ ನಿದಾನವಾಗಿ ನೊರೆಯನ್ನು ಹೀರುತ್ತಾ..........ಕಾಫಿಯ ಮೊದಲ ಗುಟುಕು ನಾಲಗೆಗೆ ಸೋಕುವಾಗ ಆಹಾ! ಆ ಸ್ವರ್ಗ ಸುಖ!  ಇಲ್ಲಿ ಹಟ್ಟಿ ಕಾಫಿಯ ಮಾಣಿ ಕೊಡುವ ಗಾಜಿನ ಲೋಟವೂ ತನ್ನ  ಹಳೆಯ ತಾತ ಮುತ್ತಾತಂದಿರುಗಳಾದ ಪಟ್ಟಿ ಗಾಜಿನ ಲೋಟಗಳನ್ನು ನೆನಪಿಸುತ್ತದೆ.

ಹಟ್ಟಿ ಕಾಫಿ ಕುಡಿದು ಮುಗಿಸುತ್ತಿದ್ದಂತೆ ಹೇಮಾಶ್ರೀಗೂ ಆ ಲೋಟ ಇಷ್ಟವಾಗಿಬಿಟ್ಟಿತ್ತು. ಇಂಥದ್ದೇ ಗಾಜಿನ ಲೋಟವನ್ನು ಮನೆಗೆ ತನ್ನಿ ಅಂದುಬಿಟ್ಟಳು.  ಇತ್ತ ನಮ್ಮ ಮನೆಯಲ್ಲೂ ಅನೇಕ ಹೇಮಾ ತುಂಬಾ ಚೆನ್ನಾದ ಕಾಫಿ ಮಾಡಿ ಕೊಡುತ್ತಾಳೆ.  ಅಷ್ಟು ಚೆನ್ನಾದ ಕಾಫಿಗಾಗಿ ನಾವು ಹುಡುಕಿದ ಕಾಫಿಪುಡಿ ಅಂಗಡಿಗಳು ಒಂದೆರಡಲ್ಲ..ಕೊತಾಸ್, ಬಾಯರ್ಸ್,.......ಕೊನೆಗೆ ಮಲ್ಲೇಶ್ವರಂನ ಒಂಬತ್ತನೇ ಕ್ರ್‍ಆಸಿನಲ್ಲಿರುವ ನಾಯಕ್ ಕಾಫಿ ಅಂಗಡಿಯಲ್ಲಿನ ಕಾಫಿಪುಡಿಯು ನಮಗೆ ಚೆನ್ನಾಗಿ ಹೊಂದಿಕೆಯಾಗಿಬಿಟ್ಟಿತ್ತು. ಮೊದಲೆರಡು ದಿನ ಹದ ತಪ್ಪಿದರೂ ನಂತರ ಕಾಫಿ ಫಿಲ್ಟರಿಗೆ ಎಷ್ಟು ಬಿಸಿನೀರು ಮತ್ತು ಎಷ್ಟು ಕಾಫಿಪುಡಿಹಾಕಿದರೆ ಸರಿಯಾದ ಅರ್‍ಓಮದ ಫೀಲ್ ಬರುವ ಡಿಕಾಕ್ಷನ್ ಬರುತ್ತದೆ ಎನ್ನುವುದನ್ನು ಚೆನ್ನಾಗಿ ಅರಿತಿರುವುದರಿಂದ ನನಗೆ ಮನೆಯಲ್ಲಿನ ಕಾಫಿ ತುಂಬಾ ಇಷ್ಟ.  [ಟೀಯನ್ನು ನಾನು ಅವಳಿಗಿಂತ ಚೆನ್ನಾಗಿ ಮಾಡುತ್ತೇನಾದ್ದರಿಂದ ನನ್ನ ಬ್ಲಾಗ್ ಮತ್ತು ಇತರ ಗೆಳೆಯರು ಮನೆಗೆ ಬಂದಾಗ ಅದರ ರುಚಿಯನ್ನು ನೋಡಿರುತ್ತಾರೆ ಸದ್ಯ ಆ ಇಲ್ಲಿ ಟೀ ವಿಚಾರ ಬೇಡ.] ನಾನು ಆ ಗಾಜಿನ ಕಾಫಿಲೋಟಗಳಿಗಾಗಿ ನಮ್ಮ ಸುತ್ತ ಮುತ್ತ ಹತ್ತಾರು ಕಡೆ ಹುಡುಕಿದೆ ಸಿಗಲಿಲ್ಲ. ಕೇಳಿದರೆ ಸಿಟಿಯಲ್ಲಿ ಸಿಗುತ್ತದೆ ಎಂದರು.  ಒಂದು ದಿನ ಬಿಡುವು ಮಾಡಿಕೊಂಡು ಸಿಟಿಮಾರ್ಕೆಟ್, ಬಿವಿಕೆ ಆಯಂಗಾರ್ ರೋಡ್ ಎಲ್ಲಾ ಓಡಾಡಿದಾಗ ನನಗೆ ಬೇಕಾದ ಆ ಗ್ಲಾಸುಗಳು ಸಿಕ್ಕವು.  ಅದನ್ನು ನೋಡಿದ ಹೇಮಾಶ್ರೀ ಕೂಡ ತುಂಬಾ ಖುಷಿಪಟ್ಟಳು.  ಅವತ್ತಿನಿಂದ ನಮ್ಮ ಮನೆಯಲ್ಲಿ ಗಾಜಿನ ಲೋಟದಲ್ಲಿ ಕಾಫಿಯ ಸ್ವಾದ...ನಾದ....ಭಾವಾನಾತ್ಮಕ ಆನಂದ.

