Saturday, June 19, 2010

ನಾಗರಹೊಳೆ ಛಾಯಾಗ್ರಹಣ ಪ್ರವಾಸ ಭಾಗ-೧

"ಶಿವು, ನಿಮಗೆ ಆ ಶಬ್ದ ಕೇಳಿಸುತ್ತಿದೆಯಾ?"

"ಯಾವ ಶಬ್ದ ಸಾರ್?"

"ಸ್ವಲ್ಪ ಗಮನವಿಟ್ಟು ಕೇಳಿ?"

ನಾನು ಮೈಯಲ್ಲಾ ಕಿವಿಯಾಗಿ ಆಲಿಸಿದೆ. "ಜೊಯ್ಯ್..ಯ್........" ಶಬ್ದವೊಂದೇ ಜೋರಾಗಿ ಕೇಳಿಸುತ್ತಿತ್ತು.

"ಸಾರ್, ಇದು ಸಿಕಾಡಗಳ ಶಬ್ದವಲ್ಲವೇ?" ಕೇಳಿದೆ.

ನಾನು ಮತ್ತೆ ಮೈ ಮನಸ್ಸನ್ನೆಲ್ಲಾ ಕಿವಿಯಾಗಿಸಿದರೂ ಗೊತ್ತಾಗಲಿಲ್ಲ.

"ಗೊತ್ತಾಗುತ್ತಿಲ್ಲ ಸರ್", ಅಂದೆ.

"ಅರೆರೆ ಇದೇನ್ ಶಿವು, ನೀವು ಭಲೇ ಚುರುಕು ಅಂದುಕೊಂಡಿದ್ದೆ. ನೀವು ನಿಮ್ಮ ಕಣ್ಣುಮುಚ್ಚಿಕೊಳ್ಳಿ. ಈಗ ಹೊರಗಿನ ಪ್ರಪಂಚದ ಶಬ್ದವನ್ನು ಏಕಾಗ್ರತೆಯಿಂದ ಆಲಿಸಿ ನೋಡಿ," ಅಂದರು.

ಕೊನೆ ಪ್ರಯತ್ನವೂ ಆಗಿಹೋಗಲಿ ಅಂತ ಅವರು ಹೇಳಿದಂತೆ ಕಣ್ಣು ಮುಚ್ಚಿದೆ. ಸಿಕಾಡಗಳ ಅರಚಾಟದ ನಡುವೆ ಹೊಸ ಶಬ್ದ ಕೇಳಿಸಿತು.

"ಸಾರ್ ವಟರ್ ವಟರ್ ಅಂತ ಕೇಳಿಸುತ್ತಿದೆ, ಅದು ಕಪ್ಪೆ ಶಬ್ದಗಳಲ್ಲವೇ"

ಹೌದು, ಅದನ್ನೇ ನಾನು ಹೇಳಿದ್ದು, ಈಗ ಗೊತ್ತಾಯಿತಾ? ಹತ್ತಿರದಲ್ಲಿ ಇಲ್ಲೆಲ್ಲೋ ಕಪ್ಪೆಗಳಿವೆ ಹುಡುಕೋಣವೇ" ಅಂದರು.

ಅವರ ಉತ್ಸಾಹಕ್ಕೆ ನಾನು ಬೆರಗಾಗಿದ್ದೆ. ಅವರು ನಿವೃತ್ತ ಜೀವಶಾಸ್ತ್ರ ಉಪನ್ಯಾಸಕರು. ಜೀವಶಾಸ್ತ್ರವೆಂದ ಮೇಲೆ ಕೇಳಬೇಕೆ? ಕಪ್ಪೆ ಜಿರಲೆಗಳನ್ನೇ ಕುಯ್ದು ಅದರ ಭಾಗಗಳನ್ನು ವಿವರಿಸುತ್ತಾ ಪಾಠ ಮಾಡಿದವರು. ಅದಕ್ಕೆ ಅವರಿಗೆ ಕಪ್ಪೆ ಕೂಗುವ ಶಬ್ದ ನಮಗೆಲ್ಲರಿಗಿಂತ ಚೆನ್ನಾಗಿ ಅವರಿಗೆ ಕೇಳಿಸುತ್ತಿದೆ.

ಸರ್, ಈಗ ಸಮಯ ರಾತ್ರಿ ಹತ್ತು ಗಂಟೆ. ನಾವು ಇಲ್ಲಿಗೆ ಬಂದಾಗಿನಿಂದ ವಿದ್ಯುತ್ ಇಲ್ಲ. ಮೇಡದ ಬತ್ತಿಯಲ್ಲೇ ರಾತ್ರಿ ಜೀವನವನ್ನು ಕಳೆಯುತ್ತಿದ್ದೇವೆ. ಹೊರಗೆ ಇಣುಕಿದರೆ ಗಾಢಕತ್ತಲು. ನಾವು ಈ ಅತಿಥಿಗೃಹದಿಂದ ಹೊರಗೆ ಹೋದರೆ ಈ ಕಾಡಿನಲ್ಲಿ ಒಂದು ಅಡಿ ಅಂತರದಲ್ಲೂ ಒಬ್ಬರಿಗೊಬ್ಬರೂ ಕಾಣುವುದಿಲ್ಲ. ಅಂತದ್ದರಲ್ಲಿ ಆ ಕಪ್ಪೆಗಳು ನಮಗೆ ಸಿಗುತ್ತವೆಯೇ ಸರ್? ಪ್ರಶ್ನಿಸಿದೆ.

ನೋಡಿ ಶಿವು, ನಮ್ಮೆಲ್ಲರ ಬಳಿಯೂ ಬ್ಯಾಟರಿ ಇದೆ. ಸಂಜೆ ಮಳೆಬಂದು ನಿಂತು ವಾತಾವರಣವೆಲ್ಲಾ ಒಂಥರ ಹಿತವಾಗಿದೆ. ಪ್ರಯತ್ನಿಸಿದರೆ ತಪ್ಪೇನು?" ಅಂತ ಅವರು ಹೇಳಿದಾಗ ಅವರ ಉತ್ಸಾಹ ಕಂಡು ನಮಗೂ ಸ್ಫೂರ್ತಿ ಬಂತು.

ಸರಿ ಸರ್, ಹೋಗೋಣ, ನಡೀರಿ" ಅಂದೆನಾದರೂ ನಿಜಕ್ಕೂ ನಮಗೆ ಈ ಗಾಢ ಕತ್ತಲಿನಲ್ಲಿ ಆ ಕಪ್ಪೆಗಳ ಫೋಟೊ ತೆಗೆಯಲು ಸಾಧ್ಯವೇ ಅನ್ನಿಸಿತ್ತು.

ಇದಿಷ್ಟು ಸಂಭಾಷಣೆ ನಡೆದಿದ್ದು ನಾಗರಹೊಳೆ ಕಾಡಿನ ವಲಯದ ಕಲ್ಲಹಳ್ಳದಲ್ಲಿರುವ ಅರಣ್ಯ ಇಲಾಖೆಯವರ ಅತಿಥಿಗೃಹದಲ್ಲಿ. ನಾವು ನಾಲ್ವರು ಛಾಯಾಗ್ರಾಹಕರು[ನನ್ನ ಜೊತೆ ರಮಾಕಾಂತ್ ಆತ್ರೇಯ, ರಾಜೇಂದ್ರ, ದೇವರಾಜ್] ಎರಡು ದಿನದ ಮಟ್ಟಿಗೆ ನಾಗರಹೊಳೆ ಫೋಟೋಗ್ರಫಿ ಪ್ರವಾಸ ಹೊರಟು ಅಲ್ಲಿ ಉಳಿದುಕೊಂಡಿದ್ದೆವು. ಆ ದಟ್ಟಕಾಡಿನ ನಡುವೆ ಇರುವ ಈ ಅತಿಥಿಗೃಹದ ಜೊತೆಗೆ ಅರಣ್ಯ ಇಲಾಖೆಯ ಕಛೇರಿ, ನಮಗೆಲ್ಲಾ ಆಡುಗೆ ಮಾಡಿಕೊಡುವ ಭಟ್ಟನ ಮನೆ ಬಿಟ್ಟರೆ ಸುತ್ತ ಹದಿನೈದು ಕಿಲೋಮೀಟರ್ ಅಳತೆಯಲ್ಲಿ ಒಂದು ಮನೆಯೂ ಇಲ್ಲ ಮನೆಯಲ್ಲಿನ ಬೆಂಕಿಪಟ್ಟಣವೂ ಸಿಗುವುದಿಲ್ಲ. ಸರ್ಕಾರಿ ಅತಿಥಿಗೃಹವಾದ್ದರಿಂದ ನಾವಿದ್ದ ಎರಡು ದಿನವೂ ವಿದ್ಯುತ್ ಇರಲೇಇಲ್ಲ. ಹಗಲೆಲ್ಲಾ ಫೋಟೊಗ್ರಫಿಗೆ ಅಂತ ಕಾಡು ಮೇಡು ಸುತ್ತಾಡಿ, ಸಂಜೆಯಾಗುತ್ತಿದ್ದಂತೆ ಮೇಣದಬತ್ತಿ ಹೊತ್ತಿಸಿಕೊಂಡೇ ರಾತ್ರಿ ಜೀವನವನ್ನು ಕಳೆಯುತ್ತಿದ್ದೆವು. ಎರಡನೇ ದಿನದ ಕಾಡೆಲ್ಲಾ ಸುತ್ತಾಡಿ ಬಂದು ರಾತ್ರಿ ಕತ್ತಲಿನಲ್ಲೇ ಊಟ ಮುಗಿಸುವ ಹೊತ್ತಿಗೆ ಸಮಯ ಒಂಬತ್ತು ದಾಟಿತ್ತು. ಮಳೆಬಂದು ನಿಂತಿದ್ದರಿಂದ ವಾತಾವರಣ ಹಿತಕರವಾಗಿತ್ತು. ಹಾಗೆ ಅತಿಥಿಗೃಹದ ಬಾಲ್ಕನಿಯಲ್ಲಿ ನಿಂತಾಗ ಈ ಕಪ್ಪೆಯ ವಟರ್‌ಗುಟ್ಟುವಿಕೆಯನ್ನು ಕೇಳಿಸಿಕೊಂಡಿದ್ದರು ರಮಾಕಾಂತ್ ಆತ್ರೇಯ. ಅವರಿಗೆ ಉಪನ್ಯಾಸದ ಜೊತೆಗೆ ಫೋಟೋಗ್ರಫಿ ಹವ್ಯಾಸ.

