ವಿಂಧ್ಯಾ ಪುಟ್ಟಿ........... ನಿನಗೇಕೆ ಪತ್ರ ಬರೆಯಬೇಕು ? ನೀನೇನು ಒಡಹುಟ್ಟಿದವಳಾ ? ಅಥವಾ ಹತ್ತಾರು ವರ್ಷದ ಆತ್ಮೀಯ ಗೆಳೆತಿಯ ?
ಈ ಪ್ರಶ್ನೆ ಇಂದು ಬೆಳಿಗ್ಗೆ ನೂರನೆ ಸಲ ಉದ್ಭವಿಸಿತ್ತು. ಅದೇ ಸಮಯಕ್ಕೆ
" ಅಣ್ಣಾ ಗುಡ್ ಮಾರ್ನಿಂಗ್, ಇವತ್ತು ಬೇಗ ಎದ್ದೆ. "
ನಿನ್ನಿಂದ ಮೆಸೇಜು....................
ಮತ್ತೊಂದು ಗಂಟೆ ಕಳೆದಿರಬಹುದು. ನಿನ್ನಿಂದ ಮಿಸ್ಡ್ ಕಾಲ್......................
ಇನ್ನೂ ತಡೆಯಲಾರದೆ ಸಿಟ್ಟಿನಿಂದ ಆ ಪ್ರಶ್ನೆಯನ್ನು ಮತ್ತು ಅದನ್ನು ಹುಟ್ಟಿಸಿದ ಬುದ್ಧಿಯನ್ನು ಕಸದ ಬುಟ್ಟಿಗೆ ಹಾಕಿ ನಿನಗೊಂದು ಪತ್ರ ಬರೆಯತೊಡಗಿದೆ.
ಅಂದ ಮಾತ್ರಕ್ಕೆ ನಾನೇನು ಮಹಾನ್ ಪತ್ರಗಾರನಲ್ಲ. ನಿಜ ಹೇಳಬೇಕೆಂದರೆ ಇದು ನನ್ನ ಜೀವನದ " ಮೂರನೆ " ಪತ್ರ.
ಮೊದಲನೆ ಪತ್ರ ಬರೆದಿದ್ದು ನಾನು ದ್ವಿತೀಯ ಪಿ, ಯು. ಸಿ. ಅಂತಿಮ ಪರೀಕ್ಷೆಯಲ್ಲಿ. ಒಂದು ಪತ್ರ ಬರೆದರೆ ೧೨ ಆಂಕ ಕೊಡುತ್ತಿದ್ದುದರಿಂದ ಬೇಕೊ ಬೇಡವೋ ಒಂದು ವ್ಯವಹಾರದ ಪತ್ರ ಬರೆದು ಎಂಟು ಆಂಕ ಗಿಟ್ಟಿಸಿದ್ದೆ. ಎರಡನೆಯ ಪತ್ರದ ಸಮಯವನ್ನು ಮುಂದೆ ಹೇಳುತ್ತೇನೆ.
ಇಂದಿಗೆ ಸರಿಯಾಗಿ ಒಂದು ತಿಂಗಳು ಹಿಂದೆ........... ಸೋಮವಾರ ನಾನು ಟೂ ವೀಲರ್ನಲ್ಲಿ ಹೋಗುತ್ತಿದ್ದಾಗ ಒಂದು ಫೋನ್ ಕಾಲ್!
" ಹಲೋ ಶಿವಣ್ಣ ನಾನು ವಿಂಧ್ಯಾ ... ಅಂತಾ........
ಮಗುವಿನಂತಹ ದ್ವನಿಯಿರುವ ಹುಡುಗಿಯ ಮಾತು ಮೊದಲ ಸಲ ಕೇಳಿದಾಗ ನನಗೆ ಗೊತ್ತಾಗಲಿಲ್ಲ. ನನ್ನ ಟೂ ವೀಲರ್ ಸೈಡಿಗೆ ಹಾಕಿ. "ಈಗ ಹೇಳಿ ಯಾರು ಅಂತಾ..........." ಎಂದೆ. ಮತ್ತೆ ನಿನ್ನಿಂದ ಅದೇ ಮಾತು.
