Sunday, March 15, 2009

ಪೇಪರ್ ಬಿಲ್ಲು ಹೋಯ್ತು.........ಕ್ಯಾಟರ್‌ಪಿಲ್ಲರ್ ಬಂತು....ಡುಂ..ಡುಂ...!!

ನನ್ನ ಕೈಯಲ್ಲಿರುವ ಪೆನ್ನು "ಕನ್ನಡಪ್ರಭ ದಿನಪತ್ರಿಕೆಯ ..... ಮೊತ್ತವನ್ನು ಪೇಪರ್ ಬಿಲ್ಲಿನಲ್ಲಿ ಬರೆಯುತ್ತಿದ್ದರೂ ನನ್ನ ಕಣ್ಣು ಮಾತ್ರ...ಆ ಗಿಡದ ಕಡೆಗಿತ್ತು.....ಮತ್ತೇನಿಲ್ಲಾ, ಸುಮ್ಮನೇ ಕುತೂಹಲ......ನಾನು ಯಾವುದೆ ಮನೆಯ ಬಾಗಿಲಿನ ಮುಂದೆ ನಿಂತರೂ ಅವರು ಮನೆಯ ಮುಂದೆ ವರಾಂಡದಲ್ಲಿ, ಕುಂಡಗಳಲ್ಲಿ ಹಾಕಿರುವ ಹೂವಿನ ಗಿಡಗಳ ಕಡೆ ಕಣ್ಣು ವಾಲಿರುತ್ತದೆ...


ಗಿಡಗಳಲ್ಲಿರುವ ಹೂಗಳಿಗಿಂತ ಅದರ ಎಲೆಗಳು ನನ್ನನ್ನೂ ಹೆಚ್ಚಾಗಿ ಸೆಳೆಯುತ್ತವೆ..... ಅದರಲ್ಲೂ ಅಂಗವಿಕಲ ಎಲೆಗಳು!! ಒಂದೆರಡು ಎಲೆಗಳು ಈ ರೀತಿ ಯಾವುದೇ ಗಿಡದಲ್ಲಿದ್ದರೂ ನನ್ನ ಕುತೂಹಲ ಬೆರಗಿನಿಂದ ಹೆಚ್ಚಾಗುತ್ತದೆ.... ಹತ್ತಿರ ಹೋಗಿ ಎಲೆಯ ಕೆಳಬಾಗದಲ್ಲಿ ನೋಡಿದರೆ ಯಾವುದಾದರೂ ಒಂದು ಹುಳು [ಕ್ಯಾಟರ್‌ಪಿಲ್ಲರ್] ಅದೇ ಎಲೆಯನ್ನೇ ತಿನ್ನುತ್ತಿರುತ್ತದೆ.....


ಇಷ್ಟಾದರೇ ಸಾಕು...........ಅಲ್ಲಿಂದ ಶುರುವಾಗುತ್ತದೆ.....ನನ್ನ ಹೊಸ ಆಸೈನ್ ಮೆಂಟು... ಮನೆಗೆ ಬಂದು ನನ್ನ ಬಳಿ ಇರುವ ಚಿಟ್ಟೆ, ಹುಳುಗಳ ಪುಸ್ತಕಗಳಿಂದ ಗಿಡದ ಹೆಸರು, ಹುಳುವಿನ ಬಣ್ಣ ಆಕಾರ ನೋಡಿ ತಿಳಿದ ಮಾಹಿತಿಯಿಂದ ನನ್ನ ಕ್ಯಾಮೆರಾ ಜಾಗ್ರುತವಾಗುತ್ತದೆ.....


ಹೀಗೆ ಗಮನ ಸೆಳೆದ ಆ ಮನೆಯ ಕಾಂಪೌಂಡಿನಲ್ಲೇ ಬೆಳೆದಿದ್ದ ನುಗ್ಗೆ ಎಲೆಯಷ್ಟೆ ಚಿಕ್ಕದಾದ ಹಸಿರೆಲೆಗಳನ್ನು ತನ್ನ ಕಾಂಡಗಳ ತುಂಬಾ ತುಂಬಿಕೊಂಡಿದ್ದ ಆ "ಮುಳ್ಳಿನ ಗಿಡ" ನನ್ನ ಗಮನ ಸೆಳೆದಿತ್ತು..... ಆ ಮನೆಯವರು ನನ್ನ ಕೈಯಿಂದ ರಸೀತಿ ಪಡೆದು ಹಣತರಲು ಒಳ ಹೋದ ಮೇಲೆ ನಾನು ಕೆಳಗೆ ಕುಳಿತು ನಿದಾನವಾಗಿ ನೋಡಿದರೆ ಹಸಿರು ಬಣ್ಣದ ಹತ್ತಾರು ಹುಳುಗಳು ಗಿಡದ ಎಲೆಗಳ ಮೇಲೆ ಕೆಳಗೆ ಬಸವನ ಹುಳುವಿನ ವೇಗದಲ್ಲಿ ಹರಿದಾಡುತ್ತಾ ಅದೇ ಎಲೆಗಳನ್ನೇ ತಿನ್ನುತ್ತಿವೆ....!!ತಕ್ಷಣ ನೋಡಿದರೆ ಎಲೆಯಾವುದು.. ಹುಳು ಯಾವುದು ಗೊತ್ತಾಗದ ಹಾಗೆ ಎಲೆಗಳ ಜೊತೆಗೆ ಕೋಮೊಪ್ಲೇಜ್ ಆಗಿವೆ..... ಇದು ಅವುಗಳ ಪ್ರೆಡೇಟರುಗಳಾದ, ಜೇಡ, ಪ್ರೈಯಿಂಗ್ ಮ್ಯಾಂಟಿಸ್, ದುಂಬಿಗಳು, ಮತ್ತು ಇತರ ಪಕ್ಷಿಗಳಿಂದ ರಕ್ಷಿಸಿಕೊಳ್ಳಲು ದೇವರ ಸಹಜ ಸೃಷ್ಥಿ!!.


ನನ್ನ ಜೇಬಿನಲ್ಲಿ ಸದಾ ಒಂದು ಪೆನ್ನು, ಚೂರು ಕಾಲಿ ಕಾಗದ, ಒಂದಷ್ಟು ರಬ್ಬರ್ ಬ್ಯಾಂಡ್‌ಗಳು, ಮತ್ತು ಸಣ್ಣ ಕಟ್ಟರ್[ಚಾಕು ] ಇರುತ್ತದೆ. ಚಾಕುವಿನಿಂದ ಗಿಡದಲ್ಲಿ ಆ ಹಸಿರು ಹುಳುಗಳಿರುವ ಒಂದು ಕಾಂಡವನ್ನು ನಿದಾನವಾಗಿ ಕತ್ತರಿಸಿ.. .ಹುಳುಗಳಿಗೆ ನೋವಾಗದ ಹಾಗೆ ನನ್ನ ಬ್ಯಾಗಿನಲ್ಲಿ ಸೇರಿಸಿ... ಬರುವ ದಾರಿಯಲ್ಲಿ ಆಟೋದವರು ಬಸುರಿ ಹೆಂಗಸರು ಕೂತಾಗ ಅಲ್ಲಿಲ್ಲಿ ಸಿಗುವ ಹಂಪ್ಸುಗಳಲ್ಲಿ ನಿದಾನ ನಾಜೂಕಾಗಿ ಡ್ರೈವ್ ಮಾಡುವಂತೆ ನಾನು ಕೂಡ ಹಂಪ್ಸುಗಳಲ್ಲಿ ಕುಲುಕದ ಹಾಗೆ ನನ್ನ ಟೂವೀಲರ್‌ನಲ್ಲಿ ಮನೆಗೆ ಅವುಗಳನ್ನು ತಂದಿದ್ದೆ.


ನೋಡಲು ಅವರೇ ಕಾಯಿ ಹುಳುಗಳಿಗಿಂತ ಚಿಕ್ಕದಾಗಿ ಸಣ್ಣದಾಗಿದ್ದ ಅವುಗಳನ್ನು ನನ್ನಾಕೆ ನೋಡಿ...."ಓಹ್ ಇನ್ನಷ್ಟು ಹುಳಗಳನ್ನು ತಂದಿರಾ... ಮುಗಿಯಿತು ಬಿಡಿ... ಇನ್ನೂ ನಿಮಗೆ ಹೆಂಡತಿ, ಮನೆ ಮಠ, ಸಂಸಾರ, ಎಲ್ಲ ಮರೆತಂತೆ" ಅಂತ ಗೊಣಗುತ್ತಾ ಅಡುಗೆ ಮನೆಗೆ ಹೋದಳು... .[ ಇದೇ ರೀತಿ ಪ್ರಯೋಗವನ್ನು ಹೋಲಿಯಂಡರ್ ಹಾಕ್ ಮಾತ ಪತಂಗದ ಮೇಲೆ ಮಾಡಲು ಹೋಗಿ, ಆ ಹುಳು ಮಾಡಿದ ತರಲೇ ತಾಪತ್ರಯ, ಅದರ ಕಣ್ಣು ಮುಚ್ಚಾಲೆ ಆಟ, ನಂತರ ನಮ್ಮ ಜೊತೆ ಆದು ಚಿತ್ರದುರ್ಗಕ್ಕೆ ಪ್ರವಾಸ ಹೋಗಿಬಂದಿದ್ದು, ಮತ್ತೆ ಅಲ್ಲಿಂದ ಗೋವಾಗೆ ನಮ್ಮ ಜೊತೆಯಲ್ಲೇ ಬಂದು ಅಲ್ಲೇ ಅದರ ಡೆಲಿವರಿಯಾದದ್ದು ಎಲ್ಲಾ ನನ್ನಾಕೆ ನೋಡಿದ್ದಳು.. ಅದರ ಸ್ವಾರಸ್ಯಕರ ಸನ್ನಿವೇಶಗಳನ್ನು ಮುಂದೆ ಎಂದಾದರು ಬರೆಯುತ್ತೇನೆ.]


ನಾನು ತಂದಿದ್ದ ಕಾಂಡದಲ್ಲಿ ನಾಲ್ಕು ಹುಳುಗಳಿದ್ದವು.... ಅವುಗಳಲ್ಲಿ ಎರಡು ದೊಡ್ಡದಾಗಿ ಸುಮಾರು ಮುಕ್ಕಾಲು ಇಂಚಿನಷ್ಟು ಬೆಳೆದು ಸರಸರ ಹರಿದಾಡುತ್ತಿದ್ದವು... ಇನ್ನೆರಡು ಒಂದು ಸೆಂಟಿಮೀಟರ್ ಇದ್ದು ನಿದಾನವಾಗಿ ಎಲೆಗಳನ್ನು ತಿನ್ನುತ್ತಿದ್ದವು...


ಎರಡು ದಿನ ಕಳೆಯಿತು... ನನಗೂ ತಿಂಗಳ ಮೊದಲವಾರ ಅವುಗಳನ್ನೇ ನೋಡಿಕೊಂಡು ಕೂರಲೂ ಆಗುವುದಿಲ್ಲವಲ್ಲ... ಹಣವಸೂಲಿ... ಇತ್ಯಾದಿ ಕೆಲಸಗಳಿಗಾಗಿ ಬ್ಯುಸಿಯಾಗಿದ್ದೆ.... .ಮೂರನೆ ದಿನ ನೋಡುತ್ತೇನೆ. ದೊಡ್ಡವೆರಡು ಪ್ಯೂಪ ಹಾಗಿವೆ.!!




ಅಷ್ಟರಲ್ಲಿ ಇನ್ನೆರಡು ತಮ್ಮಂದಿರು ತಿಂದುಂಡು ಬೆಳೆಯುತ್ತಿದ್ದವು..... ಅಣ್ಣಂದಿರು ಪ್ಯೂಪ ಆಗುವುದನ್ನು ನೋಡಲಾಗಲಿಲ್ಲ ಇವುಗಳನ್ನು ಸರಿಯಾಗಿ ಗಮನಿಸಬೇಕು ಅಂದುಕೊಂಡು ಅವುಗಳನ್ನು ಸಂಪೂರ್ಣವಾಗಿ ಗಮನಿಸತೊಡಗಿದೆ... ಜೊತೆಗೆ ಗೋಡೆಯ ಮೇಲಿನ ಹಲ್ಲಿಗಳು, ಇದ್ದಂಕ್ಕಿದ್ದಂತೆ ಹಾಜರಾಗುವ ಜೇಡಗಳು, ಏನೇ ಸಿಕ್ಕರೂ ಬಲಿಹಾಕಿ ಶೇಕರಿಸುವ ಕೆಂಪಿರುವೆಗಳಿಂದಲೂ ಈ ಹುಳು ಮತ್ತು ಪ್ಯೂಪಗಳನ್ನು ರಕ್ಷಿಸುವ ಜವಾಬ್ದಾರಿಯೂ ನನ್ನ ಮೇಲಿತ್ತು.



ನಾಲ್ಕನೆ ದಿನ ಮದ್ಯಾಹ್ನದ ಹೊತ್ತಿಗೆ ಮೂರನೆ ತಮ್ಮ ತನ್ನ ಹೊರಗಿನ ಚರ್ಮವನ್ನು ಹಾವಿನ ಪೊರೆಯಂತೆ ಕಳಚಿ ತನ್ನ ದೊಡ್ಡ ಆಕಾರವನ್ನು ಸಂಪೂರ್ಣ ಕುಗ್ಗಿಸಿ ಅರ್ದ ಭಾಗಕ್ಕೆ ತಂದು, ತನ್ನ ದೇಹದ ಹಿಂಬಾಗವನ್ನು ಕಾಂಡದ ಒಂದು ತುದಿಗೆ ಅಂಟಿಸಿದ....!! ಮತ್ತೊಂದು ತುದಿಯನ್ನು [ತಲೆಭಾಗ] ಕಾಂಡದ ಮತ್ತೊಂದು ತುದಿಗೆ ಸಣ್ಣ ದಾರದ ಎಳೆಯಂತ ಅಂಟನ್ನು ತನ್ನ ದೇಹದಿಂದಲೇ ಸೃಷ್ಠಿಸಿ ಅದರೊಳಗೆ ತನ್ನ ಕುಗ್ಗಿಸಿದ ದೇಹವನ್ನು ತೂರಿಸಿ ನೇತಾಡತೊಡಗಿತು...... ಇದಿಷ್ಟು ಪ್ರಕ್ರಿಯೆ ನಡೆದಿದ್ದು ಸುಮಾರು ನಾಲ್ಕು ತಾಸಿನಲ್ಲಿ..!!. ಮರುದಿನ ಕೊನೆ ತಮ್ಮನದೂ ಇದೇ ಪ್ರಕ್ರಿಯೆ ! ಮರುದಿನ ಅವೆರಡು ಹಚ್ಚ ಹಸುರಿನ ಬಣ್ಣ ಹೊತ್ತ ಪ್ಯೂಪಗಳಾಗಿ ಬಿಟ್ಟಿವೆ.


ದೊಡ್ಡಣ್ಣನಿದ್ದ ಪ್ಯೂಪ ಏಳನೇ ದಿನದ ಸಂಜೆ ಹೊತ್ತಿಗೆ ನಿದಾನವಾಗಿ ಬಣ್ಣ ಬದಲಿಸುತ್ತಿದೆಯಲ್ಲ......ರಾತ್ರಿ ವೇಳೆಗೆ ಹಸಿರು ಬಣ್ಣದ ಗುರುತೇ ಇಲ್ಲದಂತೆ ಕೆಳಗೆಲ್ಲಾ ಹಳದಿ ಬಣ್ಣ ಮತ್ತು ಮೇಲಿನ ಸ್ವಲ್ಪ ಭಾಗ ಕಂದು ಬಣ್ಣಕ್ಕೆ ತಿರುಗಿದೆ.!!