ನಾಲ್ಕು ಜನರು ಕ್ಯಾಮೆರಾ, ಸ್ಟ್ಯಾಂಡ್, ಬ್ಯಾಟರಿಗಳ ಸಮೇತ ಸಜ್ಜಾಗಿ ಹೊರಬರುವಾಗ ರಾತ್ರಿ ಹತ್ತು ಗಂಟೆಯಾಗಿತ್ತು. ಹೊರಗೆ ವಾತಾವರಣ ತಂಪಾಗಿದ್ದರೂ ಒಬ್ಬರಿಗೊಬ್ಬರು ಕಾಣುತ್ತಿರಲಿಲ್ಲ. ಬ್ಯಾಟರಿಬಿಟ್ಟುಕೊಂಡೇ ಮುಖನೋಡಿಕೊಳ್ಳಬೇಕಾಗಿತ್ತು. ನಮಗೆಲ್ಲರಿಗಿಂತ ಮುಂದೆ ರಮಾಕಾಂತ್ ಇದ್ದರು. ಸ್ವಲ್ಪ ದೂರ ನಡೆಯುವಷ್ಟರಲ್ಲಿ ಮತ್ತೆ ಅದೇ ಶಬ್ದ ಕೇಳಿಸಿತು. ಎಲ್ಲರು ನಿಶ್ಯಬ್ದವಾಗಿ ನಿಂತು ಮೈಯಲ್ಲಾ ಕಿವಿ ಮಾಡಿಕೊಂಡೆವು. ನಿದಾನವಾಗಿ ಸಿಕಾಡಗಳ ಗುಯ್‍ಗುಡುವ ಶಬ್ದದ ನಡುವೆ "ವಟರ್ ವಟರ್, ವಟರ್, ವಟರ್, ಅಂತ ಕೇಳಿಸುತ್ತಿದೆ. ಅದರೆ ಅವನ್ನು ಈ ಗಾಢ ಕತ್ತಲಿನಲ್ಲಿ ಎಲ್ಲಿ ಅಂತ ಹುಡುಕುವುದು? ಶಬ್ದ ಚೆನ್ನಾಗಿ ಕೇಳಿಸುತ್ತಿತ್ತಾದರೂ ಆ ಕತ್ತಲಿನಲ್ಲಿ ಯಾವ ದಿಕ್ಕಿನಿಂದ ಬರುತ್ತಿದೆ ಎನ್ನುವುದು ಗೊತ್ತಾಗುತ್ತಿರಲಿಲ್ಲ. ನಮ್ಮ ಪ್ರಯತ್ನ ಸುಮ್ಮನೆ ಗುರಿಯಿಲ್ಲದೇ ಅಕಾಶಕ್ಕೆ ಕಲ್ಲುಹೊಡೆದಂತೆ ಅನ್ನಿಸುತ್ತಿತ್ತು.

"ಸರ್, ಯಾವ ದಿಕ್ಕಿನಿಂದ ಶಬ್ಬ ಬರುತ್ತಿದೆಯೆಂದು ಗೊತ್ತಾಯ್ತಾ?" ಕೇಳಿದೆ.

"ಶಿವು, ಒಂದು ನಿಮಿಷ ಸುಮ್ಮನಿರಿ," ಅಂದವರು ನಿದಾನವಾಗಿ ಆ ಶಬ್ದವನ್ನು ಆಲಿಸಿ ಕತ್ತಲಿನಲ್ಲಿ ಬ್ಯಾಟರಿ ಬಿಟ್ಟು ಹುಡುಕತೊಡಗಿದರು. ರಾಜೇಂದ್ರ ಮತ್ತು ದೇವರಾಜ್ ಕೂಡ ಅವರ ಜೊತೆ ಹುಡುಕತೊಡಗಿದರು. ನಾನು ನಿಂತಿದ್ದ ಜಾಗವನ್ನೊಮ್ಮೆ ಬ್ಯಾಟರಿ ಬೆಳಕಿನಿಂದ ನೋಡಿದೆ. ಅದು ಕುರುಚಲುಗಿಡಗಳು ಪೊದೆಗಳು ಇರುವಂತ ಸ್ಥಳ. ಕಾಡುಪ್ರಾಣಿಗಳಿಗೆ ಇಷ್ಟವಾಗುವಂತ ಸ್ಥಳ. ಆಗಲೇ ನಮಗೆ ಸೊಳ್ಳೆಗಳು ಕಚ್ಚಲು ಪ್ರಾರಂಭಿಸಿದ್ದವು. ಅಷ್ಟರಲ್ಲಿ ನಮ್ಮ ರೂಮಿನ ಆಡಿಗೆ ಭಟ್ಟ ಹೇಳಿದ ಮಾತು ನೆನಪಾಯಿತು.

ನಾವು ಉಳಿದುಕೊಂಡಿದ್ದ ಕಲ್ಲಹಳ್ಳದ ಅರಣ್ಯ ಇಲಾಖೆ ಅತಿಥಿಗೃಹ.

" ಸಾರ್, ಈ ಗೆಸ್ಟ್ ಹೌಸ್ ಚಾವಣಿಗಳ ಮೇಲೆ ಮರಗಳ ಕೊಂಬೆಗಳು ಇಳಿಬಿದ್ದಿರುವುದರಿಂದ ಯಾವುದೇ ಕಾರಣಕ್ಕೂ ಬಾಲ್ಕನಿ ಮತ್ತು ರೂಮುಗಳ ಕಿಟಕಿಗಳನ್ನು ತೆರೆಯಬೇಡಿ, ಇಲ್ಲಿ ಹಾವುಗಳ ಕಾಟ ಜಾಸ್ತಿ, ಮರದ ಕೊಂಬೆಗಳ ಮೇಲಿಂದ ಇಳಿದು ಕಿಟಕಿಗಳ ಮೂಲಕ ಅವು ಬಂದುಬಿಡಬಹುದು, ಯಾವುದೇ ಕಾರಣಕ್ಕೂ ಕಿಟಕಿಗಳನ್ನು ತೆರೆಯಬೇಡಿ ಅಂದಿದ್ದು ನೆನಪಾಯಿತು. ಮೊದಲನೆ ರಾತ್ರಿ ಎಲ್ಲಾ ಬಂದ್ ಮಾಡಿ ಮಲಗಿದ್ದೆವು. ಅಂತ ಗೆಸ್ಟ್ ಹೌಸ್ ಹತ್ತಿರವೇ ಹಾವು ಬರಬಹುದಾದರೇ ಇಂಥ ಪೊದೆಗಳ ಇರುವುದಿಲ್ಲವೆನ್ನುವುದಕ್ಕೆ ಏನು ಗ್ಯಾರಂಟಿ" ಮನಸ್ಸಿಗೆ ಇಂಥ ಒಂದು ಆಲೋಚನೆ ಬಂದ ಕೂಡಲೇ ಅಂತ ಚಳಿಯಲ್ಲೂ ಮೈಬೆವರಿತ್ತು. ಇದು ಮೊದಲೇ ಹಾವುಗಳ ವಿಶ್ರಾಂತಿಗೆ ಹೇಳಿಮಾಡಿಸಿದಂತ ಪೊದೆಯಂತ ಜಾಗ. ಕಪ್ಪೆಗಳಿದ್ದ ಮೇಲೆ ಅವುಗಳನ್ನು ಬೇಟೆಯಾಡಲು ಹಾವುಗಳು ಬರದಿರುತ್ತವೆಯೇ?, ಇದೆಲ್ಲಾ ಅಲೋಚನೆ ಒಮ್ಮೇಗೆ ತಲೆಗೆ ಬಂದು ಭಯಕ್ಕೆ ಆ ಕತ್ತಲಿನಲ್ಲಿ ನನ್ನ ಬ್ಯಾಟರಿಯಿಂದ ಬೆಳಕು ಹರಿಸಿದೆ. ಸುತ್ತಲಿದ್ದ ಪೊದೆಗಳು ಹೇಗೆ ಕಾಣತೊಡಗಿದವೆಂದರೆ, ಅವುಗಳ ಒಳಗೆಲ್ಲಾ ಅಲ್ಲಲ್ಲಿ ನಾಗರಹಾವು, ಕಿಂಗ್ ಕೋಬ್ರ, ............ಇನ್ನೂ ಅನೇಕವು ತೆಕ್ಕೆಹಾಕಿಕೊಂಡು ಮಲಗಿದ್ದಂತೆ, ಕೆಲವು ತಲೆಯೆತ್ತಿ ನಮ್ಮನ್ನೇ ನೋಡುತ್ತಿರುವಂತೆ ಭಾಷವಾಗತೊಡಗಿತ್ತು.