ಒಂದೆರಡು ದಿನಗಳಲ್ಲೇ ನನ್ನಲ್ಲಿ ಸೊಗಸಾದ ದುರಾಸೆ ಹುಟ್ಟಿಕೊಂಡಿತ್ತು. ಅದಕ್ಕೆ ಕಾರಣವೂ ಉಂಟು. ಹಟ್ಟಿ ಕಾಫಿಯಲ್ಲಿ  ಆರು ರೂಪಾಯಿಗೆ ಆ ಗಾಜಿನ ಲೋಟದ ಮುಕ್ಕಾಲು  ಭಾಗವನ್ನು ಮಾತ್ರ ಕಾಫಿ ಕೊಡುವುದು!  ನಾವು ಕೊಡುವ ಹಣಕ್ಕೆ ಅಷ್ಟು ಸಾಕು, ಅದು ಅರೋಗ್ಯಕ್ಕೂ ಒಳ್ಳೆಯದು ಎನ್ನುವುದು ಅವರ ಭಾವನೆಯಿರಬಹುದು. ಅದೇ ಭಾವನೆ ಹೇಮಾಶ್ರೀಗೂ ಬಂದುಬಿಟ್ಟಿರಬೇಕು  ಅದಕ್ಕೆ ಮನೆಯಲ್ಲೂ ಕೂಡ ಗಾಜಿನ ಲೋಟದಲ್ಲಿ ಅಷ್ಟೇ ಪ್ರಮಾಣದ ಕಾಫಿ ಕೊಡುತ್ತಾಳೆ. 

"ಇದರ ತುಂಬಾ ಕೊಡು" ಎಂದೆ. 

"ಕೊಡೊಲ್ಲಾ ಕಣ್ರಿ, ನಿಮಗೆ ಇಷ್ಟು ಸಾಕು ಸುಮ್ಮನೇ ಕುಡೀರಿ" ಅಂದಳು.

"ಅಲ್ಲಾ ಕಣೇ, ಈ ಲೋಟದಲ್ಲಿ ಕುಡಿಯುವ ಆನಂದವೇ ಬೇರೆ, ಅದಕ್ಕಾಗಿಯೇ ಅಲ್ಲವೇ ಸಿಟಿಯೆಲ್ಲಾ ಹುಡುಕಿ ತಂದಿದ್ದು., ಇದರ ತುಂಬಾ ಕಾಫಿಯನ್ನು ಹಾಕಿದಾಗ ನೋಡಲು ತುಂಬಾ ಚೆನ್ನಾಗಿರುತ್ತದೆ. ಮತ್ತೆ ಪೂರ್ತಿ ಕುಡಿದಾಗ ಸಿಗುವ ಸಂತೃಪ್ತಿಯನ್ನು ಬೇರೆ" ಅದಕ್ಕಾಗಿ ಪ್ಲೀಸ್ ನನಗೆ ಇನ್ನು ಮುಂದೆ ಲೋಟದ ತುಂಬ ಕಾಫಿ ಕೊಡು" ಎಂದೆ.

    "ನೀವು ಈ ಗಾಜಿನ ಲೋಟಗಳನ್ನು ತಂದಿದ್ದು ಈ ಕಾರಣಕ್ಕೋ? ನೋಡುವುದಕ್ಕೆ ಚೆಂದ ಕಾಣುತ್ತದೆ ಎನ್ನುವ ಮಾತ್ರಕ್ಕೆ ಲೋಟ ತುಂಬಾ ಕಾಫಿ ಕೊಡುವುದಕ್ಕಾಗುವುದಿಲ್ಲ. ಬೇಕಾದರೆ ಒಮ್ಮೆ ಪೂರ್ತಿ ಕೊಡುತ್ತೇನೆ, ಅದರ ಫೋಟೊ ತೆಗೆದು ಕಂಪ್ಯೂಟರಿಗೆ ಸ್ಕ್ರೀನ್ ಸೇವರ್ ಮಾಡಿಕೊಂಡು  ನೋಡುತ್ತಾ ಆನಂದಪಡಿ, ಬೇಡ ಅಂದೋರು ಯಾರು?  ಮತ್ತೆ ಪೂರ್ತಿ ಬೇಕು ಅಂತ ಹಟ ಮಾಡಿದ್ರೆ ಈ ಲೋಟವನ್ನು  ಬಾಕ್ಸಿಗೆ ಹಾಕಿಟ್ಟು ಮೇಲೆ ಇಟ್ಟುಬಿಡುತ್ತೇನೆ. ಅಥವ ಯಾರಿಗಾದ್ರು ಕೊಟ್ಟುಬಿಡುತ್ತೇನೆ ಅಷ್ಟೇ" ಅಂತ ಅಂದುಬಿಟ್ಟಳಲ್ಲ!

       ವಿಧಿಯಿಲ್ಲದೇ ಅತಿಯಾಸೆ ಗತಿಗೇಡು ಅಂದುಕೊಳ್ಳುತ್ತಾ ಮುಕ್ಕಾಲು ಕಾಫಿ ಕಾಲು ಭಾಗ ನೊರೆತುಂಬಿದ  ಆ ಗಾಜಿನ ಲೋಟದಲ್ಲಿ  ಕಾಫಿ ಕುಡಿಯುತ್ತಾ ಆನಂದಿಸುತ್ತಿದ್ದೇನೆ.


