Saturday, January 16, 2010

ಮುನ್ನಾರಲ್ಲಿ ಸೂರ್ಯನ ಸ್ಪಾಟ್ ಲೈಟು

ವಿಮಲ್ ಸರಿಯಾಗಿ ಮೂರುಗಂಟೆಗೆ ಬರುತ್ತಿದ್ದಂತೆ ನಾವು ಮುನ್ನಾರ್ ಮತ್ತು ಕೊಯಮತ್ತೂರ್ ರಸ್ತೆಯಲ್ಲಿನ ಟಾಪ್ ಸ್ಟೇಷನ್ ಕಡೆಗೆ ಹೊರಟೆವು ಅದು ಮುವತ್ತು ಕಿಲೋಮೀಟರ್ ಪ್ರಯಾಣದ ಲೆಕ್ಕಾಚಾರ ಅವನದು, ನಾವು ಆಷ್ಟು ದೂರ ಹೋಗದೇ ವಾಪಸ್ಸು ಬಂದಿದ್ದು ನಮ್ಮ ಲೆಕ್ಕಚಾರ, ಆದ್ರೆ ಅವನ ಪೂರ್ಣ ಹಣವನ್ನು ಕೊಟ್ಟಿದ್ದು ಬೇರೆ ಲೆಕ್ಕಚಾರ. ಮುನ್ನಾರಿಗೆ ತಲುಪುವ ಮೂರು ದಾರಿಯಲ್ಲಿ ಇದು ಒಂದು. ಇದೊಂದರ ವಿಭಿನ್ನವಾದ ಅಪಾಯಕಾರಿ ದಾರಿಯೇ ಸರಿ. ರಾತ್ರಿ ಸಮಯದಲ್ಲಿ ಈ ರಸ್ತೆಯಲ್ಲಿ ವಾಹನಗಳು ಓಡಾಡುವುದಿಲ್ಲ, ಏಕೆಂದರೆ ಇಲ್ಲಿ ಕಾಡುಪ್ರಾಣಿಗಳು ಅದರಲ್ಲೂ ಆನೆಗಳು ರಾತ್ರಿ ಸಮಯದಲ್ಲಿ ರಸ್ತೆಯ ಮದ್ಯೆ ನಿಂತುಬಿಟ್ಟರೆ ಅಲ್ಲಿಗೆ ಬಸ್ಸು ಕಾರು ಇತರ ವಾಹನಗಳಿಗೆ ಬೇದಿಯಾಗುವುದು ಖಚಿತ. ಅದೇ ಕಾರಣಕ್ಕೆ ಅಲ್ಲಿ ರಾತ್ರಿ ವಾಹನಗಳ ಸಂಚಾರವಿರುವುದಿಲ್ಲ. ನಾವು ಹೊರಟ ಕೆಲವೇ ನಿಮಿಷಗಳಲ್ಲಿ ಅಪಾಯದ ಸುಳಿವು ಸಿಕ್ಕಿತ್ತು. ಐದು ಕಿಲೋಮೀಟರ್ ಸಾಗಿರಬಹುದು ಸಡನ್ನಾಗಿ ವಿಮಲ್ ಆಟೋ ಬ್ರೇಕ್ ಹಾಕಿದ. ನಾವೆಲ್ಲಾ ಒಂದುಕ್ಷಣ ಮುಗ್ಗರಿಸಿ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಆಟೋ ನಿಲ್ಲಿಸಿಬಿಟ್ಟಿದ್ದ. ನಮಗೆಲ್ಲಾ ಸಿಟ್ಟುಬಂದು ಅವನನ್ನು ಬೈಯ್ಯಬೇಕೆನ್ನುವಷ್ಟರಲ್ಲಿ "ಸಾರ್ ಅಂಗೆ ಪಾರುಂಗ್ ಸಾರ್ ಪಾಂಬು" ಅಂದ. ವಿಮಲ್ ಆಟೋ ಬ್ರೇಕ್ ಹಾಕದಿದ್ದಲ್ಲಿ ಬಹುಶಃ ಮುಂದಿನ ಚಕ್ರ ಆ ದೊಡ್ಡ ಹಾವಿನ ಮೇಲೆ ಹೋಗಿಬಿಡುತ್ತಿತ್ತೇನೋ, ನಮಗೆ ಏನೇ ಹೊಸತು ಹೇಳಲಿ ಭಯಪಡುವುದಕ್ಕಿಂತ ಮೊದಲು ಕ್ಯಾಮೆರಾ ಕೈಗೆತ್ತಿಕೊಳ್ಳುವ ಅಭ್ಯಾಸವಾಗಿಬಿಟ್ಟಿದ್ದರಿಂದ, ಮತ್ತೆ ಬಲಭಾಗದಲ್ಲಿ ನಾನು ಕುಳಿತಿದ್ದು ನನ್ನ ಕ್ಯಾಮೆರಾ ಸಿದ್ಧವಾಗಿದ್ದರಿಂದ ಸಡನ್ನಾಗಿ ರಸ್ತೆ ದಾಟುತ್ತಿದ್ದ ನಾಗರಹಾವಿನ ಫೋಟೊ ತೆಗೆದೆ. ಚೆನ್ನಾಗಿ ಬರಲಿಲ್ಲವಾದರೂ ಫೋಟೊ ತೆಗೆದೆನೆಂಬ ಖುಷಿಯಿತ್ತು. "ಇಂದ ರೋಡಲ್ಲಿ ಪಾಂಬು ಮಾತ್ರವ್ ಇಲ್ಲ ಸಾರ್ ನೈಟ್ ಎಲ್ಲಾ ಕಾಡ್ ಪ್ರಾಣಿಗಳು ವರುದು, ಅದಕ್ಕೆ ಇಂದ ರೋಡಲೇ ಯಾರು ನೈಟ್ ವರಾರು" ಅಂದ. ಅವನ ಮಾತಿಗೆ ನಾವು ಉತ್ತರಿಸಲಿಲ್ಲ.



ಈ ರಸ್ತೆಯಲ್ಲಿ ನಮಗೆ ಫೋಟೊಗ್ರಫಿ ಏನು ಆಗಲಿಲ್ಲ. ಸುಮಾರು ಮುವತ್ತು ಕಿಲೋಮೀಟರ್ ಸಾಗಿ ಮಂಜುವಿನ ಆಸೆಯಂತೆ ಅರಣ್ಯ ಇಲಾಖೆಯವರ ದೊಡ್ಡ ಗೋಪರ ಹತ್ತಿ ಮೇಲೆ ನಿಂತು ಸುಮಾರು ಹತ್ತು ಕಿಲೋಮೀಟರ್ ದೂರದವರೆಗೆ ಕಾಣುವ ಕಾಡಿನ ದೃಶ್ಯವನ್ನು ನೋಡಿದ್ದಾಯಿತು. ನಮ್ಮ ಜೊತೆಗೆ ಬಂದಿದ್ದ ಗಾರ್ಡು ರಾತ್ರಿ ಇಲ್ಲೆಲ್ಲಾ ಆನೆಗಳು ಕಾಣುಪ್ರಾಣಿಗಳು ಬಂದು ಮಲಗುತ್ತವೆ ಅಂತ ಹೇಳಿದಾಗ ಅಲ್ಲಿಯೇ ತಂಗಬೇಕೆಂದುಕೊಂಡಿದ್ದ ಮಂಜುವಿನ ಆಸೆಗೆ ತಣ್ಣೀರು ಎರಚಿದಂತಾಗಿತ್ತು.



ಸಂಜೆಯ ಟ್ರಿಪ್ ಏನು ಉಪಯೋಗವಿಲ್ಲವೆಂದು ವಾಪಸ್ ಬರುತ್ತಿದ್ದೆವು. ಅಷ್ಟರಲ್ಲಿ ಇಡೀ ಮುನ್ನಾರಿಗೆ ಮುನ್ನಾರೇ ಹಸಿರು ಬಟ್ಟೆ ತೊಟ್ಟಂತೆ ಟೀ ಎಷ್ಟೇಟು ಹಸಿರಾಗಿ ಕಂಗೊಳಿಸುತ್ತಿದ್ದರೇ ಅಲ್ಲೊಂದು ಮರ ನಾನೇ ಬೇರೆ ನನ್ನ ಸ್ಟೈಲೇ ಬೇರೆ ಅನ್ನುತ್ತಾ ಮೈತುಂಬ ಕೆಂಪುಬಣ್ಣದ ಬಟ್ಟೆ ತೊಟ್ಟು ಹೀರೋಯಿನ್ ಪೋಸ್ ಕೊಡುತ್ತಾ ನಿಂತಿತ್ತು. ಅಲ್ಲಿ ನಿಲ್ಲಿಸಿ ಅದರ ಫೋಟೊ ತೆಗೆದುಕೊಂಡೆವು. ನಡುವೆ ರಸ್ತೆಬದಿಯ ಟೀ ಅಂಗಡಿಯಲ್ಲಿ ಟೀ ಕುಡಿದು ಹೊರಡುವಷ್ಟರಲ್ಲಿ ಸಮಯವಾಗಲೇ ಸಂಜೆ ಐದುಗಂಟೆ. ಚಳಿಗಾಲದಲ್ಲಿ ಮುನ್ನಾರಿನಲ್ಲಿ ಬೇಗನೇ ಕತ್ತಲಾಗುತ್ತದೆ. ಇನ್ನೂ ನಮ್ಮ ಫೋಟೊಗ್ರಫಿ ಸಾಧ್ಯವಿಲ್ಲವೆಂದು ವಿಮಲ್‍ನನ್ನು ಪುಸಲಾಯಿಸುತ್ತಾ ಅವನ ವೈಯಕ್ತಿಕ ಬದುಕಿನ ಬಗ್ಗೆ, ಅವನ ಲವ್, ಇತ್ಯಾದಿ ವಿಚಾರಗಳನ್ನು ಉಮ್ಮಸ್ಸಿನಿಂದ ಅವನು ಹೇಳುತ್ತಿರುವಾಗಲೇ ಆಟೋ ಆಪ್ ಆಗಿಬಿಟ್ಟಿತು. ಅದುವರೆಗೂ ಅವನ ಸಂಭ್ರಮ ವಿಚಾರಗಳನ್ನು ಕೇಳುತ್ತಿದ್ದ ನಮಗೆ ಆಟೋ ಆಫ್ ಆಗಿದ್ದು ಒಂಥರ ದಿಗಿಲಾಯಿತು. "ಏನಾಯ್ತು ವಿಮಲ್" ಮಲ್ಲಿ ಕೇಳಿದರು.