ನಾನು ಇದುವರೆಗೂ ಸುಮಾರು ೧೨ ವಿಧದ ಚಿಟ್ಟೆಗಳನ್ನು ಪ್ಯೂಪ ಸಮೇತ ತೆಗೆದಿರುವ ಅನುಭವದ ಪ್ರಕಾರ ಯಾವ ಪ್ಯೂಪ ಸಂಜೆ ಹೊತ್ತಿಗೆ ಬಣ್ಣ ಬದಲಿಸುತ್ತದೋ ಮರುದಿನ ಖಂಡಿತ ಪ್ಯೂಪವನ್ನು ಭೇದಿಸಿ ಚಿಟ್ಟೆ ಹೊರಬರುತ್ತದೆ...!


ಮರುದಿನ ಮುಂಜಾನೆ ನನ್ನ ದಿನಪತ್ರಿಕೆ ಕೆಲಸವನ್ನು ಹುಡುಗರಿಗೆ ವಹಿಸಿ ೬ ಗಂಟೆಗೆ ಮನೆಗೆ ಓಡಿ ಬಂದೆ. ಕ್ಯಾಮೆರಾವನ್ನು ಪ್ಯೂಪ ಮುಂದೆ ಸೆಟ್ ಮಾಡಿ ಕಾಯುತ್ತಾ ಕುಳಿತೆ.... ನನ್ನ ಅದೃಷ್ಟಕ್ಕೆ ತೆಳುವಾದ ಬೆಳಕು ಪ್ಯೂಪ ಮೇಲೆ ಬಿದ್ದು ಒಳ್ಳೆ ಪಿಕ್ಟೋರಿಯಲ್ ಬೆಳಕಿನಲ್ಲಿ ಚಿಟ್ಟೆಯ ಚಿತ್ರ ಸೆರೆಯಿಡಿಯುವ ಅವಕಾಶ ಸಿಕ್ಕಿತ್ತು.


ಮುಂಜಾನೆ ಬ್ಲಾಹ್ಮಿ ಮಹೂರ್ತದಲ್ಲಿ ಡೆಲಿವರಿ... ಚಿಟ್ಟೆ ಪ್ಯೂಪವನ್ನು ತೆರೆದುಕೊಂಡು ತಲೆಮುಖಾಂತರ ಹೊರಬರುತ್ತಿದೆ...!!

ಆಗ ತಾನೆ ಪೂರ್ತಿ ಹೊರ ಬಂದ "ಟ್ರೀ ಎಲ್ಲೋ" ಚಿಟ್ಟೆ




ನನ್ನ ಕಣ್ಣು ಕ್ಯಾಮೆರಾ ಕಣ್ಣಿನೊಳಗೆ.... .ಕಣ್ಣು ನೋವು ಬಂದಾಗ ಹೊರತೆಗೆದು ಅತ್ತ ಇತ್ತ ನೋಡುವುದು... ಹೀಗೆ ಸುಮಾರು ಅರ್ಧಗಂಟೆ ನಡೆಯಿತು.....




ರ್ರೀ.....ರೀ......ಚಿಟ್ಟೆ ಆಚೆ ಬಂತು...... ತೆಗೀರಿ ಫೋಟೊ.....ಹೇಮಾಶ್ರೀ ಕೂಗಿದಾಗ ಗಡಿಬಿಡಿಯಲ್ಲಿ ಪಟಪಟನೇ ಐದಾರು ಫೋಟೊ ತೆಗೆದಿದ್ದೆ....ಅದೇ ಸಮಯಕ್ಕೆ ಸಣ್ಣಗೆ ಗಾಳಿಯೂ ಬೀಸಿ ಪ್ಯೂಪ ಅಲುಗಾಡಿ ಕೆಲವು ಫೋಟೊಗಳು ಫೋಕಸ್ ಹೌಟ್ ಆಗಿದ್ದವು.....ಎರಡೇ ಕ್ಷಣದಲ್ಲಿ ಚಿಟ್ಟೆಯ ಡೆಲಿವರಿಯಾಗಿ ಅದೇ ಪ್ಯೂಪವನ್ನು ತನ್ನ ಕಾಲುಗಳಿಂದ ಹಿಡಿದುಕೊಂಡು ತಲೆಕೆಳಗಾಗಿ ನೇತಾಡುತ್ತಿತ್ತು......


ತಮ್ಮಂದಿರಿಬ್ಬರೂ ಮೊದಲು ಪ್ಯೂಪದೊಳಗೆ ಹೀಗೆ ಒಳಗೆ ಕುಳಿತ್ತಿದ್ದರು........


"ಟ್ರೀ ಎಲ್ಲೋ.." ಚಿಟ್ಟೆಯ ಮೂರನೆ ತಮ್ಮ ಹೊರಬಂದಿದ್ದಾನೆ...ನಾಲ್ಕನೆಯವನು ಹೊರಲು ಕಾಯುತ್ತಿದ್ದಾನೆ.




ಇದೇ ರೀತಿ ಮರುದಿನ ಮೊದಲನೆ ತಮ್ಮ, ಮೂರುದಿನ ಬಿಟ್ಟು ಕೊನೆಯ ಇಬ್ಬರೂ ತಮ್ಮಂದಿರಲ್ಲಿ ಒಬ್ಬ ಆರು ಗಂಟೆಗೆ ಮತ್ತೊಬ್ಬ ೭-೩೦ಕ್ಕೆ ಡೆಲಿವರಿಯಾಗಿ ನನ್ನ ಕ್ಯಾಮೆರಾದಲ್ಲಿ ಸೆರೆಯಾಗಿದ್ದರು....ಸುಮಾರು ಎಂಟು ಗಂಟೆಯ ಹೊತ್ತಿಗೆ ಜೇನು ಹೀರಲು ಹೂಗಳನ್ನರಸಿ ಹಾರಿ ಹೋದವು.

ಪೇಪರ್ ಬಿಲ್ಲು ಹೋಯ್ತು......ಕ್ಯಾಟರ್‌ಪಿಲ್ಲರ್ ಸಿಕ್ತು... ಡುಂ..ಡುಂ...

ಕ್ಯಾಟರ್‌ಪಿಲ್ಲರ್ ಹೋಯ್ತು....ಪ್ಯೂಪ ಆಯ್ತು.......ಡುಂ..ಡುಂ.....

ಪ್ಯೂಪ ಹೋಯ್ತು....ಚಿಟ್ಟೆ ಬಂತು ಡುಂ...ಡುಂ.......

ಇಷ್ಟಕ್ಕೂ ಈ ಚಿಟ್ಟೆಯ ಹೆಸರು "ಟ್ರೀ ಎಲ್ಲೋ". ಇವು "ಕಾಮನ್ ಗ್ರಾಸ್ ಎಲ್ಲೋ" ಪ್ರಭೇದಕ್ಕೆ ಸೇರಿದರೂ ಗಾತ್ರದಲ್ಲಿ ಸಲ್ಪ ದೊಡ್ಡವು.... ಸುಮಾರು ೫೦-೬೦ ಎಮ್ ಎಮ್ ಇರುತ್ತವೆ . ಈ "ಟ್ರೀ ಎಲ್ಲೋ" ಎಲ್ಲೋ ಚಿಟ್ಟೆಯೂ ಪಿಯಾರಿಡೈ, PIERIDAE ಜಾತಿಗೆ ಸೇರಿದೆ....... ಸಾಧ್ಯವಾದರೆ ಎಲ್ಲಾ ಪ್ರಭೇದಗಳ ವಿವರವನ್ನು ಮುಂದೆ ಚಿತ್ರ ಸಮೇತ ಕೊಡಲು ಪ್ರಯತ್ನಿಸುತ್ತೇನೆ....



"ಟ್ರೀ ಎಲ್ಲೋ" ಚಿಟ್ಟೆಯೂ ಆಲ್ಬ್‌ಜಿಯಾ [Albzia ] ಅನ್ನುವ ಮುಳ್ಳೀನ ಗಿಡದ ಎಲೆಗಳ ಮೇಲೆ ಸಾಸುವೆಕಾಳಿಗಿಂತ ಚಿಕ್ಕದಾದ ಮೊಟ್ಟೆಗಳನ್ನು ಇಡುತ್ತದೆ....ಮೊಟ್ಟೆಯೊಡೆದು ಹೊರಬಂದ ಹುಳು [ಇದನ್ನು ಲಾರ್ವ ಅಂತಲೂ ಕರೆಯುತ್ತಾರೆ] ನಿದಾನವಾಗಿ ಅದೇ ಎಲೆಯನ್ನು ತಿನ್ನುವುದರಿಂದ ಮತ್ತು ಬೆಳೆದು ದೊಡ್ಡದಾಗಿ ಪ್ಯೂಪ ಆಗುವುದು . ಅದೇ ಗಿಡದಲ್ಲಿ ಅದ್ದರಿಂದ ಈ ಗಿಡವೇ ಚಿಟ್ಟೆಯ " ತವರುಮನೆ" [host plant ] ಎನ್ನಬಹುದು..


ನಿಮಗೆ ಈ ಗಿಡದ ಆಡುಭಾಷೆಯ ಹೆಸರನ್ನು ಗುರುತಿಸಲು ಸಾಧ್ಯವಾದರೆ ಹೇಳಿ...............



ಇವು ಜಾಲಿಗಿಡ, ದೊಡ್ಡ ಗೋಣಿಸೊಪ್ಪಿನ ಗಿಡ, ನೆಲಬೇಲಿಗಿಡ, ಲಂಟಾನ, ಹೊಂಗೆ ಮರದ ಬಳ್ಳೀಗಳು, ಬ್ಯಾಚುಲರ್ಸ್ ಬಟನ್, ಮೇಲೆ ಕೂರುತ್ತವೆ....ಇವುಗಳು ಆಹಾರಕ್ಕಾಗಿ ಕೆಳದರ್ಜೆಯ ದಾಲ್ಚಿನಿ ಗಿಡ, ಜಾಲಿಗಿಡದ ಹೂಗಳನ್ನು ಆಶ್ರಯಿಸುತ್ತವೆ..


ಕಾಮನ್ ಗ್ರಾಸ್ ಎಲ್ಲೋ ಚಿಟ್ಟೆ .......ಇದರ ವೈಜ್ಞಾನಿಕ ಹೆಸರು "Eurema hecabe"


ಈ ವಿಭಾಗದ "ಕಾಮನ್ ಗ್ರಾಸ್ ಎಲ್ಲೋ" ಚಿಟ್ಟೆಯೂ ಇದೇ ರೀತಿ ಇದ್ದರೂ ಎರಡು ರೆಕ್ಕೆಯ ಹಿಂಬಾಗದಲ್ಲಿ ಅರ್ಧ ಚಂದ್ರಾಕೃತಿಯಲ್ಲಿ ಸ್ವಲ್ಪ ಕಪ್ಪು ಬಣ್ಣವಿರುತ್ತದೆ. ಈ ಗಿಡದ ಹೋಸ್ಟ್ ಪ್ಲಾಂಟ್ " ಕಾಶಿಯಾ ಟೋರ" [cassia tora ] ಅಂದರೆ ನಮ್ಮ ಆಡುಭಾಷೆಯಲ್ಲಿ ಅದರಲ್ಲೂ ಉತ್ತರ ಕನ್ನಡದ ಕಡೆ " ನಾಯಿ ಶೇಂಗ " ಅಂತಲೂ ದಕ್ಷಿಣಾ ಕರ್ನಾಟಕ ಭಾಗದಲ್ಲಿ " ತಂಗಡಿ ಗಿಡ" ಅಂತ ಕರೆಯುತ್ತಾರೆ.


ಭಾರತ, ಶ್ರೀಲಂಕ, ಪಾಕಿಸ್ಥಾನ, ಬಾಂಗ್ಲದೇಶ, ಬರ್ಮಾ, ಮಲೇಶಿಯಾ, ಥೈಲ್ಯಾಂಡ್, ಇಂಡೋನೇಷಿಯಾ, ಆಪ್ರಿಕಾ, ಮಡ್ಗಾಸ್ಕರ್, ಮಾರಿಷಶ್, ಫುಜಿ, ಜಪಾನ್, ಟಾಂಗ, ನ್ಯೂ ಗಿನಿಯಾ, ಕೊರಿಯಾ, ಆಷ್ಟ್ರೇಲಿಯಾ ಮತ್ತು ದಕ್ಷಿಣ ಪೂರ್ವ ಚೀಣದಲ್ಲಿ ಕಂಡುಬರುತ್ತವೆ...


ಮತ್ತಷ್ಟು ಚಿಟ್ಟೆಗಳ ಕುತೂಹಲಕಾರಿ ವಿಚಾರಗಳನ್ನು ಮತ್ತೊಂದು ಚಿಟ್ಟೆಯ ಪ್ರಯೋಗ-ಫೋಟೊ-ಅನುಭವ ಭಾಂದವ್ಯಗಳ ಜೊತೆ ಜೊತೆಯಲ್ಲಿ ಹೇಳುತ್ತೇನೆ....


ಚಿತ್ರ ಮತ್ತು ಲೇಖನ:
ಶಿವು.

118 comments:

PaLa said...

ಸೂಪರ್, ನಂಗೂ ಊರಲ್ಲಿದ್ದಾಗ್ಲೆಲ್ಲಾ ಇದೇ ಕೆಲ್ಸ. ನನ್ನ ಹತ್ರ ಒಂದು ಗಾಜಿನ ದೊಡ್ಡ ಪಾತ್ರೆ ಇದೆ, ಅದ್ರೊಳಗೆ ಹುಳ, ಎಲೆಗಳನ್ನೆಲ್ಲಾ ಇಡ್ತೀನಿ, ಮೇಲೆ ಒಂದು ಲಕೋಟೆನಾ ಸೂಜಿಯಿಂದ ತೂತು ಮಾಡಿ ಗಾಜಿನ ಪಾತ್ರೆ ಮೇಲೆ ಕಟ್ತೀನಿ. ತೂತುಗಳು ಉಸಿರಾಟಕ್ಕೆ ಗಾಳಿ ಸರಿಯಾಗಿ ಆಡ್ಲಿ ಅಂತ. ಒಂದು ತಟ್ಟೆಲಿ ಸ್ವಲ್ಪ ನೀರಿಟ್ಟು ಅದ್ರ ಮೇಲೆ ಈ ಗಾಜಿನ ಪಾತ್ರೆ ಇಟ್ರೆ ಇರುವೆ ಎಲ್ಲಾ ಬರೋದಿಲ್ಲ.

ದಿನಾ ಅದನ್ನ ಸ್ವಚ್ಛ ಮಾಡಿ ಹೊಸ ಎಲೆ ಹಾಕ್ತಾ ಇರ್ಬೇಕು ಮಾತ್ರ. ನಂಗೆ ನಾಲ್ಕನೇ ಕ್ಲಾಸಿನಲ್ಲಿರ್ಬೇಕಾದ್ರೆ ನಮ್ಮ ವಿಜ್ಞಾನದ ಟೀಚರ್ ಹೇಳ್ಕೊಟ್ಟಿದ್ದು ಇದು.


ಗಾಳಿ ಎಲ್ಲಾ ಬಂದು ಔಟ್-ಆಫ್ ಫೋಕಸ್ ಆಗೊಲ್ಲ ನೋಡಿ.

ಬರವಣಿಗೆ ಆಪ್ತವಾಗಿದೆ, ಮಾಹಿತಿಯೂ ಉಪಯುಕ್ತವಾಗಿದೆ, ವಂದನೆಗಳು.

--
ಪಾಲ

PaLa said...

>>ನಿಮಗೆ ಈ ಗಿಡದ ಆಡುಭಾಷೆಯ ಹೆಸರನ್ನು ಗುರುತಿಸಲು ಸಾಧ್ಯವಾದರೆ ಹೇಳಿ.

ಸರಿಯಾಗಿ ಗೊತ್ತಾಗ್ತಾ ಇಲ್ಲ, ಚಿಟ್ಟೆ ರೆಕ್ಕೆ ಹೋಲುವ ಎಲೆ ನೋಡಿದ್ರೆ ಮಂದಾರ ಪುಷ್ಪ ಅಥವಾ ಅದಕ್ಕೆ ಹತ್ತಿರದ(ಬಸವನ ಪಾದ..) ಫ್ಯಾಮಿಲಿಯ ಗಿಡ ಅನ್ಸುತ್ತೆ

ಮನಸು said...