ಮುಂದುವರಿದು " ನಿಮ್ಮ ನಂಬರನ್ನು ಇಂಟರ್ನೆಟ್ನಿಂದ ಕದ್ದೆ ನಿಮಗೆ ಬೇಸರವಿಲ್ಲವಲ್ಲ " ಎಂದು ಹೇಳಿ ನಿನ್ನ ಪರಿಚಯ ಮಾಡಿಕೊಂಡೆ. ಆಗ ನನಗೆ ಗೊತ್ತಾಗಿದ್ದು ನೀನು ನನ್ನ ಬ್ಲಾಗನ್ನು ಪ್ರತಿನಿತ್ಯ ಓದಿ ಬ್ಲಾಗಿನಲ್ಲಿ ಕಾಮೆಂಟ್ ಮಾಡದೇ ಮೇಲ್ನಲ್ಲಿ ಪ್ರತಿಕ್ರಿಯಿಸುತ್ತಿರುವ ಹುಡುಗಿ......ಅಂತ.
ಸ್ವಲ್ಪ ಹೊತ್ತು ಮಾತಾಡಿದ ನಂತರ ನಿಮ್ಮ ಫೋನ್ ನಂಬರನ್ನು ನಿಮ್ಮ ಗೆಳೆಯರೊಬ್ಬರಿಂದ ಕೇಳಿ ಪಡೆದುಕೊಂಡೆ ಎಂದು ಹೇಳಿ ನಿನ್ನ ನಂಬರನ್ನು ಮೆಸೇಜ್ ಮಾಡಿದೆ.
ಅಮೇಲೆ ಹರಿದಾಡಿತಲ್ಲ ಎಸ್ ಎಮ್ ಎಸ್ ಗಳು............... ಮೊದಲ ದಿನವೇ ನಿನ್ನ ವಿಚಾರ ಸ್ವಲ್ಪ ತಿಳಿಯಿತು. ದಿನದ ಕೊನೆಯಲ್ಲಿ ನಿನ್ನಿಂದ ಬಂತಲ್ಲ ಒಂದು ಮೆಸೇಜು.
" ನನಗೆ ಆಣ್ಣಾ ಇಲ್ಲಾ, ಅದಕ್ಕೆ ನಿಮ್ಮನ್ನೆ ಅಣ್ಣಾ ಅಂತೀನಿ "
"ನನಗೆ ತಂಗಿ ಇಲ್ಲ ನಿನ್ನನ್ನೇ ತಂಗಿ ಅಂತೀನಿ "
ನಾನು ತಕ್ಷಣ ಎಸ್ ಎಮ್ ಎಸ್ ಕಳುಹಿಸಿದ್ದೆ. ಆ ಕ್ಷಣ ಹಾಗೇಕೆ ಮಾಡಿದೆನೋ ಗೊತ್ತಿಲ್ಲ.
ಅನಿರೀಕ್ಷಿತವಾದದ್ದು ಲಭಿಸುವಾಗ
ಪ್ರತಿಕ್ಷಣದಲ್ಲೂ ಅಚ್ಚರಿ ಮತ್ತು ಆನಂದ......
ಆ ರೋಮಾಂಚನ ನಿರೀಕ್ಷಿತವಾದದ್ದು
ಸಿಗುವಾಗ ಇರಲಾರದು........................
ಇಲ್ಲಿ ನನ್ನ ಒಡಹುಟ್ಟಿದ ತಂಗಿಯ ವಿಚಾರವನ್ನು ಸ್ವಲ್ಪ ನಿನಗೆ ಹೇಳಬೇಕಿದೆ.