ಶಿವು, ಏನು ಹುಡುಕುತ್ತಿದ್ದೀರಿ, ನನ್ನ ಬ್ಯಾಟರಿ ಬೆಳಕು ಡಲ್ ಆಗಿದೆ, ನಿಮ್ಮ ಬ್ಯಾಟರಿ ಇತ್ತ ಬಿಡಿ" ಅಂತ ರಮಾಕಾಂತ ಕೇಳಿದಾಗ ಆ ಆಲೋಚನೆಯಿಂದ ಹೊರಬಂದಾಗಿ ಅವರು ಹೇಳಿದ ಕಡೆ ಬ್ಯಾಟರಿ ಬಿಟ್ಟೆ. ನಡುವೆ ಮತ್ತೊಮ್ಮೆ ಕಪ್ಪೆಯ "ವಟರ್ ವಟರ್, ವಟರ್ ವಟರ್.....ಕೇಳಿಬಂತು. ಎಲ್ಲರೂ ಆ ಕತ್ತಲಲ್ಲಿ ಶಬ್ದ ಬಂದ ಕಡೆ ನೋಡಿ ಅತ್ತ ನಡೆದೆವು. ಹತ್ತು ಹೆಜ್ಜೆ ಇಡುವಷ್ಟರಲ್ಲಿ ಆ ಶಬ್ದ ನಿಂತುಹೋಯಿತು. ಅವಕ್ಕೆ ನಾವು ಬಂದಿರುವುದು ಗೊತ್ತಾಯಿತೇನೋ. ಸುಮ್ಮನಾಗಿಬಿಟ್ಟವು. ಈ ಕಪ್ಪೆಗಳು ನಮ್ಮನ್ನು ಸರಿಯಾಗಿ ಯಾಮಾರಿಸುತ್ತಿವೆ ಅಂದುಕೊಂಡು ಸುಮ್ಮನೇ ಬೆಪ್ಪುತಕ್ಕಡಿಗಳಂತೆ ಒಬ್ಬರ ಮುಖದ ಮೇಲೆ ಮತ್ತೊಬ್ಬರೂ ಬ್ಯಾಟರಿ ಬಿಟ್ಟುಕೊಂಡೆವು. ನೋಡಿ ಅವು ಇಲ್ಲೇ ಎಲ್ಲೋ ಕೆಳಗೆ ಆಡಗಿರುತ್ತವೆ. ನೆಲದ ಮೇಲೆ, ಅದರ ಪಕ್ಕದಲ್ಲಿರುವ ಪೊದೆಗಳ ಮೇಲೆ ಬೆಳಕುಬಿಟ್ಟು ಹುಡುಕಿ ಅಂತ ಹೇಳುತ್ತಾ, ತಾವು ಹುಡುಕತೊಡಗಿದರು.
ಮೊದಲ ಸಲ ಕಾಣಿಸಿದ ಕಪ್ಪೆ