"ಒಣ್ಣು ಇಲ್ಲೇ ಸಾರ್" ಅಂತ ಸ್ಟಾರ್ಟ್ ಮಾಡಿದ. ಅನೇಕ ಬಾರಿ ಪ್ರಯತ್ನಿಸಿದರೂ ಸ್ಟಾರ್ಟ್ ಆಗಲಿಲ್ಲ. ಕೊನೆಗೆ ಇಳಿದು ನೋಡಿದರೆ ಪೇಟ್ರೋಲ್ ಕಾಲಿಯಾಗಿತ್ತು. ನಾವು ಫೋಟೊಗ್ರಫಿಯ ವಿಚಾರ ಬಂದಾಗ ಹುಂಬರಂತೆ ಮುನ್ನುಗ್ಗುವುದು ಅವನಿಗೆ ಗೊತ್ತಾಗಿ ನಮ್ಮ ಸಹವಾಸದಿಂದ ಅವನು ಹುಂಬನಾಗಿ ಪೆಟ್ರೋಲ್ ಹಾಕಿಸಿಕೊಳ್ಳದೇ ಬಂದುಬಿಟ್ಟನೇ ಅನ್ನಿಸಿತು. ನಾವು ಅಂದುಕೊಂಡ ಹಾಗೇ ಅವನು ಪೆಟ್ರೋಲ್ ಹಾಕಿಸಿಕೊಂಡಿರಲಿಲ್ಲ. ಮೊದಲೇ ಕಾಡುರಸ್ತೆ. ಸಂಜೆಸಮಯ. ಕತ್ತಲಾಗುತ್ತಿತ್ತು. ಮುನ್ನಾರು ತಲುಪಲು ಇನ್ನೂ ಅರುಕಿಲೋಮೀಟರ್ ಸಾಗಬೇಕಿತ್ತು. ನಡುವೆ ಎಲ್ಲೂ ಪೆಟ್ರೋಲ್ ಬಂಕ್ ಇರಲಿಲ್ಲ. ಏನು ಮಾಡುವುದು. ಸಂಜೆಯಾಗುತ್ತಿದ್ದಂತೆ ಆನೆಗಳು ಬರುತ್ತವೆ ಅಂತ ಬೇರೆ ಹೇಳಿಬಿಟ್ಟಿದ್ದರಿಂದ ನಮಗೆ ದಿಗಿಲು ಶುರುವಾಗಿತ್ತು.


"ನಿಂಗ್ ಕವಲ್ ಪಡಾದೆ ಸರ್, ನಾನು ಮೇನೇಜ್ ಪಣ್ಣುವೆ" ಅಂದವನೇ ನಮ್ಮನ್ನೆಲ್ಲಾ ಕೆಳಗಿಳಿಸಿ ಒಂದುಬದಿಯ ಚಕ್ರವನ್ನು ನಾವೆಲ್ಲಾ ಮೇಲೆತ್ತುವಂತೆ ಹೇಳಿ ಸ್ವಲ್ಪ ಅಲುಗಾಡಿಸಿ ಇಳಿಸಿ, ತಕ್ಷಣ ಆಟೋ ಸ್ಟಾರ್ಟ್ ಮಾಡಿದ. ಸ್ಟಾರ್ಟ್ ಆಗಿಬಿಡ್ತು. ಅವನ ಚಾಕಚಕ್ಯತೆಗೆ ನಮಗೆಲ್ಲಾ ಬೆರಗು. "ವಕ್ಕಾರಂಗ್ ಸರ್" ಅಂದ ಆಟೋ ಸುಮಾರು ಅರ್ಧ ಕಿಲೋಮೀಟರ್ ಓಡಿತು. ಮತ್ತೊಂದು ವಿಚಾರವೇನೆಂದರೆ ಟಾಪ್ ಸ್ಟೇಷನ್ ರೂಟ್ ಎತ್ತರದ ಪ್ರದೇಶ. ಅಲ್ಲಿಂದ ವಾಪಸ್ಸು ಬರುವಾಗ ಹೆಚ್ಚಾಗಿ ಇಳಿಜಾರು. ಅದರಿಂದ ಇಳಿಜಾರಿನಲ್ಲಿ ಇಂಜಿನ್ ಆಫ್ ಮಾಡಿಕೊಳ್ಳುವುದು ಸಮರಸ್ತೆ ಬಂದಾಗ ಮತ್ತೆ ಆನ್ ಮಾಡಿಕೊಳ್ಳುವುದು ನಡೆಯಿತು. ಆದ್ರೆ ಇದು ಒಂದು ಕಿಲೋಮೀಟರ್‍ ವರೆಗೆ ಮಾತ್ರ ನಮ್ಮ ಸಾಹಸ. ಇನ್ನೂ ಐದು ಕಿಲೋಮೀಟರ್ ಇರುವಂತೆಯೇ ಕತ್ತಲಲ್ಲಿ ಇನ್ನು ನನ್ನ ಕೈಯಲ್ಲಿ ಆಗಲ್ಲ ಅಂತ ಆಟೋ ನಿಂತುಬಿಟ್ಟಿತು. ಸಂಜೆ ಆರುಗಂಟೆಯ ನಂತರ ಕಾಡುಪ್ರಾಣಿಗಳ ಭಯದಿಂದಾಗಿ ಒಂದು ವಾಹನವೂ ಓಡಾಡುವುದಿಲ್ಲ. ಮೊದಲೇ ಅಂಕುಡೊಂಕು ರಸ್ತೆ. ಆರುಗಂಟೆಗೆ ಕತ್ತಲಾಗಿಬಿಟ್ಟಿದೆ. ಏನು ಮಾಡುವುದು? ವಿಮಲ್ ಪೆಟ್ರೋಲ್ ಹಾಕಿಸದೇ ಇರುವುದು ನಮಗೆಲ್ಲಾ ಕೋಪ ಬಂದಿತ್ತು. ಆದ್ರೆ ಆ ಸಮಯದಲ್ಲಿ ಕೋಪ ಮಾಡಿಕೊಂಡರೇ ಏನು ಪ್ರಯೋಜನ.? ಮುನ್ನಾರು ತಲುಪುವುದು ಹೇಗೆ? ಅಷ್ಟರಲ್ಲಿ ವಿಮಲ್ ಒಂದು ಐಡಿಯಾ ಮಾಡಿದ. ತನ್ನ ಬಳಿಯಿದ್ದ ಒಂದು ಬ್ಯಾಟರಿಯನ್ನು ತನ್ನ ಅಟೋದ ಬಲಭಾಗಕ್ಕೆ ಕಟ್ಟಿ ಆನ್ ಮಾಡಿದ. ಅದರ ಬೆಳಕಿನಲ್ಲಿ ರಸ್ತೆಯನ್ನು ನೋಡಿಕೊಂಡು ಇಳೀಜಾರಿನಲ್ಲಿ ನಾವೆಲ್ಲಾ ಸಾಗುವುದು, ಇಳಿಜಾರು ಬಂದ ನಂತರ ಉಬ್ಬಿನ ರಸ್ತೆ ಬರಲೇಬೇಕಲ್ಲವೇ. ಸಾಧ್ಯವಾದಷ್ಟು ಬ್ರೇಕ್ ಹಿಡಿಯದೆ ಉಬ್ಬುರಸ್ತೆಯ ಕ್ರಮಿಸಿ ಆಟೋ ಐದುಸಿರು ಬಿಡುವಾಗ ಮತ್ತೆ ನಾವೆಲ್ಲಾ ಇಳಿದು ಕತ್ತಲ್ಲಲ್ಲಿ ಗೊತ್ತುಗುರಿಯಿಲ್ಲದೇ ತಳ್ಳುವುದು ಹೀಗೆ ಒಂದು ಕಿಲೋಮೀಟರ್ ಸಾಗಿತು. ಅಷ್ಟರಲ್ಲಿ ಬ್ಯಾಟರಿಯೂ ಕಣ್ಣುಕಾಣದ ಮುದುಕಿಯಂತೆ ನಿದಾನವಾಗಿ ಕಣ್ಣುಮುಚ್ಚಿತು. ಇನ್ನು ನಮಗೆ ದೇವರೇ ದಿಕ್ಕು. ಏನು ಮಾಡುವುದು, "ಸಾರ್ ಇನ್ನು ಒರೇ ಕಿಲೋಮೀಟರ್ ಸರ್, ಅಂಗೆ ಪ್ರೆಂಡ್ ಇರುಕ್ಕಾ, ಅಂದ ವೀಡಲ್ಲಿ ಪೆಟ್ರೋಲ್ ಇರುಕ್ಕು" ಅಂದ. ಅವನು ನಮ್ಮ ಸಮಾಧಾನಕ್ಕೆ ಹೇಳುತ್ತಿರಬಹುದು ಅಂದುಕೊಂಡು ರಾತ್ರಿ ಮುನ್ನಾರು ತಲುಪದಿದ್ದರೇ ನಾವು ಕಾಡಿನಲ್ಲಿ ಎಲ್ಲಾದರೂ ಮಲಗಬೇಕು ಅದಕ್ಕೆ ಏನು ಮಾಡಬೇಕು ಅನ್ನುವ ಅಲೋಚನೆಯಲ್ಲಿ ಮೂವರು ಮುಳುಗಿದ್ದೆವು. ನಮ್ಮನ್ನು ಉತ್ತೇಜಿಸಲು ವಿಮಲ್ ಅನೇಕ ಕಾಮಿಡಿಗಳನ್ನು ಮಾಡತೊಡಗಿದಾಗ ನಾವು ವಿಧಿಯಿಲ್ಲದೇ ಅವನ ಕಾಲೆಳೆಯುತ್ತಾ ಆಗು-ಹೀಗೂ ಮತ್ತೊಂದು ಕಿಲೋಮೀಟರ್ ಕತ್ತಲಲ್ಲಿ ತಳ್ಳು-ನೂಕು, ಹತ್ತು ನಡೆದೇ ಇತ್ತು. ಕೆಲವು ಮನೆಗಳು ದೀಪದಬೆಳಕಿನಲ್ಲಿ ಕಾಣಿಸಿದಾಗ ನಮಗೂ ಜೀವ ಬಂದಂತೆ ಆಗಿತ್ತು. "ಸರ್ ಪ್ರೆಂಡ್ ವೀಡ್ ಇಂಗೆ ಇರುಕ್ಕು" ಆಟೋ ಪಕ್ಕ ನಿಲ್ಲಿಸಿ ಅಲ್ಲೊಂದು ಮನೆಗೆ ಓಡಿದ. ಸಮಯವಾಗಲೇ ೭ ಗಂಟೆ ಮುವತ್ತು ನಿಮಿಷ. ಕಣ್ಣೆಷ್ಟೇ ಅಗಲಿಸಿದರೂ ಎದುರಿಗಿರುವವರು ಕಾಣದಿರುವಷ್ಟು ಕತ್ತಲು. ಒಂದು ಬಾಟಲಿಯಲ್ಲಿ ಪೆಟ್ರೋಲ್ ತಂದು ಹಾಕಿ ಮತ್ತೆ ಆಟೋ ಸ್ಟಾರ್ಟ್ ಮಾಡಿದನಲ್ಲ. ನಮಗೆಲ್ಲಾ ನಿಜಕ್ಕೂ ಮರುಜೀವ ಬಂದಂತೆ ಆಗಿತ್ತು. ಅಲ್ಲಿಂದ ಹತ್ತೇ ನಿಮಿಷದಲ್ಲಿ ಮುನ್ನಾರು ತಲುಪಿ ನಮ್ಮ ರೂಮು ತಲುಪಿದಾಗ ಆಗ ಹಸಿವಾಗುತ್ತಿದೆಯೆನ್ನಿಸಿತ್ತು. "ಸಾರಿ ಸರ್, ಮುಂದೆ ಇಂಗೆ ಆವಾದ್" ಅಂತ ವಿಮಲ್ ಸಂಕೋಚದಿಂದ ಕ್ಷಮೆ ಕೇಳಿದಾಗ, ನಮಗೆ ಅವನ ಮೇಲೆ ನಿಜಕ್ಕೂ ಕೋಪವಿರಲಿಲ್ಲ. ಅದಕ್ಕೆ ಬದಲಾಗಿ ಆರುಕಿಲೋಮೀಟರ್ ದೂರ ಆ ಕತ್ತಲಲ್ಲಿ ನಮಗೆಲ್ಲಾ ದೈರ್ಯ ತುಂಬಿ, ತಮಾಷೆ ಮಾತುಗಳನ್ನಾಡುತ್ತಾ ಸುರಕ್ಷಿತವಾಗಿ ತಲುಪಿಸಿದನಲ್ಲ ಅಂತ ಅವನ ಬಗ್ಗೆ ಖುಷಿಯೇ ಆಗಿತ್ತು. "ನಿನ್ನ ಸಾಹಸವನ್ನು ನಾವು ಮೆಚ್ಚಿದ್ದೇವೆ ನೀನು ಇವತ್ತು ನಮ್ಮ ಜೊತೇನೇ ಊಟ ಮಾಡು" ಅಂದೆವು. "ಇಲ್ಲೇ ಸರ್‍ ವೀಟಲ್ಲ್ ಎಲ್ಲಾ ಕಾತಿರಾಂಗ್" ಅಂದ. ನಾಳೆ ಮಾರ್ನಿಂಗ್ ಆರುವರೆಗೆ ವಾ" ಅಂತ ಹೇಳಿ ಕಳಿಸಿದೆವು.