ಬಾಲ್ಯದಲ್ಲಿ ಅಪ್ಪ ನನಗೆ ಐದು ಪೈಸೆ ಕೊಟ್ಟು ಅವಳಿಗೆ ತಿಂಡಿ ಕೊಡಿಸು ಅಂತ ಕಳಿಸುತ್ತಿದ್ದರು. ನಾನು ಆ ಐದು ಪೈಸೆಯಲ್ಲಿ, ಪೈಸಕ್ಕೊಂದರಂತೆ ಸಿಗುವ ನಮ್ಮ ಪುಟ್ಟ ಪುಟ್ಟ ಕೈ ಬೆರಳುಗಳಿಗೆ ಸಿಕ್ಕಿಸಿಕೊಳ್ಳುವ ಕೋಡುಬಳೆಯನ್ನು ಕೊಂಡುಕೊಂಡು ಅವಳಿಗೆ ಮೂರು ಕೊಟ್ಟು ಎರಡನ್ನು ಜೇಬಿಗಿಳಿಸುತ್ತಿದ್ದೆ.
ಕಲ್ಮಶ ತುಸು ಇಲ್ಲ.......
ನಿರ್ಮಲ ಖುಷಿ ಎಲ್ಲಾ.........
ಒಂದು ಗೂಡಿ ಕಳೆಯುವ ಕ್ಷಣದಲ್ಲಿ.......
ಗೆಳೆತನ ಎಂಥ ಮೋಡಿ...............
ಅವಳಿಗೆ ಬುದ್ದಿ ಬರುವವರೆಗೆ "ಟೋಪಿ" ಹಾಕಿಸಿಕೊಳ್ಳುವ ತಂಗಿಯಾಗಿದ್ದ ಅವಳು ನಾನು ಕಾಲೇಜಿಗೆ ಹೋಗುವ ಸಮಯಕ್ಕೆ ಅಮ್ಮನಾಗತೊಡಗಿದಳು.
ನಮ್ಮ ಮನೆಯಲ್ಲಿ ಬಡತನ. ನಾನಾಗ ಬೆಳಿಗ್ಗೆ ೫ ಗಂಟೆಗೆ ಎದ್ದು ಮನೆ ಮನೆಗೆ ಪತ್ರಿಕೆ ಹಂಚಲು ಹೋಗುತ್ತಿದ್ದೆ. ೬-೩೦ ಕ್ಕೆ ವಾಪಸ್ಸು ಬಂದು ಅರ್ದ ಗಂಟೆಯಲ್ಲಿ ರೆಡಿಯಾಗಿ ೭-೩೦ರ ಹೊತ್ತಿಗೆ ಕಾಲೇಜಿಗೆ ಹೋಗಬೇಕಿತ್ತು.
ನನಗಾಗಿ ಬೇಗ ಎದ್ದೇಳುತ್ತಿದ್ದ ತಂಗಿ ರುಕ್ಕು[ರುಕ್ಮಿಣಿದೇವಿ] ಏನಾದರೂ ತಿಂಡಿ ಮಾಡಿಕೊಡುತ್ತಿದ್ದಳು. ಮನೆಯಲ್ಲಿ ರೇಷನ್ ಇಲ್ಲದ ದಿನ ರಾತ್ರಿ ಉಳಿದ ಅನ್ನ ಸಾರು ಬಿಸಿ ಮಾಡಿ ಅಮ್ಮನಂತೆ ಬಡಿಸುತ್ತಿದ್ದಳು.
ಕೆಲವೊಂದು ದಿನ ಏನು ಇಲ್ಲದೆ ನಾನು ಹಾಗೆ ಹೋಗುವಾಗ
" ಅಣ್ಣಾ ಏನು ಅಂದುಕೋಬೇಡ. ಇವತ್ತು ಏನು ಮಾಡಲಿಕ್ಕಾಗಲಿಲ್ಲ." ವೆಂದಾಗ ನಾನು ಮರು ಮಾತಾಡದೆ ಹೋಗಿಬಿಡುತ್ತಿದ್ದೆ.
