Monday, April 12, 2010

"ಯಾವ ವಾರದ ಸುತ್ತಳತೆ ಹೇಳಲಿ ಹೇಳು"

ದೃಶ್ಯ-೧

"ಸರ್, ಕ್ಯಾನ್ ಐ ಹೆಲ್ಪ್ ಯೂ"....ಆತ ನನ್ನನ್ನು ನೋಡುತ್ತಾ ಕೇಳಿದ...
"ಇಟ್ಸ್ ಓಕೆ. ಐ ವಿಲ್ ಟೆಲ್ ಲೇಟರ್"...ನಾನಂದೆ.
"ಮೇಡಮ್, ನಿಮ್ಮ ಮನೆಗೆ ಇದು ತುಂಬಾ ಚೆನ್ನಾಗಿರುತ್ತೆ" ಅಂದ.
"ಇದು ನಮ್ಮ ಮನೆಯಲ್ಲಿದೆ ನಾನು ಬೇರೆಯದನ್ನು ನೋಡಲಿಕ್ಕೆ ಬಂದಿದ್ದೇನೆ." ನನ್ನಾಕೆ ಹೇಳಿದಳು.

ಸ್ವಲ್ಪ ಮುಂದೆ ಸಾಗಿ ಬಟ್ಟೆಗಳ ಬಳಿ ಬಂದೆವು. ತಕ್ಷಣ ಅಲ್ಲಿದವನೊಬ್ಬ,
"ಸರ್, ಯುವರ್ ವೇಸ್ಟ್ ಸೈಜ್ ಪ್ಲೀಸ್" ಕೇಳಿದ.

ಅರೆರೆ ನನ್ನ ಸೊಂಟದ ಸೈಜು ನನಗೇ ಗೊತ್ತಾಗದ ಹಾಗೆ ವ್ಯತ್ಸಾಸವಾಗುತ್ತಿರುತ್ತದೆ? ಅಂತದ್ದರಲ್ಲಿ ಇವನಿಗೆ ಹೇಗೆ ಸರಿಯಾಗಿ ಹೇಳುವುದು? ಅಂದುಕೊಂಡು, ನೋಡಪ್ಪ ನನ್ನ ಸೊಂಟದ ಸುತ್ತಳತೆ ಪ್ರತಿವಾರ ವ್ಯತ್ಯಾಸವಾಗುತ್ತಿರುತ್ತದೆ. "ಯಾವ ವಾರದ ಸುತ್ತಳತೆ ಹೇಳಲಿ ಹೇಳು" ಕೇಳಿದೆ.

ನನ್ನ ಮಾತಿಗೆ ಅವನಿಗೆ ನಗು ಬಂದರೂ ನಗುವಂತಿರಲಿಲ್ಲ. ಒಂದು ಮುಗುಳ್ನಗು ನಕ್ಕು ಸುಮ್ಮನಾದ.

ದೃಶ್ಯ-೨

ಅಲ್ಲೊಬ್ಬ ಉರಿಬಿಸಿಲನ್ನು ಲೆಕ್ಕಿಸದೆ ಹತ್ತಕ್ಕೆ ಒಂದುವರೆ, ಹತ್ತಕ್ಕೆ ಒಂದುವರೆ ಎಂದು ರಾಗವಾಗಿ ಕೂಗಿ ಈರುಳ್ಳಿ ಮಾರುತ್ತಿದ್ದ. ಹತ್ತಕ್ಕೆ ಒಂದುವರೆ ಎಂದರೇನು ಅಂತ ನನಗೆ ಗೊತ್ತಾಗಲಿಲ್ಲ. ಅವನ ಬಳಿಯೇ ಹೋಗಿ ಕೇಳಬೇಕೆನಿಸಿ ಕೇಳಿದೆ. ಅವನು ನನ್ನ ಅಪಾದಮಸ್ತಕ ನೋಡಿ,

"ಸಾರ್ ಅದು ನಿಮಗೆ ಗೊತ್ತಾಗೊಲ್ಲ ಬಿಡಿ, ಹೆಂಗಸರಿಗೆ ಬೇಗ ಗೊತ್ತಾಗಿಬಿಡುತ್ತೆ" ಅಂತ ನಕ್ಕ.

"ಅದಕ್ಕೆ ಕಣ್ರೀ ಕೇಳೀದ್ದು ಗೊತ್ತಾಗಿದ್ದರೆ ಯಾರು ಕೇಳುತ್ತಿದ್ದರು ಹೇಳಿ?" ನನ್ನನ್ನು ಸಮರ್ಥಿಸಿಕೊಳ್ಳುತ್ತಾ ಮರು ಪ್ರಶ್ನೆ ಹಾಕಿದೆ.

"ಒಂದುವರೆ ಕೇಜಿಗೆ ಹತ್ತು ರೂಪಾಯಿ ಅಷ್ಟೇ ಎಷ್ಟು ಕೊಡಲಿ?" ಅಂದ. ಅಷ್ಟರಲ್ಲಿ ನನ್ನ ಪಕ್ಕ ಒಂದು ವಯಸ್ಕ ಹೆಂಗಸು " ಕಡಿಮೆ ಮಾಡಿಕೊಳ್ಳಪ್ಪ ಸ್ವಲ್ಪ" ಅಂದಳು.

"ಓ ಇದಕ್ಕಿಂತ ಕಡಿಮೇನಾ., ನಾನು ಇಬ್ಬರು ಹೆಂಡ್ತೀ ನಾಲ್ಕು ಹೆಣ್ಣುಮಕ್ಕಳು ಸಾಕಬೇಕು. ಇನ್ನೂ ಕಡಿಮೆ ಮಾಡಿದ್ರೆ ಅಷ್ಟೆ" ತಕ್ಷಣವೇ ಅವನಿಂದ ಉತ್ತರ ಬಂತು. ಅಲ್ಲಿದ್ದವರೆಲ್ಲಾ ಅವನ ಮಾತು ಕೇಳಿ ಗೊಳ್ಳೆಂದು ನಕ್ಕರು.

"ಹೋಗ್ಲಿ ಬಿಡಪ್ಪ, ಹತ್ತು ರೂಪಾಯಿಗೆ ಒಂದುವರೆ ಕೆಜಿ ಕೊಟ್ಟು ನಿಮ್ಮ ಹೆಂಡ್ತಿ ಮಕ್ಕಳನ್ನ ಮಹಾರಾಜನಂತೆ ಸಾಕು" ಮರು ಉತ್ತರ ನೀಡಿ ಈರುಳ್ಳಿ ಕೊಂಡು ವಯಸ್ಸಾದ ಮಹಿಳೆ ಹೊರಟುಹೋದಳು.

" ಬನ್ನಿ ಅಕ್ಕ, ಬನ್ನಿ ಅಮ್ಮ....ಹತ್ತಕ್ಕೆ ಒಂದುವರೆ, ನಮ್ಮ ಈರುಳ್ಳಿ ತಿಂದವರ ಮನೆಯಲ್ಲಿ ದೀಪಾವಳಿ ಹಬ್ಬ ಬನ್ನಿ ತಂಗಿ" ಒಂದೇ ಸಮನೇ ಕೂಗುತ್ತಿದ್ದ. ಎಲಾ ಇವನ ಬರೀ ಅಮ್ಮ, ಅಕ್ಕ, ತಂಗಿ ಅಂತ ಕೇವಲ ಹೆಂಗಸರನ್ನೇ ಕರೀತಾನಲ್ಲ, ಕೇಳಿಯೇ ಬಿಡೋಣವೆನ್ನಿಸಿ, "ಏನಪ್ಪ ವ್ಯಾಪಾರಕ್ಕೆ ಹೆಂಗಸರನ್ನು ಮಾತ್ರ ಕರೀತೀಯಲ್ಲ....ನಮ್ಮಂತವರು ನಿಮಗೆ ಗಿಟ್ಟೋದಿಲ್ವೇ" ಅಂದೆ.

"ಸಾರ್ ನೀವು ಅಪರೂಪಕ್ಕೆ ಒಮ್ಮೆ ಬರುತ್ತೀರಿ, ಬೆಲೆ ಕೇಳದೆ ತೆಗೆದುಕೊಂಡು ಹೋಗಿಬಿಡುತ್ತೀರಿ. ಮತ್ತೆ ನೀವು ಬರುವುದು ಮುಂದಿನ ಯುಗಾದಿಗೋ, ಮಾರನವಮಿಗೋ...ಆದ್ರೆ ಹೆಣ್ಮಕ್ಕಳು ಪ್ರತಿ ವಾರ ಬರುತ್ತಾರೆ. ಅವರು ಚೌಕಾಸಿ ಮಾಡಿದರೂ ಯಾಪಾರ ಮಾಡೋರು ಅವರೇ ತಾನೇ! ಅವರು ಚೌಕಾಸಿ ಮಾಡಿದರೂ ಅವರಿಂದಲೇ ನಮ್ಮ ಜೀವನ. ಅವರೇ ಮುಖ್ಯ ಸಾಮಿ ನೀವಲ್ಲ.." ಅಂದ. ಅವನ ಮಾತಿಗೆ ನನ್ನಲ್ಲಿ ಉತ್ತರವಿರಲಿಲ್ಲ.

ಇವರಡು ದೃಶ್ಯಗಳಲ್ಲಿ ಮೊದಲನೆಯದು ಸಂಪಿಗೆ ರಸ್ತೆಯಲ್ಲಿರುವ ಮಂತ್ರಿ ಸ್ಕ್ವೈರ್‍ನ ಸ್ಪಾರ್ ಮಾರ್ಕೆಟಿನದು. ಎರಡನೆಯದು ಯಶವಂತಪುರ ತರಕಾರಿ ಮಾರುಕಟ್ಟೆಯದು.

ಮಂತ್ರಿ ಸ್ಕ್ವೇರ್ ಕಡೆಯಿಂದ ಸಂಪಿಗೆ ರಸ್ತೆ.

ಮಲ್ಲೇಶ್ವರಂ ಕಡೆಯಿಂದ ನೋಡಿದಾಗ ನಮ್ಮ ಸಂಪಿಗೆ ರಸ್ತೆ ಕಾಣುವುದು ಹೀಗೆ!

ಸಂಪಿಗೆ ರಸ್ತೆ ನನ್ನ ಮೆಚ್ಚಿನ ರಸ್ತೆ. ಎರಡೂ ಕಡೇ ರೆಂಬೆಕೊಂಬೆಗಳಲ್ಲಿ ಹಸಿರನ್ನು ತುಂಬಿಕೊಂಡು ಇಡೀ ರಸ್ತೆಗೆ ಹಸಿರುಚತ್ರಿ ಹಿಡಿದಂತೆ ಕಾಣುವ ದೊಡ್ಡ ದೊಡ್ಡ ಸಾಲುಮರಗಳು, ಪಕ್ಕದಲ್ಲಿನ ಉದ್ಯಾನವನ. ನನ್ನ ಹೈಸ್ಕೂಲು ಮತ್ತು ಕಾಲೇಜುದಿನಗಳ ಎಂಟುವರ್ಷಗಳು ಈ ರಸ್ತಯಲ್ಲಿ ನಡೆದಿದ್ದೇನೆ. ಆಗ ಈ ನಡುರಸ್ತೆಯಲ್ಲಿ ಆಯಾಗಿ ಸೈಕಲ್ ತುಳಿದಿದ್ದೇನೆ. ಬೇಸಿಗೆಯಲ್ಲಿ ನೆರಳಿನ ತಂಪನ್ನು, ಚಳಿಗಾಲದಲ್ಲಿ ಬೆಳಗಿನ ಚುಮುಚುಮು ಚಳಿಯ ಇಬ್ಬನಿ ವಾತಾವರಣದಲ್ಲಿ ಚತ್ರಿಗಳಂತಿರುವ ಈ ಮರಗಳ ಎಲೆಗಳ ನಡುವೆ ತೂರಿ ಬರುವ ಬಿಸಿಲಕೋಲನ್ನು ನೋಡಿ ಅಸ್ವಾದಿಸಿದ್ದೇನೆ. ಈಗಲೂ ನಿತ್ಯ ನನ್ನ ಬೆಳಗಿನ ದಿನಪತ್ರಿಕೆ ವಿತರಣೆ ಕೆಲಸದ ಓಡಾಟ ಈ ರಸ್ತೆಯಲ್ಲೇ. ಅಂತ ರಸ್ತೆಯಲ್ಲಿ ಮಾಲ್‍ಗಿಂತ ದೊಡ್ಡದು ಅಂತ ಹೇಳುವ ಮಂತ್ರಿ ಸ್ಕ್ವೇರ್ ಬಂದಿದೆ. ಜೊತೆಗೆ ಬೆಂಗಳೂರಿಗೆ ಮತ್ತೊಂದು ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಜೊತೆಯಲ್ಲಿಯೇ ಕರೆತಂದಿದೆ. ಆಗೆಲ್ಲಾ ನಿಮಿಷದಲ್ಲಿ ಈ ರಸ್ತೆಯಲ್ಲಿ ಸಾಗುತ್ತಿದ್ದ ನಾವು ಈಗ ಈ ಪುಟ್ಟ ರಸ್ತೆಯನ್ನು ಕ್ರಮಿಸಲು ಹತ್ತು ಹದಿನೈದು ನಿಮಿಷಗಳಾಗುತ್ತಿವೆ. ವಾರಾಂತ್ಯದಲ್ಲಂತೂ ವಾಹನಚಾಲಕರ ಕತೆ ಕೇಳುವುದೇ ಬೇಡ. ಮುಂದೆ ಏನಾಗಬಹುದು? ನಮ್ಮ ಸರ್ಕಾರಕ್ಕೆ ಗೊತ್ತಿರುವುದು ಒಂದೇ ರಸ್ತೆ ಅಗಲ ಮಾಡಲು ಮರಗಳನ್ನು ಕತ್ತರಿಸಿ ಬಿಸಾಡುವುದು. ಇಲ್ಲೂ ಮುಂದೆ ಅದು ಆಗುತ್ತದೆ. ಅದಕ್ಕಾಗಿ ಈ ಸುಂದರ ರಸ್ತೆಯ ಮರಗಳ ಸಮೇತ ಮಳೆಗಾಲ ಚಳಿಗಾಲ ಬೇಸಿಗೆ ಎಲ್ಲಾ ಕಾಲದಲ್ಲಿಯೂ ಫೋಟೊ ತೆಗೆದಿಟ್ಟುಕೊಂಡಿದ್ದೇನೆ. ಮುಂದೆ ಈ ರಸ್ತೆಯಲ್ಲಿ ಮರಗಳು ಇಲ್ಲವಾಗಿ ಈ ರಸ್ತೆಯೂ ಬೋಳಾಗಿಬಿಟ್ಟರೆ ಅನ್ನುವ ಭಯ ಈಗಲೇ ನನಗೆ ಕಾಡುತ್ತಿದೆ. ನಮ್ಮ ಸರ್ಕಾರಕ್ಕೆ ಅಂತ ಆಲೋಚನೆ ಬರದೇ ಟ್ರಾಫಿಕ್ಕಿಗಾಗಿ ಬೇರೆ ದಾರಿ ಹುಡುಕಿಕೊಳ್ಳಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ.