ಮೊದಲೇ ಆಟೋ ತಳ್ಳಿ ನೂಕಿ ಸುಸ್ತಾಗಿದ್ದರಿಂದಾಲೋ ಅದೇ ರಸ್ತೆ ಬದಿಯಲ್ಲಿ ಆ ತಣ್ಣನೆ ಮೂರು ಡಿಗ್ರಿ ಚಳಿಯಲ್ಲಿ ಬಿಸಿಬಿಸಿ ದೋಸೆ ಇಡ್ಲಿ, ಸ್ಯಾವಿಗೆ ಪರಮಾನಂದವೆನಿಸಿತ್ತು. ಹೋಟಲ್ ರೂಮಿಗೆ ಬಂದು ಹಾಸಿಗೆ ಮೇಲೆ ಮೈಜಾಚುತ್ತಿದ್ದಂತೆ ಅದ್ಯಾವ ಮಾಯದಲ್ಲಿ ನಿದ್ರೆ ಆವರಿಸಿತೋ ಗೊತ್ತಿಲ್ಲ ಬೆಳಿಗ್ಗೆ ಐದುಗಂಟೆಗೆ ಮೊಬೈಲ್ ಅಲಾರಂ ಹೊಡೆದಾಗಲೇ ಎಚ್ಚರ.

ದೇವಿಕುಲಂ ರಸ್ತೆಯ ಬದಿಯಲ್ಲಿ ನಿಂತು ನೋಡಿದಾಗ ಕ್ಲಬ್ ಮಹೀಂದ್ರ ರೆಸಾರ್ಟ್ ನಮ್ಮ ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ.
ಮರುದಿನ ನಮ್ಮ ಪ್ರಯಾಣ ದೇವಿಕುಲಮ್ ರಸ್ತೆಯ ಕಡೆಗೆ. ಅದು ಮದುರೈ ಮತ್ತು ಮುನ್ನಾರಿನ ಮುಖ್ಯ ರಸ್ತೆ. ಪೆಟ್ರೋಲ್ ಪೂರ್ತಿ ಹಾಕಿಸಿಕೊಂಡು ಬಂದಿದ್ದ ವಿಮಲ್. ಅವನನ್ನು ಸುಮ್ಮನೇ ರೇಗಿಸುತ್ತಾ ಸಾಗುತ್ತಿರುವಾಗಲೇ ಅನೇಕ ಒಂಟಿಮನೆಗಳು, ಮರಗಳು ನಮ್ಮ ಕಣ್ಣಿಗೆ ಸೂರ್ಯನ ಹಿಂಬೆಳಕಲ್ಲಿ ಸಿಕ್ಕಿ ನಮ್ಮ ಕ್ಯಾಮೆರಾದಲ್ಲಿ ಸೆರೆಯಾದವು. ದೇವಿಕುಲಮ್‍ಗೆ ಮೂರು ಕಿಲೋ ಮೀಟರ್ ಮೊದಲೇ ನಮ್ಮ ಸುತ್ತೆಲ್ಲಾ ಹಸಿರು ಟೀ ತೋಟಗಳು ಕ್ಯಾಮೆರಾದಲ್ಲಿ ಮತ್ತು ನಮ್ಮ ಕಣ್ಣುಗಳಲ್ಲಿ ಸೆರೆಯಾದವು. ಹಾಗೆ ಸಾಗುತ್ತಿದ್ದಂತೆ ಅಲ್ಲೊಂದು ವಿಭಿನ್ನ ಘಟನೆ ನಮಗೂ ಮತ್ತು ಸೂರ್ಯನ ನಡುವೆ ನಡೆಯಿತು. ಅವತ್ತು ಬೆಳಿಗ್ಗೆಯಿಂದಲೇ ಅಲ್ಲಲ್ಲಿ ಮೋಡ ಚಲಿಸುತ್ತಿದ್ದವು. ನಡುವೆ ಸೂರ್ಯ ಇಣುಕಿ ಮಾಯವಾಗುತ್ತಿದ್ದ. ಹೀಗೆ ಸಾಗುತ್ತಿದ್ದಂತೆ. ನಮ್ಮ ಎಡಬದಿಯಲ್ಲಿ ಹಸಿರು ಟೀ ಎಸ್ಟೇಟಿನ ನಡುವೆ ಒಂದು ಸಣ್ಣ ದೇವಸ್ಥಾನ ಕಾಣಿಸಿತು. ಎಲ್ಲರೂ ಆಟೋ ಇಳಿದು ಅದರ ಫೋಟೊ ತೆಗೆದುಕೊಂಡೆವು. ಆದ್ರೆ ಅದು ನಮಗೆ ವಿಶೇಷವೆನ್ನಿಸಲಿಲ್ಲ. ಹಾಗಾದರೆ ವಿಶೇಷವೇನು? ಸುತ್ತೆಲ್ಲಾ ನೆರಳಿದ್ದು ಸೂರ್ಯನ ತಿಳಿಬೆಳಕು ಅದರ ಮೇಲೆ ಸ್ಪಾಟ್ ಲೈಟಿನಂತೆ ಬಿದ್ದಾಗ ಕಾಯ್ದು ಪೋಟೋ ಕ್ಲಿಕ್ಕಿಸುವುದೇ ನಮ್ಮ ಗುರಿ. ಅದಕ್ಕಾಗಿ ಕಾದೆವು. ಕೆಲವೊಮ್ಮೆ ಸೂರ್ಯನಿಗೆಷ್ಟು ಸೊಕ್ಕು ಅಂದರೆ ನಮ್ಮಂತ ಛಾಯಾಗ್ರಾಹಕರಿಗೆ ಬೇಕಂತಲೇ ಆಟವಾಡಿಸಿಬಿಡುತ್ತಾನೆ. ಸುಮಾರು ಅರ್ಧ ಗಂಟೆ ಕಾದರೂ ಸೂರ್ಯ ಬರಲಿಲ್ಲ. ಕೊನೆಗೆ ಸೂರ್ಯನನ್ನು ಚೆನ್ನಾಗಿ ಹೀಯಾಳಿಸಿ ಬೈದುಕೊಳ್ಳುತ್ತಾ, ಅಲ್ಲಿಂದ ಮುಂದೆ ದೇವಿಕುಲಮ್ ಕಡೆಗೆ ಹೊರಟೆವು. ವಿಮಲ್ ಆಸೆಯಂತೆ ಒಂದಾದರೂ ಪ್ರಯಾಣದ ಅಂತ್ಯವನ್ನು ಮುಟ್ಟಿದೆವಲ್ಲ ಅಂತ ಅವನಿಗೆ ಖುಷಿಯಾಯ್ತು. ಅಲ್ಲೇ ಟಿಫನ್ ಮಾಡಿ ವಾಪಸ್ ಹೊರಟೆವು. ದಾರಿಯುದ್ದಕ್ಕೂ ಮೋಡಗಳ ನಡುವೆ ಸೂರ್ಯ ಇಣುಕುವುದು ನಡೆದೇ ಇತ್ತು. ಮೊದಲೇ ನೋಡಿದ್ದ ದೇವಸ್ಥಾನಕ್ಕೆ ಒಂದು ಕಿಲೋಮೀಟರ್ ಇರುವಂತೆಯೇ ಆಕಾಶ ನೋಡಿದೆ. ಮೋಡಗಳು ದೇವಿಕುಲಮ್ ಕಡೆಯಿಂದ ಮುನ್ನಾರ್ ಕಡೆಗೆ ದಟ್ಟವಾಗಿ ಸಾಗುತ್ತಿದ್ದವು. ಆ ಮೋಡಗಳಾದರೂ ಕೂಡ ಒಂದು ಗುಂಪು ಸಾಗುವಷ್ಟರಲ್ಲಿ ಮತ್ತೊಂದು ಗುಂಪು ಅದೆಲ್ಲಿತ್ತೋ ತೇಲಿಬರುತ್ತಿತ್ತು. ಒಹೋ! ಈಗ ನಮಗಿರುವ ಅವಕಾಶವೆಂದರೆ ಒಂದು ಗುಂಪಿನ ಮೋಡಗಳು ತೇಲಿಹೋಗಿ ಮತ್ತೊಂದು ಮೋಡಗಳ ಗುಂಪು ಬರುವ ಸಮಯದ ನಡುವೆ ಇಣುಕುವ ಸೂರ್ಯನ ಬೆಳಕು ಖಂಡಿತ ಆ ದೇವಸ್ಥಾನದ ಮೇಲೆ ಸ್ಪಾಟ್ ಲೈಟಿನಂತೆ ಬೀಳುವುದು ಖಚಿತ. ಆ ಸಮಯದಲ್ಲಿ ಅಲ್ಲಿದ್ದರೇ ನಮಗೆ ಅದರ ಸುಂದರ ಫೋಟೋ ಸಿಗಬಹುದು ಅನ್ನಿಸಿತ್ತು. ವಿಮಲ್‍ಗೆ ನನ್ನ ಪ್ಲಾನ್ ವಿವರಿಸಿದೆ. ಅಷ್ಟರಲ್ಲಾಗಲೇ ಅವನಿಗೆ ನಮ್ಮ ನಾಡಿಮಿಡಿತ ಅರ್ಥವಾಗಿದ್ದರಿಂದ ಒಮ್ಮೆ ಆಕಾಶ ನೋಡಿದ. ನಮ್ಮ ಸುತ್ತ ಮುತ್ತ ಸೂರ್ಯನ ಬೆಳಕು ಸ್ಪಾಟ್ ಲೈಟಿನಂತೆ ಬಿದ್ದಿತ್ತು ಮುಂದೆಯೂ ಮೋಡ, ಹಿಂದೆಯೂ ಮೋಡ. ನಮ್ಮ ಮೇಲೆ ಬಿದ್ದ ಸ್ಪಾಟ್ ಲೈಟ್ ಹೀಗೆ ಸಾಗಿ ಖಂಡಿತ ಆ ದೇವಾಸ್ಥಾನದ ಮೇಲೆ ಬೀಳುತ್ತದೆ. ಅದರ ಪೋಟೊ ತೆಗೆಯುವುದೇ ನಮ್ಮ ಗುರಿ ಎಂದೆ. ಅವನಿಗೆ ಅರ್ಥವಾಗಿ ಸುಮಾರು ಒಂದು ಕಿಲೋಮೀಟರ್ ವೇಗವಾಗಿ ಆಟೋ ಓಡಿಸಿದ. ಅವನ ವೇಗ ಹೇಗಿತ್ತೆಂದರೇ ಮೋಡಗಳ ಜೊತೆಗೆ ಸಮಾನ ವೇಗವಾಗಿ ಚಲಿಸಿದ್ದರಿಂದ ಸುಮಾರು ಒಂದು ಕಿಲೋ ಮೀಟರ್ ನಮ್ಮ ಸೂರ್ಯನ ಬೆಳಕು ಸ್ಪಾಟ್ ಲೈಟಿನಂತೆ ನಮ್ಮ ದಾರಿಯುದ್ದಕ್ಕೂ ಬೀಳುವಂತೆ ವಿಮಲ್ ಆಟೋ ಓಡಿಸಿದ್ದ. ಸರಿಯಾದ ಸಮಯಕ್ಕೆ ದೇವಸ್ಥಾನದ ಸಮೀಪ ತಲುಪಿದ್ದೆವು. ನಮಗಿಂತ ಒಂದು ಪರ್ಲಾಂಗು ದೂರವಿದ್ದ ದೇವಸ್ಥಾನದ ಮೇಲೆ ನಮ್ಮ ಮೇಲೆ ಬಿದ್ದ ಸೂರ್ಯನ ಬೆಳಕು ಸ್ಪಾಟ್ ಲೈಟಿನಂತೆ ಬೀಳುತ್ತದೆ, ಅದನ್ನು ಕ್ಲಿಕ್ಕಿಸಲು ಕ್ಯಾಮೆರಾ ಸಹಿತ ಸಿದ್ದರಾದೆವು. ಸೂರ್ಯನ ಬೆಳಕು ನಿದಾನವಾಗಿ ನಮ್ಮನ್ನು ದಾಟಿ, ಟೀ ಎಸ್ಟೇಟಿನ ಮೇಲೆ ಚಲಿಸಿತ್ತು. ನಮ್ಮ ಕ್ಯಾಮೆರಾಗಳು ತಾಂತ್ರಿಕವಾಗಿ ಎಲ್ಲಾ ಸರಿಮಾಡಿಕೊಂಡಿದ್ದೇವಾ ಅಂತ ನೋಡಿಕೊಂಡೆವು. ಕೆಲವೇ ಸೆಕೆಂಡುಗಳಲ್ಲಿ ನಿದಾನವಾಗಿ ಸ್ಪಾಟ್ ಲೈಟಿನಂತೆ ದೇವಸ್ಥಾನದ ಮೇಲೆ ಬಿದ್ದ ಸೂರ್ಯನ ಬೆಳಕಿನಲ್ಲಿ ಆ ದೇವಸ್ಥಾನದ ಫೋಟೊಗಳನ್ನು ಮೈಮರೆತು ಕ್ಲಿಕ್ಕಿಸುತ್ತಿರುವಾಗ ನಮ್ಮ ಅಕ್ಕ ಪಕ್ಕ ಏನಾಗುತ್ತಿದೆ ಎನ್ನುವುದನ್ನು ಮೈಮರೆತುಬಿಟ್ಟಿದ್ದೆವು.
ಇಪ್ಪತ್ತು ಸೆಕೆಂಡುಗಳಷ್ಟೇ. ಅದ್ಯಾವ ಕ್ಷಣದಲ್ಲಿ ಬೆಳಕು ಚಲಿಸಿ ದೇವಸ್ಥಾನ ದಾಟಿಹೋಗಿತ್ತೋ ಗೊತ್ತಾಗಲಿಲ್ಲ. ಪೋಟೊ ತೆಗೆಯುವುದು ನಿಲ್ಲಿಸಿ ಒಮ್ಮೆ ಸುತ್ತಲೂ ನೋಡಿದಾಗಲೇ ನಮಗೆ ಗೊತ್ತಾಗಿದ್ದು, ನಾವು ಪೋಟೊ ತೆಗೆಯುವ ತನ್ಮಯತೆಯಲ್ಲಿ ನಡು ರಸ್ತೆಯಲ್ಲಿ ನಿಂತಿರುವುದು ನಮಗೇ ಗೊತ್ತಿರಲಿಲ್ಲ. ಎರಡು ಕಡೆಯಿಂದ ಲಾರಿಗಳು, ಬಸ್ಸುಗಳು, ಕಾರುಗಳು ಸಾಲಾಗಿ ನಿಂತು ಹಾರ್ನ್ ಮಾಡುತ್ತಿರುವುದು ನಮಗೇ ಗೊತ್ತೇ ಆಗಿರಲಿಲ್ಲ. ಎರಡು ಕಡೆ ರಸ್ತೆಯಲ್ಲಿ ಸಣ್ಣ ಮಟ್ಟಿನ ಟ್ರಾಫಿಕನ್ನು ಪರೋಕ್ಷವಾಗಿ ಸೃಷ್ಟಿಸಿಬಿಟ್ಟಿದ್ದೆವು. ಎಚ್ಚೆತ್ತುಕೊಂಡು ಅವರಿಗೆಲ್ಲಾ ಸಾರಿ ಹೇಳಿ ದಾರಿಮಾಡಿಕೊಟ್ಟಾಗಲೇ ನಮಗೇ ವಾಸ್ತವ ಜಗತ್ತು ಅರಿವಾಗಿತ್ತು. ಇದರ ನಡುವೆ ಯಾವಾನಾದ್ರೂ ತಲೆಕೆಟ್ಟ ಬಸ್ಸೋ, ಕಾರೋ ವೇಗವಾಗಿ ನುಗ್ಗಿಬಂದಿದ್ದರೇ ನಮ್ಮ ಕತೆ ಅಲ್ಲಿಗೇ ಮುಗಿದು ಈ ಲೇಖನ ಬರೆಯಲು ಸಾಧ್ಯವಾಗುತ್ತಿರಲಿಲ್ಲವೇನೋ. ವಿಮಲ್‍ಗೂ ನಮ್ಮ ಪೋಟೊಗ್ರಫಿ ಭಾಷೆ, ಅದರ ಆನಂದ ಅರ್ಥವಾಗಿದ್ದರಿಂದ ಮೈಮರೆತು ಆ ದೃಶ್ಯವನ್ನು ತನ್ಮಯನಾಗಿ ನೋಡುತ್ತಾ ನಿಂತುಬಿಟ್ಟಿದ್ದ.