ಮದ್ಯಾಹ್ನ ಒಂದು ಗಂಟೆಯ ಹೊತ್ತಿಗೆ ಕಾಲೇಜು ಮುಗಿಸಿ ಹೊಟ್ಟೆ ಹಸಿದು ಸುಸ್ತಾಗಿ ಬಂದಾಗ ಬಿಸಿ ಬಿಸಿ ರಾಗಿ ಮುದ್ದೆ ಬಸ್ಸಾರು ಮಾಡಿ ಬಡಿಸಲು ಕಾಯುತ್ತಿದ್ದಳು.
ದೇವರು ಅವಳನ್ನು ನನಗೆ ಯಾಕೆ
ಪರಿಚಯಿಸಿದ ಎಂಬುದಕ್ಕಿಂತ ನನಗೊಂದು
ಪ್ರೀತಿಸುವ ಹೃದಯದ ಅಗತ್ಯವಿತ್ತು ಅಂತ
ದೇವರಿಗೆ ಗೊತ್ತಾದದ್ದಾದರೂ ಹೇಗೆ !!..............
ಹಾಗಂತ ನನಗೆ ಅಪ್ಪ.. ಅಮ್ಮ.. ಅಕ್ಕ.. ತಮ್ಮ.. ಯಾರು ಈ ರೀತಿ ನೋಡಿಕೊಳ್ಳುತ್ತಿರಲಿಲ್ಲವೇ ಅಂತ ನಿನಗೆ ಅನ್ನಿಸಬಹುದು. ಅಪ್ಪ ಸಂಸಾರದ ನೊಗ ಹೊತ್ತಿದ್ದರು. ಅಮ್ಮ ಅಪ್ಪನಿಗೆ ಸಾತಿಯಾಗಿದ್ದಳು. ಅಕ್ಕ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳಾದರೂ ಕೆಲವೇ ದಿನಗಳಲ್ಲಿ ಅಕ್ಕನ ಮದುವೆಯಾಗಿ ತಂಗಿಯೇ ಮನೆಯ ಒಳಗಿನ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಎಲ್ಲರಿಗೂ ಅಮ್ಮ ಆಗಿದ್ದಳು.
ಇಂಥ ತಂಗಿಗೆ ಮದುವೆಯಾಗಿ ಗಂಡನ ಮನೆಗೆ ಹೋದಾಗ ನನ್ನ ಎರಡನೆ ಅಮ್ಮ ದೂರವಾದಳೇನೋ ಅನ್ನಿಸಿತ್ತು. ಕೆಲವೇ ದಿನಗಳಲ್ಲಿ ಅಪ್ಪನಿಗೆ ನಿವೃತ್ತಿಯಾಗಿ ಮನೆಯ ಜವಾಬ್ದಾರಿ ನನ್ನ ಹೆಗಲ ಮೇಲೆ ಬಿತ್ತು.
ತಂಗಿಯ ಚೊಚ್ಚಲ ಹೆರಿಗೆ ಕಷ್ಟವಾಗಿ ತಾಯಿ-ಮಗು ಇಬ್ಬರ ಜೀವಕ್ಕೂ ಅಪಾಯ ಅಂತ ಡಾಕ್ಟರಮ್ಮ ಹೇಳಿದಾಗ ನನ್ನ ಪಾಲಿಗೆ ಭೂಮಿ ಬಿರಿದಂತಾಗಿತ್ತು.