ಶಿವೂ ಸರ್,
ಏನು ಸಾರ್ ನಿಮ್ಮ ತಾಳ್ಮೆ , ಇಷ್ಟು ಚೆಂದದಿ ಎಲ್ಲದರ ಬಗ್ಗೆ ತಿಳಿಸಿದೀರಿ... ಓ ಚಿಟ್ಟೆ ಬಣ್ಣದ ಚಿಟ್ಟೆ ಶಿವೂ ಸರ್ ಕೈಗೆ ಸಿಕ್ಕಿ ನೀ ವರ್ಣಿಸಲ್ ಪಟ್ಟೆ. ಹುಳು ಚಿಟ್ಟೆ ಎಲ್ಲದರ ವಿವರ, ಚಿತ್ರ ಎಲ್ಲವು ಚೆನ್ನಾಗಿದೆ ಉಪಯುಕ್ತ ಕೂಡ... ಬರುವ ಮತ್ತಲವು ಚಿತ್ರ ಬರವಣಿಗೆಗೆ ಕಾಯುತ್ತೇವೆ..

ವಂದನೆಗಳು ..

Anonymous said...

ನಮಸ್ತೇ ಶಿವು ಅಣ್ಣ
ಟ್ರೀ ಎಲ್ಲೋ ಚಿಟ್ಟೆಯ ಬಗ್ಗೆ ಒಳ್ಳೆ ಮಾಹಿತಿ ಕೋಟ್ಟಿದ್ದೀರ ದನ್ಯವಾದಗಳು. ನಮ್ಮ ಮನೆ ಅಂಗಳದಲ್ಲೂ ಇಂತಹ ಸನ್ನಿವೇಶ ನೋಡ ಸಿಗುತ್ತವೆ ಅದರೆ ಅದನ್ನ ಮುಟ್ಟಲು ಹೋದರೆ ಅಮ್ಮನ ಕೈಯಿಂದ ಬೈಸ್ಕೊತಿನಿ ಮುಟ್ಟ ಬೇಡ್ವೇ ಮುಟ್ಟಿದರೆ ಅದರ ತಾಯಿ ಅದನ್ನ ಹತ್ರ ಸೇರಿಸ್ಕೊಳ್ಳಲ್ಲ. ಆಮೇಲೆ ಅದು ಸತ್ತು ಹೊಗುತ್ತೆ ಅಂತಾರೆ. ಅದ್ರೆ ನಿಮ್ಮ ಲೇಖನ ಒದಿದ ನಂತರ ಹಾಗೇನು ಆಗಲ್ಲ ಅಂದ್ಕೋತಿನಿ. ಒಳ್ಳೆ ಲೇಖನ ಛಾಯಚಿತ್ರ. ದನ್ಯವಾದಗಳು ಶಿವು ಅಣ್ಣ.

ಪಾಚು-ಪ್ರಪಂಚ said...

ಶಿವೂ ಅವರೇ,

ತುಂಬಾ ಇಂಟರೆಸ್ಟಿಂಗ್ ಆಗಿದೆ ಬರಹ.. ಒಂದೇ ಉಸಿರಲ್ಲಿ ಓದಿ ಮುಗಿಸಿದೆ. ಕೊನೆಯ ಚಿತ್ರ ತುಂಬಾ ಹಿಡಿಸಿತು..ನನ್ನ ಗಣಕ-ಯಂತ್ರದ wallpaper ಮಾಡಿಕೊಂಡೆ.

ಅಭಿನಂದನೆಗಳು.

Unknown said...

ಶಿವು ಸಾರ್,
ಈ ಚಿತ್ರ ಲೇಖನವಂತು ಅದ್ಭುತ. ಚಿತ್ರಗಳು, ಅವುಗಳನ್ನು ತೆಗೆಯುವ ಮುನ್ನ ನಡೆದ ನಿಮ್ಮ ಸಂಶೋಧನೆ, ತಾಂತ್ರಿಕ ವಿವರಗಳು ಎಲ್ಲವೂ ಚೆನ್ನಾಗಿವೆ. ಕ್ರಿಯಾಶೀಲ ಮನಸ್ಸಿದ್ದರೆ ಅವಿರತ ದುಡಿಮೆಯ ನಡುವೆಯೂ ವಿಸ್ಮಯಗಳನ್ನು ಕಾಣಬಹುದು ಎನ್ನುವುದಕ್ಕೆ ನೀವು ಸಾಕ್ಷಿಯಾಗಿದ್ದೀರಿ. ನೀವು ವಿಸ್ಮಯಗಳ ಬೆನ್ನು ಹತ್ತಿ ಹೊರಟ್ಟಿದ್ದೀರಿ. ಹುಡುಕಾಟದ ಫಲವನ್ನು ನಮಗೂ ಬಡಿಸಿದ್ದೀರಿ. ಅದಕ್ಕಾಗಿ ನಿಮಗೆ ಧನ್ಯವಾದಗಳು.

Ittigecement said...

ಶಿವು ಸರ್..

ಈ ಜೀವ ಸ್ರಷ್ಟಿಯ ವೈಚಿತ್ರ ....

ಹುಟ್ಟು ಸಾವಿನ ಜೀವಪ್ರಪಂಚದ ..

ರಹಸ್ಯ...ಬಹಳ ಕುತೂಹಲ...

ಚಿಟ್ಟೆಯ ಹುಟ್ಟಿನ ..

ಫೋಟೊ ತೆಗೆಯುವ ನಿಮ್ಮ
ತಾಳ್ಮೆ, ಶ್ರದ್ಧೆಗೆ ಶಬ್ಧಗಳಿಲ್ಲ...

ಚಂದದ ಫೋಟೊಗಳು..
ಸುಂದರ ಲೇಖನ, ಉಪಯುಕ್ತ ಮಾಹಿತಿ.....

ಅಭಿನಂದನೆಗಳು...

ಚಿತ್ರಾ said...

ಅಬ್ಬಬ್ಬಬ್ಬಾ ಶಿವೂ ,
ನೀವೂ ,ನಿಮ್ಮ ತಾಳ್ಮೆ , ನಿಮ್ಮ ಕ್ಯಾಮೆರಾ ಹಾಗೂ ಪ್ರಕೃತಿಯಲ್ಲಿ ನಿಮಗಿರುವ ಆಸಕ್ತಿಗೆ ನನ್ನ ಸಲಾಮ್ ಕಣ್ರೀ !
ಎಷ್ಟು ಚಂದದ ಫೋಟೋಗಳು , ಅಷ್ಟೇ ಉಪಯುಕ್ತ ವಿವರಗಳು ... ಏನು ಹೇಳೋದು ಅಂತಾನೇ ಅರ್ಥ ಆಗ್ತಿಲ್ಲ !

ಕ್ಷಣ... ಚಿಂತನೆ... said...

ಶಿವು ಅವರೆ, ತುಂಬಾ ಸೊಗಸಾಗಿದೆ.

ಈವತ್ತಿನ ವಿಜಯಕರ್ನಾಟಕದಲ್ಲಿ ಡಿ.ಜಿ. ಮಲ್ಲಿಕಾರ್ಜುನ ರವರ ಇದೇ ಸಬ್ಜೆಕ್ಟ್ ನ ಚಿತ್ರ-ಲೇಖನ ಪ್ರಕಟವಾಗಿದೆ. ಅವರಿಗೂ ಸೂಪರ್‍ ಚಿತ್ರ ತೆಗೆದುಕೊಟ್ಟಿದ್ದಕ್ಕೆ ಧನ್ಯವಾದಗಳು.

ವಿಶ್ವಾಸದೊಂದಿಗೆ,

ಶ್ರೀನಿಧಿ.ಡಿ.ಎಸ್ said...

ಚೆನ್ನಾಗಿದೆ.

ಬಾಲು said...

super ide marayare!! odutta idda haage tejaswi avara parisara da kathe galu nenapige bandavu.

chitra lekhana galu, adakkaagi nivu madida samshodane!!! thumba chennagide!!!!!

ತೇಜಸ್ವಿನಿ ಹೆಗಡೆ said...

ಶಿವು ಅವರೆ,

ನಿಜಕ್ಕೂ ನೀವು ಅಭಿನಂದನೀಯರು. ಎಷ್ಟು ಜನರಿಗೆ ತಮ್ಮ ಕೆಲಸ ಕಾರ್ಯಗಳ ನಡುವೆ ಸೃಷ್ಟಿಯ ಈ ವೈಚಿತ್ರ್ಯವನ್ನು ಗಮನಿಸುವ, ಆಲೋಕಿಸುವ ಆಸಕ್ತಿಯಿರುತ್ತದೆ?! ಅಂತಹದರಲ್ಲಿ ನೀವು ನಿಮ್ಮ ಕಾರ್ಯ ಒತ್ತಡದ ನಡುವೆಯೂ ಇಷ್ಟೊಂದು ಮಾಹಿತಿಪೂರ್ಣ ಜೊತೆಗೆ ಸವಿವರವಾಗಿರುವ ಲೇಖನವನ್ನೂ, ಅದ್ಭುತ ಸುಂದರ ಚಿತ್ರಗಳನ್ನೂ ನಮ್ಮೊಂದಿಗೆ ಹಂಚಿಕೊಂಡಿರುವಿರಿ. ತುಂಬಾ ಮೆಚ್ಚುಗೆಯಾಯಿತು. ಧನ್ಯವಾದಗಳು. ಹೀಗೇ ಮಾಹಿತಿಯನ್ನೊದಗಿಸುತ್ತಿರಿ... ಕಾಯುತ್ತಿರುತ್ತೇನೆ.

shivu.k said...

ಪಾಲಚಂದ್ರ,

ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.....

ನಿಮ್ಮ ಪ್ರಯೋಗವನ್ನು ಮುಂದುವರಿಸಿ....ಅದರೆ ಅದಕ್ಕೂ ಮೊದಲು ಸಿಕ್ಕ ಹುಳುಗಳನ್ನು ಮೊದಲು ಯಾವುದು ಅಂತ ಗುರುತಿಸಲು ಪ್ರಯತ್ನಿಸಿ...ಅದಕ್ಕೆ ಪುಸ್ತಕಗಳ ಮೊರೆಹೋಗಬೇಕು....

ಮತ್ತೆ ನೀವು ಹೇಳಿದ ಎರಡು ಗಿಡಗಳು ಅಲ್ಲ ....ಇವೆರಡು ಗಿಡಗಳನ್ನು ನಾನು ನೋಡಿದ್ದೇನೆ....ಇವು ಚಿಕ್ಕ ಎಲೆಗಳು..ಮುಳ್ಳೂ ಉಂಟು.....ಇನ್ನೂ ಪ್ರಯತ್ನಿಸಿ ನೋಡೋಣ...ಥ್ಯಾಂಕ್ಸ್....

shivu.k said...

ಮನಸು ಮೇಡಮ್,

ನನ್ನನ್ನು ತುಂಬಾ ಹೊಗಳುತ್ತಿದ್ದೀರಿ...

ಮತ್ತೆ ನನ್ನ ಬಳಿ ಸುಮಾರು ೫೦ ಹೆಚ್ಚು ಕೀಟಗಳ ಛಾಯಾಚಿತ್ರಗಳಿವೆ....ಅವುಗಳಲ್ಲಿ ಈ ರೀತಿ ಪ್ಯೂಪ ಸಮೇತ ಜೀವನ ಕ್ರಿಯೆ ಹಿಂಬಾಲಿಸಿ ಸಂಶೋದಿಸಿದ್ದು...ಸುಮಾರು ೧೩ ವಿವಿಧ ಬಗೆಗಳೀವೆ....ಧನ್ಯವಾದಗಳು....

Srinidhi said...

ನಿಮ್ಮ ಆಸಕ್ತಿ, ಏಕಾಗ್ರತೆ, ತಾಳ್ಮೆ ಹಾಗೂ ಕ್ಯಾಮೆರಾ ಬಗ್ಗೆ ನನಗೆ ಅಸೂಯೆ :-)

Pramod P T said...

ವ್ಹಾ!

shivu.k said...

ರೋಹಿಣಿ ಪುಟ್ಟಿ,

ಚಿಟ್ಟೆಯ ಡೆಲಿವರಿ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....

ಮತ್ತೆ ಚಿಟ್ಟೆ ಅಥವ ಪಕ್ಷಿಗಳನ್ನು ಹಿರಿಯರು ಏಕೆ ಮುಟ್ಟಬೇಡವೆನ್ನುತ್ತಾರೆಂದರೆ ನಮಗೆ ನಯವಾಗಿ ಮುಟ್ಟಲು ಗೊತ್ತಿಲ್ಲದೆ ಅವುಗಳ ಪ್ರಾಣಕ್ಕೆ ಅಪಾಯ ತಂದರೆ ಅಂತ ನೇರವಾಗಿ ಹೇಳಲಾಗದೆ ಈ ರೀತಿ ಹೇಳುತ್ತಾರೆ....ಆ ರೀತಿಯಾದರೂ ಅವುಗಳನ್ನು ಕಾಪಾಡಬಹುದಲ್ಲ ಅಂತ...
ನೀನು ಮುಟ್ಟಬಹುದು....ಮುಟ್ಟುವಾಗ ಅದು ಪುಟ್ಟ ಮಗು ಅಂತ ನಿನ್ನಲ್ಲಿ ಭಾವನೆ ಬಂದರೆ ನಿನ್ನ ಸ್ಪರ್ಶ ತುಂಬಾ ನಯವಾಗಿ ಅವುಗಳಿಗೆ ಏನು ಆಗುವುದಿಲ್ಲ....ಅದರೆ ಅಜಾಗುರುಕತೆಯಿಂದಾಗಿ ಯಾವುದಕ್ಕೂ ಪ್ರಾಣ ಹಾನಿ, ನೋವಾಗಬಾರದು...

ಧನ್ಯವಾದಗಳು...

shivu.k said...

ಪ್ರಶಾಂತ್ ಭಟ್,

ಚಿಟ್ಟೆಯ ಚಿತ್ರ ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....

ಕೊನೆಯ ಚಿತ್ರ ನಿಮಗಿಷ್ಟವಾಗಿ ಅದನ್ನು ವಾಲ್ ಪೇಪರ್ ಮಾಡಿಕೊಂಡಿದ್ದೀರಿ....enjoy ಮಾಡಿ....

shivu.k said...
This comment has been removed by the author.
shivu.k said...

Dr. ಸತ್ಯನಾರಾಯಣ ಸರ್,

ಚಿಟ್ಟೆಯ ಡೆಲಿವರಿ ನೋಡಿದ್ದಕ್ಕೆ ಥ್ಯಾಂಕ್ಸ್....

ಮತ್ತೆ ನನ್ನ ಈ ಲೇಖನದ ಬಗ್ಗೆ ಸಂಶೋಧನೆ...ಅಂತೆಲ್ಲಾ ದೊಡ್ಡ ಮಾತು ಹೇಳಿದ್ದೀರಿ....ಸರ್ ಇವೆಲ್ಲಾ ನನ್ನ ಕುತೂಹಲ ತಣಿಸುವ ತಾಪತ್ರಯಗಳಷ್ಟೇ....

ಇವೆಲ್ಲವನ್ನು ನೋಡಿ ಸಂತೋಷಪಟ್ಟಿದ್ದಕ್ಕೆ ಥ್ಯಾಂಕ್ಸ್...

ಹೀಗೆ ಬರುತ್ತಿರಿ...

Unknown said...

wah !! wah !! ... informative article.pics so too good !!! excelent.. !!!!

shivu.k said...

ಪ್ರಕಾಶ್ ಸರ್,

ನಿಮ್ಮ ಅಭಿಪ್ರಾಯ ಸರಿಯಾಗಿದೆ....

ನಿಜಕ್ಕೂ ಈ ಸೃಷ್ಠಿಯ ವೈವಿಧ್ಯ, ವೈಚಿತ್ರಗಳನ್ನು ನಾನು ಅರಿಯಲು ಸಾಧ್ಯವೇ....