ಅಂಥ ಅದ್ಬುತ ಕ್ಷಣವನ್ನು ಕ್ಲಿಕ್ಕಿಸಿದ ನಮಗೆ ಇನ್ಯಾವುದೇ ಫೋಟೊ ಕ್ಲಿಕ್ಕಿಸುವ ಮನಸ್ಸಿರಲಿಲ್ಲ. ಅಷ್ಟರ ಮಟ್ಟಿಗೆ ತೃಪ್ತಿ ನಮ್ಮ ಮುಖದಲ್ಲಿ ತುಂಬಿ ತುಳುಕುತ್ತಿತ್ತು. ವಿಮಲ್ ಕೂಡ ಖುಷಿಯಿಂದ ಆಟೊ ಓಡಿಸುತ್ತಿದ್ದ. ವಿಮಲನನ್ನು ಕೆಣಕಬೇಕೆನ್ನಿಸಿ "ವಿಮಲ್ ನೆಕ್ಸ್ಟ್ ನಾವ್ ಮುನ್ನಾರಿಕ್ಕೂ ಖಂಡಿತ ವರುವೆವು. ಅದಕ್ಕೂ ಪಿನಾಲೆ ನೀ ಒರು ಪಣ್ಣುವೆಯಾ? ಪ್ರಶ್ನಿಸಿದೆ. "ಖಂಡಿತ ಪಣ್ಣುವೆ ಸೊಲ್ಲುಂಗ್ ಸಾರ್" ಅಂದ. "ಅದು ಒಣ್ಣು ಇಲ್ಲೇ, ನೀ ಅಂದ ದೇವಸ್ಥಾನಕ್ಕೂ ಕೊಂಚ ಮಂಜ[ಆರೆಂಜ್]ಕಲರ್ ಪೇಂಟ್ ಪಣ್ಣು. ಅಪ್ರಮಾ ಅದು ಫೋಟೊಗ್ರಫಿಕ್ಕೂ ರೊಂಬ ನಲ್ಲ ಇರುಕುದು, ತೆರಿಮಾ" ಅಂದೆ. ನನ್ನ ಮಾತನ್ನು ಕೇಳಿ ಮಲ್ಲಿ, ಮಂಜು ವಿಮಲ್ ಎಲ್ಲರೂ ಜೋರಾಗಿ ನಕ್ಕರು. ಆಟೋ ನಿದಾನವಾಗಿ ಮುನ್ನಾರು ತಲುಪುತ್ತಿತ್ತು.


ಪ್ರವಾಸ ಕಥನ ತುಂಬಾ ದೊಡ್ಡದಾಯಿತೆಂದೂ ಇಲ್ಲಿಗೇ ನಿಲ್ಲಿಸಿದ್ದೇನೆ. ಇನ್ನೂ ಮುನ್ನಾರಿನ ನೀಲಗಿರಿ ಥಾರ್, ಕುರುಂಜಿ ಹೂ, ಮುನ್ನಾರು ನಗರ ಸುತ್ತಾಟ ಮುನ್ನಾರು ಚಾಕಲೆಟ್, ಕ್ಯಾರೆಟ್ಟು, ಸರೋವರದಲ್ಲಿ ಸಿಕ್ಕ ಸುಂದರ ಸಾಲು ಹುಡುಗಿಯರು, ಅಲ್ಲಿಂದ ಬೆಂಗಳೂರಿಗೆ ವಾಪಸ್ ಬಂದಿದ್ದು ಇತ್ಯಾದಿಗಳ ಬಗ್ಗೆ ಬರೆಯುವುದಿದೆ. ನಿಮಗೆಲ್ಲಾ ಬೇಸರವಾಗಬಹುದೆಂದು ಇಲ್ಲಿಗೆ ನಿಲ್ಲಿಸಿದ್ದೇನೆ. ನೀವು ಇಷ್ಟ ಪಟ್ಟರೆ ಮುಂದೆ ಅದನ್ನು ಬರೆಯುತ್ತೇನೆ. ಅದಕ್ಕಾಗಿ ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ತಿಳಿಸಿ.