ಚಿತ್ರಗಳು ಮತ್ತು ಲೇಖನ.
ಶಿವು.ಕೆ

Thursday, November 4, 2010

ಒಂದೂವರೆದಿನದ ಧಾರವಾಡ ಅನುಭವ

        

        ನಾನು ದೂರದ ಪ್ರಯಾಣಕ್ಕಾಗಿ ಅದೆಷ್ಟೇ ವೇಗದ ರೈಲಿನ ಟಿಕೆಟ್ ಕಾಯ್ದಿರಿಸಿದರೂ ಅದ್ಯಾಕೋ ನಿದಾನವಾಗಿ ಪಕ್ಕಾ ಪ್ಯಾಸಿಂಜರ್ ಆಗಿಬಿಡುತ್ತದೆ. ಇಲ್ಲೂ ಹಾಗೇ ಆಯಿತು. ನಮ್ಮ ಅತ್ಯಂತ ವೇಗದ ರೈಲಾದ ಬೆಂಗಳೂರು-ಧಾರವಾಡ ಇಂಟರ್ ಸಿಟಿ ರೈಲನ್ನು ಮಧ್ಯಾಹ್ನ ಒಂದುಗಂಟೆಗೆ ಹತ್ತಿ ಕುಳಿತಾಗ ಅದು ರಾತ್ರಿ ಒಂಬತ್ತು ಗಂಟೆಗೆ ತಲುಪುತ್ತದೆ. ನಾನು ಬೇಗ ಹೋಟಲ್ ರೂಮ್ ಸೇರಿ ಲಗ್ಗೇಜ್ ಇಟ್ಟು ಊಟ ಮುಗಿಸಿ ರಾತ್ರಿ ಒಂದು ಸುತ್ತು ಧಾರವಾಡವನ್ನು ಕ್ಯಾಮೆರಾ ಸಮೇತ ಸುತ್ತೋಣವೆಂದು ಮಾಸ್ಟರ್ ಪ್ಲಾನ್ ಮಾಡಿದ್ದೆ.  ಆದ್ರೆ ಈ ರೈಲು ರಾತ್ರಿ ಹತ್ತುಮುವತ್ತೈದಕ್ಕೆ ಧಾರವಾಡ ತಲುಪಿ ನನ್ನ ಲೆಕ್ಕಚಾರವನ್ನೆಲ್ಲಾ ತಲೆಕೆಳಗಾಗಿಸಿತ್ತು.  ನಾನು ರೈಲಿಳಿದು ಆಟೋ ಏರಿ ಅವರೇ ವ್ಯವಸ್ಥೆ ಮಾಡಿದ್ದ ಬೃಂದಾವನ ಲಾಡ್ಜ್ ಸೇರುವ ಹೊತ್ತಿಗೆ ಹನ್ನೊಂದು ಗಂಟೆಯಾಗಿದ್ದರಿಂದ ಕ್ಯಾಮೆರಾದೊಂದಿಗೆ ಸುತ್ತುವ ಆಸೆಯನ್ನು ಕೈಬಿಟ್ಟಿದ್ದೆ. ರೈಲಿನಲ್ಲಿ ಏನು ತಿಂದಿರಲಿಲ್ಲ.  ಹೊರಗೆ ಬಂದು ನೋಡಿದರೆ ಜನರ ಓಡಾಟವೇ ಇಲ್ಲ. ಧಾರವಾಡ ಆಗಲೇ ನಿದ್ರಿಸುತ್ತಿದೆ. ಹೊಟ್ಟೆ ಚುರುಗುಟ್ಟುತ್ತಿದ್ದರಿಂದ ತಿನ್ನಲು ಏನಾದರೂ ಸಿಗುತ್ತದೋ ಅಂತ ಹೋಟಲಿನ ಬಲಬದಿಯ ರಸ್ತೆಯ ಉದ್ದಕ್ಕೆ ಒಂದು ಪರ್ಲಾಂಗ್ ನಡೆದೆ. ಅಂಗಡಿ ಹೋಟಲ್ಲುಗಳೆಲ್ಲಾ ಮುಚ್ಚಿವೆ. ಮತ್ತೆ ಬಲಕ್ಕೆ ತಿರುಗಿ ಸ್ವಲ್ಪ ದೂರ ನಡೆದರೂ ಏನೂ ಪ್ರಯೋಜನವಿಲ್ಲ. ಮತ್ತೊಂದು ತಿರುವು ಬಲಕ್ಕೆ ಕಾಣಿಸಿತು. ತಿರುಗಿದೆ. ಅಲ್ಲಿ ರಸ್ತೆಯಲ್ಲಿ ಇಬ್ಬರು ಬೈಕ್ ಮೇಲೆ ಕುಳಿತು ಮಾತಾಡುತ್ತಿದ್ದರು. ಅವರನ್ನೇ ದೈರ್ಯಮಾಡಿ ಕೇಳಿದೆ. "ಇಲ್ಲಿ ಊಟದ ಹೋಟಲ್, ಖಾನವಾಳಿ ಏನಾದ್ರು ತೆರೆದಿದೆಯಾ" ಅಂತ.  ಅವರು "ಸ್ವಲ್ಪ ಮುಂದಕ್ಕೆ ಹೋಗಿ ಬಲಕ್ಕೆ ತಿರುಗಿ ಅಲ್ಲೊಂದು ಖಾನಾವಳಿ ಇದೆ. ನಿಮ್ಮ ಅದೃಷ್ಟವನ್ನು ಪರೀಕ್ಷಿಸಿ" ಎಂದರು.  ಸಣ್ಣ ಆಸೆಯಿಂದ ಅಲ್ಲಿಗೆ ಹೋದೆ. ಅರ್ಧ ಬಾಗಿಲು ಮುಚ್ಚಿದ್ದ ಖಾನಾವಳಿಯ ಒಳಗೆ ಹೋಟಲ್ಲಿನವರೇ ಊಟ ಮಾಡುತ್ತಿದ್ದರು.  