ಅದರೂ ಈ ರೀತಿ ಇವು ನಾನು ಸುಮ್ಮನಿರಲಾಗದೆ...ಮೈಮೇಲೆ ಏರಿಕೊಳ್ಳುವ ತೆವಲುಗಳು ಅಷ್ಟೆ....

ಇಂಥ ಅನೇಕ ತೆವಲುಗಳಲ್ಲಿ....ವಿಫಲತೆ ಹೆಚ್ಚು....ಯಶಸ್ವಿಯಾಗಿರುವುದು..ಬೆರಳೆಣಿಕೆಯಷ್ಟು...

ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್....

shivu.k said...

ಚಿತ್ರ ಮೇಡಮ್,

ನೀವು ಹೇಳಿದಂತೆ ಪ್ರಕೃತಿಯ ವೈವಿಧ್ಯತೆ ಬಗ್ಗೆ ನನಗೆ ಕುತೂಹಲವಿದೆ....ಆಸಕ್ತಿಯಿದೆ....ಅದರೆ ನೀವು ಹೊಗಳುವಷ್ಟು...ತಾಳ್ಮೆ ಖಂಡಿತ ನನ್ನಲ್ಲಿ ಇಲ್ಲ...

ನನ್ನ ಶ್ರೀಮತಿ " ನಿಮಗೆ ತಾಳ್ಮೆ ತುಂಬಾ ಕಡಿಮೆ ಕಣ್ರೀ" ಅಂತ ಅವಾಗಾವಾಗ ಹೇಳುತ್ತಿರುತ್ತಾಳೆ...

ಚಿಟ್ಟೆಯ ಚಿತ್ರ ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

sunaath said...

ಶಿವು,
ನಿಮ್ಮ ನಿಸರ್ಗಪಾಠ ತುಂಬಾ ಚೆನ್ನಾಗಿದೆ.
ತುಂಬಾ ಪರಿಶ್ರಮ ಮತ್ತು ನಿಷ್ಠೆಯಿಂದ ನಮಗೆಲ್ಲರಿಗೂ ಉತ್ತಮ ಚಿತ್ರಗಳನ್ನು ಹಾಗೂ ಮಾಹಿತಿಯನ್ನು ಕೊಡುತ್ತಿದ್ದೀರಿ.
ಧನ್ಯವಾದಗಳು.

ಚಂದ್ರಕಾಂತ ಎಸ್ said...

ಶಿವೂ ಅವರೆ

ನಿಜಕ್ಕೂ ನಿಮ್ಮ ಕೆಲಸ ಶ್ಲಾಘನೀಯ.ಮದುವೆಯ ದಿನ ಸಮಯವಿಲ್ಲದ ನಿಮಗೆ ಚಿಟ್ಟೆಯ ಡೆಲಿವರಿ ನೋಡೋಕಾದರೂ ಸಮಯ ಸಿಕ್ಕಿತಲ್ಲ.ತಮಾಷೆಗೆ ಬೇಸರಿಸಬೇಡಿ. ನಮಗಿಷ್ಟವಾದ ಕೆಲಸಕ್ಕೆ ಹೇಗಾದರೂ ಸಮಯ ಹೊಂದಿಸಿಕೊಳ್ಳುತ್ತೇವೆ ಎಂದು ಹೇಳಲು ಹಾಗೆ ತಮಾಷೆ ಮಾಡಿದೆ.

ನೀವೂ ಮಲ್ಲಿಕಾರ್ಜುನ್ ಅವರೂ ಪೈಪೋಟಿಯ ಮೇಲೆ ಇಂತಹ ಚಿತ್ರ ಲೇಖನ ಬರೆಯುತ್ತಿದ್ದರೆ ನಮಗಂತೂ ಸುಗ್ರಾಸ ಭೋಜನ.!!

ಅತ್ಯುತ್ತಮ ಚಿತ್ರಗಳೂ ಹಾಗು ಬರಹಕ್ಕಾಗಿ ಧನ್ಯವಾದಗಳು.

Umesh Balikai said...

ಬೋಳು ತಲೆ - ಭೂ ಪಟಗಳ ಬಗ್ಗೆ, ಚಿಟ್ಟೆಗಳ ಬಗ್ಗೆ, ಸಸ್ಯ ಪ್ರಭೇಧಗಳ ಬಗ್ಗೆ, ಹೀಗೆ ವೈವಿಧ್ಯಮಯ ವಿಷಯಗಳ ಮೇಲೆ ನಿಮಗಿರುವ ಜ್ಞಾನ ಮೆಚ್ಚಬೇಕಾದ್ದೆ. ಪ್ರೌಢಶಾಲಾ ತರಗತಿಗಳಲ್ಲಿ ಚಿಟ್ಟೆಯ ಜೀವನ ಚಕ್ರದ ಬಗ್ಗೆ ಓದಿದ ನೆನಪು. ಅದನ್ನು ಸಚಿತ್ರವಾಗಿ ವಿವರಿಸಿದ್ದಕ್ಕೆ ಧನ್ಯವಾದಗಳು.

Anveshi said...

ಶಿವು...

ನೀವು ಸಂಶೋಧನೆ ಕೆಲಸಕ್ಕೆ ಸೇರಬೇಕಾಗಿದ್ದವರು ಹೇಗೆ ರೂಟ್ ಬದಲಾಯಿಸಿದ್ರಿ... ಸೂಪರ್ ಆಗಿದೆ...

ಹರೀಶ ಮಾಂಬಾಡಿ said...

ಸೂಪರ್

Greeshma said...

informative ಲೇಖನ.
ಈ ಚಿಟ್ಟೆ ಫೋಟೋ ನೋಡಿದ್ರೆ ಪರಿಚಯ ಇದ್ದಹಂಗಿದೆ . ತುಂಬಾ common ಚಿಟ್ಟೆನಾ ಇದು?

Annapoorna Daithota said...

ಚಿಟ್ಟೆ ಹೋಯ್ತು, ಫೋಟೋ ಉಳೀತು ಡುಂ ಡುಂ ಡುಂ
ಫೋಟೋ ಜೊತೆಗೆ ಲೇಖನ ಬಂತು ಡುಂ ಡುಂ ಡುಂ

ಒಳ್ಳೆ ಲೇಖನ, ಸುಂದರವಾದ ಚಿತ್ರಗಳು, Very interesting.

ನಂಗೂ `ಪೂಚಂತೇ' ಅವರ ನೆನಪು ಬಂತು :-)

shivu.k said...

ಕ್ಷಣ ಚಿಂತನೆ ಸರ್,


ಚಿಟ್ಟೆ ಚಿತ್ರ ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....

ಮತ್ತು ಇವತ್ತು ಬೆಳಿಗ್ಗೆ ವಿಜಯ ಕರ್ನಾಟಕದಲ್ಲಿ ಮಲ್ಲಿಕಾರ್ಜುನ್ ತೆಗೆದ ಚಿತ್ರಗಳು ಪ್ರಕಟವಾಗಿದೆ....ಚಿಟ್ಟೆಗಳು ಬೇರೆ....ಅವರಿಗೆ ಅಭಿನಂದಿಸಿದ್ದೇನೆ....ನಿಮ್ಮ ಅಭಿನಂದನೆಗಳನ್ನು ಅವರಿಗೆ ತಿಳಿಸುತ್ತೇನೆ...

shivu.k said...

ಶ್ರೀನಿಧಿ,ಡಿ.ಎಸ್.

ಥ್ಯಾಂಕ್ಸ್...ಕಣ್ರೀ....

shivu.k said...

ಬಾಲು ಸರ್,

ಚಿಟ್ಟೆ ಚಿತ್ರ ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....

ನನ್ನೆಲ್ಲಾ ಬರವಣಿಗೆ ಮತ್ತು ಪ್ರಕೃತಿ ವಿಸ್ಮಯದೆಡೆಗಿನ ಸ್ಪೂರ್ತಿ..ಪೂರ್ಣ ಚಂದ್ರ ತೇಜಸ್ವಿಯವರು....
ಚಿಕ್ಕಂದಿನಿಂದಲೂ ಅವರ ಪುಸ್ತಕಗಳೆಂದರೆ ನನಗೆ ಇಷ್ಟ...ಈಗಲೂ "ಕರ್ವಾಲೋ" ನನ್ನ ಪೇವರೇಟು..
ಅದನ್ನು ಮತ್ತೆ ಓದಿದಾಗಲೆಲ್ಲಾ ಈ ರೀತಿ ಹೊಸ ಅಲೋಚನೆಗೆ ತಗುಲಿಕೊಂಡಿರುತ್ತೇನೆ....

SSK said...

shivu avare nimma saahasakke mattu nimma wife nimage needuva sahakaarakke, u both just great!! Lekhana tumbaa chennagide, tumba ishtavayithu.

shivu.k said...

ತೇಜಸ್ವಿನಿ ಮೇಡಮ್,

ಚಿಟ್ಟೆಯ ಚಿತ್ರ-ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

ನನಗೆ ಚಿಕ್ಕಂದಿನಿಂದಲೂ ಈ ಪ್ರಕೃತಿಯ ಕಡೆಗೆ ಒಂದು ಕುತೂಹಲವಿತ್ತು, ಮತ್ತು ಬೆರಗಿತ್ತು....ನಮ್ಮ ಮನೆಗೆ ನೆಂಟರು ಗೆಳೆಯರು ಬಂದರೇ ನಾನು ಅವರನ್ನು ಸರಿಯಾಗಿ ಮಾತಾಡಿಸದೇ ಮೌನಿಯಾಗಿದ್ದುಬಿಡುತ್ತಿದ್ದೆ...ಅದನ್ನು ಕಂಡ ನನ್ನಪ್ಪ ಅಮ್ಮ .. ನೆಂಟರು ಹೋದ ಮೇಲೆ ಅವರನ್ನು ಮಾತಾಡಿಸಲು ನಿನಗೆ ಆಗುವುದಿಲ್ಲವಾ ಅಂತ ಮೇಲೆ ರೇಗುತ್ತಿದ್ದರು....ನಾನು ಏನು ಪ್ರತಿಕ್ರಿಯೆ ನೀಡದೇ ಸುಮ್ಮನಿರುತ್ತಿದ್ದೆ.. ಆಗ ಜನರ ಮೇಲೆ ಕುತೂಹಲವೇ ಇರಲಿಲ್ಲ...ಅದೇ ಪ್ರಕೃತಿಯ ಮೇಲೆ ತುಂಬಾ ಬೆರಗಿತ್ತು..... ಅದೇ ಈಗಲೂ ಈ ರೀತಿ ಬೆಳೆದು ಬಂದಿರಬಹುದೇನೋ.....

ಈಗ ಜನರೆಡೆಗೂ ನನ್ನ ಬೆರಗು ಮತ್ತು ಗಮನ ಹೆಚ್ಚಾಗಿದೆ...

shivu.k said...

ಟಿ.ಜಿ. ಶ್ರೀನಿಧಿ,

ನನ್ನ ಬಗ್ಗೆ, ಆಸಕ್ತಿ, ಇತ್ಯಾದಿಗಳ ಬಗ್ಗೆ ನಿಮ್ಮ ಅಸೂಯೆಗೆ ನನಗೆ ಬೇಸರವಿಲ್ಲ...ಅದ್ರೆ ಪಾಪ ಕ್ಯಾಮೆರಾ ಕಣ್ರಿ..

shivu.k said...

ಪ್ರೊಮೋದ್ ಥ್ಯಾಂಕ್ಸ್...

shivu.k said...

ರೂಪ ಮೇಡಮ್,

ನನ್ನ ಬ್ಲಾಗಿಗೆ ಸ್ವಾಗತ...

ಚಿಟ್ಟೆ ಚಿತ್ರ- ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....
ಹೀಗೆ ಬರುತ್ತಿರಿ....

shivu.k said...

ಸುನಾಥ್ ಸರ್,

ನಿಸರ್ಗ ಪಾಠ ಅಂತ ಹೊಸ ಹೆಸರು ಇಟ್ಟಿದ್ದೀರಿ...ಥ್ಯಾಂಕ್ಸ್...ಚಿತ್ರ ಲೇಖನವನ್ನು ಮೆಚ್ಚಿದ್ದೀರಿ...
ಅದರೆ ನಿಮ್ಮ ಧೀರ್ಘ ಅಧ್ಯಾಯನದ ವಸ್ತುಗಳು, ವಿಚಾರಗಳ ಮುಂದೆ ಇದು ಏನು ಇಲ್ಲವೆನಿಸುತ್ತದೆ...ನೀವು ಬರೆದ ಎಲ್ಲಾ ವಿಚಾರಗಳ ಒಂದು ಪ್ರತಿಯನ್ನು ನನಗೆ ಕೊಡುವಿರಾದರೆ ನಾನು ನನ್ನ ಅದ್ಯಾಯನಕ್ಕೆ ಮತ್ತು ನನಗಿಂತ ಕಿರಿಯರಿಗೆ ಅದನ್ನು ಕಾದಿರಿಸುತ್ತೇನೆ.....

ಧನ್ಯವಾದಗಳು....

shivu.k said...

ಚಂದ್ರ ಕಾಂತ ಮೇಡಮ್,

ಚಿಟ್ಟೆಯ ಛಾಯಾಚಿತ್ರ ಮತ್ತು ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು....

ಮತ್ತೆ ಮದುವೆಗೆ ತೊಂದರೆಯಾದಂತೆ ಈ ಚಿಟ್ಟೆ ಫೋಟೊಗಳಿಗೂ ತುಂಬಾ ತೊಂದರೆಯಾಗಿದೆ...
ನನ್ನ ದಿನಪತ್ರಿಕೆ ಕೆಲಸದ ಒತ್ತಡದಿಂದಾಗಿ ಈ ಬೆಳಗಿನ ಚಿಟ್ಟೆ ಫೋಟೋಗಳ ವಿಚಾರದಲ್ಲಿ ನೂರಕ್ಕೆ ೧೦ ರಷ್ಟೇ ಸಫಲನಾಗಿದ್ದೇನೆ....
ಆ ಸಫಲತೆಯ ಫಲವೇ ಈಗ ನನ್ನ ಬಳಿ ಸುಮಾರು ೫೦ಕ್ಕೂ ಅಧಿಕ ಚಿಟ್ಟೆಗಳು,ಆರು ವಿಧವಾದ ಡ್ರ್ಯಾಗನ್ ಪ್ಲೈಗಳು, ಸುಮಾರು ಪತಂಗಗಳು, ಕೆಲವು ದುಂಬಿಗಳು, ಜೇಡಗಳು, ಕೀಟಗಳು ಛಾಯಾಚಿತ್ರಗಳಿವೆ...

ಬಹುಶಃ ನನಗೆ ಇತರರಂತೆ ಬೆಳಗಿನ ಸಮಯವಿದ್ದಿದ್ದರೆ ನನ್ನ ಬಳಿ ಇಂಥ ನೂರಾದರೂ ಎಲ್ಲಾ ಬಗೆಯ ಚಿಟ್ಟೆಗಳು ಕೀಟಗಳು, ದುಂಬಿಗಳು, ಡ್ರ್ಯಾಗನ್ ಪ್ಲೈಗಳು ಇತ್ಯಾದಿಗಳ ಚಿತ್ರ ಸಹಿತ ದಾಖಲೆಗಳಿರುತ್ತಿದ್ದವು...