ಧನ್ಯವಾದಗಳು.

ಚಿತ್ರ ಮತ್ತು ಲೇಖನ.

ಶಿವು.ಕೆ.

71 comments:

balasubramanya said...

ಶಿವೂ ನಿಮ್ಮ ಬರಹ ಚಿತ್ರಗಳಷ್ಟೇ ಸುಂದರ!!!ಫೋಟೋ ಗಳು ನನ್ನ ಕಣ್ಣನ್ನು ಕುಕ್ಕಿವೆ!![ಹಿಂದೆ ನೀವು ನನಗೆ ಬರೆದಿದ್ದ ಮಾತು ] .ನಮ್ಮ ಬರಹ ಮುಂದುವರೆಯಲಿ.

balasubramanya said...

ನಮ್ಮ ನೆಚ್ಚಿನ ಬರಹ ಎನ್ನಲು ಹೋಗಿ ನಮ್ಮ ಬರಹ ಆಗಿದೆ!!ನಮ್ಮ್ಮ ನೆಚ್ಚಿನ ಬರಹ ಅಂತ ಓದಿಕೊಳ್ಳಿ .

ಜಲನಯನ said...

ಶಿವು ನಾನು ಈ ಮುಂಚೆಯೇ ನನ್ನ ಮಾತನ್ನು ಹೇಳಿದ್ದೇನೆ...ನಿಮ್ಮ ಚಿತ್ರಗಳ ಸೊಬಗು ಕಣ್ಣಿಗೆ ಹಬ್ಬವಾದರೆ ನಿಮ್ಮ ಬರಹ ಓದಲು ಸೊಬಗು...ಎರಡೂ ಒಂದೇ ಕಡೆ ಬಂದರೆ...ಕೇಳಬೇಕೆ??

umesh desai said...

ಶಿವು ಮೂರನೇ ಭಾಗಾನೂ ಚೆನ್ನಾಗಿದೆ ಹಾಗೆಯೇ ಫೋಟೋಗಳು...!

ಚುಕ್ಕಿಚಿತ್ತಾರ said...

ಶಿವು ಸರ್..
ಫೋಟೋಗ್ರಫಿಯಲ್ಲಿ ಇಷ್ಟೆಲ್ಲಾ ತರ್ಕ ಕೆಲಸ ಮಾಡುತ್ತದೆ೦ದು ಗೊತ್ತಿರಲಿಲ್ಲ.
ಪ್ರಕ್ರುತಿಯೊ೦ದಿಗಿನ ನೆರಳು ಬೆಳಕಿನಾಟ ಒಳ್ಳೆ ಪತ್ತೆದಾರಿ ಕಥೆಯ೦ತೆ ಸಾಗುತ್ತಿದೆ...
ನೀವು ಉಳಿದ ಭಾಗಗಳನ್ನೂ ಬರೆದರೆ ಓದುವ ಭಾಗ್ಯ ನಮ್ಮದಾಗುತ್ತದೆ.......!
ವ೦ದನೆಗಳು.

Guruprasad said...

ಶಿವೂ,,,
ನಿಮ್ಮ ಫೋಟೋ ಗಳು,, ಅದರ ನವಿರಾದ ವಿವರಣೆ,,,,ವರ್ಣಿಸಲು ಪದಗಳೇ ಇಲ್ಲ... ನಿಮ್ಮ ಜೊತೆ ನಾವು ಬಂದು ಫೋಟೋಗ್ರಫಿ ಮಾಡ್ತಾ ಇದ್ದಿವೇನೋ ಅಂತ ಅನಿಸ್ತ ಇದೆ... ಪ್ಲೀಸ್ ಮುಂದುವರಿಸಿ ಸರ್.... ತುಂಬ ಚೆನ್ನಾಗಿ ಇದೆ......ಏನು ಬೇಜಾರ್ ಆಗೋಲ್ಲ.....ನೀವು ತೆಗೆದಿರುವ ಫೋಟೋಗಳನ್ನು ನೋಡುವುದೇ ಒಂದು ಆನಂದ

ವನಿತಾ / Vanitha said...

ಶಿವು, ವಿಮಲ್ ಜೊತೆಗೆ ನಿಮ್ಮ ಆಟೋ ಪ್ರಯಾಣ ಸಕತ್ತಾಗಿದೆ..:-) ರೊಂಬ ನಲ್ಲಯಿರುಕ್ಕುದು ಸರ್..
ಜೊತೆಗೆ ಕೆಂಪು ಮರ, ದೇವಸ್ಥಾನದ ಫೋಟೋ ಎಲ್ಲ ಅತ್ಯುತ್ತಮ.ಮುಂದುವರೆಸುವಂತವರಾಗಿ..

ಮನಮುಕ್ತಾ said...

ಶಿವು ಅವರೆ,

ಆಗ ನಿಸರ್ಗದ ಕಸೂತಿಯ ಚಿತ್ತಾರ,
ಈಗ ಬಣ್ಣಗಳ ಕೌತುಕದ ಮಹಾಸಾಗರ,
ಶಿವುರವರ ಫೋಟೋಗ್ರಫಿಯ ಚಮತ್ಕಾರ,
ಕಣ್ಮನ ತಣಿಸಿವೆ ಎಲ್ಲ ನೋಡುಗರ,
ಬರಹಗಳು ನೀಡಿವೆ ಅನುಭವದ ಆಗರ,
ಓದುಗರ ಮನದಲಿ ಸ೦ತಸದ ಮಹಪೂರ.

ಬರಹ ಮತ್ತು ಚಿತ್ರಗಳನ್ನು ತು೦ಬಾ ಚೆನ್ನಾಗಿ ನೀಡಿದ್ದೀರಿ.
ಧನ್ಯವಾದಗಳು.

ತೇಜಸ್ವಿನಿ ಹೆಗಡೆ said...

ಚಿತ್ರಗಳು ತುಂಬಾ ಅದ್ಭುತವಾಗಿ ಬಂದಿವೆ. ಕಣ್ತುಂಬಿಕೊಂಡೆ ಚಿತ್ರಗಳನ್ನು. ಅದರಲ್ಲೂ ಎರಡನೆಯ ಮತ್ತು ಮೂರನೆಯ ಚಿತ್ರಗಳಂತೂ ಮತ್ತೂ ಇಷ್ಟವಾದವು. ಧನ್ಯವಾದಗಳು.

ಸವಿಗನಸು said...

ಶಿವು ಸರ್,
ಫೋಟೋಗ್ರಫಿ ತುಂಬಾ ಅದ್ಭುತವಾಗಿದೆ....
ಎನಕಿ ರೊಂಬ ಪುಡುಚಿ..... ಇಷ್ಟವಾದವು.....
ಧನ್ಯವಾದಗಳು....

ಆನಂದ said...

ಶಿವೂ ಸರ್, ದಯವಿಟ್ಟು ಮುಂದುವರಿಸಿ. ನಿಮ್ಮ ಫೋಟೋಗಳು, ಲೇಖನ ಚೆನ್ನಾಗಿವೆ.
ಮುಂದಿನ ಭಾಗದಲ್ಲಿ 'ಸರೋವರದಲ್ಲಿ ಸಿಕ್ಕ ಸುಂದರ ಸಾಲು ಹುಡುಗಿಯರು'(ಬಾತುಕೋಳಿಗಳು ಅಲ್ಲ ತಾನೇ).... ಹ್ಮ...ಕುತೂಹಲ ಹೆಚ್ಚಾಗುತ್ತಿದೆ. :)

shivu.k said...

Susheela nair said:

Great photograph. Looks like a picture post card. Where is this temple and the name of this temple?

Susheela nair.
Bangalore.

Subrahmanya said...

ಚಿತ್ರಗಳೆಲ್ಲಾ ಅಧ್ಭುತವಾಗಿವೆ...ವಿವರಣೆಯೂ ಒಂದು ಟೂರ್ ಮಾಡಿದಂತೆಯೇ ಅನಿಸುತ್ತಿದೆ....heegee ಮುಂದುವರಿಸಿ ..

sunaath said...

ಶಿವೂ,
ಪೆಟ್ರೋಲ್ ತೀರಿ, ನೀವು ನಡುಕಾಡಿನ ರಸ್ತೆಯಲ್ಲಿ ನಿಂತಿದ್ದು ಓದಿ ಎದೆ ಝಲ್ ಎಂದಿತು. Thank God, ಸುರಕ್ಷಿತವಾಗಿ ಮರಳಿದಿರಿ.
ನಿಮ್ಮ ಸಾಹಸಗಾಥೆಯನ್ನು ಮುಂದುವರೆಸಿ.

Raghu said...

ಒಳ್ಳೆಯ ಬರಹ...ಚೆನ್ನಾಗಿ ಸಾಗ್ತಾ ಇದೆ ಕಥೆ.. ಅದರ ಜೊತೆಗೆ ನಾವು ಕೂಡ... ನಿಲ್ಲಿಸಬೇಡಿ ಮುಂದುವರಿಸಿ..
ನಿಮ್ಮವ,
ರಾಘು.

Nisha said...

Shivu sir
Nimma baraha hagu sundaravada chitragalu namage nave munnar ge hogi allina soundaryavannu anubhavisida hagide. Dayavittu munduvaresi.

ಮನಸು said...

wow enta photogaLu nijakku tumba chennagive... vivarne chennagi tiLisiddeeri.

Unknown said...

ಶಿವು,
ನಿಮ್ಮ ಈ ಬರವಣಿಗೆಯನ್ನು ನಾನು ಓದುತ್ತಿದ್ದೇನೆ. ಅದರ ಬಗ್ಗೆ ಇಲ್ಲಿ ಕಾಮೆಂಟ್ ಮಾಡುವುದಕ್ಕಿಂತ ನಿಮ್ಮೊಂದಿಗೆ ಲೋಕಾಭಿರಾಮವಾಗಿ ಮಾತನಾಡುವುದೇ ಒಳ್ಳೆಯದೆಂದು ಸುಮ್ಮನಾಗಿದ್ದೇನೆ. ನಿಮ್ಮ ಬರವಣಿಗೆಗೆ ಹೊರಗಿನ ಪ್ರೇರಣೆಗಿಂತ ನಿಮ್ಮೊಳಗಿನ ಪ್ರೇರಣೆಯೇ ಮುಖ್ಯ. ಬ್ಲಾಗ್ ಓದುಗರ ಕಾಮೆಂಟ್ ಗಳ ಮೇಲೆ ನಿಮ್ಮ ಬರವಣಿಗೆಯನ್ನು ಮುಂದುವರೆಸುವ ಯೋಚನೆ ಮಾಡಬೇಡಿ. ಬರೆಯಬೇಕೆಂಬ ಬೇಗುದಿಗೆ ತಲೆಬಾಗಿದರೆ ಸಾಕು!