 "ಊಟ ಸಿಗುತ್ತಾ" ಕೇಳಿದೆ.

 "ಎಲ್ಲಾ ಖಾಲಿಯಾಯ್ತಲ್ಲ" ಅಂದ ಒಬ್ಬ.


"ಹೌದಾ, ಛೇ ಎಂಥ ಕೆಲಸವಾಯ್ತು, ರೈಲು ತಡವಾಗಿದ್ದರಿಂದ ನನ್ನ ಊಟ ತಪ್ಪಿ ಹೋಯ್ತಲ್ಲ" ಅಂದ ನನ್ನಲ್ಲೇ ಗೊಣಗಿಕೊಂಡೆ.

"ಸ್ವಲ್ಪ ದೂರ ಅಲ್ಲಿ ಒಂದು ಖಾನಾವಳಿ ತೆರೆದಿದೆ ಅಲ್ಲಿ ಹೋಗಿ ನಿಮಗೆ ಊಟ ಸಿಗುತ್ತದೆ" ಅಂತ ಕೈತೋರಿಸುತ್ತ ಹೇಳಿದ ಮಗದೊಬ್ಬ.

 "ಆ ಖಾನಾವಳಿ ತುಂಬಾ ದೂರನಾ?" ನಾನು ಅರೆಮನಸ್ಸಿನಿಂದ ಕೇಳಿದೆ. ನನ್ನ ಅಷ್ಟು ದೂರ ಹೋಗಬೇಕಲ್ಲ ಅನ್ನುವ ಚಿಂತೆಯಿಂದ ಅಲ್ಲೇ ಅತ್ತಿತ್ತ ನೋಡುತ್ತಾ ನಿಂತೆ.

        "ಎಲ್ಲಿಂದ ಬಂದ್ರಿ"  ಹೋಟಲ್ ಒಡತಿ ಕೇಳಿದಳು.

"ಬೆಂಗಳೂರಿನಿಂದ" ಹೇಳಿದೆ.  "ರೊಟ್ಟಿ ಇಲ್ಲ ಚಪಾತಿ ಆಗುತ್ತಾ" ಕೇಳಿದಳು. ಪರ್ವಾಗಿಲ್ಲ ಏನಿದ್ದರೂ ಕೊಡಿ. ಎಂದೆ. ಸ್ವಲ್ಪ ಅನ್ನವೂ ಉಂಟು ಅಂದಳು. "ಚಪಾತಿ ಜೊತೆಗೆ ಅನ್ನವೂ ಸಿಗುತ್ತಾ"  ಹಸಿವನ್ನು ಅದುಮಿಟ್ಟುಕೊಂಡಿದ್ದ ನನಗೆ ಮತ್ತಷ್ಟು ಹಸಿವು ಹೆಚ್ಚಾಯಿತು. ಒಂದು ಊಟ ಪಾರ್ಸೆಲ್ ಕೊಟ್ಟುಬಿಡುತ್ತೇನೆ ಎಂದಳು. ಸದ್ಯ ಅಷ್ಟಾದರೂ ಸಿಕ್ಕಿತಲ್ಲ ನಿಮಗೆ ಪುಣ್ಯಬರಲಿ ಎಂದುಕೊಳ್ಳುತ್ತಾ "ಆಗಲಿ ಕೊಡಿ ಎಂದು ಹೇಳಿದೆನಾದರೂ ಅವರಿಗೆ ಉಳಿಸಿಕೊಂಡಿರುವ ಊಟವನ್ನು ನಾನು ದೂರದಿಂದ ಬಂದಿದ್ದೇನೆ ಅಂತ ನನಗೆ ಕೊಟ್ಟು ಅವರು ಅರೆಹೊಟ್ಟೆ ತಿಂದು ಮಲಗಬಹುದಾ ಅಂತ ಒಮ್ಮೆ ಅನ್ನಿಸಿತು. "ತಗೊಳ್ಳಿ ಸರ, ಪಲ್ಯ ಉಪ್ಪಿನಕಾಯಿ ಹಾಕಿದ್ದೇನೆ. ಚಟ್ನಿ ಹಪ್ಪಳ ಖಾಲಿಯಾಗಿದೆ, ಇಪ್ಪತ್ತೈದು ರೂಪಾಯಿ ಕೊಡ್ರಿ" ಅಂದಳು.