ಅವಳಿಗೆ ರಕ್ತ ಕೊಡಬೇಕೆಂದಾಗ ನನ್ನ ರಕ್ತವನ್ನೇ ಕೊಟ್ಟಿದ್ದೆ. ನನ್ನದು " ಎ ಪಾಸಿಟೀವ್ " ಆಗಿದ್ದರಿಂದ ಹೆಚ್ಚು ಮೌಲ್ಯವುಳ್ಳದ್ದು ಅಂತ ಯಾರೋ ಹೇಳಿದ ನೆನಪು. ಆ ಬೆಲೆಯುಳ್ಳ ರಕ್ತವೂ ನನ್ನ ತಂಗಿಯನ್ನು, ಅವಳ ಮಗುವನ್ನು ಉಳಿಸಿಕೊಳ್ಳಲಾಗದೆ ಬೆಲೆ ಕಳೆದುಕೊಂಡಿತ್ತು...........
ಇನ್ನೊಬ್ಬರಿಗೆ ತಿಳಿಯಬಾರದೆಂದು ನಮ್ಮ
ನೋವನ್ನು ಎಷ್ಟು ಬಚ್ಚಿಟ್ಟರೂ..........
ಅದು ಪ್ರಕಟವಾಗದೆ ಇರದು.
ಅಂತೆಯೇ ಪ್ರೀತಿಯೂ.......... !!
ಶವಗಳನ್ನು ಮನೆಗೆ ತಂದ ರಾತ್ರಿ ನಾನು ನನ್ನ ಜೀವನದ ಎರಡನೆ ಪತ್ರವನ್ನು ಅಮ್ಮನ ಪಾತ್ರದಲ್ಲಿದ್ದ ತಂಗಿ ರುಕ್ಮಿಣಿಗೆ ಬರೆದಿದ್ದೆ.
ಆದರೆ ವಿಂಧ್ಯಾ ಪುಟ್ಟಿ............. ನಿನಗೆ ಈ ಮೂರನೆ ಪತ್ರವನ್ನು ಬರೆಯಬೇಕು ಅಂತ ಏಕೆ ಅನ್ನಿಸಿತೋ ಗೊತ್ತಿಲ್ಲ.
ಮೂರು ದಿನಗಳ ಹಿಂದೆ ರಾತ್ರಿ " ಆಣ್ಣಾ ನನಗೆ ಬೇಜಾರಾಗ್ತಿದೆ, ಜ್ವರಾನು ಬಂದಿದೆ " ಬಂತಲ್ಲ ನಿನ್ನಿಂದ ಒಂದು ಮೇಸೇಜು.
" ಯಾಕೊ ಮರಿ ಏನಾಯ್ತು " ನನ್ನ ಕಡೆಯಿಂದ.
" ನನ್ ತಮ್ಮ ನನಗೆ ಹೇಳದೆ ಅವನ ಪ್ರೆಂಡ್ ಮನೆಗೆ ಹೋದ. ನನಗೆ ಒಬ್ಬಳೇ ಅಂತ ಬೇಸರವಾಗಿದೆ ಅಣ್ಣಾ " ನಿನ್ನ ಕಡೆಯಿಂದ..
ನನಗೆ ನಗು ಬಂತು. ಚಿಕ್ಕಂದಿನಲ್ಲಿ ನನ್ನ ತಂಗಿಯೂ ಕೂಡ ಇಂಥದ್ದೇ ಕೆಲವು ಸಣ್ಣ [ಕ್ಷಮಿಸು ಸಣ್ಣದು ಅಂದಿದ್ದಕ್ಕೆ] ಸಣ್ಣ ಕಾರಣಗಳಿಗೆ ನನ್ನ ತಮ್ಮನ ಮೇಲೆ ದೂರು ಹೇಳುತ್ತಿದ್ದುದ್ದು ನೆನಪಾಯಿತು.........ಇದು ಹೀಗೆ ಮುಂದುವರಿದಿತ್ತು.