ಮತ್ತೊಂದು ವಿಭಿನ್ನ ಕಪ್ಪೆ


ಶಿವು, ಬನ್ನಿ ಇಲ್ಲಿ. ಈ ಗಿಡದ ಎಲೆಯ ಮೇಲೆ ಇದ್ದ ಒಂದು ಕಪ್ಪೆ ಬೆಳಕನ್ನು ನೋಡಿ ಪಕ್ಕನೆ ಎಲೆಯ ಮರೆಯಲ್ಲಿ ಹೋಗಿಬಿಡ್ತು! ಅಂದರು ರಾಜೇಂದ್ರ, ನಾನು ಅವರು ಹೇಳಿದ ಕಡೆ ನನ್ನ ಬ್ಯಾಟರಿಯಿಂದ ಬೆಳಕು ಬಿಟ್ಟು ಎಲೆಯನ್ನು ತಿರುಗಿಸಿ ನೋಡಿದೆ ಅಷ್ಟೇ. ಪಣ್ಣನೆ ಬೆಳಕಿನಿಂದ ಕತ್ತಲೆಯೆಡೆಗೆ ಹಾರಿ ಮಾಯವಾಯಿತು ಆ ಕಪ್ಪೆ. ನನಗೆ ಹಾರಿದ್ದು ಮಾತ್ರ ಗೊತ್ತಾಯಿತು. ಕೊನೇ ಪಕ್ಷ ಒಂದು ಕ್ಷಣವಾದರೂ ನೋಡಲು ಸಿಕ್ಕಿತಲ್ಲ ಅಂದುಕೊಂಡೆನಾದರೂ ಹಾರಿದ ಜಾಗವನ್ನು ಹುಡುಕಲಾರಂಭಿಸಿದೆ. ಒಂದೆರಡು ನಿಮಿಷದಲ್ಲಿ ಮತ್ತೊಂದು ಎಲೆಯ ತುದಿಯಲ್ಲಿ ಕುಳಿತಿದ್ದು ಕಾಣಿಸಿತು. ಈಗ ಸ್ಪಷ್ಟವಾಗಿ ಕಾಣುತ್ತಿದೆ! ಇಷ್ಟಕ್ಕೂ ಅದರ ಗಾತ್ರವಿದ್ದುದ್ದು ಕಿರುಬೆರಳ ತುದಿಯಷ್ಟು ಮಾತ್ರ. ಮತ್ತೆ ಅದರ ಮೇಲೆ ಬ್ಯಾಟರಿ ಬೆಳಕು ಬಿಟ್ಟರೆ ಮತ್ತೆಲ್ಲಿ ಹಾರಿಹೋದರೆ ಕಷ್ಟ ಅಂದುಕೊಂಡು ಅದು ಇರುವ ಜಾಗವನ್ನು ಕತ್ತಲಲ್ಲಿ ಗುರುತಿಸಿಕೊಂಡು ನಿದಾನವಾಗಿ ನನ್ನ ಕ್ಯಾಮೆರಾ, ಲೆನ್ಸು, ಸ್ಟ್ಯಾಂಡು, ಎಲ್ಲವನ್ನು ನೆಲದ ಮೇಲೆ ಕುಳಿತುಕೊಂಡು ಸಿದ್ದಮಾಡಿಕೊಂಡೆ. ನನ್ನ ಸಹಾಯಕ್ಕೆ ದೇವರಾಜ್ ನಿಂತಿದ್ದರು. ನಡುವೆ ಸಮಯವನ್ನು ನೋಡಿಕೊಂಡಾಗ ಹನ್ನೊಂದುಗಂಟೆ. ಇರಲಿ ಅಂದುಕೊಳ್ಳುತ್ತಾ ನಿದಾನವಾಗಿ ಕ್ಯಾಮೆರ ಸೆಟ್ ಮಾಡಿದ ಸ್ಟ್ಯಾಂಡ್ ಅನ್ನು ಅರ್ಧರ್ಧ ಅಡಿ ಮಾತ್ರವೇ ಮುಂದೆ ಸರಿಸುತ್ತಾ ಕಪ್ಪೆಯಿದ್ದ ಕಡೆ ತೆವಳಿಕೊಂಡು ಅದಕ್ಕೆ ಒಂದು ಅಡಿಯಷ್ಟು ಹತ್ತಿರವಾದೆ. ಈಗ ನಿದಾನವಾಗಿ ಕಪ್ಪೆ ಕುಳಿತಿದ್ದ ಎಲೆಯ ಪಕ್ಕದ ಎಲೆಯ ಮೇಲೆ ಬೆಳಕು ಬಿಡಲು ದೇವರಾಜ್‍ಗೆ ಹೇಳಿದೆ. ಕಪ್ಪೆಯ ಮೇಲೆ ನೇರವಾಗಿ ಬಿಟ್ಟರೆ ಅದು ದಿಗಿಲುಗೊಂಡು ಹಾರಿಬಿಟ್ಟರೆ? ಅದಕ್ಕಾಗಿ ದೇವರಾಜ್‍ಗೆ ಅದರ ಪಕ್ಕದ ಎಲೆಯ ಮೇಲೆ ಬೆಳಕು ಬಿಡಲು ಹೇಳಿದೆ. ದೇವರಾಜ್ ಹಾಗೆ ಮಾಡಿದರು. ಆ ಮಬ್ಬು ಬೆಳಕಿನಲ್ಲಿ ನಿದಾನವಾಗಿ ಕ್ಯಾಮೆರವನ್ನು ಮತ್ತಷ್ಟು ಹತ್ತಿರ ತಂದು ಫೋಕಸ್ ಮಾಡಲೆತ್ನಿಸಿದೆ. ನಮ್ಮಂತೆ ಕ್ಯಾಮೆರಾಗೂ ಬೆಳಕು ಬೇಡವೇ? ಫೋಕಸ್ ಆಗಲು ಕ್ಯಾಮೆರಾ ಒಪ್ಪಲಿಲ್ಲ. ಲೆನ್ಸ್ ಮಾತ್ರ ನಾನೆಲ್ಲಿ ಫೋಕಸ್ ಮಾಡಬೇಕೆಂಬುದು ಅದಕ್ಕೂ ತಿಳಿಯದೆ ಸುಮ್ಮನೇ ಹಿಂದೆ ಮುಂದೆ ಚಲಿಸುತ್ತಿತ್ತು. ಇದ್ಯಾಕೋ ಸರಿಹೋಗೊಲ್ಲವೆಂದುಕೊಂಡು ದೇವರಾಜ್ ಈಗ ನಿದಾನವಾಗಿ ಕಪ್ಪೆಯಮೇಲೆ ಬ್ಯಾಟರಿ ಬೆಳಕು ಬಿಡಿ ಎಂದೆ. ನಿದಾನವಾಗಿ ತನ್ನತ್ತ ಸರಿದ ಬೆಳಕು ಕಂಡು ಒಮ್ಮೆ ಜಗ್ಗಿತ್ತಾದರೂ ಯಾಕೋ ಮತ್ತೆ ಹಾರಲಿಲ್ಲ. ಅದೇ ಸಮಯವೆಂದು ನಾನು ಕ್ಲಿಕ್ ಬಟನ್ ಆರ್ಧ ಪ್ರೆಸ್ ಮಾಡಿದೆ. ಈಗ ಕ್ಯಾಮೆರಾಗೂ ಬೆಳಕಿನಿಂದ ಕಣ್ಣು ಕಾಣಿಸಿತಲ್ಲ. ತಕ್ಷಣ ಫೋಕಸ್ ಮಾಡಿತು. ಇನ್ನೂ ತಡ ಮಾಡಬಾರದೆಂದು ಕ್ಲಿಕ್ ಬಟನ್ ಪೂರ್ತಿ ಒತ್ತಿದೆ. ....ಕ್ಲಿಕ್...ಕ್ಲಿಕ್...ಕ್ಲಿಕ್ ಹೀಗೆ ಮೂರ್ನಾಲ್ಕು ಫೋಟೊ ತೆಗೆಯುವಷ್ಟರಲ್ಲಿ ಮತ್ತೊಮ್ಮೆ ಹಾರಿ ಕತ್ತಲಲ್ಲಿ ಮಾಯವಾಯಿತು. ಇಂಥದ್ದೆ ಸರ್ಕಸ್ ಅನ್ನು ನಮಗಿಂತ ಇಪ್ಪತ್ತು ಆಡಿ ದೂರದಲ್ಲಿ ರಮಕಾಂತ್ ಸರ್ ರಾಜೇಂದ್ರ ಸಹಾಯದಿಂದ ಮತ್ತೊಂದು ಕಪ್ಪೆಯ ಫೋಟೊ ಕ್ಲಿಕ್ಕಿಸಿದ್ದರು. ಹೀಗೆ ನೈಟ್ ಸರ್ಕಸ್ ಮಾಡಿ ಮೂರು ವಿವಿಧ ರೀತಿಯ ಕಪ್ಪೆಗಳ ಫೋಟೊವನ್ನು ಕ್ಲಿಕ್ಕಿಸಿದ್ದೆವು. ಎಲ್ಲಾ ಪ್ಯಾಕ್ ಮಾಡಿ ವಾಪಸ್ ರೂಮಿನ ಕಡೆಗೆ ಬರುವಷ್ಟರಲ್ಲಿ ಹನ್ನೊಂದು ಮುಕ್ಕಾಲು ದಾಟಿತ್ತು. ಈ ಸ್ಥಳದಲ್ಲಿ ಮೊದಲು ಬೆಳಕು ಬಿಟ್ಟಾಗ ಹಾವಿನ ಕಲ್ಪನೆ ಬಂದು ದಿಗಿಲಾದರೂ ಕಪ್ಪೆ ಕಾಣಿಸಿದ ತಕ್ಷಣ ಅದೆಲ್ಲಾ ಹೇಗೆ ಮರೆತುಹೋಯಿತು ಅನ್ನೋದೇ ನನಗೆ ಆಶ್ಚರ್ಯವಾಗಿತ್ತು.


"ಸರ್, ಇಂಥ ಸರಿರಾತ್ರಿಯಲ್ಲಿ ನಾವು ಹೋಗಿದ್ದ ಜಾಗದಲ್ಲಿ ಹಾವುಗಳಿದ್ದಿದ್ದರೇ ಏನು ಗತಿ? ನನಗಂತೂ ಆ ಕ್ಷಣದಲ್ಲಿ ಅದನ್ನು ನೆನೆಸಿಕೊಂಡು ದಿಗಿಲಾಗಿತ್ತು. ಆ ಪೊದೆಯಲ್ಲೆಲ್ಲಾ ಹಾವುಗಳು ಕುಳಿತಂತೆ ಮಲಗಿದ್ದಂತೆ ಅನ್ನಿಸಿ ಭಯವಾಗಿತ್ತು. ಅದನ್ನು ನಿಮ್ಮ ಬಳಿ ಹೇಳಿದರೇ ನನ್ನಂತೆ ನೀವು ಭಯದಿಂದ ವಾಪಸ್ ಹೋಗಿಬಿಡುತ್ತೀರೇನೋ ಅಂತ ಹೇಳಲಿಲ್ಲ ನಾನು" ಅಂದೆ

ಮಗದೊಂದು ರೀತಿಯ ಪುಟ್ಟ ಕಪ್ಪೆ

ಶಿವು, ನಿಮಗೆ ಅನ್ನಿಸಿದಂತೆ ನನಗೂ ಹಾವಿನ ಭಯ ಬಂತು. ಹೇಳಿದರೇ ಎಲ್ಲರೂ ಹೆದರಿ ವಾಪಸ್ ಹೋಗಿಬಿಡುತ್ತಿರೇನೋ ಅಂದುಕೊಂಡು ನಾನು ಸುಮ್ಮನಾದೆ ಅಂದರು ದೇವರಾಜ್. ರಮಾಕಾಂತ್ ಮತ್ತು ರಾಜೇಂದ್ರರಿಗೂ ಕೂಡ ಹೀಗೆ ಅನ್ನಿಸಿದನ್ನು ಹೇಳಿ ನಕ್ಕರು. ಹೀಗೆ ಎಲ್ಲರ ಮನದಲ್ಲೂ ಬಂದ ಭಯವನ್ನು ಹೊರಹಾಕದಂತೆ ಮಾಡಿದ್ದು ಈ ಹುಚ್ಚು ಫೋಟೊಗ್ರಫಿ ಅಲ್ಲವೇ? ಇದೊಂತರ ಹೆಂಡತಿ ಇದ್ದಹಾಗೆ, ಕಟ್ಟಿಕೊಂಡ ಮೇಲೆ ಎಂಥ ಕಷ್ಟಬಂದರೂ ಎದುರಿಸಲೇ ಬೇಕು" ಅಂತ ರಮಾಕಾಂತ್ ಹೇಳಿದಾಗ ಆ ಕತ್ತಲಲ್ಲೂ ಎಲ್ಲರೂ ಜೋರಾಗಿ ನಕ್ಕೆವು.