ಈ ಟ್ರಾಫಿಕ್ ಮಂತ್ರಿ ಸ್ಕ್ವೇರ್ ಎಫೆಕ್ಟ್!


ಮಾಲ್ ಸಂಸ್ಕೃತಿ ನಮ್ಮ ಕಡೆ[ಮಲ್ಲೇಶ್ವರಂ, ರಾಜಾಜಿನಗರ, ವೈಯ್ಯಾಲಿಕಾವಲ್, ಶೇಷಾದ್ರಿಪುರಂ, ಇತ್ಯಾದಿ..]ಇರಲಿಲ್ಲ. ಇತ್ತೀಚೆಗೆ ಒಂದು ಬಿಗ್ ಬಜಾರ್, ಅದರ ಪಕ್ಕ ಪ್ಯಾಕ್ಟರಿ ಔಟ್‍ಲೆಟ್, ಸಂಪಿಗೆ ರಸ್ತೆಯಲ್ಲಿ ಮಂತ್ರಿ ಸ್ಕ್ವೇರ್....ದೊಡ್ದದಾದ ರೀತಿಯಲ್ಲಿ ತೆರೆದುಕೊಂಡಿವೆ. ಎಲ್ಲೆಲ್ಲೂ ದೊಡ್ಡ ದೊಡ್ಡ ಜಾಹಿರಾತಿನ ದೊಡ್ದಪಲಕಗಳು, ಟಿ.ವಿ ಮತ್ತು ಎಪ್. ಎಮ್ ರೇಡಿಯೋದಲ್ಲಿ ನಿಮಿಷಕೊಮ್ಮೆ ಜಾಹಿರಾತುಗಳು, ಪತ್ರಿಕೆಗಳಲ್ಲಿ ಪುಟಗಟ್ಟಲೇ ಜಾಹಿರಾತುಗಳನ್ನು, ನಮ್ಮ ಓಣಿಯ ಪುಟ್ಟ ಮಕ್ಕಳು ಈ ಮಾಲ್, ಬಜಾರುಗಳ ಬಗ್ಗೆ ಮಾತಾಡುವುದನ್ನು ನೋಡಿ ನನ್ನ ಶ್ರೀಮತಿ ನಾವು ಹೋಗಿಬರೋಣವೆಂದು ಒತ್ತಾಯ ಮಾಡಿದಳು. ಮೊದಲು ಪ್ಯಾಕ್ಟರಿ ಔಟ್‍ಲೆಟ್, ಬಿಗ್ ಬಜಾರ್...ನಂತರ ಮಂತ್ರಿ ಸ್ಕ್ವೇರ್. ಒಳಗೆ ಹೋಗುತ್ತಿದ್ದಂತೆ ಆಹಾ.....ತರಾವರಿ ಬಣ್ಣ ಬಣ್ಣದ ವಸ್ತುಗಳು, ಮನೆಗೆ ಬೇಕಾದ ಸಕಲವೂ ಇಲ್ಲಿ ಸಿಕ್ಕೇ ಸಿಗುತ್ತವೆ. ನುಣುಪಾದ ಕನ್ನಡಿಯಂತ ನೆಲ, ಮೇಲೇರಿ ಕೆಳಗಿಳಿಯುವ ಎಸ್ಕಲೇಟರುಗಳು, ಸುತ್ತಾಡಿ ಸುಸ್ತಾಗುವಷ್ಟು ದೊಡ್ಡ ಮಾಲುಗಳು ಎಲ್ಲ ಏಸಿ. ಪೂರ್ತಿ ಓಸಿ. ನೋಡುತ್ತಿದ್ದರೇ ಕಾಮನಬಿಲ್ಲಿನ ಎಲ್ಲಾ ಬಣ್ಣಗಳೂ ಇಲ್ಲೇ ಮೇಳೈಸಿದಂತೆ ಅನುಭವ.

ಒಳಗೆ ಜೀನ್ಸ್ ಪ್ಯಾಂಟುಗಳನ್ನು ಒಪ್ಪವಾಗಿ ಜೋಡಿಸಿಟ್ಟಿದ್ದ ಮಂತ್ರಿ ಸ್ಕ್ವೇರಿನ ಒಂದು ಮಾಲ್‍ನೊಳಗೆ ಹೋಗಿ ನೋಡುತ್ತಿದ್ದೆ. ಎಲ್ಲದರ ಬೆಲೆಯೂ ಸಹಜವಾಗಿ ಹೆಚ್ಚೇ ಇತ್ತು. ಯಾವ ಬಟ್ಟೆಯನ್ನು ನೋಡಿದರೂ ಬೆಲೆ ಹೆಚ್ಚಾಗಿಯೇ ಇತ್ತು. ಆಗ ನಮ್ಮ ರಾಮಚಂದ್ರಪುರದ ಟೈಲರ್ ನೆನಪಿಗೆ ಬಂದ. "ಸರ್, ನಿಮಗೆ ಬೇಕಾದ ಬಟ್ಟೆ ಇಲ್ಲಿದೆ ನೋಡಿ ಅಯ್ಕೆ ಮಾಡಿ. ನಿಮಗೆ ಬೇಕಾದ ಪಕ್ಕಾ ಅಳತೆಯಲ್ಲಿ ಬಟ್ಟೆ ಮತ್ತು ಹೊಲೆಯುವ ಕೂಲಿ ಸೇರಿ ಕೇವಲ ಮುನ್ನೂರು ರೂಪಾಯಿಗೆ ಚೆನ್ನಾಗಿ ಹೊಲಿದುಕೊಡುತ್ತೇನೆ" ಅಂತ ಆತ ಹೇಳಿದ್ದು ನೆನಪಿಗೆ ಬಂತು. ಇಂಥ ಮಾಲ್‍ನಲ್ಲಿ ದುಬಾರಿ ಬೆಲೆಯನ್ನು ಕೊಟ್ಟು ನಮ್ಮಂಥ ಮದ್ಯಮ ವರ್ಗದವರು ಬಟ್ಟೆಗಳನ್ನು ಕೊಳ್ಳಲು ಪ್ರಾರಂಭಿಸಿದರೆ ಆ ಟೈಲರುಗಳ ಗತಿಯೇನು? ಅವನ ಹೆಂಡತಿ ಮತ್ತು ಮಕ್ಕಳ ಕತೆಯೇನು? ಯಾವಾಗ ಹೋದರು ಪ್ರೀತಿಯಿಂದ ಮನಃಪೂರ್ವಕವಾಗಿ ಮಾತಾಡಿಸುವ ಆತ ಚೌಕಾಸಿ ಮಾಡಿದರೂ ಬೇಸರಗೊಳ್ಳುವುದಿಲ್ಲ. ಆದ್ರೆ ಇಲ್ಲಿ ಎಲ್ಲವೂ ನಿಗದಿತ ಬೆಲೆ. ತರಕಾರಿ ಆಹಾರ ಪದಾರ್ಥಗಳು, ಖಾದ್ಯಗಳು ಇನ್ನಿತರ ವಿಚಾರದಲ್ಲಿ ಬೆಲೆಗಳು ಸ್ವಲ್ಪ ಕಡಿಮೆಯಿದೆ ಅನ್ನೋದು ನನ್ನ ಶ್ರೀಮತಿಯ ಅಭಿಪ್ರಾಯ. ಕೆಲವು ಉತ್ತಮ ಗುಣಮಟ್ಟದ ವಸ್ತುಗಳ ಬೆಲೆಯೂ ಗುಣಮಟ್ಟಕ್ಕೆ ತಕ್ಕಂತೆ ಇರುವುದರಿಂದ ಗುಣಮಟ್ಟ ನಿರೀಕ್ಷಿಸುವವರು ದಾರಾಳವಾಗಿ ಕೊಂಡುಕೊಳ್ಳುತ್ತಿದ್ದರು. ಮತ್ತೆ ಎಲ್ಲ ವಸ್ತುಗಳಿಗೂ ನಿಗದಿತ ಬೆಲೆ. ಚೌಕಾಸಿಯ ಮಾತೇ ಇಲ್ಲ. ಅದಕ್ಕಿಂತ ಮೊದಲಿಗೆ ಎಲ್ಲಾ ಲೆಕ್ಕಾಚಾರ. ಬ್ರೆಡ್ಡಿನ ಮೇಲೆ ಬೆಣ್ಣೆ ಸವರಿದಂತೆ ಮೇಲುನೋಟಕ್ಕೆ ಎಲ್ಲವೂ ತಳುಕುಬಳುಕು.

ಆದ್ರೂ ಮಂತ್ರಿ ಸ್ಕ್ವೇರಿಗೆ ಬರಬೇಕು ಕಣ್ರಿ... ಏನನ್ನು ಕೊಂಡುಕೊಳ್ಳದಿದ್ದರೂ ಚೆಂದದ ಬಟ್ಟೆ ತೊಟ್ಟ ಬಣ್ಣ ಬಣ್ಣದ ಹುಡುಗಿಯರನ್ನು ನೋಡಲು ಬರಬೇಕು. ಮನೆಯಲ್ಲಿ, ಕಾಲೇಜಿನಲ್ಲಿ, ಅಫೀಸಿನಲ್ಲಿ ಜೈಲುಹಕ್ಕಿಗಳಾಗಿದ್ದರೇನೋ ಅನ್ನುವಷ್ಟರ ಮಟ್ಟಿಗೆ ಹುಡುಗರು ಮತ್ತು ಹುಡುಗಿಯರು ಮೈಮರೆತು ನಲಿಯುವುದನ್ನು ನೋಡಲು ಬರಲೇಬೇಕು. ನುಣುಪಾದ ನೆಲದಲ್ಲಿ ಆಗಾಗ ನಮ್ಮ ಮುಖ ನೋಡಿಕೊಳ್ಳಬೇಕು. ಬಣ್ಣ ಬಣ್ಣದ ಗೋಡೆಗಳು ಅದಕ್ಕೊಪ್ಪುವಂತ ಕಣ್ಕುಕ್ಕುವಂತ ಜಾಹಿರಾತುಗಳುಗಳನ್ನೆಲ್ಲಾ ನೋಡುತ್ತಾ ಮೆಟ್ಟಿಲು ಹತ್ತಿಳಿಯಬೇಕು. ಇಡೀ ಮಾಲನ್ನು ಲೆನ್ಸಿನ ವೈಡ್ ಆಂಗಲಿನಂತೆ ಕಣ್ಣಗಲಿಸಿ ನೋಡಿ ಕಣ್ತುಂಬಿಕೊಳ್ಳಬೇಕು. ಡಾಕ್ಟರು ವಾಕಿಂಗ್ ಮಾಡಿ ಅಂತ ಹೇಳಿದಾಗ ಬೇಸರಗೊಳ್ಳದೆ ಇಲ್ಲಿ ಬಂದು ದಿನಕ್ಕೆ ಎರಡುಗಂಟೆ ಇಡೀ ಮಾಲ್ ತುಂಬಾ ವಾಕ್ ಮಾಡಿ ಮೆಟ್ಟಿಲು ಹತ್ತಿಳಿಯಿರಿ. ಅಂತ ಏಸಿ ಮಾಲಿನಲ್ಲಿ ಕಣ್ಣು ಮತ್ತು ಮನಸ್ಸು ತಂಫು ಮಾಡಿಕೊಳ್ಳೂತ್ತಾ ಉಚಿತವಾಗಿ ದೇಹದ ತೂಕವನ್ನು ಇಳಿಸಿಕೊಳ್ಳಲು ಇದಕ್ಕಿಂತ ಒಳ್ಳೇ ದಾರಿ ಬೇರೊಂದಿಲ್ಲ.