ಮತ್ತೆ ನೀವು ಹೇಳಿದಂತೆ ಮಲ್ಲಿಕಾರ್ಜುನ್ ಮತ್ತು ನಾನು ಪೈಪೋಟಿಯಿಂದ ಚಿಟ್ಟೆಗಳ ಫೋಟೊಗಳನ್ನು ಹಾಕುತ್ತಿಲ್ಲ...
ನನಗೆ ಮಲ್ಲಿಕಾರ್ಜುನ್ ಪರಿಚಯವಾಗಿ ನಾಲ್ಕು ವರ್ಷಗಳಾಗಿವೆ...ನಮ್ಮಿಬ್ಬರ ಆಸಕ್ತಿ, ಅಭಿರುಚಿ ಒಂದೇ ಆಗಿರುವುದರಿಂದ...ಇಬ್ಬರೂ ಒಟ್ಟಿಗೆ ಫೋಟೊಗ್ರಫಿ ಮಾಡುತ್ತೇವೆ...ಸುಮಾರು ಚಿಟ್ಟೆಗಳ ಫೋಟೊಗಳನ್ನು ಒಟ್ಟಿಗೆ ಕ್ಲಿಕ್ಕಿಸಿದ್ದೇವೆ....
ಇದೇ ಚಿಟ್ಟೆಯ ಚಿತ್ರ ಫೋಟೊ ತೆಗೆಯಲು ಹಿಂದಿನ ದಿನ ಸಂಜೆ ಈ ಚಿಟ್ಟೆ ಬಣ್ಣ ಬದಲಾಗಿದ್ದು ಕಂಡು ಮಲ್ಲಿಕಾರ್ಜುನ್‌ಗೆ ಫೋನ್ ಮಾಡಿ ಮರುದಿನ ಏಳು ಗಂಟೆಯೊಳಗೆ ಬರಲು ಹೇಳಿದ್ದೆ....ಅವರು ಮುಂಜಾನೆ ನಾಲ್ಕು ಗಂಟೆಗೆ ಎದ್ದು ಸಿದ್ದವಾಗಿ ಶಿಡ್ಲಘಟ್ಟದಿಂದ ಐದು ಗಂಟೆಯ ಬಸ್ ಹಿಡಿದು...ನಮ್ಮ ಮನೆಗೆ ಬಂದು ಇದೇ ಚಿಟ್ಟೆಯ ಫೋಟೊವನ್ನು ತೆಗೆದು ಮತ್ತೆ ಹನ್ನೊಂದು ಗಂಟೆಯ ಹೊತ್ತಿಗೆ ಅವರು ಊರು ಸೇರಿದ್ದಾರೆ....
ನಾನು ಅದೇ ಕೆಲಸವನ್ನು ಅವರ ಊರಿಗೆ ಹೋದಾಗ ಮಾಡುತ್ತೇನೆ....

ಈ ರೀತಿ ನಮ್ಮಲ್ಲಿ ಒಂದು ಹೊಂದಾಣಿಕೆಯಿದೆ...ಅದರೆ ಬರವಣಿಗೆಯಲ್ಲಿ ಅವರದೇ ಬೇರೆ ಶೈಲಿ ಮತ್ತು ನನ್ನದೇ ಬೇರೆ ಶೈಲಿ....ಎಲ್ಲೂ ಅದು ಒಬ್ಬರಿಂದೊಬ್ಬರಿಗೇ ರಿಪೀಟ್ ಆಗುವುದಿಲ್ಲ...

ಈ ಚಿಟ್ಟೆಯ ಲೇಖನಕ್ಕೆ ಶೀರ್ಷಿಕೆಯನ್ನು ಹೇಳೀದ್ದು ಮಲ್ಲಿಕಾರ್ಜುನ್...

shivu.k said...

ಉಮಿ ಸರ್,

ನಿಮ್ಮಂತೆ ನನಗೂ ಈ ಚಿಟ್ಟೆಗಳ ಮತ್ತು ಇನ್ನಿತರ ಹುಳುಗಳ ಬಗ್ಗೆ ಪ್ರೌಢಶಾಲೆಯಲ್ಲಿ ಓದಿದ್ದೆ....ಆಗಲೇ ತುಂಬಾ ಕುತೂಹಲವಿತ್ತು....ನೆನಪಿಸಿದ್ದಕ್ಕೆ ಥ್ಯಾಂಕ್ಸ್...

ಭೂಪಟಗಳ ಬಗ್ಗೆ ಇಲ್ಲಿ ಪ್ರಸ್ಥಾಪಿಸಿದ್ದಕ್ಕೆ, ಚಿತ್ರ ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....

shivu.k said...

ಅಸತ್ಯ ಅನ್ವೇಷಿ ಸರ್,

ನೀವು ನನ್ನ ಚಿತ್ರಲೇಖನವನ್ನು ಸಂಶೋಧನೆಯೆಂದು ಹೇಳಿರುವುದು ನನಗೆ ಒಂದು ರೀತಿ ಟಾನಿಕ್ ಕೊಟ್ಟ ಹಾಗಿದೆ...

ಮತ್ತೆ ನಾನು ರೂಟ್ ಬದಲಾಯಿಸಿಲ್ಲ....ದಿನಪತ್ರಿಕೆ ಕೆಲಸದಲ್ಲಿ ಛಾಯಾಗ್ರಹಣ ಕೆಲಸದಲ್ಲೂ ನನ್ನ ಸಂಶೋಧನೆ ಮುಂದುವರಿಸಿದ್ದೇನೆ....ಮತ್ತು ಇವೆರಡು ನನ್ನ ಸ್ವಂತ ಉದ್ಯೋಗಗಳಾದ್ದರಿಂದ ಸ್ವತಂತ್ರವಾಗಿ ಖುಷಿಯಿಂದ ಮಾಡುತ್ತಿದ್ದೇನೆ...

shivu.k said...

ಹರೀಶ್ ಮಾಂಬಾಡಿ...

ಚಿಟ್ಟೆಯ ಚಿತ್ರ ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

shivu.k said...

ಗ್ರೀಷ್ಮ ಮೇಡಮ್,

ಲೇಖನ ಮಾಹಿತಿಯುಕ್ತವೆನಿಸಿದ್ದಕ್ಕೆ ಥ್ಯಾಂಕ್ಸ್...

ಮತ್ತು ಈ ಚಿಟ್ಟೆಯೂ ಪಿಯಾರಿಡೆ ಜಾತಿಗೆ ಸೇರಿದರೂ ಸಾಮಾನ್ಯವಾಗಿ ಕಾಮನ್ ಗ್ರಾಸ್ ಎಲ್ಲೋ ಚಿಟ್ಟೆಯಂತೆ ಕಾಣುತ್ತದೆ...ಅದರೆ ಕಾಮನ್ ಗ್ರಾಸ್ ಎಲ್ಲೋ ಚಿಟ್ಟೆಗಿಂದ ಸ್ವಲ್ಪವೇ ದೊಡ್ಡ ರೆಕ್ಕೆ ಹೊಂದಿದೆ...ಮತ್ತು ಸಾಮೂಹಿಕವಾಗಿ ಮೊಟ್ಟೆಗಳನ್ನು ಇಡುವುದರಿಂದ ಒಂದೇ ಗಿಡದಲ್ಲಿ ನೂರಾರು ಮೊಟ್ಟೆಗಳನ್ನು ಇಡುತ್ತದೆ.........

shivu.k said...

ಅನ್ನಪೂರ್ಣ ಮೇಡಮ್,

ಚಿಟ್ಟೆ ಲೇಖನದಿಂದಾಗಿ ನಿಮಗೆ ತೇಜಸ್ವಿಯವರು ನೆನಪಾಗಿರು ಅಂದರೆ ನಾನು ಬರೆದದ್ದಕ್ಕೂ ಸಾರ್ಥಕವೆನಿಸುತ್ತದೆ....ಥ್ಯಾಂಕ್ಸ್...

shivu.k said...

SSK ಸರ್,

ನನ್ನ ಬ್ಲಾಗಿಗೆ ಸ್ವಾಗತ...

ನನ್ನ ಎಷ್ಟೋ ಫೋಟೊಗ್ರಫಿಯ ಯಶಸ್ಸಿಗೆ ನನ್ನ ಶ್ರೀಮತಿಯ ಸಹಕಾರ ದೊಡ್ಡದು....

ಚಿಟ್ಟೆಯ ಚಿತ್ರಗಳು-ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.....

ಬಿಸಿಲ ಹನಿ said...

ಶೀವು ಅವರೆ,
ನಿಮ್ಮ ಈ ಲೇಖನ ಓದುತ್ತಾ ಹೋದಂತೆ ನನಗೆ ತೇಜಸ್ವಿಯವರು ನೆನಪಾದರು.ಅವರೂ ಸಹ ನಿಮ್ಮಂತೆ ಹುಳು, ಪಕ್ಷಿಗಳ ಬಗ್ಗೆ ಆಸಕ್ತಿಯನ್ನು ಹೊಂದಿದ್ದು ಗಂಟೆಗಟ್ಟಲೆ ಕಾದು ಕಾದು ಚಿತ್ರಗಳನ್ನು ತೆಗೆಯುತ್ತಿದ್ದರು. ನಿಮ್ಮ ಸುಂದರ ಲೇಖನ ಹಾಗೂ ಅತಿ ಸುಂದರ ಚಿತ್ರಗಳಿಗೆ ಧನ್ಯವಾದಗಳು.

shivu.k said...

ಉದಯ್ ಸರ್,

ಚಿಟ್ಟೆಯ ಚಿತ್ರ ಲೇಖನದ ಬಗ್ಗೆ ನಿಮ್ಮ ಪ್ರತಿಕ್ರಿಯೆ ನನಗೆ ಹೊಸ ಹುರುಪು ತರುತ್ತಿದೆ...ಇನ್ನಷ್ಟು ಇಂಥಹ ಲೇಖನಗಳನ್ನು ಮಾಡುವ ಜವಾಬ್ದಾರಿ ಹೆಚ್ಚಿಸುತ್ತಿದೆ...
ಮತ್ತೆ ನನ್ನ ಎಲ್ಲಾ ಬರವಣಿಗೆಗೆ ಮತ್ತು ಈ ಕೀಟ ಚಿಟ್ಟೆಗಳ ಛಾಯಾಗ್ರಹಣಕ್ಕೆ ಪೂರ್ಣಚಂದ್ರ ತೇಜಸ್ವಿಯವರೆ ಸ್ಫೂರ್ತಿ...

ಧನ್ಯವಾದಗಳು ಸರ್,

ಸುಪ್ತದೀಪ್ತಿ suptadeepti said...

ಶಿವು,
ನಿಮ್ಮ ಚಿಟ್ಟೆ ಹುಟ್ಟಿನ ಗಾಥೆ ಚೆನ್ನಾಗಿದೆ. ಸುಂದರವಾದ ಚಿತ್ರಗಳು, ಸಮಂಜಸ ವಿವರ-ವಿವರಣೆಗಳು. ಇದಕ್ಕೆ ಬೇಕಾದ ಬೆರಗಿನ, ತಾಳ್ಮೆಯ ಅರಿವು ನನಗಿದೆ.

ನಾನೂ ಹಲವಾರು ಕ್ಯಾಟರ್ಪಿಲ್ಲರ್ಗಳನ್ನು ಗಾಜಿನ ಬೋಗುಣಿಯಲ್ಲಿಟ್ಟು ಮೇಲೆ ತೆಳ್ಳನೆಯ ಬಿಳಿ ಬಟ್ಟೆ ಕಟ್ಟಿ, ಒಳಗೆ ಅವಕ್ಕೆ ಬೇಕಾಗುವ ಅದೇ ಗಿಡದ ಎಲೆಗಳನ್ನು ಹಾಕಿ, 'ಸಾಕಿ', ಅವುಗಳು ಕೋಶ ಕಟ್ಟುವುದನ್ನು ಕಾಯುತ್ತಾ ಕೂತು ನೋಡಿ, ಮತ್ತೆ ಕೆಲವು ದಿನಗಳ ಮೇಲೆ ಚಿಟ್ಟೆ ಹುಟ್ಟಿ ಹಾರಲು ಕಲಿಯುವುದನ್ನು ಕಂಡು ಬೆರಗಿನಿಂದ ಕಣ್ಣರಳಿಸಿದ್ದೆ. ಆಗ ನನ್ನ ಕೈಯಲ್ಲಿ (ಮನೆಯಲ್ಲಿ) ಕ್ಯಾಮೆರಾ ಇರಲಿಲ್ಲ. ಪ್ರತೀ ಹಂತವೂ ಒಂದೊಂದು ಹೊಸಹುಟ್ಟು ಆ ಹುಳಗಳಿಗೆ. ಅದನ್ನು ನೋಡುತ್ತಾ ಕೂತಿರುವುದು ಧ್ಯಾನದಂತೆ.

ಗುಂಡು ಸೂಜಿಮೊನೆಯ ಗಾತ್ರದ ಮೊಟ್ಟೆಯಿಂದ ಸುಮಾರು ಒಂದು/ ಒಂದೂಕಾಲು ತಿಂಗಳಲ್ಲಿ ಸುಂದರ ಚಿಟ್ಟೆ ಬರುವ ಪ್ರಕ್ರಿಯೆಗೆ ಬೆರಗಷ್ಟೇ ಉತ್ತರ. ಮನೆಯ ಹಿರಿಯರಿಂದ ಬೈಗುಳ ತಿಂದರೂ ಪ್ರತೀ ಸಲವೂ ಈ ಬೆರಗು ಕೊಡುವ ಅನುಭೂತಿಯನ್ನು ಮರೆಯಲಾರೆ, ತಪ್ಪಿಸಿಕೊಳ್ಳಲಾರೆ.

guruve said...

ವಾವ್... ಕುತೂಹಲಕಾರಿ ಫೋಟೋಗಳು... ಬಹಳ ಚೆನ್ನಾಗಿವೆ, ಉಪಯುಕ್ತ ಮಾಹಿತಿ ಕೂಡ.. ನಿಮ್ಮ ಈ ಪ್ರಯೋಗಕ್ಕೆ ಮೆಚ್ಚಿದೆ..

ಚಂದ್ರಕಾಂತ ಎಸ್ said...

ಶಿವೂ

ನೀವು ನನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡಿರುವಿರಿ. ನಾನು ಹೇಳಿದ ಪೈಪೋಟಿ ಇಂಗ್ಲೀಷಿನ Healthy Compettition. ಇದು ತುಂಬಾ ಒಳ್ಳೆಯದು. ನೀವಿಬ್ಬರೂ ಸ್ನೇಹಿತರು ಎಂದು ಅನಿಸಿತ್ತು. ನಿಜವಾಗಿಯೂ ನಿಮ್ಮಿಬ್ಬರಲ್ಲಿರುವ ಶ್ರದ್ಧೆ ನನಗೆ ಬಹಳ ಇಷ್ಟವಾಯಿತು. ಕೆಲಸದ ಒತ್ತಡದಲ್ಲಿಯೇ creativity ಕಾಣುವುದು. ನಿಮ್ಮಿಬ್ಬರ ಬ್ಲಾಗ್ ಗಳಲ್ಲಿ ಬರುವ ಸುಂದರ ಚಿತ್ರಗಳಿಗಾಗಿ ನಾನು ಯಾವಾಗಲೂ ಕಾಯುತ್ತಿರುತ್ತೇನೆ. ನನ್ನ ಮಾತುಗಳು ನಿಮ್ಮಲ್ಲಿ ಇನ್ನಷ್ಟು ಹುರುಪು ತರಲಿ, ಮತ್ತಷ್ಟು ಸುಂದರ ಚಿತ್ರ,ಬರವಣಿಗೆಗಳು ಮೂಡಿಬರಲಿ.

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಬೇಕೆಂದೇ ಈ ಬಾರಿ ಲೇಟಾಗಿ comment ಬರೆಯುತ್ತಿರುವೆ.
Half Century ಆಗಲಿ ಎಂದು.
ಈ ಚಿಟ್ಟೆ ಫೋಟೋ ತೆಗೆಯುವಾಗ ನಾನು ನಮ್ಮ ಊರಿಂದ ಬೆಳೆಗ್ಗೆ 7 ಗಂಟೆಗೆಲ್ಲ ನಿಮ್ಮಮನೆಗೆ ಬಂದಿದ್ದು, ಅದನ್ನು ಫೋಟೊ ತೆಗೆಯುವಾಗ ಗಾಳಿಯಿಂದ ರೆಕ್ಕೆ view finder ನಲ್ಲಿ ಬಾವುಟದಂತೆ ಹಾರಾಡುವಾಗ, ನಿಮ್ಮ ಮನೆಯವರು ಕಾಫಿ ಕುಡೀರಿ ಅಂದದ್ದು...
ನಮ್ಮದೊಂತರಹದ ಸರ್ಕಸ್ ಕಂಪೆನಿ!!
ಮಾಹಿತಿ ಮತ್ತು ಫೋಟೋ ಹಾಲಿಗೆ ಸಕ್ಕರೆ ಬೆರೆಸಿದಂತೆ ಸಮಪ್ರಮಾಣದಲ್ಲಿದೆ. ಸೊಗಸಾಗಿದೆ.
ಕಷ್ಟಪಟ್ಟದ್ದಕ್ಕೂ ಸಾರ್ಥಕಭಾವ.

shivu.k said...