ಕಿರುಬೆರಳ ತುದಿಗಾತ್ರದ ಕಪ್ಪೆಗಳ ಚಿತ್ರಗಳು ನಮ್ಮೆಲ್ಲರ ಕ್ಯಾಮೆರದ ನೆನಪಿನ ಪೆಟ್ಟಿಗೆಯಲ್ಲಿ ಸದ್ದು ಮಾಡದೆ ಮಲಗಿದ್ದರೇ, ಅದಕ್ಕೆ ವಿರುದ್ಧವಾಗಿ ದೂರದಲ್ಲಿ ನಮ್ಮ ಕ್ಯಾಮೆರಾಗೆ ಫೋಸ್ ಕೊಟ್ಟ ಕಪ್ಪೆಗಳು "ವಟರ್ ವಟರ್...ವಟರ್ ವಟರ್....ಶಬ್ಧವನ್ನು ರಾತ್ರಿಪೂರ ಮಾಡುತ್ತಲೇ ಇದ್ದವು.

[ಮುಂದಿನ ಭಾರಿ ಕಾಡಿನಲ್ಲಿ ನನ್ನ ಮೊಬೈಲ್ ಕಳೆದುಹೋಗಿ ಮತ್ತೆ ಸಿಕ್ಕಿದ್ದು, ಪ್ರಾಣಿಪಕ್ಷಿಗಳ ಫೋಟೊ ಮತ್ತಷ್ಟು ವಿಚಾರಗಳು.
ಚಿತ್ರಗಳು ಮತ್ತು ಲೇಖನ
ಶಿವು.ಕ

56 comments:

ದಿನಕರ ಮೊಗೇರ said...

ಶಿವೂ ಸರ್,
ಸುಂದರ ವರ್ಣನೆ.... ಸುಂದರ ಫೋಟೋಗಳು...... ಹಾವುಗಳ ಬಗ್ಗೆ ಬರೆದಾಗ, ನನಗೂ ಹೆದರಿಕೆ ಹುಟ್ಟಿಸಿತು...... ನಿರೂಪಣೆ ತುಂಬಾ ಚೆನ್ನಾಗಿತ್ತು....... ನಿಮ್ಮ ಕ್ಯಾಮರಾದಲ್ಲಿ ಕಪ್ಪೆಗಳೂ ಸುಂದರವಾಗಿ ಕಂಡವು.........ಧನ್ಯವಾದ.........

SSK said...

ಶಿವೂ ಅವರೇ,
ನೀವೆಲ್ಲಾ ನಿಜಕ್ಕೂ ಎಷ್ಟು ಗ್ರೇಟ್ ಅಪ್ಪಾ.....! ಆ ಭಯಾನಕ ಕಾನನದ ಭಯಂಕರ ರಾತ್ರಿಯಲ್ಲಿ ಇಂತಹ ಒಂದು ಸಾಹಸವಾ?
ನನಗಂತೂ ನಿಮ್ಮ ಈ ಲೇಖನ ಓದಿಯೇ ಭಯವಾಯಿತು. ಇನ್ನು ನೀವು ಆ ಕಾಳ ರಾತ್ರಿಯಲ್ಲಿ ಆ ಭಯದಲ್ಲೂ ಕಪ್ಪೆಯ ಫೋಟೋಗಳನ್ನು ತೆಗೆದು
ಆ ಚಿತ್ರಗಳನ್ನು ನಾವುಗಳೂ ನೋಡುವಂತೆ ಮಾಡಿದ್ದೀರಾ!! ನಿಮಗೂ ನಿಮ್ಮ ಗ್ಯಾಂಗಿಗೂ ಹ್ಯಾಟ್ಸ್ ಆಫ್ !!!

shivu.k said...

ದಿನಕರ್ ಸರ್,

ಅಂಥ ಸಮಯದಲ್ಲಿ ಸಹಜವಾಗಿ ಹಾವುಗಳ ಕಲ್ಪನೆ ಬಂದೇ ಬರುತ್ತದೆ. ಆದ್ರೆ ನಮ್ಮ ಹುಚ್ಚು ಫೋಟೊಗ್ರಫಿ ಪ್ರೀತಿ ಅವಲ್ಲವನ್ನು ಹೇಗೆ ಮೀರಿಬಿಡುತ್ತದೆ ನೋಡಿ. ಈ ಕಪ್ಪೆಗಳು ತುಂಬಾ ಚಿಕ್ಕದಾಗಿರುವುದರಿಂದ ಮ್ಯಾಕ್ರೋ ಲೆನ್ಸ್ ಅಳವಡಿಸಿ ಫೋಟೊ ತೆಗೆದಿದ್ದೇನೆ. ಅನುಭವ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಚಂದ್ರು ಸರ್,

ಇದರಲ್ಲಿ ನನ್ನ ಗ್ರೇಟ್‍ನೆಸ್ ಏನು ಇಲ್ಲ. ನಮ್ಮ ನಾಲ್ವರಲ್ಲಿ ಒಬ್ಬರಾದರೂ ಆ ವಿಚಾರದ ಬಗ್ಗೆ ಚಕಾರವೆತ್ತಿದ್ದರೂ ನಾವೆಲ್ಲಾ ಹಿಂದೆ ಸರಿದುಬಿಡುತ್ತಿದ್ದೆವು. ಆದ್ರೆ ಈ ಫೋಟೊಗ್ರಫಿ ಎಲ್ಲರಿಗೂ ಬೇಕಿರುವುದರಿಂದ ಎಲ್ಲರಿಗೂ ಈ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಾಗಿದ್ದೆವು. ಇದೊಂದರ group effort. ಮತ್ತೆ ಅವತ್ತು ರಾತ್ರಿ ನಮ್ಮ ಫೋಟೋಗ್ರಫಿ ಸನ್ನಿವೇಶವೇ ಆಗಿತ್ತಲ್ಲ. ಅದನ್ನೇ ಯಥಾವತ್ತಾಗಿ ಬರೆದಿದ್ದೇನೆ. ಅಷ್ಟೆ. ಚಿತ್ರಗಳನ್ನು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

Subrahmanya said...

ತುಂಬ ಚೆನ್ನಾಗಿದೆ ಸರ್. ನಮ್ಮ ಜೊತೆ ಹಂಚಿಕೊಳ್ಳುತ್ತಿರುವುದು ಇನ್ನೂ ಸಂತಸವಾಗುತ್ತಿದೆ.

ಮನಸು said...

ತುಂಬಾನೇ ಚೆನ್ನಾಗಿದೆ ಸರ್, ನಮಗೆ ಒಳ್ಳೊಳ್ಳೆ ಮಾಹಿತಿ ನೀಡುತ್ತಲಿರುತ್ತೀರಿ ಧನ್ಯವಾದಗಳು ಮತ್ತಷ್ಟು ಹೀಗೆ ಬರುತ್ತಲಿರಲಿ.

ಸವಿಗನಸು said...

ಶಿವು ಸರ್,
ಸೌಂದರ್ಯ ಎಲ್ಲೆಲ್ಲಿ ಇದೆ ನೋಡಿ.....ಕಪ್ಪೆಗಳನ್ನು ಸಹ ಸುಂದರವಾಗಿ ತೋರಿಸಿದ್ದೀರ....
ಸೊಗಸಾದ ವರ್ಣನೆ.... ..
ತುಂಬಾ ಚೆನ್ನಾಗಿದೆ ....
ಮುಂದಿನ ಭಾಗ ಬೇಗ ಬರಲಿ....
ಧನ್ಯವಾದಗಳು ನಿಮಗೆ...

ಮನದಾಳದಿಂದ............ said...

ಶಿವು ಸರ್,
ಫೋಟೋಗ್ರಫಿಯ ಹುಚ್ಚು ಹಾವಿನ ಭಯವನ್ನು ಓಡಿಸಿತು ಅಲ್ವಾ?
ಚಂದದ ವರ್ಣನೆಯೊಂದಿಗೆ ಕಪ್ಪೆಯ ಫೋಟೋ ತೆಗೆಯುವ ಸನ್ನಿವೇಶವನ್ನು ವರ್ಣಿಸಿದ್ದೀರಾ....
ಧನ್ಯವಾದಗಳು.

VENU VINOD said...