ಮೂರನೆ ಮಹಡಿಯಲ್ಲಿರುವ ಫುಡ್ ಕಾಂಪ್ಲೆಕ್ಸು

ನನ್ನ ಈ ಉಪಾಯವನ್ನು ಕೆಲವು ವಯಸ್ಕರು ಆಗಲೇ ಕಾರ್ಯೋನ್ಮುಖರಾಗಿಬಿಟ್ಟಿದ್ದಾರೆ. ನಾನು ಪರೀಕ್ಷೆಮಾಡಲು ಮೂರು ದಿನ ಸತತವಾಗಿ ಹೋಗಿದ್ದೆ. ಮೂರು ದಿನವೂ ಸಂಜೆಯ ವೇಳೆಯಲ್ಲಿ ಆರು ವಯಸ್ಕರು ಹಾಜರಾಗಿದ್ದಾರೆ. ಅವರು ಸ್ಪಾರ್ ಮಾರ್ಕೆಟ್ಟಿನ ವೈನ್ ಸೆಕ್ಷನ್ನಿನಲ್ಲಿ ತಮ್ಮ ಆಡ್ಡ ಮಾಡಿಕೊಂಡಿದ್ದರು. ಒಬ್ಬ ಹಿರಿಯ ಅಲ್ಲಿರುವ ದುಬಾರಿ ವಿದೇಶಿ ವೈನನ್ನು ತೋರಿಸಿ ’ಫಾರೀನ್‍ನಿಂದ ಬಂದ ನನ್ನ ಅಳಿಯ ಇದೇ ವೈನನ್ನು ನನಗಾಗಿ ತಂದುಕೊಟ್ಟಿದ್ದ, ಅದನ್ನು ಜೋಪಾನವಾಗಿಟ್ಟು ನನ್ನ ಗೆಳೆಯನ ಮದುವೆ ವಾರ್ಷಿಕೋತ್ಸವಕ್ಕೆ ಗಿಫ್ಟ್ ಮಾಡಿದೆ ಕಣಯ್ಯ", ಅಂತ ಹೇಳಿದರೇ, "ನನಗೆ ಐದುನೂರು ವರ್ಷದಷ್ಟು ಹಳೆಯದಾದ ಫಾರಿನ್ನಿನ ವೈನೊಂದು ಗಿಪ್ಟ್ ಬಂದಿತ್ತು ಕಣಯ್ಯ, ಎಂಥ ಪ್ಲೇವರ್ ಅಂತೀಯಾ, ವರ್ಷಾನುಗಟ್ಟಲೇ ಅದರ ವಾಸನೆ ಎಳೆದುಕೊಂಡೇ ಖುಷಿಪಟ್ಟಿದ್ದೆ. ಅದೊಂದು ರಾತ್ರಿ ಸಿಂಗ್ ಜೊತೆಸೇರಿ ಕುಡಿದು ಖಾಲಿಮಾಡಿದ್ದೆ." ಅಂತ ಮತ್ತೊಬ್ಬರು ಹೇಳಿದ್ದು ಕೇಳಿ ನನಗೆ ನಗು ಬಂತು. ಹೀಗೆ ವಯಸ್ಕರು ಏನನ್ನು ಕೊಳ್ಳದೇ ಹೀಗೆ ಅಡ್ದಾಡಿ ವಸ್ತುಗಳ ಮುಂದೆ ನಿಂತು ತಮ್ಮ ಗತಕಾಲದ ನೆನಪುಗಳ ಸುರುಳಿಯನ್ನು ಬಿಚ್ಚಲು ಇದಕ್ಕಿಂತ ಒಳ್ಳೇ ಜಾಗ ಎಲ್ಲಿದೆ ಹೇಳಿ?

ಬೃಹತ್ ಗಾತ್ರ ಜಾಹಿರಾತು ಫಲಕಗಳು ಮಾಲುಗಳಲ್ಲಿ

ನಾನು ಗಮನಿಸಿದ ಮತ್ತೊಂದು ವಿಚಾರವೆಂದರೆ ನಿತ್ಯ ಗಾಂಪರ ಹಾಗೆ ದಿನಪತ್ರಿಕೆ ಹಂಚಲು ಬರುವ ನಮ್ಮ ಬೀಟ್ ಹುಡುಗರು ಮತ್ತು ಯುವಕರು ಇದೇ ಮಾಲುಗಳಲ್ಲಿ ಸಮವಸ್ತ್ರ ಧರಿಸಿ ಸೇಲ್ಸ್ ಬಾಯ್ಸ್ ಆಗಿರುವುದು ಕಾಣಿಸಿತು. ಮತ್ತೆ ದಿನಪತ್ರಿಕೆ ವಸೂಲಿಗೆ ಹೋದಾಗ ಒಂದು ರೂಪಾಯಿ ಮತ್ತು ಐವತ್ತು ಪೈಸೆಗೆ ನನ್ನ ಜೊತೆಗೆ ಚೌಕಾಸಿ ಮಾಡುವ ಅನೇಕ ಗ್ರಾಹಕರು ಮಾಲ್‍ನ ಮೂರನೇ ಮಹಡಿಯಲ್ಲಿರುವ ಪುಡ್ ಕಾಂಪ್ಲೆಕ್ಸುಗಳಿಗೆ ಲಗ್ಗೆ ಹಾಕಿದ್ದರು. ಅದಕ್ಕೆ ನನ್ನ ಅಭ್ಯಂತರವೇನು ಇಲ್ಲ. ಆದ್ರೆ ಇಲ್ಲಿರುವ ಪ್ರತಿಯೊಂದು ತಿಂಡಿಯ ಬೆಲೆಯೂ ನೂರನ್ನೂ ದಾಟುತ್ತದೆ. ಅದನ್ನು ಕ್ಯೂನಲ್ಲಿ ಮಕ್ಕಳ ಜೊತೆ ನಿಂತಿರುವುದು ನೋಡಿ ನನಗೆ ನಗುಬಂತು. ಇಷ್ಟೆಲ್ಲಾ ನೋಡಿದ ಮೇಲೆ ಎಲ್ಲೋ ಒಂದು ಕಡೆ ನಮಗೆ ಗೊತ್ತಿಲ್ಲದ ಹಾಗೆ ಬೇಸರವಾಗುತ್ತದೆ. ಅದ್ಯಾಕೆ ಬೇಸರವಾಗುತ್ತದೆ ಅಂತ ನಿಮ್ಮನ್ನು ನೀವು ಪ್ರಶ್ನಿಸಿಕೊಂಡರೇ ಉತ್ತರ ತಕ್ಷಣಕ್ಕೆ ಹೊಳೆಯುವುದಿಲ್ಲ. ಸ್ವಲ್ಪ ಯೋಚಿಸಿದಾಗ ಹೊಳೆಯಿತು. ಅಲ್ಲಿಗೆ ಬಂದಿರುವ ಪ್ರತಿಯೊಬ್ಬರೂ ಸಹಜವಾಗಿ ಇದ್ದಂತೆ ಕಾಣಲಿಲ್ಲ. ಜೊತೆಗೆ ನಾನು ಕೂಡ ನನಗಾಗಿ ಮಾಲ್‍ನಲ್ಲಿ ಸಹಜವಾಗಿ ಇರಲಿಲ್ಲವಲ್ಲ ಅನ್ನಿಸತೊಡಗಿತು. ಪ್ರತಿಯೊಬ್ಬರೂ ಆಧುನಿಕ ಬಟ್ಟೆಗಳನ್ನು ಧರಿಸಿದ್ದರೂ ಅದು ಅವರಿಗಾಗಿ ಹಾಕಿರಲಿಲ್ಲವೇನೋ, ಬೇರೆಯವರು ಅವರನ್ನು ನೋಡಿ ಮೆಚ್ಚಿಕೊಳ್ಳಲಿ ಎನ್ನುವ ಹಾಗೆ ಅವರ ನಡುವಳಿಕೆಯಿತ್ತು. ಮತ್ತೆ ಕ್ಷಣಕೊಮ್ಮೆ ತಮ್ಮನ್ನು ಯಾರಾದರೂ ಗಮನಿಸುತ್ತಿದ್ದಾರೆಯೇ ಅಂತ ವಾರೆನೋಟದಲ್ಲಿ ನೋಡುವವರೇ ಇದ್ದರು. ಒಟ್ಟಾರೆ ಇಡೀ ಮಾಲ್‍ನಲ್ಲಿ ತಮ್ಮ ಸಹಜಗುಣವನ್ನು ಮರೆತು ಬೇರೆಯವರಿಗಾಗಿ ಹೀಗೆಲ್ಲಾ ವರ್ತಿಸುತ್ತಿದ್ದಾರೇನೋ ಅನ್ನಿಸಿದ್ದು ನಿಜ. ಅವರಿಗೇ ತಮ್ಮ ಮನಸ್ಸಿಗೆ ಬಂದಂತೆ ಹೃದಯಪೂರ್ವಕವಾಗಿ ಬಂದ ಭಾವನೆಗಳನ್ನು ಸಹಜವಾಗಿ ಯಾರೊಂದಿಗೂ ಹಂಚಿಕೊಳ್ಳದೇ ಪ್ರತಿಯೊಬ್ಬರೂ ತೋರಿಕೆಗೆ ಒಬ್ಬರನ್ನೊಬ್ಬರೂ ಮೆಚ್ಚುತ್ತಾ ಮಾಲ್ ಕಾಂಪ್ಲೆಕ್ಸನ್ನು ಹೊಗಳುತ್ತಾ ಕೃತಕವಾಗಿ ಮುಗುಳ್ನಗು ಮಾತ್ರ ಚಿಮ್ಮಿಸುತ್ತಿದ್ದರು.

ಬಣ್ಣದ ದೀಪಗಳಿಂದ ಅಲಂಕೃತವಾದ ಮಾಲ್

ಮತ್ತೊಂದು ವಿಚಾರವೆಂದರೆ ಇಡೀ ಮಾಲ್‍ನಲ್ಲಿ ಎಲ್ಲೂ ನಾವು ಮನ:ಪೂರ್ವಕವಾಗಿ ನಗುವಂತಿಲ್ಲ. ಜೋರಾಗಿ ನಗಬಾರದೆಂದು ಎಲ್ಲೂ ಬೋರ್ಡು ಹಾಕಿಲ್ಲ. ಆದ್ರೂ ಯಾರು ಮನಸೋ ಇಚ್ಚೇ ನಕ್ಕು ಸಂತೋಷಪಡುವಂತಿಲ್ಲ. "ಹಾಗಾದರೆ ಇಂಥ ಮಾಲುಗಳಿಗೆ ಸುಖಾಸುಮ್ಮನೇ ಬರುವುದಕ್ಕೆ ಜನರಿಗೇನು ತಲೆಕೆಟ್ಟಿದೆಯೇ?" ಅಂತ ನಿಮಗನ್ನಿಸಬಹುದು. ನಾನು ಇದೇ ಪ್ರಶ್ನೆಯನ್ನು ಕೇಳಿಕೊಂಡಾಗ ಸಿಕ್ಕ ಉತ್ತರವೇನೆಂದರೆ, ಅವರು ಇಲ್ಲಿಗೆ ಬಂದಾಗ ತುಂಬಾ ಖುಷಿಯಾಗುತ್ತದೆ, ಅದಕ್ಕಾಗಿಯೇ ಬರುತ್ತಾರೆ. ಆದ್ರೆ ಅದನ್ನು ಹೊರಗಡೆ ಮಗುವಿನಂತೆ ಆನಂದಿಸಲು ಅವರಿಗೆ ನಮ್ಮ ಆಧುನಿಕ ನಗರೀಕರಣದ ಗಾಂಭೀರ್ಯ ಸಂಸ್ಕೃತಿ ಆಡ್ಡಬರುತ್ತಿದೆ. ಅಲ್ಲಿ ಮಕ್ಕಳು ಮಕ್ಕಳಂತೆ ಆನಂದಿಸಲು ಅವರ ತಂದೆತಾಯಿಗಳು ಬಿಡುವುದಿಲ್ಲ. ಅವರ ಮೇಲು ಇದೇ ಸಂಸ್ಕೃತಿಯನ್ನು ಹೇರಿಬಿಡುತ್ತಾರೆ. ಇನ್ನೂ ಅದರಲ್ಲಿ ಕೆಲಸ ಮಾಡುವ ಕೆಲಸಗಾರರಿಗೂ ಹಾಗೆ ನೀತಿ ನಿಯಮಗಳಿರುವುದರಿಂದ, ಅವರು ಕೂಡ ಒಳಗೊಳಗೆ ನಗಬೇಕು.

ಯಶವಂತಪುರ ತರಕಾರಿ ಮಾರುಕಟ್ಟೆ.