ಚಂದ್ರ ಕಾಂತ ಮೇಡಮ್,

ನಾನು ನಿಮ್ಮ ಮಾತನ್ನು ತಪ್ಪಾಗಿ ಅರ್ಥೈಸಿಲ್ಲ...ನಿಮ್ಮ ಮಾತಿನಿಂದಾಗಿಯೇ...ನಮ್ಮಿಬ್ಬರ ಸ್ನೇಹ ಮತ್ತು ಆಸಕ್ತಿಕರ ವಿಚಾರಗಳನ್ನು ಹೇಳಲು ಅವಕಾಶ ಸಿಕ್ಕಿದ್ದು...ನಾನು ನೀಡಿದ ಉತ್ತರದಿಂದ ನಿಮಗೆ ಬೇಸರವಾಗಿದ್ದರೇ ಕ್ಷಮೆಇರಲಿ..

ನೀವು ನಮ್ಮಿಬ್ಬರ ಚಿತ್ರಗಳಿಗೆ ಕಾಯುತ್ತಿರುವುದು, ಬ್ಲಾಗಿಗೆ ಬಂದು ನೋಡಿ ಸಂತೋಷಪಟ್ಟು ಪ್ರೋತ್ಸಾಹಿಸುವುದು...ಇಬ್ಬರಿಗೂ ಟಾನಿಕ್ ನೀಡಿದಂತೆ...
ಧನ್ಯವಾದಗಳು...

shivu.k said...

ಜ್ಯೋತಿ ಮೇಡಮ್,


ನೀವು, ಪಾಲಚಂದ್ರ ಸೇರಿದಂತೆ ಈ ಚಿಟ್ಟೆಗಳ ವೈವಿಧ್ಯಮಯ ಜಗತ್ತು ಅರಿಯಲು ನಿಮಗೆ ತಿಳಿದ ರೀತಿಯಲ್ಲಿ ಪ್ರಯೋಗಗಳನ್ನು ಮಾಡಿರುವುದು ತುಂಬಾ ಖುಷಿಯ ವಿಚಾರ.....ಇಂಥಹ ಕುತೂಹಲದ ವಿಚಾರಗಳು ನಮ್ಮನ್ನು ಪ್ರಪಂಚಕ್ಕೆ ತೆರೆದುಕೊಳ್ಳುವಂತೆ ಮಾಡುತ್ತವೆ...ಮತ್ತು ಪ್ರಕೃತಿಯು ಕೂಡ ನಮ್ಮನ್ನು ಬೆರಗನ್ನು ಖಂಡಿತ ತಣಿಸುತ್ತದೆ.....ನನ್ನ ಬರವಣಿಗೆಯಿಂದ ಇನ್ನಷ್ಟು ಗೆಳೆಯರು ಇಂಥವುಗಳಲ್ಲಿ ತೊಡಗಿಸಿಕೊಳ್ಳುತ್ತಾರೆಂಬ ನಂಬಿಕೆಯಿದೆ.

ಅವುಗಳ ಪ್ರತಿಯೊಂದು ಹಂತವನ್ನು ನೋಡುವುದು...ಒಂದು ದ್ಯಾನವೇ ಸರಿ....ನೀವು ಆ ಮಟ್ಟಕೆ ಅದನ್ನು ಅನುಭವಿಸುತ್ತಿರುವುದು ಕೂಡ ಖುಷಿಯ ವಿಚಾರ....

ಧನ್ಯವಾದಗಳು.....

shivu.k said...

ಗುರುವೇ,

ಲೇಖನ ನೋಡಿ ಪ್ರತಿಕ್ರಿಯಿಸಿದ್ದಕ್ಕೆ enjoy ಮಾಡಿದ್ದಕ್ಕೆ ಧನ್ಯವಾದಗಳು.....

shivu.k said...

ಮಲ್ಲಿಕಾರ್ಜುನ್,

ನೀವು ಲೇಟಾಗಿ ಬಂದಿದ್ದಕ್ಕೆ ತೊಂದರೆಯಿಲ್ಲ....

ನೀವು ಅಂದು ಬಂದು ನಮ್ಮ ಹಳೆ ಮನೆ ಟೆರಸ್ಸಿನಲ್ಲಿ ಈ ಫೋಟೊ ತೆಗೆಯುವಾಗಿನ ಅನುಭವ..ಹಂಚಿಕೊಂಡಿದ್ದೀರಿ ಥ್ಯಾಂಕ್ಸ್....

ನಿಮ್ಮ ಶ್ರೀಮತಿಯವರು ನಿಮ್ಮನ್ನು, ನನ್ನ ಶ್ರೀಮತಿ ನನ್ನನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸದಿದ್ದಲ್ಲಿ ನಾವು ಖಂಡಿತ ನೀವೇಳಿದಂತೆ ಸರ್ಕಸ್ ಕಂಪನಿಯ ಎಲ್ಲಾ ಆಟವನ್ನು ಆಡುತ್ತಿದ್ದೆವೇನೋ....
ಇರಬೇಕು ಬದುಕಿಗೆ ರಿಂಗ್ ಮಾಸ್ಟರುಗಳು....

PARAANJAPE K.N. said...

ಶಿವೂ,
ನಿಮ್ಮ ತಾಳ್ಮೆ, ಪರಿಸರಪ್ರೀತಿ, ಹೊಸತನ್ನು ಅನ್ವೇಷಿಸುವ ತವಕ, ಸೃಜನಶೀಲತೆ ಎಲ್ಲವುಮೆಚ್ಚತಕ್ಕದ್ದೇ.ಸ್ವಲ್ಪ ತಡವಾಗಿ ಪ್ರತಿಕ್ರಿಯಿಸಿದೆ. ಆದರೆ ನಿಮ್ಮ ಚಿತ್ರ-ಬರಹ ಗಳನ್ನು ನಿನ್ನೆಯೇ ನೋಡಿದ್ದೇ. ಮೊನ್ನೆ ಭಾನುವಾರ ನಮ್ಮ ಮನೆ ಸಮೀಪದ ಗುಡ್ಡಕ್ಕೆ ಮಕ್ಕಳೊ೦ದಿಗೆ ಚಾರಣ ಹೋಗಿದ್ದೆ. ಆವಾಗ ಅಲ್ಲಿ ಓತಿಕ್ಯಾತ ಮತ್ತಿನ್ನಿತರ ಅಪರೂಪದ creature ಗಳನ್ನೂ ಕ೦ಡಾಗ ನಿಮ್ಮ ನೆನಪಾಯಿತು. ನೀವು ಇದ್ದಿದ್ದರೆ ಅವುಗಳನ್ನು ನಿಮ್ಮ ಕ್ಯಾಮರಾ ಕಣ್ಣಿನಿ೦ದ ಸೆರೆಹಿಡಿಯಬಹುದಿತ್ತೆನಿಸಿತು. ಒ೦ದು ಸಲ ಪುರುಸೊತ್ತು ಮಾಡಿಕೊ೦ಡು ನಮ್ಮತ್ತ ಬನ್ನಿ. ಜೊತೆಯಾಗಿ ಇನ್ನೊಮ್ಮೆ ಹೋಗೋಣ.

shivu.k said...

ಪರಂಜಪೆ ಸರ್,

ಚಿಟ್ಟೆಯ ಚಿತ್ರ ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....

ನೀವು ಚಾರಣ ಹೋಗುವುದು ತಿಳಿದು ಖುಷಿಯಾಯಿತು....ಸರ್ ಇಂಥ ಚಟುವಟಿಕೆಗಳು ನಮ್ಮಲ್ಲಿ ಇನ್ನಷ್ಟು ತಿಳಿದುಕೊಳ್ಳುವ ಹಸಿವು ಹೆಚ್ಚಿಸುತ್ತವೆ....
ಓತಿಕ್ಯಾತಗಳು ತುಂಬಾ ಭಯ ಉಳ್ಳವಂತವುಗಳು...

ಮತ್ತೆ ಎಂದಾದರೂ ನಿಮ್ಮ ಊರಿನ ಗುಡ್ಡಕ್ಕೆ ಹೋಗೋಣ...
ಧನ್ಯವಾದಗಳು...

Anonymous said...

ಆಹಾ! ಸೂಪರ್! ತುಂಬಾ ಧನ್ಯವಾದಗಳು ಕಣ್ರೀ! ಚಿತ್ರಗಳೊಂದಿಗೆ ಜ್ಞಾನ! ಮುಂದಿನ ಸಾರಿ ವೀಡಿಯೋ ಕ್ಯಾಮೆರಾ ಬಳಸಿದ್ರೆ ಇನ್ನೂ ಸೂಪರ್ ಆಗಿರುತ್ತೆ ಕಣ್ರಿ...

shivu.k said...

ಪ್ರದೀಪ್,

ಚಿಟ್ಟೆಯ ಡೆಲಿವರಿಯ ಚಿತ್ರ ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

ಮತ್ತೆ ನಿಮ್ಮ ಅನಿಸಿಕೆಯಂತೆ ಸಾಧ್ಯವಾದರೆ ಇಂಥವನ್ನು ವಿಡಿಯೋ ಚಿತ್ರಿಕರೀಸಲು ಪ್ರಯತ್ನಿಸುತ್ತೇನೆ....

PaLa said...

ಶಿವು,
ಅದ್ಯಾವ ಗಿಡದೆಲೆ ಗೊತ್ತಾಗ್ಲಿಲ್ಲ.. ಹಾಗೇ ನೀವೋದುವ ಪುಸ್ತಕ ಬರೆದವರ ಬಗ್ಗೆ ಸ್ವಲ್ಪ ಮಾಹಿತಿ ಕೊಡ್ತೀರ.

ಇವುಗಳ ಹೆಸರು ತಿಳಿಯೋಕೆ ನಾನು http://indianaturewatch.net ಅಂತ ಒಂದು ವೆಬ್ ಸೈಟನ್ನ ಉಪಯೋಗಿಸ್ತೀನಿ.
--
ಪಾಲ

Archu said...

sumaaru dina aagittu nimma blog ge bheti kodade..
iwattu nodidare chitte horage bandu aagide..

super !!

ಮಿಥುನ ಕೊಡೆತ್ತೂರು said...

ನಿಮ್ಮ ತಾಳ್ಮೆ, ಆಸಕ್ತಿಗಳಿಗೆ ದೊಡ್ಡ ನಮಸ್ಕಾರ

shivu.k said...

ಪಾಲಚಂದ್ರ,

ನಾನು ಚಿಟ್ಟೆಗಳಿಗಾಗಿ ಕೆ.ಗುಣತಿಲಗರಾಜ್ ರವರ "some south indian Butterflies" ಪುಸ್ತಕ ಉಪಯೋಗಿಸುತ್ತೇನೆ...ಅದರಲ್ಲಿ ಕೆಲವು ವಿವರಗಳಿವೆ..

ಮತ್ತು ನನ್ನೊಬ್ಬ ಗೆಳೆಯರು ಬನ್ನೇರುಘಟ್ಟ ನ್ಯಾಷಿನಲ್ ಪಾರ್ಕ್‌ನಲ್ಲಿ ಇದೇ ಸಂಶೋಧನೆ ಮಾಡುತ್ತಾರೆ...ಅವರಿಗೆ ಬೇಕಾದ ಮಾಹಿತಿಗಾಗಿ ಫೋನ್ ಮಾಡಿ ತಿಳಿದುಕೊಳ್ಳುತ್ತೇನ್...

shivu.k said...

ಅರ್ಚನ ಮೇಡಮ್,

ತುಂಬಾ ದಿನಗಳ ನಂತರ ಬ್ಲಾಗಿಗೆ ಬಂದಿದ್ದೀರಿ...ಸ್ವಾಗತ... ಚಿಟ್ಟೆ ಹೊರಬಂದಂತ ಚಿತ್ರವನ್ನು ಇಷ್ಟಪಟ್ಟಿದ್ದೀರಿ....

ಧನ್ಯವಾದಗಳು...

shivu.k said...

ಮಿಥುನ,

ನನ್ನ ಬ್ಲಾಗಿಗೆ ಬಂದು ಚಿಟ್ಟೆಯ ಲೇಖನ ಓದಿದ್ದೀರಿ.... ಧನ್ಯ್ತವಾದಗಳು

ದೊಡ್ಡ ನಮಸ್ಕಾರ ಹೊಡೆದು ಹೋಗಿಬಿಡಬೇಡಿ...ಮತ್ತೆ ಬನ್ನಿ... ್

ಮನಸ್ವಿ said...

ಪೋಟೋಗ್ರಫಿಗೆ ಮುಖ್ಯ ತಾಳ್ಮೆ ಎಂದು ಮತ್ತೆ ಸಾಬೀತು ಮಾಡಿದ್ದೀರಿ.. ನಿಮ್ಮ ತಾಳ್ಮೆ ಮತ್ತು ಕಾಳಜಿಯನ್ನು ಮೆಚ್ಚಲೇ ಬೇಕು.. ಸುಂದರ ಚಿತ್ರಗಳು ಮತ್ತು ನಿರೂಪಣೆಯ ಶೈಲಿ ಅಪ್ಯಾಯಮಾನವಾಗಿದೆ.

ಅಂತರ್ವಾಣಿ said...

ಶಿವಣ್ಣ,
ಅದ್ಭುತ ಚಿತ್ರಗಳು :)
ಸೂಪರ್ ಬರಹ...:)

shivu.k said...

ಮನಸ್ವಿ,

ನಿಮ್ಮ ಮಾತು ನಿಜ ಫೋಟೋಗ್ರಫಿ ತುಂಬಾ ತಾಳ್ಮೆ ಮತ್ತು ಶ್ರದ್ಧೆಯನ್ನು ಬೇಡುತ್ತದೆ...ನಿರೂಪಣೆ ಮತ್ತು ಚಿತ್ರಗಳು ಇಷ್ಟವಾಗಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ....

shivu.k said...

ಜಯಶಂಕರ್
ಥ್ಯಾಂಕ್ಸ್.....

ವಿನುತ said...

ಶಿವು ಅವರೇ,

ಚಿತ್ರ ಸಹಿತ ವಿವರಣೆಯೊಂದಿಗೆ ಒಂದು ಅದ್ಭುತ ಲೇಖನ. ಅಭಿನಂದನೆಗಳು
ನನ್ನ ಶಾಲಾದಿನಗಳ ಚಿಟ್ಟೆಯ ಜೀವನ ಚಕ್ರ ನೆನಪಿಗೆ ಬಂತು. ಹಳೆಯದಾದ ಆ ಕಪ್ಪು ಬಿಳುಪು ಚಿತ್ರದ ಬದಲು, ಇಲ್ಲಿರುವಂತೆ ಬಣ್ಣ ಬಣ್ಣದ, ಒಂದೊಂದು ಹಂತದಲ್ಲೂ ಒಂದೊಂದು ಚಿತ್ರ ತೋರಿಸಿದ್ದರೆ, ಇನ್ನೂ ಹೆಚ್ಚು ಅರ್ಥಗರ್ಭಿತವಾಗಿರುತ್ತಿತ್ತು ನಮಗೆ.
ಇದರ ವೀಡಿಯೋ ನೂ ತೆಗೆದಿದ್ದೀರಾ?

Anonymous said...

ನಿಮ್ಮ ಉತ್ಸಾಹ, ಎಫರ್ಟ್ ನೋಡಿ ಬಹಳ ಖುಷಿಯಾಗುತ್ತೆ ಶಿವು ಸರ್..