ಶಿವು, ಥ್ರಿಲ್ಲರ್‌ ಕಥೆಗಳ ಹಾಗೆ... ಎಂದಿನಂತೆ ನಿಮ್ಮ ನಿರೂಪಣೆ ಖುಷಿಕೊಟ್ಟಿತು, ನನ್ನ ಚಾರಣದ ಕೆಲ ಕ್ಷಣಗಳು ನೆನಪಾದವು. ನಿಮ್ಮ ಇಂತಹ ಪಯಣಗಳನ್ನು ಮಾಡುತ್ತಲೇ ಇರಿ, ಬಿಡಬೇಡಿ. ಫೋಟೋ ಪ್ರವಾಸ ಇದ್ರೆ ನಂಗೂ ಹೇಳಿ..ಆದರೆ ಸೇರಿಕೊಳ್ಳುವೆ..

-ವೇಣು(venuvinodks@gmail.com)

ಸುಮ said...

ಒಳ್ಳೆಯ ಅನುಭವಕಥನ ಸರ್ .. ನನಗೆ ನಿಮ್ಮೆಲ್ಲರನ್ನ ನೋಡಿ ಹೊಟ್ಟೆಕಿಚ್ಚಾಗುತ್ತಿದೆ.

ನನ್ನ ಸೋದರಮಾವ "ಗಣೇಶ್ .ಎಚ್.ಶಂಕರ್ " ಅವರು ಜೋಗದ ಬಳಿಯ ಕತ್ತಲೆಕಾನು ಎಂಬ ಪ್ರದೇಶದಲ್ಲಿ ಹೀಗೆ ನಿಶಾಚರ ಮರಕಪ್ಪೆಗಳ ಫೋಟೊ ತೆಗೆದ ಅನುಭವಗಳನ್ನು ಕೆಲ ದಿನಗಳ ಹಿಂದೆ ಹೇಳಿಕೊಂಡಿದ್ದರು.

ಅವರು ತೆಗೆದ ಫೋಟೊಗಳನ್ನು "http://www.naturelyrics.com "ಇಲ್ಲಿ ನೊಡಬಹುದು.

rukminimalanisarga.blogspot.com said...

ಚೆನ್ನಾಗಿತ್ತು ಕಪ್ಪೆಗಳ ಚಿತ್ರ ತೆಗೆಯಲು ಮಾಡಿದ ವರ್ಣನೆ.ಹಾಗೂ ಕಪ್ಪೆಗಳ ಚಿತ್ರ.

sunaath said...

ಶಿವು,
ಕಪ್ಪೆಗಳ ಫೋಟೋ ತೆಗೆಯಲು ಎಷ್ಟೆಲ್ಲ ಒದ್ದಾಡುತ್ತೀರಲ್ಲ ಅಂತ ಮೊದಲು ನಗು ಬಂದಿತ್ತು. ಫೋಟೋಗಳನ್ನು ನೋಡಿದ ಬಳಿಕ ನಿಮ್ಮ ಶ್ರಮ ಸಾರ್ಥಕವೆನಿಸಿತು. ನಿಮ್ಮ ವರ್ಣನೆ ಸಹ ಅಷ್ಟೇ ಸ್ವಾರಸ್ಯಕರವಾಗಿದೆ!

balasubramanya said...

ಶಿವೂ ಕಾಡಿನ ನೆನನಪು ಮೂಡಿಸಿದ್ದಕ್ಕೆ ಖುಷಿ ಆಯ್ತು.ನಾವು ಪ್ರತಿವರ್ಷ ಕಾಡಿನ ಒಳಗೆ ಅಲೆವ ಅಲೆಮಾರಿಗಳು , ಮೊದ ಮೊದಲು ಇದು ಸಾಮಾನ್ಯ ,ನಂತರ ನೀವು ಇನ್ನೊದು ಭಾರಿ ಹೋಗುವ ವೇಳೆಗೆ ಅದು ಅಭ್ಯಾಸ ವಾಗುತ್ತದೆ.ಕಾಡಿನ ಮೌನ ,ನಿಶ್ಯಬ್ದ ವಾತಾವರಣದಲ್ಲಿ ಎಲ್ಲಿಂದಲೋ ಪ್ರತ್ಯಕ್ಷ ವಾಗುವ ಪ್ರಾಣಿಗಳು [ಅದೃಷ್ಟವಿದ್ದರೆ], ಕ್ಯಾಮರ ಕೆಲವೊಮ್ಮೆ ಕೈ ಕೊಟ್ಟು ಒಳ್ಳೆಯ ಘಟನೆ ತಪ್ಪಿಹೋಗುವ ಸಂಧರ್ಭ ,ವಾವ್ ಒಂದೇ ಎರಡೇ , ಅದರಲ್ಲೂ ರಾತ್ರಿವೇಳೆ ಕಾಡಿನ ಅನುಭವೇ ಬೇರೆ .ಕಾಡಿನ ನೆನಪು ಮಾಡಿದ ನಿಮ್ಮ ಲೇಖನ ನನಗೆ ಮತ್ತೊಮ್ಮೆ ಕಾಡಿಗೆ ಹೋಗಲು ಪ್ರೇರೇಪಿಸುತ್ತಿದೆ. ತುಂಬಾ ಚೆನ್ನಾಗಿದೆ. ನಿಮಗೆ ಥ್ಯಾಂಕ್ಸ್ .

Pradeep said...

ಚೆನ್ನಾಗಿ ಬರೆದಿದ್ದೀರ ಶಿವೂ! ಚಿತ್ರಗಳೂ ಚೆನ್ನಾಗಿ ಮೂಡಿಬಂದಿವೆ.. ನಿಮ್ಮ ಮುಂದಿನ ಲೇಖನದಲ್ಲಿ ಇನ್ನಷ್ಟು ಚಿತ್ರಗಳನ್ನು ನಿರೀಕ್ಷಿಸುತ್ತಿರುವೆ.. :)

ಕೇಶವ ಪ್ರಸಾದ್.ಬಿ.ಕಿದೂರು said...

ಕಾಡಿನ ಛಾಯಾಗ್ರಹಣದ ವರ್ಣನೆ ಸೊಗಸಾಗಿದೆ.

PARAANJAPE K.N. said...

ಕಾಡಿನ ವರ್ಣನೆ ಕಣ್ಣಿಗೆ ಕಟ್ಟುವ೦ತಿದೆ, ಸೊಗಸಾದ ನಿರೂಪಣೆ. ಹೊಸ ಹೊಸ ವಿಚಾರಗಳ ಹುಡುಕಾಟ, ಅವನ್ನು ಮಿತ್ರರೊ೦ದಿಗೆ ಹ೦ಚಿ ಕೊಳ್ಳುವಲ್ಲಿ ನಿಮಗಿರುವ ಆಸಕ್ತಿ ಇಷ್ಟವಾಗುತ್ತದೆ. ಇನ್ನಷ್ಟು ಛಾಯಾಚಿತ್ರಗಳ ನಿರೀಕ್ಷೆ ಯಲ್ಲಿದ್ದೇನೆ.

ಭಾಶೇ said...

ಇನ್ನಷ್ಟು ಚಿತ್ರಗಳಿಗಾಗಿ ಕಾಯುತ್ತಿರುವೆ.

ಶಿವಪ್ರಕಾಶ್ said...

chitragalu mattu vivarane channagittu...

ಸುಧೇಶ್ ಶೆಟ್ಟಿ said...

mundina bhaagakke waiting :)

romanchana huttisuttade nimma barahagaLu mattu photography anubhavagaLu...

kushi koduva blogu :)

Prashanth Arasikere said...

hi shivu,

nimma lekana matte nimma anubava nammannu saha nimma jothe idda hage agtha ittu..

Naveen ಹಳ್ಳಿ ಹುಡುಗ said...

anna.. supeer experience....

Guruprasad said...

ಅದ್ಬುತ ಅನುಭವ.....ವೌ.... ನಾವು ನಿಮ್ಮ ಜೊತೆ ಇದ್ದವೇನೋ ಅಂತ ಅನ್ನಿಸಿತು ನಿಮ್ಮ ಈ ಬರಹ..... ಗುಡ್ job ಸರ್...

Guru

ಸೀತಾರಾಮ. ಕೆ. / SITARAM.K said...