ಅದೇ ನಮ್ಮ ಮಲ್ಲೇಶ್ವರಂ ೮ನೇ ಆಡ್ಡರಸ್ತೆಗೆ ಬನ್ನಿ. ಅಲ್ಲಿ ರಸ್ತೆಯಲ್ಲಿ ಹೂ ಮಾರುವ ಹುಡುಗಿಯ ಬಳಿ ನಗುತ್ತಾ ಚೌಕಾಸಿ ಮಾಡಬಹುದು. ಕೈಗಾಡಿಯ ಹಣ್ಣಿನವನು ಹೇಳುವ ಅವನ ಸ್ವಂತ ಕತೆಯನ್ನು ಹಿತವಾಗಿ ಕೇಳಬಹುದು. ಉಗುರಿಗೆ ಹಾಕುವ ನೇಲ್ ಪಾಲಿಸ್ ಒಮ್ಮೆ ಹಾಕಿ ನೋಡಿ ಚೆನ್ನಾಗಿಲ್ಲವೆಂದರೆ ವಾಪಸ್ಸು ಕೊಡಬಹುದು, ತರಕಾರಿ ಮಾರುವವಳ ಬಳಿ ಅಮಟೇಕಾಯಿ ಕೊಳ್ಳುತ್ತಾ ಆದರಿಂದ ತಂಬುಳಿ ಮಾಡುವುದನ್ನು ಚರ್ಚಿಸಬಹುದು. ಯಶವಂತಪುರ ತರಕಾರಿ ಮಾರುಕಟ್ಟೆಯಲ್ಲಿ ಮತ್ತಷ್ಟು ಹಳ್ಳಿ ಸೊಗಡು ಭಾಷೆ ಮುಗ್ದತೆಯನ್ನು ನೋಡುತ್ತಾ, ಮನಃಪೂರ್ವಕವಾಗಿ ನಗುತ್ತಾ ವ್ಯಾಪಾರ ಮಾಡಬಹುದು. ಅಲ್ಲಿ ಎಲ್ಲವೂ ಮುಕ್ತ ಮುಕ್ತ. [ಯಶವಂತಪುರ ಸಂತೆಯನ್ನು ಆನಂದಿಸಬೇಕಾದರೆ ನನ್ನ ಈ ವಾರಕೊಮ್ಮೆ ಯಶವಂತಪುರ ಸಂತೆ. ಓದಿ.]
ಮಲ್ಲೇಶ್ವರಂ ಎಂಟನೇ ಆಡ್ಡರಸ್ತೆಯ ರಸ್ತೆ ಮಾರುಕಟ್ಟೆ
ಇಂಥ ಮಾಲುಗಳಲ್ಲಿ ಪ್ರತಿಯೊಂದು ವಸ್ತುವನ್ನು ಪ್ಲಾಸ್ಟಿಕ್ ಪೇಪರಿನಲ್ಲಿ ತುಂಬಿ ತೂಕ ಹಾಕಿ ಸೀಲ್ ಮಾಡಿಟ್ಟಿರುತ್ತಾರೆ. ನನ್ನ ಶ್ರೀಮತಿ ಐದುನೂರು ರೂಪಾಯಿ ಬೆಲೆಯ ವಸ್ತುಗಳನ್ನು ತಂದು ಮನೆಯ ಡಬ್ಬಗಳಿಗೆ ತುಂಬಿದ ನಂತರ ಎಲ್ಲ ಪ್ಲಾಸ್ಟಿಕ್ ಕವರುಗಳನ್ನು ತೂಕ ಮಾಡಿದಾಗ ೨೫೦ ಗ್ರಾಂಗಿಂತಲೂ ಹೆಚ್ಚು ತೂಗುತ್ತಿತ್ತು. ನಮ್ಮಂತೆ ಸಾವಿರಾರು ಗ್ರಾಹಕರು ಸಾವಿರಾರು ರೂಪಾಯಿ ಬೆಲೆಯ ಖರೀದಿಗಳನ್ನು ಮಾಡಿದಾಗ ಅವರಿಗೆ ಕಡಿಮೆಯೆಂದರೂ ಅರ್ಧ ಕೇಜಿ ಪ್ಲಾಸ್ಟಿಕ್ ಅವರ ಮನೆ ಸೇರುತ್ತದೆ. ಇದೇ ಲೆಕ್ಕಾಚಾರದಲ್ಲಿ ಒಂದು ಮಾಲ್ ದಿನಕ್ಕೆ ಅರ್ಧ ಟನ್‍ಗಿಂತಲೂ ಅಧಿಕ ಪ್ಲಾಸ್ಟಿಕ್ ಅನ್ನು ಮನೆಗೆ ಮನೆಗೆ ಕಳಿಸುವುದರಿಂದ ಇಂಥ ಹತ್ತಾರು ಮಾಲುಗಳಿಂದ ಅದೆಷ್ಟು ಟನ್ ಪ್ಲಾಸ್ಟಿಕ್ ಹೊರಬರಬಹುದು. ಇಷ್ಟು ಪ್ಲಾಸ್ಟಿಕ್ ಬೇಡಿಕೆಯನ್ನು ಪರೋಕ್ಷವಾಗಿ ಸೃಷ್ಟಿಸುವ ಮಾಲುಗಳಿಗೆ ಹೋಲಿಸಿದರೆ ಈ ವಿಚಾರದಲ್ಲಿ ನಮ್ಮ ರಸ್ತೆ ಮಾರುಕಟ್ಟೆಗಳೇ ಉತ್ತಮ. ನಾವು ಮಲ್ಲೇಶ್ವರಂ ಅಥವ ಯಶವಂತ ಮಾರುಕಟ್ಟೆಗೆ ಹೊರಟರೆ ಕೈಯಲ್ಲಿ ಒಂದು ದೊಡ್ಡ ಬಟ್ಟೆ ಬ್ಯಾಗುಗಳನ್ನು ತೆಗೆದುಕೊಂಡೇ ಹೊರಡುವುದು. ಕೊಂಡ ಎಲ್ಲಾ ತರಕಾರಿ ರೇಷನ್ ಇತ್ಯಾದಿಗಳನ್ನು ಅದೇ ಬ್ಯಾಗಿನಲ್ಲಿ ತುಂಬಿಸಿಕೊಳ್ಳುತ್ತೇವೆ. ಪ್ಲಾಸ್ಟಿಕ್ ಬಳಕೆ ಇದ್ದರೂ ತೀರ ಕಡಿಮೆ. ಪರೀಕ್ಷೆಗಾಗಿ ಐದುನೂರು ಬೆಲೆಯ ವಸ್ತುಗಳನ್ನು ಮಲ್ಲೇಶ್ವರಂನಲ್ಲಿ ಕೊಂಡು ತಂದಾಗ ನಮಗೆ ಬಂದ ಪ್ಲಾಸ್ಟಿಕ್ ೫೦ ಗ್ರ್‍ಆಂಗಿಂತಲೂ ಕಡಿಮೆಯೆಂದರೇ ನೀವು ನಂಬಲೇ ಬೇಕು. ಹಾಗೆ ಈ ಮಾಲ್‍ಗಳಲ್ಲಿ ನಿತ್ಯ ಉಪಯೋಗಿಸುವ ವಿದ್ಯುತ್ ಲೆಕ್ಕಕ್ಕೆ ಸಿಗುವುದಿಲ್ಲ. ದಿನದ ಹದಿನಾಲ್ಕು ಗಂಟೆ ಲಕ್ಷಾಂತರ ದೀಪಗಳು, ಏಸಿ, ಎಸ್ಕಲೇಟರುಗಳು, ಒಂದೇ ಎರಡೇ......ನಮ್ಮ ಸರ್ಕಾರ ಉತ್ಪಾದಿಸುವ ವಿದ್ಯುತ್ ಇಂಥ ಮಾಲುಗಳಿಗೆ ಸಿಂಹ ಪಾಲು ಸಿಗುವುದರಿಂದ ನಮ್ಮ ಮನೆಗಳಿಗೆ ಗಂಟೆಗೊಮ್ಮೆ ಲೋಡ್ ಸೆಡ್ಡಿಂಗ್. ಅದೆಲ್ಲಾ ಖರ್ಚನ್ನು ಕೊನೆಗೆ ನಮ್ಮ ತಲೆಗೆ ಕಟ್ಟುವುದರಿಂದ ಸಹಜವಾಗಿ ವಸ್ತುಗಳ ಬೆಲೆ ಹೆಚ್ಚೇ ಇರುತ್ತದೆ. ಅದರ ಬದಲಾಗಿ ನಮ್ಮ ರಸ್ತೆಬದಿಯಲ್ಲಿ ಹಗಲೆಲ್ಲಾ ಸೂರ್ಯನಬೆಳೆಕು ರಾತ್ರಿ ಬೀದಿ ದೀಪಗಳಲ್ಲಿ ವ್ಯಾಪಾರ ಮಾಡುವವರೊಂದಿಗೆ ಖುಷಿಯಿಂದ ಚೌಕಾಸಿ ವ್ಯಾಪಾರ ಮಾಡಿ ಸರ್ಕಾರಕ್ಕೆ ಲಕ್ಷಾಂತರ ಯೂನಿಟ್ ವಿದ್ಯುತ್ ಉಳಿಸಬಹುದಲ್ಲವೇ?
ಇವೆಲ್ಲಾ ನನ್ನ ಮನಸ್ಸಿಗೆ ಅನ್ನಿಸಿದ ಭಾವನೆಗಳು ಅಷ್ಟೇ. ಬಡವರ, ಬಡ ಮದ್ಯಮ ವರ್ಗದವರ ದೃಷ್ಟಿಕೋನದ ಅಲೋಚನೆಗಳಷ್ಟೆ. ಶ್ರೀಮಂತರ ದೃಷ್ಟಿಕೋನದಲ್ಲಿ ನೋಡಿದಾಗ ಇದಕ್ಕಿಂತ ಭಿನ್ನ ಚಿತ್ರಗಳೇ ಮೂಡಬಹುದು. ನೀವು ಮಾಲ್‍ಗಳಿಗೆ ಬೇಟಿಕೊಟ್ಟರೆ ನಿಮ್ಮ ಅನುಭವವೂ ಬೇರೆಯಾಗಬಹುದು. ದಿನ ಬದಲಾದಂತೆ ಭಾವನೆಗಳು ಬದಲಾಗಬಹುದು. ಬದಲಾವಣೆ ಜಗದ ನಿಯಮ. ಆದ್ರೆ ಅದು ಪರಿಸರಕ್ಕೆ ಸಂಬಂದಿಸಿದಂತೆ ದಿಡೀರ್ ಬದಲಾವಣೆಯಾಗಬಾರದು, ನಮ್ಮ ಸುಂದರ ಸಾಲುಮರಗಳ ಸಂಪಿಗೆ ರಸ್ತೆಯ ವಾತಾವರಣ ಬದಲಾಗಬಾರದು. ಹಸಿರಿಂದ ನಳನಳಿಸುವ ಮರಗಳು ಮರೆಯಾಗಬಾರದು ಅಲ್ಲವೇ....

ಚಳಿಗಾಲದಲ್ಲಿ ಸಂಪಿಗೆ ರಸ್ತೆ...ಮುಂದೆಯೂ ಈ ಹಸಿರು ಹೀಗೆ ಉಳಿಯುವುದೇ?

ಚಿತ್ರಗಳು ಮತ್ತು ಲೇಖನ.
ಶಿವು.ಕೆ

58 comments:

ಚುಕ್ಕಿಚಿತ್ತಾರ said...

ಶಿವು ಸರ್..
ಸುಮ್ಮನೆ ಮಾಲ್ ಮತ್ತು ರಸ್ಥೆ ಬದಿ ವ್ಯಾಪಾರವನ್ನು ಹೋಲಿಸುತ್ತಿದ್ದೀರೆ೦ದು ಕೊ೦ಡರೆ ಎ೦ತೆ೦ತಹಾ ವಿಚಾರಗಳನ್ನು ತೆರೆದಿಟ್ಟಿರಲ್ಲ...! ಮಲ್ಲೆಶ್ವರ೦ ೮ ನೆ ಕ್ರಾಸ್ ನನಗೂ ಇಶ್ಟ..
ಅಲ್ಲೊ೦ದು ಭಾವನೆಗಳ ಕೊಡು ಕೊಳ್ಳುವಿಕೆ ಇದೆ ಅನ್ನಿಸುತ್ತೆ ನನಗೆಷ್ಟೋಸಲ.ಚೌಕಾಸಿ ಮಾಡಿದರೂ ವ್ಯಾಪಾರಿ ಒಪ್ಪದಿದ್ದರೂ ಒ೦ತರಾ ಬೇಸರವೆನಿಸದು...
ನೀವ೦ದಿದ್ದು ನಿಜ ಮಾಲ್ ಗಳಲ್ಲಿ ನಮ್ಮೊಳಗಿನ ನಮ್ಮನ್ನು ಮುಚ್ಚಿಕೊಳ್ಳುತ್ತೇವೆ.. ನಾವು ನಾವಾಗಿರುವುದಿಲ್ಲ..
ಸು೦ದರ ಚಿತ್ರ, ಬರಹಕ್ಕೆ ಥ್ಯಾ೦ಕ್ಸ್.

Guruprasad said...

ಶಿವೂ ಸರ್, ನೀವು ಫೋನ್ ನಲ್ಲಿ ಹೇಳಿದಾಗಲೇ ಇನ್ನೊಂದು ಸ್ವಾರಸ್ಯಕರ ಲೇಖನ ಸಿದ್ದವಾಗಿದೆ ಅಂತ ಕಾಯುತ್ತ ಇದ್ದೆ...
ಗುಡ್, ಒಳ್ಳೆಯ ಲೇಖನವನ್ನು, ಚಿತ್ರಗಳ ಸಮೇತ , ನಿಮ್ಮ ಅಭಿಪ್ರಾಯಗಳ ಜೊತೆ ತಿಳಿಸಿ ಹೇಳಿದ್ದಿರ... ಇದರಲ್ಲಿ ಕೆಲವೊಂದು ವಿಚಾರಗಳು ಯೋಚಿಸುವನ್ತದ್ದು.... ಮುಂದೆ ಇಂತಹ ಮಾಲ್ ಸಂಸ್ಕೃತಿ ಇಂದ. ನಮ್ಮ ಸಂಪಿಗೆ ರೋಡ್ ನ ಮರಗಳಿಗೆ ತೊಂದರೆ ಆಗದಿದ್ದರೆ ಸಾಕು......
ಒಳ್ಳೆಯ ಯೋಚಿಸುವಂತ ಲೇಖನ ಕೊಟ್ಟಿದ್ದಕೆ ಧನ್ಯವಾದಗಳು......
ಗುರು

ಜಲನಯನ said...

ಶಿವು, ಸೂಪರ್ ಥಾಟ್...ಅಲ್ಲ ಮಾಲುಗಳಲ್ಲಿ ಮಾಲನ್ನು ಬೇಕಾಬೇಟಿ ಬೆಲೆಗೆ ಮಾರುವವರು....ದಾರಿಬದಿಯ ಅಂಗಡಿ ಬೆಲೆಗೆ ಮಾರಿದ್ರೆ ಮಾಲಿನ ಬಾಡಿಗೆಗೆ ತಮ್ಮದ್ದೆಲ್ಲ ಮಾರ್ಕೋ ಬೇಕಾಗುತ್ತೆ...
ನಿಜ ನೋಡಿ ಮಲ್ಲೇಶ್ವರಂ ಸಂಪಿಗೆ ರಸ್ತೆ ತನ್ನ ಹಳೆತನ್ನ ಉಳಿಸಿಕೊಂಡಿದೆ....
ಒಳ್ಳೆ ಚಿತ್ರಗಳು ಅಷ್ಟೇ ರಸವತ್ತಾದ ಪ್ರಸ್ತಾವನೆ...

ವನಿತಾ / Vanitha said...

ಶಿವು..ನಿಜಕ್ಕೂ ಯೋಚಿಸಲೇಬೇಕಾದ ವಿಚಾರ..
ನೀವು ಹೇಳಿದ್ದು ತುಂಬ ಸರಿಯಾಗಿದೆ..ಹಿರಿಯ ವಾಕಿಂಗ್ ಗೆ, ಯುವಜನರ ಸ್ಟೈಲ್ ಗೆ ಈ ಮಾಲ್ ಗಳು ಬೆಸ್ಟು..ಇಲ್ಲದಿದ್ದರೆ ನಮ್ಮ ಸಂತೆ ಯ ವಿಶೇಷ ಸೊಗಡು ಮಾಲ್ ನಲ್ಲಿ ಕಾಣಸಿಗುವುದಿಲ್ಲ..ಮೈಸೂರಿನ ಕೃಷ್ಣ ದೇವರಾಜ ಮಾರ್ಕೆಟ್ ನೆನಪಾಯ್ತು..ಸಂಪಿಗೆ ರೋಡ್ ನ ಮರಗಳು ಇನ್ನು ತುಂಬಾ ವರ್ಷಗಳ ಕಾಲ ಮಳೆ-ಚಳಿಗೆ ಹಾಗೆಯೇ ಇರಲಿ ಎಂದು ಆಶಿಸೋಣ...ಒಳ್ಳೆಯ ಚಿತ್ರಗಳು:)

ಮನಸಿನ ಮಾತುಗಳು said...