Unknown said...

Chennaagide... Munduvarisi saar

Pramod P T said...

ಹಾಯ್ ಶೀವು,

ನೀವೇಲ್ಲೆ ಫೋಟೊಗ್ರಫಿ ಗಂತ ಹೋದ್ರೂ ’ವಿಮಲ್’ ನಂತವರು ಸಿಕ್ಕೇ ಸಿಗ್ತಾರಲ್ಲಾ. ಚೆನ್ನಾಗಿದೆ ಅನುಭವದ ರಸದೌತಣ.
ನೀವು ಮುಖ್ಯವಾಗಿ ಫೋಟೊಗ್ರಫಿ ಯ ಅನುಭವದ ಬಗ್ಗೆ ಬರೀತಿರೋದ್ರಿಂದ ಬರವಣಿಗೆಯಷ್ಟೆ importance ಫೋಟೊಗಳಿಗೂ ಇರೋದ್ರಿಂದ, ಫೋಟೊಗಳ ಸಂಖ್ಯೆ ಕಡಿಮೆ ಆಯ್ತು ಅಂತ ನನ್ನ ಅನಿಸಿಕೆ. ಇನ್ನೂ ಒಂದಿಷ್ಟು ಫೋಟೊಗಳಿದ್ದರೆ ಚೆನ್ನ. ಮುಂದುವರೆಸಿ.

PARAANJAPE K.N. said...

ಚಿತ್ರ-ಕಥೆ ಎರಡೂ ಚೆನ್ನಾಗಿವೆ. ನಿಮ್ಮ ಜೊತೆ ಒ೦ದು ಸಲ ಪ್ರವಾಸಕ್ಕೆ ಬರುವ ಮನಸಾಗುತ್ತಿದೆ,

ಯಜ್ಞೇಶ್ (yajnesh) said...

excellent fotos sir

ಕ್ಷಣ... ಚಿಂತನೆ... said...

ಶಿವೂ ಸರ್‍,
ಬರಹ + ಛಾಯಾಚಿತ್ರಗಳು ತುಂಬಾ ಚೆನ್ನಾಗಿವೆ. ಅದರಲ್ಲಿಯೂ ನಿಮ್ಮ ತಲ್ಲೀನತೆಯನ್ನು ಬರಹದಲ್ಲಿ ಓದಿದಾಗ, ಅಬ್ಬಾ!! ಎನ್ನಿಸಿತು.

ಫೋಟೋಗಳಂತೂ ಮನಸ್ಸನಲ್ಲಿ ಮನೆಮಾಡಿಕೊಂಡು ಬಿಡುತ್ತಿವೆ. ಇನ್ನು ನಾವು ಅಲ್ಲಿಗೇ ಹೋಗಿ ನೋಡಿದ್ದರೆ ಹೇಗಿರಬಹುದು? ಎಂದೂ ಅನಿಸತೊಡಗಿದೆ.

ಕೆಂಪು ಹೂ/ಎಲೆಗಳಿಂದ ಕೂಡಿರುವ ಚಿತ್ರವಂತೂ ವಾಹ್!! ಒಂದಕಿಂತ ಒಂದು ಸುಂದರ.

ಸ್ನೇಹದಿಂದ,

ದಿನಕರ ಮೊಗೇರ said...

ಶಿವೂ ಸರ್,
ಮೇಲಿನ ಎಲ್ಲಾ ಕಾಮೆಂಟ್ ಓದಿ ನಂತರ ಬರೆಯುತ್ತಿದ್ದೇನೆ..... ಎಲ್ಲರಿಗೂ ನಿಮ್ಮ ಪ್ರವಾಸ ಕಥನ ತುಂಬಾ ಇಷ್ಟವಾಗಿದೆ..... ನಿಮ್ಮ ನಿರೂಪಣೆ ಹೇಗಿದೆ ಎಂದರೆ ನಿಮ್ಮ ಜೊತೆ ನಾವೂ ಪರಾಯಣ ಮಾಡಿದ ಹಾಗಿದೆ.... ಎಲ್ಲಾ ಫೋಟೋಗಳೂ ಸೂಪರ್... ಕೆಂಪು ಮರದ ಫೋಟೋ, ದೇವಸ್ತಾನದ ಫೋತೊಗಲಂತೂ ತುಂಬಾ ತುಂಬಾ ತುಂಬಾ ಚೆನ್ನಾಗಿವೆ...... ದಯವಿಟ್ಟು ಮುಂದುವರೆಸಿ........ ಎಲ್ಲಿಗೆ ಬಂತು ನಿಮ್ಮ ಮುಂದಿನ ಪುಸ್ತಕದಕೆಲಸ......

ಸಾಗರದಾಚೆಯ ಇಂಚರ said...

ಶಿವೂ ಸರ್
ಮತ್ತೊಂದು ಸುಂದರ ಬರಹ
ಅದ್ಭುತ ಫೋಟೋಗಳು
ನಿಮ್ಮ ಶೈಲಿ ತುಂಬಾ ಚೆನ್ನಾಗಿದೆ
ನಿಮ್ಮ ಪ್ರವಾಸ ಕಥನಗಳನ್ನು ಪುಸ್ತಕ ರೂಪದಲ್ಲಿ ಹೊರ ತನ್ನಿ

Prashanth Arasikere said...

hi shivu nimma photo tegivuya hindina anubava keltha idre navu nimma jothe idda hage annustha ide..tumba chennagide nimma photo

ದೀಪಸ್ಮಿತಾ said...

ಸೂರ್ಯ ಮೋಡದ ಬೆಳಕಿನ ಆಟ ಸುಂದರ. ಅದನ್ನು ಎಲ್ಲರಿಗೂ ತೋರಿಸುವುದು ಕಲಾವಂತಿಕೆ. ನಿಮ್ಮ ಬರಹ, ಮತ್ತು ಚಿತ್ರಗಳು ಇದನ್ನು ಚೆನ್ನಾಗಿ ಮಾಡಿದೆ

ಸೀತಾರಾಮ. ಕೆ. / SITARAM.K said...
This comment has been removed by the author.
ಸೀತಾರಾಮ. ಕೆ. / SITARAM.K said...

ಚೆ೦ದದ ನಿರೂಪಣೆ. ಜೊತೆಗೆ ತಮ್ಮ ಸಾಹಸಯಾತ್ರೆಯ ಮತ್ತು ಬವಣೆಗಳ ಚಿತ್ರಣ, ಅದಕ್ಕೊಪ್ಪುವ ಮನಮೋಹಕ ಛಾಯಚಿತ್ರ -ಒಟ್ಟಿನಲ್ಲಿ ಲೇಖನ ಅದ್ಭುತವಾಗಿದೆ. ವಿಮಲ್-ನ ಕಥೆ ನವಿರು ಹಾಸ್ಯಲೇಪನವನ್ನು ನೀಡಿದೆ. ಲೇಖನ ಮು೦ದುವರೆಸಿ -ಸಾಲು ಸು೦ದರ ಹುಡುಗಿಯರು, ಕ್ಯಾರಟ್, ಹೂ, ಚಾಕಲೇಟ್ -ಏನು ಎನ್ನುವ ಕುತೂಹಲ ಮೂಡಿದೆ.

Rakesh Holla said...

Tumba chenngide part3...
Beautiful photos...

ಶಿವಪ್ರಕಾಶ್ said...

ಚಿತ್ರಗಳು ಹಾಗು ನಿರೂಪಣೆ ಚನ್ನಾಗಿದೆ.

ಲೇಖನ ಉದ್ದವಾದಸ್ಟು ಕಂಪ್ಯೂಟರ್ ಮುಂದೆ ಕುಳಿತು ಓದುವುದು ಸ್ವಲ್ಪ ಕಷ್ಟವಾಗುತ್ತದೆ. ಇದು ನನ್ನ ಅಭಿಪ್ರಾಯ ಅಸ್ಟೆ.

ಹರೀಶ ಮಾಂಬಾಡಿ said...

ಕಥನ ಮುಂದುವರಿಸಿ.
ನಾಗರಹಾವಿನ ಫೋಟೊ ಚೆನ್ನಾಗಿದೆ.! :)

b.saleem said...

ಶಿವು ಸರ್,
ಮುನ್ನಾರ ಪ್ರವಾಸ ಅನುಭವಳನ್ನು ಮೂರನೆ ಕಂತಿನಲ್ಲಿ
ಮುಗಿಸುವ ಭರದಲ್ಲಿ ಬರಹ ಸ್ವಲ್ಪ ವೇಗ ಪಡೆದುಕೊಂಡಿದೆ.
ಪ್ರವಾಸದ ಉಳಿದ ಭಾಗಗಳನ್ನು ಪ್ರಕಟಿಸಿ.
ಉಳಿದಂತೆ ಫೊಟೊಗಳೂ ಸುಂದರವಾಗಿವೆ.

AntharangadaMaathugalu said...

ಶಿವು ಸಾರ್...
ಮಾತು ಮರೆತುಹೋಗಿತ್ತು ನಿಮ್ಮ ಚಿತ್ರಗಳನ್ನು ನೋಡಿ.... simply superb !!! ಮುಂದುವರೆಸಿ ನಿಮ್ಮ ಕಥೆಯನ್ನೂ ಚೆನ್ನಾಗಿದೆ..........

ಶ್ಯಾಮಲ

Prabhuraj Moogi said...

ನೀವು ಸುತ್ತಾಡಿದ್ದಲ್ಲದೇ ನಮಗೂ ಮುನ್ನಾರ್ ಪ್ರವಾಸ ಮಾಡಿಸಿದ್ದೀರಿ.... ಸೂರ್ಯ ಕಿರಣ ಸ್ಪಾಟ್ ಲೈಟ್‌ನಂತೆ ಬಿದ್ದ ಆ ದೇವಸ್ಥಾನದ ಫೋಟೊ ಬಹಳ ಇಷ್ಟವಾಯಿತು...

ಸುಧೇಶ್ ಶೆಟ್ಟಿ said...

ರವಷ್ಟು ಬೋರು ಆಗಿಲ್ಲ... ಓದುತ್ತಾ ಓದುತ್ತಾ ನಮ್ಮನ್ನೆ ಮರೆಸುವ ಹಾಗಿದೆ ಶಿವಣ್ಣ...

ಪ್ಲೀಸ್ ಮು೦ದುವರಿಸಿ :)

shivu.k said...

ನಿಮ್ಮಳಗೊಬ್ಬ ಬಾಲು ಸರ್,

ಮುನ್ನಾರಿನ ಚಿತ್ರಗಳು ಮತ್ತು ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್ ಹೀಗೆ ಬರುತ್ತಿರಿ..

shivu.k said...

ಅಜಾದ್ ಸರ್,
ನನ್ನ ಬರಹ ಮತ್ತು ಚಿತ್ರಗಳನ್ನು ನೋಡುವುದು ಹಬ್ಬವೆಂದು ಹೇಳಿದ್ದೀರಿ. ಮುಂದೆಯೂ ಎರಡು ಒಟ್ಟಿಗೇ ಸಿಗುವಂತೆ ನೋಡುಕೊಳ್ಳುತ್ತೇನೆ ಸರ್.

shivu.k said...