ನಮ್ಮ ಬೆಂಗಳೂರಿನಲ್ಲಿ ಇಂಥ ಹೊತ್ತಿನಲ್ಲಿ ಇಂಥ ಸಂದರ್ಭ ಬಂದಿದ್ದಲ್ಲಿ ಹೋಟಲ್ಲಿನ ಒಡೆಯ ಅಥವ ಕೆಲಸ ಮಾಡುವವರು ಹೀಗೆ ತಮ್ಮ ಊಟವನ್ನು ದೂರದವರೊಂದಿಗೆ ಹಂಚಿಕೊಳ್ಳುತ್ತಿದ್ದರೆ? ಖಂಡಿತ ಇಲ್ಲ. ಧಾರವಾಡದಲ್ಲಿ ಇನ್ನೂ ಮುಗ್ದತೆಯಿರುವುದರಿಂದ ಅಲ್ಲಿನ ಜನಗಳಿಗೆ ಹೊರಗಿನವರ ಮೇಲೆ ತುಂಬುಪ್ರೀತಿಯಿದೆ. ಅದರ ಪಲಿತಾಂಶವೇ ನನಗೆ ಊಟ ಸಿಕ್ಕಿರಬಹುದು ಎಂದುಕೊಳ್ಳುತ್ತಾ ನನ್ನ ರೂಮು ಸೇರುವ ಹೊತ್ತಿಗೆ ಸಮಯ ಹನ್ನೊಂದುವರೆಯಾಗಿತ್ತು.

ಲಾಡ್ಜಿನ ರೆಸೆಪ್ಟನ್‍ನಲ್ಲಿ ಒಂದು ಊಟದ ತಟ್ಟೆ ಮತ್ತು ನೀರಿನ ಲೋಟವನ್ನು ನನ್ನ ರೂಮಿಗೆ ಕಳಿಸಿ ಎಂದು ಹೇಳಿ ರೂಮಿಗೆ ಹೋದೆ. ಎರಡೂ ಬರಲಿಲ್ಲ. ಸಮಯವಾಗಲೇ ಮೀರಿಹೋಗುತ್ತಿದೆ. ನನ್ನ ರೂಮಿನ ಎದುರಿಗೆ ರೂಮ್ ಬಾಯ್‍ನ ರೂಮ್ ಇತ್ತು. ಅಲ್ಲಿ ಊಟದ ತಟ್ಟೆಗಳು, ಗಾಜಿನ ಲೋಟಗಳು ಹಾಸಿಗೆ ದಿಂಬು ಟವಲ್ಲುಗಳು ಎಲ್ಲಾ ಇದ್ದರೂ ರೂಮ್ ಬಾಯ್ ಇರಲಿಲ್ಲ. ನಾನೇ ಹೋಗಿ ಒಂದು ತಟ್ಟೆಯನ್ನು ಮತ್ತು ಲೋಟವನ್ನು ತೆಗೆದುಕೊಂಡು ಬಂದು ಊಟದ ಪಾರ್ಸೆಲ್ ತೆಗೆಯುತ್ತೇನೆ!  ಇಬ್ಬರು ಊಟಮಾಡುವಷ್ಟನ್ನು ಪಾರ್ಸೆಲ್ ಮಾಡಿಬಿಟ್ಟಿದ್ದಾರೆ.  ನನ್ನ ಊಟ ಮುಗಿದು ಮಲಗುವ ಹೊತ್ತಿಗೆ ರಾತ್ರಿ ಹನ್ನೆರಡು ದಾಟಿತ್ತು. ಅದ್ಯಾವ ಮಾಯದಲ್ಲಿ ನಿದ್ರೆ ಬಂತೋ ಬೆಳಿಗ್ಗೆ ಎಚ್ಚರವಾದಾಗ ಆರುವರೆಯಾಗಿತ್ತು


ಎದ್ದು ಕೈಕಾಲು ಮುಖ ತೊಳೆದುಕೊಂಡು ಕ್ಯಾಮೆರಾ ಬ್ಯಾಗ್ ಹೆಗಲಿಗೇರಿಸಿ ರೂಮಿನಿಂದ ಹೊರಬಿದ್ದೆ.  ಧಾರವಾಡ ಎದ್ದಿತ್ತಾದರೂ ಪೂರ್ತಿ ಎದ್ದಿರಲಿಲ್ಲ. ಸ್ವಲ್ಪ ದೂರ ನಡೆಯುವಷ್ಟರಲ್ಲಿ  ಒಂದು ಕಾಂಪ್ಲೆಕ್ಸ ಕೆಳಗೆ ನನ್ನ ವೃತ್ತಿ ಭಾಂದವರಾದ ದಿನಪತ್ರಿಕೆ ವಿತರಕರು ಅವರ ಬೀಟ್ ಹುಡುಗರು ಸೈಕಲ್ಲಿಗೆ ಕ್ಯಾರಿಯರಿಗೆ ಪೇಪರುಗಳನ್ನು ಜೋಡಿಸಿಕೊಳ್ಳುತ್ತಿದ್ದರು.


 ನಮ್ಮ  ವೃತ್ತಿ ಭಾಂದವರು ಎಲ್ಲಿದ್ದರೂ ನನ್ನ ಕಣ್ಣಿಗೆ ಕಾಣಲೇಬೇಕು!


 ಮಂಜು ಮುಸುಕಿದ ದಟ್ಟಮರಗಳ ಧಾರವಾಡ ರಸ್ತೆ!