Nice Pics again....:-)

shivu.k said...

ಚುಕ್ಕಿಚಿತ್ತಾರ ಮೇಡಮ್,

ಮೊದಲು ಸುಮ್ಮನೇ ಮಾಲ್ ಮತ್ತು ಸಂತೆಗಳ ಬಗ್ಗೆ ಸಣ್ಣದಾಗಿ ಬರೆಯಬೇಕೆಂದುಕೊಂಡು ಪ್ರಾರಂಭಿಸಿದ ಮೇಲೆ ನಿದಾನವಾಗಿ ಇವೆಲ್ಲ ವಿಚಾರಗಳು ಗಮನಕ್ಕೆ ಬಂದವು. ಎರಡೂ ವಿಚಾರದಲ್ಲೂ ಆಗಿರುವ ಅನುಕೂಲ ಅನಾನುಕೂಲಗಳನ್ನು ನಿರ್ಲಿಪ್ತನಾಗಿ ಬರೆಯಬೇಕೆನ್ನುವ ನನ್ನ ಉದ್ದೇಶ ಈಡೇರಿದೆಯೋ ಇಲ್ಲವೋ ಗೊತ್ತಿಲ್ಲ. ನನಗಾದ ಅನುಭವವನ್ನು ಬರೆದಿದ್ದೇನೆ. ಅದನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಗುರು,

ನೀವು ಮಂತ್ರಿ ಮಾಲ್‍ಗೆ ಹೋಗಲು ಇಷ್ಟಪಟ್ಟಾಗ ನನ್ನ ಲೇಖನವನ್ನು ಓದಿ ನಂತರ ಹೋಗಿ ನಿಮ್ಮ ಅನುಭವ ವಿಭಿನ್ನವಾಗಿರುತ್ತದೆ ಅಂದಿದ್ದೆ. ನೀವು ಹೋಗಿ ಬಂದ ನಂತರ ಅನೇಕ ವಿಚಾರಗಳು ಖಂಡಿತ ನಮ್ಮನ್ನು ಯೋಚನೆಗೀಡುಮಾಡುತ್ತದೆ. ಏನೇ ಆದರೂ ಆ ರಸ್ತೆಯ ಮರಗಳಿಗೆ ಮಾತ್ರ ಏನು ಆಗದಿದ್ದರೇ ಅಷ್ಟೇ ಸಾಕು ಅಲ್ವಾ...

ಚಿತ್ರಗಳನ್ನು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಅಜಾದ್,

ನಾವು ಮಾಲ್‍ಗಳಲ್ಲಿ ಕೊಂಡು ತಂದ ವಸ್ತುಗಳನ್ನು ಈ ರೀತಿ ಅವಲೋಕಿಸಿದಾಗ ನಿಜಕ್ಕೂ ಅವುಗಳ ಬೆಲೆ ಹೆಚ್ಚೇ ಇರುತ್ತದೆ. ಟಮೋಟೋ ಬೆಲೆ ಮಾಲ್‍ನಲ್ಲಿ ಎಂಟು ರೂಪಾಯಿ ಇದ್ದಾಗ ನಾವು ಖುಷಿಯಿಂದ ಕೊಂಡೆವು. ಆದ್ರೆ ಮರುದಿನ ಭಾನುವಾರ ಯಶವಂತ ಪುರ ಸಂತೆಯಲ್ಲಿ ಅಷ್ಟೇ ಚೆನ್ನಾದ ಟಮೋಟೊ ಬೆಲೆ ಹತ್ತು ರೂಪಾಯಿಗೆ ಎರಡುವರೆ ಕೆಜಿ ಅಂದಾಗ ನಿಜಕ್ಕೂ ಅಶ್ಚರ್ಯವಾಯಿತು. ಅಂದಮೇಲೆ ಮಾಲುಗಳಲ್ಲಿ ಬೆಲೆ ಹೆಚ್ಚಿರುತ್ತದೆ ಅನ್ನುವುದು ಸಾಕ್ಷಿ ಸಹಿತ ತಿಳಿದಂತಾಯಿತು.
ಚಿತ್ರ ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ವನಿತಾ,

ನನಗೂ ಮೊದಲು ಮಾಲ್‍ಗಳಿಗೆ ಹೋಗುವಾಗ ತುಂಬಾ ಖುಷಿಯಾಗುತ್ತಿತ್ತು. ಅಮೇಲೆ ಅಲ್ಲಿನ ಅನೇಕ ವಿಚಾರಗಳು ಇಂಥ ಅವಲೋಕನಕ್ಕೆ ಸಿಕ್ಕಿ ನಿಜ ಸ್ಥಿತಿ ಏನೆಂದು ಅರಿವಾಗಿದೆ. ಅದನ್ನು ಇಲ್ಲಿ ಚಿತ್ರ ಸಹಿತ ಹಂಚಿಕೊಂಡಿದ್ದೇನೆ. ಮೈಸೂರು ಮಾರುಕಟ್ಟೆ, ಯಶವಂತ ಪುರ ಮಾರುಕಟ್ಟೆ ಮಲ್ಲೇಶ್ವರಂ ಮಾರುಕಟ್ಟೆ, ಮಡಿವಾಳ ಮಾರುಕಟ್ಟೆ, ಪುಟ್ಟ ಪುಟ್ಟ ಪಟ್ಟಣಗಳಲ್ಲಿ ರಸ್ತೆ ಬದಿಯ ಅಂಗಡಿಗಳು ಇವೆಲ್ಲಾ ನಿಜಕ್ಕೂ ತುಂಬಾ ಒಳ್ಳೆಯದು ಅಂತ ನನ್ನ ಭಾವನೆ.

ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ದಿವ್ಯಾ,

ಥ್ಯಾಂಕ್ಸ್...

ತೇಜಸ್ವಿನಿ ಹೆಗಡೆ said...

ಮನಸು ನಾವಿರುವ ಪರಿಸರವನ್ನವಲಂಬಿಸಿ ಸ್ಪಂದಿಸುತ್ತದೆ. ಹಾಗಾಗಿಯೇ ಮಾಲ್‌ಗಳಲ್ಲಿ ಮುಚ್ಚಿರುವ ಮನಸು ತೆರೆದ ಮಾರ್ಕೆಟ್‌ಗಳಲ್ಲಿ ಮುಕ್ತವಾಗುವುದು. ನಾ ಈವರೆಗೆ ನೋಡಿರದ ಜಾಗಗಳ ಸಚಿತ್ರ ಪರಿಚಯಮಾಡಿಕೊಟ್ಟಿರುವಿರಿ ಜೊತೆಗೆ ಒಂದಿಷ್ಟು ಉತ್ತಮ ವಿಚಾರಗಳು ಆಲೋಚನೆಗಳನ್ನೂ ಮುಂದಿಟ್ಟಿರುವಿರಿ. ಅದರಲ್ಲೂ ಸಂಪಿಗೆ ರಸ್ತೆಯ ಇಕ್ಕೆಲಗಳಲ್ಲಿರುವ ಆ ಮರಗಳು! ತುಂಬಾ ಚೆನ್ನಾಗಿದೆ.... ಆ ಮರಗಳ ಆಯಸ್ಸುಗಳನ್ನು ಆ ದೇವರೇ ಕಾಪಾಡಬೇಕು!!

ಕ್ಷಣ... ಚಿಂತನೆ... said...

ಶಿವು ಅವರೆ,
ನಿಮ್ಮ ಈ ಬರಹದ ಶೀರ್ಷಿಕೆ ಓದಿದಾಗ ಕುತೂಹಲವಾಯಿತು.
ಏಕೆಂದರೆ, 'ಯಾವ ವಾರದ ಸುತ್ತಳತೆ...' ಶಾಪಿಂಗ್ ಮಾಲುಗಳ ಹಾಗೂ ರಸ್ತೆ ಬದಿಯ ಶಾಪಿಂಗ್ ಇವುಗಳ 'ಸುತ್ತಳತೆ' ಫೋಟೋಗಳೊಂದಿಗೆ ಚೆನ್ನಾಗಿ ಬಂದಿದೆ.
ಸಂಪಿಗೆ ರಸ್ತೆಯ ಚಿತ್ರಗಳು ನೋಡಿದಾಗ ಈಗಿನ ಬೆಂಗಳೂರು ರಸ್ತೆಗಳು ಹೀಗೆಯೇ ಇರಬಾರದಿತ್ತೆ ಎನಿಸುತ್ತದೆ.

ಎಲ್ಲವೂ ಹೊಸತು...

ಧನ್ಯವಾದಗಳು.

Sushrutha Dodderi said...

ಶಿವು,

ನಾನು ಬರೀಬೇಕು ಅಂದುಕೊಂಡಿದ್ದನ್ನು ನೀವು ಬರೆದಿದ್ದೀರಾ. ನನ್ನ ಪ್ರೀತಿಯ ಮಲ್ಲೇಶ್ವರಂ, ಇದೊಂದು ಮಾಲ್ ಬಂದ ನಂತರ ಬದಲಾಗಿಹೋದ ಪರಿ ಇದೆಯಲ್ಲ, ನಂಗಂತೂ ಸಿಕ್ಕಾಪಟ್ಟೆ ಬೇಸರ ಆಗುತ್ತೆ. ಮಲ್ಲೇಶ್ವರಂಗೊಂದು ಸಹಜ ಸೌಂದರ್ಯ ಇತ್ತು. ಅದು ನಾಶವಾಗಿಹೋಯ್ತು. ಮತ್ತೆ ನೀವಂದಿದ್ದಿದೆಯಲ್ಲ- ಮಾಲ್‌ನ ಒಳಗೆ ಪ್ರವೇಶಿಸುತ್ತಿದ್ದಂತೆ ನಮ್ಮ ವರ್ತನೆಯೇ ನಮಗೆ ಅಸಹಜ ಅನಿಸಲಿಕ್ಕೆ ಶುರುವಾಗುತ್ತೆ ಅಂತ -ಅದು ಅಕ್ಷರಶಃ ಸತ್ಯ.

ಮೊದಲು ಹತ್ತು ನಿಮಿಷಕ್ಕೆ ಆಫೀಸಿನಿಂದ ಮನೆ ತಲುಪುತ್ತಿದ್ದ ನನಗೆ ಈಗ 35 ನಿಮಿಷ ಬೇಕು. ನೋ ಡೌಟು, ಅಲ್ಲಿಯ ಟ್ರಾಫಿಕ್ ಕಡಿಮೆ ಮಾಡಲಿಕ್ಕೆ ಮರಗಳನ್ನು ಕಡಿಯದೆ ಬೇರೆ ದಾರಿಯೇ ಇಲ್ಲ. ಇಂಥದೊಂದು ಜಾಗದಲ್ಲಿ ಇಷ್ಟು ದೊಡ್ಡ ಮಾಲ್ (ಅದು ಎಷ್ಟು ದೊಡ್ಡಕಿದೆ ಎಂದರೆ, ನನಗಂತೂ ಒಳಹೋದಾಗ ಆಶ್ಚರ್ಯವೋ ಆನಂದವೋ ಆಗುವ ಬದಲು ಭಯವಾಗಿಹೋಯ್ತು!) ತೆರೆಯಲು ಅನುಮತಿ ನೀಡಬೇಕಾದರೆ ಸರ್ಕಾರಕ್ಕೆ ಕೊಂಚವೂ ಮುಂದಾಲೋಚನೆ ಇರಲಿಲ್ಲವೇ?

ಇದಷ್ಟೇ ಅಲ್ಲ ಶಿವು, ಇನ್ನು ಮೂರ್ನಾಲ್ಕು ತಿಂಗಳೊಳಗೆ ರಾಜಾಜಿನಗರದಲ್ಲಿ ನಮ್ಮ ಮನೆ ಬಳಿ (ಮೈಸೂರ್ ಸೋಪ್ ಫ್ಯಾಕ್ಟರಿ) ಬಳಿ ಮತ್ತೊಂದು ಮಾಲ್ ಬರ್ತಿದೆ- ಬ್ರಿಗೇಡ್ ಗ್ರೂಪ್‌ನವರದು. ಆಮೇಲೆ ನೋಡಿ ಅಪಸವ್ಯಗಳನ್ನು. :x

ಇಲ್ಲ, ನಾನೂ ಬರೀಬೇಕು ಇದರ ಬಗ್ಗೆ.

ಭಾಶೇ said...

ನಿಮ್ಮ ಬರವಣಿಗೆ ಮತ್ತು ಫೋಟೋಗಳನ್ನು ನೋಡಿ ಒಮ್ಮೆ ಮತ್ತೆ ಸಂಪಿಗೆ ರಸ್ತೆಯನ್ನ (ಕಡೆಯಬಾರಿ?) ನೋಡಿ ಈ ಮಾಲಿನ ಅಂದ ಸವಿದು ಬರಬೇಕೆನಿಸಿದೆ.

umesh desai said...

ಶಿವು ಒಳ್ಳೇ ಬರಹ ಹಾಗೂ ಚಿತ್ರಗಳು. ಮಲ್ಲೇಶ್ವರಂ ಅಪರಿಚಿತ ಜಾಗೆ ಮಾಲ್ ಬೇಕೆ ಬೇಡವೇ ಈ ಚರ್ಚೆ ನಿರಂತರ್
ಸೊಗಸಾದ ಲೇಖನಕ್ಕೆ ಅಭಿನಂದನೆಗಳು.

Chaithrika said...