ನೀನು ಮತ್ತು ನಾನು ಪ್ರತಿದಿನ ಚಿಕ್ಕಮಕ್ಕಳ ಹಾಗೆ, ನಮ್ಮ ದಿನನಿತ್ಯದ ವಿಚಾರಗಳನ್ನು ಮಾತಾಡಿಕೊಳ್ಳುತ್ತಿದ್ದೆವು. ನನ್ನೆಲ್ಲಾ ಕೆಲಸದ ನಡುವೆ ನಿನ್ನ ಒಂದು ಫೋನ್ ಕಾಲ್ ಅಥವ ಒಂದು ಎಸ್ ಎಮ್ ಎಸ್ ನನಗೊಂತರ ರಿಲೀಪ್ ಕೊಡಲಾರಂಭಿಸಿತು. ನಿನಗೆ ಹಾಗೆ ಆನ್ನಿಸುತ್ತಿತ್ತಾ ? ಗೊತ್ತಿಲ್ಲಾ.........
ಕೆಲವೊಮ್ಮೆ ನಿನ್ನ ಮಾತು ಕೇಳುತ್ತಿದ್ದಾಗ ಚಿಕ್ಕಂದಿನಲ್ಲಿ ನನ್ನ ತಂಗಿ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು, ಇಬ್ಬರೂ ಹೊರಪ್ರಪಂಚದ ಹರಿವಿಲ್ಲದೆ ಮಾತಾಡುತ್ತಾ, .......ಒಂದು ಕ್ಷಣ............. ನಗು, ಮರುಕ್ಷಣ ಹುಸಿಮುನಿಸು...........ಟೂ ಟೂ..... ಶೇ..................................
ಮಲ್ಲಿಗೆ ಗುಲಾಬಿಗೆ ತನ್ನ ಪರಿಮಳದ
ಒಂದಂಶವನ್ನು ಕೊಟ್ಟಂತೆ................
ಗುಲಾಬಿ ಮಲ್ಲಿಗೆಗೆ ತನ್ನ ಸೌಂದರ್ಯದ
ಕೊಂಚ ಭಾಗವನ್ನು ಕೊಟ್ಟಂತೆ...............
ನೆನಪು ಮರುಕಳಿಸಿತ್ತು. ಅದಕ್ಕಾಗಿ ನಿನಗೆ ಸಾವಿರ ಸಾವಿರ ಥ್ಯಾಂಕ್ಸ್.............
ಇಷ್ಟಕ್ಕೂ ನಾವಿಬ್ಬರೂ ಮುಖಾ ಮುಖಿ ಭೇಟಿಯಾಗೆ ಇಲ್ಲ. ಫೋನಿನಲ್ಲಿ ನಿನ್ನ ಮಾತು ಮತ್ತು ದ್ವನಿ ಮಗುವಿನಂತೆ... ನಿನ್ನ ಕಾಮೆಂಟುಗಳನ್ನು ಓದಿದಾಗ ನನಗನ್ನಿಸಿದ್ದು ನೀನು ಬುದ್ಧಿವಂತೆ. ತುಂಬಾ ಪುಸ್ತಕ ಓದಿದ್ದೀಯಾ ನಿನ್ನ ವಯಸ್ಸಿಗೆ ಮೀರಿದ ಕಷ್ಟಗಳನ್ನು ಅನುಭವಿಸಿದ ಅಮ್ಮನ ಹಾಗೆ ಅಂತ. ನಾನಂತೂ ನಿನ್ನೆರಡೂ ಪಾತ್ರಗಳನ್ನು "Enjoy" ಮಾಡುತ್ತಿದ್ದೇನೆ.