 ಮುಂಜಾವಿನ ಧಾರವಾಡ ರಸ್ತೆ




  ಆಗಾಗ ಕಾಣುವ ದೂರದ ಊರಿನ ಬಸ್ಸುಗಳ ಜೊತೆಗೆ ಸಿಟಿಬಸ್ಸುಗಳು ಒಂದೊಂದಾಗಿ ಕಾಣತೊಡಗಿದವು. ರಸ್ತೆಗಳ ಎರಡೂ ಬದಿಯಲ್ಲೂ ದಟ್ಟಮರಗಳು ನಮ್ಮ ಹದಿನೈದು ವರ್ಷದ ಬೆಂಗಳೂರನ್ನು ನೆನಪಿಸಿದವು. ಅದ್ಯಾಕೋ ಖುಷಿಯಿಂದ ಒಂದಷ್ಟು ಮರಗಳ ಸಮೇತ ರಸ್ತೆಗಳ ಪೋಟೊಗಳನ್ನು ಕ್ಲಿಕ್ಕಿಸಿದೆ. ಹಾಗೇ ಸಾಗುತ್ತಿದ್ದಂತೆ ಆರ್.ಎನ್ ಸೆಟ್ಟಿ ಮೈದಾನ ಕಾಣಿಸಿತು. ಒಳಗೆ ಹೋದೆ. ಯುವಕ ಯುವತಿಯರು ಜಾಗಿಂಗ್ ಮಾಡುತ್ತಿದ್ದರು, ಬಾಲಕರು ಪುಟ್‍ಬಾಲ್ ಆಡುತ್ತಿದ್ದರು. ವಯಸ್ಸಾದವರು ವಾಕ್ ಮಾಡುತ್ತಿದ್ದರು. ದೂರದಲ್ಲೊಬ್ಬ ಪ್ರಾಣಯಾಮ ಮಾಡುತ್ತಾ ಉಸಿರು ಎಳೆದುಬಿಡುತ್ತಿದ್ದಾನೆ.  ಇದೆಲ್ಲವೂ ಏನು ವಿಶೇಷವಿಲ್ಲವೆಂದುಕೊಳ್ಳುವಷ್ಟರಲ್ಲಿ ಪಕ್ಕದಿಂದ ಕೆಲವು ವಯಸ್ಕ ಮಹಿಳೆಯರ ದ್ವನಿಗಳು ಕೇಳಿಬರತೊಡಗಿದವಲ್ಲ! ನಾನು ಅತ್ತ ತಿರುಗದೇ ಹಾಗೆ ಕೇಳಿಸಿಕೊಂಡೆ!




" ಅಲ್ಲ ಕಣ್ರಿ, ಈ ರಾಜಕೀಯ್ದೋವ್ರಿಗೆ ಏನು ಬಂದು ಸಾಯಲ್ವಾ? ನಮ್ಮ ದುಡ್ಡಲ್ಲಿ ರಿಸಾರ್ಟ್‍ನಲ್ಲಿ ಕೂತು ಮಜಮಾಡುತ್ತಾರಲ್ವಾ?
"ಹೌದು ಬಾಯೆರ್ರ...ಇವರಿಗೆ ದೊಡ್ಡ ರೋಗಬಡಿಬೇಕು ನೋಡ್ರಿ..’ ಹೇಳಿದಳು ಈಕೆ.

ಹೂ ಕಣ್ರಿ..ಇವರಿಗೆ ಚಿಕನ್ ಗುನ್ಯಗಿಂತ ದೊಡ್ಡದು ಅದೇನೋ ಮಟನ್ ಗುನ್ಯ ಅಂತ ಬಂದಿದೆಯಂತೆ ಅದು ಬಂದವರಿಗೆ ಆರುತಿಂಗಳು ನರಕದರ್ಶನವಂತೆ! ಅದು ಇವರಿಗಾದ್ರು ಬರಬಾರದಾ? ಶಾಪ ಹಾಕಿದಳು ಆಕೆ.


ಮತ್ತೆ ಇದು ಮುಂದುವರಿದು ಯಡಿಯೂರಪ್ಪ, ಕುಮಾರಸ್ವಾಮಿ,............ರೇಣುಕಾಚಾರ್ಯ....ಸಾಗುತ್ತಿತ್ತು.  ಹಾಗೆ ಮೈದಾನದಿಂದ ಹೊರಗೆ ಬಂದು ರಸ್ತೆಯಲ್ಲಿ ನಡೆಯತೊಡಗಿದೆ. ಕಾಲೇಜಿಗೆ ಹೋಗುವ ಸುಂದರ ಹುಡುಗಿಯರು ಕಾಣಿಸತೊಡಗಿದರು.