ತುಂಬಾ ಖುಷಿಯಾಯ್ತು ಈ ಲೇಖನ.

ಥ್ಯಾಂಕ್ಸ್!

Unknown said...

ಶಿವೂ ಸರ್ , ಏನ್ರೀ ಇದು? ಇಷ್ಟೊಂದು ತಾಳ್ಮೆಯಿಂದ ಅಧೆಂಗ್ರಿ ಇಷ್ಟೆಲ್ಲಾ ಕೆಲಸ ಮಾಡ್ತೀರಾ? ನಿಮ್ ತಾಳ್ಮೆ ನೋಡಿದ್ರೆ ನನಗ್ಯಾಕೋ ಹೊಟ್ಟೆ ಕಿಚ್ಹಾಗ್ತಿದೆ... ಲೇಖನ ಓದಿ ಬಾಲ್ಯದಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕ ಓದಿದ ನೆನಪಾಯಿತು... ಲೇಖನ ಮತ್ತು ಫೋಟೋ ಜೊತೆಗಿನ ವಿವರಣೆ ಇಷ್ಟವಾಯಿತು... ಅಂದಹಾಗೆ ತುಂಬಾ ದಿನಾ ಆಯಿತು "ಕ್ಯಾಮೆರ ಹಿಂದೆ" ಏನೂ ಇಲ್ವಲ್ರಿ..
http://ravikanth-gore.blogspot.com

Dr.Gurumurthy Hegde said...

Shivu avare,

wonderful, great pcitures

ಚಂದ್ರಕಾಂತ ಎಸ್ said...

ಶಿವು

ಅಂತೂ ನನ್ನ ಮಾತಿನಿಂದ ನೀವು ಬೇಸರ ಪಟ್ಟಿಲ್ಲ ಎಂದು ಬರೆದಿರಲ್ಲಾ. ಈಗ ಸಮಾಧಾನವಾಯಿತು

Guruprasad said...

ಒಂದು big ಸಲ್ಯೂಟ್ ನಿಮ್ಮ ತಾಳ್ಮೆ ಮತ್ತು ನಿಮಗೆ ಇರುವ ಇಂಟರೆಸ್ಟ್ ಗೆ.... ತುಂಬ ಚೆನ್ನಾಗಿ ಇದೆ ಶಿವೂ ನಿಮ್ಮ ಬರಹ ಮತ್ತೆ ಫೋಟೋಸ್. ವೆರಿ ನೈಸ್... ತುಂಬ ಇಂಪ್ರೆಸ್ಸ್ ಮಾಡಿದವು ಚಿಟ್ಟೆಯ ಬದುಕಿನ ಚಿತ್ರಮಾಲಿಕ ......

" ಸುಂದರ ಎಲೆಯ ಮೇಲಿರುವ ಚಿಟ್ಟೆಯ ಬದುಕಿನ ಚಿತ್ರಣವು .... ನವಿರಾದ ನಿಮ್ಮ ಬರಹದಲ್ಲಿ ಎಳೆ ಎಳೆಯಾಗಿ ಹೊರಹೊಮ್ಮಿ, ರೆಕ್ಕೆ ಬಿಚ್ಚಿ ಹಾರದುತಿಹುದು ನೋಡಲ್ಲಿ......"

ನಿಮ್ಮ
ಗುರು
http://guruprsad.blogspot.com/

shivu.k said...

ವಿನುತಾ ಮೇಡಮ್,

ಚಿಟ್ಟೆಯ ಚಿತ್ರ-ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....

ನೀವು ಹೇಳಿದಂತೆ ಶಾಲಾ ದಿನಗಳಲ್ಲಿ ಹೀಗೆನಂತೆ ತಂತ್ರಜ್ಞಾನ ಮುಂದುವರಿದಿರಲಿಲ್ಲವಾದ್ದರಿಂದ ಆಗಿನ ಸಮಯಾ ಉತ್ತಮವಾದುದನ್ನು ಕೊಟ್ಟಿದ್ದಾರೆ ಎನ್ನುವುದು ನನ್ನ ಅನಿಸಿಕೆ....ನೀವೇನಂತೀರಿ....

ಮತ್ತೆ ನನ್ನ ಬಳಿ ವಿಡಿಯೋ ಕ್ಯಾಮರಾ ಇಲ್ಲವಾದ್ದರಿಂದ ಈ ವಿಡಿಯೋ ಮಾಡಲಾಗಲಿಲ್ಲ...ಮುಂದಿನ ಬಾರಿ ಪ್ರಯತ್ನಿಸುತ್ತೇನೆ....ಧನ್ಯವಾದಗಳು...

shivu.k said...

ರಂಜಿತ್ ಸರ್,

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...ಹೀಗೆ ಬರುತ್ತಿರಿ...

shivu.k said...

ರವಿಕಾಂತ್ ಗೋರೆ ಸರ್,

ನಿಮ್ಮ ಹೊಟ್ಟೆ ಕಿಚ್ಚು ಅನ್ನುವ ಮಾತು ನನಗೆ ಉಬ್ಬಿಹೋಗುವುದಕ್ಕಿಂತ ಭಯವನ್ನು ತರಿಸುತ್ತದೆ...ಕಾರಣ ನಿಮ್ಮ ನಿರೀಕ್ಷೆ ಇದಕ್ಕಿಂತ ಉತ್ತಮವಾಗಿರುವುದನ್ನು ಬಯಸುವುದರಿಂದ ಮುಂದೆ ಅದನ್ನು ನನ್ನಿಂದ ಸಾಕಾರ ಗೊಳಿಸಲು ಸಾಧ್ಯವೇ ಅಂತ....ಅದರೂ ಅದೇನೋ ಹುಚ್ಚು ದೈರ್ಯ, ಮತ್ತು ಅತ್ಮವಿಶ್ವಾಸ ಹೊಸ ವಿಚಾರಗಳ ಹಿಂದೆ ಬೀಳುವಂತೆ ಮಾಡುತ್ತದೆ....

ನಾನು ಮೂಲತಃ ತೇಜಸ್ವಿಯವರ ಅಭಿಮಾನಿ....ನನ್ನೆಲ್ಲಾ ಲೇಖನಗಳಿಗೆ ಅವರೇ ಸ್ಪೂರ್ತಿ.....

ಕ್ಯಾಮೆರಾ ಹಿಂದೆ ಬ್ಲಾಗನ್ನು ಸದ್ಯಕ್ಕೆ ನಿಲ್ಲಿಸಿದ್ದೇನೆ...ಅದರಲ್ಲಿ ಬರೆಯಬೇಕಾದ ಬರಹಗಳನ್ನು ಇದೇ ಬ್ಲಾಗಿನಲ್ಲಿ ಹಾಕಿದ್ದೇನೆ...ಮತ್ತು ಹಾಕುತ್ತಿದ್ದೇನೆ.[ಅಹಾ! ನನ್ನ ಮದುವೆಯಂತೆ, ಇತ್ಯಾದಿಗಳು ಇವೆ..]...ಬಿಡುವು ಮಾಡಿಕೊಂಡು ನೋಡಿ....ಧನ್ಯವಾದಗಳು

shivu.k said...

ಡಾ. ಗುರುಮೂರ್ತಿ ಹೆಗಡೆ ಸರ್,

ಧನ್ಯವಾದಗಳು....

shivu.k said...

ಚಂದ್ರಕಾಂತ ಮೇಡಮ್,

ನಮ್ಮ ಬ್ಲಾಗ್ ಗೆಳೆಯರ ಪ್ರತಿಕ್ರಿಯೆಗಳನ್ನು ಯಾವುದೇ ಪೂರ್ವಗ್ರಹ ಪೀಡಿತನಾಗದೆ...ಸ್ವೀಕರಿಸಲೆತ್ನಿಸುವುದರಿಂದ ಇಲ್ಲಿ ಬೇಸರದ ಮಾತೇ..ಇಲ್ಲ.....ಒಂದು ಅರೋಗ್ಯಕರ ಚರ್ಚೆಗೆ ಅವಕಾಶ ಸಿಕ್ಕಂತಾಗಿ ಸಂತೋಷವಾಗುತ್ತದೆ....ಮತ್ತೆ ಬಂದಿದ್ದಕ್ಕೆ ಧನ್ಯವಾದಗಳು...

shivu.k said...

ಗುರು,

ಚಿಟ್ಟೆಯ ಚಿತ್ರ-ಲೇಖನ ಮನಸಾರೆ ಅನಂದಿಸಿದ್ದಕ್ಕೆ ಧನ್ಯವಾದಗಳು...ನಿಮ್ಮ ಮಾತುಗಳು ನನಗೆ ಇನ್ನಷ್ಟು ಹೊಸತನಕ್ಕೆ ತೆರೆದುಕೊಳ್ಳಲು ಟಾನಿಕ್ ನೀಡಿದಂತೆ ಆಗುತ್ತಿವೆ....

ನನ್ನ ಚಿತ್ರ-ಲೇಖನಕ್ಕೆ ಒಂದು ಸುಂದರ ಸ್ಪೂರ್ತಿದಾಯಕ ಕವನವನ್ನು ಬರೆದಿದ್ದೀರಿ...ಧನ್ಯವಾದಗಳು...

ಶಾಂತಲಾ ಭಂಡಿ (ಸನ್ನಿಧಿ) said...

ಶಿವು ಅವರೆ...
ಚಿಟ್ಟೆಮರಿ ಜಗತ್ತಿಗೆ ಬಂದ ಬಗೆಯ ಬಗ್ಗೆ ಸಚಿತ್ರವರದಿ, ಮಾಹಿತಿಭರಿತವಾಗಿದೆ. ಧನ್ಯವಾದಗಳು.
ನಿಮ್ಮ ಮಡದಿಯವರು ನಿಮ್ಮನ್ನು ಕಂಟ್ರೋಲ್ ಮಾಡುವ ಬಗೆ ಆಪ್ತವೆನಿಸುತ್ತದೆ.

ವಿನಾಯಕ ಕೆ.ಎಸ್ said...

olle barha chennaagide...blog kooda tumba chennaagi ide...
vinayaka kodsra

shivu.k said...

ಶಾಂತಲಾ ಮೇಡಮ್,

ಕಳೆದೆರಡು ಲೇಖನಗಳನ್ನು ಓದಲು ನೀವು ಬರಲಿಲ್ಲವಾದ್ದರಿಂದ ನನ್ನ ಬರಹ ನಿಮಗಿಷ್ಟವಾಗಲಿಲ್ಲವೇನೋ ಅನ್ನಿಸಿತ್ತು....ಇಲ್ಲಿ ಕೊನೆಯವರಾಗಿಯಾದರೂ ಬಂದು ಚಿಟ್ಟೆಯ ಲೇಖನ ಮೆಚ್ಚಿದಿರಲ್ಲ...ಧನ್ಯವಾದಗಳು...

ನನ್ನಾಕೆ ನನ್ನನ್ನು ತುಂಬಾ ನಿಯಂತ್ರಿಸುತ್ತಾಳೆ...ಇಲ್ಲದಿದ್ದಲ್ಲೂ ದಿನಕೊಂದು ಲೇಖನ...ಫೋಟೋಗ್ರಫಿ...ಇತ್ಯಾದಿಗಳು...ಬಂದುಬಿಡುತ್ತಿತ್ತೆನೋ....

shivu.k said...

ವಿನಾಯಕ್,

ನನ್ನ ಬ್ಲಾಗಿಗೆ ಸ್ವಾಗತ....ಚಿಟ್ಟೆಯ ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ...

ಅನಿಲ್ ರಮೇಶ್ said...

ಶಿವು,
ಚಿತ್ರಗಳು ತುಂಬಾ ಚೆನ್ನಾಗಿವೆ,

ಕೊನೆಯ ಚಿತ್ರ ತುಂಬಾ ಹಿಡಿಸಿತು.

-ಅನಿಲ್.

shivu.k said...

ಅನಿಲ್,

ತುಂಬಾ ಧನ್ಯವಾದಗಳು...ಹೀಗೆ ಬರುತ್ತಿರಿ...

ಧರಿತ್ರಿ said...

ಶಿವಣ್ಣ....
ಆಗತಾನೇ ಮಲ್ಲಿಯಣ್ಣ ಬ್ಲಾಗಿಗ ಹೋಗಿ ಹಕ್ಕಿಗಳ ಫೋಟೋ ನೋಡಿ ಬಂದೆ.ಅಲ್ಲೂ ಹೀಗೇ ಬರೆದಿದ್ದೆ..
"ಕಲ್ಲಿನಲ್ಲೂ ಅಡಗಿದೆ ಸೌಂದರ್ಯ
ಕೆತ್ತುವ ಸಾಮರ್ಥ್ಯ ವಿದ್ದರೆ!
ಪ್ರತಿಮಾತುನಲ್ಲೂ ಅಡಗಿದೆಸಾಹಿತ್ಯ
ಗ್ರಹಿಸುವ ಸಾಮರ್ಥ್ಯವಿದ್ದರೆ ..(ಎಫ್. ಅಸಾದುಲ್ಲಾ ಬೇಗ್ ಶಾಯರಿ)
ನಿಮ್ಮ ಬರಹ, ಫೋಟೋ ಮಾಹಿತಿಗಳನ್ನು ಕಂಡಾಗ ನಂಗೇ ಹಾಗೇ ಅನಿಸ್ತು. ಬ್ಲಾಗ್ ಗಳು ಕೇವಲ ಟೈಂಪಾಸ್ ಬರಹಗಳು ಎಷ್ಟೋ ಜನರ ಆರೋಪ. ಈ ನಡುವೆ.ಜನರಿಗೆ ಮಾಹಿತಿ ನೀಡುವ ಹಾಗೂ ಸೃಜನಶೀಲ ಬರಹಗಳನ್ನು ಬರೆಯುತ್ತಾಲೇ ಮನಸ್ಸಿಗೆ ಹತ್ತಿರುವಾಗೋರು ಒಂದು ಕಡೆ. ಅಂಥವರಲ್ಲಿ ನೀವೂ ಒಬ್ಬರು. ಸುಂದತ ಫೋಟೋ ಸಮೇತ ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಶಿವಣ್ಣ. ಮತ್ತೆ ಬರುವೆ
-ಧರಿತ್ರಿ

Rajesh Manjunath - ರಾಜೇಶ್ ಮಂಜುನಾಥ್ said...

ಶಿವೂ ಸರ್,
ಬೊಂಬಾಟ್, ಬೊಂಬಾಟ್, ಬೊಂಬಾಟ್.....
ವೈಜ್ಞಾನಿಕ ಬರಹ ಒಂದನ್ನು ಓದಿದ ಖುಷಿ ನನಗೆ, ಓದಿನಲ್ಲಿ ಜೀವ ಶಾಸ್ತ್ರ ನನ್ನ ಐಚ್ಚಿಕ ವಿಷಯವಾಗಿರಲಿಲ್ಲ, ಆದರೆ ಈಗ ಅದನ್ನೂ ಹೇಳಿಕೊಡುತ್ತಿದ್ದೀರಿ, ಭೂಗೋಳ ಮತ್ತು ಜೀವ ಶಾಸ್ತ್ರ ಎರಡನ್ನು ನೀವು ಬೋಧಿಸುತ್ತಿರುವ ರೀತಿ ಚೆನ್ನಾಗಿದೆ.

shivu.k said...

ಧರಿತ್ರಿ,

ಚಿಟ್ಟೆ ಚಿತ್ರ ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್.....

ನಾನು ಪ್ರಕೃತಿಯ ಸಹಜ ಪ್ರೇಮಿ....ಅದರಲ್ಲಿ ನಡೆಯುವ ಪ್ರತಿಯೊಂದು[ಮಾನವನು ಸೇರಿದಂತೆ]ಕೌತುಕವು ನನಗೆ ಅಬ್ಯಾಸದ ವಸ್ತು....ಇದೆಲ್ಲಾ ನಾನು ತೇಜಸ್ವಿಯವರಿಂದ ಕಲಿತೆ......ಅದಕ್ಕೇ ನನ್ನ ಛಾಯಾಗ್ರಹಣ ಸಹಾಯಕವಾಗಿದೆ.....