ನನಗೆ ಇವತ್ತು ಬೆಳಿಗ್ಗೆ ಈ ಪತ್ರ ಬರೆಯುವ ತುಡಿತ ಹೆಚ್ಚಾದಾಗ ನಾನು ದಿನಪತ್ರಿಕೆಗಳ ಹಣ ವಸೂಲಿಗಾಗಿ ಮನೆ ಮನೆಗೆ ಅಲೆಯುತ್ತಿದ್ದೆ. ಈ ಪತ್ರ ಬರೆಯಲು ಕಾಗದವಿರಲಿಲ್ಲ. ಕೊನೆಗೆ ನನ್ನ ಹಣ ವಸೂಲಿಯ ಅಂಗೈ ಅಗಲದ ರಸೀತಿಯ ಹಿಂಭಾಗದಲ್ಲೇ ಮನೆ ಮನೆ ಅಲೆಯುತ್ತಾ ಈ ಪತ್ರ ಬರೆದು ಮುಗಿಸಿದೆ.
ಈ ಕಾರಣಕ್ಕೆ ರಸೀತಿಯೆಲ್ಲಾ ಖಾಲಿಯಾಗಿ ಪೂರ್ತಿ ಹಣ ವಸೂಲಿಯಾಗಲಿಲ್ಲ. ಇದಕ್ಕೆ ನೀನು ಕಾರಣ. ಹಣ ವಸೂಲಿ ಸರಿಯಾಗಿ ಆಗದಿದ್ದರೂ ರಸೀತಿಯ ಹಿಂದೆ ನನ್ನ ಭಾವನೆಗಳು ಸಂಪೂರ್ಣ ವಸೂಲಾಗಿದೆಯೆಂಬ ಖಾತ್ರಿಯಾಗಿದೆ........
ಕೊನೆಯ ಮಾತು. ನೀನು ಇದಕ್ಕೆ ಬೈಯಬಹುದು. ಮೊದಲೇ ಸಿಟ್ಟಿನ ಹುಡುಗಿಯೆಂದು ನಿನಗೆ ನೀನೆ ಸರ್ಟಿಫಿಕೇಟ್ ಕೊಟ್ಟುಕೊಂಡಿರುವುದರಿಂದ ಮತ್ತು ನಿನ್ನ ಮೆಸೇಜ್ ಹಾಗು ಮಿಸ್ಸ್ಡ್ ಕಾಲ್ಗೆ ನಾನು ಉತ್ತರಿಸದಿರುವ ಕಾರಣ ಇದೊಂದೆ ಎಂದು ಹೇಳಿದರೂ ನಿನ್ನ ಬಗ್ಗೆ ವಾತ್ಸಲ್ಯ ತುಂಬಿದ ಪ್ರೀತಿಯ ಜೊತೆಗೆ ಭಯವಿದೆಯೆಂದು ಹೇಳುತ್ತಾ ಈ ಪತ್ರವನ್ನು ಮುಗಿಸುತ್ತೇನೆ......
ಬೇಗ ಹುಷಾರಾಗು ತಂಗಿ.........ಇವತ್ತಿನ ದಿನ ನಿನ್ನದಾಗಲಿ...................
ನಿನ್ನ ಪ್ರೀತಿಯ ಅಣ್ಣ...........
ಶಿವು.
-------------------------------------
ನನ್ನ ತಂಗಿ ರುಕ್ಮಿಣಿ ದೇವಿ.

ಇಂದು ಜನವರಿ ೧೬. ನನ್ನ ತಂಗಿ ರುಕ್ಮಿಣಿಯ ಜನ್ಮ ದಿನ. ಅವಳಿದ್ದಿದ್ದರೆ ಇಂದಿಗೆ ೨೯ನೇ ವರ್ಷಕ್ಕೆ ಕಾಲಿಡುತ್ತಿದ್ದಳು. ಅವಳ ನೆನಪಿಗಾಗಿ ಮತ್ತೊಬ್ಬ ಸಹೋದರಿ ವಿಂಧ್ಯಾಳ ಅನುಮತಿ ಪಡೆದು ಈ ಪತ್ರವನ್ನು ಬ್ಲಾಗಿಗೆ ಹಾಕಿದ್ದೇನೆ......
ಧನ್ಯವಾದಗಳು.
ಶಿವು.