 ರಸ್ತೆ ಬದಿಯ ಹೋಟಲ್ ಹಿಂಭಾಗದಲ್ಲಿ ಮುಂಜಾವಿನಲ್ಲಿ ನೀರು ಕಾಯಿಸುತ್ತಿರುವ ವಯಸ್ಕ ಮಹಿಳೆ



ಅವರನ್ನೆಲ್ಲಾ ಹಾಗೆ ನೋಡಿ ಕಣ್ಣುತುಂಬಿಕೊಳ್ಳುತ್ತಾ, ಕನ್ನಡ ಸಂಸ್ಕೃತಿ ಇಲಾಖೆ ಕಟ್ಟಡ, ಮಂದಾರ ಹೋಟಲ್ ಸಾಗಿ ದಾರಿಯಲ್ಲಿ ಸಿಕ್ಕ ಒಂದು ಪುಟ್ಟ ಹೋಟಲ್ಲಿ ಚಾ ಕುಡಿದು ಹೋಟಲ್ಲಿಗೆ ಬರುವ ಹೊತ್ತಿಗೆ ಯಾರೋ ದೂರದಿಂದ ಕೈಯಾಡಿಸುತ್ತಿರುವುದು ಕಾಣಿಸಿತು. ಹತ್ತಿರ ಬರುವಷ್ಟರಲ್ಲಿ ಆತ ಚಿದಾನಂದ ಸಾಲಿ ಅಂತ ಗೊತ್ತಾಯಿತು.  ಕಳೆದ ನಾಲ್ಕು ತಿಂಗಳಿಂದ ಬರೀ ಫೋನಿನಲ್ಲಿ ನಮ್ಮ ಗೆಳೆತನ ಬೆಳೆದಿದ್ದರಿಂದ ನಾನು ಅವರನ್ನು ನೋಡಿರದಿದ್ದರೂ ಆತ ನನ್ನ ಬ್ಲಾಗಿನಲ್ಲಿ ನನ್ನ ಫೋಟೊ ನೋಡಿದ್ದರಿಂದ ಹತ್ತಿರ ಬಂದವರೇ ನನ್ನ ಅಪ್ಪಿಕೊಂಡುಬಿಟ್ಟರು.  ಮತ್ತೆ ಮಾತಾಡಿ ಪರಿಚಯಮಾಡಿಕೊಂಡ ಮೇಲೆ ಜೊತೆಗಿದ್ದವರು ಆರೀಪ್ ರಾಜ ಅಂತ ಪರಿಚಯ ಮಾಡಿಕೊಂಡರು.  ಅಲ್ಲಿಂದ ಮತ್ತೆ ನಮ್ಮ ರೂಮ್ ಸೇರಿ ಸಿದ್ದರಾಗಿ ಹೊರಬರುವ ಹೊತ್ತಿಗೆ ಸಮಯ ಒಂಬತ್ತುವರೆಯಾಗಿತ್ತು.
            
ಈ ಫೋಟೊ ಚೆನ್ನಾಗಿದೆಯಲ್ವಾ.....


ಮತ್ತೆ ಸ್ವಲ್ಪ ಹೊತ್ತಿನಲ್ಲೇ  ಮುಂಡರಗಿಯ ಸಲೀಂ ಮತ್ತು ಬಾಗಲಕೋಟದ ಇಂದ್ರಕುಮಾರ್ ಕೂಡಿಕೊಂಡರು. ಅವರು ನನ್ನ ವೆಂಡರ್ ಕಣ್ಣು ಪುಸ್ತಕಕ್ಕೆ ಬಹುಮಾನ ಬಂದ ಸಂತೋಷಕ್ಕೆ  ನನ್ನ ಮೇಲಿನ ಪ್ರೀತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು. ಎಲ್ಲರೂ ಒಟ್ಟಿಗೆ ಬೆಳಗಿನ ಉಪಹಾರ ಮುಗಿಸಿ ದ.ರಾ.ಬೇಂದ್ರೆ ಭವನವನ್ನು ಸೇರುವ ಹೊತ್ತಿಗೆ ಹತ್ತುವರೆಯಾಗಿತ್ತು.

ಅರೀಫ್ ರಾಜರ "ಪಕೀರ ಜಂಗಮ ಜೋಳಿಗೆ, ಮತ್ತು ನನ್ನ ವೆಂಡರ್ ಕಣ್ಣು ಪುಸ್ತಕದ ಬಗ್ಗೆ ಅವಲೋಕಿಸಿದವರು ಡಾ.ರಂಗರಾಜ ವನದುರ್ಗ. ಸಂದೀಪ್ ನಾಯಕ್‍ರ "ಗೋಡೆಗೆ ಬರೆದ ನವಿಲು" ಚಿದಾನಂದ ಸಾಲಿಯವರ "ಯಜ್ಞ" ಅನುವಾದ ಕೃತಿ, ಮಾರ್ತಾಂಡಪ್ಪ ಕತ್ತಿಯವರ "ಬಸವರಾಜ ಮನ್ಸೂರರ ಜೀವನ ಚರಿತೆ" ಶ್ರೀಧರ ಹೆಗಡೆ ಭದ್ರನ್‍ರವರ "ವಿಸ್ತರಣೆ" ಕೃತಿಗಳ ಬಗ್ಗೆ ಜಗದೀಶ ಮಂಗಳೂರ್ ಮಠ್‍ರವರು ಮಾತಾಡಿದರು. ನಂತರ ಇಡೀ ಕಾರ್ಯಕ್ರಮವನ್ನು ಉದ್ದೇಶಿಸಿ ಮತ್ತು ಪುಸ್ತಕಗಳ ಬಗ್ಗೆ ಇಂದಿನ ಸಾಹಿತ್ಯದ ಬಗ್ಗೆ ಲವಲವಿಕೆಯಿಂದ ಮಾತಾಡಿದವರು ಜಯಂತ್ ಕಾಯ್ಕಿಣಿ.


ಕಾರ್ಯಕ್ರಮದ ನಡುವೆ ಪುಸ್ತಕ ಮಾರಾಟ ಹೊರಗೆ ನಡೆಯುತ್ತಿತ್ತು. ನಾನು ತೆಗೆದುಕೊಂಡು ಹೋಗಿದ್ದ ಹದಿನೈದು "ವೆಂಡರ್ ಕಣ್ಣು ಪುಸ್ತಕಗಳು ಮಾರಾಟವಾಗಿದ್ದು ನನಗೆ ಖುಷಿಯಾಗಿತ್ತು.  ಮದ್ಯಾಹ್ನ ಸಂಸ್ಥೆಯವರ ಜೊತೆ ಜಯಂತ್ ಕಾಯ್ಕಿಣಿ ಮತ್ತು ಬಹುಮಾನ ಪುರಸ್ಕೃತರಾದ ನಾವೆಲ್ಲಾ ಸಹಜವಾದ ಮಾತು, ಹರಟೆ, ತಮಾಷೆಗಳೊಂದಿಗೆ ಒಟ್ಟಿಗೆ ಊಟ ಮಾಡಿದ್ದು ಮರೆಯಲಾಗದ ಅನುಭವ.