ದೇಸಾಯ್ ಸರ್,

ಲೇಖನದ ಮೂರನೇ ಭಾಗವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

shivu.k said...

ಚುಕ್ಕಿ ಚಿತ್ತಾರ ವಿಜಯಶ್ರಿ ಮೇಡಮ್,

ನಮ್ಮ ಫೋಟೊಗ್ರಫಿ ಪ್ರವಾಸಗಳು ಕೆಲವೊಮ್ಮೆ ಖಂಡಿತ ಪತ್ತೆದಾರಿ ಕತೆಗಳಂತೆ ಸಾಗುತ್ತದೆ. ಇನ್ನು ಕೆಲವನ್ನು ಮುಂದೆ ಬರೆಯುವುದಿದೆ. ಅವು ಇವಕ್ಕಿಂತ ಕುತೂಹಲಕರಿಯಾಗಿವೆ. ಅವು ಯಾಕೆ ಕುತೂಹಲ ಕಾರಿಯಾಗಿವೆ ಅಂದರೆ ನಾವು ಕ್ಲಿಕ್ಕಿಸುವದು ಏನನ್ನು ಅಂತ ಮೊದಲೇ ಗೊತ್ತಿರುವುದಿಲ್ಲ. ಮತ್ತೆ ಅತ್ಯುತ್ತಮವಾದದ್ದು ಬೇಕೆಂದು ಅದರ ಹಿಂದೆ ಬಿದ್ದಾಗ ಇಷ್ಟು ಸಾಹಸ ಬೇಕಾಗುತ್ತದೆ.
ಇನ್ನಷ್ಟು ಬರೆಯುವುದಕ್ಕೆ ಪ್ರೋತ್ಸಾಹ ನೀಡುತ್ತಿದ್ದೀರಿ..
ಧನ್ಯವಾದಗಳು.

shivu.k said...

ಗುರು,

ನಮ್ಮ ಫೋಟೋಗ್ರಫಿಯ ಜೊತೆಗೆ ನಿರೂಪಣೆಯನ್ನು ಮೆಚ್ಚಿದ್ದೀರಿ. ಇದನ್ನು ಚಿಕ್ಕದಾಗಿ ಬರೆಯಲು ಪ್ರಯತ್ನಿಸಿದಾಗ ಅನೇಕ ಕುತೂಹಲಕಾರಿ ವಿಚಾರಗಳು ತಪ್ಪಿಹೋಗುತ್ತವೆ ಎನ್ನುವ ಸಂಕಟ. ಎಲ್ಲವನ್ನು ಬರೆದಾಗ ಹೀಗೆ ಲೇಖನ ದೊಡ್ಡದಾಗಿಬಿಡುತ್ತದೆ. ಅದರೂ ತಾಳ್ಮೆಯಿಂದ ಓದಿ ಖುಷಿಪಡುತ್ತೀರಲ್ಲ ಅದಕ್ಕೆ ಧನ್ಯವಾದಗಳು.

shivu.k said...

ವನಿತಾ,

ನೀವು ತಮಿಳು ಮಾತಾಡಿಬಿಟ್ರ, ಮುನ್ನಾರು ಚಿತ್ರಗಳು ಮತ್ತು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.. ಆಟೊ ವಿಮಲ್‍‍ನಂತವರು ನಮ್ಗೆ ಪ್ರತಿ ಪ್ರವಾಸದಲ್ಲೂ ಸಿಗುತ್ತಾರೆ. ಮುಂದಿನಲೇಖನಕ್ಕೂ ಹೀಗೆ ಬನ್ನಿ.

shivu.k said...

ಮನಮುಕ್ತರವರೆ,

ಮುನ್ನಾರು ಪ್ರವಾಸ ಲೇಖನ ಮೆಚ್ಚಿ ಒಂದು ಕವನವನ್ನೇ ಬರೆದಿದ್ದೀರಿ ಅದಕ್ಕಾಗಿ ಧನ್ಯವಾದಗಳು.

ಹೀಗೆ ಬರುತ್ತಿರಿ.

shivu.k said...

ತೇಜಸ್ವಿನಿ ಮೇಡಮ್,

ಮುನ್ನಾರಿನ ಚಿತ್ರಗಳನ್ನು ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು.

shivu.k said...

ಸವಿಗನಸು ಮಹೇಶ್ ಸರ್,

ಚಿತ್ರಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಆನಂದ್ ಸರ್,

ಮುನ್ನಾರು ಪ್ರವಾಸ ಲೇಖನಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದೀರಿ. ಮೊದಲ ಎರಡು ಭಾಗಗಳನ್ನು ಬಿಡುವು ಮಾಡಿಕೊಂಡು ಓದಿ. ಮತ್ತೆ ಸರೋವರದಲ್ಲಿ ಸಾಲು ಹುಡುಗಿಯರು ಅಂದ್ರೆ ಬಾತುಕೋಳಿಗಳು ಅಲ್ಲ ಸರ್, ಅವರು ನಿಜಕ್ಕೂ ಸುಂದರ ಹುಡುಗಿಯರೇ...ಅವರ ಪೋಟೊ ತೆಗೆದ ಕತೆ ಕೂಡ ಕುತೂಹಲಕಾರಿಯೇ..ಮುಂದಿನ ಲೇಖನದಲ್ಲಿ ಹಾಕುತ್ತೇನೆ.
ಧನ್ಯವಾದಗಳು.

shivu.k said...

ಸುಶೀಲ ನಾಯರ್ ಮೇಡಮ್,

ಚಿತ್ರಗಳನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...

shivu.k said...

ಸುಬ್ರಮಣ್ಯ ಭಟ್ ಸರ್,

ಮುನ್ನಾರು ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗದಿದ್ದರೂ ಬರೆಯವಣಿಗೆಯಲ್ಲಿ ಕರೆದೊಯ್ಯಬೇಕೆನ್ನುವ ಆಸೆ ಯಶಸ್ವಿಯಗಿದೆಯೆನ್ನು ನೀವೆಲ್ಲಾ ಮೆಚ್ಚಿದ್ದಕ್ಕೆ ಗೊತ್ತಾಗಿದೆ. ಅದಕ್ಕಾಗಿ ಧನ್ಯವಾದಗಳು.

shivu.k said...

ಸುನಾಥ್ ಸರ್,

ಪೆಟ್ರೋಲ್ ತೀರಿದಾಗ ವಿಮಲ್ ನಮ್ಮನ್ನು ಸಮಯೋಜಿತವಾಗಿ ನಮ್ಮನ್ನು ಮುನ್ನಾರು ತಲುಪಿಸಿದ್ದು ನಿಜಕ್ಕೂ ಆವನ ಸಾಹಸವೇ. ಇನ್ನಷ್ಟು ಸಾಹಸಗಳನ್ನು ಬರೆಯುವ ಆಸೆಯಾಗಿದೆ. ಆಗಲೂ ಹೀಗೆ ನಿಮ್ಮ ಪ್ರೋತ್ಸಾಹವಿರಲಿ.

shivu.k said...

ರಘು ಸರ್,

ನನ್ನ ಬರಹದ ಜೊತೆಗೆ ನೀವು ನಮ್ಮ ಪ್ರವಾಸದಲ್ಲಿದ್ದಂತೆ ಅನಿಸಿದ್ದಕ್ಕೆ ಥ್ಯಾಂಕ್ಸ್...ಮುಂದೆಯೂ ನಿಮ್ಮನ್ನು ಬೇರೆ ಬೇರೆ ಪ್ರವಾಸಗಳಿಗೆ ಹೀಗೆ ಕರೆದೊಯ್ಯುತ್ತೇನೆ...

shivu.k said...

ನಿಷಾ ಮೇಡಮ್,

ಮುನ್ನಾರು ಪ್ರವಾಸದ ಚಿತ್ರಗಳು ಮತ್ತು ಲೇಖನ ಓದಿ ನಮ್ಮ ಜೊತೆಯಲ್ಲಿದ್ದಂತೆ ಅನಿಸಿದ್ದಕ್ಕೆ ಥ್ಯಾಂಕ್ಸ್..
ಮತ್ತಷ್ಟು ಹೊಸ ವಿಚಾರಗಳನ್ನು ಮುಂದಿನಭಾಗದಲ್ಲಿ ಹೇಳುತ್ತೇನೆ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.

shivu.k said...

ಮನಸು ಮೇಡಮ್,

ಫೋಟೊ ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...
This comment has been removed by the author.
shivu.k said...

ಸತ್ಯನಾರಾಯಣ ಸರ್,

ನನ್ನ ಬರವಣಿಗೆ ಬಗ್ಗೆ ಲೋಕಭಿರಾಮವಾಗಿ ಮಾತಾಡೋಣವೆಂದಿರಿ. ಅದಕ್ಕೆ ಥ್ಯಾಂಕ್ಸ್. ಮತ್ತೆ ನೀವು ಹೇಳಿದಂತೆ ಖಂಡಿತ ನಾನು ಬರೆಯುವುದು ಮೊದಲು ನನಗಾಗಿ. ಅದು ನನಗೆ ಎಲ್ಲಾ ವಿಧದಲ್ಲಿಯೂ ಇಷ್ಟವಾಗಬೇಕು ನಂತರ ಅದನ್ನು ಬ್ಲಾಗಿಗೆ ಹಾಕುತ್ತೇನೆ. ಆದ್ರೆ ಇಷ್ಟು ದೊಡ್ಡ ಲೇಖನಗಳು ಪುಸ್ತಕದಲ್ಲಿ ನಿದಾನವಾಗಿ ಓದಲು ಚೆನ್ನ. ಬ್ಲಾಗಿನಲ್ಲಿ ತುಸು ಕಷ್ಟವೆಂದು ನನಗೆ ಅನ್ನಿಸಿದ್ದು ಅದು ಇತರರಿಗೂ ಅನ್ನಿಸುತ್ತದೆಯಾ ಎನ್ನುವುದನ್ನು ತಿಳಿದುಕೊಳ್ಳಲು ನಾನು ಕೊನೆಯಲ್ಲಿ ಕೇಳಿದ್ದೇನೆ. ಇದರಲ್ಲಿ ಬೇರೆ ಉದ್ಡೇಶವಿಲ್ಲ.
ಮತ್ತೆ ಕಾಮೆಂಟುಗಳಿಗಾಗಿ ನಾನು ಲೇಖನ ಬರೆಯುದಿಲ್ಲ. ಅದು ಬ್ಲಾಗ್ ಮಿತ್ರರು ಇಷ್ಟಪಟ್ಟು ಮಾಡುವಂತದ್ದು.ಅದು ಎಷ್ಟು ಬಂದರೂ, ಬರದಿದ್ದರೂ ನಾನು ಬರೆದಿದ್ದೂ ನಮ್ಮ ಬ್ಲಾಗ್ ಮಿತ್ರರಿಗೆ ಖುಷಿ ಕೊಟ್ಟಿದೆಯೋ ಅನ್ನುವುದು ಒಂದು ಲೇಖನದ ಕ್ಲಿಕ್ಕಿಂಗ್ಸ್‍ನಿಂದಾಗಿ ಸುಲಭವಾಗಿ ಗೊತ್ತಾಗುತ್ತದೆ. ಚೆನ್ನಾಗಿದ್ದಲ್ಲಿ ಹೆಚ್ಚು ಜನ ನೋಡುತ್ತಾರೆ ಬ್ಲಾಗಿಗೆ ಬರುತ್ತಾರೆ. ಅದರಿಂದ ಕ್ಲಿಕ್ಕಿಂಗ್ಸ್ ಹೆಚ್ಚಾಗುತ್ತದೆ. ಸುಮಾರಾಗಿ ಇದ್ದಲ್ಲಿ ಕ್ಲಿಕ್ಕಿಂಗ್ಸ್ ಕಡಿಮೆ ಇರುತ್ತದೆ.
ನಮ್ಮ ಲೇಖನದ ಯಶಸ್ಸು ಇದರ ಮೂಲಕ ತಿಳಿಯುತ್ತದೆಯೆನ್ನುವುದು ನನ್ನ ಭಾವನೆ.