ಮರಗಳು ಉರುಳುವುದನ್ನು ನೆನೆಸಿದರೇ ಬಹಳ ದುಃಖವಾಗುತ್ತದೆ. ಮಲ್ಲೇಶ್ವರಂ ಸಂಪಿಗೆ ರಸ್ತೆಯಲ್ಲಿ ನನ್ನ ಸಂಬಂಧಿಕರ ಮನೆಯಿದೆ. ಚಳಿಗಾಲದಲ್ಲಿ ಅಲ್ಲಿಗೆ ಹೋದರೆ ನಾನು ಮನೆ ಬಿಟ್ಟು ನೂರಾರು ಕಿಲೋ ಮೀಟರ್ ದೂರದ hill station ಗೆ ಬಂದೆನೇನೋ ಅನ್ನಿಸುತ್ತದೆ. ಬನಶಂಕರಿ ಮತ್ತು ಯ ಮಲ್ಲೇಶ್ವರಂನ ಹವೆಯಲ್ಲಿ ಅಷ್ಟೊಂದು ವ್ಯತ್ಯಾಸ. ಸಾಲು ಮರಗಳ ನಡುವೆ ವಜ್ರ ಬಸ್ಸಿನಲ್ಲಿ ಜುಂ ಎಂದು ಪ್ರಯಾಣಿಸಿದ ಖುಷಿ ನೆನಪಾಗುತ್ತದೆ.

ಮಾಲ್ ಬಗ್ಗೆ ಹೇಳುವುದಾದರೆ, ನಾನು ರೂ. 25ಕ್ಕೆ ದಕ್ಷಿಣ ಕನ್ನಡದಲ್ಲಿ ಕೊಂಡ ಬಳೆ ರೂ. 125 ಎಂದು ಚೀಟಿ ಅಂಟಿಸಿಕೊಂಡು ಮಾರಾಟಕ್ಕೆ ಇರುವುದನ್ನು ಪ್ಯಾಂಟಲೂನ್ಸಲ್ಲಿ ಕಂಡಿದ್ದೇನೆ. ಮೋರ್ ನಿಂದ ಕೆ.ಜಿ. ಗೆ ರೂ. 40 ಕೊಟ್ಟು ಅಕ್ಕಿ ಕೊಳ್ಳಲು ಹೊರಟಾಗ ಪ್ಯಾಕೇಟಿನ ಒಳಗೆ ಹುಳವೊಂದು ಸರಿದಾಡಿದ್ದನ್ನು ಕಂಡಿದ್ದೇನೆ. (ಗುಣ ಮಟ್ಟ ಚೆನ್ನಾಗಿದ್ದರೆ ಬೆಲೆ ತೆತ್ತು ಕೊಳ್ಳಲು ಬೇಸರವಾಗುವುದಿಲ್ಲ).
ಇನ್ನು ಬಿಗ್ ಬಜಾರ್ ನ ಮಾತು. ಮೂರು ನಾಲ್ಕು ಪ್ಲಾಸ್ಟಿಕ್ ಕೊಡಬೇಡಿ ಎಂದರೂ "We cannot do it madam. This is the way we have to pack" ಎಂದು ನನ್ನ ಕೈಗಿತ್ತದ್ದು, ಎರಡು ರೂಪಾಯಿ ಚಿಲ್ಲರೆ ಬಾಕಿ ಇದೆಯೆಂದು ಕಾಯಲು ಹೇಳಿ, ಚಿಲ್ಲರೆ ತರಲು ಹೋದವ ಯಾರೊಡನೆಯೋ ಹರಟುತ್ತಾ ನನ್ನನ್ನು ಮರೆತೇ ಹೋದದ್ದು, ನನ್ನ ಬ್ಯಾಗಲ್ಲಿದ್ದ ಆಫೀಸಿನ diary ಗೆ "security purpose" ಎಂದು ನೋಡು ನೋಡುತ್ತಿದ್ದಂತೆ "ಬಿಗ್ ಬಜಾರ್" ಎಂಬ ಚೀಟಿಯನ್ನು ಕೀಳಲಾಗದಂತೆ ಅಂಟಿಸಿದ್ದು ಮರೆಯಲಸಾಧ್ಯ.

PaLa said...

ಶಿವು,

ಒಳ್ಳೆಯ ಲೇಖನ.. ಮಾಲ್ಗಳ ಪ್ರಯೋಜನ ಅಂದ್ರೆ ಎಲ್ಲಾ ವಸ್ತುಗಳೂ ಒಂದೇ ಕಡೆ ಸಿಗುತ್ತೆ ಅನ್ನೋದು.. ಆದರೆ ನೀವು ತಿಳಿಸಿದಂತೆ ಇಕ್ಕಟ್ಟಾದ ಜಾಗಗಳಲ್ಲಿ ಮಾಲ್ ನಿರ್ಮಿಸಿ, ರಸ್ತೆ ಅಗಲೀಕರಣದ ನೆಪದಿಂದ ಮರಗಳನ್ನು ಕಡಿಯುವುದು ಮಾತ್ರ ಬೇಸರದ ಸಂಗತಿ.

ನಾನು ಕೆಲಸ ಮಾಡೋ ಕಡೆ ತಿಂಗಳಿಗೆ ಸುಮಾರು ೧೨೦೦ ರೂ. ಗಳಷ್ಟು ಬೆಲೆಯ ಫುಡ್ ಕೂಪನ್ ಕೊಡ್ತಾರೆ (ನನ್ನ ಸಂಬಳದ ಲೆಕ್ಕದಲ್ಲೇ). ಇದನ್ನ ಚಲಾಯಿಸಬೇಕಾದರೆ ಇಂತಹ ಮಾಲ್ಗಳಿಗೇ ಹೋಗಬೇಕು.

ಇನ್ನು ಮಾಲ್ನ ಜನರು ಮತ್ತು ಅವರ ಅಸಹಜ ನಡವಳಿಕೆಯ ಬಗ್ಗೆ ಬರೆದಿದ್ದೀರಿ. ನಾನೂ ಕೂಡ ಹಳ್ಳಿಯಿಂದ ಬಂದವನಾದರೂ ನನ್ನ ಅಭಿಪ್ರಾಯ ಮಾತ್ರ ಭಿನ್ನವಾಗಿದೆ. ಮೊಡಲೊಂದೆರಡು ಬಾರಿ ಪ್ರವೇಶಿಸ್ದಿಗ ಅಳುಕಾಗಿತ್ತಾದರೂ, ಈಗ ಯಾವುದೇ ಅಳುಕಿಲ್ಲದೆ, ಅಸಹಜ ಭಾವನೆಯಿಲ್ಲದೆ (ನಾನು ಮಾಲ್ಗಳಲ್ಲಿ ವ್ಯವಹರಿಸೋದು ಕನ್ನಡದಲ್ಲೇ) ಹೋಗ್ತೀನಿ. ಇನ್ನು ನಾವು ನಮ್ಮ ಹಳ್ಳಿಯ ಮಾರುಕಟ್ಟೆ ಪ್ರವೇಶಿಸಿದಂತೆ, ಸಿಟಿಯಲ್ಲಿ ಬೆಳೆದವರಿಗೆ ಮಾಲ್ ಪ್ರವೇಶಿಸುವುದು ರೂಢಿಯಾಗಿರುತ್ತೆ. ಇಂತದ್ರಲ್ಲಿ ಒಬ್ರಿಗೆ ಸಹಜವಾಗಿರೋದು ಇನ್ನೊಬ್ರಿಗೆ ಅಸಹಜ ಆಗೋದು ಸಹಜ ಅಲ್ವ :) ಇದೊಂಥರಾ ಜೀವನ ಶೈಲಿಲಿರೋ ಗ್ಯಾಪ್ ಅಷ್ಟೆ..

rukminimalanisarga.blogspot.com said...

ಚಿತ್ರ ಬರಹ ಚೆನ್ನಾಗಿತ್ತು.

PARAANJAPE K.N. said...

ನಾನು ಈ ಮ೦ತ್ರಿ ಸ್ಕ್ವೇರ್ ಎ೦ಬ ಬೃಹತ್ ಸಮುಚ್ಚಯವನ್ನು ಹೊರಗಿ೦ದಷ್ಟೆ ನೋಡಿದ್ದೇ, ನೀವು ನಿಮ್ಮ ಬರಹದ ಮೂಲಕ ಒಳಗೆಲ್ಲ ಸುತ್ತಾಡಿಸಿದಿರಿ. ಚೆನ್ನಾಗಿದೆ.

ಸಾಗರದಾಚೆಯ ಇಂಚರ said...

ಶಿವೂ ಸರ್
ಏನೋ ಮುಂದೆ ಕಥೆ ಇದೆ ಅಂದರೆ ನಮ್ಮ ಬೆಂಗಳೂರಿನ ದರ್ಶನ ಮಾಡಿಸಿದಿರಲ್ಲ
ಆ ಸುಂದರ ಫೋಟೋಗಳು, ಅದಕ್ಕೆ ತಕ್ಕ ವಿವರಣೆ ತುಂಬಾ ಚೆನ್ನಾಗಿದೆ
ಅಲ್ಲಿಗೆ ಹೋದಂತೆ ಆಯಿತು
ಆ ಹಸಿರು ಹಾಗೆ ಉಳಿಯಲಿ ಎಂಬ ಹಾರೈಕೆ ಅಷ್ಟೇ

AntharangadaMaathugalu said...

ಶಿವು ಸಾರ್...
ಮಂತ್ರಿ.... ಮಾಲ್ ನ ಹೊರಗೆ ೧ ಘಂಟೆ ಟ್ರಾಫಿಕ್ ಜ್ಯಾಮ್ ನಲ್ಲಿ ಸಿಕ್ಕು ತಲೆಬಿಸಿ ಮಾಡ್ಕೊಂಡು ಬಂದಾಯ್ತು. ನೀವು ನೋಡಿದರೆ ಇಲ್ಲಿ ಒಳಗೂ ತೋರಿಸಿಬಿಟ್ಟಿರಿ. ಮುಕ್ತವಾಗಿರುವ ಮಾರುಕಟ್ಟೆಯಲ್ಲಿ, ಮನವೂ ಮುಕ್ತವಾಗಿರುತ್ತದೆ.... ಮಲ್ಲೇಶ್ವರಂ ೮ನೇ ಕ್ರಾಸ್ ಅಂತೂ ನನ್ನ ಬಾಲ್ಯದಿನಗಳ ನೆನಪು ಮಾಡಿಕೊಟ್ಟಿತು. ಹಳೆಯ ಸಂಸ್ಕೃತಿಯ ಘಮ ಕಾಯ್ದಿಟ್ಟುಕೊಂಡಿದ್ದ ಮಲ್ಲೇಶ್ವರವನ್ನೂ ವಾಯು, ಶಬ್ದ ಮಾಲಿನ್ಯಗಳಿಂದ ಹಾಳು ಮಾಡಿಯಾಯಿತು... ಇನ್ನು ಮರಗಳನ್ನೂ ಕಡಿದು, ರಸ್ತೆಗಳನ್ನೂ ಬೋಳು ಮಾಡುವುದೊಂದು ಅಗಬೇಕಿದೆ ಅಷ್ಟೆ...
ನಿಮ್ಮ ಲೇಖನ ತುಂಬಾ ವಿಚಾರಗಳನ್ನು ತಿಳಿಸಿಕೊಟ್ಟಿದೆ,,,

ಸುಧೇಶ್ ಶೆಟ್ಟಿ said...

shivanna...

ondu Lekhanadalli jeevana halavu maggulugaLannu thereditta reethi mattu nammannu chinthanege hachchida reethi thumba istha aayithu.

Bengaloorige sobagu bandiruvudhe aa saalu maragaLinda. Jayanagarada kadeyoo inthaha maragaLu jayanagarakke andhavannu needidhe... aadare metro dheseyindha swalpa maragaLannu kadidhidhaare annuvudhu bEsaradha sangathi.

badhukina putta putta vishayagaLannu bahu sundharavaagi niroopisidha reethi thumba istha aayithu.

ದಿನಕರ ಮೊಗೇರ said...

ಶಿವೂ ಸರ್,
ಚಿತ್ರ ಬರಹ ಓದುತ್ತಲೇ ನಿಮ್ಮ ಪರಿಸರ ಕಾಳಜಿ ಬಹಳ ಮೆಚ್ಚುಗೆಯಾಯಿತು..... ಮಾಲ್ ಗಳಲ್ಲಿ ನಡೆಯುವ ಪ್ರತೀ ಹೆಜ್ಜೆಯನ್ನೂ ಕಣ್ಣಿಗೆ ಕಟ್ಟುವ ಹಾಗೆ ಬರೆದಿದ್ದೀರಿ....... ಸಂತೆಗಳಲ್ಲಿ ಬೆಲೆಗಳಲ್ಲಿ ಚೌಕಾಸಿ ಮಾಡುವ ನಾವು, ಮಾಲ್ ಗಳಲ್ಲಿ ಎಲ್ಲಾ ಮುಚ್ಚಿಕೊಂಡು ಕೇಳಿದ ಬೆಲೆ ಕೊಟ್ಟು ಬರುತ್ತೇವೆ..... ಸಂಪಿಗೆ ರಸ್ತೆಯ ಮರಗಳ ಭವಿಷ್ಯ ಚೆನ್ನಾಗಿರಲಿ.... ಇದನ್ನು ಬಿಟ್ಟು ನಾವೇನೂ ಮಾಡೋಹಾಗಿಲ್ಲ.....

Unknown said...

ಲೇಖನ ಬಹಳ ಚೆನ್ನಾಗಿದೆ, ಫೊಟೊಗಳು ಸಹ ಅದರಲ್ಲು ಹಸಿರುಮರಗಳ ಸಾಲು ಸೂಪರ್ .
ಅ೦ದ ಹಾಗೆ ಇಲ್ಲಿನ ಅ೦ದರೆ " ದುಬೈ ಬರ್ಜುಮನ್ ಸೆ೦ಟರ್ " ಕೆಲವು ಫೊಟೊ ಇಲ್ಲಿದೆ ಸಮಯವಿದ್ದಾಗ ನೋಡಿ

http://picasaweb.google.com/IsmailMkShivamogga/DubaiTrip190609#

Subrahmanya said...

ದೊಡ್ಡ ಮಾಲ್ ಗಳಿಗೆ ಹೋದಾಗ ನಾವೊಂದು ರೀತಿ ಸಮ್ಮೋಹಿತರಾಗಿ ಬಿಡುತ್ತೀವಿ ಎನಿಸುತ್ತದೆ. ಅದು ಮಾಲ್ ಮಹಿಮೆಯೋ ಅಥವ ನಮ್ಮ ಬುದ್ದಿಗೆ ಬಡಿಯುವ ಮಂಕೋ ..ಕಾಣೆ. ತಾಳ-ಮೇಳ ಹದವಾಗಿ ಬೆರಸಿ , ಮನತಣಿಸುವ ಚಿತ್ರಗಳೊಂದಿಗೆ ಉತ್ತಮ ಬರಹಕ್ಕೆ ಥ್ಯಾಂಕ್ಸು.