ಸಂಜೆ ಧಾರವಾಡ ವಿಶ್ವವಿದ್ಯಾಲಯವನ್ನು ಸಲೀಂ ಮತ್ತು ಇಂದ್ರಕುಮಾರ್ ಜೊತೆ ನೋಡಲು ಹೋದಾದ ಅದರ ಆಗಾದವಾದ ಕ್ಯಾಂಪಸನ್ನು ನೋಡುವುದೇ ಒಂದು ಆನಂದ. ದಟ್ಟ ಮರಗಳ ನಡುವೆ ಅಲ್ಲಲ್ಲಿ ಇರುವ ವಿಭಾಗಗಳು, ಕಾಲೇಜು ಮತ್ತು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು,..........ಈಗ ಹತ್ತು ವರ್ಷ ಚಿಕ್ಕವನಾಗಿದ್ದರೆ ಇಲ್ಲಿ ಸ್ನಾತಕೋತ್ತರ ಪದವಿಗೆ ಸೇರಿಕೊಳ್ಳುವ ಆಸೆ ಮನದಲ್ಲಿ ಮೂಡಿತ್ತು.

 ಸೂರ್ಯ ಮುಳುಗುವ ಹೊತ್ತಿನಲ್ಲಿ ಧಾರವಾಡ ವಿಶ್ವವಿದ್ಯಾಲಯ ಮುಖ್ಯ ಕಟ್ಟಡ.



 ದಟ್ಟ ಮರಗಳಿಂದ ಕೂಡಿದ ಕ್ಯಾಂಪಸಿನ ರಸ್ತೆ...


    ಸಂಜೆ ಹೊತ್ತಿನಲ್ಲಿ ಧಾರವಾಡ ವಿಶ್ವವಿದ್ಯಾಲಯದ ಕ್ಯಾಂಪಸ್.


ಅಲ್ಲಿಂದ ಹೊರಬಂದು ಬಸ್ ಹತ್ತಿ ನಮ್ಮ ಸಂಜೆ ಕಾರ್ಯಕ್ರಮವಿದ್ದ ಸೃಜನ ರಂಗಮಂದಿರಕ್ಕೆ ಬಂದೆವು ಅಲ್ಲಿ ನಮಗಾಗಿ ಸುನಾಥ್‍ರವರು ಕಾಯುತ್ತಿದ್ದರು. ಅವರನ್ನು ಬೇಟಿಯಾಗಿದ್ದು ಒಂದು ವಿಭಿನ್ನ ಅನುಭವ. ಸಂಜೆ ಕಾರ್ಯಕ್ರಮ ಮುಗಿದು ಎಲ್ಲರಿಂದಲೂ ಬೀಳ್ಕೊಡುವಾಗ ಎಲ್ಲರ ಮನತುಂಬಿಬಂದಿತ್ತು.  ವಾಪಸ್ಸು ರೂಮಿಗೆ ಬಂದು ನಮ್ಮ ಲಗ್ಗೇಜುಗಳನ್ನು ಪ್ಯಾಕ್ ಮಾಡಿಕೊಂಡು ಒಂದು ದೊಡ್ಡ ಮಿಶ್ರ ಪೇಡ ಅಂಗಡಿಯಲ್ಲಿ ಧಾರವಾಡ ಪೇಡವನ್ನು ಕೊಂಡು ಪಕ್ಕದಲ್ಲಿಯೇ ಇದ್ದ ೯೦ ವರ್ಷ ಹಳೆಯದಾದ ಬಸಪ್ಪ ಖಾನಾವಳಿಯಲ್ಲಿ ಊಟಮಾಡಿ ರೈಲು ನಿಲ್ದಾಣದ ಬಳಿಗೆ ಬರುವ ಹೊತ್ತಿಗೆ ೯-೩೦.  ನಾನು ಬೆಂಗಳೂರಿಗೆ ಬರುವ ರಾಣಿಚೆನ್ನಮ್ಮ ಎಕ್ಸ್‍ಪ್ರೆಸ್ ಬಂದುನಿಂತಿತ್ತು.

ಇಡೀ ದಿನದ ಧಾರವಾಡದ ಅನುಭವವನ್ನು ಮೆಲುಕು ಹಾಕುತ್ತಿರುವಾಗಲೇ ಅದ್ಯಾವಾಗ ನಿದ್ರೆ ಬಂತೊ ಗೊತ್ತಿಲ್ಲ.  ಬೆಳಿಗ್ಗೆ ಕಣ್ಣು ಬಿಟ್ಟಾಗ ರೈಲು ತುಮಕೂರು ದಾಟಿ ಬೆಂಗಳೂರಿನ ಕಡೆ ವೇಗವಾಗಿ ಚಲಿಸುತ್ತಿತ್ತು.


ಚಿತ್ರಗಳು ಮತ್ತು ಲೇಖನ:
ಶಿವು.ಕೆ