ಧನ್ಯವಾದಗಳು.

shivu.k said...

ರವಿಕಾಂತ್ ಸರ್,

ಧನ್ಯವಾದಗಳು. ಖಂಡಿತ ಮುಂದುವರಿಸುತ್ತೇನೆ.

shivu.k said...

ಪ್ರಮೋದ್,

ನನ್ನ ಬರವಣಿಗೆ ರಸದೌತಣವೆಂದಿದ್ದೀರಿ. ಬರಹದಲ್ಲಿ ಕೆಲವೇ ಫೋಟೊಗಳನ್ನು ಹಾಕುವ ಉದ್ದೇಶ. ನಾನು ವಿವರಿಸುತ್ತಿರುವ ವಿಚಾರಕ್ಕೆ ಇಷ್ಟು ಫೋಟೊ ಸಾಕು ಎನ್ನುವುದಷ್ಟೇ. ಫೋಟೊಗಳು ದಾರಾಳವಿದ್ದರೂ ವಿಚಾರ ಹೊರಗೆ ಹೋಗಬಾರದು ಎನ್ನುವುದಕ್ಕೆ ಸೀಮಿತವಾಗಿ ಹೀಗೆ ಮಾಡಿದ್ದೇನೆ. ಬೇರೆ ಲೇಖನಗಳನ್ನು ಹೆಚ್ಚು ಫೋಟೊಗಳನ್ನು ಕೊಡುತ್ತೇನೆ.

ಧನ್ಯವಾದಗಳು.

shivu.k said...

ಪರಂಜಪೆ ಸರ್,

ಚಿತ್ರ-ಲೇಖನವನ್ನು ಮೆಚ್ಚಿದ್ದೀರಿ. ಖಂಡಿತ ನಮ್ಮ ಜೊತೆ ಮುಂದಿನ ಪ್ರವಾಸಕ್ಕೆ ಬನ್ನಿ.

shivu.k said...

ಯಜ್ಞೇಶ್,

ಧನ್ಯವಾದಗಳು.

shivu.k said...

ಚಂದ್ರೂ ಸರ್,

ಬರಹ ಮತ್ತು ಚಿತ್ರಗಳನ್ನು ನೀವು ಒಬ್ಬ ಛಾಯಾಗ್ರಾಹಕರಾಗಿ ಇಷ್ಟಪಡುತ್ತಿರುವುದು ನನಗೆ ಖುಷಿ. ನಾನು ಬರೆಯುವಾಗ ಅನುಭವಿಸಿದ ಅನುಭವವನ್ನು ನೀವು ಓದುವಾಗಲೂ feel ಮಾಡಿದ್ದೀರಿ. ಮತ್ತೆ ಪ್ರತಿ ಸ್ಥಳವನ್ನು ಬೇರೆ ದೃಷ್ಟಿಕೋನದಲ್ಲಿ ನೋಡಿದಾಗ ನಮಗೆ ಹೇಗೆ ವಿಭಿನ್ನವಾದದ್ದು ಸಿಗುತ್ತದೆ ಎನ್ನುವುದನ್ನು ತೋರಿಸುವುದಷ್ಟೇ ನನ್ನ ಉದ್ದೇಶ.
ನೀವು ಬಿಡುವಾಗಾದ ಒಮ್ಮೆ ಮುನ್ನಾರಿಗೆ ಹೋಗಿಬನ್ನಿ.
ಧನ್ಯವಾದಗಳು.

shivu.k said...

ದಿನಕರ್,

ನನ್ನ ಪ್ರವಾಸವನ್ನು ನೀವು ಮೆಚ್ಚುತ್ತಿರುವುದು ನನಗೆ ಮತ್ತಷ್ಟು ಇಂಥವು ಬರೆಯಲು ಸ್ಫೂರ್ತಿ ನೀಡುತ್ತದೆ. ಚಿತ್ರಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಮುಂದಿನ ಪುಸ್ತಕದ ಕೆಲಸ ನಡೆಯುತ್ತಿದೆ ಸರ್...

ಧನ್ಯವಾದಗಳು.

shivu.k said...

ಗುರುಮೂರ್ತಿ ಹೆಗಡೆ ಸರ್,

ಪ್ರವಾಸ ಕಥನ ಶೈಲಿಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು. ಮತ್ತೆ ನಾನು ಇದೇ ಮೊದಲ ಬಾರಿಗೆ ಪ್ರವಾಸ ಕಥನವನ್ನು ಬರೆದಿರುವುದು. ಮತ್ತಷ್ಟು ಲೇಖನಗಳನ್ನು ಬರೆದಮೇಲೆ ನೀವು ಹೇಳಿದಂತೆ ಪ್ರಯತ್ನಿಸಬಹುದು.

shivu.k said...

ಪ್ರಶಾಂತ್ ಅರಸಿಕೆರೆ,

ನಮ್ಮ ಫೋಟೊ ತೆಗೆಯುವ ಅನುಭವದ ಕತೆಯಲ್ಲಿ ನೀವು ಇರುವಂತೆ ಅನ್ನಿಸಿದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ.

shivu.k said...

ಕುಲದೀಪ್ ಸರ್,

ಸೂರ್ಯನನ್ನು ನಾನು ಹಿಂಬಾಲಿಸಿ, ಮೋಡದ ಹಿಂದೆ ಸಾಗಿದ ಅನೇಕ ಪ್ರವಾಸಗಳಿವೆ ಸರ್. ಸಾಧ್ಯವಾದರೆ ಮುಂದೆ ಬರೆಯುವ ಆಸೆಯಿದೆ..
ಧನ್ಯವಾದಗಳು.

shivu.k said...

ಸೀತಾರಾಂ ಸರ್,

ಮುನ್ನಾರು ಮೂರನೆ ಭಾಗವನ್ನು ಮೆಚ್ಚಿದ್ದೀರಿ. ವಿಮಲ್‍ ಪ್ರತಿ ಮುನ್ನಾರು ಪ್ರವಾಸಕ್ಕೂ ನಮ್ಮ ಜೊತೆಯಾಗುತ್ತಾನೆ.
ಮತ್ತೆ ಖಂಡಿತ ನಾಲ್ಕನೇ ಭಾಗದಲ್ಲಿ ಉಳಿದ ವಿಚಾರಗಳನ್ನು ಬರೆಯುತ್ತೇನೆ...ಧನ್ಯವಾದಗಳು.

shivu.k said...

ರಾಕೇಶ್,

ಮೂರನೆ ಭಾಗವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

ಶಿವಪ್ರಕಾಶ್,

ನನಗೂ ದೊಡ್ಡ ಲೇಖನಗಳನ್ನು ಓದುವಾಗ ಕಂಪ್ಯೂಟರಿನಲ್ಲಿ ಕಷ್ಟವಾಗುತ್ತದೆ. ಆದ್ರೆ ಏನು ಮಾಡಲಿ. ಲೇಖನದಲ್ಲಿ ಎಲ್ಲಾ ಸೂಕ್ಷ್ಮ ವಿಚಾರಗಳನ್ನು ಕೊಡಬೇಕೆನ್ನುವುದರಿಂದ ಲೇಖನ ದೊಡ್ಡದಾಗಿದೆ. ಮುಂದೆ ಚಿಕ್ಕ ಲೇಖನಗಳನ್ನು ಬರೆಯುತ್ತೇನೆ..
ಧನ್ಯವಾದಗಳು.

shivu.k said...

ಹರೀಶ್,

ಕಥನವನ್ನು ಖಂಡಿತ ಮುಂದುವರಿಸುತ್ತೇನೆ.

shivu.k said...

ಸಲೀಂ,

ಮೂರನೇ ಭಾಗದಲ್ಲಿ ನೀವು ಹೇಳಿದಂತೆ ಖಂಡಿತ ಬರಹ ವೇಗ ಪಡೆದುಕೊಂಡಿದೆ. ಆದ್ರೆ ಮುಗಿಸುವ ಉದ್ದೇಶದಿಂದಲ್ಲ. ಅಲ್ಲಿ ನಡೆದ ಘಟನೆಯೇ ಆಗಿತ್ತಲ್ಲವೇ..
ನಾಲ್ಕನೆ ಭಾಗವನ್ನು ಸಾಧ್ಯವಾದಷ್ಟು ಬೇಗ ಕೊಡುತ್ತೇನೆ.

shivu.k said...

ಶ್ಯಾಮಲ ಮೇಡಮ್,

ಚಿತ್ರಗಳನ್ನು ನೋಡಿ ಈಗಲೇ ಮೈಮರೆಯಬೇಡಿ. ಮುಂದಿನ ಭಾಗ ಮತ್ತಷ್ಟು ಕುತೂಹಲವಾಗಿದೆ. ಅದಕ್ಕೂ ಹೀಗೆ ಬನ್ನಿ.

ಧನ್ಯವಾದಗಳು.

shivu.k said...

ಪ್ರಭು,

ನಮ್ಮ ಪ್ರವಾಸದಲ್ಲಿ ನಿಮ್ಮನ್ನೂ ಕರೆದೊಯ್ಯಬೇಕೆನ್ನುವುದೇ ಈ ಬರಹದ ಉದ್ದೇಶ. ಮುಂದಿನ ಭಾಗದಲ್ಲೂ ನಮ್ಮ ಜೊತೆಯಾಗಿರಿ...ಧನ್ಯವಾದಗಳು.

shivu.k said...

ಸುಧೇಶ್,

ರವಷ್ಟು ನಿಮಗೆ ಬೋರ್ ಆಗಲಿಲ್ಲವೆಂದ ಮೇಲೆ ಮುಂದಿನ ಭಾಗದ ಪ್ರವಾಸಕ್ಕೂ ಜೊತೆಯಾಗಿಯೇ ಇರಿ...ಧನ್ಯವಾದಗಳು.