Shweta said...

ನಿಜ ಶಿವು ಸರ್....ಜನ ಮರುಳೋ ಜಾತ್ರೆ ಮರುಳೋ...ಅನ್ನೋ ಮಾತು ಇದೆಯಲ್ಲಾ....

ಬೆಕ್ಕಿಗೆ ಗಂಟೆ ಕಟ್ಟೋರು ಯಾರು?...

Nivedita Thadani said...

Shivu avare,
nimma lekhanavannu tumba enjoy maadide, mattu indina stithiyannu tumba chennagi vyakta padisddira.(my Kannada software is not working).
Photos are very good.

ಮನಸಿನಮನೆಯವನು said...

ರೀ shivu.k..,

ಅಬಾಬಾಬಾಬಾ !!
ಮೊದಲನೆಯದು ಸೂಪರ್.>)

shivu.k said...

ತೇಜಸ್ವಿನಿ ಮೇಡಮ್,

ಮನಸ್ಸಿನ ಪರಿಸ್ಥಿತಿಯೇ ಆಗಲ್ಲವೇ. ಭ್ರಮೆಗೊಳಗಾಗುವುದೇ ಅದರ ಕೆಲಸ. ಅದಕ್ಕೆ ಇಂಥ ಮಾಲ್‍ಗಳು, ಕಾಂಪ್ಲೆಕ್ಸುಗಳು ಸಹಾಯ ಮಾಡುತ್ತವೆ. ಈ ಲೇಖನದಲ್ಲಿ ಆಗುತ್ತಿರುವ ವಿಚಾರವನ್ನು ಮಂಡಿಸಿದ್ದೇನೆ. ಮುಂದೆ ಆಗುವ ಪರಿಣಾಮವನ್ನು ಊಹಿಸಿದ್ದೇನೆ.

ಲೇಖನವನ್ನು ಮತ್ತು ಚಿತ್ರಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಚಂದ್ರು ಸರ್,

ಸುತ್ತಳತೆ ಪದ ಬಳಸಿದ್ದು ಸುಮ್ಮನೇ ತಮಾಷೆಗೆ. ಯಾವುದೇ ಗಹನವಾದ ವಿಚಾರವನ್ನು ತಮಾಷೆ ಮಾಡುತ್ತಾ ಹೇಳಿದರೆ ಚೆನ್ನಾಗಿರುತ್ತದೆ ಎಂದು ನನ್ನ ಭಾವನೆ. ಮಾಲುಗಳ ಸುತ್ತಳತೆ ಲೇಖನ ಮತ್ತು ಚಿತ್ರಗಳನ್ನು ಮೆಚ್ಚಿದ್ದೀರಿ
ಧನ್ಯವಾದಗಳು.

shivu.k said...

ಸುಶ್ರುತ,

ಇದು ನಿಮ್ಮ ಮನಸ್ಸಿನ ಭಾವನೆ ಮಾತ್ರವಲ್ಲ. ಎಲ್ಲರ ಭಾವನೆಗಳೂ ಇದೇ ಆಗಿದೆ. ನಾನು ನೀವು ಬರೆಯುತ್ತೇವೆ, ಫೋಟೊ ತೆಗೆಯುತ್ತೇವೆ. ಆದ್ರೆ ಉಳಿದವರಿಗೂ ಅದು ಆಗೋದಿಲ್ಲ ಅಷ್ಟೇ. ಈ ಮಾಲ್‍ನಿಂದಾಗಿ ಮಲ್ಲೇಶ್ವರಂ ಸೌಂದರ್ಯ ಕಳೆದುಕೊಳ್ಳುತ್ತಿರುವುದು ನನಗೂ ಬೇಸರವಾಗಿಯೇ ಈ ಲೇಖನವನ್ನು ಬರೆದಿದ್ದು. ನಾವು ಮಲ್ಲೇಶ್ವರಂ ಮರಗಳನ್ನು ಉಳಿಸುವ ಉದ್ದೇಶದಲ್ಲಿ ಇವತ್ತು ಯಡಿಯೂರಪ್ಪ ಆ ಮಾಲ್ ಪಕ್ಕದಲ್ಲೇ ಮೆಟ್ರೋ ನಿಲ್ದಾಣ ಶಂಕುಸ್ಥಾಪನೆಗೆ ಇವತ್ತು ಬರುತ್ತಾರಂತೆ ಅದಕ್ಕೆ ಇಡೀ ರಸ್ತೆಯ ತುಂಬಾ ಪೋಲಿಸ್ ನಿಂತಿದ್ದಾರೆ. ಇದೆಲ್ಲದರ ಬೆಳವಣಿಗೆಯೆಂದರೆ ಸರ್ಕಾರ ಅವರ ಜೊತೆ ಒಂದಾಗಿದೆ ಎಂದೇ ಅರ್ಥವಲ್ಲವೇ...ಹೀಗಿದ್ದ ಮೇಲೆ ಆ ಮರಗಳಿಗೆ ಎಂಥ ಗತಿ ಬರಬಹುದು ಅಂತ ಈಗಲೇ ಊಹಿಸಬಹುದು.
ರಾಜೀಜಿನಗರದ ಬ್ರಿಗೇಡ್ ಮಾಲ್ ಬೆಳವಣಿಗೆಯನ್ನು ಈಗಿನಿಂದಲೇ ಗಮನಿಸಿ ನೋಟ್ ಮಾಡಿಕೊಳ್ಳಿ. ಅದು ಬಂದ ಮೇಲೆ ನಮ್ಮ ಪರಿಸ್ಥಿತಿ ಏನಾಗುತ್ತದೋ ಗೊತ್ತಿಲ್ಲ...
ನಿಮ್ಮ ಅದರ ಬರಹಕ್ಕೆ ಕಾಯುತ್ತೇನೆ...

ಧನ್ಯವಾದಗಳು.

shivu.k said...

ಭಾಶೇ,

ಬೇಗ ಹೋಗಿ ಸಂಪಿಗೆ ರಸ್ತೆ ಮತ್ತು ಮರಗಳನ್ನು ನೋಡಿಬಿಡಿ. ಮುಂದೆ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ....

ಧನ್ಯವಾದಗಳು.

shivu.k said...

ಉಮೇಶ್ ದೇಸಾಯಿ ಸರ್,

ಮಲ್ಲೇಶ್ವರಂಗೆ ನೀವು ಅಪರಚಿತರಾಗಿಬಿಟ್ಟರೇ ಹೇಗೆ ಒಮ್ಮೆ ಬಂದು ನೋಡಿ. ನಂತರ ನಿಮಗೂ ಅನ್ನಿಸುತ್ತದೆ ಮಾಲ್ ಬೇಕೋ ಬೇಡವೋ ಅಂತ....

ಧನ್ಯವಾದಗಳು.

shivu.k said...

Chaithrika,

ಮಲ್ಲೇಶ್ವರಂ ಈಗಲೂ ನೀವು ಹೇಳಿದಂತೆ ಇರುವುದರಿಂದ ನಾವೆಲ್ಲಾ ಅಲ್ಲಿ ಓಡಾಡಿಕೊಂಡೆ ಕೆಲಸ ಮಾಡುತ್ತೇವೆ. ಈಗ ಅದೇ ತಂಪು ತಂಪು. ಬನಶಂಕರಿಯ ಕಡೆ ಇಂಥ ತಂಪು ಇರಲಿಕ್ಕಿಲ್ಲ ಅನ್ನೋದು ನಿಜ.

ಮಾಲುಗಳಲ್ಲಿ ಸಿಗುವ ಬೆಲೆ ಸಹಜವಾಗಿ ಹೆಚ್ಚಾಗಿರುವುದು ನಿಜ. ಕೋಟ್ಯಂತರ ಖರ್ಚುಮಾಡುವುದು ನಮ್ಮಿಂದ ವಸೂಲಿ ಮಾಡಲಿಕ್ಕೆ ಅಲ್ಲವೇ...ಅಕ್ಕಿಯಲ್ಲಿ ಹುಳು ಬರಬಾರದು ಎನ್ನುವುದಕ್ಕೆ ಮಾಲ್ ಏನು ದೇವಲೋಕದಿಂದ ಇಳಿದುಬಂದಿಲ್ಲವಲ್ಲ. ಏಕೆಂದರೆ ಅಕ್ಕಿಯನ್ನು ಬಡವರೇ ಪ್ಯಾಕ್ ಮಾಡುತ್ತಾರೇ ಹೊರತು. ಮಾಲ್‍ ಧಣಿಗಳು ಮಾಡುವುದಿಲ್ಲ...
ನೀವು ಹೇಳಿದಂತೆ ಮಾಲ್‍ಗಳು ಪ್ಲಾಸ್ಟಿಕ್ ಪ್ಯಾಕ್ಟರಿಗಳೇ ಆಗುತ್ತಿವೆ. ಉಳಿದ ವಿಚಾರದಲ್ಲೂ ಪುಟ್ ಪಾತ್ ವ್ಯಾಪಾರಿಗಳಷ್ಟೇ ಗುಣಮಟ್ಟವಿರುತ್ತದೆ. ಇನ್ನೆಲ್ಲ ಬರೀ ತಳುಕು ಬಳುಕು ಅಷ್ಟೇ.

ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

shivu.k said...

ಮಾಲಾ ಮೇಡಮ್,

ಥ್ಯಾಂಕ್ಸ್...

shivu.k said...

ಪರಂಜಪೆ ಸರ್,

ನೀವು ಒಮ್ಮೆ ಬಿಡುವು ಮಾಡಿಕೊಂಡು ಮಾಲ್ ಒಳಗಡೆ ಓಡಾಡಿ ನಿಮಗೂ ಇನ್ನಷ್ಟು ವಿಭಿನ್ನ ಅನುಭವವಾಗಬಹುದು.

ಧನ್ಯವಾದಗಳು.

shivu.k said...

ಪಾಲಚಂದ್ರ,

ಸಾಪ್ಟ್ ವೇರ್ ಕೆಲಸ ಮಾಡುವವರಿಗೆಲ್ಲಾ ನಿಮ್ಮಲ್ಲಿರುವ ಕೊರಗು ಇದ್ದೇ ಇರುತ್ತದೆ. ನಿಮಗಿಷ್ಟವಾದ ಸ್ಥಳದಲ್ಲಿ ಊಟ ತಿಂಡಿ ಮಾಡಲು ಅವಕಾಶವಿರುವುದಿಲ್ಲ. ಅದನ್ನು ಪರೋಕ್ಷವಾಗಿ ನಿಮ್ಮ ಹಣವನ್ನು ಮುರಿದುಕೊಂಡು ಅವರಿಗೆ ಬೇಕಾದ ಜಾಗದಲ್ಲಿ ನಿಮ್ಮ ಊಟ ತಿಂಡಿ ನಡೆಯಬೇಕು ಅನ್ನುವಂತೆ ಮಾಡಿಬಿಡುತ್ತಾರೆ.

ಮತ್ತೆ ನೀವು ಮಾಲ್ ‍ಗೆ ನಿತ್ಯ ಹೋಗುವುದರಿಂದ ನಿಮಗೆ ಅದು ಸಹಜವೆನಿಸಬಹುದು. ಆದ್ರೂ ನಾನು ಹೇಳಿರುವಂತೆ ನಿತ್ಯವೂ ರಸ್ತೆಬದಿ, ಹೊರ ಮಾರುಕಟ್ಟೆಯಲ್ಲಿ ವ್ಯವಹರಿಸಿದರೆ ಎರಡರ ವ್ಯತ್ಯಾಸ ನಿಮಗೆ ಗೊತ್ತಾಗಬಹುದು.[ನಾನು ಬ್ಲಾಗಿನಲ್ಲಿ ಬರೆದಂತೆ].

ಇನ್ನು ಮಾಲ್‍ನಿಂದಾಗಿ ಉಂಟಾಗುವ ಟ್ರಾಫಿಕ್ಕಿನಿಂದಾಗ ಮರಗಳನ್ನು ಕತ್ತರಿಸಿ ರಸ್ತೆಯನ್ನು ಅಗಲೀಕರಿಸುವುದು ನಿಮ್ಮಂತೆ ನನಗೂ ಬೇಸರದ ಸಂಗತಿ..

ಲೇಖನವನ್ನು ಇಷ್ಟಪಟ್ಟು ಮುಕ್ತವಾಗಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

shivu.k said...

ಗುರುಮೂರ್ತಿ ಹೆಗಡೆ ಸರ್,

ನೀವು ನಿರೀಕ್ಷಿಸಿದ ಇನ್ನಷ್ಟು ಬೆಂಗಳೂರ ಕತೆಯನ್ನು ಹೀಗೆ ಕೊಡಲು ಪ್ರಯತ್ನಿಸುತ್ತೇನೆ.

ಚಿತ್ರಗಳನ್ನು ಮತ್ತು ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಶ್ಯಾಮಲ ಮೇಡಮ್,

ಸಂಪಿಗೆ ರಸ್ತೆಯ ಟ್ರಾಫಿಕ್ ಅನುಭವ ನಿಮಗೂ ಆಯಿತಾ...

ನನ್ನ ಲೇಖನದಲ್ಲಿರುವುದು ಮಾಲ್ ಬಗ್ಗೆ ಪುಟ್ಟ ತುಣುಕು ಅಷ್ಟೇ. ನೀವೊಮ್ಮೆ ಹೋಗಿಬಂದರೆ ನಿಮಗೆ ಮತ್ತಷ್ಟು ಅನುಭವವಾಗಬಹುದು. ಸಾಧ್ಯವಾದರೆ ಅದರ ಜೊತೆಗೆ ನಿಮ್ಮ ಮಲ್ಲೇಶ್ವರಂ ಅನುಭವಗಳನ್ನು ಹಂಚಿಕೊಳ್ಳಿ...

ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಸುಧೇಶ್,

ನಿಮ್ಮ ಅನಿಸಿಕೆಯಂತೆ ನನ್ನ ಬಯಕೆಯೂ ಆಗಿತ್ತು. ಬದುಕಿನಲ್ಲಿ ಇವೆಲ್ಲಾ ಎಷ್ಟೊಂದು ಪರಿಣಾಮ ಬೀರುತ್ತವೆ ಅನ್ನುವುದನ್ನು ಹೇಳುವುದಷ್ಟೇ ನನ್ನ ಉದ್ದೇಶ. ಅದು ನಿಮಗೆಲ್ಲಾ ಇಷ್ಟೋಂದು ಚಿಂತನೆಗೆ ಅವಕಾಶ ಮಾಡಿಕೊಟ್ಟಿದೆಯೆಂದರೆ ನಾನು ಓಡಾಡಿ ಕ್ಲಿಕ್ಕಿಸಿದ ಫೋಟೊ ಮತ್ತು ಅದಕ್ಕಾಗಿ ಬರೆದ ಲೇಖನ ಸಾರ್ಥಕವಾದಂತೆ. ಮೆಟ್ರೋ ಒಂದೇ ಅಲ್ಲ ಅನೇಕ ಕಾರಣಗಳಿಂದಾಗಿ ಬೆಂಗಳೂರು ರಸ್ತೆಯ ಅನೇಕ ಮರಗಳನ್ನು ಹೀಗೆ ಉರುಳಿಸುತ್ತಿದ್ದಾರೆ. ಮುಂದೆ ಬೆಂಗಳೂರು ಕತೆ ಏನು ಎಂಬುದರ ಬಗ್ಗೆ ಚಿಂತೆಯಾಗುತ್ತಿದೆ....
ಚಿತ್ರಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ದಿನಕರ್ ಸರ್,

ಮಾಲ್‍ನೊಳಗೆ ನಡೆಯುವ ಎಲ್ಲವನ್ನು ಬರೆದಿಲ್ಲ. ಸ್ವಲ್ಪವನ್ನು ಮಾತ್ರ ಕೊಟ್ಟಿದ್ದೇನೆ. ನಿತ್ಯ ನಾನು ಅದೇ ರಸ್ತೆಯಲ್ಲಿ ಓಡಾಡುವುದರಿಂದ ನನ್ನಂತ ಸಾವಿರಾರು ಸಾರ್ವಜನಿಕರಿಗೆ ಆಗುವ ತೊಂದರೆಗಳ ಒಂದು ಚಿತ್ರವನ್ನು ಅದರಿಂದ ಮುಂದೆ ಏನಾಗಬಹುದು ಅನ್ನುವ ಚಿತ್ರವನ್ನು ಕೊಡಲು ಪ್ರಯತ್ನಿಸಿದ್ದೇನೆ.

ಚಿತ್ರಗಳನ್ನು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಇಸ್ಮಾಯಿಲ್ ಸರ್,

ನನ್ನ ಬ್ಲಾಗಿಗೆ ಸ್ವಾಗತ.

ನನ್ನ ಮಾಲ್ ಲೇಖನವನ್ನು ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು. ಫೋಟೊಗಳನ್ನು ಕೂಡ ಮೆಚ್ಚಿದ್ದೀರಿ...

ನಿಮ್ಮ ದುಬೈ ಟ್ರಿಪ್ ಫೋಟೊಗಳನ್ನು ನೋಡಿದೆ. ತುಂಬಾ ಚೆನ್ನಾಗಿವೆ. ಅಲ್ಲಿ ನಿಮಗಾದ ಅನುಭವವನ್ನು ಬರೆಯಿರಿ..ನಾವು ಓದುತ್ತೇವೆ..

ಧನ್ಯವಾದಗಳು.

shivu.k said...

ಸುಬ್ರಮಣ್ಯ ಸರ್,


ನನಗಾದ ಅನುಭವ ನಿಮಗೂ ಮಾಲು ಕಾಂಪ್ಲೆಕ್ಸುಗಳಲ್ಲಿ ಆಗಿದೆಯೆಂದ ಹಾಗೆ ಆಯಿತು...

ಚಿತ್ರ ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಶ್ವೇತ ಮೇಡಮ್,

ನೀವು ಹೇಳಿದಂತೆ ಇದು ನಿಜಕ್ಕೂ ಮಾಲ್ ಮರಳೋ...ಅನ್ನುವಂತೆ ಆಗಿದೆ...

ಧನ್ಯವಾದಗಳು.

shivu.k said...

ನಿವೇದಿತ ಮೇಡಮ್,

ನನ್ನ ಲೇಖನವನ್ನು ಓದಿ ಖುಷಿಪಡುವುದಲ್ಲದೆ ಇಂದಿನ ಪರಿಸ್ಥಿತಿಯನ್ನು ಈ ಲೇಖನದಿಂದ ತಿಳಿದುಕೊಂಡಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ...

shivu.k said...

ಜ್ಞಾನಾರ್ಪಣಮಸ್ತು...

ನನ್ನ ಬ್ಲಾಗಿಗೆ ಸ್ವಾಗತಕಣ್ರಿ....

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

sunaath said...

ಶಿವು,
ಇದೊಂದು ಉತ್ತಮವಾದ ವೈಚಾರಿಕ ಲೇಖನ.Keep it up.

shivu.k said...

ಸುನಾಥ್ ಸರ್,

ಧನ್ಯವಾದಗಳು.

ಚಿತ್ರಾ said...

ಶಿವೂ,
ಚೆನ್ನಾಗಿದೆ ಕಣ್ರೀ ! ಹಾ ಹಾ ಹಾ ... ತಿಂಗಳಿಗೊಮ್ಮೆ ೪ ವಾರಗಳ ಅಳತೆಯ ಸರಾಸರಿ ತೆಗೆದು ಇಟ್ಟುಕೊಳ್ಳಿ ! ಹಿ ಹಿ ಹಿ .
ಮಾಲ್ ಗಳಲ್ಲಿ ಉಳಿಸಬಹುದಾದ ವಿದ್ಯುತ್ ನ ಬಗ್ಗೆ , ಪ್ಲಾಸ್ಟಿಕ್ ನ ಹಾವಳಿಯ ಬಗ್ಗೆ , ಒಳಹೊಕ್ಕ ತಕ್ಷಣ ನಾವುಗಳು ಹಾಕಿಕೊಳ್ಳುವ ಮುಖವಾಡಗಳ ಬಗ್ಗೆ ... ತುಂಬಾ ಚೆನ್ನಾಗಿ ಬಂದಿದೆ ಲೇಖನ !

shivu.k said...

ಚಿತ್ರ ಮೇಡಮ್,

ನೀವು ಹೇಳಿದಂತೆ ವಾರಕ್ಕೊಂದರಂತೆ ತಿಂಗಳಿಗೆ ನಾಲ್ಕು ಲೇಖನಗಳನ್ನು ಕೊಡಬೇಕೆನ್ನುವುದು ನನ್ನ ನಿಯಮ. ಮಾಲ್ ವಿಚಾರದಲ್ಲಿ ಎಲ್ಲವನ್ನು ಗುರುತಿಸಿರುವುದಕ್ಕೆ ಧನ್ಯವಾದಗಳು.
ಹೀಗೆ ಬರುತ್ತಿರಿ...

ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...

ರಸ್ತೆ ಬದಿಯ ಮತ್ತು ಮಾಲ್-ಗಳ ವ್ಯಾಪಾರ ಹೋಲಿಸಿ, ಪ್ಲಾಸ್ಟಿಕ್ ಹೊರೆ, ಪರಿಸರ ಕಾಳಜಿ, ಕೃತ್ತಿಮ ಬದುಕು, ಸಹಜ ಬಫ಼್ದುಕು, ಇ೦ಧನ ಉಳಿತಾಯ, ಮರಗಳೂ, ಅದು ಇದು ಎ೦ದು ಚಿ೦ತನಶೀಲವಾದ ಮನವನ್ನು ಹರಿಬಿಟ್ಟು ಸಾಕಷ್ಟು ವಿಶಯವನ್ನ ಕಾಳಜಿಪೂರ್ವಕವಾಗಿ ಹೆಕ್ಕಿ ತೆಗೆದಿದ್ದಿರಾ ಜೊತೆಗೆ ಸು೦ದರ ಛಾಯಾಚಿತ್ರಗಳು. ಧನ್ಯವಾದಗಳು ಶಿವೂರವರೇ.

shivu.k said...

ಸೀತಾರಾಂ ಸರ್,

ನಾನು ಈ ಲೇಖನದಲ್ಲಿ ಮೊದಲಿಗೆ ಮಾಲ್‍ನಿಂದ ಉಂಟಾದ ಟ್ರಾಫಿಕ್ ಬಗ್ಗೆ ಬರೆಯಬೇಕೆಂದುಕೊಂಡೆ. ನಂತರ ಒಳಗೆ ಹೋದಾಗ ಆದ ಅನುಭವಗಳನ್ನು ಮುಂದೆ ಹೀಗೆ ಆಗಬಹುದು ಅನ್ನುವ ಊಹೆಯನ್ನು ಮಾಡಿಕೊಂಡು, ರಸ್ತೆ ಬದಿಯ ಜನಗಳು ಮತ್ತು ಇಲ್ಲಿನ ಧಣಿಗಳನ್ನು ಒಮ್ಮೆ ಅವಲೋಕಿಸಿದಾಗ ಈ ಲೇಖನ ಸಿದ್ದವಾಯಿತು. ಮತ್ತೆ ಪ್ಲಾಸ್ಟಿಕ್, ಮರಗಳ ಕಡಿತ ಇವೆಲ್ಲಾ ನಮಗೆ ಕಾಣದೇ ಆಗುತ್ತಿರುವ ದೊಡ್ಡ ರೀತಿಯ ಅನಾಹುತಗಳು ಅವುಗಳ ಮೇಲೆ ನನ್ನ ಲೇಖನದಿಂದ ಒಂದು ಬೆಳಕು ಚೆಲ್ಲಿದ್ದೇನೆ.
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

ಅಲೆಮಾರಿ said...

sir nim agondu dodda namaskara sir.tumba ishtavaaytu lekahana..great sir.

Ittigecement said...

ಶಿವು ಸರ್...

ಈ ಲೇಖನದಿಂದ ನಿಮಗೆ ಪರಿಸರದ ಮೇಲಿರುವ ಕಳಕಳಿ ಗೊತ್ತಾಗುತ್ತದೆ..
ತುಂಬಾ ಖುಷಿಯಾಗುತ್ತದೆ...

ಚಂದದ ಮಾಲುಗಳಲ್ಲಾಗುವ ವಿದ್ಯುತ್...ಅಪವ್ಯಯ..
ರೈತರಿಗೆ ಸಿಕ್ಕಿದ್ದರೆ ನೂರಾರು ಜನರ ಹೊಟ್ಟೆ ತುಂಬುತ್ತಿತ್ತು.. ಅಲ್ಲವಾ?

ಚಂದದ ಲೇಖನ..
ಅಂದದ ಫೋಟೊಗಳಿಗೆ..
ನಿಮ್ಮ ಪರಿಸರ ಕಾಳಜಿಗೆ ನನ್ನ ನಮನಗಳು...

shivu.k said...

ಗೌತಮ್ ಸರ್,

ನಿಮ್ಮ ಅನಿಸಿಕೆಗೆ ಧನ್ಯವಾದಗಳು.

shivu.k said...

ಪ್ರಕಾಶ್ ಸರ್,

ಪರಿಸರ ಕಾಳಜಿಯ ಕುರಿತು ನಾನು ಈ ಲೇಖನವನ್ನು ಬರೆಯಲಿಲ್ಲವಾದರೂ ಅಲ್ಲಿನ ಸ್ಥಿತಿಗತಿಯನ್ನು ಸ್ಪಷ್ಟವಾಗಿ ಕೊಡಲು ಪ್ರಯತ್ನಿಸಿದ್ದೇನೆ. ಅದಕ್ಕೆ ತಕ್ಕಂತೆ ಫೋಟೊ ಇದ್ದರೇ ಚೆನ್ನವೆಂದು ಫೋಟೊ ತೆಗೆದೆ. ಅದು ಈ ರೀತಿ ಬೆಳವಣಿಗೆ ಆಗುತ್ತೆ ಅನ್ನೋದು ನನಗೂ ಗೊತ್ತಿರಲಿಲ್ಲ.

ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

Harisha - ಹರೀಶ said...

ಮಾಲ್ ಗಳ ಹಾವಳಿಯಿಂದ ಜನಸಾಮಾನ್ಯರ ಜೀವನದ ಮೇಲಾಗುವ ಪ್ರಭಾವವನ್ನು ವರ್ಣಿಸಿದ್ದ ಒಂದು ಕಥೆ ನೆನಪಾಯಿತು.. ಬಹಳಷ್ಟು ವಿಷಯಗಳನ್ನು ಅಳೆದು ತೂಗಿ ತುಂಬ ಚೆನ್ನಾಗಿ ಬರೆದಿದ್ದೀರಿ..

shivu.k said...

ಹರೀಶ್,

ಮಾಲ್‍ಗಳ ಬಗ್ಗೆ ಬರೆದಿದ್ದು ಒಂದು ಕಾಕತಾಳಿಯಾ...ಅದಾಗಲೇ ಪರಿಣಾಮ ಬೀರಲು ಪ್ರಾರಂಭಿಸಿದೆ. ಇವತ್ತಿನ ಪೇಪರಿನಲ್ಲಿ ಆ ಮಾಲ್ ಬಗ್ಗೆ ಯಾರೋ ಸಾರ್ವಜನಿಕ ಹಿತಾಶಕ್ತಿ ಕೇಸು ಹಾಕಿದ್ದಾರೆ. ಮಾಲ್ ಕಟ್ಟುವಲ್ಲಿ ಕಾನೂನು ಉಲ್ಲಂಘನೆಯಾಗಿದೆಯೆಂದು, ಮತ್ತು ಈಗ ಉಂಟಾಗಿರುವ ಟ್ರಾಫಿಕ್ ಬಗ್ಗೆ ಕೇಸು ಹಾಕಿದ್ದಾರೆ.
ನನ್ನ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.