ಸೋಮಾರಿಯ ತಲೆ ದೆವ್ವಿನ ಕಾರ್ಖಾನೆ ಎ೦ಬ ಗಾದೆ ಇದೆ. ಒಮ್ಮೆ ಕೆಲಸದಲ್ಲಿ ಬಿದ್ದು ತನ್ಮಯವಾದೆವೆ೦ದರೇ ಭಯ ಹೋಗೆಬಿಡುತ್ತದೆ. ನಾನು ಕಾಡಿನಲ್ಲಿ ನನ್ನ ಶಿಲಾಪ್ರಪ೦ಚದ ಸುತ್ತಾ ನೋಡುತ್ತಾ ಮರಗಿಡಗಳ ನಡುವೆ ತೆವಳುತ್ತಾ ಸಾಗುತ್ತಿರುವಾಗ ಪಕ್ಕದಲ್ಲಿರುವವರು ನಿಮಗೆ ಪ್ರಾಣಿಗಳ ಭಯವಿಲ್ಲವೇ? ಎನ್ನುತ್ತಾರೆ. ನನ್ನ ಆಸಕ್ತಿಯಲ್ಲಿ ನಾನು ತನ್ಮಯನಾಗಿ ಹೊರ್‍ಅಟಿರುವಾಗ ನನಗೆ ಇವೆಲ್ಲಾ ಗಮನಕ್ಕೆ ಬರೊಲ್ಲಾ. ಹೀಗಾಗಿ ಕಲ್ಲು-ಬಒಡೇ ಕಾಣುವವೆ ವಿನಾ: ನನಗೆ ಪ್ರಾಣಿಗೌ ಕ೦ಡಿದ್ದು ತು೦ಬಾ ವಿರಳವೇ! ಅದು ನಾನು ತಿರುಗಿದ ಗೊ೦ಡಾರಣ್ಯಗಳಲ್ಲಿ! ಚೆ೦ದದ ಲೇಖನ ಮತ್ತು ನಿರೂಪಣೆ. ನಿಮ್ಮ ಮು೦ದಿನ ಭಾಗಕ್ಕೆ ಕಾಯುತ್ತಿರುವೆ.

ಸಾಗರಿ.. said...

ಶಿವೂ ಅವರೇ,
ತಮ್ಮ ಅನುಭವ ಕಥನವನ್ನು ಬಹಳ ಚೆನ್ನಾಗಿ ಹೇಳಿದ್ದೀರಿ. photos ಅಂತೂ ಯಾವತ್ತೂ ಚೆನ್ನಾಗಿರುತ್ತದೆ.

Snow White said...

tumba chennagide sir nimma pravasakathana..photos kooda :)

Unknown said...

ಅದ್ಬುತ ವರ್ಣನೆ ನಾಗರಹೊಳೆಯ ಅನುಭವ...

ಮನಸಿನಮನೆಯವನು said...

shivu.k ,

ಚೆನ್ನಾಗಿದೆ.. ವಟವಟ..
ಮುಂದುವರೆಸಿ..
ನಾನೂ ಒಮ್ಮೆ ಒಂದು ದೈತ್ಯಾಕಾರದ ಕಪ್ಪೆ ನೋಡಿದ್ದೆ.

ಬಾಲು said...

ತುಂಬಾ ಚೆನ್ನಾಗಿದೆ ವರ್ಣನೆ.

ಕಪ್ಪೆಗಳನ್ನು ನಿಮ್ಮ ಕ್ಯಾಮೆರಗಳಲ್ಲಿ ಸೆರೆ ಹಿಡಿಯಲು ನೀವು ಪಟ್ಟ ಯತ್ನ ಅತ್ಯಂತ ಸಫವಾಗಿದೆ, ಅಧ್ಬುತ ಫೋಟೋಗಳು. ನಿಮ್ಮ ಮುಂದಿನ ಲೇಖನಕ್ಕಾಗಿ ಕಾಯುತ್ತಾ ಇರುವೆ.

shivu.k said...

ಸುಬ್ರಮಣ್ಯ ಸರ್,

ನನಗೂ ಹೀಗೆ ಹಂಚಿಕೊಳ್ಳುವುದರಲ್ಲಿ ಖುಷಿಯಿದೆ ಸರ್. ಥ್ಯಾಂಕ್ಸ್..

shivu.k said...

ಮನಸು ಮೇಡಮ್,

ಇಂಥ ಪ್ರವಾಸ ಲೇಖನಗಳು ಒಂಥರ ಮಜವೆನಿಸುತ್ತವೆ ಅಲ್ವಾ...ನಿಮ್ಮ ಪ್ರೋತ್ಸಾಹಕ್ಕೆ ನನ್ನ ಧನ್ಯವಾದಗಳು.

shivu.k said...

ಸವಿಗನಸು ಮಹೇಶ್ ಸರ್,

ಕಪ್ಪೆಯೊಂದು ಮಾತ್ರವಲ್ಲ ಸರ್, ಓತಿಕ್ಯಾತವೂ ಮ್ಯಾಕ್ರೋಲೆನ್ಸ್ ಮೂಲಕ ನೋಡಿದರೆ ಸುಂದರವಾಗಿಯೇ ಕಾಣುತ್ತದೆ. ಆ ಲೆನ್ಸಿನ ಕರಾಮತ್ತೇ ಅಂಥವುದು. ಮುಂದಿನ ಭಾಗವನ್ನು ಸಾಧ್ಯವಾದಷ್ಟು ಬೇಗ ಹಾಕುತ್ತೇನೆ.
ಧನ್ಯವಾದಗಳು.

shivu.k said...

ಮನದಾಳದ ಪ್ರವೀಣ್,

ನೀವು ಹೇಳಿದ್ದು ಸರಿ. ಫೋಟೊಗ್ರಫಿ ಹಾವು ಮಾತ್ರವಲ್ಲ ಹುಲಿ, ಸಿಂಹಗಳು ಪಕ್ಕದಲ್ಲಿದ್ದರೂ ನಮಗೆ ಭಯವೆನ್ನುವುದು ಅರಿವಿಗೆ ಬರದಿರುವಂತೆ ಮಾಡಿಬಿಡುತ್ತದೆ. ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

ವೇಣು ವಿನೋದ್,

ರಾತ್ರಿ ಫೋಟೊಗ್ರಫಿ ನನಗೂ ಮೊದಲ ಅನುಭವ. ಮೊದಲ ಸಲವಾಗಿದ್ದರಿಂದ ನಾವು ಹೀಗೆ ಮುನ್ನುಗ್ಗಿದ್ದೆವು. ನಿಮ್ಮ ಚಾರಣದ ವಿಚಾರವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನಿಮ್ಮ ಪ್ರೋತ್ಸಾಹದಿಂದ ಮತ್ತಷ್ಟು ವಿಚಾರಗಳನ್ನು ಹೀಗೆ ಹಂಚಿಕೊಳ್ಳುತ್ತೇನೆ. ಧನ್ಯವಾದಗಳು.

shivu.k said...

ಸುಮಾ ಮೇಡಮ್,

ನೀವು ನನ್ನ ಲೇಖನವನ್ನು ಹೊಟ್ಟೆ ಕಿಚ್ಚು ಪಟ್ಟುಕೊಳ್ಳಬೇಡಿ. ನೀವೊಮ್ಮೆ ನಮ್ಮ ಜೊತೆ ಬನ್ನಿ. ನಿಮ್ಮನ್ನು ಕರೆದುಕೊಂಡು ಹೋಗುತ್ತೇವೆ.

ನಿಮ್ಮ ಸೋದರಮಾವನವರ ಫೋಟೊಗಳನ್ನು ನೋಡಿದೆ. ತುಂಬಾ ಚೆನ್ನಾಗಿವೆ. ಅದಕ್ಕಾಗಿ ಧನ್ಯವಾದಗಳು.

shivu.k said...

ಮಾಲಾ ಮೇಡಮ್,

ಕಪ್ಪೆ ಚಿತ್ರಗಳನ್ನು ತೆಗೆಯುವಾಗಿನ ಅನುಭವಗಳನ್ನು ಹಾಗೆ ಬರೆದಿದ್ದೇನೆ. ಅದನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಸುನಾಥ್ ಸರ್,

ನಮ್ಮ ಜೊತೆ ಅನೇಕರು ಇಂಥ ಸ್ವಾರಸ್ಯಕರ ವಿಚಾರಗಳನ್ನು ತಿಳಿದು ಫೋಟೊ ತೆಗೆಯಲು ಬರುತ್ತಾರೆ. ನಡುವೆ ನಮ್ಮ ಕಷ್ಟಪಡುವಿಕೆಯನ್ನು ನೋಡಿ ವಾಪಸ್ ಬಂದುಬಿಡುವವರೇ ಹೆಚ್ಚು. ನಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ಕಿದ್ದು ನಮಗೂ ಖುಷಿಯಾಗಿತ್ತು. ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ನಿಮ್ಮೊಳಗೊಬ್ಬ ಬಾಲು ಸರ್,

ನನ್ನ ಲೇಖನದಿಂದಾಗಿ ನಿಮ್ಮ ಕಾಡಿನ ಅನುಭವ ನೆನಪಿಗೆ ಬಂದಿದ್ದು ನನಗೂ ಖುಷಿ. ನೀವು ಅದನ್ನೆಲ್ಲಾ ನಿಮ್ಮ ಬ್ಲಾಗಿನಲ್ಲಿ ಬರೆಯಿರಿ. ಮತ್ತೆ ನಿಮ್ಮ ಬ್ಲಾಗ್‍ನಲ್ಲಿ ಹೊಸ ಹೊಸ ಫೋಸ್ಟಿಂಗ್ ಮಾಡಿದಾಗಲೂ ಅದನ್ನು open ಮಾಡಿದರೆ ಆಗುತ್ತಿಲ್ಲ. ತಕ್ಷಣಕ್ಕೆ ಕ್ಲೋಸ್ ಆಗುತ್ತಿದೆ. ನೀವೊಮ್ಮೆ ಪರೀಕ್ಷಿಸಿ ತೊಂದರೆ ಏನೆಂದು ನೋಡಿ. ಇದೇ ಕಾರಣಕ್ಕೆ ನಿಮ್ಮ ಅನೇಕ ಲೇಖನಗಳನ್ನು ನಾನು ನೋಡಲಾಗಿಲ್ಲ..