ಆಸಾಧುಲ್ಲಾ ಬೇಗ್ ಶಾಯರಿ ನನಗೂ ಇಷ್ಟ....

ಧನ್ಯವಾದಗಳು....

shivu.k said...

ರಾಜೇಶ್,

ಕೆಲಸದ ಒತ್ತಡದಲ್ಲಿದ್ದರೂ ಚಿಟ್ಟೆ ಚಿತ್ರಲೇಖನವನ್ನು ನೋಡಿ ಮೆಚ್ಚಿದ್ದೀರಿ...ಥ್ಯಾಂಕ್ಸ್....

ನನಗೆ ಪಾಠ ಹೇಳಿಕೊಡುವಷ್ಟು ತಾಳ್ಮೆ, ಕಾಳಜಿ, ಇಲ್ಲ. ಮತ್ತು ಅಷ್ಟೊಂದು ಬುಧ್ಧಿವಂತಿಕೆ, ಜ್ಞಾನವಂತೂ ಇಲ್ಲವೇ ಇಲ್ಲ....

ನೀವು ನನ್ನ ಬರವಣಿಗೆಗೆ ಭೂಗೋಳ...ಜೀವಶಾಸ್ತ್ರ ಅಂತ ಹೆಸರಿಡುತ್ತಿದ್ದೀರಿ....ಮುಂದಿನ ಲೇಖನ ನನ್ನ ಆಟೋಗ್ರಾಪ್ [ಭಯಪಟ್ಟೇ ಬರೆಯುತ್ತಿದ್ದೇನೆ...ಬರೆದ ಮೇಲೆ ಬ್ಲಾಗಿಗೆ ಹಾಕುವ ದೈರ್ಯವಾಗುತ್ತದೊ ಇಲ್ಲವೋ ಗೊತ್ತಿಲ್ಲ] ಆಗಿರುತ್ತದೆ....ಅದಕ್ಕೇನು ಹೆಸರಿಡುತ್ತೀರಿ..ಅನ್ನುವ ಕುತೂಹಲವಿದೆ....

Laxman (ಲಕ್ಷ್ಮಣ ಬಿರಾದಾರ) said...

ಶಿವು ಸರ್, ತುಂಬಾ ಸಂತಸ ದ ಸುದ್ದಿ,
ಅಭಿನಂದನೆಗಳು ಶಿವು ಮತ್ತು ಮಲ್ಲಿಕಾರ್ಜುನರಿಗೆ.
ಲಕ್ಷ್ಮಣ

shivu.k said...

ಲಕ್ಷಣ್ ಸರ್,

ನನ್ನ ಬ್ಲಾಗಿಗೆ ಮೊದಲಬಾರಿಗೆ ಬಂದಿದ್ದೀರಿ...ಖುಷಿಯಾಯ್ತು...

ಧನ್ಯವಾದಗಳು....ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

ವಿನುತ said...

ಶಿವುರವರೇ ನಿಮ್ಮ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ. ನಿಮಗೆ ದೊರೆತ ಅಂತರರಾಷ್ಟ್ರೀಯ ಮನ್ನಣೆಗೆ ಹೃತ್ಪೂರ್ವಕ ಅಭಿನಂದನೆಗಳು

shivu.k said...

ವಿನುತಾ ಮೇಡಮ್,

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

ದೀಪಸ್ಮಿತಾ said...

ಚಿಟ್ಟೆ ಚಿತ್ರಗಳು ಚೆನ್ನಾಗಿವೆ

ಬಿಸಿಲ ಹನಿ said...

ಪ್ರೀತಿಯ ಶಿವು,
ಈಗಷ್ಟೆ ಪೇಪರ್‍ಲ್ಲಿ ನಿಮಗೂ ಹಾಗೂ ‍ಮಲ್ಲಿಕಾರ್ಜುನ ಡಿ.ಜಿ.ಅವರಿಗೂ ಅಂತರಾಷ್ಟ್ರೀಯ ಮಟ್ಟದ ಪುರಸ್ಕಾರ ಲಂಡನ್ನಿನ ಪ್ರತಿಷ್ಟಿತ ರಾಯಲ್ ಫೋಟೋಗ್ರಾಫಿಕ್ ಸೊಸೈಟಿ ದೊರೆತಿರುವದು ಓದಿ ತುಂಬಾ ತುಂಬಾ ಖುಶಿಯಾಗುತ್ತಿದೆ. ಕನ್ನಡದವರಿಗೆ ಸಿಕ್ಕ ಹೆಮ್ಮೆಯ ಗರಿ. ಇದು ನಿಮ್ಮ ಶ್ರದ್ಧೆ ಹಾಗೂ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ! ನಿಮ್ಮ ಸಾಧನೆಗೆ ಮತ್ತೊಮ್ಮೆ ನನ್ನ ವಿಶೇಷವಾದ ಅಭಿನಂದನೆಗಳನ್ನು ಹೇಳುತ್ತಿದ್ದೇನೆ. Keep it up.

ಚಂದ್ರಕಾಂತ ಎಸ್ said...

ಶಿವೂ

ಅಭಿನಂದನೆಗಳು. ನಿಮ್ಮ ಸಾಧನೆ, ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಇದು.ಯಾವ ಪತ್ರಿಕೆಯಲ್ಲಿ ಬಂದಿದೆಯೋ ತಿಳಿಯಲಿಲ್ಲ. ಆದರೆ ಅವಧಿಯ ಮೂಲಕ ಪೂರ್ಣ ವಿವರ ಸಿಕ್ಕಿತು.ಈ ಪ್ರಶಸ್ತಿ ನಿಮ್ಮ ಎಂದಿನ ಸಾಧನೆ ಪರಿಶ್ರಮಕ್ಕೆ ಮತ್ತಷ್ಟು ಸ್ಫೂರ್ತಿ ತುಂಬಲಿ. ಮತ್ತೊಮ್ಮೆ ಅಭಿನಂದನೆಗಳು

Guruprasad said...

ಹಲೋ ಶಿವೂ,,
ನಿಮಗೆ ಹಾಗು ಮಲ್ಲಿಕಾರ್ಜುನ ರವರಿಗೆ ಸಿಕ್ಕ ಅಂತರಾಷ್ಟ್ರೀಯ ಮಟ್ಟದ ಮನ್ನಣೆಗೆ ನನ್ನ ಆತ್ಮಿಯ ಅಭಿನಂದನೆಗಳು, ಖಂಡಿತ ಇದರ ಹಿಂದೆ ಇರುವ ನಿಮ್ಮ ಶ್ರದ್ದೆ, ಪರಿಶ್ರಮ ಹಾಗು ತಾಳ್ಮೆ ಗೆ ಸಿಕ್ಕ ಸಂತೋಷ ಮತ್ತೆ ಪ್ರತಿಫಲ ಅಂತಾನೆ ಹೇಳ್ಬೇಕು ,
I wish you all the best ಶಿವೂ,,, ಕೀಪ್ growing...

ಗುರು

Raveesh Kumar said...

ಲಂಡನ್ನಿನ ರಾಯಲ್ ಫೋಟೋಗ್ರಾಫಿಕ್ ಸೊಸೈಟಿಯ ಪ್ರತಿನಿಧಿ ಸದಸ್ಯತ್ವ ದೊರೆತಿದ್ದಕ್ಕೆ ಅಭಿನ೦ದನೆಗಳು.

shivu.k said...

ದೀಪಸ್ಮಿತ ಮೇಡಮ್,

ಧನ್ಯವಾದಗಳು...

shivu.k said...

ಉದಯ್ ಸರ್,

ನಿಮ್ಮ ಅಭಿನಂದನೆಗಳು ನಮಗೆ ಜವಾಬ್ದಾರಿಯನ್ನು ಹೆಚ್ಚಿಸಿದೆ...ಇನ್ನಷ್ಟು ಹೊಸ ಸಾಹಸಕ್ಕೆ ಇಳಿಯಲು ಸ್ಫೂರ್ತಿ ನೀಡುತ್ತಿವೆ....

ಧನ್ಯವಾದಗಳು....

shivu.k said...

ಚಂದ್ರಕಾಂತ ಮೇಡಮ್,

ಧನ್ಯವಾದಗಳು.....ಇನ್ನೂ ಪತ್ರಿಕೆಯಲ್ಲಿ ಬಂದಿಲ್ಲ....ಅಲ್ಲಿಂದ ಪ್ರೆಸ್ ನೋಟ್ ಬರುತ್ತೆ...ಅನಂತರ ಎಲ್ಲಾ ಪತ್ರಿಕೆಗಳಲ್ಲಿ ಬರುತ್ತದೆ....

ಮತ್ತೆ ಇವತ್ತು ಬೆಳಿಗ್ಗೆ ಇದೇ ವಿಚಾರವಾಗಿ ಮತ್ತು ನನ್ನ ಬ್ಲಾಗಿನ ಭೂಪಟಗಳ ಬಗ್ಗೆ ಸಂದರ್ಶನ ಮಾಡಲು ಕಸ್ತೂರಿ ಚಾನಲ್ಲಿನವರು ನನ್ನ ಮನೆಗೆ ಬಂದಿದ್ದರು....ಸದ್ಯದಲ್ಲೇ ಅದು ರಾತ್ರಿ ಹತ್ತು ಗಂಟೆಗೆ ಬರುತ್ತದೆ...
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.....

shivu.k said...

ಗುರು, ರವೀಶ್ ಕುಮಾರ್,

ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು..ನಿಮ್ಮ ಪ್ರೋತ್ಸಾಹಗಳು ಮತ್ತಷ್ಟು ಹುರುಪಿನಿಂದ ಈ ದಿಸೆಯಲ್ಲಿ ತೊಡಗಿಸಿಕೊಳ್ಳಲು ಸ್ಪೂರ್ತಿ ನೀಡುತ್ತಿವೆ....

Anonymous said...

ನಿಮಗೆ ಸಿಕ್ಕ ಅಂತರಾಷ್ಟ್ರೀಯ ಮನ್ನಣೆಗೆ ಅಭಿನಂದನೆಗಳು.

ಮುಂದೂ ಬರೆಯುತ್ತಿರಿ,

ಮುಂದುವರೆಯುತ್ತಿರಿ...

ಚಿತ್ರಾ said...

ಶಿವೂ,
ಮೊದಲಿಗೆ ನನ್ನ ಹಾರ್ದಿಕ ಅಭಿನಂದನೆಗಳು ! ನೀವಿಬ್ಬರೂ ಕನ್ನಡಿಗರಿಗೆ ಹೆಮ್ಮೆ ತಂದಿದ್ದೀರಿ .ಈಗ ಲಂಡನ್ ಆಯ್ತು , ಉಳಿದ ದೇಶಗಳನ್ನೂ ಬಿಡಬೇಡಿ !
ಅಂದಹಾಗೇ, ಪಾರ್ಟೀ ಯಾವಾಗ ಕೊಡ್ತೀರಾ ಸಾರ್?

guruve said...

’ರಾಯಲ್ ಫೋಟೋಗ್ರಾಫಿಕ್ ಸೊಸೈಟಿ’ ಯಲ್ಲಿ ಪ್ರತಿನಿಧಿ ಸದಸ್ಯತ್ವ ಸಿಕ್ಕಿರುವುದಕ್ಕೆ, ಹಾರ್ದಿಕ ಅಭಿನಂದನೆಗಳು. ನಿಮ್ಮ ಸಾಧನೆ ಹೀಗೆ ಮುಂದುವರೆಯಲಿ.

ರಾಜೇಶ್ ನಾಯ್ಕ said...

ಪ್ರೀತಿಯ ಶಿವು,

"ಲಂಡನ್ನಿನ ಪ್ರತಿಷ್ಠಿತ ರಾಯಲ್ ಫೋಟೋಗ್ರಫಿ ಸೊಸೈಟಿಯಿಂದ ಅದರ ಪ್ರತಿನಿಧಿ(Associate) ಎಂಬ ಗೌರವಕ್ಕೆ ನೀವು ಪಾತ್ರರಾಗಿದ್ದೀರಿ" ಎಂದು ತಿಳಿದು ಬಹಳ ಆನಂದವಾಯಿತು.

ಶುಭಾಶಯಗಳು. ಕ್ಲಿಕ್ಕಿಂಗ್ ಜಾರಿಯಲ್ಲಿರಲಿ. ಇನ್ನಷ್ಟು ಮನ್ನಣೆಗಳು ದೊರಕಲಿ.

sunaath said...

ಶಿವು,
ನಿಮ್ಮ ಛಾಯಚಿತ್ರಣಕ್ಕೆ ಅಂತರರಾಷ್ಟ್ರೀಯ ಮನ್ನಣೆ ದೊರೆತದ್ದು
ತಿಳಿದು ಭಾಳಾ ಖುಶಿಯಾಯ್ತು. ಅಭಿನಂದನೆಗಳು. ಇನ್ನೂ ಹೆಚ್ಚಿನ ಮನ್ನಣೆ ನಿಮಗೆ ಲಭಿಸುತ್ತಿರಲಿ ಅಂತ ಹಾರೈಸುತ್ತೇನೆ.

shivu.k said...

ರಂಜಿತ್ ಸರ್, ಚಿತ್ರಾ ಮೇಡಮ್, ಗುರುಪ್ರಸಾದ್, ರಾಜೇಶ್ ನಾಯ್ಕ್, ಸುನಾಥ್ ಸರ್,

ಎಲ್ಲರಿಗೂ ಧನ್ಯವಾದಗಳು....ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.....

ಗಿರಿ said...

ಶಿವಣ್ಣಾ...,

ಪ್ಯೂಪ ಹೋಯ್ತು....ಚಿಟ್ಟೆ ಬಂತು ಡುಂ...ಡುಂ.......
ಚಂದ ಇತ್ತು... ಖುಶಿ ಆಯ್ತು... ಡುಂ... ಡುಂ...

ಹೋಲಿಯಂಡರ್ ಹಾಕ್ ಮಾತ ಬರಲಿ ಡುಂ.... ಡುಂ...
ಪ್ರಸವ ಕಥನ... ಪ್ರವಾಸ ಕಥನ.... ಡುಂ... ಡುಂ...
ಕಾಯುತಿರುವೆ... ಬೇಗ ಬರಲಿ.. ಡುಂ... ಡುಂ...

-ಗಿರೀಶ್

shivu.k said...

ಗಿರಿ,

ಚಿಟ್ಟೆ ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್....

ಪತಂಗ ಪ್ರವಾಸವನ್ನು ಸಾದ್ಯವಾದಷ್ಟು ಬೇಗ ಹಾಕುತ್ತೇನೆ. ಹೀಗೆ ಬರುತ್ತಿರಿ.....
ಮುಂದಿನ ಲೇಖನವನ್ನು ಮರೆಯದೇ ಓದಿ....ಅದು ನನ್ನ "ಮೈ ಆಟೋಗ್ರಾಫ್"

Anonymous said...

ಶಿವು ಅವರೇ,
ನಿಮ್ಮ photography ಹಾಗು ಬರಹ ತುಂಬಾನೆ ಅಧ್ಭುತವಾಗಿದೆ......
-ಇಂಚರ...

shivu.k said...

ಇಂಚರ,

ಬ್ಲಾಗಿಗೆ ಸ್ವಾಗತ. ಚಿತ್ರಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...
ಹೀಗೆ ಬರುತ್ತಿರಿ....

Anonymous said...

ಶಿವು ಅವರೇ,
www.svatimuttu.wordpress.com ಇದಕ್ಕೆ ಒಮ್ಮೆ ಭೇಟಿ ನೀಡಿ ನಿಮ್ಮ ಅಭಿಪ್ರಾಯ ತಿಳಿಸಿ

shivu.k said...

ಇಂಚರ ಮೇಡಮ್,

ನಿಮ್ಮ ಬ್ಲಾಗಿಗೆ ಬೇಟಿಕೊಡುತ್ತೇನೆ...
ಧನ್ಯವಾದಗಳು..

Anonymous said...

shivu avare nanna hesaru inchara...svatimuttu nanna blog....:)