ಧನ್ಯವಾದಗಳು.

shivu.k said...

ಪ್ರದೀಪ್,

ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

ಕೇಶವ ಪ್ರಸಾದ್ ಸರ್,

ನನ್ನ ಬ್ಲಾಗಿಗೆ ಸ್ವಾಗತ. ಕಾಡಿನ ವರ್ಣನೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಪರಂಜಪೆ ಸರ್,

ಕಾಡಿನ ಅನುಭವವನ್ನು ನೇರವಾಗಿ ಅನುಭವಿಸಿದರೆ ತುಂಬಾ ಚೆನ್ನಾಗಿರುತ್ತದೆ. ಇಲ್ಲಿ ನಮಗೆ ಹೀಗೆ ಅನುಭವವಾದರೆ ಮತ್ತೊಬ್ಬರಿಗೆ ಇದೇ ಬೇರೆ ರೀತಿಯಲ್ಲಿ ಆಗಬಹುದು. ಇಂಥವು ಭಲೇ ಮಜವೆನಿಸುವುದರಿಂದ ಬ್ಲಾಗ್ ಗೆಳೆಯರೊಂದಿಗೆ ಹಂಚಿಕೊಳ್ಳಲು ನನಗೂ ಇಷ್ಟ. ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಭಾಶೇ,

ಮತ್ತಷ್ಟು ಚಿತ್ರಗಳನ್ನು ಖಂಡಿತ ಬ್ಲಾಗಿಗೆ ಹಾಕುತ್ತೇನೆ.
ಧನ್ಯವಾದಗಳು.

shivu.k said...
This comment has been removed by the author.
shivu.k said...

ಶಿವಪ್ರಕಾಶ್,

ಥ್ಯಾಂಕ್ಸ್..

shivu.k said...

ಸುಧೇಶ್,

ಮುಂದೆ ಮತ್ತಷ್ಟು ಚಿತ್ರಗಳನ್ನು ಬ್ಲಾಗಿಗೆ ಹಾಕುತ್ತೇನೆ. ನನ್ನ ಬರಹಗಳು ನಿಮಗೆ ರೋಮಾಂಚನವೆನಿಸಿದರೆ ನನ್ನ ಬ್ಲಾಗ್ ನಿಮಗೆ ಖುಷಿಕೊಟ್ಟರೆ ನನಗೂ ತುಂಬಾ ಖುಷಿಯೆನಿಸುತ್ತದೆ.
ಧನ್ಯವಾದಗಳು.

shivu.k said...

ಹಾಯ್ ಪ್ರಶಾಂತ್,

ನನ್ನ ಬರಹದ ಉದ್ದೇಶವೂ ಅದೇ ಅಲ್ಲವೇ. ಅದು ನಿಮಗೆ ಸಿಕ್ಕರೆ ನನ್ನ ಪ್ರಯತ್ನ ಸಾರ್ಥಕವಾದಂತೆ.

ಧನ್ಯವಾದಗಳು.

shivu.k said...

ನವೀನ್,

ಥ್ಯಾಂಕ್ಸ್..

shivu.k said...

ಗುರು,

ನನ್ನ ಬರಹ ಮತ್ತು ಅದರ ಅನುಭವವನ್ನು enjoy ಮಾಡಿದ್ದಕ್ಕೆ ಥ್ಯಾಂಕ್ಸ್..

shivu.k said...

ಸೀತಾರಾಂ ಸರ್,

ಸೋಮಾರಿಯ ತಲೆಯಲ್ಲಿ ದೆವ್ವ ಹೊಕ್ಕುವ ವಿಚಾರ ನನಗೆ ಗೊತ್ತಿರಲಲಿಲ್ಲ. ತಿಳಿಸಿದ್ದಕ್ಕೆ ಥ್ಯಾಂಕ್ಸ್. ನಿಮ್ಮ ಅನುಭವದ ನೆನಪುಗಳು ಮರುಕಳಿಸಿದ್ದು ಒಳ್ಳೆಯದೇ ಅಲ್ಲವೇ...ನೀವು ಅದನ್ನು ಬ್ಲಾಗಿನಲ್ಲಿ ಹಂಚಿಕೊಳ್ಳಿ. ಕಾಯುತ್ತಿರುತ್ತೇನೆ.

ಧನ್ಯವಾದಗಳು.

shivu.k said...

ಸಾಗರಿ ಮೇಡಮ್,

ನನ್ನ ಕಾಡಿನ ಕತೆಯನ್ನು ಮತ್ತು ಫೋಟೊಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

Snowwhite,

ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್.

shivu.k said...

Praveen,

ನಾಗರಹೊಳೆ ಕಾಡಿನ ಅನುಭವವನ್ನು ಮತ್ತಷ್ಟು ಹಂಚಿಕೊಳ್ಳುತ್ತೇನೆ. ಮತ್ತೆ ಬನ್ನಿ.

shivu.k said...

ಜ್ಞಾನಾರ್ಪಣಮಸ್ತು,

ಕಪ್ಪೆಯ ಆ ವಟವಟ ಶಬ್ದವೇ ನಮ್ಮ ಫೋಟೊಗ್ರಫಿ ದಾರಿದೀಪವಾಗಿದ್ದಲ್ಲವೇ. ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..ಮುಂದಿನ ಭಾಗಕ್ಕೂ ಬನ್ನಿ.

shivu.k said...

ಬಾಲು ಸರ್,

ಕಪ್ಪೆಯ ಫೋಟೊಗ್ರಫಿ ನಮಗೂ ಇದೇ ಮೊದಲು. ಮೊದಲ ಅನುಭವ ಯಾವಾಗಲೂ ವಿಶೇಷವಾಗಿರುತ್ತದೆಯಲ್ಲವೇ. ಅದಕ್ಕೆ ಬ್ಲಾಗಿಗೆ ಹಾಕಿದ್ದೇನೆ. ಮುಂದಿನ ಲೇಖನವನ್ನು ಬೇಗನೆ ಹಾಕುತ್ತೇನೆ.

shivu.k said...
This comment has been removed by the author.
AntharangadaMaathugalu said...

ಶಿವು ಸಾರ್...
ನಿಮ್ಮ ಸಾಹಸ ಮೆಚ್ಚಬೇಕಾದ್ದೇ... ಕತ್ತಲಲ್ಲಿ ಕಪ್ಪೆಯ ಚಿತ್ರ ತೆಗೆಯಲು ಹೊರಟ ನೀವು ತುಂಬಾ ಒಳ್ಳೆಯ ಚಿತ್ರಗಳನ್ನೇ ನಮಗಾಗಿ ತಂದಿದ್ದೀರಿ. ಧನ್ಯವಾದಗಳು... ವಿವರಣೆ ಕೂಡ ಕುತೂಹಲಕರವಾಗಿದೆ. ಮುಂದಿನ ಲೇಖನದ ನಿರೀಕ್ಷೆಯಲ್ಲಿ....

ಶ್ಯಾಮಲ

shivu.k said...

ಶ್ಯಾಮಲ ಮೇಡಮ್,

ನಮಗೆಲ್ಲಾ ಇಂಥವು ಒಂಥರ ಥ್ರಿಲ್ ಕೊಡುತ್ತವಾದ್ದರಿಂದ ಇವುಗಳ ಗೀಳು ಅಂಟಿಬಿಟ್ಟಿದೆ. ಫೋಟೊ ಮತ್ತು ನಮ್ಮ ಸಣ್ಣ ಸಾಹಸವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..ಮುಂದಿನದನ್ನು ಶೀಘ್ರವಾಗಿ ಬ್ಲಾಗಿಗೆ ಹಾಕುತ್ತೇನೆ.